Wednesday, 7 August 2019

ಸಾಂಭ್ರಮಿಕ ಪೂಜಾವಿಧಿ (ಸಾಲೆಮ್ನಿಟಿ), ಹಬ್ಬ/ ಉತ್ಸವ (ಫೀಸ್ಟ್) ಮತ್ತು ಸ್ಮರಣೆ (ಮೆಮೊರಿಯಲ್)ಗಳಲ್ಲಿನ ವ್ಯತ್ಯಾಸಗಳೇನು? - ನಂದಗಾವ್

ಕಥೋಲಿಕ ಧರ್ಮಸಭೆಯು (ಚರ್ಚು), ಮಾನವಕೋಟಿಯ ಬಿಡುಗಡೆ, ಮುಕ್ತಿಯ ರಹಸ್ಯ ಅಂದರೆ ದೈವಯೋಜನೆಯಲ್ಲಿ ಪ್ರಮುಖವಾಗಿರುವ ಯೇಸುಸ್ವಾಮಿಯ ಜೀವಿತದ ವಿವಿಧ ಘಟನಾವಳಿಗಳನ್ನು ಆಧರಿಸಿ ಹಬ್ಬಹರಿದಿನಗಳ ಪೂಜಾವಿಧಿಯ ದಿನದರ್ಶಿ(ಪೂಜಾ ಪಂಚಾಂಗ)ವನ್ನು ನಿಗದಿ(ಸಿದ್ಧ) ಮಾಡುತ್ತದೆ. 
   ಇಡೀ ವರ್ಷದ ಪೂಜಾವಿಧಿಯ ಪೂಜಾ ಪಂಚಾಂಗದಲ್ಲಿ ಯೇಸುಸ್ವಾಮಿಯ ಸಂಪೂರ್ಣ ದೈವಯೋಜನೆಯನ್ನು ಕಥೋಲಿಕ ಧರ್ಮಸಭೆಯು ಸಂಭ್ರಮ, ಸಡಗರದಿಂದ ಆಚರಿಸುತ್ತದೆ. ದೈವ ಸ್ವರೂಪಿಯಾದ ಸುತ ಯೇಸುಸ್ವಾಮಿಯ ಹುಟ್ಟಿನಿಂದ ಆತನ ಶಿಲುಬೆ ಮರಣ, ಪುನರುತ್ಥಾನ, ಸ್ವರ್ಗಾರೋಹಣ, ಪಂಚಾಶತ್ತಮ (ಪವಿತ್ರಾತ್ಮರು ಶಿಷ್ಯರ ಮೇಲೆ ಇಳಿದುಬಂದ ದಿನ), ಇನ್ನಿತರ ಹಲವಾರು ಘಟನಾವಳಿಗಳ ಸ್ಮರಣೆಯ ಆಚರಣೆಗಳು, ಧರ್ಮಸಭೆಯ ಸ್ಥಾಪನೆ ಹಾಗೂ ಅಂತಿಮ ನ್ಯಾಯನಿರ್ಣಯದ ದಿನ - ಕ್ರಿಸ್ತರಾಜರ ಎರಡನೇ ಆಗಮನದ ನಿರೀಕ್ಷೆಯ ಸಾಂಭ್ರಮಿಕ ಪೂಜಾವಿಧಿಗಳು ಪಂಚಾಂಗದಲ್ಲಿ ಅಡಕವಾಗಿರುತ್ತವೆ.
   ಬಹುಮುಖ್ಯವಾಗಿ ಪ್ರತಿಭಾನುವಾರವೂ, ಪ್ರಭು ಯೇಸುಸ್ವಾಮಿಯು ಪುನರುತ್ಥಾನರಾಗಿ ಪಾಪ ಮತ್ತು ಸಾವಿನ ಮೇಲೆ ಗೆಲುವು ಸಾಧಿಸಿದ್ದನ್ನು ಸ್ಮರಿಸಿಕೊಂಡು ಸಂಭ್ರಮಿಸಿ ಪೂಜಾವಿಧಿಗಳನ್ನು ನಡೆಸಲಾಗುತ್ತದೆ. ಮುಕ್ತಿಯ ರಹಸ್ಯ ಅಂದರೆ ದೈವ ಯೋಜನೆಯಲ್ಲಿನ, ಯೇಸುಸ್ವಾಮಿಯ ತಾಯಿ - ಮಾತೆ ಮರಿಯಳ ಪಾಲುದಾರಿಕೆಯ ವೈಶಿಷ್ಟ್ಯವನ್ನು ಗುರುತಿಸಿ, ಕಥೋಲಿಕ ಧರ್ಮಸಭೆಯು ಅವಳಿಗೆ ವಿಶೇಷ ರೀತಿಯಿಂದ ಗೌರವ ಸಲ್ಲಿಸಲು ಕಥೋಲಿಕ ಪಂಚಾಂಗದಲ್ಲಿ ಹಲವಾರು ದಿನಗಳನ್ನು ನಿಗದಿ ಪಡಿಸಿದೆ.
   ಇದಲ್ಲದೇ ಕಥೋಲಿಕ ಧರ್ಮಸಭೆಯು, ಇಹಲೋಕದಲ್ಲಿ ಸಂತರ ಕಳೆದ ಕೊನೆಯ ದಿನವನ್ನು ಅವರು ಸ್ವರ್ಗಕ್ಕೆ ಸೇರಿದ ದಿನವೆಂದು ಗುರುತಿಸಿ, ಅವರ ಸ್ಮರಣೆಯಲ್ಲಿ ಸಂಭ್ರಮಾಚರಣೆಗಾಗಿ ಹಲವಾರು ದಿನಗಳನ್ನು ಗುರುತಿಸಿದೆ. ಸಂತರುಗಳ ಸ್ಮರಣೆಯಿಂದ, ಸಂತರ ನಿಸ್ವಾರ್ಥ ಪಾವಿತ್ರ್ಯದ ಬದುಕಿನ ಕ್ಷಣಗಳಿಗೆ ವಿಶ್ವಾಸಿಕರು ತಮ್ಮನ್ನು ತಾವು ತೆರೆದುಕೊಳ್ಳುವರು ಎಂಬ ಆಶಯವನ್ನು ಧರ್ಮಸಭೆ ಹೊಂದಿದೆ. ಆಯಾ ತಿಂಗಳಲ್ಲಿ ಸಂತರ ದಿನಗಳನ್ನು ಸಾಮಾನ್ಯವಾಗಿ ಅವರು ಹುತಾತ್ಮರಾದ, ಹತ್ಯೆಗೊಂಡ (ರಕ್ತಸಾಕ್ಷಿ) ದಿನಗಳಂದೇ ನಿರ್ಧರಿಸಲಾಗಿತ್ತದೆ. ಕೆಲವೊಮ್ಮೆ ಇದಕ್ಕೆ ಅಪವಾದಗಳೂ ಉಂಟು.
  ಸಾಂಭ್ರಮಿಕ ಪೂಜಾವಿಧಿಗಳನ್ನು ಅತ್ಯಂತ ಮಹತ್ವದ ದಿನಗಳಂದು ಆಚರಿಸಲಾಗುತ್ತದೆ. ಪ್ರತಿಯೊಂದು ಸಾಂಭ್ರಮಿಕ ಪುಜಾವಿಧಿಯು ಹಬ್ಬದ ಹಿಂದಿನ ದಿನದ ಪ್ರಾರ್ಥನೆಗಳೊಂದಿಗೆ ಆರಂಭವಾಗಿತ್ತದೆ. ಹಲವಾರು ಸಾಂಭ್ರಮಿಕ ಪೂಜಾವಿಧಿಗಳು ಅವುಗಳದೇ ಆದ ಜಾಗರಣೆಯ ದಿವ್ಯಬಲಿಪೂಜೆ - ಪ್ರಭು ಭೋಜನದ ವಿಧಿಯೊಂದಿಗೆ ಸಂಪನ್ನಗೊಳ್ಳುತ್ತದೆ. ಆ ದಿನಗಳಂದು ಸ್ತೋತ್ರಗೀತೆ (ಗ್ಲೋರಿಯಾ) ಮತ್ತು ಕ್ರೈಸ್ತ ಧರ್ಮದ ವಿಶ್ವಾಸ ಪ್ರಮಾಣ (ಕ್ರೀಡ್)ಗಳನ್ನು ಪಠಿಸಲಾಗುತ್ತದೆ.
 ಭಾನುವಾರ ಮತ್ತು ಸಾಲದ ಹಬ್ಬದ ಪವಿತ್ರ ದಿನಗಳಲ್ಲಿ (ಜನವರಿ 1 - ದೇವಮಾತೆ ಮರಿಯಮ್ಮನವರ ಮಹೋತ್ಸವ - ಕ್ರಿಸ್ತ ಜಯಂತಿಯ ಅಷ್ಟಮ ದಿನ, ಈಸ್ಟರ್ ಭಾನುವಾರದ ನಲವತ್ತನೇ ದಿನ- ಸ್ವರ್ಗಾರೋಹಣದ ಗುರುವಾರ, ಆಗಸ್ಟ್ 15 - ಪೂಜ್ಯ ಕನ್ಯಾಮರಿಯಮ್ಮನವರ ಸ್ವರ್ಗಸ್ವೀಕಾರ/ ಸ್ವರ್ಗಾರೋಹಣ ಮಹೋತ್ಸವ, ನವೆಂಬರ್ 1 - ಸಕಲ ಸಂತರ ಮಹೋತ್ಸವ, ಡಿಸೆಂಬರ್ 8 - ಪರಿಶುದ್ಧ ಕನ್ಯಾಮರಿಯಮ್ಮನವರ ಅಮಲೋದ್ಭವ ಮಹೋತ್ಸವ, ಡಿಸೆಂಬರ್ 25 - ಕ್ರಿಸ್ತ ಜಯಂತಿ, ಪ್ರಭುವಿನ ಜನೋತ್ಸವದ ಹಬ್ಬ) ಸದಾಕಾಲ ಸಾಂಭ್ರಮಿಕ ಪೂಜಾವಿಧಿಗಳನ್ನು ನಡೆಸಿಕೊಡಲಾಗುತ್ತದೆ. 
 ಇವು ದೊಡ್ಡ ಹಬ್ಬಗಳ ದಿನಗಳು, ಮಹೋತ್ಸವದ ದಿನಗಳು. ಈ ಪಟ್ಟಿಯಲ್ಲಿ, ಮಾರ್ಚ 19 - ಮರಿಯಮ್ಮನವರ ಪತಿ ಸಂತ ಜೋಸೆಫ್‍ರ ಮಹೋತ್ಸವ, ಮಾರ್ಚ್ 25- ಮಂಗಳವಾರ್ತೆಯ ಮಹೋತ್ಸವ, ಪಂಚಾಶತ್ತಮ ದಿನದಿಂದ 19ನೇ ದಿನಕ್ಕೆ ಬರುವ ಯೇಸುಸ್ವಾಮಿಯ ಪವಿತ್ರ ಹೃದಯದ ಮಹೋತ್ಸವ, ಜೂನ್ 24- ಸಂತ ಸ್ನಾನಿಕ ಯೋವಾನ್ನರ ಜಯಂತಿ ಮಹೋತ್ಸವ, ಜೂನ್ 29 - ಪ್ರೇಷಿತರಾದ ಸಂತ ಪೇತ್ರ ಮತ್ತು ಪೌಲರ ಮಹೋತ್ಸವ, ಜುಲೈ 3- ಪ್ರೇಷಿತ ಸಂತ ತೋಮಾಸ್‍ರ ಮಹೋತ್ಸವ, ಡಿಸೆಂಬರ್ 3 ಭಾರತದ ಪಾಲಕ ಸಂತ ಫ್ರಾನ್ಸಿಸ್ ಕ್ಷೇವಿಯರ್‌ರ  ಮಹೋತ್ಸವಗಳು ಸೇರುತ್ತವೆ.

 ಇನ್ನು ಎರಡನೇ ಹಂತದಲ್ಲಿ ಹಬ್ಬದ ದಿನಗಳನ್ನು ಕಥೋಲಿಕ ಪಂಚಾಂಗದ ಪ್ರಕಾರ ನಿಗದಿತ ದಿನಗಳಂದೇ ಆಚರಿಸಲಾಗುವುದು. ಈ ಹಬ್ಬಗಳಿಗೆ ಹಿಂದಿನ ದಿನದ ಸಂಜೆ ಪ್ರಾರ್ಥನೆಗಳ ಅಥವಾ ಜಾಗರಣೆಯ ಪ್ರಭು ಭೋಜನದ ಜಂಜಾಟವಿರುವುದಿಲ್ಲ. ಪ್ರಭುವಿನ ಹಬ್ಬಗಳಲ್ಲಿ ಇವಕ್ಕೆ ವಿನಾಯತಿಯೂ ಉಂಟು. ಉದಾಹರಣೆಗೆ, ದೇವಾಲಯದಲ್ಲಿ ಯೇಸುಬಾಲರ ಸಮರ್ಪಣೆಯ ಹಬ್ಬದಲ್ಲಿ ಅದರದೇ ಆದ ಹಿಂದಿನ ದಿನ ಸಂಜೆಯ ಪ್ರಾರ್ಥನೆಗಳ ಸಲ್ಲಿಕೆಯಾಗುತ್ತದೆ. ಆ ದಿನಗಳಲ್ಲಿ ಸ್ತೋತ್ರಗೀತೆಗಳ ಹಾಡುಗಾರಿಕೆ ಇದ್ದರೂ ಕ್ರೈಸ್ತ ಧರ್ಮದ ವಿಶ್ವಾಸ ಪ್ರಮಾಣವನ್ನು ಪಠಿಸುವುದಿಲ್ಲ.

ಕರ್ನಾಟಕದಲ್ಲಿ ಸದ್ಯಕ್ಕೆ ಜಾರಿಯಲ್ಲಿರುವ ಪೂಜಾ ಪಂಚಾಂಗದ ಪ್ರಕಾರ, ಡಿಸೆಂಬರ್ 26- ಪ್ರಥಮ ರಕ್ತಸಾಕ್ಷಿ ಸಂತ ಸ್ತೇಫನರ ಹಬ್ಬ, ಡಿಸೆಂಬರ್ 27- ಪ್ರೇಷಿತ ಮತ್ತು ಶುಭಸಂದೇಶಕರ್ತ ಸಂತ ಯೊವಾನ್ನರ ಹಬ್ಬ, ಪ್ರೇಷಿತರಾದ ಸಂತ ಫಿಲಿಪ್ ಮತ್ತು ಸಂತ ಯಕೋಬರ ಹಬ್ಬ, ಮೇ 14- ಪ್ರೇಷಿತ ಸಂತ ಮತ್ತೀಯರ ಹಬ್ಬ, ಜೂನ್ 11- ಪ್ರೇಷಿತ ಸಂತ ಬಾರ್ನನಬರ ಹಬ್ಬ, ಜುಲೈ 25- ಪ್ರೇಷಿತ ಸಂತ ಯಕೋಬರ ಹಬ್ಬ, ಸೆಪ್ಟೆಂಬರ 31 - ಪ್ರೇಷಿತ ಮತ್ತು ಶುಭಸಂದೇಶಕರ್ತ ಸಂತ ಮತ್ತಾಯ, ಅಕ್ಟೋಬರ್ 18- ಶುಭಸಂದೇಶಕರ್ತ ಸಂತ ಲೂಕರ ಹಬ್ಬ, ಪ್ರೇಷಿತರಾದ ಸಂತ ಸಿಮೋನ್ ಮತ್ತ ಸಂತ ಯೂದರ ಹಬ್ಬ ಮತ್ತು ನವೆಂಬರ್ 30 ಸಂತ ಪ್ರೇಷಿತ ಅಂದ್ರೇಯರ ಹಬ್ಬ- ಮೊದಲಾದವು ಸಂತರ ಸ್ಮರಣೆ ಅಲ್ಲ ಸಂತರ ಹಬ್ಬಗಳು.

ಮೂರನೇ ಹಂತದಲ್ಲಿ ಸ್ಮರಣೆಗಳು ಬರುತ್ತವೆ. ಈ ಸ್ಮರಣೆಯಲ್ಲಿ ಕೆಲವು ಕಡ್ಡಾಯವಾಗಿವೆ ಮತ್ತೆ ಕೆಲವು ಐಚ್ಛಿಕವೂ ಆಗಿವೆ. ಸ್ಮರಣೆಗಳು ಒಬ್ಬ ಸಂತನ ಅಥವಾ ಸಂತರುಗಳ ಸ್ಮರಣೆಯ ದಿನಗಳಾಗಿರುತ್ತವೆ. ಸಾಲದ ಅಂದರೆ ಕಡ್ಡಾಯದ ಸಂತರ ಸ್ಮರಣೆಗಳನ್ನು ಅಗತ್ಯವಾಗಿ ಆಚರಿಸಬೇಕು. ಇನ್ನು ಐಚ್ಛಿಕ ಆಗಿರುವ ಸಂತರುಗಳ ಸ್ಮರಣೆಯನ್ನು ಆಚರಿಸದೇ ಬಿಟ್ಟರೂ ನಡೆಯುತ್ತದೆ. ಉದಾಹರಣೆಗೆ, ಜನವರಿ 31ರಂದು ಆಚರಿಸಲಾಗುವ ಧರ್ಮಗುರು ಸಂತ ಜಾನ್ ಬಾಸ್ಕೊ ಅವರ ಸ್ಮರಣೆ ಕಡ್ಡಾಯದ ಲೆಕ್ಕದಲ್ಲಿ ಬಂದರೆ, ಫೆಬ್ರವರಿ 3ರಂದು ನಿಗದಿಪಡಿಸಲಾದ ಸಂತ ಬ್ಲೇಸ್‍ರ ಸ್ಮರಣೆಯ ಆಚರಣೆ ಐಚ್ಛಿಕವಾಗಿದೆ. ವಿಶ್ವಮಾನ್ಯತೆ ಹೊಂದಿರುವ ಸಂತರ ಸ್ಮರಣೆಯ ದಿನಗಳನ್ನು ಸಾರ್ವತ್ರಿಕ ಕಥೋಲಿಕ ಪಂಚಾಂಗದಲ್ಲಿ ನಮೂದಿಸುವ ಕಥೋಲಿಕ ಧರ್ಮಸಭೆಯು ಅವನ್ನು ಸಾರ್ವತ್ರಿಕವಾಗಿ ಆಚರಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಆಯಾ ಗುಡಿಗಳು, ದೇಶಗಳು ಅಥವಾ ಧಾರ್ಮಿಕ ಸಮುದಾಯಗಳು ತಮ್ಮ ಅಗತ್ಯಗಳಿಗೆ ಪೂರಕವಾಗಿ ವಿಶೇಷ ಮನ್ನಣೆಯಿಂದ ಸಂತರ ಸ್ಮರಣೆಯನ್ನು ಹಬ್ಬವೆಂದು ಆಚರಿಸಬಹುದಾಗಿದೆ. ಉದಾಹರಣೆಗೆ, ಧರ್ಮಕ್ಷೇತ್ರದ ಪಾಲಕ ಸಂತನ ಗೌರವಾರ್ಥದ ಸ್ಮರಣೆಯನ್ನು ಹಬ್ಬವೆಂದು ಗುರುತಿಸಬಹುದು.
ಇದಲ್ಲದೇ, ಸಂತರ ಸ್ಮರಣೆಯ ಆಚರಣೆಯು ಆಯಾ ಹಂಗಾಮಿನ ಪಂಚಾಂಗವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಕಡ್ಡಾಯವೆಂದು ಗುರುತಿಸಿ ಕಡ್ಡಾಯವಾಗಿ ಆಚರಿಸಲಾಗುವ ಸಂತರ ಸ್ಮರಣೆಗಳು ತಪಸ್ಸು ಕಾಲದ ಸಂದರ್ಭದಲ್ಲಿ ಬಂದಾಗ, ಅವನ್ನು ಐಚ್ಛಿಕ ಸ್ಮರಣೆಯ ದಿನಗಳೆಂದು ಪರಿಗಣಿಸಲಾಗುತ್ತದೆ. 
ಧರ್ಮಸಭೆಯ ಹಕ್ಕಿನ ದಿನಗಳ ಸಂದರ್ಭದಲ್ಲಿ (ತಪಸ್ಸು ಕಾಲ ಮತ್ತು ಡಿಸೆಂಬರ್ 17ರಿಂದ 31ರ ವರಗೆ). ಪ್ರಭು ಭೋಜನದ ಮೊದಲಿನ ಪ್ರಾರ್ಥನೆಗಳ ಬದಲು ಸಂತರ ಪ್ರಾರ್ಥನೆಗಳನ್ನು ಪಠಿಸಬಹುದು. ಡಿಸೆಂಬರ್ ಮುಂಚಿನ ಆಗಮನ ಕಾಲದ, ಕ್ರಿಸ್ಮಸ್ ಹಂಗಾಮು, ಈಸ್ಟರ್ ಹಂಗಾಮು ಮತ್ತು ಸಾಮಾನ್ಯ ಕಾಲದಲ್ಲಿ ಭಾನುವಾರ ಹೊರತುಪಡಿಸಿದ ದಿನಗಳಲ್ಲಿ ಸಂತರ ನಾಮದಲ್ಲಿ, ಶುಭಸಂದೇಶ ಸಾರುವುದಕ್ಕಾಗಿ ಹಾಗೂ ವಿಶೇಷ ಉದ್ದೇಶಗಳಿಗಾಗಿ ಯಾಜಕರು ಪ್ರಭು ಭೋಜನದ ಆಚರಣೆಯನ್ನು ಕೈಗೊಳ್ಳಬಹುದು. ಶನಿವಾರಗಳಂದು, ಅಂದು ಕಡ್ಡಾಯದ ಸಂತರುಗಳ ಸ್ಮರಣೆ ಇಲ್ಲದಿದ್ದ ಸಂದರ್ಭದಲ್ಲಿ ಯಾಜಕರು ಆಶೀರ್ವದಿತ ತಾಯಿ ಮರಿಯಳ ಪ್ರಭು ಭೋಜನ ಆಚರಿಸಬಹುದಾಗಿದೆ.

*****

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...