Thursday, 13 December 2018

ಕಟ್ಟದಿರಿ ಗೋದಲಿಗಳ



ಕಟ್ಟದಿರಿ ಗೋದಲಿಗಳ 
ಹಾಡದಿರಿ ಭಜನೆಗಳ,
ತುತ್ತೂರಿ, ವಿಜೃಂಭಣೆಗಳ,
ಬಡಗಿಯ ಬಡಕೂಸಿಗೆ 
ಒಡವೆ ಕಾಸಿನ ಗೊಡವೆಯೇಕೆ?

ಊರದಿರಿ ಮಂಡಿಗಳ
ಉರಿಸದಿರಿ ಧೂಪಗಳ,
ಆಚಾರವಿಲ್ಲದ ಭಕುತಿ
ಹಿಡಿಕೆಇಲ್ಲದಸುತ್ತಿಗೆಯಂತೆ
ನಗುತಲಿಹನು ನನ್ನಪ್ಪ ಬಡಗಿ !

ಮರಳುಗಾಡಿನ ಕ್ರಾಂತಿ ನಾನು
ಗುಡಿಕಟ್ಟಿ ಬಚ್ಚಿಡಬೇಡಿ
ಬೀದಿ ಬದಿಯ ಬಂಡಾಯ ನಾನು
ಬಂಧಿಸಬೇಡಿ ಪೀಠ, ಪೆಟ್ಟಿಗೆಯಲಿ
ದೈವೀಕರಿಸಿ ದೂರವಿರಿಸದಿರಿ !

ಹೆರೋದ, ಪಿಲಾತ
ಫರಿಸಾಯ, ಸದ್ದುಕಾಯರ
ಸದ್ದಡಗಿಸಿ ತೊಡೆತಟ್ಟಿ
ಸತ್ಯವನು ಸಾರಲೆನಗೆ
ಶಿಲುಬೆಯಲಿ ಸಾವಿನ ಪಾಠ

ವೇಶ್ಯೆ, ಪಾಪಿ’  ಹಣೆಪಟ್ಟಿಯವರ
ರೊಟ್ಟಿಕಾಣದ ಕೇರಿ ಮಕ್ಕಳ
ಬಸವಳಿದು, ದಣಿವುಗೊಂಡವರ  
ತನುವು ತಣಿಯುವತನಕ
ಕಟ್ಟದಿರಿ ಗೋದಲಿಗಳ !

¨ ಡೇವಿಡ್ ಕುಮಾರ್.


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...