Wednesday, 7 August 2019

ಸಂತ ಯೊವಾನ್ನರ ಶುಭಸಂದೇಶ – 12 - -ಸಹೋ. ವಿನಯ್ ಕುಮಾರ್ , ಚಿಕ್ಕಮಗಳೂರು


------------------------------------------------------------------------------------------
ಕಳೆದ ಬಾರಿ ಎರಡು ಐತಿಹಾಸಿಕ ಸನ್ನಿವೇಶ ಸಮುದಾಯದ ಒಳ ಅಂಶಗಳು ಹೇಗೆ ಶುಭಸಂದೇಶವನ್ನು ಪ್ರೇರೇಪಿಸಿದೆ ಎಂದು ಕಂಡೆವು. ಅದರಲ್ಲಿ ಉಳಿದ ತತ್ವಗಳನ್ನು ನಾನು ಈ ಸಂಚಿಕೆಯಲ್ಲಿ ಬರೆಯುತ್ತಿದ್ದೇನೆ.
---------------------------------------------------------------------------------------------------

3. ನೊಸ್ಟಿಸಿಸಂ - ( Gnosticism)
ಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಕೆಟ್ಟದ್ದು ಅಥವಾ ದುಷ್ಟತೆ ಬರುವುದು ಅಜ್ಞಾನದಿಂದ ಎನ್ನುವುದು ಅವರ ಸಿದ್ಧಾಂತ.           
1) ಮುಕ್ತಿ ಅಥವಾ ರಕ್ಷಣೆ ಪ್ರಾಪ್ತಿಯಾಗುವುದು ಅಜ್ಞಾನ ತೊಲಗಿದ ನಂತರ. ಮುಕ್ತಿಯನ್ನು ನಾವು ಜ್ಞಾನದ ಮೂಲಕ ಪಡೆಯಬಹುದಾಗಿದೆ. ಅದು ಯೇಸುಕ್ರಿಸ್ತರು ತಂದ ಜ್ಞಾನದಿಂದ ಎನ್ನುವುದೇ ಇವರ ವಾದ. ಈ ವಾದದ ಪ್ರಕಾರ ಈ ಗುಟ್ಟಿನ ಅರಿವು ಇರುವುದು ಕೆಲವರಿಗೆ ಮಾತ್ರ ಮತ್ತು ಅವರು ಮಾತ್ರ ರಕ್ಷಣೆಯನ್ನು ಹೊಂದುತ್ತಾರೆ, ಅಂದರೆ ರಕ್ಷಣೆ ಆಯ್ದ ಕೆಲವರಿಗೆ ಮಾತ್ರ. ಈ ವಾದಕ್ಕೆ ಶುಭಸಂದೇಶದ ಈ ವಾಕ್ಯವನ್ನು ತಾಳೆ ಹಾಕುತ್ತಾರೆ ಯೊವಾನ್ನ 17:3 "ಏಕೈಕ ನಿಜ ದೇವರಾದ ನಿಮ್ಮನ್ನು ನೀವು ಕಳುಹಿಸಿಕೊಟ್ಟ ಯೇಸುಕ್ರಿಸ್ತನನ್ನು ಅರಿತುಕೊಳ್ಳುವುದೇ ನಿತ್ಯಜೀವ" ( ಇಲ್ಲಿ ಯೇಸುಕ್ರಿಸ್ತರನ್ನು ನಿಜ ದೇವರು ಎನ್ನುವುದು ಗುಟ್ಟಾಗಿ ಕೆಲವರಿಗೆ ಮಾತ್ರ ಜ್ಞಾನ ನೀಡಲು ಕಳುಹಿಸಿಕೊಟ್ಟಿದ್ದಾರೆ ಎಂದು ಬಿಂಬಿಸಲಾಗುತ್ತದೆ)
2) ಇವರ ಎರಡನೆಯ ತತ್ವ - ಪ್ರಪಂಚದ ಬಗ್ಗೆ ದ್ವಂದ್ವ ಅಭಿಪ್ರಾಯವನ್ನು ಹೊಂದಿರುವುದಾಗಿದೆ. ಈ ಪ್ರಪಂಚ ಒಳಿತು ಕೆಡುಕು ಎಂಬ ಎರಡು ತತ್ವದ ಮೇಲೆ ನಿರ್ಮಿತವಾಗಿದೆ. ಪ್ರಪಂಚದಲ್ಲಿ ಎಲ್ಲವೂ ಕೆಟ್ಟದ್ದು. ತನ್ನನ್ನು ತಾನು ಪ್ರಪಂಚದಿಂದ ಹೊರತಂದರೆ ಮಾತ್ರ ರಕ್ಷಣೆ ಸಾಧ್ಯ ಮತ್ತು ಅಧ್ಯಾತ್ಮದ ಮೊರೆ ಹೊಗುವುದರಿಂದ ರಕ್ಷಣೆಯನ್ನು ಪಡೆಯಬಹುದು ಎನ್ನುತ್ತದೆ ಈ ತತ್ವ.
ಈ ತತ್ವ ಅಥವಾ ವಾದವನ್ನು ಶುಭಸಂದೇಶ ಭೇದಿಸುತ್ತದೆ. ಯೊವಾನ್ನ 20:31 "ಇಲ್ಲಿ ಬರೆದಿರುವ ಉದ್ದೇಶ ಇಷ್ಟೇ. ಯೇಸು ದೇವರ ಪುತ್ರ ಹಾಗೂ ಲೋಕೋದ್ಧಾರಕ ಎಂದು ನೀವು ವಿಶ್ವಾಸಿಸಬೇಕು. ವಿಶ್ವಾಸಿಸಿ ಅವರ ಹೆಸರಿನಲ್ಲಿ ಸಜೀವವನ್ನು ಪಡೆಯಬೇಕು" ಇಲ್ಲಿ ವಿಶ್ವಾಸ ಮುಖ್ಯ, ಜ್ಞಾನವಲ್ಲ ಎಂದು ಈ ಪಾಷಂಡವಾದವನ್ನು ಯೊವಾನ್ನರ ಶುಭಸಂದೇಶ ತಳ್ಳಿಹಾಕುತ್ತದೆ.
ಯೊವಾನ್ನರ ಶುಭಸಂದೇಶದಲ್ಲಿ ಇರುವ ಕೆಲವು ಉಲ್ಲೇಖಗಳನ್ನು ಈ ಪಂಥದವರು ತಪ್ಪಾಗಿ ಗ್ರಹಿಸಿ ಅದನ್ನು ತಮ್ಮ ವಾದಕ್ಕೆ ಬಳಸಿಕೊಳ್ಳುತ್ತಿದ್ದರು. ಯೊವಾನ್ನರ ಶುಭಸಂದೇಶವು ಲೋಕವನ್ನು ಒಳ್ಳೆಯ ದೃಷ್ಟಿಯಿಂದ ಬಿಂಬಿಸಿ ಅವರಲ್ಲಿದ್ದ ಅಜ್ಞಾನವನ್ನು ಹೋಗಲಾಡಿಸಿತು. ಯೊವಾನ್ನ 3:16 "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು". ಲೋಕದ ಸಕರಾತ್ಮಕ ವಿಷಯವನ್ನು ಇಲ್ಲಿ ತಿಳಿಸಲಾಗಿದೆ, ದೇವರು ಈ ಲೋಕವನ್ನು ಪ್ರೀತಿಸಿದರು, ಈ ಲೋಕ ಕೆಟ್ಟದ್ದಲ್ಲ ಎಂದು ಶುಭಸಂದೇಶ ಬೋಧಿಸುತ್ತದೆ.

ಪ್ರೇ. ಕಾ. 19:17ರಲ್ಲಿ ನಾವು ನೋಡುತ್ತೇವೆ, ಎಫೇಸದಲ್ಲಿ ವಾಸಿಸುತ್ತಿದ್ದ ವಿಶ್ವಾಸಿಗಳ ಬಗ್ಗೆ ಉಲ್ಲೇಖವಿದೆ. ಇವರು ಆತ್ಮರ ದೀಕ್ಷಾಸ್ನಾನದ ಬಗ್ಗೆ ತಿಳಿದಿರಲಿಲ್ಲ, ಅವರು ಬರೀ ಸ್ನಾನಿಕ ಯೊವಾನ್ನರ ದೀಕ್ಷಾಸ್ನಾನದ ಬಗ್ಗೆ ತಿಳಿದಿದ್ದರು. ಇದರಿಂದ ನಮಗೆ ತಿಳಿಯುತ್ತದೆ, ಕೆಲವರು ಸ್ನಾನಿಕ ಯೊವಾನ್ನನನ್ನು ಮೆಸ್ಸಾಯ (ಲೋಕೋದ್ಧಾರಕ) ಎಂದು ನಂಬಿದ್ದರು. ಈ ಯೊವಾನ್ನರ ಸಮುದಾಯವು ಎಫೇಸದಲ್ಲಿ ವಾಸಿಸುತ್ತಿದ್ದುದರಿಂದ ಈ ಬೋಧನೆಯನ್ನು ಅನುಸರಿಸುತ್ತಿದ್ದರು ಎನ್ನಿಸುತ್ತದೆ. ಅದಕ್ಕೆ ಶುಭಸಂದೇಶವು ಸ್ನಾನಿಕ ಯೊವಾನ್ನ ಮೆಸ್ಸಾಯ ಅಲ್ಲ ಎನ್ನುವುದರ ಬಗ್ಗೆ ತಿಳಿಸುತ್ತದೆ. ಆತನ ಸ್ಥಾನಮಾನವನ್ನು ನಿರ್ದೇಶಿಸುತ್ತದೆ. ಆತ ಮೆಸ್ಸಾಯನಲ್ಲ ಬದಲಾಗಿ ಬರೀ ಸಾಕ್ಷಿ ನೀಡುವವ ಎಂದು. ಯೊವಾನ್ನ 1:15, 20, 23, 5: 35-36 ಈ ಎಲ್ಲಾ ವಾಕ್ಯಗಳಲ್ಲಿ ಆತನು ಸಾಕ್ಷಿ ನೀಡುವುದರ ಬಗ್ಗೆ ತಿಳಿಸುತ್ತದೆ. ಬರೀ ಯೇಸುಸ್ವಾಮಿಗಾಗಿ ಹಾದಿ ಸಿದ್ಧ ಮಾಡಿದಂತಹ ವ್ಯಕ್ತಿ ಎಂದು ತೋರಿಸುತ್ತದೆ.

ಇನ್ನೊಂದು ಮುಖ್ಯ ಐತಿಹಾಸಿಕ ಸನ್ನಿವೇಶವೆಂದರೆ ಅದು ಸಮುದಾಯದ ವಿಭಜನೆ. ವಿಭಜಿಸುವ ಪ್ರವೃತ್ತಿ ಈ ಸಮುದಾಯದಲ್ಲಿ ಆಗಲೇ ಇದ್ದಿರಬೇಕು. ಅದನ್ನು ನಾವು ಯಾಜಕೀಯ ಪ್ರಾರ್ಥನೆ ಎಂದು ಕರೆಸಿಕೊಳ್ಳುವ 17ನೇ ಅಧ್ಯಾಯದಲ್ಲಿ ಕಾಣುತ್ತೇವೆ 17: 21 "ಪಿತನೆ ಇವರೆಲ್ಲ ಒಂದಾಗಿರಲಿ" ಎಂದು. ಈ ವಾಕ್ಯದಲ್ಲಿ ನಮಗೆ ತಿಳಿಯುತ್ತದೆ ಈಗಾಗಲೇ ಸಮುದಾಯದಲ್ಲಿ ವಿಭಜನೆಯಾಗಿತ್ತು ಎಂದು. ಈ ಎಲ್ಲಾ ಸನ್ನಿವೇಶಗಳು ಶುಭಸಂದೇಶವನ್ನು ಅವುಗಳದ್ದೇ ಆದ ರೀತಿಯಲ್ಲಿ ಪ್ರೇರೇಪಿಸಿವೆ.

**************

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...