Friday, 12 July 2019

ದನಿ ರೂಪಕ

ಅಷ್ಟ ಭಾಗ್ಯಗಳು
ಅಷ್ಟ ಭಾಗ್ಯಗಳು ಎಂಬ ಪಠ್ಯದಲ್ಲಿ ಪುನರಾವರ್ತನೆಗೊಂಡಿರುವ ಭಾಗ್ಯವಂತರು ಎಂಬ ಪದವು ಆಂಗ್ಲ ಭಾಷೆಯ Blessed ಎಂಬ ಪದದ ಕನ್ನಡ ಅವತರಣಿಕೆ. ಆಂಗ್ಲ ಭಾಷೆಯ ಶುಭಸಂದೇಶದಲ್ಲಿ ಈ ಸಂಪೂರ್ಣ ಪಠ್ಯವನ್ನು Beatitude ಎಂಬ ಶಿರ್ಷಿಕೆಯಡಿಯಲ್ಲಿ ಕೊಡಲಾಗಿದೆ. ಈ ಪಠ್ಯವು beatitudes ಅಂತಾಲೇ ಜಗತ್ಪಸಿದ್ಧ. Beatitude ಅನ್ನೊದು ಗ್ರೀಕ್‍ಪದವಾದ macarius ಎಂಬ ಪದದಿಂದ ಭಾಷಾಂತರಗೊಂಡಂತಹ ಆಂಗ್ಲ ರೂಪ. Macarius ಎಂಬ ಪದವು ಪರಮಸುಖ ಹಾಗೂ ಭಾಗ್ಯವೆಂಬ ಸಂಯೋಗ ಅರ್ಥವನ್ನು ನೀಡುತ್ತದೆ. ಆದ್ದರಿಂದ beatitude‍ ಎಂಬ ಪಠ್ಯ ಪರಮಸುಖದ ಸೌಭಾಗ್ಯ ಜೀವನಕ್ಕೆ ಬೇಕಾದ ಮೂಲಭೂತ ಮನೋಭಾವ, ಮನೋಸ್ಥಿತಿ ಮತ್ತು ಬದುಕ ರೀತಿಯನ್ನು ತಿಳಿಹೇಳುವ ಪಠ್ಯ. ಒಂದು ಮಾತಿನಲ್ಲಿ ಹೇಳಬೇಕಾದರೆ, ಈ ಪಠ್ಯವು ಭಾಗ್ಯವಂತ ಸುಖಭರಿತ ಕ್ರೈಸ್ತ ಜೀವನಕ್ಕೆ ಅಥವಾ ಕ್ರಿಸ್ತನೊಂದಿಗಿನ ಒಡನಾಟದ ಸಂಬಂಧಕ್ಕೆ ಆಯಕಟ್ಟು ಹಾಗೂ ರೀತಿನೀತಿಗಳನ್ನು ನಿರ್ದೇಶಿಸುವ ಸಂವಿಧಾನ. 

ಅಮರ ಜೀವನ ಪಡೆಯಲು ಪೂರೈಸಬೇಕಾದ ಬೇಡಿಕೆಗಳನ್ನು, ಸ್ವರ್ಗಲೋಕವನ್ನು ಪ್ರವೇಶಿಸಲು ಬದುಕಬೇಕಾದಂತಹ ಯೋಗ್ಯ ಜೀವನವನ್ನು ನಾವು ಕ್ರಿಸ್ತನಿಂದ ಕೇಳಿದ್ದೇವೆ. ಅಮರ ಜೀವನದ ಪ್ರಾಪ್ತಿಗೆ ಧನಿಕನು ಕಟ್ಟಳೆಗಳನ್ನು ಪಾಲಿಸುವುದರೊಂದಿಗೆ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ, ಬಡವರಿಗೆ ಹಂಚಿ, ಕ್ರಿಸ್ತನನ್ನು ಹಿಂಬಾಲಿಸಲೇಬೇಕು. ಇನ್ನೊಂದು ಕಡೆ, ಸ್ವರ್ಗ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿಸಿಕೊಳ್ಳಬೇಕಾದರೆ, ಹಸಿದಿದ್ದವನಲ್ಲಿ, ಬಾಯಾರಿದವನಲ್ಲಿ ಅಪರಿಚಿತನಲ್ಲಿ, ಬಟ್ಟೆಬರೆಯಿಲ್ಲದವನಲ್ಲಿ, ರೋಗಿಯಲ್ಲಿ, ಬಂಧಿಯಾದವನಲ್ಲಿ ಕ್ರಿಸ್ತನನ್ನು ಕಂಡು ಆರೈಕೆ ಮಾಡಲೇಬೇಕು. ಕ್ರಿಸ್ತನ ಈ ಬೇಡಿಕೆಗಳು ಮೂಲಭೂತವಾಗಿ ಪಾಲಿಸಬೇಕಾದಂತವುಗಳೇ. ಇವುಗಳಿಗೆ ಪರ್ಯಾಯ ಅಥವಾ ಬದಲಿ ಎಂಬುವುದಿಲ್ಲ. 

ಅಂತಯೇ ಕ್ರೈಸ್ತ ಪರಮಸುಖ ಸೌಭಾಗ್ಯದ ಬದುಕಿಗೆ, ಕಿಸ್ತನೊಂದಿಗಿನ ಅನನ್ಯ ಬದುಕಿಗೆ ಮೂಲಭೂತವಾಗಿ ಇರಬೇಕಾದ ಮನಸ್ಥಿತಿ, ಮನೋಭಾವವನ್ನು ಕ್ರಿಸ್ತನ ಸಂಪೂರ್ಣ ಬೋಧನೆಯ ಸಾರವೆಂದೇ ಕರೆಯಲ್ಪಡುವ ಆಷ್ಟಭಾಗ್ಯಗಳು ಎಂಬ ಪಠ್ಯವು ನಮಗೆ ತಿಳಿಹೇಳುತ್ತದೆ. ಒಟ್ಟಾರೆ, ಒಬ್ಬನು ತಾನು ಭಾಗ್ಯವಂತನಾಗಬೇಕಾದರೆ ತನ್ನಲ್ಲಿ ಇರಿಸಿಕೊಳ್ಳಬೇಕಾದ ಮನೋಸ್ಠಿತಿಯನ್ನು ಅನಾವರಣಗೊಳಿಸುತ್ತದೆ ಈ ವಚನ: 

¨ ತನ್ನ ಸಂಪೂರ್ಣ ಅಸಹಾಯಕತೆಯನ್ನು ಅರಿತು, ದೇವರ ಮೇಲೆ ಪೂರ್ಣ ಅವಲಂಬಿತನಾಗಿ ಬಾಳಬೇಕಾದ ಪಾರಮಾರ್ಥಿಕ/ ಆಧ್ಯಾತ್ಮಿಕ ಬಡತನ,

¨ ಜಗತ್ತಿನ ದುಷ್ಟತೆಯಿಂದ ನೊಂದು ಬೆಂದವರ ನೋವಿಗೆ ಮರುಗುತ್ತಲೇ ತಾನು ಮಾಡಿದ ಪಾಪಗಳಿಗೂ ದುಃಖಿಸುವ ಸಂತೈಸುವ ಮೃದು ಮನಸ್ಸು

¨ ಹಿಂಸಾತ್ಮಕ ಪರಿಸ್ಥಿತಿಯಲ್ಲೂ ಸೌಮ್ಯತೆಯಿಂದ ಅಹಿಂಸಿಯಾಗಿ ತನ್ನುನ್ನು ದೇವರ ಅಧೀನಕ್ಕೆ ಒಳಪಡಿಸಲು ಹಿಂಜರಿಯದ ವಿನಯ,

¨ ನ್ಯಾಯನೀತಿಗೆ ಹಸಿದು ಹಾತೊರೆಯುವ ಸಾಮಾಜಿಕ ಕಾಳಜಿ, 

¨ ಸಕಲ ಸೃಷ್ಟಿಗೂ ದೇವರ ದಯೆಯನ್ನು ಬಿಂಬಿಸುವ ಅಂತಃಕರಣ,

¨ ಒಡಕಿನ ಸಮಾಜದಲ್ಲಿ ಶಾಂತಿಯ ಸ್ಥಾಪನೆಗೆ ಶಕ್ತಿಮೀರಿ ಶ್ರಮಿಸಬೇಕಾದ ಮನೋಧರ್ಮ

¨ ಎಲ್ಲವನ್ನೂ ಎಲ್ಲರನ್ನೂ ಶುದ್ಧಮನಸ್ಸಿನಿಂದ ಕಾಣುವ ನಿರ್ಮಲ ಕಣ್ಣು

¨ ನ್ಯಾಯನೀತಿಯ ಸ್ಥಾಪನೆಯ ಹಾದಿಯಲ್ಲಿ ಒದಗಿ ಬರುವ ಹಿಂಸೆಯನ್ನು ಸಹಿಸಲು, ಅನುಭವಿಸಲು ದೃಢ ಸಂಕಲ್ಪ.

ಇವೆಲ್ಲವೂ ಕ್ರೈಸ್ತ ಬದುಕಿಗೆ ಆಧಾರ ಮತ್ತು ಮಾರ್ಗಸೂಚಿಗಳು. ಕ್ರೈಸ್ತತೆಯನ್ನು ಕ್ರೈಸ್ತತತ್ವವನ್ನು ಸಾದರ ಪಡಿಸುವಂತಹ ಪ್ರಣಾಳಿಕೆಯಿದು. ಒಬ್ಬನು ಕ್ರೈಸನಾಗಬೇಕಾದರೆ / ಕ್ರೈಸ್ತನೆಂದೆನ್ನಿಸಿ ಕೊಳ್ಳಬೇಕಾದರೆ ಮೇಲಿನ ಅಷ್ಟಭಾಗ್ಯಗಳನ್ನು ಅವನು ತನ್ನ ಬದುಕಾಗಿಸಿ ಕೊಳ್ಳಲೇಬೇಕು. ಇದಕ್ಕೆ ಪರ್ಯಾಯವೆನ್ನುವುದೇ ಇಲ್ಲ. 

ಇವುಗಳನ್ನು ಅನುಸರಿವುದು ದೇವರ ಹತ್ತು ಆಜ್ಞೆಗಳನ್ನು ಪಾಲಿಸಿದಷ್ಟು ಸುಲಭವಲ್ಲ. ಕೆಲವೊಮ್ಮೆ ಆಜ್ಞೆಗಳ ಮೂಲ ಉದ್ದೇಶಗಳ ಗ್ರಹಿಕೆಯಿಲ್ಲದೆ ಪ್ರೀತಿಯಿಲ್ಲದೆಯೂ ನಮ್ಮ ಸ್ವಾರ್ಥ ಅಥವಾ ಸ್ವಹಿತಕ್ಕಾಗಿ ನಾವು ಅವುಗಳನ್ನು ಪಾಲಿಸಿಬಿಡಬಹುದು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಅಷ್ಟಭಾಗ್ಯಗಳೆಂಬುದು ಅಜ್ಞೆಗಳಲ್ಲ; ಪಾಲಿಸಬೇಕಾದ ನಿಯಮಗಳಲ್ಲ. ಇದು ಕ್ರೈಸ್ತನಲ್ಲಿ ಇರಲೇಬೇಕಾದ ಮನೋಭಾವ. ಕ್ರೈಸ್ತ ಬದುಕಿನ ಸಾರಂಶ ಮತ್ತು ವ್ಯಾಖ್ಯಾನ. ದೇವರಲ್ಲಿ ಮತ್ತು ಪರರಲ್ಲಿ ಅಪಾರ ಪ್ರೀತಿ ಇರಿಸಿಕೊಂಡವನ್ನು ಮಾತ್ರ ಈ ಅಷ್ಟಭಾಗ್ಯಗಳನ್ನು ತನ್ನದಾಗಿಸಿಕೊಳ್ಳಲು ಸಾಧ್ಯ. ಇಲ್ಲದೆ ಹೋದರೆ, ನಾವು ಬೆಟ್ಟವನ್ನು ಮೇಲೆಕೆಳಗೆ ಮಾಡಿದರೂ ಅವು ನಮ್ಮ ಬದುಕಾಗುವುದಿಲ್ಲ. ಇಂದು ಆಷ್ಟಭಾಗ್ಯಗಳ ಪಠ್ಯದ ನೆರಳಲ್ಲಿ ನಮ್ಮ ಬದುಕನ್ನು ವಿಮರ್ಶಿಸಿಕೊಳ್ಳಬೇಕಾಗಿದೆ. ಇಂತಹ ವಿಮರ್ಶೆ ಖಂಡಿತವಾಗಿ ನಾವು ಕ್ರಿಸ್ತನ ಹಿಂಬಾಲಕನೋ ಇಲ್ಲವೋ ಎಂಬುವುದನ್ನು ಸ್ಪಷ್ಟವಾಗಿ ನಮಗೆ ತಿಳಿಸಿಬಿಡುತ್ತದೆ. 





No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...