Friday, 10 August 2018

ನಾಳೈ ನಮದೈ


ಇದೇ ಸಭಾಂಗಣದಲ್ಲೆ, ಇಲ್ಲೆ ಬಹುಶಃ ದಸಂಸದ ಒಡಕಿನ ಸಂದರ್ಭದಲ್ಲಿ ಕೆಲವು ಮಾತುಗಳನ್ನಾಡಿದ್ದೆ. ಇಲ್ಲಿ ಒಂದು ಸಭೆ ನಡೆಯುತ್ತಿದ್ದರೆ ಇನ್ನೆಲ್ಲೊ ಇನ್ನೊಂದು ಬಣದ ಸಭೆ ನಡೆಯುತ್ತಿತ್ತು. ಅಂದು ಮಾತಾಡಿದ್ದು ಈಗ ನೆನಪಿಗೆ ಸಿಗುತ್ತಿರುವುದು ಇಷ್ಟು: ಗೆಳೆಯರೇ, ಒಂದು ಸಿನಿಮಾ ಹಾಡು ಇದೆ. ನಾಳೈ ನಮದೈ ಅಂತ. ತಮಿಳು ಹಾಡು ಇದು. ಅಶೋಕಪುರಂನಲ್ಲಿ ನಮ್ಮ ಮನೆಯಿದ್ದಾಗ ಸಿದ್ಧಾರ್ಥ ಹಾಸ್ಟಲ್ ಮುಂದೆ ಬಂದಾಗ, ಒಂದು ಹುಡುಗ ನಾಳೈ ನಮದೈ ಹಾಡನ್ನು ಉತ್ಕಂಠಿತನಾಗಿ ಹಾಡುತ್ತಿದ್ದ. ಹಾಡು ಮುಗಿಯುವವರೆಗೂ ನಿಂತು ಕೇಳಿದ್ದೆ. ಅಷ್ಟು ತುಂಬಿಕೊಂಡು ಹಾಡುತ್ತಿದ್ದ. ಆ ಹುಡುಗನ ಹೆಸರು ಕೇಳಿದಾಗ ಮಲ್ಲಿಕಾರ್ಜುನಸ್ವಾಮಿ ಅಂತ ತಿಳೀತು. ಇದೂ ನೆನಪಿದೆ. ಈ ಹಾಡು ಎಷ್ಟೋ ಕಾಲ ನನ್ನನ್ನು ಹಿಂಬಾಲಿಸುತ್ತಿತ್ತು. ಹೋರಾಟಗಾರರು ಆದರ್ಶವಾದಿಗಳು ಇನ್ನೂ ಹುಟ್ಟದ ನಾಳೆಗಳಲ್ಲಿ ಹೆಚ್ಚಾಗಿ ಜೀವಿಸುತ್ತಿರುತ್ತಾರೆ. ಅವರು ಇಂದು ಹೆಚ್ಚಾಗಿ ಬದುಕುತ್ತಿರುವುದಿಲ್ಲ.
ಈ ನಾಳೆಗಳವರಲ್ಲಿ ಒಬ್ಬೊಬ್ಬರಲ್ಲೂ ಒಂದೊಂದು ನಾಳೆಗಳಿದ್ದು ಅವೂ ಜಗಳ ಆಡುತ್ತಿರುತ್ತವೆ. ಆದ್ದರಿಂದ ದಯವಿಟ್ಟು ಇಂದು ಜೀವಿಸಿ. ಮುಖಾಮುಖಿಯಾದರೆ ನಮ್ಮ ಎಷ್ಟೋ ಸಮಸ್ಯೆಗಳು ಜಗಳಗಳು ತಂತಾನೆ ಕರಗಬಹುದು ಎಂದಿದ್ದೆ. ಯಾಕೆಂದರೆ ನಾಳೆಗಳಲ್ಲಿ ಜೀವಿಸುವವರು ಪಾದವಿಲ್ಲದೆ ಚಲಿಸಿದಂತೆ- ಎಂದೂ ಅಂದಿದ್ದೆ. ಇಂದು ಏನಾಗಿದೆ? ನಿನ್ನೆ ಅಂದರೆ ಗತಕಾಲದಲ್ಲಿ ಜೀವಿಸುವವರ ಕಾಟ ಹೆಚ್ಚಾಗಿದೆ. ನಾಳೆ ಜೀವಿಸುತ್ತಿರುವವರಂತೆಯೇ ನೆನ್ನೆ ಅಂದರೆ ಗತಕಾಲದಲ್ಲಿ ಜೀವಿಸುತ್ತಿರುವವರೂ ಇದ್ದಾರೆ. ಇವರೂ ಹೆಚ್ಚಾಗಿ ಇಂದು ಬದುಕುತ್ತಿರುವುದಿಲ್ಲ. ನೆನ್ನೆ ಬದುಕುತ್ತಿರುವವರ ಪಾದ ಹಿಂದಕ್ಕಿರುತ್ತದೆ. ಹಾಗಾಗಿ ಇವರ ಕಾಟ ಜಾಸ್ತಿ. ಇದು ಭೂತ ಪ್ರೇತ ಕಾಟ. ಈಗಿನ ಉದಾಹರಣೆ ನೋಡಿ. ಕನ್ನಡ ಸಂಸ್ಕೃತಿಯನ್ನು ಚಿಗುರಿಸುತ್ತಿರುವ ಹಂಪಿ ವಿಶ್ವವಿದ್ಯಾನಿಲಯದ ಜಾಗವನ್ನು ಕಿತ್ತು ಗತ ಕೃಷ್ಣದೇವರಾಯನ ಸ್ಮಾರಕ ಮಾಡಲು ಖಾಸಗಿಯವರಿಗೆ ಕೊಡಲಾಗುತ್ತಿದೆಯಂತೆ. ಇದು ಸ್ಮಶಾನ ವೈಭವೀಕರಿಸಿದಂತೆ ಅಲ್ಲವೆ? ಸಂಸ್ಕೃತಿ ಹೆಸರಲ್ಲಿ ಮಾಡುತ್ತಿರುವ ಈ ಕೃತ್ಯ ಸಂಸ್ಕೃತಿ ಹೀನ ಕೆಲಸ ಅಲ್ಲವೆ?


ಈ ಜಾಗ ಪಡೆಯಲು, ಬಿಜೆಪಿ ಅನಂತಕುಮಾರ್ ನವರ ಪತ್ನಿ ಇರಬೇಕು, ವೀರಗಚ್ಚೆ ಹಾಕಿಕೊಂಡು ದಾಳಿ ಮಾಡುತ್ತಿದ್ದಾರೆ. ನನಗೆ ಒಂದೊಂದು ಸಲ ಅನ್ನಿಸುತ್ತೆ- ಹಿಂದೆ ಭಾರತದ ಮೇಲೆ ದಾಳಿ ಮಾಡಿ ದೋಚುತ್ತಿದ್ದ ದಾಳಿಕೋರರು ದೋಚಿಕೊಂಡು ಹೋಗುವಾಗ ಏನೋ ಹೆಚ್ಚುಕಮ್ಮಿ ಮಾಡಿ ಹುಟ್ಟಿದ ಸಂತಾನವೇನೋ ಇವರು! ಅದಕ್ಕಾಗಿ ಭೂಮಿಯ ಹೊರಮೈ ಒಳಮೈ ಎಲ್ಲವನ್ನೂ ಧ್ವಂಸ ಮಾಡಿ ದೋಚುತ್ತಿದ್ದಾರೆ ಅನ್ನಿಸುತ್ತದೆ. ಈ ನೆನ್ನೆ ಬದುಕುವರಲ್ಲೂ ನನ್ನ ಪ್ರಾರ್ಥನೆ: ದಯವಿಟ್ಟು ವರ್ತಮಾನದಲ್ಲಿ ಬದುಕಿರಿ.
ನಿನ್ನೆ ನಾಳೆಗಳು ಬೇಡ. ಇಂದು ಜೀವಿಸೋಣ.
ದೇವನೂರ ಮಹಾದೇವ /ಎದೆಗೆ ಬಿದ್ದ ಅಕ್ಷರ / ೭೪


ಗುಂಪುಹತ್ಯೆಗಳು - ಜೋವಿ


ಸುಮಾರು ಹತ್ತೋ ಹದಿನೈದೋ ದಿನಗಳ ಹಿಂದೆ, ಇಂಗ್ಲೀಷ್ ನ್ಯೂಸ್ ಚಾನೆಲ್‍ನಲ್ಲಿ ಗುಂಪುಹತ್ಯೆ‍ಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಚರ್ಚೆಯಲ್ಲಿ ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಭಾಗವಹಿಸಿ ಎಂದಿನಂತೆ ಗುಂಪುಹತ್ಯೆಯ ಬಗ್ಗೆ ತಂತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಕೆಲವರು ತಮ್ಮ ಮೂಗಿನ ನೇರಕ್ಕೆ ಗುಂಪುಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಈ ಚರ್ಚೆಯನ್ನು ನಿಭಾಯಿಸುತ್ತಿದ್ದ ಚಾನೆಲ್ಲಿನ ನಿರೂಪಕಿ ತಕ್ಷಣ ಗುಂಪುಹತ್ಯೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದ ಲಾಯರನ್ನು ಮುಖಾಮುಖಿಯಾಗಿ “ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುತ್ತಿರುವುದನ್ನು ಕಂಡು ನಿಮಗೆ ರಾತ್ರಿ ನಿಶ್ಚಿಂತೆಯಿಂದ ಮಲಗಲು ಸಾಧ್ಯನಾ? ನಿಮಗೆ ಇಂತಹ ಅಮಾನವೀಯ ಕೃತ್ಯದ ಬಗ್ಗೆ ಏನು ಅನಿಸುವುದೇ ಇಲ್ವ?” ಹೀಗೆ ಕೇಳಿದ ಭಾವನಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಲಾಯರ್ Cause and effect ಬಗ್ಗೆ ಮಾತನಾಡಲಾರಂಭಿಸಿದ. 


ಭಾರತದಲ್ಲಿ ಗುಂಪುಹತ್ಯೆಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ಅದರಲ್ಲೂ ಕೆಲವೊಂದು ರಾಜಕೀಯ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಂತೂ ಗುಂಪುಹತ್ಯೆಗಳು ರಾಜಾರೋಷವಾಗಿ ನಡೆಯುತ್ತಿವೆ. ಈ ಗುಂಪುಹತ್ಯೆಗಳು ಯಾವ ಕಾರಣಗಳಿಗಾಗಿ ನಡೆಯುತ್ತಿವೆ ಎಂಬ ಪ್ರಶ್ನೆಯ ಬೆನ್ನಟ್ಟಿ ಹೋದರೆ ಅನೇಕ ಕಾರಣಗಳು ನಮಗೆ ಕಾಣಸಿಗುತ್ತವೆ. ಧರ್ಮ, ಜಾತಿ ರಾಷ್ಟ್ರವಾದ, ಸಂಸ್ಕೃತಿಯ ರಕ್ಷಣೆಯ ನೆಪದಲ್ಲಿ ಗುಂಪುಹತ್ಯೆಗಳು ನಡೆಯುತ್ತಿವೆ. ಅದರಲ್ಲೂ ಒಂದು ಕೋಮಿಗೆ ಸೇರಿದ ಜನರ ಹತ್ಯೆಗಳು ಯಥೇಚ್ಛವಾಗಿ ನಡೆಯುತ್ತಿವೆ. ಇನ್ನೊಂದು ಕಡೆ ಹತ್ಯೆಗಳಲ್ಲಿ ಭಾಗಿಯಾದ ಜನರಿಗೆ ನಮ್ಮ ಪ್ರತಿನಿಧಿಗಳು ಶಹಬಾಸ್ ಹೇಳಿ ಅವರನ್ನು ಸನ್ಮಾನಿಸುತ್ತಿದ್ದಾರೆ. ಮೇಲಾಗಿ ಗುಂಪುಹತ್ಯೆ ಮಾಡಿದವರಿಗೆ ಸಹಾಯ ನೀಡಲು ನಮ್ಮ ಪ್ರತಿನಿಧಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಕೆಲವರಂತೂ ಗುಂಪುಹತ್ಯೆಗಳನ್ನು ಖಂಡಿಸುವುದನ್ನು ಬಿಟ್ಟು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೆಲ ರಾಜಕೀಯ ಪಕ್ಷದವರು ಗುಂಪುಹತ್ಯೆ ಮಾಡಲು ಜನರನ್ನು ಉತ್ತೇಜಿಸುತ್ತಿದ್ದಾರೆ. ಇಂಥ ಹೀನ ರಾಜಕೀಯದಿಂದ ಮುಗ್ಧ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಮಾಜ ಹೋಳಾಗುತ್ತಿದೆ. ಜನರು ಭಯದಿಂದ ಜೀವಿಸುತ್ತಿರುವ ಚಿತ್ರಣ ನಮಗೆ ಕಾಣಸಿಗುತ್ತಿದೆ. ಈ ಕಾರಣದಿಂದ ನಾವು ಅಂದರೆ ಮಾನವೀಯತೆಯಲ್ಲಿ ನಂಬಿಕೆ ಇರುವವರು ಗುಂಪುಹತ್ಯೆಯ ವಿರುದ್ಧ ಹೋರಾಡಬೇಕಾಗಿದೆ. 

ಭಾರತದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಗುಂಪುಹತ್ಯೆಗಳ ಬಗ್ಗೆ ಕೆಳಗಿನಂತೆ ಸಂಕ್ಷಿಪ್ತವಾಗಿ ಹೇಳಬಹುದು:

೧. ಭಾರತದಲ್ಲಿ ಬಹುಜನ ಹಸುಗಳನ್ನು ಪೂಜಿಸುವುದರಿಂದ ಅನೇಕ ಗುಂಪುಹತ್ಯೆಗಳು ಗೋರಕ್ಷಣೆಯ ನೆಪದಲ್ಲಿ ಗೋರಕ್ಷಕರಿಂದ ನಡೆಯುತ್ತಿವೆ
೨. ಹಸುಗಳ ಹತ್ಯೆ ಅಥವಾ ಕಳ್ಳತನದ ಆರೋಪಗಳ ಮೇಲೆ ಬಹುತೇಕವಾಗಿ ಮುಸ್ಲಿಮರನ್ನು ಮತ್ತು ದಲಿತರನ್ನು ಗುರಿಯಾಗಿಸಿಕೊಂಡು ಈ ಹತ್ಯೆಗಳು ನಡೆಯುತ್ತಿವೆ
೩. ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ರಚನೆಯಾದ ದಿನಗಳಿಂದ ಗುಂಪುಹತ್ಯೆಗಳು ಉಲ್ಬಣಗೊಂಡಿದೆ ಎಂದು ಅಂಕಿ ಅಂಶಗಳ ಸಾಕ್ಷಿ ಅಧಾರಿಸಿ ಕೆಲವರು ಅಭಿಪ್ರಾಯ ಪಡುತ್ತಾರೆ
೪. ಅನೇಕ ಗೋರಕ್ಷಣೆಯ ಗುಂಪುಗಳಿಗೆ ಬಿಜೆಪಿಯ ಗೆಲುವಿನಿಂದ ಆನೆಬಲ ಬಂದಾಂತಾಗಿದೆ
೫. ಪೊಲೀಸರಿಂದ ಗೋರಕ್ಷಣೆಯು ಸಾಧ್ಯವಾಗುತ್ತಿಲ್ಲವಾದ್ದರಿಂದ ಗೋರಕ್ಷಣೆ ತಮ್ಮ ಕರ್ತವ್ಯವೆಂದು ಗೋರಕ್ಷಕರು ಕಾನೂನನ್ನು ಕೈಗೆತ್ತಿಕೊಂಡು ಹತ್ಯೆಮಾಡುತ್ತಿದ್ದಾರೆ. 
೬. ಗೋರಕ್ಷಣೆಯ ನೆಪದಲ್ಲಿ ನಡೆಯುತ್ತಿರುವ ಹಿಂಸಾಚಾರವು ಹೊಸದೇನಲ್ಲ. ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರವು ಹಿಂದೆಯೂ ಸಂಭವಿಸಿದೆ. ಆದರೆ ಹಸುವಿನ ಸಂಬಂಧಿತ ಹಿಂಸಾಚಾರದ ಪ್ರಮಾಣದಲ್ಲಿ ನಿರ್ಭೀತವಾಗಿ ನಡೆಯುತ್ತಿರುವ ರೀತಿಯಲ್ಲಿ ವ್ಯತ್ಯಾಸವಿದೆ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. 
೭. ಜಾನುವಾರುಗಳನ್ನು ಸಾಗಿಸುವ ವಾಹನಗಳ ಮೇಲೆ ದಾಳಿಗಳು ಹೆಚ್ಚಾಗಿದೆ ಮತ್ತು ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ನಿಲ್ಲಿಸಿ ಹಣಕ್ಕಾಗಿ ಬಲಾತ್ಕರಿಸಿ ಬೆಲೆಬಾಳುವ ಜಾನುವಾರಗಳನ್ನು ಕದಿಯುತ್ತಿದ್ದಾರೆ ಎಂಬ ವರದಿಗಳನ್ನು ಸಹ ಕಾಣಬಹುದು
೮. ಚುನಾವಣೆಗಳ ಸಂದರ್ಭಗಳಲ್ಲಿ ಗೋರಕ್ಷಣೆಗೆ ಸಂಬಂಧಿಸಿದ ಹಿಂಸಾಚಾರ ಹೆಚ್ಚಾಗುವ ಪ್ರವೃತಿಯನ್ನು ಸಹ ಗಮನಿಸಬಹುದು
೯. ಚುನಾವಣೆಗಳನ್ನು ಗೋಮಾಂಸವನ್ನು ತಿನ್ನುವವರು ಹಾಗೂ ಹಸುವಿನ ಹತ್ಯೆಯನ್ನು ವಿರೋಧಿಸುವವರ ನಡುವಿನ ಕಾಳಗ ಎಂದು ಹೇಳಲಾಗುತ್ತಿದೆ
೧೦. ಗೋರಕ್ಷಣೆಯು ಕೂಡ ಒಂದು ಲಾಭದಾಯಕ ವ್ಯವಹಾರವಾಗಿದೆ. ಕೆಲವೊಂದು ಕಡೆ ಗೋರಕ್ಷಕರು ಜಾನುವಾರು ಸಾಗಾಣಿಕೆದಾರರಿಂದ ಪ್ರತಿ ಹಸುವಿನ ಸಾಗಾಣಿಕೆಗೆ ೨೦೦ ರೂಪಾಯಿಗಳನ್ನು ವಸೂಲಿ ಮಾಡುತ್ತಿರುವ ವಿಷಯ ತನಿಖೆಗಳಿಂದ ಬೆಳಕಿಗೆ ಬಂದಿದೆ. 
೧೧. ಗೋರಕ್ಷಣೆಯ ಗುಂಪುಗಳು/ ಗೋರಕ್ಷ ದಳಗಳು ಯಥೇಚ್ಛವಾಗಿ ಬೆಳೆಯುತ್ತಿವೆ. ಅಂಕಿ ಅಂಶಗಳ ಪ್ರಕಾರ ರಾಜಧಾನಿ ದೆಹಲಿಯಲ್ಲೇ ಸುಮಾರು ೨೦೦ ಗುಂಪುಗಳು ಇರುವುದಾಗಿ ಅಂದಾಜಿಸಲಾಗಿದೆ
೧೨. ಸಾಮಾನ್ಯವಾಗಿ ಯುವ ಬಡ ಕಾರ್ಮಿಕರು ಈ ಗುಂಪುಗಳ ಸದಸ್ಯರು. ಹಸುಹತ್ಯೆಗಳ ಸಂಬಂಧಿಸಿದ ವಿಡಿಯೋಗಳನ್ನು ತೋರಿಸಿ ಯುವಕರನ್ನು ಆಕರ್ಷಿಸಲಾಗುತ್ತಿದೆ. ಚಮ್ಮಾರರು, ಆಟೋರಿಕ್ಷಾ ಚಾಲಕರು, ತರಕಾರಿ ವ್ಯಾಪಾರಿಗಳು ಗೋಹತ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ಗುಂಪುಗಳಿಗೆ ನೀಡುವುದಾಗಿ ವರದಿ ಮಾಡಲಾಗಿದೆ
ನಾನು ಇತ್ತೀಚೆಗೆ ಓದಿದ ಕಮಲಾ ದಾಸ್ ರವರ ‘ಬಾಲಕ, ಹಸು ಮತ್ತು ಸನ್ಯಾಸಿಗಳು’ ಎಂಬ ಕಿರುಗತೆಯನ್ನುಅನುವಾದಕರ ಕ್ಷಮೆ ಕೇಳುತ್ತಾ ನಿಮ್ಮ ಓದಿಗಾಗಿ ನೀಡುತ್ತಿದ್ದೇನೆ: 
ಒಂದು ದಿನ ಒಬ್ಬ ಚಿಕ್ಕ ಬಾಲಕ ರಸ್ತೆ ಬದಿಯಲ್ಲಿದ್ದ ಕಸದ ತೊಟ್ಟಿಯಿಂದ ಒಂದು ಬಾಳೆಹಣ್ಣು ಸಿಪ್ಪೆಯನ್ನು ಹೆಕ್ಕಿದ. ಇನ್ನೇನು ತಿನ್ನಬೇಕು, ಒಂದು ಹಸು ಬಂದು ಅದನ್ನು ಅವನ ಕೈಯಿಂದ ಕಿತ್ತುಕೊಂಡಿತು. 
ಹುಡುಗನಿಗೆ ಬೇಸರವಾಯ್ತು, ಅವನು ಹಸುವನ್ನು ತಳ್ಳಿದ. ಹಸು ಅಂಬಾ ಎನ್ನುತ್ತ ರಸ್ತೆಯಲ್ಲಿ ಓಡಲಾರಂಭಿಸಿತು.
ಇದ್ದಕ್ಕಿದ್ದಂತೆ ಎಲ್ಲಿಂದಲೋ ಕೆಲವು ಸನ್ಯಾಸಿಗಳು ಕಾಣಿಸಿಕೊಂಡರು. 

“ಆ ಪವಿತ್ರ ಹಸುವಿಗೆ ತೊಂದರೆ ಕೊಟ್ಟೆಯೇನು?”-ಅವರು ಹುಡುಗನನ್ನು ಕೇಳಿದರು. 

“ಇಲ್ಲ. ಅದನ್ನು ಓಡಿಸಿದೆ, ಅಷ್ಟೇ. ಅದು ನಾನು ತಿನ್ನುತ್ತಿದ್ದ ಬಾಳೆಹಣ್ಣು ಸಿಪ್ಪೆಯನ್ನು ಕಸಿಯಿತು, ಅದಕ್ಕೇ. ”

“ನಿನ್ನ ಧರ್ಮ ಯಾವುದು?” - ಸನ್ಯಾಸಿಗಳು ಕೇಳಿದರು. 

“ಧರ್ಮ? ಏನು ಹಾಗಂದ್ರೆ?” - ಹುಡುಗ ಕೇಳಿದ. 

“ನೀನು ಹಿಂದೂವೊ ಅಥವಾ ಮುಸಲ್ಮಾನನೋ? ಅಥವಾ ಕ್ರಿಶ್ಚಿಯನ್ನೋ? ನೀನು ದೇವಸ್ಥಾನಕ್ಕೆ ಹೋಗ್ತೀಯಾ ಅಥವಾ ಮಸೀದಿಗೋ?”

“ನಾನು ಅಲ್ಲಿಗೆ ಎಲ್ಲಿಗೂ ಹೋಗೂದಿಲ್ಲ” - ಹುಡುಗ ಉತ್ತರಿಸಿದ. 

“ಅಂದರೆ ನಿನಗೆ ಪೂಜೆಪ್ರಾರ್ಥನೆಯಲ್ಲಿ ನಂಬಿಕೆ ಇಲ್ಲ?”

“ನಾನು ಎಲ್ಲಿಗೂ ಹೋಗೂದಿಲ್ಲ. ನನ್ನತ್ರ ಶರ್ಟಿಲ್ಲ, ನನ್ನ ಚಡ್ಡಿ ಹಿಂಬದಿಯಲ್ಲಿ ಹರಿದಿದೆ ” 

ಸನ್ಯಾಸಿಗಳು ತಮ್ಮ-ತಮ್ಮೊಳಗೇ ಏನೋ ಗುಸುಗುಸು ಎಂದರು, ನಂತರ ಹುಡುಗನತ್ತ ತಿರುಗಿ “ನೀನು ಮುಸಲ್ಮಾನನೇ ಇರಬೇಕು. ಹಸುವಿಗೆ ನೋವುಂಟು ಮಾಡಿದ್ದೀಯಾ”

“ಆ ಹಸು ನಿಮ್ಮದೇನು?”

ಆ ಸನ್ಯಾಸಿಗಳು ಹುಡುಗನ ಕುತ್ತಿಗೆ ತಿರುಚಿದರು, ಕಸದ ತೊಟ್ಟಿಗೆ ಎಸೆದರು. 

ನಂತರ ಒಟ್ಟಿಗೇ ಸ್ತುತಿಸಿದರು - “ಓಂ ನಮಃ ಶಿವಾಯ, ಓಂ ನಮಃ ಶಿವಾಯ”


****

ಸ್ಟ್ರೇಂಜ್ ಫ್ರೂಟ್ ಎನ್ನುವುದು ಅಬೆಲ್ ಮೀರೋಪೋಲ್‍ ನವರು ಬರೆದ ಕವಿತೆ. ದಕ್ಷಿಣ ಅಮೇರಿಕಾದಲ್ಲಿ ನಡೆದ ಅಮಾನವೀಯ ಕೃತ್ಯವನ್ನು ಖಂಡಿಸಿ ಬರೆದಂತಹ ಪದ್ಯ. ಈ ಕವಿತೆ ಲಿನ್ಚಿಂಗ್ ಅಥವಾ ಗುಂಪುಹತ್ಯೆಯ ಬಗ್ಗೆ ಹೇಳುತ್ತದೆ. ದಕ್ಷಣ ಅಮೇರಿಕಾದಲ್ಲಿ ಲಿನ್ಚಿಂಗ್ ಅಥವಾ ಗುಂಪುಹತ್ಯೆಯನ್ನು ಹಿಂಸಾತ್ಮಕ ಶಿಕ್ಷೆಯಾಗಿ ಬಳಸಲಾಗುತ್ತಿದ್ದ ಸಂದರ್ಭ. ಆಫ್ರಿಕಾ ಮೂಲದ ಅಮೇರಿಕನ್ನರನ್ನು, ಗುಲಾಮರನ್ನು ಮತ್ತು ಹೋರಾಟಗಾರರನ್ನು ಗುಂಪುಹತ್ಯೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನಕ್ಕಾಗಿ ಪಾಪ್ಲರ್ ಮರಕ್ಕೆ ನೇತು ಹಾಕುವುದರ ಬಗ್ಗೆ ಧ್ವನಿಸುತ್ತದೆ ಈ ಕವಿತೆ. ಆಶ್ಚರ್ಯವೆಂದರೆ, ಅಬೆಲ್ ಮೀರೋಪೂಲ್ ಕೂಡ ಒಬ್ಬ ಬಿಳಿಯ. ಆದರೂ ಗುಂಪುಹತ್ಯೆಯನ್ನು ಬಲವಾಗಿ ವಿರೋಧಿಸಿದ ಕವಿ. ಕವಿತೆಯ ಉದ್ದಗಲಕ್ಕೂ ಗುಂಪುಹತ್ಯೆಯ ಭೀಕರತೆಯನ್ನು ಹೇಳಲು ಅನೇಕ ಉಪಮೆಗಳನ್ನು ಬಳಸಿಕೊಳ್ಳಲಾಗಿದೆ. 


ದಕ್ಷಿಣ ಮರವು ಬೆಳೆದಿದೆ ಒಂದು ವಿಚಿತ್ರ ಹಣ್ಣನ್ನು

ಎಲೆಗಳೆಲ್ಲವೂ ರಕ್ತಮಯವಾಗಿದೆ ಬುಡದಲ್ಲೂ ರಕ್ತ

ಕಪ್ಪು ದೇಹಗಳು ದಕ್ಷಿಣದ ತಂಗಾಳಿಗೆ ತೂಗಾಡುತ್ತಿವೆ…

ಹೌದು ವಿಚಿತ್ರ ಹಣ್ಣುಗಳು ನೇತಾಡುತ್ತಿವೆ ಪಾಪ್ಲರ್ ಮರಗಳಲ್ಲಿ

ಧೀರ ದಕ್ಷಿಣದ ಈ ಗ್ರಾಮೀಣ ದೃಶ್ಯ

ಉಬ್ಬಿದ ಕಣ್ಣುಗಳು ತಿರುಚಿದ ಬಾಯಿಗಳು

ಮ್ಯಾಗ್ನೋಲಿಯಾಸ್‍ನ ಸಿಹಿ ಮತ್ತು ತಾಜಾ ಸುವಾಸನೆ

ತಕ್ಷಣ ಸುಟ್ಟ ಮಾಂಸದ ವಾಸನೆಯಾಗುವುದು

ಇಲ್ಲಿದೆ ಹಣ್ಣು. . 

ಕಾಗೆಗಳಿಗೆ ಕೀಳಲು

ಮಳೆಗೆ ಕ್ರೋಢೀಕರಿಸಲು

ಗಾಳಿಗೆ ಹೀರಲು

ಸೂರ್ಯನಿಗೆ ಕೊಳೆಸಲು

ಮರಕ್ಕೆ ಬೀಳಿಸಲು

ಇಲ್ಲಿದೆ ವಿಚಿತ್ರ ಮತ್ತು ಕಹಿ ಹಣ್ಣು…

ಏನೇ ಇರಲಿ, ಗೋರಕ್ಷಣೆಯ ನೆಪದಲ್ಲಿ ಕಾರ್ಯಾಚರಿಸುತ್ತಿರುವ ಗೋರಕ್ಷಣ ದಳದಂತಹ ತಂಡಗಳು ಎಲ್ಲ ರೀತಿಯಲ್ಲೂ ನಿಷೇಧಕ್ಕೆ ಅರ್ಹವಾಗಿವೆ. ಅಕ್ರಮ ಚಟುವಟಿಕೆಯನ್ನು ತಡೆಯಬೇಕಾದುದು ಸರಕಾರವೇ ಹೊರತು ಇಂತಹ ಖಾಸಗಿ ತಂಡಗಳಲ್ಲ ಎಂಬುವುದು ನಮ್ಮ ನಿಮ್ಮ ನಿಲುವು ಆಗಬೇಕಾಗಿದೆ. 











ಶೆಟ್ಟಿಹಳ್ಳಿಯ ಮರುಹುಟ್ಟು.......


ಪಾರ ಒಣಭೂಮಿಗೆ ನೀರೊದಗಿಸಿ ರೈತರ ಬದುಕನ್ನು ಹಸನಾಗಿಸಲೆಂದೇ ಕಟ್ಟಲಾಗುವ ಜಲಾಶಯಗಳ ಹಿಂದೆ ಕೆರೆಗೆ ಹಾರವಾಗುವಂತಹ ದುಗುಡದ ಕತೆಗಳಿರುತ್ತವೆ. ನಾಗರೀಕ ಸೌಕರ್ಯಗಳಿಗಾಗಿ ಹೆಮ್ಮೆಯಿಂದ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಯೋಜನೆಗಳು ಕೆಲವೊಮ್ಮೆ ದೀಪದ ಕೆಳಗೇ ಕತ್ತಲು ಎಂಬಂತೆ ಅಭಿವೃದ್ಧಿಯ ನಿವೇಶನದಡಿಯಲ್ಲೇ ಕೆಲ ಹೇಳಲಾಗದ ನರಳುವಿಕೆಗೆ ಕಾರಣವಾಗುತ್ತವೆ. ಅದರಲ್ಲೂ ಹಿನ್ನೀರಿನಲ್ಲಿ ಮುಳುಗಡೆಯಾದ ಊರುಗಳು ಗುಳೇ ಏಳಬೇಕಾದ ಸಂಕಟದ ಸಮಯಗಳನ್ನು ವರ್ಣಿಸಲಸಾಧ್ಯ. ಅಂಥ ಒಂದು ಊರು ಹಾಸನದ ಗೊರೂರು ಅಣೆಕಟ್ಟೆಯ ಹಿನ್ನೀರಿಗೆ ಬಲಿಯಾದ ಶೆಟ್ಟಿಹಳ್ಳಿ.
ಶೆಟ್ಟಿಹಳ್ಳಿಯು ನೂರಕ್ಕೆ ನೂರು ಕೃಷಿಕ ಕ್ರೈಸ್ತರೇ ವಾಸಿಸುತ್ತಿದ್ದ ಹಳ್ಳಿ. ಸುಮಾರು ಇನ್ನೂರು ವರ್ಷಗಳ ಹಿಂದೆ ನಾಡಿಗೆ ಸಿಡುಬು ಲಸಿಕೆಯನ್ನು ಪರಿಚಯಿಸಿದ ಮೈಸೂರು ಮಹಾರಾಜರಿಂದ ದೊಡ್ಡಸ್ವಾಮಿಯವರು ಎಂದೇ ಕರೆಸಿಕೊಳ್ಳುತ್ತಿದ್ದ ಫ್ರೆಂಚ್ ಗುರು ಅಬ್ಬೆ ದ್ಯುಬುವಾನವರ ಕೆಲಕಾಲದ ಕರ್ಮಭೂಮಿ ಈ ಶೆಟ್ಟಿಹಳ್ಳಿ. ದ್ಯುಬುವಾನವರು ಈ ಹಳ್ಳಿಯಲ್ಲಿ ಸಹಕಾರ ಬೇಸಾಯ ಪದ್ದತಿಯನ್ನು ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಿದ್ದರು. ಅದಕ್ಕಾಗಿ ಅವರು ಅಂದಿನ ಬ್ರಿಟಿಷ್ ಸರಕಾರದಿಂದ ಶಹಬ್ಬಾಸ್ ಗಿರಿಯನ್ನೂ ಪಡೆದಿದ್ದರು. ಸಹಕಾರ ಬೇಸಾಯ ಪದ್ದತಿಯ ಪ್ರಕಾರ ರೈತರು ಮುಯ್ಯಿಗೂಲಿ ಮಾಡಬೇಕಾಗಿತ್ತು. ಯಾರ ಗದ್ದೆಯಲ್ಲಿ ಪೈರು ನಾಟಬೇಕೋ, ಯಾರ ನೆಲದಲ್ಲಿ ಪೈರು ಕಟಾವಿಗೆ ಬಂತೋ ಅಲ್ಲೆಲ್ಲ ಇವರು ಹೋಗಿ ಕೆಲಸ ಗೇಯಬೇಕಿತ್ತು. ಅದೇ ರೀತಿ ಇವರ ಗದ್ದೆಗೆ ಅವರು ಬಂದು ಗೇಯುತ್ತಿದ್ದರು. ಹೀಗೆ ಶ್ರಮದ ಕೆಲಸವು ಸುಲಭವಾಗುತ್ತಿತ್ತು ಮಾತ್ರವಲ್ಲ ಹೆಚ್ಚು ಭೂಮಿ ಕೃಷಿಗೆ ಒಳಪಡುತ್ತಿತ್ತು. ಬೆಳೆಗಳ ಬೆಳೆಯುವಿಕೆಯಲ್ಲೂ ಸಾಮರಸ್ಯ ಮೂಡಿ ರೈತರ ಫಸಲಿಗೆ ಒಳ್ಳೆಯ ಬೆಲೆ ಬರುತ್ತಿತ್ತು.
ಹೀಗೆ ಸುಭಿಕ್ಷೆಯಿಂದ ಸಮೃದ್ಧವಾಗಿದ್ದ ಶೆಟ್ಟಿಹಳ್ಳಿ ಮತ್ತು ಸುತ್ತಮುತ್ತಲ ಮುದ್ದೇಗೌಡನ ಕೊಪ್ಪಲು, ನರಸಯ್ಯನ ಕೊಪ್ಪಲು, ದೊಡ್ಡಕೊಪ್ಪಲು, ಹೊಸಹಳ್ಳಿ, ಚೆಂಗರವಳ್ಳಿ, ಆರೂಬರೆ ಕೊಪ್ಪಲು, ಮಂದಿರ, ಸುಲಗೋಡು ಮುಂತಾದ ೬೨ ಹಳ್ಳಿಗಳ ಕೃಷಿಕ ಜನ ಲಾಗಾಯ್ತಿನಿಂದ ಒಕ್ಕಲನ್ನು ನೆಚ್ಚಿಕೊಂಡು ಭೂಮಿಯನ್ನು ಹದಮಾಡಿ ಬೆಳೆತೆಗೆದು ಹಸುಕುರಿಕೋಳಿ ತೆಂಗು ಮಾವು ಹಲಸುಗಳೊಂದಿಗೆ ಜಾಜಿ ಮೊಲ್ಲೆಗಳೊಂದಿಗೆ ಸಂತೋಷ ಸಂತೃಪ್ತಿಯಿಂದ ಬಾಳುವೆ ನಡೆಸುತ್ತಿದ್ದರು. ಸುತ್ತಲ ಹೊಲಗಳಲ್ಲಿ ರಾಗಿ ಭತ್ತ ಜೋಳದ ಫಲಭರಿತ ಪೈರುಗಳ ನಡುವೆ ಅಕ್ಕಡಿಯಾಗಿ ಅವರೆ ತಡುಗಣಿ ಮುಂತಾದ ಕಾಳುಗಳೂ ಎರಡನೇ ಬೆಳೆಯಾಗಿ ತರಕಾರಿಗಳೂ ಬೆಳೆದು ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದವು.
ಈ ಊರುಗಳ ನಡುವೆಯೇ ಯಗಚಿ ಹೊಳೆಯುಸ್ವಚ್ಛಂದವಾಗಿ ಹರಿದು ಊರವರಿಗೆಲ್ಲ ಸೋದರಿಯಂತೆ ಅಮ್ಮನಂತೆ ಸಲಹುತ್ತಿದ್ದಳು. ಹೊಳೆಯ ನೀರಲ್ಲಿ ಎತ್ತುಗಳೂ ಹಸುಕುರಿಗಳೂ ನೀರುಂಡು ಬದಿಯ ಹಸಿರು ಗರಿಕೆಯನ್ನು ಮೇಯುತ್ತಿದ್ದರೆ ಕಾಲವೇ ನಿಂತು ವಿರಮಿಸುವಂತೆ ತೋರುತ್ತಿತ್ತು.
ಈ ಊರುಗಳಿಗೆಲ್ಲ ಕಲಶಪ್ರಾಯವೆಂಬಂತೆ ಶೆಟ್ಟಿಹಳ್ಳಿಯ ದಿಬ್ಬದ ಮೇಲೆ ಫ್ರೆಂಚ್ ಮಿಷನರಿಗಳು ಕಟ್ಟಿದ ಭಾರೀ ಗಾತ್ರದ ಕೆಂಪುಕಲ್ಲಿನ ಗಾರೆಗಚ್ಚಿನ ದಿವ್ಯ ಭವ್ಯ ಚರ್ಚಿನ ಸುಂದರ ನೋಟ ಬಹುದೂರಕ್ಕೂ ತನ್ನ ಆಧ್ಯಾತ್ಮಿಕ ಸೌಂದರ್ಯವನ್ನು ತೋರುತ್ತಿತ್ತು. ದೇವಾಲಯದ ಬೃಹತ್ ಕಂಚಿನ ಗಂಟೆ ಸುಮಧುರ ನಿನಾದಗೈದು ಎಲ್ಲರಲ್ಲಿ ಶಾಂತಿಯ ದೈವತ್ವವನ್ನು ಬೀರುತ್ತಿತ್ತು.
ಹೀಗೆ ಸುಂದರ ಗಂಭೀರ ನಡೆ ಹೊಂದಿದ್ದ ಚರ್ಚು ಮತ್ತು ಅದಕ್ಕೆ ನಡೆದುಕೊಳ್ಳುತ್ತಿದ್ದ ಆಸುಪಾಸಿನ ಹಳ್ಳಿಗಳ ಜನರ ಮೇಲೆ ಸುಮಾರು ೧೯೬೮ರಲ್ಲಿ ಗೊರೂರು ಡ್ಯಾಮ್ ಎಂಬ ಯೋಜನೆ ಮಂಜೂರಾದ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ಯಗಚಿ ಮತ್ತು ಹೇಮಾವತಿಯರು ಸಂಗಮವಾಗುವ ಗೊರೂರು ಬಳಿ ಕಟ್ಟೆ ಹಾಕಿ ತಡೆದು ನೀರಾವರಿಗೆ ಅನುವಾಗಲು ಕರ್ನಾಟಕ ಸರ್ಕಾರ ಭಾರೀ ಯೋಜನೆಯೊಂದನ್ನು ಕೈಗೆತ್ತಿಕೊಂಡಿತು. ಯೋಜನೆಯ ಅನುಷ್ಠಾನಕ್ಕಾಗಿ ಹಿನ್ನೀರಿನಲ್ಲಿ ಮುಳಗಡೆಯಾಗಲಿದ್ದ ಹಲವಾರು ಹಳ್ಳಿಗಳನ್ನು ಗುರುತಿಸಿ ಅಲ್ಲಿ ವಾಸವಿದ್ದವರನ್ನು ಒಕ್ಕಲೆಬ್ಬಿಸಿ ಬೇರೆಡೆ ಪುನರ್ವಸತಿ ಕಲ್ಪಿಸಲಾಯಿತು. ಶಾಲೆಯಲ್ಲಿ ಕಲಿಯುತ್ತಾ ನಲಿಯುತ್ತಾ ಇದ್ದ ಈ ಕ್ರೈಸ್ತ ಜನಪದರು ತಮ್ಮ ಪಾರಂಪರಿಕ ಆಸ್ತಿಗಳನ್ನು ಬಿಡಲಾಗದೆ ಕೊರಗಿದರೂ ಸರ್ಕಾರದ ಆದೇಶವನ್ನು ಮೀರಲಾಗುವುದೇ ಎಂದುಕೊಂಡು ಸರ್ಕಾರದ ಅಧಿಕಾರಿಗಳು ತೋರಿದೆಡೆಗೆ ಸಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕಾಯಿತು.
ಇಲ್ಲೆಲ್ಲಾ ವಾಸವಿದ್ದ ವಯಸ್ಕರನ್ನು ಗುರುತಿಸಿ ’ಯೋಜನಾ ನಿರ್ವಸಿತರು’ ಎಂಬ ಹಣೆಪಟ್ಟಿ ಹಚ್ಚಿ ತಲಾ ಒಂದು ಸರ್ಟಿಫಿಕೇಟ್ ಕೊಡಲಾಯಿತು. ಆ ಸರ್ಟಿಫಿಕೇಟ್ ಹೊಂದಿದ್ದವರು ಸರ್ಕಾರ ಗುರುತಿಸಿದ್ದ ಹೇಮಾವತಿ ನಿರ್ವಸಿತರ ಕಾಲೋನಿಗಳಲ್ಲಿ ತಲಾ ನಾಲ್ಕು ಎಕರೆ ಜಮೀನು ಪಡೆದುಕೊಂಡು ನೆಲೆಗೊಳ್ಳಬೇಕಾಯಿತು.
ಸುಮಾರು ಎಂಟುನೂರು ಕುಟುಂಬಗಳನ್ನು ಹೊಂದಿದ್ದ ಶೆಟ್ಟಿಹಳ್ಳಿಯ ಕೆಲ ಜನ ಅನತಿದೂರದಲ್ಲಿದ್ದ ಬೋರೆ ಪ್ರದೇಶದಲ್ಲಿ ಜ್ಯೋತಿನಗರ ಎಂಬ ಹೆಸರಿನಲ್ಲಿ ಊರು ಕಟ್ಟಿಕೊಂಡರು. ಸುಮಾರು ಐವತ್ತು ಕುಟುಂಬಗಳು ಹಾಸನ ಪಟ್ಟಣದಲ್ಲೂ ನಲ್ವತ್ತು ಕುಟುಂಬಗಳು ಶೀಮೊಗ್ಗೆಯಲ್ಲೂ ನೆಲೆ ಕಂಡುಕೊಂಡರು. ಕೆಲವರು ಹೆಗ್ಗಡದೇವನಕೋಟೆ ಬಳಿಯ ನಾಗನಹಳ್ಳಿಗೂ ಕೆಲವರು ಬೆಂಗಳೂರು ನಗರಕ್ಕೂ ಹೋದರು.
ಆದರೆ ಕೆಲವರು ತಮ್ಮ ಮನೆ ಮಠ ತೋಟ ಗುಡ್ಡ ಹಿತ್ತಿಲುಗಳೆಲ್ಲ ಜಲಸಮಾಧಿಯಾಗುವುದನ್ನು ನೆನೆದು ಹಲುಬಿದರು. ಏನೇ ಆಗಲಿ ತಮ್ಮ ಊರ ನೆಲವನ್ನು ಅಪ್ಪ ಕಟ್ಟಿದ ಮನೆಯನ್ನು ಬಿಟ್ಟು ಕದಲಲಾರೆವೆಂದು ಪಟ್ಟು ಹಿಡಿದು ಕೂತರು. ಸುಮಾರು ೧೯೭೬ನೇ ಇಸವಿ, ಡ್ಯಾಮಿನ ಕೆಲಸಗಳೆಲ್ಲ ಪೂರ್ಣಗೊಂಡು ಮುಖ್ಯವಾದ ಅಡ್ಡಬಾಗಿಲನ್ನೂ ಮುಚ್ಚುವುದಕ್ಕೆ ಅಣಿಯಾಯಿತು. ಆದರೂ ಮೇಲ್ಕಂಡ ಊರುಗಳಲ್ಲಿ ಸರಿಸುಮಾರು ಇನ್ನೂರು ಕುಟುಂಬಗಳು ಉಳಿದೇ ಇದ್ದವು. ನೀರಾವರಿ ಅಧಿಕಾರಿಗಳಿಗೆ ಚಿಂತೆ ಶುರುವಾಯಿತು. ಈ ಜನರ ಎತ್ತಂಗಡಿಯಾಗದೆ ಅಣೆಕಟ್ಟೆಯ ಗೇಟು ಮುಚ್ಚುವಂತಿಲ್ಲ. ಅವರು ಪೊಲೀಸರ ದಂಡಿನೊಂದಿಗೆ ಬಂದು ಹಳ್ಳಿಗರೆಲ್ಲರನ್ನೂ ಬಲವಂತವಾಗಿ ಲಾರಿಗಳಲ್ಲಿ ಹತ್ತಿಸಿ ಮುಳುಗಡೆ ಸಂತ್ರಸ್ತರು ಎಂಬ ಹಣೆಪಟ್ಟಿ ಹಚ್ಚಿ ಸರಕಾರ ಮೊದಲೇ ಗುರುತಿಸಿದ್ದ ತಾಣಗಳಿಗೆ ಒಯ್ದು ಬಿಟ್ಟುಬಂದರು.
ಸುಮಾರು ಇನ್ನೂರು ಕುಟುಂಬಗಳನ್ನು ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಬೆಳಮೆ ಎಂಬ ಕೊಡಗಿನಂಚಿನ ಕಾಡಿನಲ್ಲಿ ದಬ್ಬಿದರು. ಆ ಕಾಲೋನಿ ಈಗ ಮರಿಯಾನಗರ ಆಗಿದೆ.
ಮುದ್ದೇಗೌಡನ ಕೊಪ್ಪಲಿನ ಸುಮಾರು ಐವತ್ತು ಕುಟುಂಬಗಳು ಹೇಮಾವತಿ ಹೋಜನೆಗೆ ಮುನ್ನವೇ ಯಗಚಿ ಹೊಳೆ ನೀರನ್ನು ಆಶ್ರಯಿಸಿ ಒಕ್ಕಲುತನ ಮಾಡುತ್ತಿದ್ದುದರಿಂದ ಅವರಿಗೆ ಚೆನ್ನರಾಯಪಟ್ಟಣದ ಬಳಿಯ ಹಾಸುಗಲ್ಲುಬಾರೆ ಎಂಬಲ್ಲಿ ಹೇಮಾವತಿ ನಾಲೆ ಹರಿಯಲಿದೆ ಎಂಬ ಆಶ್ವಾಸನೆ ನೀಡಿ ಬಂಜರು ಭೂಮಿಯನ್ನು ತೋರಿಸಲಾಯಿತು. ಬಾಂದಿನವರು ಬಂದು ಬರೇ ಕಲ್ಲು ಕಾರೇಮುಳ್ಳುಗಳಿಂದ ತುಂಬಿದ್ದ ಭೂಮಿಯಲ್ಲಿ ರಂಗೋಲಿಯ ಗೆರೆ ಬಳಿದು ಒಬ್ಬೊಬ್ಬರಿಗೂ ಇಂತಿಷ್ಟು ಭೂಮಿ ಎಂದು ಅಳೆದುಕೊಟ್ಟರು. ಅಲ್ಲಿ ಜಾಗ ಸಾಲದಾದಾಗ ದೊಡ್ಡಕುಂಚೇವು, ಹೊಸೂರು ಮುಂತಾದೆಡೆಗಳಲ್ಲೂ ಜಮೀನು ಕೊಡಲಾಯಿತು.
ಇವರೆಲ್ಲರೂ ಸಾಗುವಳಿಗಾಗಿ ತಮ್ಮ ಜಮೀನಿನಲ್ಲಿದ್ದ ಕಲ್ಲುಗಳನ್ನು ಆಯ್ದು ಹೊರಹಾಕಿ, ಕಾರೇಗಿಡ ಕುರುಚಲು ಪೊದೆಗಳನ್ನೆಲ್ಲ ಬೇರುಸಮೇತ ಅಗೆದು ತೆಗೆದು ಬೆಂಕಿಯಲ್ಲಿ ಸುಟ್ಟು, ನೆಲವನ್ನು ಹರಗಿ ಹೊಸದಾಗಿ ಬೆಳೆ ತೆಗೆಯಬೇಕಾಯಿತು. ಈ ನಡುವೆ ತಮ್ಮ ವಾಸಕ್ಕೂ ದನಕರುಕುರಿಗಳ ವಾಸಕ್ಕೂ ಕಟ್ಟೋಣದ ಕೆಲಸದಲ್ಲಿ ತೊಡಗಬೇಕಾಗಿತ್ತು.  ತಮಗೊಂದು ಭದ್ರವಾದ ಸೂರು ಕಟ್ಟಿಕೊಳ್ಳುವ ಮುನ್ನವೇ ಇವರು ದಿಬ್ಬದ ಮೇಲೆ ದೇವಾಲಯ ಕಟ್ಟಿದರು.
ಅಂದು ಹಾಸನದಲ್ಲಿ ಸೇವೆ ಸಲ್ಲಿಸುತ್ತಿದ್ದ ಫಾದರ್ ಇಮ್ಯಾನ್ಯುವೆಲ್ ಸಿ ಮಣಿಯವರು ಈ ಜನರ ದೈವಭಕ್ತಿಯನ್ನು ಕಂಡು ಇವರ ಜೊತೆಗೆ ನಿಂತು ನೈತಿಕ ಸ್ಥೈರ್ಯ ತುಂಬಿದರು. ಸಂಜೆಯ ಬಿಡುವಿನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಜನರನ್ನು ಒಟ್ಟುಗೂಡಿಸಿ ಸೌಹಾರ್ದ ವಾತಾವರಣ ಮೂಡಿಸಿದರು. ಹೊಸ ಸಮಾಜವು ಯಾವುದೇ ತಕರಾರು ಜಗಳಗಳಿಲ್ಲದೆ ಸಾಮರಸ್ಯದ ಜೀವನ ನಡೆಸುವಂತೆ ನೋಡಿಕೊಂಡರು. ಪಾದ್ರಿಗಳ ನಿವಾಸವೇ ಈ ಜನರಿಗೆ ಗುಡಿಯಾಯಿತು, ಶಾಲೆಯಾಯಿತು, ಮಕ್ಕಳ ಬೇಸಿಗೆ ಶಿಬಿರವಾಯಿತು, ಊರವರಿಗೆ ಪ್ರಾಥಮಿಕ ಚಿಕಿತ್ಸಾಕೇಂದ್ರವೂ ಆಯಿತು. ಊರವರ ಆಸಕ್ತಿಪೂರ್ಣ ಪಾಲುಗೊಳ್ಳುವಿಕೆಯನ್ನು ತಮ್ಮ ಬಿಷಪರಿಗೆ ಅರುಹಿದ ಫಾದರ್ ಮಣಿಯವರು ಶಾಲೆಯ ಚಟುವಟಿಕೆಗಳನ್ನು ಸುಸೂತ್ರವಾಗಿ ಮುಂದುವರಿಸಲು ನೆರವು ನೀಡುವಂತೆ ಕೋರಿದ್ದರ ಫಲವಾಗಿ ಮಂಗಳೂರಿನಿಂದ ಕೆಲ ಕನ್ಯಾಸ್ತ್ರೀಯರು ಬಂದು ಶಾಲೆಯ ಉಸ್ತುವಾರಿ ವಹಿಸಿಕೊಂಡರು. ಹೀಗೆ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ನಿರಾಶ್ರಿತರ ತಾಣವಾಗಿದ್ದ ಒಂದು ನೆಲೆ ಇಂದು ’ಅಲ್ಫೋನ್ಸ್ ನಗರ’ ಎಂಬ ವ್ಯವಸ್ಥಿತ ಹಾಗೂ ಚೊಕ್ಕ ಗ್ರಾಮವಾಗಿ ಬೆಳೆದು ಸುತ್ತಮುತ್ತಲ ಗ್ರಾಮಗಳಿಗೆ ಮಾದರಿಯಾಗಿದೆ.

¨ ಸಿ ಮರಿಜೋಸೆಫ್



ದನಿ ರೂಪಕ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲಿ ನನ್ನ ನಾಡು...
ವಾಲ್ಸ್ ಎಂಬ ಕಾದಂಬರಿಯಲ್ಲಿ ವೈಕೊಮ್ ಮುಹಮದ್ ಬಸೀರ್ ಎಂಬ ಲೇಖಕ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ:

೧. ನಾನು ಏಕೆ ಸ್ವತಂತ್ರನಾಗಿರಬೇಕು?

೨. ಯಾರಿಗೆ ಸ್ವಾತಂತ್ರ‍್ಯ ಬೇಕು?

ಕಾದಂಬರಿಕಾರ ಇಲ್ಲಿ ಸ್ವಾತಂತ್ರ್ಯದ ಅರ್ಥಹೀನತೆಯ ಬಗ್ಗೆ ಹೇಳುತ್ತಿದ್ದಾನೆ. ಪ್ರೀತಿ ರಹಿತ ಜಗತ್ತಿನಲ್ಲಿ ಅಥವಾ ದ್ವೇಷ ತುಂಬಿದ ಜಗತ್ತಿನಲ್ಲಿ ಸ್ವಾತಂತ್ರ್ಯದ ಬೆಲೆ ಏನು? ಒಂದು ಭ್ರಾತೃತ್ವದ ಸಮುದಾಯದಲ್ಲಿ ಮಾತ್ರ ಸ್ವಾತಂತ್ರ್ಯ ಮತ್ತು ಸಮಾನತೆಗಳಿಗೆ ಅರ್ಥವಿರುವುದು. ನಾವು ಪ್ರಂಚ್ ಕ್ರಾಂತ್ರಿಯ ಧ್ಯೇಯವಾಕ್ಯವನ್ನು ನೆನೆಸಿಕೊಳ್ಳುವುದು ಸೂಕ್ತ: ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ; ಇವುಗಳಲ್ಲಿ ಯಾವುದೂ ಪರಸ್ಪರ ಒಂದರಿಂದ ಬೇರ್ಪಡಿಸಲಾಗದು. 

ಕೊನೆಗೆ, ರವೀಂದ್ರನಾಥ ಠಾಕೂರರ ಕವಿತೆಯೊಂದಿಗೆ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧಗೊಳ್ಳೋಣ.

ಎಲ್ಲಿ ಮನಸ್ಸು ನಿರ್ಭಯವೋ, 

ಶಿರ ಎತ್ತರಕ್ಕೆ ನಿಮಿರಿ ನಿಂತಿದೆಯೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, 

ಎಚ್ಚರಗೊಳ್ಳಲಿ ನನ್ನ ನಾಡು

ಎಲ್ಲಿ ಜ್ಞಾನ ಸ್ವತಂತ್ರವೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, 

ಎಚ್ಚರಗೊಳ್ಳಲಿ ನನ್ನ ನಾಡು

ಎಲ್ಲಿ ಜಗತ್ತು ಸಂಕುಚಿತವಾದ

ಮನೆಗೋಡೆಗಳಿಂದ ಒಡೆದು

ಚೂರುಚೂರಾಗಿಲ್ಲವೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ 

ಎಚ್ಚರಗೊಳ್ಳಲಿ ನನ್ನ ನಾಡು

ಎಲ್ಲಿ ಮನಸ್ಸನ್ನು ನೀನು ಸತತ 

ವಿಸ್ತರಣಶೀಲ ವಿಚಾರ ಕ್ರಿಯೆಗಳಿಗೆ ಮುನ್ನಡೆಸುತ್ತೀಯೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, 

ಎಚ್ಚರಗೊಳ್ಳಲಿ ನನ್ನ ನಾಡು



“ನಿನಗೆ ವಯಸ್ಸು ಎಷ್ಟು?” 


ಮೊನ್ನೆ ನನ್ನ ತಂಗಿ ಮಗ ಕನ್ನಡ ಪಠ್ಯ ಪುಸ್ತಕವನ್ನು ತೆರೆದು, ನಾನು ಪಠ್ಯವನ್ನು ಓದುತ್ತೇನೆ, ನಾನು ಓದುವುದರಲ್ಲಿ ಲೋಪವಿದ್ದರೆ ದಯವಿಟ್ಟು ನನ್ನನ್ನು ತಿದ್ದಿ ಎಂದು ಹೇಳಿ ಓದಲು ಪ್ರಾರಂಭಿಸಿದ. ಪಾಠದ ಹೆಸರು ಬುದ್ಧಿವಂತ ಮುದುಕ. ಕಥೆಯು ತುಂಬ ಆಸಕ್ತಿಕರ ಎಂದೆನಿಸಿ ಇಲ್ಲಿ ಆ ಕಥೆಯ ಒಂದು ಭಾಗವನ್ನು ಹೇಳುತ್ತಿದ್ದೇನೆ:


ಒಮ್ಮೆ ರಾಜನು ಬೇಟೆ ಮುಗಿಸಿ ಹಿಂದಿರುಗುವಾಗ ವಿಶ್ರಾಂತಿ ಬಯಸಿ ದಾರಿಯಲ್ಲಿ ಕಂಡ ಒಂದು ಮನೆಗೆ ಬಂದ. ಅಲ್ಲಿ ಒಬ್ಬ ಮುದುಕ ಮಾವಿನ ಗಿಡವನ್ನು ನೆಟ್ಟು ಪಾತಿ ಮಾಡಿ ನೀರು ಹಾಕುತ್ತಿದ್ದ. ತನ್ನ ಇಳಿ ವಯಸ್ಸಿನಲ್ಲಿಯೂ ಕೆಲಸ ಮಾಡುತ್ತಿರುವನಲ್ಲಾ ಆ ಮುದುಕ ಎಂದು ಆಶ್ಚರ್ಯದಿಂದ “ನಿನಗೆ ವಯಸ್ಸು ಎಷ್ಟು?” ಎಂದು ಕೇಳಿದ. ಮುದುಕ “ನನಗೆ ಮೂರು ವರ್ಷ” ಎಂದು ಉತ್ತರಿಸಿದ. ತಕ್ಷಣ ದಂಡನಾಯಕ “ಇವರು ಯಾರು ಗೊತ್ತಾ? ಇವರು ಈ ನಗರದ ಮಹಾರಾಜರು. ತಲೆ ಹರಟೆ ಉತ್ತರ ನೀಡಬೇಡ. ಮಹಾರಾಜರ ಮುಂದೆ ಅಪಹಾಸ್ಯವೇ” ಎಂದು ಗದರಿಸಿದ. “ಅಪ್ಪ ನಾನು ಅಪಹಾಸ್ಯ ಮಾಡುತ್ತಿಲ್ಲ. ನಾನು ಸರಿಯಾದ ಉತ್ತರವನ್ನೇ ನೀಡಿದೆ” ಎಂದು ಮುದುಕ ಉತ್ತರ ಕೊಡಲು, ರಾಜನಿಗೆ ಕುತೂಹಲವಾಗಿ “ಏನು ಹಾಗೆಂದೆರೆ?” ಎಂದು ಪ್ರಶ್ನಿಸಿದ. ಮುದುಕ “ನಾನು ಮೂರು ವರ್ಷಗಳ ಹಿಂದಿನವರೆಗೂ ನನಗಾಗಿ, ನನ್ನ ಸಂಸಾರಕ್ಕಾಗಿ ನನ್ನ ಮಕ್ಕಳಿಗಾಗಿ ಜೀವನ ಮಾಡಿದ್ದೆ. ಕಳೆದ ಮೂರು ವರ್ಷಗಳಿಂದ ಸಮಾಜಕ್ಕಾಗಿ ಕೆಲಸ ಮಾಡುತ್ತಿರುವೆ. ಯಾವತ್ತಿನಿಂದ ಒಬ್ಬ ಮನುಷ್ಯ ಪರೋಪಕಾರದಲ್ಲಿ, ಸಮಾಜ ಸೇವೆಯಲ್ಲಿ ತೊಡಗುತ್ತಾನೋ ಅಂದಿನಿಂದ ಅವನ ವಯಸ್ಸು ಆರಂಭವಾಗುತ್ತದೆ. ಆದ್ದರಿಂದ ಈ ರೀತಿಯ ಕೆಲಸದಲ್ಲಿ ತೊಡಗಿ ಮೂರು ವರ್ಷವಾಯಿತು. ಅದಕ್ಕೆ ನನಗೆ ಈಗ ಮೂರು ವರ್ಷ ಎಂದು ಹೇಳಿದೆ” ಎಂದ.

ಬೈಬಲ್ ದನಿ


ಹದಿನೆಂಟು ವರ್ಷಗಳಿಂದ ನಡುಬೊಗ್ಗಿದ್ದ ಸ್ತ್ರೀ


¨  ಡಾ. ಲೀಲಾವತಿ ದೇವದಾಸ್


ದೊಂದು ಸಬ್ಬತ್ ದಿನ (ಯೆಹೂದ್ಯರಿಗೆ ಶನಿವಾರ). ಅದರಲ್ಲೂ ಸಭಾಮಂದಿರದ ಪವಿತ್ರ ಪರಿಸರ. ಯೇಸುಕ್ರಿಸ್ತರು, ತಾವು ಎಲ್ಲಿದ್ದರೂ ಸಬ್ಬತ್ ದಿನವನ್ನು ಮಾತ್ರ ಸಭಾಮಂದಿರದಲ್ಲಿ ಅಥವಾ ದೇವಾಲಯದಲ್ಲಿ ಕಳೆಯುವುದನ್ನು ತಪ್ಪಿಸುತ್ತಿರಲಿಲ್ಲ! ಅಂದು, ಸಭಾಮಂದಿರದಲ್ಲಿ ಅವರ ಉಪದೇಶಾಮೃತವೂ ಜನರಿಗೆ ದೊರಕಿತ್ತು.
ಸಭಾಮಂದಿರಗಳಲ್ಲಿಯೂ ದೇವಾಲಯದಲ್ಲೂ ಸ್ತ್ರೀಯರಿಗೆ ಹಾಗೂ ಯೆಹೂದ್ಯೇತರರಿಗೆ ಬೇರೆ ಬೇರೆ ವಲಯಗಳಿದ್ದು, ಅವರು ನೇರವಾಗಿ ಒಳವಲಯಗಳಿಗೆ ಕಾಲಿಡುವಂತಿರಲಿಲ್ಲ. ಹಾಗಾಗಿ, ಹದಿನೆಂಟು ವರ್ಷಗಳಿಂದ ರೋಗಿಷ್ಟಳಾಗಿ, ನಡು ಬೊಗ್ಗಿಹೋಗಿ, ?ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾಗದೆ ಇದ್ದ ಯೆಹೂದ್ಯ ಸ್ತ್ರೀಯೊಬ್ಬಳು ತನ್ನ ಸ್ಥಾನದಲ್ಲೇ ನಿಂತಿದ್ದು, ಭಯಭಕ್ತಿಯಿಂದ ಕ್ರಿಸ್ತರ ದಿವ್ಯಬೋಧನೆಯನ್ನು ತದೇಕಭಾವದಿಂದ ಕೇಳಿಸಿಕೊಳ್ಳುತ್ತಿದ್ದಳು. ಅವಳು ತಪ್ಪದೆ ಆರಾಧನೆಗೆ ಬರುತ್ತಿದ್ದರೂ, ಅವಳು, ತಾನು ವಾಸಿಯಾಗುತ್ತೇನೆಂಬ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿರಲಿಲ್ಲ. ಆದರೂ, ಈ ದಿನದಲ್ಲಿ ಮಾತ್ರ ಅವಳ ಹೃದಯದಲ್ಲಿ ಒಂದು ಅವ್ಯಕ್ತ ಆನಂದ ನೆಲೆಗೊಂಡಿತ್ತು!
ಯೆಹೂದ್ಯ ಗುರುಗಳು, ಸ್ತ್ರೀಯರನ್ನು ನೇರವಾಗಿ ನೋಡುತ್ತಿರಲಿಲ್ಲ. ದಾರಿಯಲ್ಲಿ ನಡೆಯುತ್ತಿರುವಾಗ ಯಾವ ಸ್ತ್ರೀಯನ್ನೂ ದೃಷ್ಟಿಸಬಾರದು ಎಂದು, ಕಣ್ಣುಗಳನ್ನು ಮುಚ್ಚಿಕೊಂಡು ನಡೆದು, ಅಲ್ಲಿನ ಗೋಡೆಗೆ ಹಣೆತಾಗಿಸಿಕೊಂಡು ಅಲ್ಲೆಲ್ಲಾ ಬುಗುಟುಗಳು ಏಳುತ್ತಿದ್ದವು! ಇನ್ನು, ಸ್ತ್ರೀಯರನ್ನು ಮಾತಾಡಿಸುವುದೂ ಮುಟ್ಟುವುದೂ ಅವರಿಗೆ ನಿಷಿದ್ಧವಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ!
ಆದರೆ, ನಮ್ಮ ಯೇಸುಕ್ರಿಸ್ತರು, ಯೆಹೂದ್ಯರ ಇಂಥಾ ಜಡ್ಡುಗಟ್ಟಿದ ಅಭ್ಯಾಸಗಳನ್ನು ಅಳಿಸಿಹಾಕಿ, ಸ್ತ್ರೀಯರಿಗೆ ಒಂದು ಸಮಾನಸ್ಥಾನ ಕೊಡುವ ಮಹಾಗುರುವಲ್ಲವೇ? ಅವರು, ಆ ರೋಗಿಷ್ಟ ಸ್ತ್ರೀಯನ್ನು ನೇರವಾಗಿ ನೋಡಿದರು. ಅಷ್ಟೇ ಅಲ್ಲ, ಅವಳನ್ನು ತಮ್ಮ ಹತ್ತಿರಕ್ಕೆ ಕರೆದರು. ಅವಳು, ಆ ಕರೆಗೆ ಓಗೊಡುವ ಮೊದಲು ಅನುಮಾನಿಸಿದಳು. ಯಾಕೆಂದರೆ, ಇದುವರೆಗೆ ಯಾವ ಸ್ತ್ರೀಯೂ ಗುರುಗಳು ಕೂಡುತ್ತಿದ್ದ ವಲಯಕ್ಕೆ ಕಾಲಿಟ್ಟಿದ್ದಿಲ್ಲ. ಕ್ರಿಸ್ತರ ದಿಟ್ಟ ಕರೆ ಮತ್ತೆ ಬಂದಾಗ, ಆ ಸ್ತ್ರೀ ಬಹಳ ಕಷ್ಟದಿಂದ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಮೆಲ್ಲನೆ ಅವರ ಬಳಿಗೆ ಬಂದಳು.
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಕ್ರಿಸ್ತಯೇಸುವು ಯೆಹೂದ್ಯರ ಮೂರು ನಿಬಂಧನೆಗಳನ್ನು ಮುರಿದಿದ್ದರು. ಈಗ, ಅವಳನ್ನು ಮಾತಾಡಿಸಿ, ಮತ್ತೊಂದು ನಿಯಮವನ್ನು ವಿರೋಧಿಸಿದ್ದರು. ಜೊತೆಗೆ, ಅವಳ ಮೇಲೆ ತಮ್ಮ ಕೈಗಳನ್ನಿಟ್ಟು, (ಐದು ನಿಬಂಧನೆಗಳು ಧೂಳೀಪಟವಾದವು!) “ಅಮ್ಮಾ, ನಿನಗೆ ರೋಗ ಬಿಡುಗಡೆಯಾಯಿತು?ಎಂದು ಅಧಿಕಾರಯುತವಾಗಿ ನುಡಿದರು. ಕೂಡಲೇ ಆ ಸ್ತ್ರೀ ನೆಟ್ಟಗಾದಳು, ತುಂಬು ಕೃತಜ್ಞತೆಯಿಂದ ಅವಳು ದೇವರನ್ನು ಕೊಂಡಾಡಿದಳು!
ಇದನ್ನು ನೋಡಿದ ಸಾಮಾನ್ಯ ಜನರು ತುಂಬಾ ಸಂತೋಷಪಟ್ಟರು. ಆದರೆ, ಕ್ರಿಸ್ತರ ಮೇಲೆ ಕತ್ತಿ ಮಸೆಯುತ್ತಿದ್ದ ಹಾಗೂ, ಇವರ ಬಗ್ಗೆ ಕೇಳಿಸಿಕೊಂಡು, ಅಸೂಯೆಯಿಂದ ಕುದಿಯುತ್ತಿದ್ದ, ಸಭಾಮಂದಿರದ ಅಧಿಕಾರಿಗಳಿಗೆ ಈ ಅದ್ಭುತ ಕಾರ್ಯವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ! ಒಬ್ಬ ಅಧಿಕಾರಿ, ಕೊಂಕು ತೆಗೆಯುತ್ತಾ ’ಇಂದು ಸಬ್ಬತ್ ದಿನ. ಈ ದಿನದಲ್ಲಿ ಯೇಸುವು ಒಬ್ಬ ಸ್ತ್ರೀಗೆ ಆರೋಗ್ಯ ತಂದನಲ್ಲಾ’ ಎಂದು ರೋಷಗೊಂಡರು. ಅವರನ್ನು ನೇರವಾಗಿ ಖಂಡಿಸಲು ಧೈರ್ಯಸಾಲದೆ, ಜನರಿಗೆ, ’ನಿಮಗೆ ಕೆಲಸಮಾಡಲು ಆರು ದಿನಗಳು ಇವೆಯಷ್ಟೆ, ಆ ದಿವಸಗಳಲ್ಲಿ ಬಂದು ವಾಸಿಮಾಡಿಕೊಳ್ಳಿರಿ, ಸಬ್ಬತ್ ದಿನದಲ್ಲಿ ಮಾತ್ರ ಬೇಡ’ ಎಂದು ಗದರಿಸಿದರು.
ಯೇಸುಸ್ವಾಮಿಯವರು ಸುಮ್ಮನಿರಲಿಲ್ಲ. ವಿರೋಧಿಗಳನ್ನು ಉದ್ದೇಶಿಸಿ, ’ನಿಮ್ಮ ಎತ್ತಿಗಾಗಲಿ ಕತ್ತೆಗಾಗಲಿ ನೀವು ಸಬ್ಬತ್ ದಿನದಂದು ಕೊಟ್ಟಿಗೆಯಿಂದ ಬಿಚ್ಚಿ, ನೀರುಕುಡಿಸಲು ಹಿಡಿದುಕೊಂಡು ಹೋಗುವುದಿಲ್ಲವೇ? ಹಾಗಾದರೆ, ಹದಿನೆಂಟು ವರ್ಷಗಳ ಕಾಲ ಸೈತಾನನು ಕಟ್ಟಿಹಾಕಿದ್ದ ಈ ಯೆಹೂದ್ಯ ಸ್ತ್ರೀಯನ್ನು ನಾನು ಸಬ್ಬತ್ ದಿನದಂದು ಆ ಕಟ್ಟಿನಿಂದ ಬಿಡಿಸಬಾರದೋ?’ ಎಂದು ಕಟುವಾಗಿ ಉತ್ತರನೀಡಿದಾಗ ಅವರೆಲ್ಲಾ ತಲೆ ತಗ್ಗಿಸಬೇಕಾಯಿತು!
ಈ ಅನನ್ಯ ಪ್ರಕರಣದಿಂದ ನಾವು ಕಲಿಯಬೇಕಾದ ಅಂಶಗಳೇನು?
ಅಷ್ಟು ವರ್ಷಗಳಿಂದ ರೋಗಿಷ್ಟೆಯಾಗಿ, ನಡು ಬೊಗ್ಗಿಹೋಗಿದ್ದ ಸ್ತ್ರೀಯೇ ಕ್ರಮವಾಗಿ ಆರಾಧನೆಗೆ ಬರುತ್ತಿರುವಾಗ, ನಾವೇಕೆ ಸಬ್ಬತ್ ದಿನದಲ್ಲಿ (ಭಾನುವಾರ) ದೇವಾಲಯಕ್ಕೆ ಕ್ರಮವಾಗಿ ಹೋಗಬಾರದು?
’”ನನ್ನನ್ನು ವಾಸಿಮಾಡು” ಎಂದು ಯಾಚಿಸದ ಸ್ತ್ರೀಗೆ ಕ್ರಿಸ್ತರ ಕೃಪೆ, ಕರುಣೆಗಳು ತಾವಾಗಿಯೇ ದೊರಕಿದವು! ಅವಳನ್ನು ಸ್ವಾಮಿಯವರು ತಮ್ಮ ಸಮೀಪಕ್ಕೆ ಕರೆಗಾಗ, ತನ್ನ ಆತ್ಮಕ್ಕೆ ಬೇಕಾದ ಬೋಧನೆ ಸಿಗುತ್ತದೆ ಎಂದು ಅವರ ಹತ್ತಿರ ಬಂದ ಸ್ತ್ರೀಗೆ ದೈಹಿಕ ಆರೋಗ್ಯವೂ ದಕ್ಕಿತು! ಹಾಗಾಗಿ, ಕ್ರಿಸ್ತರ ಕರೆಗೆ ನಾವೂ ಸ್ಪಂದಿಸಿ, ಅವರ ಸಾನ್ನಿಧ್ಯಕ್ಕೆ ಓಡೋಡಿ ಬರಬೇಕು.
ಅಂಥಾ ನೀಳಿತ ಕಾಯಿಲೆಯನ್ನು ನಿಮಿಷದಲ್ಲೇ ಗುಣಪಡಿಸಿದ ಯೇಸುಕರ್ತರ ಅಗಾಧಶಕ್ತಿಯನ್ನು ನಾವು ಕಂಡು ಬೆರಗಾಗುತ್ತೇವೆ. ನೇರವಾಗಿ ನಿಲ್ಲಲೂ ಆಗದಿದ್ದ ಅವಳನ್ನು ಅವರು ಹಿಡಿದೆತ್ತಿ ನೆಟ್ಟಗೆ ನಿಲ್ಲ್ಸಿದರು! ಹಾಗೆಯೇ, ನಮ್ಮ ಅಂಕುಡೊಂಕುಗಳನ್ನೂ ಅವರು ಸರಿಪಡಿಸುತ್ತಾರಲ್ಲವೇ?
ನಮಗೆ ದಕ್ಕಿದ ಕೃಪೆ, ಕರುಣೆಗಳಿಗಾಗಿ ನಾವು ದೇವರಿಗೆ ಕೃತಜ್ಞರಾಗಿದ್ದು ಅವರನ್ನು ಸ್ತುತಿಸಬೇಕು, ಕೊಂಡಾಡಬೇಕು. ಅವರ ಮಹಾಮಹಿಮೆಯನ್ನು ಸ್ತುತಿಸಬೇಕು.
ಇಲ್ಲಿ, ಮುಖ್ಯವಾಗಿ, ಯೇಸುಸ್ವಾಮಿಯವರು, ಇಡೀ ಸ್ತ್ರೀಸಮೂಹಕ್ಕೇ ತಮ್ಮ ದಿವ್ಯಸಂದೇಶವನ್ನು ನೀಡಿದ್ದಾರೆ! ನಾನಾ ದಮನಗಳಿಗೆ ಒಳಗಾಗಿ, ನಿಲ್ಲಲೂ ಆಗದ ಸ್ತ್ರೀಯರಿಗೆ ’ಏಳಮ್ಮಾ, ನೆಟ್ಟಗಾಗು’, ಎಂದು ಹೇಳುತ್ತಿದ್ದಾರೆ. ಸ್ತ್ರೀಯರ ಎಲ್ಲಾ ಬಂಧನಗಳಿಗೂ ಯೇಸುಕ್ರಿಸ್ತರ ಬಳಿ, ಬಿಡುಗಡೆ ದೊರಕುತ್ತದೆ! ಇದಕ್ಕೆ ಎಷ್ಟೇ ಕಪಟ ವಿರೋಧಿಗಳಿದ್ದರೂ, ಅವರ ಒಡಕು ಮಾತುಗಳಿಗೆ ಸೊಪ್ಪು ಹಾಕುವವರಲ್ಲ ನಮ್ಮ ಸ್ವಾಮಿ! ಆ ಜನರ ಎತ್ತು, ಕತ್ತೆಗಳಿಗಿಂತ ಸ್ತ್ರೀಯರು ಕೀಳಲ್ಲವಲ್ಲಾ!



ನನ್ನವರು…


ಅಳುವ ಮನಸ್ಸ
ಸಂತೈಸುವ
ಪ್ರತಿಯೊಬ್ಬರೂ ನನ್ನವರು
-------------
ನೋವಿಗೆ ನೂರೆಂಟು ಕಾರಣಗಳಿರಬಹುದು
ಆದರೆ ನೋವಿಗೆ ಸ್ಪಂದಿಸಲು ಇರುವ
ಕಾರಣ ಒಂದೇ: ಮನುಷ್ಯತ್ವ
-------------
ಪುಸ್ತಕದಲ್ಲಿದ್ದ ಸಾಲುಗಳು
ನನ್ನ ಪ್ರತಿಬಿಂಬಿಸುತ್ತಿತ್ತೋ ಏನೋ
ಓದಲು ಭಯವಾಗುತ್ತಿದೆ..
--------
ಬಡಿದು ಸಾಯಿಸುವುದರಿಂದ
ಉಳಿಯುವುದಿಲ್ಲ ಧರ್ಮ
ಉಳಿಯುವುದು ಪ್ರೀತಿಯ ಒರತೆಯಿಂದ
------------
ನಿನಗೆ ನಿನ್ನ ಧರ್ಮದವರು
ನಿನ್ನವರಾದರೆ ನನಗೆ
ಧರ್ಮವ ಮೀರಿದ ಪ್ರೀತಿಯ
ಬಿತ್ತುವವರೆಲ್ಲರೂ ನನ್ನವರು…


¨ ಜೀವಸೆಲೆ


ಹಿರೋಶಿಮಾ ದಿನ (ಆಗಸ್ಟ್ ೬)

೧೯೩೯ ರಲ್ಲಿ ಶುರುವಾದ ಎರಡನೇ ಮಹಾಯುದ್ಧವು ಆರು ವರ್ಷಗಳಾದರೂ ಅಂತ್ಯ ಕಂಡಿರಲಿಲ್ಲ. ನೇರ ಹಣಾಹಣಿ ಬಹುತೇಕ ನಿಂತಿದ್ದರೂ ಶೀತಲ ಸಮರ ಮುಂದುವರಿದೇ ಇತ್ತು. ಯುದ್ಧದಲ್ಲಿ ಮಿತ್ರರಾಷ್ಟ್ರಗಳು ಶತ್ರುರಾಷ್ಟ್ರಗಳು ಎಂಬ ಎರಡು ಬಣಗಳಿದ್ದವು. ಮಿತ್ರರಾಷ್ಟ್ರಗಳ ಪರ ಅಮೆರಿಕ ಸಂಯುಕ್ತ ಸಂಸ್ಥಾನ, ಬ್ರಿಟನ್, ಫ್ರಾನ್ಸ್, ಸೋವಿಯತ್ ಒಕ್ಕೂಟವು ಒಂದುಗೂಡಿ ಜರ್ಮನ್, ಇಟಲಿ ಮತ್ತು ಜಪಾನ್ ದೇಶಗಳ ವಿರುದ್ಧ ಮೀಸೆ ತಿರುವುತ್ತಿದ್ದವು. ಜಗತ್ತಿನಲ್ಲಿ ಹಿರಿಯಣ್ಣನಾಗುವ ಬಯಕೆಯಿಂದಾಗಿ ಉಭಯ ಬಣದ ಮುಂಚೂಣಿ ದೇಶಗಳು ಯುದ್ಧದಲ್ಲಿ ನೇರವಾಗಿ ಭಾಗಿಯಾಗದ ಹಾಗೂ ಯುದ್ಧದಿಂದ ಯಾವುದೇ ರೀತಿಯ ಲಾಭನಷ್ಟಗಳ ಸೋಂಕಿಲ್ಲದ ದೇಶಗಳನ್ನೂ ತಮ್ಮತ್ತ ಸೆಳೆದುಕೊಂಡಿದ್ದವು. ಅಭಿವೃದ್ಧಿಶೀಲರನ್ನು ಮೊಟಕಿ ಯುದ್ಧದಲ್ಲಿ ಮೇಲುಗೈ ಸಾಧಿಸಿ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳುವ ರಾಜ್ಯವಿಸ್ತರಣೆಯ ಅಮಲು ಎಲ್ಲರಲ್ಲೂ ಇತ್ತು. ಮಾನವತೆ, ಮಾನವಧರ್ಮ, ಆಲಿಪ್ತನೀತಿ, ವಿಶ್ವಶಾಂತಿ, ಅಹಿಂಸೆ ಮುಂತಾದ ಆದರ್ಶಗಳೆಲ್ಲಾ ಅಕ್ಷರಶಃ ಮಣ್ಣುಪಾಲಾಗಿದ್ದವು.
ತಮ್ಮ ಪಶ್ಚಿಮ ಕರಾವಳಿಯಿಂದ ಯುದ್ಧರಂಗಕ್ಕಿಳಿದಿದ್ದ ಅಮೆರಿಕನ್ನರು ಅಗಾಧ ವಿಸ್ತಾರದ ಶಾಂತಸಾಗರವನ್ನು ದಾಟಿಕೊಂಡು ಫಿಲಿಪ್ಪೀನ್ ಸಮುದ್ರದವರೆಗೂ ಬಂದಿದ್ದರು. ಇಷ್ಟು ದೂರ ಕ್ರಮಿಸುತ್ತಿದ್ದ ತಮ್ಮ ಯುದ್ಧವಿಮಾನಗಳಿಗೆ ಇಂಧನ ತುಂಬಿಸಿಕೊಳ್ಳಲು ಹಾಗೂ ಮಿಲಿಟರಿ ನೆಲೆ ಸ್ಥಾಪಿಸಲು ಸೂಕ್ತ ನಡುಗಡ್ಡೆಗಳನ್ನು ಅವರು ಹುಡುಕುತ್ತಿದ್ದರು. ಜಪಾನಿನ ದಕ್ಷಿಣಕ್ಕೆ ಸುಮಾರು ೧೫೦೦ ಕಿಲೋಮೀಟರುಗಳ ಅಂತರದಲ್ಲಿ ಗುವಾಮ್, ಸೇಪಾನ್ ಮತ್ತು ತಿನಿಯಾನ್ ನಡುಗಡ್ಡೆಗಳು ಅವರ ಕಣ್ಣಿಗೆ ಬಿದ್ದವು. ಆದರೆ ಆ ದ್ವೀಪಗಳು ಜಪಾನಿನ ಹಿಡಿತದಲ್ಲಿದ್ದವು.
೧೯೪೪ರ ಜೂನ್ ಹದಿನೈದನೇ ತಾರೀಕು, ಅಮೆರಿಕದ ಸೈನ್ಯ ಸೇಪಾನ್ ದ್ವೀಪವನ್ನು ಮುತ್ತಿಗೆ ಹಾಕಿತು. ದ್ವೀಪದಲ್ಲಿದ್ದ ೨೫೦೦೦ ಜಪಾನೀ ಸೈನಿಕರನ್ನು ಅತಿ ಸುಲಭದಲ್ಲಿ ಮಣಿಸಬಹುದೆಂದು ಅಂದಾಜಿಸಿದ್ದ ಅಮೆರಿಕನ್ ಸೈನ್ಯದ ಊಹೆ ತಪ್ಪಾಯಿತು. ಜಪಾನ್ ದೇಶವು ಗಾತ್ರದಲ್ಲಿ ಪುಟ್ಟದಾದರೂ ಜಪಾನ್ ಯೋಧರ ಅಪ್ರತಿಮ ದೇಶಭಕ್ತಿ ಹಾಗೂ ರಾಜಭಕ್ತಿ ತುಂಬಿದ್ದ ವೀರಾವೇಶದ ಹೋರಾಟದ ಮುಂದೆ ಅಮೆರಿಕ ಸಾಕಷ್ಟು ಬೆವರಿಳಿಸಬೇಕಾಯಿತು. ಅಮೆರಿಕದ ಬೋಯಿಂಗ್ ಬಿ-೨೯ ಯುದ್ಧವಿಮಾನಗಳು ಹಲವು ದಿನಗಳ ಕಾಲ ಈ ದ್ವೀಪದ ಸೇನಾ ನೆಲೆಗಳ ಮೇಲೆ ಬಾಂಬುಗಳನ್ನು ಹಾಕಿದ ಮೇಲೆಯೇ ಸೇಪಾನ್ ಕೈವಶವಾಗಿದ್ದು.
ತಿನಿಯಾನ್ ನಡುಗಡ್ಡೆಯ ಮೇಲೆ ಜುಲೈ ೨೪ರಂದು ದಾಳಿ ಶುರುವಾಗಿ ಆಗಸ್ಟ್ ಒಂದರಂದು ಅದು ಅಮೆರಿಕದ ತೆಕ್ಕೆಗೆ ಬಂದಿತು. ತಿನಿಯಾನ್ ಯುದ್ಧದಲ್ಲಿ ಮುನ್ನೂರು ಅಮೆರಿಕನ್ ಸೈನಿಕರು ಹಾಗೂ ಜಪಾನಿನ ಆರು ಸಾವಿರ ಯೋಧರು ಅಸುನೀಗಿದರು. ತಿನಿಯಾನ್ ಅನ್ನು ಅಮೆರಿಕವು ತನ್ನ ವಾಯುನೆಲೆಯಾಗಿ ಮಾಡಬಯಸಿತು. ಕೇವಲ ನೂರು ಚದರ ಕಿಲೊಮೀಟರುಗಳ ವಿಸ್ತೀರ್ಣದ ಆ ನಡುಗಡ್ಡೆಯಲ್ಲಿನ ಹವಳ ದಿಬ್ಬಗಳನ್ನು ಅಮೆರಿಕದ ನೂರಾರು ಬುಲ್ಡೋಜರುಗಳು ಕಡಿದು ಸಮತಟ್ಟು ಮಾಡಿದವು. ಎರಡೇ ತಿಂಗಳಲ್ಲಿ ಅಲ್ಲಿ ಆರು ಓಡುಹಾದಿ (ರನ್ವೇ) ಗಳ ನಿರ್ಮಾಣವಾಯಿತು. ಆ ಕಾಲಕ್ಕೆ ಅದು ಜಗತ್ತಿನ ಅತ್ಯಂತ ದೊಡ್ಡ ವಾಯುನೆಲೆಯಾಯಿತು. ವಿಶಾಲ ಸಾಗರದ ನಡುವೆ ಮೂರು ಕಿಲೋಮೀಟರು ಉದ್ದದ ಓಡುಹಾದಿಗಳು ಹಾಗೂ ಅವುಗಳ ಇಕ್ಕೆಲಗಳಲ್ಲಿ ನೂರಾರು ಲೋಹವಕ್ಕಿಗಳನ್ನು ಪಕ್ಷಿನೋಟಗಳಲ್ಲಿ ಕಂಡಾಗ ಒಂದು ಭಾರೀ ಯುದ್ಧವಿಮಾನವೊಂದು ಶಸ್ತ್ರಸಜ್ಜಿತವಾಗಿ ಯುದ್ಧಕ್ಕೆ ಹೊರಟಂತೆ ತೋರುತ್ತಿತ್ತು.
೧೯೪೫ ಫೆಬ್ರವರಿಯಲ್ಲಿ ಈ ದ್ವೀಪಗಳಿಂದ ಹೊರಟ ಯುದ್ಧವಿಮಾನಗಳು ೫೧ ಕಾರ್ಯಾಚರಣೆಗಳಲ್ಲಿ ಪಂಪ್ಕಿನ್ ಬಾಂಬ್ ಎಂಬ ಬಿ ವರ್ಗದ ಭಾರೀ ಸ್ಫೋಟಕಗಳನ್ನು ಜಪಾನಿನ ವಿವಿಧೆಡೆಗಳಲ್ಲಿ ಉದುರಿಸಿದವು. (ಪಂಪ್ಕಿನ್ ಬಾಂಬ್ ಎಂಬುದು ಸುಮಾರು ೨೮೫೦ ಕೆಜಿ ತೂಕದ ಕಾಂಕ್ರೀಟ್ ಗಟ್ಟಿ, ಅವನ್ನು ಸೇನಾನೆಲೆಗಳನ್ನು ಧ್ವಂಸಮಾಡಲು ಬಳಸಲಾಗುತ್ತದೆ, ಆದರೆ ಅಮೆರಿಕನ್ನರು ಬಳಸಿದ ಪಂಪ್ಕಿನ್ ಬಾಂಬುಗಳು ಸ್ಫೋಟಕಗಳನ್ನು ಹೊಂದಿದ್ದ ಲೋಹಕೋಶಗಳು)
ಯುದ್ಧ ನಡೆಯುತ್ತಿದ್ದ ಇದೇ ಸಂದರ್ಭದಲ್ಲಿ ಇತ್ತ ಅಮೆರಿಕದ ವಿಜ್ಞಾನಿಗಳು ವಿವಿಧ ಪ್ರಯೋಗಗಳಲ್ಲಿ ತೊಡಗಿ ದೇಶಕ್ಕೆ ಉಪಯುಕ್ತವಾಗಬಹುದಾದ ಅಪರಿಮಿತ ಅನ್ವೇಷಣೆಗಳ ಜನಕರಾಗಿದ್ದರು. ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದಕ್ಕಾಗಿ ಅಮೆರಿಕ ಸರ್ಕಾರವು ಧಾರಾಳ ಹಣಕಾಸಿನ ನೆರವು ನೀಡುತ್ತಿತ್ತು. ಅದೇ ವೇಳೆಯಲ್ಲಿ ಆಲ್ಬರ್ಟ್ ಐನ್ಸ್ಟೀನರ ಸಾಪೇಕ್ಷವಾದ ಹಾಗೂ ಶಕ್ತಿಮೂಲವಾದ (ಇ = ಎಂಸಿ ಸ್ಕ್ವೇರ್) ಗಳು ವಿಶ್ವದ ಗಮನ ಸೆಳೆದಿದ್ದವು.
ಅಗಾಧ ವೇಗದ ಕಾಯವೊಂದು ಅಷ್ಟೇ ವೇಗದ ಇನ್ನೊಂದು ಕಾಯಕ್ಕೆ ಡಿಕ್ಕಿಯಾದಾಗ ಅಲ್ಲಿ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆನ್ನುವುದು ಇ = ಎಂಸಿ ಸ್ಕ್ವೇರ್ ಸೂತ್ರದ ಸಾರಾಂಶ. ಅಗಾಧ ವೇಗದ ಗುಣ ಹೊಂದಿದ ಯುರೇನಿಯಂ ೨೩೫ ಎಂಬ ಖನಿಜದ ಅಣುಗಳನ್ನು ಪರಸ್ಪರ ಘಟ್ಟಿಸಿದರೆ ಅಪಾರ ಶಕ್ತಿ ಉದ್ಭವವಾಗುವುದು ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡರು. ಒಂದು ಲೆಕ್ಕಚಾರದ ಪ್ರಕಾರ ೨,೭೬,೦೦೦ ಕಿಲೋಗ್ರಾಂ ತೂಕದ ಕಲ್ಲಿದ್ದಲು ನೀಡಬಲ್ಲ ಶಾಖಶಕ್ತಿಯನ್ನು ಒಂದೇ ಒಂದು ಕಿಲೋಗ್ರಾಂ ಯುರೇನಿಯಂ ನಿಂದ ಪಡೆಯಬಹುದು ಅಂದಮೇಲೆ ಅಣು ಢಿಕ್ಕಿಯ ವಿಪರೀತ ಪರಿಣಾಮವನ್ನು ಊಹಿಸಿಕೊಳ್ಳಬಹುದು. ಈ ಶಾಖಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡು ಮಾನವ ಸ್ನೇಹಿಯಾಗಬಹುದು ಅಥವಾ ಬಾಂಬಿನಂತೆ ಸಿಡಿಸಿ ಮಾನವ ವಿನಾಶಕ್ಕೂ ಕಾರಣವಾಗಬಹುದು.
ಅಮೆರಿಕದ ಅಧ್ಯಕ್ಷರ ಗುಪ್ತ ಅಣತಿಯ ಮೇರೆಗೆ ಯುದ್ಧ ತಜ್ಞರು ಐನ್‌ಸ್ಟೀನ್ ಸೂತ್ರವನ್ನು ಬಳಸಿಕೊಂಡು ಅಂಥಾ ಒಂದು ಅಣುಬಾಂಬ್ ತಯಾರಿಗೆ ಆದ್ಯತೆ ಇತ್ತಿದ್ದರು. ಖಂಡಾಂತರಗಳ ವಿಸ್ತಾರ ಹೊಂದಿದ್ದ ವಿಶಾಲ ಶಾಂತಸಾಗರದ ನಿರ್ಜನ ನಡುಗಡ್ಡೆಯಲ್ಲಿ ಅತ್ಯಂತ ರಹಸ್ಯವಾಗಿ ಅಮೆರಿಕದ ಅಣು ವಿಜ್ಞಾನಿಗಳು ಪ್ರಯೋಗ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಆ ದ್ವೀಪ ಸಮುಚ್ಚಯವು ಮುಖ್ಯನೆಲದಿಂದ ಬಹುದೂರವಿದ್ದುದರಿಂದ ಯಾರಿಗೂ ಸುಲಭದಲ್ಲಿ ನಿಲುಕವಂತೆ ಇರಲಿಲ್ಲ. ಹಾಗಾಗಿ ಅಣುಬಾಂಬಿನ ಪ್ರಯೋಗಗಳು ನಿರಾತಂಕವಾಗಿ ನಡೆದಿದ್ದವು. ನಿರ್ಜನ ದ್ವೀಪಗಳಲ್ಲಿ ಸಾಗರತಳದಲ್ಲಿ ಅನೇಕ ಸಣ್ಣ ಪುಟ್ಟ ಪ್ರಯೋಗಗಳು ನಡೆದಿದ್ದವಾದರೂ ಬೃಹತ್ ಪ್ರಮಾಣದ ಪ್ರಯೋಗಕ್ಕೆ ರಂಗವಿನ್ನೂ ಅಣಿಯಾಗಿರಲಿಲ್ಲ. ಭಾರೀ ಬಾಂಬು ಬಹುತೇಕ ಸಿದ್ಧವಾಗಿದ್ದರೂ ಅದನ್ನು ರಣಾರಂಗದಲ್ಲಿ ಪ್ರಯೋಗ ಮಾಡಿರಲಿಲ್ಲ.
ಅಮೆರಿಕದ ಅಧ್ಯಕ್ಷರು ತಮ್ಮ ಸೇನೆಯ ಅಧಿಕಾರಿಗಳಿಂದ ಎಲ್ಲ ಮಾಹಿತಿ ಪಡೆಯುತ್ತಿದ್ದರು. ಜಪಾನಿನಂತ ಪುಟ್ಟ ದೇಶದ ಅಪ್ರತಿಮ ದೇಶಭಕ್ತಿಯ ವೀರಾಗ್ರಣಿ ಯೋಧರು ತಮ್ಮ ದೇಶದ ಯುವಸೈನಿಕರನ್ನು ಬಗ್ಗುಬಡಿಯುತ್ತಿರುವುದು ಅವರಿಗೆ ಚಿಂತೆಯಾಗಿ ಕಾಡಿತ್ತು. ಅಮೆರಿಕದ ಹೆಂಗಳೆಯರು ಸೈನ್ಯದಿಂದ ತಮ್ಮ ಮಕ್ಕಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಅಧ್ಯಕ್ಷರಿಗೆ ದಂಬಾಲು ಬಿದ್ದಿದ್ದರು. ಹೇಗಾದರೂ ಮಾಡಿ ಜಪಾನನ್ನು ಶರಣಾಗತಿಗೆ ದೂಡಬೇಕು ಹಾಗೂ ಆ ಮೂಲಕ ಅಮೆರಿಕವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಯುದ್ಧವನ್ನು ಕೊನೆಗಾಣಿಸಬೇಕು ಎಂದು ಅಮೆರಿಕ ತುಡಿಯತೊಡಗಿತು. ಅಧ್ಯಕ್ಷರು ತಮ್ಮ ಸೇನಾವಿಜ್ಞಾನಿಗಳಿಗೆ ಒಂದು ರಹಸ್ಯ ಸಂದೇಶವನ್ನು ರವಾನಿಸಿದರು.
ಅದು ೧೯೪೫ರ ಆಗಸ್ಟ್ ೬ನೇ ದಿನ. ಮುಂಜಾವದ ೨:೪೫ ರ ವೇಳೆ. ಅಗಸವಿನ್ನೂ ಕಪ್ಪಗಿತ್ತು. ಪರಿಸರು ನೀರವವಾಗಿತ್ತು. ಆದರೆ ಆ ಟಿನಿಯನ್ ದ್ವೀಪದ ವಾಯುನೆಲೆಯಲ್ಲಿ ಒಂದು ನಿಗೂಢ ಚಲನೆಯಿತ್ತು. ಕರ್ನಲ್ ಪಾಲ್ ಟಿಬ್ಬೆಟ್ಸ್‌ ನವರು ಎನೊಲಾ ಗೇ ಎಂಬ ತಮ್ಮ ಬಿ-೨೯ ಬಾಂಬರ್ ವಿಮಾನವನ್ನು ನೆಲದಿಂದ ಮೇಲಕ್ಕೆ ಚಿಮ್ಮಿಸಿದರು. ಅದರ ಸರಕುಗಳ ಅಟ್ಟಣಿಗೆಯಲ್ಲಿ ’ಲಿಟಲ್ ಬಾಯ್’ ಎಂಬ ಹತ್ತಡಿ ಉದ್ದ ಮೂರಡಿ ವ್ಯಾಸದ ಕಬ್ಬಿಣದ ಕೊಳಗವೊಂದು ಮಲಗಿತ್ತು. ಅದರ ಒಡಲೊಳಗಿನ ಉದ್ದನೆಯ ಕೊಳವೆಯಲ್ಲಿ ೬೪ ಕಿಲೋಗ್ರಾಮಿನಷ್ಟು ಯುರೇನಿಯಂ ಅಡಗಿತ್ತು. ವಿಮಾನ ಹಾರುತ್ತಾ ಮೆಲ್ಲಮೆಲ್ಲನೆ ವೇಗ ಹೆಚ್ಚಿಕೊಳ್ಳುತ್ತಾ ಹದಿನೈದು ನಿಮಿಷಗಳು ಕಳೆದಿದ್ದವು. ವಿಜ್ಞಾನಿ ಕ್ಯಾಪ್ಟನ್ ವಿಲಿಯಂ ಎಸ್ ಪಾರ್ಸನ್ ನವರು ಮೇಲೆದ್ದು ತಮ್ಮ ಸಲಕರಣೆಗಳೊಂದಿಗೆ ಕೆಲಸ ಶುರುಮಾಡಿಕೊಂಡರು. ಕೊಳಗದ ಬಾಗಿಲು ತೆರೆದು ತಣ್ಣಗೆ ಮಲಗಿದ್ದ ಬಾಂಬನ್ನು ಸಕ್ರಿಯಗೊಳಿಸುವ ಸಾಧನಗಳಲ್ಲಿ ಜೀವ ತುಂಬಿದರು. ಗಡಿಯಾರದ ಮುಳ್ಳುಗಳು, ವಿದ್ಯುತ್ ತಂತಿಗಳು, ಇಂಧನದ ಕೊಳವೆಗಳು ಮಿನಮಿನ ದೀಪಗಳು, ಗಾಳಿಯ ಕವಾಟಗಳು, ಕೀಲೆಣ್ಣೆಯ ನಳಿಕೆಗಳು, ಯಂತ್ರಗಳ ಚಕ್ರಗಳು ಚುರುಕಾದವು. ಎಲ್ಲವೂ ಸಜ್ಜಾಗಿ ಒಂಬತ್ತು, ಎಂಟು, ಏಳು, ಆರು ಎಂಬ ಇಳಿಯಣಿಕೆ ಶುರುವಾಯಿತು.
ಸೂರ್ಯೋದಯವಾಗಿ ಹೊತ್ತು ಮೇಲೇರಿತ್ತು. ಆಗ ಬೆಳಗಿನ ೭:೨೫ ರ ಸಮಯ ಹೊಳೆವ ನೀಲಾಗಸದಲ್ಲಿ ೨೬,೦೦೦ ಅಡಿಗಳ ಎತ್ತರದಲ್ಲಿ ಎನೊಲಾ ಗೇ ವಿಮಾನ ಹಾರುತ್ತಿತ್ತು. ವಿಮಾನ ಜಪಾನಿನ ಹಿರೋಶಿಮಾ ನಗರದ ಮೇಲೆ ಹಾರುತ್ತಿರುವಾಗ ಎಂಟುಗಂಟೆ ಹದಿನಾರು ನಿಮಿಷಕ್ಕೆ ಸರಿಯಾಗಿ ಇಳಿಯಣಿಕೆಯ ಘೋಷಣೆ ತಾರಕಕ್ಕೇರಿ “ಮೂರು, ಎರಡು, ಇನ್ನೇನು, ಈಗ” ಎನ್ನುತ್ತಿದ್ದ ಹಾಗೆಯೇ ವಿಮಾನದ ಪೈಲಟ್ ಕರ್ನಲ್ ಟಿಬ್ಬೆಟ್ಸ್ ನವರು ಕೀಲು ಎಳೆದರು. ಬಾಂಬು ತುಂಬಿದ್ದ ಕಬ್ಬಿಣದ ಕೊಳಗ ಸರಕ್ಕನೇ ಕೆಳಕ್ಕೆ ಜಿಗಿಯಿತು. ಅದರ ಚೂಪಾದ ಮೂತಿ ನೆಲದತ್ತ ಮುಖ ಮಾಡಿತ್ತು. ಹಿಂದಿನ ಬಾಲದ ಕಡೆ ಇದ್ದ ನಾಲ್ಕು ರೆಕ್ಕೆಗಳು ಕೊಳಗವು ಗಾಳಿಗೆ ಓಲಾಡದಂತೆ ಸ್ತಿಮಿತಕ್ಕೆ ತರುತ್ತಿದ್ದವು. ನೆಲದಿಂದ ೧೯೦೦ ಅಡಿ ಮೇಲಿರುವಾಗ ಅದರ ಅಂತರಾಳದ ಬಾಂಬಿಗೆ ಕಿಡಿ ತಗುಲಿತು. ಲೋಹದ ಕಾಯವಿನ್ನೂ ನೆಲ ತಲಪುವ ಮೊದಲೇ ಭಾರೀ ಶಬ್ದದೊಂದಿಗೆ ಬಾಂಬು ಸ್ಫೋಟಿಸಿ ಅಪಾರ ಪ್ರಮಾಣದ ಬೆಂಕಿಯನ್ನು ಹೊರಹಾಕಿತು. ೪೦೦೦ ಡಿಗ್ರಿ ಸೆಲ್ಷಿಯಸ್ ಇದ್ದ ಆ ಬೆಂಕಿಯ ತಾಪಕ್ಕೆ ಎಪ್ಪತ್ತು ಸಾವಿರ ಮಂದಿ ಇದ್ದಲ್ಲೇ ಸುಟ್ಟು ಬೂದಿಯಾದರು. ಸುತ್ತಲಿನ ಎಂಟು ಕಿಲೋಮೀಟರು ವ್ಯಾಪ್ತಿಯ ಎಲ್ಲ ಮನೆಗಳು, ಕಟ್ಟಡಗಳು, ಮರಗಿಡಗಳು, ಗುಡ್ಡಗಳು ಎಲ್ಲವೂ ನೆಲಸಮವಾಗಿ ಬಟಾಬಯಲಾದವು. ಭಾರಿ ಅಣಬೆಯಾಕಾರದ ಹೊಗೆಯ ಮೋಡ ಭುಗಿಲೆದ್ದಿತು.
ಬಾಂಬುಗಳ ದಾರ್ಢ್ಯತೆಯನ್ನು ಟಿಎನ್ಟಿ ಎಂದು ಅಳೆಯಲಾಗುತ್ತದೆ. ಒಂದು ಕೆಜಿಯಷ್ಟು ಟಿಎನ್ಟಿ ಆರುದ್ಧ ಆರಗಲ ಚದರಡಿಯ ಕೋಣೆಯ ಎಲ್ಲವನ್ನೂ ಧ್ವಂಸಗೊಳಿಸಬಲ್ಲದು. ಒಂದು ಕೆಜಿಯ ಸಾವಿರಪಟ್ಟು ಅಂದರೆ ಒಂದು ಟನ್ನು. ಅಂಥಾ ಇಪ್ಪತ್ತು ಸಾವಿರ ಟನ್ ಟಿಎನ್ಟಿ ಯ ಶಕ್ತಿಯನ್ನು ಹಿರೋಶಿಮಾ ಬಾಂಬು ಸಿಡಿಸಿತ್ತು. ತಕ್ಷಣವೇ ಭಸ್ಮವಾದ ಆ ಎಪ್ಪತ್ತು ಸಾವಿರ ಜನರೇ ಪುಣ್ಯವಂತರು. ಬಾಂಬಿನ ದುಷ್ಟರಿಣಾಮಗಳ ಪರಿವೆಯೇ ಇಲ್ಲದಂತೆ, ನೋವಿನ ಹಾಗೂ ಉರಿಯ ಅನುಭವವೇ ಆಗದಂತೆ ಒಂದೇ ಕ್ಷಣದಲ್ಲಿ ಅವರು ಪ್ರಾಣ ಕಳೆದುಕೊಂಡರು. ಆದರೆ ಅಣುಬಾಂಬ್ ಸಿಡಿದು ಒಂದು ತಿಂಗಳ ತನಕ ಹಿರೋಶಿಮಾ ಹೊತ್ತಿ ಉರಿಯಿತು. ನೋವಿನಿಂದ, ಉರಿಯಿಂದ, ಧಗೆಯಿಂದ, ಅನ್ನನೀರಿಲ್ಲದೆ, ಔಷಧೋಪಚಾರವಿಲ್ಲದೆ ನರಳಿ ನರಳಿ ಸತ್ತವರು ಸುಮಾರು ಎಂಬತ್ತು ಸಾವಿರ ಮಂದಿ. ಅವರಿಗೆ ಸಹಾಯ ಹಸ್ತ ನೀಡ ಹೋದವರೂ ಅಣುವಿನ ವಿಕಿರಣಕ್ಕೆ ಬಲಿಯಾಗಿ ವಿಲವಿಲ ಒದ್ದಾಡಿ ಸತ್ತರು.
_____________________________________________________________________
ತ್ಸುತೊಮು ಯಮಾಗುಚಿಯವರು ಮಿತ್ಸುಬಿಶಿ ಹೆವಿ ಇಂಡಸ್ಟ್ರಿಯ ನೌಕರ. ಅಂದು ಕಂಪೆನಿಯ ವ್ಯವಹಾರಕ್ಕಾಗಿ ಹಿರೋಶಿಮಾಗೆ ಬಂದು ಅತಿಥಿಗೃಹದಲ್ಲಿ ಮಲಗಿದ್ದರು. ಅವರಿದ್ದ ತಾಣ ಬಾಂಬು ಬಿದ್ದ ಮೂರು ಕಿಲೋಮೀಟರು ದೂರದಲ್ಲಿತ್ತು. ಒಮ್ಮೆಲೇ ಕಣ್ಣುಕೋರೈಸುವ ಬೆಳಕು ಅವರ ಕೋಣೆಯಲ್ಲಿ ಪ್ರಕಾಶಿಸಿತು. ಅವರು ಎಚ್ಚರಾಗಿ ಅದು ಮಿಂಚಿನ ಹೊಳಪು ಎಂದುಕೊಳ್ಳುತ್ತಿರುವಾಗಲೇ ಧಗೆಯುಂಟಾಗಿ ಬಾಂಬಿನ ಸಿಡಿತಲೆಯ ಬೆಂಕಿಯ ಶಾಖಕ್ಕೆ ಅವರ ಮೈಕೈಮುಖವೆಲ್ಲಾ ಸೀದುಹೋದವು. ತಲೆಗೂದಲೆಲ್ಲಾ ಸುಟ್ಟುಹೋದವು. ಕಿವಿ ಕಿವುಡಾಯಿತು. ಅಂಗೈ ಚರ್ಮ ಬಾತುಕೊಂಡಿತು. ಆದರೆ ಅದ್ಭುತಕರವಾಗಿ ಅವರು ಬದುಕುಳಿದರು. ಹತ್ತಿರದ ತುರ್ತು ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಾ ಒಂದು ರಾತ್ರಿ ಕಳೆದು, ಸುಮಾರು ಮುನ್ನೂರು ಕಿಲೋಮೀಟರು ದೂರದಲ್ಲಿದ್ದ ಅವರೂರಿಗೆ ನಡೆದುಕೊಂಡೇ ಹೋಗಿ ತಲಪಿದಾಗ ಅವರ ಹೆಂಡತಿ ಮಕ್ಕಳು ಅವರನ್ನು ಗುರುತು ಹಿಡಿಯಲೇ ಇಲ್ಲ.
ಅಂದು ಆಗಸ್ಟ್ ಒಂಬತ್ತರ ನಡುಹಗಲು. ತ್ಸುತೊಮುನವರು ಕಚೇರಿಗೆ ತೆರಳಿ ತಮ್ಮ ಅಧಿಕಾರಿಗಳಿಗೆ ವರದಿಯೊಪ್ಪಿಸುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಅವರ ಕಚೇರಿಯನ್ನು ಪ್ರಖರವಾದ ಬೆಳಕೊಂಡು ಆವರಿಸಿತು. ಹಿರೋಶಿಮಾದ ಬಾಂಬ್ ಭೂತ ತಮ್ಮನ್ನು ಅಟ್ಟಿಸಿಕೊಂಡು ಬಂತೆಂದು ತ್ಸುತೊಮುನವರು ಥರಥರಗುಟ್ಟಿ ನಡುಗಿಹೋದರು. ಈ ಸಲ ಅವರಿದ್ದ ಸ್ಥಳಕ್ಕೆ ಮೂರು ಕಿಲೊಮೀಟರು ದೂರದಲ್ಲಿದ್ದ ನಾಗಾಸಾಕಿ ಪಟ್ಟಣದ ಮೇಲೆ ಅಮೆರಿಕನ್ ಯುದ್ಧವಿಮಾನವು ಪ್ಲುಟೋನಿಯಂ ಅಣು ಬಾಂಬನ್ನು ಬೀಳಿಸಿತ್ತು. ಮತ್ತೆ ಸುಮಾರು ೩೫,೦೦೦ ಮಂದಿ ಸುಟ್ಟು ಬೂದಿಯಾದರು. ಆದರೆ ತ್ಸುತೊಮುನವರು ಈ ಸಾರಿಯೂ ಬದುಕುಳಿದಿದ್ದರು.
_____________________________________________________________________
ಅಣುಬಾಂಬ್ ಪ್ರಯೋಗವಾದ ಮೇಲೆಯೂ ಗುವಾಮ್, ಸೇಪಾನ್ ಮತ್ತು ತಿನಿಯಾನ್ ದ್ವೀಪಗಳಿಂದ ಅಮೆರಿಕವು ಜಪಾನಿನ ಮೇಲೆ ನಿರಂತರವಾಗಿ ದಾಳಿ ನಡೆಸಿತು. ಆಗಸ್ಟ್ ಹದಿನಾಲ್ಕರಂದು ನೂರಾರು ಬಿ-೨೯ ಬಾಂಬರ್ ವಿಮಾನಗಳು ಜಪಾನಿನ ಮೇಲೆ ಬಾಂಬುಗಳ ಸುರಿಮಳೆಗೈದವು. ಅದೇ ರಾತ್ರಿ ಜಪಾನ್ ರೇಡಿಯೋದ ಮೂಲಕ ಸಂದೇಶ ಬಿತ್ತರಿಸಿದ ಜಪಾನ್ ಚಕ್ರವರ್ತಿ ಹಿರೊಹಿಟೋ ನವರು “ನಮ್ಮ ದೇಶವು ಹಿರಿಯರು ಹಾಕಿಕೊಟ್ಟ ದೇಶಭಕ್ತಿಯ ಮಾರ್ಗದಲ್ಲಿ ನಡೆದು ತನ್ನ ನೆಲದ ಒಂದೊಂದು ಅಂಗುಲವನ್ನೂ ಕಳೆದುಕೊಳ್ಳಲಿಚ್ಛಿಸದೆ ಸ್ವಾಭಿಮಾನವನ್ನು ಪ್ರದರ್ಶಿಸಿದೆ. ಆದರೆ ಅತ್ಯಂತ ಕ್ರೂರವೂ ಅಮಾನುಷವೂ ಆದ ಬಾಂಬ್ ಪ್ರಯೋಗವು ನಮ್ಮ ಅಮಾಯಕ ಪ್ರಜೆಗಳ ಜೀವವನ್ನು ಹೊಸಕುತ್ತಿರುವುದರಿಂದ ನಮ್ಮ ಹೃದಯ ಬೆಂದಿದೆ. ಈ ತಕ್ಷಣದಿಂದ ನಾವು ಯುದ್ಧದಿಂದ ತಟಸ್ಥರಾಗೋಣ. ನಮ್ಮ ಪ್ರಜೆಗಳು ಬೇರೊಂದು ರೀತಿಯಲ್ಲಿ ಸಶಕ್ತ ಜಪಾನನ್ನು ಮರುನಿರ್ಮಿಸುವ ಮೂಲಕ ಮೃತರಾದ ಸಹಪ್ರಜೆಗಳಿಗೆ ಅಶ್ರುತರ್ಪಣ ನೀಡಲಿ. ಆ ಮೂಲಕ ವಿಶ್ವದೆಲ್ಲೆಡೆಯ ನಾಗರಿಕರು ಶಾಂತಿ ಸಹಬಾಳ್ವೆಯಿಂದ ಬಾಳುವಂತಾಗಲಿ” ಎಂದು ನುಡಿದರು. ಆ ಬಾನುಲಿ ಸಂದೇಶವನ್ನು ಇಂದಿಗೂ ’ಜುವೆಲ್ ವಾಯ್ಸ್ ಬ್ರಾಡ್‌ಕಾಸ್ಟಿಂಗ್’ ಎಂದು ಕರೆದು ಮರು ಬಿತ್ತರಿಸಲಾಗುತ್ತಿದೆ.
ಚಕ್ರವರ್ತಿಯ ಈ ಮಾತನ್ನು ಜಪಾನಿನ ಶರಣಾಗತಿ ಎಂದೇ ಬಿಂಬಿಸಲಾಗುತ್ತದೆ. ಆದರೆ ಅದು ವಿಶ್ವದ ಕ್ರೂರಮನಸುಗಳ ಮೇಲಿನ ದಿಗ್ವಿಜಯ ಎಂದೇ ನಾನು ಬಣ್ಣಿಸುತ್ತೇನೆ.
ಚಿಟಿಕೆಯಷ್ಟು ಯುರೇನಿಯಂ ಒಂದು ನಗರಕ್ಕೆ ಒಂದಿಡೀ ವರ್ಷಕ್ಕೆ ಬೇಕಾಗುವಷ್ಟು ವಿದ್ಯುತ್ತನ್ನು ಉತ್ಪಾದಿಸಬಲ್ಲದು. ಅದೇ ಚಿಟಿಕೆ ಯುರೇನಿಯಂ ಆ ನಗರವನ್ನು ಒಂದೇ ನಿಮಿಷದಲ್ಲಿ ಬಲಿ ತೆಗೆದುಕೊಳ್ಳಬಹುದು. ಇದೆಲ್ಲ ನಾವು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿದೆ. ಅಂದರೆ ಮನುಷ್ಯನ ಬುದ್ಧಿಶಕ್ತಿಯು ಕೆಡಕನ್ನು ಗೆದ್ದು ಒಳಿತನ್ನು ಸಾಧಿಸುವ ಕಡೆಗೆ ಹರಿಯಲಿ ಎಂಬುದೇ ಶಾಂತಿಪ್ರಿಯರ ಹಾರೈಕೆ. ಹಿರೋಶಿಮಾ ದಿನದ ಆಚರಣೆಯ ಹಿಂದಿನ ಧ್ವನಿಯೂ ಅದೇ ಆಗಿದೆ.
ಸಿ ಮರಿಜೋಸೆಫ್ -    


ಸ್ವರ್ಗಸ್ವೀಕೃತ ಮಾತೆ ಮರಿಯ



ಮಾನವ ಕುಲದ ಏಕೈಕ ರಕ್ಷಕ ಪ್ರಭು ಯೇಸುವಿನ ತಾಯಿ ಮರಿಯ. ಈಕೆಯನ್ನು ತ್ರೈಏಕ ದೇವರು ಆದಿಯಿಂದಲೇ ತಮ್ಮ ನಿಗೂಢ ರಕ್ಷಣಾ ಯೋಜನೆಯನ್ನು ಸಿದ್ಧಿಗೆ ತರಲು ವಿಶೇಷವಾಗಿ ಆಯ್ಕೆ ಮಾಡಿದ್ದರು. ಆ ಕಾರಣದಿಂದ ಆಕೆಗೆ ಜನ್ಮಪಾಪರಹಿತಳಾಗಿ ಜನ್ಮತಾಳುವ ಸೌಭಾಗ್ಯವನ್ನಿತ್ತರು. ಆಕೆಯು ದೈವಾನುಗ್ರಹದಿಂದ ತುಂಬಿದವಳಾಗಿ ತನಗಿತ್ತ ಆ ಆನಂತ ಸೌಭಾಗ್ಯವನ್ನು ದೇವರ ಅನುಗ್ರಹದಿಂದ ಅಂತಿಮ ಕ್ಷಣಗಳವರೆಗೂ ಕಾಪಾಡಿಕೊಂಡು ಪರಿಶುದ್ಧಳಾಗಿ ಜೀವಿಸಿದಳು ಹಾಗೂ ಮಾನವ ಕುಲಕ್ಕೆ ರಕ್ಷಣೆಯ ಬಾಗಿಲನ್ನು ತೆರೆಯಲು ದೇವರ ರಕ್ಷಣಾ ಯೋಜನಗೆ "ತಥಾಸ್ತು" ಎಂದಳು. 

ಅದಕ್ಕಾಗಿ ಆಕೆಯು ತನ್ನ ಲೌಕಿಕ ಆಸೆ ಆಕಾಂಕ್ಷೆಗಳೆಲ್ಲವನ್ನೂ ಬಿಟ್ಟು ಆ ಪವಿತ್ರ ಯೋಜನೆಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ದೇವರ ಅಪಾರ ಮೆಚ್ಚಿಗೆಗೆ ಪಾತ್ರಳಾದ ದೀನ ಹಾಗೂ ಧೀರ ಮಹಿಳೆ. ಆಕೆಯು ತನ್ನ ಯೆಹೂದ್ಯ ಧರ್ಮದ ಸತ್ಯಗಳನ್ನು ಅರಿತು ಧ್ಯಾನಿಸಿ ದೇವರ ಚಿತ್ತಕ್ಕೆ ಅನುಗುಣವಾಗಿ ಜೀವಿಸುತ್ತ ಸದ್ಗುಣಗಳ ಆಗರವಾಗಿದ್ದಳು. ನಿತ್ಯವೂ ಸದ್ಗುಣ ಸಂಪನ್ನಳಾಗಿ, ದೀನತೆಯ ಶಿಖರವಾಗಿ ಬೆಳೆಯುತ್ತಿದ್ದಳು. ದೇವರಲ್ಲಿ ಅಪಾರ ವಿಶ್ವಾಸವುಳ್ಳವಳಾಗಿ, ಸದೃಢವಾಗಿ ನೆಲೆನಿಂತಿದ್ದಳು. ಧಾರ್ಮಿಕ ವಿಷಯಗಳಲ್ಲಿ ನುರಿತವಳಾಗಿದ್ದಳು ಹಾಗೂ ಧಾರ್ಮಿಕತೆಯನ್ನು ರೂಢಿಸಿಕೊಳ್ಳುವುದರಲ್ಲಿ ಅಪಾರ ಆಸಕ್ತಿಯುಳ್ಳವಳಾಗಿದ್ದಳು. ಹಾಗೆಯೇ ತನ್ನ ಪ್ರೀತಿಯ ತಂದೆ ತಾಯಿಯರಾದ ಅನ್ನ ಮತ್ತು ಜೋವಾಕಿಮರಿಗೆ ವಿಧೇಯಳಾಗಿ ತನ್ನ ಸುತ್ತಮುತ್ತಲಿನವರಿಗೂ ಅಚ್ಚುಮೆಚ್ಚಿನ ಹಿತೈಷಿಯಾಗಿದ್ದಳು. 



ತ್ರೈಏಕ ದೇವರ ರಕ್ಷಣಾ ಯೋಜನೆಯಲ್ಲಿ ಮರಿಯಳ ಪಾತ್ರ ಅಪಾರವಾದುದು. ಹೆಜ್ಜೆಹೆಜ್ಜೆಗೂ ಕಷ್ಟದುಃಖಗಳ ಸುರಿಮಳೆಯೇ ಎದುರಾದರೂ ಕೆಚ್ಚೆದೆಯಿಂದ ಹಿಂದೆ ನೋಡದೆ ಮುಂದೆ ಸಾಗಿದ ವೀರ ವನಿತೆಯವಳು. ಹದಿವಯಸ್ಸಿನಲ್ಲಿಯೇ ಸಂಕಷ್ಟದ ಸುಳಿಯಲ್ಲಿ ಸಿಲುಕಿ ನಲುಗಿದರೂ ವಿಶ್ವಾಸದ ದೀವಿಗೆಯನ್ನು ಪ್ರಜ್ವಲಿಸುತ್ತಲೇ ಸಾಗಿದ ಧೀಮಂತ ಮಹಿಳೆ. ಈಕೆಯು ಮಾನವ ಸಂಸರ್ಗವಿಲ್ಲದೆ ಪವಿತ್ರಾತ್ಮರ ವರದಾನದಿಂದ ಮಾನವ ಕುಲದ ರಕ್ಷಕ ಪ್ರಭು ಯೇಸುವನ್ನು ಉದರದಲ್ಲಿ ಧರಿಸಿದವರು (ಲೂಕ೧:೨೬-೩೮). ಅಂದಿನ ಯೆಹೂದ್ಯ ಧರ್ಮದ ಧಾರ್ಮಿಕ ಪದ್ದತಿಯಂತೆ ಮದುವೆಗೆ ಮುನ್ನ ಗರ್ಭದರಿಸಿದರೆ ಅಂತಹ ಮಹಿಳೆಯನ್ನು ಅಕೆಯ ಮನೆಯ ಮುಂದೆ ತಂದೆಯ ಎದುರಲ್ಲಿ ಕಲ್ಲುಗಳಿಂದ ಹೊಡೆದು ಕೊಲ್ಲುತ್ತಿದ್ದರು. ಇದರ ಅರಿವು ಮರಿಯಳಿಗಿತ್ತು (ಧರ್ಮೋ ೨೨:೨೦). ಆದರೂ ದೇವರ ಮೇಲೆ ಅಪಾರ ಭರವಸೆ ಇಟ್ಟು ದೈವ ಯೋಜನೆಗೆ ದಿಟ್ಟತನದಿಂದ ಶಿರಬಾಗುತ್ತಾಳೆ. ಇದು ಆಕೆಯ ಪರಿಪೂರ್ಣ ವಿಶ್ವಾಸಕ್ಕೆ ಹಿಡಿದ ಕನ್ನಡಿಯಾಗಿದೆ. 

ಜೋಸೆಫ ಮರಿಯಳಿಗೆ ದೇವರಿಂದ ಆಯ್ಕೆಯಾದ ಪತಿ. ಅವನ ಪ್ರಾಮಾಣಿಕ ಬದುಕು, ಪಾರದರ್ಶಕ ಜೀವನ ಮತ್ತು ಸರಳ ಸಜ್ಜನಿಕೆ ಮಾನವಕುಲಕ್ಕೆ ವರದಾನ. ಅವನಆದರ್ಶ ಬದುಕು ಮಾನವಕುಲಕ್ಕೆ ದಿಕ್ಸೂಚಿ. ಜೋಸೆಫ ಮತ್ತು ಮರಿಯಳ ಕೌಟುಂಬಿಕ ಜೀವನ ಯುಗಯುಗಕ್ಕೂ ಮೆಚ್ಚುವಂತದ್ದೇ. ಲೋಕರಕ್ಷಕ ಪ್ರಭು ಯೇಸು ಜನಿಸಲು ಒಂದು ವ್ಯವಸ್ಥಿತವಾದ ಸ್ಥಳ ಸಿಗದಿದ್ದಾಗಲೂ ಅವರು ದೇವರನ್ನು ದೂರಲಿಲ್ಲ. ಜೆರುಸಲೇಮಿನಿಂದ ಕೆಲವೇ ಮೈಲಿಗಳ ದೂರದಲ್ಲಿರುವ ಬೆತ್ಲಹೇಮಿನ ಪುಟ್ಟ ಗವಿಯಲ್ಲಿದ್ದ ದನಗಳ ಕೊಟ್ಟಿಗೆಯಲ್ಲಿಲೋಕರಕ್ಷಕ ಜನಿಸಿದರು (ಲೂಕ ೨:೧-೭). ಆಗ ಅವರು ಧೃತಿಗೆಡಲಿಲ್ಲ ಗೊಣಗಲೂ ಇಲ್ಲ ಹಾಗೂ ತಮ್ಮ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ, ಯಾರ ಮೇಲೂ ತಪ್ಪು ಹೊರಿಸಲಿಲ್ಲ. ಅಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಸ್ಥಿರಚಿತ್ತದಿಂದಿದ್ದು ದೇವರಲ್ಲಿ ತಮಗಿದ್ದ ಅಪಾರ ಭರವಸೆ ಮತ್ತು ವಿಶ್ವಾಸವನ್ನು ತಮ್ಮ ಜೀವನ ಶೈಲಿಯಲ್ಲಿ ವ್ಯಕ್ತಪಡಿಸಿದರು. 

"ಏಳು, ಹೆರೋದರಸನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ, ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು. ನಾನು ಪುನಃಹೇಳುವ ತನಕ ಅಲ್ಲೇ ಇರು" (ಮತ್ತಾಯ ೨:೧೩) ಎಂದಾಗ ದೈವಯೋಜನೆಗೆ ತಲೆಬಾಗಿ ರಾತ್ರೋರಾತ್ರಿ ಪುಟ್ಟಕಂದನನ್ನು ಹೊತ್ತು ಹಗಲುರಾತ್ರಿ ಎನ್ನದೆ ಆ ಗುಡ್ಡಗಾಡಿಲ್ಲಿ ಪಯಣಿಸುವಾಗಲೂ ಅವರ ವಿಶ್ವಾಸ ಕುಂದಲಿಲ್ಲ ಹಾಗೂ ಅವರು ದೇವರ ಸನ್ನಿಧಿಯಿಂದ ಕದಲಲಿಲ್ಲ. ಪ್ರತಿಯೊಂದು ಕಷ್ಟವೂ ಅವರ ವಿಶ್ವಾಸದ ಪ್ರಗತಿಗೆ ಭರವಸೆಯ ಮೆಟ್ಟಲುಗಳಾಗಿದ್ದವು. ಯಾವಾಗಲೂ ಅವರ ಹೃದಯದಲ್ಲಿ ದೈವೀ ಪ್ರಸನ್ನತೆ ಮನೆಮಾಡಿತ್ತು. ನಜರೇತಿನಲ್ಲಿ ಬೆಳೆಯುತ್ತಿದ್ದ ಪ್ರಭು ಯೇಸುಕ್ರಿಸ್ತ ಹನ್ನೆರಡು ವರ್ಷದವನಿರುವಾಗಲೇ ತಂದೆಯ ಕಾರ್ಯದಲ್ಲಿ ನಿರತನಾಗಲು ಪ್ರಾರಂಭಿಸಿದ (ಲೂಕ ೨:೪೬) ಅವನ ನಡೆನುಡಿ ಹಾಗೂ ವಿಚಾರಲಹರಿಗಳು ತಂದೆ-ತಾಯಿಯರಿಗೆ ಸೋಜಿಗವನ್ನು ತಂದಿತ್ತು. ಜನರಲ್ಲಿ ಹಲವರು ಆಶ್ಚರ್ಯವನ್ನು ವ್ಯಕ್ತಪಡಿಸಿದರೆ ಹಲವರು ಕುಹಕವನ್ನಾಡಲು ಪ್ರಾರಂಭಿಸಿದರು. ಆದರೆ ಜೋಸೆಫ ಮತ್ತು ಮರಿಯ ಮಾತ್ರ ಮೌನವಾಗಿ ದೈವ ಯೋಜನೆಗೆ ಸಂಪೂರ್ಣವಾಗಿ ತಲೆ ಬಾಗಿದ್ದರು. ಪ್ರಭು ಯೇಸುಕ್ರಿಸ್ತನ ರಕ್ಷಣಾ ಯೋಜನೆಯ ಪ್ರತಿ ಹಂತದಲ್ಲೂ ಮಾತೆಯು ಅವರಿಗೆ ಆಸರೆಯಾಗಿ, ವಿಶ್ವಾಸದ ಗಣಿಯಾಗಿ, ಆದರ್ಶಮಾತೆಯಾಗಿ ಜೊತೆಜೊತೆಯಲ್ಲೇ ಇದ್ದರು. 



ಪ್ರಭು ಯೇಸುಕ್ರಿಸ್ತರು ವಯಸ್ಕರಾದ ಮೇಲೆ ವಿಭಿನ್ನವಾಗಿ ಬೋಧಿಸಲು ಪ್ರಾರಂಭಿಸಿದರು. ಅವರ ಬೋಧನೆ ಯೆಹೂದ್ಯ ಧಾರ್ಮಿಕ ಮುಖಂಡರಿಗೆ ಕಿರಿಕಿರಿ ಉಂಟುಮಾಡಿತು.ಅವರು ಪ್ರಭುವನ್ನು ಮುಗಿಸಿಬಿಡಲು ಯೋಜನೆ ರೂಪಿಸಿ ಸಫಲರಾದರು. ಶಿಲುಬೆಯ ಘೋರ ಮರಣದ ವೇಳೆಯಲ್ಲಿಯೂ ಶಿಲುಬೆಯ ಬುಡದಲ್ಲಿ ಮೌನವಾಗಿ ನಿಂತು ದೇವರ ಯೋಜನೆ ಪೂರ್ಣಗೊಳ್ಳಲು ಸಕ್ರಿಯವಾಗಿ ಸಹಕರಿದ ಮಹಾ ಮಹಿಳೆ ಮರಿಯ. ಪ್ರಭುವಿನ ಶಿಲುಬೆಯ ಮರಣದ ನಂತರ ಪ್ರಭುವಿನ ಜೀವನಕ್ಕೆ ಸಾಕ್ಷಿಗಳಾಗಿದ್ದ ಪ್ರೇಷಿತರು ದಿಕ್ಕುತೋಚದೆ ಚದುರಿ ಹೋಗುವುದರಲ್ಲಿದ್ದಾಗ ಮರಿಯಾ ಮಾತ್ರ ತನ್ನ ನಂಬಿಕೆಗೆ ಕುಂದು ಬರದಂತೆ ಬಂಡೆಯಂತೆ ಸ್ಥಿರವಾಗಿದ್ದು ಪ್ರಭುವಿನ ಪ್ರೇಷಿತರನ್ನು ಒಟ್ಟುಗೂಡಿಸಿ ಸಾಂತ್ವನ ನೀಡಿ ಅವರ ಮುದುಡಿದ ಮನಗಳು ಚೇತರಿಸಿಕೊಳ್ಳುವಂತೆ ಹುರಿದುಂಬಿಸಿದಳು. ಅವರು ವಿಶ್ವಾಸವನ್ನು ಕಳೆದುಕೊಳ್ಳದಂತೆ ಅವರೊಡನೆ ವಿನಯದಿಂದ ಪ್ರಾರ್ಥಿಸಿದಳು. 

ಪ್ರೇಷಿತರು ಪವಿತ್ರಾತ್ಮರ ಆಗಮನದಿಂದ ಭೂಷಿತರಾಗಿ ಸ್ವರ್ಗಸಾಮ್ರಾಜ್ಯದ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ (ಪ್ರೇ. ಕಾ. ೨: ೧-೧೩) ಅವರೊಡನಿದ್ದು ಅವರ ಕಷ್ಟ-ದುಃಖದಲ್ಲಿ ನೆರವಾಗಿ ಧರ್ಮಸಭೆಯ ಪ್ರಗತಿಗೆ ನಾಂದಿಯಾದರು. ಆ ಕಾರಣ ಧರ್ಮಸಭೆಯು ಫಲಭರಿತವಾಗಿ ಬೆಳೆಯತೊಡಗಿತು. ಅದನ್ನು ಪ್ರೇಷಿತರ ಕಾರ್ಯಕಲಾಪವು ಹೀಗೆ ವಿವರಿಸುತ್ತದೆ. "ಅಂದಿನಿಂದ ಅವರು (ಧರ್ಮಸಭೆ) ಪ್ರೇಷಿತರ ಬೋಧನೆಯನ್ನು ಕೇಳುವುದರಲ್ಲಿ ನಿರತರಾಗಿದ್ದರು; ಅನ್ಯೋನ್ಯವಾಗಿ ಬಾಳುತ್ತಿದ್ದರು; ರೋಟ್ಟಿ ಮುರಿಯುವ ಸಹಭೋಜನದಲ್ಲಿ ಪಾಲ್ಗೊಳ್ಳುತ್ತಿದ್ದರು ಹಾಗೂ ಪ್ರಾರ್ಥನಾಕೂಟಗಳಲ್ಲಿ ಭಾಗವಹಿಸುತ್ತಿದ್ದರು" (೧೪:೪೨). 

ಮಾತೆ ಮರಿಯಳ ಜೀವನದುದ್ದಕ್ಕೂ ಕಷ್ಟಗಳ ಸುರಿಮಳೆಯೇ ಹಾಸುಹೊಕ್ಕಾಗಿತ್ತು ಆದರೂ ಆಕೆ ದೈವ ಯೋಜನೆಗೆ ಶರಣಾಗಿ ತನ್ನ ವಿಶ್ವಾವನ್ನು ಬಂಡೆಯಂತೆ ಸಶಕ್ತಗೊಳಿಸಿ, ಆ ವಿಶ್ವಾಸದ ದೀವಿಗೆಯ ಪ್ರಖರವಾಗಿ ಪ್ರಜ್ವಲಿಸುವಂತೆ ತನ್ನನ್ನೇ ಸಮರ್ಪಿಸಿಕೊಂಡಿದ್ದಳು. ಅಂತಹ ಧೀರ ಮಹಿಳೆ ಸಂತೃಪ್ತಿಯ ಜೀವನವನ್ನು ಮುಗಿಸಿ ಪರಂಪರೆಯ ನಂಬಿಕೆಯಂತೆ ಸುಮಾರು ಕ್ರಿಸ್ತಶಕ ೪೧ರಲ್ಲಿ ಪ್ರೇಷಿತರ ಸಮ್ಮುಖದಲ್ಲಿ ಮರಣವನ್ನು ಹೊಂದಿದ ನಂತರ ದೇವಾನುಗ್ರಹದಿಂದ ಶರೀರಾತ್ಮಗಳೊಡನೆ ದೇವರ ಅನಂತ ನಿವಾಸವನ್ನು ಸೇರಿದಳು. (The immaculate Mother of God, the ever Virgin Mary, having completed the course of her earthly life, was assumed body and soul into heavenly glory - Pius XII Munificentissimus Deus 44). ಅಲ್ಲಿ ಅವರು ತ್ರೈಏಕದೇವರ ಸಮ್ಮುಖದಲ್ಲಿ ನಿರಂತರವೂ ಪರಿಪೂರ್ಣ ಸಂತೋಷದ ಹೊನಲಿನಲ್ಲಿ ಮಿಂದು, ತೇಲುತ್ತಾ ಆ ಸವಿಯನ್ನು ನಾವೂ ಸಹ ಅನುಭವಿಸಲು ಅನುವಾಗುವಂತೆ ನಮಗಾಗಿ ಪ್ರಾರ್ಥಿಸುತ್ತಿದ್ದಾಳೆ. 

ನಮ್ಮ ಮುಕ್ತಿಗಾಗಿ ತನ್ನನ್ನು ಸಮರ್ಪಿಸಿಕೊಂಡು ಲೋಕ ರಕ್ಷಕರನ್ನು ನೀಡಿದ ಆ ವೀರ ವನಿತೆ ದೇವಾನುಗ್ರಹದಿಂದ ಶರೀರಾತ್ಮಗಳೊಡನೆ ಸ್ವರ್ಗದಲ್ಲಿ ರಾರಾಜಿಸುತ್ತಿದ್ದಾಳೆ. ಇದು ನಮ್ಮ ವಿಶ್ವಾಸದ ಪರಮ ಸತ್ಯಗಳಲ್ಲಿ ಒಂದು. ಮಾತೆಯು ದೇವಾನುಗ್ರಹದಿಂದ ಶರೀರಾತ್ಮಗಳೊಡನೆ ಸ್ವರ್ಗ ಸ್ವೀಕೃತಳಾದುದರ ಬಗ್ಗೆ ಪ್ರಾಯಶಃ ಎರಡನೇ ಅಥವ ಮೂರನೇ ಶತಮಾನದಲ್ಲಿ ರಚಿತವಾಗಿರುವ "Transitus Mariae" (The Crossing Over of Mary) ಮತ್ತು ನಾಲ್ಕನೇ ಶತಮಾನದಲ್ಲಿ ರಚಿಸಲಾದ Deus Liber Requiel Maria (The Book of Mary's Repose) ಎಂಬ ಪುಸ್ತಕಗಳಲ್ಲಿ ವಿವರಣೆಯನ್ನು ಕಾಣಬಹುದು. ಆದರೆ ಈ ಪರಮ ಸತ್ಯವು ಪೂರ್ವದ ಧರ್ಮಸಭೆಯಲ್ಲಿ ಹಿಂದಿನಿಂದಲೇ ಪ್ರಚಲಿತದಲ್ಲಿತ್ತು. ಪಶ್ಚಿಮದ ಧರ್ಮಸಭೆ ಅದನ್ನು ಮುಕ್ತವಾಗಿ ಅಂಗಿಕರಿಸಿರಲಿಲ್ಲ. ೧೩ನೇ ಶತಮಾನದಲ್ಲಿ ಆ ಸತ್ಯ ಎಲ್ಲೆಡೆ ಹರಡಿತು. ಅಂದಿನಿಂದ ಈ ಹಬ್ಬವನ್ನು The Feast of Saint Mary the Virgin, Mother of our Lord Jesus Christ and the Falling Asleep of the Blessed Virgin Mary-the Dormition ಎಂಬ ವಿವಿಧ ಹೆಸರುಗಳಿಂದ ಆಚರಿಸುತ್ತಿದ್ದರು. 

ದೈವಶಾಸ್ತ್ರಜ್ಞರು ಈ ಪರಮ ಸತ್ಯವನ್ನು ವಿವಿಧ ಆಯಾಮಗಳಲ್ಲಿ ಚರ್ಚಿಸಿದರು. ಮೇ ೧೯೪೬ರಲ್ಲಿ ಈ ಪರಮ ಸತ್ಯವನ್ನು ವ್ಯಾಖ್ಯಾನಿಸಲು ವಿಶ್ವಗುರು ೧೨ನೇ ಪಯಸ್‌(೧೨ನೇ ಭಕ್ತಿನಾಥರು) ನವರು Deiparae Virginis Mariae ಎಂಬ ವಿಶ್ವಪರಿಪತ್ರವನ್ನು ಹೊರಡಿಸಿ ವಿಶ್ವದ ಎಲ್ಲಾ ಧರ್ಮಾಧ್ಯಕ್ಷರುಗಳನ್ನು ದೈವಶಾಸ್ತ್ರಜ್ಞರುಗಳನ್ನು ಮತ್ತು ಶ್ರೀಸಾಮಾನ್ಯರನ್ನು ಚರ್ಚೆಗೆ ಅಹ್ವಾನಿಸಿದರು. ಇದರಲ್ಲಿ ೧,೧೮೧ ಮಂದಿ ಭಾಗವಹಿಸಿದ್ದರು. ಅದರಲ್ಲಿ ೬ ಜನರು ಮಾತ್ರ ತಮ್ಮ ಬೆಂಬಲವನ್ನು ನೀಡಲು ಹಿಂಜರಿದರು. ಅಂತಿಮವಾಗಿ ನವಂಬರ್ ೧, ೧೯೫೦ರಲ್ಲಿ ವಿಶ್ವಗುರು ೧೨ನೇ ಪಯಸ್‌ರವರು ತಮ್ಮ ಪ್ರೇಷಿತ ಸಂವಿಧಾನ "Munificentissimus Deus" (Most Bountiful God =ಕೊಡುಗೈದಾನಿ ದೇವರು In the Apostolic constitution) ನಲ್ಲಿ “ಮಾತೆ ಮರಿಯಮ್ಮ ದೈವಾನುಗ್ರಹದಿಂದ ತನ್ನ ಲೌಕಿಕ ಜೀವನವನ್ನು ಸಂಪೂರ್ಣಗೊಳಿಸಿ ನಿಧನಳಾದಳು,ನಂತರ "ಶರೀರಾತ್ಮಗಳೊಡನೆ ಸ್ವರ್ಗಸ್ವೀಕೃತಳಾದಳು" ಎಂದು ಘೋಷಿಸಿ ಇದು ವಿಶ್ವಾಸದ ಪರಮ ಸತ್ಯಗಳೊಂದು” ಎಂದು ಘೋಷಿಸಿದರು. 

ಅಂದಿನಿಂದ ಧರ್ಮಸಭೆಯು ಆಗಸ್ಟ್ ೧೫ ಅನ್ನು ಸಾರ್ವತ್ರಿಕ ಮಹೋತ್ಸವವಾಗಿ ಆಚರಿಸುತ್ತಿದೆ. ಈ ಮಹೋತ್ಸವವನ್ನು ಕಥೋಲಿಕರು ಮಾತ್ರವಲ್ಲದೆ ಆಂಗ್ಲಿಕನರು, ಈಸ್ಟರ್ನ್ ಆರ್ಥೋಡಾಕ್ಸರು, ಒರಿಯಂಟಲ್ ಆರ್ಥೋಡಾಕ್ಸರು ಸಹ ಆಚರಿಸುತ್ತಾರೆ. ಮಾತೆ ಮರಿಯ ಸದಾ ದೈವಾನುಗ್ರಹಭರಿತಳಾಗಿದ್ದಳು ಹಾಗೂ ಸರ್ವೇಶ್ವರ ಆಕೆಯೊಡನಿದ್ದರು (ಲೂಕ ೧:೨೮). ಇದಕ್ಕೆ ಅನುಗಣವಾಗಿ ಮಾತೆಯು ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆ, ಪರಿಶುದ್ಧತೆ, ಪರ ಪ್ರೀತಿಯಿಂದ ಬಾಳಿದರು. ಎಲ್ಲಕ್ಕಿಂತ ಮಿಗಿಲಾಗಿ ಆಕೆಯ ಆಳವಾದ ವಿಶ್ವಾಸ ಹಾಗೂ ವಿಧೇಯತೆಯು ತ್ರೈಏಕನಿಗೆ ಮೆಚ್ಚಿಗೆಯಾಗಿ ಅವರು ಮಾತೆಗಿತ್ತ ಉದಾರ ಹಾಗೂ ಉಚಿತ ಬಹುಮಾನವೇ ಈ ಅನಂತ ಸೌಭಾಗ್ಯ. "Assumpta est Maria in coelum: gaudent angeli! God has taken Mary - body and soul - to Heaven and the Angels rejoice!



¨ ಫಾದರ್ ವಿಜಯ್ ಕುಮಾರ್, ಬಳ್ಳಾರಿ



ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...