ಪ್ರೀತಿಯ ಅನುಗೆ ನಮಸ್ಕಾರಗಳು. ನಿನಗೊಂದು ಪತ್ರ ಬರೆಯಬೇಕೆಂಬ ಅನೇಕ ದಿನಗಳ ಆಸೆಯ ಕಾವು ಇಂದು ಬೆಳಕಾಗುತ್ತಿದಂತೆ ನನ್ನೊಳಗಿನ ಆಳದ ತೀಕ್ಷ್ಣ ಭಾವನೆಗಳನ್ನು ಮಾತುಗಳು ಕೈಹಿಡಿಯುತ್ತಿವೆ.
ತಂದೆತಾಯಿಗಳನ್ನು ಕಳೆದುಕೊಂಡಾಗ ದೇವರನ್ನೇ ಕಳೆದುಕೊಂಡಂತಹ ಅನುಭವ ನಮ್ಮಲ್ಲಿ ಕೆಲವರಿಗಾಗುವುದು ತೀರಾ ಸ್ವಾಭಾವಿಕ. ನನ್ನ ತಾಯಿ ತೀರಿಕೊಂಡಾಗ ನನಗೂ ಈ ರೀತಿ ಅನ್ನಿಸಿದ್ದು ಸುಳ್ಳಲ್ಲ. ಬಹುಶಃ ನನ್ನ ಈ ಅನಿಸಿಕೆ ನಿಮಗೆ ಅತೀರೇಕ ಎನ್ನಿಸಬಹುದಾದರೂ ಇದು ನನ್ನ ಅನುಭವಾತ್ಮಕ ದೃಢ ಮಾತೆನ್ನಿಸುತ್ತದೆ. ಕವಿ ಲಂಕೇಶ್ ತಮ್ಮ ಅವ್ವ ಎಂಬ ಕವಿತೆಯಲ್ಲಿ ಹೇಳುವಂತೆ ನನ್ನ ತಾಯಿ ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ ಹೊರಟು ಹೋಗಲಿಲ್ಲ.
ನಿರಾಕಾರ ದೇವರನ್ನು ಪ್ರತಿಯೊಂದರಲ್ಲೂ ನೆನಪಿಸಿ ಸಾಕ್ಷಾತ್ಕರಿಸಿದ ನಮ್ಮ ತಂದೆತಾಯಿಗಳು ದೇವರ ನೆರಳಚ್ಚುಗಳಂತನೇ ಹೇಳಬಹುದು. ನಿಜವಾಗಿ ಹೇಳಬೇಕೆಂದರೆ, ಧೀಮಂತರ ಪ್ರವಚನಗಳಿಂದ ನಾನು ದೇವರನ್ನು ತಿಳಿಯಲಿಲ್ಲ. ನನ್ನ ತಂದೆತಾಯಿಗಳ ಮೂಲಕ ದೇವರನ್ನು ಆರ್ಥಮಾಡಿಕೊಂಡಿರುವ ಸಾವಿರಾರು ಜನರಲ್ಲಿ ನಾನು ಒಬ್ಬ. ಯಾರೂ ದೇವರನ್ನು ಕಂಡವರಿಲ್ಲ ತಂದೆತಾಯಿಗಳ ಎಲ್ಲಾ ಒಳೆತನದಲ್ಲಿ, ನಡೆನುಡಿಗಳಲ್ಲಿ, ಕಾರ್ಯದಕ್ಷತೆ, ಆರೈಕೆ ಭಾವಣಿಕೆಗಳಲ್ಲಿ, ಅಂತಃಕರಣದಲ್ಲಿ ಜತೆಗೆ ವಿಶ್ವಾಸದ ದೃಢತೆಯಲ್ಲಿ ಎಲ್ಲೋ ಒಂದು ಕಡೆ ನಮ್ಮ ಗ್ರಹಿಕೆಯ ದೇವರನ್ನು ನೆನಪಿಸುತ್ತಾ ಅವರು ಕೆಲವೊಮ್ಮೆ ಅವರೇ ದೇವರು ಎಂಬ ಭಾವ ನಮ್ಮಲ್ಲಿ ಬಾರದಿರಲಿಲ್ಲ. ಈ ಒಂದು ಕಾರಣಕ್ಕೇನೋ ದೇವರನ್ನು ತಂದೆತಾಯಿಗಳಂತೆ ಕಾಣಿಸುವ ನೂರಾರು ಪ್ರತಿಮೆಗಳ ಉಪಮೆಗಳ ಸಿರಿ ಸಂಪತ್ತುಗಳು ಪವಿತ್ರ ಗ್ರಂಥಗಳಲ್ಲಿ, ಹಾಡುಗಳಲ್ಲಿ, ಸಾಹಿತ್ಯಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ.
ಹೌದು, ನನ್ನ ತಾಯಿ ತೀರಿಕೊಂಡಾಗ ನಾನು ಅತೀವ ದುಃಖದಿಂದ, ಸಣ್ಣ ಮಗುವಂತೆ ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜ. ಏನೋ ನನ್ನ ಬದುಕಿನ ಒಂದು ಭಾಗವೇ ಕಳೆದುಕೊಂಡಂತಹ ವ್ಯಾಕುಲದ ಭಾವ ಹತ್ತಾರು ತಿಂಗಳು ನನ್ನನ್ನು ಕಾಡದೆ ಬಿಡಲಿಲ್ಲ. ಜತೆಗೆ ಅಮ್ಮನನ್ನು ಕಳೆದುಕೊಂಡ ಕೊರಗು ನನ್ನ ಹಿಂಡಿದ ಪರಿಯಂತೂ ಇಲ್ಲಿ ಹೇಳಲು ನನ್ನಿಂದ ಅಸಾಧ್ಯ.
ಈ ಅನುಭವದ ಒಳಹೊಕ್ಕು ನೋಡಿದಾಗ ನನ್ನ ಗ್ರಹಿಕೆಗೆ ಬಂದಿದ್ದು ಇದು. ಹೌದು ಅಮ್ಮ ಸತ್ತಾಗ ಅಮ್ಮನನ್ನು ನೆನಪಿಸುವ ಸಾವಿರಾರು ನೆನಪುಗಳು ನಿಯಂತ್ರಣಶಕ್ತಿ ಕಳೆದುಕೊಂಡು ಭಾವೋದ್ವೇಗದಲ್ಲಿ ದಾಳಿ ಮಾಡುತ್ತಾ ಎಲ್ಲೆಂದರಲ್ಲಿ ಕಲ್ಲು ತೂರುತ್ತಾ ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಾಶಮಾಡುವ ದೊಂಬಿಯಂತೆ (riot) ನನ್ನ ಮನಸ್ಸನ್ನು ಪುಡಿಪುಡಿ ಮಾಡಿಬಿಟ್ಟಿತ್ತು. ಅಮ್ಮ ಮತ್ತು ನನ್ನ ನಡುವಿದ್ದ ಅಂತಃಕರಣವನ್ನು ಧನಾತ್ಮಕವಾಗಿಸಿ ಧೈರ್ಯ ಹೇಳಬೇಕಾದ ನೆನಪುಗಳು, ಋಣಾತ್ಮಕವಾಗಿ ನನ್ನನ್ನು ಮಾನಸಿಕವಾಗಿ ಒಂಟಿತನದ ರೂಮಿನಲ್ಲಿ ಕೂಡಿ ಹಾಕಿ ಆಶಾಶೂನ್ಯನಾಗಿಸಿಬಿಟ್ಟಿತ್ತು. ಆಗ ನಾನು ನನ್ನ ವಿವೇಚನೆಯೇ ಕೆಲಸಮಾಡಲಾಗದಷ್ಟು ಭಾವೋದ್ರಿಕ್ತನಾಗಿಬಿಟ್ಟಿದ್ದೆ. ಆದರೆ ನನ್ನನ್ನು ಹತ್ತಾರು ತಿಂಗಳು ಕಾಡಿದ ನೋವು, ಕೊರಗು, ಖಿನ್ನತೆ, ನನ್ನ ಸ್ವಾರ್ಥದ ಫಲಗಳೇ ಎಂಬುದು ಗ್ರಹಿಕೆಗೆ ಬಾರದಿರಲಿಲ್ಲ. ಅಮ್ಮ ತನ್ನ ಹಾತ್ತಾರು ವರ್ಷಗಳ ನೋವಿನಿಂದ ಬಿಡುಗಡೆಗೊಂಡು ದೇವರ ಅನಂತತೆಯ ಅತಿಥಿಯಾಗಿ ಹೋಗಿದ್ದನ್ನು ಸಂಭ್ರಮಿಸುವುದನ್ನು ಬಿಟ್ಟು ನನ್ನ ಚಿಂತೆಯಲ್ಲೇ ನಾನು ಸ್ವಾರ್ಥಿ ಆಗಿಬಿಟ್ಟಿದ್ದೆ.
ಒಬ್ಬ ಅನುಭವಿ ಹೇಳುತ್ತಾನೆ, ಸಾವೆಂಬುವುದು ಆತ್ಮವನ್ನು ಆವರಿಸಿರುವ ಹೊದಿಕೆಯ ಕಣ್ಮರೆಯಷ್ಟೇ, ಆತ್ಮಕ್ಕೆ ಸಾವಿಲ್ಲ ಅಂತ. ಇನ್ನೂಬ್ಬ ಜ್ಞಾನಿ ಹೇಳುತ್ತಾನೆ, “ಮನುಷ್ಯ ಚಿರಂಜೀವಿ. ಸಾವು ಎಂದರೆ ಜೀವನದ ರೂಪಾಂತರ ಅಷ್ಟೆ” ಅಂತ. ಕ್ರೈಸ್ತರಾದ ನಾವು ಕೂಡ ಕ್ರಿಸ್ತನ ಪುನರುತ್ಥಾನದಲ್ಲಿ ಉತ್ಥಾನರಾಗುತ್ತೇವೆಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತೇವೆ. ಉತ್ಥಾನರಾದವರು ವಿಭಿನ್ನ ರೂಪದಲ್ಲಿ ನಮ್ಮಲ್ಲಿರುತ್ತಾರೆಂಬ ವಿಶ್ವಾಸದ ವಿಸ್ತರಣೆಯೂ ಹೌದು. ಬಾಹ್ಯ ಕಣ್ಣುಗಳಿಗೆ ಕಾಣದ ನಮ್ಮ ಆಂತರಿಕ ಕಣ್ಣುಗಳಿಗೆ ಮಾತ್ರ ಗೋಚರಿಸುವಂತಹ ಮಹಿಮಾ ಇರುವಿಕೆ ಅದು. ಅವರ ಆತ್ಮಗಳು ಸದಾ ನಮ್ಮ ಜೊತೆಯಲ್ಲಿರಲಿ ಮತ್ತು ನಮ್ಮನ್ನು ನಡೆಸಲಿ ಎಂದು ಬೇಡಿಕೊಳ್ಳೋಣ.
ನೀವು ವಿಜ್ಞಾನ ವಿಷಯವನ್ನು ಓದಿಕೊಂಡಿರುವವರು ಸಾಲದ್ದಕ್ಕೆ ವೃತ್ತಿಯಲ್ಲಿ ವೈದ್ಯರು ಬೇರೆ. ನಾವು ನಮ್ಮ ತಂದೆ ತಾಯಿಗಳಿಂದ ಏನೇನು ಎಷ್ಟೆಷ್ಟು ಬಳುವಳಿ ಪಡೆದಿರುತ್ತೇವೆಂಬ ಲೆಕ್ಕಾಚಾರ ನಿಮಗೆ ಗೊತ್ತಿರುವಂತದ್ದು. ಆದರಲ್ಲೂ ಒಂದು ತಾಯಿ ಒಂದು ಮಗುವಿಗೆ ಜನ್ಮ ಕೊಡುವಾಗ ಅನುಭವಿಸುವ ನೋವಿನ ತೂಕ ನಿಮಗೆ ತಿಳಿದೇ ಇದೆ. ಮಗುವಿಗೆ ಜನ್ಮ ಕೊಟ್ಟು ಮಗುವಿನ ಮುಖ ನೋಡಿದಾಕ್ಷಣ ಅವಳ ನೋವು ಅವಳಿಗೆ ನಗಣ್ಯವಾಗಿ ಬಿಡುತ್ತದೆ. ಅದೇ ತಾಯಿಯ ಅಂತಃಕರಣ.
ಈ ಅಂತಃಕರಣವು ಜನ್ಮಕೊಟ್ಟ ಗಳಿಗೆಗೆ ಕೊನೆಗೊಳ್ಳಲಿಲ್ಲ. ಅದು ನಿತ್ಯ ನಿರಂತರವಾಗಿತ್ತು. ತಂದೆತಾಯಿಗಳ ಉದಾತ್ತ ಸೇವೆಯಲ್ಲಿ ಅದು ದೇಹರೂಪ ಪಡೆಯಲಾರಂಭಿಸಿತ್ತು. ಅಶಕ್ತ ಮಗುವಿಗೆ ಹಾಲು ಉಣಿಸಿತ್ತು. ಕಕ್ಕ ಮಾಡಿಕೊಂಡಾಗ ಅಸಹ್ಯ ಪಡೆದುಕೊಳ್ಳದೆ ಒರೆಸಿ ಶುಚಿಗೊಳಿಸಿ ಶುಭ್ರ ಬಟ್ಟೆ ತೊಡಿಸಿತ್ತು, ಅತ್ತಾಗ ಮಡಿಲಲ್ಲಿರಿಸಿಕೊಂಡು ಜೋಗುಳ ಹಾಡಿತ್ತು, ಚಾಚಿದ ಕಾಲುಗಳ ಮೇಲಿರಿಸಿ ಬಿಸಿ ನೀರ ಸ್ನಾನ ಮಾಡಿಸಿ, ಸಾಂಬ್ರಾಣಿ ಸುವಾಸನೆಯನ್ನು ಮೈಗೆ ಘಮಿಸಿ, ಮೈಗೆ ಪೌಡರ್ ಹಚ್ಚಿ, ದೃಷ್ಟಿ ಬೊಟ್ಟು ಹಾಕಿಸಿತ್ತು. ಮಗುವಿನ ರಾತ್ರಿಯ ನಿರಾಂತಕ ಸವಿ ನಿದ್ರೆಗೆ ನಿದ್ರಾಹೀನ ರಾತ್ರಿಗಳ ಕಳೆದಿತ್ತು. ಅದು ನಮ್ಮ ಹೆಜ್ಜೆಗಳಿಗೆ ಕಾಲಾಗಿತ್ತು, ಬೆಳವಣಿಗೆಗೆ ನೀರುಣಿಸಿತ್ತು, ಕನಸುಗಳ ಬೆಳೆಗೆ ಭೂಮಿತಾಯಾಗಿತ್ತು, ನಮ್ಮ ವಿಶ್ವಾಸವಾಗಿತ್ತು, ಓದಿಸಿತ್ತು, ಕಣೀರಿಗೆ ಸಾಂತ್ವನ ಹೇಳಿತ್ತು, ಏಕತನದ ಖಾಲಿ ಮನೆಯಲ್ಲಿ ಆತ್ಮೀಯತೆಯ ತುಂಬಿಸಿತ್ತು. ನಮ್ಮ ಅನಾರೋಗ್ಯದಲ್ಲಿ ಆರೋಗ್ಯವನ್ನು ಬೇಡಿತ್ತು. ನಮ್ಮ ಹಿಗ್ಗುವಿಕೆಯಲ್ಲಿ ತನ್ನನೇ ಕುಗ್ಗಿಸಿಕೊಂಡಿತ್ತು. ಕೊನೆಗೆ ನಮ್ಮ ತುಂಬು ಜೀವದ ಖಾತರಿಗಾಗಿ ತನ್ನ ಜೀವವನ್ನೇ ಅಡವಿಟ್ಟವಿಟ್ಟಿತ್ತು. ಯೋಚಿಸಿ ನೋಡಿ ಮೇಲಿನ ಅಂತಃಕರಣದ ಕೆಲವೊಂದು ಕಾರ್ಯಗಳಿಗೆ ಪ್ರರ್ಯಾಯವೆಂಬುವುದೇ ಇಲ್ಲ. ಒಬ್ಬ ಸಾಹಿತಿ ಅಮ್ಮನನ್ನು ಕುರಿತು ಹೀಗೆ ಹಾಡುತ್ತಾನೆ: ದೇವರಿಗೆ ನಾನು ದಿನ ಮುಗಿಯುವುದಿಲ್ಲ. ಅಮ್ಮನನ್ನು ಜಪಿಸುವುದ ಮರೆಯುವುದಿಲ್ಲ. ನನಗೆ ಅಳು ಬಂದರೆ ಅವಳು ಅತ್ತು ಕರೆಯುವಳು. ನನಗೆ ನಗು ಬಂದರೆ ಅವಳು ನೋವ ಮರೆವಳು. ...
ಕೆಲವೊಮ್ಮೆ ಮೌನಕ್ಕೆ ಶರಣಾದಾಗ. ನನ್ನ ಪ್ರತಿಯೊಂದು ನೆನೆಪಿನ ಹಾಳೆಯಲ್ಲೂ ತಂದೆತಾಯಿಗಳ ಮಾಸದ ಅಚ್ಚಿರುವುದು ನನ್ನಲ್ಲಿ ದೃಢವಾಗುತ್ತದೆ. ಕಾಲದ ರಬ್ಬರ್ ಕೂಡ ಅಳಿಸಲಾಗದ ಬದುಕಿನ ಪುಸ್ತಕ ದಾಖಲಾಗಿರುವ ಈ ನೆನಪುಗಳು ಅದು ನಮ್ಮ ಬದುಕಿನ ಬಲವಾದ ಸಶಕ್ತ ನೆನಪುಗಳೆಂದೇ ಹೇಳಬಹುದು. ಅವರ ಪ್ರತಿಯೊಂದು ಮಾತು, ನಡವಳಿಕೆ, ವಿಶ್ವಾಸ, ರೀತಿನೀತಿ, ದೃಷ್ಟಿ, ತತ್ವ ಸದಾ ನಮ್ಮಲ್ಲಿ ಹಸಿರಾಗಿ ನಮ್ಮ ನಡೆಸುವ, ರೂಪಿಸುವ, ನಡೆಯಲು ದಾರಿತೋರುವ, ತಾಳ್ಮೆ ಹೇಳುವ, ದೃಢವಾಗಿಸುವ ನೆನಪುಗಳಾಗಿವೆ. ಆದರಿಂದಲೇ ಆ ನೆನಪುಗಳನ್ನು ನಾವು ಬದುಕಿನ ಆಧಾರ ನೆನಪುಗಳು ಅಂತನೇ ಹೇಳಬಹುದು. ಒಂದಂತೂ ಸತ್ಯ, ಅವರ ಒಡಲಿನಿಂದಲೇ ಕುಡಿಯೊಡೆದಿರುವ ನಾವು ಅವರ ನೆನಪುಗಳು ಇಲ್ಲದೇ ಬದುಕಲು ಅಸಾಧ್ಯ ಅಂತ. ಅದು ಒಂದು ರೀತಿಯಲ್ಲಿ ವೀಣೆಯಲ್ಲಿರುವ ಸಂಗೀತದಂತೆ.
ನಾವೆಲ್ಲಾ ಅವರ ಗಿಡದ ಹೂವುಗಳಾಗಿ ಮತ್ತೊಂದು ಬೀಜಗಳಾಗಲು ಕಾರಣವೇ ನಮ್ಮ ತಂದೆತಾಯಿಗಳು. ಆವರ ಗಿಡಗಳಲ್ಲಿ ಆರಳಿದ ನಾವು ಅವರ ಫಲಗಳು, ಅವರ ಅನುರೂಪಿಗಳು. ಅ ಗಿಡಗಳನ್ನು ಅನಂತವಾಗಿಸುವ ಸಂತತಿಯ ಬೀಜಗಳು ಹೌದು. ಆದ್ದರಿಂದ ನಮ್ಮ ಆತ್ಮೀಯ ತಂದೆ ತಾಯಿಗಳನ್ನು ಕಳೆದುಕೊಳ್ಳುವುದೆಂದರೆ ಜೀವದ ಮೂಲವನ್ನೇ ಕಳೆದುಕೊಂಡ ಅನುಭವ. ಅದು ಹೂವು ತನ್ನ ತಾಯಿಬೇರನ್ನೇ ಕಳೆದುಕೊಂಡಂತೆ. ಇದು ನಿಮ್ಮ ಅನುಭವವೂ ಕೂಡ ಅಂತ ನನ್ನ ಭಾವನೆ. ಆದರೂ ತಂದೆತಾಯಿಗಳನ್ನು ಬಿಟ್ಟು ನಾವು ಮತ್ತೊಂದು ಗಿಡಗಳಾಗಿ ಮರಗಳಾಗಬೇಕು. ಅದು ಪ್ರಕೃತಿಯ ನಿಯಮ. ಹೌದು ಅಕ್ಕ ನಾನು ಇಲ್ಲಿ ತಂದೆತಾಯಿಗಳ ಬಗ್ಗೆ ಯಾವ ಪ್ರಬಂಧ ಬರೆಯಲು ಕೂತಿಲ್ಲ. ಅದನ್ನು ಬರೆಯುವ ಸಾಮರ್ಥ್ಯವು ನನಗಿಲ್ಲ. ಏನೋ ನನ್ನ ಒಡಲಾಳ ಮಾತುಗಳು. ಅಕ್ಷರಗಳಾಗುತ್ತಿವೆ ಅಷ್ಟೇ.
ಅಕ್ಕ, ನಿಮ್ಮ ತಂದೆಯ ಬಗೆಗಿನ ನನ್ನ ಮಾಹಿತಿ ಅಷ್ಟಕಷ್ಟೆ. ಅವರು ಬದುಕಿನ ತುತ್ತತುದಿಯ ಶಿಖರದ ಮೇಲಿದ್ದಾಗ, ನಾನು ಕಣ್ಣು ಕಣ್ಣು ಬಿಡುತ್ತಾ ಆಗತಾನೆ ಲೋಕಕ್ಕೆ ತೆರೆದುಕೊಳ್ಳುತ್ತಿದ್ದ ಚಿಕ್ಕ ಪೋರ. ಅದ್ದರಿಂದ ಅಪ್ಪನ ಬಗ್ಗೆ ಒಂದೇ ಒಂದು ಮಾತು ಮಾತ್ರ ಹೇಳಬಲ್ಲೇ. ಬಡತನವೆಂಬ ಬಂಡುಕೋರನಿಗೆ ಮಂಡಿಯೂರದೆ ಬಡತನವನ್ನು ಮೆಟ್ಟಿ ನಿಂತ ಸ್ವಾಭಿಮಾನಿ ಅಂತ, ಗಿಡಕ್ಕೆ ಹೂವೇ ಸಾಕ್ಷಿ ಎಂಬಂತೆ, ನಿಮ್ಮಲ್ಲಿ ಹುದುಗಿರುವ ಆ ಸ್ವಾಭಿಮಾನವೇ ನನ್ನ ಮಾತಿನ ಕೋರ್ಟಿನಲ್ಲಿ ಸಾಕ್ಷಿಯಾಗಿ ನಿಲ್ಲಬಹುದೇನೋ!
ಅಮ್ಮ ಅಂದ್ರೆ ನನ್ನ ಅತ್ತೆ. ಮುಗ್ಧ ಮನಸ್ಸಿನ ಮಗು,ಬೇಧ ಭಾವ, ಲಾಭನಷ್ಟ ಲೆಕ್ಕಚಾರಗಳನ್ನು ತಿಪ್ಪೆಗೆಸೆದಿದ್ದ ಉದಾರಿ. ಎಲ್ಲರನೂ ತನ್ನ ಮಕ್ಕಳಂತೆ ಕಾಣುವಂತಹ ಮನೋಭಾವದಿಂದ ತನ್ನ ಕುಟುಂಬವನ್ನು ಬಲೂನಂತೆ ಉಬ್ಬಿಸಿಕೊಂಡಿದ್ದ ಅವರು ಪ್ರತಿಯೊಬ್ಬರ ಶ್ರೇಯಸ್ಸಿಗೆ ದಿನಂಪ್ರತಿ ಪ್ರಾರ್ಥಿಸಿದ ಉದಾತ್ತ ವ್ಯಕ್ತಿಯೂ ಹೌದು. ಇಂತಹ ವೈಶಾಲ್ಯತೆಯ ಹೃದಯವು ಎಂದೂ ಲಾಭನಷ್ಟದ ಲೆಕ್ಕಚಾರದ ಸುದ್ದಿಗೆ ಹೋಗಲೇ ಇಲ್ಲ. ಅವರು ಲೆಕ್ಕಚಾರದಿಂದೆನಾದರೂ ಬಂಧಿಯಾಗಿದ್ದಿದ್ದರೆ, ಅವರ ಆತಿಥ್ಯವನ್ನು ಸ್ವೀಕರಿಸುವ ಅವಕಾಶಗಳು ನಮಗೆಲ್ಲಿರುತಿತ್ತು? ಜತೆಗೆ ಹತ್ತಾರು ರೀತಿಯ ತಿಂಡಿತಿನಿಸುಗಳ ರುಚಿಸುವ ಸೌಭಾಗ್ಯ ನಮಗೆಲ್ಲಿ ಸಿಗುತಿತ್ತು? ನಿಮಗೆ ಗೊತ್ತಿದ್ಯೋ ಇಲ್ವೋ. ಅವರ ಆತಿಥ್ಯದಲ್ಲಿ ಯಾವುದೇ ಬಗೆಯ ತೋರಿಕೆಯಾಗಲಿ, ವ್ಯಾವಹಾರಿಕ ನಿರೀಕ್ಷೆಗಳಾಗಲೀ, ಹೋಟೆಲ್ಲಿನ ವ್ಯಾಪಾರವಾಗಲೀ ಇರಲಿಲ್ಲ. ಆತಿಥ್ಯವನ್ನು ಆತಿಥ್ಯಕ್ಕಾಗಿಯೇ ಮಾಡುತ್ತಿದ್ದ ಒಬ್ಬ ಸಜ್ಜನ ಆತಿಥೇಯ ಅವರಾಗಿದ್ದರು. ವ್ಯಕ್ತಿಯ ಶ್ರೇಷ್ಠತೆಯ ಗುಟ್ಟು ಇರುವುದು ಕೂಡಿಕೆಯಲ್ಲಲ್ಲ ಕೊಡುವಿಕೆಯಲ್ಲಿ, ಅದು ಉದಾರಿ ಹೃದಯದ ಮೂರ್ತ ರೂಪವೂ ಕೂಡ. ಒಂದು ಮಾತಿನಲ್ಲಿ ಹೇಳುವುದಾದರೆ, ಅಮೂರ್ತ ಉದಾರತೆಯ ಮೂರ್ತ ರೂಪವೇ ಅವರಾಗಿದ್ದರು.
ಎರಡನೇದು, ಎಲ್ಲದರಲ್ಲೂ ಗುಣಾತ್ಮಕ ಅಂಶಗಳನ್ನು ಕಾಣುವುದು ಅವರ ಜಾಯಮಾನವಾಗಿತ್ತು. ಒಂದ್ಗಳಿಗೆ ಅವರ ಬದುಕಿಗೆ ದೃಷ್ಟಿಯಾಯಿಸಿ ನೋಡಿ… ಅವರು ಎಂದೂ ಯಾರನ್ನೂ ದೂಷಿಸಿದವರಲ್ಲ, ಯಾರ ಬಗ್ಗೆಯೂ ಅವಹೇಳನ ಮಾತುಗಳನ್ನಾಡಿದವರಲ್ಲ, ತಮ್ಮ ಬಗೆಗಿನ ಚಾಡಿ ಮಾತಿಗೆ ಯಾವತ್ತೂ ಪ್ರತಿಕ್ರಿಯಿಸಿದರಲ್ಲ, ಮುನಿಸಿಕೊಂಡವರಲ್ಲ. ಇವೆಲ್ಲಾವೂ ಪಕ್ವ ಮನಸ್ಸಿನ ಚಿತ್ರಣವೇ ಅಂತನೇ ಹೇಳಬಹುದು. ಕಸದಲ್ಲೂ ರಸವನ್ನು ಕಾಣುವುದು ಅವರ ಹುಟ್ಟು ಗುಣವಾಗಿತ್ತು. ಲೋಕವೆಲ್ಲಾ ಕತ್ತಲೆಂದು ದೂಷಿಸುತ್ತಿದ್ದರೆ, ಕತ್ತಲೆಗೆ ದೀಪ ಹಿಡಿಯುವ ಪಕ್ವ ಮನಸ್ಸು ಅವರದಾಗಿತ್ತು, ಅಂತಹ ಮೇರುವ್ಯಕ್ತಿಯು ನನ್ನ ಅತ್ತೆ ಆಗಿದ್ದರು ಎಂಬುವುದೇ ನನ್ನ ಹೆಮ್ಮೆ.
ಇನ್ನೊಂದು ಕಡೆ, ಅವರದು ಪಾದರಸದಂತಹ ಚುರುಕುತನ. ಅವರನ್ನು ಎಂದೂ ಸೋಮಾರಿಯಾಗಿ ಕೂತಿದಾಗಲೀ, ಮಲಗಿದ್ದಾಗಲೀ ನಾನು ಕಂಡೇ ಇಲ್ಲ. ಸದಾ ಕೆಲಸ ಕಾರ್ಯಗಳಲ್ಲಿ ತಮ್ಮನ್ನೇ ತೊಡಗಿಸಿಕೊಳ್ಳುವುದರಲ್ಲಿ ಅವುಗಳನ್ನು ತದೇಕಚಿತ್ತದಿಂದ ನಿರ್ವಹಿಸುತ್ತಿದ್ದುದು ನಿಜವಾಗಲೂ ಶ್ಲಾಘನೀಯ. ಕೆಲಸ ಅವರಿಗೆ ಎಂದೂ ಹೊರೆಯಾಗಿರಲಿಲ್ಲ. ಅವು ವ್ಯಕ್ತಿಯ ಬಗೆಗಿನ ಅವರ ಆಂತರಿಕ ಪ್ರೀತಿ ಮತ್ತು ಆರೈಕೆಯ ಅಭಿವ್ಯಕ್ತಿಗಳಾಗಿದ್ದವು. ಎಂತಹ ಕೆಲಸವನ್ನೂ ನಿಭಾಯಿಸಬಲ್ಲೆ ಎಂಬ ಆತ್ಮಶಕ್ತಿ ಅವರಲ್ಲಿ ತುಂಬಿ ತುಳುಕುತ್ತಿತ್ತು, ಬದುಕಿನ ಸಂದಿಗ್ಧ ಪರಿಸ್ಥಿತಿಗಳನ್ನು ಅವಕಾಶಗಳ ಮೆಟ್ಟಿಲುಗಳಾಗಿಸಿಕೊಂಡು ಬದುಕಿನ ಏಣಿಯನ್ನು ಏರಿದವರು ಅವರು. ಒಂದು ಹಳ್ಳಿಯಿಂದ ಬಂದ ಮುಗ್ಧೆ ಹೇಗೆ ಪಟ್ಟಣದಲ್ಲಿ ತನ್ನ ಸಾಂಸಾರಿಕ ಜವಬ್ಧಾರಿಯನ್ನು ಅತ್ಯಂತ ಶ್ರದ್ಧೆಯಿಂದ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯ್ತು? ಕೊನೆಗೆ ತನ್ನ ಇಳಿ ವಯಸ್ಸಿನಲ್ಲೂ ಇನ್ನೊಬ್ಬರಿಗಾಗಿ ಬಾಳಿದ ತ್ಯಾಗಿಮಯಿ ಅವರು. ಒಂದು ಮಾತಿನಲ್ಲಿ ಹೇಳುವುದಾದರೆ, ಕ್ರಿಸ್ತನ ಶಿಲುಬೆಯ ಅರ್ಥಕ್ಕೆ ವ್ಯಾಖ್ಯಾನವೇ ಆಗಿಬಿಟ್ಟಿತ್ತು ಅವರ ತುಂಬು ಬದುಕು. ಕುಟುಂಬದ ಇಂತಹ ಮೇರುವ್ಯಕ್ತಿಗಳ ಬದುಕಿನ ವ್ಯಾಖ್ಯಾನದಲ್ಲಿ ನಮ್ಮ ಬದುಕಿನ ಅರ್ಥ ತಿಳಿದುಕೊಳ್ಳೋಣವೇ?
ಕೊನೆಗೆ ಹೇಳಲೇಬೇಕಾದ ಒಂದೇ ಒಂದು ಮಾತು:
ನನ್ನಮ್ಮ, ನನ್ನತ್ತೆ ಸಮೀಪಿಸಿದಷ್ಟು ದೂರವಾಗುವ ಕಾಲುದಾರಿಗಳು, ಗ್ರಹಿಕೆಗೆ ಪ್ರಯಾಸ ಕೇಳುವ ಪುಸ್ತಕಗಳು, ತಮ್ಮ ಚಿಕ್ಕಪುಟ್ಟ ಆಟಗಳಲ್ಲಿ ಹಾಸುಹೊಕ್ಕ ಪುಟ್ಟ ಬಾಲಕಿಯರು, ಬರಹಗಾರರಿಗೆ ಆಗಬಹುದಾದ ಒಂದು ಹಿಡಿ ಕಾದಂಬರಿಗಳು.
ಅವರ ಆತ್ಮಕ್ಕೆ ಶಾಂತಿ ನಿತ್ಯವಾಗಲಿ.
No comments:
Post a Comment