Saturday, 20 June 2020

ಇವನು ಶೂನ್ಯನು

ಇದೀಗ

ಊರ ಮೈ ತುಂಬಾ

ಅಣುರೇಣು-ವೈರಾಣುಗಳ ಸಹಸ್ರಾಕ್ಷ ವಕ್ರನೋಟ

ಮಹಾಮಾರಿಯ ಅಟ್ಟಲು

ನರ-ನಾರಾಯಣರ ಅಹರ್ನಿಶಿ ಹೋರಾಟ

 

ಉರುಳುತ್ತಿವೆ ಚಕ್ರಾಧಿಪತ್ಯಗಳು

ಅಗ್ಗವಾಗಿವೆ ಝಳಪಿಸುವ ಶಸ್ತ್ರಾಸ್ತ್ರಗಳು

ಹಾರಿ ಹೋಗಿವೆ ಮನುಷ್ಯ ಸತ್ತೆಗಳು

ಮೌನವಾಗಿವೆ ಪ್ರಾರ್ಥನಾ ಮಂದಿರಗಳು

ಕಾಣೆಯಾಗಿವೆ ಜನರ ಮುಖಗಳು

ಕಳಚಿಬಿದ್ದಿವೆ ಮುಖವಾಡಗಳು

ಸತ್ತವನಿಗೊಂದು ಮಸಣವಿಲ್ಲ

ಹೆಸರ ಬರೆಸಲು ಕೊನೆಪಕ್ಷ ಕಲ್ಲು ಇಲ್ಲ

ದೀಪ-ಧೂಪದ ವಾಸನೆ ಇಲ್ಲ

ಜಗದ ಸುಖದ ವಿಲಾಸವಿಲ್ಲ

ಬಣ್ಣದ ಕೆಸರೆರಚಾಟಕ್ಕೆ ಕೊನೆಯಿಲ್ಲ

 

ಶಂಖ- ಜಾಗಟೆ ಕರತಾಡನದ ಗದ್ದಲಕ್ಕೆ

ನಾಲಿಗೆ ಮಲಿನಗೊಂಡ ಕಾಲಕ್ಕೆ

ಹುಸಿ ಆಧ್ಯಾತ್ಮದ ಹೊಲಸಿಗೆ ರೋಸಿ

ಮೈಯೆಲ್ಲ ಪರಚಿಕೊಂಡು

ಭವ ಚಕ್ರದಲ್ಲಿ

ಅರ್ಥ ಹುಡುಕ ಹೊರಟ

ಇವನೀಗ ಶೂನ್ಯನು

 

ತೊಳೆಯಲು ಬಣ್ಣವ

ಕಳೆಯಲು ವ್ಯಾಧಿಯ

ಹುಡುಕುತ್ತಿದ್ದಾನೆ ಇವನು ಗಂಗೆಯ

ಸ್ವಸ್ಥವಾಗಲು

ಆತ್ಮ-ಜ್ಞಾನಯೋಗದಲ್ಲಿ

ಬೆತ್ತಲಾಗಲು

ಉತ್ತುಬಿತ್ತಲು ಸೂರ-ಊರ ಕಟ್ಟಲು

 

- ಡಾ. ದಿನೇಶ್ ನಾಯಕ್

***********************


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...