Wednesday, 7 August 2019

ಓದಿದ ಪುಸ್ತಕಗಳಿಂದ...

ಕವಿಯೊಬ್ಬನ ನೆನಪು.
ರೀಟಾ: ಕಿರಿಯ ಲೇಖಕರಿಗೆ ಏನಾದರೂ ಹಿತವಚನ ನೀಡುವಿರಾ?
ನೆರೂಡ: ಮುಖ್ಯ ಹಿತವಚನ, ಅವರು ರಾಜಕೀಯ ಪದ್ಯಗಳನ್ನು ಬರೆಯಲು ಯತ್ನಿಸಕೂಡದು, ತಮಗೆ ತೋಚಿದಂತೆ ಬರೆಯಬೇಕು. ರಾಜಕೀಯ ಕಾವ್ಯ ಪ್ರೇಮ ಕಾವ್ಯದಷ್ಟೇ ಗಾಢವೂ, ತೀವ್ರವೂ ಆದದ್ದು. ಆದರೆ ಅದನ್ನು ಪ್ರಯತ್ನಪೂರ್ವಕವಾಗಿ ಬರೆಯಲು ಆಗುವುದಿಲ್ಲ. ಬೇರೆ ಕಾವ್ಯ ಬರೆದು ಅನುಭವಿಸಿದ ಮೇಲೆ ರಾಜಕೀಯವನ್ನು ಗ್ರಹಿಸುವ ಶಕ್ತಿ ಬಂದಾಗ ಮಾತ್ರ ಅವರು ರಾಜಕೀಯ ಪದ್ಯ ಬರೆಯಬಹುದು. ರಾಜಕೀಯ ಕಾವ್ಯ ಬರೆಯುವಾತ ಕಾವ್ಯಕ್ಕೆ ದ್ರೋಹ ಬಗೆದ ಬಗ್ಗೆ, ರಾಜಕೀಯಕ್ಕೆ ದ್ರೋಹ ಬಗೆದ ಬಗ್ಗೆ ಕಟು ಟೀಕೆಗೆ ಒಳಗಾಗಲು ಸಿದ್ಧನಿರಬೇಕು.
ರೀಟಾ: ನೀವು ನಿಮ್ಮ ದೇಶ ಮತ್ತು ನೊಬೆಲ್ ಬಹುಮಾನ – ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗಿ ಬಂದರೆ ಯಾವುದನ್ನು ಆರಿಸಿಕೊಳ್ಳುತ್ತೀರಿ?
ನೆರೂಡ: ಆ ಬಗೆಯ ಹುಸಿ ಆಯ್ಕೆ ಎದುರಾಗಲಾರದು.
ರೀಟಾ: ಅವೆರಡನ್ನು ಒಂದು ಮೇಜಿನ ಮೇಲಿಟ್ಟು ಆರಿಸಿಕೋ ಎಂದು ಹೇಳಿದರೆನ್ನಿ..
ನೆರೂಡ: ಬೇರೆ ಮೇಜಿಗೆ ಹೋಗಿ ಕೂರುತ್ತೇನೆ.
ಟೀಕೆ ಟಿಪ್ಪಣಿ – ಪಿ ಲಂಕೇಶ್ - ಪುಟ – 142- 43

ಇಲ್ಲಿ ಯಾವನೂ ದ್ವೀಪವಲ್ಲ
ಆ ಓಲಗದ ಸದ್ದು ಯಾವ ನೋವನ್ನು, ಯಾರ ಸಾವನ್ನು, ಎಷ್ಟು ಹೃದಯಗಳ ಆಕ್ರಂದನವನ್ನು ಸೂಚಿಸುತ್ತಿದೆ? ಅದೇ ದುಃಖದ ಓಲಗ ಎಷ್ಟ ಜನರ ಸಂತೋಷವನ್ನು, ಸಾವಿನ ಬಗ್ಗೆ ಅಟ್ಟಹಾಸವನ್ನು, ರೋಷದ ಅಂತಿಮವನ್ನು, ಸೇಡಿನ ಪ್ರತಿಫಲನವನ್ನು ಮಂಡಿಸುತ್ತಿದೆ?
ಆ ಓಲಗದ ಸದ್ದು ಯಾವ ಮಾಯವಾದ ಕ್ರಿಯಶೀಲತೆಯನ್ನು ಕೊನೆಗೊಂಡ ಕನಸನ್ನು ಸೂಚಿಸುತ್ತಿದೆ?
ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಲು ನನ್ನ ಮನಸ್ಸು ತವಕಿಸುತ್ತಿದೆ. ನಾನು ಬಲ್ಲ. ಪ್ರೀತಿಸಿದ, ದ್ವೇಷಿಸಿದ ಯಾರೂ ಮರಣ ಹೊಂದಿಲ್ಲ ; ನನ್ನನ್ನು ದುಃಖಕ್ಕೆ ಈಡುಮಾಡಿಲ್ಲ. ಎಲ್ಲೋ ಸ್ಫುರಿಸುತ್ತಿರುವ ಈ ನೋವಿನ ಓಲಗದ ಸದ್ದು ನನ್ನನ್ನೇಕೆ ಕಾಡಿಸಬೇಕು?
For Whom the bell tolls? ಎಂದು ಕೇಳುವ ಕ್ರಶ್ಚಿಯನ್ ಕವಿ ಡನ್ ನೆನಪಾಗುತ್ತಿದ್ದಾನೆ. ಮರಣದ ಸೂಚಕವಾಗಿ ಕ್ರಿಶ್ಚಿಯನ್ ದೇವಾಲದಲ್ಲಿ ಗಂಟೆ ನಿನದಿಸುತ್ತದೆ; ಯಾವನೋ ಒಬ್ಬ ವ್ಯಕ್ತಿ ಮರಣ ಹೊಂದಿ ಮಣ್ಣಾಗುತ್ತಿದ್ದಾನೆ. ಆತನ ಬಗೆ ವ್ಯಾಕುಲಗೊಳ್ಳಲು, ಅಪರಿಚಿತ ವ್ಯಕ್ತಿ ಸಾವಿನ ಬಗ್ಗೆ ದುಗುಡಗೊಳ್ಳಲು ನಿರಾರಿಸುತ್ತಿರುವ ಮನಸ್ಸಿನ ಆಳಕ್ಕೆ ಹೋಗಿ ನೋಡಿದರೆ ಅಲ್ಲಿ ಕವಿಯ ಆತ್ಮಕ್ಕಾದ ನಷ್ಟದ ಅರಿವಾಗುತ್ತದೆ. ಯಾವನೇ ಒಬ್ಬ ವ್ಯಕ್ತಿ ನಷ್ಟ, ಆನ್ಯಾಯ, ಸಾವಿಗೆ ಈಡಾದರೂ ಬದುಕಿರುವವರ ಜೀವನ ಸಂಕುಚಿತಗೊಳ್ಳುತ್ತದೆ. No man is an island ಎಂದು ತನ್ನ ಪದ್ಯವನ್ನು ಶುರುಮಾಡುವ ಕವಿ ಈ ಜಗತ್ತಿನ ಎಲ್ಲರ ಬದುಕು ತಳಕು ಹಾಕಿಕೊಂಡಿರುವುದನ್ನು, ಪರಸ್ಪರ ಸಂಬಂಧ ಹೊದಿರುವುದನ್ನು ಸೂಚಿಸುತ್ತಾನೆ.
ಟೀಕೆ ಟಿಪ್ಪಣಿ 1 - ಪಿ ಲಂಕೇಶ್ ಪುಟ 162


ಓ ಸತ್ಯ ಸ್ವರೂಪಿಯಾದ ದೇವರೆ!
ನಿರಂತರ ಒಲವಿನಲ್ಲಿ
ನನ್ನನ್ನು ನಿನ್ನಲ್ಲಿ ಒಂದುಗೂಡಿಸು
ಹಲವು ವಿಷಯಗಳನ್ನೋದಿ ಕೇಳಿ
ಅನ್ಯಮನಸ್ಕನಾಗಿಹೆ ನಾನು
ನನಗೆ ಅನಿಸುವುದೆಲ್ಲವೂ
ಹಂಬಲಿಸುವುದೆಲ್ಲವೂ
ನಿನ್ನಲ್ಲಿಯೇ ಇದೆ.
ಬೋಧಕರೆಲ್ಲರೂ ಮೌನವಾಗಿರಲಿ
ಸೃಷ್ಟಿಸಲಾದ ಸಮಸ್ತ ವಸ್ತುಗಳೆಲ್ಲವೂ
ನಿನ್ನ ಸಮ್ಮುಖದಲ್ಲಿ ಸುಮ್ಮನಿರಲಿ.
ನೀನೊಬ್ಬನೇ ನನ್ನೊಡನೆ ಮಾತನಾಡು

ನಿನ್ನಂತೆ ನಾನಾಗಲು
(Thomas A Kempis: The imitation of Christ ಗ್ರಂಥದ ಭಾಗವೊಂದರ ಭಾವಾನುವಾದ) -
ಪ್ರಶಾಂತ್  ವಲೆರಿಯನ್ ಮಾಡ್ತ. ಪುಟ - 4

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...