Wednesday, 9 May 2018

ಮಿಷನ್ ಸಫಲವಾಯಿತು!


ಪ್ರಭು ಯೇಸುಕ್ರಿಸ್ತರು ದೇವರ ಪುತ್ರ. ಸ್ವರ್ಗಸಾಮ್ರಾಜ್ಯದ ಒಡೆಯ. ಸ್ವರ್ಗಸಾಮ್ರಾಜ್ಯವನ್ನು ಗ್ರೀಕ್ ಬಾಷೆಯಲ್ಲಿ ಬಸಿಲೇಯ (basileia) ಎಂತಲೂ ಅರಮಿಕ್‌ನಲ್ಲಿ ಮಲ್ಕುತ್ ಎಂತಲೂ ಕರೆವರು. ಪ್ರಭು ಯೇಸು ಈ ವಿಶ್ವದಲ್ಲಿ ಸ್ವರ್ಗಸಾಮ್ರಾಜ್ಯವನ್ನು ಸ್ಥಾಪಿಸಿ ಮಾನವಕುಲವನ್ನು ಸರ್ವ ಬಂಧನಗಳಿಂದಲೂ, ಪಾಪದ ಸಂಕೋಲೆಗಳಿಂದಲೂ, ಸೈತಾನ ರಾಜ್ಯದಿಂದಲೂ ಬಿಡಿಸಿ ರಕ್ಷಿಸುವುದು ಅವರ ಜೀವನದ ಪರಮ ಗುರಿಯಾಗಿತ್ತು. ನಾನು ಬಂದದ್ದಾದರೋ ಜೀವನೀಡಲು .. ಯಥೇಚ್ಛವಾಗಿ ನೀಡಲು. (ಯೊವಾನ್ನ ೧೦:೧೦) ಎಂದು ಪ್ರಭು ಘೋಷಿಸಿದರು.
ಆ ಜೀವ ನಶಿಸಿ ಹೋಗುವುದಿಲ್ಲ. ಅದು ಶಾಶ್ವತವಾದ ಎಂದೂ ಅಳಿಯದ ನಿತ್ಯಜೀವ. ಅದನ್ನು ಮಾನವಕುಲಕ್ಕೆ ದೊರಕಿಸಿಕೊಡಲು ಪ್ರಭು ಸ್ವರ್ಗಸಾಮ್ರಾಜ್ಯವನ್ನು ಅಂದರೆ ತಂದೆಯ ಬಲಪಾರ್ಶ್ವವನ್ನು ಬಿಟ್ಟು ಬೆತ್ಲೆಹೇಮಿನಲ್ಲಿ ಮರಿಯಳ ಉದರದಿ ಮಗುವಾಗಿ ಧರೆಗಿಳಿದರು, ಮಾನವರಲ್ಲಿ ಮಾನವರಾಗಿ ಜೀವಿಸಿದರು.
ಆದರೆ ಲೋಕವಾದರೋ ಅವರನ್ನು ಅರಿತುಕೊಳ್ಳದೆ ಹೋಯಿತು. (ಯೊವಾನ್ನ ೧:೧೦) ಅವರನ್ನು ತಿರಸ್ಕಾರ ಮಾಡಿತು, ಪರಾಧೀನ ಮಾಡಿ ಹೀನಾಯವಾಗಿ ಶಿಲುಬೆಗೇರಿಸಿತು. ಆದರೆ ಅವರು ತಾವು ಮುಂಚಿತವಾಗಿ ತಿಳಿಸಿದಂತೆ ಮರಣವನ್ನು ನಿರ್ನಾಮ ಮಾಡಿ ಪುನರುತ್ಥಾನರಾದರು. ನಂತರ ಎಲ್ಲಾ ಮುಗಿಯಿತುಎಂದು ನಿರಾಸೆಯಿಂದ ಪರಿತಪಿಸುತ್ತಿದ್ದ ತಮ್ಮ ಪ್ರೇಷಿತರಿಗೆ ನಲವತ್ತು ದಿನಗಳ ಕಾಲ ವಿವಿಧ ರೀತಿಯಲ್ಲಿ ಕಾಣಿಸಿಕೊಂಡು ಅವರನ್ನು ಸಶಕ್ತಗೊಳಿಸಿ, ಅವರ ವಿಶ್ವಾಸವನ್ನು ಸದೃಢಗೊಳಿಸಿ, ಅವರನ್ನು ಮರುರೂಪಿಸಿ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಿಎಂದು ಹೇಳಿ ಪ್ರೇಷಿತರು ನೋಡುತ್ತಿದ್ದಂತೆಯೇ, ಸ್ವರ್ಗಾರೋಹಣರಾದರು (ನೋಡಿ ಪ್ರೇ. ಕಾ. ೧:೯).
ಸ್ವರ್ಗದಿಂದ ಧರೆಗಿಳಿದು ಒಂದಿದ್ದ ಪ್ರಭು ಸ್ವರ್ಗದೆಡೆಗೆ ಪಯಣಿಸಿದರು. ಹೌದು, ನಾನು ಪಿತನಿಂದಲೇ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ಈಗ ಈ ಲೋಕವನ್ನು ಬಿಟ್ಟು ಪಿತನಲ್ಲಿಗೆ ಹೋಗುತ್ತಿದ್ದೇನೆ (ಯೊವಾನ್ನ ೧೬:೨೮). ಪ್ರಭು ಪುನರುತ್ಥಾನದ ನಂತರ ಮರಿಯಳಿಗೆ ಕಾಣಿಸಿಕೊಂಡು ಅದನ್ನು ದೃಢೀಕರಿಸುತ್ತಾರೆ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ, ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆಂದು ತಿಳಿಸು ಎಂದು ಹೇಳಿದರು (ಯೊವಾನ್ನ ೨೦:೧೭).
ಪ್ರಭುಕ್ರಿಸ್ತ ಮಾನವಕುಲದ ರಕ್ಷಣೆಯ ಸೇವೆಯನ್ನು ಈ ವಿಶ್ವದಲ್ಲಿ ಫಲದಾಯಕವಾಗಿ ಸಂಪೂರ್ಣಗೊಳಿಸಿ ಮತ್ತೆ ತಂದೆಯ ಮಹಿಮೆಯ ಬಲಪಾರ್ಶ್ವದಲ್ಲಿ ಆಸೀನರಾಗಿ ಸಮಸ್ತಕ್ಕೂ ಒಡೆಯರಾಗಿದ್ದಾರೆ. ಅವರ ರಾಜ್ಯಭಾರಕ್ಕೆ ಅಂತ್ಯವೇ ಇರದು’. ಅವರು ದೈವ ಯೋಜನೆಯನ್ನು ಸಂಪೂರ್ಣಗೊಳಿಸಿ ಮಾನವಕುಲವನ್ನು ಪುನರ್ ಸ್ಥಾಪಿಸಲು ತಮ್ಮನ್ನೇ ಸರ್ವಾಂಗಹೋಮವಾಗಿ ಸಮರ್ಪಿಸಿದರು. ತಮಗೆಂದು ಅವರು ಏನನ್ನೂ ಹಿಡಿದಿಟ್ಟುಕೊಳ್ಳಲಿಲ್ಲ (ಫಿಲಿಪ್ಪಿ ೨:೬-೧೧). ಎಲ್ಲವನ್ನೂ ಸಮಸ್ತ ಜನತೆಯ ಒಳಿತಿಗಾಗಿ ಮುಡಿಪಾಗಿಟ್ಟಿದ್ದರು.
ಪ್ರಭು ಕ್ರಿಸ್ತ ಈ ಲೋಕಕ್ಕೆ ಬಂದದ್ದು ಸ್ವರ್ಗಸಾಮ್ರಾಜ್ಯವನ್ನು ಸ್ಥಾಪಿಸಲು. ಅದು ಈಗಾಗಲೇ ಪ್ರಾರಂಭವಾಗಿದೆ. ಅದು ಪ್ರೀತಿ ಹಾಗೂ ಸಮಾನತೆಯ ಸಾಮ್ರಾಜ್ಯ. ಮಾನವ-ಮಾನವರ ನಡುವೆ ಇದ್ದ (ಇರುವ) ಭಿನ್ನ ಭೇದಗಳೆಂಬ ಗೋಡೆಗಳನ್ನು ಕೆಡವಿ ಸಾಮರಸ್ಯವನ್ನು ಬಿತ್ತಿ, ಸ್ವಾರ್ಥದ ಬಿರುಕುಗಳನ್ನು ಮುಚ್ಚಿ, ಎಂದೂ ಅಳಿಯದ, ದೈವೀಸ್ನೇಹದ ಅಪ್ಪಟ ಪ್ರೀತಿಯ ಸಾಮ್ರಾಜ್ಯ. ಅದನ್ನು ಸ್ಥಾಪಿಸಲು ಅವರು ಯುದ್ಧಗಳನ್ನು ಮಾಡಲಿಲ್ಲ ಬದಲಾಗಿ ತಮ್ಮ ಪಾಡು, ಮರಣ ಹಾಗೂ ಪುನರುತ್ಥಾನದಿಂದ ಸ್ಥಾಪಿಸಿದ್ದಾರೆ. ಅದು ಈ ಲೋಕದಲ್ಲಿ ರಾಜಮಹಾರಾಜರುಗಳು ಸ್ಥಾಪಿಸಿದಂತಹ ರಾಜ್ಯವಾಗಿರಲಿಲ್ಲ. ಏಕೆಂದರೆ ಈ ಲೋಕದ ಎಲ್ಲಾ ಸಾಮ್ರಾಜ್ಯಗಳಿಗೂ ನಿಕರವಾದ ಎಲ್ಲೆಗಳಿದ್ದವು. ನಿರ್ದಿಷ್ಟ ರಾಜ ಅಥವಾ ಚಕ್ರವರ್ತಿಗಳಿದ್ದರು. ಇಂದು ಇತಿಹಾಸದಲ್ಲಿ ಅವರೆಲ್ಲರೂ ಮಾಯವಾಗಿದ್ದಾರೆ. ಕಾರಣ ಅವರಾರೂ ಅಳಿಯದ ರಾಜ್ಯವನ್ನು ಕಟ್ಟುವ ಕಾಯಕ ಮಾಡಲೇ ಇಲ್ಲ. ಅವರಲ್ಲಿ ದೈವಿರಾಜ್ಯದ ಕನಸೇ ಇರಲಿಲ್ಲ. ಅವರೆಲ್ಲರೂ ತಮ್ಮ ಸ್ವಾರ್ಥದ ಸುಳಿಯಲ್ಲಿ ಸಿಲುಕಿ ತಮ್ಮ ತಮ್ಮ ರಾಜ್ಯಗಳೇ ಅತಿ ಮುಖ್ಯವೆಂದು ಅದನ್ನು ಉಳಿಸಿಕೊಳ್ಳುವುದರಲ್ಲಿಯೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಆದರೆ ಪ್ರಭು ತಮ್ಮ ನಿಸ್ವಾರ್ಥಸೇವೆಯಿಂದ ಪ್ರಾರಂಭದಿಂದಲೇ ದೈವೀ ರಾಜ್ಯವನ್ನು ಕಟ್ಟಲು ಪ್ರಾರಂಭಿಸಿದರು. ಅದು ಅವರ ಪರಮ ಗುರಿಯಾಗಿತ್ತು. ಆ ಕಾರಣ ಆ ರಾಜ್ಯದ ಬಗ್ಗೆ ಸರ್ವಜನತೆಗೆ ಸಾರಿ ಹೇಳಿದರು. ಅದಲ್ಲದೆ ನನ್ನ ಸಾಮ್ರಾಜ್ಯ ಈ ಲೋಕದ್ದಲ್ಲ (ಯೊವಾನ್ನ ೧೮:೩೬) ಎಂದು ಘಂಟಾಘೋಷವಾಗಿ ಜುದೇಯದ ರಾಜ್ಯಪಾಲ ಪಿಲಾತ ಹಾಗೂ ಅಲ್ಲಿ ನೆರೆದ ಜನಸ್ತೋಮದ ಮುಂದೆ ಮುಕ್ತವಾಗಿ ಘೋಷಿಸಿದ್ದರು. ಹಾಗೆಯೇ ಪ್ರಭು ದೈವೀ ರಾಜ್ಯದ ಸತ್ಯಗಳನ್ನು ಬೋಧಿಸಿದರು. ಅದರ ಕಿಚ್ಚನ್ನು ಎಲ್ಲರ ಅಂತರಂಗದಲ್ಲೂ ಹೊತ್ತಿ ಉರಿಯುವಂತೆ ಮಾಡಿದರು. ಅದು ನಿರಂತರವಾಗಿ ಮಾನವರ ಅಂತರಂಗದಲ್ಲಿ ಬೆಳೆಯುವಂತೆಯೂ ಮಾಡಿದರು.
ಕೆಲವರು ಇದನ್ನು ಗ್ರಹಿಸಲು ಪ್ರಯತ್ನಿಸಿದರೆ ಹಲವರು ಇನ್ನೂ ಸಹ ಅವರ ರಾಜ್ಯದಲ್ಲಿ ಯಾರು ಎಡಗಡೆ ಮತ್ತು ಯಾರು ಬಲಗಡೆ ಕುಳಿತುಕೊಳ್ಳುವುದುಎಂದು ಕನಸುಕಾಣುತ್ತಲೇ ಇದ್ದರು. ಯಾಕೆಂದರೆ ಅವರ ಅಂತರಂಗದಲ್ಲಿ ಇನ್ನೂ ಸಹ ಪ್ರಭುವಿನ ಸಂದೇಶ ಮೊಳೆಕೆಯೊಡೆಯುವಷ್ಟು ಫಲವತ್ತಾದ ವಿಶ್ವಾಸವೆಂಬ ಮಣ್ಣಿರಲಿಲ್ಲ. ಅವರ ಅಂತರಂಗ ಲೌಕಿಕ ಆಶಾಪಾಶದಿಂದ ತುಂಬಿತ್ತು. ಅದು ಇಂದಿಗೂ ಸಹ ಸತ್ಯವೇ ಸರಿ!
ಪ್ರಭುವಿನ ಸಾಮ್ರಾಜ್ಯ ಕಾಲಾನಂತರ ಅಳಿದು ಹೋಗುವಂತಹದ್ದಲ್ಲ. ಏಕೆಂದರೆ ಅದು ಬೌತಿಕ ಎಲ್ಲೆಗಳಿಗೆ ಸೀಮಿತವಾದದ್ದಲ್ಲ. ಅದನ್ನು ಕಾಲಗಳಿಂದ ಕಟ್ಟಿಹಾಕಲು ಅಸಾಧ್ಯ, ಅದು ನಿತ್ಯ ನಿರಂತರ ಅಳಿಯದ ಅಮರ ಸಾಮ್ರಾಜ್ಯ. ಆ ಸಾಮ್ರಾಜ್ಯದ ಅರಸ ಅವರೇ. ಅಲ್ಲಿ ಯಾರು ಕ್ರಿಸ್ತನಂತೆ ನಿಸ್ವಾರ್ಥ ಜೀವಿಗಳಾಗಿರುವರೋ ಅವರೆಲ್ಲರಿಗೂ ಪಾಲಿದೆ. ನಾನು ಜಯಗಳಿಸಿ ನನ್ನ ತಂದೆಯೊಡನೆ ಅವರ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೇನೆ. ಅದೇ ಪ್ರಕಾರ ಜಯ ಹೊಂದಿದವನಿಗೆ ನನ್ನೊಡನೆ ನನ್ನ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ ಎಂಬ ವಾಗ್ದಾನವನ್ನು ಮಾಡಿದ್ದಾರೆ (ಪ್ರಕಟನೆ ೩:೨೧).
ಇದು ಮಾನವ ನಿರ್ಮಿತರಾಜ್ಯವಲ್ಲ, ದೈವ ನಿರ್ಮಿತವಾದುದು. ತಾತ್ಕಾಲಿಕವಾದುದಲ್ಲ ಶಾಶ್ವತವಾದುದು. ಈ ರಾಜ್ಯಕ್ಕೆ ಅಳಿವೂ ಇಲ್ಲ, ಅಂತ್ಯವೂ ಇಲ್ಲ. ಇದು ಶಾಂತಿಯ, ಸಮಾನತೆಯ ಸಾಮರಸ್ಯದ ರಾಜ್ಯ. ಈ ರಾಜ್ಯಕ್ಕೆ ಕ್ರಿಸ್ತನೇ ಅಡಿಗಲ್ಲು. ಅವರ ಬೋಧನೆಗಳ ಸಾರವೇ ಶಕ್ತಿ. ಅವರ ಪಾಡು ಮರಣವೇ ಅದರ ಜೀವ. ಅವರ ಪುನರುತ್ಥಾನವೇ ಅದರ ಪ್ರಗತಿಯ ಸಂಕೇತ. ಅವರ ಸ್ವರ್ಗಾರೋಹಣವೇ ನಮ್ಮ ಸ್ವರ್ಗಾರೋಹಣಕ್ಕೆ ನಾಂದಿ. ಆದ್ದರಿಂದ ಕ್ರಿಸ್ತ ನಮ್ಮನ್ನು ಬಿಟ್ಟು ಹೋಗಿಲ್ಲ. ಅವರು ನಮಗಾಗಿ ಸಿದ್ಧಗೊಳಿಸಿರುವ ನೀತಿಯ ಸಾಮ್ರಾಜ್ಯದ ರಾಜ್ಯಭಾರವನ್ನು ವಹಿಸಿಕೊಳ್ಳಲು ಈ ಲೋಕದಲ್ಲಿ ತಂದೆ ದೇವರು ತಮಗೆ ವಹಿಸಿದ್ದ ಯೋಜನೆಯನ್ನು ಸಂಪೂರ್ಣವಾಗಿ ಸಫಲಗೊಳಿಸಿದ್ದಾರೆ. ಈಗ ಅವರು ಸಮಸ್ತಲೋಕದ ಒಡೆಯರಾಗಿ ಹಾಗೂ ನೈಜ ನ್ಯಾಯಾಧಿಪತಿಯಾಗಿ ಸ್ವರ್ಗದಲ್ಲಿ ನಮ್ಮ ಪರವಾಗಿ ಬಿನ್ನಹಿಸುವವರಾಗಿದ್ದಾರೆ. ಅಂತಹ ರಾಜ್ಯದ ಪ್ರಜೆಗಳಾಗುವ ನಾವು ಧನ್ಯರು!


-ಫಾದರ್ ವಿಜಯ್ ಕುಮಾರ್, ಬಳ್ಳಾರಿ

ಐಕಮತ್ಯ


ಇದು ಹಿಂದೆಂದೋ ನಡೆದ ಘಟನೆ. ಅಮೆರಿಕದ ಒಂದು ಆಸ್ಪತ್ರೆಯಲ್ಲಿ ನರ್ಸ್ ಒಬ್ಬಳು, ವೃದ್ಧ ಸ್ತ್ರೀರೋಗಿಯನ್ನು ವೀಲ್ ಚೇರ್ ಮೇಲೆ ಕರೆದೊಯ್ಯುತ್ತಿದ್ದಳು. ಲಿಫ್ಟ್ ಮೂಲಕ ಸಾಗುವಾಗ ಯಾವುದೋ ಒಂದು ಮಹಡಿಯಲ್ಲಿ ಮತ್ತೊಬ್ಬ ನರ್ಸ್ ಜೊತೆಯಾದಳು. ಇಂಡಿಯಾದವರಾದ ಇಬ್ಬರೂ ನರ್ಸುಗಳು ತಮ್ಮದೇ ಭಾಷೆಯಲ್ಲಿ ಗಲಗಲಗಲ ಮಾತಾಡಿಕೊಂಡರು. ಮನಸಾರೆ ಕಿಲಕಿಲ ನಕ್ಕರು. ಆಗೊಮ್ಮೆ ಈಗೊಮ್ಮೆ ಪೇಶೆಂಟ್ ಕಡೆ ನೋಡಿದರು.

ಬಂದಾಕೆಯಾದರೂ ರೋಗಿಹೆಂಗಸಿಗೆ ಹೇಗಿದ್ದೀರಾ, ಬೇಗ ಗುಣಹೊಂದಿ ಅಂತೇನೂ ಹಾರೈಸಲಿಲ್ಲ. ರೋಗಿಗೆ ತಳಮಳವೆನಿಸಿತು. ನರ್ಸುಗಳು ತನಗೆ ತಿಳಿಯದ ಭಾಷೆಯಲ್ಲಿ ಮಾತಾಡಿಕೊಂಡದ್ದು ತನ್ನ ಬಗ್ಗೆಯೇ ಇರಬಹುದು ಎಂದುಕೊಂಡಳು. ಮಾನಸಿಕವಾಗಿ ಆಕೆ ನೊಂದಳು. ದೇಹಾರೋಗ್ಯ ಹದಗೆಟ್ಟಿತು. ಆಕೆ ಕೋರ್ಟಿಗೆ ಅಪೀಲು ಮಾಡಿ ನರ್ಸುಗಳು ತನಗೆ ಅಪಮಾನ ಮಾಡಿದರೆಂದು ನಷ್ಟ ಪರಿಹಾರ ಕೋರಿದಳು. ಕೋರ್ಟು ಆಕೆಯ ವಾದವನ್ನು ಎತ್ತಿ ಹಿಡಿಯಿತು. ರೋಗಿಯ ದುರ್ಬಲ ಮನೋಸ್ಥಿತಿಯ ಸಂದರ್ಭದಲ್ಲಿ ಅವಳೆದುರು ಅರ್ಥವಾಗದಂತೆ ಸಂವಾದಿಸುವುದು ರೋಗಿಗೆ ಅಭದ್ರತೆಯ ಭಾವಮೂಡಿಸುತ್ತದೆ ಎಂದು ಹೇಳಿತು.

ಇನ್ನೊಂದು ಘಟನೆ. ರೇಲ್ವೇ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ನನ್ನ ಹಿರಿಯ ಗೆಳೆಯರೊಬ್ಬರು ಒಮ್ಮೆ ಆತ್ಮೀಯವಾಗಿ ಮಾತಾಡುತ್ತಾ ರೇಲ್ವೇಗೆ ಸೇರಿದ ಜಾಗವೊಂದರಲ್ಲಿ ಸ್ಥಳೀಯರು ಒಂದು ಗುಡಿ ಕಟ್ಟಿಕೊಂಡು ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ವಿವೇಚನೆ ಬಳಸಿ ಮುಸ್ಲಿಮರಿಗೂ ಕ್ರೈಸ್ತರಿಗೂ ಧಾರ್ಮಿಕ ಚಟುವಟಿಕೆಗಳಿಗಾಗಿ ಸ್ಥಳ ನೀಡುವ ಅಧಿಕಾರ ತಮಗಿದೆಯೆಂದೂ, ಚರ್ಚಿನ ಮುಖ್ಯಾಧಿಕಾರಿಗಳ ಪರವಾಗಿ ತಮಗೊಂದು ಪತ್ರ ಬಂದರೆ ಅದರ ಕುರಿತು ಮುಂದುವರಿಯುವುದಾಗಿಯೂ ತಿಳಿಸಿದರು. ಹೀಗೇ ಒಂದು ಸುಮುಹೂರ್ತದಲ್ಲಿ ಆ ಅಧಿಕಾರಿಗೆ ನಮ್ಮಬಿಷಪರನ್ನು ಭೇಟಿ ಮಾಡಿಸಲು ಸಮಯ ಗೊತ್ತು ಮಾಡಲಾಯಿತು. ಸರಿಯಾದ ಸಮಯಕ್ಕೆ ನಾವಲ್ಲಿದ್ದೆವಾದರೂ ನಮಗೆ ಮೊದಲಿದ್ದವರು ಬಿಷಪರ ಬಳಿ ಹತ್ತು ನಿಮಿಷ ಹೆಚ್ಚು ಸಮಯ ತೆಗೆದುಕೊಂಡರು. ಆಮೇಲೆ ನಾವು ಒಳಹೊಕ್ಕು ನಮ್ಮ ಪರಿಚಯ ಹಾಗೂ ಬಂದ ಕಾರಣವನ್ನು ವಿವರಿಸುತ್ತಿದ್ದ ಹಾಗೇ ಬಿಷಪರ ಒಳಬಾಗಿಲಿಂದ ಕನ್ಯಾಸ್ತ್ರೀಯೊಬ್ಬರು ಹಣಕಿ ನೋಡಿ ತಾವು ದೂರದಿಂದ ಬಂದಿರುವುದಾಗಿ ಅವರ ಭಾಷೆಯಲ್ಲಿ ಹೇಳಿಕೊಂಡರು. ಕೂಡಲೇ ನಮ್ಮ ಬಿಷಪರು ಅವರ ಭಾಷೆಯಲ್ಲಿ ತುಂಬಾ ಗೆಲುವಾಗಿ ಆಕೆಯೊಂದಿಗೆ ಮಾತಾಡುತ್ತಾ ಒಳಕೋಣೆಗೆ ಹೊರಟರು. ನಾವಿತ್ತ ಸುಮಾರು ಹೊತ್ತು ಕಾದಿದ್ದೇ ಬಂತು. ಅಷ್ಟರಲ್ಲಿ ಬಿಷಪರ ಆಪ್ತಸಹಾಯಕರಾಗಿದ್ದ ಪಾದ್ರಿಯವರು ಬಂದು ನಿಮ್ಮ ಸಮಯ ಮುಗಿದಿದೆ, ಹೊರಗೆ ಬೇರೆಯವರು ಕಾಯುತ್ತಿದ್ದಾರೆ. ನೀವಿನ್ನು ಹೊರಡಬಹುದು ಎಂದರು. ನಮ್ಮ ಯಾವ ವಿವರಣೆಗೂ ಅವಕಾಶ ಸಿಗಲಿಲ್ಲ. ರೇಲ್ವೇಯ ಆ ಜಾಗವನ್ನು ಪ್ರೋಟೆಸ್ಟೆಂಟ್ ಕ್ರೈಸ್ತರು ಪಡೆದುಕೊಂಡರು.

ವೈಯಕ್ತಿಕ ಹಿತಾಸಕ್ತಿಗಳು ಹೇಗೆ ನಮಗೂ ನಮ್ಮ ಸಂಸ್ಥೆಗೂ ನಷ್ಟವುಂಟುಮಾಡುತ್ತವೆ ಎಂಬುದಕ್ಕೆ ಜ್ವಲಂತ ಉದಾಹರಣೆಗಳಿವು. ಸಂಸ್ಥೆಯೊಂದನ್ನು ಪ್ರತಿನಿಧಿಸುವಾಗ ವೈಯಕ್ತಿಕ ವಾಂಛೆಗಳಿಂದ ದೂರವಿರಬೇಕೆಂಬ ಸಂದೇಶ ಸಾರ್ವತ್ರಿಕ ಮತ್ತು ಸಾರ್ವಕಾಲಿಕ, ಆದರೂ ನಾವು ಕೆಲವೊಮ್ಮೆ ನಮಗರಿವಿಲ್ಲದೇ ಪರಿಸ್ಥಿತಿಯ ಬಲಿಪಶುಗಳಾಗುತ್ತೇವೆ.

ವೈಯಕ್ತಿಕ ವಾಂಛೆಗಳು ದೇವಾಲಯಗಳಂತಹ ಸಾರ್ವತ್ರಿಕ ತಾಣಗಳನ್ನೂ ವಿರೂಪಗೊಳಿಸುತ್ತವೆ, ಇದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಬೆಂಗಳೂರಿನ ವೈಟ್ ಫೀಲ್ಡ್ ಎಂಬ ಹೊರವಲಯದಲ್ಲಿ ಕಳೆದ ನೂರು ವರ್ಷಗಳಿಂದಲೂ ಒಂದು ಪುರಾತನ ಲೂರ್ದುಮಾತೆಯ ದೇವಾಲಯ ಅಲ್ಲಿನಭಕ್ತಾದಿಗಳಿಗೆ ಆಧ್ಯಾತ್ಮಿಕ ನೆಲೆಯಾಗಿದೆ. ಒಂದಾನೊಂದು ಕಾಲದಲ್ಲಿ ಬೆಂಗಳೂರು ದಂಡು ಪ್ರದೇಶದ ಆಂಗ್ಲೋ ಇಂಡಿಯನ್ನರು ತಮಗಾಗಿಯೇ ಒಂದು ಜನವಸತಿ ಪ್ರದೇಶ ಬೇಕೆಂಬ ಬೇಡಿಕೆಯನ್ನು ಮಹಾರಾಜರಲ್ಲಿ ಮುಂದಿಟ್ಟಾಗ ಅವರಿಗೆ ದೊರಕಿದ ವಿಶಾಲ ಭೂಭಾಗವೇ ವೈಟ್ ಫೀಲ್ಡ್. ಅದರಲ್ಲಿ ಅವರು ಕಟ್ಟಿದ ಲೂರ್ದುಮಾತೆಯ ಆಲಯಕ್ಕೆ ಸುತ್ತಮುತ್ತಲಿನ ಕನ್ನಡದ ಒಕ್ಕಲಿನ ಜನರೂ ಬಂದು ಭಾಗವಹಿಸುತ್ತಿದ್ದರು, ಕ್ರಮೇಣ ಆಂಗ್ಲೋಇಂಡಿಯನ್ನರು ಬೇರೆ ದೇಶಗಳಿಗೆ ಗುಳೇ ಎದ್ದ ಮೇಲೆ ಅದೊಂದು ಸಂಪೂರ್ಣ ಕನ್ನಡಮಯ ಗುಡಿಯಾಯಿತು. ಬೆಂಗಳೂರು ಬೆಳೆದ ಹಾಗೆಯೇ ಅದರ ವಸತಿ ನಕ್ಷೆಯೂ ಬದಲಾಗಿ ಹೊಲಗದ್ದೆ ತೋಟಕಾಡುಗಳ ವೈಟ್ ಫೀಲ್ಟ್ ಎಂಬುದು ಕಾಂಕ್ರೀಟು ಕಾಡಾಯಿತು. ಭಕ್ತಾದಿಗಳ ಸಂಖ್ಯೆ ಜಾಸ್ತಿಯಾದ ಹಾಗೆ ಮೊನ್ನೆ ಮೊನ್ನೆ ಪುಟ್ಟ ದೇವಾಲಯದ ಬದಿಯಲ್ಲಿ ದಿವ್ಯವೂ ಭವ್ಯವೂ ಆದ ಬೃಹತ್ ದೇವಾಲಯ ತಲೆಯೆತ್ತಿತು. ದೇವಾಲಯವನ್ನು ಉದ್ಘಾಟಿಸಿದ ಬಿಷಪರು ಖರ್ಚುವೆಚ್ಚಗಳ ಪಟ್ಟಿನೀಡುತ್ತಾ, ಈ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಸಿರೋಮಲಬಾರ್ ಪಂಥದ ಕಥೋಲಿಕರೂ ಇದ್ದು ದೇವಾಲಯ ನಿರ್ಮಾಣವೆಚ್ಚದಲ್ಲಿ ಅವರ ಪಾಲೂ ಇದೆ. ಅವರಿಗೆ ಪ್ರತ್ಯೇಕ ದೇವಾಲಯ ಇಲ್ಲದ ಕಾರಣ ಒಂದು ವೇಳಾವಧಿಯನ್ನು ಅವರ ಪೂಜಾರ್ಪಣೆಗೆ ಮುಕ್ತಗೊಳಿಸಬೇಕೆಂದು ಕೇಳಿಕೊಂಡರು. ಅಲ್ಲದೆ ದೇವಾಲಯದ ಮುಂದೆ ಎಲ್ಲರಿಗೂ ಕಾಣುವ ಹಾಗೆ ಸರ್ಕಾರದ ಆಣತಿಯಂತೆ ಮಾತ್ರವಲ್ಲ ಮಹಾಧರ್ಮಪ್ರಾಂತ್ಯದ ಆಶಯದಂತೆ ಕನ್ನಡ ಮತ್ತು ಇಂಗ್ಲಿಷಿನ ಬೋರ್ಡು ಹಾಕಿದ್ದೀರಿ, ಇವುಗಳ ಹೊರತು ಇನ್ಯಾವುದೂ ಬೇಡ ಎಂದು ತಾಕೀತು ಮಾಡಿದರು, ಆದರೆ ಬಿಷಪರು ಹೋದ ಮೇಲೆ ನಡೆದಿದ್ದೇ ಬೇರೆ. ದೇವಾಲಯದ ಮುಂಬಾಗಿಲ ಮೇಲೆ ಕನ್ನಡ, ಇಂಗ್ಲಿಷುಗಳ ಸಾಲಿನಲ್ಲೇ ಅದೇ ಗಾತ್ರದಲ್ಲಿ ತಮಿಳು ಅಕ್ಷರಗಳೂ ಕಾಣಿಸಿಕೊಂಡವು. ಧರ್ಮಕೇಂದ್ರದ ಗುರುಗಳು ಈ ವಿದ್ಯಮಾನವನ್ನು ಪೆಚ್ಚಾಗಿ ವೀಕ್ಷಿಸಿದರೇ ಹೊರತು ಏನೂ ಮಾಡಲಾಗಲಿಲ್ಲ. ಈ ಕೃತ್ಯದ ಹಿಂದೆ ಧರ್ಮಪ್ರಾಂತ್ಯದ ಕೆಲ ಗುರುಗಳ ಒತ್ತಾಸೆಯೂ ಇತ್ತು. 

ಹಾಗೆ ನೋಡಿದರೆ ಬೆಂಗಳೂರಿನ ದೇವಾಲಯಗಳಲ್ಲಿ ಭಕ್ತಿಪೂರ್ವಕ ಆರಾಧನೆ ಮತ್ತು ಪಾಲುಗೊಳ್ಳುವಿಕೆಗಳಿಗಿಂತ ಭಾಷೆಗಳನ್ನು ಸ್ಪರ್ಧೆ ಎಂಬಂತೆ ಮೆರೆಸುವುದೇ ಒಂದು ಚಟವಾಗಿದೆ. ಹೆಸರಿನ ಹಂಬಲದ ವ್ಯಕ್ತಿಗಳು ಕಟೌಟುಗಳ ಫ್ಲೆಕ್ಸ್ ಬೋರ್ಡುಗಳ ಭರಾಟೆಯನ್ನು ತೋರುವ ತೆರದಲ್ಲಿ ಭಕ್ತಾದಿಗಳು, ಚರ್ಚುಗಳ ಮೇಲೆ ತಮಿಳು ಬ್ಯಾನರುಗಳನ್ನೂ, ಬೋರ್ಡುಗಳನ್ನೂಬರೆಸುವ ಉಮೇದಿನಲ್ಲಿದ್ದಾರೆ. ಸ್ಪರ್ಧೆಯ ಹಾಗೆ ಪೂಜಾ ವೇಳಾಪಟ್ಟಿಯಲ್ಲಿ ಮುಖ್ಯವಾದ ಸ್ಥಾನ ಪಡೆಯುತ್ತಾ, ಪೂಜೆಯನ್ನು ಅಗತ್ಯಕ್ಕಿಂತ ಉದ್ದಗೊಳಿಸುತ್ತಾ, ಉಳಿದ ಪೂಜೆಗಳು ನಡೆವಾಗ ಹೊರಗೆ ನಿಂತು ಕೇಕೆ ಹಾಕಿ ನಗುತ್ತಾ, ಹರಟುತ್ತಾ ಗದ್ದಲವೆಬ್ಬಿಸುತ್ತಾ ಇರುವುದನ್ನು ಕಾಣುವಾಗ ಕ್ರಿಸ್ತಮನಸುಗಳು ಎತ್ತ ಸಾಗುತ್ತಿವೆ ಎಂಬ ಗೊಂದಲ ಕಾಡುತ್ತದೆ.

ಮೂವರು ಒಂದೆಡೆ ಸೇರಿದಾಗ ಅದರಲ್ಲಿ ಇಬ್ಬರು ವ್ಯಕ್ತಿಗಳು ಮೂರನೆಯವನಿಗೆ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿದರೆ ಹೇಗೆ ಎಂಬುದನ್ನು ಮೊದಲೇ ಹೇಳಿದ್ದೇನೆ. ಅದೇ ಸಂದಿಗ್ಧ ಪರಿಸ್ಥಿತಿಯನ್ನು ಇಲ್ಲಿಯೂ ಕಾಣಬಹುದು. ಎಲ್ಲರೂ ಸಮಾನರು ಎಂದು ಸಾರಿದ ಕ್ರಿಸ್ತ ಇಲ್ಲಿ ಮೂಕನಾಗುತ್ತಾನೆ. ಕ್ರಿಸ್ತನಲ್ಲಿ ನೆಮ್ಮದಿ ಅರಸಿ ಬಂದವನು ಗೊಂದಲಕ್ಕೀಡಾಗುತ್ತಾನೆ.


ದೇವರ ದಿನದಂದು ಕ್ರಿಸ್ತುವರೆಲ್ಲರೂ ಒಂದೇ ಬಲಿಪೀಠದ ಸುತ್ತ ಒಟ್ಟುಗೂಡಿ ಒಂದೇ ರೊಟ್ಟಿಯನ್ನು ಮುರಿದು ಒಟ್ಟಿಗೆ ಭುಜಿಸುವ ಪ್ರೀತಿಮಯ ವಾತಾವರಣವನ್ನು ಉತ್ತರ ಇಂಡಿಯಾದ ಅದರಲ್ಲೂ ಈಶಾನ್ಯ ರಾಜ್ಯಗಳ ಕ್ರೈಸ್ತ ಸಮುದಾಯಗಳಲ್ಲಿ ನಿಚ್ಚಳವಾಗಿ ಕಾಣಬಹುದು. ಅದನ್ನು ಅವರು ಪ್ಯಾರಿಶ್ ಮಾಸ್ ಎನ್ನುತ್ತಾರೆ. ಆ ಪ್ಯಾರಿಶ್ ಮಾಸ್ ಗಾಗಿ ಅವರು ಇಪ್ಪತ್ತು ಮೂವತ್ತು ಕಿಲೋಮೀಟರುಗಳಷ್ಟು ದೂರವನ್ನು ಕ್ರಮಿಸಿ ಬಂದಿರುತ್ತಾರೆ.

ಆದರೆ ಬೆಂಗಳೂರಿನಲ್ಲಿ ಹಲವು ಭಾಷಾಪೂಜೆಗಳು ಇರುವುದರಿಂದ ಯಾವುದನ್ನೂ ಪ್ಯಾರಿಶ್ ಮಾಸ್ ಎಂದು ಗುರುತಿಸುವುದಿಲ್ಲ. ಅದಕ್ಕೆ ಕೆಲವರು ಉಡಾಫೆಯಿಂದ ಬೆಂಗಳೂರಿನಂತ ಕಾಸ್ಮೊಪಾಲಿಟನ್ ನಗರದಲ್ಲಿ ಅದು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ. ನನ್ನ ವೃತ್ತಿಕಾರಣದಿಂದ ನಾನು ಬೊಂಬಾಯಿ ನವದೆಹಲಿ ಮುಂತಾದ ನಗರಗಳಿಗೆ ಆಗಿಂದಾಗ್ಗೆ ಪ್ರಯಾಣ ಮಾಡುತ್ತಿರುತ್ತೇನೆ. ಅಲ್ಲೆಲ್ಲ ಭಾನುವಾರದ ಬೆಳಗಿನ ವೇಳೆ ಆರು ಆರೂವರೆ ಗಂಟೆಗೆ ತುರ್ತು ಅಗತ್ಯಗಳಿಗೆ ತೆರಳುವವರಿಗಾಗಿ ಒಂದು ಸಾಧಾರಣ ಪೂಜೆ ಇರುತ್ತದೆ. ಆಮೇಲೆ ಎಂಟು ಎಂಟೂವರೆ ಗಂಟೆಗೆ ಮಕ್ಕಳು ಮುದಕರಾದಿಯಾಗಿ ಧರ್ಮಕೇಂದ್ರದ ಎಲ್ಲರೂ ಪಾಲುಗೊಳ್ಳುವ ಪ್ಯಾರಿಶ್ ಮಾಸ್ ಎಂಬ ಸಾಂಭ್ರಮಿಕ ಪೂಜೆ ನೆರವೇರುತ್ತದೆ. ವಿಪರ್ಯಾಸವೆಂದರೆ ಬೊಂಬಾಯಿ ದೆಹಲಿಗಳೆರಡೂ ಬೆಂಗಳೂರಿಗಿಂತ ದೊಡ್ಡ ಊರುಗಳು. ಅಲ್ಲಿ ಸಾಧ್ಯವಾಗುವುದು ಬೆಂಗಳೂರಿಗೇಕೆ ಸಾಧ್ಯವಾಗುವುದಿಲ್ಲ?

ಈ ಒಂದು ಪ್ಯಾರಿಶ್ ಮಾಸ್ ಅಥವಾ ಸಮುದಾಯ ಒಗ್ಗೂಡುವಿಕೆಗೆ ಅನುವು ಮಾಡಿಕೊಡುವ ಸಲುವಾಗಿ ಆಯಾ ಧರ್ಮಕೇಂದ್ರದ ವ್ಯಾಪ್ತಿಯಲ್ಲಿನ ಕಾನ್ವೆಂಟುಗಳ ಮಠಗಳ ಹಾಗೂ ಉಪಕೇಂದ್ರಗಳ ಪೂಜೆಗಳನ್ನು ರದ್ದುಪಡಿಸಿ ಎಲ್ಲರನ್ನೂ ಒಂದೇ ಬಲಿಪೀಠದತ್ತ ಬರಮಾಡಬೇಕೆಂದು ದ್ವಿತೀಯ ವ್ಯಾಟಿಕನ್ ಸುಧಾರಣಾ ನಿರ್ಣಯಗಳು ಒತ್ತಿ ಹೇಳುತ್ತವೆ. ಆದರೆ ದೇವಾಲಯದ ಬದಿಯಲ್ಲೇ ಇರುವ ಬೆಂಗಳೂರಿನ ಕೆಲ ಕಾನ್ವೆಂಟುಗಳು ತಮ್ಮ ಸಂನ್ಯಾಸಿನಿಯರನ್ನು ಜನರ ಜೊತೆ ಬೆರೆಯಲು ಬಿಡುವುದೇ ಇಲ್ಲ. ಅವುಗಳ ಮೇಲೆ ಸ್ಥಳೀಯ ಧರ್ಮಗುರುಗಳಿರಲಿ ಸ್ವತಃ ಬಿಷಪರೂ ಅಧಿಕಾರ ಚಲಾಯಿಸಲಾಗುವುದಿಲ್ಲ. ಕೇಳಿದರೆ ಆ ಕಾನ್ವೆಂಟಿನವರು ತಮ್ಮದು ಪೊಂಟಿಫಿಕಲ್ ಕಾನ್ವೆಂಟು ಅಂದರೆ ಪೋಪರ ಅಧೀನದ್ದು, ಆದ್ದರಿಂದ ಬಿಷಪರ ಮಾತು ನಮಗೆ ಅನ್ವಯಿಸುವುದಿಲ್ಲ ಎನ್ನುತ್ತಾರೆ.

ಬೆಂಗಳೂರಿನ ರಾಜಾಜಿನಗರದಲ್ಲಿ ಸಂನ್ಯಾಸಿಗಳ ಮಠವೊಂದರ ಮುಖ್ಯಪೀಠವಿದೆ. ಆ ಮಠವು ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯ ಹಾಗೂ ರಾಜಾಜಿನಗರದ ಸ್ವರ್ಗಸ್ವೀಕೃತ ಮಾತೆಯಾಲಯಕ್ಕೆ ಸಮಾನ ದೂರದಲ್ಲಿದೆ. ಆದರೂ ಆ ಮಠದವರು ತಮ್ಮ ಮಠದಲ್ಲಿಯೇ ಪೂಜೆ ಏರ್ಪಡಿಸಿಕೊಳ್ಳುತ್ತಾರೆ. ಹೊರಗಿನ ಸಮಾಜದಲ್ಲಿ ಅವರು ಗುರುತಿಸಿಕೊಳ್ಳುವುದೂ ಇಲ್ಲ, ಆಧ್ಯಾತ್ಮಿಕ ಪೋಷಣೆ ನೀಡುವುದೂ ಇಲ್ಲ. ಅಚ್ಚರಿಯೆಂದರೆ ಅವರು ಈ ಎರಡೂ ಧರ್ಮಕೇಂದ್ರಗಳಿಗೆ ಸೇರಿದ ಕೆಲ ಕೊಂಕಣಿ ಭಾಷಿಕ ಹೆಂಗಸರನ್ನು ಆಹ್ವಾನಿಸಿ ಕೊಂಕಣಿಯಲ್ಲಿ ಪೂಜೆ ಅರ್ಪಿಸುತ್ತಾರೆ. ಇದನ್ನು ಧರ್ಮಪೋಷಣೆ ಎನ್ನಬೇಕೋ, ತೀಟೆ ತೆವಲು ಎನ್ನಬೇಕೋ?

ಕ್ರಿಸ್ತನಲ್ಲಿ ಎಲ್ಲರೂ ಒಂದಾಗಬೇಕು ಎಂಬ ಆಶಯ ಇಂದು ಮರೆಯಾಗಿ ನಾವೆಲ್ಲ ಕ್ರಿಸ್ತನನ್ನು ಮರೆತು ವಿವಿಧ ಭಾಷೆಗಳ ಪೂಜೆಗಳಾಗಿ ವಿಂಗಡಿಸಿಕೊಂಡು ವಿಘಟನೆಯಲ್ಲಿ ವಿಕೃತಾನಂದ ಕಾಣುತ್ತಿದ್ದೇವಾ?


ಸಿ ಮರಿಜೋಸೆಫ್ - 

ಭೂಮಿ ಮುನಿಸಿಕೊಂಡರೆ ವಿಶ್ವವೇ ನಾಶವಾಗಲಿದೆ - ಎಚ್ಚರಿಕೆ

(ಪ್ಲಾಸ್ಟಿಕ್ ಮುಕ್ತ ಭೂಮಿ)

ನಮ್ಮ ಭೂತಾಯಿಯನ್ನು ಸಂರಕ್ಷಿಸುವ ಉನ್ನತ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಪರಿಸರವನ್ನು ಸಂರಕ್ಷಿಸಿಕೊಳ್ಳುವ ಅನಿವಾರ್ಯತೆಯ ಸೂಕ್ಷ್ಮತೆಯನ್ನು ಸಹ ನಮಗೆ ತಿಳಿಸಲಾಗಿದೆ. ಪರಿಸರವನ್ನು ನಮ್ಮ ಸ್ವಾರ್ಥಕ್ಕಾಗಿ ನಾಶಮಾಡುತ್ತಿದ್ದೇವೆ. ಹೌದು ಪ್ರಕೃತಿದತ್ತ ನೈಸರ್ಗಿಕ ಸಂಪನ್ಮೂಲವನ್ನು ದುರಾಸೆಗೆ ನಾಶ ಮಾಡಲಾಗುತ್ತಿದೆ. ಭೂಗರ್ಭದಿಂದ ಖನಿಜ ಸಂಪತ್ತನ್ನು ಅಕ್ರಮವಾಗಿ ತೆಗೆದು ಮಾರಾಟ ಮಾಡಲಾಗುತ್ತಿದೆ. ಅಂತರ್ಜಲ ಪಾತಾಳಕ್ಕೆ ಕುಸಿದು ಕಲುಷಿತಗೊಂಡಿದೆ. ನದಿಮೂಲಗಳು ಬತ್ತಿವೆ. ವಾತಾವರಣವು ಏರುಪೇರಾಗಿ ಉಷ್ಣಾಂಶ ಏರುತ್ತಲೇ ಇದೆ. ಭೂಮಿ ಮುನಿಸಿಕೊಂಡರೆ ವಿಶ್ವವೇ ನಾಶವಾಗಲಿದೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು.
ಮೊನ್ನೆ ನನ್ನ ಗೆಳೆಯ ಒಂದು ವೀಡಿಯೊ ಕಳುಹಿಸಿದ. ಅದು ಒಂದು ಸರಳವಾದ ಕಥೆಯ ಮೂಲಕ ಪರಿಸರದ ಸಂರಕ್ಷಣೆಯ ಸೂಕ್ಷ್ಮತೆಯನ್ನು ತಿಳಿ ಹೇಳುತ್ತದೆ. ನದಿಯ ಪಕ್ಕದಲ್ಲಿ ಒಂದು ಮನೆ. ಮನೆಗೆ ಬೇಕಾದ ನೀರಿನ ಪೂರೈಕೆ ನದಿಯಿಂದಲೇ. ನದಿಯು ಮಾಲಿನ್ಯಗೊಳ್ಳದೆ ಪರಿಶುದ್ಧವಾದ ನೀರಿನಿಂದ ತುಂಬಿ ಹರಿಯುತ್ತಿದೆ. ಮನೆಯ ಯಜಮಾನ ತನ್ನ ಸ್ನಾನದ ಕೋಣೆಯಲ್ಲಿ ನದಿಯಿಂದ ಸರಬರಾಜು ಅಗುವ ಸ್ವಚ್ಚ ನೀರಿನಿಂದ ಉಲ್ಲಾಸದಿಂದ ಸ್ನಾನ ಮಾಡಿಕೊಳ್ಳುತ್ತಿದ್ದಾನೆ. ನಂತರ ದಿನಗಳಲ್ಲಿ ಈ ಮನುಷ್ಯ ತನ್ನ ತ್ಯಾಜ್ಯ ವಸ್ತುಗಳನ್ನು ಕಸಕಡ್ಡಿಗಳನ್ನು, ಹಾಳು ಪ್ಲಾಸ್ಟಿಕ್ ವಸ್ತುಗಳನ್ನು ನದಿಗೆ ಬಿಸಾಡಿ, ಆ ನದಿಯನ್ನು ಕಲುಷಿತಗೊಳಿಸುತ್ತಾನೆ. ನದಿಯು ಮಲಿನ ವಸ್ತುಗಳಿಂದ ತುಂಬಿ ಹೋಗುತ್ತದೆ. ಕೊನೆಗೆ ಅದೇ ಮನುಷ್ಯ ಎಂದಿನಂತೆ ತನ್ನ ಸ್ನಾನದ ಕೋಣೆಗೆ ಹೋಗಿ ಸ್ನಾನಮಾಡಲು ಶವರ್ ಅನ್ ಮಾಡುತ್ತಿದ್ದಂತೆ ತನ್ನ ಕೈಯಾರೆ ನದಿಗೆ ಬಿಸಾಡಿದ ತ್ಯಾಜ್ಯ ವಸ್ತುಗಳೇ ಅವನ ಮೇಲೆ ಬೀಳಲು ಮನುಷ್ಯನು ಕುರೂಪಿಯಾಗುತ್ತಾನೆ. ಹೌದು ಇದೊಂದು ಸರಳವಾದ ಕಥೆಯಾದರೂ ಅದರಲ್ಲಿ ಗಾಢವಾದ ಅರ್ಥವಿದೆ. ಮಾಡಿದ್ದುಣ್ಣೋ ಮಹಾರಾಯ ಎಂದು ತಿಳಿ ಹೇಳುವ ಪಾಠವಿದು.
ವಿಶ್ವಸಂಸ್ಥೆ ಪ್ರತಿವರ್ಷ ಪರಿಸರ ಉಳಿವಿಗೆ ನಿರ್ದಿಷ್ಟ ವಿಚಾರದ ಮೇಲೆ ಅಭಿಯಾನ ಆರಂಭಿಸುತ್ತದೆ. ಈ ಬಾರಿ ಪ್ಲಾಸ್ಟಿಕ್ ಮುಕ್ತ ಭೂಮಿ ಎಂಬ ಘೋಷವಾಕ್ಯದಡಿ ಪರಿಸರ ಕಾಳಜಿಗೆ ಕರೆ ನೀಡಿದ್ದು ನಾವೆಲ್ಲರೂ ಕೈಜೋಡಿಸೋಣ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ವಸ್ತುಗಳನ್ನು ನಿರ್ಮೂಲನೆ ಮಾಡುವ ಮೂಲಕ ನಾವೆಲ್ಲರೂ ಭೂಮಿಯನ್ನು ಉಳಿಸಿಕೊಳ್ಳೋಣ.
ಇದಕ್ಕೆ ಪೂರಕವೆಂಬಂತೆ ಡಾ. ಮಹಾಂತೇಶ ಪಾಟೀಲರವರು ಬರೆದ ಮರದ ಹಕ್ಕಿ ಎಂಬ ಕವನ ಮನಮುಟ್ಟುತ್ತದೆ.
ನಾವು ಮನೆಕಟ್ಟುವ ಬದಲು
ಮರ ನೆಟ್ಟಿದ್ದರೆ
ಹತ್ತಾರು ಹಕ್ಕಿಗಳಾದರೂ
ಗೂಡು ಕಟ್ಟುತಿದ್ದವು

ಚಿಗುರುವ ಚೈತ್ರವ ಕಂಡು
ಮುಪ್ಪಾದರೂ ಮುಂದೂಡಬಹುದಿತ್ತು

ಜೀವ ಪಡೆಯಬಹುದಿತ್ತು ನೆಮ್ಮದಿಯ
ಹಕ್ಕಿಗಳ ಸ್ವಚ್ಛಂದ ನೋಡಿಯಾದರೂ.

ಸಾವ ಮರೆಯಬಹುದಿತ್ತು ನಾವು
ಹಕ್ಕಿಗಳ ಕಲರವ ಕೇಳಿಯಾದರೂ..

ಮರುಭೂಮಿ ಕಾಡಾಗಬಹುದಿತ್ತು ಇಂದಿಗೆ
ಹಕ್ಕಿಗಳ ಹಾಗೆ ಬೀಜ ಬಿತ್ತಿದ್ದರೆ.

ಒಂದೇ ಒಂದು ಸಲ ಮರವಾಗಿದ್ದರೆ
ನಾವು ಮನುಷ್ಯರಾಗಬಹುದಿತ್ತು.
ಫಾ. ಚಸರಾ ಹೇಳುವಂತೆ ಜೀವಾತ್ಮನ ಹೊರರೂಪವೇ ಈ ಸೃಷ್ಟಿಯ ಸಂಕುಲ. ಆತನ ಉಸಿರೊಂದಿಗೆ ಇದು ಜೀವ ಸಂಕುಲವಾಯಿತು. ಈ ಜೀವ ಸಂಕುಲದ ಮೇರು ಕೃತಿ ಮನುಷ್ಯನಾದ್ದರಿಂದ ಅವನ ಜವಾಬ್ದಾರಿಗೆ ಈ ಜೀವ ಸಂಕುಲವನ್ನು ನೀಡಲಾಯಿತು. ಸ್ವಾರ್ಥ ಹಿತವೇ ಮನುಷ್ಯನ ಮೂಲ ಮಂತ್ರವಾದ್ದರಿಂದ ಈ ಮನುಷ್ಯ ಜವಾಬ್ದಾರಿಯನ್ನು ಒಡೆತನವೆಂದು ಭಾವಿಸಿದ. ಈ ಜೀವ ಸಂಕುಲವನ್ನು ತನ್ನ ಸುಖಕ್ಕೆ ಏಣಿಯಾಗಿಸಿಕೊಂಡ. ತನ್ನ ದುಷ್ಟತೆಯನ್ನು ಶುದ್ಧ ಸಂಕುಲಕ್ಕೆ ಲೇಪಿಸಿದ ಜೀವ ಸಂಕುಲ ಕಲುಷಿತಗೊಂಡಿತು. ಕದಡಿದ ನೀರು ಕೆಸರಾಯಿತು.
ಹೌದು ,ಈ ಜೀವ ಸಂಕುಲದ ಮರುಶುದ್ಧತೆಗೆ ಮನುಷ್ಯರಾದ ನಾವು ಸ್ವಾರ್ಥಬಿಟ್ಟು ಇಡೀ ಜೀವಸಂಕುಲದ ಜೊತೆ ಸಂಧಾನ ಮಾಡಿಕೊಳ್ಳಬೇಕಾದ ಅವಶ್ಯಕತೆ ನಮಗಿದೆ. ಇಲ್ಲದಿದ್ದಲ್ಲಿ ಮನುಷ್ಯನಿಗೆ ಉಳಿಗಾಲವಿಲ್ಲ. 
-ಆನಂದ್ -

ಪುಸ್ತಕ ಪ್ರೀತಿ


ವಿಶ್ವ ಪುಸ್ತಕ ದಿನ ಅಂದ್ರೆ ಪುಸ್ತಕಗಳ ಹಬ್ಬ, ಲೇಖಕ/ಕಿಯರ ಸಂಭ್ರಮ ಮುಖ್ಯವಾಗಿ ಓದಿನ ಸಂಭ್ರಮ. ಹೌದು ಓದು ಎಂದರೇನು? ಇದು ಒಂದು ಮೂರ್ಖತನದ ಪ್ರಶ್ನೆ ಎನ್ನಿಸಬಹುದು. ಎಷ್ಟೋ ಜನರಿಗೆ ಓದುಗಾರಿಕೆ ಅಥವಾ ಓದುವಿಕೆ ಎಂದರೆ ಏನು ಎಂಬ ಪ್ರಶ್ನೆಗೆ ಉತ್ತರವೇ ಗೊತ್ತಿರುವುದಿಲ್ಲ. ಓದು ಅಂದ್ರೆ ಒಂದು ಜ್ಞಾನೇಂದ್ರಿಯಗಳ ಹಾಗೂ ಮಾನಸಿಕ ಪ್ರಕ್ರಿಯೆ. ಮನುಷ್ಯನನ್ನು ಚೈತನ್ಯಗೊಳಿಸುವ ಭಾವನೆ, ಗಾಢ ಯೋಚನೆಗೆ ಹಚ್ಚುವ ಪ್ರಕ್ರಿಯೆ. ಅದ್ದರಿಂದ ಓದುವುದು ಒಂದು ಯೋಚನಾ ಹಾಗು ಕಲಿಕಾ ಕ್ರಿಯೆ. ಓದು ಒಬ್ಬನನ್ನು ಸ್ವ-ಜ್ಞಾನಕ್ಕೆ ಅನುವು ಮಾಡಿಕೊಡುವುದರ ಮೂಲಕ ಜ್ಞಾನಿಯಾಗಿಸುತ್ತದೆ. ನಾವು ಓದುವುದಿಲ್ಲವೆಂದರೆ ನಾವು ಯೋಚಿಸುವುದಿಲ್ಲ, ನಗಾಡುವುದಿಲ್ಲ ಕೊನೆಗೆ ಬದುಕುತ್ತಿಲ್ಲವೆಂದೇ ಅರ್ಥ. ಓಟ್ಟಾರೆ ಓದು ಅರ್ಥಗ್ರಹಿಕೆ ಹಾಗೂ ಸಂವೇದನಾ ಮತ್ತು ಸಂವಹನ ಕ್ರಿಯೆ.
ಪುಸ್ತಕವು ಜ್ಞಾನ ಸಂಪಾದನೆಯ ಮಾಧ್ಯಮ. ಮಾಹಿತಿಗಳ ಭಂಡಾರ. ಐತಿಹಾಸಿಕ ದಿನಚರಿ. ಒಬ್ಬನನ್ನು ಯೋಚಿಸಲು, ಭಾವಿಸಲು, ಅನುಭವಿಸಲು, ಕಲ್ಪಿಸಿಕೊಳ್ಳಲು ಸಹಾಯ ಮಾಡುವುದೇ ಈ ಪುಸ್ತಕಗಳು. ಒಂದು ಪುಸ್ತಕವನ್ನು ಕೈಯಲ್ಲಿ ಇಟ್ಟುಕೊಂಡು ಅದನ್ನು ಓದುತ್ತಾ ಕೂತಲ್ಲೇ ಸಾವಿರಾರು ಮೈಲಿಗಳ ದೂರ ಕ್ರಮಿಸಬಿಡಬಹುದು. ಹೌದು ಪುಸ್ತಕಕ್ಕೆ ಕಲಿಸುವ, ಮಾರ್ಗದರ್ಶನ ಮಾಡುವ, ನಗಿಸುವ, ಅಳಿಸುವ, ಪರಿವರ್ತಿಸುವ, ಬದಲಾಯಿಸುವ, ಕಲ್ಪಿಸುವ ಶಕ್ತಿ ಇದೆ. ಈ ಸಾರಿ ವಿಶ್ವ ಪುಸ್ತಕದಿನದ ಅಂಗವಾಗಿ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನು ಕೈಯಲ್ಲಿಡಿದು ಓದಲಾರಂಭಿಸಿ, ಪೂರ್ತಿಯಾಗಿ ಓದಿ ಮುಗಿಸುವ ತನಕ ಆ ಪುಸ್ತಕ ನನ್ನ ಕೈಗಳ ಬಿಡಲಿಲ್ಲ. ಅಂತಹ ಕುತೂಹಲಕಾರಿ ಪುಸ್ತಕ ಅದು. ಓದಿದ ನಂತರ ಆ ಪುಸ್ತಕವನ್ನು ಓದಿದ ಇತರರ ಅನುಭವಗಳೇನು ಎಂಬ ಪ್ರಶ್ನೆಯೊಂದಿಗೆ ಗೂಗಲು ಮಾಡಿದಾಗ ಆ ಕಾದಂಬರಿಯ ಬಗ್ಗೆ ಬರೆದ ಅನೇಕ ಲೇಖನಗಳು ಕಂಡು ಬಂದವು. ಅವುಗಳಲ್ಲಿ ಪ್ರಶಾಂತ್ ಇಗ್ನೇಶಿಯಸ್ ಹೊನಲು‍ಗೆ ಬರೆದ ಒಂದು ಲೇಖನವು ನನ್ನ ಕಣ್ಣಿಗೆ ಬಿತ್ತು. ಆ ಲೇಖನವನ್ನು ಓದುತ್ತಿದ್ದಂತೆ ಕೆಲವೊಂದು ಅವರ ಅಭಿಪ್ರಾಯಗಳು, ಅನಿಸಿಕೆಗಳು, ಹೊಳಹುಗಳು ನನ್ನ ಅನುಭವಗಳಷ್ಟೇ ತಾಜಾವಾಗಿದವು. ಅದಕ್ಕಾಗಿ ಆ ಲೇಖನವನ್ನು ನಿಮ್ಮ ಓದಿಗೆ ಇಲ್ಲಿ ಕೊಡುತ್ತಿದ್ದೇನೆ. ಓದಿ ಆನಂದಿಸಿ ಮೂಲ ಪುಸ್ತಕವನ್ನು ಓದಲು ಮರೆಯಬೇಡಿ. ಬನ್ನಿ ಪುಸ್ತಕಗಳನ್ನು ನಮ್ಮ ಸಂಗಾತಿಯಾಗಿಸಿಕೊಳ್ಳೋಣ.
ಕರ್ವಾಲೊ ಒಂದು ಸೀಳುನೋಟ (ಹೊನಲು·-09-2013)
ನಾನುಮೂಡುಗೆರೆಜೇನು ಸೊಸಯ್ಟಿಯ ಬಾಗಿಲುಗಳನ್ನು ತಳ್ಳಿ ಒಳಗೆ ಪ್ರವೇಶಿಸಿದಾಗ.." ಎಂದು ಪ್ರಾರಂಭವಾಗುವ ತೇಜಸ್ವಿಯವರಕರ್ವಾಲೊಕಾದಂಬರಿಯ ಮೊದಲ ಸಾಲುಗಳಲ್ಲೇ ಒಂದು ರೀತಿಯ ಗೊಂದಲ ಮೂಡುತ್ತಿತ್ತು. ಹಾಗೇ ನೋಡಿದರೆತೇಜಸ್ವಿಯವರ ಕಾದಂಬರಿ, ಕತೆಗಳನ್ನು ಅದರ ಮೊದಲ ಸಾಲು, ಪುಟ ಅತವಾ ಅಧ್ಯಾಯದಿಂದ ಅಳೆಯಲಾಗದು. ಎಲ್ಲಿಯೋ ಅರಂಭವಾಗಿ ಯಾವುದೇ ಅನಗತ್ಯ ತಿರುವುಗಳಿಲ್ಲದೆ, ಹಂತ ಹಂತವಾಗಿ ಅಚ್ಚರಿಗೊಳಿಸುತ್ತ ಮತ್ತೆಲ್ಲಿಯೋ ಹೋಗಿ ಮುಟ್ಟುವ ಪರಿ ಅವರ ಓದುಗರಿಗೆ ಪರಿಚಿತವೇ. ಆದರೂ ಹಾರುವ ಓತಿಯ ಹುಡುಕಾಟದ ಬಗೆಗಿನ ಕಾದಂಬರಿ ಎಂದು ಗೊತ್ತಿತ್ತಾದರಿಂದ, ಕರ್ವಾಲೊ ಎಂಬ ವಿಚಿತ್ರ ಹೆಸರು ಯಾರದು? ಇದ್ಯಾವುದೋ ಕ್ರಾಂತಿಕಾರಿ ವ್ಯಕ್ತಿಯ ಹೆಸರಿರಬಹುದೇ, ಹಾರುವ ಓತಿಗೂ ಮೂಡುಗೆರೆಗೂ ಎಲ್ಲಿಯ ಸಂಬಂಧ, ಅದು ಕಾಡಿನ ಸಾಹಸ ಕತೆಯಾದರೆ ಅದಕ್ಕೂ ಮೂಡುಗೆರೆ ಜೇನು ಸೊಸಯ್ಟಿಗೂ ಯಾವ ನಂಟು ಎಂಬುದರಲ್ಲೇ ಕರ್ವಾಲೋ ಓದುವುದನ್ನು ಬೇಕಂತಲೇ ಮುಂದೂಡತ್ತಲೇ ಬಂದಿದ್ದೆ.
ಪೂರ್ಣ ಚಂದ್ರ ತೇಜಸ್ವಿಯವರುಕುವೆಂಪುರವರ ಮಗ ಎಂದು ತಿಳಿದಿತ್ತಾದರೂ ಅವರ ಬರಹಗಳ ಪರಿಚಯ ಆಗಿದ್ದುಲಂಕೇಶ್ ಪತ್ರಿಕೆಯಲ್ಲಿನ 'ಆಣ್ಣನ ನೆನಪು' ಅಂಕಣದಿಂದಾಗಿಯೇ. ಆಗ ಲಂಕೇಶ್ ಪತ್ರಿಕೆ ಬಹಳ ಜನಪ್ರಿಯವಾಗಿದ್ದರೂ ಅದರಲ್ಲಿ ನನ್ನಂತವನಿಗೆ ಅರ್ಥವಾಗುತ್ತಿದ್ದದ್ದು, ನೀಲು ಚುಟುಕುಗಳು, ಸಿನಿಮಾ, ಅನಂತ್ ನಾಗ್‍ರ 'ನನ್ನ ತಮ್ಮ ಶಂಕರ', ಅಣ್ಣನ ನೆನಪು ಇಂತ ಅಂಕಣಗಳು ಮಾತ್ರವೇ. ಅಲ್ಲಿಂದಲೇ ತೇಜಸ್ವಿಯವರ ಬರಹಗಳ ಬಗ್ಗೆಯೂ ಒಂದು ಕುತೂಹಲ ಮೂಡಿತು. ಕುತೂಹಲದಿಂದಾಗಿ ಮುಂದೆ ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಕಿರುಗೂರಿನ ಗಯ್ಯಾಳಿಗಳು ಮುಂತಾದ ಪುಸ್ತಕಗಳು ಓದುವಂತೆಯೂ ಆಯಿತು. ಮತ್ತೊಂದು ಪುಸ್ತಕದಲ್ಲಿ ತಮ್ಮ ಮನೆಯ ಬಳಿ ಹಾವೊಂದು ಕಪ್ಪೆಯನ್ನು ನುಂಗಿ, ಅದರ ಭಾರಕ್ಕೆ ಮುಂದೆ ಸಾಗಲಾರದೆ ಸಣ್ಣ ಪಕ್ಷಿಯೊಂದಕ್ಕೆ ಆಹಾರವಾಗುವ ಪ್ರಸಂಗವನ್ನು ತೇಜಸ್ವಿ ಎಷ್ಟು ಅದ್ಭುತವಾಗಿ ವರ್ಣಿಸಿದ್ದಾರೆಂದರೆ ಅವರ ಎಲ್ಲಾ ಬರಹಗಳನ್ನೂ ಓದಬೇಕೆಂಬ ಆಸೆ ಬೆಳೆಯಿತು. ಅದರೂ ಎಲ್ಲರೂ ಕ್ಲಾಸಿಕ್ ಎಂದೇ ಕರೆಯುತ್ತಿದ್ದ 'ಕರ್ವಾಲೊ' ಓದಲು ಮನಸ್ಸಾಗಿರಲಿಲ್ಲ.
ಒಂದಷ್ಟು ಪುಟಗಳನ್ನು ಓದಿ ಬಿಟ್ಟಿದ್ದ ಅದನ್ನು ಓದಲು ಮತ್ತೆ ಶುರು ಮಾಡಿದ್ದೊಂದೆ ನೆನಪು. ಹೇಗೆ ಮುಗಿಯಿತೋ ಕಾಣೆ. ಕರ್ವಾಲೊ ಒಂದು ಹೊಸ ಜಗತ್ತನ್ನೆ ತೆರೆದಿಟ್ಟಂತೆ ಆಯಿತು ಎಂಬುದು ನಿಜವಾದರೂ, ಅದಕ್ಕಿಂತ ಮುಖ್ಯವಾಗಿ ಕಾದಂಬರಿಯಲ್ಲಿ ಅಷ್ಟೇನೂ ಮುಖ್ಯವಲ್ಲದ   ಎಷ್ಟೋ ಸಣ್ಣ ಸಣ್ಣ ಪ್ರಶ್ನೆಗಳಿಗೆ ಉತ್ತರ ದೊರಕುತ್ತಾ ಹೋಯಿತು. ಇನ್ನು ಕಾದಂಬರಿಗೆ ಕರ್ವಾಲೊ ಎಂಬ ಹೆಸರು ಇದೆಯಾದರೂ ಅಲ್ಲಿನ ಯಾವ ಪಾತ್ರದ ಹೆಸರನ್ನು ಇಟ್ಟರೂ ಸರಿಯೇ ಎಂಬಷ್ಟು ಎಲ್ಲಾ ಪಾತ್ರಗಳೂ ಲೀಲಾಜಾಲವಾಗಿ ನಮ್ಮನ್ನು ಅವರಿಸಿಕೊಳ್ಳುತ್ತವೆ. ಜಗತ್ತಿನ ವಿಕಸನದ ರಹಸ್ಯದ ಅಧ್ಯಾಯವೊಂದನ್ನು ತನ್ನಲ್ಲೇ ಇಟ್ಟುಕೊಂಡು ಅದರ ಬಗ್ಗೆ ಯಾವುದೇ ಅರಿವಿಲ್ಲದಂತೆ ಬಾಳುತ್ತಿರುವ ಓತಿ, ಅದನ್ನು ಹುಡುಕಿಕೊಂಡು ಹೊರಟವರಲ್ಲಿನ ಅದೇ ನಿರ್ಭಾವ, ಕರ್ವಾಲೊಗೆ ಮಾತ್ರ ತಿಳಿದಿರುವ ಅದರ ಮಹತ್ವ, ಆದರೂ ಅವರು ತೋರುವ ಸಂಯಮ,ಮಂದಣ್ಣ ಬೇಜವಾಬ್ದಾರಿ, ಬಿರಿಯಾನಿ ಕರಿಯಪ್ಪನ ರಸಿಕತನ, ನಾಯಿ 'ಕಿವಿ' ನಾಯ್ತನ(?), ಸ್ವತಃ ತೇಜಸ್ವಿಯವರ ಉತ್ಸಾಹ, ಹಾಸ್ಯ, ಹತಾಶೆ, ಬೇಸರ, ಪ್ರಭಾಕರನ ಪ್ರಜ್ಞೆ, ಕೆಲಸದಾಳುಪೀರ ಮುಗ್ಧತೆ, ಮೂಡುಗೆರೆಯಂತ ಊರುಗಳಲ್ಲಿನ, ಕಾಡುಗಳಲ್ಲಿನ ಭಾರತ, ಎಲ್ಲವೂ ಓದುಗನ ಭಾವಪ್ರಪಂಚದಲ್ಲಿ ಲೀನವಾಗುತ್ತಾ ಹೋಗುವ ಪರಿಯಿಂದಾಗಿಯೇ ಕರ್ವಾಲೋ ಏಕೆ ಕನ್ನಡ ಸಾಹಿತ್ಯದಲ್ಲಿ ಒಂದು ಆಪ್ತ ಹೆಸರು ಎಂಬ ಸತ್ಯ ಅರಿವಾಗುತ್ತದೆ. ಹುಡುಕುವ ಪಯಣದ ರೋಮಾಂಚನದಲ್ಲಿ ಮುಳುಗಿ ಏಳುವ ಓದುಗನಿಗೆ ಓತಿ ಸಿಕ್ಕರೂ ಸಿಕ್ಕದಿದ್ದರೂ ನಿರಾಸೆಯಂತೂ ಆಗುವುದಿಲ್ಲ.
ಕಾದಂಬರಿಯಲ್ಲಿ ಮೂಡುಗೆರೆಯಂತ ಊರುಗಳ, ಜನರ ಬವಣೆಗಳ ವಿವರಗಳ ಜೊತೆಗೆ ಕಾಡಿನ ಅಗಾಧತೆ, ಅನಂತತೆಯ ಬಗೆಗಿನ ವಿವರಗಳು ಆಶ್ಚರ್, ಭಯ, ರೋಮಾಂಚನ ಎಲ್ಲವನ್ನೂ ಉಂಟು ಮಾಡುತ್ತದೆ. ತೇಜಸ್ವಿಯವರು ಮೂಡುಗೆರೆಗೆ ಬಂದು ಮನೆಗೆ ಇನ್ನೂ ವಿದ್ಯುತ್ ಶಕ್ತಿ ಸಂಪರ್ಕ ಹಾಕಿಸಕೊಳ್ಳದ ದಿನಗಳಲ್ಲಿ ಕಾದಂಬರಿಯನ್ನು ಬರೆದರು ಎಂಬ ತೇಜಸ್ವಿಯವರ ಪತ್ನಿ ರಾಜೇಶ್ವರಿ ನೀಡುವ ಮಾಹಿತಿಯೊಂದಾಗಿ 'ಕರ್ವಾಲೊ' ಕತ್ತಲ್ಲಲ್ಲಿ ಹೊಳೆಯುವ ದಿವ್ಯ ತಾರೆಯಂತೆ ಆಪ್ತವಾಗಿ ಕಾಣುತ್ತದೆ.
ಜೋವಿ 

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...