Monday, 8 April 2019

ಸಂತ ಯೊವಾನ್ನರ ಶುಭಸಂದೇಶ – 8 - ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು



ಯೊವಾನ್ನರ ಶುಭಸಂದೇಶದ ಕರ್ತೃ 

ಇಲ್ಲಿಯವರೆಗೆ ನಾವು ನೋಡಿದಂತಹ ಯಾವ ಸಾಕ್ಷಿಗಳು ಕೂಡ ಈ ಶುಭ ಸಂದೇಶವನ್ನು ಬರೆದಿದ್ದು ಜೆಬೆದಾಯನ ಮಗ ಸಂತ ಯೊವಾನ್ನಎಂದು ಹೇಳುವುದಿಲ್ಲ. ಯೊವಾನ್ನ- ಜೆಬೆದಾಯನ ಮಗ, ಯೇಸುವಿನ ಆಪ್ತ ಶಿಷ್ಯ. ಸಂತ ಯೊವಾನ್ನರ ಶುಭ ಸಂದೇಶ ನಮಗೆ ತಿಳಿಸುತ್ತದೆ ಈ ಆಪ್ತ ಶಿಷ್ಯ ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಉಪಸ್ಥಿತನಿದ್ದ ಎಂದು. ಬೇರೆ ಮೂರು ಶುಭ ಸಂದೇಶಗಳ ಪ್ರಕಾರ ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಕೇವಲ ಆಯ್ದುಕೊಂಡ 12 ಮಂದಿ ಪ್ರೇಷಿತರು ಮಾತ್ರ ಇದ್ದರು. ಹಾಗಾದರೆ 12 ಮಂದಿಯಲ್ಲಿ ಆಪ್ತ ಶಿಷ್ಯ ಕೂಡ ಒಬ್ಬ ಎಂದು ಹೇಳಬಹುದೇ? ಹಾಗಾದರೆ ಯಾರು ಈ ಆಪ್ತ ಶಿಷ್ಯ? ಬಹುಶಃ ಆಪ್ತ ಶಿಷ್ಯ ಜೆಬೆದಾಯನ ಮಗ ಯೊವಾನ್ನ ಇರಬಹುದು. ಏಕೆಂದರೆ ಮೂರು ಶುಭಸಂದೇಶಗಳಲ್ಲಿ ವಿಶೇಷವಾಗಿ 4ನೇ ಶುಭಸಂದೇಶದಲ್ಲಿ ಕೂಡ ಈತನ ಕುರುಹುಗಳನ್ನು ಕಾಣಬಹುದು. ಸಂತ ಯೊವಾನ್ನರ ಶುಭಸಂದೇಶ 13:1 ಅಲ್ಲಿ ನಾವು ಕಾಣುತ್ತೇವೆ; ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಭಾಗವಹಿಸಿದ ಎಲ್ಲರೂ ಆತನ ಶಿಷ್ಯರು ಎಂದು. ಇಲ್ಲಿ ಇನ್ನೊಂದು ನಾವು ಗಮನಿಸಬೇಕಾದದ್ದು ಎರಡು ವಿಶೇಷವಾದ ಪದಗಳನ್ನು; 

1)ಶಿಷ್ಯ 

2) ಹಿಂಬಾಲಕ. 

ಎರಡು ಪದಗಳ ಬಳಕೆಯನ್ನು ಶುಭಸಂದೇಶದ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಯೇಸುಸ್ವಾಮಿಯನ್ನು ಅನೇಕರು ಹಿಂಬಾಲಿಸುತ್ತಿದ್ದರು ಅವರನ್ನ ಹಿಂಬಾಲಕರು ಆಂಗ್ಲ ಭಾಷೆಯಲ್ಲಿ Disciples ಎಂದು ಕರೆಯಲಾಗಿದೆ. ಅದೇ ಯೇಸುಸ್ವಾಮಿ ಆರಿಸಿಕೊಂಡ ತನ್ನ ಆಪ್ತ ಶಿಷ್ಯರನ್ನ ಆಂಗ್ಲ ಭಾಷೆಯಲ್ಲಿ Apostles ಎಂದು ಕರೆಯಲಾಗಿದೆ. ಇಲ್ಲಿ ಯೊವಾನ್ನ ಯಾವ ಗುಂಪಿಗೆ ಸೇರುತ್ತಾನೆ ಎನ್ನುವುದು ಚರ್ಚಾ ವಸ್ತು. ಹಾಗಾದರೆ ಈ ಕಡೆಯ ರಾತ್ರಿಯ ಭೋಜನದ ಸಮಯದಲ್ಲಿ ಯಾರು ಇದ್ದರು? ಎನ್ನುವುದನ್ನು ಕಾಣಬೇಕಾಗಿದೆ. 

ಅ) ಪ್ರೇಷಿತರ ಕಾರ್ಯಕಲಾಪ 1:22-23 ರಲ್ಲಿ ಇಲ್ಲಿ ಇಬ್ಬರ ಹೆಸರುಗಳನ್ನು ಉಲ್ಲೇಖಿಸಿ ಇವರು ಯೇಸುವಿನ ಎಲ್ಲಾ ಹಾಗೂಹೊಗುಗಳಲ್ಲಿ ಜೊತೆಗಿದ್ದು ಸಾಕ್ಷಿಗಳಾಗದವರು ಎಂದು ಹೇಳಲಾಗಿದೆ. ಇವರು ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಇದ್ದರೆ? 

ಆ) ಯೇಸು ಸ್ವಾಮಿ ಎಪ್ಪತ್ತು ಮಂದಿಯನ್ನು ಸೇವಕಾರ್ಯಕ್ಕೆ ಕಳುಹಿಸುವುದನ್ನು ನೋಡಿದ್ದೇವೆ. ಇವರಲ್ಲಿ ಯಾರಾದರೂ ಕಡೆಯ ರಾತ್ರಿಯ ಭೋಜನದ ಸಮಯದಲ್ಲಿ ಇದ್ದರೆ? 

ಇ) ಯೇಸುಸ್ವಾಮಿ ಕಡೆಯ ರಾತ್ರಿಯ ಭೋಜನವನ್ನು ಮೇಲ್ಕೋಣೆಯಲ್ಲಿ ಜೇರೂಸಲೇಮ್ ನಗರದಲ್ಲಿ ಆಚರಿಸಿದರು ಎಂದು ತಿಳಿದು ಬರುತ್ತದೆ. ಬಹುಶಃ ಆಚರಣೆಗೆ ಮನೆ ಕೊಟ್ಟ ಯಜಮಾನನನ್ನ ಕೂಡ ಈ ಭೋಜನಕ್ಕೆ ಆಹ್ವಾನಿಸಿರಬೇಕು ಅವರನ್ನು ಯೇಸುಸ್ವಾಮಿಯ ಪಕ್ಕದಲ್ಲಿ ಕೂರಿಸಿರಬೇಕು. ಈ ಎಲ್ಲಾ ಕಾರಣಗಳಿಂದ ಯೊವಾನ್ನ- ಪ್ರೇಷಿತ, ಜೆಬೆದಾಯನ ಮಗ, ಯೇಸುವಿನ ಆಪ್ತ ಶಿಷ್ಯನೇ ಈ ಶುಭ ಸಂದೇಶವನ್ನು ಬರೆದಿರುವುದು ಎನ್ನುವುದು ವಿವಾದಾತ್ಮಕವಾಗಿದೆ. ಫೋಲಿಕ್ರೇಟ್ಸ್ ಅವರು ಈ ಶುಭ ಸಂದೇಶದ ಕರ್ತೃ ಒಬ್ಬ ಯಾಜಕ ಎಂದು ತಿಳಿಸುತ್ತಾರೆ. ಕಾರಣಗಳು ಹೀಗಿವೆ: 

1) ಯೊವಾನ್ನರ ಶುಭಸಂದೇಶ 17 ಅಧ್ಯಾಯದ್ದಲ್ಲಿ ನಾವು ಕಾಣುತ್ತೇವೆ ಯೇಸುಸ್ವಾಮಿ ಶಿಷ್ಯರಿಗೋಸ್ಕರ ಪ್ರಾರ್ಥನೆ ಮಾಡುತ್ತಾರೆ, ಇದನ್ನು ಯಾಜಕೀಯ ಪ್ರಾರ್ಥನೆ ಎಂದು ಹಲವರು ಕರೆಯುತ್ತಾರೆ. 

2) ಯೊವಾನ್ನರ ಶುಭಸಂದೇಶ 11:49- 52 ನಲ್ಲಿ ಯೇಸುಸ್ವಾಮಿಯ ಸಾವಿನ ಉದ್ದೇಶವನ್ನು ಕಾಯಫನು ಹೇಳುವುದರ ಬಗ್ಗೆ ಬೈಬಲ್ ವಿದ್ವಾಂಸರು ಈ ಉಲ್ಲೇಖವನ್ನು ಕರ್ತೃವಿನ ಕಾಯಕಕ್ಕೆ ತಾಳೆ ಹಾಕುತ್ತಾರೆ. ಇದನ್ನು ಒಬ್ಬ ಯಾಜಕ ಬರೆದಿರಬಹುದು ಎಂದು ತಿಳಿಸುತ್ತಾರೆ. 

3) ಈ ಶುಭಸಂದೇಶದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಯಹೂದಿ ಹಬ್ಬಗಳಿಗೆ ಕೊಡಲಾಗಿದೆ. ಇದರಿಂದಲೂ ಕೂಡ ಶುಭ ಸಂದೇಶದ ಕರ್ತೃ ಒಬ್ಬ ಯಾಜಕ ಎಂದು ತಾಳೆ ಹಾಕುತ್ತಾರೆ. 

4) ಯೊವಾನ್ನರ ಶುಭಸಂದೇಶ 18:15-17ರಲ್ಲಿ ಪ್ರಧಾನ ಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನ ಕುರಿತು ಮಾತನಾಡಲಾಗಿದೆ. ಈ ಇನ್ನೊಬ್ಬ ಶಿಷ್ಯ ಯೊವಾನ್ನ! ಇಲ್ಲೂ ಕೂಡ ಕರ್ತೃ ಒಬ್ಬ ಯಾಜಕ ಒಂದು ತಾಳೆ ಹಾಕುತ್ತಾರೆ. ಇವೆಲ್ಲವನ್ನು ಗಮನಿಸಿದ ನಮಗೆ ಒಂದು ಪ್ರಶ್ನೆ ಉದ್ಭವಿಸುವುದು ಸಹಜ. ಈ ಯೊವಾನ್ನ - ಪ್ರೇಷಿತ, ಜೆಬೆದಾಯನ ಮಗ ಏನಾದರೂ ಯಾಜಕ ಕುಲದ ಮೂಲದವನೋ? ಎನಿಸುತ್ತದೆ. ಆದರೆ ಒಬ್ಬ ಯಾಜಕ ಮೀನು ಹಿಡಿಯುವವನು ಆಗಲು ಸಾಧ್ಯವಿಲ್ಲ. ನಾವು ಮಾತನಾಡುತ್ತಿರುವಂತಹ ಪ್ರೇಷಿತ ಯೊವಾನ್ನ ಮೂಲತಃ ಮೀನು ಹಿಡಿಯುವವ. ಜೆಬೆದಾಯನ ಮಗ ಯೊವಾನ್ನ ಈ ಶುಭ ಸಂದೇಶವನ್ನು ಬರೆದಿದ್ದರೆ ಏಕೆ ಅವರ ಹೆಸರು ಇಲ್ಲಿ ಉಲ್ಲೇಖವಾಗಿಲ್ಲ? ಎನ್ನುವುದು ಪ್ರಶ್ನೆ. ಇದನ್ನ ಬೈಬಲ್ ವಿದ್ವಾಂಸರು Self effacement theory ಎನ್ನುತ್ತಾರೆ. ಹಾಗಂದರೆ ಸ್ವಯಂ ನಾಶಪಡಿಸಿಕೊಳ್ಳುವಂತಹ ಸಿದ್ಧಾಂತ - ಇದು ತನ್ನನ್ನು ತಾನು ಗುರುತಿಸಿಕೊಳ್ಳದೇ ಇರುವುದು ಅಥವಾ ತನ್ನ ಕುರುಹುವನ್ನು ನಾಶಪಡಿಸುವುದಾಗಿದೆ. ಕರ್ತೃ ವಿಧೇಯತೆ ವಿನಮ್ರತೆಗೋಸ್ಕರ ತನ್ನನ್ನು ತಾನು ಎಲ್ಲೂ ಕೂಡ ಗುರುತಿಸಿಕೊಳ್ಳುವುದಿಲ್ಲ. ಇದು ಆತನ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಅದಕ್ಕಾಗಿ ನಾವು ಈ ವ್ಯಕ್ತಿ ಯಾರನ್ನು ಕೂಡ ಗುರುತಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಅನೇಕ ವ್ಯಕ್ತಿಗಳ ಹೆಸರುಗಳು ಇಲ್ಲಿ ಉಲ್ಲೇಖವಾಗಿದೆ. ಹೆಸರು ಹೇಳಿಕೊಳ್ಳದೆ ಇರುವುದನ್ನು ಅನಾಮಧೇಯತೆ ಎಂದು ಕರೆಯಲಾಗುತ್ತದೆ. ಈ ಶುಭಸಂದೇಶದಲ್ಲಿ ಅನಾಮಧೇಯತೆಯು ಕೂಡ ವಿಶೇಷವಾದಂತಹ ದೈವಶಾಸ್ತ್ರೀಯ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. 

ಎರಡನೇ ಅಭಿಪ್ರಾಯ ಜೆಬೆದಾಯನ ಮಗ ಯೊವಾನ್ನ ಮತ್ತು ಆಪ್ತ ಶಿಷ್ಯ ಯೊವಾನ್ನ ಇಬ್ಬರೂ ಒಬ್ಬರೇ ಆಗಿರುವುದರಿಂದ ಇದು ಆಗಬಹುದು ಎಂದು ತಿಳಿದು ಇದನ್ನ ಬರೆಯಲಾಗಿಲ್ಲ ಎನಿಸುತ್ತದೆ. ಹಾಗಾದರೆ ಜೆಬೆದಾಯನ ಮಗ ಈ ಶುಭಸಂದೇಶದ ಕರ್ತೃವಾಗಿದ್ದರೆ ಏಕೆ ಶುಭಸಂದೇಶ ಈ ವ್ಯಕ್ತಿಯು ಹಲವು ಸನ್ನಿವೇಶಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು ಕೂಡ ಹೆಸರು ಉಲ್ಲೇಖಿಸಿಲ್ಲ? ಉದಾಹರಣೆ - ಯೇಸುವಿನ ಮಹಿಮಾ ರೂಪಾಂತರ, ಗೆತ್ಸೇಮಿನ ತೋಪಿನಲ್ಲಿ ಪ್ರಾರ್ಥನೆ... ಮಾರ್ಕ 9 10:39 - ಇಲ್ಲಿ ತಿಳಿಯುತ್ತದೆ ನಮಗೆ ಯಕೋಬನೊಂದಿಗೆ ಯೊವಾನ್ನನು ರಕ್ತ ಸಾಕ್ಷಿಯಾಗಿ ಮಣಿಯ ಬೇಕೆಂದು. ಯೊವಾನ್ನರ ಶುಭಸಂದೇಶ 21:20-23ರಲ್ಲಿ ತಿಳಿಸುವಂತೆ ಈ ಆಪ್ತ ಶಿಷ್ಯನಿಗೆ ಸಾವು ಇಲ್ಲ ಎಂದು ತಿಳಿಯುತ್ತದೆ. 

ಸಾಮಾನ್ಯವಾಗಿ ಅನೇಕ ವಿದ್ವಾಂಸರು ಶುಭ ಸಂದೇಶದ ಕರ್ತೃ ಪ್ಯಾಲೆಸ್ಟೀನ್ ದೇಶದ ಯಹೂದಿ, ಈತ ಬಹುಷ್ಯ ಜೆರುಸಲೇಮ್ ನಿವಾಸಿಯಾಗಿದ್ದು, ಈತನಿಗೆ ಯಹೂದ್ಯ ದೈವಶಾಸ್ತ್ರದ ಹಾಗೂ ಯಹೂದಿ ಹಬ್ಬಗಳ ಒಳ್ಳೆಯ ಜ್ಞಾನವಿದ್ದು, ಯೇಸುವಿನ ಸನ್ನಿವೇಶಗಳನ್ನ ಅತ್ಯಂತ ಎತ್ತರವಾದ ದೈವೀಶಾಸ್ತ್ರದ ಚಿಂತನೆಗಳೊಂದಿಗೆ ಈ ಶುಭ ಸಂದೇಶವನ್ನು ಬರೆದಿದ್ದಾನೆ ಎಂದು ತಿಳಿದು ಬರುತ್ತದೆ. 



———— 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...