Wednesday, 30 January 2019

ಒಬ್ಬಂಟಿ ಮುದುಕಿ



ಬಾಡುವ ಜೀವವೊಂದು
ಕಿತ್ತು ತಿನ್ನುತ್ತಿರುವದು ಹಣ್ಣು
ಹೊಟ್ಟೆ ಬಾಡಿಗೆಯ ಕಟ್ಟಲು
ಜೀವನುದ್ದಕ್ಕೂ ಮುದುಕಿಯ
ಮನಸನ್ನು ತಿಂದ ಮಕ್ಕಳೆಷ್ಟೋ
ಅವಳ ಹಣವ ಕಸಿದವರೆಷ್ಟೋ
ಅವರವರ ಸುಖದ ಕೂಲಿಗಾಗಿ

ಒಬಂಟಿಯಾಗಿ ತಾನು 
ಒಂಟಿ ಕೋಲಿನ ಜಂಟಿಯಾಗಿ
ಬದುಕ ನೂಕಲೇಬೇಕಲ್ಲವೆ
ಉಂಗುಟಿನ ಚಪ್ಪಲಿ ಸವೆಯುದರೊಳಗೆ 
ಸವೆದರು ಖರೀದಿಸಿಕೊಡುವ
ಮಾಲಿಕನಿಲ್ಲ ಜೊತೆಗೆ
ಇವತ್ತೋ ನಾಳೆ ತುಕ್ಕು ಹಿಡಿಯುವ
ಬಟ್ಟೆಯ ಬಿಟ್ಟು

ಹಣ್ಣು ಸಿಗುತ್ತಿಲ್ಲ 
ಎಷ್ಟೆ ಕೈ ಚಾಚಿದರು
ಹಸಿವು ನೀಗುತ್ತಿಲ್ಲ
ಎಷ್ಟೋ ಮಕ್ಕಳಿದ್ದರು
ಉದ್ದನೆಯ ಕೋಲೆ ಆಧಾರ 
ಮುದಿ ಜೀವಕೆ 
ಕಿತ್ತು ತಿಂದೆ ತಿನ್ನುವೇ ಹಣ್ಣನು
ಬಾಯ ದಣಿವಾರಿಸಲು
ನನಗಾದ ನೋವು ಗಿಡದ ಎಲೆಗೂ
ನಾ ನೀಡಲಾರೇನು

ನಾ ಸತ್ತಿಲ್ಲ ಮುಂದೇನೂ ಸಾಯಲ್ಲ
ಬದುಕೆ ತೀರುವೆನು
ಗಿಡ ಮರಗಳ ಅರಮನೆಯಲಿ
ಸಿಕ್ಕ ಸಿಕ್ಕ ಹಣ್ಣ ಹಂಪಲು
ತಿಂದು
ಹಸಿವಿನ ಬೇರಿಗೆ ಜೀವ ನೀಡುವೆನು
ಬಿದ್ದ ಹಣ್ಣನು ಲೆಕ್ಕಿಸದೆ 
ತಿಂದು ಕಾಲ ಕಳೆವೆನು
ಮನದಾಳದ ನೋವ ಮರೆವೆನು


- ಜಿ. ಶಿವಮೂರ್ತಿ, ಕೆ.ಗುಡದಿನ್ನಿ

ದೀಪದ ಗಿಡ


ಇಷ್ಟು ದೂರ ನಡೆದು ಬಂದಿದ್ದೇನೆ
ಹಾದಿಯಲ್ಲಿ ಮೂಡಿದ ಹೆಜ್ಜೆಗಳಷ್ಟೇ ನನ್ನ ಪರಿಚಯ

ಬರೆವ ಎರಡು ಸಾಲು ಕವಿತೆಯಾಗಿಸದೆ ಹೋದರೆ
ಕವಿಯೇ, ನೂರು ಸಾಲು ಬರೆದರೂ ಕವಿತೆ ಹುಟ್ಟದು

ಗುಡುಗಿನ ಮೊದಲೂ ಮೌನ ನಂತರವೂ...
ಲೋಕದ ಕಿವಿಯಲಿ ಕೊನೆತನಕ ಗುಡುಗಿನ ಸದ್ದಷ್ಟೇ ಉಳಿಯಿತು

ಈಜಲು ವಿಶಾಲ ಸಮುದ್ರವಿದೆಯೆಂದು ಮೀನು ತುಸು ಮೇಲೆದ್ದಿತು
ನೂರಾರು ಗಾವುದ ದೂರದ ಹದ್ದಿನ ಕಣ್ಣಿಗೆ ಅಷ್ಟು ಸಾಕಿತ್ತು

ಮನ್ನಿಸು, ಹೂಗಳನ್ನಲ್ಲ ನಿನ್ನ ಸಮಾಧಿಯ ಮೇಲೆ ಬರಿ ಅಕ್ಷರಗಳನಿಟ್ಟೆ
ಓದಿದವರ ಎದೆಯಲ್ಲಿ ಅಕ್ಷರಗಳು ನಿನಗೆ ಮರುಹುಟ್ಟು ಕೊಟ್ಟವು

ಹಗಲೇ ಇರುಳಿಗೆ ಜಾರಿ ಬಂದಂತಿದೆ
ಕತ್ತಲೆಯಲ್ಲಿ ಸಣ್ಣ ದೀಪಕ್ಕೂ ಉರಿವ ಸೂರ್ಯನಷ್ಟೇ ಜಂಬ

ಹಣತೆ ಹಚ್ಚಿಟ್ಟ ಮೇಲೂ ಎದುರಿನ ಮುಖ ಕಾಣಲಿಲ್ಲವಾದರೆ
ದೋಷ ಎಲ್ಲಿಯದೆಂದು ಈಗಲಾದರೂ ಹುಡುಕು


- ಬಸೂ

ಬದುಕು ರಂಗವಲ್ಲಿ



ಬಿಡಿಸ ಬನ್ನಿ ರಂಗವಲ್ಲಿ
ಹೊಸ ವರುಷದ ಹೊಸ್ತಿಲಲ್ಲಿ
ಹಚ್ಚ ಬನ್ನಿ ಭಾವ ಬಣ್ಣ
ಸಾಲು ಚುಕ್ಕಿ ನಡುವೆ ಹೊಕ್ಕಿ 

ಮನುಜರೆಲ್ಲಾ ಚುಕ್ಕಿಗಳೇ
ಎಳೆಯ ಬನ್ನಿ ಗೆರೆಗಳ
ಹೃದಯದಿಂದ ಹೃದಯಕೆ
ಭಾವದಿಂದ ಭಾವಕೆ

ಕೆಂಪು ಚುಕ್ಕಿ, ನೀಲಿ ಚುಕ್ಕಿ
ಹಸಿರು ಚುಕ್ಕಿ, ಹಳದಿ ಚುಕ್ಕಿ
ಇರಲಿ ಬಿಡಿ  ಕಪ್ಪು ಚುಕ್ಕಿ !

ಮನೆಗಳಲ್ಲೂ ಮನಗಳಲ್ಲೂ
ಕನಸು ಕಣ್ಣ ರೆಪ್ಪೆಯಲ್ಲೂ
ಒಲುಮೆ ನಭದ ಎಲ್ಲೆಯಲ್ಲೂ
ಮೂಡಿ ಬರಲಿ ಬೆಳ್ಳಿ ಚುಕ್ಕಿ 

ಬದುಕು ಎಂಬ ರಂಗವಲ್ಲಿ
ಮೂರರಿಂದ ಆರು ಚುಕ್ಕಿ
ಆರರಿಂದ ಮೂರು ಚುಕ್ಕಿ
ಜೀವವೆಂಬ ಮಾಯಾ ಹಕ್ಕಿ !

- . ಡೇವಿಡ್ಕುಮಾರ್


Saturday, 12 January 2019

ತನ್ನ ಪವಾಡಗಳಿಂದ ದೇಶ ವಿದೇಶಗಳ ಸಾವಿರಾರು ಭಕ್ತರನ್ನು ಹೊಂದಿದ್ದ ಸ್ವಾಮೀಜಿಯ ಆಸ್ಥಾನವದು. ಭಕ್ತರು ಒಬ್ಬೊಬ್ಬರಾಗಿ ತಮ್ಮಕಷ್ಟಗಳನ್ನುಸ್ವಾಮೀಜಿ ಬಳಿ ನಿವೇದಿಸುತ್ತಿದ್ದರು. ಸ್ವಾಮೀಜಿ ತನ್ನ ಪವಾಡದ ಮೂಲಕ ಗಾಳಿಯಿಂದ ಭಸ್ಮವನ್ನು ಸೃಷ್ಟಿಸಿ ಹಸನ್ಮುಖರಾಗಿ ಅವರಿಗೆ ಹಂಚುತ್ತಿದ್ದನು. ಭಕ್ತ ಸಮೂಹ ಅದನ್ನು ಅಷ್ಟೇ ಆದರದಿಂದ ಪಡೆದು ಧನ್ಯತೆಯ ಭಾವದಿಂದ ಹೊಂದುತ್ತಿದ್ದರು.

ಬರಗಾಲದಿಂದ ಕಂಗಾಲಾಗಿದ್ದ ರೈತನೊಬ್ಬ ಅದೇ ಸ್ವಾಮೀಜಿಯ ಬಳಿ ಬಂದು ತನ್ನ ಕಷ್ಟಗಳನ್ನೆಲ್ಲ ಹೇಳಿಕೊಂಡನು. ಸ್ವಾಮೀಜಿ ಎಂದಿನಂತೆ ಗಾಳಿಯಿಂದ ಭಸ್ಮವನ್ನು ತೆಗೆದು ಅವನಿಗೆ ಕೊಟ್ಡ. ಅದನ್ನು ತಿರಸ್ಕರಿಸಿದ ರೈತ, ‘ಬರದಿಂದ ಕಂಗಾಲಾದ ನನಗೆ ಬೇಕಾದುದು ಭಸ್ಮವಲ್ಲ ಸ್ವಾಮಿ; ಒಂದಿಷ್ಟು ಅಕ್ಕಿ ಮತ್ತು ಕಾಳುಗಳನ್ನು ತಾವು ಗಾಳಿಯಿಂದ ಸೃಷ್ಟಿಸಿ ಕೊಡಿ’ ಎಂದು ನಯವಾಗಿ ಬೇಡಿಕೆಯಿಟ್ಟ. ಸ್ವಾಮೀಜಿಯ ಮುಖದಲ್ಲಿದ್ದ ‘ಪ್ರಸನ್ನತೆ’ ಒಮ್ಮೆಲೇ ಮಾಯವಾಯ್ತು!

●●●

ಪಾದ್ರಿಯು ತನ್ನ ಧರ್ಮಕೇಂದ್ರದ ಸದಸ್ಯರ ಮನೆಗಳನ್ನು ಭೇಟಿ ಮಾಡುತ್ತಿದ್ದ ಕಾರಣ, ಭಾನುವಾರದ ಬಲಿಪೂಜೆಯ ಪ್ರಬೋಧನೆಯನ್ನು ಸಿದ್ಧಮಾಡಿಕೊಳ್ಳಲು ಆಗಲಿಲ್ಲ. ಹಾಗಾಗಿ ಅವರು ಹಿಂದಿನ ಭಾನುವಾರ ಬಲಿಪೂಜೆಗೆ ಸಿದ್ದಪಡಿಸಿದ ಪ್ರಬೋಧನೆಯನ್ನೇ ಹೇಳಿದರು. ಮತ್ತೊಂದು ವಾರವೂ ಹೀಗೆಗಿ ಅದೇ ಪ್ರಬೋಧನೆಯನ್ನು ಪುನರಾವರ್ತಿಸಿದರು. ಇದರಿಂದ ಕುಪಿತರಾದ ವಿಚಾರಣೆಯ ಸದಸ್ಯರು  ಧರ್ಮಾಧ್ಯಕ್ಷರಿಗೆಗೆ ದೂರು ಕೊಡುತ್ತಾ, "ನಮ್ಮ ಧರ್ಮಕೇಂದ್ರದ ಗುರುಗಳು ಸುಮಾರು ನಾಲ್ಕು ಭಾನುವಾರಗಳಿಂದ ಒಂದೇ ಪ್ರಬೋಧನೆಯನ್ನು ಕೊಡುತ್ತಿದ್ದಾರೆ" ಎಂದು ಹೇಳಿದರು. 
ಧರ್ಮಾಧ್ಯಕ್ಷರು ಸದಸ್ಯರಿಗೆ, “ಸ್ವಲ್ಪ ಪ್ರಬೋಧನೆಯ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಹೇಳಿ” ಎಂದು ಕೇಳಿದಾಗ,  ಅವರು ತಲೆಕೆರೆದುಕೊಳ್ಳಲು ಪ್ರಾರಂಭಿಸಿದರು. ಕೊನೆಗೆ ಧರ್ಮಾಧ್ಯಕ್ಷರು, "ನಿಮ್ಮ ಧರ್ಮಕೇಂದ್ರದ ಗುರುಗಳಿಗೆ ಪುನಃ ಅದೇ ಪ್ರಬೋಧನೆಯನ್ನು ಈ ಭಾನುವಾರವೂ  ಕೊಡಲು ಹೇಳಿ", ಎಂದು ಸದಸ್ಯರನ್ನು ವಾಪಸ್ಸು ಕಳುಹಿಸಿದರು.

●●●

ಸನ್ಯಾಸಿಯೊಬ್ಬ ಗುರು ಜೋಶೋಗೆ ಹೇಳಿದ,
"ಈ ಗುರುಕುಲಕ್ಕೆ ಈಗಷ್ಟೇ ನಾನು ಬಂದೆ. ನನಗೆ ವಿದ್ಯೆಯನ್ನು ನೀಡಿ",
'ಬೆಳಗಿನ ಗಂಜೆ ಕುಡಿದಾಯಿತೇ?'
"ಆಯಿತು ಗುರುಗಳೇ"
"ಹಾಗಿದ್ದರೆ ಗಂಜೆ ಕುಡಿದ ಬಟ್ಟಲನ್ನು ತೊಳೆದಿಡು..."

●●●

ಪದಪುಂಜ

ಮಾನವನ ಭಾವನೆಗಳ ಅಭಿವ್ಯಕ್ತ ವು ಪದಗಳ ಮೂಲಕ ಹೊರಬಂದು ಭಾಷೆಯಾಗಿ ಸಂವಹನ ಕ್ರಿಯೆಗೆ ಪುಷ್ಟಿ ನೀಡುತ್ತದೆ. ಪದ ಬಳಕೆಯು ಭಾಷೆ ಬೆಳೆದಂತೆ ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತದೆ. ಈಗ ನಾವು ಬಳಸುತ್ತಿರುವ ಪದಗಳು ಇನ್ನು ಹತ್ತು ವರ್ಷದ ನಂತರ ಬಳಕೆ ಇಲ್ಲದೆ ಇರಬಹುದು ಅಥವಾ ಬದಲಾಗಬಹುದು. ಹೀಗೆ ಪದ ಬಳಕೆಯು ನಮ್ಮ ಧರ್ಮ ಸಭೆಯಲ್ಲಿ ಇದೆ. ನಾವು ಧಾರ್ಮಿಕ ಚೌಕಟ್ಟಿನಲ್ಲಿ ಬಳಸುವ ಪದಗಳು ಸಹ ಬದಲಾಗಿವೆ ಹೊಸ ರೂಪಗಳನ್ನು ಪಡೆದಿವೆ. ಆ ಪದಗಳ ಬಗ್ಗೆ ಗಮನ ಹರಿಸುವ ಈ ಸಣ್ಣ ಹೊತ್ತಿಗೆ ಪದ ಪುಂಕ. 

ನಾವು ನಮ್ಮ ಊರಿನ ದೇವಾಲಯವನ್ನು ವಿಚಾರಣೆ ಎಂದು ನಮ್ಮ ಚರ್ಚಿನ ಗುರುಗಳನ್ನು ವಿಚಾರಣೆ ಗುರು ಎಂದು  ಕರೆಯುತ್ತೇವೆ. ನಮ್ಮ ಚರ್ಚ್ ಅಥವಾ ದೇವಾಲಯ ಯಾವುದೇ ವಿಚಾರಣೆ ಕೇಂದ್ರವಲ್ಲ ಇದೊಂದು ಧಾರ್ಮಿಕ ಪುಣ್ಯ ಕ್ಷೇತ್ರ ಇದನ್ನು ಧರ್ಮ ಕೇಂದ್ರ ಎಂದು ಕರೆಯುವುದು ಸೂಕ್ತ. ಪ್ರತಿ ಒಬ್ಬ ಗುರು ಇನ್ನೊಬ್ಬ ಕ್ರಿಸ್ತ. ಆತ ಯಾವುದೇ  ವಿಚಾರಣೆಗೆ ಅಥವಾ ನ್ಯಾಯಾಧಿಪತಿಯ ಸ್ಥಾನಕೆ ನಿಲ್ಲಿಸುವುದು  ಸೂಕ್ತವಲ್ಲ. ವಿಚಾರಣೆ ಗುರು ಎನ್ನುವುದು ಎಷ್ಟು ಸೂಕ್ತ?  ಆತ ಧರ್ಮಕೇಂದ್ರದ ಗುರು ಇದು ನಮ್ಮ ದೈನಂದಿನ ಬಳಕೆಯಲ್ಲಿ ಬಳಸುವುದು ಕಷ್ಟವಾದರೆ ಚರ್ಚ್ ಗುರು ಅಥವಾ ನಮ್ಮ ಚರ್ಚ್ ಫಾದರ್ ಆಗಬಹುದು. 

ನಮ್ಮ ಧರ್ಮ ಕೇಂದ್ರಗಳಲ್ಲಿ ಅಥವಾ ಧರ್ಮಕ್ಷೇತ್ರಗಳಲ್ಲಿ ಕಿರು ಕ್ರೈಸ್ತ ಸಮುದಾಯ ಗಳಿವೆ. ಅದಕ್ಕೆ ಒಂದೊಂದು ಸಂತರ ಅಥವಾ ಸಾಮಾನ್ಯ ಹೆಸರುಗಳನ್ನು ಇಡಲಾಗುತ್ತದೆ. ಉದಾಹರಣೆ: ಸಂತ ಜೋಸೆಫರ ವಿಭಾಗ.  ಈ ಕಿರು ಕ್ರೈಸ್ತ ಸಮುದಾಯದ ಸಮುದಾಯವನ್ನು ವಿಭಾಗ ಎಂದು ಕರೆಯುವುದು ಎಷ್ಟು ಸೂಕ್ತ? ವಿಭಾಗ ಎಂದರೆ ವಿಭಾಗಿಸುತ್ತದೆ ಸಮುದಾಯದ ಕಲ್ಪನೆ ಪರಿಕಲ್ಪನೆ ಈ ಪದದಲ್ಲಿ ಇದೆಯೇ? ವಿಭಾಗದ ಬದಲು ಸಮುದಾಯ ಎಂದು ಕರೆದರೆ ಹೆಚ್ಚು ಅರ್ಥಗರ್ಭಿತ. ಸಮುದಾಯ ಎನ್ನುವುದು ಐಕ್ಯತೆಯನ್ನು ಒಗ್ಗಟ್ಟನ್ನು ತೋರಿಸುತ್ತದೆ. ಹೀಗೆ ಇನ್ನಿತರ ಪದಗಳನ್ನು ಒತ್ತು ನಿಮ್ಮ ಮುಂದೆ ತರುತ್ತೇವೆ. 

1. ವಿಚಾರಣೆ- ಧರ್ಮ ಕೇಂದ್ರ.       
2. ವಿಚಾರಣೆ ಗುರು- ಧರ್ಮಕೇಂದ್ರದ ಗುರು. 
3. ವಿಭಾಗ-ಸಮುದಾಯ

-ಸಹೋ.ವಿನಯ್‌ ಕುಮಾರ್‌

ಇನ್ನಿಲ್ಲವಾದ ದಕ್ಷ ಅಧಿಕಾರಿ-ಮಧುಕರ್‌ ಶೆಟ್ಟಿ

ಬೆಂಗಳೂರಿನ ವಿಧಾನಸೌಧದ ಮಹಾದ್ವಾರದಲ್ಲಿ ನಾವು ಕಾಣುವವಾಕ್ಯ: 
'ಸರ್ಕಾರದ ಕೆಲಸ ದೇವರ ಕೆಲಸ'. 

ಈ ವಾಕ್ಯವನ್ನು ಬದುಕಿನಲ್ಲಿ ಅಳವಡಿಸಿಕೊ೦ಡು ದಕ್ಷತೆ ಹಾಗೂ ಪ್ರಾಮಾಣಿಕತೆಯಿ೦ದ ಜನಸೇವೆಗೈದು ೪೭ನೇ ವಯಸ್ಸಿನಲ್ಲೇ ಅಕಾಲಿಕ ಮರಣವನ್ನಪ್ಪಿದ ನಿಷ್ಟಾವ೦ತ ಐಪಿಎಸ್‌ ಅಧಿಕಾರಿ ಮಧುಕರ ಶೆಟ್ಟಿ. ಎಚ್೧ಎನ್೧ ಸೋ೦ಕಿನಿ೦ದ ಬಳಲುತ್ತಿದ್ದ ಈ ಪೊಲೀಸ್‌ಅಧಿಕಾರಿ ಡಿಸೆ೦ಬರ್ ೨೯, ೨೦೧೮ ರ೦ದು ಇಹಲೋಕದ ಯಾತ್ರೆಯನ್ನು ಮುಗಿಸಿದ್ದು ದುರ್ದೈವ.

ಉಡುಪಿ ಮೂಲದ ಮಧುಕರ ಶೆಟ್ಟಿಯವರು ಸರಳ ಜೀವಿಯಾಗಿದ್ದರು. ದಿನಪತ್ರಿಕೆಯೊ೦ದರ ವರದಿಯ೦ತೆ ಹುಟ್ಟೂರಾದ ಕು೦ದಾಪುರ ತಾಲ್ಲೂಕಿನ ಯಡ್ಯಾಡಿಯಲ್ಲಿರುವ ಮಧುಕರ ಶೆಟ್ಟಿಯವರ ಮನೆಯನ್ನು ನೋಡಿಕೊಳ್ಳುತ್ತಿರುವ ಬೆಟ್ಟಾಶೆಟ್ಟಿಯವರು ಕಣ್ಣೀರಿಡುತ್ತಾ ಹೇಳುತ್ತಾರೆ: 'ನಮ್ಮನ್ನು ಎ೦ದಿಗೂ ಕೆಲಸದವರ೦ತೆ ಕ೦ಡವರಲ್ಲ. ಸಹೋದರರ೦ತೆ ಕ೦ಡವರು. ತೋಟದಲ್ಲಿ ಇಬ್ಬರೂ
ಒಟ್ಟಿಗೆ ಕೆಲಸ ಮಾಡಿದ್ದೆವು. ೧೨ ವರ್ಷಗಳಿ೦ದ ಮನೆ ನೋಡಿಕೊಳ್ಳುತ್ತಿದ್ದೇನೆ. ತಾಯಿ-ತ೦ದೆಯರಲ್ಲಿ ಸಿಗದ ಪ್ರೀತಿ ಅವರಲ್ಲಿ ಸಿಕ್ಕಿತ್ತು'. ಬೆಟ್ಟಾಶೆಟ್ಟಿಯವರ ಮೇಲಿನ ವಾಕ್ಯಗಳು ಮಧುಕರ ಶೆಟ್ಟಿಯವರ ನಮ್ರತೆಯನ್ನು, ಸಹೃದಯತೆಯನ್ನು ಎತ್ತಿ ತೋರಿಸುತ್ತದೆ.

ಇವೆಲ್ಲದರ ಜೊತೆಗೆ  ದಕ್ಷತೆಯನ್ನು ಮಧುಕರ ಶೆಟ್ಟಿಯವರು ಮೈಗೂಡಿಸಿಕೊ೦ಡಿದ್ದರು. ಹಲವಾರು ಹಗರಣಗಳನ್ನು ಬಯಲಿಗೆಳೆದು ಖಡಕ್ ಅಧಿಕಾರಿಯೆ೦ದೇ ಪ್ರಸಿದ್ಧಿಯಾಗಿದ್ದರು. ವೀರಪ್ಪನ್ ಬ೦ಧನದ ಸ್ಪೆಷಲ್‌ಟಾಸ್ಕ್ ಫೋರ್ಸ್‌ನಲ್ಲಿ ಎಸ್ಪಿ ಆಗಿ, ರಾಜ್ಯಪಾಲರ ಕಚೇರಿ, ರಾಜಧಾನಿ ಬೆ೦ಗಳೂರು ನಗರ ಸ೦ಚಾರ ವಿಭಾಗದ ಡಿಸಿಪಿಯಾಗಿ, ೨೦೦೮-೦೯ರಲ್ಲಿ ಕೋಸೋವಾದಲ್ಲಿ ಯುನೈಟೆಡ್ ನೇಷನ್ಸ್ ಮಿಷನ್‌ನಲ್ಲಿ ಯುದ್ಧಪರಾಧಗಳ ತನಿಖಾದಳದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ವಿಶೇಷವಾಗಿ ಬಳ್ಳಾರಿ ಗಣಿಕಾರಿಕೆ ಹಗರಣವನ್ನು ಬೆಳಕಿಗೆ ತ೦ದು ಯಾವುದೇ ಆಮಿಷಕ್ಕೆ ಅಥವಾ ರಾಜಕೀಯ ಒತ್ತಡಕ್ಕೆ ಮಣಿಯದೆ ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಮಧುಕರ ಶೆಟ್ಟಿಯವರು ಜಾತಿ-ಧರ್ಮ- ಭಾಷೆಯ ಹೆಸರಿನಲ್ಲಿ ಯಾವುದೇ ಪಕ್ಷಪಾತ ಮಾಡದೆ, ಲ೦ಚಕ್ಕೆ ಮಾರುಹೋಗದೆ, ಸರ್ಕಾರದ ಕೆಲಸವನ್ನು ದೇವರು ಮೆಚ್ಚುವ೦ತೆ ಮಾಡಿ ಭಗವ೦ತ ಹಾಗು ಭುವಿಯ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ತನ್ನ ಸ೦ತಾಪ ಸೂಚಕ ಸ೦ದೇಶದಲ್ಲಿ ಇನ್ನೊಬ್ಬ ನಿಷ್ಟಾವ೦ತ ಪೋಲಿಸ್ ಅಧಿಕಾರಿಯಾದ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಹೇಳುತ್ತಾರೆ: 'ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲವೆ೦ಬ ದೃಢತೆ. ವೃತ್ತಿ ಮೌಲ್ಯಗಳನ್ನು ಕಾಪಾಡಿದ್ದೀರಿ. ಆಧಿಕಾರಿಗಳ ಜೊತೆಗಿನ ಬಾ೦ಧವ್ಯ, ಬಡವರ ಬಗೆಗಿನ ನಿಮ್ಮ ಸೇವೆ ಹೇಳಲು ಪಟ್ಟಿ ಸಾಲುವುದಿಲ್ಲ. ದೈಹಿಕವಾಗಿ ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ ಎ೦ದೆ೦ದಿಗೂ ನಮ್ಮೊ೦ದಿಗೆ ಇರುತ್ತೀರಿ'

ವಿಧಾನಸೌಧದಲ್ಲಿರುವ ಹಲವಾರು ರಾಜಕಾರಣಿಗಳು, ಸಹೋದ್ಯೋಗಿಗಳು ಮತ್ತು ಕರ್ನಾಟಕ ಜನತೆ ಮಧುಕರ ಶೆಟ್ಟಿಯವರ ನಿಧನಕ್ಕೆಸ೦ತಾಪ ಹಾಗು ಶೋಕ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಎಲ್ಲಾ ರಾಜಕಾರಣಿಗಳು, ಸರ್ಕಾರದ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖ೦ಡರುಗಳು ಸರಳತೆ, ನಮ್ರತೆ ಹಾಗು ಪ್ರಾಮಾಣಿಕತೆಯನ್ನು ನೂತನ ವರ್ಷ ೨೦೧೯ರಲ್ಲಿ ಮೈಗೂಡಿಸಿಕೊ೦ಡು ಬಾಳಲು ಮಧುಕರ ಶೆಟ್ಟಿಯವರ ನಿಸ್ವಾರ್ಥ ಬದುಕು ಪ್ರೇರಣೆಯಾಗಲಿ.

- ಫಾ. ಜಾನ್‌ ಪ್ರದೀಪ್‌ ಯೇ.ಸ  

ಕೊನೆ ಮಾತು

ಲೀಲಾವತಿ ದೇವದಾಸ್‌ರವರ ಮತ್ತು ನನ್ನ ಒಡನಾಟ ಕೇವಲ ಒಂದು ವರ್ಷದ್ದು. ನಾವಿಬ್ಬರೂ ಮುಖಾಮುಖಿಯಾಗಿದ್ದೇ ಇಲ್ಲ. ಇಬ್ಬರೂ ಮಾತನಾಡಿದ್ದು ಪೋನ್ ಮೂಲಕ ಮಾತ್ರ. ಹಂಚಿಕೊಂಡಿದ್ದು ಹತ್ತಾರು ಮೆಸೇಜ್‌ಗಳನ್ನು. ಅದೂ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ. ಆದರೂ ಅವರು ನನ್ನ ಬದುಕಿನ ಮೇಲೆ ಅಚ್ಚೊತ್ತಿ ಹೋಗಿರುವ ಪ್ರೇರಣೆ ಮಾತ್ರ ಅಸಾಧಾರಣವಾದುದ್ದು.

’ದನಿ’ ಪ್ರಾರಂಭಿಸಿ ಲೇಖಕರ ಬೇಟೆಯಲ್ಲಿದ್ದ ನನಗೆ ಲೀಲಾವತಿ ದೇವದಾಸ್‌ರವರ ಪರಿಚಯವಾದುದ್ದು ಆತ್ಮೀಯರಾದ ಮರಿಜೋಸೆಫ್‌ರವರ ಮೂಲಕ. ಲೀಲಾವತಿ ದೇವದಾಸ್‌ರವರ ದೂರವಾಣಿಯ ಸಂಖ್ಯೆಯನ್ನು ನನಗೆ ಮೆಸೇಜ್ ಮಾಡಿ, “ಫಾದರ್ ಲೀಲಾವತಿ ದೇವದಾಸ್‌ರವರ ಹತ್ತಿರ ಮಾತಾಡಿ, ಅವರನ್ನು ಕೂಡ ದನಿಗೆ ಬರೆಯಲು ಕೇಳಿಕೊಳ್ಳಿ" ಎಂದು ಸಲಹೆ ಮಾಡಿದರು.

ಲೀಲಾವತಿ ದೇವದಾಸ್‌ರವರಿಗೆ ಪೋನ್ ಮಾಡೋದೋ ಬೇಡ್ವೋ? ಎಂಬ ಗೊಂದಲದಲ್ಲಿ ನಾನಿದ್ದಾಗ, ನನಗೆ ಸಹಾಯ ಮಾಡಿದ್ದು ಒಂದು ಲೇಖನ. ಆ ಲೇಖನದಲ್ಲಿ ಈ ರೀತಿ ಇತ್ತು: “ಉತ್ತಮ ಬರಹಗಾರರನ್ನು ಸಂಪರ್ಕಿಸಲು ಭಯಪಡಬೇಡಿ, ನಿಮ್ಮ ಪತ್ರಿಕೆಗೆ ಅವರನ್ನು ಅತ್ಮೀಯವಾಗಿ ಆಹ್ವಾನಿಸಿ”, ಈ ಒಂದು ಮಾತಿನಿಂದ ಸ್ಫೂರ್ತಿಗೊಂಡು ಲೀಲಾವತಿ  ದೇವದಾಸ್‌ರವರನ್ನು ಅರೆ ಮನಸ್ಸಿನಿಂದಲೇ ಸಂಪರ್ಕಿಸಿದೆ.

ಪೋನ್‌ನಲ್ಲಿ ನನ್ನ ಕಿರು ಪರಿಚಯ ಹೇಳಿ ಲೀಲಾವತಿ ದೇವದಾಸ್‌ರವರೊಂದಿಗೆ ಮಾತನಾಡಲು ಆರಂಭಿಸಿದೆ. ಅವರ ಮಾತುಗಳು ತುಂಬ ಆತ್ಮೀಯವಾಗಿತ್ತು. ಎಷ್ಟೋ ವರ್ಷಗಳಿಂದ ಗೊತ್ತಿದ್ದ ಗೆಳಯನೊಟ್ಟಿಗೆ ಮಾತನಾಡುವ ಧಾಟಿಯಲ್ಲಿ ಬಾಯಿತುಂಬ ಮಾತನಾಡಿದರು. ನನ್ನಲ್ಲಿದ್ದ ಅಳುಕು ಮಾಯವಾಯಿತು. ನಾನು, “ನೀವು ನಮ್ಮ ಪತ್ರಿಕೆಗೆ ಬರೆಯಬೇಕು” ಎಂದು ಕೇಳಿಗೊಂಡಾಗ, “ತುಂಬಾ ಸಂತೋಷ, ಬರಿತೀನಿ ಫಾದರ್” ಎಂದು ಹೇಳಿದರು. ಅವರ ಧನಾತ್ಮಕ ಉತ್ತರದಿಂದ ಖುಷಿಯಾದರೂ, ಅವರು ಬರೀತಾರಾ? ಅವರಿಗೆ ಬರೆದಿದ್ದನ್ನು ಟೈಪು  ಮಾಡಿ ಇಮೇಲ್ ಮಾಡಲಿಕ್ಕೆ ಆಗುತ್ತಾ? ಹೀಗೆ ಹತ್ತಾರು ಪ್ರಶ್ನೆಗಳು ನನ್ನ ಮನಸ್ಸಿನ ಸುಳಿಯಲ್ಲಿ ಹುಟ್ಟಿಕೊಂಡವು. 

ಮಾರನೆಯ ದಿನ ನನ್ನ ಇಮೇಲ್ ಬಾಕ್ಸ್‌ನಲ್ಲಿ ಲೀಲಾವತಿ ದೇವದಾಸ್‌ರವರಿಂದ ಒಂದು ಲೇಖನ ಬಂದಿತ್ತು. ನನಗೆ ಒಮ್ಮೆಲೇ ಅಶ್ಚರ್ಯವಾಯಿತು. ಅವರ promptness ಮತ್ತು commitment ಕಂಡು ಬೆರಗಾದೆ. ಅಷ್ಟು ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳ ಬಗ್ಗೆ ಕಂಪ್ಯೂಟರುಗಳ ಬಗ್ಗೆ ಕನಿಷ್ಠ ಜ್ಞಾನವಿಲ್ಲದ ಎಷ್ಟೋ  ಜನರು ನಮ್ಮಲ್ಲಿರುವಾಗ, ತನ್ನ ಹಿರಿ ವಯಸ್ಸಿನಲ್ಲೂ ಕಂಪ್ಯೂಟರುಗಳ ಜತೆ ಸಲೀಸಾಗಿ ಕೆಲಸ ಮಾಡಿಕೊಳ್ಳುತ್ತಿದ್ದ ಅವರ ಜಾಣ್ಮೆಯನ್ನು ಕಂಡು ಮೂಕವಿಸ್ಮಿತನಾದೆ.

ನಮ್ಮ ಪತ್ರಿಕೆಯು ಪ್ರತಿ ತಿಂಗಳು ೫ನೇ ತಾರೀಖಿಗೆ ಬಿಡುಗಡೆಗೊಂಡರೆ, ಮರುದಿನವೇ ಲೀಲಾವತಿ ದೇವದಾಸ್‌ರವರ ಮುಂದಿನ ಲೇಖನ ನನ್ನ ಮಿನ್ನಂಚೆಯ ಪೆಟ್ಟಿಗೆಯಲ್ಲಿ ಬಂದು ಬೀಳುತ್ತಿತ್ತು. ಲೇಖನವನ್ನು ಕಳುಹಿಸಿ, ”ಫಾದರ್ ಲೇಖನವನ್ನು ಕಳುಹಿಸಿದ್ದೀನಿ… ನಿಮಗೆ ಸಿಕ್ಕಿತೇ? ತಿಳಿಸಿ” ಎಂದು ಒಡನೆ ಮೆಸೇಜ್ ಮಾಡುತ್ತಿದ್ದರು. ಅವರ ಮೆಸ್ಸೇಜ್‌ಗೆ ಪ್ರತ್ಯುತ್ತರ ನೀಡಲು ತಡ ಮಾಡಿದರೆ ಪುನಃ ಸಂದೇಶದ ಮೂಲಕ ನನಗೆ ನೆನಪಿಸುತ್ತಿದ್ದರು.

ಇತ್ತೀಚೆಗೆ ದನಿ ಮಾಧ್ಯಮ ಮನೆಯಿಂದ ಬೈಬಲ್ ಆಪ್ ಮಾಡ ಬೇಕೆಂದು ಯೋಚಿಸಿ, ಲೀಲಾವತಿ ದೇವದಾಸ್‌ರವರನ್ನು, “ನೀವು ಸಂತರ ಮತ್ತು ಬೈಬಲ್‌ನಲ್ಲಿರುವ ಕೆಲ ವಿಶಿಷ್ಟ ವ್ಯಕ್ತಿಗಳನ್ನು ಪರಿಚಯಿಸುವಂತಹ ಲೇಖನಗಳನ್ನು ಬರದುಕೊಡುವಿರಾ?” ಎಂದು ನಾನು ಕೇಳಿಕೊಂಡಾಗ, ಮನಪೂರ್ತಿಯಾಗಿ ಒಪ್ಪಿಕೊಂಡು, ಸುಮಾರು ಐದು ಸಂತರ ಮತ್ತು ಬೈಬಲಿನಲ್ಲಿ ಕಂಡು ಬರುವ ವಿಶಿಷ್ಟ ವ್ಯಕ್ತಿಗಳ ಪರಿಚಯದ ಲೇಖನಗಳನ್ನು ಬರೆದುಕೊಟ್ಟಿದ್ದರು. ಅದರೆ ದೇವರ ಚಿತ್ತ ಏನಿತ್ತೋ ನಮ್ಮ ಬೈಬಲ್ ಆಪ್ ಬಿಡುಗಡೆಗೊಳ್ಳುವ ಮುಂಚೆಯೇ ಅವರು ನಮ್ಮಿಂದ ದೂರ ಹೋಗಿಬಿಟ್ಟರು.

ಕೊನೆಗೆ ಇಷ್ಟು ಮಾತ್ರ ಹೇಳಬಲ್ಲೆ: ಸಮಾಧಿಯ ಬಳಿ ಹೋಗಿ ಯೇಸುವನ್ನು ಹುಡುಕುತ್ತಿರಬೇಕಾದರೆ, ದೇವದೂತರು ಹೇಳುತ್ತಾರೆ- ಸತ್ತವರ ಮಧ್ಯೆ ಜೀವಿಸುವವರನ್ನು ಹುಡುಕುವುದೇಕೆ? ಹೌದು, ನಮ್ಮ ಅತ್ಮೀಯರು ಸಮಾಧಿಯಲ್ಲಿ ಸಿಗುವುದಿಲ್ಲ. ಅವರು ಜೀವಿಸುತ್ತಿದ್ದಾರೆ. ಅವರು ಎಲ್ಲಿ ಬದುಕಿದ್ದರೋ ಅಲ್ಲಿಯೇ ಸಿಗುತ್ತಾರೆ. ಅವರು ಜೀವಕಾಳಜಿಯಲ್ಲಿ, ಸೇವೆಯಲ್ಲಿ, ಸಾಹಿತ್ಯದಲ್ಲಿ ಬದುಕಿದವರು. ಅಲ್ಲಿ ನಮ್ಮ ಲೀಲಾವತಿಯವರನ್ನು ಹುಡುಕೋಣ. ಖಂಡಿತ ಅಲ್ಲಿ ನಮಗೆ ಅವರು ಸಿಗುವರು. ಅಷ್ಟೇ ಮಾತ್ರವಲ್ಲ ಅವರು ಬದುಕಿದ ಬದುಕನ್ನು ನಮ್ಮದಾಗಿಸಿಕೊಳ್ಳುತ್ತಾ ಅವರನ್ನು ಅಮರರಾಗಿಸೋಣ.

ಲೀಲಾವತಿ ದೇವದಾಸ್‌ರವರೇ, ಮರೆಯದೆ ನಿಮ್ಮ ಲೇಖನಗಳನ್ನು ನನ್ನ ಇಮೇಲ್ ಬಾಕ್ಸಿಗೆ ಕಳುಹಿಸಿ, “ಫಾದರ್ ಲೇಖನವನ್ನು ಕಳುಹಿಸಿದ್ದೀನಿ… ನಿಮಗೆ ಸಿಕ್ಕಿತೇ? ತಿಳಿಸಿ” ಎಂದು ಮೆಸ್ಸೇಜ್ ಮಾಡುವುದನ್ನು ಮಾತ್ರ ಮರೆಯಬೇಡಿ.

-ಜೋವಿ

Friday, 11 January 2019

ಅಗಲಿಕೆಯೇಕೆ ಹಳೇ ವರುಷಕೆ!


ಕಳೆದಿಹವು ಅದೆಷ್ಟೋ ವರುಷಗಳು ಬಾಳಲಿ
ನೆನ್ನೆಯ ನೆನಪುಗಳೆಲ್ಲ ಮಾಸದೆ
ಕೆದರುತಿವೆ ಆಡಂಭರದ ಆಟಿಕೆಗಳು 
ಎಣ್ಣೆ ಸಾರಾಯಿ ನೆಪದಲಿ
ಹಸಿರು ಇರದ ನಿಸರ್ಗದಲಿ.

ಅದೊಂದು ಯುಗಾದಿಯು
ಎಲೆಗಳೆಲ್ಲ ಚಿಗುರೊಡೆದು
ಪರಿಸರಕ್ಕೊಮ್ಮೆ ಮರುಜನ್ಮ ತುಂಬಿ
ತಂದೆ ತರುವುದೊಮ್ಮೆ ಬಾಳಲಿ
ಹೊಸ ವರುಷದ ಆಗಮನದಲಿ
ಕಣ್ಣ ತಂಪು ಮಾಡಲು
ಹಚ್ಚ ಹಸಿರು ಕಾಣಲು.

ವರುಷ ಬದಲಾದೊಡೇನು
ಹರುಷ ಬದಲಾದಿತೇನು
ಮನದೊಳಿರುವ ಕಸವ ಬಳಿದರೊಮ್ಮೆ ಅಂದು
ಹೊಸ ವರುಷ ಬಂದಿತೊಮ್ಮೆ ಬಾಳಲಿ
ದಿನವು ಬದಲಾದೊಡೇನು ಮನವು ಬದಲಾದಿತೇನು
ಜಗವ ಜಯಿಸುವ ಗುರಿಯಿಟ್ಟೊಡನೆ
ಕನಸ ನನಸಾದೊಡನೆ
ಹೊಸ ವರುಷ ಬಂದಿತೊಮ್ಮೆ
ನಗುತಲಿ.

ಆಚರಣೆಯೇಕೆ ಹೊಸ ವರುಷಕೆ
 ಅಗಲಿಕೆಯೇಕೆ ಹಳೆ ವರುಷಕೆ
ಮುಗಿದಿಲ್ಲ  ಹಳೆ ವರುಷದ
ಸಂಬಂಧಗಳು
ಕಳೆದಿಲ್ಲ ಇನ್ನು ಕನವರಿಕೆಯ ನೆನಪುಗಳು 
ಬದುಕಿನುದ್ದಕ್ಕೂ ಹೊಸ ವರುಷವೇ
ನೀನು ಬದಲಾದೊಡೆ ನಿನ್ನತನ ಬದಲಾದೊಡೆ.

- ಜಿ. ಶಿವಮೂರ್ತಿ, ಕೆ.ಗುಡದಿನ್ನಿ


ಬನ್ನಿ, ಹೇಳೋಣ ಗುಡ್‌ಬೈ!

ಮತ್ತೊಂದು ಹೊಸ ವರುಷ, ದೇವರ ವರದಾನವೇ ಸರಿ. ಈ ಹೊಸ ವರುಷ ೨೦೧೯ ಹೊಸ ಹೊಸ ಆಶೋತ್ತರಗಳನ್ನು ಹೊತ್ತು ಪ್ರಾರಂಭವಾಗಿದೆ. ಈ ನವ ವರುಷ ಎಲ್ಲರಿಗೂ ಶುಭದಾಯಕವಾಗಲಿ ಎಂಬುದು ನನ್ನ ಹಾರೈಕೆ. ಇಂದು ಸರ್ವರೂ ನೆಮ್ಮದಿಯ ಬದುಕನ್ನು ಬಯಸುತ್ತಿದ್ದಾರೆ. ಆದರೆ ಪ್ರತಿ ಕ್ಷಣವೂ ಗಡಿಬಿಡಿಯಲ್ಲೇ ಜೀವನ ಸಾಗುತ್ತಿದೆ. ಕೆಲವರು ಈ ಗಡಿಬಿಡಿಯ ಬದುಕಿಗೆ ಮಾರುಹೋಗಿದ್ದಾರೆ. ಆದರೆ ಹಲವರು ಈ ಬದುಕಿನಿಂದ ಬೇಸತ್ತಿದ್ದಾರೆ. ಎಲ್ಲಾ ಸ್ತರಗಳಲ್ಲಿಯೂ ಬದುಕು ದುಸ್ತರವಾಗುತ್ತಿದೆ. ಬದಲಾವಣೆ ಬಯಸುತ್ತಿದೆ.

ತ್ರೈಏಕ ದೇವರು ಮಾನವರು ನೆಮ್ಮದಿಯ ಹಾಗೂ ಸಂತೃಪ್ತಿಯ ಬದುಕನ್ನು ಬದುಕಲೆಂದು ಅವರನ್ನು ತಮ್ಮ ಪರಿಪೂರ್ಣ ಪ್ರೀತಿಯಿಂದ ತುಂಬಿದ್ದಾರೆ. ಆದರೆ ಮಾನವರು ತಮ್ಮ ಬದುಕನ್ನು ತಾವೇ ದುಸ್ತರವಾಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಮಾನವರ ಅಂತರಂಗದಲ್ಲಿ ನಿತ್ಯವೂ ದ್ವಿಗುಣಗೊಳ್ಳುತ್ತಿರುವ ದ್ವೇಷ, ಅಸೂಯೆ, ದುರಾಸೆ ಮತ್ತು ಸ್ವಾರ್ಥ. ಈ ದುಷ್ಟ ಗುಣಗಳಿಂದ ಮಾನವರು ಹೊರಬರಲು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆ. ಆದರೆ ತ್ರೈಏಕ ದೇವರ ಅನುಗ್ರಹದಿಂದ ಇದು ಖಂಡಿತ ಸಾಧ್ಯ! “ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ” (ಲೂಕ ೧:೩೭). ಯಾರು ತ್ರೈಏಕ ದೇವರಲ್ಲಿ ದೃಢ ನಂಬಿಕೆ ಇಟ್ಟು ದುಷ್ಟ ಗುಣಗಳಿಂದ ದೂರ ಸರಿಯುವ ಪ್ರಕ್ರಿಯೆಯನ್ನು, ಸ್ಥಿರ ಮನಸ್ಸಿನಿಂದ ಪ್ರಾರಂಭಿಸುತ್ತಾರೋ ಅಂಥವರಿಗೆ ಭಗವಂತ, ಆ ತ್ರೈಏಕ ದೇವರು ಬದಲಾಗುವ ಸ್ಥಿರ ಮನಸ್ಸಿಗೆ ಸ್ಪೂರ್ತಿ ಮತ್ತು ಪವಿತ್ರಾತ್ಮರ ಚೈತನ್ಯವನ್ನು ತುಂಬಿ ಚಾಲನೆ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಅಂಗುಲಿಮಾಲಾ ಒಬ್ಬ ಕುಖ್ಯಾತ ದರೋಡೆಕೋರ. ಆತ ಬುದ್ದನ ಸ್ಪರ್ಶದಿಂದ ಬದಲಾದ. ಜಕ್ಕಾಯ ನಿಗದಿತ ಸುಂಕಕ್ಕಿಂತ ಅಧಿಕ ವಸೂಲಿ ಮಾಡಿ ಧನಾಡ್ಯನಾಗಿದ್ದ. ಆದರೆ  ಪ್ರಭು ಕ್ರಿಸ್ತನ ದರ್ಶನದಿಂದ ಪುಳಕಿತನಾಗಿ ನೆರೆದ ಜನರ ಮುಂದೆ ಎದ್ದು ನಿಂತು, “ಪ್ರಭುವೇ, ನನ್ನ ಆಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದು ಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ” (ಲೂಕ೧೯:೧-೧೦) ಎಂದು ಬದಲಾವಣೆಯ ಕಹಳೆ ಊದಿದ, ರಕ್ಷಣೆಗೆ ಪಾತ್ರನಾದ. ಉಕ್ಕಡದಲ್ಲಿ ಕುಳಿತು ಯಹೂದ್ಯರ ಆಶೋತ್ತರಗಳಿಗೆ ವಿರುದ್ಧವಾಗಿ ಸುಂಕ ವಸೂಲಿ ಮಾಡುತ್ತಿದ್ದ ಮತ್ತಾಯ (ಲೇವಿ) ಪ್ರಭು ಕ್ರಿಸ್ತನ ಕರೆಯಿಂದ ಪರಿವರ್ತನೆಗೊಂಡ (ಮಾರ್ಕ೨:೧೪). ಲೌಕಿಕ ಸುಖಬೋಗಗಳಲ್ಲಿ ಮೈಮರೆತಿದ್ದ ಅಗಸ್ಟೀನ್, ಅವರ ತಾಯಿ ಮೋನಿಕರವರ ನಿರಂತರ ಪ್ರಾರ್ಥನೆಯಿಂದ ಸಂತರಾದರು. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಯಾರು ತ್ರೈಏಕ ದೇವನಲ್ಲಿ ಅಪಾರ ವಿಶ್ವಾಸವಿಟ್ಟು  ಸ್ಥಿರ ಮನಸ್ಸಿನಿಂದ ಬದಲಾವಣೆ ಬಯಸುತ್ತಾರೋ, ಅವರಲ್ಲಿ ಹೊಸ ಬದುಕು ಚಿಗುರಿಕೊಳ್ಳುತ್ತದೆ. ತ್ರೈಏಕ ದೇವನ ಸ್ಪರ್ಶವಾದಾಗ ಕೊರಡು ಸಹ ಕೊನರುತ್ತದೆ. 

ಕಳೆದ ವರುಷ ೨೦೧೮ರಲ್ಲಿ ವಿವಿಧ ಪ್ರಕೃತಿ ವಿಕೋಪಗಳಿಂದ ಉಂಟಾದ ನಷ್ಟಕ್ಕಿಂತ ಮಾನವನ ಧನದಾಹಿ ಸ್ವಾರ್ಥದಿಂದ ಉಂಟಾದ ನಷ್ಟವೇ ಅಧಿಕ. ಕೆಲವರ ಸ್ವಾರ್ಥದ ದುರಾಸೆಯಿಂದ ಹಲವು ಅಮಾಯಕರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ ಎಂದು ಹೇಳಲು ಬಹು ಸಂಕಟವಾಗುತ್ತದೆ. ಈ ಲೌಕಿಕ ಬದುಕು ಸ್ಥಿರವಲ್ಲ, ಇಲ್ಲಿ ಎಷ್ಟೇ ಆಸ್ತಿ, ಅಂತಸ್ತು ಮತ್ತು ಅಧಿಕಾರವಿದ್ದರೂ ಅದು ನೀರ ಮೇಲಿನ ಗುಳ್ಳೆಯಂತೆ. ನಮ್ಮ ಸ್ಥಿರವಾದ ನೆಲೆ ಇದಲ್ಲ! ಎಂಬ ಅರಿವೂ ಮೂಡಿ ಅಳಿಯದ ಆಸ್ತಿಯಾದ ನಿಷ್ಕಪಟ, ನಿಸ್ವಾರ್ಥ ಹಾಗೂ ನಿಷ್ಕಳಂಕ ಪ್ರೀತಿಯ ಸಂಪಾದನೆಯಲ್ಲಿ ಮಾನವರು ನಿರಂತರವಾಗಿ, ನಿರಾಸೆಗೊಳ್ಳದೆ ತೊಡಗಿಸಿಕೊಳ್ಳಬೇಕು. ಅದಕ್ಕೆ ಬೇಕು ನಿಷ್ಠೆ ಹಾಗೂ ನಿಸ್ವಾರ್ಥತೆ, ಪರಪ್ರೀತಿ ಹಾಗೂ ಸಹಿಷ್ಣುತೆ. ಈ ಸದ್ಗುಣಗಳನ್ನು ರೂಡಿಸಿಕೊಂಡು ಹಲವರು ಮಹಾತ್ಮರಾಗಿದ್ದಾರೆ. ಅಂಥ ಮಹಾನುಭಾವರಲ್ಲಿ ಸರ್ವಶ್ರೇಷ್ಠ ಮಾನವ ಜೀವಿ, ಅನ್ನ ಮತ್ತು ಜೋಕಿಂರವರ ಒಬ್ಬಳೇ ಸುಪುತ್ರಿ ಮರಿಯಾ! ಇವರು ತ್ರೈಏಕ ದೇವರ ಅನುಗ್ರಹದಿಂದ ಪಾಪರಹಿತರಾಗಿ ಜನಿಸಿದವರು. ಇವರು ಮಾನವ ಜನಾಂಗಕ್ಕೆ ಸಂಪೂರ್ಣ ರಕ್ಷಣೆಯನ್ನು ತರಲು ತಮ್ಮ ಒಬ್ಬನೇ ಮಗನಾದ ಪ್ರಭು ಯೇಸು ಕ್ರಿಸ್ತರನ್ನು ಜಗಕ್ಕೆ ಹೊತ್ತು ತರಲು ಗಬ್ರಿಯೇಲ್ ದೂತನ ಸಂದೇಶಕ್ಕೆ, “ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ” (ಲೂಕ ೧:೩೮)  ಎಂದು ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಮಹಾ ಮಹಿಳೆ, ಪವಿತ್ರ ಕಥೋಲಿಕ ಧರ್ಮಸಭೆಯ ನಿಷ್ಠಾವಂತ ಪಾಲಕಿ, ಸರ್ವ ಸದ್ಗುಣ ಸಂಪನ್ನೆ, ವರಪೂರ್ಣಳು ಹಾಗೂ ಪರಿಪೂರ್ಣಳು ಆಗಿರುವವಳು. ಈ ಕಾರಣ ಪವಿತ್ರ ಕಥೋಲಿಕ ಧರ್ಮಸಭೆ ಈಕೆಯನ್ನು ಮಾನವ ಕುಲಕ್ಕೆ ಆದರ್ಶ ಮಾತೆಯನ್ನಾಗಿ ನೀಡುತ್ತಾ, ಈಕೆಯನ್ನು ಅನುಕರಿಸುವಂತೆ ಹೊಸ ವರ್ಷದ ಪ್ರಥಮ ಕ್ಷಣದಿಂದಲೇ ಕರೆ ನೀಡುತ್ತಿದೆ. ಯಾರು ಈಕೆಯಂತೆ ತ್ರೈಏಕ ದೇವರಿಗೆ ವಿಧೇಯರಾಗಿ, ವಿನಯತೆಯಿಂದ, ಹಿಗ್ಗದೆ-ಕುಗ್ಗದೆ ಹಾಗೂ ವಿಶ್ವಾಸಭರಿತರಾಗಿ ನಡೆದುಕೊಳ್ಳುತ್ತಾರೋ ಅವರು ಸ್ವಾರ್ಥದ ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಹಾಕಲು ಪ್ರೇರೇಪಿತರಾಗುತ್ತಾರೆ. ಅಂಥವರ ಜೀವನ ಪ್ರೀತಿ, ಸಹನೆ, ಸಹಬಾಳ್ವೆಯಿಂದ ಕೂಡಿರುತ್ತದೆ.

ಈ ವರುಷವಾದರೂ ಇಂತಹ ಬದುಕಿನೆಡೆಗೆ ಅಭಿಮುಖರಾಗಲು, ಸ್ವಾರ್ಥದ ಬದುಕಿಗೆ ವಿಮುಖರಾಗಲು, ಮಾನವರೆಲ್ಲರ ಅಂತರಾಳದಲ್ಲಿ ಬದಲಾವಣೆಯ ಕಹಳೆ ಮೊಳಗಬೇಕು. ನೈಜ ಬದಲಾವಣೆ ಬಯಸುವ ಮಾನವರೆಲ್ಲರೂ ನಿಸ್ವಾರ್ಥಿ, ತ್ಯಾಗಮಯಿ ಹಾಗೂ ಮಾನವ ಕುಲದ ನಿಷ್ಠಾವಂತ ಪಾಲಕಿ ಮಾತೆ ಮರಿಯಳ ಕೈಹಿಡಿದು ಸರ್ವರ ನೈಜ ಸಂಪತ್ತು ಹಾಗೂ ಶಾಶ್ವತ ಸಂತೋಷದ ಅರಸರಾದ, ಪ್ರಭು ಕ್ರಿಸ್ತರೆಡೆ ಸಾಗಲೇಬೇಕು. ಆಗ ಮಾತ್ರ ನೈಜ ಬದಲಾಣೆ ಸಾಧ್ಯ!!! ಬನ್ನಿ, ಹಾಗಾದರೆ ನಮ್ಮ ಕ್ಷಣಿಕ ಸಂತೋಷಕ್ಕೆ ಕಾರಣವಾಗಿ, ನಮ್ಮ ಶಾಶ್ವತ ಸಂತೋಷವನ್ನು ಕಸಿದುಕೊಳ್ಳುತ್ತಿರುವ ದ್ವೇಷ, ಅಸೂಯೆ, ದುರಾಸೆ ಮತ್ತು ಸ್ವಾರ್ಥಕ್ಕೆ ಹೇಳೋಣ ಗುಡ್ ಬೈ.  ●●●
ಫಾ.ವಿಜಯ್‌ಕುಮಾರ್‌.ಪಿ., ಬಳ್ಳಾರಿ

ನಾ.ಡಿಸೋಜಾರವರೊಂದಿಗಿನ ಪುಟ್ಟ ಸಂದರ್ಶನ

ಶ್ರೀಯುತ ನಾ.ಡಿಸೋಜ ಕರ್ನಾಟಕದ ಅಗ್ರಗಣ್ಯ ಸಾಹಿತಿಗಳಲ್ಲೊಬ್ಬರು. ಇವರು ಕಿಟೆಲ್'ರವರ ನಂತರ ಕನ್ನಡ ಸಾಹಿತ್ಯಕ್ಕೆ ಗಣನೀಯವಾಗಿ ಸೇವೆ ಸಲ್ಲಿಸಿದ ಕ್ರೈಸ್ತ ಸಾಹಿತಿ ಎಂದರೆ ಉತ್ಪ್ರೇಕ್ಷೆಯಾಗಲಾರದು. ಕ್ರೈಸ್ತ ಧರ್ಮದ ಆಚಾರ ವಿಚಾರಗಳು, ಸಂಸ್ಕೃತಿ, ಬದುಕು, ಶೈಲಿ, ಸವಾಲುಗಳು, ತಲ್ಲಣಗಳು, ಮುಗ್ಧತೆ, ಹತಾಶೆ, ಮೌನ ಇನ್ನು ಮುಂತಾದ ಆಯಾಮಗಳನ್ನು ತಮ್ಮ ಕಾದಂಬರಿಗಳ ಚೌಕಟ್ಟನ್ನಾಗಿರಿಸಿಕೊಂಡಿರುವ ನಾ.ಡಿಸೋಜರವರು ಸುಮಾರು 110ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಇವರ ಹಲವಾರು ಕಾದಂಬರಿಗಳು ಇಂಗ್ಲಿಷ್, ತಮಿಳು, ಮರಾಠಿ ಮತ್ತು ಇತರ ಭಾಷೆಗಳಿಗೂ ಅನುವಾದಗೊಂಡಿವೆ. ದ್ವೀಪ, ಸುಣ್ಣ ಬಳಿದ ಸಮಾಧಿಗಳು, ಇಗರ್ಜಿ ಸುತ್ತಲಿನ ಹತ್ತು ಮನೆಗಳು, ನೆಲೆ, ಮುಳುಗಡೆ, ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ, ತ್ರಿಕೋನ ಇವರ ಪ್ರಧಾನ ಕೃತಿಗಳು. 80ರ ಇಳಿ ವಯಸ್ಸಿನಲ್ಲಿಯೂ ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ಶ್ರೀಯುತರು ಮೊನ್ನೆ ಶಿವಮೊಗ್ಗದ ಸಾಗರದಲ್ಲಿ ಮಾತಿಗೆ ಸಿಕ್ಕರು. ನನ್ನ ಮತ್ತು ಅವರ ನಡುವೆ ಸುಮಾರು ಒಂದು ಗಂಟೆಯ ಕಾಲ ನಡೆದ ಸಂಭಾಷಣೆಯನ್ನು ಸಂದರ್ಶನದ ರೂಪದಲ್ಲಿ  ಯಥಾವತ್ತಾಗಿ ನಿರೂಪಿಸಲು ಪ್ರಯತ್ನಿಸಿದ್ದೇನೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಮುಕ್ತ ಸ್ವಾಗತ.
- ಅಜಯ್ ರಾಜ್
ಸಹಕಾರ: ಗೆಳೆಯ, ಸುಜಯ್ ಕಾಣಿಕ್ ರಾಜ್


ಪ್ರಶ್ನೆ: ಸರ್, ನಮಸ್ಕಾರ! ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತೋಷ. ನಿಮ್ಮ ಸಾಹಿತ್ಯದ ಪಯಣ ಪ್ರಾರಂಭವಾಗಿದ್ದು ಯಾವಾಗ ಎಂದು ನಮ್ಮೊಂದಿಗೆ ಹಂಚಿಕೊಳ್ಳುವಿರಾ?

ನಾ.ಡಿಸೋಜ: ನಮಸ್ಕಾರ! ನೀವು ಬಂದಿದ್ದು ಬಹಳ ಸಂತೋಷ. ಮೊದಲಿಗೆ, ನಾನು ಹುಟ್ಟಿದ್ದು ೧೯೩೭ರಲ್ಲಿ. ನನ್ನ ಸಾಹಿತ್ಯ ಕೃಷಿ ಆರಂಭವಾಗಿದ್ದು  ೧೯೫೩ರಲ್ಲಿ. ಪ್ರಾರಂಭದಲ್ಲಿ ಸಣ್ಣ ಕಥೆ, ಕವನಗಳನ್ನು ಬರೆಯುತ್ತಿದ್ದೆನಾದರೂ, ನಾನು ಪೂರ್ಣ ಪ್ರಮಾಣದ ಲೇಖಕನಾಗಿದ್ದು ಮಾತ್ರ ೧೯೫೯ರಲ್ಲಿ.

ಪ್ರಶ್ನೆ. ನಿಮ್ಮ ಮೊದಲ ಕಾದಂಬರಿ ಯಾವುದು? ಅದಕ್ಕೆ ಮೂಲ ಪ್ರೇರಣೆ ಏನು?

ನಾ.ಡಿಸೋಜ: ನನ್ನ ಮೊದಲ ಕಾದಂಬರಿ "ಬಂಜೆ ಬೆಂಕಿ." ನಾನು ಈ ಕಾದಂಬರಿ ಬರೆಯಲು ಕಾರಣ, ಸುಮಾರು ೫೦ ವರ್ಷಗಳ ಹಿಂದೆ ನಡೆದ ಒಂದು ಘಟನೆ. ನಾನು ಆಗ ಶರಾವತಿ ಡ್ಯಾಂ ಪ್ರಾಜೆಕ್ಟ್'ನಲ್ಲಿ ಸ್ಟೆನೋಗ್ರಾಫರಾಗಿ ಕೆಲಸ ಮಾಡುತ್ತಿದ್ದೆ. ಆಗ ಒಂದು ಹುಡುಗಿ, ನೋಡನೋಡುತ್ತಿದ್ದಂತೆಯೇ ಶರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು. ಆಗ ನನ್ನನ್ನು ಬಹಳವಾಗಿ ಕಾಡಿದ್ದು ಆ ಚಿಕ್ಕ ವಯಸ್ಸಿನಲ್ಲಿ ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಕಾರಣವಾದರೂ ಏನು ಅಂತ. ಮನಸ್ಸಿನಲ್ಲಿ ಎಡೆಬಿಡದೆ ಕೊರೆಯುತ್ತಿದ್ದ ಪ್ರಶ್ನೆಗಳೇ ಆ ಕಾದಂಬರಿಯ ಕಥಾವಸ್ತುವಾಗಿ ಮಾರ್ಪಟ್ಟಿತು.

ಪ್ರಶ್ನೆ: ನೀವು ಪ್ರಧಾನವಾಗಿ ಬರೆದಿದ್ದು ಕ್ರೈಸ್ತ ಧರ್ಮದ ಜನಜೀವನದ ಮೇಲೆ. ಈ ನಿಟ್ಟಿನಲ್ಲಿ ನಿಮ್ಮ ಕೃತಿಗಳನ್ನು ಪ್ರಕಟಿಸುವ ವೇಳೆ ನೀವು ಎದುರಿಸಿದ ಸವಾಲುಗಳು ಯಾವುವು? Was publishing your works a cakewalk or...?

ನಾ.ಡಿಸೋಜ: ಕೃತಿಗಳನ್ನು ಪ್ರಕಟಿಸುವುದು ಸುಲಭದ ಕೆಲಸವೇನಲ್ಲ. ಎಷ್ಟೋ ಬಾರಿ ಪ್ರಕಾಶಕರು ನನ್ನ ಕಾದಂಬರಿಗಳನ್ನು ಪ್ರಕಟಿಸುವುದಿಲ್ಲ ಎಂದು ವಾಪಸ್ ಕಳಿಸಿದ್ದಾರೆ. ಇದಕ್ಕೆ ಅವರದ್ದೇ ಆದ ಕಾರಣಗಳಿರುತ್ತವೆ. ಹಾಗಾಗಿ ಒಬ್ಬ ಪ್ರಕಾಶಕ ಅವನಿಗಾಗುವ ಲಾಭ ನಷ್ಟಗಳನ್ನು ಪರಿಗಣಿಸಿ ಮುಂದಿನ ಹೆಜ್ಜೆ ಇಡುತ್ತಾನೆ.

ಪ್ರಶ್ನೆ: ನೀವು ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಎಂಬುದು ತಿಳಿದಾಗ ಯಾವ ರೀತಿ ಪ್ರತಿಕ್ರಿಯಿಸಿದಿರಿ? 

ನಾ.ಡಿಸೋಜ: ಆ ವಿಷಯ ಕೇಳಿ ನನಗೆ ಆಶ್ಚರ್ಯವಾಯಿತು. ಆ ಸಮ್ಮೇಳನ ನಡೆದಿದ್ದು ಮಡಿಕೇರಿಯಲ್ಲಿ. ವಿಷಯ ತಿಳಿದ ನಂತರ ಸಾಕಷ್ಟು ಜನ ಮನೆಗೆ ಬಂದು ಶುಭಕೋರಿದರು. ರಾಜಕಾರಣಿಗಳೂ ಬಂದರು. ನಮ್ಮ ಮನೆಯ ಅಕ್ಕಪಕ್ಕದಲ್ಲಿ ಹಾಗು ಊರಿನಲ್ಲಿ ಸಂಭ್ರಮದ ವಾತಾವರಣ ಇತ್ತು.

ಪ್ರಶ್ನೆ: ಚರ್ಚಿನ ವಿಷಯಕ್ಕೆ ಬರೋಣ. ಭಾರತದ ಚರ್ಚು, ಅದರಲ್ಲೂ ಕರ್ನಾಟಕದ ಧರ್ಮ ಸಭೆ ಕೇವಲ ಮೇಲ್ವರ್ಗದವರ ಹಿಡಿತದಲ್ಲಿದೆ. ಈ ಬಗ್ಗೆ ನೀವೇನಂತೀರಿ?

ನಾ.ಡಿಸೋಜ: ಹೌದು. ಚರ್ಚು ಬಹುತೇಕ ಬ್ರಾಹ್ಮಣಶಾಹಿಯ ಹಿಡಿತದಲ್ಲಿದೆ. ಈ ಹಿಂದೆ ಸಾಹಿತ್ಯ ಅಕಾಡೆಮಿ ಕ್ರೈಸ್ತರ ಸ್ಥಿತಿಗತಿಗಳ ಬಗ್ಗೆ ಸಂಶೋಧನೆ ಮಾಡುತ್ತಿರುವ ಸಂಶೋಧಕರ ವಿಚಾರಗೋಷ್ಠಿಗೆ ನನ್ನನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಅಲ್ಲಿ ನಾನು ಹೇಳಿದ್ದೂ ಇದನ್ನೆ. ಕೊಂಕಣಿ ಮಾತಾಡುವವರು ಮಾತ್ರ ಕ್ರೈಸ್ತರು ಎಂಬ ತಪ್ಪು ಅಭಿಪ್ರಾಯ ಈಗಲೂ ಚಾಲ್ತಿಯಲ್ಲಿದೆ. ಈ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹೋರಾಡಬೇಕಿದೆ.

ಪ್ರಶ್ನೆ: ಕರ್ನಾಟಕದಲ್ಲಿ ಕನ್ನಡ ಬಲಿಪೂಜೆ ಕೇಳುವುದು ತಪ್ಪೇ?

ನಾ.ಡಿಸೋಜ: ಕನ್ನಡ ನೆಲದಲ್ಲಿ ಕನ್ನಡವೇ ಪ್ರಧಾನ. ಕನ್ನಡದಲ್ಲಿ ಪೂಜೆ ಕೇಳುವುದು ನಮ್ಮ ಹಕ್ಕು. ಕನ್ನಡ ಕ್ರೈಸ್ತರು ಕರ್ನಾಟಕದಲ್ಲಿ ಇತರೆ ಯಾವುದೇ ಭಾಷೆಯಲ್ಲಿ ಪೂಜೆ ನಡೆಯುತ್ತಿದ್ದರೆ, ನಮ್ಮ ಪ್ರಾರ್ಥನೆಯ ಉತ್ತರಗಳು ಮಾತ್ರ ಕನ್ನಡದಲ್ಲಿಯೇ ಇರಬೇಕು. ಈ ರೀತಿಯಲ್ಲಿ ನಾವು ಮುಂದುವರಿದರೆ ನಮ್ಮ ಗುರಿ ತಲುಪಲು ಸಾಧ್ಯ. ನನ್ನ ಪ್ರಕಾರ ಇದೇ ಈ ಸಮಸ್ಯೆಗೆ ಪರಿಹಾರ.

ಪ್ರಶ್ನೆ: ೫೦ ವರ್ಷಗಳಿಗೂ ಹೆಚ್ಚಿನ ಕಾಲ ನೀವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡಿದ್ದೀರಿ. ಅನೇಕ ಬಾರಿ ನಿಮಗೆ ಪ್ರಶಸ್ತಿಗಳು ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ ಸಹ ಲಭಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ನಾ.ಡಿಸೋಜ: ಮಕ್ಕಳ ಸಾಹಿತ್ಯಕ್ಕೆ ನನಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಪುರಸ್ಕಾರ ಲಭಿಸಿದೆ. ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳೂ ಬಂದಿದೆ. ನನ್ನ ಕಾದಂಬರಿಗಳು ಸಮಾಜದಲ್ಲಿನ ಹುಳುಕು ಹಾಗು ರೋಗಗಳಿಗೆ ಚಿಕಿತ್ಸೆಯಾಗಲಿ ಎಂಬ ಉದ್ದೇಶದಿಂದ ನಾನು ಇಷ್ಟೂ ವರ್ಷಗಳು ಬರೆದಿದ್ದು.

ಪ್ರಶ್ನೆ: ಸಾಹಿತ್ಯ ಕ್ಷೇತ್ರದಲ್ಲಿ ನಿಮಗೆ ಮರೆಯಲಾಗದಂತಹ ನೆನಪು ಯಾವುದು?

ನಾ.ಡಿಸೋಜ: ಹಲವಾರು ವರ್ಷಗಳ ಹಿಂದೆ, ಸಾಗರದಲ್ಲಿ ನಡೆದ ಸಮಾರಂಭವೊಂದಕ್ಕೆ ರಾಷ್ಟ್ರಕವಿ ಕುವೆಂಪು ಅವರು ಬಂದಿದ್ದರು. ಆಗ ನಾನು ದೂರದಲ್ಲಿ ನಿಂತಿದ್ದನ್ನು ನೋಡಿದ ಅವರು ನನ್ನನ್ನು ಹತ್ತಿರಕ್ಕೆ ಕರೆದು ಮಾತಾಡಿಸಿದರು. "ಡಿಸೋಜ, ನಿಮ್ಮ ಕಾದಂಬರಿಗಳನ್ನು ಓದಿದ್ದೇನೆ. ಅವು ನನಗೆ ಇಷ್ಟವಾಗಿವೆ. ಹೀಗೆ ಮುಂದುವರೆಸಿ," ಎಂದಿದ್ದು ಇಂದಿಗೂ ಮರೆಯಲಾಗದ ನೆನಪು. ಆಗ ನನ್ನ ಜೊತೆ ಕೆ.ಎಸ್.ನಿಸಾರ್ ಅಹಮದ್ ಸಹ ಇದ್ದರು.

ಇದೊಂದು ಅಧಿಕೃತ ಸಂದರ್ಶನವಾಗಿದ್ದರೆ ಇನ್ನಷ್ಟು ಪ್ರಶ್ನೆಗಳನ್ನು ಡಾ.ನಾ.ಡಿಸೋಜರಿಗೆ ಕೇಳ ಬ‌ಹುದಿತ್ತು. ಕಾರಣಾಂತರಗಳಿಂದ ಅದು ಆಗಲಿಲ್ಲ. ಇದ್ದ ಕೊಂಚ ಸಮಯದಲ್ಲಿ ಅವರ ಜೊತೆ ಮಾತನಾಡಿದನ್ನು ಹೆಕ್ಕಿ ಸಂದರ್ಶನದ ರೂಪದಲ್ಲಿ ಪ್ರಸ್ತುತ ಪಡಿಸಿದ್ದೇನೆ. ●●●

ನಮ್ಮೂರಲ್ಲಿ ಮೂರು ರಾಯರ ಹಬ್ಬ

ಮೂರು ರಾಯರ ಹಬ್ಬಕ್ಕೆ ತಾಯಿ ಧರ್ಮಸಭೆ ವಿಶೇಷವಾದ ಮಹತ್ವ ನೀಡುತ್ತದೆ. ಕಂದ ಯೇಸುವನ್ನು ನೋಡಿ ನಮಿಸಲು ಬಂದ ಮೂರು ಜ್ಞಾನಿಗಳು ಬಾಲಯೇಸುವಿಗೆ ಚಿನ್ನ ಧೂಪ ಹಾಗೂ ಪರಿಮಳದ್ರವ್ಯಗಳನ್ನು ಅರ್ಪಿಸುತ್ತಾರೆ. ಇದರ ಪ್ರತೀಕವಾಗಿ ಪ್ರತಿವರ್ಷ ಕ್ರಿಸ್ಮಸ್ ಹಬ್ಬದ ನಂತರ ಪ್ರಪಂಚದಾದ್ಯಂತ ಮೂರು ರಾಯರ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಇನ್ನು ನಮ್ಮ ಊರಿನಲ್ಲಿ ಆಚರಿಸುವ ಮೂರು ರಾಯರ ಹಬ್ಬ ನನ್ನ ಮಟ್ಟಿಗೆ ವಿಭಿನ್ನವೂ ವಿಶಿಷ್ಟವೂ ಆಗಿದೆ. 

ನಮ್ಮ ಊರಿನ ಮೂರು ರಾಯರ ಹಬ್ಬ ಮುಂಜಾನೆಯ ಬಲಿಪೂಜೆಯಿಂದ ಪ್ರಾರಂಭವಾಗಿ ಮಧ್ಯಾಹ್ನದ ಸಾಂಗ್ಯಗಳಲ್ಲಿ ಕೊನೆಗೊಳ್ಳುತ್ತದೆ. ಈ ಸಾಂಗ್ಯಗಳು ಕರ್ನಾಟಕದಲ್ಲಿ ಮಾತ್ರವೇ ಕಾಣಸಿಗುತ್ತವೆ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಈ ರೀತಿಯ ಸಾಂಗ್ಯಗಳನ್ನು ಕ್ರೈಸ್ತರು ಆಚರಿಸುವುದು ನಾನು ಬೇರೆಲ್ಲೂ ನೋಡಿಲ್ಲ. ಈ ಸಾ೦ಗ್ಯಗಳ ವೈಶಿಷ್ಟ್ಯ ಎಂದರೆ ಇವು ದೇಸೀ ರಂಗು ತುಂಬಿಕೊಂಡಿರುವುದು. ಉದಾಹರಣೆಗೆ, ನಮ್ಮ ಹಿಂದೂ ಬಾಂಧವರು ಸಂಕ್ರಾಂತಿ ಆಚರಿಸುವುದನ್ನು ಗಮನಿಸಿದರೆ ಅಲ್ಲಿ ಅವರು ಎತ್ತುಗಳನ್ನು ಹಾಗು ಇನ್ನಿತರ ಜಾನುವಾರುಗಳನ್ನು ಸಿಂಗರಿಸುವುದು ಕಾಣಸಿಗುತ್ತದೆ. ಹಾಗೆಯೇ, ನಮ್ಮೂರಿನಲ್ಲೂ, ಮೂರು ರಾಯರ ಹಬ್ಬದ ದಿನ ಮನೆಯಲ್ಲಿ ಸಾಕಿರುವ ಜಾನುವಾರುಗಳನ್ನು ಸಿಂಗರಿಸಿ ಚರ್ಚಿನ ಮೈದಾನಕ್ಕೆ ಮಂತ್ರಿಸಲು ಕರೆದೊಯ್ಯುತ್ತಾರೆ. ಇದಲ್ಲದೆ, ಜಾನುವಾರುಗಳ ಜೊತೆ ಜೊತೆಗೆ, ನಮ್ಮೂರಿನ ಜನ ಅವರವರ ವಾಹನಗಳನ್ನೂ ಸಹ ಮಂತ್ರಿಸಲೆಂದು ಚರ್ಚಿನ ಮೈದಾನಕ್ಕೆ ಒಯ್ಯುತ್ತಾರೆ. ಇದೊಂದು ರೀತಿ ದಸರ ಹಾಗು ಸಂಕ್ರಾಂತಿ ಹಬ್ಬದ ಜುಗಲ್ ಬಂದಿ. 

ಇಲ್ಲಿ ಗಮನಿಸಬೇಕಾದ ಮತ್ತೊಂದು ಆಚರಣೆಯೆಂದರೆ, ಗುರುಗಳು ವಾಹನಗಳನ್ನು ಹಾಗು ಜಾನುವಾರುಗಳನ್ನು ಮಂತ್ರಿಸಿ ಹೋದ ನಂತರ ಊರಿನ ಮಕ್ಕಳು, ಯುವಕರು ಸೇರಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ನನ್ನ ಬಾಲ್ಯದಲ್ಲಿ ಬಹಳಷ್ಟು ವಿಜೃಂಭಣೆಯಿಂದ ಆಚರಿಸುತ್ತಿದ್ದ ಈ ಹೋಳಿ ಹಬ್ಬ ಕ್ರಮೇಣ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಈ ಹೋಳಿ ಆಚರಣೆಯ ಹಾಸ್ಯಾತ್ಮಕ ಅಂಶವೆಂದರೆ ನಾವು ಬಾಲ್ಯದಲ್ಲಿ ಒಬ್ಬರ ಮೇಲೊಬ್ಬರು ಹೋಳಿ ಎರಚುವಾಗ ಸೇಡು ತೀರಿಸಿಕೊಳ್ಳುತ್ತಿದ್ದ ರೀತಿಯಲ್ಲಿ ಇದನ್ನು ಆಚರಿಸಲಾಗುತ್ತಿತ್ತು. 

ಇಲ್ಲಿ ಸೇಡು ತೀರಿಸಿಕೊಳ್ಳುತ್ತಿದ್ದ ರೀತಿಯೇ ವಿಭಿನ್ನವಾಗಿತ್ತು. ನಮಗೆ ಕೋಪವಿದ್ದವರ ಮೇಲೆ ನಾವು ಹೋಳಿ ನೀರಿನ ಜೊತೆ ಸಗಣಿಯೋ ಅಥವಾ ಗಂಜಲವನ್ನೋ ಕಲಸಿ, ಅವರ ಮೇಲೆ ಎರಚುತಿದ್ದೆವು. ಈ ಕೆಲಸ ನಮ್ಮ ಕೇರಿಯ ಎಲ್ಲಾ ಮಕ್ಕಳು ಮಾಡುತಿದ್ದುದು ಸರ್ವೇಸಾಮಾನ್ಯವಾಗಿತ್ತು. ಈ ಸೇಡು ತೀರಿಸಿಕೊಳ್ಳುವ ಭರದಲ್ಲಿ ನನ್ನ ಮೇಲೂ ಸಾಕಷ್ಟು ಬಾರಿ ಸಗಣಿ ನೀರು ಬಿದ್ದಿದ್ದಿದೆ. ಇದೆಲ್ಲಾ ಎಂದೂ ಮರೆಯದ ಅಚ್ಚಳಿಯದ ನೆನಪುಗಳು. 

ಮತ್ತೊಂದು ಆಚರಣೆ ಎಂದರೆ, ತಮಟೆ ಬಾರಿಸುವವರನ್ನು ಕರೆತಂದು ಊರೆಲ್ಲಾ ಸುತ್ತಿಸಿ, ಮನೆಮನೆಗೂ ತಮಟೆ ಬಾರಿಸಿಕೊಂಡು ಹೋಗಿ, ಹಿರೀಕರು ಮನೆಯಲ್ಲಿನ ಪಾತ್ರೆ ತಣಿಗೆಗಳಲ್ಲಿ ಹಾಕಿರುವ ರಾಗಿ ಗೋಧಿಯ ಮಿರಮಿರ ಮಿಂಚುವ ಹಳದಿ ಬಣ್ಣದ ಮೊಳಕೆಪೈರುಗಳನ್ನು ತೆಗೆದು ನೀರಿನಲ್ಲಿ ಬಿಡಲು ಹೇಳಿ, ತಮಟೆ ಬಾರಿಸುವವರಿಗೆ ಐದೋ ಹತ್ತೋ ಕೊಡುತ್ತಿದ್ದ ವಾಡಿಕೆ. 

ಈ ಎಲ್ಲಾ ಆಚರಣೆಗಳನ್ನು ನೋಡಿಕೊಂಡು, ಆಚರಿಸಿಕೊಂಡು ಬೆಳೆದ ನನಗೆ, ಇತ್ತೀಚಿನ ಬೆಳವಣಿಗೆಗಳು ಕಳವಳವನ್ನುಂಟು ಮಾಡುತ್ತಿವೆ. ಆಗ ಇದ್ದಷ್ಟು ಸಂಭ್ರಮ ಸಡಗರ ಕ್ರಮೇಣ ಕಡಿಮೆಯಾಗಿರುವುದು ಈಗಿನ ಆಚರಣೆಗಳನ್ನು ಗಮನಿಸಿದರೆ ಮೆಲ್ನೋಟಕ್ಕೆ ಸಾಬೀತಾಗುತ್ತದೆ. ಮು೦ದಿನ ದಿನಗಳಲ್ಲಿ ಕೇವಲ ಮೂರುರಾಯರ ಹಬ್ಬ ಮಾತ್ರ ಉಳಿದುಕೊಂಡು, ನಮ್ಮ ಸಾಂಸ್ಕೃತಿಕ ಆಚರಣೆಗಳು ನಶಿಸಿಹೋಗುವುದಂತೂ ಸತ್ಯ. ●●●
-ಅಜಯ್‌ ಫ್ರಾನ್ಸಿಸ್‌

ಈ ದೇವರ ಮಂಜೂಷ ಈಗ ಎಲ್ಲಿದೆ?

1981ರಲ್ಲಿ ಸ್ಟೀವನ್‌ ಸ್ಪೆ‌ಲ್‌ಬರ್ಗ್ ಎಂಬ ಹಾಲಿವುಡ್‌ ನಿರ್ದೇಶಕನ  'ದಿ ರೈಡರ್‌ ಆಫ್‌ ದಿ ಲಾಸ್ಟ್‌ ಆರ್ಕ್‌' ಎಂಬ ಚಿತ್ರವು ಆ ಕಾಲದ ಅತ್ಯದ್ಭುತ ಚಿತ್ರವಾಗಿ ದಾಖಲೆ ನಿರ್ಮಿಸಿತ್ತು. ಬಳಿಕ ಆ ಚಿತ್ರದ ಸೀಕ್ವೆಲ್‌ಗಳಾಗಿ 'ಇಂಡಿಯಾನ ಜೋನ್ಸ್' ಎಂಬ ಹೆಸರಿನಲ್ಲಿ ಮೂರು ಚಿತ್ರಗಳೂ ತಯಾರಾಗಿ ಸಾಕಷ್ಟು ಹಣವನ್ನು ಬಾಚಿದ್ದವು. ಆದರೆ 'ದಿ ರೈಡರ್‌ ಆಫ್‌ ದಿ ಲಾಸ್ಟ್‌ ಆರ್ಕ್‌' ಚಿತ್ರದಲ್ಲಿ ಮೋಸೆಸನು ನಿರ್ಮಿಸಿದ್ದ ದೇವರ ಮಂಜೂಷದ ಬಗ್ಗೆ ಇತಿಹಾಸಕಾರರು ಕಂಡು ಹಿಡಿಯುವ ಪ್ರಯತ್ನವನ್ನು ಚಿತ್ರೀಕರಿಸಲಾಗಿತ್ತು. ಆ ಮಂಜೂಷವನ್ನು ಪಡೆಯಲು ಪ್ರಯತ್ನಿಸಿದ  ಅನೇಕರ ಪ್ರಯತ್ನಗಳು ಸಫಲವಾಗದೇ ಅವರು ನಿರ್ನಾಮವಾದ ಬಗ್ಗೆ ಚಿತ್ರವು ಹೇಳುತ್ತದೆ. ಆದರೆ ಒಬ್ಬನಿಗೆ ಮಾತ್ರ ಅದು ದಕ್ಕುತ್ತದೆ. ಆತ ಅದನ್ನು ಅಮೆರಿಕಾ ಸರಕಾರಕ್ಕೆ ಒಪ್ಪಿಸುತ್ತಾನೆ ಎಂಬಲ್ಲಿಗೆ ಚಿತ್ರ ಮಕ್ತಾಯವಾಗುತ್ತದೆ. ಆತ, ಆ ದೇವರ ಮಂಜೂಷವನ್ನು ಈಜಿಪ್ಟ್‌ನ 'ತಾನಿಸ್‌' ಎಂಬ ಪ್ರದೇಶದಲ್ಲಿ ಕಂಡು ಹಿಡಿದ  ಎಂಬುದಾಗಿ ಆ ಚಿತ್ರದಲ್ಲಿ ದಾಖಲಿಸಲಾಗಿದೆ.

ಮೋಸೆಸನು ನಿರ್ಮಿಸಿದ ಈ ಮಂಜೂಷಕ್ಕೆ 'ದಾಖಲೆಗಳ ಮಂಜೂಷ' ಎಂದೂ ಹೇಳಲಾಗುತ್ತದೆ. ಕಾರಣ ಸಿನಾಯ್‌ ಪರ್ವತದ ಮೇಲೆ ದೇವರು ಮೋಸೆಸನಿಗಿತ್ತ 'ದಶಾಜ್ಞೆ'ಗಳ ಎರಡು ಕಲ್ಲಿನ ಫಲಕಗಳು' ಎಂಬ ದಾಖಲೆಗಳನ್ನು ಇರಿಸಲೆಂದು ಮರ ಮತ್ತು ಚಿನ್ನವನ್ನು ಉಪಯೋಗಿಸಿ ತಯಾರಿಸಿದ ಒಂದು ವಿಶೇಷ ಪೆಟ್ಟಿಗೆಯೇ ಈ ಮಂಜೂಷ. ಇದನ್ನು ಮೋಸೆಸನ ಕೋರಿಕೆಯ ಮೇರೆಗೆ ತಯಾರಿಸಿದವನು 'ಬೆಜಲೇಲ'ನೆಂಬ ಶಿಲ್ಪಶಾಸ್ತ್ರಜ್ಞ. 'ಸುಮಾರು ಎರಡೂವರೆ ಮೊಳ ಉದ್ದವೂ ಒಂದೂವರೆ ಮೊಳ ಅಗಲವೂ ಒಂದೂವರೆ ಮೊಳ ಎತ್ತರವೂ ಇರುವ ಈ ಮಂಜೂಷವನ್ನು ಜಾಲಿಮರ ದಿಂದ ತಯಾರಿಸಲಾಗಿತ್ತು.  ಅದರ ಒಳಕ್ಕೂ ಹೊರಕ್ಕೂ ಚೊಕ್ಕ ಬಂಗಾರದ ತಗಡು 1ನಲ್ಲಿದೆ.
ಗಳನ್ನು ಹೊದಿಸಲಾಗಿತ್ತು. ಅದರ ಹೊರಭಾಗದ ಸುತ್ತಲೂ ಚಿನ್ನದ ತೋರಣ ಕಟ್ಟಿಸಿ ನಾಲ್ಕು ಬಂಗಾರದ ಬಳೆಗಳನ್ನು ಎರಕ ಹೋಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಒಂದೊಂದರಂತೆ ಇರಿಸಲಾ ಗಿತ್ತು. ಜಾಲಿ ಮರದ ಗದ್ದುಗೆಗಳನ್ನು ಮಾಡಿಸಿ ಅದಕ್ಕೆ ಚಿನ್ನದ ತಗಡುಗಳನ್ನು ಹೊದಿಸಿ ಮಂಜೂಷದ ಎರಡೂ ಕಡೆಗಳಲ್ಲಿರುವ ಬಳೆಗಳಲ್ಲಿ ಮಂಜೂಷವನ್ನು ಹೊರುವುದಕ್ಕಾಗಿ ಅವುಗಳನ್ನು ಸೇರಿಸಲಾಗಿತ್ತು. ಅದಲ್ಲದೆ ಎರಡೂವರೆ ಮೊಳ ಉದ್ದವೂ ಒಂದೂವರೆ ಮೊಳ ಅಗಲವೂ ಇದ್ದ ಚೊಕ್ಕ ಬಂಗಾರದ ಕೃಪಾಸನವನ್ನು ಮಾಡಿ ಮಂಜೂಷದ ಮೇಲುಭಾಗದಲ್ಲಿ ಇರಿಸಲಾಗಿತ್ತು. ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬದ ಎರಡು ಬಂಗಾರದ ಆಕೃತಿಗಳನ್ನು ನಕಾಸಿ ಕೆಲಸದಿಂದ ಮಾಡಿಸಿ ಕೂರಿಸಲಾಗಿತ್ತು. ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತಹ ಭಂಗಿಯಲ್ಲಿರುವ ಆ ಎರಡು ಕೆರೂಬಗಳ ಮುಖಗಳು ಒಂದಕ್ಕೊಂದು ಎದುರಾಗಿ ಕೃಪಾಸನವನ್ನು ವೀಕ್ಷಿಸುತ್ತಿರುವಂತೆ ಇರಿಸಲಾಯಿತು', ಎಂಬ ಸಂಗತಿ ಬೈಬಲ್‌‌

ಈ ಮಂಜೂಷವನ್ನು ಡೇರೆಯಲ್ಲಿರಿಸಿ ಅದಕ್ಕೆ ವಿಶೇಷ ಧೂಪಾರಾಧನೆಗಳನ್ನು ಅರ್ಪಿಸಲಾಗುತ್ತಿತ್ತು. ಅದಕ್ಕೆಂದೇ ಲೇವಿಯರ ಪಂಗಡವನ್ನು ಆರಿಸಿ ಅವರಿಗೆ ಅದರ ಉಸ್ತುವಾರಿಯನ್ನು ನೀಡಲಾಗಿತ್ತು. ಈ ಮಂಜೂಷವನ್ನು ಲೇವಿಯರು ಮಾತ್ರವೇ ಹೊತ್ತು ತಿರುಗಬಹುದಾಗಿತ್ತು. ಅದರ ಸನಿಹ ಇತರರಾರೂ ಸುಳಿಯುವಂತಿರಲಿಲ್ಲ. ಅದನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಲೇವಿಯರು ಕೊಂಡೊಯ್ಯುವ ಸಂದರ್ಭದಲ್ಲಿ ಅದನ್ನು ಹಿಂಬಾಲಿಸುವವರು ಕನಿಷ್ಟ ಒಂದು ಕಿಲೋಮೀಟರ್‌ ದೂರದಿಂದ ಹಿಂಬಾಲಿಸಬೇಕಾಗಿತ್ತು.

ಯೆಹೋಶುವನ ನೇತೃತ್ವದಲ್ಲಿ ಇಸ್ರಾಯೇಲರು ಜೋರ್ಡನ್ ನದಿಯನ್ನು ದಾಟುವಾಗ ಮಂಜೂಷವನ್ನು ಹೊತ್ತ ಲೇವಿಯರು ನದಿಯ ನೀರಿಗೆ ಕಾಲಿಡುತ್ತಲೇ  ಹರಿಯುತ್ತಿದ್ದ ನದಿ ಇಬ್ಭಾಗವಾಗಿ ನಿಂತುಹೋಗುತ್ತದೆ. ಇಸ್ರಾಯೇಲರು ನದಿಯನ್ನು ದಾಟುತ್ತಲೇ ಅದು ಮೊದಲಿನಂತೆ ಹರಿಯತೊಡಗುತ್ತದೆ2.

ಜೆರಿಕೊ ಯುದ್ಧದ ಸಂದರ್ಭದಲ್ಲಿ ಇಸ್ರಾಯೇಲರು ಮಂಜೂಷವನ್ನು ಹೊತ್ತುಕೊಂಡು ಏಳು ದಿನಗಳ ಕಾಲ ನಗರವನ್ನು ಸುತ್ತು ಹಾಕುತ್ತಾರೆ. ಏಳನೆಯ ದಿನದ ಪ್ರದಕ್ಷಣೆಯ ವೇಳೆ ಇಸ್ರಾಯೇಲರು ಆರ್ಭಟಿಸಿದಾಗ ನಗರವನ್ನು ಸುತ್ತುವರಿದಿದ್ದ ಗೋಡೆ ತಾನೇ ತಾನಾಗಿ ಬಿದ್ದು ಹೋಗುತ್ತದೆ3.

ಇಂತಹ ವಿಶಿಷ್ಟ ಮಂಜೂಷವು ಒಮ್ಮೆ ಪರಕೀಯರ ಕೈಗೂ ಹೋಗುವ ಪ್ರಸಂಗ ಒದಗುತ್ತದೆ.  ಇಸ್ರಾಯೇಲರನ್ನು ಫಿಲಿಷ್ಟಿಯರು ಸೋಲಿಸಿ ಮಂಜೂಷವನ್ನು ತಮ್ಮ ಕೈವಶಮಾಡಿಕೊಳ್ಳುತ್ತಾರೆ. ಇಸ್ರಾಯೇಲರಿಂದ ವಶಪಡಿಸಿಕೊಂಡ ಮಂಜೂಷವನ್ನು ಅವರು 'ಅಷ್ಟೋದ್‌'  ಎಂಬಲ್ಲಿರುವ 'ದಾಗೋನ್‌' ಎಂಬ ಮೀನಿನ ದೇವರ ಗುಡಿಯಲ್ಲಿರಿಸುತ್ತಾರೆ. ಅಲ್ಲೊಂದು ಅದ್ಭುತವು ಸಂಭವಿಸುತ್ತದೆ. ಫಿಲಿಷ್ಠೀಯರು ಮರುದಿನ ಬೆಳಗೆದ್ದು ನೋಡುವಾಗ ದಾಗೋನ್‌ ವಿಗ್ರಹವು ಸರ್ವೇಶ್ವರನ ಮಂಜೂಷದ ಮುಂದೆ ಬೋರಲು ಬಿದ್ದಿರುವುದನ್ನು ಕಾಣುತ್ತಾರೆ. ಅವರು ದಾಗೋನ್‌ ವಿಗ್ರಹವನ್ನು ಮೊದಲಿನಂತೆ ಎತ್ತಿ ನಿಲ್ಲಿಸಿ ಹೋಗುತ್ತಾರೆ. ಅದರ ಮರುದಿನ ಬಂದು ನೋಡುವಾಗ ದಾಗೋನ್‌ ವಿಗ್ರಹದ ಅಂಗಾಂಗಗಳು ಛಿದ್ರವಾಗಿ ಬಿದ್ದಿದ್ದು ವಿಗ್ರಹದ ತಲೆಯು ಮಂಜೂಷದ ಬಳಿ ಬಿದ್ದಿರುವುದನ್ನು ಕಾಣುತ್ತಾರೆ. ಆ ಘಟನೆಗಳಿಂದ ಹೆದರಿದ ದಾಗೋನನ ಯಾಜಕರು ಹೆದರಿ ಆ ಬಳಿಕ ಗುಡಿಯ ಹೊಸ್ತಿಲನ್ನು ತುಳಿಯುವುದನ್ನೇ ನಿಲ್ಲಿಸಿಬಿಡುತ್ತಾರೆ. ಮಂಜೂಷವು ದಾಗೋನಿಗೆ ಮಾರಕವಾದಾಗ ಫಿಲಿಷ್ಟೀಯರು ಅದನ್ನು 'ಗತ್‌' ಎಂಬ ಊರಿಗೆ ಸಾಗಿಸುತ್ತಾರೆ. ಅಲ್ಲಿಯೂ ಅದು ಆ ಊರಿನ ಜನರಿಗೆ ಬಾಧಕವಾಗುತ್ತದೆ. ಜನರು ಪ್ಲೇಗಿನಿಂದ ನರಳುತ್ತಾರೆ. ಬಳಿಕ ಅದನ್ನು 'ಎಕ್ರೋನ್‌' ಎಂಬ ಊರಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿಯೂ ಪ್ಲೇಗ್‌ ರೋಗ ತಾಂಡವನೃತ್ಯವಾಡುತ್ತದೆ. ಅದನ್ನು ಕಂಡ ಆ ಊರಿನ ಜನರು ಕಂಗಾಲಾಗುತ್ತಾರೆ. "ನಮ್ಮನ್ನೂ ನಮ್ಮ ಬಂಧುಗಳನ್ನು ಕೊಲ್ಲುವುದಕ್ಕಾಗಿಯೇ ಇಸ್ರಾಯೇಲ್‌ ದೇವರ ಮಂಜೂಷವನ್ನು ಇಲ್ಲಿಗೆ ಕಳುಹಿಸಿಕೊಡಲಾಗಿದೆ' ಎಂದವರು ಕೂಗಾಡುತ್ತಾರೆ. ಬೇರೆ ದಾರಿ ಕಾಣದೇ ಅದನ್ನು ಇಸ್ರಯೇಲರಿಗೆ  ಮರಳಿಸಲು ಫಿಲಿಷ್ಠಿಯರು ನಿರ್ಧರಿಸುತ್ತಾರೆ. ಎತ್ತಿನ ಬಂಡಿಯಲ್ಲಿ ಅದನ್ನು ಸಾಗಹಾಕುತ್ತಾರೆ. ಮಂಜೂಷವನ್ನು ಹೊತ್ತು ತಂದ ಬಂಡಿಯ ಎತ್ತುಗಳು ಅತ್ತಿತ್ತ ನೋಡದೇ ನೇರವಾಗಿ ಬೆತ್‌ಷೆಮೆಷಿನ ಬಳಿಯಿದ್ದ ಯೆಹೋಶುವನ ಹೊಲದ ಬಳಿ ಬಂದು ನಿಲ್ಲುತ್ತದೆ. ಅಲ್ಲಿಯೂ ದುರ್ಘಟನೆಗಳು ನಿಲ್ಲುವುದಿಲ್ಲ. ಮಂಜೂಷವನ್ನು ತೆರೆದು ನೋಡಿದ ಆ ಊರಿನ ಎಪ್ಪತ್ತು ಮಂದಿ ಸಾವಿಗೀಡಾಗುತ್ತಾರೆ.

ಬಳಿಕ ಅದನ್ನು 'ಕಿರ್ಯತ್ಯಾರೀಮ್‌' ಎಂಬ ಊರಿನ ಗುಡ್ಡದ ಮೇಲೆ ವಾಸವಿದ್ದ ಅಬೀನಾದಾಬ್‌ ಎಂಬಾತನ ಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅವನ ಮಗ ಎಲ್ಲಾಜಾರನನ್ನು ಅದರ ಸೇವೆಗಾಗಿ ನಿಯೋಜಿಸಲಾ ಗುತ್ತದೆ4.

ಮುಂದೆ ದಾವೀದನ ಆಳ್ವಿಕೆಯ ಕಾಲದಲ್ಲಿ ದೇವರ ಮಂಜೂಷವನ್ನು ದಾವೀದನಗರ(ಜೆರು ಸಲೇಂ)ಕ್ಕೆ ತರುವ ಪ್ರಯತ್ನ ಗಳಾಗುತ್ತವೆ, ಆದರೆ ಎತ್ತಿನ ಬಂಡಿಯಲ್ಲಿ ತರುವ ಪ್ರಯತ್ನ ದಲ್ಲಿ ಆಗುವ ಅನಾಹುತ ದಿಂದಾಗಿ ಆ ಪ್ರಯತ್ನ ಅಸಫಲ ವಾಗುತ್ತದೆ. ಹಾಗಾಗಿ ಅದನ್ನು ಪುನಃ 'ಗತ್‌' ಎಂಬ ಊರಿನ 'ಒಬೇದೆದೋಮ'ನ ಮನೆಯ ಲ್ಲಿ ಉಳಿಸಿಕೊಳ್ಳಲಾಗುತ್ತಾ ದರೂ ಆಗ ಯಾರಿಗೂ ಯಾವ ಹಾನಿಯೂ ಸಂಭವಿಸುವುದಿಲ್ಲ; ಈ ಹಿಂದೆ ಫಿಲಿಷ್ಟೀಯರು ಅದನ್ನು ಅದೇ ಊರಿಗೆ ಸಾಗಿಸಿದ್ದಾಗ ಊರಿನವರು ಪ್ಲೇಗ್‌ ರೋಗದಿಂದ ತತ್ತರಿಸಿದ್ದರು. ಮೂರು ತಿಂಗಳ ಬಳಿಕ ಮಂಜೂಷವನ್ನು ಅಲ್ಲಿಂದ ಬಹುಸಡಗರದಿಂದಲೇ ದಾವೀದನಗರಕ್ಕೆ ತರುವಲ್ಲಿ ಯಶಸ್ವಿಯಾಗುತ್ತಾರೆ5. ದಾವೀದನು ಆ ಮಂಜೂಷವನ್ನಿರಿಸಲು ದೇಗುಲ ನಿರ್ಮಾಣದ ನಿರ್ಧಾರ ಕೈಗೊಳ್ಳುತ್ತಾನಾದರೂ ಸರ್ವೇಶ್ವರನ ಆಜ್ಞೆಯ ಮೇರೆಗೆ ಆ ಪ್ರಯತ್ನವನ್ನು ಕೈಬಿಡುತ್ತಾನೆ6. ಅವನ ಮಗ ಸೊಲೊಮೋನನು ದೇಗುಲವನ್ನು ಕಟ್ಟಿಸಿದ ಬಳಿಕ ಆ ಮಂಜೂಷವನ್ನು ನೂತನ ದೇಗುಲದಲ್ಲಿ ಇರಿಸಲಾಗುತ್ತದೆ ಮತ್ತು ಜದೋಕನನ್ನು ಆ ದೇಗುಲದ ಪ್ರಧಾನ ಯಾಜಕನನ್ನಾಗಿ ನೇಮಿಸುತ್ತಾನೆ ಎಂಬಲ್ಲಿಯವರೆಗೆ ಮಂಜೂಷದ ಬಗ್ಗೆ ತಿಳಿದು ಬರುತ್ತದೆ. ಆದರೆ ದೇಗುಲವು ನಿರ್ನಾಮ ಹೊಂದಿದ ಸಂದರ್ಭದಲ್ಲಿ ಮಂಜೂಷ  ಅಲ್ಲಿರಲಿಲ್ಲವೆಂದು ಹೇಳಲಾಗುತ್ತಿದೆ. ಪ್ರಸ್ತುತ ಅದು ಎಲ್ಲಿದೆಯೆಂಬ ಬಗ್ಗೆ ಅನೇಕ ಊಹಾಪೋಹಗಳಿವೆಯಾದರೂ ನಿರ್ದಿಷ್ಟವಾಗಿ ಅದರ ಬಗ್ಗೆ ಯಾವ ಸುಳಿವೂ ದೊರೆತಿಲ್ಲ.●●●

-ಕೆ.ಜೆ.ಜಾರ್ಜ್‌, ಬಿಳಿಕೆರೆ   

ಉಲ್ಲೇಖ: 
1.ವಿಮೋಚನಾ 37:1-9, 
2. ಯೆಹೋ. 3:1-17, 
3. ಯೆಹೋ.6:20, 
4. ಯೆಹೋ.5 ಮತ್ತು 6, 
5. 2ಸಮ; 6:1-11; 1ಪೂರ್ವ.13:1-13, 
6. 2ಸಮು.7:1-17, 1ಪೂರ್ವ.17:1-15; 28:2,3      

ನೀವೂ ನೋಡಿ, ಆ ಮನೋಜ್ಞ ಚಲನಚಿತ್ರ: 'ಆಫ್‌ ಗಾಡ್ಸ್‌ ಅಂಡ್‌ ಮೆನ್‌'

2010 ರಲ್ಲಿ ಬಿಡುಗಡೆಗೊಂಡ  ಫ್ರೆಂಚ್ ಚಿತ್ರ ಆಫ್ ಗಾಡ್ಸ್ ಅಂಡ್ ಮೆನ್. ವಿಶ್ವ ವಿಖ್ಯಾತ ಕೇನ್ಸ್ ಚಿತ್ರೋತ್ಸವದಲಿ ಮೊದಲು ಪ್ರದರ್ಶಿತಗೊಂಡ ಈ ಚಿತ್ರವು ಮೆಚ್ಚುಗೆಯನ್ನು, ಅನೇಕ ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಅಲ್ಲದೆ ಆ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ  ಚಿತ್ರವು ವಿಫಲವಾಗಿದೆ ಎಂಬ ಟೀಕೆಯನ್ನು ಸಹಾ ಎದುರಿಸಿದೆ.

ಆಲ್ಜೀರಿಯಾದಲ್ಲಿ ನಡೆದ ಸತ್ಯ ಘಟನೆಯೊಂದನ್ನು ಆಧಾರ ವಾಗಿಟ್ಟುಕೊಂಡು ಈ ಚಿತ್ರವು ನಿರ್ಮಾಣಗೊಂಡಿತು. ಜೇವಿಯರ್ ಬಿಯೋವಿಯೋ ಈ ಚಿತ್ರದ ನಿರ್ದೇಶಕ. ಚಿತ್ರಕಥೆಯಲ್ಲಿ ನಿರ್ಮಾಪಕ ಕೋಮರ್ ಜೊತೆ ನಿರ್ದೇಶಕ ಸಹ ಕೈ ಜೋಡಿಸಿದ್ದಾನೆ.

ಮೊದಲೇ ಹೇಳಿದಂತೆ ಇದೊಂದು ಸತ್ಯ ಘಟನೆಯ ಸ್ಪರ್ತಿಯಿಂದ ನಿರ್ಮಾಣಗೊಂಡ ಚಿತ್ರ. 1996ರಲ್ಲಿ ಏಳು ಜನ ಫ್ರೆಂಚ್ ಗುರುಗಳು, ಆಲ್ಜೀರಿಯಾ ದ ಟಿಬಿಯಿನ್ ಎಂಬ ಹಳ್ಳಿಯಲ್ಲಿನ ಮಠದಿಂದ ಅಪಹರಣಕ್ಕೆ ಒಳಗಾಗುತ್ತಾರೆ. ನಂತರ ಅವರುಗಳ ಶಿರಚ್ಛೇದನಗೊಂಡ ದೇಹಗಳು ಸಿಗದೇ  ಕೇವಲ ತಲೆಗಳು ಸಿಗುತ್ತವೆ. ಆಲ್ಜೀರಿಯದ ಮೂಲಭೂತವಾದಿ ಭಯೋತ್ಪಾದಕರು ಈ ಕೊಲೆಗಳನ್ನು ತಾವು ಮಾಡಿದ್ದೇವೆಂದು ಕೊಚ್ಚಿಕೊಳ್ಳುತ್ತಾರೆ.

ಆದರೆ ನಂತರದ ವರ್ಷಗಳ ತನಿಖೆ ಮತ್ತು ವರದಿಗಳ ಪ್ರಕಾರ ಅಲ್ಜೀರಿಯಾದ ಸೈನ್ಯದಿಂದಲೇ ಬಿಡುಗಡೆ ಕಾರ್ಯಾಚರಣೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಈ ಗುರುಗಳು ಸಾವನ್ನಪ್ಪುತ್ತಾರೆ. ಈ ಒಂದು ಅಪವಾದದಿಂದ ತಪ್ಪಿಸಿಕೊಳ್ಳಲು ಸೈನ್ಯವೇ ಅವರ ಶಿರಚ್ಛೇದನ ಮಾಡಿ ಭಯೋತ್ಪಾದಕರ ಕಾರ್ಯವೆಂದು ಆರೋಪಿಸುತ್ತಾರೆ ಎಂಬುದಾಗಿ ವರದಿಗಳಿವೆ. ಯಾವುದು ನಿಜ ಎಂಬುದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಇದು ನಡೆದ ಘಟನೆಯಾದರೆ, ಇಷ್ಟನ್ನು ಬಳಸಿಕೊಂಡ ಚಿತ್ರವೇ ಆಫ್ ಗಾಡ್ಸ್ ಅಂಡ್ ಮೆನ್. ಈ ಚಿತ್ರವು ಬಹಳ ಮನೋಜ್ಞವಾಗಿ ಹೃದಯಂಗಮವಾಗಿ ಮೂಡಿ ಬಂದಿದೆ. ಅಲ್ಜೀರಿಯಾದ ಬಡ ಸ್ಥಳವೊಂದರಲ್ಲಿ ಏಳು ಜನ ಗುರುಗಳು ತಮ್ಮ ಸೇವಾ ವೃತ್ತಿಯನ್ನು ಮಾಡುತ್ತಿರುತ್ತಾರೆ. ಶಾಂತಿಯುತ ಹಾಗೂ ಪ್ರಾರ್ಥನಾಮಯ ಜೀವನ ಅವರದು. ಜೊತೆಗೆ ಸುತ್ತಮುತ್ತಲಿನ ಜನರೊಂದಿಗೆ ಬೆರೆಯುತ್ತಾ  ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಗುರುಗಳು ವೈದ್ಯಕೀಯ ಸೇವೆಯನ್ನು ಸಹ ನೀಡುತ್ತಿರುತ್ತಾರೆ.

ಆರ್ಥಿಕವಾಗಿ ಬಡತನದಲ್ಲಿದ್ದರೂ ತಮ್ಮ ಮಠದ ಒಳಗೆ ತಮಗೆ ಬೇಕಾದ ತರಕಾರಿಗಳನ್ನು ಬೆಳೆಸಿಕೊಳ್ಳುತ್ತಾ ತಮ್ಮದೇ ತ್ಯಾಗಮಯ ಜೀವನವನ್ನು ನಡೆಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ದೇಶದಲ್ಲಿ ರಾಜಕೀಯ ಅರಾಜಕತೆ ಉಂಟಾಗುತ್ತದೆ. ಅದರೊಂದಿಗೆ ಧಾರ್ಮಿಕ ಅಸಹನೆ, ಅಸಹಿಷ್ಣುತೆಯೂ ಪ್ರಾರಂಭವಾಗುತ್ತದೆ. ರಾಜಕೀಯ ಹಾಗೂ ಧಾರ್ಮಿಕ ಕಾರಣಗಳಿಂದ ಕೊಲೆ, ಅಪಹರಣಗಳು ಸಾಮಾನ್ಯವೆಂಬಂತೆ ನಡೆಯುತ್ತಿರುತ್ತವೆ. 

ಇದೇ ಸಮಯದಲ್ಲಿ ಮಠದ ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸಾಮೂಹಿಕ ಮಾರಣಹೋಮ ನಡೆಯುತ್ತದೆ. ಜನರು ಭಯಭೀತರಾಗುತ್ತಾರೆ. ಗುರುಗಳು ಸಹಾ ವಿಚಿಲಿತರಾದರೂ, ತಮ್ಮ ಸೇವಾ ಬದುಕಿಗೆ ಬದ್ಧರಾಗಿ ಉಳಿಯುತ್ತಾರೆ. ಇತ್ತ ಇವೆಲ್ಲವನ್ನೂ  ಕಂಡ ಸರ್ಕಾರವು ತನ್ನ ಅಧಿಕಾರಿಯೊಬ್ಬನನ್ನು ಗುರುಗಳ ಬಳಿ ಕಳುಹಿಸಿ ಮಾತನಾಡುತ್ತದೆ. ಆ ಅಧಿಕಾರಿಯು ಗುರುಗಳು ಇನ್ನು ಈ ದೇಶದಲ್ಲಿ ವಾಸಿಸುವುದು ಅಪಾಯಕಾರಿ ಎಂದು ತಿಳಿಸುತ್ತಾ ಅವರು ದೇಶವನ್ನು ಬಿಟ್ಟು ತಮ್ಮ ಸ್ವಂತ ದೇಶವಾದ ಫ್ರಾನ್ಸಿಗೆ ಮರುಳಬೇಕೆಂದು ಸಲಹೆ  ನೀಡುತ್ತಾನೆ. ಅಲ್ಲದೆ ಅವರಿರುವ ತನಕ ಮಠಕ್ಕೆ ಸರ್ಕಾರದಿಂದ ಸೈನ್ಯಾ ಭದ್ರತೆಯನ್ನು ಕೊಡುವ ಭರವಸೆ ನೀಡುತ್ತಾನೆ. 

ಆದರೆ ಗುರುಗಳು ಇದನ್ನು ಒಪ್ಪದೇ ಕಷ್ಟದಲ್ಲಿ ಇರುವ ಜನರನ್ನು ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ. ಅಲ್ಲದೆ ಮಠದಲ್ಲಿ ಸೈನ್ಯವಿರುವುದು ಬೇಡವೆಂದು ಹೇಳುತ್ತಾರೆ. ಇದರ ಬಗ್ಗೆ ಅಲ್ಲಿನ ಜನರೊಂದಿಗೆ ಮಾತನಾಡಿದಾಗ ಜನರು ಕೂಡ ಗುರುಗಳು ಊರನ್ನು ತೊರೆದರೆ ತಮಗೆ ಉಳಿಗಾಲವಿಲ್ಲ ಎಂದು ಹೇಳುತ್ತಾರೆ.

ಈ ಸಮಯದಲ್ಲಿ ಗುರುಗಳು ತಾವು ಏನು ಮಾಡಬೇಕೆಂಬ ಕಠಿಣವಾದ ನಿರ್ಧಾರ ತೆಗೆದುಕೊಳ್ಳುವ ಸಮಯ ಬರುತ್ತದೆ. ಆ ನಿರ್ಣಯ ಸುಲಭವಾದದ್ದಲ್ಲ. ಗುರುಗಳ ನಡುವೆಯೇ ವಾಗ್ವಾದಗಳು ನಡೆಯುತ್ತವೆ.  ತಮ್ಮ ಜೀವನಗಳು ಕೊಲೆಗಡುಕರ ಕೈಗೆ ಏಕೆ ಸುಲಭದ ತುತ್ತಾಗಬೇಕು ಎಂಬ ವಾದಗಳು ಅವರಲ್ಲೇ ನಡೆಯುತ್ತದೆ. 

ಮಠದ ಮೇಲ್ವಿಚಾರಕ ಗುರುಗಳಾದ ಕ್ರಿಸ್ಟಿಯನ್ ತಮ್ಮದೇ ಆದ ವಾದವನ್ನು ಮುಂದಿಡುತ್ತಾರೆ ಅದರ ಪ್ರಕಾರ ತಾವು ಮಠದಲ್ಲಿಯೇ ಉಳಿದು ಜನರ ಸೇವೆ ಮಾಡುವುದಾಗಿ ತಿಳಿಸುತ್ತಾರೆ.  ಅಂತೆಯೇ ಮಠದ ರಕ್ಷಣೆಗಾಗಿ ಸೈನಿಕರನ್ನು ಕಳುಹಿಸುವ ಪ್ರಸ್ತಾವವನ್ನು ಸಹ ತಿರಸ್ಕರಿಸುವ ನಿರ್ಣಯ ಮಾಡುತ್ತಾರೆ. ಕೊನೆಗೆ ಎಲ್ಲಾ ಗುರುಗಳು ಈ ನಿರ್ಣಯಕ್ಕೆ ಅನುಮೋದನೆ, ಸಹಮತವನ್ನು ನೀಡಿ ತಾವು ಸಹ ಗುರು ಮಠದಲ್ಲಿ ಉಳಿಯುವ ನಿರ್ಧಾರಕ್ಕೆ ಬರುತ್ತಾರೆ. 

ಮುಂದೆ ಅವರು ನಿರೀಕ್ಷಿಸುತ್ತಿದ್ದ ಆ ಸಮಯ ಬರುತ್ತದೆ. ಕ್ರಿಸ್ತ ಜಯಂತಿಯ ಹಿಂದಿನ ದಿನ ಮೂಲಭೂತವಾದಿಗಳ ಭಯೋತ್ಪಾದಕ ತಂಡವು ಮಠಕ್ಕೆ ಬರುತ್ತದೆ. ಗಾಯಗೊಂಡ ತಮ್ಮ ಸದಸ್ಯನೊಬ್ಬನನ್ನು ಮಠದ ವೈದ್ಯ ಗುರುಗಳು ಬಂದು ಉಪಚರಿಸಬೇಕೆಂದು ಆಜ್ಞೆ ನೀಡುತ್ತಾರೆ ಗುರು ಕ್ರಿಶ್ಚಿಯನ್ ಆ ಆಜ್ಞೆಯನ್ನು  ತಿರಸ್ಕರಿಸುತ್ತಾರೆ. ತಮ್ಮಲ್ಲಿ ವೈದ್ಯಕೀಯ ನೆರವು ನೀಡುವಷ್ಟು ಸಾಮಗ್ರಿ ಇಲ್ಲವೆಂದು ಹಾಗೂ ವೈದ್ಯ ಗುರುಗಳು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅವರು ಬರಲಾಗುವುದಿಲ್ಲ ಎಂದು ತಿಳಿಸುತ್ತಾರೆ. ಆಶ್ಚರ್ಯವೆಂಬಂತೆ ತಂಡದ ನಾಯಕ ಇದನ್ನು ಒಪ್ಪಿಕೊಳ್ಳುತ್ತಾನೆ. ಅಷ್ಟು ಮಾತ್ರವಲ್ಲದೆ ತಾನು ಸರ್ಕಾರದಿಂದ ಹತನಾಗುವ ತನಕ ಆ ಮಠಕ್ಕೆ ರಕ್ಷಣೆಯನ್ನೂ ನೀಡುತ್ತಾನೆ.

ಮುಂದಿನ ದಿನಗಳಲ್ಲಿ ಗುರುಗಳನ್ನು ಭಯೋತ್ಪಾದಕರು ಅಪಹರಿಸುತ್ತಾರೆ. ಸಾವಿನತ್ತ ಅವರ ಭಾರವಾದ ನಡಿಗೆಯಿಂದ ಚಿತ್ರ ಕೊನೆಗೊಳ್ಳುತ್ತದೆ.

ಚಿತ್ರದಲ್ಲಿ ಅನೇಕ ದೃಶ್ಯಗಳು ಮನಕಲಕುವಂತಿದೆ. ಹೊರಗಡೆ ನಡೆಯುವ ರಾಜಕೀಯ ಧಾರ್ಮಿಕ ಕೋಲಾಹಲದ ನಡುವೆ ಮಠದ ಒಳಗಿನ ಮಾನಸಿಕ ತಳಮಳವನ್ನು ಸುಂದರವಾಗಿ ಚಿತ್ರಿಸಿಲಾಗಿದೆ. ಸಾವು ಖಚಿತ ಎಂದು ತಿಳಿದ ಮೇಲೆ ಗುರುಗಳ ಮನಸ್ಸಿನಾಳದಲ್ಲಿ ನಡೆಯುವ ದ್ವಂದ್ವ ಯುದ್ಧವನ್ನು ನಿರ್ದೇಶಕ ಯಾವುದೇ ನಿಲುವು ತಾಳದೇ ಭಾವಗಳ ಸಂಘರ್ಷದ ಮೊರೆ ಹೋಗುತ್ತಾನೆ. ಅವರು ಗುರುಗಳಾಗಿದ್ದರೂ, ಆಳದಲ್ಲಿ ಅವರೂ ಸಾಮಾನ್ಯ ಮನುಷ್ಯರಂತೆಯೇ ಜೀವನದ ಬಗ್ಗೆ ಆಸೆ ಇಟ್ಟುಕೊಂಡವರೇ ಆಗಿರುತ್ತಾರೆ. ಆದರೆ ಅದೆಲ್ಲವನ್ನೂ ಮೀರಿದ ಅವರ ಬದ್ಧತೆಯನ್ನು ನಿರ್ದೇಶಕ ಚಿತ್ರಿಸಿದ್ದಾನೆ.

ಮಠಕ್ಕೆ ಬರುವ ಅತಿಥಿಗಳನ್ನು ಸತ್ಕರಿಸುವ ಭೋಜನದ ದೃಶ್ಯದಲ್ಲಿ ಎಲ್ಲರೂ ಸೇರಿ ನಲಿಯುತ್ತಲ್ಲೇ ಮುಂದೆ ತಮಗೆ ಬರಬಹುದಾದ ಸಾವು ಹಾಗೂ ಅದರೊಂದಿಗಿನ ತಮ್ಮ ಅಗಲಿಕೆ ನೆನೆದು ದು:ಖಿಸುವ ದೃಶ್ಯ ಕಣ್ಣೀರು ತರಿಸುತ್ತದೆ.


ಅಂತೆಯೇ ಯುವತಿಯೊಬ್ಬಳು ಹಿರಿಯ ಗುರುಗಳನ್ನು ಪ್ರೀತಿ ಪ್ರೇಮದ ಬಗ್ಗೆ ಕೇಳುತ್ತಾ, “ನೀವು ಎಂದಾದರೂ ಪ್ರೇಮದಲ್ಲಿ ಸಿಲುಕಿದ್ದೀರ” ಎಂದು ಕೇಳುತ್ತಾಳೆ. ಅದಕ್ಕೆ ಉತ್ತರವಾಗಿ ಗುರುಗಳು” ಹೌದು  ಅನೇಕ ಬಾರಿ ಎಂದು ಉತ್ತರಿಸುತ್ತಾ,  ನಂತರ ಅದಕ್ಕಿಂತಲೂ ದೊಡ್ಡದಾದ ಪ್ರೇಮದಲ್ಲಿ ಕಳೆದ 60 ವರ್ಷಗಳಿಂದ ಇದ್ದೇನೆ ಎಂದು ತಮ್ಮ ಗುರು ಜೀವನದ ಬಗ್ಗೆ ಹೇಳುತ್ತಾರೆ. ಈ ರೀತಿಯ ಅನೇಕ ದೃಶ್ಯ ಹಾಗೂ ಅವುಗಳ ಒಟ್ಟು ಪರಿಣಾಮದಿಂದಾಗಿ ಇದು ನಾವು ನೋಡಲೇ ಬೇಕಾದ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆ.●●●
-ಪ್ರಶಾಂತ್‌ ಇಗ್ನೇಶಿಯಸ್‌

ಬೈಬಲ್‌ ದನಿ: ಸಂತ ಯೊವಾನ್ನರ ಶುಭಸಂದೇಶ-೫


ಕಳೆದ ಸಂಚಿಕೆಯಲ್ಲಿ ಬರೆದಂತಹ ಶುಭಸಂದೇಶದ ಚಿಂತನೆಯಲ್ಲಿ ಸಾಂಕೇತಿಕ ಶುಭಸಂದೇಶವೆಂದು ಬರೆಯಲಾಗಿತ್ತು. ಸಂತ ಯೊವಾನ್ನರ ಶುಭಸಂದೇಶವನ್ನು ಏಕೆ ಹೀಗೆ ಕರೆಯುತ್ತಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೆ ಇಲ್ಲಿ ಉತ್ತರಿಸುತ್ತಿದ್ದೇನೆ.

ಸಂತ ಯೊವಾನ್ನರ ಶುಭಸಂದೇಶದಲ್ಲಿ ಎಲ್ಲವನ್ನೂ ಸಾಂಕೇತಿಕವಾಗಿ ಬಿಂಬಿಸಲಾಗಿದೆ. ಪ್ರತಿಯೊಂದು ವಸ್ತು, ವ್ಯಕ್ತಿ, ಘಟನೆ, ಹೇಳಿಕೆ ಮತ್ತು ಮಾತುಗಳು ಎಲ್ಲವೂ ಸಾಂಕೇತಿಕವಾಗಿ ಸೂಚಿಸಲಾಗಿರುತ್ತದೆ. ಉದಾಹರಣೆಗೆ

1. ಕೆಲವು ವ್ಯಕ್ತಿಗಳನ್ನು ಇಲ್ಲಿ ಸಾಂಕೇತಿಕವಾಗಿ ಕಾಣಬಹುದು: ಸಮಾರಿಯದ ಸ್ತ್ರೀ, ಹುಟ್ಟು ಕುರುಡ, ನಿಕೋದೆಮ ಮತ್ತು ಆಪ್ತ ಶಿಷ್ಯನನ್ನು ಇಲ್ಲಿ ಸಾಂಕೇತಿಕವಾಗಿ ಕಾಣಬಹುದಾಗಿದೆ. ದೇವರ ತಾಯಿಯನ್ನು ಸಾಂಕೇತಿಕವಾಗಿ ಧರ್ಮಸಭೆ ಅಥವಾ ಒಂದು ಸಮುದಾಯವಾಗಿ ಬಿಂಬಿಸಲಾಗಿದೆ. ಯೇಸುಸ್ವಾಮಿ ಮಾತೆ ಮರಿಯಳನ್ನು ಆಪ್ತ ಶಿಷ್ಯನಿಗೆ ಒಪ್ಪಿಸುತ್ತಾರೆ.

2. ಶುಭಸಂದೇಶದಲ್ಲಿ ಅನೇಕ ವಸ್ತುಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ ಉದಾಹರಣೆಗೆ ರೊಟ್ಟಿ, ನೀರು, ಬೆಳಕು, ದೇವಾಲಯ ಮತ್ತು ದ್ರಾಕ್ಷಾರಸ ಇವೆಲ್ಲವೂ ಯೇಸುಸ್ವಾಮಿಯ ಸಂಕೇತವಾಗಿದೆ. ವಿಷಯಗಳ ಕುರಿತು ಮುಂದಿನ ಸಂಚಿಕೆಗಳಲ್ಲಿ ಯೊವಾನ್ನರ ಸಾಂಕೇತಿಕವಾದ ಎಂಬ ವಿಷಯದಲ್ಲಿ ಕಾಣಬಹುದಾಗಿದೆ.

ಸಂತ ಯೊವಾನ್ನರು ಬರೆದ ಶುಭಸಂದೇಶದ ವೈಶಿಷ್ಟ್ಯ ಓದುಗನಲ್ಲಿ ಕುತೂಹಲ ಹೆಚ್ಚಿಸುವುದಾಗಿದೆ. ಇದು ಬೇರೆ ಮೂರು ಶುಭಸಂದೇಶಗಳಿಗಿಂತ ವಿಭಿನ್ನವಾಗಿದೆ. ಇದು ಅನೇಕ ವಿಷಯಗಳನ್ನು ಬಿಟ್ಟು ತನ್ನದೇ ಆದಂತಹ ಪ್ರತ್ಯೇಕಭಾವವನ್ನು ಶುಭಸಂದೇಶದಲ್ಲಿ ಪ್ರಸ್ತುತಪಡಿಸಿದೆ. ಶುಭಸಂದೇಶದಲ್ಲಿ ಯೇಸುವಿನ ಜನನದ ಬಗ್ಗೆ, ಅವರ ದೀಕ್ಷಾಸ್ನಾನದ ಬಗ್ಗೆ ಮತ್ತು ಪ್ರಲೋಭನೆಗಳ ಬಗ್ಗೆ, ಕಡೆಯ ರಾತ್ರಿ ಭೋಜನದ ಬಗ್ಗೆ, ಗೆತ್ಸೆಮನೆ ಮತ್ತು ಸ್ವರ್ಗಾರೋಹಣದ ಬಗ್ಗೆ ಹೇಳುವುದಿಲ್ಲ. ಇವುಗಳ ಯಾವುದೇ ಮಾಹಿತಿ ಶುಭಸಂದೇಶದಲ್ಲಿ ಇಲ್ಲ. ಯೇಸುಸ್ವಾಮಿಯ ಜೀವನದಲ್ಲಿನ ಅತ್ಯಂತ ಪ್ರಮುಖವಾದ ಘಟನೆಗಳನ್ನು ಶುಭಸಂದೇಶ ನಿರ್ಲಕ್ಷಿಸಿದೆ ಎಂದು ಓದುಗರಿಗೆ ಅನ್ನಿಸಬಹುದು. ಆದರೆ ಇದಕ್ಕೆ ಬೇರೆಯದೇ ಕಾರಣಗಳಿವೆ.

ಶುಭಸಂದೇಶದಲ್ಲಿ ಅಸ್ವಸ್ಥತೆ, ದೆವ್ವಗಳ ಉಚ್ಚಾಟನೆ, ದೆವ್ವಗಳು, ಆತ್ಮಗಳ ಬಗ್ಗೆ ಉಲ್ಲೇಖ ಇರುವುದಿಲ್ಲ. ಯೇಸುಸ್ವಾಮಿಯ ಮಹತ್ತರವಾದ ಬೋಧನೆಗಳಲ್ಲಿ ಒಂದಾದ ಸಾಮತಿಗಳು ಸಹ ಶುಭಸಂದೇಶದಲ್ಲಿ ನಾವು ಕಾಣುವುದಿಲ್ಲ. ಸಾಮತಿಗಳು ಬೇರೆ ಮೂರು ಶುಭಸಂದೇಶಗಳ ಆಸ್ತಿಯಾಗಿದೆ ಮತ್ತು ಯೇಸುಸ್ವಾಮಿಯ ಪರಿಣಾಮಕಾರಿ ಬೋಧನೆಯ ಮೂಲತತ್ವವಾಗಿದೆ.

ಯೊವಾನ್ನರ ಶುಭಸಂದೇಶದಲ್ಲಿ ಯೇಸುಸ್ವಾಮಿ ಸದಾ ಒಬ್ಬ ವ್ಯಕ್ತಿಯೊಡನೆ ದೀರ್ಘವಾದ ಸಂಭಾಷಣೆಯಲ್ಲಿ ಇರುತ್ತಾರೆ, ಅಥವಾ ಘೋಷಣೆಗಳನ್ನು ಮಾಡುತ್ತಾರೆ. ಇಲ್ಲಿ ಯೇಸುಸ್ವಾಮಿ ಮಾತ್ರವೇ ಕೇಂದ್ರವಾಗಿರದೆ ಓದುಗನು ಅಥವಾ ಯೇಸುಸ್ವಾಮಿಯ ಜೊತೆ ಇರುವ ವ್ಯಕ್ತಿಯು ಕೇಂದ್ರವಾಗಿರುತ್ತಾನೆ. ಓದುಗನನ್ನು ಮತ್ತು ಬೇರೆ ವ್ಯಕ್ತಿಯನ್ನು ಕೇಂದ್ರೀಕೃತ ಮಾಡುವುದು ಶುಭಸಂದೇಶದ ಒಂದು ವೈಶಿಷ್ಟ್ಯವಾಗಿದೆ.●●●

-ಸಹೋ. ವಿನಯ್‌ಕುಮಾರ್‌

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...