Monday, 8 April 2019

ಕಂದೀಲ ಬೆಳಕಲ್ಲಿ ಜ್ಞಾನ; ಮನೆಮನೆಯಲ್ಲೂ ಭೀಮನ ಧ್ಯಾನ - ಶಿವಮೂರ್ತಿ ಕೆ. ಗುಡದಿನ್ನಿ


"ಶಿಕ್ಷಣ ಅನ್ನೋದು ಹುಲಿಯ ಹಾಲಿನಂತೆ 

ಅದನ್ನು ಕುಡಿದವನು ಘರ್ಜಿಸಲೇಬೇಕು" 

ಈ ಮಾತುಗಳನ್ನು ಯಾರೋ ಒಬ್ಬ ಹುಟ್ಟಿನಿಂದಲೇ ಮಹಾನ್ ಶಿಕ್ಷಣ ಪ್ರೇಮಿ ತಾನು ಅನುಭವಿಸಿ ತನ್ನ ಅಂತರಾಳದಿಂದಲೇ ಇದನ್ನ ನುಡಿದಿರಬೇಕು ಎನಿಸುತ್ತದೆ. ಈ ವಾಕ್ಯವನ್ನು ಹೇಳಿದ ಆ ಮಹಾನ್ ಶಿಕ್ಷಣ ಪ್ರೇಮಿ ಯಾರಿರಬಹುದು ಎಂದುಕೊಳ್ಳುತ್ತಾ ಮನಸಿಗೆ ಮೊದಲು ಮೂಡಿ ಬಂದ ಹೆಸರು ಬೇರೆ ಯಾರದ್ದೋ ಅಂದುಕೊಂಡಿದ್ದೆ. ಅದು ಬಾಬಾ ಸಾಹಬರೇ ಎಂದು ತಿಳಿದಾಗ ನಾ ಮೊದಲೆ ಊಹಿಸಿದ್ದೆ ಇವರಿಂದಲೇ ಇಂತಹ ಪದವನ್ನು ಹೇಳೋಕೆ ಸಾಧ್ಯ ಎಂದು ಸಂತಸಗೊಂಡಿದ್ದು ಇನ್ನೂ ಎದೆಯಲ್ಲಿ ಅಚ್ಚಳಿಯದೆ ಉಳಿದು ಹೋಗಿದೆ. 

ಬಾಬಾ ಸಾಹೇಬರ ಬಗ್ಗೆ ಹೊಗಳೋಕೆ ಒಂದೆರಡು ಪುಸ್ತಕ ಬರೆದು ಜನರ ಕೈಗೆ ಕೊಟ್ಟರೆ ಜನತೆ ಬದಲಾದೀತೆ? ಅವರ ಆದರ್ಶಗಳನ್ನು ಪಾಲಿಸಿದಂತಾದೀತೆ ಅಥವಾ ಅವರ ಜೀವನಚರಿತ್ರೆಯನ್ನು ತಿಳಿದುಕೊಂಡರೆ ಅವರಿಗೆ ಸಲ್ಲಿಸಬೇಕಾದ ಗೌರವ ಸಲ್ಲಿಸಿದಂತಾದೀತೇ? 

ಒಬ್ಬ ಸುಪ್ರಸಿದ್ಧ ವ್ಯಕ್ತಿಯನ್ನು ಗೌರವಿಸಬೇಕಾದರೆ ಮೊದಲು ನಾವೆಲ್ಲ ಅವರ ವ್ಯಕ್ತಿತ್ವದ ಬಗ್ಗೆ ಅರಿತುಕೊಂಡಿರಬೇಕು. ಅವರ ಆಶಯದ ಕುರಿತು ಆಲೋಚಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಆ ಆಶಯಗಳನ್ನು ಈಡೀರಿಸಬೇಕಾದ ಕರ್ತವ್ಯ ನನ್ನದು ಅನ್ನೋ ಮನೋಭಾವನೆ ಪ್ರತಿಯೊಬ್ಬರಲ್ಲಿ ಮೂಡಿ, ಆ ಪ್ರಗತಿಯತ್ತ ಸಾಗಲು ನಾವು ಕೂಡ ಪಾಲುದಾರರಾದಾಗ ಮಾತ್ರ ಅವರಿಗೆ ಸಲ್ಲಿಸಬೇಕಾದ ಋಣದ ಬಾರ ಕಿಂಚಿತ್ತಾದರೂ ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತೇವೆ. ಭೂಮಿಯ ಮೇಲೆ ಬದುಕುವ ಪ್ರತಿಯೊಬ್ಬ ಮನುಷ್ಯನಿಗೆ ಆಕಾರ-ವಿಕಾರ ಒಂದೇ ರೀತಿಯಲ್ಲಿ ಇರಲಾರವು ಒಂದೇ ತೆರನಾದ ಬುದ್ದಿಶಕ್ತಿಯೂ ಕೂಡ ಇರಲಾರದು. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಮನೋಭಾವ, ಅವರದ್ದೆ ಆಚಾರ ವಿಚಾರ ಅವರದ್ದೇ ರೀತಿಯ ಜೀವನದ ಶೈಲಿ. ಭಿನ್ನ ಭಿನ್ನ ರೀತಿಯಲ್ಲಿ ಆಹಾರದ ಸಂಗ್ರಹಣೆ ಅವರವರ ರುಚಿಗೆ ತಕ್ಕಂತೆ ದೇವರು ಎಲ್ಲರ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಿರುವಾಗ ನಮ್ಮಲ್ಲೇಕೆ ಭೇದ-ಭಾವ, ಬಿನ್ನಾಭಿಪ್ರಾಯಗಳು ಸೃಷ್ಟಿಯಾಗುತ್ತವೆ ಅನ್ನೋದಕ್ಕೆ ಸಂಪೂರ್ಣವಾದ ವಿವರಣೆ ಕಂಡುಕೊಳ್ಳುವಲ್ಲಿ ನಾನು ವಿಫಲನಾಗಿದ್ದೇನೆ. 

ಯಾರೇ ಒಬ್ಬ ವ್ಯಕ್ತಿಯಲ್ಲಿ, ಆತನ ಜೀವನದ ಸಾಧನೆ ಅಭಿವೃದ್ಧಿಯ ಇತಿಹಾಸದಲ್ಲಿ ಶಿಖರದಷ್ಟು ಇಚ್ಛಾಶಕ್ತಿ ಮತ್ತು ಶ್ರಮದ ಅಳವಡಿಕೆ ಆಳವಾಗಿ ಅಡಗಿರುತ್ತದೆ ಹೊರತು ಯಾವ ಜಾತಿಧರ್ಮದ ಸಹಾಯದಿಂದ ಆತ ಮೇಲೆ ಬಂದಿರುವುದಿಲ್ಲ. ಬಾಬಾ ಸಾಹೇಬರ ಅಷ್ಟು ಸುಧೀರ್ಘ ಜೀವನದ ಹಾದಿಯಲ್ಲಿ ಒಂದು ದಿನವೂ ಸಹ ಸುಖದ ಸುರುಳಿಗೆ ಬಲಿಯಾಗಲಿಲ್ಲ ತಮ್ಮ ಜೀವನದುದ್ದಕ್ಕೂ ತುಳಿತಕ್ಕೊಳಗಾಗಿ ದಬ್ಬಾಳಿಕೆಯ ನೆರಳಲ್ಲಿ ವಾಸವಿದ್ದು, ಕಷ್ಟದ ಆಪ್ತ ಸ್ನೇಹಿತರಂತೆ ಕಂದೀಲ ಕೋಣೆಯಲ್ಲಿ ವಿದ್ಯೆ ಪಡೆದು, ಇಂದು ಜಗಕೆಲ್ಲ ಜ್ಞಾನದ ಕತ್ತಲೆಗೆ ದೀವಿಗೆಯಾಗಿದ್ದಾರೆ ಎಂದು ಹೇಳಲು ತುಂಬಾನೇ ಹೆಮ್ಮೆ ಎನಿಸುತ್ತದೆ. ಅದ್ಯಾವ ಜನ್ಮದ ಪುಣ್ಯ ಮಾಡಿದ್ದೆವೋ ನಾವು ಇಡೀ ಜಗತ್ತಿಗೆ ಮಾದರಿಯಾಗಿ ನಿಂತಿರುವ ವ್ಯಕ್ತಿಯೂ ನಮ್ಮ ನೆಲದಲ್ಲಿಯೇ ಇದ್ದ ಅನ್ನೋದು ಕೂಡ ಒಂದು ಹೆಮ್ಮೆಯ ಪರಿಯೇ ಸರಿ. ಹಿಂದೊಮ್ಮೆ 1923ರ ಆಸುಪಾಸಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರಾಜ ಗಾಯಕವಾಡರು ಬಾಬಾ ಸಾಹೇಬರ ಕುರಿತು ಈ ರೀತಿ ಹೇಳುತ್ತಾರೆ "ನೀವೆಲ್ಲ ನಿಜಕ್ಕೂ ಅದೃಷ್ಟವಂತರು! ಅಂಬೇಡ್ಕರಂತಹ ನಾಯಕರನ್ನು ಪಡೆದ ನೀವು ಧನ್ಯರು ಅವರ ಹಾದಿಯಲ್ಲಿ ನೀವು ನಡೆದರೆ ನಿಮಗೆ ಕೇಡುಗಾಲವಿಲ್ಲ. ಅವರ ನಾಯಕತ್ವ ಪಡೆದ ನೀವು ನಿಜಕ್ಕೂ ಧನ್ಯರೇ ಸರಿ" ಎಂದು ದೇಶದ ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಬಾಬಾ ಸಾಹೇಬರನ್ನುದ್ದೇಶಿಸಿ ಹಾಡಿ ಹೊಗಳಿದ್ದನ್ನು ಅವರ ಕುರಿತ ಒಂದು ಪುಸ್ತಕದಲ್ಲಿ ಓದಿದ್ದು ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಓದುತ್ತಾ ಓದುತ್ತಾ ಆವೊತ್ತಿನ ಕ್ಷಣದಲ್ಲಿ ರೋಮಾಂಚನಗೊಂಡು ಅವರ ಸಾಧನೆಗೆ ಚಿರಋಣಿಯಾಗಿದ್ದೇನೆಂದು ಹೇಳಿಕೊಳ್ಳಲು ಮನಸಿನಲ್ಲಿ ಉಲ್ಲಾಸವಾಗುತ್ತಿತ್ತು. ಇಂದಿಗೂ ಆ ಉಲ್ಲಾಸದ ವಲಯಕ್ಕೆ ನನ್ನಲ್ಲಿ ಕೊರತೆಯಿಲ್ಲ. 

ಭಾರತೀಯರು ನಾವೆಲ್ಲ ಒಂದೇ ಎನ್ನಬೇಕಾದ ಈ ಪುಣ್ಯ ಭೂಮಿಯಲ್ಲಿ, ಇಂದು ನಾವೆಲ್ಲ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎನ್ನೋ ಹಗ್ಗಜಗ್ಗಾಟದಲ್ಲಿದ್ದೇವೆ. ಇದರಲ್ಲಿ ಬಲಿಪಶುಗಳಾಗುವುದು ಮಾತ್ರ ಅಮಾಯಕ ಜೀವಗಳೇ. ಅಸಾಮಾನ್ಯ ವ್ಯಕ್ತಿತ್ವದ ಬಾಬಾ ಸಾಹೇಬರನ್ನೆ ಈ ಜಾತಿಧರ್ಮ ಅನ್ನೋ ವಿಷಹುಳಗಳು ದೂರಿದ್ದವು, ಇಂದಿಗೂ ಅವರನ್ನ ದೂರುತ್ತಿವೆ ಅನ್ನೋದು ಸಂಕಟಕರ. ಕೆಲವೊಮ್ಮೆ ಆಳವಾಗಿ ಚಿಂತನೆ ಮಾಡಿದಾಗ ಒಂದು ಸತ್ಯ ಹೊರಬೀಳುತ್ತದೆ. ನಮ್ಮಲ್ಲಿ ಅಂದರೆ ನಮ್ಮ ದೇಶದಲ್ಲಿ ಜನರು ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕಿಂತ ಹೆಚ್ಚಾಗಿ ಆತನ ಧರ್ಮ ಜಾತಿಯನ್ನು ಆಧಾರವಾಗಿ ಇಟ್ಟುಕೊಂಡು ಒಂದು ವೇಳೆ ಕೆಳಜಾತಿಯಲ್ಲಿ ಹುಟ್ಟಿದವನು ದೇವರೇ ಆದರೂ ಆತನನ್ನ ಪೂಜಿಸುವುದಿಲ್ಲ ಆತ ಎಂಥ ಜಗತ್ಪ್ರಸಿದ್ಧ ಸಾಧನೆ ಮಾಡಿದರೂ ಲೆಕ್ಕಕ್ಕಿಲ್ಲವೆಂಬಂತೆ ಕಾಣುವುದು ದುರಂತ ಕಥೆ. ಈ ಜಾತಿ ಅನ್ನೋ ಎರಡಕ್ಷರ, ಒಬ್ಬ ಸಾಧಕನ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂಬುದು ಬಹುಶಃ ನಮ್ಮಲ್ಲಷ್ಟೆ ಕಾಣಬೇಕು. ಧರ್ಮದ ವಿಷಯದಲ್ಲಂತೂ ಎಲ್ಲರೂ ಗಂಭೀರವಾಗಿಯೇ ಇದ್ದಾರೆ. ಯಾರು ಕೂಡ ಧರ್ಮವನ್ನು ಅವಮಾನಿಸಲು ಬಿಡುವುದಿಲ್ಲ. ಒಂದು ವೇಳೆ ಆ ರೀತಿಯ ಅವಮಾನವಾದಲ್ಲಿ ಕೋಮುಗಲಭೆ ಸೃಷ್ಟಿಯಾಗುವಲ್ಲಿ ಯಾವ ಅನುಮಾನವೂ ಇಲ್ಲ. 

ಆದರೆ ಅದೇ ಜಾತಿ ಮತ್ತು ಧರ್ಮ ಅನ್ನೋ ಹೆಸರಲ್ಲಿ ವ್ಯಕ್ತಿಯನ್ನು ಅವಮಾನಿಸುವುದು ತಪ್ಪಲ್ಲವೇ ಅನ್ನೋದು ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. ಇದರಿಂದ ಹೆಚ್ಚಾಗಿ ಅಮಾಯಕರೇ ಬಲಿಯಾಗುತ್ತಿರುವುದು ಮಾತ್ರ ಚಿಂತಾಜನಕವಾಗಿದೆ. ನಮಗೀಗಾಗಲೇ ತಿಳಿದಿರುವಂತೆ ಈ ತಿಂಗಳು ಅಂದರೆ ಏಪ್ರಿಲ್ 14 ತುಂಬಾ ವಿಶೇಷವಾದ ದಿನ. ಅಂದು ಇಡೀ ಜಗತ್ತೇ ಹಬ್ಬದ ವಾತಾವರಣದಿಂದ ಕೂಡಿರುತ್ತದೆ. ಕಾರಣ ಅಂದಿನ ದಿನ ಇಡೀ ಜಗತ್ತೇ ಇಂಡಿಯಾದತ್ತ ತಲೆಯೆತ್ತಿ ನೋಡುವಂತೆ ಮಾಡಿ ಸಾಕಷ್ಟು ಜನರಿಗೆ ಮಾದರಿಯಾದ ನಮ್ಮ ಬಾಬಾ ಸಾಹೇಬರು ಹುಟ್ಟಿದ ದಿನ. ಆವತ್ತಿನ ದಿನ ಕೇವಲ ಭೀಮರಾವ್ರವರ ಜನನವಷ್ಟೇ ಆಗಲಿಲ್ಲ, ಶೋಷಿತರ ಕತ್ತಲೆಯ ಬಾಳಿಗೆ ಬೆಳಕು ಕೂಡ ಪ್ರಜ್ವಲಿಸಿತು. ದುರಂತ ಎಂದರೆ ಇಂದು ಕೆಲವು ಮಾನವೀಯತೆ ಇರದ ವಿಷಜಂತುಗಳು ಅವರನ್ನ ಸುಖಾಸುಮ್ಮನೆ ದೂರುತ್ತಿದ್ದಾರೆ, ಇದಕ್ಕೆ ಜಾತಿಯೇ ಕಾರಣ ಅನ್ನೋದು ಜಾತಿಯ ಹೆಸರಲ್ಲಿ ಪೆಟ್ಟು ತಿಂದವರಿಗೇ ಗೊತ್ತು. ಒಂದೇ ಮಾತಲ್ಲಿ ಹೇಳೋದಾದರೆ ಬಾಬಾ ಸಾಹೇಬರದು ತಮ್ಮ ಇಡೀ ಜೀವನದುದ್ದಕ್ಕೂ ಒಂದು ಇರುವೆಗೂ ಕೂಡ ನೋವು ಕೊಡದಂತಹ ಮೃದು ಮನಸು. ಅಂತಹ ವ್ಯಕ್ತಿಗೆ ಅಪಪ್ರಚಾರ ಮಾಡುವುದು ಎಷ್ಟು ಸೂಕ್ತ. ಹಾಗೇನಾದರು ಅವರ ವಿರುದ್ದ ಅಪಪ್ರಚಾರ ಮಾಡಿದರೆ ಅಂತವರು ಅನಾಗರಿಕರೇ ಸರಿ. ಯಾವ ನಾಗರಿಕನೂ ಸಹ ಅವರ ವಿರೋಧಿಯಾಗಲು ಸಾಧ್ಯವೇ ಇಲ್ಲ. ಮೊದಲಿನಿಂದಲೂ ಬಾಬಾ ಸಾಹೇಬರು ವಿದೇಶಗಳಲ್ಲಿ ತುಂಬಾ ಪ್ರಸಿದ್ಧಿ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಏಪ್ರಿಲ್ 14ರಂದು ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ, ಜಗತ್ತಿನ ನಾನಾ ದೇಶಗಳಲ್ಲಿ ತುಂಬಾ ಪ್ರೀತಿಯಿಂದ, ಅಭಿಮಾನದಿಂದ, ವಿಜೃಂಭಣೆಯಿಂದ ಅವರ ಹುಟ್ಟು ಹಬ್ಬ ಆಚರಿಸಲಾಗುತ್ತದೆ. ಇಂದಿನ ದಿನ ಬಾಬಾ ಸಾಧನೆ ಮತ್ತು ಜ್ಞಾನದ ಸಂಪಾದನೆ ಎಷ್ಟರ ಮಟ್ಟಿಗೆ ಇದೆ ಅನ್ನೋದಕ್ಕೆ ಇಲ್ಲಿ ಸಾಕಷ್ಟು ಸಾಕ್ಷಿಗಳಿವೆ. 

ವಿಶ್ವದ ದೊಡ್ಡಣ್ಣ ಎಂದು ಹೆಸರಾದ ಅಮೇರಿಕಾ ದೇಶವು Dr. BR. Ambedkar in colombia, USA University Library ನಿರ್ಮಿಸಿ ಇಂದು ಅವರ ಹೆಸರಲ್ಲಿ ಶಿಕ್ಷಣ ದಾಹವನ್ನು ತೀರಿಸುವ ಪ್ರಯತ್ನದಲ್ಲಿದ್ದರೆ, ಇತ್ತ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಆಡಿ. Ambedkar Statue in Sydney, Australia ಎಂಬ ಮೂರ್ತಿ ಪ್ರತಿಷ್ಠಾಪನೆ ಮಾಡಿ ಇತರರು ಅವರನ್ನ ಅನುಸರಿಸಲಿ ಎಂಬ ನಿಟ್ಟಿನಲ್ಲಿ ಅಂಬೇಡ್ಕರ್ ರವರಿಗೆ ಗೌರವಸಲ್ಲಿಸಿದ್ದಾರೆ. ಅಂತೆಯೇ ಸುಮಾರು ಇನ್ನೂರು ವರ್ಷಗಳ ಕಾಲ ನಮ್ಮ ದೇಶವನ್ನು ತಮ್ಮ ಆಡಳಿತದಲ್ಲಿಟ್ಟುಕೊಂಡ ಇಂಗ್ಲೆಂಡ್ ದೇಶವು Dr. B.R. Ambedkar London school of Economics ಎಂಬ ದೊಡ್ಡ ವಿದ್ಯಾಸಂಸ್ಥೆಯನ್ನೆ ಕಟ್ಟಿ ಎಷ್ಟೋ ಮಂದಿ ಶಿಕ್ಷಣ ಪ್ರೇಮಿಗಳಿಗೆ ಆಸರೆಯಾಗಿದೆ. ವಿದೇಶದಲ್ಲಿ ಬಾಬಾ ಸಾಹೇಬರಿಗೆ ಸಂದ ಗೌರವವಿದು. 

ವಿದೇಶದಲ್ಲಿ ಮೆಚ್ಚುಗೆ ಪಡೆದದ್ದಷ್ಟೆ ಅಲ್ಲದೆ ಆತನ ಹೆಸರಿನಲ್ಲಿ ಶಿಕ್ಷಣವನ್ನು ಹರಡುತ್ತಿದ್ದಾರೆ ಎಂದರೆ ಅದು ಸಾಮಾನ್ಯವೇ. ಆ ಮಟ್ಟಕ್ಕೆ ಅವರು ಮೇಲೆ ಬರಲು ಕಾರಣವೇನು ಎಂದು ಹುಡುಕುವಲ್ಲಿ ನಾವೆಲ್ಲ ಬಹುಶಃ ವಿಫಲರಾಗಿದ್ದೇವೆ ಎನಿಸುತ್ತಿದೆ. ಹಾಗೆಂದು ನಮ್ಮ ದೇಶದಲ್ಲಿ ಅವರ ಹೆಸರಲ್ಲಿ ಪ್ರತಿಮೆ ಮತ್ತು ಶಿಕ್ಷಣ ಸಂಸ್ಥೆ ಇಲ್ಲವೇ? ಅನ್ನೋ ಪ್ರಶ್ನೆ ತಮ್ಮಲ್ಲಿದ್ದರೆ ಅದಕ್ಕೆ ಉತ್ತರ ಹೀಗಿರುತ್ತೆ. ನಿಜ; ಅವರ ಹೆಸರಲ್ಲಿ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿಯೂ ಇವೆ, ಆದರೆ ಅವರ ಆದರ್ಶಗಳಿಗೆ ಎಷ್ಟೋ ಕಡೆ ಅವಮಾನ ಮಾಡುತ್ತಿದ್ದಾರೆ. ಅವರು ಬರೆದಂತಹ ಪ್ರಪಂಚಕ್ಕೆ ಮಾದರಿಯಾದ ಅಂತಹ ಶ್ರೇಷ್ಠವಾದ ಸಂವಿಧಾನವನ್ನು ಹಾಡಹಗಲೇ ಸುಟ್ಟರು. ದೇಶಕ್ಕೆ ಭದ್ರತೆಯಾಗಿರೋ ಸಂವಿಧಾನ ಸುಟ್ಟರು ಎಂದರೆ ಏನ್ ಅರ್ಥ ಅಲ್ವಾ? ಕಾಣದ ದೇವರ ಪೋಟೋಗೆ ಅವಮಾನ ಮಾಡಿದರೇನೆ ಜನ ಬಿಡೋದಿಲ್ಲ. ಅಂತಹುದರಲ್ಲಿ ಸಂವಿಧಾನ ಸುಟ್ಟರೂ ದೇಶದ ಜನ ಸುಮ್ಮನಿದ್ದಾರೆ ಎಂದರೆ ಅದಕ್ಕಿಂತ ದೊಡ್ಡ ದುರಂತವನ್ನು ನಾವೆಂದದಾದರೂ ಕಂಡಿದ್ದೇವೆಯೇ ಅಥವಾ ಮುಂದೆ ಕಾಣಲು ಸಾಧ್ಯವೇ. ಪ್ರಪಂಚದಲ್ಲಿ ಅತ್ಯಂತ ಅಭಿವೃದ್ಧಿ ಹೊಂದಿದ ಅಮೇರಿಕಾ, ಆಸ್ಟ್ರೇಲಿಯಾ ಇಂಗ್ಲೆಂಡ್ ದೇಶಗಳೇ ಅವರ ಆದರ್ಶಗಳನ್ನು ಪಾಲನೆ ಮಾಡಿ ಅಷ್ಟೆಲ್ಲಾ ದೊಡ್ಡ ಮಟ್ಟದ ಗೌರವ ನೀಡುವಾಗ, ಸ್ವತಃ ನಮ್ಮ ದೇಶದವರೇ ನಮ್ಮ ದೇಶದ ಅತ್ಯುನ್ನತ ಸಾಧಕವ್ಯಕ್ತಿಯನ್ನು ಅವಮಾನಿಸೋದು ನಿಜಕ್ಕೂ ಖಂಡನೀಯ. ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಒಬ್ಬ ಸುಪ್ರಸಿದ್ಧ ವ್ಯಕ್ತಿಗೆ ಸಲ್ಲಿಸಬೇಕಾದ ಗೌರವವನ್ನು ನಾಗರಿಕ ವ್ಯಕ್ತಿಯೂ ಸಲ್ಲಿಸೇ ತೀರುತ್ತಾನೆ. ಯಾರೋ ಅನಾಗರಿಕರು ಅವಮಾನ ಮಾಡಿದರು ಎಂದ ಮಾತ್ರಕ್ಕೆ ಅಂಬೇಡ್ಕರ್ ಅವರ ಸಾಧನೆಯ ಫಲ ವಿಫಲವಾಗುವುದೇ? ಸಾಧ್ಯವೇ ಇಲ್ಲ. ಯಾರು ಹೇಗೇ ಇರಲಿ, ಬನ್ನಿ ಸ್ನೇಹಿತರೆ ಬಾಬಾಸಾಹೇರ ಆಶಯಕ್ಕಾಗಿ ದುಡಿಯೋಣ. ಅವರ ಹೋರಾಟದ ರಥವನ್ನು ಎದೆಗುಂದದೆ ಮುಂದಕ್ಕೆ ಸಾಗಿಸೋಣ. 

———— 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...