Wednesday, 9 October 2019

ನೀನೇ ಮೌನಜಂಗಮನು

ನೂರು ಗೌಜು - ಗದ್ದಲಗಳ
ಸಾವಿರ ವಾದ - ವಾಗ್ವಾದಗಳ
ನಡುವೆಯೂ
ನಿನ್ನ ಮೆದುನಡಿಗೆಯ ನೆರಳು
ಹೊರಟಿದೆ ಮೂಕಮೆರವಣಿಗೆ
ಶಬುದ ನಾದದ ಹೆಸರ ತೊರೆದು
ನುಡಿದ ನಿನ್ನುಡಿಗೆ
ಮಿಡಿದ ನಿನ್ನುಸಿರಿಗೆ
ಅಪಾರ್ಥದ ವಿಪರೀತ ಅರ್ಥಗಳು
ಬಸುರ ತುಂಬ ವಿಷವ ಹೊತ್ತು
ಹೊಂಕರಿಸುವ ನೆಲದ ರಣಹದ್ದುಗಳು

ನಿನ್ನ ಧರ್ಮದ ಬಲವು ಅಧ್ಯಾತ್ಮದ ಒಲವು
ಕಳಚಿಬಿದ್ದ ಗಳಿಗೆ ಬಯಲ ತುಂಬಾ
ಕಂಪಿಸುವ ಶೋಕತಪ್ತ ಮಳೆದುಂಬಿಗಳು

ನೀ ಕಲಿಸಿದ ಜೀವನದ ಶುಚಿಯು
ಬದುಕಿನ ರುಚಿಯು
ಗುಡಿಸಿ ಹಾಕಿದೆ
ಬೀದಿ ಕೇರಿಯ ಕೊಚ್ಚೆ ಕೊಳೆಯನು
ನೀ ನಿವೃತ್ತನಾದರೂ
ಶತಮಾನದ ಅನುಮಾನಕ್ಕೆ
ತುತ್ತಾದರೂ
ನಿಜಪ್ರೇಮದ ಹಾಡಿಯಲಿ
ನಡೆಯುತ್ತಲೇ ಇರುವೆ
ಕೋಲು ಹಿಡಿದು ಬಾಗಿದ ಬೆನ್ನು
ಇನ್ನೆಂದೂ ಮುಖ ತೋರಿಸಲಾರೆ
ಎಷ್ಟೇ ಅಂದರೂ
ಬೆನ್ನು ಬಿಡರು ದುಂದುಮಾರರು
ಏನಾದರೂ
ನೀನೇ ಮೌನಜಂಗಮನು
ನೊಂದವರಿಗೂ
ನಿನ್ನ ಕೊಂದವರಿಗೂ


ಡಾ. ದಿನೇಶ್ ನಾಯಕ್


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...