ಮೂಡಣದಿ ನೇಸರು ಮೂಡುವ ಹೊತ್ತಿನೊಳು
ಕೈಯಲೊಂದು ಚೀಲವನು ಹಿಡಿದು ಧ್ಯಾನಿಸುತೆ
ಹೊರಟಿಹನು ಯತಿ ದಿವ್ಯನಗರಿಯ ದಿಸೆಯಲಿ.
ದೂರದಾ ಬಾನಂಚಿನಲಿ ಕದ್ದಿಣಕಿದ ನೇಸರನು
ಹೊಂಗದಿರ ಚೆಲ್ಲುತ ಮೆಲ್ಲನೆ ಮೇಲೇರುತಿರಲು
ರೋಮಾಪುರಿಯತ್ತ ಸಾಗಿಹನು ಕ್ಯಾಂತಿಯುಸ್.
'ದೀನರ ಸೇವೆಯೆ ಪರಮನ ಸೇವೆ' ಎನ್ನುತಲಿ
ಪರಹಿತವನೆ ಬಯಸುತ ಮನುಕುಲದ ಸೇವೆಗೆ
ತನ್ನನೆ ಅರ್ಪಿಸಿಹ ಶ್ರೇಷ್ಟತಮ ಯಾಜಕನಾತ.
ಮುಳ್ಳಂತೆ ನಿಮಿರಿ ನಿಂತ ಹುಲ್ಲಿನ ನಡುವಿನ
ಅಂಕುಡೊಂಕು ಹಾದಿಯೊಳು ನಿಲ್ಲದೆ ಎಲ್ಲೂ
ಲವಲವಿಕೆಯಲಿ ಸಾಗಿಹನಾ ನರೋತ್ತಮನು.
ಹಿಂದೆ ಹಿಂದಕೆ ಚಲಿಸುತಿದೆ ಬಯಲುದಾರಿ
ಮುಂದೆ ಸಾಗಿತಲಿಹನು ಗುರಿಯತ್ತ ಯೋಗಿ
ನಡೆಯುವ ಕಾಲ್ಗಳಲ್ಲಿದೆ ಕುಂದದ ಸುಚೇತನ.
ಹೊತ್ತು ನೆತ್ತಿಗೇರಿದರೂ ಉಳಿದಿಹುದು ಹಾದಿ
ಎನ್ನುವ ಹೊತ್ತಿನೊಳು ಕಂಡನು ಠಕ್ಕರ ಪಡೆ
ಅಂಜದಿಹ ಯೋಗಿ ನಡೆದನು ಅದಕಾಣದೆ.
ಸುತ್ತುವರಿಯಿತವನನು ದುಷ್ಟ ನಿರಂಕುಷ ಪಡೆ
ಕಿತ್ತು ತೆಗೆಯಿತು ಯೋಗಿಯ ಕೈಯ ಹೊರೆ
ಹುಡುಕುತಲಿ ಇನ್ನೇನು ಸಿಗುವುದೋ ಎನುತೆ.
ಏನಿಹುದು ನಿನ್ನಲ್ಲಿ, ಇರುವುದೆಲ್ಲವನು ಕೊಡು!
ಎಂದಬ್ಬರಿಸಿದನಾ ದುಷ್ಟಕೂಟದ ನಾಯಕನು,
ಅವನಲ್ಲಿರುವುದನು ಕಿತ್ತು ತೆಗೆವ ಸನ್ನಾಹದಲಿ.
ಎನ್ನದೆಂಬುದೇನು ಇಲ್ಲ, ಇರುವುದು ನಿಮ್ಮಲ್ಲಿಹುದು,
ಉಳಿದಿಹುದು ಎನ್ನುಡುಗೆಗಳು ಮಾತ್ರವೇ! ಎಂದು
ಮಾರ್ನುಡಿದಿಹನು ಅಂಜದೆ ಆ ಸಾತ್ವಿಕ ಯೋಗಿ.
ಭಿಕಾರಿಗಳೊಳು ಭಿಕಾರಿಯಿವನು ಎಂದುಸುರುತೆ
ನಡೆದರಾ ಕಳ್ಳರು ನಿರಾಸೆಯಲಿ ಹೆಜ್ಜೆಯನಿಕ್ಕುತೆ
ಇನ್ನೋರ್ವನು ಸಿಗುವನೆ ಹಾದಿಯಲೆಂದರಸುತೆ.
ಡೊಂಕು ಹಾದಿಯಲಿ ಮರೆಯಾಗುತಿಹ ಕಳ್ಳರನು
ನೋಡುತಿರಲು ಫಕ್ಕನೆ ಹೊಳೆಯಿತು ಯೋಗಿಗೆ
ಎನ್ನಲ್ಲೇನೋ ಉಳಿದಿಹುದಲ್ಲ ಎನುತ ಹುಡುಕಿಹನು.
ಉಡಿಯಲಿ ಸಿಕ್ಕಿತು ಮಿರಮಿರಗುವ ಲೋಹದಮಾಲೆ
'ನಿಲ್ಲಿರಿ, ನಿಲ್ಲಿರಿ' ಎಂದರಚುತೆ ಓಡಿಹನಾ ಯೋಗಿ
ದೂರದ ಹಾದಿಯಲಿ ಸಾಗಿಹ ಕಳ್ಳರನು ಹಿಂಬಾಲಿಸಿ.
ಹಿಂದೆ ಬರುತಿಹ ಯೋಗಿಯ ಕಂಡು ಬೆರಗಿನಿಂ
ನಿಂತಿಹ ಕಳ್ಳರ ಬಳಿ ಸಾಗಿ ಕೈಗಿತ್ತನು ವಿನಯದಿ
ನುಡಿಯುತಲಿ, 'ನಿಮಗಿದು ಸೇರಬೇಕು!' ಎನುತ.
ಬೆಕ್ಕಸ ಬೆರಗಿನಿಂ ನೋಡುತ ನಿಂತಿತು ಕಳ್ಳರ ಪಡೆ
ಕೈಯಲ್ಲಿ ಹೊಳೆದಿಹುದು ಲೋಹದೊಂದು ಮಾಲೆ
ಸಾಧುವಿನ ಮೊಗದಲಿಣಕುತಿದೆ ಸಂತೃಪ್ತಿಯ ಸೆಲೆ.
ದಿವ್ಯನಗರಿಯತ್ತ ಹೊರಟಿಹ ಯಾಜಕನ ಕಂಡು
ಇರಲೆಂದು ನೀಡಿದ್ದನೋರ್ವ ಸುಮನಸಿನ ಧನಿಕ
ವಿಶ್ವಾಸ ನಲ್ಮೆಯಿಂದಲಿ ಇನಿತು ಉಡುಗೊರೆಯಾಗಿ.
ಕರಗಿ ನೀರಾಗಿ ಹರಿದವು ದುಷ್ಟರ ಕಟುಹೃದಯಗಳು
ತಟ್ಟನೆ ಕಾಲಿಗೆರಗಿದ ಠಕ್ಕರ ಗುರು ಭಾವತೀವ್ರತೆಯಲಿ
ನುಡಿದನು ಮನ್ನಿಸೆಮ್ಮನು, ನಾವೆಸಗಿದಾ ಪಾಪಗಳನು.
————
No comments:
Post a Comment