-ಶ್ರೀಮತಿ ದೀಪ್ತಿ ಫ್ರಾನ್ಸಿಸ್ಕಾ
ನಿಮ್ಮಿಂದ
ಅಸಾಧ್ಯ ಎನ್ನುವವರಿಗೆ ಕಿವುಡಾಗಿರಿ
ಒಮ್ಮೆ
ಎರಡು ಕಪ್ಪೆಗಳು ನೀರಿನ ಸುಳಿಯೊಳಕ್ಕೆ ಜಿಗಿದು ಆಟವಾಡುತ್ತಿದ್ದವು. ಆಡುತ್ತಿದ್ದ
ಹಾಗೇ ಎರಡೂ ಕಪ್ಪೆಗಳು ಆಳವಾದ ಗುಂಡಿಯೊಂದರ
ಒಳಕ್ಕೆ ಅಕಸ್ಮಾತಾಗಿ ಹಾರಿಬಿಟ್ಟವು. ಆ ಆಳವಾದ ಗುಂಡಿಯಿಂದ ಹೊರಕ್ಕೆ ಜಿಗಿಯಲು ಎಷ್ಟು ಪ್ರಯತ್ನಿಸಿದರೂ ಸಫಲವಾಗದೆ ಯಾವುದಾದರೂ ಬೇರೆ ಕಪ್ಪೆಗಳು
ಸಹಾಯಕ್ಕೆ ಬರಬಹುದೆಂದು ಗಟ್ಟಿಯಾಗಿ ಬೊಬ್ಬಿಡ ತೊಡಗಿದವು. ಬೇರೆ ಕಪ್ಪೆಗಳು ಬಂದವು, ಗುಂಡಿಯ ಆಳ ನೋಡಿ
ಸಹಕಾರ ನೀಡುವುದು ಅಸಾಧ್ಯವೆಂದು ಸುಮ್ಮನಾದವು.
ಎರಡೂ ಕಪ್ಪೆಗಳು ಮುಂಗಾಲುಗಳಿಂದ ಬದಿ ಹಿಡಿದು ಮೇಲೆ ಬರಲು
ಯತ್ನಿಸುತ್ತಲೇ ಇದ್ದವು. ಕೊನೆಗೆ ಸಾಯುವುದೊಂದೇ ದಾರಿ ಎಂದುಕೊಂಡು
ಬೊಬ್ಬೆ ಹಾಕುವುದನ್ನು ನಿಲ್ಲಿಸಿದವು. ಆದರೂ ಬದಿ ಹಿಡಿದು ಮೇಲೆ ಬರುವ
ಯತ್ನ ನಿಲ್ಲಲಿಲ್ಲ. ಗಂಟೆಗಳೇ ಕಳೆದವು. ಅದರಲ್ಲಿ ಒಂದು ಕಪ್ಪೆ ಸೋತು ಅಲ್ಲಿಯೇ
ಪ್ರಾಣ ಬಿಟ್ಟಿತು. ಮತ್ತೊಂದು ಕಪ್ಪೆ ಪ್ರಯತ್ನವನ್ನು ಬಿಡದೆ ಸಾಧಿಸುತ್ತಿತ್ತು. ಮೇಲಿನಿಂದ ಇಣುಕಿ ನೋಡುತ್ತಿದ್ದ ಕಪ್ಪೆಗಳು ಗುಂಡಿಯೊಳಗಿದ್ದ ಕಪ್ಪೆಗೆ ಮೇಲೆ ಬರುವುದು ಅಸಾಧ್ಯ, ಇನ್ನು ಪ್ರಯತ್ನ
ಪಡುವುದು ವ್ಯರ್ಥ, ಸಾವೊಂದೇ
ದಾರಿ ಎನ್ನುತ್ತಿದ್ದವು.
ಕಷ್ಟದಿಂದ ಅಂಗುಲಂಗುಲ ಮೇಲೆ ಬರುತ್ತಿದ್ದ ಕಪ್ಪೆ ಸುಮಾರು
ದೂರ ತಲುಪಿ ಮುಂಗಾಲುಗಳು ಸ್ವಾಧೀನ
ತಪ್ಪತೊಡಗಿದವು. ಆದರೂ ಆ ಕಪ್ಪೆ ತನ್ನ
ಹಿಂಗಾಲುಗಳಿಂದ ಮೇಲಕ್ಕೇರುವುದನ್ನು ಬಿಡಲಿಲ್ಲ. ಮೇಲಿದ್ದ ಕಪ್ಪೆಗಳು ನಿನ್ನಿಂದ
ಅಸಾಧ್ಯ ಎಂದೇ ಹೇಳುತ್ತಿದ್ದವು. ಪಟ್ಟು ಹಿಡಿದ
ಆ ಕಪ್ಪೆಯು ತನ್ನ ಶ್ರಮದಿಂದ ಮೇಲೆ ತಲುಪುತ್ತಿದ್ದಂತೆ ಎಲ್ಲರನ್ನೂ ವಂದಿಸಿ ಕೃತಜ್ಞತೆ ಸಲ್ಲಿಸಿತು. ಏರಿ
ಬಂದ ಕಪ್ಪೆ ಕಿವುಡಾಗಿತ್ತೆಂದು ಮೇಲಿದ್ದ ಯಾವ ಕಪ್ಪೆಗೂ ತಿಳಿದಿರಲಿಲ್ಲ.
ಎಲ್ಲಾ ವಯಸ್ಸಿನವರಿಗೂ ಜೀವನಾನುಭವ
ಒಂದೇ
ಒಂದು ಮುಂಜಾನೆ ತಾಯಿಯು ಎಂದಿನಂತೆ
ಎದ್ದು ತನ್ನ ಎಂಟು ವರ್ಷದ ಮಗನನ್ನು ಶಾಲೆಗೆ ಹೋಗಲು ಸಿದ್ಧಪಡಿಸಿ
ಹೊರಡಿಸಿದಳು. ತಾಯಿ ಮಗ ಇಬ್ಬರೂ ಬಸ್ ನಿಲ್ದಾಣಕ್ಕೆ ಹೋಗಿ ಬಸ್ಸಿಗಾಗಿ ಕಾಯುತ್ತಿದ್ದರು. ಬಸ್ ಬಂದು, ಮಗ
ಆ ಬಸ್ಸಿನಲ್ಲಿ ಹತ್ತಿ ಕುಳಿತುಕೊಂಡ.
ತಾಯಿ ಮನೆ ಕಡೆಗೆ
ಮುಖ ಮಾಡಿ ತನ್ನ ಕಛೇರಿಯ ಕೆಲಸಕ್ಕೆ ಹೋಗುವ ತಯಾರಿಯ ಚಿಂತನೆಯೊಂದಿಗೆ ನಡೆಯುತ್ತಾಳೆ.
ಮನೆಗೆ ತಲುಪಿ ಹದಿನೈದು ನಿಮಿಷಗಳಾಗಿವೆಯಷ್ಟೆ,
ಹೊರಗಿನಿಂದ ಬೆಲ್ ಶಬ್ದ ಕೇಳಿಬರುತ್ತದೆ. ಯಾರೆಂದು ಬಾಗಿಲು ತೆಗೆದು ನೋಡಿದರೆ ತನ್ನ ಮಗ ಬಾಗಿಲಲ್ಲಿ ನಿಂತಿದ್ದಾನೆ. ಅವನಿಗೇನಾಯಿತೋ
ಎಂದು ಒಂದು ಕ್ಷಣ ದಂಗಾದ ತಾಯಿ, ’ಮನೆಗೆ ಏಕೆ ಬಂದೆ?’ ಎಂದು ಪ್ರಶ್ನಿಸಿದಳು. ಅದಕ್ಕೆ ಎಂಟು
ವರ್ಷದ ಮಗ
ಉತ್ತರಿಸಿದ “ನಾನು ಶಾಲೆಗೆ
ಹೋಗುವುದಿಲ್ಲ, ವ್ಯಾಸಂಗ
ಬಿಟ್ಟುಬಿಡುತ್ತೇನೆ, ಅದು ತುಂಬಾ ಕಷ್ಟವಾಗಿದೆ, ಬೇಸರ ಮೂಡಿಸುತ್ತದೆ, ಅಧಿಕ ಸಮಯ ತೆಗೆದುಕೊಳ್ಳುತ್ತದೆ”
ಎಂದು. ತಾಯಿ ಆತನ ಅವಸ್ಥೆ ನೋಡಿ, ಏನು ಹೇಳಬೇಕೆಂದು ತಿಳಿಯದೆ ‘’ಅದುವೇ ಜೀವನ,
ಈಗ ಬಸ್ಸಿಗೆ ನಡೆ, ಶಾಲೆಗೆ
ಹೋಗಿ ಕಲಿ’’ ಎಂದಳು.
No comments:
Post a Comment