Tuesday, 24 April 2018

ವೋಟ್ ಕೇಳಲು ನಾಯಕರೊಬ್ಬರು. . . .




ಮೊನ್ನೆ,
ವೋಟ್ ಕೇಳಲು ನಾಯಕರೊಬ್ಬರು
ಮನೆಯ ಬಳಿ ಬಂದರು
ಕೈ ಮುಗಿದರು
ಮನೆಯ ಪಕ್ಕದ ಕಸದ ರಾಶಿ
ತೋರಿಸಿದೆ
ನಮ್ಮ ಮನೆಯ ಪಕ್ಕದಲ್ಲೂ
ಹೀಗೆ ಎಂದರು
ಮನೆಯ ಮುಂದಿನ
ಕೆಟ್ಟು ಹೋದ
Street light
ತೋರಿಸಿದೆ
ಕಿತ್ತು ಹೋಗಿದ್ದ ರಸ್ತೆ
ತೋರಿಸಿದೆ
ನಮ್ಮ ಮನೆಯ ಮುಂದೆಯೂ
ಹೀಗೆ ಎಂದರು
ಮನೆ ಕಾರು ತೋರಿಸಿ
ನಮ್ಮದು ಒಂದೇ ಮನೆ
ಒಂದೇ ಕಾರು ಎಂದೆ
ಬರಲೇ ಎಂದು ಕೈ ಬೀಸಿ
ಮುಂದೆ ನಡೆದರು


¨ ಪ್ರಶಾಂತ್ ಇಗ್ನೇಷಿಯಸ್


ವಸಂತ ಸಂತ



ಪಾದ್ವದ ಪರಿಮಳವೇ,
ಹಲಸೂರಿನ ಮಣ್ಣಿನಲ್ಲಿದೆ.
ಈ ಮಣ್ಣ ಪ್ರತಿಕಣಕಣದಲ್ಲೂ
ಆ ಸಂತನ ವರದಾನವಿದೆ!
"ಬಾರಯ್ಯಾ ಬಾ ಯಾತ್ರಿಕನೇ,
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
ನದಿಯಾಳದ ಮೀನಿಗೂ,
ಬುದ್ಧಿ ಮರೆತ ಪ್ರಾಣಿಗೂ,
ಜೀವವಾಣಿ ಕೇಳಿಸಿದ ಸಂತ.
ಹುಲುಮಾನವನೆದೆಯಲ್ಲಿ,
ಪರಮಾತ್ಮನ ಮೂಡಿಸಲು,
ಈ ಬೆಟ್ಟದ ಬಯಲಲ್ಲಿ ನಿಂತ!
"ಬಾರಯ್ಯಾ ಬಾ ಯಾತ್ರಿಕನೇ,
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
ದೂರದೂರಿಗೊಯ್ದರೂ,
ಮರಳಿ ಬಂದು ನಿಂತನು,
ಕಾಲ ದೇಶ ಮೀರಿದಂಥ ಸಂತ!
ನಂಬಿ ಬಂದ ಕಂಗಳಲಿ,
ಒಣಮರದ ರೆಂಬೆಗಳಲಿ,
ತಂದೇ ತರುವನಯ್ಯಾ ವಸಂತ!
"ಬಾರಯ್ಯಾ ಬಾ ಯಾತ್ರಿಕನೇ,
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
(ಬೆಟ್ಟದ ಹಲಸೂರಿನ ಅಂತೋಣಪ್ಪನನ್ನು ನೆನೆದು. . . . )

¨ ಯಜಮಾನ್ ಫ್ರಾನ್ಸಿಸ್


ಕೊನೇ ಮಾತು




"ರಾಜಕೀಯ ನಿರಕ್ಷರಸ್ಥ"
¨  ಸಮೀಶಾ 


ಹಿಂದಿನ ಕಾಲದಲ್ಲಿ ರಾಜ ಮಹಾರಾಜರುಗಳು ತಮ್ಮ ವಿರುದ್ಧವಾಗಿ ಮಾತನಾಡುವವರನ್ನು, ಪಿತೂರಿ ಮಾಡುವವರನ್ನು ಗುಪ್ತಚಾರಿಗಳ ಮೂಲಕ ತಿಳಿದುಕೊಂಡು, ರಹಸ್ಯವಾಗಿ ಮುಗಿಸಿಬಿಡುತ್ತಿದ್ದರು. ಹಿಟ್ಲರನೂ ಕೂಡ ಇಂಥ ರಹಸ್ಯ ಕಾರ್ಯಾಚರಣೆಯ ಮೂಲಕ ಲಕ್ಷಾಂತರ ಮಂದಿಯ ಮಾರಣ ಹೋಮಕ್ಕೆ ಕಾರಣನಾಗಿದ್ದ. ಇಂದಿನದು ಡಿಜಿಟಲ್ ಯುಗ. ಯುಗದ ಸಾಧ್ಯಾಸಾಧ್ಯತೆಗಳನ್ನು ಆಳುವ ಮಂದಿ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ಅಂಗೈಯೊಳಗಿನ ಮೊಬೈಲಿಗೆ ವಾಟ್ಸಾಪು, ಫೇಸ್ ಬುಕ್ಕು, ಟ್ವಿಟ್ಟರು, ಇತ್ಯಾದಿಗಳ ಮೂಲಕ ದ್ವೇಷ, ಕೋಮುಭಾವನೆ ಕೆರಳಿಸುವ, ವಿಷಕಾರುವ, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ, ಧರ್ಮ, ರಾಷ್ಟ್ರಪ್ರೇಮವನ್ನು ನೆಪವಾಗಿಸುತ್ತಾ ವಿಕೃತ ಸಂತೋಷದಲ್ಲಿ ತೊಡಗಿದ್ದಾರೆ. ನಮ್ಮನ್ನೇ ಗ್ರೂಪುಗಳ ಆಡ್ಮಿನ್ ಮಾಡಿ, ನಾವೇ ಬಡಿದಾಡಿಕೊಂಡು ಸಾಯುವ ಹಾಗೆ ಮಾಡುತ್ತಿದ್ದಾರೆ. ನಮ್ಮ ಮನೆಯ ಒಲೆಯ ಬೆಂಕಿಯನ್ನು ಪಡಸಾಲೆವರೆಗೂ ವಿಸ್ತರಿಸಿ ಖುಷಿ ಪಡುತ್ತಿದ್ದಾರೆ. ನಾವಾದರೋ ಕಷ್ಟಪಟ್ಟು ಹುಡುಕಿದ  ಹತ್ತಿಪ್ಪತ್ತು ವರುಷದ ಹಳೆಯ ಗೆಳೆಯರನ್ನು ಅನುಮಾನಸ್ಪದವಾಗಿ ನೋಡಲು ಶುರುಮಾಡಿದ್ದೇವೆ. ಯಾರೊಬ್ಬ ಸರ್ಕಾರದ ವಿರುದ್ಧವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ, ತೋಳಗಳಂತೆ ಮುಗಿಬೀಳುತ್ತೇವೆ. ಇವನ ಹಿಂದೆ ಎಂಥಾ ಅಸಹ್ಯ ಮುಖವಿದೆ ಎಂದು ಆಡಿಕೊಳ್ಳುತ್ತೇವೆ. ಇತ್ತೀಚೆಗೆ ಪ್ರಸ್ತುತ ರಾಜಕೀಯ ಸನ್ನಿವೇಷದ ಕಾರಣಗಳಿಗಾಗಿ ನಾನೂ ಒಬ್ಬನಾಗಿದ್ದೇನೆ. ಆದರೆ ನನಗೆ ಸಹ್ಯವಾಗದ ವಿಚಾರವನ್ನು ನಾನು ಏಕೆ ಒಪ್ಪಿಕೊಳ್ಳಬೇಕು? ಅನ್ಯಾಯ ಎನಿಸಿದಾಗ ಪ್ರತಿರೋಧ ತೋರದೆ ಹೇಗಿರಲಿ?
ಜರ್ಮನ್ ಕವಿ, ನಾಟಕಕಾರ, ಬರ್ಟೋಲ್ಟ್ ಬ್ರೆಕ್ಟ್ ಕುರಿತಾಗಿ ಹೇಳಿದ್ದನ್ನು ಇತ್ತೀಚೆಗೆ ಗೆಳೆಯ ಭಾರವಿ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು. ಅದನ್ನು ಇಲ್ಲಿ ಹಾಗೆಯೇ ಸುರುವಿದ್ದೇನೆ. - 

ಅತಿ ಕೆಟ್ಟ ನಿರಕ್ಷರಸ್ಥ ಎಂದರೆ "ರಾಜಕೀಯ ನಿರಕ್ಷರಸ್ಥ". ಆತನಿಗೆ ಕೇಳಿಸುವುದಿಲ್ಲ, ಆತ ಮಾತನಾಡುವುದಿಲ್ಲ, ರಾಜಕೀಯ ಘಟನೆಗಳಲ್ಲಿ ಭಾಗವಹಿಸುವುದೇ ಇಲ್ಲ. ಬದುಕಿನ ಬೆಲೆ, ತರಕಾರಿ, ಮೀನು, ಹಿಟ್ಟು, ಬಾಡಿಗೆ, ಚಪ್ಪಲಿ, ಔಷಧಿಯ ಬೆಲೆ ಎಲ್ಲವೂ ರಾಜಕೀಯ ನಿರ್ಧಾರಗಳ ಮೇಲೆ ಅವಲಂಬಿಸಿವೆ ಎಂಬುದು ಆತನಿಗೆ ತಿಳಿದಿಲ್ಲ. ರಾಜಕೀಯ ನಿರಕ್ಷರಸ್ಥ ಎಷ್ಟೊಂದು ಮೂರ್ಖನೆಂದರೆ ತಾನು ರಾಜಕೀಯವನ್ನು ದ್ವೇಷಿಸುತ್ತೇನೆ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುತ್ತಾನೆ. ತನ್ನ ರಾಜಕೀಯ ಅಜ್ಞಾನದಿಂದಲೇ ವೇಶ್ಯೆ, ನಿರ್ಗತಿಕ ಮಗು, ಎಲ್ಲರಿಗಿಂತ ಕೆಟ್ಟ ಕಳ್ಳ, ಕೆಟ್ಟ ರಾಜಕಾರಣಿ, ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಭ್ರಷ್ಟ ಹಾಗೂ ಭಟ್ಟಂಗಿ ಹುಟ್ಟುತ್ತಾರೆ ಎಂದು ದಡ್ಡನಿಗೆ ತಿಳಿದಿಲ್ಲ.



ಸುದ್ದಿ, ಚೂರು ಪಾರು ಸುದ್ದಿ


 ದೂರುದಾರರೊಂದಿಗೆ ಮಾತುಕತೆಗೆ ಮುಂದಾದ ಆರ್ಚಬಿಷಪ್
ಎರ್ನಾಕುಲಂ-ಅಂಗಮಾಲಿ ಧರ್ಮಕ್ಷೇತ್ರಕ್ಕೆ ಸೇರಿದ್ದ ೆಲೆಬಾಳುವ ಭೂಮಿಯನ್ನು ಅಲ್ಪ ಬೆಲೆಗೆ ಮಾರಾಟ ಮಾಡಿದ್ದಾರೆ ಎಂಬ ಭೂ ಹಗರಣದ ಆರೋಪ ಹೊತ್ತ, ವಿವಾದದ ಕೇಂದ್ರ ಬಿಂದುವಾಗಿದ್ದ ಕಾರ್ಡಿನಲ್ ಜಾರ್ಜ್ ಅಲೆಂಚೆರಿ ಅವರು, ತಮ್ಮ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪಾದ್ರಿಗಳೊಂದಿಗೆ ಮಾತಕತೆ ನಡೆಸಲು ಮುಂದಾಗಿದ್ದಾರೆ.
ಇದರೊಂದಿಗೆ, ಪ್ರಶ್ನಾರ್ಹವಾಗಿದ್ದ ಧರ್ಮಸಭೆಗೆ ಸೇರಿದ್ದ ಅಪಾರ ಮೌಲ್ಯದ ಆಸ್ತಿ ಪರಭಾರೆ ಹಗರಣದ ವಿವಾದ, ಧರ್ಮಸಭೆಯ ಆಂತರಿಕ ವ್ಯವಹಾರ ಎಂಬ ಕಣ್ಕಟ್ಟಿನ ಮುಸುಕಿನಲ್ಲಿ, ಈಗ ತೆರೆಯ ಹಿಂದೆ ಸ್ಥಳಾಂತರಗೊಂಡಂತಾಗಿದೆ.
ಯೇಸುಸ್ವಾಮಿಯ ಪುನರುತ್ಥಾನದ ಸಂದರ್ಭದ ಬೆಳವಣಿಗೆ ಏನೇ ಫಲಶೃತಿ ತರಲಿ, ಸದ್ಯಕ್ಕಂತೂ ಕಾರ್ಡಿನಲ್ ಅವರು, ಧರ್ಮಸಭೆಯ ಆಡಳಿತ ನಿರ್ಧಾರಗಳಿಂದ ದೂರ ನಿಲ್ಲುವಂತಾಗಿದೆ.
ಕಾರ್ಡಿನಲ್ ಅಲೆಂಚರಿ (೭೨) ಅವರು ಸಿರೋ ಮಲಬಾರ್ ಕಥೋಲಿಕ ಧರ್ಮಸಭೆಯ ಪ್ರಧಾನ ಮಹಾಧರ್ಮಾಧ್ಯಕ್ಷರಾಗಿದ್ದಾರೆ (ಆರ್ಚಬಿಷಪ್ ಮೇಜರ್). ಕಳೆದ ಮೂರು ತಿಂಗಳಿಂದ ಭೂ ವಿವಾದ ಬೆಳಕಿಗೆ ಬಂದ ನಂತರ, ಅವರು ಧರ್ಮಸಭೆಯಲ್ಲಿ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದೆಂಬ ನಿಷೇಧ ಜಾರಿಯಲ್ಲಿದ್ದು, ಆಡಳಿತ ಯಂತ್ರದ ಏಣಿಯಲ್ಲಿ ಅವರ ನಂತರದ ಸ್ಥಾನದಲ್ಲಿದ್ದವರು, ಈಗಾಗಲೇ ಅವರ ಅನುಪಸ್ಥಿತಿಯಲ್ಲಿ ಎರಡು ಮಹತ್ವದ ಸಭೆಗಳನ್ನು ನಡೆಸಿದ್ದಾರೆ.

ಬಿಷಪರೇ, ಹಣಕಾಸು ಮತ್ತು ಭೂ ವ್ಯವಹಾರಗಳಿದ ದೂರವಿರಿ
ಇನ್ನೊಂದು ಪ್ರಕರಣದಲ್ಲಿ, ಕೊಲ್ಲಂ ಜಿಲ್ಲೆಯ ನ್ಯಾಯಾಲಯವೊಂದು, ಕ್ವಿಲಾನ್ ಬಿಷಪ್ ಸ್ಟ್ಯಾನ್ಲಿ ರೋಮನ್ ಅವರು ಧರ್ಮಕೇತ್ರದ ಹಣಕಾಸಿನ ಹಾಗೂ ಭೂ ವ್ಯವಹಾರಗಳಿಂದ ದೂರವಿರುವಂತೆ ಸೂಚಿಸಿದೆ. ಆದರೂ, ಧಾರ್ಮಿಕ ಕ್ರಿಯಾವಿಧಿಗಳನ್ನು ನಡೆಸುವುದಕ್ಕೆ ವಿನಾಯತಿ ನೀಡಲಾಗಿದೆ.
ಕಥೋಲಿಕ ಧರ್ಮಸಭೆಯ ಸಂವಿಧಾನದ ಕ್ಯಾನನ್ ಕಾನೂನಿನ ಪ್ರಕಾರ, ೭೫ವರ್ಷ ದಾಟಿದ ಬಿಷಪರು ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಕೂಡದು, ಅವರು ಕೇವಲ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಬೇಕು ಎಂಬ ನಿಲುವಿನಿಂದ ನ್ಯಾಯಾಲಯದ ಕಟ್ಟೆ ಏರಿದ್ದ ದೂರುದಾರರು, ಬಿಷಪ್ ಸ್ಟ್ಯಾನ್ಲಿ ರೋಮನ್ ಅವರು, ಕೊಟ್ಟಾಯಂ ಮತ್ತು ಕೊಲ್ಲಂ ಧರ್ಮಸಭೆಯ ಆಸ್ತಿಯಲ್ಲಿ ಅಕ್ರಮವಾಗಿ ಕೆಲವನ್ನು ಮಾರಾಟ ಮಾಡಿದ್ದಾರೆ ಹಾಗೂ ಕೆಲವನ್ನು ಭೋಗ್ಯಕ್ಕೆ ಹಾಕಿದ್ದಾರೆ, ಇದಲ್ಲದೇ, ಅಪಾರ ಹಣವನ್ನು ಬ್ಯಾಂಕ್ ಖಾತೆಗಳಿಂದ ತೆಗೆಯಲಾಗಿದೆ ಎಂದು ಆರೋಪಿಸಿದ್ದರು.

ಗರಿಗಳ ಭಾನುವಾರದಂದು ಕತ್ತೆ ಹತ್ತಿದ ಪಾದ್ರಿ!
ಇಂದೋರ ಧರ್ಮಕ್ಷೇತ್ರದ ನಂದನಗರದ ಸಂತ ಜೋಸೆಫರ ಚರ್ಚಿನ ವಿಚಾರಣೆ ಗುರು ರಾಜಮಾಣಿಕ್ಯಂ ಅವರು, ಗರಿಗಳ ಭಾನುವಾರದಂದು ಕತ್ತೆಯ ಮೇಲೆ ಕುಳಿತು ಚರ್ಚಿನ ಆವರಣದಲ್ಲಿ ಮೆರವಣಿಗೆಯಲ್ಲಿ ಸಾಗಿದರೆ, ಮಕ್ಕಳು ಯುವಕರುಗಳಿದ್ದ ಚರ್ಚಿನ ಹಾಡಿನ ತಂಡದ ಸದಸ್ಯರು ಗರಿಗಳನ್ನು ಹಿಡಿದು, ಹಬ್ಬದ ಹಾಡುಗಳನ್ನು ಹಾಡುತ್ತಾ, ಜೈಕಾರ ಮಾಡುತ್ತಾ ಅವರ ಹಿಂದೆ ಸಾಗಿದ ಘಟನೆ ನಡೆದಿದೆ.
ಹೊಸ ಒಡಂಬಡಿಕೆಯಲ್ಲಿನ ಯೇಸುಸ್ವಾಮಿಯ ಜೆರುಸಲೇಮ್ ಪಟ್ಟಣ ಪ್ರವೇಶದ ಘಟನೆಯನ್ನು ಪ್ರತಿನಿಧಿಸುವಂತೆ, ಪೂಜಾ ಧಿರಿಸಿನಲ್ಲಿ ವಿಚಾರಣೆ ಗುರು ಕತ್ತೆ ಹತ್ತಿ ಚರ್ಚಿಗೆ ಬಂದ ಪ್ರಸಂಗ, ಅನೇಕರಿಗೆ ಅಚ್ಚರಿ ಮೂಡಿಸಿದರೆ, ವಿಚಾರಣೆಯ ವ್ಯಾಪ್ತಿಗೆ ಸೇರಿದ್ದ ಹಿರಿಯರಿಗೆ ಮಕ್ಕಳಿಗೆ ಗರಿಗಳ ಭಾನುವಾರದ ಮಹತ್ವವನ್ನು ಮನಮುಟ್ಟುವಂತೆ ವಿವರಿಸಲು ಸಾಧ್ಯವಾಯಿತು ಎನ್ನಲಾಗುತ್ತಿದೆ.
ಚರ್ಚ್ ಆವರಣದಲ್ಲಿನ ಒಟ್ಟು ೩೦ ನಿಮಿಷಗಳ ಮೆರವಣಿಗೆ ಒಂದು ಅವಿಸ್ಮರಣೀಯ ಘಟನೆ ಎನ್ನವ ಕೆಲವು ವಿಶ್ವಾಸಿಗಳು, ಮೊದಮೊದಲು ಅದನ್ನು ತಮಾಷೆಯಾಗಿಯೇ ಕಂಡರು. ಆದರೆ, ಪೂಜೆಯಲ್ಲಿನ ಪ್ರಸಂಗ ಕೇಳಿದ ನಂತರ, ಅವರಿಗೆ ಅತಿ ಹೀನಾಯ ಪ್ರಾಣಿ ಎಂದು ಗುರುತಿಸುವ, ಸಾಮಾನು, ಸರಂಜಾಮು ಸಾಗಿಸುವ ಕತ್ತೆಯ ಮೇಲಿನ ಪಾದ್ರಿಯ ಮೆರವಣಿಗೆ, ಇಂದಿನ ಐಷಾರಾಮಿ ಬದುಕಿನ ದಿನಗಳಲ್ಲಿ ಯೇಸುಸ್ವಾಮಿಯ ದೀನತೆಯ ಪಾಠ ಎಂಬುದು ಮನದಟ್ಟಾಯಿತು.

ಕಾಶ್ಮೀರದಲ್ಲೊಂದು ಘರ ವಾಪಸಿ ಹಗರಣ
ರಾಜೌರಿ (ಜಮ್ಮು ಮತ್ತು ಕಾಶ್ಮೀರ): ಜಮ್ಮುವಿನ ರಾಜೌರಿ ಜಿಲ್ಲೆಯ ಕಾಂಗ್ರಿ ಮತ್ತು ಸೆಹ್ಯಾಲ ಗ್ರಾಮಗಳ ಕ್ರೈಸ್ತ ಕುಟುಂಬಗಳು ಘರ ವಾಪಸಿ ಹಗರಣದಿಂದ ನಲುಗುತ್ತಿರುವ ಘಟನೆ ವರದಿಯಾಗಿದ್ದು, ಪೋಲಿಸರು ಸಂತ್ರಸ್ತರಿಗೆ ರಕ್ಷಣೆ ಒದಗಿಸಿದ್ದಾರೆ.
೩೦೦ಕ್ಕೂ ಅಧಿಕ ಹಿಂದು ಕುಟುಂಬಗಳಿರುವ ಗ್ರಾಮಗಳಲ್ಲಿ ಸುಮಾರು ಐವತ್ತು ಕ್ರೈಸ್ತ ಕುಟುಂಬಗಳಿವೆ. ಅವರೆಲ್ಲಾ ಮುಂಚೆ ವಾಸಿಥ್ ಸಮುದಾಯಕ್ಕೆ ಸೇರಿದವರಾಗಿದ್ದರು. ಜನವರಿ ತಿಂಗಳಲ್ಲಿ ಸ್ಥಳೀಯ ಬಿಜೆಪಿ ಶಾಸಕ ರವೀಂದ್ರ ರೈನಾ, ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ೪೫ ಕುಟುಂಬಗಳು ಮತ್ತೆ ಹಿಂದುಗಳಾಗಿದ್ದು, ಅವರು ಮನೆಗೆ ಹಿಂತಿರುಗಿದ್ದಾರೆ ಎಂದು ಶಾಸಕರು ಹೇಳಿಕೊಂಡಿದ್ದಾರೆ.
ಕ್ರೈಸ್ತ ಧರ್ಮವನ್ನು ಬಿಟ್ಟುಕೊಡದ ಉಳಿದ ಕುಟುಂಬಗಳು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಿವೆ. ಹಿಂದುಗಳಾದವರು ಹರಿದ್ವಾರಕ್ಕೆ ಹೋಗಿ, ಯಜ್ಞಯಾಗಾದಿ ಮಾಡಿ, ಗಂಗಾನದಿಯಲ್ಲಿ ಮಿಂದು ಪರಿಶುದ್ಧರಾಗಿ ಬರಬೇಕೆಂದು ಆಗ್ರಹಿಸಲಾಗುತ್ತಿದೆ.
ಜನವರಿ ೧೫ ರಂದು, ಅದೇ ಮದುವೆಯಾಗಿದ್ದ ರಿಂಕುಕುಮಾರನ ಹೆಂಡತಿ ಸೀಮಾದೇವಿ ತೀರಿಕೊಂಡಾಗ, ರಿಂಕುಕುಮಾರ ಕ್ರೈಸ್ತ ವಿಧಿವಿಧಾನದಂತೆ ಶವಸಂಸ್ಕಾರಕ್ಕೆ ಮುಂದಾಗಿದ್ದ, ಆದರೆ ಊರಲ್ಲಿನ ಬಹುಸಂಖ್ಯಾತರು ಶವಕ್ಕೆ ಅಗ್ನಿಸಂಸ್ಕಾರ ಮಾಡಿದರು, ಜೊತೆಗೆ ಕ್ರೈಸ್ತ ಸಮಯದಾಯಕ್ಕೆ ಸೇರಿದವರ ಅಂಗಡಿ ಮುಗ್ಗಟುಗಳಿಗೆ ಬೆಂಕಿ ಹಚ್ಚಿದ್ದರು. ಅಷ್ಟಾದ ನಂತರ ಘರ ವಾಪಸಿ ಕಾರ್ಯಕ್ರಮ ನಡೆಸಲಾಗಿತ್ತು. ಈಗ ಎಲ್ಲವೂ ಶಾಂತವಾಗಿದೆ ಎಂಬುದು ಬಿಜೆಪಿ ಶಾಸಕರ ಹೇಳಿಕೆಯಾಗಿದೆ.


ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...