Saturday, 11 January 2020

ಪೌರತ್ವಕ್ಕೆ ಪುರಾವೆ

- ಡೇವಿಡ್ ಕುಮಾರ್. ಎ

ಮುತ್ತಜ್ಜನ ಲಂಗೋಟಿಯನು
ಗೆದ್ದಲ ಹುಳು ತಿಂದು,
ಬೆಳೆದು ನಿಂತಿದೆ ಹುತ್ತ,
ಹಳೇ ಮಣ್ಣ ಘಮಲೇ ಪುರಾವೆ !

ಮುತ್ತಜ್ಜಿಯ ಮಣ್ಣ ಮಡಕೆಯ
ಒಡೆದ ಚೂರುಗಳು,
ಊರೆಲ್ಲಾ ಹರಡಿ
ಕುಂಟಪಿಲ್ಲಿಯ ಚೌಕದೊಳಗೆ
ಬಿಡಿ ಬಿಡಿ ಚೆಲ್ಲಾಡಿವೆ
ಸಾಕಲ್ಲವೇ ಸಾಕ್ಷಿ !?

ಊರೊಳಗಿನ ಗೋಕಟ್ಟೆ
ಊರಾಚೆಯ ಗುಂಡುತೋಪು,
ಗಿಳಿಹಿಂಡು, ಹಕ್ಕಿಹಾಡು,
ಕೆರೆ ಏರಿಯ ನೇರಳೆ ಹಣ್ಣು,
ನನ್ನೂರಿಗೆ ದಾಖಲೆ !

ವಿದೇಶಿ ದಂಡುಗಳ
ಹಿಮ್ಮೆಟ್ಟಿದ ಹಿರಿಯರಿಗೆ
ಜಾತಿ-ಧರ್ಮಗಳಿಲ್ಲ,
ವಂಶ ವೃಕ್ಷಗಳಿಗೆ, ದ್ವೇಷದ ಬೇರಿಲ್ಲ
ಪೌರತ್ವಕ್ಕೆ ಸಹಬಾಳ್ವೆಯೇ ಪುರಾವೆ!

--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...