Friday, 11 January 2019

ಈ ದೇವರ ಮಂಜೂಷ ಈಗ ಎಲ್ಲಿದೆ?

1981ರಲ್ಲಿ ಸ್ಟೀವನ್‌ ಸ್ಪೆ‌ಲ್‌ಬರ್ಗ್ ಎಂಬ ಹಾಲಿವುಡ್‌ ನಿರ್ದೇಶಕನ  'ದಿ ರೈಡರ್‌ ಆಫ್‌ ದಿ ಲಾಸ್ಟ್‌ ಆರ್ಕ್‌' ಎಂಬ ಚಿತ್ರವು ಆ ಕಾಲದ ಅತ್ಯದ್ಭುತ ಚಿತ್ರವಾಗಿ ದಾಖಲೆ ನಿರ್ಮಿಸಿತ್ತು. ಬಳಿಕ ಆ ಚಿತ್ರದ ಸೀಕ್ವೆಲ್‌ಗಳಾಗಿ 'ಇಂಡಿಯಾನ ಜೋನ್ಸ್' ಎಂಬ ಹೆಸರಿನಲ್ಲಿ ಮೂರು ಚಿತ್ರಗಳೂ ತಯಾರಾಗಿ ಸಾಕಷ್ಟು ಹಣವನ್ನು ಬಾಚಿದ್ದವು. ಆದರೆ 'ದಿ ರೈಡರ್‌ ಆಫ್‌ ದಿ ಲಾಸ್ಟ್‌ ಆರ್ಕ್‌' ಚಿತ್ರದಲ್ಲಿ ಮೋಸೆಸನು ನಿರ್ಮಿಸಿದ್ದ ದೇವರ ಮಂಜೂಷದ ಬಗ್ಗೆ ಇತಿಹಾಸಕಾರರು ಕಂಡು ಹಿಡಿಯುವ ಪ್ರಯತ್ನವನ್ನು ಚಿತ್ರೀಕರಿಸಲಾಗಿತ್ತು. ಆ ಮಂಜೂಷವನ್ನು ಪಡೆಯಲು ಪ್ರಯತ್ನಿಸಿದ  ಅನೇಕರ ಪ್ರಯತ್ನಗಳು ಸಫಲವಾಗದೇ ಅವರು ನಿರ್ನಾಮವಾದ ಬಗ್ಗೆ ಚಿತ್ರವು ಹೇಳುತ್ತದೆ. ಆದರೆ ಒಬ್ಬನಿಗೆ ಮಾತ್ರ ಅದು ದಕ್ಕುತ್ತದೆ. ಆತ ಅದನ್ನು ಅಮೆರಿಕಾ ಸರಕಾರಕ್ಕೆ ಒಪ್ಪಿಸುತ್ತಾನೆ ಎಂಬಲ್ಲಿಗೆ ಚಿತ್ರ ಮಕ್ತಾಯವಾಗುತ್ತದೆ. ಆತ, ಆ ದೇವರ ಮಂಜೂಷವನ್ನು ಈಜಿಪ್ಟ್‌ನ 'ತಾನಿಸ್‌' ಎಂಬ ಪ್ರದೇಶದಲ್ಲಿ ಕಂಡು ಹಿಡಿದ  ಎಂಬುದಾಗಿ ಆ ಚಿತ್ರದಲ್ಲಿ ದಾಖಲಿಸಲಾಗಿದೆ.

ಮೋಸೆಸನು ನಿರ್ಮಿಸಿದ ಈ ಮಂಜೂಷಕ್ಕೆ 'ದಾಖಲೆಗಳ ಮಂಜೂಷ' ಎಂದೂ ಹೇಳಲಾಗುತ್ತದೆ. ಕಾರಣ ಸಿನಾಯ್‌ ಪರ್ವತದ ಮೇಲೆ ದೇವರು ಮೋಸೆಸನಿಗಿತ್ತ 'ದಶಾಜ್ಞೆ'ಗಳ ಎರಡು ಕಲ್ಲಿನ ಫಲಕಗಳು' ಎಂಬ ದಾಖಲೆಗಳನ್ನು ಇರಿಸಲೆಂದು ಮರ ಮತ್ತು ಚಿನ್ನವನ್ನು ಉಪಯೋಗಿಸಿ ತಯಾರಿಸಿದ ಒಂದು ವಿಶೇಷ ಪೆಟ್ಟಿಗೆಯೇ ಈ ಮಂಜೂಷ. ಇದನ್ನು ಮೋಸೆಸನ ಕೋರಿಕೆಯ ಮೇರೆಗೆ ತಯಾರಿಸಿದವನು 'ಬೆಜಲೇಲ'ನೆಂಬ ಶಿಲ್ಪಶಾಸ್ತ್ರಜ್ಞ. 'ಸುಮಾರು ಎರಡೂವರೆ ಮೊಳ ಉದ್ದವೂ ಒಂದೂವರೆ ಮೊಳ ಅಗಲವೂ ಒಂದೂವರೆ ಮೊಳ ಎತ್ತರವೂ ಇರುವ ಈ ಮಂಜೂಷವನ್ನು ಜಾಲಿಮರ ದಿಂದ ತಯಾರಿಸಲಾಗಿತ್ತು.  ಅದರ ಒಳಕ್ಕೂ ಹೊರಕ್ಕೂ ಚೊಕ್ಕ ಬಂಗಾರದ ತಗಡು 1ನಲ್ಲಿದೆ.
ಗಳನ್ನು ಹೊದಿಸಲಾಗಿತ್ತು. ಅದರ ಹೊರಭಾಗದ ಸುತ್ತಲೂ ಚಿನ್ನದ ತೋರಣ ಕಟ್ಟಿಸಿ ನಾಲ್ಕು ಬಂಗಾರದ ಬಳೆಗಳನ್ನು ಎರಕ ಹೋಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಒಂದೊಂದರಂತೆ ಇರಿಸಲಾ ಗಿತ್ತು. ಜಾಲಿ ಮರದ ಗದ್ದುಗೆಗಳನ್ನು ಮಾಡಿಸಿ ಅದಕ್ಕೆ ಚಿನ್ನದ ತಗಡುಗಳನ್ನು ಹೊದಿಸಿ ಮಂಜೂಷದ ಎರಡೂ ಕಡೆಗಳಲ್ಲಿರುವ ಬಳೆಗಳಲ್ಲಿ ಮಂಜೂಷವನ್ನು ಹೊರುವುದಕ್ಕಾಗಿ ಅವುಗಳನ್ನು ಸೇರಿಸಲಾಗಿತ್ತು. ಅದಲ್ಲದೆ ಎರಡೂವರೆ ಮೊಳ ಉದ್ದವೂ ಒಂದೂವರೆ ಮೊಳ ಅಗಲವೂ ಇದ್ದ ಚೊಕ್ಕ ಬಂಗಾರದ ಕೃಪಾಸನವನ್ನು ಮಾಡಿ ಮಂಜೂಷದ ಮೇಲುಭಾಗದಲ್ಲಿ ಇರಿಸಲಾಗಿತ್ತು. ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬದ ಎರಡು ಬಂಗಾರದ ಆಕೃತಿಗಳನ್ನು ನಕಾಸಿ ಕೆಲಸದಿಂದ ಮಾಡಿಸಿ ಕೂರಿಸಲಾಗಿತ್ತು. ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತಹ ಭಂಗಿಯಲ್ಲಿರುವ ಆ ಎರಡು ಕೆರೂಬಗಳ ಮುಖಗಳು ಒಂದಕ್ಕೊಂದು ಎದುರಾಗಿ ಕೃಪಾಸನವನ್ನು ವೀಕ್ಷಿಸುತ್ತಿರುವಂತೆ ಇರಿಸಲಾಯಿತು', ಎಂಬ ಸಂಗತಿ ಬೈಬಲ್‌‌

ಈ ಮಂಜೂಷವನ್ನು ಡೇರೆಯಲ್ಲಿರಿಸಿ ಅದಕ್ಕೆ ವಿಶೇಷ ಧೂಪಾರಾಧನೆಗಳನ್ನು ಅರ್ಪಿಸಲಾಗುತ್ತಿತ್ತು. ಅದಕ್ಕೆಂದೇ ಲೇವಿಯರ ಪಂಗಡವನ್ನು ಆರಿಸಿ ಅವರಿಗೆ ಅದರ ಉಸ್ತುವಾರಿಯನ್ನು ನೀಡಲಾಗಿತ್ತು. ಈ ಮಂಜೂಷವನ್ನು ಲೇವಿಯರು ಮಾತ್ರವೇ ಹೊತ್ತು ತಿರುಗಬಹುದಾಗಿತ್ತು. ಅದರ ಸನಿಹ ಇತರರಾರೂ ಸುಳಿಯುವಂತಿರಲಿಲ್ಲ. ಅದನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಲೇವಿಯರು ಕೊಂಡೊಯ್ಯುವ ಸಂದರ್ಭದಲ್ಲಿ ಅದನ್ನು ಹಿಂಬಾಲಿಸುವವರು ಕನಿಷ್ಟ ಒಂದು ಕಿಲೋಮೀಟರ್‌ ದೂರದಿಂದ ಹಿಂಬಾಲಿಸಬೇಕಾಗಿತ್ತು.

ಯೆಹೋಶುವನ ನೇತೃತ್ವದಲ್ಲಿ ಇಸ್ರಾಯೇಲರು ಜೋರ್ಡನ್ ನದಿಯನ್ನು ದಾಟುವಾಗ ಮಂಜೂಷವನ್ನು ಹೊತ್ತ ಲೇವಿಯರು ನದಿಯ ನೀರಿಗೆ ಕಾಲಿಡುತ್ತಲೇ  ಹರಿಯುತ್ತಿದ್ದ ನದಿ ಇಬ್ಭಾಗವಾಗಿ ನಿಂತುಹೋಗುತ್ತದೆ. ಇಸ್ರಾಯೇಲರು ನದಿಯನ್ನು ದಾಟುತ್ತಲೇ ಅದು ಮೊದಲಿನಂತೆ ಹರಿಯತೊಡಗುತ್ತದೆ2.

ಜೆರಿಕೊ ಯುದ್ಧದ ಸಂದರ್ಭದಲ್ಲಿ ಇಸ್ರಾಯೇಲರು ಮಂಜೂಷವನ್ನು ಹೊತ್ತುಕೊಂಡು ಏಳು ದಿನಗಳ ಕಾಲ ನಗರವನ್ನು ಸುತ್ತು ಹಾಕುತ್ತಾರೆ. ಏಳನೆಯ ದಿನದ ಪ್ರದಕ್ಷಣೆಯ ವೇಳೆ ಇಸ್ರಾಯೇಲರು ಆರ್ಭಟಿಸಿದಾಗ ನಗರವನ್ನು ಸುತ್ತುವರಿದಿದ್ದ ಗೋಡೆ ತಾನೇ ತಾನಾಗಿ ಬಿದ್ದು ಹೋಗುತ್ತದೆ3.

ಇಂತಹ ವಿಶಿಷ್ಟ ಮಂಜೂಷವು ಒಮ್ಮೆ ಪರಕೀಯರ ಕೈಗೂ ಹೋಗುವ ಪ್ರಸಂಗ ಒದಗುತ್ತದೆ.  ಇಸ್ರಾಯೇಲರನ್ನು ಫಿಲಿಷ್ಟಿಯರು ಸೋಲಿಸಿ ಮಂಜೂಷವನ್ನು ತಮ್ಮ ಕೈವಶಮಾಡಿಕೊಳ್ಳುತ್ತಾರೆ. ಇಸ್ರಾಯೇಲರಿಂದ ವಶಪಡಿಸಿಕೊಂಡ ಮಂಜೂಷವನ್ನು ಅವರು 'ಅಷ್ಟೋದ್‌'  ಎಂಬಲ್ಲಿರುವ 'ದಾಗೋನ್‌' ಎಂಬ ಮೀನಿನ ದೇವರ ಗುಡಿಯಲ್ಲಿರಿಸುತ್ತಾರೆ. ಅಲ್ಲೊಂದು ಅದ್ಭುತವು ಸಂಭವಿಸುತ್ತದೆ. ಫಿಲಿಷ್ಠೀಯರು ಮರುದಿನ ಬೆಳಗೆದ್ದು ನೋಡುವಾಗ ದಾಗೋನ್‌ ವಿಗ್ರಹವು ಸರ್ವೇಶ್ವರನ ಮಂಜೂಷದ ಮುಂದೆ ಬೋರಲು ಬಿದ್ದಿರುವುದನ್ನು ಕಾಣುತ್ತಾರೆ. ಅವರು ದಾಗೋನ್‌ ವಿಗ್ರಹವನ್ನು ಮೊದಲಿನಂತೆ ಎತ್ತಿ ನಿಲ್ಲಿಸಿ ಹೋಗುತ್ತಾರೆ. ಅದರ ಮರುದಿನ ಬಂದು ನೋಡುವಾಗ ದಾಗೋನ್‌ ವಿಗ್ರಹದ ಅಂಗಾಂಗಗಳು ಛಿದ್ರವಾಗಿ ಬಿದ್ದಿದ್ದು ವಿಗ್ರಹದ ತಲೆಯು ಮಂಜೂಷದ ಬಳಿ ಬಿದ್ದಿರುವುದನ್ನು ಕಾಣುತ್ತಾರೆ. ಆ ಘಟನೆಗಳಿಂದ ಹೆದರಿದ ದಾಗೋನನ ಯಾಜಕರು ಹೆದರಿ ಆ ಬಳಿಕ ಗುಡಿಯ ಹೊಸ್ತಿಲನ್ನು ತುಳಿಯುವುದನ್ನೇ ನಿಲ್ಲಿಸಿಬಿಡುತ್ತಾರೆ. ಮಂಜೂಷವು ದಾಗೋನಿಗೆ ಮಾರಕವಾದಾಗ ಫಿಲಿಷ್ಟೀಯರು ಅದನ್ನು 'ಗತ್‌' ಎಂಬ ಊರಿಗೆ ಸಾಗಿಸುತ್ತಾರೆ. ಅಲ್ಲಿಯೂ ಅದು ಆ ಊರಿನ ಜನರಿಗೆ ಬಾಧಕವಾಗುತ್ತದೆ. ಜನರು ಪ್ಲೇಗಿನಿಂದ ನರಳುತ್ತಾರೆ. ಬಳಿಕ ಅದನ್ನು 'ಎಕ್ರೋನ್‌' ಎಂಬ ಊರಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿಯೂ ಪ್ಲೇಗ್‌ ರೋಗ ತಾಂಡವನೃತ್ಯವಾಡುತ್ತದೆ. ಅದನ್ನು ಕಂಡ ಆ ಊರಿನ ಜನರು ಕಂಗಾಲಾಗುತ್ತಾರೆ. "ನಮ್ಮನ್ನೂ ನಮ್ಮ ಬಂಧುಗಳನ್ನು ಕೊಲ್ಲುವುದಕ್ಕಾಗಿಯೇ ಇಸ್ರಾಯೇಲ್‌ ದೇವರ ಮಂಜೂಷವನ್ನು ಇಲ್ಲಿಗೆ ಕಳುಹಿಸಿಕೊಡಲಾಗಿದೆ' ಎಂದವರು ಕೂಗಾಡುತ್ತಾರೆ. ಬೇರೆ ದಾರಿ ಕಾಣದೇ ಅದನ್ನು ಇಸ್ರಯೇಲರಿಗೆ  ಮರಳಿಸಲು ಫಿಲಿಷ್ಠಿಯರು ನಿರ್ಧರಿಸುತ್ತಾರೆ. ಎತ್ತಿನ ಬಂಡಿಯಲ್ಲಿ ಅದನ್ನು ಸಾಗಹಾಕುತ್ತಾರೆ. ಮಂಜೂಷವನ್ನು ಹೊತ್ತು ತಂದ ಬಂಡಿಯ ಎತ್ತುಗಳು ಅತ್ತಿತ್ತ ನೋಡದೇ ನೇರವಾಗಿ ಬೆತ್‌ಷೆಮೆಷಿನ ಬಳಿಯಿದ್ದ ಯೆಹೋಶುವನ ಹೊಲದ ಬಳಿ ಬಂದು ನಿಲ್ಲುತ್ತದೆ. ಅಲ್ಲಿಯೂ ದುರ್ಘಟನೆಗಳು ನಿಲ್ಲುವುದಿಲ್ಲ. ಮಂಜೂಷವನ್ನು ತೆರೆದು ನೋಡಿದ ಆ ಊರಿನ ಎಪ್ಪತ್ತು ಮಂದಿ ಸಾವಿಗೀಡಾಗುತ್ತಾರೆ.

ಬಳಿಕ ಅದನ್ನು 'ಕಿರ್ಯತ್ಯಾರೀಮ್‌' ಎಂಬ ಊರಿನ ಗುಡ್ಡದ ಮೇಲೆ ವಾಸವಿದ್ದ ಅಬೀನಾದಾಬ್‌ ಎಂಬಾತನ ಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅವನ ಮಗ ಎಲ್ಲಾಜಾರನನ್ನು ಅದರ ಸೇವೆಗಾಗಿ ನಿಯೋಜಿಸಲಾ ಗುತ್ತದೆ4.

ಮುಂದೆ ದಾವೀದನ ಆಳ್ವಿಕೆಯ ಕಾಲದಲ್ಲಿ ದೇವರ ಮಂಜೂಷವನ್ನು ದಾವೀದನಗರ(ಜೆರು ಸಲೇಂ)ಕ್ಕೆ ತರುವ ಪ್ರಯತ್ನ ಗಳಾಗುತ್ತವೆ, ಆದರೆ ಎತ್ತಿನ ಬಂಡಿಯಲ್ಲಿ ತರುವ ಪ್ರಯತ್ನ ದಲ್ಲಿ ಆಗುವ ಅನಾಹುತ ದಿಂದಾಗಿ ಆ ಪ್ರಯತ್ನ ಅಸಫಲ ವಾಗುತ್ತದೆ. ಹಾಗಾಗಿ ಅದನ್ನು ಪುನಃ 'ಗತ್‌' ಎಂಬ ಊರಿನ 'ಒಬೇದೆದೋಮ'ನ ಮನೆಯ ಲ್ಲಿ ಉಳಿಸಿಕೊಳ್ಳಲಾಗುತ್ತಾ ದರೂ ಆಗ ಯಾರಿಗೂ ಯಾವ ಹಾನಿಯೂ ಸಂಭವಿಸುವುದಿಲ್ಲ; ಈ ಹಿಂದೆ ಫಿಲಿಷ್ಟೀಯರು ಅದನ್ನು ಅದೇ ಊರಿಗೆ ಸಾಗಿಸಿದ್ದಾಗ ಊರಿನವರು ಪ್ಲೇಗ್‌ ರೋಗದಿಂದ ತತ್ತರಿಸಿದ್ದರು. ಮೂರು ತಿಂಗಳ ಬಳಿಕ ಮಂಜೂಷವನ್ನು ಅಲ್ಲಿಂದ ಬಹುಸಡಗರದಿಂದಲೇ ದಾವೀದನಗರಕ್ಕೆ ತರುವಲ್ಲಿ ಯಶಸ್ವಿಯಾಗುತ್ತಾರೆ5. ದಾವೀದನು ಆ ಮಂಜೂಷವನ್ನಿರಿಸಲು ದೇಗುಲ ನಿರ್ಮಾಣದ ನಿರ್ಧಾರ ಕೈಗೊಳ್ಳುತ್ತಾನಾದರೂ ಸರ್ವೇಶ್ವರನ ಆಜ್ಞೆಯ ಮೇರೆಗೆ ಆ ಪ್ರಯತ್ನವನ್ನು ಕೈಬಿಡುತ್ತಾನೆ6. ಅವನ ಮಗ ಸೊಲೊಮೋನನು ದೇಗುಲವನ್ನು ಕಟ್ಟಿಸಿದ ಬಳಿಕ ಆ ಮಂಜೂಷವನ್ನು ನೂತನ ದೇಗುಲದಲ್ಲಿ ಇರಿಸಲಾಗುತ್ತದೆ ಮತ್ತು ಜದೋಕನನ್ನು ಆ ದೇಗುಲದ ಪ್ರಧಾನ ಯಾಜಕನನ್ನಾಗಿ ನೇಮಿಸುತ್ತಾನೆ ಎಂಬಲ್ಲಿಯವರೆಗೆ ಮಂಜೂಷದ ಬಗ್ಗೆ ತಿಳಿದು ಬರುತ್ತದೆ. ಆದರೆ ದೇಗುಲವು ನಿರ್ನಾಮ ಹೊಂದಿದ ಸಂದರ್ಭದಲ್ಲಿ ಮಂಜೂಷ  ಅಲ್ಲಿರಲಿಲ್ಲವೆಂದು ಹೇಳಲಾಗುತ್ತಿದೆ. ಪ್ರಸ್ತುತ ಅದು ಎಲ್ಲಿದೆಯೆಂಬ ಬಗ್ಗೆ ಅನೇಕ ಊಹಾಪೋಹಗಳಿವೆಯಾದರೂ ನಿರ್ದಿಷ್ಟವಾಗಿ ಅದರ ಬಗ್ಗೆ ಯಾವ ಸುಳಿವೂ ದೊರೆತಿಲ್ಲ.●●●

-ಕೆ.ಜೆ.ಜಾರ್ಜ್‌, ಬಿಳಿಕೆರೆ   

ಉಲ್ಲೇಖ: 
1.ವಿಮೋಚನಾ 37:1-9, 
2. ಯೆಹೋ. 3:1-17, 
3. ಯೆಹೋ.6:20, 
4. ಯೆಹೋ.5 ಮತ್ತು 6, 
5. 2ಸಮ; 6:1-11; 1ಪೂರ್ವ.13:1-13, 
6. 2ಸಮು.7:1-17, 1ಪೂರ್ವ.17:1-15; 28:2,3      

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...