Saturday, 9 May 2020

ಕಥೋಲಿಕ ಕ್ರೈಸ್ತರು ಮತ್ತು ಕೊರೊನಾ


ಫ್ರಾನ್ಸಿಸ್ ನಂದಗಾವ್

 `ಪ್ರಿಯರೇ, 2020ನೇ ವರ್ಷದ ಈ ದಿನಗಳಲ್ಲಿ, ಜ್ವರ, ನೆಗಡಿ, ನ್ಯೂಮೊನಿಯಾ ಕಾಯಿಲೆಗಳ ಲಕ್ಷಣಗಳೊಂದಿಗೆ ಉಸಿರಾಟಕ್ಕೆ ತೊಂದರೆಕೊಡುತ್ತಾ ಅಂತಿಮವಾಗಿ ಮಾನವರ ಜೀವಕ್ಕೆ ಕಂಟಕಕಾರಿ ಆಗಿರುವ ಕೋವಿಡ್-19 ಹೆಸರಿನ ಹೊಸಬಗೆಯ ರೋಗ ತರುವ ಕೊರೊನಾ ವೈರಸ್ ವೈರಾಣು, ವಿಶ್ವಾದಾದ್ಯಂತ ಹರಡುತ್ತಾ ಹೊರಟಿದ್ದು ಮಾನವ ಜಗತ್ತನ್ನು ತಲ್ಲಣಗೊಳಿಸಿದೆ. ವೈರಾಣು ಪ್ರಸಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಅಗತ್ಯ ಇಲ್ಲದೇ ಓಡಾಡಬೇಡಿ, ಇದ್ದಲ್ಲೇ ಇರಿ (ಲಾಕ್‍ಡೌನ್ ವಿಧಿಸಿರುವ) ಎಂದಿರುವ ಈ ಸಂದರ್ಭದಲ್ಲಿ ಗೃಹ ಬಂಧನ ಅನಿವಾರ್ಯವಾಗಿದೆ, ಈಗ ಸಾಮಾಜಿಕ ಅಂತರ (ಸೋಶಿಯಲ್ ಡಿಸ್ಟನ್ಸಿಂಗ್) ಕಾಯ್ದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ನಾವು ನಮ್ಮ ಚರ್ಚುಗಳಿಗೆ ತೆರಳಿ ಸಹೋದರ ಭಾವದಲ್ಲಿ ದೇವರ ಸಾನ್ನಿಧ್ಯದಲ್ಲಿ ನಿಂತು ಸಾಮೂಹಿಕವಾಗಿ ಪ್ರಾರ್ಥನೆಯನ್ನು ಸಲ್ಲಿಸುವುದು ದಿವ್ಯ ಬಲಿಪೂಜೆಯಲ್ಲಿ(ಮಾಸ್)ಭಾಗವಹಿಸುವುದು ಸಾಧ್ಯವಿಲ್ಲ. ಬನ್ನಿ ಆನ್ ಲೈನ್ ಪೂಜೆಯಲ್ಲಿ, ಧ್ಯಾನದಲ್ಲಿ ಪಾಲ್ಗೊಳ್ಳೋಣ, ದೇವರ ವರಪ್ರಸಾದಗಳನ್ನು ಪಡೆಯೋಣ. ಈ ಸಂಪರ್ಕಕೊಂಡಿ      (ಲಿಂಕ್)ನೋಡಿ’’ ಇಂಥ ಬಗೆಬಗೆಯ ಮಾಹಿತಿಗಳು ಕ್ರೈಸ್ತ ವಿಶ್ವಾಸಿಗಳ ಚರದೂರವಾಣಿಯ(ಮೊಬೈಲ್)ವ್ಯಾಟ್ಸ್ ಆ್ಯಪ್ ಗುಂಪುಗಳಲ್ಲಿ ಕಳೆದ ನಾಲ್ಕೈದು ವಾರಗಳಿಂದ ಹರಿದಾಡುತ್ತಿವೆ.

ವಿಶ್ವದಾದ್ಯಂತ ಹರಡಿರುವ ಕಥೋಲಿಕ ಕ್ರೈಸ್ತರು ಇಂದು ಈ ಇಂಥ ಬಗೆಯ ದೇವರೊಂದಿಗಿನ ಅನುಸಂಧಾನಕ್ಕೆ ಹೊಂದಿಕೊಂಡು ಹೋಗುತ್ತಿದ್ದಾರೆ. ಯೇಸುಸ್ವಾಮಿ ಶಿಲುಬೆಗೆ ಏರುವ ಮುನ್ನ ಅನುಭವಿಸಿದ ಪಾಡುಗಳನ್ನು ಸ್ಮರಿಸುವ ತಪಸ್ಸು ಕಾಲದ ಶುಕ್ರವಾರದ ಶಿಲುಬೆಹಾದಿಯ ಧ್ಯಾನ, ಭಾನುವಾರದ ಪೂಜೆಗಳು, ಮೇತ್ರಾಣಿಗಳು (ಬಿಷಪ್) ನೆರವೇರಿಸುವ ಪ್ರಧಾನಾಲಯಗಳ(ಕಥಿಡ್ರಲ್/ಮಹಾದೇವಾಲಯ)ಲ್ಲಿನ ದಿವ್ಯ ಬಲಿಪೂಜೆಗಳು ಪೂಜಾಸಮಯಕ್ಕೆ ಆನ್‍ಲೈನ್‍ನಲ್ಲಿ ಬಿತ್ತರಗೊಳ್ಳುತ್ತಿವೆ. ಅವು, ಇ- ಮಾಧ್ಯಮಗಳಾದ ಮೊಬೈಲ್ ಆ್ಯಪ್, ವೆಬ್‍ಸೈಟ್, ಯೂಟ್ಯೂಬ್ ಮತ್ತು ಫೇಸ್‍ಬುಕ್ ಪುಟಗಳಲ್ಲಿ ಲಭ್ಯವಾಗುತ್ತಿವೆ.

ನೇರವಾಗಿ ಬಿತ್ತರಗೊಳ್ಳುವಾಗ ನೋಡಲಾಗದಿದ್ದರೆ, ಕೇಳಲಾಗದಿದ್ದರೆ, ಬಿತ್ತರಗೊಂಡ ನಂತರವೂ ವಿಶ್ವಾಸಿಗಳು ತಮಗೆ ಅನುಕೂಲವಾದ ಸಮಯದಲ್ಲಿ ಬಲಿಪೂಜೆ ಮತ್ತು ಸಾಂಗ್ಯಗಳಲ್ಲಿ ಭಾಗವಹಿಸಬಹುದಾಗಿದೆ. ಪಟ್ಟಣಗಳಲ್ಲಿನ ಸಂಚಾರದ ದಟ್ಟಣೆ, ಹಿಂದಿನ ದಿನದ ರಾತ್ರಿ ಪಾಳಿ ಮೊದಲಾದ ಕಾರಣಗಳಿಂದ ಬೇಗ ಸಮಯಕ್ಕೆ ಸರಿಯಾಗಿ ಚರ್ಚಿಗೆ ತಲುಪದ ವಿಶ್ವಾಸಿಗಳಿಗೆ, ಎಲ್ಲದಕ್ಕೂ ತಡವಾಗಿ ಹೋಗುವ ಜಾಯಮಾನದ ಸೋಮಾರಿಗಳಾದ ನಗರವಾಸಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿರುವ ವಿಶ್ವಾಸಿಗಳು ಈಗ ಚಿಂತಿಸುವ ಅಗತ್ಯವಿಲ್ಲ. ಬಿತ್ತರಗೊಂಡ ಪೂಜೆಯನ್ನು ದಿನದ ಯಾವ ಸಮಯದಲ್ಲಾದರೂ ನೋಡುವ, ಕೇಳುವ ಅವಕಾಶ ಅವರದಾಗಿದೆ.

ಬೆಂಚುಗಳು ಖಾಲಿ ಖಾಲಿ: ಈ ಆನ್‍ಲೈನ್ ಪೂಜೆಗಳಲ್ಲಿ ಬಲಿಪೀಠದ ಹತ್ತಿರ ಯಾಜಕರು ಪೂಜೆ ಮಾಡುತ್ತಿದ್ದರೆ, ಎದುರಿಗಿನ ವಿಶ್ವಾಸಿಕರು ಕುಳಿತುಕೊಳ್ಳುವ ಬೆಂಚುಗಳು ಖಾಲಿ ಖಾಲಿ. ಪೂಜೆಗಳು ನಡೆಯುವ ಸಂದರ್ಭಗಳಲ್ಲಿ ತುಂಬಿ ಗಿಜಗುಡುತ್ತಿದ್ದ ಚರ್ಚುಗಳು ಈಗ ಭಣಗುಡುತ್ತಿವೆ. ಯಾಜಕರೊಂದಿಗೆ ಹಾಜರಿರುವ ಪೀಠ ಬಾಲಕರು, ಪವಿತ್ರ ಗ್ರಂಥ ಬೈಬಲ್ ವಚನಗಳ ವಾಚಕರು, ಕೆಲವಷ್ಟು ಮಂದಿ ಹಾಡುತಂಡದ ಸದಸ್ಯರು ಮಾತ್ರ ಪೂಜೆಗೆ ಒತ್ತಾಸೆಯಾಗಿ ನಿಂತು ಅನುವು ಮಾಡಿಕೊಡುತ್ತಿದ್ದಾರೆ. ಧರ್ಮಸಭೆ ಇಷ್ಟೆಲ್ಲಾ ಅನುಕೂಲತೆಗಳನ್ನು ಒದಗಿಸಿದ್ದರೂ, ಈ ಆನ್‍ಲೈನ್ ಪೂಜೆಗಳಲ್ಲಿ, ಸಾಂಗ್ಯಗಳಲ್ಲಿ ಮನೆಯಲ್ಲಿರುವ ವಿಶ್ವಾಸಿಗಳು ಸಾಂಗೋಪಾಂಗವಾಗಿ ಪಾಲ್ಗೊಳ್ಳುವರೆಂಬ ನಂಬಿಕೆಯಿಲ್ಲ. ಎದ್ದು ನಿಲ್ಲುವ, ಮೊಣಕಾಲೂರುವ ಸಮಯ ಬಂದಾಗ ಚರ್ಚಿನಲ್ಲಿ ಬಹುತೇಕರು ಅವನ್ನು ಪಾಲಿಸುತ್ತಿದ್ದರೆ, ಮನೆಯಲ್ಲಿ ನೋಡುವಾಗ, ಕೇಳುವಾಗ ಹಾಗಾಗುತ್ತದೆ ಎಂದು ಹೇಳುವಂತಿಲ್ಲ. ಇದು, ಆಯಾ ಕುಟುಂಬಗಳ ಧಾರ್ಮಿಕ ಒತ್ತಾಸೆಯ ಸಂಸ್ಕಾರಕ್ಕೆ ಬಿಟ್ಟ ವಿಚಾರ.

ಇದು ನಮ್ಮ ನಾಡಿನ ಕತೆಯಷ್ಟೇ ಅಲ್ಲ, ಇಡೀ    ವಿಶ್ವದಲ್ಲಿರುವ ಎಲ್ಲಾ ಕ್ರೈಸ್ತರದ್ದೂ ಇದೇ ಹಾಡು, ದೂರದ ಅಮೆರಿಕದಲ್ಲಿ ಕೊರೊನಾ ಹಾವಳಿಯ ಕಾರಣ ಈ ಸಾಲಿನ(2020) ಮಾರ್ಚ್ ತಿಂಗಳ 16ನೇ ತಾರೀಖಿನಿಂದಲೇ ಅಲ್ಲಿನ ಚರ್ಚುಗಳಲ್ಲಿ ನಡೆಯುವ ಬಲಿಪೂಜೆಗಳನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ. ಮೇತ್ರಾಣಿಗಳು (ಬಿಷಪ್ಪರು) ಪಾದ್ರಿಗಳು ವಿಶ್ವಾಸಿಕರು ತಾವಿರುವ ತಾಣದಲ್ಲೇ ಇದ್ದು ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳಿ, ದೂರದರ್ಶನ ವಾಹಿನಿಗಳಲ್ಲಿ ಬರುವ ನೇರ ಪ್ರಸಾರದ ಬಲಿಪೂಜೆಗಳಲ್ಲಿ ಭಾಗವಹಿಸಿ, ಆಧ್ಯಾತ್ಮಿಕ ಸಂವಾದದ ಫಲಗಳನ್ನು ಪಡೆಯಿರಿ ಎಂದು ಸೂಚಿಸಲಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಆಧ್ಯಾತ್ಮಿಕ ರೊಟ್ಟಿ ಸ್ವೀಕಾರ: ಆದರೆ, ಸದ್ಯದ ಸ್ಥಿತಿಯಲ್ಲಿ ಇಂಥ ಆನ್‍ಲೈನ್ ಪೂಜೆಗಳಲ್ಲಿ ಭಾಗವಹಿಸಿದಾಗ ರೊಟ್ಟಿಯ ರೂಪದ ಪರಮಪ್ರಸಾದ ಸ್ವೀಕಾರ ಸಾಧ್ಯವಾಗದ ಕಾರಣ, ಆಧ್ಯಾತ್ಮಿಕವಾಗಿ ರೊಟ್ಟಿ ಸ್ವೀಕಾರ ಮಾಡುವ ಸ್ಥಿತಿ ತಲೆದೋರಿದೆ. ದೇಶವಿದೇಶಗಳಲ್ಲೂ ಕ್ರೈಸ್ತರು ಇದೇ ಪಾಡನ್ನು ಅನುಭವಿಸುತ್ತಿದ್ದಾರೆ. ಕ್ರೈಸ್ತ ವಿಶ್ವಾಸಿಗಳಿಗೆ ಈ `ಆಧ್ಯಾತ್ಮಿಕ ರೊಟ್ಟಿ’ ಅನ್ನುವ ಪದ ಕೊರೊನಾ ಕಾಲದ ಹೊಸ ನುಡಿಗಟ್ಟು.

ಆದರೆ, ಕಥೋಲಿಕ ದೈವಶಾಸ್ತ್ರದ ಅಧ್ಯಯನ ನಡೆಸಿದ ಯಾಜಕರಿಗೆ ಇದು ಹೊಸ ನುಡಿಗಟ್ಟೇನಲ್ಲ. ಹದಿಮೂರನೇ ಶತಮಾನದಲ್ಲಿದ್ದ ಇಟಲಿ ಮೂಲದ ಯಾಜಕ, ಡಾಮಿನಿಕ್ ಸನ್ಯಾಸಿ ಮಠದ ಸದಸ್ಯ, ತತ್ವಜ್ಞಾನಿ ಸಂತ ಥಾಮಸ್ ಅಕ್ವಿನಸ್ (1225-1274) ಅವರು, ಆಧ್ಯಾತ್ಮಿಕ ಪರಮ ಪ್ರಸಾದ ಸ್ವೀಕಾರದ ಬಗ್ಗೆ ಚಿಂತನೆ ನಡೆಸಿದ್ದರು.

ಬಲಿಪೂಜೆಯ ಪವಿತ್ರ ಸಂಸ್ಕಾರದಲ್ಲಿರುವ               ಪ್ರಭು ಯೇಸುಸ್ವಾಮಿಯನ್ನು ಪವಿತ್ರ ಪ್ರಸಾದ, ಪರಮ ಪ್ರಸಾದ, ಸತ್ಪ್ರಸಾದ, ಪವಿತ್ರರೊಟ್ಟಿ ಮುಂತಾದ ಹೆಸರುಗಳಲ್ಲಿ ಗುರುತಿಸಲಾಗುತ್ತದೆ. ಪವಿತ್ರ ಸಂಸ್ಕಾರದಲ್ಲಿರುವ           ಪ್ರಭು ಯೇಸುಸ್ವಾಮಿಯನ್ನು ಭಾವಪೂರ್ಣವಾಗಿ ಬಯಸಿ, ಆಧ್ಯಾತ್ಮಿಕವಾಗಿ ಅವರನ್ನು ಸ್ವೀಕರಿಸಬೇಕು. ಹಾಗಾದಾಗ ಅವರನ್ನು ನಿಜದ ಅರ್ಥದಲ್ಲಿ ಸ್ವೀಕರಿಸಿದಂತೆ, ಅವರನ್ನು ಅಪ್ಪಿಕೊಂಡಂತೆ ಆಗುವುದೆಂದು ಸಂತ ಥಾಮಸ್ ಅಕ್ಷಿನಸ್ ಅವರು ಪ್ರತಿಪಾದಿಸುತ್ತಿದ್ದರು.

ಅದೇ ಇಟಲಿ ಮೂಲದ ಹದಿನೆಂಟನೇ ಶತಮಾನದಲ್ಲಿದ್ದ   ತತ್ವಜ್ಞಾನಿ ದೈವಶಾಸ್ತ್ರಜ್ಞ ಸಂತ ಅಲ್ಫೋನ್ಸಸ್ ಮರಿಯಾ ಲಿಗೋರಿ (1696-1787) ಅವರು, ನೇರವಾಗಿ ಬಲಿಪೂಜೆಗಳಲ್ಲಿ ಭಾಗÀವಹಿಸಿದಿದ್ದ ಸಂದರ್ಭಗಳಲ್ಲಿ, `ಓ ಎನ್ನ ಜೇಸುನಾಥರೆ, ಸಂಸ್ಕಾರದ ರೂಪದಲ್ಲಿ ನಿಮ್ಮನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ, ದಯಮಾಡಿ ಆಧ್ಯಾತ್ಮಿಕವಾಗಿ ನನ್ನ ಹೃದಯಕ್ಕೆ ಆಗಮಿಸಿ’ ಎಂದು ಪ್ರಾರ್ಥಿಸುತ್ತಿದ್ದರು.

ಫ್ರಾನ್ಸ್ ದೇಶದಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿದ್ದ  ಯೇಸುಕ್ರಿಸ್ತರ ಕಿರಿಯ ಪುಷ್ಪ ಸಂತ ತೆರೆಸಾ (1873-1897) ಅವರು, `ಬಲಿಪೂಜೆಯಲ್ಲಿ ದೈಹಿಕ ಹಾಜರಾತಿಯಲ್ಲಿ ಭಾಗವಹಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಆಧ್ಯಾತ್ಮಿಕ ಪರಮಪ್ರಸಾದವನ್ನು ಸ್ವೀಕರಿಸಬಹುದಾಗಿದೆ’ ಎಂದು ವಿವರಿಸಿದ್ದರು. ಈ ಸಂತರಿಗೆ ಯಾವ ಬಗೆಯ ತುರ್ತು ಪರಿಸ್ಥಿತಿ ಎದುರಾಗಿತ್ತೋ ತಿಳಿಯದು.

ಈಚೆಗೆ, ಈ ಹಿಂದಿನ ಪೋಪ್ ಬೆನೆಡಿಕ್ಟ್ ಅವರು, `ಬಲಿಪೂಜೆಯಲ್ಲಿ ಭಾಗವಹಿಸಿದ್ದರೂ, ದಿವ್ಯ ಸಂಸ್ಕಾರದ ಪರಮಪ್ರಸಾದವನ್ನು ಸ್ವೀಕರಿಸಲು ಸಾಧ್ಯವಾಗದಿರುವಾಗ,    ಯೇಸುಕ್ರಿಸ್ತರಲ್ಲಿ ಒಂದಾಗುವ ಆಸೆಯಿಂದ ಆಧ್ಯಾತ್ಮಿಕ ರೂಪದ ಪರಮಪ್ರಸಾದವನ್ನು ಸ್ವೀಕರಿಸುವುದು ಶ್ರೇಯಸ್ಕರ’ ಎಂದು ಹೇಳಿರುವುದನ್ನು ಇಂದಿನ ತುರ್ತು ಪರಿಸ್ಥಿತಿಯಲ್ಲಿ ಸ್ಮರಿಸಬಹುದಾಗಿದೆ.

ದೈಹಿಕ ಹಾಜರಾತಿಯ ಕಟ್ಟಳೆ: ಕಥೋಲಿಕ ಕ್ರೈಸ್ತ ವಿಶ್ವಾಸದ ಪ್ರಕಾರ, ಜಗದ ರಕ್ಷಣೆಗಾಗಿ ತಮ್ಮ ಏಕಮಾತ್ರ ಮಗನನ್ನು ಇಹಲೋಕಕ್ಕೆ ಕಳುಹಿದರು. ದೇವರೂ ಮನುಷ್ಯರೂ ಆದ ದೇವಸುತರು, ಮನುಷ್ಯರಿಗೂ ದೇವರಿಗೂ ನಡುವೆ ಮಧ್ಯಸ್ಥರಾದರು. ದೇವಸುತ ಯೇಸುಸ್ವಾಮಿ ಜಗದ ಉದ್ಧಾರಕ್ಕಾಗಿ ತಮ್ಮನ್ನು ಯಜ್ಞಪಶುವಾಗಿಸಿಕೊಂಡರು. ತಮ್ಮ ಅಂತಿಮ ಭೋಜನದಲ್ಲಿ, ತಮ್ಮ ಶರೀರ ಮತ್ತು ರಕ್ತವನ್ನು ರೊಟ್ಟಿ ಮತ್ತು ರಕ್ತದಲ್ಲಿ ಆವಾಹನೆ ಮಾಡಿಕೊಂಡು ಅವನ್ನು ತಮ್ಮ ಹನ್ನೆರಡು ಶಿಷ್ಯರಲ್ಲಿ ಹಂಚಿಕೊಂಡರು. ಮುರುದಿನ ಶಿಲುಬೆ ಮೇಲೆ ಮರಣಿಸಿ, ಮಾರನೇ ದಿನ ಮೃತರ ಮಧ್ಯದಿಂದ ಪುನರ್ ಜೀವಂತರಾಗಿ ಎದ್ದರು. ನಂತರ ಮೋಕ್ಷಾರೋಹಣ ಮಾಡಿ ನಮ್ಮನ್ನು ದೇವದೂತರೊಂದಿಗೆ ಸಂಧಾನ ಮಾಡಿದರು. ಅಂತಿಮ ಭೋಜನದ ಸ್ಮರಣೆಯೇ ಇಂದಿನ ಬಲಿಪೂಜೆಯ ಆಚರಣೆಗಳು.

ಈ ಪರಮಪ್ರಸಾದ ಸಂಸ್ಕಾರದ ಆಚರಣೆಯನ್ನು ದಿವ್ಯ ಪೂಜಾರ್ಪಣೆ, ಕರ್ತರ ಭೋಜನ, ರೊಟ್ಟಿಮುರಿ ಆಚರಣೆ, ಪ್ರಭುವಿನ ಯಾತನೆ, ಮರಣ, ಪುನರುತ್ಥಾನ ಸ್ಮರಣೆ, ದಿವ್ಯ ಬಲಿಪೂಜೆ, ದಿವ್ಯ ಮತ್ತು ದೈವಿಕ ಆರಾಧನೆ, ಪುನೀತ ರಹಸ್ಯಗಳು, ಪೀಠದ ಅತಿ ಪೂಜ್ಯ ಸಂಸ್ಕಾರ ಮತ್ತು ಪವಿತ್ರ ಪ್ರಸಾದ ಎಂದು ಕರೆಯಲಾಗುತ್ತದೆ.

`ಬಲಿಪೂಜೆಯ ಆರಾಧನಾ ಕೂಟವು ಒಂದು ಸಾಮುದಾಯಿಕ ಆಚರಣೆಯಾಗಿದೆ. ದೈವಪ್ರಜೆ ಕ್ರಿಸ್ತರ ಪ್ರತಿನಿಧಿಯಾದ ಗುರುಗಳ ಸುತ್ತಲೂ ಸಭೆ ಸೇರುತ್ತದೆ. ಈ ಸಭೆಯಲ್ಲಿ ಹಾಜರಿರುವ ಕ್ರೈಸ್ತ ಭಕ್ತನಲ್ಲಿ ತಾನು ಈ ಕೂಟದಲ್ಲಿ ಸ್ವತಃ ಭಾಗಿಯೆಂಬ ಮನೋಭಾವ ಇರಬೇಕು, ಸ್ವಂತ ಆಚರಣೆಗಳಿಗಿಂತ ಎಲ್ಲ ಕ್ರೈಸ್ತ ಭಕ್ತರು ಸೇರಿ ಅರ್ಪಿಸುವ ಬಲಿಪೂಜೆ ಹೆಚ್ಚಿನ ಮೆಚ್ಚುಗೆಗೆ ಪಾತ್ರವಾದುದು ಎಂತಲೆ ಸರ್ವರೂ ಅತ್ಯಧಿಕ ಉತ್ಸಾಹ ಭಕ್ತಿಯಿಂದ ಈ ವಿಧಿಗಳಲ್ಲಿ ಭಾಗವಹಿಸಬೇಕು’ ಎನ್ನುವುದು ಕಥೋಲಿಕ ಧರ್ಮಸಭೆಯ ಕಟ್ಟಳೆ.

ಬಲಿ ಪೂಜೆಯಲ್ಲಿ ಭಾಗವಹಿಸುವುದು ಎಂದರೆ ದೈಹಿಕವಾಗಿ ಹಾಜರಿರಬೇಕು ಎಂಬುದು ಕಥೋಲಿಕ ಧರ್ಮಸಭೆಯ ಕಟ್ಟಳೆ. ವಿಶ್ವಾಸಿಕರು ಧರ್ಮಸಭೆಯ ನಿಯಮದಂತೆ ಪ್ರಭು ಯೇಸುಸ್ವಾಮಿಯ ಪ್ರತಿರೂಪದಂತಿರುವ ಯಾಜಕರಲ್ಲಿ ಮೊದಲು ಪಾಪನಿವೇದನೆ ಮಾಡಿಕೊಂಡು ತಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟು, ಆತ್ಮಿಕವಾಗಿ ಶುದ್ಧರಾಗಿ, ರಕ್ಷಕರಾದ ದೇವಸುತ ಯೇಸುಸ್ವಾಮಿಯು ದೇಹ ಮತ್ತು ರಕ್ತಗಳನ್ನು ಗೋದಿಯ ರೊಟ್ಟಿ ಮತ್ತು ದ್ರಾಕ್ಷಾರಸಗಳಲ್ಲಿ ಆಹ್ವಾಹನೆÉ ಮಾಡುವ, ನಂತರ ರೊಟ್ಟಿಯನ್ನು ಭುಜಿಸುವ ಮತ್ತು ರಸವನ್ನು ಪಾನಮಾಡುವ ದಿವ್ಯ ಬಲಿಪೂಜೆಯಲ್ಲಿ ಭಕ್ತಿಯಿಂದ ಭಾಗವಹಿಸಬೇಕು.

ಬಲಿ ಪೂಜಾ ವಿಧಿಯ ಕೊನೆಯ ಘಟ್ಟದಲ್ಲಿ ವಿಶ್ವಾಸಿಕರು ರೊಟ್ಟಿಯನ್ನು ಭುಜಿಸಬೇಕು. ಶತಶತಮಾನಗಳಿಂದಲೂ ಧರ್ಮಸಭೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡುಬಂದಿದೆ. ಇಂದು ಈ ಕೊರೊನಾ ಹಾವಳಿಯು, ಹಲವಾರು ತಲೆಮಾರುಗಳಿಂದ ಅನುಗಾಲವೂ ನಡೆದುಕೊಂಡು ಬಂದಿದ್ದ ಕಥೋಲಿಕ ಧರ್ಮಸಭೆಯ ಈ ನಿಯಮಾವಳಿಗಳ ಪಾಲನೆಯಲ್ಲಿ ಭಂಗ ತಂದಿದೆ.

ಕೊರೊನಾ ವೈರಾಣು ಹಾವಳಿ ತಡೆಗಟ್ಟುವ    ಉದ್ದೇಶದಿಂದ, ಈ ರೋಗಾಣುವಿನ ರೋಗದ           ರುದ್ರ ನರ್ತನದಿಂದ ಬಸವಳಿದಿರುವ ಜಗತ್ತಿನ ಬಹತೇಕ ದೇಶಗಳು, ಆರೋಗ್ಯ, ನೈರ್ಮಲ್ಯ ಮೊದಲಾದವನ್ನು ಮತ್ತು ಅವಕ್ಕೆ ಪೂರಕವಾಗಿರುವ ಮತ್ತು ಜೀವನಕ್ಕೆ ಅಗತ್ಯವಿರುವ ಸೇವೆಗಳನ್ನು ಹೊರತುಪಡಸಿ ಜನ ಒಂದು ಕಡೆ ಸೇರಬಹುದಾದ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ಹೇರಿವೆ. ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳ ಜನಜೀವನ ಸ್ತಬ್ಧಗೊಂಡಿದೆ. ದೇವಾಲಯ, ಚರ್ಚುಗಳು ಮಸೀದಿಗಳು ಮುಂತಾದ ಪವಿತ್ರ ಸ್ಥಳಗಳಿಗೂ ದಿಗ್ಬಂಧನ ಹೇರಲಾಗಿದೆ. ಪೂಜಾರಿಗಳು, ಯಾಜಕರು ಮಾತ್ರ ನಿಗದಿತ ಕೆಲವು ಸಮಯದಲ್ಲಷ್ಟೇ ಅಲ್ಲಿ ಪ್ರವೇಶಿಸಲು ಅವಕಾಶ      ಕಲ್ಪಿಸಲಾಗಿದೆ. ದೇವರು ಕೈ ಬಿಡುವುದಲ್ಲ, ಮನುಷ್ಯನೇ ದೇವರ ಕೈ ಬಿಟ್ಟಿದ್ದಾನೆ.

`ನನ್ನ ನಾಮದಲ್ಲಿ.. ..’: ``.. ..ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದಾದರೂ ಒಂದು ವಿಷಯವಾಗಿ ಇಹಲೋಕದಲ್ಲಿ ಒಮ್ಮನಸ್ಸುಳ್ಳವರಾಗಿದ್ದರೆ, ಅದು ಸ್ವರ್ಗದಲ್ಲಿರುವ ನನ್ನ ತಂದೆಯಿಂದ ಅವರಿಗೆ ಕೈಗೂಡುತ್ತದೆ. ಎಲ್ಲಿ ಇಬ್ಬರು ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ.’’ ಇವು ಪ್ರಭು ಯೇಸುಕ್ರಿಸ್ತರ ನುಡಿಗಳು. ಇವು ಮತ್ತಾಯನ ಶುಭಸಂದೇಶದ 18ನೇ ಅಧ್ಯಾಯದ 19 ಮತ್ತು 20ನೇ ಚರಣಗಳು. ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್‍ನ ಎರಡನೇ ಭಾಗ ಹೊಸ ಒಡಂಬಡಿಕೆಯ ಮುಖ್ಯ ಭಾಗದಲ್ಲಿ ನಾಲ್ವರು ಬರೆದ ಶುಭ ಸಂದೇಶಗಳಿವೆ. ಈ ಶುಭಸಂದೇಶಗಳು ಯೇಸುಸ್ವಾಮಿಯ ಬೋಧನೆ ಹಾಗೂ ಅವನ ಜೀವನ ಗಾಥೆಯನ್ನು ತಿಳಿಸುತ್ತವೆ.

ಆದಿಕಾಲದಲ್ಲಿ ಕ್ರೈಸ್ತ ವಿಶ್ವಾಸಿಗಳು ಇಬ್ಬರು, ಮೂವರು ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಂತರ ವಿಶ್ವಾಸಿಕರ ಸಂಖ್ಯೆ ಹೆಚ್ಚುತ್ತಿದ್ದಂತೆಯೆ, ಕ್ರೈಸ್ತ ಧರ್ಮಸಭೆಯು ಒಂದು ಸಾಂಸ್ಥಿಕ ಸ್ವರೂಪ ಪಡೆದಾಗ, ವಿಶ್ವಾಸಿಕರೆಲ್ಲಾ ಅಧಿಕ ಪ್ರಮಾಣದಲ್ಲಿ ಒಂದೆಡೆ ನೆರೆದು ಯಾಜಕರ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದು ಆರಂಭವಾಗಿ ಚರ್ಚ್ ಕಟ್ಟಡಗಳು ಅಸ್ತಿತ್ವಕ್ಕೆ ಬಂದವು ಎಂದು ಇತಿಹಾಸದ ಪುಟಗಳು ತಿಳಿಸುತ್ತವೆ.

ವಿಶ್ವವ್ಯಾಪಿಯಾಗಿರುವ ಕಥೋಲಿಕ ಧರ್ಮಸಭೆಯ ಆರು ನಿಯಮಗಳಲ್ಲಿನ ಮೊದಲನೆಯ ನಿಯಮ-    ಆದಿತ್ಯವಾರಗಳಲ್ಲಿಯೂ ಕಟ್ಟಳೆಯ ಹಬ್ಬಗಳಲ್ಲಿಯೂ ಪೂರ್ಣ ಬಲಿಪೂಜೆಯಲ್ಲಿ ಭಾಗವಹಿಸು – ಎಂದು ಹೇಳುತ್ತದೆ. ಇದು ಸಾಮಾನ್ಯ ಪರಿಸ್ಥಿತಿಯಲ್ಲಿನ ಸಂಗತಿ. ಕೆಟ್ಟ ಹವಾಮಾನ ಪರಿಸ್ಥಿತಿ, ತೀವ್ರ ಅನಾರೋಗ್ಯ ಸ್ಥಿತಿ ಇತ್ಯಾದಿ ಪ್ರಸಂಗಗಳಲ್ಲಿ ಈ   ನಿಯಮದಿಂದ ವೈಯಕ್ತಿಕ ವಿನಾಯಿತಿ ಉಂಟು. ನಡೆಯಲಾಗದ ವೃದ್ಧರಿಗೂ ಈ ಬಗೆಯ ವಿನಾಯಿತಿ ಸಾಧ್ಯ. ಕೌಟುಂಬಿಕ ಸಮಸ್ಯೆಗಳಿದ್ದಾಗಲೂ ಇಂಥ ವಿನಾಯಿತಿ ತೋರಲಾಗುತ್ತದೆ.

ಕಳೆದ ಒಂದೆರೆಡು ಶತಮಾನಗಳಲ್ಲಿ ಜಗತ್ತು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಸಂಪರ್ಕಸಾಧನಗಳಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ. ಬೆಳಿಗ್ಗೆ ಬೆಂಗಳೂರಲ್ಲಿ ತಿಂಡಿ ತಿಂದವರು, ಸಂಜೆ ಸಿಂಗಾಪೂರದಲ್ಲಿ ರಾತ್ರಿ ಭೋಜನ ಮಾಡಬಹುದೆಂಬ ಸಂಗತಿ ನೀರು ಕುಡಿದಷ್ಟೇ ಸರಳ ಎನ್ನುವಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. `ಆರೋಗ್ಯ ಮತ್ತು ವೃದ್ಧಾಪ್ಯದಿಂದ ಜರ್ಜಿರಿತರಾದವರಿಗೆ ಭಾನುವಾರದ ಪೂಜೆಯಲ್ಲಿ ದೈಹಿಕವಾಗಿ ಭಾಗವಹಿಸುವುದರಿಂದ ವಿಶೇಷ ವಿನಾಯಿತಿ ಪಡೆದವರು, ದೂರದರ್ಶನದಲ್ಲಿ ಬಿತ್ತರಗೊಳ್ಳುವ ಬಲಿಪೂಜೆಯನ್ನು ಕೇಳುವುದು ಅನುಕೂಲಕರ ಸಂಗತಿ, ಆದರೆ ಅದರಿಂದ ಬಲಿಪೂಜೆಯಲ್ಲಿ ಪಾಲ್ಗೊಂಡ ಫಲ ಲಭಿಸುವುದಿಲ’್ಲ ಎಂದು ಇದುವರೆಗೂ ಧರ್ಮಸಭೆ ಬೋಧಿಸುತ್ತ ಬಂದಿದೆ.

ಆತ್ಮಘಾತುಕ ಸಾವಾದ ಪಾಪ: ಕಥೋಲಿಕರು ಭಾನುವಾರದ ಪ್ರಭು ಭೋಜನ (ಬಲಿಪೂಜೆ) ದಲ್ಲಿ ತಪ್ಪದೇ ಭಾಗವಹಿಸಬೇಕು. ಅದು ಅವರ ಕರ್ತವ್ಯ. ಭಾನುವಾರದ ಬಲಿಪೂಜೆಯನ್ನು ತಪ್ಪಿಸಿಕೊಳ್ಳುವುದು ಎಂದರೆ ಅದೊಂದು ಆತ್ಮಘಾತುಕ ಸಾವಾದ ಪಾಪ. ಈ ಪಾಪದ ಪರಿಹಾರಕ್ಕಾಗಿ ಯಾಜಕರಲ್ಲಿ ಪಾಪನಿವೇದನೆ ಮಾಡಿಕೊಂಡು ಪಶ್ಚಾತ್ತಾಪಪಟ್ಟು ತಕ್ಕ ಪ್ರಾಯಾಶ್ಚಿತ್ತ ಮಾಡಿಕೊಳ್ಳಬೇಕು ಎಂದು ಧರ್ಮಸಭೆ ಬೋಧಿಸುತ್ತದೆ. ನಗರವಾಸಿ ವಿಶ್ವಾಸಿಗಳಿಗೆ ವಿಶೇಷ ವಿನಾಯತಿ ಏನೂ ಇರುವುದಿಲ್ಲ.

`ನೀವು ಚರದೂರವಾಣಿ ಮತ್ತು ದೂರದರ್ಶನ ಸೆಟ್ಟುಗಳ ಪರದೆಗಳ ಮೇಲೆ ಬಲಿಪೂಜೆಯನ್ನು ನೋಡಿದರೆ ಅದು ಲೆಕ್ಕಕ್ಕೆ ಬರುವುದಿಲ್ಲ. ಏಕೆಂದರೆ, ಅದು ನೇರವಾಗಿ ಬಲಿಪೂಜೆಯಲ್ಲಿ ಭಾಗವಹಿಸಿದಂತಾಗುವುದಿಲ್ಲ, ಆದರೆ, ಅಲ್ಲಿ ಪ್ರಾರ್ಥನೆಗಳನ್ನು, ಪವಿತ್ರ ಗ್ರಂಥಗಳ ವಾಚನಗಳನ್ನು ಮತ್ತು ಯಾಜಕರು ನೀಡುವ ಪ್ರಬೋಧನೆಯನ್ನು ಕೇಳುವ ಸೌಭಾಗ್ಯ ದೊರೆಯಬಹುದು ಅಷ್ಟೆ. ಅದು ಬಲಿಪೂಜೆಯಲ್ಲಿ ಭಾಗವಹಿಸಿದಂತಾಗದು’ ಎಂಬುದು ಕಥೋಲಿಕ ಧರ್ಮಸಭೆಯ ಖಚಿತ ನಿಲುವಾಗಿತ್ತು. ಅದನ್ನು ಆಗಾಗ ಗಟ್ಟಿದನಿಯಲ್ಲಿ ಪ್ರತಿಪಾದಿಸುತ್ತಾ ಬಂದಿರುವುದನ್ನು ಇತಿಹಾಸದ ಪುಟಗಳಲ್ಲಿ ನೋಡಬಹುದಾಗಿದೆ.

ಇತ್ತೀಚೆಗಿನ ಉದಾಹರಣೆಯೊಂದು ಅಮೆರಿಕದಿಂದ ವರದಿಯಾಗಿದೆ. ಈಚೆಗೆ 2015ರಲ್ಲಿ ಓಬಾಮಾ ಅವರು ಅಧ್ಯಕ್ಷರಾಗಿದ್ದಾಗ, ಅಲ್ಲಿನ ಪ್ರಮುಖ ನಗರ ಫಿಲಡೆಲ್ಫಿಯಾದ ಮೆಫೇರ್‍ನ ಸಂತ ಮತ್ತಾಯನ ಚರ್ಚಿನ ಆಶ್ರಯದಲ್ಲಿ ಬೆಂಜಾಮಿನ್ ಫ್ರ್ಯಾಂಕಲಿನ್ ಪಾರ್ಕ್ ವೇ ನಲ್ಲಿ, ಸೆಪ್ಟೆಂಬರ 27ರ ಸಂಜೆ 4 ಗಂಟೆಗೆ ಪಾಪುಸ್ವಾಮಿಗಳು (ಪೋಪರು) ಬಲಿಪೂಜೆಯನ್ನು ಅರ್ಪಿಸುವವರಿದ್ದರು, `ಆ ಬಲಿಪೂಜೆಯಲ್ಲಿ ಖುದ್ದಾಗಿ ಭಾಗವಹಿಸಬೇಕು. ಅದನ್ನು ದೂರದರ್ಶನದ ಮೂಲಕ ವೀಕ್ಷಿಸಿದರೆ, ಅದು ಭಾನುವಾರದ ಬಲಿಪೂಜೆಗೆ ಸಮವಲ್ಲ. ಏಕೆಂದರೆ, ದೂರದರ್ಶನದಲ್ಲಿ ಬಲಿಪೂಜೆಯನ್ನು ನೋಡಿದರೆ ಅದು ಬಲಿಪೂಜೆಯಲ್ಲಿ ಭಾಗವಹಿಸಿದಂತೆ ಲೆಕ್ಕವಲ್ಲ. ವಿಶ್ವಾಸಿಕರು ಚರ್ಚುಗಳಲ್ಲಿ ಭಾನುವಾರದ ಬೆಳಗಿನ ಬಲಿಪೂಜೆ ಕೇಳಲೇ ಬೇಕು’ ಎಂದು ಸ್ಪಷ್ಟಪಡಿಸಲಾಗಿತ್ತು.

ಆತ್ಮಿಕವಾಗಿ ಲಾಭಕರ: ಈ ಕೊರೊನಾ ಹಾವಳಿಯು, ಹಲವಾರು ತಲೆಮಾರುಗಳಿಂದ ಅನುಗಾಲವೂ ನಡೆದುಕೊಂಡು ಬಂದಿದ್ದ ಕಥೋಲಿಕ ಧರ್ಮಸಭೆಯ ಈ ನಿಯಮಾವಳಿಗಳ ಪಾಲನೆಯಲ್ಲಿ ಭಂಗ ತಂದಿದೆ. ಈಗ ಧರ್ಮಸಭೆಯು ಕೊರೊನೊಗೆ ಮಣಿದಂತಾಗಿದ್ದು, ‘ವಿವಿಧ ಈ ಮಾಧ್ಯಮಗಳಲ್ಲಿ ಆನ್‍ಲೈನ್ ಬಲಿಪೂಜೆ ಕೇಳುವುದು, ನೋಡುವುದು ಆತ್ಮಿಕವಾಗಿ ಲಾಭಕರ’ ಎಂಬ ಧಾಟಿಯಲ್ಲಿ ಬೋಧಿಸತೊಡಗಿದೆ.

ಶಾರೀರಿಕವಾಗಿ ಉಪಸ್ಥಿತರಿದ್ದು ಸಕ್ರಿಯವಾಗಿ ಬಲಿಪೂಜೆಯಲ್ಲಿ ಭಾಗವಹಿಸುವುದು ಬೇರೆ, ಆನ್‍ಲೈನ್ ಬಲಿಪೂಜೆ ನೋಡುವುದೇ ಬೇರೆ. ಈ ಆನ್‍ಲೈನ್ ಬಲಿಪೂಜೆಗಳಲ್ಲಿ ಯಾಜಕರು ಪೂಜೆ ಮಾಡುತ್ತಿದ್ದರೆ, ಎದುರಿಗಿನ ವಿಶ್ವಾಸಿಕರು ಕುಳಿತುಕೊಳ್ಳುವ ಬೆಂಚುಗಳು ಖಾಲಿ ಖಾಲಿ. ಪೂಜೆಗಳು ನಡೆಯುವ ಸಂದರ್ಭಗಳಲ್ಲಿ ವಿಶ್ವಾಸಿಗಳಿಂದ ತುಂಬಿ ಗಿಜಗುಡುತ್ತಿದ್ದ ಚರ್ಚುಗಳ ಒಳಾಂಗಣ ಈಗ ಭಣಗುಡುತ್ತಿದೆ.

ಪರಿಸ್ಥಿತಿಯ ಒತ್ತಡ ಹಾಗಿದೆ. ಕ್ರೈಸ್ತರು ಇಂದು ಈ ಇಂಥ ಬಗೆಯ ದೇವರೊಂದಿಗಿನ ಹೊಸಬಗೆಯ ವಿನೂತನಮಾದರಿಯ ಅನುಸಂಧಾನಕ್ಕೆ ಹೊಂದಿಕೊಂಡು ಹೋಗುತ್ತಿದ್ದಾರೆ. ಯೇಸುಸ್ವಾಮಿ ಶಿಲುಬೆಗೆ ಏರುವ ಮುನ್ನ ಅನುಭವಿಸಿದ ಪಾಡುಗಳನ್ನು ಸ್ಮರಿಸುವ ತಪಸ್ಸು ಕಾಲದ ಶುಕ್ರವಾರದ ಶಿಲುಬೆ ಹಾದಿಯ ಧ್ಯಾನ, ಭಾನುವಾರದ ಪೂಜೆಗಳು, ಮೇತ್ರಾಣಿಗಳು (ಬಿಷಪ್) ನೆರವೇರಿಸುವ ಪ್ರಧಾನಾಲಯಗಳ (ಕಥಿಡ್ರಲ್)ಲ್ಲಿನ ದಿವ್ಯ ಬಲಿಪೂಜೆಗಳು ಪೂಜಾಸಮಯಕ್ಕೆ ಆನ್ ಲೈನ್ ನಲ್ಲಿ ಬಿತ್ತರಗೊಂಡು, ಮೊಬೈಲ್ ಆ್ಯಪ್, ವೆಬ್ ಸೈಟ್, ಯೂಟ್ಯೂಬ್ ಮತ್ತು ಫೇಸ್ ಬುಕ್ ಪುಟಗಳಲ್ಲಿ ಲಭ್ಯವಾದವು. ಗರಿಗಳ ಭಾನುವಾರ. ಶುಭ ಶುಕ್ರವಾರ ಯೇಸುಸ್ವಾಮಿ ಶಿಲುಬೆಗೇರಿದ ದಿನ. ಮುಂದಿನ ಭಾನುವಾರ ಯೇಸುಸ್ವಾಮಿಯ ಮರಣದ ಮೇಲೆ ಜಯ ಸಾಧಿಸುವ ಪುನರುತ್ಥಾನದ ಹಬ್ಬ- ಈಸ್ಟರ್ ಹಬ್ಬ. ಪಾಪನಿವೇದನಗೆ ಅವಕಾಶವಿಲ್ಲ. ಸದ್ಯದ ಸ್ಥಿತಿಯಲ್ಲಿನ ಇಂಥ ಆನ್‍ಲೈನ್ ಬಲಿಪೂಜೆಗಳಲ್ಲಿ ಭಾಗವಹಿಸಿದಾಗ ಪ್ರಸಾದ ರೂಪದ ರೊಟ್ಟಿ - ಪರಮಪ್ರಸಾದ ಸ್ವೀಕಾರ ಸಾಧ್ಯವಾಗದ ಕಾರಣ, ಆಧ್ಯಾತ್ಮಿಕವಾಗಿ ರೊಟ್ಟಿ ಸ್ವೀಕಾರ ಮಾಡುವ ಸ್ಥಿತಿ ತಲೆದೋರಿತ್ತು.

ಬೇಡ, ಚರ್ಚಿಗೆ ಬರಬೇಡಿ: ಜಾತಿ, ಧರ್ಮ, ಕುಲವೆಂಬುದನ್ನು ನೋಡದೆ, ಬಡವ ಬಲ್ಲಿದ, ಅಕ್ಷರಸ್ಥ ಅನಕ್ಷರಸ್ಥ ಎಂಬು ಭೇದಭಾವ ಮಾಡದೆ, ರಾಜಕೀಯದ ಎಡ ಸಿದ್ಧಾಂತಿ, ಬಲಸಿದ್ಧಾಂತಿ, ಎರಡನ್ನು ಗೌರವಿಸುವ, ಎರಡನ್ನು ಧಿಕ್ಕರಿಸುವವ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ, ನಮ್ಮ ಕಾಲದಲ್ಲಿ ಕಾಣಿಸಿಕೊಂಡ ಕೊರೊನಾ ವೈರಾಣುವಿನಿಂದ ಬರುವ ಕೋವಿಡ್-19 ಎಂಬ ರೋಗವು ಮಹಾಮಾರಿಯ ರೂಪತಾಳಿ, ವಿಶ್ವದಾದ್ಯಂತ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಜನರನ್ನು ಆಪೋಶನ ಮಾಡಿಬಿಟ್ಟಿದೆ.

ಎಲ್ಲ ಕಡೆಗೂ ಕೋವಿಡ್ ಕಾಯಿಲೆಯ ಸಾವಿನ ಪ್ರಕರಣಗಳದ್ದೇ ಸುದ್ದಿ. ಈ ಸಾವುಗಳು ಮಾನವನ  ಇತಿಹಾಸದಲ್ಲಿನ ಅತ್ಯಂತ ಭೀಕರವಾದ ಮಹಾಮಾರಿಯೊಂದರ ಕರಾಳ ಮುಖದ ಸಾಕ್ಷಿ ಒದಗಿಸುತ್ತಿವೆ. ಪ್ರಭು ಯೇಸುಕ್ರಿಸ್ತರು ಸಾವಿನ ಮೇಲೆ ಜಯ ಗಳಿಸಿ, ಮೃತ್ಯಂಜಯರಾದದನ್ನು ಸ್ಮರಿಸಿ ಕೊಂಡಾಡುವ ಪುನರುತ್ಥಾನ (ಈಸ್ಟರ್) ಹಬ್ಬದ ಸಂದರ್ಭದ ಈ ಸಾವುಗಳನ್ನು ಮಾನವ ಕುಲಕೋಟಿಯು ಸಂದಿಗ್ಧ ಸ್ಥಿತಿಯಲ್ಲಿ ಮೌನವಾಗಿ ಸಹಿಸಿಕೊಳ್ಳುವಂತೆ ಮಾಡಿದೆ.

ಕ್ರೈಸ್ತರೇ ಹೆಚ್ಚಿರುವ ಚಿಕ್ಕ ಚಿಕ್ಕ ಊರುಗಳಲ್ಲಿ ಪ್ರತಿದಿನವೂ ಮನೆಯ ಪಕ್ಕದ ಬೀದಿಯ ಚರ್ಚಿಗೆ ಬಲಿಪೂಜೆಗೆ ಹೋಗುವುದು ಸಹಜ ಸಂಗತಿಯಾಗಿತ್ತು. ಕೇವಲ ಭಾನುವಾರ ಚರ್ಚಿಗೆ ಬರುವವರನ್ನು ಉಳಿದವರು `ಭಾನುವಾರದ ಭಕ್ತರು’ (ಸಂಡೆ ಕ್ರಿಶ್ಚಿಯನ್ಸ್) ಎಂದು ಲೇವಡಿ ಮಾಡುತ್ತಿದ್ದರು. ಆದರೆ, ಇದೇ ಮೊದಲ ಬಾರಿ ಕಥೋಲಿಕ ಧರ್ಮಸಭೆಯ ಇತಿಹಾಸದಲ್ಲಿ ಮೇತ್ರಾಣಿ(ಬಿಷಪ್‍ರು)ಗಳು ಕಥೋಲಿಕ ಕ್ರೈಸ್ತ ವಿಶ್ವಾಸಿಗಳನ್ನು ಚರ್ಚಿಗೆ ಹೋಗಬೇಡಿರೆಂದು ಕೋರಿಕೊಂಡಿದ್ದಾರೆ. ಅದೂ ಎಂತಹ ಸಮಯ? ಕ್ರೈಸ್ತ ಧರ್ಮಸಭೆಯ ವಿಶ್ವಾಸದ ಮೂಲ ನೆಲಗಟ್ಟಾಗಿರುವ ಶಿಲುಬೆ ಮರಣದ ಶಿಕ್ಷೆಗೆ ಒಳಗಾಗುವ ಪ್ರಭು ಯೇಸುಕ್ರಿಸ್ತರ ಸಂಕಷ್ದದ ಪಾಡುಗಳನ್ನು ಸ್ಮರಿಸುವ ಶಿಲುಬೆ ಹಾದಿ ಆಚರಣೆ, ಅವರ ಶಿಲುಬೆ ಮೇಲಿನ ದಾರುಣ ಮರಣವನ್ನು ಕಂಡು ಮರುಗುವ, ಧ್ಯಾನಿಸುವ, ಪ್ರಾರ್ಥಿಸುವ ಮತ್ತು ಅವರು ಮೃತರ ಮಧ್ಯದಿಂದ ಪುನರ್ ಜೀವಂತರಾಗಿ ಎದ್ದು ಬರುವ ಸಂಗತಿಯಿಂದ ಸಂಭ್ರಮಿಸುವ ಸಂಕ್ರಮಣ ಕಾಲದಲ್ಲಿ – ದೇವಸುತ ಪ್ರಭು   ಯೇಸುಸ್ವಾಮಿ ಪುನರುತ್ಥಾನರಾದ ಸಮಯದಲ್ಲಿ.

ವಿಶ್ವವ್ಯಾಪಿ ಕಥೋಲಿಕ ಧರ್ಮಸಭೆಯ ಇತಿಹಾಸದಲ್ಲಿ ಹಿಂದೆಂದೂ ಇಂಥ ಘಟನೆ ನಡೆದ ಉದಾಹರಣೆಯೇ ಇಲ್ಲ. ಆಯಾ ಕಾಲದ ಆಯಾ ಅರಸೊತ್ತಿಗೆಗಳು, ಸರ್ಕಾರಗಳು ನಿರ್ಬಂಧಗಳನ್ನು ಹೇರಿದ್ದ ಸಂದರ್ಭಗಳಲ್ಲಿ ಹತಾಶೆಹೊಂದದೇ, ಬಂಧನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಬರಗಾಲ, ಅತಿವೃಷ್ಠಿ, ಭೂಕಂಪ, ಸುನಾಮಿಯಂಥ ನೈಸರ್ಗಿಕ ವಿಕೋಪದ ಪ್ರಸಂಗಗಳಲ್ಲಿ, ಸಿಡುಬು, ಪ್ಲೇಗ್ ನಂಥ ಮಹಾಮಾರಿ ರೋಗಗಳು ಬಂದಾಗ, ಮತ್ತು ಮಾನವ ಕುಲಕ್ಕೆ ಕಂಟಕಕಾರಿಯಾದ ಯುದ್ಧದಂಥ ಮಾನವ ಜನ್ಯ ಅವಘಡಗಳ ಮಧ್ಯೆಯೂ ಕಥೋಲಿಕ ಕ್ರೈಸ್ತರ ಧರ್ಮಸಭೆಯು ಧರ್ಮದ    ದೀಪವನ್ನು ನಂದಾದೀಪದಂತೆ ಬೆಳಗುತ್ತಾ ಬಂದಿತ್ತು. ಸಾವಿನ ಭಯವು ದೇವರ ಮೇಲಣ ವಿಶ್ವಾಸಕ್ಕಿಂತ ಮಿಗಿಲಾದುದೆ? ಎಂಬ ಪ್ರಶ್ನೆ ಇಂದು ವಿಶ್ವಾಸಿಗಳನ್ನು ಬಲವಾಗಿ ಕಾಡತೊಡಗಿದೆ.

ಏಕಾಂಗಿ ಕೌಟುಂಬಿಕ ಆಚರಣೆ: ಹಿಂದಿನ ಹಲವಾರು ವಾರಗಳಿಂದ ಕಥೋಲಿಕ ಕ್ರೈಸ್ತರು ಕಥೋಲಿಕ ಧರ್ಮಸಭೆಯ ನಿರ್ದೇಶನದಂತೆ ಭಾನುವಾರದ ಪೂಜೆಯಲ್ಲಿ ಭಾಗವಹಿಸಬೇಕೆಂಬ ಆಣತಿಯನ್ನು ಪಾಲಿಸಲು ಸಾಧ್ಯವಾಗಿಲ್ಲ. ಸದ್ಯದ ಸ್ಥಿತಿಯಲ್ಲಿ ಇದು ಇನ್ನೂ ಕೆಲವು ವಾರಗಳು ಮುಂದುವರಿದರೂ ಅಚ್ಚರಿಯೇನಿಲ್ಲ. ವರ್ಷಕ್ಕೊಮ್ಮೆಯಾದರೂ ಅದೂ ಈಸ್ಟರ್ ಹಬ್ಬದ ಪವಿತ್ರ ವಾರದ ಮತ್ತು ಕ್ರಿಸ್ಮಸ್ ಹಬ್ಬದ ಸಂದರ್ಭಗಳಲ್ಲಿ ತಪ್ಪದೇ ಪಾಪಸಂಕೀರ್ತನೆ ಮಾಡಬೇಕೆಂಬ ನಿಯಮಾವಳಿಯಂತೆ ಈ ಬಾರಿಯ ಈಸ್ಟರ್ ಹಬ್ಬದ ಪವಿತ್ರ ವಾರದ ಸಂದರ್ಭದಲ್ಲಿ ಪಾಲಿಸಲಾಗುತ್ತಿಲ್ಲ. ಜೊತೆಗೆ ಪೂಜೆಯ ಅಂತಿಮ ಘಟ್ಟದಲ್ಲಿ, ಯಾಜಕರು ಪ್ರಭು ಯೇಸುಸ್ವಾಮಿಯ ಶರೀರವನ್ನು ಆವಾಹನೆ ಮಾಡಿದ ರೊಟ್ಟಿ (ಪರಮ ಪ್ರಸಾದದವನ್ನು)ಯನ್ನು ಪಡೆಯಲಾಗುತ್ತಿಲ್ಲ.

ಎರಡು ಸಾವಿರ ವರ್ಷಗಳ ಹಿಂದೆ ಪ್ರಭು ಯೇಸುಸ್ವಾಮಿ ಅರಸನಂತೆ ಜೆರುಸಲೇಮು ಪಟ್ಟಣವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅಲ್ಲಿನ ಸಾಮಾನ್ಯ ಜನತೆ ಸಂಭ್ರಮದಿಂದ ಅವರನ್ನು ಬರಮಾಡಿಕೊಂಡದ್ದನ್ನು ಸ್ಮರಿಸುವ ಸಂಭ್ರಮದ ಆಚರಣೆಯಾದ ಭಾನುವಾರದ ಗರಿಗಳ ಹಬ್ಬದಂದು, ಅದೇ ಪ್ರಸಕ್ತ ಸಾಲಿನ ಏಪ್ರಿಲ್ 5ರಂದು ಗರಿಗಳ ಹಬ್ಬದ ಮೆರವಣಿಗೆ ನಡೆಯಲೇ ಇಲ್ಲ. ಗುರುಗಳು ವಿಶ್ವಾಸಿಕರ ಅನುಪಸ್ಥಿತಿಯಲ್ಲಿ ತಮ್ಮ ತಮ್ಮ ಚರ್ಚುಗಳಲ್ಲಿ ತಮ್ಮಷ್ಟಕ್ಕೆ ತಾವು ಪೂಜಾವಿಧಿಗಳನ್ನು ನಡೆಸಬೇಕಾಯಿತು. ಏಪ್ರಿಲ್ 12 ರಂದು ಆಚರಿಸಿದ ಪ್ರಭು   ಯೇಸುಸ್ವಾಮಿಯ ಮೃತದ ಮಧ್ಯದಿಂದ ಪುನರ್ ಜೀವಂತರಾಗಿ ಎದ್ದುದನ್ನು ಕೊಂಡಾಡುವ ಈಸ್ಟರ್ ಹಬ್ಬವನ್ನು ಕಥೋಲಿಕ ಕುಟುಂಬಗಳು ಏಕಾಂಗಿಯೇ ಆಚರಿಸಿದವು.

ಪ್ರಭು ಯೇಸುಸ್ವಾಮಿಯ ಶೋಧನೆಯ ದಿನಗಳನ್ನು ಸ್ಮರಿಸಿ, ಕ್ರೈಸ್ತ ವಿಶ್ವಾಸಿಗಳು ಆಚರಿಸುವ ಸರಳ ಜೀವನದ ತಪಸ್ಸು ಕಾಲದ ಅಂತ್ಯದಲ್ಲಿ ಬರುವ ಪವಿತ್ರ ತ್ರಿದಿನಗಳ ಬಲಿಪೂಜೆಗಳು ಮತ್ತು ಸಾಂಗ್ಯಗಳು ಬಹು ಮಹತ್ವವಾದವು. ಸಾಮಾನ್ಯ ಪರಿಸ್ಥಿತಿಯಲ್ಲಿ ಪ್ರಭು ಯೇಸುಕ್ರಿಸ್ತರ ಅಂತಿಮ ಭೋಜನದ ಸ್ಮರಣೆಯ ದಿನವಾದ ಪವಿತ್ರ ಗುರುವಾರದಂದು ಧರ್ಮಕೇಂದ್ರದ ವಿಶ್ವಾಸಿಗಳು ಮತ್ತು ಯಾಜಕರು ಸಂಭ್ರಮದಿಂದ  ಬಲಿಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅಂದು 12 ಜನ ಪ್ರೇಷಿತ ಶಿಷ್ಯರ ಪಾದ ತೊಳೆದು ಸೋದರ ಪ್ರೀತಿ ಮತ್ತು ಪರರ ಸೇವೆಯ ಮಹತ್ವವನ್ನು ತೋರಿಸಿಕೊಟ್ಟ ಯೇಸುಸ್ವಾಮಿಯ ನಡೆಯನ್ನು ಅನುಸರಿಸಿ, ಯಾಜಕರು ಹನ್ನೆರಡು ಮಂದಿಯ ಪಾದ ತೊಳೆಯುವ ಆಚರಣೆಗೆ ತಿಲಾಂಜಲಿ ಇಟ್ಟಾಯಿತು. ನೇರವಾಗಿ ಬಿತ್ತರಗೊಂಡ ಬಲಿಪೂಜೆಯಲ್ಲಿ ಯೇಸುಸ್ವಾಮಿ ಶಿಷ್ಯರ ಪಾದ ತೊಳೆಯುವ ವಿಡಿಯೋ ಚಿತ್ರಣಗಳನ್ನು ತೋರಿಸಲಾಯಿತು. ವಿಶ್ವಾಸಿಗಳ ಸಮ್ಮುಖದಲ್ಲಿ ಯೇಸುಸ್ವಾಮಿಯ ಶಿಲುಬೆ ಮೇಲಿನ ಮರಣವನ್ನು ಸ್ಮರಿಸುವ ಪೂಜಾ ವಿಧಿಗಳ ಆಚರಣೆ ಮಧಾನ್ನ 3 ಗಂಟೆಗೆ ಚರ್ಚಿನಲ್ಲಿ ಆರಂಭವಾಗುತ್ತಿದ್ದವು. ಅವುಗಳಿಗೂ ಸಂಚಕಾರ ಬಂದಿತು. ಇವು ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ನಡೆದ ಪವಿತ್ರವಾರದಲ್ಲಿನ ಆಚರಣೆಗಳು.

ಆದರೂ, ಧರ್ಮಸಭೆಯ ಸೂಚನೆಯಂತೆ, ಅದರ ಸದಾಶಯದಂತೆ ತಪಸ್ಸು ಕಾಲದಲ್ಲಿನ ಭಾನುವಾರಗಳಲ್ಲಿ ಮನೆಯಲ್ಲಿ ಆಚರಿಸಿದ ಕೌಟುಂಬಿಕ ಆಧ್ಯಾತ್ಮಿಕ ಬಲಿಪೂಜೆಗಳು, ಆನ್ ಲೈನ್ ಬಲಿಪೂಜೆಗಳು ಮತ್ತು ತಪಸ್ಸು ಕಾಲದ ಅಂತ್ಯದಲ್ಲಿ ಆನ್ ಲೈನ್ ನಲ್ಲಿ ಬಿತ್ತರಗೊಂಡ ಪವಿತ್ರ ತ್ರಿ ದಿನಗಳ ಬಲಿಪೂಜೆಗಳು ಮತ್ತು ಸಾಂಗ್ಯಗಳ ಸಂದರ್ಭಗಳಲ್ಲಿ ಆಯಾ ಮನೆಗಳ ದೇವರ ಪೀಠಗಳೇ ದೇವಾಲಯದ ಪೂಜಾಂಕಣದ ಸ್ವರೂಪ ಪಡೆದವು ಎಂದರೆ ತಪ್ಪಾಗದು.

ಸವಾಲುಗಳಿಗೆ ಸದಾ ಸಿದ್ಧ: ಸುಮಾರು ಎರಡು ಶತಮಾನಗಳ ಇತಿಹಾಸವಿರುವ ಕಥೋಲಿಕ ಧರ್ಮಸಭೆಯ ಎಂಥದೇ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಸದಾ ಸಜ್ಜಾಗಿರುತ್ತದೆ. ಅದರಂತೆಯೇ ಈ ಕೊರೊನಾ ವೈರಾಣು ತಂದಿಟ್ಟಿರುವ ಇಂದಿನ ಸಂಕಟಕಾರಿ ಎರಡಲಗಿನ ಕತ್ತಿಯ ಮೇಲಣ ನಡಿಗೆಯ ಇಂದಿನ ಪರಿಸ್ಥಿತಿಯಲ್ಲಿ, ಏಪ್ರಿಲ್ 15ರಂದು ಕೊನೆಗೊಳ್ಳುವ 21 ದಿನಗಳ ಜನಜೀವನವನ್ನು ಸ್ತಬ್ಧಗೊಳಿಸಿರುವ ಲಾಕ್‍ಡೌನ್ - ಸಂದರ್ಭದಲ್ಲಿ ಗೃಹ ಬಂಧನದಂಥ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ವಿಶ್ವಾಸಿಕರ ಮೇಲೆ ಕಥೋಲಿಕ ಧರ್ಮಸಭೆಯು ಹೇರಿದ ನಿರ್ಬಂಧಗಳನ್ನು ಸಡಲಿಸುವ ಆದೇಶದ ಜವಾವ್ದಾರಿಯನ್ನು ಆಯಾ ಧರ್ಮಕ್ಷೇತ್ರದ ಮತ್ರಾಣಿ(ಬಿಷಪ್)ಗಳಿಗೆ ಒಪ್ಪಿಸಿದೆ.

ಆಯಾ ಚರ್ಚುಗಳು ಜವಾಬ್ದಾರಿ ಹೊತ್ತ ವಿಚಾರಣಾ ಗುರುಗಳಿಗೆ ಪವಿತ್ರ ವಾರದ ಆಚರಣೆಗಳನ್ನು ವೈಯಕ್ತಿಕ ಮಟ್ಟದಲ್ಲಿ ನಡೆಸುವಂತೆ ಕಥೋಲಿಕ ಧರ್ಮಸಭೆ ಸೂಚಿಸಿತು. ಮನೆಗಳಲ್ಲಿ ಬಂಧಿಗಳಾಗಿರುವ ಕಥೋಲಿಕ ಕ್ರೈಸ್ತ ವಿಶ್ವಾಸಿ ಕುಟುಂಬಗಳ ಸದಸ್ಯರು, ಭಾನುವಾರ ಪೀಠದ ಎದುರು ಸೇರಿಕೊಂಡು, (ಯಾಜಕರ ಅನುಪಸ್ಥಿತಿಯಲ್ಲಿ) ಆಧ್ಯಾತ್ಮಿಕ ದಿವ್ಯ ಬಲಿಪೂಜೆ ನಡೆಸಿ, ಸಂಸ್ಕಾರ ರೂಪದ ಕ್ರಿಸ್ತ ಶರೀರದ (ರೊಟ್ಟಿ) ಸೇವನೆ ಆಗದ ಕಾರಣ ಆಧ್ಯಾತ್ಮಿಕ ಪರಮಪ್ರಸಾದ (ರೊಟ್ಟಿ) ಸೇವಿಸುವಂತೆ ಸಲಹೆ ನೀಡಲಾಯಿತು.

ಮೇತ್ರಾಣಿಗಳು ಕಥೋಲಿಕ ಕ್ರೈಸ್ತ ವಿಶ್ವಾಸಿಗಳು  ಮನೆಯಲ್ಲಿಯೇ ಇದ್ದುಕೊಂಡು ಧಾರ್ಮಿಕ ವಿಧಿಗಳನ್ನು ಹೇಗೆ ನಡೆಸಿಕೊಂಡು ಹೋಗಬೇಕೆಂಬ ತಿಳಿವಳಿಕೆ ನೀಡಿದ್ದಾರೆ. ಅದರಂತೆ ಮನೆಗಳಲ್ಲಿರುವ ಕ್ರೈಸ್ತ ವಿಶ್ವಾಸಿಗಳು ನಿಗದಿತ ಸಮಯದಲ್ಲಿ ಆನ್ ಲೈನ್ ನಲ್ಲಿ ಬಿತ್ತರಗೊಳ್ಳುವ ಬಲಿಪೂಜೆಗಳಲ್ಲಿ ಭಾಗವಹಿಸಿ ಪುನೀತರಾಗುತ್ತಿದ್ದಾರೆ. ಕಥೋಲಿಕ ಧರ್ಮಸಭೆಯ ಹೊಸ ನಿಲುವಿನಂತೆ ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಅತಿ ವಂದನೀಯ ಪೀಟರ್ ಮಚಾದೊ ಅವರು, ಆದಿತ್ಯವಾರದಲ್ಲಿಯೂ ಕಟ್ಟಳೆಯ ಹಬ್ಬಗಳಲ್ಲಿಯೂ ಪೂರ್ಣ ಬಲಿಪೂಜೆಯಲ್ಲಿ ಭಾಗವಹಿಸು, ವರ್ಷಕ್ಕೆ ಒಮ್ಮೆಯಾದರೂ ಪಾಪ ನಿವೇದನೆ ಮಾಡು, ಪಾಸ್ಖ ಕಾಲದಲ್ಲಿ ಪರಮಪ್ರಸಾದವನ್ನು ಸ್ವೀಕರಿಸು- ಎಂದು ನಿದೇಶಿಸುವ ಧರ್ಮಸಭೆಯ ಕಟ್ಟಳೆಗಳಿಂದ ತಮ್ಮ ಧರ್ಮಕ್ಷೇತ್ರಕ್ಕೆ ಸೇರಿದ ವಿಶ್ವಾಸಿಗಳನ್ನು ಮಾರ್ಚ್ 31ರವರೆಗೆ ಮುಕ್ತಗೊಳಿಸಿದ್ದರು. ಉಳಿದ ಮೇತ್ರಾಣಿಗಳೂ ಅದೇ ಹಾದಿ ತುಳಿದಿದ್ದಾರೆ.

ಮಾರ್ಚ್ ಮೊದಲವಾರದಲ್ಲಿಯೇ ಕ್ರೈಸ್ತರ ಪವಿತ್ರ ತೀರ್ಥ ಕ್ಷೇತ್ರ ಯೇಸುಸ್ವಾಮಿ ಜನ್ಮ ತಳೆದ ಜಾಗ ಎಂದು ಗುರುತಿಸಲಾಗುವ ಬೆತ್ಲೆಹೇಮಿನಲ್ಲಿರುವ ಲ್ಲಿರುವ ಚರ್ಚಿನ ಬಾಗಿಲನ್ನು ಮುಚ್ಚಲಾಗಿದೆ. ಆಗಿನಿಂದಲೇ, ಕಥೋಲಿಕ ಕ್ರೈಸ್ತ ಪಂಥದ ಜಗದ್ಗುರುಗಳ ಪೀಠವಿರುವ ರೋಮ ಪಟ್ಟಣದ ವ್ಯಾಟಿಕನ್‍ನಲ್ಲಿರುವ ಸಂತ ಪೀಟರ್ (ಪೇತ್ರ) ವೃತ್ತದಲ್ಲಿ ಕಿಟಕಿಯಿಂದ ಭಾನುವಾರದ ದಿವ್ಯ ಸಂದೇಶ ನೀಡುತ್ತಿದ್ದ, ಕಥೋಲಿಕ ಕ್ರೈಸ್ತರ ಪರಮೋಚ್ಚ ಗುರು ಜಗದ್ಗುರು, ಪಾಪು (ಪೋಪ್) ಸ್ವಾಮಿಗಳಾದ ಫ್ರಾನ್ಸಿಸ್ ಅವರು ಅದಕ್ಕಾಗಿ ವಿಡಿಯೋ ಲಿಂಕ್ ಬಳಸಿದರು. ಅವರ ಬುಧವಾರದ ದರ್ಶನವೂ ವಿಡಿಯೋ ಲಿಂಕ್ ಮೂಲಕವೇ ನಡೆಯಿತು, ಮಾರ್ಚ್ ತಿಂಗಳ ಕೊನೆಯಲ್ಲಿ, ರೋಮ ನಗರದ ಮಹಾಮೇತ್ರಾಣಿಗಳಾಗಿ ರೋಮ ನಗರಕ್ಕೆ (ಊರ್ಬಿ) ಮತ್ತು ಪ್ರಭು ಯೇಸುಕ್ರಿಸ್ತನ ಪ್ರತಿನಿಧಿಯಾಗಿ ಇಡೀ ಜಗತ್ತಿಗೆ (ಓರ್ಬಿ) ಪಾಪುಸ್ವಾಮಿಗಳು ವಿಶ್ವಾಸಿಗಳ ಅನುಪಸ್ಥಿತಿಯಲ್ಲಿ ಏಕಾಂಗಿಯಾಗಿ ವಿಶೇಷ ಆಶಿರ್ವಾದವನ್ನು ಪ್ರಸಾದಿಸಿದರು. ಅದು ಆನ್ ಲೈನ್ ನಲ್ಲಿ ನೇರವಾಗಿ ಬಿತ್ತರಗೊಂಡಿತ್ತು. ಪಾಪುಸ್ವಾಮಿಗಳು ಕ್ರಿಸ್ತ ಜಯಂತಿ ಮತ್ತು ಪುನರುತ್ಥಾನದ (ಈಸ್ಟರ್) ಹಬ್ಬದ ಸಂದರ್ಭಗಳಲ್ಲಿ ವರ್ಷಕ್ಕೆರಡು ಬಾರಿ ವ್ಯಾಟಿಕನ್ ನಗರದ ಸಂತ ಪೇತ್ರರ ಮಹಾದೇವಾಲಯದ ಮೆಟ್ಟಿಲುಗಳ ಮೇಲಿನ ಅಂಗಳದಲ್ಲಿ ನಿಂತು ಪರಮಪ್ರಸಾದದ ಪ್ರಭಾವಳಿಯನ್ನು ಎತ್ತಿ ಹಿಡಿದು ಎರಡು (ಊರ್ಬಿ ಎತ್ ಓರ್ಬಿ)ಆಶೀರ್ವಾದ ನೀಡುವುದು ಸಂಪ್ರದಾಯ.

ಕೋವಿಡ್ -19 ರೋಗ ಸೋಂಕಿತರು ಪತ್ತೆಯಾಗುತ್ತಿದ್ದಂತೆಯೇ, ಇಟಲಿ ದೇಶದ ಉತ್ತರ ಭಾಗದಲ್ಲಿರುವ ಟುರಿನ್, ವೇನಿಸ್ ಮೊದಲಾದ ಅನೇಕ ಪಟ್ಟಣಗಳಲ್ಲಿ     ಆಯೋಜಿಸಿದ್ದ ತಪಸ್ಸು ಕಾಲದ ಆರಂಭವನ್ನು ಗುರುತಿಸುವ ಬೂದಿ ಬುಧವಾರದ ಬಲಿಪೂಜೆಗಳನ್ನು ರದ್ದು ಪಡಿಸಲಾಯಿತು. ಸ್ಥಳೀಯ ದೂರದರ್ಶನ ಚಾನೆಲ್ ಗಳಲ್ಲಿ, ಆನ್ ಲೈನ್ ನಲ್ಲಿ ಪೂಜೆಯನ್ನು ಬಿತ್ತರಿಸಲಾಯಿತು. ವಿಶ್ವದಾದ್ಯಂತ ಹರಡಿರುವ ಪ್ರೊಟೆಸ್ಟೆಂಟ್ ಚರ್ಚುಗಳೂ, ವಿಶ್ವಾಸಿಗಳು ಚರ್ಚಿಗೆ ಬಾರದೇ ಮನೆಯಲ್ಲಿಯೇ ಪ್ರಾರ್ಥನೆಗಳನ್ನು ಸಲ್ಲಿಸಿ ಎಂದು ಸೂಚಿಸಿದವು. ಕೋವಿಡ್-19 ಕಾಯಿಲೆಯ ಭಯ ಭಾನುವಾರವೆಂದರೆ ಚರ್ಚು, ಚರ್ಚು ಎಂದರೆ ಭಾನುವಾರ ಎಂಬ ಕ್ರೈಸ್ತರ ವಾಡಿಕೆಯ ಅನಿಸಿಕೆಯನ್ನು ತಾತ್ಕಾಲಿಕವಾಗಿ ಹುಸಿಯಾಗುವಂತೆ ಮಾಡಿದೆ.

ಪ್ರೀತಿಗಾಗಿ ಕ್ರೈಸ್ತರ ಹೆಜ್ಜೆ: ಕ್ರೈಸ್ತ ವಿಶ್ವಾಸಿಗಳು ತಮ್ಮ ಧರ್ಮಸಭೆಗಳÀ ಬೋಧನೆಗಳನ್ನು ಪಾಲಿಸಬೇಕೋ? ಅಥವಾ ಆಯಾ ದೇಶಗಳ ಸರ್ಕಾರಗಳು ನೀಡುವ ಆದೇಶಗಳನ್ನು ಪಾಲಿಸಬೇಕೋ? ಈ ಬಗೆಯಲ್ಲಿ ನೂರಾರು ಅಪ್ರಬುದ್ಧ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ, ಕೆಲಸಕ್ಕೆ ಬಾರದ ವಾದವಿವಾದಗಳನ್ನು ಹುಟ್ಟುಹಾಕುತ್ತಾ ಹೋಗಬಹುದು.

ಅವು ಏನೇ ಇರಲಿ `ಮಾನವ ಪ್ರೀತಿ, ತನ್ನಂತೆ ಪರರನ್ನು, ನೆರೆಹೊರೆಯವರನ್ನು ಪ್ರೀತಿಸುವುದು ಮತ್ತು ದೈವ ಭಕ್ತಿ ಕ್ರೈಸ್ತ ಧರ್ಮದ ಜೀವಾಳ’ ಎನ್ನುವುದನ್ನು ಮರೆಯುವಂತಿಲ್ಲ. ಒಟ್ಟಾಗಿ ನೆರೆದು ಸಾಮೂಹಿಕವಾಗಿ ಪ್ರಾರ್ಥಿಸುವುದರಿಂದ ಕೊರೊನಾ ವೈರಾಣು ಹರಡಲು ಅನುಕೂಲವಾಗುತ್ತದೆ, ಅದು ನರೆಹೊರೆಯವರ ಜೀವಕ್ಕೆ ಕುತ್ತು ತರುವ ಮಾರಣಾಂತಿಕ ಕೋವಿಡ್-19 ಕಾಯಿಲೆಗೆ ಕಾರÀಣವಾಗಿ ಮಾನವರಿಗೆ ಸಂಕಟತಂದೊಡ್ಡುತ್ತದೆ ಎಂದರೆ ಅದು ಕ್ರೈಸ್ತ ಪ್ರಾರ್ಥನೆಯೇ ಅಲ್ಲ.

ದೇವರ ಹತ್ತು ಆಜ್ಞೆಗಳು ಎರಡು ಮೂಖ್ಯ ಆಜ್ಞೆಗಳಲ್ಲಿ ಅಡಗಿವೆ ಎಂದು ಕಥೋಲಿಕ ಧರ್ಮಸಭೆ ಅನಾದಿ        ಕಾಲದಿಂದಲೂ ಸಾರುತ್ತಾ ಬಂದಿದೆ. ಆ ಎರಡು ಆಜ್ಞೆಗಳು   ಇಂತಿವೆ: ಎಲ್ಲಕ್ಕಿಂತ ಹೆಚ್ಚಾಗಿ ದೇವರನ್ನು ಪ್ರೀತಿಸು ಮತ್ತು ನಿನ್ನಂತೆಯೇ ಪರರನ್ನು ಪ್ರೀತಿಸು. ಜೊತೆಗೆ ಕಥೋಲಿಕ ಧರ್ಮಸಭೆಯು `ಮಾನವ ವ್ಯಕ್ತಿತ್ವದ ಘನತೆ ಅವನು ದೇವರ ಹೋಲಿಕೆ ಮತ್ತು ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರುವ ಮೂಲದಿಂದ ಉಗಮಿಸುತ್ತದೆ ಎಂದೂ ತನ್ನ ಧರ್ಮೋಪದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಇಂತಿರುವಾಗ, ಪ್ರತಿಯೊಬ್ಬ ಮಾನವನೂ ದೇವ ಸ್ವರೂಪಿ, ಪ್ರಾರ್ಥನೆಗಾಗಿ ವಿಶ್ವಾಸಿಗಳು ಚರ್ಚುಗಳಲ್ಲಿ ನೆರೆಯುವುದರಿಂದ ರೋಗ ಹರಡಿ ತಮಗೂ, ತಮ್ಮ ನೆರೆಹೊರೆಯವರ ಜೀವಕ್ಕೂ ಕುತ್ತು ತರುವುದು ಎಂದರೆ ದೇವ ಸ್ವರೂಪಿಗಳಾದ ಮಾನವರ ಕುಲಕ್ಕೆ ಕುತ್ತು ತಂದಂತೆಯೇ ಅಲ್ಲವೆ? ತನ್ನಂತೆ ಪರರನ್ನು ಪ್ರೀತಿಸುವ ತನ್ನ ರಕ್ಷಣೆಗೆ ಮುಂದಾಗುವಂತೆ ಪರರ ರಕ್ಷಣೆಗೆ ಮುಂದಾಗುವುದು ಅವನು ಮಾಡುವ ದೇವರ ಪೂಜೆಯಲ್ಲದೆ ಮತ್ತೇನು?

ಕೋವಿಡ್-19 ಕಾಯಿಲೆಯ ಹಿನ್ನೆಲೆಯಲ್ಲಿ `ನೀನು ನೆರೆಹೊರೆಯವರನ್ನು ಪ್ರೀತಿಸುತ್ತಿ ಎನ್ನುವುದಾದರೆ, ಅವರಿಂದ ದೂರವಿರು’ ಎನ್ನುವುದೇ ಕ್ರೈಸ್ತ ನಡೆ ಆಗಿದೆ’. ಮಾನವರಿಗೆ ಸಾವಿನ ಕುತ್ತು ತರುವ ಸಾಮೂಹಿಕವಾಗಿ ಮಾಡುವ ಪ್ರಾರ್ಥನೆ, ಪ್ರಾರ್ಥನೆಯೇ ಅಲ್ಲ. ಅಂಥ ಪ್ರಾರ್ಥನೆಯಿಂದ ದೂರ ಇರುವುದೆಂದರೆ ಸಾವಿಗೆ ಹೆದರಿ ದೂರ ಇದ್ದಂತಲ್ಲ, ಇದು ಮಾನವತೆಗಾಗಿ ಮಾನವ ಪ್ರೀತಿಗಾಗಿ ಕ್ರೈಸ್ತರು ಇಡುವ ಹೆಜ್ಜೆ ಎನ್ನುವುದು ಪ್ರಾಜ್ಞರ ಅನಿಸಿಕೆ.

ಬೇಕಾಗಿರದ ಚರ್ಚುಗಳ ಪೈಪೋಟಿ: ಒತ್ತಾಯದ ಮಾಘಸ್ನಾನದ ಸ್ವಲ್ಪ ಸ್ವಾತಂತ್ರ್ಯದ ಗೃಹ ಬಂಧನದ ಅವಧಿಯಲ್ಲಿ ಕೊರೊನಾ ಹಾವಳಿಯು ತಮಗಿತ್ತ ವಿಶೇಷ ವರದಾನ ಎಂದುಕೊಂಡು ಪೈಪೋಟಿಗೆ ಬಿದ್ದಂತೆ, ಕೆಲವು ಚರ್ಚುಗಳು ನಾ ಮುಂದು ತಾ ಮುಂದು ಎಂಬಂತೆ, ಆನ್‍ಲೈನ್ ವಿಧಾನಲ್ಲಿ ನೇರವಾಗಿ ಬಲಿಪೂಜೆಗಳನ್ನು ಬಿತ್ತರಿಸತೊಡಗಿವೆ. ವಿವಿಧ ಕಥೋಲಿಕ ಧರ್ಮಕೇತ್ರಗಳೂ ಈ ಪೈಪೋಟಿಯಲ್ಲಿ ಹಿಂದೆ ಬಿದ್ದಿಲ್ಲ. ಆಯಾ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರುಗಳಿಗೆ, ತಮ್ಮ ತಮ್ಮ ಧರ್ಮಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಧರ್ಮಕೇಂದ್ರಗಳ ವಿಶ್ವಾಸಿಗಳನ್ನು ಒಂದೇ ಬಾರಿಗೆ ಸಂಪರ್ಕಿಸಿ ಅವರಿಗೆ ಆಯಾ ಧರ್ಮಕ್ಷೇತ್ರಗಳ ಮೇತ್ರಾಣಿಗಳ ಪೂಜೆಯನ್ನು ನೇರವಾಗಿ ನೋಡುವಂತೆ, ಕೇಳುವಂತೆ ಮಾಡುವ ಸೌಭಾಗ್ಯವನ್ನು ಕಲ್ಪಿಸುವ ಒಂದು ಸದಾಶಯದ ಸದವಕಾಶ ಒದಗಿಬಂದಿತ್ತ್ತು. ಭಾಷೆ, ಪ್ರಾದೇಶಿಕತೆ ಮುಂತಾದ ವ್ಯತ್ಯಾಸಗಳಿಂದ ದಾಯಾದಿಗಳ ಒಡೆದ ಮನೆಯಂತಲ್ಲದಿದ್ದರೂ, ಮನಸ್ಸಿನವರಿರುವ ಕಾಲದಲ್ಲಿ, ಅಂಥ ಒಂದು ಒಳ್ಳೆಯ ಪ್ರಯತ್ನಕ್ಕೆ ಇದು ಒಂದು ಸುಸಮಯವಾಗಿತ್ತು ಎಂಬುದು ಕೆಲವು ವಿಶ್ವಾಸಿಕರ ಅಂಬೋಣವಾಗಿತ್ತು.

ಈ ಸಮಯದಲ್ಲಿ ಬೆಳ್ಳಿಗೆರೆಯಂತೆ ಒಂದೆರಡು ಚಟುವಟಿಕೆಗಳು ನಡೆದಿವೆ. ಶನಿವಾರದ ನಡುರಾತ್ರಿ, ಪುನರುತ್ಥಾನ (ಈಸ್ಟರ್) ಹಬ್ಬದ ಭಾನುವಾರದ ಆದಿಯಲ್ಲಿ ಪಾಸ್ಖ ಜಾಗರಣೆಯ ಕಾಲದಲ್ಲಿ ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಆಚರಣೆಗೆ ಮುಂದಾದಾಗ, ಭಾರತದ ಕಥೋಲಿಕ ಧರ್ಮಸಭೆಯ ವರಿಷ್ಠರು, `ಆನ್‍ಲೈನ್‍ನಲ್ಲಿ ನೇರವಾಗಿ ಬಿತ್ತರಗೊಳ್ಳುವ ನಡುರಾತ್ರಿಯ ಪೂಜಾ ವಿಧಿಗಳಲ್ಲಿ ಬಹಳಷ್ಟು ಜನ ಭಾಗವಹಿಸುವರು, ಇಳಿವಯಸ್ಸಿನವರು ಮತ್ತು ಮಕ್ಕಳು ನಿದ್ರೆಗೆ ಜಾರಿರುವ ಸಂದರ್ಭದಲ್ಲಿ ಭಾನುವಾರ ಸಂಜೆ ಮನೆಮನೆಗಳ ದೇವರ ಗೂಡುಗಳಲ್ಲಿ ಜ್ಯೋತಿ ಬೆಳಗಿಸಬಹುದು’ ಎಂದು ಸೂಚಿಸಿದ್ದರು.

ಧರ್ಮಸಭೆಯ ಸೂಚನೆಯಂತೆ ಪುನರುತ್ಥಾನದ (ಈಸ್ಟರ್)ದಿನ ಭಾನುವಾರ ರಾತ್ರಿ ಎಂಟರಿಂದ ಎಂಟೂವರೆಯವರೆಗೆ ಕಥೋಲಿಕ ಕ್ರೈಸ್ತ ವಿಶ್ವಾಸಿಗಳು ತಮ್ಮ ತಮ್ಮ ಮನೆಗಳ ದೇವರ ಗೂಡುಗಳಲ್ಲಿ, ಮುಂಬಾಗಿಲಿನ ಹೊಸ್ತಿಲದ ಹತ್ತಿರ, ಅಂಗಳ, ಉಪ್ಪರಿಗೆಯ ಮಾಡುಗಳಲ್ಲಿ ಮೇಣದ ಬತ್ತಿ ಇಲ್ಲವೇ ಹಣತೆ ಬೆಳಗೋಣ ಎಂದು ಕರ್ನಾಟಕದ ಮಹಾಧರ್ಮಾಧ್ಯಕ್ಷ (ಮಹಾಮೇತ್ರಾಣಿ) ಅತಿ ವಂದನೀಯ ಪೀಟರ್ ಮಚಾಡೋ ಅವರು ನೀಡಿದ ಕರೆಯನ್ನು ಮನ್ನಿಸಿ ರಾಜ್ಯದ ಕಥೋಲಿಕ ವಿಶ್ವಾಸಿಕರು ಅದರಂತೆ ನಡೆದುಕೊಂಡು ಈಸ್ಟರ್ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ಒಂದೇ ಮಂದೆಯ ಸದಸ್ಯರು: ಕಥೋಲಿಕ ಕ್ರೈಸ್ತರು ಒಂದೇ ಮಂದೆಯ ಸದಸ್ಯರು ಎಂಬುದನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ, ಭಾರತದ ಕಥೋಲಿಕ ಬಿಷಪ್ಪರುಗಳ ಮಹಾಸಭೆಯ ಅಧ್ಯಕ್ಷ ಹಾಗೂ ಭಾರತ ದೇಶದ ಕಾರ್ಡಿನಲ್ (ರೋಮನ್ ಕಥೋಲಿಕ ಪಂಥದ ಜಗದ್ಗುರು ಪೋಪರ ಪ್ರತಿನಿಧಿ) ಅತಿ ವಂದನೀಯ ಕಾರ್ಡಿನಲ್ ಒಸ್ವಾಲ್ಡ್ ಗ್ರೇಸಿಯಸ್ ಅವರು ನೀಡಿದ ಸೂಚನೆಯಂತೆ, ಈಸ್ಟರ್ ಹಬ್ಬ–ಪ್ರಭು    ಯೇಸುಸ್ವಾಮಿಯ ಪುನರುತ್ಥಾನ ಹೊಂದಿದ ಸಂಭ್ರಮದ ದಿನ - ಭಾನುವಾರ 2020ನೇ ಸಾಲಿನ ಏಪ್ರಿಲ್ 12ರಂದು, ಮಧ್ಯಾನ್ನ 12 ಗಂಟೆಗೆ ದೇಶದ ಎಲಾ ಬಿಷಪ್ಪರು (ಮೇತ್ರಾಣಿಗಳು), ತಮ್ಮ ತಮ್ಮ ಪ್ರಧಾನಾಲಯ (ಕಥೆಡ್ರಲ್)ಗಳಲ್ಲಿ ಒಟ್ಟಿಗೆ ಒಂದೇ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಾಜ್ಯದ ಕಥೋಲಿಕ ಕ್ರೈಸ್ತ ವಿಶ್ವಾಸಿಗಳು, ತಮ್ಮ ತಮ್ಮ ಧರ್ಮಕ್ಷೇತ್ರ (ಧರ್ಮಪ್ರಾಂತ್ಯ)ಗಳ ಮೇತ್ರಾಣಿಗಳು ಪ್ರಧಾನಾಲಯಗಳಲ್ಲಿ ಸಲ್ಲಿಸಿದ ಪೂಜೆಯ ನೇರ ಪ್ರಸಾರ ಆನ್‍ಲೈನ್‍ನಲ್ಲಿ ಯು ಟ್ಯೂಬ್‍ನಲ್ಲಿ ಬಿತ್ತರಗೊಂಡಾಗ ಅದನ್ನು ನೋಡಿ, ಕೇಳಿ, ಜಪಗಳನ್ನೂ ತಾವು ಪಠಿಸಿ ಆಧ್ಯಾತ್ಮಿಕ ಅನುಭವವನ್ನು, ದೇವರ ಆಶೀರ್ವಾದವನ್ನು ಪಡೆದು ಪುನೀತರಾದರು.

ಬಲಿಪೂಜೆಯಲ್ಲಿ ದೇಶದ ಎಲ್ಲಾ ಬಿಷಪರುಗಳು    ಶ್ರೀಯೇಸುವಿನ ಪವಿತ್ರ ಹೃದಯ ಮತ್ತು ಕನ್ಯಾ ಮರಿಯಮ್ಮನವರ ನಿಷ್ಕಳಂಕ ಹೃದಯಗಳಿಗೆ ಒಪ್ಪಿಸಿ, ಕೊರೊನಾ ವೈರಾಣುವಿನ ನಿಯಂತ್ರಣಕ್ಕಾಗಿ, ವೈದ್ಯಕೀಯ ಸಿಬ್ಬಂದಿಯ ಆತ್ಮಸ್ಥೈರ್ಯಕ್ಕಾಗಿ ಪ್ರಾರ್ಥಿಸಲಾಯಿತು. ದೂರದರ್ಶನಗಳ ಮುಂದೆ ಕುಳಿತ ಕಥೋಲಿಕ ಕ್ರೈಸ್ತರು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕಾರ್ಡಿನಲ್‍ರ ಒತ್ತಾಸೆಯಂತೆ ಸಂಜೆ 8 ರಿಂದ 8,30ರ ನಡುವೆ ಮನೆಗಳ ಮಂದೆ, ಪೀಠಗಳಲ್ಲಿ ದೀಪ ಬೆಳಗಿಸಿ ಈಸ್ಟರ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಅದೇ ಬಗೆಯಲ್ಲಿ ಏಪ್ರಿಲ್ 19 ರಂದು ಆಚರಿಸಿದ ದೈವೀ ಕರುಣೆಯ ಭಾನುವಾರದಂದು ಕ್ರೈಸ್ತ ವಿಶ್ವಾಸಿಗಳು    ಮನೆಯಲ್ಲಿದ್ದುಕೊಂಡೇ ಜಪಸರ ಮತ್ತು ಬಲಿಪೂಜೆಯಲ್ಲಿ ಭಾಗವಹಿಸಿ ತಮ್ಮ ಆಧ್ಯಾತ್ಮಿಕ ಹಸಿವನ್ನು ತಣಿಸಿಕೊಂಡರು.

`ಶ್ರೀ ಕ್ರಿಸ್ತ ಯೇಸುವಿನಲ್ಲಿ ಆತ್ಮೀಯ ಕ್ರೈಸ್ತ ಬಾಂಧವರೇ, ದೈವ ಪ್ರಜೆಗಳೇ, ಜಗತ್ತಿನಾದ್ಯಂತ ಕೊರೊನಾ ಎಂಬ ಮಾರಕ ರೋಗ ಹಬ್ಬಿರುವ ಈ ದುಸ್ತರವಾದ ಸಮಯದಲ್ಲಿ ಎಲ್ಲಾ ದೇವಾಲಯಗಳು ಮುಚ್ಚಿರುವುದು ನಿಮಗೆಲ್ಲಾ ತಿಳಿದಿರುವ ವಿಚಾರ. ಇಂಥ ದಾರುಣ ಪರಿಸ್ಥಿತಿಯಲ್ಲಿ ನಿಮಗೆ ಅನುಕೂಲವಾಗುವಂತೆ ನಮ್ಮ ಧರ್ಮಕ್ಷೇತ್ರದ ವತಿಯಿಂದ ಟಿವಿ ಹಾಗೂ ಯೂಟ್ಯೂಬಿನಲ್ಲಿ ದಿವ್ಯ ಬಲಿಪೂಜೆಯ ನೇರ ಪ್ರಸಾರವನ್ನು `ಈ ಮಾಧ್ಯಮ’ (ಎಲೆಕ್ಟ್ರಾನಿಕ್ ಮಾಧ್ಯಮ)ಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ. ನೀವು, ನಿಮ್ಮ ನಿಮ್ಮ ಮನೆಗಳಲ್ಲಿಯೇ ಇದ್ದುಕೊಂಡು ಕುಟುಂಬ ಸಮೇತರಾಗಿ ಬಲಿ ಪೂಜೆಗಳಲ್ಲಿ ಪಾಲ್ಗೊಂಡು ಪ್ರಭು ಯೇಸುಕ್ರಿಸ್ತರ ಆಶೀರ್ವಾದ ಪಡೆದು ಧನ್ಯರಾಗಬೇಕೆಂದು ಕೋರಿಕೆ’ ಎಂದು ವಿವಿಧ ಧರ್ಮಕ್ಷೇತ್ರಗಳು ಕಥೋಲಿಕ ಕ್ರೈಸ್ತ ವಿಶ್ವಾಸಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿವೆ. ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ಭಾನುವಾರವಷ್ಟೇ ಅಲ್ಲ, ಪ್ರತಿದಿನವೂ ಯೂಟ್ಯೂಬುಗಳಲ್ಲಿ ಅಂದಂದಿನ ಬಲಿಪೂಜೆಗಳು ನೇರವಾಗಿ ಬಿತ್ತರಗೊಳ್ಳತೊಡಗಿವೆ.

ಪಾದ್ರಿಗಳು, ಮೊಬೈಲ್‍ನಲ್ಲಿ ಮತ್ತು ಟೆಲಿಪೋನುಗಳ ಮೂಲಕ ತಮ್ಮನ್ನು ಸಂಪರ್ಕಿಸಿದ ಶ್ರದ್ಧಾವಂತರಿಗೆ, `ನೋಡಿ ದೂರದರ್ಶನಗಳಲ್ಲಿ ಪ್ರತಿದಿನ ಮತ್ತು ಭಾನುವಾರ ಬಲಿಪೂಜೆಗಳು ಬಿತ್ತರಗೊಳ್ಳುವ ಸಮಯದಲ್ಲಿ ಶುಚಿಯಾಗಿದ್ದು, ಎಂದಿನಂತೆ ಗರಿಗರಿಯಾಗಿ ಇಸ್ತ್ರಿ ಮಾಡಿದ ಮಡಿ ಬಟ್ಟೆಗಳನ್ನು ತೊಟ್ಟು ಬರುವಂತೆಯೇ ಒಳ್ಳೆಯ ಶುಚಿಯಾದ ಬಟ್ಟೆಗಳನ್ನು ತೊಟ್ಟು ಕುಳಿತುಕೊಳ್ಳಿ, ಬಿತ್ತರಗೊಳ್ಳುವ ಬಲಿಪೂಜೆಯಲ್ಲಿ ಭಕ್ತಿಯಿಂದ ಭಾಗವಹಿಸಿ’ ಎಂದು ಸಲಹೆ ಕೊಡುತ್ತಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬಂತೆ, ನೇರವಾಗಿ ವೇದಿಕೆಯ ಮೇಲೆ ಸ್ಪರ್ಧೆ ನಡೆಸಲಾಗದ ಈ ಸಮಯದಲ್ಲಿ, ಬೆಂಗಳೂರು ಮಹಾಧರ್ಮಕ್ಷೇತ್ರವು, ತನ್ನ ದೈವ ಪ್ರಜೆಗಳೊಂದಿಗಿನ ಒಡನಾಟಕ್ಕೆ ಪೂರಕವಾಗಿ `ಕುಟುಂಬ ಈಸ್ಟರ್ ಹಬ್ಬದ ಹಾಡುಗಳ ಸ್ಪರ್ಧೆ’ ಏರ್ಪಡಿಸಿದೆ. ಆಸಕ್ತ ಕುಟುಂಬಗಳಿಂದ ನಿಗದಿತ ಅವಧಿಯ ವಿಡಿಯೋ ರಿಕಾರ್ಡೆಡ್ ಫೈಲ್‍ಗಳನ್ನು `ಈ ಮಾಧ್ಯಮ’ದಲ್ಲಿ ತರಿಸಿಕೊಂಡು ಸ್ಪರ್ಧೆಯನ್ನು ನಿರ್ವಹಿಸುತ್ತಿದೆ.

`ಇದ್ದಲ್ಲೇ ಇರಿ’ (ಲಾಕ್‍ಡೌನ್) ಎನ್ನುವುದು ಮೇ ತಿಂಗಳ ಮೂರರಂದು ಮುಗಿಯಬಹುದು ಅಥವಾ ಮುಂದುವರಿಯಲೂ ಬಹುದು. ಅದು ಅಂದಿನ ಕೊರೊನಾ ಹಾವಳಿಯ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಏನೇ ಆದರೂ, `ಸಾಮಾಜಿಕ ಅಂತರ’ ಕಾಯ್ದುಕೊಳ್ಳುವ ಅನಿವಾರ್ಯತೆ ಬಹಳಷ್ಟು ಸಮಯ ಮುಂದುವರಿಯಬಹುದು.

ಸುರಂಗ ಪಯಣ ತಾತ್ಕಾಲಿಕ: `ಇಂದು ಜಗತ್ತನ್ನು ಮಹಾಮಾರಿಯಾಗಿ ಕಾಡುತ್ತಿರುವ ಕೋವಿಡ್ 19 ಕಾಯಿಲೆ ಹರಡುವುದನ್ನು ತಡೆಯುವ ಉದ್ದೇಶದ ಒತ್ತಾಯದ ಇದ್ದಲ್ಲೇ ಇರಬೇಕಾದ ಮತ್ತು ವ್ಯವಹರಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅವಸ್ಥೆಯು, ಪವಿತ್ರ ಸಂಸ್ಕಾರಗಳಿಂದ, ಚರ್ಚುಗಳಿಂದ ಮತ್ತು ದೇವ ಜನರ ಒಡನಾಟದಿಂದ ದೂರ ಇರಬೇಕಾದ ವಿಶ್ವಾಸಿಗಳು ಆನ್‍ಲೈನ್ ಮಾಧ್ಯಮದ ಬಲಿಪೂಜೆಗಳಿಂದ ತಮ್ಮ ವಿಶ್ವಾಸವನ್ನು ತಮ್ಮಷ್ಷಕ್ಕೇ ಸೀಮಿತಗೊಳಿಸಿಕೊಳ್ಳುವ ಅಪಾಯವಿದೆ’ ಎಂದು ಪೋಪ್ ಫ್ರಾನ್ಸಿಸ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. 

  ಏಪ್ರಿಲ್ 17ರಂದು ಇಟಲಿಯ ರೋಮ್  ಪಟ್ಟಣದಲ್ಲಿರುವ ವ್ಯಾಟಿಕನ್‍ನ ತಮ್ಮ ನಿವಾಸದಲ್ಲಿನ ಕಿರುದೇವಾಲಯದಲ್ಲಿನ (ಚಾಪೆಲ್) ಬಲಿಪೂಜೆಯಲ್ಲಿ ಭಾಗವಹಿಸಿದ್ದಾಗ, ಈ ಆತಂಕ ವ್ಯಕ್ತಪಡಿಸಿರುವ ಅವರು, ತಮ್ಮ ಏಕಾಂಗಿ ಪೂಜೆಗಳ ಕುರಿತು ಬಂದ ಆಕ್ಷೇಪವನ್ನು ಪ್ರಸ್ತಾಪಿಸಿ, `ಆನ್‍ಲೈನ್ ಬಲಿಪೂಜೆಗಳು ಮತ್ತು ಆಧ್ಯಾತ್ಮಿಕ ಪರಮಪ್ರಸಾದ ಸ್ವೀಕಾರವು ಧರ್ಮಸಭೆಯನ್ನು ಪ್ರತಿನಿಧಿಸುವುದಿಲ್ಲ, ಸದ್ಯದ ಸಂಕಟದ ಸಮಯದಲ್ಲಿ ಅವಕ್ಕೆ ದೇವರ ಸಮ್ಮತಿ ಇರಬಹುದು, ದೇವಪ್ರಜೆಗಳು ಮತ್ತು ಸಂಸ್ಕಾರಗಳೊಂದಿಗೆ ಇರುವುದೇ ಧರ್ಮಸಭೆಯ ಮಾದರಿ. ಮಾಧ್ಯಮಗಳಿಂದ ವಿಶ್ವಾಸವನ್ನು ರೂಡಿಸುವುದಾದರೆ ಅದು ಧರ್ಮಸಭೆ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.  

 `ಪ್ರಭು ಯೇಸುಸ್ವಾಮಿಯ ಜೊತೆಗಿನ ಬಾಂಧವ್ಯ ವ್ಯಯಕ್ತಿಕ ಮತ್ತು ಆತ್ಮಿಕವಾದುದು, ಆದರೆ ಅದು ಸಾಮುದಾಯಿಕ ಪಾಲುಗಾರಿಕೆಯಲ್ಲಿ ಅಭಿವ್ಯಕ್ತಗೊಳ್ಳಬೇಕು. ದೇವ ಪ್ರಜೆಗಳು ಸಾಮೂಹಿಕವಾಗಿ ಪೂಜಾವಿಧಿಗಳಲ್ಲಿ ಪಾಲ್ಗೊಳ್ಳಬೇಕು. ಸಾಮುದಾಯಿಕ ಪಾಲುದಾರಿಕೆಯನ್ನು ಪೋಷಿಸದ, ವೈಯಕ್ತಿಕ ನೆಲೆಯನ್ನು ಮುನ್ನೆಲೆಗೆ ತರುವ ಸದ್ಯದ ವ್ಯವಸ್ಥೆ ಒಂದು ಸುರಂಗ ಮಾರ್ಗದ ಪ್ರಯಾಣವಿದ್ದಂತೆ, ಅದರಲ್ಲೇ ನಿಲ್ಲಬೇಕಾಗಿಲ್ಲ. ಧರ್ಮಸಭೆ, ಸಂಸ್ಕಾರಗಳು ಮತ್ತು ದೇವ ಪ್ರಜೆಗಳ ನಡುವಣ ಬಂಧನ ಅಬೇಧ್ಯ’ ಎಂದು ಪ್ರತಿಪಾದಿಸಿರುವ ಪೋಪರು, ಸದ್ಯದ ವ್ಯವಸ್ಥೆ ತಾತ್ಕಾಲಿಕವಷ್ಟೇ ಎಂಬ ಸುಳಿವು ನೀಡಿದ್ದಾರೆ.

ತೀರ್ಥದಿಂದ ವೈರಾಣು ತಡೆ ಸಾಧ್ಯವೆ?: ಕಥೋಲಿಕ ಕ್ರೈಸ್ತ ಪಂಗಡದಲ್ಲಿ ಹಲವಾರು ಉಪಪಂಗಡಗಳು ಇರುವಂತೆ, ಪ್ರೊಟೆಸ್ಟೆಂಟ್ ಕ್ರೈಸ್ತ ಪಂಗಡಗಳಲ್ಲೂ ಹತ್ತು ಹಲವಾರು ಪಂಗಡಗಳಿವೆ. ಪ್ರೊಟೆಸ್ಟೆಂಟ್ ಪಂಗಡದ ಕ್ರೈಸ್ತರೂ ಸಹ ಕೊರೊನಾ ತರುವ ರೋಗ ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ಚರ್ಚುಗಳ ಬಾಗಿಲು ಮುಚ್ಚುವ ಕ್ರಮಗಳನ್ನು ಕೈಗೊಂಡಿವೆ. ಆದರೂ ಕೆಲವು ಕಡೆಗಳಲ್ಲಿ ಅತಿಯಾದ ದೈವ ಭಕ್ತಿ, ಮತ್ತು ವಿಪರೀತ ವಿಶ್ವಾಸದಂಥ ನಡವಳಿಕೆಗಳು ಕೆಲವು ಕ್ರೈಸ್ತ ವಿಶ್ವಾಸಿಗಳನ್ನು ಕೊರೊನಾ ಸಂಕಟಕ್ಕೆ ತಳ್ಳಿದ ಘಟನೆಗಳೂ ಕೆಲವು ದೇಶಗಳಲ್ಲಿ ನಡೆದಿವೆ.

ಉದಾಹರಣೆಗೆ ಕಳೆದ ತಿಂಗಳು, 2020ರ ಸಾಲಿನ ಮಾರ್ಚ 1 ಮತ್ತು 8 ರಂದು ದಕ್ಷಿಣ ಕೊರಿಯಾದ,      ಸಿಯೋಲ್‍ನ ದಕ್ಷಿಣದಲ್ಲಿರುವ ಗಿಯೊಂಗಿ ಪ್ರಾಂತ್ಯದ ರಿವರ್ ಆಫ್ ಗ್ರೇಸ್ ಕಮ್ಯುನಿಟಿ ಚರ್ಚಿನ ವಿಶ್ವಾಸಿಗಳು ಪ್ರಾರ್ಥನೆಗೆ ನೆರೆದಿದ್ದಾಗ, ಚರ್ಚಿನ ಪಾದ್ರಿಯೊಬ್ಬರು ಕೊರೊನಾ ವೈರಾಣುವನ್ನು ತೀರ್ಥದ ನೀರು ತಡೆಗಟ್ಟುತ್ತದೆ ಎಂದು ನಂಬಿಸಿ ತೀರ್ಥ (ಉಪ್ಪು ಬೆರೆಸಿದ ನೀರು)ವಿದ್ದ ಸ್ಪ್ರೇ ಬಾಟಲಿಯನ್ನು ಬಾಯಿಯ ಒಳಗಿಟ್ಟು ಸ್ಪ್ರೇ ಮಾಡಿದ್ದರು. ಒಟ್ಟು ನೂರು ಜನ ವಿಶ್ವಾಸಿಗಳ ಬಾಯಿಗಳಲ್ಲಿ ತೀರ್ಥವನ್ನು ಹಾಕಲಾಗಿತ್ತು. ತೀರ್ಥವನ್ನು ಬಾಯಿಗೆ ಹಾಕುವಾಗ ಪ್ರತಿ ಬಾರಿಯೂ ಅದನ್ನು ಸ್ವಚ್ಛವಾಗಿ ಒರೆಸಿರಲಿಲ್ಲವಂತೆ. ಕೆಲವು ದಿನಗಳ ನಂತರ ನೂರು ಜನರಲ್ಲಿ ಪಾದ್ರಿ ಮತ್ತು ಆತನ ಪತ್ನಿಯೂ ಸೇರಿದಂತೆ 46 ಜನರು ಕೊರೊನಾ ವೈರಾಣುವಿನಿಂದ ಸೋಂಕಿತರಾಗಿದ್ದರು! ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಚರ್ಚ ಬಾಗಿಲಿಗೆ ಬೀಗ ಜಡಿಯಬೇಕಾಯಿತು. ಅಂದಿನ ಪ್ರಾರ್ಥನಾ ಕೂಟಗಳಲ್ಲಿ ಭಾಗವಹಿಸಿದವರನ್ನು ಪತ್ತೆ ಮಾಡಿ ಶಂಕಿತರನ್ನು ಪ್ರತ್ಯೇಕವಾಸದಲ್ಲಿ ಇಡಲು ಕ್ರಮ ಜರುಗಿಸಲಾಯಿತು.

ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು, ಕೊರೊನಾ ವೈರಾಣು ಹರಡದಂತೆ ತಡೆಯುವ ಕ್ರಮವಾಗಿ ಧಾರ್ಮಿಕ ಆಚರಣೆಗಳೂ ಸೇರಿದಂತೆ ಜನ ಸಮಾವೇಶಗೊಳ್ಳುವ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದರು. ಗಿಯೊಂಗಿ ಪಾಂತ್ಯದಲ್ಲಿ ಒಟ್ಟು 14 ಮಿಲಿಯನ್ ಜನ ವಾಸವಾಗಿದ್ದು, ಅಲ್ಲಿನ 6578 ಚರ್ಚುಗಳಲ್ಲಿನ ಎಲ್ಲಾ ಪ್ರಾರ್ಥನಾ ಕೂಟಗಳನ್ನು, ಪೂಜಾ ವಿಧಿಗಳನ್ನು ರದ್ದುಪಡಿಸಿ ಕ್ರೈಸ್ತ ವಿಶ್ವಾಸಿಗಳು ಆನ್‍ಲೈನ್‍ನಲ್ಲಿ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಬೇಕೆಂದು ತಿಳಿಸಲಾಯಿತು.

ಕೊರೊನಾ ಭ್ರಾಂತಿ, ಚರ್ಚು ಆಧ್ಯಾತ್ಮಿಕ ಆಸ್ಪತ್ರೆ: ಬ್ರೆಜಿಲ್ ದೇಶದ ಕ್ರೈಸ್ತರದ್ದು ಇನ್ನೂ ವಿಚಿತ್ರ ನಡವಳಿಕೆ. ಮಾರ್ಚ ತಿಂಗಳ ಮೂರನೇ ವಾರದಲ್ಲಿ ಜಗತ್ತಿನ ದೇಶಗಳೆಲ್ಲಾ ಕರೊನಾ ವೈರಾಣು ಉಂಟು ಮಾಡುತ್ತಿರುವ ಸಾವಿನ ಪ್ರಕರಣಗಳಿಂದ ಹೈರಾಣಾಗಿವೆ. ಆಯಾ ದೇಶಗಳಲ್ಲಿನ ಧಾರ್ಮಿಕ ಮುಖಂಡರು, ಕೋವಿಡ್-19 ರೋಗ ಹರಡುವ ಕರೊನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಜನ ಒಂದುಕಡೆ ನೆರೆಯಬಾರದೆಂದು ಧಾರ್ಮಿಕ ಕೇಂದ್ರಗಳನ್ನು, ಪ್ರಾರ್ಥನಾ ಮಂದಿರಗಳನ್ನು ತಾತ್ಕಾಲಿಕವಾಗಿ ಭಕ್ತಾದಿಗಳಿಗೆ ಮುಚ್ಚಲಾಗಿದ್ದರೆ, ಬ್ರೆಜಿಲ್ ನಲ್ಲಿರುವ ಅತಿಯಾದ ಧಾರ್ಮಿಕ ಶ್ರದ್ಧೆಯ ಕ್ರೈಸ್ತರ ಧಾರ್ಮಿಕ ಮುಖಂಡರ ದೆಸೆಯಿಂದ ಅಲ್ಲಿ ಹಲವಾರು ಚರ್ಚುಗಳು ಬಾಗಿಲು ತೆರೆದಿಟ್ಟು ಎಂದಿನಂತೆ ಪೂಜೆ ಪುನಸ್ಕಾರಗಳನ್ನು ನಡೆಸುತ್ತಿರುವುದು ವರದಿಯಾಗಿದೆ. ಅಲ್ಲಿನ ಧಾರ್ಮಿಕ ಮುಖಂಡರು, `ಕೊರೊನಾ ವೈರಾಣು ಎಂಬುದು ಒಂದು ಭ್ರಾಂತಿ, ಭ್ರಮೆ’ ಎನ್ನುತ್ತಾ ಸ್ಥಳೀಯ ನ್ಯಾಯಾಲಯದ ಕಟ್ಟೆ ಹತ್ತಿ ತಮ್ಮ ಪರ ತೀರ್ಪು ಪಡೆದುಕೊಂಡುಬಿಟ್ಟಿದ್ದಾರೆ!

ವಿಶ್ವಾಸಿಕರು ಚರ್ಚಿಗೆ ಬಾರದಿದ್ದರೆ, ಅವರಿಂದ ಕಾಣಿಕೆಯನ್ನು ಪಡೆಯಲಾಗದು ಎಂಬ ದೂರುಗಳು ಕೇಳಿಬಂದರೂ, ಅದಕ್ಕೂ ಆನ್‍ಲೈನ್ ವಿಧಾನವಿದೆ ಎಂಬ ಉತ್ತರ ಸಿದ್ಧವಿದೆ. ಜೊತೆಗೆ ಸಾಂಕ್ರಾಮಿಕ ಹರಡುತ್ತಿರುವ ರೋಗವಿದ್ದಾಗ ಒಂದೆಡೆ ಜನರನ್ನು ಸೇರಿಸುವುದು ಆತ್ಮಘಾತುಕ ನಡೆ ಎಂದು ವೈದ್ಯರು ಎಚ್ಚರಿಸಿದ್ದರೂ, ಏನೂ ಪ್ರಯೋಜನವಾದಂತಿಲ್ಲ, ಬಲಿಪೂಜೆಗಳಲ್ಲಿ ಭಾಗವಹಿಸಲು ಬರುವ ವಿಶ್ವಾಸಿಗಳಿಗೆ ಕೈ ತೊಳೆಯಲು ಸಾಬೂನು, ನೀರು, ಸೆನಿಟೈಜರ್ (ಕ್ರಿಮಿನಾಶಕ ಔಷಧಿ)ಗಳನ್ನು ಹಂಚುತ್ತಾ, ಅಂತರ ಕಾಯ್ದುಕೊಳ್ಳಿ ಎಂದು ಕೋರುತ್ತಿರುವ ಪಾದ್ರಿಗಳು, ಚರ್ಚುಗಳ ಬಾಗಿಲ ತೆರೆದಿಡುವುದನ್ನು ಸಮರ್ಥಿಸಿಕೊಳ್ಳುತ್ತಾ, ಚರ್ಚು ಆಧ್ಯಾತ್ಮಿಕ ಆಸ್ಪತ್ರೆ ಎಂದು ಪ್ರತಿಪಾದಿಸಿ ಮೊಂಡುವಾದ ನಡೆಸುತ್ತಿದ್ದಾರಂತೆ. `ದುಷ್ಟ ಸೈತಾನ ಸಾವಿನ ಭಯಪಡಿಸಿ ಮೇಲುಗೈ ಸಾಧಿಸುತ್ತಿದ್ದಾನೆ. ಕೋವಿಡ್-19 ರೋಗದ ಭೀತಿಯು ಸೈತಾನನ ಸೃಷ್ಟಿ, ಈ ಕರೊನಾ ಭಯದ ಪ್ರಚಾರ ಆರ್ಥಿಕ ಹಿತಾಸಕ್ತಿಯ ಹುನ್ನಾರ ಎಂದೂ ವಾದಿಸುತ್ತಿದ್ದಾರೆ.

`ದೇವರು ನಮ್ಮೊಂದಿಗಿದ್ದಾರೆ. ಈ ಏಕಃಶ್ಚಿತ ಕೊರೊನಾ ವೈರಾಣು, ರಕ್ಷಕ ಶ್ರೀ ಯೇಸುಕ್ರಿಸ್ತನಲ್ಲಿ ಅಚಲ ವಿಶ್ವಾಸವಿಟ್ಟ ಭಕ್ತರನ್ನು ಏನೂ ಮಾಡಲಾಗದು. ಅದು, ಅವರ ಕೂದಲನ್ನೂ ಮುಟ್ಟದು’ ಎಂದು ಪ್ರಬೋಧನೆಯಲ್ಲಿ ಆಶ್ವಾಸನೆ ಕೊಡುತ್ತಿದ್ದ ಪ್ರೊಟೆಸ್ಟೆಂಟ್ ಕ್ರೈಸ್ತ ಪಂಥದ ಹಲವಾರು ಸಭೆಗಳ ಕೆಲವು  ಪಾದ್ರಿಗಳು ಅದರಿಂದ ಬಳಲುತ್ತಿರುವರು ಮತ್ತು ಅದಕ್ಕೆ ಬಲಿಯಾದ ಪ್ರಕರಣಗಳೂ ವರದಿಯಾಗಿವೆ.

ಈ ಕೋವಿಡ್-19 ಎಂಬ ರೋಗದಿಂದ ಪೀಡಿತರಾದವರಲ್ಲಿ ಸಾಯುವವರ ಸಂಖ್ಯೆ ತೀರ ನಗಣ್ಯ. ಅಂದರೆ ಕೇವಲ ಶೇಕಡಾವಾರು ಎರಡು ಅಥವಾ ಮೂವರು ಜನ ಅಷ್ಟೇ. ಅರವತ್ತು ವರ್ಷ ದಾಟಿದ ಹಿರಿಯರು ಮತ್ತು ರೋಗನಿರೋಧಕ ಶಕ್ತಿ ಕ್ಷೀಣಿಸಿದ ಮಧುಮೇಹ, ಹೃದಯ ಸಂಬಂಧಿ ರೋಗದಿಂದ ಬಳಲುವವರು ಈ ರೋಗಕ್ಕೆ ಬಲಿಯಾಗುವ ಮೊದಲ ಬಲಿಪಶುಗಳು ಎಂದು ಹೇಳಲಾಗುತ್ತದೆ. ಈ ರೋಗ ಚಿಕ್ಕಮಕ್ಕಳನ್ನು ಅಷ್ಟಾಗಿ ಬಾಧಿಸುವುದಿಲ್ಲ ಎನ್ನಲಾದರೂ, ಮನೆಯ ಹಿರಿಯರನ್ನು, ನೆರೆಹೊರೆಯ ಆತ್ಮೀಯರನ್ನು, ಚರ್ಚಿನ ಬೆಂಚಿನಲ್ಲಿ ನಮ್ಮೊಂದಿಗೆ ಆಪ್ತವಾಗಿ ಕುಳಿತುಕೊಳ್ಳುವವರನ್ನು ಕಳೆದುಕೊಳ್ಳುವ ನೋವು ಭರಿಸಲಾಗದಂಥದು. ಸಾವಿಲ್ಲದ ಮನೆಯ ಸಾಸಿವೆ ಕಾಳನ್ನು ತರಲಾಗದಲ್ಲ.


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...