ನಜರೇತಿನ ಯೇಸು,
ಯೆಹೂದ್ಯರ ಅರಸು.
‘ನಾನು ಬರೆದುದು ಬರೆದಾಯ್ತು
ಅದನ್ನು ಬದಲಾಯಿಸಲಾಗದು
ಇದು ಪಿಲಾತನ ಉವಾಚ.
ಅಯ್ಯೋ ಅದು ಹಾಗಲ್ಲ
ಅಲವತ್ತುಕೊಂಡರು
ಹಲವು ಮಂದಿ ಯೆಹೂದ್ಯರು.
‘ಆತ, ನಮ್ಮ ಅರಸನಲ್ಲ,
ಯೆಹೂದ್ಯರ ಅರಸನೆಂದು
ಬರೆಯುವುದ ಬೇಡ ಕನಲಿದರವರು,
‘ಅವನು ಯೆಹೂದ್ಯರ ಅರಸನಲ್ಲ,
ಯೆಹೂದ್ಯರ ಅರಸನೆಂದು
ಹೇಳಿಕೊಂಡವನು ಅವನು'
‘ನಾನು ಬರೆದುದು ಬರೆದಾಯ್ತು
ಅದನ್ನು ಬದಲಾಯಿಸಲಾಗದು
ಮತ್ತೆ ನುಡಿದನಂತೆ ಪಿಲಾತ.
ಅದಕ್ಕೂ ಮೊದಲು,
‘ನೀನೊಬ್ಬ ಅರಸನೋ?
ರಾಜ್ಯಪಾಲ ಪಿಲಾತ ಕೇಳಿದಾಗ,
‘ಅದು, ನಿನ್ನ ಬಾಯಿಯಿಂದಲೇ
ಬಂದಿದೆ.
ಅರಸು ಎನ್ನುವುದು,
ನೀನು ಹೇಳುವ ಮಾತು,
ನನ್ನದೋ,
ಸತ್ಯದಪರರೆಲ್ಲರಿಗೂ
ಸತ್ಯದ ಸಾಕ್ಷಿ ಹೇಳುವ ಕೆಲಸ.
ನನ್ನ ಸಾಮ್ರಾಜ್ಯ ಇಹಲೋಕದ್ದಲ್ಲ,
ಪರಲೋಕದ್ದು.
ನಂತರದಲ್ಲಿ,
ಪಾಸ್ಖದ ಪದ್ಧತಿಯ ಸೆರೆಯಾಳು
ಬಿಡುಗಡೆಗೆ, ಈತನೋ ಬರಬ್ಬನೋ?
ಪಿಲಾತನ ಪ್ರಶ್ನೆಗೆ,
ಈತನಲ್ಲ, ನಮಗೆ
ದರೋಡೆಕೋರ ಬರಬ್ಬನನ್ನು
ಬಿಟ್ಟುಬಿಡು ಬೊಬ್ಬಿಟ್ಟರು ಜನ.
ಬರಬ್ಬನ ಬಿಡುಗಡೆಯಾಯ್ತು.
‘ಈತನೋ ನಿಮ್ಮ ಅರಸ'
ಎಂದು ಉಲಿದ
ಹಾಸುಗಲ್ಲಿನ ಕಟ್ಟೆಯ ನ್ಯಾಯಾಧಿಪತಿ,
'ರೋಮಾಪುರಿಯ ಚಕ್ರವರ್ತಿಯ ಹೊರತು
ಬೇರೆ ಅರಸರಿಲ್ಲ ಎಮಗೆ,
ಸಾಯಿಸು ಶಿಲುಬೆಗೇರಿಸು ಅವನ'
ಆರ್ಭಟದಿ ಕೂಗಿದವರ
ಕೈಗೊಪ್ಪಿಸಿ ಕೈ ತೊಳೆದುಕೊಂಡ.
**********
No comments:
Post a Comment