Friday, 6 September 2019

ಗೆಲ್ಲುವುದಕ್ಕಾಗಿ ಸೋತಿದ್ದೇವೆ ಅಷ್ಟೆ


ಪ್ರೀತಿಯ ಅನುಗೆ, 
ಮೊನ್ನೆ ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ತಮ್ಮ ತಂಡ ಹೀನಾಯ ಸೋಲನನುಭವಿಸಿತ್ತು. ಸೋಲನ್ನು ಒಪ್ಪಿಕೊಳ್ಳದ ನಮ್ಮ ಆಟಗಾರರು ಹಲವಾರು ನೆವಹೇಳುತ್ತಾ ತಮ್ಮನ್ನೇ ಸಮರ್ಥಿಕೊಳ್ಳುತ್ತಿದ್ದರು. ನಾವು ಕೂಡ ಅವರಜತೆ ಹೂಂಗೂಡುತ್ತಾ ತಂಡದ ಕೋಚನ್ನುಟೀಕಿಸಲು ಪ್ರಾರಂಭಿಸಿದ್ದೆವು. ನಮ್ಮ ಕೋಚ್ ತನ್ನ ತಂತ್ರಗಳಲ್ಲಿ ಅಪ್ಡೇಟ್ ಅಗಿಲ್ಲ. ಅವನಿಗೆ ತರಬೇತಿ ಕೊಡಲು ಬರುವುದಿಲ್ಲ. ಅವನನ್ನು ಬದಲಾಯಿಸುವುದು ಒಳ್ಳೇದು” ಹೀಗೆ ಟೀಕೆಗಳ ಪ್ರವಾಹವೇ ಅವನ ಮೇಲೆ ಎರಗಿ ಬಂತು. ಇಂತಹ ಪರಿಸ್ಥಿತಿಯಲ್ಲೂ ತಂಡದ ಕೋಚ್ ಮಾತ್ರ…Lost to Win. . ಗೆಲ್ಲುವುದಕ್ಕಾಗಿ ಸೋತಿದ್ದೇವೆ ಅಷ್ಟೆ” ಎಂದು ಹೇಳುವುದನ್ನು ಕೇಳಿ ಆಶ್ಚರ್ಯಚಕಿತನಾದೆ. 
ಹೌದು ’ಸೋಲು’ ಎಂಬುವುದು ಯಾರಿಗೂ ಬೇಡವಾದ ವಾಸ್ತವ. ಅಪ್ಪಿತಪ್ಪಿಯೂ ನಮಗೆ ನಾವು ಕೇಳಿಕೊಳ್ಳದ ಸ್ಥಿತಿಯು ಹೌದು. ಬದುಕಿನ ಮಾರುಕಟ್ಟೆಯಲ್ಲಿರುವ ಬೇಡಿಕೆರಹಿತ ಸರಕೇ ಈ ಸೋಲು. ಏಕೆ ನಮ್ಮಲ್ಲಿ ಸೋಲಿನ ಬಗ್ಗೆ ಈ ರೀತಿಯ ತಾತ್ಸಾರ? ವಿರೋಧ?ಸೋಲಿನಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಸರ್ಕಸ್ಸುಗಳೇಕೆ? ಸೋತು ಬಂದ ಟೀಮ್ ಸೋಲನ್ನು ಒಪ್ಪಿಕೊಳ್ಳದೆ ಹಲವಾರು ನೆವಹೇಳುತ್ತಾ ತಮ್ಮನ್ನೇ ಸಮರ್ಥಿಕೊಳ್ಳುವ ಪರಿಪಾಠವೇಕೆ? ಸೋತ ಆಟಗಾರರ ಮನೆಗಳ ಮುಂದೆ ಅಭಿಮಾನಿ ದೇವರುಗಳು ಸಿಟ್ಟಿಗೆದ್ದು ಧರಣಿ ಕೂರುವುದೇಕೆ? ಆಟೋಟ ಸ್ಪರ್ಧೆಗಳಲ್ಲಿ ಸೋಲು ಮತ್ತು ಗೆಲುವುಗಳು ಸರ್ವೇಸಾಮಾನ್ಯವಾದರೂ ಸೋತ ಆಟಗಾರರ ಭಾವಚಿತ್ರಗಳಿಗೆ ಚಪ್ಪಲಿಗಳ ಹಾರಗಳನ್ನು ಹಾಕಿ ಪ್ರತಿಭಟಿಸುವುದಾದರೂ ಏಕೆ? ಆಟೋಟ ಸ್ವರ್ಧೆ ಅಥವಾ ಪರೀಕ್ಷೆಗಳಲ್ಲಿ ಗೆಲ್ಲಲು ಪೂಜೆ ಯಜ್ಞಗಳೇಕೆ? ಒಂದು ಮಾತಿನಲ್ಲಿ ಹೇಳುವುದಾದರೆ “ಸೋಲಲು ನಮಗೇಕೆ ಭಯ? ಸೋತೆವು ಎಂದು ಒಪ್ಪಿಕೊಳ್ಳಲು ನಮಗೇಕೆ ಕಷ್ಟ? ಈ ಸೋಲೆಂಬುದು ಗೆಲುವಿಗೆ ಅನಿವಾರ್ಯವೇ? ಸೋಲೆಂಬುದು ಗೆಲುವಿನ ಗುರಿಗೆ ಕೊಂಡೊಯ್ಯುವ ಮೆಟ್ಟಿಲುಗಳೇ? ಸೋಲೆಂಬುದು ಕೆಲಸಕ್ಕೆ ಬಾರದ ಬದುಕಿನ ನಿಷ್ಪ್ರಯೋಜಕ ಅನುಭವವೇ? 

ಸೋಲುವುದೆಂದರೆ ನಾನು ಬಲಹೀನ ಎಂದು ಒಪ್ಪೊಕೊಳ್ಳುವುದೇ ಅಥವಾ ನನ್ನ ಸಾಮಾರ್ಥ್ಯ ತೌಲನಿಕವಾಗಿ ಕೀಳಾದುದು ಎಂದು ಒಪ್ಪಿಕೊಳ್ಳುವುದೇ? ಒಟ್ಟಿನಲ್ಲಿ ನಾವು ಎಚ್ಚರ ತಪ್ಪಿದರೆ ಸೋಲು ನಮ್ಮ ಆಹಂ ಅನ್ನು ತಟ್ಟಿ, ನೀನು ಕೀಳು, ನೀನು ಅಸಮರ್ಥ, ದಡ್ಡ ಎಂಬ ಋಣಾತ್ಮಕ ಭಾವನೆಗಳನ್ನು ನಮ್ಮಲ್ಲಿ ತುಂಬಿ ಬಿಡುತ್ತದೆ. ಕೆಲವೊಮ್ಮೆ ನಮ್ಮ ಮನೋಬಲವನ್ನು ಸಹ ಕ್ಷೀಣಿಸಿಬಿಡುತ್ತದೆ. ಸೋಲು ನಮ್ಮ ಬಲಹೀನತೆ, ಅಸಾಮರ್ಥ್ಯವನ್ನು ಅಥವಾ ನಮ್ಮ ಸಾಮರ್ಥ್ಯ ತೌಲನಿಕವಾಗಿ ಕೆಳಗಿದೆ ಎಂದು ತಿಳಿಸುತ್ತದೆ ವಿನಹಃ ನಾವು ಶಾಶ್ವತವಾಗಿ ಅಸಮರ್ಥರು ಬಲಹೀನರೆಂದು ಎಂದಿಗೂ ಹೇಳುವುದಿಲ್ಲ. ನಮ್ಮ ಬಲಹೀನತೆ, ದೌರ್ಬಲ್ಯಗಳ ಬಗ್ಗೆ ನಮ್ಮಲ್ಲಿ ಅರಿವು ಮೂಡಿಸಿ ಅವುಗಳನ್ನು ಸುಸೂತ್ರವಾಗಿ ಜಯಿಸಲು ಒಂದು ನೀಲಿನಕ್ಷೆಗೆ ಅಣಿಮಾಡುವುದೇ ಈ ಸೋಲು. 

ಆದ್ದರಿಂದ ಸೋಲನ್ನು ನಾವು ಯಾವ ರೀತಿಯಾಗಿ ಕಾಣುತ್ತೇವೆಂಬುವುದು ಮುಖ್ಯ. ಪ್ರಮುಖ ಸಂಶೋಧನೆಯಲ್ಲಿ ಸಫಲನಾಗುವ ಮುನ್ನ ಥಾಮಸ್ ಆಲ್ವಾ ಎಡಿಸನ್ (ವಿದ್ಯುತ್ ದೀಪವನ್ನು ಕಂಡುಹಿಡಿದವ) ಕನಿಷ್ಠ ಹತ್ತು ಸಾವಿರ ಪ್ರಯೋಗಗಳನ್ನಾದರೂ ಮಾಡಿದ್ದ! ಯಾರೋ ಕೇಳಿದರಂತೆ – ಅಲ್ಲ ಎಡಿಸನ್ ಮಹಾಶಯ, ಹತ್ತು ಸಾವಿರ ಬಾರಿ ಸೋತಿದ್ದ ಕ್ಕೆ ನಿನಗೇನೂ ಅನ್ನಿಸುವುದಿಲ್ಲವೇ” ಎಂದು ಎಡಿಸನ್ ಥಟ್ಟನೆ “ಇಲ್ಲ ಇಲ್ಲ ವಿದ್ಯುತ್ ಬಲ್ಪುಗಳನ್ನು ಮಾಡಲು ಸಾಧ್ಯವಾಗದ ಹತ್ತು ಸಾವಿರ ಕ್ರಮಗಳನ್ನು ನಾನು ಕಂಡು ಹಿಡಿದೆ” ಎನ್ನುತ್ತಾನೆ. ಇದು ಸೋಲನ್ನು ಒಪ್ಪಿಕೊಳ್ಳದ ಸಂಶೋಧಕನ ಮಾತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸೋಲಿನಲ್ಲಿ ಗೆಲುವನ್ನು ಕಂಡ ಸಂಶೋಧಕನ ಮಾತಿದು. 

ಸೋಲು ನಮ್ಮ ಗೆಲುವಿನ ಮೆಟ್ಟಿಲಾಗಬೇಕು, ಹೊಸ ಹೊಸ ಪ್ರಯೋಗಗಳಿಗೆ, ಆವಿಷ್ಕಾರಗಳಿಗೆ ಮುಹೂರ್ತ ಹಾಕಿಕೊಡಬೇಕು. ನಮ್ಮ ದೌರ್ಬಲ್ಯಗಳನ್ನು ಮೀರಿ ನಡೆಯಲು ಅವುಗಳ ಮೇಲೆ ಪ್ರಭುತ್ವ ಸಾಧಿಸಲು ಸ್ಪೂರ್ತಿ ಆಗಬೇಕು. ಸೋಲಿಗೆ ಮೌಲ್ಯ ಬರುವುದೇ ಅದನ್ನು ನಾವು ಕಾಣುವ ದೃಷ್ಟಿಯಿಂದ. ಅವುಗಳಿಂದ ಕಲಿಯುವ ಪಾಠಗಳಿಂದ. ಒಂದೇ ಒಂದು ಸೋಲಿನಿಂದ ನಾವು ನಿರುತ್ಸಾಹ ತಳೆದು ನಾವು ಹಾಕಿಕೊಂಡ ಗುರಿಗಳಿಗೆ ನಮಸ್ಕಾರ ಹೇಳಿ…ಸುಮ್ಮನೆ ಆಗಿಬಿಟ್ಟರೆ ನಮ್ಮನ್ನು ನಾವೇ ಶಾಶ್ವತ ಸೋಲಿನ ಸಮುದ್ರಕ್ಕೆ ಕಲ್ಲು ಕಟ್ಟಿ ನೂಕ್ಕಿಕೊಂಡಂತೆ. ಆದ್ದರಿಂದ ನಮ್ಮ ಸೋಲುಗಳು ಅವಕಾಶಗಳನ್ನು ಸೃಷ್ಟಿಸುವ ಹೊಲಗಳಾಗಬೇಕು. ನಮ್ಮ ಉತ್ಸಾಹ, ಕನಸುಗಳನ್ನು,ಆಸೆಗಳನ್ನು ಚಿವುಟಿಬಿಡುವ destructive weaponಗಳಾಗಬಾರದು. ಅದಕ್ಕಾಗಿ ಒಬ್ಬ ತತ್ವಜ್ಞಾನಿ ಹೇಳುತ್ತಾನೆ: ಬದುಕಿನಲ್ಲಿ ಸೋಲೆಂಬುವುದೇ ಇಲ್ಲ… ಇರುವುದು ಕೇವಲ “ನೇರ್ಪಿನ ಪ್ರಯತ್ನ” ಮಾತ್ರವೆಂದು. 

ಅಮೆರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಬದುಕಿನಲ್ಲಿ ಎದುರಿಸಿದ ಸೋಲುಗಳು ಅಪಾರ. ಇಪ್ಪತ್ತೇಳನೆಯ ವಯಸ್ಸಿನಲ್ಲಿ ದೇಹದ ನರಮಂಡಲವೇ ತೊಂದರೆಗೊಳಗಾಗಿತ್ತು. ನಲವತ್ತಾರನೆಯ ವಯಸ್ಸಿನಲ್ಲಿ ಸೆನೆಟರ್ ಚುನಾವಣೆಯಲ್ಲಿ ಸೋಲು. ನಲವತ್ತೇಳನೆಯ ವಯಸ್ಸಿನಲ್ಲಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸೋಲು. ಹೀಗೆಲ್ಲ ಸೋಲುಗಳು ದಿಕ್ಕೆಡಿಸಿದರೂ ಅವರ ಆತ್ಮವಿಶ್ವಾಸಕ್ಕೆ ಸ್ವಲ್ಪವೂ ಧಕ್ಕೆ ಬರಲಿಲ್ಲ. ಐವತ್ತೆರಡನೆಯ ವಯಸ್ಸಿನಲ್ಲಿ ಅವರು ಅಮೇರಿಕಾದ ಅಧ್ಯಕ್ಷರಾದರು. 

ಇನ್ನೊಂದು ಕಡೆ, ಗೆಲುವಿನ ಬಗ್ಗೆ ನಮಗೇಕೆ ಎಷ್ಟೊಂದು ವ್ಯಾಮೋಹ! ಗೆಲುವನ್ನು ಪಡೆಯುವ ವಿಧಾನವನ್ನು ವಿವರಿಸಿ ಸ್ಪಷ್ಟ ಪಡಿಸುವ ಎಷ್ಟೋ ಪುಸ್ತಕಗಳು ಮಾರುಕಟ್ಟೆಗಳಲ್ಲಿ ಲಭ್ಯವಿದ್ದು ಅವು ಬೇಡಿಕೆಯ ಶಿಖರವನ್ನೇ ಏರುತ್ತಿವೆ. ಸಿದ್ಧ ಉಡುಪಿನಂತೆ ಎಷ್ಟೋ ಗೆಲುವಿನ ಸೂತ್ರಗಳ ಪುಸ್ತಕಗಳು ಗೆಲ್ಲಲು ಹಾತೊರೆಯುತ್ತಿರುವ ಗಿರಾಕಿಗಳ ಕೈಪಿಡಿಯಾಗಿಬಿಟ್ಟಿದೆ. ಮಾಡರ್ನ್ ಗುರುಗಳಿಗಂತೂ ಶುಕ್ರದೆಸೆ. ಅವರ ’ಗೆಲುವಿನ ಮಾರ್ಗಸೂಚಿ’ ಗಳು ಸಾವಿರಾರು ಜನರ ದೈನಿಕ ಮಂತ್ರವಾಗಿಬಿಟ್ಟಿದೆ. ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಭಾಗವಹಿಸಲು ತೆರಳಿರುವ ನಮ್ಮ ಕ್ರಿಡಾಪಟುಗಳು ಕೂಡ ಪದಕಗಳನ್ನು ಗೆದ್ದು ತರುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರೆ. ಇನ್ನೊಂದು ಕಡೆ ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಜಯದ ಲಕ್ಷೀಯನ್ನು ವರಿಸಿಕೊಳ್ಳಬಹುದೆಂಬ ಲೆಕ್ಕಚಾರದಲ್ಲೇ ಮುಳುಗಿ ಹೋಗಿವೆ ನಮ್ಮ ರಾಜಕೀಯ ಪಕ್ಷಗಳು. ಗೆಲುವು ನಮಗೆ ಯಶಸ್ಸು ಅಪಾರ ಜನಪ್ರಿಯತೆ, ಅಧಿಕಾರ, ಹಣ ಸಂಪತ್ತುಗಳನ್ನು ತಂದುಕೊಡುತ್ತದೆ. ಧನಾತ್ಮಕ ಭಾವನೆಗಳನ್ನು ನಮ್ಮಲ್ಲಿ ತುಂಬಿ ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುವುದಲ್ಲದೆ, ಹೊಸ ಹೊಸ ಪ್ರಯೋಗಗಳಿಗೆ ದಾರಿಮಾಡಿಕೊಡುತ್ತದೆ. ಆದರೆ ಗೆಲುವು ಅಥವಾ ಯಶಸ್ಸು ಎಂಬ ದೇವತೆ ಸದಾ ನಮ್ಮ ಜೊತೆಯಿರುತ್ತಾಳೆಂಬ ಖಾತ್ರಿಯಂತೂ ಯಾರಿಗೂ ಇಲ್ಲ. ಗೆಲುವನ್ನು ಸಂಪಾಧಿಸಿ ಅದರ ಮೇಲೆ ಶಾಶ್ವತವಾಗಿ ಚಕ್ರಾಧಿಪತ್ಯ ಸ್ಥಾಪಿಸಿಲಾಗುವುದಿಲ್ಲ. ಇಂದಿನ ಸಮರ್ಥನೂ ನಾಳೆ ಅಸಮರ್ಥನಾಗುತ್ತಾನೆ, ಇಂದು ಗೆದ್ದವನುನಾಳೆ ಸೋಲುತ್ತಾನೆ. ಗೆದ್ದವನ ಸಾಮರ್ಥ್ಯ ಮತ್ತು ಅಸಾಮರ್ಥ್ಯವನ್ನು ಪಡೆದುಕೊಳ್ಳಲು ಅವನು ಪಟ್ಟ ಶ್ರಮ, ಹಿಂದಿರುವ ತ್ಯಾಗ, ಅವನ ದಕ್ಷತೆ ನಮಗೆ ಪಾಠಗಳಾಗಬೇಕು. ಅದನ್ನು ಬಿಟ್ಟು, ಗೆದ್ದವನ ಮೇಲೆ ಹಗೆ ಸಾಧಿಸುವುದು, ಸೋತಿದ್ದಾರೆ ಎಂಬ ಕಾರಣಕ್ಕೆ ಸೋತವರ ಭಾವಚಿತ್ರಗಳ ಮೇಲೆ ಚಪ್ಪಲಿ ಹಾರಗಳನ್ನು ಹಾಕಿ ನಿಂದಿಸುವುದು ಯಾರೂ ಒಪ್ಪದ ನಡವಳಿಕೆ. 

ಹೀಗೆ ಸೋಲು ಗೆಲುವುಗಳ ಬಗ್ಗೆ ಚಿಂತಿಸುವಾಗ ಸೋಲು ಗೆಲುವುಗಳ ಬಗ್ಗೆಗಿನ ಇನ್ನೊಂದು ಆಯಾಮ ನನಗೆ ಗೋಚರಿಸಿತ್ತು. ಕೆಲವರು ತಾವು ಸೋಲುತ್ತೇವೆ ಎಂದು ಮುಂಚಿತವಾಗಿ ಗೊತ್ತಿದ್ದರೂ ಒಂದು ಒಳ್ಳೆಯ ಸಂಪ್ರದಾಯವನ್ನು, ನ್ಯಾಯವಾದ ವ್ಯವಸ್ಥೆಯನ್ನು ರೂಪಿಸಲು ದೊಡ್ಡ ಗಂಡಾಂತರವನ್ನೇ ತಮ್ಮ ಮೇಲೆ ಎಳೆದುಕೊಳ್ಳುತ್ತಾರೆ. ಅವರು ತಮ್ಮ ಗಣಕಗಳನ್ನೇ ಬಿಸಾಡಿದವರು, ತಮ್ಮ ಅಹಂ ಅನ್ನು ಮೀರಿ ಬೆಳೆದವರು. ಅವರಿಗೆ ಗೊತ್ತು, ತನ್ನ ಜೀವಮಾನದಲ್ಲೇ ತಾನು ಕೈಗೊಂಡಿರುವ ಕೆಲಸದಲ್ಲಿ, ಹೋರಾಟದಲ್ಲಿ ಯಶಸ್ಸು ಕಾಣುವುದು ಅನಿಶ್ಚಿತವೆಂದು. ಆದರೂ ಊಟ, ನೀರು ನಿದ್ದೆಯನ್ನು ಬಿಟ್ಟು ಅಂತಹ ವ್ಯವಸ್ಥೆಯ ಸಾಕಾರಕ್ಕೆ ಶಕ್ತಿ ಮೀರಿ ದುಡಿಯುತ್ತಾರೆ. ಅವರಿಗೆ ಸೋಲು ಸೋಲಾಗುವುದಿಲ್ಲ. ಅವರಕನಸಿನ ಮತ್ತು ಸ್ಥಾಪಿಸುವ ವ್ಯವಸ್ಥೆಯ ಪಯಣಕ್ಕೆ ಮೆಟ್ಟಿಲುಗಳಾಗುತ್ತವೆ. ಕ್ರಿಸ್ತ, ಬಸವಣ್ಣ, ಅಂಬೇಡ್ಕರ್, ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ… ಇವರೆಲ್ಲರೂ ನಮ್ಮಲ್ಲಿ ಚಿರಸ್ಥಾಯಿಯಾಗಿರುವುದು ಈ ಕಾರಣಕ್ಕಾಗಿಯೇ. ಇವರಿಗೆ ಗೊತ್ತಿತ್ತು ಅನ್ಯಾಯದ ವಿರುದ್ಧ ಹೋರಾಡುವುದೆಂದರೆ ತಮ್ಮನ್ನೇ ಸೋಲಿನ ಸಮಾಧಿಯಲ್ಲಿ ಹೂಣುವುದೆಂದು. ಆದರೂ ಅನ್ಯಾಯದ ವ್ಯವಸ್ಥೆಯ ವಿರುದ್ಧ ಎದೆ ತಟ್ಟಿ ಹೋರಾಡಿದರು. ತಾವು ಅನುಭವಿಸಿದ ಹಿಂಸೆಯಲ್ಲಿ ಬಡವರ ನಗುವನ್ನು ಕಂಡು ಮುನ್ನಡೆದರು. ತಮ್ಮ ನೋವಿನಲ್ಲಿ ಬಡವರ ನಲಿವನ್ನು ಕಂಡು ಹೋರಾಡಿದರು. 

ಕ್ರಿಸ್ತ ಬಸವಣ್ಣ ಕೂಡ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯ ವಿರುದ್ಧ ಹೋರಾಡಿದ ಹಠ ಯೋಗಿಗಳು. ಢಾಂಬಿಕರನ್ನು ಸುಣ್ಣ ಬಳಿದ ಸಮಾಧಿಗಳೆಂದು ಬಹಿರಂಗವಾಗಿ ವ್ಯವಸ್ಥೆಯ ಬಂಡೆಗೆ ತಲೆ ಬಡಿದುಕೊಂಡವರು. ಅವರಿಗೆ ಗೊತ್ತಿತ್ತು, ತಾವು ಕೈಗೊಂಡಿರುವ ಹೋರಾಟದಲ್ಲಿ ಸೋಲು ಕಟ್ಟಿಟ್ಟ ಬುತ್ತಿಯೆಂದು. ಆದರೂ ಹಾವಿದ್ದ ಹುತ್ತಕ್ಕೆ ಕೈಹಾಕಿದರು. ಕೊನೆಗೆ ಧಾರ್ಮಿಕ ಅಧಿಕಾರಿಗಳ ಉಗ್ರ ಕೋಪಕ್ಕೆ ಸುಟ್ಟು ಭಸ್ಮವಾದರು. ಪ್ರಪಂಚದ ಸಂಕುಚಿತ ದೃಷ್ಟಿಯಲ್ಲಿ ಅವರು ಸೋತ ಯೋಧರಾಗಿದ್ದರು. ತಾವು ಕಂಡ ಕನಸಿನ ರಾಜ್ಯವನ್ನು ಕಾಣದೆ, ಹತಾಶರಾಗಿ ಸತ್ತರು. ಅವನ ಕನಸುಗಳು ಚಾಲ್ತಿಯಲ್ಲಿಲ್ಲದ ನಾಣ್ಯಗಳಾದವು. ಆದರೂ ಅನ್ಯಾಯದ ವ್ಯವಸ್ಥೆಯ ಜತೆ ರಾಜಿ ಮಾಡಿಕೊಳ್ಳಲಿಲ್ಲ. ಅವರು ಕ್ಷಣಿಕ ಸೋಲಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅವರ ಸೋಲೇ ಇಂದು ನೂರಾರು ಜನರಲ್ಲಿ ನ್ಯಾಯದ ತುಡಿತವನ್ನು ಹುಟ್ಟಿಸಿದ್ದು. ನಿಸ್ವಾರ್ಥ ಬದುಕಿಗೆ ಪ್ರೇರಣೆಯಾಗಿದ್ದು, ಸಾವಿರಾರು ಜನರಲ್ಲಿ ಅವರು ಮತ್ತೆ ಹುಟ್ಟಿ ಬಂದಿದ್ದು. 

ಜನವಿರೋಧಿ, ಜೀವ ವಿರೋಧಿಗಳ ವಿರುದ್ಧ ಹೋರಾಡುತ್ತಿರುವ ಸಾವಿರಾರು ಸಾತ್ವಿಕ ಜನರಿಗೆ ನಮಸ್ಕರಿಸಿ ಅವರೆಲ್ಲರೂ ನಮ್ಮ ಪ್ರತಿಧ್ವನಿಗಳಾಗಲಿ ಎಂದು ಆಶಿಸುತ್ತಾ ಸೋಲು ಗೆಲುವು ಯೋಚನಾಲಹರಿಗೆ ಶುಭಂ ಹೇಳುತ್ತೇನೆ. 

ಇಂತಿ ನಿನ್ನವ 

ಆನಂದ್ 

ಸೌಹಾರ್ದತೆಗೆ ಸ್ವಯಂ ನಿಯಂತ್ರಣ ಅಗತ್ಯ ಒಂದು ಚಿಂತನೆ

ಫ್ರಾನ್ಸಿಸ್. ಎಂ. ಎನ್
ತಾವೇ ಆಯಾ ಸಮುದಾಯಗಳ ಅಧಿಕೃತ ನೇತಾರರೆಂದು ಬಿಂಬಿಸಿಕೊಳ್ಳುವ ಕೆಲವರು ತಾವು ನಡೆದದ್ದೇ ಹಾದಿ ಎಂಬಂತೆ, ಪೈಪೋಟಿಯಲ್ಲಿ ಕಿವಿಗಡಚಿಕ್ಕುವ ಧ್ವನಿವರ್ಧಕಗಳ ಹಾಡುಗಳೊಂದಿಗೆ, ಕಿವಿಯ ಪರದೆ ಹರಿಯುವಷ್ಟು ಪ್ರಬಲವಾದ ನಾದ ಹೊಮ್ಮಿಸುವ ವಾದ್ಯಮೇಳಗಳೊಂದಿಗೆ ಬೀದಿ ಬೀದಿಗಳಲ್ಲಿ ಸಾಗುವ ಮೆರವಣಿಗೆಗಳನ್ನು, ಜಾಥಾಗಳನ್ನು, ಯಾತ್ರೆಗಳನ್ನು ಆಯೋಜಿಸುವುದು, ಹಬ್ಬ ಹರಿದಿನಗಳಲ್ಲಿ ರಸ್ತೆಗಳನ್ನು ಆಪೋಷಣೆ ಮಾಡುವ ಮಂಟಪಗಳನ್ನು ನಿರ್ಮಿಸುವುದು, ಯಾವುದೋ ದಿನವೊಂದಕ್ಕೆ ನಿಗದಿಯಾಗುವ ಹಬ್ಬದ ದಿನಗಳಂದು ರಸ್ತೆಗಳಲ್ಲೇ ಧಾರ್ಮಿಕ ಆಚರಣೆಯ ಪ್ರಾರ್ಥನಾ ವಿಧಿಗಳನ್ನು ನಡೆಸುವುದು - ಮುಂತಾದವು ದಿನೆದಿನೇ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲವೆ? 

ನಿತ್ಯದ ಪ್ರಾರ್ಥನೆಗೆ ಕರೆ ನೀಡುವ ಮಸೀದಿಗಳ ಅಝಾ (ಆದಾನ್)ದ ಧ್ವನಿವರ್ಧಕದ ಆರ್ಭಟಗಳಿಗೆ, ನೆರೆಹೊರೆಯವರಿಗೆ ಕಿರಿಕಿರಿ ಮಾಡುವ ಜೋರುದನಿಯಲ್ಲಿ ಸದ್ದು ಮಾಡುವ ಸುಪ್ರಭಾತಗಳಿಗೆ, ಭಜನೆಗಳಿಗೆ, ಪ್ರಾರ್ಥನಾ ಕೂಟಗಳ ಹೆಸರಲ್ಲಿ ಜನ ನೆರೆದ ಸಂದರ್ಭಗಳಲ್ಲಿ ಏರುದನಿಯ ಸಾಮೂಹಿಕ ಹಾಡುಗಳು, ಭಾರಿ ಪ್ರಮಾಣದಲ್ಲಿ ಧ್ವನಿ ಹೊರಡಿಸುವ ವಾದ್ಯಗಳು ಉಂಟುಮಾಡುವ ಶಬ್ದ ಮಾಲಿನ್ಯಕ್ಕೆ, ಅವುಗಳಿಂದ ಉಂಟಾಗುವ ಶಾಂತಿಭಂಗ ಪ್ರಕರಣಗಳಿಗೆ ಕಡಿವಾಣ ಹಾಕುವುದಕ್ಕೆ ಆಗುವುದಿಲ್ಲವೆ? ಕೆಲವು ರಾಜಕೀಯ ಪಕ್ಷಗಳು ಇವುಗಳ ಬಗೆಗೆ ಜಾಣ ಕಿವುಡುತನ ಮತ್ತು ಜಾಣ ಕುರುಡುತನ ತೋರುತ್ತಿರುವುದು ತರವೆ? 

ದೇಶದಲ್ಲೇ ಅತ್ಯಂತ ಅಧಿಕ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ ಮುಖ್ಯಮಂತ್ರಿಯೊಬ್ಬರು, ಈ ಹಿಂದೆ `ಈದ್ (ಮುಸ್ಲಿಂರ ಹಬ್ಬ)ಗಳ ಸಂದರ್ಭದಲ್ಲಿ ರಸ್ತೆಯಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಲಾಗುವುದಿಲ್ಲ. ಅದರಂತೆಯೇ, ಜನ್ಮಾಷ್ಠಮಿ ಮುಂತಾದವುಗಳನ್ನು ಪೋಲಿಸ್ ಠಾಣೆಗಳಲ್ಲಿ ಆಚರಿಸಬಾರದೆಂದು ಹೇಳುವ ಹಕ್ಕು ನನಗಿಲ್ಲ' ಎಂದು ಆಡಿದ ಮಾತುಗಳು ತಿಪ್ಪೆ ಸಾರಿಸಿದಂತಿತ್ತು. ಸಂವಿಧಾನದ ಆಶಯದಂತೆ ಸೌಹಾರ್ದವನ್ನು ರೂಢಿಸಬೇಕಾದವರೇ, ಪ್ರಾಮಾಣಿಕ ಪ್ರಯತ್ನ ಮಾಡದೇ ಕೈತೊಳೆದುಕೊಳ್ಳುತಿದ್ದಾರೆ ಎಂಬ ಭಾವ ಮೂಡಿಸುವಂತಿತ್ತು. 

ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ಇಂಥ, ಶಾಂತಿಗೆ ಭಂಗ ತರುವ, ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ವಿದ್ಯಮಾನಗಳಿಗೆ ಇತಿಶ್ರೀ ಹಾಡುವುದೆಂದರೆ, ಬೆಕ್ಕಿಗೆ ಗಂಟೆ ಕಟ್ಟಿದಂತೆ ಎಂಬುದು ಹಲವರ ಅನಿಸಿಕೆ ಇದ್ದಿರಬಹುದು. ಬಹುತ್ವದಲ್ಲಿ ಏಕತೆಯನ್ನು ಅಪ್ಪಿಕೊಂಡಿರುವ ನಮ್ಮ ದೇಶದಲ್ಲಿ ಯಾರಾದರೊಬ್ಬರು ಒಂದು ಹೆಜ್ಜೆ ಮುಂದೆ ಇಡಬೇಕು, ಇಲ್ಲವೆ ಒಂದು ಹೆಜ್ಜೆ ಹಿಂದೆ ಹೆಜ್ಜೆ ಇಡಬೇಕು. 

ಅದೇ ಅಧಿಕ ಸಂಖ್ಯಾ ಬಾಹುಳ್ಯದ ಉತ್ತರಪ್ರದೇಶದಲ್ಲಿಯೇ, ಈಗ ಈ ನಿಟ್ಟಿನಲ್ಲಿ (ಅಂದರೆ ರಸ್ತೆಗಿಳಿಯುವುದರ ಬಗ್ಗೆ ಜಿಲ್ಲಾಡಳಿತದ ನಿರ್ದೆಶನದಂತೆ ಸ್ವಯಂ ನಿಯಂತ್ರಣ ಹೇರಿಕೊಳ್ಳುವ) ಆಶಾಕಿರಣದ ಬೆಳ್ಳಿಗೆರೆಯೊಂದು ಕಾಣಿಸಿಕೊಂಡಂತಿದೆ. ಒಂದು ಕಾಲದಲ್ಲಿ ಬೀಗದ ತಯಾರಿಕೆಗೆ ಹೆಸರು ಮಾಡಿದ್ದ ಅಲಿಗಡ ಜಿಲ್ಲೆಯ, ಇಂದಿನ ಜಿಲ್ಲಾ ಮ್ಯಾಜಿಸ್ಟ್ರೇಟ್‍ರು ಕೈಗೊಂಡ ನಿಷ್ಠುರ ನಿರ್ಧಾರ, ಇಂಥ ಒಂದು ಬೆಳವಣಿಗೆಗೆ ಕಾರಣವಾಗಿದೆ. 

ಈಚೆಗೆ, ಉತ್ತರಪ್ರದೇಶದಲ್ಲಿ `ನೀವು ರಸ್ತೆಗಿಳಿಯುವುದು ಸರಿ ಎನ್ನುವುದಾದರೆ ನಾವೂ ರಸ್ತೆಗಿಳಿಯುತ್ತೇವೆ' ಎಂಬ ಅನಾರೋಗ್ಯಕರ ದಾಯಾದಿ ಪೈಪೋಟಿ ಆರಂಭವಾಗಿತ್ತು. `ಮುಸ್ಲಿಂರು ನಡುರಸ್ತೆಗಳಲ್ಲಿ ನಮಾಜು ಮಾಡುವ ಕ್ರಮದಿಂದ ಆಗುವ ಕಿರಿಕಿರಿ ಸಹಿಸಿಕೊಳ್ಳುವಿರಾದರೆ, ನಮ್ಮ ಕಿರಿಕಿರಿಯನ್ನೂ ಸಹಿಸಿಕೊಳ್ಳಿ' ಎಂದು ಕೆಲವು ಹಿಂದೂ ಸಂಘಟನೆಗಳು, ಪ್ರತಿ ಮಂಗಳವಾರ ಮತ್ತು ಶನಿವಾರ ಅಲಿಗಡದ ರಸ್ತೆಗಳಲ್ಲಿ ಇಳಿದು ಹನುಮಾನ ಚಾಲಿಸ್ ಭಜನೆ ಹಾಗೂ ಮಹಾ ಆರತಿಗಳನ್ನು ನೆರವೇರಿಸುವ ಹೊಸ ಪರಿಪಾಠವೊಂದನ್ನು ರೂಢಿಗೆ ತಂದವು. ಇದೆಲ್ಲಾ ಮೊದಲು ಆರಂಭವಾದದ್ದು ಹಾಪುರ ಜಿಲ್ಲೆಯಲ್ಲಿ. ನಂತರ ಈ ಆಚರಣೆಗಳು ಸುಮಾರು ಹನ್ನೆರಡು ಜಿಲ್ಲೆಗಳಲ್ಲಿ ಅನುರಣಿಸ ತೊಡಗಿದವು. ಈ ಹಿಂದೆ ಇಂಥದೇ ವಿದ್ಯಮಾನ ಕರ್ನಾಟಕದ ಹಾವೇರಿಯಲ್ಲಿ ನಡೆದಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡು ಬರುವುದಕ್ಕೆ ಪ್ರತಿಯಾಗಿ ಕೆಂಪು, ಕೇಸರಿ ಶಾಲು ಹೊತ್ತುಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು. 

ಅಲಿಗಡದ ಮಾಜಿ ಮೇಯರ್ ಶಕುಂತಲಾ ಭಾರತಿ, ನಗರ ಘಟಕದ ಬಿಜೆಪಿ ಪದಾಧಿಕಾರಿ ಮಾನವ್ ಮಹಾಜನ್ ಮೊದಲಾದವರು, ಹನುಮಾನ್ ಚಾಲೀಸ್ ಮತ್ತು ಮಹಾ ಆರತಿಗಳಲ್ಲಿ ಭಾಗವಹಿಸಿ ಅದಕ್ಕೊಂದು ಮಾನ್ಯತೆ ಕೊಡತೊಡಗಿದರು, ಒಂದು ಹೆಜ್ಜೆ ಮುಂದೆ ಹೋದ ಮಹಾಜನ್, ಈ ಕ್ರಮ ಆರಂಭಿಸಿದವರನ್ನು ಅಭಿನಂದಿಸಿ, `ಈ ನಿಟ್ಟಿನಲ್ಲಿ ಚರ್ಚೆ ಆರಂಭವಾಗಲಿ' ಎಂದು ಹಾರೈಸಿದರು. ಅಷ್ಟೇ ಅಲ್ಲ, ಅವರು, `ಒಂದು ಸಮುದಾಯ ನಮಾಜಿನ ಹೆಸರಲ್ಲಿ ರಸ್ತೆಗಿಳಿದರೆ, ಹನುಮಾನ್ ಚಾಲೀಸ್, ಮಹಾ ಆರತಿಗಳನ್ನು ರಸ್ತೆಗಳಲ್ಲಿ ನೆರವೇರಿಸುವುದರಲ್ಲಿ ತಪ್ಪೇನು?' ಎಂದು ಪ್ರಶ್ನಿಸತೊಡಗಿದಾಗ, ಶಾಂತಿ ಕದಡುವ ಸಂಚಾರ ವ್ಯವಸ್ಥೆ ಹದಗೆಡುವ ಆತಂಕ ಕಾಣಿಸಿಕೊಂಡಿತ್ತು. 

ಆಗ ರಂಗಕ್ಕಿಳಿದ ಅಲಿಗಢ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‍ರು, `ಎಲ್ಲರಿಗೂ ತಮ್ಮ ತಮ್ಮ ಧರ್ಮದ ಆಚರಣೆಗೆ ಸ್ವಾತಂತ್ರ್ಯ ಉಂಟು. ಆದರೆ, ಅದು ಸಾರ್ವಜನಿಕ ಬೀದಿಗಳನ್ನು ಆಕ್ರಮಿಸದೇ ಅವರವರ ಪೂಜಾ ಸ್ಥಳಗಳಿಗೆ ಸೀಮಿತವಾಗಿರಬೇಕು. ಮನಸ್ಸಿಗೆ ಬಂದಂತೆ ರಸ್ತೆಗಳನ್ನು ಬಳಸುವಂತಿಲ್ಲ' ಎಂದು ನಿಷೇಧದ ಫರ್ಮಾನು ಹೊರಡಿಸಿದ್ದರು. `ಬಹಳಷ್ಟು ಜನರು ಸೇರುವ ಹಬ್ಬಗಳ ಸಂದರ್ಭಗಳಲ್ಲಿ ವಿನಾಯಿತಿ ಕೊಡಬಹುದು. ಆದರೆ ಅದಕ್ಕಾಗಿ ಮೊದಲೇ ಅನುಮತಿ ಪಡೆಯಬೇಕು' ಎಂಬ ಷರತ್ತನ್ನೂ ಅವರು ವಿಧಿಸಿದ್ದರು. 

ಜಿಲ್ಲಾ ಮ್ಯಾಜಿಸ್ಟ್ರೇಟ್‍ರ ಆದೇಶದ ಹಿನ್ನೆಲೆಯಲ್ಲಿ, ರಸ್ತೆ ಬಳಕೆ `ನಮಗೂ ಬೇಡ ನಿಮಗೂ ಬೇಡ' ತತ್ವ ಮುನ್ನೆಲೆಗೆ ಬಂದಿದೆ. ಈ ನಿಷೇಧದ ಕಾರಣದಿಂದ ಅಲಿಗಡದ ಮುಸ್ಲಿಂ ಧರ್ಮಗುರು (ಮುಫ್ತಿ) ಮೊಹಮ್ಮದ ಖಾಲೀದ್ ಹಮೀದ್ ಅವರು, `ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸಿಂ ಮತಬಾಂಧವರು ರಸ್ತೆಗಳಲ್ಲಲ್ಲ, ಮನೆ, ಕಟ್ಟಡಗಳ ಮೇಲ್ಛಾವಣಿಗಳಲ್ಲಿ ನಮಾಜ್ ಸಲ್ಲಿಸಲು ಕ್ರಮ ಜರುಗಿಸಬೇಕು' ಎಂದು ಅಲಿಗಡ ಶಹರಿನ ಮಸೀದಿಗಳ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆಗ, `ಅವರು ರಸ್ತೆಗಿಳಿಯದಿದ್ದರೆ, ನಾವೂ ರಸ್ತೆಗಿಳಿಯವುದಿಲ್ಲ' ಎಂದು ಭಜರಂಗದಳ ಜಿಲ್ಲಾಡಳಿತಕ್ಕೆ ಭರವಸೆ ನೀಡಿತ್ತು. 

ವಿವಿಧ ಸಮುದಾಯಗಳು, ಒಣ ಪ್ರತಿಷ್ಠೆಗಾಗಿ ಒಬ್ಬರನ್ನೊಬ್ಬರು ಎದುರಾಳಿಗಳನ್ನಾಗಿ ಮಾಡಿಕೊಂಡು ದಾಯಾದಿ ಕಲಹ ಮಾಡುವುದನ್ನು ಬಿಟ್ಟು, ಕೋಮು ಸಂಘರ್ಷಕ್ಕೆ ಕಾರಣವಾಗುವ ತಮ್ಮ ನಡವಳಿಕೆಗಳನ್ನು ಬದಿಗೆ ಸರಿಸಿ, ಸ್ವಯಂ ನಿಯಂತ್ರಣ ಹೇರಿಕೊಂಡು ತಮ್ಮ ತಮ್ಮ ಪೂಜಾ ಮಂದಿರಗಳಿಗೆ ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ಸೀಮಿತಗೊಳಿಸಿಕೊಂಡರೆ, ಕೋಮು ಸೌಹಾರ್ದತೆ ಕದಡುವ, ಅವಕಾಶವಾದಿ ಸಮಾಜವಿರೋಧಿ ಶಕ್ತಿಗಳನ್ನು ಮಟ್ಟಹಾಕುವುದು ಸುಲಭವಾಗುತ್ತದೆ. 



*************** 



ಸಂತ ಯೊವಾನ್ನರ ಶುಭಸಂದೇಶ -13

 ಸಹೋ. ವಿನಯ್ ಕುಮಾರ್
ಇಲ್ಲಿ ನಾವು ಮುಖ್ಯವಾಗಿ ಐದು ಮೂಲ ಉದ್ದೇಶಗಳನ್ನು ಕಾಣಲಿದ್ದೇವೆ. ಈ ವಾದಕ್ಕೆ ಪೂರಕವಾಗಿ ಪುರಾವೆಗಳನ್ನು ಒದಗಿಸಲು ಸಾಧ್ಯವಿಲ್ಲ, ಆದ್ದರಿಂದ ಇವುಗಳನ್ನು ಅಧ್ಯಯನದ ದೃಷ್ಟಿಯಿಂದ ನೋಡುವುದು ಸೂಕ್ತವಾಗಿದೆ. 


1) ಐಚ್ಛಿಕ ಉದ್ದೇಶ - ಈ ಶುಭಸಂದೇಶವನ್ನು ಬೇರೆ ಮೂರು ಶುಭಸಂದೇಶಕ್ಕೆ ಐಚ್ಛಿಕವಾಗಿ ಅಥವಾ ಪರ್ಯಾಯವಾಗಿ ಬರೆಯಲಾಗಿದೆ ಎಂದು ಹೇಳಲಾಗುತ್ತದೆ. ಈ ಶುಭ ಸಂದೇಶವನ್ನು ಬರೆಯುವ ಒತ್ತಿಗಾಗಲೇ ಮೂರು ಸಮನ್ವಯ ಶುಭಸಂದೇಶಗಳು ಬಳಕೆಯಲ್ಲಿದ್ದವು, ಅವುಗಳನ್ನ ರದ್ದುಗೊಳಿಸಿ ಈ ಶುಭ ಸಂದೇಶವನ್ನು ಐಚ್ಛಿಕವಾಗಿ ಬರೆಯಲಾಗಿದೆ ಎನ್ನಲಾಗುತ್ತದೆ. ಈ ವಾದವನ್ನು ಮಂಡಿಸಿದವರು ಅಲೆಗ್ಸಾಂಡ್ರಿಯಾದ ಸಂತ ಕ್ಲೇಮೆಂಟ್‍ರವರು. ಅವರು ಈ ಶುಭಸಂದೇಶವನ್ನು ಆಧ್ಯಾತ್ಮಿಕ ಶುಭಸಂದೇಶವೆಂದು ಕರೆದರು. ಒಂದು ವೇಳೆ ಈ ಶುಭ ಸಂದೇಶವನ್ನು ಬೇರೆ ಶುಭಸಂದೇಶಕ್ಕೆ ಪರ್ಯಾಯವಾಗಿ ಬರದಿದ್ದರೆ ಇಲ್ಲಿ ಬೇರೆ ಶುಭಸಂದೇಶಕ್ಕೆ ಭಿನ್ನ ವಾದಂತಹ ಯಾವುದೇ ವಿಷಯಗಳು ಇರುತ್ತಿರಲಿಲ್ಲ ಅಂದರೆ ಎರಡು ಸರಿಯಾಗಿ ಇರುತ್ತಿತ್ತು, ಇಲ್ಲಿ ನಾವು ಈ ಶುಭಸಂದೇಶದಲ್ಲಿ ವಿಭಿನ್ನತೆಯನ್ನು ಕಾಣಬಹುದಾಗಿದೆ ಅಥವಾ ವಿರುದ್ಧವಾದಂತಹ ವಿಷಯಗಳನ್ನ ನೋಡಬಹುದಾಗಿದೆ. ಪರ್ಯಾಯವಾಗಿ ಅಥವಾ ಐಚ್ಛಿಕವಾಗಿ ಬಳಸಿದ್ದರೆ ಎರಡು ಶುಭಸಂದೇಶವೂ ಒಂದೇ ರೀತಿ ಇರಬೇಕಾಗಿತ್ತು ಆದರೆ ವಿಭಿನ್ನತೆ ಇದೆ. ಇಲ್ಲಿ ಒಂದು ಉದಾಹರಣೆಯನ್ನು ನೋಡಬಹುದಾಗಿದೆ - ಸಮನ್ವಯ ಶುಭಸಂದೇಶಗಳು ಅಂದರೆ ಮೂರು ಶುಭಸಂದೇಶಗಳು ಸ್ನಾನಿಕ ಯೋವಾನ್ನನ ಮೆಸ್ಸಾಯಗಿಂತ ಮುಂಚಿತವಾಗಿ ಬರುವ ವ್ಯಕ್ತಿಯೆಂದು ವೈಭವೀಕರಿಸಿತು. ಆದರೆ ಈ ಶುಭಸಂದೇಶದಲ್ಲಿ ನಾವು ಕಾಣುತ್ತೇವೆ ಯೋವಾನ್ನ 1:21ರಲ್ಲಿ ಇತರರು ಕೇಳುವ ಪ್ರಶ್ನೆಗಳಿಗೆ ಸ್ನಾನಿಕ ಯೋವಾನ್ನ "ನಾನಲ್ಲ" ಎಂದು ಉತ್ತರ ಕೊಡುತ್ತಾನೆ. ಇಲ್ಲಿ ನಾನಲ್ಲ ಎನ್ನುವುದು ಧಿಕ್ಕರಿಸುವ ಸೂಚನೆ ಅಂದರೆ ನಾನು ಮೆಸ್ಸಾಯ ಆಗಲಿ ಪ್ರವಾದಿಯಾಗಲಿ ಅಲ್ಲ ಆತನಿಗಿಂತ ಮುಂಚಿತವಾಗಿ ಬರುವ ವ್ಯಕ್ತಿಯಲ್ಲ ವೆಂದು ನಿರಾಕರಿಸುತ್ತಾನೆ. ಯೇಸುಕ್ರಿಸ್ತರ ಶಿಲುಬೆ ಮರಣದಲ್ಲೂ ಅನೇಕ ಬದಲಾವಣೆಗಳನ್ನು ಶುಭಸಂದೇಶದಲ್ಲಿ ನಾವು ಕಾಣಬಹುದಾಗಿದೆ ಇವು ಸಮನ್ವಯ ಶುಭಸಂದೇಶಕ್ಕಿಂತ ವಿಭಿನ್ನವಾಗಿದೆ. ಆದ್ದರಿಂದ ಇದನ್ನು ಐಚ್ಛಿಕ ಅಥವಾ ಪರ್ಯಾಯ ಶುಭಸಂದೇಶ ಎಂದು ಕರೆಯಲು ಸಮಂಜಸವಲ್ಲ ಎನ್ನುವುದು ಕೆಲವರ ಅಭಿಪ್ರಾಯ. 



2) ಬದಲಿ ಪಡಿಸುವ ಉದ್ದೇಶ - (Replacement purpose) ಸಂತ ಯೋವಾನ್ನರ ಶುಭ ಸಂದೇಶವನ್ನು ಬೇರೆ ಮೂರು ಶುಭ ಸಂದೇಶಗಳನ್ನು ಬದಲಾಯಿಸುವ ಅಥವಾ ಅವುಗಳನ್ನು ತೆಗೆದು ಹಾಕುವ ಉದ್ದೇಶದಿಂದ ಬರೆಯಲಾಗಿದೆ ಎನ್ನಲಾಗುತ್ತದೆ. ಮೂರು ಶುಭಸಂದೇಶಗಳು ಉಪಯೋಗಕ್ಕೆ ಬಾರದ ಶುಭಸಂದೇಶಗಳು ಎನ್ನಲಾಗಿದೆ. ಸಂತ ಯೊವಾನ್ನರ ಶುಭಸಂದೇಶದಲ್ಲಿ ಎಲ್ಲವೂ ಇದೆ. ಎಲ್ಲವನ್ನೂ ಬರೆಯಲಾಗಿದೆ, ಹಾಗಾಗಿ ಬೇರೆ ಶುಭಸಂದೇಶಗಳು ಅಗತ್ಯವಿಲ್ಲ ಎನ್ನುವುದು ಕೆಲವರ ವಾದ. ಈ ಅಭಿಪ್ರಾಯವು ಮೂರಟೋರಿಯನ್ ( Muratorian Canon) ಕ್ಯಾನನ್ನಿಂದ ಬಂದಿದೆ. ಈ ವಾದಕ್ಕೆ ಉದಾಹರಣೆಯೆಂಬಂತೆ ಯೋವಾನ್ನ 10: 8 ರಲ್ಲಿ ಬರೆಯಲಾಗಿರುವ ವಾಕ್ಯವನ್ನು ತೆಗೆದುಕೊಳ್ಳಲಾಗಿದೆ. " ನನಗಿಂತ ಮುಂಚೆ ಬಂದವರೆಲ್ಲ ಕಳ್ಳರು ಸುಳ್ಳು ಕೋರರು ಆಗಿದ್ದಾರೆ" ಇಲ್ಲಿ ಶುಭ ಸಂದೇಶವು ಮುಂಚೆ ಬಂದವರೆಲ್ಲ ಅಂದರೆ ಮುಂಚೆ ಇದ್ದಂತಹ ಮೂರು ಶುಭಸಂದೇಶವನ್ನು ಕಳ್ಳತನ ಅಥವಾ ಸುಳ್ಳುತನದಿಂದ ಕೂಡಿದೆ ಎಂದು ಹೇಳುತ್ತದೆ ಎಂಬುದು ಈ ವಾದದ ಅಭಿಪ್ರಾಯ. ಈ ಶುಭಸಂದೇಶವು ತುಂಬಾ ಶ್ರೇಷ್ಠವಾದದ್ದು ಎಂದು ಬಿಂಬಿಸಲಾಗಿದೆ ಹಾಗಾದರೆ ಈ ಶುಭಸಂದೇಶದಲ್ಲಿ ಯೇಸು ಸ್ವಾಮಿಯ ಇನ್ನೂ ಅನೇಕ ಮುಖ್ಯ ಘಟನೆಗಳನ್ನು ಮತ್ತು ವಿಷಯಗಳನ್ನು ಯಾಕೆ ದಾಖಲಿಸಿಲ್ಲ? ಎಂಬುದು ಯಕ್ಷಪ್ರಶ್ನೆಯಾಗಿದೆ. ‌ 

3) ಪ್ರತಿವಾದಿಸುವ ಉದ್ದೇಶ (polemic purpose) : ಈ ಶುಭಸಂದೇಶವೂ ಅಲ್ಲಿ ಪ್ರಸ್ತುತ ವಿದ್ದಂತಹ ಪಾಷಾಂಡವಾದಗಳನ್ನು ಹಾಗೂ ತಪ್ಪು ಸಿದ್ಧಾಂತಗಳನ್ನು ನಿಯಂತ್ರಿಸುವ ಸಲುವಾಗಿ ಅದನ್ನು ಖಂಡಿಸುವ ಸಲುವಾಗಿ ಬರೆಯಲಾಗಿದೆ. ಈ ವಾದವು ಸಂತ ಐರೇನಿಯಸ್ ರವರಿಂದ ಬಂದಿದೆ. ಈ ಶುಭ ಸಂದೇಶವು ಕೇವಲ ಪ್ರತಿಪಾದಿಸುವ ಉದ್ದೇಶದಿಂದ ಬರೆದಿಲ್ಲ ಬದಲಾಗಿ ಅದಕ್ಕಿಂತ ತುಂಬಾ ಅರ್ಥವನ್ನು ಮತ್ತು ಇನ್ನು ಅನೇಕ ಉದ್ದೇಶಗಳನ್ನು ಒಳಗೊಂಡಿದೆ ಎನ್ನುವುದು ಅವರ ವಾದವಾಗಿದೆ. 

4) ತಾರ್ಕಿಕ ವಾದದ ಉದ್ದೇಶ (Dialectic purpose) : ಸಂತ ಯೊವಾನ್ನರ ಶುಭ ಸಂದೇಶವು ನಮಗೆ ಕೆಲವು ಮುಖ್ಯ ಕ್ರೈಸ್ತ ಸಿದ್ಧಾಂತಗಳ ಬಗ್ಗೆ ತಿಳಿಸುತ್ತದೆ. ಅವುಗಳನ್ನು ಇಲ್ಲಿ ನಾವು ನೋಡಬಹುದಾಗಿದೆ. 

ಅ) ಯೇಸು ಸ್ವಾಮಿಯ ಪೂರ್ವ ಅಸ್ತಿತ್ವದ ಬಗ್ಗೆ 

ಆ) ಯೇಸು ಸ್ವಾಮಿ ಒಬ್ಬ ನಿಜವಾದ ದೇವರು ಎಂದು ಬಹಿರಂಗ ಪಡಿಸುವುದರ ಬಗ್ಗೆ. 

ಇ) ಯೇಸುಸ್ವಾಮಿಯು ಮನುಷ್ಯತ್ವ ಮತ್ತು ದೈವತ್ವ ಎಂಬ ಎರಡು ಸಂಪೂರ್ಣವಾದ ಸತ್ವವನ್ನು ಇರುವವರ ಗಿದ್ದಾರೆ ಎಂದು ತೋರಿಸುವುದರ ಬಗ್ಗೆ. 

ಈ) ವಿಶ್ವಾಸಿಯು ತನ್ನ ಪೂರ್ಣ ಫಲಗಳಿಂದ ದೇವರಿಗೆ ಮಹಿಮೆ ಪಡಿಸುವುದರ ಬಗ್ಗೆ. 

ಉ) ಪರಸ್ಪರ ಪ್ರೀತಿಯಿಂದ ಯೇಸು ಸ್ವಾಮಿಗೆ ಸಾಕ್ಷಿ ನೀಡುವವರಾಗಿರುವಂತೆ. 

ಊ) ನಾವು ಸದಾ ಯೇಸುಸ್ವಾಮಿಯಲ್ಲಿ ನೆಲೆಸಿರುವಂತೆ. 

ಋ) ಪವಿತ್ರಾತ್ಮನಿಂದ ಧರ್ಮಸಭೆಯ ಕಾರ್ಯವೂ ಶಕ್ತವಾಗಿರುವಂತೆ. 

ಈಗೇ ಶುಭ ಸಂದೇಶವು ಅನೇಕ ಸಿದ್ಧಾಂತಗಳ ಬಗ್ಗೆ ತಿಳಿಸಿಕೊಡುತ್ತದೆ. 

5) ಶುಭಸಂದೇಶ ಸಾರುವ ಉದ್ದೇಶ : ಸಂತ ಯೊವಾನ್ನರ ಸಂದೇಶವು ಮೂಲತಹ ಯೇಸು ಸ್ವಾಮಿಯ ಶುಭ ಸಂದೇಶ ಸಾರುವ ಉದ್ದೇಶವನ್ನು ಇಟ್ಟುಕೊಂಡಿದೆ. ಯೋವಾನ್ನ 20:30-31ರಲ್ಲಿ ಒಂದು ವಿಶೇಷವಾದ ಉದ್ದೇಶವನ್ನು ನಾವು ಕಾಣಬಹುದಾಗಿದೆ. " ಯೇಸು ತನ್ನ ಶಿಷ್ಯರ ಸಮ್ಮುಖದಲ್ಲಿ ಇನ್ನೂ ಅನೇಕ ಚಿಹ್ನೆಗಳನ್ನು ಮಾಡಿದರು ಅದನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿಲ್ಲ ಆದರೆ ಇವುಗಳನ್ನು ಬರೆದಿರುವುದು ಯೇಸು ದೇವರ ಮಗನಾದ ಮೆಸ್ಸಾಯ ಎಂದು ನೀವು ನಂಬುವುದಕ್ಕಾಗಿ. . . ಇಲ್ಲಿ ನಾವು ಶುಭಸಂದೇಶದ ಉದ್ದೇಶವನ್ನು ಕಾಣಬಹುದಾಗಿದೆ. 

6) ಇಲ್ಲಿ ಇನ್ನೊಂದು ಪ್ರಮುಖ ಉದ್ದೇಶವನ್ನು ಬೈಬಲ್ ವಿದ್ವಾಂಸರು ನಮಗೆ ನೀಡುತ್ತಾರೆ. ಈ ಶುಭ ಸಂದೇಶವೂ ಲೋಕದ ಜೊತೆ ಇನ್ನೊಂದು ನಂಟನ್ನು ಬೆಳೆಸುತ್ತದೆ. ದೇವರು ತನ್ನ ಏಕಮಾತ್ರ ಪುತ್ರ ನನ್ನ ಲೋಕಕ್ಕೆ ಕಳಿಸಿದ್ದು ಲೋಕದ ಹಾಗೂ ಜನರ ಜ್ಞಾನೋದಯಕ್ಕೆಂದು ತಿಳಿಸಲಾಗುತ್ತದೆ. ತನ್ನ ಪುತ್ರ ಲೋಕದ ಒಂದು ರೂಪವನ್ನು ಧರಿಸಿದ. ಇದು ದೇವರು ಲೋಕದ ಮೇಲೆ ಇಟ್ಟಿರುವ ಭರವಸೆಯನ್ನು ಸೂಚಿಸುತ್ತದೆ. ಇದು ಈ ರೀತಿಯ ಪ್ರಕ್ರಿಯೆ ಗೊಂದು ಆರಂಭ. ದೇವಪುತ್ರ ಯೇಸು ತನ್ನ ಶಿಷ್ಯರುಗಳನ್ನು ಈ ಲೋಕಕ್ಕೆ ಕಳುಹಿಸುತ್ತಾರೆ ಕಾರಣ ಅವರಿಗೂ ಈ ಲೋಕದ ಮೇಲೆ ಬರವಸೆ ಇದೆ. ಶಿಷ್ಯರು ಈ ಲೋಕದ ರೂಪವನ್ನು ಉಳಿಸಿಕೊಳ್ಳಬೇಕು ಯೇಸುಸ್ವಾಮಿಯ ಶಿಷ್ಯರು ಕೂಡ ಮುಖದಲ್ಲಿ ಅವತರಿಸಿ ಈ ಲೋಕವನ್ನು ಶುದ್ಧೀಕರಿಸಬೇಕಾಗಿದೆ ಆದರೆ ಈ ಲೋಕಕ್ಕೆ ಯೇಸುವಿನಂತೆಯೇ ಸೇರಬಾರದು ಅಷ್ಟೇ. ಇನ್ನೊಂದು ನನ್ನ ವೈಯಕ್ತಿಕ ಚಿಂತನೆಯ ಮೇರೆಗೆ ಈ ಶುಭ ಸಂದೇಶವನ್ನು ಪ್ರೀತಿಯ ಉದ್ದೇಶಕ್ಕಾಗಿ ಬರೆಯಲಾಗಿದೆ. 

7) ಪ್ರೀತಿಯ ಉದ್ದೇಶ: ಯೋವಾನ್ನ3:16 ದೇವರು ಈ ಲೋಕವನ್ನು ಅಷ್ಟಾಗಿ ಪ್ರೀತಿಸಿದರೆ ಎಂದರೆ ತಮ್ಮ ಏಕೈಕ ಪುತ್ರನನ್ನೇ ಲೋಕಕ್ಕೆ ದಾರೆ ಎರೆದರು. ಇಲ್ಲಿ ದೇವರ ಅಪರಿಮಿತ ಪ್ರೀತಿಯನ್ನ ಕಾಣುತ್ತೇವೆ. ಈ ಶುಭ ಸಂದೇಶವನ್ನು ದೇವರ ಪ್ರೀತಿ ಹಾಗೂ ಯೇಸುಸ್ವಾಮಿಯ ಪ್ರೀತಿಯನ್ನು ತೋರಿಸಿ ಕೊಡುವುದಕ್ಕಾಗಿ ಬರೆಯಲಾಗಿದೆ ಎನ್ನುವುದು ನನ್ನ ವಾದ. ಇದಕ್ಕೆ ಕಾರಣ ಇಡೀ ಶುಭಸಂದೇಶದಲ್ಲಿ ದೇವರ ಪ್ರೀತಿ ಹರಿಯುವ ನೀರಿನಂತೆ ಕಾಣಬಹುದಾಗಿದೆ 



******************** 

ಜಗದ ಸೃಷ್ಟಿಯ ಪೌರಾಣಿಕ ಕತೆಗಳು

ಎಫ್. ಎಂ. ನಂದಗಾವ್
ಪೀಠಿಕೆ 

ನಮ್ಮ ಖಗೋಳ ಶಾಸ್ತ್ರ, ಭೂಗೋಳ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮೊದಲಾದ ವಿಜ್ಞಾನಗಳ, ಸೌರವ್ಯೂಹದ, ಪೃಥ್ವಿಯ, ಜೀವಜಗತ್ತಿನ ವೈಜ್ಞಾನಿಕ ತಿಳಿವಳಿಕೆಯು ಒಂದು ಬಗೆಯದಾದರೆ, ಆಯಾದೇಶ, ಜನಸಮುದಾಯದ ಪುರಾಣ ಗ್ರಂಥಗಳು ಪ್ರತಿಪಾದಿಸುವ ಜಗತ್ತಿನ ಉಗಮದ ರೀತಿಗಳು ಮತ್ತೊಂದು ಬಗೆಯಲ್ಲಿವೆ. 

ನಾವು ಕಾಣುವ ಆಕಾಶದಾಚೆಯ ಅಂತರಿಕ್ಷದಲ್ಲಿ ಅಗಣಿತ ತಾರೆಗಳಿವೆ. ಅಸಂಖ್ಯಾತ ನಕ್ಷತ್ರ(ತಾರೆ)ಗಳು ಬಹು ಒತ್ತಾಗಿರುವುದರಿಂದ ಆಕಾಶದಲ್ಲಿ ಹಾಲು ಚೆಲ್ಲಿದಂತೆ ಸುತ್ತುವರಿದು ಕಾಣುವ ತೇಜಃಪುಂಜಗಳನ್ನು ಕ್ಷೀರಪಥ ಅಥವಾ ಆಕಾಶಗಂಗೆ ಎಂದು ಕರೆಯುತ್ತಾರೆ. 

ನಮ್ಮ ಸೂರ್ಯನೂ ಒಂದು ನಕ್ಷತ್ರವೇ. ಆತನೂ ಒಂದು ಕ್ಷೀರಪಥದಲ್ಲಿರುವ ಒಂದು ನಕ್ಷತ್ರ. ನಮ್ಮ ಸೂರ್ಯನ ಬೆಳಕು ಭೂಮಿಗೆ ತಲುಪಲು ಎಂಟು ನಿಮಿಷಗಳು ಬೇಕು. ಅದೇ ನಮಗೆ ಹತ್ತಿರದ ನಕ್ಷತ್ರದ ಬೆಳಕು. ನಮ್ಮ ಬರಿಗಣ್ಣಿಗೆ ಕಾಣದ ಅದೆಷ್ಟೋ ನಕ್ಷತ್ರಗಳೂ ಇವೆ. ಭೂಮಿಯ ಮೇಲಿನ ಜೀವಜಗತ್ತಿಗೆ ಪೂರಕವಾಗಿರುವ ಸೂರ್ಯನನ್ನು ಸ್ವಯಂ ಬೆಳಕನ್ನು ಹೊಮ್ಮಿಸುವ ನಿಗಿ ನಿಗಿ ಉರಿಯುವ ಅನಿಲಗಳ ಅಗ್ನಿಗೋಲ ಎಂದು ಖಗೋಳ ವಿಜ್ಞಾನ ಹೇಳುತ್ತದೆ. 

ಸಾವಿರಾರು ಮಿಲಿಯನ್ ವರ್ಷಗಳ ಹಿಂದೆ ಸೂರ್ಯನಿಂದ ಹೊರಚಿಮ್ಮಿದ ವಿವಿಧಗಾತ್ರದ ಅಗ್ನಿಗೋಲಗಳು ಕ್ರಮೇಣ ನಮ್ಮ ಸೌರವ್ಯೂಹದ ಗ್ರಹಗಳಾದವೆಂದು ಅಂದಾಜಿಸಲಾಗುತ್ತದೆ. ಆರು ಸಾವಿರ ವರ್ಷಗಳ ಹಿಂದೆ ಸೂರ್ಯನಿಂದ ಬೇರ್ಪಟ್ಟ ಭೂಗ್ರಹ-ನಮ್ಮ ಭೂಮಿ, ನಾಲ್ಕುನೂರು ಮಿಲಿಯನ್ ವರ್ಷಗಳ ಹಿಂದೆಗಟ್ಟಿ ಆಕಾರ ತಾಳಿತು. ಕ್ರಮೇಣವಾಗಿ ಗಿರಿಪರ್ವತಗಳ, ಬಯಲಿನ ನೆಲ, ಆಳ ಸಾಗರಗಳು ಅಸ್ತಿತ್ವಕ್ಕೆ ಬಂದವು. ಗೋಲಾಕಾರದ ಭೂಗ್ರಹದ ಸುತ್ತ ವಾಯುಗೋಳ ರಚನೆಯಾಯಿತು. 

ನಾಲ್ಕು ಸಹಸ್ರ ಮಿಲಿಯನ್ ವರ್ಷಗಳವರೆಗೆ ಭೂಮಿಯಲ್ಲಿ ಯಾವುದೇ ಬಗೆಯ ಜೀವಿಗಳ ಉಗಮವಾಗಿರಲಿಲ್ಲ. ಸೂರ್ಯನನ್ನು ಪರಿ ಭ್ರಮಿಸುತ್ತಿರುವ ಭೂಮಿಯಲ್ಲಿ ಋತುಮಾನಗಳು ಉಂಟಾದವು. ಸೂರ್ಯನ ಬೆಳಕು, ಬಿಸಿ ಮತ್ತು ಶಕ್ತಿಯಿಂದ ಜೀವಜಗತ್ತು ಅಸ್ತಿತ್ವಕ್ಕೆ ಬಂದಿತು. ಮೊದಲು ಅಮೀಬಾ ಗಾತ್ರದ ಜೀವಿಗಳು ಉಂಟಾದವು. ನಿಧಾನವಾಗಿ ಬಗೆಬಗೆಯ ಸಸ್ಯ ಸಂಕುಲಗಳು, ಪ್ರಾಣಿ ಪಕ್ಷಿಗಳು ಅಸ್ತಿತ್ವಕ್ಕೆ ಬಂದವು ಎಂದು ನಮ್ಮ ವೈಜ್ಞಾನಿಕ ತಿಳಿವಳಿಕೆ ತಿಳಿಸುತ್ತದೆ. ಮಂಗನಿಂದ ಮಾನವ ಬಂದ ಎಂದೂ ವಿಜ್ಞಾನ ಪ್ರತಿಪಾದಿಸುತ್ತದೆ. 

ಆದರೆ, ಜಗತ್ತಿನ ತುಂಬೆಲ್ಲ ಹರಡಿರುವ ಮಾನವರಲ್ಲಿ, ಅವರವರ ಸಮುದಾಯಗಳು ಬೆಳೆದು ಬಂದ ಪರಿಸರ ಮತ್ತು ಅವುಗಳ ಅನುಭವಜನ್ಯ ನಿಸರ್ಗದ ಅರಿವಿನ ಆಧಾರದಲ್ಲಿ ಭೂಮಿಯ ಹುಟ್ಟಿನ ಬಗೆಗೆ ಆಯಾ ಸಮುದಾಯಗಳು ತಮ್ಮದೇ ಆದ ಬಗೆಬಗೆಯ ವಿವರಣೆ ನೀಡುತ್ತಾ ಬಂದಿವೆ. ಆ ವಿವರಣಾತ್ಮಕ ಕತೆಗಳು, ನಂತರ ಆಯಾ ಸಮುದಾಯದ ಸಂಸ್ಕೃತಿಯ ಪ್ರತೀಕಗಳಾದವು, ಸಂಪ್ರದಾಯಗಳಾದವು, ಅವು, ಅವರವರ `ತಮ್ಮತನವನ್ನು ಗಟ್ಟಿಗೊಳಿಸುವ' ಪುರಾಣ ಕಥೆಗಳಾದವು. 

ಜಗದ ಹುಟ್ಟಿನ-ಉಗಮದ ಪುರಾಣ ಕತೆಗಳು ಅಪಾರ ಸಂಖ್ಯೆಯಲ್ಲಿ ದೊರೆಯುತ್ತವೆ. ನಮ್ಮ ಭೂಗೋಳದ ಭೂ ಪ್ರದೇಶಗಳ ತುಂಬೆಲ್ಲ ಹರಡಿರುವ ಸಹಸ್ರಾರು ಸಮುದಾಯಗಳು, ತಮ್ಮದೇ ಆದ ವಿವಿಧ ಬಗೆಯಲ್ಲಿ ಜಗತ್ತಿನ ಸೃಷ್ಟಿಯ ಬಗೆಗೆ ಕತೆಗಳನ್ನು ಕಟ್ಟಿಕೊಂಡಿವೆ. 

ಈ ಸೃಷ್ಟಿಯ ಕತೆಗಳು ಆಯಾ ಸಮುದಾಯಗಳ ಸಂಸ್ಖೃತಿ, ಸಂಪ್ರದಾಯ ಮತ್ತು ಅವು ಪಾಲಿಸುವ ಧರ್ಮದ ಆಶಯಗಳಂತೆ ರೂಪತಳೆದಿವೆ. ಸದ್ಯದ ಜಗತ್ತು ಹಿಂದೆ ಹೇಗೆ ರೂಪತಾಳಿತು ಎಂಬುದನ್ನು ವಿವರಿಸುವ ಈ ಕತೆಗಳು ಎಲ್ಲಾ ಸಮುದಾಯಗಳಲ್ಲಿ ಆಯಾ ಸಮುದಾಯಗಳ ಪೌರಾಣಿಕ ಕತೆಗಳೇ ಆಗಿವೆ. 

ಅವು ಮೊದಲು ಮೌಖಿಕವಾಗಿ ರೂಪ ತಾಳಿ ನಂತರದ ಕಾಲಘಟ್ಟಗಳಲ್ಲಿ ಲಿಖಿತರೂಪದಲ್ಲಿ ಸ್ಥಾಪಿತಗೊಂಡಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವನ್ನು ಕೇವಲ ನಿಜವಾಗಿಯೂ ನಡೆದ ಘಟನೆಗಳ ಸುತ್ತ ಹೆಣೆದ ಐತಿಹಾಸಿಕ ದಾಖಲೆಗಳೆಂದು ಪರಿಗಣಿಸುವಂತಿಲ್ಲ. ಆದರೆ ಕೆಲವೊಮ್ಮೆ ಅವನ್ನು ಮಹಾನ್ ಸಾಹಿತ್ಯಕೃತಿಗಳೆಂದು ಗುರುತಿಸಬಹುದು. ಎಷ್ಟೇ ಆದರೂ, ಅವು ಆಯಾ ಸಮುದಾಯಗಳು ತಲಾತಲಾಂತರದಿಂದ ನಂಬಿಕೊಂಡು ಬಂದ ಸಂಗತಿಗಳು ಎಂಬುದನ್ನು ಅಲ್ಲಗಳೆಯಲಾಗದು. 

ಸಾಮಾನ್ಯ ಮೂಲೋದ್ದೇಶದ ಆಧಾರದಲ್ಲಿ ಜಗದ ಸೃಷ್ಟಿಯ ಕತೆಗಳನ್ನು ಹಲವು ಬಗೆಯಲ್ಲಿ ವಿಂಗಡಿಸಲಾಗಿದೆ. ಆದಿಯಲ್ಲಿ ಇದ್ದ ಗೊಂದಲದ ಸ್ಥಿತಿಯಿಂದ ಸೃಷ್ಟಿಯ ಉಗಮ ಆರಂಭವಾಗುತ್ತದೆ. ಸೃಷ್ಟಿಕರ್ತ ಜಗತ್ತನ್ನು ಸೃಷ್ಟಿಸುತ್ತಾನೆ. ಆದಿ ಸಮುದ್ರದಲ್ಲಿ ದೇವಪುರುಷ, ಹಕ್ಕಿ ಇತ್ಯಾದಿಗಳು ಮುಳುಗು ಹಾಕುವುದರಿಂದ ಜಗತ್ತು ಸೃಷ್ಟಿಯಾಗುತ್ತದೆ. ಶೂನ್ಯಾವಸ್ಥೆಯಲ್ಲಿ ಜಗತ್ತು ಅಸ್ತಿತ್ವ ಪಡೆಯುತ್ತದೆ. ಆದಿ ತಂದೆತಾಯಿಗಳಿಂದ ಜಗತ್ತಿನ ಸೃಷ್ಟಿಯಾಗುತ್ತದೆ. ದೈವಿಸಂಭೂತ ಅವಳಿಜವಳಿಗಳಿಂದ ಸೃಷ್ಟಿಯು ರೂಪಗೊಳ್ಳುತ್ತದೆ. ಮೊಟ್ಟೆಯಿಂದ ವಿಶ್ವ ರೂಪತಾಳುತ್ತದೆ. ಆದಿಯಲ್ಲಿ ಇದ್ದ ಜೀವದ ಅಂಗಾಂಗಳು ಹರಿದು ಹಂಚುವುದರಿಂದ ಜಗತ್ತು ಹುಟ್ಟುತ್ತದೆ. ಅನಂತ ಜಲರಾಶಿಯಿಂದ ಅಥವಾ ಆಕಾಶದಿಂದ ಜಗತ್ತು ಜನಿಸುತ್ತದೆ, ಈ ಮಾಲಿಕೆಯಲ್ಲಿನ ಕತೆಗಳು, ಸೃಷ್ಟಿಯ ಹುಟ್ಟಿನ ಕೆಲವು ಪ್ರಾತಿನಿಧಿಕ ಕತೆಗಳು. 

ಜಗದ ಸೃಷ್ಟಿಯ ಪೌರಾಣಿಕ ಕತೆಗಳು 

1. ಭೂಮಿದೇವರು, ಆಕಾಶ ದೇವತೆ 

ಈ ಜಗತ್ತಿನ ಆರಂಭದಲ್ಲಿ ಏನೂ ಇರಲಿಲ. ಎಲ್ಲೆಲ್ಲೂ ಶೂನ್ಯ. ಕತ್ತಲೋಕತ್ತಲು ತುಂಬಿತ್ತು. ಎತ್ತ ನೋಡಿದರತ್ತ ನೀರು ನೀರು. ಒಂದು ಬಗೆಯಲ್ಲಿ ಗೊಂದಲದ ಅವ್ಯವಸ್ಥೆಯ ಪರಿಸ್ಥಿತಿ ಇತ್ತು. ಆ ಆದಿ ಜಲರಾಶಿಯನ್ನು `ನನ್' ಸಾಗರ ಎಂದು ಗುರುತಿಸಲಾಗುತ್ತದೆ. ಹೀಗಾಗಿ `ನನ್' ಈಗ ಸಾಗರದೇವತೆ. `ನನ್' ಸಾಗರದ ಮಧ್ಯದಿಂದ ದಿನ್ನೆಯೊಂದು ಮೇಲೆದ್ದು ಬರುತ್ತದೆ, 

ಆ ದಿನ್ನೆಯೇ ಇಂದಿನ ಇಜಿಪ್ತಿನ ಪಿರಾಮಿಡ್‍ಗಳ ಅವುಗಳ ಆಕಾರ ಪಡೆಯುವುದಕ್ಕೆ ಕಾರಣ ಎನ್ನಲಾಗುತ್ತದೆ. ಆ ದಿನ್ನೆಯನ್ನು `ಬೆನ್‌ಬೆನ್' ಎಂದು ಕರೆಯಲಾಗುತ್ತದೆ. ಈ `ಬೆನ್ ಬೆನ್' ದಿನ್ನೆಯಿಂದಲೇ ಮೊದಲ ಬಾರಿ ಸೂರ್‍ಯದೇವರು `ರಾ' ಜಗತ್ತಿಗೆ ಬೆಳಕು ಕೊಡುವುದಕ್ಕೆ ಮೊದಲ ಮಾಡಿದ್ದ ಎಂದು ಹೇಳಲಾಗುತ್ತದೆ. ಅದೇ ದಿನ್ನೆಯ ಮೇಲೆಯೇ ಮೊದಲ ದೇವರು `ಆಟಮ್' ನಿಂತುಕೊಂಡಿದ್ದು. `ಆಟಮ್', `ರಾ' ದೇವರ ಮಗದೊಂದು ಹೆಸರು ಎಂದು ಹೇಳಲಾಗುತ್ತದೆ. 

ಆ `ಆಟಮ್' ಈ ಜಗತ್ತಿನ ಜೀವಜಾಲದ ಮೂಲ ಪುರುಷ. ಹೀಗಾಗಿ ಅವನು ಜಗತ್ತಿನ ಎಲ್ಲಾ ಜೀವರಾಶಿಗಳನ್ನು ಸೃಷ್ಟಿಸಿದಾತ. `ಬೆನ್ ಬೆನ್' ದಿನ್ನೆಯ ಮೇಲೆ ನಿಲ್ಲುವ ಮೊದಲು `ಆಟಮ್' `ನನ್' ಸಮುದ್ರದಲ್ಲಿ ದಿಕ್ಕೆದೆಸೆ ಇಲ್ಲದೇ ತೇಲುತ್ತಿದ್ದ. ಅವನಲ್ಲಿ ಗಂಡು ಹೆಣ್ಣು ಎರಡೂ ಅಂಶಗಳಿದ್ದವು. ಒಂದು ಬಾರಿ ಅವನಿಗೆ ತಾನು `ನನ್' ಸಮುದ್ರದಿಂದ ಹೊರ ಬಂದು ಜೀವ ಸೃಷ್ಟಿಯನ್ನು ಆರಂಭಿಸಬೇಕು ಎನ್ನಿಸುತ್ತದೆ. ಆಗ ಅವನು ಸಮುದ್ರದಿಂದ ಮೇಲೆ ಎದ್ದುಬಂದು `ಬೆನ್ ಬೆನ್' ದಿನ್ನೆಯ ಮೇಲೆ ನಿಂತುಕೊಳ್ಳುತ್ತಾನೆ. 

`ಆಟಮ್' ತನ್ನಲ್ಲಿದ್ದ ಹೆಣ್ತನವನ್ನು ಬಳಸಿ ಜೀವ ಸೃಷ್ಟಿಗೆ ಮುಂದಾಗುತ್ತಾನೆ. ಗಾಳಿ ಮತ್ತು ಖಾಲಿ ಜಾಗದ ದೇವರು `ಶೂ' ಅನ್ನು ಹುಟ್ಟಿಸುತ್ತಾನೆ. ನಂತರ ಮತ್ತು `ಶೂ'ನ ಸೋದರಿ ಹಬೆ ಮತ್ತು ಮಂಜಿನ ದೇವತೆ `ಟೆಫ್ನಟ್' ಳಿಗೆ ಜನ್ಮ ನೀಡುತ್ತಾನೆ. 

ಆತ ತನ್ನ ಎರಡೂ ಕೈಗಳನ್ನು ಕೂಡಿಸಿ, `ನಾನು ನನ್ನ ನೆರಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತೇನೆ. ನನ್ನಲ್ಲಿನ ಹೆಣ್ತನ ಮತ್ತು ಗಂಡುಗಳ ಸಂಯೋಗದಿಂದ ನನ್ನ ಬಾಯಲ್ಲಿ ಬೀಜವು ರೂಪತಾಳಿತು. ಆ ಬೀಜದ ಫಲವತ್ತತೆಯಿಂದ `ಶೂ' ಮತ್ತು `ಟೆಫ್ನಟ್' ದೇವರುಗಳು ಹುಟ್ಟಲಿ ಎಂದು ಆಶಿಸುತ್ತಾನೆ'. ಆಗ ಅವರಿಬ್ಬರೂ ಹುಟ್ಟುತ್ತಾರೆ. 

ಆದಿ ದೇವರು `ಆಟಮ್' ಸೀನಿದಾಗ `ಶೂ' ದೇವರು ಹುಟ್ಟಿದ, ಉಗುಳಿದಾಗ `ಟೆಫ್ನಟ್' ದೇವತೆ ಜನಿಸುತ್ತಾಳೆ. `ಶೂ' ಅನ್ನುವುದು ಸೀನಿದಾಗ ಊಂಟಾಗುವ ಸಪ್ಪಳವಾದರೆ, `ಟೆಫ್ನಟ್' ಅನ್ನುವುದು ಉಗುಳುವಾಗ ಉಂಟಾಗುವ ಶಬ್ದ ಎನ್ನಲಾಗುತ್ತದೆ. 

`ಆಟಮ್' ದೇವರು ಇಬ್ಬರು ಮಕ್ಕಳನ್ನು ಸೃಷ್ಟಿಸಿದ ಮೇಲೆ, ಆಗ ಒಬ್ಬರಲ್ಲ ಒಟ್ಟು ಮೂವರು ದೇವರುಗಳ ಉಪಸ್ಥಿತಿ ಉಂಟಾಗುತ್ತದೆ. ಆಗ, ಕತ್ತಲು, ಗೊಂದಲ ಹೇಳ ಹೆಸರಿಲ್ಲದಂತೆ ಮಾಯವಾಗಿ, ವಿಶ್ವದಲ್ಲಿ ಬೆಳಕು ಮೂಡತೊಡಗುತ್ತದೆ. 

ತನ್ನ ಮೊದಲ ಸೃಷ್ಟಿಯ ನಂತರ `ಆಟಮ್' ದೇವರು ಶ್ರಮದ ಕಾರಣ ದಣಿದಿರುತ್ತಾನೆ. ಅವನ ಬೆವರ ಹನಿ ನೆಲಕ್ಕೆ ಬಿದ್ದಾಗ, ಮೊದಲ ಸೃಷ್ಟಿಯ ಸಂತೋಷದಿಂದ ಅಳತೊಡಗಿದ ಸಂದರ್ಭದಲ್ಲಿ, ಅವನ ಕಣ್ಣೀರ ಹನಿಗಳು ಕೆಳಗೆ ಬಿದ್ದಾಗ, ಅವುಗಳಿಂದ ಮಾನವರು- ಗಂಡಸರುಹೆಂಗಸರು ಉಂಟಾಗುತ್ತಾರೆ. ಆದಿ ದೇವರು `ಆಟಮ್'ನ ಮಗದೊಂದು ಹೆಸರು `ರಾ' ಎಂದು ಹೇಳಲಾಗುತ್ತದೆ. ಹೀಗಾಗಿ, ಪುರಾತನ ಇಜಿಪ್ತಿನ ಜನ ತಮ್ಮನ್ನುತಾವು `ರಾನ ದನಕರುಗಳು' ಎಂದು ಕರೆದುಕೊಳ್ಳುತ್ತಿದ್ದರು. 

ಇತ್ತಇಷ್ಟೆಲ್ಲಾ ನಡೆಯುವಾಗ, ಅತ್ತ ಆದಿ ದೇವರ ಮಕ್ಕಳಾದ `ಶೂ' ಮತ್ತು `ಟೆಫ್ನಟ್' ಅವರು ಗಂಡ ಹೆಂಡಿರಂತೆ ಜೀವನ ಆರಂಭಿಸುತ್ತಾರೆ. ಅವರಿಗೆ ಒಬ್ಬರು ಮಕ್ಕಳು ಹುಟ್ಟುತ್ತಾರೆ. ಅವರಿಗೆ ಹುಟ್ಟುವ ಆದಿ ದೇವರು `ಆಟಮ್'ನ ಮೊಮ್ಮಕ್ಕಳಿಗೆ `ಗೆಬ್' ಮತ್ತು `ನಟ್' ಎಂದು ಹೆಸರಿಡಲಾಗುತ್ತದೆ. ಈ `ಗೆಬ್' ಭೂದೇವರಾದರೆ, `ನಟ್' ಆಗಸ ದೇವತೆಯಾಗಿರುತ್ತಾಳೆ. 

ಆದರೆ, ಅವರಿಬ್ಬರೂ ಹುಟ್ಟುವಾಗ ಒಬ್ಬರಿಗೊಬ್ಬರು ಅಪ್ಪಿಕೊಂಡು ಅಂಟಿಕೊಂಡೇ ಹುಟ್ಟುತ್ತಾರೆ. ಆಗ, ಆ ಇಬ್ಬರು ದೇವರುಗಳ ತಂದೆದೇವರು - ಗಾಳಿ ದೇವರು `ಶೂ', ಅವರಿಬ್ಬರ ಮಧ್ಯ ನುಸುಳುತ್ತಾನೆ. ಮಗಳು `ನಟ್' ಇರುಳಿನ ಆಗಸ ದೇವತೆಯನ್ನು ತಂದೆ ದೇವರು `ಶೂ' ಎತ್ತಿ ಹಿಡಿದು, ಭೂದೇವರು `ಗೆಬ್'ನಿಂದ ಬಿಡಿಸಿ ಮೇಲೆ ತಳ್ಳುತ್ತಾನೆ. 

ಭೂದೇವರು `ಗೆಬ್' ಮತ್ತು ಆಗಸ ದೇವತೆ `ನಟ್' ಮದುವೆಯಾಗಿ ಸಂಸಾರಿಗಳಾದಾಗ ಅವರಿಗೆ `ಒಸ್ಸಿರಿಸ್', `ಐಸಿಸ್' ಮತ್ತು `ಸೆಟ್' ಹಾಗೂ `ನೆಫಥಿಸ್' ಹೆಸರಿನ ನಾಲ್ವರು ಮಕ್ಕಳಾಗುತ್ತಾರೆ. ಮುಂದೆ ಒಸ್ಸಿರಿಸ್ ಭೂಮಿಯನ್ನು ಆಳತೊಡಗುತ್ತಾನೆ. `ಒಸ್ಸಿರಿಸ್' ತನ್ನ ಸಹೋದರಿ `ಐಸಿಸ್'ಳನ್ನು ತನ್ನ ರಾಣಿಯನ್ನಾಗಿ ಸ್ವೀಕರಿಸುತ್ತಾನೆ. ಅವರಿಬ್ಬರು ಬಹುಕಾಲ ರಾಜ್ಯವಾಳುತ್ತಾರೆ. `ಒಸ್ಸಿರಿಸ್' ಮತ್ತು `ಐಸಿಸ್' ಫಲವಂತಿಕೆ ಮತ್ತು ಸುವ್ಯವಸ್ಥೆಗಳ ದೇವತೆಗಳು. 

`ಸೆಟ್' ಮತ್ತು `ನೆಫೆಸಸ್‌ಳು' ದಂಪತಿಗಳು, ಒಳಿತಿನ ಪರವಾಗಿ ನಿಲ್ಲುವ `ಒಸ್ಸಿರಿಸ್' ಮತ್ತು `ಐಸಿಸ್' ದೇವರುಗಳ ಕಾರ್‍ಯಗಳಿಗೆ ಕಡಿವಾಣ ಹಾಕುವ, ಅವ್ಯವಸ್ಥೆಯನ್ನು ಪ್ರತಿಪಾದಿಸುವ ಕೆಡುಕಿನ ದೇವರುಗಳು. `ಹೋರಸ್' ದೇವರು `ಒಸ್ಸಿರಿಸ್' ಮತ್ತು `ಐಸಿಸ್' ದಂಪತಿಗಳ ಮಗ. ಇಜಿಪ್ತಿನ ಪುರಾಣಗಳಲ್ಲಿನ `ಹೊರಸ್' ದೇವರನ್ನು ಬದಿಗಿಟ್ಟು, ಉಳಿದ ಒಂಬತ್ತು ದೇವರುಗಳನ್ನು `ನವದೇವತೆಗಳು' ಎಂದು ಗುರುತಿಸಲಾಗುತ್ತದೆ. 

--- 

ಇದು ಪುರಾತನ ಇಜಿಪ್ತಿನ ಹೆಲಿಯೊಪೊಲಿಸ್ ಪಟ್ಟಣದ ಪೂಜಾರಿಗಳ ಐತಿಹ್ಯಗಳ ಪ್ರಭಾವಳಿಯಲ್ಲಿ ರೂಪತಾಳಿದ್ದ ಜಗತ್ತಿನ ಹುಟ್ಟಿನಕತೆ. ಇದಲ್ಲದೇ ಇನ್ನು ಹಲವು ಜಗತ್ತಿನ ಹುಟ್ಟಿನ ಕತೆಗಳು ಇಜಿಪ್ತಿನ ವಿವಿಧೆಡೆ ಕಂಡುಬರುತ್ತವೆ. 

*********** 

ಬೈಬಲ್ಲಿನ ಸ್ತ್ರೀಯರು

ಹವ್ವ 
ದೀಪ್ತಿ ಫ್ರಾನ್ಸಿಸ್ಕಾ
ವರು ತಮ್ಮದೇ ರೂಪದಲ್ಲಿ ಮಾನವನನ್ನು ಸೃಷ್ಟಿಸುತ್ತಾರೆ. ದೇವರ ಸೃಷ್ಟಿಕಾರ್ಯದಲ್ಲಿ ಅವನು ಒಡೆಯನಾಗುತ್ತಾನೆ, ಅವಳು ಒಡತಿಯಾಗುತ್ತಾಳೆ. ಅವಳೂ ಸಹ ದೇವರ ಪ್ರತಿರೂಪವಾಗಿದ್ದು ಪುರುಷನೊಂದಿಗೆ ಪ್ರಕೃತಿಗೆ ದೇವರ ಪ್ರೀತಿಯ ಹಾಗೂ ಶಕ್ತಿಯ ಸಾಕ್ಷಿಯಾಗುತ್ತಾಳೆ. ಅವಳನ್ನು ದೇವರು 'ಏಝರ್' (ಎಂದರೆ ಸಹಾಯ) ಎನ್ನುತ್ತಾರೆ. ಆದಾಮ ಸಂತಾನೋತ್ಪತ್ತಿಯ ಪಾತ್ರವನ್ನು ಪರಿಗಣಿಸಿ ಅವಳನ್ನು ಹವ್ವ (ಎಂದರೆ ಜೀವ) ಎಂದು ಹೆಸರಿಸುತ್ತಾನೆ. 

ಸೃಷ್ಟಿಗೆ ಒಡತಿಯಾದ ಇವಳು ಆದಾಮನ ಒಡನಾಡಿಯಾಗಿ, ಸಂಗಾತಿಯಾಗಿ, ಸಹಾಯಕಳಾಗಿ, ಅವನನ್ನು ಪೂರ್ಣಗೊಳಿಸುವ ಮತ್ತು ಸೃಷ್ಟಿಯ ಜವಾಬ್ದಾರಿಯುತ ಅವನೊಂದಿಗೆ ಸಮಾನವಾಗಿ ಹಂಚಿಕೊಳ್ಳುವವಳಾದಳು. ಹವ್ವಳ ಸೃಷ್ಟಿಯೊಂದಿಗೆ ದೇವರು ಸಂಬಂಧಗಳನ್ನು, ಸ್ನೇಹವನ್ನು, ಒಡನಾಟ ಮತ್ತು ಮದುವೆಯಂತಹ ಮನೋಭಾವಗಳನ್ನು ಜಗತ್ತಿಗೆ ಪರಿಚಯಿಸಿದರು.

ಇಲ್ಲಿ ನಾವು ಗಮನಿಸಬೇಕಾದದ್ದು, ಹವ್ವಳ ಸೃಷ್ಟಿಯಾಗುವವರೆಗೂ ಆದಾಮನಿಗೆ ತಾನು ಪುರುಷನೆಂಬ ಮನವರಿಕೆ ಇರುವುದಿಲ್ಲ. ಹವ್ವಳನ್ನು ಕಂಡ ನಂತರವೇ ತನಗೂ ಆಕೆಗೂ ಇದ್ದ ಏಕತೆಯನ್ನು, ವ್ಯತ್ಯಾಸವನ್ನು ಗುರುತಿಸುತ್ತಾನೆ. 

ಹವ್ವಳಿಗೆ ಇದ್ದ ಬುದ್ಧಿ - ತಿಳುವಳಿಕೆ ದೇವರಿಂದ ಹಾಗೂ ಆದಾಮನಿಂದಲೇ ಬಂದದ್ದು. ಅವಳ ಹೃದಯ ಪರಿಶುದ್ಧವಾಗಿದ್ದು ಅವರಿಬ್ಬರೂ ನಾಚಿಕೆಪಡದೆ ಬೆತ್ತಲೆ ಓಡಾಡುತ್ತಿದ್ದರು. ಸೃಷ್ಟಿಯಾದೊಡನೆ ಮಾತನಾಡಿಕೊಳ್ಳಲು, ಭಾವನೆಗಳನ್ನಂಚಿಕೊಳ್ಳಲು ಬಾಷಾ ನೈಪುಣ್ಯತೆ ಅವರಿಗಿತ್ತು. ಹವ್ವಳಿಗೆ ಕೇಡಿನ ಅರಿವೇ ಇರಲಿಲ್ಲ. ಸೈತಾನನ ಕುಯುಕ್ತಿಗಳ ಶಂಕೆಯೂ ಅವಳಿಗಿರಲಿಲ್ಲ. ದೇವರು ಅವರಿಗೆ ಎಲ್ಲಾ ಜೀವಿಗಳನ್ನಾಳುವ ಅಧಿಕಾರವನ್ನು ಕೊಟ್ಟಿದ್ದರು. ಆದರೂ ಹವ್ವಳು ಸೈತಾನನಿಂದ ಶೋಧಿತಳಾಗಿ ಮೊದಲ ಪಾಪ ಗೈದಳು. ಆದಾಮನೂ ಅದರಲ್ಲಿ ಭಾಗಿಯಾದನು. ಆದರೆ ಇನ್ನೊಂದು ದೃಷ್ಟಿಯಿಂದ ನೋಡಿದರೆ ಹವ್ವಳನ್ನಾಗಲಿ ಆದಾಮನನ್ನಾಗಲಿ ದೂಷಿಸುವುದು ಸರಿಯಲ್ಲ. ಪಾಪ ಮಾಡುವುದಕ್ಕೂ ಪುಣ್ಯ ಮಾಡುವುದಕ್ಕೂ ಒಳಿತು ಕೆಡುಕುಗಳ ಅರಿವು ಇರಬೇಕು. ಅವರು ಕೆಡುಕನ್ನು ಮಾಡುವುದರಿಂದಲೇ ಅವರಿಗೆ ಒಳಿತು ಕೆಡುಕುಗಳ ಅರಿವಾಯಿತು. 

ಏಡನ್ ವನದಲ್ಲಿ ಅವರು ಹಣ್ಣನ್ನು ತಿಂದು ಅವರಿಗೆ ಪಾಪದ ಅರಿವು ಉಂಟಾದಾಗ ಅವರಿಬ್ಬರೂ ನಗ್ನತೆಯನ್ನು ಮುಚ್ಚಿಕೊಂಡರು. ಹೀಗೆ ಮಾನ ಮುಚ್ಚಿಕೊಳ್ಳುವುದರಿಂದ ಸಂಸ್ಕೃತಿಗೆ ದಾರಿಯಾಯಿತು. 


ಹವ್ವಳು ಮೊದಲ ಪಾಪವೆಸಗಿ, ದೇವರು ಅವಳಿಗೆ ಮಕ್ಕಳನ್ನು ಹೆರುವ ಶಿಕ್ಷೆ ಕೊಟ್ಟಿದ್ದರಿಂದಲೇ ಸಂತಾನೋತ್ಪತ್ತಿ ಸಾಧ್ಯವಾಯಿತು. ಸ್ತ್ರೀಯರ ಸಂತಾನಾಭಿವೃದ್ದಿ ಶಕ್ತಿ ನಿಜಕ್ಕೂ ಒಂದು ಆಶೀರ್ವಾದವೇ ಎಂದು ಹೇಳಬೇಕು. ಅವಳು ಆದಾಮನ ಸಂಗಾತಿಯಾಗಿ ಅವನ್, ಕಾಯಿನ್, ಅಝರ, ಆಬೇಲ್, ಸೆತ್ ಮತ್ತು ಅಕ್ಲಿಮಾ ಎಂಬ ಐದು ಮಕ್ಕಳಿಗೆ ಜನ್ಮವಿತ್ತಳು. ಹೀಗೆ ಹವ್ವಳು ಸೃಷ್ಟಿಯ ಮೊದಲ ಮಹಿಳೆ, ಮೊದಲ ಗೆಳತಿ, ಮೊದಲ ಹೆಂಡತಿ, ಮೊದಲ ತಾಯಿಯಾದಳು. 



**************** 

ನ್ಯೂಜಿಲೆಂಡಿನ ರೋಟೊರುವ (Rotorua)

 - ಪ್ರಶಾಂತ್ ಇಗ್ನೇಶಿಯಸ್
ಪ್ರವಾಸಗಳಿಗೆ ಹೋದಾಗ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಅನೇಕ ಕಾರಣಗಳಿರುತ್ತವೆ. ಐತಿಹಾಸಿಕ ಸ್ಥಳವಾದರೆ ಸ್ಥಳವನ್ನು ಆಳಿದ ರಾಜರು, ರಾಣಿಯರ ಕಣ್ಣೀರು, ಅರಮನೆ, ಕೋಟೆ-ಕೊತ್ತಲು, ಐತಿಹಾಸಿಕ ಪಾರಂಪರಿಕ ಕಟ್ಟಡಗಳ ಆಯಸ್ಸು, ಅದಕ್ಕಂಟಿದ ರಕ್ತ ಎಲ್ಲದರ ಮಾಹಿತಿಗಳಿರುತ್ತವೆ, ಇಲ್ಲವೇ ಭೂಗರ್ಭದಲ್ಲಿ ಕಳೆದು ಹೋಗಿರುತ್ತವೆ. ತಿಳಿದುಕೊಳ್ಳಲು ಮನಸ್ಸು ಹಾತೊರೆದರೂ ಈ ಐತಿಹಾಸಿಕ ಸ್ಥಳಗಳಲ್ಲಿ ಕಡೆಲೇಕಾಯಿ, ಸೌತೆಕಾಯಿ ಮಾರುವವರ ದರ್ಬಾರು ಆ ಹಿಂದಿನ ರಾಜರುಗಳಿಗಿಂತ ಜೋರು. ಹುಸಿ ಗೈಡ್^ಗಳ ಬಳಿ ಸಿಕ್ಕಿಕೊಂಡರಂತೂ, ಅವರದೇ ಆದ ಹೊಸ ಚರಿತ್ರೆ ಸೃಷ್ಟಿಯಾಗುತ್ತದೆ. ಈ ಎಲ್ಲ ಕಾಟ ತಪ್ಪಿಸಿಕೊಳ್ಳಲು ಬೇಸಿಗೆಯಲ್ಲಿ ಐಸ್‍ಕ್ರೀಮ್, ಚಳಿಗಾಲದಲ್ಲಿ ಹುರಿದ ಜೋಳಕ್ಕೆ ಪ್ರವಾಸಿಗರು ಮಾರು ಹೋಗಿ, ತಿಂದು, ಪೇಪರ್ ಕಸವನ್ನು ಇತಿಹಾಸದಲ್ಲಿ ಒಂದಾಗಿಸಿ ಪರಮ ಪಾವನರಾಗುತ್ತಾರೆ.

ಪ್ರಕೃತಿ ಸೌಂದರ್ಯದ ಸ್ಥಳಗಳಿಗೆ ಹೋದಾಗ ಮಾಹಿತಿಗಳಿಗಿಂತ ಸೌಂದರ್ಯವನ್ನು ಕಣ್ಣಿನಲ್ಲಿ ತುಂಬಿಕೊಳ್ಳುವುದೇ ಕೆಲಸವಾಗುತ್ತದೆ. ವರ್ಷಗಳ ಹಿಂದೆ ರೋಲ್ ಕ್ಯಾಮರಾಗಳು ಇದ್ದಾಗ ಒಂದು ಸ್ಥಳದಲ್ಲಿ ಒಂದಷ್ಟು ಫೋಟೋ ತೆಗೆದು, ಕ್ಯಾಮರಾ ಮುಚ್ಚಿ ಪ್ರಕೃತಿಯನ್ನು ಆನಂದಿಸುವುದು ಸಾಮಾನ್ಯವಾಗಿತ್ತು. ಡಿಜಿಟಲ್ ಕ್ಯಾಮೆರಾ ಹಾಗೂ ಮೊಬೈಲ್ ಕ್ಯಾಮರಾ ಬಂದ ಮೇಲೆ ಪ್ರಕೃತಿಗೆ ಅಡ್ಡ ನಿಂತು ಸೆಲ್ಫಿ ತೆಗೆದುಕೊಂಡು, ಎಲ್ಲವನ್ನೂ ಮೆಮರಿ ಕಾರ್ಡಿನಲ್ಲಿ ತುರುಕಿಕೊಳ್ಳುವುದರಲ್ಲೇ ಸಮಯವಾಗಿ, ಗೇಟುಗಳು ಮುಚ್ಚಿ ಸೌಂದರ್ಯಾಸ್ವಾದಕ್ಕೆ ಭಂಗ ಬರುತ್ತದೆ. 

ಗಿರಿಧಾಮಗಳಿಗೆ ಹೋದಾಗ ಮೋಡಗಳು ರಸ್ತೆಯ ಮೇಲೆ ಓಡಾಡುತ್ತಿರುವಂತಿರುತ್ತದೆ. ಗೋವದಂತ ಸ್ಥಳಗಳಿಗೆ ಹೋದಾಗ ತೆರೆ 'ನೊರೆ'ಗಳು ನಮ್ಮನ್ನು ಆಕರ್ಷಿಸುತ್ತದೆ. ಮಂಜು ಭೂಮಿಗಿಳಿದು ಸ್ವರ್ಗದ ಅನುಭವ ನೀಡುವ ಸ್ಥಳಗಳು ಮಡಿಕೇರಿಯಿಂದ ಸ್ವಿಜರ್ಲೆಂಡ್ ತನಕ ಸಾವಿರಾರಿವೆ. ಆದರೆ ಭೂಮಿಯೊಳಗಿನಿಂದ ಹೊರಡುವ ಹೊಗೆ ಹಾಗೂ ಒಂದು ಅಸಾಧ್ಯ ವಾಸನೆಯಿಂದ ಸೆಳೆಯುವ ಊರೊಂದಿದೆ ಎಂದರೆ ಆಶ್ಚರ್ಯವಾಗಬಹುದು. ನ್ಯೂಜಿಲೆಂಡಿನ ರೋಟೊರುವ (Rotorua) ಅಂತಹ ಒಂದು ಊರು.

ಪ್ರಕೃತಿ ಸೌಂದರ್ಯ ಹಾಗೂ ಮೌನದಲ್ಲಿ ಅದ್ದಿದಂತ ಪ್ರಶಾಂತತೆಗೆ ನ್ಯೂಜಿಲೆಂಡ್ ಒಂದು ಅಪೂರ್ವ ಸಾಕ್ಷಿಯಾದರೆ, ಅಂತಹ ದೇಶದಲ್ಲಿನ ಅಪರೂಪದ ಅನುಭವವನ್ನು ರೋಟೊರುವ ನೀಡುತ್ತದೆ. ರೋಟೊರುವ ನಗರವನ್ನು ಪ್ರವೇಶಿಸುತ್ತಿದ್ದಂತೆ ವಾಕರಿಕೆ ತರುವಂತ ವಾಸನೆ ನಮ್ಮನ್ನು, ನಮ್ಮ ಮೂಗನ್ನು ಸ್ವಾಗತಿಸುತ್ತದೆ. ಅದಕ್ಕೆ ಹೊಂದಿಕೊಳ್ಳುವ ತನಕ ಸ್ವಲ್ಪ ಕಷ್ಟವೇ. ಆದರೆ ನಿಧಾನವಾಗಿ ಆ ವಾಸನೆಗೆ ನಮ್ಮ ದೇಹ ಒಗ್ಗಿಕೊಳ್ಳುತ್ತದೆ, ಒಗ್ಗಿಕೊಳ್ಳಲೇಬೇಕಾಗುತ್ತದೆ. 

ಪ್ರಾಕೃತಿಕ ಸೌಂದರ್ಯದಿಂದ ಸೆಳೆಯುವ ಈ ಊರು, ಮುಂದೆ ನಮ್ಮ ಕಣ್ಣ ಮುಂದೆ ಇನ್ನಷ್ಟು ಅಚ್ಚರಿಗಳನ್ನು ಮೂಡಿಸುತ್ತಾ ಸಾಗುತ್ತದೆ. ನ್ಯೂಜಿಲೆಂಡಿನ ಇತರ ಸ್ಥಳಗಳಂತೆ ಸುಂದರವಾಗಿದ್ದರೂ, ಇತರ ಮಹಿಮೆಗಳನ್ನು ಈ ಊರು ತೋರಿಸುತ್ತದೆ. ಸಾಗುತ್ತಿದ್ದಂತೆ ಅಲ್ಲಲ್ಲಿ ಹೊಗೆ ಏಳುವುದನ್ನು, ಹೊಗೆ ಗಾಳಿಯಲ್ಲಿ ಒಂದಾಗುವುದನ್ನು ನಾವು ಕಾಣಬಹುದು. ಯಾವ ಮನೆಯಲ್ಲಿ ಏನು ಬೇಯಿಸುತ್ತಿದ್ದಾರೆ? ಇಷ್ಟು ಹೊಗೆ ಬೇಯಿಸುವಂತ ಮಾಂಸವಾದರೂ ಯಾವುದು? ಅಥವಾ ಯಾರ ಬುಡಕ್ಕೆ ಎಷ್ಟು ಬೆಂಕಿ ಬಿತ್ತು? ಎಂದುಕೊಳ್ಳುವಷ್ಟರಲ್ಲಿ ಮತ್ತಷ್ಟು ಹೊಗೆ ಬುಗ್ಗೆಗಳು ಗಾಳಿಯಲ್ಲಿ ಲೀನವಾಗಲು ಮೇಲೆ ಏಳುತ್ತಿರುತ್ತವೆ. 

'ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ' ಎಂಬ ಗಾದೆ ಮಾತು ಈ ಊರಲ್ಲಿ ಸುಳ್ಳಾಗುತ್ತದೆ. ಇಲ್ಲಿ ಹೊಗೆಗೆ ಬೆಂಕಿ ಕಾರಣವಲ್ಲ, ಸಿಗರೇಟೂ ಅಲ್ಲ. ಊರನ್ನು ಆಗಲೇ ಕಂಡವರು ಜೊತೆಯಲ್ಲಿದ್ದು ಅದರ ಬಗ್ಗೆ ತಿಳಿಸಿದರೆ ಮಾತ್ರ ನಿಮಗೆ ಅದರ ರಹಸ್ಯ ಗೊತ್ತಗುವುದು. ಇಲ್ಲವಾದರೆ ತೆರೆದ ಬಾಯಿ, ಮುಚ್ಚಿದ ಮೂಗು, ಕಟ್ಟಿಕೊಂಡ ಕಿವಿಯಲ್ಲಿ ಇದನ್ನೆಲ್ಲಾ ನೋಡಬೇಕಾಗುತ್ತದೆ. ನಮ್ಮ ರಸ್ತೆಗಳಲ್ಲಿ ನೆಲದೊಳಗಿನ ನೀರಿನ ಪೈಪು ಒಡೆದು ಹೋಗಿ, ನೀರಿನ ಬುಗ್ಗೆಗಳು ಒಮ್ಮೊಮ್ಮೆ ಸಣ್ಣದಾಗಿ ಮತ್ತೊಮ್ಮೆ, ಸಿಡಿಯುವಂತೆ ಇಲ್ಲಿ ಗ್ಯಾಸಿನ ಪೈಪೇನಾದರೂ ಒಡೆದು ಹೋಗಿದೆಯೇ ಎಂಬ ಕೀಟಲೆಯ ಪ್ರಶ್ನೆ ಮನಸಿನಲ್ಲಿ ಬಂದರೆ ನಿಮ್ಮ ತಪ್ಪಲ್ಲ. 

ನೀರಿನ ಬುಗ್ಗೆಗಳು ರಸ್ತೆಗಳಲ್ಲಿ ಕೊತಕೊತನೆ ಕುದಿಯುತ್ತಾ, ನೆಲದಿಂದ ಹೊಗೆ ಬರುವುದನ್ನು ಕಂಡಾಗ ಒಂದಷ್ಟು ಭಯವಾಗಬಹುದು, ಆಶ್ಚರ್ಯವಾಗಬಹುದು. ಮುಂದೆ ಆಶ್ಚರ್ಯ, ಭಯ ಒಂದು ರೀತಿಯ ಅಪೂರ್ವ ಅನುಭವಕ್ಕೆ ಎಡೆ ಮಾಡಿಕೊಡುತ್ತದೆ. ಈ ಪ್ರದೇಶದಲ್ಲಿನ ನೆಲವು 'ಜಿಯೋಥರ್ಮಲ್' ಕ್ರಿಯೆಗೆ ವೇದಿಕೆಯಾಗಿದೆ. ಹಾಗೆಂದರೆ ಏನು ಎಂಬ ಪ್ರಶ್ನೆಯನ್ನು ಉತ್ತರಿಸುವಷ್ಟು ವೈಜ್ಞಾನಿಕ ಬುದ್ದಿವಂತಿಕೆ ನನ್ನಲ್ಲಿ ಇಲ್ಲ. ಭೂಮಿಗೆ ಬಿದ್ದ ಬೀಜ ಚಿಗುರೊಡೆದು ಸಸಿಯಾಗಿ ಬೆಳೆಯುವಷ್ಟು ಸಹಜವಾದ ಭೂಮಿಯಾಳದ ಒಂದು ಪ್ರಕ್ರಿಯೆ ಇದು.



ಗೀಸರ್‍ಗಳು ಹಾಗೂ ಬಿಸಿ ನೀರ ಬುಗ್ಗೆಗಳನ್ನು ಈ ಪ್ರದೇಶದಲ್ಲಿ ಬಹಳವಾಗಿ ಕಾಣಬಹುದು. ಆ ವಾಸನೆ ಹಾಗೂ ಹೊಗೆಗೆ ಪ್ರಮುಖ ಕಾರಣ ಭೂಮಿಯೊಳಗಿನ 'ಸಲ್ಫರ್ ಡೆಪಾಸಿಟ್'. ನೆಲದ ಆಳದಲ್ಲಿ ಕೊತಕೊತನೆ ಕುದಿಯುವ ಈ ಸಲ್ಫರ್ ಅಥವಾ ಗಂಧಕವು, ನೆಲದ ತೂತುಗಳಿಂದ ತನ್ನ ಬಿಸಿಯಾಟದ ಕುರುಹುಗಳನ್ನು ಗಾಳಿಯಲ್ಲಿ ತೇಲಿ ಬಿಡುತ್ತದೆ. ಇತ್ತ ಗಂಧಕದ ಈ ವಾಸನೆ, ಅತ್ತ ಹೊಗೆಯಿಂದಾಗಿ ಈ ನಗರವನ್ನು 'ಸಲ್ಫರ್ ಸಿಟಿ' ಎಂದೇ ಕರೆಯಲಾಗುತ್ತದೆ. 

ಈ ಗಂಧಕವು ಉರಿಯುವಾಗ ಕೊಳೆತ ಮೊಟ್ಟೆಯ ವಾಸನೆ ಹೊರಬೀಳುತ್ತದೆ. ಇದರಿಂದಾಗಿಯೇ ಈ ನಗರ ’Rotten Rua’ ರೋಟೊರುವ ಆಗಿದೆ ಎನ್ನುತ್ತಾರೆ. ರುವಾ ಎಂದರೆ ಗೆಡ್ಡೆಗೆಣಸುಗಳನ್ನು ಶೇಖರಿಸಿಡುವ ಕಣಜ. ನೂಲ್ ಕೋಲ್ ಅಥವಾ ಮೂಲಂಗಿಯಂಥ ಗೆಡ್ಡೆಯು ಕಣಜದಲ್ಲಿ ಕೊಳೆತು ಹೋದರೆ ಎಂತಹ ಕೆಟ್ಟ ವಾಸನೆ ಬರಬಹುದೆಂದು ಊಹಿಸಿ. ಹಾಗಾಗಿ ಈ ಊರನ್ನು ಕೊಳೆತ ಕಣಜ ಎಂದು ಕರೆಯುತ್ತಾರೆ ಎಂಬುದು ಒಂದು ವಾದ. ಆದರೆ ನಿಜಕ್ಕೂ ಅದರ ಹೆಸರು ಬಂದಿರುವುದು ಅಲ್ಲಿನ ಮೂಲನಿವಾಸಿಗಳು ಮಾತನಾಡುವ 'ಮಾವೊರಿ' ಎಂಬ ಭಾಷೆಯಿಂದ. 'ರೋಟೋ' ಎಂದರೆ ಸರೋವರ ಹಾಗೂ 'ರುವಾ' ಎಂದರೆ 'ಎರಡನೆಯ'. ಹೀಗೆ ರೋಟೊರುವ ಎಂದರೆ 'ಎರಡನೆಯ ಸರೋವರ' ಎಂಬುದು ನಿಜ ಅರ್ಥ. 

ಭೂಮಿಯ ಒಡಲಾಳದಲ್ಲಿ ನಡೆಯುವ ಈ ತಿಕ್ಕಾಟದಿಂದ ನೆಲದ ಮೇಲೆ ಒಂದು ಅಸಾಧಾರಣವಾದ ನೋಟ ಸೃಷ್ಟಿಯಾಗುತ್ತದೆ ಈ ಊರಿನ ಅನೇಕ ಕಡೆಗಳಲ್ಲಿ, ಪಾರ್ಕುಗಳಲ್ಲಿ, ಕೊನೆಗೆ ಸಾಮಾನ್ಯ ರಸ್ತೆಗಳಲ್ಲಿ ಸಹಾ ಇದನ್ನು ನಾವು ಕಾಣಬಹುದಾಗಿದೆ. 

ಇದೇ ನಗರದಲ್ಲಿರುವ ಲೇಡಿ ನಾಕ್ಸ್ ಎಂಬ ಒಂದು ನೀರಿನ ಬಗ್ಗೆ ಒಂದು ಅಪೂರ್ವವಾದ ಅನುಭವವನ್ನು ನೋಡುಗರಿಗೆ ನೀಡುತ್ತದೆ. ಪ್ರತಿದಿನ ಬೆಳಿಗ್ಗೆ ಸುಮಾರು ಹತ್ತು ಮೂವತ್ತಕ್ಕೆ ಈ ಪ್ರದೇಶದಲ್ಲಿ ನೂರಾರು ಜನ ಬಂದು ಸೇರುತ್ತಾರೆ. ಜನ ಸೇರಿದ ಮೇಲೆ ನೀರಿನ ಬುಗ್ಗೆ ಚಿಮ್ಮುವ ಕಲ್ಲಿನ ರಂಧ್ರಕ್ಕೆ ಅಲ್ಲಿನ ಸ್ವಯಂಸೇವಕರು ಯಾವುದೋ ಒಂದು ರೀತಿಯ ದ್ರವವನ್ನು ಸುರಿಯುತ್ತಾರೆ. ತಕ್ಷಣವೇ ರಂಧ್ರದಿಂದ ಸುಮಾರು 20 ಮೀಟರುಗಳ ಎತ್ತರಕ್ಕೆ ಚಿಮ್ಮುವ ಬಿಸಿ ನೀರಿನ ಬುಗ್ಗೆಯ ಪರಿಯೇ ಅದ್ಭುತ. 

ಭೂಮಿಯೊಳಗೆ ಕೊತ ಕುದಿಯುತ್ತಿರುವ ನೀರಿಗೆ ದ್ರವದ ಸಾಂಗತ್ಯ ಸಿಕ್ಕಿದೊಡನೆ ಹೊರಡುವ ಈ ಬುಗ್ಗೆ ನಿಜಕ್ಕೂ ಪ್ರಕೃತಿಯ ಅದ್ಭುತವೇ ಸರಿ. ಈ ಬುಗ್ಗೆ ಸುಮಾರು ಒಂದು ಗಂಟೆಗಳ ತನಕ ಚಿಮ್ಮುತ್ತಿರುತ್ತದೆ ಎಂದು ಹೇಳಲಾಗುತ್ತದೆ. ಹೆಮ್ಮೆಯ ಭಾರತೀಯರಂತೆ ನಾವು ಸುಮಾರು 15 ನಿಮಿಷಗಳು ತಡವಾಗಿ ಹೋಗಿ, ಬುಗ್ಗೆಯ ಉಚ್ಛ್ರಾಯ ಸ್ಥಿತಿಯ ನೋಟದಿಂದ ವಂಚಿತವಾದೆವು. 

ಈ ಸ್ಥಳದ ಈ ಕ್ರಿಯೆ ಹೇಗೆ ಬೆಳಕಿಗೆ ಬಂತು ಎಂಬುದು ಸಹ ಒಂದು ಆಸಕ್ತಿಕರವಾದ ವಿಷಯ. 1901 ರಲ್ಲಿ ಈ ಪ್ರದೇಶದಲ್ಲಿ ಮೊದಲ ಮುಕ್ತ ಸೆರೆಮನೆಯನ್ನು ಸ್ಥಾಪಿಸಲಾಯಿತು. ರೋಟೊರುವ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದ ಜೈಲುಗಳಲ್ಲಿದ್ದ ಒಳ್ಳೆಯ ನಡತೆಯ ಅಪರಾಧಿಗಳನ್ನು ಈ ಮುಕ್ತ ಸೆರೆವಾಸಕ್ಕೆ ಬಿಡಲಾಗುತ್ತಿತ್ತು. ಅಲ್ಲಿ ಸುತ್ತಾಡುತ್ತಿದ್ದ ಅವರು ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಲು ಈ ಬುಗ್ಗೆಯ ಬಳಿ ಬರುತ್ತಾರೆ. ಬಟ್ಟೆ ಒಗೆಯಲು ತಂದಿದ್ದ ಬಟ್ಟೆ ಸೋಪ್ ಆ ನೀರಿನ ಬುಗ್ಗೆಯ ಸಂಪರ್ಕಕ್ಕೆ ಬಂದೊಡನೆ, ಧುತ್ತನೆ ಬಿಸಿ ನೀರಿನ ಬುಗ್ಗೆ ಎತ್ತರಕ್ಕೆ ಚಿಮ್ಮಿತಂತೆ. ಈ ರೀತಿಯಾಗಿ ಇದು ಬೆಳಕಿಗೆ ಬಂತು. 

ಇದನ್ನು ಕಂದು ಹಿಡಿದಿದ್ದು ಆ ಬಡ ಬಂಧಿತರು. ಆದರೆ ಬುಗ್ಗೆಗೆ ಹೆಸರು ಅಂದಿನ ನ್ಯೂಜಿಲೆಂಡಿನ ಗೌವರ್ನರ್ ಆಗಿದ್ದ ಬ್ರಿಟಿಷ್ ರಾಜಕಾರಿಣಿ ಜಾನ್ ಮಾರ್ಕ್ ನಾಕ್ಸ್ ನ ಎರಡನೆಯ ಮಗಳು ಲೇಡಿ ನಾಕ್ಸ್ ಳದು. ಇಂದಿಗೂ ಪ್ರತಿದಿನ ಅವಳ ಹೆಸರಿನಲ್ಲೇ ಬುಗ್ಗೆ ಚಿಮ್ಮುತ್ತಿದೆ. ಆ ಅಪರಾಧಿಗಳ ಹೆಸರು ನೆಲದಾಳದ ಚಿಮ್ಮದ ನೀರಿನಲ್ಲಿ ಎತ್ತ ಸೇರಿಕೊಂಡಿತೋ?. 

ನಮ್ಮ ಸುಪ್ತ ಮನಸ್ಸಿನಲ್ಲಿ ಯಾರಿಗೂ ತಿಳಿಯದಂತೆ ಕೊತಕೊತನೆ ಕುದಿಯುವ ಭಾವನೆಗಳು ಯಾವುದೋ ಒಂದು ಸಣ್ಣ ಪ್ರಚೋದನೆಯಲ್ಲಿ ಸ್ಫೋಟಗೊಳ್ಳುವ, ಚಿಮ್ಮುವ ಪ್ರತೀಕವಾಗಿ ಈ ಬುಗ್ಗೆಯು ಕಾಣುತ್ತದೆ. ಮುಂದೆ ಅದೇ ಪ್ರದೇಶದಲ್ಲಿ ಸಿಗುವ ಶ್ಯಾಂಪೇನ್ ಪೂಲ್, ಆರ್ಟಿಸ್ಟ್ ಪ್ಯಾಲೆಟ್, ಪ್ರಿಮ್ ರೋಸ್ ಟೆರೆಸ್ ಎಲ್ಲದಕ್ಕೂ ಅದರದೇ ಆದ ರೋಚಕ ಕತೆಗಳಿವೆ. 



************* 

ನಿಮ್ಮಲ್ಲಿ ನಾನೂ ಒಬ್ಬ

- ಆಜು
ನನ್ನಲ್ಲಿ ನಿಮ್ಮನು ನೀವು ಕಾಣದಿರಬಹುದು. ಆದರೆ ಪ್ರತಿನಿತ್ಯ ನಿಮ್ಮಲ್ಲಿ ನಾನು ನನ್ನನ್ನು ಕಾಣುತ್ತೇನೆ. ಹೇಗೆ ಎಂದು ಯೋಚಿಸಬೇಡಿ ಮುಂದೆ ನಿಮಗೇ ತಿಳಿಯುತ್ತದೆ. ಅದಕ್ಕೂ ಮುಂಚೆ ನನ್ನ ಮೇಲಿನ ನನ್ನ ಅಭಿಪ್ರಾಯ ತಿಳಿಸಿದರೆ ನಿಮ್ಮ ಮೇಲಿನ ನನ್ನ ಅಭಿಪ್ರಾಯ ಏನೆಂಬುದು ನಿಮಗೂ ತಿಳಿದರೂ ತಿಳಿಯಬಹುದು. ನಾನು ನನ್ನ ಬಗ್ಗೆ ಮಾತಾಡಲು ಹೊರಟಾಗ ನನ್ನ ಮುಂದೆ ಸದಾ ಸಿದ್ದವಾಗಿ ಎದುರಾಗುವ ಪ್ರಶ್ನೆ "ನಾನು ಯಾರು". ಕೆಲವೊಮ್ಮೆ ಪ್ರಶ್ನೆಗಳು ಎಷ್ಟು ಸುಲಭವಾಗಿ ಕಂಡರೂ ಅದಕ್ಕೆ ಬೇಕಾದ ಉತ್ತರ ಕಠಿಣ ಹಾಗೂ ನಿಗೂಢ. 


ಈ ಪ್ರಶ್ನೆ ನನಗೇನು ಹೊಸದಲ್ಲ ಎಷ್ಟೋ ಮಂದಿಯ ಈ ಪ್ರಶ್ನೆಗೆ ನಾನು ಈಗಾಗಲೇ ಉತ್ತರಿಸಿದ್ದೀನಿ. ಆ ಉತ್ತರಗಳಲ್ಲಿ ನಾನು "ನನ್ನ ಅಪ್ಪನ ಮಗನಾಗಿದ್ದೆ" "ಅಜ್ಜಿಯ ಮೊಮ್ಮಗನಾಗಿದ್ದೆ" "ಯಾರದೋ ಗೆಳೆಯನಾಗಿದ್ದೆ "ಮುಂದೆ "ನನ್ನ ಮಡದಿಯ ಗಂಡನಾಗುತ್ತೇನೆ"! ಕೆಲವೊಮ್ಮೆ"ನನ್ನ ಜಾತಿಯ ನಾನಾಗಿದ್ದೇನೆ" ಹಾಗಾಗ "ನನ್ನ ರಾಜಕೀಯ ಪಕ್ಷದವ" ಆಗಿದ್ದೇನೆ. ಆದರೆ ಇದು ಯಾವುದೂ ನನ್ನನ್ನು ಮಾತ್ರ ಪರಿಚಯಿಸದೆ, ನನ್ನ ಜೊತೆಯವರನ್ನು, ನನ್ನ ಜಾತಿಯನ್ನು ಪರಿಚಯಿಸುತ್ತದೆ. ಆದರೆ ಇಲ್ಲಿನ ಪ್ರಶ್ನೆ ನನ್ನನ್ನು ಮಾತ್ರ ಕೇಳುತ್ತಿದೆ. 


ಹಾಗಾದರೆ ನಾನ್ಯಾರು? ನಾನು ಯಾರು ಎಂದು ತಿಳಿಯದ ನಾನು. ಇನ್ನು ಹೇಗೆ ನಿಮ್ಮನ್ನು ತಿಳಿಯಲಿ? ನಿಮ್ಮನ್ನು ತಿಳಿಯದ ನಾನು ಹೇಗೆ ನನ್ನನ್ನು ತಿಳಿಯಲಿ? ನನ್ನನೇ ತಿಳಿಯದ ನನ್ನಿಂದ ನೀವು ನಿಮ್ಮನ್ನು ಹೇಗೆ ತಿಳಿಯುವಿರಿ? ಇದಕ್ಕೇ ಇರಬೇಕು ಕ್ರಿಸ್ತ "ಜನ ತನ್ನನ್ನು ಯಾರೆಂದು ತಿಳಿಯುತ್ತಾರೆ" ಎಂದು ಶಿಷ್ಯರಿಂದ ತಿಳಿದುಕೊಂಡದ್ದು. ಜನ ತನ್ನನ್ನು ಏನೆಂದು ತಿಳಿಯುತ್ತಾರೆ ಎಂದು ತಿಳಿದೇ ಆ ಜನರನ್ನು ಅವನು ಅರಿತದ್ದು. (ತಿಳಿದುಕೊಂಡಿದ್ದರಿಂದಲೇ ಬಹುಶಃ ಅವನನ್ನು ಶಿಲುಬೆಗೇರಿಸಲು ಆ ಜನ ಮುಂದಾದದ್ದು). ಇಷ್ಟೆಲ್ಲಾ ಯೋಜನೆಗಳು ಶುರುವಾದದ್ದು ಕೇವಲ "ನಾನು" ಎಂಬುದರಿಂದ. 


ಈ ಪ್ರಶ್ನೆಯ ಹುಡುಕಾಟದಲ್ಲಿ ಮುಕ್ತಾಯ ಶುರುವಿನಲ್ಲಿಯೇ ಎಂದು ತಿಳಿದ್ದಿದರೂ ಮತ್ತೆ ಶುರು ಮಾಡುತ್ತೇವೆ ಮತ್ತೆ ಶುರುವಿನಲ್ಲೇ ಬಂದು ನಿಲ್ಲುತ್ತೇವೆ. ಇಷ್ಟೆಲ್ಲಾ ಹೇಳಿದ ನನಗೀಗ ಕನಕದಾಸರ "ನಾನು ಹೋದರೆ ಹೋದೇನು" ಎಂಬ ಮಾತುಗಳು ನೆನಪಾಗುತ್ತಿವೆ. 

ಇದು ನಿಮಗೂ ತಿಳಿದಿರುವ ಕಥೆಯೇ ಆದರೂ ಮತ್ತೆ ಹೇಳುವ ನನ್ನ ಉದ್ದಟತನವನ್ನು ಸಹಿಸಿಕೊಳ್ಳಿ. ಒಮ್ಮೆ ವ್ಯಾಸರಾಜರ ಶಿಷ್ಯ ಕೂಟದಲ್ಲಿ ಯಾರು ಸ್ವಗ9ಕ್ಕೆ ಹೋಗುವೆವು ಎಂಬ ಚಚೆ9 ಎದ್ದಾಗ ಎಲ್ಲರೂ ನಾನು ನಾನು ಶ್ರೇಷ್ಠನೆಂದು ಹೇಳುತ್ತಿದಾಗ, ಕನಕದಾಸರು ಮಾತ್ರ ಸುಮ್ಮನಿರುವುದನ್ನು ಕಂಡ ಗುರುಗಳು ಕನಕನ ಕುರಿತು "ಏಕೆ ಕನಕ ನೀನು ಸ್ವಗ9ಕ್ಕೆ ಹೋಗುವುದಿಲ್ಲವೆ "ಎಂದು ಕೇಳಿದರು. ಆಗ ಕನಕ "ನಾನು ಹೋದರೆ ಹೋದೇನು"ಎಂದು ಹೇಳುತ್ತಾರೆ. ಅಂದರೆ "ನಾನು" ಎಂಬ ಭಾವನೆ ನನ್ನನ್ನು ಬಿಟ್ಟು ಹೋದರೆ ಹೋಗುತ್ತೇನೆ ಎಂದು. 

ಆದರೆ ನಾನು ಎಂಬುದನ್ನು ಬಿಡಲು ಸಾಧ್ಯವೇ? ಬಿಟ್ಟರೂ ಅದು ನಮ್ಮನ್ನು ಬಿಡುತ್ತದೆಯೆ? ನನ್ನನ್ನು ಬಿಡದ ನಾನು ನಿಮ್ಮನ್ನು ಬಿಡುವುದೇ? ಈ ನಾನು ಎಂಬುದರ ಸಂತತಿಗಳಾದ ನನ್ನದು, ನನ್ನ ಆಸ್ತಿ, ನನ್ನ ಮನೆ, ನನ್ನ ಜಾತಿ ಇವನ್ನೆಲ್ಲ ಹೇಗೆ ಬಿಡಲು ಸಾಧ್ಯ. ನಿಶ್ಚಿತವಾಗಿ ಇಲ್ಲ, ಇದು ನಮ್ಮಿಂದ ಆಗದು. 

ಇಂತಹ ಸ್ವಾಥ9 ತುಂಬಿರುವ ನಮ್ಮಲ್ಲಿ ಹೇಗೆ ತಾನೆ "ನಮ್ಮಂತೆಯೆ ಪರರರನ್ನು ಪ್ರೀತಿಸಲು ಸಾಧ್ಯ" ಪರರನ್ನು ಪ್ರೀತಿಸದ ಹೊರತು, ಪರಮಾತ್ಮನ ನಿಮಿತ್ತವನ್ನು ನಡೆಸಲು ಸಾಧ್ಯ, ಅವನನ್ನು ಸೇರಲು ಸಾಧ್ಯ, ನಾನರಿಯೆ, ಏಕೆಂದರೆ "ನಿಮ್ಮಲ್ಲಿ ನಾನೂ ಒಬ್ಬ" 


*********** 





ವಿದ್ಯಾರ್ಥಿ ಎಂಬ ಜ್ಯೋತಿಗೆ ಶಿಕ್ಷಕರು ಹಣತೆಯಾಗಬೇಕಲ್ಲವೇ?

ಸಹೋ. ಜಾರ್ಜ್ ಫೆರ್ನಾಂಡಿಸ್ (ಜಾಜಿ) ಎಂ. ದಾಸಾಪುರ

ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಮಹತ್ತರವಾದ ಸ್ಥಾನವನ್ನು ವಹಿಸುವುದು ಶಿಕ್ಷಕರು ಎಂದರೆ ತಪ್ಪಾಗಲಾರದು. ಈ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ನೀರೆರೆದು ಪೋಷಿಸುವವರು ಈ ಶಿಕ್ಷಕರೇ ಹೌದು, ಈ ಶಿಕ್ಷಕ ವೃತ್ತಿಯೂ ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.

ಮೊತ್ತ ಮೊದಲನೆಯದಾಗಿ ನಮಗೆ ಶಿಕ್ಷಕರು ಎಂದು ಮೊದಲು ಗೋಚರಿಸಲ್ಪಡುವುದು ನಮ್ಮ ಮನೆಯಲ್ಲಿರುವ ನಮ್ಮ ಅಜ್ಜಿ, ಅಜ್ಜ, ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ ಇತ್ಯಾದಿ. ನಾವೆಲ್ಲರೂ ಒಂದು ಕುಟುಂಬದ ಮೂಲಕ ಈ ಸಮಾಜಕ್ಕೆ ಕಾಲಿಡುತ್ತೇವೆ. ಹೀಗೆ ಸಮಾಜಕ್ಕೆ ನಮ್ಮನ್ನು ಪರಿಚಯಿಸಿ, ಅಲ್ಲಿಂದ ಉತ್ತಮ ನಾಗರೀಕರು ನಾವಾಗಬೇಕೆಂದು ನಮಗೆ ಮೂಲಭೂತ ಶಿಕ್ಷಣವನ್ನು ಶಿಕ್ಷಕರಾಗಿ ನಮಗೆ ಕಲಿಸಿಕೊಡುತ್ತಾರೆ. ಹೀಗೆ ನಮಗೆ ಶಿಕ್ಷಕ/ಕಿ ಎಂಬ ಪದ ಕುಟುಂಬದಿಂದಲೇ ಪರಿಚಯವಾಗುತ್ತದೆ. ಅಲ್ಲಿಂದ ಹೊರಟು ಶಾಲೆ ಮೆಟ್ಟಿಲನ್ನು ಹತ್ತುವ ನಮಗೆ ಈ ಶಿಕ್ಷಕ/ಕಿಯರು ಮೊದಲು ಅಪರಿಚಿತರಂತೆ ಕಂಡರೂ ಕಾಲ ಕಳೆದಂತೆ ಅವರೂ ನಮ್ಮ ಮಾರ್ಗದರ್ಶಕರು ಎಂಬುದು ನಮಗೆ ಗೊತ್ತಾಗುತ್ತದೆ. ಇಲ್ಲಿಂದ ನಮ್ಮ ವಿದ್ಯಾರ್ಥಿ ಜೀವನ ಆರಂಭವಾಗುತ್ತದೆ. ಹೀಗೆ ಶಿಕ್ಷಕರ ಮತ್ತು ವಿದ್ಯಾರ್ಥಿಯ ನಡುವೆ ಎಂದೆಂದೂ ಮರೆಯಲಾಗದ ಅವಿನಾಭಾವ ಸಂಬಂಧ ಏರ್ಪಡುತ್ತದೆ. 

ನಮ್ಮ ದೇಶದ ಇತಿಹಾಸದ ಪುಟಗಳನ್ನು ಇಣುಕಿ ನೋಡಿದಾಗ ನಮಗೆ ಈ ಶಿಕ್ಷಕ ಮತ್ತು ವಿದ್ಯಾರ್ಥಿ ಸಂಬಂಧವು ಆಗಿನ ಕಾಲದಲ್ಲಿ ಗುರು ಶಿಷ್ಯರ ಸಂಬಂಧವಾಗಿತ್ತೆಂಬುದು ನಮಗೆ ತಿಳಿಯುತ್ತದೆ. ತಾವು ಕಲಿತದ್ದನ್ನು ತಮ್ಮ ಶಿಷ್ಯರಿಗೆ ಧಾರೆಯೆರೆಯುವುದರ ಮೂಲಕ ಒಬ್ಬ ವ್ಯಕ್ತಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಲ್ಲ ಎಂಬುದನ್ನು ಅವರು ತೋರಿಸಿಕೊಟ್ಟರು. ಈ ಸಂಬಂಧ ಪ್ರೀತಿಯ ಹಾಗೂ ಸ್ನೇಹದ ಬಾಂಧವ್ಯವನ್ನು ಹೊಂದಿರುತ್ತಿತ್ತು. ಅದೇ ಬಾಂಧವ್ಯವನ್ನು ನಾವು ಈಗಲೂ ಸ್ಮರಿಸುತ್ತೇವಲ್ಲವೇ?

ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಾ ಹೋಗುತ್ತಿದೆ. ಪ್ರತಿಯೊಂದು ಕ್ಷಣವೂ ವಿಸ್ಮಯಕಾರಿಯಾಗಿ ಗೋಚರವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಶಿಕ್ಷಣದ ರುವಾರಿಗಳಾದ ಶಿಕ್ಷಕರು ಈ ಸಮಾಜದ ಒಳಿತಿಗಾಗಿ ಎಷ್ಟು ಶ್ರಮಿಸುತ್ತಿದ್ದಾರೆ? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ನಾ ಕಂಡಂತೆ ಹಲವಾರು ಶಿಕ್ಷಕ/ಕಿಯರು ತಮ್ಮ ತನುಮನಗಳನ್ನು ಧಾರೆಯೆರೆಯುವುದರ ಮೂಲಕ ತಮ್ಮ ವಿದ್ಯಾರ್ಥಿಗಳನ್ನು ಈ ದೇಶದ ಉತ್ತಮ ಪ್ರಜೆಗಳನ್ನಾಗಿಸಲು ಶ್ರಮಿಸುತಿದ್ದಾರೆ ಎಂದರೆ ತಪ್ಪಾಗಲಾರದು. 

ಈ 21ನೇ ಶತಮಾನದಲ್ಲಿ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಉತ್ತಮ ನಾಗರೀಕರನ್ನಾಗಿ ಮಾಡಲು ಈ ಶಿಕ್ಷಕರು ತಮ್ಮ ಸರ್ವ ಪ್ರಯತ್ನವನ್ನು ಮಾಡಲೇಬೇಕಾಗಿದೆ. ಕೇವಲ ಪರೀಕ್ಷೆಗಳಲ್ಲಿ ಬಾಯಿಪಾಠ ಮಾಡಿ ಅಂಕಗಳನ್ನು ಪಡೆಯುವಂತೆ ಮಾಡುವುದನ್ನು ತಡೆದು, ಒಬ್ಬ ವ್ಯಕ್ತಿ ಈ ಸಮಾಜದ ಒಳಿತಿಗಾಗಿ ಹೇಗೆ ಶ್ರಮಿಸಬೇಕೆಂಬುದನ್ನು ಕಲಿಸಿಕೊಡಬೇಕಾಗಿದೆ. ನೂರಕ್ಕೆ ನೂರು ಅಂಕಗಳನ್ನು ಪಡೆದವರು ಮಾತ್ರ ಬುದ್ಧಿವಂತರು, ಮತ್ತಿನ್ನೆಲ್ಲರು ದಡ್ಡರು ಎಂಬ ಮಾತನ್ನು ಅಲ್ಲಗಳೆಯಬೇಕಾಗಿದೆ. ಇಂದಿನ ಮಾಧ್ಯಮಗಳ ಹಾವಳಿಯ ಅಲೆಗೆ ಸಲುಕಿ ನಲುಗುತ್ತಿರುವ ಈ ವಿದ್ಯಾರ್ಥಿಗಳ ಜೀವನವನ್ನು ಪುಸ್ತಕದಿಂದಾಚೆ ಮತ್ತು ತರಗತಿಯ ಕೊಠಡಿಯಿಂದಾಚೆ ರೂಪುಗೊಳಿಸಬೇಕಿದೆ. ಮೊದಲು ಬದುಕು ಅಂದರೆ ಏನು ಎಂಬುದನ್ನು ಅವರಿಗೆ ಮನವಿಕೆ ಮಾಡಿಕೊಡಬೇಕಾಗಿದೆ. ಮೌಲ್ಯಯುತ ವ್ಯಕಿಗಳಾಗಿ ಹೇಗೆ ಬಾಳಬೇಕು ಎಂಬುದನ್ನು ತಮ್ಮ ಬೋಧನೆಯ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಈಗ ಶಿಕ್ಷಕರ ಕೈಯಲ್ಲಿದೆ.


ಈ ಶಿಕ್ಷಕರು ಮನಸ್ಸು ಮಾಡಿದರೆ ರೋಗಗ್ರಸ್ತವಾಗಿರುವ ಈ ಸಮಾಜವನ್ನು ಸ್ವಚ್ಚ ಸಮಾಜವನ್ನಾಗಿ ಮಾಡಬಹುದು. ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಅವಲೋಕಿಸಿ ನೋಡಿದಾಗ ಅದರಲ್ಲಿ ಕಂಡುಬರುವ ಅಂಶವೇನೆಂದರೆ ವಿದ್ಯಾರ್ಥಿಗಳು ಕೇವಲ ಬಾಯಿಪಾಠದ ಯಂತ್ರಗಳಾಗಿ ಹೊರಹೊಮ್ಮುತ್ತಿದ್ದಾರೆ. ಭಾವನೆಗಳನ್ನು ಅರ್ಥೈಸಿಕೊಂಡು ಅವುಗಳಿಗೆ ಹೇಗೆ ಸ್ಪಂದಿಸಬೇಕು ಎಂಬ ಸಾಮಾನ್ಯ ಅರಿವು ಅವರಿಗಿಲ್ಲವಾಗಿದೆ. ಇಂದಿನ ಶಿಕ್ಷಕರು ಪ್ರಸ್ತುತ ಸಮಾಜದ ಅಗತ್ಯತೆಗಳನ್ನು ಮನಗಂಡು ವಿದ್ಯಾರ್ಥಿಗಳಿಗೆ ಈಗಿನಿಂದಲೇ ಅವುಗಳನ್ನು ಹೇಗೆ ಎದುರಿಸಿ ಮಂದೆ ಹೋಗಬೇಕೆನ್ನುವುದನ್ನು ತಮ್ಮ ಬೋಧನೆಯ ಮೂಲಕ ತಿಳಿಸಿಕೊಡಬೇಕಿದೆ. ಹೀಗೆ ನಿರ್ಜೀವ ಕಲ್ಲಿಗೆ ಜೀವ ಕೊಡುವ ತಾಕತ್ತು ಈ ಶಿಕ್ಷಕರಿಗಿದೆ ಎಂಬುದನ್ನು ಅವರು ಮರೆಯಬಾರದು. ಮುಖದಲ್ಲಿ ಸದಾ ಮಂದಹಾಸವನ್ನು ಸೂಸುತ್ತಾ, ಮುಗುಳುನಗೆಯನ್ನು ಬೀರುತ್ತಾ, ತಮಗೆ ಸಿಗುವ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸುವ ಹೊಣೆ ಅವರದ್ದಾಗಿದೆ. 

ಈ ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿ ಎಂದು ತಿಳಿದು ಆ ವಿದ್ಯಾರ್ಥಿಗಳ ಜೀವನದಲ್ಲಿ ಸದಾ ಗೆಲುವು ಅವರಿಗೆ ದೊರೆಯಲು ಅವರಿಗೆ ಬೇಕಾದ ಉತ್ಸಾಹ ಎಂಬ ನೀರನ್ನು ದಿನವೂ ಎರೆಯುತ್ತಾ, ಅದೇ ವಿದ್ಯಾರ್ಥಿಗಳು ಮುಂದೊಂದು ದಿನ ಸಾಧನೆಯ ಶೀಖರವನ್ನೇರಲೆಂದು ಪ್ರಾರ್ಥಿಸುವವರು ಈ ಶಿಕ್ಷಕರೆ. ಅಂತೆಯೇ ಅವರು ಸಾಧನೆಗೈದಾಗ ಖುಷಿ ಪಡುವವರು ಈ ಶಿಕ್ಷಕರು ತಾನೇ? ವಿದ್ಯಾರ್ಥಿಗಳ ಪ್ರತಿ ನೋವಿನಲ್ಲೂ ನಲಿವಿನಲ್ಲೂ ಜೊತೆಗಿದ್ದು ಅಮ್ಮನಂತೆ ಮತ್ತು ಅಪ್ಪನ ಹಾಗೆ ಪ್ರೀತಿ ತೋರುತ್ತಾ ತಂದೆತಾಯಿಯ ಸ್ಥಾನವನ್ನು ತುಂಬುವವರು ಈ ಶಿಕ್ಷಕರೆ. ಈ ಶಿಕ್ಷಕರು ತಮ್ಮ ಬಳಿ ಬರುವ ಶಿಷ್ಯ ವೃಂದವನ್ನು ನಿಸ್ವಾರ್ಥತೆಯಿಂದ ತಿದ್ದಿ ತೀಡಿ, ಬದುಕಿನ ಅರ್ಥವನ್ನು ತಮ್ಮ ಪಾಠ ಪ್ರವಚನಗಳ ಮೂಲಕ ಅವರಿಗೆ ತಿಳಿಸಿಕೊಟ್ಟು, ಬದುಕಿನಲ್ಲಿ ಎದುರಾಗುವ ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಸಮಾಜದ ಹಾಗೂ ತಮ್ಮ ಕುಟುಂಬಗಳ ಏಳ್ಗೆಗಾಗಿ ಪ್ರತಿಕ್ಷಣವೂ ಅವರು ದುಡಿಯುವಂತೆ ಅವರನ್ನು ಪ್ರೇರೆಪಿಸುವ ಜವಾಬ್ದಾರಿ ನಿಮ್ಮದು ಒಲವಿನ ಶಿಕ್ಷಕರೆ. ಹಾಗಾದರೆ ಈ ಶಿಕ್ಷಕ ವೃತ್ತಿ ಎಷ್ಟೊಂದು ಮೌಲ್ಯವುಳ್ಳದ್ದೆಂದು ನಿಮಗೆ ಗೊತ್ತಲ್ಲವೇ? ಅದಕ್ಕಾಗಿ ನಿಮಗೆಲ್ಲಾ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ವಿದ್ಯಾರ್ಥಿ ಎಂಬ ಜ್ಯೋತಿಗೆ ಹಣತೆಯು ನೀವಾಗಿ ಅದು ಸದಾ ಸಕರಾತ್ಮಕವಾಗಿ ಪ್ರಜ್ವಲಿಸುವಂತೆ ನೋಡಿಕೊಳ್ಳಿ. 



***********









ದನಿ ರೂಪಕ

ಪೂರ್ವಗ್ರಹ ಪೀಡಿತರಾದವರಿಗೆ ಸತ್ಯದ ದರ್ಶನ ಎಂದಿಗೂ ಸಾಧ್ಯವಿಲ್ಲ 

ಅವರ ಮನಸ್ಸು ಏಕಮುಖವಾಗಿ ಸಂಚರಿಸುತ್ತಲೇ ಇರುತ್ತದೆ. ಅವರಿಗೆ ಸಿಗುವುದು ಅರ್ಧಸತ್ಯ ಮಾತ್ರ ಎಂಬುದನ್ನು ನಿರೂಪಿಸಲು ಓಶೋ ತನ್ನ ಶಿಷ್ಯರಿಗೆ ಮುಲ್ಲಾ ನಸ್ರುದ್ದೀನನ ಪ್ರಸಂಗವನ್ನು ವಿವರಿಸಿದ್ದಾರೆ. 

ಒಮ್ಮೆ ಗೌರವಾನ್ವಿತ ನ್ಯಾಯಾಧೀಶನಾದ ಮುಲ್ಲಾ ನಸ್ರುದ್ದೀನ್ ತನ್ನ ಮೊದಲ ಮೊಕದ್ದಮೆಯ ತೀರ್ಪು ನೀಡಲು ಸಜ್ಜಾಗಿ ನ್ಯಾಯಪೀಠವನ್ನು ಅಲಂಕರಿಸಿ ಕೂತಿದ್ದ. ಒಂದು ಕಡೆ ಫಿರ್ಯಾದುಗಳ ವಾದವನ್ನು ಆಸಕ್ತಿಯಿಂದ ತುಂಬಾ ಏಕಾಗ್ರತೆಯಿಂದ ಆಲಿಸಿದ ನಸ್ರುದ್ದೀನ್, ಕೋರ್ಟಿನಲ್ಲಿ ನೆರದಿದ್ದವರನ್ನು ಉದ್ದೇಶಿಸಿ ಇಂತೆಂದನು: "ಇನ್ನು ಐದು ನಿಮಿಷಗಳಲ್ಲಿ ನಾನು ಈ ಕೇಸಿಗೆ ಸಮರ್ಪಕವಾದ ತೀರ್ಪನ್ನು ನೀಡುತ್ತೇನೆ" 

ಆದರೆ, ಮುಲ್ಲಾನ ಈ ಮಾತುಗಳನ್ನು ಕೇಳಿ ಕೋರ್ಟ್ ಆವರಣದಲ್ಲಿ ಗುಸುಗುಸು ಶುರುವಾಯಿತು. ಕೊಂಚ ಧೈರ್ಯ ಮಾಡಿದ ಕ್ಲರ್ಕ್ ಒಬ್ಬ ಮುಲ್ಲಾನಿಗೆ ಕಿವಿಯಲ್ಲಿ ಈ ರೀತಿ ಪಿಸುಗುಟ್ಟಿದ "ಇದೇನು ಮಾಡುತ್ತಿದ್ದೀರಿ ಮಹಾಸ್ವಾಮಿ? ಇನ್ನೊಂದು ಪಕ್ಷದವರ ವಾದವನ್ನು ಕೇಳದೆ ತೀರ್ಪು ನೀಡಲು ಹೇಗೆ ಸಾಧ್ಯ?" 

ಅದಕ್ಕೆ ಉತ್ತರಿಸಿದ ಮುಲ್ಲಾ "ಈಗ ನನ್ನನ್ನು ಗೊಂದಲಕ್ಕೆ ದೂಡಬೇಡ. ನನ್ನ ಮನಸ್ಸು ತೀರ್ಪನ್ನು ಯೋಚಿಸಿ ಆಗಿದೆ. ಘೋಷಿಸುವುದೊಂದೇ ಬಾಕಿ. ನಾನು ಇನ್ನೊಂದು ಪಾರ್ಟಿಯ ವಾದ ಕೇಳಿದರೆ, ಮತ್ತೆ ಮನಸ್ಸಿನಲ್ಲಿ ಗೊಂದಲವುಂಟಾಗುತ್ತದೆ!" ಗೊಂದಲದಲ್ಲಿ ಇರುವ ಮನಸ್ಸು ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದುಬಿಟ್ಟನು. 


ಶಾಂತಿಯೋಧ 

ಡಾನ್ ಮಿಲ್ ಮನ್ ಒಬ್ಬ ಕಾಲೇಜು ವಿದ್ಯಾರ್ಥಿ. ಅವನು ಸ್ಥಳೀಯವಾಗಿ ಪ್ರಸಿದ್ಧನಾಗಿರುವ ಜಿಮ್ನಾಸ್ಟ್ ಕೂಡ ಆಗಿರುತ್ತಾನೆ. ಅವನಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಕನಸಿರುತ್ತದೆ. ಆದರೆ ಅವನನ್ನು ಅವಿಶ್ರಾಂತ ಸ್ಥಿತಿ (restlessness)ಕಾಡುತ್ತಿರುತ್ತದೆ. ಅದರಿಂದ ಹೊರಬರಲು ಅವನು ಸೂರ್ಯೋದಯಕ್ಕೆ ಮೊದಲು ಓಡುವ ಅಭ್ಯಾಸ ಇಟ್ಟುಕೊಂಡಿರುತ್ತಾನೆ. ಹಾಗೆ ಓಡುತ್ತಿರುವಾಗ ಒಂದು ದಿನ ಒಬ್ಬ ವೃದ್ಧ (ಸಾಕ್ರಟೀಸ್) ಅವನಿಗೆ ಎದುರಾಗುತ್ತಾನೆ. ಡಾನನ ಸಮಸ್ಯೆಯ ಬಗ್ಗೆ ಸ್ವತಃ ಡಾನನಿಗೆ ತಿಳಿದಿರುವುದಕ್ಕಿಂತಲೂ ಹೆಚ್ಚಾಗಿ ಅವನಿಗೆ ತಿಳಿದಿರುವಂತೆ ತೋರುತ್ತದೆ! ಸಾಕ್ರಟೀಸ್ ಒಬ್ಬ ಮಾರ್ಗದರ್ಶಿಯಾಗಿ,ಡಾನನಿಗೆ ಅನೇಕ ಕೆಲಸ (task)ಗಳನ್ನು ಕೊಟ್ಟು,ತಿಳಿಹೇಳುತ್ತಾ ಅವನಲ್ಲಿದ್ದ ದೌರ್ಬಲ್ಯಗಳನ್ನು ನಿವಾರಿಸಲು ಪ್ರಯತ್ನಿಸುತ್ತಾನೆ. . . ಅವನಿಗೆ ಪ್ರತಿ ಕ್ಷಣದ ಮಹತ್ವವನ್ನು ಅರಿಯುವುದನ್ನು ಕಲಿಸುತ್ತಾನೆ. ಗುರಿಗಿಂತಲೂ ಕ್ರಮಿಸುವ ಮಾರ್ಗ ಪ್ರಮುಖವಾದುದು ಎನ್ನುವ ಮಹತ್ವವನ್ನು ಡಾನ್ ಅನ್ನು ಒಂದು ಬೆಟ್ಟದ ಮೇಲಕ್ಕೆ ಕರೆದುಕೊಂಡು ಹೋಗುತ್ತಾ ಮನವರಿಕೆ ಮಾಡುತ್ತಾನೆ. . . . ಈ ನಡುವೆ ಒಂದು ಅಪಘಾತದಲ್ಲಿ ಡಾನನ ಬಲಗಾಲಿನ ಮೂಳೆ ಮುರಿದು ಅವನು ಜಿಮ್ನಾಸ್ಟಿಕ್ ಅಭ್ಯಾಸದಿಂದ ಹೊರಬರಬೇಕಾದ ಸನ್ನಿವೇಶ ಎದುರಾಗುತ್ತದೆ. ಆದರೂ ಸಾಕ್ರಟೀಸನ ಮಾರ್ಗದರ್ಶನದಲ್ಲಿ ಸತತ ಪ್ರಯತ್ನದಿಂದ ಅರ್ಹತೆಯನ್ನು ಪಡೆದು ಒಲಂಪಿಕ್ ಟ್ರಯಲ್‍ನಲ್ಲಿ ಆಯ್ಕೆಯಾಗುತ್ತಾನೆ. ಅಂತಿಮ ಸ್ಪರ್ಧೆಯ ಮೊದಲು ಸಾಕ್ರಟೀಸ್ ಡಾನನಿಗೆ ಎಲ್ಲಿಯೂ ಸಿಗುವುದಿಲ್ಲ. ಸ್ಪರ್ಧೆಯ ಕಡೆಯ ಸುತ್ತಿನಲ್ಲಿ ಸಾಕ್ರಟೀಸ್ ಅವನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ: 

"ಎಲ್ಲಿದ್ದೀಯಾ ಡಾನ್?" 

"ಈ ಜಾಗದಲ್ಲೇ" 

"ಇದಾವ ಸಮಯ?" 

"ಈ ಸಮಯ" 

"ನೀನಾರು?" 

"ನಾನು ಈ ಕ್ಷಣ" 

ನಂತರ ಡಾನ್ ಜಿಂಕೆಯಂತೆ ನೆಗೆದು ಸತತ ಮೂರು ಹೊರಳುಗಳನ್ನು ಬಲು ಸರಾಗವಾಗಿ ನಿರ್ವಹಿಸಿ ತೀರ್ಪುಗಾರರಿಗೇ ಅಚ್ಚರಿ ಮೂಡಿಸುತ್ತಾನೆ! ಪ್ರೇಕ್ಷಕರೆಲ್ಲ ಹುಚ್ಚೆದ್ದು ಕುಣಿಯುತ್ತಾರೆ. ಡಾನ್ ಇರುವ ತಂಡವು ಮೊದಲ ರಾಷ್ಟ್ರೀಯ ಪದಕವನ್ನು ಪಡೆಯುತ್ತದೆ. 

ಈ ರೂಪಕದಲ್ಲಿ ಬರುವ ಡಾನ್ ಮತ್ತು ಸಾಕ್ರಟೀಸ್ ನಡುವಿನ ಸಂಭಾಷಣೆ ಬಹಳ ಸ್ವಾರಸ್ಯಕರವಾಗಿದೆ. ಎಲ್ಲೆಲ್ಲೋ ಅಲೆಯುವ ನಮ್ಮ ಮನಸ್ಸನ್ನು ಇಲ್ಲಿಗೆ, ಈಗ, ಈ ಕ್ಷಣಕ್ಕೆ ಹಿಡಿದು ನಿಲ್ಲಿಸಿದರೆ ಯಾವುದೇ ಸಾಧನೆಯೂ ಕಷ್ಟಕರವಲ್ಲ. ಅದಕ್ಕಾಗಿ ಒಬ್ಬ ಮಾರ್ಗದರ್ಶಕನ ಅವಶ್ಯಕತೆಯಿದೆ. ಅದು ಸದಾ ನಮ್ಮೊಂದಿಗೇ ಇರುವ ನಮ್ಮ ಅಂತರಂಗವೇ ಆದರೆ ಎಷ್ಟು ಚೆನ್ನ! 


· ಅನು 

ಮೂಲ ಜಾಡನು ಹುಡುಕಿ

ಝರಿಯು ಉಕ್ಕಿ ಹರಿದಿದೆ

ಮಣ್ಣ ಮೈಯ ಕುಕ್ಕಿದೆ

ಮೂಲ ಜಾಡ ಹುಡುಕಿದೆ



ತೊರೆಯು ಮೊರೆದು ಉಬ್ಬಿದೆ

ಅತಿಕ್ರಮಣದ ಗಾಯಕೆ

ಮತಿಭ್ರಮಣೆಯ ಆಟಕೆ



ಕೆರೆಯು ತುಂಬಿ ತುಳುಕಿದೆ

ಹೊಟ್ಟೆಯೊಳಗೆ ಹೂಳಿದೆ

ಆಸು-ಪಾಸು ವಿಷವಿದೆ



ಹೊಳೆಯ ರಭಸ ಹೆಚ್ಚಿದೆ

ಕೊಳೆಯ ಕೊಚ್ಚಿ ತಂದಿದೆ

ಮಳೆಯ ರುದ್ರ ಕುಣಿತಕೆ



ಕಡಲ ಒಡಲು ಸಿಡಿದಿದೆ

ಒಳಗೊಳಗೆ ಕುದಿಯಿದೆ

ಅಂತ್ಯ ನಿಗಧಿಯಾಗಿದೆ



¨ ಡೇವಿಡ್ ಕುಮಾರ್. ಎ

ಮಕ್ಕಳ ಸುಳ್ಳಿನ ಪ್ರಪಂಚ (ಭಾಗ - 1)

ಯೊಗೇಶ್ ಮಾಸ್ಟರ್
ಬಾಯಿ ಬಿಟ್ಟರೆ ಸುಳ್ಳು 

ಮಕ್ಕಳು ಮನೆಯಲ್ಲಿ ಒಂದು ರೀತಿಯಲ್ಲಿ ಸುಳ್ಳುಗಳನ್ನು ಹೇಳುತ್ತಿದ್ದರೆ, ಶಾಲೆಯಲ್ಲಿ ಮತ್ತೊಂದು ಬಗೆಯ ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ನಾನು ಶಿಕ್ಷಕನಾಗಿ ಕಳೆದ ಮೂವತ್ತೈದು ವರುಷಗಳ ವೃತ್ತಿ ಜೀವನದಲ್ಲಿ ಸುಳ್ಳು ಹೇಳದ ಮಕ್ಕಳನ್ನೇ ನೋಡಿಲ್ಲ. ಕೆಲವು ಮಕ್ಕಳು ಕಡಿಮೆ, ಕೆಲವು ಮಕ್ಕಳು ಹೆಚ್ಚು, ಕೆಲವು ಮಕ್ಕಳು ಅತೀ ಹೆಚ್ಚು. 

ಬಹಳಷ್ಟು ಪೋಷಕರಿಗೆ ಮತ್ತು ಶಿಕ್ಷಕರಿಗೆ ತಮ್ಮ ಮಕ್ಕಳು ಹೇಳುವ ಸುಳ್ಳು ಬಹುದೊಡ್ಡ ತಲೆ ನೋವಾಗಿ ಪರಿಣಮಿಸಿರುತ್ತದೆ. ಕೆಲವರಿಗೆ ಮಕ್ಕಳು ಸುಳ್ಳು ಹೇಳುವುದೇ ಗೊತ್ತಾಗುವುದಿಲ್ಲ. ಕೆಲವು ಮಕ್ಕಳು ಹೇಳುವ ಸುಳ್ಳುಗಳು ಗೊತ್ತಾಗುತ್ತವೆ. ಆದರೆ ಕೆಲವೊಮ್ಮೆ ಮಕ್ಕಳು ಹೇಳುವಾಗ ಅದು ಸುಳ್ಳು ಎಂದು ಗೊತ್ತಾಗುವುದಿಲ್ಲ. ಆದರೆ ಸಾಂದರ್ಭಿಕವಾಗಿಯೋ ಅಥವಾ ಪರಿಶೀಲಿಸಿದ ನಂತರವೋ ಸುಳ್ಳು ಎಂಬುದು ಅರಿವಿಗೆ ಬರುತ್ತದೆ. ಏನೇ ಆಗಲಿ, ಸುಳ್ಳು ಹೇಳುವ ಮಕ್ಕಳು ಯಾವಾಗಲೂ ತಲೆ ನೋವೇ. 

ಮಕ್ಕಳು ಸುಳ್ಳು ಹೇಳಿದಾಗ ಅಥವಾ ಅವರು ಸುಳ್ಳು ಹೇಳಿದರೆಂದು ತಿಳಿದಾಗ ಬಹಳಷ್ಟು ಪೋಷಕರಿಗೆ ತಮ್ಮ ಪೋಷಣೆಯ ವೈಫಲ್ಯವೆಂದೋ ಅಥವಾ ತಾವು ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲವೆಂದೋ ಅನ್ನಿಸುವುದುಂಟು. ಆದರೆ ಹಾಗೆ ಕೊರಗುವುದಕ್ಕಿಂತ ಸುಳ್ಳಿನ ಹಿಂದಿನ ಕಾರಣವನ್ನು ಗುರುತಿಸಿದರೆ ಕಾಲ ಕ್ರಮೇಣ ಸೂಕ್ತ ಕ್ರಮಗಳನ್ನು ಕೈಗೊಂಡು ಸುಳ್ಳಿನ ಪ್ರವಾಹಕ್ಕೆ ತಡೆಯೊಡ್ಡಲು ಸಾಧ್ಯವಿದೆ. 

ಯಾವುದೇ ಪೋಷಕರು ತಮ್ಮ ಮುದ್ದಿನ ಮತ್ತು ಪ್ರೀತಿಯ ಮಕ್ಕಳು ತಮ್ಮೊಂದಿಗೇ ಸುಳ್ಳನ್ನು ಹೇಳಿದಾಗ, 

1. ತಾವು ಮಕ್ಕಳಿಂದ ಅವಮಾನಿತರಾದ ಅನುಭವವಾಗಬಹುದು. 

2. ತಾವು ಸತ್ಯವನ್ನು ಸ್ವೀಕರಿಸುತ್ತೇವೆ ಎಂಬ ವಿಶ್ವಾಸ ಮಕ್ಕಳಲ್ಲಿ ಇಲ್ಲ ಎಂಬ ನೋವಾಗಬಹುದು. 

3. ತಾವು ಇಟ್ಟಿರುವ ವಿಶ್ವಾಸವನ್ನು ಅವರು ಭಂಗ ಮಾಡಿದರೆಂಬ ಖೇದವುಂಟಾಗಬಹುದು. 

4. ತಾವು ಇಷ್ಟು ಪ್ರೀತಿ ಮತ್ತು ವಿಶ್ವಾಸವನ್ನು ಇಟ್ಟಿದ್ದರೂ ಅವರು ಅದನ್ನು ಗುರುತಿಸದೇ ಹೋಗುತ್ತಿದ್ದಾರೆಂಬ ನಿರಾಸೆಯಾಗಬಹುದು. 

5. ತಮ್ಮನ್ನೇ ನಂಬಲು ತಯಾರಿಲ್ಲದ ತಮ್ಮ ಮಕ್ಕಳ ಬಗ್ಗೆ ಜಿಗುಪ್ಸೆ ಹುಟ್ಟಬಹುದು. 

6. ಇಷ್ಟೇನಾ ಸಂಬಂಧ, ಪ್ರೀತಿ, ವಿಶ್ವಾಸ ಎಲ್ಲಾ? ಎಂದು ಕೌಟುಂಬಿಕ ಸಂಬಂಧಗಳ ಬಗ್ಗೆಜಿಗುಪ್ಸೆ ಹುಟ್ಟ ಬಹುದು. 

ಪೋಷಕರ ಅಥವಾ ಶಿಕ್ಷಕರ ಭಾವುಕತೆಗೆ ಯಾವುದೇ ಬಗೆಯ ನೋವಾಗಲಿ, ಅಥವಾ ಬಿಡಲಿ. ಆದರೆ ಅವರು ಸುಳ್ಳು ಹೇಳುವುದರ ಕಾರಣದ ಕಡೆಗೆ ವೈಚಾರಿಕವಾಗಿ, ವೈಜ್ಞಾನಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಗಮನ ಹರಿಸಲೇ ಬೇಕು. ಬಹಳಷ್ಟು ಶಿಕ್ಷಕರು ಮತ್ತು ಪೋಷಕರು ಮಕ್ಕಳ ಕುರಿತಾಗಿ ಹೇಳುತ್ತಿರುತ್ತಾರೆ, ಅವನು/ಅವಳು ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾನೆ/ಳೆ ಎಂದು. ನಿಜವೇ. ಆದರೆ ಅದು ಮಕ್ಕಳ ವಿಷಯದಲ್ಲಿ ಮಾತ್ರವಲ್ಲ ಎಂಬುದನ್ನೂ ನಾವು ಗಮನಕ್ಕೆ ತಂದುಕೊಳ್ಳಬೇಕು. ಬಾಲ್ಯದಲ್ಲಿ ಮಗುವಿಗೆ ಸುಳ್ಳು ಹೇಳುವ ರೂಢಿಯನ್ನು ತಪ್ಪಿಸದಿದ್ದರೆ, ಅಥವಾ ಮಗುವಿಗೇ ಅದು ಅರಿವೆಗೆ ಬರದಿದ್ದರೆ ಅದು ದೊಡ್ಡವನಾದ ಮೇಲೂ ಅದನ್ನೇ ಮುಂದುವರಿಸುತ್ತದೆ. ಆದರೆ ಒಂದು ವಿಷಯವಂತೂ ನಿಜ. ಮಕ್ಕಳು ಸುಳ್ಳು ಹೇಳುವುದೆಂದರೆ ನೈತಿಕವಾಗಿ ಪಾಪದ ವಿಷಯವೇನಲ್ಲ. ಅದು ಅದರ ಮಿದುಳಿನ ಬೆಳವಣಿಗೆಯ ಒಂದು ಹಂತದ ಪ್ರತಿಫಲನವೇ. 

ಮಕ್ಕಳು ಸುಳ್ಳು ಹೇಳುವುದೇಕೆ? 

ಮೊದಲು ಒಂದು ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ, ಮಕ್ಕಳು ಮತ್ತು ಹದಿ ಹರೆಯದವರು ದೊಡ್ಡವರಂತೆ ಆಲೋಚಿಸಲಾರರು. 

ಅಮೇರಿಕೆಯ ವಿಶ್ವವಿದ್ಯಾಲಯವೊಂದರಲ್ಲಿ ಈ ಮಕ್ಕಳ ವಿಷಯವಾಗಿ ಒಂದು ಪ್ರಯೋಗವನ್ನು ಮಾಡಲಾಯಿತು. ನಾಲ್ಕರಿಂದ ಒಂಭತ್ತು ವರ್ಷದ ಮಕ್ಕಳನ್ನು ಪ್ರಯೋಗಕ್ಕೆ ಆರಿಸಿಕೊಳ್ಳಲಾಯಿತು. ಒಂದು ವಿಶಾಲವಾದ ಕೋಣೆಯಲ್ಲಿ ಡಾರ್ಟ್ ಬೋರ್ಡೊಂದನ್ನು ಇರಿಸಿದ್ದರು (ಗುರಿ ಫಲಕ). ಯಾರ್ಯಾರು ಎಷ್ಟೆಷ್ಟು ಡಾರ್ಟ್ (ಗುರಿಬಾಣ) ಅನ್ನು ಫಲಕಕ್ಕೆ ಎಸೆದು ಗುರಿ ಬೇಧಿಸಿರುತ್ತಾರೆಯೋ ಅವರಿಗೆ ಅಷ್ಟು ಚಾಕೋಲೆಟ್ ಮತ್ತು ಕ್ಯಾಂಡಿಗಳನ್ನು ಕೊಡಲಾಗುವುದು. ಯಾರ ಡಾರ್ಟ್​ಗಳು ಕೆಳಕ್ಕೆ ಬಿದ್ದಿರುತ್ತವೆಯೋ ಅಷ್ಟಕ್ಕೆ ಸಿಹಿ ಸಿಗುವುದಿಲ್ಲ. ನಿಯಮದ ಪ್ರಕಾರ ಬೋರ್ಡಿಗೆ ಸ್ವಲ್ಪ ದೂರ ಹಳದೀ ಪಟ್ಟಿ ಬಳೆಯಲಾಗಿತ್ತು. ಗುರಿ ಎಸೆಯುವ ಮಕ್ಕಳು ಅದನ್ನು ದಾಟಬಾರದಿತ್ತು. ಒಂದೊಂದೇ ಮಗುವನ್ನು ಒಳಕ್ಕೆ ಕಳುಹಿಸಲಾಗಿತ್ತು. 

ಪ್ರಯೋಗಕಾರರು ನೋಡಿದಾಗ ಸುಮಾರು ಶೇಕಡಾ 90ರಷ್ಟು ಮಕ್ಕಳು ತಾವು ಎಸೆದೆವು ಎಂದು ಸುಳ್ಳು ಹೇಳಿದ್ದರು. ಅಲ್ಲಿ ರಹಸ್ಯ ಕ್ಯಾಮರಾವನ್ನು ಇಡಲಾಗಿತ್ತು. ಮಕ್ಕಳ ಸುಳ್ಳು ಬಯಲಾಗಿತ್ತು. 

ಅದೇ ರೀತಿಯಲ್ಲಿ ಇನ್ನೊಮ್ಮೆ, ಅದೇ ರೀತಿಯ ಪ್ರಯೋಗವನ್ನು ಮಾಡುವಾಗ ಅದೇ ವಯೋಮಿತಿಯ ಮಕ್ಕಳನ್ನು ಆಯ್ದುಕೊಂಡಿದ್ದು, ಆ ಕೋಣೆಯಲ್ಲಿ ಖಾಲಿ ಕುರ್ಚಿಯೊಂದನ್ನು ಇಟ್ಟಿದ್ದರು. ಮಕ್ಕಳಿಗೆ ಆ ಕುರ್ಚಿಯ ಮೇಲೆ ಕಣ್ಣಿಗೆ ಕಾಣದ ರಾಜಕುಮಾರಿಯೊಬ್ಬಳು ಕುಳಿತಿದ್ದಾಳೆಂದೂ ಅವಳು ಎಲ್ಲವನ್ನೂ ನೋಡುತ್ತಿರುತ್ತಾಳೆಂದೂ ಹೇಳಿದ್ದರು. ಆಗ ಸುಳ್ಳು ಹೇಳುವವರ ಸಂಖ್ಯೆ ಬಹಳಷ್ಟು ಗಮನೀಯವಾಗಿ ಕಡಿಮೆಯಾಗಿತ್ತು. 

ಮಗುವಿನ ಯಾವುದೋ ಮಾನಸಿಕ ಅಥವಾ ಭಾವನಾತ್ಮಕ ಸಮಸ್ಯೆಯಿಂದಾಗಿಯೋ, ಅಥವಾ ಮಕ್ಕಳನ್ನು ಬೆಳೆಸುವುದರಲ್ಲಿಯೇ ತಪ್ಪಿದ್ದೇವೆ ಎಂದೋ ಭಾವಿಸುವ ಅಗತ್ಯವಿಲ್ಲ. 

ಎರಡನೆಯ ಪ್ರಯೋಗದಲ್ಲಿ ಗಮನಿಸಿದಾಗ, ಯಾರೋ ಒಬ್ಬರು ತಮ್ಮನ್ನು ನೋಡುತ್ತಿದ್ದಾರೆ ಎಂದು ತಿಳಿದಾಗ ಸುಳ್ಳು ಹೇಳದಿರಲು ಯತ್ನಿಸಿದರು. ನಿಜ ಹೇಳಬೇಕೆಂದರೆ, ತಾವು ಮಾತಾಡುವಷ್ಟು ಸಹಜವಾಗಿಯೇ ಸುಳ್ಳು ಹೇಳುತ್ತಾರೆ. ಅವರಿಗೆ ತಮ್ಮ ಶಿಕ್ಷಕರಾಗಲಿ, ಪೋಷಕರಾಗಲಿ ಹೀಗೆ ಸುಳ್ಳು ಹೇಳುವುದಕ್ಕೆ ಯಾಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತಾರೆ ಎಂದು ಅರ್ಥವೇ ಆಗುವುದಿಲ್ಲ. ಎಷ್ಟೋ ಬಾರಿ ಅವರು ದೊಡ್ಡವರನ್ನು ಖುಷಿ ಪಡಿಸಲೆಂದೇ ಸುಳ್ಳು ಹೇಳುವುದು. 

ಮಕ್ಕಳಿಗೆ ಆಯಾಯ ವಯಸ್ಸಿನಲ್ಲಿ ಆಯಾಯ ಅಗತ್ಯಗಳು ಮತ್ತು ಆಸೆಗಳಿದ್ದಂತೆ ಆಯಾ ಪ್ರಮಾಣದ ಸುಳ್ಳುಗಳೂ ಕೂಡಾ ಹುಟ್ಟಿಕೊಳ್ಳುತ್ತಿರುತ್ತವೆ. ಆದರೆ, ಮಕ್ಕಳು ದೊಡ್ಡವರಷ್ಟು ಪರಿಣಿತರಲ್ಲದ ಕಾರಣ ಸಾಕಷ್ಟು ಬಾರಿ ದೊಡ್ಡವರ ಮುಂದೆ ಸುಳ್ಳು ಹೇಳುವಾಗ ಸಿಕ್ಕಿಬೀಳುತ್ತಾರೆ. ಆದರೆ ಸರಳವಾದ ಸುಳ್ಳುಗಳು ದೊಡ್ಡವರನ್ನು ಸುಲಭವಾಗಿ ಮೋಸಗೊಳಿಸುತ್ತವೆ. ದೊಡ್ಡದೊಡ್ಡ ಕತೆ ಕಾದಂಬರಿಗಳನ್ನು ಹೆಣೆವ ಮಕ್ಕಳು ತಾರ್ಕಿಕವಾಗಿ ಮತ್ತು ಇತರ ತಾಂತ್ರಿಕ ಮಂಡನೆಗಳಲ್ಲಿ ವಿಷಯದ ಅಭಾವದಿಂದ ಸಿಕ್ಕಿ ಬೀಳುತ್ತಾರೆ. 

ಮಕ್ಕಳು ಸುಳ್ಳು ಹೇಳಿದಾಗ ಸಿಕ್ಕಿ ಬೀಳುವ ವಿಷಯಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾಗಿರುವುದು ಅವರು ಯಾವ್ಯಾವ ವಿಷಯಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ? ಯಾಕೆ ಹೇಳುತ್ತಿದ್ದಾರೆ? ಎಷ್ಟು ಪ್ರಮಾಣದಲ್ಲಿ ಹೇಳುತ್ತಿದ್ದಾರೆ? ಈ ಸುಳ್ಳುಗಳಲ್ಲಿ ಹಾನಿಕಾರಕವಲ್ಲದ್ದು ಯಾವುದು? ಮಾರಕವಾಗಿರುವವು ಯಾವುವು? ಯಾವ ಸುಳ್ಳುಗಳು ಸಹಜವಾಗಿರುವ ಸುಳ್ಳುಗಳು? ಯಾವ ಸುಳ್ಳುಗಳು ಮನೋರೋಗ ಸಮಸ್ಯೆಯ ಸಂಕೇತಗಳು? ಎಂತಹ ಸುಳ್ಳುಗಳು ಮಕ್ಕಳ ವ್ಯಕ್ತಿತ್ವವನ್ನು ರೂಪುಗೊಳಿಸುವಲ್ಲಿ ಎಂತಹ ಪಾತ್ರವನ್ನು ವಹಿಸುತ್ತವೆ? ಎಂತಹ ಸುಳ್ಳುಗಳು ವರ್ತನೆಗಳನ್ನು ರೂಪಿಸುತ್ತವೆ? ಇತ್ಯಾದಿ ಅನೇಕ ವಿಷಯಗಳನ್ನು ಪೋಷಕರು ಮತ್ತು ಶಿಕ್ಷಕರು ಕಂಡುಕೊಳ್ಳಬೇಕಾಗುತ್ತದೆ. 

ಉಫ್! ಸುಳ್ಳೇನೂ ಸರಳವಲ್ಲ. ಸುಲಭವಾಗಿ ನಿರ್ಲಕ್ಷಿಸಲೂ ಸಾಧ್ಯವಿಲ್ಲ. ಏಕೆ? ಮುಂದೆ ನೋಡೋಣ. 


*********** 



ಗೀತಾಂಜಲಿಯ ತುಣುಕು

ನೀ ಹೇಗೆ ಹಾಡುವೆಯೋ ನಾನರಿಯೆ ಗುರುವೇ!

ಮೌನ ಸೋಜಿಗದಿ ನಾನದಕೆ ಕಿವಿಯಾಗುವೆ.

ನಿನ್ನ ರಾಗವದು ಜಗವ ಬೆಳಗುತಿಹುದು.

ಆ ಗಾನದ ಜೀವದುಸಿರು ಗಗನದಿಂ ಗಗನಕೆ ನೆಗೆಯುತಿಹುದು.

ನಿನ್ನ ಹಾಡೆಂಬ ಪವಿತ್ರ ಝರಿಯು

ಬಂಡೆಗಳನೆಲ್ಲ ಕೊರೆದು ಮುನ್ನುಗ್ಗುತಿಹುದು.

ನಿನ್ನ ನಾದದಲಿ ಬೆರೆಯಲು ನನ್ನಾತ್ಮ ಹಾತೊರೆದರೂ,

ಸ್ವರವೆತ್ತಲು ತಿಣುಕಿ ಸೋಲುತಿಹೆ.

ಬಾಯ್ದೆರೆವೆನಾದರೂ ಮಾತು ಹಾಡಾಗದೆ ಗೊಂದಲದಿಕಿರುಲುತಿಹೆ.

ಅಯ್ಯೋ!ಸ್ವಾಮೀ!ನಿನ್ನ ಗೀತೆಯ ಕೊನೆಯಿರದ ಜಾಲಂದ್ರದೊಳೆನ್ನ

ಗುಂಡಿಗೆಯ ಬಂಧಿಯಾಗಿಸಿಹೆ.


· ಅನುವಾದ: ಸಿ ಮರಿಜೋಸೆಫ್

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು

ಡಾ. ಸಿಸ್ಟರ್ ಪ್ರೇಮ (ಎಸ್. ಎಮ್. ಎಮ್. ಐ)
ಹಿಂದಿನ ಸಂಚಿಕೆಯಲ್ಲಿ 'ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು' ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕಕ್ಕೆ ಆಗಮಿಸಿ ಕನ್ನಡ ಸಾಹಿತ್ಯವನ್ನು ಬೆಳೆಸಲು ಶ್ರಮಿಸಿದ ಮಿಶನರಿಗಳ ಬದುಕು ಮತ್ತು ಕೊಡುಗೆಗಳ ಮಹತ್ವವನ್ನು ತಿಳಿದಿರುತ್ತೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಮಿಶನ್ ಸಂಸ್ಥೆಗಳು ಮತ್ತು ಅವುಗಳ ಕಾರ್ಯಗಳನ್ನು ಪರಿಚಯಿಸುವ ಪುಟ್ಟ ಪ್ರಯತ್ನವನ್ನು ಮಾಡಿದ್ದೇನೆ. 


ಮಿಶನ್ ಸಂಸ್ಥೆಗಳು ಮತ್ತು ಕಾರ್ಯಗಳು : 

ಕರ್ನಾಟಕದಲ್ಲಿ ಮಿಶನರಿ ಚಟುವಟಿಕೆಯು ಹದಿನೇಳನೇ ಶತಮಾನದಷ್ಟು ಹಿಂದಿನದ್ದು, ಇವರುಗಳು ಆಗಮಿಸಿದ ಕಾಲಾವಧಿಯಲ್ಲಿ ಒಂದೊಂದು ಪ್ರದೇಶವನ್ನು ಮುಖ್ಯ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡು ಆ ಕ್ಷೇತ್ರಗಳ ಮೂಲಕ ಸೇವೆಗೈದರು. ನಮ್ಮ ನಾಡಿನಲ್ಲಿ ಗಣನೀಯ ಪ್ರಮಾಣದಲ್ಲಿ ಸೇವೆ ಸಲ್ಲಿಸಿದ ಮಿಶನರಿಗಳೆಂದರೆ - ಜೆಸ್ವಿಟ್ ಸೊಸೈಟಿ, ಲಂಡನ್ ಮಿಶನ್, ವೆಸ್ಲಿಯನ್ ಮಿಶನ್ ಮತ್ತು ಬಾಸೆಲ್ ಮಿಶನ್. ಈ ಮಿಶನ್ನುಗಳಿಂದ ಹಲವಾರು ಮಿಶನರಿಗಳು ಕರ್ನಾಟಕಕ್ಕೆ ಆಗಮಿಸಿ ಅವಿರತ ಸೇವೆಯನ್ನು ಸಲ್ಲಿಸಿರುತ್ತಾರೆ. 

ಕ್ರೈಸ್ತ ಧರ್ಮೀಯರಲ್ಲಿ ಮುಖ್ಯವಾಗಿ ಕಥೋಲಿಕರು ಮತ್ತು ಪ್ರೊಟಸ್ಟೆಂಟರೆಂದು ಎರಡು ಪಂಗಡಗಳಿವೆ. ಈ ಎರಡು ಪಂಗಡಗಳಲ್ಲಿಯೂ ಮಿಷನರಿಗಳಿದ್ದಾರೆ. ಕರ್ನಾಟಕಕ್ಕೆ ಮೊದಲು ಬಂದ ಮಿಶನರಿಗಳೆಂದರೆ ಕಥೋಲಿಕರು. ಆಮೇಲೆ ಕ್ರಿ. ಶ. 1810ರ ಸುಮಾರಿಗೆ ಪ್ರೊಟಸ್ಟೆಂಟ್ ಮಿಶನರಿಗಳು ಕರ್ನಾಟಕಕ್ಕೆ ಬಂದು ತಮ್ಮ ಸೇವಾ ಕಾರ್ಯವನ್ನು ಪ್ರಾರಂಭಿಸಿದರು. ಕಥೋಲಿಕ ಮಿಶನರಿಗಳ ದೃಷ್ಟಿಕೋನ ಮತೀಯ ಚೌಕಟ್ಟಿನಿಂದ ಬಹಳ ನಿರ್ಬಂಧಿತವಾಗಿತ್ತು. ಕಥೋಲಿಕ ಮತದ ವಿವರಣೆಗೆ ಬೇಕಾದ ಪರಿಭಾಷೆಯನ್ನು ಸೃಷ್ಟಿಸಿ, ಕನ್ನಡ ಧಾರ್ಮಿಕ ಭಾಷಾ ಪರಿಕರಗಳಿಗೆ ತಮ್ಮ ಕೊಡುಗೆಯನ್ನು ನೀಡಿದರು. ಕಥೋಲಿಕ ಮಿಶನರಿಗಳು ರಚಿಸಿದ ಸಾಹಿತ್ಯವನ್ನು ವಿಷಯನುಸಾರ ಆರು ಭಾಗಗಳನ್ನಾಗಿ ವಿಂಗಡಿಸಿಬಹುದು ತತ್ವ, ಆಚಾರ, ಬೋಧನೆ, ಬೈಬಲ್ ಚರಿತ್ರೆ, ಜೀವನ ಚರಿತ್ರೆಗಳು ಮತ್ತು ಅನ್ಯಮತ ಪ್ರಸ್ತಾಪ. ಕಥೋಲಿಕ ಮಿಶನರಿಗಳ ಕೃತಿಗಳು ಪ್ರಧಾನವಾಗಿ ಧಾರ್ಮಿಕವಾಗಿದ್ದವು ಸಾಹಿತ್ಯಿಕವಾಗಿರಲಿಲ್ಲ 

ಅ) ಜೆಸ್ವಿಟ್ ಸೊಸೈಟಿ: 

ಮೊತ್ತಮೊದಲಿಗೆ ನಮ್ಮ ಕನ್ನಡ ನಾಡಿಗೆ ಆಗಮಿಸಿದ ಮಿಶನರಿಗಳಲ್ಲಿ ಜೆಸ್ವಿಟ್ ಮಿಶನರಿ ಸಂಸ್ಥೆಗೆ ಸೇರಿದ ಲಿಯೋನಾರ್ಡೊ ಚಿನ್ನಾಮಿ ಆದ್ಯರು ಹಾಗೂ ಪ್ರಮುಖರು. ಇವರ ಮೂಲಕ ಈ ಮಿಶನ್ ಸಂಸ್ಥೆಯು ಕನ್ನಡ ಕ್ರೈಸ್ತ ಧಾರ್ಮಿಕ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಉದಾ: ಲಿಯೋನಾರ್ಡೊ ಚಿನ್ನಾಮಿ ಬರೆದ ಕ್ರೈಸ್ತ ಧರ್ಮದ ಮುಖ್ಯ ಧಾರ್ಮಿಕ ತತ್ವಗಳನ್ನು ಬೋಧಿಸುವ 'ದೀರ್ಘ ಪ್ರಶ್ನೋತ್ತರಾವಳಿ', 'ಕ್ರೈಸ್ತ ಧರ್ಮದ ಸಾರ ಸ್ವರೂಪ', 'ಕ್ರೈಸ್ತ ಸಂತರ ಜೀವನ ಚರಿತ್ರೆಗಳು', 'ಕ್ರೈಸ್ತ ಧರ್ಮ ಸಮರ್ಥನೆ', 'ಲತೀನ್-ಕನಾರಿಸ್​ನಿಘಂಟು’, ’ಪತಿತರ ಮಾರ್ಗ', 'ದೊಡ್ಡ ಜಪದ ಪುಸ್ತಕ', ಪಿಯೆರ್-ಅಗುಸ್ತ್ ಬುತೆಲೂ ರ 'ಸತ್ಯೋಪದೇಶ', 'ಜ್ಞಾನೋಪದೇಶ', ತಿಯೊದೊರ್ - ಆಂದ್ರೆ ಜೆರ್ಬಿಯೇ ನವರು ಬರೆದ 'ಪರಲೋಕ ರಾಜ್ಯದ ಬೀಗದ ಕೈ ಆಗಿರುವ ಪಶ್ಚಾತ್ತಾಪವೆಂಬ ದೇವದ್ರವ್ಯ ಅನುಮಾನವು, 'ದೇವರ ತಾಯಿಯ ಮಾಸವು', ಅಮಾಂ ಕೊನ್​ಸ್ತಾಂ ದೆಸೇಂನ 'ಜ್ಞಾನ ಬೊಕ್ಕಸವು', ಮತ್ತು 'ಜ್ಞಾನ ಒರೆಗಲ್ಲು' ಇವೆಲ್ಲವೂ ಕಥೋಲಿಕ ಕ್ರೈಸ್ತ ಮಿಶನರಿಗಳ ಕೊಡುಗೆಗಳು. 

ಆ) ಲಂಡನ್ ಮಿಶನರಿ ಸೊಸೈಟಿ: 

ಈ ಮಿಶನ್ ಸಂಸ್ಥೆಯ ಸಂಕ್ಷಿಪ್ತ ಚರಿತ್ರೆಯನ್ನು ಗಮನಿಸುವುದಾದರೆ ಡಾ. ಡೇವಿಡ್ ಬೋಗ್ ಎಂಬ ಬೋಧಕನೇ ಇದರ ಸ್ಥಾಪಕ. ಕ್ರಿ. ಶ. 1795 ಸೆಪ್ಟೆಂಬರ್ 21 ರಂದು ಯೇಸುಕ್ರಿಸ್ತನ ಸುವಾರ್ತೆಯನ್ನು ಲೋಕದ ಕಟ್ಟಕಡೆಯವರೆಗೂ ಸಾರಬೇಕೆಂಬ ಅಪ್ಪಣೆಯಂತೆ ಅನೇಕ ಸುವಾರ್ತ ಗುಂಪುಗಳಿಗೆ ಸೇರಿದ ವಿಶ್ವಾಸಿಗಳ ಗುಂಪು ವಿಶಾಲ ದೃಷ್ಟಿಯಿಂದ ಸೇರಿ ಬಂದು ಈ ಕಾರ್ಯವನ್ನೆಸಗುವುದು ತಮ್ಮ ಜವಾಬ್ದಾರಿಯೆಂದು ತಿಳಿದು ಸಮರ್ಪಣಾ ಭಾವದಿಂದ ತಮ್ಮನ್ನು ಸುವಾರ್ತಾ ಪ್ರಸರಣ ಸೇವೆಗೆ ಸಮರ್ಪಿಸಿಕೊಂಡರು. ಹೀಗೆ ಈ ಸಂಸ್ಥೆಯು ಲಂಡನ್ ಮಿಶನರಿ ಸಂಸ್ಥೆಯೆಂಬ ಹೆಸರನ್ನು ಪಡೆದುಕೊಂಡು ಕಾರ್ಯವನ್ನಾರಂಭಿಸಿತು. ಕ್ರಿ. ಶ. 1810 ಮೇ 5 ರಂದು ಲಂಡನ್ ಮಿಶನರಿ ಸಂಸ್ಥೆಯಿಂದ ಜಾನ್ ಹ್ಯಾಂಡ್ಸ್ ಎಂಬುವನು ಕರ್ನಾಟಕದ ಬಳ್ಳಾರಿಗೆ ಬಂದ ಮೊದಲ ಮಿಶನರಿ. ಈತನ ಮುಂದಾಳತ್ವದಲ್ಲಿ ಲಂಡನ್ ಮಿಶನ್ ಸಂಸ್ಥೆಯು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಕಾರ್ಯವನ್ನಾರಂಭಿಸಿತು. 

ಈ ಸಂಸ್ಥೆಯ ಮಿಶನರಿಗಳೆಂದರೆ ಜಾನ್ ಹ್ಯಾಂಡ್ಸ್, ವಿಲಿಯಂ ರೀವ್, ಜಾನ್ ರೀಡ್, ಬೆನಾರ್ಡ್, ಲೂಕಸ್, ಪೊರ್ಬರ್ ಮತ್ತು ಲೈಡೆಕ್, ಬೆಂಜಮಿನ್ ರೈಸ್, ವಿಲಿಯಂ ಕ್ಯಾಂಬೆಲ್, ಹಿಕ್ಲಿಂಗ್, ಟಿ. ಇ. ಸ್ಲೀಟಿಕ್, ಇ. ಎಫ್. ಗುರ್ನಿ, ಸಿ. ಬಿ. ಫರ್ತ್ ಮತ್ತು ಸ್ತ್ರೀಯರಲ್ಲಿಯೂ ಕೂಡ ಮಿಸ್ ಬರೆತ್ ದೇಸಿಯರಾದ ಜೀವರತ್ನಮ್ಮ ಹಾಗೂ ಚಂದ್ರ ಲೀಲಮ್ಮ ಇವರೆಲ್ಲರೂ ಪ್ರೀತಿ, ತ್ಯಾಗ, ಕಷ್ಟ ಸಹಿಷ್ಣುತೆ, ಅನುಕಂಪ ಭಾವದಿಂದ ಜನರೊಂದಿಗೆ ಬೆರೆತಿದ್ದು ಅವರ ಕಾರ್ಯಸಾಧನೆಯ ಮೂಲಕ ಎಂದು ತಿಳಿದುಕೊಳ್ಳಬಹುದಾಗಿದೆ. 

ಶಿಕ್ಷಣದ ಮಹತ್ವವನ್ನು ಮನಗಂಡ ಈ ಸಂಸ್ಥೆಯ ಮಿಶನರಿಗಳು ಅವಿದ್ಯಾವಂತರಾದ ಜನರಲ್ಲಿ ಮೌಢ್ಯಗಳನ್ನು ಅಳಿಸಿ ಸುಶಿಕ್ಷಿತರನ್ನಾಗಿ ಮಾಡಿ ಸಮಾಜಕ್ಕೆ ಉತ್ತಮ ಉತ್ಪಾದಕ ವ್ಯಕ್ತಿಗಳನ್ನು ಸೃಷ್ಟಿ ಮಾಡಬೇಕೆಂಬ ಛಲದಿಂದ ದುಡಿದರು. ಜನರಲ್ಲಿ ಹೊಸತನ್ನು ಹುಟ್ಟಿಸಬೇಕೆಂಬ ನಿಲುವು ಹೊಂದಿ ಸಂಸ್ಥೆಗಳನ್ನು ಸ್ಥಾಪಿಸಿದರು. ಇನ್ನೂ ಎಲ್ಲಕ್ಕಿಂತ ವಿಶೇಷವೆಂದರೆ ದೇಶೀ ಮಕ್ಕಳಿಗೆ ಆಧುನಿಕ ಶಿಕ್ಷಣದ ಮೂಲಕ ಶುಭಸಂದೇಶ ಸಾರಿ ಅವರೆಲ್ಲರನ್ನೂ ಧಾರ್ಮಿಕ ಶ್ರದ್ಧೆಯೆಡೆಗೆ ನಡೆಸುವುದು ಇವರ ಗುರಿಯಾಗಿತ್ತು. ಅಲ್ಲಿನ ಮಕ್ಕಳ ಬುದ್ಧಿಮಟ್ಟಕ್ಕೆ ಅನುಗುಣವಾಗಿ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಸರಳ ಕೃತಿಗಳನ್ನು ಹೊರಡಿಸಿ ಅವರನ್ನು ಕಾವ್ಯದೆಡೆಗೆ ಆಕರ್ಷಿಸುವ ಹಂಬಲ ಹೊಂದಿದ್ದರು. ಮತಾಂತರ ಹೊಂದಿದ ದೇಶೀಯ ಕ್ರೈಸ್ತರಿಗೂ ತತ್ವ ಬೋಧನೆಗಳನ್ನು ತಿಳಿಸಿಕೊಡುವುದಾಗಿ ಸೆಮಿನರಿ ಶಾಲೆಗಳಂತ ಶಾಲೆಗಳನ್ನು ಆರಂಭಿಸಿದರು. ಶಾಲೆಗಳಲ್ಲಿ ವಿಜ್ಞಾನ, ಗಣಿತ, ಭೂಗೋಳ ಎಂಬ ವಿಷಯಗಳ ಜೊತೆಗೆ ನೀತಿ-ಶಿಕ್ಷಣದಂತಹ ಶಿಕ್ಷಣವನ್ನು ಕೂಡ ಒದಗಿಸಿಕೊಟ್ಟರು. ಹೀಗೆ ಪ್ರಾರಂಭದಲ್ಲಿ ಉದಯಿಸಿದ ಲಂಡನ್ ಮಿಶನ್, ಶೈಕ್ಷಣಿಕ ಕ್ಷೇತ್ರಕ್ಕೆ ಬಹು ಅಮೂಲ್ಯ ಕೊಡುಗೆಯನ್ನು ನೀಡಿ ಕರ್ನಾಟಕದಲ್ಲಿ ಚಿರಸ್ಥಾಯಿ ಸಂಸ್ಥೆಯಾಗಿ ಹೆಸರುಗಳಿಸಿದೆ. 

ಇ) ವೆಸ್ಲಿಯನ್ ಮಿಶನ್ ಸೊಸೈಟಿ: 

ಲಂಡನ್ ಮಿಶನ್ನಿನ ಕಾರ್ಯವು ಬಿರುಸಾಗಿ ಪ್ರಸಾರವಾಗುತ್ತಿದ್ದಂತೆಯೇ 'ವೆಸ್ಲಿಯನ್ ಮಿಶನ್'ಎಂಬ ಸಂಸ್ಥೆಯು ಇಂಗ್ಲೆಂಡಿನಲ್ಲಿ ಹುಟ್ಟಿಕೊಂಡ ಭಕ್ತಿ ಚಳುವಳಿಯ ಸುವಾರ್ತಿಕ ಗುಂಪು. ಇದು ಲಂಡನ್ ನಗರದಲ್ಲಿ ಕ್ರಿ. ಶ. 1740ರಲ್ಲಿ ಜಾನ್​ವೆಸ್ಲಿ ಮತ್ತು ಚಾರ್ಲ್ಸ್​ವೆಸ್ಲಿ ಎಂಬುವರ ಮೂಲಕ ಸ್ಥಾಪನೆಯಾಯಿತು. ಈ ಸಂಘವೇ ವೆಸ್ಲಿಯನ್ ಮೆಥೋಡಿಸ್ಟ್ ಮಿಶನ್. ಈ ಸಂಘದವರು ಕರ್ನಾಟಕದಲ್ಲಿ ಕ್ರಿ. ಶ. 1833ರಲ್ಲಿ ಮೈಸೂರಿನಲ್ಲಿ ಕಾರ್ಯಾರಂಭ ಮಾಡಿದರು. ಮೈಸೂರನ್ನು ಪ್ರಮುಖ ಕ್ಷೇತ್ರವಾಗಿ ಹೊಂದಿ ವಿದ್ಯಾ ಕ್ಷೇತ್ರದ ಮೂಲಕ ಕ್ರೈಸ್ತ ಸುವಾರ್ತೆಯನ್ನು ಜನಸಮೂಹಕ್ಕೆ ಪರಿಚಯಿಸಬಹುದೆಂದು ನಂಬಿ ಶಾಲೆಗಳನ್ನು ಪ್ರಾರಂಭಿಸಿದರು. ಜನರಲ್ಲಿಯೂ ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಲು ವಿದ್ಯಾಭ್ಯಾಸ ಸಹಾಯ ಮಾಡುತ್ತದೆಂದು ಭಾವಿಸಿ ಇವರು ಹಗಲಿನಲ್ಲಿ ಚಿಕ್ಕಮಕ್ಕಳಿಗೂ, ಸಂಜೆಯಲ್ಲಿ ದೊಡ್ಡವರಿಗೂ ಶಾಲೆಗಳನ್ನು ಪ್ರಾರಂಭಿಸಿದರು. 

ಈ ಶಾಲೆಗಳು ಸಭೆಗಳ ಬೆಳವಣಿಗೆಗೆ ಕಾರಣವಾಗಬಹುದೆಂಬುದನ್ನು ಥಾಮಸ್ ಹಡ್ಸನ್ ಎಂಬ ಮಿಶನರಿ ತಾನು ಬಂದ ಮರುವರ್ಷವೇ ಕ್ರಿ. ಶ. 1834ರಲ್ಲಿ ನಂಬಿ ಬೆಂಗಳೂರಿನಲ್ಲಿ ಪ್ರಥಮ ಇಂಗ್ಲೀಷ್ ಶಾಲೆಯನ್ನು ಆರಂಭಿಸಿದ. ಥಾಮಸ್ ಹಡ್ಸನ್ ಮಿಶನರಿ ತಾನು ಬಂದ ಕೆಲವೇ ತಿಂಗಳುಗಳಲ್ಲಿ ಬೆಂಗಳೂರಿನ ಕಂಟೋನ್​ಮೆಂಟ್​ನಲ್ಲಿ ಮೊತ್ತಮೊದಲ ಇಂಗ್ಲೀಷ್ ಶಾಲೆಯನ್ನು ಮತ್ತು ತಾನು ನಿವೃತ್ತಿಯಾಗುವ ಹೊತ್ತಿಗಾಗಲೇ 60ಶಾಲೆಗಳನ್ನು ನಡೆಸುತ್ತಿದ್ದರು. ಒಟ್ಟಾರೆಯಾಗಿ ಇವರ ಶೈಕ್ಷಣಿಕ ಕಾರ್ಯವನ್ನು ಅವಲೋಕಿಸಿದರೆ ಲಂಡನ್ ಮಿಶನ್​ದವರಿಗಿಂತಲೂ ವ್ಯಾಪಕವಾದ ಮಿಶನ್ ಎಂದು ಗುರುತಿಸಬಹುದಾಗಿದೆ. ಈ ಸಂಸ್ಥೆಯ ಮಿಶನರಿಗಳ ಮುಖ್ಯ ಧ್ಯೇಯ ಸ್ಥಳೀಯ ಸರಕಾರದೊಂದಿಗೆ ಸೌಹಾರ್ದತೆ, ಭಾರತೀಯ ನಾಯಕತ್ವಕ್ಕೆ ಪ್ರೋತ್ಸಾಹ ಹಾಗೂ ಕ್ರೈಸ್ತ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಅಭ್ಯಾಸ, ಹಿರಿಯ ಮತ್ತು ಕಿರಿಯರಿಗೆ ತರಬೇತಿಯನ್ನು ಒದಗಿಸಿಕೊಡುವುದು ಆಗಿತ್ತು ಎಂದು ತಿಳಿಯಬಹುದು. 

ಮಿಶನರಿಗಳು ಓದುವುದಕ್ಕೆಂದು ಬರೆದ ಪಠ್ಯ ಪುಸ್ತಕಗಳಲ್ಲಿ ಇತಿಹಾಸ, ಗಣಿತ, ಭೌಗೋಳಿಕ ವ್ಯಾಪ್ತಿಯನ್ನೊಳಗೊಂಡ ಸಂಗತಿಗಳು ಪ್ರಮುಖವಾಗಿವೆ. ಭಾಷಾಧ್ಯಯನದಲ್ಲಿ ಕಂಡು ಬರುವ ನಿಘಂಟುಗಳು ಕೂಡ ಇಲ್ಲಿ ಬಹುಮುಖ್ಯವೆನಿಸಿವೆ ಮತ್ತು ಪಂಚತಂತ್ರಗಳಂತಹ ಕೃತಿಗಳನ್ನು ಅನುವಾದಿಸಿ ಪರಿಚಯಿಸುವಾಗ ನೈತಿಕ ಮೌಲ್ಯವಾಧರಿತ ವಿಷಯಗಳಿಗೆ ಕೊಟ್ಟ ಬೆಲೆಯನ್ನು ತಿಳಿಯಬಹುದಾಗಿದೆ. ಈ ಸಂಸ್ಥೆಯ ಮಿಶನರಿಗಳೆಂದರೆ ಥಾಮಸ್ ಹಡ್ಸನ್, ಜಾನ್ ಗ್ಯಾರೆಟ್, ಡ್ಯಾನಿಯೇಲ್ ಸ್ಯಾಂಡರ್ಸಸ್, ಜಾನ್ ಸ್ಟೀವನ್​ಸನ್ ಮತ್ತು ಹೆಬ್ರಿಹೇಗ್ ಈ ಎಲ್ಲಾ ಮಿಶನರಿಗಳ ಶೈಕ್ಷಣಿಕ ಕಾರ್ಯವು ಹಿರಿದಾಗಿದ್ದು, ಶಕ್ತಿಯುತ ಪುಸ್ತಕಗಳನ್ನು ಹೊರತಂದಿದ್ದಾರೆ. 

ಈ) ಬಾಸೆಲ್ ಮಿಶನ್ ಸೊಸೈಟಿ: 

ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಜರ್ಮನ್ ಮಾತೃಭಾಷೆಯ ಪ್ರೊಟೆಸ್ಟೆಂಟ್ ಕ್ರೈಸ್ತ ಶ್ರೀಸಾಮಾನ್ಯರಿಂದ ಕ್ರಿ. ಶ. 1815, ಸೆಪ್ಟೆಂಬರ್25ರಂದು ಸ್ವಿಜರ್ಲೆಂಡ್​ನ ಬಾಸೆಲ್ ನಗರದಲ್ಲಿ ಈ ಸಂಸ್ಥೆ ಸ್ಥಾಪನೆಯಾಯಿತು. ಕ್ರಿ. ಶ 1834ರಲ್ಲಿ ಭಾರತಕ್ಕೆ ಬಂದ ಬಾಸೆಲ್ ಮಿಷನ್ ಸಂಸ್ಥೆ, ಕ್ರಿ. ಶ. 1834 ಅಕ್ಟೋಬರ್ 30ರಂದು ಕರ್ನಾಟಕದ ಕರಾವಳಿಯ ಮಂಗಳೂರು ನಗರಕ್ಕೆ ಆಗಮಿಸಿತು. ಉತ್ತರ ಕರ್ನಾಟಕದ ಬಹುದೊಡ್ಡ ಪ್ರಶಂಸನೀಯ ಸಂಸ್ಥೆಯನಿಸಿದ ಬಾಸೆಲ್ ಮಿಷನ್ ಸಾಧಿಸಿದ ಸಾಧನೆಯನ್ನು ಯಾವೊಬ್ಬ ವ್ಯಕ್ತಿಯು ಎಳೆ-ಎಳೆಯಾಗಿ ಅಳೆದು ನೋಡಿದರೆ ಹುಬ್ಬೇರಿಸುವಷ್ಟರ ಮಟ್ಟಿಗೆ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ. 

ಯುರೋಪಿನಲ್ಲಿ ಸಂಭವಿಸಿದ ದಂಗೆಯ ದೆಸೆಯಿಂದ ಅಶಾಂತಿ, ಅಸಮಾಧಾನಗಳು ಹುಟ್ಟಿದ ಸಂಧರ್ಭದಲ್ಲಿ ಕೆಲ ಭಕ್ತಿಪರವಶ ಕ್ರೈಸ್ತರ ಪ್ರಾರ್ಥನೆ ಹಾಗೂ ಸಮಯೋಚಿತ ಪ್ರತಿಷ್ಠೆಯ ಫಲಿತಾಂಶವೆಂಬಂತೆ ಬಾಸೆಲ್ ಇವ್ಯಾಂಜಿಕಲ್ ಮಿಷನರಿ ಸಂಘವು ಸ್ಯಾಮುವೆಲ್ ಹೆಬಿಕ್, ಜಾನ್ ಕ್ರಿಸ್ಟಿಯನ್ ಲೆಹೆನರ್ ಮತ್ತು ಕ್ರಿಸ್ಟೋಫರ್ ಲಿಯೋನ್​ಹಾರ್ಡ್ ಗ್ರೈನರ್ ಎಂಬ ಮೂವರು ಮಿಷನರಿಗಳಿಂದ ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟಿತು. ನಂತರ ಮಂಗಳೂರಿನಲ್ಲಿ ಹಬ್ಬಿಕೊಂಡು ದೇಶೀಯ ಜನರ ಸಹಾಯವನ್ನು ಪಡೆದು ಬಾಸೆಲ್ ಮಿಶನರಿಗಳು ಕನ್ನಡ ಕಲಿಯಲಾರಂಭಿಸಿದರು. ಧರ್ಮ ಪ್ರಚಾರದ ಜೊತೆ-ಜೊತೆಯಲ್ಲೇ ಶೈಕ್ಷಣಿಕ ಪದ್ಧತಿಗೆ ಹೆಚ್ಚಿನ ಇಂಬನ್ನು ಕೊಟ್ಟರು. ಸ್ಥಳೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಶಾಲೆಗಳು ಬಹು ಮುಖ್ಯ ವಾಹಿನಿಗಳೆಂದು ಅರಿತು ಪ್ರತಿಯೊಬ್ಬರನ್ನು ಸುಶಿಕ್ಷಿತರನ್ನಾಗಿ ಮಾಡಬೇಕೆನ್ನುವ ಹಂಬಲ ವ್ಯಕ್ತಪಡಿಸಿದರು. ಕ್ರಮೇಣ ಈ ಸಂಸ್ಥೆ ಕೊಡಗು, ಧಾರವಾಡ ಮತ್ತು ಬಿಜಾಪುರ ಜಿಲ್ಲೆಗಳಿಗೂ ಹಬ್ಬಿತು. ಗ್ರಂಥೋದ್ಯಮ, ಶಿಕ್ಷಣ ಮತ್ತು ಕೈಗಾರಿಕೋದ್ಯಮಗಳನ್ನು ಪ್ರಮುಖವಾಗಿ ತನ್ನ ಗುರಿಯಾಗಿಸಿಕೊಂಡು ಮತಪ್ರಚಾರ ಕಾರ್ಯ ಮಾಡಿದ ಖ್ಯಾತಿ ಈ ಸಂಸ್ಥೆಯದು. 

ಈ ಮಿಷನ್ನಿನ ಮಿಶನರಿಗಳ ಪ್ರಗತಿಯನ್ನು ಗಮನಿಸಿದರೆ ಮೊತ್ತಮೊದಲಿಗೆ ಧರ್ಮ ಪ್ರಚಾರದ ಕಾರ್ಯವನ್ನು ಬದಿಗಿಟ್ಟು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದನ್ನು ಅರಿಯಬಹುದು ಕಾರಣ ಶೈಕ್ಷಣಿಕ ಕ್ಷೇತ್ರದಿಂದಲೇ ಉಳಿದೆಲ್ಲ ಕ್ಷೇತ್ರಗಳು ಅಭಿವೃದ್ಧಿ ಸಾಧಿಸಬಹುದೆಂಬುದನ್ನು ಮನಗಂಡರು. ಹೀಗಾಗಿ ಶಾಲೆಗಳನ್ನು ಸ್ಥಾಪಿಸಿ ಅವುಗಳಲ್ಲಿ ಸಾಧ್ಯವಿರುವ ಎಲ್ಲಾ ವಿಧವಾದ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಸಂಗತಿಗಳನ್ನು ಒದಗಿಸಿಕೊಟ್ಟದ್ದು ಇವರ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ. 

ಉತ್ತರ ಕರ್ನಾಟಕದಲ್ಲಿ ಮರಾಠಿ ಭಾಷೆಯ ಪ್ರಭಾವವಿದ್ದ ಸಮಯದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಡಾ. ಮೋಗ್ಲಿಂಗ್, ಡಾ. ಹೆಬಿಕ್ ಅವಿರತವಾಗಿ ಶ್ರಮಿಸಿದರು. ಪಾಶ್ಚಿಮಾತ್ಯ ಪದ್ಧತಿಯ ಶಿಕ್ಷಣವನ್ನು ಇಲ್ಲಿನ ಜನರು ವಿರೋಧಿಸುತ್ತಿದ್ದ ಕಾಲದಲ್ಲಿ ಈ ಮಿಷನರಿಗಳು ಮನೆ ಮನೆಗೆ ಹೋಗಿ ಪಾಲಕರ ಮನವೊಲಿಸಿ ಮಕ್ಕಳಿಗೆ ಶಿಕ್ಷಣವನ್ನು ಕಲಿಸಿಕೊಡಲು ಮುಂದಾದರು. ಶಾಲೆಗಳನ್ನು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಸ್ಥಾಪಿಸಿದರು. ಮಿಷನರಿಗಳು ಕೇವಲ ಶಾಲೆಗಳನ್ನು ಸ್ಥಾಪಿಸಿದ್ದು ಮಾತ್ರವಲ್ಲದೇ ಅದಕ್ಕೆ ಅವಶ್ಯವಿರುವ ಪಠ್ಯ ಪುಸ್ತಕಗಳ ರಚನೆ, ಸರಬರಾಜು, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಕ್ಷೆಗಳು, ಪಠ್ಯಗಳು, ಪ್ರಾಯೋಗಿಕಾತ್ಮವಾದ ಸಲಕರಣೆಗಳು, ಬೋಧಕರಿಗೆ ಅವಶ್ಯವಿರುವ ಬೋಧನಾ ಕೈಪಿಡಿಗಳು, ದಿನಚರಿಗಳು, ಕ್ರೀಡೆಗೆ ಸಂಬಂಧಿಸಿದ ಕ್ರೀಡಾವಸ್ತು ಸಲಕರಣೆಗಳ ಸೌಲಭ್ಯಗಳನ್ನು ಒದಗಿಸಿ ಕೊಡುವುದರ ಮೂಲಕ ಗುಣಾತ್ಮಕ ಶಿಕ್ಷಣವನ್ನು ಒದಗಿಸುವಲ್ಲಿ ಪರಿಶ್ರಮಿಸಿದರು. ಈ ದಿಸೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯಗೈದ ಮಿಶನರಿಗಳೆಂದರೆ ಡಬ್ಯ್ಲೂ. ಜಿ. ವರ್ಥ್,ರೆವರೆಂಡ್ ಕಿಟೆಲ್,ಜಿಗ್ಲರ್,ಗ್ರೇಟರ್,ಗಸ್ತಾವ್ ಕೀಜ್, ಲೆಹ್ನರ್, ವೈಗಲ್ ಮುಂತಾದವರು. 

ಬಾಸೆಲ್ ಮಿಶನ್ನಿನ ಮಿಶನರಿಗಳು ಮಾಡಿದ ಕೆಲಸ ಇತರೆಲ್ಲ ಮಿಶನ್ನಿನ ಮಿಶನರಿಗಳಿಗಿಂತಲೂ ಅದ್ಭುತವಾದುದು. ಕನ್ನಡ ಪಠ್ಯಪುಸ್ತಕಗಳನ್ನು ವಿಷಯಾನುಸಾರವಾಗಿ ವಿವಿಧ ಕೃತಿಗಳಿಂದ ಆರಿಸಿ ಬರೆದದ್ದು, ಹಳಗನ್ನಡ ಕೃತಿಗಳಿಂದ ಅವಲೋಕಿಸಿ ಬರೆದದ್ದು, ನೀತಿ ಕಥೆಗಳನ್ನು ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಿ ಮಕ್ಕಳ ನೈತಿಕ ಗುಣಮಟ್ಟವನ್ನು ಕಥೆಗಳ ಮೂಲಕ ಹೆಚ್ಚಿಸಿದರೆ ಸಮಾಜದ ನೈತಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂಬೆಲ್ಲಾ ಸಂಗತಿಗಳನ್ನು ಅರ್ಥೈಸಿಕೊಂಡು ಆ ದಿಸೆಯಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದರು. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿರುವ ಪ್ರಾಯೋಗಿಕಾತ್ಮಕ ಪರೀಕ್ಷೆಗಳನ್ನು ಏರ್ಪಾಡಿಸುದುವುದರ ಮೂಲಕ ಅವರ ಬುದ್ಧಿಮಟ್ಟವನ್ನು ಪರೀಕ್ಷಿಸಿ ತಮ್ಮ ಮಿಷನರಿ ಕಾರ್ಯಗಳಲ್ಲಿ ಅವರುಗಳನ್ನು ತೊಡಗಿಸಿಕೊಳ್ಳುತ್ತಿದ್ದರು. 

ಒಟ್ಟಾರೆಯಾಗಿ 18 ಮತ್ತು 19ನೇ ಶತಮಾನದ ಶೈಕ್ಷಣಿಕ ವ್ಯವಸ್ಥೆಯನ್ನು ಗಮನಿಸಿದರೆ ಒಂದು ಪ್ರಬುದ್ಧವಾದ ಪ್ರಗತಿದಾಯಕವಾದ ವ್ಯವಸ್ಥೆಯಾಗಿ ಈ ಮಿಶನ್ ಸಂಸ್ಥೆಯು ರೂಪುಗೊಂಡು ಪ್ರತಿಯೊಬ್ಬರಲ್ಲಿಯೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿರುಚಿ ಹುಟ್ಟಿಸಿದ್ದನ್ನು ಇಲ್ಲಿ ಗಮನಿಸಬಹುದು. ನಾಲ್ಕು ಮಿಶನ್ನುಗಳಿಂದ ಆಗಮಿಸಿದ ಮಿಶನರಿಗಳು ತಮ್ಮ ಅಮೂಲ್ಯ ಸಮಯವನ್ನು ಕೆಲವು ಉಪಯುಕ್ತ ಕಾರ್ಯಗಳಿಗೆ ವಿನಿಯೋಗಿಸಿಕೊಂಡು ಅಮರ ಸೇವೆಗೆ ಸಾಕ್ಷಿಗಳಾಗಿದ್ದಾರೆ. 

ಮುಂದಿನ ಸಂಚಿಕೆಯಲ್ಲಿ ಈ ಮೇಲೆ ತಿಳಿಸಿದ ಮಿಶನ್ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ತಿಳಿಸಲಾಗುವುದು. 



*********** 

ಕಥಾದನಿ



ನಾನು ನಿಸ್ವಾರ್ಥಿ, ಇತರರ ಬಗ್ಗೆ ಆಲೋಚಿಸುವವನು 

ಪ್ರಖ್ಯಾತ ವಿದ್ವಾಂಸನೊಬ್ಬ ನಸ್ರುದ್ದೀನನ ಹಳ್ಳಿಯಲ್ಲಿ ಹಾದು ಹೋಗುತ್ತಿದ್ದ. ಆತನಿಗೆ ಹಸಿವಾಗಿತ್ತು. ಎದುರಿಗೆ ಸಿಕ್ಕ ನಸ್ರುದ್ದೀನನನ್ನು ಆ ಊರಿನಲ್ಲಿ ಒಳ್ಳೆಯ ಊಟ ಸಿಗುವ ಸ್ಥಳ ಯಾವುದು ಎಂದು ಕೇಳಿದ. ನಸ್ರುದ್ದೀನ್ ತನಗೆ ತಿಳಿದಿದ್ದ ಉಪಾಹಾರ ಮಂದಿರದ ವಿಳಾಸ ತಿಳಿಸಿದ. ಆ ವಿದ್ವಾಂಸನಿಗೆ ನಸ್ರುದ್ದೀನ್ ಸಹ ಒಬ್ಬ ವಿದ್ವಾಂಸನ ಹಾಗೆ ಕಂಡು ಆತನೊಂದಿಗೆ ಬಹಳಷ್ಟು ವಿಷಯ ಚರ್ಚೆ ಮಾಡಬಹುದೆಂದು ಆತನನ್ನು ಸಹ ತನ್ನ ಜೊತೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಬಹಳ ಸಂತೋಷದಿಂದ ಒಪ್ಪಿದ ನಸ್ರುದ್ದೀನ್ ಆತನನ್ನು ಉಪಾಹಾರ ಮಂದಿರಕ್ಕೆ ಕರೆದೊಯ್ದ. ಅಲ್ಲಿ ಊಟಕ್ಕೆ ತಾಜಾ ಮೀನು ಸಿಗುತ್ತದೆ ಎಂದು ತಿಳಿದು ವಿದ್ವಾಂಸ ಎರಡು ಮೀನು ಬಡಿಸಲು ಹೇಳಿದ. ಬಡಿಸುವವ ತಟ್ಟೆಯಲ್ಲಿ ಎರಡು ಮೀನು ತಂದಾಗ ಅದರಲ್ಲಿ ಒಂದು ಸ್ವಲ್ಪ ದೊಡ್ಡದು ಮತ್ತೊಂದು ಸಣ್ಣದಿತ್ತು. ನಸ್ರುದ್ದೀನ್ ಗಬಕ್ಕನೆ ದೊಡ್ಡ ಮೀನನ್ನು ಎತ್ತಿ ತನ್ನ ತಟ್ಟೆಗೆ ಹಾಕಿಕೊಂಡ. ಅದನ್ನು ನೋಡಿದ ವಿದ್ವಾಂಸ ಮುಲ್ಲಾ ನಸ್ರುದ್ದೀನನಿಗೆ ಆತನ ನಡತೆಯ ಬಗ್ಗೆ ದೊಡ್ಡ ಭಾಷಣವನ್ನೇ ಮಾಡಿದ. ಆ ರೀತಿ ಯಾವುದೇ ವ್ಯಕ್ತಿ ಸ್ವಾರ್ಥಿಯಾಗಿರಬಾರದೆಂದೂ, ಆ ರೀತಿಯ ನಡತೆಯು ಎಲ್ಲ ನೈತಿಕ ಮೌಲ್ಯಗಳನ್ನು ಧಿಕ್ಕರಿಸುವುದೆಂದೂ ಹೇಳಿದ. ಆ ವಿದ್ವಾಂಸ ಬಹಳಷ್ಟು ಹೇಳಿ ತನ್ನ ಭಾಷಣ ನಿಲ್ಲಿಸಿದ. ಅದನ್ನೇ ಕಾಯುತ್ತಿದ್ದ ನಸ್ರುದ್ದೀನ್, ‘ನನ್ನ ಸ್ಥಾನದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ?’ಎಂದು ಕೇಳಿದ. 

‘ನಾನು ನಿಸ್ವಾರ್ಥಿ, ಇತರರ ಬಗ್ಗೆ ಆಲೋಚಿಸುವವನು. ಹಾಗಾಗಿ ನಾನು ಮೊದಲು ಚಿಕ್ಕ ಮೀನೇ ತೆಗೆದುಕೊಳ್ಳುತ್ತಿದ್ದೆ’ ಎಂದ ವಿದ್ವಾಂಸ. ಅದಕ್ಕೆ ನಸ್ರುದ್ದೀನ್, ‘ಹೌದೇ! ತೆಗೆದುಕೊಳ್ಳಿ, ನಿಮ್ಮ ಚಿಕ್ಕಮೀನು ಇನ್ನೂ ಇಲ್ಲೇ ಇದೆ’ ಎನ್ನುತ್ತಾ ಅದನ್ನು ತೆಗೆದು ವಿದ್ವಾಂಸನ ತಟ್ಟೆಗೆ ಹಾಕಿದ. 



ಕತ್ತೆ ಮತ್ತು ಮುಠ್ಠಾಳರು 

ಮುಲ್ಲಾನಸ್ರುದ್ದೀನ್ ಮತ್ತು ಆತನ ಮಗ ತಮ್ಮ ಕತ್ತೆಯ ಮೇಲೆ ಕೂತು ಮಾರುಕಟ್ಟೆಗೆ ಹೋಗುತ್ತಿದ್ದರು. ಅದನ್ನು ನೋಡಿದ ಕೆಲವರು, "ಎಂಥಾ ಕಾಲ ಬಂತು ನೋಡಿ! ಈ ಇಬ್ಬರು ಮೂಕ ಪ್ರಾಣಿಯ ಮೇಲೆ ಹೇಗೆ ಕೂತು ಹೋಗುತ್ತಿದ್ದಾರೆ. ಬಡಪಾಯಿ ಪ್ರಾಣಿ ಅವರ ತೂಕಕ್ಕೆ ಬಾಗಿಹೋಗಿದೆ!" ಎಂದರು. 

ಆ ಮಾತನ್ನು ಕೇಳಿದ ನಸ್ರುದ್ದೀನ್ ತನ್ನ ಮಗನಿಗೆ ಕತ್ತೆಯಿಂದ ಕೆಳಗಿಳಿದು ನಡೆದು ಕೊಂಡು ಬರಲು ತಿಳಿಸಿದ. ಸ್ವಲ್ಪ ಮುಂದೆ ಹೋದಂತೆ ರಸ್ತೆಯ ಬದಿಯಲ್ಲಿ ನಿಂತಿದ್ದ ಕೆಲವರು, "ಎಂಥಾ ಕಾಲ ಬಂತು ನೋಡಿ! ಈ ಧಡಿಯ ತನ್ನ ಬಡಪಾಯಿ ಮಗನನ್ನು ನಡೆಸಿಕೊಂಡು ತಾನು ಕತ್ತೆಯ ಮೇಲೆ ಕೂತು ಹೋಗುತ್ತಿದ್ದಾನೆ!" ಎಂದರು. 

ಅದನ್ನು ಕೇಳಿಸಿಕೊಂಡ ನಸ್ರುದ್ದೀನ್ತ ತಾನು ಕತ್ತೆಯಿಂದ ಕೆಳಗಿಳಿದು ತನ್ನ ಮಗನನ್ನು ಕತ್ತೆಯ ಮೇಲೆ ಕೂರಿಸಿ, ತಾನು ಅದರ ಪಕ್ಕದಲ್ಲಿ ನಡೆಯುತ್ತಾ ಹೋದ. ಒಂದಷ್ಟು ದೂರ ಹೋದ ಮೇಲೆ ಒಂದು ಜನರ ಗುಂಪು ಇವರನ್ನು ಹಾದು ಹೋಯಿತು. ಅವರಲ್ಲೊಬ್ಬ, "ಎಂಥಾ ಕಾಲ ಬಂತು ನೋಡಿ! ವಯಸ್ಸಿನ ಹುಡುಗ ಕತ್ತೆಯ ಮೇಲೆ ಕೂತು ಹೋಗುತ್ತಿದ್ದಾನೆ, ವಯಸ್ಸಾದ ಆತನ ತಂದೆ ನಡೆದು ಹೋಗುತ್ತಿದ್ದಾನೆ!" ಎಂದ. 

ಆತನ ಮಾತು ಕೇಳಿಸಿಕೊಂಡ ನಸ್ರುದ್ದೀನ್ ತನ್ನ ಮಗನನ್ನೂ ಕೆಳಕ್ಕಿಳಿಸಿ ಕತ್ತೆಯ ಹಗ್ಗ ಹಿಡಿದುಕೊಂಡು ಅದನ್ನು ಕರೆದೊಯ್ಯುತ್ತಾ ಇಬ್ಬರೂ ನಡೆದುಕೊಂಡು ಹೊರಟರು. ಎದುರಿಗೆ ಮತ್ತೊಂದು ಜನರ ಗುಂಪು ಬಂದಿತು. ಇವರನ್ನು ನೋಡಿದ ಅವರಲ್ಲೊಬ್ಬಾತ, "ಈ ಮುಠ್ಠಾಳರನ್ನು ನೋಡಿ! ಅವರ ಬಳಿ ಕತ್ತೆಯೊಂದಿದೆ, ಆದರೂ ನಡೆದು ಹೋಗುತ್ತಿದ್ದಾರೆ!" ಎಂದ. 


ತಜ್ಞರುತಪ್ಪುಮಾಡುವುದುಂಟೆ? 

ಮರಣ ಹೊಂದಿದ್ದಾನೆ ಎಂದು ತಜ್ಞರಿಂದ ತೀರ್ಮಾನಿಸಲಾದ ಒಬ್ಬನನ್ನು ಸಮಾಧಿ ಮಾಡಲೆಂದು ಹೊತ್ತುಕೊಂಡು ಹೋಗಲಾಯಿತು. ಶವಪೆಟ್ಟಿಗೆಯನ್ನು ಕೆಳಗಿಳಿಸಬೇಕು ಎನ್ನುವಷ್ಟರಲ್ಲೇ ಒಳಗಿದ್ದವನು ಮುಚ್ಚಳವನ್ನು ಹೊಡೆಯಲಾರಂಭಿಸಿದ, ಒಡನೆಯೇ ಶವ ಪೆಟ್ಟಿಗೆಯನ್ನು ತೆರೆಯಲಾಯಿತು. ಸತ್ತು ಹೋದ ಎಂದೆಣಿಸಿದ ವ್ಯಕ್ತಿ ಎದ್ದು ಕುಳಿತು ನೀವೇನು ಮಾಡ್ತಾ ಇದ್ದೀರಾ? ನಾನಿನ್ನೂ ಜೀವಂತವಾಗಿಯೇ ಇದ್ದೇನೆ. ಸತ್ತು ಹೋಗಿಲ್ಲ ಎಂದವನೇ ಹೊರಬರಲು ಪ್ರಯತ್ನಿಸಿದ. ಸುತ್ತಲಿದ್ದವರು ಭಯಭ್ರಾಂತರಾಗಿ ಗುರುಗಳು ಮತ್ತು ವೈದ್ಯರು ನೀನು ಮರಣ ಹೊಂದಿದ್ದೀಯೆಂದು ಸಾಬೀತು ಪಡಿಸಿದ್ದಾರೆ. ತಜ್ಞರು ತಪ್ಪು ಮಾಡುವುದುಂಟೆ. ಒಳಗೆ ಸೇರು, ನೀನು ಸತ್ತು ಹೋಗಿದ್ದೀಯಾ ಎಂದು ಅವನನ್ನು ಬಲವಂತವಾಗಿ ಶವಪೆಟ್ಟಿಗೆಯಲ್ಲಿ ಮುಚ್ಚಿ, ಶಾಸ್ತ್ರೋಕ್ತವಾಗಿ ಸಮಾಧಿ ಮಾಡಿದರು. 


· ಇನ್ನಾ

ದೇಶವೆಂದರೆ ಮಣ್ಣಿನ ಪವಿತ್ರೀಕರಣ ಅಲ್ಲ


ಡಾ. ದಿನೇಶ್ ನಾಯಕ್
ಕಳೆದ ಐದು ವರ್ಷಗಳ ಕಾಲ ಈ ದೇಶವನ್ನು ಆಳಿದ ಬಿಜೆಪಿ ಆಡಳಿತದ ರಾಜನೀತಿ ಮತ್ತು ಆರ್ಥಿಕ ನೀತಿಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ವಾದ-ವಾಗ್ವಾದಗಳು ಈ ದೇಶದಾದ್ಯಂತ ನಡೆದಿದ್ದು, ಇದೀಗ ಮತ್ತೆ ಬಿಜೆಪಿ ಮುಂದಾಳತ್ವದ ಎನ್​ಡಿಎ ಸರ್ಕಾರ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿಯನ್ನು ಹಿಡಿದಿದೆ. ಚುನಾವಣಾ ಫಲಿತಾಂಶಕ್ಕಿಂತ ಮೊದಲೇ ನಡೆದ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿ ಕೂಟದ ದಿಗ್ವಿಜಯದ ಬಗ್ಗೆ ಎಲ್ಲ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದಂತೆ ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ ಏರಿಕೆ ಕಂಡುಬರಲು ಶುರುವಾಯಿತು. ಮತಎಣಿಕೆ ಆರಂಭಗೊಂಡು, ನಿಜ ಫಲಿತಾಂಶ ಹೊರಬೀಳುತ್ತಿದ್ದಂತೆ ಷೇರುಪೇಟೆಯ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಗೂಳಿಯ ನಾಗಾಲೋಟ ಆರಂಭಗೊಂಡಿತ್ತು. ನರೇಂದ್ರ ಮೋದಿಯವರ ಗೆಲುವಿನಿಂದಾಗಿ ವಿಶ್ವದ 6ನೇ ಅತಿದೊಡ್ಡ ಎಂದು ಹೇಳಲಾಗುತ್ತಿರುವ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಈಗಾಗಲೇ ಒಂದು ಬಗೆಯ ಸಂಚಲನ ಉಂಟಾಗಿದ್ದು, ಮುಂದೆ ಪ್ರಗತಿಗೆ ವೇಗ ದೊರೆಯಲಿದೆ ಎಂದು ಕಾರ್ಪೊರೇಟ್ ಬಳಗ ಗುಸುಗುಸು ಮಾತನಾಡತೊಡಗಿತು. ಮತ್ತೆ ಮೋದಿ ಸರ್ಕಾರ ಎಂಬುದು ಕಾರ್ಪೊರೇಟ್ ಜಗತ್ತಿನಲ್ಲಿ ಹರ್ಷೋಲ್ಲಾಸ ತಂದ ಈ ಹೊತ್ತಲ್ಲಿ ಈಗ ಮತ್ತೆ ದೇಶದ ರಾಜಕೀಯ ಪಂಡಿತರು, ಆರ್ಥಿಕ ವಿಶ್ಲೇಷಣೆಕಾರರು, ರಾಜಕೀಯ ವಿಜ್ಞಾನಿಗಳು ಮತ್ತು ಸಮಾಜ ವಿಜ್ಞಾನಿಗಳು ದೇಶದ ಆರ್ಥಿಕ ನೀತಿ ಮತ್ತು ಸುಧಾರಣೆಗಳ ಬಗ್ಗೆ ಬಿರುಸಿನಿಂದ ಮಾತನಾಡತೊಡಗಿದ್ದಾರೆ. 

ಈ ದೇಶದ ಆರ್ಥಿಕ ನೀತಿಗೆ ಸಂಬಂಧಿಸಿದಂತೆ 5 ವರ್ಷಗಳ ಕಾಲದ ಮೋದಿ ಸರ್ಕಾರದ ನಡೆಗಳು ಮತ್ತು ಮುಂದೆ ಅವರು ಕ್ರಮಿಸಬಹುದಾದ ದಾರಿ ಅಥವಾ ಮೋದಿಪೂರ್ವದ ಸರಕಾರಗಳ ನೀತಿಗಳ ಬಗ್ಗೆ ನ್ಯಾಯತೀರ್ಮಾನದ ನೆಲೆಯಲ್ಲಿ ತೀರ್ಪನ್ನು ಮುಂದಿಡುವ ಮೊದಲು ಒಟ್ಟು ಆರ್ಥಿಕ ನೀತಿಗಳ ಬಗ್ಗೆ ಒಂದೆರಡು ಅಂಶಗಳನ್ನು ಇಲ್ಲಿ ಗಮನಿಸಬಹುದಾಗಿದೆ. ಪಶ್ಚಿಮದ ದೇಶಗಳಲ್ಲಿ ಮುಕ್ತ ಮಾರುಕಟ್ಟೆ ನೀತಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವಾತ್ಮಕ ಆರ್ಥಿಕ ನೀತಿ ಎಂಬ ಎರಡು ರೀತಿಯ ಆರ್ಥಿಕ ನೀತಿಗಳಿವೆ. ಮತ್ತು ಈ ಎರಡು ನೀತಿಗಳನ್ನು ಪ್ರತಿಪಾದಿಸುವ ಬೇರೆ ಬೇರೆ ಪಕ್ಷಗಳು ಇಂದು ಪಶ್ಚಿಮದ ರಾಷ್ಟ್ರಗಳಲ್ಲಿ ಇವೆ. ಮುಕ್ತ ಮಾರುಕಟ್ಟೆ ಆರ್ಥಿಕ ನೀತಿ, ಸರಕು ಸೇವೆಗಳ ಪೂರೈಕೆಯನ್ನು ಹೆಚ್ಚಿಸುವ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂದು ಭಾವಿಸಿದರೆ, ಸಾಮಾಜಿಕ ಪ್ರಜಾಪ್ರಭುತ್ವಾತ್ಮಕ ನೀತಿಯು ಜನರ ಮೂಲಭೂತ ಆವಶ್ಯಕತೆಗಳಾದ ಆಹಾರ, ವಸತಿ, ಶಿಕ್ಷಣ, ಆರೋಗ್ಯ ಇವುಗಳನ್ನು ಸುಧಾರಿಸುತ್ತಾ ದೇಶವನ್ನು ಅಭಿವೃದ್ಧಿಗೊಳಿಸಬಹುದು ಎಂದು ತಿಳಿಯುತ್ತದೆ. ಭಾರತದಲ್ಲಿ ಕಾಂಗ್ರೆಸ್ ತನ್ನನ್ನು ತಾನು ಸಾಮಾಜಿಕ ಪ್ರಜಾಪ್ರಭುತ್ವಾತ್ಮಕ ಆರ್ಥಿಕ ನೀತಿಯ ಪರ ಎಂದು ಹೇಳುತ್ತಾ ಬಂದಿದೆ. ಹಾಗೆಯೇ ಬಿಜೆಪಿ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯನ್ನು ಪ್ರಬಲವಾಗಿ ನೆಚ್ಚಿದೆ. ಆದರೆ ತಮ್ಮ ರಾಜನೀತಿಯಲ್ಲಿ ಯಾವಾಗಲೂ ಗೊಂದಲ ಮತ್ತು ಎಡೆಬಿಡಂಗಿತನವನ್ನು ಪ್ರದರ್ಶಿಸುತ್ತಾ ಬರುತ್ತಿರುವ ಈ ಪಕ್ಷಗಳು ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಕೂಡಾ ಅದೇ ರೀತಿಯಲ್ಲಿ ವರ್ತಿಸಿವೆ. ಅಭಿವೃದ್ಧಿ ಹಾಗೂ ರಾಜಕೀಯ ಚಿಂತಕರಾದ ಡಾ. ಎಂ. ಚಂದ್ರ ಪೂಜಾರಿಯವರು ತಮ್ಮ `ನಿಯೋಲಿಬರಲ್ ಅಭಿವೃದ್ಧಿ' ಎಂಬ ಪುಸ್ತಕದಲ್ಲಿ ಸರಿಯಾಗಿಯೇ ಹೇಳುವಂತೆ, ಈ ಎರಡೂ ಪಕ್ಷಗಳೂ ಪ್ರತೀಬಾರಿಯೂ ವಿರೋಧಪಕ್ಷದಲ್ಲಿದ್ದಾಗ ಒಂದು ರೀತಿಯಲ್ಲಿ ಹೇಳಿಕೆಯನ್ನು ನೀಡುತ್ತಾ, ಅಧಿಕಾರಕ್ಕೆ ಬಂದಾಗ ಮತ್ತೊಂದು ರೀತಿಯಲ್ಲಿ ಕಾರ್ಯವೆಸಗುತ್ತಾ ಬಂದಿವೆ. ಹಾಗಾಗಿ ವಿರೋಧಪಕ್ಷದಲ್ಲಿದ್ದಾಗ ಬಿಜೆಪಿ ವಿದೇಶಿ ಬಂಡವಾಳ ಹೂಡಿಕೆ ಬಗ್ಗೆ, ಸರಕು ಸೇವೆಗಳ ತೆರಿಗೆ ಜಾರಿಗೊಳಿಸುವುದರ ಬಗ್ಗೆ, ಇಂಧನಗಳ ಬೆಲೆಯಲ್ಲಿನ ಸಬ್ಸಿಡಿಗೊಳಿಸುವುದರ ಬಗ್ಗೆ, ಉದ್ದಿಮೆಗಳಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ಪೂರೈಕೆ ಮಾಡುವುದರ ಬಗ್ಗೆ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದರೂ ತಾನು ಅಧಿಕಾರಕ್ಕೆ ಬಂದು ಆಳ್ವಿಕೆ ನಡೆಸಿದ ಕಳೆದ 5 ವರ್ಷಗಳಲ್ಲಿ ಅದು ಅನುಸರಿಸಿದ ಆರ್ಥಿಕ ನೀತಿ ಮಾತ್ರ ಸಂಪೂರ್ಣ ಬಂಡವಾಳಪರ ಆರ್ಥಿಕ ನೀತಿಯಾಗಿದೆ. ಈ ಬಗೆಯ ಬಂಡವಾಳಪರ, ಮಾರುಕಟ್ಟೆಪರ ಆರ್ಥಿಕ ನೀತಿಯನ್ನು `ನವ ಉದಾರವಾದಿ ಅಭಿವೃದ್ಧಿ ಆರ್ಥಿಕ ನೀತಿ'ಯೆಂಬುದಾಗಿ ಅರ್ಥಶಾಸ್ತ್ರಜ್ಞರು, ಆರ್ಥಿಕ ತಜ್ಞರು, ಅಭಿವೃದ್ಧಿ ಹಾಗೂ ರಾಜಕೀಯ ಚಿಂತಕರನೇಕರು ಗುರುತಿಸುತ್ತಾರೆ. 

20ನೆಯ ಶತಮಾನದ ಸಮಾಜವಾದ ಮತ್ತು ಕೇನ್ಸನ ಆರ್ಥಿಕ ಮಾದರಿಗಳನ್ನು ನಿರಾಕರಿಸುತ್ತಾ ಮುಕ್ತ ಮಾರುಕಟ್ಟೆ ಮತ್ತು ಬಂಡವಾಳವಾದದ ಸಿದ್ಧಾಂತವನ್ನು ಮುನ್ನೆಲೆಗೆ ತಂದ ಆಸ್ಟ್ರಿಯಾದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಫ್ರೆಡ್ರಿಕ್ ಸೆಪ್ಟೆಂಬರ್ವಾನ್ ಹಯೇಕ್ ಅವರು ಮಾರುಕಟ್ಟೆ ಪರವಾಗಿರುವ ನಿಯೋ ಲಿಬರಲ್ ಆರ್ಥಿಕತೆಯನ್ನು ಬಲವಾಗಿ ಸಮರ್ಥಿಸಿದವರು. 1920ರ ಬ್ರಿಟಿಷ್ ಆರ್ಥಿಕ ಕುಸಿತದ ಬಳಿಕ ಆರ್ಥಿಕ ಸ್ಥಿರತೆ ಮತ್ತು ದೇಶದ ಪ್ರಗತಿಯ ದೃಷ್ಟಿಯಿಂದ ಸಾರ್ವಜನಿಕ ಹೂಡಿಕೆಗಿಂತ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚು ಲಾಭದಾಯಕವಾದುದು ಎಂದುವಾದಿಸಿದ ಹಯೇಕ್ ಅವರು ಈ ಮೂಲಕ ನವ ಉದಾರವಾದೀ ಆರ್ಥಿಕ ನೀತಿಗೆ ಚಾಲನೆ ನೀಡಿದರು. ಆದರೆ ಇತ್ತೀಚೆಗೆ ಖ್ಯಾತ ಯುವ ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿಯವರು ತಮ್ಮ ಆರ್ಥಿಕ ಸಿದ್ಧಾಂತದಲ್ಲಿ ನಿಯೋ ಲಿಬರಲ್ ಆರ್ಥಿಕ ನೀತಿಯಲ್ಲಿ ಹೇಗೆ ಸರಕಾರೀ ಸಂಸ್ಥೆಗಳು ನಿಯಂತ್ರಣಕ್ಕೊಳಗಾಗಿ ಖಾಸಗಿ ಹೂಡಿಕೆದಾರರ ಪಾರಮ್ಯ ಹೆಚ್ಚಾಗಿ ತಾವು ಮತ್ತು ತಮ್ಮ ಪಾಲುದಾರರು ಹೆಚ್ಚು ಲಾಭವನ್ನು ಪಡೆಯುವಂತೆ ವ್ಯವಹಾರವನ್ನು ನಡೆಸುತ್ತಾರೆ. ಮತ್ತು ಇವರು ತಮ್ಮ ಕಾರ್ಮಿಕರಿಗೆ ಇದರಲ್ಲಿ ಏನೇನೂ ಪಾಲು ನೀಡದಿರುವ ಕಾರಣ ಈ ವ್ಯವಸ್ಥೆಯಲ್ಲಿ ಆರ್ಥಿಕ ಅಸಮಾನತೆ ಉಂಟಾಗುತ್ತದೆ ಎಂದು ತೋರಿಸಿಕೊಟ್ಟು ಹೇಯಕ್​ನ ನಿಯೋ ಲಿಬರಲ್ ಆರ್ಥಿಕ ನೀತಿಯ ಬಗ್ಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. 

ಭಾರತದಲ್ಲಿ ಬಿಜೆಪಿ ಅನುಸರಿಸುತ್ತಾ ಬಂದಿರುವ `ನಿಯೋಲಿಬರಲ್ ಅಭಿವೃದ್ಧಿ ನೀತಿ' ಆರ್ಥಿಕ ವ್ಯವಸ್ಥೆಯಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಎಲ್ಲವೂ ಸೇರಿ ಒಂದಕ್ಕೊಂದು ಸಹಾಯ ಮಾಡುವಂತೆ ಅವು ಕಾರ್ಯನಿರ್ವಹಿಸುತ್ತವೆ. ಹಾಗೆ ನೋಡಿದರೆ ಈ ಆರ್ಥಿಕ ನೀತಿ ಮೋದಿ ಕಾಲದಲ್ಲಿ ಮೊತ್ತ ಮೊದಲ ಬಾರಿಗೆ ಜಾರಿಗೆ ಬಂದಿರುವಂಥಾದ್ದು ಎಂದು ಹೇಳುವಂತಿಲ್ಲ. 1991ರಲ್ಲಿ ಮುಕ್ತ ಮಾರುಕಟ್ಟೆ ನೀತಿಯನ್ನು ಅತ್ಯಂತ ಸಂತೋಷದಿಂದ ಒಪ್ಪಿಕೊಂಡ ಪಿ ವಿ ನರಸಿಂಹ ರಾವ್ ಅವರ ಕಾಂಗ್ರೆಸ್ ಸರಕಾರದಿಂದ ಇದು ಆರಂಭಗೊಂಡಿತ್ತು. ಕಾಂಗ್ರೆಸ್ ಆರ್ಥಿಕ ನೀತಿಯಲ್ಲಿ ತಾನು ಭಾಜಪಕ್ಕಿಂತ ಭಿನ್ನ ಎಂದು ಎಷ್ಟೇ ಹೇಳಿದರೂ ಅದು ವಿರೋಧಪಕ್ಷದಲ್ಲಿದ್ದಾಗಿನ ಮಾತಾಗಿ ಮಾತ್ರ ಉಳಿಯುತ್ತಿತ್ತು. ಈ ಆರ್ಥಿಕ ನೀತಿ ಕಾಂಗ್ರೆಸ್ ಸರಕಾರದಿಂದ ತೊಡಗಿ ಹಂತಹಂತವಾಗಿ ಬೆಳೆದು ಬಂದು ಇದೀಗ ಮೋದಿಯವರ ರಾಜ್ಯಭಾರದಲ್ಲಿ ಭೂತಾಕಾರವಾಗಿ ಬೆಳೆದು ನಿಂತಿದೆ. ಹಾಗಾಗಿ ಇಂದು ಎಚ್​ಎಎಲ್, ಬಿಇಎಮ್​ಎಲ್ ಬಿಎಸ್​ಎನ್​ಎಲ್, ಬ್ಯಾಂಕಿಂಗ್ ಕ್ಷೇತ್ರ, ವಿಮಾಕ್ಷೇತ್ರ, ವಿಮಾನ ನಿಲ್ದಾಣಗಳು, ರೈಲ್ವೆ ವಿಭಾಗ, ಶಿಕ್ಷಣ, ಆರೋಗ್ಯ, ಸಾರಿಗೆ-ಸಂಪರ್ಕ - ಹೀಗೆ ಪ್ರತಿಯೊಂದು ಸಾರ್ವಜನಿಕ ಉದ್ದಿಮೆಗಳು ಅಪಾಯದಲ್ಲಿವೆ. ಎಲ್ಲವೂ ಇಂದು ಅಥವಾ ನಾಳೆ ಖಾಸಗಿ ಧನಿಗಳ ಕೈವಶವಾಗುವ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಭಾರತದ ಈಗಿನ ಎಲ್ಲ ಕಾರ್ಪೊರೇಟ್ ಉದ್ದಿಮೆದಾರರ ಹೆಸರನ್ನು ನಾವು ಗಮನಿಸಿದರೆ ಅವರು ಯಾರೂ ಒಮ್ಮೆಲೇ ರಾತೋರಾತ್ರಿ ಕಾಣಿಸಿಕೊಂಡವರಲ್ಲ. ಇವರೆಲ್ಲರ ಏಳ್ಗೆಯಲ್ಲಿ ನರಸಿಂಹರಾವ್ ಅವರಿಂದ ಹಿಡಿದು ಮನಮೋಹನ್ ಸಿಂಗ್​ವರೆಗೆ ಪಾಲು ಇದೆ. ಆದರೆ ಗಮನಿಸಬೇಕಾದದ್ದು ಏನೆಂದರೆ ಮೋದಿ ಪೂರ್ವದ ಖಾಸಗೀಕರಣ ಪ್ರಕ್ರಿಯೆಗೂ ಇವತ್ತಿನ ಕಾರ್ಪೊರೇಟ್ ಶಕ್ತಿಗಳ ಪಾರಮ್ಯಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮೋದಿ ಪೂರ್ವದ ನವ ಉದಾರವಾದದಲ್ಲಿ ವ್ಯಾಪಾರ-ವಹಿವಾಟುಗಳಿಗೆ ಸಂಬಂಧಿಸಿದಂತೆ ಔದಾರ್ಯದ ಜೊತೆಗೆ ಸರಕಾರದ ನಿಯಂತ್ರಣವೂ ಖಾಸಗಿ ಧನಿಗಳ ಮೇಲೆ ಇತ್ತು. ಆದರೆ `ಕನಿಷ್ಠ ಸರಕಾರ ಗರಿಷ್ಠ ಆಡಳಿತ' ಎಂದು ಹೇಳುತ್ತಾ, ಉದ್ಯಮ ನಡೆಸುವುದು ಉದ್ದಿಮೆದಾರರ ಕೆಲಸ ಎಂದು ಭಾವಿಸುವ ಮೋದಿಯವರ ಕಾಲದ ನವ ಉದಾರವಾದೀ ಆರ್ಥಿಕ ನೀತಿಯಲ್ಲಿ ಎಲ್ಲವನ್ನೂ ಕಾರ್ಪೊರೇಟ್ ಒಡೆಯರೇ ನಿಯಂತ್ರಿಸುತ್ತಿದ್ದಾರೆ ಎನ್ನುವುದು ಗಮನಿಸಬೇಕಾದ ಸಂಗತಿ. ತಮಗೆ ಸಿಕ್ಕ ಅಪಾರವಾದ ಪ್ರಾಮುಖ್ಯತೆಯಿಂದಾಗಿ ಅಂಬಾನಿ, ಅದಾನಿಯಂಥವರು ಈ ದೇಶದಲ್ಲಿ ಭದ್ರವಾಗಿ ಬೇರೂರಲು ಸಾಧ್ಯವಾಗಿದೆ. ಹಾಗಾದರೆ ಜನಸಾಮಾನ್ಯರನ್ನು ಮೇಲಕ್ಕೆತ್ತುವವರು ಯಾರು? ಚುನಾವಣೆಯ ಸಂದರ್ಭದಲ್ಲಿ ಬಡತನ ನಿರ್ಮೂಲನೆಯ ಬಗ್ಗೆ ಜನರ ಮುಂದೆ ಮಾತಾಡುವ ಸರಕಾರ ಬಳಿಕ ಬಡವರನ್ನು ಮೇಲೆತ್ತುವ ಪರಿಣಾಮಕಾರಿಯಾದ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಎನ್​ಡಿಎ ಸರಕಾರ ಕಳೆದ 5 ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಅವರ ಕಣ್ಣಿಗೆ ಮಣ್ಣೆರಚುವಂಥಾ ಕೆಲವೊಂದು ಸಣ್ಣ ಪುಟ್ಟ ಯೋಜನೆಗಳನ್ನಷ್ಟೇ ಜಾರಿಗೆ ತಂದಿದೆ. ಹಾಗಾಗಿ ಇಲ್ಲಿ ಬಡವರು ದ್ವೀಪವಾಗಿ ಬಿಟ್ಟಿದ್ದಾರೆ. ತಾವು ಬದುಕುವ ನಾಡಿನಲ್ಲೇ ಅಘೋಷಿತ ಆರ್ಥಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಹಾಗಾಗಿ ಪ್ರಖ್ಯಾತ ವಿದ್ವಾಂಸರಾದ ನೋಮ್ ಚೋಮ್​ಸ್ಕಿ ಅವರು ಹೇಳುವಂತೆ, ನಿಯೋ ಲಿಬರಲಿಸಂ ನಾಗರಿಕರಿಗೆ, ಜನಸಾಮಾನ್ಯರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಿಲ್ಲ. ಬದಲಾಗಿ ಇಲ್ಲಿ ಕೊಳ್ಳುಬಾಕ ಸಂಸ್ಕೃತಿ ಅಧಿಕಗೊಂಡು, ಜನರು ಸುಖವನ್ನು ಅರಸುತ್ತಾ, ಅರಸುತ್ತಾ, ಆತ್ಮವಿಶ್ವಾಸವನ್ನು ಕಳೆದುಕೊಂಡು, ನಿರಾಸಕ್ತರಾಗುತ್ತಾರೆ ಮತ್ತು ನಿರುಪಯುಕ್ತರಾಗುತ್ತಾರೆ. ಛಿದ್ರಗೊಂಡ ಸಮಾಜ ಸೃಷ್ಟಿಯಾಗುತ್ತದೆ. ಹಾಗಾಗಿ ದೇಶದ ಸಮಸ್ತರನ್ನು ಒಳಗೊಂಡ, ಅವರ ಸಹಭಾಗಿತ್ವವಿರುವ ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ನಿಯೋ ಲಿಬರಲ್ ಆರ್ಥಿಕ ನೀತಿ ದೊಡ್ಡ ಶತ್ರುವಾಗಿದೆ. 

ನವ ಉದಾರವಾದೀ ಆರ್ಥಿಕ ತತ್ತ್ವದಲ್ಲಿ ಒಂದು ಸರಳ ಮೇಲ್ಪದರದ ತರ್ಕವಿದೆ. ಅದೇನೆಂದರೆ ಸರಕು ಸೇವೆಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಏರಿಕೆಯಾದರೆ ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಸರಕುಗಳು ದೊರೆಯುತ್ತವೆ, ಇದರಿಂದ ಬಡತನ ನಿವಾರಣೆಯಾಗುತ್ತದೆ, ಜೊತೆಗೆ ನಿರುದ್ಯೋಗ ಓಡಿ ಹೋಗುತ್ತದೆ. ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ. ಇದರಿಂದ ಸಮಷ್ಟಿಗೆ ಒಳ್ಳೆಯದಾಗುತ್ತದೆ. ದೇಶ ಅಭಿವೃದ್ಧಿಯಾಗುತ್ತದೆ. ಆದರೆ ಮೋದಿಯವರು ಅಂದುಕೊಂಡಂತೆಯೇ ಎಲ್ಲವೂ ಆಗಿಬಿಟ್ಟಿದೆಯೇ ಎಂದು ಕೇಳಿದರೆ ಇಲ್ಲ, ಹಾಗಾಗಲಿಲ್ಲ. ವಾಸ್ತವ ಬೇರೆಯೇ ಇದೆ. ಈ ಆರ್ಥಿಕ ನೀತಿಯಿಂದ ಬಡತನ ಕಡಿಮೆ ಆಗಲಿಲ್ಲ. ನಿರುದ್ಯೋಗ ನಿವಾರಣೆ ಆಗಲಿಲ್ಲ. ಸ್ವಲ್ಪ ಮಟ್ಟಿಗೆ ಅಸಂಘಟಿತ ಉದ್ಯೋಗಿಗಳು ಹೆಚ್ಚಾಗಿದ್ದಾರೆ. ಅನುಕೂಲಸ್ಥರು ಕಟ್ಟಬೇಕಾದ ನೇರ ತೆರಿಗೆಯೂ ಇಲ್ಲಿ ಹೆಚ್ಚಾಗಲಿಲ್ಲ. ಬದಲಾಗಿ ಬಡವರು ಕಟ್ಟಿದ ಪರೋಕ್ಷ ತೆರಿಗೆ ಮಾತ್ರ ಹೆಚ್ಚಾಗಿದೆ. 

ಹಾಗಿದ್ದರೆ ಪ್ರಯೋಜನವಾದದ್ದು ಯಾರಿಗೆ ಎಂದರೆ ಕಾರ್ಪೊರೇಶನ್​ಗಳಿಗೆ. ಹಾಗಾಗಿ ನಮ್ಮ ದೇಶದ ಕಾರ್ಪೊರೇಟ್ಸ್​ಗಳಿಗೆ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕು. ನಿಜದಲ್ಲಿ ನೋಡಿದರೆ ಕೆಲವು ಕಾರ್ಪೊರೇಶನ್​ಗಳೇ ಈ ದೇಶವನ್ನು ಆಳುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ರಿಲಯನ್ಸ್, ಟಾಟಾ, ಎಸ್ಸಾರ್, ಇನ್ಫೋಸಿಸ್ ಮೊದಲಾದ ಕಾರ್ಪೊರೇಶನ್​ಗಳು ಅಮೆರಿಕಾ ಮೂಲದ ರಾಕ್ ಫೆಲ್ಲರ್ ಮತ್ತು ಫೋರ್ಡ್ ಫೌಂಡೇಶನ್ಸ್​ಗಳಂತೆ ಕೆಲಸ ಮಾಡುತ್ತಿವೆ. ರಾಕ್ ಫೆಲ್ಲರ್ ಮತ್ತು ಫೋರ್ಡ್ ಫೌಂಡೇಶನ್ಸ್ ಪ್ರಭುತ್ವದ ಜೊತೆಗೆ ಹತ್ತಿರದ ನಂಟನ್ನು ಬೆಳೆಸಿಕೊಂಡು ಸರಕಾರ ಮತ್ತು ತಮ್ಮ ಉದ್ದೇಶಗಳಿಗೆ ಪೂರಕವಾಗಿ ಕೆಲಸ ಮಾಡಿದಂತೆಯೇ ನಮ್ಮ ಕಾರ್ಪೊರೇಶನ್ಸ್ ಅದೇ ಬಗೆಯ ತಂತ್ರಗಾರಿಕೆಯನ್ನು ಬಳಸಿಕೊಂಡು ಕೆಲವೊಂದು ರಾಜಕೀಯ ಪಕ್ಷಗಳನ್ನು ನಡೆಸುತ್ತಿವೆ. ಜೊತೆಗೆ ಈ ದೇಶದ ಮಾಧ್ಯಮಗಳನ್ನು ಕೂಡಾ. ಹಾಗೆಯೇ ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಭಾರತೀಯ ಖಾಸಗಿ ಕಂಪೆನಿಗಳು ಚ್ಯಾರಿಟೇಬಲ್ ಫೌಂಡೇಶನ್ಸ್​ಗೆ ಹಣವನ್ನು ಹಂಚಿ ಅವುಗಳ ಮೂಲಕ ಸಾರ್ವಜನಿಕ ವಲಯಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ದಾರಿಗಳನ್ನು ಕಂಡುಕೊಳ್ಳುತ್ತಿವೆ. ಹೀಗಾಗಿ ಕಾರ್ಪೊರೇಟ್ಸ್​ಗಳ ಕಾರ್ಯತಂತ್ರ ಸ್ಪಷ್ಟವಾಗಿದೆ - ನಿಧಾನಕ್ಕೆ ಸಾರ್ವಜನಿಕರ ಭಾವನೆಗಳನ್ನು ನಂಬಿಕೆಗಳನ್ನು ನಿಯಂತ್ರಿಸುವುದು, ಬಳಿಕ ಜನಸಾಮಾನ್ಯರ ಆರೋಗ್ಯ ರಕ್ಷಣೆ ಹಾಗೂ ಶಿಕ್ಷಣಕ್ಕಾಗಿ ಸರಕಾರದಿಂದ ಹಣ ಮಂಜೂರಾಗದ ಸಂದರ್ಭದಲ್ಲಿ ತಮ್ಮ ನಿಯಂತ್ರಣದಲ್ಲಿರುವ ಸರಕಾರೇತರ ಚ್ಯಾರಿಟೇಬಲ್ ಸಂಸ್ಥೆಗಳ ಮೂಲಕ ಜನರಿಗೆ ಧನಸಹಾಯವನ್ನು ನೀಡುವುದು, ಆಗ ಆರ್ಥಿಕ ಸಹಾಯವನ್ನು ಪಡೆದ ಜನಸಾಮಾನ್ಯರ ಕಣ್ಣಲ್ಲಿ ಇವರು ಉದಾರಿಗಳಾಗುತ್ತಾರೆ. ಈ ಮೂಲಕ ದೇಶವನ್ನು ಕಾರ್ಪೊರೇಟ್ ಬಂಡವಾಳದ ಮುಕ್ತ ಮಾರುಕಟ್ಟೆಯನ್ನಾಗಿ ಮಾಡುವುದು. ಇದು ಒಂದು ರೀತಿಯಲ್ಲಿ ವಸಾಹತುಶಾಹಿ ಆಳ್ವಿಕೆಯಲ್ಲಿ ಮಿಶನರಿಗಳು ಮಾಡುತ್ತಿದ್ದ ಕೆಲಸದ ಹಾಗೆಂದು ಖ್ಯಾತ ಬರಹಗಾರ್ತಿ ಅರುಂಧತಿ ರಾಯ್ ಅವರು ಹೇಳುತ್ತಾರೆ. 

ದೇಶದ ಸಂಪತ್ತು ಎಂಬುದು ಕೆಲವೇ ಕೆಲವು ಮಂದಿಯ ಕೈಯಲ್ಲಿ ಉಳಿಯುವಂತೆ ಮಾಡಿ ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ಹುಟ್ಟುಹಾಕುವ ಇಂಥಾ ಔದಾರ್ಯರಹಿತ ಮತ್ತು ಕೇವಲ ಭೀಕರತೆಯನ್ನು ಮಾತ್ರ ಹೊಂದಿರುವ ಆರ್ಥಿಕ ನೀತಿಯನ್ನು ಜಾರಿಗೆ ತರುವ ಸಲುವಾಗಿ ಮೋದಿ ಸರಕಾರ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದ, ಬಂಡವಾಳ ಹಿಂತೆಗೆತಕ್ಕೆಂದೇ ಒಬ್ಬ ಸಚಿವನನ್ನು ಆಯ್ಕೆಮಾಡಿ ಅದಕ್ಕಾಗಿ ಒಂದು ಸಚಿವಾಲಯವನ್ನು ಆರಂಭ ಮಾಡಿದ್ದು ಈಗ ಇತಿಹಾಸ. ಹಾಗೆಯೇ ಛತ್ತೀಸ್​ಗರ್​ನಲ್ಲಿ 1 ಲಕ್ಷ 70 ಸಾವಿರ ಹೆಕ್ಟೇರ್ ಅರಣ್ಯಭೂಮಿಯನ್ನು ಅದಾನಿಯವರಿಗೆ ನೀಡಿದ ಉದ್ದೇಶವನ್ನು ಈ ದೇಶದ ಪ್ರಜೆಗಳು ಏನೆಂದು ಅರ್ಥೈಸಬೇಕೆಂದು ಮೋದಿಯವರೇ ಹೇಳಬೇಕು. ರಾಷ್ಟ್ರೀಯ ಸಂಪನ್ಮೂಲಗಳನ್ನು, ಸರಕಾರಿ ಸಂಸ್ಥೆಗಳನ್ನು ಖಾಸಗಿ ಬಂಡವಾಳಿಗರಿಗೆ ಕೈಗಿತ್ತು ಅವರ ಬದುಕನ್ನು ಹಸನು ಮಾಡುವ ಮೋದಿ ಮತ್ತು ಅವರ ತಂಡದ ಸದಸ್ಯರ ಕಣ್ಣಿಗೆ ಕಾಣುವುದು ಇಂದು ಈ ದೇಶದಲ್ಲಿ ಅತ್ಯಂತ ಸಂತೋಷದಲ್ಲಿರುವ ಗುಜರಾತಿನ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಅಂಥವರು ಮಾತ್ರ. ಆದರೆ ಅದಾನಿಯವರು ಮಂಗಳೂರು ವಿಮಾನ ನಿಲ್ದಾಣವನ್ನು ಕೊಂಡುಕೊಂಡರೆ ಅಲ್ಲಿ ಯಾರಿಗೆ ಉದ್ಯೋಗ ದೊರೆಯುತ್ತದೆ ಎಂಬುದನ್ನು ನಾವು ಪ್ರಶ್ನಿಸಬೇಕಾಗಿದೆ. ಖಾಸಗಿ ಬಂಡವಾಳ ಹೂಡಿಕೆಯಿಂದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಸಮಾನತೆ ಎಲ್ಲವೂ ಓಡಿಹೋಗಲು ಸಾಧ್ಯವೇ? ಎಂಬುದನ್ನು ಜನರು ಗಂಭೀರವಾಗಿ ಯೋಚಿಸಬೇಕು. 

ನೆಹರೂ ಕಾಲದಲ್ಲಿ ಅಷ್ಟಾಗಿ ಬಂಡವಾಳ ಹೂಡಲು ಮುಂದಾಗದಿದ್ದ ಖಾಸಗಿ ಧನಿಗಳು ನೆಹರೂ ವಿರೋಧಿ ಸರಕಾರದ ಕಾಲದಲ್ಲಿ ಅತ್ಯುತ್ಸಾಹದಿಂದ ಸಾಲು ಸಾಲಾಗಿ ಮುಂದೆ ಬರುತ್ತಿರುವುದು ಖಂಡಿತವಾಗಿಯೂ ದೇಶೋದ್ಧಾರಕ್ಕಾಗಿ ಅಲ್ಲ ಅನ್ನುವ ಸಂಗತಿ ಯಾರಿಗಾದರೂ ಅರ್ಥವಾಗುವಂಥಾದ್ದು. ಸದಾ ಮಣ್ಣಿನ ಪವಿತ್ರೀಕರಣದ ಮೂಲಕ ಜನರ ಭಾವುಕ ಪ್ರಪಂಚವನ್ನು ತಲುಪಿ ಸಮೂಹದ ನಾಯಕನಾಗಿ ಬೆಳೆದು, ತನ್ನ ಅಭೂತಪೂರ್ವ ವಾಕ್ ಪ್ರತಿಭೆಯಲ್ಲಿ ನಿತ್ಯ ನೂತನ ಪರಿಭಾಷೆಗಳನ್ನು ಜನರ ಮುಂದಿಟ್ಟು ಜನರ ಕಣ್ಣು, ಕಿವಿ, ಮನಸ್ಸುಗಳಲ್ಲೆಲ್ಲಾ ತುಂಬಿ ದೇಶದ ಪ್ರಧಾನಮಂತ್ರಿಯೆನ್ನಿಸಿಕೊಂಡವರು ಮುಂದಕ್ಕೆ ಈ ದೇಶದ ಸಂಪನ್ಮೂಲಗಳನ್ನು ಖಾಸಗಿಯವರ ಕೈಗೆ ಒಪ್ಪಿಸುವ ಮೊದಲು ದೇಶವೆಂದರೆ ಯುದ್ಧೋನ್ಮಾದ ಅಲ್ಲ, ದೇಶದ ಕಾವಲುಗಾರನೆಂದರೆ ಇಲ್ಲಿನ ಸಂಪನ್ಮೂಲಗಳನ್ನು ಮಾರಿ `ಮೈಸೂರನ್ನು ಪ್ಯಾರಿಸ್ ಮಾಡ್ತೇನೆ, ಉದಯ್​ಪುರ್ ಮಾಡ್ತೇನೆ' ಅಂತ ಜನರು ಹುಚ್ಚೇಳುವಂತೆ ಭಾಷಣ ಮಾಡುವುದಲ್ಲ ಎಂಬುದನ್ನು ತಿಳಿಯಬೇಕು. ದೇಶ ಅಂದರೆ ಜನ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲಿ ಜನ ಮನುಷ್ಯರಾಗಿ ಬಾಳಬೇಕಾದರೆ ಅವರಿಗೆ ಪ್ರಯೋಜನಕಾರಿಯಾದ ಸರಕಾರೀ ಸಂಸ್ಥೆಗಳ ಮೂಲಕ ಆಹಾರ, ಶಿಕ್ಷಣ, ಆರೋಗ್ಯ, ವಸತಿ ದೊರೆಯಬೇಕು ಎಂಬುದು ಅರ್ಥ ಆಗಬೇಕು. ಆದರೆ ದೇಶದ ಬಗ್ಗೆ ನಿಜ ಕಾಳಜಿ ಇರುವ ಒಬ್ಬ ಪ್ರಾಮಾಣಿಕ ರಾಜಕಾರಣಿಗೆ ಮತ್ತು ಸೂಕ್ಷ್ಮ ಮನಸ್ಸಿನ ಮುತ್ಸದ್ಧಿಗೆ ಮಾತ್ರ ಇಂಥಾ ವಿಚಾರಗಳು ಬಲು ಬೇಗ ತಿಳಿಯಲು ಸಾಧ್ಯ. 



*********** 

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...