Friday, 7 June 2019

ಸೋತು ಗೆದ್ದವರು


ಹಾಳು ಬಿದ್ದ ಊರಿನೊಳಗೆ
ಹುರಿ ಮೀಸೆಯ ಗೌಡನು
ಕೇಸರಿ ಬಣ್ಣ ರುಮಾಲಿನಲಿ 
ಸೋತು - ಗೆದ್ದ ಬಿಗುಮಾನವು !

ಹಸಿರು, ಬಿಳಿ ಬಣ್ಣಗಳ
ನುಂಗುತ್ತಿದೆ ಕೇಸರಿಯು
ರಾಷ್ಟ ಭಕ್ತಿ ಅಮಲಿನಲಿ
ಬಿರುಕುಬಿಟ್ಟ ಭಾವೈಕ್ಯತೆ

ಮತಯಂತ್ರದ ಸುತ್ತ
ಅನುಮಾನದ ಹುತ್ತ
ತಂತ್ರ ಕುತಂತ್ರಾಂಶದಲಿ
ಸೋತಿರುವುದು ದೇಶ

ದಾರಿ ತಪ್ಪಿದ ದೇಶಭಕ್ತಿ
ದ್ವೇಷದಿಂದಲೇ ಮುಕ್ತಿ ??
ಬಹುತ್ವದ ಭಾರತಕ್ಕೆ
ಸಂವಿಧಾನವೇ ಶಕ್ತಿ 


¨ ಡೇವಿಡ್ ಕುಮಾರ್. ಎ. 

ದೃಷ್ಟಿಯಲ್ಲಿದೆ ಸೃಷ್ಟಿ

ಪ್ರೀತಿಯ ಅನು.. 
ಹಾರೈಕೆಗಳ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು, ಸುಂದರ ಸುಮಧುರ ಜಗತ್ತಿನ ಚುಂಬನದಲ್ಲಿ ತೇಲಾಡುತ್ತಿರಬಹುದು! ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಊಟದಂತೆ ಸಪ್ಪೆ ಸಪ್ಪೆ, ಆದರೂ ಬದುಕಿಗೆ ಸ್ವಲ್ಪ ಬೇಕಿರುವಷ್ಟು ಪುಡಿ ಉಪ್ಪು ಸೇರಿಸಿ, ಸರಿಪಡಿಸಿ ಬದುಕ ಊಟದ ಸವಿಯನ್ನು ತಿನ್ನುವ ಹಂಬಲ. ಸಾಲವೇನಾದರೂ ನೀನು ಕೂಡುವುದಾದರೆ ನಿನ್ನ ನಗುವನ್ನು ನನಗೆ ಕೊಟ್ಟು, ನನ್ನನ್ನು ನಿನ್ನ ನಗುವಿನ ಸಾಲಗಾರನಾಗಿ ಮಾಡಿಕೂಳ್ಳಬೇಕೆಂದು ಕೇಳಿಕೂಳ್ಳುವ ನನ್ನ ಬಿಳಿಚಿಕೊಂಡ ಮುಖ, ಹೌದು ನಿನಗೆ ಪತ್ರ ಬರೆಯದೆ ಸುಮಾರು ದಿನಗಳಾಯ್ತು. ಅಂದು ನೀನು ಹೇಳಿದ “ದೃಷ್ಟಿಯಲ್ಲಿದೆ ಸೃಷ್ಟಿ” ಎಂಬ ಮಾತು ನನಗೆ ನೆನಪಿಗೆ ಬಂದು ಈ ಪತ್ರವನ್ನು ಬರೆಯಲು ಅನುವು ಮಾಡಿದೆ. 

ನಮ್ಮ ಬದುಕು ತರತರ ಘಟನೆ, ಅನುಭವಗಳನ್ನು ಗರ್ಭಕಟ್ಟಿಕೊಂಡ ಒಂದು ಮೊತ್ತ. ಈ ಘಟನೆಗಳ, ಆನುಭವಗಳ ಸ್ವಭಾವ ನಾವು ಕಾಣುವ ದೃಷ್ಟಿಯ ಮೇಲೆ ಆಧಾರವಾಗಿರುತ್ತದೆ ಎಂದು ನೀನು ನನಗೆ ಹೇಳಿದ್ದು ನೆನಪು ಅನು.... ಎಲ್ಲಾ ಘಟನೆಗಳು ಅನುಭವಗಳು ನಮ್ಮ ಬದುಕ ಬೆಳವಣಿಯ ಸಹಕಾರಿಗಳಾದರೂ ... ನಮ್ಮ ನಕಾರಾತ್ಮಕ ಮನೋಭಾವದಿಂದ, ... ಒಳ್ಳೆತನದಲ್ಲಿ ಕೆಟ್ಟದನ್ನು ಹುಡುಕುತ್ತೇವೆ, ಗೆಲುವಿನಲ್ಲಿ ಸೋಲನ್ನು ಅನುಭವಿಸುತ್ತೇವೆ... ಹೌದು ಅನು ಬದುಕ ತಾಜ್ಯ ಅನುಭವಗಳು, ಘಟನೆಗಳು ... ನಾವು ಕಾಣುವ ದೃಷ್ಟಿಯ ಮೇಲೆ ಆಧಾರವಾಗಿರುತ್ತದೆ. ಮೊನ್ನೆ ಆಂಗ್ಲ ಭಾಷೆಯಲ್ಲಿದ್ದ ಒಂದು ಕವನ ಓದಿದೆ. ನಮ್ಮ ಕಣ್ಣುಗಳನ್ನು ತೆರೆವಷ್ಟು ಅರ್ಥಗರ್ಭಿತವಾದ ಸಾಲುಗಳು.... 

Attitude is everything 

what happens within you 

two forces are at work around you, 

external and internal, 

you have little control over 

external forces such, 

earthquake, distress, sickness and pain. 



What really matters is the internal force 

how do you respond to these disaster? 

Over that you have complete control 

no one on earth can hurt you 

unless you accept the hurt in your own mind 

the problem is not other people, 

its your reaction to them 

you can can not always control 

your circumstances 

but you can control your own thoughts... 

ಹೀಗೆ ನಮ್ಮ ಬದುಕಿನ ಪ್ರತಿಯೊಂದು ಘಟನೆಗಳು.. ಕ್ರಿಯೆಗಳು ... ಅನುಭವಗಳು ನಾವು ನೋಡುವ ದೃಷ್ಟಿಯ ಮೇಲೆ ... ನಾವು ಸ್ವೀಕರಿಸುವ ಮನೋಭಾವ ಮೇಲೆ depend ಆಗಿರುತ್ತದೆ ಅನು ... ನಮ್ಮ attitude positive ಆಗಿದ್ದರೆ.. ನಾವು ಕಸದಿಂದ ರಸ ಕೂಡ ಮಾಡಲು ಸಹ ಸಾಧ್ಯ, ಇಲ್ಲವಾದರೆ ಜೀವನ negative feelings ತುಂಬಿ ತುಳುಕುವ ಒಂದು ಭಾರವಾದ ಹೊರೆಯಾಗುವುದರಲ್ಲಿ ಸಂಶಯವೇ ಇಲ್ಲ... 

ನನ್ನ ಮಾತನ್ನು ಒಂದು ಕತೆಯ ಜೊತೆ ಕೊನೆಗೊಳಿಸುತ್ತೇನೆ. ಡೇವಿಡ್ ಹಾಗೂ ಗೋಲಿಯತ್ ಎಂಬುವುದು ಬೈಬಲನಲ್ಲಿ ಬರುವ ಒಂದು ಸುಂದರ ಹಾಗೂ ಒಳ್ಳೆಯ ಪಾಠವನ್ನು ತಿಳಿಸುವ ಘಟನೆ. ಒಂದು ಹಳ್ಳಿಯಲ್ಲಿ ದೈತ್ಯನೊಬ್ಬನಿದ್ದ. ಆತ ಎಲ್ಲರಿಗೂ ಕಿರುಕುಳ ಕೊಡುತ್ತಿದ್ದ. ಒಂದು ದಿನ ಆ ಹಳ್ಳಿಗೆ ತನ್ನ ಸಹೋದರನನ್ನ ಭೇಟಿಯಾಗಲು ಬಂದ ಹದಿನೇಳು ವರ್ಷದ ಕುರುಬರ ಹುಡುಗನೊಬ್ಬ “ನೀವೆಲ್ಲ ಏಕೆ ಈ ದೈತ್ಯನ ವಿರುದ್ಧ ಎದ್ದು ನಿಂತು ಹೋರಾಡಬಾರದು?” ಎಂದು ಕೇಳಿದ. ಆತನ ಮಾತು ಕೇಳಿ ಅವರೆಲ್ಲರೂ ತಲ್ಲಣಗೊಂಡರು. ಅತನ ವಿರುದ್ಧ ಹೋರಾಡುವುದೇ? “ಆತನಿಗೆ ಹೊಡೆಯುವುದೇ? ಆತ ಹೊಡೆತಕ್ಕೆ ನಿಲುಕದಷ್ಟು ದೈತನಾಗಿದ್ದಾನೆ” ಎಂದರು. ಆದಕ್ಕೆ ಕುರುಬರ ಹುಡುಗ ಹೇಳಿದ, “ಇಲ್ಲ ಹೊಡೆಯಲಾರದಷ್ಟು ಆತ ಎತ್ತರವಾಗಿಲ್ಲ, ಆದರೆ ಹೊಡೆತ ತಪ್ಪಿಸಿಕೊಳ್ಳದಷ್ಟು ಎತ್ತರವಾಗಿದ್ದಾನೆ ಎಂಬುವುದು ನೆನಪಿರಲಿ.” ಮುಂದಿನದು ಇತಿಹಾಸ. ಆನಂತರ ಆ ಹುಡುಗ ಆ ದೈತ್ಯನನ್ನು ಕವಣೆಯಿಂದ ಸಾಯಿಸಿದ. ಅದೇ ದೈತ್ಯ. ಉಪಾಯ ಮಾತ್ರ ಬೇರೆ. 

ನಿನ್ನ ಪ್ರತಿಯೊಂದು ಬದುಕ ಅನುಭವಗಳು, ಘಟನೆಗಳು .. ನಿನ್ನ ಆಶಾವಾದ ದೃಷ್ಟಿಯಲ್ಲಿ ನಿನಗೆ ಕಾಣಲಿ .. ಎಂದು ಹಾರೈಸುವ 

¨ ಆನಂದ 

‘ದುಂದುಗಾರ ಮಗ ಒಳ್ಳೆಯ ಕುರಿಗಾಹಿ ಅಪ್ಪ’

- ಆಜು (ಮರಿಯಾಪುರ)
ಅಂದು ಸುಮ್ಮನೆ ಮನೆಯಲ್ಲಿ ಕೂತು ನನ್ನ ಮೊಬೈಲಿನಲ್ಲಿ ಏನೋ ತಡುಕುತ್ತಾಇದ್ದ ನನಗೆ ನನ್ನ ಅಪ್ಪನ ಬಿರುಸು ಮಾತುಗಳು ಕೂತಲ್ಲಿ ಕೂರಬಿಡದೆ ಎದ್ದು ಹೊರ ನಡೆಯುವಂತೆ ಮಾಡಿತು. 
ದಾರಿಯುದ್ದಕ್ಕೂ ನನ್ನ ಅಪ್ಪನ ಬಗ್ಗೆ ತಿರಸ್ಕಾರದ ಮಾತುಗಳನ್ನು ಒಬ್ಬನೇ ಗೊಣಗುತ್ತ ನಮ್ಮೂರಿನ ಮೈದಾನದ ಕಡೆಗೆ ಹೊರಟೆ. ನನ್ನ ಎಲ್ಲಾ ತರಲೆ ತರ್ಕಗಳ ಕೇಳಲು ನನಗಾಗಿ ಆ ಮೈದಾನದ ಮಧ್ಯದ ಅಗಾಧವಾದ ಆಲದಮರ ಕಾಯುತ್ತ ಇತ್ತು. ಆ ಮರದ ಆಡಿಯಲ್ಲಿ ಬಿದ್ದ ಪೀಚು ಕಾಯಿಗಳ ಜೊತೆ ಕೂತು ನನ್ನ ಪೀಚು ಬುದ್ದಿಯ ಯೋಚನೆಗಳು ಒಂದೊಂದೇ ಹೊರಬಂದವು. "ಈ ಹೆತ್ತವರು ಹೀಗೇಕೆ", "ನಮ್ಮ ವಯಸ್ಸಲ್ಲಿ ಇವರೇನು ಕಡಿದು ಕಟ್ಟೆ ಹಾಕಿದರು?", "ಇವರಿಗೇನು ತಿಳಿಯುತ್ತೆ ನಮ್ಮ ಕಷ್ಟ", "ಛೇ ಇವರ ಜೊತೆ ಇರೋದೇ ಬೇಡ ಎಲ್ಲಾದ್ರೂ ದೂರ ಹೋಗಿ ಬಿಡಬೇಕು" ಎಂಬೆಲ್ಲ ಆಲೋಚನೆಗಳು ಮೂಡಿ ಇನ್ನೇನು ನನ್ನ ಕಣ್ಣಿಂದ ಒಂದು ಹನಿ ಹೊರಬರಲು ಪ್ರಯತ್ನಿಸುತ್ತಿರುವಾಗಲೇ ಹಿಂದೆ ಯಾರೋ ಅಳುವ ಸದ್ದು ಕೇಳಿಸಿತು. 

"ಏನಾಶ್ಚರ್ಯ! ನನ್ನ ಗೋಳು ಕೇಳಿ ಇಷ್ಟು ವರ್ಷ ಅಲುಗಾಡದ ಈ ಆಲದಮರ ಅಳುತ್ತಿದೆಯೇ ಎಂದು ಹಿಂತಿರುಗಿ ನೋಡಿದೆ. ಅದು ನಿಂತ ಜಾಗದಲ್ಲೇ ಗಾಂಭೀರ್ಯದಿಂದ ನಿಂತಿತ್ತು. ಮತ್ತೆ ಎಲ್ಲಿಂದ ಈ ಸದ್ದು ಎಂದು ಎದ್ದು ಮರದ ಹಿಂಬದಿಗೆ ಹೋಗಿ ನೋಡಿದೆ. ಅಲ್ಲಿ ಒಬ್ಬ ಹನ್ನೆರಡು ಆಸುಪಾಸಿನ ಹುಡುಗ ಮುಖ ಮುಚ್ಚಿಕೊಂಡು ಆಕಾಶ ಕಳಚಿ ಬಿದ್ದಂತೆ ಆಳುತ್ತಿದ್ದ. 

"ಅರೆರೇ!! ಅಳಬೇಕೆಂದು ನಿರ್ಧರಿಸಿದವನು ನಾನು, ಇವನ್ಯಾರೋ ನನಗೆ ಪೈಪೋಟಿ ನೀಡಿ ಅಳುತ್ತಿದ್ದಾನಲ್ಲ" ಎಂದು ಅವನ ಬಳಿ ಹೋಗಿ ಸಮಸ್ಯೆ ಏನೆಂದು ವಿಚಾರಿಸಿದೆ. ಅದಕ್ಕೆ ಅವನು ಬಿಕ್ಕಳಿಸುತ್ತಲೇ "ನನ್ನ ಅಪ್ಪ" ಎಂದು ಆರಂಭಿಸಿದ. ನನ್ನ ಮನಸ್ಸಿನಲ್ಲಿ ಇವನು ಯಾರೋ ನನ್ನ ಕೇಸು, ಅಪ್ಪನ ಮೇಲಿನ ಬೇಜಾರಿಗೆ ಬಂದು ಕುಳಿತಿದ್ದಾನೆಂದು ಯೋಚಿಸಿದೆ. ಅವನು ಮುಂದುವರಿಸುತ್ತ "ನಾನು ನನ್ನ ಅಪ್ಪನ ಜೇಬಿನಿಂದ ನೂರು ರೂಪಾಯಿ ಕದ್ದು ಖರ್ಚು ಮಾಡಿಬಿಟ್ಟೆ. ಈಗ ಅದು ನಮ್ಮಪ್ಪನಿಗೆ ಗೊತ್ತಾದ್ರೆ ಹೊಡಿತಾರೆ ಎಂದು ಭಯದಲ್ಲಿ ಬಂದು ಇಲ್ಲಿ ಕುಳಿತಿದ್ದೀನಿ" ಎಂದು ಹೇಳಿದ. 

ನನ್ನ ಯೋಚನೆ ಅಷ್ಟು ನಿಖರವಾಗಿರದಿದ್ದರೂ ತಕ್ಕಮಟ್ಟಿಗೆ ಸರಿಯಿತ್ತು. ನಾನು ಅವನಿಗೆ ಸಮಾಧಾನ ಮಾಡುವಷ್ಟರಲ್ಲಿ ದೂರದಿಂದ ಯಾರೋ "ಜಾನಿ ಜಾನಿ" ಎಂದ ಕೂಗು ಕೇಳಿಸಿತು. ನನಗೆ ಆ ಧ್ವನಿ ಯಾರದೆಂದು ತಿಳಿಯಲಿಲ್ಲ. ಆದರೆ ಆ ಹುಡುಗ ಖಂಡಿತವಾಗಿ ಇದು ತನ್ನ ಅಪ್ಪನ ಧ್ವನಿಯೆಂದು "ಇಂದು ನಾನು ಸತ್ತೆ" ಎನ್ನುತ್ತ ಇನ್ನಷ್ಟು ಜೋರಾಗಿ ಅಳಲಾರಂಭಿಸಿ, ಓಡಲೆತ್ನಿಸಿದ. 

ನಾನು ಅವನ ಕೈ ಹಿಡಿದು ಎಲ್ಲಿಗೆ ಹೋಗುತ್ತೀಯ ಇಲ್ಲೇ ಇರು ನಾನು ಮಾತನಾಡುತ್ತೀನಿ ಎಂದು ಹೇಳಿ ನಿಲ್ಲಿಸಿದೆ. ದೂರದಲ್ಲಿ ಇದ್ದ ಆ ಹುಡುಗನ ಅಪ್ಪ ಹತ್ತಿರವಾಗುತ್ತಿದ್ದಂತೆ ಆ ಹುಡುಗನ ಅಳು ದ್ವಿಗುಣವಾಯಿತು. ಆದರೆ ಅವನ ಅಪ್ಪನ ಮುಖದಲ್ಲಿ ಕೋಪದ ಯಾವ ಕುರುಹೂ ಕಾಣಲ್ಲಿಲ್ಲ. ಮಗನನ್ನು ಕಾಣದ ಭೀತಿ ಕಾಣಿಸುತ್ತಿತು, ಆತಂಕವಿತ್ತು. ಆ ಆತಂಕ ತನ್ನ ಕಾಣದ ಕಾಸಿನ ಬಗ್ಗೆಯಲ್ಲ, ಕಾಣದ ತನ್ನ ಮಗನ ಬಗ್ಗೆ ಎಂದು ನನಗೆ ಅರಿವಾಗಿತ್ತು, ಅವನ ಅಪ್ಪ ಬಂದೊಡನೆ ಮಗನನ್ನು ತಬ್ಬಿಕೊಂಡು ಅವನೂ ಅಳಲಾರಂಭಿಸಿದ. ನಾನು ಮೂಗನಂತೆ ಇದನ್ನೆಲ್ಲ ನೋಡುತ್ತಾ ನಿಂತೆ. 

ಸ್ವಲ್ಪ ಸಮಯದ ನಂತರ ಆ ಅಪ್ಪ ತನ್ನ ಕಣ್ಣೀರನ್ನು ಒರೆಸಿಕೊಂಡು, "ಯಾಕೋ ಹೀಗೆ ಮಾಡಿದೆ? ನಿನ್ನ ಹುಡುಕಿ ಹುಡುಕಿ ಸಾಕಾಯಿತು ಯಾರಿಗೂ ಹೇಳದೆ ಹೀಗೆ ಬಂದು ಬಿಟ್ರೆ" ಎಂದು ಪ್ರೀತಿಯಿಂದಲೇ ಬೈಯತೊಡಗಿದ "ನೀನು ತಗೊಂಡ ಆ ಕಾಸು ನಿನಗೆಂದು ತೆಗೆದು ಇಟ್ಟಿದ್ದು, ಅದರ ಬಗ್ಗೆ ನೀನೇನು ಯೋಚನೆ ಮಾಡಬೇಡ ನನ್ನದೆಲ್ಲ ನಿನಗೆ ಅಲ್ಲವೇನೋ ಮತ್ತೆ ಯಾವತ್ತೂ ಈ ರೀತಿ ಮಾಡಬೇಡ, ನಡಿ ನಿಮ್ಮಮ್ಮ ಕಾಯುತ್ತಿರುತ್ತಾಳೆ" ಎಂದು ಅವನನ್ನು ಸಮಾಧಾನ ಮಾಡಿ ಕರೆದುಕೊಂಡು ಹೋಗಲಾರಂಭಿಸಿದ. 

ಇವೆಲ್ಲವನ್ನು ಕಂಡ ನನಗೆ ಅವನ ಅಪ್ಪ ಹೇಳಿದ್ದು ಸರಿ ಎನಿಸಿತು. ಹೆತ್ತವರು ಏನೇ ಮಾಡಿದರೂ ಅಥವಾ ಏನೇ ಹೇಳಿದರೂ ತಮ್ಮ ಮಕ್ಕಳ ಒಳಿತಿಗಾಗೇ ಹೇಳುತ್ತಾರೆ. ಅವರು ಮಾಡುವ ಆಸ್ತಿ, ಮನೆ, ಗಳಿಸುವ ಹಣ, ಸೌಕರ್ಯಗಳು ಯಾವುದು ಅವರಿಗಾಗಿ ಅಲ್ಲ ತಮ್ಮ ಮಕ್ಕಳಿಗಾಗಿ ಎಂಬುದು ಎಷ್ಟು ನಿಜವೋ ಮಕ್ಕಳು ತಪ್ಪು ಮಾಡಿದಾಗ ಅವರನ್ನು ಬೈಯದೆ ಅವರ ಎಳೇ ಮನಸ್ಸಿಗೆ ಗಾಸಿಮಾಡದೆ ಪ್ರೀತಿಯ ಮಾತಿನಿಂದ ತಿದ್ದಿ ಸರಿ ದಾರಿಗೆ ತರುವುದು ಅಷ್ಟೇ ಸಮಂಜಸವೆಂಬ ನಿರ್ಧಾರಕ್ಕೆ ಬರುತ್ತಿದ್ದಂತೆ ದೂರದಲ್ಲಿ ಆ ಅಪ್ಪ ಮತ್ತು ಮಗ ಇಬ್ಬರೂ ಒಟ್ಟಿಗೆ ಹೋಗುತ್ತಿದದ್ದು ಕಾಣಿಸಿತು. ಅರೆಕ್ಷಣ ಅವರಿಬ್ಬರೂ ನನಗೆ ಬೈಬಲ್‍ನ ಒಳ್ಳೆಯ ಕುರಿಗಾಹಿ-ದುಂದುಗಾರ ಮಗನಂತೆ ಕಂಡರು. 

ಹಲವು ಬಾರಿ ಕೇಳಿದ ಈ ಸಾಮತಿ ಆಗ ಇನ್ನಷ್ಟು ಅರ್ಥವಾದಂತೆನಿಸಿತು. ಆ ಅಪ್ಪ ಮಗ ದೂರಾಗುತ್ತ ಹಾಗೇ ಮರೆಯಾದರು. ಅವರೊಂದಿಗೆ ಸೂರ್ಯನೂ ಸಹ ಮರೆಯಾಗ ತೊಡಗಿದ, ಇನ್ನೇಕೆ ನಾನೊಬ್ಬನೇ ಇಲ್ಲಿ ಎಂದು ನಾನೂ ನನ್ನ ಕುರಿಗಾಹಿಯ ಕಡೆಗೆ ಹೋಗಬೇಕೆಂದು ಮನೆಯ ಕಡೆ ಹೊರಟೆ. 


********* 



ಸಂತ ಯೊವಾನ್ನರ ಶುಭಸಂದೇಶ – 10

ಸಹೋ. ವಿನಯ್ ಕುಮಾರ್,  ಚಿಕ್ಕಮಗಳೂರು
ಯಾವುದೇ ಒಂದು ಕೃತಿ ಹೊರಬರುವಾಗ ಅದರ ಹಿಂದೆ ಇದ್ದ ಹಿನ್ನೆಲೆ ಮತ್ತು ಬರೆಯುವಾಗ ಇದ್ದಂತಹ ಸನ್ನಿವೇಶ ಹಾಗೂ ಸಂದರ್ಭ ಆ ಕೃತಿಯನ್ನು ಹಾಸುಹೊಕ್ಕು ಅದರ ವಿಶೇಷತೆಯನ್ನು ನಾವು ಕಾಣಬಹುದಾಗಿದೆ. ಹೀಗೆ ಅದರ ಕುರುಹುಗಳನ್ನು ಹುಡುಕಿ ಹೋದವರಿಗೆ ಅದು ತಿಳಿಯುತ್ತದೆ. ಈ ಕಥಾವಸ್ತುವಿನ ಸನ್ನಿವೇಶ ಹಾಗೂ ಸಂದರ್ಭ ಬಹಳ ಮುಖ್ಯವಾದದ್ದು ಕಾರಣ ಇಡೀ ಕೃತಿ ಇದರಿಂದ ಆವರಿತಗೊಂಡಿರುತ್ತದೆ. ಸಂತ ಯೋವಾನ್ನರ ಶುಭಸಂದೇಶದಲ್ಲಿಯೂ ನಾವು ಬಹು ಮುಖ್ಯವಾದ ಎರಡು ಬಗೆಯ ಸನ್ನಿವೇಶ ಅಥವಾ ಸಂದರ್ಭವನ್ನು ಕಾಣುತ್ತೇವೆ. 

1.ಐತಿಹಾಸಿಕ ಸನ್ನಿವೇಶ ಸಮುದಾಯದ ಹೊರಗಡೆಯಿಂದ. 

2. ಐತಿಹಾಸಿಕ ಸನ್ನಿವೇಶ ಸಮುದಾಯದ ಒಳಗಡೆಯಿಂದ. 

ನಮಗೀಗಾಗಲೇ ತಿಳಿದಿರುವಂತೆ ಸಂತ ಯೋವಾನ್ನರ ಒಂದು ಸಮುದಾಯವಿತ್ತು. ಈ ಸಮುದಾಯವು ಅನೇಕ ಕಷ್ಟ ತೊಂದರೆಗಳನ್ನು ಎದುರಿಸುತ್ತಿತ್ತು. ಅದು ಒಳಗಡೆಯಿಂದ ಮತ್ತು ಹೊರಗಡೆಯಿಂದ ಇತ್ತು. ಹೀಗೆ ಇಂತಹ ಸಂದರ್ಭದಲ್ಲಿ ಸಂತ ಯೋವಾನ್ನ ತನ್ನ ಸಮುದಾಯದವರಿಗೆ ಈ ಶುಭ ಸಂದೇಶವನ್ನು ಬರೆಯುತ್ತಾನೆ. ಮೊದಲು ಐತಿಹಾಸಿಕ ಸಂದರ್ಭ - ಸಮುದಾಯದ ಹೊರಗಡೆಯಿಂದ ಹೇಗಿತ್ತು ಎಂಬುದನ್ನು ನೋಡೋಣ. 

ಯೋವಾನ್ನರ ಸಮುದಾಯವು ಈ ಶುಭಸಂದೇಶ ರಚಿತವಾಗುವ ಸಮಯದಲ್ಲಿ ಹಗೆತನವನ್ನು ಸಮುದಾಯದ ಹೊರಗಡೆಯವರಿಂದ ಎದುರಿಸುತ್ತಿತ್ತು. ರೋಮನ್ನರು ಮತ್ತು ಯೆಹೂದ್ಯರು ಇಬ್ಬರೂ ಈ ಸಮುದಾಯದ ಮೇಲೆ ಹಗೆತನ ಸಾಗಿಸುತ್ತಿದ್ದರು. ರೋಮನ್ನರ ಹಗೆತನಕ್ಕೆ ಎರಡು ಕಾರಣಗಳು; 

ಅ) ರೋಮನ್ನರ ಆಧಿಕಾರಿಗಳ ದಂಡ ಯೇಸುವನ್ನು ಖಂಡಿಸಿ ಶಿಲುಬೆಗೇರಿಸಿತ್ತು. ಯೇಸುವನ್ನು ಒಬ್ಬ ದಂಗೆಕೋರ ಎಂದು ಘೋಷಿಸಿತ್ತು. ಆದರೆ ಈ ಸಮುದಾಯದವರು ಆತನನ್ನು ರಕ್ಷಕ ಮತ್ತು ಲೋಕೋದ್ಧಾರಕ ಎಂದು ಆರಾಧಿಸುತ್ತಿದ್ದರು. ಇದು ರೋಮನ್ನರ ವಿರುದ್ಧ ಈ ಸಮುದಾಯದವರು ಹೋದಂತೆ ಕಂಡು ಅವರ ಮೇಲೆ ಹಗೆತನ ಕಾರಲು ಕಾರಣವಾಯಿತು. 

ಆ) ರಾಜಕೀಯ ಸನ್ನಿವೇಶವು ಇದಕ್ಕೆ ಇನ್ನೊಂದು ಕಾರಣ. ಯೆಹೂದ್ಯರಿಂದ ಬೇರ್ಪಟ್ಟು ಹೊಮ್ಮುತ್ತಿರುವ ಈ ಸಮುದಾಯವು ಅನುಮಾನಕ್ಕೆ ಕಾರಣವಾಯಿತು. ಈ ಸಮುದಾಯದ ಉದ್ದೇಶ ಏನಾಗಿರಬಹುದು ಎಂದು ಸದಾ ಅವರನ್ನು ಅನುಮಾನ ಹಾಗೂ ಹಗೆತನದಿಂದ ರೋಮನ್ನರು ನೋಡುತ್ತಿದ್ದರು. 

ಯೆಹೂದ್ಯರ ಹಗೆತನಕ್ಕೆ ಮೂರು ಕಾರಣಗಳು: 

ಅ) ಶಿಲುಬೆ ಮರಣ ಯೆಹೂದ್ಯರಿಗೆ ಅದೊಂದು ರೀತಿ ದೇವರ ಶಾಪ ಎಂಬ ನಂಬಿಕೆ ಇತ್ತು. ಇಂತಹ ಶಾಪ ಮರಣವನ್ನು ಅನುಭವಿಸಿದ್ದ ಅದರೆ ಈತನನ್ನು ಈ ಸಮುದಾಯದವರು ಮೆಸ್ಸಾಯ/ ಲೋಕೋದ್ಧಾರಕ್ಕ ಎಂದು ನಂಬುವುದು ಯಹೂದಿ ಸಮುದಾಯದ ಭಾವನೆಗಳನ್ನು ಕೆರಳಿಸಿದಂತಿತ್ತು. 

ಆ) ಆದಿಕಾಲದಲ್ಲಿ ಕ್ರೈಸ್ತ ಸಮುದಾಯಕ್ಕೆ ಯಹೂದಿ ಮತಾಂತರಿಗಳು ಬಹುತೇಕವಾಗಿ ಸೇರುತ್ತಿದ್ದರು. ಇದರಿಂದ ಯಹೂದಿಗಳಿಗೆ ಇದೊಂದು ಅವರ ಧರ್ಮದ ವಿರುದ್ಧ ಕಟ್ಟಿಕೊಂಡಿರುವ ಪಂಗಡದಂತೆ ಕಾಣುತ್ತಿತ್ತು. 

ಇ) ದೇವಾಲಯದ ವಿನಾಶವಾದ ನಂತರ ಅಂದರೆ 70 ಕ್ರಿ. ಶ.ರಲ್ಲಿ ಯಹೂದಿ ಧರ್ಮದಲ್ಲಿ ಅವರ ಧರ್ಮವನ್ನು ಪುನಶ್ಚೇತನಗೊಳಿಸಲು ಮುಂದಾದರು. ಅವರ ಪವಿತ್ರ ಗ್ರಂಥಕ್ಕೆ ಹೆಚ್ಚು ಮಹತ್ವವನ್ನು ನೀಡಿದರು. ಈ ಗ್ರಂಥ ಮನುಕುಲಕ್ಕೆ ದೇವರ ಸದೃಶ್ಯ ರೂಪ ಎಂದು ಸಾರಿದರು. ಆದರೆ ಈ ಸಮುದಾಯವು ಕ್ರಿಸ್ತರು - ದೇವರ ಸಜೀವ ಹಾಗು ಸದೃಶ್ಯ ರೂಪವೆಂದು ಸಾರಿದರು. ಇದರಿಂದ ದೈವಶಾಸ್ತ್ರದ ಭಿನ್ನಭಿಪ್ರಾಯ ಉಂಟಾಗಿ ಯಹೂದ್ಯರಲ್ಲಿ ಈ ಸಮುದಾಯದ ಮೇಲೆ ಹಗೆತನ ಕಾರಲು ಕಾರಣವಾಯಿತು. 

********* 

ಹೆಮ್ಮೆ


ಹಾಡೆಂದು ನೀವೆನಗೆ ಹೇಳಿದರೆ ಸಾಕು ಎದೆಯುಬ್ಬುವುದು ಹೆಮ್ಮೆಯಿಂದ
ಸ್ವಾಮಿ ನಿಮ್ಮ ಸಿರಿಮೊಗವ ನೋಡಿದರೆ ಸಾಕು ಕಣ್ದುಂಬುವುದು ಸುಮ್ಮಾನದಿಂದ

ನನ್ನೊಡಲ ಗೊಗ್ಗರುದನಿಯೆಲ್ಲ ಕರಗಿ ನೀರಾಗಿ ಇಂಚರವಾಗುವುದು
ಅನುರಾಗವದು ಕಡಲ ಹಾಯುವಕ್ಕಿಯ ವಿಶಾಲ ರೆಕ್ಕೆಯೊಲು ಚಾಚುವುದು

ನನ್ನ ಹಾಡದು ನಿಮಗೆ ಸುಮಧುರವೆಂದರಿತಿರುವೆ
ಗಾನವಾಡಲೆಂದೇ ನಾ ನಿಮ್ಮ ಸನ್ನಿಧಿಗೆ ಬರುವೆ

ಹಾಡೆಂಬ ವಿಶಾಲ ರೆಕ್ಕೆಯ ಗರಿಯ ಕೊನೆಯಿಂದ
ನಾನೆಂದೂ ಮುಟ್ಟಲಾಗದ ನಿಮ್ಮಡಿಯನೆಟಕುವೆ

ಹಾಡಿ ಅಮಲೇರಿ ನನ್ನನೇ ಮರೆವೆ
ಒಡೆಯ ನಿಮ್ಮನ್ನು ಗೆಳೆಯನೆಂದೇ ಕರೆವೆ

(ರವೀಂದ್ರನಾಥ ಟಾಗೋರ್‌ ನವರ ಗೀತಾಂಜಲಿ ಯಿಂದ 

When thou commandest me to sing 

ಪದ್ಯದ ಅನುವಾದ ಸಿ ಮರಿಜೋಸೆಫ್ ನವರಿಂದ) 

ಕಥಾದನಿ

'ಓದೋದಕ್ಕೂ ಬರೆಯೋದಕ್ಕೂ ಗೊತ್ತಿಲ್ಲದ ಅನಕ್ಷರಸ್ಥನಿಗೆ ನಾನು ಒಂದೇ ಕ್ಷಣದಲ್ಲಿ ಓದುಬರಹ ಕಲಿಸಬಲ್ಲೆ'. ಹಾಗಂತ ಹೇಳ್ತಾ ಫಕೀರನೊಬ್ಬ ಊರು ತುಂಬ ಓಡಾಡ್ತಿದ್ದ. ನಸ್ರುದ್ದೀನ್‌ ಅವನ ಬಳಿಗೆ ಓಡಿದ. 'ನನಗೆ ಕಲಿಸು' ಅಂದ. 

ಫಕೀರ ನಸ್ರುದ್ದೀನನ ತಲೆಯ ಮೇಲೆ ಕೈಯಿಟ್ಟು ಧ್ಯಾನಿಸಿದ. 'ಈಗ ನಿಂಗೆ ಓದೋಕೆ ಬರುತ್ತೆ ಹೋಗು' ಅಂದ. 

ಅದಾಗಿ ಅರ್ಧಗಂಟೆಗೆ ವಾಪಸ್ಸು ಬಂದ ನಸ್ರುದ್ದೀನ್‌, ಆ ಫಕೀರನಿಗೋಸ್ಕರ ಊರಲ್ಲೆಲ್ಲ ಹುಡುಕತೊಡಗಿದ. 

'ಏನಾಯ್ತಪ್ಪ... ಓದೋದು ಕಲಿಸ್ತೀನಿ ಅಂತ ಫಕೀರ ಚೆನ್ನಾಗಿ ನಾಮ ಹಾಕಿದ್ನಾ?' ದಾರಿಹೋಕನೊಬ್ಬ ಕೇಳಿದ. 

'ಹಂಗೇನಲ್ಲ, ಚೆನ್ನಾಗೇ ಓದೋದಕ್ಕೆ ಬರುತ್ತೆ. ಓದೋಕ್‌ ಬಂದಿದ್ರಿಂದಲೇ ಆ ಫಕೀರನ್ನ ಹುಡುಕ್ತಿರೋದು ನಾನು. ಎಲ್ಹೋದ ಆ ಮೋಸಗಾರ.' 

'ಇದೇನಪ್ಪ ಹೀಗ್‌ಮಾತಾಡ್ತಿದ್ದೀಯ. ನಿಂಗೆ ಒಂದೇ ನಿಮಿಷದಲ್ಲಿ ಓದೋಕೆ ಕಲಿಸಿದೋನನ್ನ ಮೋಸಗಾರ ಅಂತಿದ್ದೀಯಲ್ಲ. ಸರೀನಾ ಇದು?' 

'ಹೌದು ಮತ್ತೆ. ನಾನು ಓದೋಕೆ ಎತ್ತಿಕೊಂಡ ಪುಸ್ತಕದ ಮೊದಲನೇ ಸಾಲಲ್ಲೇ, 'ಎಲ್ಲಾ ಫಕೀರರೂ ಶುದ್ಧ ಮೋಸಗಾರರು' ಅಂತ ಬರೆದಿತ್ತು'. 

------------ 

ಮುಲ್ಲಾ ನಸ್ರುದ್ದೀನ್ ಪ್ರವಚನ ನೀಡುತ್ತಾನೆ ಅಂದರೆ ಊರಿಗೆ ಊರೇ ಬಂದು ಸೇರುತ್ತಿತ್ತು. ಅವನು ಉದಾಹರಣೆ ಸಹಿತವಾಗಿ ವಿಷಯಗಳನ್ನು ವಿವರಿಸುವುದು ಅವರಿಗೆ ಖುಷಿ ಕೊಡುತ್ತಿತ್ತು. ಜನರಿಗೆ ಖುಷಿಯಾಗಲೆಂದು ನಸ್ರುದ್ದೀನ್ ಕೂಡಾ ಉತ್ಸಾಹದಲ್ಲಿ ಏನೋ ಒಂದು ಹೇಳಿಬಿಡುತ್ತಿದ್ದ. 

ಆ ದಿನ ನಸ್ರುದ್ದೀನ್ ಮಾತನಾಡುತ್ತಾ, “ನೀವು ರೊಟ್ಟಿಯ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆಯಿರಿ. ನೀವು ಹೇಗೇ ಎಸೆದರೂ ಕೆಳಕ್ಕೆ ಬಿದ್ದಾಗ ಬೆಣ್ಣೆ ಹಚ್ಚಿದ ಬದಿ ಮೇಲಕ್ಕೇ ಇರುತ್ತದೆ” ಎಂದ. 

ಜನರೆಲ್ಲಾ ಅತ್ಯಂತ ಆಸಕ್ತಿಯಿಂದ ಕೇಳಿಕೊಂಡರು. ರೊಟ್ಟಿಯನ್ನು ಎಸೆದಂತೆಯೂ, ಬೆಣ್ಣೆ ಹಚ್ಚಿದ ಬದಿಯೇ ಮೇಲೆ ಬಂದಂತೆಯೂ ಕಲ್ಪಿಸಿಕೊಂಡರು. 

ಆ ಸಭಿಕರಲ್ಲಿ ಒಬ್ಬ ಹುಡುಗನಿಗೆ ಮಾತ್ರ ಅದನ್ನು ನಂಬಲಾಗಲಿಲ್ಲ. ಪರೀಕ್ಷೆ ಮಾಡಿಯೇಬಿಡೋಣ ಅಂದುಕೊಂಡು ತನ್ನ ಬಳಿಯಿದ್ದ ರೊಟ್ಟಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆದ. ಆ ರೊಟ್ಟಿ ಕೆಳಗೆ ಬಿತ್ತು. ಆದರೆ ನಸ್ರುದ್ದೀನ್ ಹೇಳಿದಂತೆ ಬೆಣ್ಣೆ ಹಚ್ಚಿದ ಬದಿ ಮೇಲಕ್ಕಿರದೆ, ಕೆಳಗೆ ಮುಖ ಮಾಡಿಕೊಂಡು ಮಣ್ಣಾಯಿತು. ಹುಡುಗ ಅದನ್ನು ತೆಗೆದುಕೊಂಡು ನಸ್ರುದ್ದೀನನ ಮುಂದೆ ಹಿಡಿಯುತ್ತಾ, 'ಎಲ್ಲಿ? ನೀವು ಹೇಳಿದಂತೆ ಆಗಲಿಲ್ಲವಲ್ಲ! ಬೆಣ್ಣೆ ಹಚ್ಚಿದ ಬದಿ ಕೆಳಮುಖವಾಗಿದೆಯಲ್ಲ! ನೀವು ಹೇಳುವುದೆಲ್ಲಾ ಸುಳ್ಳು' ಎಂದ. 

ನಸ್ರುದ್ದೀನ್ ಚೂರೂ ಕಂಗೆಡದೆ ಮುಗುಳ್ನಗುತ್ತಾ, 'ನಾನು ಹೇಳಿದ್ದು ಸರಿಯಾಗೇ ಇದೆ. ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ ಅಷ್ಟೇ’ ಅಂದ! 

(ಕೃಪೆ https://aralimara.com) 

ಸಂಗ್ರಹ - ಇನ್ನಾ 

ಮೌನದ ದನಿ

ಹಸಿರೇ ಉಸಿರಾಗಲಿ
¨ ಎ ಡೇ ಕು 

ಮೊಗ್ಗಿನ ಮುಸುಕಿನಲಿ
ಹೂವೊಂದು ಹಿಗ್ಗುವುದು
ಹಣ್ಣೊಳಗಿನ ಬೀಜದಲಿ
ಮರವೊಂದು ಬಿರಿಯುವುದು 

ಬೀಜ ಬ್ರಹ್ಮಾಂಡದಲಿ 
ಕೋಟಿ ವೃಕ್ಷದ ಸೈನ್ಯ
ಮಣ್ಣ ಪೊರೆಯ ಬಿರಿದು
ಹಸಿರು ಕಣ್ಣ ತೆರೆದು

ಖಗ, ಮೃಗದ ಗೂಡಾಗಿ 
ಸೃಷ್ಟಿಯ ಸೊಬಗಾಗಿ 
ಕ್ರಿಮಿ ಕೀಟಕೆ ನೆಲೆಯಾಗಿ
ಜೀವಾತ್ಮಕೂ ಸೆಲೆಯಾಗಿ

ಮಣ್ಣೊಡಲು ಬಸಿರಾಗಿ
ವನಸಿರಿಯು ಹೊನಲಾಗಿ 
ಎಲೆ ಎಲೆಯ ಲೀಲೆಯಲಿ
ಹಸಿರೆಲ್ಲಾ ಉಸಿರಾಗಿ ! 




Because He lives

Because He lives

Because He lives, I can face tomorrow 

Because He lives, all fear is gone 

Because I know, He holds the future 

And life is worth the living, just because He lives. 


ಬಿಲ್ ಮತ್ತು ಗ್ಲೋರಿಯ ದಂಪತಿಗಳು ಸಂಯೋಜಿಸಿ ರಚಿಸಿರುವ ಈ ಹಾಡು ಚರ್ಚುಗಳಲ್ಲಿ ಆಗಾಗ ಕೇಳುತ್ತಿರುತ್ತದೆ. 1960ರ ಅಸುಪಾಸಿನಲ್ಲಿ ರಚನೆಗೊಂಡ ಈ ಹಾಡು, ಒಂದು ಕುತೂಹಲಕಾರಿ ಕಥೆಯನ್ನು ಗರ್ಭ ಕಟ್ಟಿಕೊಂಡಿದೆ. ವರ್ಷ 1969. ಚಳಿಗಾಲದ ಸಮಯ. ಮನೆಯಲ್ಲಿ ಗಂಡ ಬಿಲ್‍ನ ಅರೋಗ್ಯ ಕೆಟ್ಟಿದೆ. ಈ ಕಡೆ ಧರ್ಮಕೇಂದ್ರದಲ್ಲಿ ಗ್ಲೋರಿಯ ಬಗ್ಗೆ ಸುಳ್ಳು ಅಪಾದನೆಗಳು ಮುತ್ತಿಕೊಳ್ಳುತ್ತವೆ. ಇವಿಷ್ಟು ವೈಯಕ್ತಿವಾದರೆ, ಹೊರ ಜಗತ್ತಿನಲ್ಲಿ ಬೇರೆ ರೀತಿಯದೇ ಸಮಸ್ಯೆ. God is dead ಎಂಬ ಮನೋಭಾವ ಜನರಲ್ಲಿ ಬೇರೂರಿ ದೇವರನ್ನು ಮರೆತಿದ್ದಾರೆ. ಜೊತೆಗೆ ಜನಾಂಗೀಯ ಗಲಭೆಗಳು ಹೆಚ್ಚುತ್ತಿವೆ. ಮಾದಕವಸ್ತು ಸೇವನೆಯು ಜನರಲ್ಲಿ ಅತಿರೇಕವಾಗಿದೆ. ಇಂತಹ ದುಃಸ್ಥಿತಿಯಲ್ಲಿ ಗ್ಲೋರಿಯಾ ಗರ್ಭಿಣಿಯಾಗಿದ್ದಾಳೆ. ಮುಗ್ಧ ಮಗುವಿನ ನಿರೀಕ್ಷೆಯಲ್ಲಿ ದಂಪತಿಗಳಿದ್ದಾರೆ. ಆದರೆ ಅವರಲ್ಲಿ ಒಂದು ಪ್ರಶ್ನೆ ಕಾಡಲಾರಂಭಿಸುತ್ತದೆ: 

ಜಗದ ಈ ದುಃಸ್ಥಿತಿಯಲ್ಲಿ ಮಗುವಿಗೆ ಜನ್ಮಕೊಡುವುದು ಸೂಕ್ತವೇ? 
ಪ್ರಶ್ನೆಯು ಅವರ ಮನಸ್ಸುಗಳನ್ನು ಕೊರೆಯುತ್ತಿದೆ. ಇಬ್ಬರೂ ಭರವಸೆಯನ್ನು ಕಳೆದುಕೊಂಡು ಹತಾಶರಾಗಿದ್ದಾರೆ… 
ಒಂದು ದಿನ ಬಿಲ್ ‍ನ ತಂದೆ ಮನೆಯ ಕೈತೋಟದಲ್ಲಿ ನಡೆಯುತ್ತಿದ್ದಾಗ…ಒಂದು ಲವಲವಿಕೆಯ ದೃಶ್ಯವನ್ನು ಕಂಡು ಮೂಕವಿಸ್ಮಿತರಾಗುತ್ತಾರೆ. ಮಗ ಮತ್ತು ಸೊಸೆಯನ್ನು ಕರೆದು ಅವರು ಕಂಡಿದ್ದನ್ನು ತೋರಿಸುತ್ತಾರೆ. ಹೌದು.. ಒಂದು ಪುಟ್ಟ ಸಸಿ ಕಾಂಕ್ರೀಟ್ ನಡುವೆ ಪ್ರಯಾಸದಿಂದ ಕಾಂಕ್ರೀಟನ್ನು ಮೀರಿ ಮೊಳಕೆಯೊಡೆಯುತ್ತಿರುವ ದೃಶ್ಯ. ಬದುಕಬೇಕೆಂಬ ಬಲವಾದ ಛಲ ಈ ಪುಟ್ಟ ಗಿಡದಲ್ಲಿ ಕಾಣುತ್ತದೆ 

ಈ ಒಂದು ದೃಶ್ಯದಿಂದ ಪ್ರೇರಿತಗೊಂಡ ದಂಪತಿಗಳು Because he lives I can face tomorrow ಎಂಬ ಹಾಡನ್ನು ರಚಿಸುತ್ತಾರೆ. 


ಚಿಕ್ಕರಸಿನಕೆರೆ ಪಾಟಿಸ್ವಾಮಿ ಪವಾಡ

- ಎಫ್.ಎಂ.ನಂದಗಾವ್ 
ಸಾಕ್ಷರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಮ್ಯಾಲ, ನನಗ ಸ್ವಂತ ಜಿಲ್ಲೆಯ ಭೌಗೋಳಿಕ ಜ್ಞಾನದ ಜೋಡಿ ಮತ್ತೊಂದು ನಾಲ್ಕು ಜಿಲ್ಲೆಗಳ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ಜಾನಪದ ಆಚರಣೆಗಳ ತಿಳುವಳಿಕೆ ಸಿಕ್ತು. ಮತ್ತ ಮತ ಮತ್ತ ನನ್ನ ಜ್ಞಾನ ಭಂಡಾರ ಹೆಚ್ಚಾಗೇದ ಅಂದ್ರ ತಪ್ಪೇನೂ ಆಗೂದಿಲ್ಲ. 

ಹಿಂದಿನ ಜಿಲ್ಲಾಧಿಕಾರಿಗಳದ್ದು ಈ ದ ಮ್ಯಾಲ ಭಾಳ ಕಾಳಜಿ. ಹಿಂಗಾಗಿ, ಹಿಡಸ್ಲಿ ಬಿಡ್ಲಿ ಈ ಸಾಕ್ಷರ ಕಾರ್‍ಯಕ್ರಮದ ಮಿಟಿಂಗ್ ಗಳಿಗೆ ಕರೆದಾಗ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳೂ ಸೇರಿದಂಗ, ಸಮಾಜ ಸೇವಕರು, ಆಸಕ್ತರು ತಪ್ಪದ ಹಾಜರಾಗತಿದ್ರು. ಈಗಿನ ಜಿಲ್ಲಾಧಿಕಾರಿಗಳೂ ಹಂಗ ಅದಾರು. ಆದ್ರ ಮೊದ್ಲ ಮೊದ್ಲ. ಹೊಸಾ ಕಾರ್‍ಯಕ್ರ ಅಂದಾಗ, ಹತ್ತಾರು ಎಡರು ತೊಡರೂ ಇದ್ದ ಇರತಿದ್ದವು. ಅವನ್ನೆಲ್ಲಾ ಸಾವರಿಸಿಕೊಂಡ ಈ ಸಾಕ್ಷ ಕಾರ್‍ಯಕ್ರಮ ಮುಂದುವರಿಸಿಕೊಂಡ ಹೋಗ್ಬೇಕಾಗಿತ್ತು. 

ಮುಂಜಾನೆ ಕಾಲೇಜಿನಲ್ಲಿ ಎಲ್ಲಾ ಕ್ಲಾಸ್ ಮುಗಿಸಿಕೊಂಡು ಮಧ್ಯಾನ್ನದಿಂದ ಸಂಜಿಮಟ ಸಾಕ್ಷರ ಕಾರ್‍ಯಕ್ರಮ ಜಾರಿ ಕಚೇರಿಯೊಳಗ ಏಳ ಎಂಟ ತಿಂಗಳ ಕೆಲಸಾ ಮಾಡಿದೆ. ಮುಂದ ಕಲಿಕಾ ಕೇಂದ್ರಗಳ ದೇಖಬಾಲ್ ಅಂದ ಅದ ಉಸ್ತುವಾರಿ ನೋಡಿಕೊಂಡೆ. ಹಂಗ ಸಂಪನ್ಮೂಲ ವ್ಯಕ್ತಿ ಮಾಡಿದ್ರು. ನಮ್ಮ ಜಿಲ್ಲೆ ಅಲ್ಲದ ಬ್ಯಾರೆ ಬ್ಯಾರೆ ಜಿಲ್ಲೆಗಳಲ್ಲಿ ನಡೆಯುವ ವಿಚಾರ ಸಂಕಿರಣ, ಕಮ್ಮಟ ಅಂತ ಅಲ್ಲಿಲ್ಲೆ ಹೋಗತಿದ್ದೆ. ಮೈಸೂರು, ಮಂಗಳೂರು ಇತ್ಯಾದಿ ದೂರದ ಊರಗೋಳಲ್ಲಿ ನಡೆಯೂ ಕಮ್ಮಟಗಳಿಗೂ ಹಾಜರಾಗೂ ಕೆಲಸಾನೂ ನನ್ ಕೊಳ್ಳಿಗೆ ಬಿದ್ದಿತ್ತು. 

ಬಿಜಾಪೂರದಿಂದ (ಈಗ ಅದು ವಿಜಯಪುರ ಆಗಿದೆ) ದೂರದ ಮೈಸೂರಿಗೆ ಈ ಕಮ್ಮಟ, ವಿಚಾರ ಸಂಕಿರಣ ಮುಂತಾದವಕ್ಕ ಹೋಗಾಕ ಒಬ್ಬರೂ ತಯ್ಯಾರ ಇರ್ತಿರಲಿಲ್ಲ. ಜಿಲ್ಲಾಧಿಕಾರಿಗಳು ನನ್ನ ಕರೆಸಿ, `ಮಿಸ್ಟರ್ ದೇಶಪಾಂಡೆ, ನೀವ ಹೋಗ ಬರ್ರಿ' ಅಂದಾಗ, `ಒಲ್ಲರಿ' ಅಂತನ್ನೂದ ಆಗ್ತಿರಲಿಲ್ಲ. ಭೀಡೇಕ ಬಿದ್ದ ಹೂಂ ಅಂತ ಅಂದಂಗಾಗಿತ್ತು. ದಸರಾ ಟೈಮ್ ಬ್ಯಾರೆ. 

ನಂದು ಮಾತಿಗಿಂತ ಉಗಳ ಜಾಸ್ತಿ ಆಯ್ತೇನೋ? ನಾನು ಈಗ ಒಂದ ಕತಿ ಹೇಳುದುಕ್ಕ ಹೊಂಟೀನಿ. ನೀವದಕ್ಕ ಕತಿ ಅಂತಿರೋ ಇಲ್ಲೋ ಗೊತ್ತಿಲ್ಲ ಮತ್ತ. ನನ್ನ ಓಡಾಟದ ಕಂಡುಂಡ ಒಂದು ಊರಾಗೀನ ಪ್ರಸಂಗದ ವರದಿ ಅಂತ ಕೆಲವರಿಗೆ ಅನ್ನಿಸಬಹುದು. ನಾನು ಕಂಡದ್ದನ್ನ ಕಂಡಂಗ, ಕೇಳಿದ್ದನ್ನ ಕೇಳಿದಂಗ ನಿಮ್ಮ ಮುಂದ ಇಡ್ತೀನಿ. ಯಾಕಂದ್ರ ಆ ದಿನಗಳು ನನ್ನ ಮ್ಯಾಲ ಭಾಳ ಪರಿಣಾಮ ಬೀರ್ಯಾವು 

ಕಳೆದ ನಾಲ್ಕರು ವರ್ಷದಾಗ ಮೈಸೂರಿಗೆ ಹತ್ತಾರಸಾರಿ ಹೋಗಿದ್ದೆ. ಸುಮಾರಾಗಿ ಮನಗಂಡ ಗೆಳ್ಯಾರನ್ನ ಮಾಡಕೊಂಡಿದ್ದೆ. ಬ್ಯಾರೆ ಬ್ಯಾರೆ ಊರಗಳ ಕಾರುಕ್ರಮ ಜಾರಿ, ಮೌಲ್ಯ ಮಾಪನ, ವಗೈರೆ ವಗೈರೆ ನಡೆಯುವಾಗ ಒಮ್ಮೆ ರಾಯಚೂರಿಗೆ ಹೋಗಿದ್ದೆ. ಮತ್ತೊಮ್ಮೆ ಮಂಡ್ಯಕ್ಕೆ ಹೋದಾಗ ಒಂದ ಗ್ರಾಮದಾಗ ಅದ ಹಳ್ಯಾಗಿನ ಅಂದ್ರ ಊರಾಗಿನ ಮಂದಿಯ ನಡವಳಿಕೆ ನನ್ನ ಲಕ್ಷ ಸೆಳೆದಿತ್ತು. ಬಾಳ ವಿಚಿತ್ರವಾಗಿ ಕಂಡಿತ್ತು. 

ಪ್ರಾಥಮಿಕ ಶಾಲಾ ಶಿಕ್ಷಕ ಪರ್ವತೇಗೌಡ ಅನ್ನಾವರನ್ನ ಜೋಡಿಮಾಡಕೊಂಡ, ಮಂಡ್ಯ ಜಿಲ್ಲೆಯೊಳಗ ಸುತ್ತಾಡುವಾಗ ಚಿಕ್ಕರಿಸಿನಕೆರೆ ಅನ್ನೂ ಊರಿಗೆ ಹೋಗಿದ್ದೆ. 

ಊರು ಅಂದ್ರ, ಅದೊಂದ ಸಣ್ಣ ಹಳ್ಳಿ. ವಿಚಿತ್ರ ಅನ್ನುವಂಗ ಆ ಊರಾಗಿನ ಒಂದ ಬ್ಯಾರೆ ನಮೂನಿ ಗುಡಿ, ಮತ್ತ ಮುಂದಿನ ಆಲದ ಮರಕ್ಕ ಪಾಟಿಗಳನ್ನ ಜೋತಹಾಕಿದ್ರು. 

ಆ ಗುಡಿ ಆಕಾರ ಬ್ಯಾರೇನ ಇತ್ತು. ಗುಡಿ ಗುಡಿ ಹಂಗ ಇರದ, ಮನಿ ಕಂಡಂಗ ಕಾಣ್ತಿತ್ತು. ಆದರ ಮ್ಯಾಲ ಅಧಿಕ ಚಿನ್ಹಿ ಇತ್ತು. ಅದರ ಉದ್ದ ಕೋಲ ಮಾತ್ರ ಅಡ್ಡಗಿದ್ದ ಕೋಲಗಿಂತ ಭಾಳ ಉದ್ದ ಇತ್ತು. ಅಲ್ಲೆ ಮಗ್ಗಲದಾಗ ಢಾಳಾಗಿ ಕಾಣುವ ಒಂದ ಸಮಾಧಿ. ಅದು ಸಿದ್ಧರ ಸಮಾಧಿ ಇರಬೇಕು. ಅದರ ಮ್ಯಾಲೂ ಒಂದ ಗಣಿತದ ಅಧಿಕ ಚಿನ್ಹಿ ಇತ್ತು. ಅದರ ಮುಂದಿನ ಮರದ ಟೊಂಗಿಗಳಿಂದ ಪಾಟಿಗಳು ಜೋತಾಡತ್ತಿದ್ವು. 

ಭಕ್ತರು ಮಕ್ಕಳಿಗಾಗಿ ಹರಕಿ ಹೊತ್ತವರು ಕೆಲವು ಗುಡಿಗಳ ಮುಂದಿನ ಗಿಡಗೋಳಿಗೆ ತೊಟ್ಟಲಾ ಕಟ್ಟೂದು, ಮದವಿ ಬಯಸಿದವ್ರು ಹಸಿರ ಬಳಿಗಳನ್ನ ಗಿಡಕ್ಕೆ ಕಟ್ಟೂದ ನೋಡಿದ್ದೆ. ಆದ್ರ ಇಲ್ಲಿ ಪಾಟಿ ಕಟ್ಟಿದ್ರು! 

``ಏನ್ ಗೌಡರ ಇದು?'' 

``ಅದು ಒಂದ ದೊಡ್ಡ ಕತಿ ಅದರಿ''. 

ನನ್ನ ಜೋಡಿ ಅಡ್ಡಾಡಿ ಅಡ್ಡಾಡಿ ಪರ್ವತೇಗೌಡನ ನಾಲಗಿ `ರಿ' ಹಾಕುವುದನ್ನ ರೂಢಿಸಿಕೊಂಡಬಿಟ್ಟಿತ್ತು. ಸಂಗತಿ ದೋಷ ನೋಡ್ರಿ. ನಾನು ಅಂವ್ಙಾ ಮಾತಾಡೂ ಧಾಟಿ ಕಲಿಬೇಕಿತ್ತು. ಇಲ್ಲಾ ಅಂವ್ಙಾ ನಾ ಮಾತಾಡೂ ಧಾಟಿ ಕಲ್ಕೋಬೇಕಾಗಿತ್ತು. ನಾನ ಅವನಿಗಿಂತಾ ಹಿರ್‍ಯಾ ಅಲ್ಲೇನ್? ಅದಕ್ಕ ನನ್ನಂಗ ಮಾತಾಡುವಂಗ ಅವನನ್ನ ಮಾಡಬಿಟ್ಟಿದೆ. 

``ಏನ್ರಿ ಕತೆ ಸಾಕ್ಷರ ಕಾರ್‍ಯಕ್ರಮ ಎಲ್ಲಾ ಪಾಟಿಗಳು ಇಲ್ಲೇ ಬಂದಾವೇನು?'' ನನ್ನ ಅನುಮಾನದ ತೆಲಿ ಚುರುಕಾತು. 

``ಅದೇನಲ್ಲ ಬಿಡ್ರಿ, ಇಲ್ಲಿ ಪರಂಗಿ ಪಾದ್ರಿ ದೇವರಾಗಿ ಕೂತಾನ್ರಿ''. 

ನನ್ನ ಟೂಬ್ಲೈಟ್ ತೆಲಿ ಫಕ್ಕನ ಹತ್ತಗೋತು. ಅವು ಗಣಿತದ ಅಧಿಕ ಚಿನ್ನಿ ಅಲ್ಲ. ಅವರು ಕಿರಿಸ್ತಾನರ ಶಿಲುಬಿ ಗುರ್ತುಗಳು. 

ಮಂಡ್ಯ ಈ ಕುಗ್ರಾಮದಾಗ ಈ ಪಾದ್ರಿ? ನನಗ್ಯಾಕೋ ಅನುಮಾನ ಕಾಡಿತು. ಪರ್ವತೇಗೌಡನ ಮಾತು ವಿಚಿತ್ರ ಅನ್ನಿಸಿತು. 

``ಪರಂಗಿ ಪಾದ್ರಿ ಇಲ್ಲೇನ್ ಮಾಡ್ಲಿಕ್ಕೆ ಬಂದಿದ್ದ?'' 

``ಅದರಿ ಸರ್, ಧಾರವಾಡದಾಗ, ಮಡಿಕೇರ್‍ಯಾಗ ಇದ್ರಂತಲಾ ಕಿಟ್ಟೆಲ್ ಪಾದ್ರಿಗಳಂಗ ಈ ಪರಂಗಿ ಪಾದ್ರಿ ಇಲ್ಲಿಗೆ ಬಂದಿದ್ರು''. 

ಮಸಾಲೆ ಪದಾರ್ಥಗಳಿಗಾಗಿ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದ ಯುರೋಪಿಯನ್ನರು ಬೇರೆ ಬೇರೆ ತಂಡಗಳಲ್ಲಿ ಬಂದು ವ್ಯಾಪಾರ ಮಾಡತೊಡಗಿದರು. ಅವರ ಜೋಡಿ ವಿವಿಧ ಪಂಥಗಳಿಗೆ ಸೇರಿದ ಕ್ರೈಸ್ತ ಮಿಷನರಿಗಳು- ಧರ್ಮ ಪ್ರಚಾರಕ ಪಾದ್ರಿಗಳು ಭಾರತ ಉಪಖಂಡದಲ್ಲಿ ಯೇಸುಕ್ರಿಸ್ತರ ತತ್ವ ಪ್ರಚಾರ ಮಾಡಲು ಬಂದರು. ಮತಾಂತರ ಪ್ರಾಥಮಿಕ ಗುರಿ ಆಗಿದ್ರೂ, ಆ ಮಿಷನರಿ ಪಾದ್ರಿಗಳು ತಾವು ನೆಲೆನಿಂತ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಗುಡಿ ಕೈಗಾರಿಕೆ ಮುಂತಾದವನ್ನು ತೆರೆದು ಜನರ ಏಳಿಗೆಗೆ ದುಡಿದರು. ಕೆಲವರು ಭಾಷಾ ಪಾಂಡಿತ್ಯವನ್ನೂ ಗಳಿಸಿದರು. ಅಂಥ ಸಂದರ್ಭದಲ್ಲೇ ಕಿಟ್ಟೆಲ್ ಅವರು ಕನ್ನಡ ನಾಡಿಗೆ ಸಿಕ್ಕರು. ಕ್ರೈಸ್ತ ಧರ್ಮ ಬೋಧನೆಯ ಜೊತೆಗೆ ಜಡಗಟ್ಟಿದ ಸಮಾಜದಲ್ಲಿ ಸಂಚಲನೆ ತಂದುಕೊಟ್ಟರು ಅಂತ ಇತಿಹಾಸದ ಪುಟಗಳು ಹೇಳುತ್ತವೆ. 

ಈ ಪಾದ್ರಿಯೂ ಹಾಗೆಯೇ ಇಲ್ಲಿಗೆ ಬಂದಿರಬೇಕು. 

ಸುಮಾರು ನೂರೈವತ್ತು ವರ್ಷಗಳ ಹಿಂದೆ ಪ್ಲಾಟೆ ಹೆಸರಿನ ಈ ಪಾದ್ರಿ ಅಂದರೆ ಮಿಷನರಿ ಈ ಪ್ರದೇಶಕ್ಕೆ ಬಂದಿದ್ದರು. ಅವರು, ಶ್ರೀರಂಗಪಟ್ಟಣದಲ್ಲಿ ಇದ್ದುಕೊಂಡು, ಅದರ ಆಸುಪಾಸಿನ ಗ್ರಾಮಗಳಲ್ಲಿ ಕ್ರೈಸ್ತ ಧರ್ಮ ಪ್ರಚಾರ ಕಾರ್ಯ ನಡೆಸುತ್ತಿದ್ದರು. 

``ಅವರು ಥೇಟ್ ನಮ್ಮ ಸನ್ಯಾಸಿಗಳಂಗ ಉದ್ದನ ಕಾವಿ ನಿಲುವಂಗಿ ತೊಡತಿದ್ರು. ಕೊಲು, ಕಮಂಡಲು, ಜೋಳಿಗೆ ಜೋಡಿ ಇರತಿದ್ದವು ಅಂತ ನಮ್ಮ ಮುತ್ತಜ್ಜ ಹೇಳತಿದ್ದನಂತ'' ಎಂದು ಪರ್ವತೇಗೌಡ ಕತಿ ಶುರು ಮಾಡಿದಾಗ, ನನಗ ಪೂರ್ತಿ ಕತಿ ಕೇಳಬೇಕು ಅನ್ನಿಸಿತು. 

``ಈ ಪರಂಗಿ ಸ್ವಾಮಿ, ಚಿಕ್ಕ ಚಿಕ್ಕ ಮಕ್ಕಳನ್ನ ಕೂಡಿಸಿಕೊಂಡ ಅವರಿಗೆ ಅ, ಆ, ಇ, ಈ ಕಲಿಸ್ತಿದ್ದ. ದೊಡ್ಡವರಿಗೆ ಸತ್ಯವೇದ ಅಂದ್ರ ಅದರೀ ಬೈಬಲ್ಲಿನಲ್ಲಿರುವ ಕತಿಗಳ್ನ ಹೇಳತಿದ್ರಂತ. ಬ್ಯಾರೆ ಬ್ಯಾರೆ ಜಪ ಹೇಳಕೊಡ್ತಿದ್ದರಂತ, ಜಪಮಾಲಿ ಹೇಳಸ್ತಿದ್ದರಂತ'' ಎಂದು ಪರ್ವತೇಗೌಡ ತಾನು ಕೇಳಿದ್ದ ಸಂಗತಿಗಳನ್ನ ಹೇಳಾಕಹತ್ತಿದ. 



``ಕಾಯಲೆ ಕಸಾಲೆ ಬಂದ್ರ, ಔಷಧಿ ಮಾಡಿಕೊಟ್ಟು ವಾಸಿ ಮಾಡಸ್ತಿದ್ದರು''. 

ಅಲ್ಲಲ್ಲೇ ಧಾರವಾಡ, ಗದಗ್ ನಲ್ಲಿರುವ ಕ್ರೈಸ್ತ ಮಿಷನರಿಗಳು ನಡೆಸುವ `ಜರ್ಮನ್ ದವಾಖಾನಿಗಳು' ಅಂತ ಜನಗಳ ಮನದಲ್ಲಿ ನೆಲೆಯೂರಿದ ದವಾಖಾನಿಗಳು ಮತ್ತ ಮಂಗಳೂರು ಬೆಂಗಳೂರನೊಳಗಿರುವ ಕ್ರೈಸ್ತರ ಆಡಳಿತದಲ್ಲಿರುವ ಈಗಿನ ಹೈಟೆಕ್ ದವಾಖಾನಿಗಳು ನನ್ನ ಕಣ್ಮುಂದ ಮೂಡಿ ಮಾಯವಾದ್ವು. ಈ ಪ್ಲಾಟೆ ಸ್ವಾಮಿ ಔಷಧಿ ಕೊಡುವ ಗೀಳು ಬಹುಶಃ ಇಂದಿನ ದವಾಖಾನಿಗಳ ಬೀಜ ಸ್ವರೂಪ ಅನ್ನಿಸ್ತು. 

``ಸರಳ ಸೌಜನ್ಯದ ನಡವಳಿಕೆಯಿಂದ ಪರಂಗಿ ಸ್ವಾಮಿ ಸುತ್ತಮುತ್ತ ನಾಲ್ಕಾರು ಗ್ರಾಮಗಳೊಳಗಿನ ಗ್ರಾಮಸ್ಥರ ಮನಸ್ಸು ಗೆದ್ದರು. ಅವರ ಪ್ರಭಾವಕ್ಕೆ ಒಳಗಾಗಿ, ಈ ಗ್ರಾಮಗಳೊಳಗಿನ ನೂರಿನ್ನೂರು ಕುಟುಂಬಗಳು ಕ್ರೈಸ್ತ ಧರ್ಮಕ್ಕೆ ಸೇರಿಕೊಂಡವು. ಅವರು ಹೊಸ ಕ್ರೈಸ್ತ ವಿಶ್ವಾಸಿಗಳಾದರು'' ಪರ್ವತೇಗೌಡ ಕತಿ ಮುಂದವರಿಸಿದ್ದ. 

``ಈ ವಿಷಯ ತಿಳಿದ ನಾಲ್ಕೂರ ಒಡೆಯ ನಾಯಕನಿಗೆ ಗೊತ್ತಾದಾಗ, ಅವನಿಗೆ ಸಿಟ್ಟ ಬಂದಿತ್ತಂತ. ಆ ಕಾಲದಾಗ ಇನ್ನೂ ಬ್ರಿಟಿಷ್ ಪೊಲೀಸ್ ಆಡಳಿತ ವ್ಯವಸ್ಥೆ ಬಂದಿರಲಿಲ್ಲ. ಮೈಸೂರು ಅರಸರ ಆಡಳಿ ಇದ್ದರೂ, ದಳವಾಯಿಗಳ ದರ್ಬಾರು ನಡಿತಿತ್ತು. ಅವರು ನಾಲ್ಕಾರು ಊರುಗಳಿಗೆ ಒಬ್ಬೊಬ್ಬು ನಾಯಕರಿಗೆ ದೇಖರೇಕಿ ಮಾಡಪಾ ಅಂತ ಒಪ್ಪಿಸಿರ್ತಿದ್ದರು''. 

``ತನ್ನ ಸಿಟ್ಟಿನ ಭರದಲ್ಲಿ ನಾಲ್ಕೂರು ಒಡೆಯ-ಅದೇ ನಾಯಕ, ಆ ಪರಂಗಿ ಸ್ವಾಮೀನ್ನ ಹಿಡದು ಹೆಡಮುರಿಗೆ ಕಟ್ಟಿ, ತುರಂಗಕ್ಕೆ ತುರುಕಿದ''. 

``ಮೂರ್ನಾಲ್ಕು ತಿಂಗಳು ಕೂಡಿ ಹಾಕಿದ. ಆದು ಮಳೆಗಾಲದ ಸಮಯ. ಆ ಮೂರ್‍ನಾಲ್ಕು ತಿಂಗಳು ನಾಲ್ಕೂರು ಸೀಮೆಯಲ್ಲಿ ಮಳೆ ಬರಲಿಲ್ಲ. ಮಳೆ ಇಲ್ಲ ಬೆಳೆ ಇಲ್ಲ. ನೀರಿಲ್ಲ ನಿಡಿ ಇಲ್ಲ. ದನಕರುಗಳಿಗೆ ಮೇವಿಗೆ, ನೀರಿಗೆ ತ್ರಾಸಾಯ್ತು. ರೈತರು ಕಂಗೆಟ್ಟರು. ನಾಲ್ಕೂರು ನಾಯಕ ಅಂದ್ರೆ ಅದೇ ಆ ಪಾಳೆಗಾರನಿಗೂ ಹೊಟ್ಟಿಬ್ಯಾನಿ ಶುರುವಾಗಿತ್ತು. ಅವನಿಗೆ ಏನು ಮಾಡಬೇಕೆಂದು ಗೊತ್ತಾಗದೇ ಸಂದಿಗ್ಧದಲ್ಲಿದ್ದ''. 

``ಸುತ್ತಲಿನ ಮುಗ್ಧ ಗ್ರಾಮಸ್ಥರು, - ಆ ಪರಂಗಿ ಸ್ವಾಮಿ, ಸಾಧವನ್ನ ತುರಂಗಕ್ಕೆ ಹಾಕಿದ್ರಿಂದ ಹಿಂಗ ಆಗೇದ. ಮಳೆರಾಯ ಮುನಿಸಿಕೊಂಡಾನ- ಅಂತ ಮಾತಾಡ್ಲಿಕ್ಕೆ ಹತ್ತಿದರು. ನಾಲ್ಕೂರ ನಾಯಕನಿಗೆ ಒಳಗೊಳಗೆ ಅಂಜಿಕಿ ಆಗಾಕಹತ್ತಿತ್ತು. ಅಂವಾ ಅಂಜಿಕೊಂಡ. ಏನಾರ ಆಗ್ಲಿ ಅಂತಂದು ಅವರನ್ನ ಬಿಟ್ಟ ಬಿಟ್ಟ''. 

``ಪವಾಡ ಅನ್ನೂಹಂಗ, ಅವರು ಅದ ಪರಂಗಿ ಸ್ವಾಮಿ ಅದೇ ಪಾದ್ರಿ ತುರಂಗವಾಸದಿಂದ ಹೊರಗೆ ಬಂದು ತಮ್ಮ ಮನಿ ಸೇರ್‍ಕೊಳ್ಳುದುಕ್ಕೂ, ಅತ್ತ ಮಳೆ ಬರೂದಕ್ಕೂ ಸರಿಹೋಯ್ತು ಅಂತ ಹೇಳ್ತಾರ ಮಂದಿ''. 

``ಆ ಪರಂಗಿ ಪಾದ್ರಿ- ಸ್ವಾಮಿ ಪವಾಡ ಪುರುಷ ಆಗಿ ಬಿಟ್ಟ''. 

``... ... ...'' 

ಪರ್ವತೇಗೌಡನ ಈ ಕತಿ ನಂಬಲೋ ಬ್ಯಾಡೋ ಅನ್ನೊ ಗೊಂದಲದಲ್ಲಿದ್ದ ನಾ ದಂಗ ಹೊಡದ ನಿಂತಿದ್ದೆ. ಏನೂ ಪ್ರತಿಕ್ರಿಯೆ ತೋರಿಸಲಿಲ್ಲ. 

ನಾನು ಮಾತಾಡದೇ ಇದ್ದುದನ್ನು ನೋಡಿ, ಆ ಕತಿ ನನ್ನ ಮೇಲೆ ಏನೂ ಪರಿಣಾಮ ಮಾಡಿರಾಕಿಲ್ಲ ಎಂಬ ಭಾವನೆ ಪರ್ವತೇಗೌಡನಲ್ಲಿ ಮೂಡಿರಬೇಕು. ಅಂವಾ ತಾನು ಕೇಳಿದ್ದ ಆ ಪಾದ್ರಿಯ ಇನ್ನೊಂದು ಪವಾಡದ ಕತಿ ಹೇಳ್ಳಿಕ್ಕೆ ಶುರು ಮಾಡಿದ. 

``ಈ ಪರಂಗಿ ಪಾದ್ರಿ ಪ್ಲಾಟೆ ಸ್ವಾಮಿ ತೀರಿಕೊಂಡರು. ಆಗಲೂ ಒಂದು ಪವಾಡ ನಡೀತು. ಅಲ್ಲಿನ ಕಿರಿಸ್ತಾನರು ಪಾದ್ರಿಗಳ ಅಂತಿಮ ಇಚ್ಛೆಗೆ ಅನುಸಾರ, ಅವರು ನಿತ್ಯ ಪೂಜೆ ಪುನಸ್ಕಾರ ಮಾಡುತ್ತಿದ್ದ ಆ ಪುಟ್ಟ ಗುಡಿಯಲ್ಲೇ, ಅಂದ್ರೆ ಗುಡಿ ಅಂಗಳದಲ್ಲಿ ಸಮಾಧಿ ಮಾಡಿದ್ರು''. 

``ಆಗ ಮಳೆಗಾಲ. ತಿಂಗಳೊಪ್ಪತ್ತು ಮಳೆ ಬಂದಿರಲಿಲ್ಲ. ಹಿಂದಿನ ಸಿಟ್ಟನ್ನು ಮನಸ್ಸಲ್ಲೇ ಇಟ್ಟುಕೊಂಡಿದ್ದ ನಾಲ್ಕೂರ ಒಡೆಯ ತನ್ನ ಜೊತೆಗೆ ಒಂದಿಷ್ಟು ಜನ ಸೇರಿಸಿಕೊಂಡು ಗುಡಿ ಬಗ್ಗೆ ಕತಿ ಕಟ್ಟಿದರು. ಮಳೆ ಬಾರದ್ದಕ್ಕೆ ಊರಲ್ಲಿ ಹೆಣ ಹೂತ್ತಿದ್ದೇ ಕಾರಣ. ಇದು ಘನಘೋರ ತಪ್ಪು. ಹಂಗಂತ ಸುದ್ದಿ ಹಬ್ಬಿಸಿದ್ರು. ಹೂತ ಹೆಣ ಹೊರಗ ತಗದು ಬ್ಯಾರೆ ಕಡೆ ಹೂಳಾಕ ಗಂಟ ಬಿದ್ರು. ಅದು ಸಾಧ್ಯ ಆಗದು ಅಂದಾಗ, ರಾತ್ರೊ ರಾತ್ರಿ ಹೆಣಾ ಹೊರಗ ತಗದು ಬ್ಯಾರೆ ಕಡೆ ಹೂಳಾಕ ಹೊಂಚ ಹಾಕಿದ್ರು''. 

``ಊರಲ್ಲಿ ಹೆಣಾ ಹೂಳಿದ್ರಿಂದ ಮಳೆ ಬಂದಿಲ್ಲ. ಊರು ಮುಡಚಟ್ಟೆ ಆಗೇದ. ಹೆಣಾ ಹೊರಗ ತಗದು ನಾಲ್ಕ ತುಕಡಿ ಮಾಡಿ ನಾಲ್ಕೂ ದಿಕ್ಕಿಗೆ ಹಾಕಿದರ ಮಳಿ ಬರ್ತದೆ- ಎಂದು ಪುಕಾರು ಹಬ್ಬಿಸಿದರು. ಒಂದ ದಿನಾ ಮಟಮಟ ಮಧ್ಯಾನ್ನ ಗುದ್ದಲಿ ಸಲಕಿ ಜೋಡಿ ಇಪ್ಪತ್ತ ಮೂವತ್ತ ಜನ ಗಂಡಾಳುಗಳು ಗುಡಿಯ ಅಂಗಳಕ್ಕೆ ನುಗ್ಗಿದರು. ಇನ್ನೇನು ಸಮಾಧಿಕಲ್ಲು ಕೀಳಬೇಕು, ಅಷ್ಟರಾಗ ಕಪ್ಪು ಮೋಡ ಸೇರಿದವು. ಅದರ ಹಿಂದ ಧಾರಾಕಾರ ಮಳಿ ಸುರೀತಂತ್ರಿ'' ಎಂದು ಪರ್ವತೇಗೌಡ ಹೇಳಿದ. 

ನಾನು ಆಗಾಗ ಹೂಂ ಹೂಂ ಅಂತಿದ್ದೆ. 

ಕತಿ ಮುಂದವರಿದಿತ್ತು. 

``ಗುದ್ದಲಿ ಸಲಿಕಿ ಜೋಡಿ ಬಂದ ಜನರನ್ನ ನೋಡಿ, ಅಲ್ಲೇ ದೂರದಲ್ಲಿ ಗಡಾಗಡಾ ನಡಗಿಕೋತ ನಿಂತಿದ್ದ ಕಿರಿಸ್ತಾನರು ದೇವರಿಗೆ ಕೃತಜ್ಞತೆ, ಸ್ತೋತ್ರ ಸಲ್ಲಿಸತೊಡಗಿದರು. ಗುಡ್ಯಾಗ ಸೇರಿ ಕೃತಜ್ಞಾತಾ ಭಾವದಿಂದ ಪ್ರಾರ್ಥನೆ ಮಾಡಿದ್ರು. ಅವರೊಂದಿಗೆ ಹೆಣಾ ಹೊರಗ ತೆಗ್ಯಾಕ ಬಂದಿದ್ದವರೂ ಪ್ರಾರ್ಥನಾ ಸಲ್ಲಿಸಿದ್ರು. ಎಲ್ಲರೂ ಸೇರಿ ಖುಷಿ ಬಂದ ಕರ್ತನ ಶ್ಲೋಕ ಪಠಿಸಿದರು. ನಿರಂಬಳ ಮನಸ್ಸಿನಿಂದ ಬಂದವರು ತಮ್ಮ ತಮ್ಮ ಮನಿಗಳಿಗೆ ಹಿಂದಕ್ಕ ಹ್ವಾದರು.''. 

``ಈ ಪವಾಡ ಸದೃಶ ಪ್ರಸಂಗ ಮಂದಿ ಮನಸ್ಸಿನ್ಯಾಗ ಗ್ವಾಡ್ಯಾಗ ಮಳಿ ಹೊಡದವರಂಗ ಗಟ್ಟಿ ಕೂತಿತು. ಈ ಗುಡ್ಯಾಗಿ ಸಮಾಧಿ ಮಾಡಿದ್ದ ಸ್ವಾಮಿ ಪವಾಡ ಪುರುಷ ಆದ''. 

``ಈಗಲೂ ಮಳೆ ಬರದಿದ್ರ ಈ ಊರವರ ಜೋಡಿ ಸುತ್ತಮುತ್ತ ಇರೂ ಊರವರು ಸೇರ್ಕೊಂಡ ಇಲ್ಲಿಗೆ ಬಂದ ಪ್ರಾರ್ಥನಾ ಸಲ್ಲಿಸ್ತಾರ''. 

ಪರ್ವತೇಗೌಡನ ಈ ಐತಿಹ್ಯದ ರೋಚಕ ಕತಿ ಮುಗಿಯುವ ಹಂತಕ್ಕ ಬಂದಿತ್ತು. 

ಪರಂಗಿ ಪಾದ್ರಿಯೊಬ್ಬ ನೂರು ವರ್ಷ ಕಳಿಯೂದರಾಗ ಮಳೆ ತರುವ ದೈವ ಆಗಿದ್ದ, ಮತ್ತ ಈ ಪಾಟಿಗಳು? 

ನನ್ನ ಮುಖಭಾವದಿಂದ ಪ್ರಶ್ನೆ ತಿಳಕೊಂಡ ಪರ್ವತೇಗೌಡ, ``ಈ ಊರಾಗ ನಮ್ಮ ಅಕ್ಷರ ಕಲಿಕಾ ಕೇಂದ್ರಗಳು ಇಲ್ಲ. ಆದರೆ ಸುತ್ತಲ ಊರಾಗ ಇರುವ ಕಲಿಕಾ ಕೇಂದ್ರಗಳಲ್ಲಿ ಕೆಲಸ ಮಾಡೂ ಸ್ವಯಂ ಸೇವಕರು ಇಲ್ಲಿಯವರು'' ಎಂದ. 

ಪರ್ವತೇಗೌಡನ ವಿವರಣೆ ನನ್ನ ಮನಸ್ಸಿನ್ಯಾಗ ಮೂಡಿದ್ದ ಪ್ರಶ್ನೆಗೆ ಸೂಕ್ತ ಸಮಜಾಯಿಷಿ ನೀಡುವ ಉತ್ತರ ಅಂತ ಅನ್ನಿಸಲಿಲ್ಲ. 

ಅಷ್ಟರಾಗ, ಪರ್ವತೇಗೌಡ ಮಾತ ಮುಂದುವರಿಸಿದ್ದ ... 

``ಈ ಪ್ಲಾಟೆ ಪಾದ್ರಿ, ಹಿಂದ ಮಕ್ಕಳನ್ನ ಕೂಡಿಸಿಕೊಂಡ, ಅ, ಆ, ಇ, ಈ ಹೇಳಿಕೊಡ್ತಿದ್ದ. ದೊಡ್ಡವರು ಮಕ್ಕಳ ಜೋಡಿ ಬಂದ ಅಕ್ಷರ ತೀಡತಿದ್ದರು. ಅವರ ಕಲಿಸುವ ಪದ್ಧತಿ ಬಾಳ ಸರಳ ಇತ್ತಂತ''. 

``ಅದಲ್ಲದ, ಕಾಯಿಲೆ ಕಸಾಲೆಗೆ ಔಷಧಿ ಕೊಡತ್ತಿದ್ದ ಆ ಸ್ವಾಮಿ, ಗೋಮಾಳದಾಗ ಅಲ್ಲಲ್ಲಿ ಆಲದ ಮರಗಳಿದ್ವು. ಈ ಪರಂಗಿ ಸ್ವಾಮೊ- ಪಾದ್ರಿ ಸಂತೆ ನಡೆವ ಮೈದಾನದಾಗ, ಗೋಮಾಳದ ದಂಡಿಗೆ ನೆರಳಿಗೆ ಮರಗಳನ್ನ ನೆಡಸಿದ್ರಂತ. ಅವು ಈಗಲೂ ಅದಾವಂತ. ಗುಡಿಯ ಮಗ್ಗಲದ ಆಲದ ಮರ ಅವರೇ ನೆಟ್ಟಿದ್ದು ಅಂತ ಹೇಳ್ತಾರ''. 

ಪರ್ವತೇಗೌಡನ ಕತಿ, ಪಾದ್ರಿಯ ನಡವಳಿಕೆ ಒಂದ ರೀತಿಯೊಳಗ ಶತಮಾನದ ಹಿಂದಿನ ಸಮಾಜಸೇವಕನ ಗಾಂವಟಿ ಶಾಲೆಯೊಂದರ ಚಿತ್ರ ನನ್ನ ತೆಲ್ಯಾಗ ಮೂಡಿಸತೊಡಗಿತ್ತು. 

``ಆ ಪರಂಗಿ ಪಾದ್ರಿ ತಮ್ಮೊಂದಿಗೆ ತಂದಿದ್ದ ಬೈಬಲ್ ಪುಸ್ತಕದ ವಿವರಗಳ್ನ ಕನ್ನಡಕ್ಕೆ ತರ್ಜುಮೆ ಮಾಡಿ, ಅವನ್ನ ಅವರೆದುರು ಓದುತ್ತಿದ್ರು. ಕೆಲವು ದೇವರ ಸ್ತೋತ್ರದ ಹಾಡುಗಳ್ನ ಸ್ಥಳೀಯ ಜಾನಪದ ಹಾಡುಗಳ ಮೆಟ್ಟುಗಳ ಧಾಟಿಯಲ್ಲಿ ಹಾಡತಿದ್ರು, ಹಾಡಸ್ತಿದ್ರು. ಆ ಪಾದ್ರಿಯ ಸ್ಮರಣೆ ಎಂಬಂತೆ, ಗ್ರಾಮದ ಪ್ರತಿಯೊಂದು ಕುಟುಂಬದವರು, ತಮ್ಮ ಮನ್ಯಾಗಿನ ಮಕ್ಕಳು ಮೊದಲಸಾರಿ ಶಾಲೆಗೆ ಕಳಿಸುವಾಗ ಇಲ್ಲಿಗೆ ಬಂದು ಬೇಡಿಕೊಳ್ತಾರ. ಈ ಮರಕ್ಕೊಂದು ಪಾಟಿ ಕಟ್ಟಿ ಆಶೀರ್ವಾದ ಕೇಳಿಕೊಳ್ತಾರ'' ಎಂದ ಪರ್ವತೇಗೌಡ, ``ಇದು ಉಳ್ಳವರ, ಸ್ಥಿತಿವಂತರ ಮಾತು'' ಅಂತಂದು ಅದಕ್ಕೊಂದು ಬಾಲ ಸೇರಿಸಿದ್ದ. 

``ಇನ್ನು ಬಡವರ ಮಕ್ಕಳು, ಪ್ಲಾಟೆ ಸ್ವಾಮಿಗಳ ಕೃಪೆ ಅಂತ ಹೇಳಿಕೊಂಡು ಆ ಮರಕ್ಕೆ ತೂಗು ಹಾಕಿದ್ದ ಪಾಟಿಗಳನ್ನ ಇಳಿಸಿಕೊಂಡು ಶಾಲೆಗೆ ಹೋಗ್ತಾವ್ರಿ''. 

``ಈ ನಾಲ್ಕೂರಾಗಿನ ಕಿರಿಸ್ತಾನರು ಸೇರಿದಂಗೆ ಉಳಿದ ಕೋಮಿನ ಜನರಿಗೆ ಸಾಕಷ್ಟು ಅಕ್ಷರ ಜ್ಞಾನ ಇದೆ. ಪ್ರಾಥಮಿಕ, ಪ್ರೌಢ ಶಾಲೆ ಓದು ಪೂರ್ತಿ ಮುಗಿಸದೇ ಇದ್ರೂ, ಓದು ಬರಹ ತಿಳಿದವರು. ಹೀಗಾಗಿ ಅಕ್ಷರ ಕಲಿಕಾ ಕೇಂದ್ರಗಳು ಇಲ್ಲಿಲ್ರಿ.'' 

ಈ ಮಾತಿಗೆ ಪರ್ವತೇಗೌಡನ ಕತಿ ಮುಗಿದಿತ್ತು. 

ಈಗ ಬಹುತೇಕ ಎಲ್ಲಾ ಊರಾಗೂ ಸರ್ಕಾರಿ ಸಾಲಿ ಅದಾವು. ಮತ್ತ ದೊಡ್ಡ ದೊಡ್ಡ ಊರಾಗ ಇಂಗ್ಲಿಷ್ ಮಾಧ್ಯಮದ ಸಾಲಿಗಳಂತೂ ಮನಾರ ತುಂಬ್ಯಾವ. 

ಬಾಳ ಹಿಂದ ನಮ್ಮ ಕಡಿ ಸರ್ಕಾರಿ ಸಾಲಿಗಳು ಇರಲಿಲ್ಲ. ದೊಡ್ಡ ದೊಡ್ಡ ಊರಾಗ ಒಂದೂ ಎರಡೋ ಇದ್ದವಂತ. ಅಲ್ಲಿ ಇಲ್ಲಿ ನಾಲ್ಕಾರು ಮಠಗಳಲ್ಲಿನ ಐನೋರು ಅಕ್ಷರ ಕಲಸ್ತಿದ್ರಂತ. ಪಾಟಿ ಇಲ್ಲ ಬಳಪಾ ಇಲ್ಲ. ಉಸುಕಿನ ರಂಗೋಲಿ ಹಾಕ್ಕೋತ, ಬೆರಳಿಂದ ಮೂಡಿಸಿಗೋತ - ರ ಠ ಈ ಕ ಕಲಸ್ತಿದ್ರಂತ. ಮುಂದ ಪಾಟಿ ಬಳಪ ಬಂದವು. 

ಆಮ್ಯಾಲ ಒಬೊಬ್ಬರ ಗಾಂವಟಿ ಸಾಲಿ ನಡಸ್ತಿದ್ರಂತ. ತಾವೇ ಸಾಲಿ ನಡಸೂದು ಸರ್ಕಾರ ಅದಕ್ಕ ಪರವಾನಿಗಿ ಕೊಡೂದ ನಡಿತ್ತಿತ್ತು. ಏನ ಆದ್ರೂ, ಸರ್ಕಾರಿ ಸಾಲಿಗಳಂಗ ಆಗ್ತಿರಲಿಲ್ಲ. ದೊಡ್ಡ ದೊಡ್ಡ ಮಂದಿ ಮಕ್ಕಳಿಗೆ ಅಕ್ಷರ ಜ್ಞಾನ ಸಿಗ್ತಿತ್ತು. ಸರ್ಕಾರಿ ಸಾಲಿಗಳು ಬಂದ ಮ್ಯಾಲ ಎಲ್ಲಾರೂ ಕಲಿವಂಗಾಯ್ತು. 

ಆದರ, ಇದನ್ನ ಈ ಪರಂಗಿ ಸ್ವಾಮಿ ನೂರೈವತ್ತ ವರ್ಷಗಳ ಹಿಂದ ಮಾಡಿ ತೋರಿಸಿದ್ದ! 

ಈ ಸ್ವಾಮಿ ವಿದೇಶಿಯನಾದರೇನು? ನೂರೈವತ್ತು ವರ್ಷಗಳ ಹಿಂದ ಸಾಮಾಜಿಕ ಕಳಕಳಿ ಹೊಂದಿದ್ದನ್ನ ಮರೆಯುಹಂಗಿಲ್ಲ. 

ನೆರಳಿಗೆ ಅನುಕೂಲವಾಗ್ಲಿ ಅಂತ ಮರ ನೆಟ್ಟಿದ್ದು, ಮಕ್ಕಳು ಮರಿಗಳಿಗೆ ಅಕ್ಷರ ಜ್ಞಾನ ಕೊಡಾಕ ಮುಂದಾದದ್ದು, ಎಲ್ಲಾ ಆಸಕ್ತಿ ಮೂಡಿಸುವ ಸಂಗತಿಗಳು. ಆ ಕಾಲಕ್ಕೆ ಬಹಳ ಹೊಸತನ ಎನ್ನುವ ಇಂಥ ವಿಚಾರಗಳನ್ನ ಅಂದಿನ ಜನ ಹ್ಯಾಂಗ ನೋಡಿದ್ರೋ? ಸ್ವೀಕರಿಸಿದ್ರೋ? ಗೊತ್ತಿಲ್ಲ. ಅಧ್ಯಯನಕ್ಕೆ ಒಂದು ವಸ್ತು ಆಗುವಂಥದ್ದು ಇದು. 

ಈ ಸ್ವಾಮಿಗಳಂಥವರ ಮುಂದ `ಕಾಮಾ ಪುರ್ತೆ ಮಾಮಾ' ಅನಕೋತ ಕಾಟಾಚಾರದಿಂದ ಕೆಲಸ ಮಾಡಕೋತ ಕೂಡು ಕಾಮಚೋರ ಮಂದೀನ್ನ ಏನ ಮಾಡಬೇಕು? ಆ ದೇವರಿಗೆ ಗೊತ್ತು. ನಂಗಂತೂ ಅಕ್ಷರ ಕಲಿಕೆ, ವಯಸ್ಕರ ಶಿಕ್ಷಣ ಕಾರ್‍ಯಕ್ರಮ ಜಾರಿ ಹೆಸರಲ್ಲೇ, ಕೆಲಸ ಮಾಡದ ಸರ್ಕಾರಿ ರೊಕ್ಕ ಖರ್ಚ ಮಾಡಕೋತ ಚೈನಿ ಹೊಡಿಯುವ ಮಂದೀನ್ನ ನಿವಾಳಿಸಿ ಒಗೀಬೇಕು ಅನ್ನಿಸ್ತು. 

ಪರ್ವತೇಗೌಡ, ಗೌರವಾದರಗಳೊಂದಿಗೆ ಆ ಪುನೀತ ಸ್ವಾಮಿಯ ಸಮಾಧಿಗೆ ನಮಸ್ಕಾರ ಮಾಡಿ ಅಲ್ಲಿನ ಮಣ್ಣನ್ನ ತನ್ನ ಹಣೀಗೆ ಹಂಚಿಕೊಂಡ. 

ನನಗೂ ಆ ಸ್ವಾಮಿ ಮಾಡಿದ ಕೆಲಸ ಹಿಡಿಸ್ತು. ಸರ್ಕಾರ ಮಾಡೂ ಕೆಲಸ ತಾನ ಮಾಡಿದ್ದ. ನೂರೈವತ್ತು ವರ್ಷಗಳ ಹಿಂದ ಅಕ್ಷರ ಕಲಿಸಾಕ ಮುಂದಾಗಿದ್ದ ಆ ಮಹಾಚೇತನದ ಸಮಾಧಿಗೆ ನಾನೂ ಅಡ್ಡಬಿದ್ದೆ. 

ಸಾಕ್ಷರ ಕಾರ್‍ಯಕ್ರಮದ ಮುಂದ ಸಾಕ್ಷರೋತ್ತರ ಕಾರ್‍ಯಕ್ರಮ ಇತ್ತು. ಅದು ಬಂತು ಹೋಯ್ತು. ಹೊಸ ಜಿಲ್ಲಾಧಿಕಾರಿ ಬಂದ ಮ್ಯಾಲ ನಾನು ಆ ಕಾರ್‍ಯಕ್ರಮದಿಂದ ದೂರ ಉಳಿದೆ. ಆದ್ರ ಸಾಕ್ಷರ ಕಾರ್‍ಯಕ್ರಮದಾಗ ಇದ್ದಾಗ ಮಂಡ್ಯದ ಜಿಲ್ಲೆಯ ಆ ಹಳ್ಳಿಗೆ ಭೆಟ್ಟಿ ಕೊಟ್ಟಿದ್ದು, ಆ ಸ್ವಾಮಿಯ ಸಮಾಧಿಗೆ ಭೆಟ್ಟಿ ಕೊಟ್ಟದ್ದು ಮರಿಲಿಕ್ಕೆ ಆಗವಲ್ತು. 

(2006ರಲ್ಲಿ ಪ್ರಕಟವಾದ `ಗಂಟಿಗುಡಿಗೆ ಹ್ವಾದವರ ಶುದ್ಧೀಕರಣ' ಕಥಾ ಸಂಕಲನದಲ್ಲಿನ ಕತೆ. ಇದೇ ಕತೆ, `ಪಾಟಿ ಗಿಡ' ಹೆಸರಲ್ಲಿ ಸುಧಾ ವಾರ ಪತ್ರಿಕೆ (28 ಡಿಸೆಂಬರ್ 2006ರಲ್ಲಿ ಪ್ರಕಟಗೊಂಡಿದೆ.) 



******* 

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು

- ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)
ಸ್ವಾತಂತ್ರ್ಯ ಪೂರ್ವದಲ್ಲಿ ಕ್ರೈಸ್ತರು: 

ಮಿಷನರಿಗಳ ಆಗಮನಕ್ಕೂ ಮುಂಚೆ ಅಂದರೆ ಮೂರನೇ ಶತಮಾನದಲ್ಲೇ ಕ್ರೈಸ್ತ ಧರ್ಮವನ್ನು ಭಾರತಕ್ಕೆ ಹೊತ್ತು ತಂದವನೇ ಸಂತ ಥೋಮಸ್. ಸುಮಾರು ಎರಡು ಮತ್ತು ಮೂರನೇ ಶತಮಾನದಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ಕ್ರೈಸ್ತರು ಅನುಭವಿಸುತ್ತಿದ್ದ ಚಿತ್ರಹಿಂಸೆಯನ್ನು ಇತಿಹಾಸದ ಪುಟಗಳನ್ನು ತಿರುವಿದಾಗ ನೋಡುವುದಾದರೆ, ಪ್ರಾಚೀನ ಶತಮಾನಗಳಲ್ಲಿ ಕ್ರೈಸ್ತರು ಭಯದ ದವಡೆಗೆ ಸಿಲುಕಿ ರೋಮ್ ಮತ್ತು ಇತರೆ ದೇಶಗಳಲ್ಲಿ ರೋಮನ್ನರು ನೀಡುತ್ತಿದ್ದ ಚಿತ್ರಹಿಂಸೆಯನ್ನು ಮೌನವಾಗಿ ಅನುಭವಿಸುತ್ತಿದ್ದರು. 

ಅಂದಿನ ದಿನಗಳಲ್ಲಿ ಯಾವುದೇ ಕಾರಣವಿಲ್ಲದಿದ್ದರೂ ಕ್ರೈಸ್ತರನ್ನು ಬಹು ಕ್ರೂರವಾಗಿ ದಂಡಿಸಲಾಗುತ್ತಿತ್ತು. ಅನ್ಯ ದೇವರುಗಳನ್ನು ಆರಾಧಿಸುವಂತೆಯೂ ಮತ್ತು ಅಮಾಯಕರನ್ನು ಕೊಲ್ಲುವಂತೆಯೂ ಒತ್ತಾಯಿಸಲಾಗುತ್ತಿತ್ತು. ಇತರರು ಗೈದ ತಪ್ಪನ್ನು ಕ್ರೈಸ್ತರ ಮೇಲೆ ಹೊರಿಸುತ್ತಾ ತಪ್ಪಿತಸ್ಥರ ಸಾಲಿನಲ್ಲಿ ನಿಲ್ಲಿಸುವುದು, ಪಾಪಮಯವಾದ ಕೃತ್ಯಗಳನ್ನು ಎಸಗಲು ಒತ್ತಾಯಿಸುವುದು, ಅದನ್ನು ಒಪ್ಪದೆ ಪ್ರತಿಕ್ರಿಯಿಸಿದರೆ ಅದರ ಪರಿಣಾಮವಾಗಿ ಗಲ್ಲುಶಿಕ್ಷೆ, ಮರಣದಂಡನೆ, ಜೀವಂತವಾಗಿ ಶಿಲುಬೆ ಮೇಲೆ ಜಡಿಯುವುದು, ಹಸಿದ ಕ್ರೂರ ಪ್ರಾಣಿಗಳ ಬಾಯಿಗೆ ಎಸೆಯುವುದು, ಮುಳ್ಳಿನ ಚಾಟಿಗಳಿಂದ ಹೊಡೆಯುವುದು, ಈಟಿಗಳಿಂದ ತಿವಿಯುವುದು, ಚೂಪಾದ ಅಸ್ತ್ರಗಳಿಂದ ಚುಚ್ಚುವ ಮೂಲಕ ಕ್ರೈಸ್ತರನ್ನು ಹಿಂಸಿಸಿ ಕೊಲ್ಲಲಾಗುತ್ತಿತ್ತು ಎಂಬಿತ್ಯಾದಿ ಮಾಹಿತಿಯನ್ನು 'ಚರ್ಚ್ ಇತಿಹಾಸ' ಎಂಬ ಪುಸ್ತಕದಲ್ಲಿ ಕಾಣಬಹುದು. 

ಜೊತೆಗೆ, 70-72ನೇ ದಶಕಗಳಲ್ಲಿ ಅಂದರೆ ರೋಮನ್ನರ ಆಳ್ವಿಕೆಯಲ್ಲಿ ಪ್ರೇಕ್ಷಕರ ಮನರಂಜನೆಗಾಗಿ ಅಂದಿನ ರೋಮನ್ ಚಕ್ರಾಧಿಪತಿ ವೆಸ್ಪೆಸಿಯನ್ ಎಂಬುವನು (The largest amphitheater in the Roman world) 'ಕೊಲೋಸ್ಸಿಯಮ್' ಎಂಬ ಥಿಯೇಟರನ್ನು ರೋಮನ್ ಜನರ ಮನರಂಜನೆಗಾಗಿ ನಿರ್ಮಿಸಿದ್ದನು. ಅಲ್ಲಿ ನಡೆಯುವ ಸ್ಪರ್ಧೆಗಳನ್ನು ವೀಕ್ಷಿಸಿ ಮನರಂಜನೆ ಪಡೆಯಲು ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದರು. ಭಯಾನಕ ಆಟೋಟ ಸ್ಫರ್ಧೆಗಳು ನಡೆಯುತ್ತಿದ್ದವು. ರೋಮನ್ ಅಧಿಕಾರಿಗಳು ತಮ್ಮ ಕ್ರೀಡಾ-ವಿನೋದಗಳ ಮಧ್ಯದಲ್ಲಿ ಕ್ರೈಸ್ತರನ್ನು ಹಿಂಸಿಸುವ ಸಲುವಾಗಿ ಅವರನ್ನು ಹಸಿದಿದ್ದ ಕ್ರೂರಪ್ರಾಣಿಗಳಾದ ಸಿಂಹ, ಹುಲಿ, ಚಿರತೆಗಳ ಬಾಯಿಗೆ ಎಸೆಯುತ್ತಾ ಅವರ ಚೀರಾಟ ಮತ್ತು ತೊಳಲಾಟದಲ್ಲಿ ವಿಕೃತಾನಂದ ಅನುಭವಿಸುತ್ತಿದ್ದಂತಹ ಸನ್ನಿವೇಶ ಹಾಗೂ ಸಂದರ್ಭಗಳ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿ ಅವರು ಅನುಭವಿಸಿದಂತಹ ಚಿತ್ರಹಿಂಸೆಯ ಘಟನೆಗಳನ್ನು ಓದುವಾಗ ಎಂಥವರಿಗೂ ಕರುಳು ಕಿತ್ತು ಬಂದತಾಗುತ್ತದೆ. 

ಹೀಗೆ ಪ್ರಾರಂಭದ ಶತಮಾನಗಳಲ್ಲಿ ಎಷ್ಟೋ ಕ್ರೈಸ್ತರು ಶಿಕ್ಷಣದಿಂದ ವಂಚಿತರಾಗಿದ್ದುದರ ಜೊತೆಗೆ ಎಲ್ಲೆಡೆ ಹಿಂಸೆ, ಬಡತನ ಮತ್ತು ನಿರುದ್ಯೋಗ ತಾಂಡವಾಡುತ್ತಿತ್ತು. ಕ್ರಮೇಣ ಹಲವು ವರ್ಷಗಳ ನಂತರ ವಿವಿಧ ಉದ್ಧೇಶಗಳೊಂದಿಗೆ ಪ್ರಪಂಚದ ವಿವಿಧ ಮೂಲೆಗಳಿಂದ ಮಿಷನರಿಗಳು ಭಾರತಕ್ಕೆ ಬರಲು ಪ್ರಾರಂಭಿಸಿದರು. 

ಮಿಷನರಿಗಳ ಆಗಮನ : 

ಕ್ರೈಸ್ತ ಧರ್ಮದ ಪ್ರಚಾರವನ್ನೇ ಪ್ರಧಾನ ಉದ್ದೇಶವಾಗಿಟ್ಟುಕೊಂಡು ಕ್ರೈಸ್ತೇತರರ ನಡುವೆ ಸೇವೆ ಮಾಡುವವನೇ ಮಿಷನರಿ. ಮಿಷನ್ ಎಂದರೆ 'ಕಳುಹಿಸುವಿಕೆ' (A sending) ನೀವು ಲೋಕದ ಎಲ್ಲಾ ಕಡೆಗೆ ಹೋಗಿ, ಪ್ರತಿಯೊಬ್ಬರಿಗೂ ಸುವಾರ್ತೆಯನ್ನು ಸಾರಿ ಎಂದು ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಕೊಟ್ಟ ಆದೇಶವೇ ಈ ಕಳುಹಿಸುವಿಕೆಯ ಮೂಲ ಕಾರಣ. 

ಯೇಸು ಕ್ರಿಸ್ತನ ಮರಣಾನಂತರ ಅವನ ಶಿಷ್ಯರು ಪ್ರಪಂಚದ ವಿವಿಧ ದೇಶಗಳಿಗೆ ಧರ್ಮಪ್ರಚಾರಕೋಸ್ಕರ ಪ್ರವಾಸ ಮಾಡಿದರು. ತರುವಾಯ ಕ್ರೈಸ್ತ ಧರ್ಮಸಭೆ ವಿಶಾಲವಾಗಿ ಬೆಳೆದಂತೆ ಧರ್ಮಪ್ರಚಾರ ಕಾರ್ಯಕ್ರಮವು ಬಹು ಬಿರುಸಾಗಿ ಬೆಳೆಯಲಾರಂಭಿಸಿತು. ಹೊಸ ಭೂಖಂಡಗಳು, ಹೊಸ ಸಂಸ್ಕೃತಿಗಳು ಮತ್ತು ಆಚಾರ-ವಿಚಾರಗಳು ಅಂದಿನ ಕ್ರೈಸ್ತ ಸಮಾಜಕ್ಕೆ ಪರಿಚಿತವಾದಂತೆ ಮಿಷನರಿಗಳು ಅಲ್ಲೆಲ್ಲಾ ಕ್ರೈಸ್ತಧರ್ಮವನ್ನು ಕೊಂಡೊಯ್ಯುವ ಕಾಯಕಕ್ಕಿಳಿದರು. ಈ ಮೇರೆಗೆ ಯೇಸುಕ್ರಿಸ್ತನ ಮತ್ತು ಅವನ ಉತ್ತರಾಧಿಕಾರಿಯಾದ ಧರ್ಮಸಭೆಯ ನಿರ್ದೇಶನಕ್ಕೆ ಒಳಪಟ್ಟು ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುವುದು 'ಮಿಷನ್' ಎಂದೂ, ಪ್ರಚಾರ ಮಾಡುವವನು 'ಮಿಷನರಿ' ಎಂದು ಸ್ಥೂಲವಾಗಿ ಹೇಳಬಹುದು. 

ಸುಮಾರು 14ನೆಯ ಶತಮಾನದ ಹೊತ್ತಿಗೆ ಮಿಷನರಿಗಳು ಮೊತ್ತ ಮೊದಲಿಗೆ ಭಾರತದಲ್ಲಿ ಕಾಲಿಟ್ಟರು. ಪೋರ್ಚುಗೀಸರು ಆಗಮಿಸುವ ಮೊದಲೇ ಡೊಮಿನಿಕನ್ ಮತ್ತು ಫ್ರಾನ್ಸಿಸ್ಕನ್ ಎಂಬ ಸನ್ಯಾಸಿ ಸಂಸ್ಥೆಗಳ ಮಿಷನರಿಗಳು ಇಲ್ಲಿಗೆ ಬಂದಿದ್ದರು. ಇವರಲ್ಲಿ ಮುಖ್ಯರಾದವರು ಬ್ರದರ್ ಜೋರ್ಡಾನ್ ಎಂಬ ಫ್ರೆಂಚ್ ಡೊಮಿನಿಕನ್ ಮಿಷನರಿ. ಇವನು ಕ್ರಿ.ಶ. 1321ರಲ್ಲಿ ಭಾರತಕ್ಕೆ ಬಂದು ಮತಪ್ರಚಾರ ಮಾಡಿದನು. ಈ ಮಿಷನರಿಗಳು ರೋಮ್‌ನಲ್ಲಿ ಇರುವ ಪೋಪ್‌ನ ಆದೇಶದ ಮೇರೆಗೆ ಯೂರೋಪಿನಿಂದ ಬಂದವರಾಗಿದ್ದರು. ಅಧಿಕ ಪ್ರಮಾಣದಲ್ಲಿ ಮಿಷನರಿಗಳು ಭಾರತಕ್ಕೆ ಬಂದುದು ಪೋರ್ಚುಗೀಸರ ಆಗಮನದ ಕಾಲದಲ್ಲಿ. ಕ್ರಿ.ಶ. 1500ರಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ನಾವಿಕ ಕಬ್ರಾಲನ ತಂಡದಲ್ಲಿ ಎಂಟು ಮಂದಿ ಮಿಷನರಿಗಳೂ ಇದ್ದು ಇವರು ಪೋರ್ಚುಗೀಸ್ ವರ್ತಕರು ಹೋದಡೆಗಳಲ್ಲೆಲ್ಲಾ ಹೋಗುತ್ತಾ ಅಲ್ಲಿ ಮತ ಪ್ರಚಾರ ಮಾಡುತ್ತಿದ್ದರು. ಈ ಪೋರ್ಚುಗೀಸರ ಧನಸಹಾಯವು ಮತ್ತು ಅಧಿಕಾರ ಸಹಾಯವೂ ಲಭ್ಯವಿರುವ ವಸಾಹತುಗಳು ಮಿಷನ್ ಕೇಂದ್ರಗಳಾದವು. ಕಲ್ಲಿಕೋಟೆ, ಕಣ್ಣನೂರು, ಕ್ವಿಲೋನ್, ಕೊಚ್ಚಿನ್ ಮೊದಲಾದ ಸ್ಥಳಗಳಲ್ಲಿ ಮತಪ್ರಚಾರ ಮಾಡಿದರು, ಕ್ರಿ.ಶ. 1540ರ ಸುಮಾರಿಗೆ ಪೋರ್ಚುಗಲ್ಲಿನ ರಾಜನಾದ ಮೂರನೇ ಜಾನನ ಬೇಡಿಕೆಯ ಫಲವಾಗಿ ಹೊಸದಾಗಿ ಸ್ಥಾಪಿತವಾದ ಜೆಸ್ವಿಟ್ ಸನ್ಯಾಸಿ ಕ್ರಮದ ಮಿಷನರಿಗಳು ಭಾರತಕ್ಕೆ ಬಂದರು. 



ಕರ್ನಾಟಕದಲ್ಲಿ ಮಿಷನರಿಗಳು : 

ಕರ್ನಾಟಕಕ್ಕೆ ಕ್ರೈಸ್ತ ಧರ್ಮ ಪಾದಾರ್ಪಣೆ ಮಾಡಿದಂದಿನಿಂದ ಕ್ರೈಸ್ತ ಸಾಹಿತ್ಯ ಉಗಮವಾಯಿತು. ವಿವಿಧ ದೇಶಗಳಿಂದ ಆಗಮಿಸಿದ ಮಿಷನರಿಗಳು ಇಲ್ಲಿಯ ಭಾಷೆಯ ಅಂತಃಸತ್ವವನ್ನು ಅರಿತವರಾಗಿ ಧರ್ಮಪ್ರಚಾರದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಧಿಸಿದರು. ಕರ್ನಾಟಕದ ಕುರಿತಾಗಿ ಹೇಳುವುದಾದರೆ ಮಿಷನರಿಗಳು 18ನೇ ಶತಮಾನದಲ್ಲಿ ಅಂದರೆ ಸುಮಾರು ಕ್ರಿ.ಶ. 1804ರ ಸುಮಾರಿಗೆ ಇಲ್ಲಿಗೆ ಆಗಮಿಸಲಾರಂಭಿಸಿದರು. ಇವರ ಆಗಮನಕ್ಕೆ ಸುವಾರ್ತಾ ಪ್ರಸಾರಣೆಯೇ ಕಾರಣವಾಗಿತ್ತು. ಬ್ರಿಟೀಷರ ಜೊತೆಗೆ ಭಾರತೀಯ ನೆಲದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಬಲಗೊಂಡಿದ್ದ ಕ್ರೈಸ್ತ ಧರ್ಮವು ಸಹ ಬೇರೂರುವಂತಾಯಿತು. ಯೂರೋಪ್, ಅಮೇರಿಕಾಗಳಲ್ಲಿ ನೆಲೆಸಿದ್ದ ಮಿಷನರಿಗಳನ್ನು ಭಾರತೀಯರ ಸಂಯಮತೆ ಹಾಗೂ ಉದಾರತೆಯ ಜೀವನ ಶೈಲಿಗಳು ಭಾರತದಲ್ಲಿ ಅವರು ನೆಲೆಸುವಂತೆ ಮಾಡಲು ಮೂಲ ಪ್ರೇರಕ ಶಕ್ತಿಗಳಾಗಿದ್ದವು. 

18ನೇ ಶತಮಾನದ ಆರಂಭದ ದಶಕಗಳಲ್ಲಿ ಸುವಾರ್ತಾ ಸೇವೆಯಲ್ಲಿ ಆಸಕ್ತಿ ಬೆಳೆದು ಹಲವಾರು ಮಿಷನರಿ ಸಂಘಗಳು ಅಸ್ತಿತ್ವಕ್ಕೆ ಬಂದವು. ಇಂಗ್ಲೆಂಡಿನಲ್ಲಿ ಕ್ರಿ.ಶ. 1792ರಲ್ಲಿ ಬ್ಯಾಪ್ಟಿಸ್ಟ್ ಮಿಷನರಿ ಸೊಸೈಟಿಯೂ, ಕ್ರಿ.ಶ. 1799ರಲ್ಲಿ ಚರ್ಚ್ ಮಿಷನರಿ ಸೊಸೈಟಿಯೂ, ಕ್ರಿ.ಶ. 1813ರಲ್ಲಿ ಭಾರತದಲ್ಲಿನ ಈಸ್ಟ್ ಇಂಡಿಯಾ ಕಂಪನಿಯ ಬದಲಾವಣಾ ನೀತಿಯಿಂದ ಈ ಕೆಳಕಂಡ ಮಿಷನರಿಗಳ ಆಗಮನಕ್ಕೆ ತುಂಬ ಅನುಕೂಲವಾಯಿತು. ಹೀಗೆ ಬಂದು ಭಾರತವನ್ನು ಪ್ರವೇಶಿಸಿ ಸೇವೆ ಪ್ರಾರಂಭಿಸಿದವರೆಂದರೆ -ಇಗ್ನೇಷಿಯಸ್ ಲಯೋಲಾ ಸ್ಥಾಪಿಸಿದ ಜೆಸ್ಯುಟ್ ಸೊಸೈಟಿ (Jesuit Scoiety), ಲಂಡನ್ ಮಿಷನ್ (London Mission), ವೆಸ್ಲಿಯನ್‌ ಮಿಷನ್, (Weslian Mission), ಮೆಥೋಡಿಸ್ಟ್ ಮಿಷನ್ (Methodist mission) ಹಾಗೂ ಜರ್ಮನ್ ಇವ್ಯಾಂಜೆಲಿಕಲ್ ಬ್ಯಾಸೆಲ್ ಮಿಷನ್. ಮೊದಲಿನದು ರೋಮನ್ ಕ್ಯಾಥೋಲಿಕ ಪಂಥದ ಪ್ರತಿನಿಧಿಯಾಗಿದ್ದರೆ, ಈ ಉಳಿದವು ಪ್ರೊಟೆಸ್ಟಂಟ್ ಸಂಸ್ಥೆಗಳಾಗಿವೆ. ನಮ್ಮ ಕನ್ನಡ ನಾಡಿನಲ್ಲಿ ಮಿಷನರಿ ಚಟುವಟಿಕೆಯು ಸುಮಾರು 18ನೇ ಶತಮಾನದಷ್ಟು ಹಿಂದಿನದ್ದಾಗಿದ್ದು, ಅದನ್ನು ಆರಂಭಿಸಿದವರು ಜೆಸ್ಯುಟ್ ಪಾದ್ರಿಯಾದ ಲಿಯೋನಾರ್ಡ್ ಸಿನ್ನಾಮಿ (ಕ್ರಿ.ಶ.1609-1676). ಅನಂತರ ಬಂದ ಇತರ ಮಿಷನ್ ಸಂಸ್ಥೆಗಳ ಮಿಷನರಿಗಳು ಧಾರವಾಡ, ಮಂಗಳೂರು, ಮೈಸೂರು, ಬೆಂಗಳೂರು, ಬಳ್ಳಾರಿ ಮತ್ತು ಬೆಳಗಾವಿ ಊರುಗಳಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. 

ಕ್ರಿ.ಶ. 19ನೇ ಶತಮಾನದ ಮಧ್ಯದ ಸುಮಾರಿಗೆ ನಾಲ್ಕು ಕ್ರೈಸ್ತ ಮಿಷನರಿ ಸಂಸ್ಥೆಗಳಿಗೆ ಸಂಬಂಧಿಸಿದ 400ಕ್ಕೂ ಮೀರಿದ ಮಿಷನರಿ ವ್ಯಕ್ತಿಗಳು ಭಾರತದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರತರಾಗಿದ್ದರು. ಅದೇ ಸಮಯದಲ್ಲಿ ವಿಶ್ವದ ಎಲ್ಲೆಡೆ ಚದುರಿದ್ದ ಮಿಷನರಿಗಳು (ಸುಮಾರು 200ರಷ್ಟು) ಇದ್ದಾಗ ಭಾರತ ಒಂದರಲ್ಲೇ 400ಕ್ಕೂ ಹೆಚ್ಚು ಮೀರಿದುದು ಇವರ ಸಂಖ್ಯಾ ಬಾಹುಳ್ಯವನ್ನು ತೋರಿಸುತ್ತದೆ. ಆ ಸಂದರ್ಭದಲ್ಲಿ ಕ್ರೈಸ್ತಮತದ ಪ್ರಚಾರಕ್ಕೆಂದು ಭಾರತಕ್ಕೆ ಬರುತ್ತಿದ್ದ ವಾರ್ಷಿಕ ಧನ ಸಹಾಯ (Financial Assistance) ಸುಮಾರು 20ಲಕ್ಷ ರೂಪಾಯಿಗಳಷ್ಟಿದ್ದಿತು. ಇದರ ಪರಿಣಾಮದಿಂದಾಗಿ ಕ್ರೈಸ್ತರ ಮುದ್ರಣಾಲಯಗಳು ಹಾಗೂ ನೂರಾರು ವಿದ್ಯಾಲಯಗಳು ದೇಶದಾದ್ಯಂತ ತಲೆ ಎತ್ತಿ ನಿಂತವು. ಈ ಎಲ್ಲಾ ಯೋಜನೆಗಳ ಹಿಂದೆ ಮತಾಂತರ ಮಾಡುವುದು ಮಿಷನರಿಗಳ ಆಂತರಿಕ ಉದ್ದೇಶವಾಗಿ ಕಂಡುಬಂದರೂ, ಭಾರತೀಯರಿಗೆ ಶಿಕ್ಷಣ ಪ್ರಸಾರ ಹಾಗೂ ಜ್ಞಾನಾರ್ಜನೆಯನ್ನು ಮಾಡುವುದು ತಮ್ಮ ಆದ್ಯ ಉದ್ದೇಶವಾಗಿಸಿಕೊಂಡಿದ್ದ ಮಿಷನರಿಗಳು ಭಾರತೀಯ ಯುವ ಜನತೆಗೆ ಆಕರ್ಷಕರಾಗಿದ್ದರು. 

ಮಿಷನರಿ ಸಂಸ್ಥೆಗಳ ಹಾಗೂ ವ್ಯಕ್ತಿಗಳ ಬದುಕಿನ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅವರಲ್ಲಿ ಹೆಚ್ಚಿನ ಪ್ರಮಾಣದವರು ಜನ್ಮತಃ ಕುಶಾಗ್ರ ಬುದ್ಧಿಯುಳ್ಳವರು ಮತ್ತು ಕೆಲವು ಪ್ರತಿಭಾವಂತ ಮಿಷನರಿಗಳು ಯೂರೋಪಿನ ಪ್ರಖ್ಯಾತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಪಡೆದ ಉನ್ನತ ಪದವೀಧರರಾಗಿದ್ದರು. ಇವರುಗಳು ತಮ್ಮ ತಾಯ್ನಾಡಲ್ಲೇ ಯಾವುದೇ ಒಂದು ಉದ್ಯೋಗದಲ್ಲಿ ತೊಡಗಿ ಲಾಭದಾಯಕ ಮತ್ತು ನಿಶ್ಚಿಂತವಾದ ಜೀವನವನ್ನು ಸಾಗಿಸಬಹುದಾಗಿತ್ತು ಆದರೆ ಸ್ವಧರ್ಮ ನಿಷ್ಠಪರರಾಗಿ ಪ್ರೇರಿತಗೊಂಡು ಕ್ರೈಸ್ತ ಸೇವಾದೀಕ್ಷೆಯನ್ನು ಕೈಕೊಂಡರು. ಯೂರೋಫ್ ದೇಶಗಳಲ್ಲಿ ಯಾವುದಾದರೂ ಮಿಷನ್ ಸಂಸ್ಥೆಯೊಂದರ ಸದಸ್ಯರಾಗಿ, ಎರಡು-ಮೂರು ವರ್ಷಗಳ ಮತ ಪ್ರಸಾರದ ವಿಷಯದ ಬಗ್ಗೆ ತರಬೇತಿ ಹೊಂದಿ ಸ್ವಇಚ್ಛೆಯಿಂದ ತಮ್ಮ ತಾರುಣ್ಯಾವಸ್ಥೆಯಲ್ಲಿಯೇ ಭಾರತಕ್ಕೆ ಬರುತ್ತಿದ್ದರು. ಕನ್ನಡ ನಾಡಿನ ಆಚಾರ-ವಿಚಾರವನ್ನು ಮೈಗೂಡಿಸಿಕೊಂಡಿದ್ದರು. ಇವರ ಜೀವನ ಎಳ್ಳಷ್ಟು ಬಿಡುವಿಲ್ಲದೇ ಇರುವ ಜೀವನವಾಗಿದ್ದು, ಸತತ ಅಭ್ಯಾಸ, ಭಾಷಾಧ್ಯಯನ, ಕೃತಿಗಳ ರಚನೆ, ಅನುವಾದ ಕಾರ್ಯ, ಪ್ರಸಂಗ ನಡೆಸುವುದು ಮುಂತಾದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದರು. ಸಾರಿಗೆ ಸಂಪರ್ಕಗಳ ಸಮರ್ಪಕವಾದ ಸೌಲಭ್ಯಗಳಿಲ್ಲದೆ ಇರುತ್ತಿದ್ದ ಆ ಕಾಲದಲ್ಲಿ ಸ್ವತಃ ತಾವುಗಳೇ ಕುದುರೆಗಾಡಿಗಳ ಮೂಲಕ ಮತ್ತು ಕಾಲ್ನಡಿಗೆಗಳ ಮೂಲಕವಾಗಿಯೇ ಹೋಗಿ ತಮ್ಮ ಕಾರ್ಯಗಳನ್ನು ಮುಗಿಸಿಕೊಂಡು ಬರುತ್ತಿದ್ದರು. ಇಂತಹ ಒಂದು ಸಂದರ್ಭದಲ್ಲಿ ಅವರ ವೈಯಕ್ತಿಕ ಆಸಕ್ತಿ, ಧೈರ್ಯ, ಸ್ಥೈರ್ಯ, ದೃಢತೆ ಮೆಚ್ಚುವಂತಹದು. ನಮ್ಮ ಕನ್ನಡ ನಾಡಿಗೆ ಬರಬೇಕೆಂದು ಪಣತೊಟ್ಟಾಗ ಅಲ್ಲಿದ್ದುಕೊಂಡೇ ಭಾರತೀಯ ಭಾಷೆಗಳ ಮೇಲೆ ಒಲವು ತೋರುತ್ತಿದ್ದರು ಇಲ್ಲವೇ ಸಮುದ್ರ ಪ್ರಯಾಣಗಳ ಮಾರ್ಗ ಮಧ್ಯದಲ್ಲಿಯೇ ಭಾಷಾಧ್ಯಯನಗಳ ಕಾರ್ಯಚಟುವಟಿಕೆಗಳಲ್ಲಿ ತೊಡಗುತ್ತಿದ್ದರು, ಈ ರೀತಿ ಹುಮ್ಮಸ್ಸಿನಿಂದ ಬಂದ ಮಿಷನರಿಗಳ ಉತ್ಕಟ ಬಯಕೆ 'ಶುಭಸಂದೇಶ ಪ್ರಚಾರ ಹಾಗು ಶಿಕ್ಷಣ ನೀಡುವಂತದಾಗಿತ್ತು. 

'ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ' ಎಂಬ ಪುರಂದರದಾಸರ ಕೀರ್ತನ ತತ್ವದ ಮೇರೆಗೆ ತಾವು ಉದ್ದೇಶಿಸಿ ಬಂದಿದ್ದ ಕಾರ್ಯವನ್ನು ಅಚ್ಚುಕಟ್ಟಾಗಿ ಗೈದು ಕನ್ನಡ ನಾಡಿನ ಜನರಿಗೆ ಆದರ್ಶಕಳಸವಾಗಿದ್ದರು ನಮ್ಮ ಮಿಷನರಿಗಳು. ಇವರು ಬೇರೆ ಬೇರೆ ಕ್ಷೇತ್ರಗಳಲ್ಲಿದ್ದು ಘನವಾದ ಕಾರ್ಯ ಮಾಡಿದ್ದಾರೆ. ಇವರುಗಳ ಪ್ರಮುಖ ಉದ್ದೇಶ ಧರ್ಮಪ್ರಸಾರಣೆಯಾಗಿದ್ದರೂ ಅದರ ಜೊತೆಗೆ ವಿವಿಧ ಕ್ಷೇತ್ರಗಳ ಮೇಲ್ಮುಖ ಅಭಿವೃದ್ಧಿಯಲ್ಲಿ ಆಸಕ್ತಿವಹಿಸಿದ್ದರು ಎಂಬುದರ ಹಿಂದೆ ಬಲವಾದ ಕಾರಣವೂ ಇತ್ತು ಅದೇನೆಂದರೆ ತಮ್ಮಂತೆಯೇ ಈ ನಾಡಿನ ಜನರು ಕೂಡ ಎಲ್ಲಾ ವಿಧದಲ್ಲೂ ಶಿಸ್ತು, ಸಂಯಮ, ರೀತಿ-ನೀತಿಯ ಭಾವನೆಯನ್ನು ರೂಢಿಸಿಕೊಂಡು, ಉತ್ತಮವಾಗಿ ಕಲಿತು, ಜ್ಞಾನ ಸಂಪನ್ನರಾಗಬೇಕೆಂಬ ಆಸ್ಥೆಯನ್ನು ಹೊಂದಿದ್ದರು ಮತ್ತು ಇದೇ ತರಹದ ಜೀವನ ಶೈಲಿಯನ್ನೇ ಇಲ್ಲಿನ ಜನರಿಂದಲೂ ಬಯಸಿದರು. ಹೀಗೆ ಕರ್ನಾಟಕದಲ್ಲಿಯೂ ಕ್ರೈಸ್ತ ಮಿಷನರಿಗಳು ತಮ್ಮ ಸೇವೆಯನ್ನು ಆರಂಭಿಸುವ ಮೂಲಕ ಸಾಹಿತ್ಯ ಸೃಷ್ಟಿಗೆ ಅಡಿಗಲ್ಲನ್ನು ಹಾಕಿದರು ಎನ್ನಬಹುದು. 

ಪ್ರಮುಖ ಮಿಷನರಿಗಳ ಜೀವನ ಮತ್ತು ಸಾಧನೆ : 

ಯೇಸುಕ್ರಿಸ್ತನ ಕಾಲದಲ್ಲಿ ಹಲವಾರು ಶಿಷ್ಯರು ಇತರೆ ಊರುಗಳಿಗೆ ಸುವಾರ್ತೆ ಸಾರುವ ಕೆಲಸಕ್ಕಾಗಿ ಆರಿಸಿ ಕಳುಹಿಸಲ್ಪಟ್ಟಿದ್ದರು. ಕ್ರಮೇಣ ಆತನ ಅನುಯಾಯಿಗಳು ಅದೇ ತತ್ವಗಳನ್ನು ಅನುಸರಿಸುತ್ತಾ ಭಾರತ ದೇಶಕ್ಕೂ ಪ್ರಪಂಚದ ವಿವಿಧ ದೇಶಗಳಿಂದ ಶುಭ ಸಂದೇಶ ಪ್ರಚಾರಕ್ಕೆ ಆಗಮಿಸಿದರು. ಜರ್ಮನಿ, ಇಂಗ್ಲೆಂಡ್, ಸ್ವಿಝರ್‌ಲ್ಯಾಂಡಿನಿಂದ ಭಾರತಕ್ಕೆ ಬಂದ ಜೆಸುಯೆಟ್, ಲಂಡನ್, ವೆಸ್ಲಿಯನ್ ಮತ್ತು ಬಾಸೆಲ್ ಎಂಬ ಮಿಷನರಿಗಳು ಕರ್ನಾಟಕದಲಿ ವಿಶೇಷ ಪಾತ್ರ ವಹಿಸಿದ್ದರು. ಈ ಮಿಷನರಿಗಳು ಕರ್ನಾಟಕದ ಇತಿಹಾಸದಲ್ಲೇ ಶ್ರೇಷ್ಠವಾದ ಕಾರ್ಯಸಾಧನೆ ಗೈದು ಕೀರ್ತಿಶೇಷರಾಗಿದ್ದಾರೆ. ಈ ಎಲ್ಲಾ ಮಿಷನರಿಗಳು ತ್ಯಾಗಿಗಳಾಗಿದ್ದು ಧರ್ಮಪ್ರಸಾರದ ಕಾರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅಲ್ಲದೆ ಧರ್ಮಶಾಸ್ತ್ರದಲ್ಲೂ ಆಶಾವಾದಿ ಜ್ಞಾನವನ್ನು ಹೊಂದಿದ್ದರು. ಕರ್ನಾಟಕಕ್ಕೆ ಬಂದ ಮೇಲೆ ಧಾರ್ಮಿಕ ಪ್ರಚಾರದ ಜೊತೆ-ಜೊತೆಗೆ ಧಾರ್ಮಿಕ ಕೃತಿಗಳ ರಚನೆ, ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಗಳ ತೌಲನಿಕ ಅಧ್ಯಯನ, ದೇಶಿಯರನ್ನು ಮತಾಂತರಗೊಳಿಸುವ ಮತ್ತು ಪ್ರೋತ್ಸಾಹಿಸುವ ಮುಂತಾದ ಕೆಲಸ-ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ದೇಶಿಯರಲ್ಲಿ ಒಬ್ಬರಾಗಿ ಉಳಿದು ಅಮರರಾದರು. 

ಹೀಗೆ ಆಗಮಿಸಿದ ಮಿಷನರಿಗಳೆಂದರೆ ಜೆಸುಯೆಟ್ ಸೊಸೈಟಿಯ ಮಿಷನರಿಗಳು - ಲಿಯೋನಾರ್ಡೊ ಚಿನ್ನಮಿ, (ಕ್ರಿ.ಶ. 1609-1676), ಅಂತೋನ್ ಮರೀ ಪ್ಲಾಟೆ ಮುಂತಾದವರು. ಪ್ಯಾರಿಸ್ಸಿನ ಹೊರನಾಡು ಮಿಷನರಿಗಳಾದ ಎತಿಯೆನ್ ಲೂಯಿ ಶಾರ್ಬೊನೊ, ಜೆ ಬ್ಯಾರಿಲ್, (ಕ್ರಿ.ಶ. 1860-1870) ಅಗಸ್ತೆ ಬೊತೆಲೊ, (ಕ್ರಿ.ಶ. 1820-1892) ಲಿಯೊದೊರ್ ಅಂದ್ರೆ (ಕ್ರಿ.ಶ. 1850-1911) ಜೆರ್ಬಿಯೆ, ಆಮಾಂ ಕೊನ್‌ಸ್ತಾಂ (ಕ್ರಿ.ಶ. 1831-1913) ದೆಸೇಂ. ಹ್ಯುಗ್ ಮೆದಲೇಂ (ಕ್ರಿ.ಶ. 1837-1913) ಮುಂತಾದವರು. ಲಂಡನ್ ಮಿಷನರಿಗಳಾದ ಜಾನ್ ಹ್ಯಾಂಡ್ಸ್, ವಿಲಿಯಂ ರೀವ್, ಕಾಲಿನ್ ಕ್ಯಾಂಬೆಲ್, ಬಿ. ಎಲ್. ರೈಸ್ ನವರು. ವೆಸ್ಲಿಯನ್ ಮಿಷನರಿಗಳಾದ ಜಾನ್ ಗ್ಯಾರೆಟ್, ಹೆನ್ರಿಹೇಗ್, ಜೊಶಾಯ ಹಡ್ಸನ್, ಜೆ.ಆಲ್‌ಫ್ರಿಡ್ ವೇನ್ಸ್, ಡ್ಯಾನಿಯಲ್ ಸ್ಯಾಂಡರಸನ್, ಟಾಮ್ಲಿನ್ ಸನ್ ಮತ್ತು ಬಾಸೆಲ್ ಮಿಷನರಿಗಳಾದ ರೆವರೆಂಡ್ ಹರ್ಮನ್ ಮೊಗ್ಲಿಂಗ್, ರೆ. ಕೆ. ಜಾನ್‌ತಿಯರ್, ರೆ. ಗಾಡ್ ಫ್ರೆ ವೈಗಲ್, ರೆ. ಜಾರ್ಜ್‌ವುರ್‍ತ್. ರೆ. ಜಿ. ಕೀಸ್, ರೆ. ಯೊಹಾನೆ ಸಮುಲ್ಲರ್, ರೆ. ಬೆನಡಿಕ್ಟ್ ಲೂತಿ, ರೆ. ಜಿ. ಸಿ. ಲೇನ್ಹರ್, ರೆ. ಫೆಟ್ರಿಕ್ ಝಿಗ್ಲರ್, ರೆ. ಹೆರ್ಮನ್‌ರೀಫ್, ರೆ. ಬೆನ್ನಿನಿಗಸ್ ಗ್ರೇಟರ್, ರೆ. ಫರ್ಡಿನಾಂಡ್ ಕಿಟಲ್, ರೆ. ಜೆಮ್ಯಾಕ್ ಮತ್ತು ಕ್ಯಾನನ್‌ರಿ ವಿಂಗಟನ್ ಇವರುಗಳೆಲ್ಲ ವಿದೇಶಿಯ ಮಿಷನರಿಗಳಾಗಿದ್ದರು. ಈ ಮೇಲಿನ ಮಿಷನ್ ಸಂಸ್ಥೆಗಳಲ್ಲಿ ಪ್ರಮುಖರಾದವರ ಜೀವನ ಮತ್ತು ಸಾಧನೆಯನ್ನು ಮುಂದಿನ ಸಂಚಿಕೆಯಲ್ಲಿ ಮುಂದುವರಿಸಲಾಗುವುದು. 

******** 

ಬಿಜೆಪಿ = ಬ್ರಿಂಗ್ ಜೀಸಸ್ ಟು ಪಿಪಲ್

- ಫ್ರಾನ್ಸಿಸ್.ಎಂ.ಎನ್
ಬಿಜೆಪಿ ಎಂದರೇನು? ಕನ್ನಡ ಭಾಷೆಯಿಂದ ಇಂಗ್ಲಿಷ್ ಭಾಷೆಗೆ ಹೋಗೋಣ. ಕನ್ನಡ ಮನೆ ಮಾತಿನ ಕನ್ನಡನಾಡಾದ ಕರ್ನಾಟಕದಲ್ಲಿ, ಸರ್ಕಾರದ ಆಶಯದಂತೆ ಇನ್ನು ಮುಂದೆ ಅಂದರೆ ಪ್ರಸಕ್ತ ಸಾಲಿನಿಂದ ಕನ್ನಡ ಮಾಧ್ಯಮದ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಮಾಧ್ಯಮದಲ್ಲಿ ಬೋಧನೆ ಪ್ರಾರಂಭವಾಗಬೇಕಿದೆ ಅಲ್ಲವೇ? ವಾಟ್ ಡಸ್ ಬಿಜೆಪಿ ಮೀನ್? ಬಿ ಜೆ ಪಿ ಎಂಬ ಮೂರಕ್ಷರಗಳ ಅರ್ಥವೇನು? ಯೇಸುಸ್ವಾಮಿಯನ್ನು ಜನರತ್ತ ಕೊಂಡೊಯ್ಯುವುದು ಅಂದರೆ ಬ್ರಿಂಗ್ ಜೀಸಸ್ ಟು ಪಿಪಲ್- ಬಿಜೆಪಿ. 

ಪ್ರಸಕ್ತ ಲೋಕಸಭೆಯ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕ್ರೈಸ್ತ ಸಮುದಾಯದವರ ವಾಟ್ಸ್ ಆಪ್ ಗುಂಪುಗಳಲ್ಲಿ ಈ ಅರ್ಥ ನೀಡುವ ಸಂದೇಶದ ಚಿತ್ರಗಳು ಹರಿದಾಡತೊಡಗಿವೆ. 

ಈ ಸಂದೇಶದ ಚಿತ್ರದಲ್ಲಿ, ಸದ್ಯದ ನಿತ್ಯ ಸತ್ಯದ ನಮ್ಮ ದೇಶದ ಸ್ಥಿತಿಯಲ್ಲಿ ನಾವು ಪ್ರಾರ್ಥನೆ ಸಲ್ಲಿಸೋಣ. 

`ಪ್ರಭು, ನಿಮ್ಮ ಇಷ್ಟದಂತೆಯೇ ಬಿಜೆಪಿಯ ನೇತೃತ್ವದಲ್ಲಿ ದೇಶವು ಮುನ್ನಡೆಯಲಿ, ... ನಿಮ್ಮ ಮಾರ್ಗದರ್ಶನದಲ್ಲಿಯೇ ಬಿಜೆಪಿಯ ನಾಯಕರು ಸರಿಯಾದ ಪಥದಲ್ಲಿ ಮುಂದೆ ಸಾಗುವಂತೆ ಮಾಡು' ಎಂಬ ಪ್ರಾರ್ಥನೆಯನ್ನೂ ಸಲ್ಲಿಸಲು ಕೋರಲಾಗುತ್ತಿದೆ. 

ಇದು ಗೆದ್ದೆತ್ತಿನ ಬಾಲ ಹಿಡಿಯುವ ಹುನ್ನಾರವೆ? ಹೌದೋ? ಅಲ್ಲವೋ? ಅದನ್ನು ಸ್ಪಷ್ಟವಾಗಿ, ನೇರವಾಗಿ ಹೇಳಲಾಗದು. ಆದರೆ, ಒಂದಂತೂ ನಿಜ. ಇದು ದೇವರ ಚಿತ್ತ, ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವುದು ಕ್ರೈಸ್ತರ ವಿಶ್ವಾಸದ ನಡಿಗೆ ಎನ್ನವುದಂತೂ ಸತ್ಯ. 

ಆತಂಕದ ಪ್ರತಿಕ್ರಿಯೆಯೇ?: 

ನರೇಂದ್ರ ಮೋದಿ ಅವರ ನೇತೃತ್ವದ, ಆರ್ ಎಸ್ ಎಸ್- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ಮುಖದಂತಿರುವ, ಹಿಂದೂ ಮತ ಪಕ್ಷಪಾತಿ ಆಪಾದನೆ ಹೊತ್ತಿರುವ ರಾಜಕೀಯ ಪಕ್ಷ ಬಿಜೆಪಿ - ಭಾರತೀಯ ಜನತಾ ಪಕ್ಷವು, ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವ ಪ್ರತಿಪಕ್ಷ ಕಾಂಗ್ರೆಸ್ ಅನ್ನು ಹೀನಾಯವಾಗಿ ಮಣಿಸಿ ಅಧಿಕ ಕ್ಷೇತ್ರಗಳನ್ನು ತನ್ನ ಮಡಿಲಿಗೆ ಕಟ್ಟಿಕೊಂಡಾಗ, ಈ ಬಗೆಯ ಸಂದೇಶಗಳು ಹರಿದಾಡಲು ಆರಂಭಿಸಿವೆ. 

ಇದು ಆತಂಕದ ಪ್ರತಿಕ್ರಿಯೆ ಅನ್ನಿಸದೇ ಇರದು. ಸಾಂಪ್ರದಾಯಿಕವಾಗಿ ಸಂವಿಧಾನ ಬದ್ಧನಾಗಿರುತ್ತೇನೆ, ಗೌಪ್ಯತೆಯನ್ನು ಕಾಪಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸುವ ಬಿಜೆಪಿಯ ಕರ್ನಾಟಕದ ಸಂಸದರೊಬ್ಬರು, `ನಾವು ಸಂವಿಧಾನ ಬದಲಾವಣೆಗೆ ಬಂದವರು' ಎಂದವರು. ಅವರು ಮತ್ತೆ ಅಧಿಕ ಮತಗಳ ಮುನ್ನಡೆಯಿಂದ ಆಯ್ಕೆಯಾಗಿದ್ದಾರೆ. ಉತ್ತರ ಭಾರತದಲ್ಲಿ ಮಹಾತ್ಮಾ ಗಾಂಧಿ ಪಟಕ್ಕೆ ಗುಂಡು ಹಾರಿಸಿದ ಹಾಗೂ ಗಾಂಧಿ ಅವರನ್ನು ಕೊಂದ ಘೋಡಸೆ ಒಬ್ಬ ದೇಶಭಕ್ತ ಎಂದು ಸಾರುತ್ತಿದ್ದ ಧಾರ್ಮಿಕ ವ್ಯಕ್ತಿಯೂ ಈ ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಧರ್ಮ ಅಫೀಮು ಎಂಬ ಮಾತಿದೆ. ನಿತ್ಯ ಜೀವನದ ಜಂಜಾಟಗಳನ್ನು ಮರೆಸುವ ಶಕ್ತಿ ಇಂಥವುಗಳಿಗೆ ಮಾತ್ರ ಸಾಧ್ಯ. 

ಬಿಜೆಪಿಯ ಜಯಭೇರಿ : 

ಈ ಸಾಲಿನ ಮೇ ತಿಂಗಳ 23 ರಂದು ಘೋಷಣೆಯಾದ ಲೋಕಸಭೆಯ ಚುನಾವಣೆಯ ಫಲಿತಾಂಶದಲ್ಲಿ ತನ್ನ ಮಿತ್ರಪಕ್ಷಗಳೊಂದಿಗೆ ಜಯಭೇರಿ ಬಾರಿಸಿದ ಬಿಜೆಪಿಯು 351 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತು. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಕೇವಲ 92 ಕ್ಷೇತ್ರಗಳ ಗೆಲುವಿಗೆ ತೃಪ್ತಿಪಡಬೇಕಾಯಿತು. ಪಕ್ಷೇತರರು. ಸ್ವಂತಂತ್ರವಾಗಿ ಪ್ರತಿನಿಧಿಸಿದ್ದ ಪಕ್ಷಗಳು 99 ಸ್ಥಾನಗಳಲ್ಲಿ ಗೆಲವು ಸಾಧಿಸಿವೆ. ನಮ್ಮ ಸಂಸತ್ ನಲ್ಲಿ ಒಟ್ಟು ಸದಸ್ಯರ ಸಂಖ್ಯೆ 545 ಇದ್ದು, ಉಳಿದ 2 ಸ್ಥಾನಗಳು ಆಂಗ್ಲೊ ಇಂಡಿಯನ್ ಸಮುದಾಯ ಪ್ರತಿನಿಧಿಸುತ್ತಿದ್ದರೆ, ಅವರನ್ನು ಆಯಾ ಸರ್ಕಾರಗಳು ನಾಮಕರಣ ಮಾಡುತ್ತವೆ. 

ಕಳೆದ 2014ರಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಒಟ್ಟು 336 ಸ್ಥಾನಗಳನ್ನು ಗಳಿಸಿದ್ದವು. ಈಗ 2019ರ ಚುನಾವಣೆಯಲ್ಲಿ ಅದು ಹೆಚ್ಚುವರಿಯಾಗಿ 15 ಸ್ಥಾನಗಳನ್ನು ಪಡೆದಿದೆ. ಹಿಂದಿ ಭಾಷಿಕ ಪ್ರಭಾವದ ಉತರ ಭಾರತದಲ್ಲಿನ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದರೂ, ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡುಗಳಲ್ಲಿ ಅಲ್ಲಲ್ಲಿನ ಪ್ರಾದೇಶಿಕ ಪಕ್ಷಗಳನ್ನು ನೆಚ್ಚಿಕೊಂಡ ಜನ ಬಿಜೆಪಿಯನ್ನು ಹತ್ತಿರ ಸೇರಿಸಿಕೊಂಡಿಲ್ಲ. 

ಬಿಜೆಪಿಯನ್ನು ದೂರವಿಟ್ಟ ಅಯ್ಯಪ್ಪಸ್ವಾಮಿ : 

ಹಿಂದೂ ರಾಷ್ಟ್ರವಾದ, ಯುದ್ಧೋನ್ಮಾದ, ಎಲ್ಲವೂ ತನ್ನಿಂದಲೇ ಎಂಬ ನರೇಂದ್ರ ಮೋದಿ ಅವರ ಅಹಮಿಕೆಯ ಮಾತುಗಳಲ್ಲಿ ಉತ್ತರ ಭಾರತದ ಜನ ಕೊಚ್ಚಿಹೋದರು. ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ, ಹೆಚ್ಚತ್ತಿರುವ ಹಣದುಬ್ಬರ, ಕೃಷಿ ಕ್ಷೇತ್ರದಲ್ಲಿನ ಆತಂಕದ ಸ್ಥಿತಿ, ನೋಟು ರದ್ದು ತಂದ ಆರ್ಥಿಕ ಸಮಸ್ಯೆಗಳು... ... ಮುಂತಾದವು ಚುನಾವಣಾ ವಿಷಯಗಳಾಗಿ ಮುಂಚೂಣಿಗೆ ಬರಲೇ ಇಲ್ಲ. ಧರ್ಮದ ದಾಳಗಳನ್ನು ಉರುಳಿಸುತ್ತಾ ಬಂದ ಬಿಜೆಪಿಗೆ, ಕೇರಳದಲ್ಲಿನ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿವಾದ ಅಲ್ಲಿ ನೆಲಯೂರಲು ಅವಕಾಶ ನೀಡಲೇ ಇಲ್ಲ. 

ಉತ್ತರ ಭಾರತ ಹಿಂದೂ ಅಲೆಯಲ್ಲಿ, ಹುಸಿ ದೇಶಪ್ರೇಮದ ಅಮಲಿನಲ್ಲಿ ತೇಲಿಹೋದರೂ, ರೆಡ್ಡಿ ಮತ್ತು ಕಮ್ಮ ಸಮುದಾಯಗಳ ಜುಗಲ್ ಬಂದಿಯ ಆಂಧ್ರ ಪ್ರದೇಶದಲ್ಲಿ ಕೇವಲ ಎರಡರಷ್ಟು ಜನಸಂಖ್ಯೆಯನ್ನು ಹೊದಿದ ಕ್ರೈಸ್ತ ಸಮುದಾಯಕ್ಕೆ ಸೇರಿದ ದಿವಂಗತ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಮಗ ಜಗನ್‌ಮೋಹನ ರೆಡ್ಡಿ ಅವರ ಪಕ್ಷ, ಬಿಜೆಪಿಯೂ ಸೇರಿದಂತೆ ದಾಯಾದಿ ಪಕ್ಷವನ್ನು ಗುಡಿಸಿಹಾಕಿದ್ದು ಒಂದು ವಿಶೇಷ. 

ಹಿಂದೂವಾದ ಜಗನ್ ಮೋಹನ ರೆಡ್ಡಿ? : 

ಬಿಜೆಪಿ ಪರ ಅಲೆಯ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ, `ವೈ ಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಹುಟ್ಟಾ ಕ್ರೈಸ್ತ ಜಗನ್‌ಮೋಹನ ರೆಡ್ಡಿ ಇಷ್ಟರಲ್ಲೇ ಹಿಂದೂ ಧರ್ಮವನ್ನು ಸ್ವೀಕರಿಸಲಿದ್ದಾರೆ' ಎಂಬ ಒಕ್ಕಣೆಯ ವಿಡಿಯೋ ಸುದ್ದಿ ಚಿತ್ರವನ್ನು ಜಾಲತಾಣವೊಂದರಲ್ಲಿ ಹರಿಬಿಡಲಾಯಿತು. ಅದನ್ನು ನಾನೂರಕ್ಕೂ ಅಧಿಕ ಮಂದಿ ಹಂಚಿಕೊಂಡರು. 

ಆದದ್ದಿಷ್ಟು, 2016ರ ಆಗಸ್ಟ ಹತ್ತರಂದು ಹೃಷಿಕೇಶದಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ಹಾಗೂ ಆಂಧ್ರದ ಜನರ ಶ್ರೇಯೋಭಿವೃದ್ಧಿ ಕೋರಿ ಸ್ವರೂಪಾನಂದ ಸ್ವಾಮಿ ಅವರ ಉಪಸ್ಥಿತಿಯಲ್ಲಿ ಹೋಮ ಹವನ ಮಾಡಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಮಾಹಿತಿ ಪಕ್ಷದ ವೆಬ್ ಸೈಟ್ ನಲ್ಲೂ ಲಭ್ಯ. ಅದೇ ವಿಡಿಯೋವನ್ನು ಕದ್ದು, `ಇಷ್ಟರಲ್ಲೇ ಜಗನ್ ಹಿಂದೂ ಧರ್ಮವನ್ನು ಸೇರಲಿದ್ದರೆ. ಹೃಷಿಕೇಶದ ಸ್ವರೂಪಾನಂದ ಸ್ವಾಮಿಜಿ ಅವರು ಅವರ ಪ್ರಮಾಣವಚನ ಸ್ವೀಕಾರ ದಿನವನ್ನು ನಿಗದಿಪಡಿಸಿದ್ದಾರೆ' ಎಂದು ವಿಡಿಯೋ ವನ್ನು ಜಾಲತಾಣವೊಂದರಲ್ಲಿ ಹಂಚಿಕೊಳ್ಳಲಾಗಿತ್ತು! 

ಧರ್ಮದ ಅಫೀಮು, ಈಡೇರದ ಭರವಸೆಗಳು : 

ಕಳೆದ 2014ರ ಚುನಾವಣೆಯಲ್ಲಿ, ಪ್ರತಿವರ್ಷ 20 ಮಿಲಿಯನ್ ಉದ್ಯೋಗ ಸೃಷ್ಟಿ, ಹಸಿರಿನಿಂದ ಕಂಗೊಳಿಸುವ ಸ್ಮಾರ್ಟ ಸಿಟಿಗಳ ಅಭಿವೃದ್ಧಿ ಮುಂತಾದ ಭರವಸೆಗಳು ಬಹುತೇಕವಾಗಿ ಈಡೇರಲೇ ಇಲ್ಲ. 

ಕಳೆದು ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ, ಹಿಂದೂಸ್ತಾನ ಹಿಂದುಗಳ ದೇಶ ಎಂಬ ಭಾವನೆಯನ್ನು ಪುಷ್ಟೀಕರಿಸುವ ಅಲ್ಪಸಂಖ್ಯಾತರ ಮೇಲಿನ ದಾಳಿಗಳು, ಆಹಾರ ಸಂಸೃತಿಯ ಮೇಲಿನ ಹಲ್ಲೆಗಳು ಅಲ್ಪಸಂಖ್ಯಾತರಲ್ಲಿ ಬಿಜೆಪಿಯ ಆಡಳಿತದ ಕುರಿತು ಅಪನಂಬಿಕೆಯನ್ನು ರೂಢಿಸಿದ್ದವು. 

ಭಾರತದಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 80ರಷ್ಟು ಇದ್ದರೆ, ಮುಸ್ಲಿಂರು ಮತ್ತು ಕ್ರೈಸ್ತರ ಶೇಕಡಾವಾರು ಪ್ರಮಾಣ 14 ಇದೆ. ಉಳಿದ ಅಲ್ಪಸಂಖ್ಯಾತರಲ್ಲಿ ಬಹಾಯಿ, ಬೌದ್ಧರು, ಶಿಖ್‌ರು, ಜೈನರು ಮತ್ತು ಪಾರ್ಸಿಗಳು ಸೇರುತ್ತಾರೆ. 

ಅಚ್ಚರಿ, ಆಘಾತಗಳ ಫಲಿತಾಂಶ: 

ಲೋಕಸಭೆಗೆ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ, ಈ ಬಾರಿ ಆಡಳಿತಾರೂಢ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವುದಿಲ್ಲ. ಎನ್ನಿದ್ದರೂ ಬೇರೆ ಬೇರೆ ಪಕ್ಷಗಳ ಹೊಂದಾಣಿಕೆಯ ಸರ್ಕಾರ ಅಸ್ತಿತ್ವಕ್ಕೆ ಬರಬಹುದು, ಇಲ್ಲವಾದರೆ ಕಾಂಗ್ರೆಸ್ ನೇತೃತ್ವ ಪಕ್ಷಗಳ ಗುಂಪು ಕೇಂದ್ರದಲ್ಲಿ ಅಧಿಕಾರ ಹಿಡಿಯಬಹುದು ಎಂದು ಬಹತೇಕ ವಿಶ್ಲೇಷಣೆಗಳು ಹೇಳುತ್ತಿದ್ದವು. ಆದರೆ, ಬಂದಿದ್ದು ಮಾತ್ರ ಅನಿರೀಕ್ಷಿತ ಪಳಿತಾಂಶ. ಬಿಜೆಪಿಗೆ ತಾನು ಅಷ್ಟೊಂದು ಸ್ಥಾನಗಳನ್ನು ಗೆಲ್ಲುವೆ ಎಂಬ ವಿಶ್ವಾಸವಿರಲಿಲ್ಲಿ. ಈ ಪ್ರಮಾಣದ ಸ್ಥಾನಗಳು ತನ್ನ ಕೈ ಬಿಟ್ಟು ಹೋಗುತ್ತವೆ? ಎಂಬ ಕಲ್ಪನೆಯೂ ಕಾಂಗ್ರೆಸ್‌ಗೆ ಇರಲಿಲ್ಲ, 

ಚುನಾವಣೆಯ ಪೂರ್ವದಲ್ಲಿ ಬ್ರಿಟನ್ ಮೂಲದ ಇಂಗಿಷ್ ಪತ್ರಿಕೆ (ಗಾರ್ಡಿಯನ್)ಯೊಂದು, `ಸುಳ್ಳು ಸುದ್ದಿ ಬಿತ್ತುತ್ತಾ, ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಾ, ವಾಣಿಜ್ಯೋದ್ಯಮಿಗಳ ಪರನಿಲುವಿನ, ಪ್ರಚಾರದ ಭರಾಟೆಯ ಜನಪ್ರಿಯ ನಾಯಕ ಜಗತ್ತಿಗೆ ಬೇಕಿಲ್ಲ. ಭಾರತದ ಆತ್ಮಕ್ಕೆ ಇದು ಒಳ್ಳೆಯದಾಗಲಿಕ್ಕಿಲ್ಲ' ಎಂದು ಕಳವಳ ವ್ಯಕ್ತಪಡಿಸಿತ್ತು. 

ಮತ್ತೊಂದು ಅಮೆರಿಕದ ಪತ್ರಿಕೆ (ಟೈಮ್ಸ್)ಯು, ಒಂದು ಕಡೆ ಭಾರತದ ಉತ್ತಮ ಆರ್ಥಿಕ ಬೆಳವಣಿಗೆಯ ಭರವಸೆಯ ಹರಿಕಾರ ಎಂದು ಶ್ಲಾಘಿಸಿದರೆ, ಮತ್ತೊಂದೆಡೆ ಪ್ರಧಾನವಾಗಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಅವರನ್ನು ಭಾರತದ ವಿಭಜಕದ ಮುಖ್ಯಸ್ಥ (ಇಂಡಿಯಾಸ್ ಡಿವೈಡರ್ ಇನ್ ಚೀಫ್) ಎಂದು ಹೀಗಳೆದಿತ್ತು, 

ಸಮೃದ್ಧ ನವ ಭಾರತ ನಿರ್ಮಾಣ : 

ಚುನಾವಣೆಯಲ್ಲಿ ಸ್ಪಷ್ಟ ಗೆಲವು ಸಾಧಿಸಿದ ನಂತರ, ಮಾತನಾಡಿದ ಮೋದಿ ಅವರು, `ಸರ್ಕಾರ ಎಲ್ಲರ ಜೊತೆಗಿದೆ. ಅಭಿವೃದ್ಧಿ ಎಲ್ಲರಿಗಾಗಿ, ಎಲ್ಲರ ಜೊತೆಗೆ ಪ್ರಗತಿ ಪರ ಮತ್ತು ಸಮೃದ್ಧ ನವ ಭಾರತ ನಿರ್ಮಾಣ' ನಮ್ಮ ಗುರಿ ಎಂದು ಸಾರಿದರು. `ಸರ್ವರ ಜತೆಗೂಡಿ ಸರ್ವರ ವಿಕಾಸ' ಎಂಬುದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆ. 

ಬಾಂಬೆಯ ಆರ್ಚಬಿಷಪ್, ಭಾರತದ ಕಥೋಲಿಕ ಬಿಷಪ್‌ರ ಒಕ್ಕೂಟ (ಕಥೋಲಿಕ ಬಿಷಪ್ಸ್ ಕಾನ್ಫರನ್ಸ್ ಆಫ್ ಇಂಡಿಯಾ)ದ ಅಧ್ಯಕ್ಷರಾಗಿರುವ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ಅವರು, ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ನಾಡಿನ ಕಥೋಲಿಕ ಕ್ರೈಸ್ತರ ಪರವಾಗಿ, ಸ್ಪಷ್ಟ ಬಹುಮತದಿಂದ ಸುಭದ್ರ ಸರ್ಕಾರ ರಚನೆಗೆ ಪೂರಕವಾಗಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಕ್ಕೆ ಅಭಿನಂದಿಸಿದ್ದಾರೆ. ಜೊತೆಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನೂ ಸಹ ಅಭಿನಂದಿಸಿದ್ದಾರೆ. 

ನಾವೂ (ಕ್ರೈಸ್ತರೂ) ನಿಮ್ಮೊಂದಿಗಿದ್ದೇವೆ : 

ಮೋದಿ ಅವರಿಗೆ ಶುಭ ಕೋರಿರುವ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ಅವರು, `ನಿಮ್ಮ ಮತ್ತು ನಿಮ್ಮ ಸಂಗಡಿಗರ ತಂಡವು ಎಲ್ಲರನ್ನೂ ಒಳಗೊಂಡ, ಬಲಶಾಲಿ ಭಾರತ ನಿರ್ಮಾಣದಲ್ಲಿ ನಾವೂ ನಿಮ್ಮ ಜೊತೆಗಿದ್ದೇವೆ' ಎಂದು ಅಭಯ ನೀಡಿದ್ದಾರೆ, `ಗುರುತರ ಜವಾಬ್ದಾರಿ ಹೊತ್ತಿರುವ ನಿಮ್ಮ ಒಳಿತಿಗಾಗಿ, ಆಯುರಾರೋಗ್ಯಕ್ಕಾಗಿ ದೇವರು ಬಲ ನೀಡಲೆಂದು ಪ್ರಾರ್ಥನೆ ಸಲ್ಲಿಸುತ್ತೇವೆ' ಎಂದು ತಿಳಿಸಿದ್ದಾರೆ. 

`ಯುವಜನತೆಗೆ ಭರವಸೆ ಒದಗಿಸುವ, ಮಹಿಳೆಯರ ಅದೂ ಗ್ರಾಮೀಣ ಪ್ರದೇಶದ ಮಹಿಳೆಯರ ಸಬಲೀಕರಣ, ನಮ್ಮ ರೈತರಿಗೆ ವಿವಿಧ ಅವಕಾಶಗಳನ್ನು ತೆರೆದಿಡುವ, ಆರ್ಥಿಕತೆಯನ್ನು ಬಲಪಡಿಸುವ, ಯಾರನ್ನೂ ಹಿಂದೆ ಬಿಟ್ಟು ಹೋಗದ, ಶಾಂತಿ ಮತ್ತು ಸೌಹಾರ್ದದ ಸಮೃದ್ಧ ದೇಶ ಕಟ್ಟುವ, ನೀವು ಕನಸು ಕಂಡ ನವ ಭಾರತ ನಿರ್ಮಾಣದ ಕಾಯಕದಲ್ಲಿ ನಾವು ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ' ಎಂದೂ ಭರವಸೆ ನೀಡಿದ್ದಾರೆ. 

ದೈವ ಚೈತನ್ಯವು ದಾರಿ ದೀಪವಾಗಲಿ : 

ಈ ಹಿನ್ನೆಲೆಯಲ್ಲಿ `ನಾವು ಕಥೋಲಿಕರು ನಮ್ಮ ದೇಶಕ್ಕಾಗಿ ಪ್ರಾರ್ಥಿಸೋಣ. ನಮ್ಮ ಪ್ರಧಾನಿ ನರೇಂದ್ರ ಮೋದಿ, ನೂತನ ಸಂಸದರು, ಸಚಿವರಾಗುವವರಿಗಾಗಿ ಪ್ರಾರ್ಥಿಸೋಣ. ನಮ್ಮ ದೇಶದ ಜನರು ಶಾಂತಿ ಸಮೃದ್ಧಿಯನ್ನು ಮತ್ತು ಸೌಹಾರ್ಧವನ್ನು ಹೊಂದುವಲ್ಲಿ ದೇವರ ಚೈತನ್ಯವು ಅವರಿಗೆ ದಾರಿದೀಪವಾಗಲಿ ಎಂದು ಪ್ರಾರ್ಥಿಸೋಣ' ಎಂಬ ಒಕ್ಕಣೆಯ ಸಂದೇಶಗಳು ವಿವಿಧ ಜಾಲತಾಣ, ಸಮೂಹ ಸಂಪರ್ಕ ಮಾಧ್ಯಮ ಗುಂಪುಗಳಲ್ಲಿ ಹರಿದಾಡತೊಡಗಿವೆ. 

`ನಾವು ಕ್ರೈಸ್ತರು, ತನ್ನಂತೆಯೆ ಪರರನ್ನು ಪ್ರೀತಿಸು, ಪರಪ್ರೀತಿಯೇ ಪರದೈವ' ಎಂಬ ನಂಬಿಕೆಯಲ್ಲಿ ವಿಶ್ವಾಸವಿಟ್ಟವರು. ದೇವರ ಅಪರಿಮಿತ ಪ್ರೀತಿಯನ್ನು ಬೈಬಲ್ಲಿನಲ್ಲಿ ನಾವು ಕಾಣುತ್ತೇವೆ. ಅದೇ ದೇವರ ಚಿತ್ತವನ್ನು ಅನುಸರಿಸುತ್ತೇವೆ. ಸಂದರ್ಶನವೊಂದರಲ್ಲಿನ ಆಂಧ್ರಪ್ರದೇಶದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್‌ಮೋಹನ ರೆಡ್ಡಿ ಅವರ ಮಾತುಗಳೊಂದಿಗೆ ಈ ಚರ್ಚೆಗೆ ಮಂಗಳ ಹಾಡಬಹುದು ಎನ್ನಿಸುತ್ತದೆ. 

ಪರಲೋಕ ಮಂತ್ರ ಪಠಿಸಿದ ಜಗನ್ : 

`ನಿಮ್ಮನ್ನು ತುಷ್ಟೀಕರಿಸಿದ ಕಾಂಗ್ರಸ್ ಪಕ್ಷವನ್ನು ಕ್ಷಮಿಸುತ್ತೀರಾ?' ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ, `ಕ್ಷಮಿಸುವುದಕ್ಕೆ ನಾನಾರು? ನಾನು ಪ್ರತಿದಿನ ಬೈಬಲ್ ಅನ್ನು ಪಠಿಸುವೆ. ದಿನಕ್ಕೆರಡು ಬಾರಿ ಪ್ರಾರ್ಥನೆ ಸಲ್ಲಿಸುವೆ. ಬೈಬಲ್ ಓದಿದ ನಂತರ ಪ್ರತಿಬಾರಿಯೂ ಪರಲೋಕ ಮಂತ್ರ ಹೇಳಿ ಪ್ರಾರ್ಥನೆ ಸಲ್ಲಿಸುವೆ' ಎಂದು ಉತ್ತರಿಸಿ ಪರಲೋಕ ಮತ್ರವನ್ನು ಪಠಿಸುತ್ತಾರೆ. 

********* 

ವಿದ್ಯಾದಾನದಲ್ಲಿ ಕ್ರೈಸ್ತರು




'ಸಮಾಜದ ಕಟ್ಟಕಡೆಯವನಿಗೆ ನೀವು ಮಾಡುವ ಸೇವೆ ನನಗೇ ಸಲ್ಲುತ್ತದೆ' ಎಂದು ಯೇಸುಸ್ವಾಮಿ ಹೇಳಿದ್ದನ್ನು ನಮ್ಮ ಕ್ರೈಸ್ತ ಸಹೋದರ ಸಹೋದರಿಯರು ಅಕ್ಷರಶಃ ಪಾಲಿಸುತ್ತಾ ನೂರಾರು ವರ್ಷಗಳಿಂದ ವಿಶ್ವದೆಲ್ಲೆಡೆ ಅದರಲ್ಲೂ ದುರ್ಗಮ ಪ್ರದೇಶಗಳಲ್ಲಿ ನಡೆದಾಡಿ ರೋಗಿಗಳಿಗೆ ಆರೈಕೆ, ನತದೃಷ್ಟರಿಗೆ ಸಾಂತ್ವನ, ಸಮಾಜದ ಎಲ್ಲ ವರ್ಗದವರಿಗೂ ಶಿಕ್ಷಣ ನೀಡುತ್ತಿದ್ದಾರೆ.
ನಮ್ಮ ದೇಶ ಇಂಡಿಯಾದ ಸಂದರ್ಭದಲ್ಲಿ ಶಿಕ್ಷಣವು ಸಮಾಜದ ಕೆಲವೇ ಶ್ರೇಣಿಗಷ್ಟೇ ಹೊರತು ಇತರರಿಗೆ ನಿಲುಕದ ಕುಸುಮವಾಗಿತ್ತು. ಅದರಲ್ಲೂ ಹೆಣ್ಣುಮಕ್ಕಳಿಗೆ ವಿದ್ಯೆ ಎಂಬುದಂತೂ ಊಹಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. 

ಅಂತಲ್ಲಿ ಬ್ರಿಟಿಷರು ಬರುವುದಕ್ಕೆ ಮೊದಲೇ ವರ್ಗಭೇದವಿಲ್ಲದೇ ಲಿಂಗಭೇದವಿಲ್ಲದೇ ಅಕ್ಷರಾಭ್ಯಾಸ ನೀಡಿದವರು ನಮ್ಮ ಕ್ರೈಸ್ತ ಮಿಷನರಿಗಳು. ಬಹುಶಃ ಇದೇ ಕಾರಣದಿಂದ ಕಲಿಕಾ ಕೇಂದ್ರಗಳಿಗಿದ್ದ ಅಯ್ಯನವರ ಮಠ ಎಂಬ ಹೆಸರನ್ನು ಕ್ರೈಸ್ತ ದೇವಾಲಯಗಳಿಗೂ ಅನ್ವಯಿಸಿ ಪಾದಾರಯ್ಯನ ಮಠ, (ದೇವರ) ತಾಯಿ ಮಠ ಎಂದು ಕರೆಯಲಾಯಿತು ಎಂದು ತೋರುತ್ತದೆ. ಇಂದಿಗೂ ನಮ್ಮ ಹಿರೀಕರು ಚರ್ಚುಗಳನ್ನು ತಾಯಿಮಠ ಎಂದೇ ಗುರುತಿಸುವುದನ್ನು ನೋಡಬಹುದು. 

ಹಾಗೆ ನೋಡಿದರೆ ಕನ್ನಡ ನಾಡಿನಲ್ಲಿ ಶಿಕ್ಷಣ ಕ್ಷೇತ್ರವು ಎರಡು ಸಾವಿರ ವರ್ಷಗಳ ಪರಂಪರೆ ಹೊಂದಿದೆ. ಬಹು ಹಿಂದಿನಿಂದಲೂ ಬೌದ್ಧ ವಿಹಾರಗಳೂ ಜೈನ ಬಸದಿಗಳೂ ಸಂಘಟಿತ ರೂಪದಲ್ಲಿ ಶಿಕ್ಷಣ ನೀಡುತ್ತಿದ್ದವು. ಅಂದು ವಿದ್ಯಾದಾನವನ್ನು ಮಹಾ ಪುಣ್ಯಕಾರ್ಯವೆಂಬಂತೆ ಪರಿಭಾವಿಸಲಾಗುತ್ತಿತ್ತು. ವಿಬುಧರನ್ನು ಆದರಿಸಿ ಸಮಾಜದಲ್ಲಿ ಉತ್ತಮಸ್ಥಾನವನ್ನು ನೀಡುವುದು ಪದ್ಧತಿಯಾಗಿತ್ತು. ರಾಜರೂ ಧನಿಕರೂ ವಿಹಾರಗಳನ್ನು ಸ್ಥಾಪಿಸಿ ಅವಕ್ಕೆ ದತ್ತಿ ಕೊಡುವ ಸಂಪ್ರದಾಯವೂ ಬೆಳೆದುಬಂದಿತ್ತು. ಕ್ರಿಸ್ತಶಕ ಮೂರನೇ ಶತಮಾನದ ಬನವಾಸಿಯ ಒಂದು ಶಾಸನದಲ್ಲಿ ಶಿವಸ್ಕಂದ ನಾಗಶ್ರೀ ಎಂಬ ಚುಟು ರಾಜಕುಮಾರಿಯು ವಿದ್ಯಾದಾನಕ್ಕಾಗಿ ಒಂದು ಬೌದ್ಧ ವಿಹಾರವನ್ನು ನಿರ್ಮಿಸಿದ್ದಳು ಎಂಬ ಉಲ್ಲೇಖವಿದೆ. ಎರಡನೆಯ ಪುಲಕೇಶಿಯ ಆಳ್ವಿಕೆಯ ಹೊತ್ತಿಗೆ ಇಂತಹ ವಿಹಾರಗಳ ಸಂಖ್ಯೆ ನೂರಕ್ಕೆ ಏರಿತ್ತು. 

ಮುಂದೆಯೂ ಗ್ರಂಥದಾನ, ಅಕ್ಷರದಾನಗಳ ಹೆಸರಲ್ಲಿ ಕಲಿಕೆಯು ಮುಂದುವರಿದ ಉಲ್ಲೇಖಗಳು ಕಾಣಸಿಗುತ್ತವೆ. ಘಟಿಕಗಳು, ಅಗ್ರಹಾರಗಳು, ಬ್ರಹ್ಮಪುರಿಗಳು, ಮಠಗಳು ಮತ್ತು ದೇಗುಲದ ವಿದ್ಯಾಲಯಗಳು ಉನ್ನತ ಶಿಕ್ಷಣವೀಯುತ್ತಿದ್ದ ಬಗ್ಗೆಯೂ ಪಾರಂಪರಿಕ ದಾಖಲೆಗಳಿವೆ.
ಇಷ್ಟೆಲ್ಲಾ ಇದ್ದರೂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ನೀಡಿದ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಎಲ್ಲೋ ಒಬ್ಬರು ಇಬ್ಬರು ಅರಗುವರಿಯರು ರಾಣಿಯರು ವಿದ್ಯಾಪಾರಂಗತರಾಗಿದ್ದ ಉದಾಹರಣೆ ಇದ್ದರೂ ಸಾರ್ವತ್ರಿಕವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ ಕುರಿತು ಎಲ್ಲೂ ಹೇಳಿಲ್ಲ. 

ಲಿಂಗಾಯತ ಮಠಗಳು ತಮ್ಮ ಧರ್ಮಪ್ರಚಾರದ ಅಂಗವಾಗಿ ತಮ್ಮ ಮಠದಲ್ಲಿ ವಿದ್ಯೆ ಕಲಿಯುವವರಿಗಷ್ಟೇ ಪ್ರಸಾದದ ರೂಪದಲ್ಲಿ ಊಟ ನೀಡುವ ಆಮಿಷ ತೋರಿಸಿ ಸರ್ವ ವರ್ಗಗಳಿಗೂ ವಿದ್ಯಾದಾನ ಮಾಡಿದವಾದರೂ ಸ್ವತಃ ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕೆ ಮುಂದೆ ಬರಲಿಲ್ಲವೆಂಬುದು ನಮ್ಮ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಆದರೂ ಮಿಂಚಿನಂತೆ ಹೊಳೆಯುವ ಅಕ್ಕಮಹಾದೇವಿಯ ಕಾವ್ಯೋನ್ನತಿಯನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಅತ್ತಿಮಬ್ಬೆ, ಶಾಂತಲೆ, ಹೊನ್ನಮ್ಮ, ಮಲ್ಲಮ್ಮ ಮುಂತಾದವರು ವಿದ್ಯಾವಂತರಾಗಿದ್ದರೋ ಇಲ್ಲವೋ ಕಾವ್ಯ ಕಲೆಗಳ ಬಗೆಗಿನ ಅವರ ಒಲವು ಅಭಿನಂದನೀಯ. 

ಬಹು ಹಿಂದಿನಿಂದಲೂ ವಿಬುಧರನ್ನು ಸನ್ಮಾನಿಸುವ ಹಾಗೂ ವಿದ್ಯಾರ್ಜನೆಯನ್ನು ನಿರಂತರವೂ ಮುಂದುವರಿಸುವ ಮಣಿಹಕ್ಕೆ ಸಾಮಾಜಿಕ ಗೌರವ ಸಂದಿದೆ. ಜೊತೆಗೆ ಮಕ್ಕಳನ್ನು ಪಡೆಯುವುದರಿಂದಲೇ ತಂದೆಯ ಕರ್ತವ್ಯ ಮುಗಿಯುವುದಿಲ್ಲ; ಅವರಿಗೆ ತಕ್ಕ ಶಿಕ್ಷಣವೀಯುವುದೂ ಅವನ ಕರ್ತವ್ಯವೆಂದು ನಮ್ಮ ಹಿರಿಯರು ಭಾವಿಸಿದ್ದರು. ಅಜ್ಞಾತ ಕವಿಯೊಬ್ಬನು, 

ಮಕ್ಕಳಿಗೆ ತಂದೆ ಬಾಲ್ಯದೊ
ಳಕ್ಕರವಿದ್ಯೆಗಳನರಿಪದಿರ್ದೊಡೆ ಕೊಂದಂ
ಲಕ್ಕಧನಮಿರಲು ಕೆಡುಗುಂ
ಚಿಕ್ಕಂದಿನ ವಿದ್ಯೆ ಪೊರೆಗು ಚೂಡಾರತ್ನಾ

ಎಂದಿದ್ದಾನೆ. ಅದರರ್ಥ 'ಮಕ್ಕಳಿಗೆ ಅವರ ತಂದೆಯು ಅಕ್ಷರವಿದ್ಯೆಗಳನ್ನು ಕಲಿಸದಿದ್ದರೆ ಅವರನ್ನು ಸಾಯಿಸಿದಂತೆಯೇ. ವಿದ್ಯೆಯಿಲ್ಲದಿದ್ದರೆ ಲಕ್ಷ ಹಣವಿದ್ದರೂ ಪ್ರಯೋಜನಕ್ಕೆ ಬಾರದು. ಚಿಕ್ಕಂದಿನಲ್ಲಿ ಕಲಿತ ವಿದ್ಯೆ ಜೀವನಪರ್ಯಂತ ಕಾಯುವುದು' 

ಈ ಒಂದು ಹಿನ್ನೆಲೆಯಲ್ಲಿ ನಮ್ಮ ಕ್ರೈಸ್ತ ಮಿಷನರಿಗಳು ವಿದ್ಯಾದಾನಕ್ಕೆ ಕೈಗೂಡಿಸಿದ ಬಗೆಯು ವಿಭಿನ್ನವೂ ವಿನೂತನವೂ ಆಗಿತ್ತು. ಅವರು ನಮ್ಮ ದೇಶದ ಪಾರಂಪರಿಕ ಕಾವ್ಯದ ಓದಿನ ಬದಲಾಗಿ ಶಾಲಾ ಪಠ್ಯಗಳಲ್ಲಿ ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ದೇಶವಿದೇಶಗಳ ಚರಿತ್ರೆ, ಸಾಮಾನ್ಯ ವಿಜ್ಞಾನ, ಗಣಿತ ಮುಂತಾದ ವಿಷಯಗಳನ್ನು ತುಂಬಿದರು. ನಕಾಶೆಗಳನ್ನು ಬರೆಯುವುದು ಹೇಗೆಂದು ಹೇಳಿಕೊಟ್ಟರು. 

ಮೈಸೂರು ಸಂಸ್ಥಾನದ ಮಹಾರಾಜರು ಪ್ರಗತಿಪರ ವಿಚಾರಧಾರೆ ಹೊಂದಿದವರಾಗಿದ್ದು ತಮ್ಮ ನಾಡಿನಲ್ಲಿ ಶಿಕ್ಷಣಕ್ಕೆ ಬಹುತರ ಆದ್ಯತೆ ನೀಡಿದ್ದರಲ್ಲದೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಸ್ಥಾಪಿಸಿದವರಲ್ಲಿ ಮೊದಲಿಗರಾಗಿದ್ದರು. ಬನಾರಸ್ ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಮೈಸೂರು ಮಹಾರಾಜರ ಕೊಡುಗೆ ಅತಿ ಹೆಚ್ಚಿನದಾಗಿತ್ತಲ್ಲದೆ ಅದೇ ಕಾರಣದಿಂದ ಅವರು ಮೂರು ಅವಧಿಯವರೆಗೆ ಆ ವಿಶ್ವವಿದ್ಯಾಲಯದ ಕುಲಪತಿ ಸ್ಥಾನವನ್ನು ಅಲಂಕರಿಸಿದ್ದರು. ದೇಶದಲ್ಲೇ ಮೊದಲ ಬಾರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿದ ಕೀರ್ತಿ ಮೈಸೂರು ಮಹಾರಾಜರಿಗೆ ಸಲ್ಲುತ್ತದೆ. 

ಅಂದು ದೇಶವನ್ನು ಆಳುತ್ತಿದ್ದ ಬ್ರಿಟಿಷ್ ಸರಕಾರವು ಜಾತ್ಯತೀತವಾಗಿದ್ದು ಮಿಷನರಿ ಕೆಲಸಕ್ಕೆ ಬೆಂಬಲ ನೀಡಲಿಲ್ಲವಾದರೂ ಸಾರ್ವತ್ರಿಕ ಶಿಕ್ಷಣಕ್ಕೆ ಪಠ್ಯಪುಸ್ತಕಗಳನ್ನು ರೂಪಿಸಲು ಮಿಷನರಿಗಳ ನೆರವು ಪಡೆಯಿತೆಂಬುದು ಗಮನಾರ್ಹ. ಈ ದೆಸೆಯಿಂದ ಅಂದಿನ ಶಿಕ್ಷಣದಲ್ಲಿ ಒಂದು ಏಕರೂಪತೆ ಸಾಧ್ಯವಾಯಿತು. ಹೀಗೆ ಎಲ್ಲೆಡೆ ಸರಕಾರಿ ಶಾಲೆಗಳು ತೆರೆಯಲ್ಪಟ್ಟು ಸಮಾಜದ ಎಲ್ಲರಿಗೂ ಸುಲಭವಾಗಿ ವಿದ್ಯೆ ಸಿಗುವಂತಾಯಿತು. 

ಆದರೂ ನಮ್ಮ ದೇಶದ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಬಹುಕಾಲ ಹಾಗೂ ಬಹುಸ್ಥಳಗಳಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿದ್ದವು. ನಮ್ಮ ದೇಶದಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಯ ಪ್ರಪ್ರಥಮ ರೂವಾರಿಗಳಾದ ಕ್ರೈಸ್ತ ವಿದ್ಯಾಸಂಸ್ಥೆಗಳು ಬಹು ವಿಶಾರದವೂ ವಿಚಾರಪ್ರದವೂ ಆದ ಶಿಕ್ಷಣದ ಮೂಲಕ ಸಹಸ್ರಾರು ಜನರನ್ನು ದೇಶ ಕಟ್ಟುವ ನಿಟ್ಟಿನಲ್ಲಿ ತಯಾರು ಮಾಡಿದವು. ದೇಶದ ಅತಿರಥ ಮಹಾರಥರಾಗಿ ವಿಜೃಂಭಿಸಿದ ನಾಯಕರನೇಕರು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಕ್ರೈಸ್ತ ಶಿಕ್ಷಣವೇತ್ತರಲ್ಲಿ ತಯಾರಾದರೆಂಬುದು ಗಮನಾರ್ಹ ಸಂಗತಿ. 

ಆದರೆ ಸ್ವತಃ ಕ್ರೈಸ್ತರನ್ನು ಈ ಶಿಕ್ಷಣಸಂಸ್ಥೆಗಳು ಹೇಗೆ ನಡೆಸಿಕೊಂಡವು ಎಂಬುದನ್ನು ವಿಮರ್ಶೆಗೊಳಪಡಿಸಲೇಬೇಕು. 32ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರೂ ಸಾಹಿತ್ಯವೇತ್ತರೂ ಕ್ರೈಸ್ತ ಲಿಂಗಾಯತ ಉಭಯ ಧರ್ಮಗಳ ಪಂಡಿತೋತ್ತಮರೂ ಆಗಿದ್ದ ರೆವರೆಂಡ್ ಉತ್ತಂಗಿ ಚೆನ್ನಪ್ಪನವರ ಅನುಭವದ ಪ್ರಕಾರ “ಸ್ಥಳೀಯ ಕ್ರೈಸ್ತರನ್ನು ಕ್ರೈಸ್ತಧರ್ಮ ಪ್ರಚಾರಕ್ಕೆ ಅಗತ್ಯವಿದ್ದಷ್ಟೇ ಓದು ಬರಹದ ತಿಳಿವನ್ನು ನೀಡಬೇಕು, ಉಚ್ಚಶಿಕ್ಷಣ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ಅವರನ್ನು ಪಾರಂಗತರಾಗಲು ಬಿಡಬಾರದು, ಹಾಗೇನಾದರೂ ಅವರನ್ನು ಹೆಚ್ಚು ಓದಲು ಬಿಟ್ಟರೆ ಮುಂದೆ ನಮಗೇ ಕಂಟಕಪ್ರಾಯರಾದಾರು” ಎಂದು ಮಿಷನರಿ ಮುಖ್ಯಸ್ಥರು ಭಾವಿಸಿದಂತೆ ತೋರುತ್ತದೆ. ಹೀಗೆ ಅರ್ಹತೆಯಿದ್ದರೂ ಚನ್ನಪ್ಪನವರು ಉನ್ನತ ವ್ಯಾಸಂಗದಿಂದ ವಂಚಿತರಾದರೆಂಬುದು ಇತಿಹಾಸದ ನಗ್ನಸತ್ಯ. 

ಸ್ವಾತಂತ್ರ‍್ಯಾನಂತರದ ದಿನಗಳಲ್ಲಿ ನಮ್ಮದೇ ಇಂಡಿಯಾದ ಸರಕಾರವು ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದಲ್ಲಿ ಆಮೂಲಾಗ್ರ ಅಭಿವೃದ್ಧಿಗೆ ತೊಡಗಿತು. ಸರ್ವರಿಗೂ ಶಿಕ್ಷಣ ಎಂಬ ಒಂದು ಯೋಜನೆಯಡಿಯಲ್ಲಿ ದುರ್ಗಮ ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ದುರ್ಬಲ ವರ್ಗದವರಿಗೂ ಶಿಕ್ಷಣವು ಎಟಕುವಂತೆ ಮಾಡಲು ಯತ್ನಿಸಿತು. ಈ ಒಂದು ಪ್ರಕ್ರಿಯೆಯಲ್ಲಿ ಅದಾಗಲೇ ತೊಡಗಿಕೊಂಡಿದ್ದ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಸರಕಾರದ ಅನುದಾನ ನೀಡಿ ಅವನ್ನೂ ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ಮಾಡಲಾಯಿತು. ಹೀಗೆ ನಮ್ಮ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಸರಕಾರದ ಸಂಬಳವನ್ನು ಪಡೆಯುವುದು ಸಾಧ್ಯವಾಯಿತು. ಅಲ್ಲದೆ ನಮ್ಮ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲಾಕಟ್ಟಡಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಂದ ಕಟ್ಟಡನಿಧಿ ಸಂಗ್ರಹಿಸಲೂ ಪರೋಕ್ಷವಾಗಿ ಬೆಂಬಲಿಸಿದಂತಾಯಿತು. 

ಇದೇ ಕಟ್ಟಡನಿಧಿ ಸಂಗ್ರಹಣೆಯು ಮುಂದೆ ಡೊನೇಶನ್ ಎಂಬ ರೂಪದಲ್ಲಿ ಭೂತಾಕಾರವಾಗಿ ಬೆಳೆದು ಹಣ ಕೊಡುವವರಿಗಷ್ಟೇ ಸೀಟು ಎಂಬ ತತ್ವ ಮೈಗೂಡಿಸಿಕೊಂಡು ದುರ್ಬಲರಿಗೆ ಶಿಕ್ಷಣವೆಂಬ ತತ್ವ ಮೂಲೆಗುಂಪಾಯಿತು. ಶಾಲೆಗಳನ್ನು ನಡೆಸುವುದು ಲಾಭದಾಯಕ ಉದ್ಯಮವಾಗಿ ಬದಲಾಯಿತು. ಉದಾಹರಣೆಗೆ ತಮಿಳುನಾಡಿನ ಯೇರ್ಕಾಡು ಎಂಬ ಗಿರಿಪ್ರದೇಶದಲ್ಲಿ ಬಡಜನರ ಸೇವೆಗಾಗಿ ವಿದೇಶದಿಂದ ವಂತಿಗೆ ಸ್ವೀಕರಿಸುವ ಕನ್ಯಾಮಠವೊಂದು ಬೆಂಗಳೂರಿನಲ್ಲಿ ಶಾಲೆ ತೆರೆದು ಸಮಾಜದ ಉನ್ನತವರ್ಗದವರಿಗಷ್ಟೇ ಸೀಟು ಕೊಡುತ್ತದೆ. ಹೀಗೆ ಕ್ರೈಸ್ತ ಶಿಕ್ಷಣಸಂಸ್ಥೆಗಳೆಂಬ ಹೆಸರು ಹೊತ್ತಿರುವ ಅನೇಕ ಶಾಲೆಗಳು ಕ್ರೈಸ್ತರಿಗೆ ಸೀಟು ಕೊಡದ ಅನೇಕ ಉದಾಹರಣೆಗಳನ್ನು ಈಗಲೂ ಕಾಣಬಹುದು. 

ಹಾಗೆ ಇಂತಹ ಶಾಲೆಗಳಲ್ಲಿ ಶಿಕ್ಷಣ ಪಡೆದ ಸಮಾಜದ ಉನ್ನತ ವರ್ಗದ ಬಲಾಡ್ಯ ಸಮುದಾಯದ ವಿದ್ಯಾರ್ಥಿಗಳು ಮುಂದೆ ಉನ್ನತ ಸ್ಥಾನಗಳನ್ನು ಅಲಂಕರಿಸಿ ನಮ್ಮ ಧಾರ್ಮಿಕ ಸಂಸ್ಥೆಗಳ ವಿರುದ್ಧವೇ ಕತ್ತಿ ಜಳಪಿಸುವುದು ಸರ್ವೇಸಾಮಾನ್ಯವಾಗಿದೆ. ಹೀಗೆ ನಮ್ಮದೇ ಕ್ರೈಸ್ತಶಾಲೆಯ ವಿದ್ಯಾರ್ಥಿಯಾಗಿದ್ದ ಅರುಣ್ ಶೌರಿ ಎಂಬ ಪತ್ರಕರ್ತ ಮುಂದೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಅಂಕಣಕಾರನಾಗಿ ನಮ್ಮ ಧಾರ್ಮಿಕ ವಿಷಯಗಳನ್ನು ಲೇವಡಿ ಮಾಡುತ್ತಾ ಪುಂಖಾನುಪುಂಖವಾಗಿ ಲೇಖನಗಳನ್ನು ಬರೆದದ್ದು ನೆನಪಿದೆ ತಾನೇ? ಇದೇ ಅರುಣ್ ಶೌರಿ ಮುಂದೆ ಲೋಕಸಭಾ ಸದಸ್ಯನಾಗಿ ಮಂತ್ರಿಯೂ ಆಗುತ್ತಾನೆನ್ನುವುದು ಆತ್ಮಘಾತುಕ ಸಂಗತಿ. 

ಇಂದು ನಮ್ಮ ಶಾಲೆಗಳಲ್ಲಿ ಬೋಧಿಸುವ ಪಾದ್ರಿಗಳೂ, ಬ್ರದರುಗಳೂ, ಸಂನ್ಯಾಸಿನಿಯರೂ ಸರಕಾರದ ಅನುದಾನದಡಿಯಲ್ಲಿ ಸಂಬಳ ಪಡೆಯುತ್ತಿದ್ದರೂ ಆದಾಯ ತೆರಿಗೆ ಪಾವತಿಸಲು ವಿನಾಯಿತಿ ಪಡೆಯುತ್ತಿದ್ದಾರೇಕೆ ಎಂದು ಪ್ರಶ್ನಿಸಲಾಗುತ್ತಿದೆ. ಅಲ್ಲದೆ ಸರಕಾರದ ಅನುದಾನ ಪಡೆಯುವ ಕ್ರೈಸ್ತಶಾಲೆಗಳನ್ನು ವಶಕ್ಕೆ ತೆಗೆದುಕೊಂಡು ಸರಕಾರವೇ ಶಾಲೆ ನಡೆಸಬಾರದೇಕೆ ಎಂಬ ಪ್ರಶ್ನೆಯನ್ನೂ ಹಾಕಲಾಗುತ್ತಿದೆ. 

ಇಂತಿರುವಲ್ಲಿ ನಮ್ಮದೇ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಸೀಟುಕೊಡದ, ನಮ್ಮ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸದ, ನಮ್ಮ ಜನರನ್ನು ಭಾಷೆಯ ಕಾರಣದಿಂದ ಪ್ರಾದೇಶಿಕ ಕಾರಣದಿಂದ ತರತಮ ಭಾವದಲ್ಲಿ ಕಾಣುವ, ಬೇರೆಲ್ಲೋ ಸಂದರ್ಶನ ನಡೆಸಿ ಅಲ್ಲೆಲ್ಲಿಂದಲೋ ಶಿಕ್ಷಕರನ್ನು ತಂದು ಹೇರುವ ಹುಳುಕು ಮನಸ್ಸುಗಳು ಇರುವವರೆಗೂ ನಮ್ಮ ವಿಮೋಚನೆ ಯಾರಿಂದಲೂ ಸಾಧ್ಯವಿಲ್ಲ. 

********* 



ನಿತ್ಯಜೀವ!

- ಫಾ. ಪಿ ವಿಜಯ ಕುಮಾರ್, ಬಳ್ಳಾರಿ
ನಿತ್ಯಜೀವ ಎಂದರೆ ಏನು? ಇದು ಯಾರಿಗೆ ಬೇಕು, ಯಾರಿಗೆ ಬೇಡ? ಯಾರಿಗೆ ಸಿಗುತ್ತದೆ, ಯಾರಿಗೆ ಸಿಗುವುದಿಲ್ಲ? ಯಾವಾಗ ಸಿಗುತ್ತದೆ? ಇವೆಲ್ಲ ಯಕ್ಷ ಪ್ರಶ್ನೆಗಳೇ ಸರಿ. ಹಾಗಾದರೆ ನಿತ್ಯಜೀವ ಎಂದರೆ ಏನು? ಇದು ಯಾರಿಗೆ ದೊರೆಯುತ್ತದೆ? ನಿತ್ಯಜೀವ ಎಂದರೆ ತ್ರೈಏಕ ದೇವನ ಸನ್ನಿಧಿಯಲ್ಲಿ ನಿರಂತರವಾಗಿ ಪರಿಪೂರ್ಣವಾದ ಆನಂದವನ್ನು ಆಸ್ವಾಧಿಸುವುದು. ಇದು ಯಾರಿಗೆ ಬೇಕಾದರೂ ಸಿಗಬಹುದು. ಇದಕ್ಕೆ ಬಡವ-ಬಲ್ಲಿದ, ಜ್ಞಾನಿ-ಅಜ್ಞಾನಿ, ಶ್ರೇಷ್ಠ-ಕನಿಷ್ಠ, ಬಲಹೀನ-ಬಲಿಷ್ಟ ಎಂಬ ಬೇಧವಲ್ಲ. ಇದು ತ್ರೈಏಕ ದೇವರು ಉಚಿತವಾಗಿ ನೀಡಿವ ಅನಂತ ಉಡುಗೊರೆ. ಅವರು ಇಚ್ಛಿಸಿದವರಿಗೆ ಅದನ್ನು ಉಚಿತವಾಗಿ ಯಥೇಚ್ಛವಾಗಿ ನೀಡುವರು. ಯಾರೂ ಸಹ ಇದನ್ನು ತಮ್ಮ ಪರಿಶ್ರಮದಿಂದಾಗಲೀ, ಬುದ್ದಿವಂತಿಕೆಯಿಂದಾಲೀ, ದಾನ-ಧರ್ಮದಿಂದಾಗಲೀ, ಭಕ್ತಿ-ಭಾವದಿಂದಾಗಲೀ ಗಳಿಸಲು ಸಾಧ್ಯವಿಲ್ಲ. ಇದು ದೇವರ ಉಚಿತ ವರದಾನ. ಇದನ್ನು ಸಂತ ಪೌಲನು ಹೀಗೆ ವಿವರಿಸುತ್ತಾನೆ 
“ಮರಣವೇ ಪಾಪದ ವೇತನ; ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ಇರುವ ನಿತ್ಯಜೀವವೇ ದೇವರ ಉಚಿತ ವರದಾನ” 
(ರೋಮನರಿಗೆ 6:23). 

ನಿತ್ಯಜೀವ ಒಬ್ಬ ವ್ಯಕ್ತಿ ಸತ್ತ ನಂತರ ಅನುಭವಿಸುವುದಲ್ಲ. ಪ್ರಭುಯೇಸು ಅದನ್ನು ಹೀಗೆ ವಿವರಿಸುತ್ತಾರೆ : 

ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನ ಮಾತಿಗೆ ಕಿವಿಗೊಟ್ಟು ನನ್ನನ್ನು ಕಳುಹಿಸಿದ ಆತನಲ್ಲಿ ವಿಶ್ವಾಸವಿಡುವವನು ನಿತ್ಯಜೀವವನ್ನು ಪಡೆದಿರುತ್ತಾನೆ. ಅವನು ಖಂಡನೆಗೆ ಗುರಿ ಆಗನು; ಅವನು ಈಗಾಗಲೇ ಸಾವನ್ನು ದಾಟಿ ಜೀವವನ್ನು ಸೇರಿರುತ್ತಾನೆ (ಯೊವಾನ5:24). 
ಅಂದರೆ ಒಬ್ಬ ವ್ಯಕ್ತಿ ಪ್ರಭುಯೇಸುವಿನಲ್ಲಿ ವಿಶ್ವಾಸವಿಟ್ಟು ಸ್ನಾನದೀಕ್ಷೆ ಪಡೆದ ಕ್ಷಣದಿಂದಲೇ ನಿತ್ಯಜೀವ ಪ್ರಾರಂಭವಾಗುತ್ತದೆ. ಅದು ವ್ಯಕ್ತಿಯ ಸ್ವಾಭಾವಿಕ ಬೆಳವಣಿಗೆಯೊಂದಿಗೆ ಆಧ್ಯಾತ್ಮಿಕವಾಗಿ ಅವನಿಗರಿವಿಲ್ಲದಂತೆ ಆಂತರಿಕವಾಗಿ ಬೆಳೆಯುತ್ತಿರುತ್ತದೆ. ಅದೇ ಸಮಯದಲ್ಲಿ ಈ ಸುಂದರ ಲೋಕದ ಆಶಾಪಾಶಗಳು ಆ ವ್ಯಕ್ತಿಯನ್ನು ಅಕರ್ಷಿಸುತ್ತವೆ. ಆದರೆ ಅವುಗಳಿಗೆ ಬಲಿಯಾಗದೆ ತ್ರೈಏಕನಲ್ಲಿ ತನ್ನ ದೃಷ್ಟಿಯನ್ನು ನೆಟ್ಟಾಗ ತ್ರೈಏಕ ದೇವ ಅವರನ್ನು ಕೈಹಿಡಿದು ಮುನ್ನೆಡೆಸುತ್ತಾರೆ. ಅವರ ಕರಗಳಲ್ಲಿ ನಮ್ಮ ಕರಗಳನ್ನು ಇರಿಸಿದಾಗ ಲೋಕದ ಆಶಾಪಾಶಗಳೆಲ್ಲ ಕ್ಷಣಿಕವೆಂಬ ಅರಿವು ಮೂಡಿ ಅವು ಮಂಜಿನಂತೆ ಕರಗಿಹೋಗಿ ಭ್ರಾತೃಪ್ರೇಮ ಅಂತರಾಳದಲ್ಲಿ ಅಂಕುರಿಸುತ್ತದೆ. ಅದು ಹಂತ ಹಂತವಾಗಿ ಬೆಳೆದು ಹೆಮ್ಮರವಾಗಿ ’ತನಗಾಗಿ ಬಾಳುವುದು ಬಾಳಲ್ಲ ಪರರಿಗಾಗಿ ಬಾಳುವುದೇ ನಿಜವಾದ ಬಾಳು’ ಎಂಬ ಆಧ್ಯಾತ್ಮಿಕ ಒಳ ಅರಿವು ತೆರೆದುಕೊಳ್ಳುತ್ತದೆ. ಅಲ್ಲಿ ನಿತ್ಯಜೀವದ ಬುನಾದಿ ಭದ್ರವಾಗಿ ಆಳವಾಗಿ ಬೇರು ಬಿಟ್ಟು ನೆಲೆಯೂರುತ್ತದೆ. ಪರರಿಗಾಗಿ ಯಾರು ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೋ ಅವರು ನಿತ್ಯಜೀವದೆಡೆಗೆ ನಿರಂತರ ದಾಪುಗಾಲು ಹಾಕುತ್ತಾರೆ. 

ನಿತ್ಯಜೀವ ಈ ಲೋಕದಲ್ಲಿರುವಾಗಲೇ ಅನುಭವಿಸಲು ಸಾಧ್ಯವಿರುವ ದೈವಾನುಭಾವ. ಅದು ಈ ಲೋಕದ ಜೀವನ ಯಾತ್ರೆಯಲ್ಲಿ ಸದೃಢವಾಗಿ ಬೆಳೆಯುತ್ತ ಹೆಮ್ಮರವಾಗುತ್ತ ಸಾಗಿ ಒಂದು ದಿನ ಎಲ್ಲರ ಹಾಗೆ ಇಹಲೋಕ ತ್ಯಜಿಸಿ ತ್ರೈಏಕ ದೇವನ ಸನ್ನಿಧಿ ಸೇರಿದಾಗ ಪರಿಪೂರ್ಣವಾಗುವುದು. 
ಹಾಗಾದರೆ ಒಬ್ಬ ವ್ಯಕ್ತಿ ನಿತ್ಯಜೀವದೆಡೆಗೆ ಪಯಣಿಸುತ್ತಿರುವನೆಂದು ತಿಳಿಯುವುದು ಹೇಗೆ? ಅಂತಹ ವ್ಯಕ್ತಿ ನಿಸ್ವಾರ್ಥಿಯಾಗಿರುತ್ತಾನೆ. ಆ ವ್ಯಕ್ತಿಗೆ ’ಅಲ್ಪ ಸುಖಕ್ಕಿಂತ ಪರರ ಸುಖವೇ’ ಶ್ರೇಷ್ಠವೆಂಬ ಅರಿವು ಉದಯವಾಗುತ್ತದೆ. ಆಗ ಆ ವ್ಯಕ್ತಿಯಲ್ಲಿ ಈ ಲೋಕದ ಅಳಿದು ಹೋಗುವ ಆಸ್ತಿ-ಅಂತಸ್ತಿನ ವ್ಯಾಮೋಹವಿರುವುದಿಲ್ಲ. ಸದಾ ಪರೋಪಕಾರಿಯಾಗಿರಲು ಬಯಸುತ್ತಾನೆ. ನುಸಿ ಹಿಡಿಯುವ ಆಸ್ತಿಯನ್ನು ಸಂಪಾದಿಸುವುದರಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಿಲ್ಲ. ಬದಲಾಗಿ ಸಮಾಜದಿಂದ ತಿರಸ್ಕೃತರಾದವರ, ದೀನರ, ಬಡವರ, ರೋಗಿಗಳ ಫಲಾಪೇಕ್ಷೆ ಇಲ್ಲದ ಸೇವೆಯೇ ಅವನ/ಳ ಪರಮ ಗುರಿಯಾಗಿರುತ್ತದೆ. ಅವರ ಹೃದಯ ಸದಾ ಪರಹಿತವನ್ನು ಬಯಸುತ್ತದೆ. ನೊಂದ ಮನಗಳಿಗೆ ಸಾಂತ್ವನ ನೀಡಿ ಅವರ ಕಣ್ಗಳಲ್ಲಿ ಸಂತೋಷವನ್ನು ಕಾಣಲು ಅವರು ತವಕಿಸುತ್ತಾರೆ. ನಿಷ್ಕಪಟ ಹೃದಯ, ನಿರ್ಮಲ ಮನಸ್ಸು, ಸೇವಾ ಮನೋಭಾವ ಅವರ ಆಸ್ತಿ. ಕ್ರಿಸ್ತನ ತ್ಯಾಗ ಅವರಿಗೆ ಸ್ಫೂರ್ತಿ, ಕ್ರಿಸ್ತನ ಬೋಧನೆ ಅವರಿಗೆ ಪ್ರೇರಣೆ, ಕ್ರಿಸ್ತನ ಪುನರುತ್ಥಾನ ಅವರಿಗೆ ಭರವಸೆಯ ಚಿಲುಮೆ. ಒಟ್ಟಾರೆ ಪ್ರಭು ಕ್ರಿಸ್ತನೇ ಅವರಿಗೆ ನಿತ್ಯಜೀವ (ಯೊವಾನ್ನ 17:3). 
ಪರಮ ತ್ಯಾಗಿ ಪ್ರಭು ಕ್ರಿಸ್ತನನ್ನು ಅಂಗೀಕರಿಸಿ ಅವರ ಆಜ್ಞೆಯನ್ನು ಪಾಲಿಸುತ್ತ ಮುಕ್ತ ಮನದಿಂದ ಕ್ರಿಸ್ತನನ್ನು ಹಿಂಬಾಲಿಸುತ್ತ ಸರಳತೆಯನ್ನು ಮೈಗೂಡಿಸಿಕೊಂಡು ನಿಸ್ವಾರ್ಥತೆಯಿಂದ ಮಾನವರ ಸೇವೆಮಾಡುವವನಿಗೆ ನಿತ್ಯಜೀವ ಲಭಿಸುವುದರಲ್ಲಿ ಸಂಶಯವೇ? 

********* 


ಮೋದಿಯವರೇ all the best

¨ ಜೋವಿ

ಹದಿನೇಳನೇ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಅಘಾತಗೊಂಡ ಎಷ್ಟೋ ಜನರಲ್ಲಿ ನಾನು ಕೂಡ ಒಬ್ಬ. ಯಾವ ಅಧಾರದ ಮೇಲೆ ಜನರು ಓಟು ಮಾಡಿ ಒಂದು ಪಕ್ಷಕ್ಕೆ ಬಹುಮತಕೊಟ್ಟು ಗೆಲ್ಲಿಸಿದರೋ ಗೊತ್ತಿಲ್ಲ; ಗೆಲ್ಲಬೇಕಾದವರು ಗೆಲ್ಲಲಿಲ್ಲ, ಗೆಲ್ಲಬಾರದವರು ಗೆದಿದ್ದಾರೆ. ಸರ್ಕಾರದ ತಪ್ಪುಒಪ್ಪುಗಳನ್ನು ಪಶ್ನಿಸಿ ಬಡವರ ಪರ ಕಾಳಜಿಯನ್ನು ತೋರಿದವರನ್ನು ಸೋಲಿಸಿ, ಉಗ್ರವಾದವನ್ನು ಪೋಷಿಸಿ ಅಪ್ಪಿಕೊಂಡವರನ್ನು ಗೆಲ್ಲಿಸಿದ್ದಾರೆ; ಶಿಕ್ಷಣತಜ್ಞೆಯನ್ನು ಸೋಲಿಸಿ ಆಟಗಾರನಿಗೆ ಓಟ್ ಹಾಕಿ ಗೆಲ್ಲಿಸಿದ್ದಾರೆ. ಒಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಮಣೆ ಹಾಕದೆ, ಜನರಲ್ಲಿ ಒಡಕು ಮೂಡಿಸಿ ಬಲಹೀನರ ಮೇಲೆ ಬಲ ಪ್ರಯೋಗ ಮಾಡುವ ಒಂದು ಸಿದ್ಧಾಂತಕ್ಕೆ ಜನರು ಮಾರು ಹೋದಂತೆ ನಮಗೆ ಸ್ವಷ್ಟವಾಗಿ ಕಾಣುತ್ತಿದೆ. 

ಚುನಾವಣೆಯ ಅತಿರೇಕ ಫಲಿತಾಂಶವನ್ನು ವಿಶ್ಲೇಷಿಸಿ ಅನೇಕರು ಕಾರಣಗಳಿಗೆ ಹುಡುಕಾಡುತ್ತಿದ್ದಾರೆ. ಕೆಲವರಂತೂ ಇವಿಎಂ ರಿಗ್ ಆಗಿದೆ ಅಥವಾ ಇವಿಎಂ ಮಿಷಿನ್‍ಗಳಲ್ಲಿ ಮೋಸ ನಡೆದಿದೆ ಎಂದು ಚುನಾವಣಾ ಆಯೋಗವನ್ನು ದೂಷಿಸುತ್ತಿದ್ದಾರೆ. ಕೆಲವೊಂದು ಮಾಧ್ಯಮಗಳು ತಮ್ಮ ಸಂಶೋಧನೆಯಿಂದ ಹೊರ ಹಾಕಿರುವ ಕೆಲವೊಂದು ವರದಿಗಳು ಚುನಾವಣಾ ಅಯೋಗದ ಸ್ವಾಯತ್ತತೆ ಬಗ್ಗೆ ಮತ್ತು ಅದರ ಕಾರ್ಯವೈಖರಿಯ ಬಗ್ಗೆ ಸಂಶಯ ಕಣ್ಣುಗಳಿಂದ ನೋಡಲು ಅನು ಮಾಡಿಕೊಟ್ಟಿದೆ. ಎಷ್ಟೋ ಕಡೆ ಚಲಾವಣೆಯಾದ ಮತಗಳು ಮತ್ತು ಎಣಿಕೆಯಾದ ಮತಗಳ ಲೆಕ್ಕಚಾರದಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಇವಿಎಂ ದುರುಪಯೋಗ ಮಾಡಿಕೊಂಡಿರುವುದು ಪಕ್ಕಾ ಎಂದು ಜನರು ಹೇಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವಿಎಂ ರಿಗ್ ಆಗಿರಲೀ ಆಗದೆಯೇ ಇರಲಿ ಒಂದು ವಿಷಯದ ಬಗ್ಗೆ ಯಾರಿಗೂ ಸಂಶಯ ಬರಲು ಸಾಧ್ಯವೇ ಇಲ್ಲ; ಅದೆಂದರೆ ಪರಿಣಾಮಕಾರಿಯಾಗಿ ರಿಗ್ ಆಗಿರುವುದು ಹಿಂದೂ ಮನಸ್ಸು ಎಂದು ಚಿಂತಕರು ಹೇಳುತ್ತಿದ್ದಾರೆ. 

ಏನೇ ಇರಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಿ ಆರಿಸಿ ಬರಲು ಅವರ ಕಳೆದ ಐದು ವರ್ಷಗಳಲ್ಲಿ ನೀಡಿದ ಆಡಳಿತದ ವೈಖರಿ ಅಂತೂ ಅಲ್ಲವೇ ಅಲ್ಲ. ಅವರ ಅನೇಕ ಯೋಜನೆಗಳು ಪ್ರಚಾರದ ಗಿಮಿಕ್ಕು‍ಗಳಾದವೇ ವಿನಃ ಗುರಿ ಸಾಧಿಸುವಲ್ಲಿ ವಿಫಲವಾಗಿರುವುದು ನಮಗೆ ಗೊತ್ತೇ ಇದೆ. ಅವರ ನೋಟ್ ಬ್ಯಾನ್, ಡಿಜಿಟಲೀಕರಣ, ಆರೋಗ್ಯವಿಮೆ, ಸ್ವಚ್ಛ ಭಾರತ್, ಬ್ಯಾಂಕ್‍ಗಳ ಕೇಂದ್ರೀಕರಣ ಇವೆಲ್ಲವೂ ಹೀಗೆ ಗಾತ್ರದಲ್ಲಿ ದೊಡ್ಡದಾಗಿ ಮೋದಿಯ ಜನಪ್ರಿಯತೆಯನ್ನು ಹೆಚ್ಚಿಸಿದವೇ ವಿನಹ ಕಾರ್ಯಸಾಧನೆಯಲ್ಲಿ ಎಳ್ಳಷ್ಟೂ ಪ್ರಯೋಜನವಾಗಲಿಲ್ಲ. ಇನ್ನೊಂದು ಕಡೆ ಮೋದಿಯವರ ಪ್ರತಿಯೊಂದು ನಡೆ ನುಡಿಗೆ ರಾಷ್ತ್ರೀಯತೆ ಅಥವಾ ರಾಷ್ಟ್ರಪ್ರೇಮದ ಬಣ್ಣ ಹಚ್ಚಿ ವರ್ಣರಂಜಿತವಾಗಿ ವಿತರಿಸಿದ ಕಲುಷಿತ ಕಾರ್ಪೊರೇಟ್ ಮಾಧ್ಯಮಗಳು ಕೂಡ ಮೋದಿಯವರ ಗೆಲುವಿಗೆ ತುಂಬಾ ಶ್ರಮ ವಹಿಸಿದ್ದಂತೂ ನಿಜ. ಮೋದಿಯೊಬ್ಬ ಅತ್ಯುತ್ಸಾಹಿ, ದಣಿವರಿಯದ ಸರಳ ನಿಸ್ವಾರ್ಥ, ಶುದ್ಧರಾಜಕಾರಣಿ, ದಿಟ್ಟ ನಾಯಕ ಎಂದು ಏಕಪಕ್ಷೀಯವಾಗಿ ಅವರನ್ನು ಗಳಿಗೆಗೊಮ್ಮೆ ತೋರಿಸಿ ಅವರ ನ್ಯೂನತೆಗಳನ್ನು ಮುಚ್ಚಿ ಹಾಕಿ ಅತ್ಮವಂಚನೆ ಮಾಡಿಕೊಂಡ ನಮ್ಮ ಮಾಧ್ಯಮಗಳು, ಸೋಷಿಯಲ್ ಮೀಡಿಯಗಳು ಮೋದಿಯವರ ಗೆಲುವಿಗೆ ಕೈ ಜೋಡಿಸಿರುವುದು ವಾಸ್ತವ. ಮತ್ತೊಂದೆಡೆ ಹಿಂದುತ್ವದ ಅಜೆಂಡಾ ಹಿಡಿದುಕೊಂಡು ಅದರ ಅನುಷ್ಠಾನಕ್ಕೆ ತಂತ್ರಗಾರಿಕೆಯಿಂದ ಕೆಲಸಮಾಡುತ್ತಿರುವ ಕೆಲವೊಂದು ಸಂಘಟನೆಗಳ ಸಂಘಟನಾ ಶಕ್ತಿಯೂ ಕೂಡ ಮೋದಿಯವರ ಗೆಲುವಿಗೆ ವಂತಿಕೆ ಸಲ್ಲಿಸಿದಂತಿದೆ. 

ಹೌದು, ಪ್ರಜಾಪ್ರಭುತ್ವವನ್ನು ಗೌರವಿಸುವವರಿಗೆ, ಸಮಾನತೆಯ ಸಮಾಜವನ್ನು ಬಯಸುವವರಿಗೆ, ದೇಶದ ಸಂವಿಧಾನವನ್ನು ಗೌರವಿಸುವವರಿಗೆ ಈ ಲೋಕಸಭಾ ಫಲಿತಾಂಶದಿಂದ ಹತಾಶೆಯಾಗಿರಬಹು, ಪ್ರಯತ್ನದಲ್ಲಿ ಅಲ್ಪಸ್ವಲ್ಪ ಹಿನ್ನಡೆಯಾಗಿರಬಹುದು. ಆದರೆ ಬಹುಮತವೇ ಅಂತಿಮ. ಅದನ್ನು ನಾವು ಒಪ್ಪಿಕೊಳ್ಳುವುದು ಅನಿವಾರ್ಯ ಮತ್ತು ಕರ್ತವ್ಯ ಕೂಡ. ಈ ಹಿನ್ನಲೆಯಲ್ಲಿ ಸಮಾನತೆಯ ಸಮಾಜ ಸೃಷ್ಟಿಗೆ ನಮ್ಮ ಸಾತ್ವಿಕ ಹೋರಾಟ ಮುಂದುವರಿಯಲಿ. 

ಈ ಸಂದರ್ಭದಲ್ಲಿ ನಾವು ಕೂಡ ಬುದ್ಧಿವಂತಿಕೆಯಿಂದ ತಂತ್ರಗಾರಿಕೆಯಿಂದ ಕೆಲಸ ಮಾಡಬೇಕಿದೆ. ಅಂತಹ ಶಕ್ತಿ ಆ ಭಗವಂತ ನಮಗೆ ಕರುಣಿಸಲಿ. 

ಈಗಷ್ಟೇ facebook ಪೋಸ್ಟ್‍ಗಳನ್ನು ಗಮನಿಸುತ್ತಿದ್ದ ನನಗೆ "ಪದವೀಧರ ಮತದಾರರಿಗೆ ಪುಸ್ತಕಗಳ ಕೊಡುಗೆ" ಎಂಬ ಒಂದು ಪತ್ರಿಕಾವರದಿಯನ್ನು ಬಸೂರವರು ಹಂಚಿಕೊಂಡಿರುವುದನ್ನು ಕಂಡು, ವರದಿಯ ಚಿತ್ರವನ್ನು ಅನ್ನು ದೊಡ್ಡದು ಮಾಡಿ ಓದಿಕೊಂಡೆ. ಈಶಾನ್ಯ ಪದವೀಧರ ಕ್ಷೇತ್ರದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪದವೀಧರ ಮತದಾರರನ್ನು ಭೇಟಿ ಮಾಡುತ್ತಿರುವ ಪಕ್ಷೇತರ ಅಭ್ಯರ್ಥಿ ಕೂಡ್ಲಿಯ ಕಾನಾಮಡುಗು ಉಪನ್ಯಾಸಕ ಎಲ್ ಪಿ ಸುಭಾಷ್ ಚಂದ್ರರವರು ಆಯ್ದ ಮತದಾರರಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದಾರಂತೆ. ಜಾತ್ಯತೀತ ನಿಲುವು, ಸಮ ಸಮಾಜದ ನಿರ್ಮಾಣ, ದಮನಿತರ ಪರವಾದ ನಡೆಯನ್ನು ಉತ್ತೇಜಿಸುವಂಥ ಸಾವಿತ್ರಿ ಬಾಪುಲೆ, ಜ್ಯೋತಿ ಬಾಪುಲೆ, ನಾನು ಸಾಯಲು ಸಿದ್ಧ, ಭಗತ್ ಸಿಂಗ್, ಸುಭಾಷ್‍ಚಂದ್ರ ಬೋಸ್, ಚೆಗುವಾರ, ಬಸವ ಪ್ರಜ್ಞೆ, ಬಸವಣ್ಣ ಮತ್ತು ಅಂಬೇಡ್ಕರ್, ಗಾಂಧಿ ಮತ್ತು ಅಸ್ಪೃಶ್ಯತಾ ವಿಮೋಚನೆ ಸೇರಿದಂತೆ ಹಲವು ಕೃತಿಗಳ ವಿತರಣೆ ಕಾರ್ಯಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ವಿತರಿಸುವ ಕಾರ್ಯ ಭರದಿಂದ ನಡೆದಿದೆಯಂತೆ. ಪುಸ್ತಕಗಳನ್ನು ಶೇ 50 ರಿಯಾಯಿತಿ ದರಕ್ಕೆ ನೀಡಿ ಈ ಕಾರ್ಯದಲ್ಲಿ ಲಡಾಯಿ ಪ್ರಕಾಶನ ಕೂಡ ಕೈಜೋಡಿಸಿದೆಯಂತೆ. 

ಈ ವರದಿಯನ್ನು ಓದಿ ಹೀಗಾದರೂ ವಿದ್ಯಾವಂತರು ಪ್ರಜ್ಞಾವಂತರಾಗಲಿ ಹಣ ಹೆಂಡಕ್ಕೆ ಮಾರಿಕೊಳ್ಳದೆ ಜ್ಞಾನಕ್ಕೆ ಶರಣಾಗಲಿ ಎಂದು ಕೆಲವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. 

ಲೋಕಸಭಾ ಚುನಾವಣೆಯ ಮುಂಚೆ ನಾವು ಕೂಡ ನಮ್ಮ ಮತದಾರರಿಗೆ ಇಂತಹ ಪುಸ್ತಕಗಳನ್ನು ವಿತರಿಸಿ ಮತದಾರರನ್ನು ವಿಚಾರವಂತರಾಗಿ ಮಾಡಬಹುದಿತ್ತಲ್ಲ ಎಂದು ನನ್ನನ್ನು ನಾನು ಪ್ರಶ್ನೆ ಮಾಡಿಕೊಂಡಾಗ, ಅನಕ್ಷರಸ್ಥರೆ ನಮ್ಮ ದೇಶದಲ್ಲಿ ತುಂಬಿರುವಾಗ ಪುಸ್ತಕಗಳನ್ನು ಹಂಚುವುದರಲ್ಲಿ ಏನು ಉಪಯೋಗವಿಲ್ಲ. ಬದಲಾಗಿ ನಿಜವಾದ ಶಿಕ್ಷಣವನ್ನು ಅಕ್ಷರಸ್ಥರಿಗೆ ಹಾಗು ಅನಕ್ಷರಸ್ಥರಿಗೆ ಕೊಡಬೇಕಾಗಿದೆ. ಎಲ್ಲವನ್ನು ಪ್ರಶ್ನಿಸುವ ವಿಮರ್ಶಿಸುವ ಗುಣವನ್ನು ಬೆಳಸಬೇಕಾಗಿದೆ. ಯಾವುದು ಸತ್ಯ ಯಾವುದು ಮಿಥ್ಯ ಎಂದು ಅರಿಯುವ ಶಕ್ತಿ ಕೂಡ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕೂಡ ಶಿಕ್ಷಿತರಾಗಬೇಕಿದೆ ಎಂಬ ನನ್ನಲ್ಲಿ ಮೂಡಿದ ಉತ್ತರ ನಿಜವೆನ್ನಿಸುತ್ತಿದೆ. !!! 

ಕೊನೆಗೆ ಎನ್ ರವಿಕುಮಾರ್ ತಮ್ಮದೊಂದು ಲೇಖನದಲ್ಲಿ ಹೇಳುವಂತೆ “…ಮೋದಿ ಅವರ ನಡೆಯನ್ನು ಅಷ್ಟು ಸುಲಭವಾಗಿ ನಂಬುವಂತಿಲ್ಲ. ಅವರದ್ದು ಮಾರ್ಜಾಲ ನಡೆ. ಇನ್ನೂ ಈ ದೇಶದ ಸ್ಥಿತಿ ಮುಗಿದೇ ಹೋಯಿತು, ಬಹುತ್ವದ ದೇಶವೊಂದು ಕೋಮುವಾದದತ್ತ ಧ್ರುವೀಕರಣಗೊಂಡಂತಾಗಿಬಿಟ್ಟಿತು ಎಂಬ ಮಾತುಗಳು ಕೇಳಿಬಂದರೂ ನಾವಿನ್ನೂ ಕಾದು ನೋಡುವ ಸ್ಥಿತಿಯ ಕಾಲಕ್ಕೆ ಒಗ್ಗಿಕೊಳ್ಳಬೇಕಿದೆ. ಅದಕ್ಕೆ ಕಾರಣ ಈ ದೇಶದ ಪರಂಪರೆಯೊಂದು ನಮ್ಮ ಕಣ್ಣ ಮುಂದೆ ಇದೆ. ರಣ ಹಂತಕ ಅಂಗುಲಿಮಾಲ ಬುದ್ಧನೆದುರು ಬಿಕ್ಕುವಾಗಿ ನಿಂತದ್ದು, ದರೋಡೆಕೋರ ವಾಲ್ಮೀಕಿ ಶ್ರೇಷ್ಠ ಮಹರ್ಷಿಯಾಗಿದ್ದು, ಸಾಮ್ರಾಟನಾದ ಅಶೋಕ ಚಕ್ರವರ್ತಿ ಯುದ್ಧಕಣದಲ್ಲೇ ಹಿಂಸೆಯನ್ನು ತೊರೆದು ನಡೆದದ್ದು ನಮ್ಮೊಳಗೆ ಒಂದು ದಾರ್ಶನಿಕ ಹಾದಿಯನ್ನು ಬಿಟ್ಟುಹೋಗಿರುವಾಗ ನರೇಂದ್ರ ಮೋದಿ ಅವರಲ್ಲಿನ ಈ ಬದಲಾವಣೆ ಆಶ್ಚರ್ಯ ತಂದರೂ ಸದ್ಯಕ್ಕೆ ಅನುಮಾನಿಸುವುದು ಬೇಡ…” 
ಈ ಒಂದು ಧನಾತ್ಮಕ ಭಾವನೆಯಲ್ಲಿ ಮೋದಿಯವರೇ all the best ಎನ್ನುತ್ತೇನೆ. 

********* 

ಓದಿದ ಪುಸ್ತಕಗಳಿಂದ...



.......ಸರ್ವಮತಗಳಿಗಿಂತಲೂ ಶುದ್ಧಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದುದು. ಆ ಗುರು, ಆ ಆಚಾರ್ಯ, ಆ ಧರ್ಮಶಾಸ್ತ್ರ, ಈ ಮನುಸ್ಮೃತಿ ಮೊದಲಾದುವು ಏನೇ ಹೇಳಲಿ; ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ಈಶ್ವರನು ನಮ್ಮಲ್ಲಿಯೂ ಇದ್ದಾನೆ. ಆತನ ಮಹಾಜ್ಯೋತಿಯ ಕಿರಣಗಳು ನಮ್ಮ ಬುದ್ಧಿಯಲ್ಲಿಯೂ ಪ್ರಕಾಶಿಸುತ್ತವೆ. ಆ ಪ್ರಕಾಶವೇ ಮತಿ. ಮತಿಯನ್ನು ತಿರಸ್ಕರಿಸಿದರೆ ಈಶ್ವರನ ಜ್ಯೋತಿಯನ್ನು ತಿರಸ್ಕರಿಸಿದಂತಾಗುತ್ತದೆ. ಹಾಗೆ ಮಾಡುವವನೇ ನಿಜವಾಗಿಯೂ ನಾಸ್ತಿಕನು. ಮೌಢ್ಯವೇ ಈಶ್ವರ ನಿಂದೆ. ಯಾವ ರೂಪದಲ್ಲಿಯೇ ಆಗಲಿ, ಯಾವ ವೇಷದಲ್ಲಿಯೇ ಆಗಲಿ, ತಿಳಿದೂ ತಿಳಿದೂ ಮೂಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ. 

ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮೊಡನೆ ಮಾತಾಡುತ್ತಿರುವಂತೆ, ಋಷಿಗಳಿಗೆ ವೇದಗಳನ್ನು ಉಪನ್ಯಾಸಿಸಿದನು ಎಂದು ಹೇಳಿದರೆ, ಕಣ್ಣು, ಮುಚ್ಚಿಕೊಂಡು ನಂಬಬೇಡಿ. ಯಾವ ಕಾಲದಲ್ಲಿಯೋ ಯಾವ ಸಮಾಜಕ್ಕಾಗಿಯೋ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನಾಳಬೇಕೆಂದು ಹೇಳಿದರೆ ತಲೆದೂಗಿಬಿಡಬೇಡಿ. ಆಗಿನ ಮನು ಪವಿತ್ರನಾದರೆ ಈಗಿನ ಮಹಾತ್ಮಗಾಂಧಿ ಪವಿತ್ರನಲ್ಲವೆ? ನಂಬುಗೆ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ. ಪುರಾತನವಾದ ಮಾತ್ರಕ್ಕೆ ಸತ್ಯವಾದುದೆಂದು ಭಾವಿಸಬೇಡಿ. ವಿಜ್ಞಾನ ಪ್ರಪಂಚದಲ್ಲಿ ಹೊಸದಾಗಿ ಕಂಡು ಹಿಡಿದ ಸತ್ಯಗಳು ಹಳೆಯ ಅರ್ಧಸತ್ಯಗಳಿಗಿಂತಲೂ ಮಾನ್ಯವಾಗುವುದಾದರೆ ಧರ್ಮ ಪ್ರಪಂಚದಲ್ಲೇಕೆ ಹಾಗಾಗಬಾರದು? ವೇದ ಅನಾದಿಯಾದರೆ ಅನಂತವೂ ಆಗಿರುವುದಿಲ್ಲವೆ? ವೇದ ಪೂರೈಸಿದ ಗ್ರಂಥವಲ್ಲ; ವೇದದ ಕಟ್ಟಕಡೆಯ ಅಧ್ಯಾಯ ಅಂದಿಗೇ ಮುಗಿದಿಲ್ಲ. ಅದು ಇಂದಿಗೂ ನಾಳೆಗೂ ಮುಂದುವರಿಯುತ್ತದೆ. ಹಾಗೆಯೇ ಋಷಿಗಳೂ ಆಚಾರ್‍ಯರೂ ಅಂದಿಗೇ ಪೂರೈಸಿಲ್ಲ, ಕೊನೆಗಂಡಿಲ್ಲ; ಇಂದಿಗೂ ನಾಳೆಗೂ ಬರುತ್ತಲೇ ಇರುತ್ತಾರೆ. ಆದ್ದರಿಂದ ಹೊಸ ಋಷಿಗಳ ಹೊಸ ವೇದವಾಕ್ಯಗಳನ್ನು ಕಿವಿಗೊಟ್ಟು ಕೇಳಿ. ಸಂಕುಚಿತ ಬುದ್ಧಿಯನ್ನು ದೂರಮಾಡಿ. ಹೃದಯಜೀವನ ಹಳೆಯ ನೀರಿನ ಕೊಳಕು ಕೊಳವಾಗದಿರಲಿ; ಯಾವಾಗಲೂ ಹೊಸ ನೀರು ಬಂದು ಹರಿಯುತ್ತಿರುವ ಸ್ವಚ್ಛ ಸಲಿಲ ಸ್ರೋತವಾಗಿರಲಿ... 

710 ಕುವೆಂಪು ಸಂಚಯ 

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...