Thursday, 7 November 2019

ಕಥಾದನಿ

ಕುರುಡರು ಮತ್ತು ಆನೆ
ವಿಭಿನ್ನ ಮತಗಳ ಮತ್ತು ದೇವರ ಕುರಿತಂತೆ ಹಲವು ಮಂದಿ ಪ್ರಜೆಗಳ ನಡುವೆ ಬಿಸಿಬಿಸಿ ಚರ್ಚೆ ನಡೆಯಿತಾದರೂ ಸರ್ವಸಮ್ಮತವಾದ ಉತ್ತರವೊಂದೂ ಸಿಕ್ಕಲಿಲ್ಲ. ಎಂದೇ, ಅವರು ದೇವರು ನೋಡಲು ಹೇಗಿರುತ್ತದೆ ಎಂಬುದನ್ನು ತಿಳಿಯಲು ಬುದ್ಧನ ಬಳಿ ಬಂದರು. ಒಂದು ಭವ್ಯವಾದ ಆನೆಯನ್ನೂ ನಾಲ್ವರು ಕುರುಡರನ್ನೂ ಕರೆ ತರುವಂತೆ ಬುದ್ಧ ತನ್ನ ಶಿಷ್ಯರಿಗೆ ಆದೇಶಿಸಿದ. ಅವರು ಅಂತೆಯೇ ಮಾಡಿದ ನಂತರ ಅವನು ನಾಲ್ವರು ಕುರುಡರನ್ನು ಅನೆಯ ಹತ್ತಿರ ಕರೆತಂದು ಆನೆ 'ನೋಡಲು' ಹೇಗಿರುತ್ತದೆ ಎಂಬುದನ್ನು ವಿವರಿಸಲು ಹೇಳಿದ.
ಮೊದಲನೆಯ ಕುರುಡ ಆನೆಯ ಕಾಲನ್ನು ಮುಟ್ಟಿ ಆನೆ ಕಂಭದಂತಿದೆ ಎಂಬುದಾಗಿ ಹೇಳಿದ. ಎರಡನೆಯವನು ಹೊಟ್ಟೆಯನ್ನು ಮುಟ್ಟಿ ಹೇಳಿದ: "ಗೋಡೆಯಂತಿದೆ." ಮೂರನೆಯವನು ಕಿವಿಯನ್ನು ಮುಟ್ಟಿ ಹೇಳಿದ: "ಬಟ್ಟೆಯ ಚೂರಿನಂತಿದೆ." ನಾಲ್ಕನೆಯವನು ಬಾಲವನ್ನು ಮುಟ್ಟಿ ಹೇಳಿದ: "ಹಗ್ಗದಂತಿದೆ." ತತ್ಪರಿಣಾಮವಾಗಿ ಆನೆ ಹೇಗೆ ಗೋಚರಿಸುತ್ತದೆ ಎಂಬುದರ ಕುರಿತು ಬಿಸಿಬಿಸಿ ಚರ್ಚೆ ಆಯಿತು.
ಬುದ್ಧ ಪ್ರಜೆಗಳನ್ನು ಕೇಳಿದ: "ಪ್ರತೀ ಕುರುಡನೂ ಆನೆಯನ್ನು ಮುಟ್ಟಿದ್ದಾನಾದರೂ ಅವರು ಆನೆಯನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ. ಅವರ ಉತ್ತರಗಳ ಪೈಕಿ ಯಾವುದು ಸರಿ?"
ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ
ಮುಲ್ಲಾ ನಸ್ರುದ್ದೀನ್ ಊರಿನವರಿಗೆ ಒಂದು ಪ್ರವಚನ ನೀಡುತ್ತಿದ್ದ. ಪ್ರವಚನದ ಮಧ್ಯೆ ಒಂದು ಉದಾಹರಣೆ ನೀಡುತ್ತಾ, `ನೀವು ರೊಟ್ಟಿಯ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆಯಿರಿ. ನೀವು ಹೇಗೇ ಎಸೆದರೂ ಕೆಳಕ್ಕೆ ಬಿದ್ದಾಗ ಬೆಣ್ಣೆ ಹಚ್ಚಿದ ಬದಿ ಮೇಲಕ್ಕೇ ಇರುತ್ತದೆ' ಎಂದ. ಜನರೆಲ್ಲಾ ಅತ್ಯಂತ ಭಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಆದರೆ ಒಬ್ಬ ಕಿಡಿಗೇಡಿ ಹುಡುಗ ಪರಿಶೀಲಿಸೋಣವೆಂದು ತಕ್ಷಣವೇ ತನ್ನ ಬಳಿಯಿದ್ದ ರೊಟ್ಟಿಗೆ ಬೆಣ್ಣೆ ಹಚ್ಚಿ ಮೇಲಕ್ಕೆಸೆದ. ಟಪಕ್ಕನೆ ಬೆಣ್ಣೆ ಹಚ್ಚಿದ ಬದಿ ಕೆಳಕ್ಕೆ ಬಿದ್ದು ಮಣ್ಣಾಯಿತು. ಅದನ್ನು ತೆಗೆದುಕೊಂಡು ಮುಲ್ಲಾನಿಗೆ ತೋರಿಸಿ `ನೋಡಿ, ನೀವು ಹೇಳಿದ್ದು ಸುಳ್ಳು' ಎಂದ. ಮುಲ್ಲಾ ಗಡ್ಡ ನೀವಿಕೊಂಡು ಮುಗುಳ್ನಗುತ್ತಾ, `ಇಲ್ಲಾ ನಾನು ಹೇಳಿದ್ದು ಸರಿಯಿದೆ. ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ' ಎಂದ.
"ಧರ್ಮದ ಮೂಲಧರ್ಮ ಉಂಟಲ್ಲ, ಅದಕ್ಕೆ ಧರ್ಮವೇ ಇಲ್ಲ"
ಬುದ್ಧ ಮಹಾಕಶ್ಯಪನಿಗೆ ತಾವರೆ ನೀಡಿ ಮೌನವಾದ...
ಸಭೆಯ ಕೊನೆಗೆ ನುಡಿದ -
"ಧರ್ಮದ ಮೂಲಧರ್ಮ ಉಂಟಲ್ಲ, ಅದಕ್ಕೆ ಧರ್ಮವೇ ಇಲ್ಲ".'
"ಸ್ವಾಮೀ ಈಗ ನಿಮ್ಮ ಇಡೀ ಜೀವನ ವ್ಯರ್ಥವಾಗುತ್ತದೆ"
ಒಂದು ಬಾರಿ ಮುಲ್ಲಾ ನಸ್ರುದ್ದೀನ್‌ದೋಣಿಯಲ್ಲಿ ಪ್ರಯಾಣ ಬೆಳೆಸುತ್ತಿದ್ದ. ಅವನಂತೆಯೇ ಒಂದಿಷ್ಟು ಸಹಯಾತ್ರಿಕರು ದೋಣಿಯಲ್ಲಿದ್ದರು. ಎಲ್ಲರೂ ಒಂದೇ ಮಟ್ಟದ ಬುದ್ಧಿವಂತರಾಗಿದ್ದರು. ಅದೇ ದೋಣಿಯಲ್ಲಿ ಪರವೂರಿನ ವ್ಯಕ್ತಿಯೊಬ್ಬನಿದ್ದ. ನೋಡಲು ಉತ್ತಮ ಬಟ್ಟೆಬರೆಯನ್ನು ಧರಿಸಿ ಪಂಡಿತನಂತೆ ಕಾಣುತ್ತಿದ್ದ ಅವನ ಮುಖದಲ್ಲಿ ಗರ್ವ ಎದ್ದು ಕಾಣುತ್ತಿತ್ತು. ಅವನು ನಸ್ರುದ್ದೀನ್‌ಮುಲ್ಲಾನಲ್ಲಿ ಮಾತಿಗೆ ಆರಂಭಿಸಿದ. ಹೀಗೆ ಮಾತನಾಡುವಾಗ ಮುಲ್ಲಾ ಒಂದು ಪದವನ್ನು ತಪ್ಪಾಗಿ ಉಚ್ಚರಿಸಿದ. ಪಂಡಿತ ಇದನ್ನು ಕೇಳಿ ಮುಲ್ಲಾನನ್ನು ಹಾಸ್ಯ ಮಾಡುತ್ತಾ ಜೀವನದಲ್ಲಿ ನೀನು ಒಮ್ಮೆಯೂ ಅಕ್ಷರಗಳ ಉಚ್ಚಾರವನ್ನೇ ಕಲಿತಿಲ್ಲವೇ ಎಂದು ಕೇಳುತ್ತಾನೆ. ಇಲ್ಲ ಎಂದ ಮುಲ್ಲಾನಿಗೆ ಹಾಗಾದರೆ ನಿನ್ನ ಅರ್ಧ ಜೀವನ ವ್ಯರ್ಥವಾಯಿತಲ್ಲ ಎನ್ನುತ್ತಾನೆ. ಅಷ್ಟೊತ್ತಿಗೆ ಗಾಳಿ ಜೋರಾಗಿ ಬೀಸಿ ದೋಣಿ ಅಲುಗಾಡಲಾರಂಭಿಸುತ್ತದೆ. ಆಗ ಮುಲ್ಲಾ ಪಂಡಿತನಿಗೆ ತಮಗೆ ಈಜಲು ಬರುತ್ತದೆಯೋ ಎಂದು ಕೇಳುತ್ತಾನೆ. ಇಲ್ಲ ಎನ್ನುತ್ತಾನೆ ಪಂಡಿತ. ಆಗ ಮುಲ್ಲಾ ಅವನಿಗೆ "ಸ್ವಾಮೀ ಈಗ ನಿಮ್ಮ ಇಡೀ ಜೀವನ ವ್ಯರ್ಥವಾಗುತ್ತದೆ. ಯಾಕೆಂದರೆ ದೋಣಿ ಮುಳುಗುತ್ತಿದೆ. ಬದುಕಬೇಕಾದರೆ ನೀರಿಗೆ ಹಾರಿ ಈಜಲೇಬೇಕು" ಎಂದು ಹೇಳಿ ನೀರಿಗೆ ಹಾರುತ್ತಾನೆ.'
*******************

ಕೊನೇ ಮಾತು

ಪ್ರೀತಿಯ ಅನು
ಸ್ನೇಹಾಂಜಲಿ.
ಭರವಸೆ, ನಿರೀಕ್ಷೆ, ಸಿದ್ಧತೆ, ಪರಿವರ್ತನೆ, ಹೀಗೆ ಬದುಕಿನ ನಾನಾ ವರಸೆಗಳನ್ನು ಕಟ್ಟಿಕೊಡುವ ಅಗಮನಕಾಲ, ಕ್ರೈಸ್ತ ಪಂಚಾಂಗದಲ್ಲಿ ಕಾಣಸಿಗುವ ಒಂದು ವಿಶಿಷ್ಟ ಕಾಲ. ಕ್ರಿಸ್ತನು ಮನುಷ್ಯ ರೂಪ ತಾಳಿ ಬಂದದ್ದನ್ನು ಅರ್ಥಭರಿತವಾಗಿ ಸ್ಮರಿಸಲು ಅಣಿಮಾಡಿಕೊಡುವುದರ ಜತೆಗೆ ಕ್ರಿಸ್ತನ ಪುನರಾಗಮನದ ಪೂರ್ವಾನುಭವವನ್ನು ಉಣಬಡಿಸುತ್ತದೆ ಈ ಆಗಮನಕಾಲ. ಕ್ರಿಸ್ಮಸ್ ಎಂಬ ಪಾರಮಾರ್ಥಿಕ ಅದ್ದೂರಿಯ ಜೌತಣದ ಸಂಪೂರ್ಣ ಅನುಭೋಗಕ್ಕೆ ನಮ್ಮನ್ನು ಸಿದ್ಧಗೊಳಿಸುತ್ತಲೇ, ಕ್ರಿಸ್ತನ ಎರಡನೆಯ ಬರುವಿಕೆಯನ್ನು ಮತ್ತು ಮಾನವರನ್ನು ನ್ಯಾಯವಿಚಾರಣೆಗೆ ಗುರಿಮಾಡುವ ಅಂತಿಮ ದಿನವನ್ನು ಸಾಂಕೇತಿಕವಾಗಿ ಸ್ಪಷ್ಟಪಡಿಸುತ್ತದೆ. ಆ ಕಾರಣದಿಂದ ಆಗಮನ ಕಾಲವೆಂಬುವುದು ಜೀವಾವಧಿಯ ಕಾಲ, ಆಜೀವ ಸಿದ್ಧತೆಯ ಕಾಲವೆಂಬ ಸತ್ಯವನ್ನು ಮನಗಾಣಿಸುತ್ತದೆ. 
ಆಂಗ್ಲ ಭಾಷೆಯ advent season ಎಂಬುದನ್ನು ಕನ್ನಡದಲ್ಲಿ ಆಗಮನಕಾಲ ಎಂದು ಕರೆಯುತ್ತಾರೆ. ಮೂಲತಃ ಲ್ಯಾತಿನ್ ಪದದ ವ್ಯುತ್ಪನ್ನವಾಗಿರುವ advent ಆಗಮನ ಅಥವಾ ಬರುವಿಕೆ ಎಂಬ ಅರ್ಥಗಳನ್ನು ನೀಡುತ್ತದೆ. ಕ್ರಿಸ್ತಜಯಂತಿಯ ಪೂರ್ವಭಾವಿಯಾಗಿ ಬರುವ ಈ ಆಚರಣೆಯ ಕಾಲಾವಧಿ ಸುಮಾರು ನಾಲ್ಕು ವಾರಗಳಿಗೆ ವಿಸ್ತರಿಸಿಕೊಂಡಿದ್ದು ಡಿಸಂಬರ್ 25ಕ್ಕೆ ಪೂರ್ಣಗೊಂಡು ಕ್ರಿಸ್ಮಸ್ ಹಬ್ಬದ ಸಂಭ್ರಮದ ಆಚರಣೆಗೆ ಮುಹೂರ್ತ ಹಾಕಿಕೊಡುತ್ತದೆ. ನಾಲ್ಕನೆ ಶತಮಾನದಲ್ಲಿ ಆಗಮನಕಾಲವನ್ನು ಉಪವಾಸ ಮತ್ತು ಪ್ರಾಯಶ್ಚಿತ್ತ ಕಾಲವಾಗಿ ಆಚರಿಸುತ್ತಿದ್ದರಂತೆ. ಕ್ರೈಸ್ತ ಧರ್ಮದಲ್ಲಿ ಈ ಆಗಮನಕಾಲದ ಆಚರಣೆಯು ಯಾವಾಗ ರೂಢಿಗೆ ಬಂತೆಂಬ ಪ್ರಶ್ನೆಗೆ ನಿಖರವಾದ ಉತ್ತರ ಅಲಭ್ಯವಿದ್ದರೂ ಶತಮಾನಗಳಿಂದ ಅನೇಕ ರೀತಿಯ ವೈವಿಧ್ಯಮಯ ಆಚರಣೆಗಳನ್ನು ಈ ಕಾಲವು ಮೈಗೂಡಿಸಿಕೊಂಡಿರುವುದು ಒಂದು ಸ್ವಾರಸ್ಯಕರ ವಿಷಯ.
ವಾಡಿಕೆಯಂತೆ ಬಡ ಮಹಿಳೆಯರು ಆಗಮನಕಾಲದ ವಿಷಯವನ್ನು ಒಕ್ಕಣಿಸುವ ಕೆಲವೊಂದು ಭಾವಚಿತ್ರಗಳನ್ನು ಮತ್ತು ಮೇರಿ ಮತ್ತು ಯೇಸುವಿನಂತೆ ಆಲಂಕರಿಸಿದ ಗೊಂಬೆಗಳನ್ನು ಹೊತ್ತು, ಮನೆ ಮನೆಗೆ ಹೋಗಿ, ಮನೆಮಂದಿಗೆಲ್ಲಾ ತೋರಿಸಿ ಅವರಿಂದ ಹಣ ಪಡೆಯುವ ರೂಢಿ ಇಂಗ್ಲೆಂಡ್ ದೇಶದಲ್ಲಿ ಕಾಣ ಸಿಗುತ್ತದೆ. ಗೊಂಬೆಗಳನ್ನು ಹೊತ್ತುಕೊಂಡ ಮಹಿಳೆಯರು ಕ್ರಿಸ್ಮಸ್ಸಿಗೆ ಮುನ್ನ ತಮ್ಮ ಮನೆಯ ಅಂಗಳದಲ್ಲಿ ಕಾಣಿಸಿಕೊಳ್ಳದಿದ್ದಲ್ಲಿ ಅಂತಹ ಮನೆಗಳಿಗೆ ಅಪಶಕುನ ಅಥವಾ ಅನಿಷ್ಟ ಕಟ್ಟಿಟ್ಟ ಬುತ್ತಿಯೆಂಬ ನಂಬಿಕೆಯಿದೆ. 
ಉಳುಮೆಗಾರರು ಅಥವಾ ಕೃಷಿಕರು ತಮ್ಮ ಹೊಲಗದ್ದೆಗಳ ಸುತ್ತಾ ಗಸ್ತು ತಿರುಗುವಂತೆ, ಒಣಗಿದ ಹುಲ್ಲು ಕಡ್ಡಿಗಳ ಕಂತೆಗಳಿಗೆ ಬೆಂಕಿ ಹಚ್ಚಿ ಕೂಗಾಡಲು ಮಕ್ಕಳನ್ನು ನೇಮಿಸುತ್ತಾರಂತೆ. ಕ್ರಿಮಿಕೀಟಗಳು ಬೆಳೆಗಳನ್ನು ನಾಶಮಾಡುವುದೆಂಬ ಭಯದಿಂದ ಅವುಗಳನ್ನು ತಮ್ಮ ಹೊಲಗದ್ದೆಗಳಿಂದ ಅಟ್ಟಿಸಲು ಈ ರೀತಿಯ ವಾಡಿಕೆ ಅವರಿಗೆ ಅಂಟಿಕೊಂಡಿದೆ ಎಂಬ ವಿವರಣೆಯಿದೆ. ಇಟಲಿಯ ದೇಶದಲ್ಲಿ ಮೇರಿ ಮಾತೆಯ ಪುಣ್ಯಕ್ಷೇತ್ರಗಳ ಮುಂದೆ ಜನರು ಬ್ಯಾಗ್ ಪೈಪ್ (bagpipe) ಎಂಬ ತಿದಿಗೊಳಲು ವಾದ್ಯಗಳನ್ನು ನುಡಿಸುತ್ತಾರಂತೆ. ಕ್ರಿಸ್ತನ ಜನನದ ನಂತರ ಅವನನ್ನು ಕಾಣಲು ಬಂದ ಕುರುಬರು ಕೊಳಲು ನುಡಿಸಿ ಸಂಭ್ರಮಿಸಿದರೆಂಬ ನಂಬಿಕೆಯಿಂದ ಹುಟ್ಟಿಕೊಂಡ ಇನ್ನೊಂದು ಆಚರಣೆಯಿದು.
ನನ್ನ ಹುಟ್ಟೂರಿನಲ್ಲಿ ಆಗಮನ ಮತ್ತು ಕ್ರಿಸ್ಮಸ್ ಕಾಲಗಳೆಂದರೆ ಭಜನೆ ಮೇಳಗಳ ಕಾಲ. ಆಗಮನಕಾಲದ ಭಜನೆಗಳು (ಬನ್ನಿ ರಕ್ಷಕರೇ ಬನ್ನಿ ರಕ್ಷಕರೆ, ನಾವು ನಿಮ್ಮನ್ನಪೇಕ್ಷಿಸಿ ಕಾದು ಕೊಂಡಿದ್ದೇವೆ. ಬನ್ನಿ ಬನ್ನಿ...) ಕ್ರಿಸ್ತನ ಬರುವಿಕೆಯನ್ನು ಉತ್ಕಟವಾಗಿ ಆಶಿಸುವ ಜನರ ಹಂಬಲವನ್ನು ವ್ಯಕ್ತಪಡಿಸುತ್ತವೆ. ಇನ್ನೊಂದು ಕಡೆ, ಕ್ರಿಸ್ಮಸ್ ಹಬ್ಬದ ದಿನ ಮತ್ತು ನಂತರ ದಿನಗಳಲ್ಲಿ ಹಾಡಲು ವಿಶೇಷವಾಗಿ ರಚಿತಗೊಂಡ ಕ್ರಿಸ್ಮಸ್ ಭಜನೆಗಳು ಕ್ರಿಸ್ತನ ಜನನದ ಘಟನೆಯನ್ನು ಮತ್ತು ಈ ಘಟನೆಯ ಸುತ್ತ ಆವರಿಸಿಕೊಂಡಿರುವ ಇನ್ನಿತರ ಘಟನೆಗಳನ್ನು ಸ್ವಾರಸ್ಯವಾಗಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತವೆ. ಗೊಲ್ಲರ ಅನುಭವಕ್ಕೆ ಬರುವ ಕ್ರಿಸ್ತ ಜನನದ ವಿವರಣೆಯ ಹಾಡುಗಳಂತೂ ತುಂಬ ವಿಶೇಷವೆನ್ನಿಸುತ್ತವೆ.
ಸರಳತೆ ಸ್ಪಷ್ಟತೆಗಳಿಗೆ ಒತ್ತುಕೊಡುವ ನಿರೂಪಣಾ ವಿಧಾನವನ್ನು ಈ ಭಜನೆಗಳಲ್ಲಿ ಕಾಣಬಹುದು. ಭಜನೆಗಳಲ್ಲಿ ರಾಗ, ತಾಳ, ಲಯಬದ್ಧವಾಗಿದ್ದು ಸರಳ ಶೈಲಿಯಲ್ಲಿ ರಚಿತವಾಗಿರುವುದರಿಂದ ಒಮ್ಮೆ ಓದಿದವರಿಗೆ ಪುನಃ ಓದಬೇಕೆಂಬ, ಓದಿದ ಮೇಲೆ ಹಾಡಬೇಕೆಂಬ, ಹಾಡಿದ ಮೇಲೆ ಅಲ್ಲಿಯ ತತ್ತ್ವಗಳನ್ನು ಅರಿಯಬೇಕೆಂಬ ಆಸಕ್ತಿ ಒಡಮೂಡದೆ ಇರುವುದಿಲ್ಲ. ದೈನಂದಿನ ಮಾತಿನ ಬಳಕೆ ಹಾಗೂ ಆಡುಮಾತುಗಳಲ್ಲಿ ಈ ಭಜನೆಗಳು ರಚನೆಯಾಗಿರುವುದರಿಂದ ಅವುಗಳು ವ್ಯಕ್ತಪಡಿಸುವ ಧೋರಣೆ, ಆಶಯಗಳು ಸುಲಭವಾಗಿ ಅರ್ಥವಾಗುತ್ತವೆ. ಇನ್ನೊಂದು ಕಡೆ, ಸಂವಾದದ ಧಾಟಿಯಲ್ಲಿರುವ ಅನೇಕ ಭಜನೆಗಳು ಆಶಯಗಳ ಅಭಿವ್ಯಕ್ತಿಗೆ ಅನುಕೂಲವಾಗಿವೆ. ಒಟ್ಟಿನಲ್ಲಿ, ಭಾಷೆಯ ಸಂಕೀರ್ಣತೆಯಿಂದ ದೂರವಾಗಿ ಘನವಾದ ವಿಷಯಗಳನ್ನು ತಿಳಿಗೊಳಿಸಿ ಹೇಳುವ ನೈಪುಣ್ಯತೆ ಈ ಭಜನೆಗಳ ಜೀವಾಳ. ಭಜನೆಗಳ ಧಾಟಿ ಗ್ರಾಮ್ಯವಾಗಿರುವುದ್ದರಿಂದ ಹಳ್ಳಿಯ ಕ್ರೈಸ್ತರ ಮನೆ ಮನಗಳಲ್ಲಿ ಇಂದಿಗೂ ಜೀವಂತವಾಗಿ ಉಳಿದಿವೆ. ಇನ್ನೊಂದು ಕಡೆ, ಭಜನೆಗಳಲ್ಲಿರುವ ಸಾಹಿತ್ಯ ಮತ್ತು ಸಂಗೀತಗಳ ಅನ್ಯೋನ್ಯತೆ ಭಕ್ತನನ್ನು ಭಕ್ತಿಯ ಪರವಶತೆಯಲ್ಲಿ ತೇಲಿಸಿಬಿಡುತ್ತವೆ. ಕೆಲವು ಭಜನೆಗಳ ಸಂಗೀತ ಲ್ಯಾಟಿನ್, ಪ್ರೆಂಚ್ ಮೂಲವಾಗಿದ್ದು ಅವುಗಳನ್ನು ಕನ್ನಡೀಕರಿಸಿ ತಮ್ಮ ಭಜನೆಗಳಲ್ಲಿ ಉಪಯೋಗಿಸಿಕೊಂಡಿರುವುದು ಗಮನಾರ್ಹ.
ಆಗಮನಕಾಲ, ಕ್ರಿಸ್ಮಸ್ ಕಾಲ, ಪಾಸ್ಖಕಾಲ ಹೀಗೆ ಕ್ರೈಸ್ತಪೂಜಾವಿಧಿಗಳ ವಿಶೇಷ ಕಾಲಗಳಲ್ಲಿ ಮತ್ತು ವಾರದ ವಿಶೇಷ ದಿನಗಳಲ್ಲಿ ಭಜನೆ ಮೇಳಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ಜತೆಗೆ ಊರಿನಲ್ಲಿ ಭೀಕರ ಸಮಸ್ಯೆಗಳು ತಲೆದೋರಿದಾಗ ಭಜನೆಮೇಳಗಳು ಹೆಚ್ಚಾಗಿ ನಡೆಯುವುದು ಒಂದು ಕುತೂಹಲವುಳ್ಳ ವಿಷಯವೂ ಹೌದು.
ಭಜನೆ ಮೇಳವನ್ನು ವ್ಯಕ್ತಿಗತ ಮತ್ತು ಸಾಮೂಹಿಕ ಎಂದು ಎರಡು ಹಂತಗಳಲ್ಲಿ ವಿಭಾಗಿಸಬಹುದು. ಈ ಗ್ರಾಮದಲ್ಲಿ ನಡೆಯುವ ಭಜನೆಮೇಳಗಳು ಸಾಮೂಹಿಕ ರೂಪದ್ದು, ಇಲ್ಲಿ ಹಾಡುವವರ ಸಂಖ್ಯೆಯನ್ನು ನಿರ್ದಿಷ್ಟವಾಗಿ ಹೇಳದೇ ಒಂದಕ್ಕಿಂತ ಹೆಚ್ಚು ಎನ್ನುವುದೇ ಸೂಕ್ತವೆನ್ನಿಸುತ್ತದೆ. ಏಕೆಂದರೆ ಹಲವು ಬಾರಿ ಹಾಡುವವರ ಸಂಖ್ಯೆ 10 ರಿಂದ 15 ಇದ್ದರೆ, ಕೆಲವೊಮ್ಮೆ ಹಾಡುವವರ ಸಂಖ್ಯೆ 20ಕ್ಕಿಂತ ಅಧಿಕವಿರುತ್ತದೆ. ಸಾಮೂಹಿಕ ಭಜನೆಯಾದ್ದರಿಂದ ಹಿಮ್ಮೇಳವಿರವುದನ್ನು ಗಮನಿಸಬಹುದು. ಮುಖ್ಯ ಗಾಯಕ ಭಜನೆಯನ್ನು ಹಾಡುತ್ತಾ ಹೋದಂತೆ ಉಳಿದವರು ಅದೇ ಧಾಟಿಯಲ್ಲಿ ಅದನ್ನು ಪುನರಾವರ್ತಿಸುತ್ತಾರೆ. ಕೆಲವೊಮ್ಮೆ ಪಲ್ಲವಿಯ ಭಾಗವನ್ನು ಪುನರಾವರ್ತಿಸಿದರೆ, ಹಲವು ಸಲ ಜತೆಯಲ್ಲೇ ಇಡೀ ಹಾಡನ್ನು ಪುನರಾವರ್ತಿಸುವುದು ಕಂಡು ಬರುತ್ತದೆ. ತಾಳ, ಕಂಜಿರ, ಹಾರ್ಮೊನಿಯಂ ಮೊದಲಾದ ವಾದ್ಯ ವಿಶೇಷಗಳು ಇಲ್ಲಿರುತ್ತವೆ.
ಭಜನೆ ಕರ್ನಾಟಕದಾದ್ಯಂತ ಕಂಡು ಬರುವ ದೇಸಿ ಧಾರ್ಮಿಕ ಸಂಪ್ರದಾಯ. ಒಂದು ಆರಾಧನಾ ಕ್ರಮ. ಒಂದೊಂದು ಭಾಗದಲ್ಲಿ ಹಾಡುವ ಭಜನೆಗಳ ಹಿನ್ನೆಲೆ ಹಾಗೂ ಪ್ರಕಾರಗಳ ಮಟ್ಟಿಗೆ ಸ್ವಲ್ಪ ವ್ಯತ್ಯಾಸವಾದರೂ ಒಟ್ಟಾಗಿ ಮೇಳಗಳು ಒಂದಲ್ಲ ಒಂದು ರೀತಿಯಲ್ಲಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿವೆ. ಇದು ಧರ್ಮಾತೀತ ಸಂಪ್ರದಾಯವೂ ಹೌದು. ಇಂತಹ ದೇಸಿಮೇಳಗಳು ಆಗಮನಕಾಲ ಮತ್ತು ಕ್ರಿಸ್ಮಸ್ ಆಚರಣೆಗಳನ್ನು ಅಪ್ಪಿಕೊಂಡಿದ್ದು ಹೇಗೆ? 
 ಕೆಲ ದುಷ್ಟಾತ್ಮಗಳಿಗೆ ಮಧ್ಯಾಹ್ನ ಮತ್ತು ನಡುರಾತ್ರಿಯಲ್ಲಿ ಕಾಲರಾ ರೋಗವನ್ನು ಹರಡುವ ಶಕ್ತಿ ಇತ್ತಂತೆ. ರೋಗವನ್ನು ಹರಡುವ ಅಂತಹ ಭಯಾನಕ ದುಷ್ಟಾತ್ಮಗಳನ್ನು ತಮ್ಮ ಊರುಕೇರಿಗಳಿಂದ ಬೆಂಕಿ ಪಂಜು ಮತ್ತು ಸದ್ದುಗದ್ದಲ ಕೂಗಾಟಗಳಿಂದ ಬೆದರಿಸಿ ಬಡಿದೋಡಿಸಬಹುದು ಎಂಬ ನಂಬಿಕೆಯಿಂದ ಜನರು ಊರಿನ ಸುತ್ತಾ ಪಂಜು ಮತ್ತು ಗದ್ದಲಗಳಿಂದ ಗಸ್ತುಮಾಡಲು ಪ್ರಾರಂಭಿಸಿ ಕಾಲಕ್ರಮೇಣ ಅದು ಭಜನೆ ಸಂಪ್ರದಾಯವಾಗಿ ರೂಪುಗೊಂಡಿತ್ತಂತೆ. ಕೊನೆಗೆ 19ನೇ ಶತಮಾನದಲ್ಲಿ ಭಜನೆಯೆಂಬ ದೇಸಿ ಸಂಪ್ರದಾಯವು ಕ್ಯಾರಲ್ ಸಿಂಗಿಂಗ್ (carol singing) ಜತೆ ಸಮೀಕರಿಸಿಕೊಂಡ ಫಲವಾಗಿ ಕ್ರೈಸ್ತ ಭಜನೆಮೇಳಗಳು ಹುಟ್ಟಿಕೊಂಡವೆಂದು ಜಾನಪದ ತಜ್ಞ ಪಾಧರ್ ವಿನ್ಸೆಂಟ್ ವಿಲ್ಸನ್‌ರವರ ವಿವರಣೆ. ಭಜನೆಮೇಳಗಳು ಈಗ ಕಾಲರಾ ರೋಗವನ್ನು ಹರಡುವ ದುಷ್ಟಶಕ್ತಿಯನ್ನು ಓಡಿಸುವ ಕೆಲಸವನ್ನು ಬಿಟ್ಟು, ಕ್ರಿಸ್ಮಸ್ ಆಚರಣೆಗೆ ಸಿದ್ಧತೆಗೊಳಿಸುವ, ಮನಸ್ಸಿನಲ್ಲಿರುವ ದುಷ್ಟ ಶಕ್ತಿಗಳನ್ನು ಬಡಿದೋಡಿಸಿ ಕ್ರಿಸ್ತನಿಗೆ ಒಂದು ಪವಿತ್ರ ಕೊಟ್ಟಿಗೆಯನ್ನು ನಮ್ಮ ಬದುಕಿನಲ್ಲಿ ಕಟ್ಟಲು ಅನುವುಮಾಡಿಕೊಡುವ ಸಂಪ್ರದಾಯವಾಗಿ ರೂಪುಗೊಂಡಿರುವುದು ಶ್ಲಾಘನೀಯ ವಿಷಯ. ಅನು, ಇಂತಹ ಭಜನೆಗಳನ್ನು ಕೇಳಲು ಆಸಕ್ತಿಯಿದ್ದಲ್ಲಿ 'ನಮ್ಮ ನಾಯಕ ಹುಟ್ಟಿದನು ನೋಡಿ' ಎಂಬ ದ್ವನಿಸುರುಳಿಯನ್ನು ಕೊಂಡು ಆಲಿಸು. 
ಧನ್ಯವಾದಗಳು
ಆನಂದ್

ಜೀವನ ಚದುರಂಗ



ಬೆವರಿಲ್ಲದ ಹಣೆಯುಂಟೆ
ನೋವಿಲ್ಲದ ಮನಸ್ಸುಂಟ್ಟೆ
ಕಂಬನಿ ಮಿಡಿಯದ ಕಣ್ಣುಂಟ್ಟೆ
ಜೀವನ ಚದುರಂಗ

ಎಲ್ಲೆಲ್ಲೂ ಕಪ್ಪು-ಬಿಳುಪು
ಅರಿತಿಹುದು ಎಡವಿದ ತಪ್ಪು
ಬಂದಿಸಿವುದು ನುಡಿದ ಒಪ್ಪು
ಜೀವನ ಚದುರಂಗ

ನಡೆಯದ್ದಿಲ್ಲಿ ಸನ್ಯಾಸ ವ್ರತ
ನಿಲ್ಲು ನೀನೆಂದು ಸತ್ಯದ ಮತ
ಕ್ರಿಸ್ತನ ಸಾನ್ನಿಧ್ಯವೇ ಪುಣ್ಯ ಪಥ
ಜೀವನ ಚದುರಂಗ

ಸೋಲಿನಲ್ಲಿ ಇಹುದು ಪಾಠ
ಮುಗಿಯದ ಶತ್ರು ಕಾಟ
ಮರ್ಮ ಅಳಿಯದ ಈ ಆಟ
ಜೀವನ ಚದುರಂಗ

- ನವೀನ್ ಮಿತ್ರ, ಬೆಂಗಳೂರು

*******************

ಸಂತ ಯೊವಾನ್ನರ ಶುಭಸಂದೇಶ –14

ಸಂತ ಯೊವಾನ್ನರ ಶುಭಸಂದೇಶ ಮತ್ತು ಸಮನ್ವಯ ಶುಭಸಂದೇಶಗಳ (ಮಾರ್ಕ, ಮತ್ತಾಯ ಮತ್ತು ಲೂಕ) ಮಧ್ಯೆ ಇರುವಂತಹ ತುಲನಾತ್ಮಕ ವಿಶ್ಲೇಷಣೆ. ಇಲ್ಲಿ ನಾವು ಎರಡು ಶುಭಸಂದೇಶಗಳ ಮಧ್ಯೆ ಏನು ಸಾಮ್ಯತೆಗಳಿವೆ ಎನ್ನುವುದರ ಬಗ್ಗೆ ನೋಡೋಣ. 

ಸಮಾನತೆಗಳು
1. ಸಂತ ಯೊವಾನ್ನರ ಶುಭಸಂದೇಶವು ಮತ್ತು ಸಮನ್ವಯ ಶುಭಸಂದೇಶಗಳೆಲ್ಲವೂ ಒಂದೇ ಸಂಪ್ರದಾಯದ ಅಡಿಪಾಯದ ಮೇಲೆ ನಿಂತಿದೆ; ಅದೇನೆಂದರೆ ಸಾಹಿತ್ಯದ ಪ್ರಕಾರ. ಈ ಎಲ್ಲಾ ಶುಭಸಂದೇಶಗಳಲ್ಲಿ  ಕಾಣುವಂತಹ ಸಾಹಿತ್ಯದ ಪ್ರಕಾರ ಒಂದೇ- ಅದು ಶುಭಸಂದೇಶದ ಸಾಹಿತ್ಯದ ಪ್ರಕಾರವಾಗಿದೆ. 
2. ಯೊವಾನ್ನರ ಶುಭಸಂದೇಶ ಮತ್ತು ಸಮನ್ವಯ ಶುಭಸಂದೇಶಗಳು ಯೇಸುಸ್ವಾಮಿಯ ಜನನ, ಜೀವನ, ಬೋಧನೆ, ಮರಣ ಹಾಗೂ ಪುನರುತ್ಥಾನದಿಂದ ಕೂಡಿವೆ. (ಸಂತ ಯೊವಾನ್ನರ ಶುಭಸಂದೇಶದಲ್ಲಿ ಯೇಸುಸ್ವಾಮಿಯ ಜನನದ ಪ್ರಕರಣ ಇಲ್ಲವಷ್ಟೇ) ಇವೆಲ್ಲವೂ ಕ್ರಿಸ್ತ ಕೇಂದ್ರಿತ ಶುಭಸಂದೇಶಗಳಾಗಿವೆ. ಕ್ರಿಸ್ತನ ಕಾರ್ಯಗಳನ್ನು ಕಥಾವಸ್ತುವನ್ನಾಗಿಟ್ಟುಕೊಂಡು, ಕ್ರಿಸ್ತನನ್ನ ಕಥಾನಾಯಕನನ್ನಾಗಿಟ್ಟುಕೊಂಡು ಈ ಶುಭಸಂದೇಶಗಳನ್ನು ಬರೆಯಲಾಗಿವೆ. 
3. ಈ ಶುಭಸಂದೇಶಗಳಲ್ಲಿ ಒಂದು ಸಾಮ್ಯತೆ ಎದ್ದು ಕಾಣುವುದೆಂದರೆ; ಅದು ಯೇಸುಸ್ವಾಮಿಯ ಬಹಿರಂಗ ಜೀವನ ಹಾಗೂ ದೈವೀ ರಾಜ್ಯದ ಕಾರ್ಯ ಪ್ರಾರಂಭವಾದದ್ದು ಎರಡು ಪ್ರಮುಖ ಪಟ್ಟಣಗಳಲ್ಲಿ ಅವು ಗಲಿಲೇಯ ಮತ್ತು ಜೆರುಸಲೇಮ್. 
4. ಕೆಲವು ಪ್ರಮುಖ ವ್ಯಕ್ತಿಗಳು ಹಾಗೂ ಸ್ಥಳಗಳು ಯೇಸುಸ್ವಾಮಿಯ ಬಹಿರಂಗ ಜೀವನಕ್ಕೆ ಮತ್ತು ದೈವೀ ರಾಜ್ಯದ ಕಾರ್ಯಕ್ಕೆ ಹೊಂದಿಕೊಂಡಿವೆ. ಇಲ್ಲಿ ಬರುವಂತಹ ವ್ಯಕ್ತಿಗಳು ಹಾಗೂ ಸ್ಥಳಗಳು ಸಮಾನತೆಯನ್ನು ಹೊಂದಿವೆ. ಉದಾಹರಣೆಯಾಗಿ- ವ್ಯಕ್ತಿಗಳು - ಮಾತೆ ಮೇರಿ, ಸ್ನಾನಿಕ ಯೋವಾನ್ನ, ಮಗ್ದಲದ ಮರಿಯ, ಮೇರಿ ಹಾಗೂ ಮಾಥ9. ಸ್ಥಳಗಳು - ಬೆಥನಿ, ಕಫೇರ್ನಾವುಮ್, ಗಲಿಲೀಯ ಹಾಗೂ ಜೆರುಸಲೇಮ್. 
5. ಕೆಲವೊಂದು ಯೇಸುಸ್ವಾಮಿಯ ವಾಕ್ಯಗಳಲ್ಲಿ ಸಮಾನತೆಯನ್ನು ಈ ಶುಭಸಂದೇಶಗಳಲ್ಲಿ ಕಾಣಬಹುದಾಗಿದೆ. ಉದಾಹರಣೆಗೆ - ಯೊವಾನ್ನ 2:19, 4:44, 12:25-26, 13:16, 13:20 & 15:20 ಈ ಉಲ್ಲೇಖಗಳು ಬೇರೆ ಶುಭಸಂದೇಶದಲ್ಲಿಯೂ ಕಾಣಬಹುದು. 
6. ಸಂತ ಯೊವಾನ್ನ ಶುಭಸಂದೇಶದಲ್ಲಿ ಪ್ರತಿಯೊಂದು ಪವಾಡಕೊಂದು ಅರ್ಥವಿದೆ; ಇಲ್ಲಿ ಅದನ್ನು ಪವಾಡ ಎನ್ನದೆ ಅದೊಂದು ಸಂಕೇತ, ಚಿನ್ನೆ ಅಥವಾ ಸೂಚನೆ ಎಂದು ಕರೆಯಲಾಗುತ್ತದೆ. ಇದಕ್ಕಾಗಿಯೇ ಈ ಶುಭಸಂದೇಶದಲ್ಲಿ ಕೊಂಚ ಬೇರೆ ಹಾಗೂ ವಿಭಿನ್ನ ಪವಾಡಗಳನ್ನು ನಾವು ಕಾಣಬಹುದಾಗಿದೆ. ಆದರೂ ಇಲ್ಲಿ ಎರಡು ಪವಾಡಗಳು ಪುನರಾವರ್ತನೆಯಾಗಿವೆ. ಮೊದಲನೆಯದು - ಯೇಸುಸ್ವಾಮಿ ರೊಟ್ಟಿಯ ಪವಾಡ ಮಾಡಿದ್ದು ಹಾಗೂ ಎರಡನೆಯದು - ಯೇಸುಸ್ವಾಮಿ ನೀರಮೇಲೆ ನಡೆದ ಪವಾಡ. 
7. ಇನ್ನು ಕೆಲವು ಸಾಹಿತ್ಯದ ಪ್ರಕಾರಗಳು ಒಂದೇ ರೀತಿ ಇದೆ. ಸ್ನಾನಿಕ ಯೊವಾನ್ನರ ಕುರಿತು, ದೇವಾಲಯವನ್ನು ಶುದ್ಧೀಕರಿಸುವುದರ ಕುರಿತು, ಯೇಸುಸ್ವಾಮಿ ಜೆರುಸಲೇಮ್ ನಗರವನ್ನು ಪ್ರವೇಶಿಸುವುದರ ಕುರಿತು ಹಾಗೂ ಬಹುಪಾಲು ಯೇಸುಸ್ವಾಮಿಯ ಯಾತನೆ ಕುರಿತು ಈ ಎರಡು ಶುಭಸಂದೇಶಗಳಲ್ಲಿ ಒಂದೇ ಆದಂತಹ ಸಾಹಿತ್ಯ ಪ್ರಕಾರಗಳನ್ನು ಹೊಂದಿದೆ. ಇವೆಲ್ಲವೂ ಸಮಾನತೆಯನ್ನು ಹೊಂದಿವೆ ಎನ್ನುವುದರ ವಿಷಯವಾಗಿ ಕುರಿತಾದಂತಹ ಅಂಶಗಳಾಗಿವೆ. ಈಗ ವಿಭಿನ್ನತೆಗೆ ಹೋಗುವುದಕ್ಕಿಂತ ಮುಂಚೆ ಕೆಲವು ವಿಷಯಗಳು ತೀರಾ ವಿಭಿನ್ನವಾಗದೆ ಕೊಂಚ ಬೇರೆ ರೀತಿಯಾಗಿ ಅಥವಾ ಕೊಂಚ ಬದಲಾದ ರೀತಿಯಲ್ಲಿ ಬಿಂಬಿಸಲಾಗಿವೆ. ಅವುಗಳನ್ನು ನಾವು ಮೊದಲು ನೋಡೋಣ. ಉದಾಹರಣೆ - ಯೊವಾನ್ನರ ಶುಭಸಂದೇಶ 4:46- 54 - ಯೇಸುಸ್ವಾಮಿ ಇಲ್ಲಿ ಒಬ್ಬ ಯೆಹೂದಿ ಅಧಿಕಾರಿಯ ಮಗನನ್ನು ಗುಣಪಡಿಸುತ್ತಾರೆ. ಬಹಳಷ್ಟು ಮಂದಿ ಇದನ್ನು ಮತ್ತಾಯ 8:5-12 ಮತ್ತು ಲೂಕ 7: 1- 10ರಲ್ಲಿ ಬರುವ ಶತಾಧಿಪತಿಯ ಸೇವಕನು ಪವಾಡಕ್ಕೆ ತಾಳೆ ಹಾಕುತ್ತಾರೆ. ಸಮಾನವಾದಂತಹ ಅಂಶಗಳನ್ನು ಕಂಡರೂ ಸಹ ಇಲ್ಲಿ ಒಂದು ಸಣ್ಣ ವಿಭಿನ್ನತೆ ಎಂದರೆ ಯೊವಾನ್ನರ ಶುಭಸಂದೇಶದಲ್ಲಿ ಯೆಹೂದಿ ಅಧಿಕಾರಿಯ ಮಗ ಗುಣವಾದರೆ, ಬೇರೆ ಶುಭಸಂದೇಶಗಳಲ್ಲಿ ಶತಾಧಿಪತಿಯ ಮಗ ಗುಣ ಹೊಂದುತ್ತಾನೆ. 
2. ಯೊವಾನ್ನರ ಶುಭಸಂದೇಶ 12:1-18 ರಲ್ಲಿ ಯೇಸುಸ್ವಾಮಿಯನ್ನು ಒಬ್ಬ ಮಹಿಳೆ ಅಭ್ಯಂಗಿಸುತ್ತಾಳೆ. ಇದನ್ನು ಕೆಲವರು ಮತ್ತಾಯ 26: ಹಾಗೂ ಮಾಕ9 14:3-9 ದಲ್ಲಿ ಬರುವ ಮಹಿಳೆಯ ಸನ್ನಿವೇಶಕ್ಕೆ ತಾಳೆ ಹಾಕುತ್ತಾರೆ. ಇಲ್ಲಿ ಒಂದು ಸಮಾನತೆಯ ಅಂಶವೆಂದರೆ ಎರಡು ಅಭ್ಯಂಜನಗಳು ನಡೆಯುವುದು ಬೆಥನಿ ಎಂಬ ಸ್ಥಳದಲ್ಲಿಯೇ. ಆದರೆ ಕೊಂಚ ವಿಭಿನ್ನತೆಯನ್ನು ನಾವು ಕಾಣಬಹುದಾಗಿದೆ. 
- ಯೊವಾನ್ನರ ಶುಭಸಂದೇಶದಲ್ಲಿ ಈ ಅಭ್ಯಂಜನ ನಡೆಯುವುದು ತನ್ನ ಆಪ್ತ ಸ್ನೇಹಿತನಾದ ಲಾಜ಼ರನ ಮನೆಯಲ್ಲಿ. ಮಾರ್ಕ ಮತ್ತು ಮತ್ತಾಯನ ಶುಭಸಂದೇಶಗಳಲ್ಲಿ ಅಭ್ಯಂಜನ ನಡೆಯುವುದು ಕುಷ್ಟ ರೋಗಿ ಸೀಮೋನ ಎಂಬ ವ್ಯಕ್ತಿಯ ಮನೆಯಲ್ಲಿ. 

- ಯೊವಾನ್ನರ ಶುಭಸಂದೇಶದಲ್ಲಿ ಲಾಜ಼ರನ ಸಹೋದರಿ ಮೇರಿ ಈ ಅಭ್ಯಂಜನವನ್ನು ಮಾಡುತ್ತಾಳೆ ಆದರೆ ಮಾರ್ಕ ಮತ್ತು ಮತ್ತಾಯನ ಶುಭಸಂದೇಶದಲ್ಲಿ ಅನಾಮಧೇಯ ಮಹಿಳೆ ಈ ಅಭ್ಯಂಜನವನ್ನು ಮಾಡುತ್ತಾಳೆ.

ಸಹೋ. ವಿನಯ್ ಕುಮಾರ್

ಜಗದ ಸೃಷ್ಟಿಯ ಪೌರಾಣಿಕ ಕತೆಗಳು - 3

ಜಗವ ಸೃಷ್ಟಿಸಿದ ಪಂಕು ಮತ್ತು ನುಗು
ಆದಿಯಲ್ಲಿಎಲ್ಲೆಲ್ಲೂ ಶೂನ್ಯವೆ ಇತ್ತು. ಜೊತೆಗೊಂದು ಮೊಟ್ಟೆಯೊಂದಿತ್ತು. ಆ ಮೊಟ್ಟೆಯೊಳಗೆ ಕತ್ತಲಿತ್ತು. ಅದರಲ್ಲಿ ಕತ್ತಲಲ್ಲದೇ ಅದು ದಟ್ಟವಾದ ಅಸ್ತವ್ಯಸ್ತತೆಯ ತಬ್ಬಿಬ್ಬಿನ ಗೊಂದಲದ ಸುಳಿಯ ತಾಣವಾಗಿತ್ತು. ಸುಳಿಯು ತಣ್ಣಗಾಗಿ, ಗೊಂದಲ ಒಂದು ಹದಕ್ಕೆ ಬಂದಾಗ, ಆಕಾರವೊಂದು ರೂಪ ತಳೆಯತೊಡಗಿತ್ತು. ಅದು ಗುಜ್ಜಾರಿಗಿಡ್ಡನ ರೂಪದಲ್ಲಿ ಹೊರಬಂದಾಗ ಅದನ್ನು `ಪಂಕು' ಎಂದು ಕರೆಯಲಾಗುತ್ತಿತ್ತು. 
ನಿಧಾನವಾಗಿ `ಪಂಕು'ವಿನಲ್ಲಿ ಉಸಿರಾಟ ಆರಂಭವಾಗಿತ್ತು. ಅದು ಮಿಸುಕಾಡತೊಡಗಿತು. `ಪಂಕು'ವಿಗೆ ಜೀವ ಬಂದಿತ್ತು! ಮೈ ಮುರಿದು ಕಣ್ಣುಬಿಟ್ಟು ನೋಡಿದ `ಪಂಕು' ಕತ್ತಲಕೂಪದೊಳಗೆ ತಾನು ಸಿಕ್ಕಿ ಹಾಕಿಕೊಂಡಿದ್ದೇನೆ ಎನ್ನಿಸಿತು. ಮೊಟ್ಟೆಯ ಕವಚಕ್ಕೆ ಜೋರಾಗಿ ತಿವಿದಾಗ, ಅದು ಬಿರುಕುಬಿಟ್ಟು ಬಾಯಿ ತೆರೆಯಿತು. `ಯಿನ್' ಹೆಸರಿನ ಹಗುರವಾದ ಬೆಳಕಿನ ಕಣಗಳು `ಪಂಕು'ವಿನ ತಲೆಯ ಮೇಲೆ ಸಾಗಿ ಆಗಸವನ್ನು ರಚಿಸಿದವು. ಮತ್ತೆ `ಯಂಗ್' ಹೆಸರಿನ ಭಾರವಾದ ಕಣಗಳು `ಪಂಕು'ವಿನ ಕೆಳಗೆ ಕಲೆತು ನೆಲವಾಯಿತು.
ಆ ನೆಲದ ಮೇಲೆ - ಭೂಮಿಯ ಮೇಲೆ ಎದ್ದು ನಿಲ್ಲಲು ನೋಡಿದರೆ `ಪಂಕು'ವಿನ ಬೆನ್ನು ಆಕಾಶಕ್ಕೆ ಬಡಿಯುತ್ತಿತ್ತು. ನೇರವಾಗಿ ನಿಲ್ಲಲಾಗದ `ಪಂಕು', ಭೂಮಿಯ ಮೇಲೆ ಕಾಲುಗಳನ್ನು ಭದ್ರವಾಗಿರಿಸಿ ಎರಡೂ ಕೈಗಳ ಅಂಗೈಯನ್ನೆತ್ತಿ ಆಕಾಶವನ್ನು ಎತ್ತಿ ಹಿಡಿದ. ತನ್ನ ಬಲವನ್ನೆಲ್ಲಾ ಕೂಡಿಸಿ ಆಕಾಶವನ್ನು ಮೇಲೆ ತಳ್ಳಿದಾಗ, `ಪಂಕು'ವಿಗೆ ಸರಾಗವಾಗಿ ಸುಮ್ಮನೆ ಎದ್ದು ನಿಲ್ಲಲು ಸಾಧ್ಯವಾಯಿತು. 
ಹೀಗೆ ಆದರೆ, ಎಷ್ಟು ಹೊತ್ತು ಆಕಾಶವನ್ನು ಕೈ ಹಿಡಿದು ಹೊತ್ತು ನಿಲ್ಲುವುದು? ಅದನ್ನು ಕೈಬಿಟ್ಟರೆ, ಧಡಾರ್‌ ಎಂದು ಅವನ ಮೇಲೇ ಬಿದ್ದು ಅವನನ್ನು ಅಪ್ಪಚ್ಚಿ ಮಾಡುವ ಸಾಧ್ಯತೆ ಇದ್ದೇ ಇತ್ತು. ದಿನವೂ ಹಗಲು ಮಂಜನ್ನು ತಿನ್ನಲಾರಂಭಿಸಿದ `ಪಂಕು', ಆಗಸ ಮೈಮೇಲೆ ಬಿದ್ದರೇನು ಮಾಡುವುದು ಎಂದು ರಾತ್ರಿಯಲ್ಲಿ ನಿದ್ದೆಯನ್ನೇ ಮಾಡಲಿಲ್ಲ. ನಿಧಾನವಾಗಿ ಅವನ ಬೆಳವಣಿಗೆ ಆರಂಭವಾಯಿತು. ವಾರಕ್ಕೆ ಎಪ್ಪತ್ತು ಅಡಿಗಳಂತೆ ಅವನ ಬೆಳವಣಿಗೆಯಿಂದ ಅವನ ಎತ್ತರ ಹೆಚ್ಚುತ್ತಾ ಹೋಯಿತು. ಅದೇ ಬಗೆಯಲ್ಲಿ ಭೂಮಿ ಮತ್ತು ಆಕಾಶಗಳ ನಡುವಿನ ಅಂತರವೂ ಹೆಚ್ಚಾಗುತ್ತಾ ಸಾಗಿತು. ಹದಿನೆಂಟು ಸಾವಿರ ವರ್ಷಗಳ ನಂತರ ಭೂಮಿ ಮತ್ತು ಆಕಾಶಗಳ ಅಂತರದಲ್ಲಿ ಅಪಾರವಾದ ಹೆಚ್ಚಳ ಕಂಡಿತ್ತು. `ಇನ್ನು, ಆಕಾಶ ಮೈಮೇಲೆ ಬೀಳುವ ಭಯವಿಲ್ಲ' ಎಂಬ ಧೈರ್ಯ `ಪಂಕು'ವಿನಲ್ಲಿ ಮೂಡಿತು. 
`ಪಂಕು'ವಿಗೆ ತುಂಬಾ ತುಂಬಾ ದಣಿವಾಗಿತ್ತು. ಆಕಾಶವನ್ನು ಹೊತ್ತು ಹೊತ್ತು ಮೇಲೆ ತಳ್ಳಿ ತಳ್ಳಿ ಅವನ ಕೈಗಳು ಮತ್ತು ಕಾಲುಗಳು ನೋವಿನಿಂದ ಕುಂಯಿಗುಡ ತೊಡಗಿದ್ದವು. ನಿಧಾನವಾಗಿ ಆಗಸದ ಕೈ ಬಿಟ್ಟ `ಪಂಕು' ಕಾಲುಗಳನ್ನು ಮಡಚಿ ನೆಲಕ್ಕೆ ಕುಂಡಿ ಊರಿ ಕುಳಿತುಕೊಂಡ. ಹಾಗೆಯೇ ನೆಲದ ಮೇಲೆ ಮೈ ಒರಗಿಸಿ, ನಿರಂತರವಾಗಿ ಕಣ್ಣುಬಿಟ್ಟು ನಿಂತಿದ್ದ `ಪಂಕು', ರೆಪ್ಪೆಗಳನ್ನು ಮುಚ್ಚುತ್ತಾ ನಿದ್ದೆಗೆ ಶರಣಾದ. ನೆಲಕ್ಕೆ ಒರಗುತ್ತಿದ್ದಂತೆಯೇ ಗಾಢ ನಿದ್ರೆ ಆವರಿಸಿಬಿಟ್ಟಿತು.
ದುರಾದೃಷ್ಟ, `ಪಂಕು'ವಿಗೆ ಮತ್ತೆ ಎಚ್ಚರವೇ ಆಗಲಿಲ್ಲ. ಅವನು ಮಲಗಿದ್ದಲ್ಲಿಯೇ ಮರಣಿಸಿದ್ದ. ಅವನ ದೇಹವು ಪ್ರಪಂಚವಾಗಿ ಮಾರ್ಪಟ್ಟಿತು. ಅವನ ತಲೆ ಮತ್ತು ಕಾಲುಗಳು ಪೂರ್ವ ಮತ್ತು ಪಶ್ಚಿಮದ ಪವಿತ್ರಘಟ್ಟದ ಶ್ರೇಣಿಗಳಾದವು. ಅದೆ ಬಗೆಯಲ್ಲಿ, ಎಡಬಲದ ಕೈಗಳು ಉತ್ತರ ಮತ್ತು ದಕ್ಷಿಣದ ಪವಿತ್ರ ಪರ್ವತ ಶ್ರೇಣಿಗಳಾದವು. ಅವನ ಮುಂಡವು ಭೂಮಿಯ ಮಧ್ಯ ಪ್ರದೇಶದ ಪವಿತ್ರ ಪರ್ವತಗಳ ಸಾಲು ರೂಪ ತಾಳಿತು. ಈ ಎಲ್ಲಾ ಸಕಲ ಪರ್ವತ ಶ್ರೇಣಿಗಳ ತುದಿಗಳು ಸ್ವರ್ಗವನ್ನುಎತ್ತಿ ಹಿಡಿಯುವ ಆಧಾರ ಕಂಬಗಳಾದವು. 
ಮತ್ತೆ `ಪಂಕು'ವಿನ ತಲೆಯ ಮೇಲಿದ್ದ ಕೂದಲುಗಳು ಗ್ರಹಗಳ ಮತ್ತು ನಕ್ಷತ್ರಗಳ ರೂಪ ಪಡೆದವು. ಅವನ ಎಡಗಣ್ಣು ಸೂರ್ಯನಾದರೆ, ಬಲಗಣ್ಣು ಚಂದ್ರನಾಯಿತು. `ಪಂಕು'ವಿನ ದೇಹದ ಮಾಂಸ ಭೂಮಿಗೆ ಮಣ್ಣಾಯಿತು. ಇದಲ್ಲದೇ ಅವನ ಹಲ್ಲು ಮತ್ತು ಮೂಳೆಗಳು ಅಮೌಲ್ಯವಾದ ಪಚ್ಚೆ, ರತ್ನಗಳ, ಬಗೆ ಬಗೆಯ ಅದಿರು ಮತ್ತು ಲೋಹಗಳಾದವು. `ಪಂಕು'ವಿನ ಮೈ ಮೇಲಿನ ರೋಮಗಳು ಮರಗಳು, ಗಿಡಗಂಟಿಗಳು ಹಾಗೂ ಹೂವುಗಳಾದವು. ಅವನ ಮೃತದೇಹದ ಮೇಲೆ ಹರಿದಾಡುತ್ತಿದ್ದ ಹುಳುಹುಪ್ಪಡಿಗಳು, ಬಗೆಬಗೆಯ ಕೀಟಗಳ, ಪ್ರಾಣಿಗಳ ಪಕ್ಷಿಗಳ ಸ್ವರೂಪ ಪಡೆದವು. `ಪಂಕು'ವಿನ ದೇಹದಲ್ಲಿ ಹರಿದಾಡುತ್ತಿದ್ದ ರಕ್ತ ಬಾವಿ, ಕೆರೆ, ಹೊಳೆ, ಹಳ್ಳ, ನದಿಗಳ ಹಾಗೂ ಸಮುದ್ರದ ನೀರಾಯಿತು. ಅವನ ಉಸಿರಾಟದ ದೆಸೆಯಿಂದ ಆಗಲೇ ಗಾಳಿ ಮತ್ತು ಮೋಡಗಳು ಅಸ್ತಿತ್ವ ತಾಳಿದ್ದವು, ಅವನ ಶ್ರಮದ ಬೆವರು ಮಳೆ ಹನಿಗಳಾಗಿದ್ದವು ಮತ್ತೆ ಅವನ ಧ್ವನಿ ಗುಡುಗು ಮಿಂಚಿನರೂಪ ಪಡೆದಿದ್ದವು.
`ಪಂಕು'ವಿನ ದೇಹದ ಪಳೆಯುಳಿಕೆಗಳಿಂದ ಸುಂದರವಾದ ಪ್ರಪಂಚವೊಂದು ಅಸ್ತಿತ್ವದಲ್ಲಿ ಬಂದುದನ್ನು ದೂರದಲ್ಲಿ ನಿಂತು ನೋಡುತ್ತಿದ್ದ `ನುಗು' ದೇವತೆಯಕಣ್ಣು ಸೆಳೆಯಿತು. `ಪಂಕು'ವಿನ ದೇಹದ ಸೃಷ್ಟಿಯ ಪ್ರತಿಯೊಂದು ಸ್ಥಿರವಾದ, ಚರಾಚರ ವಸ್ತುವೂ- ಪ್ರಾಣಿ ಪಕ್ಷಿಗಳು, ಗಿಡಮರಗಳು, ಹುಳು ಹುಪ್ಪಡಿಗಳು, ಸಕಲ ಪ್ರಾಣಿಗಳು ತಮ್ಮತಮ್ಮ ಸಮುದಾಯಗಳಲ್ಲಿ ಅನ್ಯೋನ್ಯವಾಗಿ ಜೀವಿಸುತ್ತಿರುವುದನ್ನು ನೋಡುತ್ತಾ ಇರುವುದು ಅವಳಿಗೆ ಸಂತಸವನ್ನು ನೀಡುತ್ತಿತ್ತು.
`ನುಗು' ದೇವತೆಗೆತನ್ನದೇ ಆದ ಅದ್ಭುತವಾದ ಪ್ರಾಣಿಗಳನ್ನು ಸೃಷ್ಟಿಸಬೇಕೆನ್ನುವ ಹುಕಿ ಹುಟ್ಟಿಕೊಂಡಿತು. ತಾನು ಸೃಷ್ಟಿಸುವ ಪ್ರಾಣಿ ಉಳಿದೆಲ್ಲಾ ಪ್ರಾಣಿ ಪಕ್ಷಿಗಳಿಗಿಂತ ಮೇಲಾದುದಾಗಿರಬೇಕು ಎಂದು ಅವಳು ಬಯಸಿದಳು. ಅದಕ್ಕಾಗಿ ಅಗತ್ಯ ವಸ್ತುಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದಳು. ಆಗಸದಿಂದ ಭೂಮಿಗೆ ಧುಮುಕಿ, ಬಂಗಾರದ ಸಮುದ್ರದ ತೀರದಲ್ಲಿ ತಡಕಾಡಿದಳು, ಮರಳನ್ನು ಬಳಸಲು ಪ್ರಯತ್ನಿಸಿದಳು. ಅವಳ ಸೃಷ್ಟಿ ಕುಸಿದು ಬೀಳುತ್ತಿತ್ತು. 
ಕಲ್ಲಿನಲ್ಲಿ ಕೆತ್ತಲು ಪ್ರಯತ್ನಿಸಿದಳು. ಅವಳಿಗೆ ಅದು ಬಹಳ ಕಷ್ಟದ ಕೆಲಸ ಅನ್ನಿಸಿತು. ಆಗ, ಆಕಸ್ಮಿಕವಾಗಿ ಹಳದಿ ನದಿಯ ದಡದಲ್ಲಿನ ಮೆಕ್ಕಲು ಮಣ್ಣು ಕಣ್ಣಿಗೆ ಬಿತ್ತು. ಅದು ಮೃದುವಾಗಿದ್ದು, ಬಯಸಿದ ಆಕಾರದಲ್ಲಿ ರೂಪಪಡೆಯುವ ಮಣ್ಣಾಗಿತ್ತು.
ದೇವತೆ `ನುಗು' ಆ ಮೃದು ಮಣ್ಣನ್ನು ತುಳಿದು, ತಟ್ಟಿ, ನಾದಿ ಒಂದು ಹದಕ್ಕೆತಂದು, ಇಷ್ಷಿಷ್ಟೇ ಹದವಾದ ಮಣ್ಣುತೆಗದುಕೊಂಡು, ಒಂದು ರೂಪಕೊಡಲು ಮುಂದಾದಳು. ಹತ್ತಾರು ಬಾರಿ ಮಾಡಿ ಕೆಡಿಸಿದ ನಂತರ ಕೊನೆಗೊಂದು ಮೈ ತಳೆದ ಆಕಾರ ಅವಳ ಮನಸ್ಸಿಗೆ ನೆಮ್ಮದಿ ತಂದಿತು. ಆಕೆ, ಪುಟ್ಟದಾದ ಮಾಟವಾದ ಆ ಆಕಾರವನ್ನೇ ಹೋಲುವ ಮತ್ತಷ್ಟು ಆಕಾರಗಳನ್ನು ರಚಿಸಿದಳು. ಅವನ್ನೆಲ್ಲಾ ನಿಲ್ಲಿಸಿ ನೋಡಿ ಏನು ಹೆಸರಿಡೋಣ? ಎಂದು ಯೋಚನೆ ಮಾಡಿ ಮಾಡಿ ಅವಕ್ಕೆ `ಜನ' ಎಂದು ಹೆಸರಿಟ್ಟಳು.
ಆ ಜನರಲ್ಲಿ ಕೆಲವರು ಎತ್ತರವಿದ್ದರು, ಕೆಲವರು ಕುಳ್ಳಗಿದ್ದರು, ಮತ್ತೆ ಕೆಲವರು ದಪ್ಪಗಿದ್ದರು, ಇನ್ನೊಂದಿಷ್ಟು ಜನ ತೆಳ್ಳಗಿದ್ದರು, ಕೆಲವರು ಭಾರವಾಗಿದ್ದರು, ಕೆಲವರು ಹಗುರವಾಗಿದ್ದರು. ಆದರೆ, ಪ್ರಾಥಮಿಕವಾಗಿ ಎರಡು ಬಗೆಯ ಜನರಿದ್ದರು. ದೇವತೆ `ನುಗು' ಒಂದು ಬಗೆಯ ಜನರಿಗೆ ಪುರುಷತನ `ಯಂಗ್' ಅನ್ನು ಉಸಿರಿದಾಗ ಅವರು ಪುರುಷರಾದರು. ಉಳಿದವರಿಗೆ ಮಹಿಳಾತನ `ಯಿನ್' ಅನ್ನು ಉಸಿರಿದಾಗ ಅವರು ಮಹಿಳೆಯರಾದರು. 
ತಾನು ರಚಿಸಿದ ಜನತನ್ನ ಮುಂದೆ ಮಾತನಾಡ ತೊಡಗಿರುವುದನ್ನು, ನಡೆದಾಡುವುದನ್ನು ಮತ್ತು ಸುತ್ತಲ ಪರಿಸರವನ್ನು ಅವಲೋಕಿಸುವುದನ್ನು ನೋಡಿ, ದೇವತೆ `ನುಗು'ಗೆ ಸಂತೋಷವಾಯಿತು. ಅವಳು ಚಪ್ಪಾಳೆ ತಟ್ಟಿತನ್ನ ಸಂತೋಷವನ್ನು ವ್ಯಕ್ತಪಡಿಸಿದಳು.
ಆ ಜನರನ್ನು ಕಂಡು ಉತ್ತೇಜಿತಳಾದ `ನುಗು' ದೇವತೆ ಒಂದೇ ಬಾರಿಗೆ ಹೆಚ್ಚು ಹೆಚ್ಚು ಜನರನ್ನು ಸೃಷ್ಟಿಸಲು ಯೋಚಿಸತೊಡಗಿದಳು. ಅವಳ ಉತ್ಸಾಹ ಮೇರೆ ಮೀರಿತ್ತು. ತಾಳ್ಮೆ ಕಳೆದುಕೊಂಡ ಅವಳು ಶೀಘ್ರ ಶೀಘ್ರವಾಗಿ ಮತ್ತಷ್ಟು ಜನರನ್ನು ಸೃಷ್ಟಿಸುವ ವಿಧಾನದ ಬಗೆಗೆ ಚಿಂತಿಸತೊಡಗಿದಳು. 
ಆಗ, ಅವಳ ಕಣ್ಣಿಗೆ ಅಲ್ಲೆ ಹತ್ತಿರದಲ್ಲಿ  ಬಿದ್ದಿದ್ದ ಉದ್ದನೆಯ ಹಗ್ಗವೊಂದು ಕಾಣಿಸಿತು. ತಕ್ಷಣವೇ ಅದನ್ನು ಕೈಗೆತ್ತಿಕೊಂಡ `ನುಗು' ದೇವತೆ ಹಳದಿ ನದಿಯ ಮೃದುವಾದ ಮಣ್ಣಿನಲ್ಲಿ ಇರಿಸಿದಳು. ಅಲ್ಲಿಯೇ ಅದನ್ನು ಇಟ್ಟು ಗಿರಗಿರನೇ ಸುತ್ತ ತೊಡಗಿದಳು. ನದಿಯ ಮಣ್ಣಿನಲ್ಲಿದ್ದ ಹಗ್ಗಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅಂಟುಅಂಟಾದ ಮೆಕ್ಕೆಮಣ್ಣು ಮೆತ್ತಿಕೊಂಡಿತು. ನಿಧಾನವಾಗಿ ಅದನ್ನು ಮೇಲೆತ್ತಿಕೊಂಡು ದಂಡೆಗೆ ಬಂದ `ನುಗು' ದೇವತೆ ಅದನ್ನು ಜೋರಾಗಿ ಗಿರಗಿರ ತಿರುಗಿಸತೊಡಗಿದಳು. ಅದರಿಂದ ಸಿಡಿದು ನೆಲಕ್ಕೆ ಬೀಳುವ ಪ್ರತಿಯೊಂದು ಹನಿಯಿಂದ ಜನ ರೂಪಗೊಳ್ಳ ತೊಡಗಿದರು. 
ಅದನ್ನು ಕಂಡು `ನುಗು' ದೇವತೆಗೆ ರೋಮಾಂಚನ ಉಂಟಾಯಿತು. ಆದರೆ ಈ ಜನ, ಅವಳು ಈ ಮೊದಲು ಕೈಯಾರೆ ಮಾಡಿದ್ದ ಜನರಂತೆ ಇರಲಿಲ್ಲ. ಅವರಷ್ಟು ಮಾಟವಾಗಿರಲಿಲ್ಲ, ಅವರಲ್ಲಿ ಚುರುಕುತನವಿರಲಿಲ್ಲ, ಅವರಷ್ಟು ಕೌಶಲ್ಯವನ್ನೂ ಹೊಂದಿರಲಿಲ್ಲ. ಆದರೆ, ಅದರ ಬಗ್ಗೆ ನುಗು ದೇವತೆ ತನ್ನ ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೇ, ಹಳದಿ ನದಿಯ ಮಣ್ಣಿನಲ್ಲಿ ಅದ್ದಿದ ಹಗ್ಗವನ್ನು ಸುತ್ತಿಸುವುದರಿಂದ ಜನರನ್ನು ಮಾಡುವುದು ಆಕೆಗೆ ಸುಲಭದ ಕೆಲಸವಾಗಿತ್ತು. ಈ ಎರಡೂ ವಿಧಾನಗಳಲ್ಲಿ ಅಸ್ತಿತ್ವಕ್ಕೆ ಬಂದ ಜನ ಪರಸ್ಪರ ಪರಿಚಯಿಸಿಕೊಳ್ಳುವುದನ್ನು ಕಂಡು `ನುಗು' ದೇವತೆಗೆ ಸಂತಸವಾಯಿತು. 
ಮೊದಲು ಬಂದ ಮಾಟವಾದ ಜನ, ಬುದ್ಧಿವಂತರಾಗಿದ್ದರು, ಅವರು ನಿಧಾನವಾಗಿ ಚಾಕಚಕ್ಯತೆಯಿಂದ ಎಲ್ಲದರ ಮೇಲೂ ತಮ್ಮ ಹಿಡಿತ ಸಾಧಿಸತೊಡಗಿದರು. ನಾಯಕತ್ವದಗುಣ ಹೊಂದಿದ್ದ ಈ ಮಾಟವಾದ ಜನರ ನಾಯಕತ್ವವನ್ನು, ನಂತರ ಹಗ್ಗದಿಂದ ಅಸ್ತಿತ್ವದಲ್ಲಿ ಬಂದ ಜನರು ಸರಳವಾಗಿ ಒಪ್ಪಿಕೊಂಡರು. ಒಳ್ಳೆಯ ಕೆಲಸಗಾರರಾಗಿದ್ದ ಹಗ್ಗದಜನ ತಮ್ಮ ಇರುವಿಕೆಯ ಬಗ್ಗೆ ಅಷ್ಟೇನೂ ಬೇಸರಿಸಿಕೊಳ್ಳಲಿಲ್ಲ. ಎಲ್ಲ ಜನರೂ ಸಮಾಧಾನವಾಗಿದ್ದರು, ಸಂತಸದಲ್ಲಿ ಜೀವನ ಸಾಗಿಸುತ್ತಿದ್ದರು. 
ಆ ಜನರು ಊರುಗಳನ್ನು ಕಟ್ಟಿದರು, ಬಾವಿಗಳನ್ನು ತೋಡಿದರು. ನೆಲವನ್ನು ಊಳತೊಡಗಿದರು. ಸಮಾಧಾನದಲ್ಲಿ ಎಲ್ಲವನ್ನು ರೂಢಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ, ಒಂದು ದಿನ ಅವರೆಲ್ಲರಿಗೂ ಸಂಕಟ ಬಂದಿತು. 
ಏಕೆಂದರೆ, ಈ ಜನರ ಹೆಚ್ಚುತ್ತಿರುವ ಚಟುವಟಿಕೆಗಳಿಂದ ಭೂಮಿಯ ಅಡಿಯಲ್ಲಿ ಮಲಗಿದ್ದ `ಗೊಂಗ್‌ಗೊಂಗ್' ದೈತ್ಯಪ್ರಾಣಿಗೆ ತೊಂದರೆಯಾಯಿತು. ಸಿಟ್ಟಿಗೆದ್ದ ಅದು ಭೂಮಿಯಿಂದ ಎದ್ದು ಹೊರಗೆ ಬಂದಿತು. ಅದು ಹೊರಗೆ ಬರುತ್ತಿದ್ದಂತೆಯೆ ಬಿರುಕು ಬಿಟ್ಟ ಭೂಮಿಯಿಂದ ಬೆಂಕಿಯ ನದಿಯು ಹರಿಯುತ್ತಾ ಕೆನ್ನಾಲಿಗೆಗಳೊಂದಿಗೆ ತೂರಾಡತೊಡಗಿತು. 
`ಗೊಂಗ್‌ಗೊಂಗ್' ದೈತ್ಯ ಪ್ರಾಣಿ, ಹಿಂದಕ್ಕೆ ಸರಿದು ತನ್ನತಲೆ ಹೆಗಲು ಕೊಡವಿಕೊಂಡಿತು. ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟಿದ್ದ ಆ ದೈತ್ಯ ಪ್ರಾಣಿ, ಹಿಂಗಾಲಿನಲ್ಲಿ ನಿಂತುತಲೆಯಿಂದಡಿಕ್ಕಿ  ಹೊಡೆದಾಗ, ಆಕಾಶವನ್ನು ಎತ್ತಿ ಹಿಡಿದಿದ್ದ ಪರ್ವತಗಳು ಅದುರಿದವು. ಆಕಾಶಕ್ಕೆ ದೊಡ್ಡ ತೂತು ಬಿತ್ತು. ಸ್ವಲ್ಪ ಪ್ರಮಾಣದಲ್ಲಿ ಆಕಾಶ ಕುಸಿದು ಬಿತ್ತು. ಆಕಾಶದಿಂದ ದೊಡ್ಡ ಹರಿವಿನಲ್ಲಿ ನೀರು ಸುರಿಯತೊಡಗಿತು.
ತನ್ನ ಜನರು ಜೀವ ಉಳಿಸಿಕೊಳ್ಳಲು ಹೆದರಿಕೆಯಲ್ಲಿ ಅತ್ತ ಇತ್ತ ದಿಕ್ಕುಪಾಲಾಗಿ ಓಡುತ್ತಿರುವುದನ್ನು ನೋಡಿ, `ನುಗು' ದೇವತೆಗೆ ತನ್ನ ಜನರಗತಿ ಏನಾಗುವುದು? ಎಂಬ ಆತಂಕ ಮೂಡಿತು. ಜನರ ಸಹಸ್ರಾರು ಮನೆಗಳು ಒಂದುಕಡೆ ಬೆಂಕಿಗೆ ಆಹುತಿಯಾದರೆ, ಅದರಿಂದ ಬಚಾವಾಗಿ ಉಳಿದ ಇನ್ನೊಂದಿಷ್ಟು ಮನೆಗಳು ನೀರಲ್ಲಿ ಮುಳುಗಿದವು. `ನುಗು' ದೇವತೆಗೆ ತಕ್ಷಣ ಉಪಾಯವೊಂದು ಹೊಳೆಯಿತು.
ಅವಳು ಹಳದಿ ನದಿಯ ದಂಡೆಗುಂಟ ಬೆಳೆದ ಗಿಡಗಂಟಿಗಳಿಗೆ ಬೆಂಕಿ ಹಚ್ಚಿದಳು. ಗಿಡಗಂಟಿಗಳು ಸುಟ್ಟ ನಂತರ ಸಿಕ್ಕ ಬೂದಿಯನ್ನುಎತ್ತಿಕೊಂಡು ಹೋಗಿ ಬಿರುಕು ಬಿಟ್ಟ ಭೂಮಿಯ ಜಾಗಗಳನ್ನೆಲ್ಲಾ ತುಂಬಿದಳು. ಹಾಗಾದಾಗ, ಬೆಂಕಿಯುಗುಳುವ ಬೆಂಕಿಯ ನದಿಯು ನಂದಿತು. ನದಿಯ ತಳದಲ್ಲಿದ್ದ ಕಲ್ಲುಗಳನ್ನು ಆರಿಸಿಕೊಂಡು ಹೋಗಿ, ಒಂದೊಂದಾಗಿ ಆಗಸದಲ್ಲಿ ಉಂಟಾಗಿದ್ದ ತೂತುಗಳನ್ನು ಮುಚ್ಚಿದಳು.
ಬೆಂಕಿಯು ನಂದಿ ಹೋಯಿತು. ನೀರು ಹರಿದು ಹೋಯಿತು. ಜನರಲ್ಲಿ ಮತ್ತೆ ಜೀವ ಬಂದಂತಾಯಿತು. ಒಬ್ಬೊಬ್ಬರಾಗಿ ತಮ್ಮ ಮೊದಲಿನ ತಾಣಗಳಿಗೆ ಹಿಂದಿರುಗ ತೊಡಗಿದರು. `ನುಗು' ದೇವತೆಯ ಮೊಗದಲ್ಲಿ ನಗು ಮೂಡಿತು. ಅವಳ ಜನ, ಕೊನೆಗೆ ಮೊದಲಿನಂತೆಯೆ ಸುರಕ್ಷಿತವಾಗಿ ನೆಮ್ಮದಿಯ ಜೀವನ ಸಾಗಿಸ ತೊಡಗಿದರು. 

-- ಚೀನಾ ದೇಶದಲ್ಲಿ ಪ್ರಚಲಿತವಿರುವ ಸೃಷ್ಟಿಯ ಒಂದು ಪೌರಾಣಿಕ ಕತೆ.

ಎಫ್. ಎಂ. ನಂದಗಾವ್

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು - 6


ಹಿಂದಿನ ಸಂಚಿಕೆಯಲ್ಲಿ 'ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು' ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಕರ್ನಾಟಕಕ್ಕೆ ಆಗಮಿಸಿದಂತಹ ಮಿಶನರಿಗಳು ತಮ್ಮ ಅಮೂಲ್ಯ ಸಮಯವನ್ನು ಸಾಹಿತ್ಯಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತೊಡಗಿದ್ದರು ಎಂಬುದನ್ನು ತಿಳಿದಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಅವರ ಸೇವೆಯು ಸಾಮಾಜಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿಯೂ ವಿಸ್ತಾರವಾಗಿತ್ತು ಎಂಬುದನ್ನು ಸಾದಾರಪಡಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ. 
ಸಾಮಾಜಿಕ ಕಾರ್ಯಗಳು : 
ಮಿಶನರಿಗಳ ಸಾಧನೆಯನ್ನು ಗಮನಿಸಿದಾಗ ಅವರ ಸೇವಾಹಸ್ತವು ಸಾಮಾಜಿಕ ರಂಗದಲ್ಲೂ ಸ್ವರ್ಶಿಸಿದ್ದುದನ್ನು ನಾವು ಕಾಣಬಹುದಾಗಿದೆ. ಮಿಶನರಿಗಳ ಪ್ರವೇಶದಿಂದ ಸಮಾಜದಲ್ಲಿ ಬಹಳಷ್ಟು ಮಾರ್ಪಾಡುಗಳಾದವು. 18ನೇ ಶತಮಾನದ ಅವಧಿಯನ್ನು ಅಥವಾ ಅದಕ್ಕಿಂತಲೂ ಪೂರ್ವದ ಅವಧಿಯನ್ನು ನೋಡಿದರೆ ಸಮಾಜದ ಜನರಲ್ಲಿ ಅಜ್ಞಾನ,ಅನಕ್ಷರತೆ, ಅಂಧಶ್ರದ್ಧೆ, ಮೂಢನಂಬಿಕೆಗಳಂತಹ ಸಂಗತಿಗಳು ತಾಂಡವವಾಡುತ್ತಿದ್ದವು, ಬೆರಳೆಣಿಸುವಷ್ಟು ಜನರು ಮಾತ್ರ ಬುದ್ಧಿಜೀವಿಗಳು, ತಾರ್ಕಿಕವಾದಿಗಳಾಗಿ ಜೀವಿಸುತ್ತಿದ್ದರು.ಶಿಕ್ಷಣವು ಕೂಡ ಸ್ವಾರ್ಥಪರ ನಿಲುವಿನಿಂದ ಕೇವಲ ಉಚ್ಚ ಜಾತಿಯವರಿಗೆ ಮಾತ್ರ ಲಭಿಸುತ್ತಿತ್ತು. ಇದರಿಂದ 12ನೇ ಶತಮಾನದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳುಂಟಾಗಿದ್ದರೂ ಗಣನೀಯವಾದ ಪರಿಣಾಮ ಸಮಾಜದ ಮೇಲುಂಟಾಗಿರಲಿಲ್ಲ. ಆದರೆ 18 ಮತ್ತು 19ನೇ ಶತಮಾನದಲ್ಲಿ ಪಾಶ್ಚಾತ್ಯ ಸಂಪರ್ಕ ಅದರಲ್ಲೂ ಮಿಶನರಿ ಜನರ ಶೈಕ್ಷಣಿಕ ಕ್ಷೇತ್ರದಲ್ಲಿನ ಬದಲಾವಣೆಗಳಿಂದಾಗಿ ಸಮಾಜದ ಜನರಲ್ಲಿಯೂ ಹೊಸ ಹೊಸ ದೃಷ್ಟಿಕೋನಗಳು ನವೀನ ವಿಚಾರಧಾರೆಗಳು ಮೂಡತೊಡಗಿದವು. ಜನರು ಹಳೆಯ ಸಂಗತಿಗಳನ್ನು ಬಿಟ್ಟು ಪ್ರಗತಿಪರ ಸಂಗತಿಗಳಿಗೆ ಮಾರುಹೋಗಿ ತಮ್ಮನ್ನು ಕೂಡ ಆ ದಿಸೆಯಲ್ಲಿ ಕಾರ್ಯ ಪ್ರವೃತ್ತರನ್ನಾಗಿಸಿಕೊಂಡರು. ಮಿಶನರಿಗಳು ಬರಗಾಲದಿಂದ ತತ್ತರಿಸಿಹೋದ ಜನರಿಗೆ ಆರ್ಥಿಕವಾಗಿ ಸಹಾಯ ಮಾಡುವಲ್ಲಿ, ಮನೆ-ಮಠಗಳಿಲ್ಲದವರಿಗೆ ನಿವೇಶನಗಳನ್ನು ಕೊಡಿಸುವುದು, ಸಮಂಜಸ ವೃತ್ತಿಪರ ಮಾರ್ಗದರ್ಶನದಂತಹ ಕೆಲವು ಸಲಹೆಗಳನ್ನು ನೀಡಿ ಅವರನ್ನು ತರಬೇತುಗೊಳಿಸಿ ಕೆಲಸಕ್ಕೆ ತೊಡಗುವಂತೆ ಮಾಡುವುದು, ಅನಾರೋಗ್ಯಕ್ಕೀಡಾದಾಗ ಅವರಿಗೆ ಔಷಾಧೋಪಚಾರಗಳ ನೆರವು ನೀಡುವುದು, ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳನ್ನು, ಬೋರ್ಡಿಂಗ್ ಹೋಮ್‌ಗಳನ್ನು, ಅನಾಥಮಕ್ಕಳಿಗೆ ಅನಾಥಾಶ್ರಮಗಳಂತಹ ಶಾಲೆಗಳನ್ನು, ವಿಧವೆಯರಿಗೆ ಅನೇಕ ಕರ-ಕುಶಲ ತರಬೇತಿಯನ್ನು ನೀಡಿ ಅವರೆಲ್ಲರೂ ಸ್ವಾಭಿಮಾನ ಬಾಳ್ವೆ ನಡೆಸಲು ಮನೋಸ್ಥೈರ್ಯವನ್ನು ತುಂಬುವಂತಹ ಅನೇಕ ಸೃಜನಾತ್ಮಕ ಕಾರ್ಯಗಳನ್ನು ಕೈಗೊಂಡಿದ್ದರಿಂದ ಇವರ ಕ್ರಿಯಾತ್ಮಕ ಸಹಾಯ ಹಸ್ತಕ್ಕೆ ಮಾರುಹೋಗಿ ಸಾಮಾನ್ಯರು ಇವರ ಹಿಂಬಾಲಕರಾದರು. ಸಮಾಜದಲ್ಲಿಯು ಕೂಡ ಉತ್ತಮವಾದ ವಾತಾವರಣ ಸೃಷ್ಟಿಯಾಗಿ ಪ್ರಗತಿಪರ ಧೋರಣೆಳು ಕಂಡುಬಂದವು.
ಔದ್ಯೋಗಿಕ ಕಾರ್ಯಗಳು :
ಮಿಶನರಿಗಳು ಇಂಡಿಯಾಕ್ಕೆ ಆಗಮಿಸಿದ ನಂತರ ನಾಡಿನಾದ್ಯಂತ ಹಲವು ಸಮಸ್ಯೆಗಳು ನಿವಾರಿಸಲ್ಪಟ್ಟವು. ಬಡತನದ ದವಡೆಗೆ ಸಿಲುಕಿದ್ದವರು ಬಡತನದಲ್ಲೇ ಜೀವನ ಸಾಗಿಸುತ್ತಿದ್ದುದು, ಶ್ರೀಮಂತರು ದಬ್ಬಾಳಿಕೆಯ ಜೀವನ ನಡೆಸುತ್ತಿದ್ದುದನ್ನು ಗಮನಿಸಿದ ಇವರು ಬಡತನದಲ್ಲಿರುವವರಿಗೆ ಯೋಗ್ಯವಾದ ಕೆಲಸ ಕಾರ್ಯಗಳನ್ನು ಒದಗಿಸಿಕೊಟ್ಟು ಅವರನ್ನು ಅಭಿವೃದ್ಧಿ ಪಡಿಸುವುದಕ್ಕೆ ನಾನಾ ವಿಧವಾದ ಔದ್ಯೋಗಿಕ ಕಾರ್ಯಗಳನ್ನು ಕಲ್ಪಿಸಿಕೊಟ್ಟರು. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಯುವಪೀಳಿಗೆಗೂ ಉತ್ತಮ ಅವಕಾಶಗಳನ್ನು ಒದಗಿಸಿಕೊಟ್ಟು ಅವರ ಆರ್ಥಿಕ ಸ್ಥಿತಿಗತಿಯನ್ನು ಉತ್ತಮ ಗುಣಮಟ್ಟಕ್ಕೆ ಕೊಂಡೊಯ್ದ ಘಟನೆಗಳು ಇಲ್ಲಿ ಕಂಡು ಬರುತ್ತವೆ. 
ಮಿಶನರಿಗಳು ತಮ್ಮ ಕಾರ್ಖಾನೆಗಳನ್ನು ಮಂಗಳೂರು, ಮಲ್ಪೆ, ಕಣ್ಣಾನೂರು, ಮತ್ತು ಕಲ್ಲಿಕೋಟೆಗಳಲ್ಲಿ ಪ್ರಾರಂಭಿಸಿದರು. ಹಂಚಿನ ಮತ್ತು ಹತ್ತಿ ಬಟ್ಟೆಯ ಕಾರ್ಖಾನೆಗಳನ್ನು ತೆರೆದು ಸಾವಿರಾರು ನಿರಾಶ್ರಿತರಿಗೆ ಆಶ್ರಯ ಮತ್ತು ಉದ್ಯೋಗವಕಾಶ ಕಲ್ಪಿಸಿಕೊಟ್ಟಿದ್ದರು. ಬಾಸೆಲ್ ಮಿಶನ್ನಿನ ಹಂಚು ಸಮಸ್ತ ಇಂಡಿಯಾದಲ್ಲಿ ದೊಡ್ಡ ಹೆಸರುಗಳಿಸಿತ್ತು. ಈ ಕಾರ್ಖಾನೆಗಳು ಬಡ ಜನರಿಗೆ ನಿತ್ಯ ಜೀವನೋಪಾಯಕ್ಕೆ ನಿಧಿಯಾಗಿದ್ದವು. ಬಟ್ಟೆ ಕಾರ್ಖಾನೆಗಳು ಕೂಡ ಅಸ್ತಿತ್ವದಲ್ಲಿದ್ದವು. ಬಡವರಿಗೆ ಕೈಗೆಟಕಬಹುದಾದ ಬೆಲೆಯಲ್ಲಿ ಸಿಗುವುದರ ಜೊತೆಗೆ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ತಯಾರಿಸಿದ ಈ ಕಾರ್ಖಾನೆಗಳು ಮಹಿಳೆಯರ ಕರಕುಶಲತೆಗೆ ಸಂಬಂಧಿಸಿದಂತೆ ನಿಟ್ಟಿಂಗ್, ಕ್ರಾಸ್ ಸ್ಟಿಚ್ಛ್ ಹೊಲಿಗೆ, ಇತ್ಯಾದಿ ಗುಡಿ ಕೈಗಾರಿಕೆಗಳ ತರಬೇತಿಯನ್ನು ನೀಡುತ್ತಿದ್ದವು. ಜೊತೆಗೆ ನೇಯುವ ಮಗ್ಗಗಳನ್ನು ಸ್ಥಾಪಿಸಿದರು ಮತ್ತು ಲೋಹಗಳಾದ ಸೀಸ, ಹಿತ್ತಾಳೆ, ಕಬ್ಬಿಣದ ವಸ್ತುಗಳನ್ನು ತಮ್ಮ ಕಾರ್ಯಗಾರದಲ್ಲಿ ತಯಾರಿಸುತ್ತಿದ್ದರು. ಇವರು ತಯಾರಿಸುತ್ತಿದ್ದ ಕಬ್ಬಿಣದ ಪೆಟ್ಟಿಗೆಗಳನ್ನು ಅಂದಿನ ಮದ್ರಾಸಿನ ಬ್ರಿಟೀಷ್ ಸರ್ಕಾರ ತನ್ನ ಎಲ್ಲಾ ಖಜಾನೆಗಳಲ್ಲಿಯೂ ಬ್ಯಾಂಕ್‌ಗಳಲ್ಲಿಯೂ ಉಪಯೋಗಿಸುತ್ತಿತ್ತು. ಮಿಶನರಿಗಳು ಕ್ರಿ.ಶ. 1874ರಲ್ಲಿ ಒಂದು ತಾಂತ್ರಿಕ ಕಾರ್ಯಗಾರವನ್ನು ಸ್ಥಾಪಿಸಿದರು, ಹಟ್ಟಂಗರ್ ಎಂಬ ತಾಂತ್ರಿಕ ಮಿಶನರಿ ಇದರ ಜವಬ್ದಾರಿ ವಹಿಸಿ ಒಬ್ಬ ನುರಿತ ಕೆಲಸದವರನ್ನಿಟ್ಟುಕೊಂಡು ಐದು ಜನ ತರಬೇತುದಾರರನ್ನು ಹೊಂದಿ ಕಾರ್ಯ ನಿರ್ವಹಿಸಿದಾಗ ಎರಡೇ ವರ್ಷಗಳಲ್ಲಿ ಈ ಕಾರ್ಯಗಾರ ವಿಶಾಲವಾಗಿ ಬೆಳೆದು ಅಲ್ಲಿ ಕೆಲಸ ಮಾಡುವವರ ಸಂಖ್ಯೆ ಇಪ್ಪತ್ತೈದಕ್ಕೆ ಏರಿತು. ಇದರಿಂದಾಗಿ ಅವರ ಜೀವನ ಕ್ರಮವು ಕ್ರಮವಾಗಿ ಸುಧಾರಿಸಲ್ಪಟ್ಟಿತು. ಕ್ರಿ.ಶ. 1851ರಲ್ಲಿ ಜಾನ್ ಹಲ್ಲರ್ ಎಂಬಾತನ ನೇತೃತ್ವದಲ್ಲಿ ಯೂರೋಪಿಯನ್ ಮಾದರಿಯ ನೇಯ್ಗೆಕಾರ್ಯವನ್ನು ಮಂಗಳೂರಿನಲ್ಲಿ ಆರಂಭಿಸಿದರು. ಜಗತ್ ಪ್ರಸಿದ್ಧವಾದ ಖಾಕಿ ಬಟ್ಟೆಯ ಸಂಶೋಧನೆ ಮಂಗಳೂರಿನ ಬಾಸೆಲ್‌ಮಿಶನ್ ನೇಯ್ಗೆಯ ಕಾರ್ಖಾನೆಯಲ್ಲಿ ಹಲ್ಗರ್‌ನಿಂದಾಯಿತು. ಕ್ರಿ.ಶ. 1865ರಲ್ಲಿ ಪ್ಲೆಚಿಸ್ಟ್ ನವೀನ ಮಾದರಿಯ ಹಗುರ ಭಾರದ ಹಂಚನ್ನು ನಿರ್ಮಾಣಗೊಳಿಸಿ ಪಶ್ಚಿಮ ಕರಾವಳಿಯಲ್ಲಿ ಮಾತ್ರವಲ್ಲ ಇಂಡಿಯಾದಲ್ಲಿಯೇ ವ್ಯಾಪಕವಾದ ಬೇಡಿಕೆ ಗಳಿಸುವಂತೆ ಸಿದ್ಧಪಡಿಸಿದರು. ಕ್ರಿ.ಶ. 1874ರಲ್ಲಿ ಮಂಗಳೂರಿನಲ್ಲಿಯೇ ಕಬ್ಬಿಣದ ಕಾರ್ಖಾನೆಯೊಂದನ್ನು ಆರಂಭಿಸಿದರು. ಈ ಕಾರ್ಖಾನೆಯಲ್ಲಿ ಶ್ರೇಷ್ಠ ಗುಣಮಟ್ಟದ ಹಾಗೂ ಭದ್ರವಾದ ಬೀಗಗಳು, ಖಜಾನೆಗಳು ಮತ್ತು ಕಾರ್ಖಾನೆಗಳಿಗೆ ಬೇಕಾಗುವ ವಿವಿಧ ರೀತಿಯ ಅಚ್ಚುಗಳನ್ನು ತಯಾರಿಸುತ್ತಿದ್ದರು. ಮನೆ ಸಾಮಾಗ್ರಿ ಹಾಗೂ ಉಪಯುಕ್ತವಾದ ಆಧುನಿಕ ಉಪಕರಣಗಳನ್ನು ಮಾರುವ ವ್ಯಾಪಾರ ಮಳಿಗೆಗಳನ್ನು ಮಂಗಳೂರಿನ ಕೆಲವೆಡೆಗಳಲ್ಲಿ ಸ್ಥಾಪಿಸಿದರು. 
19ನೇ ಶತಮಾನದ ಕೊನೆ ಘಟ್ಟದಲ್ಲಿ ಮಂಗಳೂರು, ಕಲ್ಲಿಕೋಟೆ, ಕಣ್ಣನೂರು, ಮಲ್ಪೆ, ಮೊದಲಾದ ಸ್ಥಳಗಳಲ್ಲಿ ಸುಮಾರು ಐದು ಹಂಚಿನ ಮತ್ತು ನೇಯ್ಗೆಯ ಕಾರ್ಖಾನೆಗಳು ಸ್ಥಾಪಿಸಲ್ಪಟ್ಟು ಅವುಗಳಲ್ಲಿ ಸಾವಿರಾರು ಜನರು ದುಡಿಯುತ್ತಿದ್ದರು. ಈ ಮಿಶನರಿಗಳು ಕರ್ನಾಟಕದ ಜನರಿಗೆ ಹೊಲಿಗೆ, ಬಡಿಗೆ, ನೇಯ್ಗೆ, ಮುಂತಾದ ಗುಡಿ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ತರಬೇತುಗೊಳಿಸಿದ್ದರಿಂದ ಇವರು ತಯಾರಿಸಿಕೊಟ್ಟ ವಸ್ತುಗಳು ಮತ್ತು ಬಟ್ಟೆಗಳು ಯೂರೋಪಿಗೂ, ಏಷ್ಯಾ ಮತ್ತು ಆಫ್ರಿಕಾದ ಅನೇಕ ರಾಷ್ಟ್ರಗಳಿಗೂ ರಫ್ತಾಗುತ್ತಿದ್ದವು. ಇದರಿಂದ ಸಾವಿರಾರು ಜನರ ಜೀವನೋಪಾಯಕ್ಕೆ ಅನುಕೂಲವಾಯಿತು. ಹಾಗೆಯೇ ಯುವಕರಿಗೆ ಗಡಿಯಾರ ತಯಾರಿಸುವುದು, ಬಟ್ಟೆ ನೇಯುವುದು, ಹಂಚು ತಯಾರಿ, ಸಾಬೂನು ಮಾಡುವುದು, ಮತ್ತು ಬಡಗಿಯ ಕೆಲಸ ಮುಂತಾದವುಗಳನ್ನು ಅವರುಗಳ ಜೀವನೋಪಾಯಕ್ಕಾಗಿ ಪರಿಚಯಿಸಿಕೊಟ್ಟರು.

ಮುಂದಿನ ಸಂಚಿಕೆಯಲ್ಲಿ ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯವನ್ನು ಬೆಳೆಸುವಲ್ಲಿ ದುಡಿದ ಕ್ರೈಸ್ತ ಸಾಹಿತಿಗಳ ಬದುಕು ಮತ್ತು ಬರಹವನ್ನು ಪರಿಚಯಿಸಲಾಗಿವುದು.

ಡಾ. ಸಿಸ್ಟರ್ ಪ್ರೇಮ (ಎಸ್. ಎಮ್. ಎಮ್. ಐ) 


ಮೌನದ ದನಿ


ಬಾಗಿಲನ್ನು ತಟ್ಟುವ ಸದ್ದು ಕೇಳಿ
ಮನಸ್ಸು ಕಳವಳಗೊಂಡಿದೆ
ಯಾರು?
ಯಾಕಾಗಿ ತಟ್ಟುತ್ತಿರುವರು?
ಬಂದು ಒಳಗೆ ಮಾಡುವುದಾದರೂ ಏನು?
ಒಳ ಬಿಟ್ಟು ಹೊರಗೆ ಹೋಗುವುದೆಂದು?
ಅಯ್ಯೊ ಏನೇನೋ ಪ್ರಶ್ನೆಗಳು
ಹೌದು
ಬಾಗಿಲು ತಟ್ಟುವ ಸದ್ದು ಕೇಳಿ
ಕಳವಳಕೊಂಡಿದೆ ಮನಸ್ಸು
ಇವಿಷ್ಟು ಪ್ರಶ್ನೆಗಳ ಜತೆಗೆ ಮತ್ತಷ್ಟು
ಸೇರಿಕೊಳ್ಳುತ್ತಿದೆ
ಬಂದವನು ಮನಸ್ಸು ಕೂಡಿ
ಏನು ಮಾಡಿಬಿಡುವನು?
ನನ್ನ ಸಹ್ಯ ಅಸಹ್ಯಗಳು ಅವನಿಗೆ
ಕಾಣಿಸಿಬಿಡುವುದೇ?
ಮುಖವಾಡಗಳು ಕಳ್ಳರಂತೆ ಸಿಕ್ಕಿಬಿಡುವುದೇ
ಅವನ ಪೋಲಿಸ್ ಕೈಗಳಿಗೆ
 ಸಿಕ್ಕ ಮುಖವಾಡಗಳ ಕಂಡು
ರೋಸಿ
ಹೋಗಿಬಿಡುವನೇ ನನ್ನ ಬಿಟ್ಟು?
ಎಲ್ಲಾ ಈ ಗೊಂದಲಗಳಿಂದ
ಏಕೋ
ಅವನು ತಟ್ಟುತ್ತಿರುವುದನ್ನು ಕೇಳಿ
ಕೇಳದಂತೆ
ಸುಮ್ಮನೆ ಕುಳಿತು ಬಿಟ್ಟಿದ್ದೇನೆ.

ಜೀವಸೆಲೆ

ಸಂವಾದವೆನ್ನುವುದು ಬೀದಿಜಗಳವಲ್ಲ........


ಪ್ರಜಾಸತ್ತೆಯ ಮೂಲಾಧಾರಗಳು ಕಂಪನಕ್ಕೊಳಗಾಗುತ್ತಿರುವ ಒಂದು ಬಗೆಯ ಬಿಕ್ಕಟ್ಟಿನ ಸಾಂಸ್ಕೃತಿಕ-ರಾಜಕೀಯ ಸನ್ನಿವೇಶದಲ್ಲಿ ಇಂದು ನಾವೆಲ್ಲರೂ ಬದುಕುತ್ತಿದ್ದೇವೆ. ಈ ಬಿಕ್ಕಟ್ಟು ಅತ್ಯಂತ ಸಂಕೀರ್ಣವಾಗಿದೆ, ಹಾಗೆಯೇ ಬಿಗುವಿನಿಂದಲೂ ಕೂಡಿದೆ. ಇಂತಹ ಒಂದು ಪರಿಸ್ಥಿತಿ ಈ ಹಿಂದೆ ಇದ್ದಿರಲಿಲ್ಲ. ಹಾಗಿರುವಾಗ ಇಂತಹ ಒಂದು ಸನ್ನಿವೇಶವನ್ನು ನಾವೆಲ್ಲರೂ ಅಪಾರ ತಾಳ್ಮೆಯಿಂದ, ವಿನಯದಿಂದ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕು. 
ನಾವಿಂದು, ಸಮಾಜವನ್ನು ಮೌಲಿಕವಾಗಿ ಶ್ರೀಮಂತಗೊಳಿಸುವ ಮತ್ತು ಸಾಮಾಜಿಕ ಬಂಧುತ್ವವನ್ನು ಬೆಳೆಸುವ, ಗಟ್ಟಿಗೊಳಿಸುವ ನೆಲೆಯಲ್ಲಿ ಪ್ರಯತ್ನಿಸಬೇಕಾಗಿದೆ. ವಿಮರ್ಶೆಯ, ಸ್ವ-ವಿಮರ್ಶೆಯ ಮತ್ತು ವಿಚಾರಶೀಲತೆಯ ಗಟ್ಟಿತನದಿಂದ ಸೊಂಪಾದ ಸಾಮಾಜಿಕ ವ್ಯವಸ್ಥೆಯನ್ನು ಮರುನಿರ್ಮಿಸಬೇಕಾಗಿದೆ. ಇಂತಹ ಸಾಂಸ್ಕೃತಿಕ ಜರೂರುಗಳಿರುವ ಕಾಲಘಟ್ಟದಲ್ಲಿ ಈ ನಾಡಿನ ಪ್ರಜ್ಞಾವಂತ ನಾಗರಿಕರು, ವಿದ್ವಾಂಸರು, ಸಾಮಾಜಿಕ ಬದ್ಧತೆಯುಳ್ಳ ಚಿಂತಕರು ತಾವು ಪ್ರತಿನಿಧಿಸುತ್ತಿರುವ ಪಂಥಗಳು ಹೇಳುವುದೇ ಆತ್ಯಂತಿಕ `ಸತ್ಯ' ಎಂದು ಬಲವಾಗಿ ನಂಬುವುದನ್ನು ವಿಮರ್ಶೆಗೆ ಗುರಿ ಪಡಿಸುವ ಅಗತ್ಯತೆಯ ಬಗ್ಗೆ ಇತ್ತೀಚೆಗೆ ಕನ್ನಡದ ಬೌದ್ಧಿಕ ವಲಯದಲ್ಲಿ ಕೆಲವು ವಿದ್ವಾಂಸರು ಒಲವು ತೋರಿಸುತ್ತಿರುವುದು ಈ ಹೊತ್ತಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವೂ, ಅರ್ಥಪೂರ್ಣವೂ ಆಗಿದೆ. 
20ನೆಯ ಶತಮಾನದ ಖ್ಯಾತ ಬ್ರಿಟಿಷ್ ತತ್ತ್ವಜ್ಞಾನಿ ಬರ್ಟ್ರೆಂಡ್ ರಸೆಲ್‌ನನ್ನು ಒಮ್ಮೆ, 'ನೀವು ನಂಬಿದ ತತ್ತ್ವ-ಸಿದ್ಧಾಂತಕ್ಕಾಗಿ ಜೀವಕೊಡಲು ಸಿದ್ಧರಿದ್ದೀರಾ' ಎಂದು ಪ್ರಶ್ನಿಸಿದಾಗ, ಆತ 'ಇಲ್ಲ, ನಾಳೆ ಬೇರೊಬ್ಬ ಬುದ್ಧಿವಂತ ಬರಬಹುದು, ನನ್ನ ಸಿದ್ಧಾಂತ ತಪ್ಪು ಎಂದು ಹೇಳಿ ಅದನ್ನು ಸಾಬೀತು ಪಡಿಸಬಹುದು, ಹಾಗಾಗಿ ಈ ಹೊತ್ತು ನಾನು ನಂಬಿದ ಸಿದ್ಧಾಂತಕ್ಕಾಗಿ ನಾನೇಕೆ ನನ್ನ ಅಮೂಲ್ಯ ಪ್ರಾಣವನ್ನು ಕಳೆದುಕೊಳ್ಳಲಿ' ಎಂದು ಹೇಳಿದ್ದನಂತೆ. ಹೀಗೆ ತಾನು ನಂಬಿದ ವಿಚಾರಗಳ ಬಗ್ಗೆ ತಾನೇ ಸಂದೇಹಿಯಾಗಿ, ತನ್ನ ತಿಳಿವಳಿಕೆಯ ಬಗ್ಗೆ ಒಂದು ಬಗೆಯ ಮರುವಿಮರ್ಶೆಯ ನೋಟವನ್ನು ಹೊಂದಿದ್ದ ರಸೆಲ್, ತನ್ನ ಅರಿವು ಎಂಬುದು ತತ್ಕಾಲದ ಸಾಮಾಜಿಕ-ರಾಜಕೀಯ ವಿಚಾರಗಳ ಪ್ರೇರಣೆ, ಒತ್ತಾಯ, ಒತ್ತಡದಿಂದ ರೂಪುತಳೆದ ಲೋಕದರ್ಶನವಾಗಿದೆ ಎಂದು ಭಾವಿಸುತ್ತಾನೆ. 
ಆತ ತನ್ನ ಈ ಚಿಂತನೆಯನ್ನು 'ದಿ ಪ್ರಾಬ್ಲೆಮ್ಸ್ ಆಫ್ ಫಿಲಾಸಫಿ' ಎಂಬ ಅತ್ಯಂತ ಪ್ರಸಿದ್ಧ ಕೃತಿಯಲ್ಲಿ ಮುಂದಿಡುತ್ತಾನೆ. ಈ ಕೃತಿಯಲ್ಲಿ ಆತ `ಜ್ಞಾನ'ದ ಕುರಿತ ಸಿದ್ಧಾಂತಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸುತ್ತಾ, `ಸತ್ಯ'ದ ಬಗ್ಗೆ ಅನೇಕ ಕುತೂಹಲಕರವಾದ ಮಾತುಗಳನ್ನು ಹೇಳುತ್ತಾನೆ. ಆತನ ಪ್ರಕಾರ, ಯಾವುದು ಸತ್ಯ ಅಥವಾ ಯಾವುದು ಮಿಥ್ಯ ಎಂಬುದಾಗಿ ಮಾತ್ರ ನಾವಿಂದು ಪ್ರಶ್ನಿಸುತ್ತೇವೆ. ಬದಲಾಗಿ ಯಾವ ನಂಬಿಕೆಗಳು ಸತ್ಯ ಅಥವಾ ಯಾವ ನಂಬಿಕೆಗಳು ಮಿಥ್ಯ ಎಂಬುದಾಗಿ ನಾವು ಕೇಳುವುದಿಲ್ಲ. ವಾಸ್ತವದಲ್ಲಿ ಇವೆರಡು ಪ್ರಶ್ನೆಗಳು ಭಿನ್ನ ಭಿನ್ನ ಬಗೆಯವು. ಅಂದರೆ ನಮ್ಮ ನಂಬಿಕೆಗಳು ಮತ್ತು ಕೆಲವೊಂದು ಹೇಳಿಕೆಗಳು ನಾವು ನಂಬಿರುವ ಸತ್ಯ ಮತ್ತು ಅಸತ್ಯವನ್ನು ರೂಪಿಸುತ್ತವೆ ಎಂದು ತಿಳಿಯುವ ಆತ, ಸತ್ಯ ಎಂಬುದು ಸದಾ ಹುಸಿತನದ ಜೊತೆಗೂಡಿರುತ್ತದೆ ಎಂಬುದಾಗಿ ಹೇಳುತ್ತಾನೆ. 
ಆತನ ಪ್ರಕಾರ ನಂಬಿಕೆಗಳು, ಹೇಳಿಕೆಗಳು ಇಲ್ಲದಿದ್ದರೆ ಸತ್ಯವೂ ಇಲ್ಲ ಮಿಥ್ಯವೂ ಇಲ್ಲ. ಹಾಗಾಗಿ ಇವೆರಡೂ ಯಾವಾಗಲೂ ಒಂದಕ್ಕೊಂದು ನಂಟನ್ನು ಇಟ್ಟುಕೊಂಡಿರುವ ಪರಿಕಲ್ಪನೆಗಳು. ಆದ್ದರಿಂದ ನಾವು ತಿಳಿದುಕೊಂಡಿರುವ `ಸತ್ಯ' ಅದು ನಮ್ಮ ನಂಬಿಕೆ ಮಾತ್ರ, ಅದು ನಿಜ ವಾಸ್ತವ ಆಗಿರಬೇಕಾಗಿಲ್ಲ. ನಾವು `ಮಿಥ್ಯೆ' ಅಂತ ಅಂದುಕೊಂಡಿರುವ ನಮ್ಮ ನಂಬಿಕೆ ನಾಳೆ ಸುಳ್ಳಾಗಿ ನಮಗೆ `ಸತ್ಯ' ದರ್ಶನವಾಗಬಹುದು. ಹಾಗಾಗಿ ರಸೆಲ್, ಸತ್ಯದ ವಿರುದ್ಧ ಸಿದ್ಧಾಂತವಾದ ಮಿಥ್ಯೆಯ ತತ್ತ್ವವನ್ನೂ ನಾವು ಸ್ವೀಕರಿಸಬೇಕು ಎಂದು ನಮ್ಮನ್ನು ಒತ್ತಾಯಿಸುತ್ತಾನೆ. ಒಟ್ಟಿನಲ್ಲಿ ರಸೆಲ್ ಹೇಳುವಂತೆ, ಸತ್ಯ ಮತ್ತು ಮಿಥ್ಯದ ನಿರ್ವಚನ ಎಂಬುದು ಇಷ್ಟೊಂದು ಅವಿಶ್ವಾಸದ ಕಥನವಾಗಿರುವಾಗ ನಮ್ಮ ತಿಳಿವಳಿಕೆ, ನಮ್ಮ ಲೋಕಜ್ಞಾನ, ತತ್ತ್ವ-ದರ್ಶನಗಳು ಕಾಲದಿಂದ ಕಾಲಕ್ಕೆ ಚರ್ಚೆಗೆ, ಸಂವಾದಕ್ಕೆ ಮುಕ್ತವಾಗಬೇಕು ಎಂದು ಹೇಳುವುದರಲ್ಲಿ ತೊಡಕೇನಿದೆ ಎಂಬುದು ನನಗರಿಯದು. 
ನಾವು ಇಲ್ಲಿ ಮೊದಲು ಅರ್ಥಮಾಡಿಕೊಳ್ಳಬೇಕಾದದ್ದು ಸಂವಾದ ಎಂದರೆ ವಿವೇಕದಿಂದ-ವಿವೇಚನೆಯಿಂದ ಕೂಡಿದ ಒಂದು ಚಿಂತನೆ ಇನ್ನೊಂದು ಚಿಂತನೆಯನ್ನು ಗ್ರಹಿಸುವ, ಸಮಸ್ಯಾತ್ಮಕಗೊಳಿಸುವ, ಅದರ ಸಾಧಕ-ಬಾಧಕಗಳನ್ನು ಅರಿಯುವ ಪ್ರಯತ್ನವನ್ನು ಮಾಡುವುದು. ಅಂದರೆ ಅತ್ಯಂತ ದೀರ್ಘ ಕಾಲದಲ್ಲಿ ನಿಧಾನವಾಗಿ ಸಾಗುವ ಮತ್ತು ಸಾಕಷ್ಟು ಲಕ್ಷ್ಯಕೊಟ್ಟು ನಡೆಯುವ ಒಂದು ಬಗೆಯ ಬೌದ್ಧಿಕ ವಿದ್ಯಮಾನ ಇದು. ಪಶ್ಚಿಮದ 'ಡೆಲಿಬರೇಶನ್' ಪರಿಕಲ್ಪನೆಯಲ್ಲಿ ಬರುವ ವಿಚಾರಶೀಲ ಸಂವಾದದ ಅರ್ಥ ವಿಸ್ತಾರತೆ ಇದುವೇ ಆಗಿದೆ. ಇದು ಪರಸ್ಪರರ ನಿಲುವುಗಳ ಕುರಿತು ಪರಸ್ಪರರೇ ವಿಮರ್ಶೆ ಮಾಡುವುದಾಗಿದೆ, ತಮ್ಮ ತಮ್ಮ ಚಿಂತನೆಗಳ ಕುರಿತಂತೆ ಪರಸ್ಪರರು ಶೋಧನೆ ನಡೆಸುವುದಾಗಿದೆ. ಕೆಲವೊಮ್ಮೆ ತನ್ನ ಅರಿವಿನ ಕುರಿತು ತಾನೇ ತಾಳುವ ಸಂಶಯವೂ ಇದಾಗಿದೆ. ಹಾಗಾಗಿ ಇದು ಒಂದು ಬಗೆಯಲ್ಲಿ ಸಂಶೋಧನೆಯೇ ಸರಿ.
ಈ ಹಿನ್ನೆಲೆಯಲ್ಲಿ `ಸತ್ಯ'ದ ಬಗೆಗಿನ ನಮ್ಮ ಅಂಧವಿಶ್ವಾಸವನ್ನು ನಾವು ಮತ್ತೆ ಮತ್ತೆ ವಿಮರ್ಶೆಗೆ ಒಳಪಡಿಸುವ, ಭಿನ್ನವಾದ ವಿಚಾರಗಳ ಜೊತೆಗೆ ಒಂದು ಅರ್ಥಪೂರ್ಣವಾದ ಮಾತುಕತೆಗೆ ತೊಡಗುವ ಮೂಲಕ ಒಂದು ಆರೋಗ್ಯಕರ ಸಮಾಜ ನಿರ್ಮಾಣದ ನೆಲೆಯಲ್ಲಿ ನಾವು ಮುನ್ನಡೆಯಬೇಕಾದುದು ಇಂದು ತೀರಾ ಅವಶ್ಯವಾಗಿದೆ. ನಾವು ನಾವು ನಂಬಿದ ಸತ್ಯದ ಬಗ್ಗೆ ನಮಗೆ ಒಂದು ಅವಿಶ್ವಾಸವೂ ನಮ್ಮ ಜೊತೆಗೆ ಇರಬೇಕು, ಜೊತೆಗೆ ನಾವು ಭಾವಿಸಿದ ನಮ್ಮದಲ್ಲದ ಅನ್ಯರ ಕುರಿತಾದ ಹುಸಿತನದ ಬಗೆಗೂ ನಮಗೆ ಕೆಲವೊಮ್ಮೆ ನಂಬಿಕೆ ಹುಟ್ಟಬೇಕು. ಅದು ಸಾಧ್ಯವಾದಾಗ ಮಾತ್ರ `ನಮ್ಮದಲ್ಲ' ಎಂದು ನಾವು ಪ್ರಬಲವಾಗಿ ಪ್ರತಿಪಾದಿಸುವ, ನಮಗಿಂತ ವ್ಯತಿರಿಕ್ತ ಅಂತ ನಾವು ಪರಿಭಾವಿಸಿದ ಇನ್ನೊಂದು ಚಿಂತನೆಯ ಜೊತೆ ನಮಗೆ ಮಾತಾಡಲು, ಸಂವಾದಿಸಲು, ಮುಖಾಮುಖಿಯಾಗಲು ಸಾಧ್ಯವಾಗುತ್ತದೆ. ಯಾವಾಗ ಮಾತುಕತೆ, ಸಂವಾದ ಸಾಧ್ಯವಾಗುತ್ತದೋ, ಯಾವಾಗ ನಾವು ಇನ್ನೊಂದು ಚಿಂತನೆಯ ಬಗ್ಗೆ ಮುಕ್ತಭಾವ ಹೊಂದಲು ಸಾಧ್ಯವೋ ಆಗ ಸಮಾಜ ಸ್ವಸ್ಥವಾಗಿದೆ ಎಂದರ್ಥ. ಯಾವ ಸಮಾಜ ಮಾತುಕತೆಗೆ ಒಲವನ್ನು ತೋರಿಸುತ್ತದೋ ಆ ಸಮಾಜ ಪ್ರಗತಿಯ ಕಡೆಗೆ ಚಲಿಸುತ್ತಿದೆ ಎಂದರ್ಥ. ಆದರೆ ಯಾವಾಗ ಮಾತುಕತೆ ಇಲ್ಲವಾಗುತ್ತದೋ ಆಗ ಆ ಸಮಾಜದ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದರ್ಥ. 
ಹೀಗೆ ಹೇಳುವಾಗ `ಸತ್ಯ' ಎಂಬುದೇ ಇಲ್ಲ, ಎಲ್ಲವೂ ಹುಸಿಭ್ರಮೆ ಅಥವಾ `ಮಾಯೆ' ಎಂಬ `ಸತ್ಯ'ದ ಕುರಿತ ಅರಾಜಕ ಮನೋಸ್ಥಿತಿಗೆ ನಾವು ತಲುಪಬೇಕೆಂದೇನಲ್ಲ. ಬದಲಾಗಿ ಸತ್ಯದ ಹುಡುಕಾಟದಲ್ಲಿ ನಾವು ನಿರಂತರವಾಗಿ ಸಾಗುತ್ತಾ, ಆ ಮಾರ್ಗದಲ್ಲಿ ಅನೇಕ ಪ್ರಯೋಗಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು ಎಂದರ್ಥ. ಹಾಗಾಗಿ ಒಂದು ಬಗೆಯ 'ಡೆಲಿಬರೇಶನ್' ಮಾದರಿಯ ಸಂವಾದ ಇವತ್ತಿನ ನಮ್ಮ ಸಮಾಜಕ್ಕೆ ಬಹಳ ಅಗತ್ಯವಾಗಿದೆ. ಹಾಗೆಯೇ ಈ ಬಗೆಯ ವಿಚಾರಶೀಲ ತಾತ್ತ್ವಿಕ ಸಂವಾದದ ಸಾರ್ವಜನಿಕ ಮಾತುಕತೆಗಳಲ್ಲಿ ನಾವು ಬಳಸುವ ಪದಪ್ರಯೋಗಗಳ ಬಗ್ಗೆ ನಮಗೆ ಅರಿವು, ಎಚ್ಚರ ಇರಬೇಕು. ಆ ಅರಿವು ಇದ್ದಾಗ ಮಾತ್ರ ಸಾರ್ವಜನಿಕ ಸಂವಾದದ ಮಾತುಗಳು ತತ್ತ್ವಜ್ಞಾನೀಯ ನೆಲೆಯಲ್ಲಿ ಮೂಡಿಬಂದು ಯೋಚನೆಗಳು ತರ್ಕಬದ್ಧವಾಗಿ ವ್ಯಕ್ತಗೊಳ್ಳುತ್ತವೆ. ಸಂವಾದ ಉನ್ನತ ಮಟ್ಟದಲ್ಲಿ ನಡೆದು ಹೆಚ್ಚು ಘನತೆಯನ್ನು ಮೆರೆಯುತ್ತದೆ. ಆ ಅರಿವು ಇಲ್ಲದೇ ಇದ್ದಾಗ ಸಂವಾದ ಬೀದಿಜಗಳದ ಮಾತುಗಳಾಗಿ ಕ್ಷುಲ್ಲಕವಾಗುವುದು ಮತ್ತು ಕರ್ಕಶವಾಗುವುದು. ಜೊತೆಗೆ ಸಂವಾದ ಎಂಬುದು ಸಮಾಜವನ್ನು ಸರಿ ಮಾಡುವ ಸಾಮರಸ್ಯದ ಚರ್ಚೆಯಾಗಿ ಉಳಿಯದೆ ಪರಸ್ಪರ ನಿಂದನೆಯ ಮತ್ತು ಅಸಹನೆಯ ವಾಗ್ಯುದ್ಧಗಳಿಗೆ ವೇದಿಕೆಯಾಗುತ್ತದೆ.

ಡಾ. ದಿನೇಶ್ ನಾಯಕ್
ಕನ್ನಡ ವಿಭಾಗ, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ)
ಮಂಗಳೂರು


ಪ್ರಾಣವಾಯು!


ಆಮ್ಲಜನಕದ ಮತ್ತೊಂದು ಹೆಸರು ಪ್ರಾಣವಾಯು. ಮಾನವನ ಪ್ರಾಣದ ಉಳಿವಿಗೆ, ಪ್ರಾಣವಾಯು ಬೇಕೇ ಬೇಕು. ಪ್ರಾಣ ವಾಯುವಿನ ಕೊರತೆಯಾದರೆ ಉಸಿರಾಟದಲ್ಲಿ ಏರುಪೇರು ಉಂಟಾಗಿ ಜೀವಕ್ಕೆ ಆಪತ್ತು ಖಚಿತ. ಹಾಗೆಯೇ ಆತ್ಮದ ಉಸಿರಾಟಕ್ಕೆ ಪ್ರಾರ್ಥನೆಯೇ ಪ್ರಾಣವಾಯು. ಪ್ರಾರ್ಥನೆ, ಮಾನವ ದೇವರಲ್ಲಿ ಸ್ಥಿರವಾಗಿ ಬೇರೂರಲು ಪೂರಕವಾದ ಪವಿತ್ರ ಸಾಧನ. ಪ್ರಾರ್ಥನೆ ದೇವ-ಮಾನವರ ಸಂಬಂಧವನ್ನು ವೃದ್ಧಿಗೊಳಿಸಿ, ಅವರಿಬ್ಬರ ಸಂಬಂಧವು ನಿರಂತರವಾಗಿ ಸಂವೃದ್ಧಿಯಾಗಿ ಪರಿಪೂರ್ಣಗೊಳ್ಳಲು ನಾಂಧಿಯಾಗುತ್ತದೆ.
ಮಾನವ ತ್ರೈಏಕದೇವರ ಅತ್ಯುನ್ನತ ಪ್ರೀತಿಯ ಸೃಷ್ಟಿ. ಅಷ್ಟು ಮಾತ್ರವಲ್ಲ ಸಕಲ ಸೃಷ್ಟಿಯ ಮುಕುಟ. ಇವರಿಬ್ಬರ ಸಂಬಂಧ ಅನಂತ. ಅದು ಎಂದು ಯಾರಿಂದಲೂ ಬಿಡಿಸಲಾರದ ಆತ್ಮೀಯ ಅನುಬಂಧ. ಅದರೆ ಇಂದು ಮಾನವ ಈ ಪರಮ ಸತ್ಯವನ್ನು ಮರೆತು ಲೌಕಿಕ ಆಶಾಪಾಶಕ್ಕೆ ಸಿಲುಕಿ, ಶಾಶ್ವತ ಆನಂದವನ್ನು ಸ್ವ-ಇಚ್ಚೆಯಿಂದ ಕಳೆದುಕೊಳ್ಳುತ್ತಿದ್ದಾನೆ. ಈ ಲೋಕದ ಸಿರಿಸಂಪತ್ತೆಲ್ಲವೂ ನಶ್ವರ ಎಂಬ ನಿತ್ಯ ಸತ್ಯವು ಮಾನವನ ಅರಿವಿನಲ್ಲಿ ಸ್ಥಿರವಾಗಿ, ಸದಾ ದೇವರೆಡೆ ಪಯಣಿಸಲು ಪ್ರಾರ್ಥನೆ ಮಾನವನ ಅಜ್ಞಾನಕ್ಕೆ, ಸುಜ್ಞಾನದ ಬೆಳಕನ್ನು ಚೆಲ್ಲುತ್ತದೆ. ಆಗ ಮಾನವ ಲೌಕಿಕ ಆಶಾಪಾಶಗಳಿಂದ ದೂರಸರಿಯಲು ಪ್ರಾರಂಭಿಸುತ್ತಾನೆ. ಏಕೆಂದರೆ ಸಕಲ ಅಧಿಪತ್ಯಕ್ಕೂ ಅಧಿಕಾರಕ್ಕೂ ಶಿರಸ್ಸು ಅವರೇ. ಅವರಲ್ಲಿ ಮಾತ್ರ ನೀವು ಪರಿಪೂರ್ಣತೆಯನ್ನು ಹೊಂದಲು ಸಾಧ್ಯ (ಕೊಲೊಸ್ಸೆ 2:10) ಎಂಬ ಅರಿವಿನ ಬೊಕ್ಕಸ ತೆರೆದುಕೊಳ್ಳುತ್ತದೆ.
ಪ್ರಾರ್ಥನೆ: ಅದೊಂದು ವಿನಮ್ರ ನಿವೇದನೆ. ಪ್ರಾರ್ಥನೆಯಲ್ಲಿ ದೀನತೆ ಹಾಗೂ ಕೃತಜ್ಞತಾಭಾವ ತುಂಬಿರಬೇಕು. ಸದಾ ಹರ್ಷಚಿತ್ತರಾಗಿರಿ. ಎಡೆಬಿಡದೆ ಪ್ರಾರ್ಥಿಸಿರಿ. ಎಲ್ಲಾ ಸಂದರ್ಭಗಳಲ್ಲೂ ಉಪಕಾರಸ್ಮರಣೆ ಮಾಡಿರಿ (1ಥೆಸಲೋ 5:16) ಎನ್ನುತ್ತಾನೆ ಸಂತ ಪೌಲ. ಹಾಗೆಯೇ ಯಾವ ವಿಷಯದಲ್ಲೂ ಚಿಂತಿಸದೆ, ನಿಮ್ಮ ಅಗತ್ಯಗಳಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ. ಪ್ರಾರ್ಥಿಸುವಾಗಲೆಲ್ಲಾ ನಿಮ್ಮಲ್ಲಿ ಕೃತಜ್ಞತಾಭಾವ ಇರಲಿ. ಆಗ ಮನುಷ್ಯಗ್ರಹಿಕೆಗೂ ಮೀರಿದ ದೈವಶಾಂತಿಯು ನಿಮ್ಮ ಹೃನ್ಮನಗಳನ್ನು ಕ್ರಿಸ್ತೇಸುವಿನ ಅನ್ಯೋನತೆಯಲ್ಲಿ ಸುರಕ್ಷಿತವಾಗಿ ಕಾಪಾಡುವುದು (ಫಿಲಿಪ್ಪಿ 4:6-7) ಎನ್ನುತ್ತಾನೆ. ಪ್ರಾರ್ಥನೆ ಫಲಿಸಬೇಕಾದರೆ ಮಾನವ ದೀನನಾಗಿ ಹಾಗೂ ಸಂಪೂರ್ಣವಾಗಿ ದೇವರಿಗೆ ಶರಣಾಗಬೇಕು. ಹೀಗೆ ಶರಣಾದ ಮಾನವ ತಾನು ಮಾಡಿದ ಪ್ರಾರ್ಥನೆ ಫಲಿಸದಿದ್ದರೂ ಪ್ರಾರ್ಥಿಸುವುದನ್ನು ಮಾತ್ರ ಬಿಡುವುದಿಲ್ಲ. ಯಾಕೆಂದರೆ ಅಂತವನು ತನ್ನ ಚಿತ್ತವನ್ನು ದೇವರ ಚಿತ್ತದಲ್ಲಿರಿಸಿ ದೇವರಿಗೆ ಸಂಪೂರ್ಣವಾಗಿ ಶರಣಾಗಿ ನನ್ನ ಚಿತ್ತದಂತೆ ಅಲ್ಲ ನಿಮ್ಮ ಚಿತ್ತದಂತೆ ಆಗಲಿ (ಮತ್ತಾ 26:39)ಎಂದು ದೇವರ ಚಿತ್ತವನ್ನು ಎಲ್ಲಾ ಸಮಯದಲ್ಲಿಯೂ ಅಂಗಿಕರಿಸುತ್ತಾನೆ. ಉದಾಹರಣೆಗೆ ತ್ರೈಏಕದೇವರು ಸೊದೋಮಿನ ನಾಶಕ್ಕೆ ಮುಂದಾದಾಗ ಅದರ ಪರವಾಗಿ ಅದನ್ನು ನಾಶಮಾಡದಂತೆ ಅಬ್ರಹಾಮ ದೇವರಲ್ಲಿ ವಿನಂತಿಸಿದ. ಆದರೆ ಅಂತಿಮವಾಗಿ ದೇವರ ಚಿತ್ತಕ್ಕೆ ತಲೆಬಾಗಿದ ಆನಂತರ ಅಬ್ರಹಾಮನೊಡನೆ ಮಾತನಾಡುವುದನ್ನು ಮುಗಿಸಿ ಸರ್ವೇಶ್ವರಸ್ವಾಮಿ ಹೊರಟುಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು (ಆದಿ 18:16-33).
ಪ್ರಾರ್ಥನೆ ದೇವ ಮಾನವರ ನಡುವಿನ ಅತ್ಮೀಯ ಸಂವಾದ. ಅಲ್ಲಿ ಯಾವುದೇ ಮುಚ್ಚು-ಮರೆ ಇರುವುದಿಲ್ಲ. ಎಲ್ಲವು ಮುಕ್ತತೆಯಿಂದ ಕೂಡಿರುತ್ತದೆ. ಮಾನವ ದೇವರ ಅನಂತತೆಯನ್ನು ಹಾಗೂ ಅವರ ಸಾರ್ವಭೌಮತೆಯನ್ನು ಅಂಗೀಕರಿಸುತ್ತಾನೆ ಏಕೆಂದರೆ ನಮ್ಮ ಆಶೆ-ಆಕಾಂಕ್ಷೆಗಿಂತಲೂ ಬೇಡಿಕೆ-ಕೋರಿಕೆಗಿಂತಲೂ ಅಧಿಕವಾದುದನ್ನು ಮಾಡಲು ದೇವರು ಶಕ್ತರು ಎಂಬ ಅರಿವು ಅವನಲ್ಲಿ ಮನೆಮಾಡಿ ಅವನಂತರಂಗದಿಂದ ಕೃತಜ್ಞತಾಸ್ತುತಿ ಹೊರಹೊಮ್ಮುತ್ತದೆ. ಆಗ ದೈವೀಕ ಪ್ರೀತಿ ಅವನನ್ನು ಆವರಿಸುತ್ತದೆ. ಪಾವನತೆ ಅವನಲ್ಲಿ ಮನೆಮಾಡುತ್ತದೆ. ಪಾಪಕೃತ್ಯಗಳಿಂದ ಅವನು ದೂರಸರಿಯುತ್ತಾನೆ. ಸಂತ ಪೌಲನು ಹೇಳುವಂತೆ ಅಂತವರ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರಿಕೃತವಾಗಿರುತ್ತದೆ (ಕೊಲೋಸ್ಸೆ 3:3).
ಪ್ರಾರ್ಥನೆಯಲ್ಲಿ ಸಕ್ರಿಯವಾಗಿ ಪ್ರಗತಿ ಸಾಧಿಸಲು ಮಾನವನ ಸ್ವಜ್ಞಾನದಿಂದ ಸಾಧ್ಯವಿಲ್ಲ. ಈ ಅರಿವು ಮಾನವನಲ್ಲಿ ಮನೆಮಾಡಿದಾಗ ದೇವರು ಅಂತವರ ಪ್ರಾರ್ಥನೆಯನ್ನು ಪುರಸ್ಕರಿಸುವರು. ಈ ಹಂತವನ್ನು ತಲುಪಲು ಸುಜ್ಞಾನಕ್ಕಾಗಿ ಸ್ಥಿರಚಿತ್ತದಿಂದ ಪ್ರಾರ್ಥಿಸಬೇಕೆಂದು ಜ್ಞಾನೋಕ್ತಿಗಳಲ್ಲಿ ಸುಜ್ಞಾನಿಯು ನಿನ್ನ ಸ್ವಂತ ಬುದ್ದಿಯನ್ನೇ ನೆಚ್ಚಿಕೊಂಡಿರದಿರು; ಪೂರ್ಣ ಮನಸ್ಸಿನಿಂದ ಸರ್ವೇಶ್ವರನಲ್ಲಿ ನಂಬಿಕೆಯಿಡು. ನಿನ್ನ ನಡತೆಯಲ್ಲೆಲ್ಲಾ ನಿವೇದಿಸು ಆತನನ್ನು, ಆಗ ಸರಾಗಮಾಡುವನು ನಿನ್ನ ಮಾರ್ಗವನ್ನು. ನೀನೇ ಬುದ್ದಿವಂತನೆಂದು ಎಣಿಸದಿರು. ಸರ್ವೇಶ್ವರನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದು ಬಿಡು. ಆಗ ನಿನಗೆ ದೇಹಾರೋಗ್ಯ ದೊರಕುವುದು, ನಿನ್ನ ಎಲುಬುಗಳಿಗೆ ಶಕ್ತಿಸಾರತ್ವ ಸಿಗುವುದು. ನಿನ್ನ ಆಸ್ತಿಯನ್ನರ್ಪಿಸಿ ಸರ್ವೇಶ್ವರನನ್ನು ಸನ್ಮಾನಿಸು, ನಿನ್ನಬೆಳೆಯ ಪ್ರಥಮ ಫಲವನ್ನು ಕಾಣಿಕೆಯಾಗಿಕೊಡು. ಆಗ ನಿನ್ನ ಕಣಜಗಳು ದವಸಧಾನ್ಯದಿಂದ ಭರ್ತಿಯಾಗುವುವು, ನಿನ್ನ ತೊಟ್ಟಿಗಳು ದ್ರಾಕ್ಷಾರಸದಿಂದ ತುಂಬಿ ತುಳುಕುವುವು (ಜ್ಞಾನೋಕ್ತಿ 3:5-10) ಎನ್ನುತ್ತಾನೆ.
ಪ್ರಾರ್ಥನೆ ಮಾನವನ ಹೃನ್ಮನಗಳನ್ನು ದಿನದಿಂದ ದಿನಕ್ಕೆ ಶುದ್ಧಿಕರಿಸುತ್ತದೆ. ಮಾನವ ಬದುಕಿನ ಮಹತ್ವದ ಅರಿವನ್ನು ಮೂಡಿಸುತ್ತದೆ. ಮಾನವ-ಮಾನವರ ನಡುವಿನ ದ್ವೇಷವನ್ನು ಧಮನಗೊಳಿಸುತ್ತದೆ. ಸ್ನೇಹದ ಕಾರಂಜಿಯನ್ನು ಮೊಳಗಿಸುತ್ತದೆ. ಕಷ್ಟ-ನಷ್ಟಗಳನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಆತ್ಮ ಸಾಕ್ಷಾತ್ಕಾರಕ್ಕೆ ನಾಂದಿಯಾಗುತ್ತದೆ. ಒಟ್ಟಾರೆ ಹೇಳುವುದಾದರೆ ಯಾವ ಮಾನವ ದೇವರಿಗೆ ಶರಣಾಗಿ ಲೋಕದ ಏರಿಳಿತಗಳಿಗೆ ಅಂಜದೆ-ಅಳುಕದೆ ಪ್ರಾರ್ಥನೆಯಲ್ಲಿ ಸ್ಥಿರವಾಗಿ ನೆಲೆ ನಿಲ್ಲುತ್ತಾನೋ ಅಂತವನು ಸೂರ್ಯನಂತೆ ಸದಾ ಪ್ರಕಾಶಿಸುತ್ತಾನೆ. ಅಂತವನಿಗೆ ಕತ್ತಲೆಂಬುದೇ ಇರುವುದಿಲ್ಲ. ಪುರುತ್ಥಾನಿ ಪ್ರಭು ಕ್ರಿಸ್ತನೇ ಅವನ ನಿತ್ಯಬೆಳಕಾಗಿ ಭಯಪಡಬೇಡ ಲೋಕಾಂತ್ಯದವರೆಗೂ ಸದಾ ನಾನು ನಿನ್ನೊಡನಿರುತ್ತೇನೆ (ಮತ್ತಾ 28:20) ಎಂಬ ಭರವಸೆಯ ಬೀಜವನ್ನು ಬಿತ್ತುತ್ತಲೇ ಇರುತ್ತಾನೆ. ಅದು ಹೆಮ್ಮರವಾದಾಗ ಪ್ರಾರ್ಥನೆಯ ಅನುಬಂಧ ಸದೃಢವಾಗತ್ತ ದೇವ-ಮಾನವರ ಸಂಬಂಧ ಪರಿಪೂರ್ಣವಾಗಿ ಜೀವನ ಪಾವನವಾಗುತ್ತದೆ.

ಫಾದರ್ ವಿಜಯ್ ಕುಮಾರ್, ಬಳ್ಳಾರಿ


ಧರ್ಮಸಭೆಯಲ್ಲಿ ಎಲೆಕ್ಟ್ರಾನಿಕ್ ಕ್ರಾಂತಿ


ಸಂವಹನೆ ಶುರುವಾಗುವುದೇ ಮಾತಿನಿಂದ. ಮಾತೆಂಬುದು ಜ್ಯೋತಿರ್ಲಿಂಗ. ಮಾತೇ ವಾಣಿ. ಮಾತೇ ದೇವರು. ಆ ಮಾತು, ವಾಣಿ, ಶಬುದವೆಂಬುದು ದೇವರಲ್ಲಿತ್ತು. ಆ ವಾಣಿಯೇ ದೇವರಾಗಿತ್ತು. ಲೋಕವೆಂಬುದು ಶಾಂತ ಪ್ರಶಾಂತ ಬ್ರಹ್ಮಾಂಡದಲ್ಲಿ ಗಾಢಾಂಧಕಾರದಲ್ಲಿ ವಿರಮಿಸುತ್ತಿದ್ದಾಗ ಸರ್ವಕ್ಕೂ ಈಶ್ವರನಾದ ಅಗೋಚರನಾದ ದೇವರ ರೂಹಿನಲ್ಲಿ ಆಡದೆ ಉಳಿದಿದ್ದ ಅನಾಹತ ಶಬ್ದವು ಲೋಕಸೃಷ್ಟಿಯ ತರುಣದಲ್ಲಿ ಬೆಳಕಾಗಲಿ ಎಂದು ಉಲಿಯಿತಲ್ಲವೇ? ಆ ಬೆಳಕೇ ಕೋಟ್ಯಂತರ ವರ್ಷಗಳಿಂದ ಇಡೀ ವಿಶ್ವದಲ್ಲಿ ನಕ್ಷತ್ರ ನಕ್ಷತ್ರಗಳಾಚೆಗೂ ಹಾಯುತ್ತಿದೆ. 
ಮಹೋನ್ನತನ ಆ ಮೊದಲ 'ಉಲಿ' ಮಾನವರೂಪ ತಳೆದು ನಮ್ಮೊಡನೆ ನೆಲೆಸಿ ಜಗವನ್ನು ಮುನ್ನಡೆಸುತ್ತಿದೆ. ಹೀಗೆ ಮೊತ್ತಮೊದಲ ಸಂವಹನದ ರೂವಾರಿಯೂ ಆದ ಅವನ ವಾಣಿಯೂ ಸಂವಹನದ ವಿವಿಧ ರೂಪಗಳಲ್ಲಿ ವಿವಿಧ ಆಯಾಮಗಳಲ್ಲಿ ಆಧುನಿಕತೆಯ ಸ್ಪರ್ಶದೊಂದಿಗೆ ಜಗದೆಲ್ಲೆಡೆಯನ್ನೂ ತಲಪುತ್ತಿದೆ. 
ಪವಿತ್ರ ಬೈಬಲಿನ ಹಳೆಯ ಒಡಂಬಡಿಕೆಯಲ್ಲೂ ದೇವರು ಆದಾಮನೊಡನೆ ಮಾತಾಡಿದರು, ಅಬ್ರಹಾಮನೊಡನೆ ಮಾತಾಡಿದರು, ಮೋಶೆಯೊಂದಿಗೆ ಮಾತಾಡಿದರು, ಪ್ರವಾದಿ ಎಲೀಯನೊಂದಿಗೆ ಮಾತಾಡಿದರು ಎಂಬುದನ್ನು ಅರಿತಿದ್ದೇವೆ. ಹಾಗೆಯೇ ದೇವರು ತಮ್ಮ ದೂತರ ಮೂಲಕ, ಕನಸುಗಳ ಮೂಲಕ, ಪ್ರವಾದಿಗಳ ಮೂಲಕ ಸಂದೇಶಗಳನ್ನು ರವಾನಿಸಿದರು ಎಂಬುದನ್ನೂ ಅರಿತಿದ್ದೇವೆ. ಇಷ್ಟೆಲ್ಲ ಆದ ಮೇಲೆ ಸಂವಹನದ ರೂವಾರಿಯಾದ ತಮ್ಮ ಪುತ್ರ ಯೇಸುಕ್ರಿಸ್ತನನ್ನೇ ಮಾನವ ರೂಪದಲ್ಲಿ ಭುವಿಗೆ ಕಳುಹಿಸಿದರು ಎಂಬುದನ್ನೂ ಅರಿತಿದ್ದೇವೆ. 
ಮಾನವಕುಲಕ್ಕೆ ದೇವರ ಜೀವತಂತ ಸಂದೇಶವಾದ ಯೇಸುಕ್ರಿಸ್ತರು ಎರಡು ಸಾವಿರ ವರ್ಷಗಳ ಹಿಂದೆ ಮಾನವಪ್ರೇಮದ ಒಂದು ಶುಭಸಂದೇಶವನ್ನು ನಮಗೆ ಕೊಟ್ಟರು. ಅಲ್ಲದೆ ತಾವು ಸ್ವರ್ಗಕ್ಕೆ ಏರಿಹೋಗುವ ಮುನ್ನ `ಹೋಗಿ ಜಗದೆಲ್ಲೆಡೆಯಲ್ಲೂ ಶುಭಸಂದೇಶವನ್ನು ಸಾರಿರಿ' ಎನ್ನುತ್ತಾ ನಮಗೆಲ್ಲರಿಗೂ ಒಂದು ಅಭೂತಪೂರ್ವ ಕರೆ ನೀಡಿದರು. ಎರಡು ಸಾವಿರ ವರ್ಷ ಉರುಳಿದರೂ ಆ  ದಿವ್ಯವಾಣಿ ಇಂದಿಗೂ ಈ ಕ್ಷಣಕ್ಕೂ ಅನುರಣಿಸುತ್ತಿದೆ. ಕುಬ್ಜನಲ್ಲೂ ಮಹೋನ್ನತ ದೇವರನ್ನು ಕಾಣುವ ನವಸಮಾಜದ ಪರಿಕಲ್ಪನೆ ಈ ಶುಭಸಂದೇಶದಲ್ಲಿದೆ. ಅಂದು ಯೇಸುಕ್ರಿಸ್ತನ ನೇರಶಿಷ್ಯರು ಹಾಗೂ ಅವರನ್ನು ನಂಬಿದ ಅನೇಕ ಅನುಯಾಯಿಗಳು ಪವಿತ್ರಾತ್ಮರ ಲೋಕಾದ್ವಿತೀಯ ಶಕ್ತಿಯನ್ನ ಆವಾಹಿಸಿಕೊಂಡು  ಕಾಲ್ನಡೆಯಲ್ಲಿ ಊರೂರುಗಳನ್ನು ಸಂಚರಿಸಿ ಯಾವುದೇ ಆಧುನಿಕ ಪರಿಕರಗಳಿಲ್ಲದೆ ಬಾಯಿಮಾತಿನಲ್ಲಿ ಸುವಾರ್ತೆಯನ್ನು ಬಲು ಸಮರ್ಥವಾಗಿ ಸಾರಿದರು. ಅವರ ಮಾತುಗಳು ಎಲ್ಲ ದೇಶಗಳ ಎಲ್ಲ ಭಾಷೆಗಳ ಜನರನ್ನು ಸುಲಭವಾಗಿ ತಲಪಿದ್ದವು. 
ಸುಮಾರು ಐನೂರು ವರ್ಷಗಳ ಹಿಂದೆ ಮಾನವಕೋಟಿಯು ಮುದ್ರಣಯಂತ್ರವನ್ನು ಕಂಡುಹಿಡಿದ ಮೇಲಂತೂ ಶುಭಸಂದೇಶ ಪ್ರಚಾರಕ್ಕೆ ಹೊಸ ವೇಗವನ್ನು ಒದಗಿಸಿತು. ಮುದ್ರಣಮಾಧ್ಯಮವು ವಿವಿಧ ದೇಶಭಾಷೆಗಳಿಗೆ ಶುಭಸಂದೇಶವನ್ನು ಹಂಚಿತಲ್ಲದೆ ಅದು ಇಂದಿಗೂ ಮುಂದುವರಿದುಕೊಂಡು ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಮುದ್ರಣದಲ್ಲಿ ಮೊದಲು ಮೂಡಿಬಂದ ಪವಿತ್ರ ಬೈಬಲ್ ಶ್ರೀಗ್ರಂಥದ ಮೂಲಕ ಯೇಸುಕ್ರಿಸ್ತರು ಇಂದಿಗೂ ನಮ್ಮೊಂದಿಗೆ ಸಂವಹನೆ ನಡೆಸುತ್ತಿದ್ದಾರೆ. 
ಇದೀಗ ಅತ್ಯಾಧುನಿಕ ಯುಗ. ಮುದ್ರಣಮಾಧ್ಯಮ ಮಾತ್ರವಲ್ಲದೆ ಇನ್ನೂ ತ್ವರಿತಗತಿಯಲ್ಲಿ ಜನರನ್ನು ತಲಪಬಲ್ಲ ರೇಡಿಯೋ, ದೂರದರ್ಶನ, ದೂರಸಂಪರ್ಕ, ಮಿಂಬಲೆ (ಜಾಲತಾಣ), ಮಿನ್ನಂಚೆ (ಇ-ಮೇಲ್), ಫೇಸ್ಬುಕ್ಕು, ವಾಟ್ಸಾಪು, ಟೆಲಿಗ್ರಾಮು ಮುಂತಾದ ಮಾಧ್ಯಮಗಳ ಮೂಲಕ ಕೋಟ್ಯಂತರ ಜನರಿಗೆ ಏಕಕಾಲಕ್ಕೆ ಮಿಂಚಿನ ವೇಗದಲ್ಲಿ ಸಂದೇಶಗಳನ್ನು ಸಂವಹನೆ ಮಾಡುವ ಸಾಧ್ಯತೆಗಳನ್ನು ಕಂಡುಹಿಡಿಯಲಾಗಿದೆ. ಇಂಡಿಯಾದಂತ ಅಭಿವೃದ್ಧಿಶೀಲ ದೇಶಗಳ ಶೇಕಡಾ ಎಂಬತ್ತರಷ್ಟು ಜನ ಇಂದು ಚೂಟಿಯಾದ ಕೈಫೋನುಗಳನ್ನು ಬಳಸಿ ಉಲಿಯುತ್ತಾ, ಕಲಿಯುತ್ತಾ, ನಲಿಯುತ್ತಾ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. 
ಜಗದಾದ್ಯಂತ ಹಲವಾರು ದೇಶಗಳಲ್ಲಿ ಹಬ್ಬಿ ಹರಡಿರುವ ವಿಶ್ವಧರ್ಮಸಭೆಯು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮೇಲ್ಕಂಡ ಎಲ್ಲ ಸಾಧನ ಸಲಕರಣೆಗಳ ಮೂಲಕ ತ್ವರಿತಗತಿಯಲ್ಲಿ ಮುನ್ನಡೆಯುತ್ತಿದೆ. ತನ್ಮೂಲಕ ಜಾಗತಿಕ ಚರ್ಚು ಆಧುನಿಕತೆಗೆ ಹೊರಳುತ್ತಿದೆ. ನಾವು ಕಂಡಂತೆ ಈಗಾಗಲೇ ಕ್ರೈಸ್ತ ಬಾನುಲಿ ಕೇಂದ್ರಗಳು ಬಂದುಹೋಗಿವೆ. ಕ್ರೈಸ್ತ ದೂರದರ್ಶನ ಚಾನಲ್ಲುಗಳೂ ಕಾರ್ಯ ನಿರ್ವಹಿಸುತ್ತಿವೆ. ಗುರುಮಠಗಳಲ್ಲಿ ಸಾಮಾಜಿಕ ಸಂವಹನೆಯ ಪಾಠಗಳಲ್ಲಿ ಆಧುನಿಕ ಸಾಧನಗಳ ಪ್ರಸ್ತಾಪ ಕಾಣುತ್ತಿದೆ. ಜಗದ್ಗುರುಗಳಾದ ಪರಮಪೂಜ್ಯ ಫ್ರಾನ್ಸಿಸ್‍ನವರೂ ಅದನ್ನು ಅನುಮೋದಿಸಿದ್ದಾರೆ.
ಹದಿನೈದನೇ ಶತಮಾನದಲ್ಲಿ ಮುದ್ರಣ ತಂತ್ರಜ್ಞಾನವು ಹುಟ್ಟುಹಾಕಿದ ಕ್ರಾಂತಿಯನ್ನೇ ಇಂದು ಕಳೆದ ಮೂರು ದಶಕಗಳಲ್ಲಿ ಎಲೆಕ್ಟ್ರಾನಿಕ್ ತಂತ್ರಜ್ಞಾನವು ಹುಟ್ಟುಹಾಕಿದೆ. ಅಥವಾ ಅದಕ್ಕಿಂತಲೂ ಹೆಚ್ಚಿನ ಸ್ಫೋಟವನ್ನು ಉಂಟುಮಾಡಿದೆ. ಅದನ್ನು ತೆಗಳದೆ ತಕ್ಕ ರೀತಿಯಲ್ಲಿ ನಮ್ಮ ಬದುಕಿಗೆ ಅಳವಡಿಸಿಕೊಳ್ಳುತ್ತಾ ಸಾಮಾಜಿಕ ಸಂಬಂಧಗಳನ್ನು ಕಟ್ಟಿಕೊಳ್ಳಬೇಕಿದೆ. ಧರ್ಮವೂ ಕೂಡಾ ಸಮತೂಕದಲ್ಲಿ ಅದನ್ನು ಸ್ವೀಕರಿಸಿ ದೈವಶಾಸ್ತ್ರದ ಹೊಸ ಹುಡುಕಾಟವನ್ನು ಮಾಡಬೇಕಿದೆ. 
ಎಲೆಕ್ಟ್ರಾನಿಕ್ ಮಾಧ್ಯಮವು ಧರ್ಮಸಭೆಗೆ ಹೊಸದೇನಲ್ಲ. ಶ್ರೀಲಂಕಾದ ಕ್ರೈಸ್ತ ಬಾನುಲಿ ಕೇಂದ್ರವು ಹಲವಾರು ದಶಕಗಳಿಂದ ಇಂಡಿಯಾದ ವಿವಿಧ ಭಾಷೆಗಳಲ್ಲಿ ನಿಗದಿತ ಸಮಯಗಳಲ್ಲಿ ಸುವಾರ್ತ ಪ್ರಸಾರವನ್ನು ಬಲು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದೆ, ಅದೇ ರೀತಿ ಫಾರ್ ಈಸ್ಟ್ ಬ್ರಾಡ್ಕಾಸ್ಟಿಂಗ್ ಕಂಪೆನಿಯು 1947ರಲ್ಲಿ ಚೀನಾ ದೇಶದ ಶಾಂಗೈನಲ್ಲಿ ಕಾರ್ಯಾರಂಭ ಮಾಡಿ ಇಂದಿಗೂ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಅಮೆರಿಕಾದ ಟ್ರಾನ್ಸ್ ವರಲ್ಡ್ ರೇಡಿಯೋ, 1931ರಿಂದಲೂ 90 ದೇಶಗಳಲ್ಲಿ ನೂರಕ್ಕೂ ಮಿಗಿಲಾದ ಭಾಷೆಗಳಲ್ಲಿ ಕಾರ್ಯಕ್ರಮ ನೀಡುತ್ತಿರುವ ಎಚ್ಸಿಜೆಬಿ ರೇಡಿಯೋ, ವ್ಯಾಟಿಕನ್ ರೇಡಿಯೋ, ವರಲ್ಡ್ ರೇಡಿಯೊ ನೆಟ್ವರ್ಕ್ ಮುಂತಾದವುಗಳು ಕೂಡಾ ಯಶಸ್ವೀ ಕಾರ್ಯಕ್ರಮಗಳನ್ನು ನೀಡುತ್ತಿವೆ. ಮಿಂಬಲೆಯ ಇಂದಿನ ಪ್ರಪಂಚದಲ್ಲಿ ಲೆಕ್ಕವಿಲ್ಲದಷ್ಟು ಮಿನ್ದಾಣಗಳು (ವೆಬ್ ಸೈಟ್) ಕ್ರಿಸ್ತವಾಕ್ಯವನ್ನು ಸಾರುತ್ತಿವೆ. ಅವುಗಳಲ್ಲಿ ಪ್ರಮುಖವಾದವು ವೆಬ್ ಎವಾಂಜೆಲಿಸಮ್ ಡಾಟ್ ಕಾಮ್, ಅಮೇಝಿಂಗ್ ಗ್ರೇಸ್ ಡಾಟ್ ಕಾಮ್, ಇ-ವ್ಯಾಂಜೆಲಿಸಮ್ ಡಾಟ್ ಕಾಮ್, ಸ್ಟ್ರೈಕ್ ಸಮ್‌ಒನ್ ಡಾಟ್ ಕಾಮ್, ಫಿಶ್ ದಿ ಡಾಟ್ ನೆಟ್, ಆಕ್ಸೆಸ್ ಜೀಸಸ್ ಡಾಟ್ ಆರ‍್ಗ್, ದಿ ಗುಡ್ ನ್ಯೂಸ್ ಡಾಟ್ ಆರ್ಗ್, ಪವರ್ ಟು ಚೇಂಜ್ ಡಾಟ್ ಕಾಮ್, ಕ್ರಿಶ್ಚಿಯಾನಿಟಿ ಡಾಟ್ ಕಾಮ್ ಮುಂತಾದವು ಮುಂಚೂಣಿಯಲ್ಲಿವೆ. 
ದೂರದರ್ಶನ ಮಾಧ್ಯಮವನ್ನೂ ಶುಭಸಂದೇಶ ಪ್ರಸಾರಕ್ಕೆ ಯಶಸ್ವಿಯಾಗಿ ಬಳಸಿಕೊಂಡಿರುವ ಉದಾಹರಣೆಗಳನ್ನು ನಾವು ನಿತ್ಯವೂ ನೋಡುತ್ತಿದ್ದೇವೆ. ಯೂಟ್ಯೂಬ್ ಮಾಧ್ಯಮದಲ್ಲಿ ದೃಶ್ಯಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ತೆರೆದು ನೋಡುವ ಅವಕಾಶವೂ ಇದೆ. ಆಡಿಯೋ ಬೈಬಲ್ ಮೂಲಕ ಜನರು ಕಾರನ್ನು ಓಡಿಸುತ್ತಿರುವಾಗಲೇ ಪವಿತ್ರ ಬೈಬಲ್ ವಾಚನವನ್ನು ಆಲಿಸುವ ಸುಯೋಗ ಹೊಂದಿದ್ದಾರೆ.
ಸತ್ಯ ನ್ಯಾಯ ಮತ್ತು ನೀತಿಗಳನ್ನು ಎತ್ತಿಹಿಡಿಯುವುದಕ್ಕೆ ಕಂಕಣಬದ್ದವಾಗಿರುವ ಧರ್ಮಸಭೆಯು ಹೊಸದರಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಕೆಡುಕುಗಳನ್ನು ಕುರಿತು ಜನರಿಗೆ ಎಚ್ಚರಿಸಿದ್ದು ಸಹಜವಾದ ಕ್ರಿಯೆಯೇ ಆಗಿತ್ತು (ಕ್ಯಾನನ್ 666). ಥಿಯೇಟರುಗಳಿಗೆ ಹೋಗಬೇಡಿ ಎಂದು ಜನರಿಗೆ ತಾಕೀತು ಮಾಡುತ್ತಿದ್ದ ಧರ್ಮಸಭೆ ಇಂದು ಮನೆಯೊಳಗೇ ನೂರಾರು ಚಾನಲ್ಲುಗಳ ಥಿಯೇಟರು ಬಂದು ಕುಳಿತಿರುವುದನ್ನು ಕಂಡು ಸುಮ್ಮನಾಗಿದೆ. ಇಂದು ಎಲೆಕ್ಟ್ರಾನಿಕ್ ಮಾಧ್ಯಮವು ಜನಮಾನಸವನ್ನು ಎಷ್ಟೊಂದು ಆವರಿಸಿಕೊಂಡಿದೆಯೆಂದರೆ ಅದನ್ನು ಹೊರತುಪಡಿಸಿ ಜನಜೀವನ ನಡೆಯುತ್ತಿಲ್ಲ. ಆದ್ದರಿಂದ ಅದರ ಕೆಡಕುಗಳ ಬಗ್ಗೆಯೇ ಹೇಳುತ್ತಾ ಜನರನ್ನು ಚರ್ಚಿನಿಂದ ಹೊರದೂಡುವುದಕ್ಕಿಂತ ಅದೇ ಮಾಧ್ಯಮವನ್ನು ಚರ್ಚಿನತ್ತ ತಿರುಗಿಸಿಕೊಳ್ಳುವ ಮೂಲಕ ಜನರನ್ನು ಸರಿದಾರಿಗೆ ಎಳೆಯಬಹುದೆಂಬುದನ್ನು ಮನಗಂಡಿದೆ. ನಿನ್ನೆ ಮೊನ್ನೆಯವರೆಗೂ ಸಾಮಾಜಿಕ ಸಂಬಂಧಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಹಾಳುಗೆಡವುತ್ತಿವೆ, ಕುಟುಂಬದಲ್ಲಿ ಒಬ್ಬರಿಗೊಬ್ಬರು ಮಾತಾಡುತ್ತಿಲ್ಲ, ಎಲ್ಲರೂ ಟಿವಿಯಲ್ಲಿ ಮೊಬೈಲಿನಲ್ಲಿ ಮುಳುಗಿದ್ದಾರೆ ಎಂದೆಲ್ಲ ಪ್ರಬೋಧನೆ ನೀಡುತ್ತಿದ್ದ ಗುರುಗಳು ಇಂದು ವಾಟ್ಸಾಪಿನಲ್ಲಿ ಪ್ರಬೋಧನೆ ನೀಡುತ್ತಿದ್ದಾರೆ. ನಮ್ಮ ಬಲಿಪೂಜೆಗಳನ್ನು ನೇರಾನೇರ ಯೂಟ್ಯೂಬಿನಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಸ್ವರಪ್ರಸ್ತಾರ ಅಥವಾ ನೊಟೇಶನ್ ನೋಡಿಕೊಂಡು ಹಾಡು ಕಲಿಯುತ್ತಿದ್ದವರು ಇಂದು ಧ್ವನಿಮುದ್ರಿಕೆಗಳನ್ನು ಆಲಿಸಿ ಹಾಡು ಕಲಿಯುತ್ತಿದ್ದಾರೆ. 
ಆದರೆ ಎಲ್ಲರೂ ಏಕಕಾಲಕ್ಕೆ ಒಂದೇ ಸಮುದಾಯವಾಗಿ ದೇವಾಲಯಕ್ಕೆ ತೆರಳಿ ಒಟ್ಟಿಗೆ ಪ್ರಾರ್ಥಿಸಿ, ಸ್ತುತಿಸಿ, ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟು, ಇತರರಿಗಾಗಿ ಪ್ರಾರ್ಥಿಸಿ, ಸೌಹಾರ್ದ ಮೆರೆದು, ಬಲಿಯರ್ಪಿಸಿ, ಒಂದೇ ರೊಟ್ಟಿಯನ್ನು ಪ್ರೀತಿಯಿಂದ ಒಟ್ಟಿಗೆ ಭುಜಿಸುವ ಆ ಅನ್ಯೋನ್ಯ ನಡವಳಿಕೆಗಳು ಟಿವಿಯಲ್ಲಿ ಪೂಜೆ ನೋಡುವುದರಿಂದ ಸಾಧ್ಯವಾಗುವುದೇ ಎಂಬುದು ಯಕ್ಷಪ್ರಶ್ನೆ. ದೇವಾಲಯದೊಳಗೆ ಕಂಡುಬರುವ ಮನಸೂರೆಗೊಳ್ಳುವ ಸ್ವರೂಪಗಳು, ಮನಮುಟ್ಟುವ ಪ್ರಬೋಧನೆಗಳು, ಮನತಣಿಸುವ ಗೀತೆಗಳು, ಪ್ರಾರ್ಥನೆಯ ಮೌಲ್ಯಗಳು, ಶಿಲುಬೆಹಾದಿಯ ಯಾತನೆಗಳು, ನಿರೀಕ್ಷೆ ಹುಟ್ಟಿಸುವ ಧ್ಯಾನಗಳು, ಮೌನ ಜಪಗಳೆಲ್ಲ ನೇಪಥ್ಯಕ್ಕೆ ಸರಿದು ಮೊಬೈಲ್ ಪೂಜೆಗಳು ಆಸ್ಪತ್ರೆಯ ಹಾಸಿಗೆಯ ಮೇಲೆ ಅಲುಗಾಡದೆ ಪವಡಿಸಿದ ರೋಗಿಯು ಆರೋಗ್ಯಕ್ಕಾಗಿ ಧ್ಯಾನಿಸುವಂತೆ ಆದೀತಲ್ಲವೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. 
ಅದೇ ವೇಳೆಯಲ್ಲಿ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಕಟಿಬದ್ದವಾಗಿರುವ ಧರ್ಮಸಭೆಯು ಇಂದು ಪ್ರಪಂಚದಲ್ಲಿ ಸರ್ವವ್ಯಾಪಿಯಾಗಿರುವ ವಿದ್ಯುನ್ಮಾನ ಮಾಧ್ಯಮವನ್ನು ಪ್ರವೇಶಿಸಿ ಈಗಾಗಲೇ ಅಲ್ಲಿ ತಳವೂರಿರುವ ಅಧಿಕಾರದಾಹಿಗಳ, ಶ್ರೀಮಂತರ, ರಾಜಕಾರಣಿಗಳ, ಜೂಜುಕೋರರ, ರಾಜಕೀಯ ಪ್ರೇರಿತ ಸುಳ್ಳುಸುದ್ದಿಗಾರರ, ಆರ್ಥಿಕತೆಯ ಬುಡಮೇಲುಗಾರರ, ಲಂಪಟರ ಹಾಗೂ ಪ್ರಲೋಭನಕಾರರ ಮನತಿರುಗಿಸಬೇಕೆನ್ನುವ ಕೂಗು ಸಹಾ ಕೇಳಿಬರುತ್ತಿದೆ. 
ಇತ್ತೀಚೆಗೆ ನಾವು ಪುಣ್ಯಭೂಮಿಯಾತ್ರೆಗೆ ಹೋಗಿದ್ದಾಗ ನಮ್ಮ ತಂಡದಲ್ಲಿದ್ದ ಗುರುವೊಬ್ಬರು ನಮಗಾಗಿ ಪ್ರತಿದಿನ ಬಲಿಪೂಜೆ ಅರ್ಪಿಸುತ್ತಿದ್ದರು. ಅವರು ತಮ್ಮ ಕೈಪೆಟ್ಟಿಗೆಯಲ್ಲಿ ಪೂಜಾವಸ್ತ್ರ, ದ್ರಾಕ್ಷಾರಸದ ಕುಪ್ಪಿ, ಪಾನಪಾತ್ರೆಗಳನ್ನೆಲ್ಲ ತುಂಬಿಕೊಂಡಿದ್ದರು. ಆದರೆ ಮಣಭಾರದ ಪೂಜಾಪುಸ್ತಕ ವಾಚನಗಳ ಗ್ರಂಥವಿಲ್ಲದೆ ಅವರು ಪೂಜೆಯರ್ಪಿಸುವುದು ಹೇಗೆಂಬ ಕುತೂಹಲ ನನಗಿತ್ತು. ಪುಟ್ಟ ಮೇಜನ್ನು ಬಲಿಪೀಠವಾಗಿ ಸಿದ್ಧಗೊಳಿಸಿದ ಮೇಲೆ ಅವರು ತಮ್ಮ ಮೊಬೈಲು ತೆರೆದು ಅದರಿಂದ ಅಂದಿನ ಪೂಜಾಪಠ್ಯವನ್ನು ಓದತೊಡಗಿದರು. ಹೀಗೆ ಪೂಜೆ ಸಾಂಗವಾಗಿ ನೆರವೇರಿತು. ಅಂದರೆ ಸಾವಿರಾರು ಪುಟಗಳ ಪೂಜಾರ್ಪಣೆಯ ಪಠ್ಯಗಳನ್ನು ಅಂಗೈ ಮೇಲಿನ ಮೊಬೈಲಿನಲ್ಲಿ ಹಿಡಿದಿಟ್ಟುಕೊಳ್ಳುವ ಮೂಲಕ ಚರ್ಚಿನ ಹೊರಗಡೆಯೂ ಪೂಜಾರ್ಪಣೆ ಸಾಧ್ಯವೆಂದಾಯಿತು. ಈ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ಕ್ರಾಂತಿಯು ಒಂದು ವರದಾನವೆಂದೇ ಹೇಳಬಹುದು. 
ಅದೇ ರೀತಿ ಸಾವಿರಾರು ಪುಟಗಳ ದಪ್ಪ ಕೀರ್ತನೆ ಪುಸ್ತಕವನ್ನು ಕೈಯಲ್ಲಿಡಿದು ಹಾಡುವ ಬದಲಿಗೆ ದೇವಾಲಯದಲ್ಲಿ ಪ್ರೊಜೆಕ್ಟರ್ ಮೂಲಕ ಗೋಡೆಯ ಮೇಲೆ ಹಾಡನ್ನು ಮೂಡಿಸಿ ಎಲ್ಲರೂ ಗಾಯನದಲ್ಲಿ ಪಾಲುಗೊಳ್ಳುವ ಪ್ರಯೋಗಗಳು ಹಲವೆಡೆ ನಡೆದಿವೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಾಡುಗಳನ್ನು ಮೊಬೈಲಿನಲ್ಲಿ ನೋಡಿಕೊಂಡು ಹಾಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಮುದ್ರಣಮಾಧ್ಯಮದ ಬದಲು ಈ ರೀತಿಯ ಎಲೆಕ್ಟ್ರಾನಿಕ್ ಮಾಧ್ಯಮದ ಬಳಕೆಯು ಪರಿಸರಕ್ಕೆ ವರವಾಗಿದೆ ಎಂಬುದು ಸಂತೋಷದ ವಿಷಯ. 
ಪ್ರವಾಸದ ಸಂದರ್ಭದಲ್ಲಿ ಅಪರಿಚಿತ ನಾಡಿನಲ್ಲಿ ದೇವಾಲಯವೊಂದರ ತಾಣವನ್ನು ಕಂಡುಹಿಡಿಯಲೂ ಸಹ ಮಿಂಬಲೆಯ ನಕಾಶೆಗಳು ಸಹಾಯ ಮಾಡುತ್ತಿವೆ. ಸುಮಾರು 1989ರಲ್ಲಿ ನಾನು ಒರಿಸ್ಸಾದ ಕೋರಾಪುಟ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವಾಗ ಭಾನುವಾರದ ಪೂಜೆಯಲ್ಲಿ ಭಾಗವಹಿಸಲು ಕಥೋಲಿಕ ಚರ್ಚನ್ನು ಹುಡುಕಿದ್ದೇ ಒಂದು ತ್ರಾಸದಾಯಕ ಸಂಗತಿಯಾಗಿತ್ತು. ಕಿಲೋಮೀಟರುಗಟ್ಟಲೆ ಕಾಲ್ನಡಿಗೆಯಲ್ಲಿ ಹೋಗಿ ಶಿಲುಬೆಯಿದ್ದ ಕಟ್ಟಡವನ್ನು ಹುಡುಕಿ ಅಲ್ಲಿನ ಪಾದ್ರಿಯನ್ನು ಮಾತಾಡಿಸಿ ಪೂಜಾ ವೇಳಾಪಟ್ಟಿ ತಿಳಿದುಕೊಂಡಿದ್ದೊಂದು ಸಾಹಸದ ಕೆಲಸವೇ ಆಗಿತ್ತು. ಇಂದು ಯಾವುದೇ ಊರಿಗೆ ಹೋದರೂ ಚರ್ಚಿನವರಲ್ಲದಿದ್ದರೂ ಇತರರು ಚರ್ಚಿನ ಬಗ್ಗೆ ಮಾಹಿತಿ ನೀಡುವುದನ್ನು ಮಿಂಬಲೆಯಲ್ಲಿ ಕಾಣಬಹುದು. ಹೀಗೆ ಕೆಲ ದಿನಗಳ ಹಿಂದೆ ನಾನು ಮತ್ತು ನನ್ನ ಶ್ರೀಮತಿ ಮಲೇಶಿಯಾ ದೇಶಕ್ಕೆ ಪ್ರವಾಸ ಹೋಗಿದ್ದಾಗ ನಮ್ಮ ಹೋಟೆಲಿನಿಂದ ದೇವಾಲಯಕ್ಕೆ ಟ್ಯಾಕ್ಸಿ ಮಾಡಿಕೊಂಡು ಹೋಗಿ ಬಂದದ್ದು ಮಿಂಬಲೆಯ ಸಹಾಯದಿಂದಲೇ. ಹೀಗೆ ಎಲೆಕ್ಟ್ರಾನಿಕ್ ಮಾಧ್ಯಮವು ನಮ್ಮ ದೈನಂದಿನ ವ್ಯವಹಾರಗಳಿಗೆ ಮಾತ್ರವಲ್ಲ ನಮ್ಮ ಆಧ್ಯಾತ್ಮಿಕ ಬದುಕಿಗೂ ನೆರವಾಗುತ್ತಿದೆ.
ಬೆಂಗಳೂರಿನಂತ ಮಹಾನಗರಗಳ ಕೆಲ ಚರ್ಚುಗಳು ತಮ್ಮದೇ ಆದ ಮೊಬೈಲ್ ಅಪ್ಲಿಕೇಶನ್ನುಗಳನ್ನು ಅಳವಡಿಸಿಕೊಂಡು ತಮ್ಮ ಸುಪರ್ದಿಯ ಭಕ್ತಾದಿಗಳಿಗೆ ದೇವಾಲಯದ ವಿವಿಧ ಕಾರ್ಯಕ್ರಮಗಳ ವೇಳಾಪಟ್ಟಿಯನ್ನೂ, ಧಾರ್ಮಿಕ ಪೋಷಣೆಯ ವಿವರಗಳನ್ನೂ ಒದಗಿಸುತ್ತಿದ್ದಾರೆ. ದೇವಾಲಯದ ವಿವಿಧ ಪ್ರಕಟನೆಗಳೂ, ಸೂಚನೆಗಳೂ ಇದರಲ್ಲಿ ಲಭ್ಯವಿರುತ್ತವಲ್ಲದೆ ಮುಖ್ಯ ವ್ಯಕ್ತಿಗಳ ಸಂಸ್ಥೆಗಳ ಸಂಪರ್ಕ ವಿವರಗಳೂ ಇದ್ದು ಭಕ್ತರು ಆಗಿಂದಾಗ್ಗೆ ವಿಷಯಗಳನ್ನು ಅರಿಯಬಹುದಾಗಿದೆ. ಹಾಗೂ ಚರ್ಚಿನ ಕಾರ್ಯಕ್ರಮಗಳಿಗೆ ಹಣ ವರ್ಗಾವಣೆಯನ್ನೂ ಮಾಡಬಹುದಾಗಿದೆ.
ಬಲಿಪೂಜೆಯ ಪವಿತ್ರ ವಾಚನಗಳನ್ನೂ ಹಾಡುಗಳನ್ನೂ ಮೊದಲೇ ವಾಟ್ಸಾಪು ಮೂಲಕ ಹಂಚಿಕೊಂಡು ಅಭ್ಯಾಸ ಮಾಡಿಕೊಳ್ಳುವ ಪ್ರಯೋಗಗಳೂ ಇತ್ತೀಚೆಗೆ ಚಾಲ್ತಿಗೆ ಬರುತ್ತಿವೆ. ಕ್ರಿಸ್ತಗಾನವೃಂದ ಎಂಬ ಒಂದು ವಾಟ್ಸಾಪ್ ಗುಂಪು (9481423743) ಕರ್ನಾಟಕದ ಎಲ್ಲ ಗಾನವೃಂದಗಳ ಪ್ರತಿನಿಧಿಗಳನ್ನು ಒಳಗೊಂಡಿದ್ದು ಬಲಿಪೂಜೆಗೆ ಅಗತ್ಯವಾದ ಹಾಡು, ಕೀರ್ತನೆ, ಪ್ರಾರ್ಥನೆ, ಪೂಜಾವಿಧಿ, ಧಾರ್ಮಿಕ ಸಂದೇಹಗಳನ್ನು ಸಂದೇಶಗಳನ್ನು ಹಂಚಿಕೊಳ್ಳುತ್ತಾ ಗಾಯನತಂಡಗಳಿಗೆ ನೆರವು ನೀಡುತ್ತಿದೆ. ದನಿ ಎಂಬ ಇ-ಮಾಸಿಕವು ಜಗತ್ತಿನಾದ್ಯಂತ ಕನ್ನಡ ಓದುಗರಿಗೆ ಕ್ರೈಸ್ತ ಸಾಹಿತ್ಯವನ್ನು ಉಣಬಡಿಸುತ್ತಿದೆ. ಕ್ರಿಸ್ತದನಿ ಎಂಬ ಬ್ಲಾಗು ಸಂವಾದ ಬಲಿಪೂಜೆ, ಜಪಸರ, ಪೂಜಾವಾಚನಗಳು, ಪ್ರಭೋಧನೆಗಳು, ಶಿಲುಬೆಹಾದಿ, ಧರ್ಮಸಾರ ಮುಂತಾದ ಧಾರ್ಮಿಕ ಸಾಹಿತ್ಯವನ್ನು ಒದಗಿಸುತ್ತಾ ಎಲ್ಲ ಕ್ರೈಸ್ತರಿಗೆ ವಿಶೇಷವಾಗಿ ಪ್ರವಾಸಿ ಕ್ರೈಸ್ತರಿಗೆ ಕೈಪಿಡಿಯಾಗಿದೆ. ಬಿಡುವಿಲ್ಲದ ಯಾಂತ್ರಿಕ ಜೀವನದ ನಡುವೆ ಸಮಯ ಸಿಕ್ಕಾಗ ಹಾಡುಗಳನ್ನು ಕೇಳಿ ಕಲಿಯುವ, ಪವಿತ್ರವಾಚನವನ್ನು ಮನನ ಮಾಡುವ ಅವಕಾಶವನ್ನು ಒದಗಿಸಿರುವ ಈ ಒಂದು ಸುಂದರ ತಂತ್ರಜ್ಞಾನಕ್ಕೆ ಯಾರಾದರೂ ಮನ ಸೋಲಲೇಬೇಕು. 
ಇಂಥಾ ಒಂದು ಯಶಸ್ವೀ ತಂತ್ರಜ್ಞಾನವನ್ನು ಬಳಸಿಕೊಂಡು "ಜಗದೆಲ್ಲೆಡೆಗೆ ಶುಭಸಂದೇಶವನ್ನು ಸಾರುವ" ಕಾಯಕವನ್ನು ನಾವೆಲ್ಲರೂ ಮುಂದುವರಿಸೋಣ. ಧರ್ಮಸಭೆಯೊಂದಿಗೆ ಕೈಗೂಡಿಸೋಣ.
ಸಿ ಮರಿಜೋಸೆಫ್

ಹಾಗರ

ಊರ್ ಗ್ರಾಮದಿಂದ ಕಾನಾನಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಅಬ್ರಹಾಮ ಮತ್ತು ಸಾರ ಫರೋಹನ ತೊಂದರೆಗೆ ಸಿಲುಕಿ ದೇವರ ಮಧ್ಯೆ ಪ್ರವೇಶದಿಂದ ಪಾರಾದ ಸಂಗತಿಯಂತೂ ನಮಗೆ ಗೊತ್ತೇ ಇದೆ. ಅವರಿಬ್ಬರೂ ಅಂತಃಪುರದಿಂದ ತೆರಳುವಾಗ ಫರೋಹನು ಅವರಿಗೆ ಕುರಿಮೇಕೆಗಳನ್ನು, ದಾಸ ದಾಸಿಯರನ್ನೂ, ಒಂಟೆಗಳನ್ನೂ ಇನ್ನೂ ಮುಂತಾದುವುಗಳನ್ನು ಕೊಟ್ಟನು. ಬಹುಶಃ ಹಾಗರಳು ಆ ದಾಸದಾಸಿಯರ ಕೊಡುಗೆಯಲ್ಲಿ ಒಬ್ಬಳಾಗಿರಬಹುದು. ಹಾಗಾಗಿ ಅವಳು ಈಜಿಪ್ಟಿನವಳು.
ಈಜಿಪ್ಟಿನ ದಾಸಿ ಹಾಗೂ ಸಾರಾಳ ಪ್ರತಿಸ್ಪರ್ಧಿಯಾಗಿದ್ದರೂ ಹಾಗರಳಿಗೆ ಹೆಮ್ಮೆ ಪಡಲು ಒಂದು ಆನಂದದ ಸಂಗತಿ ಇದ್ದೇ ಇದೆ. ಅದೇನೆಂದರೆ ಅವಳ ಪರವಾಗಿ ದೇವರು ಒಮ್ಮೆ ಅಲ್ಲ ಎರಡು ಬಾರಿ ಪ್ರೀತಿಯಿಂದ ಮಧ್ಯೆ ಪ್ರವೇಶಿಸಿದ್ದು. ಇನ್ನು ಹಾಗರಳು ಅಬ್ರಹಮನ ಸಂತತಿ ಬೆಳೆಸಲು ಒಪ್ಪಿದಳಾದರೂ ಅವಳೊಬ್ಬಳು ಮುಗ್ಧೆ. ಯಜಮಾನಿಯ ಅಜ್ಞೆಯನ್ನು ವಿರೋಧಿಸಲು ಅಲ್ಪ ಶಕ್ತಿ ಹೊಂದಿದವಳಾಗಿದ್ದಳು. ಸಾರಾಳು ಅಬ್ರಹಾಮನನ್ನು ತನ್ನ ದಾಸಿಯೊಂದಿಗೆ ಮಲಗಲು ಹೇಳಿದಾಗ, ಆ ಮುಗ್ಧ ದಾಸಿಯು ಆಧ್ಯಾತ್ಮಿಕ ವಿಪತ್ತಿನ ಜೀವನಕ್ಕೆ ಹೆಜ್ಜೆ ಇಡಬೇಕಾಗಿ ಬರುತ್ತದೆ. ಇದರ ಪರಿಣಾಮವಾಗಿ ಅವಳು ಗರ್ಭವತಿಯಾಗಿ ಗರ್ವದಿಂದ ಅಬ್ರಹಾಮನಿಗೆ ಹತ್ತಿರವಾಗ ತೊಡಗಿದಳು. ಇದನ್ನು ಕಂಡ ಸಾರಾಳು ತಾತ್ಸಾರಗೊಂಡು ಹೊಟ್ಟೆಕಿಚ್ಚಿನಿಂದ ಹಾಗರಳಿಗೆ ಕಿರುಕುಳ ಕೊಡಲು ಪ್ರಾರಂಭಿಸಿದಾಗ, ಆ ಕಿರುಕುಳವನ್ನು ತಾಳಲಾರದೆ ಹಾಗರಳು ಓಡಿಹೋಗುತ್ತಾಳೆ. ಅವಳಿಗೆ ಇದೊಂದು ಹತಾಶೆ ನಡೆಯಾಗಿತ್ತು.
ಹಾಗರಳು ಓಡಿಹೋಗುತ್ತಿರುವ ಸಂದರ್ಭದಲ್ಲಿ ಅವಳಿಗೆ ದೇವದೂತನ ವಾಣಿಯೊಂದು ಕೇಳಿಬರುತ್ತದೆ. ಆ ವಾಣಿಯು ಸಾರಾಳ ದಾಸಿ ಹಾಗರಳೇ, ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ ಎನ್ನಲು ಅವಳು ತಾನು ತನ್ನ ಯಜಮಾನಿಯಾದ ಸಾರಾಳ ಬಳಿಯಿಂದ ಹೋಗುತ್ತಿರುವುದಾಗಿ ತಿಳಿಸುತ್ತಾಳೆ. ಪ್ರತ್ಯುತ್ತರವಾಗಿ ಆ ವಾಣಿಯು,
" ನಿನ್ನ ಯಜಮಾನಿಯ ಬಳಿಗೆ ಹಿಂತಿರುಗು ಅವಳಿಗೆ ತಗ್ಗಿ ನಡೆದುಕೋ ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ದೊಡ್ಡದಾಗಿಸುವೆನು ಹುಟ್ಟುವನು ಮಗನೊಬ್ಬನು ಗರ್ಭಿಣಿಯಾದ ನಿನಗೆ ಇಸ್ಮಾಯೇಲೆಂಬ ಹೆಸರನು ಇಡು ಅವನಿಗೆ ಕಾರಣ- ಸರ್ವೇಶ್ವರ ಕಿವಿಗೊಟ್ಟಿಹನು ನಿನ್ನ ಮೊರೆಗೆ ಬಾಳುವನು ಅವನು ಕಾಡುಗತ್ತೆಯಂತೆ ಎತ್ತುವನು ಕೈಯನು ಎಲ್ಲರ ಮೇಲೆ ಎತ್ತುವರೆಲ್ಲರೂ ಕೈ ಅವನ ಮೇಲೆ ಬಾಳುವನು ಸೋದರರಿಗೆ ಎದುರು-ಬದುರಾಗೆ" ಎಂದಿತು.
ಬೈಬಲ್ ನಲ್ಲಿ ದಾಖಲಾಗಿರುವ ದೇವದೂತನ ವರದಿಗಳಲ್ಲಿ ಇದೇ ಮೊದಲನೆಯದು. ದೂತನ ಬೇಟಿ ಹಾಗೂ ಆಶ್ವಾಸನೆ ಪಡೆದವರಲ್ಲಿ ಹಾಗರಳೇ ಪ್ರಥಮಳು. ಪೂರ್ವಜರ ವಂಶವೃಕ್ಷದಲ್ಲಿ ಗಂಡುಮಗುವಿನ ಜನನದ ಪ್ರಕರಣ ಮೊದಲನೆಯದು. ಸಾರಾಳಿಗೆ ಸಿಕ್ಕ ವಾಗ್ದಾನದಂತೆ ಹಾಗರಳಿಗೂ ದೊಡ್ಡ ಸಂತಾನ ಪ್ರಾಪ್ತಿಯಾಗುವ ಆಶ್ವಾಸನೆ ಸಿಗುತ್ತದೆ. ಅಂತೆಯೇ ಹಾಗರಳು ಯಜಮಾನಿಯ ಬಳಿಗೆ ಹಿಂದಿರುಗಬೇಕಾಯಿತು. ದಾಸಿಯು ಯಜಮಾನಿಯ ಬಳಿಯಲ್ಲೇ ಇದ್ದು ತಗ್ಗಿ-ಬಗ್ಗಿ ನಡೆಯುವುದು ಪೂರ್ವಜರ ನಿಯಮ ಹಾಗೂ ವಾಡಿಕೆಯಾಗಿತ್ತು.
ದೂತನ ಮುಖೇನ ದೇವರ ಮಾತುಗಳನ್ನು ಕೇಳಿ ಹಾಗರಳು ಉಲ್ಲಾಸಭರಿತಳಾಗಿ, 'ನನ್ನನ್ನು ನೋಡುವಾತ ದೇವರನ್ನು ನಾನಿಲ್ಲೇ ನೋಡಿಬಿಟ್ಟೆನಲ್ಲ' ಎಂದುಕೊಂಡು ಅವರಿಗೆ 'ಎಲ್ಲವನ್ನೂ ನೋಡುವಾತ ದೇವರು' ಎಂದು ಹೆಸರಿಟ್ಟಳು. ಅಂತೆಯೇ ಅಲ್ಲಿದ್ದ ಬಾವಿಗೆ 'ಲಹೈರೋಯಿ' ಎಂದರೆ 'ನನ್ನನ್ನು ನೋಡುವ ಜೀವ ಸ್ವರೂಪನ ಬಾವಿ' ಎಂದು ಹೆಸರಾಯಿತು.
ಜನರೆಲ್ಲರೂ ಅವಳನ್ನು ದಾಸಿ ಎಂದು ಕರೆದರೆ ದೇವರು ಮಾತ್ರ ಅವಳನ್ನು ಹಾಗರ ಎಂದು ಹೆಸರಿಡಿದು ಕರೆಯುತ್ತಾರೆ. ಅವಳ ಮಾತನ್ನು ಆಲಿಸಿ, ಅವಳನ್ನು ಒಂದು ಜನಾಂಗದ ತಾಯಿ ಎಂದು ಕರೆಯುತ್ತಾರೆ. ದೇವರಿತ್ತ ವಾಗ್ದಾನದಂತೆ ಹಾಗರಳು ಒಂದು ಗಂಡು ಮಗುವಿಗೆ ಜನ್ಮವಿತ್ತು ಅವನನ್ನು ಇಸ್ಮಾಯೇಲ್ ಎಂದು ಹೆಸರಿಸುತ್ತಾಳೆ.

ಸುಮಾರು ಹದಿನಾರು ವರ್ಷಗಳ ನಂತರ ಇಸ್ಮಾಯೇಲ್ ಮತ್ತು ಈಸಾಕ ಇಬ್ಬರೂ ದೊಡ್ಡವರಾಗಿ ಜೊತೆಗೆ ಆಡಿ ನಲಿದಾಡುತ್ತಿರುವುದನ್ನು ಕಂಡು ಸಾರಳಿಗೆ ಹೊಟ್ಟೆಕಿಚ್ಚು ಹುಟ್ಟುತ್ತದೆ. ತನ್ನ ಮಗ ಈಸಾಕನಂತೆ ಇಸ್ಮಾಯೇಲನು ಸಹ ಆಸ್ತಿಯಲ್ಲಿ ಸಮಾನ ಬಾಧ್ಯಸ್ಥನಾಗುವನೆಂದು ತಿಳಿದು ಅವನನ್ನು ಮತ್ತು ಅವನ ತಾಯಿ ಹಾಗರಳನ್ನು ಮನೆಯಿಂದ ಹೊರದೂಡಲು ಅಬ್ರಹಾಮನಿಗೆ ಹೇಳಿಬಿಡುತ್ತಾಳೆ. ಅವಳ ಮಾತಿಗೆ ಕಿವಿಗೊಟ್ಟ ಅಬ್ರಹಾಮನು ಹಾಗೆಯೇ ಮಾಡುತ್ತಾನೆ. ಇದರ ಪರಿಣಾಮವಾಗಿ ಹಾಗರಳು ತನ್ನ ಮಗನೊಂದಿಗೆ ಬೆರ್ಷೆಬಾ ಎಂಬ ಕಾಡಿನಲ್ಲಿ ಅಲೆಯಬೇಕಾಗುತ್ತದೆ. ಕಟ್ಟಿ ತಂದ ಊಟ ನೀರು ಎಲ್ಲಾ ಮುಗಿದ ಮೇಲೆ ಇಸ್ಮಾಯೇಲನ ಸ್ಥಿತಿ ನೋಡಲಾಗದೆ ಅವನನ್ನು ದೂರದ ಪೊದೆಯಲ್ಲಿಟ್ಟು ಜೋರಾಗಿ ಅಳುವಾಗ ಅಲ್ಲಿ ಒಂದು ಚಿಲುಮೆ ಕಾಣುತ್ತದೆ. ಇಸ್ಮಾಯೇಲ್ ಎಂಬ ಹೆಸರಿಗೆ ತಕ್ಕಂತೆ ದೇವರು ಅವರ ಮೊರೆಯನ್ನು ಆಲಿಸುತ್ತಾರೆ. ಚಿಲುಮೆಯಲ್ಲಿನ ನೀರು ಕುಡಿದು ಅವರಿಬ್ಬರೂ ತೃಪ್ತರಾಗುತ್ತಾರೆ. ಅಲ್ಲಿ ಅವರಿಗೆ ಮತ್ತೊಮ್ಮೆ ದೂತನ ವಾಣಿ ಕೇಳಿಬರುತ್ತದೆ. ಆ ವಾಣಿ ಹೀಗೆನ್ನುತ್ತದೆ "ಹಾಗರಳೇ, ನಿನಗೇನು ಆಯಿತು? ಅಂಜಬೇಡ; ಆ ಹುಡುಗನು ಬಿದ್ದಿರುವ ಸ್ಥಳದಿಂದಲೇ ಅವನ ಕೂಗು ದೇವರನ್ನು ಮುಟ್ಟಿತು; ನೀನೆದ್ದು ಹೋಗಿ ಅವನನ್ನು ಎತ್ತಿಕೋ. ಅವನನ್ನು ಕೈ ಬಿಡಬೇಡ; ಅವನಿಂದ ಒಂದು ದೊಡ್ಡ ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ". ಹೀಗೆ ಎರಡನೇ ಬಾರಿ ರಾಷ್ಟ್ರ ಉತ್ಥಾನದ ಆಶ್ವಾಸನೆ ದೇವರಿಂದ ಅವಳಿಗೆ ಸಿಗುತ್ತದೆ.
ಅಲ್ಲಿಂದ ಹೊರಟ ತಾಯಿ ಮಗ ಇಬ್ಬರೂ ಸೀನಾಯ್ ಪರ್ಯಾಯ ದ್ವೀಪದಲ್ಲಿದ್ದ ಪಾರಾನಿನಾ ಅರಣ್ಯಕ್ಕೆ ತಲಪಿ ಅಲ್ಲಿ ಬೀಡುಬಿಟ್ಟರು. ಹಾಗರಳು ಇಸ್ಮಾಯೇಲನಿಗೆ ಈಜಿಪ್ಟಿನಿಂದ ಹೆಣ್ಣನ್ನು ತಂದು ಮದುವೆ ಮಾಡಿಸಿದಳು. ಹೀಗೆ ದೇವರ ವಾಗ್ದಾನದಂತೆ ಇಸ್ಮಾಯೇಲನ ಸಂತತಿ ಬೆಳೆಯಿತು. ಅವನ ಸಂತತಿಯು ಹವಿಲ ಹಾಗೂ ಶೂರ್ ಮಧ್ಯೆಯಿರುವ ಪ್ರದೇಶದಲ್ಲಿ ವಾಸವಾಗಿದ್ದು; ಶೂರ್ ಈಜಿಪ್ಟಿನ ಪೂರ್ವಕ್ಕೆ ಅಸ್ಸೀರಿಯಾಗೆ ಹೋಗುವ ಹಾದಿಯಲ್ಲಿದೆ. ಹೀಗೆ ಸಂಬಂಧಿಕರೆಲ್ಲರೂ ಎದುರುಬದುರಾಗಿಯೇ ವಾಸಮಾಡಿದರು ಎಂದು ಪವಿತ್ರ ಗ್ರಂಥದಲ್ಲಿ ಹೇಳಲಾಗಿದೆ.
ಒಂಟಿ ಮಹಿಳೆಯಾಗಿ ಕಾಡಿನಲ್ಲಿ ಹಾಗರಳು ತನ್ನ ಮಗನೊಂದಿಗೆ ಅಲೆಯುವಾಗ ಅವಳಿಗಾಗಿ ಬಂಧು ಮಿತ್ರರಾರೂ ನೆರವಾಗಲಿಲ್ಲ. ಅಂಥ ಸಂದರ್ಭದಲ್ಲಿ ದೇವರು ಅವಳ ಮೊರೆಗೆ ಕಿವಿಗೊಟ್ಟರು, ಅವಳನ್ನು ಈಕ್ಷಿಸಿದರು, ಆಶ್ವಾಸನೆ ನೀಡಿ ವಿಶ್ವಾಸಾರ್ಹರಾದರು. ಅವಳ ಮುಗ್ಧತೆ ಹಾಗೂ ದೈವಾಜ್ಞೆಯ ಪಾಲನೆ ಅವಳನ್ನು ದೇವರ ಕೃಪೆಗೆ ಪಾತ್ರಳಾಗುವಂತೆ ಮಾಡಿತು. ದೇವದೂತನ ಮುಖೇನ ದೇವರಿತ್ತ ವಾಗ್ದಾನ ಚಾಚೂತಪ್ಪದೆ ಹೀಗೆ ಈಡೇರಿಯೇ ತೀರಿತು.

ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ



ಗೌರಮ್ಮಳ ಮನೆ

ಕನ್ನಡ ರಾಜ್ಯೋತ್ಸವದ ಸಂಭ್ರಮದಾಚರಣೆ ಮತ್ತು ಅತೀವ ಮಳೆಯಿಂದಾಗಿ ಮನೆಮಠ ಕಳೆದುಕೊಂಡು ಬೀದಿಪಾಲಾಗಿರುವ ಜನರ ಹತಾಶೆಯ ಹಿನ್ನಲೆಯಲ್ಲಿ ಒಂದು ನೈಜ ಘಟನೆಯನ್ನು ಒಂದು ಕಥೆಯ ರೂಪದಲ್ಲಿ ಬರೆಯುತ್ತಿದ್ದೇನೆ. ಖಂಡಿತವಾಗಿ ಓದಿ.. ಮತ್ತೊಮ್ಮೆ ಕನ್ನಡ ರಾಜೋತ್ಸವದ ಶುಭಾಶಯಗಳು...

“ಈ ಗೌರಮ್ಮಳಿಗೆ ಹುಚ್ಚು ಇರ್ಬೇಕು.. ಮಳೆಗೆ. ಮನೆ ಅಗೋ ಇಗೋ ಅಂತಿರ್ಬೇಕಾದ್ರೆ… ಮನೆ ಒಳ್ಗೆ ದೆವ್ವ ಕೂತಂಗೆ…ಕೂತ್ತಾವ್ಳೆ..” 
ಪಕ್ಕದ ಮನೆಯ ನಾಗಮ್ಮ ಕಳವಳದಿಂದ ಆಡಿದ ಮಾತು ತನ್ನ ಮನೆಯ ಮುಂಭಾಗದ ಕೋಣೆಯಲ್ಲಿ ಮಂಡಿಗಳ ಮೇಲೆ ತನ್ನ ಇಡೀ ತಲೆಯ ಭಾರವನ್ನೆಲ್ಲಾ ಹಾಕಿ ಕಲ್ಲಂತೆ ಕೂತಿದ್ದ ಗೌರಮ್ಮಳ ಕಿವಿಗಳನ್ನು ಮುಟ್ಟಿದರೂ ಅವು ಅವಳ ಲೆಕ್ಕಕ್ಕೆ ಬರಲಿಲ್ಲ. ಕಾಲದ ಪರಿವೆಯನ್ನೇ ತಾನು ಕಳೆದುಕೊಂಡಂತೆ ಅವಳು ಮಂಕಾಗಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ಕೋಪದಿಂದ ದಿಟ್ಟಿಸುತ್ತಿದಳು. ಅವಳ ನೋಟದಡಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಕಡು ವೈರಿಯನ್ನು ನೋಡುವ ಸಿಟ್ಟು ಅವಳ ನಿಟ್ಟುಸಿರಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇತ್ತ ಮನೆಯ ಮಗ್ಗಲಲ್ಲೇ ಇದ್ದ ರಾಜಣ್ಣನ ಚಿಲ್ಲರೆ ಅಂಗಡಿಯ ರೇಡಿಯೋದಿಂದ ಹಾಡು ಕೇಳಿಬರುತ್ತಿತ್ತು. ಗಂಡಸರೆಲ್ಲ ಅಂಗಡಿಯ ಕಟ್ಟೆಯ ಮೇಲೆ ಕೂತು ಚಳಿಯ ನೆವದಲ್ಲಿ ಒಂದಾದನಂತರ ಮತ್ತೊಂದು ಬೀಡಿ ಹಚ್ಚಿಕೊಂಡು ಬುಸ ಬುಸ ಹೊಗೆ ಬಿಡುತ್ತಾ ಮೂರ್ನಾಲ್ಕು ಬೀಡಿ ಕಟ್ಟುಗಳನ್ನು ಬೂದಿ ಮಾಡಿ ಮಳೆ ತಂದ ಪಜೀತಿಯ ಬಗ್ಗೆ ಹರಟುತ್ತಿದ್ದರು. ಇದ್ಯಾವುದರ ಪರಿವೇ ಇಲ್ಲದಂತೆ ಚಿಂತೆಯ ಬಾವಿಯ ಆಳಕ್ಕೆ ಇಳಿದು ಬಿಟ್ಟಿದ್ದ ಗೌರಮ್ಮ ಸುಮ್ನೆ ಕೂತಿದ್ಲು.
“ಈ ಹುಚ್ಚು ಮಳೆ ಇಂಗೇ ಮುಂದುವರಿದ್ರೆ... ನನ್ ಮನೀ ಗತಿಯೇನು ಅಂತ? ದೇವ್ರೆ ಈ ಹುಚ್ಚು ಮಳೆನಾ ನಿಲ್ಸಪ್ಪ” ದಿಗಿಲುಗೊಂಡ ಗೌರಮ್ಮ ಬೇಡಿಕೊಳ್ಳುತ್ತಿದಳು. ಮುಂಜಾನೆಯಿಂದಲೇ ಹನಿ ಹನಿಯಾಗಿ ಶುರುವಾದ ಮಳೆ ಸ್ವಲ್ಪ ಹೊತ್ತಿನಲ್ಲೇ ಜೋರಾಗಿ ಸುರಿಯಲಾರಂಭಿಸಿತ್ತು. ಇಂತಹ ಅಬ್ಬರದ ಮಳೆಗೆ “ನಿಂತುಬಿಡು” ಎಂಬ ಬೇಡಿಕೆಯನ್ನಿಟ್ಟುಕೊಂಡು ಕಾದು ಕೂತಿದ್ದಳು ಗೌರಮ್ಮ. ಅವಳ ಒಕ್ಕೊರಲಿನ “ಮನವಿ” ಮಳೆರಾಯನ ಗಣನೆಗೆ ಬರಲಿಲ್ಲವೋ ಅಥವಾ ಅವನ ಅಬ್ಬರದಲ್ಲಿ ಅವಳ ಅಳು ಅವನಿಗೆ ಕೇಳಲಿಲ್ಲವೋ ಧಪ ಧಪ ಎಂದು ಬೀಳುತ್ತಲೇ ಇದ್ದ. ಆಗಲೇ ಹೆಪ್ಪುಗಟ್ಟಿಕೊಂಡಿದ್ದ ಕಾರ್ಮೋಡ ಮಾತ್ರ ಸಮಯ ಮೀರಿದ ಕತ್ತಲೆಯನ್ನು ಕವಿಸಿ ಕತ್ತಲೆಯ ತೆರೆಯನ್ನು ಇಳಿಸಲು ಸಜ್ಜಾಗುತ್ತಿತ್ತು. ಆದರೂ ಗೌರಮ್ಮ ಕೂತಲೇ ಕೂತು ಮಳೆಯ ಅಂತ್ಯಕ್ಕೆ ಕಾದಿದ್ದಳು. 
ನಿಜ, ಕೆಂಡದಂಥ ಬೇಸಿಗೆಯ ತಾಪಕ್ಕೆ ಧಗಧಗಿಸಿ ಉರಿಯುತ್ತಿದ್ದ ಊರಿಗೆ ಬೇಕಾಗಿದ್ದು ಕಿಂಚತ್ ಮಳೆ. ಮಳೆ ಬಾಲ ಹಿಡಿದು ಬರುವ ಅಲ್ಪ ತಂಪು, ಮೇಲಾಗಿ ಒಣಗಿದ್ದ ಬೆಳೆಗಳ ಆಸ್ತಿತ್ವದ ಉಳಿವಿಗಂತ ಅಲ್ಪಸ್ಪಲ್ಪ ನೀರು. ಇಂತಹ ತೀರ ಬೇಡಿಕೆಯನ್ನಿಟ್ಟುಕೊಂಡು ಕೂತಿದ್ದ ಊರಿಗೆ ಬಂದೂದಗಿದ್ದೇ ಬೇರೆ. ಆಕಾಶ ಮೋಡಗಳೆಲ್ಲಾ ಒಮ್ಮೆಲೇ ಕರಗಿ ಏಕಾಏಕಿಯಾಗಿ ಕಣ್ಣು ಕೋರೈಸುವ ಮಿಂಚು ಕಿವಿಗಡಚಿಕ್ಕುವ ಗುಡುಗು ಅರ್ಭಟಗಳಿಂದ ಆಕ್ರಮಣ ಪ್ರಾರಂಭಿಸಿ, ನಾಲ್ಕು ತಾಸಿಗೂ ಹೆಚ್ಚು ಹೊತ್ತು ಸತತವಾಗಿ ಭೋರ್ಗರೆದು ಊರಿಗೇ ಊರೇ ಬೆಚ್ಚಿ ಬೀಳುವಂತೆ ಮರಗಳನ್ನು ಬುಡಮೇಲಾಗಿಸಿ ಇಡೀ ಊರನ್ನು ಅಸ್ತವ್ಯಸ್ಥಗೊಳಿಸಿ ಹತ್ತಾರು ಎಕರೆಗಳ ಬೆಳೆಗಳನ್ನು ನುಂಗಿ ತೇಗಿದ್ದಲ್ಲದೆ ಇಡೀ ಊರನ್ನೇ ಜಲಾವೃತ್ತವಾಗಿಸಿ ಊಹೆಗೂ ಮೀರಿದ ಸಾವಿರಾರು ರೂಪಾಯಿ ಮೌಲ್ಯದ ನಷ್ಟವನ್ನು ಲೆಕ್ಕಪಟ್ಟಿಗೆ ಸೇರಿಸಿದ. ಅಷ್ಟಕ್ಕೇ ನಿಲ್ಲದೆ ಮೋರಿಗಳನ್ನು ದಿಕ್ಕು ತಪ್ಪುವಂತೆ ಮಾಡಿ ಮಣ್ಣ ರಸ್ತೆಗಳನ್ನು ಕೆಂಪು ನದಿಗಳಾಗಿಸಿಬಿಟ್ಟ. ಕೆಲ ಮನೆಗಳ ಅಡಿಪಾಯಗಳ ಬಾಯಿಗಳಿಗೆ ಬೇಕಾದಷ್ಟು ನೀರು ಕುಡಿಸಿ ನೆಲಕಚ್ಚುವಂತೆ ನೋಡಿಕೊಂಡಿದ್ದ. ಸಾಲದೆಂಬಂತೆ, ಹತ್ತಾರು ಮನೆಗಳ ಮೇಲ್ಛಾವಣಿಗಳನ್ನು ಬೀಳಿಸಿ ಬೋಳುಬೋಳಾಗಿಸಿದ್ದ, ಕರೆಂಟ್‍ಕಂಬಗಳನ್ನು ನೆಲಕ್ಕುರುಳಿಸಿ ಊರನ್ನು ಮತ್ತಷ್ಟು ಕತ್ತಲೆಗೆ ದೂಡಿ ಎಣ್ಣೆದೀಪಗಳ ಮರೆಹೊಗಲು ಅಪ್ಪಣೆಕೊಟ್ಟುಬಿಟ್ಟಿದ್ದ. 
ಮಳೆಯ ಇಂತಹ ಕ್ಷಿಪ್ರದಾಳಿಗೆ ಹುಚ್ಚು ಆಟಕ್ಕೆ ಊರು ಒಂದು ಚೂರೂ ಸನ್ನದ್ಧವಾಗಿರಲಿಲ್ಲವೆಂಬ ಸತ್ಯವನ್ನು ಅಸ್ತವ್ಯಸ್ತದ ತಲ್ಲಣವೇ ಸಾರಿ ಸಾರಿ ಡಂಗೂರ ಹೊಡೆಯುತ್ತಿತ್ತು. ಇದರ ನಡುವೆ ಜನಸಾಮಾನ್ಯರು ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಸರಕಾರವು ಯಾವುದೇ ರೀತಿಯ ಕ್ರಮಕೈಕೊಳ್ಳದಿರುವುದು ಜನರನ್ನು ಸಿಟ್ಟಿಗೆಬ್ಬಿಸಿತ್ತು. ಆದರೆ ಜನರ ಸಿಟ್ಟು ತಣ್ಣಗಾಯಿತೇ ವಿನಃ ಆಲಸೀ ಸರ್ಕಾರವನ್ನು ಬಡಿದೆಚ್ಚರಿಸುವ ಕಾರ್ಯ ಮಾಡಲಿಲ್ಲ. ಈ ಮಧ್ಯೆ, ಮುಂದಿನ ದಿನಗಳಲ್ಲಿ ಭಾರೀ, ಮಳೆಯಾಗುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತಿದ್ದವು.
ಇವೆಲ್ಲಾ ಆಗಿದ್ದು ಎರಡು ದಿನಗಳ ಹಿಂದೆ. ಗೌರೇನಹಳ್ಳಿ ಎಂಬ ಆ ಕಡೆ ಹಳ್ಳಿಯೂ ಎನ್ನಿಸಿಕೊಳ್ಳದ ನಗರದ ಜಾತಿಗೂ ಸೇರದ ಒಂದು ಊರಿನಲ್ಲಿ. ನಗರದ ಮಗ್ಗುಲಲ್ಲಿ ಮಲಗಿಕೊಂಡಿದ್ದರೂ ನಗರದ ಗುಣಗಳನ್ನು ಎರವಲು ಪಡೆಯಲು ಹೆಣಗಾಡುತ್ತಿದ್ದ ಒಂದು ಕೊಂಪೆಯಲ್ಲಿ. ಈ ಊರಿನ ಮುಖ್ಯ ರಸ್ತೆಯಲ್ಲಿ ಬಸ್ಸುಗಳ ಓಡಾಟವಿತ್ತು, ಆಗಾಲೇ ತಲೆ ಎತ್ತಿಕೊಂಡಿದ್ದ ಬೇಕರಿಗಳು, ದಿನಸಿ ಅಂಗಡಿಗಳ ಮೆರವಣಿಗೆಯ ಸಾಲುಗಳಿತ್ತು. ಹೋಟೆಲುಗಳ ವ್ಯವಸ್ಥೆಯು ಹಿಂದೆ ಬಿದ್ದಿರಲಿಲ್ಲ. ಮುಖ್ಯ ರಸ್ತೆಯ ಬಳಿಯಲ್ಲಿ ಕೆಲವು ಮೆಕ್ಯಾನಿಕ್ ಹಾರ್ಡ್‍ವೇರ್, ವೆಲ್ಡಿಂಗ್ ಅಂಗಡಿಗಳು ಸೆಟೆದು ನಿಂತಿದ್ದವು. ಊರನ್ನು ಸುತ್ತುವರಿದಿದ್ದ ಕೆಲ ಗಾರ್ಮೆಂಟ್ ಪ್ಯಾಕ್ಟರಿಗಳು ಊರಿನ ಹೆಣ್ಣುಮಕ್ಕಳಿಗೆ ಉದ್ಯೋಗ ನೀಡುವ ನೆಪದಲ್ಲಿ, ಆಗಲೇ ಮಿತಿಮೀರಿ ದುಡಿಸಿಕೊಳ್ಳಲು ಆರಂಭಿಸಿ ಗೋಮುಖ ವ್ಯಾಘ್ರಗಳಾಗಿದ್ದವು. ಆದರೆ ನಗರಗಳಲ್ಲಿರುವ ಅವಸರ ಇಲ್ಲಿನ ಜನರಲ್ಲಿ ಇನ್ನೂ ಮೈದೆಳೆದಿರಲಿಲ್ಲ. ಯಾಂತ್ರಿಕತೆ ಜನರಲ್ಲಿ ಇನ್ನೂ ಪ್ರವೇಶ ಗಿಟ್ಟಿಸಿಕೊಂಡಿರಲಿಲ್ಲ. ಆದರೂ ನಗರವೆಂಬ ಮಾಯೆಗೆ ಸ್ವಲ್ಪ ಸ್ವಲ್ಪವಾಗಿ ತನ್ನನ್ನೇ ಅರ್ಪಿಸಿಕೊಳ್ಳುವಂತಿತ್ತು ಈ ಹಳ್ಳಿ. ರಾಜಕೀಯವಾಗಿ ಸುತ್ತಮುತ್ತ ಹಳ್ಳಿಗಳಿಗಿಂತ ಒಂದು ಹೆಜ್ಜೆ ಮುಂದಿದ್ದ ಗೌರೇನಹಳ್ಳಿ ಕೆಲ ಪುಡಾರಿಗಳ ರಾಜಕೀಯ ಬಿತ್ತನೆಗೆ ಕೃಷಿಭೂಮಿಯಾದ ಹೆಗ್ಗಳಿಕೆ ಹೊಂದಿತ್ತು. ಅವಸರದಲೇ ತಲೆ ಎತ್ತುತಿದ್ದ ಕೆಲ ಕಾಂಕ್ರಿಟ್ ಮನೆಗಳು ಊರಿನ ಕಾಂಕ್ರಿಟೀಕರಣಕ್ಕೆ ಚಾಲನೆಕೊಟ್ಟ ಹಸಿರು ನಿಶಾನೆಯಂತೆ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದ್ದವು. 
ಇಂತಹ ಊರಿನಲ್ಲಿ ಬಡಕಲಾಗಿ ಹಣ್ಣು ಹಣ್ಣು ಮುದುಕಿಯಂತೆ ಬಾಗಿ ನಿಂತಿದ್ದೇ ಗೌರಮ್ಮಳ ಪ್ರೀತಿಯ ಮನೆ. ಇದರ ನಡುವೆ, ಅದನ್ನು ಗೂಡು ಎನ್ನಬೇಕೋ ಅಥವಾ ಮನೆ ಎನ್ನಬೇಕೋ ಎಂಬ ಗೊಂದಲದಲ್ಲಿದ್ದ ಊರಿನವರಿಗೆ ಕಾಂಕ್ರಿಟ್ ಮನೆಗಳ ಹಾವಳಿಯಲ್ಲಿ ಅದು ಗೂಡಾಗಿಯೇ ಕಾಣುತ್ತಿತ್ತು. ಊರ ಜನರಿಗೆ ಗೂಡಂತೆ ಕಾಣುವ, ಗೌರಮ್ಮಳ ಪ್ರೀತಿಯ ಮನೆಗಿದ್ದಿದ್ದು ಸಾದಾ ಎರಡು ಕೋಣೆಗಳು ಮಾತ್ರ. ಅವು ಅಡ್ಡಗೋಡೆ ಹಾಕಿದ್ದ ಗೆರೆಯಿಂದ ಇಬ್ಭಾಗಕೊಂಡು ಹಿಂಬದಿ ಮತ್ತು ಮುಂಬದಿ ಕೋಣೆಗಳಾಗಿದ್ದವು. ಮನೆಯ ಮುಂಬಾಗಿಲಿನ ಹಣೆನೇರಕ್ಕೆ ಪೂಜೆಮಾಡಿ ಬಟ್ಟೆಯಲ್ಲಿ ಕಟ್ಟಿ ನೇತು ಹಾಕಿದ ಒಂದು ತೆಂಗಿನಕಾಯಿ ಧೂಳಲ್ಲಿ ಮಿಂದು ತನ್ನ ಸ್ವರೂಪವನ್ನೇ ಕಳೆದುಕೊಂಡಿತ್ತು. ಮುಂಬಾಗಿಲಿನ ಎದುರಿಗಿದ್ದ ನೇರಗೋಡೆಯ ಮೇಲೆ ಒಂದು ಲಕ್ಷ್ಮಿ ಪೊಟೋ ನಿರ್ಲಕ್ಷ್ಯಕ್ಕೀಡಾಗಿ ಒಣಗಿದ ಹಾರ ಧರಿಸಿಕೊಂಡಿತ್ತಾದರೂ ಮನೆಗೆ ಸಿಂಧೂರದಂತಿತ್ತು. ಪುರಾತನ ವಸ್ತು ಸಂಗ್ರಹಾಲಯದಲ್ಲಿಡಲು ಯೋಗ್ಯವಾದ ಒಂದು ಹಳೇ ಟ್ರಂಕು ಅದೇ ಕೋಣೆಯ ಬಲ ಭಾಗದ ಒಂದು ಮೂಲೆಯಲ್ಲಿ ಬಚ್ಚಿಟ್ಟುಕೊಂಡು ಬಟ್ಟೆಬರಿ ಕಸಕಡ್ಡಿಗಳನ್ನು ತುಂಬಿಕೊಂಡಂತೆ ಕಂಡು ಬಂತು. ಜತೆಗೆ ಮನೆಯ ಹಿಂಭಾಗದ ಕೋಣೆಯ ಎಡಭಾಗದಲ್ಲಿ ಮಣ್ಣಿನ ಒಂದು ಒಲೆಯಿತ್ತಾದರೂ ಅದು ಅಡುಗೆಮನೆಯಂತೆ ಕಂಡುಬರಲಿಲ್ಲ. ಎರಡು ಮೂರು ಸಣ್ಣ ಪಾತ್ರೆ ಸಾಮಾನುಗಳನ್ನು ಬಿಟ್ಟರೆ ಆ ಕೋಣೆಯಲ್ಲಿ ಮತ್ತೇನೂ ಇರಲಿಲ್ಲ. ಇನ್ನು ಮನೆಯ ಸುಣ್ಣಬಣ್ಣದ ಬಗ್ಗೆ ಹೇಳದೇ ಇರುವುದು ಒಳ್ಳೆಯದೆನಿಸುತ್ತದೆ. ಇಂತಹ ಬಡಕಲು ಮನೆಯನ್ನು ಗೌರಮ್ಮ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದುದು ಮಾತ್ರ ಜನರಿಗೆ ಯಕ್ಷಪ್ರಶ್ನೆಯಾಗಿತ್ತು. 
“ಆ ಮುದಿ ಗೂಬೆಗೆ ಸರಿಯಾದ ಕೋಳಿಗೂಡು” ಹೀಗೆ ತಲೆಗೊಂದು ಮಾತನಾಡಿ ಅಣಗಿಸಿ ನಗುತ್ತಿದ್ದರು ಊರಿನವರು. ಕೆಲವರಂತೂ ಗೌರಮ್ಮಳ ಮನೆಗಿರುವ ವಿಶೇಷತೆಯ ತಡಕಾಟದಲ್ಲಿ ಸೋತು “ಆ ಗೌರಮ್ಮಂಗೆ ಸ್ವಲ್ಪ ತಿಕ್ಲು” ಎಂದು ತೀರ್ಪು ಕೊಟ್ಟುಬಿಟ್ಟಿದ್ದರು.
ಮೂರ್ನಾಲ್ಕು ವರ್ಷಗಳ ಹಿಂದೆ ತನ್ನ ಮೊದಲನೇ ಮಗ ಹೊಸಮನೆಯನ್ನು ಕಟ್ಟಿ ತನ್ನ ಮನೆಗೆ ಬಂದು ಸೇರಿಕೋ ಎಂದು ಕರೆದಾಗಲೂ, “ನನ್ ಪ್ರಾಣ ಓದ್ರೂ ಈ ಮನಿ ಬಿಡೊಲ್ಲಾ” ನಿಷ್ಠುರವಾಗಿ ಗೌರಮ್ಮ ತಿರಸ್ಕರಿಸಿದ್ದು ಊರವರ ಬಾಯಿಗೆ ಉಪ್ಪಿನಕಾಯಿ ಆಗಿತ್ತು.
“ಈ ಹುಚ್ಚು ಮಳೆ ಇಂಗೇ ಮುಂದುವರಿದ್ರೆ... ನನ್ ಮನೀ ಗತಿಯೇನು? ದೇವ್ರೆ ಈ ಹುಚ್ಚು ಮಳೆನಾ ನಿಲಿಸಪ್ಪ” ಎಂದು ಮನಸ್ಸಿನಲೇ ಮತ್ತೊಮ್ಮೆ ಬೇಡಿಕೊಳ್ಳುತ್ತಿದ್ದ ಗೌರಮ್ಮ ಕೂತೇ ಇದ್ದಳು. ಹಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆರಾಯ ನಿಲ್ಲುವಂತೆ ಕಾಣಲಿಲ್ಲ. ಆಕಾಶಕ್ಕೆ ತೂತು ಬಿದ್ದಂತೆ ಧಪ ಧಪ ಎಂದು ಬೀಳುತ್ತಿದ್ದ ಒಂದೊಂದು ತೊಟ್ಟು ಗೌರಮ್ಮಳ ಆತಂಕವನ್ನು ಹೆಚ್ಚಿಸುತ್ತಿದ್ದವು.
ಈ ನಡುವೆ ಮೂರ್ನಾಲ್ಕು ದಿನಗಳಿಂದ ಒಂದೇ ಸಮನೆ ಧಾರಾಕಾರವಾಗಿ ಸುರಿಯುತ್ತಿದ್ದ ಉಗ್ರಪ್ರತಾಪಿ ಮಳೆಯ ಹೊಡೆತಕ್ಕೆ ಸಿಲುಕಿದ್ದ ಗೌರಮ್ಮಳ ಚಿಕ್ಕ ಚೊಕ್ಕ ಮಣ್ಣಿನ ನಿಶಕ್ತ ಮನೆಯ ಹಿಂಭಾಗ ಕುಸಿದು ಪೂರ್ತಿ ಮನೆ ಕುಸಿದು ಬೀಳುವ ಮುನ್ಸೂಚನೆ ನೀಡಿತ್ತು. ಮನೆಯ ಬಲಬದಿಯ ಗೋಡೆಯಂತೂ ಮಳೆಯಲ್ಲಿ ಸಂಪೂರ್ಣ ತೊಯ್ದು ಶಿಥಿಲಗೊಂಡು, ನೆಲವನ್ನು ಕಚ್ಚಿಕೊಳ್ಳುವುದರಲ್ಲಿತ್ತು. ತಕ್ಷಣ ಮನೆಯ ರಿಪೇರಿಯ ಕೆಲಸ ಆಗಲೇಬೇಕಾಗಿತ್ತು. 
“ಏನಾದ್ರು ಮಾಡಿ ನನ್ನ ಮನೀನ ಉಳಿಸಿಕೊಡಪ್ಪ” ಎಂದು ಗೋಗರೆಯುತ್ತಿದ್ದ ಗೌರಮ್ಮಳಿಗೆ 
“ನಿನ್ನ ಮನೆಯ ರಿಪೇರಿಗೆ ಐದ್ರಿಂದ ಹತ್ತು ಸಾವಿರ ರೆಡಿ ಮಾಡ್ಕೊಂಡ್….ನನ್ನ ಕರಿ” 
ಕಡ್ಡಿ ಮುರಿದಂಗೆ ಗಾರೆಯವ ಹೇಳ್ಬಿಟ್ಟಿದ್ದ. ಕೂಲಿ ಮಾಡಿ ಬದುಕುತ್ತಿದ್ದ ಗೌರಮ್ಮಳಿಗೆ ಅಷ್ಟು ಹಣವಾದರೂ ಎಲ್ಲಿಂದ ಬರಬೇಕು. ಗಂಡ ಮತ್ತು ತಾನು ಕೂಡಿಸಿಟ್ಟಿದ ದುಡ್ಡು ಆಗಲೇ ಗಂಡನ ಅಸ್ಪತ್ರೆ ಖರ್ಚು, ಅಂತ್ಯಕ್ರಿಯೆಗಂತ ಖರ್ಚಾಗಿ ಗೌರಮ್ಮ ಬರಿಗೈಯಲ್ಲಿದ್ದಳು. ಈ ಕಡೆ, ಇಳೀ ವಯಸ್ಸಿನಲ್ಲಿದ್ದ ಗೌರಮ್ಮಳಗೆ ಯಾರು ತಾನೇ ಸಾಲ ಕೊಟ್ಟಾರು? ಆಕಾಶಕ್ಕೆ ಏಣಿ ಹಾಕುವ ಪ್ರಯತ್ನವಾದರೂ ಗೌರಮ್ಮ ಧೃತಿಗೆಟ್ಟಿರಲ್ಲಿಲ್ಲ. ತನ್ನ ಮನೆಯ ರಕ್ಷಣೆಗೆ ಕೈಯೊಡ್ಡುವ ಸಾಧ್ಯತೆಗಳ ಬಗ್ಗೆ ಲೆಕ್ಕಹಾಕುತ್ತಿದಳು.
ಪ್ರತಿ ಮಂಗಳವಾರ ನಡೆಯುತ್ತಿದ್ದ ಉಳಿತಾಯ ಸಂಘದ ನೆನಪಾಗಿ “ಇವತ್ತು ಏನಾದ್ರೂ ಮಾಡಿ ಸಂಘದಿಂದ ಸಾಲ ಕೇಳ್ಲೇ ಬೇಕು… ಇಲ್ದೆದ್ರೆ ನನ್ ಮನೆ ಉಳಿಯೊದಿಲ್ಲ” ಹೊತ್ತು ಮೀರಿದ್ದರೂ ಸಂಕಲ್ಪ ಹೊತ್ತು ಸಂಘದ ಮನೆ ಕಡೆಗೆ ದೌಡಾಯಿಸಿದಳು. 
ಮಳೆರಾಯನ ಕಣ್ಣುಮುಚ್ಚಾಲೆ ಆಟ ಇನ್ನೂ ಮುಗಿದಿರಲಿಲ್ಲ, ಮಳೆಯ ವೇಗ ಇಳಿಮುಖವಾಗಿದ್ದರೂ ಪಟ ಪಟ ಹನಿ ಬೀಳುತ್ತಲೇ ಇತ್ತು. ಆದರೂ ಮಳೆಯ ಜಪದಲ್ಲೇ ಸಂಘದ ಮನೆ ಕಡೆಗೆ ಹೆಜ್ಜೆ ಹಾಕಿದ ಅವಳು ದೇಹವನ್ನೇ ಬಿಟ್ಟ ಆತ್ಮದಂತೆ ಕಂಡಳು. ಅವಳ ಸೆರಗು ಇರಬೇಕಾದಲ್ಲಿ ಇರಲಿಲ್ಲ. ಕೆದರಿದ ತಲೆಕೂದಲು. ಬಾಡಿದ ಮುಖ. ದೃಢತೆಯನ್ನು ಕಳೆದುಕೊಂಡಿದ್ದ ಅವಳ ಹೆಜ್ಜೆಗಳಲ್ಲಿ ಬಿರುಸಿತ್ತಾದರೂ ಮನದಲ್ಲಿದ್ದ ಅವಳ ಆತಂಕ, ನೋವು ನಡೆಯಲ್ಲಿ ಕಾಣುತ್ತಿದ್ದವು. ತನ್ನ ಮನೆಯಿಂದ ಸುಮಾರು ಒಂದು ಕಿಲೊಮೀಟರು ದೂರದಲ್ಲಿದ್ದ ಸಂಘದ ಮನೆಗೆ ಕೆಸರ ಗುಂಡಿ ಹೊಂಡ ಎಂದು ತಲೆಕೆಡಿಸಿಕೊಳ್ಳದೆ ಮುನ್ನುಗ್ಗುತ್ತಿದ್ದ ಗೌರಮ್ಮಳ ನಡೆ ಕೀಲು ಕೊಟ್ಟ ಗೊಂಬೆಯಂತಿತ್ತು.
 ಗೌರಮ್ಮಳಿಗೆ ಆ ಮನೆ ಕಲ್ಲುಮಣ್ಣಿನಿಂದ ಕಟ್ಟಿದ ನಿರ್ಜೀವ ಕಟ್ಟಡವಾಗಿರಲಿಲ್ಲ. ಗಂಡ ಮಕ್ಕಳ ನೆನೆಪುಗಳು ಸಾಲುಗಟ್ಟಿ ಬೆಚ್ಚನೆ ಕೂತುಬಿಟ್ಟ ಆಪ್ತ ಖನಿಯೇ ಅದಾಗಿತ್ತು. ಆ ಮನೆ ದಾಂಪತ್ಯ ಜೀವನದ ಪ್ರತಿಯೊಂದು ಹೆಜ್ಜೆಗಳನ್ನು ದಾಖಲಿಸಿದ  ಬದುಕಿನ  ಗ್ರಂಥಾಲಯವೇ ಏನೋ ಎಂಬುವಂತಿತ್ತು. ಗಂಡನ ಪ್ರೀತಿಯ ಮಾತುಗಳನ್ನು, ತನ್ನ ಮಕ್ಕಳ ಅಕ್ಕರೆಯ ನಗು ಅಳಲು ತೊದಲು ಮಾತುಗಳು ಪ್ರತಿಧ್ವನಿಸುವ ಒಲವಿನ ಕನವರಿಕೆಗಳನ್ನೇ ತುಂಬಿಕೊಂಡಿದ್ದ ಆ ಮನೆ ಗೌರಮ್ಮಳಿಗೆ ಒಂದು ವಿಸ್ಮಯ ಜಗತ್ತಾಗಿತ್ತು. ತಮ್ಮ ಮಕ್ಕಳ ಹೊಳಪಿನ ಭವಿಷ್ಯಕ್ಕೆ ಯೋಜನೆಗಳನ್ನು ನೇಯಿಸಿದ ಮುದ್ದಿನ ಗೂಡಾಗಿದ್ದಲ್ಲದೆ, ದನ ಕರುಗಳಿಗೆ, ಹೆಂಚುಗಳ ಸಂದುಗಳಲ್ಲಿ ಆಗಾಗ ನುಸುಳುತ್ತಿದ್ದ ಬೆಕ್ಕು, ’ಮೇ” ಎಂದು ಅರುಚಿಕೊಳ್ಳುತ್ತಿದ್ದ ಕುರಿಮೇಕೆಗಳಿಗೆ, ಮನೆಯ ಅಲಾರಂ ಗಡಿಯಾರಗಳಾಗಿದ್ದ ಕೋಳಿಗಳಿಗೆ ಸೂರನ್ನು ಒದಗಿಸಿ ಸಹಬಾಳ್ವೆ ಮಾಡಿಸಿದ ಆತ್ಮೀಯ ಭಾವವೇ ಅದಾಗಿತ್ತು. ಆದ್ದರಿಂದ ತನ್ನ ಮುರುಕು ಮನೆಯನ್ನು ಕಳೆದುಕೊಳ್ಳುವುದೆಂದರೆ, ತನ್ನ ಬದುಕಿನ ಭವ್ಯ ಇತಿಹಾಸವನ್ನೆ ಕಳೆದುಕೊಳ್ಳುವುದಾಗಿತ್ತು. ಬದುಕಿನ ಮಧುರ ಕ್ಷಣಗಳನ್ನು ನೆನಪಿಸುವ ಕನ್ನಡಿಯನ್ನೇ ಚೂರು ಚೂರು ಮಾಡಿಬಿಡುವಂತಾಗಿತ್ತು. 
ಒಂದು ಕಾಲದಲ್ಲಿ ಬಾಡಿಗೆ ಮನೆಗಳ ಒಡತಿಯರು ಸಣ್ಣಪುಟ್ಟ ಕಾರಣಗಳಿಗೆಲ್ಲಾ ನೀಡುತ್ತಿದ್ದ ಉಗ್ರ ಹಿಂಸೆಗಳಿಂದ ಬೇಸತ್ತು ಬಾಡಿಗೆ ಮನೆಯೆಂದರೆ ವಾಕರಿಕೆ ಹುಟ್ಟುವಂತಾಗಿದ್ದ ಸಂದರ್ಭದಲ್ಲಿ ಹಠಕ್ಕೆ ಬಿದ್ದು ಗಂಡನನ್ನು ಹಿಂಸಿಸಿ ಬಹು ಆಸೆಯಿಂದ ಕಟ್ಟಿಕೊಂಡ ಸೂರಾಗಿತ್ತು. ಮನೆಕಟ್ಟಲು ಆರಂಭಿಸಿದ್ದಾಗ, ಬಿಟ್ಟಿ ಬಿಟ್ಟಿ ಸಲಹೆ ಸೂಚನೆಗಳನ್ನು ಕೊಡಲು ಬರುವವರ ಮುಂದೆ ಜಂಬದ ಬಾಯಿಂದ ಮನೆ ಬಗ್ಗೆ ಹೇಳುತ್ತಿದ್ದಳು. “ಗೌರಮ್ಮ ಮನೆಕಟ್ಟುತಾಳ?” ಎಂದು ಮೂಗುಮುರಿದು ಚುಚ್ಚಿ ಮಾತನಾಡುತ್ತಿದ್ದ ಜನರಿಗೆ ಮನೆಯನ್ನು ಕಟ್ಟಿ ಉತ್ತರಿಸಿದ್ದಳು. ಮನೆ ಕಟ್ಟಬೇಕೆಂಬ ಗೌರಮ್ಮಳ ಕನಸು ಮೂರ್ತವಾದಾಗ ಅವಳಿಗದು ಆಸೆ, ಸಂಭ್ರಮ, ದುಗುಡ, ಹತಾಶೆ, ಅತಂಕ ತುಂಬಿಕೊಂಡ ಒಂದು ಸಂಸಾರದಂತೆ ಕಂಡು ಬಂತು. ಕೆಳಮನೆ ರಾಜಣ್ಣ, ಗೌರಮ್ಮ ಎಂಬ ಒಂದು ವಿಳಾಸ ಕೊಟ್ಟಿದ್ದಲ್ಲದೆ, ಊರಿನಲ್ಲಿ ಅವರ ವಾಸ್ತವ್ಯವನ್ನು ಸ್ಥಿರೀಕರಣಗೊಳಿಸಿ, ಊರಿನ ಜನರ ಕಣ್ಣು ಬಾಯಿಗಳನ್ನು ಅವರತ್ತ ಸೆಳೆದಿದ್ದೇ ಈ ಮನೆ. ಮನೆ ಕಟ್ಟಿದ ಹೊಸದರಲ್ಲಿ ಊರಿನ ಕೆಲ ಮಂದಿ ಮನೆಯನ್ನು ನೋಡಿ ಹೊಟ್ಟಿಕಿಚ್ಚು ಪಟ್ಟಿದ್ದು ಗೌರಮ್ಮಳ ಗಮನಕ್ಕೆ ಬಾರದೆ ಇರಲಿಲ್ಲ. ಇಂತಹ ಭವ್ಯ ಪರಂಪರೆಯ ಮನೆಯನ್ನು ನೆಲಸಮ ಮಾಡಿಬಿಡಬೇಕು ಎಂಬ ಹಠಕ್ಕೆ ಬಿದ್ದಂತೆ ಮಳೆ ಧೋ ಎಂದು ಸುರಿಯುತ್ತಿತ್ತು.
ದಿನಪತ್ರಿಕೆಯ ಹಣೆಬರಗಳಂತಿದ್ದ “ಒಗ್ಗಟ್ಟಿನಲ್ಲಿ ಬಲವಿದೆ” “’ಸ್ವಾಲಂಬನೆ ನಮ್ಮ ಗುರಿ” ಎಂಬ ವಾಕ್ಯಗಳು ಗೋಡೆಯ ಮೇಲೆ ಭದ್ರಸ್ಥಾನ ಗಿಟ್ಟಿಸಿಕೊಂಡಿದ್ದ ಗಾಂಧಿ, ಅಂಬೇಡ್ಕರರ ಭಾವಚಿತ್ರಗಳ ಮಧ್ಯೆ ರಾರಾಜಿಸುತ್ತಿದ್ದವು. ಸಂಘವು ಸಮಯಕ್ಕೆ ಸರಿಯಾಗಿ ಪ್ರಾರಂಭಗೊಂಡಿತ್ತು. ಸಂಪ್ರದಾಯಿಕವಾಗಿ ಹೇಳುತ್ತಿದ್ದ ಪ್ರಾರ್ಥನೆಯ ಪಠನ ಮುಗಿದಿತ್ತು. ಉಳಿತಾಯ ಹಣದ ಜಮಾವಣೆ ಕಾರ್ಯ ಆರಂಭವಾಗಿತ್ತು. ಗಾಂಧಿ ಮತ್ತು ಅಂಬೇಡ್ಕರುಗಳ ಪೋಟೋಗಳ ಅಭಿಮುಖರಾಗಿ ಎರಡು ಸಾಲುಗಳಲ್ಲಿ ಕೋಣೆಯ ಕೇಂದ್ರಭಾಗದಲ್ಲಿ ಕುಳಿತಿದ್ದ ಹೆಂಗಸರು ಒಬ್ಬೊಬ್ಬರಾಗಿ ಪಾಸ್ ಪುಸ್ತಕಗಳನ್ನು ಹಿಡಿದು ಸಂಘಟಕರ ಬಳಿಗೆ ಬಂದು ಹಣ ಜಮಾವಣೆ ಮಾಡುತ್ತಿದ್ದರು. ಕೆಲ ಮಹಿಳೆಯರು ’ನಿಶ್ಯಬ್ದ’ ಎಂಬ ನಿಯಮಕ್ಕೆ ಹೆದರಿ ಪಿಸ ಪಿಸ ಎಂದು ದನಿ ತಗ್ಗಿಸಿ ಮಾತನಾಡುತ್ತಿದ್ದರು. ತಡವಾದರೂ ಹಠಾತ್ತಾಗಿ ಬಂದ ಗೌರಮ್ಮಳಿಗೆ ಬಾಗಿಲಿರಲಿ ಇಡೀ ಸಂಘವೇ ನಡುಗಿದಂತೆ ಕಂಡುಬಂತು. ಸಾಲಿನಲ್ಲಿ ಕುಳಿತುಕೊಳ್ಳುವ ಗೋಜಿಗೆ ಹೋಗದ ಗೌರಮ್ಮ ಕೋಣೆಯ ಮುಂಬಾಗಿಲು ಬಳಿಯಿಂದಲೇ “ನನ್ ಮನಿ ಮಳೆಗೆ ಬಿದೋಗ್ತಾ ಇದೆ… ಮನಿ ರಿಪೇರಿಗೆ ಸ್ವಲ್ಪ ಸಾಲ ಬೇಕು… ವಾರದಂಗೆ ಅಲ್ಪ ಸ್ವಲ್ಪ ಕಟ್ಟಿ ತೀರ್ಸುಬಿಡ್ತೀನಿ” ಎನ್ನುತ್ತಾ ಕೀರಲು ದನಿಯಿಂದ ಹೇಳಿದ ಮಾತು ಕೋಣೆಯನ್ನು ತುಂಬಿಕೊಂಡಿತ್ತು. ಒಮ್ಮೆಲೇ ಕೋಣೆಯಲ್ಲಿ ಮೌನ ಆವರಿಸಿತ್ತು. ಗೌರಮ್ಮಳಿಗೆ ಸಾಲ ಕೊಡಬೇಕೋ ಬೇಡವೋ ಎಂಬ ಲೆಕ್ಕಾಚಾರ ಬರಮಾಡಿಕೊಂಡಿದ್ದ ಮೌನ ಅದಾಗಿತ್ತು. 
ಪ್ರಾಯಶಃ ಗೌರಮ್ಮಳ ಅಳಲು ಮಹಿಳೆಯರ ಸಂಘದ ವಿಶ್ವಾಸ ಗಳಿಸಿದಂತೆ ಕಾಣಲಿಲ್ಲ. “ಮೊದಲು ನೀನು ತೆಗೆದುಕೊಂಡಿರುವ ಸಾಲವನ್ನು ತೀರಿಸಿ ಆಮೇಲೆ ನೀನು ಲೋನ್ ಪಡೆಯಬಹುದು” ಸಂಘದ ಅಧ್ಯಕ್ಷರು ಹೇಳುತ್ತಿದ್ದಂತೆ, “ಕಷ್ಟ ಕಾಲ್ದಾಗೆ ಆಗದ ನಿಮ್ಮ ಸಂಗ ಎಂತ ಸಂಗ… ನಿಮ್ ಸಂಗನ್ನೂ ಬೇಡ… ನಿಮ್ಮ ಸಾಲಾನೂ ಬೇಡ..” ಭ್ರಮನಿರಸನಗೊಂಡ ಗೌರಮ್ಮ ಸಂಘ ಮನೆಯಿಂದ ರೌದ್ರಾವೇಶದಿಂದ ಹೊರಬಂದು ಮನೆಯ ಕಡೆ ಹೆಜ್ಜೆ ಹಾಕಿದಳು. “ಎಲ್ಲರಿಗಾಗಿ ಒಬ್ಬರು ಒಬ್ಬರಿಗಾಗಿ ಎಲ್ಲರು” ಎಂಬ ಧ್ಯೇಯಹೊತ್ತು ಹುಟ್ಟಿಕೊಂಡಿದ್ದ ಸಂಘವು ಕೂಡ ಗೌರಮ್ಮಳ ಆರ್ತನಾದವನ್ನು ಗ್ರಹಿಸಿಕೊಳ್ಳಲಿಲ್ಲ.
“ತನ್ನ ಮನೆಯ ರಿಪೇರಿ ಮಾಡಿಕೊಡಲು ತನ್ನ ಹಿರಿಮಗ ಶಂಕರಪ್ಪನನ್ನು ಹೇಗಾದರೂ ಮಾಡಿ ಒಪ್ಪಿಸಲೇಬೇಕು” ಎಂಬ ಸಂಕಲ್ಪ ಹೊತ್ತು ಶಂಕರಪ್ಪನ ಮನೆಯ ಕಡೆ ಹೆಜ್ಜೆ ಹಾಕಿದಳು ಗೌರಮ್ಮ. ಕೊನೆ ಪ್ರಯತ್ನ ಫಲ ನೀಡುತ್ತೋ ಇಲ್ಲವೋ ಎಂಬ ಗೊಂದಲದಲೇ ಶಂಕರಪ್ಪನ ಮನೆ ಮುಟ್ಟಿದಳು. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ್ದರಿಂದ ಶಂಕರಣ್ಣ ರಾತ್ರಿ ನಡೆಬೇಕಾಗಿದ್ದ ಭಜನೆಯ ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುತ್ತಿದ್ದ. ಹೆಂಡತಿ ಕೋಣೆಮನೆಯಲ್ಲಿದ್ದಳು. ಮಕ್ಕಳು ತಮ್ಮ ಪುಸ್ತಕಗಳನ್ನು ಹರಡಿಕೊಂಡು ಮಧ್ಯ ಕೋಣೆಯಲ್ಲಿ ಕುಳಿತಿದ್ದರು. ಒಮ್ಮೆಲೇ ಮನೆಯೊಳಗೆ ನುಗ್ಗಿದ ಗೌರಮ್ಮಳ ಕಣ್ಣುಗಳು ತಡಕಾಡಿದ್ದು ಶಂಕ್ರಣ್ಣನ್ನ. ಕಾಣಬೇಕಾಗಿದ್ದು ಕಂಡು ಶಾಂತವಾದ ಗೌರಮ್ಮಳ ಕಣ್ಣುಗಳು ಶಂಕ್ರಣ್ಣನ ಮೇಲೆ ನೆಟ್ಟವು.
“ಏ ಮಗಾ ಮನಿ ಕುಸಿಯುತ್ತಿದೆ, ಏನಾದ್ರು ಮಾಡಿ ಒಂಚೂರು ಆ ಮನಿ ರಿಪೇರಿ ಮಾಡ್ಸೋ.. ನಿನ್ ದಮ್ಮಯ್ಯ“ ಗೌರಮ್ಮ ಗೋಗರೆದಳು. 
ಆ ಮನೆ ಬಿಟ್ಟು ನನ್ ಮನೆಗೆ ಬಂದು ಸೇರ್ಕೋ ಅಂತಾ ಎಷ್ಟು ಸಲ ಹೇಳೋದ್… ನನ್ ಮಾತ್ ಎಲ್ಲಿ ಕೇಳ್ತೀಯ.. ಆ ಮುರುಕು ಮನೆಯಲ್ಲಿ ಏನಿದೆ ಅಂತಾ?” ಎಂದು ಶಂಕ್ರಣ್ಣ ಕೂಗಾಡಿದ. ಕೂಗಾಟಕ್ಕೆ ಶಂಕ್ರಣ್ಣನ ಹೆಂಡತಿ ಕೋಣೆಮನೆ ಬಿಟ್ಟು ಶಂಕ್ರಣ್ಣನಿದ್ದ ಕಡೆ ಓಡಿಬಂದಳು. ಮಕ್ಕಳ ಕಣ್ಣುಗಳು ಪುಸ್ತಕಗಳ ಕಡೆಯಿಂದ ಶಂಕ್ರಣ್ಣ ಮತ್ತು ಗೌರಮ್ಮರ ಕಡೆ ವಾಲಿದವು.
“ಲೋ ಆಗಲ್ಲ ಕಣೋ.” 
“ನಿನ್ ಪುರಾಣ ಸಾಕು… ನಾಳೆ ನಾನು ಅಯ್ಯಪ್ಪ ಸ್ವಾಮಿಗೆ ಹೋಗುತ್ತಿದೇನೆ.. ನಾನು ವಾಪಸ್ಸು ಬಂದ್ಮೇಲೆ ನೋಡ್ತೀನಿ..” ಎಂಬ ಶಂಕ್ರಣ್ಣನ ಮಾತು ಗೌರಮ್ಮಳ ಕಿವಿಗೆ ಬೀಳುತ್ತಿದ್ದಂತೆ, “ಲೋ ಈ ಹುಚ್ಚು ಮಳೆಗೆ ನಮ್ಮ ಮನೆ ಉಳೀತದಾ.. ಅಯ್ಯಪ್ಪಗೆ ಇನ್ನೊಂದು ವರ್ಷ ಹೋದ್ರೆ ಆಯಿತು… ಏನಾದರೂ ಮಾಡಿ.. ಮನೆ ಉಳಿಸಿ ಕೊಡೋ…” 
ಗೌರಮ್ಮಳ ಕಳಕಳಿಯ ಮಾತುಗಳು ಬಂಡೆ ಮೇಲೆ ನೀರುಬಿದ್ದಂತೆ ಶಂಕ್ರಣ್ಣನನ್ನ ಮನದ ಬಂಡೆಯನ್ನು ಮುಟ್ಟದೆ ಸರಸರವೆಂದು ಹರಿದೋಯ್ತು. ಶಂಕ್ರಣ್ಣ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದ್ದ. ಜತೆಗೆ ನಗರದಿಂದ ಮದ್ಯದ ಬಾಟಲುಗಳನ್ನು ತಂದು ದುಪ್ಪಟ್ಟು ಬೆಲೆಗೆ ಮಾರಿ ಅಲ್ಪಸ್ವಲ್ಪ ದುಡ್ಡು ಕೂಡ ಮಾಡಿಕೊಂಡಿದ್ದ. ಹೀಗೆ ನಾನಾ ವೃತ್ತಿಗಳ ಕಲಾಸೆಗಳಿಂದ ಸಂಪಾದಿಸಿಕೊಂಡಿದ್ದ ದುಡ್ಡಿನಲ್ಲೇ ಒಂದು ದೊಡ್ಡ ಮನೆಯನ್ನು ಸಹ ಕಟ್ಟಿಸಿಕೊಂಡಿದ್ದ. 
ಗೌರಮ್ಮಳ ಇನ್ನೊಬ್ಬ ಮಗ ಕುಳ್ಳ. ಹೆಸರು ರಮೇಶ ಅಂತಿದ್ದರೂ ಅವನ ಗಿಡ್ಡ ದೇಹವನ್ನು ಕಂಡು ಊರಿಗೆ ಊರೇ ಅವನನ್ನು ಕುಳ್ಳ ಎಂದು ಕರೆಯುತ್ತಿತು. ಅವನು ಅಪ್ರಾಪ್ತ ಹುಡುಗಿಯನ್ನು ಪ್ರೀತಿಸಿ ಅವಳೊಂದಿಗೆ ಕದ್ದೋಡಿ ಮದುವೆ ಮಾಡಿಕೊಂಡಿದ್ದ. ವೃತ್ತಿಯಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ಕುಳ್ಳ ಸರಿಯಾಗಿ ಕೆಲಸಕ್ಕೆ ಹೋಗಿದ್ದಿದ್ದರೆ ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬಹುದಾಗಿತ್ತು. ಆದರೆ ಹಾಗಾಗಲಿಲ್ಲ. ಕುಳ್ಳ ಒಂದು ದಿನದ ಕೆಲಸಕ್ಕೆ ಹೋದರೆ ಮೂರುದಿನ ಮನಯಲ್ಲಿ ಕೂತು ಸಿಕ್ಕಾಪಟ್ಟೆ ಕುಡಿಯುತ್ತಿದ್ದ. ಕುಡಿತವನ್ನು ಚಟವಾಗಿಸಿಕೊಂಡಿದ್ದ ಕುಳ್ಳ ಮನೆ ಬಾಡಿಗೆ ಕಟ್ಟಲಾಗದೆ ಹೆಂಡತಿ ಮತ್ತು ಮಗುವಿನ ಜತೆ ಗೌರಮ್ಮಳ ಮನೆ ಸೇರಿಕೊಂಡಿದ್ದ. ಅದೇ ಕುಳ್ಳ ಸುರಿಯುತ್ತಿರುವ ಹುಚ್ಚು ಮಳೆಗೆ ಮನೆ ಕುಸಿಯುವುದೆಂದು ಗೊತ್ತಾಗಿ ರಾತ್ರೋರಾತ್ರಿ ಹೆಂಡತಿ, ಮಗುವಿನ ಜತೆ ಗಂಟುಮೂಟ್ಟೆ ಕಟ್ಟಿಕೊಂಡು ಗೌರಮ್ಮಳನ್ನು ನಡುನೀರಿನಲ್ಲಿ ಬಿಟ್ಟು ಮನೆಯಿಂದ ಓಟ ಕಿತ್ತಿದ್ದ. 
ಗೌರಮ್ಮಳ ಮನೆಯ ಅಸ್ತಿತ್ವಕ್ಕೆ ಗಂಡಾಂತರ ಬಂದಿದ್ದು ಇದೇ ಮೊದಲ ಸಲವಲ್ಲ. ಬೃಹತ್ತಾದ ಸ್ಟಾರ್ ಅಪಾರ್ಟಮೆಂಟ್‍ನ ಮೂಲದಾರಿಯನ್ನು ಸೊಟ್ಟಾಗಾಗಿಸಿ, ನೇರದಾರಿಗೆ ಅಡ್ಡಗಾಲಾಗಿದ್ದ ಗೌರಮ್ಮಳ ಮನೆಯ ಖರೀದಿಗೆ ಮಾತುಕತೆ ನಡೆದಿತ್ತು. ಮಾರುಕಟ್ಟೆ ಬೆಲೆಗಿಂತ ದುಬಾರಿ ಬೆಲೆ ಕೊಟ್ಟು ಮನೆಯನ್ನು ಕೊಂಡುಕೊಳ್ಳಲು ಗೌರಮ್ಮಳ ಬೆನ್ನು ಹತ್ತಿದ ಅಪಾರ್ಟಮೆಂಟಿನ ಮಾಲೀಕನಿಗೆ, “ನಿಮ್ ಮನಿ ದಾರಿಗೊಸ್ಕರ ನಮ್ ಮನಿ ಕೆಡವಬೇಕಾ… ನನ್ ಜೀವ ಇರೋತನಕ ಇದ್ರ ಆಸೆ ಬಿಟ್‍ಬುಡಿ” ಎಂದು ಬಾಣ ಬಿಟ್ಟಾಗೆ ಮಾತಾಡಿ ಓಡಿಸಿದ್ದಳು. 
ಈಗ ಏನು ಮಾಡುವುದೆಂದು ತೋಚದೆ ಮಂಕಾಗಿಬಿಟ್ಟಿದ್ದ ಗೌರಮ್ಮಳ ಮನಸ್ಸು ಮಾತ್ರ ಮನೆಯನ್ನು ಕಳೆದುಕೊಳ್ಳಲು ಸುತರಾಂ ಒಪ್ಪಲಿಲ್ಲ. ಕೊನೆಗೆ, ತನ್ನ ಮನೆಯನ್ನು ಉಳಿಸಿಕೊಳ್ಳುವ ಆಸೆಯನ್ನು ಜೀವಂತವಾಗಿಸಲು ಗೌರಮ್ಮ ಹೋಗಿದ್ದು ಊರಿನ ಚೇರ್ಮನ್ ಮನೆಗೆ. 
ಪಕ್ಷದ ಕಚೇರಿಯಂತಿದ್ದ ಮನೆಯ ಮುಂಭಾಗದ ಕೋಣೆಯಲ್ಲಿ ಊರಿನ ಚೇರ್ಮನ್ ನಾಲ್ಕೈದು ಹೊಗಳುಭಟ್ಟರೊಂದಿಗೆ ಮಾತಿಗಿಳಿದಿದ್ದ. ಹೋಟೆಲಿಂದ ತರಿಸಿದ ಟೀ ಲೋಟಗಳು ಖಾಲಿಯಾಗಿ ಅಲ್ಲಲ್ಲಿ ಅನಾಥವಾಗಿ ಬಿದ್ದಿದ್ದವು. ಬೀಡಿಗಳ ಬೂದಿ ಮನೆಯೆಲ್ಲಾ ಹರಡಿಕೊಂಡಿದ್ದವು. ತರತರ ಭಂಗಿಗಳಿಂದ ಕೂಡಿದ ಪಕ್ಷದ ವರಿಷ್ಠರ ಭಾವಚಿತ್ರಗಳು ಕೋಣೆಯ ಗೋಡೆಯ ಮೇಲೆ ವಿರಾಜಿಸಿದ್ದವು. 
ಆವೇಶದ ಮುಖ ಹೊತ್ತು ತನ್ನ ಮುಂದೆ ಪ್ರತ್ಯಕ್ಷಳಾದ ಗೌರಮ್ಮಳ ಕಂಡು ಅಲ್ಪಸ್ವಲ್ಪ ಗಲಿಬಿಲಿಗೊಂಡಂತೆ ಕಂಡರೂ ತೋರಿಸಿಕೊಳ್ಳದೆ ಹಲ್ಲುಗಳ ತೋರಿಸುತ್ತಾ, “ಏನು ಗೌರಮ್ಮ ಏನು ಸಮಾಚಾರ” ಕೃತಕವಾಗಿದ್ದರೂ ಅವನ ಪ್ರಶ್ನೆ ವಿನಯವಾಗಿತ್ತು.
“ಸ್ವಾಮೀ, ಏನಾದರೂ ಮಾಡಿ ನನ್ನ ಮನೆಯನ್ನು ಉಳ್ಸಿಕೊಡಿ.. ಈ ದರಿದ್ರ ಮಳೆಗೆ ನನ್ನ ಮನೆ ಅಗೋ ಇಗೋ ಅನ್ತಾ ಇದೆ” ಎಂದು ವಿನಂತಿಸುತ್ತಿದ್ದಂತೆ, ತಲೆ ಕೆರೆದುಕೊಳ್ಳಲು ಪ್ರಾರಂಭಿಸಿದ ಚೇರ್ಮನ್.
“ಈಗ ನಾನು ಪಂಚಾಯಿತಿ ಎಲೆಕ್ಷನಲ್ಲಿ ಬ್ಯುಸಿ ಇದ್ದೀನಿ.. ಎಲೆಕ್ಷನ್ ಮುಗಿದ ನಂತ್ರ ಮನೆನಾ ನಾನೇ ನಿಂತು ರಿಪೇರಿ ಮಾಡಿಸಿಕೊಡುತ್ತೀನಿ ಭಯ ಪಡಬೇಡ” ಎಂದು ಆತ ರಾಜಕಾರಣಿಯ ಶೈಲಿಯಲ್ಲೇ ಭರವಸೆಯನ್ನು ಕೊಡುತ್ತಿದ್ದಂತೆ, ಮನೆಯ ಮುಂದೆ ಯಾರದೋ ಕಾರು ಬಂದ ಸಪ್ಪಳವಾಯಿತು. 
“ಈಗ ನಾನು ಇನ್ನೊಂದು ಹಳ್ಳಿಗೆ ಹೋಗ್ಬೇಕು … ಬರ್ತಿನಿ ಗೌರಮ್ಮ” ಹನುಮನ ಬಾಲದಂತಿದ್ದ ತನ್ನ ಬೆಂಬಲಿಗರ ಜೊತೆಗೂಡಿ ಅವನು ಮನೆಯಿಂದ ಹೊರನಡೆದ.
“ಅಲ್ಲಿ ತನ್ಕ ನನ್ ಮನೆ ಉಳಿಯೊಲ್ಲ” ಚುನಾವಣೆಯ ಸಂದರ್ಭದಲ್ಲಿ ಸಾಮಾನ್ಯ ಜನರ ಆಶೋತ್ತರಗಳಿಗೆ ತೆರೆದುಕೊಳ್ಳುವ ಚೇರ್ಮನ್ನನ ಕಿವಿಗಳಿಗೆ ಗೌರಮ್ಮ ಆಡಿದ ಮಾತು ಕೇಳಲೇ ಇಲ್ಲ. ಅವನಿಗೆ ಅದರ ಅವಶ್ಯಕತೆಯೂ ಇರಲಿಲ್ಲ. 
ತನ್ನ ಮನೆಯನ್ನು ಉಳಿಸಿಕೊಳ್ಳಲು ಮಾಡಿದ ತನ್ನ ಸರ್ವ ಪ್ರಯತ್ನಗಳು ನೀರಿನ ಮೇಲೆ ಮಾಡಿದ ಹೋಮದಂತಾಗಿ, ಗೌರಮ್ಮ ಏನು ಮಾಡುವುದೆಂದು ತೋಚದೆ, ತನ್ನ ಮನೆಯ ಮುಂದಿನ ಕೋಣೆಯ ಮಧ್ಯಭಾಗದಲ್ಲಿ ಮಂಕಾಗಿ ಕೂತಳು. ನಿರ್ಭಾವದ ಅವಳ ಮುಖ ಯಾವುದೋ ಸಂಗ್ರಹಾಲಯದಲ್ಲಿದ್ದ ಹಳತಾದ ಮೂರ್ತಿಯಂತಿತ್ತು. ಅಸಹಾಯಕ ಸ್ಥಿತಿಯಲ್ಲಿ ಗೌರಮ್ಮ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ದಿಟ್ಟಿಸುತ್ತಾ..ಶಪಿಸುತ್ತಾ… ಕೂತಳು.ಆದರೆ ಮನಸ್ಸು ಸೋತಿರಲಿಲ್ಲ.
ಉಗ್ರಪ್ರತಾಪದಿಂದ ಮಳೆ ಸುರಿಯುತ್ತಲೇ ಇತ್ತು. ಗೌರಮ್ಮ ಅಗೊಮ್ಮೆ ಈಗೊಮ್ಮೆ ತಂತಾನೆ ಮಾತನಾಡಿಕೊಳ್ಳುತ್ತಿದ್ದಳು. ತನ್ನ ಮನೆಯ ಬಗೆಗಿನ ಚಿಂತೆ ಗೌರಮ್ಮಳ ಊಟ ನೀರು ಕಬಳಿಸಿದ್ದಲ್ಲದೆ ನಾಲ್ಕೈದು ದಿನಗಳ ನಿದ್ದೆಯನ್ನು ಸಹ ಕಿತ್ತುಕೊಂಡಿತ್ತು. ಗೌರಮ್ಮಳ ಕಣ್ಣುಗಳು ಕ್ಷಣಮಾತ್ರದಲ್ಲೇ ನಿದ್ದೆಗೆ ಸೋಲಲಾರಂಭಿಸಿತ್ತು. ಇಡೀ ದೇಶವೇ ಹೊತ್ತಿ ಉರಿದರೂ ಎಚ್ಚರವಾಗದಂತಹ ಭಯಂಕರ ನಿದ್ದೆ ಗೌರಮ್ಮಳನ್ನು ತಬ್ಬಿದ್ದರಿಂದ ಕ್ಷಣಮಾತ್ರದಲೇ ಗೌರಮ್ಮ ಕೋಣೆಯ ನೆಲದ ಮೇಲೆ ಮೈಮೇಲೆ ಪ್ರಜ್ಞೆಯೇ ಇಲ್ಲದಂತೆ ಬಿದ್ದುಕೊಂಡಳು. ವರುಣನಿಗೆ ಗೌರಮ್ಮಳ ಪ್ರಾರ್ಥನೆ ಕೇಳಿದಂತೆ ಕಾಣಲಿಲ್ಲ. ಗೌರಮ್ಮಳ ಮನೆಯ ಮೇಲೆ ಜಿದ್ದಿಗೆ ಬಿದ್ದವನಂತೆ ಧಾರಾಕಾರವಾಗಿ ಇನ್ನೂ ಸುರಿಯುತ್ತಲೇ ಇದ್ದ. ಜತೆಗೆ ತನ್ನ ಕಾರ್ಯಾಚರಣೆಯ ಗತಿ ಹೆಚ್ಚಿಸಿಕೊಂಡಿದ್ದ…

ಜೋವಿ
vpaulsj@gmail.com





ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...