Friday, 12 July 2019

ವೇಶ್ಯೆಯ ಪ್ರಸಂಗ


(ಮೂಲ: ಹಿರೇಬಳ್ಳಾಪುರ ಸುಬ್ಬರಾಯಪ್ಪನವರ ’ಏಸು ಸ್ವಾಮಿಯ ಕಥೆ’ ಎಂಬ ಮೂಡಲಪಾಯ ಯಕ್ಷಗಾನ]

... ಶಾಸ್ತ್ರಿಗಳು ಒಬ್ಬ ವೇಶ್ಯೆಯನ್ನು ಎಳೆದುಕೊಂಡು ಬಂದು ಏನೆಂದು ಪೇಳುತ್ತಿರ್ದಾರದೆಂತೆನೇ |

ಹರಿಕಾಂಭೋದಿ ರಾಗ ||ತ್ರಿಪುಡೆ||
ಸಾರಿ ಹೇಳುವೆ ಕೇಳಿರೀಕೆಯು |
ಮಾರಿಯಂತೆ ಊರ ಹುಡುಗರ |
ಮಾರ ತಾಪಕೆ ಸೇರಿಸುವಳು | ದಾರಿ ಕೆಡಿಸುವಳು || 1 ||

ಹಿಂದೆ ಮೋಶೆಯ ಆಜ್ಞೆಯಂತೆ |
ಬಂಧನವನು ಇಂದು ಮಾಡಿಸು |
ಚಂದದಿಂದಲೇ ಮರಕೆ ಕಟ್ಟಿಸಿ | ಇಂದು ಕೊಲ್ಲಿಪುದು || 2 ||

ಪೂರ್ವ ಕಾಲದ ಮೋಶೆ ಮಾರ್ಗವ |
ಮೀರದಂತೆ ವೇಶ್ಯೆ ಈಕೆಗೆ |
ಭಾರಿ ಶಿಕ್ಷೆಯ ಮಾಡಿಸೆಂದು | ಸಾರಿ ಪೇಳಿದನು || 3 ||

ವಚನ

ಈ ಪ್ರಕಾರವಾಗಿ ಶಾಸ್ತ್ರಿಗಳು ಆ ವೇಶ್ಯೆಯನ್ನು ಯೇಸುದೇವನ ಬಳಿಗೆ ಕರೆದುಕೊಂಡು ಹೋಗಿ ನಿಲ್ಲಿಸಿ, ಈಕೆಯು ಮಹಾ ವ್ಯಭಿಚಾರಿಣಿ, ಈಕೆಯು ಬಡ ಹುಡಗರಿಗೆಲ್ಲ ವ್ಯಭಿಚಾರ ಕಲಿಸಿ, ತಂದೆ ತಾಯಿಗಳ ಮಾತುಗಳನ್ನು ಕೇಳದೆ, ಹುಡುಗರು ದುರ್ಮಾರ್ಗ ಪ್ರವರ್ತಕರಾಗಿ ಗುರುಹಿರಿಯರೆಂದು ತಿಳಿಯದೆ ನಿಂದಿಸುವರು. ಹಿಂದೆ ಮೋಶೆ ಹೇಳಿರುವ ಧರ್ಮಶಾಸ್ತ್ರದಂತೆ ಮಾಡಿಸೆನಲು ವೇಶ್ಯೆಯು ಏನೆನುತ್ತಿರ್ದಳದೆಂತೆನೆ ||

ಅರಿಯದೆ ಮಾಡಿದೆ | ಗುರುವೆ ಈ ಕಾರ್ಯವ | ಯೇಸುದೇವ |
ಅರಿತು ಮನ್ನಿಸಬೇಕು | ಗುರುವರನಾಗಿಹ | ಯೇಸುದೇವ || 1 ||

ಚರಣವ ಪಿಡಿದೀಗ | ಪರಿ ಪರಿ ಬೇಡುವೆ | ಯೇಸುದೇವ |
ಕರುಣೆಯ ತೋರಿಸು | ಶರಣೆಂದು ಬೇಡುವೆ | ಯೇಸುದೇವ || 2 ||

ನಾನು ಮಾಡುವುದಿಲ್ಲ | ಹೀನ ಕಾರ್ಯವ ಇನ್ನು | ಯೇಸುದೇವ |
ನೀನು ಮನ್ನಿಸಿ ಎನ್ನ | ಮಾನವ ರಕ್ಷಿಸು | ಯೇಸುದೇವ || 3 ||

ವಚನ
ಈ ಪ್ರಕಾರವಾಗಿ ಆ ವ್ಯಭಿಚಾರಿಣಿಯು ಯೇಸುದೇವನ ಪಾದ ಕಮಲಗಳಿಗೆ ನಮಸ್ಕರಿಸಿ ತಾನು ಮಾಡಿರುವ ತಪ್ಪನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳಲು ಯೇಸುದೇವನು ಆ ಶಾಸ್ತ್ರಿಗಳೊಡನೆ ಏನೇನ್ನತ್ತಿರ್ದಾನದೆಂತೆನೇ |

ಯಾಲಪದ
ಅಂತು ಇಂತು | ಎಂತ ನೋಡೆ | ಅಂತರಂಗದಿ | ತಿಳಿದುನೋಡೆ |
ಭ್ರಾಂತಿ ಅಳಿದು | ಬಯಲು ತೋರ್ಪುದು | ಓ ಶಾಸ್ತ್ರಿಗಳಿರಾ |
ಚಿಂತೆ ಎಂಬ ಭ್ರಾಂತಿ ಇಲ್ಲವು || 1 ||

ಸಕಲ ಜೀವಗಳಿಗೆ ಎಲ್ಲಾ | ಸಕಲೇಶ್ವರನು | ತಾನಾಗಿರುವ |
ಸಕಲ ಜೀವಕೆ ಒಬ್ಬನೆ ಕರ್ತನು | ಓ ಶಾಸ್ತ್ರಿಗಳಿರಾ |
ಸಕಲವನ್ನು ಸಲಹುವಾತನು || 2 ||

ಮೋಶೆ ಧರ್ಮವನ್ನು ನೋಡೆ | ಘಾಸಿಯಲ್ಲವೆ ಜಗಕೆ ಇನ್ನೂ |
ನಾಶಗೈವುದು | ಮೋಸವಲ್ಲವೇ | ಓ ಶಾಸ್ತ್ರಿಗಳಿರಾ |
ಲೇಸು ಮಾತ್ರವು ಸತ್ಯವಿಲ್ಲವು || 3 ||

ವಚನ
ಈ ಪ್ರಕಾರವಾಗಿ ಯೇಸುದೇವನು ಶಾಸ್ತ್ರಿಗಳಿಗೆ, ಮೋಶೆ ಧರ್ಮವನ್ನು ಅನುಸರಿಸಿ ನೋಡಿದರೆ, ಸಕಲ ಚರಾಚರಾತ್ಮಕವಾದ ಪ್ರಾಣಿಗಳಲ್ಲಿಯೂ ಒಬ್ಬಾತ್ಮನೇ ಎಂದು ಸಾರುತ್ತಿರುವಲ್ಲಿ ಈಕೆಯನ್ನು ಮರಕ್ಕೆ ನೇತುಹಾಕಿ, ಕಲ್ಲುಗಳಿಂದ ಹೊಡೆಯಬೇಕೆಂದು ಹೇಳುವುದು ಧರ್ಮವೇ ಎಂದು ಹೇಳಿ, ನಿಮ್ಮಲ್ಲಿ ಪಾಪವಿಲ್ಲದೆ ಪರಮಾತ್ಮನಂತೆ ನಡೆನುಡಿ ಉಳ್ಳವರು ಯಾರೋ, ಆತನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ ಎಂದು ಹೇಳಲು, ಆ ಮಾತನ್ನು ಕೇಳಿ, ತಾವುಗಳೇ ಪಾಪಿಗಳೆಂದು ಮನಸ್ಸಿನಲ್ಲಿ ತಿಳಿದುಕೊಂಡು ಹಿರಿಯರು ಮೊದಲ್ಗೊಂಡು ಕಿರಿಯರವರೆಗೂ ಎಲ್ಲರೂ ತಮ್ಮ ಕೈಯಲ್ಲಿದ್ದ ಕಲ್ಲುಗಳನ್ನು ಬಿಸುಟು, ಒಬ್ಬರ ಹಿಂದೊಬ್ಬರು ಹೊರಗೆ ಹೋದರು. ನಂತರ ಯೇಸುದೇವನು ಆ ಸ್ತ್ರೀಯನ್ನು ಕುರಿತು ಏನೆಂದು ಪೇಳುತ್ತಿರ್ದಾರದೆಂತೆನೆ |


ಬಿಲ್ಹರಿ ರಾಗ || ಏಕ ತಾಳ || ಕಮಾಚ್ ರಾಗ ||

ಕಾಮಿನಿ ಮಣಿಯೇ ಕೇಳು | ಕಾಮ ಎಂಬುವದದು |
ಪ್ರೇಮದ ಆಶೆಯು | ನೇಮ ಕೆಡಿಸುವುದು || 1 ||

ಸೋಮ ಸೂರ್ಯಾದಿಗಳ | ನೇಮ ತಪ್ಪಿಸುವುದು |
ಭಾಮಿನಿ ನೀ ಕೇಳು | ಕಾಮವು ಭ್ರಾಂತಿ || 2 ||

ತರುಣಿಯೇ ನೀ ಕೇಳು | ಚಿರಕಾಲ ನಿನ್ನೊಳಿಹ |
ಸ್ಥಿರವಾದ ಆತ್ಮನ | ಅರಿತು ಬಾಳಮ್ಮ || 3 ||

ವಚನ
ಈ ಪ್ರಕಾರವಾಗಿ ಏಸುದೇವನು ಆ ಸ್ತ್ರೀಯ ಕೂಡೆ ‘ಕಾಮ ವಿಕಾರವು ಜನ್ಮಗಳನ್ನು ಎತ್ತುವಂತೆ ಮಾಡಿ ನರಕ ಕೂಪದಲ್ಲಿ ತಿರುಗಿಸುತ್ತಿರುವುದು. ಆದ್ದರಿಂದ ಕಾಮ ತಾಪಕ್ಕೆ ತಾಳಲಾರದೆ ಮೋಹಾಂಧಕಾರದಲ್ಲಿ ನರಳುತ್ತಿರುವರು. ನೀನು ಸದಾ ಕಾಲದಲ್ಲಿಯೂ ಪರಮಾತ್ಮನ ಧ್ಯಾನ ಮಾಡುತ್ತಿರು’ ಎಂದು ಹೇಳಿ, ಆಕಗೆ - ಅಮ್ಮಾ ನಿನ್ನ ಮೇಲೆ ತಪ್ಪು ಹೊರಿಸುವವರು ಎಲ್ಲಿದ್ದಾರೆ? ನಿನಗೆ ಯಾರೂ ಶಿಕ್ಷೆಯನ್ನು ವಿಧಿಸಲಿಲ್ಲವೋ ಎನ್ನಲು, ಆಗ ಆಕೆಯು ಯಾರೂ ವಿಧಿಸಲಿಲ್ಲ ಎಂದು ಹೇಳಲು, ಯೇಸುಸ್ವಾಮಿಯು ಆಕೆಗೆ - ನಾನೂ ನಿನಗೆ ಶಿಕ್ಷೆಯನ್ನು ವಿಧಿಸುವುದಿಲ್ಲ ಹೋಗು, ಇನ್ನುಮೇಲೆ ಪಾಪ ಮಾಡಬೇಡ ಎಂದು ಹೇಳಿ ಆಕೆಯನ್ನು ಕಳುಹಿಸಿ ಎನೆನ್ನುತ್ತಿರ್ದಾರದೆಂತೆನೇ |

*****



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...