Sunday, 9 September 2018

ನೋವಿಗೆ, ಸಂಕಟಕೆ ಗೆರೆ ಬೇಲಿಗಳುಂಟೇ? - ಜೋವಿ


ನೋವಿಗೆ, ಸಂಕಟಕೆ ಗೆರೆ ಬೇಲಿಗಳುಂಟೇ? ಗಡಿಗಳುಂಟೇ? ಆಚೆ ಈಚೆ ಉಂಟೇ? ಧರ್ಮ ಜಾತಿಗಳುಂಟೇ? ಯಾರ ಎದೆಯಲ್ಲಿ ನೋವಿದ್ದರೂ ಅದು ನೋವೇ? ಕನ್ನಡಿಗರ ನೋವಾಗಲೀ, ಮಲಯಾಳಿಗಳ ನೋವಾಗಲೀ ಅದು ನೋವೇ. ಈ ಕಾರಣದಿಂದ ನೋವಿಗೆ ಗಡಿಮೀರಿ ಮಿಡಿಯುವ ಹೃದಯಗಳಿವೆ, ಸಹಾಯಹಸ್ತ ಚಾಚುವ ಉದಾತ್ತ ಕೈಗಳಿವೆ, ಆರೈಕೆ ಮಾಡುವ ಕರುಣ ಒಡಲುಗಳಿವೆ. ಇನ್ನೊಂದು ಕಡೆ ಈ ನೋವು ಸಂಕಟಗಳು ಎಂಬುವುವು ಕೇಳಿಕೊಂಡು ಬರುವುದಿಲ್ಲ, ಬಡವ, ಬಲ್ಲಿದ, ಮೇಲು, ಕೀಳು ಎಂಬ ಭೇದಭಾವಗಳ ಲೆಕ್ಕಾಚಾರಗಳ ಆಧರಿಸಿ ಕೂಡ ಬರುವುದಿಲ್ಲ. ಹೇಳಿ ಕೇಳದೆ ವಕ್ಕರಿಸಿಕೊಳ್ಳುವ ಆಘಾತಗಳು, ಅತಿವೃಷ್ಟಿಗಳು, ಅವು ತರುವ ನೋವು ಸಂಕಟಗಳು ದೂರದಲ್ಲಿದ್ದವರನ್ನು ಹತ್ತಿರವಾಗಿಸಿ, ಹತ್ತಿರದವರನ್ನು ದೂರವಾಗಿಸಿ ಬಿಡುತ್ತವೆ; ಮಿತ್ರರನ್ನು ಶತ್ರುಗಳಾಗಿ, ಶತ್ರುಗಳನ್ನು ಮಿತ್ರರನ್ನಾಗಿಸುತ್ತವೆ; ಕ್ರೂರಿಯನ್ನು ಮನುಷ್ಯನಾಗಿ, ಮನುಷ್ಯನನ್ನು ಕ್ರೂರಿಯಾಗಿಸುತ್ತವೆ. ಕ್ರೂರಿಗಳನ್ನು ಅತೀ ಕ್ರೂರಿಗಳಾಗಿಸುವುದನ್ನು ಸಹ ಕಂಡಿದ್ದೇವೆ. ಆದರೆ ನೋವುಂಡ ಮನುಷ್ಯ ಬದಲಾಗಿರುತ್ತಾನೆ ಎಂಬುವುದು ಮಾತ್ರ ದಿಟ. ಬದಲಾವಣೆ ಧನಾತ್ಮಕದ್ದೋ ಋಣಾತ್ಮಕದ್ದೋ ಕಾಲವೇ ನಿರ್ಧರಿಸುತ್ತದೆ. 


ಇಲ್ಲಿ ಇನ್ನೊಂದು ಗಮನಿಸಬೇಕಾದುದ್ದು ಮನುಷ್ಯನ ಸ್ವಾರ್ಥತನ. ಇಂತಹ ಸಂಕಟ ಸಂದರ್ಭಗಳನ್ನು ತನ್ನ ಒಳಿತಿಗೆ, ಲಾಭಕ್ಕೆ ಬಳಸಿಕೊಳ್ಳುವ ಹೀನತನ ಕೆಲವರಲ್ಲಿ ಎದ್ದು ಕಾಣುತ್ತದೆ. ಇದನ್ನೇ ತಾಯಿ ಹೃದಯವಂತಿಕೆ ಇರೋ, ಜೀವಪರ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಈ ರೀತಿ ಹೇಳುತ್ತಾರೆ: ನಾವು ಎಷ್ಟು ಕೆಟ್ಟ ರಾಜಕಾರಣಿಗಳನ್ನು, ಅಧಿಕಾರ ಶಾಹಿಯನ್ನು ನಿರ್ಮಾಣ ಮಾಡಿದ್ದೇವೆಂದರೆ, ಅತಿವೃಷ್ಟಿ, ಅನಾವೃಷ್ಟಿ, ಬರ, ಭೂಕಂಪ, ಯುದ್ಧ ಮೊದಲಾದ ಯಾವುದೇ ವಿಪತ್ತು ಬಂದರೂ ಅವರು ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ. 


ಹೌದು, ಎಂದೂ ಕಾಣದ ಭೀಕರ ಮಳೆಗೆ ಕೇರಳ ಮತ್ತು ಕೊಡಗಿನ ಜನರು ತತ್ತರಿಸಿ ಹೋಗಿದ್ದಾರೆ. ಪ್ರವಾಹ, ಭೂಕುಸಿತದಿಂದ ಮನೆಮಠಗಳನ್ನು ಕಳೆದುಕೊಂಡು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಹಳ್ಳಿಗಳು ಪಟ್ಟಣಗಳನ್ನೆದೆ ಎಲ್ಲವೂ ಜಲಾವೃತಗೊಂಡಿವೆ. ರಸ್ತೆಗಳು ಕೊಚ್ಚಿ ಹೋಗಿವೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಜನರು ನಿರಾಶ್ರಿತರಾಗಿದ್ದಾರೆ. ಕೆಲವೊಂದು ಪ್ರಕಟಿತ ಸುದ್ದಿಗಳ ಪ್ರಕಾರ ಸುಮಾರು ೫೪ ಸಾವಿರಕ್ಕೂ ಹೆಚ್ಚು ಜನರು ಈ ಮಹಾಮಳೆಯಿಂದ ತೊಂದರೆಗೆ ಈಡಾಗಿದ್ದಾರೆ. ಈ ಪ್ರವಾಹದಿಂದ ಉಂಟಾದ ಒಟ್ಟು ನಷ್ಟ ಸುಮಾರು ೩,೦೦೦ ಕೋಟಿಯೆಂದು ಅಂದಾಜಿಸಲಾಗಿದೆ. ಈ ನಷ್ಟ ಕಷ್ಟ ಏನೇ ಇರಲಿ, ಮನುಷ್ಯ ಮತ್ತೆ ಎದ್ದು ಬರುತ್ತಾನೆ. ಮಹಾ ಅತಿವೃಷ್ಟಿಗಳು ಬಂದು ಎಲ್ಲವನ್ನೂ ನಾಶ ಮಾಡಿ ಹೋದರೂ ಮನುಷ್ಯ ಚೆಂಡಿನಂತೆ ಪುಟಿದೇಳುತ್ತಾನೆ. ಈ ಅತಿರೇಕಗಳು ಮನುಷ್ಯನಲ್ಲಿ ಅಂತಹ ದೃಢತೆ, ಛಲ ಮೂಡಿಸುವುದರಲ್ಲಿ ಎರಡು ಮಾತಿಲ್ಲ. ಅಂತಹ ಮನೋಭಾವವನ್ನು ನಮ್ಮ ಜನರಲ್ಲಿ ವಿಶೇಷವಾಗಿ ಕೇರಳ ಮತ್ತು ಕೊಡಗಿನ ಜನರಲ್ಲಿ ನಾವು ಕಾಣುತ್ತಿದ್ದೇವೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಅಷ್ಟು ಮಾತ್ರವಲ್ಲ, ಸಂಕಷ್ಟದಲ್ಲಿ ಸಿಲುಕಿರುವ ಜನರ ಕೈಹಿಡಿದು ಎಬ್ಬಿಸುವಲ್ಲಿ ಹಿಂದು ಮುಂದು ನೋಡದೆ, ಸಹಾಯದ ಹಸ್ತ ಚಾಚಿ ನಿಂತಿರುವ ಸಾವಿರಾರು ಉದಾರಿಗಳು ಸಹ ನಿಜವಾಗಲೂ ಸ್ತುತ್ಯರ್ಹ. 


ಈ ಎಲ್ಲದರ ನಡುವೆ ಈ ಒಂದು ಪಕೃತಿಯ ವಿಕೋಪಕ್ಕೆ ಜನರು ಸ್ಪಂದಿಸಿದ ರೀತಿ ನಿಜವಾಗಲೂ ಒಂದು ಸಂಶೋಧನೆಗೆ ಆಸಕ್ತಿಕರ ವಿಷಯವೆಂದೇ ಹೇಳಬಹುದು. ಒಂದು ಗುಂಪಿನ ಜನರು ವಿಕೋಪಕ್ಕೆ ಗುರಿಯಾದ ಜನರ ರಕ್ಷಣೆಗೆ ಮುನ್ನುಗ್ಗಿ ಸಹಾಯಹಸ್ತವನ್ನು ಚಾಚಿದರೆ ಇನ್ನೂ ಹಲವರು ದೂರದಲ್ಲೇ ಇದ್ದು, ತಮ್ಮ ಕೈಲಾಗುವ ಸಹಾಯವನ್ನು ಮಾಡಿದ್ದು ನಿಜವಾಗಲೂ ಉಲ್ಲೇಖಾರ್ಹ. ನಿರಾಶ್ರಿತರ ಸಹಾಯಕ್ಕಾಗಿ ಹಣ ಸಂಗ್ರಹಿಸುವಂತಹ ಸಂದರ್ಭದಲ್ಲಿ ಒಬ್ಬ ಹೆಣ್ಣು ಮಗಳು ತಾನು ಹಾಕಿಕೊಂಡಿದ್ದ ಒಡವೆಗಳನ್ನು ಬಿಚ್ಚಿಕೊಟ್ಟ ಘಟನೆಯನ್ನು ಕೇಳಿದ್ದೇವೆ. ಇನ್ನೊಂದು ಹೆಣ್ಣು ಮಗು ತಾನು ಸೈಕಲ್ ಕೊಳ್ಳಲು ಕೂಡಿ ಇಟ್ಟಿದ ಹಣವನ್ನೇ ಸಂತ್ತಸ್ರರ ನೆರವಿಗೆ ದಾನ ಮಾಡಿದ್ದು ಕೂಡ ನಮಗೆ ತಿಳಿದಿದೆ. ನಿರಾಶ್ರಿತರ ಪುನರ್ವಸತಿಗೆ ಹಣ ಸಹಾಯಕ್ಕಾಗಿ ಬಟ್ಟೆ ವ್ಯಾಪಾರಿಯ ಹತ್ತಿರ ಹೋದಾಗ, ಆತ ತನ್ನ ಇಡೀ ಅಂಗಡಿಯನ್ನೇ ಬಿಟ್ಟುಕೊಟ್ಟ ಉದಾಹರಣೆ ಕೂಡ ನಮ್ಮ ಮುಂದಿದೆ. ನವ ವಿವಾಹಿತ ಜೋಡಿ ತಮ್ಮ ಬಂಗಾರದ ಒಡವೆಗಳನ್ನೇ ನೆರೆ ಸಂತ್ರಸ್ತರ ನೆರವಿಗೆ ಕೊಡುಗೆಯಾಗಿ ನೀಡಿದ್ದಾರೆ. ಚರ್ಚ್, ದೇವಸ್ಥಾನ, ಮಸೀದಿ ಶಾಲೆಗಳು ನಿರಾಶ್ರಿತರ ಆಶ್ರಯ ತಾಣಗಳಾಗಿವೆ. ಪ್ರವಾಹ ಸಂತ್ರಸ್ತರ ನೆರವಿನ ಕಾರ್ಯದಲ್ಲಿ ಸಿನಿಮಾ, ರಾಜಕೀಯ, ಸಾಮಾಜಿಕ ಸಂಘಗಳ ಸದಸ್ಯರು ಕೂಡ ಹಿಂದೆ ಬಿದ್ದಿಲ್ಲ. ಅನೇಕರು ತಮ್ಮ ಟ್ವೀಟ್‍ಗಳ ಮೂಲಕ ಕೇರಳದ ಪ್ರವಾಹ ಪೀಡಿತರ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ. ಜತೆಗೆ ಸಹಾಯವಾಣಿಗಳ ಸಂಖ್ಯೆಯನ್ನೂ ಪ್ರಕಟಿಸುವ ಮೂಲಕ ತಮ್ಮ ಕೈಲಾದ ರೀತಿಯಲ್ಲಿ ನೆರವಾಗಲು ಪ್ರಯತ್ನಿಸಿದ್ದಾರೆ. ಸಂತ್ರಸ್ತರ ಕಷ್ಟಕ್ಕೆ ಮನ ಮಿಡಿದ ಕೆಲ ಚಿತ್ರನಟ, ನಟಿಯರು, ಕ್ರೀಡಾಪಟುಗಳು ತಂತಮ್ಮ ಸಂಭಾವನೆಯ ಹಣವನ್ನು ಸಂತ್ರಸ್ಥರಿಗೆ ಕೊಡಲು ನಿರ್ಧರಿಸಿರುವುದು ಮಾತ್ರವಲ್ಲ, ಅಭಿಮಾನಿಗಳಿಗೂ ನೆರವಾಗುವಂತೆ ಮನವಿ ಮಾಡುತ್ತಿದ್ದಾರೆ. 


ಇಷ್ಟೆಲ್ಲಾ ಒಳ್ಳೆತನದಲ್ಲೂ ಕೆಲ ರಾಜಕೀಯ ಪುಡಾರಿಗಳು, ಪ್ರಕೃತಿಯ ವಿಕೋಪಕ್ಕೆ ಅವೈಜ್ಞಾನಿಕ ಕಾರಣಗಳನ್ನು ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದನದ ಮಾಂಸವನ್ನು ನಡು ರಸ್ತೆಯಲ್ಲಿ ತಿಂದುದಕ್ಕಾಗಿ, ಶಬರಿಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ಅನುಮೋದಿಸಿದಕ್ಕಾಗಿ, ಪಾಪ ನಿವೇದನೆಯ ಸಂಸ್ಕಾರವನ್ನು ನಿಷೇಧಿಸಲು ಮಾಡಿದ ಹೋರಾಟದ ಪ್ರತಿಫಲವಾಗಿ ಈ ಪ್ರವಾಹವೆಂದು ಹೇಳಿ ತಮ್ಮ ದಡ್ಡತನವನ್ನು ಪ್ರದರ್ಶಿಸಿದ್ದಾರೆ. ಕೆಲ ಧರ್ಮಾಂಧರು, ಕೇರಳದಲ್ಲಿ ಬಹು ಜನರು ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳಿಗೆ ಸೇರಿದವರಾಗಿರುವುದರಿಂದ ಯಾವುದೇ ರೀತಿಯ ಸಹಾಯವನ್ನು ನೀಡಬಾರದೆಂದು ಕರೆಕೊಟ್ಟಿದ್ದಾರೆ. ಕೆಲವೊಂದು ಸಂಘಸಂಸ್ಥೆಗಳು ಕೇರಳ ಪ್ರವಾಹ ಸಂತ್ರಸ್ತರಿಗೆ ಸಂಸ್ಥೆಯ ಸಹಾಯ ಎಂದು ಹೇಳಿ ಗುಜರಾತ್ ಪ್ರವಾಹದ ಪೋಟೋಗಳನ್ನು ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಪರಿಹಾರ ಹಣವನ್ನು ಬಿಡುಗಡೆ ಮಾಡಲು ಮಲತಾಯಿ ಧೋರಣೆ ಅನುಸರಿಸುತ್ತಿರುವ ಸರ್ಕಾರ, ಕೇರಳ ಹಾಗು ಕೊಡಗಿಗೆ ನ್ಯಾಯಯುತವಾಗಿ ನೀಡಬೇಕಾದ ಅರ್ಥಿಕ ಸಹಾಯ ನೀಡದೆ ಮತ್ತು ಆರ್ಥಿಕ ಸಹಾಯ ಮಾಡಲು ಮುಂದೆ ಬಂದವರನ್ನು ಸಹ ಉತ್ತೇಜಿಸದೆ ಕೀಳು ರಾಜಕೀಯದಲ್ಲಿ ಮಗ್ನವಾಗಿದೆ. 


ಕೊನೆಗೆ ಮಳೆ ಬಂದರೂ ಶಾಪ, ಬಾರದಿದ್ದರೂ ಶಾಪ ಎನ್ನುವಂತಹ ಪರಿಸ್ಥಿತಿ ಏಕೆ ಉಂಟಾಗಿದೆ ಎನ್ನುವುದರ ಬಗ್ಗೆ ಸರ್ಕಾರ ಮತ್ತು ಜನರು ಆಲೋಚಿಸಬೇಕಾಗಿದೆ. ಕೇರಳದ ಮಹಾ ಪ್ರವಾಹ ನಮಗೆ ಎಚ್ಚರಿಕೆಯ ಘಂಟೆಯಾಗಬೇಕಿದೆ. ಪ್ರಕೃತಿಯ ಜತೆಗೆ ಹೊಂದಾಣಿಕೆಯ ಜೀವನವನ್ನು ನಡೆಸದೆ, ಪ್ರಕೃತಿಯನ್ನು ನಮ್ಮ ಲಾಭಕ್ಕಾಗಿ ನಾಶ ಮಾಡುತ್ತಿದ್ದೇವೆ. ಪ್ರಕೃತಿಯ ಬಗ್ಗೆ ಕಾಳಜಿ ವಹಿಸುವಂತಹ ಅಭಿವೃದ್ಧಿಯ ಸೂತ್ರಗಳನ್ನು ನಾವು ಜಾರಿಗೊಳಿಸದೆ ಪ್ರಕೃತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೇವೆ. ಇನ್ನೊಂದು ಕಡೆ ಹವಾಮಾನ ವೈಪರೀತ್ಯದ ಮುನ್ನೆಚ್ಚರಿಕೆಗಳಿಗೆ ಸೂಕ್ತ ಗಮನ ಕೊಡದೇ ಇರುವುದು ಈ ರೀತಿಯ ಅನಾವೃಷ್ಟಿ ಮತ್ತು ಅತಿವೃಷ್ಟಿಗೆ ಮತ್ತೊಂದು ಕಾರಣ. ಪ್ರವಾಹಕ್ಕೆ ಪರಿಸರ ತಜ್ಞರು ಪಟ್ಟಿ ಮಾಡಿರುವ ಕಾರಣಗಳೆಂದರೆ: ನದಿ ಪಕ್ಕ ಮರಳು ಗಣಿಗಾರಿಕೆ, ಅರಣ್ಯ ಮತ್ತು ಹುಲ್ಲುಗಾವಲುಗಳ ನಾಶ, ನಗರ ಪಟ್ಟಣ ಮತ್ತು ಹಳ್ಳಿಗಳನ್ನದೆ ಎಲ್ಲೆಡೆ ಮನಬಂದಂತೆ ಏಳುತ್ತಿರುವ ವಸತಿ ಮತ್ತು ವಾಣಿಜ್ಯ ಕಟ್ಟಡಗಳು, ಅಣೆಕಟ್ಟೆಗಳಲ್ಲಿ ಹೂಳು ತೆಗೆಯದಿರುವುದು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಇತ್ಯಾದಿ. ಪರಿಸರ ತಜ್ಞ ಮಾಧವ್ ಗಾಡ್ಗೀಲ್ ಅವರು "ವ್ಯಾಪಕ ಪ್ರಮಾಣದಲ್ಲಿ ಕಲ್ಲುಗಳನ್ನು ಕೊರೆದಿರುವುದು ಮತ್ತು ತಗ್ಗುಗಳನ್ನು ತೋಡಿರುವುದು ಭೂಕುಸಿತಕ್ಕೆ ಕಾರಣವಾಗಿ ಕೇರಳದ ಪ್ರವಾಹವನ್ನು ಹದಗೆಡುವಂತೆ ಮಾಡಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. 


ಕೊನೆಗೆ, ಮೊನ್ನೆ ಫೇಸ್ಬುಕ್ಕಿನಲ್ಲಿ ತೇಲಿ ಬಂದ ವಿಡಿಯೋ ತುಣುಕೊಂದನ್ನು ನೋಡಿದೆ. ಧರ್ಮಾಂಧನಾಗಿ, ಒಂದು ಕೋಮಿಗೆ ಸೇರಿದ ಜನರನ್ನು ದ್ವೇಷಿಸುತ್ತಿದ್ದ ಮನುಷ್ಯನೊಬ್ಬ, ನಾನು ಇನ್ನು ಮುಂದೆ ಮಾನವೀಯತೆಯ ಪ್ರವರ್ತಕನಾಗಿ ಬಾಳುತ್ತೇನೆ ಎಂದು ಸಾಕ್ಷಿ ನೀಡುವ ವಿಡಿಯೋ ಅದು. ಆಗಿದ್ದು ಇಷ್ಟು. ಪ್ರವಾಹದ ಸಂದರ್ಭದಲ್ಲಿ ನಿರಾಶ್ರಿತನಾಗಿದ್ದಾಗ ಮುಸ್ಲಿಂ ಕೋಮಿಗೆ ಸೇರಿದ ಕುಟುಂಬವೊಂದು ಅವನ ನೆರವಿಗೆ ಧಾವಿಸಿ ಆಶ್ರಯವನ್ನು ನೀಡಿದ್ದಲ್ಲದೆ, ಊಟ ಉಪಚಾರಗಳನ್ನು ನೀಡಿ ಸತ್ಕರಿಸಿ ಅವನ ಜೀವ ಉಳಿಸಿತ್ತು. ಈ ಅನುಭವ ಅವನ ಪರಿವರ್ತನೆಗೆ ಕಾರಣವಾಯಿತು. ಕೊನೆಗೆ, ಕೇಳಿಕೊಳ್ಳಬೇಕಾದ ಪ್ರಶ್ನೆಯಿದು: ನಾವೆಲ್ಲರೂ ಮನುಷ್ಯರು ಎಂಬ ಅರಿವು ನಮಗೆ ಮೂಡಲು ಇಂತಹ ಪಕೃತಿ ವಿಕೋಪಗಳೇ ಕಾರಣವಾಗಬೇಕೇ?








ಕಿರು ಧರ್ಮಸಭೆಗಳು




¨  ಲ್ಯಾನ್ಸಿ ಫೆರ್ನಾಂಡಿಸ್ ಯೇ. ಸ.

ನಾವೆಲ್ಲರೂ ಬೇರೆ ಬೇರೆ ಜೀವನ ಶೈಲಿಯನ್ನು ಆರಿಸಿ ಯೇಸುವನ್ನು ಹಿಂಬಾಲಿಸಲು ಹಾತೊರೆಯುತ್ತೇವೆ. ಕೆಲವರು ಸನ್ಯಾಸಿ ಜೀವನವನ್ನು ಅಪ್ಪಿಕೊಂಡರೆ, ಇನ್ನು ಕೆಲವರು ಕೌಟುಂಬಿಕ ಜೀವನವನ್ನು ಆರಿಸುತ್ತಾರೆ. ಇನ್ನು ಕೆಲವರು ಅವಿವಾಹಿತರಾಗಿ ಸೇವೆ ಮಾಡಲು ಇಚ್ಛಿಸುತ್ತಾರೆ. ಯಾವ ಹಾದಿಯೂ ಸುಲಭವಲ್ಲ. ಪ್ರತಿಯೊಂದರಲ್ಲೂ ಅದರದೇ ಆದ ಸುಖ ದುಃಖ ಕಷ್ಟ-ನೋವುಗಳಿವೆ. ಆದರೆ ನಾವು ಪ್ರತಿಯೊಬ್ಬರೂ ಒಂದು ಕುಟುಂಬದ ಸದಸ್ಯರಾಗಿ ಈ ಭೂಲೋಕದಲ್ಲಿ ಜನಿಸುತ್ತೇವೆ.
ಆದಿಕಾಂಡ (೨:೨೪) ಹೇಳುವ ಪ್ರಕಾರ ದೇವರು ಈ ಭೂಲೋಕವನ್ನು ಸೃಷ್ಟಿಸಿದ ಮೇಲೆ ಕೊನೆಗೆ ತನ್ನದೇ ಸ್ವರೂಪದಲ್ಲಿ ಮಾನವನನ್ನು ಆದಾಮ ಮತ್ತು ಏವಳಾಗಿ ಈ ಭೂಲೋಕದಲ್ಲಿ ಇರಿಸಿದರು. ಇಲ್ಲಿ ವರ್ಣಿಸಲಾಗಿರುವ ಸೃಷ್ಟಿಕಾರ್ಯವನ್ನು ಇನ್ನೊಂದು ದೃಷ್ಟಿಕೋನದಿಂದ ನೋಡಿದರೆ, ಏವಳನ್ನು ಸೃಷ್ಟಿಸುವುದರ ಮೂಲಕ ದೇವರು ಅಂದು ಒಂದು ಕುಟುಂಬವನ್ನು ವಿಶೇಷ ವರವಾಗಿ ಸೃಷ್ಟಿಸಿದರು. ಈ ವರದ ಮೂಲಕ ಇವತ್ತಿಗೂ ನಾವು ಒಂದು ಕುಟುಂಬದಲ್ಲಿ ಜನಿಸಿ ದೇವರನ್ನು ಅರಿಯಲು ಸಾಧ್ಯವಾಗುತ್ತದೆ.
ಕುಟುಂಬವು ಒಂದು ಕಿರು ಧರ್ಮಸಭೆ ಹೇಗೆ?
ಫೋಪ್ ಫ್ರಾನ್ಸಿಸ್ ನವರು ಈ ವರ್ಷ ಕುಟುಂಬದ ಬಗ್ಗೆ ಚರ್ಚಿಸಲು ಒಂದು ಸಭೆಯನ್ನು ಕರೆದಿದ್ದಾರೆ. ಧರ್ಮಸಭೆಯಲ್ಲಿ ಕುಟುಂಬದ ಬಗ್ಗೆ ಬೋಧನೆ ನೀಡುವ ಪರಿಪತ್ರಗಳೆಂದರೆ (Familiaris Consortio - ಕುಟುಂಬವು ಒಂದು ಸಮುದಾಯ) ಹಾಗೂ ವ್ಯಾಟಿಕನ್ ಮಹಾಸಭೆಯು Gaudium et Spes ನಲ್ಲಿ ಮೊತ್ತ ಮೊದಲನೆಯ ಬಾರಿ ಕುಟುಂಬವು ಒಂದು ಕಿರು ಧರ್ಮಸಭೆ ಎಂದು ಬಣ್ಣಿಸಿದೆ.
ನಾವು ಕ್ರೈಸ್ತ ಕುಟುಂಬದಲ್ಲಿ ಜನಿಸಿದರೆ ಮಾತ್ರ ಕ್ರೈಸ್ತರಾಗುವುದಿಲ್ಲ. ನಾವು ಜ್ಞಾನಸ್ನಾನ ಪಡೆದು ಧರ್ಮಸಭೆಯ ಸದಸ್ಯರಾಗುತ್ತೇವೆ ಅಷ್ಟೇ. ನಿಜವಾದ ಕ್ರೈಸ್ತನು ದೃಢೀಕರಣ ಸಂಸ್ಕಾರದ ಪ್ರಭಾವದಿಂದ ಯೇಸುವಿನ ಬೋಧನೆಯಂತೆ ಜೀವಿಸಲು ಪ್ರಯತ್ನಿಸಿ ಈ ಲೋಕದಲ್ಲಿ ಇನ್ನೊಬ್ಬ ಕ್ರಿಸ್ತನಾಗುವುದರಲ್ಲಿ ಕ್ರೈಸ್ತತ್ವ ಇದೆ.
ಕ್ರೈಸ್ತ ಧರ್ಮದ ಪರಿಪಾಲನೆಯನ್ನು ತಾಯಿಯ ಮುಖಾಂತರ ನಾವು ಕಲಿತುಕೊಳ್ಳುತ್ತೇವೆ. ಮನೆಯಲ್ಲಿ ಪ್ರಾರ್ಥನೆ, ಧಾರ್ಮಿಕತೆ ಇಲ್ಲದಲ್ಲಿ ನಾವು ಕ್ರೈಸ್ತ ವಿಶ್ವಾಸದಲ್ಲಿ ಬೆಳೆದು ಬರಲು ಸಾಧ್ಯವಿಲ್ಲ. ತಂದೆ ತಾಯಂದಿರು ಭಕ್ತಿ ಪ್ರಾರ್ಥನೆಗೆ ಮಹತ್ವ ಕೊಟ್ಟರೆ ಮಾತ್ರ ಮಕ್ಕಳು ಧಾರ್ಮಿಕತೆಯಲ್ಲಿ ಬೇರೂರುತ್ತಾರೆ. ಆದ್ದರಿಂದ ಕುಟುಂಬವು ಒಂದು ಕಿರು ಧರ್ಮಸಭೆಯಾಗಿದೆ. ಪೋಪ್ ಹನ್ನೆರಡನೆಯ ಪಿಯುಸ್ ನವರು - ಕುಟುಂಬದಲ್ಲಿ ತಾಯಿಯು ಹೃದಯ ಇದ್ದಂತೆ, ಆದರೆ ತಂದೆ ಶಿರವಿದ್ದಂತೆ ಎನ್ನುತ್ತಾರೆ.
ಎಷ್ಟು ಸಲ ದೇವಾಲಯಕ್ಕೆ ಬಂದರೂ ಮನೆಯಲ್ಲಿ ಪ್ರಾರ್ಥನೆಯ ರುಚಿ, ದೈವಭಕ್ತಿ ಇಲ್ಲದಿದ್ದರೆ, ಮಕ್ಕಳು ಕೂಡ ಅದೇ ಮಾರ್ಗವನ್ನು ಪಾಲಿಸುತ್ತಾರೆ. ಯಾವ ಕುಟುಂಬದಲ್ಲಿ ಪ್ರಾರ್ಥನೆ ಇಲ್ಲವೋ ಆ ಕುಟುಂಬದಲ್ಲಿ ದಂಪತಿ ಮಕ್ಕಳಲ್ಲಿ ಐಕ್ಯತೆ ಇರುವುದಿಲ್ಲ. ತಂದೆ ತಾಯಿಯು, ಮಕ್ಕಳಿಗೆ ದೇವರ ಸ್ವರೂಪವಾಗಿರುತ್ತಾರೆ. ತಂದೆ ತಾಯಿಯ ನಡವಳಿಕೆ ಮಗುವಿನಲ್ಲಿ ದೇವರ ಬಗೆಗಿನ ಕಲ್ಪನೆಗೆ ಕಾರಣವಾಗುತ್ತದೆ. ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ (ದೈಹಿಕ, ಮಾನಸಿಕ, ಸಾಮಾಜಿಕ ಇತ್ಯಾದಿ) ಅಭಿವೃದ್ಧಿ ಆಗುವುದು ಕುಟುಂಬದಲ್ಲಿ. ಆ ಮೊದಲ ಹತ್ತು ವರ್ಷಗಳು ಮಕ್ಕಳ ಮೇಲೆ ಬಹಳ ಪರಿಣಾಮ ಬೀರುತ್ತವೆ. ಹಾಗಾಗಿ ಕುಟುಂಬ ನಮಗೆಲ್ಲರಿಗೆ ಭರವಸೆ ಹಾಗೂ ಜವಾಬ್ದಾರಿಯನ್ನು ಕಲಿಸುವ ಸಾಧನ. ದೇವರೇ ಅದರ ಬುನಾದಿ. ಪರಮ ತ್ರಿತ್ವದ ಪ್ರೀತಿಯ ಸಹಬಾಳ್ವೆಯೇ ಕೌಟುಂಬಿಕ ಜೀವನಕ್ಕೆ ಮಾದರಿ.
ಇಂದಿನ ಕುಟುಂಬಗಳ ಪರಿಸ್ಥಿತಿ:
ಕುಟುಂಬ ಸಮಾಜದ ಅಂಗ. ಏವಳನ್ನು ದೇವರು ಅದಾಮನ ಪಕ್ಕೆಯ ಎಲುಬಿನಿಂದ ಸೃಷ್ಟಿಸಿದರು. ಒಬ್ಬ ಚಿಂತಕ ಹೇಳುತ್ತಾನೆ, ಇದರ ಅರ್ಥ ಆದಾಮನಲ್ಲಿ ಒಂದು ಎಲುಬು ಕಮ್ಮಿ ಇದೆ, ಏವಳಲ್ಲಿ ಒಂದು ಎಲುಬು ಆದಾಮನದಿದೆ. ಆದ್ದರಿಂದ ಇಬ್ಬರಲ್ಲೂ ನ್ಯೂನತೆ ಇದೆ. ದೇವರು ಇದನ್ನು ಬೇಕೆಂತಲೇ ಮಾಡಿರಬಹುದೇ? ದೇವರ ಒಲವು ಇಷ್ಟೇ - ಇಬ್ಬರೂ ಸಮಾನರು. ದೇವರೇ ದಂಪತಿಗೆ ಒಡೆಯ.
ಇವತ್ತು ಕೌಟುಂಬಿಕ ಜೀವನಕ್ಕೆ ಹಲವಾರು ಸವಾಲುಗಳು ಎದುರಾಗಿವೆ.
೧. ಹೆಚ್ಚುತ್ತಿರುವ ವಿವಾಹ ವಿಚ್ಛೇದನೆಗಳು
೨. ಅಂತರ್-ಧರ್ಮೀಯ ವಿವಾಹಗಳು
೩. ಮಕ್ಕಳ ಪಾಲನೆ ಪೋಷಣೆಯ ಶೈಲಿ (ತಪ್ಪು ದಾರಿ ಹಿಡಿದು ದೂರ ಹೋಗುತ್ತಿರುವ ಮಕ್ಕಳು)
೪. ಮದುವೆ ಮುಂಚಿನ ಶಾರೀರಿಕ ಸಂಬಂಧ
೫. ಪ್ರೌಢಾವಸ್ಥೆಯಲ್ಲಿ ತಾಯ್ತನ
೬. ಮರುವಿವಾಹಗಳು
೭. ಸಲಿಂಗಕಾಮ
೮. ತಾಂತ್ರಿಕ ಜಗತ್ತಿನಲ್ಲಿ ತಾಯಿತನಕ್ಕೆ ಕಡಿಮೆಯಾಗುತ್ತಿರುವ ಬೇಡಿಕೆ

ಇಂದಿನ ಕುಟುಂಬಗಳ ಪರಿಸ್ಥಿತಿಗೆ ಕಾರಣಗಳು:
ಈ ಮೇಲಿನ ಸವಾಲುಗಳು ಇಂದು ಫ್ಯಾಶನ್ ಆಗಿವೆ. ಏಕೆ? ಪ್ರೇಷಿತರ ಕಾರ್ಯಕಲಾಪದಲ್ಲಿ ನಾವು ನೋಡುವಂತೆ, ಆದಿ ಧರ್ಮಸಭೆಯಲ್ಲಿ ಇತರ ಧರ್ಮದವರು ಯೇಸುವಿನ ಹಿಂಬಾಲಕರನ್ನು ಕ್ರೈಸ್ತರೆಂದು ಕರೆದಾಗ ಅವರ ಪ್ರಕಾರ ಕ್ರೈಸ್ತ ಕುಟುಂಬಗಳ ಜೀವನ ಶೈಲಿ ಎಷ್ಟು ಮೆಚ್ಚುವಂತದ್ದು ಆಗಿರಬೇಕಲ್ಲವೇ?
ಆದರೆ ಇಂದು ದಂಪತಿಗಳಲ್ಲಿ ಐಕ್ಯತೆ ಇಲ್ಲದಾಗಿದೆ. ಮಕ್ಕಳು ತಮ್ಮದೇ ಲೋಕದಲ್ಲಿ ಇದ್ದಾರೆ. ಮದುವೆ ದಿನ ದಂಪತಿಗಳು ಮಾಡಿದ ಪ್ರತಿಜ್ಞೆಯನ್ನು ಪಾಲಿಸುವವರೇ ಕಮ್ಮಿಯಾಗಿದ್ದಾರೆ. ದೇವರ ಮುಂದೆ ಮತ್ತು ಸಭಿಕರ ಮುಂದೆ ಮಾಡಿದ ಒಪ್ಪಂದ “ಕಷ್ಟದಲ್ಲಿಯೂ ಸುಖದಲ್ಲಿಯೂ ನಿನ್ನೊಡನೆ ಇರುವೆ. . . “ ಇವತ್ತು ಅರ್ಥ ಕಳೆದುಕೊಂಡಿದೆ. ಪ್ರೀತಿ ಮತ್ತು ಕಾಮುಕತೆಯ ವ್ಯತ್ಯಾಸ ಇಲ್ಲದಾಗಿದೆ. ತಂದೆ ತಾಯಿ ಮಕ್ಕಳಿಗೆ ಸಮಯ ಕೊಡಲು ವಿಫಲರಾಗುತ್ತಿದ್ದಾರೆ.
ಆಧುನಿಕತೆಯು ಕೆಟ್ಟದ್ದಲ್ಲ. ಆದರೆ ಆಧುನಿಕತೆಯಿಂದ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಹೊಸ ಮೌಲ್ಯಗಳು ಕುಟುಂಬವನ್ನು ನಾಶದೆಡೆಗೆ ಸಾಗಿಸುತ್ತಿವೆ. ಸಂಶಯ, ಸ್ವಾರ್ಥವನ್ನು ತಂದುಕೊಟ್ಟಿದೆ. ಇವತ್ತು ಕುಟುಂಬಗಳು ಅರ್ಥಿಕವಾಗಿ ಸುಭದ್ರವಾಗಿವೆ, ಆಧ್ಯಾತ್ಮಿಕವಾಗಿ ಕುಂದುತ್ತಿವೆ. ಟಿ.ವಿ., ಕಂಪ್ಯೂಟರ್, ಮೊಬೈಲ್, ಫೇಸ್ ಬುಕ್ ನಮ್ಮ ಶಾಂತಿಯನ್ನು ನಾಶ ಮಾಡುತ್ತಿವೆ. ಅವುಗಳು ಒಳ್ಳೆಯವು. ಆದರೆ ಅವುಗಳೇ ನಮ್ಮ ಜೀವನದಲ್ಲಿ ದೇವರಿಗಿಂತ ಮುಖ್ಯವಾಗಿ ಮತ್ತು ದೇವರಿಗಿಂತ ಹೆಚ್ಚಿನ ಸ್ಥಾನವನ್ನು ಪಡೆದಾಗ ಅವುಗಳು ಕೆಡುಕನ್ನು ತರುತ್ತವೆ.
ಇವತ್ತು ಈ ಸೌಲಭ್ಯಗಳು ಇದ್ದರೂ ಒಂಟಿತನ ಜನರನ್ನು ಕಾಡುತ್ತಿದೆ. ಸಂಜೆ ಸೀರಿಯಲ್, ಐ.ಪಿ.ಎಲ್. ನಿಂದಾಗಿ ಮನೆಯಲ್ಲಿ ಪ್ರಾರ್ಥನೆಗೆ ಸಮಯ ಇಲ್ಲದಾಗಿದೆ. ಮನೆಯಲ್ಲಿ ಪ್ರತಿಯೊಬ್ಬರಿಗೆ ತಮ್ಮದೇ ಆದ ಕೋಣೆ. ಎಲ್ಲಾ ಕೊಠಡಿಗಳಲ್ಲಿ ಟಿ.ವಿ. ಮನೆಯಲ್ಲಿ ಎಲ್ಲಾ ಸದಸ್ಯರು ಒಟ್ಟಾಗಿ ಬಂದು ಊಟಮಾಡುವ ಸನ್ನಿವೇಶಗಳೂ ಕಡಿಮೆಯಾಗಿವೆ. ಮಕ್ಕಳ ಬಗ್ಗೆ ತಿಳಿದುಕೊಳ್ಳಲು ಅವರ ಕಲಿಕೆಯ ಬಗ್ಗೆ ಒತ್ತು ಕೊಡಲು, ಆತ್ಮೀಯವಾಗಿ ಮಾತನಾಡಲು ತಂದೆ ತಾಯಿಯರಿಗೆ ಸಮಯವಿಲ್ಲ. ಪ್ರತಿಯೊಬ್ಬರೂ ತಮ್ಮದೇ ಲೋಕದಲ್ಲಿ ಬಿಜಿಯಾಗಿದ್ದಾರೆ. ಮಕ್ಕಳು ವಿಡಿಯೋ ಗೇಮ್ಸ್ ಆಡುವುದರಲ್ಲಿ ತಲ್ಲೀನರಾಗಿದ್ದಾರೆ.
ಇವತ್ತು ಹೃದಯಗಳು ಕಲ್ಲಾಗಿವೆ. ಭಾವನೆಗಳೇ ಇಲ್ಲದಾಗಿವೆ. ಎಲ್ಲರೂ ಒಂಟಿತನವನ್ನು ಆಶಿಸುವವರಾಗಿದ್ದಾರೆ. ಮಕ್ಕಳು ತಂದೆತಾಯಿಯರ ಸಂಬಂಧದಿಂದ ಪ್ರಭಾವಿತರಾಗಿ ಕೆಟ್ಟಮಾರ್ಗಗಳನ್ನು, ಕೆಟ್ಟ ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳುಮಾಡುತ್ತಾರೆ. ಇದಕ್ಕೆ ಕಾರಣ ಮಕ್ಕಳಲ್ಲ, ತಂದೆ ತಾಯಿಗಳೇ. ತಂದೆ ತಾಯಂದಿರು ಮಕ್ಕಳ ಮುಂದೆ ಮಾದರಿಯ ಜೀವನ ನಡೆಸಿದರೆ ಅವರು ಕೂಡ ತಂದೆ ತಾಯಿಯರಂತೆ ಆಗುತ್ತಾರೆ. ಮಗ ತಂದೆಯನ್ನು ಅನುಸರಿಸುತ್ತಾನೆ, ಮಗಳು ತಾಯಿಯಂತೆ ಆಗುತ್ತಾಳೆ ಎಂಬುದು ಸತ್ಯವೇ ಸರಿ.
ಒಂದು ಧರ್ಮಕೇಂದ್ರಕ್ಕೆ ಭೇಟಿನೀಡಿದಾಗ ಕಂಡ ಪರಿಸ್ಥಿತಿ ಹೀಗಿತ್ತು. ಒಂದು ದಂಪತಿ, ಮದುವೆಯಾಗಿ ಒಂದು ತಿಂಗಳಲ್ಲೇ ಬೇರೆಯಾಗಿ ಜೀವಿಸುತ್ತಿದ್ದಾರೆ. ಒಂದು ಮನೆ, ಎರಡು ಬಾಗಿಲುಗಳು. ಕ್ಷಮೆ ಮತ್ತು ಹೊಸಬಾಳ್ವೆ ತಿಳಿಯದ ಹಾಗೆ ಜೀವಿಸುತ್ತಿದ್ದಾರೆ. ಹೌದು, ಎಷ್ಟೋ ಮಕ್ಕಳು ತಂದೆ ತಾಯಿಯ ತಪ್ಪಿನಿಂದ ಕ್ರೈಸ್ತ ವಿಶ್ವಾಸವನ್ನು ಬಿಟ್ಟುಬಿಡುತ್ತಿದ್ದಾರೆ. ಅಂತರ್-ಧರ್ಮೀಯ ಮದುವೆಗಳಾಗಿ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೆ ಅದೆಷ್ಟು ದಂಪತಿಗಳು ಮಕ್ಕಳ ಜೀವನವನ್ನು ಹಾಳುಮಾಡಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಸವಾಲುಗಳನ್ನು ನಾವು ಆಳವಾಗಿ ಯೋಚಿಸಿ ಎದುರಿಸಬೇಕಾಗಿದೆ.

ನಾವು ಇಂದು ಉತ್ತರಿಸಬೇಕಾದ ಪ್ರಶ್ನೆಗಳು:
೧) ನಮ್ಮ ಕುಟುಂಬಗಳಲ್ಲಿ ಪ್ರಾರ್ಥನೆಗೆ ಪ್ರಾಮುಖ್ಯತೆ ಇದೆಯೇ?
೨)ತಂದೆ ತಾಯಿ ಮಕ್ಕಳ ಮುಂದೆ ಒಳ್ಳೆಯ ಮಾತುಗಳನ್ನು ಆಡುತ್ತಾರೆಯೇ, ಒಳ್ಳೆಯ ಮಾದರಿಯ ಜೀವನ ನಡೆಸುತ್ತಾರೆಯೇ?
೩) ಕಷ್ಟಗಳು ಬಂದಾಗ ದಾಂಪತ್ಯ ಜೀವನವನ್ನು ಮುಂದುವರಿಸಲು ಪ್ರಯತ್ನಿಸುತ್ತಾರೆಯೇ ಅಥವಾ ತಮ್ಮ ನಡುವೆ ಅಗೌರವದ ವಾತಾವರಣವನ್ನು ಅನುಸರಿಸುತ್ತಾರೆಯೇ?
೪) ತಂದೆ ತಾಯಂದಿರು ವಿಚ್ಛೇದನೆಯ ಹಾದಿ ಹಿಡಿಯುವ ಮೊದಲು  ಕುಟುಂಬದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಮಾಡುತ್ತಾರೆಯೇ?

ಕೌಟುಂಬಿಕ ಜೀವನಕ್ಕೆ ಪವಿತ್ರ ಕುಟುಂಬ ಮತ್ತು ಪರಮ ತ್ರಿತ್ವವು ಮಾದರಿಗಳು:
ಕುಟುಂಬ ಪರಮ ತ್ರಿತ್ವದ ಪ್ರತಿರೂಪ. ಪ್ರತಿಯೊಬ್ಬರಿಗೆ ತಮ್ಮದೇ ಆದ ಪಾತ್ರವಿದೆ. ತಮ್ಮ ತಮ್ಮ ಕರ್ತವ್ಯವನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಆ ಕುಟುಂಬದಲ್ಲಿ ಶಾಂತಿ, ಪ್ರೀತಿ ನೆಲೆಸುತ್ತದೆ. ದೇವರು ಆ ಕುಟುಂಬವನ್ನು ಮುನ್ನಡೆಸುತ್ತಾರೆ. ತಂದೆ ಅಥವಾ ತಾಯಿ ಮನೆಯ ಬಾಸ್ ಅಲ್ಲ. ಅವರು ಬರೀ ವಾರಸುದಾರರು. ದೇವರು ಕೊಟ್ಟ ಕೆಲಸವನ್ನು ಮಾಡುವವರು. ಎಲ್ಲರೂ ಕುಟುಂಬದ ಏಳಿಗೆಯಲ್ಲಿ ತಮ್ಮ ಪಾತ್ರವನ್ನು ಅರಿತಾಗ ಅಲ್ಲಿ ಐಕ್ಯತೆ ನೆಲೆಸುತ್ತದೆ. ಕಷ್ಟಗಳು ಬಂದರೂ ಅವುಗಳನ್ನು ಎದುರಿಸಲು ಸಾಧ್ಯವಾಗುತ್ತದೆ.

ಹಾಗಾದರೆ ಕುಟುಂಬಗಳಲ್ಲಿ ಇರಬೇಕಾದ ನಾಲ್ಕು ಅಂಶಗಳು ಯಾವುವು?
೧) ದೇವರಿಗೆ ಮೊದಲ ಆದ್ಯತೆ ನೀಡುವುದು - ಶ್ರೀಮಂತ ಕುಟುಂಬವಾಗಿರಲಿ, ಬಡವನಾಗಿರಲಿ, ದೇವರಿಗೆ ಮೊದಲ ಸ್ಥಾನ ನೀಡುವ ಕುಟುಂಬದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಯೇಸುವೇ ಹೇಳಿರುವಂತೆ ಎಲ್ಲಿ ಇಬ್ಬರು ಮೂವರು ನನ್ನ ಹೆಸರಿನಲ್ಲಿ ಸೇರುತ್ತಾರೋ ಅಲ್ಲಿ ನಾನು ಇರುವೆ. ಇಲ್ಲಿ ಒಮ್ಮನಸ್ಸು ಅಗತ್ಯ. ದೇವರ ವಾಕ್ಯದ ಸ್ತುತಿ ಇರುವ ಕುಟುಂಬ ಹಣವು ಕೊಡಲಾಗದ ಮನಶಾಂತಿ, ಹೊಂದಾಣಿಕೆ ನೀಡುತ್ತದೆ. ಕುಟುಂಬವು ಸುಭದ್ರವಾಗಿರುತ್ತದೆ. ಮಕ್ಕಳು ಕೂಡ ವಿಶ್ವಾಸದ ಜೀವನದಲ್ಲಿ ಬೆಳೆದು ಧರ್ಮಸಭೆಯ ಸಕ್ರಿಯ ಸದಸ್ಯರಾಗುತ್ತಾರೆ.
೨) ಪ್ರತಿ ಸದಸ್ಯನು ತನ್ನ ಕರ್ತವ್ಯವನ್ನು ಅರಿತು ಮಾಡುವುದು - ಸೇವೆ ಪ್ರೀತಿಯ ಸಂಕೇತ. ಅಲ್ಲಿ ಶಿಸ್ತು, ಮೌಲ್ಯಗಳು, ಒಳ್ಳೆಯ ಗುಣಗಳು ಬೇರೂರುತ್ತವೆ. ಪ್ರತೀ ಸದಸ್ಯನು ಚಿಕ್ಕ ಪುಟ್ಟ ಸೇವೆ ಮಾಡಿದರೆ ಕುಟುಂಬಕ್ಕೆ ಹಿತ. ಯೊವಾನ್ನ ೧೩: ೩೪-೩೫ ’ಒಬ್ಬರನೊಬ್ಬರು ಪ್ರೀತಿಸುವುದರ ಮುಖಾಂತರ ನೀವು ನನ್ನ ಶಿಷ್ಯರೆನಿಸಿಕೊಳ್ಳುವಿರಿ’.
ಹೆಣ್ಣು - ಒಂದು ಕುಟುಂಬದಲ್ಲಿ ಹೆಣ್ಣು ತಾಯಿಯ, ಹೆಂಡತಿಯ ಮತ್ತು ಶಿಕ್ಷಕಿಯ ಪಾತ್ರಗಳನ್ನು ಹೊಂದಿದ್ದಾಳೆ. ಮಕ್ಕಳಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸುವ ಕರ್ತವ್ಯ ಅವಳದು. ಮಕ್ಕಳನ್ನು ತಿದ್ದಿ ಸರಿದಾರಿಯನ್ನು ತೋರಿಸುವವಳು ಅವಳು.
ಗಂಡು - ಒಬ್ಬ ಗಂಡನಾಗಿ ಮತ್ತು ತಂದೆಯಾಗಿ ಕುಟುಂಬದ ಏಳಿಗೆಗಾಗಿ ಶ್ರಮಿಸಬೇಕು. ಅವನು ಕುಟುಂಬವನ್ನು ಪ್ರಾರ್ಥನೆಗೆ, ಊಟಕ್ಕೆ ಮನೋರಂಜನೆಗೆ ಸೇರಿಸುವ ಕರ್ತವ್ಯ ಹೊಂದಿದ್ದಾನೆ. ಮಕ್ಕಳಿಗೆ ಸರಿದಾರಿ ತೋರಿಸಿ, ಬುದ್ದಿ ಮಾತು ಹೇಳುವುದು, ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡಿಕೊಳ್ಳುವುದು ಅವನ ಕರ್ತವ್ಯ.
ಹಿರಿಯರು - ಹಿರಿಯರು ಮನೆಯ ನಿಧಿ ಇದ್ದಂತೆ. ಅವರ ಜೀವನ ಶೈಲಿಯಿಂದ ಮಕ್ಕಳು ಕಲಿಯುತ್ತಾರೆ. ಅವರ ಮಾದರಿ ಇಡೀ ಕುಟುಂಬಕ್ಕೆ ದಾರಿದೀಪ. ನಾಲ್ಕನೆ ಕಟ್ಟೆಳೆಯನ್ನು ಪಾಲಿಸುವುದೆಂದರೆ - ಬರೀ ತಂದೆ ತಾಯಿಗೆ ಗೌರವ ಕೊಡುವುದಲ್ಲ, ಅವರನ್ನು ಮುದಿ ಪ್ರಾಯದಲ್ಲಿ ಚೆನ್ನಾಗಿ ನೋಡಿಕೊಳ್ಳುವುದು ಕೂಡ ಅದರಲ್ಲಿ ಅಡಗಿದೆ.
೩) ತಾಳ್ಮೆ ಮತ್ತು ಕ್ಷಮೆ ಎಂಬ ಎರಡು ಮಾತ್ರೆಗಳು: ಸಮಸ್ಯೆಗಳು ಬಂದಾಗ, ಸಹನೆ ಬೇಕಾದಾಗ ತಾಳ್ಮೆ ಮತ್ತು ಕ್ಷಮೆ ಇದ್ದಲ್ಲಿ ಯಾವುದೇ ಸಮಸ್ಯೆಯನ್ನು, ಗೊಂದಲವನ್ನು ಪರಿಹರಿಸಲು ಸಾಧ್ಯವಾಗುತ್ತದೆ. ದುಃಖ, ಕಷ್ಟ, ನೋವು, ನಲಿವು, ಜಗಳವನ್ನು ಪರಿಹರಿಸಲು ಸಾಧ್ಯಮಾಡುತ್ತದೆ. ಒಳ್ಳೆಯ ಮಾತುಗಳು ಕ್ಷಮೆಗೆ ದಾರಿ ಮಾಡಿಕೊಡುತ್ತವೆ.
೪) ತ್ಯಾಗ ಎಂಬ ಅಪ್ಲಿಕೇಷನ್ - ಮೊಬೈಲ್ ಬಳಸುವ ನಮಗೆ ’‌ಅಪ್ಲಿಕೇಷನ್’ (App) ಏನೆಂದು ತಿಳಿದಿರುತ್ತದೆ. ತ್ಯಾಗವು ಎಲ್ಲವನ್ನು ಸಹಿಸಿ ಪರರ ಹಿತವನ್ನು ಬಯಸುತ್ತಾ ತನ್ನನ್ನೇ ಬರಿದು ಮಾಡಲು ಸಹಕರಿಸುತ್ತದೆ. ತ್ಯಾಗದ ಮೂಲಕ ಒಂದು ಕುಟುಂಬವು ದೇವರ ಸಂದೇಶವನ್ನು ಸಾರುತ್ತದೆ.
ಜಗದ್ಗುರು ಸಂತ ಎರಡನೇ ಜಾನ್ ಪೌಲ್ ಹೀಗೆ ಹೇಳಿದ್ದರು - ಪ್ರತಿ ಕ್ರೈಸ್ತ ಕುಟುಂಬವು ಲೋಕದಲ್ಲಿ ದೇವರ ಪ್ರೀತಿಯ ಮತ್ತು ಪರಮತ್ರಿತ್ವದ ಬೆಳಕು ಆಗಬೇಕು. ಮತ್ತಾಯನ ಶುಭಸಂದೇಶದಲ್ಲಿ ಹೇಳಿದಂತೆ ಪ್ರತೀ ಕುಟುಂಬವು ಜಗತ್ತಿಗೆ ಉಪ್ಪು ಅಥವಾ ಬೆಳಕಿನಂತೆಯಾದರೆ ಧರ್ಮಸಭೆ ಚೆನ್ನಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅದರ ಜವಾಬ್ದಾರಿ ತಂದೆ ತಾಯಿಯ ಮೇಲೆ ಇದೆ. ನಾವೆಲ್ಲರೂ ಒಳ್ಳೆಯ ಜೀವನವನ್ನು ನಡೆಸಿ ದೇವರ ಪ್ರೀತಿ ನೆಲೆಸುವ ಕುಟುಂಬದ ಸದಸ್ಯರಾಗೋಣ. ನಮ್ಮ ನಮ್ಮ ಜವಾಬ್ದಾರಿಯನ್ನು ನಾವು ಮಾಡೋಣ.



ಗ್ಲೂಟೆನ್ ವಿವಾದ



¨ ಫ್ರಾನ್ಸಿಸ್. ಎಂ. ನಂದಗಾವ

ಒಂದಾನೊಂದು ಕಾಲದಲ್ಲಿ ಅಂದರೆ ಅಷ್ಟು ದೂರವೇನಲ್ಲ, ಮೂರ್ನಾಲ್ಕು ದಶಕಗಳ ಹಿಂದೆ, ಮನೆಯಲ್ಲಿ ಯಾರಿಗಾದರೂ ಜ್ವರ ಬಂದರೆ, ಕಾಯಿಲೆ ಕಸಾಲೆ ಕಾಣಿಸಿಕೊಂಡರೆ, ಅವರನ್ನು ಕಾಣಲು ಹೋಗುವವರು ಕೈಯಲ್ಲೊಂದು ಬ್ರೆಡ್ ಮತ್ತು ಮೊಸಂಬಿ ಹಣ್ಣುಗಳನ್ನುತೆಗೆದುಕೊಂಡು ಹೋಗುತ್ತಿದ್ದುದು ವಾಡಿಕೆಯಾಗಿತ್ತು. ಅಂತೆಯೇ ಎಲ್ಲಾ ಆಸ್ಪತ್ರೆಗಳಲ್ಲಿ ಒಳ ರೋಗಿಗಳಿಗೆ ಬ್ರೆಡ್ ಹಾಲು ಕೊಡುತ್ತಿದ್ದರು.
ಅದಕ್ಕೂ ಹಿಂದೆ ನಮ್ಮ ನಾಡಿನಲ್ಲಿ ಲಂಘನಂ ಪರಮೌಷಧ ಎಂದು ಹೇಳಲಾಗುತ್ತಿತ್ತು. ಲಂಘನ ಎಂದರೆ ಲಂಕೆಗೆ ಹಾರಿದ ಮಾರುತಿ, ಅಂದರೆ ಹನುಮಂತನ ಸೀಮೋಲ್ಲಂಘನವಲ್ಲ. ಇದು ಕೇವಲ ಲಂಘನ. ಸೀಮೆಯನ್ನು ಹಾರುವುದಲ್ಲ, ಮಹಾತ್ಮಗಾಂಧಿ ಅವರ ಸತ್ಯಾಗ್ರಹದ ಒಂದು ಭಾಗವಾಗಿದ್ದ ಉಪವಾಸ. ಇಂಗ್ಲಿಷ್ ಅಲೋಪತಿ ವೈದ್ಯಪದ್ಧತಿ ಮುನ್ನೆಲೆಗೆ ಬಂದು, ಸ್ಥಳೀಯ ಗಾಂವಟಿ ಔಷಧವೆಂದು ಗುರುತಿಸಲಾಗುತ್ತಿದ್ದ ಆಯುರ್ವೇದ ಪದ್ಧತಿ ಹಿಂದೆ ಸರಿದಾಗ, ಆಯುರ್ವೇದ ಪದ್ಧತಿಯ ಈ ಉಪವಾಸ ಹಿಂದೆ ಸರಿದು ಇಂಗ್ಲಿಷ್ ಔಷಧಿ ತಗೊಳ್ಳುವಾಗ ಹೊಟ್ಟೆಗೆ ಏನಾದರೂ ತೆಗೆದುಕೊಳ್ಳಬೇಕು, ಬ್ರೆಡ್ ಉತ್ತಮ ಆಹಾರ ಎಂಬ ಮಾತು ಚಲಾವಣೆಗೆ ಬಂದಿತ್ತು.
ಸಂಶೋಧನೆಗಳು ನಿರಂತರವಾಗಿ ನಡೆಯುತ್ತವಲ್ಲವೇ? ಅದರಂತೆ, ನೂತನ ಸಂಶೋಧನೆಯಲ್ಲಿ ಮೇಲ್ಮೈ ಹೊಟ್ಟು (ನಾರಿನಂಶ) ತೆಗೆದ ಜಿಗುಟು ಪದಾರ್ಥವಾದ ಗೋಧಿಹಿಟ್ಟು / ಮೈದಾ(?) ದೇಹಾರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ. ಗೋಧಿಕಾಳುಗಳ ಹಿಟ್ಟಿನಲ್ಲಿಯ ಪಿಷ್ಟಾಂಶವನ್ನು ತೊಳೆದುಬಿಟ್ಟ ಮೇಲೆ ಉಳಿಯುವ ಜಿಗುಟಾದ ಸಸಾರಜನಕ ಭಾಗವೆಂದು ಗುರುತಿಸುವ ಗ್ಲೂಟೆನ್ ಅಂಶವು ಸಿಲಿಯಾಕ್ ಹೆಸರಿನ ಸಣ್ಣಕರುಳಿನ ಉರಿಯೂತ ರೋಗಕ್ಕೆ ಕಾರಣವಾಗುವುದೆಂದು ಪತ್ತೆ ಮಾಡಲಾಗಿದೆ. ಕರುಳಿನಲ್ಲಿ ಆಹಾರವನ್ನು ತಳ್ಳುವ ಕ್ರಿಯೆಯಲ್ಲಿ ಅಡ್ಡಿಯುಂಟು ಮಾಡುವ ಆಹಾರದಲ್ಲಿನ ಗ್ಲೂಟೆನ್ ಅಂಶವು, ನೂರರಲ್ಲಿ ಒಬ್ಬರಿಗೆ ಈ ರೋಗಕ್ಕೆ ಕಾರಣವಾಗಬಲ್ಲುದು.
ಮಕ್ಕಳು ಮತ್ತು ದೊಡ್ಡವರಲ್ಲೂ ಈ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಲ್ಲಿ ಹೊಟ್ಟೆನೋವು, ತೀವ್ರ ಅತಿಭೇದಿ, ವಾಂತಿ, ಮಲಬದ್ಧತೆ, ವಾಸನಾಯುಕ್ತ ಮಲ, ಸುಸ್ತು, ನಡವಳಿಕೆಯಲ್ಲಿ ವ್ಯತ್ಯಾಸ, ಹಲ್ಲಿನ ಹೊರ ಕವಚಕ್ಕೆ ಘಾಸಿ, ಕುಂಠಿತ ಬೆಳವಣಿಗೆಗಳು ಕಾಣಿಸಿಕೊಳ್ಳಬಹುದು. ದೊಡ್ಡವರಲ್ಲಿ ಕಬ್ಬಿಣಾಂಶದ ಕೊರತೆ, ಮೂಳೆ ಮತ್ತು ಸಂದುನೋವು, ಮೂಳೆ ಸವೆತ, ಪಿತ್ತಕೋಶದ ಸಮಸ್ಯೆ, ಋತುಚಕ್ರದಲ್ಲಿ ಏರುಪೇರು, ವ್ಯಾಕುಲ ಮನಸ್ಥಿತಿ, ಫಲವಂತಿಕೆಯಲ್ಲಿ ಕುಸಿತ, ನಿಲ್ಲದ ಗರ್ಭಪಾತಗಳು, ಅರೆತಲೆ ನೋವು, ಚರ್ಮ ಕೆಂಪಗಾಗಿಸುವ ಮೈ ತುರಿಕೆ, ಬಾಯಲ್ಲಿ ಹುಣ್ಣುಗಳಾಗುವವು.
ಈ ಗ್ಲೂಟೆನ್ ಅಂಶವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಜಿಗುಟಾಗಿರುವ ಗೋಧಿ ಕಾಳಿನ ಮಧ್ಯದ ಹಿಟ್ಟಿನಿಂದ ಸಿದ್ಧಪಡಿಸಿದ ಮೈದಾ ಹಿಟ್ಟು, ನಮ್ಮ ಅಡುಗೆ ಮನೆಯಲ್ಲಿ ಸಿದ್ಧಪಡಿಸುವ ವಿವಿಧ ಬಗೆಯ ತಿಂಡಿಗಳ ತಯಾರಿಕೆಯಲ್ಲಿ ಪ್ರಮುಖ ಮೂಲವಸ್ತು ಎಂಬುದು ನಮಗೆಲ್ಲರಿಗೂ ಗೊತ್ತೆ ಇದೆ. ಮಿಠಾಯಿ ಅಂಗಡಿಗಳ ತಿಂಡಿಗಳ ಮತ್ತು ಬೇಕರಿಗಳ ಸಕಲ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಮೈದಾ ಎಂಬ ಮೂಲ ವಸ್ತುವಿಲ್ಲದೇ ಕೈ ಮುಂದೆ ಸಾಗುವುದೇ ಇಲ್ಲ. ಬ್ರೆಡ್ಡಿಗೂ ಮೈದಾನೇ ಮೂಲ ವಸ್ತು. ಹೊಸ ಸಂಶೋಧನೆಯ ಹಿನ್ನೆಲೆಯಲ್ಲಿ ದೇಹಕ್ಕೆ ಮೈದಾ ಒಳ್ಳೆಯ ಆಹಾರವಲ್ಲ, ಸಂಪೂರ್ಣ ಗೋಧಿಯೇ ಆರೋಗ್ಯಕ್ಕೆ ಪೂರಕ ಎಂಬುದನ್ನು ಕಂಡುಕೊಳ್ಳಲಾಯಿತು. ಮನೆಯ ಅಡುಗೆ ಮನೆಗಳಿಂದ ಮೈದಾ ಕಾಲ್ಕಿತ್ತರೂ, ಮಿಠಾಯಿ ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ, ಬೇಕರಿಗಳಲ್ಲಿ ಸಂಪೂರ್ಣ ಗೋಧಿ ಹಿಟ್ಟಿಗೆ ಹೋಲಿಸಿದರೆ, ಕಡಿಮೆ ಬೆಲೆಯಲ್ಲಿ ಸಿಗುವ ಮೈದಾ ಇನ್ನೂ ತನ್ನ ಸ್ಥಾನದಲ್ಲಿ ಗೂಟ ಹೊಡೆದುಕೊಂಡು ಕೂತಿದೆ.
ಇದೆಲ್ಲಾ ಯಾವುದಕ್ಕೆ ಪೀಠಿಕೆ ಅಂತೀರಾ? ಸ್ವಾಮಿ ನಾವು, ಕ್ರೈಸ್ತರು, ಅದರಲ್ಲೂ ಮುಖ್ಯವಾಗಿ ವಿಶ್ವವ್ಯಾಪಿ ಕಥೋಲಿಕ ವಿಶ್ವಾಸಿಕರು ಪ್ರತಿ ಪ್ರಭು ಬೋಜನದ ಆಚರಣೆಯ ಸಂದರ್ಭದಲ್ಲಿ ’ನಮ್ಮ ಸ್ವಾಮಿಯ ಶರೀರ’ವೆಂದು ಭಕ್ತಿ ಭಾವದಿಂದ ಸತ್ಪ್ರಸಾದ, ಪರಮಪ್ರಸಾದ,ಅಪ್ಪ, ಪವಿತ್ರ ರೊಟ್ಟಿ ಮುಂತಾದ ಹೆಸರುಗಳಲ್ಲಿ ಸ್ವೀಕರಿಸುವ ’ಕ್ರಿಸ್ತರ ಶರೀರ’ (ಸತ್ಪ್ರಸಾದ)ದ ತಯಾರಿಕೆಯಲ್ಲೂ ಈ ಗ್ಲೂಟೆನ್‌ ಅಂಶವಿರುವ ಗೋಧಿಹಿಟ್ಟನ್ನೇ (ಮೈದಾ) ಬಳಸಲಾಗುತ್ತಿದೆ!
ಪ್ರಭು ಯೇಸುಕ್ರಿಸ್ತರ ಸಂಪೂರ್ಣ ಜೀವನವು, ಪಿತ ತಮ್ಮ ರಕ್ಷಣಾ ಯೋಜನೆಯನ್ನು ಕಾರ್ಯಗತ ಮಾಡುವಲ್ಲಿ ಸ್ವಅರ್ಪಣೆಯಾಗಿತ್ತು ಎಂದು ವಿಶ್ವವ್ಯಾಪಿಯಾಗಿರುವ ಕಥೋಲಿಕ ಧರ್ಮಸಭೆಯು ತನ್ನ ಧರ್ಮೋಪದೇಶದಲ್ಲಿ ಸಾರುತ್ತಿದೆ. ಅವರು ’ಸರ್ವರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನು ಈಡಾಗಿ ಕೊಡಲು ಬಂದವರು’ ಎಂದು ಪ್ರೇಷಿತ ಮಾರ್ಕನ ಶುಭಸಂದೇಶದಲ್ಲಿ ದಾಖಲಾಗಿದೆ (ಪ್ರೇಷಿತ ಮಾರ್ಕನ ಸುವಾರ್ತೆ-೧೪ನೇ ಅಧ್ಯಾಯ, ೨೨, ೨೩, ೨೩, ೨೪ ಮತ್ತು ೨೫ನೇ ಚರಣಗಳು). ಹೀಗೆ ಅವರು, ಇಡೀ ಮಾನವ ಕುಲವನ್ನು ದೇವರೊಡನೆ ಸಂಧಾನಗೊಳಿಸಿದರು ಎಂದು ವಿವರಿಸಲಾಗಿದೆ.
ತಮ್ಮನ್ನು ಶಿಲುಬೆಗೇರಿಸುವ ಮುಂಚಿನ ಯಾತನೆಯ ಹಿಂದಿನ ದಿನ ಅಂದರೆ ’ತಮ್ಮನ್ನು ಪರಾಧೀನ ಮಾಡಲಾದ ರಾತ್ರಿ’ (ಕೊರಿಂಥಿಯರಿಗೆ ಬರೆದ ಮೊದಲ ಪತ್ರ ೧೧ನೇ ಅಧ್ಯಾಯ ೨೩ನೇ ಚರಣ) ಅಂತಿಮ ಭೋಜನದ ಸಂದರ್ಭದಲ್ಲಿ ಪ್ರೇಷಿತ ಶಿಷ್ಯರೊಂದಿಗೆ ಯೇಸುಸ್ವಾಮಿ ತಮ್ಮ ಸ್ವ ಅರ್ಪಣೆಯ ಕುರಿತು ಮಾತಾಡಿದರು. ಅದನ್ನು ಸಾಂಕೇತಿಕವಾಗಿ ಮತ್ತು ನೈಜವಾಗಿ ಪ್ರತ್ಯಕ್ಷಗೊಳಿಸಿದರು. ’ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ’ (ಪ್ರೇಷಿತ ಲೂಕನಸುವಾರ್ತೆ ೨೨ ನೇ ಅಧ್ಯಾಯ೧೯ನೇ ಚರಣ) ’ಇದು ಸುರಿಸಲಾಗುವ ನನ್ನ ರಕ್ತ’ (ಪ್ರೇಷಿತ ಮತ್ತಾಯನ ಸುವಾರ್ತೆ ೨೬ನೇ ಅಧ್ಯಾಯ ೨೮ನೇ ಚರಣ). ಹೀಗೆ ಅವರು ಪರಮ ಪ್ರಸಾದವನ್ನು ತಮ್ಮ ಬಲಿಯ ’ಸ್ಮರಣೆ’ (ಕೊರಿಂಥಿಯರಿಗೆ ಬರೆದ ಮೊದಲ ಪತ್ರ ೧೧ನೇ ಅಧ್ಯಾಯ ಚರಣ ೨೫)ಯಾಗಿ ಮತ್ತು ತಮ್ಮ ಪ್ರೇಷಿತರನ್ನು ಹೊಸ ಒಡಂಬಡಿಕೆಯ ಯಾಜಕರನ್ನಾಗಿ ಪ್ರತಿಷ್ಠಾಪಿಸಿದರು ಎಂದೂ ಕಥೋಲಿಕ ಧರ್ಮಸಭೆಯ ಧರ್ಮೋಪದೇಶವು ಸ್ಪಷ್ಟಪಡಿಸುತ್ತದೆ.
ಕ್ರೈಸ್ತ ವಿಶ್ವಾಸಿಗಳು ಸ್ವಾಮಿ ಯೇಸುಕ್ರಿಸ್ತರ ಶರೀರವನ್ನು ಭುಜಿಸುವ, ಅವರ ರಕ್ತವನ್ನು ಕುಡಿಯುವ ಆಚರಣೆಯಲ್ಲಿ ನರಭಕ್ಷಣೆಯ ನಕಲನ್ನು ಕಾಣಬಯಸುವ ಪಾಷಂಡಿಗಳೂ ಇದ್ದಾರೆ. ಇಲ್ಲಿ, ಪ್ರಭು ಯೇಸುಸ್ವಾಮಿ ತಮ್ಮನ್ನು ತಾವೇ ಮಾನವ ಕುಲಕ್ಕಾಗಿ ಸಮರ್ಪಿಸಿಕೊಂಡವರು ಎಂಬುದನ್ನು ಗಮನಿಸಬೇಕು. ಒಬ್ಬ ವ್ಯಕ್ತಿ ಇನ್ನಿತರರಿಗೆ ತನ್ನಲ್ಲಿರುವುದನ್ನು ಕೊಡುತ್ತಾನೆ. ಆದರೆ, ಇಲ್ಲಿ ಪ್ರಭು ಯೇಸುಸ್ವಾಮಿ ತಮ್ಮನ್ನೇ ತಾವು ಬಲಿಯಾಗಿ ಅರ್ಪಿಸಿಕೊಂಡವರು. ವಸ್ತ್ರದಾನ, ಹಸುದಾನ, ಅನ್ನದಾನ, ಭೂದಾನ ಮೊದಲಾದವುಗಳ ಜೊತೆಗೆ ಜೀವಂತ ವ್ಯಕ್ತಿಗಳ ಅಂಗಾಂಗ ದಾನ, ಮೃತರಾದವರ ಅಂಗಾಂಗ ದಾನ, ದೇಹದಾನಗಳು ಇತ್ತೀಚೆಗೆ ಆರಂಭವಾಗಿದೆ.
ಕ್ರೈಸ್ತರು ಪರಿಪಾಲಿಸುವ ಪ್ರಭುಭೋಜನ ಸಂಸ್ಕಾರ ’ಪರಮಪ್ರಸಾದ’ ಪ್ರಾತಿನಿಧಿಕವಾಗಿ ಪ್ರಭು ಯೇಸುಕ್ರಿಸ್ತರ ಶರೀರ ಮತ್ತು ರಕ್ತದ ಬಲಿಯಾಗಿದೆ. ಇದನ್ನು ಕರ್ತರ ಭೋಜನ, ರೊಟ್ಟಿಮುರಿ, ಪ್ರಭುವಿನ ಯಾತನೆ ಮರಣ ಪುನರುತ್ಥಾನಗಳ ಸ್ಮರಣೆ, ದಿವ್ಯ ಮತ್ತು ದೈವಿಕಆರಾಧನೆ, ಪುನೀತ ರಹಸ್ಯಗಳು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಪ್ರಭು ಯೇಸುಸ್ವಾಮಿ ಮಾನವ ಕೋಟಿಯ ಉದ್ಧಾರಕ್ಕಾಗಿ ತಮ್ಮನ್ನೇ ತಾವು ಸಮರ್ಪಿಸಿಕೊಂಡವರು. ತಮ್ಮ ಅಂತಿಮ ಭೋಜನದ ಸಂದರ್ಭದಲ್ಲಿ, ಗೋಧಿಕಾಳಿನಿಂದ ಮಾಡಿದ ರೊಟ್ಟಿ (ಬ್ರೆಡ್) ಮತ್ತು ದ್ರಾಕ್ಷಾರಸಗಳನ್ನು ತಮ್ಮ ದೇಹ ಮತ್ತು ರಕ್ತವೆಂದುಪರಿಗಣಿಸಬೇಕೆಂದು ಕೋರಿದ್ದರು. ಅದಕ್ಕೆಂದೇ ಅವರು ಪ್ರಭು ಭೋಜನದ ಸಂಸ್ಕಾರವನ್ನು ಸ್ಥಾಪಿಸಿದರು. ಶಿಲುಬೆಬಲಿ ಮತ್ತು ಪರಮಪ್ರಸಾದ ಬಲಿ ಇವೆರಡೂ ಏಕ ಮತ್ತು ತತ್ಸಮ ಬಲಿಯಾಗಿವೆ. ಹೀಗಾಗಿ ಕ್ರೈಸ್ತ ಪೂಜಾವಿಧಿ ಪ್ರಭು ಭೋಜನದಲ್ಲಿ (ಮಾಸ್), ರೊಟ್ಟಿ (ಬ್ರೆಡ್/ತೆಳುವಾದ ಬಿಲ್ಲೆ-ವೇಫರ್) ಮತ್ತು ದ್ರಾಕ್ಷಾರಸಗಳಿಗೆ ಒಂದು ಪರಮಪೂಜ್ಯ ಸ್ಥಾನವನ್ನು ಕಲ್ಪಿಸಲಾಗಿದೆ. ಕಥೋಲಿಕ ಧರ್ಮಸಭೆಯು, ಪ್ರಭು ಭೋಜನದಲ್ಲಿ ಬಳಸುವ ರೊಟ್ಟಿಯಲ್ಲಿ ಸ್ವಲ್ಪವಾದರೂ ಗ್ಲೂಟೆನ್ ಪ್ರಮಾಣ ಇರಲೇಬೇಕೆಂದು ಅಪೇಕ್ಷಿಸುತ್ತದೆ.
ಸಂಫೂರ್ಣ ಗ್ಲೂಟೆನ್ ಮುಕ್ತ ರೊಟ್ಟಿಯನ್ನು ಪ್ರಭು ಭೋಜನಕ್ಕೆ ಬಳಸಲಾಗದೆಂದು, ಕಾಲಕಾಲಕ್ಕೆ ಕಥೋಲಿಕ ಧರ್ಮಸಭೆ ತಿಳುವಳಿಕೆ ನೀಡುತ್ತಾ ಬಂದಿದೆ. ಜೊತೆಗೆ, ಪ್ರಭುಭೋಜನದ ರೊಟ್ಟಿಯ ತಯಾರಿಕೆಯಲ್ಲಿ ರೊಟ್ಟಿಯ ಸ್ವರೂಪಕ್ಕೆ ಧಕ್ಕೆ ತರದೇ, ಇತರೇಪದಾರ್ಥಗಳನ್ನು ಸೇರಿಸದ, ಕಡಿಮೆ ಪ್ರಮಾಣದ ಗ್ಲೂಟೆನ್ ಇರುವ ರೊಟ್ಟಿ / ತೆಳುವಾದ ಬಿಲ್ಲೆ (ವೆಫರ್) ಬಳಸಲು ಅನುಮತಿ ಇದೆ ಎಂದೂ ಅದು ಸ್ಪಷ್ಟವಾಗಿ ತಿಳಿಸುತ್ತಾ ಬಂದಿದೆ.
ಹುಳಿ ಹಿಡಿಯದ, ಹುದುಗದ ಗೋಧಿಯ ಹಿಟ್ಟಿನಿಂದಲೇ ಪ್ರಭು ಭೋಜನದ ರೊಟ್ಟಿಯನ್ನು ಸಿದ್ಧಪಡಿಸಬೇಕು. ಮತ್ತು ಅದನ್ನು ಹಾಳಾಗುವ ಮೊದಲೇ ತಕ್ಷಣದಲ್ಲಿ ಬಳಸಬೇಕು ಎಂದು ಕಥೋಲಿಕ ಸಭೆ ನಿರ್ಬಂಧಗಳನ್ನು ಹಾಕಿದೆ. ಹೀಗಾಗಿ ಗೋಧಿಯಲ್ಲದೇ ಬೇರಾವುದೇ ಕಾಳಿನಿಂದ, ಬೇರೆ ಕಾಳುಗಳನ್ನು ಬೆರೆಸಿ ಸಿದ್ಧಪಡಿಸಿದ ರೊಟ್ಟಿಯನ್ನು ಪ್ರಭು ಭೋಜನದಲ್ಲಿ ಬಳಸಲಾಗದು.
ಕಥೋಲಿಕರೂ ಸೇರಿದಂತೆ ವಿವಿಧ ಪಂಗಡದ ಬಹುತೇಕ ಕ್ರೈಸ್ತರು ಪ್ರಭು ಭೋಜನದಲ್ಲಿ ಬಳಸುವ ಪ್ರಭುಭೋಜನದ ರೊಟ್ಟಿಯು ವೃತ್ತಾಕಾರದ ಹಗುರವೂ ಗರುಗೂ ಬಲು ತೆಳುವೂ ಆದ ಹುದುಗು (ಹುಳಿ)ಹಾಕದ ಗೋಧಿ ಹಿಟ್ಟಿನ ಬಿಲ್ಲೆ (ಬಿಸ್ಕತ್ತು ಮಾದರಿ) ಯ ಆಕಾರಹೊಂದಿರುತ್ತದೆ. ಈ ಪ್ರಭು ಭೋಜನದ ರೊಟ್ಟಿ (ವೆಫರ್) ಯನ್ನು ಮೈದಾ ಹಿಟ್ಟು (ಹೊಟ್ಟುತೆಗೆದ ಬರಿ ಬಿಳಿ ಬಣ್ಣದ ತುಂಬಾ ಸಣ್ಣಗೆ ಬೀಸಿದಹಿಟ್ಟು), ಶುದ್ಧವಾದ ನೀರು  ಮತ್ತು ಉಪ್ಪುಗಳನ್ನು ಸೇರಿಸಿ ನಾದಿದ ಹಿಟ್ಟನ್ನು ತೆಳುವಾಗಿ ಅಚ್ಚಿನಲ್ಲಿ ಹಾಕಿ ಭಟ್ಟಿಯಲ್ಲಿ ಕಾವು ಕೊಟ್ಟು (ಬೇಕ್ ಮಾಡಿ) ಸಿದ್ಧಪಡಿಸಲಾಗುತ್ತದೆ. ಈ ಬಗೆಯಲ್ಲಿ ಸಿದ್ಧವಾದ ತೆಳುವಾದ ಬಿಲ್ಲೆ(ವೆಫರ್)ಗಳು ತೆಳ್ಳಗೆ, ಬೆಳ್ಳಗೆ ಶುಭ್ರವಾಗಿ ಕಾಣುತ್ತವೆ. ಸಾಮಾನ್ಯವಾಗಿ ಇವನ್ನು ಕನ್ಯಾಸ್ತ್ರೀ ಮಠಗಳಲ್ಲಿ ಸಿದ್ಧಗೊಳಿಸಲಾಗುತ್ತದೆ. ಅದೇ ಮೇರೆಗೆ ’ಧಾರ್ಮಿಕ ಸಂಸ್ಕಾರದ ವೈನು’ ಎಂದು ಕರೆಯಲಾಗುವಪ್ರಭು ಬೋಜನಕ್ಕೆ ಬಳಸುವ ದ್ರಾಕ್ಷಾರಸವನ್ನೂ ಸಿದ್ಧಪಡಿಸಲಾಗುತ್ತದೆ.
ಸಿಲಿಯಾಕ್ ಹೆಸರಿನ ಸಣ್ಣಕರುಳಿನ ಉರಿಯೂತ ರೋಗಕ್ಕೆ ಗ್ಲೂಟೆನ್ ಕಾರಣವಾಗುತ್ತದೆಂಬ ಸಂಗತಿ ಪತ್ತೆಯಾದ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಈಚೆಗೆ ಅಂದರೆ ೨೦೦೦ದ ನಂತರದಲ್ಲಿ ಕಡಿಮೆ ಪ್ರಮಾಣದ ಗ್ಲೂಟೆನ್ ಇರುವ ಪ್ರಭುಭೋಜನದ ರೊಟ್ಟಿಗಳನ್ನುಸಿದ್ಧಪಡಿಸಲಾಗುತ್ತಿದೆ. ಶಿಸ್ತಿನಿಂದ ಗ್ಲೂಟೆನ್ ಮುಕ್ತ ಆಹಾರ ಸೇವಿಸುವ, ಸಣ್ಣ ಕರುಳಿನ ಉರಿಯೂತದ ಕಾಯಿಲೆಯಿಂದ ನರಳುವವರಿಗೆ ಇದರಿಂದ ಅನುಕೂಲವಾದಂತಿದೆ.
ಕಳೆದ ಸಾಲಿನ ಮಧ್ಯಭಾಗದಲ್ಲಿ, ಕಥೋಲಿಕ ಧರ್ಮಸಭೆಯ ಜಗದ್ಗುರುಗಳ ನೆಲೆಯಾದ ರೋಮ್ ನಿಂದ ಅಂದರೆ ವ್ಯಾಟಿಕನ್ ನಿಂದ ಕಥೋಲಿಕ ಮೇತ್ರಾಣಿ (ಬಿಷಪ್)ಗಳಿಗೆ ಕಳುಹಿಸಿದ ಪರಿಪತ್ರವೊಂದರಲ್ಲಿ, ಗ್ಲೂಟೆನ್ ಮುಕ್ತ ಪ್ರಭುಭೋಜನದ ರೊಟ್ಟಿಯ ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಇದೇನೂ ಹೊಸ ವಿಷಯವಾಗಿರಲಿಲ್ಲ. ಕಥೋಲಿಕ
 ಧರ್ಮಸಭೆಯು, ತನ್ನ ಹಳೆಯ ನಿಲುವನ್ನೇ ಮಗದೊಮ್ಮೆ ಸ್ಪಷ್ಟಪಡಿಸಿದ್ದರೂ, ಈ ಗ್ಲೂಟೆನ್ ವಿಷಯ ಮಾಧ್ಯಮಗಳ ಗಮನಕ್ಕೆ ಬಂದಾಗ ಬಗೆಬಗೆಯ ಚರ್ಚೆಗಳಿಗೆ ಗ್ರಾಸವೊದಗಿಸಿತ್ತು.ವಿಶ್ವದಾದ್ಯಂತ ಪರ ವಿರೋಧದ ಚರ್ಚೆಗಳು ನಡೆದವು. ಈ ನಿಟ್ಟಿನ ಹತ್ತಾರು ಬಗೆಯ ವ್ಯಾಖ್ಯಾನಗಳೂ ಕೇಳಿ ಬಂದವು,
ಆನ್ ಲೈನ್ ವಹಿವಾಟಿನ ಇಂದಿನ ಕಾಲದಲ್ಲಿ ಧರ್ಮಸಭೆಯಲ್ಲದ ಖಾಸಗಿಯವರೂ ಸಿದ್ಧಪಡಿಸಿದ ಪ್ರಭು ಭೋಜನದ ರೊಟ್ಟಿ (ವೆಫರ್) ಮತ್ತು ಪವಿತ್ರ ವೈನ್ (ದ್ರಾಕ್ಷಾರಸ) ಗಳನ್ನು ಮಾರಾಟಕ್ಕೆ ಒದಗಿಸುತ್ತಿರುವ ಹಿನ್ನೆಲೆಯಲ್ಲಿ, ತಿಳುವಳಿಕೆ ನೀಡುವ ಕ್ರಮವಾಗಿ ವ್ಯಾಟಿಕನ್ನಿನಿಂದ ಈ ಪರಿಪತ್ರ ಹೊರಡಿಸಲಾಗಿತ್ತು.
ಗ್ಲೂಟೆನ್ ಅಂಶ ಬರಿ ಗೋಧಿಯಲ್ಲಷ್ಟೇ ಅಲ್ಲ ಬಾರ್ಲಿ ಮೊದಲಾದ ಕಾಳುಗಳಲ್ಲೂ ಇದ್ದೇ ಇರುತ್ತದೆ. ಈಚೆಗೆ ಅಮೆರಿಕದಲ್ಲಿ ಗ್ಲೂಟೆನ್ ಮುಕ್ತ ಆಹಾರ ಪದಾರ್ಥಗಳ ಮಾರಾಟದ ಭರಾಟೆ ಜೋರಾಗಿದೆ. ಸಣ್ಣ ಕರುಳಿನ ಬಾಧೆಯಿಂದ ನರಳುವವರಷ್ಟೇ ಅಲ್ಲ ಉಳಿದವರೂ ಗ್ಲೂಟೆನ್ ಮುಕ್ತ ಆಹಾರಕ್ಕೆ ಮುಗಿಬೀಳ ತೊಡಗಿದ್ದಾರೆ. ಅಮೆರಿಕದಲ್ಲಿನ ಬಹುತೇಕ ಪ್ರೊಟೆಸ್ಟೆಂಟ್ ಕ್ರೈಸ್ತ ಪಂಥದ ಚರ್ಚುಗಳಲ್ಲಿ ಗ್ಲೂಟೆನ್ ಮುಕ್ತ ಪ್ರಭು ಭೋಜನದ ರೊಟ್ಟಿಗಳ ಬಳಕೆ ಆರಂಭವಾಗಿದೆ. ಇಷ್ಟಲ್ಲದೇ, ಕೆಲವು ಕ್ರಾಂತಿಕಾರಿ ಮನೋಭಾವದ ಕಥೋಲಿಕರಲ್ಲಿ, ಪ್ರಭುಭೋಜನದ ರೊಟ್ಟಿಯನ್ನು ಗೋಧಿಯನ್ನು ಬಿಟ್ಟು ಅಕ್ಕಿ ಮುಂತಾದ ಧಾನ್ಯಗಳಲ್ಲಿ ಸಿದ್ಧಪಡಿಸಲು ತಮ್ಮ ಚರ್ಚು (ಕಥೋಲಿಕ ಧರ್ಮಸಭೆ) ಮುಂದಾದರೆ ಒಳ್ಳೆಯದೇನೋ ಎಂಬ ಚಿಂತನೆ ಆರಂಭವಾಗಿದೆ. ದ್ರಾಕ್ಷಾರಸದ ಬದಲು ತಾಳೆಮರದ ಹಣ್ಣುಗಳನ್ನು ಬಳಸಿ ಸಿದ್ಧಪಡಿಸಿದ ರಸವನ್ನು ಪ್ರಭು ಭೋಜನದ ಸಂದರ್ಭದಲ್ಲಿ ಬಳಸಬಾರದೇಕೆ? ಎಂಬ ಚಿಂತನೆಯನ್ನು ಅವರು ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಥೋಲಿಕ ಧರ್ಮಸಭೆ (ಚರ್ಚು) ಈ ಸ್ಪಷ್ಟನೆ ನೀಡಿದೆ.
ಪ್ರಭು ಯೇಸುಸ್ವಾಮಿ ತಮ್ಮ ಅಂತಿಮ ಭೋಜನದ ಸಂದರ್ಭದಲ್ಲಿ, ಗೋಧಿ ಕಾಳಿನಿಂದ ಮಾಡಿದ ರೊಟ್ಟಿ (ಬ್ರೆಡ್) ಮತ್ತು ದ್ರಾಕ್ಷಾರಸಗಳನ್ನು ತಮ್ಮ ದೇಹ ಮತ್ತು ರಕ್ತವೆಂದು ಪರಿಗಣಿಸಬೇಕೆಂದು ಕೋರಿ ಪ್ರತಿಷ್ಠಾಪಿಸಿದ್ದ ’ಸ್ಮರಣ ಬಲಿ ಪರಮಪ್ರಸಾದ ಸಂಸ್ಕಾರದಲ್ಲಿ, ಅವರು ಗೋಧಿಯ ರೊಟ್ಟಿಯನ್ನು ಮತ್ತು ವೈನ್ (ದ್ರಾಕ್ಷಾರಸ)ವನ್ನು ಬಳಸಿದ್ದರು. ಅದೇ ಬಗೆಯ ಆಚರಣೆಯನ್ನು ಮುಂದುವರಿಸಿಕೊಂಡು ಬಂದಿರುವ ಕಥೋಲಿಕ ಧರ್ಮಸಭೆಯು, ಸ್ಮರಣ ಬಲಿಯ ಪರಮಪ್ರಸಾದದ ಸಂಸ್ಕಾರದ ಆಚರಣೆಯಲ್ಲಿ ಗೋಧಿಯಿಂದ ಸಿದ್ಧಪಡಿಸಿದ ರೊಟ್ಟಿ ಮತ್ತು ವೈನ್ (ದ್ರಾಕ್ಷಾರಸ) ಗಳನ್ನು ಮಾತ್ರ ಬಳಸುತ್ತಾ ಬಂದಿದೆ.
ಕೆಲವು ಧರ್ಮ ಪಂಡಿತರು ರೊಟ್ಟಿ ಮತ್ತು ರಸಗಳು ಕೇವಲ ಸಂಕೇತ ಮಾತ್ರ ಎಂದು ವಾದಿಸಿ, ಆಯಾ ಪ್ರದೇಶದಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಬೇರೆ ಬಗೆಯ ಧಾನ್ಯಗಳಿಂದ ರೊಟ್ಟಿಯನ್ನು ಮತ್ತು ಬೇರೆ ಬಗೆಯ ಹಣ್ಣುಗಳ ರಸವನ್ನು ಪ್ರಭು ಭೋಜನದಲ್ಲಿ ಬಳಸಿದರೆತಪ್ಪಾಗದು ಎಂದು ಪ್ರತಿಪಾದಿಸುತ್ತಿರುವರು. ಆದರೆ, ಆ ವಾದಗಳನ್ನು ಕಥೋಲಿಕ ಧರ್ಮಸಭೆ ಒಪ್ಪಿಕೊಂಡಿಲ್ಲ. ಪ್ರಭು ಯೇಸುಸ್ವಾಮಿ ಸ್ವತಃ ಸ್ಥಾಪಿಸಿದ ಪವಿತ್ರ ಪ್ರಭು ಭೋಜನದ ಸಂಸ್ಕಾರದ ಸಂದರ್ಭದಲ್ಲಿ ಬಳಿಸಿದ್ದು, ಗೋಧಿಯಿಂದ ಸಿದ್ಧಪಡಿಸಿದ ರೊಟ್ಟಿ ಮತ್ತು ವೈನ್ (ದ್ರಾಕ್ಷಿಹಣ್ಣಿನ ರಸ). ಯೇಸುಸ್ವಾಮಿ ಮಾಡಿದ ಕ್ರಮವನ್ನೇ ಬಳಸುವುದು ಸರಿಯಾದ ಕ್ರಮ ಎನ್ನುವ ಕಥೋಲಿಕ ಧರ್ಮಸಭೆ ಅದನ್ನು ಶಿರಸಾವಹಿಸಿ ಪಾಲಿಸಿಕೊಂಡು ಬರುತ್ತಿದೆ.
ಕೆಲವು ಪ್ರಗತಿಪರ ಧೋರಣೆಯ ಜನರಿಗೆ, ಕಥೋಲಿಕ ಧರ್ಮಸಭೆಯ ಕ್ರಮ ಬದಲಾವಣೆಗೆ ಅತೀತವಾದುದೇನಲ್ಲ ಎಂದು ಅನ್ನಿಸಬಹುದು. ಆದರೆ, ಕಳೆದು ಎರಡು ಸಾವಿರ ವರ್ಷಗಳಿಂದ ಪ್ರಭು ಯೇಸುಕ್ರಿಸ್ತರನ್ನು ಅನುಸರಿಸಿಕೊಂಡು ಬರುತ್ತಿರುವ ಕಥೋಲಿಕಧರ್ಮಸಭೆಯು ಪ್ರತಿಯೊಂದು ಚಿಕ್ಕ ವಿಷಯದಲ್ಲೂ ಪ್ರಭು ಯೇಸುಕ್ರಿಸ್ತರನ್ನು ಅನುಕರಿಸುತ್ತಾ ಬಂದಿದೆ.
ಪ್ರಭು ಭೋಜನದಲ್ಲಿ ಬಳಸಲಾಗುವ ಬ್ರೆಡ್ ಮತ್ತು ತೆಳುವಾದ ಬಿಲ್ಲೆ (ವೆಫರ್) ಗಳನ್ನು ಕಡ್ಡಾಯವಾಗಿ ಹುಳಿ ಹಾಕದೇ, ಅಪ್ಪಟ ಗೋಧಿ ಹಿಟ್ಟಿನಿಂದ ಸಿದ್ಧಪಡಿಸಬೇಕು. ಮತ್ತು ಬಹುಬೇಗ ಹಾಳಾಗುವಷ್ಟು ಅದು ಹಳತಾಗಿರಬಾರದು. ಪ್ರಭು ಭೋಜನದ ಗೋಧಿಯ ಹಿಟ್ಟಿನ ತೆಳುವಾದ ಬಿಲ್ಲೆಗಳು (ವೆಫರ್) ಗ್ಲೂಟೆನ್ ಮುಕ್ತವಾಗಿದ್ದರೆ ಅವನ್ನು ಪ್ರಭು ಭೋಜನಕ್ಕೆ ಬಳಸಬಾರದು. ಆದಾಗ್ಯೂ ಕಡಿಮೆ ಪ್ರಮಾಣದ ಗ್ಲೂಟೆನ್ ಹೊಂದಿರುವ ಗೋಧಿ ಹಿಟ್ಟಿನ ಬ್ರೆಡ್ ಮತ್ತು ತೆಳುವಾದ ಬಿಲ್ಲೆಗಳನ್ನು ಮತ್ತು ಕಲಬೆರಕೆಯಾಗದ ನೈಸರ್ಗಿಕ ಸ್ವಚ್ಛ ದ್ರಾಕ್ಷಿ ಹಣ್ಣಿನ ರಸವನ್ನು ಮಾತ್ರ ಪ್ರಭು ಭೋಜನದಲ್ಲಿ ಬಳಸಬಹುದೆಂದು ಕಥೋಲಿಕ ಧರ್ಮಸಭೆಯ ಹೊರಡಿಸಿದ್ದ ಪರಿಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಪ್ರಭು ಭೋಜನದಲ್ಲಿ ಬಳಸುವ ಹುಳಿ ಹಿಡಿಯಲು ಆರಂಭಿಸಿದ ದ್ರಾಕ್ಷಾರಸ (ಪವಿತ್ರ ವೈನ್)ದಲ್ಲಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಮದ್ಯ ಎಂದು ಹಣೆಪಟ್ಟಿ ಹೊಂದಿರುವ ವೈನ್ ನಲ್ಲಿರುವ ಆಲ್ಕೋಹಾಲ್ ಪ್ರಮಾಣದ ಶೇಕಡಾ ೧ರಷ್ಟೂ ಇರುವುದಿಲ್ಲ. ಕೆಲವು ವಿಶ್ವಾಸಿಗಳಿಗೆ ಪವಿತ್ರ ವೈನ್ ನಲ್ಲಿನ ಆಲ್ಕೋಹಾಲ್ ಪ್ರಮಾಣ ಕಿರಿಕಿರಿ ಎನಿಸಿದರೆ, ಅವರಿಗಾಗಿ ವೈನ್ ಬದಲು ಕೇವಲ ದ್ರಾಕ್ಷಿ ಹಣ್ಣಿನ ತಾಜಾರಸವನ್ನು ಪ್ರಭು ಭೋಜನದಲ್ಲಿ ಬಳಸಬಹುದೆಂದು ಪರಿಪತ್ರದಲ್ಲಿ ತಿಳಿಸಲಾಗಿದೆ. ಮತ್ತೆ, ಮತ್ತೇರಿಸುವ ಮದ್ಯಪಾನ - ಆಲ್ಕೊಹಾಲ್ ಕುಡಿತ ಕೆಟ್ಟ ಚಟ ಎಂಬುದು ಸಾಮಾನ್ಯ ನಂಬುಗೆ. ಈ ಭಾವನೆಯ ಹಿನ್ನೆಲೆಯಲ್ಲಿ ಕ್ರೈಸ್ತರ ಧಾರ್ಮಿಕ ಆಚರಣೆಯಲ್ಲಿ ವೈನ್ (ಹುಳಿ ಏರಿಸಿದ ದ್ರಾಕ್ಷಾರಸ) ವನ್ನು ಬಳಸಲಾಗುತ್ತದೆ ಎಂದು ಭಾವಿಸಿರುವ ಭಾರತದಲ್ಲಿನ ಕೆಲವು ಕಟ್ಟಾ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು, ಈಚೆಗೆ ಮದ್ಯಪಾನ ನಿಷೇಧ ಜಾರಿಯಲ್ಲಿರುವ ಕೆಲವು ರಾಜ್ಯಗಳಲ್ಲಿ ಕ್ರೈಸ್ತರ ಪೂಜಾವಿಧಿಗಳಲ್ಲಿನ ವೈನ್ ಬಳಕೆಯನ್ನ ತಡೆಯಬೇಕು ಎಂದು ಆಗ್ರಹಿಸಿದ ಪ್ರಕರಣಗಳು ವರದಿಯಾಗಿದ್ದವು.
ಗೋಧಿಯ (ಮೈದಾ) ಹಿಟ್ಟಿನ ತೆಳುವಾದ ಪ್ರಭು ಭೋಜನದ ಬಿಲ್ಲೆಗಳಲ್ಲಿ, ಪ್ರತಿಯೊಂದರಲ್ಲೂ ಸಾಮಾನ್ಯವಾಗಿ ೨೨ ಮಿಲಿ ಗ್ರಾಮ್ ಗ್ಲೂಟೆನ್ ಇದ್ದೇ ಇರುತ್ತದೆ ಎನ್ನಲಾಗುತ್ತದೆ. ಈ ಪ್ರಮಾಣ, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಬಹುದು. ಗ್ಲೂಟೆನ್ ಪ್ರಮಾಣ ೧೦ಮಿಲಿ ಗ್ರಾಮಿಗಿಂತ ಕಡಿಮೆ ಇರುವ ಪ್ರಭು ಭೋಜನದ ಬಿಲ್ಲೆಗಳನ್ನು, ಕಡಿಮೆ ಗ್ಲೂಟೆನ್ ಹೊಂದಿದ ಪ್ರಭು ಭೋಜನದ ಬಿಲ್ಲೆಗಳೆಂದು ಗುರುತಿಸಲಾಗುತ್ತಿದೆ. ಇಷ್ಟು ಕಡಿಮೆ ಪ್ರಮಾಣದ ಗ್ಲೂಟೆನ್ ಇರುವ ಪ್ರಭುಭೋಜನದ ರೊಟ್ಟಿಗಳನ್ನು ಪ್ರತಿದಿನವೂ ಸತತವಾಗಿ ಸೇವಿಸುವುದರಿಂದ ಗ್ಲೂಟೆನ್ ಮುಕ್ತ ಆಹಾರ ಸೇವಿಸುವ ರೂಢಿ ಹೊಂದಿರುವವರಿಗೆ ಮತ್ತು ಸಣ್ಣ ಕರುಳಿನ ಉರಿಯೂತದ ಕಾಯಿಲೆಯಿಂದ ನರಳುವವರಿಗೆ ಅಷ್ಟೇನೂ ತೊಂದರೆಯಾಗದು ಎಂದು ತಜ್ಞ ವೈದ್ಯರು ಅಭಿಪ್ರಾಯಪಡುತ್ತಿದ್ದಾರೆ.


ಹೆಚ್ಚೆಚ್ಚು ಡಿಮ್ಯಾಂಡ್ ಮಾಡಿ / ಜೋಹಾರಿ ಕಿಟಕಿ

ನಮ್ಮ ರಾಜಕೀಯ ನಾಯಕರಿಂದ ಇನ್ನೂ ಹೆಚ್ಚು ಡಿಮ್ಯಾಂಡ್ ಮಾಡಿ. ನಮಗೆ ಅವರ ವಾಕ್‍ಚಾತುರ್ಯ ಬೇಕಾಗಿಲ್ಲ, ಮೋಡಿ ಮಾಡುವ ಮಾಂತ್ರಿಕ ಶಕ್ತಿ ಬೇಕಾಗಿಲ್ಲ, ಎಲ್ಲರ ಗಮನವನ್ನು ಒಮ್ಮೆಲೇ ಹಿಡಿದಿಟ್ಟುಕೊಳ್ಳುವ ಶೈಲಿ ಕೂಡ ನಮಗೆ ಬೇಡ. ಖಾಲಿ ಘೋಷಣೆಗಳೂ ಬೇಡ. ನಮಗೆ ಬೇಕಾಗಿರುವುದು ಒಳ್ಳೆಯ ವ್ಯಕ್ತಿತ್ವ, ಶುದ್ಧ ಮನಸ್ಸು, ಘನತೆ, ಗಾಂಭೀರ್ಯ, ದೂರದೃಷ್ಟಿಯ ಅಭಿವೃದ್ಧಿಯ ಕಾರ್ಯಕ್ರಮಗಳು.

ನಮ್ಮ ಓದಿನಿಂದಲೂ ನಾವು ಹೆಚ್ಚು ಡಿಮಾಂಡ್ ಮಾಡಬೇಕು. ಸುಳ್ಳು ಸುದ್ದಿಗಳ ಹಬ್ಬಿಸಿ, ಅಂತೆ ಕಂತೆಗಳನ್ನು ಹೊತ್ತು ತರುವ ನಿಯತಕಾಲಿಕೆಗಳು/ ಮ್ಯಾಗಜೀನ್ಸ್/ ಪತ್ರಿಕೆಗಳನ್ನು ಬಿಟ್ಟು ನಮ್ಮನ್ನು ಒಳ್ಳೆಯದಕ್ಕೆ ಪ್ರೇರೇಪಿಸುವ, ನಮಗೆ ಸ್ಪೂರ್ತಿ ತುಂಬುವ, ನಮ್ಮ ಮೇಲೆ ಗಾಢವಾದ ಪ್ರಭಾವ ಬೀರುವ ಅಷ್ಟೇ ಅಲ್ಲ, ನಮ್ಮನ್ನು ಕಾರ್ಯಪ್ರವೃತರಾಗಿಸುವ ಪುಸ್ತಕಗಳ ಓದು ನಮ್ಮದಾಗಬೇಕು.
ಎಲ್ಲಕ್ಕಿಂತಲ್ಲೂ ಹೆಚ್ಚಾಗಿ, ನಮ್ಮಿಂದಲೂ ನಾವು ಹೆಚ್ಚು ಡಿಮ್ಯಾಂಡ್ ಮಾಡಬೇಕು:
ಮಾಡುವ ಕೆಲಸ ಕಾರ್ಯಗಳು ಉನ್ನತ ಗುಣಮಟ್ಟದ್ದಾಗಿರಬೇಕು
ನಿರಂತರವಾಗಿ ನಮ್ಮ ವ್ಯಕ್ತಿತ್ವ ವಿಕಾಸಗೊಳ್ಳಬೇಕು
ಬ್ರಿಲಿಯಂಟ್ ಕೆಲಸ ಕಾರ್ಯಗಳು ನಮ್ಮಿಂದಾಗಬೇಕು
ಗಾಢವಾಗಿ ಪ್ರಭಾವಿಸುವ ವ್ಯಕ್ತಿತ್ವ ನಮ್ಮದಾಗಬೇಕು
ಹೌದು, ವಿಳಂಬವೇಕೆ? ಇಂದೇ ಪ್ರಾರಂಭಿಸೋಣ.....


ಜೋಹಾರಿ ಕಿಟಕಿ

ಅಮೇರಿಕದ ಮನೋವಿಜ್ಞಾನಿಗಳಾದ ಜೋಸೆಫ್ ಲುಫ್ ಹಾಗೂ ಹ್ಯಾರಿ-ಇಂಗ್-ಹ್ಯಾಮ್ ನವರು ೧೯೫೦ರಲ್ಲಿ ಈ ‘ಕಿಟಕಿ’ಯನ್ನು ತಯಾರಿಸಿದರು. ಇದನ್ನು ಆತ್ಮ ಪ್ರಜ್ಞೆ, ವ್ಯಕ್ತಿತ್ವ ನಿರ್ಮಾಣ, ಸಮೂಹ ಪ್ರಗತಿ ಹಾಗೂ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಬಳಸಲಾಗುತ್ತದೆ.


1 ಕಿಟಕಿ

ತೆರೆದ ವಲಯ

2 ಕಿಟಕಿ

ಕುರುಡು ವಲಯ

3 ಕಿಟಕಿ

ಗುಟ್ಟಾದ ವಲಯ

4 ಕಿಟಕಿ

ಗೊತ್ತಿರದ ವಲಯ


ಜೋಹ್ಯಾರಿ ಕಿಟಕಿಯ ನಾಲ್ಕು ಭಾಗಗಳು-

೧. ವ್ಯಕ್ತಿಗೆ ತನ್ನ ಬಗ್ಗೆ ಗೊತ್ತಿರುವುದು ಇತರರಿಗೂ ಗೊತ್ತಿರುವ ಅಂಶಗಳು- ತೆರೆದ ವಲಯ, ತೆರೆದ ವ್ಯಕ್ತಿತ್ವ / ಬಯಲಾದ ವ್ಯಕ್ತಿತ್ವ

೨. ವ್ಯಕ್ತಿಗೆ ತನ್ನ ಕುರಿತಾಗಿ ತನಗೆ ಗೊತ್ತಿಲ್ಲದಿದ್ದು, ಇತರರಿಗೆ ಗೊತ್ತಿರುವ ಅಂಶಗಳು - ಕುರುಡು ವಲಯ, ಕುರುಡು ವ್ಯಕ್ತಿತ್ವ ಅಥವಾ ಕುರುಡು ಮೂಲೆ

೩. ತನ್ನ ಬಗ್ಗೆ ತನಗೆ ಗೊತ್ತಿದ್ದು ಇತರರಿಗೆ ಗೊತ್ತಿರದ ಅಂಶಗಳು- ಗುಟ್ಟಾದ ವಲಯ, ಗುಟ್ಟಾದ ವ್ಯಕ್ತಿತ್ವ, ಉದಾಸೀನ ಮಾಡಿದ ವ್ಯಕ್ತಿತ್ವ.

೪. ತನಗೂ ಇತರರಿಗೂ ತನ್ನ ಬಗ್ಗೆ ಗೊತ್ತಿರದ ಅಂಶಗಳು- ಗೊತ್ತಿರದ ವ್ಯಕ್ತಿತ್ವ ಅಥವಾ ಗೊತ್ತಿರದ ಆತ್ಮ.

ಬನ್ನಿ ಈ ಜೋಹ್ಯಾರಿ ಕಿಟಕಿಯನ್ನು ಉಪಯೋಗಿಸಿಕೊಂಡು, ಸ್ವಜ್ಞಾನವನ್ನು ಪಡೆದುಕೊಳ್ಳೋಣ

ಬೈಬಲಿನ ವಿಶಿಷ್ಟ ವ್ಯಕ್ತಿಗಳು: ನೆಹೆಮೀಯನ ಕತೆ




-  ಡಾ. ಲೀಲಾವತಿ ದೇವದಾಸ್
ಪ್ಪತ್ತು ವರ್ಷಕಾಲ ಇಸ್ರಾಯೇಲ್ಯರು ದೇಶಭ್ರಷ್ಟರಾಗಿದ್ದು, ಕೊನೆಗೆ, ಪರ್ಷಿಯಾದ ಅರಸ ಕೊರೇಷನ ಆಳ್ವಿಕೆಯಲ್ಲಿ ತಮ್ಮ ದೇಶಕ್ಕೆ ಹಿಂತಿರುಗಿದರು. ಆದರೆ, ಎಲ್ಲರೂ ಪರ್ಷಿಯಾ ದೇಶವನ್ನು ಬಿಟ್ಟು ಬರಲಿಲ್ಲ. ಅಲ್ಲಿಯೇ ಉಳಿದವರಲ್ಲಿ, ನೆಹೆಮೀಯನು ನಮಗೆ ಎದ್ದು ಕಾಣುತ್ತಾನೆ.
ಈತನಿದ್ದದ್ದು, ಪ್ಲೇಟೊ, ಡಯೋಜಿನಿಸ್ ನಂಥಾ ತತ್ವಜ್ಞಾನಿಗಳಿದ್ದ ಕಾಲ. ನೆಹಮೀಯನು ಪ್ರವಾದಿಯೇನೂ ಅಲ್ಲ. ಪರ್ಷಿಯಾದ ಮುಖ್ಯ ಪಟ್ಟಣವಾದ ಶೂಷನ್ ನಲ್ಲಿ ಉದಾರ ಹೃದಯೀ ಅರಸ ಆರ್ತಷಸ್ತನಿಗೆ ಪಾನಸೇವಕನಾಗಿದ್ದನು. ಒಂದು ದಿನ, ಯೆಹೂದದಿಂದ ಕೆಲವರು ಬಂದು, ನೆಹೆಮೀಯನಿಗೆ "ಯೆರುಸಲೇಮಿನ ಪೌಳೀ ಗೋಡೆಯನ್ನು ಶತ್ರುಗಳು ಕೆಡವಿಹಾಕಿದ್ದಾರೆ. ಅಲ್ಲಿನ ನಮ್ಮವರು ತುಂಬಾ ಕಷ್ಟ, ನಿಂದೆಗಳಿಗೆ ಒಳಗಾಗಿದ್ದಾರೆ" ಎಂಬ ಆಘಾತಕಾರೀ ಸುದ್ದಿಯನ್ನು ಮುಟ್ಟಿಸಿದರು.
ಅದನ್ನು ಕೇಳಿ ನೆಹೆಮೀಯನು ತೀರಾ ವಿಷಣ್ಣನಾಗಿದ್ದ. ಅರಸನಿಗೆ ದ್ರಾಕ್ಷಾರಸ ನೀಡುವಾಗಲೂ ಆತನ ಮುಖ ಕುಂದಿಹೋಗಿತ್ತು. ಅರಸನು ಅದನ್ನು ಗಮನಿಸಿ, ಕಾರಣ ಕೇಳಿದಾಗ, ಆತನಿಗೆ ನೆಹೆಮೀಯನು ಎಲ್ಲವನ್ನೂ ತಿಳಿಸಿದನು, ಮತ್ತು ತಾನು ಯೆರೂಸಲೇಮಿಗೆ ಹೋಗಿಬರಲು ಅನುಮತಿ ಬೇಡಿದನು. ಅರಸನು ಒಪ್ಪಿಕೊಂಡು, ಪೌಳಿಗೋಡೆ ಕಟ್ಟಲು ಅಗತ್ಯವಾದ ಸಕಲ ವಸ್ತುಗಳನ್ನು ನೆಹೆಮೀಯನಿಗೆ ನೀಡಿದ್ದಲ್ಲದೆ, ಜೊತೆಗೆ ಪ್ರಯಾಣಿಸಲು ಸೇನಾಧಿಪತಿಗಳನ್ನೂ ರಾಹುತರನ್ನೂ ಕೊಟ್ಟು, ಬೇಕಾಗುವ ಪತ್ರಗಳನ್ನೂ ಅನುಗ್ರಹಿಸಿದನು.
ನೆಹೆಮೀಯನು ಯೆರೂಸಲೇಮನ್ನು ತಲಪಿ, ಸಮಯವನ್ನು ವ್ಯರ್ಥ ಮಾಡದೆ ರಾತ್ರಿ ವೇಳೆಯಲ್ಲೇ ಕೆಲವರ ಜೊತೆಯಲ್ಲಿ ಪೌಳಿಗೋಡೆಯ ಹತ್ತಿರ ಹೋಗಿ ಅದರ ದುರವಸ್ಥೆಯನ್ನು ಕಂಡನು. ಪಾಳುಬಿದ್ದಿದ್ದ ಗೋಡೆಯನ್ನು ಕಟ್ಟಲು ಜೊತೆ ಯೆಹೂದ್ಯರನ್ನು ಪ್ರೇರೇಪಿಸಿದನು. ಆತನು ವಿಶೇಷವಾಗಿ ಒತ್ತಿ ಹೇಳಿದ ಬನ್ನಿ, ಕಟ್ಟೋಣ ಎಂಬ ಪ್ರಸಿದ್ಧ ವಾಕ್ಯವು ಎಲ್ಲರನ್ನೂ ಬಡಿದೆಬ್ಬಿಸಿತು. ಶತ್ರುಗಳು ಎದುರಿಸಿದರೆ ಸಿದ್ಧವಾಗಿರಲು ಆಯುಧಗಳನ್ನು ಧರಿಸಿದ ಕಾವಲನ್ನೂ ಏರ್ಪಡಿಸಿದನು.
ಸುದ್ದಿ ಕೇಳಿದ ವೈರಿಗಳು ಇವರನ್ನು ಗೇಲಿ ಮಾಡುತ್ತಿದ್ದರೂ, ಅಲ್ಲಿ ಕಟ್ಟುತ್ತಿದ್ದ ಯೆಹೂದ್ಯರ ಮನಸ್ಸು ಇನ್ನಷ್ಟು ದೃಢವಾಯಿತು. ಕಟ್ಟೋಣದ ಕಾರ್ಯವನ್ನು ಎಲ್ಲಾ ಕುಟುಂಬದವರಲ್ಲಿ ಹಂಚಲಾಯಿತು. ಸಮಸ್ತ ಕೋಟೆ ಬಾಗಿಲುಗಳೂ ಜೀರ್ಣೋದ್ಧಾರವನ್ನು ಕಂಡವು.
ಇವರ ಸಾಹಸಕಾರ್ಯವನ್ನು ಕಂಡು, ಅಸೂಯೆ, ದ್ವೇಷಗಳಿಂದ ಕಂಗಾಲಾದ ಶತ್ರು ಸನ್ಬಲ್ಲಟನು ಯೆಹೂದ್ಯರನ್ನು ಹಂಗಿಸಿ, ಸುಟ್ಟುಹೋದ ಪಟ್ಟಣದ ದೂಳಿನ ರಾಶಿಯೊಳಗೆ ಹುಗಿದುಹೋದ ಕಲ್ಲುಗಳನ್ನು ಬದುಕಿಸುವಿರೋ?” ಎಂಬ ನಿಂದನೆಯ ಮಾತುಗಳನ್ನು ಆಡಿದನು. ಅವನ ಜೊತೆಗೇ ಟೋಬೀಯನು, ”ಅವರು ಕಟ್ಟುವ ಕಲ್ಲುಗೋಡೆಯ.ಮೇಲೆ ನರಿ ಹಾರಿದರೆ, ಅದು ಬಿದ್ದುಹೋಗುವದು ಎಂದು ಗೇಲಿಮಾಡಿದನು. (ನೆಹೆ ೪:೩ (
ಬೇರೆ ಬೇರೆಯವರು ಬೇರೆ ಬೇರೆ ಭಾಗಗಳನ್ನು ಕಟ್ಟಿದ್ದರಿಂದ ನಡುನಡುವೆ ಸಂದುಗಳೂ ಇದ್ದವು. ಅವುಗಳನ್ನೆಲ್ಲಾ ಮುಚ್ಚಿ, ಗೋಡೆಗಳನ್ನು ಬಲಪಡಿಸಿದಾಗ, ಶತ್ರುಗಳು ಪೆಚ್ಚಾದರು! ಅವರು ಪರ್ಷಿಯಾದ ಅರಸನಿಗೆ ದೂರನ್ನು ಬರೆದು, ಯೆಹೂದ್ಯರು ಆತನಿಗೆ ವಿರುದ್ಧವಾಗಿ ಪಿತೂರಿ ಮಾಡುತ್ತಿದ್ದಾರೆಂದು ಆಪಾದಿಸಿದರು. ಜನರಿಗೆ ಲಂಚಕೊಟ್ಟು, ಪೌಳಿಯನ್ನು ಕಟ್ಟುತ್ತಿದ್ದವರ ಮೇಲೆ ಇಲ್ಲದ ಸಲ್ಲದ ಸುಳ್ಳುಸುದ್ದಿಗಳನ್ನು ಹಬ್ಬಿಸಿದರು.
ಅವರೇನೇ ಹೇಳಿದರೂ ಗೋಡೆಯಂತೂ ಕೇವಲ52  ದಿನಗಳಲ್ಲಿ ಪೂರ್ತಿಯಾಯಿತು. ಯೆರೂಸಲೇಮಿನಾಚೆ ವಾಸವಾಗಿದ್ದ ಯೆಹೂದ್ಯರು ದೇವನಗರಿಯಲ್ಲಿ ಬಂದು ನೆಲೆಸಲು ನೆಹೆಮೀಯನು ಆದೇಶಿಸಿದನು.  ಪೌಳಿಗೋಡೆ ಹಾಗೂ ಬಾಗಿಲುಗಳ ಪ್ರತಿಷ್ಠೆ ಸಂಭ್ರಮದಿಂದ ಜರುಗಿತು. ಧರ್ಮಾಧಿಕಾರಿ ಎಜ್ರನಿಂದ ಧರ್ಮಶಾಸ್ತ್ರ ಪಾರಾಯಣವೂ ನಡೆಯಿತು.
ಈ ಮಧ್ಯೆ, ನೆಹೆಮೀಯನು ಒಮ್ಮೆ ಶೂಷನ್ನಿಗೆ ಹೋಗಿ ಮತ್ತೆ ಯೆರೂಸಲೆಮಿಗೆ ವಾಪಸಾಗಿದ್ದನು. ಎರಡು ಬಾರಿ ಯೂದಾಯದ ದೇಶಾಧಿಪತಿಯಾಗಿದ್ದ ಮಹಾನ್ ನಾಯಕನು ಪ್ರಕಟಿಸಿದ ನಿಷ್ಠೆ, ದೇವಾಲಯದ ಮೇಲೆ ಅಗಾಧ ಪ್ರೀತಿ, ಭಕ್ತಿ, ಕಳಕಳಿಗಳು, ಪೌಳಿಗೋಡೆಯನ್ನು ಬಲಪಡಿಸಲು ಎಲ್ಲರನ್ನೂ ಕೂಡಿಸಿದ್ದು - ಇವೆಲ್ಲವೂ ಅತ್ಯಂತ ಅನುಕರಣೀಯ, ನಮ್ಮಲ್ಲಿರಬೇಕಾದ ಗುಣಗಳಿವು, !

ಯೋಚಿಸಿ -ನಮ್ಮ ದೇವಸಭೆಯಲ್ಲಿ ಸಂದುಗಳಿವೆಯೋ? ಇದ್ದರೆ, ಅವುಗಳನ್ನು ಮುಚ್ಚಿ, ದೇವಾಲಯವನ್ನು ಭದ್ರಪಡಿಸೋಣವೆ?




ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...