Wednesday, 15 January 2020

ಕೊನೇ ಮಾತು

ನಾವು ಏಕೆ ಬರೆಯುತ್ತೇವೆ?

ಪ್ರೀತಿಯ ಅನುಗೆ, ಸ್ನೇಹಾಂಜಲಿ.
ನಾವು ಏಕೆ ಬರೆಯುತ್ತೇವೆ? ತಮ್ಮ ಬಿಡುವಿಲ್ಲದ ಬ್ಯುಸಿ ಲೈಪ್ ನಲ್ಲೂ ಬ್ಲಾಗ್ ಅಥವಾ ಟ್ವಿಟ್ ಮಾಡಲು celebraties ಹೇಗೂ ಸಮಯ ಹುಡುಕಿಕೊಳ್ಳುತ್ತಾರಲ್ಲ ಏಕೆ? ನೀರು, ಊಟ, ನಿದ್ದೆ,, ನಮ್ಮ ಬದುಕಿನ ಅತ್ಯಾವಶ್ಯಗಳ ಪ್ಯಾಕೇಜ್ ನಲ್ಲಿ ಬರೆಯುವುದು..ಶ್ರುತಪಡಿಸುವುದು ಕೂಡ ಒಂದಾ? ಕುವೆಂಪು ಅಷ್ಟೊಂದು ಕವಿತೆ, ಕಾದಂಬರಿಗಳನ್ನು ಏಕೆ ಬರೆದರು? ಕಾರ್ಲ್ ಮಾಕ್ರ್ಸ್ ಏಕೆ ಕ್ಯಾಪಿಟಲ್ ಎಂಬ ಗ್ರಂಥ ಬರೆದ? ಯಾವ ಶಕ್ತಿ ಯು.ಆರ್ ಅನಂತಮೂರ್ತಿಯವರ ಕೈಯಲ್ಲಿ ಹತ್ತಾರು ಭಾಷೆಗಳಿಗೆ ಅನುವಾದಗೊಂಡಿರುವ ಸಂಸ್ಕಾರ ಎಂಬ ಕಾದಂಬರಿಯನ್ನು ಬರೆಸಿತ್ತು? ಗಿರೀಶ್ ಕಾರ್ನಾಡ್ ರವರು ನಾಟಕಗಳನ್ನು ಬರೆಯಲು ಕಾರಣವೇನಿರಬಹುದು? ಪ್ರರ್ತಕರ್ತರು ದಿನಪ್ರತಿ ಅಷ್ಟೊಂದು ಬರೆದು ದಿನಪತ್ರಿಕೆಯನ್ನು ತುಂಬಿಸುತ್ತಾರಲ್ಲ.. ಕಾರಣವೇನಿರಬಹುದೆಂದು ಎಂದಾದರೂ ನಾವು ಯೋಚಿಸಿದ್ದೇವೆಯೇ? ಮೊನ್ನೆ ರಾಜಕಾರಣಿಯೊಬ್ಬರು ಪ್ರಸ್ತುತ ಸರ್ಕಾರದ ದೌರ್ಬಲ್ಯ ಭ್ರಷ್ಟತೆ ಹಾಗು ನಿಷ್ಕ್ರಿಯತೆಗಳನ್ನು ಜನರಿಗೆ ತಿಳಿಸಲು ಕವಿತೆಗಳ ಮೊರೆ ಹೋಗಿದ್ದಾರಂತೆ!
ಸರ್ಕಾರಗಳ ನಿರ್ಬಂಧವಿದ್ದರೂ ಅನೇಕರು ಸರ್ಕಾರದ ವಿರುದ್ಧ ಬರೆದು ಜೈಲು ಅಥವಾ ಗಡೀಪಾರಾದ ಅನೇಕ ಉದಾಹರಣೆಗಳು ನಮಗೆ ಇತಿಹಾಸದಲ್ಲಿ ಕಾಣಸಿಗುತ್ತವೆ. ಕೆಲವರಂತೂ ಬರೆಯುವುದಕ್ಕಾಗಿಯೇ ಮನೆ, ಆಸ್ತಿ, ಕುಟುಂಬ, ದೇಶ ಕೊನೆಗೆ ತಮ್ಮ ಪ್ರಾಣಗಳನ್ನೇ ಕಳೆದುಕೊಂಡ ಹಸಿ ಸತ್ಯ ನಮ್ಮ ಮುಂದಿದೆ. ಆದ್ದರಿಂದ ಬರೆಯುವುದು ಒಂದು ಗೀಳಾ? ಅಥವಾ ಪ್ರೊಫೆಶನಾ? ಒಡಲಾಳಿನ ಕರೆ ಅಥವಾ ಕೂಗಾ? ನಾನಾ ಕಾರಣಗಳಿಗೆ ನಾವು ಬರೆಯಬಹುದು.
ಕೆಲವರಿಗೆ ಅದೊಂದು ಉದ್ಯೋಗವಾಗಿರಬಹುದು, ಇನ್ನೂ ಕೆಲವರಿಗೆ ಅನೇಕ ಹವ್ಯಾಸಗಳಲ್ಲಿ ಬರೆಯುವುದು ಒಂದು ಹವ್ಯಾಸವಾಗಿರಬಹುದು. ಮತ್ತೆ ಕೆಲವರು ತಮ್ಮ ಅಂತರಂಗದ ಭಾವನೆಗಳನ್ನು ಹೂರಹಾಕಲು ಬರವಣಿಗೆಯನ್ನು ಆಯ್ಕೆ ಮಾಡಿಕೊಂಡಿರಬಹುದು. ಕೆಲವರಿಗಂತೂ ಸಂತೋಷದ ಮೂಲ ಬುಗ್ಗೆಯೇ ಬರವಣಿಗೆಯಾಗಿರಬಹುದು. ಆದರೆ ಬರವಣಿಗೆ ಇಲ್ಲದ ಜಗತ್ತನ್ನು ಒಮ್ಮೆ ಊಹಿಸಿ ನೋಡಿ.. ಬರವಣಿಗೆ ಎಷ್ಟೂ ಅನಿವಾರ್ಯವೆಂದು ಒಡನೆ ನಮಗೆ ಗೋಚರಿಸಿಬಿಡುತ್ತದೆ.
ಜಾರ್ಜು ಅರ್ವೆಲ್ ಎಂಬುವನು ತನ್ನ ಲೇಕನದಲ್ಲಿ ನಾವು ಏಕೆ ಬರೆಯುತ್ತೇವೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ನಾಲ್ಕು ಪ್ರೇರಕ ಶಕ್ತಿಗಳನ್ನು ಪಟ್ಟಿ ಮಾಡುತ್ತಾನೆ. ಮೊದಲನೆಯದು ನಮ್ಮ ಆಹಂ; ನಾವು ಬರೆಯಲು ಅವಿರತವಾಗಿ ಪ್ರೋತ್ಸಾಹಿಸುವ ಒಂದು ಪ್ರೇರಣಾ ಶಕ್ತಿ. ನಾನು ಬುದ್ಧಿವಂತ, ನಾನು ಎಲ್ಲರ ಹೊಗಳಿಕೆಗೆ ಭಾಜನನಾಗಬೇಕು. ನನ್ನ ಬಗ್ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಬೇಕು, ನಾನು ಸತ್ತ ನಂತರವು ಜನ ನನ್ನನ್ನು ನೆನೆದು ಹಾಡಿ ಹೊಗಳಿ ಕೊಂಡಾಡಬೇಕೆಂಬ ವೈಯಕ್ತಿಕ ಆಸೆಗಳಿಗೆ ಹಠ ಬಿದ್ದು ಬರೆಯತೊಡಗಬಹುದು. ಈ ರೀತಿಯ ಡ್ರೈವ್ ವಿಜ್ಞಾನಿಗಳಲ್ಲಿ,
ವಕೀಲರಲ್ಲೂ ವಾಣಿಜ್ಯೋದ್ಯಮಿಗಳಲ್ಲೂ ಕೆಲಸ ಮಾಡುತ್ತಿರುತ್ತದೆ. ಎರಡನೆಯ ಪ್ರೇರಕಾ ಶಕ್ತಿ ರಾಜಕೀಯ ಉದ್ಡೇಶ.
ರಾಜಕೀಯ ಎಂಬುದು ಇಲ್ಲಿ ವಿಶಾಲಾರ್ಥದಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಜಗತ್ತಿಗೆ ಮಾರ್ಗದರ್ಶನ ನೀಡಲು, ಜನರ ಕೆಲವೊಂದು ತಪ್ಪು ಸಿದ್ದಾಂತಗಳನ್ನು ತಿದ್ದಲು, ಸಮಾಜದ ನೈತಿಕತೆಯನ್ನು ವೃದ್ಧಿಸಲು ಹೀಗೆ ನಾನಾ ಕಾರಣಗಳು ಒಬ್ಬನನ್ನು ಬರೆಯಲು ಪ್ರೋತ್ಸಾಹಿಸುತ್ತಿರುತ್ತವೆ. ಮೂರನೆಯ ಕಾರಣ ಐತಿಹಾಸಿಕ ಪ್ರಚೋದನೆಯಿರಬಹುದು. ನಮ್ಮ ನಡುವಿನ ಆಗುಹೋಗುಗಳನ್ನು ನೈಜತೆಯ ಕಣ್ಣುಗಳಲ್ಲಿ ನೋಡಿ ದಾಖಲಿಸಲು, ವಿಷಯಗಳ ಸತ್ಯತೆಯನ್ನು ಹೊರಹಾಕಲು ಅನ್ಯಾಯ ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಸಲು ಜನರು ಬರೆಯುತ್ತಿರುತ್ತಾರೆ. ಕೊನೆಯದು ಸೌಂದರ್ಯಾಸ್ವಾದಕ್ಕೆ ಸಂಬಂಧಿಸಿದ ಶಕ್ತಿ. ಜಗತ್ತಿನ ಸೌಂದರ್ಯವನ್ನು ವರ್ಣಿಸಲು, ಅಥವಾ ಸುಂದರ ಪದಗಳು ಮತ್ತು ಪದಗಳ ಜೋಡನೆಯಿಂದ ರಚನೆಗೊಂಡ ಕಥೆಗಳನಾಗಲ್ಲಿ ಅಥವಾ ಕವಿತೆಗಳನಾಗಲಿ ಇನ್ನೊಬ್ಬರಿಗೆ ತಿಳಿಸಿ ಅದರ ಸ್ವಾದವನ್ನು ಅವರು ಸಹ ಅನುಭವಿಸಲಿ ಎಂಬ ಹಂಬಲದಿಂದ ಬರೆಯುತ್ತೇವೆ. ನಮಗೆ ಅಮೂಲ್ಯವೆನ್ನಿಸುವ ಘಟನೆ ಅಥವಾ ಅನುಭವಗಳನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳಲು ಸಹ ನಾವು ಬರೆಯಬೇಕಾಗುತ್ತದೆ.
ಇನ್ನೊಂದು ಕಡೆ ತಮ್ಮ ಸಿದ್ದಾಂತಗಳನ್ನು promote ಮಾಡಲು, ಸರ್ಕಾರ ಅಥವಾ ರಾಜಕೀಯ ಪಕ್ಷಗಳಿಗೆ ಗುಲಾಮರಾಗಿ ಅವುಗಳನ್ನು ಸಮರ್ಥಿಸಲು, ಜನರ ಮಧ್ಯೆ ಒಡಕನ್ನು ಮೂಡಿಸಿ ಸಾಮರಸ್ಯವನ್ನು ಕೆದಡಲು, ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವರ್ಗ, ಜಾತಿ ವ್ಯವಸ್ಥೆಗಳನ್ನು ಸಮರ್ಥಿಸಲು ಹೀಗೆ ನಾನಾ ಕಾರಣಗಳಿಗೋಸ್ಕರ ಬರೆಯುವವರನ್ನು ಸಹ ನಾವು ಕಾಣುತ್ತೇವೆ.
ಬರೆಯುವುದು ಸುಲಭದ ಮಾತಲ್ಲ. ಅದು ಒಂದು ರೀತಿ ಮಗುವಿಗೆ ಜನ್ಮ ಕೊಟ್ಟಾಗೆ. ಅದು ನಮ್ಮ ಶಕ್ತಿಯನ್ನೆಲ್ಲಾ  ಹಿಂಡಿ ಹೀರಿ ಬಿಡುವ ಹೆಣಗಾಟ. ಅರ್ಥಮಾಡಿಕೊಳ್ಳಲಾಗದ, ನಿಗ್ರಹಿಸಲಾಗದ ಯಾವುದೋ ಶಕ್ತಿಯಿಂದ ಪ್ರೇರಿತಗೊಂಡವನು ಮಾತ್ರ ಈ ರೀತಿಯ ಸೆಣಸಾಟಕ್ಕೆ ಕೈಹಾಕಬಹುದು. ಕೆಲವೊಮ್ಮೆ ತಮ್ಮ ಅಭಿವ್ಯಕ್ತಿಗೆ ಸರಿಯಾದ ಪದ ಅಥವಾ ವಾಕ್ಯಗಳು ಸಿಗದೆ ನಿದ್ದೆ ಊಟ ಬಿಟ್ಟವರು ಸಹ ನಮ್ಮಲ್ಲಿದ್ದಾರೆ.
ಹೌದು, ನಮ್ಮ ಯೋಜನೆಗಳನ್ನು ಜೀವನ ಅನುಭವಗಳನ್ನು ಅನುಭವಗಳಿಂದ ಕಲಿತೆ ಪಾಠಗಳನ್ನು ಆಂತರಿಕವಾಗಿ ನಮ್ಮಲ್ಲಿ ಹಾದು ಹೋಗುವ ಭಾವನೆಗಳನ್ನು ಆಸೆಗಳನ್ನು ಮತ್ತೊಬ್ಬರ ಮೇಲಿರುವ ಪ್ರೀತಿ ಪ್ರೇಮವನ್ನು ನಾವು ನಂಬುವ ಸಿದ್ಧಾಂತಗಳನ್ನು, ಸರಿ ಅನಿಸುವ ಸಲಹೆಗಳನ್ನು? ಹೀಗೆ ಇತರರಿಗೆ ತಿಳಿಸಲು ಹಂಬಲಿಸುತ್ತೇವೆ. ಹಂಬಲ ಎಷ್ಟೇಂದರೆ ಅದೇ ಜೀವನವೆನ್ನುವ ಮಟ್ಟಿಗೆ. ಇತರರಿಗೆ ತಿಳಿಸಲು ಉಪಯೋಗಿಸುವ ಪ್ರಕಾರ, ಸಾಧನಗಳು ಅಥವಾ ಮಾಧ್ಯಮಗಳು ಯಾವುದೇ ಇರಬಹುದು ಆದರೆ shಚಿಡಿe ಅಥಾವ ಹಂಚುವ ಕಾರ್ಯಮಾತ್ರ must ಇಂತಹ ಆಸೆ ಅಭಿಲಾಸೆಯಿಂದಲೇ, ಹಂಬಲದಿಂದಲೇ ನಮ್ಮ ಜಗತ್ತಿನಲ್ಲಿ ಅನೇಕ ಲೇಖಕರು, ಶಿಲ್ಪಿಗಳು, ಸಂಗೀತ ವಿದ್ವಾನರು, ಕವಿಗಳು ಹುಟ್ಟಿಕೊಂಡಿರುವುದು. ಜತೆಗೆ ಅನೇಕ ಸೃಜನಾತ್ಮಕ ಪ್ರಕಾರಗಳು, ಸಾಧನಗಳು ರೂಪಿತಗೊಂಡಿರುವುದು. ನಮ್ಮ ‘ದನಿ’ ನಮ್ಮಲ್ಲಿದ್ದ ಬರೆಯುವ ಹಂಬಲದಿಂದ ಹುಟ್ಟಿಕೊಂಡ ಪುಟ್ಟ ಕೂಸು. ನಮ್ಮ ನಿಲ್ಲುವುಗಳನ್ನು, ಕಲಿಕೆಗಳನ್ನು, ವೈಯಕ್ತಿಕ ಚಿಂತನೆಗಳನ್ನು ತಿಳಿಸುವ, ಹಂಚಿಕೊಳ್ಳುವ ಒಂದು ವೇದಿಕೆಯನ್ನು ಈ ಪತ್ರಿಕೆ ಸೃಷ್ಟಿಮಾಡಿಕೊಟ್ಟಿದಕ್ಕೆ ಧನ್ಯವಾದ ಹೇಳುತ್ತಾ ಜತೆಗೆ ಅಸತ್ಯ ಅನ್ಯಾಯ, ಜೀವವಿರೋಧಿ, ಶೋಷಣೆ ಹಾಗು ಮನುಷ್ಯನನ್ನು ತುಚ್ಛವಾಗಿ ಕಾಣುವ ಸಿದ್ದಾಂತಗಳ ವಿರುದ್ಧ ಸಾತ್ವಿಕ ಸಿಟ್ಟಿನಿಂದ ಬರೆಯುವ ಎಲ್ಲಾ ಲೇಖಕರನ್ನು ನೆನೆಯುತ್ತಾ ಉದಾತ್ತ ಮೌಲ್ಯಗಳಿಗೆ ಬೆಲೆಕೊಟ್ಟು ಜೀವಪೂರಕ ಬರವಣಿಯ ನೀಡಿ ಮನುಷ್ಯತ್ವ ಬೆಳಗಿದ ಎಲ್ಲಾ ಬರಹಗಾರರಿಗೆ ಧನ್ಯವಾದವನ್ನು ಹೇಳುತ್ತಾ ನನ್ನ ಈ ಲೇಖನಕ್ಕೆ ಶುಭಂ ಹೇಳುತ್ತೇನೆ.
- ಆನಂದ್

ಕ್ರಿಸ್ತನ ಅಧ್ಯಾತ್ಮ (ಭಾಗ - 1)


- ಜೋವಿ 

ನಮ್ಮನ್ನು ನಾವು ಕ್ರೈಸ್ತರೆಂದು ಕರೆದುಕೊಳ್ಳುತ್ತೀವೋ ಇಲ್ಲವೋ ಗೊತ್ತಿಲ್ಲ, ಆದರೆ ಕ್ರಿಸ್ತನನ್ನು ನಾವು ಗಂಭೀರವಾಗಿ ಪರಿಗಣಿಸಿದಂತಿಲ್ಲ ಎಂಬುದನ್ನು ಮಾತ್ರ ಸ್ಪಷ್ಟವಾಗಿ ಹೇಳಬಹುದು. ಕೆಲವು ಗಮನೀಯ ಅಂಶಗಳನ್ನು ಹೊರತುಪಡಿಸಿ, ಬಹುಮಟ್ಟಿಗೆ ಕ್ರಿಸ್ತ ಹೇಳಿದ್ದÀನ್ನು ನಮ್ಮ ಜೀವನದಲ್ಲಿ ನಾವು ಪಾಲಿಸುತ್ತಿಲ್ಲ. ನಾವು ನಮ್ಮ ಶತ್ರುಗಳನ್ನ ಪ್ರೀತಿಸುವುದಾಗಲೀ, ನಮ್ಮ ಇನ್ನೊಂದು ಕೆನ್ನೆಯನ್ನು ತೋರುವುದಾಗಲೀ, ಏಳೆಪ್ಪತ್ತು ಸಲ ಕ್ಷಮಿಸುವುವುದಾಗಲೀ ಇವುಗಳನ್ನು ಪಾಲಿಸುವುದು ತುಂಬ ವಿರಳ. ನಮ್ಮ ಈ ವೈಫಲ್ಯಕ್ಕೆ ನಮ್ಮದೇ ಅದ ಸಮರ್ಥನೆಗಳಿವೆ: ನಾವು ಸಂತರಲ್ಲ, ಇಂಥÀದೊಂದು ಜೀವನ ಎಲ್ಲರಿಗೂ ಸಾಧ್ಯವಿಲ್ಲ. ಆದರ್ಶಪ್ರಾಯವಾದ ಈ ರೀತಿಯ ಜೀವನವನ್ನು ರೂಢಿಸಿಕೊಳ್ಳುವುದು ಸ್ವಲ್ಪ ಕಷ್ಟಕರವೇ ಸರಿ ಇತ್ಯಾದಿ.
ನಮ್ಮ ಈ ಕಾಲಘಟ್ಟದ ಪರಿಸ್ಥಿತಿ, ವಿದ್ಯಮಾನಗಳನ್ನು ಅವಲೋಕಿಸಿದಾಗ ನಾವು ಕ್ರಿಸ್ತನನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಖಂಡಿತವಾಗಿ ಮನದಟ್ಟಾಗುತ್ತದೆ. ವಾಸ್ತವವಾಗಿ ನಮ್ಮ ಕಾಲದ ವಸ್ತುಸ್ಠಿತಿಯನ್ನು ಸಹ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಒತ್ತಡ ನಮ್ಮ ಮೇಲಿದೆ. ಕಾಲವು ಒಡ್ಡುತ್ತಿರುವ ಬೆದರಿಕೆ, ಸವಾಲುಗಳನ್ನು ಗಣನೆಗೆ ತೆಗೆದುಕೊಳ್ಳದೆ ನಾವು ನಮ್ಮದೇ ಕನಸಿನ ಲೋಕದಲ್ಲಿ ಜೀವಿಸುತ್ತಿದೇವೆ. ಕೆಲ ಕ್ರೈಸ್ತರಂತೂ ಇಂದಿನ ಕಾಲದ ವಸ್ತುಸ್ಥಿತಿಯನ್ನು, ಅದರಲ್ಲಿನ ಅಗುಹೋಗುಗಳನ್ನು ಗಂಭೀರವಾಗಿ ಪರಿಗಣಿಸದೆ, ಕ್ರಿಸ್ತನನ್ನು ಗಂಭೀರವಾಗಿ ಪರಿಗಣಿಸಬಹುದೆಂಬ ಮೌಢ್ಯತೆಯಲ್ಲಿ ಬದುಕುತ್ತಿದ್ದಾರೆ. ಕ್ರಿಸ್ತನ ಅಧ್ಯಾತ್ಮ ಎನ್ನುವುದು ಸಂದರ್ಭೋಚಿತವಾದುದ್ದು, ಸಮಂಜಸವಾದುದ್ದು. ಕಾಲದ ಅಳದಲ್ಲಿ ಹುದುಗಿ ಬರುವಂಥದ್ದು. ಕ್ರಿಸ್ತನು ಸಹ ಅವನ ಕಾಲದ ವಿದ್ಯಮಾನಗಳನ್ನು ಅರ್ಥಮಾಡಿಕೊಂಡು ಅವನ ಶಿಷ್ಯರಿಗೂ ಅದನ್ನೇ ಮಾಡಲು ತಿಳಿಹೇಳಿದ. ನಾವು ಇತರ ವಿಷಯಗಳ ನಡುವೆ, ನಮ್ಮ ಈಗಿನ ಪರಿಸ್ಥಿತಿಯನ್ನು ಪ್ರಾಮಾಣಿಕತೆಯಿಂದ ವಿಮರ್ಶಿಸಿ ಗಂಭೀರವಾಗಿ ಪರಿಗಣಿಸಿದಾಗ ಮಾತ್ರ ಕ್ರಿಸ್ತನನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯ.
ನಮ್ಮ ಕಾಲದ ಲಕ್ಷಣಗಳನ್ನು ತಿಳಿಯುವುದೆಂದರೆ, ವಿಶ್ವದ ಹೊರನಿಂತು, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಮನೋಭಾವದಿಂದ ವಿಶ್ವವನ್ನು ದಿಟ್ಟಿಸುವುದಲ್ಲ. ನಾವು ತಪ್ಪಿಸಿಕೊಳ್ಳಲಾಗದಂತಹ ಸಂಬಂಧ ಜಾಲದ ಬಲೆಯಲ್ಲಿ ಹೆಣೆಯಲ್ಪಟ್ಟಿದ್ದೇವೆ, ಇದು ನಮ್ಮ ಜಗತ್ತು, ಯಾವುದೇ ರೀತಿಯ ಗಂಭೀರವಾದ ಅಧ್ಯಾತ್ಮ ಎಂಬುದು ಈ ಜಗತ್ತನ್ನು ಹೊರತುಪಡಿಸಿ ಇರಲು ಸಾಧ್ಯವೇ ಇಲ್ಲ. 
ಆದ್ದರಿಂದ ಒಂದನೆಯ ಭಾಗದಲ್ಲಿ ನಮ್ಮ ಕಾಲದ ಲಕ್ಷಣಗಳ, ಆಗುಹೋಗುಗಳ ರೂಪರೇಖೆಗಳನ್ನು ಚರ್ಚಿಸೋಣ. ಎರಡನೆಯ ಭಾಗದಲ್ಲಿ ಕ್ರಿಸ್ತ ಅಧ್ಯಾತ್ಮದ ಮೇಲೆ ಆತ್ಮೀಯ ದೃಷ್ಟಿಯನ್ನು ಹರಿಸಸೋಣ. ಕೊನೆಯ ಮೂರು ಮತ್ತು ನಾಲ್ಕನೆಯ ಭಾಗಗಳಲ್ಲಿ ಕ್ರಿಸ್ತನಿಂದ ಪ್ರೇರಣೆಗೊಂಡ ಅಧ್ಯಾತ್ಮವನ್ನು ನಾವು ಹೇಗೆ ಇಂದಿನ ಜಗತ್ತಿನಲ್ಲಿ ಕ್ರಿಯಾತ್ಮಕವಾಗಿ ಬದುಕಾಗಿಸಿಕೊಳ್ಳಬಹುದು ಎಂಬುದನ್ನು ಚರ್ಚಿಸೋಣ. ಆದ್ದರಿಂದ ಈ ಲೇಖನಗಳ ಸರಣಿಯ ಕೇಂದ್ರ ಬಿಂದು ಅಧ್ಯಾತ್ಮ. 
ಇಂದು ಅಧ್ಯಾತ್ಮದ ವಿಷಯವನ್ನು ಕುರಿತು ಅನೇಕ ಪುಸ್ತಕಗಳನ್ನು ಬರೆಯಲಾಗಿದೆ. ಆತ್ಮ್ಮದ ಬಗೆಗಿನ ವಿಷಯಗಳಲ್ಲಿ ಜನರ ಅಭೂತಪೂರ್ವ ಆಸಕ್ತಿಯನ್ನು ಅಂತಹ ಪುಸ್ತಕಗಳಲ್ಲಿ ಕಾಣಬಹುದಾಗಿದೆ. ಆದರೆ ಕ್ರಿಸ್ತನ ಅಧ್ಯಾತ್ಮದ ಬಗ್ಗೆ ಬರೆದ ಹಲವಾರು ಪುಸ್ತಕಗಳಲ್ಲಿ ಕ್ರಿಸ್ತನನ್ನೇ ಕಡೆಗಣಿಸಲಾಗಿದೆ. ಕೆಲವೊಂದಂತೂ ಕ್ರಿಸ್ತನನ್ನು ಅಸಂಬದ್ಧ ಎಂದು ಪರಿಗಣಿಸಿ ಕ್ರಿಸ್ತನನ್ನೇ ತಿರಸ್ಕರಿಸಿವೆ. ಇನ್ನೊಂದು ಕಡೆ, ಕ್ರಿಸ್ತನನ್ನು ಕೇಂದ್ರೀಕರಿಸಿ ಹುಟ್ಟಿಕೊಂಡ ಅಧ್ಯಾತ್ಮದ ಪುಸ್ತಕಗಳು, ಕ್ರಿಸ್ತನನ್ನು ಅಧ್ಯಾತ್ಮದ ವಸ್ತುವನ್ನಾಗಿಸಿಕೊಂಡಿವೆ ಹೊರತು, ಕ್ರಿಸ್ತನೆಂಬ ವ್ಯಕ್ತಿಗೂ ಅವನದೇ ಆದ ಅಧ್ಯಾತ್ಮ ಇತ್ತೆಂಬ ಅರಿವಿನಲ್ಲಿ ಅವನ ಅಧ್ಯಾತ್ಮದಿಂದ ನಾವು ಕಲಿಯಬೇಕಾದುದನ್ನು ಸೂಚಿಸಲು ಮರೆತಿದಂತಿದೆ. ಕ್ರಿಸ್ತನ ಅಧ್ಯಾತ್ಮದ ಬಗೆ ಅಳವಾದ, ಆತ್ಮೀಯವಾದ ಒಲವು ನಮ್ಮಲ್ಲಿ ಇಲ್ಲದೇ ಹೋದರೆ, ಇಂದಿನ ನಮ್ಮ ಹೋರಾಟಗಳಲ್ಲಿ ಕ್ರಿಸ್ತನೆಂಬ ವ್ಯಕ್ತಿಯ ಪ್ರಾಮುಖ್ಯತೆಯನ್ನು ಗ್ರಹಿಸಲು ವಿಫಲವಾಗಿಬಿಡುತ್ತೇವೆ.
ಮುಂದಿನ ಲೇಖನಗಳ ಸರಣಿಯಲ್ಲಿ ನಮ್ಮ ಕಾಲಘಟ್ಟದ ಅನೇಕ ಘಟನೆಗಳು, ಸಂಶೋಧನೆಗಳು, ಆವಿಷ್ಕಾರಗಳು ಹೇಗೆ ಕ್ರಿಸ್ತನ ಪ್ರೀತಿ ಮತ್ತು ಸ್ವಾತಂತ್ರ್ಯವನ್ನು ಕ್ರಿಯಾತ್ಮಕವಾಗಿ ಬದುಕಾಗಿಸಿಕೊಂಡವರ ಜತೆ, ಹೇಗೆ ಇನ್ನೂ ಹೆಚ್ಚು ಹೆಚ್ಚು ಜನರು ಬದುಕು ರೂಪಿಸಿಕೊಳ್ಳಬಹುದು ಎಂಬ ಸಾಧ್ಯತೆಯ ಹೊಸ ಮತ್ತು ಉತ್ತೇಜನದ ಮಾರ್ಗಗಳನ್ನು ನಿಮಗೆ ತೋರಿಸಿ ಕೊಡಲಾಗುವುದು.

ನಮ್ಮ ಕಾಲಘಟ್ಟದ ಲಕ್ಷಣಗಳು
ಮುಂದಿನ ನಾಲ್ಕು ಸರಣಿ ಲೇಖನಗಳು ನಮ್ಮ ಕಾಲಘಟ್ಟದ ಅತ್ಯಂತ ಸಂಕೀರ್ಣ ಮತ್ತು ಬದಲಾಗುತ್ತಿರುವ ಕಾಲಘಟ್ಟದ ಲಕ್ಷಣಗಳನ್ನು ಬಹಿರಂಗಪಡಿಸುವ ಒಂದು ಪಕ್ಷಿನೋಟ ಮಾತ್ರವೆಂದಷ್ಟೇ ಹೇಳಬಹುದು. ನಮ್ಮ ಕಾಲದ ಕೆಲವೊಂದು ಘಟನೆಗಳ ಮೇಲಿನ ಒಂದು ಸ್ಥೂಲ ನೋಟ ನಮ್ಮ ಕಾಲಘಟ್ಟದ ಲಕ್ಷಣಗಳ ಭಯಾನಕತೆಯನ್ನು ತೋರಿಸುತ್ತದೆ. ಭಯಾನಕತೆಯೆನ್ನಲು ಎರಡು ಕಾರಣಗಳಿವೆ: ನಮಗೆ ಕಾಣುತ್ತಿರುವ ನಮ್ಮ ಅವ್ಯವಸ್ಥೆಯ ಬದುಕು ಒಂದಾದರೆ, ಇನ್ನೂಂದು ನಮ್ಮ ಇತಿಹಾದ ಮತ್ತು ವಿಕಾಸದ ಪ್ರಕ್ರಿಯೆಯಲ್ಲಿ ಸಾಧ್ಯತೆಕೊಂಡ ಒಂದು ದೊಡ್ಡ ದೈತ್ಯ ನೆಗೆತ.
ಹೌದು ನಮ್ಮ ಕಾಲಘಟ್ಟದ ಲಕ್ಷಣಗಳು ಅಸ್ಪಷ್ಟವಾಗಿವೆ. ಏಕಕಾಲದಲ್ಲಿ ನಾನಾÀ ವಿಷಯಗಳು ನಾನಾÀ ದಿಕ್ಕಿನಲ್ಲಿ ಚಲಿಸುತ್ತಿರುವಂತೆ ತೋರುತ್ತಿವೆ. ಕೆಲವೊಂದು ಪ್ರವೃತ್ತಿಗಳು ಕೆಲವರು ತೆಗೆದುಕೊಂಡ ದಿಕ್ಕಿನ ಪ್ರತಿಕ್ರಿಯೆಂಬಂತೆ ಕಾಣುತ್ತಿವೆ. ಉಣ್ಣೆಯ ಬಿಡಿ ಬಿಡಿ ಎಳೆÉಗಳಂತಹ ವಿವಿಧ ಲಕ್ಷಣಗಳು ಒಟ್ಟಾಗಿ ಹೆಣೆದುಕೊಂಡು ಒಂದು ಸಂಕೀರ್ಣ ಸ್ವರೂಪವನ್ನು ಪಡೆದುಕೊಂಡುಟ್ಟಿವೆ  
ನಮ್ಮ ಕಾಲಘಟ್ಟದ ವಿದ್ಯಮಾನಗಳು ನಮ್ಮ ಭವಿಷ್ಯದ ಸೂಚಿಗಳಂತನೇ ಹೇಳಬಹುದು. ಈ ಸೂಚಿಗಳು ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನಿಖರವಾಗಿ ನಮಗೆ ಹೇಳುವುದಿಲ್ಲ. ಬದಲಾಗಿ ಸೂಚಿಗಳ ಮಹತ್ವವೇನೆಂದರೆ ಅವು ನಮಗೆ ಸವಾಲುಗಳನ್ನು ಒಡ್ಡುತ್ತವೆ. ಇಲ್ಲಿ ನಮಗೆ ಮುಖ್ಯವೆನ್ನಿಸುವುದೇನೆಂದರೆ, ಅವು ಒಡ್ಡುವ ಸವಾಲುಗಳನ್ನು ನಾವು ಒಪ್ಪಿಕೊಳ್ಳುತ್ತೇವೆ. ಅಥವಾ ವಿಶ್ವಾಸದ ದೃಷ್ಟಿಯಿಂದ ನೋಡುವುದಾದರೆ, ನಮ್ಮ ಕಾಲಘಟ್ಟದ ವಿದ್ಯಮಾನಗಳನ್ನು ದೇವರು ನಮಗೆ ಒಡ್ಡುವ  ಸವಾಲುಗಳೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಈ ಒಂದು ಪ್ರಕ್ರಿಯೆಯಲ್ಲಿ ವಾಸ್ತವಿಕತೆಯ ಬಗೆಗಿನ ನಮ್ಮ ಪೂರ್ವಕಲ್ಪಿತ ಅಲೋಚನೆಯನ್ನು ಬಿಟ್ಟುಬಿಡಬೇಕು. ನಮಗೆ ಇಷ್ಟವೋ ಇಲ್ಲವೋ ನಮ್ಮ ನಡುವೆ ಏನು ಆಗುತ್ತಿದೆಯೆಂಬ ಸತ್ಯವನ್ನು ಎದುರಿಸುವ ಉದ್ದೇಶ ನಮ್ಮದಾಗಬೇಕು. ನಮ್ಮ ಈಗಿನ ಸಮಸ್ಯೆಗಳಿಗೆ ಇನ್ನೊಬ್ಬರ ಮೇಲೆ ಗೂಬೆಕೂರಿಸಿದರೆ ಕಾಲಘಟ್ಟದ ಆಗುಹೋಗುಗಳ ನಮ್ಮ ವಿಮರ್ಶೆಯಲ್ಲಿ ಮುಖ್ಯ ಉದ್ದೇಶವೇ ವಿಫಲವಾಗಿಬಿಡುತ್ತವೆ.

ಮುಂದುವರಿಯುವುದು

-0--0--0--0--0--0-

ಕಥಾದನಿ

- ಇನ್ನಾ
ಮೆಡಿಟೇಶನ್
ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ನಲ್ಲಿ `ವಾಕಿಂಗ್ ಮೆಡಿಟೇಶನ್' ಮಾಡುತ್ತಿದ್ದರು. ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ.
ಮಾಸ್ಟರ್‍ನ   ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ ಅವರಿಬ್ಬರೂ ಮಾಸ್ಟರ್ ಗೆ ಹೆದರಿ ಗಾರ್ಸನ್ನಲ್ಲಿ ಹೊಗೆಸೊಪ್ಪು ಸೇದುತ್ತಿರಲಿಲ್ಲ. ಒಂದು ದಿನ ಶಿಷ್ಯರಿಬ್ಬರೂ ಪ್ರತ್ಯೇಕವಾಗಿ ಮಾಸ್ಚರ್ ಬಳಿ ಹೋಗಿ ಗಾರ್ಸನ್ನಲ್ಲಿ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆ ಸೊಪ್ಪು ಸೇದಲು ಮಾಸ್ಟರ್‍ನ ಅನುಮತಿ ಕೇಳಲು ನಿರ್ಧರಿಸಿದರು.
ಮರುದಿನ ಒಬ್ಬ ಶಿಷ್ಯ ಗಾರ್ಸನ್ನಲ್ಲಿ ಹೊಗೆಸೊಪ್ಪು ಸೇದುತ್ತ ನಡೆದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಶಿಷ್ಯನಿಗೆ ಸಿಟ್ಟು ಬಂತು. ``ನಾನೂ ಅನುಮತಿ ಕೇಳಿದೆ ಆದರೆ ಮಾಸ್ಟರ್ ನಿರಾಕರಿಸಿಬಿಟ್ಟರು. ನಿನಗೆ ಹೇಗೆ ಒಪ್ಪಿಗೆ ಕೊಟ್ಟರು? ನಾನು ಈಗಲೇ ಮಾಸ್ಟರ್ ಬಳಿ ಹೋಗುತ್ತೇನೆ'' ಅವ ಸಿಟ್ಟಿನಿಂದ ಹೇಳಿದ.
``ನಿಲ್ಲು ನಿಲ್ಲು, ನೀನು ಮಾಸ್ಟರ್‍ನ ಏನಂತ ಕೇಳಿದೆ?'' ಮೊದಲ ಶಿಷ್ಯ ಕೇಳಿದ.
``ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆಸೊಪ್ಪು ಸೇದಲೆ? ಎಂದು ಕೇಳಿದೆ'' ಎರಡನೆಯವ ಉತ್ತರಿಸಿದ.
``ಅದೇ ನೋಡು ನೀನು ಮಾಡಿದ ತಪ್ಪು. ಹಾಗಲ್ಲ ಕೇಳೋದು. ಹೊಗೆಸೊಪ್ಪು ಸೇದುವಾಗ ವಾಕಿಂಗ್ ಮೆಡಿಟೇಶನ್ ಮಾಡಬಹುದಾ ಅಂತ ಕೇಳಬೇಕಿತ್ತು. ನಾನು ಹಾಗೆ ಕೇಳಿದೆ'' ಮೊದಲ ಶಿಷ್ಯ ನಕ್ಕು ಬಿಟ್ಟ.

ನನ್ನ ಗುರು ಅದೆಷ್ಟು ಬುದ್ಧಿವಂತನೆಂದರೆ, ಹಸಿವಾದಾಗ ತಿನ್ನುತ್ತಾನೆ ಮತ್ತು ಸುಸ್ತಾದಾಗ ಮಲಗುತ್ತಾನೆ ಹಾಗೂ ಅಗತ್ಯವಿದ್ದಾಗ ಮಾತನಾಡುತ್ತಾನೆ.
ಬೌದ್ಧ ಬಿಕ್ಕುಗಳ ಗುಂಪು ಒಂದು ಊರಿನಿಂದ ಇನ್ನೊಂದು ಊರಿಗೆ ಸುತ್ತಾಡುತ್ತಿರುತ್ತವೆ. ಒಮ್ಮೆ ಇಂತಹ ಬಿಕ್ಕುಗಳ ಅನೇಕ ಗುಂಪುಗಳು, ನಾಲ್ಕು ರಸ್ತೆಗಳು ಸೇರುವ ಊರೊಂದರಲ್ಲಿ ತಂಗಿದ್ದವು. ಬೇರೆ ಬೇರೆ ಗುಂಪಿನ ನಾಲ್ಕು ಜನ ಶಿಷ್ಯ ಸನ್ಯಾಸಿಗಳು ತಮ್ಮ ನಡುವೆ ತಮ್ಮ ಅನುಭವಗಳ ಬಗ್ಗೆ ಚರ್ಚಿಸುತ್ತಿದ್ದರು. ಆ ಮಧ್ಯೆ ಅವರ ಮಾತು ಯಾರ ಗುರು ಹೆಚ್ಚು ಶ್ರೇಷ್ಠ ಮತ್ತು ಉತ್ತಮ? ಎಂಬುದರ ಕುರಿತು ಹೊರಳಿತು. ಒಬ್ಬ ಶಿಷ್ಯ ಹೇಳಿದ, ನನ್ನ ಗುರು ಎಷ್ಟು ಶಕ್ತಿಶಾಲಿಯೆಂದರೆ, ನಾಲ್ಕು ದಿನಗಳ ಹಿಂದೆ ನಮ್ಮ ಗುಂಪನ್ನು ಡಕಾಯಿತರು ಸುತ್ತುವರಿದಾಗ, ಕೇವಲ ತನ್ನ ಕಣ್ಸನ್ನೆಯಿಂದಲೇ ಎಲ್ಲರನ್ನೂ ಹಿಮ್ಮೆಟ್ಟಿಸಿದ.
ಇನ್ನೊಬ್ಬ ಶಿಷ್ಯ, ನನ್ನ ಗುರು ಝೆನ್ ಮಾತ್ರವಲ್ಲ, ರಕ್ಷಣಾ ವಿದ್ಯೆಯಲ್ಲಿ ಕೂಡ ಪಾರಂಗತ. ನಲ್ವತ್ತು ಜನರೊಂದಿಗೆ ಕತ್ತಿಹಿಡಿದು ಹೋರಾಡುವಾಗಲೇ, ಇನ್ನೂ ಇಪ್ಪತ್ತು ಜನರನ್ನು ವಾದದಲ್ಲಿ ಮಣಿಸಬಲ್ಲ ಎಂದ.
ಮೂರನೆಯ ಶಿಷ್ಯ ಹೇಳಿದ, ನನ್ನ ಗುರುವಿಗೆ ಇರುವಷ್ಟು ನಿಯಂತ್ರಣ ಶಕ್ತಿ ನಿಮ್ಮಲ್ಲಿ ಯಾರ ಗುರುವಿಗೂ ಇದ್ದಂತಿಲ್ಲ. ಆತ ದಿನವಿಡೀ ನಿದ್ದೆಮಾಡದೇ, ಆಹಾರ ಸೇವಿಸದೇ ಇರಬಲ್ಲ. ಕೊನೆಯ ಶಿಷ್ಯ ಹೇಳಿದ, ನನ್ನ ಗುರು ಅದೆಷ್ಟು ಬುದ್ಧಿವಂತನೆಂದರೆ, ಹಸಿವಾದಾಗ ತಿನ್ನುತ್ತಾನೆ ಮತ್ತು ಸುಸ್ತಾದಾಗ ಮಲಗುತ್ತಾನೆ ಹಾಗೂ ಅಗತ್ಯವಿದ್ದಾಗ ಮಾತನಾಡುತ್ತಾನೆ.
-0--0--0--0--0--0-

ಓದಿದ ಪುಸ್ತಕಗಳಿಂದ. . ..

ಮಠಕ್ಕೂ ಒಂದು ಪತ್ರ
ಮಠಮಾನ್ಯರೇ,
ಬಸವಕಲ್ಯಾಣದಿಂದ ಹೊರಡುವ ದಿನ ನಾನು ಅನುಭವ ಮಂಟಪ ನೋಡಿದೆ. ಅಲ್ಲಿ ಅಲ್ಲಮನ ಬದಲು ಬಸವಣ್ಣ ಹಾಗೂ ಅಕ್ಕಪಕ್ಕದಲ್ಲಿ ನಾಗಲಾಂಬಿಕೆ ಗಂಗಾಂಬಿಕೆ ನೋಡಿ ಅವಕ್ಕಾದೆ. ಶ್ರೀಮತಿ ಮಾತೆ ಮಹಾದೇವಿಯವರು ಬಸವಣ್ಣನವರ ಅಂಕಿತ ತಿದ್ದಿ ದಡ್ಡತನ, ಮೂರ್ಖತನ ತೋರಿಸಿಕೊಂಡಿದ್ದರೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮನ ಸ್ಥಾನದಲ್ಲಿ ಬಸವಣ್ಣನನ್ನು ಇಟ್ಟು ವಚನಯುಗದ ಜೀವ(ಸ್ಪಿರಿಟ್)ತಿದ್ದಿ ವಿರೂಪಗೊಳಿಸಲಾಗಿದೆ ಅನ್ನಿಸಿತು. ಮಾತೆ ಮಹಾದೇವಿಯವರು ಮಾಡಿದ ಕಳಂಕದ ನೂರರಷ್ಟು ಇದು ಅನ್ನಿಸಿತು.
ಆಮೇಲೆ ವಚನಗಳಲ್ಲಿ ಮೂಡುವ ಧರ್ಮಪ್ರವರ್ತಕ ಬಸವಣ್ಣನಿಗೂ ಈಗ ಫೋಟೋಗಳ ಮೂಲಕ ಹೆಚ್ಚು ಪ್ರಚಲಿತಗೊಳಿಸುತ್ತಿರುವ ಕಿರೀಟಿ ಬಸವಣ್ಣನಿಗೂ ಏನೇನೂ ಸಂಬಂಧವಿಲ್ಲ ಅನ್ನಿಸುತ್ತದೆ. ಪಂಚಾಚಾರ್ಯರ ಕಿರೀಟದ ಮುಂದೆ ತಮ್ಮವನದೂ ಕಮ್ಮಿಯಿಲ್ಲ ಎಂಬ ಅಸಹಾಯಕತೆ ಕೀಳರಿಮೆಯಿಂದ ಹುಟ್ಟಿಕೊಂಡ ವ್ಯಕ್ತಿಚಿತ್ರ ಕಿರೀಟಿ ಬಸವಣ್ಣ ಇರಬೇಕು. ಕಿರೀಟದವರು ಈ ಭೂಮಿ ಮೇಲೆ ಕೋಟಿ ಕೋಟಿ ಆಗಿ ಹೋಗಿರಬಹುದು. ಆದರೆ ಉಳಿದಿರುವವರು ಬೆತ್ತಲೆಗೆ ಹತ್ತಿರದವರು ಎಂಬುದು ತಮಗೆ ತಿಳಿದಿದೆ. ನನಗೆ ಕೊಟ್ಟಿದ್ದ ಬಸವಣ್ಣನ ಪೋಟೋ ಅಲ್ಲೆ ಬಿಟ್ಟುಬಂದೆ, ಕ್ಷಮಿಸಿ. ಈ ಸಂದರ್ಭದಲ್ಲಿ, ಅಸಾಧ್ಯವಲ್ಲ ಎಂದುಕೊಂಡು ನನ್ನ ಒಂದೆರಡು ಅನಿಸಿಕೆಗಳನ್ನು ತಮ್ಮ ಮುಂದಿಡುವೆ.
1. ತಮ್ಮ ಸಂಸ್ಥೆಗಳಲ್ಲಿ ಅಂತರ್ಜಾತಿ ವಿವಾಹಿತರು, ಅವರ ಮಕ್ಕಳುಗಳಿಗೆ ಉದ್ಯೋಗ ಶಿಕ್ಷಣದಲ್ಲಿ ಕನಿಷ್ಟ 5%ರಷ್ಟು ಮೀಸಲಾತಿ ತಂದು ಸರ್ಕಾರಕ್ಕೂ ತಾವು ಮಾರ್ಗದರ್ಶಿಯಾಗಲು ಸಾಧ್ಯವೆ?
2. ಹಿಂದೆ ಇಡೀ ಸಮಾಜವನ್ನು ಬ್ರಾಹ್ಮಣ ಮಠಗಳು ಪ್ರತಿನಿಧಿಸುತ್ತಿದ್ದವು. ಇತ್ತೀಚೆಗೆ ಮಧ್ಯಮ ಜಾತಿಗಳ ಮಠಗಳು ಪ್ರಬಲಗೊಂಡು ಬಹುಸಂಖ್ಯಾತ ಜನ ಈ ಮಠಗಳಿಗೆ ನಡೆದುಕೊಳ್ಳುತ್ತಿರುವುದರಿಂದ ಬ್ರಾಹ್ಮಣ ಮಠಗಳ ಅಹಂಗೆ ಪೆಟ್ಟು ಬೀಳುತ್ತಿದೆ ಅನ್ನಿಸುತ್ತಿದೆ. ಅದಕ್ಕಾಗಿ ಬ್ರಾಹ್ಮಣ ಮಠಗಳ ಅಹಂ ಇಡೀ ಸಮಾಜವನ್ನು ತಾನು ಪ್ರತಿನಿಧಿಸಬೇಕೆಂಬ ಮೇಲರಿಮೆ ಹುನ್ನಾರವಾಗಿ ಭಜರಂಗದಳ, ಸಂಘಪರಿವಾರಕ್ಕೆ ಆಶೀರ್ವಾದ ಮಾಡುತ್ತಿರುವಂತೆ ಕಾಣುತ್ತಿದೆ. ಹಿಂದುತ್ವ ಪರಿಕಲ್ಪನೆ ಪ್ರಬಲವಾದರೆ ಭಾರತದ ನೂರಾರು ಧರ್ಮಗಳು ಸಾವಿರಾರು ಸಂಪ್ರದಾಯಗಳು ತಂತಾನೇ ನಾಶವಾಗುವುದರಿಂದ ಮತ್ತೆ ಬ್ರಾಹ್ಮಣಶಾಹಿ ತನ್ನ ಮೇಲರಿಮೆ ಕಾಪಾಡಿಕೊಳ್ಳುವುದರ ಹವಣಿಕೆಯಾಗಿ ಇದು ನನಗೆ ಕಾಣಿಸುತ್ತಿದೆ. ಶ್ರೀ ಪೇಜಾವರರ ಚಲನವಲನಗಳೂ ನನಗೆ ಹೀಗೆ ಅನ್ನಿಸಲು ಕಾರಣವಾಯ್ತು. ಈ ಬಿಕ್ಕಟ್ಟಿನಲ್ಲಿ ಮೂಲಭೂತವಾದಿಗಳ ಕ್ರಿಯೆಗಳಿಗೆ ಪ್ರತಿಕ್ರಿಯೆ ಪ್ರತಿಕಾರ್ಯಕ್ರಮ ತೋರಿಸುತ್ತ ಏತಿಗೆ ಪ್ರೇತಿ ಅನ್ನುವುದು ಮೂಲಭೂತಗಳು ನಮ್ಮನ್ನೇ ಆಹಾರವಾಗಿಸಿಕೊಂಡು ಇನ್ನೂ ಕೊಬ್ಬಲು ಕಾರಣವಾಗಬಹುದು. ಬದಲಾಗಿ, ಇಂದು ದಿಕ್ಕಿಲ್ಲದ ನಿರುದ್ಯೋಗಿ ಜನಸಮುದಾಯ ಎತ್ತಗೆ ಬೇಕಾದರೂ ಎಳೆದ ಕಡೆ ಹೋಗುವ ಪರಿಸ್ಥಿತಿ ಇರುವುದರಿಂದ ಹಳ್ಳಿಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಉದಾ: ಆಯಾ ಊರಿನ ಜಲಸಂವರ್ಧನೆ, ಆಯಾ ಊರಿನ ಕಸಗೊಬ್ಬರದ ಪುನರ್ರಚನೆ, ಆಯಾ ಊರಿನ ಗ್ರಂಥಾಲಯ, ಪ್ರಾಥಮಿಕ ಶಿಕ್ಷಣ, ಆಸ್ಪತ್ರೆ-ನಿಗಾ ಕಾರ್ಯಕ್ರಮ; ಆಯಾ ಊರಿನ ಮಹಿಳಾ ಸ್ವಸಹಾಯ ಸಂಘಗಳಿಗೆ ಒತ್ತಾಸೆ, ಇತ್ಯಾದಿ, ತಾಲ್ಲೂಕಿಗೆ ಒಂದು ಊರು ಆಯ್ದು ಆರಂಭಿಸಬಹುದು.
ಅನ್ನ ಅಕ್ಷರ ದಾಸೋಹ ಪರಂಪರೆಗೆ ಇದು ಸಾಧ್ಯವಿಲ್ಲವೆ?

- ಎದೆಗೆ ಬಿದ್ದ ಅಕ್ಷರ/ ದೇವನೂರ ಮಹಾದೇವ
ಮತಾಂಧರ ಮೆದುಳೊಳಗೆ / 117

ಮೌನದ ದನಿ

- ಜೀವಸೆಲೆ

ಉರಿದ ಹಣತೆ
ಹೇಳಿದ್ದು ಇಷ್ಟೇ
ಸುಟ್ಟುಕೊಂಡರಷ್ಟೇ ಬೆಳಕು

ಬೆಳಕು ನಿನ್ನ
ಸಂಭ್ರಮಿಸಿ ಬೆಳಕಾಗಲು
ನಿನ್ನಂತೆ ಹಣತೆಯಾಗ ಹೊರಟಿದ್ದೇನೆ.

ಇಡೀ ಲೋಕಕ್ಕೆ ಬೆಳಕಾಗಬೇಕೆಂಬ ಭ್ರಮೆಯಿಂದಲ್ಲ
ಎಲ್ಲವನ್ನು ಮರೆತು ಬಿಡುವ
ಈ ಜಗತ್ತಿನಲ್ಲಿ ನಿನ್ನನ್ನು
ಎಂದೆಂದಿಗೂ ಜೀವಂತವಾಗಿರಿಸಬೇಕೆಂಬ
ಸಣ್ಣ ಆಸೆಯಿಂದ

ಹೌದು
ಹಣತೆಯಾಗಿ ಬೆಳಕು ಚೆಲ್ಲಲು ನಾನು
ನೆನಪಿಸು ಆ ಹಣತೆ
ನಾನಲ್ಲ ನೀನು !

-0--0--0--0--0--0-

ಮಕ್ಕಳ ಸುಳ್ಳಿನ ಪ್ರಪಂಚ [ಭಾಗ 05]

- ಯೋಗೇಶ್ ಮಾಸ್ಟರ್

ವಿನಾಕಾರಣ ಸುಳ್ಳಿನ ಕಾರಣ
ಪ್ರಾಧಾನ್ಯತೆಗಾಗಿ

ಮೂರನೇ ತರಗತಿಯ ಒಬ್ಬ ಹುಡುಗ ಅವನ ಶಿಕ್ಷಕರ ಹತ್ತಿರ ತಾನು ರಾತ್ರಿ ಹನ್ನೊಂದೂವರೆವರೆಗೂ ಓದುತ್ತಿರುತ್ತೇನೆ. ಬೆಳಗ್ಗೆಯೇ ಐದು ಗಂಟೆಗೇ ಎದ್ದು ತನ್ನ ಪೋಷಕರೊಡನೆ ವ್ಯಾಯಾಮ ಮಾಡುತ್ತೇನೆ. ಇತ್ಯಾದಿ ತನ್ನ ಮನೆಯಲ್ಲಿ ತನ್ನ ಸುಶಿಸ್ತಿನ ವೇಳಾಪಟ್ಟಿಯನ್ನು ಬಿಡಿಸಿಡುತ್ತಿದ್ದ. ಆ ಹುಡುಗನ ಪೋಷಕರಲ್ಲೊಬ್ಬರು ಕಾರಣಾಂತರಗಳಿಂದ ಅದೇ ಶಿಕ್ಷಕರನ್ನು ಭೇಟಿ ಮಾಡಿದಾಗ ಸಹಜವಾಗಿ ಮಾತನಾಡುತ್ತಾ ಹೇಳುತ್ತಿದ್ದರು, “ಇವನು ನಿದ್ರೆ ತಡೆಯಲ್ಲ. ಎಂಟು – ಎಂಟೂವರೆಯಾಗುತ್ತಿದ್ದಂತೆ ಮಲಗಿಬಿಡುತ್ತಾನೆ. ಹೋಂ ವರ್ಕ್ ಮಾಡುತ್ತಿರಲಿ, ಹಾಗೆಯೇ ಮಲಗಿಬಿಡುತ್ತಾನೆ. ಕೆಲವೊಮ್ಮೆ ಊಟವೂ ಮಾಡಲ್ಲ.” ಇದು ಇಷ್ಟಕ್ಕೇ ಮುಗಿಯಲಿಲ್ಲ. “ಬೆಳಗ್ಗೆ ಎಷ್ಟು ಹೊತ್ತಾದರೂ ಏಳುವುದಿಲ್ಲ. ಇನ್ನೇನು ಸ್ಕೂಲ್ ಬಸ್ ಬರಕ್ಕೆ ಮುಕ್ಕಾಲು ಗಂಟೆ, ಒಂದು ಗಂಟೆ ಇದ್ದಂತೆ ಬಲವಂತವಾಗಿ ಎಬ್ಬಿಸಿ ಎಲ್ಲವನ್ನೂ ಗಡಿಬಿಡಿಯಲ್ಲಿಯೇ ಮಾಡಬೇಕು.”
“ಮತ್ತೆ, ಅವನು ಹೀಗೆ ಹೇಳಿದ...” ಶಿಕ್ಷಕರು ಅವನು ಹೇಳಿದ್ದನ್ನೇ ಹೇಳಿದಾಗ “ಎಲ್ಲಾ ಸುಳ್ಳು” ಎಂದು ಅವನ ಪೋಷಕರು ಎಲ್ಲರ ಎದುರೂ ಹೇಳಿದ್ದು ಆ ಹುಡುಗನಿಗೆ ತೀರಾ ಮುಜುಗರವಾಯಿತು. 
ಸಮಯ ಪಾಲನೆಯ ಬಗ್ಗೆ, ಶಿಸ್ತಿನ ಬಗ್ಗೆ; ಇತ್ಯಾದಿಗಳ ಬಗ್ಗೆ ಪಾಠ ಮಾಡುವಾಗ ತಾನೂ ಕೂಡಾ ಹಾಗಿರುವಂತ ವ್ಯಕ್ತಿ ಎಂದು ತೋರಿಸಿಕೊಂಡಾಗ ತನಗೆ ಪ್ರಶಂಸೆ ಸಿಗುತ್ತದೆ. ಎಲ್ಲರ ಎದುರು “ಗುಡ್, ಹೀಗಿರಬೇಕು” ಎಂಬ ಮಾದರಿಗೆ ಬೊಟ್ಟು ಮಾಡಿ ತನ್ನನ್ನು ತೋರಿದಾಗ ಏನೋ ಸಂತೋಷ. ಇತರರಿಗಿಂತ ತಾನು ಮೇಲು ಎಂಬ ಭಾವನೆಯಿಂದ ಆನಂದವಾಗುತ್ತದೆ. ಅದಕ್ಕಾಗಿ ಇಂತಹ ಸುಳ್ಳುಗಳು. ಒಂದು ಮಗು ಇಂತಹ ಸುಳ್ಳು ಹೇಳಿ ಮೆಚ್ಚುಗೆ, ಹೊಗಳಿಗೆ ಪಡೆಯುತ್ತಿದ್ದಾಗ ಇನ್ನೊಂದು ಮಗು ಆ ಪ್ರಶಂಸೆಗಳು ತನಗೂ ಸಿಗಲೆಂದು ತಾನೂ ಹೇಳತೊಡಗುತ್ತದೆ. ಸುಳ್ಳು ವೇಳಾಪಟ್ಟಿಗಳ ಪ್ರದರ್ಶನಗಳ ಪೈಪೋಟಿಯೇ ಪ್ರಾರಂಭವಾಗಿಬಿಡುತ್ತದೆ. ಶಿಕ್ಷಕರಿಗೆ ಇದು ಸುಳ್ಳು ಎಂದು ಗೊತ್ತಾದರೂ ಕೆಲವೊಮ್ಮೆ ಕಡ್ಡಿ ಮುರಿದಂತೆ ಮಾತಾಡಿ ಮಕ್ಕಳ ಮುಖ ಮುರಿಯಲು ಇಷ್ಟಪಡದೇ ನಿರ್ಲಕ್ಷದ ನಗೆ ನಕ್ಕು, ಪ್ರಶಂಸೆಗಳನ್ನು ನೀಡದೇ, ಅದನ್ನು ಬೆಳಸದೇ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ, ಒಂದು ಮಗುವಿನ ನಂತರ ಸುಳ್ಳಿನ ಸ್ಪರ್ಧೆಯ ಅಭ್ಯರ್ಥಿಗಳಿಗೆ ಅದರಿಂದ ನಿರಾಸೆಯಾಗುತ್ತದೆ. ಅವನ ಸುಳ್ಳಿಗೆ ಪ್ರತಿಫಲ ಸಿಕ್ಕಿತು, ತನ್ನ ಸುಳ್ಳಿಗೆ ಪ್ರತಿಫಲ ಸಿಗಲಿಲ್ಲ ಎಂದೋ, ಅಥವಾ ತನ್ನದು ಸುಳ್ಳು ಎಂದು ಗೊತ್ತಾಗಿಬಿಟ್ಟಿತೋ ಎಂದು ಬೇಸರಿಸಿಕೊಳ್ಳುತ್ತದೆ. ಆ ಇನ್ನೊಂದು ಸುಳ್ಳು ಹೇಳಿ ಪ್ರಾಧಾನ್ಯತೆ ಪಡೆದುಕೊಂಡ ಮಗುವಿನ ಬಗ್ಗೆ ಅಸೂಯೆ ತಾಳುತ್ತದೆ. ಇದು ಮುಗಿಯದ ಕತೆ. 
ಕೆಲವು ಗುಣವಿಶೇಷಗಳನ್ನು ಪ್ರಧಾನವಾಗಿ ಪ್ರಶಂಸಿಸುವ ಕಾರಣದಿಂದ ಮಕ್ಕಳು ತಾವು ಅಂತಹ ಗುಣಗಳನ್ನು ಹೊಂದಿದ್ದೇವೆ ಎಂದೋ, ಅಥವಾ ಅಂತಹ ಒಳ್ಳೆಯ ಅಭ್ಯಾಸಗಳಿವೆ ಎಂದೋ, ತೋರ್ಪಡಿಸುತ್ತಾ ಪ್ರಾಧಾನ್ಯತೆಯನ್ನು ಪಡೆಯಲು ಯತ್ನಿಸುತ್ತಾರೆ.
ಸ್ವಾತಂತ್ರ್ಯಕ್ಕಾಗಿ
ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳು ಪ್ರಶಂಸೆಯ ಕಾರಣದಿಂದ ಸುಳ್ಳು ಹೇಳುವುದಕ್ಕಿಂತ ತಮ್ಮ ಸಂಗತಿಗಳನ್ನು ತಾವೇ ಕಾಪಾಡಿಕೊಳ್ಳುವುದಕ್ಕೆ, ತಾವೇ ವ್ಯವಹರಿಸಿಕೊಳ್ಳುವುದಕ್ಕೆ ಯತ್ನಿಸುತ್ತಿರುತ್ತಾರೆ. ಉದಾಹರಣೆಗೆ ಸ್ನೇಹಿತರ ಜೊತೆಗೆ ಹೋಗುವಂತಹ ಯಾವುದೋ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕರು ಕರೆದುಕೊಂಡು ಹೋಗುತ್ತಾರೆ ಎಂದು ಮನೆಯಲ್ಲಿ ಹೇಳುತ್ತಾರೆ. ಇಲ್ಲಿ ತಾವು ತಾವಾಗಿ ಸ್ನೇಹಿತರೆಲ್ಲಾ ಒಟ್ಟಾಗಿ ಹೋಗುವ ಆಸೆ ಬಿಟ್ಟರೆ ಬೇರೆ ಏನೂ ಅಂತಹ ವಿಶೇಷ ಕಾರಣವೂ ಬೇಕಾಗಿರುವುದಿಲ್ಲ. ಸ್ನೇಹಿತರ ಜೊತೆಯಲ್ಲಿಹೋದರೆ ಒಂದು ಮಜಾ ಇರುತ್ತದೆ. ಆದರೆ, ಅಪ್ಪನೋ ಅಥವಾ ಅಮ್ಮನೋ ಗಾಡಿಯಲ್ಲಿ ಸೀದಾ ಕರೆದುಕೊಂಡು ಹೋಗಿ ಹೋಗಬೇಕಾದ ಸ್ಥಳದ ಬಾಗಿಲಿಗೇ ಬಿಟ್ಟು ಹೋಗುದು ಬೇಸರದ ಸಂಗತಿ. ಅಲ್ಲದೇ ತನ್ನ ಸ್ನೇಹಿತರ ಗುಂಪು ತಾವಾಗಿ ಬರುವ ಆನಂದವನ್ನು ಪಡೆಯುವಾಗ ತಾನು ಅದರಿಂದ ವಂಚಿತನಾಗಿ ಮೊದ್ದುಮೊದ್ದಾಗಿ, ಯಾವುದೇ ಮಜವಿಲ್ಲದೆ ಹಿರಿಯರ ಜೊತೆಗೆ ಗಾಡಿಯಲ್ಲಿ ಸೀದಾ ಬರುವುದು ಅವರಿಗೆ ಇಷ್ಟವಿರುವುದಿಲ್ಲ. ಆದ್ದರಿಂದ ಮನೆಯಲ್ಲಿ ಶಿಕ್ಷಕರು ಕರೆದುಕೊಂಡು ಹೋಗುತ್ತಾರೆ ಎಂದು ಸುಳ್ಳು ಹೇಳಿದರೆ, ಶಾಲೆಯಲ್ಲಿ ಅಪ್ಪ ಮತ್ತು ಅಮ್ಮನಿಗೆ ಕೆಲಸವಿತ್ತು, ಎಲ್ಲೋ ಹೋಗಿದ್ದರು, ಹಾಗಾಗಿ ಅವರಿಗೆ ಬರಲಾಗಲಿಲ್ಲ. ನಾವೇ ಬಂದೆವು; ಈ ರೀತಿಯಲ್ಲಿ ತಮ್ಮ ಸ್ವಾತಂತ್ರ್ಯವು ಹರಣವಾಗದಿರಬಾರದೆಂಬ ಕಾರಣಗಳಿಂದ ಸುಳ್ಳುಗಳನ್ನು ಹೇಳುತ್ತಾರೆ. ಸರ್ವೇ ಸಾಮಾನ್ಯವಾಗಿ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಸಾಕಷ್ಟು ಸುಳ್ಳುಗಳು ಪ್ರೌಢಶಾಲೆಯ ಅಥವಾ ಬೆಳೆದ ಮಕ್ಕಳಿಂದ ಹುಟ್ಟುವುದು. 
ವಿನಾಕಾರಣ
ತಮ್ಮ ಮಗ ವಿನಾಕಾರಣ ಸುಳ್ಳು ಹೇಳುತ್ತಾನೆ ಎಂದು ಪೋಷಕರೊಬ್ಬರು ತಮ್ಮ ಮಗನ ಬಗ್ಗೆ ದೂರುತ್ತಿದ್ದರು. ಎಷ್ಟೋ ಬಾರಿ ಮಕ್ಕಳ ಗುಂಪು ಯಾವುದೋ ಕೆಲಸವನ್ನು ಮಾಡಲು ಅಥವಾ ಎಲ್ಲಿಗೋ ಹೋಗಲು ಬಯಸುತ್ತದೆ. ಆಗ ಅವರು ಎಲ್ಲರೂ ಕೂಡಿ ಯಾವ ಸುಳ್ಳನ್ನುಮನೆಯಲ್ಲಿ ಹೇಳಬೇಕು ಎಂಬುದನ್ನು ಚರ್ಚಿಸುತ್ತಾರೆ. ಎಲ್ಲರೂ ಅದೇ ಸುಳ್ಳನ್ನುಹೇಳಬೇಕೆಂಬುದು ಮೊಟ್ಟ ಮೊದಲ ನಿಬಂಧನೆಯಾಗಿರುತ್ತದೆ. ನಂತರ ಒಂದು ವೇಳೆ ಸಿಕ್ಕಿಬಿದ್ದರೆ ಮತ್ತೇನು ಹೇಳಬೇಕು? ಎಂಬುದರ ಬಗ್ಗೆಯೂ ಕೂಡಾ ಒಂದು ಹಂತದ ಯೋಜನೆಯಿರುತ್ತದೆ. 
ಇದಕ್ಕೆ ಮುಖ್ಯ ಕಾರಣವೆಂದರೆ, ಅವರ ಆ ಯೋಜನೆ ಬರಿಯ ಒಂದು ಮೋಜಿನದೋ ಅಥವಾ ಬರಿದೇ ಕಾಲ ಕಳೆಯಲೋ ಆಗಿರುತ್ತದೆ. ಅದನ್ನು ಹೇಳಲು ಮನೆಯಲ್ಲಿ ಒಪ್ಪುವುದಿಲ್ಲ ಎಂದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಜೊತೆಗೆ ಅವರ ಕೆಲವು ‘ಔಟಿಂಗ್’ಗಳು ವಿವರಣೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಅಲ್ಲೇನೂ ಕೆಟ್ಟದ್ದೋ, ದುಷ್ಟತನದ್ದೋ ಏನೂ ಇರುವುದಿಲ್ಲ. ಆದರೆ ಆ ಔಟಿಂಗ್ ಏಕೆ ಬೇಕು ಎಂದು ವಿವರಿಸಲು ಅವರಿಗೆ ಸಾಧ್ಯವಿರುವುದಿಲ್ಲ. ಪೋಷಕರಾಗಲೀ, ಶಿಕ್ಷಕರಾಗಲಿ ಕಾರಣ, ವಿವರಣೆ, ಪರಿಣಾಮ ಇವೆಲ್ಲವನ್ನೂ ಕೇಳುತ್ತಾರೆ. ಆದರೆ ಅವು ಯಾವುವೂ ಅವರ ಕೆಲಸಗಳಿಗೆ ಇರುವುದಿಲ್ಲ. ಆದ್ದರಿಂದ ಕಾರಣ, ವಿವರಣೆ, ಪರಿಣಾಮ ಎಲ್ಲವೂ ಇರುವಂತಹ ಮಾದರಿ ಕೆಲಸದ ಹೆಸರನ್ನು ಹೇಳಿ ತಮ್ಮ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿಕೊಳ್ಳಲು ಮಕ್ಕಳು ಸುಳ್ಳು ಹೇಳುತ್ತಾರೆ. ಆದ್ದರಿಂದಲೇ ಶೈಕ್ಷಣಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ಅಥವಾ ಧಾರ್ಮಿಕವಾಗಿ ಒಪ್ಪುವಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಮಕ್ಕಳು ತಮ್ಮ ಖುಷಿಯನ್ನು ತಾವು ಪಡೆಯುತ್ತಾರೆ. ಅಲ್ಲಿಂದಲ್ಲಿಗೆ ಮುಗಿಯುವಂತಹ ಆನಂದವೂ ಇದಾಗಿರಬಹುದು ಅಥವಾ ಇಂತಹ ಖುಷಿಗಳು ಕೆಲವೊಮ್ಮೆ ದುರಂತಕ್ಕೂ ದಾರಿಯಾಗಬಹುದು. ಹಾಗಾಗಿಯೇ ಮಕ್ಕಳ ಪ್ರತಿಯೊಂದು ನಡೆಗೂ ವಿವರಣೆ, ಕಾರಣ ಇತ್ಯಾದಿಗಳನ್ನು ಕಠೋರವಾಗಿ ಕೇಳುತ್ತಿರಬಾರದು. ಖುಷಿ, ಬರೀ ಖುಷಿ ನೀಡುವಂತಹ ಹಲವು ಸಂಗತಿಗಳಿರುತ್ತವೆ. ಅವನ್ನು ಪೋಷಕರು ಮತ್ತು ಶಿಕ್ಷಕರು ಮನಗಂಡಿದ್ದೇ ಆದರೆ ಮಕ್ಕಳನ್ನು ಅವರ ಎಲ್ಲಾ ಸಂಗತಿಗಳಿಗೂ ವಿವರಣೆಯನ್ನು ಕೇಳಲು ಹೋಗುದಿಲ್ಲ. 
ಏನೇ ಆಗಲಿ ಸುಳ್ಳು ಕಡಿಮೆ ಹೇಳುವ ಅಥವಾ ಸುಳ್ಳು ಹೇಳದಿರುವ ಮಕ್ಕಳೂ ಉಂಟು. ಅವರ ಹಿನ್ನೆಲೆಗಳನ್ನು ಗಮನಿಸಿದರೆ ಬಹಳಷ್ಟು ಕುತೂಹಲಕಾರಿ ಸಂಗತಿಗಳು ತಿಳಿಯುತ್ತವೆ. ಅವು ನಿಜಕ್ಕೂ ಸಾಕಷ್ಟು ಒಳನೋಟಗಳನ್ನು ನೀಡುವಂತಹದ್ದು. ಅವುಗಳೇನೆಂದು ಮುಂದೆ ನೋಡೋಣ.
-0--0--0--0--0--0-

ಪರಮ ಸಂಸ್ಕಾರ [ಭಾಗ 2)


- ಸಿಎಂಜೆ

ಪ್ರಾಯಶ್ಚಿತ್ತ
ಪ್ರಾಯಶ್ಚಿತ್ತವಿದ್ದಲ್ಲಿ ಮತ್ತು ಕ್ಷಮೆ ಇರುತ್ತದೆ, ದೇವರು ದಯಾಮಯ ಎಂಥವರನ್ನೂ ಕ್ಷಮಿಸದೆ ಬಿಡಲಾರ, ಪಾಪಿಗಳ ಮೇಲೆ ಅವನಿಗೆ ಪ್ರೀತಿ ಹೆಚ್ಚು, ತೊಂಬತ್ತೊಂಬತ್ತು ನಿಯತ್ತಿನ ಕುರಿಗಳಿಗಿಂತ ತಪ್ಪಿಹೋದ ಒಂದೇ ಕುರಿಯನ್ನು ಹುಡುಕಿ ಕರೆತರುವ ಅವನ ಕಾಳಜಿ ಅನನ್ಯ ಎಂದಿದ್ದಾರೆ ಪ್ರಭುಯೇಸು. ``ದೇವರು ನಮ್ಮಲ್ಲಿರುವ ಆತ್ಮವನ್ನು ಅತ್ಯಾಸಕ್ತಿಯಿಂದ ಅಪೇಕ್ಷಿಸುತ್ತಾರೆ'' (ಯಕೋಬ 4: 5) ಆದ್ದರಿಂದ ಕ್ರೈಸ್ತಧರ್ಮದಲ್ಲಿ ಪ್ರಾಯಶ್ಚಿತ್ತಕ್ಕೆ ಒಂದು ಪ್ರಮುಖ ಸ್ಥಾನವಿದೆ. ಯೇಸುಸ್ವಾಮಿಯನ್ನು ಶಿಲುಬೆಗೇರಿಸಿದಾಗ ಅವರ ಬದಿಯಲ್ಲಿ ಮತ್ತಿಬ್ಬರು ಅಪರಾಧಿಗಳನ್ನೂ ಶಿಲುಬೆಗೇರಿಸಲಾಗಿತ್ತು. ಅವರಲ್ಲೊಬ್ಬ ತನ್ನ ತಪ್ಪುಗಳಿಗಾಗಿ ಪ್ರಾಯಶ್ಚಿತ್ತಪಟ್ಟು 'ಸ್ವಾಮೀ ನೀವು ಪರಂಧಾಮದಲ್ಲಿರುವಾಗ ನನ್ನನ್ನು ಜ್ಞಾಪಕ ಮಾಡಿಕೊಳ್ಳಿ' ಎಂದು ಬಿನ್ನವಿಸಿದಾಗ ಯೇಸು ಅವನಿಗೆ ಅಭಯ ನೀಡುತ್ತಾರೆ. ಹೀಗೆ ಬದುಕಿದ್ದಾಗ ಅವನು ಏನೆಲ್ಲ ದುಷ್ಕಾರ್ಯಗಳನ್ನು ಮಾಡಿದ್ದರೂ ಸಾಯುವ ಮುನ್ನ ಪ್ರಾಯಶ್ಚಿತ್ತಪಟ್ಟು ಯೇಸುವಿನಲ್ಲಿ ಪ್ರಾರ್ಥಿಸಿದ ಕಾರಣದಿಂದ ಅವನು ಸ್ವರ್ಗ ಸೇರಿದ. 'ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲ ವಿಧಿಗಳನ್ನು ಕೈಗೊಂಡು, ನ್ಯಾಯ ನೀತಿಗಳನ್ನು ನಡೆಸಿದರೆ ಸಾಯನು; ಖಂಡಿತ ಜೀವಿಸುವನು. ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರದು’. (ಯೆಜೆಕಿಯೇಲ 18:21-22)
ಮಾನವರಾದ ನಮಗೆಲ್ಲರಿಗೂ ಒಂದಲ್ಲ ಒಂದು ಬಲಹೀನತೆ ಇರುತ್ತದೆ, ಹಾಗಾಗಿ ನಾವು ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪುಗಳಿಗಾಗಿ ನಾವು ದೇವರಲ್ಲಿ ಕ್ಷಮೆ ಯಾಚಿಸಿ ಪ್ರಾಯಶ್ಚಿತ್ತ ಪಟ್ಟು ಮತ್ತೆ ಆ ತಪ್ಪನ್ನು ಮರುಕಳಿಸದಿರುವುದೇ ನಿಜ ಕ್ರೈಸ್ತ ಜೀವನ. (ನೋಡಿ. ಲೂಕ 13: 3)
ಯೇಸು ತಮ್ಮ ಪ್ರೇಷಿತರನ್ನು ಸುವಾರ್ತೆ ಸಾರಲು ಕಳಿಸುತ್ತಾ: ``ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು, ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ ಅವರಿಗೆ ಕ್ಷಮಿಸದೆ ಉಳಿಸಲಾಗುವುದು'' (ಯೊವಾನ್ನ 20:23) ಎಂದಿದ್ದಾರೆ. ಇಂದು ಪ್ರೇಷಿತರ ಪ್ರತಿನಿಧಿಗಳಾಗಿರುವ ಗುರುಸ್ವಾಮಿಯವರ ಬಳಿ ನಾವು ಒಂದು ಗೊತ್ತಾದ ಸಮಯದಲ್ಲಿ ಗೊತ್ತಾದ ವಿಧಾನದಲ್ಲಿ ಪಾಪಗಳನ್ನು ನಿವೇದಿಸುವ ಮೂಲಕ ಅವರು ಸೂಚಿಸುವ ಪ್ರಾಯಶ್ಚಿತ್ತವನ್ನು ಈಡೇರಿಸಿ ಪಾಪಕ್ಷಮೆ ಹೊಂದುತ್ತೇವೆ. 
ಇಲ್ಲಿ ಗುರುಗಳು ಯೇಸುಸ್ವಾಮಿಯ ತನ್ಮೂಲಕ ದೇವರ ಪ್ರತಿನಿಧಿಯಾಗಿರುತ್ತಾರಷ್ಟೆ. ಅವರು ಪಾಪನಿವೇದನೆಗೆಂದೇ   ವಿಶೇಷವಾಗಿ ನಿರ್ಮಿಸಿದ ಮರದ ಗೂಡಿನಲ್ಲಿ ಆಸೀನರಾಗುತ್ತಾರೆ. ಅವರ ಕಿವಿಗಳ ಕಡೆ ಸಣ್ಣ ಜಾಲಂದ್ರದ ಕಿಟಕಿಯಿರುತ್ತದೆ. ಆಕಡೆಯಿಂದ ಕ್ರೈಸ್ತವಿಶ್ವಾಸಿಗಳು ಒಬ್ಬೊಬ್ಬರಾಗಿ ಬಂದು ಮೊಣಕಾಲೂರಿ ಗುರುಗಳ ಕಿವಿಗೆ ಕೇಳುವಂತೆ ತಮ್ಮ ತಪ್ಪುಗಳನ್ನು ನಿವೇದಿಸುತ್ತಾರೆ. ಅವರ ಮಾತಿಗೆ, ಬಿಕ್ಕುವಿಕೆಗೆ, ಅಳುವಿಗೆ, ಮೌನಕ್ಕೆ ಗುರುಗಳು ಸ್ಥಿತಪ್ರಜ್ಞ ಕಿವಿಯಾಗುತ್ತಾರೆ. ಬಂದವರಾರು, ಅವರ ಹೆಸರುಕುಲಗೋತ್ರಗಳೇನು ಎಂಬುದರ ಚಿಂತೆ ಅವರಿಗಿಲ್ಲ. ಭಕ್ತರು ಎಲ್ಲ ಹೇಳಿ ಮುಗಿಸಿದ ಮೇಲೆ ಅವರು ‘ಪ್ರಾಯಶ್ಚಿತ್ತವಾಗಿ ಮೂರು ಸಲ ನಮೋಮರಿಯಾ ಪ್ರಾರ್ಥನೆ ಹೇಳು, ಒಂದು ಸಾರಿ ಸ್ವರ್ಗದಲ್ಲಿರುವ ನಮ್ಮ ತಂದೆಯೇ ಪ್ರಾರ್ಥನೆ ಹೇಳು' ಎಂದು ಹೇಳಬಹುದು. ಗುರುಮಠಗಳಲ್ಲಿ ಕನ್ಯಾಮಠಗಳಲ್ಲಿ ಕೆಲವೊಮ್ಮೆ ಎಲ್ಲರ ತಟ್ಟೆಲೋಟ ತೊಳೆ, ಗಿಡಗಳಿಗೆ ನೀರು ಹಾಯಿಸು, ಬಟ್ಟೆಗಳಿಗೆ ಇಸ್ತ್ರಿ ಹಾಕು ಎಂದು ಹೇಳಬಹುದು. ಆದರೆ ಇವಾವುವೂ ನಾವು ಮಾಡಿದ ತಪ್ಪುಗಳಿಗೆ ತಕ್ಕನಾದ ಪ್ರಾಯಶ್ಚಿತ್ತವಲ್ಲ, ನಮ್ಮ ಮನದಲ್ಲಿ ಮೂಡುವ ಪಶ್ಚಾತ್ತಾಪದ ಭಾವನೆಯೇ ನಿಜವಾದ ಪ್ರಾಯಶ್ಚಿತ್ತ ಎಂಬುದನ್ನು ಮನಗಾಣಬೇಕು.
ಗುರುಗಳು ನಮ್ಮ ಸಂಬಂಧಿಕರೋ, ನಮ್ಮ ಧರ್ಮಕೇಂದ್ರದವರೋ, ಪರಿಚಿತರೋ ಎಂಬ ಭಾವನೆಯಿಂದ ಕೆಲವರು ಅವರಲ್ಲಿಗೆ ಹೋಗಿ ಪಾಪಗಳನ್ನು ನಿವೇದಿಸಲು ಹಿಂಜರಿಯುತ್ತಾರೆ. ಆದರೆ ಆ ಹಿಂಜರಿಕೆ ಅನಗತ್ಯ. ಏಕೆಂದರೆ ಪಾಪನಿವೇದನೆಯ ಗೂಡಿನಲ್ಲಿ ಗುರುಗಳು ಯಾವ ಪಕ್ಷಪಾತವಿಲ್ಲದೆ ನಿರ್ಲಿಪ್ತರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪಾಪನಿವೇದನೆ ಆಲಿಸಲೆಂದೇ ಹೊರವೂರುಗಳಿಂದ ಗುರುಗಳನ್ನು ಆಹ್ವಾನಿಸಲಾಗುತ್ತದೆ. ಹಾಗೂ ಗುರುಗಳು ಪಾಪನಿವೇದನೆ ಕೇಳಲು ಮರದ ಗೂಡಿನ ಬದಲು ದೇವಾಲಯದ ಆವರಣದಲ್ಲೇ ಕುರ್ಚಿಯೊಂದರ ಮೇಲೆ ಕುಳಿತುಕೊಳ್ಳುತ್ತಾರೆ. ಕಳೆದ ಪವಿತ್ರವಾರದಲ್ಲಿ ಜಗದ್ಗುರು ಪೋಪ್ ಫ್ರಾನ್ಸಿಸರು ವ್ಯಾಟಿಕನ್ನಿನ ಸಂತ ಪೀಟರ್ ಚೌಕದಲ್ಲಿ ಸಾರ್ವಜನಿಕರಿಂದ ಪಾಪನಿವೇದನೆ ಆಲಿಸಲು ಕುರ್ಚಿ ಹಾಕಿ ಕುಳಿತರೆನ್ನುವುದು ಒಳ್ಳೆಯ ಉದಾಹರಣೆಯಾಗಿದೆ.
‘ಪಾಪಗಳನ್ನು ಮುಚ್ಚಿಟ್ಟುಕೊಳ್ಳುವವನಿಗೆ ಮುಕ್ತಿ ದೊರಕದು; ಅವುಗಳನ್ನು ಒಪ್ಪಿಕೊಂಡುಬಿಟ್ಟರೆ ಕರುಣೆ ದೊರಕುವುದು' (ಜ್ಞಾನೋಕ್ತಿಗಳು 28:13). ಹಾಗೆಂದು ಎಲ್ಲೆಂದರಲ್ಲಿ ಯಾವಾಗೆಂದರೆ ಆವಾಗ ಪಾಪನಿವೇದನೆ ಸಾಧ್ಯವಿಲ್ಲ. ಪಾಪನಿವೇದನೆ ಆಲಿಸಲು ಸೂಕ್ತ ಅಧಿಕಾರವಿದ್ದ ಗುರುಗಳಲ್ಲಿ ಮಾತ್ರವೇ ಅದರಲ್ಲೂ ಸೂಕ್ತ ಸ್ಥಳ ಮತ್ತು ತಾಣದಲ್ಲಿ ಪಾಪನಿವೇದನೆ ಮಾಡಬೇಕು. ಗುರುಗಳೊಂದಿಗೆ ಲೋಕಾಭಿರಾಮವಾಗಿ ಹರಟುತ್ತಾ ತಪ್ಪುಗಳನ್ನು ಹೇಳಿಕೊಳ್ಳುವುದು ಪಾಪನಿವೇದನೆ ಅನಿಸಿಕೊಳ್ಳುವುದಿಲ್ಲ. ಅದೇ ರೀತಿ ಯಾರಾದರೂ ತಾನು ಪಾಪನಿವೇದನೆ ಮಾಡಬೇಕೆಂದು ವಿನಂತಿಸಿಕೊಂಡರೆ ಗುರುಗಳು ತಮಗೆ ಪ್ರಾಯಶ್ಚಿತ್ತ ನೀಡುವ ಆ ಅಧಿಕಾರ ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳಿಬಿಡಬೇಕು.
ಅಧಿಕಾರವಿಲ್ಲದೇ ಪಾಪನಿವೇದನೆ ಆಲಿಸುವುದು ಗುರುಗಳಿಗೆ ಘೋರಪಾಪವಾಗುತ್ತದೆ. ಗುರುಗಳು ಯಾಜಕಾಭಿಷೇಕ ಪಡೆದ ನಂತರದ ಕೆಲ ದಿನಗಳು ಧರ್ಮಕೇಂದ್ರದಲ್ಲಿ ಕೆಲಸ ನಿರ್ವಹಿಸಿ ಆಮೇಲೆ ಸೂಚಿತ ಗುರುಮಠದಲ್ಲಾಗಲೀ ಧರ್ಮಾಧ್ಯಕ್ಷರಲ್ಲಾಗಲೀ ಕೆಲವು ಕಠಿಣ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪರೀಕ್ಷೆ ತೇರ್ಗಡೆಯಾದ ನಂತರವಷ್ಟೇ ಅವರಿಗೆ ಆ ಅಧಿಕಾರ ನೀಡಲಾಗುತ್ತದೆ. ಕೆಲವೊಮ್ಮೆ ಆ ಅಧಿಕಾರವನ್ನು ಮತ್ತೆ ಮತ್ತೆ ನವೀಕರಿಸಿಕೊಳ್ಳುವ ಷರತ್ತೂ ಇರುತ್ತದೆ.
ತಪ್ಪು ಮಾಡಿದವನೊಬ್ಬ ತನ್ನಲ್ಲಿ ನಿವೇದಿಸಿಕೊಂಡದ್ದು ಎಂದೂ ಒಡೆಯಲಾಗದ ಗುಟ್ಟಾಗಿ ಗುರುಗಳ ಬಳಿ ಉಳಿಯುತ್ತದೆ. ಪ್ರಾಣಹೋಗುವ ಸಂದರ್ಭ ಬಂದರೂ ಅವರು ಅದನ್ನು ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ, ಹೇಳಿಕೊಳ್ಳಬಾರದು. ಆದ್ದರಿಂದ ಯಾರು ಬೇಕಾದರೂ ನಿಶ್ಚಿಂತರಾಗಿ ಗುರುಗಳ ಬಳಿ ಪಾಪಗಳನ್ನು ಹೇಳಿಕೊಂಡು ಪ್ರಾಯಶ್ಚಿತ್ತಪಟ್ಟು ಮನವನ್ನು ಹಗುರ ಮಾಡಿಕೊಳ್ಳಬಹುದು. ಹಾಗೂ ನಿಜಕ್ರೈಸ್ತರಾಗಿ ಒಳ್ಳೆಯ ಜೀವನ ನಡೆಸಬಹುದು, ಮಾತ್ರವಲ್ಲ ಮನಪರಿವರ್ತನೆಯ ಕಾರಣದಿಂದ ದೇವರೊಂದಿಗೆ ನಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ. 
ಪಾಪನಿವೇದನೆಯ ಸಂಸ್ಕಾರವನ್ನು ಕೊಡಮಾಡಲು ವಿಶೇಷವಾದ ಸಂದರ್ಭವೇನೂ ಇರುವುದಿಲ್ಲ. ಬಾಲಕಬಾಲಕಿಯರು ಹೊಸದಾಗಿ ಪರಮಪ್ರಸಾದ ಸ್ವೀಕರಿಸುವ ಮುನ್ನ ಅವರ ಪೂರ್ವಪಾಪಗಳನ್ನು ತೊಳೆದು ಮನವನ್ನು ಪರಿಶುದ್ಧಗೊಳಿಸುವ ಸಲುವಾಗಿ ಹೊಸಪರಮಪ್ರಸಾದದ ಹಿಂದಿನ ಸಂಜೆ ಅವರು ಈ ಸಂಸ್ಕಾರವನ್ನು ತಾವಾಗಿ ಅಳವಡಿಸಿಕೊಳ್ಳುತ್ತಾರೆ.

-0--0--0--0--0--0-

Saturday, 11 January 2020

ಭೂಮಿ ದೇವರು, ಆಕಾಶ ದೇವತೆ ಸೃಷ್ಟಿಯ ಕತೆ (ಭಾಗ 5)




- ಎಫ್ ಎಂ ಎನ್

—————————–—————————-

ಇದು ಪುರಾತನ ಇಜಿಪ್ತಿನ ಹೆಲಿಯೊಪೊಲಿಸ್ ಪಟ್ಟಣದ ಪೂಜಾರಿಗಳ ಐತಿಹ್ಯಗಳ ಪ್ರಭಾವಳಿಯಲ್ಲಿ ರೂಪತಾಳಿದ್ದ ಜಗತ್ತಿನ ಹುಟ್ಟಿನಕತೆ. ಇದಲ್ಲದೇ ಇನ್ನು ಹಲವು ಜಗತ್ತಿನ ಹುಟ್ಟಿನ ಕತೆಗಳು ಇಜಿಪ್ತಿನ ವಿವಿಧೆಡೆ ಕಂಡುಬರುತ್ತವೆ.
———————————————————

ಈ ಜಗತ್ತಿನ ಆರಂಭದಲ್ಲಿ ಏನೂ ಇರಲಿಲ್ಲ. ಎಲ್ಲೆಲ್ಲೂ ಶೂನ್ಯ. ಕತ್ತಲೋಕತ್ತಲು ತುಂಬಿತ್ತು. ಎತ್ತ ನೋಡಿದರತ್ತ ನೀರು ನೀರು. ಒಂದು ಬಗೆಯಲ್ಲಿ ಗೊಂದಲದ ಅವ್ಯವಸ್ಥೆಯ ಪರಿಸ್ಥಿತಿ ಇತ್ತು. ಆ ಆದಿ ಜಲರಾಶಿಯನ್ನು `ನನ್’ ಸಾಗರ ಎಂದು ಗುರುತಿಸಲಾಗುತ್ತದೆ. ಹೀಗಾಗಿ `ನನ್’ ಈಗ ಸಾಗರದೇವತೆ. `ನನ್’ ಸಾಗರದ ಮಧ್ಯದಿಂದ ದಿನ್ನೆಯೊಂದು ಮೇಲೆದ್ದು ಬರುತ್ತದೆ,

ಆ ದಿನ್ನೆಯೇ ಇಂದಿನ ಇಜಿಪ್ತಿನ ಪಿರಾಮಿಡ್ ಗಳ ಅವುಗಳ ಆಕಾರ ಪಡೆಯುವುದಕ್ಕೆ ಕಾರಣ ಎನ್ನಲಾಗುತ್ತದೆ. ಆ ದಿನ್ನೆಯನ್ನು `ಬೆನ್‍ಬೆನ್’ ಎಂದುಕರೆಯಲಾಗುತ್ತದೆ. ಈ `ಬೆನ್ ಬೆನ್’ ದಿನ್ನೆಯಿಂದಲೇ ಮೊದಲ ಬಾರಿ ಸೂರ್ಯ ದೇವರು `ರಾ’ ಜಗತ್ತಿಗೆ ಬೆಳಕು ಕೊಡುವುದಕ್ಕೆ ಮೊದಲ ಮಾಡಿದ್ದ ಎಂದು ಹೇಳಲಾಗುತ್ತದೆ. ಅದೇ ದಿನ್ನೆಯ ಮೇಲೆಯೇ ಮೊದಲ ದೇವರು `ಆಟಮ್’ ನಿಂತುಕೊಂಡಿದ್ದು. `ಆಟಮ್’, `ರಾ’ ದೇವರ ಮಗದೊಂದು ಹೆಸರು ಎಂದು ಹೇಳಲಾಗುತ್ತದೆ.

ಆ `ಆಟಮ್’ ಈ ಜಗತ್ತಿನ ಜೀವಜಾಲದ ಮೂಲ ಪುರುಷ. ಹೀಗಾಗಿ ಅವನು ಜಗತ್ತಿನ ಎಲ್ಲಾ ಜೀವರಾಶಿಗಳನ್ನು ಸೃಷ್ಟಿಸಿದಾತ. `ಬೆನ್ ಬೆನ್’ ದಿನ್ನೆಯ ಮೇಲೆ ನಿಲ್ಲುವ ಮೊದಲು `ಆಟಮ್’ `ನನ್’ ಸಮುದ್ರದಲ್ಲಿ ದಿಕ್ಕೆದೆಸೆ ಇಲ್ಲದೇ ತೇಲುತ್ತಿದ್ದ. ಅವನಲ್ಲಿ ಗಂಡು ಹೆಣ್ಣು ಎರಡೂ ಅಂಶಗಳಿದ್ದವು. ಒಂದು ಬಾರಿ ಅವನಿಗೆ ತಾನು `ನನ್’ ಸಮುದ್ರದಿಂದ ಹೊರಬಂದು ಜೀವ ಸೃಷ್ಟಿಯನ್ನು ಆರಂಭಿಸಬೇಕು ಎನ್ನಿಸುತ್ತದೆ. ಆಗ ಅವನು ಸಮುದ್ರದಿಂದ ಮೇಲೆ ಎದ್ದುಬಂದು `ಬೆನ್ ಬೆನ್’ ದಿನ್ನೆಯ ಮೇಲೆ ನಿಂತುಕೊಳ್ಳುತ್ತಾನೆ.

`ಆಟಮ್’ ತನ್ನಲ್ಲಿದ್ದ ಹೆಣ್ತನವನ್ನು ಬಳಸಿ ಜೀವ ಸೃಷ್ಟಿಗೆ ಮುಂದಾಗುತ್ತಾನೆ. ಗಾಳಿ ಮತ್ತು ಖಾಲಿ ಜಾಗದ ದೇವರು `ಶೂ’ ಅನ್ನು ಹುಟ್ಟಿಸುತ್ತಾನೆ. ನಂತರ ಮತ್ತು `ಶೂ’ನ ಸೋದರಿ ಹಬೆ ಮತ್ತು ಮಂಜಿನ ದೇವತೆ `ಟೆಫ್ನಟ್’ ಳಿಗೆ ಜನ್ಮ ನೀಡುತ್ತಾನೆ.

ಆತ ತನ್ನ ಎರಡೂ ಕೈಗಳನ್ನು ಕೂಡಿಸಿ, `ನಾನು ನನ್ನ ನೆರಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತೇನೆ. ನನ್ನಲ್ಲಿನ ಹೆಣ್ತನ ಮತ್ತು ಗಂಡುಗಳ ಸಂಯೋಗದಿಂದ ನನ್ನ ಬಾಯಲ್ಲಿ ಬೀಜವು ರೂಪತಾಳಿತು. ಆ ಬೀಜದ ಫಲವತ್ತತೆಯಿಂದ `ಶೂ’ ಮತ್ತು `ಟೆಫ್ನಟ್’ ದೇವರುಗಳು ಹುಟ್ಟಲಿ ಎಂದು ಆಶಿಸುತ್ತಾನೆ’. ಆಗ ಅವರಿಬ್ಬರೂ ಹುಟ್ಟುತ್ತಾರೆ.

ಆದಿ ದೇವರು `ಆಟಮ್’ ಸೀನಿದಾಗ `ಶೂ’ ದೇವರು ಹುಟ್ಟಿದ, ಉಗುಳಿದಾಗ `ಟೆಫ್ನಟ್’ ದೇವತೆ ಜನಿಸುತ್ತಾಳೆ. `ಶೂ’ ಅನ್ನುವುದು ಸೀನಿದಾಗ ಊಂಟಾಗುವ ಸಪ್ಪಳವಾದರೆ, `ಟೆಫ್ನಟ್’ ಅನ್ನುವುದು ಉಗುಳುವಾಗ ಉಂಟಾಗುವ ಶಬ್ದ ಎನ್ನಲಾಗುತ್ತದೆ.

`ಆಟಮ್’ ದೇವರು ಇಬ್ಬರು ಮಕ್ಕಳನ್ನು ಸೃಷ್ಟಿಸಿದ ಮೇಲೆ, ಆಗ ಒಬ್ಬರಲ್ಲ ಒಟ್ಟು ಮೂವರು ದೇವರುಗಳ ಉಪಸ್ಥಿತಿ ಉಂಟಾಗುತ್ತದೆ. ಆಗ, ಕತ್ತಲು, ಗೊಂದಲ ಹೇಳ ಹೆಸರಿಲ್ಲದಂತೆ ಮಾಯವಾಗಿ, ವಿಶ್ವದಲ್ಲಿ ಬೆಳಕು ಮೂಡತೊಡಗುತ್ತದೆ.

ತನ್ನ ಮೊದಲ ಸೃಷ್ಟಿಯ ನಂತರ `ಆಟಮ್’ ದೇವರು ಶ್ರಮದ ಕಾರಣ ದಣಿದಿರುತ್ತಾನೆ. ಅವನ ಬೆವರ ಹನಿ ನೆಲಕ್ಕೆ ಬಿದ್ದಾಗ, ಮೊದಲ ಸೃಷ್ಟಿಯ ಸಂತೋಷದಿಂದ ಅಳತೊಡಗಿದ ಸಂದರ್ಭದಲ್ಲಿ, ಅವನ ಕಣ್ಣೀರ ಹನಿಗಳು ಕೆಳಗೆ ಬಿದ್ದಾಗ, ಅವುಗಳಿಂದ ಮಾನವರು - ಗಂಡಸರು ಹೆಂಗಸರು – ಉಂಟಾಗುತ್ತಾರೆ. ಆದಿ ದೇವರು `ಆಟಮ್’ನ ಮಗದೊಂದು ಹೆಸರು `ರಾ’ ಎಂದು ಹೇಳಲಾಗುತ್ತದೆ. ಹೀಗಾಗಿ, ಪುರಾತನ ಇಜಿಪ್ತಿನ ಜನ ತಮ್ಮನ್ನು ತಾವು `ರಾನ ದನಕರುಗಳು’ ಎಂದು ಕರೆದುಕೊಳ್ಳುತ್ತಿದ್ದರು.

ಇತ್ತ ಇಷ್ಟೆಲ್ಲಾ ನಡೆಯುವಾಗ, ಆತ್ಮ್ತ ಆದಿ ದೇವರ ಮಕ್ಕಳಾದ `ಶೂ’ ಮತ್ತು `ಟೆಫ್ನಟ್’ ಅವರು ಗಂಡ ಹೆಂಡಿರಂತೆ ಜೀವನ ಆರಂಭಿಸುತ್ತಾರೆ. ಅವರಿಗೆ ಒಬ್ಬರು ಮಕ್ಕಳು ಹುಟ್ಟುತ್ತಾರೆ. ಅವರಿಗೆ ಹುಟ್ಟುವ ಆದಿ ದೇವರು `ಆಟಮ್’ನ ಮೊಮ್ಮಕ್ಕಳಿಗೆ `ಗೆಬ್’ ಮತ್ತು `ನಟ್’ ಎಂದು ಹೆಸರಿಡಲಾಗುತ್ತದೆ. ಈ `ಗೆಬ್’ ಭೂದೇವರಾದರೆ, `ನಟ್’ ಆಗಸ ದೇವತೆಯಾಗಿರುತ್ತಾಳೆ.

ಆದರೆ, ಅವರಿಬ್ಬರೂ ಹುಟ್ಟುವಾಗ ಒಬ್ಬರಿಗೊಬ್ಬರು ಅಪ್ಪಿಕೊಂಡು ಅಂಟಿಕೊಂಡೇ ಹುಟ್ಟುತ್ತಾರೆ. ಆಗ, ಆ ಇಬ್ಬರು ದೇವರುಗಳ ತಂದೆದೇವರು- ಗಾಳಿ ದೇವರು `ಶೂ’, ಅವರಿಬ್ಬರ ಮಧ್ಯ ನುಸುಳುತ್ತಾನೆ. ಮಗಳು `ನಟ್’ ಇರುಳಿನ ಆಗಸ ದೇವತೆಯನ್ನು ತಂದೆ ದೇವರು `ಶೂ’ ಎತ್ತಿ ಹಿಡಿದು, ಭೂದೇವರು `ಗೆಬ್’ನಿಂದ ಬಿಡಿಸಿ ಮೇಲೆ ತಳ್ಳುತ್ತಾನೆ.

ಭೂದೇವರು `ಗೆಬ್’ ಮತ್ತು ಆಗಸ ದೇವತೆ `ನಟ್’ ಮದುವೆಯಾಗಿ ಸಂಸಾರಿಗಳಾದಾಗ ಅವರಿಗೆ `ಒಸ್ಸಿರಿಸ್’, `ಐಸಿಸ್’ ಮತ್ತು `ಸೆಟ್’ ಹಾಗೂ `ನೆಫಥಿಸ್’ ಹೆಸರಿನ ನಾಲ್ವರು ಮಕ್ಕಳಾಗುತ್ತಾರೆ. ಮುಂದೆ ಒಸ್ಸಿರಿಸ್ ಭೂಮಿಯನ್ನು ಆಳತೊಡಗುತ್ತಾನೆ. `ಒಸ್ಸಿರಿಸ್’ ತನ್ನ ಸಹೋದರಿ `ಐಸಿಸ್’ಳನ್ನು ತನ್ನ ರಾಣಿಯನ್ನಾಗಿ ಸ್ವೀಕರಿಸುತ್ತಾನೆ. ಅವರಿಬ್ಬರು ಬಹುಕಾಲ ರಾಜ್ಯವಾಳುತ್ತಾರೆ. `ಒಸ್ಸಿರಿಸ್’ ಮತ್ತು `ಐಸಿಸ್’ ಫಲವಂತಿಕೆ ಮತ್ತು ಸುವ್ಯವಸ್ಥೆಗಳ ದೇವತೆಗಳು.

`ಸೆಟ್’ ಮತ್ತು `ನೆಫೆಸಸ್’ಳು ದಂಪತಿಗಳು, ಒಳಿತಿನ ಪರವಾಗಿ ನಿಲ್ಲುವ `ಒಸ್ಸಿರಿಸ್’ ಮತ್ತು `ಐಸಿಸ್’ ದೇವರುಗಳ ಕಾರ್ಯಗಳಿಗೆ ಕಡಿವಾಣ ಹಾಕುವ, ಅವ್ಯವಸ್ಥೆಯನ್ನು ಪ್ರತಿಪಾದಿಸುವ ಕೆಡುಕಿನ ದೇವರುಗಳು. `ಹೋರಸ್’ ದೇವರು `ಒಸ್ಸಿರಿಸ್’ ಮತ್ತು `ಐಸಿಸ್’ ದಂಪತಿಗಳ ಮಗ. ಇಜಿಪ್ತಿನ ಪುರಾಣಗಳಲ್ಲಿನ `ಹೊರಸ್’ ದೇವರನ್ನು ಬದಿಗಿಟ್ಟು, ಉಳಿದ ಒಂಬತ್ತು ದೇವರುಗಳನ್ನು `ನವದೇವತೆಗಳು’ ಎಂದು ಗುರುತಿಸಲಾಗುತ್ತದೆ.

-0--0--0--0--0--0-



ಗೀತಾಂಜಲಿಯ ತುಣುಕು


ನಾ ಹಾಡುವ ಹಾಡದು ಇಂದಿಗೂ ಹಾಡದೇ ಉಳಿದಿದೆ.
ದಿನವೆಲ್ಲ ತಂಬೂರಿಯ ತಂತಿಯನು ಬಿಗಿಯಲೂ ಬಿಚ್ಚಲೂ ಕಳೆದಿದೆ.
ಗಳಿಗೆಯದು ಬಂದಿಲ್ಲ, ಶಬುದಗಳೇ ಸಿಗುತಿಲ್ಲ;
ಮಾತಾಡುವ ಬಯಕೆಯದು ಮನಸಿನಲಿ ತುಡಿಯುತಿದೆ.
ಮೊಗ್ಗಿನ್ನೂ ಅರಳಿಲ್ಲ, ತಂಬೆಲರು ನಿಟ್ಟುಸಿರ ಸೂಸಿದೆ.
ನಾನವನ ಮೊಗವ ಕಂಡಿಲ್ಲ, ಅವನ ದನಿಯನೂ ಕೇಳಿಲ್ಲ;
ಮನೆಯಾಚೆ ಬೀದಿಯಲಿ ಅವನ ಹೆಜ್ಜೆಯ ಸಪ್ಪಳವಷ್ಟೇ ಆಲಿಸಿದೆ.
ಅವನಿಗಾಗಿ ಮಣೆಹಾಕಿ ದಿನವೆಲ್ಲ ಕಳೆದೋಯ್ತು;
ದೀಪ ಹಚ್ಚುವುದ ಮರೆತೆ,
ಅವನ ಒಳಗೆ ಕರೆಯಲೂ ಸೋತೆ,
ಅವನ ಭೇಟಿಯ ಬಯಕೆಯಲಿ ಬದುಕಿರುವೆ; ಆದರೆ ಆ ಭೇಟಿಯಿನ್ನೂ ಆಗಿಲ್ಲ.


ಮೂಲ: ರವೀಂದ್ರನಾಥ ಟ್ಯಾಗೋರರ
The song that I came to sing

 ಭಾವಾನುವಾದ, ಸಿ ಮರಿಜೋಸೆಫ್

-0--0--0-

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು (ಲೇಖನ-9)

- ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)
-------------------------------------
ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕನ್ನಡ ಕ್ರೈಸ್ತ ಸಾಹಿತಿಯಾದ ರೆವರೆಂಡ್ ಉತ್ತಂಗಿ ಚೆನ್ನಪ್ಪರವರ ಬದುಕಿನ ವೈಖರಿಯನ್ನು ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಅವರ ಸೇವೆಯ ಅಮೋಘತೆಯನ್ನು ಸಾದಾರಪಡಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ. 
-------------------------------------
ಸರ್ವಜ್ಞ ಸಾಹಿತಿ : 
ಉತ್ತಂಗಿ ಚೆನ್ನಪ್ಪರವರಿಗೆ ಕೀರ್ತಿಯನ್ನು ತಂದುಕೊಟ್ಟಿದ್ದು ಅವರ ‘ಸರ್ವಜ್ಞ ಅಧ್ಯಯನ’. ಸರ್ವಜ್ಞನನ್ನು ಮನೆ ಮನೆಗೆ ಕೊಂಡೊಯ್ಯುವುದರ ಜೊತೆಗೆ ಚೆನ್ನಪ್ಪನವರೂ ಬೆಳೆದರು. ಅವರ ಬಗ್ಗೆ ಮಾಹಿತಿ ಇರುವ ಪುಸ್ತಕಗಳಲ್ಲಿ ಉತ್ತಂಗಿ ಚೆನ್ನಪ್ಪರವರು ಸರ್ವಜ್ಞನ ಸರಳ ಭಾಷೆಗೆ ಮನಸೋತು ಅಧ್ಯಯನಕ್ಕೆ ತೊಡಗಿದನೆಂದು ಅವರೇ ಹೇಳಿರುವುದು ನಿಜವಾಗಿಯು ಶ್ಲಾಘನೀಯ.
‘ತಿರುಳುಗನ್ನಡ ತಿರುಕ ಮರುಳಾದನು ಅವಗೆ
ಅರಳಿ ಹೋಯಿತು ಅವನ ಸರಳ ಭಾವಕೆ ಮನವು’
ಎಂದು ತಮ್ಮ ಸ್ಪೂರ್ತಿಯ ನೆಲೆಯನ್ನು ಗುರುತಿಸಿಕೊಂಡಿದ್ದಾರೆ. 
ಕನ್ನಡವ ಕನ್ನಡಿಸಿ ಕನ್ನಡಿಗರೆಲ್ಲರಿಗೆ
ಕನ್ನಡದ ಕನ್ನಡಿಯದೇನೆಂದು ತೋರಿ
ಕನ್ನಡವು ಕನ್ನಡಿಯ ತಾ ಬೇರೆಯಲ್ಲ ಈ
ಕನ್ನಡಿಯ ನೋಡದನು ಕನ್ನಡಿಗನೇ ಅಲ್ಲ
ಎನ್ನುತ ಬೆಳಗಿದನು ಕನ್ನಡದ ಜಾಣ
ಕನ್ನಡವು ಕನ್ನಡಿಯು ಸರ್ವಜ್ಞ ಕಾಣ||.
ಸರ್ವಜ್ಞ ಒಬ್ಬ ಸಾಮಾನ್ಯ ಸರಳ ಕವಿ, ಅವನ ಕಾವ್ಯದಲ್ಲಿ ಕಥಾವಸ್ತುವಿಲ್ಲ, ನವರಸಗಳಿಲ್ಲ, ಅವನೊಬ್ಬ ಪೂರ್ವಕವಿ, ಕುವರರನ್ನು ಸ್ಮರಿಸದ ಸಂಪ್ರದಾಯ ವಿರೋಧಿ ಎಂದು ಪಂಡಿತರೆನಿಸಿಕೊಳ್ಳುವವರು ಸರ್ವಜ್ಞನನ್ನು ಕುರಿತು ಮೂಗು ಮುರಿದು ಮಾತಾನಾಡುವ ಕಾಲವೊಂದಿತ್ತು. ಇದು ಮಹಾಸರ್ವಜ್ಞನ ಬಗೆಗಿನ ಪಂಡಿತರ-ಮೇಧಾವಿಗಳ ಅಲ್ಪತನವನ್ನು ಸೂಚಿಸುತ್ತದೆ. ಇಂತಹ ಸಮಯದಲ್ಲಿ ಪಂಡಿತ ಪಾಮರರಿಬ್ಬರಿಗೂ ಮಾನ್ಯವಾದ ‘ಸರ್ವಜ್ಞ ಮೂರ್ತಿ’ಯನ್ನು ಬೆಳಕಿಗೆ ತಂದ ಕೀರ್ತಿ ಉತ್ತಂಗಿಯವರದು. ಅಲ್ಲಿಯವರೆಗೂ ಯಾರ ಕಣ್ಣಿಗೂ ಗೋಚರಿಸದ ಸರ್ವಜ್ಞ ಕವಿಯು ಉತ್ತಂಗಿಯವರ ಪರಿಶ್ರಮದಿಂದ ಪ್ರತ್ಯಕ್ಷನಾದ. ಉತ್ತಂಗಿಯವರ ಅವಿರತ ಶ್ರಮದಿಂದ ಸರ್ವಜ್ಞನ ಸುವಿಚಾರಗಳು ಹಳ್ಳಿಯ ಮುಗ್ಧರಿಂದಿಡಿದು ಪಟ್ಟಣದ ಪಂಡಿತರವರೆಗೂ ಹರಡಿದವು. ಜನಸಾಮಾನ್ಯರು ಸರ್ವಜ್ಞನನ್ನು ಹಾಡಿ ಹೊಗಳಿದರು. ಅವನ ಅರ್ಥಪೂರ್ಣ ವಚನಗಳಿಗೆ ಮಾರುಹೋದರು. ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿಗಳಾಗಿ ಉಪಯೋಗವಾದವು.
ಇಂತಹ ಸರ್ವಜ್ಞ ಕವಿಯನ್ನು ಸಾಕ್ಷಾತ್ಕರಿಸಿಕೊಂಡ ಉತ್ತಂಗಿಯವರ ಕಾರ್ಯ ಆತ್ಮ್ಯಂತ ಘನತರವಾದುದು. ಅಜ್ಞಾತವಾಸದಲ್ಲಿದ್ದ ಸರ್ವಜ್ಞ ಕವಿಯನ್ನು ಹುಡುಕಿ ತಂದು ಕನ್ನಡದ ಸಿಂಹಾಸನದಲ್ಲಿ ಕುಳ್ಳಿರಿಸಿದ ಉತ್ತಂಗಿಯವರ ಪ್ರಯತ್ನ ನಿಜವಾಗಿಯು ಶ್ಲಾಘನೀಯ. ಸರ್ವಜ್ಞನ ಸೇವೆಯಲ್ಲಿ ಬದ್ಧರಾಗಿ ನಿಲ್ಲುವಂತೆ ಉತ್ತಂಗಿಯವರಿಗೆ ಪ್ರೇರಣೆಯನ್ನಿತ್ತವರು ವಿದೇಶಿ ಮಿಶನರಿಗಳಾದ ರೆವರೆಂಡ್. ಜೆ. ಜೆ. ಉರ್ನರವರು. ಅವರು ಬಾಸೆಲ್ ಮಿಷನ್ ಸಂಸ್ಥೆಯ ಮೂಲಕ ಕರ್ನಾಟಕದಲ್ಲಿ ಕ್ರೈಸ್ತ ಧರ್ಮಪ್ರಸಾರಕ್ಕಾಗಿ ಬಂದವರು, ಕನ್ನಡವನ್ನು ಕಲಿಯಲು ಅವರಿಗೆ ಚೆನ್ನಪ್ಪರವರು ಪ್ರೇರಣೆಯಾಗಿದ್ದರು. ಹೀಗೆ ಕನ್ನಡವನ್ನು ಕಲಿಯುವಾಗ ಉದಾಹರಣೆಗಳಿಗೆ ಸಂಬಂಧಿಸಿದಂತೆ ಸರ್ವಜ್ಞನ ಕೆಲವು ಪದ್ಯಗಳ ಅರ್ಥವನ್ನು ರೆವರೆಂಡ್ ಜೆ. ಜೆ. ಉರ್ನರವರಿಗೆ ವಿವರಿಸುತ್ತಿದ್ದರು. ಹೀಗೆ ಸರ್ವಜ್ಞನ ಸರಳವಾದ ಭಾಷೆಗೆ ಮತ್ತು ನವೀನ ವಿಚಾರಗಳಿಗೆ ಅವರು ಮಾರುಹೋದರು ಮತ್ತು ತಮ್ಮ ವಿಚಾರಗಳು ಸರ್ವಜ್ಞನ ವಿಚಾರಗಳಿಗೂ ಬಹುಮಟ್ಟಿಗೆ ಸಾಮ್ಯವಿದ್ದುದನ್ನು ಕಂಡು ಸಂತಸಗೊಂಡರು. ಸರ್ವಜ್ಞನು ಹುಟ್ಟಿದ ಸ್ಥಳ, ಮತ, ಕಾಲ ಇತ್ಯಾದಿಗಳ ಬಗೆಗೆ ವಿವರ ನೀಡಬೇಕೆಂದು ಆ ಮಿಶನರಿಯೂ ಅಂಗಲಾಚಿ ಬೇಡಿಕೊಂಡನು. ಹೀಗೆ ರೆವರೆಂಡ್ ಉರ್ನರ್‍ರಿಂದ ಸ್ಪೂರ್ತಿ ಪಡೆದ ಉತ್ತಂಗಿಯವರು ಸರ್ವಜ್ಞ ಕವಿ ಹಾಗೂ ಅವನ ವಚನಗಳ ಹುಡುಕಾಟಕ್ಕೆ ಮುಂದಾದರು. 
ಹೊರದೇಶದವರು ಸರ್ವಜ್ಞನ ಬಗೆಗೆ ಆದರಾಭಿಮಾನಗಳನ್ನು ತಳೆದು ಅವನ ಸೇವೆಗೆ ಸಿದ್ಧರಾಗಿರುವುದನ್ನು ಕಂಡು ಸರ್ವಜ್ಞನು ಜನ್ಮಿಸಿದ ಜಿಲ್ಲೆಯವರಾದ ಉತ್ತಂಗಿಯವರಿಗೆ ನಾಚಿಕೆಯಾಯಿತು. ತಮ್ಮ ಜಿಲ್ಲೆಯ, ತಮ್ಮ ನುಡಿಯ ಕವಿಯ ಸೇವೆ ಮಾಡದೆ ಕೈಕಟ್ಟಿ ಕುಳಿತುಕೊಳ್ಳುವುದು ನಾಚಿಗೇಡಿತನವೆಂದು ಬಗೆದರು. ಆಗ ತನು-ಮನ-ಧನಗಳಿಂದ ಸರ್ವಜ್ಞನ ಸೇವೆ ಮಾಡಲು ಉದ್ಯುಕ್ತರಾದರು. ತತ್ವಶಾಸ್ತ್ರದಲ್ಲಿ ವಿಶೇಷವಾದ ಆಸೆಯಿದ್ದರೂ ಅದರಿಂದ ಅವರ ಮನಸ್ಸಿಗೆ ಶಾಂತಿ ದೊರೆಯಲಿಲ್ಲ, ಸಾಹಿತ್ಯದಲ್ಲೂ ಮೊದಮೊದಲು ಅವರಿಗೆ ಆಸಕ್ತಿ ಇರಲಿಲ್ಲ. ಹೀಗಾಗಿ ಜೀವನದಲ್ಲಿ ಜಿಗುಪ್ಸೆಯೆನಿಸಿದಾಗ ಸರ್ವಜ್ಞ ಕವಿಯ ಜೀವನ ಹಾಗೂ ಕೃತಿಗಳ ಬಗೆಗಿನ ಸಂಶೋಧನೆ ಮಾಡಲು ಹೊರಟ ಸಂದರ್ಭವನ್ನು ಉತ್ತಂಗಿಯವರು ಈ ಕೆಳಕಂಡಂತೆ ಸ್ಮರಿಸಿಕೊಂಡಿರುವರು. ಹೀಗೆ ಭಗ್ನಾಶನಾಗಿ ಸಾಗುತ್ತಿದ್ದ ನನ್ನ ಜೀವನದ ಹಾದಿಯಲ್ಲಿ ಸರ್ವಜ್ಞನೆಂಬ ತಿರುಕನ ದರ್ಶನವಾಯಿತು. ಉಭಯತರ ಹಾಡು ಒಂದೇ ಎಂದು ಎನಿಸಿತು. ಆಗ ನಾನು ಅವನಲ್ಲಿ ನನ್ನನ್ನು ಕಂಡೆ. ಹೀಗೆ ಇಬ್ಬರಿಗೂ ಮೇಳವಾಯಿತು. ಕರಿಗೆ ಕರಿ ಕೂಡಿದಂತಾಗಿ ಪರಸ್ಪರರಲ್ಲಿ ಹಿರಿಯ ಸ್ನೇಹವುಂಟಾಯಿತು. ಪ್ರಿಯನು ಪ್ರೇಯಸಿಯ ಭಾಷೆಯನ್ನು ಕಲಿಯುವಂತೆ ನಾನು ಸರ್ವಜ್ಞನಿಂದ ಸರ್ವಜ್ಞನಿಗಾಗಿ ಕನ್ನಡವನ್ನು ಕಲಿತೆ. ಕನ್ನಡ ವ್ಯಾಕರಣ, ಛಂದಸ್ಸು, ಕಾವ್ಯ, ಅಲಂಕಾರ-ಮುಂತಾದ ಶಾಸ್ತ್ರ ಗ್ರಂಥಗಳನ್ನು ಓದಿದ್ದು ಸರ್ವಜ್ಞನ ಕಾರ್ಯವನ್ನು ಕೈಗೊಂಡ ನಂತರ ಎಂಬುದಾಗಿ ತಾವೆ ಹೇಳಿಕೊಂಡಿರುತ್ತಾರೆ.
ತಮ್ಮ ಸಂಸಾರದಲ್ಲಿ ತಿರಸ್ಕಾರ ಭಾವನೆಯನ್ನು ತಳೆದಿದ್ದ ಉತ್ತಂಗಿಯವರಿಗೆ ಸರ್ವಜ್ಞನ ದರ್ಶನವಾದದ್ದು ನಿಜವಾಗಿಯು ಅದ್ಭುತ. ಇಲ್ಲಿ ಉತ್ತಂಗಿಯವರು ಹೇಳುವ ‘ನಾನು ಅವನಲ್ಲಿ ನನ್ನನ್ನು ಕಂಡೆ ಎಂಬ ವಾಕ್ಯವು ನಿಜವಾಗಿಯು ಅಂತರಾವಲೋಕನಕ್ಕೆ ಎಡೆ ಮಾಡಿಕೊಡುವಂತದ್ದಾಗಿದೆ. ಸರ್ವಜ್ಞನ ಸ್ವಭಾವಕ್ಕೂ ಅವರ ಸ್ವಭಾವಕ್ಕೂ ವ್ಯತ್ಯಾಸವಿಲ್ಲವೆಂಬ ವಿಷಯ ಮನದಟ್ಟಾಗುವುದನ್ನು ಗಮನಿಸಬಹುದು. ಮದುವೆಯಾದ ಹೊಸತರಲ್ಲಿ ಪತಿಯ ಒಲವನ್ನು ಪಡೆಯಲೆತ್ನಿಸುವ ಪ್ರೀತಿಯ ಸತಿಯಂತೆ, ಉತ್ತಂಗಿಯವರು ಸರ್ವಜ್ಞನ ಉತ್ತಮವಾದ ವಚನಗಳನ್ನು ಅನುವಾದಿಸಿ ಇಂಗ್ಲೀಷಿನಲ್ಲಿ ಪ್ರಸಿದ್ಧಿಪಡಿಸಬೇಕೆಂದು ನಿಶ್ಚಯಿಸಿದರು. ಕನ್ನಡ ವಾಙ್ಞಯದಲ್ಲಿ ಸರ್ವಜ್ಞನಂತಹ ಕವಿಗಳು ಬಹು ವಿರಳವಾಗಿರುವುದರಿಂದ ಆತನ ವ್ಯಕ್ತಿತ್ವದ ಮಹಿಮೆಯನ್ನು ಪರದೇಶದವರಿಗೆ ತೋರಿಸಿಕೊಡಬೇಕೆಂಬ ಹೆಬ್ಬಯಕೆಯುಂಟಾಯಿತು. ಮರಾಠಿ ವಾಙ್ಞಯದಲ್ಲಿ ತುಕಾರಾಮನಿಗೂ, ತೆಲುಗು ವಾಙ್ಞಯದಲ್ಲಿ ವೇವನನಿಗೂ, ತಮಿಳು ವಾಙ್ಞಯದಲ್ಲಿ ಅವ್ವಾಯಿ, ಅರುಣಗಿರಿನಾಥರಿಗೂ ಸಮಾನನಾದ ಕವಿ ಸರ್ವಜ್ಞನಾಗಿದ್ದರೂ ಕನ್ನಡ ವಾಙ್ಞಯದಲ್ಲಿ ಅವನಿಗೆ ಅಂಥ ಎತ್ತರದ ಸ್ಥಾನವಿಲ್ಲದಿರುವುದನ್ನು ಕಂಡು ಉತ್ತಂಗಿಯವರಿಗೆ ವ್ಯಸನವಾಯಿತು. ರೂಢಗನ್ನಡ ಕವಿ ಶಿಶುಮಣಿ ಎನಿಸಿಕೊಳ್ಳಲು ಅರ್ಹನಾದ ಸರ್ವಜ್ಞನ ಭವ್ಯ ವ್ಯಕ್ತಿತ್ವವನ್ನು ಪರದೇಶಸ್ಥರಿಗೆ ತೋರಿಸಿಕೊಡುವ ಹಂಬಲ ಮೊದಲು ಅವರಿಗೆ ಉಂಟಾಯಿತು. ಅಂದಿನಿಂದ ಅವನ ವಚನಗಳನ್ನು ಇಂಗ್ಲೀಷ್ ಭಾಷೆಯಲ್ಲಿ ತರ್ಜುಮೆ ಮಾಡಲುದ್ಯುಕ್ತರಾದರು.
ಹೀಗೆ ಸರ್ವಜ್ಞನ ಕನ್ನಡತನಕ್ಕೆ ಮರುಳಾಗಿ, ಹಲವರ ಬಾಯಲ್ಲಿ, ಕೆಲವರ ಕೈಬರಹದಲ್ಲಿ ಚೆಲ್ಲಿ ಹರಿದು ಹೋಗಿದ್ದ ಸರ್ವಜ್ಞನ ವಚನಗಳನ್ನು ಅಲ್ಲೊಂದು ಇಲ್ಲೊಂದು ಎಂಬಂತೆ ಅಚ್ಚಾದ-ಅಚ್ಚಾಗದ ಸಹಸ್ರ ಸಹಸ್ರ ತ್ರಿಪದಿಗಳನ್ನು ಕಲೆಹಾಕಿದರು. ನಿರ್ಭೀತ, ನಿರಹಂಕಾರ ಪುರುಷರತ್ನನ ಮಿಂಚಿನ ಗೊಂಚಲ ನುಡಿ ಮುತ್ತುಗಳನ್ನು ಹಾಸ್ಯ ರಸಾಯನಗಳನ್ನು ವಿಂಗಡಿಸಿ, ಕ್ರಮಗೊಳಿಸಿ, ಸಂಕಲಿಸಿ ಯಶವಂತರಾವ್ ಜಾತಾರರ ನೆರವಿನಿಂದ 1924 ರಲ್ಲಿ ಮೊತ್ತ ಮೊದಲ ಆವೃತ್ತಿಯನ್ನು ಪ್ರಕಟಿಸಿದರು. ಕ್ರಮೇಣ 1927, 1935, 1957ರಲ್ಲಿ ಇದರ ಪರಿಷ್ಕøತ ಆವೃತ್ತಿಗಳನ್ನು ಹೊರತಂದು ಸರ್ವಜ್ಞನ ವಾಣಿಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಅವನ ಸಮಗ್ರ ದರ್ಶನವನ್ನು ಮಾಡಿಸಿದರು. ಚೆನ್ನಪ್ಪನವರ ಕನ್ನಡದ ಅವಿರತ ಸೇವೆಯನ್ನು ಕಂಡು ಅನೇಕ ಮಹನೀಯರು ಅಂದು ಮೆಚ್ಚುಗೆಯ ಮಾತಾಡಿದರು. ವಿಶೇಷವಾಗಿ ಶ್ರೀ ತಿರುಮಲೆ ತಾತಾಚಾರ್ಯಶರ್ಮ ಅವರು –
‘ಉತ್ತಂಗಿ ಬರೆದಷ್ಟು ಮತ್ಯಾರು ಬರೆದಿಲ್ಲ
ವಿಸ್ತಾರದಿಂದ ಸರ್ವಜ್ಞನಾ ವಚನ
ಉತ್ತಮವು ಕಾಣೊ ಸರ್ವಜ್ಞ.
ಎಂದರೆ,
ಶ್ರೀ ಪುಣೇಕರ ಅವರು –
ಕ್ರಿಸ್ತರವರಿವರೆಂದು ಪುಸ್ತಕವ ತಿರುವದಿರು
ಹಸ್ತವನಿಗೆ ಹಣ್ಣನಿತ್ತಂತೆ
ಕ್ರೈಸ್ತರ ಶಿಸ್ತು ಕಾಣಾಯ್ಯ ಸರ್ವಜ್ಞ’
ಎಂದು ಬಾಯ್ತುಂಬ ಪ್ರಶಂಸಿಸಿದ್ದಾರೆ.
ಉತ್ತಂಗಿಯವರ ಕೃತಿ ರತ್ನಗಳು :
ಉತ್ತಂಗಿ ಚೆನ್ನಪ್ಪರವರು ಬುದ್ಧಿ ಮತ್ತು ಸರಳ ಜೀವಿ ಯಾವುದೇ ವಿಷಯವನ್ನು ತಮ್ಮ ಬುದ್ಧಿಯ ಒರೆಗಲ್ಲಿಗೆ ಉಜ್ಜಿನೋಡಿ, ಅಂದರೆ ವಿಮರ್ಶಿಸಿ, ವಿಶ್ಲೇಷಿಸಿ ಸತ್ಯವೆನಿಸಿದನ್ನು ಮಾತ್ರ ನಂಬುವ ಸ್ವಭಾವದವರು. ಕ್ರೈಸ್ತ ಸಂಸ್ಥೆಯ ಸೇವೆಯಲ್ಲಿ ನಿರತರಾಗಿದ್ದರೂ ಕ್ರೈಸ್ತ ಧರ್ಮದ ಮೇಲಿನ ದುರಭಿಮಾನದಿಂದ ಇತರ ಧರ್ಮ ತತ್ವಗಳನ್ನು ತಿರಸ್ಕರಿಸುವುದಾಗಲೀ, ನಿಂದಿಸುವುದಾಗಲಿ ಅಥವಾ ಖಂಡಿಸಿ ಉಪದೇಶ ಮಾಡುವ ಜಾಯಮಾನವಾಗಲಿ ಅವರದಲ್ಲ. ಅವರದೇನಿದ್ದರೂ ನೇರ ನುಡಿ-ನೇರ ಹಾದಿ, ಒಳ-ಹೊರಗು ಎಂಬುದಿಲ್ಲ. ಹಾಗಾಗಿಯೇ ಅವರು ಬೇರೆ ಧರ್ಮಗಳ ಕೃತಿಗಳನ್ನು ಅವಲೋಕಿಸಿ ಸಂಶೋಧನೆ ಮಾಡುವಂತಾಯಿತು.
ಸರ್ವಜ್ಞ ಕವಿಯನ್ನು ಅರಿಯಲು ಹೊರಟ ಉತ್ತಂಗಿಯವರು ವೀರಶೈವ ಧರ್ಮದ ಸಾಹಿತ್ಯ ಸತ್ವವನ್ನು ಹೀರಬೇಕಾಯಿತು ಅದರಿಂದ ಉಗಮವಾದದ್ದು ವೀರಶೈವ ಸಾಹಿತ್ಯವೆಂಬ ಕಲ್ಪವೃಕ್ಷ. ಚೆನ್ನಪ್ಪರವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅಂತಹ ಹಲವು ಗ್ರಂಥಗಳ ಅವಲೋಕನ ಮಾಡಿದರೆ ಉತ್ತಂಗಿಯವರ ಮೇರು ವ್ಯಕ್ತಿತ್ವದ ಅರಿವಾಗುತ್ತದೆ ಮತ್ತು ವೀರಶೈವ ಧರ್ಮ ಹಾಗೂ ಸಾಹಿತ್ಯಗಳಿಗೆ ಸಲ್ಲಿಸಿದ ಅನುಪಮ ಸೇವೆಯ ದರ್ಶನವಾಗುತ್ತದೆ. ಶ್ರೀಯುತರ ಕೃತಿಗಳು ಕ್ರಮವಾಗಿ ‘ಬನಾರಸಕ್ಕೆ ಬೆತ್ಲಹೇಮಿನ ವಿನಂತಿ’ (1921), ‘ಹಿಂದೂ ಸಮಾಜ ಹಿತಚಿಂತಕ’ (1921), ‘ಸರ್ವಜ್ಞನ ವಚನಗಳು’ (1924), ‘ಬಸವೇಶ್ವರನೂ ಕರ್ನಾಟಕದ ಅಭ್ಯುದಯವೂ’ (1928), ‘ಅನುಭವ ಮಂಟಪ’, ‘ಮಕ್ಕಳ ಶಿಕ್ಷಣ ಪಾಠ’ (1933), ‘ಬಸವೇಶ್ವರನೂ ಅಸ್ಪøಶ್ಯರ ಉದ್ಧಾರವೂ’ (1933), ‘ಸಾಧು ಸುಂದರ ಸಿಂಗರ ಅನುಭವ ಸಿದ್ಧಾಂತ’ (1929), ‘ಅಧ್ಯಕ್ಷರ ಭಾಷಣ’ (1949), ‘ಮೋಳಿಗೆಯ ಮಾರಯ್ಯ ಮತ್ತು ಮಹಾ ದೇವಿಯವರ ವಚವನಗಳು’ (1950), ‘ಅನುಭವ ಮಂಟಪದ ಐತಿಹಾಸಿಕ’ (1951), ‘ಸಿದ್ಧರಾಮ ಸಾಹಿತ್ಯ ಸಂಗ್ರಹ’ (1955), ‘ಪೂಜ್ಯ ಉತ್ತಂಗಿಯವರ ಜೀವನ ಚರಿತ್ರೆ’ (1956), ಆದಯ್ಯನ ವಚನಗಳು’ (1958), ‘ಮೃತ್ಯುಂಜಯ’ (1968), ‘ಲಿಂಗಾಯತ ಧರ್ಮ ಹಾಗೂ ಕ್ರೈಸ್ತ ಧರ್ಮ’ (1969) ಇವುಗಳಲ್ಲದೆ, `Complete Concordance to Bhagavat Geeta, Creation : A wonderful child of God, Lingayatism' ªÀÄvÀÄÛ ‘Yellamma : A Goddess of South India’ ಎಂಬ ಇಂಗ್ಲೀಷ್ ಕೃತಿಗಳನ್ನೂ ರಚಿಸಿ ‘ಅಭಿನವ ಸರ್ವಜ್ಞ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಉತ್ತಂಗಿಯವರ ಒಟ್ಟು ಸಾಹಿತ್ಯವನ್ನು ಪ್ರಮುಖವಾಗಿ ಕ್ರೈಸ್ತ ಧರ್ಮದ ಕೃತಿಗಳು ಮತ್ತು ಕನ್ನಡ ಸಾಹಿತ್ಯ ಸಂಸ್ಕøತಿಯ ಕೃತಿಗಳು ಎಂಬುದಾಗಿ ವಿಭಾಗಿಸಬಹುದು.

-0--0--0--0--0--0-

ಪೌರತ್ವಕ್ಕೆ ಪುರಾವೆ

- ಡೇವಿಡ್ ಕುಮಾರ್. ಎ

ಮುತ್ತಜ್ಜನ ಲಂಗೋಟಿಯನು
ಗೆದ್ದಲ ಹುಳು ತಿಂದು,
ಬೆಳೆದು ನಿಂತಿದೆ ಹುತ್ತ,
ಹಳೇ ಮಣ್ಣ ಘಮಲೇ ಪುರಾವೆ !

ಮುತ್ತಜ್ಜಿಯ ಮಣ್ಣ ಮಡಕೆಯ
ಒಡೆದ ಚೂರುಗಳು,
ಊರೆಲ್ಲಾ ಹರಡಿ
ಕುಂಟಪಿಲ್ಲಿಯ ಚೌಕದೊಳಗೆ
ಬಿಡಿ ಬಿಡಿ ಚೆಲ್ಲಾಡಿವೆ
ಸಾಕಲ್ಲವೇ ಸಾಕ್ಷಿ !?

ಊರೊಳಗಿನ ಗೋಕಟ್ಟೆ
ಊರಾಚೆಯ ಗುಂಡುತೋಪು,
ಗಿಳಿಹಿಂಡು, ಹಕ್ಕಿಹಾಡು,
ಕೆರೆ ಏರಿಯ ನೇರಳೆ ಹಣ್ಣು,
ನನ್ನೂರಿಗೆ ದಾಖಲೆ !

ವಿದೇಶಿ ದಂಡುಗಳ
ಹಿಮ್ಮೆಟ್ಟಿದ ಹಿರಿಯರಿಗೆ
ಜಾತಿ-ಧರ್ಮಗಳಿಲ್ಲ,
ವಂಶ ವೃಕ್ಷಗಳಿಗೆ, ದ್ವೇಷದ ಬೇರಿಲ್ಲ
ಪೌರತ್ವಕ್ಕೆ ಸಹಬಾಳ್ವೆಯೇ ಪುರಾವೆ!

--0--0--0-

ಯಾರು ನಿನ್ನವರು?


- ಎಲ್. ಚಿನ್ನಪ್ಪ, ಬೆಂಗಳೂರು

ಎಷ್ಟೋ ಸಲ ನಾವನ್ಕಂಡಿರ್ತೇವೆ, ನಾನಿಲ್ಲದಿದ್ರೆ ನನ್ನ ಹೆಂಡ್ತಿ, ಮಕ್ಕಳು ತಂದೆ-ತಾಯಿ ಗತಿಯೇನು? ಅವರೆಲ್ಲ ನನ್ನಲ್ಲೇ ಪ್ರಾಣ ಇಟ್ಕೊಂಡಿದ್ದಾರೆ, ನಾನಿಲ್ಲದಿದ್ರೆ ಅವಳು ಬದುಕೋದೇ ಇಲ್ಲ. ಹೀಗೆ ನಮ್ಮ ಜೀವನದ ಹೋರಾಟ ನಡೀತಾ ಇರ್ತದೆ. ಆದರೆ ಅದರ ಸತ್ಯಾನೇ ಬೇರೆ. ಒಂದು ಸಲ ಒಬ್ಬ ಗುರು ಮತ್ತು ಶಿಷ್ಯನ ನಡುವೆ ಒಂದು ವಾಗ್ವಾದ ನಡಿಯಿತು. ಗುರು ಶಿಷ್ಯನಿಗೆ, ‘ಜಗತ್ತು ಕೇವಲ ಒಂದು ಭ್ರಮೆ, ದೇವರೊಬ್ಬರನ್ನು ಬಿಟ್ಟು ನಿನ್ನನ್ನು ನಿಜವಾಗಿ ಪ್ರೀತಿಸೋರು ಯಾರೂ ಇಲ್ಲಪ್ಪ’ ಎಂದು ಶಿಷ್ಯನಿಗೆ ಹೇಳಿದ. ಅದರ ಬಗ್ಗೆ ವಾದ ಜರುಗಿತು. 
ಶಿಷ್ಯ: ನಿಮಗೆ ಗೊತ್ತಿಲ್ಲ ಬಿಡಿ ಸ್ವಾಮಿ, ನನ್ನ ಹೆಂಡ್ತಿ ನನ್ನನ್ನ ತುಂಬಾ ಪ್ರೀತಿಸ್ತಾಳೆ, ನನ್ನ ತಾಯಿಗೆ ನಾನಿಲ್ಲದಿದ್ರಂತೂ ಆಗೋದೇ ಇಲ್ಲ. ನನ್ನ ಮಕ್ಳೂ ನನ್ನನ್ನ ಚೆನ್ನಾಗಿ ಗಮನಿಸ್ತಾರೆ, ಗೌರವಿಸ್ತಾರೆ. ನನ್ನ ವ್ಯಾಪಾರ ಪರಿಸ್ಥಿತಿ, ಹಣ ಕಾಸು ಎಲ್ಲಾ ತುಂಬಾ ಚೆನ್ನಾಗಿದೆ. ಹೀಗಿರುವಾಗ ಇದು ಕಲ್ಪನೆ ಹೇಗಾಗುತ್ತೇ ಸ್ವಾಮಿ?
ಸ್ವಾಮೀಜಿ: ನಿಮ್ಮ ಹೆಂಡ್ತಿ ಪ್ರೀತಿ, ನಿಮ್ಮ ತಾಯಿ ಪ್ರೀತಿ, ನಿಮ್ಮ ಮಕ್ಕಳ ಗೌರವ, ಇವೆಲ್ಲಾ ಭ್ರಮೆ
ಶಿಷ್ಯ: ಇದು ಭ್ರಮೆ ಹೇಗಾಗುತ್ತೆ ಸ್ವಾಮಿ, ಪ್ರತಿ ದಿನ ನಡೆಯೋದನ್ನ ಯಾರಾದರೂ ಕಲ್ಪಿಸಿಕೊಂಡು ಹೇಳೋಕಾಗುತ್ತಾ? ನಾನು ಇಷ್ಟು ದಿನ ಅವರ ಜೊತೆ ಇದ್ದೀನಿ, ಯಾರ್ಯಾರು ಏನೇನು ಅಂತ ನನಗೆ ಚೆನ್ನಾಗಿ ಗೊತ್ತಿದೆ ಸ್ವಾಮೀಜಿ, ಇದನ್ನೆಲ್ಲ, ಕಲ್ಪನೆ, ಭ್ರಮೆ ಕನಸು ಅಂತ ಹೇಳೋಕಾಗಲ್ಲ, ಬಿಡಿ ಸ್ವಾಮಿ. 
ಸ್ವಾಮೀಜಿ: ಒಂದು ಪಕ್ಷ ನೀವಂದುಕೊಂಡಿರುವುದೆಲ್ಲ ಸುಳ್ಳು ಅಂತ ತೋಚಿದ್ರೆ ಹಾಗೇನ್ಮಾಡ್ತೀರಿ?
ಶಿಷ್ಯ: ಹಾಗೇನಾದ್ರು ಆದ್ರೆ ನಾನು ಖಂಡಿತ ನಿಮ್ಮ ಹಿಂದೆ ಬಂದ್ಬಿಡ್ತೀನಿ ಸ್ವಾಮೀಜಿ.
ಸ್ವಾಮೀಜಿ: ಖಂಡಿತವಾಗಿ...?
ಶಿಷ್ಯ: ಖಂಡಿತ ಸ್ವಾಮಿ
ಸ್ವಾಮೀಜಿ: ಸರಿಯಾಗಿ ಯೋಚ್ನೆ ಮಾಡಿ, ಸಂನ್ಯಾಸಿ ಆಗ್ಬೇಕಾಗುತ್ತೆ...
ಶಿಷ್ಯ: ಆಗ್ಲಿ ಬಿಡಿ ಸ್ವಾಮಿ.
ಸ್ವಾಮೀಜಿ: ಸಂನ್ಯಾಸಿ ಆಗೋದೇನೂ ಬೇಡ. ನೋಡಿ, ತಗೋಳಿ, ಇದನ್ನ ಮನೆಗೆ ಹೋದ ಮೇಲೆ ತಗೋಳಿ. ತಗೊಂಡ್ರೆ ನೀವು ಸತ್ತ ಹಾಗೆ ಮಲಕೊಂಡಿರ್ತೀರಿ. ಆದರೆ ಸತ್ತಿರಲ್ಲ, ನೀವು ಸತ್ತಿದ್ದೀರಿ ಅಂತ ಗೊತ್ತಾದ್ಮೇಲೆ, ನಿಮ್ಮನೇಲಿ ಯಾರ್ಯಾರು ಯಾವ ರೀತಿ ನಡ್ಕೋಂತಾರೆ ಅನ್ನೋದು ನಿಮಗೇ ಕೇಳ್ಸುತ್ತೆ, ಸರಿಯಾದ ಸಮಯಕ್ಕೆ ನಾನು ಬರ್ತೀನಿ.
ಶಿಷ್ಯ: ಆದರೆ ಇದರಿಂದ ಏನೂ ತೊಂದ್ರೆ ಇಲ್ವಲ್ಲ ಸ್ವಾಮಿ...?
ಸ್ವಾಮೀಜಿ: ಏನೂ ಇಲ್ಲ. 
ಶಿಷ್ಯ: ಯಾಕಂದ್ರೆ ಇನ್ನೂ ಬೇಕಾದಷ್ಟು ಜವಾಬ್ದಾರಿ ಇದೆ, ಸ್ವಾಮಿ. 
ಸ್ವಾಮೀಜಿ: ಏನೂ ಹೆದರ್ಕೋ ಬೇಡಿ, ಜೀವಕ್ಕೆ ಏನೂ ಭಯ ಇಲ್ಲ, ಹೋಗ್ಬಿಟ್ಟು ಬನ್ನಿ. 
ಶಿಷ್ಯ: ಆಯ್ತು ಸ್ವಾಮಿ, ನಾನು ಬರ್ತೀನಿ, ನಮಸ್ಕಾರ ! ಮನೆಗೆ ಬಂದು ಸ್ವಾಮೀಜಿ ಕೊಟ್ಟ ಔಷಧಿಯನ್ನು ತೆಗೆದುಕೊಂಡು ಶಿವಪ್ಪ ಮಲಕ್ಕೊಂಡ. ಅವನು ಸತ್ತೋಗಿದ್ದಾನೆ ಅಂತ ಅವನ ಮನೆಯಲ್ಲಿ ಎಲ್ಲರೂ ದುಃಖಪಡ್ತಾ ಇದ್ದಾರೆ. 
ಹೆಂಡತಿ: ಅಯ್ಯೋ, ಅಯ್ಯೋ ! ನಾನೇನ್ಮಾಡ್ಲಿ, ನಾನೇನ್ಮಾಡ್ಲಿ...?
ಅತ್ತೆ: (ಶಿವಪ್ಪನ ತಾಯಿ) ಸಮಾಧಾನ ಮಾಡ್ಕೋಳೇ ತಾಯಿ, ಸಮಾಧಾನ ಮಾಡ್ಕೋ. ನೋಡಿ, ನನ್ನ ಕರ್ಮ ಇದು. ಆ ದೇವರು ನನ್ನನ್ನ ಕರ್ಕೋಳೋ ಬದಲು ನನ್ನ ಮಗನ್ನೇ ಕರ್ಕೊಂಡ್ಬಿಟ್ಟಿದ್ದಾನೆ, ಪಾಪಿ ಮುಂಡೇ ಮಗ...
ಬಂಧುಗಳು: ಎಲ್ರೂ ಸಮಾಧಾನ ಮಾಡ್ಕೋಬೇಕ್ರಮ್ಮ... 
ಅಷ್ಟರಲ್ಲಿ ಸ್ವಾಮೀಜಿಗಳು ಮನೆಗೆ ಬರುತ್ತಾರೆ.
ತಾಯಿ: ನೋಡಿ ಸ್ವಾಮಿಗಳೇ ಅನ್ಯಾಯಾನಾ. ಬೆಳಿಗ್ಗೆ ಚೆನ್ನಾಗೇ ಇದ್ದ, ಎಲ್ಲೋ ಹೋಗಿ ಬಂದು ಮಲಕ್ಕೊಂಡ, ಆಮೇಲೇ ಹೀಗಾಗ್ಬಿಟ್ಟ ನೋಡಿ...
ಸ್ವಾಮೀಜಿ: (ಸ್ವಾಮೀಜಿ ಶಿವಣ್ಣನ ಕೈ ಹಿಡಿದು ಪರೀಕ್ಷಿಸುತ್ತ) ಶಿವಣ್ಣ ಇನ್ನೂ ಬದುಕೇ ಇದ್ದಾನೆ 
ಹೆಂಡತಿ: ಹಾಗಾದೆ ನನ್ನ ಗಂಡನ್ನ ಹೇಗಾದ್ರೂ ಉಳ್ಸಿ ಸ್ವಾಮಿ.
ಸ್ವಾಮೀಜಿ: ಆದರೆ, ಇವರನ್ನ ಉಳ್ಸೋದ್ರಲ್ಲಿ ಒಂದು ಕಷ್ಟ ಇದೆ....?
ಹೆಂಡತಿ: ಏನದು ಸ್ವಾಮಿ?
ಸ್ವಾಮೀಜಿ: ಆಕೆಗೆ ಒಂದು ಔಷಧವನ್ನು ಕೊಟ್ಟು ‘ಇದನ್ನ ನೀರಿನಲ್ಲಿ ಕದಡಿ ಕುಡಿಸಿದ್ರೆ, ಇವನು ಬದುಕ್ತಾನೆ’
ಹೆಂಡತಿ: ಅಷ್ಟೇ ತಾನೇ, ಕೊಡಿ ಸ್ವಾಮಿ, ನಾನು ಕುಡಿಸ್ತೇನೆ.
ಸ್ವಾಮೀಜಿ: ಆದರೆ, ತಾಯಿ, ಇದನ್ನ ಮೊದಲು ಅವರಿಗೆ ಕುಡ್ಸೋಕೆ ಮುಂಚೆ, ನೀವು ಕುಡಿಬೇಕಾಗುತ್ತೆ.
ಹೆಂಡತಿ: ಅಷ್ಟೇ ತಾನೇ ಸ್ವಾಮಿ? ನಾನು ಕುಡಿತೀನಿ.
ಸ್ವಾಮೀಜಿ: ಆದರೆ ಸ್ವಲ್ಪ ಕಷ್ಟ ಇದೆ ತಾಯಿ. ಇದನ್ನ ಮೊದಲು ನೀವು ಕುಡಿದ್ರೆ ಸಾಯ್ತೀರಿ. ಆಗ ಮಾತ್ರ ಅವರು ಬದುಕುತ್ತಾರೆ. ಒಂದು ಜೀವ ತಗೊಂಡ್ಮೇಲೇನೇ, ಇನ್ನೊಂದು ಜೀವ ಕೋಡೋದು, ಇದೇ ಔಷಧಿಯ ಸತ್ವ. ಈಗ ಹೇಳಿ ಕುಡಿತೀರಾ...? ಯಾಕೆ ತಾಯಿ ನೀವು ಕುಡಿಯೋದಿಲ್ವ? ನಿಮ್ಮ ಗಂಡನ್ನ ಬದುಕಿಸಬೇಕಂತ ನಿಮಗಿಷ್ಟ ಇಲ್ಲವಾ? ಇಷ್ಟೇನಾ ನಿಮ್ಮ ಗಂಡನ್ನ ಪ್ರೀತಿ ಮಾಡೋದು?
ಹೆಂಡತಿ: ಪ್ರೀತಿ ಇಲ್ಲ ಅಂತ ಯಾರು ಹೇಳಿದ್ದು ಗುರುಗಳೇ? ನಾನು ಸತ್ರೆ ನಮ್ಮ ಮಕ್ಕಳನ್ನ, ಅತ್ತೆಯನ್ನ ಯಾರು ನೋಡ್ಕೋತಾರೆ? 
ಸ್ವಾಮೀಜಿ: ನಿಮ್ಮ ಗಂಡ ಬದುಕುತ್ತಾನಲ್ಲ, ಅವನು ನೋಡ್ಕೋತಾನೆ. ಅವರ ತಾಯಿ ನಿಮ್ಮ ಮಕ್ಕಳು, ಇಬ್ಬರನ್ನೂ.
ಹೆಂಡತಿ: ಅವರು ಬದುಕಿದರೆ, ಅವರ ತಾಯನ್ನ ನೋಡ್ಕೋತಾರೆ. ನನ್ನ ಮಕ್ಕಳ ಗತಿ? ನಾನು ಸತ್ತ ಮೇಲೆ ಇನ್ನೊಂದು ಮದುವೆÀ ಮಾಡ್ಕೋತಾರೆ. ಆಗ ಬರೋಳು ನನ್ನ ಮಕ್ಕಳನ್ನ ಚೆನ್ನಾಗಿ ನೋಡ್ಕೋತಾಳ? ...ಆಗಲ್ಲ, ಗುರುಗಳೇ, ನನ್ನ ಕೈಯಲ್ಲಿ ಆಗಲ್ಲ. 
ಸ್ವಾಮೀಜಿ: ಶಿವ, ಶಿವ ! ಇದೇ ಸತ್ಯ...! 
ಹೆಂಡತಿ: ಗುರುಗಳೇ, ಇದನ್ನ ನಮ್ಮ ಅತ್ತೇನೇ ಕುಡೀಲಿ. ಅವರು ಮಾಡೋದಾದ್ರೂ ಏನಿದೆ? ಅವರು ಕುಡಿದು ಅವರ ಮಗನ್ನ ಉಳಿಸಿಕೊಡಲಿ.
ಸ್ವಾಮೀಜಿ: ‘ನಿಮ್ಮ ಕೈಯಲ್ಲಾಗ್ಲಿಲ್ವಲ್ಲ?’ ಎನ್ನುತ್ತ, ಸ್ವಾಮೀಜಿ ಔಷಧಿಯ ಲೋಟವನ್ನು ಎತ್ತಿ ತಾಯಿಗೆ ಕೊಡುತ್ತ, ‘ತಾಯಿ, ತಗೊಳ್ಳಿ. ಜಗತ್ತಿನಲ್ಲಿ ಯಾವುದೇ ತಾಯಿ ಆಗಲಿ ತನ್ನ ಪ್ರಾಣ ಕೊಟ್ಟಾದ್ರೂ ಮಗನನ್ನು ಬದುಕಿಸಿಕೊಳ್ಳೋಕೆ ಪ್ರಯತ್ನ ಪಡ್ತಾಳಂತೆ. ತಗೊಳ್ಳಿ ನೀವು ಕುಡೀರಿ, ನಿಮ್ಮ ಪ್ರಾಣ ಹೋಗಲೀ, ನಿಮ್ಮ ಮಗನ ಪ್ರಾಣ ಬರ್ಲಿ’
ತಾಯಿ: ‘ಸ್ವಾಮಿಗಳೇ, ನನ್ನ ಮೊಮ್ಮಕ್ಕಳು ನನ್ನನ್ನು ತುಂಬಾ ಹಚ್ಕೊಂಬಿಟ್ಟಿದ್ದಾರೆ, ನಾನು ಸತ್ತೋದ್ರೆ ಅವರನ್ನ ನೋಡ್ಕೊಳ್ಳೋರು ಯಾರು?...’ ಅತ್ತೆ ಸೊಸೆಯ ಮುಖ ನೋಡಿ, ‘ಅಮ್ಮ ತಾಯಿ, ನೀನೇ ಅದನ್ನ...’
ಹೆಂಡತಿ: ನನ್ನ ಕಷ್ಟಾನೂ ಅರ್ಥಮಾಡ್ಕೋಳಿ ಅತ್ತೆ, ನಾನೂ ಸಾಯೋಕಾಗಲ್ಲ
ಸ್ವಾಮೀಜಿ: ‘ಅಂತೂ ಕೊನೆಗೆ ಶಿವಣ್ಣನನ್ನು ಬದುಕಿಸೋಕೆ ಯಾರೂ ಮುಂದೆ ಬರ್ಲಿಲ್ಲ. ಔಷಧಿ ಸತ್ವ ಹೊರಟು ಹೋಯಿತು. ಶಿವಣ್ಣಾನೂ ಹೊರಟು ಹೋದ. ಇನ್ನು ಆತ್ಮ್ತು ಪ್ರಯೋಜನವಿಲ್ಲ. ತಗೊಂಡು ನಡೀರಿ’ ಎಂದರು. ಅಲ್ಲಿದ್ದವರು ಮಂಚದ ಸಮೇತ ಶಿವಣ್ಣನನ್ನು ಎತ್ತಿ ಹೊರ ಹೊಯ್ಯಲು ಮುಂದಾದರು. 
ತಾಯಿ: ಅಯ್ಯಯ್ಯೋ ! ಮಂಚ ಒಯ್ಬೇಡಿ !
ಸ್ವಾಮೀಜಿ: ಯಾಕೆ ತಾಯಿ, ಏನಾಯ್ತು? 
ತಾಯಿ: ಮಗನೂ ಹೊರಟು ಹೋದ, ನನ್ನ ಗಂಡನ ನೆನಪಾಗಿ ಇರೋದು, ಅದೊಂದೇ. 
ಸ್ವಾಮೀಜಿ: ಮಗಾನೇ ಹೋದ್ಮೇಲೆ ಇನ್ನು ಮಂಚಕ್ಕೇಕೆ ಒದ್ದಾಡ್ತೀರಿ...? ತಗೊಂಡು ಬನ್ರಪ್ಪ...
ಬಂಧುಗಳು: ಬಾಗಿಲು ಚಿಕ್ಕದು ಇರೋದ್ರಿಂದ ಆಚೆ ತರೋಕೆ ಆಗ್ತಾ ಇಲ್ಲ ಸ್ವಾಮಿ 
ಸ್ವಾಮೀಜಿ: ಬಾಗಿಲು ಚೌಕಟ್‍ನ ಒಡೆದು ಹಾಕ್ಬಿಡಿ. ಆಗ ತಗೊಂಡು ಹೋಗ್ಬೋದು
ಹೆಂಡತಿ: ಅಯ್ಯೋ...! ಬೇಡ, ಬೇಡ ! ಬಾಗಿಲು ಮಾತ್ರ ಮುರ್ದಾಕ್ಬೇಡಿ. ಅವರು ಬೇರೆ ಇಲ್ಲ, ನನ್ನ ಕೈಯಲ್ಲಿ ಸರಿ ಮಾಡ್ಸೋಕೆ ಆಗೋಲ್ಲ.
ಸ್ವಾಮೀಜಿ: ತಾಯಿ, ಮಂಚದಿಂದ ದೇಹಾನ ಇಳ್ಸೋಕೆ ಆಗೋದಿಲ್ಲ. ಮಂಚದಲ್ಲೇ ಇರ್ಬೇಕು. ದೇಹ ಸೆಟೆದುಕೊಂಡು ಬಿಟ್ಟಿದೆ. ಮಂಚದಿಂದ ದೇಹಾನ ಹೊರಗೆ ತೆಗೆದ್ರೆ, ದೇಹದ ಭಾಗಗಳಿಗೆ ಊನ ಆಗಬಹುದು. ನಿಮ್ಮ ಗಂಡನ ಕೈಯ್ಯೋ, ಕಾಲೋ ಮುರೀಬಹುದು, ಆಗ ಬಹುದಾ...?
ಹೆಂಡತಿ: ಏನಾದ್ರೂ ಆಗ್ಲಿ, ಆದರೆ ಬಾಗಿಲು ಮಾತ್ರ ಮುರಿಬೇಡಿ. 
ತಾಯಿ: ಮಂಚ ಮಾತ್ರ ತಗೊಂಡು ಹೋಗಬೇಡಪ್ಪ. 
ಶಿವಣ್ಣ: ಮಂಚದಿಂದ ಎದ್ದು ಕುಳಿತು, ಹೆಂಡತಿ ಮುಖ ನೋಡಿ ‘ಏನಾದ್ರೂ ಪರವಾಗಿಲ್ವಾ?’ ಹಾಗೆಯೇ ತಾಯಿಯತ್ತ ತಿರುಗಿ, ‘ಏನಮ್ಮ ನನಗಿಂತ ನಿನಗೆ ಮಂಚಾನೇ ಹೆಚ್ಚಾಯ್ತಾ?’ ‘ಏನೇ, ನನಗಿಂತ ಈ ಬಾಗಿಲುಗಳು, ಈ ಮನೆ, ಇವೇ ಹೆಚ್ಚ ನಿನಗೆ?’ ತಾವು ಹೇಳಿದ್ದು ಸತ್ಯ ಗುರುಗಳೇ. ಎಲ್ಲಾ ತಮ್ಮ ಸ್ವಾರ್ಥಕ್ಕೋಸ್ಕರ ಇನ್ನೊಬ್ಬರನ್ನು ಪ್ರೀತಿಸುತ್ತಾರೆ. ಸತ್ಯ ಏನಂತ ಈಗ ಚೆನ್ನಾಗಿ ಗೊತ್ತಾಯಿತು’ 

ಶ್ರೀ ರಾಮಕೃಷ್ಣ ಪರಮಹಂಸರು ಹೇಳುತ್ತಾರೆ. ಜಗತ್ತಿನ ಜನ ಎಲ್ಲಿವರೆಗೆ ತಮ್ಮ ಸ್ವಾರ್ಥವನ್ನು ಈಡೇರಿಸಿಕೊಳ್ಳೋಕೆ ಅಡ್ಡಿ ಆಗೋದಿಲ್ಲವೋ, ಅಲ್ಲಿವರೆಗೂ ಸ್ನೇಹಿತರ ತರಾನೇ ಇರುತ್ತಾರೆ. ಸಾಧಕ ಅಂತ ಅನ್ನಿಸಿಕೊಂಡವನು ತನ್ನ ಜೀವನದ ಘಟನೆಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡಿ ‘ದೇವರು ಒಬ್ಬರು ಮಾತ್ರ ನಿಜವಾಗಿ ನನ್ನನ್ನು ಪ್ರೀತಿಸೋನು’ ಅಂತ ಅರ್ಥ ಮಾಡಿಕೊಳ್ಳುತ್ತಾನೆ. 

-0--0--0--0--0--0-

ಕ್ರಿಸ್ಮಸ್ ಕೊಟ್ಟಿಗೆ


- ಸಿ ಮರಿಜೋಸೆಫ್
------------------------------------
ಹಿಂದೊಮ್ಮೆ ರೀಡಸ್ರ್ಸ ಡೈಜೆಸ್ಟ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ 'ಕ್ಯಾಥೀಮೆಲಿಯಾ ಲಿವೈನ್' Kathy Melia Levine CªÀgÀ Sharing a Legacy of Love ಎಂಬ ಇಂಗ್ಲಿಷ್ ಕತೆಯ ಭಾವಾನುವಾದ
----------------------------------------
ಎಂಬತ್ನಾಲ್ಕು ವರ್ಷಗಳ ತುಂಬು ಜೀವನ ನಡೆಸಿದ ನಮ್ಮಮ್ಮ ಇಳಿವಯಸ್ಸಿನಲ್ಲಿ ಯಾರಿಗೂ ಹೊರೆಯಾಗದೆ ಯೇಸುಪಾದ ಸೇರಿದರು. ನನಗೂ ಅಕ್ಕಂದಿರಿಗೂ ಬಹುವಾಗಿ ಹೃದಯ ಕಲಕಿದ ದಿನವದು. ಮಮತೆಯೇ ಮೈವೆತ್ತ ತಾಯಿಮಡಿಲನ್ನು, ಚಿಕ್ಕವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಜಂಜಾಟಗಳ ನಡುವೆಯೂ ಬದುಕನ್ನು ಪ್ರೀತಿಸಿ ಮಕ್ಕಳು ಮೊಮ್ಮಕ್ಕಳ ಮೇಲೆ ವಾತ್ಸಲ್ಯದ ಹೊಳೆ ಹರಿಸಿದಾಕೆಯನ್ನು ಕಳೆದುಕೊಂಡ ಆ ನೋವು ಏನೆಂಬುದು ನಮಗೆ ಮಾತ್ರ ಗೊತ್ತು. 
ಕೆಲವು ದಿನಗಳಾದ ಮೇಲೆ, ನಾವೆಲ್ಲ ಮತ್ತೆ ಅಮ್ಮನ ಮನೆಯಲ್ಲಿ ಸೇರಿದೆವು. ತುಳಸಿತೋಟದ ಅಮ್ಮನ ಮನೆ ಬೆಂಗಳೂರು ಪಟ್ಟಣದಲ್ಲಿ ಹಳೆಯ ಮನೆ. ಅದನ್ನು ಮನೆ ಎನ್ನುವುದಕ್ಕಿಂತ ಬಂಗಲೆ ಎನ್ನುವುದೇ ಸರಿ. ಮನೆಯ ಹಿತ್ತಿಲಲ್ಲಿ ನಾವು ಕುಂಟೋಬಿಲ್ಲೆ ಆಡಿದ್ದು, ಅಮ್ಮನಿಗೆ ಉಗುರುಬಣ್ಣ ಹಚ್ಚಿದ್ದು, ಅಕ್ಕಂದಿರೆಲ್ಲ ಚಿಕ್ಕ ತಂಗಿಯಾದ ನನಗೆ ಅಪ್ಪನ ಕೋಟು ಮಕ್ಮಲ್ಲ ಟೋಪಿ ತೊಡಿಸಿ ನಕ್ಕಿದ್ದು, ಸೀಬೇಗಿಡದಲ್ಲಿ ಪೀಚುಕಾಯಿ ಕಿತ್ತು ತಿಂದಿದ್ದು, ಸೀತಾಫಲ ಹಣ್ಣು ತಿನ್ನುವಾಗ ಬೀಜವನ್ನೂ ಕಚ್ಚಿದ್ದು, ಧರ್ಮಾಂಬುಧಿ ಕೆರೆಯ ಅಂಗಳದಲ್ಲಿ ಸದಾರಮೆ ನಾಟಕ ನೋಡಿದ್ದು, ಹೀಗೆ ಹಳೆಯ ಸಂತಸದ ದಿನಗಳನ್ನೆಲ್ಲ ಮೆಲುಕು ಹಾಕುತ್ತಾ ಮನಸಾರೆ ನಕ್ಕೆವು, ಈ ಸಂದರ್ಭದಲ್ಲಿ ಅಮ್ಮನಿಲ್ಲವಲ್ಲಾ ಎಂದು ನೆನಪು ಮರುಕಳಿಸಿ ಉಮ್ಮಳಿಸಿ ಬಿಕ್ಕಿದೆವು. ಹೀಗೇ ಮಾತಾಡುತ್ತಾ, ತಾಯಿಲ್ಲದ ತವರಿಗೆ ಬಂದು ಮಾಡುವುದಾದರೂ ಏನು, ಅಮ್ಮನ ಈ ಮನೆಯನ್ನು ಮಾರಿಬಿಡೋಣ ಎಂಬ ತೀರ್ಮಾನಕ್ಕೆ ಬಂದೆವು. ಇವೊತ್ತು ಆ ಮನೆಗೆ ಕೋಟಿ ಕೋಟಿ ಬೆಲೆ. ಆದರೆ ಬೆಂಗಳೂರಿನಿಂದ ಮದುವೆಯಾಗಿ ಬೇರೆ ಬೇರೆ ಊರುಗಳಲ್ಲಿ ಸಂಸಾರ ಹೂಡಿರುವ ನಾವು ಇಲ್ಲಿ ಬರುವುದಕ್ಕೆ ಕಾರಣವಾದರೂ ಏನಿದೆ? ಅಮ್ಮ ಇರುವವರೆಗೂ ಇದು ಅಮ್ಮನ ಮನೆ. ಈಗ ..
ಅಮ್ಮನ ಮನೆಯನ್ನೇನೋ ಮಾರಿಬಿಡಲು ತೀರ್ಮಾನವಾಯಿತು. ಆದರೆ ಮನೆಯೊಳಗಿನ ಬೆಲೆಬಾಳುವ ಮರಮಟ್ಟು, ದೇವರ ಪೀಠ ಇತ್ಯಾದಿ ವಸ್ತುಗಳನ್ನು ಮಾರದೇ ಅಮ್ಮನ ನೆನಪಿಗಿರಲೆಂದು ನಾವೇ ಹಂಚಿಕೊಳ್ಳೋಣ ಎಂದುಕೊಂಡೆವು. ಅಮ್ಮನ ಒಂದೊಂದೇ ವಸ್ತುಗಳನ್ನು ನನಗೆ ತನಗೆ ಎಂದು ಒಬ್ಬೊಬ್ಬರೂ ಅಪ್ಯಾಯತೆಯಿಂದ ಎತ್ತಿಟ್ಟುಕೊಳ್ಳುವಾಗ, ಹಳೆಯ ಅದಾವುದೋ ಸಿನಿಮಾದಲ್ಲಿ ಮಕ್ಕಳು ತಮ್ಮ ಅಪ್ಪಅಮ್ಮನ ಆಸ್ತಿಗಾಗಿ ಹೊಡೆದಾಡಿ ಬಡಿದಾಡಿಕೊಂಡ ದೃಶ್ಯ ಕಣ್ಣಮುಂದೆ ಹಾದುಹೋಯಿತು. ಸದ್ಯ, ಇಲ್ಲಿ ಹಾಗೇನೂ ನಡೆಯಲಿಲ್ಲ, ಒಬ್ಬೊಬ್ಬರೂ ತ್ಯಾಗ ಮನೋಭಾವದಿಂದ ಪಾಲಿಗೆ ಬಂದದ್ದೇ ಪಂಚಾಮೃತ ಎಂಬಂತೆ ಕಾಸಿನ ಸರ, ಅಡಿಕೆ ಚೈನು, ಕಿವಿಸರ, ಜುಮುಕಿ, ಡಾಬು, ಬೈತಲೆ ಬೊಟ್ಟು, ವಜ್ರದಬೆಂಡೋಲೆ, ವಜ್ರದ ಮೂಗುತಿ, ಮುತ್ತಿನ ಜೋಡಿಬಳೆ, ಹವಳ ಕೂಡಿಸಿದ ಬಳೆ, ಬಳೀಕಲ್ಲಿನ ಬಳೆ ಮುಂತಾದ ಒಡವೆಗಳನ್ನು, ಹಳೆಯ ಕಾಲದ ಹಲಸಿನಮರದ ಭಾರೀ ರಾಣಿಮಂಚವನ್ನು, ಮೈಸೂರುತೇಗದ ಕಪಾಟು ಮೇಜು ಕುರ್ಚಿಗಳನ್ನು, ಶ್ರೀಗಂಧದಲ್ಲಿ ಕೆತ್ತಿದ ಪವಿತ್ರಶಿಲುಬೆ ಮತ್ತು ಮೇಣದಬತ್ತಿ ಕಂಬಗಳನ್ನೂ ಯಾವುದೇ ಕಿತ್ತಾಟವಿಲ್ಲದೆ ಹಂಚಿಕೊಂಡೆವು. ಬಹುಶಃ ಅಮ್ಮ ಬಿಡಿಸಿದ ಅಂದದ ಕುಸುರಿಕೆಲಸದ ಚಿತ್ರಪಟಗಳ ಸಂದರ್ಭದಲ್ಲಾದರೂ ಜಗಳ ಉಂಟಾಗುವುದೇನೋ ಎಂದು ಬಾವಿಸಿದ್ದೆ. ಆದರೆ ಅದೂ ಕೂಡಾ ಸುಸೂತ್ರವಾಗಿ ನಡೆದುಹೋಯಿತು. ಮನೆಯಲ್ಲಿ ಅಮ್ಮನ ಆತ್ಮವೇ ಸುಳಿದಾಡುತ್ತಾ, ತನ್ನ ನಾಲ್ಕೂ ಹೆಣ್ಣುಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ತನ್ನೆಲ್ಲ ವಸ್ತುಗಳನ್ನು ಸರಿಸಮನಾಗಿ ಹಂಚುತ್ತಿದೆಯೇನೋ ಎಂಬಂತೆ ಎಲ್ಲವೂ ನಾಜೂಕಾಗಿ ನಡೆದವು.
ಅಮ್ಮನ ಪ್ರೀತಿಯ ಸಂದೂಕದಲ್ಲಿ ಕ್ರಿಸ್ಮಸ್ ಗೊಂಬೆಗಳ ಒಂದು ಪೆಟ್ಟಿಗೆಯಿತ್ತು. ಅಪ್ಪ ಅಮ್ಮ ಮದುವೆಯಾದ ಹೊಸದರಲ್ಲಿ ಆತ್ಮೀಯನಾಗಿದ್ದ ಬಡಗಿಯೊಬ್ಬ ಅದನ್ನು ಕ್ರಿಸ್ಮಸ್ ಕೊಡುಗೆಯಾಗಿ ಕೊಟ್ಟಿದ್ದನಂತೆ. ಪ್ರತಿ ಕ್ರಿಸ್ಮಸ್ಸಿನಲ್ಲೂ ಅಮ್ಮ ಅದರ ಬಗ್ಗೆ ಹೇಳದೆ ಇರುತ್ತಿರಲಿಲ್ಲ. ಆದರೆ ನಮ್ಮೆಲ್ಲರಿಗೂ ದೊಡ್ಡವರಾದ ರೀತಕ್ಕ ಅಂದುಕೊಂಡಿರುವುದೇ ಬೇರೆ. ನಮ್ಮ ರಸ್ತೆಯಲ್ಲೇ ವಾಸವಿದ್ದ ಕತರೀನಮ್ಮನವರು ಒಮ್ಮೆ ಯಾಕೋ ಏನೋ ಮನಸು ಕೆಟ್ಟು ಅದನ್ನು ತಿಪ್ಪೆಗೆ ಬಿಸಾಡುವಾಗ ಅಮ್ಮ ನೋಡಿ ಇಸಕೊಂಡರಂತೆ.
ಅಮ್ಮನ ಆ ಕ್ರಿಸ್ಮಸ್ ಗೊಂಬೆಗಳ ಪೆಟ್ಟಿಗೆಯಲ್ಲಿದ್ದದ್ದು ರತ್ನಖಚಿತ ಬಂಗಾರದ ನಕ್ಷತ್ರದ ಹಿಂದೆ ಯಕ್ಷಲೋಕದ ಕಿನ್ನರರಂತೆ ಬೆಳ್ಳನೆಯ ದಿರಿಸು ತೊಟ್ಟು ಗ್ಲೋರಿಯಾ ಎಂದು ಹಾಡುವ ದೇವದೂತರು, ಅಂದಚೆಂದದ ಅಂಗಿ ತೊಟ್ಟ ಕೊಳಲನೂದುವ ಕುರುಬರು, ಮುಗ್ದವಾಗಿ ಕಣ್ಣರಳಿಸಿದ ಆಡು ಕುರಿಮರಿ ದನಕರುಗಳ ಗೊಂಬೆಗಳು, ಮಿರಿಮಿರಿ ಮಿಂಚುವ ಸಿಂಗಾರದ ಬಟ್ಟೆ ತೊಟ್ಟ ಮೂರುರಾಯ ಗೊಂಬೆಗಳು, ಅವರ ಹೊಳೆಹೊಳೆವ ಚಿನ್ನದ ಕಿರೀಟಗಳು ಇವೆಲ್ಲ ಇದ್ದವು ಎಂದುಕೊಳ್ಳಬೇಡಿ. ಏಕೆಂದರೆ ಅದರಲ್ಲಿದ್ದದ್ದು ಬೀಟೆಯ ಮರದಲ್ಲಿ ಸರಳ ಸುಂದರವಾಗಿ ಕೆತ್ತಲಾದ ಹುಲ್ಲಿನ ಗೋದಲಿಯ ಮೇಲೆ ಮಲಗಿದ ಯೇಸುಕಂದ, ಮೊಣಕಾಲೂರಿ ಅವನತ್ತ ಅಕ್ಕರೆಯ ನೋಟ ಬೀರಿದ ಜೋಸೆಫ್ ಮತ್ತು ಮರಿಯಾ ಗೊಂಬೆಗಳು ಮಾತ್ರವೇ. ಜೊತೆಗೆ ಒಂದು ಪುಟ್ಟ ಚಾವಣಿ, ಒಂದು ನೆಲಹಾಸು ಮತ್ತು ಅದರ ಸುತ್ತ ಪುಟ್ಟ ಕಟಾಂಜನ ಅಷ್ಟೇ. ಕಟಾಂಜನದ ಮುಂದಿನ ಗೇಟು ತಿರುಗಣಿ ಕಿತ್ತುಹೋಗಿ ಕೆಳಕ್ಕೆ ಜಾರಿತ್ತು.
ಎಷ್ಟೋ ವರ್ಸಗಳ ನಂತರ ಅಮ್ಮ ಅದರ ಜೊತೆ ಮೂರುರಾಯರು, ಕುರುಬರು, ಕುರಿಮರಿಗಳನ್ನು ಸೇರಿಸಿದಳು. ಚಿಕ್ಕವಯಸ್ಸಿನಲ್ಲಿ ನಾವೆಲ್ಲ ಕ್ರಿಸ್ಮಸ್ ಬಂದರೆ ನಲಿದಾಡುತ್ತ ಕ್ರಿಸ್ಮಸ್ ಅಲಂಕಾರಗಳನ್ನು ಮಾಡುತ್ತಿದ್ದೆವು. ಅಮ್ಮ ತನ್ನ ಸಂದೂಕದಿಂದ ಹುಷಾರಾಗಿ ತೆಗೆದುಕೊಡುತ್ತಿದ್ದ ಆ ಕೊಟ್ಟಿಗೆಯಲ್ಲಿ ನಾಜೂಕಾಗಿ ಯೇಸುಕಂದನನ್ನು ಎತ್ತಿಡುವಾಗ ನಾವೆಲ್ಲ ಪುಳಕಗೊಳ್ಳುತ್ತಿದ್ದೆವು. ಮೊಮ್ಮಕ್ಕಳು ಬಂದ ಮೇಲೆ ಕ್ರಿಸ್ಮಸ್ ಕೊಟ್ಟಿಗೆಯ ಮೆರುಗು ಇನ್ನಷ್ಟು ಹೆಚ್ಚಾಯಿತು. ಪುಟಾಣಿ ಮೊಮ್ಮಕ್ಕಳು ತಮಮ ಆಟಿಕೆಯ ಸುಂದರ ಗೊಂಬೆಗಳನ್ನೂ ತಂದು ಕ್ರಿಸ್ಮಸ್ ಕೊಟ್ಟಿಗೆಯಲ್ಲಿ ಇಡುತ್ತಿದ್ದರು. ಆ ಮೂರು ನಾಯಿಮರಿ ಗೊಂಬೆಗಳು ಬಂದಿದ್ದೂ ಹಾಗೆಯೇ.
ಇದೀಗ ಕ್ರಿಸ್ಮಸ್ ಅಲ್ಲದ ಈ ಸಂದರ್ಭದಲ್ಲಿ ನಾವು ಈ ಪೆಟ್ಟಿಗೆಯನ್ನು ತೆರೆದಾಗ ಇಷ್ಟು ದೊಡ್ಡ ಜಗಳವಾಗುತ್ತದೆಂದು ಅಂದುಕೊಂಡಿರಲೇ ಇಲ್ಲ. ಮೇರಕ್ಕ ತನಗೆ ಈ ಪೆಟ್ಟಿಗೆಯೊಂದೇ ಸಾಕೆಂದೂ ಅಮ್ಮನ ಬೇರಾವ ವಸ್ತುವೂ ಬೇಡವೆಂದೂ ಖಡಾಖಂಡಿತವಾಗಿ ಹೇಳಿಬಿಟ್ಟರು. ಅಷ್ಟರಲ್ಲಾಗಲೇ ರೋಜಕ್ಕ ಅಮೆರಿಕದಲ್ಲಿದ್ದ ತನ್ನ ಮಗಳ ಜೊತೆ ಫೋನಿನಲ್ಲಿ ಮಾತಾಡುತ್ತಿದ್ದವಳು ತನ್ನ ಕೈಫೋನಿನ ಸ್ಪೀಕರನ್ನು ಎಲ್ಲರಿಗೂ ಕೇಳಿಸುವಂತೆ ಮಾಡಿದಳು. ಆತ್ಮ್ತಲಿಂದ ಸಹನಾ ಮಾತಾಡುತ್ತಾ ‘ಅಜ್ಜಿ ತಾನು ಸತ್ತ ಮೇಲೆ ಆ ಕ್ರಿಸ್ಮಸ್ ಗೊಂಬೆಗಳ ಪೆಟ್ಟಿಗೆ ತನಗೇ ಸೇರುತ್ತದೆಂದು ಹೇಳಿದ್ದರು' ಎಂದು ಅಳುತ್ತಾ ತನ್ನ ಹಕ್ಕು ಮಂಡಿಸಿದಳು.
ಮೇರಕ್ಕ ರೋಜಕ್ಕ ಈಗ ದೊಡ್ಡದಾಗಿ ಕೂಗಾಡುತ್ತಾ ಜಟಾಪಟಿಗೇ ಇಳಿದುಬಿಟ್ಟರು. ಕ್ರಿಸ್ಮಸ್ ಕೊಟ್ಟಿಗೆ ದೊಡ್ಡ ರಾದ್ಧಾಂತವನ್ನೇ ತಂದಿತೇನೋ ಎಂಬಂತೆ ನಾವೆಲ್ಲ ಪೆಚ್ಚಾದೆವು. ಮೇರಕ್ಕ ರೋಜಕ್ಕ ಇಬ್ಬರಲ್ಲಿ ಯಾರೂ ಸೋಲುವಂತೆ ಕಾಣಲಿಲ್ಲ. ಅವರ ಜಗಳದ ಮಾತಿನ ಭರದಲ್ಲಿ ಇಷ್ಟು ವರ್ಷ ಜತನದಿಂದ ಕಾಪಾಡಿಕೊಂಡು ಬಂದ ಕುಟುಂಬದ ಎಷ್ಟೋ ಗುಟ್ಟುಗಳು ಹೊರಬಿದ್ದು ಚೆಲ್ಲಾಡಿದವು.
ಸಮಸ್ಯೆ ಬಗೆಹರಿಯುವಂತೆ ಕಾಣದಾದಾಗ ರೋಜಕ್ಕ ತಾವೇ ದನಿ ತಗ್ಗಿಸಿ ತಮ್ಮದೊಂದು ಸಲಹೆ ಮುಂದಿಟ್ಟರು. ಅಮ್ಮ ಸತ್ತು ಇನ್ನೂ ತುಂಬಾ ದಿನ ಆಗಿಲ್ಲ, ಇಷ್ಟು ವರ್ಷ ಅನ್ಯೋನ್ಯವಾಗಿದ್ದ ತಾವು ಇಷ್ಟು ಬೇಗ ನಾಯಿ ಬೆಕ್ಕಿನಂತೆ ಕಿತ್ತಾಡುವುದೇಕೆ ಎಂದರು. ನಾವೆಲ್ಲ ಉಸಿರು ಬಿಗಿಹಿಡಿದು ಅವರು ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯತೊಡಗಿದೆವು. ಒಂದು ರೀತಿಯಲ್ಲಿ ನನಗೂ ಆ ಕ್ರಿಸ್ಮಸ್ ಗೊಂಬೆಗಳು ಸಹನಾಗೇ ಸೇರಬೇಕು ಅನಿಸಿತ್ತು. ಆದರೆ ಈಗ ಸಹನಾಳ ಅಮ್ಮ ರೋಜಕ್ಕ ಸುಮ್ಮನಾಗಿದ್ದು ಒಂಥರಾ ಕುತೂಹಲ ಮೂಡಿಸಿತ್ತು.
ವಾತಾವರಣ ತಿಳಿಯಾದಾಗ ರೋಜಕ್ಕ ಮಾತಾಡುತ್ತಾ ತಮಗೆ ಗೊತ್ತಿರುವ ಮರದ ಆಚಾರಿಯ ಹತ್ತಿರ ಸಾಗುವಾನಿ ಮರದಲ್ಲಿ ಅಂಥದ್ದೇ ಇನ್ನೊಂದು ಕ್ರಿಸ್ಮಸ್ ಗೊಂಬೆಗಳನ್ನು ಮಾಡಿಸೋಣ ಎಂದರು. ತಿಗುಳರಪೇಟೇಲಿ ಇರುವ ರಾಯಪ್ಪಾಚಾರಿ ಒಳ್ಳೆಯ ಶಿಲ್ಪಿ. ಮನೆಯ ದೇವರ ಮಂಟಪ, ಪೂಜಾಪೀಠ, ಮರದ ಜಾಗಟೆ, ದಂತ ಕೂರಿಸಿದ ಟೀಪಾಯ್, ಮೇಣದ ಬತ್ತಿಯ ನಿಲುಗಂಬಗಳನ್ನೆಲ್ಲ ಕಲಾತ್ಮಕವಾಗಿ ಮಾಡುತ್ತಿದ್ದ. ಹೊಸದಾಗಿ ಮನೆ ಕಟ್ಟುವವರು ತಮ್ಮ ಮನೆಯ ಮುಂಬಾಗಿಲ ಮೇಲೆ ದೇವರ ಚಿತ್ರಗಳನ್ನು ಕೆತ್ತುವಂತೆ ರಾಯಪ್ಪಾಚಾರಿಗೆ ಬಳಿಗೆ ಹೋಗುತ್ತಿದ್ದರು. ಅವನು ಕೆತ್ತುವ ಚಿತ್ರಗಳಲ್ಲಿ ಜೀವಂತಿಕೆ ಇರುತ್ತಿತ್ತು. ರೋಜಕ್ಕ ಅವನ ಬಳಿ ಹೋಗಿ ಕ್ರಿಸ್ಮಸ್ ಕೊಟ್ಟಿಗೆಗಾಗಿ ಮನೆಯಲ್ಲಿ ನಡೆದ ರಾದ್ಧಾಂತವನ್ನೆಲ್ಲ ಹೇಳಿ, ಅಂಥದೇ ಇನ್ನೊಂದನ್ನು ಮಾಡಿಕೊಡಲು ವಿನಂತಿಸಿದರು. 
ಕ್ರಿಸ್ಮಸ್ ಕೊಟ್ಟಿಗೆಯನ್ನೂ ಅದರ ಗೊಂಬೆಗಳನ್ನೂ ಕೈಗೆತ್ತಿಕೊಂಡು ನೋಡಿದ ರಾಯಪ್ಪಾಚಾರಿ ಅದನ್ನು ಅಳೆದು ತೂಗಿ, 'ಈ ಗೊಂಬೆಗಳಿಗೋಸ್ಕರ ಅಷ್ಟೊಂದು ಜಗಳವಾಯ್ತೇ?' ಎಂದು ಜೋರಾಗಿ ನಕ್ಕ. ‘ಅಯ್ಯೋ ಏನಪ್ಪ ಮಾಡೋದು, ನೀನು ಹೇಳೂದು ನಿಜ, ನಮ್ಮಮ್ಮ ಇದನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ, ನಾವೆಲ್ಲ ಈ ಗೊಂಬೆಗಳ ಜೊತೇನೇ ನಮ್ಮೆಲ್ಲ ಕ್ರಿಸ್ಮಸ್ಸುಗಳನ್ನು ಕಳೆದಿರೋದು' ಎಂದು ಅಲವತ್ತುಕೊಂಡರು ರೋಜಕ್ಕ. ಅವರ ಕಳಕಳಿಯನ್ನು ಅರ್ಥ ಮಾಡಿಕೊಂಡ ರಾಯಪ್ಪಾಚಾರಿ, 'ಸರಿಯಮ್ಮ, ಇದನ್ನು ಇಲ್ಲೇ ಬಿಟ್ಟುಹೋಗಿ, ನಾನು ನೋಡ್ತೀನಿ' ಎಂದು ಆಶ್ವಾಸನೆ ಕೊಟ್ಟ. ಸಧ್ಯ, ಬಡಗಿಯಿಂದಾದ್ರೂ ಈ ಜಗಳ ಇತ್ಯರ್ಥವಾಗಲಿ ಎಂದುಕೊಂಡ ರೋಜಕ್ಕ ಮನೆಗೆ ಮರಳಿದರು. 
ಒಂದೆರಡು ದಿನಗಳಾದ ಮೇಲೆ ರಾಯಪ್ಪಾಚಾರಿ ಕ್ರಿಸ್ಮಸ್ ಕೊಟ್ಟಿಗೆ ಸಿದ್ದವಾಗಿದೆ ಬಂದು ತಗೊಂಡು ಹೋಗಿ ಎಂದು ಫೋನ್ ಮಾಡಿದ. ರೋಜಕ್ಕನ ಜೊತೆ ನಾನೂ ಆಚಾರಿಯಂಗಡಿ ಕಡೆ ಹೊರಟೆ. ಎರಡು ಕ್ರಿಸ್ಮಸ್ ಕೊಟ್ಟಿಗೆಗಳು ಅಲ್ಲಿದ್ದವು. ಆ ಕೊಟ್ಟಿಗೆಯ ಮುಂದಿನ ಗೇಟು .. ಅದೇ ತಿರುಗಣಿ ಮುರಿದು ವಾಲಿತ್ತಲ್ಲ ಅದು .. ಎರಡರಲ್ಲೂ ಅದು ವಾಲಿಕೊಂಡಿತ್ತು. ಯಾವುದು ಹೊಸದು, ಯಾವುದು ಹಳೆಯದು ಎಂಬುದು ಗೊತ್ತೇ ಆಗುತ್ತಿರಲಿಲ್ಲ.. ರಾಯಪ್ಪಾಚಾರಿ ತನ್ನ ಕೆಲಸದ ಬಗ್ಗೆ ಅಭಿಮಾನದಿಂದ ಮಾತಾಡುತ್ತಾ'ಎರಡೂ ಒಂದೇ ತರಾ ಇರ್ಬೇಕು ಅಂದಿದ್ರಲ್ವಾ, ಅದಕ್ಕೇ ಒಂದರಲ್ಲಿ ಏನೇನು ಊನ ಇತ್ತೋ ಅದನ್ನೆಲ್ಲಾ ಇನ್ನೊಂದರಲ್ಲೂ ಮಾಡಿದೆ' ಎನ್ನುತ್ತಿರುವಾಗ ರೋಜಕ್ಕ ಉದ್ವೇಗದಿಂದ ಕಣ್ದುಂಬಿಕೊಂಡು, 'ಕ್ರಿಸ್ಮಸ್ ಕೊಟ್ಟಿಗೆಯ ಕಾರಣದಿಂದ ಯಾವುದೇ ಮನೆಯಲ್ಲಿ ಜಗಳ ಬರಬಾರದು ಕಣಪ್ಪ, ತುಂಬಾ ಚೆನ್ನಾಗಿ ಕೆಲಸ ಮಾಡಿದ್ದೀಯ, ಅದಕ್ಕೇ ನಾವು ನಿನ್ನ ಹತ್ತಿರ ಬಂದಿದ್ದು. ನೀನೆಷ್ಟು ದುಡ್ಡು ಕೇಳಿದ್ರೂಕೇಳಿದ್ರೂ ಕೊಡ್ತೀನಿ,ಎಷ್ಟಾಯತ್ತಪ್ಪಾ' ಎಂದರು.
‘ಅಯ್ಯೋ ಬೇಡಮ್ಮಾ, ಈ ಕೆಲಸ ಸುರು ಮಾಡ್ದಾಗಿಂದ ನನ್ನ ಮನಸಿನಲ್ಲಿ ಏನೋ ಒಂಥರಾ ನೆಮ್ಮದಿ ಕಣಮ್ಮ' ಎಂದ ರಾಯಪ್ಪಾಚಾರಿ, ‘ಮರದಲ್ಲಿ ಏನೂ ಗಂಟು ಟೊಳ್ಳು ಇಲ್ದೇ ಸಲೀಸಾಗಿ ಕೆಲಸ ನಡೆದೋಯ್ತು, ನನಗೆ ಏನೂ ಬೇಡ ಕಣಮ್ಮ, ಈ ಕ್ರಿಸ್ಮಸ್ ಕೊಟ್ಟಿಗೆಯಿಂದ ಒಂದು ಕುಟುಂಬದಲ್ಲಿ ಶಾಂತಿ ಸಮಾಧಾನ ಬರುವುದಾದರೆ ಅಷ್ಟೇ ಸಾಕು' ಎಂದ. ಮರದ ಬೆಲೆನಾದ್ರು ತಗೋ ಅನ್ತ ಎಷ್ಟು ಹೇಳಿದರೂ ದುಡ್ಡು ತೆಗೆದುಕೊಳ್ಳಲೇ ಇಲ್ಲ. ‘ಎಲ್ಲ ಕ್ರಿಸ್ಮಸ್ಸುಗಳಿಗಿಂತ ಈ ಸಲದ ಕ್ರಿಸ್ಮಸ್ ನಿಮಗೆ ತುಂಬಾ ಸಂತೋಷವಾಗಿರಲಿ ಕಣಮ್ಮ' ಎಂದು ಹಾರೈಸಿದ. 
ಎರಡೂ ಕ್ರಿಸ್ಮಸ್ ಕೊಟ್ಟಿಗೆಗಳು ಮನೆಗೆ ಬಂದಾಗ ಎಲ್ಲರಿಗೂ ತುಂಬಾ ಖುಶಿಯಾಯಿತು. ಮೇರಕ್ಕ ರೋಜಕ್ಕನ ಕೈ ಹಿಡಿದುಕೊಂಡು ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡಾಗ ಇಬ್ಬರ ಕಣ್ಣಲ್ಲೂ ಹನಿ ತೊಟ್ಟಿಕ್ಕಿತು, ಅಲ್ಲದೆ ಮೇರಕ್ಕ ಹೊಸದಾಗಿ ಮಾಡಿಸಿದ ಕೊಟ್ಟಿಗೆ ತನಗೇ ಇರಲೆಂದೂ, ಸಹನಾಳಿಗೆ ಅಮ್ಮನ ಹಳೆಯ ಕ್ರಿಸ್ಮಸ್ ಕೊಟ್ಟಿಗೆಯನ್ನೇ ಕೊಡಬೇಕೆಂದೂ ಹೇಳಿದರು. ಎಲ್ಲರಿಗೂ ಒಂಥರಾ ನಿರಾಳವೆನಿಸಿತು. ಎರಡು ದಿನಗಳಿಂದ ಸ್ಮಶಾನ ಮೌನ ಆವರಿಸಿದ್ದ ಮನೆಯಲ್ಲಿ ಮತ್ತೆ ಲವಲವಿಕೆಯ ಗಾನ ತೇಲಿಬಂತು.

-0--0--0--0--0--0-

ವ್ಯಾಟಿಕನ್ನಿನÀಲ್ಲಿ ವಲಸಿಗರಿಗೊಂದು ಶಿಲ್ಪ

- ಎಫ್.ಎಂ. ನಂದಗಾವ

`ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ.
ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ.
ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯ.’

ಇದು ಭರತ ಖಂಡದ ಕನ್ನಡ ನಾಡು ಕಂಡ ಒಬ್ಬ ಮಹಾನ್ ದಾರ್ಶನಿಕ ಬಸವಣ್ಣನವರ ಒಂದು ಖ್ಯಾತ ವಚನ. ಹನ್ನೆರಡನೇ ಶತಮಾನದಲ್ಲಿನ ಶಿವಕೇಂದ್ರಿತ ಭಕ್ತಿ ಚಳುವಳಿಯ ಮುಂಚೂಣಿಯಲ್ಲಿದ್ದ ಅವರು, ಸಮಾನ ವಿಚಾರಧಾರೆಯ ಸಹಚರರೊಂದಿಗೆ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದರು, ಕಾಯಕ ತತ್ವ ಬೋಧಿಸಿದರು. ಲಿಂಗ, ಸಾಮಾಜಿಕ ತಾರತಮ್ಯ, ಮೂಢನಂಬಿಕೆ ಮೊದಲಾದ ಸಾಮಾಜಿಕ ಅನಿಷ್ಟಗಳನ್ನು ನಿರಾಕರಿಸಿದರು. 
ಬಸವಣ್ಣನವರು ಈ `ಇವನಾರವ ಇವನಾರವ..’ ವಚನದಲ್ಲಿ ಮಾನವರು ಎಲ್ಲರೂ ದೇವರ ಮಕ್ಕಳು, ಎಲ್ಲರನ್ನು ನಮ್ಮವರೆಂದು ಕಾಣಬೇಕೆಂದು ಪ್ರತಿಪಾದಿಸಿದ್ದಾರೆ.
ಅದರಂತೆ ಹದಿನೈದನೇ ಶತಮಾನದ ಹಂಪಿಯ ವಿಜಯನಗರ ಅರಸರ ಕಾಲದಲ್ಲಿನ ದಾಸ ಚಳುವಳಿಯಲ್ಲಿ ಪ್ರಮುಖರಾಗಿದ್ದ ಕನಕದಾಸರು, ತಮ್ಮ ಒಂದು ಪದ್ಯದಲ್ಲಿ `ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಬಲ್ಲಿರಾ? ಹುಟ್ಟದ ಯೋನಿಗಳಿಲ್ಲ, ಮೆಟ್ಟದ ಭೂಮಿಗಳಿಲ್ಲ, ಅಟ್ಟು ಉಣ್ಣದ ವಸ್ತುಗಳಿಲ್ಲ. ..ಜಲದ ಕುಲವನೆನಾದರು ಬಲ್ಲಿರಾ?’ ಎನ್ನುತ್ತಾ `ಹರಿಯೆ ಸವೇಶ್ವರ ಹರಿಯೇ ಸರ್ವೋತ್ತಮ’ ಎನ್ನುತ್ತಾರೆ. 
ಮಗದೊಂದು ಪದ್ಯದಲ್ಲಿ `ಕುಲ ಕುಲ ವೆನ್ನುತಿಹರು ಕುಲ ಯಾವುದು ಸತ್ಯ ಸುಖವುಳ್ಳ ಜನರಿಗೆ’ ಎಂದು ಪ್ರಶ್ನಿಸಿದ್ದಾರೆ. ಅದೇ ಪದ್ಯದಲ್ಲಿ, `.. ಬಗೆಯಿಂದ ನಾರಾಯಣನಾವ ಕುಲವಯ್ಯ, ಜಗವಲ್ಲಭನಾವ ಕುಲ ಪೇಳಿರಯ್ಯ’ ಎಂದು ಪ್ರಶ್ನಿಸುವ ಅವರು, `ಆತ್ಮ ಯಾವ ಕುಲ, ಜೀವ ಯಾವ ಕುಲ, ತತ್ವೇಂದ್ರಿಯಗಳ ಕುಲ ಪೇಳಿರಯ್ಯ, ಆತ ಮಹಾತ್ಮನು ನೆಲೆಯಾದಿಕೇಶವ, ಯಾತರ ಕುಲವಯ್ಯ ಆತನೊಲಿದ ಮೇಲೆ’ ಎಂದೂ ಉತ್ತರಿಸಿದ್ದಾರೆ. ಶತಮಾನಗಳ ಹಿಂದೆಯೇ, ದೇವರೊಲಿದ ಮೇಲೆ ಎಲ್ಲರೂ ಸಮಾನರು ಎಂಬ ತತ್ವವನ್ನು ಸಾರಿದ್ದಾರೆ.
ಇದು ನಮ್ಮ ಕನ್ನಡ ನಾಡಿನ, ಭಾರತ ದೇಶದ ಸಾಮಾಜಿಕ ಅಂತಃಸತ್ವ. ಅಮೆರಿಕದ ಪ್ರಜ್ಞಾವಂತ ನಾಗರಿಕರು, ಕಪ್ಪು ಬಿಳಿ ಬಣ್ಣದಲ್ಲಿ ಮಾನವರನ್ನು ಗುರುತಿಸಿ ಗೌರವಿಸುವ, ಅವಮಾನಿಸುವ ವರ್ಣಬೇಧ ನೀತಿಯ ವಿರುದ್ಧ ತೀರ ಇತ್ತೀಚೆಗೆ ಧನಿ ಎತ್ತಿರುವರು. ಹತ್ತೊಂಬತ್ತನೇ ಶತಮಾನದಲ್ಲಿ ಕರಿಯ ಜನಾಂಗದ ಪರವಾಗಿ ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಮೊದಲಾದವರು ಸಮಾನತೆಗಾಗಿ ಮಾನವ ಗೌರವಕ್ಕಾಗಿ ಹೋರಾಟ ನಡೆಸಿದರು. ಆಧುನಿಕ ಕಾಲದಲ್ಲಿ ನಮ್ಮನ್ನಾಳಿದ ವಸಾಹತುಶಾಹಿ ಬ್ರಿಟಿಷರು, ತಮ್ಮ ಒಡೆದಾಳುವ ನೀತಿಯನ್ನು ಅನುಸರಿಸಿ, ದೇಶದ ಅಲ್ಪಸಂಖ್ಯಾತ ಮುಸ್ಲೀಂ ಮತ್ತು ಬಹುಸಂಖ್ಯಾತ ಹಿಂದೂ ಸಮುದಾಯಗಳ ನಡುವೆ ಅಪನಂಬುಗೆ ಮೂಡಿಸಿ, ದ್ವೇಷವ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಂಡ ಪರಿಣಾಮ ಸ್ವತಂತ್ರಗೊಂಡಾಗ, ದೇಶ ಒಡೆದು ಎರಡು ತುಂಡಾಗಬೇಕಾಯಿತು. ಹುಟ್ಟಿನಿಂದ ಸೋದರರು, ಬೆಳೆದಂತೆ ದಾಯಾದಿಗಳು ಎಂಬಂತೆ ಭಾರತ ಉಪಖಂಡವು ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜನೆಗೊಂಡಿತು. 
ಪಾಕಿಸ್ತಾನ ಧರ್ಮಾಧರಿತ ರಾಷ್ಟ್ರವೆಂದು ರೂಪತಾಳಿದರೆ, ಭಾರತವು ಧರ್ಮನಿರಪೇಕ್ಷ ತತ್ವದಡಿ, ಭಾಷೆಗಳ ಆಧಾರದ ವಿವಿಧ ರಾಜ್ಯಗಳ ಒಕ್ಕೂಟದ ಜನತಂತ್ರದ ದೇಶವಾಯಿತು. ಭಾರತದ ಸಂವಿಧಾನವು ಭಾತೃತ್ವ, ಸಮಾನತೆ ಮತ್ತು ಧರ್ಮನಿರಪೇಕ್ಷತೆಯ ಸ್ವರೂಪದಲ್ಲಿ ರೂಪತಾಳಿತು.
ಭಾರತ ಉಪಖಂಡದಲ್ಲಿ, ಹಿಂದೂ ದೇವಾಲಯಗಳಿಗೆ ಮುಸ್ಲೀಂ ಬಾಂಧವರು ನಡೆದುಕೊಳ್ಳುವುದು, ಮುಸ್ಲೀಂ ಸಂತರ ದರ್ಗಾಗಳನ್ನು ಹಿಂದುಗಳು ಆದರಿಸುವುದು ಹಿಂದುಗಳ ಹಬ್ಬಗಳಲ್ಲಿನ ವಿವಿಧ ವಸ್ತುಗಳ ಬೇಡಿಕೆಗಳನ್ನು ಮುಸ್ಲೀಂರು ಪೂರೈಸುವುದು - ಮೊದಲಾದ ಸಾಮರಸ್ಯದ ಜೀವನ ಹೊಂದಿರುವರು. 
ಆದರೆ, ಇಂದು ಪ್ರಜಾಪ್ರುಭುತ್ವದ ವ್ಯವಸ್ಥೆಯಲ್ಲಿನ ಬಹುಮತವನ್ನು ಗುರಾಣಿಯಾಗಿಸಿಕೊಂಡ ಅಧಿಕಾರರೂಢ ಪಕ್ಷವು, ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ, ಪೌರತ್ವ (ತಿದ್ದುಪಡಿ) ಮಸೂದೆ-2019ಕ್ಕೆ ಸಂಸತ್ತಿನಲ್ಲಿ ಒಪ್ಪಿಗೆ ಪಡೆದಿದೆ, ರಾಷ್ಟ್ರಪತಿಗಳ ಅಂಕಿತದೊಂದಿಗೆ ಅದು ಈಗ ಕಾನೂನು ಆಗಿದೆ. ನಮ್ಮ ನೆರೆಯ ದೇಶಗಳಲ್ಲಿ ಧರ್ಮದ ದೆಸೆಯಿಂದ ಶೋಷಣೆಗೊಳಗಾಗಿ ತಮ್ಮ ದೇಶಗಳನ್ನು ತೊರೆದವರಿಗೆ ಆಶ್ರಯ ನೀಡುವುದು ಈ ಕಾನೂನಿನ ಮೂಲ ಉದ್ದೇಶವಾಗಿದ್ದರೂ, ಮುಸ್ಲೀಂ ಸಮುದಾಯದವರನ್ನು ಆ ಶೋಷಿತ ಸಮುದಾಯಗಳಲ್ಲಿ ಸೇರಿಸಿಲ್ಲ. ಇದೊಂದು ಬಗೆಯಲ್ಲಿ ಭಾರತದ ಸಂವಿಧಾನದ ಆಶಯವನ್ನು ಮುಕ್ಕಾಗಿಸಿದಂತಾಗಿದೆ. ನಮ್ಮ ಸಂವಿಧಾನದ ಸರ್ವ ಸಮಾನತೆಯ ಪರಿಕಲ್ಪನೆಗೆ ವಿರುದ್ಧದ ಈ ನಡವಳಿಕೆ, ಇನ್ನೊಂದು ಬಗೆಯಲ್ಲಿ ಆಧುನಿಕ ಕಾಲದ ಪ್ರಗತಿಪರ ಆಲೋಚನೆಯಲ್ಲಿನ ಹಿನ್ನಡೆ ಎನ್ನಿಸದೇ ಇರದು. 
ಇಂದಿನ ದಿನಮಾನಗಳಲ್ಲಿ, ರಾಜಕೀಯ ಮತ್ತು ಧರ್ಮದ ದೆಸೆಯಿಂದ ಕಷ್ಟಕೋಟಲೆಗಳನ್ನು ಅನುಭವಿಸಿ ದೇಶಾಂತರವಾಸಿಗಳಾಗಿ ತಮ್ಮ ತಾಯ ನೆಲವನ್ನು ಬಿಟ್ಟು, ಸುರಕ್ಷಿತ ಆಶ್ರಯ ತಾಣಗಳನ್ನು ಅರಸಿಕೊಂಡು ನೆರೆಹೊರೆಯ ದೇಶಗಳಿಗೆ ವಲಸೆ ಬರುವವರ ಸಂಖ್ಯೆ ಈಚೆಗೆ ಹೆಚ್ಚಾಗುತ್ತಿರುವುದು ವಿಪರ್ಯಾಸದ ಸಂಗತಿ.
ಇಪ್ಪತ್ತೊಂದನೇ ಶತಮಾನ ಮಾನವನ ನಾಗರಿಕತೆಯ ಉತ್ತಂಗದಲ್ಲಿರುವ ಕಾಲ ಎನ್ನಲಾಗುವ ಈ ಸಮಯದಲ್ಲಿ ಸುರಕ್ಷಿತ ಆಶ್ರಯ ತಾಣ ಅರಸಿಕೊಂಡು ಬರುವ ವಲಸಿಗರನ್ನು ತಮ್ಮ ತಮ್ಮ ಪ್ರದೇಶಗಳಲ್ಲಿ ಕಾಲಿಡದಂತೆ ಮಾಡಲು ದೇಶಗಳು ತಮ್ಮ ಗಡಿಗಳಲ್ಲಿ ಬೇಲಿಗಳನ್ನು, ತಪ್ಪಿದರೆ ಎತ್ತರದ ಗಡಿ ಗೋಡೆಗಳನ್ನು ಕಟ್ಟಲು ಮುಂದಾಗುತ್ತಿರುವುದು, ಮಾನವೀಯ ಮೌಲ್ಯಗಳ ಅದಃಪತನ ಎನ್ನಬಹುದೇನೋ. ಭಾರತವು ಈಗ ವಲಸಿಗರಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಹೊರಟಿರುವುದೂ ಅಂಥಹದೇ ಹೆಜ್ಜೆಯ ಇನ್ನೊಂದು ರೂಪ.
ಕಳೆದ ಕೆಲವು ವರ್ಷಗಳಿಂದ ಆಫ್ರಿಕಾ ಖಂಡದಲ್ಲಿನ ಕೆಲವು ದೇಶಗಳಲ್ಲಿ ಭುಗಿಲೆದ್ದ ರಾಷ್ಟ್ರೀಯವಾದಿಗಳ ಹುಚ್ಚಾಟಗಳಿಂದಾಗಿ ಸಹಸ್ರಾರು ಸಂಖ್ಯೆಯಲ್ಲಿ ವಲಸಿಗರು ಯುರೋಪಿನ ವಿವಿಧ ದೇಶಗಳಲ್ಲಿ ನುಗ್ಗಿದರು.
ಆತ್ತ್ತ, ಮಧ್ಯ ಅಮೆರಿಕದ ವಲಸಿಗರನ್ನು ತಡೆಯಲು, ಉತ್ತರ ಅಮೆರಿಕ ಸಂಸ್ಥಾನಗಳ ಒಕ್ಕೂಟ ದಕ್ಷಿಣದ ತನ್ನ ಗಡಿಯಲ್ಲಿ ಗೋಡೆಯ ನಿರ್ಮಾಣದಲ್ಲಿ ತೊಡಗಿದೆ. ಇತ್ತ ಏಷ್ಯ ಖಂಡದ ಮೈಯನ್ಮಾರ (ಹಿಂದಿನ ಬರ್ಮಾ) ದೇಶದಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಸಮುದಾಯದವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಕೆಲವು ಅರಬ ರಾಷ್ಟ್ರಗಳಲ್ಲಿನ ಭಯೋತ್ಪಾದಕರ ಹುಚ್ಚಾಟಗಳ ಪರಿಣಾಮದ ಅನಿಶ್ಚಿತತೆಯ ಕಾರಣ ಅಮಾಯಕರು, ತಮ್ಮ ದೇಶಗಳನ್ನು ತೊರೆದು ದೇಶಾಂತರ ಹೋಗುತ್ತಿದ್ದಾರೆ. 
ವಲಸಿಗರ ಅಂತರ್ರಾಷ್ಟ್ರೀಯ ಸಂಸ್ಥೆಯ ಅಂದಾಜಿನಂತೆ ಕಳೆದ ವರ್ಷ ವಿಶ್ವದಾದ್ಯಂತ ಸುಮಾರು 2300 ಜನ ಅಮಾಯಕ ವಲಸಿಗರು ಜೀವ ಕಳೆದುಕೊಂಡಿದ್ದಾರೆ. ವಿಶ್ವದಾದ್ಯಂತ ಯುದ್ಧಗಳ ದೆಸೆಯಿಂದ, ಅನ್ಯಾಯ ಅನಾಚಾರಗಳಿಂದ, ಆರ್ಥಿಕ ಮತ್ತು ಸಾಮಾಜಿಕ ತರತಮಗಳಿಂದ ಬಸವಳಿದ ಅಮಾಯಕ ಜನ, ಅಕ್ರಮ ವಲಸಿಗರಾಗಿ ತಮ್ಮದಲ್ಲದ ತಪ್ಪಿಗಾಗಿ ಬೆಲೆ ತೆರಬೇಕಾಗಿದೆ.
ವಿಶ್ವ ಸಂಸ್ಥೆಯ ಸಮಾನ್ಯ ಸಭೆಯು 1990ರ ಡಿಸೆಂಬರ 18ರಲ್ಲಿ ಸಕಲ ವಲಸಿಗ ಕಾರ್ಮಿಕರ ಮತ್ತು ಅವರ ಕುಟುಂಬದವರ ಹಕ್ಕುಗಳ ರಕ್ಷಣೆಗಾಗಿ ಒಂದು ನಿರ್ಣಯವನ್ನು ಅಂಗೀಕರಿಸಿತ್ತು. ಆ ನಂತರ 2004ರ ಡಿಸೆಂಬರ್ 4ರಂದು, ಮಾನವ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಗಳ ಆಗ್ರಹದ ಹಿನ್ನೆಲೆಯಲ್ಲಿ, ಈ ವಿಷಯದ ಬಗೆಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಡಿಸೆಂಬರ್ 18ರಂದು ಅಂತರ್ರಾಷ್ಡ್ರೀಯ ವಲಸಿಗರ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಿತು.
ದುರ್ಭರ ಪ್ರಸಂಗಗಳಲ್ಲಿ ಒಳ್ಳೆಯ ಬದುಕನ್ನು ಬಯಸಿ ವಲಸೆ ಹೋಗುವ ಪ್ರಕ್ರಿಯೇ ಮಾನವ ಇತಿಹಾಸದಲ್ಲಿ ಎಲ್ಲಾ ಕಾಲಗಳಲ್ಲೂ ನಡೆಯುತ್ತ ಬಂದಿದೆ. ಇಂದಿನ ಜಾಗತೀಕರಣ, ಕೈಗೆಟಕುವ ಸಂಪರ್ಕ ಸಾಧನಗಳು ಮತ್ತು ಸುಲಭ ಪ್ರಯಾಣದ ಅನುಕೂಲಗಳು, ಉತ್ತಮ ಬದುಕು ಅರಸಿ ರಹದಾರಿ ಪಡೆದು ಸಕ್ರಮ ದಾರಿಯಲ್ಲಿ, ಅನಿವಾರ್ಯ ಪ್ರಸಂಗಗಳಲ್ಲಿ ಅಕ್ರಮವಾಗಿ ವಲಸೆ ಹೋಗುವವರ ಸಂಖ್ಯೆ ಹೆಚುವಂತೆ ಮಾಡಿದೆ. ಕೆಲವು ಕಡೆ ಈ ವಲಸೆಗಾರರು ವಲಸೆ ಹೋದ ಪ್ರದೇಶಗಳ ಅಭಿವೃಧ್ದಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವುದನ್ನು ಮರೆಯುವಂತಿಲ್ಲ. ಇದರೊಂದಿಗೆ, ರಾಜಕೀಯ ಹಾಗೂ ಧರ್ಮದ ದಬ್ಬಾಳಿಕೆಗಳ ದೆಸೆಯಿಂದ ಅನಾಥರಾಗಿ, ಸಂತ್ರಸ್ತರಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅಕ್ರಮವಾಗಿ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿರುವುದು, ವಲಸೆ ಬಂದವರಿಗೆ ಅಗತ್ಯ ಸೌಲತ್ತುಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದ ದೇಶಗಳಲ್ಲಿ ಆತಂಕವನ್ನು ಸೃಷ್ಟಿಸಿರುವುದನ್ನು ತಳ್ಳಿಹಾಕಲಾಗದು.
ಇಡೀ ಜಗತ್ತು ಇದೇ ಬಗೆಯಲ್ಲಿ ಯೋಚಿಸುತ್ತಿಲ್ಲ. ಧಾರ್ಮಿಕ ತಾರತಮ್ಯದಿಂದ ಹಾಗೂ ರಾಜಕೀಯ ಕಾರಣಗಳಿಂದ ಸಂತ್ರಸ್ತರಾದ ವಲಸಿಗರಿಗೆ ಯುರೋಪಿನ ಕೆಲವು ದೇಶಗಳು ತಮ್ಮ ನೆಲದಲ್ಲಿರಲು ಒಪ್ಪದಿದ್ದರೂ, ಬಹುತೇಕ ದೇಶಗಳು ಅವರಿಗೆ ಅವಕಾಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂಥ ಬೆಳ್ಳಿಯ ಗೆರೆಗಳು, ಸಂತ್ರಸ್ತ ವಲಸಿಗರಿಗೆ ಭರವಸೆಯನ್ನು ಮೂಡಿಸುವಂತಿವೆ.
ಪ್ರಸಕ್ತ ಸಾಲಿನ 2019ರ ಸೆಪ್ಟೆಂಬರ್ 29 ರಂದು, ಕ್ರೈಸ್ತ ಧರ್ಮದ ಜಗದ್ಗುರು, (ಪೋಪ) ಪಾಪು ಸ್ವಾಮಿ ಫ್ರಾನ್ಸಿಸ್ ಅವರು, ಇಟಲಿಯ ತಮ್ಮ ನಿವಾಸ ಸ್ಥಳ ರೋಮ್ ಪಟ್ಟಣದಲ್ಲಿನ, ವ್ಯಾಟಿಕನ್‍ನ ಸಂತ ಪೇತ್ರರ ಚೌಕಿನಲ್ಲಿ (ಸೆಂಟ್ ಪೀಟರ್ಸ್ ಸ್ಕ್ಯಯರ್), `ಅರಿವಿಗೆ ಬಾರದ ದೇವದೂತರು’ (ಏಂಜಿಲ್ಸ್ ಅನವೆಯರ್) ಹೆಸರಿನ ಕಂಚಿನ ಪ್ರತಿಮೆಗಳ ಗುಚ್ಛವನ್ನು ಅನಾವರಣಗೊಳಿಸಿ ಜಗತ್ತಿನ ವಿವಿಧೆಡೆಯ ಅಕ್ರಮ ವಲಸಿಗರಿಗೆ, ಸಂತ್ರಸ್ತರಿಗೆ ಧೈರ್ಯ ತುಂಬಿದ ಘಟನೆ ನಡೆದಿದೆ. ಅವರು 2013ರಲ್ಲಿ ಪಟ್ಟಕ್ಕೆ ಚುನಾಯಿತರಾದ ದಿನದಿಂದಲೂ, ವಲಸಿಗರ ಪರವಾಗಿ ವಾದಿಸಿ, ಆಯಾ ದೇಶಗಳ ಜನ ಮುಕ್ತಮನಸ್ಸಿನಿಂದ ವಲಸಿಗರನ್ನು ಸ್ವಾಗತಿಸಿ ತಮ್ಮವರೆಂದು ಒಪ್ಪಿಕೊಳ್ಳುವಂತೆ ದೇಶವಾಸಿಗಳ, ನಾಯಕರ ಮನವೊಲಿಸಲು ಶ್ರಮಿಸುತ್ತಿದ್ದಾರೆ.
ರಾಜಕೀಯ ಮತ್ತು ಧರ್ಮದ ಕಾರಣ ತೊಂದರೆಗಳನ್ನು ಅನುಭವಿಸಿ ತಮ್ಮ ಮಾತೃ ಭೂಮಿಯನ್ನು ಬಿಟ್ಟು, ಸುರಕ್ಷಿತ ಆಶ್ರಯ ಸ್ಥಳಗಳನ್ನು ಅರಸಿಕೊಂಡು ಹೋಗುವವರಿಗೆ ಸಾಂತ್ವನ ಹೇಳುವ ಉದ್ದೇಶದಿಂದ ಅಕ್ರಮ ವಲಸಿಗರ ಸ್ಮಾರಕಾರ್ಥವಾಗಿ ಸಿದ್ಧಪಡಿಸಲಾದ ಈ ಅಪೂರ್ವ ಕಲಾಕೃತಿಯಲ್ಲಿ ವಲಸೆಗಾರರನ್ನು ಪ್ರತಿನಿಧಿಸುವ ಕಂಚಿನ ಪ್ರತಿಮೆಗಳಿವೆ.
ವ್ಯಾಟಿಕನ್ನಿನÀ ಸಂತ ಪೇತ್ರರ ಚೌಕಿನಲ್ಲಿ ಅನಾವರಣಗೊಳಿಸಿರುವ `ಅರಿವಿಗೆ ಬಾರದ ದೇವದೂತರು’ ಕಂಚಿನ ಪ್ರತಿಮೆಗಳ ಗುಚ್ಛದ ಕಲಾಕೃತಿಯನ್ನು ನಿರ್ಮಸಿದ ಶಿಲ್ಪಿ ಕೆನಡಾ ದೇಶದ ತಿಮೋತಿ. ಪಿ. ಸ್ಮಾಲ್ಝ್. 
ಸುಮಾರು ಮೂರೂವರೆ ಟನ್ ಭಾರದ, 20 ಅಡಿ ಎತ್ತರದ ಈ ಕಂಚಿನ ಶಿಲ್ಪದ ಪ್ರತಿಮೆಗಳ ಗುಚ್ಛದಲ್ಲಿ, ವಿವಿಧ ಸಂಸ್ಕøತಿ, ಕಾಲಘಟ್ಟಗಳನ್ನು, ದೇಶಗಳನ್ನು ಪ್ರತಿನಿಧಿಸುವ ಒಟ್ಟು 140 ವಲಸಿಗರ ನಿಂತ ನಿಲುವಿನ ಪ್ರತಿಮೆಗಳನ್ನು ದೋಣಿಯೊಂದರಲ್ಲಿ ಕಡೆದು ನಿಲ್ಲಿಸಲಾಗಿದೆ. 
ಅವುಗಳಲ್ಲಿ ನಾಝಿ ಜನರಿಂದ ಅಪಖ್ಯಾತಿ ಹೊಂದಿದ ಜರ್ಮನಿಯಿಂದ ಪಲಾಯನಗೈದ ಯಹೂದಿಗಳಿಂದ ಹಿಡಿದು ಇಂದಿನ ಯುದ್ಧಗಳು ಹಾಗು ಬರಗಾಲಗಳಿಂದ ಬಸವಳಿದ ಸಿರಿಯ ಮತ್ತು ಆಫ್ರಿಕಾ ದೇಶಗಳಿಂದ ಬಂದ, ಆತಂಕದಲ್ಲಿರುವ, ದುಃಖದಲ್ಲಿರುವ, ಆಶಾಭಾವನೆಯ ಮುಖ ಹೊತ್ತ, ಕೊನೆಗೂ ಸುರಕ್ಷಿತ ತಾಣ ಮುಟ್ಟಿದ ಮುಖಭಾವದ ವಲಸಿಗರನ್ನು ಈ ಕಲಾಕೃತಿಯಲ್ಲಿ ಕಾಣಬಹುದಾಗಿದೆ.
 `ನಿನ್ನಂತೆಯೇ ನಿನ್ನ ನರೆಹೊರೆಯವರನ್ನು ಪ್ರೀತಿಸು’ ಎಂದು ಸಾರಿದ ಯೇಸುಕ್ರಿಸ್ತರ `ಜೀವನವನ್ನು, ನಂತರದ ಘಟನಾವಳಿಗಳನ್ನು ಕಟ್ಟಿಕೊಡುವ `ಬೈಬಲ್’ನ ಹೊಸ ಒಡಂಬಡಿಕೆಯ `ಹಿಬ್ರಿಯರಿಗೆ ಬರೆದ ಪತ್ರ’ದಲ್ಲಿನ ಸಾಲುಗಳು - `ಸೋದರ ಪ್ರೀತಿಯಲ್ಲಿ ನೆಲೆಯಾಗಿ ನಿಲ್ಲಿರಿ. ಅತಿಥಿ ಸತ್ಕಾರ ಮಾಡುವುದನ್ನು ಮರೆಯದಿರಿ. ಅದನ್ನು ಮಾಡುವಾಗ ಅರಿಯದೇ ಕೆಲವರು ದೇವದೂತರನ್ನೇ ಉಪಚರಿಸಿದ್ದಾರೆ. ಸೆರೆಯಲ್ಲಿರುವವರನ್ನು ಸ್ಮರಿಸಿಕೊಳ್ಳಿ, ಅವರ ಸಂಗಡ ನೀವೂ ಸೆರೆಯಲ್ಲಿರುವಂತೆ ಭಾವಿಸಿಕೊಳ್ಳಿ, ಅನ್ಯಾಯಕ್ಕೆ ಒಳಗಾಗುವವರನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ, ಅನ್ಯಾಯಕ್ಕೆ ಒಳಗಾಗಬಲ್ಲ ದೇಹವೊಂದು ನಿಮಗೂ ಸಹ ಇದೆಯಲ್ಲವೇ?’ ಹೇಳುವ ಭಾವದ ಮೂರ್ತ ಸ್ವರೂಪ ಈ ಶಿಲ್ಪ ಎನ್ನಲಾಗುತ್ತದೆ. 
ಅತಿಥಿ ಸತ್ಕಾರದಲ್ಲಿ `ಕೆಲವರು ದೇವದೂತರನ್ನು ಉಪಚರಿಸಿದ್ದಾರೆ’ ಎಂಬ ಮಾತಿಗೆ ಪೂರಕವಾಗಿ ಸಂತ ಪೇತ್ರರ ಮಹಾದೇವಾಲಯ(ಬೆಸಿಲಿಕಾ)ದ ಎದುರಿಗಿನ, ಸಂತ ಪೇತ್ರರ ಚೌಕಿನಲ್ಲಿ ನಿಲ್ಲಿಸಲಾಗಿರುವ ಈ ಅಪರೂಪದ ಕಂಚಿನ ಕಲಾಕೃತಿ (`ಅರಿವಿಗೆ ಬಾರದ ದೇವದೂತರು’)ಯ ತುಂಬಿದ ದೋಣಿಯ ಗಿಜಿಗಿಡುವ ಜನರ ಮಧ್ಯದಲ್ಲಿ ಕ್ರೈಸ್ತರು ವಿಶ್ವಾಸಿಸುವ ಪ್ರಧಾನ ದೇವದೂತ, ಕಾವಲು ದೂತ ಸಂತ ಮಿಖೇಲಪ್ಪರೂ ಇದ್ದಾರೆ. ಈ ಪ್ರಧಾನ ದೂತ ತಕ್ಷಣ ಕಣ್ಣಿಗೆ ಕಾಣಿಸುವುದಿಲ್ಲ. ಮಧ್ಯದಲ್ಲಿ ಎದ್ದು ಬಂದಂತಿರುವ ಎರಡು ರೆಕ್ಕೆಗಳು ಪ್ರಧಾನ ದೇವದೂತನ ಅಸ್ತಿತ್ವದ ಸುಳಿವು ನೀಡುತ್ತವೆ. ಹಾರಬಲ್ಲ ದೇವದೂತರು ರೆಕ್ಕೆ ಹೊಂದಿರುವರು ಎಂಬುದು ಕ್ರೈಸ್ತ ವಿಶ್ವಾಸ. 
ಪರಸ್ಪರ ಅಂಟಿಕೊಂಡ ಈ ಸಂತ್ರಸ್ತ ವಲಸಿಗರ ಪುತ್ಥಳಿಗಳ ನಡುವೆ, ಯೇಸುಸ್ವಾಮಿ ಹುಟ್ಟಿದ ಸಂದರ್ಭದಲ್ಲಿ, ಹಸುಗೂಸುಗಳ ಕೊಲೆಗೆ ಹೆರೋದ ಅರಸ ಅಪ್ಪಣೆ ಕೊಡಿಸಿದ್ದಾಗ ಇಜಿಪ್ತಿಗೆ ಪಲಾಯನಗೈದ ಮಾತೆ ಮರಿಯಳ, ತಂದೆ ಜೋಸೆಫರ ಸ್ವರೂಪಗಳೂ ಇವೆ. ಅತಿಥಿ ಸತ್ಕಾರದಲ್ಲಿ ಅವರು, ಅಂಥವರು ಅರಿವಿಗೆ ಬಾರದ ದೇವದೂತರು, ಸುಳಿವು ಕೊಡದ ದೇವದೂತರು!
ವಚನಗಳ ಮಾಧ್ಯಮದ ಬಸವಾದಿ ಶರಣರ ಸಾಮಾಜಿಕ ಅನಿಷ್ಠಗಳ, ಡಂಬಾಚಾರಗಳ ವಿರೋಧದ ನಿಲುವು, ಎಲ್ಲರನ್ನೂ ಸಮಾನರನ್ನಾಗಿ ಕಾಣು, ಪ್ರಯೊಬ್ಬರಲ್ಲೂ ದೇವರಿದ್ದಾನೆ (ಶಿವನಿದ್ದಾನೆ) ಎನ್ನುವ ಶರಣ ಧರ್ಮವು ವೀರಶೈವ ಧರ್ಮವಾಗಿ ರೂಪತಾಳಿತು. ಅವರ ಪ್ರಗತಿಪರ ವಿಚಾರಗಳು ಕ್ರಮೇಣ ದೇಶವ್ಯಾಪಿ ಹರಡಿತು, ಭಕ್ತಿ ಚಳುವಳಿ ಹಬ್ಬಿತು. ರಾಮದೇವ, ಸೂರದಾಸ, ರಮಾನಂದ, ಕಬೀರ ಮುಂತಾದವರು ಸೌಹಾರ್ದತೆಯ ಬೀಜಮಂತ್ರಗಳನ್ನು ಹಾಡಿದರು.
ವ್ಯಾಟಕನ್ ಪಟ್ಟಣದಲ್ಲಿ ಸ್ಥಾಪಿತವಾಗಿರುವ ಈ ಶಿಲ್ಪವೂ, ಭಕ್ತಿ ಚಳುವಳಿಯ ನೇತಾರರ, ಆಶಯ ಮತ್ತು ಬಸವಣ್ಣನವರ’ ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ’ ವಚನ ಮತ್ತು ಕನಕದಾಸರ `ಕುಲಕುಲವೆಂದು ಹೊಡೆದಾಡದಿರಿ..’ ಪದ್ಯಗಳ ಮೂರ್ತ ಸ್ವರೂಪವೇ ಎನ್ನಬಹುದು. 
------------------------------------------
ವಲಸಿಗರ ನಾಡುಗಳು ಭಾರತ, ಅಮೆರಿಕ

ಸಾವಿಲ್ಲದ ಮನೆಯ ಸಾಸುವೆ ಕಾಳು ಹೇಗೆ ಸಿಗುವುದಿಲ್ಲವೋ, ಅಂತೆಯೇ ವಲಸಿಗರು ಇಲದ್ಲ ನಾಡು ಸಿಗುವುದೇ ಇಲ್ಲ. ಆಯಾ ನಾಡಿನ, ದೇಶದ ಇತಿಹಾಸ ಒಂದೊಂದು ಕಾಲದಲ್ಲಿ ವಲಸೆಯ ಪ್ರಕರಣಗಳು ನಡದೇ ಇರುತ್ತವೆ. ಭಾರತದ ಇತಿಹಾಸವನ್ನು ಬಗೆದರೆ, ಭರತ ಖಂಡದಲ್ಲಿನ ಸಂಪತ್ತನ್ನು ಅರಸಿ ಈ ನಾಡಿಗೆ ಬಂದವರೇ ಢಾಳಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ಆದಿಯಲ್ಲಿ ಐದು ಸಾವಿರ ವರ್ಷಗಳಿಂದಲೂ ಇಜಿಪ್ತ ಮತ್ತು ಮೆಸೆಪೆÇೀÀಟೇಮಿಯಾ ನದಿ ಸಂಸ್ಕøತಿಗಳಂತೆ ಭಾರತವೂ ಒಂದು ಪುರಾತನ ನದಿ ನಾಗರಿಕತೆ ಹೊಂದಿತ್ತು. ಅದನ್ನು ಸಿಂಧು ಮತ್ತು ಈಗ ಗುಪ್ತಗಾಮಿನಿಯಾಗಿರುವ ಸರಸ್ವತಿ ನದಿಗಳ ಬಯಲಿನಲ್ಲಿನ ಸಿಂಧು ನದಿ ನಾಗರಿಕತೆ ಎಂದು ಗುರುತಿಸಲಾಗುತ್ತದೆ. ಇಂದು ಈ ಸಂಸ್ಕøತಿ ಅಸ್ತಿತ್ವದಲ್ಲಿದ್ದ ಬಹುಪಾಲು ಪ್ರದೇಶ ಪಾಕಿಸ್ತಾನದ ಪಂಜಾಬ ಪ್ರಾಂತ್ಯದ ಪಾಲಾಗಿದೆ.
ನಂತರ ಮಧ್ಯ ಏಷಿಯಾದಿಂದ ಕುದುರೆಗಳೊಂದಿಗೆ ಆರ್ಯರು ಬಂದರು. ಸ್ಥಳೀಯರೊಂದಿಗೆ ಸಂಘರ್ಷ ನಡೆಯುತ್ತದೆ. ಕಾಲಾಂತರದಲ್ಲಿ ಹೊಂದಾಣಿಕೆಯ ಬದುಕು ಆರಂಭವಾಗುತ್ತದೆ. ಸಂಘರ್ಷದ ಸಂದರ್ಭಗಳಲ್ಲಿ ಮೂಲ ನಿವಾಸಿಗಳು ಅಪಾರ ಪ್ರಮಾಣದಲ್ಲಿ ದಕ್ಷಿಣಕ್ಕೆ ವಲಸೆ ಹೋಗಬೇಕಾಗುತ್ತದೆ. ಅವರನ್ನು ದ್ರಾವಿಡರು ಎಂದು ಗುರುತಿಸಲಾಗುತ್ತದೆ.
ಪರ್ಷಿಯನ್ನರು ಭರತ ಖಂಡದ ವಾಯುವ್ಯ ದಿಕ್ಕಿನ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಾರೆ. ದಕ್ಷಿಣದ ಪಲ್ಲವರ ಮೂಲ ಪರ್ಷಿಯಾ ಎಂದು ಹೇಳಲಾಗುತ್ತದೆ. ಆನಂತರ ಅಲೆಕ್ಸಾಂಡರನ ನೇತೃತ್ವದಲ್ಲಿ ಗ್ರೀಕರು ಭಾರತದ ಮೇಲೆ ದಂಡತ್ತಿ ಬರುತ್ತಾರೆ. ಮುಂದೆ ಕುಷಾಣರು, ಹೂಣರು ಬರುತ್ತಾರೆ. ಕ್ರಮೇಣ ಇಲ್ಲಿನ ಜನರೊಂದಿಗೆ ಬೆರೆಯುತ್ತಾರೆ. ಅವರ ನಂತರ ಎಂಟನೇ ಶತಮಾನದಲ್ಲಿ ಮುಸ್ಲೀಂರು ಭಾರತಕ್ಕೆ ಲಗ್ಗೆ ಇಡುತ್ತಾರೆ. ಮಹಮ್ಮದ ಬಿನ್ ಕಾಸಿಂ, ಮುಂದೆ ಹತ್ತನೇ ಶತಮಾನದಲ್ಲಿ ಗಜನಿಯ ಮಹಮ್ಮದ ಹದಿನೇಳು ಬಾರಿ ಭರತಖಂಡದ ಮೇಲೆ ದಾಳಿ ನಡೆಸಿ ಲೂಟಿ ಮಾಡುತ್ತಾನೆ. ಅವನ ಹಿಂದೆಯೇ ಬಂದ ಮುಸ್ಲೀಂರು ಭರತಖಂಡದಲ್ಲೇ ನೆಲೆಸಿ ರಾಜ್ಯವಾಳಲು ಆರಂಭಿಸಿ ಈ ನೆಲದವರೇ ಆಗುತ್ತಾರೆ. ಸಿಂಧೂ ನದಿಯ ಈಚೆಗಿನ ಜನರೆಲ್ಲರೂ ಸಿಂಧುನಾಡಿನ ಜನ. ಕ್ರಮೇಣ `ಸ’ಕಾರ ಹಿಂದೆ ಸರಿದು ಅಲ್ಲಿ `ಹ’ಕಾರ ಬಂದಾಗ ಅವರೆಲ್ಲ ಹಿಂದುಗಳಾದರು, ಅವರ ನಾಡು ಹಿಂದುಸ್ತಾನವಾಯಿತು. ಅಂಥ ಹಿಂದುಸ್ತಾನದಲ್ಲಿನ ನೂರಾರು ರಾಜ್ಯಗಳನ್ನು ಸ್ಥಳೀಯ ಹಿಂದೂ ಅರಸರು, ವಲಸೆ ಬಂದು ಸ್ಥಳೀಕರೇ ಆದ ಮುಸ್ಲೀಂ ಅರಸರು/ಸುಲ್ತಾನರು ಆಳತೊಡಗಿದರು. ಆ ಸಂದರ್ಭದಲ್ಲಿ ಬಹುತೇಕ ಉತ್ತರ ಭಾರತದಲ್ಲಿ ಸ್ಥಳೀಯ ಭಾಷೆ ಮತ್ತು ಪರ್ಷಿಯ ಬೆರೆತು ಉರ್ದು ಎಂಬ ಹೊಸ ಭಾಷೆಯ ಉಗಮವಾಯತು. ಪರ್ಷಿಯಾದ ತಾನಪುರಾ ಮತ್ತು ಭಾರತದ ವೀಣೆಗಳ ಸಂಗಮವಾಗಿ ಸಿತಾರ ವಾದ್ಯ ರೂಪತಾಳಿತು! ದಕ್ಷಿಣ ಭಾರತದ ಡೋಲು, ತಬಲಾ ವಾದ್ಯದ ಹುಟ್ಟಿಗೆ ಮೂಲವಾಯಿತು! ಇವು ಒಂದೆರಡು ಉದಾಹರಣೆಗಳು.
ಮುಂದೆ 15ನೇ ಶತಮಾನದಲ್ಲಿ ವ್ಯಾಪಾರಕ್ಕಾಗಿ ಬಂದ ಯುರೋಪಿನ ಜನ ಭಾರತದಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಂಡರು. ಇಲ್ಲಿನ ಅರಸರು, ಸುಲ್ತಾನರ ನಡುವಿನ ಒಳಜಗಳಗಳಲ್ಲಿ ತಲೆತೂರಿಸಿ ತಮ್ಮ ಬೇಳೆ ಬೇಯಿಸಿಕೊಂಡ ಬ್ರಿಟಿಷರು ಇಡೀ ನಾಡನ್ನು ತಮ್ಮ ವಸಹಾತು ಮಾಡಿಕೊಂಡರು. ಇಪ್ಪತ್ತನೇ ಶತಮಾನದಲ್ಲಿ ಬ್ರಿಟಿಷರು ಒದಗಿಸಿದ ಶಿಕ್ಷಣ ಸೌಲಭ್ಯ ಮೂಡಿಸಿದ ತಿಳುವಳಿಕೆಯಲ್ಲಿ ಭರತಖಂಡದ ಜನರಲ್ಲಿ ಮೂಡಿದ ಸ್ವಾಂತಂತ್ರ್ಯದ ಕನಸು ಮಹಾತ್ಮಾಗಾಂಧಿ ಅವರ ಅಹಿಂಸಾ ಹೋರಾಟದಿಂದ ನನಸಾಯಿತು. 
ಬ್ರಿಟಿಷರು 1947ರಲ್ಲಿ ನಮ್ಮ ದೇಶಬಿಟ್ಟು ತೊಲಗಿದಾಗ ಭಾರತ ಸ್ವತಂತ್ರ ದೇಶವಾಯಿತು. (ಆದರೆ, ಬ್ರಿಟಿಷರ ಉಡುಗೆತೊಡುಗೆ, ಆಚಾರವಿಜಾರಗಳು ಸಮಾಜದಲ್ಲಿ ನೆಲೆಯೂರಿದವು. ಅವರ ಇಂಗ್ಲಿಷ್ ಭಾಷೆ ನಾಡಿನ ಆಡಳಿತದ ಎಲ್ಲಾ ಸ್ತರಗಳಲ್ಲೂ ಬೇರು ಬಿಟ್ಟಿತು. ಈಗಂತೂ ಉದ್ಯೋಗದಾತನಾದ ಇಂಗಿಷ್ ಭಾಷೆ ಸ್ಥಳೀಯ ಭಾಷೆಗಳಿಗೆ ಕಂಟಕಪ್ರಾಯವಾಗಿಬಿಟ್ಟಿದೆ, ಹೊಸಬಗೆಯ ದಾಸ್ಯಕ್ಕೆ ದೂಡುತ್ತಿದೆ.) ಭರತ ಖಂಡದ ನೆಲಕ್ಕೆ ಕಾಲಿರಿಸಿದ ಈ ಎಲ್ಲ ಜನರ ಶ್ರಮದಿಂದ ಪ್ರಸಕ್ತ ಭಾರತ ಇಂದಿನ ಸ್ವರೂಪ ಪಡೆಯಲು ಸಾಧ್ಯವಾಯಿತು. ಕಳೆದ 60 ವರ್ಷಗಳಲ್ಲಿ ಭಾರತ ತನ್ನದೇ ಆದ ಛಾಪನ್ನು ಹೊಂದಿದೆ, ಗುರುತನ್ನು ಸ್ಥಾಪಿಸಿಕೊಂಡಿದೆ.
ಭಾರತವು ಪುರಾತನ ಕಾಲದಿಂದಲೂ ತನ್ನನ್ನು ಅರಸಿಕೊಂಡು ಬಂದ ವಲಸಿಗರನ್ನು ಅಪ್ಪಿ ಮುದ್ದಾಡಿದೆ. ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕವನ್ನು (ಉತ್ತರ ಅಮೆರಿಕ ಸಂಸ್ಥಾನಗಳು- ಯು ಎಸ್ ಎ- ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ) ಈ ಮಟ್ಟಕ್ಕೆ ಬೆಳೆಸಿದವರು ಅಲ್ಲಿನ ಮೂಲ ನಿವಾಸಿಗಳಲ್ಲ(ಇಂದು ಅಲ್ಲಿನ ಮೂಲನಿವಾಸಿಗಳನ್ನು ಕೆಲವು ರಾಜ್ಯಗಳಲ್ಲಿ ಮೂಲೆಗುಂಪು ಮಾಡಲಾಗಿದೆ), ಈಚೆಗಿನ ನಾಲ್ಕಾರು ಶತಮಾನಗಳ ಕಾಲ ಯುರೋಪಿನ ವಿವಿಧ ದೇಶಗಳ ವಲಸಿಗರು. ಐಟಿ, ಬಿಟಿಯ ಇಂದಿನ ಯುಗದಲ್ಲಂತೂ ಏಷ್ಯ ಖಂಡದ ಭಾರತೀಯರು ಮತ್ತು ಚೈನಾದಿಂದ ವಲಸೆ ಹೋಗಿರುವ ಯುವಜನತೆಯ ಶ್ರಮದಿಂದಲೇ ಅಮೆರಿಕ ಇಂದು ಜಗತ್ತಿನ ಒಂದು ಶ್ರೀಮಂತ ರಾಷ್ಟ್ರವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

-0--0--0--0--0--0-

SWOT Analysis


SWOT Analysis ಎಂದರೆ ಕಾರ್ಯವೆಸಗುವಲ್ಲಿನ ನಮ್ಮ ಸಾಮಥ್ರ್ಯ (Strength), ದೌರ್ಬಲ್ಯ,  (Weakness), ಅವಕಾಶಗಳು (Opportunity), ಹಾಗೂ ಅಡತಡೆ (Threats) ಗಳನ್ನು ವಿವೇಚಿಸುವ ವ್ಯವಸ್ಥಿತವಾದ ಯೋಜನಾಕ್ರಮ. ಇದು ಇನ್ನೂ ಉತ್ತಮ ನಿರ್ಣಯ ಹಾಗೂ ಸಮಸ್ಯಾ-ಪರಿಹಾರಗಳನ್ನು ಹುಡುಕುವ ಕ್ರಮ.
ಸಾಮಥ್ರ್ಯಗಳು - ನಮ್ಮ ಕಾರ್ಯದಲ್ಲಿ ನೆರವಾಗುವಂತಹ ಸಕಾರಾತ್ಮಕ ಗುಣ-ಸಾಧ್ಯತೆಗಳು.
ದೌರ್ಬಲ್ಯಗಳು - ಕಾರ್ಯದಲ್ಲಿ ತಡೆ ಉಂಟು ಮಾಡುವಂತಹ ನಕಾರಾತ್ಮಕ ಅಂಶಗಳು.
ಅವಕಾಶಗಳು - ಲಕ್ಷ್ಯ ಸಾಧನೆಯಲ್ಲಿ ಅನುಕೂಲವೊದಗಿಸುವಂತಹ ಬಾಹ್ಯ ಸಂದರ್ಭಗಳು.
ಅಡತಡೆಗಳು - ನಮ್ಮ ಕಾರ್ಯದಲ್ಲಿ ತಡೆಯುಂಟು ಮಾಡುವಂತಹ ಬಾಹ್ಯ ಕಾರಣಗಳು.
SWಔಖಿ ಚಿಟಿಚಿಟಥಿsis ಮೂಲಕ ನಮ್ಮ ಹಿಂದಿನ ಜೀವನವನ್ನು ಒಳಹೊಕ್ಕು ನೋಡಿ ವಿವೇಚಿಸಿ, ಇಂದಿನ ಅಥವಾ ಮುಂದೆ ಬರಬಹುದಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪರಿಹಾರಗಳನ್ನು ಹುಡುಕಬಹುದು. ಒಂದೊಂದನ್ನೂ ವಿವರವಾಗಿ ನೋಡೋಣ. ಉದಾಹರಣೆ - ನಾನು ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯಾಗಲು ಬಯಸುತ್ತೇನೆ. 
ಸಾಮಥ್ರ್ಯಗಳು
ನಾನು ಬಿ.ಕಾಂ ಮಾಡಿದ್ದೇನೆ.
ಪರಿವಾರದ ವೃತ್ತಿ- ಉದ್ಯಮ.
ಅಪಾಯಗಳನ್ನು ಎದುರಿಸುವ ಸಾಹಸ ಪ್ರವೃತ್ತಿ ಇದೆ.
ತಾಯ್ತಂದೆಯರು ನನ್ನ ನಿರ್ಧಾರವನ್ನು ಬೆಂಬಲಿಸುತ್ತಾರೆ.

ದೌರ್ಬಲ್ಯಗಳು
ಉದ್ಯಮವನ್ನು ಪ್ರಾರಂಭಿಸುವುದು ನನಗೆ ಗೊತ್ತಿಲ್ಲ.
ಸ್ನೇಹಿತರು ಅಪಹಾಸ್ಯ ಮಾಡುತ್ತಾರೆ.
ಪೂರ್ವ ಅನುಭವವಿಲ್ಲ.

ಅವಕಾಶಗಳು
ನನ್ನ ಚಿಕ್ಕಪ್ಪ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾರೆ.
ಸಾಲ ಪಡೆಯಲು ಸಾಧ್ಯ.
ಅಧ್ಯಯನ ಮೂಲಗಳ ಪ್ರಕಾರ ರಿಯಲ್ ಎಸ್ಟೇಟ್ ರಂಗದಲ್ಲಿ ಪ್ರಗತಿಯಿದೆ.
ಈ ವೃತ್ತಿಯಲ್ಲಿ ಹೆಚ್ಚಿನ ಲಾಭವಿದೆ.

ಅಡತಡೆಗಳು
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಏರುಪೇರುಗಳಿರುತ್ತವೆ.
ಭ್ರಷ್ಟಾಚಾರ ತುಂಬ ಹೆಚ್ಚು.
ಕೆಲಸಗಾರರನ್ನು ಉಳಿಸಿಕೊಳ್ಳುವುದು ಕಷ್ಞ.

ಈ ಅಭ್ಯಾಸವು ನಮ್ಮ ಮೌಮಾಪನ ಮಾಡುತ್ತ ನಮ್ಮ ನಿರ್ಧಾರ ಶಕ್ತಿಯನ್ನು ಹೆಚ್ಚಿಸುತ್ತದೆ. ಬನ್ನಿ ಕೆಳಗಿನವುಗಳಿಗೆ ಉತ್ತರಿಸುತ್ತಾ  SWOT Analysis ಮಾಡೋಣ. 
ನಮ್ಮ ಸಾಮಥ್ರ್ಯಗಳು
ನಮ್ಮ ದೌರ್ಬಲ್ಯಗಳು
ನಮ್ಮ ಅವಕಾಶಗಳು
ನಮ್ಮ ಅಡತಡೆಗಳು

-0--0--0--0--0--0-

ಒಂದು ಚಿನ್ನದ ಶಿಲುಬೆಯ ಕತೆ

- ಅಜಯ್ ರಾಜ್
 ಖ್ಯಾತ ಫ್ರೆಂಚ್ ಕಾದಂಬರಿಕಾರ ವಿಕ್ಟರ್ ಹ್ಯೂಗೋನ ಪ್ರಸಿದ್ಧ ``ಲೇ ಮಿಸೆರಾಬ್ಲ್'' ಕೃತಿಯಿಂದ ಪ್ರೇರಿತಗೊಂಡು ಸ್ಕಾಟ್ಲೆಂಡಿನ ನಾಟಕಕಾರ ನಾರ್ಮನ್ ಮ್ಯಾಕಿನೆಲ್ ``ದಿ ಬಿಷಪ್ಸ್ ಕ್ಯಾಂಡಲ್ ಸ್ಟಿಕ್ಸ್'' ಎಂಬ ನಾಟಕವನ್ನು ರಚಿಸಿದ್ದಾನೆ. ಈ ನಾಟಕದಲ್ಲಿನ ಬಿಷಪರು ಕೊಡುಗೈ ದಾನಿ ಮತ್ತು ಜಗದ ಎಲ್ಲಾ ಜೀವಿಗಳಲ್ಲಿಯೂ ಒಳ್ಳೆಯತನವನ್ನು ಕಾಣುವ ಮಾನವತಾವಾದಿ. ಅವರÀ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ಅನೇಕರು ಅವರÀಲ್ಲಿದ್ದ ಎಲ್ಲವನ್ನೂ ವಿವಿಧ ಕಾರಣಗಳನ್ನು ಹೇಳಿ ಪಡೆದುಕೊಳ್ಳುತ್ತಿದ್ದರು. ಅದೆಷ್ಟೋ ಬಾರಿ ಬಿಷಪರು ಅಂಥವÀರಿಂದ ಮೋಸ ಹೋಗಿರುತ್ತಾರೆ. ಈ ಕುರಿತು ತನ್ನ ತಂಗಿ ಹೇಳಿದಾಗಲೂ ಸಹ ಬಿಷಪರು ಕೋಪಗೊಳ್ಳುವುದಿಲ್ಲ. ಕೇಳಿಕೊಂಡು ಬಂದ ಯಾರನ್ನೂ ಆತ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಮೋಸ ಮಾಡಿದವರು ದೇವರಿಗೆ ಮತ್ತು ಅವರ ಅಂತರಂಗಕ್ಕೆ ಮೋಸ ಮಾಡುತ್ತಾರೆಯೇ ಹೊರತು ನನಗಲ್ಲ ಎಂಬ ಭಾವನೆಯನ್ನು ತಾಳಿ, ಬಂದವರಿಗೆಲ್ಲಾ ತನ್ನಲಿದ್ದುದ್ದೆಲ್ಲವನ್ನು ಕೊಡುತ್ತಿದ್ದ ಬಿಷಪರ ಬಳಿ ಈಗ ಉಳಿದಿದ್ದು ಮಾತ್ರ ಮರಣಶಯ್ಯೆಯಲ್ಲಿದ್ದ ಆತನ ತಾಯಿ ನೀಡಿದ್ದ ಮೇಣದಬತ್ತಿಗಳನ್ನು ಹಚ್ಚುವ ಕಂಬ.
ಅದೊಂದು ದಿನ ರಾತ್ರಿ ಬಿಷಪರು ಎಂದಿನಂತೆ ಪ್ರಾರ್ಥನೆ ಮಾಡಿ ಮಲಗುವ ಕೋಣೆಗೆ ಹೋಗುವಾಗ ಜೈಲಿನಿಂದ ತಪ್ಪಿಸಿಕೊಂಡ ಕಳ್ಳನೊಬ್ಬ ಕಿಟಕಿಯಿಂದ ಧುಮುಕಿ ಬಂಗಲೆ ಪ್ರವೇಶಿಸುತ್ತಾನೆ. ಕೈಯಲ್ಲಿ ಹರಿತವಾದ ಕತ್ತಿಯನ್ನು ಹಿಡಿದುಕಂಡಿದ್ದ ಅವನನ್ನು ನೋಡಿದರೂ ಬಿಷಪರು ಎದೆಗುಂದದೆ ಅವನನ್ನೇ ದಿಟ್ಟ್ಟಿಸಿ ನೋಡುತ್ತಾರೆ. ಆತನ ಕುರಿತು ವಿಚಾರಿಸಲಾಗಿ ಆತ ಕಾಯಿಲೆಯಿಂದ ನರಳುತ್ತಿರುವ ಹೆಂಡತಿಗಾಗಿ ಕಳ್ಳತನ ಮಾಡಿದನೆಂದೂ ಹಾಗೂ ಆ ಅಪರಾಧಕ್ಕೆ ಹತ್ತು ವರ್ಷಗಳ ಶಿಕ್ಷೆ ನೀಡಿದ್ದರಿಂದ ಈಗ ತಪ್ಪಿಸಿಕೊಂಡು ಬಂದೆನೆಂದೂ ಹೇಳುತ್ತಾನೆ. ಈತನ ಕಥೆ ಕೇಳಿ ಮರುಕಗೊಂಡ ಬಿಷಪರು ತನ್ನಲ್ಲಿದ್ದ ಕೊನೆಯ ವಸ್ತು ಮೇಣದಬತ್ತಿಯ ಕಂಬವನ್ನು ಆತನಿಗೆ ನೀಡುತ್ತಾರೆ. 
ಇದಾದ ಕೆಲ ಸಮಯದ ನಂತರ ಪೋಲಿಸರು ಆತನನ್ನು ಹಿಡಿದು, ಆ ಮೇಣದಬತ್ತಿಯ ಕಂಬದೊಂದಿಗೆ ಬಿಷಪ್ಪರ ಬಳಿ ಕರೆತಂದಾಗ ಬಿಷಪರು ಅದನ್ನು ತಾನೇ ನೀಡಿದ್ದಾಗಿಯೂ ಹಾಗೂ ಆತ ತನ್ನ ಸ್ನೇಹಿತನೆಂದೂ ಹೇಳುತ್ತಾರೆ. ಇದನ್ನು ಕೇಳಿದ ಪೊಲೀಸರು ಅಲ್ಲಿಂದ ಹೊರಡುತ್ತಾರೆ. ಆಗ ಆ ಕಳ್ಳ ಬಿಷಪ್ಪರ ಮಾನವೀಯತೆ ಮತ್ತು ಕರುಣೆಯನ್ನು ಕಂಡು ಕಣ್ಣೀರಿಟ್ಟು ಮನತಿರುಗುತ್ತಾನೆ.
ನಮ್ಮ ನೆಲದಲ್ಲೇ ನಡೆದ ಇಂತಹದ್ದೇ ಒಂದು ನೈಜ ಘಟನೆ ಬಹುಶಃ ಯಾರಿಗೂ ತಿಳಿದಿಲ್ಲವೆನಿಸುತ್ತದೆ. ಇದು ಮೈಸೂರಿನ ಖ್ಯಾತ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದ ಜೇಕಬ್ ಚಾಂಡಿಯವರ ಜೀವನದಲ್ಲಿ ನಡೆದ ನೈಜ ಘಟನೆ. ಆಗಷ್ಟೇ ಕಾಲೇಜಿನಲ್ಲಿ ಓದುತ್ತಿದ್ದ ಜೇಕಬ್‍ಗೆ ತನ್ನ ಸಹಪಾಠಿ ಆಶಾ ಎಂಬ ಹುಡುಗಿಯ ಮೇಲೆ ಪ್ರೀತಿ ಮೂಡುತ್ತದೆ. ಇವರಿಬ್ಬರ ಪ್ರೇಮಕತೆ ಅವರ ತಂದೆ ತಾಯಿಗಳಿಗೆ ತಿಳಿದು ವಿರೋಧ ವ್ಯಕ್ತವಾದಾಗ ಜೇಕಬ್ ಚಾಂಡಿ ತಾನು ಮದುವೆಯಾಗಲಿರುವ ಹುಡುಗಿ ಆಶಾಳನ್ನು ಕೇರಳದ ಒಂದು ಕಾನ್ವೆಂಟಿನಲ್ಲಿ ಕೆಲ ದಿನಗಳ ಮಟ್ಟಿಗೆ, ಅಂದರೆ ತನ್ನ ವಿದ್ಯಾಭ್ಯಾಸ ಮುಗಿದು ಒಂದು ನೌಕರಿ ಸಿಗುವವರೆಗೆ ಉಳಿದುಕೊಳ್ಳುವಂತೆ ಮಾಡುತ್ತಾನೆ. ಆದರೆ, ಆ ``ಕೆಲವು ದಿನಗಳು'' ದಿನೇ ದಿನೇ ಹೆಚ್ಚುತ್ತಾ ಹೋಗುದನ್ನು ಅರಿತ ಜೇಕಬ್‍ನ ಸ್ನೇಹಿತ ಅಶೋಕ್ ಲಾಜರ್ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಪ್ರೊಫೆಸರ್ ಆಗಿದ್ದ ಜೇಕಬ್‍ನ ತಂದೆ ಪ್ರೊಫೆಸರ್ ವರ್ಗೀಸ್ ಚಾಂಡಿಯವರಿಗೆ ಇವರಿಬ್ಬರ ಪ್ರೇಮವನ್ನು ತಿಳಿಸಿ, ಕೇರಳದಲ್ಲಿ ಆ ಹುಡುಗಿ ಒಬ್ಬಳೇ ಯಾತನೆ ಅನುಭವಿಸುತ್ತಿರುವುದನ್ನು ವಿವರವಾಗಿ ತಿಳಿಸುತ್ತಾರೆ. ಈ ಪತ್ರದ ಒಂದು ಪ್ರತಿಯನ್ನು ಜೇಕಬ್ ಚಾಂಡಿಗೂ ಕಳುಹಿಸುತ್ತಾನೆ.
ಜೇಕಬ್ ಚಾಂಡಿ ತನ್ನ ಸ್ನೇಹಿತ ಕಳುಹಿಸಿದ ಆ ಪತ್ರವನ್ನು ತೆಗೆದುಕೊಂಡು ಅಂದಿನ ರಾತ್ರಿ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಬಿಷಪ್ ಅತಿ. ವಂ. ಡಾ. ಮಥಿಯಾಸ್ ಫರ್ನಾಂಡಿಸರ ಬಳಿಗೆ ಸಹಾಯಕ್ಕಾಗಿ ಧಾವಿಸುತ್ತಾನೆ. ತನ್ನಲಿದ್ದ ಪತ್ರವನ್ನು ತೋರಿಸಿ, ಈ ಮದುವೆಗೆ ತನ್ನ ತಂದೆಯನ್ನು ಒಪ್ಪಿಸಬೇಕೆಂದು ಬಿಷಪ್ ಮಥಿಯಾಸ್ ಫರ್ನಾಂಡಿಸರನ್ನು ಕೇಳಿಕೊಂಡಾಗ ಅವರು ಒಪ್ಪಿ ಆತನನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಆತನ ಮನೆಗೆ ತೆರಳುತ್ತಾರೆ. ಅಲ್ಲಿ ಹುಡುಗನ ತಂದೆ ವರ್ಗೀಸ್ ಚಾಂಡಿಯವರನ್ನು ಮಾತನಾಡಿಸಿದ ಬಿಷಪ್ ಮಥಿಯಾಸ್ ಫರ್ನಾಂಡಿಸರು ಜೇಕಬನ ಮದುವೆಗೆ ಒಪ್ಪಿಗೆ ಕೊಡಿ ಎಂದು ಮನವಿ ಮಾಡುತ್ತಾರೆ. ಸ್ವತಃ ಬಿಷಪ್ಪರೇ ತಮ್ಮ ಮನೆಗೆ ಬಂದುದನ್ನು ಕಂಡು ಚಕಿತರಾದ ವರ್ಗೀಸ್ ಚಾಂಡಿಯವರು ನೌಕರಿ ಇಲ್ಲದ ತಮ್ಮ ಮಗನಿಗೆ ಮದುವೆ ಮಾಡಿದರೆ ಆಗುವ ಕಷ್ಟಗಳ ಬಗ್ಗೆ ಬಿಷಪ್ಪರಿಗೆ ವಿವರಿಸುತ್ತಾರೆ. ಇದನ್ನು ಕೇಳಿದ ಬಿಷಪರು ``ನೀವು ಮದುವೆ ಮಾಡಿ. ಉಳಿದೆಲ್ಲವನ್ನು ದಯಾಮಯ ದೇವರು ನೋಡಿಕೊಳ್ಳುತ್ತಾರೆ'' ಎಂದು ಹೇಳಿ ಅಲ್ಲಿಂದ ಜೇಕಬ್ ಚಾಂಡಿಯ ಜೊತೆ ತಮ್ಮ ಬಂಗಲೆಗೆ ಹಿಂತಿರುಗುತ್ತಾರೆ.
ತಮ್ಮ ಬಂಗಲೆಗೆ ಬಂದ ನಂತರ ಬಿಷಪ್ ಮಥಿಯಾಸರು ತಮ್ಮ ಪರ್ಸ್ ಮತ್ತು ಕಿಸೆಯೆಲ್ಲಾ ಹುಡುಕಾಡಿದರೂ ಆ ಹುಡುಗನ ಸಹಾಯಕ್ಕಾಗುವಷ್ಟು ಹಣ ಅವರ ಬಳಿ ಇರುವುದಿಲ್ಲ. ಆಗ ಬಿಷಪ್ ಮಥಿಯಾಸ್ ಫರ್ನಾಂಡಿಸ್ ತಮ್ಮ ಕೊರಳಲ್ಲಿದ್ದ, ಬಿಷಪ್ಪರು ಸಾಂಕೇತಿಕವಾಗಿ ಧರಿಸಿಕೊಳ್ಳುವ ಚಿನ್ನದ ಶಿಲುಬೆಯನ್ನು ಆ ಹುಡುಗನಿಗೆ ನೀಡಿ, ``ಇದನ್ನು ಮಾರಿ, ಬಂದ ಹಣವನ್ನು ನಿನ್ನ ಮದುವೆಗೆ ಬಳಸಿಕೊ'' ಎಂದು ಹೇಳುತ್ತಾರೆ. ಬಿಷಪ್ಪರ ಈ ಮಾತುಗಳನ್ನು ಕೇಳಿದ ಹುಡುಗ ಒಂದು ಕ್ಷಣ ಮಾತೇ ಹೊರಡದೆ ನಿಂತು ಬಿಡುತ್ತಾನೆ. ``ನೋ ಮೈ ಲಾರ್ಡ್, ದಯವಿಟ್ಟು ಹೀಗೆ ಮಾಡಬೇಡಿ. ನೀವು ಧರಿಸಿಕೊಳ್ಳುವ ಪವಿತ್ರವಾದ ಈ ಶಿಲುಬೆಯನ್ನು ನಾನು ನನ್ನ ಅವಶ್ಯಕತೆಗಳಿಗೋಸ್ಕರ ಮಾರುವುದಿಲ್ಲ.'' ಎಂದು ಹೇಳಿ ಹೊರಗೆ ನಿಲ್ಲಿಸಿದ್ದ ತನ್ನ ಸೈಕಲ್ಲನ್ನು ಎತ್ತಿಕೊಳ್ಳಲು ಓಡುತ್ತಾನೆ. ಈತನ ಹಿಂದೆಯೇ ಬಿಷಪ್ ಮಥಿಯಾಸ್ ಫರ್ನಾಂಡಿಸ್ ಸಹ ಓಡಿಬರುವಷ್ಟರಲ್ಲಿ ಆ ಹುಡುಗ ಒಂದೇ ಉಸಿರಿನಲ್ಲಿ ಮನೆಗೆ ತೆರಳಿ ನಡೆದುದೆಲ್ಲವನ್ನು ತನ್ನ ತಂದೆ ತಾಯಿಗೆ ಹೇಳುತ್ತಾನೆ.
ನಡೆದುದೆಲ್ಲವನ್ನು ಕೇಳಿಸಿಕೊಂಡ ನಂತರ ಜೇಕಬ್ ಚಾಂಡಿಯ ಅಮ್ಮ ತನ್ನ ಮಗ ಬಿಷಪ್ಪರ ಶಿಲುಬೆಯನ್ನು ಮುಟ್ಟಲಿಲ್ಲ ಎಂದು ಸಂತೋಷ ಪಡುತ್ತಿರುವಾಗ, ಆತನ ತಂದೆ ವರ್ಗೀಸ್ ಚಾಂಡಿ, ನೀನು ಆ ರೀತಿ ಅವರಿಂದ ಅಗೌರವಯುತವಾಗಿ ಓಡಿ ಬಂದದ್ದು ತಪ್ಪು. ಅವರು ಪ್ರೀತಿಯಿಂದ ಕೊಟ್ಟದ್ದನ್ನು ತೆಗೆದುಕೊಳ್ಳಬೇಕಿತ್ತು ಎಂದು ಹೇಳಿ, ಬಿಷಪ್ಪರಲ್ಲಿ ಕ್ಷಮೆಯಾಚಿಸಿ ಬಾ ಎಂದು ತನ್ನ ಮಗನಿಗೆ ಹೇಳುತ್ತಾರೆ. ಆ ನಡುರಾತ್ರಿಯಲ್ಲೇ ಜೇಕಬ್ ತನ್ನ ಸೈಕಲ್ಲಿನಲ್ಲಿ ಬಿಷಪ್ಪರ ನಿವಾಸಕ್ಕೆ ಬಂದು ಬಿಷಪ್ ಮಥಿಯಾಸ್ ಫರ್ನಾಂಡಿಸರಲ್ಲಿ ಕ್ಷಮೆ ಯಾಚಿಸಿದಾಗ, ಕೋಪದಿಂದಲೇ ಬಿಷಪ್ ಮಥಿಯಾಸ್ ಫರ್ನಾಂಡಿಸರು ಅವರ ಚಿನ್ನದ ಶಿಲುಬೆ ಮತ್ತು ಆಶೀರ್ವಾದವನ್ನು ನೀಡುತ್ತಾರೆ. ಈ ಮೂಲಕ ಜೇಕಬ್ ಚಾಂಡಿಗೆ ``ಶಿಲುಬೆಯ ಭಾರ'' ವರ್ಗಾವಣೆಯಾಗುತ್ತದೆ. ಕ್ರಿಸ್ತನನ್ನೂ ಆತನ ಶಿಲುಬೆಯನ್ನು ಹೊತ್ತುಕೊಳ್ಳುವ ಸಂದಿಗ್ಧಕ್ಕೆ ಆ ಹುಡುಗ ಬೀಳುತ್ತಾನೆ.
ಮರುದಿನವೇ ಕೊಚ್ಚಿನ್‍ಗೆ ಬಸ್ಸು ಹತ್ತಿ ಗೆಳೆಯ ಅಶೋಕನ ಮನೆಗೆ ಜೇಕಬ್ ಧಾವಿಸುತ್ತಾನೆ. ಅಲ್ಲಿಯೂ ಸಹ ಆತನಿಗೆ ಸಮಸ್ಯೆಗಳು ಎದುರಾಗುತ್ತವೆ. ತನ್ನ ಮದುವೆಗಾಗಿ ಬಿಷಪ್ಪರು ನೀಡಿದ ಆ ಚಿನ್ನದ ಶಿಲುಬೆಯನ್ನು ಮಾರಲು ಹೋದಾಗ, ಯಾರೂ ಅದನ್ನು ಕೊಳ್ಳಲು ತಯಾರಿರಲಿಲ್ಲ. ಅದನ್ನು ತನಗೆ ಖುದ್ದು ಬಿಷಪ್ಪರೇ ನೀಡಿದರು ಎಂದು ಹೇಳಿದರೂ ಯಾರೂ ನಂಬುತ್ತಿಲ್ಲ. ಅಲ್ಲಿದ್ದವರೆಲ್ಲಾ ಆ ಶಿಲುಬೆಯನ್ನು ಆತ ಕದ್ದಿದ್ದಾನೆ ಎಂದೇ ಭಾವಿಸುತ್ತಿದ್ದರು. ಮುಂದೇನು ಮಾಡುವುದು ಎಂದು ತೋಚದಿದ್ದಾಗ, ಗೆಳೆಯ ಅಶೋಕ್ ಲಾಜರನ ತಾಯಿ ಶ್ರೀಮತಿ ಲಾಜರ್ ಅದನ್ನು ತನ್ನ ಬಳಿ ಇಟ್ಟುಕೊಳ್ಳುವುದಾಗಿ ಹೇಳಿ, ಜೇಕಬ್ ಚಾಂಡಿಯ ಮದುವೆಗೆ ಒಂದಷ್ಟು ಹಣವನ್ನು ನೀಡುತ್ತಾರೆ. ಇದಾದ ನಂತರ ದಿನಾಂಕ ಜೂನ್ 19, 1967ರಂದು ಜೇಕಬ್ ಚಾಂಡಿಯ ಮದುವೆ ನಡೆದ ನಂತರ ಆ ಚಿನ್ನದ ಶಿಲುಬೆ ಸುರಕ್ಷಿತವಾಗಿ ಮತ್ತೊಮ್ಮೆ ಮೈಸೂರಿಗೆ ಮರಳುತ್ತದೆ. ಆಗ ಚಾಂಡಿ ಕುಟುಂಬ ಆ ಶಿಲುಬೆಯನ್ನು ಬಿಷಪ್ ಮಥಿಯಾಸ್ ಫರ್ನಾಂಡಿಸರಿಗೆ ಗೌರವಪೂರ್ವಕವಾಗಿ ಹಿಂದಿರುಗಿಸುತ್ತದೆ. ಮರಳಿ ತಮ್ಮ ಬಳಿಗೆ ಬಂದ ಆ ``ಶಿಲುಬೆ''ಯನ್ನು ಬಿಷಪ್ ಮಥಿಯಾಸ್ ಫರ್ನಾಂಡಿಸರು ಮುಂದಿನ 18 ವರ್ಷಗಳ ಕಾಲ, ಅಂದರೆ ತಾವು ಸಾಯುವವರೆಗೂ ಕೊರಳಲ್ಲಿ ಧರಿಸಿಕೊಂಡಿದ್ದರು. ತಮ್ಮ ಮರಣಶಯ್ಯೆಯಲ್ಲಿ ಮಲಗಿರುವಾಗ ತಮ್ಮ ಖಾಸಗಿ ವೈದ್ಯರಾದ ಡಾ. ಜಾವೇದ್ ನಯೀಮ್‍ರವರಿಗೆ ಆ ಚಿನ್ನದ ಶಿಲುಬೆಯನ್ನು ಕೊಟ್ಟು ಮುಂದಿನ ಮೈಸೂರು ಬಿಷಪ್ಪರಿಗೆ ಹಸ್ತಾಂತರಿಸುವಂತೆ ಕೇಳಿಕೊಳ್ಳುತ್ತಾರೆ. ಅವರ ಮರಣದ ನಂತರ ಸುದೀರ್ಘ ಎರಡೂವರೆ ವರ್ಷಗಳ ನಂತರ ಮೈಸೂರಿಗೆ ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ಬೆಂಗಳೂರಿನ ನಮ್ಮ ಹಾರೋಬೆಲೆಯವರೇ ಆದ ಬಿಷಪ್ ಡಾ. ಫ್ರಾನ್ಸಿಸ್ ಮಿಖೇಲಪ್ಪನವರಿಗೆ ಆ ಚಿನ್ನದ ಶಿಲುಬೆಯನ್ನು ಡಾ. ಜಾವೇದ್ ನಯೀಮ್ ಹಸ್ತಾಂತರಿಸುತ್ತಾರೆ.

-0--0--0--0--0--0-

ಮನಸು


- ಫಾದರ್ ವಿಜಯ ಕುಮಾರ್ ಪಿ, ಬಳ್ಳಾರಿ

ಮನಸು ಮಾನವ ಮಿದುಳಿನಲ್ಲಿ ಹುದುಗಿರುವ ವಿಶೇಷ ಅಂಗ. ಈ ಮನಸು ಸೃಜನಾತ್ಮಕವಾದುದು ಹಾಗೂ ಸದಾ ಕ್ರಿಯಾಶೀಲವಾದುದು. ಈ ಮನಸ್ಸೇ ಮಾನವನ ಸರ್ವ ಒಳಿತು ಕೆಡುಕುಗಳ ಉಗಮಸ್ಥಾನ. ಇದು ಮಾನವನ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. "ಮನಸಿದ್ದರೆ ಮಾರ್ಗ" ಎಂಬ ಉಕ್ತಿಯನ್ನು ನಾವು ಕೇಳಿದ್ದೇವೆ. ಅಂದರೆ ಮನಸ್ಸನ್ನು ಮಾನವ ತನ್ನಿಚ್ಚೆಯಂತೆ ಪಳಗಿಸಬಹುದು ಎಂಬುದರಲ್ಲಿ ಕಿಂಚಿತ್ತೂ ಸಂಶಯವಿಲ್ಲ. ಈ ಮನಸನ್ನು ಯಾವನು ಕ್ರಮಬದ್ಧವಾಗಿ ಪಳಗಿಸುತ್ತಾನೋ ಅಂತವನು ಯಶಸ್ಸಿನ ಉತ್ತುಂಗ ಶಿಖರವನ್ನೇರಬಹುದು ಹಾಗೆಯೇ ಯಾರು ಅದನ್ನು ಕ್ರಮಬದ್ಧವಾಗಿ ಪಳಗಿಸುವುದಿಲ್ಲವೋ ಅಂತವರು ಆಳವಾದ ಹಾಗೂ ಬುಡವಿಲ್ಲದ ಪ್ರಪಾತಕ್ಕೂ ಬೀಳಬಹುದು. ಈ ಮನಸ್ಸಿನಲ್ಲಿ ಉತ್ತಮವಾದುದನ್ನು ಬಿತ್ತಿದರೆ ಉತ್ತಮವಾದುದನ್ನು ಬೆಳೆಯಬಹುದು. ಮಾನವ ತನ್ನ ಮನಸ್ಸಿನ ಹಿಡಿತದಲ್ಲಿ ಇರಬಾರದು. ಬದಲಾಗಿ ಮನಸು ಮಾನವನ ಹಿಡಿತದಲ್ಲಿರಬೇಕು. ಅದು ಗಾಳಿಗಿಂತಲೂ ಶರವೇಗದಲ್ಲಿ ಚಲಿಸುತ್ತದೆ, ಅದರ ಲಗಾಮು ಮಾನವನ 
ಕೈಯಲ್ಲಿರಬೇಕು!
ಮನಸು "ಮರವನೇರಿದ ಮರ್ಕಟನಂತೆ" ಎಂಬ ಉಕ್ತಿ ಇದೆ. ಇದು ಅಕ್ಷರಶಃ ಸತ್ಯ. ಮರ್ಕಟ ಅಂದರೆ ಮಂಗ, ಕ್ಷಣಮಾತ್ರವೂ ಒಂದು ಕಡೆ ಕುಳಿತುಕೊಳ್ಳುವುದಿಲ್ಲ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಲೇ ಇರುತ್ತದೆ. ಆದರೆ ಅದನ್ನೂ ಸಹ ಮಾನವ ತನ್ನಿಚ್ಛೆಯಂತೆ ಪಳಗಿಸಿ ಆಟವಾಡಿಸುತ್ತಾನೆ. ಅಂದರೆ ಮನಸ್ಸನ್ನು ಉತ್ತಮವಾಗಿ ಪಳಗಿಸಬಹುದು. ಅದು ಬಹಳ ಸೂಕ್ಷ್ಮವಾದುದು ಹಾಗೂ ಮೃದುವಾದುದು. ಅದನ್ನು ಹದವಾಗಿ, ನಯವಾಗಿ ರೂಪಿಸಬೇಕು. ಮನಸ್ಸನ್ನು ಉತ್ತಮವಾಗಿ ರೂಪಿಸಲು ಮಾನವ ಸ್ವಹಿತದ ಚಿಂತೆಬಿಟ್ಟು ಸಮಾಜಮುಖಿಯಾಗಬೇಕು. ಆಗ ಅವನ ಮನಸು ಸಂಕುಚಿತತೆಯಿಂದ ವಿಕಾಸದೆಡೆಗೆ ಮುಖಮಾಡುತ್ತದೆ. ಮಾನವ ತನ್ನ ಮನಸ್ಸನ್ನು ಸಶಕ್ತವಾಗಿ ರೂಪಿಸಲು ಸರ್ವರ ಬದುಕಿಗೆ ಹಿತವನ್ನೀಯುವ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಪ್ರಥಮವಾಗಿ "ಬೆಳೆಯುವ ಪೈರು ಮೊಳಕೆಯಲ್ಲೇ" ಎಂಬಂತೆ ಮಗು ತಾಯಿಯ ಉದರದಲ್ಲಿರುವಾಗಲೇ ಕಲಿಯಲು ಪ್ರಾರಂಭಿಸುತ್ತದೆ. ಈ ಕಾರಣ ತಾಯಿ-ತಂದೆಯ ಮನಸು ಪ್ರಶಾಂತವಾಗಿಯೂ, ನಿಷ್ಕಲ್ಮಶವಾಗಿಯೂ ಹಾಗೂ ವಿಶಾಲ ಮನೋಭಾವುಳ್ಳದ್ದಾಗಿಯೂ ಇರಬೇಕು. ಸದಾ ಸಕಾರಾತ್ಮಕ ಭಾವನೆಗಳಿಂದ ತಂದೆತಾಯಿಯರ ಮನಸು ತುಂಬಿರಬೇಕು. ತಂದೆತಾಯಿಯರು ಪ್ರಕೃತಿಯ ಸೊಬಗನ್ನು ಸವಿಯುತ್ತ, ಪ್ರಕೃತಿಯಂತೆ ನಾವಿನ್ಯತೆಯಿಂದ ಕೂಡಿರಬೇಕು. ಆಕಾಶದಷ್ಟು ವಿಶಾಲವಾದ ಮನೋಭಾವವನ್ನು ಬೆಳಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಪರನಿಂದೆ ಮಾಡದೆ, ಪರಹಿತ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಗುವಿನ ಮನಸು ಹದವಾಗಿಯೂ, ಹಿತವಾಗಿಯೂ ಬೆಳೆದು ಪರಹಿತ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹವಣಿಸುತ್ತದೆ (ಲೂಕ 1:39-56).
ಮನಸು ನಿರಂತರವಾಗಿ ಬೆಳೆಯುವ ಚೈತನ್ಯವುಳ್ಳದ್ದು. ಅದು ಬೆಳೆದಂತೆ ಜ್ಞಾನವು ವೃದ್ಧಿಯಾಗುತ್ತದೆ. "ಜ್ಞಾನವು ಮನುಷ್ಯನ ಮುಖವನ್ನು ಮಾರ್ಪಡಿಸುತ್ತದೆ" ಎನ್ನುತ್ತಾನೆ ಉಪದೇಶಕ (ಉಪದೇಶಕ 8:1). ಅಂತಹ ಜ್ಞಾನವು ಸಕಾರಾತ್ಮಕವಾಗಿಯೂ, ಉಜ್ವಲವಾಗಿಯೂ ಸಂವೃದ್ಧಿಯಾಗಬೇಕಾದರೆ ಉತ್ತಮ ಸಾಹಿತ್ಯದ ಅಧ್ಯಯನ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಧಾರ್ಮಿಕ ಗ್ರಂಥಗಳ ಅಧ್ಯಯನದ ಜೊತೆಗೆ ಉತ್ತಮ ಸಾಧಕರ, ಗಣ್ಯವ್ಯಕ್ತಿಗಳ, ನೀತಿಬೋಧೆಗಳ ಸಾಹಿತ್ಯದ ಅಧ್ಯಯನ ನಿರಂತರವಾಗಿ ಸಾಗುತ್ತಿರಬೇಕು. ಇದರಿಂದ ಮನೋವಿಕಾಸವು ಮನಸ್ಸಿನ ಆಳದಲ್ಲಿ ಮನೆಮಾಡಿ ಪ್ರೀತಿಯನ್ನು ಅರಳಿಸುತ್ತದೆ, ದ್ವೇಷವನ್ನು ದಮನಮಾಡುತ್ತದೆ ಹಾಗೂ ಧಾರ್ಮಿಕ ಸಹಿಷ್ಣತೆ ಚಿಗುರೊಡೆದು ಸಹಕಾರ ಮನೋಭಾವ ಮನೆಮಾಡುತ್ತದೆ. ಅಧ್ಯಯನ ಎಂದಾಕ್ಷಣ ಬರಿ ಗ್ರಂಥಗಳನ್ನು ಓದುವುದು ಮಾತ್ರವಲ್ಲ ಉತ್ತಮ ಉಪದೇಶಗಳನ್ನು, ಪ್ರವಚನಗಳನ್ನು ಆಲಿಸಿ ಗ್ರಹಿಸುವುದು ಸಹ ಅಧ್ಯಯನವೇ ಎಂದು ಪರಿಗಣಿಸಬಹುದು. ದೇವರು ಜ್ಞಾನದ ಮೂಲ. "ದೇವರು ತಾವು ಮೆಚ್ಚಿದವನಿಗೆ ಜ್ಞಾನವನ್ನೂ, ತಿಳುವಳಿಕೆಯನ್ನೂ, ಸುಖ ಸಂತೋಷವನ್ನೂ ದಯಪಾಲಿಸುತ್ತಾರಲ್ಲವೇ?" ಎನ್ನುತ್ತಾನೆ ಉಪದೇಶಕ (ಉಪದೇಶಕ 2:26). ಅಂಥ ಜ್ಞಾನ ಮಾನವನಿಗೆ ಲಭಿಸಬೇಕಾದರೆ ಮಾನವನು ಏನು ಮಾಡಬೇಕು ಎಂಬುದನ್ನು ಸಿರಾಕನು "ನಿನ್ನ ಇಚ್ಛಾಶಕ್ತಿಗಳಿಗೆ ಬಲಿಯಾಗಬೇಡ, ನಿನ್ನ ಮನದಾಶೆಗೆ ಗುಲಾಮನಾಗಬೇಡ" (ಸಿರಾಕ 5:2) ಎಂದು ಎಚ್ಚರಿಸುತ್ತಾನೆ.
ಮಾನವನ ಮನಸ್ಸನ್ನು ಹದವಾಗಿ ತಿದ್ದಿ ರೂಪಿಸಲು ತರಬೇತಿ ಅತಿ ಅವಶ್ಯಕ. ಇದಕ್ಕೆ ಧ್ಯಾನ ಉತ್ತಮ ಸಾಧನ. ಮನಸ್ಸನ್ನು ಒಂದು ಉತ್ತಮವಾದ, ಫಲಭರಿತವಾದ ಹಾಗೂ ನಿಖರವಾದ ವಿಷಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಧ್ಯಾನ ಎನ್ನಬಹುದು. ಒಂದು ಸ್ಥಳದಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿ ಮನಸು ದೈವೀಕ ಹಾಗೂ ಸರ್ವೋತ್ತಮವಾದ ವಿಷಯಗಳನ್ನು ಧ್ಯಾನಿಸುವುದು ಒಂದು ಬಗೆಯ ಧ್ಯಾನವಾದರೆ, ಮಾನವ ತಾನು ಮಾಡುವ ಪ್ರತಿ ಕೆಲಸವನ್ನು ಶ್ರದ್ಧೆ, ಭಕ್ತಿ ಹಾಗೂ ಪ್ರಾಮಾಣಿಕತೆಯಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ನಿಷ್ಠೆಯಿಂದ ಮಾಡಿದರೆ ಅದೂ ಸಹ ಒಂದು ಬಗೆಯ ಉತ್ತಮ ಧ್ಯಾನವೇ ಆಗುತ್ತದೆ. ಸಂತ ಪೌಲನು ಮನಸ್ಸನ್ನು ಹದವಾಗಿ ತಿದ್ದಲು "ಯಾವುದು ಸತ್ಯವು-ಮಾನ್ಯವು, ನ್ಯಾಯವು-ಶುದ್ಧವು, ಪ್ರೀತಿಕರವು-ಮನೋಹರವು ಆಗಿದೆಯೋ ಯಾವುದು ಸದ್ಗುಣವು-ಸ್ತುತ್ಯಾರ್ಹವು ಆಗಿದೆಯೋ ಅಂಥವುಗಳಲ್ಲಿ ಮಗ್ನರಾಗಿರಿ" (ಫಿಲಿಪ್ಪಿ 4:8) ಎನ್ನುತ್ತಾನೆ. ಧ್ಯಾನವು ಮನಸ್ಸನ್ನು ಹದಗೊಳಿಸಿ, ಹಗುರಗೊಳಿಸಿ ಸಕಾರಾತ್ಮಕವಾಗಿ ವೃದ್ಧಿಯಾಗಲು ಚಾಲನೆ ನೀಡುತ್ತದೆ. ಆದರೆ "ಮನುಜನ ಮನದಲ್ಲಿ ಏಳುವ ಯೋಜನೆಗಳು ಹಲವು; ಈಡೇರುವುದಾದರೊ ಸರ್ವೇಶ್ವರನ ಸಂಕಲ್ಪವು" (ಜ್ಞಾನೋಕ್ತಿ 19:21) ಎನ್ನುವುದರಲ್ಲಿ ಸಂಶಯವಿಲ್ಲ.
ಮಾನವನ ಮನಸ್ಸಿನಲ್ಲಿ ಗೊಂದಲಗಳು ಹಲವು. ಹಲವು ಬಾರಿ ಕೆಡುಕು ಕೂಡ ಒಳಿತಿನಂತೆ ಕಾಣಬಹುದು ಆದರೆ ಯಾವುದು ಸತ್ಯ ಯಾವುದು ಮಿಥ್ಯ ಎಂದು ತಿಳಿದುಕೊಳ್ಳಲು ಸತ್ಯ, ಮಿಥ್ಯಗಳ ಸ್ಪಷ್ಟ ಅರಿವಿರಬೇಕು. ಈ ಅರಿವು ಮನಸ್ಸನ್ನು ಶುದ್ಧೀಕರಿಸಿ ಸ್ಪಷ್ಟ ಅರಿವಿನೆಡೆಗೆ ಅಂದರೆ ಕತ್ತಲೆಯಿಂದ ಬೆಳಕಿನೆಡೆಗೆ ನಿರಂತರವಾಗಿ ಸಾಗಲು ತವಕಿಸುತ್ತದೆ. ಮನಸು ಮಾನವನ ಯೋಚನಾ ಲಹರಿಯ ಕೇಂದ್ರಬಿಂದು. ಇದು ಮಾನವನ ಅತಿ ಬೆಲೆ ಬಾಳುವ ಆತ್ಮ್ಯುತ್ತಮ ಆಸ್ತಿ. ಮನಸ್ಸಿನ ಆಲೋಚನೆ ಸಕಾರಾತ್ಮಕವಾಗಿದ್ದಲ್ಲಿ ಅವನ ಕ್ರಿಯೆಗಳು ಸಹ ಸಕಾರಾತ್ಮಕವಾಗಿರುತ್ತವೆ. ಹಾಗೆಯೇ ಮನಸ್ಸಿನ ಆಲೋಚ£ Éನಕಾರಾತ್ಮಕವಾಗಿದ್ದಲ್ಲಿ ಅವನ ಕ್ರಿಯೆಗಳು ಸಹ ನಕಾರಾತ್ಮಕವಾಗಿರುತ್ತವೆ. ಕಾರಣ ಉತ್ತಮ ಆಲೋಚನೆಗಳ ಕಡೆಗೆ ಮನಸು ತಿರುಗಿಕೊಳ್ಳಬೇಕು. ಮನಸ್ಸಿನ ಅಂತರಾಳದಲ್ಲಿ ಸದ್ಭಾವನೆಗಳು ನೆಲೆನಿಂತರೆ ಅವು ಇತರರ ಬಾಳಿಗೆ ಪ್ರೇರಣೆಯನ್ನು ನೀಡಿ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ನಾಂದಿಯಾಡಬಹುದು. ಬುದ್ಧ ಬಸವ, ಕನಕದಾಸ, ವಿವೇಕಾನಂದ ಹಾಗೂ ಇನ್ನೂ ಅನೇಕರು ಶುದ್ಧ ಹಾಗೂ ಪರಿಪಕ್ವವುಳ್ಳ ಮನಸುಳ್ಳವರಾಗಿದ್ದ ಕಾರಣ ಸಮಾಜದ ಕತ್ತಲನ್ನು (ಅಜ್ಞಾನವನ್ನು) ಅಳಿಸಿ ಬೆಳಕನ್ನು ಚೆಲ್ಲಿದರು. ಇವರಿಂದ ಪ್ರೇರಿತಗೊಂಡ ಹಲವು ಮಂದಿ ಇಂದಿಗೂ ಸಹ ಸಮಾಜದ ಒಳಿತಿಗಾಗಿ ಶ್ರಮಿಸುತ್ತಲೇ ಇದ್ದಾರೆ. ಸಂತ ಪೌಲನು "ಇಹಲೋಕದ ಆಚಾರ ವಿಚಾರಗಳಿಗೆ ಮಾರು ಹೋಗಬೇಡಿ, ಬದಲಿಗೆ, ಮಾನಸಾಂತರಗೊಂಡು ನೂತನ ಜೀವಿಗಳಾಗಿ ಬಾಳಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಉನ್ನತವಾದುದು ಎಂಬುದನ್ನು ಅರಿತುಕೊಳ್ಳುವಿರಿ" (ರೋಮನರಿಗೆ 12:2) ಎನ್ನುತ್ತಾನೆ. ಈ ಕಾರಣ ಮನಸು ಶುದ್ಧವಾಗಿದ್ದರೆ ಮಾನವನ ಭಾವನೆಗಳು ಶುದ್ಧವಾಗಿರಲು ಸಾಧ್ಯ. ಭಾವನೆಗಳು ಶುದ್ಧವಾಗಿದ್ದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಉತ್ತಮ ಸಮಾಜ ನಿರ್ಮಾಣವಾದರೆ ಅಧ್ಯಾತ್ಮ ಚಿಗುರೊಡೆಯಲು ಸಾಧ್ಯ. ಅಧ್ಯಾತ್ಮವು ಚಿಗುರೊಡೆದರೆ ಸಮಾಜದಲ್ಲಿ ದೈವೀ ಪ್ರಸನ್ನತೆ ಮನೆಮಾಡಿ ದ್ವೇಷಾವೇಶಗಳು ಮರೆಯಾಗಿ ಆನಂದಮಯ ಸಮಾಜ ನಿರ್ಮಾಣವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

-0--0--0--0--0--0-

ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎನ್ನುವುದು ನಿಚ್ಚಳವಾಗಿ ಕಾಣುತ್ತಿದೆ !

ಕಳೆದ ಎರಡು ತಿಂಗಳಿಂದ ಮೈಸೂರು ಬಿಷಪರಾದ ಅತಿವಂದನೀಯ ಕಾಣಿಕದಾಸ್ ವಿಲಿಯಂ ಅಂತೋಣಿಯವರ ಮೇಲೆ ಅನೈತಿಕ ಜೀವನದ ಆರೋಪದ ತೂಗುಕತ್ತಿ ತೂಗಾಡುತ್ತಿದೆ. ತಮ್ಮ ಧರ್ಮಕ್ಷೇತ್ರದ ಸಹವರ್ತಿ ಗುರುಗಳೂ ಸೇರಿದಂತೆ ಮೂವತ್ತೇಳು ಮಂದಿ ಅವರ ಮೇಲೆ ಸಾಕ್ಷ್ಯಾಧಾರ ಸಮೇತ ವ್ಯಾಟಿಕನ್ ಪರಮೋಚ್ಛಪೀಠಕ್ಕೆ ದೂರು ಸಲ್ಲಿಸಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಕಾಳಜಿಯುತ ಕಥೋಲಿಕರು ಎಂಬ ಸಂಘವೊಂದು ರಾಬರ್ಟ್ ರೊಸಾರಿಯೋ ಎಂಬುವರ ನೇತೃತ್ವದಲ್ಲಿ ಬಿಷಪರ ಮೇಲೆ ಆರೋಪ ಮಾಡಿದಾಗ ಇಡೀ ಇಂಡಿಯಾದ ಧರ್ಮಸಭೆ ಬೆಚ್ಚಿಬಿದ್ದಿತು.
ಮೈಸೂರು ಧರ್ಮಕ್ಷೇತ್ರದ ಪ್ರಧಾನಗುರುವಾಗಿರುವ ಫಾದರ್ ಲೆಸ್ಲಿ ಮೋರಾಸ್ ಅವರು ತಮ್ಮ ಕಚೇರಿಯಲ್ಲಿ ಕೆಲಸಕ್ಕಿದ್ದ ಯುವತಿಯನ್ನು ಹೊತ್ತಲ್ಲದ ಹೊತ್ತಿನಲ್ಲಿ ತಮ್ಮ ಕೊಠಡಿಗೆ ಕರೆಸಿಕೊಂಡು ಕಡತವನ್ನು ನೋಡುವ ನೆವದಲ್ಲಿ ಆಕೆಯ ಮೈಮಾಟವನ್ನು ಕಣ್ದಿಟ್ಟಿಯಲ್ಲೇ ಅಳೆದರೆಂದು ಆಕೆಯೇ ಹೇಳಿಕೊಂಡಿರುವ ಅನುಭವ ಕಥನವು ಚಲನಚಿತ್ರದ ರೂಪದಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಭಾರತೀಯ ಹೆಣ್ಣುಮಗಳೊಬ್ಬಳು ತನ್ನ ಮೈಯ ಬಗ್ಗೆ ಅತೀವ ಜಾಗರೂಕತೆ ವಹಿಸುತ್ತಾಳೆ, ಪರಪುರುಷನೊಬ್ಬನು ತನ್ನನ್ನು ಮುಟ್ಟುವುದಿರಲಿ ಕೇವಲ ಕಾಮುಕ ದೃಷ್ಟಿಯಿಂದ ತನ್ನ ದೇಹವನ್ನು ನೋಡಿದರೂ ಆಕೆ ಇರುಸುಮುರುಸು ಆಗುತ್ತಾಳೆ. ಅಂಥಲ್ಲಿ ಒರ್ವ ಯುವತಿಯು ಕ್ರೈಸ್ತ ಗುರುವೊಬ್ಬರ ಮೇಲೆ ಅಂಥ ಆರೋಪ ಮಾಡಿದ್ದಾಳೆಂದರೆ ಅದನ್ನು ಸುಮ್ಮನೇ ತಳ್ಳಿಹಾಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ದೇಶದ ಕಾನೂನು ತನ್ನ ನಡೆಯನ್ನು ಮುಂದಿಟ್ಟು ಆ ಯುವತಿಯನ್ನು ಖುದ್ದಾಗಿ ಸಂದರ್ಶಿಸಿ ಹೇಳಿಕೆಯನ್ನು ದಾಖಲು ಮಾಡಿಕೊಂಡಿದೆ. ಆ ಪ್ರಕಾರ 2018ರ ಮೇ ತಿಂಗಳಲ್ಲಿ ಮೇಲ್ತಿಳಿಸಿದ ಘಟನೆ ನಡೆಯಿತೆಂದೂ ಆ ನಂತರ ಆಕೆ ತಾನು ಕೆಲಸಕ್ಕಿದ್ದ ಕ್ರೈಸ್ತಸಂಸ್ಥೆಗೆ ರಾಜಿನಾಮೆ ಕೊಟ್ಟು ಹೊರನಡೆದಳೆಂದೂ, ಜುಲೈ 18ರಲ್ಲಿ ಬಿಷಪರ ಕಡೆಯವರೆನ್ನಲಾದ ಒಂದಷ್ಟು ಮಂದಿ ಆಕೆಯನ್ನು ಕಾರಿನಲ್ಲಿ ಅಪಹರಿಸಿ ಆಕೆಯ ಫೋನಿನಲ್ಲಿದ್ದ ಮಾಹಿತಿಯನ್ನೆಲ್ಲ ಅಳಿಸಿ ಬೆದರಿಸಿ ಹೋದರೆಂದೂ ದಾಖಲಾಗಿದೆಯಂತೆ. ಅಲ್ಲದೆ ಆಕೆ ಎಂದೋ ಮಾಡಿದ ಆರೋಪದ ವಿಡಿಯೋವನ್ನು ಮತ್ತೊಬ್ಬ ಗುರುಗಳು ಇಂದು ಬೆಳಕಿಗೆ ತಂದಿದ್ದಾರೆ, ತನ್ನನ್ನು ತನ್ನ ಪಾಡಿಗೆ ಬಿಟ್ಟುಬಿಡಿ ಎಂದೂ ಆಕೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾಳೆ.
ಬಿಷಪರು ಈ ಆರೋಪ ಮಾಡಿದವರಲ್ಲಿ ಭೇದ ಉಂಟುಮಾಡಲು ಪ್ರಯತ್ನಿಸಿ ಅಂಥವರ ಮೇಲೆಯೇ ಪ್ರತಿತಂತ್ರ ಹೂಡಿದರು ಹಾಗೂ ಆ ಯುವತಿಯನ್ನು ಬೆದರಿಸಿದರು ಕೊನೆಗೆ ಹಣದ ಆಮಿಷ ಒಡ್ಡಿದರು ಎನ್ನುವ ಆರೋಪವೂ ಕೇಳಿಬರುತ್ತಿದೆ.
ಬಿಷಪ್ ವಿಲಿಯಮ್ ಅವರ ಮೇಲೆ ಬೆದರಿಕೆ, ಅಪಹರಣದ ಮಾತು ಮಾತ್ರವೇ ಕೇಳಿಬರುತ್ತಿಲ್ಲ. ಆ ಮೂವತ್ತೇಳು ಮಂದಿಯ ಪ್ರಕಾರ 'ಬಿಷಪರು ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳ ಸಖ್ಯ ಹೊಂದಿದ್ದಾರೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ, ಮುಖ್ಯ ಪೊಲೀಸ್ ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ, ಹಾಗು ಭೂಗತ ಲೋಕದ ನಂಟೂ ಹೊಂದಿದ್ದಾರೆ' ಎಂಬ ಆಪಾದನೆಯೂ ಇದೆ. ಇಷ್ಟಲ್ಲದೆ ಅವರು ಪ್ರಧಾನಾಲಯದ ಗುರುವಾಗಿದ್ದಾಗ ರಾತ್ರಿ ಊಟದ ನಂತರ ಪ್ಯಾಂಟುಶರಟು ಧರಿಸಿ ಹೊರಗೆ ಹೊರಟರೆ ಮತ್ತೆ ಹಿಂದಿರುಗುತ್ತಿದ್ದುದು ಮರುದಿನ ಬೆಳಗ್ಗೆಯೇ ಎಂದು ಸಹ ಪ್ರತ್ಯಕ್ಷದರ್ಶಿಗಳು ಮಾತಾಡುತ್ತಿದ್ದಾರೆ. ಅವರು ಪ್ರತಿರಾತ್ರಿ ಒಂದು ಹೆಂಗಸಿನೊಂದಿಗೆ ತಂಗುತ್ತಿದ್ದರು ಹಾಗೂ ಆ ಸಂಬಂಧದ ಫಲವಾಗಿ ಅವರಿಗೊಬ್ಬ ಮಗನಿದ್ದಾನೆ ಎಂದೂ ಗುರುತರ ಆರೋಪ ಕೇಳಿಬರುತ್ತಿದೆ.
ಬಹುಕಾಲ ಈ ಆರೋಪಗಳ ಬಗ್ಗೆ ಸುಮ್ಮನಿದ್ದ ಬಿಷಪರು ರಾಜಕಾರಣಿಯ ತೆರದಲ್ಲಿ ಕೈಯೆತ್ತಿ ಮುಗಿಯುತ್ತಾ ಸಂಗಡಿಗರ ಸಮೇತ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ದಿಶಾವರಿ ನಗೆ ಬೀರಿ ಆಕೆ ಯಾರೆಂದೇ ನನಗೆ ಗೊತ್ತಿಲ್ಲ ಎಂದು ಹೇಳಿದರು. ಈ ಆರೋಪಗಳೆಲ್ಲ ಸುಳ್ಳು ಎಂದೂ ವಾದಿಸಿದರು. ಹಣಕಾಸಿನ ಅವ್ಯವಹಾರದಲ್ಲಿ ತೊಡಗಿದ್ದ ಗುರುಗಳ ಮೇಲೆ ನಾನು ಕ್ರಮ ಕೈಗೊಂಡಿದ್ದರಿಂದ ಅವರು ನನ್ನ ಮೇಲೆ ತಿರುಗಿಬಿದ್ದಿದ್ದಾರೆ ಎಂದೂ ಅವರು ಹೇಳಿದ್ದಾರೆ. ಅವರು ಬಿಷಪರಾಗಿ ನೇಮಕಗೊಂಡು ಅಭಿಷೇಕ ಹೊಂದುವವರೆಗೆ ಒಂದೂವರೆ ತಿಂಗಳ ಸಮಯವಿತ್ತು, ಆಗ ಆರೋಪ ಮಾಡದವರು ಈಗೇಕೆ ಆರೋಪ ಮಾಡುತ್ತಿದ್ದಾರೆ ಎಂದು ಬಿಷಪರ ನಿಷ್ಟರು ಹೇಳುತ್ತಿದ್ದಾರೆ.
ಏನೇ ಇರಲಿ ಕಾನೂನು ತನ್ನ ಪಾತ್ರವನ್ನು ನಿರ್ವಹಸಲಿದೆ, ಆದರೆ ನಮ್ಮ ಧರ್ಮಸಭೆಗೆ ಇದೊಂದು ಕಪ್ಪುಚುಕ್ಕೆಯಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.
-0-
ಇತ್ತ ಕೇಂದ್ರ ಸರ್ಕಾರವು ಪೌರತ್ವ ಕಾಯಿದೆಯನ್ನು ಜಾರಿಗೆ ತಂದು ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹಣದುಬ್ಬರ, ಕಾನೂನು ಅವ್ಯವಸ್ಥೆ, ಹಗರಣಗಳನ್ನು ಮುಚ್ಚಿಹಾಕಲು ಅಥವಾ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಇಂಥ ಸಾಹಸಕ್ಕೆ ಕೈಹಾಕಿದೆ ಎಂದು ವಿಚಾರವಾದಿಗಳು ಹೇಳುತ್ತಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಸುಮಾರು ಹತ್ತೊಂಬತ್ತು ಲಕ್ಷ ನಾಗರಿಕರು ತಮ್ಮ ಪೌರತ್ವ ರುಜುವಾತುಗೊಳಿಸಲು ಸಾಧ್ಯವಾಗದೆ ಬಂಧನ ಕೇಂದ್ರಗಳಲ್ಲಿದ್ದಾರೆ ಎಂಬುದು ಆತಂಕಕಾರಿಯಾಗಿದೆ. ಕರ್ನಾಟಕದಲ್ಲೂ ಪಜಾಪಪಂ ಅಭಿವೃದ್ಧಿಗೆಂದು ಕಟ್ಟಿದ ಕಟ್ಟಡವನ್ನು ಬಂಧನಕೇಂದ್ರವಾಗಿ ಮಾರ್ಪಡಿಸಲಾಗುತ್ತಿದೆ ಎಂಬ ಸುದ್ದಿಯಿದೆ. ಅಲೆಮಾರಿಗಳಿಗೆ, ಆದಿವಾಸಿಗಳಿಗೆ, ಬುಡಕಟ್ಟಿನವರಿಗೆ, ಲಂಬಾಣಿ ತಾಂಡಾಗಳವರಿಗೆ ಹಾಗೂ ಪೌರತ್ವ ನಿರೂಪಿಸುವಂತ ದಾಖಲೆಗಳಾದ ಆಧಾರ್ ಗುರುತಿನ ಚೀಟಿ, ಪಡಿತರಚೀಟಿ, ಮತದಾರಚೀಟಿ ಮುಂತಾದವನ್ನು ಹೊಂದಿಲ್ಲದವರು ಈ ಕಾಯಿದೆಯ ಕೆಟ್ಟದೃಷ್ಟಿಗೆ ಒಳಗಾಗುತ್ತಾರೆ. ಆದರೆ ಅವರಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಇತರರನ್ನು ಮಾತ್ರವೇ ಪೌರತ್ವಕ್ಕೆ ತರಲು ಅವಕಾಶ ಇದೆ ಎಂಬುದೇ ಆತಂಕಕಾರಿಯಾದ ವಿಷಯ. ಏಕೆಂದರೆ ನಮ್ಮ ಕಾಯ್ದೆ ಕಟ್ಟಲೆಗಳು ಜಾತಿ ಧರ್ಮಗಳ ಕುರಿತು ಕುರುಡಾಗಿರಬೇಕು ಎಂದು ನಮ್ಮ ಘನ ಸಂವಿಧಾನ ಪ್ರತಿಪಾದಿಸುತ್ತದೆ. ದೇಶಾದ್ಯಂತ ಈ ಪೌರತ್ವ ಕಾಯಿದೆಯ ವಿರುದ್ಧ ಜನ ದಂಗೆಯೆದ್ದು ನಡೆದ ಹಿಂಸಾಚಾರಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಹುತಾತ್ಮರಾಗಿದ್ದಾರೆ.
-0-
ಇತ್ತೀಚಿನ ಒಂದೆರಡು ದಿನಗಳಲ್ಲಿ ಹಾರೋಬೆಲೆಯಲ್ಲಿ ನಿರ್ಮಾಣವಾಗಲಿರುವ ಯೇಸುಕ್ರಿಸ್ತನ ಅತಿ ಎತ್ತರದ ಪ್ರತಿಮೆಯ ಸುದ್ದಿ ಕಾವು ಪಡೆಯುತ್ತಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮವು ನೂರಕ್ಕೆ ನೂರು ಕ್ರೈಸ್ತರೇ ವಾಸಿಸುವ ಹಳ್ಳಿ. ಅರ್ಕಾವತಿ ನದಿದಂಡೆಯ ಈ ಊರಿನ ಕ್ರೈಸ್ತರಿಗೆ ನಾನೂರು ವರ್ಷಗಳ ಹೆಮ್ಮೆಯ ಇತಿಹಾಸವಿದೆ. ಫ್ರೆಂಚ್ ಮಿಷನರಿಗಳು ಕಟ್ಟಿದ ಜಪಸರಮಾತೆ ದೇವಾಲಯ, ಕನ್ನಡ ಕ್ರೈಸ್ತ ನಾಟಕ ಪಿತಾಮಹ ಲಾಜರ್ ಸ್ವಾಮಿಯವರು, ಜೆಸ್ವಿತ್ ವಾರ್ಷಿಕ ವರದಿಗಳ ಆಧಾರದಲ್ಲಿ ಕರ್ನಾಟಕದ ಇತಿಹಾಸಕ್ಕೆ ಹೊಸ ತಿರುವು ನೀಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂತಪ್ಪ ಫಾದರ್, ನೂರಾರು ವರ್ಷಗಳ ಇತಿಹಾಸವುಳ್ಳ ಯೇಸುಮಹಿಮೆ ಎಂಬ ಬಯಲುನಾಟಕ, ಊರಿನವರಿಗೆ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಿಗೂ ಪವಿತ್ರವೆನಿಸಿದ ಕಪಾಲಬೆಟ್ಟ ಹಾಗೂ ಕೃಷಿಕರ ಸೌಭಾಗ್ಯದೇವತೆ ಅರ್ಕಾವತಿ ಅಣೆಕಟ್ಟು ಮುಂತಾದವು ಹಾರೋಬೆಲೆ ಊರಿನೊಂದಿಗೆ ಹಾಸುಹೊಕ್ಕಿವೆ. ಸೌದೆ ಒಲೆಗಳನ್ನು ತ್ಯಜಿಸಿ ಮೊತ್ತಮೊದಲು ಸಮುದಾಯ ಅಡುಗೆ ಅನಿಲ ಒಲೆಗಳನ್ನು ಬಳಸಿದ ಕೀರ್ತಿ ಈ ಗ್ರಾಮದ್ದು. ಸೌರವಿದ್ಯುತ್ ಬಳಸಿ ಪಂಪುಸೆಟ್ಟು ನಡೆಸುವ ಸಾಹಸಕ್ಕೂ ಇಲ್ಲಿನ ಜನ ಕೈಹಾಕಿದ್ದಾರೆ. ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಸಾಮುದಾಯಿಕ ಕಾಳಜಿಯ ಫಲವಾಗಿ ಇಲ್ಲಿ ಕುರಿಬ್ಯಾಂಕ್ ಎಂಬ ವಿಶಿಷ್ಟ ಪ್ರಯೋಗ ಕಳೆದ ಐವತ್ತು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಹಾರೋಬೆಲೆ ಊರಿನ ಆರ್. ಸಿ ಶಾಲೆಯು ಕಳೆದ ಆರು ದಶಕಗಳಿಂದ ಈ ವಲಯದ ಆತ್ಮ್ಯುತ್ತಮ ಶಾಲೆಯೆನಿಸಿದೆ ಮಾತ್ರವಲ್ಲದೆ ಸುತ್ತಲಿನ ಹತ್ತಾರು ಹಳ್ಳಿಗಳ ಶಿಕ್ಷಣವಂಚಿತ ಮಕ್ಕಳಿಗೆ ಈ ಶಾಲೆ ವರದಾನವಾಗಿದೆ. ಈ ಪ್ರದೇಶದ ಪೂರ್ಣ ಸಾಕ್ಷರತೆಯ ಸಾಧನೆಗೆ ಈ ಶಾಲೆಯೇ ಕಾರಣವೆಂದರೆ ತಪ್ಪಾಗದು.
ಊರಿನ ಈ ಎಲ್ಲಾ ಉತ್ಸಾಹಭರಿತ ಚಟುವಟಿಕೆಗಳ ಹಿಂದೆ ಉತ್ಸಾಹಿ ಯುವಪಡೆಯೇ ಇದೆ. ಅವರೆಲ್ಲ ಸೇರಿ ನೂರಹದಿನಾಲ್ಕು ಅಡಿ ಎತ್ತರದ ಬೃಹತ್ ಯೇಸುಪ್ರತಿಮೆ ಕೆತ್ತಲು ಚಾಲನೆ ನೀಡಿದ್ದಾರೆ. ಕಪಾಲಬೆಟ್ಟ ಎಂಬುದು ಕ್ರೈಸ್ತರಿಗೆ ಒಂದು ಪವಿತ್ರ ತಾಣ. ಕಪಾಲಬೆಟ್ಟ ಅಥವಾ ಗೊಲ್ಗೊಥಾ ಎಂಬಲ್ಲಿ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಲಾಯಿತು ಎಂಬುದು ಜನಜನಿತ ಸತ್ಯ.. ಗೊಲ್ಗೊಥಾ ಎಂದರೆ ಮನುಷ್ಯನ ತಲೆಬುರುಡೆಯ ಆಕಾರದಲ್ಲಿ ಗೋಚರಿಸುವ ಹೆಬ್ಬಂಡೆ. ಅದನ್ನು ಕನ್ನಡದಲ್ಲಿ ಕಪಾಲಬೆಟ್ಟ ಎನ್ನಲಾಗುತ್ತದೆ.
ಆದ್ದರಿಂದ ಶುಭಶುಕ್ರವಾರದಂದು ಜಗತ್ತಿನ ಎಲ್ಲಾ ಕ್ರೈಸ್ತರು ಚರ್ಚುಗಳಿಗೆ ತೆರಳಿ ಕಪಾಲಸ್ಥಳದ ಆ ಘಟನೆಯನ್ನು ಸ್ಮರಿಸುತ್ತಾ ಉಪವಾಸ ಧ್ಯಾನ ಆಚರಿಸುತ್ತಾರೆ. ತಮ್ಮೂರಿಗೆ ಹತ್ತಿರದ ಬೆಟ್ಟ ಗುಡ್ಡಗಳಿಗೆ ಹೋಗಿ ಯೇಸುಕ್ರಿಸ್ತನ ಶಿಲುಬೆಯಾತ್ರೆಯನ್ನು ಅನುಕರಿಸುತ್ತಾರೆ.
ನಾಲ್ಕು ಶತಮಾನಗಳ ಹಿಂದೆ ಐರೋಪ್ಯ ಜೆಸ್ವಿತ್ ಮಿಷನರಿಗಳಿಂದ ಪ್ರಾರಂಭವಾದ ಹಾರೊಬೆಲೆ ಮಿಷನ್ ಕೇಂದ್ರದ ಬಳಿಯಿರುವ ಕಪಾಲಬೆಟ್ಟದ ಶಿಲುಬೆಯಾತ್ರೆಯೂ ಅಷ್ಟೇ ಪ್ರಾಚೀನ. ಮೊದಲೆಲ್ಲ ಈ ಬೆಟ್ಟದಯಾತ್ರೆ ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಕ್ರಮೇಣ ಹಾರೋಬೆಲೆ ಕ್ರೈಸ್ತಭಕ್ತರು ಆ ಬೆಟ್ಟದಲ್ಲಿ ದೈನಂದಿನ ಜಪತಪಧ್ಯಾನಗಳಿಗೆÀ ನಾಂದಿ ಹಾಡಿದರು. ಹೀಗೆ ಹಾರೋಬೆಲೆ ಕ್ರೈಸ್ತರು ಕಳೆದ ಹಲವಾರು ವರ್ಷಗಳಿಂದ ತಮ್ಮೂರಿಗೆ ಹತ್ತಿರದ ಕಪಾಲಬೆಟ್ಟದಲ್ಲಿ ಪ್ರಾರ್ಥನೆ ಮತ್ತು ಶಿಲುಬೆಯಾತ್ರೆಗಳನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸುತ್ತಮುತ್ತಲಿನ ಕ್ರೈಸ್ತೇತರ ರೈತಾಪಿ ಜನರು ಸಹ ಈ ಬೆಟ್ಟವನ್ನು ಕಪಾಲಬೆಟ್ಟ ಎಂದು ಕರೆಯುತ್ತಾ ಗೌರವದಿಂದ ಪರಿಭಾವಿಸುತ್ತಿದ್ದಾರೆ.
ತಮ್ಮ ಭಕ್ತಿಯ ದ್ಯೋತಕವಾಗಿ ಹಾರೋಬೆಲೆ ಜನರು ಈ ಬೆಟ್ಟದ ಮೇಲೆ ಯೇಸುಸ್ವಾಮಿಯ ಪ್ರತಿಮೆ ನಿಲ್ಲಿಸಲು ಯೋಜನೆ ಹಾಕಿಕೊಂಡು ತಮ್ಮ ನೆಚ್ಚಿನ ಶಾಸಕ ಶ್ರೀ ಡಿಕೆ ಶಿವಕುಮಾರ್‍ನÀವರಲ್ಲಿ ವಿನಂತಿಸಿಕೊಂಡರ ಫಲವಾಗಿ ತಮ್ಮ ಅಭಿಮಾನಿ ಮತದಾರರ ಮೇಲೆ ವಿಶೇಷ ಕಾಳಜಿ ತೋರಿದ ಮಾನ್ಯ ಶಾಸಕರು ಬೆಟ್ಟದ ಆ ಜಾಗದಲ್ಲಿ ಸುಮಾರು ಹತ್ತು ಎಕರೆಯಷ್ಟು ಜಮೀನನ್ನು ಸ್ವಂತ ಹಣ ನೀಡಿ ಸರ್ಕಾರದಿಂದ ಖರೀದಿಸಿ ಹಾರೋಬೆಲೆ ಜನಕ್ಕೆ ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ಅವರು ಶಿಲ್ಪಕೆತ್ತನೆಯ ಕೆಲಸಕ್ಕೆ ವಿಧ್ಯುಕ್ತ ಚಾಲನೆ ನೀಡಿದ್ದು ಪತ್ರಿಕೆಗಳಲ್ಲಿ ವರದಿಯಾಗಿ ಅದೇ ವಿವಾದದ ಕಿಡಿಹೊತ್ತಿಸಿತು. ಮೊದಲೇ ಡಿಕೆಶಿ ಮತ್ತು ಕಾಂಗ್ರಸ್ ವಿರುದ್ಧ ಕುದಿಯುತ್ತಿರುವ ಬಿಜೆಪಿ ಪಕ್ಷದ ಮಂತ್ರಿ ಶಾಸಕರೆಲ್ಲ ಈ ಸುದ್ದಿ ಕೇಳಿದ್ದೇ ಕೆಂಡಾಮಂಡಲವಾದರು. ಅವರ ಸಡಿಲ ಮಾತುಗಳಲ್ಲಿ ಯೇಸುಕ್ರಿಸ್ತ, ಸೋನಿಯಾಗಾಂಧಿ, ವ್ಯಾಟಿಕನ್ ನಗರ, ಕ್ರೈಸ್ತ ಸಮುದಾಯಗಳೆಲ್ಲ ಬಂದುಹೋದವು. ಕ್ಷೇತ್ರಕಾರ್ಯವನ್ನೇ ಮಾಡದ ವರದಿಗಾರನೊಬ್ಬ ಕಪಾಲಬೆಟ್ಟವನ್ನು ಕಪಾಲಿಬೆಟ್ಟ ಎಂದು ವರದಿಮಾಡಿದ್ದು ಉರಿವ ಬೆಂಕಿಗೆ ತುಪ್ಪ ಸುರಿದಂತಾಯ್ತು. ಇದೀಗ ಪ್ರಜಾವಾಣಿ ಪತ್ರಿಕೆ ಈ ತಪ್ಪನ್ನು ತಿದ್ದುವ ಕೆಲಸ ಮಾಡಿದೆ. ಮುಖ್ಯಮಂತ್ರಿಗಳು ಸುಮ್ಮನಿದ್ದರೂ ಆಡಳಿತಪಕ್ಷ ಬಿಜೆಪಿಯ ನಾಯಕರು ಪರೋಕ್ಷವಾಗಿ ಕ್ರೈಸ್ತರ ವಿರುದ್ದ ಸಿಡಿಮಿಡಿಗೊಂಡಿದ್ದಾರೆ. ಕಪಾಲಬೆಟ್ಟವನ್ನು ಕಪಾಲಿಬೆಟ್ಟ ಎನ್ನುತ್ತಿರುವ ಇವರು ಈ ಸ್ಥಳದಲ್ಲಿ ಹಿಂದೂ ಸಾಧುಸಂತರು ಧ್ಯಾನ ನಡೆಸಿದ್ದಾರೆ, ಅದನ್ನು ಕ್ರೈಸ್ತಕ್ಷೇತ್ರವಾಗಿ ಮಾಡಲು ಸಾಧ್ಯವಿಲ್ಲ, ಪ್ರತಿಮೆ ಸ್ಥಾಪನೆಗೆ ನೀಡಿರುವ ಗೋಮಾಳದ ಆ ಜಮೀನನ್ನು ಹಿಂಪಡೆಯುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರದ ಆದೇಶ ಮೇರೆಗೆ ರಾಮನಗರ ಜಿಲ್ಲಾಧಿಕಾರಿಯವರು ಈ ತಪೋಭೂಮಿಯ ಸ್ಥಳಪರೀಕ್ಷೆ ನಡೆಸಿದ್ದಾರೆ. ಅವರು ಈ ಕುರಿತ ವಿಸ್ತೃತ ವರದಿ ನೀಡುವ ಮುನ್ನವೇ ಸ್ಥಳೀಯ ತಹಶೀಲ್ದಾರರನ್ನು ವರ್ಗಾವಣೆ ಮಾಡಲಾಗಿದೆ ಹಾಗೂ ಕೆತ್ತನೆಯ ಕೆಲಸವನ್ನು ಸ್ಥಗಿತಗೊಳಿಸಲÁಗಿದೆ. ಈ ಎಲ್ಲ ವಿದ್ಯಮಾನಗಳ ಹಿಂದೆ ಪೊಳ್ಳು ಹಿಂದುತ್ವವಾದಿಗಳ ಕುತಂತ್ರವಿದ್ದು ಅವರು ಸರ್ಕಾರಕ್ಕೆ ಹಾಗೂ ಪತ್ರಿಕಾಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡಿ ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎನ್ನುವುದು ನಿಚ್ಚಳವಾಗಿ ಕಾಣುತ್ತಿದೆ. 
- ಸಿಎಂಜೆ
-0--0--0--0--0--0-

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...