
ಪ್ರಾಚೀನ ಪದ್ಧತಿಗಳಲ್ಲಿ ಕೆಲವು ಪದ್ಧತಿಗಳು ಮನುಷ್ಯನ ಜೀವಹರಣವನ್ನು ಸುಲಭವಾಗಿ ಮಾಡುತ್ತದೆಯಾದರೆ; ಇನ್ನು ಕೆಲವು ಪದ್ಧತಿಗಳಲ್ಲಿ ಸಾವು ಅತ್ಯಂತ ನಿಧಾನವಾಗಿದ್ದು ಕೆಲವೊಮ್ಮೆ ವಾರಗಟ್ಟಲೆ ಮನುಷ್ಯ ನರಳಿ ಸಾಯಬೇಕಾದ ಪರಿಸ್ಥಿತಿ ತರುತ್ತದೆ. ಇಂತಹ ಪದ್ಧತಿಗಳು ದುಷ್ಕೃತ್ಯಗಳನ್ನು ಎಸಗಿದ ಮನುಷ್ಯನನ್ನು ಶಿಕ್ಷಿಸುವ ಅತ್ಯಂತ ಕ್ರೂರವಾದ ಮತ್ತು ಅನಾಗರಿಕ ಶಿಕ್ಷೆಗಳಾಗಿವೆ. ಅನೇಕ ಸಂದರ್ಭಗಳಲ್ಲಿ ಒಬ್ಬ ಅಪರಾಧಿಗೆ ಕಠಿಣ ಶಿಕ್ಷೆಯನ್ನು ವಿಧಿಸಿ ಬೇರಾರೂ ಅಂತಹ ತಪ್ಪನ್ನು ಮಾಡಬಾರದು ಎಂಬ ಭಯವನ್ನು ಮೂಡಿಸುವ ಧೋರಣೆಯಿಂದ ಅಪರಾಧಿಗೆ ಇಂತಹ ಶಿಕ್ಷೆಗಳನ್ನು ವಿಧಿಸಲಾಗಿದ್ದರೂ, ಹಲವು ಸಂದರ್ಭಗಳಲ್ಲಿ ಅವನ ಸಾವನ್ನು ಕಂಡು ವಿಕೃತಾನಂದ ಹೊಂದುವ ತವಕವೇ ಶಿಕ್ಷೆಯನ್ನು ನೀಡಿದವರದ್ದಾಗಿರುತ್ತದೆ.
ಹೀಗೆ ದುಷ್ಕೃತ್ಯಗಳನ್ನು ಎಸಗಿದ ಅಪರಾಧಿಗಳಿಗೆ ನೀಡುವ ಶಿಕ್ಷೆಗಳಲ್ಲಿ ಅಪರಾಧಿಯನ್ನು ಶಿಲುಬೆಗೆ ಜಡಿಯುವ ಶಿಕ್ಷೆಯೂ ಒಂದು. ‘ಶಿಲುಬೆ’ ಎಂಬ ಪದಕ್ಕೆ ಕನ್ನಡದ ಅರ್ಥಕೋಶದಲ್ಲಿ ‘ಕ್ರಿಸ್ತನನ್ನು ಕೊಲ್ಲಲು ನಿರ್ಮಿಸಿದ್ದ ಮರದ ಒಂದು ಸಾಧನ, ಕ್ರೈಸ್ತರ ಒಂದು ಧಾರ್ಮಿಕ ಲಾಂಛನ’ ಎಂಬ ಅರ್ಥಗಳಿವೆ. ಆದರೆ ಶಿಲುಬೆಯು ಕ್ರಿಸ್ತನನ್ನು ಕೊಲ್ಲುವ ಸಲುವಾಗಿ ನಿರ್ಮಿತವಾದ ಸಾಧನವಾಗಿರಲಿಲ್ಲ. ಕ್ರಿಸ್ತನ ಸಾವಿನಿಂದ ಆ ಶಿಲುಬೆ ಪ್ರಸಿದ್ಧಿಯಾಯಿತಷ್ಟೆ. ಕ್ರಿಸ್ತನ ಸಾವಿಗೂ ಮೊದಲೇ ಅನೇಕರನ್ನು ಶಿಲುಬೆಗೇರಿಸಿ ಕೊಂದಿರುವ ಬಗ್ಗೆ ದಾಖಲೆಗಳಿವೆ. ಖ್ಯಾತ ಗ್ರೀಕ್ ಲೇಖಕ ‘ಹೆರೊಡೊಟಸ್’ನು ಬರೆದಿರುವ ಪ್ರಕಾರ, ಕ್ರಿ.ಪೂ. 479ರಲ್ಲಿ ಗ್ರೀಸ್ನ ಅಥೇನಿಯನ್ನರು ಪರ್ಷಿಯಾದ ಪ್ರಧಾನ ಮುಖಂಡ 'ಆರ್ಟೆಕೈಟ್ಸ್' ಎಂಬಾತನನ್ನು ಶಿಲುಬೆಗೇರಿಸಿ ಕೊಂದ ವಿವರವಿದೆ. ಇದು ನಡೆದದ್ದು ಪರ್ಷಿಯಾದಲ್ಲಿ. ಇದೊಂದು ಅನಾಗರೀಕ ಪದ್ಧತಿಯಾಗಿದ್ದು ಈ ದಂಡನೆಯು ಗ್ರೀಸ್ನ ಇತರೆಡೆಗಳಲ್ಲಿಯೂ ಸಾಮಾನ್ಯವಾಗಿತ್ತು ಎಂಬುದನ್ನೂ ಅವನು ಬರೆದಿದ್ದಾನೆ. ಸೋಜಿಗದ ಸಂಗತಿಯೆಂದರೆ ಈ ರೀತಿಯಲ್ಲಿ ಸಾವನಪ್ಪಿದವರ ಪಳೆಯುಳಿಕೆಗಳು ಲಭ್ಯವಾಗಿರುವುದು ತೀರಾ ವಿರಳ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಶಿಲುಬೆ ಮರಣದಂಡನೆಯ ಶಿಕ್ಷೆಗೆ ಒಳಗಾದ ಅಪರಾಧಿಗಳ ಶವಸಂಸ್ಕಾರ ಮಾಡಲು ಸಾಮಾನ್ಯವಾಗಿ ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ ಅವರ ಶರೀರವನ್ನು ಶಿಲುಬೆಯಲ್ಲೇ ಕೊಳೆಯಲು ಬಿಡಲಾಗುತ್ತಿತ್ತು. ಅದು ಅಲ್ಲೇ ಕೊಳೆತು ಪ್ರಾಣಿಪಕ್ಷಿಗಳ ಆಹಾರವಾಗಿ ಬಿಡುತ್ತಿದ್ದುದರಿಂದ ಅವರ ದೇಹದ ಭಾಗಗಳು ಒಂದೇ ಸ್ಥಳ ಅಥವಾ ಸಮಾಧಿಗಳಲ್ಲಿ ಲಭಿಸುತ್ತಿರಲಿಲ್ಲ.
ಶಿಲುಬೆಗೆ ಪರ್ಯಾಯವಾಗಿ ‘ಕ್ರೂಜೆ’ ಎಂಬ ಪದವನ್ನು ಕನ್ನಡದಲ್ಲಿ ಬಳಸಲಾಗುತ್ತಿದೆ. ಇದು ಲ್ಯಾಟಿನ್ ಭಾಷೆಯ ‘ಕ್ರೂಚಿಸ್’ನ ತದ್ಭವ. ದುಷ್ಕರ್ಮಿಗಳಿಗೆ ಅಥವಾ ಕ್ರೂರವಾದ ಅಪರಾಧಗೈದವರಿಗೆ ವಿಧಿಸುವ ಶಿಕ್ಷಾ ಪದ್ಧತಿಯೇ ’ಶಿಲುಬೆಗೇರಿಸುವ’ (Crucifixion) ಶಿಕ್ಷೆ. ನಂತರದ ದಿನಗಳಲ್ಲಿ ಪರ್ಷಿಯಾ (ಇಂದಿನ ಇರಾನ್) ದ ಆಸುಪಾಸಿನ ನಾಡುಗಳಾದ ಸಿರಿಯಾ, ಪಾಲೆಸ್ಟಿನ್, ಜೋರ್ಡಾನ್, ಮೆಸೆಪೊಟೇಮಿಯ (ಇಂದಿನ ಇರಾಕ್), ಟರ್ಕಿ ಮತ್ತು ಸೌದಿ ಅರೇಬಿಯಾಗಳಲ್ಲೂ ಈ ಪದ್ಧತಿ ಜಾರಿಗೆ ಬಂತು ಎನ್ನಲಾಗುತ್ತಿದೆ. ಆನಂತರದ ದಿನಗಳಲ್ಲಿ ರೋಮಿಗೂ ಹಬ್ಬಿದ ಈ ಪದ್ಧತಿಯನ್ನು ಕ್ರಿ. ಪೂ. 100ರ ಸುಮಾರಿನಲ್ಲಿ ರೋಮನ್ನರು ಪರಿಷ್ಕರಿಸಿದ್ದರು. ಶಿಲುಬೆಗೆ ಇಂಗ್ಲೀಷಿನ 'ಪ್ಲಸ್' ರೂಪ ದೊರೆತದ್ದು ಆಗಲೇ. ಪಾಲೆಸ್ತೀನಿನ ಜುದೇಯವೂ ಸೇರಿದಂತೆ ಅನೇಕ ದೇಶಗಳ ಮೇಲೆ ಚಕ್ರಾಧಿಪತ್ಯವನ್ನು ಸ್ಥಾಪಿಸಿದ್ದ ರೋಮನರು ಅಪರಾಧಿಗಳನ್ನು ಕೊಲ್ಲುತ್ತಿದ್ದುದು ಈ ಪದ್ಧತಿಯನ್ನು ಅನುಸರಿಸಿಯೇ. ಆದರೆ ದುಷ್ಕೃತ್ಯಗಳನ್ನು ಎಸೆಗಿದವರಿಗೆ ಮಾತ್ರ ನೀಡುತ್ತಿದ್ದ ಶಿಕ್ಷೆ ಇದಾಗಿದ್ದರೂ ಅಂತಹುದೇ ಅಪರಾಧಗಳನ್ನೆಸಗಿದ ಮಹಿಳೆಯರಿಗೂ ಹಾಗೂ ರೋಮನ್ ನಾಗರೀಕರಿಗೂ ಈ ದಂಡನೆಯಿಂದ ವಿನಾಯ್ತಿಯನ್ನು ನೀಡಲಾಗಿತ್ತು.
ಯೇಸುವು ಶಿಲುಬೆಗೇರಿ ಮರಣಿಸಿದರು ಎನ್ನುವುದನ್ನು ಒಪ್ಪುವುದು ಎಷ್ಟು ಸುಲಭವೋ ಅಷ್ಟು ಸರಳವಾಗಿರಲಿಲ್ಲ ಅವರ ಶಿಲುಬೆಯ ಮರಣ. ಅಲ್ಲಿ ಕ್ಷಣಕ್ಷಣಕ್ಕೂ ಅವರು ಅನುಭವಿಸಿದ್ದು ವರ್ಣಿಸಲು ಅಸಾಧ್ಯವಾದ ನೋವು, ಸಂಕಟಗಳನ್ನು. ಯಾರೂ ಅನುಭವಿಸಬಾರದಂತಹ ಯಾತನೆಯನ್ನು ಅವರು ಅನುಭವಿಸಿದ್ದರು. ಇತ್ತ ತಕ್ಷಣಕ್ಕೆ ಸಾವೂ ಬರದಂತಹ, ಅತ್ತ ಬದುಕಲೂ ಆಗದಂತಹ ಹೀನಾಯ ಪರಿಸ್ಥಿತಿ. ಸಹಿಸಲಸಾಧ್ಯವಾದ ನೋವು, ಯಾತನೆ, ಸಂಕಟಗಳ ಸರಮಾಲೆ! ಯೇಸು ಶಿಲುಬೆಯ ಮೇಲೆ ಸುಮಾರು ಆರು ಗಂಟೆಗಳಿಗೂ ಅಧಿಕ ಕಾಲ ಯಾತನೆಯನ್ನು ಅನುಭವಿಸಿದ್ದರು. ಆ ಯಾತನೆ, ಸಂಕಟ, ನೋವುಗಳನ್ನು ‘ಅರಿಝೋನ ವೈದ್ಯಕೀಯ ಸಂಘ’ದ ಡಾ. ಟ್ರೂಮನ್ ಡೇವಿಸ್, ‘ನ್ಯೂವೈನ್ ಮ್ಯಾಗಝಿನ್’ ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದಾರೆ.
ಮನುಷ್ಯನೊಬ್ಬ ಇನ್ನೊಬ್ಬ ಮನುಷ್ಯನನ್ನು ಕೊಲ್ಲಲು ಕಂಡು ಹಿಡಿದ ಪದ್ಧತಿಗಳಲ್ಲಿ ಅತ್ಯಂತ ನೋವಿನಿಂದ ಕೂಡಿದ ಕ್ರೂರವೂ ದಾರುಣವೂ ಆದ ಕೃತ್ಯ ಇದಾಗಿದೆ ಎನ್ನುತ್ತಾರವರು. ಕೇವಲ ಪುರುಷ ಅಪರಾಧಿಗಳಿಗೆಂದೇ ಮೀಸಲಾಗಿದ್ದ ಶಿಕ್ಷಾಪದ್ಧತಿಯಾಗಿತ್ತು ಇದು.
ಶಿಲುಬೆಗೇರಿದ ಯೇಸುವಿಗೆ ಶಿಲುಬೆಯ ಮೇಲೆ ತಮ್ಮ ಭಾರವನ್ನು ಹೊತ್ತು ನೇರವಾಗಿ ನಿಲ್ಲದಂತಹ ಪರಿಸ್ಥಿತಿ ಇತ್ತು. ಅದಕ್ಕೆ ಕಾರಣ, ಅವರ ಮೊಣಕಾಲುಗಳನ್ನು 45 ಡಿಗ್ರಿ ಕೋನಕ್ಕೆ ಬಾಗಿರುವಂತೆ ಇಳಿಜಾರಾದ ಪದತಲದ ಮೇಲೆ ಕಾಲುಗಳನ್ನು ಒಂದರ ಮೇಲೆ ಇನ್ನೊಂದನ್ನು ಇರಿಸಿ ಮೊಳೆಯನ್ನು ಹೊಡೆಯಲಾಗಿತ್ತು. ಊಹಿಸಿ ನೋಡಿ ಯೇಸುವಿನ ಪರಿಸ್ಥಿತಿ ಎಂತಹ ಭಯಾನಕ ಪರಿಸ್ಥಿತಿಯಾಗಿತ್ತು ಎನ್ನುವುದನ್ನು. ಒಂದು ಪಾದದ ಮೇಲೆ ಇನ್ನೊಂದು ಪಾದವನ್ನಿರಿಸಿ ಕೈಗಳನ್ನು ಅಗಲಿಸದೆಯೂ ಮೊಳೆಯನ್ನು ಹೊಡೆಯದೆಯೂ ಮುವತ್ತು ನಿಮಿಷಕ್ಕೂ ಅಧಿಕ ಕಾಲ ಮಟ್ಟಸವಾದ ಆದರೆ ಪಾದಗಳನ್ನಷ್ಟೆ ಇರಿಸಬಹುದಾದ (ಆಗಾಗ್ಯೆ ದೇಹದ ಭಾರವನ್ನು ಒಂದು ಪಾದದಿಂದ ಇನ್ನೊಂದು ಪಾದಕ್ಕೆ ಬದಲಾಯಿಸಲು ಆಗದಂತಹ) ಸ್ಥಳದಲ್ಲಿ ನೆಲದಿಂದ ಕೊಂಚ ಎತ್ತರವಾದ ಸ್ಥಳದಲ್ಲಿ ಹೆಚ್ಚುಕಾಲ ಒಂದೇ ಕಡೆ ನಿಲ್ಲಲು ನಮ್ಮಿಂದ ಆಗುವುದಿಲ್ಲ ಎಂದ ಮೇಲೆ 45 ಡಿಗ್ರಿ ಕೋನದಲ್ಲಿರುವ ಇಳಿಜಾರು ಪದತಲದ ಮೇಲೆ ಒಂದು ಕಾಲಿನ ಮೇಲೆ ಇನ್ನೊಂದನ್ನಿರಿಸಿ ಅವುಗಳಿಗೂ ಹಾಗೂ ಅಗಲಿಸಿದ ಕೈಗಳಿಗೂ ಮೊಳೆಗಳನ್ನು ಜಡಿಸಿಕೊಂಡು ಸ್ವಭಾರದಿಂದ ನೇತಾಡಿಕೊಂಡು ನೋವಿನ ಒತ್ತಡಗಳನ್ನು ಆರು ಗಂಟೆಗಳ ಕಾಲ ಹೇಗೆ ಸಹಿಸಿಕೊಂಡರು ಯೇಸು ಎಂಬುದನ್ನು ಒಮ್ಮೆ ಊಹಿಸಿ ನೋಡಿ!
ಕಾಲುಗಳನ್ನು ನೇರವಾಗಿಸಿ ಮೊಳೆಗಳನ್ನು ಜಡಿದಿದ್ದರೆ ದೇಹದ ಭಾರವನ್ನು ಕಾಲು ಮತ್ತು ತೊಡೆಗಳ ಮೇಲೆ ತಂದುಕೊಂಡು ಹೇಗೋ ಸಂಭಾಳಿಸಬಹುದಾಗಿತ್ತು. ಆದರೆ ಮೊಣಕಾಲು ಸುಮಾರು 45 ಡಿಗ್ರಿ ಕೋನಕ್ಕೆ ಬಾಗಿರುವಾಗ ದೇಹದ ಭಾರವನ್ನು ಹೊರಲು ಕಾಲುಗಳಿಂದ ಸಾಧ್ಯವಾಗುವುದಿಲ್ಲ. ಇಳಿಜಾರಾದ ಪದತಲದ ಮೇಲೆ ನಿಂತಾಗ ಕಾಲುಗಳಿಗೆ ಹೊಡೆದ ಮೊಳೆಗಳ ಮೇಲೆ ಕಾಲಿನ ಗಾಯ ಒತ್ತುತ್ತಿದ್ದಾಗ ಆಗುವ ನೋವು ವಿವರಿಸಲಸಾಧ್ಯ! ಇಂತಹ ಸಂದರ್ಭದಲ್ಲಿ ದೇಹದ ಭಾರವು ಹೆಚ್ಚಾಗಿ ಕೈಗಳ ಮೇಲೆ ಬೀಳುತ್ತದೆ. ಕೈಗಳಿಗೂ ಮೊಳೆಯನ್ನು ಹೊಡೆದಿದ್ದ ಕಾರಣ ದೇಹದ ಭಾರ ಕೈಗಳ ಮೇಲೆ ಬಿದ್ದು ಗಾಯಗಳು ಕೈಗೆ ಹೊಡೆದಿರುವ ಮೊಳೆಗಳನ್ನು ಒತ್ತುತ್ತಾ ತೀವ್ರವಾದ ನೋವನ್ನೂ ಉರಿಯನ್ನೂ ಉಂಟು ಮಾಡುತ್ತದೆ ಎಂಬುದನ್ನು ಗಮನಿಸಿ. ಆಗ ಶಿಲುಬೆಗೇರಿದ ವ್ಯಕ್ತಿಯ ಶಕ್ತಿಯು ಕುಂದುತ್ತಾ ಅವನು ಕ್ಷಣದಿಂದ ಕ್ಷಣಕ್ಕೆ ಕುಸಿಯುತ್ತಾ ಹೋಗುತ್ತಾನೆ. ಎದೆಯ ಗೂಡುಗಳು ಸಂಕುಚಿತಗೊಂಡು ವಿರೂಪಗೊಳ್ಳತೊಡಗುತ್ತವೆ. ಉಸಿರಾಟ ಸರಾಗವಾಗಿರುವುದಿಲ್ಲ; ಮೇಲುಸಿರು ಬಿಡುತ್ತಾ ಅವನು ಚಡಪಡಿಸತೊಡಗುತ್ತಾನೆ. ಆಗ ಕೈಗಳ ಮೂಳೆಗಳು ಒಂದನ್ನೊಂದು ಸೇರುವ ಸ್ಥಳದಲ್ಲಿ ಆಗುವ ಹಿಗ್ಗುವಿಕೆಯಿಂದಾಗಿ ಅವು ಸ್ಥಾನಪಲ್ಲಟಗೊಳ್ಳುತ್ತವೆ ಮಾತ್ರವಲ್ಲ ಆ ಭಾಗಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.
ಹೀಗೆ ಭುಜದ, ಮೊಣಕೈಯ ಮತ್ತು ಮಣಿಕಟ್ಟಿನ ಸಂದುಗಳು ಹಿಗ್ಗಿ ಸ್ಥಾನಪಲ್ಲಟಗೊಂಡ ನಂತರ ಕೈ ಮತ್ತು ಎದೆಯ ಮುಖ್ಯಸ್ನಾಯುಗಳು ದೇಹದ ಭಾರವನ್ನು ಹೊರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ಪರಿಸ್ಥಿತಿಯಲ್ಲಿ ಶಿಲುಬೆಯಲ್ಲಿ ತೂಗಾಡುವ ವ್ಯಕ್ತಿಯ ಎದೆಯ ಗೂಡು ಉಸಿರಾಟಕ್ಕಾಗಿ ಒಳಕ್ಕೂ ಹೊರಕ್ಕೂ ಹಿಗ್ಗುವ ಮತ್ತು ಸಂಕುಚಿಸುವ ಕ್ರಿಯೆಗೆ ಒಳಗಾಗುತ್ತವೆ. ಈ ಪರಿಸ್ಥಿತಿಯಲ್ಲಿ ಸರಾಗವಾಗಿ ಉಸಿರಾಡುವ ಸಲುವಾಗಿ ಆತ ತನ್ನ ಕಾಲುಗಳನ್ನು ನೇರಗೊಳಿಸುವ ಪ್ರಯತ್ನವನ್ನು ಮಾಡುತ್ತಾನಾದರೂ ಅದು ಅಸಾಧ್ಯವಾಗುತ್ತದೆ. ದೇಹದ ಭಾರವನ್ನು ಹೊರುವ ಪ್ರಯತ್ನದಲ್ಲಿ ಬಾಗಿದ ಕಾಲುಗಳ ಮತ್ತು ತೊಡೆಗಳ ಸ್ನಾಯುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಉಸಿರಾಡುವ ಪ್ರಯತ್ನದಲ್ಲಿ ದೇಹವು ಅಲುಗಾಡುವುದರಿಂದ ಮೊಳೆಗಳನ್ನು ಹೊಡೆದ ಜಾಗದಲ್ಲಿ ಸಹಿಸಲಸಾಧ್ಯವಾದ ನೋವುಂಟಾಗುತ್ತದೆ ಮಾತ್ರವಲ್ಲ ತೀವ್ರ ರಕ್ತಸ್ರಾವವೂ ಆಗುತ್ತದೆ. ಉಸಿರಾಡುವ ಪ್ರಯತ್ನ ಮತ್ತು ದೇಹದ ಎಲ್ಲಾ ಭಾಗಗಳಲ್ಲೂ ಉಂಟಾದ ಸಹಿಸಲಸಾಧ್ಯ ನೋವಿನಿಂದಾಗಿ ದೇಹವು ವಿಪರೀತವಾಗಿ ಬೆವತು ದೇಹದ ಪಸೆಯೆಲ್ಲ ಆರಿ ಹೋಗಿರುತ್ತದೆ.
ಆದರೆ ಯೇಸುವನ್ನು ಶಿಲುಬೆಗೆ ಏರಿಸುವ ಮೊದಲು ಕೊರಡೆಗಳಿಂದ ಹೊಡೆದಿದ್ದರು. ಅವರ ದೇಹದ ಮಾಂಸಖಂಡಗಳು ಕಿತ್ತು ದೇಹದ ತುಂಬಾ ಗಾಯಗಳಾಗಿದ್ದವು ಎನ್ನವುದು ಇಲ್ಲಿ ಗಮನಾರ್ಹ. ಇಂತಹ ಪರಿಸ್ಥಿತಿಯಲ್ಲಿ ದೇಹವು ಬೆವತು, ರಕ್ತಸ್ರಾವ ಹಾಗೂ ಅಸಾಧ್ಯ ನೋವಿನ ಕಾರಣಕ್ಕೆ ವಿಪರೀತ ಬಾಯಾರಿಕೆಯೂ ಆಗುತ್ತದೆ. ಇಷ್ಟಲ್ಲದೆ ಯೇಸುವನ್ನು ಶಿಲುಬೆಗೇರಿಸಿದ್ದು ಮಟಮಟ ಮಧ್ಯಾಹ್ನದ ವೇಳೆಯಲ್ಲಿ ಎಂಬುದೂ ಗಮನಿಸಬೇಕಾದ ಅಂಶ. ಹಾಗಾಗಿ ಬಿಸಿಲಿನ ಝಳದಿಂದಲೂ ದಾಹವಾಗುತ್ತದೆ. ಇದೇ ಕಾರಣಕ್ಕಾಗಿ ಸೈನಿಕನೊಬ್ಬ ಸ್ಪಂಜನ್ನು ಈಟಿಯಲ್ಲಿ ಚುಚ್ಚಿ ದ್ರಾಕ್ಷಾರಸಕ್ಕೆ ಅದ್ದಿ ಯೇಸುವಿನ ತುಟಿಗೆ ಇಡುತ್ತಾನೆ. ಬಾಯಾರಿಕೆಯನ್ನು ಹೋಗಲಾಡಿಸುವುದು ಒಂದು ಕಾರಣವಾದರೆ ದ್ರಾಕ್ಷರಸ ನೋವು ನಿವಾರಕವೂ ಆಗಿರುತ್ತದೆಯೆನ್ನುವುದು ಇನ್ನೊಂದು ಕಾರಣ. ಆದರೆ ಯೇಸು ಅದನ್ನು ಸ್ವೀಕರಿಸುವುದಿಲ್ಲ.
ಮುಂದೆ ಉಸಿರಾಟ ಸರಾಗವಾಗಿ ಆಗದಿದ್ದಾಗ ರಕ್ತದಲ್ಲಿ ಆಮ್ಲಜನಕದ ಕೊರತೆಯುಂಟಾಗುತ್ತದೆ. ಆಮ್ಲಜನಕವು ದೇಹದ ಭಾಗಗಳನ್ನು ಸರಿಯಾಗಿ ತಲುಪದಿದ್ದಾಗ ಹೃದಯದ ಬಡಿತ ಏರುಪೇರಾಗುತ್ತದೆ. ಆಗ ಉಸಿರಾಟ ತೀವ್ರಗತಿಯನ್ನು ತಲಪುತ್ತದೆ. ಅಂತಿಮವಾಗಿ ಹೃದಯ ಮತ್ತು ಶ್ವಾಸಕೋಶಗಳ ವೈಫಲ್ಯವುಂಟಾಗಿ ಶಿಲುಬೆಗೇರಿಸಲಾದ ವ್ಯಕ್ತಿಯು ಸಾವಿಗೀಡಾಗುತ್ತಾನೆ. ಪ್ರಾಯಶಃ ಯೇಸು ಮೃತರಾದದ್ದು ಹೀಗೆ. ಶಿಲುಬೆಗೇರಿದವರೆಲ್ಲರೂ ಯೇಸುವಿನಂತೆ ಶೀಘ್ರವಾಗಿ ಸಾವಿಗೀಡಾಗುವುದಿಲ್ಲ. ಅವರ ಸಾವು ನಿಧಾನವಾದರೆ ಅವರ ಕಾಲುಗಳನ್ನು ಮುರಿದು ಛಿದ್ರಗೊಳಿಸಿ ಬೇಗ ಸಾಯುವಂತೆ ಮಾಡಲಾಗುತ್ತದೆ. ಅದೇ ತೆರನಾಗಿ ಯೇಸುವಿನ ಜೊತೆಗೆ ಶಿಲುಬೆಗೇರಿಸಲಾಗಿದ್ದ ಇಬ್ಬರು ಕುಖ್ಯಾತ ಕಳ್ಳರ ಕಾಲುಗಳನ್ನು ಸುತ್ತಿಗೆಯಿಂದ ಹೊಡೆದು ಛಿದ್ರಗೊಳಿಸಿ ಸಾಯುವಂತೆ ಮಾಡಲಾಗಿತ್ತು.
*******
No comments:
Post a Comment