Wednesday, 9 October 2019

ನೀನೇ ಮೌನಜಂಗಮನು

ನೂರು ಗೌಜು - ಗದ್ದಲಗಳ
ಸಾವಿರ ವಾದ - ವಾಗ್ವಾದಗಳ
ನಡುವೆಯೂ
ನಿನ್ನ ಮೆದುನಡಿಗೆಯ ನೆರಳು
ಹೊರಟಿದೆ ಮೂಕಮೆರವಣಿಗೆ
ಶಬುದ ನಾದದ ಹೆಸರ ತೊರೆದು
ನುಡಿದ ನಿನ್ನುಡಿಗೆ
ಮಿಡಿದ ನಿನ್ನುಸಿರಿಗೆ
ಅಪಾರ್ಥದ ವಿಪರೀತ ಅರ್ಥಗಳು
ಬಸುರ ತುಂಬ ವಿಷವ ಹೊತ್ತು
ಹೊಂಕರಿಸುವ ನೆಲದ ರಣಹದ್ದುಗಳು

ನಿನ್ನ ಧರ್ಮದ ಬಲವು ಅಧ್ಯಾತ್ಮದ ಒಲವು
ಕಳಚಿಬಿದ್ದ ಗಳಿಗೆ ಬಯಲ ತುಂಬಾ
ಕಂಪಿಸುವ ಶೋಕತಪ್ತ ಮಳೆದುಂಬಿಗಳು

ನೀ ಕಲಿಸಿದ ಜೀವನದ ಶುಚಿಯು
ಬದುಕಿನ ರುಚಿಯು
ಗುಡಿಸಿ ಹಾಕಿದೆ
ಬೀದಿ ಕೇರಿಯ ಕೊಚ್ಚೆ ಕೊಳೆಯನು
ನೀ ನಿವೃತ್ತನಾದರೂ
ಶತಮಾನದ ಅನುಮಾನಕ್ಕೆ
ತುತ್ತಾದರೂ
ನಿಜಪ್ರೇಮದ ಹಾಡಿಯಲಿ
ನಡೆಯುತ್ತಲೇ ಇರುವೆ
ಕೋಲು ಹಿಡಿದು ಬಾಗಿದ ಬೆನ್ನು
ಇನ್ನೆಂದೂ ಮುಖ ತೋರಿಸಲಾರೆ
ಎಷ್ಟೇ ಅಂದರೂ
ಬೆನ್ನು ಬಿಡರು ದುಂದುಮಾರರು
ಏನಾದರೂ
ನೀನೇ ಮೌನಜಂಗಮನು
ನೊಂದವರಿಗೂ
ನಿನ್ನ ಕೊಂದವರಿಗೂ


ಡಾ. ದಿನೇಶ್ ನಾಯಕ್


“ ಸಾಮತಿ, ಇದೊಂದು ವಿಶಿಷ್ಟ ಸಾಹಿತ್ಯ ಪ್ರಕಾರ ”


ಪ್ರೀತಿಯ ಅನು… 

ಕತೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ನೈತಿಕತೆಯ ಬಗ್ಗೆ ತಿಳಿಸಲು ಬದುಕಿನ ಅಮೂಲ್ಯ ಪಾಠಗಳ ಬಗ್ಗೆ ತಿಳಿ ಹೇಳಲು, ತಪ್ಪುದಾರಿ ಹಿಡಿದ ನಮ್ಮನ್ನು ತಿದ್ದಲು ಘನವಾದ ಸತ್ಯವನ್ನು, ತಲೆಬುಡ ಅರ್ಥವಾಗದೆ ತಲೆ ತಿನ್ನುವ ಪಾಠಗಳನ್ನು ಸಲೀಸಾಗಿಸಲು, ನಮ್ಮ ಹಿರಿಯರು, ಕಿರಿಯರು, ಉಪನ್ಯಾಸಕರು, ಪ್ರವಾಚಕರು ಧಾರಾಳವಾಗಿ ಉಪಯೋಗಿಸುತ್ತಿದ್ದ ಮಾಧ್ಯಮವೆಂದರೆ ಕತೆಗಳು. ತಮಗೆ ಲಭಿಸಿದ ಲೋಕಜ್ಞಾನ, ವ್ಯಾವಹಾರಿಕ ಜಾಣ್ಮೆ ಬದುಕಿನ ಅನುಭವಗಳು, ಗ್ರಹಿಕೆಗೆ ನಿಲುಕದ ಸತ್ಯಗಳು ಹೀಗೆ ಅನೇಕವುಗಳನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ರವಾನಿಸಲು ಕಥೆಗಳು ಒಂದು ಉತ್ತಮ ಮಾಧ್ಯಮವಾಯಿತೆಂಬುದು ಎಲ್ಲರ ಸರ್ವಾನುಮತದ ಅಭಿಪ್ರಾಯ. 

ಶತಮಾನಗಳ ಇತಿಹಾಸ ಹೊಂದಿರುವ ಹರಿಕಥೆ ಎಂಬ ಪ್ರಕಾರವು ಇಂದಿಗೂ ಜನಪ್ರಿಯತೆಯ ಮಾಧ್ಯಮವಾಗಿ ಉಳಿದುಕೊಂಡಿರುವುದು ಈ ಕಾರಣದಿಂದಲೇ. ನಾವು ನಮ್ಮ ತಂದೆ ತಾಯಿ, ಅಜ್ಜ ಅಜ್ಜಿಯವರ ಬಳಿ ಕಾಡಿ ಬೇಡುತ್ತಿದ್ದು ಕತೆಗಳಿಗಾಗಿಯೇ. ಊಟವನ್ನು ಮಾಡಲು ಚಂಡಿ ಹಿಡಿಯುತ್ತಿದ್ದ ನಮಗೆ ಊಟ ಉಣಿಸಲು, ಅಥವಾ ಮಲಗದೆ ಹಟ ಮಾಡುತ್ತಿದ್ದ ನಮ್ಮನ್ನು ನಿದ್ರಾದೇವಿಗೆ ಶರಣಾಗಿಸಲು ತಾಯಂದಿರು ಕಂಡುಕೊಂಡಿದ್ದ ಅನೇಕ ಉಪಾಯಗಳಲ್ಲಿ ಕತೆ ಹೇಳುವುದು ಒಂದು. ಇಂದು ನಮಗೆ ಗೊತ್ತು, ನಮ್ಮ ಕಲ್ಪನಾಶಕ್ತಿ, ಸೃಜನಶೀಲತೆಯನ್ನು ಜಾಗೃತಗೊಳಿಸಿ ಭಾವ ಪ್ರಪಂಚವನ್ನು ಅರಳಿಸಿ, ನಮ್ಮ ಗ್ರಹಣಶಕ್ತಿಯನ್ನು ಹೆಚ್ಚಿಸಿದ್ದು ಈ ಕತೆಗಳೇ. ನನ್ನ ಬಾಲ್ಯದಲ್ಲಿ ಕೇಳಿದ ಹತ್ತಾರು ಕತೆಗಳಲ್ಲಿ ಕ್ರಿಸ್ತನ ಸಾಮತಿಗಳದೇ ಸಿಂಹಪಾಲು. ದುಂದುಗಾರಮಗ, ಸದಯಸಮಾರಿತ ... ಹೀಗೆ ಅನೇಕ ಸಾಮತಿಗಳನ್ನು ನನ್ನ ಉಪಾಧ್ಯಾಯರು, ಊರಿನ ಕನ್ಯಾಸ್ತ್ರೀಯರು ಮತ್ತು ಧರ್ಮಗುರುಗಳಿಂದ ಕೇಳಿದ ನೆನಪು. ಆ ಸಾಮತಿಗಳ ಗುಂಗೇ ಇಂದು ಈ ಕಾಗದ ಬರೆಸಿದ್ದು. 

ಬದುಕಿನ ಸತ್ಯವನ್ನು ತಿಳಿಸಲು ಕ್ರಿಸ್ತ ಸಾಮತಿಗಳನ್ನು ಹೇಳಿದ. ಸಾಮಾನ್ಯ ಜನರಿಗೆ ಪರಿಚಯವಿದ್ದ ರೂಪಕಗಳನ್ನು ಬಳಸಿಕೊಂಡು ಹೇಳಿದ ಅವನ ಕತೆಗಳಲ್ಲಿ ಸೃಜನಾತ್ಮಕತೆ ಇತ್ತು, ಜನಸಾಮಾನ್ಯರಿಗೆ ಬಹುಬೇಗ ತಲುಪುವ ಸರಳತೆ ಅವುಗಳಿಗಿತ್ತು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ ಸಾಮತಿಗಳು ಎಲ್ಲ ಕಾಲಕ್ಕೂ ಅನ್ವಯವಾಗುವಂತಹ, ಹಳಸದ ಕಾಲಾತೀತ ಸತ್ಯವನ್ನು ಹೇಳುವುದರಿಂದ ಅವುಗಳ ಪ್ರಸ್ತುತತೆ ಪ್ರಶ್ನಾತೀತ. ಇತ್ತೀಚಿನ ದಿನಗಳಲ್ಲಂತೂ, ಕ್ರಿಸ್ತನ ಸಾಮತಿಗಳು ನಾಟಕ, ಗೀತ ರೂಪಗಳನ್ನು ಪಡೆದುಕೊಂಡು ಜನಜನಿತವಾಗಿದೆ. ಇಂತಹ ಸಾಮತಿಗಳ ಒಳ ಹೊಕ್ಕು ಅದರ ಅಂತಃಸತ್ವವನ್ನು ಕಂಡುಕೊಂಡಾಗ ಮಾತ್ರ ಕ್ರಿಸ್ತನು ಈ ಸಾಮತಿಗಳನ್ನು ಯಾತಕ್ಕಾಗಿ, ಯಾವ ಸಂದರ್ಭದಲ್ಲಿ ಹೇಳಿದ ಎಂಬ ಅರಿವು ನಮ್ಮದಾಗುವುದರ ಜತೆಗೆ ನಮ್ಮ ಪ್ರಸ್ತುತ ಬದುಕಿಗೆ ಪಾಠಗಳಾಗುತ್ತವೆ. 

ಸಾಮತಿ, ಇದೊಂದು ವಿಶಿಷ್ಠ ಸಾಹಿತ್ಯ ಪ್ರಕಾರ. ಇದು ಆಧ್ಯಾತ್ಮಿಕ ಸಂಕೇತಗಳನ್ನೊಳಗೊಂಡ ಒಂದು ಲೌಕಿಕ ಕತೆ. ಇವು ಧಾರ್ಮಿಕ ಸತ್ಯಗಳನ್ನು ವರ್ಣಿಸುವ ನೀತಿಕತೆಗಳು. ಇದರಲ್ಲಿ ಬರುವ ಒಂದೊಂದು ಅಂಶಕ್ಕೂ ಒಂದೊಂದು ಅರ್ಥವಿರದೆ, ಇಡೀ ಕತೆಗೆ ಒಂದೇ ಅರ್ಥವಿರುತ್ತದೆ. ಅಂದರೆ ಸಾಮತಿಗಳು ಒಂದೇ ಒಂದು ವಿಷಯವನ್ನು ಅಥವಾ ಪಾಠವನ್ನು ಬಲವಾಗಿ ಸ್ಪಷ್ಟಪಡಿಸುತ್ತವೆ. ಉದಾ: ಸದಯ ಸಮಾರಿತ ಎಂಬ ಸಾಮತಿ. ವಾಸ್ತವಿಕವಾಗಿ ಸದಯ ಸಮಾರಿತ ಎಂಬುದು ಅನುಕರಣೀಯ ಸಾಮತಿ. ನಿಜವಾದ ’ನೆರೆಯವ’ನನ್ನು ಸ್ಪಷ್ಟಪಡಿಸಿ, ಹೋಗು, ನೀನೂ ಹಾಗೆಯೇ ಮಾಡು ಎಂದು ಅಮರ ಜೀವವನ್ನು ಪಡೆಯಲು ದಾರಿ ತೋರಿಸುವ ಸಾಮತಿ. ಕಷ್ಟದಲ್ಲಿರುವವರೆಲ್ಲಾ ನಮ್ಮ ನೆರೆಯವರು, ಅಂತವರಿಗೆ ನಾವು ಸಹಾಯ ಹಸ್ತವನ್ನು ಚಾಚುವುದರ ಮೂಲಕ ನಾವು ಕೂಡ ಒಳ್ಳೆಯ ನೆರೆಯವರಾಗುತ್ತೇವೆ ಎಂಬುದು ಸಾಮತಿ ಸ್ಪಷ್ಟಪಡಿಸುವ ಸತ್ಯ. 

ಸಾರ್ವತ್ರಿಕ ಮೌಲ್ಯ: ಸಾಮತಿಗಳು ಸಾಂಸ್ಕೃತಿಕ ಎಲ್ಲೆಗಳನ್ನು ಮೀರುವ ಒಂದು ಪ್ರಕಾರ. ಸಾಮತಿಯ ಮೂಲ ಭಾಷೆ, ಕೇಳುಗರು, ಹೇಳಿದ ಸಮಯ ಸಂದರ್ಭ ಬದಲಾದರೂ ಅವುಗಳ ಸಂದೇಶ ಸಾರ್ವತ್ರಿಕ ಏಕೆಂದರೆ ಸಾರ್ವತ್ರಿಕ ಮೌಲ್ಯ ಅವುಗಳಲ್ಲಿವೆ. ಆ ಮೌಲ್ಯಗಳು ಕಾಲ, ಭಾಷೆ, ಜಾತಿ, ವರ್ಗ, ಕುಲಗೋತ್ರಗಳೆನ್ನದೆ ಎಲ್ಲರಿಗೂ ಅನ್ವಯಿಸುವಂತವು. ಈ ಸಾಮತಿಯಲ್ಲಿ ಬರುವ ವ್ಯಕ್ತಿಗಳು ಸಾಂಸ್ಕೃತಿಕ ಅಥವಾ ಇತಿಹಾಸ ಪುರುಷರಲ್ಲ, ಅವರು ಮಾನವನ ಇತಿಹಾಸದ ಪ್ರತಿರೂಪಗಳು. ಆದ್ದರಿಂದ ದುಂದುಗಾರ ಮಗ, ಸಮಾರಿತ ಎಂಬ ವ್ಯಕ್ತಿಗಳು ಇಂದಿಗೂ ನಮ್ಮಲ್ಲಿ ಕಾಣಸಿಗುವ ಪಾತ್ರಗಳೇ. ಕ್ಷಮೆ, ದಯೆ, ಇಂದಿಗೂ ಮನುಷ್ಯನಿಗೆ ಬೇಕಾಗಿರುವಂತಹ ಮೌಲ್ಯಗಳೇ. 

ಕಾಲಾತೀತ: ಸಾಮತಿಗಳ ಪ್ರಸ್ತುತತೆಯ ಬಗ್ಗೆ ಎರಡು ಮಾತಿಲ್ಲ. ಅವುಗಳ ವಸ್ತುವಿಷಯಗಳು ಮಾನವನ ಮೂಲಭೂತ ಮತ್ತು ಆಧ್ಯಾತ್ಮಿಕ ಪ್ರಶ್ನೆಗಳಿಗೆ ಸಂಬಂಧಿಸಿದ್ದರಿಂದ, ಅವು ಕಾಲಾತೀತ. ನಾವು ಯಾರು? ಸಾವೆಂದರೇನು? ಸಾವು ಏಕೆ? ಶತಮಾನಗಳಿಂದ ಕಾಡಿಕೊಂಡು ಬಂದ ಪ್ರಶ್ನೆಗಳು ಇಂದು ನಮ್ಮನ್ನು ಕಾಡುತ್ತಿವೆ ಮತ್ತು ನಮ್ಮ ಮುಂದಿನವರನ್ನು ಕಾಡುತ್ತವೆ. ಸಾಮತಿಗಳು ಇಂತಹ ಮೂಲಭೂತ ಪ್ರಶ್ನೆಗಳ ಬಗ್ಗೆ ಬೆಳಕು ಚೆಲ್ಲುವುದರಿಂದ ಅವು ಕಾಲಾತೀತ. 

ಸಾಂಕೇತಿಕ: ಸಾಮತಿಗಳು ಸಾಂಕೇತಿಕ. ಅವು ಮೌಖಿಕ ಸಂಭಾಷಣೆಗಳಿಂದ ಬಂಧಿತವಾಗಿಲ್ಲ. ಇವು ಒಂದು ರೀತಿಯ ಪದರಹಿತ ಸಂವಹನ. ಶಬ್ಧಗಳಿಲ್ಲದೆ ಸಾಮತಿಗಳನ್ನು ಜನರಿಗೆ ತಿಳಿಸಬಹುದು. ಅದ್ದರಿಂದಲೇ ಸಾಮತಿಗಳು ಮೂಕಾಭಿನಯ, ನಟನೆ, ಚಿತ್ರಕಲೆ, ಹಾಡು ಮತ್ತು ನೃತ್ಯಗಳಿಗೆ ಒಗ್ಗಿ ಹೋಗಿವೆ. ಇನ್ನೊಂದು ಕಡೆ, ಅವು ಸಾಂಕೇತಿಕವಾದ್ದರಿಂದ ಅವುಗಳನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸಿಕೊಳ್ಳಬಹುದು. ಆದರೆ ಈ ವ್ಯಾಖ್ಯಾನಗಳು ಸಾಮತಿಯ ಮೂಲ ಉದ್ದೇಶದ ಗೆರೆ ದಾಟಬಾರದಷ್ಟೆ. 

ಬದಲಾವಣೆಯ ಕಿಡಿ: ಸಾಮತಿಗಳು ಅಸ್ತಿತ್ವದಲ್ಲಿರುವ ವರ್ಗ, ಸಾಮಾಜಿಕ ವ್ಯವಸ್ಥೆ, ಮೌಲ್ಯ ವ್ಯವಸ್ಥೆಗಳನ್ನು ಬುಡಮೇಲು ಮಾಡುತ್ತವೆ. ಅನ್ಯಾಯದ ವ್ಯವಸ್ಥೆಯ ಪಾಲುದಾರರಾದ ನಮ್ಮನ್ನು ಗಲಿಬಿಲಿಗೊಳಿಸುತ್ತವೆ. ಸಮಾಜದಲ್ಲಿ ಆಗುವ ಅನ್ಯಾಯ, ದಬ್ಬಾಳಿಕೆ, ಶೋಷಣೆಗಳನ್ನು ಎತ್ತಿ ತೋರಿಸುತ್ತಾ ಅವುಗಳ ವಿನಾಶಕ್ಕೆ ಕರೆ ನೀಡುತ್ತಾ, ಮನುಷ್ಯನಲ್ಲಿ ಸಾಮಾಜಿಕ ಕಳಕಳಿ ಚಿಗುರಿಸುವ ಬೀಜಗಳಾಗುತ್ತವೆ. ಮೊದಲಿಗರನ್ನು ಕೊನೆಯವರಾಗಿಸುತ್ತದೆ, ಕೊನೆಯವರನ್ನು ಮೊದಲಿಗರಾಗಿಸುತ್ತದೆ. ತನ್ನನ್ನು ತಾನೇ ಏರಿಸಿಕೊಳ್ಳುವನನ್ನು ಕೆಳಗಿಳಿಸುತ್ತದೆ, ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ಮೇಲಕ್ಕೇರಿಸುತ್ತದೆ. 

ಪ್ರಚೋದಕ: ಸಾಮತಿಗಳಿಗೆ ಪ್ರೇರೇಪಿಸಿ ಪ್ರಚೋದಿಸುವ ಶಕ್ತಿಯಿದೆ. ನಮಗೆ ಸವಾಲು ಹಾಕಿ ನಮ್ಮನ್ನು ತಿದ್ದುವುದಲ್ಲದೆ ಜಾಗೃತಗೊಳಿಸಿ ಕ್ರೀಯಾಶೀಲರನ್ನಾಗಿಸುತ್ತವೆ. ಅವು ನಮ್ಮ ನಡತೆ ವಿಚಾರಗಳ ಮಾಪನಗಳಾಗುತ್ತಾ ಅವುಗಳ ಬದಲಾವಣೆಗೆ ಮುಹೂರ್ತ ಹಾಕಿಕೊಡುತ್ತವೆ. ವಿಕೃತ ಸಮಾಜದ ಸುಧಾರಣೆಗೆ ಮತ್ತು ನವೀಕಕರಣಕ್ಕೆ ಕರೆ ನೀಡುತ್ತವೆ. 

ಅದ್ದರಿಂದ ಸಾಮತಿಗಳಿಗೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಶಕ್ತಿಯಿದೆ. ನಾವು ಕಟ್ಟಿಕೊಂಡಿರುವ ಚಿಂತನಾಕ್ರಮವನ್ನು ಅದರ ಸಂಕುಚಿತೆಯನ್ನು ಪ್ರಶ್ನಿಸುವ ತಾಕತ್ತಿದೆ. ನಮ್ಮ ಮೂಲ ನಂಬಿಕೆಗಳನ್ನೇ ಬುಡಮೇಲು ಮಾಡುವ ಧೈರ್ಯವಿದೆ. ಜೊತೆಗೆ ಪರಿವರ್ತನೆಯನ್ನು ಚಿಗುರಿಸುವ ಸತ್ವವಿದೆ. ಹೊಸಜಗತ್ತು, ಹೊಸ ಬದುಕಿಗೆ ಕರೆದೊಯ್ಯುವ ಬೆಳಕಿದೆ. ಕೆಲವು ಸಾಮತಿಗಳು ಕತೆಯಲ್ಲಿ ಬರುವ ವ್ಯಕ್ತಿಗಳನ್ನು ಮೌಲ್ಯಮಾಪನ ಮಾಡಲು ಕರೆ ನೀಡುತ್ತಲೇ, ನಮ್ಮ ಬದುಕಿನ ಮಾಪಕವಾಗಿಬಿಡುತ್ತವೆ. ನಮ್ಮ ವಾಸ್ತವಿಕ ಬದುಕಿಗೆ ಕನ್ನಡಿ ಹಿಡಿಯುತ್ತಾ, ಹೃದಯದ ಬದಲಾವಣೆಗೆ ನಾಂದಿ ಹಾಡುತ್ತವೆ. ಅವು ಕೇವಲ ಕತೆಗಳಾಗದೆ, ಬದುಕಿನ ಜೀವಂತ ದೃಶ್ಯಗಳಾಗುತ್ತಾ ನಮ್ಮ ಅನುಭವಗಳ ನೆರಳಾಗುತ್ತವೆ. ಮಡುಗಟ್ಟಿದ ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತವೆ. ಸಾಮತಿಗಳ ಇಂತಹ ಶಕ್ತಿ, ಧೈರ್ಯ, ಸತ್ವ ಮತ್ತು ಬೆಳಕನ್ನು ಕಾಣಬೇಕಾದರೆ, ತೆರೆದ ನಿಷ್ಪಕ್ಷಪಾತ ಮನಸ್ಸಿನಿಂದ ನಾವು ಸಾಮತಿಗಳನ್ನು ಓದಿದರೆ ಆ ಓದು ಪರಿಪಾಠವಾಗದೆ ಸಾತ್ವಿಕ ಅನುಭವಾಗುವುದರ ಬಗ್ಗೆ ಎರಡು ಮಾತಿಲ್ಲ. 

ಹೌದು ಅನು, ನಮ್ಮ ಮಕ್ಕಳನ್ನು ಕಂಪ್ಯೂಟರು, ಟಿ.ವಿ ಅಂತ ನಿರ್ಜೀವ ವಸ್ತುಗಳೊಡನೆ ಕಟ್ಟಿ ಹಾಕಿ ಬಿಟ್ರೆ, ಅವರ ಬಾಲ್ಯವೇ ನಿರ್ಜೀವವಾಗುವ ಗಂಡಾತರವಿದೆ. ತಂದೆತಾಯಿಗಳು ಮಕ್ಕಳಿಗೆ ಕಥೆಗಳನ್ನು ಹೇಳುವುದರ ಮೂಲಕ ಅವರಲ್ಲಿ ಸೃಜನಶೀಲತೆ ತುಂಬಲಿ ಎಂಬ ಕಳಕಳಿಯ ಮನವಿಯೊಂದಿಗೆ, ಧಾರ್ಮಿಕ ಪ್ರವಚನಗಳಲ್ಲಿ ಕಂಡು ಬರುವ ಕತೆಗಳನ್ನು ಯಾವ ರೀತಿ ಅರ್ಥೈಸಿಕೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸುವ ಕತೆಯೊಂದಿಗೆ, ನಿನಗೆ ವಿದಾಯ ಹೇಳುತ್ತೇನೆ. 

ಒಬ್ಬ ರೈತನು ಚಿನ್ನದ ಮೊಟ್ಟೆಯನ್ನಿಡುವ ಒಂದು ಬಾತುಕೋಳಿಯನ್ನು ಸಾಕಿದ್ದ. ಅದು ಪ್ರತಿದಿನ ಒಂದೊಂದು ಚಿನ್ನದ ಮೊಟ್ಟೆಯನ್ನು ಇಡುತ್ತಿತ್ತು. ರೈತನ ಹೆಂಡತಿ ಪ್ರತಿದಿನ ಒಂದೊಂದು ಮೊಟ್ಟೆಯಿಡುತ್ತಿದ್ದ ಬಾತುಕೋಳಿಯಿಂದ ಎಲ್ಲಾ ಮೊಟ್ಟೆಗಳನ್ನು ಒಮ್ಮೆಲೇ ಪಡೆಯುವ ದುರಾಸೆಯಿಂದ ಬಾತುಕೋಳಿಯನ್ನು ಕೊಯ್ದು ಬಿಡುತ್ತಾಳೆ. 

ಈ ವಾಕ್ಯವನ್ನು ಕೇಳಿದ ಒಬ್ಬ ನಾಸ್ತಿಕ ಲೇವಡಿ ಮಾಡುತ್ತಾ, ಬಾತುಕೋಳಿ ಚಿನ್ನದ ಮೊಟ್ಟೆಯಿಡುವುದೆಂದಾದರೂ ಸಾಧ್ಯವೇ, ಇದು ವೇದಗಳ ಅಸಂಬದ್ಧತೆಯನ್ನು ಮತ್ತು ಅರ್ಥಹೀನತೆಯನ್ನು ಎತ್ತಿ ತೋರಿಸುತ್ತದೆ” ಎಂದು ಮೂದಲಿಸಿದ. 

ಇನ್ನೊಬ್ಬ ಧಾರ್ಮಿಕ ಪಂಡಿತ ಮೇಲಿನ ಪಠ್ಯವನ್ನು ಓದಿ ಈ ರೀತಿ ಪ್ರತಿಕ್ರಿಯಿಸಿದ “ದೇವರು ಚಿನ್ನದ ಮೊಟ್ಟೆಯಿಡುವ ಬಾತುಕೋಳಿಯ ಬಗ್ಗೆ ತಿಳಿಸುತ್ತಾರೆ .. ವಾಸ್ತವಿಕವಾಗಿ ನಮಗೆ ಇದು ಅಸ್ವಾಭಾವಿಕವಾಗಿ ಕಂಡು ಬರಬಹುದು. ಆದರೆ ಇದು ನಮ್ಮ ಗ್ರಹಿಕೆಗೆ ನಿಲುಕದ ಸತ್ಯ. 

ಒಂದು ಮೊಟ್ಟೆ ಚಿನ್ನದ ಲಕ್ಷಣಗಳನ್ನು ಪಡೆದುಕೊಂಡು ಹೇಗೆ ಅದು ಮೊಟ್ಟೆಯಾಗಿರಲು ಸಾಧ್ಯ? ಎಂದು ಕೆಲವರು ವಾದಿಸಬಹುದು. ನಾನಾ ಪಂಥಗಳು ಈ ರೀತಿಯ ಘಟನೆಗೆ ನಾನಾ ರೀತಿಯ ಅರ್ಥವಿವರಣೆಗಳನ್ನು ಟೀಕೆಯನ್ನು ನೀಡಬಹುದು. ಆದರೆ ಇಲ್ಲಿ ಮುಖ್ಯವೆನ್ನಿಸುವುದು ನಮ್ಮ ವಿಶ್ವಾಸ. ನಮ್ಮ ಜ್ಞಾನಕ್ಕೆ ನಿಲುಕದ ಈ ರೀತಿಯ ರಹಸ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮಲ್ಲಿ ವಿಶ್ವಾಸವಿರಬೇಕು. 

ಮತ್ತೊಬ್ಬ ಪ್ರಬೋಧಕ ಪಠ್ಯದಿಂದ ಪ್ರೇರಿತನಾಗಿ, ನಗರ ಮತ್ತು ಹಳ್ಳಿಗಳಲ್ಲಿ ಸುತ್ತಾಡಿ ಒಂದಾನೊಂದು ಕಾಲದಲ್ಲಿ ಚಿನ್ನದ ಮೊಟ್ಟೆಯಿಡುವ ಬಾತುಕೋಳಿಗಳನ್ನು ದೇವರು ಸೃಷ್ಟಿಸಿದ್ದಿರಬಹುದು. ಅಂತಹ ಕೋಳಿಗಳು ಚಿನ್ನದ ಮೊಟ್ಟೆಗಳನ್ನು ಇಡುತ್ತಿದ್ದಿರಬಹುದು ಎಂದು ಹೇಳಿ ಜನರನ್ನು ನಂಬಿಸಿದನು. 

ಹಾಗಿದ್ದರೆ ಈ ಕತೆಯ ಮೂಲ ಉದ್ದೇಶವಾದರೂ ಏನು? ಚಿನ್ನದ ಮೊಟ್ಟೆಯನ್ನಿಡುವ ಬಾತುಕೋಳಿಯಲ್ಲಿ ವಿಶ್ವಾಸವನ್ನು ವೃದ್ಧಿಸುವುದೋ ಅಥವಾ ನಮ್ಮ ದುರಾಸೆಯಿಂದ ಆಗುವ ಹಾನಿಯ ಬಗ್ಗೆ ಹೇಳುವುದೋ? 

ಇಂತಿ ನಿನ್ನ 

ಆನಂದ್ 

ಗಾಂಧೀಜಿ ಮತ್ತು ಪಾದ್ರಿ ನ್ಯೂಮನ್


ಕರುಣಾಳು ಬಾ ಬೆಳಕೆ 

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ 
ಕೈ ಹಿಡಿದು ನಡೆಸನ್ನನು, 
ಇರುಳು ಕತ್ತಲೆಯ ಗವಿಮನೆ ದೂರ ಕನಿಕರಿಸಿ 
ಕೈ ಹಿಡಿದು ನಡೆಸೆನ್ನನು. 

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು 
ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ, 
ಮುನ್ನಇಂತಿರದಾದೆ ನಿನ್ನ ಬೇಡದೇ ಹೋದೆ 
ಕೈ ಹಿಡಿದು ನಡೆಸು ಎನುತ 

ನನ್ನದಾರಿಯ ನಾನೇ ನೋಡಿ ಹಿಡಿದೆನು, ಇನ್ನು 
ಕೈ ಹಿಡಿದು ನಡೆಸು ನೀನು, 
ಮಿರುಗು ಬಣ್ಣಕೆ ಬೆರೆತು ಭಯ ಮರೆತು ಕೊಬ್ಬಿದೆನು 
ಮೆರೆದಾಯ್ತು ನೆನೆಯದಿರು ಹಿಂದಿನದೆಲ್ಲ.

ಇಷ್ಟು ದಿನ ಸಲಹಿರುವೆ ಮೂರ್ಖನನು ಮುಂದೆಯೂ 
ಕೈ ಹಿಡಿದು ನಡೆಸದಿಹೆಯಾ? 
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು 
ಇರುಳನ್ನು ನೂಕದಿಹೆಯಾ? 
ಬೆಳಗಾಗ ಹೊಳೆಯದಡ ಒಂದೊಮ್ಮೆ ನಾನೊಲಿದು 
ಈ ನಡುವೆ ಕಳಕೊಂಡ ದಿವ್ಯಮುಖ ನಗುತ. 

ಇದು ಗಾಂಧೀಜಿ ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದ ಕವನ. ಈ ಕವನ ಮೂಲದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಇದ್ದ ಕವನ. ಅದನ್ನು ಪಾದ್ರಿ ಜಾನ್ ಹೆನ್ರಿ ನ್ಯೂಮನ್ (1801-1890) ಅವರು ರಚಿಸಿದ್ದಾರೆ. ಅವರು `ಲೀಡ್‌ ಕೈಂಡ್ಲಿ ಲೈಟ್' ಹೆಸರಿನಲ್ಲಿ ರಚಿಸಿದ್ದ ಈ ಕವನವನ್ನು ಕನ್ನಡದ ಖ್ಯಾತ ಸಾಹಿತಿ ಬಿ.ಎಂ.ಶ್ರೀಕಂಠಯ್ಯ (1884-1946) ಅವರು `ಕರುಣಾಳು ಬಾ ಬೆಳಕೆ' ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿರುವರು. 

ಬಿ.ಎಂ.ಶ್ರೀ. ಅವರು, ಕಳೆದ ಶತಮಾನದ ಮೊದಲ ಭಾಗದ ಉತ್ತರಾರ್ಧದಲ್ಲಿ, ಹೊಸಗನ್ನಡದ ಅರುಣೋದಯದ ಕಾಲದಲ್ಲಿ ಕನ್ನಡದ ತೇರನ್ನು ಎಳೆಯುತ್ತಿದ್ದ, ಕನ್ನಡ ಸಾಹಿತ್ಯದ ಆದ್ಯ ಪ್ರವರ್ತಕರಲ್ಲೊಬ್ಬರು. 

ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಕುವೆಂಪು, ಜಿ.ಪಿ.ರಾಜರತ್ನಂ, ತೀ.ನಂ.ಶ್ರೀ ಮತ್ತು ಡಿ.ಎಲ್.ನರಸಿಂಹಾಚಾರ್ಯ ಮೊದಲಾದ ದಿಗ್ಗಜರು ಬಿ.ಎಂ.ಶ್ರೀ ಅವರ ಶಿಷ್ಯ ಬಳಗದ ಸದಸ್ಯರು. ಬಿ.ಎಂ.ಶ್ರೀ ಅವರನ್ನು ಕನ್ನಡದ ಸಾಹಿತ್ಯ ವಲಯದಲ್ಲಿ `ಕನ್ನಡದಕಣ್ವ' ಎಂದೇ ಗುರುತಿಸಲಾಗುತ್ತದೆ. ಬಿ.ಎಂ.ಶ್ರೀ ಅವರು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ `ಕರುಣಾಳು ಬಾ ಬೆಳಕೆ' ಕವನ ಕನ್ನಡದ ಸಾಹಿತ್ಯದಲ್ಲಿನ ಒಂದು ಕಾಲಘಟ್ಟದ ಪ್ರಮುಖ ಕವನ ಎಂದೇ ಗುರುತಿಸಲಾಗುತ್ತಿದೆ. 

ಒಂದು ಕಾಲದಲಿ, ಅದು ಕನ್ನಡ ಮೂಲದ ಕವನ ಎಂಬಷ್ಟು ಬಗೆಯಲ್ಲಿ ಜನಮಾನಸದಲ್ಲಿ ನೆಲೆಯೂರಿ ಬಿಟ್ಟಿತ್ತು. ಅಧ್ಯಾಪಕ ಡಾ.ಗುರುರಾಜಕರಜಗಿ ಅವರು, ಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದ್ದ ನೀತಿ ಬೋಧಕ ಬರಹಗಳ ಅಂಕಣಮಾಲೆಗೆ `ಕರುಣಾಳು ಬಾ ಬೆಳಕೆ' ಎಂದು ಹೆಸರಿಸಿದ್ದರು. ಅದೇ ಹೆಸರಿನ ಆ ಲೇಖನಗಳ ಸರಣಿ ಸಂಗ್ರಹದ ಗುಚ್ಛಗಳ ಪುಸ್ತಕಗಳು, ಅದೇ ಶೀರ್ಷಿಕೆಯಲ್ಲಿ ಹಲವಾರು ಮುದ್ರಣಗಳನ್ನು ಕಂಡಿವೆ. ಈ ಬಗೆಯ ಅಂಕಣ ಪುಸ್ತಕದ ಪ್ರಸಿದ್ಧಿಯ ದೆಸೆಯಿಂದ ಸಾಮಾನ್ಯ ಜನರಿಗೆ, `ಕರುಣಾಳು ಬಾ ಬೆಳಕೆ' ಎಂಬುದು ಅನುವಾದವಾದ ಇಂಗ್ಲಿಷ್ ‌ಕವನದ ಶೀರ್ಷಿಕೆ. ಅದನ್ನು ಅನುವಾದಿಸಿದವರು ಬಿ.ಎಂ.ಶ್ರೀ ಅವರು ಎಂಬ ಮಾಹಿತಿ ಗಮನಕ್ಕೆ ಬಾರದ ಸ್ಥಿತಿ ಉಂಟಾಗಿದೆ. 

ಯಾರು ಈ ಹೆನ್ರಿ ನ್ಯೂಮನ್? 

ಪಾದ್ರಿ ಜಾನ್ ಹೆನ್ರಿ ನ್ಯೂಮನ್‌ ಅವರನ್ನು ಕಾರ್ಡಿನಲ್ ನ್ಯೂಮನ್ ಮತ್ತು ಆಶೀರ್ವದಿತ ಜಾನ್ ಹೆನ್ರಿ ನ್ಯೂಮನ್‌ ಎಂದೂ ಕರೆಯಲಾಗುತ್ತದೆ. ಹತ್ತೊಂಬತ್ತನೇ ಶತಮಾನದ ಒಬ್ಬ ಮೇಧಾವಿ ವ್ಯಕ್ತಿಯಾಗಿದ್ದ ಅವರು, ಮೂಲತಃ ಕ್ರೈಸ್ತರ ಪಂಗಡವಾದ ಪ್ರೊಟೆಸ್ಟಂಟ್ ಪಂಥದ ಇಂಗ್ಲೆಂಡಿನ ಆಂಗ್ಲಿಕನ್ ಸಭೆಗೆ ಸೇರಿದವರು. ಅವರು ನಂತರ ವಿಶ್ವವ್ಯಾಪಿ ಮೂಲ ಕ್ರೈಸ್ತ ಸಭೆ `ಕಥೋಲಿಕ ಧರ್ಮಸಭೆ'ಗೆ ಸೇರ್ಪಡೆಗೊಳ್ಳುತ್ತಾರೆ. 

ಅಪಾರ ದೈವಶಾಸ್ತ್ರೀಯ ವಿದ್ವತ್ತು ಹೊಂದಿದ್ದ ಅವರು ಬರಹಗಾರ, ಸಾಹಿತಿ ಮತ್ತು ಶ್ರೇಷ್ಠ ಪ್ರಭೋಧಕ ವಾಗ್ಮಿಯೂ ಆಗಿದ್ದರು. 

ಒಮ್ಮೆ 1833ರಲ್ಲಿ ನ್ಯೂಮನ್‌ ಅವರು ತೀವ್ರ ಅಸ್ವಸ್ಥರಾಗಿ ಹಾಸಿಗೆ ಹಿಡಿದಿದ್ದರು. ಆಗ, ಅವರಿಂದ ಯಾವ ಕೆಲಸವೂ ಸಾಗುತ್ತಿರಲಿಲ್ಲ. ಅಧೈರ್ಯಗೊಂಡಿದ್ದ ಅವರು, ಆಗ ದೈನ್ಯ ಭಾವದಲ್ಲಿ ದೇವರಲ್ಲಿ ಮೊರೆಯಿಡುತ್ತಾರೆ. `ಕರುಣಾಳು ದೇವರೆ, ಕೈ ಹಿಡಿದು ಮುನ್ನೆಡೆಸು' ಎಂದು ಕೋರಿಕೊಳ್ಳುತ್ತಾರೆ. 

`ಕರುಣಾಳು ಬಾ ಬೆಳಕೆ' (ಲೀಡ್‌ ಕೈಂಡ್ಲಿ ಲೈಟ್) ಹೆಸರಲ್ಲಿ ಕವನದ ಚರಣಗಳನ್ನು ಬರೆಯುತ್ತಾ ಹೋದಂತೆ ಅವರಲ್ಲಿ ಕುಂದಿದ್ದ ವಿಶ್ವಾಸ ಮತ್ತೆ ಗಟ್ಟಿಗೊಳ್ಳುತ್ತಾ ಸಾಗುತ್ತದೆ. ಇದರಲ್ಲಿ ಬೆಳಕು ಎಂದರೆ ಭೌತಿಕ ವಸ್ತುವಲ್ಲ. ಅದು ಸರ್ವಶಕ್ತ ಸರ್ವೇಶ್ವರ - ಭಗವಂತ. ತಮ್ಮನ್ನು ಇಡಿಯಾಗಿ ಭಗವಂತ (ದೇವರು) ನಿಗೆ ಸಮರ್ಪಿಸಿಕೊಂಡು, ತುಂಬು ಹೃದಯದಿಂದ ಬೇಡಿಕೊಳ್ಳುವ ಕೋರಿಕೆ ಈ ಕವನ. ಈ ಪ್ರಕ್ರಿಯೆಯಲ್ಲಿ ಮನಸ್ಸು ನಿರಾಳತೆಯನ್ನು ಅನುಭವಿಸುತ್ತದೆ. ಪ್ರತಿಯೊಬ್ಬರಿಗೂ ತಾವು ಮುಂದೆ ಕ್ರಮಿಸಬೇಕಾದ ಹಾದಿ ನಿಚ್ಚಳವಾಗಿ ಗೋಚರಿಸುತ್ತದೆ. 

ಅವರು `ಲೀಡ್‌ ಕೈಂಡ್ಲಿ ಲೈಟ್' ಶೀರ್ಷಿಕೆಯ ಈ ಕವನದ ಮೊದಲಿನ ಶೀರ್ಷಿಕೆ `ದಿ ಪಿಲ್ಲರ್ ಆಫ್‌ ಕ್ಲೌಡ್' (ಮೋಡಕಂಬ). ಈ `ಲೀಡ್‌ ಕೈಂಡ್ಲಿ ಲೈಟ್' ಕವನ ತೀವ್ರಗತಿಯಲ್ಲಿ ಜನಮನ್ನಣೆ ಗಳಿಸುತ್ತದೆ. ಅಂತಿಮವಾಗಿ ಅದನ್ನು ಜನ ಪ್ರಾರ್ಥನಾಗೀತೆಯಾಗಿ ಒಪ್ಪಿಕೊಳ್ಳುತ್ತಾರೆ. 

ಗಾಂಧಿ ಮತ್ತು ಕರುಣಾಳು ಬಾ ಬೆಳಕೆ 

ಗಾಂಧೀಜಿ ಅವರು ಲಂಡನ್ ನಲ್ಲಿ ಬ್ಯಾರಿಸ್ಟರ್ ಪದವಿಗಾಗಿ ಓದುತ್ತಿರುವಾಗ ಪರಿಚಯವಾದ ಪಾದ್ರಿ ಹೆನ್ರಿ ನ್ಯೂಮನ್‌ ಅವರ `ಲೀಡ್‌ ಕೈಂಡ್ಲಿ ಲೈಟ್' (ಕರುಣಾಳು ಬಾ ಬೆಳಕೆ) ಪ್ರಾರ್ಥನಾ ಪದ್ಯ, ಅವರ ಜೀವನದ ಹಲವಾರು ದುರ್ಭರ ಪ್ರಸಂಗಗಳಲ್ಲಿ ಧೈರ್ಯ ನೀಡಿ ಅವರನ್ನು ಕೈ ಹಿಡಿದು ಮುಂದೆ ನಡೆಸಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನ್ಯೂಮನ್ನರ ಈ ಪ್ರಾರ್ಥನಾಗೀತೆ, ಅವರು ಮಾನಸಿಕವಾಗಿ ಜರ್ಜರಿತಗೊಂಡಾಗ, ನೋವು, ಸಂಕಟ ಮತ್ತು ಸಂದಿಗ್ಧತೆಗಳ ಸಂದರ್ಭಗಳಲಿ, ಅವರಲ್ಲಿ ಧೈರ್ಯ ತುಂಬಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತಿತ್ತು ಎಂದು ಗಾಂಧೀಜಿ ಅವರ ಜೀವನಚರಿತೆಯಲ್ಲಿ ದಾಖಲೆಗೊಂಡಿದೆ. 

ದಕ್ಷಿಣ ಆಫ್ರಿಕೆಯಲ್ಲಿನ ಯೌವ್ವನದ ದಿನಗಳಲ್ಲಿನ ಹೋರಾಟಗಳ ಸಂದರ್ಭಗಳಲ್ಲಿ ಅವರಲ್ಲಿ ಧೈರ್ಯ ತುಂಬಿದ್ದ ಈ ಕವನ, ಅವರು ಮುಂದೆ ಆಶ್ರಮಗಳಲ್ಲಿ ಜೀವಿಸತೊಡಗಿದಾಗಲೂ ಅವರೊಂದಿಗೆ ಇತ್ತು. ಆಶ್ರಮಗಳಲ್ಲಿ ಹಲವಾರು ಪ್ರಾರ್ಥನೆಗಳ ಜೊತೆಗೆ ಈ ಕವನವನ್ನೂ ಹಾಡಲಾಗುತ್ತಿತ್ತು. 

ಹೆನ್ರಿ ನ್ಯೂಮನ್‌ರಿಗೆ ಸಂತ ಪದವಿ

ಪ್ರಾರ್ಥನಾ ಪದ್ಯ `ಲೀಡ್‌ ಕೈಂಡ್ಲಿ ಲೈಟ್' ರಚಿಸಿದ ಪಾದ್ರಿ ಹೆನ್ರಿ ನ್ಯೂಮನ್‌ ಅವರಿಗೆ ಸಂತಪದವಿ ನೀಡಲು ಕಥೋಲಿಕ ಧರ್ಮಸಭೆ, ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಆರಂಭಿಸಿ ದಶಕಗಳೇ ಕಳೆದಿವೆ. 

ಕಥೋಲಿಕ ಕ್ರೈಸ್ತ ಧರ್ಮದ ಪರಮೋಚ್ಚಗುರು, ನಿಜದ ಅರ್ಥದಲ್ಲಿನ ಜಗದ್ಗುರು, ಆಳುವವರಾದ ಶ್ರೀಮತ್ (ಪೋಪ) ಪಾಪು ಸ್ವಾಮಿ ಫ್ರಾನ್ಸಿಸ್‌ ಅವರು, ತಮ್ಮ ಅಧಿಕೃತ ನಿವಾಸ ಸ್ಥಳ ರೋಮಾಪುರಿಯಲ್ಲಿನ, ವ್ಯಾಟಿಕನ್ ಪ್ರದೇಶದಲ್ಲಿರುವ ಸಂತ ಪೇತ್ರರ ಪ್ರಧಾನಾಲಯದಲ್ಲಿ ಪ್ರಸಕ್ತ 2019ರ ಸಾಲಿನ ಅಕ್ಟೋಬರ್ 13ರಂದು, ತಿಂಗಳ ಎರಡನೇ ಭಾನುವಾರದಂದು, ಪಾದ್ರಿ ಜಾನ್ ಹೆನ್ರಿ ನ್ಯೂಮನ್ ‌ಜೊತೆಗೆ ಭಾರತದ ಸಿಸ್ಟರ್ ಮರಿಯಂ ಥೆರೆಸಾ, ಇಟಲಿಯ ಸಿಸ್ಟರ್ ಜೋಸ್ಫಿನ್ ವನ್ನಿನಿ, ಬ್ರೆಜಿಲ್ ನ ಸಿಸ್ಟರ್ ಡುಲ್ಸಿ ಲೊಪೆಸ್ ಪೊಂಟೆಸ್ ಮತ್ತು ಸ್ವಿಟ್ಜರಲೆಂಡ್‍ನ ಮಾರ್ಗರಿಟಾ ಬೇಸ್ ಅವರುಗಳಿಗೆ ಸಂತ ಪದವಿಯನ್ನು ಪ್ರಸಾದಿಸಲಿದ್ದಾರೆ. 
ಎಫ್. ಎಂ. ಎನ್. 
jeevadani2016@gmail.com 

ಒಳ್ಳೆಯ ದಿನಗಳ ಬಯಸಿ...


 - ಡೇವಿಡ್ ಕುಮಾರ್. ಎ
ಮನೆ ಮನೆಯ ಮುಂದೆ
’ಅಚ್ಚೇ ದಿನ’ ದ ಫಲಕ,
’ವಿಕಾಸ’ ದ ಭ್ರಾಂತಿ
ಕೋಟಿ ಜನರ ಪುಳಕ 
ಕಾಶ್ಮೀರದ ಕಣಿವೆಯಲಿ
ಕಾಮನ ಬಿಲ್ಲಿಗೂ ಗಲ್ಲು !
’ಸ್ವಾತಂತ್ರ್ಯ’ದ ಹಕ್ಕಿಗಳಿಗೆ
ಬಂಗಾರದ ಪಂಜರ 
ಅನ್ನವಿಲ್ಲದ ನಾಡು
ದೇಶಭಕ್ತಿಯ ಅಮಲು !
ಬಂಡಾಯದ ಬಡಪಾಯಿಗೆ
’ಉಗ್ರ’ನೆಂಬ ಬಿರುದು 
 ಊಟ, ಬಟ್ಟೆಗೂ ಕಾನೂನು
ಬಂಧಿಖಾನೆಯ ಭಯ,
ಸಿಂಹಗಳಿಗೂ ಸಸ್ಯಾಹಾರ
ಜಾರಿಯಾಗಿದೆ ನಿಯಮ !


ಮಕ್ಕಳ ಸುಳ್ಳಿನ ಪ್ರಪಂಚ (ಭಾಗ - 2)


¨ ಯೊಗೇಶ್ ಮಾಸ್ಟರ್

ಮಕ್ಕಳಲ್ಲಿ ಸುಳ್ಳಿನ ಹುಟ್ಟಿಗೆ ಹಲವು ಕಾರಣಗಳಿರುತ್ತವೆ ಮತ್ತು ಆ ಸುಳ್ಳುಗಳು ವ್ಯಕ್ತವಾಗುವುದರಲ್ಲಿ ಹಲವು ಆಯಾಮಗಳಿರುತ್ತವೆ. ಹಾಗಾಗಿ ಎಲ್ಲಾ ಮಕ್ಕಳ ಸುಳ್ಳುಗಳ ಹಿಂದಿನ ಕಾರಣಗಳು ಒಂದೇ ಆಗಿರುವುದಿಲ್ಲ. ಆದರೂ ಸಾಮಾನ್ಯೀಕರಿಸಿ ಒಂದಷ್ಟು ಭಾಗಗಳನ್ನಾಗಿ ಮಾಡಬಹುದು. 

ಶಿಕ್ಷೆಯ ಭಯ 

ಶಿಕ್ಷೆಯ ಭಯದಿಂದ ಸುಳ್ಳು ಹೇಳುವುದು ಸಣ್ಣ ಮಕ್ಕಳಲ್ಲೇನು, ದೊಡ್ಡವರಲ್ಲಿಯೂ ಕೂಡಾ ಸರ್ವೇ ಸಾಮಾನ್ಯ. ಮಕ್ಕಳ ವಿಷಯದಲ್ಲಿ ಶಿಕ್ಷೆಯ ಭಯದಿಂದ ರೂಢಿಯಾಗುವ ಸುಳ್ಳುಗಳು ಮುಂದೆ ಇತರರನ್ನು ವೃಥಾ ದೂರುವುದಕ್ಕೂ ಮುಂದುವರಿಯುತ್ತದೆ. ತಮ್ಮೆಲ್ಲಾ ತಪ್ಪುಗಳನ್ನು ಇತರರ ಮೇಲೆ ಹಾಕಿಯೋ, ಅಥವಾ ಇತರರ ಕಾರಣದಿಂದ ತಾವು ಹೀಗೆ ಮಾಡಿದ್ದೇವೆಯೇ ಹೊರತು ತಾವು ತಪ್ಪನ್ನು ಮಾಡಿಯೇ ಇಲ್ಲ ಎನ್ನುವಂತೆಯೋ ಮಕ್ಕಳು ವಾದಿಸಲು ಯತ್ನಿಸುತ್ತಿರುತ್ತಾರೆ. 

ಶಿಕ್ಷೆಯ ಭಯದಿಂದ ಆಗುವ ಅನಾಹುತಗಳನ್ನು ನೋಡಿ. 

1. ಮಗುವಿಗೆ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಲೇ ಆಗದು. 

2. ಸದಾ ಇತರರ ಮೇಲೆ ತಪ್ಪನ್ನು ಹಾಕುವ, ದೂರುವ ಅಥವಾ ತನ್ನ ಕೃತ್ಯಕ್ಕೆ ಇನ್ನಾರೋ ಕಾರಣ ಎನ್ನುವ ಬೇಜವಾಬ್ದಾರಿತನವು ರೂಢಿಯಾಗುತ್ತದೆ. 

3. ತನಗೆ ಆಗುವ ಶಿಕ್ಷೆಯು ಬೇರೆಯವರಿಗೆ ಆಗಲಿ, ತಾನು ಅದರಿಂದ ತಪ್ಪಿಸಿಕೊಳ್ಳುವಂತಾಗಲಿ ಎಂಬ ಮನಸ್ಥಿತಿಯು ಬೆಳೆದು ಇತರಿಗೆ ಕೇಡನ್ನು ಬಯಸುವಂತಹ ಮನೋಭಾವದ ರೂಢಿಯಾಗುತ್ತದೆ. 

4. ಮಗುವು ಪಶ್ಚಾತ್ತಾಪ, ಕ್ಷಮಾಯಾಚನೆ, ಪ್ರಾಯಶ್ಚಿತ್ತ ಇತ್ಯಾದಿ ಮೌಲ್ಯಗಳಿಂದ ದೂರವಾಗುತ್ತಾ ಹೋಗುತ್ತದೆ. 

5. ಮಾಡುವ ತಪ್ಪನ್ನು ಮಾಡಬಹುದು. ಆದರೆ ಶಿಕ್ಷೆಗೆ ಒಳಗಾಗದಂತೆ ಎಚ್ಚರವಹಿಸಬೇಕು ಎಂಬಂತಹ ಕಿಲಾಡಿತನವನ್ನು ಬೆಳೆಸಿಕೊಳ್ಳುತ್ತದೆ. 

6. ಶಿಕ್ಷೆ ಎಂಬುದು ದೊರಕಿದಾಗ ಬಹುಪಾಲು ವ್ಯಕ್ತಿಗಳಲ್ಲಿ ತಪ್ಪನ್ನು ಮಾಡಿರುವ ಬಗ್ಗೆಗಿಂತಲೂ ಸಿಕ್ಕಿ ಹಾಕಿಕೊಂಡದ್ದರೆ ಬಗ್ಗೆ ವಿಷಾದವಿರುತ್ತದೆ. ಇದು ಮಕ್ಕಳ ವಿಷಯದಲ್ಲಿಯೂ ಸತ್ಯ. 

7. ಪ್ರಾಮಾಣಿಕತೆಯನ್ನು ಬೆಳೆಸುವುದರಲ್ಲಿ ಶಿಕ್ಷೆಯು ಯಾವ ರೀತಿಯೂ ಸಹಕಾರಿಯಾಗದು. 

ಮಗುವು ಯಾವುದೋ ಒಂದು ವಸ್ತುವನ್ನು ಮುರಿದು ಹಾಕಿಬಿಟ್ಟಿತೆಂದಿಟ್ಟುಕೊಳ್ಳಿ. ಅದಕ್ಕೆ ಪ್ರತಿಯಾಗಿ ನೀವು ಶಿಕ್ಷೆ ಕೊಟ್ಟರೆ ತಾನು ಶಿಕ್ಷೆ ಅನುಭವಿಸಿದ ಕೋಪ ಮತ್ತು ನೋವು ಅದರಲ್ಲಿ ಗುಪ್ತವಾಗಿಯೇ ಉಳಿದಿರುತ್ತದೆ. ಯಾವಾಗಲಾದರೂ, ಅಥವಾ ಎಂತದ್ದಾದರೂ ಸಂದರ್ಭದಲ್ಲಿ ಇನ್ನು ತಾನು ಸಿಕ್ಕಿ ಹಾಕಿಕೊಳ್ಳುವುದಿಲ್ಲ ಅಥವಾ ಶಿಕ್ಷೆಗೆ ಒಳಗಾಗುವ ಸಾಧ್ಯತೆಗಳಿಲ್ಲ ಎಂದು ಅದಕ್ಕೆ ಖಚಿತವಾಗಿದ್ದರೆ, ಆ ಬಗೆಯ ವಸ್ತುಗಳನ್ನು ಅಥವಾ ಶಿಕ್ಷೆಗೆ ಕಾರಣರಾದವರ ಮತ್ತು ಶಿಕ್ಷೆ ಕೊಟ್ಟವರ ವಸ್ತುಗಳನ್ನು ಘನಘೋರವಾಗಿ ಧ್ವಂಸ ಮಾಡಿ ತಾನು ವಿಜಯಿಯಾದೆನೆಂಬ ಭಾವದಲ್ಲಿ ತೃಪ್ತಿಪಡುತ್ತದೆ. 

ಶಿಕ್ಷೆ ಎಂಬುದು ನೀಡುವವರ ದೃಷ್ಟಿಯಲ್ಲಿ ಪ್ರಾಯಶ್ಚಿತ್ತವೇ ಹೊರತು ಅದು ಎಂದಿಗೂ ಪಡೆಯುವವರ ಪಶ್ಚಾತ್ತಾಪವಾಗುವುದಿಲ್ಲ. ಪ್ರಾಮಾಣಿಕತೆಯೇ ಪಶ್ಚಾತ್ತಾಪದ ಮೂಲ. ಅದರಲ್ಲಿಯೂ ಮಗುವಿಗೆ ಶಿಕ್ಷೆ ಎಂಬುದು ಯಾವ ರೀತಿಯಲ್ಲಿಯೂ ಪ್ರಾಮಾಣಿಕತೆಯನ್ನು ಕಲಿಸದು. 

ಶಾಲೆಯಲ್ಲಿ ಅಥವಾ ಎಲ್ಲಿಯಾದರೂ ಕಲಿಕೆಯ ಕೇಂದ್ರದಲ್ಲಿ ಬಲಶಾಲಿಯಾದ ಮತ್ತು ಒರಟ ವಿದ್ಯಾರ್ಥಿ ಮಗುವೊಂದು ಮತ್ತೊಂದು ಮೃದು ಸ್ವಭಾವದ ಮಗುವಿಗೆ ಹಿಂಸೆಯನ್ನೋ ಅಥವಾ ಕಿರುಕುಳವನ್ನೋ ಕೊಟ್ಟಿತ್ತೆಂದಿಟ್ಟುಕೊಳ್ಳಿ. ಆ ಒರಟ ಮಗುವಿಗೆ ತರಬೇತಿದಾರರು ಅಥವಾ ಶಿಕ್ಷಕರು ಅಥವಾ ಪಾಲಕರು ಶಿಕ್ಷೆಯನ್ನು ಕೊಟ್ಟು ಇನ್ನೊಮ್ಮೆ ಆ ದುರ್ಬಲ ಅಥವಾ ಮೆತ್ತನೆಯ ಸ್ವಭಾವದ ಮಗುವಿನ ತಂಟೆಗೆ ಹೋಗದಿರುವಂತೆ ಎಚ್ಚರಿಕೆ ಕೊಟ್ಟಿರೆಂದುಕೊಳ್ಳಿ, ಅದು ಯಾವ ರೀತಿಯಲ್ಲಿಯೂ ಆ ಒರಟ ಹುಡುಗನಿಗೆ ಆ ಮತ್ತೊಂದು ಮಗುವಿನ ಬಗ್ಗೆ ಒಳ್ಳೆಯ ಅಭಿಪ್ರಾಯವೋ, ಅಥವಾ ಅನುಕಂಪವೋ ಖಂಡಿತ ಮೂಡುವುದಿಲ್ಲ. ಆ ಮಗುವಿನ ತಂಟೆಗೆ ಹೋಗಬೇಡ ಎಂದು ಒಡ್ಡುವ ಭಯವು ಅವನಲ್ಲಿ ದಯೆಯನ್ನು ಉಂಟುಮಾಡುವುದಿಲ್ಲ. ಎರಡೂ ಮಕ್ಕಳೇ. ಅವುಗಳು ಅವುಗಳ ಸ್ವಭಾವವನ್ನು ವ್ಯಕ್ತಪಡಿಸುತ್ತವೆ. ಒರಟ ಹುಡುಗನ ಮನಸ್ಸಿಗೆ ಆಪ್ತರಾಗದೇ, ಅವನ ಹೃದಯವನ್ನು ಆರ್ದ್ರಗೊಳಿಸದೇ ಹಿರಿಯರು ಯಾವ ರೀತಿಯಲ್ಲಿಯೂ ಅವನನ್ನು ಬದಲಾಯಿಸುವಲ್ಲಿ ಯಶಸ್ವಿಯಾಗುವುದಿಲ್ಲ. 

ಶಿಕ್ಷೆಯ ಭಯ ಸುಳ್ಳಿನ ಕಾರಣ ಮಾತ್ರವಲ್ಲ, ಪುಟಿದೇಳುವ ನಕಾರಾತ್ಮಕ ಗುಣಗಳನ್ನು ತತ್ಕಾಲಕ್ಕೆ ಅದುಮಿಟ್ಟು ಕೊಂಡಿರುವಂತಹ ಒತ್ತಡವಷ್ಟೇ ಆಗಿರುತ್ತದೆ. ಎಲ್ಲಿ ಶಿಕ್ಷೆಗೆ ಅವಕಾಶವಿರುವುದಿಲ್ಲವೋ ಅಥವಾ ಸಿಕ್ಕಿ ಬೀಳುವ ಅವಕಾಶವಿರುವುದಿಲ್ಲವೋ ಆಗ ಆಸ್ಫೋಟಗೊಂಡು ವಿಜೃಂಭಿಸುತ್ತದೆ. 

ನಗರದಲ್ಲಿ ಯಾವುದಾದರೂ ಬಂದ್ ಅಥವಾ ಇತ್ಯಾದಿ ಗಲಭೆಗಳಾಗುವಾಗ ಯಾರವರು ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸುವವರು? ಅವರ ಆಕ್ರೋಶದ ಹಿಂದಿನ ಕಾರಣ ಸರ್ಕಾರವಾಗಿರುವುದಿಲ್ಲ. ಯಾವಾಗಿಂದಾವಾಗಿಂದಲೋ ಅವರು ಅದುಮಿಟ್ಟಿಕೊಂಡಿರುವ ಆಸ್ಫೋಟದ ಮನಸ್ಥಿತಿಯಾಗಿರುತ್ತದೆ. 

ದೊಡ್ಡ ಮಾತುಗಳೊಂದಿಗೆ ಸಂವಾದಿಸಲು 

ಮಕ್ಕಳಾಗಲಿ ಅಥವಾ ಹದಿಹರೆಯದವರಾಗಲಿ ವಯಸ್ಕರು ಮತ್ತು ಜವಾಬ್ದಾರಿಯುತ ಸಂಸಾರಸ್ತರು ಆಲೋಚಿಸುವಂತೆ ಆಲೋಚಿಸುವುದಿಲ್ಲ. ಹಾಗೂ ಅವರಿಬ್ಬರಿಗೂ ಇವರಿಗಿರುವಂತಹ ಹೊಣೆಗಾರಿಕೆಗಳೂ ಮತ್ತು ಕೆಲಸಗಳೂ ಇರುವುದಿಲ್ಲ. ಇದು ದೊಡ್ಡವರಿಗೆ ಮೊದಲು ಅರ್ಥವಾಗಬೇಕು. ಅಂತೆಯೇ ಮಾತಾಡುವಾಗ ಹೆಂಡತಿಯೊಬ್ಬಳು ಗಂಡನೊಬ್ಬನಿಗೆ ಅವಳ ಜವಾಬ್ದಾರಿಗಳನ್ನು ಪ್ರಶ್ನಿಸುವಂತೆ ಅಥವಾ ಬೆಳೆದು ಮದುವೆಯಾಗಲು ನಿಂತ ಮಗನಿಗೆ ತಂದೆಯೊಬ್ಬ ಅವನ ಬದ್ಧತೆಗಳನ್ನು ಪ್ರಶ್ನಿಸುವಂತೆ, ಪಾಲಕರಾಗಲೀ ಶಿಕ್ಷಕರಾಗಲೀ ಮಗುವೊಂದನ್ನು ಪ್ರಶ್ನಿಸುವುದನ್ನು ನಿಲ್ಲಿಸಿದರೆ ಆಗ ಮಗುವೂ ಕೂಡಾ ಸುಳ್ಳು ಹೇಳುವುದನ್ನು ನಿಲ್ಲಿಸುವ ಸಾಧ್ಯತೆಗಳಿರುತ್ತವೆ. 

ಮಕ್ಕಳಿಗೆ ದೊಡ್ಡವರು ಮೊದಲು ದೊಡ್ಡದೊಡ್ಡ ಮಾತುಗಳನ್ನು ಆಡುವುದನ್ನು, ದೊಡ್ಡದೊಡ್ಡ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಬೇಕು. ಜವಾಬ್ದಾರಿ, ಹೊಣೆಗಾರಿಕೆ, ಬದ್ಧತೆ, ಕಷ್ಟಪಟ್ಟರೆ ಫಲವುಂಟು, ಕೈ ಕೆಸರಾದರೆ ಬಾಯಿ ಮೊಸರು, ದುಡ್ಡೇ ದೊಡ್ಡಪ್ಪ - ವಿದ್ಯೆ ಅವರಪ್ಪ; ಇತ್ಯಾದಿಗಳೆಲ್ಲಾ ಮಕ್ಕಳ ಕಿವಿಯ ಮೇಲೆ ಬಿದ್ದರೆ ಏನೂ ಪ್ರಯೋಜನವಾಗುವುದಿಲ್ಲ. ಇವೆಲ್ಲವೂ ಜೀವಂತ ಉದಾಹರಣೆಗಳಾಗಿ ಅವರಿಗೆ ದಿನಬೆಳಗಿನ ಮಾದರಿಗಳಾಗಿದ್ದು, ಜೊತೆಯಾಗಿ ತರಬೇತಿ ಕೊಡುತ್ತಾ ರೂಢಿಯಾಗಬೇಕಷ್ಟೇ. 

ನಾವು ದೊಡ್ಡದೊಡ್ಡ ಮಾತುಗಳನ್ನು ಅವರಿಗೆ ಹೇಳುತ್ತಾ ಹೋದಂತೆ ಅವರು ದೊಡ್ಡದೊಡ್ಡ ಸುಳ್ಳುಗಳನ್ನು ಹೇಳುತ್ತಾ ಹೋಗುತ್ತಾರೆ. ಸ್ವಾತಂತ್ರ್ಯ ದಿನಾಚರಣೆಗೋ, ಶಾಲಾ ವಾರ್ಷಿಕೋತ್ಸವಕ್ಕೋ ಬರುವಂತಹ ಬಹಳಷ್ಟು ಅತಿಥಿಗಳು, ತಂದೆ ತಾಯಿಗಳನ್ನು ಮತ್ತು ಶಿಕ್ಷಕರನ್ನು ದೇವರಂತೆ ನೋಡುವುದನ್ನೋ, ಸಾಧಕರ ಮತ್ತು ಮಹನೀಯರ ಉದಾಹರಣೆಗಳನ್ನು ಕೊಟ್ಟು ದೇಶಭಕ್ತಿ ಮತ್ತು ಸಮಾಜಸೇವೆ ಇತ್ಯಾದಿಗಳನ್ನು ಒಳಗೊಂಡಂತೆ ಆಡುವ ಮಾತುಗಳನ್ನು ಯಾವ ಮಗುವಾದರೂ ಕೇಳಿ, ಹೌದು ಹೌದು, ನಾನು ಹೀಗೆಯೇ ಆಗಬೇಕು ಎಂದು ನಡೆದುಕೊಂಡ ಉದಾಹರಣೆಯನ್ನಂತೂ ನಾನು ಇದುವರೆಗೂ ಕಂಡಿಲ್ಲ. 

ಸರಿ, ಈ ದೊಡ್ಡದೊಡ್ಡ ಮಾತುಗಳಿಗೂ ಮತ್ತು ಮಕ್ಕಳು ಆಡುವ ಸುಳ್ಳು ಮಾತುಗಳಿಗೂ ಏನು ಸಂಬಂಧ ಎಂದುಕೊಳ್ಳಬೇಡಿ. ಸಂಬಂಧ ಗಾಢವಾಗಿಯೇ ಇದೆ. 

1. ದೊಡ್ಡ ಮಾತುಗಳ ಸರದಾರರಾದ ದೊಡ್ಡವರಿಗೆ ತಮ್ಮ ಸರಳ ಮತ್ತು ಏನೂ ಘನವಲ್ಲದ ಪುಟ್ಟಪುಟ್ಟ ಸಂಗತಿಗಳು, ಚೇಷ್ಟೆಗಳು, ಸನ್ನಿವೇಶಗಳು ಹಿಡಿಸದು ಎಂದು ಅವರ ಮಾತಿಗೆ ಅನುಗುಣವಾಗಿರಬಹುದಾಗಿರುವಂತಹ ಸುಳ್ಳುಗಳನ್ನು ಮಕ್ಕಳು ಹೊಸೆಯುತ್ತಾರೆ. 

2. ತಮ್ಮ ಪುಟ್ಟಪುಟ್ಟ ಮತ್ತು ಸರಳ ಸಂಗತಿಗಳು ದೊಡ್ಡವರ ಮಾತಿನ ಮುಂದೆ ಕ್ಷುಲ್ಲಕ ಎನಿಸುವುದಷ್ಟೇ ಮಾತ್ರವಲ್ಲದೇ, ದೊಡ್ಡವರು ತಮ್ಮ ಮಾತನ್ನು ಒಪ್ಪುವುದಿಲ್ಲ ಎಂದುಕೊಂಡು ತಮ್ಮ ಸಂಗತಿಗಳ ಮೌಲ್ಯಪ್ರಮಾಣವನ್ನು ಹಿಗ್ಗಿಸಿಕೊಳ್ಳಲು ಯತ್ನಿಸುತ್ತಾರೆ. ಅದೋ ಭಯಂಕರ ಮತ್ತು ಅಸಹನೀಯವಾದಂತಹ ಅವಾಸ್ತವದಿಂದ ಕೂಡಿರುತ್ತದೆ. ಮಕ್ಕಳ ಬಗ್ಗೆ ಅತ್ಯಂತ ಸಹಾನುಭೂತಿ ಇರುವಂತವರಿಗೂ ಮುಜುಗರವಾಗುವಷ್ಟು ಇರಿಸುಮುರಿಸಾಗುತ್ತದೆ. 

3. ದೊಡ್ಡವರ ಮಾತಿನಲ್ಲಿ ಕೇಳುವ ಮೌಲ್ಯವನ್ನು ತಮ್ಮಲ್ಲಿ ಇದೆಯೆಂದು ಕಾಣಿಸಿಕೊಳ್ಳಲು ಮಕ್ಕಳು ಮೊಟ್ಟಮೊದಲು ಉಪಯೋಗಿಸುವ ಸಾಧನವೆಂದರೆ ಸುಳ್ಳಿನ ಮಾತು. 

4. ಮಕ್ಕಳೊಂದಿಗೆ ಮಾತಾಡುವಾಗ ಅವರ ಭಾಷೆಯಲ್ಲಿಯೇ ಮಾತಾಡಬೇಕು. ಹಾಗೂ, ಅವರಿಗೆಟಕುವ ವಿಷಯಗಳನಷ್ಟೇ ನಿವೇದಿಸಬೇಕು. ಅವರಿಗೆ ಆ ವಿಷಯಗಳ ಆಳ ಮತ್ತು ಎತ್ತರಗಳನ್ನು ಪರಿಚಯಿಸುವ ಮನಸ್ಸು ದೊಡ್ಡವರಿಗೆ ಕಿಂಚಿತ್ತಾದರೂ ಇದ್ದರೆ, ವಯಸ್ಕರ ಅಳತೆಗನುಗುಣವಾದ ದೊಡ್ಡದೊಡ್ಡ ಪದಗಳನ್ನು ಬಳಸದೇ, ಮಕ್ಕಳು ತಮ್ಮ ದೃಷ್ಟಿಯಲ್ಲಿ ಗ್ರಹಿಸುವ ಸಂಗತಿಗಳಿಗೆ ಅನ್ವಯವಾಗುವಂತಹ ಮಾತುಗಳನ್ನು ಬಳಸಬೇಕು. ನೈತಿಕ ನಿರ್ದೇಶನಗಳನ್ನೂ ಕೂಡಾ ಹಾಗೆಯೇ ಕೊಡಬೇಕು. 

5. ನೈತಿಕ ನಿರ್ದೇಶನವೆಂದರೆ, ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಹೀಗಿರಬೇಕು, ಹಾಗಿರಬೇಕು ಎಂಬಂತಹ ಮಾರ್ಗಸೂಚಿ. ಅದು ಯಾವಾಗಲೂ ಸಾಂದರ್ಭಿಕವಾಗಿ ಮತ್ತು ಸಮಯೋಚಿತವಾಗಿರಬೇಕು. ಅದುಬಿಟ್ಟು, ಮಕ್ಕಳು ದೊಡ್ಡವರಾದ ಮೇಲೆ ದೇಶ ಮತ್ತು ಸಮಾಜಕ್ಕೆ ಮಹತ್ತಾದ ಸೇವೆಗಳನ್ನು ಕೊಡುವಂತಹ ಮುಂದಿನ ಆದರ್ಶದ ಕನಸುಗಳ ಭ್ರಮೆಗಳನ್ನು ಮಾತುಗಳನ್ನಾಗಿಸಬಾರದು. ಯಾವ ಮಗುವಿಗೂ ಅವು ಅರ್ಥವೂ ಆಗುವುದಿಲ್ಲ ಮತ್ತು ತನ್ನ ಸಧ್ಯದ ಸ್ಥಿತಿಗೆ ಅನ್ವಯ ಮಾಡಿಕೊಳ್ಳಲೂ ಬರುವುದಿಲ್ಲ. ಸಮಾಜದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಅಥವಾ ಸಾಧನೆ ಮಾಡಿರುವ ಗಣ್ಯವ್ಯಕ್ತಿಯು ಅವರ ಜೊತೆಗೆ ನಿತ್ಯ ಕೆಲಸ ಮಾಡುತ್ತಿದ್ದರೂ ಅಥವಾ ಏನಾದರೂ ಹೇಳಿಕೊಡುತ್ತಿದ್ದರೂ ಸಣ್ಣಮಕ್ಕಳಿಗೆ ಅದೇನೂ ಒಂದು ವಿಷಯವೇ ಅಲ್ಲ. ಅದರ ತತ್ಕಾಲದ ಅಗತ್ಯಗಳನ್ನು ಆ ವ್ಯಕ್ತಿ ಪೂರೈಸುತ್ತಿದ್ದಾನಾ? ಆ ಹೊತ್ತಿನ ಸಂತೋಷಕ್ಕೆ ಕಾರಣನಾಗಿದ್ದಾನಾ ಎಂಬುದಷ್ಟನ್ನೇ ಅವು ಗಮನಿಸುವುದು. 

ಒಟ್ಟಾರೆ ದೊಡ್ಡದೊಡ್ದ ಮಾತುಗಳಿಂದ ಮಗುವಿಗೆ ಭ್ರಮೆಯನ್ನೋ, ಹುಸಿ ಔನ್ನತ್ಯವನ್ನೋ ಸೃಷ್ಟಿಸಿ ಆ ಮಕ್ಕಳು ಅಪ್ರಾಸಂಗಿಕವಾಗಿ, ಅನಗತ್ಯವಾಗಿ, ಅವಾಸ್ತವದಿಂದ ಕೂಡಿರುವಂತಹ ಮಾತುಗಳನ್ನು ಆಡುತ್ತಾ ಆಡುತ್ತಾ ಹುಸಿಗಾರರನ್ನಾಗಿ ಮಾಡುವುದು ಬೇಡ. 

ಸುಳ್ಳಿನ ಕಾರಣಿಕ ಪ್ರಪಂಚ ಇಷ್ಟಕ್ಕೇ ಮುಗಿಯುವುದಿಲ್ಲ. ಇನ್ನೂ ಇದೆ. 

******************* 

ಗೀತಾಂಜಲಿಯ ತುಣುಕು


ಕೈದಿಯೇ ಹೇಳು, ನಿನ್ನ ಕಟ್ಟಿಹಾಕಿದವರಾರು? 

’ಅದು ನನ್ನ ಸ್ವಾಮಿ, 

ನಾನಂದುಕೊಂಡಿದ್ದೆ 

ಬಲದಲಿ ಸೌಭಾಗ್ಯದಲಿ 

ನನಗೆ ಸಮನಾರಿಲ್ಲವೆಂದು, 

ನನ್ನೊಡೆಯನಿಗೆ ಸಲ್ಲಬೇಕಾದುದನ್ನೂ 

ನನ್ನ ತಿಜೋರಿಯಲೇ ಇಟ್ಟುಕೊಂಡಿದ್ದೆ. 

ನಿದಿರೆಯೆನ್ನನಾವರಿಸಿದಾಗ, 

ನನ್ನ ಸ್ವಾಮಿಯ ಪಲ್ಲಂಗದಲೇ ಪವಡಿಸಿದೆ, 

ಎಚ್ಚರಾದಾಗ ನಾ ಬಂಧಿಯಾಗಿದ್ದೆ 

ನನ್ನದೇ ಭಂಡಾರದಲಿ’ 

ಎಂದನಾ ಕೈದಿ, 



ಕೈದಿಯೇ ಹೇಳು, 

ಈ ಕಠೋರ ಸರಪಳಿಯಿಂದ ನಿನ್ನ ಕಟ್ಟಿದವರಾರು? 

’ಅದು ನಾನೇ’ ಎಂದನಾ ಕೈದಿ, 

’ಬಲು ಕೌಶಲ್ಯದಿಂದ ಈ ಸರಪಳಿಯ 

ಎರಕ ಹೊಯ್ದವ ನಾನೇ, 

ನಾನಂದುಕೊಂಡಿದ್ದೆ 

ನನ್ನ ಅಪ್ರತಿಮ ಬಲದಿಂದ ಜಗವನ್ನೇ ಕಟ್ಟಿ 

ಬಿಡುಬೀಸಾಗಿರಬಹುದೆಂದು. 

ಅದಕೆಂದೇ ದಿನರಾತ್ರಿಯೂ ದುಡಿದೆ, 

ಕುಲುಮೆಯಲಿ ಬಡಿದೆ. 

ಕೆಲಸವದು ಮುಗಿದಾಗ ಸಂಕೋಲೆ 

ಚೆಲುವಿತ್ತು 

ಬಲಶಾಲಿಯಾಗಿತ್ತು, 

ಆದರೆ ನನ್ನನೇ ಹಿಡಿದಿತ್ತು.’ 

- ಸಿ ಮರಿಜೋಸೆಫ್ 


(ರವೀಂದ್ರನಾಥ ಟ್ಯಾಗೋರರ “Prisoner, tell me, who was it that bound you?” ಪದ್ಯದ ಅನುವಾದ.) 

ಜಗದ ಸೃಷ್ಟಿಯ ಪೌರಾಣಿಕ ಕತೆಗಳು - 2 - ಜಗತ್ತು ಹುಟ್ಟಿದ ಬಗೆ ಹೇಗೆ?


· ಎಫ್. ಎಂ. ನಂದಗಾವ್ 

ಜಗತ್ತು ಹುಟ್ಟಿದ ಬಗೆ ಹೇಗೆ? 

ಅದು, ಒಂದಾನೊಂದು ಕಾಲ. ಅದು ಕನಸುಗಳ ಕಾಲದ ಕಾಲ. ಎಲ್ಲವೂ ಖಾಲಿ ಖಾಲಿ. ಎಲ್ಲವೂ ಬಟಾಬಯಲು. ಭೂಮಿಯ ಮೇಲ್ಮೈಯಾವುದೇ ಚಟುವಟಿಕೆಗಳಿಲ್ಲದೇ ಸ್ತಬ್ಧವಾಗಿತ್ತು. 

ಆದರೆ, ಭೂಮಿಯ ಕೆಳಗೆ ಅಂದರೆ ಭೂಮಿಯ ಮೇಲ್ಪದರದ ಕೆಳಗೆ ಎಲ್ಲಾ ಬಗೆಯ ಪ್ರಾಣಿ, ಪಕ್ಷಿ ಸಂಕುಲಗಳು ಗಾಢ ನಿದ್ರೆಯಲ್ಲಿದ್ದವು. ಪ್ರಾಣಿ ಪಕ್ಷಿಗಳು ಮತ್ತು ಸರಿಸೃಪಗಳು ತಮ್ಮಗಾಢ ನಿದ್ರೆಯಲ್ಲಿ ಕನಸು ಕಾಣುತ್ತಾ ಮಲಗಿದ್ದವು, 

ಒಂದು ಸಮಯದಲ್ಲಿ ಕಾಮನಬಿಲ್ಲಿನ ಬಣ್ಣದ ಭಾರಿ ಸರಿಸೃಪ ಅಂದರೆ ಕಾಮನಬಿಲ್ಲಿನ ಬಣ್ಣದ ಹೆಣ್ಣು ಹೆಬ್ಬಾವು ನಿಧಾನವಾಗಿ ಕಣ್ಣು ತೆರೆಯಿತು. ಕಾರ್ಗತ್ತಲು ಕತ್ತಲು, ಏನೂ ಕಾಣಿಸುತ್ತಿರಲಿಲ್ಲ. ಮೈ ಕೊಡವಿಕೊಂಡು ಎದ್ದ ಆ ಹೆಣ್ಣು ಹೆಬ್ಬಾವು, ತನ್ನ ಸುತ್ತಿದ ದೇಹವನ್ನು ಎಳೆದುಕೊಂಡು ಹೊರಟಿತು. ಅದು ನಿಧಾನವಾಗಿ ಭೂಮಿಯ ಮೇಲ್ಪದರನ್ನು ಸೀಳಿಕೊಂಡು ಹೊರಗೆ ಬಂದೇ ಬಿಟ್ಟಿತು. ನೋಡುವುದೇನು? ಸೂರ್ಯನ ಬಿಸಿಲು ಕಣ್ಣಿಗೆ ರಾಚಿತು. ಎದುರಿಗೆ ವಿಶಾಲವಾದ ಬಯಲು ದಶದಿಕ್ಕುಗಳಲ್ಲಿ ಹರಡಿಕೊಂಡಿತ್ತು. ‘ನೋಡುವಾ’ ಎಂದು ಆ ಹೆಬ್ಬಾವು ಮುಂದೆ ಸಾಗತೊಡಗಿತು. 

ತನ್ನ ಭಾರಿಗ್ರಾತ್ರದ ಬಲಶಾಲಿಯಾದ ಉದ್ದದ ಹಗ್ಗದ ದೇಹವನ್ನು ಎಳೆದುಕೊಂಡು ಬಳಕುತ್ತಾ ಸಾಗಿದ ಆ ಹೆಬ್ಬಾವು, ಭೂಮಿಯ ಮೇಲಿನ ಬಟಾಬಯಲಿನಲ್ಲಿ ಓಡಾಡತೊಡಗಿದಾಗ, ಕೊಳ್ಳಗಳು ಬೆಟ್ಟಗಳು ಅಸ್ತಿತ್ವಕ್ಕೆ ಬಂದವು. ಹತ್ತು ಹಲವು ಹುಣ್ಣಿಮೆಗಳ ಕಾಲ ಅದು. ಭೂಮಿಯನ್ನು ಸುತ್ತಿ ಸುತ್ತಿ, ಕೊನೆಗೆ ತಾನು ಪ್ರಯಾಣ ಆರಂಭಿಸಿದ ತಾಣಕ್ಕೆ ಹಿಂದಿರುಗಿತು. ದಣಿದು ಬಸವಳಿದಿದ್ದ ಆ ಕಾಮನಬಿಲ್ಲಿನ ಮೈಬಣ್ಣದ ಹೆಣ್ಣು ಹೆಬ್ಬಾವು ತನ್ನ ಮೈಯನ್ನು ಸುತ್ತಿಕೊಂಡು ಗಾಢ ನಿದ್ರೆಗೆ ಜಾರಿತು. 

ಸಾಕಷ್ಟು ಸಮಯ ನಿದ್ದೆ ಮಾಡಿದ ಆ ಹೆಬ್ಬಾವು ಎಚ್ಚತ್ತಾಗ, ಇನ್ನೂ ಏಕೆ ಎಲ್ಲಾ ಪ್ರಾಣಿಗಳು ಭೂಮಿಯ ಮೇಲ್ಪದರದ ಕೆಳಗೇ ಗಾಢ ನಿದ್ರೆಯಲ್ಲಿವೆ? ಎಂಬ ಪ್ರಶ್ನೆ ಕಾಡತೊಡಗಿತು. ಎಲ್ಲ ಪ್ರಾಣಿಗಳನ್ನು ನಿದ್ರೆಯಿಂದ ಎಬ್ಬಿಸಬೇಕೆಂದು ದೃಢನಿಶ್ಚಯ ಕೈಗೊಂಡ ಆ ಹೆಬ್ಬಾವು, ಜೋರಾಗಿ ಕೂಗಿ ಕೂಗಿ ಎಬ್ಬಿಸತೊಡಗಿತು. ಅದರ ಧ್ವನಿ ಭೂಮಿಯ ಪದರಿನಲ್ಲಿ ಸಾಗಿ ಎಲ್ಲಾ ಪ್ರಾಣಿಗಳ ಕಿವಿಯ ತಮಟೆಗೆ ಮುಟ್ಟತೊಡಗಿತ್ತು. ಎಲ್ಲಾ ಪ್ರಾಣಿಗಳು ನಿಧಾನವಾಗಿ ನಿದ್ರೆಯಿಂದ ಎಚ್ಚರಗೊಳ್ಳತೊಡಗಿದವು, 

ಎಲ್ಲಾ ಪ್ರಾಣಿಗಳಿಗಿಂತ ದೊಡ್ಡದಾದ ರಾಕ್ಷಸಗಾತ್ರದ ಮೈಯೆಲ್ಲಾ ನೀರೇ ತುಂಬಿಕೊಂಡ ವಟಗುಟ್ಟುವ ಕಪ್ಪೆಗಳಿಗೆ ಮೊದಲು ಎಚ್ಚರವಾಯಿತು. ಅವು ನಿಧಾನವಾಗಿ ಭೂಮಿಯ ಮೇಲ್ಪದರವನ್ನು ಸೀಳಿಕೊಂಡು ಮೇಲೆ ಹೊರ ಬರತೊಡಗಿದವು. 

ತೃಪ್ತಿಗೊಂಡ ಕಾಮನಬಿಲ್ಲಿನ ಹೆಣ್ಣು ಹೆಬ್ಬಾವಿಗೆ ಕಪ್ಪೆಗಳೊಂದಿಗೆ ಸರಸವಾಡುವ ಮನಸ್ಸುಂಟಾಯಿತು. ತನ್ನ ಬಾಲವನ್ನೆತ್ತಿ ನಿದ್ರೆಯಿಂದ ಎಚ್ಚತ್ತು ಭೂಮಿಯ ಮೇಲ್ಮೈಗೆ ಬಂದಿದ್ದ ರಾಕ್ಷಸಗಾತ್ರದ ಕಪ್ಪೆಗಳ ಮೈಗೆ ಕಚಗುಳಿ ಇಡತೊಡಗಿತು. ಕಚಗುಳಿಯ ಕಾರಣ ನಗತೊಡಗಿದ ಕಪ್ಪೆಗಳು ತಮ್ಮರಾಕ್ಷಸದೇಹದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದ ನೀರನ್ನೆಲ್ಲಾ ಭೂಮಿಯ ಮೇಲೆ ಚೆಲ್ಲತೊಡಗಿದವು. ಹೆಬ್ಬಾವಿನ ದೆಸೆಯಿಂದ ಭೂಮಿಯಲ್ಲಿ ಏರುತಗ್ಗುಗಳಾಗಿದ್ದರಿಂದ ಎತ್ತರದ ಜಾಗದಲ್ಲಿ ಬಿದ್ದ ನೀರು ನದಿ, ತೊರೆಗಳಾಗಿ ಕೊಳ್ಳಗಳಲ್ಲಿ ಧುಮ್ಮಿಕ್ಕ ತೊಡಗಿದವು. ಜಲಪಾತಗಳು ಉಂಟಾದವು. ಮುಂದೆ ಅವು ಹರಿವು ಹೆಚ್ಚಿಸಿಕೊಂಡು ಹರಿಯತೊಡಗಿದವು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕೆರೆ, ಸರೋವರಗಳಾದವು. 

ನೆಲಕ್ಕೆ ನೀರು ಇಂಗಿದ್ದರಿಂದ, ಎಳೆ ಹಸಿರು ಹುಲ್ಲು ಮೊಳಕೆಯೊಡೆಯಿತು. ಸ್ವಲ್ಪ ಸಮಯ ಕಳೆಯುವಷ್ಟರಲ್ಲಿ ಭೂಮಿಯ ನೆಲಕಾಣುವ ದಶದಿಕ್ಕುಗಳಲ್ಲಿ, ಹುಲ್ಲುಗಾವಲುಗಳು, ಬಗೆಬಗೆಯ ಹೂವು ಹಣ್ಣುಗಳ ಗಿಡಗಂಟಿಗಳು, ಮುಗಿಲೆತ್ತರದ, ವಿಶಾಲ ಛಾವಣಿಯ ಮರಗಳು, ಅವನ್ನು ಸುತ್ತಿದ್ದ ಬಳ್ಳಿಗಳು ಭೂಮಿಗೆ ಹಸಿರುಡುಗೆ ತೊಡಗಿಸಿದವು. 

ಭೂಮಿ ಜೀವಚೈತನ್ಯದಿಂದ ನಳನಳಿಸತೊಡಗಿದ ನಂತರ, ಭೂಮಿಯ ಮೇಲ್ಪದರದ ಕೆಳಗಿದ್ದ ಪ್ರಾಣಿಸಂಕುಲದ ಸರಿಸೃಪಗಳು, ಪಕ್ಷಿಗಳು, ಪ್ರಾಣಿಗಳು ಭೂಮಿಯ ಮೇಲ್ಪದರವನ್ನು ಸೀಳಿಕೊಂಡು ಮೇಲೆ ಬಂದವು. ಕಾಮನಬಿಲ್ಲಿನ ಮೈಬಣ್ಣದ ಹೆಣ್ಣು ಹೆಬ್ಬಾವು, ಆ ಎಲ್ಲಾ ಪ್ರಾಣಿಗಳನ್ನು ಕರೆದುಕೊಂಡು ಭೂಮಿಯ ಮೇಲೆ ಓಡಾಡಿಸತೊಡಗಿತು. ಆ ಎಲ್ಲಾ ಪ್ರಾಣಿಪಕ್ಷಿಗಳು ತಮತಮಗೆ ಅನುಕೂಲಕರವಾದ ಮನೆಗಳನ್ನು ಹೊಂದಲು ಆ ಹೆಬ್ಬಾವು ಸಹಾಯ ಸಹಕಾರ ನೀಡಿತು. ಆಗಸದಲ್ಲಿ ಹಾರಾಡುತ್ತಾ ಆಟವಾಡತೊಡಗಿದ ಪಕ್ಷಿಗಳು, ಗಿಡಮರಗಳ ತುದಿಗಳಲ್ಲಿ, ಪೊಟರೆಗಳಲ್ಲಿ ತಮ್ಮತಮ್ಮ ಗೂಡುಗಳನ್ನು ಕಟ್ಟಿಕೊಂಡವು. ಸರಿಸೃಪಗಳು, ಇಲಿ ಹೆಗ್ಗಣಗಳು ಬಿಲಗಳನ್ನು ಕಂಡುಕೊಂಡವು. ಚಿರತೆ, ಹುಲಿ ಮೊದಲಾದವು ಗುಹೆಗಳನ್ನು ಹುಡುಕಿಕೊಂಡವು. ಉಳಿದ ಪ್ರಾಣಿಗಳು ತಮಗೆ ಅನುಕೂಲ ಆಗುವಂತಹ ನಿವಾಸಗಳನ್ನು ಮಾಡಿಕೊಂಡವು. 

ಕಾಮನಬಿಲ್ಲಿನ ಮೈಬಣ್ಣದ ಆ ಹೆಣ್ಣು ಹೆಬ್ಬಾವನ್ನು ಜೀವಪ್ರದಾಯಿನಿ, ಮಹಾತಾಯಿ ಎಂದು ಗಿಡಗಂಟಿಗಳು, ಮರಗಳು, ಪಕ್ಷಿಗಳು, ಪ್ರಾಣಿಗಳು ಆದರಿಸ ತೊಡಗಿದವು. ಆ ಮಹಾತಾಯಿ, ಭೂಮಿ ಸದಾಕಾಲವು ನಳನಳಿಸುತ್ತಾ ಆರೋಗ್ಯದಿಂದ ಇರುವಂತೆ ಮಾಡಲು, ಸಕಲ ಜೀವ ಸಂಕುಲ ಪರಸ್ಪರ ಹೊಂದಿಕೊಂಡು ಬಾಳಲು ಅನುಕೂಲವಾಗುವಂತೆ ಕೆಲವಷ್ಟು ನಿಯಮಗಳನ್ನು ಮಾಡಿತು. ಕಾಲಕಳೆದಂತೆ, ಆ ಮಹಾತಾಯಿ ಕೆಲವು ಪ್ರಾಣಿಗಳು ತನ್ನ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿರುವುದನ್ನು ಗಮನಿಸಿತು. ಆ ಪ್ರಾಣಿಗಳಿಗೆ ಮನುಷ್ಯರೂಪವನ್ನು ಕೊಟ್ಟ ಆ ತಾಯಿ, ಈ ಭೂಮಿಗೆ, ಭೂಮಿಯಜೀವ ಸಂಕುಲಕ್ಕೆ ನೀವೇ ವಾರಸುದಾರರು ಎಂದು ಹೇಳಿತು. 

ಪ್ರತಿಯೊಬ್ಬ ಮಾನವರೂ ತಾವು ಹುಟ್ಟಿಬಂದ ಕುಲವನ್ನು ಪ್ರತಿನಿಧಿಸುವ ಕುಲದೇವತಾ ಕಂಭಗಳನ್ನು ಹೊಂದಿದ್ದರು. ಏಕೆಂದರೆ, ಆ ಮಾನವ ಕುಲಗಳು ಪ್ರಾಣಿ ಮೂಲದವು, ಪಕ್ಷಿ ಮೂಲದವು ಹಾಗೂ ಸರಿಸೃಪಗಳ ಮೂಲದವು ಆಗಿದ್ದವು. ಆಯಾ ಕುಲಗಳ ಮಾನವರು ತಮ್ಮ ಕುಲದೇವತೆಗಳನ್ನು ಹೊರತುಪಡಿಸಿ ಸಕಲ ಪ್ರಾಣಿಪಕ್ಷಿಗಳನ್ನು ತಿನ್ನಬಹುದು ಎಂದು ಆ ಮಹಾತಾಯಿ ನಿರ್ದೇಶನ ನೀಡಿತ್ತು. ಹಾಗಾಗಿ, ಮುಂದೆ ಸಕಲ ಕುಲದವರಿಗೂ ಸಾಕಷ್ಟು ಆಹಾರವು ಸುಲಭವಾಗಿ ಸಾಕಾಗುವಷ್ಟು ಲಭ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಉಳಿದ ಕೆಲವು ಜೀವಿಗಳ ಆರಿಸಿಕೊಂಡ ಆ ಮಹಾತಾಯಿ, ಅವುಗಳನ್ನು ಮೆಚ್ಚಿಕೊಂಡು ಅವಕ್ಕೆ ಶಿಲೆಯ ರೂಪವನ್ನು ಕೊಟ್ಟಿತು. ಅವು ಬೆಟ್ಟಗುಡ್ಡಗಳಾಗಿ ನಿಲ್ಲುವಂತೆ ಮಾಡಿತು. ಆಯಾ ಭೂ ಪರಿಸರದಲ್ಲಿ ನೆಲೆಗೊಳ್ಳುವ ಮಾನವ ಕುಲಗಳ ರಕ್ಷಣೆ ಅವುಗಳ ಹೆಗಲಿಗೇ ಏರಿತು. 

ನಂತರ ವಿವಿಧ ಕುಲಗಳಿಗೆ ಸೇರಿದ ಮಾನವರು ತಾವು ನೆಲೆನಿಂತ ಭೂ ಪರಿಸರದೊಂದಿಗೆ ಹೊಂದಿಕೊಂಡು ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಕಂಡ ಆ ಮಹಾತಾಯಿ ಸಂತಸಪಟ್ಟಿತು. ‘ಬಿಯಾಮಿ ಎಂಬ ಹೆಸರಿನ ಮಾನವ ಒಬ್ಬ ಜಾಣ ವ್ಯಕ್ತಿಯಾಗಿ ಬೆಳೆದು ನಿಂತ. ಜ್ಞಾನವಂತ, ಪ್ರಾಮಾಣಿಕ ಹಾಗೂ ದಯಾಳುವೂ ಆಗಿದ್ದ ಆತ ಭೂ ಪರಿಸರವನ್ನು- ಭೂ ಮಾತೆಯನ್ನು ಆದರದಿಂದ ನೋಡಿಕೊಂಡ. ಅವನಿಗೂ ವಯಸ್ಸಾಯಿತು. ಸಾವು ಸನ್ನಿಹಿತವಾಗಿತ್ತು. ಆದರೆ, ಆ ಮಹಾತಾಯಿಗೆ ಸುಜ್ಞಾನಿ ‘ಬಿಯಾಮಿ ಸಾಯಬಾರದೆಂದು ಅನ್ನಿಸಿತು. ಆತನಿಗೆ ಆತ್ಮಸ್ವರೂಪ ಅಂದರೆ ಚೈತನ್ಯ ಸ್ವರೂಪವನ್ನು ಪ್ರಸಾದಿಸಿತು. ‘ಸುಜ್ಞಾನಿ ಬಿಯಾಮಿ, ತನ್ನ ಚೈತನ್ಯ ಸ್ವರೂಪದಲ್ಲಿ ಮಾನವ ಕುಲಗಳನ್ನು ರಕ್ಷಿಸುತ್ತಾ ಬರಲಿ ಎಂಬುದು ಅದರ ಹಾರೈಕೆಯಾಗಿತ್ತು. 

ಆದರೆ, ಕೆಲವು ದಿನಗಳು ಕಳೆಯುವಷ್ಟರಲ್ಲೇ ಒಬ್ಬಕೆಟ್ಟ ಮನುಷ್ಯ, ‘ಸುಜ್ಞಾನಿ ಬಿಯಾಮಿಯ ಚೈತನ್ಯ ಸ್ವರೂಪಕ್ಕೆ ಮುಖಾಮುಖಿಯಾದ. ಶಾಂತ ಚಿತ್ತದಿಂದ ಆತನನ್ನು ಎದುರಿಸಿದ ಚೈತನ್ಯ ಸ್ವರೂಪಿ ‘ಸುಜ್ಞಾನಿ ಬಿಯಾಮಿ, ಕುಟಿಲನಾಗಿದ್ದ ಸ್ವಾರ್ಥ ಮನೋಭಾವದ ಮನುಷ್ಯನನ್ನು ಹೆಡಮುರಿಗೆಕಟ್ಟಿ ತನ್ನ ಕುಲದಿಂದ ಹೊರಹಾಕಿದ. ಆದರೆ, ಕುಲದಿಂದ ಹೊರಹಾಕಲ್ಪಟ್ಟ ಆ ಕೆಟ್ಟ ಮನುಷ್ಯ ವಿಪರೀತವಾಗಿ ಕೋಪಗೊಂಡ, ತನ್ನ ಕುಟಿಲ ಕಾರಸ್ಥಾನದಿಂದ ಚೈತನ್ಯ ಸ್ವರೂಪ ಹೊಂದುವುದನ್ನು ಪತ್ತೆಮಾಡಿ ತಾನೂ ಚೈತನ್ಯ ಸ್ವರೂಪವನ್ನು ಪಡೆದ. ‘ಸುಜ್ಞಾನಿ ಬಿಯಾಮಿಯ ಚೈತನ್ಯ ಸ್ವರೂಪ ಮಾನವ ಕುಲಗಳ ಉದ್ಧಾರಕ್ಕೆ ಶ್ರಮಿಸುತ್ತಿತ್ತು, ಕೆಟ್ಟ ಯೋಚನೆಗಳಿಂದ ತುಂಬಿ ಕುಟಿಲ ಕಾರಸ್ಥಾನದಿಂದ ಚೈತನ್ಯ ಸ್ವರೂಪ ಪಡೆದ ಆ ಕುವಿಚಾರಿ ಮನುಷ್ಯನನ್ನು ‘ಬುನಿಯಿಪ್ ಎಂದೆ ಕರೆಯಲಾಗುತ್ತದೆ. 

ಕೆಟ್ಟ ವಿಚಾರಗಳ ಮೂಟೆಯಾದ ‘ಬುನಿಯಿಪ್ ನಿಂದ ದೂರವಿರಬೇಕು ಎಂದು ‘ಸುಜ್ಞಾನಿ ಬಿಯಾಮಿಯ ಚೈತನ್ಯ ಸ್ವರೂಪ ಸಕಲ ಕುಲಗಳಿಗೆ ಎಚ್ಚರಿಕೆ ನೀಡುತ್ತಾ ಬಂದಿತು. ಅದರಿಂದ ಮತ್ತಷ್ಟು ಕೆರಳಿದ ‘ಬುನಿಯಿಪ್, ಸೇಡು ತೀರಿಸಿಕೊಳ್ಳಲು ಮುಂದಾಯಿತು. ತನ್ನ ಕೆಟ್ಟ ಯೋಚನೆಗಳಿಂದ ಸಕಲ ಮಾನವ ಕುಲಗಳಲ್ಲಿ ಅರಾಜಕತೆ ಮೂಡಿಸಬೇಕು, ಪ್ರತಿಯೊಬ್ಬ ಮಾನವನೂ ತೊಂದರೆಗಳಲ್ಲಿ ಸಿಲುಕಿ ನೋವು ಅನುಭವಿಸಬೇಕು, ದುಃಖಿತನಾಗಬೇಕುಎಂದು ಅದು ಗಟ್ಟಿ ನಿರ್ಧಾರಕೈಗೊಂಡಿತು. 

ಅದರಂತೆ ಕಾರ್ಯೊನ್ಮುಖವಾದ ‘ಬುನಿಯಿಪ್, ‘ಸಕಲ ಕುಲಗಳಲ್ಲಿ ಪರಸ್ಪರ ವೈಮನಸ್ಸು ಮೂಡಿಸಬೇಕು, ಯಾವುದೇ ಕುಲದಯಾರೇ ಸಿಕ್ಕರೂ ಅವರನ್ನು ಅಪಹರಿಸಬೇಕು, ಯಾರೇ ಸಿಕ್ಕರೂ ಅವರ ಮೇಲೆ ಮುಗಿಬಿದ್ದು ಅವರನ್ನು ಮುಗಿಸಿ ನುಂಗಿ ನೀರುಕುಡಿಯಬೇಕು ಎಂದು ಪ್ರತಿಜ್ಞೆ ಮಾಡಿತು. 

ಅಂದಿನಿಂದ ಪ್ರತಿಯೊಬ್ಬ ಮನುಷ್ಯನೂ ‘ಬುನಿಯಿಪ್ನ ದಾಳಿಯ ಭಯದಲ್ಲಿ ಬದುಕುವಂತಾಗಿದೆ. ಕಾರ್ಗತ್ತಲು ಕವಿದ ಅಂಧಕಾರದ ಸ್ಥಳಗಳಲ್ಲಿ, ದಟ್ಟವಾದ ಕಾಡುಮೇಡುಗಳಲ್ಲಿ, ಸುಲಭವಾಗಿ ಹೋಗಲಾಗದ ಕಾಡಿನ ಮೂಲೆ ಮೂಲೆಗಳಲ್ಲಿ, ಆಳವಾದ ನೀರಿನ ಗುಂಡಿಗಳಲ್ಲಿ ಅದು ಹೊಂಚು ಹಾಕುತ್ತಿದೆ. ಪ್ರಯಾಣಿಕರ, ಹಾದಿಹೋಕರ ದಾರಿ ತಪ್ಪಿಸಿ ಅವರ ಜೀವ ತೆಗೆಯತೊಡಗಿದೆ. ಮಕ್ಕಳನ್ನು ಕದ್ದುಕೊಂಡು ಹೋಗುವುದರಲ್ಲಿ ನಿಸ್ಸೀಮವಾದ ಅದು ಅವರನ್ನು ಕೊಂದು ತಿನ್ನುವುದರಲ್ಲಿ ಸಂತಸ ಅನುಭವಿಸುತ್ತದೆ. 

ಒಟ್ಟಾರೆ, ಎಲ್ಲ ಕುಲಗಳ ಮಾನವರು ನಿರಂತರವಾಗಿ ತನ್ನ ಕೆಟ್ಟ ಗುಲಾಮಿತನವನ್ನು ಒಪ್ಪಿಕೊಳ್ಳಬೇಕೆಂಬ ದುರಾಸೆಯಿಂದ ಅದು ಇಷ್ಟೆಲ್ಲಾ ಕಷ್ಟಗಳನ್ನು ಕೊಡುತ್ತಿದೆ. 



-- ಆಸ್ಟ್ರೇಲಿಯದ ಒಂದು ಆದಿವಾಸಿ ಬುಡಕಟ್ಟಿನಲ್ಲಿ ಪ್ರಚಲಿತವಿರುವ ಸೃಷ್ಟಿಯಕತೆ. 

******************* 

ಸಾರಾ


· ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ

ಅರವತ್ತೈದು... ನಮ್ಮಲ್ಲಿ ಅನೇಕರು ಉದ್ಯೋಗದಿಂದ ನಿವೃತ್ತರಾಗುವ ವಯಸ್ಸು. ಈ ವಯಸ್ಸಿನಲ್ಲಿ ಸಾರಾಳ ಬದುಕಿಗೆ ಪ್ರಬಲವಾದ ತಿರುವು ಸಿಗುತ್ತದೆ. ಸಾರಾ ಮತ್ತು ಅಬ್ರಹಾಮ ದೇವರ ಕರೆಗೆ ಓಗೊಟ್ಟು ಊರ್ ಎಂಬ ಗ್ರಾಮದಿಂದ ಎಲ್ಲವನ್ನೂ ಬಿಟ್ಟು ಕಾನಾನ್ ನಾಡಿಗೆ ಹೊರಟರು. ಅಪರಿಚಿತ ನಾಡಲ್ಲಿ ಯಾವುದೋ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಹೊಂದಿಕೊಳ್ಳುವುದು ಹೇಗೆಂದು ಅವರಿಬ್ಬರೂ ಚಿಂತಿತರಾಗಿದ್ದರು. ಇಂತಹ ಒಂದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ದೇವರ ಚಿತ್ತಕ್ಕೆ ತಲೆಬಾಗಿ ಬದುಕಿದ ಸಾರಾ ಎಂಬ ವಯೋವೃದ್ಧ ಮಹಿಳೆಯ ವ್ಯಕ್ತಿತ್ವ ನಿಜಕ್ಕೂ ಪ್ರಶಂಸನೀಯವಾದದ್ದು. 

ಸಾರಾಳು ಅನುಪಮ ಸೌಂದರ್ಯವತಿಯಾಗಿದ್ದರಿಂದ ಫರೋಹನ ಹಾಗೂ ಅಬಿಮೆಲೆಕನ ಕಣ್ಣುಗಳು ಅವಳ ಮೇಲಿದ್ದವು. ಹೀಗಾಗಿ ಸಾರಾ ಮತ್ತು ಅಬ್ರಹಾಮ ಊರ್ ನಿಂದ ಕಾನಾನಿಗೆ ಹೋಗುವಾಗ ದಾರಿಯ ಮಧ್ಯದಲ್ಲಿ ಅನೇಕ ಗಂಡಾಂತರಗಳನ್ನು ಎದುರಿಸಬೇಕಾಯಿತು. ಅಬ್ರಹಾಮ ಮತ್ತು ಸಾರಾ ಗಂಡ-ಹೆಂಡತಿ ಎಂದು ಹೇಳಿಕೊಂಡರೆ ಅಬ್ರಹಾಮನನ್ನು ಕೊಂದು ಸಾರಾಳನ್ನು ಫರೋಹನ ಅಂತಃಪುರಕ್ಕೆ ಸೇರಿಸುವ ಸಂಭವವಿದ್ದುದ್ದರಿಂದ ಅವರಿಬ್ಬರೂ ಅಣ್ಣತಂಗಿಯರು ಎಂದು ಹೇಳಿಕೊಳ್ಳುವ ಮಾತಾಗಿತ್ತು. 

ದುರದೃಷ್ಟವೆಂದರೆ ಸಾರಾ ಕೊನೆಗೂ ಫರೋಹನ ಅಂತಃಪುರಕ್ಕೆ ಹೋಗಲೇಬೇಕಾಯಿತು. ಆ ರಾತ್ರಿ ದೇವರು ಫರೋಹನಿಗೆ ಅನೇಕ ದುಃಸ್ವಪ್ನಗಳನ್ನು ಬರಮಾಡಿ ಅವನನ್ನು ಎಚ್ಚರಿಸುತ್ತಾರೆ. ಇದನ್ನೆಲ್ಲ ಕಂಡು ವಿಹ್ವಲಗೊಳ್ಳುವ ಫರೋಹನು ಅಬ್ರಹಾಮನನ್ನು ಕರೆಸಿ ಸಾರಾಳನ್ನು ಕರೆದುಕೊಂಡು ಹೋಗಲು ವಿನಂತಿಸುತ್ತಾನೆ. ಅಷ್ಟೇ ಅಲ್ಲದೆ ಕುರಿಮೇಕೆಗಳು, ಒಂಟೆಗಳು, ದಾಸದಾಸಿಯರಂತಹ ಕೊಡುಗೆಗಳನ್ನೂ ಸಹ ಕೊಟ್ಟು ಕಳುಹಿಸುತ್ತಾನೆ. ಇದರಿಂದ ಅಬ್ರಹಾಮನ ಆಸ್ತಿ ಹೆಚ್ಚಾಯಿತು. ಗೆರಾರಿನ ಅಬಿಮೆಲೆಕನ ಆಸ್ಥಾನದಲ್ಲಿ ಸಹ ಇಂಥದ್ದೇ ಸಂಗತಿಗೆ ದೇವರು ಮಧ್ಯ ಪ್ರವೇಶಿಸಿ ಅವನನ್ನು ಎಚ್ಚರಿಸಿ ಸಾರಾಳನ್ನು ಅಬ್ರಹಾಮನಿಗೆ ಒಪ್ಪಿಸುವಂತೆ ಮಾಡುತ್ತಾರೆ. ಅಲ್ಲಿ ಸಹ ಅವರಿಗೆ ಇನ್ನೂ ಹೆಚ್ಚಿನ ಪಶು ಪ್ರಾಣಿಗಳು ದೊರೆಯುತ್ತವೆ. ಆಗ ಅವರ ಆಸ್ತಿ ಇನ್ನೂ ಅಧಿಕವಾಗಿ ಬೆಳೆಯುತ್ತದೆ. 

ಅನೇಕ ವರ್ಷಗಳಿಂದ ಮಕ್ಕಳಿಲ್ಲದೆ ಕಂಗಾಲಾಗಿದ್ದ ಆ ದಂಪತಿಗೆ, ಊರ್ ಗ್ರಾಮವನ್ನು ಬಿಟ್ಟು ತೆರಳುವಾಗ ಆಕಾಶದ ನಕ್ಷತ್ರಗಳಂತೆ ಅವರ ಸಂತತಿ ಬೆಳೆಯುವುದು ಎಂದು ದೇವರು ವಾಗ್ದಾನ ಮಾಡಿದ್ದರು. ವರ್ಷಗಳು ಕಳೆದವು ಆದರೂ ಮಕ್ಕಳಿಲ್ಲ. ದೇವರಿತ್ತ ಆ ವಾಗ್ದಾನ ಕನಸಿನ ಗೋಪುರವಾಗಿ ಉಳಿಯಿತು. ಅಂದಿನ ಕಾಲದ ರೂಢಿಯಂತೆ ಸಾರಾಳು ಅಬ್ರಹಾಮನಿಗೆ ತಮ್ಮ ದಾಸಿಯಾದ ಹಾಗರಳೊಂದಿಗೆ ಮಲಗಲು ಅನುಮತಿ ನೀಡುತ್ತಾಳೆ. ಹಾಗರಳಿಂದ ಮಗುವಾಗುವ ಭರವಸೆ ಇಟ್ಟುಕೊಳ್ಳುತ್ತಾಳೆ. ತಡವಾಗುವ ಮುನ್ನ ಇಬ್ಬರು ದೂತರು ಬಂದು ಅಬ್ರಹಾಮನಿಗೆ ನಿನ್ನ ಮಡದಿ ಸಾರಾಳೆಲ್ಲಿ ಎಂದು ಕೇಳಲು ಶಿಬಿರದಲ್ಲಿ ಇರುವಳು ಎಂದು ಉತ್ತರಕೊಟ್ಟನು. ಅದಕ್ಕೆ ಆ ದೂತರು, ನಾವು ಬರುವ ವರ್ಷ ಇದೇ ಸಮಯಕ್ಕೆ ಇಲ್ಲಿ ಬರುತ್ತೇವೆ. ಅಷ್ಟರಲ್ಲಿ ನಿನ್ನ ಮಡದಿ ಸಾರಾಳಿಗೆ ಒಂದು ಗಂಡು ಮಗು ಹುಟ್ಟಿರುತ್ತದೆ ಎಂದರು. ಒಳಗಿದ್ದ ಸಾರಾಳು ನಕ್ಕು ಈ ಮುದಿಪ್ರಾಯದಲ್ಲಿ ನಮಗೆ ಮಕ್ಕಳಾಗುವುದೇ ಎಂದುಕೊಂಡಳು ಆದರೂ ಆಕೆ ಗಂಡು ಮಗುವಿಗೆ ಜನ್ಮವಿತ್ತಳು. ಆ ಮಗುವಿಗೆ ಇಸಾಕ್ ಎಂದು ನಾಮಕಾರಣ ಮಾಡಿದರು. ದೇವರಿತ್ತ ವಾಗ್ದಾನ ಅಲ್ಲಿಗೆ ಈಡೇರಿತು. 

ಇದಾದ ಕೆಲವೇ ದಿನಗಳಲ್ಲಿ ದೇವರು ಅವರ ಆ ಒಂದೇ ಮಗುವನ್ನು ತನಗೆ ಬಲಿಯಾಗಿ ಅರ್ಪಿಸಬೇಕೆಂದು ಆಜ್ಞಾಪಿಸುತ್ತಾರೆ. ಈ ಸಂದರ್ಭದಲ್ಲಿ ಸಾರಾಳ ಕರುಳು ಕಿತ್ತು ಬಂದಂತಾಗುತ್ತದೆ. ಬಹುಕಾಲ ಬಂಜೆಯಾಗಿದ್ದು ದೇವರ ವಿಶೇಷ ಕೃಪೆಯಿಂದ ಪಡೆದ ಸಂತಸದ ಮಗುವನ್ನು ಈಗ ದೇವರಿಗೇ ಬಲಿಯಾಗಿ ಅರ್ಪಿಸಬೇಕಲ್ಲಾ ಎಂಬುದು ಅವಳ ಗೋಳಾಟ. ಆದರೆ ಅದು ದೇವರು ಒಡ್ಡಿದ ಪರೀಕ್ಷೆಯಾಗಿತ್ತು. ಎಲ್ಲವೂ ಸಾಂಗವಾಗಿ ನಡೆದು ಇನ್ನೇನು ಇಸಾಕನ ಪ್ರಾಣವನ್ನು ತೆಗೆಯಬೇಕೆನ್ನುವಾಗ ದೇವರು ಪ್ರತ್ಯಕ್ಷರಾಗಿ ಮಗುವಿನ ಜೀವ ಉಳಿಸುತ್ತಾರೆ. 

ಹೀಗೆ ಕಷ್ಟದುಃಖಗಳನ್ನೂ ಸುಖಸಂತೋಷವನ್ನೂ ಅನುಭವಿಸುವ ಸಾರಾ 127 ವರ್ಷಗಳ ಕಾಲ ಅಬ್ರಹಾಮನೊಂದಿಗೆ ಸುಖಸಂಸಾರ ನಡೆಸಿ ಸತ್ತ ನಂತರ ಆಕೆಯ ಶರೀರವನ್ನು ಹೆಬ್ರೋನಿನ ಬಳಿ ಇರುವ ಮಚ್ಪೆಲಾ ಎಂಬ ಗುಹೆಯಲ್ಲಿ ಸಮಾಧಿ ಮಾಡುತ್ತಾರೆ. ಸಾರಾಳು ಸತ್ತಾಗ ಇಸಾಕನಿಗೆ 37 ವರ್ಷ. ತನ್ನದೇ ಸಂತಾನದ ಕುರಿತು ಆಕೆಗೆ ಆತಂಕ, ಸಂದೇಹಗಳು ಎಲ್ಲಾ ಇದ್ದರೂ ಸಹ ದೇವರು ಮಧ್ಯೆ ಪ್ರವೇಶಿಸಿ ತಾವಿತ್ತ ವಾಗ್ದಾನವನ್ನು ಈಡೇರಿಸಿದರು. ಹೀಗೆ ಸಾರಾ ಯಾವುದೇ ಕಾಲ್ಪನಿಕ ಕಥೆಯ ನಾಯಕಿಗಿಂತ ಹೆಚ್ಚು ಶ್ರಮದಾಯಕ ಸಾಹಸ ಮಾಡಿದ ಮಹಿಳೆಯಾದಳು. ಆ ಸಾಹಸವು ಭರವಸೆಯೊಂದಿಗೆ ಪ್ರಾರಂಭವಾಗಿ ಖುಷಿಯ ಅಂತ್ಯ ಕಾಣುತ್ತದೆ. ಮರಿಯಳಂತೆ ಸಾರಾಳು ಸಹ ಸಕಲ ಜನಾಂಗಗಳಿಗೆ ಆದರ್ಶ ಮಹಿಳೆಯಾಗುತ್ತಾಳೆ. 

******************* 

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು - 6


ಡಾ. ಸಿಸ್ಟರ್ ಪ್ರೇಮ (ಎಸ್. ಎಮ್. ಎಮ್. ಐ)

ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ಮಾಲಿಕೆಯಲ್ಲಿ ಸ್ವಾತಂತ್ರ್ಯಪೂರ್ವದಲಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಮಿಶನರಿಗಳನ್ನು ಕಳಿಸುತ್ತಿದ್ದಂತಹ ವಿವಿಧ ಮಿಶನ್ನುಗಳ ಬಗ್ಗೆ ತಿಳಿದಿರುತ್ತೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಆ ಮಿಶನ್ನುಗಳಿಂದ ಆಗಮಿಸಿದ ಮಿಶನರಿಗಳು ತಮ್ಮ ಅಮೂಲ್ಯ ಸಮಯವನ್ನು ಉಪಯುಕ್ತವಾದ ಸಾಹಿತ್ಯಿಕ, ಸಾಮಾಜಿಕ ಮತ್ತು ಔದ್ಯೋಗಿಕ ಕಾರ್ಯಗಳಿಗೆ ವಿನಿಯೋಗಿಸಿಕೊಂಡು ಅಮರ ಸೇವೆಗೆ ಸಾಕ್ಷಿಗಳಾಗಿದ್ದರು ಎಂಬುದನ್ನು ತಿಳಿಸುವಲ್ಲಿ ಪುಟ್ಟ ಪ್ರಯತ್ನ ಮಾಡಿರುತ್ತೇನೆ. 

ಸಾಹಿತ್ಯಿಕ ಕಾರ್ಯಗಳು: 

ಸಾಹಿತ್ಯಿಕ ಸೇವೆಗೆ ಜೆಸುಯೆಟ್ ಮಿಶನ್ ಸಂಸ್ಥೆ, ಲಂಡನ್, ವೆಸ್ಲಿಯನ್ ಮತ್ತು ಬಾಸೆಲ್ ಮಿಶನ್ನುಗಳ ಮಿಶನರಿಗಳು ಕೊಟ್ಟ ಕೊಡುಗೆ ಅದ್ಭುತವಾದುದು. ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ಶತ-ಶತಮಾನಗಳಿಂದ ಬೆಳೆದು ಬಂದ ಸಾಹಿತ್ಯವು ಹಲವಾರು ಘಟ್ಟಗಳನ್ನು ದಾಟಿದೆ. ಹೊಸಗನ್ನಡದ ಅರುಣೋದಯ ಸಮಯದಲ್ಲಿ ಕ್ರೈಸ್ತ ಧರ್ಮದ ಉದ್ದೇಶಕ್ಕೆಂದು ಅನೇಕ ಮಿಶನರಿಗಳು ಪ್ರಪಂಚದ ವಿವಿಧ ಭಾಗಗಳಿಂದ ಆಗಮಿಸಿ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯಕೃಷಿ ಮಾಡಿ ಅಭೂತಪೂರ್ವವಾದ ಕೊಡುಗೆಯನ್ನು ಕೊಟ್ಟಿರುತ್ತಾರೆ. ಪ್ರತಿಯೊಂದು ಮಿಶನ್ನಿನ ಮಿಶನರಿಗಳು ಭಾಷಾ ಚತುರರಾಗಿದ್ದರು. ಮಿಶನರಿಗಳು ಭಾಷೆಗಳನ್ನು ಯಾವ ಉದ್ದೇಶಕ್ಕೆ ಕಲಿತರೆಂಬುದನ್ನು ಜಾನ್‌ ಮೆಕ್ಕೆರಲ್ ಎಂಬ ಅಧಿಕಾರಿಯು ಕ್ರಿ.ಶ. ೧೮೨೦ರ ತನ್ನ ವ್ಯಾಕರಣ ಪುಸ್ತಕದ ಪ್ರಸ್ತಾವನೆಯಲ್ಲಿ ಹೇಳುತ್ತಾನೆ. ಆಡಳಿತ ನಡೆಸುವುದಕ್ಕಾಗಿಯೂ, ಧರ್ಮಪ್ರಸಾರಕ್ಕಾಗಿಯೂ ಕನ್ನಡವನ್ನು ಕಲಿಯುವುದರ ಅನಿವಾರ್ಯತೆಯಿಂದಾಗಿ ಕನ್ನಡ ವ್ಯಾಕರಣ, ಶಬ್ದಕೋಶಗಳು ಹೊರಬಂದವು. ಸಾಹಿತ್ಯವನ್ನು ಬಹು ಹುಲುಸಾಗಿ ಬೆಳೆಸಬೇಕೆಂಬ ಆಸೆಯನ್ನು ನಾವು ಮಿಶನರಿಗಳಲ್ಲಿ ಕಾಣಬಹುದಾಗಿದೆ. 

ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮಿಶನರಿಗಳನ್ನು ಕುರಿತು ಬರೆಯುವಾಗ ಬಿಎಂಶ್ರೀಯವರು ಕ್ರೈಸ್ತ ಪಾದ್ರಿಗಳ ಸೇವೆಯನ್ನು ಬಹು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಮೊತ್ತಮೊದಲು ಹಳೆಯ ತಾಳೆಯೋಲೆಗಳನ್ನು ಶೋಧಿಸಿ, ಸಾಹಿತ್ಯ ಗ್ರಂಥಗಳನ್ನು ಹೊರತೆಗೆದು, ಅಚ್ಚುಕೂಟವನ್ನು ಒದಗಿಸಿಕೊಟ್ಟು, ಪುಸ್ತಕಗಳನ್ನು ಪ್ರಕಟಿಸಿದವರು ಕ್ರೈಸ್ತ ಮಿಶನರಿಗಳು. ಕನ್ನಡದಲ್ಲಿ ರೆ. ಕಿಟಲ್, ತೆಲುಗಿನಲ್ಲಿ ಡಾ. ಬ್ರೌಸ್ ಹಾಗು ಮಲಯಾಳದಲ್ಲಿ ಡಾ. ಗುಂಡರ್ಟ್ ಹೀಗೆ ಇವರು ಆಯಾ ಭಾಷೆಗಳನ್ನು ಪಂಡಿತರ ಸಹಾಯದಿಂದ ಚೆನ್ನಾಗಿ ಕಲಿತು, ಹಳೆಯ ಗ್ರಂಥಗಳನ್ನು ಬೆಳಕಿಗೆ ತಂದಿದ್ದಲ್ಲದೆ ವ್ಯಾಕರಣ ನಿಘಂಟುಗಳನ್ನು ರಚಿಸಿ, ಭಾಷಾಶಾಸ್ತ್ರ ವ್ಯಾಸಂಗಕ್ಕೆ ಸಾಮಾಗ್ರಿ ಕೂಡಿ ಹಾಕಿದರು. ಆ ಬಳಿಕ ಡಾ. ಕಾಲ್ಡ್‌ವೆಲ್ ಅವರು ಇವರ ಕೆಲಸಗಳನ್ನು ಕ್ರೋಢೀಕರಿಸಿ, ಬಹುಕಾಲ ಶ್ರಮಪಟ್ಟು ಆಳವಾಗಿ ಪರಿಶೋಧಿಸಿ, ಆಯಾ ಭಾಷಾವರ್ಗದಿಂದ ಭಿನ್ನವಾದ ದ್ರಾವಿಡ ಭಾಷಾವರ್ಗವೊಂದುಂಟು ಎಂಬ ಅಭಿಪ್ರಾಯವನ್ನು ಜನಗಳ ಮುಂದಿಟ್ಟರು. ಜೊತೆಗೆ ಇವರಲ್ಲಿ ಸೃಜನಶೀಲ ಗುಣವು ಬೇರೂರಿದ್ದರಿಂದ ಕನ್ನಡದ ಸಾಹಿತ್ಯಿಕ ಬೆಳವಣಿಗೆಗೆ ಸೃಜನಾತ್ಮಕ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಸಫಲರಾದರು. ಕ್ರಿ.ಶ. ೧೮೧೦ರಿಂದ ಕ್ರಿ.ಶ. ೧೮೫೦ರ ಅವಧಿಯಲ್ಲಿ ಇವರಿಂದ ಅನುವಾದ ಕಾರ್ಯವು ಬಹು ಬಿರುಸಾಗಿ ಸಾಗಿತ್ತು. ಕನ್ನಡ ಭಾಷೆಯ ಅಂತಃಸತ್ವವನ್ನು ಗುರುತಿಸುತ್ತಾ ಅದಕ್ಕನುಗುಣವಾಗಿ ಕೃತಿಗಳನ್ನು ರಚಿಸುವುದು ಮತ್ತು ಅವುಗಳ ಪರಿಷ್ಕರಣೆ, ತೌಲನಿಕ ಅಧ್ಯಯನ ಹಾಗೂ ಪೌರಾಣಿಕ ವಿಷಯಗಳ ಮೂಲವನ್ನು ಕಂಡು ಹಿಡಿಯುವ ಕಾರ್ಯಗಳನ್ನು ಇವರು ಕೈಗೆತ್ತಿಕೊಂಡರು ಎಂಬುದಾಗಿ ಬಿಎಂಶ್ರೀಯವರು ಮಿಶನರಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಮ್ಮ ಕೆಲವು ಪುಸ್ತಕಗಳಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. 

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಮಿಶನರಿಗಳು ಸಲ್ಲಿಸಿರುವ ಸೇವೆಯನ್ನು ಈ ರೀತಿ ಸ್ಮರಿಸಬಹುದು. 

· ಕನ್ನಡದ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿ, ಉಪಯುಕ್ತವಾದ ಉಪೋದ್ಘಾತ ಬರೆದು ಪ್ರಕಟಿಸಿರುವುದು. ಉದಾಹರಣೆಗೆ ಕವಿರಾಜಮಾರ್ಗ, ಶಬ್ದಮಣಿ ದರ್ಪಣ, ಭಾಷಾಭೂಷಣ, ಕರ್ನಾಟಕ ಶಬ್ದಾನುಶಾಸನ, ಬಸವ ಪುರಾಣ, ಮುದ್ರಾಮಂಜೂಷ. 

· ಇಂಗ್ಲೀಷ್‌ನಿಂದ ಮತ್ತು ಇತರ ಭಾಷೆಗಳಿಂದ ಕೆಲವು ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಆ ಸಾಹಿತ್ಯ ಪ್ರಕಾರವನ್ನು ಪರಿಚಯಿಸಿರುವುದು. ಉದಾಹರಣೆಗೆ ಪಿಲ್ಗ್ರಿಮ್ಸ್ ಪ್ರೋಗ್ರೆಸ್ ಪ್ರವಾಸ ಕಥನ, ಸತ್ಯವೇದ ಮತ್ತು ಪರಮಾನಂದ ಗುರುವಿನ ಕಥೆ. 

· ಕನ್ನಡದ ಕೆಲವು ಗ್ರಂಥಗಳನ್ನು ಇಂಗ್ಲಿಷ್ ಹಾಗೂ ಇತರ ಭಾಷೆಗಳಿಗೆ ಅನುವಾದಿಸಿರುವುದು. ಉದಾಹರಣೆಗೆ ಶರಣರ ವಚನಗಳು, ದಾಸರ ಕೀರ್ತನೆಗಳು, ಜನಪದ ಲಾವಣಿಗಳು ಮತ್ತು ಗೋವಿಂದ ಪೈಗಳ ಗೊಲ್ಗೊಥಾ. 

· ಕನ್ನಡ ಶಾಸನಗಳನ್ನು ಪರಿಶೋಧಿಸಿ, ವ್ಯಾಖ್ಯಾನಿಸಿ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಿರುವುದು. ಉದಾಹರಣೆಗೆ ಲೂಯಿ ರೈಸ್‍ರವರ ಸಾಧನೆ. ಇವರು ಕನ್ನಡ ಶಾಸನಗಳ ಪಿತಾಮಹ ಎಂದೇ ಪ್ರಸಿದ್ಧರಾಗಿದ್ದಾರೆ. 

· ವ್ಯಾಕರಣ, ಛಂದಸ್ಸು, ನಿಘಂಟುಗಳನ್ನು ಸಿದ್ಧಪಡಿಸಿರುವುದು. ಉದಾಹರಣೆಗೆ: ಹಲವು ವ್ಯಾಕರಣ ಗ್ರಂಥಗಳು, ನಿಘಂಟುಗಳು, ಕಿಟೆಲ್ ಕನ್ನಡ-ಇಂಗ್ಲಿಷ್ ಶಬ್ದಕೋಶ. 

· ಕನ್ನಡ ಶಾಲಾ ಪಠ್ಯಪುಸ್ತಕಗಳನ್ನು ಬರೆದಿರುವುದು. 

· ಕನ್ನಡ ನಾಡಿನ ಸಾಹಿತ್ಯದ ಚರಿತ್ರೆ ಬರೆದಿರುವುದು. 

· ಚಾರಿತ್ರಿಕ ಲಾವಣಿಗಳನ್ನು ಸಂಗ್ರಹಿಸಿ ಇಂಗ್ಲಿಷ್ ಭಾಷೆಗೆ ಪರಿಚಯಿಸಿದ್ದು. ಉದಾ: ಜೆ ಎಫ್ ಫ್ಲೀಟರು ಸಂಪಾದಿಸಿದ ಲಾವಣಿಗಳು. 

· ಜಾನಪದ, ಸ್ಥಳನಾಮ ಅಧ್ಯಯನ, ಭಾಷಿಕ ಅಧ್ಯಯನಕ್ಕೆ ಸಾಮಗ್ರಿ ಒದಗಿಸಿದ್ದು. 

· ನವೋದಯ ಕನ್ನಡ ಕವಿತೆಗಳನ್ನು ಬರೆದು ಪ್ರಕಟಿಸಿದ್ದು. ಉದಾಹರಣೆಗೆ ಕಿಟೆಲ್ ಕಾವ್ಯಮಾಲೆ, ಬೈಬಲ್ ಗೀತೆಗಳು ಮತ್ತು ಪ್ರಾರ್ಥನಾ ಗೀತೆಗಳು. 

ಅಷ್ಟೇ ಅಲ್ಲದೆ, ಮಿಶನರಿಗಳು ಮುದ್ರಣಯಂತ್ರ ಬಳಸಿ ಗ್ರಂಥಗಳನ್ನು ಮುದ್ರಿಸಿ, ಪ್ರಕಟಿಸುತ್ತಾ ಜನರಿಗೆ ಸರಬರಾಜು ಮಾಡುತ್ತಿದ್ದರು. ಲಂಡನ್ ಮಿಶನಿನ ಮಿಶನರಿಗಳು ಬೈಬಲಿನ ಅನುವಾದದ ಕಾರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟರೆ, ವೆಸ್ಲಿಯನ್ ಮತ್ತು ಬಾಸೆಲ್ ಮಿಶನ್ನಿನ ಮಿಶನರಿಗಳು ಕೃತಿಗಳ ರಚನೆಯಲ್ಲೂ, ದ್ವಿಮತಗಳಿಗೆ ಹೋಲಿಸಿ ಬರೆಯುವುದರಲ್ಲಿಯೂ, ಪ್ರಾಚೀನ ಗ್ರಂಥಗಳ ಪರಿಷ್ಕರಣೆ, ಸಂಗ್ರಹಣೆ ಮತ್ತು ಸಂಪಾದನೆಗಳಿಗೂ, ಶಬ್ದಕೋಶ ರಚನೆಯಂತಹ ವಿಷಯಗಳಿಗೂ ಪ್ರಾಧಾನ್ಯತೆಯನ್ನು ಕೊಟ್ಟಿರುತ್ತಾರೆ. 

ಈ ಮಿಶನರಿಗಳು ರಚಿಸಿದ ಒಂದೊಂದು ಕೃತಿಗಳ ಸಾಹಿತ್ಯದಲ್ಲಿ ಭಾಷೆಯ ಪ್ರೌಢಿಮೆ ಎದ್ದುಕಾಣುತ್ತದೆ. ಕಥನಾತ್ಮಕ ಶೈಲಿಯಲ್ಲಿ ಗದ್ಯದ ಹರಿವನ್ನು ಹೆಚ್ಚಾಗಿ ಬಳಸಿರುತ್ತಾರೆ. ’ಹೃದಯ ದರ್ಪಣ’, ’ಯಾತ್ರಿಕನ ಸಂಚಾರ’, ಈ ಅನುವಾದಗಳಲ್ಲಿ ಗದ್ಯ-ಪದ್ಯಗಳಿರುತ್ತವೆ. ಇವರು ರಚಿಸಿದ ಕೃತಿಗಳು ಹೆಚ್ಚಾಗಿ ಕ್ರೈಸ್ತ ಸಭೆಯ ಆರಾಧನೆಗೆ ಸಂಬಂಧಿಸಿದ ಕೃತಿಗಳಾಗಿವೆ. ಅಂದರೆ ಕ್ರೈಸ್ತ ಧರ್ಮದಲ್ಲಿ ನಡೆಯುವ, ಪ್ರಾರ್ಥನೆ, ಸಂಸ್ಕಾರಗಳ ವಿಧಿ-ವಿಧಾನಗಳ ಆಚರಣೆಯಲ್ಲಿ ಹಬ್ಬ-ಹರಿದಿನಗಳಿಗೆ ಸಂಬಂಧಿಸಿದಂತಹ ವಸ್ತು ವಿಷಯವನ್ನೊಳಗೊಂಡಿವೆ. ಲಂಡನ್ ಮತ್ತು ವೆಸ್ಲಿಯನ್ ಸಂಸ್ಥೆಯ ಮಿಷನರಿಗಳು ಹೆಚ್ಚಾಗಿ ಧಾರ್ಮಿಕ ಸಾಹಿತ್ಯದೆಡೆಗೆ ಒಲವು ತೋರಿಸಿದರೆ, ಬಾಸೆಲ್ ಮಿಶನ್ ಸಂಸ್ಥೆಯವರು ಸಾಹಿತ್ಯಕ್ಕೆ ಹೆಚ್ಚಿನ ಬೆಲೆಕೊಟ್ಟು ಸಾಹಿತ್ಯಿಕ ಬೆಳೆಯನ್ನು ತೆಗೆಯುವಲ್ಲಿ ಹೆಚ್ಚು ಮಗ್ನರಾಗಿದ್ದರು. 

ಮಿಶನರಿಗಳ ಸಾಹಿತ್ಯವು ಹೊಸಗನ್ನಡದ ಭಾವಗೀತೆ, ಕತೆ, ಕಾದಂಬರಿ, ನಾಟಕ, ಸಾಹಿತ್ಯ ಪ್ರಕಾರಗಳ ಹುಟ್ಟು-ಬೆಳವಣಿಗೆಗೆ ಪ್ರೇರಕ ಶಕ್ತಿಯಾಯಿತು. ಸಭೆಗಳಲ್ಲಿ ಬಳಸುವ ಸಂಗೀತ ಸಂಕೀರ್ತನೆಗಳು ದೇಶೀಯ ಮಾದರಿಯಲ್ಲಿ ಹೋಲಿಕೆಯಾಗಿರುತ್ತವೆ. ಸಂಗೀತಗಳಲ್ಲಿ ಭಾವಗೀತೆಯ ಲಯವನ್ನು, ಸಂಕೀರ್ತನೆಗಳಲ್ಲಿ ಕೀರ್ತನಾ ಲಯವನ್ನು ಗುರುತಿಸುತ್ತವೆ. ಈ ಕೃತಿಗಳಲ್ಲಿ ಕಾಣುವ ಇನ್ನೊಂದು ಮಹತ್ವದ ಅಂಶವೆಂದರೆ ಇವರು ರಚಿಸಿರುವ ಕೃತಿಗಳಲ್ಲಿ ಗಾದೆಮಾತುಗಳ, ನಾಣ್ನುಡಿಗಳ ಪ್ರಾದೇಶಿಕತೆಯನ್ನು ಕಾಣಬಹುದು. ಉದಾಹರಣೆಗೆ ಫರ್ಡಿನಂಡ್ ಕಿಟೆಲ್ ಬರೆದ ಗಾದೆಮಾತುಗಳಲ್ಲಿ ಈ ಅಂಶ ಕಂಡುಬರುತ್ತದೆ. ಮಿಶನರಿಗಳು ಕರ್ನಾಟಕದ ಮೈಸೂರು ಮತ್ತು ಧಾರವಾಡ ಈ ಸ್ಥಳಗಳನ್ನು ತಮ್ಮ ಸಾಹಿತ್ಯ ಚಟುವಟಿಕೆಗಳ ಕೇಂದ್ರ ಸ್ಥಾನವನ್ನಾಗಿ ಆಯ್ಕೆಮಾಡಿಕೊಂಡಿದ್ದರು. ಸಾಹಿತ್ಯಾತ್ಮಕ ಕ್ಷೇತ್ರದಲ್ಲಿ ಇವರು ಸಾಧಿಸಿದ ಅತ್ಯುತ್ತಮ ಸಾಧನೆಯೆಂದರೆ ನಿಘಂಟು ಅಥವಾ ಶಬ್ದಕೋಶದ ರಚನಾಕಾರ್ಯ. ಇದು ಪ್ರತಿಯೊಬ್ಬ ವಿದ್ಯಾವಂತನಿಗೂ ಉಪಯುಕ್ತವಾದುದು ಎಂಬುದನ್ನು ಅರಿತ ಮಿಶನರಿಗಳು ಶಬ್ದಕೋಶಗಳ ರಚನೆಯಲ್ಲಿ ತೊಡಗಿದರು. 

ಕ್ರಿ.ಶ. ೧೮೧೭ರಲ್ಲಿ ವಿಲಿಯಂ ರೀವ್‌ ಹೊರತಂದ ಪ್ರಥಮ ಶಬ್ದಕೋಶ, ಕ್ರಿ.ಶ. ೧೮೪೦ರಲ್ಲಿ ಜಾನ್ ಗ್ಯಾರೆಟ್ ರಚಿಸಿದ ಕನ್ನಡ-ಇಂಗ್ಲಿಷ್ ಶಬ್ದಕೋಶ, ಸ್ಯಾಂಡರಸನ್ ಪರಿಷ್ಕರಿಸಿದ ಕನ್ನಡ-ಇಂಗ್ಲಿಷ್ ಶಬ್ದಕೋಶ, ಕ್ರಿ.ಶ. ೧೮೭೬ರಲ್ಲಿ ಪ್ರಕಟವಾದ ಝಿಗ್ಲರನ ಶಬ್ದಕೋಶ ಮತ್ತು ೧೮೯೪ರಲ್ಲಿ ಫರ್ಡಿನಂಡ್ ಕಿಟೆಲರು ರಚಿಸಿದ ಶಬ್ದಕೋಶ ಇವುಗಳೇ ಮಿಶನರಿಗಳ ಪ್ರಪ್ರಥಮ ಕಾರ್ಯ ಸಾಧನೆಗಳು. ಈ ಎಲ್ಲಾ ಕೃತಿಗಳ ಭಾಷಾ ಪ್ರೌಢಿಮೆ, ಶಬ್ದಗಳ ವ್ಯುತ್ಪತ್ತಿ ಅವುಗಳ ಮೂಲ ಮತ್ತು ವಿವಿಧಾರ್ಥಗಳನ್ನು ಗಮನಿಸಿದರೆ ನಿಜಕ್ಕೂ ಕನ್ನಡವು ಮಿಶನರಿಗಳಿಗೆ ಕೃತಜ್ಞವಾಗಿದೆ ಎಂದು ಇ. ಪಿ. ರೈಸ್ ಕ್ಯಾನರಿಸ್ ಲಿಟರೇಚರ್‌ನಲ್ಲಿ ಹೇಳುವ ಮಾತು ನೂರಕ್ಕೆ ನೂರು ಸತ್ಯವೆನಿಸುತ್ತದೆ. ಲಂಡನ್ ಮಿಶನರಿಯಾದ ಬಿ.ಎಲ್. ರೈಸ್ ’ಮೈಸೂರ್ ಗೆಝಟಿಯರ್’ನ್ನು ಸಂಪಾದಿಸಿದರು. ಕನ್ನಡ ಭಾಷೆಯ ಅಧಿಕೃತ ಮತ್ತು ಪ್ರಮುಖ ವ್ಯಾಕರಣ ಗ್ರಂಥವಾದ ’ಕೇಶಿರಾಜನ ಶಬ್ದಮಣಿದರ್ಪಣವನ್ನು’ ಕಿಟೆಲರು ಒಂಬತ್ತು ಹಸ್ತಪ್ರತಿಗಳನ್ನಿಟ್ಟುಕೊಂಡು ಶಾಸ್ತ್ರೀಯವಾಗಿ ಮತ್ತು ಕ್ರಮಬದ್ಧವಾಗಿ ಸಂಪಾದಿಸಿ ಕೊಟ್ಟಿರುತ್ತಾರೆ. 

ಮಿಶನರಿಗಳು ನಮ್ಮ ನಾಡಿಗೆ ಬಂದಾಗ ಅವರ ಗಮನ ಸೆಳೆದ ವಿಚಿತ್ರ ಸಂಗತಿಯೆಂದರೆ ಹಳಗನ್ನಡದ ಕೃತಿಗಳು ಮತ್ತು ತಾಳೆ ಎಲೆಗಳ ಮೇಲೆ ಬರೆದಿದ್ದ ಹಳಗನ್ನಡಕ್ಕೆ ಸಂಬಂಧಿಸಿದ್ದ ವ್ಯಾಕರಣಗಳೆಲ್ಲ ಗೆದ್ದಲುಹುಳುಗಳಿಗೆ ಆಹುತಿಯಾಗುತ್ತಿದ್ದ ದೃಶ್ಯ. ಈ ಸಂದರ್ಭಲ್ಲಿ ಅವುಗಳನ್ನೆಲ್ಲ ಸಂರಕ್ಷಿಸಿ, ಸಂಪಾದಿಸಿ, ಪ್ರಕಟಣೆ ಮಾಡಬೇಕೆನ್ನುವ ದಿಸೆಯಲ್ಲಿ ಆ ಕಾರ್ಯವನ್ನು ಬಹು ಸಮರ್ಪಕವಾಗಿ ನಿರ್ವಹಿಸಿದರು. ಬಾಸೆಲ್ ಮಿಶನ್ನಿನ ಮಿಶನರಿಗಳಾದ ಝಿಗ್ಲರ್, ಗ್ರೇಟರ್ ಇವರುಗಳು ಕೂಡ ವ್ಯಾಕರಣ ಪರಂಪರೆಗೆ ಉತ್ಕೃಷ್ಟವಾದ ಕೊಡುಗೆಯನ್ನು ನೀಡಿರುತ್ತಾರೆ. ಝಿಗ್ಲರ್ ಮತ್ತು ಕಿಟೆಲ್ ಇವರು ಪ್ರಾಚೀನ ಕನ್ನಡ ವ್ಯಾಕರಣ ಕ್ರಮವನ್ನು ಅನುಸರಿಸಿದರು, ಬಿ. ಗ್ರೇಟರ್‌ರವರು ಇಂಗ್ಲಿಷ್ ವ್ಯಾಕರಣ ಪದ್ಧತಿಯನ್ನು ಅನುಸರಿಸಿದರು. ಕಿಟೆಲರ ಹಳಗನ್ನಡ ವ್ಯಾಕರಣ ಮತ್ತು ಸೂತ್ರಗಳು, ಝಿಗ್ಲರರ ಕನ್ನಡ ಬಾಲವ್ಯಾಕರಣ ಮತ್ತು ಕನ್ನಡ ಶಾಲಾ ವ್ಯಾಕರಣ, ಇವು ವ್ಯಾಕರಣಕ್ಕೆ ಸಂಬಂಧಿಸಿದ ಕೃತಿಗಳು. ಇವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವವನ್ನು ಪಡೆದಿರುತ್ತವೆ. 

ಇಷ್ಟು ಸಾಲದೆಂಬಂತೆ ಗ್ರಂಥ ಸಂಪಾದನಾ ಕ್ಷೇತ್ರಕ್ಕೂ ಮಹತ್ತರವಾದ ಕೊಡುಗೆಯನ್ನು, ವಿಶೇಷವಾಗಿ ಬಾಸೆಲ್ ಮಿಶನ್ನಿನ ಮಿಶನರಿಗಳಾದ ಮೊಗ್ಲಿಂಗ್, ಕಿಟೆಲ್ ನೀಡಿರುತ್ತಾರೆ. ಮೊಗ್ಲಿಂಗ್‌ರು ಕ್ರಿ.ಶ. ೧೮೪೮ರಲ್ಲಿ ತೊರವೆರಾಮಾಯಣ, ದಾಸರ ಪದಗಳು, ಕನಕದಾಸರ ಹರಿಭಕ್ತಿಸಾರ, ಭೀಮಕವಿಯ ಬಸವ ಪುರಾಣ ಇವುಗಳ ಸಂಪಾದನಾ ಕಾರ್ಯದಲ್ಲಿ ಬಹಳಷ್ಟು ಶ್ರಮವಹಿಸಿರುತ್ತಾರೆ. ವಿಲಿಯಂ ರೀವನು ಹಳಗನ್ನಡ ಕೋಶಗಳಾದ ಕರ್ನಾಟಕ ಶಬ್ಧಮಂಜರಿ ಚತುರಾಸ್ಯ ನಿಘಂಟು ಇವುಗಳನ್ನು ಕೇವಲ ಪರಿಶೀಲಿಸಿದರು ಅಷ್ಟೇ, ಆದರೆ ಕಿಟೆಲ್ ಮತ್ತು ಮೋಗ್ಲಿಂಗ್‌ರು ಮಾಡಿದಂತಹ ಸಾಧನೆಯನ್ನು ಮೀರಿಸಲಾಗಲಿಲ್ಲ. ಇವರ ಎಲ್ಲಾ ಸಾಧನೆಯ ಗುರಿಯನ್ನು ತುಸು ಅವಲೋಕಿಸಿದಾಗ ಕನ್ನಡ ಸಾಹಿತ್ಯವನ್ನು ವಿದೇಶಿಯರಿಗೆ ಮತ್ತು ದೇಶಿಯರಿಗೆ ಪರಿಚಯಿಸಬೇಕೆಂಬ ದಿಸೆಯಲ್ಲಿ ಇವರು ಕಾರ್ಯಗೈದಿರುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ತದನಂತರ ಬಂದಂತಹ ಕವಿಗಳು ಇವರ ದಿಟ್ಟತನವನ್ನು ಮೆಚ್ಚಿ ಕನ್ನಡ ಸಾಹಿತ್ಯದ ಹಿರಿಮೆಯನ್ನು ಉತ್ತುಂಗ ಶಿಖರಕ್ಕೇರಿಸಿರುವುದು ಎಲ್ಲರಿಗೂ ತಿಳಿದಿರುವಂತಹ ವಿಷಯ. 

ಒಟ್ಟಾರೆ ಮಿಶನರಿಗಳು ಭಾರತಕ್ಕೆ ಬಂದು ಗ್ರಂಥ ರಚನೆ, ಮುದ್ರಣಕಾರ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ದುಡಿದರು. ಇವರಿಂದ ಕೆಲವು ದೇಶೀಯ ಮಿಶನರಿಗಳು ಪ್ರೇರಿತರಾಗಿ ಸಾಹಿತ್ಯ ರಂಗದಲ್ಲಿ ಶ್ರಮಿಸುವಂತಾಯಿತು. ಮಿಶನರಿಗಳು ತಮ್ಮ ಅರವತ್ತು ವರ್ಷಗಳ ಕಾಲಾವಧಿಯಲ್ಲಿ ಅನೇಕ ಹೊಸ ವಿಚಾರಗಳನ್ನೂ, ನವೀನ ರೂಪಗಳನ್ನು ಸಾಹಿತ್ಯ ರಂಗದಲ್ಲಿ ಪ್ರತಿಷ್ಠಾಪಿಸಿದ್ದಾರೆ ಜೊತೆಗೆ ಹೊಸಗನ್ನಡ ಚರಿತ್ರೆಯಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಹೀಗೆ ಮಿಶನರಿಗಳು ಹೊಸಗನ್ನಡದ ಉದಯಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಅವರು ಕನ್ನಡದಲ್ಲಿ ಕ್ರೈಸ್ತ ಧಾರ್ಮಿಕ ಸಾಹಿತ್ಯವನ್ನು ರಚಿಸಿದರು. ಪಠ್ಯಪುಸ್ತಕ ಹಾಗೂ ವ್ಯಾಕರಣ ಕೃತಿಗಳನ್ನು ಪರಿಶೀಲಿಸಿ, ಪರಿಷ್ಕರಿಸಿ ಪ್ರಕಟಿಸಿದರು. ಕನ್ನಡಕ್ಕೆ ಅಮೂಲ್ಯವಾದ ನಿಘಂಟನ್ನು ಒದಗಿಸಿಕೊಟ್ಟರು. ವಿದೇಶಿ ಭಾಷೆಗಳಲ್ಲಿ ಸಂಶೋಧನಾ ಲೇಖನಗಳನ್ನು ಬರೆದು ಕನ್ನಡ ಸಾಹಿತ್ಯವನ್ನು ಪಾಶ್ಚಾತ್ಯ ಲೋಕಕ್ಕೆ ಪರಿಚಯಿಸಿದರು. 

ಮುಂದಿನ ಸಂಚಿಕೆಯಲ್ಲಿ ಮಿಶನರಿಗಳ ಸೇವೆಯು ಸಾಮಾಜಿಕ ಮತ್ತು ಔದ್ಯೋಗಿಕ ಕಾರ್ಯಗಳಲ್ಲೂ ವಿಸ್ತಾರವಾಗಿತ್ತು ಎಂಬುದನ್ನು ತಿಳಿಸಲಾಗುವುದು. 

******************* 

ಏಳು ಸಲವಲ್ಲ ಏಳೆಪ್ಪತ್ತು ಸಲ ಕ್ಷಮಿಸಬೇಕು”


· ಅನು



ಸಂವಾದ ಶುರುವಾಗುವುದೇ ಒಂದು ಪ್ರಶ್ನೆಯಿಂದ. ಅದು ಶಿಷ್ಯರಲೇ ಪ್ರಮುಖನಾಗಿದ್ದ ಪೇತ್ರನ ಕ್ಷಮಾಪಣೆಯ ಲೆಕ್ಕಚಾರದ ಗೊಂದಲದಲ್ಲಿ ಮೂರ್ತಗೊಂಡ ಪ್ರಶ್ನೆಯಿಂದ. ಅ ಪ್ರಶ್ನೆಗೆ ಉತ್ತರವಾಗಿ ಬಂದಿದ್ದು “ಏಳು ಸಲವಲ್ಲ ಏಳೆಪ್ಪತ್ತು ಸಲ ಕ್ಷಮಿಸಬೇಕು” ಎಂಬ ಕ್ರಿಸ್ತನ ಮಾತು. ಅದನ್ನು ಸ್ಪಷ್ಟಪಡಿಸಲು ಹೇಳಿದ ಒಂದು ಸ್ವಾರಸ್ಯಕರ ಸಾಮತಿ. ಈ ಪ್ರಶ್ನೆಗಳ ಕೆಲಸವೇ ಅದು. ಹೊಸ ಹೊಸ ಅವಿಷ್ಕಾರಗಳಿಗೆ, ಅರ್ಥಗಳ ಹೆರಿಗೆಗಳಿಗೆ ಭೂಮಿಕೆಯಾಗುವಂತೆ ಇಲ್ಲೂ ಶಿಷ್ಯನ ಪ್ರಶ್ನೆಯು ಕ್ಷಮಾಪಣೆಯ ಒಂದು ಗಂಭೀರ ವ್ಯಾಖ್ಯಾನಕ್ಕೆ ಮುನ್ನುಡಿಯಾಗುತ್ತದೆ. “ಸ್ವಾಮಿ ನನ್ನ ವಿರುದ್ಧ ದ್ರೋಹ ಮಾಡುತ್ತಿರುವ ನನ್ನ ಸಹೋದರರನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?” ಈ ಪ್ರಶ್ನೆಗೆ ಉತ್ತರವಾಗಿ ಕ್ಷಮಾಪಣೆ ಎಂಬ ಒಂದು ಸಾಮತಿ ಕ್ರಿಸ್ತನ ಬತ್ತಳಿಕೆಯಿಂದ ಅನಾವರಣಗೊಳ್ಳುತ್ತಾ ಕ್ಷಮಾಪಣೆಯ ಹತ್ತಾರು ಸ್ತರಗಳನ್ನು ಬಿಚ್ಚುತ್ತಾ ಹೋಗುತ್ತದೆ. 

“ಸ್ವಾಮಿ ನನ್ನ ವಿರುದ್ಧ ದ್ರೋಹ ಮಾಡುತ್ತಿರುವ ನನ್ನ ಸಹೋದರರನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?” ಪೇತ್ರನ ಪ್ರಶ್ನೆಯನ್ನು ಮತ್ತೊಮ್ಮೆ ಓದಿ ನೋಡಿ! ಯೇಸುವಿನ ಉದಾರತೆ ಮತ್ತು ಉನ್ನತ ಮಟ್ಟದ ಮೌಲ್ಯಗಳ ಬಗ್ಗೆ ಅರಿವಿದ್ದ ಪೇತ್ರ ಯೆಹೊದ್ಯ ಗುರುಗಳು ಪ್ರತಿಪಾದಿಸಿದ ’ಮೂರು ಭಾರಿಯ ಕ್ಷಮಾಪಣೆ”ಯನ್ನು ಎರಡರಿಂದ ಗುಣಿಸಿ. ಉತ್ತರಕ್ಕೆ ಮತ್ತೊಂದು ಸೇರಿಸಿ ಏಳು ಸಲವೆಂದು ಉತ್ತರದಲ್ಲೇ ಲೆಕ್ಕದ ಪ್ರಶ್ನೆಯನ್ನು ಕ್ರಿಸ್ತನ ಮುಂದಿಡುತ್ತಾನೆ, ಇಲ್ಲಿ ಪೇತ್ರನಿಗೆ ತಪ್ಪು ಮಾಡಿದವರನ್ನು ಕ್ಷಮಿಸಬೇಕೆಂಬ ಅರಿವಿನ ಬಗ್ಗೆ ಎಳ್ಳಷ್ಟೂ ಸಂಶಯವಿರಲಿಲ್ಲ, ಅವನಿಗೆ ಸಮಸ್ಯೆಯಾಗಿ ಕಾಡಿದ್ದು ಕ್ಷಮಿಸುವುದು ಎಷ್ಟು ಸಲ ಎಂಬ ಲೆಕ್ಕಚಾರ. ಪ್ರೇತ್ರನ ಈ ಗೊಂದಲಕ್ಕೆ ಕಾರಣಗಳೇನಿರಬಹುದು? 

ಲೆಕ್ಕಚಾರವೆಂಬುದು ಯೆಹೊದ್ಯರ ಬದುಕಿನಲ್ಲಿ ಅದರಲ್ಲೂ ಅವರ ಧಾರ್ಮಿಕತೆಯಲ್ಲಿ ಹಾಸುಹೊಕ್ಕಾಗಿತ್ತು. ದಿನಕ್ಕೆ ಎಷ್ಟುಸಲ ಪ್ರಾರ್ಥಿಸಬೇಕು? ಊಟದ ಮುಂಚೆ ಎಷ್ಟು ಸಲ ಕೈತೊಳೆದುಕೊಳ್ಳಬೇಕು? ಹೀಗೆ ಅವರಲ್ಲಿ ಪ್ರತಿಯೊಂದಕ್ಕೂ ಲೆಕ್ಕಚಾರವಿರುತಿತ್ತು. ಅವರ ಬದುಕೇ ಲೆಕ್ಕಚಾರವಾಗಿತ್ತು ಎಂದರೆ ಅತಿಶೋಕ್ತಿಯಾಗಲಾರದು. ಇಂತಹ ಅವರ ಒಂದು ಮನೋವ್ಯಾಧಿ ಕ್ಷಮಾಪಣೆ ಎಂಬ ಉದಾತ್ತ ಗುಣವನ್ನು ಸಹ ಬೆಂಬಿಡದೆ ಕಾಡುವುದನ್ನು ನಾವು ಇಲ್ಲಿ ಕಾಣುತ್ತೇವೆ. ಹೌದು, ಯೆಹೂದ್ಯರಿಗೆ ಕ್ಷಮಾಪಣೆ ಎಂಬುದು ಮೂರು ಸಲ ಮಾತ್ರ ನೀಡಬಹುದಾಗಿದ್ದ ಒಂದು ವಿಧಿವಿಧಾನವಾಗಿತ್ತು. ಇದು ಧಾರ್ಮಿಕ ಮುಖಂಡರು ಬೋಧಿಸುತ್ತಿದ್ದ: ಒಬ್ಬನು ಇನ್ನೊಬ್ಬನನ್ನು ಮೂರು ಬಾರಿಗಿಂತ ಹೆಚ್ಚು ಸಲ ಕ್ಷಮಿಸಬಾರದು” ಎಂಬ ತತ್ವದ ಬೇರಿನ ಗಿಡವಾಗಿತ್ತು. ಇದೇ ಒಂದು ಸಂಕುಚಿತತೆಯ ತಕ್ಕಡಿಯಲ್ಲಿ ಯೆಹೂದ್ಯರು ಭಗವಂತನ ಕ್ಷಮಾಗುಣವನ್ನು ಅಳೆಯುತ್ತಿದ್ದರು. ಈ ಕಾರಣದಿಂದ ಭಗವಂತ ಕೇವಲ ಮೂರು ಸಲ ಕ್ಷಮಿಸಿ ನಾಲ್ಕನೇಯ ಭಾರಿಗೆ ತಪ್ಪಿಸ್ಥನನ್ನು ಶಿಕ್ಷಿಸುವ ನಿಷ್ಠುರ ನ್ಯಾಯಾಧೀಶ ಎಂಬ ಅಲ್ಪ ಅಭಿಪ್ರಾಯ ಜನರಲ್ಲಿ ಗಾಢವಾಗಿತ್ತು. 

ಇಂತಹ ಹಿನ್ನೆಲೆಯಿಂದ ಬಂದಿದ್ದ ಯೆಹೂದಿ ಪೇತ್ರನಿಗೆ ಕಾಡಿದ್ದು ಈ ಲೆಕ್ಕದ ವಿಚಾರವೇ. ಆದರೆ ಯೇಸು ಅವನ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿ, ಏಳು ಸಲವಲ್ಲ ಏಳೆಪ್ಪತ್ತುಸಲ ಕ್ಷಮಿಸಬೇಕೆಂದು ಹೇಳುತ್ತಾರೆ. ಅದರರ್ಥ ಕ್ಷಮೆಯೆಂಬುದು ಗಣಿತದ ಲೆಕ್ಕವಲ್ಲ, ಅದು ಲೆಕ್ಕ ಇಟ್ಟಷ್ಟೂ ಲೆಕ್ಕಕ್ಕೆ ಸಿಗದ ಅಂತಃಕರಣದ ನಡೆ ಎಂದು. ಆದುದರಿಂದ ಕ್ಷಮಾಪಣೆ ಎಂಬುದು ಲೆಕ್ಕಗಳಿಂದ ಬಂಧಿಸಲ್ಪಡುವಂತದಲ್ಲ. ಅದು ಪ್ರತಿಯೊಬ್ಬ ಆತ್ಮದ ಅಪರಿಮಿತ ಚೈತನ್ಯವಾಗಿರಬೇಕೆಂಬುದೇ ಕ್ರಿಸ್ತನ ಆಶಯ. 

ಇವಿಷ್ಟು ಕ್ಷಮಿಸುವ ಲೆಕ್ಕಚಾರವಾದರ, ಇನ್ನೊಂದು ಕಡೆ, ನಮ್ಮ ಕ್ಷಮೆ ಯಾವ ರೀತಿದಾಗಿರಬೇಕು ಎಂಬುವುದನ್ನು ಸಹ ಕ್ರಿಸ್ತನ ಮಾತುಗಳು ಬಹಿರಂಗಪಡಿಸುತ್ತವೆ. ಬೈಬಲ್‍ನಲ್ಲಿ ಏಳು ಎಂಬುದು, ಸಂಪೂರ್ಣತೆಯನ್ನು ಸಂಕೇತಿಸುವ ಒಂದು ಸಂಖ್ಯೆ. ಆದ್ದರಿಂದ ಯೇಸುವಿನ ಉದಾರತೆಯ ಉತ್ತರದಲ್ಲಿ ಕಾಣಸಿಗುವ ಏಳು, ನಾವು ಸಹ ದೇವರಂತೆ ನಮ್ಮವರನ್ನು ಸಂಪೂರ್ಣವಾಗಿ, ಮನಃಪೂರ್ವಕವಾಗಿ ಯಾವುದೇ ಶರತ್ತುಗಳಿಲ್ಲದೆ ಕ್ಷಮಿಸಬೇಕೆಂಬ ಪೂರ್ಣತೆಯ ರೂಪಕವಾಗಿದೆ. ಇಲ್ಲಿ ಎಷ್ಟು ಬಾರಿ ಕ್ಷಮಿಸಿದ್ದೇನೆ ಎಂಬುವುದರ ಜತೆಗೆ ನಿರಂತರವಾಗಿ, ನಿಯಮಗಳನ್ನು ಮೆಟ್ಟಿ, ಶರತ್ತುಗಳಿಲ್ಲದೆ ಸಂಪೂರ್ಣವಾಗಿ ಕ್ಷಮಿಸಬೇಕೆಂಬುವುದೇ ಕ್ರಿಸ್ತನ ಉತ್ತರದ ಒಳಾರ್ಥ. 

ಕ್ರಿಸ್ತ, ತನ್ನ ಮಾತನು ಸ್ಪಷ್ಟಪಡಿಸಲು ಅಥವಾ ಗಟ್ಟಿಗೊಳಿಸಲು ಒಂದು ಕಥೆಯ ಮರೆಹೊಗುತ್ತಾನೆ. ಈ ಸಾಮತಿಯು ಸ್ವರ್ಗರಾಜ್ಯದಲ್ಲಿ ಕ್ಷಮೆಯೆಂಬ ಅದಮ್ಯ ಚೇತನದ ಪೂರ್ಣ ಸ್ವರೂಪವನ್ನು ಅಭಿವ್ಯಕ್ತಿಗೊಳಿಸುತ್ತದೆ. 

ಕ್ರಿಸ್ತ ಹೇಳಿದ ಸಾಮತಿಯಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶ, ಸೇವಕರ ಸಾಲಗಳ ನಡುವೆಯಿದ್ದ ವ್ಯತಿರಿಕ್ತವಾದ ಅಂತರ. ಈ ಅಂತರವನ್ನು ಸಾಲಗಾರರ ಸಾಲದ ಒಟ್ಟು ಮೊತ್ತಗಳು ನಮಗೆ ಸ್ಪಷ್ಟವಾಗಿ ಬಹಿರಂಗ ಪಡಿಸುತ್ತವೆ. ಸೇವಕ ರಾಜನಿಂದ 10,000 ತಲೆಂತುಗಳನ್ನು ಸಾಲವಾಗಿ ಪಡೆದಿದ್ದರೆ, ಅವನ ಜೊತೆಗಾರ ಆಳು, ಕೇವಲ 100 ದಿನಾರಿ ನಾಣ್ಯಗಳನ್ನು ಆ ಸೇವಕನಿಂದ ಸಾಲ ಪಡೆದಿರುತ್ತಾನೆ. ಈಗಿನ ವಿನಿಮಯದ ಲೆಕ್ಕದಲ್ಲಿ 10,000 ತಲೆಂತುಗಳು 9 ಮಿಲಿಯನ್ ಡಾಲರಗಳಿಗೆ ಸಮಾನವಾದರೆ, 100 ದಿನಾರಿ ಕೇವಲ 15 ಡಾಲರ್ಗಳಿಗೆ ಸರಿಸಮನಾಗಿವೆ. 10000*600=60000000 ದಿನಾರಿಗಳಷ್ಟು ತೀರಿಸಲಾಗದಂತಹ ಬಹೃತ್ ಮೊತ್ತದ ಸಾಲ ಮಾಡಿದ್ದ ಆ ಸೇವಕ. ಯೆಹೂದ್ಯ ಇತಿಹಾಸ ಬರಹಗಾರನಾದ ಯೋಸೆಫಸ್ಸನ ಪ್ರಕಾರ ಯೆಹೂದ್ಯರು ಸಲ್ಲಿಸುತ್ತಿದ್ದ ವಿವಿಧ ತೆರಿಗೆಗಳ ಮುಖಾಂತರ ಒಂದು ಇಡೀ ವರ್ಷಕ್ಕೆ ರಾಜನ ಖಜಾನೆಗೆ ಅಥವಾ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ 600 ತಲೆಂತುಗಳು ಮಾತ್ರ. ರಾಜನ ಬೊಕ್ಕಸಕೆ ಬರುತ್ತಿದ್ದ ಆದಾಯ ಮತ್ತು ಸೇವಕನ ಸಾಲವನ್ನು ಒಮ್ಮೆ ತಾಳೆ ಮಾಡಿ ನೋಡಿ. ಆ ಸೇವಕ ತನ್ನ ಜೀವಮಾನಾವಧಿಯಲ್ಲಿ ಹಿಂತಿರುಗಿಸಲಾಗದಂತಹ ಸಾಲವನ್ನು ಮಾಡಿದ್ದ ಎಂದು. ರಾಜನು ಸೇವಕನ 9 ಮಿಲಿಯನ್ ಡಾಲರುಗಳಿಗೆ ಸಮಾನವಾದ, ಊಹಿಸದಷ್ಟು ನಂಬಲಾಗದಷ್ಟು ಬೆಟ್ಟದಾಕಾರದ ಸಾಲವನ್ನು ಮನ್ನಿಸಿದರೂ ಆ ಸೇವಕ ಜೊತೆ ಸೇವಕನ 100 ದಿನಾರಿ ನಾಣ್ಯಗಳು- ಮೊದಲನೆಯ ಸೇವಕನ ಬೆಟ್ಟದಂತಹ ಸಾಲಕ್ಕೆ ಒಂದು ಚಿಕ್ಕ ಕಣದಂತಹ ಸಾಲ- ಆನೆ ಗಾತ್ರದ ಸಾಲದ ಮುಂದೆ ಸಣ್ಣ ಇರುವೆಷ್ಟು ಸಾಲವನ್ನು ಮನ್ನಿಸುವುದಿಲ್ಲ. ದೇವರು ನಮ್ಮ ಅಸಂಖ್ಯ ಪಾಪಗಳನ್ನು ಮನ್ನಿಸಿದರೂ ನಮ್ಮ ಸಹೋದರರ ಕೆಲವೊಂದು ಪಾಪಗಳನ್ನು ಕ್ಷಮಿಸಲು ನಾವು ಹಿಂದು ಮುಂದು ನೋಡುತ್ತೇವೆ. 

ಕ್ಷಮೆ ಎಂಬ ಮೌಲ್ಯ ನಮ್ಮಲ್ಲಿ ಗರ್ಭಕಟ್ಟಿಕೊಳ್ಳಲಿ. ಆ ಕ್ಷಮೆ ಎಂಬ ಮೌಲ್ಯವನ್ನು ನಾವು ಲೆಕ್ಕಗಳಲ್ಲಿ ಬಂಧಿಸದೆ ಲೆಕ್ಕವಿಲ್ಲದಷ್ಟು ಸಲ ಕ್ಷಮಿಸುವ ಮನೋಭಾವ ನಮ್ಮಲ್ಲಿ ಹುಟ್ಟಿಕೊಳ್ಳಲಿ. ಇತರರಿಗೆ ದಯೆ, ಕ್ಷಮೆ, ಕರುಣೆ ತೋರಿಸುವವರಿಗೆ ದೇವರು ದಯೆ ಕ್ಷಮೆ ಕರುಣೆಯನ್ನು ತೋರಿಸುತ್ತಾರೆ ಎಂಬುದು ಈ ಸಾಮತಿಯ ಸಂದೇಶ. ದೇವರ ಕ್ಷಮಾಗುಣವನ್ನು ಧರ್ಮಸಭೆಯ ಪ್ರತಿಯೊಬ್ಬ ವಿಶ್ವಾಸಿಗಳು ಕಲಿಯಬೇಕು. ನಮಗೆ ಉತ್ತಮ ಉದಾಹರಣೆ ಶಿಲುಬೆ ಮೇಲೆ ನೇತಾಡುತ್ತಿರುವಾಗ ಕ್ರಿಸ್ತ ತೋರಿದ ಅನುಪಮ ಕ್ಷಮೆ. 


******************* 

ಕರ ಕೃತಿಯ ಬೋಧನೆ ತರುತ್ತದೆ ನಮಗೆ ಸ್ವರ್ಗದ ಸಂಭಾವನೆ


ಸಹೋ. ಜಾರ್ಜ್ ಫೆರ್ನಾಂಡಿಸ್ (ಜಾಜಿ) 
ಎಂ. ದಾಸಾಪುರ

ದೇವರು ನಮ್ಮೆಲ್ಲರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಠಿಮಾಡುವುದರ ಮೂಲಕ ಅವರ ಪ್ರೀತಿಯನ್ನು ನಮ್ಮಲ್ಲಿ ಹಂಚಿ ಅದೇ ಪ್ರೀತಿಯನ್ನು ಜಗದ ಎಲ್ಲೆಡೆ ಸಾರಿರಿ ಎಂದು ಹೇಳಿದರು. ಅಂದು ಅಂಜುಬುರುಕರಾಗಿದ್ದ ಶಿಷ್ಯರು ಮತ್ತು ಮಾತೆ ಮರಿಯಳು ಒಂದು ಕೊಠಡಿಯಲ್ಲಿ ಪ್ರಾರ್ಥನೆ ಮಾಡುತ್ತಾ ಇರುವಾಗ ಪವಿತ್ರಾತ್ಮರು ಅವರ ಮೇಲೆ ಇಳಿದು ಬಂದು ಅವರನ್ನು ತಮ್ಮ ಶಕ್ತಿಯಿಂದ ತುಂಬಿದರು. ಅಂದಿನಿಂದ ಅವರೆಲ್ಲರೂ ಸುವಾರ್ತಾ ಪ್ರಸಾರದ ಅವಶ್ಯಕತೆಯನ್ನು ಮನಗಂಡು ಅಂದಿನಿಂದ ಸುವಾರ್ತಾ ಪ್ರಸಾರದ ಸೇವಾಕಾರ್ಯವನ್ನು ವಿಶ್ವದ ಉದ್ದಗಲಕ್ಕೂ ಕೈಗೊಂಡರು. 

ಮುಖ್ಯವಾಗಿ ಸಂತರಾದ ಪೇತ್ರ ಮತ್ತು ಪೌಲರು ಈ ಸುವಾರ್ತಾ ಪ್ರಸಾರದ ಪ್ರಮುಖ ಮೂಲೆಗಲ್ಲುಗಳಾಗಿ, ಅನ್ಯವಿಶ್ವಾಸಿಗಳಿಗೆಲ್ಲಾ ಪ್ರಭುವಿನ ಬಗ್ಗೆ ಬೋಧಿಸಿ, ಧರ್ಮಸಭೆಯನ್ನು ಸ್ಥಾಪಿಸಿದರು. ಸುವಾರ್ತಾ ಕಾರ್ಯವನ್ನೇ ತಮ್ಮ ಬದುಕಿನ ಮುಖ್ಯ ಧ್ಯೇಯವನ್ನಾಗಿಸಿಕೊಂಡು, ತಮ್ಮ ಉಸಿರನ್ನಾಗಿಸಿಕೊಂಡು ಆ ಪುಣ್ಯದ ಕಾರ್ಯಕ್ಕೆ ಸಾಕ್ಷಿಗಳಾಗಿ ಅಂತೆಯೇ ಅದು ಎಂದಿಗೂ ನಿಂತ ನೀರಾಗಬಾರದೆಂದು ಎನಿಸಿ, ಅದನ್ನು ಪೋಷಿಸಿ ಜಗದ ಎಲ್ಲೆಡೆ ಅದು ಸಾಗರವಾಗಿ ಹರಿಯುವಂತೆ ಮಾಡಿದರು. ಹೀಗೆ ಅಂದು ಸ್ಥಾಪಿಸಲ್ಪಟ್ಟ ಆ ಕ್ರಿಸ್ತರ ಧರ್ಮಸಭೆಯು ಇಂದು ಜಗತ್ತಿನಲೆಲ್ಲಾ ಹಬ್ಬಿ ಹರಡಿದೆ, ಇಂದಿಗೂ ಆ ಸೇವಾಕಾರ್ಯ ಹರಡಿಕೊಳ್ಳುತ್ತಿದೆ. ಕ್ರಿಸ್ತರು ತೋರಿದ ಸ್ವರ್ಗದ ಹಾದಿಯನ್ನು ಈ ಜಗತ್ತಿಗೆಲ್ಲಾ ಮನದಟ್ಟು ಮಾಡಿ ಅದೇ ನಮ್ಮ ಬಾಳಿನ ಮೂಲವಾಗಬೇಕೆಂದು ಪ್ರಸ್ತುತ ಧರ್ಮಸಭೆಯ ಆಶಯ. 

ಈ ಆಶಯದೊಂದಿಗೆ ನಾವೆಲ್ಲಾ ಜೀವಿಸುತ್ತಿರುವಾಗ ನಮ್ಮ ಕ್ರಿಸ್ತ ಪ್ರೇರಿತ ಬದುಕು ಸುವಾರ್ತೆಗೆ ಸಾಧನವಾಗುತ್ತಿದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ. ನಮ್ಮ ವಿಶ್ವುರು ಫ್ರಾನ್ಸಿಸ್‍ರವರು ಸುವಾರ್ತಾ ಪ್ರಸಾರದ ಭಾನುವಾರದ ಪ್ರಯುಕ್ತ ನೀಡಿದ ಸಂದೇಶದ ಮೂಲ ತಿರುಳೇನೆಂದರೆ, ನಾವೆಲ್ಲರೂ ಸ್ನಾನದೀಕ್ಷೆಯನ್ನು ಪಡೆದವರು ಮತ್ತು ಕಳುಹಿಸಲ್ಪಟ್ಟವರು. ಇದರ ಒಳಾರ್ಥವನ್ನೊಮ್ಮೆ ಇಣುಕಿನೋಡಿದಾಗ, ನಮ್ಮ ವಿಶ್ವಗುರು ಹೇಳುವಂತೆ ಸ್ನಾನದೀಕ್ಷೆಯ ಮೂಲಕ ನಮ್ಮೆಲ್ಲರನ್ನು ಕ್ರಿಸ್ತರ ಸಾಮ್ರಾಜ್ಯಕ್ಕೆ ಆಹ್ವಾನಿಸಲಾಗಿದೆ. ಅದರ ಮೂಲಕ ನಾವು ಸುವಾರ್ತೆಯ ರಾಯಾಭಾರಿಗಳಾಗಿ ಆ ಸುವಾರ್ತೆಯನ್ನು ಜಗದ ಎಲ್ಲೆಡೆ ಬೋಧಿಸಲು ನಾವು ಕಳುಹಿಸಲ್ಪಟ್ಟಿದ್ದೇವೆ. ಹೀಗೆ ನಾವು ಸುವಾರ್ತೆಯ ರಾಯಭಾರಿಗಳಾಗಲು ಕರೆಹೊಂದಿದವರು ಎಂಬ ನಿಜಾಂಶವನ್ನು ವಿಶ್ವಗುರು ನಮಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. 

ಪ್ರಸ್ತುತ ಯುಗದಲ್ಲಿ ಎಲ್ಲವೂ ತಂತ್ರಜ್ಞಾನಮಯವಾಗುತ್ತಿರುವ ಈ ಸಮಾಜದಲ್ಲಿ ಸುವಾರ್ತಾ ಬೋಧನೆಯ ಅವಶ್ಯಕತೆ ಎಷ್ಟಿದೆ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರವೇ. ಅಂದು ಯೇಸುವು ತಮ್ಮ ಪ್ರೇಷಿತರಿಗೆ, ಹೋಗಿ ಜಗತ್ತಿನ ಎಲ್ಲೆಡೆಗೂ ಶುಭಸಂದೇಶವನ್ನು ಸಾರಿರಿ ಎಂದು ಹೇಳುವುದರ ಮೂಲಕ ಸುವಾರ್ತಾ ಪ್ರಸಾರದ ಸೇವಾ ಕಾರ್ಯಕ್ಕೆ ಮುನ್ನುಡಿ ಬರೆದರು. ಬಹುಶಃ ಅಂದು ಯೇಸುವು ಬರೆದ ಮುನ್ನುಡಿ ಇಂದಿಗೂ ಪ್ರಸ್ತುತವಲ್ಲವೇ? ಏಕೆಂದರೆ ಇಂದು ನಾವೆಲ್ಲರೂ ಸುವಾರ್ತಾ ಬೋಧಕರಾಗಬೇಕೆಂಬುದು ಕ್ರಿಸ್ತರ ಬಯಕೆ. 

ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿ ಅವರ ವಾಕ್ಯವನ್ನು ಆಲಿಸಿ, ಶರೀರವನ್ನು ಭುಜಿಸುವುದರ ಮೂಲಕ ಅಲ್ಲಿ ಕಂಡುಕೊಂಡ ಕ್ರಿಸ್ತೇಸುವನ್ನು ನಮ್ಮ ಸುತ್ತಮುತ್ತಲ ಸಮಾಜದಲ್ಲಿ ಕರ ಕೃತಿಗಳ ಮೂಲಕ ತೋರ್ಪಡಿಸಬೇಕಾದುದು ನಮ್ಮೆಲ್ಲ ಕರ್ತವ್ಯ. ಅಷ್ಟೇ ಅಲ್ಲದೆ ನಮ್ಮ ದಿನನಿತ್ಯದ ಜೀವನದಲ್ಲಿ ನೊಂದವರ ಸಾಂತ್ವನವಾಗಿ, ದಮನಿತರ ದನಿಯಾಗಿ, ನಿರ್ಗತಿಕರಿಗೆ ಆಶ್ರಯವಾಗಿ, ಪ್ರೀತಿ ಅರಸುವವರಿಗೆ ಪ್ರೀತಿಯ ಚಿಲುಮೆಯಾಗಿ ಮತ್ತು ಬದುಕಿನಲ್ಲಿ ಭರವಸೆಯನ್ನು ಕಳೆದುಕೊಂಡವರಿಗೆ ಭರವಸೆಯ ಕಿರಣವಾಗಿ ನಿಲ್ಲೋಣ. ಅವರೂ ಕೂಡ ಕ್ರಿಸರ ಸೃಷ್ಠಿಗಳು ಎಂಬುದನ್ನು ಅರಿತು ಕ್ರಿಸ್ತರ ಸ್ಪರ್ಶವು ಅವರಿಗೆ ತಾಗುವಂತೆ ನೋಡಿಕೊಳ್ಳೋಣ. 

ನಾವು ಈ ಸುವಾರ್ತಾ ಪ್ರಸಾರದ ಭಾನುವಾರದಂದು ಮಾಡುವ ತ್ಯಾಗದ ಕಾಣಿಕೆ ಈ ಜಗತ್ತಿನ ಯಾವುದೋ ಮೂಲೆಯಲ್ಲಿರುವ ಬಡವರ, ನಿರ್ಗತಿಕರ ಮತ್ತು ನೊಂದವರ ಹಸಿವನ್ನು ನೀಗಿಸುತ್ತದೆ ಎಂದಾದರೆ, ನಾವು ಆಚರಿಸುವ ಈ ನಮ್ಮ ಸುವಾರ್ತಾ ಪ್ರಸಾರ ಭಾನುವಾರವು ನಾವೆಲ್ಲರೂ ಕ್ರಿಸ್ತರ ಸುವಾರ್ತೆಯ ರಾಯಭಾರಿಗಳು ಎಂಬ ಸತ್ಯವನ್ನು ಜಗತ್ತಿಗೆ ತೋರಿಸುತ್ತದೆ. ನಾವು ಕ್ರೈಸ್ತರೆಂದು ಹೇಳಿಕೊಂಡು ಜೀವಿಸುವುದಕ್ಕಿಂತ, ನಮ್ಮ ಕರ ಕೃತಿಗಳು ಈ ಸಮಾಜದ ಶೋಷಿತ ವರ್ಗದ ಕಣ್ಣೀರನ್ನು ಒರೆಸಲು ಮುಂದಾದರೆ ಅದೇ ಅತೀ ಶ್ರೇಷ್ಠವಾದ ಸುವಾರ್ತಾ ಸೇವೆ. ಕ್ರಿಸ್ತರು ಅಂದು ಮಾಡಿದ್ದು ಅದನ್ನೇ. ಇಂದು ನಮ್ಮಿಂದ ಅವರು ಬಯಸುತ್ತಿರುವುದು ಅದನ್ನೇ. 

ನಮ್ಮ ಮುಖದ ಸೌಂದರ್ಯಕ್ಕಿಂತ ಹೃದಯದ ಸೌಂದರ್ಯವು ಈ ಸುವಾರ್ತಾ ಪ್ರಸಾರಕ್ಕೆ ಅತೀ ಅವಶ್ಯಕ ಎಂಬುದನ್ನು ಅರಿತು, ಸುವಾರ್ತಾ ಪ್ರಸಾರವು ತುಟಿ ಬೋಧನೆಗಳಿಗಿಂತ ಹೆಚ್ಚಾಗಿ ಕರ ಬೋಧನೆಗಳಲ್ಲಿ ಕಾರ್ಯರೂಪಕ್ಕೆ ಬಂದರೆ ಸುವಾರ್ತಾ ಪ್ರಸಾರವು ತನ್ನಿಂದ ತಾನೇ ಹರಡಿಕೊಳ್ಳುತ್ತದೆ ಎಂಬುದನ್ನು ಮರೆಯದಿರೋಣ. ಹೀಗೆ ನಮ್ಮ ಕರ ಕೃತಿಯ ಬೋಧನೆ ತರುತ್ತದೆ ನಮಗೆ ಸ್ವರ್ಗೀಯ ಸಂಭಾವನೆ ಎಂಬುದನ್ನು ತಿಳಿದು ಬಾಳೋಣ. 

******************* 

ನೈಜಭಕ್ತಿ!

¨ ಫಾದರ್ ವಿಜಯ್ ಕುಮಾರ್, ಬಳ್ಳಾರಿ

ನೈಜಭಕ್ತಿ! ಎಂದರೆ ಅಪ್ಪಟ ಪ್ರೀತಿಯಿಂದಲೂ, ಶ್ರದ್ಧೆಯಿಂದಲೂ, ಪ್ರಾಮಾಣಿಕತೆಯಿಂದಲೂ, ನಿಷ್ಠೆಯಿಂದಲೂ, ಬದ್ಧತೆಯಿಂದಲೂ ಮಾನವ ತನ್ನ ತನು ಮನವನ್ನು ಸಂಪೂರ್ಣವಾಗಿ ಸೃಷ್ಟಿಕರ್ತನಿಗೆ (ಒಡೆಯನಿಗೆ)ಸಮರ್ಪಿಸುವುದು. ಇವುಗಳಲ್ಲಿ ಯಾವುದನ್ನೂ ತನಗೆಂದು ಹಿಡಿದಿಟ್ಟುಕೊಳ್ಳುವ ಹಾಗಿಲ್ಲ. ಈ ಕಾರಣ ಒಬ್ಬ ಮಾನವ ತನ್ನ ಸೃಷ್ಟಿಕರ್ತನಿಗೆ (ಒಡೆಯನಿಗೆ) ತೋರುವ ನಿಷ್ಕಲ್ಮಶ ಹಾಗೂ ಅನನ್ಯ ಪ್ರೀತಿಯನ್ನು ನೈಜಭಕ್ತಿ ಎನ್ನಬಹುದು. 

ಅದರಲ್ಲಿ ಸ್ವಾಮಿನಿಷ್ಠೆ, ಅಪ್ಪಟ ಪ್ರಾಮಾಣಿಕತೆ ಹಾಗೂ ಬದ್ಧತೆ ತುಂಬಿ ಹೊರ ಸೂಸುತ್ತದೆ. ನೈಜಭಕ್ತಿಯಲ್ಲಿ ಯಾವ ದ್ವಂದ್ವವಾಗಲೀ, ಗೊಂದಲವಾಗಲೀ, ಮುಚ್ಚುಮರೆಯಾಗಲೀ ಇರುವುದಿಲ್ಲ. ಅದು ಪಾರದರ್ಶಕವಾಗಿರುತ್ತದೆ. ನೈಜಭಕ್ತಿಯಿಂದ ತುಂಬಿದ ಭಕ್ತನ ಮನದಾಳದಲ್ಲಿ ಹಾಗೂ ಎಲ್ಲೆಲ್ಲೂ ಸದಾ ಸೃಷ್ಟಿಕರ್ತನೇ ತುಂಬಿ ತುಳುಕುತ್ತಾನೆ. ಇದನ್ನೇ ಕೀರ್ತನೆಕಾರ "ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು? ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ. ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ. ನಾನರುಣ ರೆಕ್ಕೆಗಳನೇರಿ ಹಾರಿದರೂ, ಸಮುದ್ರದ ಕಟ್ಟಕಡೆಗಳಲಿ ನಾ ಸೇರಿದರೂ ಅಲ್ಲೂ, ನನ್ನ ನಡೆಸುವುದು ನಿನ್ನ ಕೈ, ನನ್ನ ಹಿಡಿದಿರುವುದು ನಿನ್ನ ಬಲಗೈ" ಎನ್ನುತ್ತಾನೆ (ಕೀರ್ತನೆ 139:8-10). 

ಈ ಕಾರಣ ಭಕ್ತನು ನಿರಂತರವೂ ತನ್ನಲ್ಲಿಯೂ, ಪರರಲ್ಲಿಯೂ ಭಗವಂತನ ಪ್ರಸನ್ನತೆಯನ್ನು ಕಾಣುತ್ತಾನೆ ಹಾಗೂ ನಿತ್ಯದ ಬದುಕಿನಲ್ಲಿ ತನ್ನ ಎಲ್ಲಾ ಕಾಯಕವನ್ನು ಆರಾಧನೆಯಾಗಿ ಪರಿವರ್ತಿಸುತ್ತಾನೆ. ಸೃಷ್ಟಿಕರ್ತನನ್ನು ಸಂತೃಪ್ತಿಪಡಿಸುವುದು ಮಾತ್ರವಲ್ಲದೆ ಸಕಲರೊಡನೆಯೂ ಅನ್ಯೋನ್ಯವಾಗಿರುವುದೇ ಭಕ್ತನ ಪರಮ ಗುರಿಯಾಗಿರುತ್ತದೆ. ಹಾಗೆಯೇ ಭಕ್ತನ ಬಾಳಿನಲ್ಲಿ ದೇವಮಾನವರ ಹಿತವೇ ಪರಮ ಉದ್ದೇಶವಾಗುತ್ತದೆ. ಸತ್ಯದ ಬೆಳಕು ಅವನಿಗೆ ನಿತ್ಯದ ಪ್ರೇರಣೆಯಾಗಿ ಅವನಂತರಂಗದಲ್ಲಿ ಮನೆಮಾಡುತ್ತದೆ. 

ನೈಜ ಭಕ್ತಿ ತೋರಿಕೆಯದಲ್ಲ. ಅದು ಪರಿಪೂರ್ಣ ತ್ಯಾಗದಿಂದ ತುಂಬಿರುತ್ತದೆ. ಅಲ್ಲಿ ತನ್ಮಯತೆ ಹಾಗೂ ತಲ್ಲೀನತೆ ತುಂಬಿರುತ್ತದೆ. ಭಕ್ತನು ತನ್ನ ಸೃಷ್ಟಿಕರ್ತನಿಗೋಸ್ಕರ ತನ್ನನ್ನು ಸಂಪೂರ್ಣವಾಗಿ ಕರಗಿಸಿಕೊಳ್ಳಲು ಸದಾ ಸಿದ್ದನಿರುತ್ತಾನೆ. ಇದನ್ನೇ ಸಂತ ಸ್ನಾನಿಕ ಯೊವಾನ್ನನು "ಆತ ಬೆಳೆಯುತ್ತಿರಬೇಕು, ನಾನು ಅಳಿಯುತ್ತಿರಬೇಕು" (ಯೊವಾನ್ನ 3:30) ಎನ್ನುತ್ತಾನೆ. ಇಲ್ಲಿ ಶೂನ್ಯವೇ ಭಕ್ತನ ಆಸ್ತಿ. ಸೃಷ್ಟಿಕರ್ತನೇ ಭಕ್ತನ ಪರಮಸಂಪತ್ತು. ನೈಜ ಭಕ್ತಿಯಲ್ಲಿ ಮಿಂದು ಸಂತೃಪ್ತನಾದ ಭಕ್ತನಿಗೆ ವಿಶ್ವವೆಲ್ಲವೂ ಮಿತ್ಯ ಸೃಷ್ಟಿಕರ್ತನೇ ಸತ್ಯ. ಈ ಕಾರಣ ಆತನ ದುರ್ಗುಣಗಳು, ನಶ್ವರ ಆಸೆ ಆಕಾಂಕ್ಷೆಗಳು ಹಂತಹಂತವಾಗಿ ದಮನವಾಗಿ ಸದ್ಗುಣಗಳು ರೂಪುಗೊಳ್ಳುತ್ತವೆ. ಪರೋಪಕಾರ, ಕ್ಷಮಾಗುಣ, ಔದಾರ್ಯ ಹಾಗೂ ಸೇವಾ ಗುಣಗಳು ಆತನಲ್ಲಿ ನಿತ್ಯವೂ ಹಾಸುಹೊಕ್ಕಾಗುತ್ತವೆ. 

ನೈಜ ಭಕ್ತಿಯಲ್ಲಿ ವಿಧೇಯತೆ ತುಂಬಿರುತ್ತದೆ. ಭಕ್ತನು ತನ್ನ ಸೃಷ್ಟಿಕರ್ತನಿಗೆ ಸಂಪೂರ್ಣವಾಗಿ ಶರಣಾಗುತ್ತಾನೆ. ನೀರಿನಲ್ಲಿ ಉಪ್ಪು ಕರಗಿಹೋಗುವಂತೆ ಭಕ್ತನು ದೇವನಲ್ಲಿ ಕರಗಿಹೋಗುತ್ತಾನೆ. ಆದರೆ ನೀರಿನಲ್ಲಿ ಉಪ್ಪು ಕರಗಿದರೂ ಅದು ತನ್ನ ರುಚಿಯನ್ನು ಕಳೆದುಕೊಳ್ಳುವುದಿಲ್ಲ ಹಾಗೆಯೇ ಭಕ್ತನು ಭಕ್ತನಾಗಿಯೇ ಉಳಿದುಕೊಳ್ಳುತ್ತಾನೆ. ಹೀಗೆ ಸೃಷ್ಟಿಕರ್ತ ಮಾನವನನ್ನು ಶುದ್ಧೀಕರಿಸಿ ಮಾನವನನ್ನಾಗಿಯೇ ಉಳಿಸುತ್ತಾರೆ. ಆದರೆ ಆತನು ತನ್ನ ಸನ್ನಿಧಿಯಲ್ಲಿ ನಿರಂತರವಾಗಿ ವಾಸಿಸಲು ಬೇಕಾದ ಸುಜ್ಞಾನದ ಬೆಳಕನ್ನು ನೀಡುತ್ತಾನೆ. ಆ ಸುಜ್ಞಾನ ಅವರಿಬ್ಬರಲ್ಲಿನ ಅನನ್ಯ ಸತ್ಸಂಬಂಧವನ್ನು ವೃದ್ಧಿಸಿ ನಿತ್ಯಾನಂದದ ಚಿಲುಮೆಯಾಗಿ ಪರಿವರ್ತನೆಯಾಗುತ್ತದೆ. 

ನೈಜ ಭಕ್ತಿಯಲ್ಲಿ ಸದ್ಭಕ್ತನು ಸೃಷ್ಟಿಕರ್ತನಲ್ಲಿ ನೆಲೆಗೊಳ್ಳುತ್ತಾನೆ. ಆಗ ಅವನಿಗೆ ಯಾವ ಕೊರತೆಯೂ ಕಾಣುವುದಿಲ್ಲ. ಒಂದು ವೇಳೆ ಕೊರತೆ ಇದ್ದರೂ ಅದು ಕೊರತೆ ಎಂದು ಕೊರಗದೆ ಸಂತೋಷ ತುಂದಿಲನಾಗುತ್ತಾನೆ. ಇದನ್ನು ಪ್ರವಾದಿ ಹಬಕ್ಕೂಕನು "ಅಂಜೂರದ ಮರ ಚಿಗುರದೆ ಹೋದರೂ, ದ್ರಾಕ್ಷಾಲತೆಗಳಲ್ಲಿ ಹಣ್ಣು ಕಾಣದೆ ಹೋದರೂ, ಎಣ್ಣೆ ಮರಗಳ ಉತ್ಪತ್ತಿಯು ಶೂನ್ಯವಾದರೂ, ಹೊಲಗದ್ದೆಗಳು ಆಹಾರ ಕೊಡದೆಹೋದರೂ, ಕುರಿಹಟ್ಟಿಗಳು ಬರಿದಾಗಿ ಹೋದರೂ, ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ ಸಂತೋಷಿಸುವೆ ನಾನು ಸರ್ವೇಶ್ವರನಲಿ ಆನಂದಿಸುವೆ ನನ್ನ ಉದ್ಧಾರಕ ದೇವನಲಿ. ಸ್ವಾಮಿಸರ್ವೇಶ್ವರ ನೀಡುವನೆನಗೆ ಧೀರತೆ, ಚುರುಕುಗೊಳಿಸುವನಾತ ನನ್ನ ಕಾಲುಗಳನು ಜಿಂಕೆಯಂತೆ, ಮಾಡುವನು ಬೆಟ್ಟಗುಡ್ಡಗಳಲಿ ನಾನು ಓಡಾಡುವಂತೆ" (3:17-19) ಎನ್ನುತ್ತಾನೆ. ಅಂದರೆ ನೈಜಭಕ್ತಿಯಲ್ಲಿ ಮಿಂದ ಭಕ್ತನಿಗೆ ತನ್ನ ದೇವನೇ ಎಲ್ಲವೂ ಎಂಬ ಆಂತರಿಕ ಅರಿವು ತೆರೆದುಕೊಳ್ಳುತ್ತದೆ. ಆಗ ಆತ ದೇವನೇ ಎಲ್ಲಾ ಮಿಕ್ಕೆಲ್ಲವೂ ಏನೂ ಅಲ್ಲ ಎಂದು ತಿಳಿದುಕೊಳ್ಳುತ್ತಾನೆ. 

ನೈಜ ಭಕ್ತಿಯಲ್ಲಿ ಭಕ್ತನು ದೈವ ಪ್ರೀತಿಯಲ್ಲಿ ತುಂಬಿಹೋಗುತ್ತಾನೆ ಆಗ ಆತನು ನಿತ್ಯವೂ ಆನಂದದಲ್ಲಿ ತುಂಬಿರುತ್ತಾನೆ. ಆತನ ತನು-ಮನ ಶುದ್ಧೀಕರಣಗೊಂಡು ನವೀಕರಣಗೊಳ್ಳುತ್ತದೆ. ವಿಶೇಷವಾಗಿ ಆತನ ಜ್ಞಾನ ವೃದ್ಧಿಯಾಗುತ್ತದೆ ಬುದ್ದಿಶಕ್ತಿ ವಿಕಾಸಗೊಂಡು ಚುರುಕುಗೊಳ್ಳುತ್ತದೆ. ಲೌಕಿಕ ಹಾಗೂ ಆಧ್ಯಾತ್ಮಿಕ ವಿಷಯಗಳನ್ನು ನಿಚ್ಚಳವಾಗಿ ಅರ್ಥೈಸಿಕೊಳ್ಳುವ ಸುಜ್ಞಾನ ಉದಯವಾಗಿ ಪರರ ಬಾಳಿಗೆ ಬೆಳಕನ್ನು ನೀಡುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಅಂಥವನಿಗೆ ಕ್ಷಣಿಕ ಆಸೆಗಳಾಗಲೀ, ಲೌಕಿಕ ಆಸ್ತಿಪಾಸ್ತಿಯ ವ್ಯಾಮೋಹವಾಗಲೀ ಇರುವುದಿಲ್ಲ. 

ಬದಲಾಗಿ ಸಮತೋಲನವಾದ ಬದುಕಿನ ಪರಿಯನ್ನು ಕರಗತಮಾಡಿಕೊಂಡು, ಸಂತೃಪ್ತಿಯ ಜೀವನವನ್ನು ರೂಢಿಸಿಕೊಂಡು ಇತರರ ಬಾಳಿಗೆ ಆಸರೆಯಾಗಲು ಹಾತೊರೆಯುತ್ತಾನೆ. ಈ ಬದುಕು ಒಂದು ಪಯಣ. ಪಯಣದ ಅಂತ್ಯದಲ್ಲಿ ಸಾಫಲ್ಯವನ್ನು ಕಾಣಲು ಜೀವನವಿಡೀ ಸಾಫಲ್ಯದ ಹಾದಿಯಲ್ಲಿ ಸಾಗಬೇಕು ಎಂಬ ಸತ್ಯ ಅವನಿಗೆ ಮನದಟ್ಟಾಗಿರುತ್ತದೆ. ಈ ಕಾರಣ ಅವನು ತನ್ನ ಬಾಳಿನ ಏಳು ಬೀಳುಗಳಲ್ಲಿ ವಿಚಲಿತನಾಗದೆ ಭಕ್ತಿಯಲ್ಲಿಯೇ ತಲ್ಲೀನನಾಗಿರುತ್ತಾನೆ. 

ನೈಜ ಭಕ್ತಿಯಲ್ಲಿ ಬದ್ಧತೆ ಪ್ರಮುಖವಾದುದು. ಬದ್ಧತೆ ಪ್ರತಿಜ್ಞೆ ಇದ್ದ ಹಾಗೆ. ಒಂದು ಬಾರಿ ಪ್ರತಿಜ್ಞೆ ಮಾಡಿದರೆ ಅದನ್ನು ಚಾಚೂ ತಪ್ಪದೆ ಪಾಲಿಸಬೇಕು. ಇಲ್ಲದಿದ್ದಲ್ಲಿ ಅದು ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ, ಕುಂದನ್ನುಂಟು ಮಾಡುತ್ತದೆ. ಮಾಡಿದ ಪ್ರತಿಜ್ಞೆಯನ್ನು ಕಾಯಾ, ವಾಚಾ, ಮನಸಾ ಪಾಲಿಸುವುದೇ ಬದ್ಧತೆ. ಯಾವುದೇ ಒಬ್ಬ ವ್ಯಕ್ತಿ ತನ್ನ ಕಾಯಕದಲ್ಲಿ ಸಾಫಲ್ಯವನ್ನು ಕಾಣಬೇಕಾದರೆ ಬದ್ಧತೆ ಇರಲೇಬೇಕು. ಬದ್ಧತೆ ಇಲ್ಲದ ಕೆಲಸ ಸಾಫಲ್ಯವನ್ನು ಕಾಣಲಾರದು. ಬದ್ಧತೆಯಲ್ಲಿ ಪೊಳ್ಳು ಆಶ್ವಾಸನೆಗಳಿಗೆ ಹಾಗೂ ಕುಂಟುನೆಪಗಳಿಗೆ ಆಸ್ಪದವಿರುವುದಿಲ್ಲ. ಅಲ್ಲಿ ಸತ್ಯ ಪಥವೇ ಪರಮ ಪಥವಾಗುತ್ತದೆ. "ನಾನು ಕ್ರಿಸ್ತ ಯೇಸುವನ್ನು ಅನುಸರಿಸುವಂತೆ, ನೀವೂ ನನ್ನನ್ನು ಅನುಸರಿಸಿರಿ" (ಕೊರಿಂಥಿ 11:1) ಎಂದು ಸಂತ ಪೌಲ ಕೊರಿಂಥಿಯರಿಗೆ ಕರೆ ನೀಡುವ ಮೂಲಕ ತನಗೆ ಕ್ರಿಸ್ತನಲ್ಲಿದ್ದ ಅಪಾರ ಭಕ್ತಿಯನ್ನು, ಬದ್ಧತೆಯನ್ನು ವ್ಯಕ್ತಪಡಿಸುತ್ತಾನೆ. ಹಾಗೆಯೇ ಪೌಲ ತನ್ನ ಮತ್ತು ಪ್ರಭುವಿನ ಸತ್ಸಂಬಂಧವನ್ನು "ಕ್ರಿಸ್ತಯೇಸುವಿನೊಂದಿಗೆ ನಾನೂ ಶಿಲುಬೆಗೇರಿಸಲಾದವನು. ಈಗ ಜೀವಿಸುವವನು ನಾನಲ್ಲ. ಕ್ತಿಸ್ತಯೇಸು ನನ್ನಲ್ಲಿ ಜೀವಿಸುತ್ತಾರೆ. ನನ್ನನ್ನು ಪ್ರೀತಿಸಿ ನನಗಾಗಿ ಪ್ರಾಣಾರ್ಪಣೆ ಮಾಡಿದ ದೇವರ ಪುತ್ರನಲ್ಲಿ ನಾನು ಇರಿಸಿರುವ ವಿಶ್ವಾಸದಿಂದಲೇ ನಾನೀಗ ಈ ದೇಹದಲ್ಲಿ ಜೀವಿಸುತ್ತಿದೇನೆ" (ಗಲಾತ್ಯ 2:20) ಎಂದು ವಿವರಿಸುತ್ತಾನೆ. 

ಬದ್ಧತೆಗೆ ಬದ್ಧನಾದವನು ನೈಜ ಭಕ್ತಿಯಲ್ಲಿ ಪ್ರವರ್ಧಿಸಿ, ಸಿದ್ಧಿಯನ್ನು ಕಂಡುಕೊಳ್ಳುತ್ತಾನೆ. ಭಕ್ತಿ ಎಂದರೆ ತೋರಿಕೆಯ ಪೂಜೆಯಲ್ಲ ಬಾಹ್ಯ ಆಚರಣೆಗಳಲ್ಲ. ಭಕ್ತಿ ಎಂದರೆ ಅಪ್ಪಟ ಪ್ರೀತಿ, ಭಕ್ತಿ ಎಂದರೆ ಪ್ರಾಮಾಣಿಕತೆ, ಭಕ್ತಿ ಎಂದರೆ ಶ್ರದ್ಧೆ ಮತ್ತು ಭಕ್ತಿ ಎಂದರೆ ಬದ್ಧತೆ ಇವುಗಳಿಲ್ಲದಿದ್ದಲ್ಲಿ ಅದು ನೈಜ ಭಕ್ತಿಯಾಗಲಾರದು. ಇದನ್ನು ವಚನಕಾರ ಜೇಡರ ದಾಸಿಮಯ್ಯ "ಬರುಸಟಗನ ಭಕ್ತಿ ದಿಟವೆಂದು ನಚ್ಚಲು ಬೇಡ. ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ!”ಎನ್ನುತ್ತಾನೆ. 

ನೈಜ ಭಕ್ತಿಯಲಿ ಪರೀಕ್ಷೆಗಳು ಸಹಜ. ಅವು ಭಕ್ತನು ದೈವ ಪ್ರೀತಿಯಲ್ಲಿ ಸಂಪೂರ್ಣವಾಗಿ ನೆಲೆ ನಿಲ್ಲುವಂತೆ ಮಾಡುತ್ತವೆ. ಇದನ್ನು ಕೀರ್ತನೆಕಾರ "ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು ಭರವಸೆಯಿಂದಿರು, ಆತನದನು ಸಾಗಿಸುವನು" (37:5) ಎನ್ನುತ್ತಾನೆ. ಆದರೆ ಭಕ್ತ ವಿಚಲಿತನಾಗಿ ನಿರಾಶೆಗೊಂಡರೆ ಭಕ್ತಿಯ ನೈಜ ಸತ್ವವನ್ನು ಕಳೆದುಕೊಳ್ಳುತ್ತಾನೆ. ಪರೀಕ್ಷೆಗಳಲ್ಲಿ ವಿಚಲಿತನಾಗದಿರುವವನು ಜಯದ ಜಯಮಾಲೆಯನ್ನು ಹೊಂದುತ್ತಾನೆ. ಇದನ್ನು ಬೈಬಲಿನ ಸುಜ್ಞಾನ ಗ್ರಂಥವು "ಮಾನವನ ದೃಷ್ಟಿಯಲ್ಲಿ ಅವರು ಕಂಡುಬಂದರು ಶಿಕ್ಷಿಸಲ್ಪಟ್ಟವರಂತೆ, ಅವರಲ್ಲಾದರೋ ತುಂಬಿತ್ತು ಅಮರತ್ವದ ನಂಬಿಕೆ ನಿರೀಕ್ಷೆ. ಅವರು ಅನುಭವಿಸಿದ ಶಿಕ್ಷೆ ಅಲ್ಪ, ಹೊಂದುವ ಸೌಭಾಗ್ಯ ಅಪಾರ. ಶೋಧಿಸಿದ ತರುವಾಯ ದೇವರಿಗೆ ಅವರು ಕಂಡುಬಂದರು ಯೋಗ್ಯಾರ್ಹ. ಶೋಧಿಸಿದರವರನು ಪುಟಕ್ಕಿಟ್ಟ ಚಿನ್ನದಂತೆ, ಅಂಗೀಕೃತರಾದರು ಪೂರ್ಣದಹನ ಬಲಿಯಂತೆ. ಪ್ರಕಾಶಿಸುವರು ದೇವರನು ಸಂದರ್ಶಿಸುವ ಕಾಲದಲಿ, ಹೊಳೆಯುವರು ಒಣಹುಲ್ಲಿನೊಳಗಿನ ಕಿಡಿಗಳೋಪಾದಿ. ನ್ಯಾಯ ತೀರಿಸುವರವರು ಜನಾಂಗಗಳಿಗೆ, ದೊರೆತನ ಮಾಡುವರವರು ಜನಗಳ ಮೇಲೆ, ದೇವರ ಪ್ರಜೆಗಳಾಗಿರುವರು ಸದಾಕಾಲಕೆ" (3:3-8). ಎಂದು ವಿವರಿಸುತ್ತದೆ. ಈ ಮೂಲಕ ಸದ್ಭಕ್ತನಿಗೆ ಬರುವ ಕಷ್ಟನಷ್ಟಗಳು ತರಗೆಲೆಗಳಂತೆ ತೂರಿಹೋಗುತ್ತೆ, ಮೋಡಗಳಂತೆ ಕರಗಿಹೋಗುತ್ತವೆ ಹಾಗೂ ದೇವರ ಭಕ್ತಿಯಲ್ಲಿ ಮಿಂದು ಮಾಗಿದ ಅನುಬಂಧ ಮಾತ್ರ ಶಾಶ್ವತ ಎಂಬುವುದಂತೂ ಸತ್ಯವೇ ಸರಿ. 


******************* 

ಗಾಂಧಿಯನ್ನು ಮೊದಲು ತಿಳಿಯಬೇಕು.......



ಡಾ. ದಿನೇಶ್ ನಾಯಕ್

ಕನ್ನಡ ವಿಭಾಗ, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) 
ಮಂಗಳೂರು 
jeevadani2016@gmail.com

ಪ್ರತೀ ಬಾರಿಯೂ ಗಾಂಧಿ ನನ್ನ ಮುಂದೆ ಬಂದು ಕುಳಿತಾಗ ನನಗೆ ಯೇಸುಕ್ರಿಸ್ತ ನೆನಪಾಗುತ್ತಾರೆ. 
ಲಾರ್ಡ್ ಮೌಂಟ್ ಬ್ಯಾಟನ್, ಬ್ರಿಟಿಷ್ ಭಾರತದ ಕೊನೆಯ ವೈಸ್‌ರಾಯ್ 
ನನಗೆ ಇಬ್ಬರು ದೇವರು. ಒಬ್ಬರು ಜೀಸಸ್ - ಅವರು ನನಗೆ ಬದುಕನ್ನು ಕೊಟ್ಟವರು. ಇನ್ನೊಬ್ಬರು ಗಾಂಧಿ - ಅವರು ನನಗೆ ಬದುಕಿನ ದಾರಿಯನ್ನು ತೋರಿಸಿದವರು. 

ಮಾರ್ಟಿನ್ ಲೂಥರ್ ಕಿಂಗ್ 

ಮಹಾತ್ಮ ಗಾಂಧೀಜೀಯವರ ಸಮಕಾಲೀನರಾದ ಇವರಿಬ್ಬರೂ ಗಾಂಧಿಯನ್ನು ಕಣ್ಣಾರೆ ಕಂಡು, ಅವರ ಬದುಕನ್ನು ಸರಿಯಾಗಿ ಅರ್ಥ ಮಾಡಿಕೊಂಡವರು. ಹಾಗಾಗಿ ಇವರ ಮಾತುಗಳಲ್ಲಿ ಅಂಥಾ ಉತ್ಪ್ರೇಕ್ಷೆ ಏನೂ ಇಲ್ಲ ಅಂತನಿಸುತ್ತದೆ. ಗಾಂಧೀಜಿಯವರ ಬದುಕೇ ಹಾಗೆ ಇತ್ತು. ಅದೊಂದು ಹೋರಾಟದ ಮತ್ತು ಸತ್ಯದ ಹುಡುಕಾಟದ ಬದುಕಾಗಿತ್ತು. ಅವರು ಯಾವತ್ತೂ ನಡೆ-ನುಡಿ ಒಂದಾಗಿ ಬದುಕಿದವರು. ಹಾಗಾಗಿ ಅವರ ಬದುಕೇ ಒಂದು ಸಂದೇಶವಾಗಿದೆ. 

ಗಾಂಧೀಜಿಯವರು ತಮ್ಮ ಆತ್ಮಕಥೆ `ನನ್ನ ಸತ್ಯಾನ್ವೇಷಣೆ' ಯಲ್ಲಿ ತಮ್ಮ ಬಾಲ್ಯದ ಒಂದು ಘಟನೆಯನ್ನು ಬರೆಯುತ್ತಾರೆ: 

ಗಾಂಧೀಜಿಯವರು ರಾಜ್‌‍ಕೋಟದಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಂದರ್ಭ. ಪರೀಕ್ಷೆ ನಡೆಯುತ್ತಿರುತ್ತದೆ. ಇನ್ಸ್‌ಪೆಕ್ಟರ್ ಮಿಸ್ಟರ್ ಗೈಲ್ಸ್ ಪರಿಶೀಲನೆಗಾಗಿ ಶಾಲೆಗೆ ಬಂದ, ವಿದ್ಯಾರ್ಥಿಗಳಿಗೆ ಐದು ಇಂಗ್ಲಿಶ್ ಪದಗಳನ್ನು ಬರೆಯಲು ಹೇಳಿದ್ದರು. ಅವುಗಳ ಪೈಕಿ `Kettle’ ಎಂಬ ಪದವೂ ಒಂದು. ಗಾಂಧಿ ಆ ಪದವನ್ನು ತಪ್ಪಾಗಿ ಬರೆದಿದ್ದರಂತೆ. ಆಗ ಗಾಂಧಿಗೆ ಕಲಿಸಿದ ಮೇಷ್ಟ್ರು ಅದನ್ನು ಗಮನಿಸಿ, ತಮ್ಮ ಕಾಲಿನ ಚಪ್ಪಲಿಯ ತುದಿಯಿಂದ ಗಾಂಧಿ ಕಾಲಿಗೆ ಚುಚ್ಚಿ `ನೀನು ತಪ್ಪು ಬರೆದಿದ್ದೀಯ ಅಂತ ಅವರನ್ನು ಎಚ್ಚರಿಸಲು ಪ್ರಯತ್ನಿಸಿದರು. ಮುಂದಿನ ಹುಡುಗನ ಸ್ಲೇಟನ್ನು ನೋಡಿಕೊಂಡು ಗಾಂಧಿ ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕೆಂದು ಅವರ ಮೇಷ್ಟ್ರ ಉದ್ದೇಶವಾಗಿತ್ತು. ಆದರೆ ಗಾಂಧಿ ಮಾತ್ರ ಮೇಷ್ಟ್ರ ಸೂಚನೆಯಂತೆ ನಡೆಯಲಿಲ್ಲ. ಎಲ್ಲ ಹುಡುಗರು ಎಲ್ಲ ಐದೂ ಪದಗಳನ್ನು ಸರಿಯಾಗಿ ಬರೆದಿದ್ದರು. ಆದರೆ ಗಾಂಧಿ ಮಾತ್ರ ಅಲ್ಲಿ ದಡ್ಡರಾಗಿದ್ದರು. ಗಾಂಧಿಗೆ ಮೇಷ್ಟ್ರ ಸೂಚನೆ ಒಪ್ಪಿಗೆಯಾಗಿರಲಿಲ್ಲ. ಯಾಕೆಂದರೆ ವಿದ್ಯಾರ್ಥಿಗಳು ನಕಲು ಮಾಡದಂತೆ ನೋಡಿಕೊಳ್ಳುವುದೇ ಮೇಷ್ಟ್ರುಗಳ ಕೆಲಸ ಎಂದು ಅವರು ಬಲವಾಗಿ ನಂಬಿದ್ದರು. ಇದಾದ ಮೇಲೆ ಅವರು ಉಪಾಧ್ಯಾಯರು ಅವರನ್ನು ಕರೆಸಿ ಅವರ ಮೂರ್ಖತನಕ್ಕೆ ಸರಿಯಾಗಿ ಬಯ್ದರು. 

ಗಾಂಧಿ ಬರೆಯುತ್ತಾರೆ: ಅದರಿಂದ ಅವರಿಗೆ ವೃಥಾ ಶ್ರಮವಾಯಿತೇ ಹೊರತು ನಕಲು ಮಾಡುವ ಕಲೆ ನನಗೆ ಕೊನೆಗೂ ಬರಲೇ ಇಲ್ಲ. ಗಾಂಧಿ ಆ ವಯಸ್ಸಿನಲ್ಲೇ ಹೀಗಿದ್ದರು. ಸನ್ನಡತೆಯ ಪ್ರಶ್ನೆ ಆಗಲೇ ಅವರಿಗೆ ಬಹಳ ಮುಖ್ಯ ಆಗಿತ್ತು. ಸರಿ-ತಪ್ಪಿನ ಅರಿವು ಆಗಲೇ ಅವರಲ್ಲಿ ಮಡುಗಟ್ಟಿತ್ತು. 

ಬಾಲ್ಯದಲ್ಲಿ ಅವರು ನೋಡಿದ `ಹರಿಶ್ಚಂದ್ರ ನಾಟಕ ಅವರನ್ನು ತೀವ್ರವಾಗಿ ಪ್ರಭಾವಿಸಿತ್ತು. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಆಪತ್ತು, ಕಷ್ಟವನ್ನೆಲ್ಲ ತಾನೂ ಪಡಬೇಕು ಎಂದು ಅವರು ಭಾವಿಸಿದ್ದರು. ಹರಿಶ್ಚಂದ್ರ ಅವರ ಮನಸ್ಸಿನಲ್ಲಿ ಸ್ಫೂರ್ತಿ ತುಂಬಿದ ಆದರ್ಶ ವ್ಯಕ್ತಿಯಾಗಿದ್ದ. ಹರಿಶ್ಚಂದ್ರನ ಕತೆಯನ್ನು ಅವರು ವಾಸ್ತವ ಎಂದು ಪರಿಭಾವಿಸಿದ್ದರು. ಹಾಗಾಗಿ ಆ ಕತೆಯನ್ನು ಅವರು ಅಕ್ಷರಶಃ ನಂಬಿದ್ದರು. ಆದುದರಿಂದಲೇ ಅವರು ಸತ್ಯವೇ ಸಾರ್ವಭೌಮ ತತ್ತ್ವ, ಸತ್ಯವೇ ಪರಮಾತ್ಮ ಎಂದು ಭಾವಿಸಿದ್ದರು. 

ಗಾಂಧಿಯ ಬಗ್ಗೆ ಹೆಚ್ಚು ಚರ್ಚೆಯಾಗದ ಇನ್ನೊಂದು ವಿಚಾರದ ಬಗ್ಗೆ ನಾನಿಲ್ಲಿ ಹೇಳಬಯಸುತ್ತೇನೆ: 

ಇಂದು ನಾವು `ಅಭಿವೃದ್ಧಿ ಎಂಬ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿದ್ದೇವೆ. ಅದರ ಪರಿಣಾಮವಾಗಿ ಹವಾಮಾನ ವೈಪರೀತ್ಯಗಳ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇದನ್ನು ಗಾಂಧಿ ಬಹಳ ಹಿಂದೆಯೇ ಗ್ರಹಿಸಿದ್ದರು. `ಭಾರತ ಕೈಗಾರಿಕೀಕರಣವನ್ನು ಬಾಚಿ ತಬ್ಬಿಕೊಂಡರೆ ಮಿಡತೆಯ ದಾಳಿಗೆ ಸಿಕ್ಕ ಪೈರಿನಂತೆ ಇಡೀ ದೇಶವೇ ಬೋಳಾಗಿಬಿಡುತ್ತದೆ' ಎಂದು ಗಾಂಧಿ ಹೇಳಿದ್ದರು. ಇಂದು ಆಗುತ್ತಿರುವುದು ಅದೇ. ಹೀಗಾಗಿ ಭೂಮಿ ನಾಶವಾಗುವ ಆತಂಕವನ್ನು ಮೊತ್ತ ಮೊದಲು ವ್ಯಕ್ತಪಡಿಸಿದ ಆಧುನಿಕ ಕಾಲದ ಮೊದಲ `ಪರಿಸರವಾದಿ' ಅವರಾಗಿದ್ದಾರೆ. ಆದರೆ ನಾವೆಲ್ಲರೂ ಇದನ್ನು ಮರೆತಿದ್ದೇವೆ. 

ಗಾಂಧೀಜಿಯವರ ಮೊಮ್ಮಗ ಪ್ರೊ. ರಾಜ್‌ಮೋಹನ್ ಗಾಂಧಿಯವರು ಗಾಂಧಿಯವರ ಬಗ್ಗೆ ಒಂದು ಅಪರೂಪದ ವಿಷಯ ಹೇಳುತ್ತಾರೆ: 

ಗಾಂಧೀಜಿಯವರು ಪ್ರತಿದಿವಸ ತಮಗೆ ಏಳು ಮಂದಿ ಹೊಸ ಸ್ನೇಹಿತರು ಸಿಗದಿದ್ದರೆ ಊಟವನ್ನೇ ಮಾಡುತ್ತಿರಲಿಲ್ಲವಂತೆ ಮತ್ತು ಈ ವಿಷಯದಲ್ಲಿ ಅವರು ಹಠಮಾರಿಯಾಗಿದ್ದರಂತೆ. ಹಾಗಾಗಿ ಸ್ವಾತಂತ್ರ್ಯ ಹೋರಾಟದ ಕಾರ್ಯಕರ್ತರು ಕೈಗೆ ಸಿಕ್ಕಿದ ಸಿಕ್ಕಿದ ಜನರನ್ನು ಕರೆದುಕೊಂಡು ಬಂದು ಗಾಂಧೀಜಿಯವರ ಮುಂದೆ ಕೂರಿಸುತಿದ್ದರು. ಹಾಗೆ ಬಂದ ಅತಿಥಿಗಳನ್ನು ಗಾಂಧಿ ಮುಂದೆ ಕೂರಿಸಿಕೊಂಡು, ಅವರ ತಲೆ ನೇವರಿಸಿಕೊಂಡು ಅವರ ಬದುಕಿನ ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದರಂತೆ. ಬಳಿಕ ಆ ಜನರಿಗೆ ಬದುಕಿನ ನಾನಾ ದಾರಿಗಳನ್ನು ಗಾಂಧಿ ಹೇಳುತ್ತಿದ್ದರಂತೆ. 

ಬಹುಸಂಸ್ಕೃತಿಯ ನಾಡಾದ ಈ ದೇಶಕ್ಕೆ ಇದು ಬಹಳ ಅಗತ್ಯವಾದುದು. ಆದ್ದರಿಂದ ನನಗೆ ಇದು ಈಗಲೂ ಬಹಳ ಮುಖ್ಯವಾದುದು ಅಂತನ್ನಿಸುತ್ತದೆ. ಅಂದರೆ ನಮ್ಮೊಳಗೆ ಇತರರನ್ನು ತಂದುಕೊಳ್ಳುವುದು ಬಹಳ ಮುಖ್ಯ. ನಮ್ಮೊಳಗೆ ಹೊಸ ಹೊಸ ಮನಸ್ಸುಗಳನ್ನು ತುಂಬಿಕೊಳ್ಳಬೇಕು. ನಮಗೆ ನಮ್ಮವರು ಮಾತ್ರ ಮುಖ್ಯವಾಗಬಾರದು. ಬೇರೆಯವರನ್ನು ಸ್ನೇಹದಿಂದ ನಾವು ನಮ್ಮೊಳಗೆ ತರಬೇಕು. ಆಗ ಇತರರಿಗೆ ನಮ್ಮ ಬಗ್ಗೆ ವಿಶ್ವಾಸ, ಪ್ರೀತಿ ಹುಟ್ಟುತ್ತದೆ. ಇದರಿಂದ ಒಂದು ರಾಷ್ಟ್ರದಲ್ಲಿ ಎಲ್ಲರೂ ಜೊತೆಯಾಗಿ ಅನ್ಯೋನ್ಯವಾಗಿ ಬದುಕಲು ಸಾಧ್ಯವಾಗುತ್ತದೆ. ಇವತ್ತು ನಮ್ಮ ದೇಶದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಇಲ್ಲಿ ಭಿನ್ನತೆಯನ್ನು ಶತ್ರುವಾಗಿ ಕಾಣಲಾಗುತ್ತಿದೆ. ಜನರ ಮಧ್ಯೆ ಪರಸ್ಪರ ಅವಿಶ್ವಾಸ ತುಂಬಿ ಹೋಗಿದೆ. ಈಗೀಗ ನಮ್ಮ ಜನರಿಗೆ ಬೇರೆಯವರ ಬಗ್ಗೆ ಅಪನಂಬಿಕೆ ಹೆಚ್ಚಾಗಿದೆ. ಎಲ್ಲ ಸಮುದಾಯದವರು ಅವರವರ ಜನರೊಂದಿಗೆ ಸೇರಿಕೊಂಡು ಬೇರೆಯವರ ಬಗ್ಗೆ ಅನುಮಾನ ಪಟ್ಟುಕೊಂಡು, ಮಾತಾಡಿಕೊಂಡು ಬದುಕುತ್ತಿದ್ದಾರೆ. ಇದು ಈ ದೇಶಕ್ಕೆ ಬಹಳ ಅಪಾಯಕಾರಿಯಾದುದು. ಇದನ್ನು ಗಾಂಧೀಜಿಯವರು ಅಂದೇ ಗ್ರಹಿಸಿದ್ದ ಕಾರಣಕ್ಕಾಗಿ ಅವರು ಜನರೊಡನೆ ಬದುಕಿದ್ದರು. 

ಭಾರತ ಅನ್ನುವುದು ಎಲ್ಲರಿಗೆ ಸೇರಿದ್ದು, ಸರ್ವೋದಯ ಎನ್ನುವುದು ಎಲ್ಲರ ಅಭಿವೃದ್ಧಿ, ಅದರಲ್ಲಿ ಯಾರನ್ನೂ ಹೊರಗಿಡುವುದು ತಪ್ಪು ಎಂದು ಬಲವಾಗಿ ಪ್ರತಿಪಾದಿಸಿದ ಗಾಂಧಿಯನ್ನು ಇಂದು ಜನರು ಅವರವರ ಮೂಗಿನ ನೇರಕ್ಕೆ ವ್ಯಾಖ್ಯಾನಿಸುತ್ತಿದ್ದಾರೆ. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ಅಮಾನ್ಯಗೊಳಿಸುವ ಸಂಚು ಈ ದೇಶದಲ್ಲಿ ಇಂದು ನಡೆಯುತ್ತಿದೆ. ಗಾಂಧಿಯನ್ನು ನೀವು ಓದಿದ್ದೀರಾ ಅಂತ ಇವರ ಹತ್ತಿರ ಕೇಳಿದರೆ `ಇಲ್ಲ' ಅಂತ ಹೇಳುತ್ತಾರೆ. ಗಾಂಧಿಯ ಬಗ್ಗೆ ಅಧ್ಯಯನ ಮಾಡಿದ್ದೀರಾ ಅಂತ ಕೇಳಿದರೆ `ಇಲ್ಲ' ಅಂತಾರೆ. ಆದರೂ ಅವರಿಗೆ ಗಾಂಧಿ ಬಗ್ಗೆ ಸಹಮತವಿಲ್ಲ. ಇದೇ ನೋಡಿ ದುರಂತ. 

ಗಾಂಧೀಜಿಯವರ 150 ವರ್ಷಗಳ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಈ ಹೊತ್ತಲ್ಲಿ ಗಾಂಧಿ ತತ್ತ್ವ-ಸಿದ್ಧಾಂತವನ್ನು ಯುವಜನತೆಗೆ ತಿಳಿಸುವ ಕಾರ್ಯಕ್ರಮವನ್ನು ನಾವು ಮಾಡಬೇಕಾಗಿದೆ. ಹಾಗೆ ಮಾಡುವಾಗ ಗಾಂಧೀಜಿಯವರಂಥಾ ನಾಯಕರ ಕುರಿತ ಭಜನೆ ಅಥವಾ ನಿಂದನೆ ಮಾಡುವ ಬದಲಾಗಿ ಚಿಂತನೆ ನಡೆಸುವುದು ಸೂಕ್ತವಾದುದು. 

******************* 

ಸಂತ ಪೇತ್ರರ ಚೌಕಿನಲ್ಲಿ 'ಅರಿವಿಗೆ ಬಾರದ ಸಮ್ಮನಸ್ಸುಗಳು' ಶಿಲ್ಪ

-  ಫ್ರಾನ್ಸಿಸ್ ಎಂ ನಂದಗಾಂವ

ಕಳೆದ ಭಾನುವಾರ ಅಂದರೆ, ಪ್ರಸಕ್ತ ಸಾಲಿನ 2019ರ ಸೆಪ್ಟೆಂಬರ್ 29ರಂದು ಮುಂಜಾನೆ, ಕಥೋಲಿಕ ಕ್ರೈಸ್ತ ಧರ್ಮದ ಪರಮೋಚ್ಚಗುರು, ನಿಜದ ಅರ್ಥದಲ್ಲಿನ ಜಗದ್ಗುರು, ಆಳುವವರಾದ ಶ್ರೀಮತ್ (ಪೋಪ) ಪಾಪು ಸ್ವಾಮಿ ಫ್ರಾನ್ಸಿಸ್‌ ಅವರು, ತಮ್ಮ ಅಧಿಕೃತ ನಿವಾಸಸ್ಥಳ ರೋಮಾಪುರಿಯಲ್ಲಿನ, ವ್ಯಾಟಿಕನ್ ಪ್ರಧಾನ ಪ್ರದೇಶದಲ್ಲಿರುವ ಸಂತ ಪೇತ್ರರ ಚೌಕಿನಲ್ಲಿ (ಸೆಂಟ್ ಪೀಟರ್ಸ್‌ ಸ್ಕವೆಯರ್), `ಅರಿವಿಗೆ ಬಾರದ ಸಮ್ಮನಸ್ಸುಗಳು' (ದೇವದೂತರು) (ಏಂಜಿಲ್ಸ್‌ ಅನವೆಯರ್) ಹೆಸರಿನ ಕಂಚಿನ ಪ್ರತಿಮೆಗಳ ಗುಚ್ಛವನ್ನು ಅನಾವರಣಗೊಳಿಸಿದ ಪ್ರಸಂಗ, ರೋಮಾಪುರಿಯ ಇತಿಹಾಸದಲ್ಲಿ ಒಂದು ಹೊಸ ದಾಖಲೆಗೆ ಕಾರಣವಾಯಿತು. 

ರಾಜಕೀಯ ಮತ್ತು ಧರ್ಮದ ದೆಸೆಯಿಂದ ಕಷ್ಟಕೋಟಲೆಗಳನ್ನು ಅನುಭವಿಸಿ ದೇಶಾಂತರವಾಸಿಗಳಾಗಿ ತಮ್ಮ ತಾಯ ನೆಲವನ್ನು ಬಿಟ್ಟು, ಸುರಕ್ಷಿತ ಆಶ್ರಯ ತಾಣಗಳನ್ನು ಅರಸಿಕೊಂಡು ಓಡಿ ಬರುವವರಿಗೆ ಸಾಂತ್ವನ ಹೇಳುವ ಉದ್ದೇಶದ `ವಿಶ್ವ ವಲಸಿಗರು ಮತ್ತು ಸಂತ್ರಸ್ತರ ದಿನ'ದ 105ನೇ ಸಾಲಿನ ದಿನದ ಸ್ಮರಣೆಯಲ್ಲಿ`ವಿಶೇಷ ಕರ್ತರ ಭೋಜನ'ದ (ಸ್ಪೇಷಲ್ ಮಾಸ್) ಪವಿತ್ರ ಪಾಡು ಪೂಜೆಯ ನಂತರ ವಲಸಿಗರ ಸ್ಮಾರಕಾರ್ಥವಾಗಿ ಸಿದ್ಧಪಡಿಸಲಾದ ಅಪೂರ್ವ ಕಲಾಕೃತಿ `ಅರಿವಿಗೆ ಬಾರದ ಸಮ್ಮನಸ್ಸುಗಳು' ಹೆಸರಿನ ಕಂಚಿನ ಪ್ರತಿಮೆಗಳ ಗುಚ್ಛವನ್ನು - ಶ್ರೀಮತ್‌ಪಾಪು ಸ್ವಾಮಿ ಫ್ರಾನ್ಸಿಸ್‌ಅವರು ಅನಾವರಣ ಮಾಡಿದ್ದನ್ನು ನೋಡಿದ ಇಡೀ ವಿಶ್ವವೇ ಆದರದಿಂದ ತಲೆದೂಗಿದ್ದಂತೂ ಹೌದು. 

ಪವಿತ್ರ ಶ್ರೀಗ್ರಂಥ `ಪವಿತ್ರ ಬೈಬಲ್'ನ ಹೊಸ ಒಡಂಬಡಿಕೆಯಲ್ಲಿನ `ಹಿಬ್ರಿಯರಿಗೆ ಬರೆದ ಪತ್ರ'ದಲ್ಲಿನ ಹದಿಮೂರನೇ ಅಧ್ಯಾಯದ ಮೊದಲಿನ ಸಾಲುಗಳು ಈ ಅಪೂರ್ವಕಲಾಕೃತಿಗೆ ಪ್ರೇರಣೆಯಾಗಿ ನಿಂತಿವೆ. 

ಆ ಸಾಲುಗಳು ಇಂತಿವೆ: `ಸೋದರ ಪ್ರೀತಿಯಲ್ಲಿ ನೆಲೆಯಾಗಿ ನಿಲ್ಲಿರಿ. ಅತಿಥಿ ಸತ್ಕಾರ ಮಾಡುವುದನ್ನು ಮರೆಯದಿರಿ. ಅದನ್ನು ಮಾಡುವಾಗ ಅರಿಯದೇ ಕೆಲವರು ದೇವದೂತರನ್ನೇ ಉಪಚರಿಸಿದ್ದಾರೆ. ಸೆರೆಯಲ್ಲಿರುವವರನ್ನು ಸ್ಮರಿಸಿಕೊಳ್ಳಿ, ಅವರ ಸಂಗಡ ನೀವೂ ಸೆರೆಯಲ್ಲಿರುವಂತೆ ಭಾವಿಸಿಕೊಳ್ಳಿ, ಅನ್ಯಾಯಕ್ಕೆ ಒಳಗಾಗುವವರನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ, ಅನ್ಯಾಯಕ್ಕೆ ಒಳಗಾಗಬಲ್ಲ ದೇಹವೊಂದು ನಿಮಗೂ ಸಹ ಇದೆಯಲ್ಲವೇ?' 

ಈ ಅಪೂರ್ವ ಕಲಾಕೃತಿಯನ್ನು ಅನಾವರಣ ಮಾಡಿದ ಶ್ರೀಮತ್ ಪಾಪು ಸ್ವಾಮಿ ಫ್ರಾನ್ಸಿಸ್‌ಅವರು, ತಮ್ಮ ಆಶೀರ್ವಚನದಲ್ಲಿ `ಸಂತ ಪೇತ್ರರ ಚೌಕಿನಲ್ಲಿ ಸ್ಥಾಪನೆಗೊಂಡಿರುವ ಈ ಕಲಾಕೃತಿ, ಅತಿಥಿ ಸತ್ಕಾರದ ಧರ್ಮಪ್ರಚಾರದ ದೊಡ್ಡ ಸವಾಲನ್ನು ಸದಾ ಸ್ಮರಣೆಗೆ ತರುತ್ತದೆ' ಎಂದು ಹೇಳಿದರು. 

ಸ್ವಾಗತ, ರಕ್ಷಣೆ, ಬೆಂಬಲ ಮತ್ತು ಸಮನ್ವಯತೆ: 

‘ವಿಶ್ವದಾದ್ಯಂತ ಯುದ್ಧಗಳ ದೆಸೆಯಿಂದ, ಅನ್ಯಾಯ ಅನಾಚಾರಗಳಿಂದ, ಆರ್ಥಿಕ ಮತ್ತು ಸಾಮಾಜಿಕ ತರತಮಗಳಿಂದ ಬಸವಳಿದ ಅಮಾಯಕ ಜನ, ತಮ್ಮದಲ್ಲದ ತಪ್ಪಿಗಾಗಿ ಅದಕ್ಕಾಗಿ ಬೆಲೆ ತೆರಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಂಥ ದೇಶಾಂತರ ವಾಸಿಗಳೊಂದಿಗೆ ವಿಶ್ವವ್ಯಾಪಿ ಕಥೋಲಿಕ ಕ್ರೈಸ್ತ ಧರ್ಮಸಭೆ ಮತ್ತು ವಿಶ್ವಾಸಿಗಳು ನಿಲ್ಲಬೇಕಾಗಿದೆ' ಎಂದು ಅವರು ಪ್ರತಿಪಾದಿಸಿದರು. 

`ಸ್ವಾಗತ, ರಕ್ಷಣೆ, ಬೆಂಬಲ ಮತ್ತು ಸಮನ್ವಯತೆ ಎಂಬ ನಾಲ್ಕು ಪದಗಳು ಈಗ ನಮಗೆ ದಾರಿದೀಪ. ಅವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಕಲ ಮಾನವರ ಉನ್ನತಿಗಾಗಿ, ಏಳಿಗಾಗಿ ನಾವು ಸಮನ್ವಯತೆಯನ್ನು ಸಾಧಿಸಬೇಕಿದೆ' ಎಂದು ಶ್ರೀಮತ್ ಪಾಪುಸ್ವಾಮಿ ಫ್ರಾನ್ಸಿಸ್‌ಅವರು ಕರೆ ನೀಡಿದ್ದಾರೆ. 

ವಿಶೇಷ ಬಲಿಪೂಜೆ - ಪಾಡು ಪೂಜೆಯ ನಂತರ, ಸಂತ ಪೇತ್ರರ ಚೌಕಿನಲ್ಲಿ ನಡೆದ ಈ ಕಾರ್‍ಯಕ್ರಮದಲ್ಲಿ ಸಂತ್ರಸ್ತ ವಲಸಿಗರೂ ಸೇರಿದಂತೆ ಸಹಸ್ರಾರು ಜನರು ಭಾಗವಹಿಸಿದ್ದರು. ಗಂಟೆಗಳ ನಿನಾದದ ನಡುವೆ, ವಿವಿಧ ಭಾಷಿಕ ಮತ್ತು ಸಮುದಾಯಗಳಿಗೆ ಸೇರಿದ ಹಾಡುತಂಡದ ಸದಸ್ಯರ ಮಂಗಳ ಹಾಡಿನ ಮಧ್ಯೆ ಈ ಅಪರೂಪದ ಕಲಾಕೃತಿ `ಅರಿವಿಗೆ ಬಾರದ ಸಮ್ಮನಸ್ಸುಗಳು' ಅನಾವರಣಗೊಂಡ ಸಂದರ್ಭದಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಸಂತ ಪೇತ್ರರ ಚೌಕಿನಲ್ಲಿ ನೆರೆದಿದ್ದ ಜನರು, ಈ ಅಪರೂಪದ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು. 

ಮಾನವೀಯತೆಗೆ ಸಂಚಕಾರ: 

ಇಪ್ಪತ್ತೊಂದನೇ ಶತಮಾನ ಮಾನವನ ನಾಗರಿಕತೆಯ ಉತ್ತಂಗದಲ್ಲಿರುವ ಕಾಲ ಎನ್ನಲಾಗುವ ಈ ಸಮಯದಲ್ಲಿ ಸುರಕ್ಷಿತ ಆಶ್ರಯತಾಣ ಅರಸಿಕೊಂಡು ಬರುವ ವಲಸಿಗರನ್ನು ತಮ್ಮ ನೆಲಕ್ಕೆ ಕಾಲಿಡದಂತೆ ಮಾಡಲು ದೇಶಗಳು ತಮ್ಮ ಗಡಿಗಳಲ್ಲಿ ಬೇಲಿಗಳನ್ನು, ತಪ್ಪಿದರೆ ಎತ್ತರದ ಗಡಿಗೋಡೆಗಳನ್ನು ಕಟ್ಟಲು ಮುಂದಾಗುತ್ತಿರುವುದು, ಮಾನವೀಯ ಮೌಲ್ಯಗಳನ್ನು ಸಂದೂಕಗಳಲ್ಲಿ ಹಿಡಿದಿಟ್ಟು ಬೀಗ ಜಡಿದಂತಾಗಿದೆ. 

ಅತ್ತ, ಮಧ್ಯ ಅಮೆರಿಕದ ವಲಸಿಗರನ್ನು ತಡೆಯಲು, ಉತ್ತರ ಅಮೆರಿಕ ಸಂಸ್ಥಾನಗಳ ಒಕ್ಕೂಟವು ದಕ್ಷಿಣದ ತನ್ನ ಗಡಿಯಲ್ಲಿ ಗೋಡೆಯ ನಿರ್ಮಾಣದಲ್ಲಿ ತೊಡಗಿದೆ. ಇತ್ತ ಏಷ್ಯ ಖಂಡದ ಮೈಯನ್ಮಾರ (ಹಿಂದಿನ ಬರ್ಮಾ) ದೇಶದಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಸಮುದಾಯದವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಕೆಲವು ಅರಬ ರಾಷ್ಟ್ರಗಳಲ್ಲಿನ ಭಯೋತ್ಪಾದಕರ ಹುಚ್ಚಾಟಗಳ ಪರಿಣಾಮದ ಅನಿಶ್ಚಿತತೆಯ ಕಾರಣ ಅಮಾಯಕರು, ತಮ್ಮ ದೇಶ ತೊರೆದು ದೇಶಾಂತರ ಹೋಗುತ್ತಿದ್ದಾರೆ. ವಲಸಿಗರ ಅಂತರ್ರಾಷ್ಟ್ರೀಯ ಸಂಸ್ಥೆಯ ಅಂದಾಜಿನಂತೆ ಕಳೆದ ವರ್ಷ ವಿಶ್ವದಾದ್ಯಂತ ಸುಮಾರು ಎರಡು ಸಾವಿರದ ಮುನ್ನೂರು ಜನ ಅಮಾಯಕ ವಲಸಿಗರು ಜೀವ ಕಳೆದುಕೊಂಡಿದ್ದಾರೆ. 

ನಿಜದ ಅರ್ಥದಲ್ಲಿನ ಜಗದ್ಗುರು, ಆಳುವವರಾದ ಶ್ರೀಮತ್ (ಪೋಪ) ಪಾಪುಸ್ವಾಮಿ ಫ್ರಾನ್ಸಿಸ್‌ಅವರು, 2013ರಲ್ಲಿ ಪಾಪುಸ್ವಾಮಿ ಪಟ್ಟಕ್ಕೆ ಚುನಾಯಿತರಾದ ದಿನದಿಂದಲೂ, ವಲಸಿಗರ ಪರವಾಗಿ ವಾದಿಸಿ, ಅವರು ಓಡಿಹೋಗಿ ಸೇರಿರುವ ಆಯಾ ದೇಶಗಳ ಜನ ಮುಕ್ತ ಮನಸ್ಸಿನಿಂದ ಅವರನ್ನು ಸ್ವಾಗತಿಸಿ ತಮ್ಮವರೆಂದು ಒಪ್ಪಿಕೊಳ್ಳುವಂತೆ ಅಲ್ಲಲ್ಲಿನ ದೇಶವಾಸಿಗಳ, ನಾಯಕರ ಮನವೊಲಿಸಲು ಶ್ರಮಿಸುತ್ತಿದ್ದಾರೆ. 

ಇಂದಿನ ವಿಪರೀತ ವೈಯಕ್ತಿಕ ಆದ್ಯತೆಗಳು, ಬಳಸಿ ಬಿಸಾಕುವ ಮನೋಭಾವವನ್ನು, ಈ ಜಾಗತೀಕರಣವೆಂಬ ಪಡೆಂಭೂತವೇ ರೂಢಿಸುತ್ತಿರುವುದರ ಬಗೆಗೆ 2015ರಲ್ಲೇ ಶ್ರೀಮತ್ ಪಾಪುಸ್ವಾಮಿ ಫ್ರಾನ್ಸಿಸ್‌ಅವರು ದನಿ ಎತ್ತಿದ್ದರು. ಆಶ್ರಯ ಅರಸಿ ಬಂದವರಿಗೆ ಆಶ್ರಯ ನೀಡಿ ಎಂದು ಕರೆಕೊಟ್ಟಿದ್ದರು. 

ಆಫ್ರಿಕಾ ಖಂಡದಲ್ಲಿನ ಕೆಲವು ದೇಶಗಳಲ್ಲಿ ಭುಗಿಲೆದ್ದ ರಾಷ್ಟ್ರೀಯವಾದಿಗಳ ಹುಚ್ಚಾಟಗಳಿಂದಾಗಿ ಆ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ವಲಸಿಗರು ಯುರೋಪಿನ ವಿವಿಧ ದೇಶಗಳಲ್ಲಿ ನುಗ್ಗಿದ್ದರು. 

ನಾಲ್ಕನೂರು ವರ್ಷದ ನಂತರದ ದಾಖಲೆ: 

ವ್ಯಾಟಿಕನ್‍ನ ಸಂತ ಪೇತ್ರರ ಚೌಕಿನಲ್ಲಿ ಅನಾವರಣಗೊಳಿಸಿರುವ `ಅರಿವಿಗೆ ಬಾರದ ಸಮ್ಮನಸ್ಸುಗಳು' ಕಂಚಿನ ಪ್ರತಿಮೆಗಳ ಗುಚ್ಛದ ಕಲಾಕೃತಿಯನ್ನು ನಿರ್ಮಸಿದ ಶಿಲ್ಪಿ - ಕಲಾಕಾರನ ಹೆಸರು ತಿಮೋತಿ. ಪಿ. ಸ್ಮಾಲ್ಝ್. ಈತ ಕೆನಡಾ ದೇಶದ ಪುತ್ಥಳಿಗಳನ್ನು ನಿರ್ಮಿಸುವ ಪ್ರಸಿದ್ಧ ಕಲಾಕಾರ. ನಾಲ್ಕುನೂರು ವರ್ಷಗಳ ನಂತರ, ಮೊದಲ ಬಾರಿಗೆ ಭಾರಿ ಗಾತ್ರದ ಕಂಚಿನ ಕಲಾಕೃತಿಯೊಂದು ಸಂತ ಪೇತ್ರರ ಚೌಕಿನಲ್ಲಿ ಅನಾವರಣಗೊಂಡಿದ್ದು ಒಂದು ಪ್ರಮುಖ ದಾಖಲೆಯಾಗಿದೆ. ಅವನ ಈ ಕಲಾಕೃತಿ ಎಷ್ಟು ಕಾಲ ಈ ಸಂತ ಪೇತ್ರರ ಚೌಕಿನಲ್ಲಿ ಇರಬಹುದು ಎಂಬುದನ್ನು ಕಾಲವೇ ನಿರ್ಧರಿಸಲಿದೆ. 

ಶ್ರೀಮತ್ (ಪೋಪ) ಪಾಪು ಸ್ವಾಮಿ ಫ್ರಾನ್ಸಿಸ್‌ಅವರ ಆಶಯದಂತೆ, ವ್ಯಾಟಿಕನ್ ನಲ್ಲಿರುವ ವಲಸಿಗರ ಮತ್ತು ಸಂತ್ರಸ್ತರ ಕಚೇರಿಯ ಉಸ್ತುವಾರಿ ವಹಿಸಿದ್ದ ಕಾರ್ಡಿನಲ್ ಮೈಕಲ್‌ಝರ್ನಿ, ಅವರು ಈ ಕಂಚಿನ ಕೃತಿಯ ನಿರ್ಮಾಣದ ಜವಾಬ್ದಾರಿಯನ್ನು ತಿಮೋತಿ ಅವರಿಗೆ ಒಪ್ಪಿಸಿದ್ದರು. 

ಒಟ್ಟು ನೂರಾನಲ್ವತ್ತು ಜನ ವಲಸಿಗರು: 

ಸುಮಾರು ಮೂರೂವರೆ ಟನ್ ಭಾರದ, ಇಪ್ಪತ್ತು ಅಡಿ ಎತ್ತರದ ಈ ಕಂಚಿನ ಶಿಲ್ಪದ ಪ್ರತಿಮೆಗಳ ಗುಚ್ಛದಲ್ಲಿ, ವಿವಿಧ ಸಂಸ್ಕೃತಿ, ಕಾಲಘಟ್ಟಗಳನ್ನು, ದೇಶಗಳನ್ನು ಪ್ರತಿನಿಧಿಸುವ ಒಟ್ಟು ನೂರಾ ನಲವತ್ತು ವಲಸಿಗರ ನಿಂತ ನಿಲುವಿನ ಪ್ರತಿಮೆಗಳನ್ನು ದೋಣಿಯೊಂದರಲ್ಲಿ ಕಡೆದು ನಿಲ್ಲಿಸಲಾಗಿದೆ. 

ಅವುಗಳಲ್ಲಿ ನಾಝಿ ಜನರಿಂದ ಅಪಖ್ಯಾತಿ ಹೊಂದಿದ ಜರ್ಮನಿಯಿಂದ ಪಲಾಯನಗೈದ ಯೆಹೂದಿಗಳಿಂದ ಹಿಡಿದು ಇಂದಿನ ಯುದ್ಧಗಳು ಹಾಗೂ ಬರಗಾಲಗಳಿಂದ ಬಸವಳಿದ ಸಿರಿಯ ಮತ್ತು ಆಫ್ರಿಕಾ ದೇಶಗಳಿಂದ ಬಂದ, ಆತಂಕದಲ್ಲಿರುವ, ದುಃಖದಲ್ಲಿರುವ, ಆಶಾ ಭಾವನೆಯ ಮುಖ ಹೊತ್ತ, ಕೊನೆಗೂ ಸುರಕ್ಷಿತ ತಾಣ ಮುಟ್ಟಿದ ಮುಖಭಾವದ ವಲಸಿಗರನ್ನು ಈ ಕಲಾಕೃತಿಯಲ್ಲಿ ಕಾಣಬಹುದಾಗಿದೆ. 

ಸಂತ ಪೇತ್ರರ ಮಹಾದೇವಾಲಯ (ಬೆಸಿಲಿಕಾ)ದ ಎದುರಿಗಿನ, ಆಸಕ್ತರನ್ನು ಎರಡೂ ಅಂಗೈಗಳನ್ನು ತೆರೆದು ಬರಮಾಡಿಕೊಳ್ಳುವ ಭಾವದಲ್ಲಿರುವ, ಅದೇ ಸಂತ ಪೇತ್ರರ ಚೌಕಿನ ಎರಡೂ ಬದಿಯಲ್ಲಿನ ಪ್ರಕಾರದಲ್ಲಿನ ಕಂಬಗಳ ಸಂಖ್ಯೆ ನೂರಾ ನಲವತ್ತು. ಅದನ್ನು ಆಧರಿಸಿಯೇ ಈ ಕಲಾಕೃತಿಯಲ್ಲಿ ಒಟ್ಟು ನೂರಾ ನಲವತ್ತು ಜನರನ್ನು ಕಡೆಯಲಾಗಿದೆ. 

ಕಲಾವಿದ ತಿಮೋತಿ, ಯಾವುದೇ ಕಲಾಕೃತಿಯನ್ನು ನಿರ್ಮಿಸಲಿ, ಅದನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುವ ಮೊದಲು, ಅದರ ಚಿಕ್ಕಗಾತ್ರದ ಕಲಾಕೃತಿಯ ಪ್ರತಿಕೃತಿ ನಿರ್ಮಿಸುವುದು ಅವನ ಜಾಯಮಾನ. ಅದರಂತೆ ಈ ಬಾರಿ ಐದು ಅಡಿ ಎತ್ತರದ `ಅರಿವಿಗೆ ಬಾರದ ಸಮ್ಮನಸ್ಸುಗಳು' ಕೃತಿಯನ್ನು ನಿರ್ಮಿಸಿದ್ದಾನೆ. ಅದೂ ಇನ್ನೊಂದೆಡೆ ಪ್ರದರ್ಶನಗೊಳ್ಳುತ್ತಿದೆ. 

ಪ್ರಧಾನ ದೇವದೂತನ ಉಪಸ್ಥಿತಿ ಕಾಕತಾಳೀಯ 

ಸಂತ ಪೇತ್ರರ ಮಹಾದೇವಾಲಯ (ಬೆಸಿಲಿಕಾ)ದ ಎದುರಿಗಿನ, ಸಂತ ಪೇತ್ರರ ಚೌಕಿನಲ್ಲಿ ಅಳವಡಿಸಲಾಗಿರುವ ಈ ಅಪರೂಪದ ಕಂಚಿನ ಕಲಾಕೃತಿ (`ಅರಿವಿಗೆ ಬಾರದ ಸಮ್ಮನಸ್ಸುಗಳು') ಮಧ್ಯದಲ್ಲಿ ಪ್ರಧಾನ ಸಮ್ಮನಸ್ಸು ಸಂತ ಮಿಖೇಲಪ್ಪಅವರ ಸ್ವರೂಪವೂ ಇದೆ. 

ಈ `ಅರಿವಿಗೆ ಬಾರದ ಸಮ್ಮನಸ್ಸುಗಳು' ಕಲಾಕೃತಿ ಸಂತ ಪೇತ್ರರ ಚೌಕಿನಲ್ಲಿ ಸ್ಥಾಪಿತಗೊಂಡು ಅನಾವರಣಗೊಂಡಿದ್ದು ಸಾಮಾನ್ಯ ಕಾಲದ ಇಪ್ಪತ್ತಾರನೇ ಭಾನುವಾರ. ಅದು, ಪ್ರಧಾನ ದೇವದೂತ ಸಂತ ಮಿಖೇಲಪ್ಪರ ಹಬ್ಬದ ದಿನವೂ ಹೌದು. 

ಪ್ರಸಕ್ತ ಸಾಲಿನಲ್ಲಿ ಭಾನುವಾರ ಬಂದ ಸೆಪ್ಟೆಂಬರ್ 29 (29. 9. 2019). ಪ್ರಧಾನ ದೇವದೂತರುಗಳಾದ ಸಂತ ಮಿಖೇಲಪ್ಪ, ಗಬ್ರಿಯೇಲಪ್ಪ ಮತ್ತು ರಫಾಯೇಲಪ್ಪರ ಸ್ಮರಣೆಯ ಹಬ್ಬದ ದಿನ. ಆ ದಿನವೇ ಪಾಪು ಸ್ವಾಮಿಗಳಿಂದ ಸಾರ್ವಜನಿಕ ವೀಕ್ಷಣೆಗೆ ಅನಾವರಣಗೊಂಡ `ಅರಿವಿಗೆ ಬಾರದ ಸಮ್ಮನಸ್ಸುಗಳು' ಕಲಾಕೃತಿಯಲ್ಲಿನ ನೂರಾ ನಲವತ್ತು ವಲಸೆ ವ್ಯಕ್ತಿಗಳ ಗೊಂಬೆಗಳ ಮಧ್ಯ ಭಾಗದಲ್ಲಿ ಇರುವ ಸಂತ ಮಿಖೇಲಪ್ಪರ ಸ್ವರೂಪವು ವಲಸಿಗರಲ್ಲಿ ಭರವಸೆಯ ಭಾವ ಮೂಡಿಸುವಂತಿದೆ. 



******************* 



ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...