Friday, 1 March 2019

ಬಂದೂಕು ಮತ್ತು ಪಾರಿಜಾತ ¨ ಡೇವಿಡ್ ಕುಮಾರ್



ಪೆನ್ನು ಹಿಡಿಯುವ ಬೆರಳುಗಳು 
ಬಂದೂಕು ನಳಿಕೆಯ ಸವರುತ್ತಿವೆ
ಗುಂಡು ಹಾರಿಸುವ ಚಪಲದಲಿ

ತೊಟ್ಟಿಲು ಕಂದನ ಜಿಲಕಿಯೊಳಗೆ
ಮದ್ದು ಗುಂಡುಗಳ ಸಪ್ಪಳವೆ

ಪಾರಿವಾಳದ ಗೂಡಿನೊಳಗೆ
ರಣಹದ್ದಿನ ಕೆಂಪು ಮೊಟ್ಟೆಗಳು
ಸಿದ್ಧಿ ಪುರುಷ ಬಾಯಲ್ಲೂ
ಯುದ್ಧ’ ’ಯುದ್ಧಓಂಕಾರನಾದ

ಗಡಿ ಬೇಲಿಗೆ ಹಬ್ಬಿದ್ದ 
ಮಲ್ಲಿಗೆ ಪಾರಿಜಾತಗಳು 
ದ್ವೇಷ ಕಿಡಿಗೆ ಸುಟ್ಟುಹೋಗಿವೆ 
ಕೋಮು ಕುಮ್ಮಕ್ಕಿನ ಗೊಬ್ಬರದಲಿ
ಪಾಪಸ್ಸು ಕಳ್ಳಿ ಬೆಳೆದಿವೆ

ಬಂದೂಕಿನೊಳಗೂ ಆತ್ಮಸಾಕ್ಷಿಯಿದೆ 
ಒಳಗೊಳಗೆ ಪಿಸುಗುಡುತ್ತಿದೆ
ಯಾರ ಎದೆಯ ಸೀಳಲಿ” ?
ಯಾರಿಗಿಂದು ವಿಧವೆಯ ಪಟ್ಟ” ?!

ಯುದ್ಧ ಕತ್ತಲಲಿ ಬೆತ್ತಲಾಗುವುದು ದೇಶ
ಒಣ ಪ್ರತಿಷ್ಠೆಗೆ ಬಡಕಲಾದವರು ನಾವು

ಎಸೆದು ಬಿಡಿ ರಣ ಆಯುಧಗಳ
ಮತ್ತೆ ಅರಳಲಿ ಸಂಪಿಗೆ, ಕೇದಗೆ
ಹಬ್ಬಲಿ ಮೆಲ್ಲಗೆ ಮಲ್ಲಿಗೆ ಹೂಗಳು
ಬಂದೂಕಿನ ನಳಿಕೆಯ ಮೇಲೆ

ಹಸಿರಾಗಲಿ ಬಿಡಿ ಯುದ್ಧಭೂಮಿಗಳು
ಬೀಸಿ ಬಿಡಲಿ ತಂಗಾಳಿಯು ಒಮ್ಮೆ
ಗಡಿ ಬೇಲಿಯ ಎಲ್ಲೆಯ ದಾಟಿಪಾರಿಜಾತವ ಹೊತ್ತು !

*******



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...