Friday, 13 March 2020

ಇನ್ನೊಂದು ಪ್ರಯೋಗ ಮಾಡಬೇಕೆಂಬ ಆಸೆ ಮೊಳಕೆಯೊಡೆಯುತ್ತಿದೆ....

ಪ್ರೀತಿಯ ಅನುಗೆ, ಸ್ನೇಹಾಂಜಲಿ.
ಮೊನ್ನೆ ಮರಿಯಾಪುರದಲ್ಲಿ ಪ್ರತಿವರ್ಷ ನಡೆಯುವ ಧ್ವನಿಬೆಳಕಿನ ಕಾರ್ಯಕ್ರಮದ ಆಮಂತ್ರದ ಪತ್ರಿಕೆಯನ್ನು ನೋಡುತ್ತಿದ್ದಂತೆ ನನ್ನ ಮನಸ್ಸು ಸುಮಾರು 8 ವರ್ಷಗಳ ಹಿಂದೆ ನಾನು ನಿರ್ದೇಶಿಸಿದ ಕಡಿಮೆ ಬಜೆಟ್ಟಿನ ಮತ್ತು ಅಲ್ಪ ಅವಧಿಯ ಧ್ವನಿ ಬೆಳಕಿನ ಕಾರ್ಯಕ್ರಮದ ಕಡೆ ಜಾರಿತ್ತು. ಕಾರ್ಯಕ್ತಮ ಮುಗಿದ ನಂತರ ಮೂಡಿದ ಸುಮಧುರ ನೆನಪುಗಳನ್ನು ಗುಡ್ಡೆ ಮಾಡಿ ಕೈಗೆ ಕೊಟ್ಟು ಇದನ್ನು ನಿನಗಾಗಿ ಬರೆಸಿತ್ತು. ಬರವಣಿಗೆಯಲ್ಲಿ exಣಡಿಚಿoಡಿಜiಟಿಚಿಡಿಥಿ ಅಂತೂ ಏನು ಇಲ್ಲ. ಆದರೂ ನೀನು ಓದಿಕೊಂಡು ಸ್ವಲ್ಪ ಖುಷಿಪಡಬಹುದೆಂಬ ನಂಬಿಕೆಯಿಂದ ನಿನಗೆ ಬರೆಯುತ್ತಿದ್ದೇನೆ.  
ಕಾರ್ಯಕ್ರಮ ಆಗಷೇ ಮುಗಿದಿತ್ತು. ಎಲ್ಲವೂ ಮುಗಿಯಿತ್ತು ಎಂದು ನನ್ನ ಮನಸ್ಸು ನಿಟ್ಟುಸಿರುಗರೆಯುತ್ತಾ ಕೂಗಿಕೊಳ್ಳುತ್ತಿದೆ. ಒಂದು ತಿಂಗಳ ಒಡಾಟ, ಕಾದಾಟ, ಕರ್ಷಕತೆಗಳಿಗೆ, ಅವಿರತ ತಾಲೀಮಿಗೆ ತೆರೆ ಬಿದ್ದಿದೆ. ನಿರಾಳದ ಜತೆಗೆ ಒಂದು ರೀತಿಯ ಖುಷಿ, ಸಂತೃಪ್ತಿ ನನ್ನನ್ನು ತುಂಬಿಕೊಂಡಿದೆ. ಭಯ ಮತ್ತು ಡೋಲಾಯಮಾನದ ಮನಸ್ಸಿನಿಂದ ಕೈಗೆತ್ತಿಕೊಂಡಿದ್ದ, ‘ಚೆನ್ನಾಗಿ ಮೂಡಿ ಬರುತ್ತದೆಯೋ ಇಲ್ಲವೋ?’ ಎಂಬ ಅನಿಶ್ಚಿತ ಮನಸ್ಸಿನಿಂದ ಕೈಹಿಡಿದಿದ್ದ ಪ್ರಾಜೆಕ್ಟ್ ಜನರ ನಿರೀಕ್ಷೆಗೂ ಮೀರಿ ಅಂದವಾಗಿ ಮೂಡಿಬಂದಿದೆ. ಇದು ನಾನು ಹೇಳಿತ್ತಿರುವ ಮಾತಲ್ಲ. ಕಾರ್ಯಕ್ರಮವನ್ನು ತದೇಕಚಿತ್ತದಿಂದ ವೀಕ್ಷಿಸಿದ್ದ ಜನರು ನನಗೆ ಖುದ್ದಾಗಿ ಹೇಳಿದ ಪ್ರತ್ಯಾದಾನದ ಮಾತಿದ್ದು. ಹೌದು, ಯಾರ ಪ್ರೇರಣೆಯೋ ಏನೋ ಕ್ರಿಸ್ತನ ಬದುಕಿಗೆ ಕನ್ನಡಿಯಿಡಿಯುವ ಒಂದು ಧ್ವನಿ ಬೆಳಕಿನ ಕಾರ್ಯಕ್ರಮ ಮಾಡೇ ತೀರಬೇಕೆಂಬ ಆಸೆ ನನ್ನಲ್ಲಿ ಮೂಡಿತ್ತು. ಪಾಸ್ಖ ಆಚರಣೆಗೆ ಸುಮಾರು ಒಂದು ಸಾವಿರದಷ್ಟು ಸೇರುವ ಜನರಿಗೆ ಕ್ರಿಸ್ತನ ಬದುಕನ್ನು ಮರುಕಳಿಸುವ ಒಂದು ಕಾರ್ಯಕ್ರಮ ಅವಶ್ಯಕತೆಯೂ ಇತ್ತು. ಆ ಅಸೆಯ ಬಳ್ಳಿಗೆ ಮರವಾಗಿದ್ದು ನಮ್ಮಕೈಗೆಟುಕುವಂತ್ತಿದ್ದ ಕೆಲ ಸವಲತ್ತುಗಳು. ಕಾರ್ಯಕ್ರಮಕ್ಕೆ ಬೇಕಾಗಿದ್ದ ಸಹಜ ಪರಿಸರ, ಹೇಳಿ ಮಾಡಿಸಿದಂತಿದ್ದ ಮಂಟಪ, ಆವರಣ, ಮೈದಾನ, ಜನರೇಟರು, ಗಣಕಯಂತ್ರ ಹೀಗೆ ಸಲಕರಣೆ, ಸಾಧನಸಾಮಾಗ್ರಿಗಳು ನಮ್ಮಲ್ಲಿದ್ದವು. ಸಾಲದಕ್ಕೆ, ಸುಮಾರು 110 ನಮ್ಮ ವಸತಿನಿಲಯ ವಿದ್ಯಾರ್ಥಿಗಳ ಉತ್ತೇಜನವಿತ್ತು. ಇಷ್ಟೆಲ್ಲಾ ಸವಲತ್ತುಗಳಿದ್ದರೂ ಕನಸ್ಸನ್ನು ನನಸಾಗಿಸುವ ಕಾರ್ಯದ ನಡೆ ಮಾತ್ರ ಅಪನಂಬಿಕೆಯಿಂದಲೇ ಪ್ರಾರಂಭಗೊಂಡಿತ್ತು. ಧ್ವನಿಬೆಳಕಿನ ಜೀವಾಳ ಸೌಂಡ್ ಮತ್ತು ಲೈಟಿಂಗ್ ವ್ಯವಸ್ಥೆಯನ್ನು ಎಲ್ಲಿಂದ ತರುವುದು? ಅವುಗಳ ಬಾಡಿಗೆ ಹಣವನ್ನು ಎಲ್ಲಿಂದ ಬರಿಸೋದು? ನಗರದಿಂದ ಸುಮಾರು 35 ಕಿ.ಮೀ ದೂರವಿರುವ ನಮ್ಮ ಕೊಂಪೆಗೆ ಸೇರಬೇಕಂದ್ರೆ ಬರೋಬರಿ 4 ಗಂಟೆಗಳು ಬೇಕು. ಅಷ್ಟು ಕೆಟ್ಟದಾಗಿದ್ದ ರಸ್ತೆಯಲ್ಲಿ ಯಾವ ಭೂಪ ನಮ್ಮ ಹಳ್ಳಿಗೆ ಬರಲು ಒಪ್ಪುವ? ಜತೆಗೆ ನಮ್ಮ ವಿದ್ಯಾರ್ಥಿಗಳಿಗೆ ಧ್ವನಿ ಬೆಳಕಿನ ಬಗ್ಗೆ ಮಾಹಿತಿಯಿರಲಿಲ್ಲ. ಧ್ವನಿ ಬೆಳಕಿನ ಬಗ್ಗೆ ಅವರಿಗೆ ಅರ್ಥಮಾಡಲು ಒಂದು ವಾರವೇ ಬೇಕಾಯ್ತು. ಕೆಲವರಂತೂ ಕಾರ್ಯಕ್ರಮ ಸಾಧ್ಯತೆಯ ಬಗ್ಗೆ ಶಂಕಿಸಿ ‘ಇದು ಅಸಾಧ್ಯದ ಮಾತು’ ಎಂದು ಕಾರ್ಯಕ್ರಮದಿಂದ ದೂರಸರಿದರು. ಅಷ್ಟು ಮಾತ್ರವಲ್ಲ, ತೀವ್ರವಾಗಿದ್ದ ಹಣದ ತೊಡಕು ಬೇರೆ. ಹೀಗೆ ಅನೇಕ ಅನುಕೂಲತೆ ಮತ್ತು ಅನಾನುಕೂಲತೆಗಳ ನಡುವೆ ನಮ್ಮ ಅಭ್ಯಾಸ ಪ್ರಾರಂಭವಾಯ್ತು. ಶಿಲಾಂಗ್ಗೆ ಹೋಗಿ ಸೌಂಡ್ ಮತ್ತು ಲೈಟಿಂಗ್ ಬಗ್ಗೆ ವಿಚಾರಿಸಿದೆ. ಸೌಂಡ್ ಮತ್ತು ಲೈಟಿಂಗ್ ವ್ಯವಸ್ಥೆಗಳ ಉಸ್ತುವರಿ ನೋಡಿಕೊಳ್ಳಲು ಒಪ್ಪಿದ ಮನುಷ್ಯ ಮಾವೈತ್ ಎಂಬ ಹಳ್ಳಿಯ ಹೆಸರನ್ನು ಕೇಳಿದಾಕ್ಷಣ ನನ್ನ ಮೊಬೈಲ್ ಕರೆಯನ್ನು ಸ್ವೀಕರಿಸುವುದೇ ನಿಲ್ಲಿಸಿಬಿಟ್ಟ.
ಇಂದು ಕಾರ್ಯಕ್ರಮ ಮುಗಿದಿದೆ. ಜನರ ನೀರಿಕ್ಷೆ ಮೀರಿದ ಪ್ರದರ್ಶನ ನಮ್ಮ ಹುಡುಗರಿಂದ ಮೂಡಿಬಂದಿದೆ. ಕಂಡಾರಿಯದ ಹೊಸ ಪ್ರಯೋಗವನ್ನು ನೋಡಿ ಸ್ಥಳೀಯರು ಮೂಕವಿಸ್ಮಿತರಾಗಿದ್ದಾರೆ. ನಮ್ಮ ನಿರ್ಮಾಪಕರು ಈ ರೀತಿಯ ಕಾರ್ಯಕ್ರಮವನ್ನು ಪ್ರತಿ ವರ್ಷ ಮಾಡಬೇಕೆಂದು ಆಗಾಗ ಹೇಳುತ್ತಿದ್ದಾರೆ. ನಮ್ಮ ಮನೆಗೆ ಬಂದಿರುವ ಫಾ. ಅರುಳ್ ಇನ್ನೀತರ ಸ್ಥಳಗಳಲ್ಲೂ ಪ್ರದರ್ಶನ ನೀಡಬಹುದೆಂಬ ಸಲಹೆ ನೀಡುತ್ತಿದ್ದಾರೆ. ಊರಿನ ಜನರು ಮತ್ತೊಂದು ಪ್ರದರ್ಶನಕ್ಕೆ ದಂಬಲು ಬಿದ್ದಿದಾರೆ. ನಾಟಕ ತಾಲೀಮಿನ ಮಧ್ಯೆ, ಕೈಕೊಟ್ಟು ಓಡಿ ಹೋದವರು ಶೋ ನೋಡಿದ ನಂತರ ನಾವು ಕೂಡ ನಾಟಕದಲ್ಲಿ ಭಾಗವಹಿಸಬೇಕಿತ್ತು ಎಂಬ ವಿಷಾದದ ಮಾತುಗಳನ್ನಾಡುತ್ತಿದ್ದಾರೆ. ಧ್ವನಿಬೆಳಕಿನ ಕಾರ್ಯಕ್ರಮದ ಬಗೆಗಿನ ನನ್ನ ಅರಿವು ಹಿಮ್ಮಡಿಯಾಗಿದೆ. ದೊಡ್ಡ ಮೇಷ್ಟ್ರುವೆಂಬ ಅಗಾಧ ಪ್ರತಿಭೆ ನನ್ನ ಪರಕಾಯ ಪ್ರವೇಶ ಮಾಡಿ ಮಾವೈತ್ ಎಂಬ ಕೊಂಪೆಯಲ್ಲಿ ಜೀವಂತವಾಗಿಬಿಟ್ಟಿದ್ದರು ಎಂದು ನನ್ನ ಮನಸ್ಸು ಹೇಳುತ್ತಿದೆ. 
ಕೊನೆಗೆ ಹೇಳುವುದಿಷ್ಟೇ. ಇದು ನನಗಾದ ಪಾಸ್ಖ ಅನುಭವ. ಅಸಾಧ್ಯವಾಗಿದ್ದು ಸಾಧ್ಯವಾದ ಪುನರುತ್ಥಾನದ ಅನುಭವ. ಈ ಅನುಭವಕ್ಕೆ ಅನು ಮಾಡಿಕೊಟ್ಟ ಪ್ರತಿಯೊಬ್ಬರು; ನಮ್ಮ ವಸತಿನಿಲಯದ ಹುಡುಗ ಹುಡಿಗಿಯರು, ಬೆನ್ನೆಲುಬಾಗಿ ನಿಂತ ಆತ್ಮೀಯ ಪೌಲ್ ಮತ್ತು ಜೂಜೆಯವರು, ಲೈಟಿಂಗ್ ಬಗ್ಗೆ  ಪೆÇೀನ್ ಮೂಲಕ ಆಗಾಗ ಸಲಹೆ ಸೂಚನೆಗಳನ್ನು ನೀಡುತ್ತಿದ್ದ ನನ್ನ ಚಿಕ್ಕಪ್ಪ ಚಿನ್ನರವರು, ನಿರ್ಮಾಪಕ ಫಾ. ರಾಬರ್ಟ ಹಾಗು ಫಾ. ಗೆಬ್ರಿಯಲ್, ಸಿಸ್ಟರ್. ನತಲಿಸ್‍ರವರು, ಕಾರ್ಯಕ್ರಮವನ್ನು ಕಂಡು ನನ್ನ ಬೆನ್ನು ತಟ್ಟಿದವರು, ಬೆರಗು ಕಣ್ಣುಗಳಿಂದ  ಕ್ರಿಸ್ತನ ಮಹಿಮೆಯನ್ನು ವೀಕ್ಷಿಸಿದ್ದ ಮಾವೈತ್ ಜನರು ನನ್ನಲ್ಲಿ ಆಗಾಗ ಜೀವಂತಗೊಳ್ಳುತ್ತಿರುತ್ತಾರೆ.
ಈ ರೀತಿಯ ಇನ್ನೊಂದು ಪ್ರಯೋಗ ಮಾಡಬೇಕೆಂಬ ಆಸೆ ಮೊಳಕೆಯೊಡೆಯುತ್ತಿದೆ. ಕಾಲ ಕೂಡಿ ಬಂದಾಗ ಖಂಡಿತವಾಗಿಯೂ  ಪ್ರಯತ್ನಿಸಿ ಪ್ರಯೋಗದ ಬಗ್ಗೆ ವಿವರವಾದ ವಿಸ್ತೃತ ಅನುಭಾವವನ್ನು ನಿನ್ನ ಮುಂದೆ ಖಂಡಿತವಾಗಿಯೂ  ಇಡುತ್ತೇನೆ, 
ಧನ್ಯವಾದಗಳು
ಇಂತಿ ನಿನ್ನವ
ಆನಂದ್

ಭಾರತದಲ್ಲಿ ಧರ್ಮಸಭೆಯ ಪಾತ್ರ: ಭಾರತದ ಕಥೋಲಿಕ ಬಿಷಪ್ಪರುಗಳಿಗೆ ಒಂದು ಬಹಿರಂಗ ಪತ್ರ


ಫಾದರ್ ಸೆಡ್ರಿಕ್ ಪ್ರಕಾಶ್, ಎಸ್‍ಜೆ
ಕನ್ನಡಕ್ಕೆ: ಅಜಯ್ ರಾಜ್

 ಪ್ರೀತಿಯ ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳೇ,

ನಿಮ್ಮ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ)ನ ದ್ವಿವಾರ್ಷಿಕ ಸಾಮಾನ್ಯ ಸಭೆಗಾಗಿ ಇಂದು (ಫೆಬ್ರವರಿ 12) ನೀವು ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಒಟ್ಟಾಗಿ ಸೇರಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ನಾನು ಶುಭಾಶಯಗಳನ್ನು ಕೋರುತ್ತೇನೆ.  ಸಾಕಷ್ಟು ವಿವೇಚನೆ ಹಾಗೂ ಹಲವರಲ್ಲಿ ಚರ್ಚಿಸಿ ನಾನು ನಿಮಗೆ (ಪ್ರತಿಯೊಬ್ಬರಿಗೂ) ಈ ಪತ್ರವನ್ನು ಬರೆಯುತ್ತಿದ್ದೇನೆ. ಇದು ಅಷ್ಟು ಸುಲಭವಲ್ಲ. ಆದರೂ ಇಲ್ಲಿ ನಾನು ಸಂಕ್ಷಿಪ್ತವಾಗಿ ಹಾಗೂ ಸವಿಸ್ತಾರವಾಗಿ ಬರೆಯುತ್ತಿದ್ದೇನೆ.
 ನಲ್ಮೆಯ ಬಿಷಪ್ಪರುಗಳೇ, ಈ ನಿಮ್ಮ ಭೇಟಿಯು ನಮ್ಮ ದೇಶ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ಅತಿ ಸೂಕ್ಷ್ಮ ಹಾಗೂ ನಿರ್ಣಾಯಕ ಹಂತದಲ್ಲಿರುವ ಸಂದರ್ಭದಲ್ಲಿ ನಡೆಯುತ್ತಿದೆ. ತನ್ನ ಪ್ರತಿಯೊಂದು ರಂಗದಲ್ಲೂ ಭಾರತವು ಎಂದಿಗೂ ಇಷ್ಟು ಕೆಟ್ಟದಾಗಿರಲಿಲ್ಲ. ನಮಗೆ ಅಮೂಲ್ಯವಾಗಿರುವ ಪ್ರಜಾಪ್ರಭುತ್ವ ನಾಶವಾಗುತ್ತಿದೆ. ನಮ್ಮ ಸಂವಿಧಾನ ಹಾಗೂ ಅದರ ಆಶಯಗಳನ್ನು ಹಂತ ಹಂತವಾಗಿ ನಿರಾಕರಿಸಲಾಗುತ್ತಿದೆ. ಇದೆಲ್ಲದಕ್ಕಿಂತ ಮಿಗಿಲಾಗಿ ನಮ್ಮ ದೇಶದ ಗುರುತಾಗಿರುವ ವೈವಿಧ್ಯತೆ ಹಾಗೂ ಬಹುಸಂಸ್ಕøತಿ ಎಳೆಯನ್ನು ನಾಶಮಾಡಲಾಗುತ್ತಿದೆ. ನಮ್ಮ ದೇಶದ ಲಕ್ಷಾಂತರ ಜನರು, ಗಂಡಸರು ಹಾಗೂ ಹೆಂಗಸರೂ ಸೇರಿದಂತೆ ಎಲ್ಲರೂ ಬೀದಿಗಿಳಿದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೊಂದಣಿ (ಎನ್ ಆರ್ ಸಿ), ಹಾಗೂ ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್‍ಪಿಆರ್) ಅನ್ನು ವಿರೋಧಿಸುತ್ತಿರುವುದು ನಾವು ಈ ದೇಶದ ನಾಗರೀಕರಾಗಿ ಕೊನೆಯಿರದ ಪ್ರಪಾತಕ್ಕೆ ತಳ್ಳಲ್ಪಟ್ಟಿದ್ದೇವೆ ಎಂಬುದನ್ನು ಸೂಚಿಸುತ್ತದೆ.
 ಪ್ರೀತಿಯ ಬಿಷಪ್ಪರುಗಳೇ, ಇಂದಿನ ವಾಸ್ತವತೆಯ ಹಿನ್ನೆಲೆಯಲ್ಲಿ ನಾನು ಈ ಹಿಂದೆ ನಡೆದ ನಿಮ್ಮ ಸಭೆಗಳ ಹೇಳಿಕೆಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ. 2018ರಲ್ಲಿ ನಿಮ್ಮ ಸಾಮಾನ್ಯ ಸಭೆಯ ಶೀರ್ಷಿಕೆ ‘ಕರುಣೆ ಮತ್ತು ಸಾಕ್ಷಿಯ ಸೇವಾಕಾರ್ಯಕ್ಕಾಗಿ ವಿವಿಧತೆಯಲ್ಲಿ ಒಂದಾಗಿರುವುದು: ಇಗೋ ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ (ಮತ್ತಾಯ 28:20)’ ಆಧಾರದ ಮೇಲೆ ನೀವು ನೀಡಿದ ಹೇಳಿಕೆಗಳನ್ನು ಇಲ್ಲಿ ಪುನರುಚ್ಛರಿಸ ಬಯಸುತ್ತೇನೆ.

ಯಾವುದೇ ಒಂದು ನಿರ್ದಿಷ್ಟ ಸಂಸ್ಕøತಿ ಅಥವಾ ಧರ್ಮದ ಆಧಾರದ ಮೇಲೆ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವುದು ಒಂದು ಅತ್ಯಂತ ಅಪಾಯಕಾರಿ ನಡೆ. ಇದು ತಾತ್ಕಾಲಿಕ ಒಗ್ಗಟ್ಟನ್ನು ಮೂಡಿಸುವ ಭ್ರಮೆಯನ್ನು ಹುಟ್ಟುಹಾಕುತ್ತಾದರೂ ಎಂದಿಗೂ ನೈಜ ಒಗ್ಗಟ್ಟನ್ನು ಮೂಡಿಸುವುದಿಲ್ಲ. ಇಂತಹ ವ್ಯರ್ಥ ಪ್ರಯತ್ನಗಳು ನಮ್ಮ ದೇಶವನ್ನು ವಿನಾಶದ ಹಾದಿಗೆ ಕೊಂಡೊಯ್ಯುತ್ತವೆ. ಬಹುಸಂಸ್ಕøತಿ, ವೈವಿಧ್ಯತೆ ಹಾಗೂ ಹಲವಾರು ಧರ್ಮಗಳ ತಾಣವಾಗಿರುವ ನಮ್ಮ ಭಾರತ ದೇಶದಲ್ಲಿ ಶಾಂತಿ, ಬೆಳವಣಿಗೆ ಹಾಗೂ ಅಭಿವೃದ್ದಿಗೆ ಏಕ ಸಂಸ್ಕøತಿ ಎನ್ನುವುದು ಎಂದಿಗೂ ಸರಿಯಾದ ಉತ್ತರವಾಗುವುದಿಲ್ಲ. ಇಂದು ಅಥವಾ ನಾಳೆ ಹಿಂಸೆ ಹಿಂಸೆಯನ್ನೇ ಪ್ರತಿಪಾದಿಸುತ್ತದೆ... ನಮ್ಮ ದೇಶದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಚಾರ, ದಲಿತರ ಕೊಲೆ ಹಾಗೂ ಅವರ ಮೇಲಿನ ಹಿಂಸಾಚಾರಗಳು ಹಾಗೂ ಕ್ರೈಸ್ತ ಚರ್ಚುಗಳು ಹಾಗೂ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ತೀವ್ರವಾಗಿ ಖಂಡಿಸುತ್ತೇವೆ... ನಿಜವಾದ ರಾಷ್ಟ್ರೀಯತೆ ಹಾಗೂ ದೇಶಪ್ರೇಮ ಈ ದೇಶದ ನಾಗರೀಕರ ಘನತೆಯನ್ನು ಅವರ ಧರ್ಮ, ಸಂಸ್ಕøತಿ, ಭಾಷೆ, ಜಾತಿ ಹಾಗೂ ಆರ್ಥಿಕ ಸ್ಥಿತಿಯ ಹೊರತಾಗಿಯೂ ಗೌರವಿಸುತ್ತದೆ.
 2014ರ ಸಭೆಯಲ್ಲಿ ನೀವು ಭಾರತದಲ್ಲಿ ಅತಿ ದೊಡ್ಡ ಸಮಸ್ಯೆಗಳಲ್ಲೊಂದಾದ ಭ್ರಷ್ಟಾಚಾರದ ಕುರಿತು ಚರ್ಚಿಸಿದಿರಿ ಹಾಗೂ ಭ್ರಷ್ಟಚಾರವನ್ನು ನಿಗ್ರಹಿಸುವ ಹಾಗೂ ತೊಡೆದುಹಾಕುವ ನಿಟ್ಟಿನಲ್ಲಿ ನಮ್ಮ ಚರ್ಚುಗಳು ಹಾಗೂ ಸಂಸ್ಥೆಗಳು ಮಾದರಿಯಾಗಿರಬೇಕು ಎಂದು ಹೇಳಿದಿರಿ.
2012ರ ಬೆಂಗಳೂರಿನ ಸಭೆಯಲ್ಲಿ ಮಾತನಾಡಿ ನಮ್ಮ ಸಂವಿಧಾನ, ನಮ್ಮ ದೇಶದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ ಹಾಗೂ ಈ ದೇಶವನ್ನು ಉತ್ತಮ ದೇಶವನ್ನಾಗಿಸುವಲ್ಲಿ ನಮ್ಮ ಕೊಡುಗೆಗಳ ಕುರಿತು ಚರ್ಚಿಸಿದಿರಿ. ಧರ್ಮಸಭೆ ಬಡವರ ಪರವಾಗಿ ಕೆಲಸ ಮಾಡುತ್ತದೆ ಹಾಗೂ ಈ ನಿಟ್ಟಿನಲ್ಲಿ ನಾವು ಸದಾ ಕಾರ್ಯಪ್ರವೃತ್ತರಾಗಿದ್ದೇವೆ ಎಂಬುದನ್ನು ನೀವು ಪುನರುಚ್ಚರಿಸಿದಿರಿ.
 ಪ್ರೀತಿಯ ಬಿಷಪ್ಪರುಗಳೇ, ದಯವಿಟ್ಟು ಈ ನಿಮ್ಮ ಮಾತುಗಳನ್ನು ಮತ್ತೊಮ್ಮೆ ಜ್ಞಾಪಿಸಿಕೊಳ್ಳಿ. ಅದೇಗೆ ನೀವು 2012 ಮತ್ತು 2014ರಲ್ಲಿ ನಮ್ಮ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ನೇರ ಹಾಗೂ ದಿಟ್ಟವಾಗಿ ಚರ್ಚಿಸಿದ ನೀವು, 2016 ಮತ್ತು 2018 ರಲ್ಲಿ ಯಾಕೆ ಮೌನಕ್ಕೆ ಜಾರಿದಿರಿ? ಅಂದು ನೀವು ಮಾತನಾಡಿದ ವಿಷಯಗಳು ಕಾರ್ಯರೂಪಕ್ಕೆ ಬಂದಿವೆಯೋ ಅಥವಾ ಇಲ್ಲವೋ ಎಂಬುದನ್ನು ನೀವು ಪರಿಶೀಲಿಸುತ್ತಿಲ್ಲ ಏಕೆ?
 ಪ್ರೀತಿಯ ಬಿಷಪ್ಪರುಗಳೇ, ನಿಮ್ಮ ಈ ಸಭೆಯ ಶೀರ್ಷಿಕೆ ‘ಸಂಭಾಷಣೆ.’ ಎನ್ನುವುದು ಪ್ರಶಂಸನೀಯ. ಆದರೆ ಇದು ಯಾರೊಂದಿಗಿನ ಸಂಭಾಷಣೆ ಎನ್ನುವುದು ತಿಳಿಯುತ್ತಿಲ್ಲ. ಸಂಭಾಷಣೆ ಎಂದರೆ ಅದು ಎರಡು ವ್ಯಕ್ತಿಗಳು ಪರಸ್ಪರ ಮಾತನಾಡಲು ಒಪ್ಪಿಕೊಂಡ ಮೇಲೆ ನಡೆಯುವ ಒಂದು ಕ್ರಿಯೆ. ಒಬ್ಬ ವ್ಯಕ್ತಿ ಮತ್ತೊಬ್ಬನಿಗಿಂತ ತಾನು ಮೇಲಿದ್ದೇನೆ ಎಂದು ಕೊಂಡರೆ ಅಲ್ಲಿ ಯಾವುದೇ ರೀತಿಯ ಸಂಭಾಷಣೆ ಸಾಧ್ಯವಾಗುವುದಿಲ್ಲ.
ಉದಾಹರಣೆಗೆ, ಇಬ್ಬರ ಸಂಭಾಷಣೆಯಲ್ಲಿ ಒಬ್ಬನು ಸಂವಿಧಾನದ ಕುರಿತು ಮಾತನಾಡುತ್ತಿರುತ್ತಾನೆ ಅಂತಿಟ್ಟುಕೊಳ್ಳಿ. ಈ ಇಬ್ಬರೂ ಸಹ ಸಂವಿಧಾನದ ಮೂಲ ಆಶಯ, ಅದರ ಪ್ರಜಾಸತ್ತಾತ್ಮಕ ಮೌಲ್ಯಗಳು, ಜಾತ್ಯಾತೀತತೆ ಹಾಗೂ ವೈವಿಧ್ಯತೆಯ ಕುರಿತು ಮರು ಮಾತನಾಡದೆ ಒಪ್ಪಿಕೊಳ್ಳುತ್ತಾರೆಯೇ? ಸಂವಿಧಾನದ ಅನುಚ್ಛೇದ 19ರ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಅನುಚ್ಛೇದ 25 ರಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಆರೋಗ್ಯದಾಯಕ ಪ್ರಜಾಪ್ರಭುತ್ವಕ್ಕೆ ಅತ್ಯವಶ್ಯಕ ಎಂಬುದನ್ನು ನಿರ್ವಿವಾದವಾಗಿ ಒಪ್ಪಿಕೊಳ್ಳುತ್ತಾರೆಯೇ? ಹೌದು, ಸಂಭಾಷಣೆ ಮುಖ್ಯ. ಆದರೆ ಒಬ್ಬನ್ನು ಮತ್ತೊಬ್ಬನನ್ನು ಕಡೆಗಣಿಸಿ, ಅಥವಾ ತನ್ನ ನಂಬಿಕೆಗಳನ್ನು ಬಲವಂತವಾಗಿ ಮತ್ತೊಬ್ಬನ ಮೇಲೆ ಹೇರಿದಾಗ ಅಲ್ಲಿ ಸಂಭಾಷಣೆ ಎನ್ನುವುದು ಇರುವುದೇ ಇಲ್ಲ. ಪ್ರಭು ಯೇಸುಕ್ರಿಸ್ತರು ತಮ್ಮ ಸಾರ್ವಜನಿಕ ಜೀವನದುದ್ದಕ್ಕೂ ಬಡವರ, ಶೋಷಿತರ, ನೊಂದವರ ಹಾಗೂ ಸಮಾಜದ ಮುಖ್ಯವಾಹಿನಿಯಿಂದ ತಿರಸ್ಕರಿಸಲ್ಪಟ್ಟವರ ಪರವಾಗಿ ನಿಂತರು. ಬಡವರನ್ನು ನಿರಂತರವಾಗಿ ಶೋಷಿಸಿ ಅವರ ಮೇಲೆ ‘ಭಾರ ಹೋರಿಸುವವರನ್ನು’ ಕಟುವಾಗಿ ಟೀಕಿಸಿದರು. ಕ್ರಿಸ್ತರು ಫರಿಸಾಯರ, ಧರ್ಮಶಾಸ್ತ್ರಿಗಳು, ಪಿಲಾತ - ಹೆರೋದರೊಂದಿಗೆ ಸಂಭಾಷಣೆ ನಡೆಸಲು (ಅವರನ್ನು ಶೋಧಿಸಲು ಬಂದ ಸೈತಾನನೊಂದಿಗೂ ಸಹ) ಒಪ್ಪಲಿಲ್ಲ.

ನಲ್ಮೆಯ ಬಿಷಪ್ಪರುಗಳೇ, ನಮ್ಮ ದೇಶದಲ್ಲಿ ಲಕ್ಷಾಂತರ ಸಹೋದರ ಸಹೋದರಿಯರು ಮಾನವೀಯ, ನ್ಯಾಯಯುತ ಹಾಗೂ ಸಮ ಸಮಾಜದ ನಿರ್ಮಾಣಕ್ಕಾಗಿ ಪರಿತಪಿಸುತ್ತಿದ್ದಾರೆ. ಅವರು ಅಳುತ್ತಿದ್ದಾರೆ ಏಕೆಂದರೆ ಸರ್ಕಾರದ ವಿಭಜಕ, ತಾರತಮ್ಯದಿಂದ ಕೂಡಿದ ಕಠೋರ ಕಾನೂನುಗಳು ಅವರ ನಾಗರೀಕತ್ವವನ್ನು ಪ್ರಶ್ನಿಸುತ್ತಿವೆ. ಅವರ ಧರ್ಮ ಹಾಗೂ ವಿಶ್ವಾಸವನ್ನು ಪ್ರಶ್ನಿಸಲಾಗುತ್ತಿದೆ. ಅವರು ಬಡವರು ಹಾಗೂ ಅಶಕ್ತರಾಗಿದ್ದಾರೆ; ಅವರು ಅಳುತ್ತಿದ್ದಾರೆ ಏಕೆಂದರೆ ಅವರು   ದಲಿತರು, ಆದಿವಾಸಿಗಳು, ಹೆಂಗಸರು, ಮಕ್ಕಳು, ನತದೃಷ್ಟ ರೈತರು ಹಾಗೂ ನಿರುದ್ಯೋಗಿ ಯುವಕ ಯುವತಿಯರಾಗಿದ್ದಾರೆ. ಅವರು ಅಳುತ್ತಿದ್ದಾರೆ ಏಕೆಂದರೆ ಅವರ ಕಷ್ಟಗಳನ್ನು ಕೇಳುವವರು ಬೇಕೆಂದು, ಅವರೊಂದಿಗೆ ಸಂಭಾಷಿಸಬೇಕೆಂದು ಹಾಗೂ ಅವರ ಜೊತೆಯಲ್ಲಿ ನಡೆಯಬೇಕೆಂದು.
 ಪ್ರೀತಿಯ ಬಿಷಪ್ಪರುಗಳೇ, ಭಾರತದ ಧರ್ಮಸಭೆಯಾಗಿ ನಾವು ಇಂದು ಎಲ್ಲಿ ನಿಂತಿದ್ದೇವೆ? ಕೆಲವು ಬಿಷಪ್ಪರುಗಳು ಬಹಿರಂಗವಾಗಿ, ಪ್ರತಿಭಟನೆಗಳಲ್ಲಿ ಪಾಲ್ಗೊಂಡು ವಿವಾದಾತ್ಮಕ ಸಿಎಎ ಕಾನೂನನ್ನು ಕಠಿಣ ಶಬ್ಧಗಳಲ್ಲಿ ವಿರೋಧಿಸಿ, ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಈ ಕಾನೂನಿನ ವಿರುದ್ದ ಭಾರತದಾದ್ಯಂತ ಹಲವಾರು ಗುರುಗಳು, ಕನ್ಯಾಸ್ತ್ರೀಯರು ಹಾಗೂ ಧಾರ್ಮಿಕ ಸಹೋದರ ಸಹೋದರಿಯರು ಪ್ರತಿಭಟನಾ ರ್ಯಾಲಿಗಳನ್ನು ಆಯೋಜಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇವೆಲ್ಲವೂ ಹೃದಯಸ್ಪರ್ಶಿಯಾಗಿವೆ ಹಾಗೂ ನಮ್ಮ ಪ್ರಭುವಿನ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಬಹಳ ಪೂರಕವಾಗಿದೆ.
ಆದರೆ, ಪ್ರೀತಿಯ ಬಿಷಪ್ಪರುಗಳೇ, ಇದು ಸಾಕಾಗುವುದಿಲ್ಲ. ಇದು ಸಾಗರದಲ್ಲಿ ಒಂದು ಹನಿ ಮಾತ್ರ. ನಾವೆಲ್ಲರೂ ಇದಕ್ಕಿಂತ ಜಾಸ್ತಿ ಒಟ್ಟಾಗಿ ಹಾಗೂ ತುರ್ತಾಗಿ ಮಾಡಬೇಕಿದೆ. ನಾವು ಈ ದಿಸೆಯಲ್ಲಿ ಮುಂದುವರೆಯುವುದನ್ನು ತಡೆಯಲು ಅನೇಕ ಕಾರಣಗಳು ಅಡ್ಡಿಯಾಗುತ್ತವೆ. ಈ ವಿಷಯವನ್ನು ಮಾತನಾಡುವಾಗ ಈ ಕಾರಣಗಳು ನಮ್ಮನ್ನು ಬಹಳಷ್ಟು 
‘ಡಿಪೆÇ್ಲಮೆಟಿಕ್’ ಹಾಗೂ ‘ಹುಷಾರಾಗಿ’ ಇರುವಂತೆ ಪ್ರೇರೇಪಿಸುತ್ತವೆ. ಭಯ, ನಿರ್ಲಕ್ಷ್ಯ ಹಾಗೂ ಪ್ರತ್ಯೇಕತೆಯೇ ಈ ಕಾರಣಗಳು. ಇವೆಲ್ಲವೂ ಪಾಪಮಯ ಹಾಗೂ ನಮ್ಮ ಪ್ರಭುಕ್ರಿಸ್ತರ ಭೋದನೆಗಳಿಗೆ ವಿರುಧ್ಧವಾಗಿವೆ. ಯೇಸು ನಮಗೆ ಹೇಳುವುದೇನೆಂದರೆ ‘ಭಯಪಡಬೇಡಿ; ನಾನು ನಿಮ್ಮೊಂದಿಗೆ ಇದ್ದೇನೆ,’
ಆಳುವವರು ನಮ್ಮನ್ನು ಹಿಂಸಿಸುತ್ತಾರೆ, ನಮ್ಮನ್ನು ಕೊಲ್ಲಯುತ್ತಾರೆ ಹಾಗೂ ನಮ್ಮ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಎಂಬ ಭಯದಿಂದ ನಾವು ನ್ಯಾಯ ಹಾಗೂ ಸತ್ಯದ ಪರ ನಿಲ್ಲದೆ ಹೋದರೆ, ನಾವು ಕ್ರಿಸ್ತನಲ್ಲಿ ನಮಗೆ ಆಳವಾದ ವಿಶ್ವಾಸವಿಲ್ಲ, ನಮ್ಮದು ಕೇವಲ ಬಾಯಿ ಪಠಣ, ನಾವು ಆತನನ್ನು ನೈಜವಾಗಿ ವಿಶ್ವಾಸಿಸುವುದಿಲ್ಲ, ನಮ್ಮ ಸಂಪತ್ತು ಆಳುವವರ ಕೈಯಲ್ಲಿದೆ ಎಂಬ ಸಂದೇಶವನ್ನು ರವಾನಿಸಿದಂತಾಗುತ್ತದೆ. ನಿರ್ಲಕ್ಷ್ಯ ಎಂದಿಗೂ ಒಳ್ಳೆಯ ಮೌಲ್ಯವಾಗಲು ಸಾಧ್ಯವಿಲ್ಲ. ಕ್ರಿಸ್ತ ಯೇಸುವೇ ‘ಕಾಲದ ಚಿಹ್ನೆ’ಗಳನ್ನು ಓದುವ ಅಸಮರ್ಥತೆಯ ಕುರಿತು ಹೇಳಿದ್ದಾರೆ.

ಹೌದು, ನಮ್ಮಲ್ಲಿ ಅನೇಕರು ಸಿಸಿಎಮ್ ರೋಗದಿಂದ (ಚರ್ಚು, ಕಾನ್ವೆಂಟು, ಕಾಂಪೌಂಡು ಮನಸ್ಥಿತಿ) ಇಂದ ಬಳಲುತ್ತಿದ್ದೇವೆ. ನಮ್ಮ ಪ್ರಯತ್ನ ಬೇರೆಯವರನ್ನು ಒಳಗೊಳ್ಳುವುದಿಲ್ಲ. ನಾವು ಗೂಡಿನೊಳಗೆ ಸೇರಿಕೊಂಡು ಬಿಡುತ್ತೇವೆ. ಕ್ರಿಸ್ತರ ತತ್ವವಾದ ಕಳೆದು ಹೋದವರನ್ನು, ಮೂಲೆಗುಂಪಾದವರನ್ನು ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ತಲುಪುವಿಕೆಯನ್ನು ನಾವು ಮರೆತಿದ್ದೇವೆ. ನಮ್ಮ ಕಿಟಕಿಗಳಾಚೆಗೆ ಇಣುಕಿ ನೋಡಿದಾಗ ನಾವು ಹಿಂಸೆಗೆ ಒಳಗಾಗಬಹುದು, ನಮ್ಮನ್ನು ಕೊಲ್ಲಬಹುದು ಹಾಗೂ ಬಹಿಷ್ಕರಿಸಬಹುದು. ಇವೆಲ್ಲದಕ್ಕೆ ಹೆದರಿ ನಾವು ಆಚೆ ಬರದಿದ್ದರೆ ನಾವು ನಮ್ಮ ನಂಬಿಕೆಯನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ಕ್ರಿಸ್ತನಿಗೆ ಹಾಗೂ ಆತನ ಸಂದೇಶಕ್ಕೆ ದ್ರೋಹಿಗಳಾಗುತ್ತೇವೆ.

ಹೌದು, ಪ್ರೀತಿಯ ಬಿಷಪ್ಪರುಗಳೇ, ಇದನ್ನು ನೀವು ನಮ್ಮ ವಿಶ್ವಾಸಕ್ಕಾಗಿ, ಪ್ರಭುವಿನ ಶುಭಸಂದೇಶಕ್ಕಾಗಿ, ನಮ್ಮ ದೇಶದ ಜನರಿಗಾಗಿ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಸಂವಿಧಾನದ ಘನತೆಗಾಗಿ ಮಾಡಬೇಕಾದ ಅವಶ್ಯಕತೆ ಇದೆ. ಮುಂದೆ ನಮಗೆ ಮತ್ತೊಂದು ಅವಕಾಶ ಸಿಗಲಾರದು. ಭಾರತದಲ್ಲಿ ಧರ್ಮಸಭೆ ಇನ್ನೂ ಪಿತೃಪ್ರಧಾನವಾಗಿದೆ. ಭಾರತದ ಜನರು ಇಂದಿಗೂ ಸಹ ನಿಮ್ಮ ಕ್ರೀಸ್ತೀಯ, ನಿಸ್ವಾರ್ಥ ಹಾಗೂ ಸೇವಾ ಮನೋಭಾವದ ನಾಯಕತ್ವಕ್ಕಾಗಿ ಎದುರು ನೋಡುತ್ತಾರೆ. ಈ ದೇಶದ ಭವಿಷ್ಯದ ದೃಷ್ಟಿಯಲ್ಲಿ ಅವರನ್ನು ನಿರಾಸೆಗೊಳಿಸಬೇಡಿ.
 ಸಾರ್ವಜನಿಕ ಹೇಳಿಕೆಗಳ ಮೂಲಕ ಅಸಾಂವಿಧಾನಿಕ ಕಾನೂನಾದ ಪೌರತ್ವ ನಾಗರೀಕ ಕಾಯ್ದೆ, ಎನ್‍ಆರ್ಸಿ, ಎನ್‍ಪಿಆರ್ ವಿರುಧ್ಧ ಧ್ವನಿಯೆತ್ತಿ. ನಮ್ಮ ದೇಶದ ಜಾತ್ಯಾತೀತತೆ ಹಾಗೂ ವೈವಿಧ್ಯತೆಯ ಪರವಾಗಿ ನಿಮ್ಮ ನಿಲುವನ್ನು ವ್ಯಕ್ತಪಡಿಸಲು ಬೆಂಗಳೂರಿನ ಬೀದಿಗಳಿಗೆ ಬನ್ನಿ. ಖಂಡಿತವಾಗಿಯೂ ಬೆಂಗಳೂರಿನ ಜನ ನಿಮ್ಮನ್ನು ಸೇರಿ ಕೊಳ್ಳುತ್ತಾರೆ ಹಾಗೂ ದೇಶದಾದ್ಯಂತ ಲಕ್ಷಾಂತರ ಜನರು ನಿಮ್ಮನ್ನು ಅನುಸರಿಸುತ್ತಾರೆ.

ಅಂತಿಮವಾಗಿ ನಾನು ಜರ್ಮನಿಯ ಪಾಸ್ಟರ್ ಮಾರ್ಟಿನ್ ನಿಮೊಲ್ಲರ್ನ ಮಾತುಗಳನ್ನು ಇಲ್ಲಿ ಉಲ್ಲೇಖಿಸ ಬಯಸುತ್ತೇನೆ. "ಆಗ ಅವರು ನನಗಾಗಿ ಬಂದರು; ಆದರೆ ಅಲ್ಲಿ ನನಗಾಗಿ ಮಾತನಾಡಲು ಯಾರೂ ಉಳಿದಿರಲಿಲ್ಲ," ನಿಮ್ಮ ಆಶೀರ್ವಾದ ಹಾಗೂ ಪ್ರಾರ್ಥನೆಯನ್ನು ಬೇಡುತ್ತಾ, ಹಾಗೂ ನಿಮಗೆ ನನ್ನ ಪ್ರಾರ್ಥನೆಗಳ ಭರವಸೆಯನ್ನೀಯುತ್ತಾ,

ಆತನಲ್ಲಿ ನಿಮ್ಮವ,
ಸೆಡ್ರಿಕ್

ಕಥಾದನಿ

ಅವಲಂಬಿತರಾಗುವಂತಹ ಪ್ರವೃತ್ತಿಯನ್ನು ನಿವಾರಿಸುವುದು 
ಪ್ರಾರ್ಥನೆಯಲ್ಲೇ ಸದಾ ಮಗ್ನನಾಗಿರುತ್ತಿದ್ದ ಶಿಷ್ಯನಿಗೆ ಗುರುಗಳು ಹೀಗೆ ಹೇಳುತ್ತಾರೆ
“ದೇವರ ಮೇಲೆ ಯಾವಗಲ್ಲೂ ಆವಲಂಬಿತನಾಗಿರ್ತಿಯಲ್ಲ, ಯಾವಾಗ ನೀನು ನಿನ್ನ ಸ್ವಂತ ಕಾಲುಗಳ ಮೇಲೆ ನಿಲ್ಲುತ್ಯಾ?
ಗುರುಗಳ ಮಾತುಗಳನ್ನು ಕೇಳಿದ ಶಿಷ್ಯನು ಆಶ್ಚರ್ಯಗೊಂಡು
“ಆದರೆ ದೇವರನ್ನು ತಂದೆಯಂತೆ ಪರಿಭಾವಿಸಬೇಕೆಂದು ನೀವೇ ಹೇಳಿದ್ದೀರಿ!”
“ಹೌದು ತಂದೆಯೆಂದರೆ ತನ್ನವರನ್ನು ಯಾವಾಗಲ್ಲೂ ತನ್ನ ಮೇಲೆ  ಸಂಪೂರ್ಣವಾಗಿ ಅವಲಂಬಿತವಾಗಿರುವಂತೆ ಮಾಡುವುದಲ್ಲ, ತನ್ನವರು ಅವಲಂಬಿತರಾಗುವಂತಹ ಪ್ರವೃತ್ತಿಯನ್ನು ನಿವಾರಿಸುವುದು ಎಂಬ ಸತ್ಯವನ್ನು ಯಾವಾಗ ಕಲಿಯುತ್ತೀರಿ?” ಎಂದು ಗುರುಗಳು ಶಿಷ್ಯನಿಗೆ ಉತ್ತರಿಸಿದರು.
---------------------
ನೀನು ಯಾರನ್ನೂ ಹಿಂಬಾಲಿಸುವುದು ಬೇಡ
“ನಾನು ನಿಮ್ಮನ್ನು ಹಿಂಬಾಲಿಸಲು ಬಂದಿದ್ದೇನೆ” ಗುರುಗಳು ಹಿಂಬಾಲಿಸಲು ಬಂದವನ್ನು ಹೇಳಿದ. ಅದಕ್ಕೆ ಗುರುಗಳು
“ನೀನು ನನ್ನ ಜೊತೆ ಇರಬಹುದು ಆದರೆ ನನ್ನ ಹಿಂಬಾಲಕನಾಗುವುದು ಬೇಡ”  ಎಂದು ಹೇಳಿದರು.
“ಮತ್ತೇ ನಾನು ಯಾರನ್ನು ಹಿಂಬಾಲಿಸಲಿ?” ವ್ಯಕ್ತಿ ಗುರುಗಳನ್ನು ಪ್ರಶ್ನಿಸಿದ
ಅದಕ್ಕೆ ಗುರುಗಳು “ ನೀನು ಯಾರನ್ನೂ ಹಿಂಬಾಲಿಸುವುದು ಬೇಡ. ಯಾವಾಗ ನೀನು ಇನ್ನೊಬ್ಬರನ್ನು ಹಿಂಬಾಲಿಸಲು ಆರಂಭಿಸುವೆಯೋ ಆ ಕ್ಷಣವೇ ನೀನು ಸತ್ಯವನ್ನು ಹಿಂಬಾಲಿಸುವುದನ್ನು ಬಿಟ್ಟು ಬಿಡುವೆ” ಎಂದು ಹೇಳಿ ಮೌನಕ್ಕೆ ಜಾರಿದರು.
---------------------
ಮಾತುಗಳ ನಡುವಿನ ಮೌನವನ್ನು ಆಲಿಸು
ದೇವರ ಬಗೆಗಿನ ನಮ್ಮ ಮಾತುಗಳು, ಪ್ರತಿಮೆಗಳು ಎಲ್ಲವೂ ದೇವರ ಬಗ್ಗೆ ವಿವರಿಸುವುದಕ್ಕಿಂತ ವಿರೂಪಗೊಳ್ಳಿಸುವುದೇ ಹೆಚ್ಚು” ಎಂದು ಗುರುಗಳು ಶಿಷ್ಯರಿಗೆ ಹೇಳುತ್ತಿದಂತೆ, ಒಬ್ಬ ಶಿಷ್ಯನು ಗುರುವನ್ನು ಕೇಳುತ್ತಾನೆ “ ಹಾಗದರೆ ದೇವರ ಬಗ್ಗೆ ನಾವು ಮಾತನಾಡುವುದಾದರೂ ಹೇಗೆ?
ಗುರುಗಳು ಪ್ರತ್ಯುತ್ತರವಾಗಿ “ ಮೌನದ ಮೂಲಕ” ಎಂದು ಹೇಳುತ್ತಿದಂತೆ
“ಹಾಗದರೆ ನೀವೇಕೆ ದೇವರ ಬಗ್ಗೆ ಮಾತನಾಡುತ್ತೀರಿ?”
ಮತ್ತೊಮ್ಮೆ ಪ್ರಶ್ನೆ ಮಾಡಿದ ಶಿಷ್ಯನಿಗೆ ಗುರುಗಳು ಹೇಳುತ್ತಾರೆ
“ನಾನು ಮಾತನಾಡುವಾಗ ನೀನು ನನ್ನ ಮಾತುಗಳನ್ನು ಕೇಳಿಸಿಕೊಳ್ಳಬೇಡ, ಮಾತುಗಳ ನಡುವಿನ ಮೌನವನ್ನು  ಆಲಿಸು”
-------------------------
ಇನ್ನಾ

ಭಾರತದ ಮಾನಸಿಕ ಸ್ವಾಸ್ಥ್ಯವೆಲ್ಲಿದೆ?


ಯೊಗೇಶ್ ಮಾಸ್ಟರ್

 ಜನಸಂಖ್ಯೆಯ ವಿಷಯದಲ್ಲಿ ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ. ಈ ಜನಸಂಖ್ಯೆಯ ಐದು ಜನರಲ್ಲಿ ಒಬ್ಬರು ಹತ್ತರಿಂದ ಹತ್ತೊಂಬತ್ತು ವರ್ಷದವರಾಗಿದ್ದಾರೆ. ಹಾಗೂ ಸರಾಸರಿಯಲ್ಲಿ ಪ್ರತಿ ಮೂರನೆಯ ವ್ಯಕ್ತಿ 10 ರಿಂದ 24 ವಯೋಮಾನದವರಾಗಿರುತ್ತಾರೆ. ಈಗ ಸದ್ಯಕ್ಕೆ ನಮ್ಮ ದೇಶದಲ್ಲಿ ಮಕ್ಕಳು ಮತ್ತು ಪ್ರೌಢ ಮಕ್ಕಳು ಸೇರಿ 434 ಮಿಲಿಯನ್ ಇದ್ದಾರೆ. ಈ ವಿಷಯದಲ್ಲಿ ಪ್ರಪಂಚದಲ್ಲೇ ಮೊದಲನೆಯ ಸ್ಥಾನ ನಮಗೆ. ಹಾಗೇ ಲೆಕ್ಕ ಹಾಕಿದರೆ 2030ರ ಹೊತ್ತಿಗೆ ವೃತ್ತಿಪರವಾಗಿ ಕ್ರಿಯಾಶೀಲವಾಗಿರುವ ಜನಸಂಖ್ಯೆ 250 ಮಿಲಿಯನ್ ಆಗಿರುತ್ತದೆ. ಇದೂ ಕೂಡಾ ಗಾತ್ರದಲ್ಲಿ ಅತ್ಯಂತ ದೊಡ್ಡದೇ. ಈ ಸಂಖ್ಯೆಯೇನಾದರೂ ರಚನಾತ್ಮಕವಾಗಿ, ಕ್ರಿಯಾಶೀಲವಾಗಿ ಮತ್ತು ಸಕಾರಾತ್ಮಕವಾಗಿ ಸ್ಪಂದಿಸುತ್ತಾ ದುಡಿದರೆ ನಮಗೆ ಬಹುದೊಡ್ಡ ಆಸ್ತಿಯಾಗಿ ರಾಷ್ಟ್ರದ ಅಭಿವೃದ್ಧಿ, ಪ್ರಗತಿ ಮತ್ತು ಪುನರುತ್ಥಾನಕ್ಕೆ ಬಹುದೊಡ್ಡ ಮಾನವ ಸಂಪನ್ಮೂಲವಾಗಿ ಇವರು ಒದಗಲಿದ್ದಾರೆ. ಶಿಕ್ಷಣ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಸೃಜನಶೀಲತೆ, ಮಾನವ ವಿಷಯ ವಸ್ತುಗಳು, ಆಡಳಿತ, ಪರಿಸರ, ನಾಗರಿಕ ಸೇವೆ, ರಾಜಕಾರಣ, ಆರ್ಥಿಕತೆ, ಸಾಹಿತ್ಯ, ಕಲೆ; ಹೀಗೆ ಅನೇಕಾನೇಕ ಉನ್ನತಿ ಸಾಧಿಸಬೇಕಾಗಿರುವಂತಹ ಕ್ಷೇತ್ರಗಳಲ್ಲಿ ಇವತ್ತಿನ ಕಿಶೋರರು ಮತ್ತು ಪ್ರೌಢ ಮಕ್ಕಳು ನಾಳೆ ದಕ್ಕುತ್ತಾರೆ. ಈ ಸಾಧನೆ ಸಾಧ್ಯವಾಗಬೇಕಾದರೆ ಮೊದಲು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಈ ಮಕ್ಕಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು. ಅದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುವಂತಹ, ಉತ್ತಮವಾಗಿಯೇ ಇರಿಸುವಂತಹ ವಾತಾವರಣವಾಗಿರಬೇಕು. 
ಶಿಶುತನಕ್ಕಿರುವ ಅಪಾಯಗಳು
ನಮ್ಮ ದೇಶದ ಸಾಮಾನ್ಯ ಸಾಮಾಜಿಕ ಮಟ್ಟದಲ್ಲಿರುವ ಶಿಶುತನವು ಅಪಾಯವನ್ನು ಎದುರಿಸುತ್ತಿದೆ. ಈ ದಿಕ್ಕಿನಲ್ಲಿ ಕಾಣಸಿಗುವ ಮೊಟ್ಟ ಮೊದಲ ಅಂಶ ಶಿಶುಮರಣ. ಭಾರತದಲ್ಲಿ ಐದು ವರುಷದ ಒಳಗಿನ ಶಿಶುಮರಣವೂ ಕೂಡಾ ಅತ್ಯಧಿಕ ಮಟ್ಟದಲ್ಲಿಯೇ ಇದೆ. ಯಾವುದೇ ದೇಶದ ಪ್ರಗತಿ ಮತ್ತು ಸ್ವಾಸ್ಥ್ಯವನ್ನು ಅಳೆಯುವುದು ಆ ದೇಶದ ಶಿಶುಮರಣದ ಪ್ರಮಾಣದಿಂದ.ಅಕ್ರಮ ಸಂತಾನದಿಂದ ಹಿಡಿದು ಒಲ್ಲದ ಸಂತಾನದವರೆಗೆ ಸಾವನಪ್ಪುವುದರಿಂದ, ಪೌಷ್ಟಿಕಾಂಶಗಳ ಕೊರತೆಯಿಂದ, ರೋಗ ನಿರೋಧಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೇ ಇರುವುದರಿಂದ, ಸಾಂಕ್ರಾಮಿಕ ರೋಗಗಳ ದಾಳಿಯೂ ಎಳೆಯ ಮಕ್ಕಳನ್ನೇ ಬಲಿತೆಗೆದುಕೊಳ್ಳುವುದರಿಂದ, ಅಪಘಾತಗಳಿಂದ, ವಂಶವಾಹಿನಿ ಅಥವಾ ಸೋಂಕಿನ ಅನಾರೋಗ್ಯದ ಸಮಸ್ಯೆಗಳಿಂದ,ಕೊಲೆ, ಅತ್ಯಾಚಾರಗಳಿಂದ, ಧಾರ್ಮಿಕ ಅಥವಾ ಸಾಂಪ್ರದಾಯಿಕ ಮೌಢ್ಯತೆಗಳಿಂದ, ಆತ್ಮಹತ್ಯೆಗಳಿಂದ ಮಕ್ಕಳು ಸಾಯಲು ನಾನಾ ಕಾರಣಗಳಿವೆ. ಶಿಶುತನಕ್ಕಿರುವ ಅಪಾಯಗಳಲ್ಲಿ ಈ ಸಂಗತಿಗಳು ದಾರುಣ ಮತ್ತು ಅನಪೇಕ್ಷಿತವೇ ಆದರೂ, ಈ ಮಕ್ಕಳದು ಅಲ್ಲಿಂದಲ್ಲಿಗೆ ಮುಗಿವ ಕತೆ ಎಂದಿಟ್ಟುಕೊಳ್ಳಿ. ಇದರ ಜೊತೆಗೆ, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮದುವೆ, ಆರ್ಥಿಕ ಮುಗ್ಗಟ್ಟುಗಳಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ದೈಹಿಕ ಶ್ರಮದ ಕೆಲಸಕ್ಕೆ ಇಳಿಯುವ ಮಕ್ಕಳು, ಬಡತನದ ಕಾರಣದಿಂದ ವಿದ್ಯಾಭ್ಯಾಸ, ಆಹಾರ, ಆರೋಗ್ಯ, ಆಶ್ರಯದಿಂದ ವಂಚಿತರಾಗಿ ಬೀದಿಗಿಳಿವ ಮಕ್ಕಳು. ಒಡಕು ಕುಟುಂಬ ಮತ್ತು ಅವೈಜ್ಞಾನಿಕ ಶಿಕ್ಷಣ ವ್ಯವಸ್ಥೆ ಮತ್ತು ಕಲಿಕಾ ಪದ್ಧತಿಗಳಿಂದ ಮಾನಸಿಕವಾಗಿ ವಿಕಾಸವಾಗದ ಅಥವಾ ನಕಾರಾತ್ಮಕ ಮನಸ್ಥಿತಿಗಳನ್ನು ಹೊಂದುವ ಮಕ್ಕಳು, ಅನಾರೋಗ್ಯಕರವಾದ ವಾತಾವರಣಗಳಿಂದ ದುಶ್ಚಟಗಳಿಗೆ ಎಳೆವೆಯಲ್ಲಿಯೇ ಬಲಿಯಾಗುವ ಮಕ್ಕಳು, ವಿಧ್ವಂಸಕ ಮತ್ತು ಅಸ್ವಾಭಾವಿಕ ಮಾದರಿಗಳಿಂದ ಅದರಂತೆಯೇ ರೂಪುಗೊಳ್ಳುವ ಮಕ್ಕಳು; ಹೀಗೆ ಅನೇಕಾನೇಕ ಮಕ್ಕಳು ತಮ್ಮ ಪ್ರೌಢಾವಸ್ಥೆಯ ಹಂತಕ್ಕೇ ರಚನಾತ್ಮಕ ಸಾಮರ್ಥ್ಯವನ್ನು, ಉತ್ಪಾದಕ ಧೋರಣೆಯನ್ನು ಮತ್ತು ಧನಾತ್ಮಕವಾಗಿ ಕ್ರಿಯಾಶೀಲವಾಗಿರುವ ಮನಸ್ಥಿತಿಯನ್ನು ಕಳೆದುಕೊಂಡುಬಿಟ್ಟಿರುತ್ತವೆ.
ಸಮಾಜದ ಮಾನಸಿಕ 
ಸ್ವಾಸ್ಥ್ಯವೆಲ್ಲಿದೆ?
ಯಾವ ಮಕ್ಕಳ ಬಾಲ್ಯಗಳು ಕಡೆಗಣಿಸಲ್ಪಟ್ಟಿರುತ್ತದೆಯೋ, ಅವರಲ್ಲಿ ಬಹಳಷ್ಟು ಜನ ಮಕ್ಕಳು ಒಂದೋ ಅನುತ್ಪಾದಕರಾಗಿ ರೂಪುಗೊಂಡಿರುತ್ತಾರೆ ಅಥವಾ ಕುಟುಂಬಕ್ಕೂ ಮತ್ತು ಸಮಾಜಕ್ಕೂ ತಲೆನೋವಾಗಿ ಪರಿಣಮಿಸಿರುತ್ತಾರೆ. ಹಾಗೂ ಇವರ ಸಂಖ್ಯೆಯೇ ದೊಡ್ಡದಾಗಿ ಸಮಾಜದಲ್ಲಿ ಬಲವಾಗಿರುವಾಗ ಮತ್ತು ಆಕ್ರಮಣಕಾರಿಗಳಾಗಿರುವಾಗ ಆರೋಗ್ಯಕರ ಮತ್ತು ಉತ್ಪಾದಕ ವಯಸ್ಕರು ಅಲ್ಪ ಸಂಖ್ಯಾತರಾಗುತ್ತಾರೆ. ಅದರ ಫಲವಾಗಿ ದೇಶವನ್ನು ಬಿಟ್ಟು ಹೋಗುವಂತಹ ಪ್ರತಿಭಾ ಪಲಾಯನಗಳಾಗುತ್ತವೆ ಅಥವಾ ಇವರ ಉತ್ಪಾದನಾ ಫಲಿತಗಳು ವ್ಯರ್ಥವಾಗುತ್ತವೆ. 
ಅನುತ್ಪಾದಕರಿಗೂ ಬಾಯಿ, ಹೊಟ್ಟೆಗಳಿರುತ್ತವೆ. ಅವರು ಬದುಕಲು ಅಗತ್ಯವಸ್ತುಗಳ ಕೊರತೆ ಇರುತ್ತದೆ. ಆಸೆ, ಮೋಜುಗಳ ಸೆಳೆತವಿರುತ್ತದೆ. ಆಗ ಅವರು ಉತ್ಪಾದಕರ ಮತ್ತು ಕ್ರಿಯಾಶೀಲರ ಮೇಲೆ ಅವಲಂಬಿತರಾಗುತ್ತಾರೆ. ಆಗಲೇ ಕೊಲೆ, ಸುಲಿಗೆ, ಕಳ್ಳತನ, ಮೋಸ, ಅನಾಚಾರ, ಅಕ್ರಮ ಸಂಪಾದನೆ; ಇತ್ಯಾದಿ ಅಪರಾಧಗಳನ್ನೆಲ್ಲಾ ಸಮಾಜ ಎದುರಿಸಬೇಕಾಗುವುದು ನಿರೀಕ್ಷಿತವೂ, ಸಹಜವೂ ಆಗುತ್ತದೆ. ಅಪರಾಧವೂ ಕೂಡಾ ವ್ಯವಸ್ಥೆಯ ಒಂದು ಭಾಗವಾಗಿ ಪರಿಗಣಿಸಿದರೂ ಆಶ್ಚರ್ಯವೇನಿಲ್ಲ. ಆಂತರಿಕವಾಗಿ ವ್ಯಕ್ತಿಯಲ್ಲಿ ಮತ್ತು ವ್ಯವಸ್ಥೆಯ ಒಳವರ್ತುಲಗಳಲ್ಲಿ ಅವುಗಳು ಸಹಜವಾಗಿ ಸಾಮಾಜಿಕವಾಗಿ ಒಪ್ಪಿತವಾಗಿಬಿಟ್ಟರೆ, ಅವು ಮುಂದೊಂದು ದಿನ ಅಪರಾಧವಾಗಿಯೂ ಉಳಿಯುವುದಿಲ್ಲ. ಇದೆಷ್ಟು ಅಪಾಯಕರವೆಂದು ಆಲೋಚಿಸಿ. 
ವ್ಯಕ್ತಿ ವ್ಯಕ್ತಿಗಳ ಶಕ್ತಿಗಳು ಸಂಕಲಿತವಾಗಿ ಹೇಗೆ ಸಾಮಾಜಿಕ ಶಕ್ತಿಯಾಗಿ ರೂಪುಗೊಳ್ಳುವುದೋ, ಅದೇ ರೀತಿ ವ್ಯಕ್ತಿ ವ್ಯಕ್ತಿಗಳ ಮನಸ್ಥಿತಿಗಳು ಸಮಾಜದ ಮಾನಸಿಕಸ್ಥಿತಿಯಾಗಿ ಅಸ್ತಿತ್ವದಲ್ಲಿ ಕ್ರಿಯಾಶೀಲವಾಗಿರುತ್ತದೆ. 
ನಮ್ಮ ಮುಂದಿನ ಸಮಾಜದಲ್ಲಿ ನಾವೇ ಏನನ್ನು ನಿರೀಕ್ಷಿಸಬೇಕು? ಯಾವ ವಿದ್ಯಮಾನಗಳು ಸಹಜವಾಗಿರಬೇಕು ಎಂಬುದರ ಸ್ಪಷ್ಟವಾದ ದೂರದೃಷ್ಟಿಯೊಂದಿಗೆ ಮಗುತನವನ್ನು ಜತನ ಮಾಡುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ವಯಸ್ಕ ವ್ಯಕ್ತಿಯೂ, ವ್ಯವಸ್ಥೆಯೂ, ಆಡಳಿತಾಂಗವೂ ಹೊತ್ತುಕೊಳ್ಳಲೇಬೇಕು. ಯಾವ ವಯಸ್ಕ ವ್ಯಕ್ತಿಗೆ, ಕುಟುಂಬಕ್ಕೆ ಮತ್ತು ಸರ್ಕಾರಕ್ಕೆ ಪ್ರಸ್ತುತ ಕಣ್ಮುಂದೆ ಇರುವ ಶಿಶುವಿನ ವಯಸ್ಕ ಚಿತ್ರಣವನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲವೋ ಅದಕ್ಕೆ ದೂರದೃಷ್ಟಿ ಇಲ್ಲವೆಂದೇ ಅರ್ಥ. ಹಾಗೂ ಅದಕ್ಕೆ ಮುಂಬರುವ ಪೀಳಿಗೆಗಳಿಗೆ ಸಮಾಜ, ವ್ಯವಸ್ಥೆ ಮತ್ತು ವಾತಾವರಣವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದೇ ಅರ್ಥ. ಆದ್ದರಿಂದ ವ್ಯಕ್ತಿಗಳು ಜಾಗೃತರಾಗಬೇಕು. ಕುಟುಂಬಗಳು ಸಿದ್ಧವಾಗಬೇಕು ಮತ್ತು ಸರಕಾರಗಳು ಕಾಯಿದೆಗಳನ್ನು, 
ಯೋಜನೆಗಳನ್ನು ರೂಪಿಸಬೇಕು. 
ಕಿಶೋರ ಮತ್ತು ಪ್ರೌಢ ಮಕ್ಕಳ ಮಾನಸಿಕ ಆರೋಗ್ಯ ಯೋಜನೆ

ಹಾಗಾಗಿಯೇ ವಿಶ್ವ ಆರೋಗ್ಯ ಸಂಸ್ಥೆಯು ಸಿ ಎ ಎಂ ಹೆಚ್ ಅಂದರೆ ಚೈಲ್ಡ್ ಅಂಡ್ ಅಡೋಲಸೆಂಟ್ ಮೆಂಟಲ್ ಹೆಲ್ತ್ ಅಸ್ತಿತ್ವಕ್ಕೆ ತಂದಿರೋದು. ಅದಕ್ಕೆ ಕಿಶೋರ ಮತ್ತು ಪ್ರೌಢ ಮಕ್ಕಳ ಮಾನಸಿಕ ಆರೋಗ್ಯ ಯೋಜನೆ ಎಂದು ಕರೆಯಬಹುದು. ಇನ್ನೊಂದು ಸಿ ಎ ಎಂ ಹೆಚ್ ಕೆನಡಾದಲ್ಲಿದೆ. ಅದು ಸೆಂಟರ್ ಫಾರ್ ಅಡಿಕ್ಷನ್ ಅಂಡ್ ಮೆಂಟಲ್ ಹೆಲ್ತ್. ಅದೂ ಕೂಡಾ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸುವುದಾದರೂ ಅದು ಶುದ್ಧಾಂಗ ಮಕ್ಕಳದ್ದೇನಲ್ಲ. 
ವಿಶ್ವ ಆರೋಗ್ಯ ಸಂಸ್ಥೆಯ ಸಿ ಎ ಎಂ ಹೆಚ್ ನಮ್ಮ ದೇಶಕ್ಕೆ ಯಾವ್ಯಾವ ಸಲಹೆಗಳು ನೀಡುತ್ತದೆ, ಎಂತಹ ಯೋಜನೆಗಳನ್ನು ರೂಪಿಸಲು ಮುಂದಾಗುತ್ತದೆ ಇದನ್ನೆಲ್ಲಾ ನಾವು ತಿಳಿಯಬೇಕು. ಮುಂದೆ ತಿಳಿಯೋಣ.

0-0-0-0-0-0

ನಾನು ಮೋಸೇಸ


ನಾನು ಮೋಸೇಸ
ಕ್ರಿಸ್ತನ ಕೊಲೆಯಲ್ಲಿ ಎನಗಿಲ್ಲ ಪಾಪ ಲವಲೇಶ
ದೇವರು ಕೊಟ್ಟರೆನಗೆ ಹತ್ತು ಕಟ್ಟಳೆ
ಬಿಸಾಡಿ ಬರೆದೆ ನನ್ನದೇ ನೂರೆಂಟು ಕಟ್ಟಳೆ
ಧರ್ಮಗುರು ಪುರೋಹಿತ ಬಿಷಪರೆಲ್ಲ ನನ್ನದೇ ವೇಷ
ನನ್ನ ಕಟ್ಟಳೆಗಳಿಗಿಲ್ಲ ದೇಶ ಕಾಲಗಳ ಕ್ಲೇಶ
ನನ್ನವೋ ಆರೂನೂರ ಇಪ್ಪತ್ತೆರಡು
ಇವರವು ಸಾವಿರದೇಳುನೂರಾ ನಲವತ್ತೆರಡು
‘ಎಲ್ಲ ಕಟ್ಟಳೆಗಳಿಗಿಂತ ಮಿಗಿಲು ತನ್ನ ಕಟ್ಟಳೆಯೆಂದ
ಸ್ನೇಹ ಪ್ರೀತಿಗಳೆರಡೂ ದೇವರೆಡೆಗೆ ಮೆಟ್ಟಿಲೆಂದ’
ಅಂಥ ಯೇಸುವನೂ ಬಿಡಲಿಲ್ಲ ನನ್ನ ಕಟ್ಟಳೆಗಳು
ಕೊಚ್ಚಿ ಕೊಲ್ಲುವ ನೀತಿ ನಿಯಮಾವಳಿಗಳು
ಹೊಸ ಕಟ್ಟಳೆಗಳ ನಾನೀಗಲೂ ಬರೆಯುತಿರುವೆ
ಧರ್ಮದ ಹೆಸರಲ್ಲಿ ಮಾನ್ಯತೆ ಪಡೆಯುತಿರುವೆ
ಕ್ರಿಸ್ತನೊಬ್ಬ ಬಡಪಾಯಿ ಅವ ಸತ್ತರೆ ಸಾಯಲಿ
ಅವನ ಶಿಲುಬೆಗೆ ಜಡಿದು ನನ್ನ ಕಟ್ಟಳೆ ಉಳಿಯಲಿ
ನಾನು ಮೋಸೇಸ
ಕ್ರಿಸ್ತನ ಕೊಲೆಯಲ್ಲಿ ಎನಗಿಲ್ಲ ಪಾಪ ಲವಲೇಶ

- ಸಿ ಮರಿಜೋಸೆಫ್

ರೆಬೆಕ್ಕಾ


ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ

ಒಂದು ದಿನ ಸೂರ್ಯನು ಆಕಾಶದ ಪಶ್ಚಿಮ ಅಂಚನ್ನು ದಾಟಿ ಮುಳುಗುತ್ತಿದ್ದ ವೇಳೆ, ಮೆಸಪೆÇಟೋಮಿಯಾದ ಆರಾಮಿನ ಯುವತಿಯೊಬ್ಬಳು ಈಶಾನ್ಯ ಕಾನಾನಿನಿಂದ 500 ಮೈಲಿ ದೂರವಿದ್ದ ನಾಹೋರ್ ನಗರದ ಹೊರಗಿದ್ದ ಬಾವಿ ಕಡೆಗೆ ಹೋಗುತ್ತಿದ್ದಳು. ಇವಳು ಅಬ್ರಹಾಮನ ತಮ್ಮ ನಹೋರನ ಮಗ ಬೆತುವೇಲನ ಮಗಳು. ಪ್ರತಿ ಸಂಜೆ ಶುದ್ಧ ನೀರು ತರುವುದು ಮಹಿಳೆಯರ ಕೆಲಸವಾಗಿತ್ತು. ಆ ಸಂಜೆಯೂ ಸಹ ಎಂದಿನಂತೆ ಬಾವಿಯಿಂದ ನೀರು ಸೇದಿ ತುಂಬಿಸಿಕೊಂಡು, ಆ ತಂಪಾದ ಮುದನೀಡುವ ಕೊಡವನ್ನು ಹೆಗಲಮೇಲೆ ಹೊತ್ತು ನಡೆಯಲು ಹಿಂತಿರುಗಿದಾಗ ಅಪರಿಚಿತನೊಬ್ಬ ಕುಡಿಯಲು ನೀರನ್ನು ಕೇಳಿದನು. ಅವಳ ನಿಸ್ಸಂಶಯವಾಗಿ ಅವನಿಗೂ ಒಂಟೆಗಳಿಗೂ ನೀರನ್ನು ಕೊಟ್ಟಳು. ರೆಬೆಕ್ಕಾ, ಅಲ್ಲಿ ಅವನ ಮುಖದಲ್ಲಿದ್ದ ಹೊಳೆಯುವ ಆಶ್ಚರ್ಯದ ಆನಂದದ ನೋಟವನ್ನು ಗಮನಿಸಿದಳು. ಅವನೊಂದಿಗಿದ್ದ ಹತ್ತು ಒಂಟೆಗಳಿಗೆ ತುಂಬಾ ನೀರು ಬೇಕಾಗುತ್ತದೆಂಬುದು ಅವಳಿಗೆ ಗೊತ್ತಿತ್ತು. ಅವುಗಳಿಗೆಲ್ಲ ನೀರು ಸೇದುತ್ತಲೇ, ಆ ಸೇವಕ ಪಿಸುಗುಡುತ್ತಾ ಬೇಡುತ್ತಿದ್ದುದನ್ನು ಕಂಡಳು. ಅವನ ಪ್ರಾರ್ಥನೆ ಹೀಗಿತ್ತು; " ಓ ಪ್ರಭುವೆ, ನನ್ನ ಯಜಮಾನ ಅಬ್ರಹಾಮನ ದೇವರೇ, ಇಂದು ನನಗೆ ಯಶಸ್ಸು ಕೊಟ್ಟು ನನ್ನ ಯಜಮಾನ ಅಬ್ರಹಾಮನಿಗೆ ದಯೆ ತೋರಿಸು. ನಾನು ಮಡಿಕೆಯನ್ನು ಇಳಿಸಿ ಕುಡಿಯಲು ಕೊಡೆಂದು ಕೇಳಿದಾಗ, 'ಕುಡಿಯಿರಿ, ನಾನು ನಿಮ್ಮ ಒಂಟೆಗಳಿಗೂ ನೀರನ್ನು ನೀಡುವೆನು' ಎಂದು ಹೇಳುವ ಹುಡುಗಿ ಇವಳೇ ಆಗಿರಲಿ. ನೀವು ನಿಮ್ಮ ಸೇವಕ ಈಸಾಕನಿಗಾಗಿ ಆಯ್ಕೆ ಮಾಡಿದವಳು ಇವಳೇ ಆಗಿರಲಿ".
ಆ ಸರಳ ಭಾವ ಉದಾರ ಪ್ರತಿಕ್ರಿಯೆಯಿಂದ ಆ ಯುವತಿಯ ಭವಿಷ್ಯ ಕ್ಷಣಮಾತ್ರದಲ್ಲಿ ಬದಲಾಗಿ ಹೋಯಿತು. ಬಾವಿಯ ಬಳಿ ರೆಬೆಕ್ಕಾಳಿಗೆ ಎದುರಾದ ವ್ಯಕ್ತಿ ಅಬ್ರಹಮನ ಆಸ್ತಿಪಾಸ್ತಿಗಳನ್ನೆಲ್ಲ ನೋಡಿಕೊಳ್ಳುತ್ತಿದ್ದ ಹಿರಿಯ ಸೇವಕನಾಗಿದ್ದ. ಅಬ್ರಹಮನ ಅಜ್ಞೆಯ ಪ್ರಕಾರ ಕಾನಾನಿನ ಸುತ್ತಮುತ್ತಲಿನಲ್ಲಿ ವಾಸವಾಗಿದ್ದವರಲ್ಲದೆ ಅಬ್ರಹಾಮನ ಸಂಬಂಧಿಕರಲ್ಲೇ ಈಸಾಕನಿಗೆ ಹೆಂಡತಿಯನ್ನು ಹುಡುಕಿ ತರುವ ಪವಿತ್ರ ಕಾರ್ಯಾಚರಣೆಯಲ್ಲಿ ಅವನಿದ್ದ. ಅವಳ ಅಜ್ಜಿ ಸಾರಾಳಂತೆ ರೆಬೆಕ್ಕಾಳು ಸಹ ದಕ್ಷಿಣದತ್ತ ಊಹಿಸಲಾಗದ ಭವಿಷ್ಯದ ಪ್ರಯಾಣ ಮಾಡುವವಳಾಗಿದ್ದಳು. ‘ನಗ' ಎಂಬ ಅರ್ಥವುಳ್ಳ, ಅವಳಿಗಿಂತ ಎರಡರಷ್ಟು ವಯಸ್ಸಾದ ವ್ಯಕ್ತಿಯೊಂದಿಗೆ ನಿಶ್ಚಯವಾದಾಗ ಅವಳೊಳಗೆ ಹಠಾತ್ ಮುಜುಗರ ಹುಟ್ಟಿತು. ಅಬ್ರಹಾಮ ಮತ್ತು ಸಾರಾಳ ದೇವರು, ಅವಳನ್ನು ಭರವಸೆಯ ಪಾಲನ್ನು ಸ್ವೀಕರಿಸಲು ಕರೆದಿದ್ದರು. ಇವಳ ಮೂಲಕ ತಮ್ಮ ಸ್ವಂತ ಜನರಾಗಲು ದೇವರು ಇನ್ನೊಂದು ಜನಾಂಗದ ಸೃಷ್ಟಿಗೆ ತಯಾರಿ ನಡೆಸಿದ್ದರು.
ಈಸಾಕನು ರೆಬೆಕ್ಕಾಳನ್ನು ಮೊದಲು ಕಂಡಾಗ ಅವನ ವಯಸ್ಸು ನಲವತ್ತಾಗಿತ್ತು. ಬಹುಶಃ ಆಗ ಅವನ ಹೃದಯದಲ್ಲಿ ಮೊದಲ ಮನುಷ್ಯನ " ನಾನೀಗ ಇವಳು ನನ್ನೇಲುಬಿನ ಎಲುಬು ನನ್ನೊಡಲಿನ ಒಡಲು" ಎಂಬ ಸಂತೋಷದ ನುಡಿಗಳು ಪ್ರತಿಧ್ವನಿಸಿರಬಹುದು. ಹೀಗೆ ಈಸಾಕ ಮತ್ತು ರೆಬೆಕ್ಕಾ ತನ್ನ ತಾಯಿ ಸಾರಾಳ ಗುಡಾರವನ್ನು ಪ್ರವೇಶಿಸಿ ಪ್ರೀತಿ ಮಾಡಿದರು. ರೆಬೆಕ್ಕಾಳು ಸಾರಾಳ ಮರಣದ ನಂತರ ಈಸಾಕನಿಗೆ ಸಾಂತ್ವನ ನೀಡಿದಳು ಎನ್ನುತ್ತದೆ ಪವಿತ್ರ ಗ್ರಂಥ.
ಸಾರಾಳಂತೆ ರೆಬೆಕ್ಕಾಳು ಸಹ ಸೌಂದರ್ಯವತಿ ಹಾಗೂ ದೃಢ ಮಹಿಳಿಯಾಗಿದ್ದರೂ ಮದುವೆಯಾದ ಮೊದಲ ಇಪ್ಪತ್ತು ವರ್ಷ ಅವಳಿಗೆ ಮಕ್ಕಳಿರಲಿಲ್ಲ. ಸಾರಾಳಂತೆ ಅವಳೂ ಬಂಜೆತನ ಅನುಭವಿಸಬೇಕಾಗಿ ಬರುತ್ತದೆ. ಈಸಾಕನು ದೇವರಿಗೆ ಮೊರೆ ಹೋದಾಗ ಆತನ ಪ್ರಾರ್ಥನೆಗೆ ಕಿವಿಗೊಟ್ಟ ದೇವರು ಒಂದಲ್ಲ ಎರಡು ಮಕ್ಕಳನ್ನು ಆಶೀರ್ವದಿಸಿದರು. ಉದರದಲ್ಲೇ ಕುಸ್ತಿ ಪ್ರಾರಂಭಿಸಿದ್ದ ಎರಡು ಕೂಸುಗಳವು. ದೇವರು ಅವಳಿಗೆ ಇಂತೆಂದರು; " ನಿಮ್ಮ ಉದರದೊಳಗೆ ಜನಾಂಗಗಳೆರಡು ಹುಟ್ಟಿನಿಂದ ವೈರಿಗಳಾ ರಾಷ್ಟ್ರಗಳೆರಡು ಬಲಿಷ್ಠವಾಗಿರುವುದು ಒಂದು ಮತ್ತೊಂದಕ್ಕೆ ಜೇಷ್ಠನೆ ದಾಸನಾಗುವನು ಕನಿಷ್ಠನಿಗೆ" (ಆದಿ 25:23). ಹೆರಿಗೆಯ ವೇಳೆ ಯಾಕೋಬನು ಮೊದಲು ಸ್ಥಾನಕ್ಕಾಗಿ ಶ್ರಮಿಸುವಂತೆ ಏಸಾವನ ಇಮ್ಮಡಿಯನ್ನು ಎಳೆದಿದ್ದ. ಹುಟ್ಟುವಾಗ ಎರಡನೆಯವನಾಗಿ ಹುಟ್ಟಿದರೂ ತಾಯಿಯ ಮಮತೆ ಅವನಿಗೆ ಮೊದಲು ಸಿಗುತ್ತಿತ್ತು. ಆದರೆ ತಂದೆಗೆ ಏಸಾವನೆಂದರೆ ಅಚ್ಚು ಮೆಚ್ಚು. ವರ್ಷಗಳ ನಂತರ ಈಸಾಕನು ಮುದುಕನಾಗಿ ಬಹುತೇಕ ಕುರುಡನಾಗಿದ್ದಾಗ, ಅವನ ಮೊದಲನೆಯ ಮಗ ಏಸಾವನಿಗೆ ಜೇಷ್ಠತನದ ಆಶೀರ್ವಾದವನ್ನು ನೀಡಲು ನಿರ್ಧರಿಸಿ ಅವನನ್ನು ಕರೆದು ಕಾಡು ಬೇಟೆಯಾಡಿ ಮಾಂಸ ತಂದು ರುಚಿಯಾದ ಅಡುಗೆ ಮಾಡಿ ಬಡಿಸಲು ಹೇಳುತ್ತಾನೆ.
ಆದರೆ ಅದನ್ನು ಕದ್ದು ಕೇಳಿದ ರೆಬೆಕ್ಕಾಳು ಕೂಡಲೇ ಯಾಕೋಬನನ್ನು ಕರೆದು ಈಸಾಕನಿಂದ ಆಶೀರ್ವಾದವನ್ನು ಕಸಿದುಕೊಳ್ಳಲು ಯೋಜನೆಯನ್ನು ರೂಪಿಸುತ್ತಾರೆ. ಮೇಕೆ ಮರಿಗಳು ಚರ್ಮವನ್ನು ಯಾಕೋಬನ ಕೈಗೆ ಹೊದಿಸಿ, ಮನೆಯಲ್ಲಿದ್ದ ಕುರಿಗಳನ್ನು ಕೊಯ್ದು ಊಟ ತಯಾರಿಸಿ ಈಸಾಕನಿಗೆ ಬಡಿಸಲು ಕಳುಹಿಸುತ್ತಾಳೆ. ಯಾಕೋಬನು ಬಡಿಸಿದ ಊಟಮಾಡಿದ ಈಸಾಕ ಯಾಕೋಬನನ್ನೇ ಏಸಾವನೆಂದು ಭಾವಿಸಿ ಹೀಗೆಂದು ಆಶೀರ್ವದಿಸುತ್ತಾನೆ; " ದಯಪಾಲಿಸಲಿ ದೇವ ನಿನಗೆ ಆಗಸದ ಮಂಜನು, ಸಾರ ಉಳ್ಳ ಹೊಲವನು, ಅನುಗ್ರಹಿಸಲಿ ಹೇರಳ ದವಸ ಧಾನ್ಯವನು, ದ್ರಾಕ್ಷಾರಸವನು. ಸೇವೆಗೈಯಲಿ ನಿನಗೆ ಹೊರನಾಡುಗಳು ಅಡ್ಡಬೀಳಲಿ ನಿನಗೆ ಹೊರಜನಾಂಗಗಳು. ಒಡೆಯನಾಗು ಸೋದರರಿಗೆ ಅಡ್ಡ ಬೀಳಲಿ ತಾಯ ಕುಡಿ ನಿನಗೆ ಶಾಪವಿರಲಿ ನಿನ್ನನ್ನು ಜಪಿಸುವವರಿಗೆ ಆಶೀರ್ವಾದವು ನಿನ್ನನ್ನು ಹರಸುವವರಿಗೆ!". ಈಸಾಕನು ತನ್ನ ಕರಗಳನ್ನು ಚಾಚಿ ಉದರದಲ್ಲಿ ಸ್ಥಾನಕ್ಕಾಗಿ ಕಿತ್ತಾಡಿದ ಸಂಗತಿಯನ್ನು ನೆನೆಯುತ್ತಲೇ ಯಾಕೋಬನಿಗೆ ನೀಡಿದ ಆಶೀರ್ವಾದವನ್ನು ಏಸಾವನ ಕಣ್ಣೀರು, ತಮ್ಮನನ್ನು ಕೊಂದುಹಾಕುವ ಆಕ್ರೋಶ ಇಂತಹ ಯಾವುದೇ ಕಾರಣಕ್ಕೂ ಹಿಂಪಡೆಯಲು ಸಾಧ್ಯವಿರಲಿಲ್ಲ.
ಯಾಕೋಬನನ್ನು ಕೊಂದುಹಾಕುವ ಏಸಾವನ ಆಕ್ರೋಶವನ್ನು ಗ್ರಹಿಸಿದ ರೆಬೆಕ್ಕಾಳು ಈಸಾಕನ ಸಮ್ಮತಿಯೊಂದಿಗೆ ಯಾಕೋಬನನ್ನು ಹುಡುಗಿ ನೋಡಿ ಮದುವೆ ಮಾಡಿಕೊಳ್ಳಲು ತನ್ನ ತಮ್ಮ ಲಬಾನನ ಮನೆಗೆ ಕಳುಹಿಸುತ್ತಾಳೆ. ವರ್ಷಗಳು ಉರುಳಿದಂತೆ, ರೆಬೆಕ್ಕಾ ತನ್ನ ಕಿರಿಯ ಮಗನನ್ನು ಅಪ್ಪಿಕೊಳ್ಳಲು ಹಂಬಲಿಸುತ್ತಾ, ತನ್ನ ಮಕ್ಕಳನ್ನು ತನ್ನ ಅಪ್ಪುಗೆಯಲ್ಲಿ ಸೇರಿಸಿಕೊಳ್ಳುವ ಭಾಗ್ಯವನ್ನು ಆಶಿಸುತ್ತಾಳೆ. ಆದರೆ ಯಾಕೋಬನು ಮರಳಿ ಬರುವ ಮುನ್ನ ಇಪ್ಪತ್ತಕ್ಕಿಂತ ಹೆಚ್ಚು ವರ್ಷಗಳು ಆಗಾಗಲೇ ಕಳೆದು ಹೋಗಿರುತ್ತವೆ. ತನ್ನ ಮಗನನ್ನು ಸ್ವಾಗತಿಸಲು ಈಸಾಕನು ಜೀವ ಹಿಡಿದುಕೊಂಡಿದ್ದನು ಆದರೆ ರೆಬೆಕ್ಕಾಳಿಗಾಗುತ್ತಿರಲಿಲ್ಲ. 
ರೆಬೆಕ್ಕಾಳ ಚಿಕ್ಕವಯಸ್ಸಿನಲ್ಲೇ, ದೇವರು ತಮ್ಮ ಜನರ ಚರಿತ್ರೆಯಲ್ಲಿ ಪ್ರಮುಖ ಪಾತ್ರವಹಿಸಲು ಅವಳನ್ನು ಕರೆದರು. ಅವಳನ್ನು ಬಹಳವಾಗಿ ಬೆನ್ನಟ್ಟಿದರು. ಸಾರಾಳಂತೆ, ಅವಳು ಸಹ ದೇವ ಜನರ ಮಾತೃಪ್ರಧಾನಳಾಗುತ್ತಾಳೆ ಹಾಗೂ ದೇವರ ವಾಗ್ದಾನದಲ್ಲಿ ಅವಳ ಹಸ್ತಕ್ಷೇಪವನ್ನು ಅರಿತ ಅವಳ ಹೃದಯ ಸಾರಾಳಂತೆ ಅನುಮಾನವನ್ನು ವಿಶ್ವಾಸದಿಂದ ಬೇರ್ಪಡಿಸುತ್ತದೆ. ದೇವರ ವಾಗ್ದಾನದಲ್ಲಿ ನಿಶ್ಚಲವಾಗಿರುವುದು ಕಷ್ಟವೆಂದು ಅರಿತ ಅವಳು, ಅದನ್ನು ಸಾಧಿಸುವ ತಂತ್ರ ಹುಡಿಗಳು ಅವಳ ಹೃದಯವನ್ನು ಪ್ರತಿಬಿಂಬಿಸುವ ಫಲಿತಾಂಶಗಳು ಮಿಶ್ರವಾಗಿದ್ದವು. ತನ್ನ ಮನೆಯಿಂದ ಹಾಗೂ ತುಂಬಾ ಪ್ರೀತಿಸಿದ ತಾಯಿಂದ ಓಡಿಸಲಾದ ಯಾಕೋಬನಾದರೊ ನಿಜಕ್ಕೂ ವಾಗ್ದಾನಕ್ಕೆ ಬದ್ಧನಾಗಿ     ಉತ್ತರಾಧಿüಕಾರಿಯಾದನು. ಇದಲ್ಲದೆ ಅವನ ಮತ್ತು ಅವನ ವಂಶಸ್ಥರು, ಏಸಾವ ಮತ್ತು ಏದೋಮಿನವರೊಂದಿಗೆ ಬಗೆಹರಿಯದ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಎರಡು ಸಾವಿರ ವರ್ಷಗಳ ನಂತರ, ಇಡುಮಿಯ (ಏದೋಮಿನ ಗ್ರೀಕ್ ಮತ್ತು ರೋಮನ್ ಹೆಸರು) ದಿಂದ ಬಂದ ಹೇರೋದರಸನು, ಕಂದ ಯೇಸುವನ್ನು ನಾಶಮಾಡುವ ಪ್ರಯತ್ನದಲ್ಲಿ ಅನೇಕ ಮುಗ್ಧ ಮಕ್ಕಳನ್ನು ವಧಿಸುತಾನೆ. ಆದರೂ ದೇವರು ತಮ್ಮ ಉದ್ದೇಶಗಳನ್ನು ಪೂರೈಸುವ ಸಲುವಾಗಿ ಆ ಮಹಿಳೆಯ ಮುಖಾಂತರ ಕಾರ್ಯನಿರ್ವಹಿಸುತ್ತಿದ್ದರು.

0-0-0-0-0-0

ಯೊವಾನ್ನರ ಶುಭಸಂದೇಶ


ಸಹೋ. ವಿನಯ್ ಕುಮಾರ್

ಈ ಸಂಚಿಕೆಯಲ್ಲಿ ಸಂತ ಯೊವಾನ್ನರ ಶುಭಸಂದೇಶದ ರಚನೆಯ ಬಗ್ಗೆ ತಿಳಿದುಕೊಳ್ಳೋಣ. ಸಂತ ಯೊವಾನ್ನರ ಶುಭಸಂದೇಶವನ್ನು ಇತರೆ ಶುಭಸಂದೇಶಗಳಿಗೆ ತುಲನೆ ಮಾಡಿದರೆ ಈ ಶುಭಸಂದೇಶವು ಮೇಲ್ನೋಟಕ್ಕೆ ಸಾಧಾರಣವೆಂಬತೆ ಕಂಡುಬರುತ್ತದೆ. ಸಂತ  
ಯೊವಾನ್ನರ ಶುಭಸಂದೇಶವನ್ನು ಮುಖ್ಯವಾಗಿ ಎರಡು ವಿಭಾಗವಾಗಿ ವಿಂಗಡಿಸಬಹುದು; 1) ಸಾಂಕೇತಿಕ ಪುಸ್ತಕ. 2) ಮಹಿಮೆಯ ಪುಸ್ತಕ. ಇದರ ಜೊತೆಗೆ ಮುನ್ನುಡಿ ಹಾಗೂ ಸಮಾಪ್ತಿ. ಮುನ್ನುಡಿ- 1:1-18, ಸಾಂಕೇತಿಕ ಪುಸ್ತಕ 1:19-12:50, ಮಹಿಮೆಯ ಪುಸ್ತಕ 13:1-20:31 ಹಾಗೂ ಸಮಾಪ್ತಿ 21:1-25. ಸ್ಥಳಾಂತರ ಸಿದ್ಧಾಂತವು ನಮಗೆ ಕೆಲವೊಂದು ಅಧ್ಯಾಯಗಳು ಶುಭಸಂದೇಶದ ಒಳಗೆ ಸರಿಯಾದ ಜಾಗದಲ್ಲಿ ಇಲ್ಲ ಎಂಬುದನ್ನು ತಿಳಿಸುತ್ತದೆ. ಒಂದಲ್ಲ ಒಂದು ಕಾರಣಕ್ಕೆ ಕೆಲವು ಅಧ್ಯಾಯಗಳು ಸ್ಥಳಾಂತರಗೊಂಡಿದೆ, ಆದ್ದರಿಂದ ನಾವು ಸರಿಯಾದ ರೀತಿಯಲ್ಲಿ ಶುಭಸಂದೇಶವನ್ನು ತಿಳಿಯಬೇಕಾದರೆ  ನಾವು ಮರುರಚನೆ ಮಾಡಿ ವಿಷಯದ ಬಗ್ಗೆ ಅಧ್ಯಯನ ಮಾಡುವುದು ಸೂಕ್ತವಾಗಿದೆ. ಏಕೆ ಶುಭಸಂದೇಶದ ರಚನೆಯ ಕ್ರಮ ಸರಿ ಇಲ್ಲ? ಎಂಬ ಪ್ರಶ್ನೆಗೆ  ಇಲ್ಲಿ ತಾರ್ಕಿಕವಾದ ಹಾಗೂ ಕ್ರಮಬದ್ಧವಾದ ಹರಿವು ಇಲ್ಲದಿರುವುದು ಇದಕ್ಕೆ ಕಾರಣ ಎಂದು ತಿಳಿಸಲಾಗಿದೆ. 2:1 - ಯೇಸುಸ್ವಾಮಿ ಗಲಿಲೇಯದಲ್ಲಿ, 2: 13 - ಯೇಸುಸ್ವಾಮಿ ಜೆರುಸಲೇಮ್‍ನಲ್ಲಿ 4: 1 - ಯೇಸುಸ್ವಾಮಿ ಗಲಿಲೇಯದಲ್ಲಿ, 5: 1 - ಯೇಸುಸ್ವಾಮಿ ಜೆರುಸಲೇಮ್‍ನ. ಅಧ್ಯಾಯ-6 ಆರಂಭವಾಗುವುದು ಯೇಸುಸ್ವಾಮಿ ತಿಬೇರಿಯ ಸರೋವರದಲ್ಲಿ ಇದ್ದಾರೆ ಎಂಬಂತೆ ಕಾಣುತ್ತದೆ. ಅಧ್ಯಾಯ ಏಳರಲ್ಲಿ ಮತ್ತೆ ಅವರು ಗಲಿಲೇಯದಲ್ಲಿದ್ದಾರೆ. ಎಂದು ತಿಳಿಸಲಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿದುಬರುವ ವಿಷಯ ಈಗಿನಂತೆ ಆಗ ಸಾರಿಗೆ ಸಂಪರ್ಕ ವ್ಯವಸ್ಥೆಗಳಿರಲಿಲ್ಲ. ಅದರಲ್ಲೂ ಇಷ್ಟು ವೇಗವಾಗಿ ಗೆಲಿಲೇಯದಿಂದ ಜೆರುಸಲೇಮಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಗೆಲಿಲೇಯದಿಂದ ಜೆರುಸಲೇಮಿಗೆ ಹೋಗಲು ಬಹಳ ಅಂತರವಿತ್ತು. ಈಗ ನಾವು ಈ ನಗರಗಳ ನಡುವೆ ಇರುವ ಅಂತರ ನೋಡಿದರೆ ಅದು 121 ಕಿಲೋಮೀಟರ್ ದೂರದಲ್ಲಿದೆ. ಈ ಶುಭಸಂದೇಶದ ರಚನೆಯ ಬಗ್ಗೆ ನಾವು ಕಾಲ್ಪನಿಕವಾಗಿ ಒಂದು ರಚನಾ ಕ್ರಮವನ್ನು ಕಲ್ಪಿಸಿಕೊಳ್ಳಬಹುದು. 
ಮುನ್ನುಡಿ 1: 1 - 18 
ಯೊವಾನ್ನರ ಸಂದೇಶದ ಮುನ್ನುಡಿಯೂ ತುಂಬ ವಿಶಿಷ್ಟವಾದದ್ದು  ಹಾಗೂ ಬಹು ಮುಖ್ಯವಾದುದಾಗಿದೆ. ಇದರ ರಚನೆ ವೈವಿಧ್ಯತೆಯಿಂದ ಕೂಡಿದೆ. ಇದು ಗದ್ಯ ಹಾಗೂ ಪದ್ಯ ಮಿಶ್ರಿತಗೊಂಡು ರಚಿಸಿರುವಂತಹ ಮುನ್ನುಡಿಯಾಗಿದೆ. ಈ ಮುನ್ನುಡಿಯೂ ‘ವಾಕ್ಯ’ದ ಸ್ತುತಿಯನ್ನು ಮಾಡುತ್ತದೆ. ಕಾರಣ ದೇವರು ಆ  ವಾಕ್ಯವಾಗಿದ್ದರೆ. ಈ ಮುನ್ನುಡಿಯಲ್ಲಿ ದೇವರ ಇರುವಿಕೆ, ಪ್ರಸನ್ನತೆ, ಸಾಕ್ಷಾತ್ಕಾರ ಹಾಗೂ ಅವರ ಕುರುಹುಗಳನ್ನು ವಾಕ್ಯದ ಜೊತೆ ತಾಳೆಹಾಕಿ ಸೂಚಿಸಲಾಗಿದೆ. ಈ ರೀತಿಯ ಪದ್ಯ ಬರೆಯುವ ಮುಂಚೆಯೇ  ಬೇರೆ ಸಂಸ್ಕೃತಿಯಲ್ಲಿ ಈ ಪದ್ಯ ಇರುವುದನ್ನು ನಾವು ಕಾಣಬಹುದಾಗಿದೆ. ಈ ಪದ್ಯಕ್ಕೆ ತನ್ನದೇ ಆದಂತಹ ಸ್ವಂತ ಅಂಶಗಳನ್ನು ಹಾಗೂ ದೈವೀಶಾಸ್ತ್ರವನ್ನು ಸೇರಿಸಿ ಈ ಶುಭಸಂದೇಶದ ಕರ್ತೃ ಇಲ್ಲಿ ಅದನ್ನು ಅಳವಡಿಸಿದ್ದಾರೆ. 
ಸಾಂಕೇತಿಕ ಪುಸ್ತಕ
ಈ ವಿಭಾಗದಲ್ಲಿ ನಾವು ಯೇಸುಸ್ವಾಮಿಯ ಬಹಿರಂಗ ಜೀವನ ಕುರಿತು ನೋಡುತ್ತೇವೆ. ಇಲ್ಲಿ ನಾವು 7 ಸಂಕೇತಗಳನ್ನು ಅಥವಾ ಚಿಹ್ನೆಗಳನ್ನು ಕಾಣುತ್ತೇವೆ. ಯೇಸುಸ್ವಾಮಿಯ ಪವಾಡಗಳನ್ನು ಈ ಶುಭಸಂದೇಶದಲ್ಲಿ ಸಂಕೇತವಾಗಿ ಅಥವಾ ಚಿಹ್ನೆಯಾಗಿ  ಸೂಚಿಸಲಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಯೊವಾನ್ನರ ಶುಭಸಂದೇಶದಲ್ಲಿ ಕೇವಲ ಪವಾಡಗಳು ಮಾತ್ರ ಸಂಕೇತವನ್ನು ಸೂಚಿಸುವುದಿಲ್ಲ ಬದಲಾಗಿ ಯೇಸುಸ್ವಾಮಿ ಮಾಡುವ ಪ್ರತಿಯೊಂದು ಕಾರ್ಯವು ಸಹ ಸಂಕೇತ ಎಂದು ಸೂಚಿಸುತ್ತದೆ. 
ಯೇಸುಸ್ವಾಮಿ ವ್ಯಕ್ತಿಯೇ ಒಂದು ಸಂಕೇತವಾಗಿದ್ದಾರೆ. ಯೇಸುಸ್ವಾಮಿಯ ಶಿಲುಬೆ ಮರಣ ಕೂಡ ಒಂದು ದೊಡ್ಡ ಸಂಕೇತವಾಗಿದೆ. ಈ ಕಾರಣಗಳಿಗೆ ಈ ಶುಭಸಂದೇಶವನ್ನು ಸಾಂಕೇತಿಕ ಶುಭಸಂದೇಶ ಎಂದು ಕರೆಯಲಾಗುತ್ತದೆ. 
ಮಹಿಮೆಯ ಪುಸ್ತಕ
ಈ ವಿಭಾಗವು ನಮಗೆ ಯೇಸುಸ್ವಾಮಿಯ ಅಂತಿಮ ದಿನಗಳ ಬಗ್ಗೆ ವಿವರಣೆಯನ್ನು ನೀಡುತ್ತದೆ. ಅವರ ವಿಚಾರಣೆ, ಪಾಡು, ಮರಣ, ಪುನರುತ್ಥಾನ, ಪ್ರೇಷಿತರ ನಿಯೋಗ ಹಾಗೂ ಪವಿತ್ರಾತ್ಮರ ವರದಾನ ಈ ವಿಚಾರಗಳ ಬಗ್ಗೆ ಇಲ್ಲಿ ನಾವು ಕಾಣಬಹುದಾಗಿದೆ. ಈ ಭಾಗದಲ್ಲಿ ವಿಶೇಷವಾಗಿ "ಯೇಸುಸ್ವಾಮಿಯ ಘಳಿಗೆ"  ಎಂಬುದರ ಬಗ್ಗೆ ಉಲ್ಲೇಖಿಸುತ್ತದೆ. 13:1 - ನಲ್ಲಿ ಯೇಸುಸ್ವಾಮಿಯ ಘಳಿಗೆಯನ್ನು ಮಹಿಮೆಯ ಘಳಿಗೆ ಎಂದು ಗುರುತಿಸಲಾಗುತ್ತದೆ. ಈ ಶುಭಸಂದೇಶದಲ್ಲಿ ಯೇಸುಸ್ವಾಮಿಯ ಮರಣವು ಅವರ ವೈಭವೀಕರಣಕ್ಕೆ ಸಮಾನವಾಗಿದೆ ಅಥವಾ ಅವರ ಮಹಿಮೆಗೆ ಸಮಾನವಾಗಿದೆ ಎಂದು ಸೂಚಿಸುತ್ತದೆ. ಶುಭಸಂದೇಶವು ಪ್ರತ್ಯೇಕವಾಗಿ ಕೂಡಿರುವಂತಹ ಈ ಪರಿಭಾಷೆಯನ್ನು ಹೊಂದಿದೆ -  ಅದೇನೆಂದರೆ ಮೇಲಕ್ಕೇರುವುದು ಅಥವಾ ಮೇಲಕ್ಕೆತ್ತಲ್ಪಡುವುದು. 3:14 ಹಾಗೂ 8:28ರಲ್ಲಿ ನಾವು ನೋಡುತ್ತೇವೆ ಮೇಲಕ್ಕೇರುವುದು ಎಂಬುದನ್ನು. ಈ ಮೇಲಕ್ಕೇರುವುದು ಎಂಬ ಪರಿಭಾಷೆ ಎರಡು ಮುಖ್ಯ ಅಂಶವನ್ನು ನಮಗೆ ತಿಳಿಸುತ್ತದೆ. ಪ್ರಪ್ರಥಮವಾಗಿ ಯೇಸುಸ್ವಾಮಿ  ದೈಹಿಕವಾಗಿ ಶಿಲುಬೆಯ ಮೇಲೆ ಏರುವುದಾಗಿದೆ. ಎರಡನೆಯದು ಯೇಸುಸ್ವಾಮಿಯ ದೈವಿ ಅಂತಸ್ತು ಮೇಲಕ್ಕೇರುವುದು ಅಥವಾ ಅವರು ಮಹಿಮೆಗೆ ಏರಲ್ಪಡುವುದನ್ನು ಸೂಚಿಸುತ್ತದೆ. 
ಸಮಾಪ್ತಿ
 ಇದನ್ನು ಬಹುಷಃ ಪುಸ್ತಕ ಬರೆದ ನಂತರ ಸೇರಿಸಿರಬಹುದು ಅಥವಾ ಇದು ಒಂದು ಅನುಬಂಧದಂತೆ ಕಂಡುಬರುತ್ತದೆ. ಅನೇಕ ಬೈಬಲ್ ವಿದ್ವಾಂಸರು ಇದನ್ನು ನಂತರದ ದಿನಗಳಲ್ಲಿ ಶುಭಸಂದೇಶಕ್ಕೆ ಸೇರಿಸಲಾಗಿದೆ ಎನ್ನುತ್ತಾರೆ. ಇದಕ್ಕೆ ಕೆಲವು ಕಾರಣಗಳಿವೆ; 1) 20:30-31 - ಇಲ್ಲಿ ಶುಭಸಂದೇಶ ಸಮಾಪ್ತಿಗೊಂಡಂತೆ ಕಂಡು ಬರುತ್ತದೆ. 2) ಎರಡನೆಯ ಸಮಾಪ್ತಿಯನ್ನು ನಾವು 21:24-25 ರಲ್ಲಿ ನೋಡುತ್ತೇವೆ. ಇದು ಪುನರಾವರ್ತಿತವಾಗಿರುವುದನ್ನು ಕಾಣಬಹುದಾಗಿದೆ. ಬಹುಶಃ ಇದನ್ನು ಪರಿಷ್ಕರಿಸಿದ ಸಂಪಾದಕರು ಪರಿಷ್ಕರಣೆಯ ನಂತರ ಶುಭಸಂದೇಶಕ್ಕೆ ಸೇರಿಸಲಾಗಿದೆ ಎಂಬುದು ಹಲವರ ವಾದವಾಗಿದೆ.
ಮುಂದುವರಿಯುವುದು

ಸಬಲೆ ಎಂಬ ಕಹಳೆ ಮೊಳಗಿಸುತ್ತಿದ್ದಾಳೆ ಮಹಿಳೆ !!!


ಜಾಜಿ ಎಂ. ದಾಸಾಪರ

ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ನಾವು ನೋಡುವುದಾದರೆ ಅದರಲ್ಲಿ ಪುರುಷರಂತೆ ಮಹಿಳೆಯರೂ ಸಹ ಎಲ್ಲಾ ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಪುರುಷರಿಗಿಂತ ನಾವು ಯಾವುದರಲ್ಲೂ ಕಡಿಮೆಯಿಲ್ಲ ಎಂಬ ಮನೋಧೈರ್ಯವನ್ನು ಪ್ರದರ್ಶಿಸಿ ಅದರಲ್ಲಿ ಯಶಸ್ವಿಯೂ ಆಗುತ್ತಿದ್ದಾರೆ. ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಮಹಿಳೆಯರು ಈ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಚಿತ್ರಣ ನಮ್ಮ ಮುಂದಿದೆ. ಹೀಗೆ ಹಿಂದೆ ಅಸ್ತಿತ್ವದಲ್ಲಿದ್ದ ಪುರುಷಪ್ರಧಾನ ವ್ಯವಸ್ಥೆಗೆ ತನ್ನ ಕಾರ್ಯವೈಖರಿಯ ಮೂಲಕ ಉತ್ತರ ನೀಡುತ್ತಾ, ಪ್ರಸ್ತುತ ಸಮಾಜದ ಅಭಿವೃದ್ಧಿಗೆ ಪುರುಷರಂತೆ ಮಹಿಳೆಯರೂ ಕೂಡ ವರವಾಗಬಲ್ಲರು ಎಂಬುದನ್ನು ತಮ್ಮ ದಿಟ್ಟತನದಿಂದ ನಿರೂಪಿಸಿದ್ದಾರೆ.
ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಮಹಿಳೆಯರಿಗೆ ಅಂದು ಇದ್ದಂತಹ ಪರಿಸ್ಥಿತಿ ನಮಗೆ ಏನೆಂಬುದು ಅರ್ಥವಾಗುತ್ತದೆ. ಕೇವಲ ಮನೆಕೆಲಸಕ್ಕೆ ಮಾತ್ರ ಅವರನ್ನು ಸೀಮಿತಗೊಳಿಸಿ, ಹಲವಾರು ಕೆಟ್ಟ ವಿಧಿ-ಸಂಪ್ರದಾಯಗಳನ್ನು ಅವರ ಮೇಲೆ ಹೇರಿ, ಅವರು ಕುಟುಂಬಕ್ಕೆ ಮಾತ್ರ ಮೀಸಲು ಎಂಬ ಧೋರಣೆಯನ್ನು ಅವರ ಮೇಲೆ ಹೊರಿಸಿ, ಪುರುಷರ ಮಂದೆ ಅವರು ಮಾತನಾಡದಂತೆ ಅವನ್ನು ಹೀನಾಯವಾಗಿ ನೋಡಿಕೊಳ್ಳಲಾಗುತಿತ್ತು. ಅಪರೂಪಕ್ಕೆ ಒಬ್ಬರೋ ಇಬ್ಬರೋ ಎಂಬಂತೆ ವಿದಾಭ್ಯಾಸವನ್ನು ಪಡೆಯುತಿದ್ದರು. ಏಕೆಂದರೆ ವಿದಾಭ್ಯಾಸವೆಂಬುವುದು ಅವರಿಗೆ ಗಗನಕುಸುಮವಾಗಿತ್ತೇ ವಿನಃ ಕೈಗೆಟಕುವಂತದ್ದಾಗಿರಲಿಲ್ಲ. ಮುಕ್ಕಾಲು ಭಾಗ ಮಹಿಳೆಯರು ತಾವಾಯಿತು ತಮ್ಮ ಮನೆಕೆಲಸವಾಯಿತು ಎಂದುಕೊಂಡು ಜೀವನ ಸಾಗಿಸುತ್ತಿದ್ದರು. ಸಮಾಜದ ಆಗುಹೋಗುಗಳ ಬಗ್ಗೆ ಅವರಿಗೆ ತಿಳುವಳಿಕೆಯೇ ಇರಲಿಲ್ಲ. ನಿಜ ಹೇಳಬೇಕೆಂದರೆ ಆಗಿದ್ದ ಪುರುಷಪ್ರಧಾನ ವ್ಯವಸ್ಥೆಯೆಂಬ ಚಕ್ರವ್ಯೂಹಕ್ಕೆ ಸಿಲುಕಿ ಅವರು ಅನುಭವಿಸಿದ ಕಷ್ಟವನ್ನು ಹೇಳತೀರದು. ಇವರ ಮಾತಿಗೆ ಕಿಂಚಿತ್ತೂ ಬೆಲೆಯಿರಲಿಲ್ಲ. ಹೀಗೆ ಇವರಿಗೆ ಏನೂ ತಿಳಿಯದು ಎಂಬ ಸಮಾಜದ ಪರಿಕಲ್ಪನೆಯಲ್ಲಿ ಸಿಲುಕಿ ತುಂಬಾ ನಲುಗಿದ್ದರು. ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಇಂತಹ ಎಷ್ಟೋ ಘಟನೆಗಳು ನಮ್ಮ ಗಮನಕ್ಕೆ ಬಂದಿರುತ್ತವೆ. 
ಅಂದಿನಕಾಲದಲ್ಲಿ ಮಹಿಳೆಯರು ಸಾಮಾಜಿಕವಾಗಿ ಬದುಕಲು ಅರ್ಹರಿದ್ದರೂ, ಆ ಬದುಕುವ ಹಕ್ಕನ್ನೇ ಅವರಿಂದ ಕಸಿದುಕೊಂಡು ಅವರು ಸದಾ ಕಣ್ಣೀರಿನಲ್ಲೇ ಕೈತೊಳೆಯುವಂತೆ ಮಾಡಿದ, ಅಂದಿನ ಆ ಕುರುಡು ಸಮಾಜದ ಸ್ಥಿತಿಯನ್ನು  ಇವರಿಂದ ಹತ್ತಿಕ್ಕಲಾಗಲಿಲ್ಲವೆಂಬ ನೋವು ಬಹುಶಃ ಅಂದಿನ ಮಹಿಳೆಯರನ್ನು ಹೆಚ್ಚಾಗಿ ಕಾಡಿತ್ತು ಎಂಬುದರಲ್ಲಿ ಯಾವುದೇ ಅನುಮಾನÀವಿಲ್ಲ. ಅಷ್ಟೇ ಅಲ್ಲದೇ ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಉಂಟಾದ ಮಾನಸಿಕ ನೋವು, ದುಃಖ, ಹತಾಶೆ, ಎಷ್ಟಿತ್ತೆಂಬುದನ್ನು ಊಹಿಸಿಕೊಳ್ಳಲು ಅಸಾಧ್ಯ. ಸಮಾಜದ ಅಭಿವೃದ್ಧಿಗೆ ಮಹಿಳೆಯರೂ ಕೂಡ ವರವಾಗಬಲ್ಲರು ಎಂಬುದನ್ನು ಪುರುಷನು ಅರಿತುಕೊಳ್ಳದೇ ಮೂಢನಾಗಿಬಿಟ್ಟ. ಇದರಿಂದಾಗಿ ಮಾಢನಂಬಿಕೆಯೆಂಬ ವಿಷವರ್ತುಲದಲ್ಲಿ ಸಿಲುಕಿ ನೋವನ್ನೇ ತಮ್ಮ ಸಂಗಾತಿನÀನ್ನಾಗಿ ಮಾಡಿಕೊಂಡು ತಮಗೆ ಎಷ್ಟೇ ನೋವಾದರೂ ಅವುಗಳನ್ನೆಲ್ಲಾ ಮನಸ್ಸಿನಲ್ಲಿಯೇ ಅದುಮಿಟ್ಟುಕೊಂಡು ಕುಟುಂಬವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾ ತಮಗೂ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ತಮಗೆ ತಾವೇ ಮೌನಿಯಾಗುತ್ತಿದ್ದರು. 
ಇಷ್ಟೆಲ್ಲಾ ನೋವುಗಳನ್ನು ಅನುಭವಿಸಿದ್ದ ಮಹಿಳೆಯರಿಗೆ ಕಾಲಚಕ್ರ ಉರುಳಿದಂತೆ, ಬದಲಾವಣೆಯೆಂಬ ತಂಗಾಳಿ ಅವರ ಮೇಲೆ ಬೀಸತೊಡಗಿತು. ಮಾನವನ ಯೋಚನಾ ಲಹರಿ ಹಲವಾರು ಆಯಾಮಗಳನ್ನು ಕಂಡುಕೊಂಡಿತು. ಆ        ಯೋಚನೆಗಳು ಮಹಿಳೆಯರಿಗೆ ವರವಾಗಿ ಪರಿಣಮಿಸಿದ್ದರಿಂದ ಅವರಿಗೂ ಸಮಾಜದಲ್ಲಿ ಒಂದು ಸ್ಥಾನಮಾನ ಎಂಬುವುದು ದೊರಕಿತು. ಮಹಿಳೆಯರ ಬದುಕಿನಲ್ಲಿ ಮಹತ್ತರ ಸ್ಥಾನಪಲ್ಲಟ ಆರಂಭವಾಯಿತು. ಮಹಿಳೆಯರಿಂದ ಏನೂ ತಾನೇ ಸಾಧ್ಯ ಎಂದುಕೊಂಡಿದ್ದ ಪುರುಷರಿಗೆ ಸಾಮಾಜಿಕ ಕೊಡುಗೆಗಳ ಮೂಲಕವೇ ಇವರು ನೇರವಾಗಿಯೇ ಉತ್ತರಕೊಡಲು ಸನ್ನದ್ಧರಾದರು. ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮಿಂದಲೂ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದನ್ನು ಪುರುಷರಿಗೆ ತೋರಿಸಿಕೊಟ್ಟರು. ಹೀಗೆ ಪುರುಷರಷ್ಟೇ ನಾವು ಶಕ್ತರು ಎಂಬುದನ್ನು ತಮ್ಮ ಕಾರ್ಯರೂಪದಲ್ಲಿ ತೋರಿಸಿಕೊಟ್ಟರು.
ಇಂದಿನ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಮಹಿಳೆಯರ ಪಾತ್ರ ಏನೆಂಬುದು ನಮಗೆ ತಿಳಿಯುತ್ತದೆ. ಸಮಾಜದ ಅಭಿವೃದ್ಧಿಗೆ ತಮ್ಮ ಕೈಗಳನ್ನು ಸೇರಿಸುವುದರ ಮೂಲಕ ವಿವಿಧ ಸ್ತರಗಳಲ್ಲಿ ತಮ್ಮದೇ ಆದ ಕೊಡುಗೆಗಳನ್ನು ಸಲ್ಲಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಯ ಶಿಖರವನ್ನೇ ಅವರು ನಿರ್ಮಿಸುತ್ತಿದ್ದಾರೆ. ತಾವೆÉೀ ಮಹಾಪುರುಷರು ಎಂದುಕೊಂಡಿದ್ದ ಅವರಿಗೆ ತಕ್ಕ ಉತ್ತರವನ್ನೇ ನೀಡುತ್ತಿದ್ದಾರೆ. ಇದರ ಮೂಲಕ ನಾವು ಸಬಲರಾಗಿದ್ದೇವೆÉಂದು ಇಡೀ ಜಗತ್ತಿಗೆ ಸಾರುತ್ತಿದ್ದಾರೆ. ಇಂದು ಎಷ್ಟೋ ಜನರಿಗೆ ಸಾಧನೆ ಮಾಡಲು ಇವರೆ ಸ್ಫೂರ್ತಿಯಾಗಿದ್ದಾರೆ. ತಾಯಿಯಾಗಿ ಮಕ್ಕಳ ಜವಾಬ್ದಾರಿ ಹೊತ್ತು, ಅವರ ಭವಿಷ್ಯದ ಕನಸಿಗೆ ತಮ್ಮ ಭುಜವನ್ನು ನೀಡುತ್ತಿದ್ದಾರೆ. ಅವರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬ ತಮ್ಮ ಯಶೋಗಾಥೆಯನ್ನು ಸಮಾಜದಲ್ಲಿ ಹಲವಾರು ರೀತಿಯಲ್ಲಿ ಬರೆದು, ಎಲ್ಲರಿಗೂ ತಮ್ಮ ತಾಕತ್ತು ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಅಂತರಾಷ್ಟ್ರಿಯ ಮಹಿಳಾ    ದಿನಾಚರಣೆಯ ಈ ಸಂದರ್ಭದಲ್ಲಿ ಅವರು ಸಮಾಜದ ಒಳಿತಿಗಾಗಿ ಪ್ರತಿದಿನವೂ ಇದೇ ರೀತಿ ಶ್ರಮಿಸಲಿ ಎಂದು ಹಾರೈಸುತ್ತಾ, ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದುಕೊಂಡು ಮುನುಗ್ಗುತ್ತಿರುವ ಎಲ್ಲಾ ಮಹಿಳೆಯರಿಗೆ ಶ್ರೇಯಸ್ಸನ್ನು ಬಯಸುತ್ತಾ, ಅವರ ಈ ಸಾಧನೆ ಎಂಬ ದೀಪ ಎಂದೂ ಅವರ ಬಾಳಿನಲ್ಲಿ ಆರದಿರಲಿ ಎಂದು ಶುಭಕೋರೋಣವೇ?

0-0-0-0-0-0

ಪರಮ ಸಂಸ್ಕಾರ [ಭಾಗ 4)


- ಸಿಎಂಜೆ

ದೃಢೀಕರಣ
ಸಾಧಾರಣವಾಗಿ ಬಾಲಕ ಅಥವಾ ಬಾಲಕಿಯ ಹನ್ನೆರಡನೇ ವಯಸ್ಸಿನಲ್ಲಿ ಅಥವಾ ಆನಂತರ ಅವರಿಗೆ ಕೊಡಲಾಗುವ ವಿಶಿಷ್ಟ ಸಂಸ್ಕಾರ ದೃಢೀಕರಣ ಸಂಸ್ಕಾರ. ದೀಕ್ಷಾಸ್ನಾನದಂದು ಮಗು ತನ್ನ ತಂದೆತಾಯಿಯರು ತನ್ನ ಪರವಾಗಿ ಮಾಡಿದ ವಾಗ್ದಾನಗಳನ್ನು ಇಂದು ತಾನೇ ಮಾಡುವುದಕ್ಕಾಗಿ ಈ ವಯಸ್ಸನ್ನು ನಿಗದಿ ಪಡಿಸಲಾಗಿದೆ. ದೃಢೀಕರಣ ಸಂಸ್ಕಾರವನ್ನು ನೀಡುವ       ಅಧಿಕಾರವಿರುವುದು ಬಿಷಪರಿಗೆ ಮಾತ್ರ. ಪೂಜಾಸಂದರ್ಭದಲ್ಲಿ 
ಬಲಿಪೀಠದ ಮುಂದೆ ಬಿಷಪರು ಕುಳಿತು, ಮಗುವಿನ ಹೆಸರಿಡಿದು ಕರೆದು ಅದರ ತಲೆಯ ಮೇಲೆ ಎರಡೂ ಹಸ್ತಗಳನ್ನಿರಿಸಿ ಪವಿತ್ರಾತ್ಮರನ್ನು ವಿಶೇಷ ಪ್ರಾರ್ಥನೆಯ ಮೂಲಕ ಆಹ್ವಾನಿಸಿ ಮಗುವಿನ ಹಣೆಯ ಮೇಲೆ ಪವಿತ್ರತೈಲವನ್ನು ಲೇಪಿಸಿ ಆ ಮಗುವನ್ನು ಕ್ರಿಸ್ತವಿಶ್ವಾಸದಲ್ಲಿ ನೆಲೆಗೊಳಿಸುತ್ತಾರೆ. “ತನ್ನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕು ಎಂಬುದೇ ದೇವರ ಉದ್ದೇಶ” (ಯೊವಾನ್ನ 3:16). ತಾನು ಎಳೆಯ ಕೂಸಾಗಿದ್ದಾಗ ಗುರುಗಳು ನೆರವೇರಿಸಿದ ಇದೇ ಕ್ರಿಯೆಯನ್ನು ಇದೀಗ ಬಿಷಪರು ಮಾಡಿದ್ದನ್ನು ಅನುಭವಿಸುವ ಆ ಮಗು ಕ್ರಿಸ್ತವಿಶ್ವಾಸದಲ್ಲಿ ಬಲಗೊಂಡು ಬೆಳೆಯುತ್ತದೆ. ಬಿಷಪರು ಬರಲಾಗದ ಸಂದರ್ಭಗಳಲ್ಲಿ ಅವರು ದೃಢೀಕರಣ ಸಂಸ್ಕಾರ ನೀಡಲು ಆಯ್ದ ಗುರುವೊಬ್ಬರಿಗೆ ಪ್ರಾತಿನಿಧ್ಯ ನೀಡಬಹುದು. ಸಾಮಾನ್ಯವಾಗಿ ದೃಢೀಕರಣ ಸಂದರ್ಭದಲ್ಲಿ ಮಗುವಿಗೊಂದು ವೈಯಕ್ತಿಕ ಶ್ರೀಗ್ರಂಥವನ್ನು ನೀಡುವ ಮೂಲಕ ಅವನನ್ನು ಪವಿತ್ರ ಬೈಬಲ್ ಓದಿಗೆ ಆಹ್ವಾನಿಸಲಾಗುತ್ತದೆ. ಕೆಲ ಧರ್ಮಪ್ರಾಂತ್ಯಗಳಲ್ಲಿ ದೃಢೀಕರಣ ಸ್ವೀಕಾರವನ್ನು ಖಾತರಿ ಪಡಿಸಲು ಒಂದು ಪ್ರಮಾಣಪತ್ರವನ್ನೂ ನೀಡಲಾಗುತ್ತದೆ.
ದೃಢೀಕರಣ ಸಂಸ್ಕಾರವು ಸಂಸ್ಕಾರಗಳಲ್ಲೇ ಮಹತ್ತರವಾದದ್ದು. ಏಕೆಂದರೆ ದೇವರ ಪವಿತ್ರಾತ್ಮರು ಇಳಿದು ಬಂದು ವ್ಯಕ್ತಿಯ ಆಂತರ್ಯಯದಲ್ಲಿ ನೆಲೆಸುವ ಮೂಲಕ ಆ ವ್ಯಕ್ತಿಗೆ ಪರಮ ರಹಸ್ಯಗಳನ್ನು ಅರಿಯುವ ವ್ಯಾಖ್ಯಾನಿಸುವ ಮಹೋನ್ನತ ಶಕ್ತಿಯನ್ನು ದಯಪಾಲಿಸುತ್ತಾರೆ. “ನೀನು ಹೋಗುವ ಎಡೆಗಳಲ್ಲೆಲ್ಲ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನ್ನ ಸಂಗಡ ಇರುತ್ತೇನೆ” ಎಂದು ಅವರೇ ಹೇಳಿದ್ದಾರೆ. (ನೋಡಿ. ಯೆಹೋಶುವ 1:9). ಅದನ್ನೇ ಯೇಸುಸ್ವಾಮಿ “ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ, ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ” ಎಂದಿದ್ದಾರೆ. (ನೋಡಿ. ಯೊವಾನ್ನ 8:12). ದೃಢೀಕರಣ ಸಂಸ್ಕಾರವನ್ನು ಜೀವನದಲ್ಲಿ ಒಮ್ಮೆ ಮಾತ್ರವೇ ನೀಡಲಾಗುತ್ತದೆ. ಮತ್ತೆ ಮತ್ತೆ ನೀಡುವುದೆಂದರೆ ಅದು ಪವಿತ್ರಾತ್ಮರಿಗೆ ಬಗೆದ ಘೋರ ಅಪಮಾನ.
ನನ್ನ ಸ್ನೇಹಿತರ ಮಗ ಈಗ ಮದುವೆಗೆ ಸಿದ್ಧನಾಗುತ್ತಿದ್ದಾನೆ. ಧರ್ಮಕೇಂದ್ರದ ಗುರುಗಳು ದೃಢೀಕರಣದ ಪುರಾವೆ ತೋರಿಸಲು ಹೇಳಿದರು. ಅವನು 18 ವರ್ಷಗಳ ಹಿಂದೆ ಹಿಂದಿನ ಧರ್ಮಕೇಂದ್ರದಲ್ಲಿ 60 ಮಕ್ಕಳ ಜೊತೆಗೂಡಿ ಹೊಸ ಪರಮಪ್ರಸಾದ ಮತ್ತು ದೃಢೀಕರಣ ಪಡೆದನೆಂದು ಅವನ ತಂದೆತಾಯಿ ಹೇಳುತ್ತಾರೆ. ಆದರೆ ಆ ಧರ್ಮಕೇಂದ್ರದ ರಿಜಿಸ್ಟ್ರಿಯಲ್ಲಿ ಆ ಬಗ್ಗೆ ದಾಖಲಾಗಿಲ್ಲ. ಅಲ್ಲದೆ ಇವರ ಬಳಿ ಆ ಸ್ಮರಣೀಯ ಘಟನೆಯನ್ನು ಸೆರೆ ಹಿಡಿದ ಫೆÇೀಟೋ ಕೂಡಾ ಇಲ್ಲ. ಹದಿನೆಂಟು ವರ್ಷಗಳ ಹಿಂದೆ ನಡೆದ ಆ ಕಾರ್ಯಕ್ರಮದಲ್ಲಿ ಭಾಗಿಯಾದ ಯಾರದೂ ಪರಿಚಯವಿಲ್ಲ, ಮತ್ತು ಆ ದಿನ ಅಲ್ಲಿದ್ದ ಪಾದ್ರಿಯೂ ಜೀವಂತರಿಲ್ಲ. ಈಗ ಏನು ಮಾಡಬೇಕು?
ದೇವಾಲಯದ ರಿಜಿಸ್ತ್ರಿಯಲ್ಲಿ ಈ ಹುಡುಗನ ಹೆಸರು ದಾಖಲಾಗದೇ ಇರಲು ಎರಡು ಕಾರಣಗಳಿವೆ. ಒಂದು ಹುಡುಗನಿಗೆ ಪ್ರಾಪ್ತ ವಯಸ್ಸಾಗಿಲ್ಲವೆಂದು ಅಥವಾ ಧರ್ಮಾಧ್ಯಕ್ಷರ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲವೆಂದು ಅವನಿಗೆ ದೃಢೀಕರಣ ಕೊಟ್ಟಿಲ್ಲದೇ ಇರಬಹುದು, ಮತ್ತೊಂದು ಕಾರಣವೆಂದರೆ 
ಪಾದ್ರಿಯವರು ಅದನ್ನು ದಾಖಲಿಸಲು ಮರೆತಿರಬಹುದು. ಸಾಮಾನ್ಯವಾಗಿ ಅನೇಕ ಮಕ್ಕಳು ಸರತಿಯ ಸಾಲಿನಲ್ಲಿ ನಿಂತಾದ ದೃಢೀಕರಣ ಸ್ವೀಕರಿಸುವವರ ಕೈಯಲ್ಲಿ ಅವರ ಹೆಸರಿನ ಚೀಟಿ ಕೊಡಲಾಗುತ್ತದೆ. ತಮ್ಮ ಸರದಿ ಬಂದಾಗ ಅವರು ಅದನ್ನು ಧರ್ಮಾಧ್ಯಕ್ಷರ ಕೈಗೆ ಹಸ್ತಾಂತರಿಸಬೇಕು. ಅದು ದೃಢೀಕರಣದ ನಂತರ ಗುಡಿಯ ಪಾದ್ರಿಯ ಕೈಸೇರುತ್ತದೆ. ಕೊನೆಗೆ ಆ ಚೀಟಿಗಳ ಆಧಾರದಲ್ಲಿ ಗುರುಗಳು ರಿಜಿಸ್ಟ್ರಿಯಲ್ಲಿ ದಾಖಲಿಸುತ್ತಾರೆ. ಇಲ್ಲಿ ಬಹುಶಃ ಆ ಚೀಟಿ ಕಳೆದಿರಬಹುದು, ಅಥವಾ ಒಂದೇ ಹೆಸರಿನ ಇಬ್ಬರು ಹುಡುಗರಲ್ಲಿ ಒಬ್ಬನಿಗೆ ದೃಢೀಕರಣ ಕೊಟ್ಟಿಲ್ಲದಿರಬಹುದು.
ಆದರೆ ಈ ಹುಡುಗನಿಗೆ ಈಗ ಮದುವೆ ಹತ್ತಿರ ಬರ್ತಾ ಇದೆ. ಏನು ಮಾಡಬೇಕು ಎಂಬುದು ತಾಯ್ತಂದೆಯರ ಅಳಲು. ಮದುವೆ, ಸಾವು ಮುಂತಾದ ಸಂದರ್ಭಗಳಲ್ಲಿ ಸಂಬಂಧಪಟ್ಟ ಗುರುಗಳು ಭಕ್ತಾದಿಗಳನ್ನು ಸತಾಯಿಸಿ ವಿಕೃತಾನಂದ ಹೊಂದುತ್ತಾರೆನ್ನುವುದು ಸುಳ್ಳೇನಲ್ಲ. ಆದರೆ ಈಗ ಈ ಸಮಸ್ಯೆಗೆ ಪರಿಹಾರವೇನು? 
ದೃಢೀಕರಣ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರ, ಚಲನಚಿತ್ರ ಮುಂತಾದ ಪುರಾವೆ ಇಲ್ಲದಿದ್ದಲ್ಲಿ ಧರ್ಮಸಂಹಿತೆಯ ಕ್ಯಾನನ್ 876ರ ಪ್ರಕಾರ ಅಂದು ಹಾಜರಿದ್ದ ಯಾರೇ ಗೌರವಾನ್ವಿತ ವ್ಯಕ್ತಿ, ಅಥವಾ ದೃಢೀಕರಣ ಪಡೆದ ಮತ್ತೊಬ್ಬ ಹುಡುಗನ ತಾಯ್ತಂದೆ ಬಂದು ಸಾಕ್ಷಿ ನುಡಿಯಬೇಕು. ಇದು ಸಾಧ್ಯವಾಗದ ಪಕ್ಷದಲ್ಲಿ ‘ಷರತ್ತುಬದ್ದ ದೃಢೀಕರಣ’ ನೀಡಲಾಗುತ್ತದೆ. ಅದೇನೆಂದರೆ ದೃಢೀಕರಣ ಹೊಂದಿದ್ದರ ಕುರಿತಾದ ಸಾಕ್ಷಿಪುರಾವೆಗಳೆಲ್ಲ ಕಾಲಗರ್ಭದಲ್ಲಿ ಹುದುಗಿರುವುದರಿಂದ, ಈ ಹಿಂದೆ ದೃಢೀಕರಣ ಆಗಿಯೇ ಇಲ್ಲವೆಂದು ಭಾವಿಸಿ ಈಗ ಮತ್ತೊಮ್ಮೆ ದೃಢೀಕರಣ ನೀಡುವುದು, ಹಾಗೇನಾದರೂ ಮುಂದೊಮ್ಮೆ ಮೊದಲ ದೃಢೀಕರಣದ ಬಗ್ಗೆ ತಿಳಿದುಬಂದರೆ ತಪ್ಪಿತಸ್ಥರು ದೇವರ ದಂಡನೆಗೆ ಗುರಿಯಾಗುತ್ತಾರೆ ಎಂಬುದು ಧರ್ಮಸಭೆಯು ನೀಡುವ ತಿಳಿವಳಿಕೆ.

0-0-0-0-0-0

ಜಗತ್ತು, ಆರು ದಿನಗಳ ಸೃಷ್ಟಿ ಸೃಷ್ಟಿಯ ಕತೆ (ಭಾಗ 7)


- ಎಫ್ ಎಂ ಎನ್

ರಂಗಿನೂಯಿ ಮತ್ತು ಪಾಪತುನುಕು
   ಆದಿ ಕಾಲದಲ್ಲಿ `ರಂಗಿನೂಯಿ’ (ಮಹಾ ಬಾನು) ಮತ್ತು `ಪಾಪತುನುಕು’ (ಭೂ ಮಾತೆ) ಹೆಸರಿನ ಆದಿ ತಂದೆತಾಯಿ ಇದ್ದರು. ಆದಿ ತಂದೆ ಆಗಸ ಮತ್ತು ಆದಿ ತಾಯಿ ಭೂಮಾತೆ ಪರಸ್ಪರ ಭದ್ರವಾಗಿ ತಬ್ಬಿಕೊಂಡಿದ್ದರು. ಅವರಿಗೆ ಹಲವಾರು ಮಕ್ಕಳಿದ್ದರು. ಎಲ್ಲಾ ಗಂಡುಮಕ್ಕಳಿಗೆ ಅನಿವಾರ್ಯವಾಗಿ, ಅವರಿಬ್ಬರ ನಡುವಿನ ಕಗ್ಗತ್ತಲೆಯಲ್ಲೇ ಬದುಕು ಸಾಗಿಸುವುದು ಅನಿವಾರ್ಯವಾಗಿತ್ತು. ಅವರೆಲ್ಲಾ ಸ್ವಲ್ಪ ಬೆಳೆದು ದೊಡ್ಡವರಾದ ಮೇಲೆ ಕಲೆತು ವಿಚಾರ ಮಂಥನ ನಡೆಸಿದರು. ಕತ್ತಲೆಯನ್ನು ದಾಟಿಕೊಂಡು ಹೊರಗೆ ಬರಬೇಕು. ಬೆಳಕಲ್ಲಿ ಬದುಕುವುದು ಎಷ್ಟು ಸುಂದರ ಎಂದು ಕನಸು ಕಂಡರು. ಎಲ್ಲಾ ಮಕ್ಕಳಲ್ಲಿ ಅತ್ಯಂತ ಕ್ರೂರಿಯಾಗಿದ್ದ ಮಗ `ತುಮತವುಂಗ’, `ನಮ್ಮ ಈ ನಿತ್ಯದ ಸಂಕಟದಿಂದ ಪಾರಾಗಬೇಕೆಂದರೆ ನಮ್ಮ ತಂದೆ ತಾಯಿಗಳನ್ನು ಸಾಯಿಸಬೇಕು’ ಎಂಬ ಸಲಹೆಯನ್ನು ಎಲ್ಲರ ಮುಂದಿಟ್ಟ.
ಆದರೆ ಅವನ ಸಹೋದರ `ತಾನೆ’, ಈ ಸಲಹೆಗೆ ತನ್ನ ಆಕ್ಷೇಪ ವ್ಯಕ್ತಪಡಿಸಿದ. `ಅವರಿಬ್ಬರನ್ನು ದೂರ ತಳ್ಳಿದರೆ ಸಾಕು’ ಎಂದು ತನ್ನ ವಿಚಾರವನ್ನು ಮಂಡಿಸಿದ. `ಜೊತೆಗೆ ತಂದೆ `ರಂಗಿನೂಯಿ’ ಬೇಕಾದರೆ ಅಪರಿಚಿತನಾಗಿ ಮೇಲೆ ಅಂತರಿಕ್ಷದಲ್ಲೇ ಇರಲಿ. `ಪಾಪತುನುಕು’ ಕೆಳಗೆ ನಮ್ಮೊಂದಿಗಿದ್ದು ನಮ್ಮನ್ನು ಸಲಹಲಿ’ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ. `ತಾನೆ’ಯ ಸಲಹೆಗೆ ಎಲ್ಲಾ ಮಕ್ಕಳು ತಮ್ಮ ಒಪ್ಪಿಗೆ ಸೂಚಿದರು.
  ಕೃಷಿಯಿಂದ ಬೆಳೆದ ಆಹಾರ ಪದಾರ್ಥಗಳ ದೇವರು `ರಾಂಗೊ’ ತನ್ನ ತಂದೆತಾಯಿಗಳ ಗಾಢಾಲಿಂಗನವನ್ನು ಬಿಡಿಸಲು ಹರಸಾಹಸಪಟ್ಟ. ಏನೂ ಪ್ರಯೋಜನ ಆಗಲಿಲ್ಲ. ಸಮುದ್ರದ ದೇವರು `ತಂಗರೊ’ ಮತ್ತು ಅವನೊಂದಿಗೆ ಹುಟ್ಟಿದ್ದ ವನ್ಯಜನ್ಯ ಆಹಾರದ ದೇವರು  ‘ಹೌಮಿಯ- ಟಿಕೆಟಿಕೆ’ ಆದಿ ತಂದೆತಾಯಿಗಳ ಮಹಾ ಆಲಿಂಗನವನ್ನು ಬಿಡಿಸಲು ಮುಂದಾದರು. ಅವರಿಬ್ಬರ ಜಂಟಿ ಪ್ರಯತ್ನವೂ ಕೈಗೂಡಲಿಲ್ಲ. `ರಂಗಿ’ ಮತ್ತು `ಪಾಪ’ರ  ಒಲವಿನ ಆಲಿಂಗನ ಮತ್ತಷ್ಟು ಗಾಢವಾಗಿಯೇ ಉಳಿದಿತ್ತು. 
  ಕೊನೆಗೆ ಅರಣ್ಯ ಮತ್ತು ಪ್ರಾಣಿಪಕ್ಷಿಗಳ ದೇವರು `ತಾನೆ’ ನಿರಂತರ ಪ್ರಯತ್ನ ಮಾಡಿ ಮಾಡಿ, ಕೊನೆಗೆ ತನ್ನ ಆದಿ ತಂದೆ ತಾಯಿಗಳ ಆಲಿಂಗನವನ್ನು ಬಿಡಿಸುವಲ್ಲಿ ಯಶಸ್ಸು ಕಂಡುಕೊಂಡ.  
ಉಳಿದ ಸಹೋದರರು, ಆದಿ ತಂದೆ ತಾಯಿಗಳ          ಆಲಿಂಗನವನ್ನು ಬಿಡಿಸಲು, ಅವರಿಬ್ಬರ ನಡುವೆ ನಿಂತು, ಕೈಗಳಿಂದ ತಳ್ಳುತ್ತಿದ್ದರು. ಅವರ ಪ್ರಯತ್ನಗಳು ಫಲ   ನೀಡುತ್ತಿರಲಿಲ್ಲ. ಆದರೆ `ತಾನೆ’ ಬೆನ್ನ ಮೇಲೆ ಮಲಗಿ, ತನ್ನ ಶಕ್ತಿಯುತ ಕಾಲುಗಳಿಂದ ಬಲವಾಗಿ ದೂಡಿ ಆದಿ ತಂದೆ ತಾಯಿಗಳ ಆಲಿಂಗನವನ್ನು ಸಡಿಲಿಸುವಲ್ಲಿ, ಬಿಡಿಸುವಲ್ಲಿ ಯಶಸ್ಸು ಸಾಧಿಸಿದ್ದ. ತನ್ನ ಸ್ನಾಯುಗಳನ್ನು ಮಾಂಸಖಂಡಗಳನ್ನು ಹುರಿಗೊಳಿಸಿ ಕಾಲುಗಳಿಂದ ಬಲವಾಗಿ ದೂಡುತ್ತಾ ಆದಿ ತಂದೆ ತಾಯಿಗಳು ತಮ್ಮ ಆಲಿಂಗನವನ್ನು ನಿಧಾನವಾಗಿ ಸಡಿಲಿಸುವಂತೆ ಮಾಡಿದ್ದ. 
   `ತಾನೆ’ಯ ಬಲಕ್ಕೆ ಮಣಿದ ಆದಿ ತಾಯಿ `ಪಾಪತುನುಕು’ ಮತ್ತು ಆದಿ ತಂದೆ `ರಂಗಿನೂಯಿ’ ದುಃಖದಿಂದ ಅಳುತ್ತಾ ಜೊತೆಗೆ ಅಚ್ಚರಿಯನ್ನು ಅನುಭವಿಸುತ್ತಾ ಒಬ್ಬರನ್ನುಒಬ್ಬರು ಬಿಟ್ಟು ಅಗಲುತ್ತಾರೆ. 
  ಆದಿ ತಾಯಿ `ಪಾಪತುನುಕು’ ಮತ್ತುತಂದೆ `ರಂಗಿನೂಯಿ’ ಒಬ್ಬರನ್ನೊಬ್ಬರು ಬಿಟ್ಟು ಅಗಲಿದಾಗ, ಎಲ್ಲೆಡೆ ಬೆಳಕು ಮೂಡುತ್ತದೆ. ಆದಿ ತಂದೆತಾಯಿಯ ಮಕ್ಕಳು, ಮೊದಲ ಬಾರಿ ಬೆಳಕನ್ನು ಕಾಣುತ್ತಾರೆ. ಮತ್ತು ಸಾಕಷ್ಟು ಜಾಗ ಸಿಕ್ಕ ಸಂಭ್ರಮ ಅವರದಾಗಿರುತ್ತದೆ. 
 ಆದಿ ತಂದೆ ತಾಯಿಗಳ ಆಲಿಂಗನವನ್ನು ಬಿಡಿಸಲು ಬಹುತೇಕ ಎಲ್ಲಾ ಮಕ್ಕಳು ಒಪ್ಪಿಗೆ ಸೂಚಿಸಿದ್ದರೂ, ಗಾಳಿ ಹಾಗೂ ಚಂಡಮಾರುತಗಳ ದೇವರಾದ `ತಾಹಿರಿಮತೆ’ಗೆ ಅವರಿಬ್ಬರೂ ಬೇರ್ಪಟ್ಟಿದ್ದು ಬೇಸರತರುತ್ತದೆ. ತಂದೆ ತಾಯಿಗಳ ಈ ಸ್ಥಿತಿ ಕಂಡು ಅವನಿಗೆ ಸಿಟ್ಟು ಬರುತ್ತದೆ. ಆದಿ ತಂದೆ ತಾಯಿಗಳು ಒಬ್ಬರನ್ನೊಬ್ಬರು ಅಗಲುವಾಗ ಅನುಭವಿಸಿದ ನೋವು ಅವನಿಗೆ ನೋಡಲಾಗುವುದಿಲ್ಲ. ಮತ್ತು ಅವರ  ವಿರಹದ ಅಳು ಹಾಗೂ ಮಹಾಬಾನು `ರಂಗಿನೂಯಿ’ ಕಣ್ಣುಗಳಲ್ಲಿ ಮಟುಗಟ್ಟಿz ದುಃಖದ ಕಣ್ಣೀರು, ಅವನನ್ನು ಮತ್ತಷ್ಟು ಸಿಟ್ಟಿಗೇಳುವಂತೆ ಮಾಡುತ್ತದೆ. 
  `ಇನ್ನು ಮುಂದೆ, ನೀವು ನನ್ನ ಸಿಟ್ಟಿನ ಫಲವನ್ನು ಅನುಭವಿಸಬೇಕಾಗುತ್ತದೆ’ ಎಂದು ಗಾಳಿ ಹಾಗೂ ಚಂಡಮಾರುತಗಳ ದೇವರಾದ `ತಾಹಿರಿಮತೆ’ ತನ್ನ ಸಹೋದರರಿಗೆ ಎಚ್ಚರಿಕೆಕೊಡುತ್ತಾನೆ. 
ತಂದೆ `ರಂಗಿನೂಯಿ’ಯನ್ನು ಸೇರಲು `ತಾಹಿರಿಮತೆ’ ಬಾನಿನತ್ತ ಹಾರಿಹೋಗುತ್ತಾನೆ. ಅಲ್ಲಿಯೇ ನೆಲೆನಿಂತು ಕೊಂಡು ಹಲವು ಮಕ್ಕಳಿಗೆ ಜನ್ಮ ನೀಡುತ್ತಾನೆ. ಹಲವಾರು ಮಾರುತ ಮಕ್ಕಳು ಹುಟ್ಟಿದಾಗ, ಅವನ್ನು ದಶ ದಿಕ್ಕುಗಳಿಗೂ ಕಳಿಸಿಕೊಡುತ್ತಾನೆ. ತನ್ನ ಸಹೋದರರೊಡನೆ ಯುದ್ಧ ಹೂಡಲು ಈ `ತಹಿರಿಮತೆ’ ತನ್ನ ಮಕ್ಕಳ ದೊಡ್ಡ ಸೈನ್ಯವನ್ನೇ ಕಟ್ಟುತ್ತಾನೆ. ಹತ್ತಾರು ಬಗೆಯ ಮಾರುತಗಳು, ನೂರಾರು ಬಗೆಯ ಬೆಳ್ಳಿ ಬಣ್ಣದ, ಗಾಢಕಪ್ಪು ಬಣ್ಣದ ಮೋಡಗಳು, ಸಹಸ್ರಾರು ಸುಂಟರಗಾಳಿಗಳು, ಹತ್ತಾರು ಬಗೆಯ ಮಂಜು, ಇಬ್ಬನಿ, ಬಗೆಬಗೆಯ ಮಳೆಗಳು ಅವನ ಸೇನೆಯಲ್ಲಿ ಸೇರಿರುತ್ತವೆ. 
ದೊಡ್ಡದೊಡ್ಡ ಮಾರುತಗಳು ಸುಂಟರಗಾಳಿಗಳು ಭಯಂಕರವಾಗಿ ಬೀಸಿದಾಗ ಧೂಳು ಮುಗಿಲೆತ್ತರಕ್ಕೆ ಏಳುತ್ತದೆ, `ತಾನೆ’ ದೇವರ ಅರಣ್ಯಗಳಲ್ಲಿನ ಗಿಡಮರಗಳು ಧರೆಗೆ ಉರುಳುತ್ತವೆ. ಅವು ಒಣಗಿ ಬೆಂಡಾಗಿ ಹುಳುಹುಪ್ಪಡಿಗಳಿಗೆ ಆಹಾರವಾಗುತ್ತವೆ.
  ನಂತರ `ತಹಿರಿಮತೆ’ ಸಮುದ್ರಗಳ ಮೇಲೆ ದಾಳಿ ಮಾಡುತ್ತಾನೆ. ಭಾರಿ ಪ್ರಮಾಣದ ಸಾಗರ ತೆರೆಗಳು ಏಳುತ್ತವೆ, ಸುಳಿಗಳು ಉಂಟಾಗುತ್ತವೆ. ದಿಗ್ಭ್ರಮೆಗೊಂಡ ಸಾಗರದೇವರು `ತಂಗರೊ’ ಹೆದರಿ ಓಡಿಹೋಗುತ್ತಾನೆ. 
  ಈ `ತಂಗರೊ’ನ ಮಗ `ಪುಂಗ’ನಿಗೆ ಇಬ್ಬರು ಮಕ್ಕಳಿರುತ್ತಾರೆ. ಅವರು, ಮೀನುಗಳ ತಂದೆಯಾದ `ಇಕತೆರೆ’ ಮತ್ತು ಸರಿಸೃಪಗಳ ಆದಿ ಪುರುಷ `ತುತೆ ವನವನ’. `ತಹಿರಿಮತೆ’ಯ ದಾಳಿಯಿಂದ ತತ್ತರಿಸಿದ `ಇಕತೆರೆ’ಯ ಮಕ್ಕಳು       ಸಮುದ್ರದಲ್ಲಿ ಆಸರೆಗಾಗಿ ತಡಕಾಡುತ್ತಾರೆ, `ತುತೆ ವನವನ’ನ ಮಕ್ಕಳಾದ ಸರಿಸೃಪಗಳು ಕಾಡುಪಾಲಾಗುತ್ತವೆ. ತನ್ನ ಓಡಿಹೋದ ಮಕ್ಕಳಿಗೆ `ತಾನೆ’ ಆಶ್ರಯ ಒದಗಿಸಿಕೊಡದೆ ಇರುವುದು, `ತಂಗರೊ’ಗೆ `ತಾನೆ’ಯ ಮೇಲಿನ ಸಿಟ್ಟಿಗೆ ಕಾರಣವಾಗುತ್ತದೆ. ಆಗ, `ತಂಗರೊ’ನ ಸಿಟ್ಟನ್ನು ಶಮನಗೊಳಿಸಲು, `ತುಮತವುಂಗ’ ತನ್ನ ಮಕ್ಕಳಿಗೆ ತೋಡುದೋಣಿ, ಮೀನು ಹಿಡಿಯುವ ಗಾಳದ ಕೊಕ್ಕೆ, ಮತ್ತು ಬಲೆಗಳನ್ನು ಕೊಟ್ಟು, `ತಂಗರೊ’ನ ಮಕ್ಕಳನ್ನು ಹಿಡಿಯಲು ಅನುವು ಮಾಡಿಕೊಡುತ್ತಾನೆ. ಅದಕ್ಕೆ ಪ್ರತಿಕಾರವಾಗಿ `ತಂಗರೊ’ ತೋಡು ದೋಣಿಗಳನ್ನು ಮುಳುಗಿಸುತ್ತಾನೆ,         ಪ್ರವಾಹದೋಪಾದಿಯಲ್ಲಿ ನುಗ್ಗಿ ಮನೆ, ಭೂಮಿ ಗಿಡಮರಗಳನ್ನು ಕೊಚ್ಚಿಕೊಂಡು ಸಮುದ್ರಕ್ಕೆ ಸೇರಿಸುತ್ತಾನೆ.
ಇಷ್ಟಾದ ಮೇಲೆ, `ತಹಿರಿಮತೆ’, ಕೃಷಿ ಭೂಮಿಗಳ ದೇವರು `ರೊಂಗೊ’ ಮತ್ತು ಬೀಳು ಭೂಮಿಗಳ ದೇವರು `ಹೌಮಿಯಟಿಕೆಟಿಕೆ’ ಅವರ ಮೇಲೆ ದಾಳಿ ಮಾಡುತ್ತಾನೆ. `ರೊಂಗೊ’ ಮತ್ತು `ಹೌಮಿಯಟಿಕೆಟಿಕೆ’ ಅವರು `ತಹಿರಮತೆ’ಯ ದಾಳಿಗೆ ಹೆದರಿಕೊಂಡಿರುತ್ತಾರೆ. ಆದಿ ತಾಯಿ ಭೂತಾಯಿ `ಪಾಪತುನುಕು’, `ರೆಂಗೊ’ ಮತ್ತು `ಹೌಮಿಯ- ಟಿಕೆಟಿಕೆ’ ನನ್ನ ಇತರ ಮಕ್ಕಳಿಗೂ ಬೇಕಾಗುತ್ತಾರೆ ಎಂದು ಅವರ ರಕ್ಷಣೆಗೆ ಮುಂದಾಗುತ್ತಾಳೆ. `ತಹಿರಿಮತೆ’ಯ ಕಣ್ಣಿಗೆ ಅವರು ಬೀಳದಂತೆ ಬಚ್ಚಿಡುತ್ತಾಳೆ. 
  ಆಗ, `ತಹಿರಿಮತೆಯ ದೃಷ್ಟಿ  ಸಹೋದರ `ತುಮತವುಂಗ’ನ ಕಡೆತಿರುಗುತ್ತದೆ. `ತಹಿರಿಮತೆ’ ತನ್ನ ಎಲ್ಲ ಶಕ್ತಿಯನ್ನು ಬಳಸಿ ದಾಳಿ ನಡೆಸಿದರೂ, `ತುಮತವುಂಗ’ ಗಟ್ಟಿಯಾಗಿ ನಿಲ್ಲುತ್ತಾನೆ. `ತಹಿರಿಮತೆ’ಗೆ `ತುಮತವುಂಗ’ನನ್ನು ಏನು ಮಾಡಲೂ ಸಾಧ್ಯವಾಗಲಿಲ್ಲ. `ತುಮತವುಂಗ’,  `ತು’ -ಮಾನವಸ್ವರೂಪ ತಾಳುತ್ತಾನೆ. ಅಷ್ಟರಲಿ,್ಲ ದೇವರುಗಳ ನಡುವಣ ಸಿಟ್ಟುಸೆಡುವು ನಿಧಾನವಾಗಿ ಕಡಿಮೆಯಾಗುತ್ತಾ ಸಾಗುತ್ತದೆ. ಅಂತಿಮವಾಗಿ ಶಾಂತಿ ನೆಲೆಸುತ್ತದೆ.
  `ತು’ ತಮ್ಮ ಆದಿ ತಂದೆತಾಯಿಗಳ ಆಲಿಂಗನವನ್ನು ಬಿಡಿಸಿದ ಸಹೋದರ `ತಾನೆ’ಯ ಚಟುವಟಿಕೆಗಳ ಬಗ್ಗೆ ಚಿಂತನೆ ನಡೆಸುತ್ತಾನೆ. `ತಾನೆ’ಯ ಮಕ್ಕಳಾದ ಪ್ರಾಣಿ,ಪಕ್ಷಿಗಳ ಕಾಲು, ತಲೆ ಸಿಕ್ಕಿಕೊಳುವಂತೆ ಮಾಡುವ ಸರಿಗುಣಿಕೆಗಳನ್ನು ಸಿದ್ಧಪಡಿಸಿ ಅವುಗಳನ್ನು ಸೆರೆಹಿಡಿದುಕೊಳ್ಳುತ್ತಾನೆ. ಅರಣ್ಯದಲ್ಲಿನ ಗಿಡಮರ ಬಳ್ಳಿಗಳಿಂದ ಬಲೆಗಳನ್ನು ಹೆಣೆದು ಸಮುದ್ರಕ್ಕೆ ಚೆಲ್ಲುತ್ತಾನೆ. `ತಂಗುರೊ’ನ ಮಕ್ಕಳನ್ನು (ಮೀನುಗಳನ್ನು) ಹೆಡಮುರಿಕಟ್ಟಿ ಸಮುದ್ರತೀರಕ್ಕೆ ಎಳೆದು ತರಲು ಉಪಕ್ರಮಿಸುತ್ತಾನೆ. 
  ಕಳೆ ಗುದ್ದಲಿಯನ್ನು ಸಿದ್ಧಪಡಿಸಿಕೊಂಡು, `ತಹಿರಿಮತೆ’ಯ ದಾಳಿಯಿಂದ ತಪ್ಪಿಸಿಕೊಂಡು, ಭೂತಾಯಿ `ಪಾಪತುನುಕು’ಳ ಎದೆಯಲ್ಲಿ ಬಚ್ಚಿಟ್ಟುಕೊಂಡ `ರೆಂಗೊ’ ಮತ್ತು `ಹೌಮಿಯ -ಟಿಕೆಟಿಕೆ’ಯರನ್ನು ಹೊರತೆಗೆಯುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾನೆ. ಗಡ್ಡೆಗಳ ರೂಪದಲ್ಲಿದ್ದ ಅವರನ್ನು  ನೆಲದಿಂದ ಹೆಕ್ಕಿ ತೆಗೆದುತಿನ್ನಲು ಬುಟ್ಟಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾನೆ. 
  ಹೇಡಿತನ ಪ್ರದರ್ಶಿಸಿದ ತನ್ನ ಎಲ್ಲಾ ಸೋದರರ ಮೇಲೆ ಸೇಡು ತೀರಿಸಿಕೊಳ್ಳುವ `ತಮತುವುಂಗ’ ಅವರನ್ನೆಲ್ಲಾ ತಿಂದುತೇಗುತ್ತಾನೆ. ಆದರೆ, ಅವನಿಗೆ, `ತಹಿರಿಮತೆ’ಯನ್ನು ದಮನ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ, `ತಹಿರಿಮತೆ’ ದೇವರ ಚಂಡಮಾರುತ ಮತ್ತು ಸುಂಟರಗಾಳಿಗಳು ಇವತ್ತಿನವರೆಗೂ ಮಾನವ ಕುಲವನ್ನು  ಬಾಧಿಸುತ್ತಲೇ ಇವೆ. 
  ಭೂತಾಯಿ `ಪಾಪತುನುಕು’ ಮತ್ತು ಮಹಾಬಾನು `ರಂಗಿನೂಯಿ’ ಆದಿ ತಂದೆತಾಯಿಗಳಿಗೆ ಇನ್ನೊಬ್ಬ ಮಗನೂ ಇದ್ದ. ಆದರೆ ಆತ, ಇನ್ನೂ ಹೊಟ್ಟೆಯಿಂದಲೇ ಹೊರಗೆ  ಬಂದಿಲ್ಲ. ಆತ, `ಪಾಪತುನುಕು’ ಭೂತಾಯಿಯ ಉದರದಲ್ಲೇ ಇದ್ದಾನೆ. `ರುವುಮೊಕೊ’ ಹೆಸರಿನ ಆತ      ಗರ್ಭಕೋಶದಲ್ಲಿ ಒದ್ದಾಡಿದಾಗಲೆಲ್ಲಾ ಭೂಮಿಯ ಮೇಲೆ ಭೂಕಂಪಗಳು ಸಂಭವಿಸುತ್ತವೆ. ಆತ ಭೂಕಂಪನ ಮತ್ತು ಅಗ್ನಿಪರ್ವತಗಳ ದೇವರು.
ಇತ್ತ, `ತಾನೆ’ಯು, ಬೆಳಕಿಗಾಗಿ ಸ್ವರ್ಗದ ಕಾಯಗಳನ್ನು ಹುಡುಕಾಡುತ್ತಿದ್ದ. ಆಗ ತಂದೆಯು ಸುಂದರವಾಗಿ ಕಾಣಬಹುದು ಎಂಬುದು ಅವನ ಲೆಕ್ಕಚಾರವಾಗಿತ್ತು. ಆತ ಕೊನೆಗೆ ನಕ್ಷತ್ರಗಳನ್ನು ಹುಡುಕಿಕೊಂಡು ಬಂದು, ಸೂರ್ಯ ಮತ್ತು ಚಂದ್ರರೊಟ್ಟಿಗೆ ಅವನ್ನು ಮೇಲೆ ತೂರಿದ. ಅದಾದ ಮೇಲೆ, ಆದಿ ತಂದೆ `ರಂಗಿನೂಯಿ’ ಸುಂದರಾಂಗನಾಗಿ ಕಾಣತೊಡಗಿದ.
 ಆದಿ ತಂದೆ, ಮಹಾಬಾನು `ರಂಗಿನೂಯಿ’ ಮತ್ತು ಆದಿ ತಾಯಿ, ಭೂತಾಯಿ `ಪಾಪತುನುಕು’ ಇವತ್ತಿನವರೆಗೂ   ಪ್ರತಿದಿನವೂ ವಿರಹದಿಂದ ದುಃಖಿಸುತ್ತಲೇ ಇದ್ದಾರೆ. ಮಹಾಬಾನು `ರಂಗಿನೂಯಿ’ ಅತ್ತಾಗ, ಅವನ ಅಳು ಮಳೆಯ ರೂಪದಲ್ಲಿ ಭೂತಾಯಿ `ಪಾಪತುನುಕು’ವಿನತ್ತ ಸಾಗಿಬರುತ್ತವೆ. ಅವು `ರಂಗಿನೂಯಿ’, `ಪಾಪತುನುಕು’ಳನ್ನು ಎಷ್ಟು ಗಾಢವಾಗಿ ಪ್ರೀತಿಸುವನು ಎಂಬುದನ್ನು ಶೃತಪಡಿಸುತ್ತವೆ. 
 ಪಾಪ ತುನುಕುಳೂ ಕೆಲವೊಮ್ಮೆ ನಿಟ್ಟುಸಿರು ಬಿಡುತ್ತಿರುತ್ತಾಳೆ. ಮತ್ತೆ ಕೆಲವೊಮ್ಮೆ ತಾಪದಿಂದ `ರಂಗಿನೂಯಿ’ಯನ್ನು ಸೇರುವತವಕ ಹೆಚ್ಚಾದಾಗ ಅವಳಲ್ಲಿ ದೊಡ್ಡದೊಡ್ಡ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಆದರೆ, ಆಕೆಗೆ ತನ್ನ ಜೊತೆಗಾರನನ್ನು ಸೇರಲು ಆಗುವುದೇ ಇಲ್ಲ. ಸಸ್ಯ ಶಾಮಲೆ ಭೂತಾಯಿ ಬಿಸಿಯುಸಿರು ಬಿಟ್ಟಾಗ ಇಬ್ಬನಿ, ಮಂಜು ಕಾಣಿಸಿಕೊಳ್ಳುತ್ತವೆ. ಆದಿ ಮಾತೆ ಭೂತಾಯಿ `ಪಾಪತುನುಕು’ಳ ಬೆಚ್ಚಗಿನ ದೇಹ ಸದಾಕಾಲ ಮಾನವ ಕುಲವನ್ನು ಪೋಷಿಸುತ್ತಲೆ ಸಾಗಿದೆ.
  ---
  *ನ್ಯೂಜಿಲೆಂಡಿನ ಮೌರಿ ಬುಡಕಟ್ಟು ಜನರ ಸೃಷ್ಟಿಯ ಪೌರಾಣಿಕ ಕತೆ.
0-0-0-0-0-0

Wednesday, 11 March 2020

ಅಳುಕಿದೆದೆಯ ಆತ್ಮಕಥೆ

ಅವನು ಕೆಲಸದವನು
ಹಾಕಿದ ಊಟ ಹೇಳಿದ ಕೆಲಸ
ಎದೆಗಾರಿಕೆಗೆ ಹೆಸರಾದವನು
ತೆರೆದೆದೆಗೆ ಗುರಿ ಇಟ್ಟವನು

ಹೊಕ್ಕ ಗುಂಡು
ಗುಂಡಿಗೆಯ ಛಿದ್ರಗೊಳಿಸಿತು ನರನಾಡಿಗಳ
ಈಡೇರದ ಕನಸುಗಳ
ಮುದಿಜೀವದ ಕೊನೆಯ ಆಸೆ ಏನೆಂದು
ಕೇಳದ ಗೋಜಿಗೆ ಬಯಲು ನಿಶ್ಯಬ್ದ

ಅದನ್ನೇ ಮತ್ತೆ ಮತ್ತೆ ರುಜುವಾತುಪಡಿಸಲೇ....?
ಮೇದಿನಿಯ ಮೇರೆ ಮೀರಿ
ಸೂರ್ಯ ಚಂದ್ರ ಗ್ರಹತಾರೆ ಲೋಕವ
ಕರೆದು ಕೂಗಲಿಲ್ಲ
ನಾ ನಾಯಕನೆಂದು
ದೇವರ ರಾಜ್ಯವ ಏರಿ ಹೋಗಿ
ವಿಜಯಪತಾಕೆ ಹಾರಿಸ ಹೊರಟ
ದಂಗೆಕೋರ ನಾನಲ್ಲ ಎಂದು

ಅಪಮಾನಿತರ ಕೊರಳ ಧ್ವನಿಯಾಗಿ
ಅನಾಥನ ಕೊಳಲನಾದದ ಶ್ರುತಿಯಾಗಿ
ಅಮಾಯಕ ಹೂವಿನ ಮಕರಂದವಾಗಿ
ಸತ್ಯದ ದಾರಿಯಲ್ಲಿ
ನ್ಯಾಯದ ನೇರದಲ್ಲಿ
ನೀರವ ಮೌನದಲ್ಲಿ
ಅರೆಬೆತ್ತಲ ಫಕೀರ ನಾನೆಂದು

ಕೆಲಸದವನಿಗೇನು ತಿಳಿಯಬೇಕು?
ನಾನು ಇನ್ನೆಂದೂ ಸವಕಲು ನಾಣ್ಯವೆಂದು
`ಗಾಂಧೀ ಮುರ್ದಾಬಾದ್’ ಕೂಗು ಮುಗಿಲು ಮುಟ್ಟಿದೆಂದು
ತಿದ್ದಲಾಗದ ಇತಿಹಾಸದ ತಪ್ಪಿಗೆ
ಮತ್ತು ನನ್ನ ಹೆಸರಿಗೆ
ಕ್ಷಮೆ ನೀಡಲಾಗದೆಂದು
ನನ್ನ ಸಾವ ನಾನೇ ಬಯಸಿದ್ದೆಂದು

ಕೋವಿಯ ಚಾಪನ್ನು ಎಳೆದ
ಅಚ್ಚ ಬಿಳಿಯ ಕೈ ಬೆರಳಿಗೆ ತಿಳಿದಿತ್ತು
ಅರ್ಧನಾರೀಶ್ವರನ ಕೊರಳ
ಉರುಳು ನಾನೆಂದು
ಮಹಾತ್ಮನ ಕೊಂದ ತಾನು ಹುತಾತ್ಮನೆಂದು
ಚರಿತ್ರೆಯಲ್ಲಿ ಮಹಾಸಾಧಕನೆಂದು


- ಡಾ. ದಿನೇಶ್ ನಾಯಕ್

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು


ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)

————————
ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕನ್ನಡ ಕ್ರೈಸ್ತ ಸಾಹಿತಿಯಾದ ರೆವರೆಂಡ್ ಉತ್ತಂಗಿ ಚೆನ್ನಪ್ಪರವರ ಬದುಕು ಹಾಗು ಬರವಣಿಗೆಯ ಬಗ್ಗೆ ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಅವಿರತ ಸೇವೆಯನ್ನು ನೀಡಿರುವ ಮತ್ತೋರ್ವ ಪ್ರಮುಖ ಕನ್ನಡ ಸಾಹಿತಿ ರೆವರೆಂಡ್ ಫಾದರ್ ಐ. ಅಂತಪ್ಪ ರವರ ಬದುಕು ಹಾಗು ಸೇವೆಯ ಅಮೋಘತೆಯನ್ನು ಸಾದಾರಪಡಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ. 
——————————————-
ರೆವರೆಂಡ್ ಫಾದರ್ ಐ. ಅಂತಪ್ಪ :
ಇವರು ಒಬ್ಬ ಕ್ರೈಸ್ತ ಧರ್ಮಗುರು ಮಿಗಿಲಾಗಿ ಕನ್ನಡ ಕ್ರೈಸ್ತ ಸಾಹಿತಿ. ಕನ್ನಡ ನಾಡಿನಲ್ಲಿ ಕ್ರೈಸ್ತ ಧರ್ಮದ ಉಗಮದ ಬಗ್ಗೆ ಆಳವಾದ ಸಂಶೋಧನೆ ನಡೆಸಿ ಹತ್ತಾರು ಚಾರಿತ್ರಿಕ ಪುಸ್ತಕಗಳನ್ನು ಪ್ರಕಟಿಸಿ, ಕನ್ನಡ ಭಾಷೆಗೆ, ಕನ್ನಡ ಜನತೆಗೆ ಕೊಡಬೇಕಾದ ಆದ್ಯತೆಯ ಬಗ್ಗೆ ಅನೇಕರ ಕಣ್ಣುಗಳನ್ನು ತೆರೆಸಿದ್ದಾರೆ. ಇವರು ಪ್ರಸ್ತುತವಾಗಿ ಮಹಾಧರ್ಮಾಕ್ಷೇತ್ರದ ವಿಶ್ರಾಂತಿ ನಿಲಯದಲ್ಲಿ ತಮ್ಮ ಕನ್ನಡಾಭಿಲಾಷೆಯ ಸೇವೆಯಲ್ಲಿ ನಿರತರಾಗಿದ್ದಾರೆ.
ಅ) ಬಾಲ್ಯ ಜೀವನ : 
ಬೆಂಗಳೂರು ಗ್ರಾಮಾಂತರದ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹಾರೋಬಲೆ ಒಂದು ಕ್ರೈಸ್ತ ಊರು. ಈ ಊರಿನ ಉಪದೇಶಿ ಇನ್ನಾಸಪ್ಪ ಮತ್ತು ಅಂತೋಣಮ್ಮನವರ ಮೊದಲ ಮಗನಾಗಿ ಫಾದರ್ ಅಂತಪ್ಪ ಜನಿಸಿದರು. ಇವರಿಗೆ ಏಳು ಜನ ಒಡಹುಟ್ಟಿದವರು. ಇವರ ಮನೆತನದ ಕಸುಬು ವ್ಯವಸಾಯ ಜೊತೆಗೆ ಉಪದೇಶಿ ಅಥವಾ ದೇವಸ್ಥಾನದ ಸೇವೆ ಮಾಡುವುದು. ಮನೆಯಲ್ಲಿ ಬಡತನ. ಏಳು ಮಕ್ಕಳನ್ನು ಸಾಕಿ ಸಲಹುವುದೆಂದರೆ ಸಾಮಾನ್ಯವೇನಲ್ಲ. ಮನೆಯ ಪರಿಸ್ಥಿತಿ ಬಡತನದಿಂದ ಕೂಡಿದ್ದರೂ ಶ್ರೀ ಇನಾಸಪ್ಪನವರು ತನ್ನ ಮಗನನ್ನು ಚೆನ್ನಾಗಿ ಓದಿಸಬೇಕು, ಆತನನ್ನು ಒಬ್ಬ ಉತ್ತಮ ಗುರುವಾಗಿ ರೂಪಿಸಬೇಕೆಂಬ ಅಂತರಾಳದ ಬಯಕೆಯನ್ನೊತ್ತಿದ್ದರು. ಚರ್ಚ್ ಮತ್ತು ಗುರುಗಳ ಒಡನಾಟದ ಆತ್ಮೀಯ ಸಂಬಂಧದ  ಪ್ರಭಾವದಿಂದಾಗಿ ತನ್ನ ಮಗನನ್ನು ಫಾದರ್ ಮಾಡಬೇಕೆಂಬ ಆಸೆಯನ್ನು ಹೊಂದಿದ್ದ ಅವರು ದುಃಖ-ದುಮ್ಮಾನಗಳ ದವಡೆಗೆ ಸಿಲುಕ್ಕಿದ್ದರೂ ಮಗನನ್ನು ಓದಿಸಲು ದೃಢ ನಿರ್ಧಾರ ಮಾಡಿ, ಅವರ ಆಸೆಯಂತೆ ಮಗನನ್ನು ಶಾಲೆಗೆ ಸೇರಿಸಿದರು. ಅಂತಪ್ಪನವರು ಬಾಲ್ಯದಲ್ಲಿ ಬಹು ಮುಗ್ಧರಾಗಿದ್ದರು. ಊರಿನಲ್ಲಿ ಕೇವಲ ಮೂರನೇ ತರಗತಿಯವರೆಗೆ ಮಾತ್ರ ಶಾಲೆಯಿತ್ತು. ತನ್ನ ತಂದೆಯ ಮನೋಭಿಲಾಷೆಯನ್ನು ಅರಿತವರಂತೆ ಅಂತಪ್ಪ ಶ್ರದ್ಧೆಯಿಂದ ಶಾಲೆಗೆ ಹೋಗುತ್ತಿದ್ದರು. ಜೊತೆಗೆ ಪ್ರತಿನಿತ್ಯ ಪೂಜೆ ಮತ್ತು ಪ್ರಾರ್ಥನೆಯಲ್ಲೂ ಭಾಗವಹಿಸುತ್ತಿದ್ದರು. ಓದಬೇಕೆಂಬ ಬಾಲಕನ ತುಡಿತಕ್ಕೆ ತಕ್ಕಂತೆ ಮೂರನೇ ತರಗತಿಯಿಂದ ಮುಂದೆ ಓದಲು ಊರಿನಲ್ಲಿ ಶಾಲೆಯಿಲ್ಲದೇ ಹೋದದ್ದು ಅಂತಪ್ಪರ ತಂದೆಯ ಆತಂಕಕ್ಕೆ ಕಾರಣವಾಯಿತು. ರಜಾ ದಿನಗಳಲ್ಲಿ ಊರಿನಲ್ಲೇ ಇದ್ದ ಬಾಲಕ ಅಂತಪ್ಪ ಹೊಲದ ಕೆಲಸಗಳಲ್ಲಿ ತಂದೆಗೆ ಆದಷ್ಟು ಸಹಾಯ ಮಾಡುತ್ತಿದ್ದರು. ಅದರಲ್ಲೂ ಮಧ್ಯಾಹ್ನದ ವೇಳೆ ಊಟವನ್ನು ತೆಗೆದುಕೊಂಡು ಹೋಗಿ ಅವರ ಮನೆಯಲ್ಲೇ ಇದ್ದ ಕೂಲಿ ಅಲಗೂರಿ ಚೌರ ಮುಂತಾದವರಿಗೆ ನೀಡುತ್ತಿದ್ದರು.24 ಈ ಸಂದರ್ಭದಲ್ಲಿ ಅಲಗೂರಿ ಚೌರ ಮತ್ತು ಇವರ ನಡುವೆ ನಡೆದ ಒಂದು ಘಟನೆ ಫಾದರ್ ಅಂತಪ್ಪ ಅವರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ. ಈ ಅಲಗೂರಿ ಚೌರ ಗುತ್ತಿಗೆಯ ಆಧಾರದ ಮೇಲೆ ಕೂಲಿ ಕೆಲಸ ಮಾಡುತ್ತಿದ್ದ. ಆಗ ಒಂದು ವರ್ಷಕ್ಕೆ ಇಷ್ಟು ರಾಗಿ ಮತ್ತು ಇಷ್ಟು ಹಣ ಎಂದು  ನಿಗಧಿಪಡಿಸಿ ಆಳುಗಳನ್ನು ನೇಮಿಸಿಕೊಳ್ಳುತ್ತಿದ್ದರು. ಅಲಗೂರಿ ಚೌರ ಕೆಲಸ ಕಾರ್ಯಗಳಿಗೆ ಹೋದಾಗ ಇವರು ಅವನೊಂದಿಗೆ ಬಹಳ ಸಲಿಗೆಯಿಂದ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು.
ಒಂದು ದಿನ ಊಟ ಮಾಡುತ್ತಿದ್ದ ಅಲಗೂರಿ ಚೌರನನ್ನು ದಿಟ್ಟಿಸಿ ನೋಡುತ್ತಿದ್ದ ಬಾಲಕ ಅಂತಪ್ಪ, ಅವನಿಗೆ ಒಂದು ಪ್ರಶ್ನೆ ಕೇಳಿದರು - ನಿನಗೆ ಮೀಸೆ ಇದೆಯಲ್ಲಾ, ನನಗೆ ಯಾಕೆ ಮೀಸೆ ಇಲ್ಲಾ? ಅಲಗೂರಿ ಚೌರ ಇವರ ಪ್ರಶ್ನೆಗೆ ಉತ್ತರ ಹೇಳಲಿಲ್ಲ. ಸ್ವಲ್ಪ ಸಮಯದ ನಂತರ ಅಂತಪ್ಪರೇ ಇದೆಲ್ಲಾ ದೇವರ ಇಚ್ಛೆ ಇರಬಹುದು ಎಂದು ಹೇಳಿಕೊಂಡು ಸುಮ್ಮನಾದರಂತೆ. ಆದರೆ, ಅಲಗೂರಿ ಚೌರ ಅಂತಪ್ಪರಿಗೆ ಉತ್ತರಿಸದೆ ಹೋದರೂ ಊರಲ್ಲೆಲ್ಲಾ ಈ ಸುದ್ದಿಯನ್ನು ಪ್ರಚಾರ ಮಾಡಿ ಬೀದಿ       ಬೀದಿಗಳಲ್ಲಿ ಹೊಗುತ್ತಿರುವಾಗ ಅಂತಪ್ಪರಿಗೆ ಮೀಸೆ ಇಲ್ಲ, ಇದು ದೇವರ ಇಚ್ಛೆಯಂತೆ ಎಂದು ನಗಾಡುತ್ತಾ ಹೇಳಿಕೊಂಡು ತಿರುಗಾಡಿದ. ಇದು ಬಾಲ್ಯದ ಅಂತಪ್ಪನವರ ಮುಗ್ಧತೆಗೆ ಒಂದು ಸಣ್ಣ ಉದಾಹರಣೆ. ಈ ಸಂದರ್ಭದ ಒಂದು ಘಟನೆ ಹಲವು ತಿರುವುಗಳಿಗೆ ಕಾರಣವಾಗುವುದರಲ್ಲಿತ್ತು. ಅಂತಪ್ಪನವರ ತಾಯಿ ತಮಿಳು ರಾಜ್ಯದ ಸೇಲಂ ಹತ್ತಿರದ ಕೊಹಿಲೂರಿನವರು. ಅಂತಪ್ಪನವರು ಮೂರನೇ ತರಗತಿ ವ್ಯಾಸಂಗ ಮುಗಿಸಿ ಬೇಸಿಗೆ ರಜೆಯನ್ನು ಕಳೆಯಲು ತಾಯಿಯೊಡನೆ ಕೊಹಿಲೂರಿಗೆ ಹೋಗಿ ಅಲ್ಲಿಯೇ ಇದ್ದ ತಮಿಳು ಮಾಧ್ಯಮದ ಶಾಲೆಗೆ ಸೇರಿಸಿದರು. ಆದರೆ ಬಾಲಕ ಅಂತಪ್ಪನಿಗೆ ಕನ್ನಡದ ಮಣ್ಣಿನ ಗುಣವೋ ಅಥವಾ ಆಕರ್ಷಣೆ ಹೆಚ್ಚಾಗಿಯೋ, ತಮಿಳು ಮಾಧ್ಯಮ ಪಥ್ಯವಾಗದೇ ತನ್ನೂರಿಗೆ ಹಿಂದಿರುಗಿದರು. ಊರಿನಲ್ಲಿದ್ದಾಗ ಅಂತಪ್ಪ ಇತರ ಅವರ ವಯಸ್ಸಿನ ಹುಡುಗರಂತೆ ದನ, ಆಡು, ಕುರಿ ಮೇಯಿಸುತ್ತಾ ಕೈಲಾದಷ್ಟು ಹೊಲ ಉಳುತ್ತಾ ರಜೆ ಕಳೆದರು. ಅವರ ತಂದೆಯ ನಿಸ್ವಾರ್ಥ ಉಪದೇಶಿ ಸೇವಾ ಮನೋಭಾವನೆ, ಪ್ರಾಮಾಣಿಕತನ, ಮತ್ತು ಅಂತಪ್ಪನ ಧಾರ್ಮಿಕ ಶ್ರದ್ಧೆಯನ್ನು ಗಮನಿಸಿದ ಅಂದಿನ ಧರ್ಮಕೇಂದ್ರದ ಗುರು ಶೆಂಬ್ರಿಯರವರು ಬಾಲಕನ ವಿದ್ಯಾಭ್ಯಾಸವನ್ನು ಮುಂದುವರೆಸಲು ನೆರವಾದರು.
ಆ) ಶಿಕ್ಷಣಾರ್ಥಿಯಾಗಿ :
ಬಾಲಕ ಅಂತಪ್ಪ ತನ್ನ ತಂದೆ ಹಾಗೂ ಗುರು ಶೆಂಬ್ರಿಯವರೊಡಗೂಡಿ ಬೆಂಗಳೂರಿಗೆ ಬಂದು ಬೆಂಗಳೂರು ಧರ್ಮಕ್ಷೇತ್ರದ ಏಕೈಕ ಶಾಲೆ ಸಂತ ಅಲೋಷಿಯಸ್‍ನಲ್ಲಿ ಫಾದರ್ ಬ್ರೌನರ್ ಅವರ ಉಸ್ತುವಾರಿಯಲ್ಲಿ ಶಾಲೆಗೆ ದಾಖಲಾತಿ ಪಡೆದರು. ಶ್ರೀಯುತನಾಯ್ಡು ರವರು ಬಾಲಕ ಅಂತಪ್ಪರವರ ಶಾಲಾ ಶಿಕ್ಷಕ. ಇವರು ಹಳ್ಳಿಯ ಮುಗ್ಧ ಬಾಲಕ ಅಂತಪ್ಪನಿಗೆ ‘ಎಬಿಸಿಡಿ’ ಗೊತ್ತಿದೆಯಾ? ಎಂದು ಪ್ರಶ್ನಿಸಿದರು. ಪಾಪ! ಕೇವಲ ಕನ್ನಡ ವರ್ಣಮಾಲೆಯನ್ನು ಕಲಿಸುವುದೇ ಆಗಿನ ಕಾಲದ ಹಳ್ಳಿಗಳಲ್ಲಿ ಕಷ್ಟವಾಗಿತ್ತು. ಹಳ್ಳಿಯ ಎಲ್ಲಾ ಬಗೆಯ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಅಕ್ಷರ ಕಲಿಯಲು ಪಟ್ಟ ಪಾಡು ಎಷ್ಟೆಂಬುದನ್ನು ಅನುಭವಿಸಿದ ಹಳ್ಳಿಯವರಿಗೆ ಮಾತ್ರ ಮನವರಿಕೆಯಾಗಲು ಸಾಧ್ಯ. ಹಳ್ಳಿಗರಾಗಿ ಹುಟ್ಟಿ ಏನೇನೂ ಸೌಲಭ್ಯಗಳಿಲ್ಲದೆ ತಮ್ಮ ಹೋರಾಟ, ಮತ್ತು ಛಲದಿಂದ ವಿದ್ಯೆ ಕಲಿತು ಉನ್ನತ ಸ್ಥಾನ ಅಲಂಕರಿಸಿದ ಹಲವು ಕನ್ನಡ ಸಾಹಿತಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಮಗನನ್ನು ಬಿಟ್ಟು ಊರಿಗೆ ಹೊರಡುವ ಮುನ್ನ ಒಂದು ಶಾಲಾ ಕೊಠಡಿಯಲ್ಲಿ ನೂರಾರು ವಿದ್ಯಾರ್ಥಿಗಳಿರುವುದನ್ನು ಕಂಡ ಅಂತಪ್ಪನವರ ತಂದೆಯವರು `ಅರೇ! ನಮ್ಮ ಹಳ್ಳಿ ಶಾಲಾ ತರಗತಿಯಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದಾರೆ ಆದರೆ ಇಲ್ಲಿ ಕೊಠಡಿ ಪೂರ್ತಿ ವಿದ್ಯಾರ್ಥಿಗಳು ತುಂಬಿದ್ದಾರಲ್ಲ ಏನಿದು ಆಶ್ಚರ್ಯ!’ ಎಂದರಿತು, ಇಷ್ಟೊಂದು ಮಕ್ಕಳಿಗೆ ಅದೇಗೆ ಒಬ್ಬ ಮೇಷ್ಟ್ರು ಪಾಠ ಮಾಡ್ತಾನೆ, ಎಂದು ಪ್ರಶ್ನಿಸಿಕೊಂಡರು, ಊರಿಗೆ ಹೋಗುವ ಮುನ್ನ ಬಾಲಕ ಅಂತಪ್ಪನವರನ್ನು ಕರೆದು ಎರಡು ಮುಖ್ಯ ಮಾತುಗಳನ್ನು ಹೇಳಿದರಂತೆ. ಮೇಷ್ಟ್ರು ಬೆರಳಷ್ಟು ಹೇಳಿಕೊಟ್ಟರೆ, ನೀನು ಮೊಳದಷ್ಟು ಅದನ್ನು ತಿಳಿದುಕೊಳ್ಳಬೇಕು. ಇದರರ್ಥ, ಬೆರಳು ತೋರಿಸಿದರೆ ಹಸ್ತವನ್ನು ನುಂಗುವಂಥವನಾಗಬೇಕೆಂಬುದಾಗಿ ಎಚ್ಚರಿಕೆಯ ಮಾತಿನ ತಿಳಿ ಹೇಳಿದರಂತೆ ಅವರು ಎಚ್ಚರಿಸಿದ ಮತ್ತೊಂದು ಮಾತು, ‘ಆಕಸ್ಮಾತ್ ಫೇಲಾಗಿ ಊರಿಗೆ ಬಂದರೆ ಹೊಲ ಉಳುವುದೇ ಗತಿ’ ಹೀಗೆ ಇವರ ತಂದೆಯ ಮಾತುಗಳು ಅಂತಪ್ಪನವರ ನೆನಪಿನಂಗಳದಲ್ಲಿ ಇನ್ನೂ ಉಳಿದಿವೆ ಎಂಬ ಸತ್ಯ ಅವರನ್ನು ಸಂದರ್ಶಿಸಿದಾಗ ತಿಳಿಯಿತು. ತಂದೆಯ ಎಚ್ಚರಿಕೆ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದ ಬಾಲಕ ಅಂತಪ್ಪ ಶ್ರಮದಿಂದ ಓದಿ ತರಗತಿಗೆ ಪ್ರಥಮರಾಗಿ ಫಾದರ್ ಬ್ರೌನ್‍ರ ಮೆಚ್ಚುಗೆಗೆ ಪಾತ್ರರಾದರು. ಬಾಲ್ಯದಲ್ಲಿಯೇ ಅವರಿಗೆ ಗುರುವಾಗಬೇಕೆಂಬ ಆಸೆ ಅತಿಯಾಗಿ ಚಿಗುರೊಡೆಯಲು ಕಾರಣ ಅವರ ತಂದೆಯವರು. ಅವರು ಮಾಡುತ್ತಿದ್ದ ಉಪದೇಶಿ ಸೇವೆಯಿಂದಾಗಿ ತಾನು ಆಧ್ಯಾತ್ಮದ ಒಲವು ಬೆಳೆಸಿಕೊಂಡಿರುವುದಾಗಿ ಅವರೇ ಈ ಮೂಲಕ ತಿಳಿಸಿದ್ದಾರೆ. ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ದೇವಾಲಯದ ಬಾಗಿಲು ತೆರೆಯುವುದು, ಪೂಜೆಯಲ್ಲಿ ಭಾಗವಹಿಸುವುದು, ಸಂಜೆ ಜಪಸರ ಮುಗಿದ ನಂತರ ಎಲ್ಲಾ ಸಕಲ ಸಂತರ ಸ್ವರೂಪಗಳಿಗೆ ಮುತ್ತಿಕ್ಕಿ ಬಾಗಿಲು ಹಾಕಿಕೊಂಡು ಬರುತ್ತಿದ್ದುದ್ದನ್ನು ನೆನಪಿಸಿಕೊಳ್ಳುತ್ತಾರೆ. ಏಳನೇ ತರಗತಿಯನ್ನು ಪೂರ್ಣಗೊಳಿಸಲು ಅಂದಿನ ಬಿಷಪ್ ಪೋತಕಮುರಿಯವರು ಸಹಾಯ ಮಾಡಿದರು. ಮೈನರ್ ಸೆಮಿನರಿಗೆ ಪ್ರವೇಶ ನೀಡಿದ ಅಂದಿನ ಮೈನರ್ ಸೆಮಿನರಿಯ ರೆಕ್ಟರ್ ಫಾದರ್ ಎ. ಡಿ. ಲೋಬೊರವರು ಹಳ್ಳಿಯ ಹುಡುಗರನ್ನು ಬಹು ತುಚ್ಛವಾಗಿ ಕಾಣುತ್ತಿದ್ದರು. ಏಳನೇ ತರಗತಿ ವ್ಯಾಸಂಗ ಮುಗಿಸುವವರೆಗೂ ಪ್ರತಿ ತಿಂಗಳು ಐದು ರೂಪಾಯಿಯಂತೆ ಈ ಬಾಲಕನಿಗೆ ನೀಡಿ ವಿದ್ಯಾಭ್ಯಾಸ ಮುಂದುವರೆಸಲು ಸಹಾಯ ಹಸ್ತ ನೀಡಿದರು.
ದೈವಕೃಪೆ, ಫಾದರ್ ಶೆಂಬ್ರಿಯವರ ಆಶೀರ್ವಾದ, ತಂದೆಯವರ ಪ್ರಾರ್ಥನೆ ಮತ್ತು ಬಿಷಪರು ಹಳ್ಳಿ ಮಕ್ಕಳ ಬಗ್ಗೆ ಹೊಂದಿದ್ದ ಕಾಳಜಿಯ ಫಲವಾಗಿ 8ನೇ ತರಗತಿಗೆ ಅಂತಪ್ಪನವರ ಸೆಮಿನರಿ ಪ್ರವೇಶ ತಡೆಯಲು ರೆಕ್ಟರ್. ಎ.ಡಿ.ಲೋಬೋಗೆ ಸಾಧ್ಯವಾಗಲಿಲ್ಲ. ಫಾದರ್ ಶೆಂಬ್ರಿಯವರ ವಿಶೇಷ ಗುಣಗಳು-ಪೂಜೆ ಮಾಡುವ ವಿಧಾನ, ಕ್ರಿಸ್ತನಲ್ಲಿ ಅವರಿಗಿದ್ದ ವಿಶ್ವಾಸ, ಅವರ ಉದಾರತೆ ಮತ್ತು ಸರಳತನ ಅಂತಪ್ಪನವರಿಗೆ ಆದರ್ಶವಾಗಿದ್ದವು. ತನ್ನ ತಂದೆಯವರ ಶ್ರಮದ ಜೀವನದ ಜೊತೆಗೆ ಸಂತ ಅನ್ನಮ್ಮರಲ್ಲಿದ್ದ ಅಪಾರ ವಿಶ್ವಾಸ ಹಾಗೂ ಸಂತ ಅನ್ನಮ್ಮನವರು ಕನಸ್ಸಿನಲ್ಲಿ ಹೇಳಿದಂತೆ ಹೇಗಾದರೂ ಮಗನನ್ನು ಗುರು ಮಾಡಬೇಕೆಂದು ನಡೆಸಿದ ಹೋರಾಟ ಅಂತಪ್ಪನವರಲ್ಲಿ ಪ್ರಭಾವ ಬೀರಿದ್ದವು. ತಂದೆಯವರು ಒಮ್ಮೆ ನೀನು ಗುರುವಾಗಲೇಬೇಕು, ಆದರೆ ಶೆಂಬ್ರಿಯವರಂತಹ ಗುರು ಆಗಬೇಕು ಎಂದಿದ್ದರು. ತಂದೆಯ ಈ ಮಾತು ಮಗನಲ್ಲಿ ಸದಾ ಜಾಗೃತವಾಗಿತ್ತು. ಅವರ ತಂದೆಯವರ ಆಸೆ ಮೊದಲ ಗಂಡು ಮಗು ಫಾದರ್ ಆಗಬೇಕು, ಕೊನೆಯ ಹೆಣ್ಣುಮಗಳು ಕನ್ಯಾಸ್ತ್ರೀ ಅಗಬೇಕೆಂಬುದು. ಅವರ ಕನಸು ನನಸಾಯಿತು. ಕೊನೆಯ ಮಗಳು ರೋಸಿ ಸಹ ತಂದೆಯ ಅಭಿಲಾಷೆಯಂತೆ ಕನ್ಯಾಸ್ತ್ರೀ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬ ತಂದೆಗೆ ಇದಕ್ಕಿಂತ ಹೆಚ್ಚಿನ ಭಾಗ್ಯ ಬೇರೇನು ಬೇಕು?. ಸೆಮಿನರಿಯಲ್ಲಿ ಲ್ಯಾಟಿನ್ ಅಧ್ಯಯನ ನಿರಂತರವಾಗಿ ನಡೆಯುತ್ತಿತ್ತು. ಅಲ್ಲಿ ನಡೆಸುತ್ತಿದ್ದ ಎಲ್ಲಾ ಪರೀಕ್ಷೆಗಳಲ್ಲಿ ಅಂತಪ್ಪ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ. ಹೀಗೆ ಮೈನರ್ ಸೆಮಿನರಿಯ ಜೊತೆಗೆ ಪ್ರೌಢಶಾಲೆ ಅಧ್ಯಯನ ಪೂರೈಸಿದರು. ಮುಂದಿನ ತತ್ವಶಾಸ್ತ್ರ ಮತ್ತು ದೈವಶಾಸ್ತ್ರದ ಅಧ್ಯಯನಕ್ಕೆ ಬೆಂಗಳೂರಿನ ಸೈಂಟ್ ಪೀಟರ್ಸ್ ಸೆಮಿನೆರಿಗೆ ಸೇರಿದರು. 
ಇ) ಪೋಂಟಿಫಿಕಲ್ ಸಂತ ಪೀಟರ್ಸ್ ಕನ್ನಡ ಸೆಮಿನರಿಯಲ್ಲಿ  ಕನ್ನಡ ಸೇವೆ :
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸೆಂಟ್ ಪೀಟರ್ಸ್ ಪೋಂಟಿಫಿಕಲ್ ಸೆಮಿನರಿಯು ಒಂದು ತರಬೇತಿ ಕೇಂದ್ರ. ಇಲ್ಲಿ ಗುರುಗಳಾಗಲು ಬೇಕಾದಂತಹ ತರಬೇತಿಯನ್ನು ನುರಿತ ಅನುಭವಿ ಪ್ರೊಫೆಸರ್ಸ್ ಹಾಗೂ ಗುರುಗಳ ಮೂಲಕ ನೀಡಲಾಗುವುದು. ಇದು ಒಂದು ಕನ್ನಡ ಕ್ರೈಸ್ತ ತರಬೇತಿ ಮತ್ತು ಅಧ್ಯಯನ ಕೇಂದ್ರ. ಫಾದರ್ ಪೀಟರ್ಸ್‍ಗೆ ಹೋಗುವಷ್ಟರಲ್ಲಿ ಕೆಲವು ಹಿರಿಯ ಕನ್ನಡ ಮತ್ತು ಕನ್ನಡದ ಒಲವಿರುವ ತಮಿಳು ಅಭ್ಯರ್ಥಿಗಳಿಂದಾಗಿ ‘ಕನ್ನಡ ಸಾಹಿತ್ಯ ಸಂಘ’ ಕೆಲವು ಚಟುವಟಿಕೆಗಳನ್ನು ನಡೆಸುತ್ತಿತ್ತು. ಚರ್ಚಾಸ್ಪರ್ಧೆ, ಪ್ರಬಂಧ ರಚನೆ, ರಸಪ್ರಶ್ನಾ ಕಾರ್ಯಕ್ರಮ ಮುಂತಾದ ಕಾರ್ಯಕ್ರಮಗಳನ್ನು ಹಿರಿಯ ಸಹೋದರರು ನಡೆಸುತ್ತಿದ್ದರು. ಇಲ್ಲಿಂದ ಅಂತಪ್ಪನವರಲ್ಲಿ ಕನ್ನಡ ಅಭಿಮಾನ ಮೂಡಲಾರಂಭಿಸಿರಬೇಕು. ಕನ್ನಡದ ಕ್ರೈಸ್ತ ಸಾಹಿತ್ಯಕ್ಕೆ ಸಂಬಂಧಿಸಿದ ಅವಶ್ಯಕವಾದ ಪುಸ್ತಕಗಳನ್ನು ಭಾಷಾಂತರಿಸಿ ಹೊರತರುವಲ್ಲಿ ಪ್ರಯತ್ನಿಸಿದ್ದು ಆಗಿನ ಕನ್ನಡ ಅಭ್ಯರ್ಥಿಗಳ ದೊಡ್ಡ ಸಾಧನೆಯೇ ಆಗಿತ್ತು ಎನ್ನಬಹುದಾಗಿದೆ. ಅಂತಪ್ಪನವರು ದೈವಶಾಸ್ತ್ರದ ಅಂತಿಮ ವರ್ಷಕ್ಕೆ ಬರುವ ವೇಳೆ ಹಲವು ಕನ್ನಡ ಅಭ್ಯರ್ಥಿಗಳ ಪ್ರವೇಶದಿಂದ ಕನ್ನಡ ಸಾಹಿತ್ಯ ಸಂಘ ಹೆಚ್ಚು ಪ್ರಬಲವಾಗಿ ಬೆಳೆಯಲು ಸಾಧ್ಯವಾಯಿತು. ಆ ಸಮಯಕ್ಕೆ ಅಂತಪ್ಪ, ಸ್ಟ್ಯಾನಿ ಬ್ಯಾಪ್ಟಿಸ್ಟ್ ಮುಂತಾದವರು ಪ್ರೊಫೆಸರ್ ಪೆನ್‍ವಿನರ್ ಜೊತೆ ಸೇರಿ ಹೊಸ ಒಡಂಬಡಿಕೆಯ ನಾಲ್ಕು ಪುಸ್ತಕಗಳಾದ ಸಂತ ಮತ್ತಾಯ, ಸಂತ ಮಾರ್ಕ, ಸಂತ ಲೂಕ, ಸಂತ ಯೊವಾನ್ನ ಈ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದರೆಂಬುದನ್ನು ಅವರನ್ನು ಸಂದರ್ಶಿಸಿದಾಗ ತಿಳಿದು ಬಂದ ವಿಷಯವಾಗಿದೆ. ಅಲ್ಲದೆ ಬೈಬಲ್‍ನ್ನು ಕನ್ನಡಕ್ಕೆ ಪೂರ್ಣ ಪ್ರಮಾಣದಲ್ಲಿ ಭಾಷಾಂತರ ಮಾಡುವ ಕಾರ್ಯ ಆರಂಭವಾಗಿದ್ದು     ಇಲ್ಲಿಂದಲೇ. ರಾತ್ರಿ ಎಲ್ಲರೂ ಮಲಗಿದ ನಂತರ ಇವರು ಮತ್ತು ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್ ಒಟ್ಟಿಗೆ ಫಾದರ್ ಪೆನ್‍ವಿನರ ಕೊಠಡಿಯಲ್ಲಿ ಸೇರಿ ಈ ಭಾಷಾಂತರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಂತಪ್ಪನವರಿಗೆ ಫಾದರ್ ಶೆಂಬ್ರಿ ಆದರ್ಶವಾದರೆ ಅಂದಿನ ಬಿಷಪ್ ಪೋತಕಮುರಿ ಗಾಡ್‍ಫಾದರ್ ಆಗಿದ್ದರು. ಅಂತಪ್ಪನವರು ಧೈರ್ಯಗುಂದಿದಾಗ, ಮಾನಸಿಕ ಒತ್ತಡಕ್ಕೆ ಒಳಗಾದಾಗ, ಜಿಗುಪ್ಸೆಗೊಂಡಾಗ ನೈತಿಕ ಸ್ಥೈರ್ಯ ತುಂಬಿ ಪ್ರೋತ್ಸಾಹ ನೀಡುತ್ತಿದ್ದರು. ಜೊತೆಗೆ ಅಂತಪ್ಪನವರಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡುವಂತೆ ಮತ್ತು ಅದನ್ನು ಹೇಗೆ ಅಭಿವೃದ್ಧಿಪಡಿಸಬೇಕೆಂದು ಬುನಾದಿ ಹಾಕಿಕೊಟ್ಟು ಕನ್ನಡ ಪ್ರಜ್ಞೆ ಮೂಡಿಸಿದವರೇ ಬಿಷಪರು. 
ಈ) ಸೇವಾ ಬದುಕು :
ದಿನಾಂಕ 06.04.1957ರಂದು ಬಿಷಪ್ ತೋಮಸ್ ಪೋತಕಮುರಿಯವರಿಂದ ದೀಕ್ಷೆ ಪಡೆದು ಕ್ರಿಸ್ತನ ಸಂದೇಶವನ್ನು ಸಾರಲು ಗುರುಜೀವನಕ್ಕೆ ತನ್ನನ್ನೇ ಸಮರ್ಪಿಸಿಕೊಂಡ ಶುಭದಿನ. ಫಾದರ್ ಅಂತಪ್ಪರಿಗೆ ಗುರು ಸೇವೆಯ ಮೊದಲ ಅನುಭವವಾದದ್ದು ಶಿವಾಜಿನಗರದ ಆರೋಗ್ಯಮಾತೆ ದೇವಾಲಯದಲ್ಲಿ. ಇಲ್ಲಿದ್ದದ್ದು ಕೇವಲ ಐದು ತಿಂಗಳು ಮಾತ್ರ, ಇಲ್ಲಿ ಪ್ರತಿ ದಿನ ಪೂಜೆ ಮತ್ತು ಪ್ರಬೋಧನೆ ಮುಂತಾದ ಆಧ್ಯಾತ್ಮಿಕ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಐದು ತಿಂಗಳ ನಂತರ ಬಿಷಪ್ ಪೋತಕಮುರಿ ಮತ್ತು ಅವರ ಸಲಹಾ ಸಮಿತಿಯು ಅಂತಪ್ಪರವರನ್ನು ಉನ್ನತ ವ್ಯಾಸಂಗಕ್ಕೆ ರೋಮ್ ದೇಶದ ಗ್ರೇಗೋರಿಯನ್ ಯೂನಿವರ್ಸಿಟಿಗೆ ಕಳುಹಿಸಲು ತಿರ್ಮಾನಿಸಿದರು. ಮೊಟ್ಟ ಮೊದಲಿಗೆ ಒಬ್ಬ ಕನ್ನಡ ಗುರು ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣ ಪಡೆದರು ಎಂಬ ಹೆಗ್ಗಳಿಕೆಗೆ ಭಾಜನರಾದರು. ರೋಮನಲ್ಲಿದ್ದಾಗ ಇವರು ಅನೇಕ ಒದ್ದಾಟಗಳು, ಆತಂಕಗಳು ಮತ್ತು ಸಮಸ್ಯೆಗಳನ್ನು ಎದುರಿಸಿದರು. ಉನ್ನತ ವ್ಯಾಸಂಗಕ್ಕೆ ಅವಶ್ಯಕವಾಗಿದ್ದ ಅದರಲ್ಲೂ ಗ್ರೇಗೋರಿಯನ್ ಯೂನಿವರ್ಸಿಟಿಯ ಅಧಿಕೃತ ಭಾಷೆಗಳಾಗಿದ್ದ ಹೀಬ್ರೂ ಮತ್ತು ಗ್ರೀಕ್ ಭಾಷೆಗಳನ್ನು ಪ್ರಥಮವಾಗಿ ಅಧ್ಯಯನ ಮಾಡಿ ಓದಲು ಬರೆಯಲು ಸಮರ್ಥರಾದರು. ಈ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳೊಂದಿಗೆ ಗ್ರೇಗೋರಿಯನ್ ಯೂನಿವರ್ಸಿಟಿ ಪ್ರವೇಶಿಸಿದರು. ಇಲ್ಲಿದ್ದ ಎರಡು ವರ್ಷಗಳಲ್ಲಿ ತಾನು ಈಗಾಗಲೇ ಪಾರಂಗತರಾಗಿದ್ದ ಲ್ಯಾಟಿನ್ ಭಾಷೆಯಲ್ಲಿ ಸುದೀರ್ಘ ಪ್ರಬಂಧ ಮಂಡಿಸಿ ಮಾರ್ಗದರ್ಶಕರು ಮತ್ತು ಪರಿಶೀಲನಾ ಮಂಡಳಿಯಿಂದ ಪ್ರಶಂಸೆ ಪಡೆದರು. ಹೀಗೆ ಯಶಸ್ವಿಯಾಗಿ ತಮ್ಮ ಸಂಶೋಧನೆಯನ್ನು ಪೂರೈಸಿ ದೈವ ಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದರು. 
————————————————
ಮುಂದಿನ ಸಂಚಿಕೆಯಲ್ಲಿ ರೆವರೆಂಡ್ ಫಾದರ್ ಐ. ಅಂತಪ್ಪ ರವರ ಸಾಹಿತ್ಯಿಕ ಸೇವಾ ವಿಚಾರಗಳ ಬಗ್ಗೆ ತಿಳಿಸಲಾಗುವುದು.
———————–————

ನಮ್ಮ ಇತಿಹಾಸ ನಮಗೆಷ್ಟು ಗೊತ್ತು?


ಸಿ ಮರಿಜೋಸೆಫ್, ಬೆಂಗಳೂರು
ಕನ್ನಡನಾಡಿಗೆ ಕ್ರೈಸ್ತಧರ್ಮವನ್ನು ಮೊದಲು ಪರಿಚಯಿಸಿದ್ದು ಯಾರೆಂಬುದರ ಬಗ್ಗೆ ಗೊಂದಲವಿದೆ. ಕೆಲವರು ಯೇಸುವಿನ ಪ್ರೇಷಿತ ಸಂತ ತೋಮಸರ ಕಾಲದಲ್ಲೇ ಇಂಡಿಯಾ ದೇಶಕ್ಕೆ ಕ್ರೈಸ್ತಧರ್ಮ ಕಾಲಿಟ್ಟಿತು ಎಂದು ಅಭಿಪ್ರಾಯಪಟ್ಟು ಸಂತ ತೋಮಸರನ್ನು ಮೈಸೂರಿಗೆ ಮತಪ್ರಚಾರಕ್ಕೆ ಆಮಂತ್ರಿಸಿದವರು ಕುಟ್ನಾಪ್ಪರ್ ಅಥವಾ ಕಂದಪ್ಪ ರಾಜನಿರಬಹುದೆಂದು ವಾದಿಸುತ್ತಾರೆ. ಈ ಕುಟ್ನಾಪ್ಪರ್ ಎಂಬುವನ ಹೆಸರು ಗುಡ್ನಾಫರ್ ಎಂದೂ ಇವನು ಉತ್ತರ ಇಂಡಿಯಾದವನು ಎಂದೂ ಮತ್ತೊಂದು ವಾದವಿದೆ. ಕ್ರಿಸ್ತಶಕ ಆರನೇ ಶತಮಾನಕ್ಕಾಗಲೇ ಕನ್ನಡನಾಡಿನಲ್ಲಿ ಕ್ರೈಸ್ತಧರ್ಮ ಬಲವಾಗಿ ಬೇರೂರಿತ್ತೆಂದೂ   ಇಲ್ಲಿನ ಕಲ್ಯಾಣದಲ್ಲಿ ಒಬ್ಬ ಬಿಷಪರು ಇದ್ದರೆಂದೂ ಕೆಲವರು ಹೇಳುತ್ತಾ ಆ ಕಲ್ಯಾಣವನ್ನು ಕರಾವಳಿಯ ಕಲ್ಯಾಣಪುರವೆಂದು ಪೇಲವವಾಗಿ ಹೇಳುತ್ತಾರೆ, ಇನ್ನು ಕೆಲವರು ಅದು ಮಹಾರಾಷ್ಟ್ರದ ಬೊಂಬಾಯಿನ ಹತ್ತಿರವಿರುವ ಕಲ್ಯಾಣವೆಂದು ಅಭಿಪ್ರಾಯಿಸುತ್ತಾರೆ. ಚಾಲುಕ್ಯರ ಕಲ್ಯಾಣ ಎಂದು ಇದುವರೆಗೆ ಯಾರೂ ಹಕ್ಕು ಮಂಡಿಸಿಲ್ಲ. 
ಕ್ರಿಸ್ತಶಕ ಹನ್ನೊಂದನೇ ಶತಮಾನದಲ್ಲಿ ಕಲಬುರ್ಗಿ ಜಿಲ್ಲೆಯ ಬಸವಕಲ್ಯಾಣದಲ್ಲಿ ಹುಟ್ಟಿದ ಶರಣ ಚಳವಳಿಯಲ್ಲಿ ಕ್ರೈಸ್ತತತ್ವಗಳು ಮಿಳಿತವಾಗಿವೆಯೆಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅದನ್ನು ಬಲವಾಗಿ ಅನುಮೋದಿಸುವ ಹಿರಿಯ ಕ್ರೈಸ್ತ ಇತಿಹಾಸಜ್ಞ ಫಾದರ್ ಡಾ|| ಐ ಅಂತಪ್ಪ ಸ್ವಾಮಿಯವರು ಬಸವಣ್ಣ ಮತ್ತು ಇತರ ಶರಣರ ಮೇಲೆ ಕ್ರೈಸ್ತಧರ್ಮದ ಪ್ರಭಾವ ಖಂಡಿತವಾಗಿಯೂ ಆಗಿದೆಯೆಂದು ಪ್ರತಿಪಾದಿಸುತ್ತಾರೆ. ಡಾ. ಫ ಗು ಹಳಕಟ್ಟಿಯವರು ಕ್ರೈಸ್ತವಿಚಾರಗಳು ಕಂಡುಬರುವ ಸುಮಾರು 250 ವಚನಗಳನ್ನು ಹೆಕ್ಕಿದ್ದಾರೆ.
ಕ್ರಿಸ್ತಶಕ 1320ರ ಹೊತ್ತಿಗೆ ದೊಮನಿಕನ್ ಪಂಥಕ್ಕೆ ಸೇರಿದ ಫಾದರ್ ಜವರ್ದಿನ್ ಕತಲಾನುಸ್ ದೆ ಸೆವೆರಾಕ್ ಎಂಬ ಗುರು ಸಾಲ್ಸೆಟ್ ಎಂಬಲ್ಲಿ ನೆಲೆನಿಂತು ಕರ್ನಾಟಕದ ಒಳನಾಡುಗಳಲ್ಲಿ ಧರ್ಮಪ್ರಚಾರ ಮಾಡಿದ ಬಗ್ಗೆ ಎಸ್ ಎ ಮಾರಾ ಎಂಬುವರು ತಮ್ಮ ‘ಭಾರತೀಯ ಕ್ರೈಸ್ತಸಭಾ ಚರಿತ್ರೆಯ ಪ್ರವೇಶಿಕೆ’ ಎಂಬ ಪುಸ್ತಕದಲ್ಲಿ ಒಕ್ಕಣಿಸಿದ್ದಾರೆ. ಅಲ್ಲದೆ ದೊಮಿನಿಕನ್ನರು ತಮ್ಮ    ದಿನಚರಿಗಳಲ್ಲಿ ಮತ್ತು ಪತ್ರಗಳಲ್ಲಿ ತಮ್ಮ ಕಾರ್ಯಕ್ಷೇತ್ರ ಕರ್ನಾಟಕವೆಂದು ಹೇಳಿ ಇಲ್ಲಿನ ಜನಜೀವನ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಕುರಿತು ದಾಖಲಿಸಿದ್ದಾರೆ. ಹದಿನಾಲ್ಕನೇ ಶತಮಾನದ ಕರ್ನಾಟಕವೆಂದರೆ ಇಡೀ ದಕ್ಷಿಣ ಇಂಡಿಯಾವನ್ನೇ ವ್ಯಾಪಿಸಿದ್ದ ವಿಜಯನಗರ ಸಾಮ್ರಾಜ್ಯವೆಂದು ಹೇಳಬಹುದು. ಇವರೇ ಕರ್ನಾಟಕಕ್ಕೆ ಅಧಿಕೃತವಾಗಿ ಬಂದ ಮೊತ್ತಮೊದಲ ಮಿಶನರಿಗಳು. ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಮುದಗಲ್ ಎಂಬ ಊರಿನಲ್ಲಿ ಕರ್ನಾಟಕದ ಮೊತ್ತಮೊದಲ ಚರ್ಚು ತಲೆಯೆತ್ತಿದ ಬಗ್ಗೆ ಅಚ್ಚರಿ ಮೂಡಿಸುವ ದಾಖಲೆ ನಮಗೆ ಲಭ್ಯವಾಗುತ್ತದೆ. ಮೊನ್ನೆಮೊನ್ನೆಯವರೆಗೂ ಕಾಣಿಸುತ್ತಿದ್ದ ಈ ಪುರಾತನ ದೇವಾಲಯವನ್ನು ಹೊಸ ದೇವಾಲಯದ ನಿರ್ಮಾಣಕ್ಕಾಗಿ ನೆಲಸಮ ಮಾಡಲಾಯಿತೆಂದು ಅಲ್ಲಿನ ಗುರುಗಳು ಹೇಳುತ್ತಾರೆ.
ವಿಜಯನಗರ ಸಾಮ್ರಾಜ್ಯದ ಸೇನೆಯಲ್ಲಿದ್ದ ಕ್ರೈಸ್ತಸಿಪಾಯಿಗಳು ರಾಜಧಾನಿಯಲ್ಲಿ ತಮ್ಮ ಚರ್ಚು ಕಟ್ಟಿಕೊಳ್ಳಲು ರಾಜನು ಅನುಮತಿ ನೀಡಿದ್ದನೆಂಬ ವಿಷಯವೂ ಇತಿಹಾಸದÀಲ್ಲಿ ಕಾಣಸಿಗುತ್ತದೆ. ದೊಮಿನಿಕನ್ನರ ನಂತರ ಫ್ರಾನ್ಸಿಸ್ಕನರು ಹಾಗೂ ಅಗಸ್ಟಿನ್ ಸಭೆಯ ಸನ್ಯಾಸಿಗಳು ಅಲ್ಲದೆ ಬೇರೆಬೇರೆ ಸಭೆಗಳಿಗೆ ಸೇರಿದ ಗುರುಗಳು ಕರ್ನಾಟಕಕ್ಕೆ ಬಂದು ಧರ್ಮಪ್ರಚಾರ ಮಾಡಿದರು ಎಂದು ಇತಿಹಾಸದಲ್ಲಿ ಅರಿಯುತ್ತೇವೆ. ಇವರೆಲ್ಲರ ನಂತರ ಕರ್ನಾಟಕಕ್ಕೆ ಬಂದ ಪ್ರಮುಖ ಕ್ರೈಸ್ತ ಗುರುಗಳೆಂದರೆ ಯೇಸುಸಭೆಯವರು. 
ಕ್ರಿಸ್ತಶಕ 1498ರಲ್ಲಿ ನಾವೆಯ ಮೂಲಕ ಇಂಡಿಯಾಕ್ಕೆ ಬಂದಿಳಿದ ಪೋರ್ಚುಗೀಸರು ಇಂಡಿಯಾದಲ್ಲಿ ಕ್ರೈಸ್ತಮತ ಪ್ರಚಾರವನ್ನು ಚುರುಕುಗೊಳಿಸಿದರು. ಯೇಸುಸಭೆಯ ಸಂತ ಫ್ರಾನ್ಸಿಸ್ ಝೇವಿಯರರ ಪ್ರವೇಶವಾದ ಮೇಲೆ ಇಂಡಿಯಾದಲ್ಲಿ ಕ್ರೈಸ್ತಧರ್ಮಕ್ಕೆ ಸುಭದ್ರ ನೆಲೆಗಟ್ಟು ಸಿಕ್ಕಿದಂತಾಯಿತು. ಗೋವಾದಲ್ಲಿ ತಮ್ಮ ಕೇಂದ್ರಕಚೇರಿಯನ್ನು ಕಟ್ಟಿಕೊಂಡು ಮತಪ್ರಚಾರಕ್ಕಿಳಿದ ಜೆಸ್ವಿತರ ಪ್ರತಿನಿಧಿಯಾಗಿ ಫಾದರ್        ಲಿಯಾನಾರ್ಡೊ ಚಿನ್ನಮಿ ಎಂಬ ಯೇಸುಸಭೆಯ ಗುರುಗಳು 1648ರಲ್ಲಿ ಶ್ರೀರಂಗಪಟ್ಟಣಕ್ಕೆ ಆಗಮಿಸಿ ಮಹಾರಾಜರನ್ನು ಭೇಟಿಯಾಗಿ 'ನಾನು ಸತ್ಯಧರ್ಮವನ್ನು ಬೋಧಿಸುತ್ತೇನೆ, ಇಷ್ಟವುಳ್ಳವರು ಬಂದು ಸೇರಬಹುದು' ಎಂದು ಹೇಳಿ ಧರ್ಮಪ್ರಚಾರಕ್ಕೆ ಅನುಮತಿ ಪಡೆದುಕೊಂಡರು. ಹೀಗೆ ಇವರಿಂದ ಕೊಳ್ಳೇಗಾಲದ ಬಳಿಯ ಬಸವಾಪುರದಲ್ಲಿ ಮೈಸೂರು ಸೀಮೆಯ ಮೊದಲ ಚರ್ಚು ಪ್ರಾರಂಭವಾಯಿತು.
ಹೀಗೆ ಉತ್ತರದಲ್ಲಿ ಫ್ರಾನ್ಸಿಸ್ಕನರ ಹಾಗೂ ದಕ್ಷಿಣದಲ್ಲಿ ಜೆಸ್ವಿತರ ಪರಿಶ್ರಮದ ಫಲವಾಗಿ ಇಂಡಿಯಾ ದೇಶದಲ್ಲಿ ಕ್ರೈಸ್ತರ ಸಂಖ್ಯೆ    ದಿನೇದಿನೇ ಹೆಚ್ಚುತ್ತಾ ಹೋಗಿ ಕ್ರೈಸ್ತಧರ್ಮವು ಗಣನೀಯವಾಗಿ ವಿಸ್ತರಿಸುತ್ತಾ ಹೋಯಿತು. ದುರಾದೃಷ್ಟಕರವಾಗಿ 1773ರಲ್ಲಿ ಪೋಪ್ ಜಗದ್ಗುರುಗಳು ಜೆಸ್ವಿತ್ ಸಭೆಯನ್ನು ಬರಖಾಸ್ತು ಮಾಡಿದ ಫಲವಾಗಿ ಪ್ರಪಂಚದೆಲ್ಲೆಡೆ ಹರಡಿದ್ದ ಜೆಸ್ವಿತ್ ಗುರುಗಳು ತಮ್ಮ ತಾಯ್ನಾಡುಗಳಿಗೆ ಹಿಂದಿರುಗಬೇಕಾಯಿತು. ಹೀಗಾಗಿ ದಕ್ಷಿಣ ಇಂಡಿಯಾದಲ್ಲಿ ಜೆಸ್ವಿತ್ ಗುರುಗಳಿಂದ ಆಧ್ಯಾತ್ಮಿಕವಾಗಿ ಪೋಷಿತರಾಗಿದ್ದ ಕ್ರೈಸ್ತಬಾಂಧವರನ್ನು ಸ್ಥಳೀಯ ಉಪದೇಶಿಗಳು ಜಪತಪಗಳ ಮೂಲಕ ಮುನ್ನಡೆಸಿದರು.
ಪಾಂಡಿಚೇರಿ ಎಂಬ ಫ್ರೆಂಚ್ ದೇಶದ ವಸಾಹತಿನಲ್ಲಿ ಬೇರೂರಿದ್ದ ಎಂಇಪಿ ಸಂಸ್ಥೆಯ ಗುರುಗಳು ಮೈಸೂರು ಸೀಮೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು 1776ರಿಂದೀಚೆಗೆ ಚಿತ್ರದುರ್ಗದಿಂದ ಕೊಯಿಮತ್ತೂರುವರೆಗಿನ ಮೈಸೂರು ಸೀಮೆಯಲ್ಲಿ ಕ್ರೈಸ್ತರನ್ನು ಪೋಷಿಸಿದರು.  
ಸವಲತ್ತುಗಳೇ  ಇಲ್ಲದಿದ್ದ ಕಾಲದಲ್ಲಿ, ನಿರಂಕುಶ ರಾಜಾಳ್ವಿಕೆ ಹಾಗೂ ಅಸಹಿಷ್ಟು ಪಾಳೇಗಾರ ಮತ್ತು ಸ್ಥಳೀಯ ನಾಯಕರ ಹಿಂಸೆಗಳನ್ನು ಸಹಿಸಿ ಅತೀವ ಕಷ್ಟದಿಂದ ಜೀವನ ಸಾಗಿಸುತ್ತಾ, ಕ್ರೈಸ್ತಧರ್ಮವನ್ನು ಬೇರೂರಿಸಿದ ಆ ಪುಣ್ಯಾತ್ಮರು ಧರ್ಮಪ್ರಚಾರದೊಂದಿಗೆ ಕನ್ನಡ ನಾಡುನುಡಿಗೆ ಹಾಗೂ ಕನ್ನಡಸಂಸ್ಕೃತಿಗೆ ತಮ್ಮ ಕೈಲಾದ ಸೇವೆಯನ್ನು ಮಾಡಿ ಕ್ರೈಸ್ತಧರ್ಮವನ್ನು ನಮಗೆ ಕೊಟ್ಟು ಹೋಗಿದ್ದಾರೆ. 
ಇಂದು ಎಸ್ಟಾಬ್ಲಿಷ್ಢ್ ಚರ್ಚುಗಳ ದಂತಗೋಪುರಗಳಲ್ಲಿ ವಾಸಿಸುತ್ತಿರುವ ನಾವು ನಮ್ಮ ಭವ್ಯ ಇತಿಹಾಸವನ್ನು ಮರೆಯದೇ ಧರ್ಮಪ್ರಚಾರಾಂದೋಲನದಲ್ಲಿ ನಮ್ಮ ಪಾತ್ರವೂ ಇದೆ ಎಂದರಿತು ಸನ್ಮಾರ್ಗದಲ್ಲಿ ಮುನ್ನಡೆದು ಸಮಾಜಕ್ಕೆ ಮಾದರಿಯಾಗೋಣ.

0-0-0-0-0-0

ಕೊರೊನಾ ವೈರಾಣು, ಸಾಮಾಜಿಕ ಬೇಹುಗಾರಿಕೆ ಮತ್ತು ನಮ್ಮ ಸಿಎಎ ಪ್ರತಿಭಟನೆ


ಎಫ್.ಎಂ. ನಂದಗಾವ್
  ಈ ವರ್ಷದ ಆದಿಯಲ್ಲಿ ಚೀನಾದಲ್ಲಿ ಪ್ರಥಮ ಬಾರಿಗೆ ತನ್ನ ಇರುವನ್ನು ತೋರಿಸಿದ ಕೊರೊನಾ ವೈರಾಣು (ವೈರಸ್), ಜಗತ್ತಿನ ವಿವಿಧ ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಪ್ರಕಟಿಸಿಕೊಂಡು, ಇದುವರೆಗೂ 3500ಕ್ಕೂ ಅಧಿಕ ಜನರ ಬಲಿ ತೆಗೆದುಕೊಂಡಿದೆ. ಜಗತ್ತಿನಾದ್ಯಂತ 95000ಕ್ಕೂ ಅಧಿಕ ಜನಕ್ಕೆ ಈ ಸೋಂಕು ತಗುಲಿದೆ. ಇಂದು 40ಕ್ಕೂ ಅಧಿಕ ದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿಶ್ವದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಮೂಡಿದಂತಾಗಿದೆ.
  ನ್ಯುಮೋನಿಯಾ ರೋಗ ಲಕ್ಷಣದ ಪ್ರಾಣಿ ಮೂಲದ ಈ ಸೋಂಕು, ಶೀತ, ಸ್ನಾಯ ನೋವು, ಆಯಾಸ ಮತ್ತು ಉಸಿರಾಟಕ್ಕೆ ತೊಂದರೆ ತಂದು ಅಂತಿಮವಾಗಿ ಸೋಂಕು ಪೀಡಿತ ವ್ಯಕ್ತಿಯ ಸಾವಿಗೆ ಕಾರಣವಾಗುತ್ತದೆ. ಹಿಂದೆ, 2002ರಲ್ಲೂ ಇದೇ ಬಗೆಯಲ್ಲಿ ಅದೇ ಚೀನಾ ದೇಶದಲ್ಲಿ ಕಾಣಿಸಿಕೊಂಡ ಸಾರ್ಸ್ ವೈರಾಣುವಿನಿಂದ ಆಗ ಜಗತ್ತಿನಲ್ಲಿ ಒಟ್ಟು 700ಕ್ಕೂ ಅಧಿಕ ಜನ ಅಸುನೀಗಿದ್ದರು. 
  ಸುಮಾರು 2 ರಿಂದ 14 ದಿನಗಳಲ್ಲಿ ವ್ಯಕ್ತಿಯ ದೇಹವನ್ನು ಆಕ್ರಮಿಸಿಕೊಳ್ಳುವ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಈ ಹೊಸ ಕೊರೊನಾ ವೈರಾಣು ಸೋಂಕು ಪಾಕಿಸ್ತಾನ, ಇರಾನ್, ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ಯುರೋಪ ಖಂಡದ ದೇಶಗಳಲ್ಲಿ ಹರಡತೊಡಗಿದ್ದು ಆತಂಕಕ್ಕೆ ಕಾರಣವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು, ಸದ್ಯಕ್ಕೆ ಇನ್ನೂ ಔಷಧಿ ಕಂಡುಹಿಡಿಯದ ಈ ಹೊಸ ಸೋಂಕು ಹರಡುವುದನ್ನು ತಡೆಯಲು ಕಟ್ಟೆಚ್ಚರದ ನಿಗಾವಹಿಸಿ ಹಲವಾರು ಉಪಕ್ರಮಗಳನ್ನು ಸೂಚಿಸಿದೆ. 
  ಜಗತ್ತಿನ ವಿವಿಧ ದೇಶಗಳು ಒಂದು ಕಡೆ ತಮ್ಮ ತಮ್ಮ ನಾಗರಿಕರನ್ನು ಚೀನಾದಿಂದ ವಾಪಸು ಕರೆಯಿಸಿಕೊಂಡರೆ, ಇನ್ನೊಂದು ಕಡೆ ಚೀನಾದೊಂದಿಗಿನ ರಫ್ತು ಆಮದು ವ್ಯವಹಾರ ನಡೆಸುವುದಕ್ಕೆ ಹಿಂದೇಟು ಹಾಕುತ್ತಿವೆ. ವಿವಿಧ ದೇಶಗಳು ಚೀನಾಕ್ಕೆ ಹೋಗುವ, ಚೀನಾದಿಂದ ಬರುವ ವಿಮಾನಗಳ ಮೇಲೆ ನಿಗಾ ಇರಿಸಿವೆ. ಇನ್ನಿತರ ದೇಶಗಳು ಚೀನಾ ದೇಶಕ್ಕೆ ತೆರಳುವ ವಿಮಾನ ಸಂಚಾರಗಳನ್ನು ರದ್ದುಗೊಳಿಸಿವೆ. ಅಂತರ್ರಾಷ್ಟ್ರೀಯ ಆಟೋಟಗಳನ್ನು, ಆರ್ಥಿಕ, ಸಾಮಾಜಿಕ, ವಿವಿಧ ಬಗೆಯ ವಿಷಯಗಳ ವಿಚಾರ ಸಂಕಿರಣಗಳನ್ನು ರದ್ದು ಪಡಿಸಲಾಗಿದೆ ಇಲ್ಲವೇ ಮುಂದೂಡಲಾಗಿದೆ. ಪ್ರವಾಸೋದ್ಯಮಕ್ಕೂ ಪೆಟ್ಟು 
ಬಿದ್ದಿದೆ.
  ಇದೊಂದು ಬಗೆಯಲ್ಲಿ ಸ್ವಯಂ ದಿಗ್ಬಂಧನ ಹೇರಿದಂತೆ, ಹೇರಿಕೊಂಡಂತೆ ಎಂದರೆ ತಪ್ಪಾಗದು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಚೀನಾದ ಜೊತೆಗೆ ವಿವಿಧ ದೇಶಗಳಲ್ಲೂ ಕಾಣಿಸುತ್ತಿರುವ ಈ ವೈರಾಣು ಸೋಂಕು, ಚೀನಾದ ಜನ ಸಮುದಾಯದ ಆರೋಗ್ಯದ ಮೇಲಷ್ಟೇ ಅಲ್ಲ, ಆ ದೇಶದ ಆರ್ಥಿಕ, ಸಾಮಾಜಿಕ ಚಟುವಟಿಕೆಗಳ ಮೇಲೆ, ಜೊತೆಗೆ ಆ ದೇಶದ ಆರ್ಥಿಕ ಚಟುವಟಿಕೆಗಳನ್ನು ಅವಲಂಬಿಸಿರುವ ವಿವಿಧ ದೇಶಗಳ ಮೇಲೂ ತನ್ನ ಕರಾಳ ಛಾಯೆ ಮೂಡಿಸುತ್ತಿದೆ.
 ಯುರೋಪಿನ ದೇಶಗಳಲ್ಲಿ ಪ್ರಮುಖವಾಗಿ ಇಟಲಿಯಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಮೊನ್ನೆಮೊನ್ನೆಯವರೆಗೂ ಸುಮಾರು 4600 ಜನರಿಗೆ ಈ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ. ಜೊತೆಗೆ 197 ಸಾವುಗಳು ಸಂಭಿವಿಸಿವೆ. ರೋಮ್ ಪಟ್ಟಣದಲ್ಲೂ ಮೂವರು ಈ ಸೋಂಕಿಗೆ ಬಲಿಯಾಗಿದ್ದಾರೆಂದು ಶಂಕಿಸಲಾಗಿತ್ತು, ಈಗ ಅವರ ಆರೋಗ್ಯ ಸ್ಥಿತಿ ಬಹಳ ಸುಧಾರಿಸಿದೆ. 
 ಆದರೆ, ಬೂದಿ ಬುಧವಾರ ಅಂದರೆ ಅದೇ ವಿಭೂತಿ ಬುಧವಾರದಂದು ಕೊರೊನಾ ವೈರಸ್ ಪೀಡಿತರಿಗೆ ಸಹಾನುಭೂತಿ ತೋರಿಸುವ ಕ್ರಮವಾಗಿ ಮುಖ ಗೌಸು ತೊಡದೇ ಪೂಜೆಯಲ್ಲಿ ಭಾಗವಹಿಸಿದ್ದ, ವಿಶ್ವಾಸಿಕರಿಗೆ ದರ್ಶನ ನೀಡಿದ್ದ ಕಥೋಲಿಕ ಕ್ರೈಸ್ತರ ಜಗದ್ಗುರು ಪಾಪು ಸ್ವಾಮಿ(ಪೋಪ್)ಗಳು ಅಸ್ವಸ್ಥರಾಗಿದ್ದಾರೆ. ಅವರು ಕೆಮ್ಮುತ್ತಿರುವ ವಿಡಿಯೋ ತುಣುಕುಗಳು ಹರಿದಾಡತೊಡಗಿವೆ, ಅವರಿಗೆ ಕೊರೊನಾ ಸೋಂಕು ತಗುಲಿದೆಯೇ ಇಲ್ಲವೇ ಕುರಿತಂತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆಯೇ? ಎಂಬುದನ್ನು ವ್ಯಾಟಿಕನ್ ಅಧಿಕೃತ ವಕ್ತಾರರು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಅವರು ನಂತರದ ಪೂಜಾವಿಧಿಗಳಲ್ಲಿ ಭಾಗವಹಿಸದಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿರುವುದಂತೂ ನಿಜ. ಇತ್ತ ಚೀನಕ್ಕೆ ತೀರಾ ಹತ್ತಿರದಲ್ಲಿರುವ ದಕ್ಷಿಣ ಕೋರಿಯಾ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಅದರಿಂದ ಆತಂಕಗೊಂಡಿರುವ ಅಲ್ಲಿನ ಧರ್ಮಕ್ಷೇತ್ರಗಳು(ಡಿಯಾಸಿಸ್)ವಿಭೂತಿ ಬುಧವಾರದ ಆಚರಣೆಗಳು ಸೇರಿದಂತೆ ಪ್ರಸಕ್ತ ಸಾಲಿನ ಮಾರ್ಚ 5ರವರೆಗೂ ಮೂರುವಾರಗಳ ಕಾಲ ಪೂಜೆಗಾಗಿ ಜನ ಸೇರುವ ದೈನಂದಿನ ಮತ್ತು ಭಾನುವಾರದ ಧಾರ್ಮಿಕ ಪೂಜಾವಿಧಿಗಳ ಸಮಾವೇಶ (ಮಾಸ್)ಗಳನ್ನು ರದ್ದುಪಡಿಸಿವೆ. ಇದಕ್ಕೂ ಮೊದಲು ಹಾಂಗಕಾಂಗ್ ಧರ್ಮಕ್ಷೇತ್ರವೂ ಇಂಥದೇ ಕ್ರಮ ಕೈಗೊಂಡಿತ್ತು. 
 ವಿಭೂತಿ ಬುಧವಾರದ ಆಚರಣೆಯು ಯೇಸುಕ್ರಿಸ್ತನ ಪುನರುತ್ಥಾನವನ್ನು ಸಾರುವ ಕ್ರೈಸ್ತರ ಈಸ್ಟರ್ ಹಬ್ಬದ ಮುಂಚಿನ ಸುಮಾರು 40 ರಿಂದ 50 ದಿನಗಳ ಕಾಲದ ಜಪತಪಗಳು, ದಾನಧರ್ಮಗಳು ಸೇರಿದಂತೆ ಸರಳ, ಸಾತ್ವಿಕ ಜೀವನದ ತಪಸ್ಸು ಕಾಲ(ಲೆಂಟ್ ಸೀಸನ್)ದ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಮದುವೆ ಮೊದಲಾದ ಶುಭಕಾರ್ಯಗಳು ನಡೆಯುವುದಿಲ್ಲ. ಈ ಸಮಯದಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ಪ್ರಾರ್ಥನಾ ಮಂದಿರಗಳಲ್ಲಿ ನೆರೆಯುತ್ತಿರುತ್ತಾರೆ.
 ಚೀನಾದ ವುಹಾನ್‍ನಲ್ಲಿ ಕಾಣಿಸಿಕೊಂಡ ಮಾನವರ ಜೀವಕ್ಕೆ ಕಂಟಕವಾಗಿರುವ ಕೋವಿಡ್ -19(ಕೊರೊನಾ ವೈರಸ್) ವೈರಾಣು ಚೀನಾದ ತುಂಬೆಲ್ಲ ಸಾಂಕ್ರಾಮಿಕವಾಗಿ ಹರಡುತ್ತಿದೆ. ಹೂಬೈ ಪ್ರಾಂತ್ಯದಲ್ಲಿರುವ ಈ ವುಹಾನ್ ಪಟ್ಟಣದೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಸುಪಾಸಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಕೊರೊನಾ ವೈರಾಣು ಹರಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಇದರ ಜೊತೆಗೆ, ಸರ್ಕಾರವೇ ಮುಂದೆ ನಿಂತು ಮಾಧ್ಯಮಗಳಿಗೆ ಮಾಹಿತಿ ಒದಗಿಸುತ್ತಿದ್ದು, ಆ ದೇಶದಲ್ಲಿನ ನಿಜವಾದ ಪರಿಸ್ಥಿತಿ ಏನೂ ಎಂಬುದು ಹೊರ ಜಗತ್ತಿಗೆ ಸರಿಯಾಗಿ ಸಿಗುತ್ತಿಲ್ಲ. ಕೊರೊನಾ ವೈರಾಣು ಸೋಂಕಿಗೆ ಸಂಬಂಧಿಸಿದಂತೆ ಚೀನಾದಲ್ಲಿದ್ದು ಸಾಕ್ಷಾತ್ ವರದಿ ಮಾಡುತ್ತಿದ್ದ ಯುರೋಪ ಮೂಲದ ಪತ್ರಿಕೆಯ ವರದಿಗಾರನನ್ನು ಚೀನಾ ದೇಶದಿಂದ ಹೊರಗಟ್ಟಿದೆ.
ಇರಲಿ, ಜನವರಿ ತಿಂಗಳಲ್ಲಿ ವುಹಾನ್ ನಗರದಲ್ಲಿ ಈ ವೈರಸ್‍ನ ಅಸ್ತಿತ್ವದ ಕುರಿತು ವರದಿ ಆಗುತ್ತಿದ್ದಂತೆಯೇ ತಕ್ಷಣ ಜಾಗೃತಗೊಂಡ ಚೀನಾ ಸರ್ಕಾರ, ನಾನಾ ಬಗೆಯ ಆ್ಯಪ್ ಆಧಾರಿತ ಪ್ರಜಾನಿಯಂತ್ರಣದ ವ್ಯವಸ್ಥೆಯಲ್ಲಿ ಕೊರೊನಾ ವೈರಸ್ ಸೊಂಕು ಪೀಡಿತರ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಒದಗಿಸಿ ಗೃಹಬಂಧನದಲ್ಲಿರಿಸಿ ಅದು ಇತರೆಡೆ ಹರಡದಂತೆ ಕಡಿವಾಣ ಹಾಕಲು ಕ್ರಮ ಕೈಗೊಂಡಿತ್ತು. 
ಚೀನಾದ ಕಮ್ಯುನಿಸ್ಟ್ ಸರ್ಕಾರ ಜಾರಿಗೆ ತಂದಿರುವ `ಸಾಮಾಜಿಕ ಮಾನ್ಯತಾ ವ್ಯವಸ್ಥೆ’ (ಸೋಶಿಯಲ್ ಕ್ರೆಡಿಟ್ ಸಿಸ್ಟಿಮ್) ಇದನ್ನು ಸಾಧ್ಯವಾಗಿಸಿತ್ತು. ಏನಿದು `ಸಾಮಾಜಿಕ ಮಾನ್ಯತಾ ವ್ಯವಸ್ಥೆ’? ಚೀನಾದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ವೈಬೋ, ಯೂಕ್ಕೂ, ವಿಚಾಟ್, ಬೈದು ಇತ್ಯಾದಿ ಹೆಸರುಗಳಲ್ಲಿರುವ ಗೂಗಲ್, ಫೇಸ್ ಬುಕ್, ಟ್ವಿಟರ್, ವಾಟ್ಸ್‍ಆ್ಯಪ್ ಮಾದರಿಯ ಸಾಮಾಜಿಕ ಮಾಧ್ಯಮಗಳ ಆಧಾರದಲ್ಲಿ, ಅವನ್ನು ಬಳಸುವ ಪ್ರತಿಯೊಬ್ಬ ವ್ಯಕ್ತಿಯ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಇದು. ಅದರಲ್ಲಿ ಲಭ್ಯವಾಗುವ ಮಾಹಿತಿ ಕ್ರೋಢಿಕರಿಸಿ ಆಡಳಿತಾರೂಢ ಸರ್ಕಾರದ ನಿಲುವುಗಳನ್ನು ಬೆಂಬಲಿಸುವ, ಅದರ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವ ವ್ಯಕ್ತಿಯಾಗಿ ಉತ್ತಮ ನಾಗರಿಕನಾಗಿದ್ದರೆ, ಅವನಿಗೆ ಅಧಿಕ ಅಂಕಗಳು ಸೇರಿಕೊಂಡು ಬಗೆಬಗೆಯ ಸರ್ಕಾರಿ ಸೌಲತ್ತುಗಳು ಸುಲಭದಲ್ಲಿ ದಕ್ಕುತ್ತವೆ. ಅದೇ ಆತ ಸರ್ಕಾರದ ವಿರುದ್ಧದ ನಿಲುವು ಹೊಂದಿದ್ದರೆ, ಅವನ ಸೌಲತ್ತುಗಳಿಗೆ ಕತ್ತರಿ ಬೀಳುತ್ತದೆ. 
   ಇದರದೇ ಮುಂದಿನ ಒಂದು ಭಾಗವಾಗಿರುವಂತೆ ಕಾಣುವ, ಅಧಿಕೃತ ಮಾನ್ಯತೆ ಪಡೆದಿರುವ ಸರ್ಕಾರಿ ಪ್ರಾಯೋಜಿತ ಸಾಂಪ್ರದಾಯಿಕ ಸಾಮಾಜಿಕ ಬೇಹುಗಾರಿಕೆ ವ್ಯವಸ್ಥೆಯಲ್ಲಿ ವ್ಯಕ್ತಿಯ ಒಲವುಗಳ ಬಗೆಗೆ, ನಡವಳಿಕೆ ಬಗೆಗೆ ಇತರರು ಸರ್ಕಾರಕ್ಕೆ ವರದಿ ಸಲ್ಲಿಸಬಹುದು. ಇದು ಪರಸ್ಪರರಲ್ಲಿ, ನೆರೆಹೊರೆಯವರಲ್ಲಿ ಅಪನಂಬಿಕೆ ಮೂಡಿಸುತ್ತಾ, ಅಲ್ಲಿನ ಸಮಾಜದಲ್ಲಿ ಅಲ್ಲೋಲಕಲ್ಲೋಲವನ್ನು ಉಂಟುಮಾಡುತ್ತಿದೆ.
  ಧಾರ್ಮಿಕ ಕ್ಷೇತ್ರವೂ ಈ ಸಾರ್ವಜನಿಕ ಬೇಹುಗಾರಿಕೆಗೆ ಹೊರತಾಗಿಲ್ಲ. ಸರ್ಕಾರದಿಂದ ಅಧಿಕೃತ ಮಾನ್ಯತೆ ಪಡೆದ ಕ್ರೈಸ್ತ ಧರ್ಮಸಭೆಯ ಸದಸ್ಯರು, ಭೂಗತ ಕ್ರೈಸ್ತ ಧರ್ಮಸಭೆಯ ಸದಸ್ಯರು ಮತ್ತು ಯಾಜಕರ ಕುರಿತು ಬೇಹುಗಾರಿಕೆ ನಡೆಸಿ 
ಅಧಿಕಾರಿಗಳಿಗೆ ವರದಿ ಸಲ್ಲಿಸಿ, ಆಯಾ ಧರ್ಮಸಭೆಯ ಸದಸ್ಯರನ್ನು ತಮ್ಮ ಧರ್ಮಸಭೆಗೆ ಸೇರಿಸಿಕೊಳ್ಳುವಲ್ಲಿ ಆಸಕ್ತಿ ಹೊಂದಿರುವುದು ಚೀನಾದಲ್ಲಿನ ಹೊಸ ಬೆಳವಣಿಗೆ. ಆಯಾ ಕ್ರೈಸ್ತ ಧರ್ಮಸಭೆಯ ಯಾಜಕರ ಮೇಲೆ, ಆಯಾ ಧರ್ಮಕ್ಷೇತ್ರದ ವಿಶ್ವಾಸಿಕರೇ ಬೇಹುಗಾರಿಕೆ ನಡೆಸುವುದೂ ಇದೆ!
 ಚೀನಾದ ಕಮ್ಯುನಿಸ್ಟ್ ಪಕ್ಷವು ಹಲವಾರು ವರ್ಷಗಳ ಹಿಂದೆಯೇ ನಾಗರಿಕರೇ ತಮ್ಮ ಸಾಮಾಜಿಕ ಪರಿಸರದಲ್ಲಿ ನಡೆಸಬಹುದಾದ ಬೇಹುಗಾರಿಕೆಯನ್ನು ಜಾರಿಗೆ ತಂದಿತ್ತು. ಈಗ ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿನ ಹಾವಳಿಯ ತಡೆಗೂ ಅದನ್ನು ಬಳಸಲು ಮುಂದಾಗಿದೆ. ತಮ್ಮ ತಮ್ಮ ಪರಿಸರದಲ್ಲಿ ಕೊರೊನಾ ವೈರಾಣು ಪೀಡಿತರನ್ನು ಪತ್ತೆ ಹಚ್ಚಿ ಅದನ್ನು ಸರ್ಕಾರದ ಗಮನಕ್ಕೆ ತರುವ ಸಾಮಾಜಿಕ ಬೇಹುಗಾರರಿಗೆ ನಗದು ಪುರಸ್ಕಾರ, ಸದ್ಯಕ್ಕೆ ಮುಖ್ಯ ಎನಿಸುತ್ತಿರುವ ಮೂಗು ಮುಸುಕುಗಳನ್ನು ಒದಗಿಸುವುದು ಮತ್ತು ವಿವಿಧ ಬಗೆಯ ಸೌಲತ್ತು ನೀಡುವ ಆಮಿಷ ಒಡ್ಡುತ್ತಿದೆ.
  ಅಪಾಯಕಾರಿ ಕೊರೊನಾ ವೈರಾಣು ಹರಡುವುದನ್ನು ತಡೆಯುವುದಕ್ಕಾಗಿ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿರುವ ಚೀನಾ, ತಮ್ಮ ತಮ್ಮ ಪರಿಸರದಲ್ಲಿ ಕೊರೊನಾ ವೈರಾಣು ಪೀಡಿತರನ್ನು ಪತ್ತೆ ಹಚ್ಚಿ ಅದನ್ನು ಸರ್ಕಾರದ ಗಮನಕ್ಕೆ ತರುವವರಿಗೆ ನಗದು ಮತ್ತು ವಿವಿಧ ಬಗೆಯ ವಸ್ತುಗಳ ಆಮಿಷ ಒಡ್ಡುತ್ತಿದೆ. ಈ ನಗದು ಪುರಸ್ಕಾರ ಮಿತಿ 3000 ಯನ್ (ಸುಮಾರು 430 ಅಮೆರಿಕದ ಡಾಲರ್). 
 ಮಾವೊ ಝಿಡಂಗ ಅವರ ಕಾಲದಿಂದಲೂ ಸರ್ಕಾರದ ನಿಲುವುಗಳನ್ನು ವಿರೋಧಿಸುವವರ ಬೇಹುಗಾರಿಕೆಗೆ ನಾಗರಿಕರನ್ನು ಬಳಸುವ ಸಂಸ್ಕøತಿ ಆರಂಭವಾಗಿತ್ತು. ಮುಂದೆ 1976ರ ಸುಮಾರು, ಹತ್ತು ವರ್ಷಗಳ ಸಾಂಸ್ಕøತಿಕ ಆಂದೋಲನ ಉತ್ತುಂಗ ಸ್ಥಿತಿಯಲ್ಲಿದ್ದಾಗ, ಈ ಬಗೆಯ ನಾಗರಿಕರ ಬೇಹುಗಾರಿಕೆಯೂ ತನ್ನ ಪರಾಕಾಷ್ಠೆಯನ್ನು ಮುಟ್ಟಿತ್ತು. ಆಗ ಅದು, ಸ್ನೇಹಿತರ, ಕುಟುಂಬಗಳ ಮತ್ತು ಸಮುದಾಯಗಳ ನಡುವೆ ಕಂದಕಗಳನ್ನು ನಿರ್ಮಿಸಿತ್ತು.  ಕೊರೊನಾ ವೈರಾಣುವಿನ ಹಿನ್ನೆಲೆಯಲ್ಲಿ ಪ್ರಸಕ್ತ ಅಧ್ಯಕ್ಷ ಕ್ಸಿ. ಜಿನ್ ಪಿಂಗ್ ಸರ್ಕಾರವು, ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ಈ ನಾಗರಿಕರ ಬೇಹುಗಾರಿಕೆಯ ಸಂಸ್ಕøತಿಗೆ ಹೊಸ ಬಗೆಯ ವಾಖ್ಯಾನವನ್ನು ನೀಡುತ್ತಿದೆ. 
 ಕೊರೊನಾ ವೈರಾಣುವಿನಿಂದ ಬಳಲುತ್ತಿರುವವರ ಮಾಹಿತಿ ಮುಚ್ಚಿಡುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಸಾರ್ವಜನಿಕ ಆರೋಗ್ಯ ನಿರ್ವಹಣೆಗೆ, ಜನಪದರ ಆರೋಗ್ಯ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಬೇಕು ಎನ್ನುವುದು ಎಲ್ಲರೂ ಒಪ್ಪುವ ಮಾತು. 
ಆದರೆ, ಕೊರೊನಾ ವೈರಾಣು ಪೀಡಿತರನ್ನು ಆಸ್ಪತ್ರೆಗಳಿಗೆ ಕರೆತಂದು ಚಿಕಿತ್ಸೆ ನೀಡುವುದನ್ನು ಬಿಟ್ಟು, ಅವರನ್ನು ಪ್ರತ್ಯೇಕವಾಗಿರಿಸುವ ಚೀನಾ ಸರ್ಕಾರದ ಕ್ರಮ, ಅದಕ್ಕೆ ಸಾರ್ವಜನಿಕ ವೈದ್ಯಕೀಯ ಚಿಕಿತ್ಸೆಯ ಕುರಿತು ವಿಶ್ವಾಸ     ಇಲ್ಲದಿರುವುದನ್ನು ಎತ್ತಿ ತೋರಿಸುತ್ತಿದೆ. ಹಿಂದೊಂದು ಕಾಲದಲ್ಲಿ, ಕ್ಷಯರೋಗ ಪೀಡಿತರನ್ನು, ಕುಷ್ಟರೋಗಿಗಳನ್ನು, ಏಡ್ಸ್ ಪೀಡಿತರನ್ನು ನಾಗರಿಕ ಪ್ರಪಂಚದಿಂದ ಹೊರಗಟ್ಟುತ್ತಿದ್ದ ವಿಧಾನದಂತೆಯೇ, ಕೊರೊನಾ ವೈರಾಣು ಪೀಡಿತರನ್ನು ಆಯಾ ಊರುಗಳಿಂದ ಒಬೊಬ್ಬರನ್ನೇ ಹೆಕ್ಕಿ ಹೆಕ್ಕಿ ಹೊರಗೆ ಅಟ್ಟಲಾಗುತ್ತಿದೆ. ಇಂಥ ಕ್ರಮಗಳು ಕೊರೊನಾ ವೈರಾಣು ಪೀಡಿತರು, ತಮ್ಮನ್ನು  ಮರೆಮಾಚಿಕೊಳ್ಳುವುದಕ್ಕೆ ಮುಂದಾಗುವಂತೆ ಮಾಡುತ್ತಿರಲೂಬಹುದು.
ಇಂಥ ಪರಿಸ್ಥಿತಿಯಲ್ಲಿ ಕೊರೊನಾ ವೈರಾಣು ಪೀಡಿತರ ಅಸ್ತಿತ್ವದ ವರದಿಗಾರಿಕೆ ಈಗ ಮೋಸದಾಟವಾಗುತ್ತಿದೆ. ಕೆಲವರಿಗಂತೂ, ಯಾರಾದರೂ ಶಂಕಿತ ಕೊರೊನಾ ವೈರಸ್ ಪೀಡಿತರು ಎಂದು ವರದಿ ಮಾಡಿ ಹಣಗಳಿಸುವುದು, ಸುಲಭದ ಗಳಿಕೆಯ ಮಾರ್ಗವಾಗುತ್ತಿದೆ. ಅಧಿಕ ಸಮಯ ಬೇಡುವ ವಿವಿಧ ವೈದ್ಯಕೀಯ ಪರೀಕ್ಷೆಗಳ ನಂತರದ ವರದಿಗಳು ನಕಾರಾತ್ಮಕ ಅಂಶಗಳಿರುವುದನ್ನು ಸೂಚಿಸಿದಾಗ ಇಡೀ ಸರ್ಕಾರದ ಆರೋಗ್ಯ ವ್ಯವಸ್ಥೆಯ ಸಂಪನ್ಮೂಲದ ಪೋಲು ಎದ್ದುಕಾಣುತ್ತದೆ.
ಹೀಗಿದ್ದರೂ, ಕೆಲವು ಕುಟುಂಬಗಳವರ ನಿಷ್ಕಪಟ ವರದಿಗಾರಿಕೆಯು, ಶಂಕಿತ ಕೊರೊನಾ ವೈರಾಣು ಪೀಡಿತರು ಸೂಕ್ತ ಸಮಯದಲ್ಲಿ ಯೋಗ್ಯ ವೈದ್ಯಕೀಯ ಸೌಲತ್ತು ಪಡೆಯುವಂತೆ ಆಗಿರುವುದನ್ನು ಅಲ್ಲಗಳೆಯಲಾಗದು.
ಏನೇ ಆಗಲಿ, ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಚಾಕಚಕ್ಯತೆಯ ಚೀನಾದ ಕಮ್ಯುನಿಸ್ಟ್ ಪಕ್ಷವು, ಪರಸ್ಪರ ಅಪನಂಬಿಕೆಯ ಮತ್ತು ಶಾಂತಿಯನ್ನು ಕಳೆದುಕೊಂಡ ಸಮಾಜವನ್ನು ನಿರ್ಮಿಸುವಲ್ಲಿ ಬಹುಮಟ್ಟಿಗೆ ಯಶಸ್ಸನ್ನು ಕಂಡಂತಾಗಿದೆ. ಈ ಕೊರೊನಾ ವೈರಾಣುವು ಚೀನಾದ ಕಮ್ಯುನಿಸ್ಟ್ ಪಕ್ಷದ ಉದ್ದೇಶಿತ ಭಯಗ್ರಸ್ಥ ಸಮಾಜ ನಿರ್ಮಾಣದ ಅದರ `ಪ್ರಮಾಣಕ ಮುದ್ರೆ’ ವಿಧಾನವು, ನಯವಾಗಿ ಅಲ್ಲಿನ ಜನರ ವೈಯಕ್ತಿಕ ಸ್ವಾತಂತ್ರ್ಯ, ಖಾಸಗಿತನ ಮತ್ತು ನೆಮ್ಮದಿಯ ಬದುಕಿನ ಮೇಲೆ ಸವಾರಿ ಮಾಡಲು ಅವಕಾಶಕೊಟ್ಟಿದಂತೂ ಸತ್ಯ. 
ಇಂದಿನ ಭಾರತದಲ್ಲಿನ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ) ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್.ಪಿ.ಆರ್) ವಿರೋಧಿ ಪ್ರತಿಭಟನೆಗಳು ದೇಶದ ವಿರುದ್ಧವಲ್ಲ, ಕೇಂದ್ರ ಸರ್ಕಾರದ ಆಡಳಿತಾರೂಢ ಪಕ್ಷದ ಸರ್ಕಾರದ ನಿಲುವುಗಳ ವಿರುದ್ಧದ ಚಟುವಟಿಕೆಗಳಾಗಿದ್ದರೂ, ಸ್ವಯಂಘೋಷಿತ ದೇಶಪ್ರೇಮಿಗಳಿಂದ ಅವನ್ನು ದೇಶದ್ರೋಹ ಎಂಬಂತೆ ಅಮಾಯಕರಲ್ಲಿ ಬಿಂಬಿಸಲಾಗುತ್ತಿದೆ. 
 ಚೀನಾದ ನಾಗರಿಕ ಬೇಹುಗಾರಿಕೆಯ ನಗದು ಪುರಸ್ಕಾರದ ಮಾದರಿಯನ್ನು ಹೋಲುವಂತೆಯೇ, ಈಚೆಗೆ ಮುಂಬೈಯಲ್ಲಿನ ಬಿಜೆಪಿ (ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ) ಯ ಶಾಸಕ ಮಂಗಲ್ ಪ್ರಭಾತ್ ಲೋಧಾ ಅವರು, ತನ್ನ ಊಬರ್ ಕ್ಯಾಬ್ (ಬಾಡಿಗೆ ಕಾರಿ)ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯದೇ ನೇರ ಪೊಲೀಸ್ ಠಾಣೆಗೆ ಕರೆದೊಯ್ದ ಕ್ಯಾಬ್ ಚಾಲಕ ರೋಹಿತ್ ಗೌರ್ ಅವರನ್ನು ಸನ್ಮಾನಿಸಿ, `ಜಾಗೃತ ನಾಗರಿಕ ಪ್ರಶಸಿ’್ತ ನೀಡಿದ್ದರು! 
ಕ್ಯಾಬ್‍ನಲ್ಲಿ ಪ್ರಯಾಣಿಸುತ್ತಿದ್ದ ಜೈಪುರ್ ಮೂಲದ ಕವಿ ಮತ್ತು ಚಳುವಳಿಕಾರ ಬಪ್ಪಾದಿತ್ಯ ಸರ್ಕಾರ್ ಅವರು, `ನಾಗರಿಕ ತಿದ್ದುಪಡಿ ಕಾನೂನು’ ವಿರೋಧಿಸಿ ದೇಶದೆಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಚರ ದೂರವಾಣಿಯಲ್ಲಿ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದುದು ಕ್ಯಾಬ್ ಚಾಲಕನಿಗೆ `ರಾಷ್ಟ್ರ ವಿರೋಧಿ ಚಟುವಟಿಕೆ’ ಎಂದು ಅನ್ನಿಸಿತಂತೆ. ಹಾಗನ್ನಿಸಿದ್ದೇ ತಡ, ಚೀನಾದಲ್ಲಿರುವಂಥ ಸಾಮಾಜಿಕ ಜವಾಬ್ದಾರಿಯ ಬೇಹುಗಾರಿಕೆಯ ಮಾದರಿಯಲ್ಲಿಯೇ, ಕ್ಯಾಬ್ ಚಾಲಕ ರೋಹಿತ್ ಗೌರ್, ಸರ್ಕಾರ್ ಅವರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯದೇ ಪೆÇೀಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. 
ಪೊಲೀಸರು ವಿಚಾರಣೆ ನಡೆಸಿ ಕ್ಯಾಬ್ ಚಾಲಕನ ಆರೋಪದಲ್ಲಿ ಹುರಳಿಲ್ಲವೆಂದು ತಿಳಿದು ಕ್ಯಾಬ್ ಪ್ರಯಾಣಿಕ ಸರ್ಕಾರ್ ಅವರನ್ನು ಪೊಲೀಸ್ ಠಾಣೆಯಿಂದ ಕಳುಹಿಸಿಕೊಟ್ಟಿದ್ದರು. ಪೊಲೀಸ್ ಠಾಣೆಯಿಂದ ಹೊರಗೆ ಕಳುಹಿಸುವಾಗ, ನಗರದಲ್ಲಿನ ಪರಿಸ್ಥಿತಿ ಸರಿಯಾಗಿಲ್ಲ, ಪ್ರತಿಭಟನೆಯ ವಿರೋಧದ ಕಾವು ಇದೆ. ಕಾರಣ ಕಮ್ಯುನಿಸ್ಟರನ್ನು ಪ್ರತಿನಿಧಿಸುವ ಕೆಂಪು ಬಣ್ಣದ ಸ್ಕಾರ್ಫನ್ನು ಬಳಸದಂತೆ ಸಲಹೆ ನೀಡಿದ್ದರು. 
ಪ್ರತಿಭಟನಾ ನಿರತರನ್ನು ಮಾತನಾಡಿಸದೇ, ಸಂವಾದಕ್ಕೆ ಅವಕಾಶಕೊಡದೇ, ಬಹುಮತದ ಗುರಾಣಿಯ ಬಲ ಹೊಂದಿರುವ ಆಡಳಿತಾರೂಢ ಪಕ್ಷವು ಕಾನೂನು ಜಾರಿ ಶತಸಿದ್ಧ ಎನ್ನುವ ನಡೆ ಪ್ರಜಾಪ್ರಭುತ್ವಕ್ಕೆ ಪೂರಕವಾದ ನಡೆಯೇ? ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಆಡಳಿತಾರೂಢ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದವರು, ಅದರ ಶಾಸಕರು, ಸಂಸದರು, ಕಾರ್ಯಕರ್ತರು ಜನ ಸಮುದಾಯಗಳಲ್ಲಿ ಭಯದ ವಾತಾವರಣ ಮೂಡಿಸುತ್ತಾ ತಮ್ಮ ನಡೆಯೇ ಅಂತಿಮ, ತಾವು ನಡೆದದ್ದೇ ಹಾದಿ ಎಂದು ಸಾಗುತ್ತಿದ್ದಾರೆ. 
 ದೊಡ್ಡಣ್ಣ ಎಂದೇ ಗುರುತಿಸಲಾಗುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯ ಸಂದರ್ಭದಲ್ಲಿ ದೇಶದ ರಾಜಧಾನಿ ದೆಹಲಿಯ ಈಶಾನ್ಯಭಾಗದ ಕೆಲವು ಬಡಾವಣೆಗಳಲ್ಲಿ ನಡೆದ ಸಿಎಎ ಪರ-ವಿರೋಧದ ಸಂಘರ್ಷದ ಹಿಂಸಾಚಾರಗಳಲ್ಲಿ, ಒಬ್ಬ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ 40ಕ್ಕೂ ಅಧಿಕ ಜನ ಜೀವಕಳೆದುಕೊಂಡಿದ್ದಾರೆ. 
 ಈ ಹಿಂಸಾಚಾರಕ್ಕೆ ಪ್ರಚೋದನಕಾರಿಯಾಗಿ ದ್ವೇಷ ಭಾಷಣ ಮಾಡಿದ ಆರೋಪ ಹೊತ್ತ ಕೇಂದ್ರದ ಅಧಿಕಾರರೂಢ ಪಕ್ಷದ ಸಚಿವರು, ಸಂಸದರು, ನಾಯಕ ಮಣಿಗಳ ಮೇಲೆ ದೂರು (ಎಫ್ ಐಆರ್) ದಾಖಲಿಸಲು ಹಿಂದೇಟು ಹಾಕಿದ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ, ದೂರು ದಾಖಲಿಸಲು      ಪೊಲೀಸರಿಗೆ ನಾಲ್ಕುವಾರಗಳ ಗಡವು ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳಿಧರ್ ಅವರನ್ನು ಆದೇಶ ನೀಡಿದ ದಿನದ ರಾತ್ರಿಯೇ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ವಿವಾದಕ್ಕೂ ಎಡೆಮಾಡಿಕೊಟ್ಟಿದೆ.
ಯಥಾಸ್ಥಿತಿವಾದಿ ಪಕ್ಷದ ಕಾರ್ಯಕರ್ತರು, ದಲಿತರು ಮದುವೆಯ ಮೆರವಣಿಗೆಯಲ್ಲಿ ಕುದುರೆ ಬಳಸುವುದನ್ನು ಅಪರಾಧವಾಗಿ ಪರಿಗಣಿಸುತ್ತಿದ್ದಾರೆ, ಆಯಾ ವ್ಯಕ್ತಿಯ ಜಿಹ್ವಾಚಪಲದ ಮೂಲದ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಬೇಕಿದ್ದ ಊಟ ತಿಂಡಿಯ ಆಯ್ಕೆ ಇಂದು ಬೀದಿರಂಪವಾಗುತ್ತಿದೆ ಪ್ರಜಾಪ್ರಭುತ್ವದ ಗಣತಂತ್ರದ ದೇಶವಾದ ಭಾರತದ ಜನಸಮುದಾಯವೂ ಚೀನಾದಂತೆಯೆ ಪರಸ್ಪರ ಅಪನಂಬಿಕೆಯನ್ನು ರೂಢಿಸುವ, ಭಯದ ವಾತಾವರಣದ ಜನಜೀವನದತ್ತ ದಾಪುಗಾಲು ಇಡುತ್ತಿದೆಯೇ? 
ಭಾರತವು ಪ್ರಜಾಪ್ರಭುತ್ವದ ಗಣತಂತ್ರದ ದೇಶ. ಇಲ್ಲಿ ಪ್ರತಿಭಟನೆ ನಡೆಸುವುದು ಸಾಂವಿಧಾನಿಕ ಹಕ್ಕು. ಕಾನೂನೊಂದರ ವಿರುದ್ಧದ ಶಾಂತಿಯುತ ಪ್ರತಿಭಟನೆ ದೇಶದ್ರೋಹದ, ರಾಷ್ಟ್ರವಿರೋಧಿ ಚಟುವಟಿಕೆಯಾಗದು ಎಂದು ನ್ಯಾಯಾಲಯಗಳು ಸಾರುತ್ತಿದ್ದರೂ, ಪ್ರಧಾನಿ ವಿರುದ್ಧದ ಕವನವನ್ನು, ನಾಟಕದ ಮಾತುಗಳನ್ನು ಮತ್ತು ಈ ಬಗೆಯ ಸಾತ್ವಿಕ ಪ್ರತಿಭಟನೆಗಳನ್ನು ರಾಷ್ಟ್ರವಿರೋಧಿ ಚಟುವಟಿಕೆ ಎಂದು ಪರಿಗಣಿಸುತ್ತಾ       ಪೊಲೀಸರು ಅಧಿಕಾರರೂಢ ಪಕ್ಷದ ಆಶಯಯಂತೆ ನಡೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. 

0-0-0-0-0-0


ಪ್ರೀತಿಸುವುದಾದರೆ



ಪ್ರೀತಿಸುವುದಾದರೆ
ಅಸ್ತ್ರಗಳನು ಕೆಳಗಿಟ್ಟು ಬಿಡು ಪ್ರೀತಿಸುವುದಾದರೆ
ದ್ವೇಷವನು ಮರೆತು ಬಿಡು ಪ್ರೀತಿಸುವುದಾದರೆ

ಎಷ್ಟೊಂದು ಲೆಕ್ಕಿಸುವೆ ಕೂಡಿಸು ಗುಣಿಸು ಆದರೆ
ಭಾಗಿಸುವುದು ಬಿಟ್ಟು ಬಿಡು ಪ್ರೀತಿಸುವುದಾದರೆ

ಯಾವುದು ನಿನ್ನದಲ್ಲವಾದರೆ ಯಾಕೀ ಬಿಗುಮಾನ
ನನ್ನದೆನುವುದನು ಬಿಡು ಪ್ರೀತಿಸುವುದಾದರೆ

ಕೊಟ್ಟಿದ್ದು ಕೆಡಲಿಲ್ಲ ಕಟ್ಟಿಡಲಾಗಿದೆ ಕಾಣೋ
ಹೋಗಿದ್ದು ಹೋಗಲು ಬಿಡು ಪ್ರೀತಿಸುವುದಾದರೆ

ಯುದ್ಧವೇ ಇಲ್ಲ ಬಿಡು ನಿನ್ನ ನೀನು ಗೆದ್ದ ಮೇಲೆ
ಸೋಲನು ಬರಲು ಬಿಡು ಪ್ರೀತಿಸುವುದಾದರೆ

ಉಮರ್ ದೇವರಮನಿ

ಪಶ್ಚಾತ್ತಾಪ

 - ಫಾದರ್ ವಿಜಯ ಕುಮಾರ್ ಪಿ, ಬಳ್ಳಾರಿ
ಮಾನವ ಸಂಘ ಜೀವಿ. ಆತ ಒಂಟಿಯಾಗಿ ಜೀವಿಸಲಾರ. ಪ್ರತಿ ಮಾನವನೂ, ಸಮುದಾಯದಲ್ಲಿ ಒಬ್ಬನಾಗಿ ಜೀವಿಸುತ್ತಾನೆ. ಸಮುದಾಯ, ಎಲ್ಲಾ ಮಾನವರ ಅವಿಭಾಜ್ಯ ಅಂಗ. ಪ್ರತಿ ಮಾನವ ಒಂದು ನಿಖರ ಚೌಕಟ್ಟಿನಲ್ಲಿ ನೀತಿ ನಿಯಮಗಳನ್ನು ಅನುಸರಿಸುತ್ತಾ ಸ್ವತಂತ್ರವಾಗಿ ಜೀವಿಸಲು ಕರೆ ಹೊಂದಿದ್ದಾನೆ. ಸಹಬಾಳ್ವೆ ಅವನ ಜೀವನದ ಪರಿ. ಸಹಕಾರವೇ ಸಹಬಾಳ್ವೆಗೆ ತಳಹದಿ. ಹಲವು ಬಾರಿ ಮಾನವ ತನ್ನ ಚೌಕಟ್ಟನ್ನೂ ಮೀರಿ ಸಮಾಜದ ನೀತಿ-ನಿಯಮಗಳನ್ನೂ ಮೀರಿ ವೈಯಕ್ತಿಕವಾಗಿಯೂ, ಸಾಮಾಜಿಕವಾಗಿಯೂ ಹಾಗೂ ಧಾರ್ಮಿಕವಾಗಿಯೂ ಇತರರಿಗೆ ತೊಡಕುಂಟುಮಾಡುತ್ತಾನೆ ಹಾಗೂ ಅವನು ಅವರ ಬಾಳಿಗೆ ಮುಳ್ಳಾಗುತ್ತಾನೆ. ಪ್ರತಿ ಸಮಾಜ ಒಂದು ಸುಂದರ ಕೊಳವಿದ್ದಂತೆ. ಆ ಕೊಳದ ನೀರು ಕದಡಿದಾಗ ನಮ್ಮ ಮೊಗವನ್ನಾಗಲೀ ಹಾಗೂ ಜಲಚರವಗಳನ್ನಾಗಲಿ ನೋಡಲಾಗದು. ಆದರೆ ನೀರು ತಿಳಿಯಾದಾಗ ಅದರಲ್ಲಿ ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ. ಹಾಗೆಯೇ ಮಾನವನ ಜೀವನ ಒಂದು ಸುಂದರ ಕೊಳವಿದ್ದಂತೆ. ಅದು ಕದಡಿದಾಗ ಮಾನವ ತಾನು ದೇವರ ಅತ್ಯಮೂಲ್ಯವಾದ ಸೃಷ್ಟಿ ಎಂಬುದನ್ನು ಮರೆತು, ದೇವರ ಹಾಗೂ ಮಾನವರ ಪ್ರೀತಿಗೆ ಮರು ಪ್ರೀತಿಯನ್ನು ತೋರುವ ಬದಲು ದ್ವೇಷವನ್ನು ಕಾರುತ್ತಾನೆ ಹಾಗೂ ತನ್ನ ಸುತ್ತ ಸ್ವಾರ್ಥದ ಸುಭದ್ರ ಗೋಡೆಯನ್ನು ಕಟ್ಟಿಕೊಳ್ಳುತ್ತಾನೆ. ದ್ವೇಷ, ಅಸೂಯೆ, ಅಹಂಕಾರ ಅವನ ನೈಜಕಣ್ಣುಗಳನ್ನು ಮುಚ್ಚಿಹಾಕುತ್ತದೆ, ಹೃದಯ ಕಠಿಣವಾಗುತ್ತದೆ. ಆಗ ಮಾನವ ದೇವರಿಗೂ, ತನಗೂ ಹಾಗೂ ಸಮಾಜಕ್ಕೂ ಹಿತವಲ್ಲದ್ದನ್ನು ಮಾಡುತ್ತಾನೆ. ಇದನ್ನೇ "ಪಾಪ" ಎನ್ನುತ್ತೇವೆ. ಇದು ಮಾನವ-ಮಾನವರ ನಡುವಿನ ಸಂಬಂಧವನ್ನು ಮತ್ತು ದೈವೀ ಸಂಬಂಧಗಳನ್ನು ಹದಗೆಡಿಸಿ, ಮುರಿದು ನುಚ್ಚುನೂರು ಮಾಡಿಬಿಡುತ್ತದೆ. ಮಾನವ ತನ್ನ ಮೂಲ ಘನತೆಯನ್ನು ಮಾತ್ರವಲ್ಲ, ದೇವರ ಪ್ರಸನ್ನತೆಯನ್ನೂ ಕಳೆದುಕೊಳ್ಳುತ್ತಾನೆ. ಆಗ ಅವನ ಪ್ರಶಾಂತವಾದ ಮನಸ್ಸೆಂಬ ಕೊಳವು ಕದಡಿ ರಾಡಿಯಾಗಿಬಿಡುತ್ತದೆ. ಇದನ್ನು ಸಂತ ಯಾಕೋಬರು ತಮ್ಮ ಪತ್ರದಲ್ಲಿ "ಮಾನವನು ಪ್ರಲೋಭನೆಗೆ ಬಳಗಾಗುವುದು ತನ್ನ ದುರಿಚ್ಛೆಯಿಂದಲೇ. ಅದು ಅವನನ್ನು ಆಕರ್ಷಿಸಿ ಮರುಳುಗೊಳಿಸುತ್ತದೆ. ದುರಿಚ್ಛೆ ಗರ್ಭಧರಿಸಿ ಪಾಪಕ್ಕೆ ಜನ್ಮವೀಯುತ್ತದೆ, ಪಾಪವು ಪೂರ್ತಿಯಾಗಿ ಬೆಳೆದು ಮರಣವನ್ನು ಹಡೆಯುತ್ತದೆ" ಎನ್ನುತ್ತಾರೆ (ಯಾಕೋಬ 1:14-15). 
ಮಾನವ ದೇಹಾತ್ಮಗಳ ಸಮ್ಮಿಲನ. ಕಾರಣ ಪಾಪ ಮಾನವನ ದೇಹವನ್ನು ಮಾತ್ರವಲ್ಲ ಆತ್ಮವನ್ನೂ ಸಹ ಕಲುಷಿತಗೊಳಿಸುತ್ತದೆ. ಅವು ತಿಳಿಯಾಗಿ ಶುದ್ಧವಾಗಬೇಕಾದರೆ, ಮಾಡಿದ ಪಾಪಕ್ಕೆ "ಕ್ಷಮೆ" ದೊರಕಬೇಕು. "ಕ್ಷಮೆ" ದೊರಕಬೇಕಾದರೆ ಮಾಡಿದ ಪಾಪಕ್ಕೆ ಪೂರ್ಣ ಮನಸ್ಸಿನಿಂದ ದುಃಖಪಟ್ಟು ತಕ್ಕ ಪ್ರಾಯಶ್ಚಿತ್ತ ಮಾಡಬೇಕು. ತಕ್ಕ ಪ್ರಾಯಶ್ಚಿತ್ತವಿಲ್ಲದೆ ಮಾಡಿದ ಪಾಪಕ್ಕೆ, ಅದು ಸಣ್ಣದಿರಬಹುದು ಅಥವ ದೊಡ್ಡದಿರಬಹುದು ಕ್ಷಮೆ ಪಡೆದುಕೊಳ್ಳಲು ಸಾಧ್ಯವಿಲ್ಲ.

ಪ್ರಾಯಶ್ಚಿತ್ತ ಎಂದರೇನು? 
ಪ್ರಾಯಶ್ಚಿತ್ತವೆಂದರೆ,
1. ಆ ಕ್ಷಣದವರೆಗೆ ಮಾಡಿರುವ ಪಾಪಗಳೆಲ್ಲವನ್ನೂ ನೆನಪಿಸಿಕೊಳ್ಳಲು ದೇವರಲ್ಲಿ ಪೂರ್ಣಮನಸ್ಸಿನಿಂದ ಪ್ರಾರ್ಥಿಸುವುದು.
2. ಮಾಡಿದ ಎಲ್ಲಾ ಪಾಪಕ್ಕೆ ಮನ ಮರುಗುವುದು (ಮನಸಾರೆ ದುಃಖಿಸುವುದು) ಹಾಗೂ ಅದರ ತೀವ್ರತೆಯನ್ನು ಅರಿತು ಪಶ್ಚಾತ್ತಾಪ ಪಡುವುದು.
3. ಮಾಡಿದ ಎಲ್ಲಾ ಪಾಪವನ್ನು ಮನಸಾರೆ ಒಪ್ಪಿಕೊಂಡು ಕ್ಷಮೆಯಾಚಿಸುವುದು.
4. ಪಾಪವನ್ನು ಮತ್ತೊಮ್ಮೆ ಮಾಡದಿರುವಂತೆ ದೃಢವಾಗಿ ಹಾಗೂ ಪ್ರಾಮಾಣಿಕವಾಗಿ ನಿರಂತರವೂ ಪ್ರಯತ್ನಿಸಲು ಸಂಕಲ್ಪ ಮಾಡುವುದು (ಕಥೋಲಿಕ ಕ್ರೈಸ್ತರಾಗಿದ್ದಲ್ಲಿ ತಪ್ಪದೆ ಪಾಪನಿವೇದನೆ ಸಂಸ್ಕಾರವನ್ನು ಸ್ವೀಕರಿಸುವುದು).
5. ಪಾಪದಿಂದ ಉಂಟಾಗಿರುವ ನಷ್ಟವನ್ನು ತಪ್ಪದೆ ತುಂಬಿಕೊಡುವುದು. 
ಈ ಎಲ್ಲಾ ಕ್ರಿಯೆಗಳು ಪಾಪದಿಂದ ಕದಡಿದ ಮಾನವನ ಅಂತರಂಗವನ್ನು ಸರಿದಾರಿಗೆ ತರಲು ಸನ್ನದ್ಧವಾಗುತ್ತವೆ ಆದರೆ ಇದರ ಸಂಪೂರ್ಣ ಫಲವನ್ನು ಪಡೆಯಬೇಕಾದರೆ ದೇವರ ಕೃಪಾವರ, ಅವರ ಅನುಗ್ರಹ ಬೇಕೇ ಬೇಕು. ಮಾನವನ ಮನಸ್ಸು ಕ್ಷಣ ಕ್ಷಣವೂ ಎಡವಿ ಬೀಳುವಂತಹುದು. ಅದು ಸದೃಢವಾಗಿ, ಉತ್ತಮವಾಗಲು ದೇವರೊಡನೆ ಪ್ರಾರ್ಥನೆಯ ಮೂಲಕ ನಿಕಟ ಸಂಪರ್ಕದಿಂದಿರಬೇಕು. ಪಾಪಕ್ಕೆ ವಿಷಾದ ವ್ಯಕ್ತಪಡಿಸಿದರೆ ಸಾಲದು, ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಪಡಬೇಕು ಹಾಗೂ ಪಾಪಕ್ಕೆ ವಿಮುಖರಾಗಬೇಕು. ಸಂತ ಬೊನವೆಂಚರ್ "ಪಾಪಕ್ಕೆ ಪ್ರಾಯಶ್ಚಿತ್ತ ಪಡದ ಯಾರೊಬ್ಬನೂ ಹೊಸ ಜೀವನವನ್ನು ಪ್ರಾರಂಭಿಸಲಾರ" ಎನ್ನುತ್ತಾರೆ. ಹಾಗೆಯೇ ಪಾಪಕ್ಕಾಗಿ ಪಶ್ಚಾತ್ತಾಪವನ್ನು ದೂರವಿಡುವವನು ಕ್ಷಮೆಯ ಬಾಗಿಲನ್ನು ಮುಚ್ಚುತ್ತಾನೆ. ಹಾಗೂ ದೇವರೆಡೆಗೆ ಅಭಿಮುಖನಾದವನು ಪಾಪಕ್ಕೆ ಅಂಟಿಕೊಂಡಿರಲು ಸಾಧ್ಯವಿಲ್ಲ. ಇದನ್ನು ಕೀರ್ತನಕಾರ "ಆತನತ್ತ ತಿರುಗಿದ ಮುಖ ಅರಳುವುದು| ಲಜ್ಜೆಯಿಂದೆಂದಿಗೂ ಕುಂದಿಹೋಗದು" ಎನ್ನುತ್ತಾನೆ (ಕೀರ್ತನೆ 34:5)
ದೇವರು ಸದಾ ಪ್ರೇಮಮಯಿ. ಅವರು ಸರ್ವರನ್ನೂ ನಿರಂತರವೂ ಪ್ರೀತಿಸುವವರಾಗಿದ್ದಾರೆ. ಅವರ ಪ್ರೀತಿಗೆ ಅಂತ್ಯವೇ ಇಲ್ಲ. ಅವರು ಪಾಪಿಯನ್ನೂ ದ್ವೇಷಿಸುವುದಿಲ,್ಲ ಬದಲಾಗಿ ಅವರ ಮನ ಪರಿವರ್ತನೆಯನ್ನು ಸತತವೂ ಬಯಸುವವರಾಗಿದ್ದಾರೆ "ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲವಲೇಶವೂ ಸಂತೋಷವಿಲ್ಲ; ಅವನು ತನ್ನ ದುಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ" (ಯೆಜೆಕಿ 33:11) ಎಂದು ದೇವರು ತಮ್ಮ ಚಿತ್ತವನ್ನು ಪ್ರವಾದಿ ಯೆಜೆಕಿಯೇಲನ ಗ್ರಂಥದಲ್ಲಿ ತಿಳಿಸಿದ್ದಾರೆ.
 ಪಾಪ ಕ್ಷಮೆಗೆ ಪ್ರಾಯಶ್ಚಿತ್ತ ಅತಿ ಅವಶ್ಯಕ. ಈ ಕಾರಣ ಭಕ್ತನು (ಪಾಪಿಯು)
"ಖಂಡಿಸಬೇಡೆನ್ನ ಪ್ರಭು, ರೋಷದಿಂದ|
ದಂಡಿಸಬೇಡೆನ್ನ ಕಡುಕೋಪದಿಂ||
ಕನಿಕರಿಸು ಹೇ ಪ್ರಭು, ನಾನು ಬಲಹೀನನು|
ಗುಣಪಡಿಸು ಸಡಿಲವಾದ ಎನ್ನೆಲುಬುಗಳನು||
ಜೀವಾತ್ಮ ನಾ ಬಳಲಿ ತತ್ತರಿಸುತಿರುವೆ|
ಎಲ್ಲಿಯ ತನಕ ಪ್ರಭು ನೀ ಕೈಬಿಟ್ಟಿರುವೇ||" 
(ಕೀರ್ತನೆ 6:1-4) 
ಎಂದು ವಿನಯದಿಂದ ವಿನಂತಿಸಿ,
ಶುದ್ಧ ಹೃದಯವನು ದೇವಾ, ನಿರ್ಮಿಸು|
ಅಂತರಂಗವನು ಚೇತನಗೊಳಿಸು||
ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ|
ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ||
ಜೀವೋದ್ಧಾರವನು ಮರಳಿ
ಸವಿಯುವಂತೆ ಮಾಡು|
ವಿಧೇಯನಾಗಿ ನಡೆವ ಸಿದ್ಧಿ ಮನಸ್ಸನು ನೀಡು|| 
(ಕೀರ್ತನೆ 51:10-12)
ಎಂದು ಮನನೊಂದು, ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಪಟ್ಟು ಪ್ರಾರ್ಥಿಸಿದರೆ ಕರುಣಾಳುವೂ, ಕೃಪಾಳುವೂ ಆದ ಪ್ರಭು ಮಾನವನ ಪಾಪವನ್ನು ಅಳಿಸಿ ಮತ್ತೆ ಆತನ ಅಂತರಂಗದಲ್ಲಿ ತನ್ನ ಪ್ರಸನ್ನತೆಯನ್ನು ಮರುಸ್ಥಾಪಿಸಿ ಅವನನ್ನು ಪೂರ್ವಸ್ಥಿತಿಗೇರಿಸುವರು. 
 ಏಕೆಂದರೆ ಪ್ರಭುವಿಗೆ ಬಲಿಯರ್ಪಣೆಯಲ್ಲಿ ಒಲವಿಲ್ಲ, ದಹನ ಬಲಿಯಿತ್ತರೂ ಅವರಿಗೆ ಬೇಕಿಲ್ಲ "ಮುರಿದ ಮನವೇ ದೇವನೊಲಿದ ಯಜ್ಞವು| ನೊಂದು ಬೆಂದ ಮನವನಾತ ಒಲ್ಲೆಯೆನನು|| (ಕೀರ್ತನೆ 51:16-17) ಎನ್ನುತ್ತಾನೆ ಕೀರ್ತನಕಾರ. ಪಾಪದಲ್ಲಿ ಬಿದ್ದವರು ಮನನೊಂದು ಪಾಪದ ದುಷ್ಪರಿಣಾಮವನ್ನು ದ್ವೇಷಿಸಿ ಪ್ರಾಯಶ್ಚಿತ್ತ ಪಟ್ಟು ನಷ್ಟವನ್ನು ತುಂಬಿಕೊಡಲು ಬದ್ಧರಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾದರೆ ಪ್ರಭು ದೇವರು ಉದಾರವಾಗಿ ಕ್ಷಮಿಸುವರು. "ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದಂತೆ ಬಿಳುಪಾಗುವುವು. ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ" ಎನ್ನುತ್ತಾನೆ ಪ್ರವಾದಿ ಯೆಶಾಯ (1:18-19) ಹೀಗೆ ಕ್ಷಮೆ ಪಡೆದ ಮಾನವರ ಅಂತರಂಗ ದೇವನ ತಾಣವಾಗಿ ಪರಿವರ್ತನೆಗೊಂಡು, ದ್ವೇಷ ಅಳಿದು ಪ್ರೀತಿ ಉದಯಿಸಿ, ಅದರ ಘಮಲು ಪರ ಸೇವೆಯ ಮೂಲಕ ಹೊರ ಹೊಮ್ಮತ್ತದೆ.
ಪಾಪ ವೈಯಕ್ತಿಕ ಸಂಬಂಧವನ್ನು ಮಾತ್ರವಲ್ಲ ಸಾಮಾಜಿಕವಾಗಿಯೂ ಸಂಬಂಧಗಳನ್ನು ಮುರಿದು ಛಿದ್ರಗೊಳಿಸುತ್ತದೆ. ಪೂರ್ಣ ಪ್ರಾಯಶ್ಚಿತ್ತ ಮುರಿದ ಎಲ್ಲಾ ಸಂಬಂಧಗಳನ್ನು ಮರು ಸ್ಥಾಪಿಸುತ್ತದೆ. ಆಗ ದೇವ-ಮಾನವನ ಸಂಬಂಧವು ಎಂದಿನಂತೆ ಮುಂದುವರಿಯುತ್ತದೆ. ಅದನ್ನು ಉಳಿಸಿಕೊಳ್ಳಲು ಮಾನವ ನಿರಂತರವೂ ಪ್ರಭು ದೇವನ ಸನಿಹವಿರಲು ಪ್ರಾರ್ಥನೆ, ಪರಪ್ರೀತಿ, ತ್ಯಾಗ, ದೇಹದಂಡನೆಗಳಿಂದ ಎಡಬಿಡದೆ ಪ್ರಯತ್ನಿಸುತ್ತ ಸಹನೆಯಿಂದಲೂ, ಸಂತೋಷದಿಂದಲೂ ಮುಂದೆ ಸಾಗಬೇಕು.

0-0-0-0-0-0

ಗೀತಾಂಜಲಿಯ ತುಣುಕು

ನನ್ನಾಸೆಗಳೋ ಅನೇಕ ನನ್ನಳುವೂ ದಯನೀಯ,
ಆದರೂ ಥೂ ಎಂಬ ತಿರಸ್ಕಾರಗಳಿಂದ ನನ್ನನ್ನು ರಕ್ಷಿಸಿರುವೆ;
ನಿನ್ನ ಕಡು ದಯೆಯೇ ನನ್ನ ಬದುಕಿನ ಒಳಹೊರಗನ್ನೆಲ್ಲ ರೂಪಿಸಿದೆ.
ದಿನದಿನವೂ ನಾ ಕೇಳದೆಯೇ ಕೊಡುವ ಸರಳ, ಮಹಾ ಕೊಡುಗೆ –
ಈ ಆಗಸ, ಈ ಬೆಳಗು, ಈ ದೇಹ, ಈ ಜೀವ ಮತ್ತು ಮನಸು –
ಗಳಿಗೆ ನನ್ನನ್ನು ಪಕ್ವನಾಗಿಸುತಿಹೆ,
ದುರಾಸೆಯೆಂಬ ದೊಡ್ಡ ಅಪಾಯಕೆ ನಾ ಸಿಲುಕದಂತೆ.
ಕೆಲವೊಮ್ಮೆ ನಾ ತೂಕಡಿಸುತ ಆಲಸಿಯಾಗಿದ್ದೆ,
ಕೆಲವೊಮ್ಮೆ ನಾ ಎಚ್ಚರಿದ್ದು ಲವಲವಿಕೆಯಿಂದ ನನ್ನ ಗುರಿಯನರಸುತ್ತಿದ್ದೆ;
ಅದೆಂತು ಕಠೋರನಾಗಿ ನನ್ನಿಂದ ನೀ ಮರೆಯಾದೆ.
ದಿನದಿನವೂ ನನ್ನ ಕಡೆಗಣಿಸಿ ಹೆಸರಿಲ್ಲದವನಾಗಿಸಿ,
ಕಾಣದ ಕ್ಷುದ್ರಬಯಕೆಯ ಸೆರೆಯಿಂದ ಬಿಡಿಸಿ,
ನಿನ್ನ ಸ್ವೀಕಾರಕ್ಕೆ ನನ್ನನ್ನು ಅರ್ಹನಾಗಿಸುತಿಹೆ

(ಟ್ಯಾಗೋರರ My desires are many and my cry is pitiful  ಕವನದ ಭಾವಾನುವಾದ: ಸಿ ಮರಿಜೋಸೆಫ್)
-0-0-0-0

ದ್ವೇಷಕ್ಕಿಂತಲೂ ಪ್ರೀತಿ ಹೆಚ್ಚು ಶಕ್ತಿಶಾಲಿ

- ಜೋವಿ
ಈಶಾನ್ಯ ದೆಹಲಿಯು ದ್ವೇಷದ ಬೆಂಕಿಯಲ್ಲಿ ಹೊತ್ತಿ  ಉರಿದು ಸುಮಾರು 42 ಜನರನ್ನು ಬಲಿತೆಗೆದುಕೊಂಡಿದೆ. ಎಷ್ಟೋ ಜನರ ಮೃತ ದೇಹಗಳು ಚರಂಡಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ತನ್ನವರನ್ನು ಕಳೆದುಕೊಂಡ ತಾಯಿಮಕ್ಕಳ ರೋಧನ ಹೇಳತೀರದು. ಮೃತದೇಹಗಳ ಮುಂದೆ ಕೂತು ಅಳುತ್ತಿರುವ ಮಕ್ಕಳನ್ನು ನೋಡಿದರೆ ಎದೆಯನ್ನು ಇರಿದಂತಾಗುತ್ತಿದೆ. ಮನೆಮಠಗಳನ್ನು ಕಳೆದುಕೊಂಡು ಹತಾಶರಾದ ಜನರ ಮಾತುಗಳನ್ನು ಕೇಳಿದರೆ ನೋವು ಕಟ್ಟೆಯೊಡೆದು ಅಸಹಾಯಕತೆಯಿಂದ ಕಿರುಚಿಕೊಳ್ಳುವುದು. ಹೌದು, ಗಲಭೆ ಶ್ರೀಮಂತರ ಮೆದುಳಿನಿಂದ ಆರಂಭವಾಗಿ ಬಡವರ ಶವದ ಮೇಲೆ ಕೊನೆಯಾಗುತ್ತದೆ ಎಂಬ ಮಾತು ಮತ್ತೊಮ್ಮೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳಿಂದ ರುಜುವಾಗಿದೆ. 
ಈಶಾನ್ಯ ದೆಹಲಿಯಲ್ಲಿ “ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದು ಪೆÇಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. “ನಮ್ಮ ಪ್ರದೇಶದಲ್ಲಿ ಪೊಲೀಸ್ ನಿಯೋಜಿಸಲಾಗಿದ್ದರೂ ಭಯದ ವಾತಾವರಣವಿದೆ. ನಾವು ಜೊತೆಯಾಗಿ ಈದ್, ಹೋಲಿ,  ದೀಪಾವಳಿ ಆಚರಿಸಿದ್ದೆವು. ಆದರೆ ಇಂಥ ಘಟನೆಯನ್ನು ಎದುರಿಸಿರಲಿಲ್ಲ. ಹಿಂಸಾಚಾರದಲ್ಲಿ ತೊಡಗಿದ್ದವರು ಯಾರೂ ಈ ಪ್ರದೇಶದವರಲ್ಲ. ಅವರೆಲ್ಲ ಹೊರಗಿನಿಂದ ಬಂದವರು. ಶಿವವಿಹಾರ್ನಲ್ಲಿ ನನ್ನ ಬಟ್ಟೆ ಅಂಗಡಿಯಿದ್ದು, ಗಲಭೆ ಸಂದರ್ಭದಲ್ಲಿ ದುಷ್ಕರ್ಮಿಗಳು ಅಂಗಡಿ ಮೇಲೆ ದಾಳಿ ನಡೆಸಿದಾಗ ಸ್ಥಳೀಯ ಹಿಂದೂಗಳು ನನ್ನನ್ನು ರಕ್ಷಣೆ ಮಾಡಿದರು” ಎಂದು ಮೊಹಮ್ಮದ್ ಯೂನಸ್ ಹೇಳಿದ್ದಾರೆ. ಗಲಭೆಯಲ್ಲಿ ಮನೆ ಕಳೆದುಕೊಂಡ ಬಿಎಸ್‍ಎಫ್ ಕಾನ್ಸ್ಟೆಬಲ್ ಮೊಹಮ್ಮದ್ ಅನೀಸ್‍ಗೆ 10 ಲಕ್ಷ ಪರಿಹಾರವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಡುಗಡೆಗೊಳಿಸಿದ್ದಾರೆ. ಬ್ರಹ್ಮಪುರಿ ಸೇರಿದಂತೆ ಹಿಂಸಾಚಾರ ನಡೆದ ಕೆಲ ಪ್ರದೇಶಗಳಿಗೆ ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಭೇಟಿ ನೀಡಿ ಮಾತುಕತೆ ನಡೆಸಿ “ಹಿಂಸಾಚಾರದಿಂದ ಹಲವರು ಆಘಾತಕ್ಕೊಳಗಾಗಿದ್ದು, ಅಂಥವರಿಗೆ ಸಮಾಧಾನ ಹೇಳಲು ಎಲ್ಲರೂ ಜೊತೆಯಾಗಬೇಕು. ಸಮಾಜಘಾತುಕ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದ್ದಾರೆ. “ದೆಹಲಿ ಕೋಮುಗಲಭೆ ‘ಪೂರ್ವಯೋಜಿತ ಹಿಂಸಾಚಾರ’ವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ದೆಹಲಿಗೆ ಭೇಟಿ ನೀಡಬೇಕು” ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆಗ್ರಹಿಸಿದ್ದಾರೆ. ‘ದೆಹಲಿ ಗಲಭೆಯ ಸಂತ್ರಸ್ತರಿಗೆ ವಿಶ್ವವಿದ್ಯಾಲಯವು ತೆರೆದಿರುತ್ತದೆ’ ಎಂದು ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ (ಜೆಎನ್ಯುಎಸ್ಯು) ಕರೆಗೆ ಸಂತ್ರಸ್ತರಿಗೆ ಆಶ್ರಯ ನೀಡಿದರೆ ಅಂಥ ವಿದ್ಯಾರ್ಥಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಜೆಎನ್ಯು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ನೋಟಿಸ್ ಮೂಲಕ ಎಚ್ಚರಿಸಿದ್ದಾರೆ. ಇಷ್ಟೆಲ್ಲಾ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು. ಆದರೆ ಫೇಸ್ ಬುಕ್‍ನಲ್ಲಿ ಓದಿದ ‘ನಾನು ಯಾವ ವರ್ಗಕ್ಕೆ ಸೇರುತ್ತೇನೆ’(Which  category do we belong to? by Einaahuwalia)ಎಂಬ ಬರಹ ನಿಜವಾಗಿಯೂ ಕಣ್ಣು ತೆರೆಸುವಂಥದ್ದು. ಅದನ್ನು  ಭಾವಾನುವಾದ ಮಾಡಿದ್ದೇನೆ. ದಯವಿಟ್ಟು ಓದಿ.
ನಾವು ಇದೀಗ ಏಳು ರೀತಿಯ ಭಾರತೀಯರನ್ನು ಕಾಣಬಹುದಾಗಿದೆ:
ಕಳವಳಗೊಂಡವರು/ಹೆದರಿರುವವರು
ಬೇಲಿ ಮೇಲೆ ಕುಳಿತುಕೊಂಡಿರುವವರು
ಆರಾಮವಾಗಿ ನಿಶ್ಚಿಂತೆಯಿಂದಿರುವವರು
ಆನಂದಿಸುವವರು/ಸಂಭ್ರಮಿಸುತ್ತಿರುವವರು
ಬಲಿಪಶುಗಳು
ದುಷ್ಕರ್ಮಿಗಳು
‘ನಾಯಕರು’

ಕೋಮುಗಲಭೆಗಳನ್ನು ಕಂಡು ಗಾಬರಿಗೊಂಡವರಿಗೆ ನಿಜವಾಗಲೂ ಧನ್ಯವಾದಗಳನ್ನು ಹೇಳಲೇಬೇಕು. ನಿಮ್ಮದು ತಾಯ್ತನದ ಹೃದಯ; ಇನ್ನೊಬ್ಬ ವ್ಯಕ್ತಿಯ ನೋವನ್ನು ಗ್ರಹಿಸಿವುದಲ್ಲದೆ ಅವರ ಪರವಾಗಿ ಮಿಡಿಯುವ ಅನುಭೂತಿ ಹೃದಯ. ಹೌದು, ಮಾನವೀಯತೆಯನ್ನು ತನ್ನ ಹೃದಯದಲ್ಲಿ ಇರಿಸಿಕೊಳ್ಳುವಷ್ಟು ವಿಶಾಲ ಹೃದಯವನ್ನು      ಹೊಂದಿದ್ದಕ್ಕಾಗಿ ಧನ್ಯವಾದ ಹೇಳಲೇ ಬೇಕು. ಸಹಬಾಳ್ವೆ, ಗೌರವ ಮತ್ತು ಶಾಂತಿಯ ಪರಿಕಲ್ಪನೆಗಳನ್ನು ಗ್ರಹಿಸಬಲ್ಲ ಮನಸ್ಸನ್ನು ಹೊಂದಿದ್ದಕ್ಕಾಗಿ ಧನ್ಯವಾದ ಹೇಳಲೇ ಬೇಕು.

ದ್ವೇಷದ ಶಕ್ತಿಯನ್ನು ದಮನಿಸಲು ಕಾರ್ಯಪ್ರವೃತರಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದವನ್ನು ಹೇಳಲೇಬೇಕು. ಜನರನ್ನು ಸಂಘಟಿಸುವುದರಿಂದ ಹಿಡಿದು ದುಷ್ಟ ಶಕ್ತಿಯನ್ನು ವಿರೋಧಿüಸಲು ಮಾಡುತ್ತಿರುವ ಪ್ರತಿಯೊಂದು ಕ್ರಿಯೆಯು ಉದಾತ್ತವಾದುದು. ಜನರನ್ನು ಸಂಘಟಿಸಿ, ಸಜ್ಜುಗೊಳಿಸುವುದು ಮಾತ್ರವಲ್ಲದೆ    ಧ್ವನಿಮುದ್ರಿಕೆ, ದಾಖಲೀಕರಣ, ಆರ್ಥಿಕ ಸಹಾಯ ಸಾಮಾಜಿಕ ಜಾಲತಾಣಗಳಲ್ಲಿ ಜನಪರ ಫೋಸ್ಟ್ ಹಾಕುವಿಕೆ, ಇವೆಲ್ಲಾ ಕೆಲಸಗಳಿಗೆ ಬೇಕಾದ ತಮ್ಮ ಕೌಶಲ್ಯಗಳನ್ನು ಸಂಪನ್ಮೂಲಗಳನ್ನು ಧಾರೆಯೆರೆಯುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳಲೇಬೇಕು. ದಯವಿಟ್ಟು ನಿಮ್ಮ ಬಗ್ಗೆ ಕಾಳಜಿ ವಹಿಸಿ. ನೀವು ಅಮೂಲ್ಯರು ಮತ್ತು ಈ ಹೋರಾಟವು ದೀರ್ಘವಾಗಿರುತ್ತದೆ ಮತ್ತು ದೀರ್ಘವಾಗಿಸಲು ನಮಗೆ ನೀವು ಬೇಕು.

ಈ ಸಂದರ್ಭದಲ್ಲಿ ಭಾವನಾತ್ಮಕವಾಗಿ ನೊಂದಿರುವವರೆ, ಅಘಾತಗೊಂಡಿರುವವರೆ ನಿಮ್ಮ ಬಗ್ಗೆಯೂ ಕಾಳಜಿ ವಹಿಸಿ. ಸ್ವಲ್ಪ ವಿಶ್ರಾಂತಿ ಪಡೆಯಿರಿ, ಆದರೆ ಶೀಘ್ರದಲ್ಲೇ ಹಿಂತಿರುಗಿ. ನಿಜವಾದ ಹಿಂಸಾಚಾರದಿಂದ ಬಳಲುತ್ತಿರುವವರಿಗೆ ಹೋಲಿಸಿದರೆ ನಮ್ಮ ಆಘಾತ, ನೋವು ಅಷ್ಟಕಷ್ಟೆ ನಮ್ಮೆಲ್ಲಾ ಭಾವನಾತ್ಮಕ ಶಕ್ತಿಯನ್ನು ಕ್ರೋಢಿಕರಿಸಿ ಧ್ವನಿರಹಿತರ ಧ್ವನಿಯಾಗುವ ಜವಾಬ್ದಾರಿ ನಮ್ಮ ಮೇಲಿದೆ. ದುಷ್ಟತೆಯನ್ನು ಎಲ್ಲಾ ರೀತಿಯಲ್ಲಿ ವಿರೋಧಿಸಿ “ಇದು ನಮಗೆ ಸ್ವೀಕಾರಾರ್ಹವಲ್ಲ” ಎಂದು ಒಕ್ಕೊರಲಿನಿಂದ ಕೂಗಿ ಹೇಳಬೇಕಾದ ಅನಿವಾರ್ಯತೆ ನಮಗಿದೆ. ಈ ಕಾಲಘಟದಲ್ಲಿ ಮತ್ತು ನಮ್ಮ ಹೆಸರಿನಲ್ಲಿ ಇಂತಹ ಅಮಾನವೀಯ ಕೃತ್ಯಗಳು ಘಟಿಸಲು ನಾವು ಅವಕಾಶ ಮಾಡಿಕೊಡಬಾರದು. ನಿಮ್ಮ ಅನುಕಂಪ ಮತ್ತು ಪರಾನುಭೂತಿ ನಿಮ್ಮ ದೊಡ್ಡ ಶಕ್ತಿ. ನಾನು ನಿಮ್ಮನ್ನು ನಂಬುತ್ತೇನೆ.
ಬೇಲಿ ಮೇಲೆ ಕುಳಿತುಕೊಂಡಿರುವ ಆತ್ಮೀಯರೇ ಮತ್ತು ಗೊಂದಲಕ್ಕೆ ಒಳಗಾಗಿರುವವರೆ ನೀವು ಎರಡೂ ಕಡೆಯವರ ಕಥೆಯನ್ನು  ಕೇಳುತ್ತಿದ್ದೀರಿ ಮತ್ತು ನಿಜವಾಗಿಯೂ ಏನು ನಡೆಯುತ್ತಿದೆ ಎಂಬ ಬಗ್ಗೆ ಗೊಂದಲಕ್ಕೊಳಗಾಗಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ವಾಸ್ತವವನ್ನು ಗ್ರಹಿಸಿ ಮಾಹಿತಿಯನ್ನು  POST ಅಥವಾ ವರದಿ ಮಾಡುವ ಜನರನ್ನು ಮತ್ತು ತರ್ಕದ ಆಧಾರದ ಮೇಲೆ ಸ್ಪಷ್ಟತೆಯನ್ನು ನೀಡುವ ಜನರನ್ನು ಅನುಸರಿಸಿ, ಆದರೆ ಉನ್ಮಾದಕ್ಕೆ ಒಳಗಾಗಬೇಡಿ. ಗುಲಾಮಿ ಮಾಧ್ಯಮವನ್ನು ಬಿಟ್ಟು ಸ್ವತಂತ್ರ ಮಾಧ್ಯಮವನ್ನು ಓದಿಕೊಳ್ಳಿ. ಸತ್ಯವನ್ನು ನೀವೇ ಪರಿಶೋಧಿಸಿ ಗ್ರಹಿಸಿಕೊಳ್ಳಿ. ನೈಜ ಮಾಹಿತಿ ಪಡೆದುಕೊಳ್ಳಲು ನಿಮಗೆ ನೀವೇ ಶಿಕ್ಷಕರಾಗಿರಿ.

ಆರಾಮವಾಗಿ ನಿಶ್ಚಿಂತೆಯಿಂದಿರುವವರೇ ತಿಳಿದುಕೊಳ್ಳಿ ಅನುಕೂಲವಂತರ ಜನರ ಮನೋಭಾವ ನನಗೆ ಚೆನ್ನಾಗಿ     ತಿಳಿದಿದೆ. ನೀವು ಗುಲಾಬಿ ಬಣ್ಣದ ಕನ್ನಡಕದ ಮೂಲಕ ಜಗತ್ತನ್ನು ನೋಡುತ್ತೀರಿ. ಜಗತ್ತಿನ ನ್ಯೂನತೆಗೆ ಕಣ್ಣನ್ನು ಮುಚ್ಚಿ ಜಾಣಕುರುಡರಾಗಿ ವರ್ತಿಸುತ್ತೀರಿ. ಹೌದು ನಿಮಗೂ ಬದುಕು ಸುಂದರ ಹೂವಾಗಿರಲಿಲ್ಲ. ನೀವು ಶ್ರಮಿಸಿದ್ದೀರಿ ಎಂದು ಹೇಳುತ್ತೀರಿ. ಒಂದು ಹೊತ್ತು ಊಟಕ್ಕಾಗಿ ಎಂತಹ ಕೆಲಸ ಮಾಡಲು ಸಿದ್ಧನಿರುವ ದಿನಕೂಲಿಯೊಬ್ಬನ ಜತೆಗೆ ನಿಮ್ಮನ್ನು ಹೋಲಿಸಲು ಬಯಸುತ್ತೀರಾ? ನಿಮ್ಮ ಸುಖಭರಿತ ಮತ್ತು ಅನುಕೂಲಕರ ಬದುಕಿನ ಬಗ್ಗೆ ಅಸಹ್ಯ ಪಡಿ ಎಂದು ಹೇಳುತ್ತಿಲ್ಲ. ನಿಮ್ಮಲ್ಲಿರುವ ಸವಲತ್ತುಗಳನ್ನು ಗುರುತಿಸಿ. ಶ್ರೀಮಂತಿಕೆ, ಸಾಮಾಜಿಕ ಸ್ಥಾನಮಾನ ಜಾತಿ ಧರ್ಮ ಅಥವಾ ಸಕಲ ಸೌಕರ್ಯಗÀಳನ್ನು ಹೊಂದಿರುವ ಕುಟುಂಬದಲ್ಲಿ ಹುಟ್ಟಿರುವ ನೀವು ಅದೃಷ್ಟಹೀನ ಬದುಕುಗಳಿಗೆ ಜೀವ ಕೊಡಲು ನಿಮ್ಮ ಸವಲತ್ತುಗಳನ್ನು ಬಳಸಿ. ಹುಟ್ಟಿನಿಂದ  ನೀವು ಸಕಲ ಸವಲತ್ತುಗಳನ್ನ ಪಡೆದುಕೊಂಡರೆ ಹುಟ್ಟಿನಿಂದಲೇ ಎಲ್ಲಾ ರೀತಿಯ ಸ್ಥಾನಮಾನಗಳನ್ನು ಕಳೆದುಕೊಂಡವರು ಅವರು. ಆದ್ದರಿಂದ ನಾವು ಮಾಡಬಹುದಾದ ಕನಿಷ್ಠವೆಂದರೆ ನಮ್ಮ ಜಾಣಕುರುಡತನವನ್ನು ಬಿಟ್ಟು ನಮ್ಮ ಸಂತೃಪ್ತಿಯ ವಲಯದಿಂದ ಹೊರಬಂದು ಎಲ್ಲರನ್ನು ಸಮಾನ ಗೌರವದಿಂದ ಕಾಣುತ್ತಾ, ಈ ಭೂಮಿ, ಆಕಾಶ, ನಗರಗಳು ನಿಮಗೆಷ್ಟು ಅವಶ್ಯಕತೆಯೋ ಅಷ್ಟೇ ಅವಶ್ಯಕತೆ ಬಡವರಿಗೂ ಇದೆ ಎಂದು ತಿಳಿಯಬೇಕಾಗಿದೆ. ನೀವು ಮತ್ತು ಬಡವರು ಧರಿಸಿಕೊಳ್ಳುವ ಬಟ್ಟೆಗಳಲ್ಲಿ, ಸೇವಿಸುವ ಅಹಾರದಲ್ಲಿ, ವಾಸಿಸುವ ಮನೆಗಳಲ್ಲಿ ವ್ಯತ್ಯಾಸವಿರಬಹುದು. ಆದರೆ ಅವರ ಜೀವನ, ಬದುಕು ನಿಮಷ್ಟೇ ಮೌಲ್ಯವಾದುದ್ದು. ನೀವು ಇದನ್ನು ಓದುವಾಗ ನಿಮಗೆ ಘಾಸಿಯಾಗಬಹುದು, ಅಸಮಾಧಾನವಾಗಬಹುದು! ಆದರೆ ನಾನು ಹೇಳುತ್ತಿರುವ ಮಾತುಗಳು ನಗ್ನ ಸತ್ಯದ್ದು. ನಿಮ್ಮ ಆತ್ಮವನ್ನು ದೀರ್ಘಕಾಲ    ದಿಟ್ಟಿಸಿ ನೋಡಿ ನಿಮ್ಮಲ್ಲಿರುವ ಮಾನವೀಯತೆ ಎದ್ದು ಕಾಣುವುದಲ್ಲದೇ ಜಾಗೃತಗೊಂಡು ನನ್ನ ಮಾತು ಸತ್ಯವೆಂದು ನಿಮಗೆ ಸ್ಪಷ್ಟಪಡಿಸುವುದು. ಜೊತೆಗೆ ನಿಮ್ಮ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ, ಕೊಲೆ, ಜೀವಂತ ಸುಡುವುದು, ಬೆಂಕಿ ಹಚ್ಚುವುದು ಹಿಂದೆಂದೂ ಇಲ್ಲದ ರೀತಿಯಲ್ಲಿ ನಿಮಗೆ ನೋವುಂಟು ಮಾಡುವುದು. ಜತೆಗೆ ಸವಲತ್ತುಗಳೊಂದಿಗೆ ಹುಟ್ಟಿರುವ ನೀವು ನಿಮ್ಮ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸಮಾನ ಜಗತ್ತನ್ನು ಸೃಷ್ಟಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂಬ ಸತ್ಯದ ಅರಿವು ನಿಮಗಾಗುವುದು.
ಸಾವನ್ನು ಸಂಭ್ರಮಿಸುವವರೆ ಒಂದು ದಿನ ಯಾವುದೋ ಒಂದು ಅತಿಮಾನುಷ ಶಕ್ತಿ ನಿಮ್ಮ ಹೃದಯದ ಬೆಳಕು ಮತ್ತು ಪ್ರೀತಿಯನ್ನು ಜಾಗೃತಗೊಳಿಸುವುದು. ಇಂದು ದ್ವೇಷದಿಂದ ಇತರರ ಸಾವನ್ನು ಸಂಭ್ರಮಿಸುತ್ತಿರುವ ನೀವು ಸಾವನ್ನಪ್ಪಿದ ಜನರು ನಿಮ್ಮ ಸಹೋದರರು ಮತ್ತು ಸಹೋದರಿಯರು ಎಂಬ ಅರಿವು ನಿಮಗೆ ಆಗದೆ ಇರುವುದಿಲ್ಲ. ಸತ್ತವರ ರಕ್ತದ ಕಲೆ ನಿಮ್ಮ ಕೈಗಳಿಗೆ ಅಂಟಿಕೊಂಡಿದೆ.
ದ್ವೇಷಕ್ಕೆ ಬಲಿಯಾದವರೆ ನಿಮ್ಮ ಕ್ಷಮೆಯನ್ನು ಕೋರುತ್ತೇನೆ. ಕ್ರೂರ ಮಾನವರು ನಿಮ್ಮನ್ನು ಹೊಡೆದು ಸಾಯಿಸಿದ್ದಾರೆ. ಹೌದು ಪ್ರಾರ್ಥನೆ ಮುಗಿಸಿ ಮನೆಯಲ್ಲಿದ್ದ ಮಕ್ಕಳಿಗೆ ಊಟವನ್ನು ಹೊತ್ತು ಹಿಂದಿರುಗುವಂತಹ ಸಂದರ್ಭದಲ್ಲಿ ನಿಮ್ಮನ್ನು ಅಮಾನುಷವಾಗಿ ಹೊಡೆದು ಕೊಲ್ಲಲಾಗಿದೆ. ಪ್ರಾಣಕ್ಕೆ ಹೆದರಿ ಮನೆಯಲ್ಲೇ ಸೆರೆಯಾಳಾಗಿರುವವರೆ, ಮನೆಮಠ, ವ್ಯವಹಾರ, ಪೂಜಾ ಸ್ಥಳವನ್ನು ಹೀಗೆ ಎಲ್ಲವನ್ನು ಕಳೆದುಕೊಂಡ ಜನರೆ; ಹೆದರಬೇಡಿ ದ್ವೇಷದ ಅಲೆಯ ವಿರುದ್ಧ ನಾನು ತಡೆಗೋಡೆಯಾಗಿ ನಿಲ್ಲುತ್ತೇನೆ ಎಂದು ನಿಮಗೆ ಭರವಸೆಯನ್ನು ನೀಡುತ್ತೇನೆ. ನಾನು ಮಾತ್ರವಲ್ಲ ಲಕ್ಷಾಂತರ ಜನರು ನಿಮ್ಮ ರಕ್ಷಣೆಗೆ ಎದೆಯೊಡ್ಡಿ ನಿಲ್ಲುತ್ತೇವೆ ಎಂದು ನಿಮಗೆ ಭರವಸೆಯನ್ನು ನೀಡುತ್ತಿದ್ದೇನೆ.
 ಘೋಷಣೆಗಳನ್ನು ಕೂಗುವ, ಸುಡುವ, ಇರಿಯುವ, ಹೊಡೆಯುವ, ಆಸಿಡ್ ಮತ್ತು ಪೆಟ್ರೋಲ್ ಬಾಂಬ್ ಎಸೆಯುವ ಜನಸಮೂಹವೇ ನೆನಪಿಟ್ಟುಕೊಳ್ಳಿ - ಭಾರತೀಯರನ್ನು ನೀವು  ನಾನಾ ವರ್ಗಗಳಾಗಿ ವರ್ಗಿಸಬಹುದು, ಆದರೆ ಇರುವುದು ಒಂದೇ ಮಾನವಕುಲ. ನಿಮ್ಮ ಕ್ರೂರ ದಾಳಿಗಳು ನಡೆಯುತ್ತಿರುವುದು ನಿಮ್ಮ ಆತ್ಮದ ಮೇಲೆ ಎಂಬುವುದನ್ನು ಮರೆಯದಿರಿ.
ದ್ವೇಷವನ್ನು ಆರಾಧಿಸುವ ಆತ್ಮೀಯ ನಾಯಕರೇ ತಿಳಿದುಕೊಳ್ಳಿ  ನಿಮಲ್ಲಿ ಅಗಾಧ ಶಕ್ತಿ ಇರಬಹುದು. ಆದರೆ ಒಂದು ದಿನ ನೀವು ಖಂಡಿತ ಸೋಲುತ್ತೀರಿ. ಆಗ ಸೂರ್ಯ ಪ್ರಕಾಶಮಾನವಾಗಿ ಉದಯಿಸುತ್ತಾನೆ. ಏಕೆಂದರೆ ದ್ವೇಷಕ್ಕಿಂತಲೂ ಪ್ರೀತಿ ಹೆಚ್ಚು ಶಕ್ತಿಶಾಲಿ ಎಂಬ ಸರಳ ಸತ್ಯವನ್ನು ನಾನು ಎಂದೂ ನಂಬುತ್ತೇನೆ.

ಕೊನೆಗೆ,
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು

ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ

ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ

ಇನ್ನಾರಿಗೆ ದೂರುವೆ
ಕೂಡಲಸಂಗಮದೇವಾ. 

ನಮ್ಮ ರಕ್ಷಣೆ ಮಾಡಬೇಕಾಗಿರುವ ನಾಯಕರೇ “ಗೋಲಿ ಮಾರೊ” (ಗುಂಡಿಕ್ಕಿ) ಎಂಬ ಘೋಷಣೆಗಳಿಂದ ಪ್ರಚೋದಿಸಿ ಕೊಲೆಗೆ ಕರೆಕೊಟ್ಟರೆ ನಮ್ಮ ರಕ್ಷಣೆಗೆ ಯಾರ ಬಳಿ ಹೋಗುವುದು? 
“ನಮ್ಮಲ್ಲಿ ಸಂಸ್ಕೃತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ, ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥ ಮೂಲವಾದ ಕುರುಡು ನೆಪದಲ್ಲಿ, ಅವಿವೇಕದ ಮೌಢ್ಯಗಳಿಗೆ ವೈಜ್ಞಾನಿಕತೆಯ ಮತ್ತು ವಿಚಾರದ ಚಿನ್ನದ ನಕಲಿ ಮುಲಾಮು ಹಚ್ಚಿ, ಜನರನ್ನು ದಿಕ್ಕು ತಪ್ಪಿಸಿ ವಂಚಿಸುವ ಮಹೋದ್ಯೋಗ ನಿರ್ಲಜ್ಜೆಯಿಂದ ಸಾಗುತ್ತಿರುವುದನ್ನು ದಿನ ದಿನವೂ ನೋಡುತ್ತಿದ್ದೇವೆ. ಅಂತಹ ಆತ್ಮವಂಚಕ ಮತ್ತು ಪರವಂಚಕತನದ ಉದ್ಯೋಗ ಪ್ರಸಿದ್ಧರೂ ಪ್ರತಿಷ್ಠಿತರೂ ಆದ ಸ್ವಾರ್ಥಸಾಧಕ ವ್ಯಕ್ತಿಗಳಿಂದಲೇ ಫೋ್ಷಿತವಾಗುತ್ತಿರುವುದನ್ನು ನೋಡಿದರೆ ಈ ದೇಶದಲ್ಲಿ ವಿಜ್ಞಾನದ ಯಂತ್ರವಿದ್ಯೆಯಿಂದ ಪಂಚವಾರ್ಷಿಕ ಯೋಜನೆಗಳು ಮುಂದುವರೆದರೂ, ವೈಜ್ಞಾನಿಕ ದೃಷ್ಠಿಯಾಗಲಿ, ವಿಚಾರವಾದವಾಗಲಿ ವಿಜಯ ಪಡೆಯುವ ಕಾಲ ಹತ್ತಿರದಲ್ಲಿ  ಎಲ್ಲಿಯೂ ಗೋಚರವಾಗುತ್ತಿಲ್ಲ.” ಎಂಬ ಕುವೆಂಪು ಅವರ ಮಾತುಗಳು ಆಗಾಗ ನನ್ನಲ್ಲಿ ಪ್ರತಿಧ್ವನಿಸುತ್ತಿದೆ.

0-0-0-0-0-0

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...