Monday, 8 April 2019

ಚುನಾವಣೆಯಲ್ಲಿ ಕ್ರೈಸ್ತರ ಜವಾಬ್ದಾರಿಗಳು - ಇನ್ಫೆಂಟ್ ಕಿಶೋರ್

ಚುನಾವಣೆ ಎಂದಾಕ್ಷಣ ಮತದಾನ, ಪಕ್ಷಗಳು, ಜಾತಿಗಳು, ಅಧಿಕಾರ-ಅಧಿಕಾರಗಳು, ಧರ್ಮಗಳು, ಒಳಿತು-ಕೆಡುಕುಗಳು, ಸೇವೆಗಳು, ಅನುಕೂಲ ಅನಾನುಕೂಲಗಳು ನೆನಪಿಗೆ ಬರುತ್ತವೆ. ನಮ್ಮಲ್ಲಿ ಆಸೆಗಳು, ಗೊಂದಲಗಳು ಮತ್ತು ತಾರತಮ್ಯಗಳು ಉಂಟಾಗುತ್ತವೆ. ನಾವು ಯಾರನ್ನು ಗೆಲ್ಲಿಸಬೇಕು, ಯಾರನ್ನು ಆಯ್ಕೆ ಮಾಡಬೇಕು, ಯಾರನ್ನು ಅಧಿಕಾರಕ್ಕೆ ತರಬೇಕು ಎನ್ನುವ ಯೋಚನೆ ಉಂಟಾಗುತ್ತದೆ. 

ಕೆಲವರು ಯಾರು ಒಳ್ಳೆಯ ಸೇವೆ ಸಲ್ಲಿಸಿ ಒಳಿತನ್ನು ಮಾಡುವರೋ, ದೇಶಕ್ಕಾಗಿ ಮಡಿವರೋ ಅವರನ್ನು ಆಯ್ಕೆ ಮಾಡುತ್ತಾರೆ. ಮತ್ತೆ ಕೆಲವರು ಧರ್ಮಗಳ ಸಂಕಟಕ್ಕೆ ಸಿಲುಕಿ ಅಧರ್ಮಿಗಳಂತೆ ವರ್ತಿಸಿ ಮೇಲು- ಕೀಳು, ಜಾತಿ ಭೇದವನ್ನು ಮೇಲೆತ್ತಿ, ಅದಕ್ಕೆ ಪ್ರೋತ್ಸಾಹಿಸುವವರನ್ನು ಗುರುತಿಸಿ ಆಯ್ಕೆ ಮಾಡುತ್ತಾರೆ. ಇನ್ನು ಕೆಲವರು ಹಣದ ದಾಹದಿಂದ ತುಂಬಿ ಅವರಿಗೆ ಉಪಕರಿಸುವರನ್ನು ಆಯ್ಕೆ ಮಾಡುತ್ತಾರೆ. ಹೀಗೆ ಇವುಗಳು ನಾವು ಚುನಾವಣೆಯಲ್ಲಿ ಮಾಡುವ ನಮ್ಮ ಆಯ್ಕೆಗಳಾಗಿರುತ್ತವೆ. 

ಮತದಾನ 

ಮತದಾನ ಪ್ರತಿಯೊಬ್ಬರ ಹಕ್ಕು. ನಾವು ಪೌರತ್ವದ ಹಕ್ಕುದಾರರಾಗಿ, ದೇಶದ ಪ್ರಜೆಗಳಾಗಿ, ದೇಶದ ಒಳಿತಿಗಾಗಿ ಮತದಾನ ನೀಡಬೇಕು ಮತ್ತು ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಅಭ್ಯರ್ಥಿಗಳು ದೇವರ ಪ್ರಜೆಗಳು ದೇವರ ಆಶೀರ್ವಾದಗಳೊಂದಿಗೆ ನಮ್ಮಿಂದಲೇ ಆರಿಸಲ್ಪಟ್ಟವರಾಗಿರುತ್ತಾರೆ. ಅವರು ನಮ್ಮಿಂದಲೇ ಹೊರತು ಅವರಿಂದ ನಾವಲ್ಲ. ಅವರು ನ್ಯಾಯಬದ್ಧರಾಗಿಯೂ, ಬುದ್ಧಿವಂತರಾಗಿಯೂ, ಧರ್ಮನಿಷ್ಠೆಯಿಂದ ಕಾರ್ಯ ಸಲ್ಲಿಸಬೇಕು. 

ಹೀಗಿರುವಾಗ ಕ್ರೈಸ್ತರಾಗಿ ಚುನಾವಣೆಯಲ್ಲಿ ನಮ್ಮ ಪಾತ್ರವೇನು? ಚುನಾವಣೆಯನ್ನು ನಾವು ನಂಬಬೇಕೇ, ಪ್ರೋತ್ಸಾಹಿಸಬೇಕೇ, ಚುನಾವಣೆಗೂ ನಮಗೂ ಸಂಬಂಧವಿದೆಯೇ? ಕ್ರೈಸ್ತರಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಸರಿಯೇ? ದೇವರಿಗೂ ಚುನಾವಣೆಗೂ ಸಂಬಂಧವಿದೆಯೇ? ದೇವರು ಚುನಾವಣೆಯನ್ನು ಪ್ರೋತ್ಸಾಹಿಸುವರೇ? ಎಂಬುದು ಕ್ರೈಸ್ತರಾಗಿ ನಮಗೆ ಮೂಡಿ ಬರುವ ಪ್ರಶ್ನೆಗಳಿವು. 

ಕೈಸ್ತರು ದೇವ ಭಯ-ಭಕ್ತಿಯುಳ್ಳವರು 

ಚುನಾವಣೆ ಅಥವಾ ರಾಜಕೀಯವನ್ನು ಭಕ್ತಿಗೂ ದೇವರಿಗೂ ಹೋಲಿಸಬೇಡಿ, ಇವೆರಡೂ ಬೇರೆ ಬೇರೆಯಾಗಿವೆ, ಇವುಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎನ್ನುವರು ಕೆಲವರು. ಅಂದರೆ ಅದು ನಾವು ದೇವರನ್ನು ಅಪಾರ್ಥ ಮಾಡಿಕೊಳ್ಳುವಂತೆ ಮಾಡುವುದು. 

ರಾಜಕೀಯ ಎಂದಾಕ್ಷಣ ನಮ್ಮಲ್ಲಿ ತಪ್ಪು ಕಲ್ಪನೆಗಳೇ ಹೊರತು ಬೇರೇನಿಲ್ಲ.ಈಗಿನ ಕಾಲಕ್ಕೆ ಅದು ಸರಿಯೇ, ಏಕೆಂದರೆ ಜಗದಲಿ ನಡೆಯುತ್ತಿರುವುದೂ ಅದೇ ರೀತಿ ಆಗಿದೆ. ರಾಜಕೀಯಕ್ಕೆ ಅರ್ಥವೇ ಇಲ್ಲದಂತಾಗಿದೆ ಹಾಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಸಮಸ್ಯೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ ದೇವರಿಗೂ ರಾಜಕೀಯಕ್ಕೂ ಸಂಬಂಧವಿದೆ. ಅದು ಎಂತಹ ಸಂಬಂಧ? 

ರಾಜಕೀಯವು ಒಳ್ಳೆಯ ಅಧಿಕಾರ, ಒಳ್ಳೆಯ ಆಡಳಿತ, ದೈವ ಸಾಮ್ರಾಜ್ಯವನ್ನು ತನ್ನ ಜನರಿಗೆ ನೀಡುವಂತಾಗಿದೆ. 

ದೇವರು ರಾಜಕೀಯದಲ್ಲಿ ಆಸಕ್ತರಲ್ಲ ಅವರಿಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದರೂ ನಾವು ದೇವರನ್ನು ಅವರ ವಾಕ್ಯವಾದ ಧರ್ಮಗ್ರಂಥವನ್ನು ನಂಬುವುದಿಲ್ಲ. ನಿಜವಾಗಿ ತಿಳಿಯುವುದಾದರೆ ದೇವರಿಗೂ ರಾಜಕೀಯಕ್ಕೂ ಒಡನಾಟವಿದೆ. ದೇವರೇ ಕಲಿಸಿಕೊಟ್ಟ ಪ್ರಾರ್ಥನೆಯನ್ನು ಗಮನಿಸುವುದಾದರೆ ನಾವು ದೇವರ ಸಾಮ್ರಾಜ್ಯ ಈ ಧರೆಗೆ ಬರಲಿ, ದೇವರ ಆಳ್ವಿಕೆ ಈಗಲೂ ಎಂದೆಂದಿಗೂ ಇರಲಿ ಎನ್ನುತ್ತಾ ಪ್ರಾರ್ಥಿಸುತ್ತೇವೆ. 

ಬಹುಶಃ ರಾಜಕೀಯಕ್ಕೂ, ಚುನಾವಣೆಗೂ, ದೇವರಿಗೂ ದೂರದ ಸಂಬಂಧವಿರಬಹುದು. ಆದರೆ ನಾವು ಕ್ರೈಸ್ತರು ಪ್ರತಿಯೊಂದು ಕ್ಷಣ ಕ್ಷಣವೂ ದೇವರ ರಾಜ್ಯವನ್ನು, ಅವರ ಆಳ್ವಿಕೆಯನ್ನು ಬಯಸುವವರಾಗಿದ್ದೇವೆ. ಕೇವಲ ಐದು ವರ್ಷಕ್ಕೆ ಒಮ್ಮೆಯಲ್ಲ ಬದಲಿಗೆ ಎಂದೆಂದಿಗೂ ಎಂದು ಬೇಡುತ್ತೇವೆ. 

ಆದ್ದರಿಂದ ಮತದಾನವು ನಾವು ಮಾಡುವ ಒಂದು ಚಿಕ್ಕ ಸೇವೆ ಸಮಾಜಕ್ಕೆ ದೇಶಕ್ಕೆ ಕೊಡುವ ಉಡುಗೊರೆಯಾಗಿದೆ. ದೇಶಕ್ಕಾಗಿ ಮಾಡುವ ಒಂದು ಪುಟ್ಟ ಜವಾಬ್ದಾರಿಯಾಗಿದೆ. 

ಒಳ್ಳೆಯ ನಂಬಿಗಸ್ಥರಾಗಿ, ದೇವರ ಪ್ರಜೆಗಳಾಗಿ, ದೇಶದ ಪ್ರಜೆಗಳಾಗಿ, ನಮ್ಮ ಹಕ್ಕಿನ ಸಮಾನತೆಯನ್ನರಿತು, ದೇಶದ ಒಳಿತಿಗಾಗಿ ಸರಿಯಾದ ಆಯ್ಕೆ ಮಾಡುವುದು ಹಾಗೂ ಒಳ್ಳೆಯ ಅಧಿಕಾರಿಯನ್ನು ದೇಶಕ್ಕೆ ನಮ್ಮೆಲ್ಲರ ಉಡುಗೊರೆಯಾಗಿ ನೀಡುವುದು ನಮ್ಮ ಜವಾಬ್ದಾರಿ. 

ಧರ್ಮಶಾಸ್ತ್ರದಲ್ಲಿ ರಾಜಕೀಯ ಹಾಗೂ ಚುನಾವಣೆಯ ಬಗ್ಗೆ ಉಲ್ಲೇಖವಾಗಿರುವ ಈ ಕೆಳಕಂಡ ಕೆಲವು ವಿವರಗಳನ್ನು ಗಮನಿಸೋಣ. 

1. ಸರ್ಕಾರಕ್ಕೆ ಸಲ್ಲತಕ್ಕ ಸೇವೆ: ರೋಮನ್ನರಿಗೆ ಬರೆದ ಪತ್ರ 13ನೇ ಅಧ್ಯಾಯದಲ್ಲಿ, ಪ್ರತಿಯೊಬ್ಬನು ತನ್ನ ಮೇಲಿನ ಅಧಿಕಾರಿಗಳಿಗೆ ಅಧೀನನಾಗಿರಬೇಕು. ಅಧಿಕಾರ ಎಲ್ಲವೂ ಬರುವುದು ದೇವರಿಂದಲೇ ಈಗಿರುವ ಅಧಿಕಾರಿಗಳು ದೇವರಿಂದಲೇ ನೇಮಕಗೊಂಡವರು ಎನ್ನಲಾಗಿದೆ. 

2. ಮತದಾನವು ಎಲ್ಲರ ಸಮಾನತೆ ಮತ್ತು ಹಕ್ಕುಗಳನ್ನು ಗುರುತಿಸುತ್ತದೆ ಎಂದು ಧರ್ಮೋಪದೇಶಕಾಂಡ 10ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. 

3. ನಾನು ಯಾವ ನಗರಕ್ಕೆ ನಿಮ್ಮನ್ನು ಸಾಗಿಸಿದ್ದೇನೋ ಅದರ ಕ್ಷೇಮವನ್ನು ಹಾರೈಸಿ. ಅದಕ್ಕಾಗಿ ಸರ್ವೇಶ್ವರನಾದ ನನ್ನನ್ನು ಪ್ರಾರ್ಥಿಸಿರಿ. ಅದರ ಕ್ಷೇಮವೇ ನಿಮ್ಮ ಕ್ಷೇಮ. ಇದು ನಿಮ್ಮ ದೇವರಾದ ನನ್ನನ್ನು ಆದರಿಸುವ ಒಂದು ಮಾರ್ಗವಾಗಿದೆ ಎಂದು ಯೆರೆಮಿಯ ಗ್ರಂಥ 29ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. 

4. ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತರಾಗಿ ಶಾಂತಿ-ಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸನಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು. ಹೀಗೆ ಮಾಡುವುದು ಒಳ್ಳೆಯದು ನಮ್ಮ ಉದ್ಧಾರಕರಾದ ದೇವರಿಗೆ ಮೇಲುಗೈಯಾದುದು ಎಂದು ತಿಮೊಥಿಯರಿಗೆ ಬರೆದ ಮೊದಲ ಪತ್ರ 2ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. 

5. ಬಿಡು ಕೆಟ್ಟದನ್ನು, ಹಾಡು ಒಳಿತನ್ನು, ಹುಡುಕು ಶಾಂತಿಯನ್ನು, ಬೆನ್ನಟ್ಟು ಅದನ್ನು ಸಜ್ಜನರನ್ನು ಪ್ರಭು ಕಟಾಕ್ಷಿಸುವನು. ಅವರ ಮೊರೆಗಾತ ಕಿವಿಗೊಡುವನು ದುರ್ಜನರಿಗಾದರೋ ಪ್ರಭು ವಿಮುಖನು, ಅವರ ಹೆಸರನ್ನು ಧರೆಯಿಂದ ಅಳಿಸುವನು ಎಂದು 34ನೇ ಕೀರ್ತನೆಯಲ್ಲಿ ಹೇಳಲಾಗಿದೆ. 

6. ಈ ಧರೆಗೆ ನೀವೇ ಉಪ್ಪು, ಉಪ್ಪೇ ಸಪ್ಪೆಯಾಗಿ ಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿ ಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ, ದಾರಿಗರು ಅದನ್ನು ತುಳಿದು ಬಿಡುತ್ತಾರೆ. ನಮ್ಮ ಸಮಾಜವನ್ನು ಒಳ್ಳೆಯದಕ್ಕೆ, ಒಳ್ಳೆಯ ಮತದಾನಕ್ಕೆ ಉತ್ತೇಜನ ಪಡಿಸುವ ರೀತಿ ಎಂದು ಮತ್ತಾಯನ ಸುವಾರ್ತೆ 5ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. 

7. ನಮ್ಮ ಪ್ರಜಾಪ್ರಭುತ್ವದ ಫಲಗಳನ್ನು ಅನುಭವಿಸುವವರು, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವಲ್ಲಿ ಮತ್ತು ಅದರ ಉನ್ನತಿಗೆ ಶ್ರಮಿಸಬೇಕು. ಇದೊಂದು ತೆಗೆದು ಕೊಳ್ಳಬೇಕಾದ ಒಂದು ಬಹುದೊಡ್ಡ ಸವಾಲಾಗಿದೆ. 

8. ಮತದಾನವು ಫಲಿತಾಂಶವನ್ನು ಪ್ರಭಾವಿಸುತ್ತದೆ. ನಮ್ಮ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು. ಅಲ್ಲದೆ ನಮ್ಮ ಕೊರತೆಯನ್ನು ನಾವೇ ನಿಭಾಯಿಸಬೇಕು ಎಂದು ಲೂಕನು ಬರೆದ ಸುವಾರ್ತೆ 10ನೇ ಅಧ್ಯಾಯದಲ್ಲಿ ಇದಕ್ಕೆ ಅನುಗುಣವಾಗಿ ವಿವರಿಸಲಾಗಿದೆ. 

9. ದಾನಿಯೇಲನ ಗ್ರಂಥದಲ್ಲಿ ರಾಜ್ಯ ಆಡಳಿತ ನಿರ್ವಹಣೆಗಾಗಿ 120 ಮಂದಿ ಪ್ರಾಂತಾಧಿಪತಿಗಳನ್ನು ಆಯಾಯ ಪ್ರಾಂತ್ಯಗಳ ಮೇಲೆ ನೇಮಿಸಿದ್ದನು. ಇವರ ಮೇಲ್ವಿಚಾರಣೆಗಾಗಿಯೂ ತನ್ನ ಹಿತಾಸಕ್ತಿಯ ದೃಷ್ಟಿಯಿಂದಲೂ ಮೂವರು ಮುಖ್ಯ ಅಧಿಕಾರಿಗಳನ್ನು ನೇಮಿಸಲು ನಿಶ್ಚಯಿಸಿದನು. 

10. ಚಕ್ರವರ್ತಿ ಔಗುಸ್ತನು ಜನಗಣತಿ ಆಗಬೇಕು ಎಂದು ಆಜ್ಞೆ ಹೊರಡಿಸಿದಾಗ ಮೊಟ್ಟಮೊದಲ ಜನಗಣತಿ ಸಿರೇನ್ಯನು ಸಿರಿಯ ನಾಡಿಗೆ ರಾಜ್ಯಪಾಲನಾಗಿದ್ದಾಗ ನಡೆಯಿತು. ಆಗ ಜೋಸೆಫನು ಗರ್ಭವತಿಯಾದ ಮರಿಯಳನ್ನು ಕರೆದುಕೊಂಡು ನಜರೆತ್ತಿನಿಂದ ಬೆತ್ಲೆಹೆಮಿಗೆ ಹೊರಟನು. 

11. ಆದಿಕಾಂಡದಲ್ಲಿ ದೇವರು ಜೋಸೆಫನನ್ನು ಮುಖ್ಯಮಂತ್ರಿಯಾಗಿ ನೇಮಿಸಿರುವುದು ಉಲ್ಲೇಖವಾಗಿದೆ. 

ನಮಗಿರುವ ಎಲ್ಲ ಸಂಪನ್ಮೂಲಗಳನ್ನು ಉಪಯೋಗಿಸಲು ಮತದಾನವು ದೇವರು ಕೊಟ್ಟ ಒಂದು ಕೊಡುಗೆ. ಒಂದು ಅನುಚಿತ ಮತದಾನವು ಅಥವಾ ಮತದಾನ ಮಾಡದಿರುವುದು ದೇವರ ಕೊಡುಗೆಯನ್ನು ನಿರಾಕರಿಸಿದಂತೆ ಅಥವಾ ಹಾಳು ಮಾಡಿದಂತೆ ಆದ್ದರಿಂದ ದೇವರು ಹೇಳಿದ ಹಾಗೆ ಚಕ್ರವರ್ತಿಗೆ ಸಲ್ಲತಕ್ಕದನ್ನು ಚಕ್ರವರ್ತಿಗೆ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ. 

———— 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...