Thursday, 28 February 2019

ಪತ್ರಿಕೆಗಳು 2016-17

1. ದನಿ ಡಿಸೆಂಬರ್ 2016
2. ದನಿ ಜನವರಿ 2017
3. ದನಿ ಫೆಬ್ರವರಿ 2017
4. ದನಿ ಮಾರ್ಚ್ 2017
5. ದನಿ ಏಪ್ರಿಲ್ 2017
6. ದನಿ ಮೇ 2017
7. ದನಿ ಜೂನ್ 2017
8. ದನಿ ಜುಲೈ 2017
9. ದನಿ ಅಗಸ್ಟ್ 2017
10. ದನಿ ಸೆಪ್ಟಂಬರ್ 2017
11. ದನಿ ಅಕ್ಟೊಬರ್ 2017
12. ದನಿ ನವೆಂಬರ್ 2017

Thursday, 7 February 2019

ಪತ್ರಿಕೆಗಳು 2017-18

1. ದನಿ ಡಿಸೆಂಬರ್ 2017
2. ದನಿ ಜನವರಿ 2018
3. ದನಿ ಫೆಬ್ರವರಿ 2018
4. ದನಿ ಮಾರ್ಚ್ 2018
5. ದನಿ ಏಪ್ರಿಲ್ 2018
6. ದನಿ ಮೇ 2018
7. ದನಿ ಜೂನ್ 2018
9. ದನಿ ಅಗಸ್ಟ್ 2018
10. ದನಿ ಸೆಪ್ಟಂಬರ್ 2018
11. ದನಿ ಅಕ್ಟೊಬರ್ 2018
12. ದನಿ ನವೆಂಬರ್ 2018

Sunday, 3 February 2019

ನಡೆದಾಡಿದ ದೇವರಿಗೆ 111 ನಮನ

ತುಮಕೂರಿನ ಪೂಜ್ಯ ಸಿದ್ಧಗಂಗಾ ಮಠದಲ್ಲಿ ದೀನದಲಿತರ ಸೇವೆಗೈದು 21 ಜನವರಿ 2019ರಂದು 'ನಡೆದಾಡುವ ದೇವರು' ಎಂದೇ ಹೆಸರಾಗಿದ್ದ ಶ್ರೀಗಳಾದ ಡಾ.ಶಿವಕುಮಾರ ಮಹಾಸ್ವಾಮಿಗಳು 111 ವರ್ಷಗಳ ಸಾರ್ಥಕ ಬದುಕನ್ನು ಬಾಳಿ ಲಿಂಗೈಕ್ಯರಾದರು.
ಶತಮಾನದ ಸಂತ ಪೂಜ್ಯನೀಯ ಶ್ರೀ ಶಿವಕುಮಾರ ಸ್ವಾಮಿಯವರ ನಿಧನದ ಸುದ್ದಿ ಕೇಳಿದಾಗ ನನ್ನ ಮನಸ್ಸಿಗೆ ತಟ್ಟನೆ ಬಂದವನು ನಮ್ಮೂರಿನ ನನ್ನ ಬಾಲ್ಯದ ಗೆಳೆಯ ದಿನೇಶ ಹಾಗೂ ನಾನು ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುವಾಗ ಬಾಯಿಪಾಠ ಮಾಡಿದ ಕವಿ ಜಿ ಎಸ್ ಶಿವರುದ್ರಪ್ಪನವರು ಬರೆದ ಕವನ. ಹಲವಾರು ಬಡ ಮಕ್ಕಳಿಗೆ ಶಿವಕುಮಾರ ಮಹಾಸ್ವಾಮಿಗಳು ಅನ್ನ, ಅಕ್ಷರ ಹಾಗೂ ಅಶ್ರಯ ನೀಡಿ ತ್ರಿವಿಧ ದಾಸೋಹಿಯಾಗಿದ್ದರು. ಮಿತ್ರ ದಿನೇಶ ಸ್ವಾಮೀಜಿಯ ಸೇವೆಯ ಫಲಾನುಭವಿಗಳಲ್ಲೊಬ್ಬ. ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೋಸ್ಕರವೇ ಸುಮಾರು 125 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದ ಶ್ರೀಗಳು ಲಕ್ಷಾಂತರ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸಿದ್ದಾರೆ.

ಕವಿ ಜಿ ಎಸ್ ಶಿವರುದ್ರಪ್ಪ ತನ್ನ ಕವನವೊಂದರಲ್ಲಿ ಬರೆಯುತ್ತಾರೆ:

ಏಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣಿನ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ.

ಸಮಾಜ ಸುಧಾರಕ ಬಸವಣ್ಣರವರ ಅನುಯಾಯಿ, ಕಾಯಕದ ಕರ್ಮಯೋಗಿಯಾದ ಪೂಜ್ಯರು ಬಡವರ ಸೇವೆ ಗೈಯುತ್ತಾ ಸಮಾಜದ ದಮನಿತ ದನಿಗಳ ಪ್ರೀತಿ ಮತ್ತು ಸ್ನೇಹದಲ್ಲಿ ದೇವರನ್ನು ನಿರಂತರ ಹುಡುಕಿದರು. ದೇವರ ಪೂಜೆಗಿಂತಲೂ ಅನ್ನ-ಅರಿವು ನೀಡುವುದೇ ಮಹಾಕಾರ್ಯ ಎಂದು ಪರಿಗಣಿಸಿದ್ದರು. 

'ತುಂಬಿದ ಕೊಡ ತುಳುಕುವುದಿಲ್ಲ' ಎಂಬ ನಾಣ್ಣುಡಿಯಂತೆ ಶತಾಯು: ಪುರುಷ ಶ್ರೀ ಶಿವಕುಮಾರ ಸ್ವಾಮಿಗಳದ್ದು ನಮ್ರ ಸ್ವಭಾವ. ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಯಾವುದೇ ಭೇದ-ಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಅದ್ದರಿಂದ ಶ್ರೀಗಳ 112ಜನ್ಮ ದಿನದ ಸಂದರ್ಭದಲ್ಲಿ ಕವಿ ಜಿ.ಎಸ್ ಶಿವರುದ್ರಪ್ಪನವರು ತಾವು ವಿದ್ಯೆ ಪಡೆದ ಸಿದ್ಧಗಂಗೆಯ ಶ್ರೀಗಳ ಗುಣಗಾನವನ್ನು ಈ ಕೆಳಗಿನಂತೆ ಮಾಡಿದ್ದರು.

ಸದ್ದು ಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ

ಕಾಯಕವೆ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ

ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ

ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ
ಪೂಜ್ಯರ ಮರಣದ ನಂತರ ಕರ್ನಾಟಕದ ಎಲ್ಲೆಡೆ ಸದ್ದುಗದ್ದಲ. ಭಾರತ ಸರ್ಕಾರ ಶ್ರೀಗಳಿಗೆ 'ಭಾರತರತ್ನ' ನೀಡದ್ದಕ್ಕೆ ಎಲ್ಲೆಡೆ ಆಕ್ರೋಶ ಹಾಗೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಡಾ. ಶಿವಕುಮಾರ ಮಹಾಸ್ವಾಮಿಯವರ ಬದುಕಿನಿಂದ ಪ್ರೇರಣೆಗೊಂಡು ಅವರ ಮೌಲ್ಯಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಪಾಲಿಸಿ ನಡೆದರೆ ಆದೇ ಅವರಿಗೆ ನಾವು ಸಲ್ಲಿಸುವ ಶೇಷ್ಠ ಸನ್ಮಾನವಲ್ಲವೇ?
¨ ಫಾ. ಜಾನ್ ಪ್ರದೀಪ್ ಯೇ.ಸ


●●●



Saturday, 2 February 2019

ನಂಬಿಕೆ



ಮೇಣದ ಬತ್ತಿ

  
ಪರಮನ ಶಿಲುಬೆಯಡಿ ಬೆಳಗುತಿದೆ ಮೇಣದಬತ್ತಿ
ಬತ್ತಿಗೋ ಮೇಣದ ಹಂಗು, ಮೇಣಕ್ಕೆ ಏತರ ಹಂಗು?
ಆದರೂ ಮೇಣ, ಬತ್ತಿಗುಣಿಸುತಿದೆ ಬೋನ
ಬತ್ತಿಯಿಲ್ಲದ ಮೇಣ ಬದುಕು ಅರ್ಥಹೀನ
ಬತ್ತಿಯ ಬೇರಿಗೆ ಊಟವನಿಕ್ಕಿ ಸ್ವರ್ಗವ ಕನಸುತಿದೆ ಮೇಣ
ಮೇಣವ ಕುಡಿದ ಬತ್ತಿಯ ಬೆಳಕು ಓಲಾಡುವುದ ಕಾಣಾ
ಮೇಣದೊಳು ಬೆಳಕೋ ಬತ್ತಿಯೊಳು ಬೆಳಕೋ
ಮೇಣ ಬತ್ತಿಗಳೆರಡೂ ಪರಮಾತ್ಮನೊಳಗೋ
ಊದಿ ಆರಿಸದಿರು ಉರಿಯುತಿರಲಿ ಬೆಳಕು
ಆಯುಷ್ಯ ಕೊನೆವರೆಗೂ ಕಳೆದುಬಿಡಲಿ ಬದುಕು
ಬತ್ತಿಯು ಉರಿದು ಮೇಣವು ಸುರಿದು
ಬೆಳಕೆಂಬ ಬೆಳಕಲ್ಲಿ ಸಾಯುಜ್ಯವಡೆದು
ಹಾಲ ಪ್ರೀತಿಯಲಿ ಜೇನ ಶಾಂತಿಯಲಿ
ತುಂಬು ಬೆಳಕಿನಲಿ ಸಾರ್ಥಕ್ಯ ಮೆರೆದು 

                            - ಸಿ ಮರಿಜೋಸೆಫ್


ಮಾನವತೆಯ ಶಿಖರ






ಮೇಧಾ ಪಾಟ್ಕರ್‌ ನವರ ಆತ್ಮಸಾಕ್ಷಿಯ ನಡೆ...


(ಮೇಧಾ ಪಾಟ್ಕರ್ ನವರು ಬಸವ ಪ್ರಶಸ್ತಿಯನ್ನು ನಿರಾಕರಿಸಿದ ಬಗ್ಗೆ ಬರೆದ ನನ್ನದೊಂದು ಹಳೆ ಲೇಖನ.) 

ಅದೇಕೋ ಗೊತ್ತಿಲ್ಲ, ಕೆಲವರಂತೂ ಬೇಡಬೇಡವೆಂದರೂ ನಮ್ಮ ಮನಸ್ಸಿಗೆ ಹತ್ತಿರವಾಗಿಬಿಡುತ್ತಾರೆ; ಸೂರ್ಯಕಾಂತಿಗೆ ಸೂರ್ಯ ಹತ್ತಿರವಾದಂತೆ. ಜೀವಮಾನದಲ್ಲೇ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಿರುವುದಿಲ್ಲ. ಸಾಲದ್ದಕ್ಕೆ, ಅವರಲ್ಲಿ ಒಂದು ಮಾತು ಕೂಡಾ ನಾವು ಆಡಿರುವುದಿಲ್ಲ. ಅವರು ಮತ್ತು ನಮ್ಮ ನಡುವೆ ತಲೆಮಾರುಗಳ ಅಂತರ ಬೇರೆ. ಆದರೂ ಅವರ ಮಾತು ನಿಲುವುಗಳು, ಮೌಲ್ಯಗಳು, ನೈತಿಕತೆ, ಎದೆಗಾರಿಕೆ, ಮಾನವನ ಉನ್ನತಿಗೆ ತೊಡೆ ತಟ್ಟಿ ನಿಲ್ಲುವ ಮೊಂಡುಧೈರ್ಯ ಕಾಲವನ್ನು ಮೀರಿ ನಮಗೆ ಆಪ್ತವಾಗಿ ಬಿಟ್ಟಿರುತ್ತವೆ. "ಬಾಳಿದರೆ ಈ ಮನುಷ್ಯನಂತೆ ಬಾಳಿ ಬದುಕಬೇಕು ನೋಡಪ್ಪ" ಎಂಬ ಮನವೊಪ್ಪುವಂತ ಮಾತನ್ನು ಅದು ಹೇಗೋ ನಮ್ಮಲ್ಲಿ ಹುಟ್ಟಿಸಿಬಿಟ್ಟಿರುತ್ತದೆ. ಅಷ್ಟು ಮಾತ್ರವಲ್ಲ ನಮ್ಮ ಅಸಂವೇದಿತ್ವವನ್ನು ಪ್ರಶ್ನಿಸುವ ನೈತಿಕತೆಯ ತಾಕತ್ತನ್ನು ಸಹ ಅವರು ಪಡೆದುಕೊಂಡು ಬಿಟ್ಟಿರುತ್ತಾರೆ. ಅವರ ನಿಲುವು, ಸಿದ್ಧಾಂತಗಳು ಪ್ರಚಾರಕ್ಕೆ ಯಾವ ಜಾಹಿರಾತು ಕಂಪೆನಿಗಳ ಮರೆಹೊಕ್ಕಿರುವುದೇ ಇಲ್ಲ. ಆವುಗಳ ಪ್ರೊಮೊಶನ್ನಿಗೆ ಕೋಟಿ ಕೋಟಿ ರೂಗಳನ್ನು ಖರ್ಚು ಮಾಡಬೇಕಾದ ಅವಕಶ್ಯತೆಯೂ ಅವರಿಗೆ ಕಂಡಿರುವುದಿಲ್ಲ. ಪ್ರಚಾರ ರಾಯಭಾರಿಗಳನ್ನು ನೇಮಿಸಿಕೊಳ್ಳುವ ಸಮಸ್ಯೆಯಂತೂ ಖಂಡಿತ ಅವರಿಗೆ ಒದಗಿ ಬಂದಿರುವುದಿಲ್ಲ. ಆದರೂ ಸಾವಿರಾರು ಹಿಂಬಾಲಕರನ್ನು ಗಳಿಸಿಕೊಂಡುಬಿಟ್ಟಿರುತ್ತಾರೆ. ಮಾತ್ರವಲ್ಲದೆ, ನೂರಾರು ಜನರ ಮನಗಳಲ್ಲಿ ಚಿರಸ್ಥಾಯಿಯಾಗಿಬಿಟ್ಟಿರುತ್ತಾರೆ. ಕಾಲವು ಕೂಡ ಲುಪ್ತವಾಗಿಸದ ಕಾಲಾತೀತ ವ್ಯಕ್ತಿಗಳಾಗಿಬಿಟ್ಟಿರುತ್ತಾರೆ. ಅದು ಹೇಗೆ? ಎಂಬ ಪ್ರಶ್ನೆಯ ಬೆನ್ನತ್ತಿ ಹೊರಟಾಗ ನಮಗೆ ಒಮ್ಮೆಲೇ ಗೋಚರಿಸುವುದು ಅವರ ಮೌಲ್ಯಭರಿತ ಸಾತ್ವಿಕ ಬದುಕು. ಮಾತು-ಕೃತಿ ಬೆರೆತ ಅವರ ಬದುಕೇ ಜಾಹೀರಾತಾಗಿ ಬಿಟ್ಟಿರುತ್ತದೆ. ಇಂತಹ ನೂರಾರು ಮಹಾತ್ಮರ ಪಂಕ್ತಿಗೆ ನಿಸ್ಸಂದೇಹವಾಗಿ ಸೇರಿಕೊಳ್ಳಲೇ ಬೇಕಾದವರು ಮೇಧಾ ಪಾಟ್ಕರ್. 

ರಾಜ್ಯ ಸರ್ಕಾರದ 2010 ಸಾಲಿನ ಪ್ರತಿಷ್ಠಿತ ಬಸವ ಪುರಸ್ಕಾರಕ್ಕೆ ಮೇಧಾ ಪಾಟ್ಕರ್ ನವರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಹಾಗೂ ದೇಶವ್ಯಾಪ್ತಿ ಜನಪರ ಚಳವಳಿಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಗುರುತಿಸಿ ಅವರನ್ನು ಸಂಶೋಧಕ ಡಾII ಎಂ.ಎಂ. ಕಲಬುರ್ಗಿ ನೇತೃತ್ವದ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. 10 ಲಕ್ಷ ರೂ ನಗದು, ಪ್ರಶಸ್ತಿಪತ್ರ ಸ್ಮರಣಿಕೆ ಒಳಗೊಂಡಂತಹ ಬಸವ ಪ್ರಶಸ್ತಿಯನ್ನು ಸ್ವಿಕರಿಸಲು ಮೇಧಾ ಪಾಟ್ಕರ್ ನವರು ನಿರಾಕರಿಸಿದ್ದಾರೆ. ಅವರು ನಿರಾಕರಿಸಿರುವ ಸುದ್ದಿ ಸುದ್ದಿಯಾಗುವ ಮೊದಲೇ ಬೇಕೆಂದೇ ಕಣ್ಮರೆಯಾದಂತಿದೆ. 

ಪ್ರತಿಷ್ಠೆಯ ಪುರಸ್ಕಾರವನ್ನು ನಿರಾಕರಿಸಿದರವಲ್ಲಿ ಮೇಧಾ ಪಾಟ್ಕರ್ವರು ಮೊದಲಿಗರೇನೂ ಅಲ್ಲ. ನಾನಾ ಕಾರಣಗಳಿಂದಾಗಿ ಈ ರೀತಿಯ ಪ್ರಶಸ್ತಿಯನ್ನು ನಿರಾಕರಿಸಿರುವ ನೂರಾರು ಜನರ ತಾಜಾ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಆದರೂ ಮೇಧಾ ಪಾಟ್ಕರ್ ನವರ ನಿರಾಕರಣೆ ನನ್ನನು ಕಾಡಿದ್ದಾದರೂ ಏಕೆ?

ತನ್ನ ಕಾರ್ಯಕ್ರಮಗಳನ್ನು ಒಪ್ಪಿ ಅವುಗಳಲ್ಲಿ ಬೇಕು ಬೇಕೆಂತಲೇ ಎಕ್ಟ್ರಾ ಆರ್ಡಿನರಿಯನ್ನು ಕಾಣುವ ಹೊಗಳು ಭಟ್ಟರಿಗೆಂದೇ ಪ್ರಶಸ್ತಿಗಳನ್ನು ಮೀಸಲಿಟ್ಟಿರುವ ನಮ್ಮ ಸರ್ಕಾರ, ಅಪವಾದವೆಂಬಂತೆ ಈ ಬಾರಿ ಸಿಕ್ಕ ಅವಕಾಶವನ್ನು ಬಿಡದೆ, ಸರ್ಕಾರದ ಆಷಾಡಭೂತಿತನವನ್ನೂ, ಭ್ರಷ್ಟತೆಯನ್ನೂ ಏಕಾಏಕಿ ಖಂಡಿಸಿದ ಮೇಧಾ ಪಾಟ್ಕರ್ ನವರಂತಹ ಯೋಗ್ಯ ಮಹಿಳೆಗೆ ಬಸವ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿರುವುದೇ ಒಂದು ಅದ್ಭುತ. ಇಂತದರಲ್ಲಿ ಆ ಪ್ರಶಸ್ತಿಯನ್ನು ಮೇಧಾ ಪಾಟ್ಕರ್ ನವರು ಒಲ್ಲೆ ಎಂದಿರುವುದು ಎಷ್ಟು ಸಮಂಜಸ?

ಸುಮಾರು ಹನ್ನೊಂದನೇ ಶತಮಾನದ ಅನುಭಾವಿ, ಸಮಾಜ ಸುಧಾರಕ, ಕ್ರಾಂತಿಕಾರಿ, ಪ್ರವಾದಿ ಬಸವಣ್ಣನವರ ಹೆಸರಿನಲ್ಲಿ ನೀಡುತ್ತಿರುವ ಈ ಪುರಸ್ಕಾರಕ್ಕೆ ತಾವು ಯೋಗ್ಯರಲ್ಲವೆಂಬ ಭಾವನೆ ಮೇಧಾರನ್ನು ಕಾಡಿತೇ? ಸುಮಾರು 27 ವರ್ಷಗಳಿಂದ ನರ್ಮದಾ ಬಚಾವೋ ಅಂದೋಲನದ ರೂವಾರಿಯಾಗಿ, ಮಾನವಹಕ್ಕುಗಳ ಹುಟ್ಟು ಹೋರಾಟಗಾರ್ತಿಯಾಗಿ, ಪರಿಸರವಾದಿಯಾಗಿ ದೇಶವ್ಯಾಪ್ತಿ ಜನಪರ ಚಳುವಳಿಗಳಲ್ಲಿ ಸಕ್ರಿಯ ಪಾಲ್ಗೊಳ್ಳುತ್ತಾ ಬಂದಿರುವ ಮೇಧಾ ಪಾಟ್ಕರ್ ನವರು ಬಸವ ಪ್ರಶಸ್ತಿಯನ್ನು ಪಡೆಯಲು ಅರ್ಹರಲ್ಲವೇ? ಸ್ಲಮ್ ನಿವಾಸಿಗಳ, ದಲಿತರ, ಅಲ್ಪಸಂಖ್ಯಾತರ, ಆದಿವಾಸಿಗಳ, ರೈತರ, ಪರಿಸರವಾದಿಗಳ ಜತೆ ಗುರುತಿಸಿಕೊಂಡಿರುವ ಮೇಧಾ ಪಾಟ್ಕರ್ ನವರು ದನಿರಹಿತ ಈ ಜನರ ರಕ್ಷಣೆಗೆ ತಮ್ಮನ್ನೇ ಸಮರ್ಪಿಸಿಕೊಂಡಿರುವ ಮಾನವತಾವಾದಿಯೂ ಹೌದು. ಜತೆಗೆ ನಮ್ಮ ರಾಜ್ಯದಲ್ಲೇ ನಡೆದ ಸ್ಲಮ್ ನಿವಾಸಿಗಳ, ದಲಿತರ, ಅಲ್ಪಸಂಖ್ಯಾತರ, ರೈತರ, ಪರಿಸರವಾದಿಗಳ ಚಳುವಳಿ ಮತ್ತು ಅಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸರ್ಕಾರವನ್ನು ಛೇಡಿಸಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಆದ್ದರಿಂದ ಕಾಂತ್ರಿಕಾರಿ ಬಸವಣ್ಣ ಹೆಸರಿನ ಪುರಸ್ಕಾರಕ್ಕೆ ಮೇಧಾರವರು ಹೇಳಿ ಮಾಡಿಸಿದಂತಹ ವ್ಯಕ್ತಿ ಎಂದರೆ ಅತಿಶಯೋಕ್ತಿಯಾಗಲಾರದು. ಇನ್ನೊಂದು ಕಡೆ, ಬಸವಣ್ಣನ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವುದೆಂದರೆ ಅವರೇ ಹೇಳುವಂತೆ ಅದೊಂದು ಗೌರವದ ಸಂಗತಿಯೂ ಹೌದು. ಆದ್ದರಿಂದ ಮೇಧಾ ಪಾಟ್ಕರವರ ಅರ್ಹತೆಯ ಬಗ್ಗೆ ನಾವು ಅಪ್ಪಿತಪ್ಪಿಯೂ ಸಂಶಯಪಡಲಾಗುವುದಿಲ್ಲ. ಆದರೂ ಆ ಪ್ರಶಸ್ತಿಯನ್ನು ಏಕೆ ನಿರಾಕರಿಸಿದರೆಂಬುವುದೇ ಹಿಡಿ ಹಿಡಿಯಾಗಿ ನಮ್ಮನ್ನು ಕಾಡುವ ಪ್ರಶ್ನೆ.

ಭ್ರಷ್ಟಚಾರದಲ್ಲೇ ಮುಳುಗಿಹೋಗಿರುವ, ಮಾನವ ಹಕ್ಕುಗಳಿಗೆ ಬೆಲೆ ಕೊಡದೆ, ಶೋಷಿತರ ಬಗ್ಗೆ ಅಪ್ಪಿತಪ್ಪಿಯೂ ಕಾಳಜಿ ತೋರದ, ಅಕ್ರಮ ಗಣಿಗಾರಿಕೆ ಮತ್ತು ಆಗಿಂದಾಗೆ ಕಂಡು ಬರುತ್ತಿರುವ ಹಗರಣಗಳ ಬಗ್ಗೆ ಸೂಕ್ತ ಕ್ರಮ ಕೈಗೊಳದೇ ಭ್ರಷ್ಟತೆಯನ್ನು ಉತ್ತೇಜಿಸುತ್ತಿರುವ ಹಾಗೂ ಭ್ರಷ್ಟಚಾರದ ಪ್ರತೀಕವೇ ಆಗಿಹೋಗಿರುವ ಜನವಿರೋಧಿ ಸರ್ಕಾರದಿಂದ ಬಸವಣ್ಣ ಪ್ರಶಸ್ತಿ ಪಡೆಯುವುದು ಎಷ್ಟ ಸರಿ? ಅಂತಹ ಪ್ರಶಸ್ತಿಯನ್ನು ನೀಡಲು ನಮ್ಮ ಸರ್ಕಾರ ಅರ್ಹವೇ? ಭ್ರಷ್ಟ ಸರ್ಕಾರದಿಂದ ನೈತಿಕತೆಯ ಪ್ರಶಸ್ತಿ ಪಡೆಯುವ ಅಗತ್ಯವಾದರೂ ಏನು?

ತನ್ನ ವಿರುದ್ಧ ಮಾತನಾಡುವ ಚಳುವಳಿಗಾರರ ಬಾಯಿಮುಚ್ಚಿಸಲು ನಮ್ಮ ಸರ್ಕಾರಗಳ ಕೈಗಳಲ್ಲಿ ಅನೇಕ ರೆಡಿಮೇಡ್ ತಂತ್ರಗಳಿವೆ. ಪ್ರತಿಭಟನಕಾರರನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸಿ, ಅವರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಹೂಡಿ, ಸೆರೆಮನೆಗೆ ತಳ್ಳುವುದು ಒಂದು ತಂತ್ರವಾದರೆ, ತನ್ನ ವಿರೋಧಿಗಳನ್ನು (ಚಳಿವಳಿಗಾರರನ್ನು) ಗುರುತಿಸಿ ಯಾವುದೋ ಒಂದು ಪರಿಷತ್ತಿನ ಅಧ್ಯಕ್ಷಗಿರಿಯೋ ಅಥವಾ ಪ್ರಶಸ್ತಿಗಳನ್ನೋ ಕೊಟ್ಟು ತಮ್ಮ ಪಾಲುದಾರಾಗಿಸಿಕೊಳ್ಳುವ ತಂತ್ರ ಇನ್ನೊಂದು. ಬರಹಗಾರ, ತತ್ತ್ವಜ್ಞಾನಿ, ನಾಟಕಕಾರ, ಅಸ್ತಿತ್ವವಾದದ ಪ್ರತಿಪಾದಕ ಜೀನ್ - ಪಾಲ್ ಸಾರ್ತ್ರ್‍ಗೆ 1964 ರಲ್ಲಿ ನೊಬೆಲ್ ಪ್ರಶಸ್ತಿ ಬಂದಾಗ, ಪ್ರಶಸ್ತಿಯು ಬರಹಗಾರನನ್ನು ಒಂದು ವ್ಯವಸ್ಥೆಯಾಗಿಸಿಬಿಡುವುದಲ್ಲದೆ, ಆ ವ್ಯವಸ್ಥೆಯ ಪಾಲುದಾರನಾಗಿಸಿ ಅವನ ಬರಹಗಳ ಪರಿಣಾಮವನ್ನು ಕ್ಷೀಣಿಸಿಬಿಡುತ್ತದೆ ಎಂದು ನೋಬೆಲ್ ಪ್ರಶಸ್ತಿಯನ್ನು ಬಟಾಟೆಗಳ ಚೀಲಕ್ಕೆ ಹೋಲಿಸಿ, ತನಗೆ ದೊರೆತಿದ್ದ ಇತರ ಪ್ರಶಸ್ತಿಗಳಂತೆಯೇ ಅದನ್ನೂ ನಿರಾಕರಿಸಿದ್ದನು. ಹೌದು, ಭ್ರಷ್ಟ ಸರ್ಕಾರದಿಂದ ಪ್ರಶಸ್ತಿ ಪಡೆಯುವುದೆಂದರೆ ಭ್ರಷ್ಟ ಸರ್ಕಾರದ ಜೊತೆ ರಾಜಿ ಮಾಡಿಕೊಂಡಂತೆಯೇ. ಈ ರೀತಿಯ ರಾಜಿಗಳು ಚಳುವಳಿಗಳ ನೈತಿಕತೆಯನ್ನು ತಿಂದು ಬಿಡುವುದಲ್ಲದೇ, ಚಳುವಳಿಗಳ ಮೂಲ ಉದ್ದೇಶವನ್ನೇ ಬ್ಲ್ಯಾಕ್ಮೇಲ್ ಮಾಡಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ಮೇಧಾಪಾಟ್ಕರ್ ನವರ ನಿಲುವು ಮೆಚ್ಚತಕ್ಕದ್ದೇ. ಅವರು ಭ್ರಷ್ಟ ಸರ್ಕಾರದಿಂದ ಪ್ರಶಸ್ತಿಯನ್ನು ಸ್ವೀಕರಿಸದೆ ತಮ್ಮ ಹೋರಾಟದ ನೈತಿಕತೆಯನ್ನು ಕಾಪಾಡಿಕೊಂಡಿದ್ದಾರೆ. ಭ್ರಷ್ಟ ಸರ್ಕಾರದ ಜೊತೆ ಕೈ ಜೋಡಿಸಲು ನಿರಾಕರಿಸಿದ್ದಾರೆ. ಜತೆಗೆ ಪುರಸ್ಕಾರವನ್ನು ನಿರಾಕರಿಸುವುದರ ಮೂಲಕ ಸರ್ಕಾರದ ಆತ್ಮವಿಮರ್ಶೆಗೆ ಕರೆನೀಡಿದ್ದಾರೆ. ಪ್ರಶಸ್ತಿ ಸ್ವೀಕರಿಸುವವರ ಅರ್ಹತೆ ಮಾತ್ರ ಮುಖ್ಯವಲ್ಲ ಪ್ರಶಸ್ತಿಗಳನ್ನು ನೀಡುವವರ ಯೋಗ್ಯತೆಯೂ ಅಷ್ಟೇ ಮುಖ್ಯ ಎಂದು ಸರ್ಕಾರದ ಕಿವಿಹಿಂಡಿದ್ದಾರೆ.

ಸರ್ಕಾರದ ಪ್ರಶಸ್ತಿಗಳನ್ನು ಪಡೆಯಬೇಕೆಂಬ ಏಕೈಕ ಅಸೆಯಿಂದ ಅಡ್ಡ ದಾರಿ ಹಿಡಿಯುವ ನೂರಾರು ಜನರು ನಮ್ಮ ಮಧ್ಯೆ ಇರುವಾಗ, ಮನೆ ಬಾಗಿಲಿಗೆ ಬಂದ ಪುರಸ್ಕಾರವನ್ನು ನಿರಾಕರಿಸುವುದೆಂದರೆ ಏನು? ಈ ರೀತಿಯ ನಿರಾಕರಣೆ ಒಂದು ಸಾಮಾನ್ಯವಾದ ಕೃತ್ಯವಲ್ಲ, ತನ್ನ ಬದುಕಿನ ನಿಲುವುಗಳ ಹಾಗೂ ಆದರ್ಶಗಳ ಕುಲುಮೆಯಲ್ಲಿ ರೂಪುಗೊಂಡು ಮನವರಿಕೆಯಾದ ಬದ್ದತೆ ಮತ್ತು ಸಂಕಲ್ಪ. ಆದ್ದರಿಂದ ಮೇಧಾ ಪಾಟ್ಕರ್ ನವರ ನಿರಾಕರಣೆ ಜನಪ್ರಿಯತೆಯ ಗಿಮಿಕ್ಕಾಗದೆ, ಅವರ ಆತ್ಮಸಾಕ್ಷಿಯ ನಡೆಯೆಂದು ನಿಸ್ಸಂಕೋಚವಾಗಿ ಒಪ್ಪಿಕೊಳ್ಳಬಹುದು. ಅವರ ಈ ಒಂದು ನಡೆ ನಮಗೆಲ್ಲಾ ಆದರ್ಶ ಪಾಠವಾಗಲಿ.
- ಜೋವಿ


●●●





ಪರೀಕ್ಷೆಗಳೇ ಹೊರತು ಕೆಡುಕೇನಿಲ್ಲ


ಸೃಷ್ಟಿಗೆ ದೇವರ ಕೃಪೆಯು ಹೇರಳವಾಗಿ ದೊರಕಿರುವ ಅನುಗ್ರಹ ಹಾಗೂ ಆದಿಯಿಂದಲೂ ಅಂತ್ಯದವರೆಗೂ ಉಡುಗೊರೆಯಾಗಿ ಸಿಕ್ಕ ವರ. ಭಕ್ತಿ, ಸಂತೋಷ, ತಾಳ್ಮೆ, ಸಹನೆ, ಸಹಾನುಭೂತಿ, ಶಕ್ತಿ, ಯುಕ್ತಿ, ಆರೋಗ್ಯ ಮತ್ತು ಭಾಗ್ಯ ದೇವರ ಕೃಪೆಗಳು. ದೇವರು ನಮ್ಮಲ್ಲಿ ನೆಲಸಿ ನಮ್ಮೊಂದಿಗಿದ್ದು ನಮ್ಮನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ಕಷ್ಟದಲ್ಲೂ ಸುಖದಲ್ಲೂ ನೋವಿನಲ್ಲೂ ನಲಿವಿನಲ್ಲೂ ಪೂರ್ಣವಾಗಿ ಭಾಗಿಯಾಗಿದ್ದಾರೆ ಮತ್ತು ಕೈ ಬಿಡದೇ ಮುನ್ನಡೆಸುತ್ತಾ ಯಥೇಚ್ಛವಾಗಿ ಪ್ರೀತಿಸಿ ಬಾಳನ್ನು ಅರಸಿ ನಮ್ಮ ಕಣಕಣದಲ್ಲೂ ಅಗೋಚರವಾಗಿದ್ದಾರೆ. ಹೀಗಿರುವಾಗ ಮಾನವ ದೇವನನ್ನು ತೆಗಳಿ ಪ್ರಶ್ನಿಸುವಂತಾಗಿದ್ದಾನೆ. ಸ್ವತಂತ್ರವಾಗಿ ಕೊಟ್ಟ ವರಕೃಪೆಗಳನ್ನು ಉಪಯೋಗಿಸುವ ರೀತಿಯನ್ನು ಅರಿಯದೆ ಸ್ವಾರ್ಥಕ್ಕಾಗಿ ಬಳಸುತ್ತಾ ತೊಂದರೆಗೀಡಾಗಿದ್ದಾನೆ. ಇಂತಿರಲು ದೇವರನ್ನು ಅವರ ನಾಮವನು ತೆಗಳಿ ಪ್ರಶ್ನಿಸುತ್ತಾನೆ. ದೇವನದು ನಿಸ್ವಾರ್ಥ ಪ್ರೀತಿ. ಸ್ನೇಹ ಹಾಗೂ ಸೇವೆ ಅವನಲ್ಲಿರುವಾಗ ಕೇಡೊಂದೂ ಬಾರದು. ಹೀಗಿರುವಾಗ ಪ್ರಶ್ನೆಗಳೇಕೆ ತೆಗಳಿಕೆ ಏಕೆ?

ಅವನಿಂದ ಪರೀಕ್ಷೆಗಳೇ ಹೊರತು ಕೆಡುಕೇನೂ ಆಗದು.

ಇಷ್ಟೆಲ್ಲ ಕೊಟ್ಟ ಆತನಿಗೆ ಪರೀಕ್ಷಿಸಲು ಸ್ವಾತಂತ್ರ್ಯವಿಲ್ಲವೇ?

ಯೋಬನ ಗ್ರಂಥದಲ್ಲಿ ಯೋಬನಿಗೆ ಬಂದ ಕಷ್ಟಗಳನ್ನು ನೆನೆಸಿಕೊಂಡಾಗ,ನಮಗೆ ತಿಳಿಯುತ್ತದೆ; ಯೋಬನಿಗೆ ಬಂದ ಕಷ್ಟಗಳು ಮತ್ತು ಪರೀಕ್ಷೆಗಳು ಕಠೋರವಾದವುಗಳು. ಇಂತಿರಲು ಹೇಗೆ ಯೋಬನು ಪರೀಕ್ಷೆಯಲ್ಲಿ ಉತ್ತೀರ್ಣನಾದನೋ ಹಾಗೆಯೇ ನಾವು ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದೇ ದೇವರಿಗೆ ನಾವು ತೋರಿಸುವ ನಿಜವಾದ ಪ್ರೀತಿ ಹಾಗೂ ನಿಜವಾದ ಒಡನಾಟ. ಪರೀಕ್ಷೆಯಲ್ಲಿ ಸಾವು ಸಂಭವಿಸಬಹುದು ಆದರೂ ಗೆದ್ದು ಬರಬೇಕು.

ಒಂದೊಮ್ಮೆ ಒಂದು ಪತ್ರಿಕೆಯನ್ನು ಓದುತ್ತಿದ್ದೆ.

ಒಬ್ಬ ಭಕ್ತ ದೇವರನ್ನು ಪರೀಕ್ಷಿಸುತ್ತಾನೆ: 'ಹೇ ದೇವಾ ನಾನು ನಿನ್ನನ್ನು ಎಷ್ಟು ಪ್ರೀತಿಸಿದರೂ ನೀನು ನನ್ನಲ್ಲಿ ಇಲ್ಲ' ಎಂದು ಪ್ರಶ್ನಿಸಿದಾಗ ದೇವರು 'ಭಕ್ತ ನಾನು ಇಂದಿಗೂ ನಿನ್ನಲ್ಲಿ ಇದ್ದೇನೆ' ಎಂದು ಉತ್ತರ ನೀಡಿದರು.

ಆಗ ಆ ಭಕ್ತ"ನಾನು ಹೇಗೆ ನಂಬುವುದು?' ಎಂದು ಕೇಳಿದನು ಆಗ ದೇವರು 'ನೀನು ಆ ಕಡಲ ತೀರದ ಮರಳಿನಲ್ಲಿ ಎರಡೆಜ್ಜೆ ಇಡು ಆಗ ನಿನ್ನೊಂದಿಗೆ ನಾನು ಎರಡೆಜ್ಜೆ ಇಡುವುದನ್ನು ನೋಡುವೆ' ಎಂದರು ಹಾಗೆಯೇ ಭಕ್ತನು ಮರಳಿನಲ್ಲಿ ನಡೆಯುವಾಗ ಅವನ ಹೆಜ್ಜೆಯೊಂದಿಗೆ ಮತ್ತೆರಡು ಹೆಜ್ಜೆಗಳು ಕಾಣತೊಡಗಿದವು ಹೀಗೆ ಕಾಲಗಳು ಉರುಳಿದವು ಭಕ್ತನ ಬಂಧು-ಬಳಗದವರ ಎಲ್ಲರೂ ದೂರ ಆದರು. ಭಕ್ತನಿಗೆ ಸಂಕಷ್ಟಗಳು ಬಂದವು.

ಹೀಗೆ ಬಂಧು ಬಳಗದವರು ದೂರ ಆಗಲು ಭಕ್ತನು ಬೇಸರದಿಂದ ಇದ್ದನು. ಹೀಗೆ ಇರುವಾಗ ಮತ್ತೊಮ್ಮೆ ಆಲೋಚನೆ ಬಂದಿತು. ಬಂಧು ಬಳಗದವರು ದೂರವಾದರು, ಆದರೆ ದೇವರು ದೂರಾದರೋ ಎಂದು ಪ್ರಶ್ನೆ ಮನಸ್ಸಿನಲ್ಲಿ ಬಂದಿತ್ತು. ಹೀಗಾಗಿ ಅವನು ಮತ್ತೊಮ್ಮೆ ದೇವರನ್ನು ಪರೀಕ್ಷಿಸಿದನು. ಈ ಬಾರಿಯೂ ಸಮುದ್ರದ ಕಡಲ ತೀರದ ಮರಳಿನಲ್ಲಿ ಎರಡು ಹೆಜ್ಜೆ ಇಟ್ಟನು. ಆದರೆ ದೇವರ ಮತ್ತೆರಡು ಹೆಜ್ಜೆಗಳು ಕಾಣಸಿಗಲಿಲ್ಲ. ಇದನ್ನು ನೋಡಿದ ಭಕ್ತ ನೊಂದು ದೇವರನ್ನು ಪ್ರಶ್ನಿಸಿದನು 'ಹೇ ದೇವಾ ಬಳಗದವರು ದೂರ ಆದರು ಸರಿ, ಆದರೆ ನೀನು ದೂರ ಆಗೋದು ಸರಿಯೇ?' ಎಂದು. ಆಗ ದೇವರು 'ಮಗೂ, ನಾನು ದೂರ ಆಗಲಿಲ್ಲ ಬದಲಾಗಿ ನಿನ್ನೊಂದಿಗೆ ಇದ್ದೆ, ನೀನು ಕಡಲ ತೀರದಲ್ಲಿ ಹೆಜ್ಜೆಯನ್ನು ಇಡುವಾಗ ಅದು ನನ್ನ ಹೆಜ್ಜೆಗಳೇ ಆಗಿದ್ದವು, ಅವು ನಿನ್ನ ಹೆಜ್ಜೆಗಳಲ್ಲ, ಆಗ ನೀನು ನನ್ನ ಮಡಿಲಲ್ಲಿ ಇದ್ದೆ, ನಾನು ನಿನಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೆ. ನಿನಗೆ ಕಾಲ ಕೂಡಿ ಬಂದು ಸಮರ್ಥನು ಆಗುವವರೆಗೂ ನಾನು ನಿನ್ನನ್ನು ಕೆಳಗೆ ಬಿಡಲಿಲ್ಲ. ಸಮರ್ಥನಾದ ಮೇಲೆ ಕೆಳಗೆ ಬಿಟ್ಟೆ' ಎಂದು ಉತ್ತರವಿತ್ತರು. 

ಹೀಗೆ ಅವನು ಸಮರ್ಥನಾದ ಮೇಲೆ ದೇವರು ಕೆಳಗೆ ಬಿಟ್ಟು ಅವನು ಸುಧಾರಿಸಿಕೊಂಡು ಸಂಕಷ್ಟಗಳು ದೂರಾದವು. ಬಂದು ಬಳಗದವರು ಸೇರಿದರು. ಇದೇ ಆ ದೇವರ ಪ್ರೀತಿ ಹಾಗೂ ದೇವರ ಕೃಪೆ. ಪರಮನ ಮಕ್ಕಳಾದ ನಾವು ಎಂದೆಂದಿಗೂ ದೇವರ ಕೃಪೆಗೆ ಪಾತ್ರ. ಮಕ್ಕಳಾದ ನಾವು ಎಂದಿಗೂ ದೇವರನ್ನು ಪ್ರಶ್ನಿಸಬಾರದು ಹಾಗೂ ಪರೀಕ್ಷಿಸಬಾರದು. ಇತರ ಜೀವಿಗಳೇ ನಂಬಿ ಬದುಕಿ ಗೆದ್ದು ಜೀವನ ಸಾಗಿಸುವಾಗ ಎಲ್ಲದರಲ್ಲೂ ಸಾಮರ್ಥ್ಯವುಳ್ಳ ಹಾಗೂ ಯೋಗ್ಯತೆಯುಳ್ಳ ನಾವು ದೇವರನ್ನು ಪ್ರಶ್ನಿಸಿ ಅವರನ್ನು ಪರೀಕ್ಷಿಸುವುದು ಸರಿಯಲ್ಲ ಎಂಬುದು ನನ್ನ ವಾದ. 

ದೇವರನ್ನು ಪ್ರೀತಿಸಿ ಎಲ್ಲಾ ಪರೀಕ್ಷೆಗಳನ್ನು ಗೆದ್ದು ಅವನ ಕೃಪೆಗೆ ಪಾತ್ರರಾಗಲು ಅವನಲ್ಲಿ ಮುಗ್ಧ ಮನಸ್ಸಿನಿಂದ ಪ್ರಾರ್ಥಿಸುವುದು ಬೇಡಿಕೊಳ್ಳುವುದು ಸೂಕ್ತ. ಕ್ರಿಸ್ತನು ಹೇಳಿದ ಪ್ರಕಾರ 'ಕೇಳಿರಿ ಕೊಡಲಾಗುವುದು, ತಟ್ಟಿರಿ ತೆರೆಯಲಾಗುವುದು, ಹುಡುಕಿರಿ ಸಿಗುವುದು' ಎನ್ನುವಾಗ ದಾರಿ ಹುಡುಕುವುದು ಕೇಳುವುದು ತಟ್ಟುವುದು ತಪ್ಪಲ್ಲ. ಆದ್ದರಿಂದ ನಾವು ಅವನ ಪರಮ ಮಕ್ಕಳಾಗಿ ಕೇಳುವುದು ತಟ್ಟುವುದು ಹಾಗೂ ಹುಡುಕುವುದು ನಮ್ಮ ಹಕ್ಕು. ಹೀಗಾಗಿ ಪ್ರಾರ್ಥಿಸಿರಿ, ಅವನು ಎಂದಿಗೂ ಇಲ್ಲ ಎನ್ನುವುದಿಲ್ಲ. ಕೊಡುವನು ಪ್ರೀತಿಸುವನು ಕರುಣಿಸುವನು ಹಾಗೂ ಸ್ನೇಹಿಸುವನು, ಅಂತಹ ದೇವನು ನಮ್ಮ ಪ್ರಭು ಕ್ರಿಸ್ತನು. 

¨ ಇನ್ಫೆಂಟ್  ಕಿಶೋರ್


●●●





ಕ್ರೈಸ್ತ ಐಕ್ಯತಾ ಸಪ್ತಾಹ

----------------------------------------------------------
ಏನಿದು ಕ್ರೈಸ್ತ ಐಕ್ಯತೆಯ ಸಪ್ತಾಹ? ನನ್ನ ಗೆಳೆಯನೊಬ್ಬ ಒಂದು ಸಂದೇಶ ಹೀಗೆಂದು ಬರೆದು ಕಳುಹಿಸಿದ. ನೀನು ಮಾಡಿದ ಪೂಜಾ ಪಂಚಾಂಗದಲ್ಲಿ ಈ ವಾರ ಕ್ರೈಸ್ತ ಐಕ್ಯತೆಯ ಸಪ್ತಾಹ ಎಂದು ಬರೆದಿದೆ, ಏನದು? ಇದಕ್ಕೆ ಕಾರಣ ನಮ್ಮಲ್ಲಿ ಐಕ್ಯತೆ ಇಲ್ಲದಿರುವುದೇ ಅಥವಾ ಎಲ್ಲಾದರೂ ಚರ್ಚುಗಳಲ್ಲಿ ಗಲಾಟೆ ಏನಾದರೂ ನಡೆದಿದೆಯೇ? ಎಂಬ ಪ್ರಶ್ನೆಯನ್ನು ಕಳುಹಿಸಿದ. ಇದನ್ನು ಯಾಕೆ ಲೇಖನದ ಮೂಲಕ ದನಿಗೆ ಬರೆಯಬಾರದು ಎಂದುಕೊಂಡು ಇಲ್ಲಿ ಬರೆಯುತ್ತಿದ್ದೇನೆ. 
------------------------------------------------------
ಏನಿದು ಕ್ರೈಸ್ತ ಐಕ್ಯತೆಯ ಸಪ್ತಾಹ? ನನ್ನ ಗೆಳೆಯನೊಬ್ಬ ಒಂದು ಸಂದೇಶ ಬರೆದು ಕಳುಹಿಸಿದ. “ನೀನು ಮಾಡಿದ ಪೂಜಾ ಪಂಚಾಂಗದಲ್ಲಿ ಈ ವಾರ ಕ್ರೈಸ್ತ ಐಕ್ಯತೆಯ ಸಪ್ತಾಹ ಎಂದು ಬರೆದಿದೆ, ಏನದು, ಇದಕ್ಕೆ ಕಾರಣ ನಮ್ಮಲ್ಲಿ ಐಕ್ಯತೆ ಇಲ್ಲದಿರುವುದೋ ಅಥವಾ ಎಲ್ಲಾದರೂ ಚರ್ಚುಗಳಲ್ಲಿ ಗಲಾಟೆ ಏನಾದರೂ ನಡೆದಿದೆಯೋ? “

ಇದನ್ನು ಯಾಕೆ ಲೇಖನದ ಮೂಲಕ ದನಿಗೆ ಬರೆಯಬಾರದು ಎಂದುಕೊಂಡು ಇಲ್ಲಿ ಬರೆಯುತ್ತಿದ್ದೇನೆ. ಕಥೋಲಿಕ ಕ್ರೈಸ್ತರಾದ ನಮಗೆ ಕ್ರೈಸ್ತ ಐಕ್ಯತೆಯ ಸಪ್ತಾಹದ ಬಗ್ಗೆ ಅಷ್ಟು ಪರಿಚಯವಿಲ್ಲ. ಇದರ ಅರ್ಥ ನನಗೂ ಕೂಡಾ ತಿಳಿದಿರಲಿಲ್ಲ. ಮೊನ್ನೆ ನಮ್ಮ ಗುರುಮಠದ ಬೋಧಕರಾದ ವಂದನೀಯ ಸ್ವಾಮಿ ಜೆ.ಬಿ ಸಲ್ಡಾನ ರವರು ನಮಗೆ ನೀಡಿದ ಬೋಧನೆಯ ಸಾರಾಂಶವೇ ಈ ನನ್ನ ಲೇಖನ. 

ಫಾದರ್ ಜೆ.ಬಿ ಒಬ್ಬ ದಕ್ಷ , ಧೀಮಂತ ಆಡಳಿತಗಾರ ಮತ್ತು ಒಬ್ಬ ಒಳ್ಳೆಯ ಬೋಧಕ. ಅವರು ಐಕ್ಯತೆ ಬಗ್ಗೆ ನಮ್ಮೆಲ್ಲರಿಗೂ ಒಂದು ಪ್ರಶ್ನೆಯನ್ನು ಹಾಕಿದರು. ಕ್ರೈಸ್ತ ಐಕ್ಯತೆ ಎನ್ನುವುದು ದೊಡ್ಡ ಸಂಗತಿ. ಕ್ರೈಸ್ತ ಐಕ್ಯತೆಗಾಗಿ ಪ್ರಾರ್ಥಿಸುತ್ತಿರುವ ನೀವು ಗುರುವಾಗಿ ಮುಂದೆ ಇದಕ್ಕಾಗಿ ಶ್ರಮಿಸಬೇಕು. ಗುರುಮಠದಲ್ಲಿರುವ ಈಗ ನೀವು ಅದನ್ನು ಹೇಗೆ ಪ್ರಾರಂಭಿಸಬೇಕು ಎಂದರೆ ಮೊದಲು ನಮ್ಮ ಕಥೋಲಿಕ ಕ್ರೈಸ್ತ ವ್ಯಕ್ತಿಯನ್ನು ಬಿಟ್ಟು ಬೇರೆ ಪಂಗಡದ ಒಬ್ಬ ವ್ಯಕ್ತಿಯೊಂದಿಗೆ ಗೆಳೆತನ ಮಾಡಬೇಕು. ಆಗ ನೀವು ಪ್ರಾರ್ಥಿಸಿದ ಪ್ರಾರ್ಥನೆಗೆ ಒಂದು ಅರ್ಥ ಎಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನಾನು ಕ್ರೈಸ್ತ ಐಕ್ಯತೆಯ ಪ್ರಾರ್ಥನೆಗೆಂದು ಬಂದ ಒಬ್ಬ ಸಿ.ಎಸ್.ಐ ಚರ್ಚಿನ ದೈವಶಾಸ್ತ್ರದ ವಿದ್ಯಾರ್ಥಿಯೊಂದಿಗೆ ಸ್ನೇಹ ಬೆಳೆಸಿದೆ. ಆಗ ನನಗೆ ಎಷ್ಟೋ ವಿಷಯಗಳು; ಅವರ ಬಗ್ಗೆ, ಅವರು ನಮ್ಮನ್ನು ಹೇಗೆ ನೋಡುತ್ತಾರೆ ಎನ್ನುವ ವಿಷಯದ ಬಗ್ಗೆ ತಿಳಿಯಿತು.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಪ್ರಭು ಯೇಸುಕ್ರಿಸ್ತರು ಕ್ರೈಸ್ತ ಧರ್ಮಸಭೆಯನ್ನು ಸ್ಥಾಪಿಸಿದರು, ಅದು ಇಂದು ಪ್ರಪಂಚದ ಮೂಲೆಮೂಲೆಗಳಿಗೆ ವಿಶಾಲವಾಗಿ ಬೆಳೆದು ನಿಂತಿದೆ. ಈ ಒಂದು ಕ್ರಿಸ್ತನ ಪರಿಚಯ ಕಾರ್ಯ ಹಲವಾರು ಕ್ರೈಸ್ತ ಮಿಶನರಿಗಳ ಮುಖಾಂತರ ಪ್ರಚಾರಗೊಂಡಿತ್ತು. ’ಹೋಗಿರಿ ಸಕಲ ದೇಶಗಳ ಜನರನ್ನೂ ನನ್ನ ಶಿಷ್ಯರನ್ನಾಗಿ ಮಾಡಿರಿ’ (ಮತ್ತಾಯ 28:19) ಎಂಬ ಪ್ರಭು ಯೇಸುಕ್ರಿಸ್ತರ ಆಜ್ಞೆಯನ್ನು ಅವರ ಶಿಷ್ಯರು ಮತ್ತು ಹಿಂಬಾಲಕರು ಕಾರ್ಯರೂಪಕ್ಕೆ ತಂದಿದ್ದಾರೆ. ಯೇಸುಕ್ರಿಸ್ತರು ಈ ಲೋಕಕ್ಕೆ ಬಂದಿದ್ದು ನಮ್ಮೆಲ್ಲರನ್ನೂ ಪಿತದೇವರಲ್ಲಿ ಒಂದು ಮಾಡಲು. ತಂದೆಯೇ, ನಾವು ಒಂದಾದಂತೆ, ಇವರೆಲ್ಲರೂ ಒಂದಾಗಲಿ. ಹೇಗೆ ಪಿತ, ಸುತ, ಮತ್ತು ಪವಿತ್ರಾತ್ಮಾರು ಒಂದಾಗಿ ತ್ರೈಯಕ ದೇವರಾಗಿ ಜೀವಿಸುತ್ತಾರೋ, ಅಂತೆಯೇ ನಾವೂ ಕೂಡಾ ಒಂದಾಗಿ ಜೀವಿಸಬೇಕೆಂದು ಪ್ರಭು ಯೇಸುಕ್ರಿಸ್ತರು ಅಪೇಕ್ಷಿಸಿದರು. 

ಆದರೆ ವಿವಿಧ ಕಾರಣಗಳಿಗೆ ಕ್ರೈಸ್ತ ಧರ್ಮವು ವಿಭಜನೆಯಾಗಿ ಹಲವಾರು ಪಂಗಡಗಳಾಗಿದ್ದು ಮಾತ್ರ ದುಃಖಕರ ವಿಚಾರವಾಗಿದೆ. 15ನೇ ಮತ್ತು 16ನೇ ಶತಮಾನದಲ್ಲಿ ಕಥೋಲಿಕ ಧರ್ಮಸಭೆಯಲ್ಲಿ ನಡೆಯುತ್ತಿದ್ದ ಅಕ್ರಮಗಳ ವಿರುದ್ದ ದಂಗೆಯೆದ್ದ ಮಾರ್ಟಿನ್ ಲೂಥರ್ ಪ್ರೊಟೆಸ್ಟೆಂಟ್ ಪಂಗಡದ ಉಗಮಕ್ಕೆ ಕಾರಣಕರ್ತರಾದರು. ಅಂದಿನಿಂದ ಇಂದಿನವರೆಗೂ ಕ್ರೈಸ್ತ ಸಭೆಯಲ್ಲಿ ಬಿರುಕು ಇನ್ನೂ ಹೆಚ್ಚಾಗಿ ಪ್ರಪಂಚದಾದ್ಯಂತ ಹಲವಾರು ಪಂಗಡಗಳಾಗಿ ಚಿಗುರಿದವು ಹಾಗೂ ಇಂದಿಗೂ ವಿಭಿನ್ನವಾದ ನೂತನ ಪಂಗಡಗಳು ಉದ್ಭವಿಸುತ್ತಿವೆ. 

ಈ ಅನೇಕ ಕ್ರೈಸ್ತ ಪಂಗಡಗಳ ನಡುವೆ, ಶುಭಸಂದೇಶ ಪ್ರಚಾರ ಕಾರ್ಯದಲ್ಲಿ ಸ್ಪರ್ಧೆ, ಭಿನ್ನಾಭಿಪ್ರಾಯಗಳು ಏರ್ಪಟ್ಟಿವೆ. ಕೆಲವೊಮ್ಮೆ ಕ್ರೈಸ್ತ ವಿಸ್ವಾಸಿಗಳ ಮನಪರಿರ್ವತನೆಯ ಸಂದರ್ಭದಲ್ಲಿ ಒಂದು ಪಂಗಡದ ಕ್ರೈಸ್ತರು ಮತ್ತೊಂದು ಪಂಗಡದವರನ್ನು ಆಪಾದಿಸುವುದು ಸಹಜವಾಗಿದೆ. ಇಂತಹ ಸಂದರ್ಭದಲ್ಲಿ ಈ ಎಲ್ಲಾ ವಿವಿಧ ಪಂಗಡಗಳ ಐಕ್ಯತೆ ಪ್ರಶ್ನಾರ್ಹ ಅಂಶವಾಗಿದೆ. 

ಆದರೆ ಇಂದು ಈ ರೀತಿಯ ಮನೋಭಾವ ಹಾಗೆಯೇ ನಮ್ಮಲ್ಲಿ ಉಳಿದಿಲ್ಲ. ಬದಲಾಗಿ ವಿವಿಧ ಕ್ರೈಸ್ತ ಪಂಗಡಗಳ ನಡುವೆ ಐಕ್ಯತೆ, ಪರಸ್ಪರ ಒಳ್ಳೆಯ ಮನೋಭಾವ, ಸಂಬಂಧಗಳು ಬಲವಾಗುತ್ತಿದೆ. ಹೀಗೆ ವಿವಿಧ ಕ್ರೈಸ್ತ ಪಂಗಡಗಳ ನಡುವೆ ಐಕ್ಯತೆಯನ್ನೂ ತಂದ ಕೀರ್ತಿ ಕ್ರೈಸ್ತ ಪಂಗಡಗಳ ಐಕ್ಯತೆಯ ವಾರದ ಪ್ರಾರ್ಥನಾ ವಿಧಿ (week for Christian unity)ಗೆ ಸಲ್ಲುತ್ತದೆ. ಕ್ರಿಸ್ತರ ಹೆಸರಲ್ಲಿ ವಿಭಜನೆಗೊಂಡ ವಿವಿಧ ಕ್ರೈಸ್ತ ಪಂಗಡಗಳನ್ನು ಮಗದೊಮ್ಮೆ ಒಂದಾಗಿಸಲು, ಮುರಿದು ಹೋದ ಸಂಬಂಧವನ್ನು ಸರಿಪಡಿಸಲು ಮಾಡುವ ಒಂದು ಸಂಚಲನಕ್ಕೆ ಸರ್ವ ’ಕ್ರೈಸ್ತರ ಐಕ್ಯತೆ’ ಎಂದು ಕರೆಯುತ್ತಾರೆ. ಸರ್ವ ಕ್ರೈಸ್ತ ಪಂಗಡಗಳು ಒಟ್ಟಾಗಿ ಬಂದು ಪ್ರತಿ ವರ್ಷ ಜನವರಿ 18 ರಿಂದ 25ರ ತನಕ ಒಂದು ವಾರದ ಪ್ರಾರ್ಥನಾವಿಧಿ (Unity Octave) ಆಚರಿಸುತ್ತಾರೆ.

ಒಂದು ಕಾಲದಲ್ಲಿ ಪರಸ್ಪರ ಶತ್ರುಗಳಂತೆ ಜೀವಿಸುತ್ತಿದ್ದ ವಿವಿಧ ಕ್ರೈಸ್ತ ಪಂಗಡಗಳು ಇಂದು ನಾವೆಲ್ಲರೂ ಪ್ರಭು ಯೇಸುಕ್ರಿಸ್ತರಲ್ಲಿ ಸಹೋದರ-ಸಹೋದರಿಯರು ಎಂಬ ಭಾವನೆಯನ್ನು ವ್ಯಕ್ತಪಡಿಸಲು ನಾನಾ ಕಾರಣಗಳಿವೆ. ದ್ವಿತೀಯ ವ್ಯಾಟಿಕನ್ ವಿಶ್ವಸಭೆಯು ಕ್ರೈಸ್ತ ಐಕ್ಯತೆಯ ಬಗ್ಗೆ ಒಂದು ಆದೇಶ ನೀಡಿ ಪ್ರತಿಯೊಬ್ಬ ಕ್ರೈಸ್ತನು ಒಮ್ಮನಸ್ಸಿನಿಂದ ಕ್ರೈಸ್ತ ಐಕ್ಯತೆಗೋಸ್ಕರ ಶ್ರಮಿಸಬೇಕೆಂದು ಕಥೋಲಿಕ ಧರ್ಮಸಭೆ ಕರೆ ನೀಡುತ್ತದೆ. ಹೀಗೆ ಕ್ರೈಸ್ತ ವಿವಿಧ ಪಂಗಡಗಳ ಐಕ್ಯತೆಗೋಸ್ಕರ ಶ್ರಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನಮಗೆ ಮನದಟ್ಟು ಮಾಡಿಕೊಟ್ಟಿದೆ. ಈ ಐಕ್ಯತೆಗಾಗಿ ಕೇವಲ ಒಂದು ವಾರದ ಪ್ರಾರ್ಥನಾವಿಧಿಯ ಸಮಯದಲ್ಲಿ ಮಾತ್ರ ಪ್ರಾರ್ಥಿಸದೆ, ನಮ್ಮ ದಿನನಿತ್ಯ ಜೀವನದಲ್ಲಿ, ನಮ್ಮ ವೈಯಕ್ತಿಕ ಪ್ರಾರ್ಥನೆ ಸಮಯದಲ್ಲಿ ಪ್ರಾರ್ಥಿಸಬೇಕಿದೆ. ಇದಕ್ಕೆ ಪವಿತ್ರಾತ್ಮರ ಕೃಪೆ ಅತ್ಯಗತ್ಯವಾಗಿದೆ. ಈ ಮೂಲಕ ನಾವು ನಮ್ಮದೇ ಆದ ಧೋರಣೆಯನ್ನು ಬಿಟ್ಟು ’ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾರೆ, ಅದನ್ನು ಮಾಡಲು' ನಾವೆಲ್ಲರೂ ಪ್ರಯತ್ನಿಸುತ್ತೇವೆ. ಇದರಿಂದ ಪ್ರತಿಯೊಂದು ಪಂಗಡಗಳು ತಮ್ಮ ಧೋರಣೆ ಬಿಟ್ಟು ಪ್ರತಿಯೊಂದು ವಿಷಯದಲ್ಲಿ ಕಥೋಲಿಕ ಧರ್ಮಸಭೆಗೆ ಒಂದಾಗುತ್ತಾರೆ ಎಂದು ಚಿಂತಿಸುವುದು ತಪ್ಪು. ಪ್ರತಿಯೊಂದು ಕ್ರೈಸ್ತ ಪಂಗಡಗಳು ತಮ್ಮ-ತಮ್ಮ ನೀತಿ, ಧೋರಣೆ, ತತ್ವಗಳನ್ನು ಬಿಡುವುದು ಅಷ್ಟೊಂದು ಸುಲಭದ ಮಾತಲ್ಲ. ಈ ಐಕ್ಯತೆಯನ್ನು ಕೈಗೊಳ್ಳುವುದು ನಮ್ಮ ಜೀವನದ ರೀತಿಯಲ್ಲಿ. ಪರಸ್ಪರರೊಂದಿಗಿರುವ ಒಳ್ಳೆಯ ಸಂಬಂಧದಿಂದ. ಐಕ್ಯತೆ ಮತ್ತು ಪ್ರೀತಿ ಒಟ್ಟಾದಾಗ ನಾವು ಪ್ರಭು ಯೇಸುಕ್ರಿಸ್ತರ ಒಂದೇ ಶರೀರವಾಗುತ್ತೇವೆ. ಅದನ್ನು ನೆರವೇರಿಸಲು ಈ ವರ್ಷದ ಪ್ರಾರ್ಥನಾವಿಧಿಯು ಕ್ರೈಸ್ತರ ಮೂಲ ಬುನಾದಿಯಾಗಬೇಕು.



ಸರ್ವ ಕ್ರೈಸ್ತರ ಐಕ್ಯತಾ ಪ್ರಾರ್ಥನಾ ವಾರ-2019



ಈ ವರ್ಷ ಕ್ರೈಸ್ತ ಐಕ್ಯತೆಯ ಪ್ರಾರ್ಥನೆಗೆ ಆರಿಸಿಕೊಂಡ ವಾಚನ ( ಧರ್ಮೋ 16: 2) “ನೀವು ನ್ಯಾಯವನ್ನು ಮಾತ್ರ ಅನುಸರಿಸಬೇಕು” ಈ ವಾಚನದ ಹಿನ್ನೆಲೆ ನೋಡಿದರೆ ನ್ಯಾಯಾಧಿಪತಿಗಳು ನೇಮಕಗೊಂಡಾಗ ಸರ್ವೇಶ್ವರಸ್ವಾಮಿ ಅವರಿಗೆ ಹೀಗೆ ತಿಳಿಸುತ್ತಾರೆ. ಕ್ರೈಸ್ತ ಐಕ್ಯತೆಗೆ ಶ್ರಮಿಸುತ್ತಿರುವ ನಮಗೆ ನ್ಯಾಯದ ಅಗತ್ಯವಿದೆ. ಈ ಕುರಿತು ಕೆಲ ಚಿಂತನೆಗಳು. ಕ್ರೈಸ್ತರಾದ ನಾವು ಯೇಸುಸ್ವಾಮಿ ಹೇಳಿದಂತೆ 'ನಾನೇ ದ್ರಾಕ್ಷಿ ಬಳ್ಳಿ ನೀವೇ ಅದರ ಕವಲು ಬಳ್ಳಿಗಳು’ (ಯೊವಾನ್ನ 15:5) ಕ್ರೈಸ್ತರಾದ ನಾವು ಯೇಸುಸ್ವಾಮಿಯೊಡನೆ ಒಂದಾಗಿ ನಾವು ಅದರ ಕವಲು ಬಳ್ಳಿಗಳಾಗಿ ಫಲ ಕೊಡಬೇಕು. ಆಗ ಮಾತ್ರ ಅವರು ತೋರಿಸಿದ ಹಾದಿಯಲ್ಲಿ ನಾವು ನಡೆಯಲು ಸಾಧ್ಯ. ಈ ನಮ್ಮ ಬಾಂಧವ್ಯದಿಂದಲೇ ಕ್ರಿಸ್ತನನ್ನು ನಾವು ಇತರರಿಗೆ ಪರಿಚಯಿಸಬೇಕು. ಸಮಾಜದಲ್ಲಿ ನ್ಯಾಯ, ನೀತಿ, ಶಾಂತಿ ಸ್ಥಾಪಿತವಾಗುವುದು. ಕ್ರಿಸ್ತ ಕೂಡಾ ಬಯಸುವುದು ಇದನ್ನೇ. ಕ್ರಿಸ್ತರು ಹೇಳಿದ್ದು ಒಂದೇ ದ್ರಾಕ್ಷಿ ಬಳ್ಳಿ ಆದರೆ ಇಂದು ಆ ದ್ರಾಕ್ಷಾ ಬಳ್ಳಿಯಿಂದ ಅನೇಕ ಕವಲೊಡೆದು ಬಳ್ಳಿಗಳಾಗಿದೆ. ನಮ್ಮೆಲ್ಲರನ್ನೂ ಸೇರಿಸುವ ಬುಡ ಕ್ರಿಸ್ತರಾಗಿದ್ದಾರೆ. ನಮ್ಮ ಭಿನ್ನತೆ ಭೇದಗಳು ಏನೇ ಇರಬಹುದು ಆದರೆ ನಾವೆಲ್ಲರೂ ಕ್ರಿಸ್ತನಲ್ಲಿ ಒಂದಾಗಬೇಕು. ಆಗ ಮಾತ್ರ ನಾವು ನಮ್ಮ ಕ್ರೈಸ್ತ ಕರೆಗೆ ನ್ಯಾಯವನ್ನು ಒದಗಿಸಲು ಸಾಧ್ಯ. ಮತ್ತಾಯ 12: 28 ರಲ್ಲಿ ಯೇಸುಸ್ವಾಮಿಯ ಬಗ್ಗೆ ಹೀಗಿದೆ - 'ನ್ಯಾಯ ನೀತಿಗೆ ಜಯ ದೊರಕಿಸದೆ ಬಿಡನಿವನು', ಇದು ಖಂಡಿತವಾಗಿಯೂ ಸತ್ಯ. ಅವರು ಜೀವನದುದ್ದಕ್ಕೂ ನ್ಯಾಯ ನೀತಿಗಾಗಿ ಬದುಕಿದವರು ಬಾಳಿದವರು. 

ಕ್ರೈಸ್ತ ಐಕ್ಯತೆಗೆ ಶ್ರಮಿಸುವವರು ಇದು ಸಾಧ್ಯವಿಲ್ಲ ಇದು ಆಗದ ಕೆಲಸ ಎನ್ನಬಹುದು. ಆದರೆ ಲೂಕನು ಶುಭ ಸಂದೇಶದಲ್ಲಿ 18:1ರಲ್ಲಿ ನಾವು ಕಾಣುತ್ತೇವೆ, ಹೇಗೆ ಬಡ ವಿಧವೆ ತನ್ನ ನಿರಂತರ ಕೋರಿಕೆಯಿಂದ ನ್ಯಾಯವನ್ನು ನ್ಯಾಯಾಧಿಪತಿಯಿಂದ ದಕ್ಕಿಸಿಕೊಂಡಳೋ ಆ ರೀತಿ ನಮ್ಮ ಪ್ರಯತ್ನವಾಗಬೇಕು. ಈ ನಿರಂತರತೆಯ ಪ್ರಯತ್ನ ನಮ್ಮದಾಗಲಿ. ನಾವು ಒಂದೇ ಕುಟುಂಬದಂತೆ ಬಾಳಲು, ಎಲ್ಲಾ ಕ್ರೈಸ್ತ ಪಂಗಡಗಳು ಒಂದಾಗಲು ಶ್ರಮಿಸಬೇಕು. ಅಂದು ಕ್ರಿಸ್ತರು ಕಂಡ ಒಂದೇ ಧರ್ಮಸಭೆಯನ್ನು ನಾವು ಕಾಣುವಂತಾಗಲಿ ಎಂದು ಪ್ರಾರ್ಥಿಸೋಣ ಅದಕ್ಕಾಗಿ ಪ್ರಯತ್ನಿಸೋಣ. ಇನ್ನು ಮೇಲಾದರೂ ಕ್ರೈಸ್ತ ಐಕ್ಯತೆಯ ಸಪ್ತಾಹ ಬಂದಾಗ ಮರೆಯದೆ ಪ್ರಾರ್ಥನೆ ಮಾಡೋಣ. ನಮ್ಮ ಫಾದರ್ ಜೆ.ಬಿ ಹೇಳಿದ ಹಾಗೆ ಬೇರೆ ಪಂಗಡದವರಲ್ಲಿ ಒಬ್ಬರನ್ನಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳೋಣ ಅವರ ಬಗ್ಗೆ ತಿಳಿಯೋಣ. 



●●●



ಹೆಗಲು


ಹೆಗಲು ಆಪ್ತರ ಸ್ವರ್ಗ
ಆಪತ್ಕಾಲದ ಅರಮನೆ !
ಇರುಳ ನೋವುಂಡವರಿಗೆ 
ಹೆಗಲು ನಿಶ್ಚಯ ಹಗಲಿನಂತೆ!
ಅಮ್ಮನ ಮಡಿಲು ಗೂಡಾದರೆ
ಅಪ್ಪನ ಹೆಗಲು ಸಿಂಹಾಸನವು
ಅಕ್ಕನ ಹೆಗಲು ಅಕ್ಕರೆಯು
ಅಣ್ಣನ ಹೆಗಲು ಸಕ್ಕರೆಯು
ಗೆಳೆಯನ ಹೆಗಲ ಬಂಡಿಯಲಿ 
ಮೊತ್ತಮೊದಲ ಸವಾರಿಯು !
ಹೃದಯದೊಳಗಡಗಿವೆ ಅಹಂ ಮೂಳೆಗಳು 
ಹೆಗಲಿನಲಿರಲಿ ಹೃದಯಗಳು
ದಣಿದ ಆಪ್ತನ ತಲೆಭಾರಕೆ
ಹೆಗಲಾಗಲಿ ಮೃದು ಹಾಸಿಗೆಯು
ಜೋಡಿ ಎತ್ತಿನ ಹೆಗಲಿನ ಶ್ರಮಕೆ
ಊಟದ ಅನ್ನವು ಒಡಮೂಡುವುದು
ಹೆಗಲಿದು ನೋಡಾ ಲಘುವಾಹನವು
ಧನಿಕನೇ ಸಾಯಲಿ ಬಡವನೇ ಸಾಯಲಿ
ಕಟ್ಟಕಡೆಯ ಸವಾರಿಯು!


- ಎ. ಡೇವಿಡ್ ಕುಮಾರ್

●●●



ದನಿ ರೂಪಕ

“ಆತ ಹೇಳಿದಂತೆ ಮಾಡಿ”
ತಾಯಿ ಸೇವಕರಿಗೆ, " ಆತ ಹೇಳಿದಂತೆ ಮಾಡಿ' ಎಂದು ತಿಳಿಸಿದರು. ತಾಯಿ ಹೇಳಿದಂತೆ ಸೇವಕರು ಮಾಡಿದರು. ನೀರು ದ್ರಾಕ್ಷಾರಸವಾಯಿತು. ನಮ್ಮ ಬದುಕಿನಲ್ಲಿ ಅದ್ಭುತಗಳಾಗಬೇಕೇ? ಮೊದಲು ಅವನು ಹೇಳಿದ್ದನ್ನು ಆಲಿಸಿ, ಹೇಳಿದಂತೆ ಮಾಡೋಣ. ಹಾಗಾದರೆ, ಅದ್ಭುತವೆಂದರೇನು? ಟೋನಿ ಡಿ'ಮೆಲೋರವರ ಒಂದು ಅದ್ಭುತ ಕಥೆಯಿದೆ. ಒರ್ವ ಗುರುವಿನ ಪ್ರಖ್ಯಾತಿ ಬಗ್ಗೆ ತಿಳಿಯಲು ಪ್ರಯಾಣ ಪ್ರಾರಂಭಿಸಿದ. "ನಿಮ್ಮ ಗುರುಗಳು ಪವಾಡ ಮಾಡ್ತಾರಂತೆ? ತಾನು ಬೇಟಿಯಾದ ಶಿಷ್ಯನೊಬ್ಬನನ್ನು ಪ್ರಶ್ನಿಸಿದ. ಶಿಷ್ಯ ಪ್ರತ್ಯುತ್ತರವಾಗಿ " ಹೌದು ಪವಾಡಗಳ ಮೇಲೆ ಪವಾಡಗಳು... ನಿಮ್ಮಲ್ಲಿ ನಿಮಗೆ ಬೇಕಾದದ್ದನ್ನು ದೇವರು ಕರುಣಿಸಿದರೆ ಪವಾಡವೆನ್ನುವಿರಿ. ಆದರೆ ನಮ್ಮ ನಾಡಲ್ಲಿ ಹಾಗಲ್ಲ.. ದೇವರ ಚಿತ್ತವನ್ನು ಕೇಳಿ ಅದನ್ನು ನಾವು ನೆರೆವೇರಿಸಿದರೆ ಅದನ್ನು ಪವಾಡವೆನ್ನುತ್ತೇವೆ. ಹೌದು ಅವನ ಮಾತುಗಳನ್ನು ಕೇಳಿ ಅವನ ಚಿತ್ತವನ್ನು ನೆರವೇರಿಸುವುದೇ ಪವಾಡ. ಅವನನ್ನು ಆಲಿಸೋಣ. ಅವನು ಹೇಳಿದ್ದನ್ನು ಕೇಳಿ, ಅವನ ಅಜ್ಞೆಯಂತೆ ಬಾಳಿದರೆ, ಪವಾಡಗಳು ನಮ್ಮ ಬದುಕನ್ನು ಮುತ್ತಿಕೊಳ್ಳುತ್ತವೆ. ಇದಕ್ಕೆ ಉತ್ತಮ ಉದಾಹರಣೆ ತಾಯಕರುಣೆಯ ಮದರ್ ತೆರೇಸಾ. ತನ್ನ ಕನ್ಯಾಸ್ತ್ರೀ ಮಠದಲ್ಲಿ ಆರಾಮದಾಯಕ ಬದುಕನ್ನು ಬದುಕಾಗಿಸಿಕೊಂಡಿದ್ದ ತೆರೇಸಾ ಪ್ರಯಾಣಿಸುತ್ತಿದ್ದ ಒಂದು ಸಂದರ್ಭದಲ್ಲಿ ಆತನ ಕರೆಯನ್ನು ಕೇಳುತ್ತಾಳೆ. ತನ್ನ ಬೋಧನಾ ವೃತ್ತಿಗೆ ಗುಡ್ ಬೈ ಹೇಳಿ, ಕನ್ಯಾಸ್ತ್ರೀ ಮಠದಿಂದ ಬೀದಿಗಿಳಿಯುತ್ತಾಳೆ. ನಾಲ್ಕುಗೋಡೆಗಳ ಮಧ್ಯದಲ್ಲೇ ಬದುಕಿದ್ದ ಹೆಣ್ಣುಮಗಳು ಅಪರಿಚಿತ ಬೀದಿಗಳಲ್ಲಿ ನಡೆದಾಡಲು ಪ್ರಾರಂಭಿಸುತ್ತಾಳೆ. ಬರಿಗೈಯಲ್ಲಿ ದೀನದಲಿತರ ನಿರ್ಗತಿಕರ, ಹಿರಿಯರ, ಅನಾಥರಿಗೆ ತಾಯಾಗಲು ಮನಸ್ಸು ಮಾಡಿ ಸೇವೆ ಆರಂಭಿಸುತ್ತಾಳೆ. ಇವೊತ್ತು ಸುಮಾರು 4500 ಕನ್ಯಾಸ್ತ್ರೀಯರ ಮಠ 133ಕ್ಕಿಂತ ಹೆಚ್ಚು ದೇಶಗಳಲ್ಲಿ ತೆರೇಸಾರವರ ಸೇವೆ ಮುಂದುವರಿಯುತ್ತಿದೆ. ಇದೇ ಪವಾಡ. ತೆರೇಸಾರವರ ಬದುಕೇ ಪವಾಡವಾಗಿ ಹಲವಾರು ಪವಾಡಗಳ ತಾಯಿಬೇರಾಯಿತು. ಹೌದು ಆತ ಹೇಳಿದಂತೆ ಮಾಡೋಣ ಪವಾಡಗಳನ್ನು ನಮ್ಮ ಬದುಕಾಗಿಸಿಕೊಳ್ಳೋಣ....




ಅಂದಿನ ಮೀಸಲಾತಿ ವಿರೋಧಿಗಳೇ ಇಂದಿನ ಮೀಸಲಾತಿಯ ದಾಸರು

---------------------------
ಒಮ್ಮೆ ಈ ರೀತಿ, ಮನುಷ್ಯ ಕುಲ ಹುಟ್ಟುವ ಮುನ್ನವೆ ಜಾತಿ ಅನ್ನೋ ಪದ ಉಗಮಿಸಿತ್ತೇ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಎಲ್ಲರ ಉತ್ತರ ಮೌನವೇ ಸರಿ. ಆದರೂ ಸಹ ಎಲ್ಲರೂ ಅವರವರ ಭಾವನೆಗಳಿಗೆ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಹಾಗೆ ಜಾತಿಗಳನ್ನು ಇಟ್ಕೊಂಡಿದಾರೆ. ಜಾತಿ ಗೀತಿ ಯಾವುದೂ ಇಲ್ಲ ಅಂತ ನಾವೇನಾದರೂ ವಾದಿಸಿದರೆ ನಮ್ಮನ್ನು ದಡ್ಡ ಹುಚ್ಚ ಎಂದೆಲ್ಲ ಜಗಳಕ್ಕೆ ಬಾಗಿಲು ತೆರೆಯುತ್ತಾರೆ.
 ----------------------------
2019ರ ಜನವರಿ 26ಕ್ಕೆ ಸಂವಿಧಾನ ಜಾರಿಗೊಂಡು ಸುಮಾರು 69 ವರ್ಷಗಳೇ ಕಳೆದರೂ ದೀನದಲಿತರು ಶೋಷಿತರಾಗುತ್ತಿದ್ದಾರೆ ಎನ್ನುವುದಕ್ಕಿಂತ ಅವರನ್ನು ಬೇರೆ ಯಾರೋ ಶೋಷಣೆಗೆ ಒಳಪಡಿಸುತ್ತಲೇ ಇದ್ದಾರೆ ಅನ್ನೋದು ಸರಿಯಾದ ಚಿಂತನೆ. ಮನುಷ್ಯ ಮನುಷ್ಯನ ಮೇಲೆ ಮಾಡುವ ಶೋಷಣೆˌ ದಬ್ಬಾಳಿಕೆˌ ಜಾತಿ-ನೀತಿಯಂತ ಕೆಟ್ಟ ಪರಿಸ್ಥಿತಿಯನ್ನು ಇನ್ನೂ ಎಷ್ಟು ದಿನಗಳ ಕಾಲ ಅಂತ ಸಹಿಸಿಕೊಳ್ಳಬೇಕು. 

ಒಬ್ಬ ವ್ಯಕ್ತಿ ತಾನು ಹುಟ್ಟುವ ಮೊದಲು ತಾನು ಹುಟ್ಟುತ್ತಾನೆ ಅನ್ನೋದನ್ನು ಯಾರೂ ಕೂಡ ಅರಿತಿರಲು ಸಾಧ್ಯವಿಲ್ಲ. ಒಂದು ಮಗುವಿನ ಜನನದ ನಂತರ ಅದಕ್ಕೆ ಏನನ್ನು ಕಲಿಸುತ್ತೇವೇಯೋ ಅದನ್ನೇ ಕಲಿಯುತ್ತದೆ. ಯಾವ ಭಾಷೆˌ ಯಾವ ಆಹಾರˌ ಯಾವ ಆಚಾರ ವಿಚಾರˌ ನಡೆ ನುಡಿ ಸಂಪ್ರದಾಯˌ ಒಳ್ಳೇದು ಕೆಟ್ಟದ್ದುˌ ತಪ್ಪು ಸರಿˌ ಹೀಗೆ ಬದುಕಲಿಕ್ಕೆ ಸಂಬಂಧಪಟ್ಟಂತೆಯೇ ಇನ್ನೂ ಏನೇನು ಇವೆಯೋ ಅವೆಲ್ಲವನ್ನೂ ಮುಖ್ಯವಾಗಿ ತಂದೆ ತಾಯಿ ಸಮಾಜ ಕಲಿಸಿದಂತೆಯೇ ಅದು ಕಲಿಯತೊಡಗುತ್ತದೆ. ಒಂದು ವೇಳೆ ಅದಕ್ಕೆ ಏನೂ ಕಲಿಸದೇ ಇದ್ದರೆ ತಾನಾಗಿಯೇ ಅದು ಏನನ್ನೂ ಕಲಿಯಲು ಸಾಧ್ಯವಿಲ್ಲ. ಅಷ್ಟೇ ಏಕೆ ಒಂದು ಮಗುವಿಗೆ ಹುಟ್ಟಿನಿಂದ ಮಾತನ್ನು ಕಲಿಸದೆ ಹಾಗೆಯೇ ಬಿಟ್ಟರೆ ಅದು ಸಾಯೋವರೆಗೂ ಮೂಕ ಪ್ರಾಣಿಯಂತೆ ಇರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಆದರೆ ಇವೊತ್ತಿನ ಜನ ತಾವೆಲ್ಲ ಮಂಗನಿಂದ ಮಾನವರಾಗಿದ್ದಾರೆ ಅನ್ನೋದನ್ನು ಮರೆತುˌ ಜಾತಿ ಧರ್ಮ ಭೇದ—ಭಾವ ಮೇಲು ಕೀಳು ಅನ್ನೋ ಅನರ್ಥಗಳಿಗೆ ಅರ್ಥ ಕೊಟ್ಟಿದ್ದಾರೆ. 

ಒಮ್ಮೆ ಈ ರೀತಿ, ಮನುಷ್ಯ ಕುಲ ಹುಟ್ಟುವ ಮುನ್ನವೆ ಜಾತಿ ಅನ್ನೋ ಪದ ಉಗಮಿಸಿತ್ತೇ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಎಲ್ಲರ ಉತ್ತರ ಮೌನವೇ ಸರಿ. ಆದರೂ ಸಹ ಎಲ್ಲರೂ ಅವರವರ ಭಾವನೆಗಳಿಗೆ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಹಾಗೆ ಜಾತಿಗಳನ್ನು ಇಟ್ಕೊಂಡಿದಾರೆ. ಜಾತಿ ಗೀತಿ ಯಾವುದೂ ಇಲ್ಲ ಅಂತ ನಾವೇನಾದರೂ ವಾದಿಸಿದರೆ ನಮ್ಮನ್ನು ದಡ್ಡ ಹುಚ್ಚ ಎಂದೆಲ್ಲ ಜಗಳಕ್ಕೆ ಬಾಗಿಲು ತೆರೆಯುತ್ತಾರೆ.

ಆದ್ರೆ ಒಂದಂತು ಸತ್ಯ ಮನುಷ್ಯನು ತಾನು ಜಾತಿ ಅಂತ ಗುರುತಿಸಿದಾಗಿನಿಂದ ಶೋಷಣೆˌ ದಬ್ಬಾಳಿಕೆಗಳು ಶುರುವಾಗಿವೆ. ಅದಕ್ಕೆ ಇಂದಿನ ಜಾತಿವ್ಯವಸ್ಥೆಯೇ ಉದಾಹರಣೆ. ಮೇಲು ಕೀಳು ಅನ್ನೋ ವ್ಯತ್ಯಾಸ ಕಾಣತೊಡಗಿದ್ದೆ ಅಲ್ಲಿಂದ. ದಲಿತ ದಮನಿತ ಅಂತ ಕಂಡುಬಂದಿದ್ದೆ ಈ ಜಾತಿ ಅನ್ನೋ ಸೋಂಕಿನಿಂದ. ಒಮ್ಮೆ ಸಾಂವಿಧಾನಿಕವಾಗಿ ಹೇಳೋದಾದ್ರೆ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರೆಲ್ಲರೂ ದಲಿತರೆ. ನಮ್ಮ ಹೆಮ್ಮೆಯ ಭಾರತ ಸಂವಿಧಾನವು ಹಿಂದುಳಿದವರ ಸಂಖ್ಯೆಗನುಗುಣವಾಗಿ ಅವರವರ ಯೋಗ್ಯತೆಗೆ ತಕ್ಕಂತೆ ಮೀಸಲಾತಿಯನ್ನು ಕೊಟ್ಟಿರುವುದು ನಮನ್ನೆಲ್ಲ ಸನ್ಮಾಸಿರುವಂತಿದೆ ಎನ್ನುವುದರಲ್ಲಿ ತಪ್ಪಿಲ್ಲ.

ಸ್ವಾತಂತ್ರ್ಯ ಸಿಕ್ಕು 70ವರ್ಷ ಕಳೆದರೂ ಸಂವಿಧಾನ ಜಾರಿಯಾಗಿ 70ವರ್ಷಗಳೇ ಮುಗಿದರೂ ಸಹಿತ ಸರಿಯಾದ ಮೀಸಲಾತಿ ಯಾರಿಗೆ ಹೆಚ್ಚು ಸಿಕ್ಕಿದೆ ಎಷ್ಟು ಸಿಕ್ಕಿದೆ ಅಂತ ಅರಿತುಕೊಳ್ಳುವದರಲ್ಲಿ ಇಂದಿನ ಸಾಕಷ್ಟು ಯುವಕ ಯುವತಿಯರು ವಿಫಲರಾಗಿದ್ದಾರೆ. ಅವರ ತಪ್ಪು ಕಲ್ಪನೆಯ ಅಂಗಳದಲ್ಲಿ ಮೀಸಲಾತಿ ಅನ್ನೋದು ಕೇವಲ ಎಸ್ಸಿ-ಎಸ್ಟಿಗೆ ಮಾತ್ರ ಇದೆ ಎಂದು ತಪ್ಪಾಗಿ ಅರಿತುಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಎಸ್ಸಿ-ಎಸ್ಟಿಗಳವರು ಮಾತ್ರವೇ ಎಲ್ಲಾ ಸೌಲಭ್ಯಗಳ ಫಲಾನುಭವಿಗಳಾಗಿದ್ದಾರೆ ಎಂಬುದಾಗಿ ಮೇಲ್ವರ್ಗದವರಿಂದ ಕೇಳಿಸಿಕೊಂಡಂತ ಮಾತು ನನ್ನನ್ನು ಪ್ರಚೋದನೆಗೆ ಇಳಿಯುವಂತೆ ಮಾಡಿದೆ. ಬಹುಶಃ ನಮ್ಮ ಬಾಬಾ ಸಾಹೇಬ ಅಂಬೇಡ್ಕರರು ತನ್ನ ಜನಾಂಗವನ್ನಷ್ಟೆ ಆಧಾರವಾಗಿಕೊಟ್ಟು ಸಂವಿಧಾನ ರಚನೆ ಮಾಡಿದ್ದರೆ ಇಷ್ಟೊತ್ತಿಗಾಗಲೇ ತನ್ನ ಜನಾಂಗದವರಾರು ಬಡವರಾಗಿರುತ್ತಿರಲಿಲ್ಲ. ಇಂದಿನ ರಾಜಕೀಯ ಚುಕ್ಕಾಣಿ ಹಿಡಿದು ದೇಶದ ಎಲ್ಲ ಕ್ಷೇತ್ರದಲ್ಲೂ ಅವರೆ ಶಾಸಕ ಮಂತ್ರಿಗಳಾಗಿ ಹೊರ ಹೊಮ್ಮುತ್ತಿದ್ದರು. ಆದರೆ ಬಾಬಾ ಸಾಹೇಬ ಅಂಬೆಡ್ಕರರು ಎಲ್ಲಾ ಜನಾಂಗದ ಹಿತಕ್ಕಾಗಿ ದುಡಿದು ಸಂಖ್ಯೆಗನುಗುಣವಾಗಿ ಸಂವಿಧಾನದಲ್ಲಿ ಸರಿಯಾದ ಸ್ಥಾನಮಾನಗಳನ್ನು ನೀಡಿದರು. 

ವಿಪರ್ಯಾಸವೆಂದರೆ ಇಂದು ಸಾಮಾನ್ಯ ವರ್ಗದ ಶೇಕಡಾ 50ರಷ್ಟು ಮೀಸಲಾತಿಯಲ್ಲಿ ಶೇಕಡಾ 10ರಷ್ಟನ್ನು ದೇಶದಲ್ಲಿ ಶೇಕಡಾ 3ರಷ್ಟಿರುವ ಜನಸಂಖ್ಯೆಗೆ ಹಂಚಿದ್ದಾರೆ. ಇದೊಂದು ಪಕ್ಷಕ್ಷಾತೀತವಾಗಿ ನಡೆದ ಒಳ ರಹಸ್ಯ ಎಂದೇ ಹೇಳಬಹುದು. ಕಾರಣ ಇಷ್ಟೇ, ಸಾಮಾನ್ಯ ವರ್ಗದಲ್ಲಿ ಬ್ರಾಹ್ಮಣರಿಗಿಂತ ಹಿಂದುಳಿದ ಶೇಕಡಾ 18ರಷ್ಟು ಜನಸಂಖ್ಯೆ ಇರುವವರಿಗೆ ಶೇಕಡಾ 5ರಷ್ಟು ಮೀಸಲಾತಿ ನೀಡಿ, ಕೇವಲ ಶೇಕಡಾ 3ರಷ್ಟಿರುವ ಜನಸಂಖ್ಯೆ ಹೊಂದಿರುವವರಿಗೆ ಶೇಕಡಾ 10 ಮೀಸಲಾತಿ ನೀಡುರುವುದೆಂದರೆ ಬಹಳ ಮೋಸದ ವಿಚಾರವಾಗಿದೆ.

ಮೀಸಲಾತಿಯನ್ನು ವಿರೋದಿಸುತ್ತಿದ್ದವರೇ ಇಂದು ಮೀಸಲಾತಿಯ ದಾಸರಾಗಿದ್ದಾರೆ. ಸಂವಿಧಾನವನ್ನು ವಿರೋಧಿಸುತ್ತಿದ್ದವರಿಗೆ ಇಂದು ಸಂವಿಧಾನವೇ ಆಶ್ರಯ ನೀಡಿದೆ. 

¨ ಶಿವಮೂರ್ತಿ ಕೆ. ಗುಡದಿನ್ನಿ


●●●



ನಮ್ಮ ಪತ್ರಿಕೆಗಳು

ನಮ್ಮ ದೇಶದಲ್ಲಿ ಮುದ್ರಣ ತಂತ್ರಜ್ಞಾನದ ಪ್ರವೇಶವಾದ ಮೇಲೆ ಮೊತ್ತಮೊದಲಿಗೆ ಪವಿತ್ರ ಬೈಬಲ್ ಮುದ್ರಣಗೊಂಡಿತು. ಎಷ್ಟೋ ವರ್ಷಗಳ ಬಳಿಕ ಭಾರತೀಯ ಭಾಷೆಗಳ ಪರಿಚಯ, ವ್ಯಾಕರಣ, ಪದಕೋಶಗಳು ಬಂದವು. ಇವೆಲ್ಲದರ ಪರಿಣಾಮ ಕನ್ನಡನಾಡಿನ ಮೇಲೂ ಆಯಿತು. ಕಿಟೆಲ್ ರವರು ತಮ್ಮ ಪ್ರಸಿದ್ಧ ಮಾಸ್ಟರ್ ಪೀಸ್ ಕನ್ನಡ-ಇಂಗ್ಲಿಷ್ ನಿಘಂಟನ್ನು ಹೊರತರುವುದಕ್ಕೆ ಮುವತ್ತೊಂಬತ್ತು ವರ್ಷಗಳ ಮೊದಲೇ ಕಥೋಲಿಕ ಮಿಷನರಿಗಳು ಕನ್ನಡ-ಲತೀನ್ ನಿಘಂಟನ್ನು ಹೊರತಂದರು. ಜಪದ ಪುಸ್ತಕ, ಧರ್ಮದ ರೀತಿನೀತಿಗಳು, ಇತಿಹಾಸ, ಭೂಗೋಳ, ಪಠ್ಯಪುಸ್ತಕ ಮುಂತಾದವು ಬೆನ್ನ ಹಿಂದೆಯೇ ಬಂದವು.

ಈ ನಡುವೆ ಹೆರ್ಮಾನ್ ಮುವ್ ಗ್ಲಿಂಗ್ ಎಂಬುವವರು 'ಮಂಗಳೂರ ಸಮಾಚಾರ' ಎಂಬ ಪತ್ರಿಕೆಯನ್ನು ಹುಟ್ಟುಹಾಕಿ ಕನ್ನಡ ಪತ್ರಿಕಾಲೋಕದ ಪಿತಾಮಹ ಎನಿಸಿದರು. ಮುಂದೆ ಅವರು ಬಳ್ಳಾರಿಗೆ ವರ್ಗವಾಗಿ ಅಲ್ಲಿ ಅದನ್ನು 'ಕಂನಡ ಸಮಾಚಾರ' ಎಂದು ಬದಲಿಸಿ ಮುನ್ನಡೆಸಿದರಾದರೂ ಒಂದು ವರ್ಷದಲ್ಲೇ ಅದು ನಿಂತುಹೋಯಿತು. ಕಿಟೆಲರು ಸಂಪಾದಕರಾಗಿದ್ದ ’ಇಂಡಿಯಾ ದೇಶದ ವಾರ್ತಿಕ' ಅನ್ನೋ ಪತ್ರಿಕೆ ಮಂಗಳೂರು ಕೊಡಿಯಾಲಬೈಲ್ ಪ್ರೆಸ್ಸಿನಲ್ಲಿ ಮುದ್ರಿತವಾಗಿ ಹಡಗಿನಲ್ಲಿ ಬೊಂಬಾಯಿ ತಲಪಿ ಅಲ್ಲಿನ ಕನ್ನಡಿಗರಿಗೆ ವಿತರಣೆಯಾಗುತ್ತಿತ್ತು. ಈ ಪತ್ರಿಕೆಗಳು ರಾಜಕೀಯ ವಿಶ್ಲೇಷಣೆ ಮಾಡದೆ ಜಾತ್ಯತೀತವಾಗಿ ಪ್ರಚಲಿತ ವಿದ್ಯಮಾನಗಳನ್ನಷ್ಟೇ ಬಿತ್ತರ ಮಾಡುತ್ತಿದ್ದವು. ಮುಂಬೈನಲ್ಲಿ ಕಾಲೂರಿದ್ದರೂ ತಾಯ್ನಾಡಿನ ಸುದ್ದಿಗಾಗಿ ಹೃದಯ ಮಿಡಿಯುತ್ತಿದ್ದ ಕನ್ನಡಿಗರಿಗೆ ಕನ್ನಡದ ಈ ಪತ್ರಿಕೆಗಳು ನೀಡುತ್ತಿದ್ದ ರೋಚಕ ಸುದ್ದಿಗಳೇ ಅಪ್ಯಾಯಮಾನವಾಗಿದ್ದವು.

ಅಲ್ಲಿಂದೀಚೆಗೆ ಕನ್ನಡದಲ್ಲಿ ಹಲವು ಪತ್ರಿಕೆಗಳು ಬಂದಿವೆ. ಕೆಲವು ಪತ್ರಿಕೆಗಳು ಕೆಲವೇ ದಿನಗಳ ಕಾಲ ಶೋಭಿಸಿ ಮರೆಯಾದರೆ ಮತ್ತೆ ಕೆಲವು ಹಲವು ದಶಕಗಳ ಕಾಲ ಮೆರೆದಿವೆ. ಪಿ. ಆರ್. ರಾಮಯ್ಯ, ಡಿ. ವಿ. ಗುಂಡಪ್ಪ, ರುಮಾಲೆ ಚೆನ್ನಬಸವಯ್ಯ, ಆರ್. ಆರ್. ದಿವಾಕರ, ಬಿ. ಪುಟ್ಟಸ್ವಾಮಿ, ಟಿ. ಎಸ್. ರಾಮಚಂದ್ರರಾವ್, ಖಾದ್ರಿ ಶಾಮಣ್ಣ, ಕಡಿದಾಳು ಮಂಜಪ್ಪ, ಪಾಟೀಲ ಪುಟ್ಟಪ್ಪ, ಕಿಡಿ ಶೇಷಪ್ಪ, ಲಂಕೇಶ್ ಮುಂತಾದವರು ಕನ್ನಡ ಪತ್ರಿಕೋದ್ಯಮಕ್ಕೆ ವಿಭಿನ್ನ ಆಯಾಮಗಳನ್ನು ನೀಡಿದವರು. 

ಮೈಸೂರು ಮಹಾರಾಜರನ್ನೇ ಗುರಿಯಾಗಿಸಿ ಬರೆಯುತ್ತಿದ್ದ 'ಸಾಧ್ವಿ ಪತ್ರಿಕೆ'ಯ ಎಂ. ವೆಂಕಟಕೃಷ್ಣಯ್ಯನವರು ಹಳದಿ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದರು. ಒಂದೇ ದೃಷ್ಟಿಕೋನದ, ಸಮರ್ಥನೀಯವಲ್ಲದ, ಅಪೂರ್ಣ ಸಂಶೋಧನೆಯ ಹಾಗೂ ತೆಗಳುವುದನ್ನೇ ಉದ್ಯೋಗವಾಗಿಸಿಕೊಂಡ ಆಕರ್ಷಕ ಬಣ್ಣ ಮತ್ತು ಶೀರ್ಷಿಕೆಗಳಿಂದ ಸೆಳೆಯುವ ಪತ್ರಿಕೋದ್ಯಮವೇ ಹಳದಿ ಪತ್ರಿಕೋದ್ಯಮ. ಹಳದಿ ಪತ್ರಿಕೋದ್ಯಮವು ಕಣ್ಣಿಗೆ ರಾಚಿದರೆ ಕೇಸರಿ ಪತ್ರಿಕೋದ್ಯಮವು ನಮ್ಮೆಲ್ಲರ ನಡುವೆಯೇ ಚಾಪೆಯ ಕೆಳಗಿನ ನೀರಿನಂತೆ ಪಸರಿಸುತ್ತಿದೆ. ಸಂಘಪರಿವಾರದ ವಿಚಾರಗಳ ಪ್ರಸರಣಕ್ಕೆಂದೇ ಮೊದಲೆಲ್ಲ ವಿಕ್ರಮ, ಹೊಸದಿಗಂತ ಮುಂತಾದ ಪತ್ರಿಕೆಗಳು ಕದ್ದುಮುಚ್ಚಿ ವಿತರಣೆಯಾಗುತ್ತಿದ್ದವು. ಆದರೆ ಇಂದಿನ ಎಲ್ಲ ಪತ್ರಿಕೆಗಳಲ್ಲೂ ದೃಶ್ಯಮಾಧ್ಯಮಗಳಲ್ಲೂ ಕೇಸರಿಯ ಜನರು ತೂರಿಕೊಂಡು ಪರೋಕ್ಷವಾಗಿ ಸಂಘಪರಿವಾರದ ಧೋರಣೆಗಳನ್ನು ಬಿತ್ತಿ ಬೆಳೆಯುತ್ತಿದ್ದಾರೆ.


ಧಾರ್ಮಿಕ ಪತ್ರಿಕೆಗಳು:


ಕೆಲ ಧಾರ್ಮಿಕ ಸಂಸ್ಥೆಗಳೂ ತಮ್ಮ ವಿಚಾರಗಳನ್ನು ಹರಿಬಿಡಲು ಪತ್ರಿಕೆಗಳನ್ನು ನಡೆಸುವುದಿದೆ. ಧರ್ಮಸ್ಥಳದಿಂದ 'ಮಂಜುವಾಣಿ', ರಾಮಕೃಷ್ಣಾಶ್ರಮದಿಂದ 'ವಿವೇಕ ಸಂಪದ' ಮುಂತಾದ ಪತ್ರಿಕೆಗಳು ಸರ್ವಜನರ ಮೆಚ್ಚುಗೆಗೆ ಪಾತ್ರವಾಗಿ ಅನೇಕರ ಮನೆಮನಗಲಲ್ಲಿ ವಿರಾಜಿಸಿವೆ. ಅಂತೆಯೇ ನಮ್ಮ ಕನ್ನಡ ಕಥೋಲಿಕ ಕ್ರೈಸ್ತ ಪಂಥದ ವಾಹಿನಿಗಳಾಗಿ ಕೆಲ ಪತ್ರಿಕೆಗಳು ಪ್ರಕಟವಾಗುತ್ತಿವೆ. ಈ ಪತ್ರಿಕೆಗಳು ಪವಿತ್ರ ಬೈಬಲಿನ ಸಿದ್ದಾಂತಗಳನ್ನು ಕನ್ನಡದ ನೆಲದ ಸೊಗಡಿನಲ್ಲಿ ಹಾಗೂ ನೆಲದ ಸಂಪ್ರದಾಯಗಳ ಬೆಳಕಿನಲ್ಲಿ ಅರಿಯುವ ಹಾಗೂ ಪಸರಿಸುವ ಪ್ರಯತ್ನವಾಗಿದೆ.

ಮೈಸೂರಿನ ಪ್ರಸಿದ್ಧ ಪುಣ್ಯಕ್ಷೇತ್ರ ದೋರನಹಳ್ಳಿಯಲ್ಲಿ ದೀರ್ಘಕಾಲ ನೆಲೆಗೊಂಡು ಅಲ್ಲೇ ಮಣ್ಣಾದ ಐ. ಎಚ್. ಲೋಬೊ ಸ್ವಾಮಿಗಳು ಹೊರತಂದ 'ಕ್ರಿಸ್ತೇಸುವಿನ ತಿರುಹೃದಯದ ದೂತನು' ಎಂಬ ಮಾಸ ಪತ್ರಿಕೆಯು ಕಾಲಾಂತರದಲ್ಲಿ ಮೈಸೂರಿಗೆ ತನ್ನ ತಾಣ ಬದಲಿಸಿದರೂ ಪುಣ್ಯಕ್ಷೇತ್ರದ ಹಣದಲ್ಲೇ ಹಲವಾರು ದಶಕಗಳ ಕಾಲ ಪ್ರಕಟವಾಗುತ್ತಾ ಬಂದು ಈಗ 'ಪ್ರಧಾನದೂತ' ಎಂಬ ಹೆಸರಿನಲ್ಲಿ ಶತಮಾನ ಪೂರೈಸುತ್ತಿದೆ. ಶತಮಾನದ ದೂತ ಪತ್ರಿಕೆಗೆ ವಂದನೀಯರಾದ ವಲೇರಿಯನ್ ಸೋಜ, ದಯಾನಂದಪ್ರಭು, ಜಿ ಜೋಸೆಫ್, ಎನ್ ಎಸ್ ಮರಿಜೋಸೆಫ್, ಕೆ ಎ ವಿಲಿಯಂ ಮುಂತಾದವರ ಕೊಡುಗೆ ಅನನ್ಯ.

ಅದೇ ರೀತಿ ಚಿಕ್ಕಮಗಳೂರು ಧರ್ಮಪ್ರಾಂತ್ಯದಿಂದ 'ನವಜ್ಯೋತಿ' ಅನ್ನುವ ಮಾಸ ಪತ್ರಿಕೆ ಬರುತ್ತಿತ್ತು. ಅದು ಈಗ ನಿಂತು ಹೋಗಿ, ಕಳೆದ ಹದಿನಾರು ವರ್ಷಗಳಿಂದ 'ಸ್ನೇಹಜ್ಯೋತಿ' ಎಂಬ ಪತ್ರಿಕೆ ಪ್ರಕಟವಾಗುತ್ತಿದೆ. ಕಲಬುರ್ಗಿ ಧರ್ಮಪ್ರಾಂತ್ಯದ 'ಸಿಂಚನ', ಪೋಟ್ಟಾ ಧ್ಯಾನಕೇಂದ್ರದ 'ವಚನೋಲ್ಸವ' ಮುಂತಾದವು ಹಲವಾರು ವರ್ಷಗಳಿಂದ ಅನೇಕ ಕ್ರೈಸ್ತರ ಮನೆ ತಲುಪುತ್ತಾ ಇವೆ. ರಾಜಧಾನಿ ಅದರಲ್ಲೂ ಮಹಾಧರ್ಮಪ್ರಾಂತ್ಯವಾದ ಬೆಂಗಳೂರಿನಿಂದ 'ಸ್ಫೂರ್ತಿ' ಅನ್ನುವ ಪತ್ರಿಕೆ ಮೊದಲು ಶುರುವಾಗಿ ಆನಂತರದಲ್ಲಿ 'ಕರ್ನಾಟಕ ತಾರೆ' ಎಂದು ಬದಲಾಯಿತು. ಸ್ವಾಮಿ ಐ. ಅಂತಪ್ಪ, ಸ್ವಾಮಿ, ಆ. ತೋಮಾಸ್ ಮುಂತಾದವರಿಂದ ಹಲವು ದಶಕಗಳ ಕಾಲ ನಡೆದು ಕಾಲಾಂತರದಲ್ಲಿ ಸ್ವಾಮಿ ಸ್ಟ್ಯಾನಿ ವೇಗಸ್ ನವರ ಕಾಲದಲ್ಲಿ ನಿಂತುಹೋಯಿತು. ಆ ನಂತರ ಕೆಲ ಜನಸಾಮಾನ್ಯರೇ 'ಕನ್ನಡವಾರ್ತೆ', 'ಕನ್ನಡಸಂದೇಶ', 'ಮಾತುಕತೆ’ 'ಸತ್ಯಮಾರ್ಗ' ಮುಂತಾದ ಪತ್ರಿಕೆಗಳನ್ನು ನಡೆಸಿದರು. 

ಇದೀಗ ಮಹಾಧರ್ಮಪ್ರಾಂತ್ಯವು 'ತಾಬೋರ್' ಎಂಬ ಹೆಸರಿನಲ್ಲಿ ಹೊಸ ಮಾಸ ಪತ್ರಿಕೆಯೊಂದನ್ನು ಹೊರತರುತ್ತಿದೆಯಾದರೂ ವರಿಷ್ಠರ ಸಹಮತವಿಲ್ಲದ ಕಾರಣ ಕ್ರಮಬದ್ಧವಾಗಿ ಪ್ರಕಟವಾಗುತ್ತಿಲ್ಲ.

ಬಳ್ಳಾರಿ ಧರ್ಮಪ್ರಾಂತ್ಯದಿಂದ 'ಬಾಳಸ್ಫೂರ್ತಿ' ಎಂಬ ಪತ್ರಿಕೆ ೧೯೯೪ರಲ್ಲಿ ಪ್ರಾರಂಭಗೊಂಡು ೨೦೦೯ ಏಪ್ರಿಲ್‌ ವರೆಗೆ ಫಾದರ್ ಜೈಪ್ರಕಾಶ್ ಫ್ರಾನ್ಸಿಸ್ ಜೋಸೆಫ್ ನವರ ಸಂಪಾದಕತ್ವದಲ್ಲಿ ನಡೆಯಿತು. ಇಂದು ಬಳ್ಳಾರಿ ಧರ್ಮಪ್ರಾಂತ್ಯದಲ್ಲಿ ಪತ್ರಿಕೆಯೇ ಇಲ್ಲ. ಅದೇ ರೀತಿಯಲ್ಲಿ ಡಾನ್ ಬಾಸ್ಕೊ ಸಂಸ್ಥೆಯು ನಡೆಸುತ್ತಿದ್ದ ಸಂಮೃದ್ಧ 'ಬಾಸ್ಕೊಬಾಂಧವ್ಯ' ಕೂಡಾ ನಿಂತುಹೋಗಿದೆ. ಬೆಳಗಾವಿ ಧರ್ಮಪ್ರಾಂತ್ಯದಿಂದ ಇಂಗ್ಲಿಷ್ ಪತ್ರಿಕೆಯೊಂದು ಬರುತ್ತಿದ್ದು ಅದರಲ್ಲಿ ಕನ್ನಡಕ್ಕೆ ಒಂದೇ ಒಂದು ಪುಟ ಮೀಸಲಿಡಲಾಗಿದೆ. ಕರ್ನಾಟಕದಲ್ಲಿ ಬೃಹತ್ ಮಿಷನರಿ ಸಂಸ್ಥೆಗಳಾಗಿ ನೆಲೆಗಂಡ ಯೇಸುಸಭೆ ಮತ್ತು ಕಪುಚಿನ್ ಸಭೆಗಳು ಕನ್ನಡದಲ್ಲಿ ಯಾವುದೇ ಪತ್ರಿಕೆಯನ್ನು ಹೊರತರುತ್ತಿಲ್ಲ .

ಸತ್ವಪೂರ್ಣ ಲೇಖನಗಳ ಕೊರತೆ, ಮುದ್ರಣದೋಷಗಳು, ಹೊಸತನವಿಲ್ಲದ ವಿನ್ಯಾಸ, ಹಂಚಿಕೆಯಲ್ಲಿ ಕ್ರಮತಪ್ಪುವಿಕೆಗಳ ಕಾರಣದಿಂದಾಗಿ ಓದುಗರು ಉತ್ಸಾಹ ಕಳೆದುಕೊಳ್ಳುತ್ತಾರೆ. ಒಮ್ಮೆ ಕಳೆದುಕೊಂಡ ಓದುಗರನ್ನು ಮತ್ತೆ ಪಡೆಯುವುದು ಬಲು ಕಷ್ಟ. ಇವನ್ನು ಮುದ್ರಿತ ಪತ್ರಿಕೆಗಳ ಸೋಲು ಎನ್ನದೆ ಅದನ್ನು ಮುನ್ನಡೆಸುವವರ ಸೋಲು ಎನ್ನಬೇಕಾಗುತ್ತದೆ. ಪ್ರತಿಭೆಗಳೂ ಸಂಪನ್ಮೂಲಗಳೂ ಯಥೇಚ್ಛವಾಗಿದ್ದರೂ ಸೈತಾನನ ಪ್ರಲೋಭನೆಗೊಳಗಾಗಿ ಸರಿಯಾಗಿ ಪತ್ರಿಕೆ ನಡೆಸಲಾಗದ ಈ ವ್ಯವಸ್ಥೆಗಳ ಬಗ್ಗೆ ಅತೀವ ವಿಷಾದವೆನಿಸುತ್ತದೆ.

ಈ ನಡುವೆ ಆಶಾಕಿರಣವೆಂಬಂತೆ ವಿದ್ಯುನ್ಮಾನ ಮಾಧ್ಯಮದಲ್ಲಿ ಹೊರತರಲಾಗುತ್ತಿರುವ 'ದನಿ' ಇ-ಪತ್ರಿಕೆಯು ಎಲ್ಲ ಜನರನ್ನೂ ತಲಪುವ ಸದುದ್ದೇಶದಿಂದ ವಿಶಿಷ್ಟ ರೂಪದಲ್ಲಿ ನಡೆಯುತ್ತಿದೆ. ಸತ್ತ್ವಶಾಲಿ ಲೇಖಕರ ಧ್ವನಿಪೂರ್ಣ ಲೇಖನಗಳ ಹೂರಣವುಳ್ಳ ಹಾಗೂ ಆಕರ್ಷಕ ವರ್ಣಚಿತ್ರಗಳ ಪುಟಸಂಯೋಜನೆ ಮಾಡಲಾದ ಈ ವಿದ್ಯುನ್ಮಾನ ಪತ್ರಿಕೆಯನ್ನು ಮೊಬೈಲಿನಲ್ಲಿ, ಲ್ಯಾಪ್ ಟಾಪಿನಲ್ಲಿ, ಗಣಕಯಂತ್ರದಲ್ಲಿ ನಮ್ಮ ಬೆರಳುಗಳ ಮೂಲಕ ಜಾಲಾಡಬಹುದು. ವಿಶ್ವದೆಲ್ಲೆಡೆಯ ಕನ್ನಡ ಬಲ್ಲ ಕ್ರೈಸ್ತರು ಮಿನ್ನಂಚೆ, ವಾಟ್ಸಾಪು, ಫೇಸುಬುಕ್ಕುಗಳ ಮೂಲಕ ಇದನ್ನು ಪಡೆದುಕೊಂಡು ಕಳೆದ ಎರಡು ವರ್ಷಗಳಿಂದ ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ. 

--------------------------------------------------------------------------------------------------------------------------
'ಮಂಗಳೂರ ಸಮಾಚಾರ' ವಾರ ಪತ್ರಿಕೆ

ಕನ್ನಡ ಪತ್ರಿಕೋದ್ಯಮದ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುವುದು 'ಮಂಗಳೂರ ಸಮಾಚಾರ'ವೆಂಬ ವಾರ ಪತ್ರಿಕೆಯೊಂದಿಗೆ. ಇದರ ಸಂಪಾದಕ 'ಹೆರ್ಮಾನ್ ಮುವ್ ಗ್ಲಿಂಗ್'. ಪ್ರಾರಂಭ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಸಂಸ್ಥೆಯಿಂದ. ಜುಲೈ 1, 1843ರಲ್ಲಿ ವಾರಪತ್ರಿಕೆಯ ಮೊದಲ ಪ್ರಕಟಣೆ. 173 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಕನ್ನಡ ಪತ್ರಿಕೋದ್ಯಮವಿದು. ಈ ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಭಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ಭಾರತದಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಕ್ರೈಸ್ತಧರ್ಮ ಪ್ರಚಾರಕ್ಕಾಗಿ ಬಂದವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬಳಕೆಗೆ ತಂದರು. ತದನಂತರ ಅಚ್ಚು ಮೊಳೆಗಳ ಮುದ್ರಣ ಆರಂಭವಾಯಿತು. 
-------------------------------------------------------------------------------------------------------------------------


ಡಾಕ್ಟರ್‍ ಹೆರ್ಮಾನ್ ಮುವ್ ಗ್ಲಿಂಗ್ 

(1811-1881) 

ಜರ್ಮನ್ ದೇಶೀಯನಾದ ರೆವರೆಂಡ್ ಡಾಕ್ಟರ್ ಹೆರ್ಮಾನ್ ಮುವ್ ಗ್ಲಿಂಗ್ (1811-1881) ಕನ್ನಡದಲ್ಲಿ `ಪತ್ರ ಸಾಹಿತ್ಯ'ವನ್ನು ಪ್ರಾರಂಭಿಸಿದ ಮೊದಲಿಗ. ಮುವ್ ಗ್ಲಿಂಗ್ ಹುಟ್ಟಿದ್ದು 1811ರಲ್ಲಿ ಜರ್ಮನಿಯ ಬ್ರಾಕನ್‌ ಹೀಮ್ ಎಂಬ ಊರಿನಲ್ಲಿ. ಬಡಮಧ್ಯಮ ವರ್ಗದ, ಹೆಚ್ಚು ಓದಿರದ ಮುವ್ ಗ್ಲಿಂಗ್‌ 19ನೆಯ ಶತಮಾನದಲ್ಲಿ ಕ್ರೈಸ್ತ ಧರ್ಮಪ್ರಚಾರಕ್ಕೆಂದು ಜರ್ಮನಿಯಿಂದ ಭಾರತಕ್ಕೆ ಕಾಲಿರಿಸಿದ. ಬಾಸೆಲ್‌ನಲ್ಲಿ ಅಲ್ಪಾವಧಿ ಮಿಶನರಿ ತರಬೇತಿಯನ್ನು ಮುಗಿಸಿ 1836ರಲ್ಲಿ ಮಂಗಳೂರಿಗೆ ಕಾಲಿರಿಸಿದ. 
------------------------------------------------------------------------------------------------------------------------
ಮಂಗಳೂರು ಸಮಾಚಾರದ ಪೀಠಿಕೆ
`ಮಂಗಳೂರಿನವರು ಮೊದಲಾದ ಯೀ ದೇಶಸ್ಥರು ಕಥೆಗಳಂನೂ ವರ್ತಮಾನಗಳಂನೂ ಹೇಳುವುದರಲ್ಲಿಯೂ ಕೇಳುವುದರಲ್ಲಿಯೂ ಯಿಚ್ಛೆಯುಳ್ಳವರಾಗಿರುತ್ತಾರೆ. ಬೆಳಿಗ್ಗೆ ಬಂದ್ರ್ಯದಲ್ಲಾಗಲಿ ಕಚೇರಿ ಹತ್ತರವಾಗಲಿ ಒಬ್ಬನು ಬಾಯಿಗೆ ಬಂದ ಹಾಗೆ ಒಂದು ವರ್ತಮಾನದ ಹಾಗೆ ಮಾತಾಡಿದರೆ ಅದನ್ನು ಬೇರೊಬ್ಬನು ಆಶ್ಚರ್ಯದಿಂದ ಕೇಳಿ ಇನ್ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ಊರೆಲ್ಲ ತುಂಬಿಸುತ್ತಾನೆ. ಮರುದಿವಸ ನಿನ್ನಿನ ವರ್ತಮಾನ ಸುಳ್ಳುಯಂತಾ ಕಾಣುವಷ್ಟರೊಳಗೆ ಎಮ್ಮೆ ಮೊಲೆಯಂತೆ ಮತ್ತೊಂದು ಹುಟ್ಟಿ ಆತು. ಈ ಪ್ರಕಾರವಾಗಿ ಬಹಳ ಜನರು ಕಾಲಕ್ರಮೇಣ ಮಾಡುತ್ತಾರೆಂದು ಕೆಲವು ವರ್ಷದಿಂದ ಇಲ್ಲಿ ವಸ್ತಿಯಾಗಿದ್ದ ಕೆಲವರು ತಿಳುಕೊಂಡು ಇದರಲ್ಲಿ ಪ್ರಯೋಜನವಿಲ್ಲವೆಂದು ಈ ಮನುಷ್ಯರ ಸಮಾಚಾರ ಆಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದ್ದರಿಂದ ಈ ಸಮಾಚಾರದ ಸಂಗ್ರಹವನ್ನು ಕೂಡಿಶಿ ಪಕ್ಷಕ್ಕೆ ಒಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸಬೇಕೆಂಬುದಾಗಿ ನಿಶ್ಚಯಿಸಿ ... ಯಾಗಿದೆ. 
"ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಇಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮರ್ಯಾದೆಗಳನ್ನು ತಿಳಿಯದೇ ಕಿಟಿಕಿಯಿಲ್ಲದ ಬಿಡಾರದಲ್ಲಿ ಉಳಕೊಳ್ಳುವವರ ಹಾಗೆಯಿರುತ್ತಾ ಬಂದರು. ಅದು ಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ಒಳಗೆ ಸ್ವಲ್ಪ ಬೆಳಕು ಬೀರುವ ಹಾಗೆಯೂ ನಾಲ್ಕೂ ದಿಕ್ಕಿಗೆ ಕಿಟಿಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷವೊಂದು ಸಾರಿ ಸಿದ್ದ ಮಾಡಿ ಅದನ್ನು ಓದಬೇಕೆಂದಿರುವೆಲ್ಲರಿಗೆ ಕೊಟ್ಟರೆ ಕಿಟಿಕಿಗಳನ್ನು ನೋಡಿದ ಹಾಗಿರುವುದು," ಇದು ಮಂಗಳೂರು ಸಮಾಚಾರ ಪತ್ರಿಕೆಯ ಆಶಯದ ಮಾತುಗಳು.ಆಗಿನ ವ್ಯಾಕರಣ, ಭಾಷೆಯನ್ನು ಯಥಾವತ್ತಾಗಿಡಲಾಗಿದೆ. ಈ ಮೂಲಕ ತಮ್ಮ ಸುತ್ತಮುತ್ತಲೂ ಏನು ನಡೆಯುತ್ತದೆ ಎಂಬುದನ್ನು ಜನರು ಅರಿತುಕೊಳ್ಳಲಿ ಎಂಬ ಕಾರಣಕ್ಕಾಗಿ ಅವರಲ್ಲಿ ವಾಚನಾಭಿರುಚಿ ಮತ್ತು ಸಮಕಾಲೀನ ವಿಷಯಗಳ ಜ್ಞಾನವನ್ನು ಬಿತ್ತುವ ಸಾಹಿತ್ಯ ಕೃಷಿಗೆ ಕೈ ಹಾಕಿದ್ದ ಕೀರ್ತಿ ಕನ್ನಡ ಪತ್ರಿಕೆಯ ಜನಕ ಹೆರ್ಮಾನ್ ಮುವ್ ಗ್ಲಿಂಗ್ ಅವರಿಗೆ ಸಲ್ಲುತ್ತದೆ. 

'ಮಂಗಳೂರ ಪತ್ರಿಕೆ'ಯಲ್ಲಿ ಪ್ರಕಟವಾಗುತ್ತಿದ್ದ ವರ್ತಮಾನಗಳ ಪಟ್ಟಿ (ಪತ್ರಿಕೆಯಲ್ಲಿದ್ದಂತೆ) ಇಂತಿದ್ದವು; 1. ವೂರ ವರ್ತಮಾನ, 2. ಸರಕಾರದವರ ನಿರೂಪಗಳು, 3. ಸರ್ವರಾಜ್ಯ ವರ್ತಮಾನಗಳು, 4. ನೂತನವಾದ ಆಶ್ಚರ್ಯ ಸುದ್ದಿಗಳು, 5. ಅಂನ್ಯರ ನಡೆಗಳು, 6. ಸುಬುದ್ಧಿಗಳು, 7. ಕಥೆಗಳು, 8. ಯಾರಾದರು ವೊಂದು ವರ್ತಮಾನ ಅಥವಾ ವೊಂದು ಮಾತು ಯಿದರಲ್ಲಿ ಶೇರಿಸಿ ಛಾಪಿಸಬೇಕು ಎಂತ ಬರದು ಕಳುಹಿಸಿದರೆ ಆ ಸಂಗತಿ ಸತ್ಯವಾಗಿದ್ದರೆ ಅದು ಸಹಾ ಯೀ ವರ್ತಮಾನ ಕಾಗದ ಸಂಗಡ ಕೂಡಿಸಿ ಛಾಪಿಸಬಹುದಾಗಿರುತ್ತದೆ, 9. ಸಾಮತಿ ಕಥೆ, 11. ಪುರಂದರದಾಸನ ಪದ.
--------------------------------------------------------------------------------------------------------------------------
 ¨ ಸಿ ಮರಿಜೋಸೆಫ್

●●●





ಫಲಭರಿತ ಬದುಕು

ಈ ವಿಶ್ವವೆಲ್ಲ ದೈವಮಯ. ಇಲ್ಲಿರುವುದೆಲ್ಲವೂ ಅವರ ಸೃಷ್ಟಿಯೇ. ಸೃಷ್ಟಿಯ ಪ್ರತಿ ಕಣದಲ್ಲೂ ದೇವನಿದ್ದಾನೆ. ದೇವರಿಲ್ಲದ ತಾಣ ಇರುವುದುಂಟೆ! ಭಕ್ತ ಕನಕದಾಸ ಒಮ್ಮೆ ತನ್ನ ಗುರು ಕೊಟ್ಟ ಬಾಳೆಹಣ್ಣನ್ನು ತಿನ್ನಲು ದೇವರಿಲ್ಲದ ಸ್ಥಳವನ್ನು ಹುಡುಕಿ ಎಲ್ಲೂ ಸಿಗದೆ ಹಿಂದಿರುಗಿದ. ಆತ ಎಲ್ಲೆಲ್ಲೂ ದೇವರ ಪ್ರಸನ್ನತೆಯನ್ನು ಕಂಡು ಪುಳಕಿತನಾದ. ಬೈಬಲ್ ಗ್ರಂಥದ ಕೀರ್ತನೆ 139ರಲ್ಲಿ ಕೀರ್ತನಕಾರನು (ದಾವೀದರಸನು) ದೈವ ಪ್ರಸನ್ನತೆಯನ್ನು ಕುರಿತು

"ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ

ತಪ್ಪಿಸಿಕೊಳ್ಳಲು?

ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ

ಮರೆಯಾಗಲು?

ಆಕಾಶಕ್ಕೆ ನಾನೇರಿದರೂ ನೀನಿರುವೆ ಅಲ್ಲಿ

ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ

ನಾನರುಣ ರೆಕ್ಕೆಗಳನೇರಿ ಹಾರಿದರೂ.

ಸಮುದ್ರದ ಕಟ್ಟಕಡೆಗಳಲಿ ನಾ ಸೇರಿದರೂ

ಅಲ್ಲೂ ನನ್ನ ನಡೆಸುವುದು ನಿನ್ನ ಕೈ,

ನನ್ನ ಹಿಡಿದಿರುವುದು ನಿನ್ನ ಬಲಗೈ" 

(139:7-10) ಎಂದು ಉದ್ಗರಿಸುತ್ತಾನೆ. 

ಆತನಿಗೆ ದೇವರಲ್ಲಿ ಸಂಪೂರ್ಣ ನಂಬಿಕೆ, ಅಚಲ ವಿಶ್ವಾಸವಿದೆ. ದೇವರೇ ಆತನಿಗೆ ಆಶ್ರಯದಾತರು, ಸಂರಕ್ಷಕರು ಹಾಗೂ ಪರಿಪಾಲಕರೂ ಆಗಿದ್ದಾರೆ. ದೇವರಿಲ್ಲದ ಬದುಕು ಶೂನ್ಯ, ನಿರರರ್ಥಕ ಎಂಬ ಅರಿವು ಆತನಿಗಿದೆ.

ಯಾವ ತಾಯಿಯ ಮಗುವಾದರೇನು? ಎಲ್ಲಿ ಜನಿಸಿ ಬೆಳೆದರೇನು? ಎಷ್ಟು ಓದಿದರೇನು? ಯಾವ ನೌಕರಿ ಗಳಿಸಿದರೇನು? ಯಾವ ಬಿರುದು ಪಡೆದರೇನು? ಎಲ್ಲವೂ ಈ ಲೋಕದಲ್ಲಿ ಅಂತ್ಯವಾಗುತ್ತದೆ. ಆದರೆ ದೇವರನ್ನು ತನ್ನ ಜೀವನದ ಕೇಂದ್ರವಾಗಿ ಉಳ್ಳವರ ಬದುಕು ಬಂಡೆಯ ಮೇಲೆ ಮನೆ ಕಟ್ಟಿಕೊಂಡವನಂತೆ (ಮತ್ತಾಯ 7:24-27; ಲೂಕ 6:46-49). ಅಂತವರು ಜಗದ ಏರಿಳಿತಗಳಿಗೆ ಹಿಗ್ಗದೆ, ಕುಗ್ಗದೆ, ಜಗ್ಗದೆ, ಸ್ಥಿರಚಿತ್ತದಿಂದ ಜೀವನದ ಸವಾಲುಗಳನ್ನು ಹಸನ್ಮುಖಿಯಾಗಿ, ಸಮತೋಲನವಾದ ಮನಸ್ಸಿನಿಂದ ಎದುರಿಸಿ, ದಿಟ್ಟತನದಿಂದ ಮುನ್ನುಗ್ಗಲು ಸಾಧ್ಯ. ಮಾತ್ರವಲ್ಲದೆ ಈ ಲೋಕದ ಯಾತ್ರೆ ಮುಗಿದಾಗ ಸಂತೃಪ್ತಿಯಿಂದ ದೇವನಲ್ಲಿ ನಿರಂತರವೂ ಜೀವಿಸಲು ತಮ್ಮನ್ನು ಸಿದ್ದಗೊಳಿಸಿಕೊಳ್ಳುತ್ತಾರೆ. ಏಕೆಂದರೆ ಅವರು ತಮಗಾಗಿ ಮಾತ್ರ ಜೀವಿಸುವುದಿಲ್ಲ. ಅವರು ಇತರರ ಒಳಿತಿಗಾಗಿ ತಮ್ಮ ಜೀವವನ್ನು ಸವೆಸಿಕೊಳ್ಳುತ್ತಾರೆ. ಇತರರ ಅಭ್ಯುದಯವೇ ಅವರ ಸಂತಸ.
ನಮ್ಮ ಪಿತಾಮಹರು, ಪ್ರವಾದಿಗಳು, ನ್ಯಾಯಸ್ಥಾಪಕರು ಹಾಗೂ ಸಕಲ ಸಂತರು ತ್ರೈಏಕದೇವನನ್ನು ತಮ್ಮ ಜೀವನದ ಕೇಂದ್ರಬಿಂದುವಾಗಿ ಇಟ್ಟುಕೊಂಡಿದ್ದರು. ಜೀವನದಲ್ಲಿ ಅವರಿಗೆ ಬಂದೊದಗಿದ ಕಷ್ಟ-ನಷ್ಟಗಳು, ತೊಂದರೆ-ತೊಡಕುಗಳು ಅಷ್ಟಿಷ್ಟಲ್ಲ. ದೇವರು ಅವರ ವಿಶ್ವಾಸವನ್ನು ಪರಿಪರಿಯಾಗಿ ಪರಿಶೋಧಿಸಿದರೂ ಅವರು ದೃತಿಗೆಡಲಿಲ್ಲ. ಏಕೆಂದರೆ ಅವರ ಅಂತರಾತ್ಮದಲ್ಲಿ ದೈವೀ ಸ್ಪರ್ಶವಾಗಿ ಅವರು ದೇವರಿಗೆ ಸಂಪೂರ್ಣವಾಗಿ ಶರಣಾಗಿದ್ದರು. ಅವರು ಪ್ರವಾದಿ ಯೆರೇಮಿಯ "ಸರ್ವೇಶ್ವರನಲ್ಲೇ ಭರವಸೆಯಿಟ್ಟವನಾದರೋ ಧನ್ಯ, ಅಂಥವನಿಗೆ ಸರ್ವೇಶ್ವರನಲ್ಲೇ ವಿಶ್ವಾಸ ನೀರರುಗಿನಲೆ ನೆಡಲಾದ, ನದಿಯ ಬದಿಯಲೆ ಬೇರು ಹರಡಿದ, ಬಿಸಿಲ ಧಗೆಗೆ ಹೆದರದೆ, ಬರಗಾಲದಲ್ಲೂ ನಿಶ್ಚಿಂತವಾದ ಹಸಿರೆಲೆ ಬಿಡುವ, ಫಲನೀಡುವ ಮರಕ್ಕೆ ಸಮಾನನು ಆತ" (ಯೆರೇಮಿ 17:8) ಎನ್ನುತ್ತಾನೆ.

ದೇವರು ಸದ್ಭಕ್ತರ ವಿಶ್ವಾಸವನ್ನು ಪುಟಕ್ಕಿಟ್ಟ ಚಿನ್ನದಂತೆ ಶುದ್ಧಗೊಳಿಸಿ ಹದಗೊಳಿಸುವರು. ಆ ಪ್ರಕ್ರಿಯೆಯು ಕಂಡಿತವಾಗಿಯೂ ಕಠಿಣವಾಗಿರುತ್ತದೆ. ಆದರೆ ಅದಾದ ನಂತರ ಅವರು ಸಕಲ ಸಂತೃಪ್ತಿಯನ್ನು ಹೊಂದುವರು. ಈ ಕಾರಣ ಪ್ರಸ್ತುತ ಯಾತನೆಯ ಬಗ್ಗೆ ಸಂತ ಪೌಲನು ರೋಮನರಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ "ಇಂದಿನ ಕಾಲದಲ್ಲಿ ನಾವು ಅನುಭವಿಸುತ್ತಿರುವ ಕಷ್ಟ ಸಂಕಷ್ಟಗಳು ಮುಂದೆ ನಮಗೆ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಹೋಲಿಸುವುದಕ್ಕೂ ಬಾರದವುಗಳೆಂದು ನಾನು ಎಣಿಸುತ್ತೇನೆ" (8:18). ಕಷ್ಟ-ನಷ್ಟ, ದುಃಖ-ದುಮ್ಮಾನಗಳು ಪ್ರತಿ ಮಾನವ ಜೀವಿಯ ಅವಿಭಾಜ್ಯ ಅಂಗ ಅದಕ್ಕಾಗಿ ಕುಗ್ಗುವ ಅವಶ್ಯಕತೆ ಇಲ್ಲ. ನಮ್ಮ ಕಷ್ಟ-ನಷ್ಟಗಳಲ್ಲಿ ದೇವರು ನಮ್ಮೂಂದಿಗೇ ಇರುತ್ತಾರೆ, ಅವರು ನಮ್ಮನ್ನೆಂದೂ ಮರೆಯುವುದಿಲ್ಲ. ಪ್ರವಾದಿ ಯೆಶಾಯ ಅದನ್ನು ಹೀಗೆ ಬಣ್ಣಿಸುತ್ತಾನೆ "ಹೆತ್ತ ತಾಯಿಗೆ ತನ್ನ ಕಂದನ ಪ್ರೀತಿ ಬತ್ತಿಹೋಗುವುದುಂಟೆ? ಆಕೆ ತನ್ನ ಮೊಲೆಗೂಸನ್ನು ಮರೆತುಬಿಡುವುದುಂಟೆ? ಒಂದು ವೇಳೆ ಆಕೆ ಮರೆತರೂ ನಾ ನಿನ್ನನು ಮರೆಯೆ" (ಯೆಶಾಯ 49:15) ಎನ್ನುತ್ತಾನೆ ಸರ್ವೇಶ್ವರ. 
ಈ ಲೋಕದಲ್ಲಿ ನಮ್ಮ ಬದುಕು ಹಾಗೂ ಕೆಲಸ ಕಾರ್ಯಗಳು ಸಫಲವಾಗಬೇಕಾದರೆ ಅದು ದೈವ ಕೇಂದ್ರಿತವಾಗಿರಬೇಕು ಇಲ್ಲದಿದ್ದಲ್ಲಿ ಕೀರ್ತನೆಕಾರ ಹೇಳುವ ಹಾಗೆ

"ಪ್ರಭುವೇ ಮನೆಮಠವನು ಕಟ್ಟದ ಹೊರತು

ಅದನ್ನು ಕಟ್ಟುವವರ ಪ್ರಯಾಸ ವ್ಯರ್ಥ

ಪ್ರಭುವೇ ಪಟ್ಟಣವನು ಕಟ್ಟದ ಹೊರತು

ಕಾವಲುಗಾರನು ಅದನ್ನು ಕಾಯುವುದು ವ್ಯರ್ಥ" 

(127:1). 

ನಮ್ಮನ್ನು ಕಾಯುವ ದೇವರು ಗುಡಿ, ಮಸೀದಿ, ಚರ್ಚುಗಳಲ್ಲಿ ಜೀವಿಸುವುದಿಲ್ಲ ಅವರು ಸದಾ ನಮ್ಮ ಮಧ್ಯದಲ್ಲಿಯೇ ಇದ್ದಾರೆ. ಮಾನವನ ಅಂತರಂಗವೇ ಅವರ ನಿಜತಾಣ. ಅವರು ’ಇಮ್ಮಾನುವೇಲ್’ ಸದಾ ನಮ್ಮೊಡನೆ ಇರಬಯಸುತ್ತಾರೆ. ಅವರು ನಮ್ಮನ್ನು ಕ್ಷಣಕ್ಷಣವು ಅಹ್ವಾನಿಸುತ್ತಿದ್ದಾರೆ "ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದು. ಹಾಗೆಯೇ ನೀವು ಕೂಡ ನನ್ನಲ್ಲಿ ಒಂದಾಗಿ ನೆಲಸದಿದ್ದರೆ ಫಲಕೊಡಲಾರಿರಿ" (ಯೊವಾನ್ನ 15:4). ನಾವು ಈ ಲೋಕದಲ್ಲಿ ಉಪಯುಕ್ತ ಹಾಗೂ ಫಲಭರಿತ ಜೀವನವನ್ನು ನಡೆಸಿ ಸಂತೃಪ್ತರಾಗ ಬೇಕೆಂಬುದು ದೇವರ ಹೆಬ್ಬಯಕೆ. ಆ ಬಯಕೆ ಸಿದ್ದಿಗೆ ಬರಬೇಕಾದರೆ ಅವರು ನಮ್ಮ ಜೀವನದ ಕೇಂದ್ರಬಿಂದುವಾಗಲೇಬೇಕು. ಇಲ್ಲದಿದ್ದಲ್ಲಿ ನಾವು ಉಸಿರಿಲ್ಲದ ಶರೀರಕ್ಕೆ ಸಮನಾಗುತ್ತೇವೆ. 
ಫಾದರ್ ವಿಜಯ್ ಕುಮಾರ್, ಬಳ್ಳಾರಿ


●●●



ಆ ದೈವಿಕ ತೋಟ ಭುವಿಯಲ್ಲಿತ್ತೇ?

1969ಕ್ಕೂ ಹಿಂದೆ, ನಾನಾಗ ಐದನೆಯ ತರಗತಿಯಲ್ಲಿ ಕಲಿಯುತ್ತಿದ್ದೆ. ಆಗ ನಮ್ಮೂರಿನಲ್ಲಿ ಚರ್ಚ್ ಇರಲಿಲ್ಲ. ಪಕ್ಕದ ಊರಿನಿಂದ ಪಾದ್ರಿಗಳು ಬಂದು ನಮ್ಮ ಊರಿನ ಪ್ರವಾಸಿ ಮಂದಿರದಲ್ಲೋ ಅಥವಾ ಸ್ಕೂಲಿನ ಕೊಠಡಿಯಲ್ಲೋ ಬಲಿಪೂಜೆಯನ್ನು ನಡೆಸಿ ಹೋಗುತ್ತಿದ್ದರು. ಅದೇ ವರ್ಷ ನಮ್ಮೂರಿನ ಮಕ್ಕಳಿಗೆ ಪ್ರಥಮ ಪರಮಪ್ರಸಾದವನ್ನು ನೀಡಲು ಅಗತ್ಯವಾದ ಏರ್ಪಾಡುಗಳು ನಡೆದಿದ್ದವು. ನಮಗೆ ಧರ್ಮೋಪದೇಶವನ್ನು ಕಲಿಸಿಕೊಡಲು ಸನಿಹದ ಪಟ್ಟಣದ ಚರ್ಚಿನ ಓರ್ವ ಬ್ರದರ್‌ ಅನ್ನು ಕರೆಸಲಾಗಿತ್ತು. ನಾವು ಒಟ್ಟು ಆರು ಮಂದಿ ಇದ್ದೆವು; ಮೂವರು ಹುಡುಗರು ಮತ್ತು ಮೂವರು ಹುಡುಗಿಯರು. 

ಒಮ್ಮೆ ಬಾಯಿಪಾಠ ಮಾಡಿ ಒಪ್ಪಿಸಲು ನಮಗೊಂದು ಪ್ರಾರ್ಥನೆಯನ್ನು ಕೊಟ್ಟಿದ್ದರು. ಆದರೆ ನಾವದನ್ನು ಕಲಿತಿರಲಿಲ್ಲ. ಬ್ರದರ್ ಕೇಳಿದಾಗ ಹುಡುಗಿಯರು ಹೇಗೋ ಮಾಡಿ ಒಪ್ಪಿಸಿಬಿಟ್ಟಿದ್ದರು. ಹುಡುಗರು ಮಾತ್ರ ಬ್ರದರ್ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಾಯಿತು. ಅದೃಷ್ಟವಶಾತ್‌ ಬ್ರದರ್ ನಮ್ಮ ಮೇಲೆ ಕೋಪಗೊಳ್ಳಲಿಲ್ಲ ಬದಲಾಗಿ ಹಿರಿಯರ, ಗುರುಗಳ ಮತ್ತು ತಂದೆತಾಯಿಯರ ಮಾತನ್ನು ಪಾಲಿಸದಿದ್ದರೆ ಏನಾಗುತ್ತೆ ಎಂಬುದಕ್ಕೆ ಉದಾಹರಣೆಯಾಗಿ 'ಆದಂ ಮತ್ತು ಏವ'ರ ಕತೆ ಹೇಳಲು ತೊಡಗಿದರು. ಜಗತ್ತನ್ನು ಸೃಷ್ಟಿಸಿದ ದೇವರು ಬಳಿಕ ಆದಂ ಮತ್ತು ಏವರನ್ನು ಸೃಷ್ಟಿಸಿ 'ಈಡನ್' ಎಂಬ ತೋಟದಲ್ಲಿ ಅವರನ್ನು ಇರಿಸಿದ್ದರು; ಆ ತೋಟದಲ್ಲಿ ನಾನಾ ಬಗೆಯ ಹಣ್ಣುಗಳಿದ್ದವು; ಒಂದು ಹಣ್ಣಿನ ಹೊರತಾಗಿ ಉಳಿದವುಗಳನ್ನೆಲ್ಲಾ ಅವರು ಇಷ್ಟ ಬಂದಂತೆ ತಿನ್ನಬಹುದಿತ್ತು, ಎಂದು ನಮ್ಮಲ್ಲಿ ಆಸೆಯನ್ನೂ ಕುತೂಹಲವನ್ನೂ ಹುಟ್ಟಿಸುವಂತೆ ಅವರು ವಿವರಿಸಿ ಹೇಳಿದರು. ಮುಂದೆ ಸೈತಾನನ ಕುತಂತ್ರಕ್ಕೆ ಬಲಿಯಾಗುವ ಆ ದಂಪತಿಗಳು ತಿನ್ನಬಾರದ ಹಣ್ಣನ್ನು ತಿಂದು ದೇವರ ಮಾತನ್ನು ಮೀರಿದ್ದಕ್ಕಾಗಿ ಆ ತೋಟದಿಂದ ಹೊರನಡೆಯಬೇಕಾಗಿ ಬರುತ್ತದೆ ಎಂದು ಹೇಳಿ, ನಮ್ಮತ್ತ ತಿರುಗಿ, ಸೈತಾನನ ಪ್ರಲೋಭನೆಗೆ ನಾವು ಬಹುಬೇಗನೇ ಒಳಗಾಗಿ ಬಿಡುತ್ತೇವೆ. ಅದರ ಮಾತನ್ನು ಕೇಳಿ ತಂದೆತಾಯಿಯ, ಗುರುಹಿರಿಯರ ಮತ್ತು ದೇವರ ಮಾತನ್ನು ನಾವು ಮಿರಿ ನಡೆಯುತ್ತೇವೆ. ಹಾಗೆ ಮಾಡಿದಾಗ ದೇವರಿಂದ ನಮಗೆ ಶಿಕ್ಷೆ ದೊರೆಯುತ್ತದೆ ಎಂದು ನಮಗೆಲ್ಲಾ ಬುದ್ದಿಮಾತುಗಳನ್ನು ಹೇಳಿದ್ದರು.

ಧರ್ಮೋಪದೇಶ ಪಾಠ ಮುಗಿದ ಬಳಿಕ ಆದಂ ಮತ್ತು ಏವರ ಬಗ್ಗೆಯಾಗಲಿ, ಅವರು ಗೈದ ಪಾಪಗಳ ಬಗ್ಗೆಯಾಗಲಿ ನಾವು ತಲೆಕೆಡಿಸಿಕೊಂಡಿರಲಿಲ್ಲ. ಇನ್ನು ಅವರನ್ನು ಶಿಕ್ಷಿಸಿದ ದೇವರ ಬಗ್ಗೆ ಯೋಚಿಸುವುದೆಲ್ಲಿಂದ ಬಂತು? ನಮ್ಮ ತಲೆಯಲ್ಲಿ ಉಳಿದದ್ದು ಒಂದೇ; 'ಈಡೆನ್ ತೋಟ!'. ವಿವಿಧ ಬಗೆಯ ಹಣ್ಣುಗಳು ಲಭ್ಯವಿರುವ ಆ ತೋಟ ಎಲ್ಲಿದೆಯೆಂಬ ಕುತೂಹಲ! ಬ್ರದರ್ ಅತ್ತ ಹೋಗುತ್ತಲೇ ಈಡನ್ ತೋಟದ ಅನ್ವೇಷಣೆಯಲ್ಲಿ ನಾವು ಮೂವರೂ ನಿರತರಾದೆವು. ನಮಗೆ ಆಗ ಲಭ್ಯವಿದ್ದುದು 'ಶಾರದಾ ಅಟ್ಲಾಸ್' ಎಂಬ ಒಂದು ಭೂಪಟಗಳ ಪುಸ್ತಕ. ಸಂಜೆಯಿಡೀ ಹುಡುಕಾಡಿದ ಬಳಿಕ ನಮಗೆ ಸಿಕ್ಕಿತ್ತು' ಭೂಪಟದಲ್ಲಿ 'ಅಡೇನ್' ಎಂಬ ಹೆಸರು. ಆ ಹೆಸರು ಸೌದಿ ಅರೇಬಿಯಾದ ದಕ್ಷಿಣಕ್ಕಿರುವ ಯೆಮೆನ್‌ನ ಕೆಳತುದಿಯ ಬಳಿ ಇತ್ತು. ಅದನ್ನು ಕಂಡು ನಮಗಂತೂ ಏನನ್ನೋ ಸಾಧಿಸಿದೆವೆಂಬ ಸಂಭ್ರಮ.

● ● ●

ಪ್ರಥಮ ಮಾನವರಾದ ಆದಂ ಮತ್ತು ಏವಳನ್ನು ಸೃಷ್ಟಿಸಿದ ದೇವರು ಅವರಿಗೆ ನೆಲೆ ನಿಲ್ಲಲು ಈಡೆನ್ ತೋಟದಲ್ಲಿ ಅವಕಾಶ ನೀಡಿದ್ದರು. ಬಳಿಕ ಅಪ್ರಾಮಾಣಿಕರಾದ ಅವರನ್ನು ಈಡನ್‌ ತೋಟದಿಂದ ಹೊರತಳ್ಳಿದರು ಎಂಬುದು ಯೆಹೂದ್ಯ, ಕ್ರೈಸ್ತಧರ್ಮ್ತು ಮುಸ್ಲಿಂ ಜನಾಂಗವು ನಂಬಿರುವ ಸಂಗತಿ. ಆದರೆ ನಿಜಕ್ಕೂ ಈಡೆನ್ ತೋಟ ಭುವಿಯಲ್ಲಿತ್ತೇ? ಇದ್ದುದೇ ಆದರೆ ಅದು ಎಲ್ಲಿತ್ತು? ಈಗದರ ಸ್ಥಿತಿ ಏನಾಗಿದೆ? ಎಂಬ ಹಲವಾರು ಪ್ರಶ್ನೆಗಳು ನಮ್ಮನ್ನು ಈಗಲೂ ಸಹ ಮುತ್ತಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. 

'ಈಡೆನ್ ತೋಟ'ದ ಬಗ್ಗೆ ಹಲವಾರು ವರ್ಷಗಳಿಂದ ಚರ್ಚೆಗಳು, ನಡೆಯುತ್ತಾ ಬಂದಿವೆ; ಹಲವು ಪುರಾತತ್ವ ಶಾಸ್ತ್ರಜ್ಞರಿಂದ ಸಂಶೋಧನೆಗಳೂ ನಡೆದಿವೆ. ಆದರೆ ಈವರೆಗೂ ಅವರುಗಳಿಂದ ' ಈಡೆನ್ ತೋಟ'ವಿರುವ ಸ್ಥಳದ ಬಗ್ಗೆ ಯಾವುದೇ ನಿರ್ಣಯಾತ್ಮಕ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ಅಗೊಮ್ಮೆ ಈಗೊಮ್ಮೆ ಈ ತೋಟದ ಬಗ್ಗೆ ಅನೇಕ ಊಹಾಪೋಹಗಳು ಹರಡುವುದುಂಟು. ಆ ತೋಟವು ಭಾರತದಲ್ಲಿ ಇತ್ತು ಎಂದು ಕೆಲವರು ಹೇಳಿದರೆ. ಟಿಬೆಟ್‌ನ 'ಶಾಂಗ್ರಿಲಾ' ಎಂದು ಕರೆಯಲ್ಪಡುವ ಅಗೋಚರ ರಹಸ್ಯ ತಾಣವೇ ಅದೆಂದು ನಂಬಿದ ಅನೇಕರು ಇದ್ದಾರೆ. ಟರ್ಕಿಯ `ಅರಾರತ್' ಪರ್ವತಗಳ ಬಳಿ ಇತ್ತೆಂದೂ ವಾದಿಸುವವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಟೈಗ್ರಿಸ್ ಮತ್ತು ಯೂಪ್ರೆಟೀಸ್ ನದಿಗಳ ಸಂಗಮ ಸ್ಥಳದ ಬಳಿಯಯಲ್ಲೇ ಇತ್ತು, ಅದೀಗ ಪರ್ಷಿಯನ್ ಕೊಲ್ಲಿಯಲ್ಲಿ ಮುಳುಗಿ ಹೋಗಿದೆಯೆಂದು ಸಾಕ್ಷ್ಯ ನೀಡುವ ಪ್ರಾಚ್ಯವಸ್ತು ಸಂಶೋಧಕರೂ ಇದ್ದಾರೆ. ಇದೆಲ್ಲವನ್ನೂ ಮೀರಿ ಅದೊಂದು ಕಾಲ್ಪನಿಕ ಸ್ಥಳ, ಭುವಿಯಲ್ಲಿ ನಿಜಕ್ಕೂ ಅದು ಇರಲೇ ಇಲ್ಲ ಎನ್ನುವವರ ಕೊರತೆಯೇನೂ ಕಡಿಮೆ ಇಲ್ಲ

ಪ್ರಸ್ತುತ 'ಈಡೆನ್' ಪದವು, ಮೆಸೊಪೊಟೇಮಿಯಾ (ಈಗಿನ ಇರಾಕ್)ದ ದಕ್ಷಿಣದಲ್ಲಿ ನೆಲೆಗೊಂಡಿದ್ದ ಒಂದು ಜನಾಂಗದ ಭಾಷೆಯಾದ ಅಕ್ಕಾಡಿಯನ್‌ನ 'ಎಡಿನ್ನು' (ಮೂಲಪದ ಸುಮೇರಿಯನ್‌ನ -'ಎಡಿನ್') ಎಂಬ ಪದದಿಂದ ಉದ್ಭವಗೊಂಡ ಪದವಾಗಿದೆ. ಆ ಭಾಷೆಯಲ್ಲಿ ಈ ಪದದ ಅರ್ಥ, 'ಬಯಲು' 'ಮರಳುಗಾಡು' ಅಥವಾ 'ಹುಲ್ಲುಗಾವಲು' ಎಂದಾಗುತ್ತದೆ. ಬೈಬಲ್‌ನ ಬಹುತೇಕ ಭಾಗ ಬರೆಯಲ್ಪಟ್ಟದ್ದು ಹಿಬ್ರೂ ಭಾಷೆಯಲ್ಲಿ. 'ಈಡೆನ್' ಎಂಬುದು ಹೀಬ್ರೂ ಪದ. ಇದರ ಅರ್ಥ 'ನಂದನವನ' ಅಥವಾ 'ಸ್ವರ್ಗ' ಎಂದಾಗುತ್ತದೆ. ಹಾಗಾದರೆ ಈ ಸ್ವರ್ಗೀಯ ತೋಟದ ಬಗ್ಗೆ ಬೈಬಲ್ ಏನನ್ನು ಹೇಳುತ್ತದೆಯೆಂದು ನೋಡೋಣ.

ಈಡೆನ್ ಸೀಮೆಯಲ್ಲಿ ಒಂದು ನದಿಯು ಹುಟ್ಟಿ ಆ ವನವನ್ನು ತೋಯಿಸುತ್ತಿತು. ಅದು ಅಲ್ಲಿಂದ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು. ಮೊದಲನೆಯದರ ಹೆಸರು ಪೀಶೋನ್, ಅದು ಬಂಗಾರ ದೊರೆಯುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. ಆ ಪ್ರದೇಶದ ಬಂಗಾರವು ಅಮೂಲ್ಯವಾದದ್ದು. ಅಲ್ಲಿ ಬದೋಲಖ ಧೂಪವೂ, ಗೋಮೇಧಿಕದ ಅಮೂಲ್ಯ ರತ್ನವು ಸಿಕ್ಕುತ್ತದೆ. ಎರಡನೆಯ ನದಿಯ ಹೆಸರು ಗೀಹೋನ್, ಅದು ಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. ಮೂರನೆಯ ನದಿಯ ಹೆಸರು ಟೈಗ್ರೀಸ್; ಅದು ಅಶ್ಯೂರ್ ದೇಶದ ಪೂರ್ವಕ್ಕೆ ಹರಿಯುವುದು. ನಾಲ್ಕನೆಯದು ಯೂಫ್ರೇಟೀಸ್ ನದಿ

'ಈಡೆನ್ ಅನ್ನುವ ದೇಶ ಅಥವಾ ಪ್ರದೇಶದಲ್ಲಿ ಹುಟ್ಟಿದ ನದಿಯೊಂದು ಅಲ್ಲಿರುವ ತೋಟವನ್ನು ತೋಯಿಸುತ್ತಿತ್ತು' ಎನ್ನುತ್ತದೆ ಬೈಬಲ್. ಅದು ದೇಶ ಅಥವಾ ಪ್ರದೇಶವಾಗಿದ್ದಲ್ಲಿ ಸಾಕಷ್ಟು ವಿಶಾಲವಾಗಿರಬೇಕು. ಈಡೆನ್ ಸೀಮೆಯಲ್ಲಿ ಹುಟ್ಟಿದ ನದಿಯು ಆ ವನವನ್ನು ತೋಯಿಸುವುದಾದರೆ ಆ ನದಿಯ ಹೆಸರೇನು? ಅಥವಾ ಅದು ಯಾವ ನದಿ ಎಂಬುದು ಬೈಬಲ್‌ನಿಂದ ತಿಳಿದು ಬರುವುದಿಲ್ಲ. ಮುಂದುವರಿದು ಆ ವನದಿಂದ ಅಥವಾ ತೋಟದಿಂದ ಆ ನದಿಯು ನಾಲ್ಕು ನದಿಗಳಾಗಿ ಕವಲೊಡೆದಿತ್ತು ಎನ್ನುತ್ತದೆ. ಆ ನಾಲ್ಕು ಉಪನದಿಗಳ ಹೆಸರು 'ಪೀಶೋನ್, ಗೀಹೋನ್, ಟೈಗ್ರಿಸ್ ಮತ್ತು ಯೂಪ್ರಟೀಸ್' ಎನ್ನುತ್ತದೆ ಬೈಬಲ್. 

ಪ್ರಸ್ತುತ, ಈ ನಾಲ್ಕು ನದಿಗಳಲ್ಲಿ ಯೂಪ್ರಟೀಸ್ ಮತ್ತು ಟೈಗ್ರಿಸ್ ನದಿಗಳು ಟರ್ಕಿಯ ಈಶಾನ್ಯ ಭಾಗದ ಪರ್ವತ ಶ್ರೇಣಿಗಳಲ್ಲಿ ಹುಟ್ಟುತ್ತವೆ. ಈ ಪರ್ವತಗಳ ಸಮೀಪವೇ ಜಲಪ್ರಳಯದ ನೀರು ತಗ್ಗಿದ ಬಳಿಕ ನೋಹನು ಸೃಷ್ಟಿಸಿದ ಬೃಹತ್ ನೌಕೆಯು ತಂಗಿದ್ದ ಸ್ಥಳ 'ಅರಾರತ್' ಪರ್ವತವಿರುವುದು. ಇಲ್ಲಿ ಹುಟ್ಟಿದ ಎರಡು ನದಿಗಳೂ ಸಿರಿಯಾದ ಮೂಲಕ ಮೆಸೊಪೊಟೇಮಿಯಾ (ಈಗಿನ ಇರಾಕ್)ವನ್ನು ಪ್ರವೇಶಿಸಿ ಹರಿದು ಪರ್ಷಿಯನ್ ಕೊಲ್ಲಿಯಲ್ಲಿ ವಿಸರ್ಜಿತಗೊಳ್ಳುತ್ತವೆ. ಟೈಗ್ರಿಸ್ ನದಿಗೆ 'ಹಿದೆಕ್ಕಲ್' ಎಂಬ ಹೆಸರೂ ಸಹ ಇದ್ದು ಈ ಹೆಸರೂ ಸಹ ಬೈಬಲ್‌ನಲ್ಲಿ ಲಿಖಿತವಾಗಿದೆ. ಈ ಎರಡೂ ನದಿಗಳು ಹುಟ್ಟುವ ಸ್ಥಳದಿಂದ ಎರಡೂ ನದಿಗಳ ನಡುವಿನ ಅಂತರ ಕೇವಲ 30ಕಿ.ಮೀ. ಅಂದರೆ ಈ ನದಿಗಳು ಹುಟ್ಟುವ ಸ್ಥಳಗಳ ಬಳಿಯೇ ಈಡೆನ್ ತೋಟವಿದ್ದಿರಬೇಕು ಅಥವಾ ಆ ಪ್ರದೇಶವೇ ಈಡೆನ್ ಆಗಿರಬೇಕು ಎಂದಾಯಿತಲ್ಲವೇ? ಹಾಗಾದರೆ ಉಳಿದ ನದಿಗಳಾದ ಪೀಶೋನ್ ಮತ್ತು ಗೀಹೋನ್ ನದಿಗಳು ಎಲ್ಲಿವೆ? ಅವುಗಳು ಇಲ್ಲವಾದರೆ ಏನಾದವು? ಅಲ್ಲದೇ ಆ ವನವನ್ನು ತೋಯಿಸುತ್ತಿದ್ದ ನದಿ ಎಲ್ಲಿದೆ? ಎಂಬ ಪ್ರಶ್ನೆಗಳು ಹಾಗೆಯೇ ಉಳಿದು ಹೋಗುತ್ತವೆ. 

ಅದಿರಲಿ, 'ಪೀಶೋನ್' ಮತ್ತು 'ಗೀಹೋನ್' ನದಿಗಳು ಆಫ್ರಿಕಾದ ನೈಲ್ ನದಿ ಮತ್ತು ಭಾರತದ 'ಗಂಗಾ' ನದಿ ಎಂಬ ವಾದವನ್ನು ಕೆಲವು ಪಂಡಿತರು ಮಂಡಿಸಿದ್ದಾರೆ. 'ಏನಕೇನ ಸಂಬಂಧ' ಎನ್ನುವಂತೆ, ಗಂಗಾ ನದಿ ಹುಟ್ಟುವುದು ಹಿಮಾಲಯ ಪರ್ವತಗಳ ಶ್ರೇಣಿಗಳಲ್ಲಿ, ಅರ್ಥಾತ್ ಏಷ್ಯಾ ಖಂಡದಲ್ಲಿ, ನೈಲ್ ನದಿಯ ಉಗಮ ದಟ್ಟವಾದ ಕಾನನಗಳ ನಡುವಿನ ಸರೋವರದಿಂದ, ಇರುವುದು ಆಫ್ರಿಕಾ ಖಂಡದಲ್ಲಿ ಯೂಪ್ರಟೀಸ್ ಮತ್ತು ಟೈಗ್ರಿಸ್ ನದಿಗಳ ಹುಟ್ಟು ಟರ್ಕಿಯ ಪರ್ವತಗಳಲ್ಲಿ ಅಂದರೆ ಮಧ್ಯ ಪ್ರಾಚ್ಯದಲ್ಲಿ ಹಾಗಿದ್ದಾಗ ಈಡೆನ್ ತೋಟ ಆ ನದಿಗಳಿಗೆ ಸಂಪರ್ಕಕ್ಕೆ ಬರುವುದಾದರೂ ಹೇಗೆ? ಈಡೆನ್ ತೋಟದ ಈ ಕ್ಲಿಷ್ಟಕರ ಸಮಸ್ಯೆಯನ್ನು ಅರಿತು ಕೆಲವರು ಇದೊಂದು ಕಾಲ್ಪನಿಕ ತೋಟ ಎಂದರು.

ಇದೇ ಸಮಯದಲ್ಲಿ, ಪುರಾತತ್ವಶಾಸ್ತ್ರಜ್ಞ ಡಾ. ಜೂರಿಸ್, ಈಡೆನ್ ತೋಟವನ್ನು ತಾನು ಕಂಡು ಹಿಡಿದಿರುವುದಾಗಿ ಪ್ರಕಟಿಸಿದರು. ಟೈಗ್ರಿಸ್ ಮತ್ತು ಯೂಪ್ರೇಟೀಸ್ ನದಿಗಳು ಸಂಗಮಿಸಿ ಪರ್ಷಿಯನ್ ಕೊಲ್ಲಿಗೆ ಸೇರುವಲ್ಲಿ ಅಂದರೆ ಕುವೈತ್‌ನ ಬಳಿ ಇತ್ತೆಂದೂ ಪ್ರಸ್ತುತ ಅದು ಪರ್ಷಿಯನ್ ಕೊಲ್ಲಿಯಲ್ಲಿ ಮುಳುಗಡೆಯಾಗಿದೆ ಎಂದೂ ಪ್ರಚುರಪಡಿಸಿದರು. ಆತನು ಹೇಳುವ ಪ್ರಕಾರ ಇರಾನ್‌ನಿಂದ ಹರಿದು ಬಂದು ಪರ್ಷಿಯನ್ ಕೊಲ್ಲಿಗೆ ಸೇರುವ 'ಕಾರುನ್' ಎಂಬ ನದಿಯೇ ಬೈಬಲ್‌ನಲ್ಲಿ ಸೂಚಿಸಿರುವ 'ಗೀಹೋನ್' ನದಿಯಾಗಿದ್ದು ಇನ್ನೊಂದು ನದಿಯಾದ 'ಪಿಶೋನ್' ಪ್ರಸ್ತುತ ಒಣಗಿ ಹೋಗಿದೆ. 'ಬಂಗಾರ ದೊರೆಯುವ ಹವಿಲ ದೇಶವನ್ನು ಈ ನದಿ ಸುತ್ತಿ ಹರಿಯುತ್ತದೆ', ಎಂದು ಬೈಬಲ್‌ನಲ್ಲಿ ಸೂಚಿಸಿರುವಂತೆ; 'ಹವಿಲ' ಎಂದು ಕರೆಯಲ್ಪಡುವ ಸೌದಿ ಅರೇಬಿಯಾದ ಒಂದು ಭಾಗದಲ್ಲಿ ಈ ನದಿ ಹರಿಯುತ್ತಿತ್ತು ಎಂಬುದರ ಸುಳಿವು ಉಪಗ್ರಹಗಳಿಂದ ದೊರೆತಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಈ ನದಿಯು ಹರಿದು ಬಂದು ಪರ್ಷಿಯನ್ ಕೊಲ್ಲಿಯನ್ನು ಸೇರುತ್ತಿತ್ತು ಎಂಬುದಕ್ಕೆ ಸಂಬಂಧಿಸಿದಂತೆ ಈಗಿರುವ 'ವಾದಿ ರಿಮಾಹ್' ಮತ್ತು 'ವಾದಿ ಬಾತಿನ್' ಎಂಬ ಕೊರಕಲುಗಳು ಪೀಶೋನ್ ನದಿಯ ಪಳೆಯುಳಿಕೆಗಳಗಿವೆ ಎಂಬುದಾಗಿ ಡಾ. ಜೂರಿಸ್ ಹೇಳಿಕೊಂಡಿದ್ದಾನೆ.

ಈ ಪುರಾತತ್ವ ಶಾಸ್ತ್ರಜ್ಞನ ಮಾತು ನಿಜವೇ ಆಗಿದ್ದರೆ, ಬೈಬಲ್ ವಾಕ್ಯಗಳನ್ನು ಪರಿಷ್ಕರಿಸಬೇಕಾಗುತ್ತೆ. ಏಕೆಂದರೆ ಬೈಬಲ್‌ನಲ್ಲಿ ಹೇಳಿದ ಪ್ರಕಾರ, '...ನದಿಯೊಂದು ಹುಟ್ಟಿ ಆ ತೋಟವನ್ನು ತೋಯಿಸುತ್ತಿತ್ತು. ಅದು ಅಲ್ಲಿಂದ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು...' ಎಂಬ ವಾಕ್ಯಗಳನ್ನು ಡಾ. ಜೂರಿಸ್‌ನ ತತ್ವಗಳು ಸಮರ್ಥಿಸುವುದಿಲ್ಲ. ಆದರೆ ಈ ವಾಕ್ಯಗಳಿಗೆ ಅನುಗುಣವಾದ ತಾಣವೊಂದಿದೆ. ಅದುವೇ ನೈಲ್ ನದಿಯ ಉಗಮ ಸ್ಥಳ ಎಂಬುದಾಗಿ ಇನ್ನೋರ್ವ ಪುರಾತತ್ವ ಶಾಸ್ತ್ರಜ್ಞ ಹೇಳಿಕೊಂಡಿದ್ದಾನೆ.

ನೈಲ್ ನದಿಯು ಜನ್ಮ ತಾಳುವುದು ಆಫ್ರಿಕಾದ ರುವಾಂಡ ಬಳಿಯ ದಟ್ಟ ಕಾನನಗಳ ನಡುವೆ. 'ವಿಕ್ಟೋರಿಯ ಸರೋವರ'ವೆಂಬ ವಿಶಾಲವಾದ ಸರೋವರವು ಆಫ್ರಿಕಾದಲ್ಲಿದ್ದು ಅದರಿಂದ ಹೊರಕ್ಕೆ ಹರಿಯು ನದಿಯೇ ಜಗತ್ತಿನ ಅತಿ ಉದ್ದದ ನದಿ, 'ನೈಲ್'. ಈ ಸರೋವರಕ್ಕೆ ನೀರುಣಿಸುವುದು 'ಕಗೇರಾ' ಎಂಬ ನದಿಯೊಂದಿಗೆ ಇನ್ನಿತರ ಸಣ್ಣಪುಟ್ಟ ನದಿಗಳು. ಹಾಗಾಗಿ ವಿಕ್ಟೋರಿಯಾ ಸರೋವರದ ಸಮೀಪದಲ್ಲೇ ಎಲ್ಲೋ 'ಈಡೆನ್ ತೋಟ'ವಿರಬೇಕೆಂದು ಆತ ಹೇಳಿಕೊಂಡಿದ್ದಾನೆ. ಚೋದ್ಯದ ಸಂಗತಿಯೆಂದರೆ ವಿಕ್ಟೋರಿಯಾ ಸರೋವರದಿಂದ ಹುಟ್ಟವ ಕವಲು ಒಂದೇ ಆಗಿದ್ದು ಅದು ನೈಲ್ ನದಿ ಮಾತ್ರವೇ. ಹಾಗಾಗಿ ಅಲ್ಲಿ 'ಈಡೆನ್ ತೋಟ' ಇತ್ತು ಎಂಬ ಕಲ್ಪನೆಯೇ ಅಸಂಗತವೆನಿಸುತ್ತದೆ.

ಗಂಗಾ ನದಿಯ ಮೂಲವಿರುವುದು ಹಿಮಾಲಯದಲ್ಲಿ ಹಾಗಾಗಿ ಹಿಮಾಲಯದಲ್ಲಿರುವ 'ಶಾಂಗ್ರಿ-ಲಾ' ಎಂಬ ಅತೀಂದ್ರಿಯಕ್ಕೆ ಮಾತ್ರವೇ ಕಾಣಿಸುವ ಆಜ್ಞಾತಸ್ಥಳವೇ 'ಏಡೆನ್' ಆಗಿರಬೇಕೆಂದೂ ಹೇಳುವವರಿದ್ದಾರೆ. ಅದೇ ರೀತಿಯಲ್ಲಿ ಭಾರತ, ಇಥಿಯೋಪಿಯಾ, ಯು.ಎಸ್.ಎ., ಸೌದಿ ಅರೇಬಿಯಾ ಮುಂತಾದ ಸ್ಥಳಗಳನ್ನು ಉಲ್ಲೇಖಿಸುವ ಧರ್ಮಶಾಸ್ತ್ರಜ್ಞರೂ ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರು ನೀಡುವ ಪುರಾವೆಗಳು ಅಸಮಂಜಸ.

ಅಂತಿಮವಾಗಿ ಈಡೆನ್ ತೋಟವನ್ನು ಕಂಡು ಹಿಡಿಯುವ ಸಲುವಾಗಿ ಒಂದು ಹೊಸ ತಂತ್ರವನ್ನು ಪ್ರಯೋಗಿಸಲಾಯಿತು; ಆದರೆ ಈ ಪ್ರಯೋಗವನ್ನು ಯಾವ ಆಧಾರದ ಮೇಲೆ ಮಾಡಲಾಯಿತು ಎಂಬುದು ಮಾತ್ರ ತಿಳಿದುಬಂದಿಲ್ಲ.

ಜೆರುಸಲೇಂನಿಂದ ಪಿತಾಮಹ ಅಬ್ರಹಾಮನ ನಾಡಾದ 'ಉರ್'ನ ನಡುವೆ ಒಂದು ಸರಳ ರೇಖೆಯನ್ನು ಎಳೆದು ಅಂತರವನ್ನು ಅಳೆದರೆ ಸಿಗುವುದು ಒಂಬೈನೂರಾ ನಲವತ್ತೈದು ಕಿಲೋಮೀಟರ್‌ಗಳು. ಅವೆರಡು ಕೇಂದ್ರ ಬಿಂದುಗಳಿಂದ ಅದೇ ಅಂತರವಿರುವಂತೆ ಉತ್ತರಾಭಿಮುಖವಾಗಿ ಒಂದು ಬಿಂದುವನ್ನು ಸಂಧಿಸುವಂತೆ ಸರಳರೇಖೆಗಳನ್ನು ಎಳೆದು ಸಮಭಾಹು ತ್ರಿಕೋನವನ್ನು ಸೃಷ್ಟಿಸಿದರೆ ಹೊಸತಾಗಿ ಸೃಷ್ಟಿಯಾದ ಮೂರನೆಯ ಕೇಂದ್ರ ಬಿಂದುವೇ 'ಈಡೆನ್' ಇರುವ ಸ್ಥಳ ಎಂಬ ಒಂದು ವಾದವಿದೆ. 

ಸೋಜಿಗದ ಸಂಗತಿಯೆಂದರೆ ಈ ಮೂರನೆಯ ಕೇಂದ್ರ ಬಿಂದು ಸೃಷ್ಟಿಯಾಗುವ ಸ್ಥಳ ಬಹುತೇಕ ಟೈಗ್ರಿಸ್ ಮತ್ತು ಯೂಪ್ರಟೀಸ್ ನದಿಗಳ ಉಗಮ ಸ್ಥಳವೇ ಆಗುತ್ತದೆ. ಅಲ್ಲಿಗೆ ನಾವು ಮೊದಲನೆಯ ವಾದದ ಬಳಿಗೆ ಮತ್ತೆ ಬಂದು ತಲುಪಿದಂತಾಗುತ್ತದೆ. ಆದರೆ ಅಲ್ಲಿ ಉದ್ಭವವಾಗಿದ್ದ ಆ ಮೂರು ಪ್ರಶ್ನೆಗಳಿಗೆ ಉತ್ತರ?

ಅದಕ್ಕೆ ಉತ್ತರವೊಂದೇ 'ಜಲಪ್ರಳಯ'!

ಬಹುತೇಕರು ಇದನ್ನು ಪುಷ್ಟೀಕರಿಸುತ್ತಾರೆ. ನೋಹನ ಕಾಲದಲ್ಲಿ ಉಂಟಾದ ಜಲಪ್ರಳಯದಿಂದಾಗಿ ಭೂಮಿಯಲ್ಲಿ ಅನೇಕ ಬದಲಾವಣೆಗಳು ಆಗಿರಬಹುದಾದ ಸಾಧ್ಯತೆ ಇದೆ. ಇದ್ದ ನದಿಗಳಲ್ಲಿ ಕೆಲವು ಮಾಯವಾಗಿ ಅನೇಕ ಹೊಸ ನದಿಗಳು ಹುಟ್ಟಿರಬಹುದು. ಅಥವಾ ನದಿಗಳು ತಮ್ಮ ಪಾತ್ರವನ್ನೇ ಬದಲಾಯಿಸಿರಬಹುದು. ಇಂತಹ ಅನೇಕ ಘಟನೆಗಳು ಜಗತ್ತಿನಲ್ಲಿ ಈಗಾಗಲೇ ನಡೆದುಹೋಗಿವೆ. ಆದರೆ ಇದು ಬರಿ ನದಿಗಳಿಗೆ ಮಾತ್ರ ಅನ್ವಯಿಸುವ ವಿಷಯವಲ್ಲ. ಅನೇಕ ಕಾಡುಗಳು ಸಹ ನಾಶವಾಗಿರಬಹುದಾದ ಸಾಧ್ಯತೆಗಳಿವೆ. ಬೆಟ್ಟಗಳು ಕುಸಿದು ಹೋಗಿರಬಹುದು. ಸಮುದ್ರ ಸಾಗರಗಳಲ್ಲೂ ಅನೇಕ ವ್ಯತ್ಯಾಸಗಳಾಗಿರಬಹುದು; ಹೀಗೆಂದು ಹೇಳುತ್ತದೆ ಭೂಶಾಸ್ತ್ರ ವಿಭಾಗ. ಹಾಗಿದ್ದಲ್ಲಿ 'ಈಡೆನ್ ತೋಟ'ವೂ ಪ್ರಳಯಕ್ಕೆ ಸಿಲುಕಿ ನಾಶವಾಗಿರಬೇಕು. ಮನುಷ್ಯ ಉಳಿಸಿಕೊಳ್ಳದೆ ದೇವರಿಗೆ ಅವಿಧೇಯನಾಗಿ ತೋಟದಿಂದ ಹೊರದೂಡಲ್ಪಟ್ಟ ಮೇಲೆ ಆ ತೋಟದ ಇರುವಿಕೆಯ ಅವಶ್ಯಕತೆಯಾದರೂ ಏನು? 
¨ ಕೆ ಜೆ ಜಾರ್ಜ್


●●●



ಸಂತ ಯೊವಾನ್ನರ ಶುಭಸಂದೇಶ ೬






ಈ ಶುಭಸಂದೇಶದ ಕರ್ತೃವಿನ ಮೂಲ ಉದ್ದೇಶ ಕ್ರೈಸ್ತ ವಿಶ್ವಾಸವನ್ನು ವ್ಯಕ್ತಪಡಿಸುವುದು ಅದರಲ್ಲೂ ಗ್ರೀಕ್ ಪ್ರ
ಪಂಚದ, ಗ್ರೀಕ್ ಜನರ ಕ್ರೈಸ್ತ ವಿಶ್ವಾಸವನ್ನು ಹೆಚ್ಚಿಸುವುದಾಗಿದೆ. ಇನ್ನೂ ಹೇಳಬೇಕೆಂದರೆ, ಪಾಷಂಡ ವಾದಗಳನ್ನು ಅಡಗಿಸುವುದು ಹಾಗೂ ಕ್ರೈಸ್ತ ಸಮುದಾಯದ ಮಧ್ಯೆ ಇರುವ ಗೊಂದಲ ಮತ್ತು ಗಲಿಬಿಲಿಯನ್ನು ನಿವಾರಣೆ ಮಾಡುವುದಾಗಿದೆ. ಈಗ ನಮ್ಮ ಪ್ರಶ್ನೆ ಈ ಶುಭಸಂದೇಶದ ಮೂಲ ಕರ್ತೃ ಯಾರು? ಸಂತ ಯೊವಾನ್ನ ಎಂದು ತೋರುತ್ತದೆಯಾದರೂ ಅವರ ಬಗ್ಗೆ ಪರಿಪೂರ್ಣ ಮಾಹಿತಿ, ಹಿನ್ನೆಲೆ, ಹಾಗೂ ಪರಿಚಯದ ಅಗತ್ಯವಿದೆ. 
ಒಂದು ಕೃತಿಯು ಆ ಕೃತಿಯ ಕರ್ತೃವಿನ ಚಿಂತನೆ, ಹಿನ್ನೆಲೆ, ಕನಸು, ಆಲೋಚನೆಗಳ ಮತ್ತು ಭಾವನೆಗಳ ಅಭಿವ್ಯಕ್ತಿಯಾಗಿರುತ್ತದೆ. ಇಲ್ಲಿಯೂ ಹಾಗೆ ಶುಭಸಂದೇಶದ ಅಂತರಾಳದಲ್ಲಿ ಕರ್ತೃವಿನ ಭಾವನೆಗಳ ಅನಾವರಣ ಆಗುವುದನ್ನು ನಾವು ಕಾಣುತ್ತೇವೆ. ಈ ಶುಭಸಂದೇಶವನ್ನು ಅರ್ಥೈಸಿಕೊಳ್ಳುವವರಿಗೆ ಶುಭಸಂದೇಶದ ಕರ್ತೃವಿನ ಅಧ್ಯಯನದ ಅಗತ್ಯ ಕಂಡು ಬರುತ್ತದೆ. ಈ ಶುಭಸಂದೇಶವನ್ನು ಬರೆದವರು ಸಂತ ಯೊವಾನ್ನರು. ಇವರು ಯೇಸುಸ್ವಾಮಿಯ ಆಪ್ತ ಶಿಷ್ಯ ಎಂದು ತಿಳಿದು ಬರುತ್ತದೆ. ಯೇಸುಸ್ವಾಮಿ ಆರಿಸಿಕೊಂಡ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬರು. ಇವರು ಜಬೆದಾಯನ ಮಕ್ಕಳಲ್ಲಿ ಒಬ್ಬರು, ಯಾಕೋಬನ ಸಹೋದರ ಎಂದು ತಿಳಿಯುತ್ತದೆ. ಈ ಇಬ್ಬರು ಸಹೋದರರ ಬಗ್ಗೆ ನಾವು ಶುಭಸಂದೇಶದಲ್ಲಿ ಕಾಣುತ್ತೇವೆ. ಇಬ್ಬರೂ ವೃತ್ತಿಯಲ್ಲಿ ಮೀನು ಹಿಡಿಯುವವರು. ಇವರ ಬಳಿ ಒಂದು ಮೀನು ಹಿಡಿಯುವ ದೋಣಿ ಇರುತ್ತದೆ. ಮತ್ತು ಅನೇಕ ಕೆಲಸದ ಆಳುಗಳು ಇವರೊಡನೆ ಕೆಲಸ ಮಾಡುತ್ತಿರುತ್ತಾರೆ (ಮಾರ್ಕ ​ 1:19-20). ಅಂದಿನ ಕಾಲದಲ್ಲಿ ದೋಣಿ ಮತ್ತು ಕೆಲಸದವರನ್ನು ಇಟ್ಟುಕೊಳ್ಳುವುದು ಎಂದರೆ ಅದೊಂದು ದೊಡ್ಡ ವಿಷಯವಾಗಿತ್ತು. ಆ ವ್ಯಕ್ತಿಯನ್ನು ತುಂಬಾ ಘನತೆ ಗೌರವದಿಂದ ಕಾಣುತ್ತಿದ್ದರು. ಸಮಾಜದಲ್ಲಿ ಅವರಿಗೆ ಒಳ್ಳೆಯ ಸ್ಥಾನಮಾನವಿತ್ತು. 

ಈ ಶುಭಸಂದೇಶದ ಕರ್ತೃ ಪ್ರಕಟಣಾ ಗ್ರಂಥವನ್ನು ಮತ್ತು ಮೂರು ಪತ್ರಗಳನ್ನು ಸಹಾ ಬರೆದಿದ್ದಾರೆ. ಈ ಕರ್ತೃವಿನ ಬಗ್ಗೆ ತಿಳಿಯಲು ನಾವು ಅಭಿಪ್ರಾಯಗಳನ್ನು ವಿಂಗಡಿಸಿ ನೋಡಬಹುದು. 1) ಆಂತರಿಕ ಸಾಕ್ಷಿಗಳು 2) ಬಾಹ್ಯ ಸಾಕ್ಷಿಗಳು. ಮೊದಲನೆಯದಾಗಿ ನಾವು ಆಂತರಿಕ ಸಾಕ್ಷಿಗಳ ಬಗ್ಗೆ ಗಮನ ಕೊಡೋಣ. ಆಂತರಿಕ ಸಾಕ್ಷಿಗಳು ಎಂದರೆ ಬೈಬಲ್ ಒಳಗೆ ಅಡಗಿರುವ ಮಾಹಿತಿಗಳ ಮೂಲಕ ಕರ್ತೃವಿನ ಬಗ್ಗೆ ತಿಳಿಯುವುದು. ಯೊವಾನ್ನ ಯಾರು ಎನ್ನುವ ಪ್ರಶ್ನೆಯನ್ನು ಹುಡುಕುತ್ತಿರುವ ನಮಗೆ ಮೊದಲ ಮೂರು ಶುಭಸಂದೇಶಗಳು ಈ ರೀತಿ ತಿಳಿಸುತ್ತವೆ. ಯೊವಾನ್ನ ಜಬೆದಾಯನ ಮಗ, ಅವರ ತಾಯಿ ಸಲೋಮಿ, ಆಕೆ ಯೇಸುಸ್ವಾಮಿಯ ತಾಯಿ ಮರಿಯಳ ಸಹೋದರಿ ಎಂದು ತಿಳಿದು ಬರುತ್ತದೆ (ಮತ್ತಾಯ 27:26, ಮಾರ್ಕ 9 16:1) ತನ್ನ ಸಹೋದರ ಯಾಕೋಬನೊಂದಿಗೆ ಯೇಸುಸ್ವಾಮಿಯ ಕರೆಗೆ ಕಿವಿಗೊಟ್ಟವ (ಮಾರ್ಕ 9 1:20). ಪೇತ್ರ ಮತ್ತು ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೊವಾನ್ನರು ವ್ಯವಹಾರದ ಸ್ನೇಹಿತರಾಗಿದ್ದರು ಎನಿಸುತ್ತದೆ (ಲೂಕ 5:7-40) ಆತನೊಬ್ಬ ಯೇಸುಸ್ವಾಮಿಯ ಆಪ್ತವಲಯದ, ಒಳ ಗುಂಪಿನ ಮತ್ತು ಆಂತರಿಕ ಆತ್ಮೀಯ ಶಿಷ್ಯರುಗಳಲ್ಲಿ ಒಬ್ಬ. ಯೇಸುಸ್ವಾಮಿ ಯಾವುದೇ ಮಹತ್ತರವಾದ ಕೆಲಸ ಮಾಡಿದಾಗೆಲ್ಲಾ ಈ ಮೂವರು ಆತ್ಮೀಯ ಶಿಷ್ಯರು ಇರುತ್ತಿದ್ದರು, ಅವರು ಯಾರೆಂದರೆ ಪೇತ್ರ, ಯಾಕೋಬ ಮತ್ತು ಯೊವಾನ್ನ - ಇವರನ್ನು ಯೇಸುಸ್ವಾಮಿ ತುಂಬಾ ಪ್ರೀತಿಸುತ್ತಿದ್ದರು (ಮಾರ್ಕ 3:17, 5:37, 9:2, 14:33). ಗುಣದಲ್ಲಿ ಆತನೊಬ್ಬ ಪ್ರಬುದ್ಧ, ಛಲವಾದಿ, ಹಾಗೂ ಮಹತ್ವಾಕಾಂಕ್ಷೆಯ ವ್ಯಕ್ತಿ. ಯೇಸುಸ್ವಾಮಿ ಈ ಇಬ್ಬರೂ ಸಹೋದರರಿಗೆ ಸಿಡಿಲಿನ ಮರಿಗಳು ಎಂದು ಕರೆಯುತ್ತಾರೆ. ಇಬ್ಬರೂ ತುಂಬಾ ಬೇಗನೇ ಕೋಪಗೊಳ್ಳುವಂತಹ ಸ್ವಭಾವದವರಾಗಿದ್ದರು. ಇವರಿಬ್ಬರೂ ಯೇಸುಸ್ವಾಮಿಯ ಸಾಮ್ರಾಜ್ಯದಲ್ಲಿ ಎಡಬಲಗಳಲ್ಲಿ ಇರಬೇಕು ಎನ್ನುವುದು ಅವರ ತಾಯಿ ಸಲೋಮಿಯ ಮಹತ್ವಾಕಾಂಕ್ಷೆಯಾಗಿತ್ತು. (ಮಾರ್ಕ 9 10:35, ಮತ್ತಾಯ 20:20) ಮೊದಲ ಮೂರು ಶುಭಸಂದೇಶದಲ್ಲಿ ಯೊವಾನ್ನ ಒಬ್ಬ ಧೀಮಂತ ನಾಯಕನಾಗಿ, ಆಪ್ತ ವಲಯದ ಶಿಷ್ಯನಾಗಿ, ಮಹತ್ವಾಕಾಂಕ್ಷೆ ಹಾಗೂ ಅಸಹಿಷ್ಣತೆ ಇರುವ ವ್ಯಕ್ತಿಯಾಗಿ ಗೋಚರಿಸುತ್ತಾನೆ. 

ಮುಂದುವರಿಯುವುದು 
¨ ಸಹೋ. ವಿನಯ್‍ ಕುಮಾರ್


●●●



'ನಾನು ಸತ್ಯದ ಪ್ರತಿವಾದಕನಾಗಲು ಬಯಸುತ್ತೇನೆ!'


'ನಾನು ಸತ್ಯದ ಪ್ರತಿವಾದಕನಾಗಲು ಬಯಸುತ್ತೇನೆ!'

'ನಾನು ಸತ್ಯದ ಪ್ರತಿವಾದಕನಾಗಲು ಬಯಸುತ್ತೇನೆ!'

'ಹೌದಾ! ಹಾಗಾದರೆ ನಲವತ್ತೈದು ವರ್ಷಗಳ ತನಕ ಅಪಹಾಸ್ಯ, ನಿರ್ಲಕ್ಷ್ಯ ನಿಂದನೆಗಳನ್ನು ಅನುಭವಿಸಲು ತಯಾರಾಗಿದ್ದೀಯಾ?'

'ನಾನು ರೆಡಿ... ಆದರೆ ನಲವತ್ತೈದು ವರ್ಷಗಳ ನಂತರ ಏನಾಗಬಹುದು?'

'ಏನಿಲ್ಲ, ಅಷ್ಟೊತ್ತಿಗೆ ನೀನು ಅವುಗಳಿಗೆ ಒಗ್ಗಿಬಿಟ್ಟಿರುತ್ತೀಯ!!!'

●●●

ಮನುಷ್ಯನಾಗಿ ಬಾಳುವುದೇ ಶ್ರೇಷ್ಠ ಸಾಧನೆ.''ನಾನು ನಿಮ್ಮ ಹಾಗೆ ಶ್ರೇಷ್ಠ ಮನುಷ್ಯನಾಗಬಹುದು ಹೇಗೆ?'

'ಶ್ರೇಷ್ಠ ಮನುಷ್ಯ?', ಗುರು ಹೇಳಿದರು; 'ಸದ್ಯ ಮನುಷ್ಯನಾಗಿ ಬಾಳುವುದೇ ಶ್ರೇಷ್ಠ ಸಾಧನೆ.'

●●●

ಒಂದು ಕ್ಷಣ ಕಾಯಬೇಕಂತೆ

ಮುಲ್ಲಾನಸ್ರುದ್ದೀನ ತೀಕ್ಷ್ಣ ಬುದ್ಧಿಯವನಾದ್ದರಿಂದ ಸುತ್ತ ಮುತ್ತಲಿನ ಜನರಿಗೆ ತನ್ನ ಸಲಹೆ, ತಿಳಿವುಗಳನ್ನು ಹಂಚುತ್ತ ಬದುಕು ಸಾಗಿಸುತ್ತಿದ್ದ. ಜನ ಅವನನನ್ನು ಸೂಫಿಯೆಂದೂ, ಭಗವಂತನೊಂದಿಗೆ ಹತ್ತಿರದ ಸಂಬಂಧವನ್ನಿಟ್ಟುಕೊಂಡವನೆಂದೂ ತಿಳಿದು ತಮ್ಮ ಸಮಸ್ಯೆ, ಪ್ರಶ್ನೆಗಳೊಂದಿಗೆ ಅವನನ್ನು ನೋಡಲು ಬರುತ್ತಿದ್ದರು. ಒಂದು ದಿನ ಒಬ್ಬ ಧಾರ್ಮಿಕ ಮನುಷ್ಯ ಅವನನ್ನು ಪರೀಕ್ಷಿಸಲು ಬಂದ.

"ನಸ್ರುದ್ದೀನ್, ಜನ ನಿನ್ನ ಸಂತ ಎಂದು ಹೇಳುತ್ತಾರೆ, ಅಲ್ಲಾಹ್ನ ಜೊತೆ ಮಾತನಾಡುವವ ಎಂದು ಹೇಳುತ್ತಾರೆ. ಅಲ್ಲಾಹ್‌ನ ದೃಷ್ಟಿಯಲ್ಲಿ 1000 ಸಾವಿರ ವರ್ಷ ಎಂದರೆ ಎಷ್ಟು? ಕೇಳಿ ಹೇಳುವೆಯಾ?"

ಉತ್ತರ ಕೊಡುವ ಮೊದಲು, ಮುಲ್ಲಾ ತಲೆಯನ್ನು ಎತ್ತಿ ಆಕಾಶವನ್ನೊಮ್ಮೆ ನೋಡಿದ, ಅಲ್ಲಾಹನ ಜೊತೆ ಯಾವದೋ ಭಾಷೆಯಲ್ಲಿ ಮಾತನಾಡಿದ. ಅನಂತರ,

"ಒಂದು ಕ್ಷಣ" ಮುಲ್ಲಾ ಉತ್ತರಿಸಿದ.

"ಅಲ್ಲಾಹ್ನ ಪ್ರಕಾರ ಒಂದು ಸಾವಿರ ಬಂಗಾರದ ನಾಣ್ಯಗಳ ಮೌಲ್ಯ ಎಷ್ಟು?" ಆ ಮನುಷ್ಯ ತಿರುಗಿ ಪ್ರಶ್ನೆ ಮಾಡಿದ. ಈ ಬಾರಿ ಮುಲ್ಲಾ ತಕ್ಷಣ ಉತ್ತರಿಸಿದ, "ಒಂದು ತಾಮ್ರದ ನಾಣ್ಯದಷ್ಟು"

"ಹಾಗಾದರೆ ಓ ಸಂತ ಶ್ರೇಷ್ಠ, ಆ ಒಂದು ತಾಮ್ರದ ನಾಣ್ಯವನ್ನು ನನಗೆ ಕೊಡಲು ಅಲ್ಲಾಹ್‌ನಿಗೆ ಹೇಳುವೆಯಾ" ಆ ಮನುಷ್ಯ ಕುಹಕದಿಂದ ಕೇಳಿದ.

ನಸ್ರುದ್ದೀನ ಮತ್ತೊಮ್ಮೆ ಆಕಾಶ ದಿಟ್ಟಿಸಿ ಬಳಿಕ ಉತ್ತರಿಸಿದ. "ಒಂದು ತಾಮ್ರದ ನಾಣ್ಯ ನಿಮಗೆ ಕೊಡಲು ಅಲ್ಲಾಹ್‌ನಿಗೆ ಯಾವ ತೊಂದರೆಯೂ ಇಲ್ಲವಂತೆ, ಆದರೆ ಒಂದು ಕ್ಷಣ ಕಾಯಬೇಕಂತೆ"
- ಸಂಗ್ರಹ - ಇನ್ನಾ

●●●



ಸರ್ವಧರ್ಮಗಳ ದೇಶ ನಮ್ಮದು


….ಧರ್ಮ ದ್ವೇಷ ಸಾಧಿಸುವ ಕೋಮುವಾದದ ಬಗ್ಗೆ ಸಂವಿಧಾನ ಸ್ಪಷ್ಟ ನೀತಿಯನ್ನು ನಿರೂಪಿಸಿದೆ. ಭಾರತವು ಎಲ್ಲಾ ಧರ್ಮಗಳ ದೇಶ ಎಂದು ಸಾರಿದೆ. ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಬಹುಸಂಖ್ಯಾತರು ಸವಾರಿ ಮಾಡದಿರಲಿ ಎಂಬ ಸಮ ಸಾಮರಸ್ಯದ ಕಾರಣಕ್ಕೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೆಲವು ವಿಶೇಷ ಅವಕಾಶಗಳನ್ನು ಕಲ್ಪಿಸಿದೆ. ಇದನ್ನು ಬಹುಸಂಖ್ಯಾತರ ವಿರೋಧಿ ನೀತಿಯೆಂದು ತಪ್ಪಾಗಿ ಅರ್ಥೈಸುವ ಶಕ್ತಿಗಳು ಅಸಹನೆಯನ್ನು ಬಿತ್ತುತ್ತಿವೆ. ಇಂತಹ ಕೆಲವು ಕಾರಣಗಳನ್ನು ಮೈದುಂಬಿಕೊಂಡ ಗೂಳಿಗುಣ ಗುಂಪು ಸಂವಿಧಾನವನ್ನು ಸುಡುವ ಮಟ್ಟಕ್ಕೂ ಹೋಗಿ ಮೆರೆಯುವಂತಾಗಿದೆ. ಆದರೆ ಸಂವಿಧಾನವು ಪ್ರತಿಪಾದಿಸಿದ ಬಹುಧರ್ಮೀಯ ಭಾರತದ ಕಲ್ಪನೆಯನ್ನು ಹಿಂದೂ ನಿಷ್ಠ ನೇತಾರರೂ ಒಪ್ಪಿದ್ದಾರೆಂಬುದನ್ನು ಇಂಥವರು ಅರಿಯಬೇಕು. ಅಷ್ಟೇ ಅಲ್ಲ, ಸಂವಿಧಾವನ್ನು ಸುಡುವುದೆಂದರೆ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸೋದರತೆ ಮತ್ತು ಸಮಾನತೆಯ ಸಿದ್ಧಾಂತಗಳನ್ನು ಸುಟ್ಟಂತೆ ಎಂಬುದನ್ನು ತಿಳಿಯಬೇಕು. ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಭಾಗವಹಿಸಿದ ಹಿಂದೂ ಧರ್ಮನಿಷ್ಠರಾದ ಡಾ. ರಾಧಾಕೃಷನ್ ಅವರು `ನಮ್ಮ ದೇಶವು ಯಾವುದೇ ಒಂದು ಧರ್ಮಕ್ಕೆ ಸೇರಿದ್ದಲ್ಲ. ಒಂದೇ ಧರ್ಮದ ಪ್ರಾಬಲ್ಯ ಸಲ್ಲ. ನಮ್ಮದು ಸರ್ವಧರ್ಮಗಳ ದೇಶವಾಗಿರಬೇಕು' ಎಂಬರ್ಥದ ಮಾತುಗಳನ್ನು ಸ್ವಷ್ಟವಾಗಿ ಹೇಳಿದ್ದರು. ಹಿಂದೂ ಧರ್ಮ ನಿಷ್ಠರಲ್ಲದ ಡಾ. ಅಂಬೇಡ್ಕರ್ ಅವರೂ ಇದೇ ವಿಚಾರವನ್ನು ಪ್ರತಿಪಾದಿಸಿದರು ಮತ್ತು ಸಂವಿಧಾನದಲ್ಲಿ ಅಳವಡಿಸಿದರು. ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲೇ ಹಿಂದೂ ರಾಷ್ಟದ ಕಲ್ಪನೆಯನ್ನು ವಿರೋಧಿಸಿದ್ದರು. ಬಹುಧರ್ಮೀಯ ಸಾಮರಸ್ಯವನ್ನು ಪ್ರತಿಪಾದಿಸಿದ ಹಿಂದೂ ಧರ್ಮನಿಷ್ಠರಾಗಿ ಬದುಕಿದವರು. ವಾಜಪೇಯಿಯವರು ಜಾತ್ಯತೀತತೆಯನ್ನು ಸರ್ವಧರ್ಮ ಸಮಭಾವ ಎಂದು ವ್ಯಾಖ್ಯಾನಿಸಿದರು. ಆದ್ದರಿಂದ ಸರ್ವಧರ್ಮ ಸಹಿಷ್ಣುತೆ ಮತ್ತು ಸಮತೆಯು ಸಂವಿಧಾನದ ಆಶಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಆಶಯವನ್ನೇ ಒಪ್ಪದಿರುವವರು ನೈಜ ಭಾರತೀಯರಾಗಲು ಅರ್ಹರಲ್ಲ......



(ಸಂವಿಧಾನ ಓದು ಎಂಬ ಪುಸ್ತಕಕ್ಕೆ ಬರಗೂರು ರಾಮಚಂದ್ರಪ್ಪನವರು ಬರೆದ `ಮುನ್ನುಡಿ'ಯಿಂದ)



ನಡೆದುದು ಸಾವಿರಾರು ಹೆಜ್ಜೆಗಳಾದರೂ



ನಡೆದುದು ಸಾವಿರಾರು ಹೆಜ್ಜೆಗಳಾದರೂ

ನೆನಪಿಗೆ ಸವಾಲೊಡ್ಡಿ ನಿಲ್ಲೋದು 

ಪರ ಒಳಿತಿಗೆ ಸವೆದ ಹೆಜ್ಜೆಗಳ ಇತಿಹಾಸ ಮಾತ್ರ

●●●

ಬುದ್ಧ ಕ್ರಿಸ್ತ ಬಸವಣ್ಣ 

ಕೂಡುವ ಮನೆಯೊಂದಿದ್ದರೆ

ಅದು ಮನುಷ್ಯತ್ವದ ಮನೆಯೊಂದೇ

●●●

ತೋರಿಕೆಯ ಜಗತ್ತಿನಲ್ಲಿ

ನಾನೊಂದು ಹಗಲು ನಕ್ಷತ್ರ

ಕಾಣಿಸಿಕೊಳ್ಳಲು ಹಿಂಜರಿಯುವ ಅತಂತ್ರ

●●●

ಧರ್ಮವೆಂಬುವುದು

ಬೇಕು ಬೇಡಗಳ ಪಟ್ಟಿಯಲ್ಲ

ಶುದ್ಧ ಅಶುದ್ಧಗಳ ಆಚರಣೆಗಳಲ್ಲ

ನನ್ನನೇ ಮೀರಿ ಉಕ್ಕುವ ಒಡನಾಟದ

ಜೀವ ಝರಿ

●●●

ಜೋತಿಷಿಗಳು ಹುಡುಕಿದ್ದು

ಕ್ರಿಸ್ತ ಎನ್ನುವ ಒಳದನಿಯ

ಸಿಕ್ಕ ಮೇಲೆ ಅಹಂ ದನಿಯು

ಸ್ತಬ್ಧವಾಗಿ ಒಳದನಿಯಾಗಿಬಿಡುವುದು

●●●

ಸಂತೋಷವಾಗಿರಬೇಕಾದರೆ

ತನ್ನಲ್ಲಿರುವುದೆಲ್ಲವ ಕೊಟ್ಟುಬಿಡು

ಕೊಡುವುದು ನಿನ್ನ ಕೊಡದ 

ಕೈಗೂ ಗೊತ್ತಾಗದಿರಲಿ

●●●

ನಿನ್ನಲ್ಲಿರುವುದೆಲ್ಲವು ದ್ವಿಗುಣವಾಗಬೇಕಾದರೆ

ನೀನು ಮಾಡಬೇಕಾಗಿರುವುದಿಷ್ಟೇ

ಎಲ್ಲವನ್ನು ಪರರ ಒಳಿತಿಗೆ ವಿನಿಯೋಗಿಸು

ವಿನಿಮಯ ಬೆಲೆ ಗೊತ್ತಾಗದಂತೆ ಬಾನಿಗೇರಿಬಿಡುವುದು



- ಜೀವಸೆಲೆ



ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ


ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸುಸ್ವಾಮಿಯ ಪಾಡುಗಳನ್ನು ಸ್ಮರಿಸುವ ಶಿಲುಬೆಹಾದಿಯ ತಿರುಜಾತ್ರೆ ಬೆಂಗಳೂರು ಮತ್ತು ಸುತ್ತಮುತ್ತಲ ಕಥೋಲಿಕ ಕ್ರೈಸ್ತರ ಆಧ್ಯಾತ್ಮಿಕ ತಾಣವಾಗಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. 

ಈ ಉತ್ತರಹಳ್ಳಿಯ ಅನ್ನಮ್ಮನ ದೆಸೆಯಿಂದ 'ಅನ್ನಮ್ಮ' ಎಂಬ ಎಂಬ ಹೆಸರು, ಅಮ್ಮ ಪ್ರತ್ಯಯ ಹಚ್ಚಿಕೊಂಡು ಆಗ್ನೆಸ್ ಆಗ್ನೇಸಮ್ಮ, ತೆರೇಸಾ ತೆರೇಸಮ್ಮ ಆಗಿ ಭಾರತೀಯ ಮೂಲದ ಜಾಡಿನ ಹೆಸರುಗಳೇ ಆಗಿ ಕನ್ನಡ ಕ್ರೈಸ್ತ ಮಹಿಳೆಯರ ಹೆಸರುಗಳಂತೆ ಈಗ ಕ್ರೈಸ್ತರ ಹೆಸರೇ ಆಗಿಬಿಟ್ಟಿದೆ. 

ಅನ್ನಮ್ಮ ಹೆಸರಿನ ಮೂಲ ಅನ್ನ ಇದ್ದೀತು. ಅನ್ನ ಎನ್ನುವುದು ನಾಮಪದವಾದಾಗ, ಅದರ ಅರ್ಥ ಆಹಾರ, ಬೇಯಿಸಿದ ಅಕ್ಕಿ, ವಿಷ್ಣು, ಸೂರ‍್ಯ ಮತ್ತು ನೀರು ಎಂದಾಗುತ್ತದೆ. ಅದು ಗುಣವಾಚಕ ಪದವಾದಾಗ, ಆ ಪ್ರಕಾರವಾದ, ಅಂಥ ಎಂಬ ಅರ್ಥ ಮೂಡುತ್ತದೆ. ಅದು ಅನ್ನಶುದ್ಧಿಯಾದಾಗ ಅದರ ಅರ್ಥ ತುಪ್ಪ ಎಂದಾಗುತ್ತದೆ ಎಂದು ಶಬ್ದಾರ್ಥಕೋಶಗಳು ಹೇಳುತ್ತವೆ.

ಅನ್ನಮ್ಮ ಎಂಬ ಹೆಸರು ಅನ್ನಪೂರ್ಣೆ ಹೆಸರಿನ ಹ್ರಸ್ವಸ್ವರೂಪ ಎಂಬ ಮಾತು ಇದೆ. ಈ ಅನ್ನಪೂರ್ಣೆ- (ಅನ್ನದಿಂದ ತುಂಬಿದ, ಅನ್ನದಿಂದ ಪೂರ್ಣಗೊಂಡ) ಅನ್ನದೇವತೆ, ಆಹಾರದ ದೇವತೆ, ಧಾನ್ಯದೇವತೆ- ಸೃಷ್ಟಿ, ಅದರ ಚಾಲನೆ ಮತ್ತು ಲಯಗಳ ಪ್ರತೀಕವಾದ ತ್ರಿಮೂರ್ತಿ ದೇವರುಗಳಾದ ಬ್ರಹ್ಮ ವಿಷ್ಣು, ಮಹೇಶ್ವರರಲ್ಲಿ ಕೊನೆಯವ ಮಹೇಶ್ವರನ ಅಂದರೆ ಶಿವನ ಹೆಂಡತಿ ಪಾರ್ವತಿಯ ಇನ್ನೊಂದು ಹೆಸರೂ ಹೌದು. ಅವಳು ಪಾರ್ವತಿಯ ಒಂದು ಅವತಾರ.

ಪೌರಾಣಿಕ ಕತೆಯೊಂದರ ಪ್ರಕಾರ, ಒಂದು ಬಾರಿ ಪತ್ನಿ ಪಾರ್ವತಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಪರಶಿವ 'ಆಹಾರ ಪದಾರ್ಥಗಳು ಸೇರಿದಂತೆ ವಿಶ್ವವೆಲ್ಲಾ ಕಣ್ಕಟ್ಟು, ಭ್ರಮೆ, ಮಾಯೆ' ಎಂದಾಗ ಸಕಲ ಚರಾಚರಗಳ, ಜಗತ್ತಿನ ಸಕಲ ವಸ್ತುಗಳ ದೈವಿಕ ತಾಯಿ ಎಂದು ಪೂಜೆಗೊಳ್ಳುವ ತಾಯಿ ಪಾರ್ವತಿಗೆ ಸಿಟ್ಟು ಬಂದು ಅವಳು ಯಾರ ಕಣ್ಣಿಗೂ ಗೋಚರಿಸದೇ ಮಾಯವಾಗುತ್ತಾಳೆ. 

ತಾಯಿಯ ಅನುಪಸ್ಥಿತಿಯಲ್ಲಿ ಕಾಲವು ಸ್ತಬ್ಧವಾದಾಗ ಜಗತ್ತು ಸಂಚಲನೆ ಇಲ್ಲದೇ ಸ್ಥಿರವಾಗಿ ನಿಲ್ಲುತ್ತದೆ. ಬರಡಾದ ಜಗತ್ತಿನಲ್ಲಿ ಮಾನವನೂ ಸೇರಿದಂತೆ ಸಕಲ ಪ್ರಾಣಿಪಕ್ಷಿಗಳು ಆಹಾರವನ್ನು ಕಾಣದೇ ಕಂಗಾಲಾಗುತ್ತಾರೆ. ಜಗತ್ತಿನ ಈ ಬವಣೆಯನ್ನು ಕಂಡು ಮನಕರಗಿದ ಮಹಾತಾಯಿ ಪಾರ್ವತಿ ಕಾಶಿಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಅಡುಗೆ ಮನೆ ಸಿದ್ಧವಾಗುತ್ತದೆ. ವಿಷಯ ತಿಳಿದ ಶಿವ ಅಲ್ಲಿಗೆ ಧಾವಿಸಿ ಬರುತ್ತಾನೆ. ಕಪಾಲವನ್ನು ಮುಂದೆ ಮಾಡಿ ಭಿಕ್ಷೆ ಬೇಡುತ್ತಾನೆ. ಲೌಕಿಕ ಜಗತ್ತು ಮಾಯೆಯಲ್ಲ ಎಂದು ಒಪ್ಪಿಕೊಳ್ಳುತ್ತಾನೆ. ಸಮಾಧಾನಗೊಂಡ ಪಾರ್ವತಿ ಪತಿ ಶಿವನಿಗೆ ತನ್ನ ಕೈಯಾರೆ ಉಣಬಡಿಸುತ್ತಾಳೆ. ಅಂದಿನಿಂದ ಪಾರ್ವತಿಗೆ ಅನ್ನಪೂರ್ಣೆ ಎಂಬ ಹೆಸರು ಪ್ರಾಪ್ತವಾಗುತ್ತದೆ. 

ಭಾರತೀಯ ಮೂಲದ ಅನ್ನಮ್ಮ (ಅನ್ನದ ತಾಯಿ- ಅನ್ನವನ್ನು ಕೊಡುವ ತಾಯಿ) ಎಂಬ ಹೆಸರು, ಯೇಸುಸ್ವಾಮಿಯ ಅಜ್ಜಿಯ ಹೆಸರು ಆನ್ ಅದು ಭಾರತೀಕರಣಗೊಂಡು ಕ್ರೈಸ್ತ ಜನಸಮುದಾಯಗಳಲ್ಲಿ ಅನ್ನಮ್ಮ ಆಗಿದೆ. ಈ ಹೆಸರು ಕ್ರೈಸ್ತರ ಅದರಲ್ಲೂ ಮುಖ್ಯವಾಗಿ ಕಥೋಲಿಕ ಕ್ರೈಸ್ತರಲ್ಲಿ ಪ್ರಮುಖ ಹೆಸರಾಗಿ ರೂಪತಾಳಿರುವ ಅದಕ್ಕೆ ಈಗ ಸುಮಾರು 250 ವರ್ಷಗಳ ಸಂಭ್ರಮ ಎಂದರೆ ತಪ್ಪಾಗದು. 

ಆಂಧ್ರಪ್ರದೇಶದ ಕ್ರೈಸ್ತರ ಆದಿ ತಾಯಿ ಅನ್ನಮ್ಮ:

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಹಳ್ಳಿಯೊಂದರ ಯುವತಿಯೊಬ್ಬಳು 'ಆನ್' ಎಂಬ ಹೆಸರು ತಳೆದು ಕ್ರೈಸ್ತಳಾಗಿ ಜ್ಞಾನಸ್ನಾನ ಪಡೆಯುತ್ತಾಳೆ. ಗುಂಟೂರು, ನೆಲ್ಲೂರು, ಚೆಂಗಲ್ ಪೇಟ್ ಜಿಲ್ಲೆಗಳಲ್ಲಿನ ಕಮ್ಮ ಜನಸಮುದಾಯದ ಬಹತೇಕ ಜನ ಕಥೋಲಿಕ ಕ್ರೈಸ್ತ ಧರ್ಮವನ್ನು ತಮ್ಮದನ್ನಾಗಿ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುವ ಈ ಮಹಿಳೆಯ ಜ್ಞಾನಸ್ನಾನದ ಪ್ರಕರಣದ ನಂತರದ ಮುಂದಿನ ದಾಖಲೆಗಳಲ್ಲಿ, ಅವಳನ್ನು ಅನ್ನಮ್ಮ ಎಂದು ಹೆಸರಿಸಲಾಗಿದೆ!

ಆ ಅನ್ನಮ್ಮಳ ಕುರಿತ ಈ ಪ್ರಕರಣದ ಮಾಹಿತಿ, ಸಿಕಂದರಾಬಾದ್‍ನಲ್ಲಿರುವ 'ದಿ ಜೆಸುಯಿಟ್ ಕರ್ನಾಟಕ್ ಮಿಷನ್ನಿನ ಆಂಧ್ರ ಜೆಸುಯಿಟರ ಪತ್ರಾಗಾರ (ಜೆಸುಯಿಟ್ ಆರ್ಕೈವಸ್ ಆಫ್ ಆಂಧ್ರ) ದಲ್ಲಿರುವ 'ಲೆಟರ್ಸ್ ಆಂಡ್ ಅದರ್ ರೈಟಿಂಗ್ಸ್ ಆಫ್ ದಿ ಮಿಷನರಿಸ್ ಹೂ ವರ್ಕಡ್ ಇನ್ ದಿ ಕರ್ನಾಟಕ್ ಕಿಂಗಡಂ' ಹೆಸರಿನಲ್ಲಿರುವ, ಪತ್ರದ ಸಂಖ್ಯೆ 296ರಲ್ಲಿ ದಾಖಲಾಗಿದೆ.

ಕ್ರಿಸ್ತಶಕ 1445ರ ಸುಮಾರು, ಸಂಗಮ ಮನೆತನಕ್ಕೆ ಸೇರಿದ್ದ ಇಮ್ಮಡಿ ದೇವರಾಯ ವಿಜಯನಗರ ಸಾಮ್ರಾಜ್ಯದ ಅಧಿಪತಿಯಾಗಿದ್ದ ಸಮಯದಲ್ಲಿ, ಅವನ ಆಸ್ಥಾನದಲ್ಲಿ ಒಬ್ಬ ಕ್ರೈಸ್ತ ಮಂತ್ರಿ (ದಿವಾನ) ಇದ್ದ ಎಂಬ ಲಿಖಿತ ಮಾಹಿತಿಗಳು ಲಭ್ಯವಿವೆ. ಆ ಮಂತ್ರಿಯನ್ನು ನಿಮೆಫೆಜಿರ್ ಎಂದು ಗುರುತಿಸಲಾಗುತ್ತದೆ. ಏಪ್ರಿಲ್‍ನಿಂದ ನವೆಂಬರ್‍ವರೆಗೂ ವಿಜಯನಗರ (ಹಂಪೆ)ದಲ್ಲಿ ತಂಗಿದ್ದ ಅಬಿರ್ ರಜಾಕ್ ಎಂಬ ಪ್ರವಾಸಿ ಈ ಮಾಹಿತಿಯನ್ನು ದಾಖಲಿಸಿದ್ದಾನೆಂದು ಜೆಸುಯಿಟ್ ಪಾದ್ರಿ ಎಚ್. ಹ್ಯೂಸ್ಟೆನ್ ಅವರ ಬರಹಗಳನ್ನು ಆಧರಿಸಿ ಫಾದರ್ ಐ ಅಂತಪ್ಪ ಅವರು, 2001ರಲ್ಲಿ ಪ್ರಕಟಗೊಂಡ ತಮ್ಮ ಉತ್ತರ ಕರ್ನಾಟಕದಲ್ಲಿ ಕ್ರೈಸ್ತ ಧರ್ಮದ ಉಗಮ (1800ಕ್ಕೂ ಹಿಂದೆ) ಪುಸ್ತಕದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದಾದ 60 ವರ್ಷಗಳ ನಂತರ 1505ರಲ್ಲಿ ಫ್ರಾನ್ಸಿಸ್ಕನ್ ಪಾದ್ರಿ, ಫಾದರ್ ಲೂಯಿ ದೆ ಸಾಲ್ವೆಡಾರ್ ಅವರು ಪೋರ್ಚುಗಲ್ ಅರಸನ ರಾಯಭಾರಿಯಾಗಿ ವಿಜಯನಗರಕ್ಕೆ ಭೇಟಿಕೊಟ್ಟ ನಂತರದಲ್ಲಿ ಕ್ರೈಸ್ತರ ಅಸ್ತಿತ್ವದ ಬಗ್ಗೆ ಅಧಿಕೃತ ಮಾಹಿತಿ ಸಿಗತೊಡಗುತ್ತದೆ. ಮುಂದೆ 1530ರಲ್ಲಿ ಭಾರತದ ನೆಲದಲ್ಲಿ ಕಾಲಿರಿಸಿದ ಇನ್ನೊಬ್ಬ ಫ್ರಾನ್ಸಿಸ್ಕನ್ ಪಾದ್ರಿ ಫಾದರ್ ಅಂತೋನಿಯೊ ಡಿ ಪಡ್ರೊ ಅವರ ಶ್ರಮದ ಫಲವಾಗಿ ವಿಜಯನಗರ ಅರಸರ ಆಡಳಿತದ ವ್ಯಾಪ್ತಿಗೆ ಸೇರಿದ್ದ ಪ್ರದೇಶಗಳಲ್ಲಿ ಹಾಗೂ ವಿಜಾಪುರದ ಇಬ್ರಾಹಿಂ ಆದಿಲ್ ಶಾಹಿಯ ( 1535-37) ಕಾಲದಲ್ಲಿ ಮುದಗಲ್ ಮತ್ತು ರಾಯಚೂರುಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕ್ರೈಸ್ತ ಧರ್ಮವನ್ನು ಅಪ್ಪಿಕೊಳ್ಳುತ್ತಾರೆ. ನಂತರ, 1542ರಲ್ಲಿ ಜೆಸುಯಿಟ್ ಸಭೆಯ ಪಾದ್ರಿಗಳು ವಿಜಯನಗರ ಅರಸರ ಆಡಳಿತದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 1652ರ ಹೊತ್ತಿಗೆ ಹೈದರಾಬಾದ್, ಗೊಲ್ಕೊಂಡ, ಮಚಲಿಪಟ್ನಂ, ನರಸಾಪುರ, ಬಿಮಲಿಪಟ್ಟಣಂ, ಶ್ರೀಕಾಕುಳಂಗಳಲ್ಲಿ ಚರ್ಚುಗಳನ್ನು ಕಟ್ಟಲಾಗುತ್ತದೆ.

ಆಂಧ್ರಪ್ರದೇಶದ ಕ್ರೈಸ್ತರ ಆದಿ ತಾಯಿ 'ಅನ್ನಮ್ಮ'ಳ ಪ್ರಭಾವ: 

ಕಳೆದ ಶತಮಾನದ 1929ರಲ್ಲಿ ಪ್ರಕಟಗೊಂಡ, ತಮ್ಮ 'ಹಿಸ್ಟರಿ ಆಫ್ ತೆಲುಗು ಕ್ರಿಶ್ಚಿಯನ್ಸ್' ಹೊತ್ತಿಗೆಯಲ್ಲಿ ಆರ್.ಸಿ.ಪೌಲ್ ಅವರು, ಜೆಸುಯಿಟ್ ಪಾದ್ರಿ ಕಾಲ್ಮೆಟ್ ಅವರು 1735ರ ಸಾಲಿನ ಸೆಪ್ಟೆಂಬರ್ ತಿಂಗಳ 17ನೇ ದಿನದಂದು ರೋಮ್‍ನಲ್ಲಿನ ತಮ್ಮ ಕೇಂದ್ರ ಕಚೇರಿಗೆ ಕಳುಹಿಸಿದ ವರದಿ ಪತ್ರಗಳನ್ನು ಆಧರಿಸಿ ಅನ್ನಮ್ಮಳ ಪ್ರಕರಣವನ್ನು ದಾಖಲಿಸಿದ್ದಾರೆ.

ಅದರ ಸಾರಾಂಶ ಹೀಗಿದೆ: ಇದು ಕಮ್ಮ ಸಮುದಾಯದ ವ್ಯಕಿಯೊಬ್ಬರು ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡ ಮೊದಲ ಪ್ರಕರಣ. ಕಾಕತೀಯ ಅರಸರ ಕಾಲದಿಂದಲೂ ತೆಲುಗು ಭಾಷಿಕ ಆಂಧ್ರಪ್ರದೇಶದಲ್ಲಿ ಕಮ್ಮ ಮತ್ತು ರೆಡ್ಡಿ ಸಮುದಾಯಗಳು ಬಹು ಪ್ರಭಾವಶಾಲಿಯಾದ ಸಮುದಾಯಗಳೆಂದು ಹೆಸರು ಮಾಡಿವೆ. ಗುಂಟೂರು ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿದ್ದ ಯುವತಿಯೊಬ್ಬಳು ಮಾಟದ ಪ್ರಭಾವಕ್ಕೆ ಒಳಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಳು. ಅವಳನ್ನು ಮದುವೆಯಾಗ ಬಯಸಿ ವಿಫಲನಾಗಿದ್ದ ಯುವಕನೊಬ್ಬ, ಅವಳು ಇನ್ನೊಬ್ಬರಿಗೆ ದಕ್ಕಬಾರದೆಂಬ ಉದ್ದೇಶದಿಂದ ಅವಳ ಮೇಲೆ ಮಾಟ ಮಾಡಿಸಿದ್ದನೆಂದು ಹೇಳಲಾಗುತ್ತದೆ. ಅವಳು ಪ್ರತಿ ರಾತ್ರಿಯನ್ನು ಮಾನಸಿಕ ಆಘಾತದಲ್ಲೇ ಕಳೆಯುತ್ತಿದ್ದಳು. ಅವಳ ಬದುಕು ಅತಂತ್ರವಾಗಿತ್ತು. ಅವಳ ಸಂಬಂಧಿಕರು, ತಮಗೆ ಪರಚಿತರಾದ ಮಾಟಗಾರರನ್ನು ಹುಡುಕಿ ಚಿಕಿತ್ಸೆ ಕೊಡಿಸಿದರು. ಅವಳ ಸಂಕಟ ಕಡಿಮೆಯಾಗಲಿಲ್ಲ. ಊರಲ್ಲಿನ ಪುರೋಹಿತರಲ್ಲಿ ಕಣಿ ಕೇಳಿಸಿದರೂ, ತಾಯಿತ ಕಟ್ಟಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅವಳು ಸುಮಾರು ಆರು ತಿಂಗಳು ಕಾಲ ನೋವು ಅನುಭವಿಸಿ ಬಸವಳಿದಿದ್ದಳು. ನಂತರ ಊರಿಗೆ ಬಂದ ಜೆಸುಯಿಟ್ ಪಾದ್ರಿಯ ಮುಂದೆ ತಂದು ನಿಲ್ಲಿಸಿದಾಗ, ಆ ಪಾದ್ರಿ ಅವಳನ್ನು ಸ್ವಸ್ಥಗೊಳಿಸುವ ಭರವಸೆ ಕೊಟ್ಟರು. ಅವಳು ಪೂರ್ಣ ಮನಸ್ಸಿನಿಂದ ಯೇಸುಸ್ವಾಮಿಯ ಧ್ಯಾನ ಮಾಡಿದಾಗ ಸ್ವಸ್ಥಳಾದಳು. ನಂತರ ಜ್ಞಾನಸ್ನಾನ ಪಡೆದು ಕ್ರೈಸ್ತಳಾದಾಗ, ಅವಳಿಗೆ ಯೇಸುಸ್ವಾಮಿಯ ಅಜ್ಜಿಯ ಹೆಸರನ್ನು ನೆನೆದು ಆನ್ ಎಂದು ನಾಮಕರಣ ಮಾಡಲಾಯಿತು. (ಸ್ಥಳೀಯರ ಬಾಯಲ್ಲಿ ಅದು ಅನ್ನ ಆಗಿ, ಈ ಮೊದಲೆ ಜನಪದರಲ್ಲಿದ್ದ ಅನ್ನಪೂರ್ಣೆ ಹೆಸರಿಗೆ ಹತ್ತಿರದ ಅನ್ನಮ್ಮ, ಕ್ರೈಸ್ತ ಜನಪದರ ಬಾಯಲ್ಲಿ 'ಅನ್ನಮ್ಮ' ಎಂದಾಗಿಬಿಟ್ಟಿರಬೇಕು.)

ಅನ್ನಮ್ಮ ಮಾಟದಿಂದ ಮುಕ್ತಳಾದ ಸಂಗತಿ ಕಾಳ್ಗಿಚ್ಚಿನಂತೆ ಸುತ್ತಲ ಊರುಗಳಲ್ಲಿ ಹರಡಿತು. ಕಮ್ಮ ಸಮುದಾಯವೇ ಪ್ರಧಾನವಾಗಿರುವ ಗುಂಟೂರು, ನೆಲ್ಲೂರು ಮತ್ತು ಚೆಂಗಲ್ ಪೇಟ್ ಜಿಲ್ಲೆಗಳಲ್ಲಿ ಕಮ್ಮ ಜನರು ಸಾರಾಸಗಟಾಗಿ ಕ್ರೈಸ್ತರಾಗಿ ಮತಾಂತರಗೊಂಡರು. ಈ ಜಿಲ್ಲೆಗಳಲ್ಲಿನ ಬಹುತೇಕ ಕ್ರೈಸ್ತ ಜನರು ತಮ್ಮ ಮೂಲವನ್ನು ಅನ್ನಮ್ಮಳ ಹೆಸರಿನೊಂದಿಗೆ ಜೋಡಿಸಿಕೊಳ್ಳುತ್ತಾರೆ. ಮತ್ತು ಅನ್ನಮ್ಮ ಎಂಬ ಹೆಸರು ಅಲ್ಲಿನ ಕ್ರೈಸ್ತರಲ್ಲಿ ಬಹು ಮೆಚ್ಚುಗೆಯ ಹೆಸರಾಗಿ ಬಳಕೆಗೆ ಬಂದಿತು. ಹದಿನೆಂಟನೇ ಶತಮಾನದಲ್ಲಿ ಕಮ್ಮ ಸಮುದಾಯದ ಬಹಳಷ್ಟು ಜನರು ಕ್ರೈಸ್ತ ಧರ್ಮವನ್ನು ಅಪ್ಪಿಕೊಳ್ಳಲು ಈ ಅನ್ನಮ್ಮಳ ಪ್ರಕರಣ ಕಾರಣವಾಗಿದೆ.

ಬ್ರಿಟಿಷರ ಕಾಲದ ಮದ್ರಾಸ್ ಪ್ರೆಸಿಡೆನ್ಸಿ ಇದ್ದಾಗ ಇದ್ದ ಗುಂಟೂರು ಮತ್ತು ನೆಲ್ಲೂರು ಜಿಲ್ಲೆಗಳು ಇಂದು ಆಂಧ್ರಪ್ರದೇಶಕ್ಕೆ ಸೇರಿದ್ದರೆ, ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿ ಕಾಲದಲ್ಲಿ ಜಿಲ್ಲಾಕೇಂದ್ರವಾಗಿದ್ದ ಚೆಂಗಲ್ ಪೇಟ್ ಇಂದು ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದೆ.

ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮ:

ಬೃಹತ್ ಬೆಂಗಳೂರಿನ ಭಾಗವಾಗಿರುವ ಬೇಗೂರಿನಲ್ಲಿ ದೊರೆತ ಶಾಸನವೊಂದರಲ್ಲಿ 9ನೇ ಶತಮಾನದ ಹೊತ್ತಿಗೆ ಬೆಂಗಳೂರು ಎಂಬ ಹೆಸರಿನ ಊರಿನ ಪ್ರಸ್ತಾಪವಿದೆ. ಮೊರಸುಗೌಡ ಸಮುದಾಯಕ್ಕೆ ಸೇರಿದ ಎಲಹಂಕ ಪ್ರದೇಶದಲ್ಲಿ ನೆಲೆಗೊಂಡು ಆಡಳಿತ ನಡೆಸುತ್ತಿದ್ದ ನೆಲಹಂಕ ನಾಡಪ್ರಭು ಕೆಂಪೇಗೌಡ ಎಂಬ ಪಾಳೆಗಾರ ಕ್ರಿಸ್ತಶಕ 1537ರಲ್ಲಿ ಬೆಂಗಳೂರು ಕೋಟೆ ಮತ್ತು ಬೆಂಗಳೂರು ಪೇಟೆಯನ್ನು ಕಟ್ಟಿಸಿದ. ವಿಜಯನಗರದ ಅರಸರ ಮಾಂಡಲೀಕನಾಗಿದ್ದ ಆತ ಯಲಹಂಕದಿಂದ ತನ್ನ ರಾಜಧಾನಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ. ಅವನ ಮಗನನ್ನು ಇಮ್ಮಡಿ ಕೆಂಪೇಗೌಡ ಎಂದು ಹೆಸರಿಸಲಾಗಿದೆ. ಈ ಪಾಳೆಗಾರರು ತಮ್ಮ ರಾಜಧಾನಿಯನ್ನು ಮುಂದೆ ಮಾಗಡಿಗೆ ಸ್ಥಳಾಂತರಿಸಿದರು. 1728ರಲ್ಲಿ ಮೈಸೂರು ಸಂಸ್ಥಾನದ ದಳವಾಯಿಗಳು ಅವರನ್ನು ಸೋಲಿಸಿ ಅವರ ವಶದಲ್ಲಿದ್ದ ಪ್ರದೇಶವನ್ನು ತಮ್ಮ ಸಂಸ್ಥಾನಕ್ಕೆ ಸೇರಿಸಿಕೊಳ್ಳುತ್ತಾರೆ. ಈ ನಡುವೆ ಸ್ವಲ್ಪ ಸಮಯ ಈ ಬೆಂಗಳೂರು ಪೇಟೆ ಮರಾಠರ ವಶದಲ್ಲೂ ಇತ್ತು. ಸಹಾಯಕ ಸೈನ್ಯ ಪದ್ಧತಿಯ ಅಡಿಯಲ್ಲಿ ಮೈಸೂರು ಸಂಸ್ಥಾನವನ್ನು ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದ ಬ್ರಿಟಿಷರು ಇಲ್ಲಿ ತಮ್ಮ ಸೇನಾ ನೆಲೆಯನ್ನು ಹೊಂದಿದ್ದರು. ಹಿಂದಿನ ಬೆಂಗಳೂರು ಪೇಟೆ ಇಂದು ಸುತ್ತಮುತ್ತಲ ನೂರಾರು ಹಳ್ಳಿಗಳನ್ನು ಆಪೋಷಣೆ ಮಾಡಿಕೊಂಡು ಬೃಹತ್ ನಗರವಾಗಿ ಬೆಳೆದುನಿಂತಿದೆ. ಕೃಷಿ ಕಸಬು ಇನ್ನಿಲ್ಲವಾದರೂ, ಹಳ್ಳಿಗಾಡಿನ ಗ್ರಾಮೀಣ ಜನಪದರ ನೆಲೆಗಳು ಇನ್ನೂ ಜೀವಂತವಾಗಿದ್ದು, ಗ್ರಾಮ ದೇವತೆಗಳೂ ಇನ್ನೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ.

ಬೆಂಗಳೂರಿನ ತುಂಬ ವಿವಿಧ ಪ್ರದೇಶಗಳಲ್ಲಿ ಅಣ್ಣಮ್ಮ ಹೆಸರಿನ ದೇವಸ್ಥಾನಗಳಿವೆ. ಆಯಾ ಗ್ರಾಮಗಳ ಜನ ಜಾನುವಾರುಗಳ ರಕ್ಷಣೆಯ ಭಾರ ಹೊತ್ತ ಗ್ರಾಮದೇವತೆಗಳು ಎಲ್ಲಾ ಗ್ರಾಮಗಳಲ್ಲೂ ಕಂಡು ಬರುತ್ತವೆ. ಕೆಲವು ಊರುಗಳು ಆಯಾ ಊರಲ್ಲಿನ ಗ್ರಾಮದೇವತೆಗಳ ಹೆಸರನ್ನು ಹೊತ್ತುಕೊಂಡಿರುವುದನ್ನು ಗಮನಿಸಬಹುದು. ಆದರೆ, ಬೆಂಗಳೂರಿಗೆ ಅಣ್ಣಮ್ಮ ಎಂಬ ಗ್ರಾಮದೇವತೆಗ ನಂಟು ಬೆಸೆದುಕೊಂಡಿದೆ. ಬೆಂಗಳೂರು ನಗರದ ಕೇಂದ್ರ ಪ್ರದೇಶ ಎಂದು ಗುರುತಿಸಲಾಗುವ ಕೆಂಪೇಗೌಡ ವೃತ್ತದ ಹತ್ತಿರ ಗ್ರಾಮದೇವತೆ ಅಣ್ಣಮ್ಮಳ ಪ್ರಧಾನ ಗುಡಿ ಇದೆ. ಆ ದೇವತೆ ಇಂದು ನಗರ ದೇವತೆಯಾಗಿ ಇಡೀ ನಗರವನ್ನು ಆವರಿಸಿಕೊಂಡಿದ್ದಾಳೆ. ಪ್ರತಿ ಬಡಾವಣೆಯಲ್ಲೂ ಅಣ್ಣಮ್ಮ ದೇವಿಯ ಉತ್ಸವ ನಡೆಯುತ್ತದೆ.

ಈ ಅಣ್ಣಮ್ಮ ದೇವಿಯ ಉಗಮದ ಕತೆ ಸ್ವಾರಸ್ಯಕರವಾಗಿದೆ. ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ಗಾಣಿಗ ಕುಟುಂಬವೊಂದರ ತಾತ ಮುತ್ತಾತನೊಬ್ಬ ಈ ಹಿಂದೆ ಕಾಡು ಪ್ರದೇಶವಾಗಿದ್ದ ಈ ಜಾಗದಲ್ಲಿ ಸಾಗುವಾಗ ಮಗುವೊಂದು ಅಳುವ ಶಬ್ದ ಕೇಳಿಸಿತು. ದೆವ್ವ ಇರಬಹುದೆಂದು ಮಾರ್ಗ ಬದಲಿಸಿ ಹೊರಟಾಗ ಕನಸಲ್ಲಿ ಕಾಣಿಸಿಕೊಂಡ ದೇವಿ 'ನಾನು ದೆವ್ವವಲ್ಲ. ನಾನು ಮಣ್ಣಲ್ಲಿ ಹೂತು ಹೋಗಿರುವೆ. ನನ್ನನ್ನು ಹೊರ ತೆಗೆದು ಪೂಜೆ ಮಾಡು' ಎಂದಳಂತೆ. ದೇವಿ ಸೂಚಿಸಿದ ಜಾಗದಲ್ಲಿ ಅಗೆದಾಗ ದೇವಿಯ ಮೂರ್ತಿ ಕಾಣಿಸಿತು. ಅದನ್ನು ಅಲ್ಲಿಯೇ ಬೇವಿನ ಮರದ ಕೆಳಗೆ ಪ್ರತಿಷ್ಠಾಪಿಸಿ ಪೂಜೆ ಮಾಡಲು ಆರಂಭಿಸಿದರಂತೆ. ಮುಂದೆ ಕೆಂಪೇಗೌಡರ ಕಾಲದಲ್ಲಿ ಈಗಿನ ಸ್ಥಳಕ್ಕೆ ಗುಡಿ ಸ್ಥಳಾಂತರಗೊಂಡಿತಂತೆ. ಇನ್ನೊಂದು ಐತಿಹ್ಯದ ಪ್ರಕಾರ, ಒಂದು ಅಜ್ಜಿ ಈ ಮೊದಲು ಈ ದೇವಸ್ಥಾನದ ಜಾಗದ ಮುಂದಿದ್ದ ಬೇವಿನ ಮರದ ಬುಡದಲ್ಲಿ ಒಂದು ಕಲ್ಲನ್ನಿಟ್ಟು ಪೂಜೆ ಮಾಡುತ್ತಿದ್ದಳಂತೆ. ನಿಧಾನವಾಗಿ ಅದಕ್ಕೆ ಅಣ್ಣಮ್ಮ ಎಂಬ ಹೆಸರು ಬಂದಿತು. ಅಜ್ಜಿ ಕಾಲವಾದ ಮೇಲೆ ಒಂದು ಗಾಣಿಗರ ಕುಟುಂಬವೊಂದು ಬಂದು ಅದನ್ನು ತಮ್ಮ ದೇವತೆ ಎಂದು ಪೂಜಿಸಲಾರಂಭಿಸಿದರಂತೆ. ನಂತರ ಅಲ್ಲಿಂದ ಈಗಿನ ಸ್ಥಳಕ್ಕೆ ಅದು ಸ್ಥಳಾಂತರಗೊಂಡಿತು. ಮುಂದೆ ಕೆಂಪೇಗೌಡರ ಕಾಲಕ್ಕೆ ದೇವಸ್ಥಾನ ಅಸ್ತಿತ್ವಕ್ಕೆ ಬಂದಿತು. ಇಂದಿಗೂ ಆ ಗಾಣಿಗರ ಕುಟುಂಬದವರು ತಲೆಮಾರಿನಿಂದ ಈ ದೇವತೆಯ ಪೂಜಾರಿಗಳಾಗುತ್ತಾ, ದೇವಾಲಯದ ಆಡಳಿತವನ್ನು ನೋಡಿಕೊಂಡು ಬರುತ್ತಿದ್ದಾರೆ.

ಈ ಉಗಮದ ಐತಿಹ್ಯದಲ್ಲಿರುವ ಸತ್ಯಾಸತ್ಯತೆಗಳನ್ನು ಕಂಡು ಹಿಡಿಯುವುದು ಕಷ್ಟವಾದರೂ, ಅಣ್ಣಮ್ಮನ ದೇವಸ್ಥಾನ ಮೊದಲಿಂದ ವ್ಯಾಪಾರ ಅಥವಾ ಇನ್ನಾವುದೋ ತಿರುಗಾಟದಲ್ಲಿದ್ದ ಕುಟುಂಬವೊಂದರ ಆಸಕ್ತಿಯ ಪರಿಣಾಮವಾಗಿ ಸ್ಥಾಪಿಸಲ್ಪಟ್ಟು ಆ ಕುಟುಂಬವು ಅಲ್ಲೇ ನೆಲೆ ನಿಲ್ಲಲು ಕಾರಣವಾಯಿತು ಎಂದಷ್ಟನ್ನಂತೂ ತಿಳಿಯಬಹುದು. ಒಟ್ಟಾರೆ ಖಾಸಗಿ ಆಡಳಿತದಲ್ಲೇ ಇರುವ ಈ ದೇವಸ್ಥಾನಕ್ಕೆ ದೇಶದ ಎಲ್ಲೆಡೆಯಿಂದ ಜನ ಬರುತ್ತಾರೆ. ಈ ದೇವತೆಯ ಕುರಿತು ಜನರಲ್ಲಿ ಒಂದು ರೀತಿಯ ಭಯವೇ ಇದೆಯಂತೆ. ಏಕೆಂದರೆ, ಇದು ಶಕ್ತಿ ದೇವತೆ. ಈಕೆಯ ಮಹಿಮೆಯ ಸ್ವರೂಪ ಹೀಗಿದೆ: ಈ ದೇವತೆ 'ತಂದು ಹಾಕುವ' ಕೆಲಸವನ್ನು ಮಾಡುತ್ತದೆ. ಅಂದರೆ, ಮಕ್ಕಳಿಗೆ ಸಿಡುಬು, ಅಮ್ಮ- ಇಂಥವನ್ನು ತರುವುದ ಈ ದೇವತೆಯೇ. ಆಗ ಜನ ಅಣ್ಣಮ್ಮನ ಬಳಿ ಬರುತ್ತಾರೆ. ಹರಕೆ ಮಾಡಿಕೊಳ್ಳುತ್ತಾರೆ. ಕಾಯಿಲೆ ವಾಸಿಯಾಗುತ್ತದೆ. ಜನ ಭಕ್ತಿಯಿಂದ ಹರಕೆ ತೀರಿಸುತ್ತಾರೆ ಎಂದು ಆರ್. ಎ. ಪುಷ್ಪಭಾರತಿ ಅವರು ತಮ್ಮ 'ನಗರ ಹಳ್ಳಿಗಳ ನಡುವೆ ಬೆಂಗಳೂರು' (2006) ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಬೆಂಗಳೂರಿನ ಗ್ರಾಮ ದೇವತೆ ಎಂದು ಗುರುತಿಸುವ ದೇವತೆಯ ಹೆಸರು ಅಣ್ಣಮ್ಮ. ಈ ಅಣ್ಣಮ್ಮಳ ಹೆಸರಿನ ಮೂಲ ಏನಿರಬಹುದು? 'ಅಣ್ಣ' ಎಂದರೆ ಹಿರಿಯ ಸಹೋದರ, ಗಂಡಸರನ್ನು ಪ್ರೀತಿಯಿಂದ ಅಥವಾ ಗೌರವದಿಂದ ಸಂಬೋಧಿಸುವ ಪದ ಎಂಬುದು ಶಬ್ದಕೋಶಗಳು ಕೊಡುವ ವಿವರಣೆ. 'ಅಣ್ಣ' ಎಂಬ ನಾಮಪದವಿದ್ದಂತೆ 'ಅಣ್ಣಿ' ಎಂಬ ನಾಮಪದವೂ ಉಂಟು. 'ಅಣ್ಣಿ' ಎಂದರೆ, ಹೆಂಗಸರನ್ನು ಪ್ರೀತಿಯಿಂದ ಕರೆಯುವಾಗ ಉಪಯೋಗಿಸುವ ಮಾತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟು ವಿವರಿಸಿದೆ.

ಇವಲ್ಲದೇ, 'ಅಣ್ಣಲೇ' ಎಂದರೆ ಅರಸ, ರಾಜ, ದೊರೆ ಎಂಬ ಅರ್ಥವಿದೆ. ಮತ್ತು 'ಅಣ್ಣನೆ' ಪದಕ್ಕೆ ಹಿತವಾಗಿ, ಬಹಳವಾಗಿ ಎಂಬ ಅರ್ಥಗಳಿವೆ. ಈ ಹಿನ್ನೆಲೆಯಲ್ಲಿ, ಹಿತವನ್ನು ತರುವ ದೇವತೆ, ನಮ್ಮ ರಾಣಿ, ದೊರೆಸಾನಿ ಎಂಬುದನ್ನು ಹೇಳಲು ಬೆಂಗಳೂರಿನ ಜನಪದರು ತಮ್ಮ ಜನಪದ ದೈವಕ್ಕೆ 'ಅಣ್ಣಮ್ಮ' ಎಂಬ ಹೆಸರನ್ನಿಟ್ಟಿರಬಹುದು. ಪುಷ್ಪಭಾರತಿ ಅವರು, 'ಮಕ್ಕಳಿಗೆ ಸಿಡುಬು, ಅಮ್ಮ ಮುಂತಾದವನ್ನು ತಂದು ಹಾಕುವ ದೇವತೆ ಅಣ್ಣಮ್ಮ ಹರಕೆ ಹೊತ್ತ ನಂತರ ಅವನ್ನು ನಿವಾರಿಸುವಳು' ಎಂದು ದಾಖಲಿಸಿದ್ದಾರೆ. ಹರಕೆ ಹೊತ್ತ ಜನಪದರ ಆಸೆಯಂತೆ ಮಕ್ಕಳ ಕಾಯಿಲೆಗಳನ್ನು ಗುಣಪಡಿಸುವ ಈ ದೇವತೆ ಶರಣು ಬರುವ ಭಕ್ತರಿಗೆ ಹಿತವನ್ನೇ ತರುವ ದೇವತೆಯಲ್ಲವೆ? ಹೀಗಾಗಿ ಜನಪದರು ಈ ದೈವಕ್ಕೆ ಅಣ್ಣಮ್ಮ ಎಂದು ಹೆಸರಿಸಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿ ಬೆಟ್ಟದ ಅನ್ನಮ್ಮ: 

ಈಗ ಅನ್ನಮ್ಮ ಕ್ರೈಸ್ತ ಜನಪದರಲ್ಲಿ ಧಾರಾಳವಾಗಿ ಬಳಕೆಯಲ್ಲಿರುವ ಹೆಸರು. ಸಂತ ಪದವಿ ಪಡೆದ ಯೇಸುಸ್ವಾಮಿಯ ಅಜ್ಜಿ, ಮಾತೆ ಮರಿಯಳ ತಾಯಿ 'ಸೆಂಟ್ ಆನ್', ಭಾರತೀಯ ಜಾಯಮಾನಕ್ಕೆ ಒಗ್ಗಿಕೊಂಡು ಕ್ರೆಸ್ತ ಜನಪದರ ಬಾಯಲ್ಲಿ ಸಂತ ಅನ್ನಮ್ಮ ಆಗಿದ್ದಾರೆ. ಬೆಂಗಳೂರಿನ ಒಡಲು ಸೇರಿರುವ ಉತ್ತರಹಳ್ಳಿಯ ಅನ್ನಮ್ಮ ದುರಂತದ ಸಾವು ಕಂಡ ಒಬ್ಬ ಸಾಧ್ವಿ ಕ್ರೈಸ್ತ ಮಹಿಳೆ. ಅವಳು ಸಾವಿಗೆ ಕಾರಣವಾಗುವ, ನಂತರ ಆಕೆ ಸ್ಥಳೀಯ ಕ್ರೈಸ್ತ ಜನಪದರ ಸಂತಳಾಗುವ ಪರಿಯನ್ನು ವಿವರಿಸುವ ಹಲವು ಐತಿಹ್ಯಗಳು ಸಿಗುತ್ತವೆ.

ಬೆಂಗಳೂರಿನ ಉತ್ತರಹಳ್ಳಿ ಬೆಟ್ಟದ ಅನ್ನಮ್ಮ ಒಂದೊಂದು ಐತಿಹ್ಯಗಳಲ್ಲಿ ಒಂದೊಂದು ಬಗೆಯಲ್ಲಿ ಸೈನಿಕರನ್ನು ಗುರುತಿಸಲಾಗಿದೆ. ಒಂದರಲ್ಲಿ, ಸಾಧ್ವಿ ಅನ್ನಮ್ಮಳ ಮೇಲೆ ಅತ್ಯಾಚಾರ ಎಸಗಲು ಮುಂದಾದವರು ಮೈಸೂರು ಸಂಸ್ಥಾನದ ಸುಬೇದಾರ ನಂತರ ಮೈಸೂರು ಅರಸರನ್ನು ಸೆರೆಮೆನೆಯಲ್ಲಿಟ್ಟು ಹೈದರ್ ಅಲಿ ಸೇನೆಯ ಸೈನಿಕರು ಎಂದು ಬಣ್ಣಿಸಲಾಗಿದೆ. ಇನ್ನೊಂದರಲ್ಲಿ ಹೈದರ್ ಅಲಿಯ ಮಗ ಟಿಪ್ಪು ಸುಲ್ತಾನನ ಸೈನಿಕರು ಸಾಧ್ವಿ ಅನ್ನಮ್ಮಳ ಮೇಲೆರಗಲು ಹವಣಿಸಿದ್ದರು ಎಂದು ಹೇಳಲಾಗುತ್ತದೆ. ಮಗದೊಂದು ಐತಿಹ್ಯದಲ್ಲಿ, ಮೋಜಿಗಾಗಿ ಬೆಟ್ಟಕ್ಕೆ ಬಂದಿದ್ದ ಬ್ರಿಟಿಷ್ ಸೇನಾಪಡೆಯ ಸೈನಿಕರು ಸಾಧ್ವಿ ಅನ್ನಮ್ಮಳ ಮೇಲೆ ಕಣ್ಣುಹಾಕಿ ಬೆನ್ನಟ್ಟಿದ್ದರು ಎಂದು ವಿವರಿಸಲಾಗುತ್ತದೆ. ತನ್ನ ಶೀಲ ರಕ್ಷಣೆಗಾಗಿ, ಸಾಧ್ವಿ ಅನ್ನಮ್ಮ ಈ ಸೈನಿಕರಿಂದ ತಪ್ಪಸಿಕೊಳ್ಳುವ ಸಲುವಾಗಿ ಬೆಟ್ಟ ಹತ್ತಿ ಮೇಲಿನಿಂದ ಕೆಳಗೆ ಹಾರಿ ಪ್ರಾಣಬಿಟ್ಟಳು ಎಂದು ಈ ಐತಿಹ್ಯಗಳು ಸಾರುತ್ತವೆ. ಹೈದರ್ ಅಲಿಯು 1749 ರಿಂದ 1782ರವರಗೆ ಮೈಸೂರು ಸಂಸ್ಥಾನದ ಚುಕ್ಕಾಣಿ ಹಿಡಿದಿದ್ದರೆ, ಅವನ ಮಗ ಟಿಪ್ಪು ಸುಲ್ತಾನ 1782ರಿಂದ 1799ರವರೆಗೆ ಮೈಸೂರು ಸಂಸ್ಥಾನದ ಸುಲ್ತಾನನಾಗಿ ಮೆರೆದಿದ್ದ. ಬ್ರಿಟಿಷರು ಟಿಪ್ಪು ಸುಲ್ತಾನನ ಕಾಲದಲ್ಲಿಯೇ ಬೆಂಗಳೂರು ಮತ್ತು ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವಿದ್ಯಮಾನದ ಹಿನ್ನೆಲೆಯಲ್ಲಿ ನೋಡುವುದಾದರೆ, ಆ ಸಮಯದಲ್ಲಿ 'ಅನ್ನಮ್ಮ' ಎಂಬ ಹೆಸರು ಕ್ರೈಸ್ತ ಜನಪದರಲ್ಲಿ ಬಳಕೆಗೆ ಬಂದು ಸಾಕಷ್ಟು ಸಮಯ ಸಂದಿರಬೇಕು.

ಈ ಉತ್ತರಹಳ್ಳಿ ಬೆಟ್ಟದ ಅನ್ನಮ್ಮ ಬೆಂಗಳೂರು ಕ್ರೈಸ್ತರ ಗ್ರಾಮದೈವವೆಂದು ಹೇಳಬಹುದು. ಈ ದೈವದ ಪ್ರಭಾವವನ್ನು ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲೂ ಗುರುತಿಸಬಹುದು. ಉತ್ತರಹಳ್ಳಿ ಬೆಟ್ಟದ ಅನ್ನಮ್ಮಳ ಕುರಿತು ಇಲ್ಲಿನ ಜನಪದರು ಹಾಡುಗಳನ್ನು ಕಟ್ಟಿದ್ದಾರೆ. ಮದುವೆ ಮನೆಯ ಹಸೆಮಣೆಯ ಕಾರ‍್ಯ ಇತ್ಯಾದಿ ವಿಧಿಯಾಚರಣೆಗಳ ಸಂದರ್ಭಗಳಲ್ಲಿ ಉತ್ತರಹಳ್ಳಿ ಬೆಟ್ಟದ ಅನ್ನಮ್ಮಳನ್ನು ಸ್ಮರಿಸಲಾಗುತ್ತದೆ. ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ಆ ಬೆಟ್ಟದಲ್ಲಿ ಶಿಲುಬೆಯಾತ್ರೆ ನಡೆದಾಗ ನೆರೆಯುವ ಜನರಿಂದ ಅಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿರುತ್ತದೆ.

ಅನ್ನಮ್ಮ ಎಂಬಾಕೆ ಒಬ್ಬಳು ಪುಣ್ಯ ಸ್ತ್ರೀ ಎಂದೂ, ಉತ್ತರಹಳ್ಳಿ ಬುಡದಲ್ಲಿ ಒಂದು ಚಿಕ್ಕ ಮಂಟಪ ಕಟ್ಟಿಕೊಂಡು ತ್ಯಾಗದ ಜೀವನ ಮಾಡಿ ಅಲ್ಲಿಯೇ ಸತ್ತು ಸಮಾಧಿಯಾಗಿ ಕ್ರೈಸ್ತ ಭಕ್ತರ ಹರಕೆಗಳನ್ನು ಕೇಳಿ ವರದಾನ ಮಾಡುತ್ತಾ ಬಂದಿರುವಳೆಂದು ಚರಿತ್ರೆ ತಿಳಿಸುತ್ತದೆ ಎಂಬಿತ್ಯಾದಿ... ಹೇಳಿಕೆಗಳನ್ನು ಇತ್ತೀಚೆಗೆ ಕರಪತ್ರಗಳಲ್ಲಿ ಪ್ರಕಟಿಸಿ ಹಂಚುವುದುಂಟು. ಆ ಕಾಲದ ಜನ ಈಕೆಯ ಬಳಿಗೆ ಬಂದು ಮಳೆಗೋಸ್ಕರ ದೇವರಲ್ಲಿ ಪ್ರಾರ್ಥಿಸುತ್ತಿದ್ದರೆಂದು ಹೇಳುತ್ತಾರೆ. ಈ ಒಂದು ಕಾರಣದಿಂದ ಬೆಂಗಳೂರು ನಗರದ ಅಧಿದೇವತೆ 'ಅನ್ನಮ್ಮ ದೇವಿ'ಯ ಪ್ರತಿರೂಪವನ್ನು ಇವಳಲ್ಲಿ ಕಂಡ ಕ್ರೈಸ್ತರು ಅನ್ನಮ್ಮ ಬೆಟ್ಟದಲ್ಲಿ ಜಾತ್ರೆ ನಡೆಸಿ ಕ್ರಿಸ್ತೀಯ ಅಂಶಗಳನ್ನು ಅಳವಡಿಸಿಕೊಂಡಿರಬಹುದೆಂಬ ವಿಚಾರವನನ್ನು ಸುಲಭವಾಗಿ ಅಲ್ಲ ಗಳೆಯುವಂತಿಲ್ಲ. ಏಕೆಂದರೆ, ಬೆಂಗಳೂರಿನ ನಾಗರಿಕರು ಮಳೆಗಾಗಿ ಪ್ರತಿಯೊಂದು ಮೊಹಲ್ಲಾಗಳಲ್ಲೂ 'ಅನ್ನಮ್ಮ ದೇವಿ'ಯನ್ನು ಪೂಜಿಸುವ ರೂಢಿ ಇಂದಿಗೂ ಪ್ರಚಲಿತದಲ್ಲಿದೆ. ಈ ನಾಡಿನ ನೆಲದ ಸಂಸ್ಕೃತಿ ಹೇಗೆ ಕ್ರೈಸ್ತರಲ್ಲಿ ಸುಸಂಸ್ಕೃತೀಕರಣ (Inculturation)ವಾಗಿ ಮಾರ್ಪಡುತ್ತದೆ ಎಂಬುದಕ್ಕೆ ಪ್ರಾಯಶಃ ಇದೊಂದು ಒಳ್ಳೆಯ ಉದಾಹರಣೆಯಾಗಬಹುದು ಎಂಬುದು 'ಕನ್ನಡ ಕ್ರೈಸ್ತರು ಮತ್ತು ಜಾತ್ರೆಗಳು' ಪುಸ್ತಕದಲ್ಲಿ ಕ್ರೈಸ್ತ ಲೇಖಕ, ಜಾನಪದ ವಿದ್ವಾಂಸ ಡಾ.ಬಿ.ಎಸ್.ತಲ್ವಾಡಿ ಅವರು ವ್ಯಕ್ತಪಡಿಸಿದ ಅಭಿಪ್ರಾಯ.

ಬೆಂಗಳೂರು ಮಹಾಧರ್ಮಕ್ಷೇತ್ರದ ಆಂಧ್ರದ ನಂಟು:

ಬೆಂಗಳೂರು ಧರ್ಮಕ್ಷೇತ್ರದ ಇತಿಹಾಸ ಕ್ರಿಸ್ತಶಕ 1886 ರಿಂದ ಆರಂಭವಾಗುತ್ತದೆ. ಇಂದು ಪುದುಚೇರಿ ಎಂದು ಕರೆಯಲಾಗುವ ಪಾಂಡಿಚೆರಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಫ್ರೆಂಚ್ ಪಾದ್ರಿಗಳ ಪ್ಯಾರಿಸ್ ಫಾರಿನ್ ಮಿಷನ್ ಸೊಸೈಟಿಯು, 1773ರಲ್ಲಿ ಯೇಸುಸಭೆಯನ್ನು ಸ್ಥಗಿತಗೊಳಿಸಿದ ನಂತರದಲ್ಲಿ ಬಹುತೇಕ ದಕ್ಷಿಣ ಭಾರತದ ಕಥೋಲಿಕ ಕ್ರೈಸ್ತರ ಆಧ್ಯಾತ್ಮಿಕ ಆಗುಹೋಗುಗಳ ನಿರ್ವಹಣೆ ಮಾಡುತ್ತಿತ್ತು. ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಯ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಬಹುತೇಕ ಭಾಗವನ್ನು ಕರ್ನಾಟಕ ಮಿಷನ್ ಎಂಬ ಹೆಸರಿನಲ್ಲಿಯೇ ಗುರುತಿಸಲಾಗುತ್ತಿತ್ತು. ಹಳೆಯ ಮದ್ರಾಸ್ ಪ್ರಾಂತ್ಯದ ಮಧುರೈ ಸುತ್ತಮುತ್ತಲ ಪ್ರದೇಶವನ್ನು ಮಧುರೈ ಮಿಷನ್ ನೋಡಿಕೊಳ್ಳುತ್ತಿತ್ತು. ಕೇರಳದಲ್ಲಿನ ಮಿಷನ್ ಅನ್ನು ಮಲಬಾರ್ ಮಿಷನ್ ಎಂದು ಕರೆಯಲಾಗುತ್ತಿತ್ತು. 

ಮುಂದೆ 1854ರಲ್ಲಿ ಮೈಸೂರು ಮಿಷನ್‍ಅನ್ನು ರಚಿಸಲಾಯಿತು. ಮೈಸೂರು ಸಂಸ್ಥಾನದ ದೆಸೆಯಿಂದ ಮೈಸೂರು ಮಿಷನ್ ಎಂದು ಕರೆಯಲಾಗುತ್ತಿತ್ತು. ಆದರೆ, ಆಗ ಈ ಮಿಷನ್‍ನ ಪ್ರಧಾನ ಕಚೇರಿ ಬೆಂಗಳೂರಿನಲ್ಲಿಯೇ ಇತ್ತು. ಮುಂದೆ 1886ರಲ್ಲಿ ಕನ್ನಡ ಮನೆಮಾತಿನ ಪ್ರದೇಶಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ, ಊಟಿ ಮೊದಲಾದ ಪ್ರದೇಶಗಳ ವ್ಯಾಪ್ತಿಯ ಮೈಸೂರು ಮಿಷನ್ ಅನ್ನು ಮೈಸೂರು ಧರ್ಮಕ್ಷೇತ್ರವೆಂದು ಘೋಷಿಸಲಾಯಿತು. ನಂತರ 1940ರಲ್ಲಿ, ಮೈಸೂರು ಧರ್ಮಕ್ಷೇತ್ರದಿಂದ ಬೆಂಗಳೂರನ್ನು ಬಿಡಿಸಿ ಬೆಂಗಳೂರು ಧರ್ಮಕ್ಷೇತ್ರವನ್ನು ರಚಿಸಲಾಯಿತು. ಇಷ್ಟಾದ ನಂತರ 1942ರಲ್ಲಿ ಬೆಂಗಳೂರು ಧರ್ಮಕ್ಷೇತ್ರದ ಇತಿಹಾಸಲ್ಲಿ ಪ್ರಥಮ ಬಾರಿ ಭಾರತೀಯರೊಬ್ಬರು ಮೇತ್ರಾಣಿಗಳಾಗಿ (ಬಿಷಪ್) ಅಭಿಷಿಕ್ತರಾಗುತ್ತಾರೆ. ಹೀಗೆ ಬೆಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ (ಬಿಷಪ್) ಪೀಠವನ್ನು ಅಲಂಕರಿಸಿದವರ ಹೆಸರು ಅತಿ.ವಂ.ಡಾ.ತೋಮಸ್ ಪೊತ್ತಕಮೂರಿ. ಈ ಪೊತ್ತಕಮೂರಿ ಎಂಬುದು ಅವರ ಮನೆತನದ ಹೆಸರು. ಅವರ ಹುಟ್ಟೂರು ಗುಂಟೂರು ಜಿಲ್ಲೆಯ ರಾವಿಪದವು. ಈ ಗುಂಟೂರು ಜಿಲ್ಲೆ, ಆಂಧ್ರಪ್ರದೇಶದ ಕ್ರೈಸ್ತರ ಆದಿ ತಾಯಿ ಅನ್ನಮ್ಮಳ ಪ್ರಭಾವ ವಲಯಕ್ಕೆ ಸೇರಿದ ಜಿಲ್ಲೆ ಎಂಬುದನ್ನು ಮರೆಯಲಾಗದು.

ಅತಿ. ವಂ. ಡಾ. ತೋಮಸ್ ಪೊತ್ತಕಮೂರಿ ಅವರ ಜೀವನ ಗಾಥೆ:

ಗುಂಟೂರು ಜಿಲ್ಲೆಯ ರಾವಿಪದವು ಗ್ರಾಮದಲ್ಲಿನ ಪರಮ ದೈವಭಕ್ತ ಕಥೋಲಿಕ ಕ್ರೈಸ್ತರ ತುಂಬು ಕುಟುಂಬವೊಂದರಲ್ಲಿ 1889ರ ಸಾಲಿನ ಸೆಪ್ಟೆಂಬರ್ 2 ರಂದು ತೋಮಾಸ್ ಪೊತ್ತಕಮೂರಿ ಅವರ ಜನನವಾಯಿತು. ಅವರು, ತಮ್ಮ ಪ್ರಾಥಮಿಕ ಹಂತದ ಶಿಕ್ಷಣದ ನಂತರ, ದೈವ ಕರೆಯಂತೆ ಗುರುಗಳಾಗಲು ಬಯಸಿ ಆ ಕಾಲದಲ್ಲಿ ಬರ್ಮಾ, ಭಾರತ ಉಪಖಂಡ ಮತ್ತು ಶ್ರೀಲಂಕಾದ ವ್ಯಾಪ್ತಿ ಹೊಂದಿದ್ದ ಮಧ್ಯ ಶ್ರೀಲಂಕಾದ ಕ್ಯಾಂಡಿ ಸಮೀಪದ ಅಂಪಿತಿಯ ಎಂಬ ಸ್ಥಳದಲ್ಲಿ 1893ರಲ್ಲಿ ಸ್ಥಾಪಿತವಾಗಿದ್ದ ಪೋಪರ ಗುರುಮಠ (ಪೇಪಲ್ ಸೆಮಿನರಿ)ವನ್ನು ಸೇರಿದರು. ಮುಂದೆ ಸ್ವಾತಂತ್ರ್ಯದ ನಂತರ, ಕ್ಯಾಂಡಿಯಲ್ಲಿನ ಗುರುಮಠವನ್ನು ವಿಭಜಿಸಿ, ಭಾರತೀಯ ಮೂಲದ ಗುರು ತರಬೇತಿ (ಸೆಮಿನರಿ)ಮಠವನ್ನು 1955ರಲ್ಲಿ ಮಹಾರಾಷ್ಟ್ರದ ಪುಣೆ ಪಟ್ಟಣಕ್ಕೆ ಸ್ಥಳಾಂತರಿಸಲಾಯಿತು.

ದೈವಶಾಸ್ತರದ ಓದು ಹಾಗೂ ಯಾಜಕ ತರಬೇತಿಯ ನಂತರ ಪೊತ್ತಕಮೂರಿ ಅವರು, 1916ರ ಸಾಲಿನ ಡಿಸೆಂಬರ್ ತಿಂಗಳ 17ರಂದು ಯಾಜಕ ದೀಕ್ಷೆ (ಗುರುದೀಕ್ಷೆ) ಪಡೆದರು. ಸುಮಾರು 24 ವರ್ಷಗಳ ಕಾಲ ವಿವಿಧ ಕಡೆಗಳಲ್ಲಿ ಯಾಜಕರಾಗಿ ಸಮರ್ಥ ಸೇವೆ ಸಲ್ಲಿಸಿ, ಜನಮನ್ನಣೆ ಗಳಿಸಿದ ಅವರು, 1940ರ ಸೆಪ್ಟೆಂಬರ್ 19ರಂದು, ನೂತನವಾಗಿ ಅಸ್ತಿತ್ವಕ್ಕೆ ಬಂದ ಗುಂಟೂರು ಧರ್ಮಕ್ಷೇತ್ರದ (ಡಯಾಸೆಸ್) ಮೇತ್ರಾಣಿ (ಧರ್ಮಾಧ್ಯಕ್ಷ)ಯಾಗಿ ಅಭಿಷಿಕ್ತರಾದರು. ನಂತರ ಎರಡು ವರ್ಷಗಳು ಕಳೆಯುವಷ್ಟರಲ್ಲಿ 1942ರ ಅಕ್ಟೋಬರ್ 15ರಂದು ಅವರನ್ನು ಬೆಂಗಳೂರು ಧರ್ಮಕ್ಷೇತ್ರದ ಮೇತ್ರಾಣಿಗಳಾಗಿ ನೇಮಕ ಮಾಡಲಾಯಿತು. 1943ರ ಜನವರಿ 31ರಂದು ಅವರು ಬೆಂಗಳೂರು ಧರ್ಮಕ್ಷೇತ್ರದ ಮೇತ್ರಾಣಿಗಳಾಗಿ ಅಭಿಷಿಕ್ತರಾದರು.

ಇಂದಿನಂತೆ ಭಾಷಾವಾರು ಪ್ರಾಂತ್ಯಗಳಿಲ್ಲದ ಸ್ವಾತಂತ್ರ್ಯ ಪೂರ್ವದ ಆ ಕಾಲದಲ್ಲಿ ಮೇತ್ರಾಣಿಗಳಿಗೆ ಇಂತಹ ರಾಜ್ಯ, ಪ್ರಾಂತ್ಯಗಳಲ್ಲಿಯೇ ಸೇವೆ ಸಲ್ಲಿಸಬೇಕೆಂಬ ಕಟ್ಟುಪಾಡುಗಳಿರಲಿಲ್ಲ. ಶ್ರೀಲಂಕಾದ ಗುರು ಕೋಲ್ಕತ್ತಾ ಧರ್ಮಕ್ಷೇತ್ರದ ಮೇತ್ರಾಣಿ ಆಗಬಹುದಿತ್ತು. ಮೈಸೂರು ಮತ್ತು ಕರ್ನಾಟಿಕ್ ಮಿಷನ್ ಪ್ರದೇಶಗಳಲ್ಲಿ ಸಕಲ ಪೂಜಾವಿಧಿಗಳು ಧರ್ಮಸಭೆಯ ಅಧಿಕೃತ ಭಾಷೆಯಾದ ಲ್ಯಾಟಿನ್‍ನಲ್ಲಿ ನಡೆಯುತ್ತಿದ್ದವು. ಪೂಜಾವಿಧಿಗಳಲ್ಲಿ ಹಾಡುವ ಹಾಡುಗಳನ್ನು ಎಂ.ಇ.ಪಿ. ಫ್ರೆಂಚ್ ಗುರುಗಳ ಪ್ರಭಾವದ ದೆಸೆಯಿಂದ ಫ್ರೆಂಚ್ ರಾಗಗಳಲ್ಲಿ ಹಾಡಲಾಗುತ್ತಿತ್ತು.

ಮುಂದೆ, 1952 ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿನ ವಿವಿಧ ಧರ್ಮಕ್ಷೇತ್ರಗಳನ್ನು ವಿಂಗಡಿಸಿ ಹೊಸ ಧರ್ಮಕ್ಷೇತ್ರಗಳನ್ನು ರಚಿಸಲಾಯಿತು. ಆಗ ಬೆಂಗಳೂರು ಧರ್ಮಕ್ಷೇತ್ರವನ್ನು ಮಹಾಧರ್ಮಕ್ಷೇತ್ರವೆಂದು (ಆರ್ಚ ಡಯಾಸೆಸ್) ಮೇಲ್ದರ್ಜೆಗೆ ಏರಿಸಲಾಯಿತು. ಈ ಹಿನ್ನೆಲೆಯಲ್ಲಿ, ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರ ಸ್ಥಾನವೂ ಧರ್ಮಾಧ್ಯಕ್ಷ ಪದವಿಯಿಂದ ಮಹಾಧರ್ಮಾಧ್ಯಕ್ಷ ಪದವಿಗೆ ಉನ್ನತೀಕರಣಗೊಂಡಿತು. ಪೊತ್ತಕಮೂರಿ ಅವರು, 1953ರ ಸೆಪ್ಟೆಂಬರ್ 19ರಂದು ಬೆಂಗಳೂರು ಮಹಾಧರ್ಮಕ್ಷೇತ್ರದ ಮೊದಲ ಮಹಾಧರ್ಮಾಧ್ಯಕ್ಷರೆಂಬ ಮನ್ನಣೆಗೂ ಪಾತ್ರರಾದರು. 

ಅಂದಿನ ಮೈಸೂರು, ಮಂಗಳೂರು, ಬಳ್ಳಾರಿ ಮತ್ತು ಊಟಿ ಮೊದಲಾದ ಪ್ರದೇಶಗಳು ಬೆಂಗಳೂರು ಮಹಾಧರ್ಮಕ್ಷೇತ್ರದ ಅಧಿಕಾರ ವ್ಯಾಪ್ತಿಗೆ ಸೇರಿದ್ದವು. ಇಂದು ಕರ್ನಾಟಕ ರಾಜ್ಯದಲ್ಲಿ ಹಲವಾರು ಕಥೋಲಿಕ ಕ್ರೈಸ್ತ ಧರ್ಮಕ್ಷೇತ್ರಗಳು ಅಸ್ತಿತ್ವದಲ್ಲಿದ್ದು, ಬೆಂಗಳೂರು ಮಹಾಧರ್ಮಾಧ್ಯಕ್ಷರ ಮಹಾಧರ್ಮಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳು ಸೇರಿವೆ.

ಐವತ್ತು ವರ್ಷದ ಸಾರ್ಥಕ ಸ್ಮರಣೆಯ ಕಾರ‍್ಯಗಳು ನಡೆಯಬೇಕಿವೆ:

ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು ಸುಮಾರು 27 ವರ್ಷಗಳ ಕಾಲ ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿದ್ದರು. ಇಷ್ಟು ಸುದೀರ್ಘವಾದ ಅವರ ಅಧಿಕಾರದ ಕಾಲದಲ್ಲಿ, ಅವರ ಅಪಾರ ಆಸಕ್ತಿ ಮತ್ತು ಶ್ರಮದ ಫಲವಾಗಿ, ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು, ಶಾಲೆ ಕಾಲೇಜುಗಳು, ಬಡವರಿಗೆ ಉಚಿತ ವಸತಿ ನಿಲಯಗಳು, ಕನ್ಯಾಮಠ (ಕಾನ್ವೆಂಟ್)ಗಳು, ಧಾರ್ಮಿಕ ಸೋದರ-ಸೋದರಿಯರ ಸಭೆಗಳು, ಗುರುಮಠಗಳು ನೆಲೆಗೊಂಡವು. ಆಸ್ಪತ್ರೆಗಳು ಆರಂಭಗೊಂಡು ಕ್ರೈಸ್ತ ಪರಿಸರವನ್ನು ಅಭಿವೃದ್ಧಿಪಡಿಸಿದವು. ಒಟ್ಟು ಸಮಾಜದಲ್ಲಿ ಕ್ರೈಸ್ತರ ಇರುವನ್ನು ಸಾರ್ಥಕವಾಗಿ ನೆಲೆಗೊಳಿಸಿದರು.

ಬೆಂಗಳೂರಿನ ಪ್ರತಿಷ್ಠಿತ ಸೆಂಟ್ ಜಾನ್ ವೈದ್ಯಕೀಯ ಕಾಲೇಜು ಸ್ಥಾಪನೆಯಲ್ಲಿ ಅವರು ಕೈಗೊಂಡ ಕ್ರಮಗಳು ಇಂದಿಗೂ ಸ್ಮರಣೀಯ. ಅವರು ಅನೇಕ ಚರ್ಚು ಕಟ್ಟಡಗಳನ್ನು ಕಟ್ಟಿಸಿದರು. ಅವರ ಅವಧಿಯಲ್ಲಿಯೇ ಸುಂದರವಾದ ಕಲ್ಲುಕಟ್ಟಡದ ಸಂತ ಫ್ರಾನ್ಸಿಸ್ ಜೇವಿಯರ್ ಪ್ರಧಾನಾಲಯವು 1948ರ ಜನವರಿ 24 ರಂದು ಲೋಕಾರ್ಪಣೆಗೊಂಡಿತು.

ಕಳೆದ ಶತಮಾನದಲ್ಲಿ ಅಂದರೆ 1944ರ ಸೆಪ್ಟೆಂಬರ್ ತಿಂಗಳಲ್ಲಿ ಮದ್ರಾಸಿನಲ್ಲಿ ಅಂದರೆ ಇಂದಿನ ಚೆನೈ ಪಟ್ಟಣದಲ್ಲಿ ಭಾರತೀಯ ಕಥೋಲಿಕ ಧರ್ಮಾಧ್ಯಕ್ಷ(ಬಿಷಪ್)ರ ಸಮ್ಮೇಳನವು (ಸಿಬಿಸಿಐ) ರಚನೆಗೊಂಡಿತು. ಬೆಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು ಅದರ ಮೊತ್ತ ಮೊದಲ ಚುನಾಯಿತ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದರು. ಅವರ ನಾಯಕತ್ವದ ಗುಣದ ಕಾರಣ, ಮುಂದೆ 1950 ಮತ್ತು 1954ರಲ್ಲೂ ಮತ್ತೆ ಅವರು ಚುನಾಯಿತಗೊಂಡಿದ್ದರು. ಈ ಸಿಬಿಸಿಐ ಕಚೇರಿಯು 1962ರವರೆಗೂ ಬೆಂಗಳೂರಿನಲ್ಲಿಯೇ ಇತ್ತು. ನಂತರ ಕಾರಣಾಂತರಗಳಿಂದ ಅದನ್ನು ನವದೆಹಲಿಗೆ ಸ್ಥಳಾಂತರಿಸಲಾಯಿತು.

ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರಿಂದ ಪತ್ರಿಕಾ ಕ್ಷೇತ್ರಕ್ಕೂ ಸಾಕಷ್ಟು ಸೇವೆ ಸಂದಿದೆ. ಮದ್ರಾಸ್ ನಿಂದ ಈಗಲೂ ಬೆಳಕು ಕಾಣುತ್ತಿರುವ 'ನ್ಯೂ ಲೀಡರ್' ಪತ್ರಿಕೆಯ ಸಂಪಾದಕರಾಗಿ ಕಾರ‍್ಯನಿರ್ವಹಿಸಿದ್ದಾರೆ. ಕಾಲಕಾಲಕ್ಕೆ ಆ ಪತ್ರಿಕೆಯಲ್ಲಿ ಸಾಮಾಜಿಕ, ಧಾರ್ಮಿಕ ವಿಚಾರಗಳ ಕುರಿತು ಪ್ರಬುದ್ಧ ಲೇಖನಗಳನ್ನು ಬರೆದು ತಾವೊಬ್ಬ ಪ್ರಮುಖ ಕ್ರೈಸ್ತ ಲೇಖಕ ಎಂಬುದನ್ನು ತೋರಿಸಿಕೊಟ್ಟಿದ್ದರು. ಸ್ವತಂತ್ರ ಭಾರತದಲ್ಲಿ ಧರ್ಮಸಭೆ (ದಿ ಚರ್ಚ್ ಇನ್ ಇಂಡಿಪೆಂಡೆಂಟ್ ಇಂಡಿಯಾ) ಎಂಬ ಕೃತಿಯೊಂದನ್ನು ಅವರು ರಚಿಸಿದ್ದಾರೆ. 

ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು 1967ರಲ್ಲಿ ಅತಿ.ವಂ.ಲೂರ್ದುಸಾಮಿ ಅವರಿಗೆ ಅಧಿಕಾರ ವಹಿಸಿಕೊಟ್ಟು ನಿವೃತ್ತರಾದರು. ನಿವೃತ್ತರಾದ ಮರುವರ್ಷವೇ 1968ರ ಜನವರಿ 11ರಂದು ಯೇಸುಪಾದ ಸೇರಿದರು ಎಂದು ಆಂಧ್ರಪ್ರದೇಶದ ಮೂಲದ ಮಾಹಿತಿಗಳು ತಿಳಿಸುತ್ತವೆ. ಆದರೆ ಬೆಂಗಳೂರು ಧರ್ಮಕ್ಷೇತ್ರದ ಮಾಹಿತಿಗಳಲ್ಲಿ ಈ ದಿನಾಂಕವನ್ನು 18-5-1968 ಎಂದು ದಾಖಲಿಸಲಾಗಿದೆ. ಅವರ ಪಾರ್ಥಿವ ಶರೀರವನ್ನು ಬೆಂಗಳೂರು ಮಹಾಧರ್ಮಕ್ಷೇತ್ರದ ಪಾಲಕ ಸಂತ, ಸಂತ ಫ್ರಾನ್ಸಿಸ್ ಜೇವಿಯರ್ ಅವರ ಹೆಸರಿನ ಪ್ರಧಾನಾಲಯದಲ್ಲಿ ಭೂಸ್ಥಾಪನೆ ಮಾಡಲಾಗಿದೆ. ಪ್ರಸಕ್ತ 2019ನೇ ವರ್ಷ ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು, ತೀರಿಕೊಂಡ ನಂತರದ ಐವತ್ತು ವಸಂತಗಳನ್ನು ಗುರುತಿಸುವ ವರ್ಷ. ಈ ವರ್ಷ ಅವರ ಸಾರ್ಥಕ ಸೇವೆಯ ಸ್ಮರಣೆಯಲ್ಲಿ ಹತ್ತುಹಲವು ಸಂಭ್ರಮಾಚರಣೆಗಳು ನಡೆಯಬೇಕಿವೆ


ರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ನಿಲ್ಲದ ನಂಟು:

ಬೆಂಗಳೂರು ಮಹಾಧರ್ಮಕ್ಷೇತ್ರ ಮತ್ತು ಆಂಧ್ರ ಪ್ರದೇಶದ ನಂಟು, ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರೊಂದಿಗೆ ಆರಂಭವಾಗಿ ಅವರೊಂದಿಗೆಯೇ ಕೊನೆಗೊಳ್ಳುವುದಿಲ್ಲ. 1945ರ ಡಿಸೆಂಬರ್ 20ರಂದು ಪೊತ್ತಕಮೂರಿ ಅವರಿಂದ ಯಾಜಕಾಭಿಷೇಕ ಪಟ್ಟವನ್ನು ಪಡೆದ ಬೆಂಗಳೂರು ಜಿಲ್ಲೆಯ ಆನೆಕಲ್ಲಿನ ವಂದನೀಯ ಗುರು ಜೋಸೆಫ್ ರಾಜಪ್ಪ ಅವರು, 1967ರಲ್ಲಿ ಕರ್ನೂಲಿನ ಧರ್ಮಾಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಅಲ್ಲಿದ್ದ ಅವರನ್ನು ಅವರ 70ರ ವಯಸ್ಸಿನಲ್ಲಿ (1988ರಲ್ಲಿ) ಕಮ್ಮಂ ಧರ್ಮಕ್ಷೇತ್ರಕ್ಕೆ ವರ್ಗಾಯಿಸಲಾಗುತ್ತದೆ. ಅಲ್ಲಿ ಅವರು 1989ರ ಡಿಸೆಂಬರ್ 27ರಂದು ನಿಧನರಾಗಿ ಕ್ರಿಸ್ತಲೋಕ ಸೇರುತ್ತಾರೆ. 

ಇಂದಿಗೂ ಕರ್ನಾಟಕ ಮತ್ತು ಆಂಧ್ರದ ನಂಟು ಮುಂದುವರಿದಿದ್ದು ಸಾಕಷ್ಟು ಸಂಖ್ಯೆಯ ಕನ್ನಡದ ಗುರುಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮತ್ತೆ ಅದೇ ಬಗೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಗುರುಗಳು ಕರ್ನಾಟಕದ ವಿವಿಧ ಧರ್ಮಕ್ಷೇತ್ರಗಳಲ್ಲಿ ಕಾರ‍್ಯನಿರ್ವಹಿಸುತ್ತಿರುವುದನ್ನು ಕಾಣಬಹುದು. 
¨ ಫ್ರಾನ್ಸಿಸ್ ಎಂ. ನಂದಗಾವ



●●●



ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...