Tuesday, 14 May 2019
ಮತಗಟ್ಟೆಯ ಮಸಿ
ಡೇವಿಡ್ ಕುಮಾರ್. ಎ.
ಮತಗಟ್ಟೆಯ ಕಪ್ಪು ಮಸಿಯು
ಬೆರಳ ತುದಿಯ ನೆಕ್ಕಿದೆ
ಕನಸ ’ಗುಂಡಿ’ ಒತ್ತಿ ಬಂದ
ಭ್ರಮನಿರಸನ ನಗೆಯಲಿ
ನಿರಂಕುಶ ಕಪಿಮುಷ್ಠಿಯು
ಜನರ ಕೊರಳು ಹಿಸುಕಿದೆ
ಕೋಮು ವಿಷದ ಘಟಸರ್ಪವು
ಬೆರಳ ತುದಿಯ ಕಚ್ಚಿದೆ !
ಜನಾಧಿಕಾರ ಕೋಟೆಯೊಳಗೆ
ಸರ್ವಾಧಿಕಾರ ನುಸುಳಿದೆ
ಪ್ರಜಾತತ್ವ ಹೆಬ್ಬಾಗಿಲಿಗೆ
ಮಸಿಯ ರಾಶಿ ಸುರಿದಿದೆ
ಕೊರಳಿಗಿರದ ಸ್ವಾತಂತ್ರ್ಯವು
ಬೆರಳ ತುದಿಗೆ ಬರುವುದೇ ?
ಮರುಳು, ಮೋಡಿ ಕಾಡಿನಲಿ
ಉರುಳು ಬಿಗಿದ ನವಿಲುಗಳು !
“ಲೆಟ್ ಹಿಮ್ ಈಸ್ಟರ್ ಇನ್ ಅಸ್” (Let Him Easter in Us)

ಈಸ್ಟರ್ ಎಂಬ ಪದವನ್ನು ಕ್ರಿಯಾಪದವಾಗಿ ಪ್ರಯೋಗಿಸಿದ ಕವಿ ಈಸ್ಟರ್ ಬಗೆಗಿನ ಒಂದು ಒಳನೋಟವನ್ನೇ ಅನಾವರಣಗೊಳಿಸುತ್ತಿದ್ದಾನೆ. ಈಸ್ಟರ್ ಎಂದರೆ ಕೇವಲ ಹಬ್ಬ, ಆಚರಣೆಗಳನ್ನು ಸೂಚಿಸುವುದು ಮಾತ್ರವಲ್ಲ. ಜಯಿಸುವುದು, ಜೀವಂತಗೊಳ್ಳುವುದು, ಪರಿಪೂರ್ಣಗೊಳ್ಳುವುದು, ಸಂಭ್ರಮಿಸುವುದು, ಅಪ್ಪಿಕೊಳ್ಳುವುದು, ಸಂತೈಸುವುದು, ಬದಲಾಗುವುದು ಹೀಗೆ ಕ್ರಿಸ್ತನ ಪುನುರುತ್ಥಾನದಿಂದ ಹಿಡಿದು ಸ್ವರ್ಗಾರೋಣವಾಗುವ ತನಕ ಕ್ರಿಸ್ತನು ಮಾಡಿದಂತಹ ಎಲ್ಲಾ ಕಾರ್ಯಗಳನ್ನು ಸೂಚಿಸುವ ಮಹಾಪದ ಈಸ್ಟರ್ ಎಂದು ಹೇಳಬಹುದು.
ಒಂದು ಮಾತಿನಲ್ಲಿ ಹೇಳಬೇಕಾದರೆ ಈಸ್ಟರ್ ಎನ್ನುವುದು ಸಂಮೃದ್ಧ ಬದುಕಿನ ಪ್ರತೀಕ, ಸಂಪೂರ್ಣ ಬದುಕಿನ ಸಂಚಲನ, ಕ್ರಿಯಾತ್ಮಕತೆ. ಸಮಾಧಿಯಲ್ಲಿ ಯೇಸುವಿನ ಪೂಜ್ಯ ಶರೀರವನ್ನು ಕಾಣದೆ ಕಳವಳಗೊಂಡ ಮರಿಯಳಿಗೆ ತಾನೇ ಸಾಕ್ಷಾತ್ತಾಗಿ ಕಾಣಿಸಿಕೊಂಡು 'ಮರಿಯಾ' ಎಂದು ಹೆಸರಿಡಿದು ಕರೆಯುವುದೇ ಈಸ್ಟರ್. ಇಸ್ರಯೇಲರನ್ನು ಬಿಡುಗಡೆ ಮಾಡುವ ಉದ್ಧಾರಕ ಎಂದು ನಾವೆಲ್ಲ ನಂಬಿದ್ದುದು ವ್ಯರ್ಥವಾಯಿತು ಎಂದು ಹತಾಶೆಯಿಂದ ತಮ್ಮ ಸ್ವಂತ ಗ್ರಾಮವಾದ ಎಮ್ಮಾವುಸ್ ಗೆ ಹೊರಟ ಶಿಷ್ಯರ ಬಳಿಗೆ ಹೋಗಿ ರೊಟ್ಟಿ ಮುರಿದು ಊಟಮಾಡಿ ಪವಿತ್ರಗ್ರಂಥಗಳಲ್ಲಿ ಬರೆದಿರುವುದೆಲ್ಲವನ್ನು ಅವರಿಗೆ ಅಮೂಲಾಗ್ರವಾಗಿ ವಿವರಿಸಿ ಅವರ ಹೃದಯಗಳನ್ನು ಕುತೂಹಲದಿಂದ ಮಿಡಿಯುವಂತೆ ಮಾಡಿ ಜೆರುಸಲೇಮಿಗೆ ಅವರು ಹಿಂದಿರುಗುವಂತೆ ಮಾಡಿದ್ದು ಈಸ್ಟರ್. ಭಯದಿಂದ ಅಡಗಿದ್ದ ಶಿಷ್ಯರಿಗೆ “ನಿಮಗೆ ಶಾಂತಿ” ಎಂದು ಹೇಳುತ್ತಾ ಕಾಣಿಸಿಕೊಂಡಿದ್ದು ಈಸ್ಟರ್. ಕ್ರಿಸ್ತನ ಪುನರುತ್ಥಾನವನ್ನು ಅನುಮಾನಿಸಿದ ತೋಮನನ್ನು ಕರೆದು ನಿನ್ನ ಬೆರಳನ್ನು ಇಲ್ಲಿಟ್ಟು ನೋಡು ಎಂದು ಕೈಯನ್ನು ಚಾಚಿ “ನಂಬಿಕೆ ಕಳೆದುಕೊಳ್ಳಬೇಡ, ವಿಶ್ವಾಸಿಯಾಗು” ಎಂದು ಹೇಳಿದ್ದು ಈಸ್ಟರ್. ಮೀನುಗಳಿಗೆ ಬಲೆ ಹಾಕಿ ರಾತ್ರಿಯಿಡೀ ಪ್ರಯತ್ನಿಸಿದರೂ ಮೀನುಗಳು ಸಿಗದೆ ರೋಸಿ ಹೋಗಿದ್ದ ಪ್ರೇತ್ರ ಮತ್ತು ಇತರರನ್ನು “ಸರಿ ಸರಿ ನಿಮ್ಮ ಬಲೆಯನ್ನು ದೋಣಿಯ ಬಲ ಭಾಗದಲ್ಲಿ ಬೀಸಿ ಮೀನು ಸಿಗುವುದು” ಎಂದು ಹೇಳಿ ರಾಶಿ ರಾಶಿ ಮೀನುಗಳು ಸಿಗುವಂತೆ ಮಾಡಿದ್ದು ಈಸ್ಟರ್. ಪ್ರಾಣಭಯದಿಂದ ಗುರುವನ್ನು ಮೂರುಬಾರಿ ನಿರಾಕರಿಸಿ ಓಡಿಹೋಗಿದ್ದ ಪೇತ್ರನನ್ನು “ಯೊವಾನ್ನನ ಮಗನಾದ ಸಿಮೋನನೇ ಇವರಿಗಿಂತಲೂ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯಾ?” ಎಂದು ಮೂರಾವರ್ತಿ ಕೇಳಿ ಅವನನ್ನು ಧರ್ಮಸಭೆಯ ಅಸ್ಥಿವಾರವಾಗಿಸುವುದು ಈಸ್ಟರ್.
ಮೇಲೆ ಹೇಳಿದ ಕಿಸ್ತನ ಆ ಎಲ್ಲಾ ಕಾರ್ಯಗಳು ನಮ್ಮ ಜೀವನಗಳಲ್ಲಿ ನಡೆದಿವೆ ಮತ್ತು ನಡೆಯುತ್ತಿವೆ. ಅದರೆ ಸಂದರ್ಭ ಸನ್ನಿವೇಶಗಳಲ್ಲಿ ಮಾತ್ರ ವ್ಯತ್ಯಾಸವಿರಬಹುದು. ಕ್ರಿಸ್ತನಿಂದ ಸಾಂತ್ವನಗೊಂಡಿದ್ದೇವೆ, ಉದಾತ್ತ ಕಾರ್ಯಗಳಲ್ಲಿ ಆಶಾಭಂಗವಾಗಿ ಕೈಚೆಲ್ಲಿ ಕುಳಿತಾಗ ಸೇವೆಯ ಕಾರ್ಯಕ್ಕೆ ಹಿಂದಿರುಗುವಂತೆ ಕ್ರಿಸ್ತ ನಮ್ಮನ್ನು ಪ್ರೇರೇಪಿಸಿದ್ದಾನೆ; ಅಪನಂಬಿಕೆಗಳ ಮನಸ್ಸಿನಲ್ಲಿ ವಿಶ್ವಾಸವನ್ನು ಗಟ್ಟಿಗೊಳಿಸಿದ್ದಾನೆ; ಕಳವಳಗೊಂಡ ನಮ್ಮ ಬದುಕಿಗೆ ಶಾಂತಿಯನ್ನು ದಯಪಾಲಿಸಿದ್ದಾನೆ; ನಮ್ಮೆಲ್ಲಾ ಪ್ರಯತ್ನಗಳನ್ನು ಸಫಲಗೊಳಿಸಿದ್ದಾನೆ. ಇವೆಲ್ಲವೂ ನಮ್ಮ ಬದುಕಿನಲ್ಲಿ ಆಗುವಂತಹ ಈಸ್ಟರುಗಳೇ.
ಕ್ರಿಸ್ತನಿಂದ ನಿತ್ಯ ಸಂಭವಿಸುವ ಇಂತಹ ಈಸ್ಟರುಗಳಿಂದ ನಮ್ಮ ಬದುಕು ಕ್ರಿಯಾತ್ಮಕವಾಗಿವೆ. ಅದಕ್ಕಾಗಿ ಕ್ರಿಸ್ತನಿಗ ಕೃತಜ್ಞತೆ ಹೇಳೋಣ. ಜತೆಗೆ ಇಂತಹ ಈಸ್ಟರುಗಳನ್ನು ಇತರರ ಬಾಳಿಗೆ ಮುಖ್ಯವಾಗಿ ನೊಂದರವರ ಬಾಳಿಗೆ ತರುವಂತಹ ಕಾರ್ಯಕ್ಕೆ ನಾವೆಲ್ಲಾ ಈಸ್ಟರಿನಿಂದ ಪ್ರೇರಣೆಗೊಳ್ಳೋಣ.
ಕವಿಯೊಬ್ಬ ಗುರುವಿನ ಬಗ್ಗೆ ಪುಸ್ತಕವೊಂದನ್ನು ಬರೆಯಲು ಮಠಕ್ಕೆ ಬಂದು “ನೀವು ಮಹಾಜ್ಞಾನಿ, ಪ್ರತಿಭಾವಂತರೆಂದು ಜನ ಅಂದುಕೊಳ್ಳುತ್ತಾರೆ. “ನೀವು ಮಹಾಜ್ಞಾನಿಯೇ?” ಎಂದು ಕೇಳುತ್ತಾನೆ.
“ನೀನೂ ಹಾಗೆ ಭಾವಿಸಬಹುದು” ಎಂದು ನಸುನಗುತ್ತಾ ನುಡಿಯುತ್ತಾರೆ ಗುರು.
“ಮತ್ತೆ ಒಬ್ಬ ಮಹಾಜ್ಞಾನಿ, ಹೇಗಾಗುತ್ತಾನೆ?” ಎಂಬುದು ಬರಹಗಾರನ ಸಂದೇಹ.
“ಕಾಣುವ ಸಾಮರ್ಥ್ಯ ಹೊಂದಿದ್ದರೆ ಸಾಕು” ಎಂದುತ್ತರಿಸುತ್ತಾರೆ ಗುರು.
ಕವಿಗೆ ಗೊಂದಲವಾಗುತ್ತದೆ. ತಲೆ ಕೆರೆದುಕೊಳ್ಳುತ್ತಾ ಅವನಂದು ಕೊಳ್ಳುತ್ತಾನೆ “ಕಾಣುವುದಾದರೂ ಏನನ್ನು?”
ಆಗ ಗುರು ಸಾವಕಾಶವಾಗಿ ಅಷ್ಟೇ ಸ್ಪಷ್ಟವಾಗಿ “ಹುಳುವಿನೊಳಗಿನ ಚಿಟ್ಟೆಯನ್ನು, ಮೊಟ್ಟೆಯೊಳಗಿನ ಗಿಡುಗವನ್ನು, ಸ್ವಾರ್ಥಿ ಮನದೊಳಗಿನ ಸಂತನನ್ನು, ಸಾವಿನೊಳಗಿನ ಜೀವವನ್ನು, ಬೇರ್ಪಟ್ಟವುಗಳಲ್ಲಿ ಒಗ್ಗಟ್ಟನ್ನು, ದೈವತ್ವದೊಳಗೆ ಮಾನವತ್ವವನ್ನು ಮತ್ತು ಮನುಷ್ಯನೊಳಗಿನ ದೈವತ್ವವನ್ನು ಕಾಣಬೇಕು” ಎನ್ನುತ್ತಾರೆ.
ಆಚೆನ್ ಬಿಷಪರಾದ ಕ್ಲಾಸ್ ಹೆಮೆರ್ಲೆಯವರು ತಾವು ಸಾಯುವ ಸಮಯ ಸನ್ನಿಹಿತವಾದಾಗ ಉತ್ಥಾನ (Easter) ಕಾಲದ ಪರಿಪತ್ರ (ಈಸ್ಟರ್ ಲೆಟರ್) ವನ್ನು ಬರೆಯುತ್ತಾ “ I wish each of us Easter eyes: ಸಾವಿನಲ್ಲಿ ಬದುಕ ಕಾಣೋಣ, ತಪ್ಪಿನಲ್ಲಿ ಕ್ಷಮೆ ಕಾಣೋಣ, ಒಡೆದು ಹೋದವು ಒಂದಾಗುವುದ ಕಾಣೋಣ, ಪರಿತಾಪದಲ್ಲಿ ಜಯವನ್ನು ಕಾಣೋಣ, ಮನುಜರಲ್ಲಿ ದೇವರ ಕಾಣೋಣ, ದೇವರಲ್ಲಿ ಮನುಷ್ಯನನ್ನು ಕಾಣೋಣ, ಹಾಗೆಯೇ ನಾನು ಎಂಬಲ್ಲಿ ನೀವು ಎಂಬುದ ಕಾಣೋಣ?” ಎಂದಿದ್ದಾರೆ.
ಪುನರುತ್ಥಾನ ಹಬ್ಬದ ಶುಭಾಶಯಗಳು.
ಚಿಕ್ಕರಸಿನಕೆರೆಯ ಜನಪದರ ದೈವ ರಾಜೇಂದ್ರಸ್ವಾಮಿ
ಎಫ್. ಎಂ. ನಂದಗಾವ್ ಎಂ.ಎ.
``ನಮಗೆಲ್ಲಾ ಒಳ್ಳೇದೆ ಆಗಿದೆ. ಎರಡು ಹೆಣ್ಮಕ್ಕಳು ನನಗೆ. ಮಗಾ ಇಲ್ಲ ಮಗಾ ಇಲ್ಲ ಅನ್ನೋರು. ಈ ಸ್ವಾಮಿನ್ನ ಬೇಡಿಕೊಂಡ ಮೇಲೆ ನನಗೆ ಗಂಡುಮಗ ಹುಟ್ಟಿದ್ದು. ನನ್ನ ಮಗ ಪಟ್ಟಾಭಿರಾಮ ಹುಟ್ಟಿದ್ದು ಕ್ರಿಸ್ಮಸ್ ದಿನವೇ. ಅವನಿಗೀಗ ಇಪ್ಪತ್ತು ವರ್ಷ''.
``ದೀಪಾವಳಿ ಆನಂತರದ ಕಾರ್ತಿಕ ಮಾಸದಲ್ಲಿ, ನಾವುಗಳೂ ಸೇರಿದಂಗೆ ಇಲ್ಲಿನ ಪ್ರತಿ ಮನೆಯವರು ಸಕ್ಕರೆ, ಕಡಲೆ, ಯಾಲಕ್ಕಿ, ಕೊಬ್ಬರಿ ಬೆರಸಿ ಈ ಸ್ವಾಮಿಗೆ ಎಡೆ ಹಿಡಿದು ಪೂಜೆ ಮಾಡ್ತಾರೆ. ಕೆಲವರು ಪುರಿ, ಬ್ರೆಡ್ ಮಾಡ್ತಾರೆ. ಹರಕೆ ಹೊತ್ತವರು ವರ್ಷಪೂರ್ತಿ ಬರ್ತಾನೆ ಇರ್ತಾರೆ''.
``ದೂರದ ಊರುಗಳಿಂದ ಭಕ್ತರು ಬರ್ತಾರೆ. ಇಲ್ಲೇ ಅಡುಗೆ ಮಾಡವ್ರು. ಪಾತ್ರೆ ಕೊಡ್ತಿದ್ವಿ. ನಮ್ಮಲ್ಲೇ ಮಲಗೋರು. ಒಮ್ಮೆ ಮಹಾರಾಷ್ಟ್ರದಿಂದ ಒಂದು ಕುಟುಂಬ ಬಂದಿತ್ತು. ನಮ್ಮ ಮನೆಯಲ್ಲೇ ಇದ್ದದ್ದು. ನಾವೇ ಅವರಿಗೆ ಅನುಕೂಲ ಮಾಡಿಕೊಟ್ಟದ್ದು. ಸ್ವಾಮಿಗೆ ಊರಲ್ಲಿ ಒಳ್ಳೆ ಹೆಸರಿದೆ. ಸ್ವಾಮಿ ಸಮಾಧಿ ಪಕ್ಕದ ಜಾಗವನ್ನ ನಮ್ಮ ಮೈದುನ ಬಿಟ್ಟುಕೊಟ್ಟ. ನಾವೂ ಈ ನಮ್ಮನೇನ ಸಮಾಧಿಗೆ ಬಿಟ್ಟುಕೊಟ್ಟು ಹೋಗ್ತೀವಿ. ರಸ್ತೆ ಪಕ್ಕದಾಗೆ ನಮಗೆ ಸುಮಾರು ಜಮೀನಿದೆ. ಅಲ್ಲೇ ಮನೆ ಕಟ್ಟಿಕೊಳ್ತೀವಿ''
ಇವು ಚಿಕ್ಕರಸಿನಕೆರೆ ಪಟೇಲ್ ಸಿದ್ದೇಗೌಡರ ಸೊಸೆ, ಸಿದ್ದರಾಜು ಅವರ ಪತ್ನಿ ಸುಧಾ ಅವರ ಕೃತಜ್ಞತಾಭಾವದ ಮಾತುಗಳು. ಅವರ ಮನೆ, ಸ್ವಾಮಿ ಸಮಾಧಿ ಎದುರಿನ ರಸ್ತೆಯ ಪಕ್ಕದಲ್ಲೇ ಇದೆ. ಮಗನ ಹುಟ್ಟುಹಬ್ಬ ಆಚರಿಸುವ ದಿನ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮವೂ ನುಸುಳಿರುತ್ತದೆ.
``ಈ ಸ್ವಾಮಿ, ಅಮಾಸೆ ಹುಣ್ಣಿಮೆ ತಾವು ಕುದುರೆ ಮೇಲೆ ಸವಾರಿ ಮಾಡ್ತಿದ್ದುದು ಕಾಣಿಸ್ತಿತ್ತು ನಮ್ಮ ತಂದೆಗೆ, ನನಗೂ ಕೆಲವೊಮ್ಮೆ ಹಂಗಾಗಿದೆ. ಆಗ ಏನೋ ಘಮ ಘಮ ಅಂದಂತೆ ಆಗೋದು.'' ಇದು ಚಿಕ್ಕರಸಿನಕೆರೆ ಶೆಟ್ಟರ ಬೀದಿಯ ನೀವಾಸಿ ರಮೇಶ ಅವರ ಅನುಭಾವದ ಮಾತುಗಳು.
``ಸ್ವಾಮಿ ಸಮಾಧಿಗೆ ಮೇಣಬತ್ತಿ ಹಚ್ಚತೀವಿ. ಕಾರ್ತಿಕ ಮಾಸದಲ್ಲಿ ಸ್ವಾಮಿ ಸಮಾಧಿಗೆ ಬೆಲ್ಲ, ಕೊಬ್ಬರಿ, ಸಕ್ರೆ ಎಡೆ ಮಾಡ್ತೀವಿ. ಕಿರಿದಾದ ಕೊಳ ಇತ್ತು. ಅಲ್ಲೇ ಮುಡಿಕೊಟ್ಟು ಸ್ನಾನ ಮಾಡ್ತಿದ್ದರು. ಕೊಳದಲ್ಲಿ ತುಂಬಕೊಳ್ತು. ಈಗ ಅದನ್ನ ಮುಚ್ಚಿಸಿದ್ದಾರೆ'' ಎನ್ನುವ ಅವರು, ತಮ್ಮ, ತಮ್ಮೂರವರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಸ್ವಾಮಿಯ ಬಗೆಗೆ ಹೊಂದಿರುವ ಆದರವನ್ನು ಹಂಚಿಕೊಂಡರು.
ಶ್ರೀ ರಾಜೇಂದ್ರಸ್ವಾಮಿ ಮಠ:
ಇಲ್ಲಿ ಸ್ವಾಮಿ ಅಂದರೆ, ಶ್ರೀ ರಾಜೇಂದ್ರಸ್ವಾಮಿ, ಚಿಕ್ಕರಸಿನಕೆರೆ ಶ್ರೀ ರಾಜೇಂದ್ರಸ್ವಾಮಿ. ಸರ್ಕಾರದ ಕಂದಾಯ ಇಲಾಖೆಯ ದಾಖಲೆಯ ಪ್ರಕಾರ ಇದು `ಶ್ರೀ ರಾಜೇಂದ್ರಸ್ವಾಮಿ ಮಠ (ಕ್ರಿಶ್ಚಿಯನ್ ಗೋರಿ). ತೆರಿಗೆ ಪಟ್ಟಿಯಲ್ಲಿ ಈ ಸ್ವತ್ತನ್ನು 80 ಅಡಿ 6 ಇಂಚು ಅಗಲ 106 ಅಡಿ ಅಗಲ ಎಂದು ಗುರುತಿಸಲಾಗಿದೆ. ಉತ್ತರ, ದಕ್ಷಿಣ, ಮತ್ತು ಪೂರ್ವದಲ್ಲಿ ರಸ್ತೆ ಇದ್ದು ಪಶ್ಚಿಮಕ್ಕೆ ತಮ್ಮಯ್ಯನ ನಿವೇಶನವಿದೆ ಎಂದು ಚಕಬಂದಿ ಗುರುತಿಸಲಾಗಿದೆ, ಅನುಭವದಾರರ ಹೆಸರಿನ ಕಾಲಮ್ಮಿನಲ್ಲಿ ಅಡ್ಡಗೆರೆ ಎಳೆಯಲಾಗಿದೆ. ವಾರ್ಷಿಕ ತೆರಿಗೆ - ಕಾಲಮ್ಮಿನಲ್ಲಿ `ಮಾಫಿ' ಎಂದು ನಮೂದು ಮಾಡಲಾಗಿದ್ದು 1995 ಮತ್ತು 1996ರ ಕಂದಾಯ ದಾಖಲೆಯಿಂದ ತಿಳಿಯುತ್ತದೆ. ಈ ದಾಖಲೆಗೆ ಚಿಕ್ಕರಸಿನಕೆರೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಸಹಿ ಮಾಡಿದ್ದಾರೆ.
ಸರ್ಕಾರಿ ದಾಖಲೆಗಳಲ್ಲಿ ರಾಜೇಂದ್ರಸ್ವಾಮಿ ಸಮಾಧಿಯನ್ನು ಮಠ ಎಂದು ಏಕೆ ದಾಖಲಿಸಿದ್ದಾರು? ಮಂತ್ರಾಲಯದ ರಾಘವೇಂದ್ರಸ್ವಾಮಿ ಬೃಂದಾವನ (ಸಮಾಧಿ)ವನ್ನು ರಾಘವೇಂದ್ರಸ್ವಾಮಿ ಮಠ ಎಂದೇ ಕರೆಯಲಾಗುತ್ತದೆ. ಅದೇ ಜಾಯಮಾನದ ಹಿನ್ನೆಲೆಯಲ್ಲಿ ರಾಜೇಂದ್ರಸ್ವಾಮಿ ಸಮಾಧಿ ಇರುವ ಜಾಗವನ್ನು ಮಠ ಎಂದು ಕರೆದಿರುವ ಎಲ್ಲಾ ಸಾಧ್ಯತೆಗಳು ಇವೆ. ಸಮಾಧಿಯ ಕಾರಣ ಜನ ಬಳಕೆಯಲ್ಲಿ ಈ ಜಾಗವನ್ನು ಶ್ರೀ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರ ಎಂದು ಕರೆಯಲಾಗುತ್ತದೆ.
ಯಾರು ಈ ರಾಜೇಂದ್ರಸ್ವಾಮಿ?
ದಕ್ಷಿಣ ಭಾರತದ ಪ್ರಮುಖ ನಗರ, ಧಾರ್ಮಿಕ ಕ್ಷೇತ್ರ ತಮಿಳುನಾಡಿನ ಮಧುರೆಯಲ್ಲಿ ಇದ್ದುಕೊಂಡು ಸುವಾರ್ತಾ ಪ್ರಚಾರದಲ್ಲಿ ವಂದನೀಯ ರಾಬರ್ಟ್ ಡಿ ನೋಬಿಲಿ (1606-1656) ಅವರು ತೊಡಗಿದ್ದರೆ, ಕನ್ನಡ ನಾಡಿನ ಮೈಸೂರು ಸೀಮೆಯಲ್ಲಿ ವಂದನೀಯ ಲಿಯನಾರ್ಡೊ ಚಿನ್ನಮಿ ಅವರು (1648-1676) ಸುವಾರ್ತಾ ಪ್ರಚಾರದಲ್ಲಿ ತೊಡಗಿದ್ದರು. ನೋಬಿಲಿ ಅವರನ್ನು ಮಧುರೆ ಮಿಷನ್ನಿನ ಮತ್ತು ಚಿನ್ನಮಿ ಅವರನ್ನು ಮೈಸೂರು ಮಿಷನ್ನಿನ ಸಂಸ್ಥಾಪಕರೆಂದು ಗುರುತಿಸಲಾಗುತ್ತದೆ. ಇವರಿಬ್ಬರೂ ಗೋವೆಯ ಸಂತ ಫ್ರಾನ್ಸಿಸ್ ಜೇವಿಯರ್ ಅವರಂತೆ ಯೇಸುಸಭೆಯ ಸದಸ್ಯರು.
ಕನ್ನಡ ನಾಡಿನಲ್ಲಿನ ಯೇಸುಸಭೆಯ ಚಟುವಟಿಕೆಗಳ ವರದಿಯ ಪತ್ರಗಳನ್ನು ಆಧರಿಸಿ ಫಾದರ್ ಐ ಅಂತಪ್ಪ ಅವರು ಬರೆದಿರುವ ಮಂಡ್ಯ ಮತ್ತು ಚನ್ನಪಟ್ಟಣ- ರಾಮನಗರ ಜಿಲೆಗಳಲ್ಲಿ (1650-1754) ಕ್ರೈಸ್ತ ಧರ್ಮದ ಉಗಮ (2010,2014) ಪುಸ್ತಕದಲ್ಲಿ, ಮೈಸೂರಿನ ಕಂಠೀರವ ನರಸರಾಜ ಒಡೆಯರು (1639-1654), ಅಂದಿನ ಕಥೋಲಿಕ ಕ್ರೈಸ್ತರ ಮೈಸೂರು ಮಿಷನ್ನಿನ ನಿರ್ದೇಶಕ ಸ್ವಾಮಿ ಲಿಯನಾರ್ಡೊ ಚಿನ್ನಮಿ (1639-1659) ಅವರಿಗೆ ಗುರುಹಿರಿಯರನ್ನು ಗೌರವಿಸುವ ಅಂದಿನ ವಾಡಿಕೆಯಂತೆ 1656ರ ಭೇಟಿಯ ಸಂದರ್ಭದಲ್ಲಿ ಚಿಕ್ಕರಸಿನಕೆರೆ ಗ್ರಾಮವನ್ನು ಉಂಬಳಿಯಾಗಿ ನೀಡಿದ್ದರೆಂದು ದಾಖಲಿಸಿದ್ದಾರೆ.
ನೋಬಿಲಿ ಮತ್ತು ಚಿನ್ನಮಿ ಅವರಂತೆಯೇ ಕಥೋಲಿಕ ಕ್ರೈಸ್ತರ ಜಗದ್ಗುರು ಪಾಪುಸ್ವಾಮಿಗಳ ನೆಲೆಯಾದ ರೋಮ್ ಪಟ್ಟಣ ದೇಶವಿರುವ, ಇಟಲಿ ನಾಡಿಗೆ ಸೇರಿದ ವಂದನೀಯ ಅಂತೋನಿಯೊ ಮರಿಯಾ ಪ್ಲಾಟೆ (1709-1719) ಯೇಸುಸಭೆಯ ಮಿಷನರಿ ಸದಸ್ಯರಾಗಿದ್ದರು. ಅವರು 1709ರಲ್ಲಿ ಮೈಸೂರು ಮಿಷನ್ನಿನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.
ಅಂದಿನ ಪ್ರಮುಖ ಕ್ರೈಸ್ತನೆಲೆ ಚಿಕ್ಕರಸಿನಕೆರೆಯಲ್ಲಿ ನೆಲೆ ನಿಂತ ಅವರು, ನೋಬಿಲಿ ಅವರಂತೆಯೇ ಭಾರತೀಯ ಸನ್ಯಾಸಿಗಳಂತೆ, ಮಠಾಧಿಪತಿಗಳಂತೆ ಕಾವಿ ಬಟ್ಟೆ ತೊಡುತ್ತಿದ್ದರು. ಹಣೆಗೆ ಶಿಲುಬೆ ಆಕಾರದಲ್ಲಿ ವಿಭೂತಿ ಹಚ್ಚಿಕೊಳ್ಳುತ್ತಿದ್ದರು. ಕೈಯಲ್ಲಿ ಸದಾಕಾಲ ಮಾತೆ ಮರಿಯಳ ಜಪಸರ ಹಿಡಿದುಕೊಂಡಿರುತ್ತಿದ್ದರು. ಪೂಜೆ ಪುನಸ್ಕಾರಗಳೊಂದಿಗೆ ಆಧ್ಯಾತ್ಮಿಕ ಚಿಂತನೆ, ಪ್ರವಚನಗಳಲ್ಲಿ ತೊಡಗಿರುತ್ತಿದ್ದ ಅವರು ಸಾತ್ವಿಕ ಆಹಾರವೆಂದು ಕೇವಲ ಅನ್ನ, ರೊಟ್ಟಿ, ಪಲ್ಲೆ, ಮೊಸರು ಮುಂತಾದವನ್ನು ಸ್ವೀಕರಿಸುತ್ತಿದ್ದರು. ಜನಾನುರಾಗಿಯಾಗಿದ್ದ ಅವರ ನಡವಳಿಕೆ ಸಾಕಷ್ಟು ಜನರನ್ನು ಕ್ರೈಸ್ತ ಧರ್ಮದ ತೆಕ್ಕೆಗೆ ತಂದುಕೊಟ್ಟಿತ್ತು. ಅವರಂತೆಯೇ ಯೇಸುಸಭೆಯ ಸ್ವಾಮಿಗಳಾದ ಸೆರಾಫಿನೊ, ಸಿಮಾವೊ, ಬರೆಟ್ಟೊ, ದಕುನ್ನಾ ಮೊದಲಾದವರ ಶ್ರಮದಿಂದ ಚಿಕ್ಕರಸಿನಕೆರೆ ಕಥೋಲಿಕ ಕ್ರೈಸ್ತರ ಪ್ರಮುಖ ನೆಲೆಯಾಗಿತ್ತು.
ಅವರಲ್ಲಿ ಪ್ರಮುಖರಾದ ಪ್ಲಾಟೆ ಸ್ವಾಮಿ, ಸುವಾರ್ತೆ ಸಾರಲು ಪೂರಕವಾದ ಸಹಾಯ ಪಡೆಯಲು ಆಡಳಿತಾಧಿಕಾರಿಗಳನ್ನು, ಪಾಳೆಪಟ್ಟಿನ ಅರಸರನ್ನು ಆಗಾಗ ಭೇಟಿ ಮಾಡುತ್ತಿದ್ದರು. ಸಮಯ ಸಿಕ್ಕಾಗ ಆಸ್ಥಾನಗಳಲ್ಲಿ, ಧಾರ್ಮಿಕ ಸಮ್ಮೇಳನಗಳಲ್ಲಿ ಧಾರ್ಮಿಕ ವಿಚಾರಗಳ ಚಿಂತನ ಮಂಥನಗಳನ್ನು ನಡೆಸುತ್ತಿದ್ದರು. ಒಂದೊಮ್ಮೆ ಪೆನುಕೊಂಡದ ಅರಸ ಅರಸಿಗೆ ಕ್ರೈಸ್ತ ದೀಕ್ಷಾಸ್ನಾನ ನೀಡಿದ್ದರಂತೆ. ರಾಜಗುರುವಿನಂತಾದ ಅವರ ಇಂಥ ಘನವಾದ ಚಟುವಟಿಕೆಗಳ ದೆಸೆಯಿಂದ ಅವರನ್ನು ಜನರು ಪ್ರೀತಿಯಿಂದ ಗೌರವದಿಂದ ರಾಜರ ಒಡನಾಟದ ಸ್ವಾಮಿ - ರಾಜೇಂದ್ರಸ್ವಾಮಿ ಎಂದು ಕರೆಯತೊಡಗಿದರು. ಜನಮಾನಸದ ಆ ಪ್ರೀತಿ, ಗೌರವದ ಹೆಸರು ಅವರಿಗೆ ಕಾಯಮ್ಮಾಗಿ ಅಂಟಿಕೊಂಡುಬಿಟ್ಟಿತಂತೆ.
ಚಿಕ್ಕರಸಿನಕೆರೆಯ ಕಾಲಭೈರವ ಮತ್ತು ಬಸವಪ್ಪ
ಈ ಚಿಕ್ಕರಸಿನಕೆರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಒಂದು ಗ್ರಾಮ. ಶತಮಾನಗಳ ಹಿಂದೆ ಪ್ರಜೆಗಳನ್ನು ಮಕ್ಕಳಂತೆ ಕಾಣುತ್ತಿದ್ದ ಪಾಳೆಪಟ್ಟು ಕುಟುಂಬಕ್ಕೆ ಸೇರಿದ್ದ ಚಿಕ್ಕರಸಿ ಮತ್ತು ದೊಡ್ಡರಸಿ ಹೆಸರಿನ ಇಬ್ಬರು ಅಕ್ಕತಂಗಿಯರಿದ್ದರು. ಅಂದಿನ ಸಂಪ್ರದಾಯದಂತೆ, ಅವರಿಬ್ಬರೂ ತಲಾ ಒಂದೊಂದು ಕೆರೆಗಳನ್ನು ಕಟ್ಟಿಸಿದರು. ಚಿಕ್ಕರಸಿ ಕರೆಯ ಬಳಿಯ ಊರು ಚಿಕ್ಕರಸಿನಕೆರೆ ಎನಿಸಿಕೊಂಡರೆ, ದೊಡ್ಡರಸಿ ಕೆರೆಯ ಹತ್ತಿರದ ಊರನ್ನು ದೊಡ್ಡರಸಿನಕೆರೆ ಎಂದು ಗುರುತಿಸಲಾಯಿತಂತೆ.
ಇಂದು ಚಿಕ್ಕರಸಿನಕೆರೆ ಅಂದರೆ, ಆ ಸೀಮೆಯ ಆಸ್ತಿಕಭಾವದ ಎಲ್ಲರಿಗೂ, ವಿಶೇಷವಾಗಿ ಚಿಕ್ಕರಸಿನಕೆರೆ ಗ್ರಾಮದ ಪ್ರಧಾನ ದೈವ ಕಾಲಭೈರವನ ಮತ್ತು ಅವನ ಅಪರಾವತಾರ ತಾಳುವ ಸ್ವಾಮಿ ಬಸವಪ್ಪನ ಸ್ಮರಣೆ ಮೂಡುತ್ತದೆ. ಅದರಂತೆಯೇ ವಿಶ್ವಾಸಿಗಳ ಪಾಲಿನ ದೈವಗಳ ಸಾಲಿನಲ್ಲಿ ಶತಮಾನಗಳ ಇತಿಹಾಸ ಪ್ರಸಿದ್ಧ ಪವಾಡ ಪುರುಷ, ಬಗೆಬಗೆಯ ವರಗಳನ್ನು ಪ್ರಾಸಾದಿಸುವ ಪಾದ್ರಿ, ಧರ್ಮಬೋಧಕ ರಾಜೇಂದ್ರಸ್ವಾಮಿ ಅವರೂ ಸೇರಿದ್ದಾರೆ. ಅಲ್ಲೇ ಸಮೀಪದ ದೊಡ್ಡರಸಿನಕೆರೆ ಊರು ಕನ್ನಡದ ಖ್ಯಾತ ನಟ ಅಂಬರೀಷನ ಹುಟ್ಟೂರು ಎಂಬುವುದು ಅಲ್ಲಿನ ನಿವಾಸಿಗಳಿಗೆ ಹೆಮ್ಮೆ ಮೂಡಿಸುತ್ತದೆ.
ಭಾರತ ಪ್ರಧಾನವಾಗಿ ಹಳ್ಳಿಗಳ ದೇಶ. ಕೃಷಿ ಇಲ್ಲಿನ ಜನರ ಪ್ರಮುಖ ಕಾಯಕ. ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ನಿಲ್ಲುವ ಹಸು, ಎತ್ತುಗಳು ಕೃಷಿಕರ ಆದರಣೆಗೆ ಪಾತ್ರವಾಗುವ ಮೂಕ ಪ್ರಾಣಿಗಳು. ತ್ರಿಮೂರ್ತಿ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಒಬ್ಬನಾದ ಶಿವನ ಜತೆಯಲ್ಲಿಯೇ ಇರುವ ನಂದಿ, ಬಸವಣ್ಣ ಎಂದು ಕರೆಯಿಸಿಕೊಳ್ಳುವ ಎತ್ತು, ರೈತರಿಗೆ ಪರಮ ಪೂಜನೀಯವಾದುದು. ಆಯಾ ಊರಿನ ಶಿವ ದೇವಾಲಯಗಳ ಹೆಸರಿನಲ್ಲಿ ಎತ್ತುಗಳನ್ನು (ನಂದಿ) ಬಿಡುವುದು ಒಂದು ಸಂಪ್ರದಾಯ
ಶಿವನ ಸಂಹಾರಿ ಗುಣಗಳನ್ನು ಆಧರಿಸಿ ಅವನನ್ನು ಅಸಿತಾಂಗ ಭೈರವ, ಸಂಹಾರ ಭೈರವ, ರುರು ಭೈರವ, ಕ್ರೋಧ ಭೈರವ, ಕಪಾಲ ಭೈರವ, ರುದ್ರ ಭೈರವ, ಉನ್ಮತ್ತ ಭೈರವ ಮತ್ತು ಕಾಲ ಭೈರವ ಎಂದು ಕರೆಯಲಾಗುತ್ತದೆ. ಚಿಕ್ಕರಸಿನಕೆರೆ ಊರಲ್ಲಿ ಮಳವಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆಯೇ ಕಾಲಭೈರವೇಶ್ವರನ ದೇವಾಲಯವಿದೆ. ಈ ದೇವರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಪಾರ ಭಕ್ತರನ್ನು ಹೊಂದಿದೆ. ಅದು, ಸಹಸ್ರಾರು ಕುಟುಂಬಗಳ ಮನೆದೇವರೂ ಹೌದು. ಈ ದೇವರನ್ನು ಬೋರದೇವರು ಎಂದೂ ಕರೆಯಲಾಗುತ್ತದೆ.
ಶತಶತಮಾನಗಳ ಹಿಂದೆ, ಬರ ಬಂದು ಕೆರೆ ಕುಂಟೆಗಳು ಬರಿದಾದಾಗ ಚಿಕ್ಕರಸಿನಕೆರೆಯ ಜನ ಶಿವನಲ್ಲಿ ಪ್ರಾರ್ಥನೆ ಸಲ್ಲಿಸಿದಾಗ ಧಾರಾಕಾರವಾಗಿ ಮಳೆ ಸುರಿಯಿತು. ಮಳೆ ನೀರಿನ ಹರಿವಿನಲ್ಲಿ ವಿಗ್ರಹಗಳು ಸಾಗಿಬಂದವು. ಅವುಗಳ ಮೇಲೆ ಹುತ್ತ ಬೆಳೆಯಿತು. ಊರಲ್ಲಿನ ರುದ್ರಪ್ಪಗೌಡನ ಮನೆಯಲ್ಲಿ ಒಂದು ದಿನ ಹಾಲು ಕರೆಯಲು ಹೋದಾಗ, ಹಾಲು ಕರೆಯುತ್ತಿದ್ದ ಹಸುವೊಂದರ ಕೆಚ್ಚಲಿನಿಂದ ಹಾಲಿನ ಬದಲು ರಕ್ತ ಒಸರುತ್ತಿತ್ತು. ಆ ಹಸುವಿನ ಚಲನವಲನ ಗಮನಿಸಿದಾಗ ಅದು ಮೇಯಲು ಹೋದಾಗ ಹುತ್ತಿನ ಮೇಲೆ ಹಾಲು ಕರೆಯುತ್ತಿದ್ದುದು ಕಂಡಿತು.
ಇನ್ನೊಂದು ಐತಿಹ್ಯದಲ್ಲಿ ಆ ಹಸು ಬ್ರಾಹ್ಮಣ ಮನೆಗೆ ಸೇರಿದ್ದೆಂದು ಹೇಳಲಾಗುತ್ತದೆ. ಊರ ಜನ ಹುತ್ತವನ್ನು ಅಗೆದು ನೋಡಿದಾಗ, ಕಾಲಭೈರವ ಮತ್ತು ನಂದಿಯ ವಿಗ್ರಹಗಳು ಲಭಿಸಿದವು. ಅವನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ಕಟ್ಟಲಾಯಿತು. ಈ ದೇವಾಲಯಕ್ಕೆ ಬಿಡುವ ನಂದಿಯನ್ನು ಕಾಲಭೈರವನ ಅಪರಾವತಾರ ಎಂಬುವುದು ಆಸ್ತಿಕರ ನಂಬಿಕೆ. ಅದನ್ನು ಕೇವಲ ನಂದಿ ಎನ್ನದೇ ಬಸವಪ್ಪ ಎಂದು ಗೌರವದಿಂದ ಕಾಣಲಾಗುತ್ತದೆ.
ಬಸವಪ್ಪನ ಸನ್ನಿಧಾನ
ಊರಲ್ಲಿ ಏನೇ ಒಳ್ಳೆಯ ಕಾರ್ಯಗಳು ಜರುಗಿದರೂ ಅವು ಬಸವಪ್ಪನ ಸನ್ನಿಧಾನದಲ್ಲೇ ನಡೆಯಬೇಕೆನ್ನುವುದು ಊರಲ್ಲಿನ ಅಲಿಖಿತ ಸಂಪ್ರದಾಯ. ನ್ಯಾಯ ದುರಂಧರ ಈ ಕಾಲಭೈರವ ಬಸವಪ್ಪನ ಸನ್ನಿದಿಯಲ್ಲಿ ಹಲವಾರು ಪ್ರಕರಣಗಳ ನ್ಯಾಯ ಪಂಚಾಯಿತಿ ನಡೆಸಿ ತೀರ್ಪು ನೀಡಲಾಗಿದೆ. ಅವನ ದೆಸೆಯಿಂದ ದೇವಸ್ಥಾನಗಳ ಜಮೀನಿನ ಅಕ್ರಮ ಒತ್ತುವರಿಗಳು ತೆರವುಗೊಂಡಿವೆ. ಅವನ ದರ್ಶನ ಭಾಗ್ಯದಿಂದ ಕಳ್ಳತನಗಳು ಪತ್ತೆಯಾಗಿವೆ. ಸಂತಾನಹೀನರಿಗೆ ಸಂತಾನ ಭಾಗ್ಯ ಲಭಿಸಿದೆ. ಆತ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ. ಅವನ ಕೃಪೆಯಿಂದ ಬರಗಾಲದಲ್ಲಿ ಮಳೆಯಾಗುತ್ತದೆ ಎಂದು ಜನ ವಿಶ್ವಾಸಿಸುತ್ತಾರೆ. ಈ ಸೀಮೆಯಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಕೆ.ಎಂ.ದೊಡ್ಡಿ, ಆತಗೂರು, ನಡಘಟ್ಟ, ಹೆಮ್ಮನಹಳ್ಳಿ ನಿವಾಸಿಗಳ ಪಾಲಿಗೆ ಅವನು ಶಿವರೂಪಿ ಬಸವಣ್ಣ, ಕಲಿಯುಗದ ಕಾಮಧೇನು.
ಚಿಕ್ಕರಸಿನಕೆರೆ ಊರಿನ ಪ್ರಮುಖ ದೇವರು ಕಾಲಭೈರವೇಶ್ವರನ ಜಾತ್ರೆ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಜರಗುತ್ತದೆ. ಕಾರ್ತಿಕ ಮಾಸದಲ್ಲಿ ದೀಪಾವಳಿ ಸಂದರ್ಭದಲ್ಲಿ ಬಸವಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಊರೂರುಗಳಿಗೆ ಬಸಪ್ಪನ ಭೇಟಿ ಪೂರ್ವ ನಿಗದಿಯಂತೆ ಒಮ್ಮೊಮ್ಮೆ ಹಟಾತ್ತಾಗಿ ನಡೆಯುವುದು ಇದೆ.
ಜಾತ್ರೆಯ ದಿನದಂದು ಚಿಕ್ಕರಿಸಿನಕೆರೆ, ಹುಣ್ಣನದೊಡ್ಡಿ, ಗುರುದೇವರಹಳ್ಳಿ ಗ್ರಾಮದವರಿಂದ ಕೊಂಡಬಂದಿ ಉತ್ಸವ, ಕಾಳಮ್ಮ, ಕಾರ್ಕಳ್ಳಿ ಬಸವೇಶ್ವರ, ಕಾಲಭೈರವ ಸೇರಿದಂತೆ ದೇವಾನು ದೇವತೆಗಳ ಶಿಂಷಾ ನದಿಯಲ್ಲಿ ಹೂ-ಹೊಂಬಾಳೆ ಕಾರ್ಯಕ್ರಮಗಳು ಜರಗುತ್ತವೆ. ಮಹಾಪೂಜೆಯ ಆನಂತರ ಪ್ರಮುಖ ಬೀದಿಯಲ್ಲಿ ಬಸವಪ್ಪನ ಮೆರವಣಿಗೆ, ಆ ಆನಂತರ ದೇವಾಲಯದ ಆವರಣದಲ್ಲಿ ಪುಷ್ಪಾಭಿಷೇಕವಾಗುತ್ತದೆ. ಇಲ್ಲಿನ ವಿಶೇಷವೆಂದರೆ, ಬಸವಪ್ಪನ ಕೊಂಬುಗಳಿಗೆ ಕಟ್ಟಲಾಗಿರುವ ಕಾಣಿಕೆ ದುಡ್ಡನ್ನು ಯಾರೂ ಮುಟ್ಟುವುದಿಲ್ಲ.
ಸಾಲು ಸಾಲು ದೇವಾಲಯಗಳು
ಕಾಲಭೈರವ ಚಿಕ್ಕರಸಿನಕೆರೆ ಗ್ರಾಮದ ಪ್ರಧಾನ ದೈವವಾದರೂ, ಈ ಊರಲ್ಲಿ ಸಾಲು ಸಾಲು ದೇವಾಲಯಗಳಿವೆ. ಮದ್ದೂರಿನಿಂದ ದಕ್ಷಿಣಕ್ಕೆ ಮಳವಳ್ಳಿಗೆ ಸಾಗುವ ದಾರಿಯಲ್ಲಿ ಎಂಟು ಕಿ.ಮೀ ದೂರ ಸಾಗಿ ಚಿಕ್ಕರಸಿನಕೆರೆ ಕ್ರಾಸ್ ತಲುಪಿದ ಆನಂತರ ಬಲಕ್ಕೆ ಮತ್ತೆ ಒಂದೂವರೆ ಕಿ.ಮೀ ಸಾಗಿದರೆ ರಸ್ತೆಯ ಎಡಬದಿಗೆ ಪೂಜ್ಯ ಶ್ರೀ ರಾಜೇಂದ್ರ ಸ್ವಾಮಿಗಳ ಪುಣ್ಯಕ್ಷೇತ್ರವು ಸಿಗುತ್ತದೆ. ಅದೇ ದಾರಿಯಲ್ಲಿ ತುಸು ಮುಂದೆ ಸಾಗಿದರೆ ಕೆರೆಯ ಏರಿಯಲ್ಲಿ ಅಗಸ್ತೇಶ್ವರಸ್ವಾಮಿ ದೇವಾಲಯವಿದೆ.
ಕ್ರೈಸ್ತ ಸಮುದಾಯದ ಕಥೋಲಿಕ ಪಂಗಡಕ್ಕೆ ಸೇರಿರುವ ಪೂಜ್ಯ ಶ್ರೀ ರಾಜೇಂದ್ರ ಸ್ವಾಮಿಗಳ ಪುಣ್ಯಕ್ಷೇತ್ರದ ಮುಂದಿನ ಬೀದಿ ದಾಟಿದರೆ ಮಾರಮ್ಮ ದೇವಿ ಗುಡಿ ಇದೆ. ಅಲ್ಲೇ ಎಡಕ್ಕೆ ಹೊಲದಲ್ಲಿ ಹನುಮಂತರಾಯ (ಆಂಜನೇಯ ಸ್ವಾಮಿ) ನ ಗುಡಿ ಇದೆ. ಊರಲ್ಲಿ ಹೊನ್ನರತಿ, ಹೂಮಾಲಮ್ಮ, ರಾಕಾಸಮ್ಮ, ಮಂಚಮ್ಮ ಮತ್ತು ಯಲ್ಲಮ್ಮ ದೇವಿ ಗುಡಿಗಳಿವೆ. ಆಯಾ ಸಮುದಾಯದವರು ಆರಾಧಿಸುವ ದೈವಗಳಿಗೆ ಆಯಾ ಕುಳ(ಪೂಜಾರಿ)ಗಳೇ ಇದ್ದಾರಂತೆ.
ಊರಲ್ಲಿ ಆಯಾ ಬೀದಿಗಳ ಶೆಟ್ಟರು, ಬ್ರಾಹ್ಮಣರು, ಒಕ್ಕಲಿಗರು, ವೀರಶೈವ ಲಿಂಗಾಯಿತರು, ಗಾಣಿಗ, ಈಡಿಗ, ಬಜಂತ್ರಿ, ಮಡಿವಾಳ, ಆದಿ ಕರ್ನಾಟಕ ಮೊದಲಾದ ಸಮುದಾಯಗಳಿಗೆ ಸೇರಿದ ಜನ ಇದ್ದಾರೆ. ಒಟ್ಟು ಕುಟುಂಬಗಳು 980 ಇದ್ದರೆ, 2113 ಗಂಡಸರು ಮತ್ತು 2074 ಹೆಂಗಸರೂ ಸೇರಿ ಒಟ್ಟು 4187 ಜನ ಊರಲ್ಲಿ ನೆಲೆಸಿದ್ದಾರೆ. ಆರು ವರ್ಷದ ಒಳಗಿನ ವಯೋಮಾನದ ಮಕ್ಕಳ ಸಂಖ್ಯೆ 345. ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದರೂ, ಕುಟುಂಬಗಳಲ್ಲಿನ ಕಲಿತವರು ಕಲಿಯದವರು ತಮ್ಮ ಯೋಗ್ಯತೆಗೆ ಅನುಸಾರ ಕೆಲಸ ಹುಡುಕಿಕೊಂಡು ಪಟ್ಟಣಗಳನ್ನು ಸೇರಿದ್ದಾರೆ.
ಪೂಜ್ಯ ಶ್ರೀ ರಾಜೇಂದ್ರ ಸ್ವಾಮಿಗಳ ಪುಣ್ಯಕ್ಷೇತ್ರದ ನೆಲೆಯಾಗಿರುವ ಚಿಕ್ಕರಸಿನಕರೆ ಊರಲ್ಲಿ ಇಂದು ಹೆಸರಿಗೆ ಹೇಳಲು ಒಂದು ಕ್ರೈಸ್ತ ಕುಟುಂಬವೂ ಇಲ್ಲ. ಇದೇನು ಸೋಜಿಗದ ಸಂಗತಿ ಏನಲ್ಲ. ಈ ಅವಸ್ಥೆಗೆ ಕಾರಣಗಳನ್ನು ಕಂಡುಕೊಳ್ಳಲು ಇತಿಹಾಸದ ಪುಟಗಳನ್ನು ಹುಡುಕಬೇಕಾಗುತ್ತದೆ.
ದಿಕ್ಕಾಪಾಲಾದ ಕ್ರೈಸ ಜನ :
ಹದಿನೇಳನೇ ಶತಮಾನದಲ್ಲಿ, ಚಿಕ್ಕರಸಿನಕೆರೆ ಅಲ್ಲದೇ ಶೆಟ್ಟಿಹಳ್ಳಿ, ಕಪ್ಪಿಗನಟ್ಟಿ (ಆನೆಕಲ್ಲು), ಗಾಡೇನಹಳ್ಳಿ, ಕಾಮನಹಳ್ಳಿ, ಶಿರಾ, ಹಾರೋಬೆಲೆ ಮೊದಲಾದ ಊರುಗಳಲ್ಲಿ ಕಥೋಲಿಕ ಕ್ರೈಸ್ತರಿದ್ದರು, ಗುರು ನಿಲಯಗಳಿದ್ದವು. ಚಿಕ್ಕರಸಿನಕೆರೆ ಹೊರತುಪಡಿಸಿದರೆ, ಉಳಿದ ಊರುಗಳು ಈಗಲೂ ಕಥೋಲಿಕ ಕ್ರೈಸ್ತರ ನೆಲೆಗಳೇ ಹೌದು.
ಹದಿನೆಂಟನೇ ಶತಮಾನದಲ್ಲಿ ಸ್ಥಳೀಯವಾಗಿ ಅಲ್ಲಲ್ಲಿ ಕ್ರೈಸ್ತರ ಸುವಾರ್ತಾ ಪ್ರಸಾರಕ್ಕೆ ಅಡ್ಡಿ ಆತಂಕಗಳಿದ್ದರೂ ಅಂದಿನ ಸಮಾಜದಲ್ಲಿ ಶಾಂತಿ ಸಮಾಧಾನ ನೆಲೆಸಿತ್ತು.
ಆದರೆ, ನಾಲ್ಕಾರು ದಶಕಗಳ ಆನಂತರದ ಬದಲಾದ ಪರಿಸ್ಥಿತಿಯಲ್ಲಿ ಬ್ರಿಟಿಷರ ಧರ್ಮವಾದ ಕ್ರೈಸ್ತಧರ್ಮ ಪಾಲಿಸುತ್ತಿದ್ದ ಕ್ರೈಸ್ತರ ಕುರಿತು ಅಪನಂಬಿಕೆ, ವೈಮನಸ್ಸು ತಾಳಿದ್ದ ಟಿಪ್ಪುವಿನ ಕಾಲದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯ ಮಿತಿಮೀರಿತ್ತು. ಕ್ರಿಸ್ತಶಕ 1782 ಸುಮಾರು ಟಿಪ್ಪುವಿನ ದುಂಡಾವರ್ತನೆಗೆ ಹೆದರಿದ, ರಾಜಧಾನಿ ಶ್ರೀರಂಗಪಟ್ಟಣಕ್ಕೆ ತೀರ ಹತ್ತಿರದಲ್ಲಿದ್ದ (52 ಕಿ..ಮೀ) ಚಿಕ್ಕರಸಿನಕೆರೆಯಲ್ಲಿನ ಕ್ರೈಸ್ತ ಜನರು ದಿಕ್ಕಾಪಾಲಾಗಿ ಹೋಗಿದ್ದಾರೆ. ನೋಡಿಕೊಳ್ಳುವವರಿಲ್ಲದೇ, ಅಲ್ಲಿನ ಚರ್ಚು ಹಾಳುಬಿದ್ದು ನೆಲಸಮವಾಗಿಬಿಟ್ಟಿದೆ.
ಮೃತರಾದ ಸಂದರ್ಭದ ಮಳೆ ತರಸಿದ ಪವಾಡ, ಮೂಡಿಸಿದ ಭಯಭಕ್ತಿ ಹಾಗೂ ಸ್ಥಳೀಯ ದೈವಭೀರು ಜನರ ಆಸ್ಥೆಯ ಕಾರಣ ರಾಜೇಂದ್ರ ಸ್ವಾಮಿಗಳ ಸಮಾಧಿ ಮುಕ್ಕಾಗದೇ ಉಳಿಯುತ್ತದೆ. ಈಗ ಅಲ್ಲಿ ರಾಜೇಂದ್ರಸ್ವಾಮಿ ಸಮಾಧಿ, ಬಲಿಪೀಠ ಮತ್ತು ಎದುರುಗಡೆ ನೀಟಾಗಿ ಮೂಲೆಗಳನ್ನು ಕತ್ತರಿಸಿದ ಮಾಟವಾದ ಶಿಲುಬೆ ಉಳಿದುಕೊಂಡಿವೆ. ಯೇಸುಸಭೆಯ ಸ್ವಾಮಿಗಳ ಸಮಾಧಿ ಮೇಲಿರುವಂಥ, ಆ ಕಾಲದಲ್ಲಿ ಪ್ರಚಲಿತವಿದ್ದ ಶಿಲುಬೆಯ ಆಕಾರವನ್ನು ಹೋಲದ, ನೀಟಾಗಿ ಮೂಲೆಗಳನ್ನು ಕತ್ತರಿಸಲಾಗಿರುವ, ಆ ಮಾಟವಾದ ಲ್ಯಾಟಿನ್ ಶಿಲುಬೆಯ ಪುರಾತತ್ವದ ಬಗ್ಗೆ ಕೆಲವರಲ್ಲಿ ಹತ್ತಾರು ಅನುಮಾನಗಳಿವೆ.
ಈ ಹಿಂದೆ ದಿಕ್ಕಾಪಾಲಾದ ಕ್ರೈಸ್ತರ ಸಂತತಿಯ ಜನ, ಪರಿಸ್ಥಿತಿ ಸುಧಾರಿಸಿದ ಆನಂತರ ತಮ್ಮ ಪೂರ್ವಜರ ನೆಲೆಯಾಗಿದ್ದ ಮತ್ತು ಪವಾಡ ಪುರುಷರಾದ ರಾಜೇಂದ್ರಸ್ವಾಮಿ ಅವರ ಸಮಾಧಿ ಇರುವ ಚಿಕ್ಕರಸಿನಕೆರೆಗೆ ಬಂದು ಸಮಾಧಿಯನ್ನು ಆದರಿಸುವುದನ್ನು ಮುಂದುವರಿಸಿಕೊಂಡು ಬಂದರು. ರಾಜೇಂದ್ರಸ್ವಾಮಿ ಅವರ ಮಧ್ಯಸ್ಥಿಕೆಯಿಂದ ವರಪ್ರಸಾದಗಳನ್ನು ಅನುಭವಿಸತೊಡಗಿದರು. ಪವಾಡಗಳಿಗೆ ಸಾಕ್ಷಿಯಾಗತೊಡಗಿದರು.
ಕ್ರೈಸ್ತರು ಊರು ಬಿಟ್ಟು ಹೋದರೂ, ಕ್ರೈಸ್ತರ ಪರಮಪೂಜ್ಯ ಜನಾನುರಾಗಿ ಸ್ವಾಮಿಯನ್ನು ಹತ್ತಿರದಿಂದ ಕಂಡಿದ ಸ್ಥಳೀಯ ಜನರು ತಮಗೆ ತಿಳಿದ ಬಗೆಯಲ್ಲಿ ರಾಜೇಂದ್ರಸ್ವಾಮಿಯ ಸಮಾಧಿ ಮತ್ತು ಚರ್ಚಿನ ಅವಶೇಷವನ್ನು ಆದರದಿಂದ ಕಾಣುತ್ತಾ ಬಂದಿದ್ದರು. ಹರಕೆ ಹೊತ್ತು ಹೂವು, ಹಣ್ಣು ಕಾಯಿ ಮಾಡುವುದನ್ನು, ಸಕ್ಕರೆ ಕೊಬ್ಬರಿ ಕಡಲೆ ಹಂಚುವುದನ್ನು, ಶಿಲುಬೆ ಕ್ರೈಸ್ತರಿಗೆ ಸೇರಿದ್ದು ಎಂಬ ಕಾರಣಕ್ಕೆ ಮೇಣದ ಬತ್ತಿ ಹಚ್ಚುವುದನ್ನು ರೂಢಿಸಿಕೊಂಡು ಬಂದರು ಎಂದು ಕಾಣುತ್ತದೆ.
ಬಲಿಪೀಠದ ಇಂದಿನ ಚಿತ್ರಣ:
ಆ ಕಾಲದಲ್ಲಿನ ಚರ್ಚುಗಳಲ್ಲಿನ ಬಲಿಪೀಠ ಗೋಡೆಗೆ ತಾಗಿಕೊಂಡಿರುತ್ತಿತ್ತು. ಈಗ ಪಳೆಯುಳಿಕೆಯಾಗಿ ಉಳಿದಿರುವ ಆ ಬಲಿಪೀಠವನ್ನು ಒಂದಿಷ್ಟು ಅಲಂಕರಿಸಲಾಗಿದೆ. ಆಗ ವಿಶ್ವಾಸಿಕರಿಗೆ ಬೆನ್ನಾಗಿ ನಿಂತು ಪಾದ್ರಿಗಳು ಬಲಿ ಅರ್ಪಿಸುವ ಪದ್ಧತಿ ಇತ್ತು. ಬಲಿಪೀಠದ ಮಧ್ಯದಲ್ಲಿ ಗಾರೆಯಲ್ಲಿ ನಿರ್ಮಿಸಲಾದ ಬಿಳಿ ಬಣ್ಣದ ಪುಟಾಣಿ ಶಿಲುಬೆ ಇದೆ. ಶಿಲುಬೆಯ ಮುಂದೆ ಮಾತೆ ಮರಿಯಳ ಜಪಮಾಲೆ ಸ್ವರೂಪವನ್ನು ಕೂರಿಸಲಾಗಿದೆ. ಶಿಲುಬೆಯ ಎಡಬಲಕ್ಕೆ ಒಂದೊಂದು ಸ್ವಲ್ಪ ದೊಡ್ಡಗಾತ್ರದ ಚೌಕಾಕಾರದ ಗೋಪುರ ಅದರ ಮೇಲೆ ಮೇಲೆ ಚೂಪಾದ ತುದಿಯ ತ್ರಿಕೋಣಾಕಾರದಲ್ಲಿ ಗಾರೆ ಮೆತ್ತಿ ಅದರ ಮೇಲೆ ಕಬ್ಬಿಣದ ಶಿಲುಬೆಗಳನ್ನು ಕೂರಿಸಲಾಗಿದೆ. ಇವಲ್ಲದೇ ಎರಡೂ ಬದಿಗೆ ಇವುಗಳಿಗಿಂತ ಚಿಕ್ಕದಾದ ಒಂದೊಂದು ಪುಟಾಣಿ ಗೋಪುರಗಳಿವೆ. ಎಲ್ಲಾ ಗೋಪುರಗಳ ಮೇಲ್ಮೆಯಲ್ಲಿ ಕೆಂಪು ಪಟ್ಟಿಯಲ್ಲಿ ಕಮಾನುಗಳನ್ನು ಮೂಡಿಸಲಾಗಿದೆ. ಬಲಿಪೀಠ ಎತ್ತರದಲ್ಲಿ ಒಂದು ಸೋಪಾನವನ್ನು ಹೊಂದಿದ್ದು ಅವುಗಳ ಮೇಲೆ ಹೂವುಗಳನ್ನು ಇರಿಸಲಾಗುತ್ತಿದೆ.
ಈ ಗೋಡೆ ಬಲಿಪೀಠದ ಮುಂದೆ ಎಡಬಲಕ್ಕೆ ಮೇಣದ ಬತ್ತಿಯ ಆಕಾರವನ್ನು ಹೋಲುವ ಒಂದೊಂದು ಗೋಲಾಕಾರದ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಅವುಗಳ ಮೇಲೂ ಕಬ್ಬಿಣದ ಶಿಲುಬೆಗಳನ್ನು ಕೂರಿಸಲಾಗಿದೆ. ಇದಲ್ಲದೇ ಈ ಗೋಡೆ ಬಲಿಪೀಠದ ಸುತ್ತ ನಾಲ್ಕು ಕಾಂಕ್ರೀಟ್ ಕಂಬಗಳನ್ನು ನಿಲ್ಲಿಸಿ, ಅವುಗಳ ಮೇಲೆ ಬಲಿಪೀಠಕ್ಕೆ ಮಳೆ ಬಿಸಿಲಿನಿಂದ ರಕ್ಷಣೆ ಒದಗಿಸಲು ಕಾಂಕ್ರೀಟಿನ ಛತ್ತನ್ನು ನಿರ್ಮಿಸಲಾಗಿದೆ.
ಈ ಕಾಲದ ಪದ್ಧತಿಯಂತೆ ಈಗ ಇರುವ ಬಲಿಪೀಠದ ಹಾಸುಗಲ್ಲು ಕಂಬದ ಮೇಲೆ ನಿಂತಿದ್ದು, ಮೂಲ ಬಲಿಪೀಠದ ಮುಂದೆ ಎದುರುಗಡೆ ಕೂಡುವ ವಿಶ್ವಾಸಿಕರ ಅಭಿಮುಖದಲ್ಲಿದೆ. ಪಾದ್ರಿಗಳು ವಿಶ್ವಾಸಿಕರನ್ನು ನೋಡುತ್ತಾ ಬಲಿ ಅರ್ಪಣೆ ಮಾಡುತ್ತಾರೆ. ತೀರ ಇತ್ತೀಚೆಗೆ ಬಲಿಪೀಠದ ಬಲ ಬದಿಗೆ ಪೂಜ್ಯ ರಾಜೇಂದ್ರ ಸ್ವಾಮಿಗಳ ಕರಿಕಲ್ಲಿನ ಸಮಾಧಿಯನ್ನು ಸಜ್ಜುಗೊಳಿಸಲಾಗಿದೆ. ಅದರ ಮಧ್ಯ ಬಿಳಿ ಬಣ್ಣ ಬಳಿದ ಪುಟಾಣಿ ಶಿಲುಬೆ ಇದೆ. ಸಮಾಧಿಯ ತಲೆಯ ಭಾಗದಲ್ಲಿ ರಾಜೇಂದ್ರ ಸ್ವಾಮಿಗಳ ಚಿತ್ರವಿರುವ ಕಪ್ಪು ಬಿಳುಪಿನ ಶಿಲೆಯನ್ನು ಕೂರಿಸಲಾಗಿದೆ,
ಅಲ್ಲಿನ ಗೋಡೆ ಪೀಠದ ಎಡ ಬದಿಗೆ ಒಂದಿಷ್ಟು ಬರಹವಿರುವ ಕಲ್ಲಿನ ಫಲಕವನ್ನು ನೆಡಲಾಗಿದೆ. ಅದು 2002ರ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಚಿಕ್ಕರಸಿನಕೆರೆಯ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರದ ಪುನರ್ ಪ್ರತಿಷ್ಠಾಪನೆಯನ್ನು ದಾಖಲಿಸಿದೆ. ಸರ್ಕಾರದ ಆರಾಧನಾ ಯೋಜನೆಯ ಅಡಿ ಈ ಪುಣ್ಯಕ್ಷೇತ್ರವನ್ನು ಗುರುತಿಸಿದ್ದು, ಅದನ್ನು ನವಿಕರಿಸಿ 30-4-2002ರಂದು ಪ್ರತಿಷ್ಠಾಪಿಸಲಾಯಿತೆಂದು ಆ ಫಲಕ ಸಾರುತ್ತಿದೆ. ಈ ಪ್ರತಿಷ್ಠಾಪನೆಯನ್ನು ಮೈಸೂರು ಧರ್ಮಕ್ಷೇತ್ರದ ಅಂದಿನ ಧರ್ಮಾಧ್ಯಕ್ಷ ಅತಿವಂದನೀಯ ಡಾ.ಜೋಸೆಫ್ ರಾಯ್ ಅವರು ಆಶೀರ್ವದಿಸಿದರು, ಈ ಪುಣ್ಯಕ್ಷೇತ್ರದ ಕುರಿತು ಚಾರಿತ್ರಿಕ ಬೆಳಕು ಚೆಲ್ಲಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ವಂದನೀಯ ಡಾ. ಐ. ಅಂತಪ್ಪ ಅವರು ಹಾಜರಿದ್ದರು. ಮದ್ದೂರು ಧರ್ಮಕೇಂದ್ರದ ಗುರು ವಂದನೀಯ ಗುರು ಜೋಸೆಫ್ ಸಾಲ್ಡಾನ್ಹ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂದು ಫಲಕದಲ್ಲಿ ತಿಳಿಸಲಾಗಿದೆ.
ಬಟಾಬಯಲಿನಲ್ಲಿದ್ದ ಗೋಡೆ ಬಲಿಪೀಠ ಮತ್ತು ರಾಜೇಂದ್ರ ಸ್ವಾಮಿ ಸಮಾಧಿಗೆ ಈಗ ಕಾಂಕ್ರೀಟ್ ಛತ್ತಿನ ಮೂಲಕ ರಕ್ಷಣೆ ಒದಗಿಸಿದಂತಾಗಿದೆ. ಪುಣ್ಯಕ್ಷೇತ್ರದ ಸುತ್ತಲೂ ಕಂಪೌಂಡ ಗೋಡೆ ಕಟ್ಟಲಾಗಿದೆ. ಅಲ್ಲೇ ಇರುವ ಮಾಟವಾದ ಶಿಲುಬೆಯ ಸುತ್ತ ಕಬ್ಬಿಣದ ಜಾಲರಿ ಕಟ್ಟಲಾಗಿದೆ. ಅಲ್ಲೇ ಪಕ್ಕದಲ್ಲಿ ತಗಡಿನ ಛತ್ತಿನ ಮನೆಯಲ್ಲಿ ಪಾದ್ರಿಗಳಿಗೆ ನಿವಾಸ ನಿರ್ಮಿಸಲಾಗಿದೆ. ಅದಕ್ಕೆ ಹೊಂದಿಕೊಂಡಂತೆ ಆಯತಾಕಾರದ ಆಳೆತ್ತರದ ನಾಲ್ಕು ಗೋಡೆ ಕಟ್ಟಿ ಅದಕ್ಕೆ ತಗಡಿನ ಛತ್ತು ಕೂರಿಸಲಾಗಿದೆ.
ಕನ್ನಡ ನಾಡಿನ ಮೊದಲ ಸಂತ
ಭಾರತದಲ್ಲಿ ಕ್ರೈಸ್ತರ ಜನಸಂಖ್ಯೆಯ ಪ್ರಮಾಣ ಸುಮಾರು ಶೇಕಡಾ ಎರಡರಷ್ಟಿದೆ. ಕಥೋಲಿಕರ ಕ್ರೈಸ್ತರ ಒಟ್ಟು ಸಂಖ್ಯೆ ಸುಮಾರು 20 ಮಿಲಿಯನ್ ಇದ್ದರೆ, ಪ್ರೊಟೆಸ್ಟೆಂಟ್ ಕ್ರೈಸ್ತರ ಸಂಖ್ಯೆ ಸುಮಾರು 5 ಮಿಲಿಯನ್ ಎಂದು ಅಂದಾಜು ಮಾಡಲಾಗುತ್ತದೆ. ಒಟ್ಟು 30 ರಾಜ್ಯಗಳಲ್ಲಿ 174 ಕಥೋಲಿಕ ಕ್ರೈಸ್ತರ ಧರ್ಮಕ್ಷೇತ್ರಗಳಿದ್ದು, ಅವುಗಳಲ್ಲಿ ಲ್ಯಾಟಿನ್ ಪಂಗಡ 132, ಸಿರೋ ಮಲಬಾರ್ 31 ಮತ್ತು ಸಿರೋ ಮಲಂಕರ 11 ಧರ್ಮಕ್ಷೇತ್ರಗಳನ್ನು ಹೊಂದಿವೆ. ಉತ್ತರ ಮತ್ತು ದಕ್ಷಿಣ ಭಾರತ ಸಭೆಗಳೆಂದು ಗುರುತಿಸಿಕೊಳ್ಳುವ ಪ್ರೊಟೆಸ್ಟೆಂಟರು 49 ಧರ್ಮಕ್ಷೇತ್ರಗಳನ್ನು ಹೊಂದಿದ್ದಾರೆ. ಪ್ರೊಟೆಸ್ಟೆಂಟರು ಕೆಲವೇ ಕೆಲವು ಸಂತರನ್ನು ಆದರಿಸಿದರೆ, ಕಥೋಲಿಕ ಕ್ರೈಸ್ತರಲ್ಲಿ ನೂರಾರು ಸಂತರನ್ನು ಆದರಿಸುವ ಪರಿಪಾಠವಿದೆ. ಆದರೆ ದಿನಚರಿಯಲ್ಲಿ ಆಯಾ ದೇಶಕಾಲಕ್ಕೆ ತಕ್ಕಂತೆ ಕೆಲವೇ ಹಸೆರುಗಳಿರುತ್ತವೆ.
ನಮ್ಮ ನಾಡಿನ ಜನರು ತಮಗೆ ಆಪ್ತವಾಗಿ ಕಂಡ ಎಲ್ಲಾ ವಿಭೂತಿ ಪುರುಷರನ್ನು ಸಂತರೆಂದೇ ಗುರುತಿಸುತ್ತಾರೆ. ಆದರೆ, ಇಟಲಿಯ ರೋಮ್ ಪಟ್ಟಣ ರಾಜ್ಯದಲ್ಲಿ ನೆಲೆಸಿರುವ ವಿಶ್ವವ್ಯಾಪಿ ಕಥೋಲಿಕ ಕ್ರೈಸ್ತ ಪಂಥದ ಪರಮೋಚ್ಚ ಗುರು ಪಾಪು ಸ್ವಾಮಿಗಳು, ಸತ್ಪುರುಷ ಅಥವಾ ಮಹಿಳೆಯನ್ನು ಅಧಿಕೃತವಾಗಿ ಸಂತರೆಂದು ಘೋಷಿಸಿದರೆ ಮಾತ್ರ ಕಥೋಲಿಕ ಕ್ರೈಸ್ತರು ಅವರನ್ನು ಸಂತರೆಂದು ಆದರಿಸಬಹುದಾಗಿದೆ. ಸಂತರ ಘೋಷಣೆಗೂ ಕೆಲವೊಂದು ವಿಧಿವಿಧಾನಗಳನ್ನು ಪಾಲಿಸಬೇಕಾಗುತ್ತದೆ.
ಮೋದಲ ಹಂತದಲ್ಲಿ ಸ್ಥಳೀಯ ಹಂತದಲ್ಲಿ ಆಯಾ ವಿಭೂತಿ ಪುರುಷರು `ದೇವರ ಸೇವಕ' (ಸರ್ವಂಟ್ ಆಫ್ ಗಾಡ್) ಎಂಬ ಘೋಷಣೆಯಾಗಬೇಕು. ಆನಂತರ ಮಾನ್ಯವಂತರು/ ಆದರಿಸಲ್ಪಡುವವರು (ವೆನರೆಬಲ್) ಎಂದು ಗುರುತಿಸಲ್ಪಡಬೇಕು. ಆನಂತರ ಆಶೀರ್ವದಿತರು/ ಪುನೀತರು ಆಗಬೇಕು (ಬ್ಲೆಸೆಡ್). ಅಂತಿಮವಾಗಿ ಪಾಪು ಸ್ವಾಮಿಗಳು ಅವರನ್ನು ಸಂತರು (ಸೆಂಟ್) ಎಂದು ಘೋಷಿಸಬೇಕು. ಈ ನಾಲ್ಕು ಹಂತಗಳಲ್ಲಿನ ಭಾರತೀಯ ಮೂಲದ ವಿಭೂತಿ ಪುರುಷ/ ಮಹಿಳೆಯರ ಪಟ್ಟಿಗಳಲ್ಲಿ, ಬಹುತೇಕರು ಗೋವಾ, ಕೇರಳ ಮತ್ತು ತಮಿಳುನಾಡಿಗೆ ಸೇರಿದವರಾಗಿದ್ದಾರೆ.
ಈ ಪಟ್ಟಿಗಳಲ್ಲಿ ಕನ್ನಡನಾಡಿನ ಮೂಲದ ಒಬ್ಬ ವಿಭೂತಿ ಪುರುಷನೂ ಇಲ್ಲ. ಆದರೆ, ಈಗ ಚಿಕ್ಕರಸಿನಕೆರೆ ಶ್ರೀ ರಾಜೇಂದ್ರ ಸ್ವಾಮಿ ಅವರು ಈ ಕೊರತೆಯನ್ನು ನೀಗಿಸಲಿದ್ದಾರೆ. ಮುನ್ನೂರು ವರ್ಷಗಳಿಂದ, ಸ್ಥಳೀಯವಾಗಿ ಕ್ರೈಸ್ತರ ಅನುಪಸ್ಥಿತಿ ಇದ್ದರೂ, ಅದ್ಭುತಗಳಿಗೆ ಕಾರಣವಾಗುತ್ತಾ, ಪವಿತ್ರ ಹಾಗೂ ನೈಜ ವಿಶ್ವಾಸದ ತಾಣವಾಗಿ, ಚಿಕ್ಕರಸಿನಕೆರೆಯ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರವು ನೂರಾರು ಪವಾಡಗಳಿಗೆ ಸಾಕ್ಷಿಯಾಗುತ್ತಿದ್ದು, ಸ್ಥಳೀಯ ಮೈಸೂರು ಧರ್ಮಕ್ಷೇತ್ರವು ಅವರನ್ನು ಸಂತರ ಪದವಿಗೆ ಏರಿಸಲು ಆಸಕ್ತಿ ತಳೆದು ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತದಲ್ಲಿ ಚಿಕ್ಕರಸಿನಕೆರೆ ರಾಜೇಂದ್ರ ಸ್ವಾಮಿ ಅವರನ್ನು, ಈ ಸಾಲಿನ ಏಪ್ರಿಲ್ 11ರಂದು (11-4-2019), ಮೈಸೂರು ಧರ್ಮಕ್ಷೇತ್ರದ ಇಂದಿನ ಧರ್ಮಾಧ್ಯಕ್ಷ ಅತಿ ವಂದನೀಯ ಕೆ.ಎ.ವಿಲಿಯಂ ಅವರು, `ದೇವರ ಸೇವಕ' ಎಂದು ಘೋಷಿಸಿದ್ದಾರೆ.
ಸುದೀರ್ಘ ವಿಚಾರಣೆ, ಸಾಕ್ಷ್ಯಾಧಾರಗಳ ಸಂಕಲನ, ಚಾರಿತ್ರಿಕ ದಾಖಲಾತಿಗಳ ಪರಿಶಿಲನೆ, ಮಧ್ಯಸ್ಥಿಕೆಯ ಪವಾಡಗಳ ಕ್ರೋಢಿಕರಣ ಮೊದಲಾದವು ನಡೆಯಬೇಕಿದೆ. ಇವೆಲ್ಲವುಗಳ ಆಧಾರದಲ್ಲಿ, ಇನ್ನು ಮುಂದಿನ ಎರಡು ಹಂತಗಳನ್ನು ದಾಟಿದ ಮೇಲೆ ಚಿಕ್ಕರಸಿನಕೆರೆ ಶ್ರೀ ರಾಜೇಂದ್ರಸ್ವಾಮಿ ಅವರು ಪೀಠದ ಗೌರವ, ಸಂತರ ಪಟ್ಟವನ್ನು ಪಡೆಯುತ್ತಾರೆ.
ವಾರ್ಷಿಕ ಉತ್ಸವ ಮತ್ತು 300ನೇ ಸ್ಮರಣೆ
ಪ್ರಸಕ್ತ 2019ರ ಸಾಲಿನ ಮೇ ತಿಂಗಳ ಒಂದರಂದು ಬುಧವಾರದಂದು ಈ ಚಿಕ್ಕರಸಿನಕೆರೆ ಊರಿನ ದೇವರ ಸೇವಕ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವವನ್ನು ಕೊಂಡಾಡಲಾಯಿತು. ಅದೇ ದಿನ ಅವರ 300ನೆಯ ಪುಣ್ಯಸ್ಮರಣೆಯನ್ನೂ ಆಚರಿಸಲಾಯಿತು.
ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಪೀಟರ್ ಮಚಾಡೋ, ಅವರು ಮಹಾ ಆಡಂಬರದ ಬಲಿಪೂಜೆಯನ್ನು ನಡೆಸಿಕೊಟ್ಟರು. ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಕೆ.ಎ.ವಿಲಿಯಂ ಅವರು ಪ್ರಬೋಧನೆ ನೀಡಿದರು.
ಬೆಂಗಳೂರು ಮಹಾಧರ್ಮಕ್ಷೇತ್ರದ ಹಿಂದಿನ ಮಹಾಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಬರ್ನಾಡ್ ಮೊರಾಸ್, ಹಿರಿಯ ಗುರುಗಳು ಮತ್ತು ಅಧಿಕ ಸಂಖ್ಯೆಯಲ್ಲಿ ವಿವಿಧ ಸಭೆಗಳಿಗೆ ಸೇರಿದ ಕನ್ಯಾಸ್ತ್ರೀಯರು, ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳು, ಕ್ರೈಸ್ತ ವಿಶ್ವಾಸಿಕರು ಪವಿತ್ರ ಪಾಡುಪೂಜೆಯಲ್ಲಿ ಭಾಗವಹಿಸಿ ಪುನೀತರಾದರು.
ಪೂಜ್ಯ ರಾಜೇಂದ್ರಸ್ವಾಮಿ ಅವರಿಗೆ ಬೇಗನೇ ಪೀಠದ ಗೌರವ ಸಿಗಲಿ ಎಂದು ಪಾಡುಪೂಜೆಯಲ್ಲಿ ಕೋರಿಕೊಳ್ಳಲಾಯಿತು.
ಪಾಡುಪೂಜೆಯ ಮೊದಲು ಧರ್ಮಾಧ್ಯಕ್ಷರುಗಳನ್ನು ಬಾಜಾಬಜಂತ್ರಿಗಳನ್ನು ಬಾರಿಸುತ್ತಾ, ಛತ್ರಿಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಚಿಕ್ಕರಸಿನಕೆರೆ ಗ್ರಾಮದಲ್ಲಿನ ದೇವರಸೇವಕ ರಾಜೇಂದ್ರಸ್ವಾಮಿ ಅವರ ಪುಣ್ಯಕ್ಷೇತ್ರಕ್ಕೆ ಕರೆತರಲಾಯಿತು.
ಎಲ್ಲಾ ಬಿಗಿ ಮಾಡಿ ಬಿಟ್ಟಾರೆ
``ಇವರೆಲ್ಲಾ ತಗಲಾಕ್ಕೊಂಡ ಹತ್ತು ವರ್ಷ ಆಯಿತು. ಸ್ವಲ್ಪ ಸ್ವಲ್ಪ ಸಮ ಮಾಡಕೊಂಡು ಬಂದ್ರು. ಆ ಸಮಾಧಿ ಇದ್ದು ಶಾನೆ ವರ್ಷ ಆಗಿದೆ. ಎಲ್ಲಾ ಬಿಗಿ ಮಾಡಿ ಬಿಟ್ಟಾರೆ. ಪಂಚಾಯ್ತಿ ಜಾಗದಲ್ಲಿದ್ದ ಕಲ್ಯಾಣಿಗೆ ಮಣ್ಣ ಹೊಡೆಸಿ ಅಮರಿಸಿಕೊಂಡ್ರು''.
ಇವು, ಅಗಸ್ತೇಶ್ವರ ದೇವಾಲಯದ ಮುಂದಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅರವತ್ತರ ಆಸುಪಾಸಿನ ರಾಮಶೆಟ್ಟಿ ಅವರ ಆತಂಕದ ಮಾತುಗಳು.
ಮೊದಲೆಲ್ಲಾ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರ ಬಟಾಬಯಲಿನಲ್ಲಿತ್ತು. ಅಲ್ಲಿಗೆ ಹೋಗಿ ಬರುವವರಿಗೆ ಯಾವ ಅಡಚಣೆಗಳೂ ಇರಲಿಲ್ಲ. ಯಾವ ಸಮಯದಲ್ಲಾದರೂ ಸಮಾಧಿಗೆ ಭೇಟಿಕೊಟ್ಟು ಪೂಜೆ, ಹರಕೆ ಸಲ್ಲಿಸಬಹುದಿತ್ತು ಎಂಬ ಭಾವ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು.
ಏಕೆಂದರೆ ಜನಪದರ ದೈವದ ಲಕ್ಷಣವೇ ಅದು. ಅದಕ್ಕೆ ಸೂರಿರುವುದಿಲ್ಲ. ಗೋಡೆಗಳ ಚಕಬಂದಿಯ ಬಂಧನವಿರುವುದಿಲ್ಲ. ಪೂಜಾರಿಗಳ ತಂಟೆಯೇ ಇರುವುದಿಲ್ಲ. ದೈವವನ್ನು ಕಾಣಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿರುವುದಿಲ್ಲ.
ಅಷ್ಟೆಲ್ಲಾ ದೂರು ನೀಡುವವರಂತೆ ರಾಮಶೆಟ್ಟಿ ಅವರು ಮಾತಾಡಿದರೂ, ಪುಣ್ಯಕ್ಷೇತ್ರದ ಬಗೆಗಿನ ಅವರ ಆದರಕ್ಕೆ ಚ್ಯುತಿ ತಟ್ಟಿದಂತೆ ಕಾಣಲಿಲ್ಲ. ``ಬುದ್ಧಿ, ಹುಡುಗರಾಗಿದ್ದಾಗ ಬೆಲ್ಲ ಕಾಸು ಹಾಕ್ತಿದ್ವಿ. ದೊಡ್ಡೋರು ದುಡ್ಡ ಹಾಕಿದಾಗ ನಾವು ಹುಡುಗ್ರು ಎತ್ತಕೊಂಡು ಹೋಗತಿದ್ದುದು. ಮೇಣಬತ್ತಿ ಎತ್ಕೋತಿದ್ವಿ. ಕೊಬ್ರಿ, ಸಕ್ಕರೆ ಕಡ್ಲೆ ಕೊಡೋರು. ಕಾರ್ತಿಕ ಮಾಸದಲ್ಲಿ ಅಕ್ಟೋಬರ್ ತಿಂಗಳ ಸೋಮವಾರ ಇದೆಲ್ಲಾ ನಡೆಯೋದು'' ಎಂಬ ಅವರ ಮಾತುಗಳು ಅವರ ಪ್ರಾಂಜಲ ಮನಸ್ಸಿನ ಪ್ರತೀಕದಂತೆ ಕಂಡವು.
ನಿಧಾನವಾಗಿ ರಾಜೇಂದ್ರಸ್ವಾಮಿಯ ವಾರ್ಷಿಕ ಉತ್ಸವ ಜಾತ್ರೆಯ ಸಕಲ ಲಕ್ಷಣಗಳನ್ನು ಆರೋಪಿಸಿಕೊಳ್ಳತೊಡಗಿದೆ. ಅದು ಆಸ್ತಿಕರ ತಾಣ, ಜನ ನೆರೆಯುತ್ತಾರೆ. ಪ್ರಸಾದವೆಂದು ಬೆಂಡು ಬತ್ತಾಸು, ಕಡಲೆಪುರಿ ಕೊಳ್ಳುತ್ತಾರೆ, ಜನ ಎಂದರೆ ಮಕ್ಕಳೂ ಇರುತ್ತಾರೆ, ಅವರಿಗಾಗಿ ಆಟಿಗೆ ಕೊಳ್ಳುತ್ತಾರೆ. ವಾರ್ಷಿಕೋತ್ಸವದ ದಿನ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರದ ಮುಂದಿನ ರಸ್ತೆಯಲ್ಲಿ ಸಾಲುಸಾಲಾಗಿ ಮಿಠಾಯಿ, ಆಟಿಕೆ, ಮನೆವಾರ್ತೆಯ ಸಾಮಾನುಗಳ ಅಂಗಡಿಗಳು ಬಂದಿದ್ದವು.
ಅಯ್ಯೋ, ಬೇರೆ ಬೇರೆ ಅಡುಗೆ ಮಾಡೋರು
`ಅಯ್ಯೋ ಬೇರೆ ಬೇರೆ ಅಡುಗೆ ಮಾಡೋರು. ಮರಿ ಕಡಿಯೋರು. ಈ ಸಾರಿ ಒಟ್ಟಾಗಿ ಒಂದೇ ಕಡೆ ಅಡುಗೆ ಮಾಡವ್ರೆ''. ಇವು ಬಿಡುಗಡೆಯ ನಿಟ್ಟುಸುರಿನೊಂದಿಗೆ ಹೊರಬಿದ್ದ ರಾಮಕ್ಕ ಮಾತುಗಳು
ಇದು, ಬುಧವಾರ, ಪ್ರಸಕ್ತ 2019ರ ಸಾಲಿನ ಏಪ್ರಿಲ್ 1 ರಂದು, ದೇವರ ಸೇವಕ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ಮತ್ತು ಮುನ್ನೂರನೆಯ ಪುಣ್ಯ ಸ್ಮರಣೆಯ ಆಚರಣೆಯ ಸಂದರ್ಭದಲ್ಲಿ ಮಾರಮ್ಮ ದೇವಿ ಗುಡಿಯ ಮುಂದಿನ ರಸ್ತೆಯ ಬಯಲಲ್ಲಿ, ಹನುಮಂತರಾಯನ ಗುಡಿಗೆ ಸಾಗುವ ದಾರಿಯಲ್ಲಿ ಹೂಡಿದ ದಾಸೋಹದ ಮಾಂಸದಡುಗೆಯ ದೊಡ್ಡ ಒಲೆಗಳು ಮತ್ತು ಪಾತ್ರೆಗಳನ್ನು ಕಂಡಾಗ ಹೊರಬಿದ್ದ ಚಿಕ್ಕರಸಿನಕೆರೆಯ ರಾಮಕ್ಕನ ನಿಟ್ಟುಸುರು.
ರಾಜೇಂದ್ರಸ್ವಾಮಿ ವಾರ್ಷಿಕ ಉತ್ಸವಕ್ಕೆ ಬಂದೋರು ಬೇರೆ ಬೇರೆ ಕಡೆ ಪ್ರತ್ಯೇಕವಾಗಿ ಅಡುಗೆ ಮಾಡುತ್ತಾ ಗಬ್ಬೆಸುತ್ತಿದ್ದರು ಎಂಬುದು ಊರವರ ಆಕ್ಷೇಪವಾಗಿತ್ತು. ಈ ಬಾರಿ ಕಸ ವಿಲೇವಾರಿಗೂ ವ್ಯವಸ್ಥೆ ಮಾಡಿಕೊಂಡಿದ್ದು, ಶೌಚಾಲಯದ ವ್ಯವಸ್ಥೆ ಕಲ್ಪಿಸಿದ್ದು, ಊರವರ ಅಷ್ಟೇ ಅಲ್ಲ ವಾರ್ಷಿಕೋತ್ಸವಕ್ಕೆ ಬಂದ ವಿಶ್ವಾಸಿಕರ ಮೆಚ್ಚುಗೆಗೂ ಪಾತ್ರವಾಗಿತ್ತು.
ಚಿಕ್ಕರಸಿನಕೆರೆ ಊರಿನ ಪ್ರಧಾನ ದೇವರು ಕಾಲಭೈರವೇಶ್ವರನ ಜಾತ್ರೆ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಜರುಗುತ್ತದೆ. ಅದೇ ಸಮಯಕ್ಕೆ ಇಲ್ಲೂ ಉತ್ಸವ ನಡೆದರೆ ಸ್ವಲ್ಪ ವ್ಯತ್ಯಾಸಗಳಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
``ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಕಾಲಭೈರವನ ಜಾತ್ರೆ ನಡೆದರೆ, ಜಾತ್ರೆಯ ಹಿಂದೆ ಮತ್ತು ಮುಂದೆ ಒಂದೊಂದು ವಾರಗಳ ಕಾಲ ಊರಲ್ಲಿ ಯಾರೂ ಮಾಂಸದ ಅಡುಗೆ ಮಾಡುವಂತಿಲ್ಲ. ಕಾಲಭೈರವನ ಜಾತ್ರೆಯ ಸಂದರ್ಭದಲ್ಲಿ ಊರವರು ಯಾರೂ ಮಾಂಸ ಮಾಡೊಲ್ಲ. ಆ ಜಾತ್ರೆಯ ಸಮಯ ಮೇ 1ರ ಆಸುಪಾಸಿನಲ್ಲಿ ಬಂದರೆ, ಇಲ್ಲಿ ಸ್ವಾಮಿ ರಾಜೇಂದ್ರ ಸ್ವಾಮಿಗಳ ವಾರ್ಷಿಕೋತ್ಸವ ನಡೆಸುವುದು ಕಷ್ಟದ ಕೆಲಸ. ಕಳೆದ ಬಾರಿ ಹಾಗೆಯೇ ಆಗಿತ್ತು. ಅಂದು ಮಾಂಸದ ಅಡುಗೆ ಮಾಡದೇ ಜಾತ್ರೆ ನಡೆಸಬೇಕಾಯಿತು. ಈ ಬಾರಿ ಕಾಲಭೈರವನ ಜಾತ್ರೆ ಮುಗಿದು ಬಹಳ ದಿನಗಳಾದ ಮೇಲೆ ರಾಜೇಂದ್ರಸ್ವಾಮಿ ಉತ್ಸವ ಬಂದದ್ದು ಒಳ್ಳೆಯದಾಯ್ತು'' ಉತ್ಸವಕ್ಕೆ ಬಂದಿದ್ದ ಅರಸಿಕೆರೆಯ ಕಾಂತರಾಜ್ ಅವರ ನುಡಿ ನೆಮ್ಮದಿಯ ಭಾವ ಹೊಮ್ಮಿಸಿತ್ತು.
``ಐದು ವರ್ಷಗಳ ಹಿಂದೆ ಬೇರೆ ಬೇರೆ ದಿನ ಜನ ಬಂದು ಹೋಗುವರು. ಈಗ ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಮೇ ಒಂದು ರಂದು ಇಲ್ಲಿ ಬಂದು ಜಾತ್ರೆ ನಡೆಸುತ್ತಿದ್ದಾರೆ. ಬೇರೆ ಬೇರೆ ದಿನ ಬಂದ ಹೋಗುವವರಿಂದ, ಜಾತ್ರೆಯ ಒಂದು ದಿನದಿಂದ ತೊಂದರೆ ಏನಿಲ್ಲ. ಆದರೆ ಭಾನುವಾರವೇ ಊರವರಿಗೆ ತೊಂದರೆಯ ದಿನ. ಏಕೆಂದರೆ, ಭಾನುವಾರದ ಪೂಜೆಗೆ ಬರುವ ಸ್ವಲ್ಪ ಜನಕ್ಕೆ ಕೇಳುವಂತೆ ಪೂಜಾ ವಿಧಿಗಳನ್ನು ನಡೆಸಿದರೆ ಆದೀತು. ಆದರೆ, ಮೈಕು ಹಾಕಿಕೊಂಡು ಪೂಜೆ ನಡೆಸುವುದು ನಮಗೆ ಕಿರಕಿರಿ. ಒಂದು ಬಾರಿ ಈ ವಿಷಯವನ್ನು ಅವರ (ಫಾದರ್) ಗಮನಕ್ಕೆ ತಂದಿದೀನಿ. ಯಾಕೋ ಕಿವಿಗೆ ಹಾಕಿಕೊಂಡಂತಿಲ್ಲ'' ಎಂದು ಗ್ರಾಮದ ಸಿದ್ದರಾಜು ಅವರು ಅಲವತ್ತುಕೊಂಡರು.
ಕಾರ್ತಿಕ ಮಾಸ ಮತ್ತು ರಾಜೇಂದ್ರಸ್ವಾಮಿ:
ಉತ್ತರ ಗೋಳಾರ್ಧದಲ್ಲಿರುವ ಭಾರತದ ನಿವಾಸಿಗಳಿಗೆ ಸೂರ್ಯ ವೃಶ್ಚಿಕ ರಾಶಿ ಪ್ರವೇಶ ಮಾಡಿದ ಆನಂತರ ದೀಪಾವಳಿ ಹಬ್ಬವಾದ ಮೇಲೆ ಚಳಿಗಾಲದ ಪ್ರಾರಂಭವಾಗುವುದರ ಸಂಕೇತವಾದ ಕಾರ್ತಿಕ ಮಾಸ ಪವಿತ್ರವಾದ ಮಾಸ. ಈ ಮಾಸದ ಸೋಮವಾರಗಳು ಅತ್ಯಂತ ಪವಿತ್ರವಾದವು, ಮಂಗಳಕರವಾದವು ಎಂಬ ವಿಶ್ವಾಸದಿಂದ ಶಿವನನ್ನು ಆರಾಧಿಸಲಾಗುತ್ತದೆ.
ಆಸ್ತಿಕರು, ಈ ಮಾಸದಲ್ಲಿ ಸೂರ್ಯೋದಯ ಸೂರ್ಯಾಸ್ತರ ಸಮಯಗಳಲ್ಲಿ ದೀಪ ಹಚ್ಚಿದರೆ ಸಂಪತ್ತು ಆರೋಗ್ಯ ವೃದ್ಧಿ ಕಟ್ಟಿಟ್ಟಬುತ್ತಿ ಎಂದು ನಂಬುತ್ತಾರೆ.
ಪುರಾಣದಲ್ಲಿ ಬರುವ ಕ್ಷೀರಸಾಗರದ ಮಂಥನದಲ್ಲಿ ಹೊರಬಂದ ಲಕ್ಷ್ಮಿಯ ಸಹೋದರಿ ತುಳಸಿ ವಿಷ್ಣುವನ್ನು ವರಿಸಬೇಕೆಂದಿರುತ್ತಾಳೆ, ಶಾಪದ ದೆಸೆಯಿಂದ ಗಿಡವಾಗುತ್ತಾಳೆ. ಅವಳ ಆಸೆಯನ್ನು ಮನ್ನಿಸಿ ತಾನು ಸಾಲಿಗ್ರಾಮದ ರೂಪದಲ್ಲಿರುವಾಗ ತುಳಿಸಿ ತನಗೆ ಪ್ರೀಯ ಎಂದುವಿಷ್ಣು ಹೇಳಿದುದರಿಂದ, ಸಾಲಿಗ್ರಾಮಕ್ಕೆ ತುಳಸಿ ಅರ್ಪಿಸುವುದು ಶ್ರೇಷ್ಠ ಆಚರಣೆಯಾದರೆ, ಕಾರ್ತಿಕ ಮಾಸದ ಶುಕ್ಲ ದ್ವಾದಶಿ ದಿನದಂದು ತುಳಸಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಇದಲ್ಲದೇ ಆಷಾಡ ಶುಕ್ಲ ಏಕಾದಶಿ ದಿನದಂದು ನಿದ್ರೆಗಿಳಿಯುವ ವಿಷ್ಣು ಕಾರ್ತಿಕ ಶುಕ್ಲ ಏಕಾದಶಿ ದಿನದಂದು ಏಳುತ್ತಾನೆ, ಕಾರ್ತಿಕ ಮಾಸದ ಪೌರ್ಣಿಮೆಯಂದು ಶಿವ ತ್ರಿಪುರಾಸುರನನ್ನು ವಧೆ ಮಾಡಿದ್ದ ಎಂಬುದು ಆಸ್ತಿಕರ ನಂಬುಗೆ. ಈ ಮಾಸದಲ್ಲಿ ಪುರಾಣಗಳ ಪಾರಾಯಣವೂ ನಡೆಯುತ್ತದೆ.
ಆಕಾರವಿಲ್ಲದ ಕಲ್ಲಿನಲ್ಲೂ ದೇವರನ್ನು ಕಾಣುವ, ಕಾಲಭೈರವ ದೇವಾಲಯದ ನಂದಿ ಬಸವಪ್ಪನನ್ನು ಶಿವನ ಅಪರಾವತಾರವೆಂದು ನಂಬುವ ಆಸ್ತಿಕ ಜನಪದರಿಗೆ ಎಲ್ಲಾ ದೈವಗಳೂ ಒಂದೇ. ಹತ್ತುಹಲವು ದೈವಗಳಿಗೆ ಹರಕೆಹೊರುವ ಹಳ್ಳಿಗಾಡಿನ ಜನಪದರಿಗೆ, ಚಿಕ್ಕರಸಿನಕೆರೆ ಗ್ರಾಮದ ಅಂಚಿನಲ್ಲಿರುವ ರಾಜೇಂದ್ರ ಸ್ವಾಮಿ ಸಮಾಧಿಯೂ ದೈವವಾಗಿ ಕಂಡಿದ್ದರಲ್ಲಿ ಅಚ್ಚರಿ ಏನೂ ಮೂಡದು. ರಾಜೇಂದ್ರಸ್ವಾಮಿ ಅವರಿಗೆ ಹತ್ತರಲ್ಲಿ ಇನ್ನೊಬ್ಬ ದೈವ ಅಷ್ಟೇ.
ಇಂಥ ಬಗೆಯ ಚಿಂತನೆಯು ಜನಪದರದ್ದು. ಇಂಥ ಪರಿಸ್ಥಿತಿಯಲ್ಲಿ ತಮ್ಮ ಪವಿತ್ರವಾದ ಕಾರ್ತಿಕ ಮಾಸದಲ್ಲಿ ಚಿಕ್ಕರಸಿನಕೆರೆ ಊರವರೆಲ್ಲಾ ರಾಜೇಂದ್ರಸ್ವಾಮಿಗೆ ನಡೆದುಕೊಳ್ಳುವ ವಿದ್ಯಮಾನ ಒಂದು ಸಹಜ ಪ್ರಕ್ರಿಯೆ. ತಾವು ತಮ್ಮ ದೈವಗಳಿಗೆ ಮಾಡುವ ಸಕ್ಕರೆ, ಬೆಲ್ಲ, ಕೊಬ್ಬರಿ ಕೊಡುವುದು, ಪುರಿ ಹಂಚುವುದು, ದೀಪ ಹಚ್ಚುವುದು - ಮುಂತಾದವನ್ನು ರಾಜೇಂದ್ರ ಸ್ವಾಮಿಯ ಸಮಾಧಿ ಪುಣ್ಯಕ್ಷೇತ್ರದಲ್ಲಿ ಮಾಡುವುದನ್ನು ಅನಾಯಾಸವಾಗಿ ರೂಢಿಸಿಕೊಂಡಿರುವರು. ಇನ್ನು ಮುಂದೆ ಹೇಗೋ ಏನೋ ಗೊತ್ತಿಲ್ಲ.
ಇಂದು, ಚರ್ಚು ಅಂದರೆ ಕಥೋಲಿಕ ಧರ್ಮಸಭೆಯು ರಾಜೇಂದ್ರಸ್ವಾಮಿ ಅವರ ಪುಣ್ಯಕ್ಷೇತ್ರದ ಮೇಲೆ ಹಕ್ಕು ಸಾಧಿಸಿಯಾಗಿದೆ. ಕ್ರೈಸ್ತರೇ ಇಲ್ಲದಿದ್ದರೂ ಕ್ರೈಸ್ತರ ಧಾರ್ಮಿಕ ಹೆಗ್ಗುರುತಾದ ಶಿಲುಬೆ, ಅಲ್ಲಿದ್ದ ಸಮಾಧಿ ಮತ್ತು ಚರ್ಚು ಹಾಳುಬಿದ್ದು ಉಳಿದಿದ್ದ ಪೂಜಾ ಪೀಠವನ್ನು ಕಾಪಾಡಿಕೊಂಡು ಬಂದಿದ್ದ ಚಿಕ್ಕರಸಿನಕೆರೆಯ ಜನಪದರಿಗೆ ಈಗ ಅಲ್ಲಿ ಏನೂ ಉಳಿದಿಲ್ಲ. ಏಕೆಂದರೆ ಅವರು (ಕಥೋಲಿಕ) ಕ್ರೈಸ್ತ ಪಂಥಕ್ಕೆ ಸೇರಿದವರಲ್ಲ. ಇದುವರೆಗೂ ಬಟಾಬಯಲಿನಲ್ಲಿದ್ದ ಸುಲಭವಾಗಿ ಜನಪದರ ಕೈಗೆ ಎಟಕುತ್ತಿದ್ದ ರಾಜೇಂದ್ರಸ್ವಾಮಿ ದೈವ ಈಗ ಅವರ ಪಾಲಿಗೆ ದೂರವಾಗುವನೋ ಎಂಬ ಭಾವ, ಅನಾಥ ಪ್ರಜ್ಞೆ ಕಾಡುತ್ತಿದ್ದರೆ ಅದಕ್ಕೆ ಯಾರನ್ನು ಹೊಣೆ ಮಾಡುವುದು.
ನಮ್ಮ ನೆರೆಯ ರಾಜ್ಯ ಕೇರಳದಲ್ಲಿ, ಮೊದಲನೇ ಶತಮಾನದಲ್ಲಿಯೇ ಯೇಸುಕ್ರಿಸ್ತನ ಶಿಷ್ಯ ಥಾಮಸ್ ಸ್ವತಃ ಬಂದು ಕ್ರೈಸ್ತ ಧರ್ಮ ಬೋಧಿಸಿದ ಎನ್ನಲಾಗುತ್ತದೆ. ಅಲ್ಲಿನ ಜನಪದರಿಗೆ ಓಣಂ ರಾಜ್ಯದ ಸಕಲ ಜನತೆಯ ಹಬ್ಬ. ಹೀಗಾಗಿ ಅದು ಚರ್ಚಿನ ಅಂಗಳಕ್ಕೂ ಬಂದು ನಿಂತಿದೆ. ಓಣಂ ದಿನ ಕೇರಳದ ಚರ್ಚುಗಳ ಮುಂದೆ ರಂಗೋಲಿ ಬಿಡಿಸಿ ಸಂಭ್ರಮಿಸಲಾಗುತ್ತದೆ. ಸಂತ ಸೆಬೆಸ್ಟಿಯನ್ ಸ್ವಾಮಿ ಅಯ್ಯಪ್ಪನ ಸಹೋದರ ಎಂದು ಅಲ್ಲಿನ ಜನಪದರು ನಂಬುತ್ತಾರೆ! ತಮಿಳರಿಗೆ ಪೊಂಗಲ್ ದೊಡ್ಡ ಹಬ್ಬ. ಕನ್ನಡ ನಾಡಿನ ಸಂಕ್ರಾಂತಿಹಬ್ಬದ ಪ್ರತಿರೂಪವಾಗಿರುವ ಪೊಂಗಲ್ ಹಬ್ಬವನ್ನು ಚರ್ಚಿನಲ್ಲೂ ಆಚರಿಸಲಾಗುತ್ತದೆ. ಚರ್ಚುಗಳ ಅಂಗಳದಲ್ಲಿ ಮೂರು ಕಲ್ಲುಗಳ ಒಲೆಯ ಮೇಲೆ ಪೊಂಗಲ್ ಪಾತ್ರೆ ಇರಿಸಿ, ಕಬ್ಬಿನ ಜಲ್ಲೆಗಳನ್ನು ನಿಲ್ಲಿಸಿ ಸಂಭ್ರಮಿಸುತ್ತಾರೆ. ಯಾಕೋ ಏನೋ? ಕನ್ನಡನಾಡಿನ ಪ್ರಮುಖ ಹಬ್ಬಗಳಾದ ಯುಗಾದಿ ಮತ್ತು ಸಂಕ್ರಾಂತಿಗಳು ಚರ್ಚಿನ ಅಂಗಳಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ.
ಕನಿಷ್ಠ ಚಿಕ್ಕರಸಿನಕರೆಯಲ್ಲಿರುವ ಶ್ರೀ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರದಲ್ಲಿ ಅಲ್ಲಿನ ಜನಪದರ ಭಾವನೆಗಳಿಗೆ ಬೆಲೆಕೊಟ್ಟು, ಕಥೋಲಿಕ ಧರ್ಮಸಭೆಯು ಕಾರ್ತಿಕ ಮಾಸದಲ್ಲಿ ಅವರುಗಳ ಪದ್ಧತಿಯಲ್ಲಿ ಸ್ವಾಮಿಯನ್ನು ಮುಕ್ತವಾಗಿ ಆರಾಧಿಸಲು ಅನುವು ಮಾಡಿಕೊಟ್ಟರೆ, ಕ್ರೈಸ್ತರ ಅನುಪಸ್ಥಿತಿಯಲ್ಲಿ ಮುನ್ನೂರು ವರ್ಷಗಳ ಕಾಲ ಸಮಾಧಿ ಸ್ಥಳ ಮತ್ತು ಪೂಜಾಪೀಠವನ್ನು ಕಾಪಾಡಿಕೊಂಡು ಬಂದಿದ್ದ ಜನಪದರಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹರಿಹರದ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ತೆಂಗಿನ ಕಾಯಿ ಒಡೆಯಲು ಅವಕಾಶ ಕಲ್ಪಿಸಲಾಗಿದೆ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಕರೆಗಾರರ ಅಮ್ಮನ ಹಬ್ಬದ ಆಚರಣೆಯನ್ನು ಕಥೋಲಿಕ ಧರ್ಮಸಭೆ ಆದರದಿಂದ ಕಾಣುತ್ತಿರುವ ಉದಾಹರಣೆ ನಮ್ಮ ಮುಂದೆ ಇದೆ.
ಈಗ, ಈ ಚಿಕ್ಕರಸಿನಕೆರೆಯ ರಾಜೇಂದ್ರಸ್ವಾಮಿ ಕಥೋಲಿಕ ಕ್ರೈಸ್ತರಿಂದ `ದೇವರ ಸೇವಕ ರಾಜೇಂದ್ರಸ್ವಾಮಿ' ಎಂದು ಕರೆಯಿಸಿಕೊಳ್ಳುತ್ತಿದ್ದಾನೆ. ರಾಜೇಂದ್ರಸ್ವಾಮಿ ಮಠ ಎಂದು ಸರ್ಕಾರಿ ದಾಖಲೆ ಗುರುತಿಸಿದ್ದ ಸಮಾಧಿಸ್ಥಳ ಇಂದು ದೇವರ ಸೇವಕ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರ ಎಂಬ ಹೊಸ ಹೆಸರಿನಿಂದ ಗುರುತಿಸಿಕೊಳ್ಳುತ್ತಿದೆ.
Sunday, 12 May 2019
ಮೌನದ ದನಿ - ¨ ಜೀವಸೆಲೆ
ನಿನ್ನ ಮಾರಾಟ ಮಾಡಿದ್ದು
ಜೂದಾಸ್ ಮಾತ್ರವಲ್ಲ
ನಾನು ಕೂಡ
ನನ್ನ ವಿಶ್ವಾಸವನ್ನು
ಪ್ರೀತಿಯನ್ನು
ಸಂಬಂಧಗಳನ್ನು
ತತ್ವ ನಿಲ್ಲುವುಗಳನ್ನು
ಮೌಲ್ಯಗಳನ್ನು
ಲೌಕಿಕ ಲಾಭಕ್ಕೆ ಆಗಾಗ
ಮಾರಾಟ ಮಾಡುತ್ತಿರುತ್ತೇನೆ…
-------
ಕತ್ತಲೆಯು ಮನಸ್ಸನ್ನು
ಆವರಿಸಿಕೊಂಡಾಗ
ಸತ್ಯವು ಕಾಣದಾಗದು…
---------
ಒಬ್ಬ ರಾಜಾಸನದಿಂದ
ಅಧಿಕಾರ ಮಾಡಲು
ಹಾತೊರೆದರೆ
ಇನ್ನೊಬ್ಬ
ಶಿಲುಬೆ ಮರದಲ್ಲಿ ತೂಗಾಡುತ್ತಾ
ಜನರನ್ನು ಪ್ರೀತಿಸಲು ಕಲಿಸಿದ
----------
ಅವಮಾನದ ಶಿಲುಬೆ ಮರ
ಕ್ರಿಸ್ತನ ಪ್ರೀತಿಯ ರಕ್ತದಿಂದ
ರಕ್ಷಣೆಯ ಮೂಲವಾಯಿತ್ತು
----------
ಪೇತ್ರನಲ್ಲಿ ಭಯ
ಜೂದಾಸ್ನಲ್ಲಿ ಕ್ರೌರ್ಯ
ಪಿಲಾತನಲ್ಲಿ ಅಧಿಕಾರ ದಾಹ
ಯಾಜಕರಲ್ಲಿ ದ್ವೇಷ, ತಳಮಳ
ಇವುಗಳೆನ್ನೆಲ್ಲಾ ನುಂಗಿಬಿಡುವ ಕ್ರಿಸ್ತನಲ್ಲಿ
ಇದುದ್ದು ಪ್ರೀತಿ ಮಾತ್ರ
ನೀರು ಉಳಿಸಿ....ಪ್ರಕೃತಿ ಬೆಳೆಸಿ - ಡಾ.ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)
ನೀರು ನಮ್ಮ ಉಸಿರು. ಉಸಿರು ಚಿರಕಾಲ ಉಳಿಯಬೇಕಾದರೆ ಬೇಕಾಗಿದೆ ನೀರು. ನೀರಿಲ್ಲದೆ ಯಾವ ಜೀವಿಯೂ ಜೀವಿಸಲಾರದು. ಆಹಾರ ಇಲ್ಲದೆ ಬದುಕಲು ಪ್ರಯತ್ನಿಸಬಹುದು ಆದರೆ ನೀರು ಇಲ್ಲದೆ ಬದುಕಲು ಸಾಧ್ಯವೇ ಇಲ್ಲ. ಪ್ರತಿನಿತ್ಯ ನಮ್ಮ ಬದುಕಿನಲ್ಲಿ ನೀರಿನ ಅವಶ್ಯಕತೆ ಇದೆ.
ನೀರು ಭೂಮಿಯ ಮೇಲಿರುವ ದೇವರ ಅಮೂಲ್ಯ ಕೊಡುಗೆಯಾಗಿದೆ. ನೀರಿನ ಲಭ್ಯತೆಯಿಂದಾಗಿ ಭೂಮಿಯ ಮೇಲೆ ಜೀವನವು ಅಸ್ತಿತ್ವದಲ್ಲಿದೆ. ಸ್ವತಃ ಆಕಾರ, ರುಚಿ, ವಾಸನೆಯನ್ನು ಹೊಂದಿರದ ಮತ್ತು ವರ್ಣರಹಿತವಾಗಿರುವ ಈ ನೀರು ಭೂಮಿಯ ಮೇಲೆ ಜೀವಂತ ಜೀವಿಗಳ ಜೀವನದಲ್ಲಿ ರುಚಿ, ಬಣ್ಣ ಮತ್ತು ಉತ್ತಮ ವಾಸನೆಯನ್ನು ಸೇರಿಸುತ್ತದೆ. ನಮ್ಮಿಂದ ಏನನ್ನೂ ಅಪೇಕ್ಷಿಸದ ನೀರು ನಮಗೆ ಜೀವವನ್ನು ಕೊಡುತ್ತದೆ. ಇದು ಸರ್ವಸ್ವದ ಉಳಿವಿಗಾಗಿ ಇರುವ ಅತ್ಯಂತ ಮೇಲ್ಮಟ್ಟದ ಸಂಪನ್ಮೂಲ.
ದಿನ ಪ್ರಾರಂಭವಾಗುವುದು ನೀರಿನ ಸೇವನೆಯಿಂದಾದರೆ ಆದು ಮುಕ್ತಾಯವಾಗುವುದು ಕೂಡ ಅದರಿಂದಲ್ಲೇ ಎಂಬ ಸತ್ಯವನ್ನು ನಾವು ಯಾರೂ ಮರೆಯಬಾರದು. ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು ಎಲ್ಲಾ ಕಡೆಗಳಲ್ಲೂ ನೀರಿನ ಅಭಾವ ತಲೆದೂರುತ್ತಿರುವುದು ಬಹು ವಿಪರ್ಯಾಸದ ವಿಷಯ. ಮುಂಬರಲಿರುವ ದಿನಗಳಲ್ಲಿ ನಮ್ಮ ದಣಿವನ್ನು ನೀಗಲು ಒಂದು ಲೋಟ ನೀರು ಸಿಗುತ್ತಾ ಎಂಬ ಸಂದೇಹ ನಮ್ಮನೆಲ್ಲ ಕಾಡಬೇಕಾಗಿದೆ, ಏಕೆಂದರೆ ಪರಿಸರಮಾಲಿನ್ಯ, ಗಿಡ-ಮರಗಳ ನೆಲಸಮ, ಇತ್ಯಾದಿಗಳಿಂದ ಕಾಲಕ್ಕೆ ತಕ್ಕಂತೆ ಮಳೆ ಆಗದೆ ಕೆರೆ-ಬಾವಿಗಳು ಬತ್ತಿ ನೀರಿಗಾಗಿ ಎಲ್ಲೆಡೆ ಹಾಹಾಕಾರ ಕೇಳಿ ಬರುತ್ತಿದೆ. ಈ ರೀತಿಯಾಗಿ ಪಕೃತಿ ವಿಕೋಪಕ್ಕೆ ಈಗಾಗಲೇ ನಾವೆಲ್ಲರು ತುತ್ತಾಗಿದ್ದೇವೆ. ಇದಕ್ಕೆ ಕಾರಣಗಳು ಹಲವಾರು. ಉದಾಹರಣೆಗೆ ಗಿಡ-ಮರಗಳ ನೆಲಸಮ, ನಾಯಿಕೊಡೆಗಳೆಂತೆ ತಲೆ ಎತ್ತುತ್ತಿರುವ ಗಗನಚುಂಬಿ ವಸತಿ ಸಂಕೀರ್ಣಗಳು, ಐ.ಟಿ ಪಾರ್ಕ್ಗಳು, ಬೃಹತ್ ಮಾಲ್ಗಳು ಒಂದೆಡೆಯಾದರೆ, ಮತ್ತೊಂದಡೆ ಕೈತೊಳೆಯಲು ಕೂಡ ನೀರು ಇಲ್ಲದಿರುವಾಗ, ಕೆಲ ಅಪಾರ್ಟ್ಮೆಂಟುಗಳಲ್ಲಿ ಜನರು ಈಜುಗೊಳದಲ್ಲಿ ಈಜಾಡುತ್ತಿರುವುದು, ಕುಡಿಯಲು ನೀರಿಗೆ ಹಾಹಾಕಾರವಿರುವಾಗ, ಪೈಪ್ ಬಿಟ್ಟು ಮನೆಮುಂದಿನ ರಸ್ತೆಯನ್ನು ತೊಳೆಯುತ್ತ ನೀರನ್ನು ಪೋಲು ಮಾಡುತ್ತಿರುವುದು ಇತ್ಯಾದಿ. ಹೀಗಿರುವಾಗ ಹೇಗೆ ನಾವು ನೀರಿನ ಸಂರಕ್ಷಣೆ ಮಾಡಲು ಸಾಧ್ಯ? ಒಂದು ವೇಳೆ ಈಗ ನೀರಿನ ಸಂರಕ್ಷಣೆಯಾಗದಿದ್ದಲ್ಲಿ ಮುಂದಿನ ಪೀಳಿಗೆಯ ಗತಿಯೇನು?
ನಾವೆಲ್ಲರೂ ನಮ್ಮ ಬೇಜವಾಬ್ದಾರಿ ಬಿಟ್ಟು ನೀರಿನ ಮೌಲ್ಯವನ್ನು ಅರಿತು ಅದನ್ನು ಮಿತವಾಗಿ ಉಪಯೋಗಿಸಲು ಪ್ರಯತ್ನಿಸಿದಾಗ ಮಾತ್ರ ನೀರಿನ ಸಂರಕ್ಷಣೆ ಸಾಧ್ಯ. ನೀರು ಕೇವಲ ಏಕ ವ್ಯಕ್ತಿಯ ಸ್ವತ್ತಲ್ಲ ಬದಲಾಗಿ ಸರ್ವರ ಸಂಪತ್ತು, ಸರ್ವರ ಪಾಲು ಹಾಗೂ ಸಕಲ ಸೃಷ್ಟಿಯ ಅದಮ್ಯ ಆಸ್ತಿ ಇದರ ಉಪಯೋಗ ಎಲ್ಲರಿಗೂ ಆಗಬೇಕು. ಬದುಕುವುದಕ್ಕಾಗಿ ನೀರು, ಆರೋಗ್ಯಕ್ಕಾಗಿ ನೀರು, ಅಭಿವೃದ್ಧಿಗಾಗಿ ನೀರು ಹಾಗು ಭವಿಷ್ಯಕ್ಕಾಗಿ ನೀರು ಎಂಬುದನ್ನರಿತು ಈ ಭೂಮಿಯ ಮೇಲಿರುವ ಜೀವ ವೈವಿಧ್ಯವೇ ನನ್ನ, ನನ್ನ ಕುಟುಂಬದ ಮತ್ತು ಪ್ರಪಂಚದಾದ್ಯಂತ ಇರುವ ನನ್ನ ಸಹಪೌರರ ಉಳಿವಿನ ಬುನಾದಿಯೆನ್ನುವುದನ್ನು ಒಪ್ಪಿಕೊಂಡು ನಾವೆಲ್ಲರು ನೀರನ್ನು ಹಿತ-ಮಿತವಾಗಿ ಬಳಕೆ ಮಾಡುತ್ತಾ ನಮ್ಮ ಮುಂದಿನ ಪೀಳಿಗೆಗೆ ಬದುಕಲು ಅನುವು ಮಾಡಿಕೊಡುತ್ತಾ ನೀರನ್ನು ಉಳಿಸಿ, ಪ್ರಕೃತಿಯನ್ನು ಉಳಿಸಲು ಪಣತೊಡೋಣ.
ನೀರು - ಡಾ. ನಾ. ಡಿಸೋಜ.
ಕ್ರಿಸ್ಚಿಯನ್ ಕೇರಿಯ ನಡುವೆ ಅನ್ನುವ ಹಾಗೆ ಅಕ್ಕಪಕ್ಕದಲ್ಲಿ ಮಚಾದೋ ಮತ್ತು ಮಿರಾಂಡರ ಎರಡು ಮನೆಗಳು. 100 ಅಡಿ ಉದ್ದ 60 ಅಡಿ ಅಗಲದ ನಿವೇಶನದ ನಡುವೆ ಒಂದೊಂದು ಮನೆ. ಈ ಎರಡೂ ಕುಟುಂಬಗಳು ಇಲ್ಲಿ ಬಹಳ ಹಿಂದಿನಿಂದಲೂ ಇವೆ. ಅಕ್ಕಪಕ್ಕದ ಮನೆಗಳು ಅಂದ ಮೇಲೆ ಜಗಳ, ಮನಸ್ಥಾಪ, ಇದ್ದದ್ದೇ. ಆದರೆ ಇಲ್ಲಿ ಇರುವ ಮನಸ್ಥಾಪ ಎಂದರೆ ನೀರಿನದ್ದು. ಈ ಎರಡೂ ನಿವೇಶನಗಳ ನಡುವೆ ಒಂದು ಬಾವಿ ಇದೆ. ಈ ಬಾವಿ ಬೇಸಿಗೆ ಕಾಲದಲ್ಲಿ ಒಣಗಿ ನೀರು ಪಾತಾಳಕ್ಕೆ ಹೋಗಿ ತಲುಪಿದಾಗ ಇಲ್ಲಿ ಈ ಎರಡೂ ಕುಟುಂಬಗಳ ನಡುವೆ ನಿತ್ಯ ಕಲಹ ಪ್ರಾರಂಭವಾಗುತ್ತದೆ. ಇರುವ ಅಲ್ಪ ಸ್ವಲ್ಪ ನೀರನ್ನ ಸೇದಿಕೊಳ್ಳಲು ಹೋರಾಟ. ಪೈಪೋಟಿ ಕೈಕೈ ಮಿಲಾಯಿಸಿ ಜಗಳ. ಹಿಂದೆ ಹೀಗೆ ಇರಲಿಲ್ಲ.
ಅದೇನೋ ಬೇಸಿಗೆಯಲ್ಲಿ ಎಂದೂ ನೀರಿಗೆ ಬರಗಾಲ ಬರುತ್ತಿರಲಿಲ್ಲ. ಸದಾ ಹತ್ತನೇ ಮೆಟ್ಟಿಲವರೆಗೆ ನೀರು ಇರುತ್ತಿತ್ತು. ನಡು ಬೇಸಿಗೆಯಲ್ಲಿ ಕೊಂಚ ಹೊತ್ತು ಬಿಟ್ಟರೆ ನೀರು ತಾನಾಗಿ ತುಂಬಿ ಕೊಳ್ಳುತ್ತಿತ್ತು. ಅಲ್ಲದೆ ಈ ಎರಡೂ ನಿವೇಶನಗಳ ನಡುವೆ ಅನ್ನುವ ಹಾಗೆ ಈ ಬಾವಿಯನ್ನ ತೋಡಿದವರ ಇರಾದೆ ಕೂಡ ಇಬ್ಬರೂ ಈ ಬಾವಿಯ ನೀರನ್ನ ಬಳಸಿ ಕೊಳ್ಳಬೇಕು ಅನ್ನುವುದೇ ಆಗಿತ್ತು. ಬಾವಿ ತೋಡಿಸುವುದು, ಹಣ ನೀಡುವುದು, ಕೆಲಸ ಮಾಡಿಸುವುದು ಕಷ್ಟದ ಕೆಲಸವಾಗಿದ್ದರಿಂದ ಈ ಮನೆಗಳ ಹಿರಿಯರು ಎರಡೂ ಮನೆಗೆ ಒಂದು ಬಾವಿ ಇರಲಿ ಎಂಬ ನಿರ್ಧಾರಕ್ಕೆ ಬಂದಿದ್ದರು. ಇದು ಒಮ್ಮತದ ನಿರ್ಧಾರ. ಇದಕ್ಕೆ ಸಾಕ್ಷಿ ಇತ್ಯಾದಿ ಏನೂ ಇರಲಿಲ್ಲ. ಇಬ್ಬರ ಒಪ್ಪಿಗೆಯೇ ಸಾಕ್ಷಿ. ಇದು ಕೂಡ ಬಹಳ ದಿನ ನಡೆದುಕೊಂಡು ಬಂದಿತ್ತು.
ಆದರೆ ಕ್ರಮೇಣ ಬೇಸಿಗೆ ಬಂದು ನೀರು ಕಡಿಮೆ ಆಯಿತು, ಜಗಳ ಆಡಲು ಮನೆಗಳವರಿಗೆ ಬೇರೆ ಬೇರೆ ಕಾರಣಗಳು ದೊರೆತವು. ಅದರಲ್ಲೂ ಸಮಾಜದಲ್ಲಿ ತುಸು ಭಲಾಢ್ಯನಾದ ಮಚಾದೋ ನಿಧಾನವಾಗಿ ನಡುವಣ ಬೇಲಿಯನ್ನ ವಿಸ್ತರಿಸಿ ಬಾವಿಯನ್ನ ತನ್ನ ಕಬ್ಜೆಗೆ ತೆಗೆದುಕೊಂಡ. ಪ್ರತಿ ವರ್ಷ ಹೊಸ ಬೇಲಿ ಹಾಕಿಸುತ್ತಿದ್ದ ಆತ ಬಾವಿ ತನ್ನ ಜಮೀನಿನೊಳಗೆ ಬರುವಂತೆ ಬೇಲಿ ವಿಸ್ತರಿಸಿಕೊಂಡ. ಇದು ಮನಸ್ತಾಪಕ್ಕೆ ಕಾರಣವಾಯಿತು. ತುಸು ದುರ್ಬಲನಾಗಿದ್ದ ಮಿರಾಂಡ ಪುರಸಭೆಗೆ ದೂರು ನೀಡಿದ, ಅವರು ಬಂದು ಜಾಗ ಅಳೆದು ಮಚಾದೋಗೆ ನೋಟೀಸ ನೀಡಿ ಹೋದರು. ಆದರೂ ಮಚಾದೋ ಬೇಲಿ ತೆಗೆಯಲಿಲ್ಲ. ಇದು ದೊಡ್ಡ ರಂಪಾಟಕ್ಕೆ ಕಾರಣವಾಯಿತು. ಹಳಬರಲ್ಲಿ ಇದ್ದ ಹೊಂದಾಣಿಕೆ, ಕೊಟ್ಟು ತೆಗೆದುಕೊಳ್ಳುವ ಮನೋಭಾವ ಕ್ರಮೇಣ ಮಾಯವಾಯಿತು.
ಮಿರಾಂಡನ ಮಗ ಈ ಬದಿಯಿಂದ ಬಾವಿಯ ಕಟ್ಟೆಯ ಮೇಲೇರಿ ಮಚಾದೋನ ಹಗ್ಗ ತೆಗೆದು ಎಸೆದ. ಮಚಾದೋ ಮಗ ಕೂಡ ಸುಮ್ಮನುಳಿಯಲಿಲ್ಲ. ಅವನು ಇವರ ಹಿತ್ತಲಿಗೆ ನುಗ್ಗಿ ಕೈ ಮಾಡಿದ. ಹೊಡೆದಾಟವಾಯಿತು. ಬಡಿದಾಡಿಕೊಂಡರು. ಅವನು ಇವನಿಗೆ ಇವನು ಅವನಿಗೆ ಹೊಡೆದದ್ದೂ ಆಯಿತು. ಜಗಳ ಪೋಲೀಸರವರೆಗೂ ಹೋಯಿತು. ಪ್ರತಿಷ್ಠೆ, ಅಭಿಮಾನ ಅಡ್ಡ ಬಂದಿತು. ಪುರಸಭೆ, ಪೋಲೀಸರು ಎಂದೆಲ್ಲ ಇಬ್ಬರೂ ಜಬ್ಬಿ ಹೋದರು. ಇದು ವಿಪರೀತಕ್ಕೆ ಹೋಗಲು ಮತ್ತೂ ಒಂದು ಕಾರಣವೆಂದರೆ ಹತ್ತಿರದಲ್ಲಿ ಎಲ್ಲಿಯೂ ಬಾವಿಗಳು ಇಲ್ಲದಿರುವುದು. ಊರಿಗೆ ನಲ್ಲಿ ಬಾರದಿರುವುದು.
ಅಂತು ಬೇಸಿಗೆ ಬಂದರೆ ಇಲ್ಲಿ ಜಗಳ ಪ್ರಾರಂಭ. ಮಚಾದೋ ಮನೆಯವರು ಮಿರಾಂಡನ ಮನೆಗೆ ನೀರು ಕೊಡುತ್ತಿದ್ದರು. ಮಾರ್ಚ ತಿಂಗಳವರೆಗೆ ಅವರು ಇವರಿಗೆ ನೀರನ್ನ ನೀಡುತ್ತಿದ್ದರು ಆನಂತರ "ನಮಗೆ ನೀರು ಸಾಲೋದಿಲ್ಲ, ನೀವು ಬೇರೆ ಕಡೆ ನೋಡಿಕೊಳ್ಳಿ" ಎಂದು ಮಚಾದೋ ಹೆಂಡತಿ ಕತ್ರೀನ ಮಿರಾಂಡನ ಹೆಂಡತಿಯ ಮುಖಕ್ಕೆ ಹೇಳುತ್ತಿದ್ದಳು.
"ಅಯ್ಯೋ ದೇವರೇ ನಾವು ಎಲ್ಲಿಗೆ ಹೋಗೋದು ? ಅಷ್ಟಕ್ಕೂ ಈ ಬಾವಿ ನಮ್ಮದೇ ಅಲ್ವಾ" ಎಂದು ಆಕೆ ಬಾಯಿ ಮಾಡುತ್ತಿದ್ದಳು.
"ಏನು ಬೇಲೀನಾ ಒತ್ತರಿಸಿಕೊಂಡು ಹಾಕಿಕೊಂಡಿರೋದರ ಜೊತೆಗೆ ಬಾವಿ ಜಮೀನು ನಿಮ್ಮದಾಯ್ತ...."
ಮಾತಿಗೆ ಮಾತು ಬೆಳೆದು ಮನೆ ಮಂದಿ ಜಗಳಕ್ಕೆ ನಿಲ್ಲುತ್ತಿದ್ದರು. ಪ್ರತಿ ಬೇಸಿಗೆ ಬಂತೆಂದರೆ ಕೇರಿಯ ಜನರಿಗೆ ಇದೊಂದು ಮನರಂಜನೆ. ವಿಷಯ ಪಾದರಿಗೂ ಹೋಯಿತು. ಅವರು ಇಬ್ಬರನ್ನೂ ಕರೆದು ಸಮಾಧಾನ ಹೇಳಿದರು.
"ಊರ ಜನ ನೋಡುತ್ತಾರೆ. ಇತರೇ ಧರ್ಮೀಯರ ಎದಿರು ಅವಮಾನ, ಇರುವ ನೀರನ್ನ ಇಬ್ಬರೂ ಹಂಚಿಕೊಳ್ಳಿ, ಸುಧಾರಿಸಿಕೊಂಡು ಹೋಗಿ" ಎಂದರು ಪಾದರಿ. ಈ ಮಾತು ಅಲ್ಲಿ ಮಾತ್ರ ಕೇಳಿ ಬಂದಿತು. ಏಪ್ರಿಲ್ ತಿಂಗಳ ಪಾಸ್ಕ ಹಬ್ಬದ ದಿನ ಮಚಾದೋ ಮಗ ಮಿರಾಂಡ ಮಗ ಹಾಕಿದ ಹಗ್ಗ ತೆಗೆದು ಹಾಕಿ, "ಯಾವ ಬೋಸುಡಿ ಮಗ ನಮ್ಮ ಬಾವಿಗೆ ಹಗ್ಗ ಹಾಕಿದ್ದು" ಎಂದು ಗುಟುರು ಹಾಕಿದ. ಮಚಾದೋ ಮಗ ತೋಳೇರಿಸಿಕೊಂಡು ಹೊರ ಬಂದ. ಹಿಂದೆಯೇ ಕೇರಿಯ ಎಲ್ಲ ಮನೆಗಳ ಜಗಲಿಗಳ ಮೇಲೆ ಜನ ಬಂದು ನಿಂತು ಕಾದರು ಪುಕ್ಕಟೆ ಮನರಂಜನೆಗಾಗಿ.
******
ಮೊನ್ನೆ ಒಂದು ಘಟನೆ ನಡೆಯಿತು. ಮೊದಲ ಮಳೆ ಬಿದ್ದು ಮೂರು ದಿನ ಆಗಿರಲಿಲ್ಲ ಬಾವಿ ಒಳಗಿನಿಂದ ಏನೋ ಸದ್ದು ಕೇಳಿಸಿತು. ಕೇರಿಯ ಜನ ನುಗ್ಗಿ ಬಂದು ನೋಡಿದರು. ಒಳಗೆ ಬಾವಿ ಕುಸಿದಿತ್ತು. ಮೆಟ್ಟಿಲು ಮೆಟ್ಟಿಲಾಗಿ ಕಟ್ಟಿದ ಕಲ್ಲುಗಳೆಲ್ಲ ಕೆಳಗೆ ಜಾರಿದ್ದರಿಂದ ಬಾವಿ ಇರುವುದಕ್ಕಿಂತ ಅಗಲವಾಗಿ ಮಣ್ಣು ಒಳಗೆ ಕುಸಿದು ದೊಡ್ಡ ಪಾತಾಳವಾಗಿತ್ತು. ಈಗ ಮಚಾದೋ ಹೆಂಡತಿ ಮತ್ತು ಮಿರಾಂಡನ ಹೆಂಡತಿ ಸೊಂಟಕ್ಕೆ ಒಂದೊಂದು ಕೊಡಪಾನ ಚಚ್ಚಿಕೊಂಡು ತುಸು ದೂರದ ಸರಕಾರಿ ಬಾವಿಗೆ ಹೋಗುತ್ತಾರೆ. ಹಶ್ ಹುಶ್ ಎಂದು ನೀರು ಹೊರುತ್ತಾರೆ.
"ಅಲ್ಲ ಎಷ್ಟ ದಿನ ಹೀಗೆ?" ಎಂದು ಮಚಾದೋ ಹೆಂಡತಿ ಗಂಡನ ಮುಖ ನೋಡುತ್ತಾಳೆ.
"ಅಲ್ಲ ಎಷ್ಟ ದಿನ ಹೀಗೆ” ಎಂದು ಮಿರಾಂಡನ ಹೆಂಡತಿ ಗಂಡನ ಮುಖ ನೋಡುತ್ತಾಳೆ.
"ಜಗಳ ಆಡತಿದ್ರಲ್ಲ....ಆಡಿ" ಅನ್ನುತ್ತಾರೆ ಇಬ್ಬರೂ. ಮಚಾದೋ ಮಿರಾಂಡ ಇಬ್ಬರೂ ತಮ್ಮ ತಮ್ಮ ನಿವೇಶನದಲ್ಲಿ ಒಂದೊಂದು ಬಾವಿ ತೋಡಿಸಲು ಬ್ಯಾಂಕಿನ ಸಾಲಕ್ಕೆ ಅರ್ಜಿ ಹಾಕಿ ಕೊಂಡಿದ್ದಾರೆ. ಹಿಂದೆಯೇ ಮಾಲತಿ ಹೊಳೆಯಿಂದ ಊರಿಗೆ ನೀರು ತರಲು ಪುರಸಭೆ ಹೊರಟಿದೆ. ಇದಕ್ಕೆ ಇನ್ನೆಷ್ಟು ದಿನ ಕಾಯಬೇಕೋ. ಅಲ್ಲಿಯ ವರೆಗೆ ಕೇರಿಯಲ್ಲಿ ಬೇಸಿಗೆಯ ಜಗಳವಿಲ್ಲ ಅನ್ನುವುದೇ ಒಂದು ಸಮಾಧಾನ. ಈ ಇಬ್ಬರೂ ಹೆಂಗಸರಿಗೆ ನೀರು ಹೊರುವುದು ಮಾತ್ರ ತಪ್ಪಿಲ್ಲ ಅನ್ನುವುದೂ ಸತ್ಯವೇ.
ಸಂತ ಯೊವಾನ್ನರ ಶುಭಸಂದೇಶ – 9 - ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು
ಯಾವುದೇ ಒಂದು ಬರವಣಿಗೆಯ ಹಿಂದೆ ಅದಕ್ಕೊಂದು ಮೂಲವಿರುತ್ತದೆ. ಈ ಮೂಲ ವಿಷಯ ಇಡೀ ಬರವಣಿಗೆಯ ಒಳಗೆ ಮತ್ತು ಹೊರಗೆ ಹಾಸುಹೊಕ್ಕಿರುತ್ತದೆ. ಇಂದು ನಾವು ಈ ಮೂಲದ ಬಗ್ಗೆ ಹುಡುಕುತ್ತಾ ಯೋವಾನ್ನರ ಶುಭಸಂದೇಶದ ಕುರುಹುಗಳನ್ನು ಹುಡುಕೋಣ.
ಸಂತ ಯೋವಾನ್ನರ ಶುಭ ಸಂದೇಶದ ಮೂಲ
ಸಾಮಾನ್ಯವಾಗಿ ಈ ಶುಭ ಸಂದೇಶಕ್ಕೆ 6 ಮೂಲಗಳಿವೆ ಎಂದು ಬೈಬಲ್ ವಿದ್ವಾಂಸರು ತಿಳಿಸುತ್ತಾರೆ.
¨ ಮೂರು ಶುಭ ಸಂದೇಶಗಳ ಮೂಲ.
¨ ಸಂಕೇತಗಳ/ ಚಿನ್ನೆಗಳ ಮೂಲ.
¨ ಬಹಿರಂಗಪಡಿಸುವ ಪ್ರವಚನದ ಮೂಲ.
¨ ಜುದೇಯ ಅಥವಾ ಜೆರುಸಲೇಮಿನ ಮೂಲ.
¨ ಯಾತನೆ ಮತ್ತು ಪುನರುತ್ಥಾನದ ಮೂಲ.
¨ ಕಣ್ಣಾರೆ ಕಂಡವನ ಸಾಕ್ಷಿಯ ಮೂಲ.
1) ಮೂರು ಶುಭ ಸಂದೇಶಗಳ ಮೂಲ: ಶುಭಸಂದೇಶಗಳಾದ ಮತ್ತಾಯ, ಮಾರ್ಕ ಮತ್ತು ಲೂಕರ ಶುಭಸಂದೇಶಗಳ ಸಂಪಾದನೆ ನಾಲ್ಕನೇ ಶುಭ ಸಂದೇಶ ಬರೆಯುವ ಹೊತ್ತಿಗೆ ಆಗಲೇ ಲಭ್ಯವಿತ್ತು. ಬಹುಷ್ಯ ಶುಭಸಂದೇಶದ ಕರ್ತೃವಿಗೆ ಈಗಾಗಲೇ ಈ ಶುಭ ಸಂದೇಶಗಳ ಬಗ್ಗೆ ಮತ್ತು ಇದರ ದೈವಶಾಸ್ತ್ರದ ಬಗ್ಗೆ ಅರಿವು ಇತ್ತು. ಉದಾಹರಣೆ: *ಐದು ಸಾವಿರ ಜನರಿಗೆ ರೊಟ್ಟಿ ಹಂಚಿದನು ಪರಮ ಪ್ರಸಾದದ ಪ್ರವಚನದಲ್ಲಿ ಒಂದಾಗಿರುವುದನ್ನ ನಾವು ಇಲ್ಲಿ ಕಾಣಬಹುದು. ಯೇಸುಸ್ವಾಮಿ ದೇವಾಲಯದ ಶುದ್ಧೀಕರಣವನ್ನುಅವರು ಪ್ರಥಮ ಕಾರ್ಯವನ್ನಾಗಿ ಈ ಶುಭ ಸಂದೇಶದಲ್ಲಿ ಮಾಡುತ್ತಾರೆ, ಆದರೆ ಈ ಸನ್ನಿವೇಶವನ್ನು ನಾವು ಕೊನೆಯ ಗಳಿಗೆಯಲ್ಲಿ ನಾವು ನೋಡಬಹುದು 3 ಶುಭ ಸಂದೇಶಗಳಲ್ಲಿ.
2) ಸಂಕೇತ ಅಥವಾ ಚಿಹ್ನೆಗಳ ಮೂಲ: ಈ ಶುಭಸಂದೇಶವನ್ನು ಸಾಂಕೇತಿಕ ಶುಭ ಸಂದೇಶ ಎಂದು ಕರೆಯಲಾಗುತ್ತದೆ. ಈ ಸಂಕೇತ ಅಥವಾ ಚಿಹ್ನೆ ಎಂಬ ಪದವು ಪವಾಡ ಅಥವಾ ಅದ್ಭುತ ಪದಕ್ಕೆ ಪರ್ಯಾಯವಾಗಿ ಈ ಶುಭ ಸಂದೇಶದಲ್ಲಿ ಬಳಸಲಾಗಿದೆ. ಈ ಶುಭ ಸಂದೇಶದಲ್ಲಿ ಏಳು ಪ್ರಮುಖ ಮತ್ತು ವಿಶೇಷವಾದ ಚಿಹ್ನೆಗಳಿವೆ.
i. ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು.
ii. ಶತಾಧಿಪತಿಯ ಮಗಳ ಸಾಧ್ಯತೆ.
iii. ಬೆಥ್ಸಾಯಿದ ಕೊಳದ ಬಳಿ ಸೌಖ್ಯತೆ.
iv. ರೊಟ್ಟಿಯ ಅದ್ಭುತ.
v. ಯೇಸುಸ್ವಾಮಿ ನೀರ ಮೇಲೆ ನಡೆದದ್ದು.
vi. ಹುಟ್ಟು ಕುರುಡರಿಗೆ ದೃಷ್ಟಿದಾನ.
vii. ಲಾಜರನನ್ನು ಸಾವಿನಿಂದ ಎಬ್ಬಿಸಿದ್ದು.
ಮೊದಲ ಎರಡನ್ನು ಸ್ಪಷ್ಟವಾಗಿ ಸಂಕೇತವನ್ನಾಗಿ ಬಿಂಬಿಸಲಾಗಿದೆ. 2:23;20:30;21:25- ಈ ಸ್ಥಳದಲ್ಲಿ ಸಂಕೇತ ಎನ್ನುವ ಪದವನ್ನು ಬಳಸಲಾಗಿದೆ. ಇದಾಗಲೇ ಯೇಸುಸ್ವಾಮಿ ಮಾಡಿದ ಪವಾಡಗಳ ಸಂಗ್ರಹ ಇದ್ದಿರಬಹುದು, ಅದನ್ನು ಈ ಶುಭ ಸಂದೇಶದ ಕರ್ತೃ ಬಳಸಿರಬಹುದು ಎನ್ನಲಾಗಿದೆ.
3) ಬಹಿರಂಗಪಡಿಸುವ ಪ್ರವಚನಗಳ ಮೂಲ: ಮೂರು ಶುಭ ಸಂದೇಶಗಳಲ್ಲಿ ನಾವು ನೋಡುವುದಾದರೆ ನಿರೂಪಣೆಯ ಶೈಲಿಯಲ್ಲಿ ಶುಭಸಂದೇಶವನ್ನು ಬರೆಯಲಾಗಿದೆ ಆದರೆ ಇಲ್ಲಿ ನಿರೂಪಣೆಯ ಶೈಲಿಯ ಬದಲು ಪ್ರವಚನದ ಶೈಲಿಯನ್ನು ಬಳಸಲಾಗಿದೆ. ಈ ಶುಭಸಂದೇಶದಲ್ಲಿ ಸಂವಾದ ರೀತಿಯೇ ಹೆಚ್ಚಾಗಿ ಕಂಡು ಬಂದರು ಅದು ಅಂತ್ಯಗೊಳ್ಳುವುದು ಪ್ರವಚನದ ರೀತಿಯಲ್ಲಿ. ಉದಾಹರಣೆ: ಯೇಸುಸ್ವಾಮಿ ಮತ್ತು ನಿಕೋದೆಮನ ಮಧ್ಯೆ ನಡೆಯುವಂತಹ ಸಂವಾದವು, ಸಂವಾದದಿಂದ ಪ್ರಾರಂಭವಾಗಿ ಪ್ರವಚನದಲ್ಲಿ ಅಂತ್ಯಗೊಳ್ಳುತ್ತದೆ. ಯೇಸುಸ್ವಾಮಿ ಮತ್ತು ಸಮಾರಿಯಾದ ಸ್ತ್ರೀ ಸಂವಾದವು ಅಂತ್ಯಗೊಳ್ಳುವುದು ಪ್ರವಚನದ ಮೂಲಕವೇ.
4) ಜುದೇಯ ಅಥವಾ ಜೆರೂಸಲೇಮಿನ ಮೂಲ: ಸಂತ ಯೋವಾನ್ನರ ಶುಭಸಂದೇಶ ಬೇರೆ ಮೂರು ಶುಭಸಂದೇಶಕ್ಕಿಂತ ಹೆಚ್ಚಾಗಿ ಜೆರುಸಲೇಮಿನಲ್ಲಿ ನಡೆದ ಘಟನೆಗಳ ಬಗ್ಗೆ ಹೆಚ್ಚು ಮಹತ್ವ ನೀಡುತ್ತದೆ. ಎಲ್ಲಾ ಸನ್ನಿವೇಶಗಳು ಜೆರೂಸಲೇಮಿನ ಹಬ್ಬಗಳ ಸುತ್ತ ನಡೆಯುವುದನ್ನು ನಾವು ಕಾಣಬಹುದು. ಪ್ರತಿಯೊಬ್ಬ ಯಹೂದ್ಯ ಗಂಡು ಜೆರುಸಲೇಮಿಗೆ ಮೂರು ಬಾರಿ ಅಥವಾ ವರ್ಷಕ್ಕೆ ಒಂದು ಬಾರಿಯಾದರೂ ಹೋಗಬೇಕಿತ್ತು ಬಹುಷ್ಯ ಈ ಐತಿಹಾಸಿಕ ಹಿನ್ನೆಲೆ ಇದಕ್ಕೆ ಕಾರಣವಿರಬೇಕು. ಈ ಜೆರುಸಲೇಮಿನಲ್ಲಿ ನಡೆದ ಎಲ್ಲಾ ಘಟನೆಗಳ ಸಂಗ್ರಹ ಇದ್ದಿರಬೇಕು ಅದನ್ನೇ ಈ ಶುಭ ಸಂದೇಶದ ಕರ್ತೃ ಬಳಸಿ ಕೊಂಡಿರಬೇಕು.
5) ಯಾತನೆ ಮತ್ತು ಪುನರುತ್ಥಾನದ ಮೂಲ: ಶುಭಸಂದೇಶದ ರಚನೆಯ ಬಗ್ಗೆ ನಾನಾಗಲೇ ನೋಡಿದಂತೆ ಎಲ್ಲಾ ಪುಸ್ತಕಗಳ ರೀತಿಯಲ್ಲಿ ಇದು ಮುಂದೆಯಿಂದ ರಚಿತವಾಗಿಲ್ಲ ಅಂದರೆ ಈಗ ನಾವು ನೋಡುವ ರೀತಿಯಲ್ಲಿ ಯೇಸುಸ್ವಾಮಿಯ ಜನನ, ಜೀವನ, ಮರಣ ಮತ್ತು ಪುನರುತ್ತಾನ ಕ್ರಮದಂತೆ ರಚಿತವಾಗಿಲ್ಲ, ಅದರ ಬದಲಾಗಿ ಪುನರುತ್ಥಾನದಿಂದ ರಚನೆಯಾದದ್ದು. ಈ ಶುಭ ಸಂದೇಶ ಕರ್ತೃ ಈ ಯಾತನೆ ಮತ್ತು ಪುನರುತ್ಥಾನದ ಸಂಗ್ರಹವನ್ನು ಆಧರಿಸಿ ಬರೆದಿರಬಹುದು. ಆದರೆ ಈ ಶುಭ ಸಂದೇಶವು ಯಾತನೆ ಮತ್ತು ಪುನರುತ್ಥಾನದ ಪ್ರಸಂಗವನ್ನು ಬೇರೆ ಮೂರು ಶುಭ ಸಂದೇಶಕ್ಕಿಂತ ಕೊಂಚ ಭಿನ್ನವಾಗಿ ಬರೆದಿದೆ. ಇದು ಕಾಲಗಣನೆ ಮತ್ತು ದೈವ ಶಾಸ್ತ್ರದಲ್ಲಿಯೂ ವಿಭಿನ್ನವಾಗಿದೆ. ಕೇವಲ ಒಂದೇ ಮೂಲವನ್ನು ಬಳಸಿ ತನ್ನದೇ ಆದಂತಹ ರೂಪ ಮತ್ತು ಶೈಲಿಯನ್ನು ಇದಕ್ಕೆ ಸೇರಿಸಿದ್ದಾರೆ ಎನ್ನಲಾಗುತ್ತದೆ.
6) ಕಣ್ಣಾರೆ ಕಂಡವನ ಸಾಕ್ಷಿಯ ಮೂಲ: ನಾವು ಸಂತ ಯೋವಾನ್ನನ ಶುಭ ಸಂದೇಶದಲ್ಲಿ ಕೆಲವು ಕಡೆಗಳಲ್ಲಿ ನೋಡುತ್ತೇವೆ ಇದು ಕಣ್ಣಾರೆ ಕಂಡವನ ಹೇಳಿಕೆ ಎಂದು ಮತ್ತು ಕಣ್ಣಾರೆ ಕಂಡವನ ಸಾಕ್ಷಿ ಎಂದು ಬರೆಯಲಾಗಿದೆ, ಇದರಿಂದ ನಮಗೆ ತಿಳಿಯುತ್ತದೆ ಇದನ್ನೆಲ್ಲಾ ಕಣ್ಣಾರೆ ಕಂಡವನ ಸಾಕ್ಷಿಯ ಮೂಲದಿಂದ ಬರೆದದ್ದು ಎಂದು. ಇವೆಲ್ಲವೂ ಒಂದು ಕಲ್ಪನೆ ಏಕೆಂದರೆ ನಮಗೆ ಸಾಕ್ಷಿ ಇದರ ಬಗ್ಗೆ ದೊರೆತಿಲ್ಲ.
ಯೇಸುಸ್ವಾಮಿ ಎದ್ದು ಬಂದನೋ - ಎಫ್.ಎಂ.ನಂದಗಾವ್
ಬಂದನೋ ಬಂದನೋ. ಯೇಸುಸ್ವಾಮಿ ಎದ್ದು ಬಂದನೋ
ಬಂದನೋ ಬಂದನೋ. ಯೇಸುಸ್ವಾಮಿ ಎದ್ದು ಬಂದನೋ
||ಪಲ್ಲವಿ||
ಎದ್ದನೋ ಎದ್ದನೋ, ಸಮಾಧಿ ಬಿಟ್ಟು ಎದ್ದು ಬಂದನೋ
ಎದ್ದನೋ ಎದ್ದನೋ, ಯೇಸುಸ್ವಾಮಿ ಎದ್ದು ಬಂದನೋ
||ಪಲ್ಲವಿ||
ಬಿದ್ದನೋ ಬಿದ್ದನೋ, ಜವರಾಯನು ಬಿದ್ದು ಬಿಟ್ಟನೋ
ಬಿದ್ದನೋ ಬಿದ್ದನೋ, ಮಕಾಡೆಯಾಗಿ ಬಿದ್ದು ಬಿಟ್ಟನೋ
||ಪಲ್ಲವಿ||
ಗೆದ್ದನೋ ಗೆದ್ದನೋ, ಯೇಸುಸ್ವಾಮಿ ಗೆದ್ದು ಬಿಟ್ಟನೋ
ಗೆದ್ದನೋ ಗೆದ್ದನೋ ಜವರಾಯನನ್ನ ಗೆದ್ದು ಬಿಟ್ಟನೋ
||ಪಲ್ಲವಿ||
ಹುಟ್ಟು ಸಾವ ಮಧ್ಯದ ಕಿರಿಬಾಳಲಿ ಯೇಸುಸ್ವಾಮಿಯೋ
ನ್ಯಾಯ, ನೀತಿ, ಬದುಕ ಪ್ರೀತಿ, ಧರ್ಮವ ಕಲಿಸಿದನೋ |
|ಪಲ್ಲವಿ||
ನರರ ಬಣ್ಣಭಾವಗಳಲಿ, ಬೇಧವನು ಎಣಿಸಬೇಡಿರೋ
ಧರೆಯ ನರರೆಲ್ಲಾ, ಒಂದೇ ಜೀವ ಎಂದು ನುಡಿದನೋ
||ಪಲ್ಲವಿ||
ಸಗ್ಗದ ಸರ್ವೇಶ್ವರನ, ತಂದೆಯೇ ಎಂದು ಕರೆದನೋ
ಪಿತನ ಸುತನು, ಜನರೆಲ್ಲಾ, ಒಂದೆ ಮಂದೆ ಎಂದನೋ
||ಪಲ್ಲವಿ||
ದುಗ್ಗಾಣಿಗೆ ಗತಿಯಿಲ್ಲದ ಬಡವರು ಬಲ್ಲಿದರೆಂದನೋ
ನಾಕದ ಭಾರಿ ಬಾಗಿಲ ಅಗಳಿಯ ತೆರೆದು ಇರಿಸಿದನೋ
||ಪಲ್ಲವಿ||
ಸಿರಿವಂತರಿಗೋ, ಸಗ್ಗದ ಹೆಬ್ಬಾಗಿಲು ಸೂಜಿಯ ಕಣ್ಣೋ
ಬಡಬಗ್ಗರಿಗೋ, ನೀರುಕುಡಿದಂದದಿ ಸಲೀಸು ಎಂದನೋ
|ಪಲ್ಲವಿ||
ಬಡವಿಧವೆಯ ಪುಡಿಗಾಸು, ಹುಂಡಿ ತುಂಬುವ ಕನಕವೋ
ಊಟ ಮಾಡುವನಿಗಿಂತ ಬಡಿಸುವವ ಹೆಚ್ಚಾದವನೆಂದನೋ
||ಪಲ್ಲವಿ||
ವ್ಯಭಿಚಾರ, ಪರನಿಂದೆ, ನರಹತ್ಯೆ, ಕಳವು ಬೇಡವೆಂದನೋ
ತಂದೆತಾಯ ಗೌರವಿಸು, ಧನಕನಕ ಕೂಡಿಡಬೇಡ ಎಂದನೋ
||ಪಲ್ಲವಿ||
ಕಡೆಯಲಿ ಬಂದವರಲಿ, ಕೆಲವರು ಮೊದಲಿಗರಾಗುವರೋ
ಮೊದಲು ಬಂದವರಲಿ, ಕೆಲವರು ಕಡೆಯವರಾಗುವರೆಂದನೊ
||ಪಲ್ಲವಿ||
ಬೆಸ್ತರ, ಸುಂಕದವರ, ಸೂಳೆಯರನು ತನ್ನವರೆಂದನೊ,
ಅಂತ್ಯಜರು, ಅಸ್ಪೃಶ್ಯರು ಸರ್ವೇಶ್ವರನ ಮಕ್ಕಳೆಂದನೋ
||ಪಲ್ಲವಿ||
ಸಿದ್ಧಪ್ರವಾದಿಗಳ ಕಾಲಜ್ಞಾನ ಇತ್ತ ಭರವಸೆಯಂತೆಯೇ
ಪಿತನ ಒಡಂಬಡಿಕೆಯಂತೆಯೇ, ಧರೆಗಿಳಿದು ಬಂದನೋ
||ಪಲ್ಲವಿ||
ಬಂದ ಕಾಯಕದಂತೆ ನೊಂದವರ ನೋವ ಕಳೆದನೋ
ಸಂದ ಪಾಪ ಸಂಭಾವನೆಯ ಮರಣವ ಗೆದ್ದು ನಿಂತನೋ
||ಪಲ್ಲವಿ||
ಯೇಸುಸ್ವಾಮಿಯೊಂದಿಗೆ ನಾವು ಮರಣ ಹೊಂದಿದರೋ
ಜೀವಿಸುವೆವು ಸತತ ಸ್ವಾಮಿಯೊಂದಿಗೆ ವಿಶ್ವಾಸದಿಂದಲೋ
||ಪಲ್ಲವಿ||
ಬಂದನೋ ಬಂದನೋ. ಯೇಸುಸ್ವಾಮಿ ಎದ್ದು ಬಂದನೋ
||ಪಲ್ಲವಿ||
ಎದ್ದನೋ ಎದ್ದನೋ, ಸಮಾಧಿ ಬಿಟ್ಟು ಎದ್ದು ಬಂದನೋ
ಎದ್ದನೋ ಎದ್ದನೋ, ಯೇಸುಸ್ವಾಮಿ ಎದ್ದು ಬಂದನೋ
||ಪಲ್ಲವಿ||
ಬಿದ್ದನೋ ಬಿದ್ದನೋ, ಜವರಾಯನು ಬಿದ್ದು ಬಿಟ್ಟನೋ
ಬಿದ್ದನೋ ಬಿದ್ದನೋ, ಮಕಾಡೆಯಾಗಿ ಬಿದ್ದು ಬಿಟ್ಟನೋ
||ಪಲ್ಲವಿ||
ಗೆದ್ದನೋ ಗೆದ್ದನೋ, ಯೇಸುಸ್ವಾಮಿ ಗೆದ್ದು ಬಿಟ್ಟನೋ
ಗೆದ್ದನೋ ಗೆದ್ದನೋ ಜವರಾಯನನ್ನ ಗೆದ್ದು ಬಿಟ್ಟನೋ
||ಪಲ್ಲವಿ||
ಹುಟ್ಟು ಸಾವ ಮಧ್ಯದ ಕಿರಿಬಾಳಲಿ ಯೇಸುಸ್ವಾಮಿಯೋ
ನ್ಯಾಯ, ನೀತಿ, ಬದುಕ ಪ್ರೀತಿ, ಧರ್ಮವ ಕಲಿಸಿದನೋ |
|ಪಲ್ಲವಿ||
ನರರ ಬಣ್ಣಭಾವಗಳಲಿ, ಬೇಧವನು ಎಣಿಸಬೇಡಿರೋ
ಧರೆಯ ನರರೆಲ್ಲಾ, ಒಂದೇ ಜೀವ ಎಂದು ನುಡಿದನೋ
||ಪಲ್ಲವಿ||
ಸಗ್ಗದ ಸರ್ವೇಶ್ವರನ, ತಂದೆಯೇ ಎಂದು ಕರೆದನೋ
ಪಿತನ ಸುತನು, ಜನರೆಲ್ಲಾ, ಒಂದೆ ಮಂದೆ ಎಂದನೋ
||ಪಲ್ಲವಿ||
ದುಗ್ಗಾಣಿಗೆ ಗತಿಯಿಲ್ಲದ ಬಡವರು ಬಲ್ಲಿದರೆಂದನೋ
ನಾಕದ ಭಾರಿ ಬಾಗಿಲ ಅಗಳಿಯ ತೆರೆದು ಇರಿಸಿದನೋ
||ಪಲ್ಲವಿ||
ಸಿರಿವಂತರಿಗೋ, ಸಗ್ಗದ ಹೆಬ್ಬಾಗಿಲು ಸೂಜಿಯ ಕಣ್ಣೋ
ಬಡಬಗ್ಗರಿಗೋ, ನೀರುಕುಡಿದಂದದಿ ಸಲೀಸು ಎಂದನೋ
|ಪಲ್ಲವಿ||
ಬಡವಿಧವೆಯ ಪುಡಿಗಾಸು, ಹುಂಡಿ ತುಂಬುವ ಕನಕವೋ
ಊಟ ಮಾಡುವನಿಗಿಂತ ಬಡಿಸುವವ ಹೆಚ್ಚಾದವನೆಂದನೋ
||ಪಲ್ಲವಿ||
ವ್ಯಭಿಚಾರ, ಪರನಿಂದೆ, ನರಹತ್ಯೆ, ಕಳವು ಬೇಡವೆಂದನೋ
ತಂದೆತಾಯ ಗೌರವಿಸು, ಧನಕನಕ ಕೂಡಿಡಬೇಡ ಎಂದನೋ
||ಪಲ್ಲವಿ||
ಕಡೆಯಲಿ ಬಂದವರಲಿ, ಕೆಲವರು ಮೊದಲಿಗರಾಗುವರೋ
ಮೊದಲು ಬಂದವರಲಿ, ಕೆಲವರು ಕಡೆಯವರಾಗುವರೆಂದನೊ
||ಪಲ್ಲವಿ||
ಬೆಸ್ತರ, ಸುಂಕದವರ, ಸೂಳೆಯರನು ತನ್ನವರೆಂದನೊ,
ಅಂತ್ಯಜರು, ಅಸ್ಪೃಶ್ಯರು ಸರ್ವೇಶ್ವರನ ಮಕ್ಕಳೆಂದನೋ
||ಪಲ್ಲವಿ||
ಸಿದ್ಧಪ್ರವಾದಿಗಳ ಕಾಲಜ್ಞಾನ ಇತ್ತ ಭರವಸೆಯಂತೆಯೇ
ಪಿತನ ಒಡಂಬಡಿಕೆಯಂತೆಯೇ, ಧರೆಗಿಳಿದು ಬಂದನೋ
||ಪಲ್ಲವಿ||
ಬಂದ ಕಾಯಕದಂತೆ ನೊಂದವರ ನೋವ ಕಳೆದನೋ
ಸಂದ ಪಾಪ ಸಂಭಾವನೆಯ ಮರಣವ ಗೆದ್ದು ನಿಂತನೋ
||ಪಲ್ಲವಿ||
ಯೇಸುಸ್ವಾಮಿಯೊಂದಿಗೆ ನಾವು ಮರಣ ಹೊಂದಿದರೋ
ಜೀವಿಸುವೆವು ಸತತ ಸ್ವಾಮಿಯೊಂದಿಗೆ ವಿಶ್ವಾಸದಿಂದಲೋ
||ಪಲ್ಲವಿ||
ಕಥಾದನಿ - ¨ ಇನ್ನಾ
ಪೀತಿ ಎಂಬ ಔಷಧಿಯನ್ನು ಇನ್ನಷ್ಟು ಹೆಚ್ಚಿಸು ಅಷ್ಟೇ..
ಜಗತ್ತಿನಲ್ಲಿ ತುಂಬಿ ತುಳುಕುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಔಷಧಿ ಎನು? ಶಿಷ್ಯ ಗುರುವನ್ನು ಕೇಳಿದ. “ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಇರುವ ಒಂದೇ ಒಂದು ಔಷಧಿ ಎಂದರೆ ಪ್ರೀತಿ ಅಂದರೆ ಪ್ರೀತಿಸುವುದು” ಗುರು ಉತ್ತರಿಸಿದ. ಶಿಷ್ಯ ಗೊಂದಲಗೊಂಡ. ಪುನಃ ಕೇಳಿದ “ಈ ಪ್ರೀತಿಯು ಸಹ ಸಮಸ್ಯೆಗಳಿಗೆ ಪರಿಹಾರ ಕೊಡಲು ವಿಫಲವಾದರೇ?” ಗುರು ಸಮಾಧಾನದಿಂದ ಹೇಳಿದ “ ಪ್ರೀತಿ ಎಂಬ ಜೌಷಧಿಯನ್ನು ಇನ್ನಷ್ಟು ಹೆಚ್ಚಿಸು ಅಷ್ಟೇ..”
ನನ್ನನ್ನು ಸಹ ಒಳಹೊಗಲು ಅವರು ಬಿಡುತ್ತಿಲ್ಲ!
ಪಾಪಿಯೊಬ್ಬ ದೇವರಿಗೆ ದೂರು ಕೊಟ್ಟ “ ದೇವರೇ ನನ್ನನ್ನು ಜನರು ಬಹಿಷ್ಕರಿಸಿದ್ದಾರೆ ಚರ್ಚ್ ಒಳಗೆ ನನ್ನನ್ನು ಬಿಡುತ್ತಿಲ್ಲ…” ಪಾಪಿಯ ವೇದನೆಯನ್ನು ಆಲಿಸಿದ ದೇವರು “ಎಂತದು ನಿನ್ನ ದೂರು! ನನ್ನನ್ನು ಸಹ ಚರ್ಚ್ ಒಳಗೆ ಹೋಗಲು ಅವರು ಬಿಡುತ್ತಿಲ್ಲ!” ಎಂದು ದುಃಖದಿಂದ ನುಡಿದರಂತೆ.
ನಾನು ಕೊಡುವುದು ಹಾಲಾದರೂ, ಅದನ್ನು ಕೊಡುವುದು ನಾನು ಬದುಕಿರುವಾಗ
ಹಂದಿ ಮತ್ತು ಹಸುವಿನ ನಡುವೆ ಒಂದು ಚರ್ಚೆ ಅರಂಭವಾಯಿತು. ಹಂದಿ ಹಸುಗೆ ಹೇಳಿತ್ತು “ನೀನು ಜನರಿಗೆ ಕೇವಲ ಹಾಲು ಮಾತ್ರ ಕೊಡ್ತೀಯ, ನಾನಾದರೊ ನನ್ನನ್ನೇ ಸಂಪೂರ್ಣವಾಗಿ ಅವರಿಗೆ ಕೊಡುತ್ತೀನಿ… ಕೊನೆಗೆ ನನ್ನ ಕರುಳನ್ನು ಸಹ ಅವರು ಬಿಡುವುದಿಲ್ಲ… ಆದರೂ ಜನರು ನಿನ್ನನ್ನೇ ಹೆಚ್ಚು ಗೌರವಿಸುತ್ತಾರಲ್ಲ ಅದು ಹೇಗೆ?”
ಆಗ ಹಸು ಹೇಳಿತು: “ನೀನು ಎಲ್ಲವನ್ನು ಕೊಡೋದು ನೀನು ಸತ್ತ ಮೇಲೆ.. ನಾನು ಕೊಡುವುದು ಹಾಲಾದರೂ, ಅದನ್ನು ಕೊಡುವುದು ನಾನು ಬದುಕಿರುವಾಗ…ಅದಕ್ಕೆ ಜನರು ನಿನಗಿಂತ ನನ್ನನ್ನು ಹೆಚ್ಚಾಗಿ ಗೌರವಿಸುತ್ತಾರೆ”
ಜಗತ್ತಿನಲ್ಲಿ ತುಂಬಿ ತುಳುಕುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಔಷಧಿ ಎನು? ಶಿಷ್ಯ ಗುರುವನ್ನು ಕೇಳಿದ. “ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಇರುವ ಒಂದೇ ಒಂದು ಔಷಧಿ ಎಂದರೆ ಪ್ರೀತಿ ಅಂದರೆ ಪ್ರೀತಿಸುವುದು” ಗುರು ಉತ್ತರಿಸಿದ. ಶಿಷ್ಯ ಗೊಂದಲಗೊಂಡ. ಪುನಃ ಕೇಳಿದ “ಈ ಪ್ರೀತಿಯು ಸಹ ಸಮಸ್ಯೆಗಳಿಗೆ ಪರಿಹಾರ ಕೊಡಲು ವಿಫಲವಾದರೇ?” ಗುರು ಸಮಾಧಾನದಿಂದ ಹೇಳಿದ “ ಪ್ರೀತಿ ಎಂಬ ಜೌಷಧಿಯನ್ನು ಇನ್ನಷ್ಟು ಹೆಚ್ಚಿಸು ಅಷ್ಟೇ..”
ನನ್ನನ್ನು ಸಹ ಒಳಹೊಗಲು ಅವರು ಬಿಡುತ್ತಿಲ್ಲ!
ಪಾಪಿಯೊಬ್ಬ ದೇವರಿಗೆ ದೂರು ಕೊಟ್ಟ “ ದೇವರೇ ನನ್ನನ್ನು ಜನರು ಬಹಿಷ್ಕರಿಸಿದ್ದಾರೆ ಚರ್ಚ್ ಒಳಗೆ ನನ್ನನ್ನು ಬಿಡುತ್ತಿಲ್ಲ…” ಪಾಪಿಯ ವೇದನೆಯನ್ನು ಆಲಿಸಿದ ದೇವರು “ಎಂತದು ನಿನ್ನ ದೂರು! ನನ್ನನ್ನು ಸಹ ಚರ್ಚ್ ಒಳಗೆ ಹೋಗಲು ಅವರು ಬಿಡುತ್ತಿಲ್ಲ!” ಎಂದು ದುಃಖದಿಂದ ನುಡಿದರಂತೆ.
ನಾನು ಕೊಡುವುದು ಹಾಲಾದರೂ, ಅದನ್ನು ಕೊಡುವುದು ನಾನು ಬದುಕಿರುವಾಗ
ಹಂದಿ ಮತ್ತು ಹಸುವಿನ ನಡುವೆ ಒಂದು ಚರ್ಚೆ ಅರಂಭವಾಯಿತು. ಹಂದಿ ಹಸುಗೆ ಹೇಳಿತ್ತು “ನೀನು ಜನರಿಗೆ ಕೇವಲ ಹಾಲು ಮಾತ್ರ ಕೊಡ್ತೀಯ, ನಾನಾದರೊ ನನ್ನನ್ನೇ ಸಂಪೂರ್ಣವಾಗಿ ಅವರಿಗೆ ಕೊಡುತ್ತೀನಿ… ಕೊನೆಗೆ ನನ್ನ ಕರುಳನ್ನು ಸಹ ಅವರು ಬಿಡುವುದಿಲ್ಲ… ಆದರೂ ಜನರು ನಿನ್ನನ್ನೇ ಹೆಚ್ಚು ಗೌರವಿಸುತ್ತಾರಲ್ಲ ಅದು ಹೇಗೆ?”
ಆಗ ಹಸು ಹೇಳಿತು: “ನೀನು ಎಲ್ಲವನ್ನು ಕೊಡೋದು ನೀನು ಸತ್ತ ಮೇಲೆ.. ನಾನು ಕೊಡುವುದು ಹಾಲಾದರೂ, ಅದನ್ನು ಕೊಡುವುದು ನಾನು ಬದುಕಿರುವಾಗ…ಅದಕ್ಕೆ ಜನರು ನಿನಗಿಂತ ನನ್ನನ್ನು ಹೆಚ್ಚಾಗಿ ಗೌರವಿಸುತ್ತಾರೆ”
ಜೀವನದಲ್ಲಿ ದ್ವೇಷವು ಪರಿಣಾಮ ಬೀರಲು ಅವಕಾಶ ನೀಡಲಿಲ್ಲ - ಅನು
ಕೆಲವರು ಹಾಗೆನೇ, ಎಲ್ಲರು ನಡೆಯುವ ದಾರಿಯನ್ನು ಬಿಟ್ಟು, ಅಸ್ಪಷ್ಟ, ಗೊತ್ತುಗುರಿಯಿಲ್ಲದ ಬೇರೆಯೊಂದು ದಾರಿಯನ್ನೇ ಆರಿಸಿಕೊಳ್ಳುತ್ತಾರೆ. ಆ ದಾರಿಯ ಬಗ್ಗೆ ಅವರಿಗೆ ಏನೇನು ಗೊತ್ತಿಲ್ಲದಿದ್ದರೂ, ಆ ದಾರಿಯನ್ನೇ ಆರಿಸಿಕೊಳ್ಳುತ್ತಾರೆ. ಎಲ್ಲರು ನಡೆದ ದಾರಿಯಲ್ಲೇ ನಾನು ಕೂಡ ನಡೆಯಬೇಕು ಎಂಬ ಯಾವ ಕಾನೂನು ಇಲ್ಲವಲ್ಲ ಎಂಬ ಮನೋಭಾವದ ಈ ಜನರು ಜನರ ನೆನಪಿನಲ್ಲಿ ಅಚ್ಚೂತ್ತಿ ನಿಂತುಬಿಡುತ್ತಾರೆ. ಇಂತಹವರು ಸಾಮಾನ್ಯ ಅಥವಾ ಸಾಧಾರಣ ಪರಧಿಯಲ್ಲಿ ಬರುವಂತವರಲ್ಲ. ಸಿಂಪಲ್ ಆಗಿ ಹೇಳಬೇಕೆಂದರೆ ಅವರು ಅಸಾಮಾನ್ಯರು. ಒಂಟಿಯಾದರೂ ಆರಿಸಿಕೊಂಡ ದಾರಿಯಲ್ಲಿ ಒಂಟಿಸಲಗದಂತೆ ಮುನ್ನುಗುತ್ತಾರೆ. ಇಂತಹವರು ಇತರರಿಗೆ ಮೂರ್ಖನಂತೆ ಕಂಡರೂ, ಅವರು ಯಾವುದೂ ಒಂದು ಗುರಿಗೆ ಹಂಬಲಿಸುವವರು. ಇದಕ್ಕೊಂದು ಉದಾಹರಣೆ ಮೊನ್ನೆ ನಾನು ಗೌರಿ ಎಂಬ ಪತ್ರಿಕೆಯಲ್ಲಿ ಓದಿದ ಯೋಗೇಂದ್ರ ಯಾದವ್ರವರ ಬದುಕಿನಲ್ಲಿ ನಡೆದ ಒಂದು ಅಘಾತದ ಘಟನೆ.
1936ರ ಸಮಯ. ಈಗಿನ ಹರಿಯಾಣಾದ ಹಿಸಾರ್ ಎನ್ನುವ ಪಟ್ಟಣದಲ್ಲಿ ರಾಮ್ ಸಿಂಗ್ ಒಂದು ಶಾಲೆಯ ಶಿಕ್ಷಕರಾಗಿದ್ದರು. ಸ್ವಾತಂತ್ರಪೂರ್ವದ ಸಮಯ. ಅಲ್ಲಲ್ಲಿ ಕೋಮು ದುಳ್ಳರಿಗಳು ನಡೆಯುತ್ತಿದ್ದವು. ರಾಮ್ ಸಿಂಗ ಅವರು ಶಿಕ್ಷಕರಾಗಿದ್ದ ಶಾಲೆಗೆ ಕೋಮು ಗಲಭೆಯನ್ನೆಬ್ಬಿಸುತ್ತ ಮುಸಲ್ಮಾನರ ಗುಂಪೊಂದು ಬಂದು ಅಲ್ಲಿದ್ದ ಮಕ್ಕಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಆದೇಶಿಸಿದರು. ಮಕ್ಕಳನ್ನು ಮುಟ್ಟೂಕಿಂತ ಮುಂಚೆ ಮೊದಲು ನನ್ನನ್ನು ನೋಡಿಕೊಳ್ಳಿ ಎಂದು ತಮ್ಮ ಕರ್ತವ್ಯ ಪಾಲಿಸಿದರು ರಾಮ್ ಸಿಂಗ್. ಆಗ ಅವರ ಕುತ್ತಿಗೆಯನ್ನು ಕುಡಗೋಲಿನಿಂದ ಸೀಳಿದರು ಆ ಗಲಭೆಕೋರರು. ಈ ಘಟನೆಯನ್ನು ನೋಡುತ್ತ ನಿಂತವರಲ್ಲಿ ಏಳು ವರ್ಷದ ಒಬ್ಬ ಬಾಲಕ ದೇವೇಂದ್ರ ಸಿಂಗ್, ಕೊಲೆಗೀಡಾದ ಶಿಕ್ಷಕ ರಾಮ್ಸಿಂಗ್ ಅವರ ಪುತ್ರ. ತನ್ನ ಕಣ್ಣೆದುರಿಗೆ ಆದ ತನ್ನ ತಂದೆಯ ಕೊಲೆಯಿಂದ ಆ ಬಾಲಕನ ಮೇಲೆ ಏನೆಲ್ಲ ಪರಿಣಾಮ ಬೀರಿತೋ ಏನೋ. ತನ್ನ ತಂದೆಯನ್ನು ತನ್ನ ಕಣ್ಣೆದುರಿಗೇ ಕೊಂದ ಮುಸಲ್ಮಾನರನ್ನು ದ್ವೇಷಿಸಲು ಅವರಿಗೆ ಸಾಕಷ್ಟ ಕಾರಣಗಳಿದ್ದವು. ಆದರೆ ಆ ಬಾಲಕ ಬೆಳೆಯುತ್ತಿರುವ ಸಮಯ ಸ್ವಾತಂತ್ರ ಸಂಗ್ರಾಮದ ಸಮಯ. ಗಾಂಧಿಜೀಯವರ ಸತ್ಯಾಗ್ರಹಗಳ, ಹಿಂದು ಮುಸ್ಲಿಂ ಏಕತೆಗಾಗಿ ಜೀವ ತೇಯುತ್ತಿದ್ದ ಸಮಯ. ನಾನೊಬ್ಬ ಹಿಂದು ಆಗಲಿ, ಮುಸಲ್ಮಾನನಾಗಲಿ ಆಗುವುದಿಲ್ಲ, ನಾನು ಆಗುವುದು ಒಬ್ಬ ಮನುಷ್ಯ ಎನ್ನುವ ಮಾತುಗಳನ್ನು ಕೇಳಿದ ದೇವೇಂದ್ರ ಸಿಂಗ್, ತಮ್ಮ ಜೀವನದಲ್ಲಿ ದ್ವೇಷವು ಪರಿಣಾಮ ಬೀರಲು ಅವಕಾಶ ನೀಡಲಿಲ್ಲ.
ಮುಂದೆ ಬೆಳೆದು ಅರ್ಥಶಾಸ್ತ್ರದ ಪ್ರಾಧ್ಯಪಕರಾದ ದೇವೇಂದ್ರ ಸಿಂಗ್, ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ನೀಡಲು ನಿರ್ಧರಿಸಿದರು. ತನ್ನ ತಂದೆಯನ್ನು ತನ್ನೆದುರಿಗೆ ಕೊಂದ ಸಮುದಾಯದವರ ಹೆಸರನ್ನು ನೀಡಲು ನಿರ್ಧರಿಸಿದರು. ಮೊದಲ ಮಗುವಿಗೆ ನಜ್ಮಾ ಎಂದು ಹೆಸರಿಡುವಾಗ ಅವರ ಹೆಂಡತಿ “ಮಗಳಿಗೆ ಬೇಡ ಮುಂದೆ ಗಂಡು ಮಗುವಾದಾಗ ಈ ಪ್ರಯೋಗವನ್ನು ಮಾಡುವ, ಹೆಣ್ಣು ಮಗಳ ಮೇಲೆ ಬೇಡ, ಮುಂದೆ ಮದುವೆಗೆ ಸಮಸ್ಯೆಯಾಗುತ್ತದೆ” ಎಂದರು. ಹಾಗಾಗಿ ಆ ಹೆಣ್ಣು ಮಗುವಿಗೆ ನೀಲ ಎಂದು ನಾಮಕರಣ ಮಾಡಲಾಯಿತು. ಆನಂತರ ಗಂಡು ಮಗುವಾದಾಗ ಸಲೀಂ ಎನ್ನುವ ಹೆಸರನ್ನಿಟ್ಟರು.
ರಾಜಸ್ಥಾನದ ಒಂದು ಹಳ್ಳಿಯಲ್ಲಿ ಶಾಲೆಗೆ ಹೋಗುತ್ತಿದ್ದ ಆ ಬಾಲಕನ ಶಾಲೆಯಲ್ಲಿ ಯಾವ ಮುಸಲ್ಮಾನ ಮಕ್ಕಳೂ ಇರಲಿಲ್ಲ. ಹಾಗಗಿ ಎಲ್ಲ ಮಕ್ಕಳಿಗೂ ಇವನ ಬಗ್ಗೆ ಕುತೂಹಲ. “ನೀನ್ಯಾರು ನಿನ್ನನ್ನು ದತ್ತು ತೆಗೆದುಕೊಂಡಿದ್ದಾರಾ? ಮುಸಲ್ಮಾನರು ಹೇಗಿರುತ್ತಾರೆ?” ಎಂದೆಲ್ಲಾ ಪೀಡಿಸಲಾರಂಭಿಸಿದರು. ತಂದೆ ದೇವೇಂದ್ರ ಜಾತ್ಯತೀತತೆಯ ಬಗ್ಗೆ ಆ ಪುಟ್ಟ ಮಗು ಸಲೀಂನಿಗೆ ಏನೆಲ್ಲಾ ಹೇಳಿದರೂ ಅವನಿಗೆ ತಲೆಬುಡ ಅರ್ಥವಾಗಲಿಲ್ಲ. ಒಂದು ದಿನ ಮನೆಗೆ ಬಂದ ಬಾಲಕ “ಇಲ್ಲ ನನ್ನ ಹೆಸರನ್ನು ಬದಲಾಯಿಸಿ, ಇಲ್ಲವಾದರೆ ಇನ್ನು ಮುಂದೆ ನಾನು ಶಾಲೆಗೆ ಹೋಗೊದಿಲ್ಲ’ ಎಂದು ಘೋಷಿಸಿದರು. ಆಗ ಸಲೀಂ ಅಂತ ಇದ್ದ ಹೆಸರು ಯೋಗೇಂದ್ರ ಯಾದವ್ ಎಂದಾಯಿತು. (ಕೃಪೆ www. Naanugauri.com)
ಕ್ರಿಸ್ತ ತನ್ನ ಶಿಷ್ಯರಿಗೆ ಹೇಳಿದ: ಕಿರಿದಾದ ಬಾಗಿಲಿನಿಂದ ಪ್ರವೇಶಿಸಿರಿ ಎಂದು. ಅವನು ತನ್ನ ಶಿಷ್ಯರಿಗೆ ಬಹುಸಂಖ್ಯಾ ಜನರು ಆರಿಸಿಕೊಳ್ಳಲು ಭಯಪಡುವ, ಹಿಂದೇಟು ಹಾಕುವ ದಾರಿಯನ್ನು ನೀವು ಆರಿಸಿಕೊಳ್ಳಿ ಎಂದು ತಿಳಿ ಹೇಳಿದ.
Subscribe to:
Posts (Atom)
ಎತ್ತಿತೋರಿಸಲಾದ ಪೋಸ್ಟ್
ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ
ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...
-
- ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ) ಸ್ವಾತಂತ್ರ್ಯ ಪೂರ್ವದಲ್ಲಿ ಕ್ರೈಸ್ತರು: ಮಿಷನರಿಗಳ ಆಗಮನಕ್ಕೂ ಮುಂಚೆ ಅಂದರೆ ಮೂರನೇ ಶತಮಾನದಲ್ಲೇ ಕ್ರೈಸ್ತ ಧರ್ಮವನ...
-
ಡಾ. ಸಿಸ್ಟರ್ ಪ್ರೇಮ (ಎಸ್. ಎಮ್. ಎಮ್. ಐ) ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ಮಾಲಿಕೆಯಲ್ಲಿ ಸ್ವಾತಂತ್ರ್ಯಪೂರ...
-
ಸ್ಥೂಲವಾಗಿ ಹೇಳುವುದಾದರೆ, ಕ್ರೈಸ್ತರಲ್ಲಿ ಎರಡು ಪ್ರಮುಖ ಪಂಗಡಗಳಿವೆ ಎಂದು ನಾವು ಅಂದು ಕೊಂಡಿದ್ದೇವೆ. ಭಾರತೀಯರಾದ ನಮ್ಮ ತಿಳುವಳಿಕೆಯ ಆಧಾರದ ಮೇಲೆ ಕ್ರೈಸ್ತರು ಎಂದ...