ಈ ಬೇಸಿಗೆಯ ಬಿಸಿಯ ಜೊತೆ ಜೊತೆಯಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ಬಿಸಿಯೂ ಏರುತ್ತಿದೆ. ಎಲ್ಲ ಪಕ್ಷಗಳು ತಮ್ಮ ಪಕ್ಷದಿಂದ ಆಳಿಗೆ ಎದುರಾಳಿಯಾಗಿ ನಿಲ್ಲಲು ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವುದರಲ್ಲಿ ಬಿಸಿಯಾಗಿದ್ದಾರೆ. ನಮಗೆಲ್ಲ ತಿಳಿದಿರುವ ಹಾಗೆ ಪ್ರಜಾಪ್ರಭುತ್ವ ಭಾರತವು ಎದುರಿಸುತ್ತಿರುವ 17ನೇ ಚುನಾವಣೆಯಾಗಿದ್ದು, ಎಲ್ಲರ ಮನಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಈ ಹಿಂದಿನ 16 ಚುನಾವಣೆಗಳಲ್ಲಿ ನಡೆದ ಪ್ರಚಾರಗಳಂತೆ ಈ ಚುನಾವಣೆಯಲ್ಲಿ ಸಹ ಬರೀ ಸುಳ್ಳು ಪೊಳ್ಳಿನ ಆಶ್ವಾಸನೆಗಳನ್ನು ಕೊಡುವುದು ಸಾಮಾನ್ಯದ ಸಂಗತಿಯಾಗಿದೆ.
ರಾಜಕಾರಣಿಗಳು ನಮ್ಮೆಲ್ಲರ ಮನಸ್ಸಿನ ದೌರ್ಬಲ್ಯವನ್ನು ಅರೆದು ಕುಡಿದಿರುವಂತವರು. ಅವರು ಪ್ರಜೆಗಳಿಗೆ ಯಾವಾಗ ಏನು ಹೇಳಬೇಕು, ಏನು ಮಾಡಬೇಕು ಎಂಬುದನ್ನು ಅರಿತು ಜನರ ಮನಸ್ಸಿನಲ್ಲಿ ಚುನಾವಣೆಯ ಬಗ್ಗೆ ಹಣಕೊಟ್ಟು ಮತವನ್ನು ಕೊಳ್ಳುವಂತಹ ಮನೋಭಾವವನ್ನು ದೃಢವಾಗಿ ಕಟ್ಟಿದ್ದಾರೆ. ಮಹಾಭಾರತದಲ್ಲಿ ದುರ್ಯೋಧನನಿಗೆ ತನ್ನ ತೊಡೆಯಲ್ಲಿದ್ದ ದೌರ್ಬಲ್ಯದಂತೆ ಎಲ್ಲರಲ್ಲೂ ಚುನಾವಣೆಯ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಜಾತಿ ಹಾಗೂ ಭಾಷೆಗಳ ದೌರ್ಬಲ್ಯವಿರುವುದನ್ನು ಅರಿತಿದ್ದಾರೆ. ಅದನ್ನೇ ಅವರು ಮತ್ತೆ ಮತ್ತೆ ಹೇಳಿ ಇಟ್ ಇಸ್ ನಾರ್ಮಲ್ ಟು ತಿಂಕ್ ಅಂಡ್ ಸ್ಪೀಕ್ ಲೈಕ್ ದ್ಯಾಟ್ ಎನ್ನುವ ಮನಸ್ಥಿತಿಯನ್ನು ಕಟ್ಟಿದ್ದಾರೆ. ಈ ದೌರ್ಬಲ್ಯವನ್ನು ರಾಜಕಾರಣಿಗಳು ತಮ್ಮ ಆಯುಧಗಳನ್ನಾಗಿಸಿಕೊಂಡು ಚುನಾವಣೆಯ ಸಂದರ್ಭಗಳಲ್ಲಿ ಭಾವನಾತ್ಮಕ ಭಾಷಣಗಳನ್ನು ಮಾಡಿ ಪ್ರಜೆಗಳ ಭಾವೋದ್ರೇಕವನ್ನು ಉಕ್ಕೇರಿಸಿ ಲಾಭವನ್ನು ಪಡೆಯುತ್ತಿದ್ದಾರೆ.
ಕಳೆದ ಸಲ ನಮ್ಮ ಊರಿಗೆ ಹೋಗಿದ್ದಾಗ ನಾನು ಕಂಡದ್ದು ಎರಡು ವರ್ಷಗಳಿಂದ ಗುಂಡಿ ಬಿದ್ದಿದ್ದ ರಸ್ತೆಗಳ ಪ್ಯಾಚ್ ವರ್ಕ್ಗಳ ಕಾಮಗಾರಿ. ಚುನಾವಣೆಯ ಸಂದರ್ಭಗಳಲ್ಲಿ ಇದೇ ರೀತಿಯ ಕಾಮಗಾರಿಗಳು ನಡೆಯುವುದು ಸರ್ವೆಸಾಮಾನ್ಯವಾಗಿವೆ. ಭಾಷಣಗಳ ಸಂದರ್ಭಗಳಲ್ಲಿ ದುಡ್ಡು, ಬಿರಿಯಾನಿ, ಬಟ್ಟೆ ಬರೆಗಳನ್ನು ಹಂಚುವುದು ಕೂಡ ರೂಢಿಯಲ್ಲಿರುವ ನಾಟಕಗಳು. ಇವೆಲ್ಲವೂ ನಮ್ಮ ದೇಶವು ಹದಗೆಟ್ಟಿರುವ ಪರಿಸ್ಥಿತಿಯನ್ನು ತೋರಿಸುತ್ತದೆ ಹೊರತು ಜನಗಳ ಮೇಲಿನ ಕಾಳಜಿಯನ್ನಲ್ಲ.
ಇದೆಲ್ಲದರ ನಡುವೆ ಮಾಧ್ಯಮಗಳು ರಾಜಕಾರಣಿಗಳ ಹಾಗೂ ಅಂಬಾನಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಜನಗಳಿಗೆ ತಮಗೆ ಬೇಕಾದಂತೆ ಉಹಾ ಪೋಹಗಳನ್ನು ಸೃಷ್ಟಿಸಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುತಿದ್ದಾರೆ. ಜನಗಳು ಮಾಧ್ಯಮಗಳಲ್ಲಿ ಬರುವುದನ್ನೇ ನಿಜವೆಂದು ನಂಬಿ ಮೋಸ ಹೋಗುತ್ತಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲ ತಾಣಗಳಲ್ಲಿ ಪಕ್ಷ ಭೇದಗಳ ಚಿತ್ರಗಳನ್ನು ವಿಡಿಯೋಗಳನ್ನು ಹರಿ ಬಿಟ್ಟು ಜನರಲ್ಲಿ ಗೊಂದಲಗಳನ್ನು ಉಂಟುಮಾಡಿ ಪ್ರಚಾರ ಮಾಡುತ್ತಿರುವುದು ತಡೆಯಲಾಗದ ಸಂಗತಿಯಾಗಿವೆ.
ಈ ಒಂದು ಸಂದರ್ಭದಲ್ಲಿ ಭಾರತದ ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರನ್ನು ನೆನಪಿಸಿಕೊಳ್ಳುವುದು ಒಳಿತು. ಇವರು ಭಾರತವೊಂದು ಭೌಗೋಳಿಗ ಪ್ರದೇಶವಲ್ಲ ಬದಲಾಗಿ ದೇಶವಾಸಿಗಳೇ ದೇಶವೆಂದು ಹೇಳಿದರು. ಲೋಹಿಯಾರವರು ರಾಷ್ಟ್ರವಾದವನ್ನು ಖಂಡಿಸಿ ಇದಕ್ಕೆ ಪ್ರಜಾತಂತ್ರದ ಮೂಗುದಾರವನ್ನು ಹೆಣೆದು ದೇಶದಲ್ಲಿನ ಎಲ್ಲರ ಭಾವಶೀಲ ಆಶೋತ್ತರಗಳ ಸಾಧನೆಗೆ ನಿಂತರು. ಧರ್ಮವನ್ನು ಜನಗಳ ಒಳಿತಿಗಾಗಿ ಹಾಗೂ ಆತಂಕಗಳಿಂದ, ಸ್ವಾರ್ಥದಿಂದ ಹೊರಬರುವುದಕ್ಕೆ ದಾರಿಯೆಂದು, ಅದನ್ನು ರಾಜಕಾರಣಕ್ಕೆ ಬಳಸುವುದು ಒಳಿತಲ್ಲವೆಂದು ಹೇಳಿದರು.
ಈ ಜಾತಿ, ಧರ್ಮ, ಭಾಷೆಗಳ ಚಕ್ರವ್ಯೂಹದಲ್ಲಿ ಸಿಲುಕಿರುವ ನಾವುಗಳು ಬದುಕಬೇಕೆಂದರೆ ಒಂದೇ ಹಾದಿ, ಅದೇ ನಮ್ಮ ಒಂದು ಮತವನ್ನು ಎಲ್ಲರ ಹಿತಕ್ಕಾಗಿ ಹಾಕಿ, ಜನರ ಹಿತಕ್ಕಾಗಿ ಚಿಂತನೆ ಮಾಡುವ ನಾಯಕರನ್ನು ಆಯ್ಕೆ ಮಾಡುವುದು. ಜಾತಿ, ಧರ್ಮಗಳನ್ನೆಲ್ಲ ಬಿಟ್ಟು, ಯಾರು ನಮ್ಮ ಸಂವಿಧಾನದ ಪ್ರಕಾರ ಆಳ್ವಿಕೆ ಮಾಡಿ ಜನರಿಗೆ ಸ್ವಾತಂತ್ರ್ಯ, ಸಮಾನ ಹಕ್ಕು, ಭ್ರಾತೃತ್ವವನ್ನು ಹಾಗೂ ಎಲ್ಲದಕ್ಕೂ ಮಿಗಿಲಾಗಿ ನೆಮ್ಮದಿಯಿಂದ ಜೀವಿಸುವ ನೆಲೆಯನ್ನು ಕಲ್ಪಿಸುತ್ತಾರೋ ಅಂಥ ನಾಯಕರನ್ನು ಆಯ್ಕೆ ಮಾಡುವ ಜವಬ್ದಾರಿ ನಮ್ಮ ಮೇಲಿದೆ.
**********
No comments:
Post a Comment