ಕಳೆದ ಬಾರಿ ನಾವು ಐತಿಹಾಸಿಕ ಸನ್ನಿವೇಶ ಸಮುದಾಯದ ಹೊರಗಡೆಯಿಂದ ಹೇಗೆ ಶುಭ ಸಂದೇಶಕ್ಕೆ ತನ್ನದೇ ಆದ ರೀತಿಯಲ್ಲಿ ಛಾಪನ್ನು ಮೂಡಿಸಿದೆ ಎಂದು ನೋಡಿದೆವು. ಈಗ ಎರಡನೆಯ ವಿಷಯ ಐತಿಹಾಸಿಕ ಸನ್ನಿವೇಶ ಸಮುದಾಯದ ಒಳಗಡೆಯಿಂದ ಹೇಗೆ ಉದ್ಭವಿಸಿ ಅದು ಶುಭ ಸಂದೇಶವನ್ನು ಪ್ರೇರೇಪಿಸಿದೆ ಎಂದು ನೋಡೋಣ.
ಸಮುದಾಯದೊಳಗಿನ ಐತಿಹಾಸಿಕ ಸನ್ನಿವೇಶಗಳು ಹೇಗೆ ಶುಭಸಂದೇಶವನ್ನು ಪ್ರೇರೇಪಿಸಿತು ಎಂದು ತಿಳಿಯೋಣ. ಕನ್ನಡದಲ್ಲಿ ಒಂದು ಮಾತಿದೆ ಊರೆಂದರೆ ಹೊಲಗೇರಿ ಇದ್ದೇ ಇರುತ್ತೆ ಎಂದು. ಹಾಗೂ ಸಮುದಾಯ ಎಂದ ಮೇಲೆ ಅದರದೇ ಆದಂತಹ ಕಷ್ಟ, ತೊಂದರೆ, ಸವಾಲುಗಳು ಇದ್ದೇ ಇರುತ್ತವೆ. ಯೊವಾನ್ನರ ಸಮುದಾಯದಲ್ಲೂ ಕೆಲ ತೊಂದರೆಗಳು ಗೊಂದಲಗಳು ಮತ್ತು ಹತಾಶೆಗಳು ಇದ್ದವು. ಅದಕ್ಕೆ ಎರಡು ಮುಖ್ಯ ಕಾರಣಗಳು.
ಮೊದಲನೆಯ ಕಾರಣ - ಯೊವಾನ್ನರ ಶುಭಸಂದೇಶ ಬರುವ ಹೊತ್ತಿಗಾಗಲೇ ಪ್ರೇಷಿತರೆಲ್ಲ ಮರಣ ಹೊಂದುತ್ತಿದ್ದರು. ಪ್ರೇಷಿತರ ಮರಣದಿಂದಾಗಿ ಸಮುದಾಯದಲ್ಲಿ ಗೊಂದಲಗಳು ಪ್ರಾರಂಭವಾಗಲು ಕಾರಣವಾಗಿತ್ತು. ಏಕೆಂದರೆ ನಾಯಕತ್ವದ ಬದಲಾವಣೆ ಸಹ ಆಗಬೇಕಿತ್ತು. ಕೆಲವರು ಪ್ರೇಷಿತರು, ಪ್ರೇಷಿತರ ಪ್ರತಿನಿಧಿಗಳಿಗೆ ಸಾವಿಲ್ಲ ಎಂಬ ನಂಬಿಕೆಯಿಂದ ಜೀವಿಸುತ್ತಿದ್ದರು. ಈ ರೀತಿಯಾದಂತಹ ನಂಬಿಕೆ ಅವರಲ್ಲಿ ಗಾಳಿ ಸುದ್ದಿಯಂತೆ ಪ್ರಚಲಿತವಾಗಿತ್ತು. ಇದಕ್ಕೆ ಪೂರಕವೆಂಬಂತೆ ಯೊವಾನ್ನರ ಶುಭಸಂದೇಶದಲ್ಲಿ 21:23 ರಲ್ಲಿ ನಾವು ಕಾಣುತ್ತೇವೆ "ಇದರಿಂದಾಗಿ ಆ ಶಿಷ್ಯನಿಗೆ ಸಾವು ಇಲ್ಲವೆಂಬ ವದಂತಿ ಸೋದರರಲ್ಲಿ ಹಬ್ಬಿತ್ತು. ಯೇಸು ತಾವು ಬರುವ ತನಕ ಅವನು ಹಾಗೆಯೇ ಇರಬೇಕೆಂದು ನನ್ನ ಬಯಕೆ ಆದರೆ ಅದರಿಂದ ನಿನಗೇನಾಗಬೇಕು? ಎಂದು ಹೇಳಿದರೇ ಹೊರತು ಅವನಿಗೆ ಸಾವಿಲ್ಲವೆಂದು ಹೇಳಲಿಲ್ಲ. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಪ್ರೇಷಿತನಿಗೆ ಸಾವಿಲ್ಲ ಎಂದುಕೊಂಡರು. ಎರಡನೆಯ ಕಾರಣ - ಶುಭಸಂದೇಶ ಸಂಯೋಜಿಸುವ ಸಮಯದಲ್ಲಿ ಸಮುದಾಯದಲ್ಲಿ ಕಂಡುಬಂದಂತಹ ಧರ್ಮವಿರೋಧಿ/ತತ್ವವಿರೋಧಿ ಗುಂಪುಗಳ ತತ್ವಗಳು ಮತ್ತು ವ್ಯಾಖ್ಯಾನಗಳು. ಅವು ಯಾವುವೆಂದರೆ:
1. ಚೇರಿಂತಿಯನಿಸಂ. (Cherinthianism),
2. ಡೋಸೆಟಿಸಂ (Docetism),
3. ನೊಸ್ಟೀಸಿಸಂ (Gnosticism)
1. ಚೇರಿಂತಿಯನಿಸಂ. (Cherinthianism) - ಇದೊಂದು ಪಾಷಂಡವಾದ ಇದು ಚೇರಿಂತಿಯನ್ ಅವರ ಹೆಸರಿನಿಂದ ಬಂದಿದೆ. ಈ ಗುಂಪು ಯೇಸು ಸ್ವಾಮಿಯ ದೈವತ್ವವನ್ನು ನಿರಾಕರಿಸಿತು, ದೇವರು ಈ ಲೋಕವನ್ನು ಸೃಷ್ಟಿಸಿದ್ದಾರೆ ಎನ್ನುವುದನ್ನು ಕೂಡ ನಿರಾಕರಿಸಿತು. ಆ ಪ್ರಕಾರ ಯೇಸುಕ್ರಿಸ್ತ ಎನ್ನುವವರು ಮಾನವ ಮಾತ್ರ, ಯೇಸು ಎನ್ನುವವರ ಮೇಲೆ ದೀಕ್ಷಾಸ್ನಾನದ ಸಮಯದಲ್ಲಿ ಕ್ರಿಸ್ತ (ಅಭಿಷಿಕ್ತ ಲೋಕೋದ್ಧಾರಕ) ಇಳಿದುಬಂದ. ಇದೇ ಕ್ರಿಸ್ತ ಯೇಸುವಿನ ಮರಣಕ್ಕೆ ಮುನ್ನ ಆರಿಹೋದ ಎಂದು ತಿಳಿಸುತ್ತಾರೆ. ಇದಕ್ಕೆ ಅವರು ಯೋವಾನ್ನರ ಶುಭಸಂದೇಶದ ವಾಚನ 19:30 ಅನ್ನು ಆಧಾರವಾಗಿಟ್ಟುಕೊಂಡು ಹೀಗೆನ್ನುತ್ತಾರೆ "ಯೇಸು ಹುಳಿರಸವನ್ನು ಸೇವಿಸುತ್ತಲೇ 'ಎಲ್ಲಾ ನೆರವೇರಿತು', ಎಂದು ನುಡಿದು ತಲೆಬಾಗಿ ತಮ್ಮ ಆತ್ಮವನ್ನು ಒಪ್ಪಿಸಿದರು". ಈ ವಾಚನವನ್ನು ಆದರಿಸಿ ಅವರ ತತ್ವಕ್ಕೆ ಸತ್ವವನ್ನಾಗಿಸಿಕೊಂಡಿದ್ದಾರೆ. ಈ ದೈವತ್ವದ ಕ್ರಿಸ್ತನ ಇರುವಿಕೆ ಕೇವಲ ಕ್ಷಣಿಕ ಎಂದು ಬೋಧಿಸುತ್ತಾರೆ.
ಆದರೆ ಯೊವಾನ್ನರ ಶುಭ ಸಂದೇಶವು ಕ್ರಿಸ್ತನ ದೈವತ್ವವನ್ನು ದೃಢೀಕರಿಸುತ್ತದೆ. ಅವರ ದೈವತ್ವವು ಅವರು ಬರುವ ಮುಂಚೆಯೂ, ಅವರು ಭೂಲೋಕದಲ್ಲಿ ಜೀವಿಸುತ್ತಿದ್ದಾಗಲೂ, ಅವರ ಮರಣದ ನಂತರವೂ ಇದೆ ಎಂದು ಪ್ರತಿಪಾದಿಸಿತು. ಯೊವಾನ್ನರ ಶುಭಸಂದೇಶ 1:1 ರಲ್ಲಿ ದೈವತ್ವವನ್ನು ತಮ್ಮ ದೈಹಿಕ ಅಸ್ತಿತ್ವಕ್ಕಿಂತ ಮುಂಚೆಯೇ ಇತ್ತು ಎಂಬುದನ್ನು ನೋಡಬಹುದು. 5:18ರಲ್ಲಿ ಯಹೂದ್ಯರ ಆರೋಪ ಸತ್ಯವಾಗಿದೆ. 20:28ರಲ್ಲಿ ತೋಮನ ವಿಶ್ವಾಸ ಪ್ರಕಟಣೆಯು ಸತ್ಯವಾಗಿದೆ. ಸಂತ ಯೊವಾನ್ನರ ಶುಭಸಂದೇಶವು 1:3ರಲ್ಲಿ " ದಿವ್ಯ ವಾಣಿಯ ಮುಖಾಂತರವೇ ಸಮಸ್ತವೂ ಉಂಟಾಯಿತು. ಉಂಟಾದವುಗಳಲ್ಲಿ ಯಾವುದು ಆ ದಿವ್ಯವಾಣಿಯಿಂದಲ್ಲದೆ ಆದುದಲ್ಲ. ಈ ವಚನದಲ್ಲಿ ಮೇಲೆ ಕಂಡ ಸಿದ್ದಾಂತವನ್ನು ಸುಳ್ಳೆಂದು ನಿರೂಪಿಸುತ್ತದೆ. ವಿದ್ವಾಂಸರ ಪ್ರಕಾರ ಈ ಪಂಗಡದವರು 19:30 ಅನ್ನು ಇವರು ತಪ್ಪಾಗಿ ಗ್ರಹಿಸಿಕೊಂಡರು. ಈ ಪಂಗಡದವರ ವಿರುದ್ಧವಾಗಿ ಶುಭ ಸಂದೇಶವು ಯೇಸುಸ್ವಾಮಿಯ ದೈವತ್ವವನ್ನು ದೃಡಪಡಿಸುತ್ತದೆ. ಇದಕ್ಕೆ ಉದಾಹರಣೆ. 1:1, 5:18, 10:30, 14:9 ಮತ್ತು 21:28. ಈ ವಚನಗಳಲ್ಲಿ ಶುಭ ಸಂದೇಶವು ಕ್ರಿಸ್ತನ ದೈವತ್ವವನ್ನು ದೃಢೀಕರಿಸಿ ಪಾಷಾಂಡವಾದದ ವಿರುದ್ಧ ಹೋರಾಡುತ್ತದೆ.
2. ಡೋಸೆಟಿಸಂ ( Docetism) - ಈ ಪದದ ಮೂಲ ಅರ್ಥ 'ಕಾಣುವ ಹಾಗೆ' ಎಂದು. ಈ ಗುಂಪಿನ ವಾದ ಯೇಸುಸ್ವಾಮಿ ಮಾನವರಾಗಿರಲಿಲಲ್ಲ ಬದಲಾಗಿ ಮಾನವರಂತೆ ಕಂಡರು. ಅವರು ನಿಜವಾಗಿಯೂ ಮಾನವರಾಗಿರಲಿಲ್ಲ ಬದಲಾಗಿ ದೈವ ಸಂಭೂತರಾಗಿದ್ದರು. ಇದಕ್ಕೆ ಅವರು ಫಿಲಿಪ್ಪಿಯವರಿಗೆ ಬರೆದ ಪತ್ರ 2:7 ತಮ್ಮ ವಾದಕ್ಕೆ ಸಾಕ್ಷಿಯಾಗಿ ಇಟ್ಟುಕೊಂಡಿದ್ದರು. "ತನ್ನನ್ನೇ ಬರಿದು ಮಾಡಿಕೊಂಡು, ದಾಸನ ರೂಪವನ್ನು ಧರಿಸಿಕೊಂಡು, ಮನುಜನ ಆಕಾರದಲ್ಲಿ ಕಾಣಿಸಿಕೊಂಡು, ಮಾನವರಿಗೆ ಸರಿಸಮನಾದ" ಮನುಜನ ಆಕಾರದಲ್ಲಿ - ಇಲ್ಲಿ ಅವರು ಈ ವಿಷಯವನ್ನು ಅಧಾರಿಸಿಕೊಂಡು ತಮ್ಮ ಸಿದ್ಧಾಂತವನ್ನು ರೂಪಿಸಿಕೊಳ್ಳುತ್ತಾರೆ.
ಆದರೆ ಶುಭಸಂದೇಶವು ಈ ಸಿದ್ಧಾಂತದ ವಿರೋಧವಾಗಿ ಯೇಸುಸ್ವಾಮಿ ನಿಜವಾಗಿಯೂ ಮನುಷ್ಯರಾದರು ಎನ್ನುವುದನ್ನು ನಿರೂಪಿಸುತ್ತದೆ. 1:14 "ವಾರ್ತೆ ಎಂಬುವರು ಮನುಷ್ಯರಾದರು ಮತ್ತು ನಮ್ಮಲ್ಲಿ ವಾಸಮಾಡಿದರು". 4:6 - ಇಲ್ಲಿ ಬಳಲಿದ್ದ ಯೇಸುವನ್ನು ಕಂಡು ಆತನ ಮಾನವೀಯ ಗುಣಗಳನ್ನು ನಾವು ಹೇಳಬಹುದು. 11:35 - ಯೇಸು ಕಣ್ಣೀರಿಟ್ಟರು. ಹೀಗೆ ಈ ಸಿದ್ಧಾಂತದ ವಿರೋಧವಾಗಿ ಶುಭಸಂದೇಶವು ಯೇಸು ಸ್ವಾಮಿಯ ಮನುಷ್ಯತ್ವವನ್ನು, ಮಾನವೀಯತೆಯನ್ನು, ಮಾನವೀಯ ಗುಣಗಳನ್ನು ಪ್ರತಿಪಾದಿಸುತ್ತದೆ.
*****
No comments:
Post a Comment