ದುಃಖದ
ಪರಿಕಲ್ಪನೆ ಅರ್ಥೈಸಿಕೊಳ್ಳಲು ಅಥವಾ ವಿಶ್ಲೇಷಿಸಲು ಬಹಳ ಕಷ್ಟಕರ. ದೈನಂದಿನ ಜೀವನದಲ್ಲಿ ದುಃಖವು
ತೀವ್ರಗೊಂಡಾಗ ಹಾಗೂ ವ್ಯಾಪಕಗೊಂಡಾಗ ನಮಗೆ ಇಂತಹ ಸನ್ನಿವೇಶಗಳಲ್ಲಿ ದೇವರ ಅಸ್ತಿತ್ವವನ್ನೇ
ಪ್ರಶ್ನಿಸುವಂತಾಗುತ್ತದೆ. ಮಾನವ ಈ ಜಗತ್ತಿನಲ್ಲಿ ಹುಟ್ಟಿನಿಂದ ಸಾವಿನವರೆಗೆ ದುಃಖವನ್ನು ಹೊತ್ತು
ನಡೆಯುತ್ತಲೇ ಇರುತ್ತಾನೆ. ದುಃಖವು ಸಹಜರೀತಿಯಲ್ಲಿ ಅವನನ್ನು ಆವರಿಸುತ್ತಲಿರುತ್ತದೆ.
ಪ್ರತಿಯೊಬ್ಬ ಮಾನವನು ಮುಗ್ಧ ಜೀವಿಯಾಗಿ ಹುಟ್ಟುತ್ತಾನೆ. ಯಾರೊಬ್ಬನೂ ಹುಟ್ಟುವಾಗಲೇ ದಾಯಾದಿಯಾಗಿ
ಕ್ರೂರಿಯಾಗಿ ಹುಟ್ಟುವುದಿಲ್ಲ ಅವನು ಬೆಳೆಯುವ ವಾತಾವರಣ ಅವನನ್ನು ಆವರಿಸಿ
ಪಾಪಗ್ರಸ್ತನಾಗಿಸುತ್ತದೆ.
ಈ ಪಾಪ
ಎಲ್ಲಿಂದ ಬಂದಿದೆ? ದುಃಖವು ಪಾಪಕ್ಕೆ ಮೂಲವೆ? ದುಃಖಕ್ಕೆ ಅಂತ್ಯವಿಲ್ಲವೆ? ಈ ರೀತಿಯ ಪ್ರಶ್ನೆಗಳು
ಜೀವನ ಪರಿಯಂತ ನಮ್ಮನ್ನು ದುಃಖಕ್ಕೀಡಾದಾಗಲೆಲ್ಲ ಕಾಡುತ್ತಲೇ ಇರುತ್ತವೆ. ದುಃಖವು ನಮ್ಮನ್ನು
ಉಸಿರಾಡಲು ಬಿಡದೆ ಕೊರಳಿನಲ್ಲಿ ಹಗ್ಗವಾಗಿ ಪ್ರಾಣ ಹಿಂಡುತ್ತಿರುತ್ತದೆ.
ನಮ್ಮನ್ನು
ಪ್ರಶ್ನೆಗಳು ಕಾಡಿದಂತೆಲ್ಲಾ ನಾವು ಅತೃಪ್ತರಾಗುತ್ತ ಹೋಗುತ್ತಿರುತ್ತೇವೆ. ಅಂತವುಗಳನ್ನು
ಎದುರಿಸಿ ಬಾಳಿದವರೇ ಸಂತರುಗಳು ಹಾಗೂ ಅಧ್ಯಾತ್ಮ ಜೀವಿಗಳು. ಈ ಸಂತ ಶ್ರೇಷ್ಠರುಗಳ ಜೀವನವನ್ನು
ಅನುಸರಿಸಿ ನೋಡಿದಾಗ ನಮಗೆ ನಮ್ಮಜೀವನದಲ್ಲೂ ಸಹ ಒಂದು ರೀತಿಯ ಸ್ಪಷ್ಟತೆಯನ್ನು
ಕಂಡುಕೊಳ್ಳುತ್ತೇವೆ. ಬುದ್ಧನ ಹಾಗೂ ಯೇಸುಕ್ರಿಸ್ತನ ಚಿಂತನೆಗಳನ್ನು ಮನಗಾಣಿಸಿಕೊಂಡಾಗ ದುಃಖದ
ಬಗೆಗಿನ ತಿಳುವಳಿಕೆಗಳು ವೃದ್ಧಿಗೊಳ್ಳುತ್ತವೆ.
ಬುದ್ಧ
ತನ್ನದ್ದೇ ಆದ ಅನುಚಿತ್ತಗಳೊಂದಿಗೆ ದುಃಖವನ್ನು ಪ್ರತ್ಯೇಕೀಕರಣದ ಮೂಲಕ ಹಾಗೂ ತನ್ನ ಮೂಲ
ಅಷ್ಟನಿಯೋಗಗಳಿಂದ ಎದುರಿಸಲು ಮುಂದಾದನು. ಯೇಸುಕ್ರಿಸ್ತನ ಬದುಕು ಮತ್ತು ಆಚಾರ ವಿಚಾರಗಳು
ಇದಕ್ಕಿಂತ ಇನ್ನು ಮಿಗಿಲಾದವುಗಳು.
ದುಃಖ
ಎಂಬುದು ಜೀವನದ ಜಂಜಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಇದನ್ನು ಹೇಗೆ ಎರಡೂ ಧರ್ಮಗಳು
ವಿಧಿವತ್ತಾಗಿ, ಕ್ರಮಬದ್ಧವಾಗಿ, ವಿಂಗಡಿಸಿವೆ ಮತ್ತು ಬುದ್ಧನ ಹಾಗೂ ಕ್ರಿಸ್ತನ ಪರ-ವಿರುದ್ಧ
ಚಿಂತನೆಗಳು ಈ ವಿಚಾರ ಮಂಡಣೆಯಲ್ಲಿ ಒಳಗೊಂಡಿವೆ.
"ಮನೋಪುಬ್ಬಂಗಮಾಧಮ್ಮಾ ಮನೋಸೆಟ್ಠಾ ಮನೋಮಯಾ
ಮನಸಾ ಚೇ ಪದುಟ್ಠೀನ ಭಾಸತಿ ವಾ ಕರೋತಿವಾ,
ತತೋ ನಙದುಕ್ಖಙಅನ್ವೇತಿ ಚಕ್ಕಂ ವ ವಹತೋ ಪದಙ" - ಯಮಕವರ್ಗ
ಈ ಮಾತುಗಳು
ಬುದ್ಧನೇ ಹೇಳಿರುವಂತದ್ದು. ಧರ್ಮಗಳಿಗೆ ಮನಸ್ಸು ಮುಂದಾಳು ಅವುಗಳಿಗೆ ಮನಸ್ಸೇ ಒಡೆಯ, ಅವು
ಮನೋಮಯ. ಕಲಕಿರುವ (ಬಗ್ಗಡ) ಮನಸಿನಿಂದ ಇರುವ ಮಾನವನಿಗೆ ದುಃಖವು ಆವರಿಸುವುದು. ಆತನಿಗೆ ದುಃಖವು
ಬಂಡಿಯನ್ನು ಹೊತ್ತೆಳೆಯುವ ಪ್ರಾಣಿಯ ಹೆಜ್ಜೆಯನ್ನು ಚಕ್ರಗಾಲಿಯು ಹಿಂಬಾಲಿಸುವ ಹಾಗೆ
ಹಿಂಬಾಲಿಸುವುದು.
ಬುದ್ಧ
ನಿರ್ವಾಣದ ನಂತರ ನಾಲ್ಕು ಉದಾತ್ತ ಸತ್ಯಗಳನ್ನು ತನ್ನ ಐದು ಮಂದಿ ಹಿಂಬಾಲಕರಿಗೆ ವಾರಾಣಸಿಯಲ್ಲಿ
ಭೋಧಿಸಿದ್ದಾನೆ. ಈ ಉದಾತ್ತ ಬೋಧನೆ ಬೌದ್ದಧರ್ಮದ ಮೂಲ ಸ್ಥಾವರಗಳಾಗಿವೆ. ಈ ನಾಲ್ಕು
ಸತ್ಯಾನ್ವೇಷಣೆಗಳಿಗೆ "ಧರ್ಮಚಕ್ರ ಪ್ರವರ್ತನ ಸೂತ್ರ" ಎಂದು ಕರೆಯತ್ತಾರೆ.
ಇವುಗಳನ್ನು ಬುದ್ಧನ ಪ್ರವಚನಗಳು ಎಂದು ಪರಿಗಣಿಸಲಾಗಿವೆ. ಬುದ್ಧನು ತನ್ನ ಎಲ್ಲಾ ತತ್ವಗಳನ್ನು
ಒಂದೇ ವಾಕ್ಯದಲ್ಲಿ ಹೀಗೆಂದು ಹೇಳ್ದಾನೆ "ನಾನು ಭೋಧಿಸುವುದು ಒಂದೇ, ದುಃಖ ಹಾಗೂ ದುಃಖದಿಂದ
ಮುಕ್ತಿ" ಈ ವಾಕ್ಯದಲ್ಲಿ ಬುದ್ಧನ ನಾಲ್ಕು ಸತ್ಯಾನ್ವೇಷಣೆಗಳ ವಿಸ್ತರಣೆ ಹಾಗೂ ಸಾರಾಂಶವು
ಅಡಗಿದೆ. ಈ ವಾಕ್ಯಗಳು ಅಗಾಧ ಆಧ್ಯಾತ್ಮಿಕ ಕಾಯ ಹಾಗೂ ತತ್ವ ಸಿದ್ಧಾಂತಗಳನ್ನು ಹೊಂದಿದೆ. ವಿವಿಧ
ರೀತಿಯ ವ್ಯಾಖ್ಯಾನಗಳು ಇದರ ಮೇರೆಗೆ ಹುಟ್ಟಿಕೊಂಡಿವೆ.
"ನನ್ನಿಂದ
ನಿಮಗೆ ಸಮಾಧಾನ ದೊರಕುವುದು. . . ಲೋಕದಲ್ಲಿ ನಿಮಗೆ ಸಂಕಟ ಇರುವುದು ನಿಜ, ಆದರೆ ಧೈರ್ಯದಿಂದಿರಿ,
ನಾನು ಲೋಕವನ್ನು ಜಯಿಸಿದ್ದೇನೆ" (ಯೊವಾನ್ನ ೧೬:೩೩). ಈ ಮಾತು ಬೈಬಲಿನದ್ದು ಯೇಸುಕ್ರಿಸ್ತನ
ದುಃಖದ ಕುರಿತ ಮಾತುಗಳು.
ದುಃಖ ಮಾನವನ
ಆಗುಹೋಗುಗಳ ಮೇಲೆ ಪರಿಣಾಮ ಬೀರುತ್ತದೆ. ದುಃಖ ಅಸ್ವಸ್ಥತೆಯನ್ನು ಮಾತ್ರ ತರುವುದಲ್ಲದೆ ಅನುಮಾನ
ಮತ್ತು ಸಂಶಯಗಳನ್ನು ಜೀವನದಲ್ಲಿ ಹುಟ್ಟುಹಾಕುತ್ತದೆ. ದುಃಖ ನೋವನ್ನು ಮಾತ್ರ ನೀಡುವುದಲ್ಲದೆ
ಸಮಸ್ಯೆಗಳನ್ನು ಸಹ ಹುಟ್ಟು ಹಾಕುತ್ತೆ. ಯೇಸುಕ್ರಿಸ್ತನ ಪ್ರಕಾರ ನೋವು, ದುಃಖ ಇವು
ಅಸ್ವಾಭಾವಿಕವಾದವುಗಳು. ನೋವು ಕದ್ದು ಬರುವಂತದ್ದು, ಪಾಪ ಅನಧಿಕೃತವಾಗಿ ನುಸುಳುವಂತದ್ದು,
ಇಂತಹವು ದೇವರ ಮಾನವನ ಸಂಬಂಧವನ್ನು ಒಡೆದು ಹಾಕಿವೆ.
ಈ ದುಃಖವು
ಮಾನವನು ದೇವರ ಬಗೆಗೆ ಕೆಟ್ಟ ಅಭಿಪ್ರಾಯವನ್ನು ಕಲ್ಪಿಸಿಕೊಳ್ಳುವಂತೆ ಮಾಡಿದೆ. ಅದ್ದರಿಂದಲೇ ಯೇಸು
ದುಃಖವು ದೇವರಿಂದ ಉಗಮವಾಗಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತಾರೆ. ಸೃಷ್ಟಿಕರ್ತ ಎಂದಿಗೂ ತನ್ನ
ಸೃಷ್ಟಿಯು ದುಃಖದಲ್ಲಿ ಬಳಲಲು ಇಚ್ಚಿಸುವುದಿಲ್ಲ. ಈ ದುಃಖಕ್ಕೆ ಪ್ರತ್ಯತ್ತರವಾಗಿ ಯೇಸುವು
ಪ್ರೀತಿ ಮತ್ತು ಕರುಣೆಯ ಬದುಕನ್ನು ಬದುಕಲು ಕರೆ ನೀಡುತ್ತಾರೆ.
* * * *
ಯೇಸುಕ್ರಿಸ್ತ
ಹಾಗೂ ಬುದ್ಧ ಇಬ್ಬರನ್ನು ಹೋಲಿಸಬಹುದಾದ ಅಂಶಗಳು ಹಾಗೂ ಹೋಲಿಕೆಗಳು ಬಹಳಷ್ಟು ಇವೆ. ಈ ವ್ಯಕ್ತಿಗಳ
ಬಾಲ್ಯದ ನಿರೂಪಣೆಗಳು, ಬದುಕು, ಬೋಧನೆಗಳು, ಸಾವು ಎಲ್ಲವೂ ಮಾನವನ ನಿಲುವಿಗೆ ಅಸ್ತಿತ್ವಗಳಾಗಿವೆ.
ಇವರುಗಳ ಜೀವನ ಬೋಧನೆಗಳು ಪ್ರತ್ಯೇಕವಾಗಿ ಆಯಾ ಸಮುದಾಯಗಳಿಗೆ ಪಂಗಡಗಳಿಗೆ ಮೀಸಲಾಗಿವೆ. ಇವರ ಮಾತು
ನಡೆ ನುಡಿ ಆಯಾ ಸಮುದಾಯಗಳಿಗೆ ಅಸ್ತಿತ್ವವಾಗಿದೆ. ಈ ಇಬ್ಬರು ದೈವೀ ಮಾನವರು ಇಡೀ ಮಾನವಕುಲಕ್ಕೆ
ಮಾದರಿಗಳಾಗಿ ಬದುಕುವ ಸನ್ಮಾರ್ಗವಾಗಿದ್ದಾರೆ. ಇವರ ಹಿಂಬಾಲಕರು ಸ್ನೇಹಿತರು ಇದನ್ನೇ ಧರ್ಮವೆಂದು
ಅನುಷ್ಠಾನಗೊಳಿಸಿದ್ದಾರೆ. ಯೇಸುಕ್ರಿಸ್ತ ಸಾವನ್ನು ಜಯಿಸಿದ ಪ್ರಪ್ರಥಮ ವ್ಯಕ್ತಿ. ಬುದ್ಧನು
ಬದುಕಿನ ಮಾರ್ಗ ಕಲ್ಪಿಸುವ ಸಂಶೋದಕನಾಗಿ ಧರ್ಮ ಹಾಗೂ ಬಿಡುಗಡೆಯ ಬದುಕನ್ನು ಬದುಕಲು ಪ್ರಚಾರ ಮಾಡಿದನು.
ಬುದ್ಧನು ಎಲ್ಲರೂ ಈ ಮಾರ್ಗ ಹಿಡಿಯಲು ಬುದ್ಧರಾಗಬೇಕು ಎಂದು ಆಹ್ವಾನ ನೀಡುತ್ತಾನೆ. ಆದರೆ ಯೇಸು
ನಾನೇ ಮಾರ್ಗ ನನ್ನಿಂದಲೆ ಮೋಕ್ಷವೆನ್ನುತ್ತಾನೆ. ವ್ಯತ್ಯಾಸವೇನೆಂದರೆ ಬುದ್ಧ ಸಾಮಾನ್ಯ
ವ್ಯಕ್ತಿಯಾಗಿ ದಾರಿ ತೋರಿಸಲು ಹೊರಟ, ಕ್ರಿಸ್ತ ದೇವಾರಾಗಿದ್ದು ತನ್ನ ಜನತೆಗೆ ದಾರಿ ತೋರಿಸಲು
ಹೊರಟ. ಬುದ್ಧ ತನ್ನಂತೆಯೇ ಜ್ಞಾನೋದಯವನ್ನು ಪಡೆದು ಬುದ್ಧರಾಗಿರಿ ಎಂದು ಕರೆ ನೀಡುತ್ತಾನೆ, ಯೇಸು
ನನ್ನಂತೆಯೆ ಶಿಲುಬೆ ಹೊತ್ತು ನಡೆಯಿರಿ ಎಂದು ಕರೆ ನೀಡುತ್ತಾನೆ. ಯೇಸುವಿನ ಪಾತ್ರ ಇನ್ನೂ
ಮಿಗಿಲಾದದ್ದು ತನ್ನ ಆಧ್ಯಾತ್ಮಿಕ ಜೀವನದಲ್ಲಿ ಭಾಗಿಯಾಗಲು ಅವಕಾಶವಿದೆ. ಬುದ್ಧನ ಜೀವನದಲ್ಲಿ
ಭ್ರಮೆಯಿಂದ ಜ್ಞಾನೋದಯಕ್ಕೆ ತಿರುಗುವ ಸನ್ನಿವೇಶವಿದೆ, ಆದರೆ ಕ್ರಿಸ್ತನ ಜೀವನದಲ್ಲಿಇಂತಹ
ಸಂಗತಿಗಳು ಕಡಿಮೆ. ಯೇಸುಕ್ರಿಸ್ತನಿಂದ ಪಾಪ ಅಪರಾಧಗಳು ಬಂದಿರಲಿಲ್ಲ, ಅವುಗಳು ಧೋರಣೆಗಳು ಮಾತ್ರ
ಬದಲಿಗೆ ಇನ್ನೊಬ್ಬರ ಪಾಪ ವಿಮೋಚನೆಗೆ ತನ್ನ ಪ್ರಾಣ ಹರಣವಾಗುವುದು.
ಪಾಪ
ಮತ್ತುದುಃಖ: ಎರಡೂ ಧರ್ಮದಲ್ಲಿ ಮಾನವನ ಅಸ್ತಿತ್ವದ ಬಗ್ಗೆ ಅರ್ಥ ಮಾಡಿಕೊಂಡರೆ ಹೆಚ್ಚು
ವ್ಯತ್ಯಾಸಗಳಿವೆ. ಬೌದ್ಧಧರ್ಮದ ಮೂಲ ವಾದಾತ್ಮಕ ವಿಷಯವೆಂದರೆ ದುಃಖ, ಈ ದುಃಖವು ಉಂಟಾಗುವುದು
ಅಜ್ಞಾನ ಹಾಗೂ ಭ್ರಮೆಗಳಿಂದ ಮಾತ್ರವೆಂದು ಬುದ್ಧ ಹೇಳುತ್ತಾನೆ. ಕ್ರೈಸ್ತ ಧರ್ಮದಲ್ಲಿ ಮೂಲ
ವಾದಾತ್ಮಕ ವಿಷಯ ವೆಂದರೆ ಮಾನವನ ಅನಂತತೆ ಹಾಗೂ ದುಃಖ ಪಾಪದ ಮೂಲವೆಂದು. ಈ ದುಃಖದ ಪ್ರಸಂಗ ನಮಗೆ
ಮಾನವನ ಅಸ್ತಿತ್ವದ ಬಗ್ಗೆ ಪ್ರಶ್ನೆ ಹುಟ್ಟಿಸುತ್ತದೆ.
ಪ್ರತ್ಯೇಕತೆ
ಮತ್ತು ದುಃಖ: ಬುದ್ಧ ಪ್ರಾರಂಭದಲ್ಲಿ ತನ್ನದೆಂಬುದನ್ನು ತ್ಯಜಿಸಲು ಪ್ರಯತ್ನಿಸಿದ. ಆತನ
ಜ್ಞಾನೋದಯಕ್ಕೆ ಇದೇ ಮೊದಲ ಹೆಜ್ಜೆಯಾಗಿರಬೇಕು. ಈ ಲೌಕಿಕತನದ ಅನಿವಾರ್ಯತೆಗಳನ್ನು ಎದುರಿಸಲು
ಬುದ್ಧ ಆರಿಸಿಕೊಂಡಂತಹ ವಿಧಿ ಪ್ರತ್ಯೇಕೀಕರಣ. ಯೇಸುಕ್ರಿಸ್ತನು ಸಹ ತನ್ನ ಶಿಷ್ಯರಿಗೆ ಮನೆಯಿಂದ,
ವಾಸ್ತವತೆಯಿಂದ, ಕೆಲಸಕಾರ್ಯಗಳಿಂದ, ಬಂಧು ಬಳಗದಿಂದ ಪ್ರತ್ಯೇಕೀಕರಣ ಬೇಡಿಕೆಗಳನ್ನು
ಮುಂದಿಡುತ್ತಾರೆ.
ಅವಶ್ಯಕತೆ
ಮತ್ತುದುಃಖ: ಯೇಸುವಿನ ಶಿಲುಬೆ ದೇವರ ಪ್ರೀತಿಯ ಸಂಕೇತವಾಗಿದೆ. ಆ ಪ್ರೀತಿ ದಮನಿತರ ಶೋಷಿತರ
ಕೂಗಿಗೆ ಆಧಾರವಾಗಿತ್ತು. ಆ ಪ್ರೀತಿ ಕ್ಷಮೆಯ ಚಿಹ್ನೆಯಾಗಿತ್ತು. ಶಿಲುಬೆ ಮರಣದ ಸಂಕೇತವಲ್ಲ
ಶಿಲುಬೆ ದುಃಖ ವಿರುದ್ದ ಜಯದ ಚಿನ್ಹೆಯಾಗಿದೆ. ಕ್ರೈಸ್ತಧರ್ಮದ ಪ್ರಕಾರ ಆದಾಮನ ಆಸೆ ಬಯಕೆಗಳಿಂದ
ದುಃಖವು ಮೂಡಿತು. ಎರಡೂ ಧರ್ಮಗಳು ಈ ಆಸೆ ಬಯಕೆಗಳನ್ನು ದುಃಖದ ಪ್ರಾರಂಬಿಕ ಎಂದು ತಿಳಿಸುತ್ತವೆ.
ದುಃಖಕ್ಕೆ ಕಾರಣ ಮಾನವನೇ ಬೇರಾರೂ ಅಲ್ಲ.
ದುಃಖದಿಂದ
ಹೊರಬರುವುದು (ಬಿಡುಗಡೆ): ನಾವೆಲ್ಲರೂ ಈಸ್ಟರ್ ಹಬ್ಬವನ್ನು ಆಚರಿಸಿದ್ದೇವೆ, ಈ ಹಬ್ಬ
ಕಾಲದಿಂದ ಕಾಲಕ್ಕೆ ರೂಢಿಯಲ್ಲಿ ಬಂದಂತಹ ಹಬ್ಬವಾಗಿದೆ. ಈ ಹಬ್ಬದ ವೈಶಿಷ್ಟ್ಯತೆ ಏನೆಂದರೆ
ದುಃಖದಿಂದ ಸಂತೋಷದೆಡೆಗೆ, ಕಾರ್ಗತ್ತಲಿನಿಂದ ಬೆಳಕಿನೆಡೆಗೆ, ನೋವಿನಿಂದ ಹೊಸಬಾಳ್ವೆಗೆ ಸಾಗುವಂತಹ
ಹಬ್ಬವಾಗಿದೆ. ಕ್ರಿಸ್ತನ ಪುನರುತ್ಥಾನವು ಧರ್ಮಸಭೆಗೆ ಹಾಗೂ ಪ್ರತಿ ಕ್ರೈಸ್ತನಿಗೆ ನವ ಬದುಕನ್ನು
ಕಲ್ಪಿಸಿ ಕೊಡುತ್ತದೆ. "ಆತನೊಂದಿಗೆ ನಮ್ಮ ದೇಹವು ಸಹ ಪಾವನಗೊಳ್ಳುವುದು" (ಫಿಲಿ
೩:೨೧). ಹೊಸ ಒಡಂಬಡಿಕೆಯ ಪ್ರಕಾರ ದುಃಖ ಅಂತ್ಯವಲ್ಲ, ಧರ್ಮಸಭೆ ಇದರ ಬಗ್ಗೆ ಇನ್ನೂ ವಿಭಿನ್ನ
ರೀತಿಯಲ್ಲಿ ದುಃಖಕ್ಕಿಂತ ಮಿಗಿಲು ಮೃತ್ಯಂಜಯ ಬದುಕು ಎಂದು ವಿಶ್ಲೇಷಿಸುತ್ತದೆ. ನಾವು ಕ್ರಿಸ್ತನ
ಅನುಯಾಯಿಗಳಾಗಿರುವುದರಿಂದ ಆತನ ನೋವು ನಲಿವಿನಲ್ಲಿ ಪಾಲುಗೊಳ್ಳುವ ಕರೆಯಿದೆ.
ಬುದ್ಧನ ಹೇಳಿಕೆಯಂತೆ
ಅಪನಂಬಿಕೆ ಆಗುವುದು ಅಹಂನಿಂದ, ಈ ಅಹಂನಿಂದ ಕೋಪ, ಆವೇಶ, ಅವಘಡಗಳು ಹುಟ್ಟಿಕೊಳ್ಳುತ್ತವೆ.
ಬುದ್ಧನಿಗೆ ದುಃಖವು ಅನಿವಾರ್ಯವಾಗಿರುವಂತದ್ದು. ಅದನ್ನು ಎದುರಿಸಲು ನಾವು ನಮ್ಮನ್ನು
ಸಂಪೂರ್ಣವಾಗಿ ಅರಿಯಬೇಕು, ಅದರಿಂದ ಜ್ಞಾನೋದಯವನ್ನು ಪಡೆಯಬೇಕು. ತನ್ನನ್ನು ಅರಿಯುವುದು ಅಹಮಿಕೆಯ
ಮಾತಲ್ಲ ಬದಲಿಗೆ ಲೋಕಸಂದೇಶ. ಆಸೆಗಳ ಮೂಲ ಅಹಂ ಆದ್ದರಿಂದ ಅವುಗಳನ್ನು ವರ್ಜಿಸಿ ನಾನು ಯಾರು
ಎಂಬುದನ್ನು ಅರಿಯಬೇಕು. ಇದು ಆಸೆಗಳನ್ನು ವರ್ಜಿಸುವುದರ ಬಗ್ಗೆ ಎರಡೂ ಧರ್ಮಗಳು
ಒಪ್ಪಿಕೊಳ್ಳುವಂತಹ ಮಾತಾಗಿದೆ.
* * * *
ಈ ದುಃಖದ
ಪರಿಕಲ್ಪನೆಗಳನ್ನು ಆಲೋಚಿಸಿ ನೋಡಿದಾಗ ಬೌದ್ಧ ಧರ್ಮದಲ್ಲಿ ದುಃಖ ಎಂಬುದು ವಾಸ್ತವಿಕ, ಈ
ವಾಸ್ತವವನ್ನು ನಾವು ಒಪ್ಪಿಕೊಂಡು ಅದನ್ನು ಎದುರಿಸಿ ಬದುಕಬೇಕು. ಇದನ್ನು ಎದುರಿಸಲು ಎಂಟು ಪಟ್ಟು
ನಿಯೋಗಗಳನ್ನು ಪಾಲಿಸಬೇಕು. ಕ್ರೈಸ್ತ ಧರ್ಮದಲ್ಲಿ ದೇವರ ಅನುಗ್ರಹದಿಂದ ಹಾಗೂ ಯೇಸುವಿನ
ಆಜ್ಞೆಗಳನ್ನು ಸ್ವೀಕರಿಸಿ ಅದನ್ನು ಬದುಕುವಲ್ಲಿ ದುಃಖವನ್ನು ಎದುರಿಸಬಹುದು.
ಈ
ಧರ್ಮಗಳಲ್ಲಿ ಸಾಮಾನ್ಯಗುರಿ ಎಂದರೆ ಮಾನವನಿಗೆ ದುಃಖದ ವಾಸ್ತವತೆಯನ್ನು ತಿಳಿಸುವುದು, ಹಾಗೂ
ಅದರಿಂದ ಹೇಗೆ ಹೊರ ಬರುವುದು ಎಂಬುದು. ಬೌದ್ಧ ಧರ್ಮದಲ್ಲಿ ಇದನ್ನು ನಿರ್ವಾಣ ಹಾಗೂ ಕ್ರೈಸ್ತ
ಧರ್ಮದಲ್ಲಿ ಇದನ್ನು ದೇವರ ರಾಜ್ಯಭಾರ (ಮೋಕ್ಷ) ಎಂದು ಕರೆಯತ್ತಾರೆ. ಕ್ರೈಸ್ತಧರ್ಮ
ವಿಮೋಚನೆಯೆಡೆಗೆ ಗಮನ ಹರಿಸಿದರೆ ಬೌದ್ಧಧರ್ಮ ವಾಸ್ತವಿಕ ಮನೋವೃತ್ತಿಯೆಡೆಗೆ ಗಮನ ಹರಿಸುತ್ತದೆ.
ಬೌದ್ಧದರ್ಮವು ವಸ್ತುನಿಷ್ಠವಾಗಿ ಎಲ್ಲವನ್ನು ಪರಿಗಣಿಸುತ್ತದೆ ಈ ವಸ್ತುನಿಷ್ಠತೆಗೆ 'ಯಾತಭೂತಮ್'
ಎನ್ನುತ್ತಾರೆ. ಇದು ಯಾವುದೇ ತಪ್ಪಾದ ಮೋಸದ ನುಡಿಯಲ್ಲ ಹಾಗೂ ಯಾವ ಬೆದರಿಕೆಯ ಹಿಂಸೆಯ
ಚಿತ್ರಣಗಳನ್ನು ಮುಂದಿಡುತ್ತಿಲ್ಲ. ಪ್ರತ್ಯೇಕ ರೀತಿಯಲ್ಲಿ ನಿನ್ನ ಮತ್ತು ನಿನ್ನ ಸುತ್ತಲಿನ
ಜಗತ್ತಿನ ಬಗೆಗೆ ಎಚ್ಚರ ವಹಿಸುತ್ತದೆ. ಈ ಮಾರ್ಗದರ್ಶನದಿಂದ ಸ್ವಾತಂತ್ರ್ಯ, ಸಂತಸ, ಯುದ್ಧವಿರಾಮ
ಸ್ಥಿತಿ, ಹಾಗೂ ಶಾಂತಿಯನ್ನು ಪಡೆಯಬಹುದು. ಕ್ರೈಸ್ತಧರ್ಮದಲ್ಲಿ ಪಾಪ ವಿಮೋಚನೆ ಪರಿಕಲ್ಪನೆಯಾದರೆ,
ಬೌದ್ಧ ಧರ್ಮದಲ್ಲಿ ದುಃಖವನ್ನು ಎದುರಿಸುವುದು ಮತ್ತು ನಿರ್ವಾಣವನ್ನು ಪಡೆಯುವುದು. ಕ್ರೈಸ್ತ
ಧರ್ಮದಲ್ಲಿ ಕಟ್ಟಕಡೆಯ ಗುರಿ ಎಂದರೆ ಒರ್ವನು ದೇವರಲ್ಲಿ ಲೀನನಾಗುವುದು. ಬೌದ್ಧ ಧರ್ಮದಲ್ಲಿ
ಬುದ್ಧನ ತತ್ವಗಳಲ್ಲಿ ದೇವರೆಂಬ ಪರಿಕಲ್ಪನೆಯೇ ಇಲ್ಲ. ಇದೇ ಬೌದ್ಧ ಹಾಗೂ ಕ್ರೈಸ್ತಧರ್ಮದ
ಭಿನ್ನವನ್ನು ಸೂಚಿಸುತ್ತದೆ. ಆದರೆ ಎಲ್ಲೋ ಕೆಲವು ಸಾಮಾನ್ಯ ಹೊಂದಾಣಿಕೆಗಳನ್ನು ನಾವು ಎರಡೂ
ಧರ್ಮದಲ್ಲೂ ಕಾಣಬಹುದು, ಹೇಗಿದ್ದರೂ ಎರಡೂ ಧರ್ಮವು ಮಾನವಧರ್ಮ ಮತ್ತು ಮಾನವೀಯತೆಯನ್ನು ಬೆಳಗಲು
ನಿಂತಿರುವಂತದ್ದು ಮೂಲ ಹೊಂದಾಣಿಕೆಯಾಗಿದೆ.
ಬೌದ್ಧ ಹಾಗೂ
ಕ್ರೈಸ್ತ ಧರ್ಮಗಳು ಸೇರಿದರೆ ಮಾನವಧರ್ಮ ಉದ್ಧಾರವಾಗುವುದು - ಥಾಮಸ್ ಮ್ಯಾಥ್ಯು.
ವಿಶ್ವ ಮಾನವ
ಬುದ್ಧನ ಹಾಗೂ ಏಕತೆಯ ಪ್ರತಿಪಾದಕ ಕ್ರಿಸ್ತನ ಬೋಧನೆಗಳು ಇಡೀ ಮಾನವ ಕುಲವನ್ನೆ
ಐಕ್ಯವಾಗಿಸುತ್ತದೆ. ಮಾನವನ ಮಧ್ಯೆ ಪ್ರೀತಿಯಕರೆ, ಪರರ ದುಃಖದಲ್ಲಿ ಭಾಗಿಯಾಗುವುದು ಇಂತಹ ಅಂಶಗಳೂ
ಎರಡೂ ಧರ್ಮವನ್ನು ಒಗ್ಗೂಡಿಸುತ್ತದೆ. ಎರಡೂ ಧರ್ಮಗಳು ತಮ್ಮಿಂದ ತಮಗೆ ಕಲೆತುಕೊಳ್ಳಲು ಬಹಳಷ್ಟು
ಇವೆ. ಇದು ವಿಮರ್ಶೆಯ ಮಾತಲ್ಲ ಬದಲಿಗೆ ಏಕಮುಖವಾದ ಧರ್ಮಗಳ ಬಗೆಯ ಹೋಲಿಕೆ. ಒಟ್ಟಾರೆ ಎರಡೂ
ಧರ್ಮಗಳ ಮೂಲ ಗುರಿಯೇನೆಂದರೇ ದುಃಖವನ್ನು ಹೋಗಲಾಡಿಸಿ ವಿಮೋಚನೆ ಪಡೆಯುವುದು.
ನವೀನ್ ಮಿತ್ರ