Thursday, 8 November 2018

ಬೈಬಲ್ಲಿನ ವಿಶಿಷ್ಟ ವ್ಯಕ್ತಿಗಳು

ವೀರಮಹಿಳೆ ಜೂಡಿತಳು
(ಅನುಗ್ರಂಥಗಳಲ್ಲಿದೆ)

¨  ಡಾ. ಲೀಲಾವತಿ ದೇವದಾಸ್

ಸ್ಸೀರಿಯಾ ದೇಶದ ಅರಸ ನೆಬುಕದ್ನೆಚ್ಚರನು ಮಹಾ ಪ್ರಭಾವಶಾಲಿಯಾಗಿದ್ದ ಕಾಲ. ಅವನು, ಎಷ್ಟೇ ರಾಜ್ಯಗಳನ್ನು ಗೆದ್ದಿದ್ದರೂ, ಜಗತ್ತಿನ ಎಲ್ಲಾ ಪ್ರದೇಶಗಳನ್ನೂ ತನ್ನದಾಗಿಸಿಕೊಳ್ಳಬೇಕೆಂಬ ದುರಾಸೆಯಿಂದ ತನ್ನ ಮುಖ್ಯ ಸೇನಾಧಿಪತಿಯಾದ ಹೋಲೋಫರ್ನಿಸನಿಗೆ ಆ ಹೊಣೆಗಾರಿಕೆಯನ್ನು ಒಪ್ಪಿಸಿದನು.
ಹೋಲೋಫರ್ನಿಸನು, ಅಗಾಧ ಸೈನ್ಯ ಹಾಗೂ ಅಗತ್ಯ ವಸ್ತುಗಳೊಡನೆ ನಿನಿವೆಯಿಂದ ಹೊರಟನು. ಚಿಕ್ಕಪುಟ್ಟ ರಾಜ್ಯಗಳು ಅವನಿಗೆ ಸುಲಭವಾಗಿ ವಶವಾದವು. ಕ್ರೂರಿಯಾಗಿದ್ದ ಅವನು, ಹೋದಲ್ಲೆಲ್ಲಾ ಕೊಲೆ, ನಾಶನಗಳೇ ತುಂಬಿದ್ದವು. ಎಲ್ಲಾ ಅಧೀನ ಜನಾಂಗದವರೂ ನೆಬುಕದ್ನೆಚ್ಚರನೇ ದೇವರೆಂದು ತಿಳಿದು, ಅವನನ್ನೇ ಆರಾಧಿಸಬೇಕೆಂದು ಕಟ್ಟಪ್ಪಣೆ ಮಾಡಿದ್ದನು.
ಯೂದಾಯದ ಸಮೀಪದಲ್ಲಿಯೇ ಈ ದುಷ್ಟ ಸೇನಾಧಿಪತಿ ಬೀಡುಬಿಟ್ಟಿದ್ದ ಸುದ್ದಿ, ಇಸ್ರಾಯೇಲ್ಯರಿಗೆ ಮುಟ್ಟಿತು. ಅವನು ಗೆದ್ದ ದೇಶಗಳಲ್ಲೆಲ್ಲಾ ದೇವಾಲಯಗಳನ್ನೂ, ಹೊಲಗದ್ದೆಗಳನ್ನೂ ನಾಶಪಡಿಸಿದ್ದು ಅವರಿಗೆ ಗೊತ್ತಿತ್ತು. ಹಾಗಾಗಿ, ಅವರು ಭಯಭೀತರಾದರು. ಆಗತಾನೇ ಸೆರೆವಾಸ ಮುಗಿಸಿದ್ದ ಇಸ್ರಾಯೇಲ್ಯರು, ದೇವಾಲಯವನ್ನು ಶುದ್ಧೀಕರಿಸಿ, ನೆಮ್ಮದಿಯಿಂದಿದ್ದರು. ಈಗ, ಈ ಭಯಂಕರ ಸಮಾಚಾರ ಕೇಳಿ, ಬೆದರಿದ್ದ ಅವರು, ತಮ್ಮ ಕೋಟೆಯನ್ನು ಭದ್ರಪಡಿಸಿ, ಸಾಕಷ್ಟು ಆಹಾರವನ್ನೂ ಸಂಗ್ರಹಿಸಿ, ಇಟ್ಟುಕೊಂಡರು. ಯೂದಾಯಕ್ಕೆ ಬರುವ ಹಾದಿಯನ್ನು ಬಲಪಡಿಸಿದರು.
ಎಲ್ಲರೂ ಕೂಡಿ, ನಾರುಮಡಿಯುಟ್ಟು, ಉಪವಾಸವಿದ್ದು, ದೇವರಿಗೆ ಮೊರೆಯಿಟ್ಟರು. ಪಟ್ಟಣದ ಹಾಗೂ ತಮ್ಮ ಹೆಂಡತಿ ಮಕ್ಕಳ ರಕ್ಷಣೆಗಾಗಿ ಕರ್ತರನ್ನು ಬೇಡಿಕೊಂಡರು.
ಇಸ್ರಾಯೇಲ್ಯರು, ಯುದ್ಧಕ್ಕೆ ಸಿದ್ಧರಾಗಿರುವ ಸುದ್ದಿ, ಹೋಲೋಫರ್ನಿಸನಿಗೆ ಮುಟ್ಟಿ, ಅವನ ಕೋಪ ನೆತ್ತಿಗೇರಿತ್ತು. ತನ್ನಲ್ಲಿದ್ದ ಅಮೋನಿಯನಾದ ಅಕಿಯೋರನಿಂದ ಇಸ್ರಾಯೇಲ್ಯರ ಇತಿಹಾಸ ಕೇಳಿದಾಗ, ಅವನು, ಆ ಜನಾಂಗದ ದೈವಭಕ್ತಿಯನ್ನೂ ಒಗ್ಗಟ್ಟನ್ನೂ ವಿವರಿಸಿ, ದೇವರು ಅವರೊಡನೆ ಇರುವುದರಿಂದ, ಅವರ ಮೇಲೆ ಯುದ್ಧಕ್ಕೆ ಹೊರಡುವುದು ಹಿತವಲ್ಲ ಎಂದಾಗ, ಆ ಮದಾಂಧನು, ಅಕಿಯೋರನ ಬುದ್ಧಿಮಾತುಗಳನ್ನು ಕೇಳಲಿಲ್ಲ. ಅವನನ್ನು ಕಟ್ಟಿಹಾಕಿ, ಇಸ್ರಾಯೇಲ್ಯರ ಕಡೆಗೆ ಎಸೆಯುವಂತೆ ಮಾಡಿದನು.
ಇಸ್ರಾಯೇಲ್ಯರು ಇಳಿದು ಬಂದು, ಅಕಿಯೋರನನ್ನು ಬಿಡಿಸಿ, ಅವನಿಂದ ಹೋಲೋಫರ್ನಿಸನ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡು, ಅವನನ್ನು ತಮ್ಮೊಳಗೆ ಸೇರಿಸಿಕೊಂಡರು. ಈಗ, ಶತ್ರುಗಳ ಪ್ರಬಲ ಸೈನ್ಯ, ಯೂದಾಯದ ಸಮೀಪದಲ್ಲೇ ಪಾಳೆಯ ಹೂಡಿ, ಅಲ್ಲೆಲ್ಲಾ ಹರಡಿಕೊಂಡಿತು. ಈ ವಿಶಾಲ ಸೈನ್ಯವನ್ನು ಇಸ್ರಾಯೇಲ್ಯರು ಕಂಡು, ಭಯದಿಂದ ಕುಗ್ಗಿಹೋದರು.
ಹೋಲೋಫರ್ನಿಸನ ಸೈನಿಕರು, ಇಸ್ರಾಯೇಲ್ಯರಿಗೆ ಸರಬರಾಜಾಗುತ್ತಿದ್ದ ನೀರಿನ ಬುಗ್ಗೆಯನ್ನು ಹಿಡಿದು, ಇಸ್ರಾಯೇಲ್ಯರು ಬಾಯಾರಿಕೆಯಿಂದ ತೊಳಲುವಂತೆ ಮಾಡಿ, ಅವರ ಪಟ್ಟಣವನ್ನು ಸುಲಭವಾಗಿ ಗೆಲ್ಲುವ ಯೋಜನೆ ಹಾಕಿಕೊಂಡರು. ಅವರ ನಾಯಕನೂ ಇದಕ್ಕೆ ಒಪ್ಪಿಗೆ ನೀಡಿದನು.
(Continued from page )

ಆ ನೀರಿನ ಬುಗ್ಗೆ, ಶತ್ರುಗಳ ವಶವಾದಮೇಲೆ, ಇಸ್ರಾಯೇಲ್ಯರ ಹೃದಯ ಕುಸಿಯಿತು. ಕೂಡಿಟ್ಟಿದ್ದ ನೀರು ಖಾಲಿಯಾಗುತ್ತಿತ್ತು. ಪ್ರತಿಯೊಬ್ಬರಿಗೂ ನೀರನ್ನು ಅಳತೆಮಾಡಿ ಕೊಡಬೇಕಾದ ಪರಿಸ್ಥಿತಿ ಎದ್ದಿತು. ಹೆಂಗಸರು, ಮಕ್ಕಳು ಕಂಗಾಲಾದರು. ತಮ್ಮ ನಾಯಕ ಒಜಿಯಾಸನ ಮೇಲೆ ಜನರು ಸಿಡಿದೆದ್ದರು. “ನೀನೇ ನಮ್ಮನ್ನು ಈ ಸ್ಥಿತಿಗೆ ತಂದಿಟ್ಟಿದ್ದೀ! ಈಗ, ನಾವು ಹೊಲೋಫರ್ನಿಸನಿಗೆ ಶರಣಾಗೋಣ. ಬಾಯಾರಿ ಸಾಯುವುದಕ್ಕಿಂತ ಅದೇ ಮೇಲು” ಎಂದು ಕೂಗಾಡಿದರು. ಒಜಿಯಾಸನು, ಅವರನ್ನು ಸಮಾಧಾನಪಡಿಸಿ, ”ಇನ್ನೂ ಐದು ದಿನ ಕಾಯೋಣ, ದೇವರ ಇಚ್ಛೆಯೇನಿದೆಯೋ ನೋಡೋಣ. ಅವರು, ನಮ್ಮ ಕೈಬಿಡಲಾರರು” ಎಂದು ಹೇಳಿ, ಅವರನ್ನು ಒಪ್ಪಿಸಿದನು.
ಈ ದುಃಸ್ಥಿತಿಯ ವಿಷಯ ಜೂಡಿತಳ ಕಿವಿಗೆ ಬಿತ್ತು. ಆಕೆ, ಒಬ್ಬ ಐಶ್ವರ್ಯವಂತ ವಿಧವೆ. ಅಸಾಮಾನ್ಯ ಸುಂದರಿ. ಉತ್ಕಟ ದೈವಭಕ್ತೆ. ಎಷ್ಟೇ ಹಣವಂತಳೂ ರೂಪವತಿಯೂ ಆಗಿದ್ದರೂ, ಸದಾ ನಾರುಡುಗೆಯ ವಸ್ತ್ರ ಧರಿಸುತ್ತಿದ್ದಳು. ಐದು ದಿನಗಳ ನಂತರ ಇಸ್ರಾಯೇಲ್ಯರು ಶತ್ರುಗಳಿಗೆ ಶರಣಾಗುತ್ತಾರೆ ಎನ್ನುವ ದುಃಖಕರ ವಿಷಯವನ್ನು ಕೇಳಿ, ತನ್ನ ದಾಸಿಯನ್ನು ಕಳಿಸಿ, ಜನನಾಯಕರನ್ನು ತನ್ನ ಬಳಿಗೆ ಕರೆಸಿದಳು.
ಅವರೆಲ್ಲರೂ ಬಂದಾಗ, ಜೂಡಿತಳು, ”ಐದು ದಿನಗಳಲ್ಲಿ ದೇವರು ನಿಮಗೆ ಸಹಾಯ ಮಾಡದಿದ್ದರೆ, ನಮ್ಮ ನಾಡನ್ನು ಅಶೂರರಿಗೆ ಒಪ್ಪಿಸುವಿರೆಂದು ನೀವು ನಿರ್ಧರಿಸಿದ್ದೀರಿ. ನೀವು ಸರ್ವೇಶ್ವರರನ್ನು ಹೀಗೇಕೆ ಪರೀಕ್ಷಿಸುವಿರಿ? ಸಕಲವನ್ನೂ ಸೃಷ್ಟಿಸಿದ ಕರ್ತರ ಮನಸ್ಸನ್ನು ನೀವು ಹೇಗೆ ತಿಳಿಯಬಲ್ಲಿರಿ?” ಎಂದು ಕಟುವಾಗಿ ಅವರನ್ನು ಪ್ರಶ್ನಿಸಿದಳು. ಮುಂದುವರಿದು, ”ನಮ್ಮನ್ನು ರಕ್ಷಿಸಲು ನೀವು ದಿನಗಳನ್ನು ಹೇಗೆ ನಿಗದಿ ಮಾಡಿದಿರಿ? ಹೀಗೆ ದೇವರನ್ನು ಬೆದರಿಸಲು, ಅವರೇನು ಮನುಷ್ಯರೇ? ಬಂಧುಗಳೇ, ನಾವು ಅವರ ನಿರ್ಧಾರಕ್ಕಾಗಿ ಕಾಯೋಣ. ಪ್ರಾರ್ಥನೆಯಲ್ಲಿ ದಿನಗಳನ್ನು ಕಳೆಯೋಣ. ಅವರನ್ನು ಬಿಟ್ಟರೆ ನಮಗೆ ಬೇರೆ ದೇವರಿಲ್ಲ. ” ಎಂದಳು.
ಆಗ, ಒಜಿಯಾಸನು, ಜೂಡಿತಳ ಜ್ಞಾನವನ್ನು ಶ್ಲಾಘಿಸಿ, ”ಪ್ರಜೆಗಳು ಬಾಯಾರಿ ಬಳಲಿದ್ದಾರೆ. ನೀನು ಮಳೆಗಾಗಿ ಪ್ರಾರ್ಥಿಸು” ಎಂದು ಕೇಳಿಕೊಂಡನು. ಜೂಡಿತಳು, ” ನಾನೊಂದು ಕಾರ್ಯವನ್ನು ಸಾಧಿಸಲಿದ್ದೇನೆ. ನೀವು ಈ ರಾತ್ರಿ, ಪಟ್ಟಣದ ಮುಖ್ಯ ದ್ವಾರದಲ್ಲಿ ನಿಲ್ಲಿರಿ. ನಾನೂ ನನ್ನ ದಾಸಿಯೂ ಹೊರಗೆ ಹೊರಟು ಈ ಐದು ದಿನಗಳಲ್ಲಿಯೇ ನಮ್ಮ ಪಟ್ಟಣವನ್ನು ಶತ್ರುಗಳಿಂದ ಕಾಪಾಡುತ್ತೇವೆ. ಅದರ ವಿವರಗಳನ್ನು ಈಗಲೇ ಕೇಳಬೇಡಿರಿ”, ಎಂದಳು. ಎಲ್ಲರೂ ಆಕೆಯ ಮಾತುಗಳಿಗೆ ಒಪ್ಪಿದರು.

(ಮುಂದುವರಿಯುವುದು)


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...