Wednesday, 9 May 2018

ಇಂಥ ಪರಿಸ್ಥಿತಿ ಬರಬಾರದಾಗಿತ್ತು


ದ್ವೇಷ ಬಿಟ್ಟು ದೇಶ ಕಟ್ಟು ಆಂದೋಲನಕ್ಕಾಗಿ ಇಂದು ಮೈಸೂರಿನ ಹಿರಿಯ ಜೀವಿಗಳು ಅಂದರೆ ಮೈಸೂರಿನ ವಿವೇಕ ಇಲ್ಲಿ ಸೇರಿದೆ. ಈ ಹಿರಿಯ ಜೀವಿಗಳು ಒಕ್ಕೊರಲಿನಿಂದ ಎಲ್ಲ ಜಾತಿ ಧರ್ಮಗಳ ಜನರೂ ಸಹನೆ ಪ್ರೀತಿಯ ಸಹಬಾಳ್ವೆ ಮಾಡುವಂತೆ ಕೈ ಮುಗಿದು ಕೇಳಿವೆ. ಇಂಥ ಪರಿಸ್ಥಿತಿ ಬರಬಾರದಿತ್ತು - ಅಂದರೆ ದೊಡ್ಡವರು ಹೀಗೆ ಕೈಮುಗಿದು ಕೇಳಿಕೊಳ್ಳುವಂತಹ ಪರಿಸ್ಥಿತಿಯನ್ನು ಯುವಜನತೆ ಹಾಗೂ ನಾಗರಿಕರು ತಂದುಕೊಳ್ಳಬಾರದಿತ್ತು. ಇಂದು ಕುಣಿಯುತ್ತಿರುವ ಮತಾಂಧತೆ - ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಅಥವಾ ಯಾವುದೇ ಜಾತಿ ಜನಾಂಗದ್ದೇ ಇರಲಿ- ಇವುಗಳೆಲ್ಲ ಒಂದೇ ತಾಯಿಯ ಸಂತಾನ. ಇವುಗಳ ಬಹಿರಂಗ ಬೇರೆ ಬೇರೆಯಾಗಿ ಕಾಣಬಹುದು. ಆದರೆ ಇವುಗಳ ಅಂತರಂಗ ಒಂದೇ. ಯಾರದೇ ಮತಾಂಧತೆಯು ತಿಂದು ಹಾಕುವುದು ಮಾನವತೆಯನ್ನು ಮಾತ್ರ. ಹಿಡಿಯಷ್ಟು ಇರುವ ಮತಾಂಧತೆಗೆ ಸುಮ್ಮನೆ ವೀಕ್ಷಕರಾಗಿರುವ ಬಹುಸಂಖ್ಯಾತ ಜನ ಸಮುದಾಯ ಬೆಚ್ಚಿ ಅಸಹಕಾರ ತೋರಿದರೆ ಮಾತ್ರ ಈಗ ಉಳಿಗಾಲವಿದೆ. ಇಲ್ಲದಿದ್ದರೆ ಯಾವುದೇ, ಯಾರದೇ ಮತಾಂಧತೆಯು ಮೊದಲು ಮಾಡುವುದು ತನ್ನವರ, ತನಗೆ ಸೇರಿದವರ ಕಣ್ಣುಗಳನ್ನು ಕಿತ್ತು ಅಂಧರನ್ನಾಗಿಸುವುದು. ಆಮೇಲೆ ಮಿದುಳು ಕಿತ್ತು ವಿವೇಕಶೂನ್ಯರನ್ನಾಗಿಸುವುದು. ನಂತರ ಹೃದಯ ಕಿತ್ತು ಕ್ರೂರಿಗಳನ್ನಾಗಿಸುವುದು. ಆಮೇಲೆ ನರಬಲಿ ಕೇಳುವುದು. ಇಂದು ಇದು ಹೆಚ್ಚುತ್ತಿದೆ. ಬಹಳ ತುರ್ತಾಗಿ ನಮ್ಮ ಮಕ್ಕಳ ಕಣ್ಣು ಹೃದಯ ಮಿದುಳುಗಳನ್ನು ಮತಾಂಧತೆಯ ದವಡೆಯಿಂದ ರಕ್ಷಿಸಬೇಕಾಗಿದೆ. ಇಂಥ ಸಂದರ್ಭದಲ್ಲಿ ಇಲ್ಲಿ ಸೇರಿರುವ ದೊಡ್ಡಜೀವಗಳ ತುಡಿತಕ್ಕೆ ಕೃತಜ್ಞತೆ ಸಲ್ಲಿಸುವೆ.


ಎದೆಗೆ ಬಿದ್ದ ಅಕ್ಷರ / ೧೧೮/ ದೇವನೂರ ಮಹಾದೇವ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...