Saturday, 20 June 2020

ದನಿರೂಪಕ


ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ?

ದಕ್ಷಿಣ ಅಮೇರಿಕ ಹಾಗು ಚಿಲಿ ತೀವ್ರ ಸಂಘರ್ಷ ಎದುರಿಸುತ್ತಿದ್ದ ಕಾಲಕ್ಕೆ ಸಾಕ್ಷಿಯಾಗಿ ನೆರೂಡನ ಕವಿತೆಗಳು ಸೃಷ್ಟಿಯಾದವು. ಎಲ್ಲೇ ಹೋದರೂ, ಯಾವ ಹುದ್ದೆಯನ್ನೇ ನಿರ್ವಹಿಸುತ್ತಿದ್ದರೂ ಆತ ಕವಿತೆ ಬರೆಯುವುದು ನಿಲ್ಲಿಸಲಿಲ್ಲ. ಯಾವ ನೆಲದಲ್ಲಿದ್ದನೋ ಅಲ್ಲಿಯ ಸಾರ ಸತ್ವ, ಸಂಕಟಗಳನ್ನೆಲ್ಲ ಹೀರಿಕೊಂಡು ಕವಿತೆ ಬರೆದ ಎಂದೇ ಜನವಿರೋಧಿ ಆಳ್ವಿಕರಿಗೆ ಅವು ಅಪಾಯಕಾರಿಯಾಗಿ ಕಂಡವು. ಒಮ್ಮೆ ಚಿಲಿಯ ಪೆÇೀಲಿಸರಿಂದ ಅವನ ಮನೆ ತಪಾಸಣೆಗೊಳಗಾದಾಗ, ಎಲ್ಲಿ ಬೇಕಾದರೂ ಹುಡುಕಿ, ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ? ಎಂದು ಹೇಳಿದ.

ಕವಿಗೇಕೆ ಬೊಂಬೆ?

ಕಪ್ಪುಚಿಪ್ಪುಗಳಂತೆಯೇ ಕವಿಯ ಬಳಿ ವಿಶಿಷ್ಟ ಬೊಂಬೆ ಸಂಗ್ರಹವೂ ಇತ್ತು! ಬೊಂಬೆಯಾಕಾರದ ವೈನ್ ಬಾಟಲು, ಬಾಟಲಿಯೊಳಗೆ ಹಡಗು ಕೂರಿಸಿದ ಬೊಂಬೆ, ಹಡಗಿನ ಮುಂಚೂಣಿಯಲ್ಲಿರುತ್ತಿದ್ದ ಫಿಗರ್ ಹೆಡ್ ಬೊಂಬೆ ಎಲ್ಲ ಅವನಲ್ಲಿದ್ದವು. ಕವಿಗೇಕೆ ಗೊಂಬೆ? ಅವನ ಮಾತುಗಳಲ್ಲೇ ನಮ್ಮ ಅಚ್ಚರಿಗೆ ಉತ್ತರವಿದೆ: ಆಟವಾಡದ ಮಗು ಮಗುವೇ ಅಲ್ಲ, ಆಟವಾಡದೇ ಬೆಳೆದ ವ್ಯಕ್ತಿಗಳು ತಮ್ಮೊಳಗಿನ ಮಗುವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಾರೆ. ತಮ್ಮೊಳಗಿನ ಮಗುತನಕ್ಕೆ ಅಪರಿಚಿತರಾಗಿರುತ್ತಾರೆ. ನಾನು ನನ್ನ ಮನೆಯನ್ನು ಬೊಂಬೆಮನೆಯ ಹಾಗೆ ಕಟ್ಟಿದ್ದೇನೆ. ಬೆಳಗಿನಿಂದ ಸಂಜೆಯವರೆಗೆ ಆಡುತ್ತೇನೆ?

ನಾನು ನನ್ನ ಮನೆ ಇಸ್ಲಾ ನೆಗ್ರಾವನ್ನು ಜನತೆಗೆ ಅರ್ಪಿಸುತ್ತಿದ್ದೇನೆ; ಒಂದಲ್ಲ ಒಂದು ದಿನ ಅದು ಯೂನಿಯನ್ ಮೀಟಿಂಗುಗಳ ಸ್ಥಳವಾಗುತ್ತದೆ, ಗಣಿ ಕಾರ್ಮಿಕರು, ರೈತರು ವಿಶ್ರಾಂತಿ ಪಡೆಯುವ ಜಾಗವಾಗುತ್ತದೆ. ಹೊಟ್ಟೆಕಿಚ್ಚಿನ ಜನರ ಮೇಲೆ ನನ್ನ ಕಾವ್ಯವು ತೀರಿಸಿಕೊಳ್ಳುವ ಪ್ರತೀಕಾರ ಅದು? ಎಂದು ಹೇಳಿದ. ಜನಪರ ಹೋರಾಟಗಾರನೊಬ್ಬ ಇದಕ್ಕಿಂತ ಉದಾತ್ತವಾಗಿ ತನ್ನ ನೆಲೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?

(ಪಾಬ್ಲೊ ನೆರೂಡ ನೆನಪುಗಳು- ಆತ್ಮಕತೆ, ಕನ್ನಡಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ)

**********


ಅಮಲಿನ ಅಮಾಯಕರು

                - ಡೇವಿಡ್ ಕುಮಾರ್. ಎ

 ನಮ್ಮ ಕರುಳುಗಳೂ ಬಾಡಿಗೆಗಿವೆ

ಜಠರ, ಮೂತ್ರಪಿಂಡ, ಪಿತ್ತಜನಕಾಂಗ

ಗುಂಬಿಸಿಬಿಡಿ ಮದ್ಯದ ಅಮಲ

ಹೆಚ್ಚಲಿ ರಾಜ್ಯದ ಭೋಗ ಖಜಾನೆ!

 

ವ್ಯವಸ್ಥೆಯ ಬಲಿಪಶುಗಳು

ಜಾತಿಯಲಿ ಕೀಳು, ವರ್ಗದಲಿ ಕಡೆ,

ಮದ್ಯವೆಂಬ ಮಿಥ್ಯೆ, ಭ್ರಮೆಯಲಿ,

ಬಾಳ ಕಳೆದವರು, ಕುಡುಕರೆಂಬ ಬಿರುದು! 

 

ಕರಿನಾಯಿ’, ‘ಮಿಂಚುಳ್ಳಿ’

ಹಳೆ ಮುದುಕ’ ಕೇಳಾ...

ಆರ್ಥಿಕ ಯಂತ್ರ-ಗಾಲಿಯ ತೈಲವೇ ನಾವು

ನಮ್ಮ ಪ್ರಾಣದ ಫಲಾನುಭವಿಗಳಾರು?

 

ಮಾರುವವರ ಮಾರಿಹಬ್ಬದಲಿ

ಮಾರಿಕೊಂಡವರು ನಾವು

ಬಲಿಕೋಣದಷ್ಟೇ ಅಮಾಯಕರು

ಬಿದಿರು ಬಸ್ಸಿನ ಪ್ರಯಾಣಿಕರು!


ಓದಿದ ಪುಸ್ತಕಗಳಿಂದಳಿ - ‘ಸುಂದರಿ ಮತ್ತು ಸಿಂಹದ' ಕಥೆ...


ಒಂದು ಸಿಂಹ ಇತ್ತು. ತನ್ನ ಗತ್ತು, ಶೌರ್ಯ, ಗಾಂಭೀರ್ಯಗಳಿಂದ ಇಡೀ ಕಾಡನ್ನು ಹತೋಟಿಯಲ್ಲಿಟ್ಟುಕೊಂಡು ಮೃಗರಾಜನಾಗಿ ಮೆರೆಯುತ್ತಿತ್ತು. ಇಂಥ ಧೀರ ಸಿಂಹ ಒಮ್ಮೆ ಅಪರೂಪದ ಸುಂದರಿಯೊಬ್ಬಳನ್ನು ಕಂಡು ಮನಸೋತುಬಿಟ್ಟಿತು. ಆ ಸುಂದರಿ ತನಗೆ ಬೇಕೇ ಬೇಕು. ಆದರೆ ಹೋಗಿ ಕೇಳದೆ ಅವಳಾಗಿ ಬರುವುದುಂಟೇ? ಸರಿ, ಸಿಂಹ ಸುಂದರಿಯ ಹತ್ತಿರ ಹೋಗಿ 'ನನಗೆ ನೀನು ಬೇಕು' ಅಂತು.

ಸುಂದರಿ ಅಷ್ಟು ಸುಲಭಕ್ಕೆ ಮಣಿಯುವವಳಲ್ಲ "ನನಗೆ ನಿನ್ನ ಆಕಾರ, ಉಗುರು ಹಲ್ಲು ನೋಡಿದರೆ ಭಯವಾಗುತ್ತೆ. ನೀನು ನಿನ್ನ ಹಲ್ಲು, ಉಗುರುಗಳನ್ನೆಲ್ಲ ಕಿತ್ತು ಬಂದರೆ ನಾನು ಒಲಿಯಬಹುದು" ಅಂದಳು. ಸರಿ, ಸಿಂಹ ಉಗುರು ಹಲ್ಲು ಎಲ್ಲ ಕಿತ್ತುಕೊಂಡು ಸುಂದರಿಯ ಹತ್ತಿರ ಬಂತು. ಸುಂದರಿ ಆಗಲೂ ಪ್ರಸನ್ನಳಾಗಲಿಲ್ಲ "ನಿನ್ನ ಕೇಸರ ನೋಡಿದರೂ ನನಗೆ ಹೆದರಿಕೆ. ಅದನ್ನೂ ಬೋಳಿಸಿಕೊಂಡು ಬಾ" ಎಂದು ತಾಕೀತು ಮಾಡಿದಳು. ಇಷ್ಟೇ ಮಾಡಿಯಾಗಿದೆ, ಇನ್ನು ಕೇಶ ಒಂದಕ್ಕೆ ಚೌಕಾಶಿಯೇ? ಸಿಂಹ ಅದನ್ನೂ ಬೋಳಿಸಿಕೊಂಡು ಸುಂದರಿಯ ಬಳಿ ಬಂತು.

ಆದರೆ ಈಗ ಸುಂದರಿ 'ಪ್ಲೇಟ್ ಚೇಂಜ್' ಮಾಡಿಬಿಟ್ಟಳು! ನನಗೂ ನಿನಗೂ ಎಲ್ಲಿಯ ಹೊಂದಾಣಿಕೆ? ನೀನು ನನಗೆ ಬೇಡವೇ ಬೇಡ ಅಂದುಬಿಟ್ಟಳು! ಸಿಂಹ ತಬ್ಬಿಬ್ಬಾಯಿತು. ಪರಿಪರಿಯಾಗಿ ಬೇಡಿಕೊಂಡಿತು. ಅವಳು ಒಪ್ಪಲಿಲ್ಲ. ಕಡೆಗೆ ಸಿಂಹ ಕೇಳಿತು - "ನಾನು ನಿನಗೆ ನಿಜಕ್ಕೂ ಬೇಡವಾಗಿದ್ದರೆ ಮೊದಲೇ ಹೇಳಬಹುದಿತ್ತಲ್ಲ? ಆಗ ನನ್ನ ಹಲ್ಲು ಉಗುರುಗಳಾದರೂ ಉಳಿಯುತ್ತಿದ್ದವು?" ಆಗ ಸುಂದರಿ ಹೇಳುತ್ತಾಳೆ-"ಹೌದು, ಮೊದಲೇ ನಾನು ನಿರಾಕರಿಸಿದ್ದರೆ ನೀನು ನನ್ನನ್ನು ಕೊಂದು ಹಾಕುತ್ತಿದ್ದೆ. ಅದಕ್ಕೇ ಹಲ್ಲು ಉಗುರು ಕೀಳಲು ಹೇಳಿದ್ದು. ಈಗ ನೀನೇನೂ ಮಾಡಲಾರೆ..."

ಅಧಿಕಾರ ರಾಜಕಾರಣದ ಸುಂದರಿ, ಜನಾಂದೋಲನವೆಂಬ ಸಿಂಹವನ್ನು ಆಕರ್ಷಿಸುತ್ತದೆ. ಆದರೆ ಹತ್ತಿರ ಬಂದೊಡನೆ ಸಿಂಹದ ಶಕ್ತಿ, ಸ್ವರೂಪಗಳನ್ನೇ ಕಿತ್ತುಕೊಂಡು ಬೀದಿಪಾಲು (ಕಾಡುಪಾಲು?) ಮಾಡುತ್ತದೆ. ಹೀಗೆ ಅಧಿಕಾರ ಕೇಂದ್ರದ ಹತ್ತಿರ ಬಂದಾಗಲೆಲ್ಲ ಚಳುವಳಿಯ ನಿರ್ದಾಕ್ಷಿಣ್ಯ ಸ್ವಾತಂತ್ರ್ಯಕ್ಕೆ ಮಸಿ ಹಿಡಿಯುತ್ತಲೇ ಇರುತ್ತದೆ.

 (ಕೃಪೆ: ಎನ್. ಎಸ್. ಶಂಕರ್ ಅವರ 'ಹುಡುಕಾಟ' ಪುಸ್ತಕದಿಂದ)

***********************

 


ಸಂತ ಅಂತೋಣಿ ಅವರ ಜೀವನ ಕಥನ


 ನಡೆದುದು ಇತರರಿಗೆ ಜೀವನಾದರ್ಶ.

ಸಂತ ಅಂತೋಣಿಯವರ ಪೂರ್ವಾಶ್ರಮದ ಹೆಸರು ಫರ್ಡಿನಾಂಡ್. ಅವರು ಸನ್ಯಾಸಿ ಸಭೆಗೆ ಸೇರಿದಾಗ, ಅವರಿಗೆ ಅಂತೋಣಿ ಎಂದು ನಾಮಕರಣ ಮಾಡಲಾಗಿದೆ. ಅವರು ಕ್ರಿ. ಶ 1195ರಲ್ಲಿ ಆಗಸ್ಟ್ 15ರಂದು ಪೋರ್ಚುಗಲ್ ದೇಶದ ಲಿಸ್ಬನ್ ನಗರದಲ್ಲಿ ಜನಸಿದ್ದರು. ಅವರ ತಂದೆ ಮಾರ್ಟಿನ್ ತಿಬಿಯೋ ಅವರು ಲಿಸ್ಬನ್ ನಗರದಲ್ಲಿ ಉನ್ನತ ಅಧಿಕಾರಿ ಆಗಿದ್ದರು. ಅವರ ತಾಯಿಯ ಹೆಸರು ದೋನಾ ಮರಿಯಾ. ಅವರಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದರು.

 ಕುಲೀನ ಮನೆತನದ ಈ ಕುಟುಂಬವು ದೇವ ಭಕ್ತಿಯಲ್ಲಿ ಸದಾ ಮಿಂದೇಳುತ್ತಿತ್ತು. ಅದರ ಪರಿಣಾಮವಾಗಿ, ಬಾಲ್ಯದಿಂದಲೇ ಸಂತ ಅಂತೋಣಿಯವರಲ್ಲಿ ದೈವಭಕ್ತಿ ಆಳವಾಗಿ ಬೇರೂರತೊಡಗಿತ್ತು. ಆಧ್ಯಾತ್ಮದತ್ತ ಒಲವು ಹೆಚ್ಚಾದಾಗ, ಅವರು ಮನೆಯನ್ನು ತೊರೆದು ಸಂತ ವಿನ್ಸೆಸ್ಸಿ ಅವರ ಸನ್ಯಾಸಿ ಮಠ ಸೇರಿದರು. ಏಕಾಂತ ವಾಸಕ್ಕೆ, ಜಪತಪಗಳಿಗೆ ಭಂಗ ಉಂಟುಮಾಡುತ್ತಿದ್ದ ಕುಟುಂಬಸ್ಥರ ಮತ್ತು ಬಂಧು ಬಳಗದವರ ಹೆಚ್ಚಿನ ಒಡನಾಟದಿಂದ ಬೇಸತ್ತ ಸಂತ ಅಂತೋಣಿ ಅವರು, ದೂರದ ಕೊಯಿಂಬ್ರ ದೇಶದ ಪವಿತ್ರ ಶಿಲುಬೆಯ ಮಠ ಸೇರಿದರು. ಅಲ್ಲಿ ಸಂಪೂರ್ಣವಾಗಿ ಅಧ್ಯಯನ, ಜಪತಪಗಳಲ್ಲಿ ತೊಡಗಿ ಆಧ್ಯಾತ್ಮಿಕ ಸಾಧನೆಗೈದರು.

 ಮೊರೊಕ್ಕೊ ದೇಶದಲ್ಲಿ ಸುವಾರ್ತೆ ಸಾರಲು ಹೋದ ಅಸಿಸ್ಸಿಯ ಸಂತ ಫ್ರಾನ್ಸಿಸ್ ರ ಮಠದ ಐವರು ಸನ್ಯಾಸಿಗಳು ರಕ್ತಸಾಕ್ಷಿಗಳಾಗಿ ಮಡಿದಿರುತ್ತಾರೆ. ತಾವೂ ಅವರಂತೆ ಆಗ ಬಯಸಿದ ಸಂತ ಅಂತೋಣಿ ಅವರು, ಆ ಫ್ರಾನ್ಸಿಸ್ಕನ್ ಸಭೆಯ ಸನ್ಯಾಸಿ ಮಠವನ್ನು ಸೇರುತ್ತಾರೆ. ಮೊರೊಕ್ಕೊ ದೇಶದಲ್ಲಿ ಸುವಾರ್ತೆ ಸಾರುವ ಉದ್ದೇಶದಿಂದ ಪ್ರಯಾಣ ಆರಂಭಿಸುತ್ತಾರೆ. ಮಾರ್ಗಮಧ್ಯದಲ್ಲಿ ಅಸ್ವಸ್ಥರಾದ ಅವರು ಸ್ವದೇಶಕ್ಕೆ ಹಿಂದಿರುಗಲು ಹಡಗೊಂದರಲ್ಲಿ ಪ್ರಯಾಣಿಸುತ್ತಾರೆ. ಬಿರುಗಾಳಿಯ ದೆಸೆಯಿಂದ ಅವರ ಹಡಗು ಇಟಲಿಗೆ ಸೇರಿದ ಸಿಸಿಲಿ ನಡುಗಡ್ಡೆಯನ್ನು ಮುಟ್ಟುತ್ತದೆ. ಆರೋಗ್ಯ ಸುಧಾರಿಸಿದ ನಂತರ ಅವರು, ಮಧ್ಯ ಇಟಲಿಯ ಟಸ್ಕನಿ ಪ್ರದೇಶವನ್ನು ತಲುಪುತ್ತಾರೆ.

 ಅಲ್ಲಿಂದ ಅವರು ರೊಮಗ್ನಾ ಪ್ರದೇಶದ ಫೊರ್ಲಿ ಪಟ್ಟಣದ ಸನಿಹದ ಸಾನ್ ಪಾಲೊದಲ್ಲಿನ ಸನ್ಯಾಸಿಮಠವನ್ನು ಸೇರುತ್ತಾರೆ. ಒಂದು ದಿನ ಯಾಜಕದೀಕ್ಷೆಯ ಸಂದರ್ಭದಲ್ಲಿ ಫ್ರಾನ್ಸಿಸ್ಕನ್ ಮತ್ತು ಡೊಮಿನಿಕನ್ ಸಭೆಗಳ ಸನ್ಯಾಸಿಗಳಲ್ಲಿ ಯಾರು ಪ್ರಬೋಧನೆ ಮಾಡಬೇಕೆಂಬ ಗೊಂದಲ ಮೂಡಿದಾಗ, ಮಠದ ಪ್ರಧಾನರು -ಗುರುಶ್ರೇಷ್ಠರು, ಸಂತ ಅಂತೋಣಿಯವರಿಗೆ ಪ್ರಭೋಧನೆ ನೀಡಲು ಆದೇಶಿಸುತ್ತಾರೆ. `ಪವಿತ್ರಾತ್ಮರು ನುಡಿಸಿದಂತೆ ನುಡಿ’ ಎನ್ನುತ್ತಾರೆ. ಅನಿರೀಕ್ಷಿತವಾದ ಈ ಬೆಳವಣಿಗೆಯಿಂದ ವಿಚಲಿತರಾದರೂ ಸಂತ ಅಂತೋಣಿಯವರು ನೀಡಿದ ಮನದುಂಬುವ ಪ್ರೌಢ ಪ್ರಬೋಧನೆ, ಅಲ್ಲಿ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಅನಂತರ ಅವರು ಫ್ರಾನ್ಸಿಸ್ಕನ ಸಭೆಯ ಸ್ಥಾಪಕ ಅಸ್ಸಿಸಿಯ ಫ್ರಾನ್ಸಿಸ್ ಅವರ ನೇರ ಸಂಪರ್ಕಕ್ಕೆ ಬರುತ್ತಾರೆ. ಅಲ್ಲಿಂದ ಅವರು ಪೂರ್ಣ ಪ್ರಮಾಣದಲ್ಲಿ ಸುವಾರ್ತಾ ಪ್ರಸಾರದಲ್ಲಿ ತೊಡಗಿಸಿಕೊಳ್ಳುತ್ತಾರೆ.

 ಮುಂದೆ ಸಂತ ಅಂತೋಣಿ ಅವರು, ಸನ್ಯಾಸಿ ಮಠದ ಆಶಯದಂತೆಯೇ ಬಡತನದ ಜೀವನ ನಡೆಸುತ್ತಾ ಪ್ರಭಾವಿ ಪ್ರಬೋಧನೆಗಳಿಂದ ಮತ್ತು ಹಲವಾರು ಪವಾಡಗಳಿಂದ ಜನಾನುರಾಗಿಯಾಗಿ ಗುರುತಿಸಿಕೊಳ್ಳುತ್ತಾರೆ. ಪಾದ್ವದಲ್ಲಿ ನೆಲೆಸಿ ತಮ್ಮ ಕೆಲಸವನ್ನು ಸಾಗಿಸುವ ಅವರು, 1231ರ ಜೂನ್ 13 ರಂದು ಅಸುನೀಗುತ್ತಾರೆ. ಅವರು ಮೃತರಾಗಿ ಒಂದು ವರ್ಷ ಕಳೆಯುವಷ್ಟರಲ್ಲಿ, ಅಂದಿನ ಪಾಪುಸ್ವಾಮಿ (ಜಗದ್ಗುರು)ಗಳಾಗಿದ್ದ ಒಂಬತ್ತನೇ ಗ್ರೆಗೋರಿ ಅವರು 1232ರ ಮೇ ಮಾಸದ 30ರಂದು ಅವರನ್ನು ಸಂತರ ಪಟ್ಟಿಗೆ ಸೇರಿಸುತ್ತಾರೆ. ಇದು ಸಂತ ಅಂತೋಣಿ ಅವರ ಜೀವನ ಚರಿತ್ರೆಯ ಸಂಕ್ಷಿಪ್ತ ಪರಿಚಯ.

ಸಂತ ಅಂತೋಣಿ ಪವಾಡಗಳು:

 ವಿಭೂತಿ ಪುರುಷರ ಜೀವನ ಚರಿತ್ರೆಗಳು ಪವಾಡಗಳಿಲ್ಲದಿದ್ದರೆ, ಅದು ಅಪೂರ್ಣ ಎಂಬ ಭಾವನೆ ಇದೆ. ಏಕೆಂದರೆ, ಎಲ್ಲಾ ವಿಭೂತಿ ಪುರುಷರು ಸಾಮಾನ್ಯರ ಮಟ್ಟಿಗೆ ಪವಾಡ ಪುರುಷರು. ಪವಾಡಗಳಿಲ್ಲದಿದ್ದರೆ ಅವರು ವಿಭೂತಿ ಪುರುಷರಲ್ಲ, ಸಂತರಲ್ಲ ಎಂದೇ ಸಾಮಾನ್ಯ ಜನರು ಭಾವಿಸುತ್ತಾರೆ. ಅದರಂತೆ ಸಂತ ಅಂತೋಣಿ ಅವರ ಜೀವನ ಚರಿತ್ರೆಯೂ ಪವಾಡಗಳಿಂದ ಹೊರತಾಗಿಲ್ಲ. ಕೆಲವು ಪವಾಡಗಳ ಹಿನ್ನೆಲೆಯಲ್ಲಿ ಒಂದಿಷ್ಟು ಬಗೆಯ ವಿಶ್ವಾಸಗಳು ಮತ್ತು ಆಚರಣೆಗಳು ಸಂತ ಅಂತೋಣಿಯವರನ್ನು ಸುತ್ತಿಕೊಂಡಿವೆ. ಇರಲಿ, ಸಂತ ಅಂತೋಣಿ ಅವರು, ಜೀವಿಸಿರುವಾಗಲೇ ಹಲವಾರು ಪವಾಡಗಳನ್ನು ಮಾಡಿದರೆಂದು ವಿಶ್ವಾಸಿಸಲಾಗುತ್ತಿದೆ. ಜಲಚರಗಳಾದ ಮೀನುಗಳಿಗೆ ಅವರು ಪ್ರಬೋಧನೆ ನೀಡಿದರು, ಮೂಕ ಪ್ರಾಣಿ ಹೇಸರಗತ್ತೆಯು ಪರಮ ಪ್ರಸಾದಕ್ಕೆ ಗೌರವ ಕೊಡುವಂತೆ ಮಾಡಿದರು ಎಂಬ ಹಲವಾರು ಪವಾಡಗಳು ಅವರ ಹೆಸರನಲ್ಲಿವೆ. ಭಕ್ತರು ಕೋರಿಕೆ ಸಲ್ಲಿಸಿದರೆ, ಕಳುವಾದ ವಸ್ತುಗಳನ್ನು ದೊರಕಿಸಿಕೊಡುವ ಸಂತರು ಎಂಬ ಖ್ಯಾತಿ ಅವರದು. ಇವುಗಳ ಜೊತೆಗೆ ಸಂತ ಅಂತೋಣಿ ಅವರು, ಬದುಕಿದ್ದಾಗ, ಬದುಕಿದ ನಂತರವೂ ಮೃತರಿಗೆ ಜೀವದಾನ ಕೊಡುತ್ತಿದ್ದರು, ಸತ್ತವರು ಎದ್ದು ಬರುವಂತೆ ಮಾಡಿ ಅವರಿಂದ ಸಾಕ್ಷಿ ಹೇಳಿಸಿದರು ಎಂಬ ಪವಾಡಗಳು ಇವೆ.

ಕಳೆದ ವಸ್ತುಗಳ ದೊರಕಿಸಿಕೊಡುವ ಸಂತ:

 ಸಂತ ಅಂತೋಣಿ ಅವರು, ಕಳೆದ ಅಥವಾ ಕಳುವಾದ ವಸ್ತುಗಳನ್ನು ದೊರಕಿಸಿಕೊಡುವ ಮಹಿಮೆಯ ಸಂತರು ಎಂದು ಹೆಸರುವಾಸಿಯಾಗಿದ್ದಾರೆ. ಅದಕ್ಕೂ ಒಂದು ಕತೆ ಇದೆ. ಅಂತೋಣಿ ಅವರು ಒಂದು ಕೀರ್ತನೆಗಳ ಪುಸ್ತಕವನ್ನು ಹೊಂದಿದ್ದರು. ಆಗ ಇನ್ನೂ ಮುದ್ರಣ ಯಂತ್ರಗಳ ಆವಿಷ್ಕಾರವಾಗಿರಲಿಲ್ಲ. ಹೀಗಾಗಿ ಅದನ್ನು ಅವರು ಬಹುವಾಗಿ ಆಪ್ತವಾಗಿ ಕಾಣುತ್ತಿದ್ದರು. ಸನ್ಯಾಸಿ ಮಠ ಬಿಟ್ಟು ಬಿಡುವ ಉದ್ದೇಶ ಹೊಂದಿದ್ದ ಒಬ್ಬ ಕಿರಿಯ ಸನ್ಯಾಸಿ, ಅವರ ಕೀರ್ತನೆಗಳ ಪುಸ್ತಕವನ್ನು ಕದ್ದುಕೊಂಡು ಹೋಗಿದ್ದ. ತಮ್ಮ ಕೀರ್ತನೆಗಳ ಪುಸ್ತಕ ತಮ್ಮೊಂದಿಗಿಲ್ಲದಿರುವುದು ಗೊತ್ತಾದ ತಕ್ಷಣ ಅವರು, ಅದನ್ನು ದೊರಕಿಸಿಕೊಡುವಂತೆ ದೇವರಲ್ಲಿ ಕೋರಿಕೆ ಸಲ್ಲಿಸಿದರು. ಪಶ್ಚಾತ್ತಾಪ ಪಟ್ಟ ಪುಸ್ತಕ ಕದ್ದ ಕಿರಿಯ ಸನ್ಯಾಸಿ ಅಂತೋಣಿ ಅವರು ಇಟ್ಟುಕೊಂಡಿದ್ದ ಕೀರ್ತನೆಗಳ ಪುಸ್ತಕವನ್ನು ಹಿಂದಿರುಗಿಸಿದ. ಸನ್ಯಾಸಿ ಮಠವನ್ನು ಬಿಡುವ ಮನಸ್ಸು ಬದಲಿಸಿ ಮತ್ತೆ ಮಠವನ್ನು ಸೇರಿಕೊಂಡ.

  ಮುಳುಗಿ ಸತ್ತವಳು ಜೀವಂತಳಾದದ್ದು:

 ಪಾದ್ವದ ಯರಿಲಿಯ ಎಂಬ ಬಾಲಕಿ ತನ್ನ ತಾಯಿಯೊಂದಿಗೆ ಸಂಬಂಧಿ ವೃದ್ಧಳೊಬ್ಬಳನ್ನು ನೋಡಲು ಹೋದಾಗ, ಅಲ್ಲಿಯೇ ಮನೆಯ ಹತ್ತಿರದಲ್ಲಿ ಉರುವಲಿಗಾಗಿ ಕೆಳಗೆ ಬಿದ್ದಿದ್ದ ಮರಗಿಡದ ಒಣಗಿದ ತುಂಡುಗಳನ್ನು ಆರಿಸಿಕೊಳ್ಳುವಾಗ ನೀರ ಹೊಂಡದಲ್ಲಿ ಬೀಳುತ್ತಾಳೆ. ಮೇಲ್ಮುಖವಾಗಿ ನೀರಲ್ಲಿದ್ದ ಮಗಳನ್ನು ಕಂಡ ತಾಯಿ ಧಾವಿಸಿ ಬರುವಷ್ಟರಲ್ಲಿ, ಯುರಿಲಿಯ ನೀರಲ್ಲಿ ಮುಳುಗುತ್ತಾಳೆ. ಹೇಗೊ ನೀರಿನಿಂದ ಮಗುವನ್ನು ಎತ್ತಿಕೊಂಡು ಬದಿಯ ರಸ್ತೆಯಲ್ಲಿ ಮಲಗಿಸುತ್ತಾಳೆ. ಅಲ್ಲಿ ಕೂಡಿದ ಜನರಲ್ಲೊಬ್ಬ ಮಗುವಿನ ತಣ್ಣಗಿನ ದೇಹವನ್ನು ಗಮನಿಸಿ ಮಗು ಸತ್ತಿದೆ ಎಂದು ಹೇಳುತ್ತಾನೆ. ದುಃಖದಲ್ಲಿದ್ದ ತಾಯಿ ಸಂತ ಅಂತೋಣಿಯವರೆ, `ಪ್ರಭು ಕ್ರಿಸ್ತರಲ್ಲಿ ಪ್ರಾರ್ಥಿಸಿ ನನ್ನ ಮಗುವನ್ನು ಬದುಕಿಸಿಕೊಡಿ’ ಎಂದು ಕೋರಿಕೊಳ್ಳುತ್ತಾಳೆ. ಈ ಸರಳ ಪದಗಳ ಕೋರಿಕೆಯ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ, ಮಗುವಿನ ತುಟಿಗಳು ಅಲುಗತೊಡಗುತ್ತವೆ. ಹೊಂಡದಲ್ಲಿ ಮುಳುಗುವಾಗ ಕುಡಿದ ನೀರು ಬಾಯಿಯಿಂದ ಹೊರಗೆ ಚಿಮ್ಮತೊಡಗುತ್ತದೆ. ಯುರಿಲಿಯ ಬದುಕುತ್ತಾಳೆ. ಪಾದ್ವದಲ್ಲಿರುವ ಸಂತ ಅಂತೋಣಿ ಅವರ ಪುಣ್ಯಕ್ಷೇತ್ರದ ಮಹಾದೇವಾಲಯದಲ್ಲಿ ಈ ಘಟನೆಯ ಉಬ್ಬುಚಿತ್ರವಿದೆ. ಇದು ಅಂತೋಣಿ ಅವರ ಜೀವಿತ ಅವಧಿಯಲ್ಲಿ ಜರುಗಿದ ಸಂಗತಿಯಲ್ಲ ಎಂದು ಹೇಳಲಾಗುತ್ತದೆ.

ಸುಳ್ಳು ಹೇಳಿದ ರೈತ:

ಸಂತ ಅಂತೋಣಿ ಅವರು ಬದುಕಿದ್ದಾಗ ಇಟಲಿ ದೇಶದ ಜೆಮೋನ್ ಪಟ್ಟಣದಲ್ಲೊಂದು ಘಟನೆ ನಡೆದಿದೆ. ಅಲ್ಲಿ ಪ್ರಬೋಧನೆ ಮಾಡುತ್ತಿದ್ದ ಸಂತ ಅಂತೋಣಿ ಅವರು, ಕ್ರೈಸ್ತ ವಿಶ್ವಾಸಿಗಳ ಅನುಕೂಲಕ್ಕಾಗಿ ದೇವಮಾತೆಯ ಗೌರವಾರ್ಥ ದೇವಾಲಯ ಹಾಗೂ ಸನ್ಯಾಸಿ ಮಠವನ್ನು ಕಟ್ಟಲು ಬೇಕಾದ ಸಾಮಾನು ಸರಂಜಾಮುಗಳನ್ನು ತರಲು ಎರಡೆತ್ತಿನ ಚಕ್ಕಡಿ ಓಡಿಸುತ್ತಿದ್ದ ರೈತನ ಸಹಾಯ ಕೇಳುತ್ತಾರೆ. ಚಕ್ಕಡಿ ಗಾಡಿಯಲ್ಲಿ ಯುವಕನೊಬ್ಬನು ಮಲಗಿರುತ್ತಾನೆ. ಸಂತ ಅಂತೋಣಿಯವರಿಗೆ ಸಹಾಯ ಮಾಡಲು ಹಿಂದೇಟು ಹಾಕುವ ರೈತ, ಗಾಡಿಯಲ್ಲಿ ಯುವಕನೊಬ್ಬನ ಶವವಿದೆ ಎಂದು ಸುಳ್ಳು ಹೇಳಿ ಮುಂದೆ ಹೋಗುತ್ತಾನೆ.

 ಮುಂದೆ ಹೋಗಿ ನೋಡಿದಾಗ ನಿಜವಾಗಿಯೂ ಆ ಯುವಕ ಮೃತಪಟ್ಟಿರುತ್ತಾನೆ. ತನ್ನ ತಪ್ಪಿನ ಅರಿವಾದಾಗ, ರೈತ ಹಿಂದಿರುಗಿ ಬಂದು ಸಂತ ಅಂತೋಣಿ ಅವರ ಹತ್ತಿರ ಕ್ಷಮೆ ಯಾಚಿಸಿ, ಯುವಕನನ್ನು ಬದುಕಿಸುವಂತೆ ಕೋರಿಕೊಳ್ಳುತ್ತಾನೆ. ಮನ ಕರಗಿದ ಸಂತ ಅಂತೋಣಿ ಅವರು, ಹೆಣದ ಮೇಲೆ ಶಿಲುಬೆ ಗುರುತು ಹಾಕಿ ದೇವರ ಕೃಪೆ ಕೋರುತ್ತಾರೆ. ಆಗ ಯುವಕ ಜೀವವನ್ನು ಪಡೆದು ಎದ್ದು ಕುಳಿತುಕೊಳ್ಳುತ್ತಾನೆ. ಈ ಪವಾಡದಿಂದ ಪ್ರಭಾವಿತರಾದ ಊರ ಜನ ಕಟ್ಟಡದ ಕೆಲಸಕ್ಕೆ ನೆರವು ನೀಡಿ ಕೊನೆಗೆ ಕ್ರೈಸ್ತ ವಿಶ್ವಾಸಿಗಳೂ ಆಗುತ್ತಾರೆ.

ಸತ್ತ ವ್ಯಕ್ತಿ ಸಾಕ್ಷಿ ಹೇಳಿದ ಪ್ರಸಂಗ:

 ಸಂತ ಅಂತೋಣಿ ಅವರ ಸ್ವಂತ ಊರು ಲಿಸ್ಬನ್. ಅಲ್ಲಿನ ನಿವಾಸಿಗಳಾದ ಎರಡು ಕುಟಂಬಗಳಲ್ಲಿ ವೈಮನಸ್ಸು ಇತ್ತು. ಒಂದು ಸಂಜೆ ಒಂದು ಕುಟುಂಬದ ಯುವಕ ತನ್ನ ವೈರಿ ಕುಟುಂಬದ ಯುವಕನನ್ನು ಯಾರಿಗೂ ಗೊತ್ತಾಗದಂತೆ ಸಾಯಿಸಿ, ಹೆಣವನ್ನು ಸಂತ ಅಂತೋಣಿ ಅವರ ತಂದೆ ಮಾರ್ಟಿನ್ ಅವರಿಗೆ ಸೇರಿದ ಹೊಲದಲ್ಲಿ ಹೂಳುತ್ತಾನೆ. ಆ ಯುವಕನನ್ನು ಸಾಯಿಸಿದ ಅಪವಾದಹೊತ್ತ ಮಾರ್ಟಿನ್ ತಮ್ಮ ನಿರಪರಾಧಿತ್ವವನ್ನು ಸಾಧಿಸಲು ಆಗುವುದಿಲ್ಲ. ಈ ಸಮಯದಲ್ಲಿ ಅಂತೋಣಿ ಅವರು ಅಲ್ಲಿಂದ 1200 ಕಿ. ಮೀ ದೂರದ ಇಟಲಿಯ ಪಾದ್ವದಲ್ಲಿ ಇರುತ್ತಾರೆ.

ದೇವರು ಈ ವಿಷಯವನ್ನು ಸಂತ ಅಂತೋಣಿಯವರಿಗೆ ತಿಳಿಸಿ ಅಲ್ಲಿಗೆ ತೆರಳಲು ಸೂಚಿಸುತ್ತಾರೆ. ದೈವ ಬಲದಿಂದ ಲಿಸ್ಬನ್ ಗೆ ಬರುವ ಸಂತ ಅಂತೋಣಿ ಅವರು, ನ್ಯಾಯಾಲಯದ ಆವರಣಕ್ಕೆ ಸತ್ತ ವ್ಯಕ್ತಿಯ ಶವವನ್ನು ತರಿಸಿ, ಅದರಿಂದಲೇ ಕೊಲೆಗಾರನ ಹೆಸರು ಹೇಳಿಸುತ್ತಾರೆ. ಅಂತೋಣಿ ಅವರ ತಂದೆ ನಿರಪರಾಧಿ ಎಂಬುದು ಸ್ಪಷ್ಟವಾಗುತ್ತದೆ. ಜೀವಂತವಾಗಿದ್ದ ಶವ ಅಂತೋಣಿಯವರತ್ತ ತಿರುಗಿ ಪಾಪಗಳಿಗಾಗಿ ಪಶ್ಚಾತ್ತಾಪ ಪಟ್ಟು ಪರಿಹಾರಕ್ಕಾಗಿ ಮನವಿ ಸಲ್ಲಿಸಿ ಮತ್ತೆ ನಿರ್ಜೀವವಾಗುತ್ತದೆ. ಈ ಘಟನೆಯ ಮರುದಿನವೇ ಸಂತ ಅಂತೋಣಿ ಅವರು ಮತ್ತೆ ಪಾದ್ವದಲ್ಲಿ ಕಾಣಿಸಿಕೊಳ್ಳುತ್ತಾರೆ.

 **********


ಗೀತಾಂಜಲಿಯ ತುಣುಕು

ಇಲ್ಲಿಹುದು ನಿನ್ನ ಕಾಲ್ಮಣೆ,

ನಿನ್ನ ಪಾದವದರ ಮೇಲಿದೆ,

ಆಶ್ರಯವದು ಹೀನರಿಗೆ,

ದೀನರಿಗೆ, ಅನಾಥರಿಗೆ.

 

ನಿನಗೆ ನಾನೆರಗುವಾಗ,

ನಾ ನಿಲುಕಲಾರೆ

ಹೀನ ದೀನ ಅನಾಥರೆಲ್ಲ

ಜೋತುಬಿದ್ದ ನಿನ್ನ ಪಾದದಾಳವ.

 

ನಾರುಮಡಿಯನುಟ್ಟು

ನೀನು ಹೀನ ದೀನ ಅನಾಥರೊಡನೆ, 

ಆಡುತಿರಲು ಹಮ್ಮು ಬಿಮ್ಮು

ಸುಳಿವುದುಂಟೇ ಸನಿಹದಿ?

 ಗೆಳೆಯರೇ ಇಲ್ಲದ ಹೀನ ದೀನ

ಅನಾಥರೊಂದಿಗೆ ನೀನು

ಒಡನಾಡುವಾಗ,

ನನ್ನ ಮನಸಿಗದು ತಟ್ಟುವುದೇ ಇಲ್ಲ.

(ಟ್ಯಾಗೋರರ Here is thy footstool and there rest thy feet where live the poorest ಕವನದ ಭಾವಾನುವಾದ: ಸಿ ಮರಿಜೋಸೆಫ್)

 

-0-0-0-0-


ಇವನು ಶೂನ್ಯನು

ಇದೀಗ

ಊರ ಮೈ ತುಂಬಾ

ಅಣುರೇಣು-ವೈರಾಣುಗಳ ಸಹಸ್ರಾಕ್ಷ ವಕ್ರನೋಟ

ಮಹಾಮಾರಿಯ ಅಟ್ಟಲು

ನರ-ನಾರಾಯಣರ ಅಹರ್ನಿಶಿ ಹೋರಾಟ

 

ಉರುಳುತ್ತಿವೆ ಚಕ್ರಾಧಿಪತ್ಯಗಳು

ಅಗ್ಗವಾಗಿವೆ ಝಳಪಿಸುವ ಶಸ್ತ್ರಾಸ್ತ್ರಗಳು

ಹಾರಿ ಹೋಗಿವೆ ಮನುಷ್ಯ ಸತ್ತೆಗಳು

ಮೌನವಾಗಿವೆ ಪ್ರಾರ್ಥನಾ ಮಂದಿರಗಳು

ಕಾಣೆಯಾಗಿವೆ ಜನರ ಮುಖಗಳು

ಕಳಚಿಬಿದ್ದಿವೆ ಮುಖವಾಡಗಳು

ಸತ್ತವನಿಗೊಂದು ಮಸಣವಿಲ್ಲ

ಹೆಸರ ಬರೆಸಲು ಕೊನೆಪಕ್ಷ ಕಲ್ಲು ಇಲ್ಲ

ದೀಪ-ಧೂಪದ ವಾಸನೆ ಇಲ್ಲ

ಜಗದ ಸುಖದ ವಿಲಾಸವಿಲ್ಲ

ಬಣ್ಣದ ಕೆಸರೆರಚಾಟಕ್ಕೆ ಕೊನೆಯಿಲ್ಲ

 

ಶಂಖ- ಜಾಗಟೆ ಕರತಾಡನದ ಗದ್ದಲಕ್ಕೆ

ನಾಲಿಗೆ ಮಲಿನಗೊಂಡ ಕಾಲಕ್ಕೆ

ಹುಸಿ ಆಧ್ಯಾತ್ಮದ ಹೊಲಸಿಗೆ ರೋಸಿ

ಮೈಯೆಲ್ಲ ಪರಚಿಕೊಂಡು

ಭವ ಚಕ್ರದಲ್ಲಿ

ಅರ್ಥ ಹುಡುಕ ಹೊರಟ

ಇವನೀಗ ಶೂನ್ಯನು

 

ತೊಳೆಯಲು ಬಣ್ಣವ

ಕಳೆಯಲು ವ್ಯಾಧಿಯ

ಹುಡುಕುತ್ತಿದ್ದಾನೆ ಇವನು ಗಂಗೆಯ

ಸ್ವಸ್ಥವಾಗಲು

ಆತ್ಮ-ಜ್ಞಾನಯೋಗದಲ್ಲಿ

ಬೆತ್ತಲಾಗಲು

ಉತ್ತುಬಿತ್ತಲು ಸೂರ-ಊರ ಕಟ್ಟಲು

 

- ಡಾ. ದಿನೇಶ್ ನಾಯಕ್

***********************


ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...