Friday, 1 March 2019

ಬಂದೂಕು ಮತ್ತು ಪಾರಿಜಾತ ¨ ಡೇವಿಡ್ ಕುಮಾರ್



ಪೆನ್ನು ಹಿಡಿಯುವ ಬೆರಳುಗಳು 
ಬಂದೂಕು ನಳಿಕೆಯ ಸವರುತ್ತಿವೆ
ಗುಂಡು ಹಾರಿಸುವ ಚಪಲದಲಿ

ತೊಟ್ಟಿಲು ಕಂದನ ಜಿಲಕಿಯೊಳಗೆ
ಮದ್ದು ಗುಂಡುಗಳ ಸಪ್ಪಳವೆ

ಪಾರಿವಾಳದ ಗೂಡಿನೊಳಗೆ
ರಣಹದ್ದಿನ ಕೆಂಪು ಮೊಟ್ಟೆಗಳು
ಸಿದ್ಧಿ ಪುರುಷ ಬಾಯಲ್ಲೂ
ಯುದ್ಧ’ ’ಯುದ್ಧಓಂಕಾರನಾದ

ಗಡಿ ಬೇಲಿಗೆ ಹಬ್ಬಿದ್ದ 
ಮಲ್ಲಿಗೆ ಪಾರಿಜಾತಗಳು 
ದ್ವೇಷ ಕಿಡಿಗೆ ಸುಟ್ಟುಹೋಗಿವೆ 
ಕೋಮು ಕುಮ್ಮಕ್ಕಿನ ಗೊಬ್ಬರದಲಿ
ಪಾಪಸ್ಸು ಕಳ್ಳಿ ಬೆಳೆದಿವೆ

ಬಂದೂಕಿನೊಳಗೂ ಆತ್ಮಸಾಕ್ಷಿಯಿದೆ 
ಒಳಗೊಳಗೆ ಪಿಸುಗುಡುತ್ತಿದೆ
ಯಾರ ಎದೆಯ ಸೀಳಲಿ” ?
ಯಾರಿಗಿಂದು ವಿಧವೆಯ ಪಟ್ಟ” ?!

ಯುದ್ಧ ಕತ್ತಲಲಿ ಬೆತ್ತಲಾಗುವುದು ದೇಶ
ಒಣ ಪ್ರತಿಷ್ಠೆಗೆ ಬಡಕಲಾದವರು ನಾವು

ಎಸೆದು ಬಿಡಿ ರಣ ಆಯುಧಗಳ
ಮತ್ತೆ ಅರಳಲಿ ಸಂಪಿಗೆ, ಕೇದಗೆ
ಹಬ್ಬಲಿ ಮೆಲ್ಲಗೆ ಮಲ್ಲಿಗೆ ಹೂಗಳು
ಬಂದೂಕಿನ ನಳಿಕೆಯ ಮೇಲೆ

ಹಸಿರಾಗಲಿ ಬಿಡಿ ಯುದ್ಧಭೂಮಿಗಳು
ಬೀಸಿ ಬಿಡಲಿ ತಂಗಾಳಿಯು ಒಮ್ಮೆ
ಗಡಿ ಬೇಲಿಯ ಎಲ್ಲೆಯ ದಾಟಿಪಾರಿಜಾತವ ಹೊತ್ತು !

*******



“ನೋಡಿ ಅಲ್ಲಿ ಅವನು ಪ್ರಾಮಾಣಿಕತೆಯ ರಾಜಕುಮಾರ” - ಆನಂದ

ಮೊನ್ನೆ ಒಂದು ಕಛೇರಿಗೆ ಯಾವುದೋ ಕೆಲಸದ ನಿಮಿತ್ತ ಹೋಗಿದೆ. ಆ ಕಛೇರಿಯ ಪ್ರವೇಶದ್ವಾರದಲ್ಲಿದ್ದ ಒಂದು ಫಲಕದ ಮೇಲೆ ಈ ರೀತಿ ಬರೆದಿತ್ತು, No Success without U. ಈ ಬರಹ ನನ್ನಲ್ಲಿ ಅನೇಕ ರೀತಿಯ ಪಶ್ನೆಗಳಿಗೆ ಅನುವು ಮಾಡಿಕೊಟ್ಟಿತ್ತು. ಹೌದು, ಯಾವುದೇ ಸಂಘಸಂಸ್ಥೆಗಳ ಕಛೇರಿಗಳಲ್ಲಿ ನಾವು ದಪ್ಪ ಅಕ್ಷರಗಳಲ್ಲಿ ಬರೆದಿರುವ ಅವರ vision ಮತ್ತು mission statements ಗಳ ಬರಹಗಳನ್ನು ಗೋಡೆಮೇಲೆ ನೇತು ಹಾಕಿರುವ ಫಲಕಗಳಲ್ಲಿ ಕಾಣುತ್ತೇವೆ. 

ವ್ಯಂಗ್ಯ ಅಂದ್ರೆ, ಕೆಲವೊಮ್ಮೆ ಸಂಸ್ಥೆಗಳಲ್ಲಿ ಬೇರೆ ಬೇರೆ ಹಂತಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಇವುಗಳ ಬಗ್ಗೆ ತಿಳಿದಿರುವುದೇ ಇಲ್ಲ. ಅವು ತೋರಿಕೆಗೆ ಮಾತ್ರ ಹಾಕಿದಂತೆ ಕಂಡುಬರುತ್ತವೆ. ಅವುಗಳು ಸಂಸ್ಥೆಯ ಬದುಕಾಗಿರುವುದಿಲ್ಲ. ಆದ್ದರಿಂದ ನಾಯಕ ಎನ್ನಿಸಿಕೊಂಡವನು ಗೋಡೆ ಬರಹಕ್ಕೆ ಸೀಮಿತವಾಗಿಬಿಟ್ಟಿರುವ ವಿಷನ್ ಮತ್ತು ಮಿಷನ್ ವ್ಯಾಖ್ಯಾನಗಳಿಗೆ ಜೀವ ಬರಿಸಬೇಕು, ಉದ್ಯೋಗಿಗಳ ನರನಾಡಿಗಳಲ್ಲಿ ಹರಿಯುವಂತೆ ಮಾಡಬೇಕು. ಅಯೋಜಿಸುವ ಪ್ರತಿಯೊಂದು ಸಭೆಗಳಲ್ಲಿ ವಿಷನ್ ಮತ್ತು ಮಿಷನ್ ಬಗ್ಗೆ ಪದೇ ಪದೇ ಪ್ರಸ್ತಾಪಿಸಿ ಉದ್ಯೋಗಿಗಳ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂತೆ ಶ್ರಮಿಸಬೇಕು. ಅವು ಎಲ್ಲರ ಪರಕಾಯ ಪ್ರವೇಶ ಮಾಡುವಂತೆ ನೋಡಿಕೊಳ್ಳಬೇಕು. 

ಅಷ್ಟೇ ಮಾತ್ರವಲ್ಲ ವಿಷನ್ ಮಿಷನ್ ಪ್ರತಿಪಾದಿಸುವ ಮೌಲ್ಯಗಳು ನಾಯಕನಲ್ಲಿ ಸಾಕಾರಗೊಳ್ಳಬೇಕು. ಆ ಮೌಲ್ಯಗಳ ಸಾಕ್ಷತ್ಕಾರ ಅವನಾಗಬೇಕು, ಅವುಗಳ ಜೀವಂತ ಉದಾಹರಣೆ ಅವನ ನಡೆನುಡಿಗಳಲ್ಲಿ ಕಾಣಿಸಿಕೊಳ್ಳಬೇಕು. ಅವನು ಅವುಗಳ ಬಗೆಗಿನ ಕಥೆಗಳನ್ನು ಪುನಃ ಪುನಃ ಹೇಳುತ್ತೀರಬೇಕು. ನಡೆದಾಡುವ ವಿಷನ್ ಮತ್ತು ವಿಷನ್ ಅವನಾಗಬೇಕು.
“ನೋಡಿ ಅಲ್ಲಿ ಅವನು ಪ್ರಾಮಾಣಿಕತೆಯ ರಾಜಕುಮಾರ” ಎಂದು ಜನರು ಹೇಳುವಂತಿರಬೇಕು. ನೀವು ನಾಯಕರಾಗಿದ್ದರೆ, ಇದು ನಿಮ್ಮ ಕೆಲಸ. ಮತ್ತು ನೆನಪಿಡಿ, ನಾವೆಲ್ಲರೂ ನಾಯಕರು!



ಅಲ್ಲಿ ನೋಡಿ ನಡೆದಾಡುವ ಮತ್ತೊಬ್ಬ ಕ್ರಿಸ್ತ ಎಂದು ಜನರು ಹೇಳುವಂತೆ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ತಪಸ್ಸುಕಾಲಕ್ಕೆ ಕಾಲಿಡುತ್ತಿರುವ ನಮ್ಮನ್ನು ಕಾಡಲಿ.



ತಪಸ್ಸುಕಾಲವೆಂದರೆ ಪರಿವರ್ತನೆಯ ಕಾಲ. ದೇವರಿಗೆ ಅಭಿಮುಖವಾಗುವ ಕಾಲ. ಕ್ರಿಸ್ತನ ಶಿಲುಬೆಯನ್ನು ನಮ್ಮ ಕ್ರೈಸ್ತಬದುಕಿನ ಮಾನದಂಡವಾಗಿಸಿಕೊಂಡು ನಮ್ಮ ಬದುಕನ್ನು ಪರೀಕ್ಷಿಸಿಕೊಳ್ಳುವ ಕಾಲ, ಕ್ರಿಸ್ತನ ಶಿಲುಬೆಯಾತನೆ ಮತ್ತು ಮರಣದ ತುದಿಯಿಂದ ಪುನರುತ್ಥಾನದ ವಿಜಯದ ಇನ್ನೊಂದು ತುದಿಗೆ ಪ್ರಾರ್ಥನೆ, ಉಪವಾಸ, ದಾನಗಳ ಮಾರ್ಗಗಳಿಂದ ಕರೆದೊಯ್ಯುವಂತಹ ಕಾಲ. ಇಂತಹ ಸಂದರ್ಭದಲ್ಲಿ ಉಪವಾಸದ ನಿಜವಾದ ಅರ್ಥವನ್ನು ಪೋಪ್ ಫ್ರಾನ್ಸಿಸ್‍‍ನವರು ಈ ರೀತಿ ಹೇಳಿದ್ದಾರೆ:

“ನೋಯಿಸುವ ಮಾತುಗಳನ್ನು ತ್ಯಜಿಸಿ, ಕರುಣೆಯ ಮಾತುಗಳನಾಡಿ. ದುಃಖಕರ ಮಾತುಗಳ ತ್ಯಜಿಸಿ ಧನ್ಯಭರಿತರಾಗಿರಿ. ಕೋಪವ ತ್ಯಜಿಸಿ ತಾಳ್ಮೆಯನ್ನು ತುಂಬಿಕೊಳ್ಳಿ. ನಿರಾಶೆಯನ್ನು ತ್ಯಜಿಸಿ ಭರವಸೆಯಿಂದ ತುಂಬಿಕೊಳ್ಳಿ. ಚಿಂತೆಗಳ ತ್ಯಜಿಸಿ ದೇವರಲ್ಲಿ ವಿಶ್ವಾಸವಿರಿಸಿ. ದೂರುವ ಪ್ರವೃತಿಯ ತ್ಯಜಿಸಿ ಸರಳತೆಯನ್ನು ಪರಿಭಾವಿಸಿಕೊಳ್ಳಿ. ಒತ್ತಡಗಳ ತ್ಯಜಿಸಿ ಪ್ರಾರ್ಥನಾಭರಿತರಾಗಿ. ಕಹಿಮನಸ್ಸನ್ನು ತ್ಯಜಿಸಿ ಸಂತೋಷವನ್ನು ಹೃದಯದಲ್ಲಿ ತುಂಬಿಕೊಳ್ಳಿ. ಸ್ವಾರ್ಥವನ್ನು ತ್ಯಜಿಸಿ ಇತರರಿಗೆ ದಯಾವಂತರಾಗಿರಿ. ದ್ವೇಷ ಹಗೆತನ ತ್ಯಜಿಸಿ ಸಾಮರಸ್ಯ ಬೆಳಸಿಕೊಳ್ಳಿ. ಮಾತುಗಳ ತ್ಯಜಿಸಿ ಆಲಿಸಲು ಮೌನರಾಗಿರಿ.”



******



ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ - ಮತ್ತೊಂದಿಷ್ಟು ಮಾಹಿತಿ

ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು ಕಮ್ಮ ಸಮುದಾಯದ ಮೂಲದವರು. ಗುಂಟೂರು ಜಿಲ್ಲೆಯ ರಾವಿಪದವು ವಂದನೀಯರ ಹುಟ್ಟೂರು.

ಕಮ್ಮ ಸಮುದಾಯವರು ನಾಯುಡು, ಚೌದರಿ ಮೊದಲಾದ ಹೆಸರುಗಳೊಂದಿಗೂ ಗುರುತಿಸಿಕೊಂಡಿದ್ದಾರೆ. ಇತಿಹಾಸ ಕಾಲದಲ್ಲಿ ಅರಸರ ಬಂಟರಾಗಿದ್ದ ಈ ಸಮುದಾಯದವರು, ಕ್ಷತ್ರಿಯರಂತೆ ಯುದ್ಧದಲ್ಲಿ ಭಾಗವಹಿಸಿದ್ದಾರೆ. ನಂತರ, ವ್ಯಾಪಾರ, ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಜಮೀನುಗಳನ್ನು ಉತ್ತಿದ್ದಾರೆ. ಒಟ್ಟಾರೆ ಶ್ರೀಮಂತಿಕೆ ಈ ಸಮುದಾಯದ ಹೆಚ್ಚುಗಾರಿಕೆ.

ತೆಲುಗು ಭಾಷಿಕ ಪ್ರಾಬಲ್ಯದ ಸೀಮೆಗಳಲ್ಲಿ ರೆಡ್ಡಿಗಳನ್ನು ಹೊರತು ಪಡಿಸಿದರೆ, ಕಮ್ಮ ಸಮುದಾಯವು ಪ್ರಭಾವಶಾಲಿ ಸಮುದಾಯ. ರಾಜಕೀಯವೇ ಇರಲಿ, ಇನ್ನಾವುದೇ ಕ್ಷೇತ್ರವಿರಲಿ, ಅಲ್ಲಿ ರೆಡ್ಡಿಗಳೊಂದಿಗೆ ಸರಿಸಮನಾಗಿ ನಿಂತು ಹೆಣಗಾಡಿದ್ದನ್ನು, ಜವಾಬ್ದಾರಿ ಹೊತ್ತಿರುವುದನ್ನು ಈಗಲೂ ಕಾಣಬಹುದು. ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹರಡಿರುವ ಈ ಸಮುದಾಯ ಅಲ್ಲೆಲ್ಲಾ ತನ್ನ ಇರುವನ್ನು ಗುರುತಿಸಿಕೊಂಡಿದೆ.

ವಂದನೀಯರಿಗೆ ಪೊತ್ತಕಮೂರಿ ಹೆಸರು ಹೇಗೆ ಅಂಟಿಕೊಂಡಿರಬೇಕು? ಅವರ ಹುಟ್ಟೂರು, ಅವರ ತಂದೆತಾಯಿಗಳಿದ್ದ ಊರು ಗುಂಟೂರು ಜಿಲ್ಲೆಯ ರಾವಿಪದವು. ಈ ಪೊತ್ತಕಮೂರಿ ಎಲ್ಲಿಂದ ಅಂಟಿಕೊಂಡಿತು?

ಇಲ್ಲಿ ತೆಲುಗು ಖ್ಯಾತ ನಟ, ರಾಜಕಾರಣಿ ಎನ್ .ಟಿ.ರಾಮರಾವ್ ಅವರ ಹೆಸರನ್ನು ನೆನಪಿಸಿಕೊಳ್ಳಬಹುದು. ಅವರ ಪೂರ್ತಿ ಹೆಸರು, ನಂದಮೂರಿ ತಾರಕ ರಾಮರಾವ್. ಅವರು ಹುಟ್ಟೂರು ಕೃಷ್ಣಾ ಜಿಲ್ಲೆಯ ಗುಡಿವಾಡ ಹತ್ತಿರದ ನಂದಮುರು ಗ್ರಾಮ. ಮತ್ತು ಅದೇ ಜಿಲ್ಲೆಯ ಗನ್ನವರಂ ಸನಿಹದಲ್ಲಿ ನಂದಮುರು ಹೆಸರಿನ ಇನ್ನೊಂದು ಗ್ರಾಮವೂ ಇದೆ. ಇಲ್ಲಿ, ನಂದಮುರು ಗ್ರಾಮದಿಂದ ಬಂದವ, ನಂದಮುರು ಗ್ರಾಮದ ಮೂಲದವ ಎಂದು ಗುರುತಿಸಿಕೊಳ್ಳುವ ಸಂದರ್ಭದಲ್ಲಿ ತೆಲಗು ಭಾಷೆಯ ಜಾಯಮಾನದಂತೆ ನಂದಮುರು ಎಂಬುದು ನಂದಮೂರಿ ಆಗಿದೆ.

ಇದೇ ಬಗೆಯಲ್ಲಿಯೇ ಅತಿ.ವಂ. ಡಾ. ಪೊತ್ತಕಮೂರಿ ಅವರು ಹುಟ್ಟಿದ್ದ ಗುಂಟೂರು ಜಿಲ್ಲೆಯ ರಾವಿಪದವು ಇದ್ದರೂ, ಅವರ ಹಿರಿಯರ ಮೂಲ ಊರು ಅಥವಾ ಗ್ರಾಮ ಪೊತ್ತಕಮುರು ಇದ್ದಿರಬೇಕು.

ಪೊತ್ತಕಮುರು ಎಂಬುದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ದರ್ಸಿ ಮಂಡಲಕ್ಕೆ ಸೇರಿದ ಒಂದು ಗ್ರಾಮದ ಹೆಸರು. ಅದು ಕಮ್ಮ ಸಮುದಾಯದ ಒಕ್ಕಲಿನ ಒಂದು ಪುರಾತನ ಗ್ರಾಮ. ಅದು ದರ್ಸಿಗೆ 11 ಕಿ.ಮೀ, ಜಿಲ್ಲಾ ಕೇಂದ್ರ ಒಂಗೋಲ್ ಗೆ 45 ಕಿ.ಮೀ ದೂರದಲ್ಲಿದ್ದರೆ, ರಾಜಧಾನಿ ಹೈದರಾಬಾದ್ ಗೆ 268 ಕಿ.ಮೀ ದೂರದಲ್ಲಿದೆ.

ಸಂಪ್ರದಾಯಿಕ ರೂಢಿಯಂತೆ ಪೊತ್ತಕಮುರು ಊರಿನಿಂದ ಬಂದವರು ಪೊತ್ತಕಮೂರಿಗಳು. ಇದಲ್ಲದೆ ಕೆಲವರು ಪೊತ್ತಕಮುರಿ ಎಂದು ತಮ್ಮ ಕುಟಂಬದ ಅಡ್ಡಹೆಸರಾಗಿ ಇಟ್ಟುಕೊಂಡಿರುವುದು ಉಂಟು. ಈ ಹಿನ್ನೆಲೆಯಲ್ಲಿ ಗಮನಿಸಿದರೆ, ಬೆಂಗಳೂರು ಮಹಾಧರ್ಮಕ್ಷೇತ್ರದ ಮೊದಲ ದೇಶಿ ಮೂಲದ ಮಹಾಧರ್ಮಾಧ್ಯಕ್ಷ ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು, ಇಂದಿನ ಪ್ರಕಾಶಂ ಜಿಲ್ಲೆಯ, ದಾಸರಿ ಮಂಡಲದ ಪೊತ್ತಕಮುರು ಗ್ರಾಮದ ಮೂಲದವರೇ ಇರಬೇಕು. ಅವರ ಪೂರ್ವಜರು ನಂತರ ಪಕ್ಕದ ಗುಂಟೂರು ಜಿಲ್ಲೆಯ ರಾವಿಪದವು ಗ್ರಾಮಕ್ಕೆ ವಲಸೆ ಬಂದಿರಬೇಕು.

ಕಮ್ಮ ಸಮುದಾಯದವರು ಊರಿನ ಹೆಸರಿನಿಂದ ಹೊಂದಿರುವ ಕಮ್ಮ ಮಕ್ಕಳ (ಸಮುದಾಯದ) ಕುಟುಂಬದ ಹೆಸರುಗಳಲ್ಲಿ -ಅಬಿನೇನಿಯಿಂದ ಆರಂಭವಾಗಿ ಯಮಿನೇನಿಯ ವರೆಗಿನ- 300ರ ಸಂಖ್ಯೆಯನ್ನು ಮೀರಿದ ಅಡ್ಡಹೆಸರುಗಳ ಪಟ್ಟಿಯಲ್ಲಿ ಪೊತ್ತಕಮುರು, ಪೊತ್ತಕಮುರಿ, ಪೊತ್ತಕಮೂರಿ ಎಂಬ ಹೆಸರುಗಳಿವೆ. 

*******



ಮರಿಯಾಪುರ-ಮಹಿಮಾಪುರ - ಆಜು, ಮರಿಯಾಪುರ


ಎಷ್ಟೋ ಜನಕ್ಕೆ ಮರಿಯಾಪುರದೊಂದಿಗಿನ ನಂಟು ಶುರುವಾದದ್ದು ಮಹಿಮೆಯಿಂದಲೇ. ಕೆಲವರಿಗಂತೂ ಮರಿಯಾಪುರ ಎನ್ನುವುದಕ್ಕಿಂತ ಮಹಿಮಾಪುರ ಎನ್ನುವುದರಲ್ಲೇ ಸಂತೋಷ! ನನ್ನ ಮತ್ತು ಮರಿಯಾಪುರದೊಂದಿಗಿನ ನಂಟು ಇದೇ ರೀತಿ ಆರಂಭವಾದದ್ದು. ನನ್ನ ವಂಶಸ್ಥರು ಇದೇ ಊರಿನವರಾದರೂ, ನನಗೆ ಮರಿಯಾಪುರದಲ್ಲಿನ ಮೊದಲ ಪರಿಚಯ ಮಹಿಮೆ ನಾಟಕದೊಂದಿಗೆ. ನಾನು ಈ ಊರಿಗೆ ಬರುತ್ತಿದ್ದುದೇ ಮಹಿಮೆ ನಾಟಕವನ್ನು ನೋಡಲು, ಆನಂದಿಸಲು. ಇದೀಗ ನಾನು ಇದೇ ಊರಿನವನು, ಈ ಕಾರಣಕ್ಕೆ ನಾನು ಮಹಿಮೆಯ ಕುರಿತು ಬರೆಯಬೇಕೆಂದೆನಿಸಿದ್ದು. 

ಮಹಿಮೆಯ ಪ್ರೇಕ್ಷಕನಾಗಿ ವೇದಿಕೆ ಮೇಲಿನ ಪಾತ್ರಧಾರಿಗಳನ್ನು, ಪಾತ್ರಧಾರಿಯಾಗಿ ವೇದಿಕೆ ಕೆಳಗಿನ ಪ್ರೇಕ್ಷಕರನ್ನು ಕಂಡು, ಇಬ್ಬರ ಮನಸ್ಥಿತಿಯನ್ನು ಅರಿತು ಇಂದು ಬರಹಗಾರನಾಗಿ ಅವರಿಬ್ಬರ ಪರವಾಗಿ ಅದರ ಹೊರಗಿನ ವೈಭವ ಒಳಗಿನ ತಯಾರಿ, ಉದ್ದೇಶಗಳನ್ನು ಹೇಳುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ.

ಒಂದು ಒಳ್ಳೆಯ ಇತಿಹಾಸ ಸೃಷ್ಟಿಯಾಗ ಬೇಕೆಂದರೆ ಅದಕ್ಕೆ ಒಂದು ಒಳ್ಳೆಯ ಉದ್ದೇಶ ಮತ್ತು ಬಲವಾದ ಸಂಕಲ್ಪ ಬೇಕು, ಜೊತೆಗೆ ಒಂದು ನೆಲೆಯೂ ಬೇಕು. ಮಹಿಮೆಯ ಇತಿಹಾಸಕ್ಕೆ ನೆಲೆಯಾದದ್ದು ಸ್ವಾಮಿ ಫಿಲಿಫ್ ಸಿಜೋನ್ ನವರು 1884 ರಲ್ಲಿ ನಿರ್ಮಿಸಿದ ತಟ್ಟುಗುಪ್ಪೆ ಎಂಬ ಪುಟ್ಟ ಗ್ರಾಮ. ಬರೀ ಕಾಡು ಮೇಡುಗಳಿಂದ ಆವೃತವಾಗಿದ ಜಾಗವನ್ನು ಸಮಮಾಡಿ ಕ್ರಿಸ್ತನ ಗುಡಿಯನ್ನು ರೂಪಿಸಿ ಕ್ರೈಸ್ತರ ನೆಲೆಯಾಗಿಸಿದರು. ಇಂದಿಗೂ ಸಹ (ತಟ್ಟಗುಪ್ಪೆ) ಮರಿಯಾಪುರ ಕ್ರೈಸ್ತ ಊರಾಗೆ ಉಳಿದಿದೆ. ಮರಿಯಾಪುರದ ಉಗಮವೇ ಒಂದು ರೋಚಕ ಇತಿಹಾಸ. 

ಈ ಊರಿನ ಹೊಸ ಮನ್ವಂತರ ಆರಂಭವಾದದ್ದು 1994 ಧರ್ಮಕೇಂದ್ರದ ಗುರುಗಳಾಗಿ ಬಂದ ಸ್ವಾಮಿ ಆ. ತೋಮಸ್‍ ನವರಿಂದ. ಇಕ್ಕಟಾದ ಈ ಊರಿನ ದಾರಿಗಳನ್ನು, ಸಂಕುಚಿತಗೊಂಡಿದ್ದ ಜನಜೀವನವನ್ನು ಸುಧಾರಣೆಗೆ ತಂದು, ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಿ ನಾಗರಿಕತೆಯ ಲೇಪನವನ್ನು ಹಚ್ಚಿದರು. ಇವರ ಸೇವೆಗೆ ಇಂದಿಗೂ ಪ್ರತ್ಯಕ್ಷ ಸಾಕ್ಷಿಗಳಾಗಿ ನಿಂತಿರುವುದು; ನಮ್ಮ ಊರಿನ ಅಗಲವಾದ ಬೀದಿಗಳು, ಸುಸಜ್ಜಿತ ಆಟದ ಮೈದಾನ, ಒಳಚರಂಡಿಯ ವ್ಯವಸ್ಥೆಗಳು. ಇದಕ್ಕಾಗೇ ನಾವು ಇವರನ್ನು ಮರಿಯಾಪುರದ ಆಧುನಿಕ ಶಿಲ್ಪಿಯೆನ್ನುವುದು. 

1995 ಕರ್ನಾಟಕದಲ್ಲಿ ಕನ್ನಡ ಕ್ರಾಂತಿ ಕಾಡ್ಗಿಚ್ಚಿನಂತೆ ಹಬ್ಬಿದ ಸಮಯ. ಅದೇ ವರ್ಷ ಮೊದಲ ಬಾರಿ ಕನ್ನಡದಲ್ಲಿ ಅಚ್ಚಾದ ಕಥೋಲಿಕ ಬೈಬಲ್ ಕನ್ನಡಿಗರ ಕೈ ಸೇರಿತ್ತು. ಇದರ ಜೊತೆಯಲ್ಲೇ ದೃಶ್ಯ ಮಾಧ್ಯಮದ ಮೂಲಕ ಧರ್ಮಪ್ರಚಾರ ಮಾಡಬೇಕೆಂಬ ಇಂಗಿತ ಸ್ವಾಮಿ ಆ. ತೋಮಸ್ ರವರಲ್ಲಿ ಅದಾಗಲೇ ಹೊಕ್ಕಿತ್ತು. 

ಜರ್ಮನಿಯಲ್ಲಿ passion of Christ ನಾಟಕವನ್ನು ಶತಕಗಳಿಂದ ನಡೆಸುತ್ತಿದ್ದರು. ಇದರೊಂದಿಗೆ ಕರ್ನಾಟಕದ ಕ್ರೈಸ್ತ ಊರುಗಳಾದ ಬೇಗೂರು, ದೊರಸಾನಿಪಾಳ್ಯ, ವೀರನಪಾಳ್ಯ, ಹಾರೋಬೆಲೆಯಲ್ಲಿ ನಡೆಯುತ್ತಿದ್ದ ನಾಟಕಗಳು ಆಗಿನ ಕಾಲಕ್ಕೆ ಪ್ರಸಿದ್ಧಿಯಾಗಿದ್ದವು. 

ಇಂತಹ ಸಂದರ್ಭದಲ್ಲೇ ಮಹಿಮೆಯ ನಾಟಕಕ್ಕೆ ಒಂದು ಪ್ರತ್ಯೇಕತೆ ಬೇಕಾಗಿತ್ತು. ಮುಂದೆ ಆ ಪ್ರತ್ಯೇಕತೆಯೇ ಮಹಿಮೆಯ ಪ್ರಖ್ಯಾತಿಗೆ ಮೂಲ ಕಾರಣವಾಯಿತು. ಆ ವಿಶೇಷತೆಯೇ ಬೈಬಲ್‍ನ ಒಟ್ಪು 78 ಪುಸ್ತಕಗಳನ್ನು ವೇದಿಕೆಯ ಮೇಲೆ ದೃಶ್ಯಮಾಧ್ಯಮದ ಮುಖಾಂತರ ಜನರಿಗೆ ತೋರಿಸುವುದು. ಈ ನಿರ್ಧಾರ ಎಷ್ಟು ಸಮರ್ಥವಾಗಿತ್ತೋ, ಅದಕ್ಕಾಗಿ ಮಾಡಬೇಕಾಗಿದ ತಯಾರಿಗಳು ಅಷ್ಟೇ ಕಠಿಣವಾಗಿದ್ದವು. 

ಇಂದಿನ ಮರಿಯಾಪುರ ಚರ್ಚಿನ ಹಿಂಬದಿಯಲ್ಲಿರುವ 125 ಮೀಟರ್ ಉದ್ದದ ವೇದಿಕೆಯನ್ನು ನಿರ್ಮಿಸಬೇಕಾಗಿತ್ತು (ಅದು ಆಗಿನ ಕಾಲಕ್ಕೆ ಜೆ.ಸಿ.ಬಿ ಹಾಗೂ ಯಾವುದೇ ತಂತ್ರಜ್ಞಾನದ ಬಳಕೆಯನ್ನು ಅರಿಯದ ಸಮಯದಲ್ಲಿ) ಈ ವೇದಿಕೆಯ ನಿರ್ಮಾಣಕ್ಕೆ ಶ್ರಮಿಸಿದವರು, ಆಗಿನ ಮರಿಯಾಪುರದ ಜನತೆ ಮತ್ತು ಸ್ವಾಮಿ ಆ. ತೋಮಸ್‍ನವರು. ಈ ಅಪ್ರತಿಮ ವೇದಿಕೆ ಇತರೆ ನಾಟಕಗಳಲ್ಲಿ ಬಳಸುವ ವೇದಿಕೆಯಂತಿರದೆ, ಪರದೆ ಇಲ್ಲದ ಹಾಗು ಸ್ಥಿರ ನೈಜ ವೇದಿಕೆಯಾಗಿರುವುದು ಗಮನಾರ್ಹ. ಇದರ ಒಂದೊಂದು ಕಲ್ಲೂ ಸಹ ಸ್ವಾಮಿ ಆ. ತೋಮಸ್ ಹಾಗೂ ಮರಿಯಾಪುರ ಜನತೆಯ ಹೆಸರನ್ನು ಹೇಳುತ್ತವೆ. 

ರಂಗಸಜ್ಜಿಕೆಯ ತಯಾರಿಯಾಗುತ್ತಿದಂತೆ ರಂಗಕಾರ್ಯಗಳ ತಯಾರಿ ಶುರುವಾಗಿತ್ತು. ಮರಿಯಾಪುರದ ವೇದಿಕೆ ಮೇಲಿನ ಮೊದಲ ಪ್ರದರ್ಶನ "ಕ್ರಿಸ್ತನ ಮಹಿಮೆ"ಎಂದು ನಿರ್ಧರಿಸಲಾಗಿತ್ತು, ಅದಕ್ಕಾಗಿ ಸಂಗೀತ ಸಂಯೋಜನೆ, ಸಂಭಾಷಣೆ, ಸಾಹಿತ್ಯ, ರಚಿಸಬೇಕಾಗಿತ್ತು ಇದಕ್ಕಾಗಿ ಮನವೊಡ್ಡಿದವರು ಕನ್ನಡ ಕ್ರೈಸ್ತ ಸಾಹಿತ್ಯದ ಧೃವತಾರೆಯಾದ ಸ್ವಾಮಿ ಚಸರಾ ನವರು. ಇಂದಿಗೂ ಜನ ಅವರು ರಚಿಸಿದ "ಕ್ರಿಸ್ತನ ಮಹಿಮೆ" ನಾಟಕದ ಪಾತ್ರಧಾರಿಗಳ ಸಂಭಾಷಣೆಯನ್ನು ನೆನೆದು ಮಾತಾಡುವುದ ಕೇಳಿದಾಗ ಆ ನಾಟಕದ ಸೊಗಡು ಏನೆಂದು ಅರ್ಥವಾಗುತ್ತದೆ.

ಹೀಗೆ ಸಿದ್ಧಗೊಂಡ ಸಂಭಾಷಣೆ ಸಾಹಿತ್ಯಗಳು ಹಲವಾರು ಕಲಾವಿದರ ಮತ್ತು ಹಾಡುಗಾರರ ಕಂಠ ಸಿರಿಯಿಂದ, ಧ್ವನಿ ಮುದ್ರಣಗೊಂಡಿತು. ಕಲೆಯನ್ನು ಮೈಗೂಡಿಸಿಕೊಂಡು ಬೆಳೆದಿದ್ದ ಮರಿಯಾಪುರದ ಜನತೆಯೇ ಮಹಿಮೆ ನಾಟಕದ ಕಲಾವಿದರಾದರು. ಹಗಲಿನ ಕೆಲಸ ಮುಗಿಸಿ ರಾತ್ರಿಯ ಚಳಿಯಲ್ಲಿ ನಿರಂತರ ಅಭ್ಯಾಸವನ್ನು ನಡೆಸುತ್ತಿದ್ದರು ಹಾಗೂ ಶಾಲಾ ಮಕ್ಕಳೂ ನೃತ್ಯಾಭ್ಯಾಸಗಳಲ್ಲಿದ್ದರು. 1994ರಲ್ಲಿ ಮರಿಯಾಪುರ ಕಂಡ ಧ್ವನಿ ಬೆಳಕು ಕಾರ್ಯಕ್ರಮದ (ಮಹಿಮೆ ನಾಟಕದ) ಕನಸು 6 ಮೇ 1995 ರ ರಾತ್ರಿ ಸರಿಸುಮಾರು 9:45ಕ್ಕೆ ನನಸಾಗಿ ಮರುದಿನವೂ ಪ್ರದರ್ಶನಗೊಂಡಿತ್ತು

ಅವರ ಆ ನನಸು ಎಷ್ಟು ವೈಭವಯುತವಾಗಿತ್ತೆಂದರೆ 125 ಮೀಟರ್ ಉದ್ದದ ಪರದೆರಹಿತ ವೇದಿಕೆಯ ಮೇಲೆ 250 ನಟನಟಿಯರು ಹಾಗು 500ಕ್ಕೂ ಅಧಿಕ ಶಾಲಾ ಮಕ್ಕಳು ನೃತ್ಯಕ್ಕೆ ಹೆಜ್ಜೆ ಹಾಕುವುದನ್ನು, 200ಕ್ಕೂ ಹೆಚ್ಚು ಸ್ಪಾಟ್ ಲೈಟ್‍ಗಳ ಹೊನಲು ಬೆಳಕಿನ ವ್ಯವಸ್ಥಯಲ್ಲಿ, 1000 ವ್ಯಾಟ್‍ನ ಸ್ಪಷ್ಟ ಧ್ವನಿಯಲ್ಲಿ ನೋಡಿ, ಆಲಿಸಿ, ಆನಂದಿಸಲು ವೇದಿಕೆಯ ಮುಂಭಾಗದ ನೆಲದ ಮೇಲೆ ಒಂದು ಚಾಪೆ ಹಾಸಿ ಸ್ವರ್ಗ ಧರೆಗಿಳಿದ ಅನುಭವವನ್ನು ಅನುಭವಿಸಿದವರಿಗಷ್ಟೇ ಗೊತ್ತು.

ಇದಾದ ನಂತರ ಪ್ರತಿವರ್ಷ ಅದೇ ಪರಿಶ್ರಮ, ಅದೇ ಅಭ್ಯಾಸ, ಅದೇ ನೈಪುಣ್ಯ, ನಟನೆ, ವೈಭವದೊಂದಿಗೆ, ಸ್ವಾಮಿ ಆ. ತೋಮಸ್‍ರವರ ಸಾರಥ್ಯ, ನಿರ್ವಹಣೆ, ನಿರ್ದೇಶನದಲ್ಲಿ ಬೈಬಲ್‍ನ ಹೊಸ ಮತ್ತು ಹಳೆ ಒಡಂಬಡಿಕೆ ಸೇರಿ 53 ಪುಸ್ತಕಗಳು ಹೊರಬಂದಿವೆ. ಸಾತ್ವಿ, ನಮ್ಮ ಎದೆಯಾಳದ ಹಣತೆ, ಸ್ವಾಮಿ ಸ್ಟ್ಯಾನಿ ಬ್ಯಾಪ್ಟಿಸ್ಟ್‍ರವರ ದಶಾಜ್ಞೆಗಳು, ಸಲೋಮನ್ ರಾಜನ ವೈಭವ, ಪ್ರೇಷಿತರ ಪ್ರಭೆ ಮುಂದಿನ ವರ್ಷಗಳಲ್ಲಿ ಪ್ರದರ್ಶನಗೊಂಡವು. ಪ್ರವಾದಿಗಳು, ರಾಣಿ ಎಸ್ತೇರ್, ಸಂಸೋನ್ ಮತ್ತು ಡೆಲೈಲಾಗಳು ಸ್ವಾಮಿ ಅ. ತೋಮಸ್‍ರವರ ರಚನೆಯಲ್ಲಿ ಹೊರ ಬಂದು ಈಗ ಜನ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿವೆ. 

ಇದೀಗ ಬೈಬಲ್‍ನ ಇನ್ನೂ ಎರಡು ಪುಸ್ತಕಗಳಾದ ಯೋಬ ಮತ್ತು ತೋಬಿತ್ ಜೀವನಾಧಾರಿತ ನಾಟಕವು ಪ್ರದರ್ಶನಕ್ಕೆ ಸಜ್ಜಾಗಿವೆ. ಈ ನಾಟಕಕ್ಕೆ ಮಹಿಮೆಯ 25ನೇ ವಾರ್ಷಿಕೋತ್ಸವದ ಬೆಳ್ಳಿ ಸಂಭ್ರಮ ಇನ್ನಷ್ಟು ಪುಷ್ಟೀಕರಿಸಿ ಮಹಿಮೆಯ ವೈಭವವನ್ನು ಮತ್ತಷ್ಟು ಹೆಚ್ಚಾಗಿಸಿದೆ. ಪ್ರೇಕ್ಷಕರಿಗಾಗೇ ಸಿದ್ದಗೊಂಡ ಕಾಂಕ್ರೀಟ್ ನೆಲ ಮತ್ತು ಸಿನಿಮಾ ಮಂದಿರಗಳ ಬಾಲ್ಕನಿಯಂತೆ ಕೂರುವ ವ್ಯವಸ್ಥೆಯ ಮೆಟ್ಟಿಲು ಸಹ ಈ ಬಾರಿ ಹೊಸ ಅನುಭೂತಿ ನೀಡಲಿದೆ. ಮಹಿಮೆಯ 25 ವರ್ಷದ ವೇದಿಕೆ ಸಹ ಕಾಯಕಲ್ಪಗೊಂಡು ತಯಾರಾಗಿದೆ ಕಲಾವಿದರು ಸಹ ಹೊಸ ಪಾತ್ರಗಳಿಂದ ರಂಗದ ರಂಗೇರಿಸಲಿದ್ದಾರೆ. ಇನ್ನೂ ನೀವು ಬರುವುದೊಂದೇ ಬಾಕಿ. 

ನೀವೆಲ್ಲರೂ ಈ ಬಾರಿ (2019 ಮಾರ್ಚ್ 2)ರ ಬೆಳ್ಳಿ ಮಹೋತ್ಸದ ಅದ್ದೂರಿ ಮಹಿಮೆಯಲ್ಲೂ ನಂತರ ಬೆಳಗಿನ ಆಧ್ಯಾತ್ಮ ಬಲಿಪೂಜೆಯಲ್ಲೂ ನಮ್ಮೊಂದಿಗೆ ಸಹಭಾಗಿಗಳಾಗಬೇಕೆಂದು ಮಹಿಮೆ ನಾಟಕದ ಕರ್ತೃ, ನಿರ್ವಹಣೆ-ನಿರ್ದೇಶನದ ಸ್ವಾಮಿ ಆ. ತೋಮಸ್ ನವರು ಮತ್ತು ಮರಿಯಾಪುರದ ಜನತೆಯ ಪರವಾಗಿ ಕೋರುತ್ತೇವೆ: "ದೈವವಾಕ್ಯವ ಸವಿಯ ಬನ್ನಿ ಅರಿಯ ಬನ್ನಿ"

*******



ಯೇಸುವನ್ನು ಸತ್ಕರಿಸಿದ ಮಾರ್ತಾ - ಸಹೋ. ಡೇವಿಡ್ ಕುಮಾರ್ ಎ.,

ಅತಿಥಿ ದೇವೋಭವ ಎಂಬ ನಾಣ್ನುಡಿಯನ್ನು ನಾವೆಲ್ಲರೂ ಕೇಳಿರುತ್ತೇವೆ. ಪವಿತ್ರ ಬೈಬಲ್‌ ನಲ್ಲಿ ತಮ್ಮ ಮನೆಗೆ ಬಂದತಂಹ ಅತಿಥಿಗಳನ್ನು ಸತ್ಕರಿಸಿದ ಹಲವಾರು ಮಂದಿ ಅನೇಕ ವರದಾನಗಳನ್ನು ಪಡೆದಿರುವುದನ್ನು ನಾವು ಆಲಿಸಿರುತ್ತೇವೆ. ಅಬ್ರಹಾಮನು ತನ್ನ ಬಳಿಗೆ ಬಂದ ಅತಿಥಿಗಳನ್ನು ಸತ್ಕರಿಸಿದ ಫಲವಾಗಿ ಮುಪ್ಪಿನಲ್ಲಿ ಅವನಿಗೆ ಇಸಾಕ್ ಎಂಬ ಮಗ ಹುಟ್ಟಿದನು. ಅಂತೆಯೇ ಶುನೇಮಿನ ಮಹಿಳೆ ಸಹ ಪ್ರವಾದಿ ಎಲೀಷನಿಗೆ ತಂಗಲು ಸ್ಥಳವನ್ನು ಅನುವು ಮಾಡಿಕೊಟ್ಟಳು, ಬಂಜೆಯಾಗಿದ್ದ ಅವಳಿಗೆ ಎಲೀಷನು ಒಬ್ಬ ಮಗ ಜನಿಸುವಂತೆ ಆಶೀರ್ವದಿಸಿದನು. 

ಹೀಗೆ ಮಾರ್ತಾಳು ಕೂಡ ಪ್ರಭುಕ್ರಿಸ್ತರನ್ನು ತನ್ನ ಮನೆಗೆ ಸ್ವಾಗತಿಸಿ, ಸತ್ಕರಿಸಿ ಧನ್ಯಳೆನಿಸಿಕೊಂಡಳು ಎಂದು ಲೂಕನ ಶುಭಸಂದೇಶ 10: 38-42ರಲ್ಲಿ ನಾವು ಓದುತ್ತೇವೆ. 

ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಾ ಎಂಬ ಮಹಿಳೆ ಅವರನ್ನು ತನ್ನ ಮನೆಗೆ ಆಮಂತ್ರಿಸಿದಳು. ಆಕೆಗೆ ಮರಿಯ ಎಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪದತಳದಲ್ಲಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ ಅತಿಥಿ ಸತ್ಕಾರಕ್ಕೆ ಅಡುಗೆ ಸಿದ್ಧತೆಯ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, ಪ್ರಭು ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನಗೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ ’ಮಾರ್ತಾ, ಮಾರ್ತಾ ನೀನು ಅನಾವಶ್ಯಕ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ತಗೆದುಕೊಳ್ಳಲಾಗದು’ ಎಂದರು. 

ಮಾರ್ತಾ ಎಂದರೆ ಸ್ವಾಮಿನಿ. ಅದು ಸ್ವಾಮಿ ಎಂಬ ಪದದ ಸ್ತ್ರೀರೂಪ. ಅವಳು ಯೇಸುಸ್ವಾಮಿಗೆ ಅಚ್ಚುಮೆಚ್ಚಿನವಳಾಗಿದ್ದಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಮಾರ್ತಾಳಿಗೆ ಅತಿಥಿ ಸತ್ಕಾರ ಮಾಡುವುದರಲ್ಲಿ ಬಹಳ ಆಸಕ್ತಿ. ನಮ್ಮ ಮನೆಗಳಲ್ಲೂ ಕೂಡ ಗುರುಗಳು ಪ್ರಾರ್ಥಿಸುತ್ತಿರುವಾಗ ಅಥವಾ ಚರ್ಚೆ ಮಾಡುವಾಗ ಹೆಂಗಸರು ಅಡುಗೆಯ ಮನೆಯಲ್ಲಿ ಊಟದ ಸಿದ್ಧತೆಯನ್ನು ಮಾಡಿಕೊಂಡಿರುವುದಿಲ್ಲವೇ! ಹಾಗೆಯೇ ಮಾರ್ತಾಳು ಕೂಡ, ಮನೆಗೆ ಬಂದಿದ್ದಂತಹ ಯೇಸುವಿಗೆ ಮತ್ತು ತಮ್ಮ ಶಿಷ್ಯರಿಗೆ ಹಲವಾರು ಭಕ್ಷ್ಯಗಳನ್ನು ತಯಾರಿಸುತ್ತಿದ್ದಳು. ಮರಿಯಳಾದರೋ ಯೇಸುವಿನ ಪಾದದ ಬಳಿ ಕುಳಿತು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಎಲ್ಲರೂ ಪ್ರಾರ್ಥನೆಯಲ್ಲಿ ತೊಡಗಿದ್ದರೆ ಅಡುಗೆಯನ್ನು ತಯಾರಿಸುವವರಾರು ಎಂಬ ಆಲೋಚನೆ ಹೆಂಗಸರಿಗೆ ಸಹಜವೇ.

ಸಾಮಾನ್ಯವಾಗಿ ನಮ್ಮ ಮನೆಗೆ ಯಾರಾದರೂ ಅಥಿತಿಗಳು ಬಂದಾಗ ಮನೆಯ ಸದ್ಯಸ್ಯರೆಲ್ಲರೂ ಅತಿಥಿಗಳೊಡನೆ ಕುಳಿತು ಮಾತನಾಡುವ ಬದಲು ತಮ್ಮ ಕೆಲಸದಲ್ಲಿ ತಾವು ತಲ್ಲೀನರಾಗಿದ್ದರೆ, ಬಂದ ಅತಿಥಿಗಳಿಗೆ ಬೆಸರವಾಗುವುದಿಲ್ಲವೇ? ಆದುದರಿಂದಲೇ ಬಹುಶಃ ಮರಿಯಳು ಬೇರೆ ಯಾವುದೇ ಕೆಲಸಕ್ಕೆ ಗಮನವನ್ನು ಕೊಡದೆ ಯೇಸುವಿನ ಪಾದದ ಬಳಿ ಕುಳಿತುಕೊಂಡು ಯೇಸುವಿನ ಬೊಧನೆಯನ್ನು ಆಲಿಸುತ್ತಿರುವುದನ್ನು ನಾವು ಗಮನಿಸುತ್ತೇವೆ. ಮಾರ್ತಾಳು, ಮರಿಯಳ ಮೇಲಿನ ಕೋಪದಿಂದ ಯೇಸುವಿಗೆ, ಈ ಕೆಲಸವನ್ನೆಲ್ಲಾ ನನಗೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ಎಂದು ದೂರು ನೀಡುತ್ತಾಳೆ. ಇಲ್ಲಿ ಮಾರ್ತಾಳು ಯೇಸುವಿನೊಂದಿಗೆ ಎಷ್ಟೊಂದು ಆತ್ಮೀಯತೆಯಿಂದ ಇದ್ದಳು ಎಂಬುವುದನ್ನು ನಾವು ಊಹಿಸಬಹುದು. ಆದರೆ ಯೇಸು ಮರಿಯಳ ಪರ ಮಾತನಾಡುತ್ತಾ ಅವಳು ಉತ್ತಮವಾದ ಆಯ್ಕೆಯನ್ನೇ ಹೊಂದಿದ್ದಾಳೆ ಎಂದು ಹೇಳಿ ದೇವರ ವಾಕ್ಯದ ಮಹತ್ವಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ. ಆದರೂ ಸಹ ಮಾನವೀಯತೆಯ ದೃಷ್ಟಿಯಿಂದ ಅತಿಥಿ ಸತ್ಕಾರವೂ ಶ್ರೇಷ್ಠ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಇದು ಯೇಸುವಿಗೂ ತಿಳಿದಿತ್ತು. 

ಅಂತೆಯೇ ಯೊವಾನ್ನ 11: 21ರಲ್ಲಿ ಮಾರ್ತಾಳ ಅಣ್ಣ ಲಾಜರನು ಸತ್ತಾಗ, ಮಾರ್ತಾಳು ಯೇಸುವಿಗಾಗಿ ಎದುರು ನೋಡುತ್ತಿದ್ದುದನ್ನು ನಾವು ಕಾಣುತ್ತೇವೆ. ಮಾರ್ತಾಳು ಯೇಸುವನ್ನು ಕಂಡ ತಕ್ಷಣ ’ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ’ ಎಂದು ತನ್ನ ದುಃಖವನ್ನು ಹಂಚಿಕೊಳ್ಳುತ್ತಾಳೆ. ಮಾರ್ತಾಳಿಗೆ ಯೇಸು ಅಲ್ಲಿದ್ದಿದ್ದರೆ ಲಾಜರನು ಸಾಯುತ್ತಿರಲಿಲ್ಲ ಎಂಬ ವಿಶ್ವಾಸವಿತ್ತು. ಆದುದರಿಂದಲೇ ಯೊವಾನ್ನ 11: 27ರಲ್ಲಿ ’ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ದಾರಕ, ದೇವರ ಪುತ್ರ’ ಎಂದು ತನ್ನ ವಿಶ್ವಾಸವನ್ನು ಪ್ರಕಟಿಸುತ್ತಾಳೆ. ಹೀಗೆ ಮಾರ್ತಾಳು ಪ್ರಭು ಕ್ರಿಸ್ತರನ್ನು ಸ್ವಾಗತಿಸಿ, ಸತ್ಕರಿಸಿ, ತನ್ನ ವಿಶ್ವಾಸವನ್ನೂ ಅಭಿವ್ಯಕ್ತಿಸಿ ದೇವರ ಮೆಚ್ಚುಗೆಗೆ ಪಾತ್ರಳಾಗಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾಳೆ. 

*****



ಮಾರ್ಸೆಲಿನೋ - ಪ್ರಶಾಂತ್ ಇಗ್ನೇಷಿಯಸ್




1955 ರಲ್ಲಿ ಬಿಡುಗಡೆಯಾದ ಮಾರ್ಸೆಲಿನೋ ಪಾನ್ ಇ ವಿನೋ ಎಂಬುದು ನಿಜಕ್ಕೂ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ನಿಲ್ಲಬಲ್ಲ ಚಿತ್ರ. ಸರಳವಾದ ಕಥೆಯೊಂದನ್ನು ಅತ್ಯಂತ ಸುಂದರ ಹಾಗೂ ಆಪ್ತವಾಗಿ ಚಲನ ಚಿತ್ರದ ಮೂಲಕ ಮುಂದಿಡುವ ಕಾರ್ಯವನ್ನು 50-60ರ ದಶಕದಲ್ಲಿ ಹಲವಾರು ನಿರ್ದೇಶಕರು ಜಾಗತೀಕ ಮಟ್ಟದಲ್ಲಿ ಮಾಡಿದ್ದರು. ’ಮಾರ್ಸೆಲಿನೋ’ ಆ ಚಿತ್ರಗಳ ಸಾಲಿಗೆ ಸೇರಬಹುದಾದಂತ ಚಿತ್ರ. ಲಡಿಸ್ಲೋ ವಜ್ಡ ಎಂಬ ನಿರ್ದೇಶಕನ ಕೈಚಳಕದಲ್ಲಿ ಮೂಡಿ ಬಂದ ಈ ಸ್ಪಾನಿಷ್ ಭಾಷೆಯ ಚಿತ್ರಕ್ಕೆ ಭಾಷೆಯ ಹಂಗಿಲ್ಲ. ಭಾಷೆ ಅರ್ಥವಾಗದಿದ್ದರೂ ಚಿತ್ರ ಹೊರಡಿಸುವ ಭಾವನಾತ್ಮಕ ತರಂಗಗಳು ನೋಡುಗರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ. ಒಂದು ಚಿತ್ರ ನಿರ್ಮಾಣದಲ್ಲಿ ಬೇಕಾದ ಅಷ್ಟೂ ಮೂಲಭೂತ ತಾಂತ್ರಿಕ ಪರಿಭಾಷೆಯನ್ನು, ಅಚ್ಚುಕಟ್ಟುತನವನ್ನು, ಕಲಾವಂತಿಕೆಯನ್ನು ಬಳಸಿಕೊಂಡಿರುವ ಈ ಚಲನಚಿತ್ರ ಅಂದಿನ ಕಾಲಕ್ಕೆ ಹಣ ಗಳಿಕೆಯಲ್ಲೂ, ಖ್ಯಾತಿಯಲ್ಲೂ ಯಶಸ್ವಿಯಾಯಿತು.

ಚಿತ್ರದ ವಸ್ತು ಸರಳ. ಸ್ಪೇನಿನ ಹಳ್ಳಿಯೊಂದರಲ್ಲಿ ಫ್ರಾನ್ಸಿಸ್ಕನ್ ಗುರುಗಳು ಬಂದು, ಯುದ್ಧದಿಂದ ಬಿದ್ದು ಹೋಗಿದ್ದ ಹಳೆಯ ಕಟ್ಟಡವೊಂದರಲ್ಲಿ ತಮ್ಮ ಸೇವಾ ಜೀವನ ಆರಂಭಿಸುತ್ತಾರೆ. ಮೂವರಿಂದ ಪ್ರಾರಂಭವಾದ ಅವರ ಗುರುಮಠಕ್ಕೆ ಅಲ್ಲಿನ ಸ್ಥಳೀಯ ಮೇಯರ್ ಆಸರೆಯಾಗಿ ನಿಲ್ಲುತ್ತಾನೆ. ಕ್ರಮೇಣ 12 ಜನರಿರುವ ಗುರು ನಿಲಯಕ್ಕೆ ಅನಪೇಕ್ಷಿತ ಅತಿಥಿಯೊಬ್ಬ ಒಂದು ವಾರದ ಎಳೇಮಗುವಿನ ರೂಪದಲ್ಲಿ ಬರುತ್ತದೆ. ಮಗುವನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕೆ? ಯಾರಿಗಾದರೂ ಕೊಡಬೇಕೇ? ಎಂಬ ಗೊಂದಲ ಗುರುಗಳದ್ದು. ಮುದ್ದು ಮಗು ತಮ್ಮ ಬಳಿಯೇ ಇರಲಿ ಎಂಬುದು ಅವರ ಆಸೆಯಾದರೂ ತಮ್ಮ ಧಾರ್ಮಿಕ ಜೀವನ ಮಗುವಿನ ಪಾಲನೆಯಲ್ಲಿ ಕಳೆದು ಹೋಗಬಾರದೆಂಬ ಕರ್ತವ್ಯ ಪ್ರಜ್ಞೆ ಅವರಲ್ಲಿ ಜಾಗೃತವಾಗುತ್ತದೆ.

ಹತ್ತಿರದ ಹಳ್ಳಿಗೆ ಹೋಗಿ ಅಲ್ಲಿನ ಅನೇಕರನ್ನು ಕೇಳಿಕೊಂಡರೂ, ಮಗುವನ್ನು ತೆಗೆದುಕೊಳ್ಳಲು ಯಾರೂ ಸಿದ್ದರಿಲ್ಲ. ಹಳ್ಳಿಯಲ್ಲಿನ ವ್ಯಾಪಾರಸ್ಥನೊಬ್ಬ ಮಗುವನ್ನು ಸಾಕಲು ಒಪ್ಪಿದರೂ ಅವನ ಜೀವನ ವಿಧಾನ, ಆತನ ಸ್ವಭಾವವನ್ನು ನೋಡಿ ಗುರುಗಳೇ ಅವನಿಗೆ ಮಗುವನ್ನು ಕೊಡಲು ನಿರಾಕರಿಸುತ್ತಾರೆ. ಮುಂದೆ ಅವನೇ ಆ ಊರಿಗೆ ಮೇಯರ್ ಆಗುತ್ತಾನೆ. ಹಳೆಯ ಮೇಯರ್ ಆ ಗುರುಗಳಿದ್ದ ಜಾಗವನ್ನು ಅವರಿಗೇ ನೊಂದಾಯಿಸಲು ಬಯಸಿದಾಗ, ತಮ್ಮದು ಏನಿದ್ದರೂ ಬೇಡಿ, ದುಡಿಯುವ ಜೀವನ ವಿಧಾನ, ಆಸ್ತಿ ಮಾಡುವುದು ತಮ್ಮ ಸಂಸ್ಥೆಯ ನಿಯಮಕ್ಕೆ ವಿರುದ್ಧ ಎಂದು ಗುರುಗಳು ನಿರಾಕರಿಸುತ್ತಾರೆ.

ಇತ್ತ ಮಗುವನ್ನು ತಾವೇ ಸಾಕಲು ಗುರುಗಳು ನಿರ್ಧರಿಸಿ, ಒಬ್ಬೊಬ್ಬರು ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಮಗು ಆ ಗುರು ನಿಲಯದಲ್ಲೇ ಎಲ್ಲರ ಮುದ್ದಿನ ಮಗುವಾಗಿ ಬೆಳೆಯುತ್ತದೆ. ಮಗು ಬಾಲಕನಾಗಿ, ಮಾರ್ಸೆಲಿನೋ ಎಂಬ ಹೆಸರಿನಿಂದ ಬೆಳೆದು ತನ್ನ ತುಂಟತನದಿಂದ ಎಲ್ಲರ ಪ್ರೀತಿ ಗಳಿಸುತ್ತಾನೆ. ಅಲ್ಲಿನ ಒಂದೊಂದು ಗುರುವಿಗೂ ಒಂದೊಂದು ಅಡ್ಡ ಹೆಸರನ್ನು ಇಟ್ಟು, ಅದೇ ಹೆಸರು ಆ ನಿಲಯದಲ್ಲಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುತ್ತಾನೆ. ಅಲ್ಲಿನ 12 ಗುರುಗಳ ಲಾಲನೆ, ಪಾಲನೆ, ಪ್ರೀತಿ ದೊರಕಿದರೂ ತಾಯಿ ಪ್ರೀತಿಗಾಗಿನ ಹಂಬಲ ಮಾರ್ಸೆಲಿನೋನಲ್ಲಿ ಕಾಣುತ್ತದೆ. ತನ್ನ ನಿಲಯಕ್ಕೆ ಬಂದ ತಾಯೊಬ್ಬಳ ಮಗನ ಹೆಸರು ಮಾನುಯೇಲ್ ಎಂದು ತಿಳಿದು, ಕಾಲ್ಪನಿಕ ಮಾನುಯೇಲ್ ಎಂಬ ಗೆಳೆಯನೊಂದಿಗೆ ಮಾತನಾಡುತ್ತಾ ದಿನ ಕಳೆಯುತ್ತಾನೆ. ಗುರುಗಳ ನಡುಕಟ್ಟಿನ ಹಗ್ಗವನ್ನು ಮತ್ತೊಬ್ಬರದಕ್ಕೆ ಕಟ್ಟಿಬಿಡುವುದು, ದೇವಾಲಯದ ಘಂಟೆಯ ಶಬ್ದ ಕೇಳದಂತೆ ಅದಕ್ಕೆ ಬಟ್ಟೆ ಕಟ್ಟುವುದು, ಪಾತ್ರೆಯಲ್ಲಿ ಕಪ್ಪೆಗಳನ್ನು ಇಡುವುದು, ದೇವಾಲಯದ ತೀರ್ಥ ತೊಟ್ಟಿಯಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಡುವುದು... ಹೀಗೆ ಸಾಗುತ್ತದೆ ಅವನ ತುಂಟಾಟ.
ಗುರು ನಿಲಯದ ಮಹಡಿಯಲ್ಲಿ ಹಳೆಯ ವಸ್ತು, ಸಾಮಾನುಗಳನ್ನು ಹಾಕಿರುತ್ತಾರೆ. ಅಲ್ಲಿಗೆ ತುಂಟ ಮಾರ್ಸೆಲಿನೋ ಹೋಗಬಾರದೆಂಬ ಕಾರಣದಿಂದ ’ಮೇಲೆ ಒಬ್ಬ ದೊಡ್ಡ ಮನುಷ್ಯನಿದ್ದಾನೆ, ಅಲ್ಲಿಗೆ ಹೋದರೆ ನಿನ್ನನ್ನು ಅಪಹರಸಿ ಬಿಡುತ್ತಾನೆ’ ಎಂದು ಗುರುಗಳೆಲ್ಲಾ ಮಾರ್ಸೆಲಿನೋನನ್ನು ಹೆದರಿಸಿರುತ್ತಾರೆ. ಆದರೆ ತುಂಟ ಮಾರ್ಸೆಲಿನೋ ಕುತೂಹಲ ಇನ್ನೂ ಹೆಚ್ಚಾಗುತ್ತದೆ. ಆ ಮಹಡಿಗೆ ಹೋಗುವ ಸಾಹಸವನ್ನು ಹಲವಾರು ಬಾರಿ ಮಾಡಿ ಕೊನೆಗೊಮ್ಮೆ ಯಶಸ್ವಿಯಾಗುತ್ತಾನೆ.

ಮೇಲೆ ಹೋದಾಗ ಅವನಿಗೆ ಕಾಣುವುದು ಶಿಲುಬೆ ಮೇಲಿನ ಯೇಸುವಿನ ಪ್ರತಿಮೆ. ಯಾತನೆಯ ಆ ಪ್ರತಿಮೆಯ ಮುಖ ನೋಡಿದಾಗ ’ಈ ವ್ಯಕ್ತಿಯ ಮುಖದಲ್ಲಿ ಹಸಿವು ಕಾಣುತ್ತಿದೆ’ ಎಂದು ಹೋಗಿ ಒಂದಷ್ಟು ರೊಟ್ಟಿ ತರುತ್ತಾನೆ. ಮುಗ್ಧ ಮಾರ್ಸೆಲಿನೋ ಸಹಜವೆಂಬಂತೆ ಯೇಸುವಿನೊಂದಿಗೆ ಮಾತನಾಡುತ್ತಾನೆ. ಪವಾಡ ಸದೃಶ ರೀತಿಯಲ್ಲಿ ಪ್ರತಿಮೆಗೆ ಜೀವ ಬಂದು ಯೇಸುವೇ ಆ ರೊಟ್ಟಿಯನ್ನು ತಿನ್ನುತ್ತಾರೆ. ಇಲ್ಲಿಂದ ಶುರುವಾಗುವ ಅವರಿಬ್ಬರ ನಡುವಿನ ಒಡನಾಟ ಆತ್ಮೀಯವಾಗಿ ಮುಂದುವರಿಯುತ್ತದೆ. 

ಇತ್ತ ಮಾರ್ಸೆಲಿನೋ ವರ್ತನೆಯಲ್ಲಿ ಆಗುವ ಬದಲಾವಣೆಗಳು ಗುರುಗಳೆಲ್ಲರ ಗಮನ ಸೆಳೆಯುತ್ತದೆ. ಹಿರಿಯ ಗುರುಗಳು ಮಾರ್ಸೆಲಿನೋಗೆ ಹೆಚ್ಚು ಹತ್ತಿರವಾದ ಅಡುಗೆ ಮನೆಯ ಉಸ್ತುವಾರಿ ಗುರುಗಳ ಬಗ್ಗೆ ಮಾರ್ಸೆಲಿನೋ ಬಗ್ಗೆ ವಿಚಾರಿಸುತ್ತಾರೆ. ಅಡುಗೆ ಉಸ್ತುವಾರಿ ಗುರುಗಳು ಸಹ ಕಾಣೆಯಾಗುತ್ತಿರುವ ರೊಟ್ಟಿ ಹಾಗೂ ದ್ರಾಕ್ಷಾರಸದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಆಗ ಹಿರಿಯ ಗುರುಗಳು ಮಾರ್ಸೆಲಿನೋವನ್ನು ಹಿಂಬಾಲಿಸಿ ಆ ರೊಟ್ಟಿ ಹಾಗೂ ದ್ರಾಕ್ಷಾರಸವನ್ನು ಆತ ಏನು ಮಾಡುತ್ತಿದ್ದಾನೆ ನೋಡಿ ತಿಳಿದುಕೊಳ್ಳಬೇಕೆಂದು ಉಸ್ತುವಾರಿ ಗುರುಗಳಿಗೆ ಹೇಳುತ್ತಾರೆ.

ಅದರಂತೆ ಗುರುಗಳು ಮಾರ್ಸೆಲಿನೋನನ್ನು ಹಿಂಬಾಲಿಸುತ್ತಾರೆ. ಮಹಡಿಯ ಕೋಣೆಯಲ್ಲಿ ಮಾರ್ಸೆಲಿನೋ ಯೇಸುವಿನೊಡನೆ ಆಪ್ತವಾಗಿ ಮಾತನಾಡುತ್ತಿರುವುದನ್ನು ನೋಡಿ ದಂಗಾಗುತ್ತಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಚಿತ್ರ ನೋಡಿ ಆನಂದಿಸಬೇಕು.

ಅತ್ಯಂತ ಸರಳ ನಿರೂಪಣಾ ಶೈಲಿಯಲ್ಲಿ ಚಿತ್ರಿತವಾಗಿರುವ ಚಿತ್ರ ನೋಡುಗರನ್ನು ಮೊದಲ ದೃಶ್ಯದಿಂದಲೂ ತನ್ನತ್ತ ಸೆಳೆದುಕೊಳ್ಳುತ್ತದೆ. ಯಾವುದೇ ರೀತಿಯ ವೈಭವಗಳು ಇಲ್ಲಿದಿದ್ದರೂ ಚಿತ್ರ ತಾಂತ್ರಿಕವಾಗಿ ಕಥೆಗೆ ಬೇಕಾದಷ್ಟು ಅಚ್ಚುಕಟ್ಟಾಗಿದ್ದು ಕಣ್ಣಿಗೆ ತಂಪೆರೆಯುತ್ತದೆ. ಛಾಯಾಗ್ರಹಣ ಹಾಗೂ ಸಂಕಲನವು ಅತ್ಯಂತ ನೈಜವಾಗಿದ್ದು, ನಿಮ್ಮ ನಡುವಿನ ದೃಶ್ಯಗಳನ್ನೇ ನೋಡುತ್ತಿದ್ದೇವೇನೋ ಎನಿಸದಿರದು. ಹಿನ್ನೆಲೆ ಸಂಗೀತವೂ ಚಿತ್ರಕ್ಕೆ ಪೂರಕವಾಗಿದೆ.

ಆದರೆ ಚಿತ್ರ ಮನದಲ್ಲಿ ನಿಲ್ಲುವುದು ಚಿತ್ರದಲ್ಲಿನ ನಟರ ಆಪ್ತ ಅಭಿನಯದಿಂದ. 12 ಜನ ಗುರುಗಳು ನಿಮ್ಮಲ್ಲಿ ಭಕ್ತಿಯನ್ನು, ಪ್ರೀತಿಯನ್ನು, ಅವರ ಜೀವನ ಶೈಲಿಯ ಬಗ್ಗೆ ಅನುಕಂಪವನ್ನು ಹುಟ್ಟಿಸುತ್ತಾರೆ. ಇನ್ನು ಬಾಲಕನ ಪಾತ್ರದಲ್ಲಿ ಪಬ್ಲಿಟೋ ಕಾಲ್ವೋ ನಟಿಸುವ ಗೋಜೆಗೆ ಹೋಗಿಲ್ಲ. ತನ್ನ ಮುಗ್ದ ಚಲನವಲನವನ್ನು ಕ್ಯಾಮೆರಾ ಮುಂದೆ ಮುಂದುವರಿಸಿದ್ದಾನೇನೋ ಎನಿಸುತ್ತದೆ. ಮುಗ್ಧ ನಗು, ತುಂಟಾಟ, ಯೇಸುವಿನ ಪ್ರತಿಮೆಯ ಮುಂದಿನ ಕಾರುಣ್ಯ, ಕಣ್ಣುಗಳಲ್ಲಿನ ತನ್ಮಯತೆ ಎಲ್ಲದರಲ್ಲೂ ವಯಸ್ಸಿಗೆ ಮೀರಿದ ನಟನೆಯಿಂದ ಕಾಲ್ವೋ ಅಜರಾಮರವಾಗಿ ಉಳಿಯುತ್ತಾನೆ. 

ಪ್ರತಿ ದೃಶ್ಯದಲ್ಲೂ ನಿರ್ದೇಶಕರ ಕಲಾ ನೈಪುಣ್ಯತೆ ಎದ್ದು ಕಾಣುತ್ತದೆ. ತಾಂತ್ರಿಕತೆ ಹಾಗೂ ಅಭಿನಯ ಎರಡರಲ್ಲೂ ಪೂರ್ಣವಾದ ಕೆಲಸವನ್ನು ತೆಗೆಯುವಲ್ಲಿ ನಿರ್ದೇಶಕರ ಶ್ರಮ, ಪ್ರೀತಿ ಕಾಣುತ್ತದೆ. ಕೊನೆಗೆ ಇದೊಂದು ಚಲನಚಿತ್ರದಂತೆ ಕಾಣದೆ ದಿನ ನಿತ್ಯದ ಚಲನವಲನದ ದೃಶ್ಯ ದಾಖಾಲಾತಿಯೇನೋ ಎಂಬಂತೆ ಕಾಣುತ್ತದೆ.

ಒಮ್ಮೆ ನೋಡಿ. ಯುಟ್ಯೂಬ್ ನಲ್ಲಿ ಲಭ್ಯವಿದೆ. Marceleno Pan Y Vino ಎಂದು ಹುಡುಕಿ ನೋಡಿ.



*******



ಕೊಡುವುದ ಕಲಿಸೆಮಗೆ ಕ್ರಿಸ್ತ - ಫಾದರ್ ಜಾನ್ ಪ್ರದೀಪ್ ಯೇ.ಸ.


ಈ ಜಗತ್ತಿಗೆ ಪ್ರಭು ಕ್ರಿಸ್ತನ ಆಗಮನವಾಗಿ ಇಗಾಗಲೇ 2018 ವರುಷಗಳು ಉರುಳಿವೆ. ಆದರೆ ಆತನ ಬೋಧನೆ ಸರ್ವಕಾಲಕ್ಕೂ ಅನ್ವಯವಾಗುತ್ತದೆ. ಈ ವಾಕ್ಯಗಳನ್ನು ಯಾವುದೋ ಬೈಬಲ್ ವಿವರಣಾ ಗ್ರಂಥ (ಕಾಮೆನ್ಟರಿ) ವನ್ನು ಓದಿ ಬರೆಯುತ್ತಿಲ್ಲ. ಬದಲಾಗಿ ಕಳೆದ ಕೆಲವು ತಿಂಗಳ ಹಿಂದೆ ನಾನು ಖುದ್ದಾಗಿ ಕೇಳಿದ ಹಾಗೂ ಕಂಡ ಘಟನೆಗಳ ಆಧಾರದ ಮೇಲೆ ಈ ಮೇಲಿನ ವಾಕ್ಯಗಳನ್ನು ಉಲ್ಲೇಖಿಸುತ್ತಿದ್ದೇನೆ. ನಾವೀಗ ಇಪ್ಪತ್ತೊಂದನೆ ಶತಮಾನದಲ್ಲಿ ಜೀವಿಸುತ್ತಿದ್ದೇವೆ. ಇಂದಿಗೂ ಕ್ರಿಸ್ತನ ಸುವಾರ್ತೆ ಅರ್ಥಗರ್ಭಿತವಾಗಿದೆ.


ಕ್ರಿಸ್ತನ ಬೋಧನೆ (ಶ್ರೀಮಂತರಿಗೆ ಸವಾಲು, ಲೂಕ 18: 24-25)

ಯೇಸು, ಸಿರಿವಂತರಿಗೆ ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟೊಂದು ಕಷ್ಟ! ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಕಣ್ಣಿನಲ್ಲಿ ನುಸುಳುವುದು ಸುಲಭ! ಎಂದರು. 



ಘಟನೆ-1

ನನಗೆ ಪರಿಚಿತ ಒಬ್ಬ ಆಗರ್ಭ ಶ್ರೀಮಂತ ಕ್ರೈಸ್ತ ಕುಟುಂಬದಲ್ಲಿ ರಾಂಚಿಯ ಒಬ್ಬ ಹುಡುಗಿ ಕಳೆದ ಒಂದು ವರುಷದಿಂದ ಮನೆಕೆಲಸ ಮಾಡುತ್ತಿದ್ದಳು. ಪರೀಕ್ಷೆ ಬರೆಯಬೇಕು ಎಂದು ಹೇಳಿ ತನ್ನ ಹುಟ್ಟೂರಿಗೆ ವಾಪಸ್ಸು ಹೋದಳು. ಆ ಮನೆಯ ಒಡತಿ ಒಂದು ವರ್ಷದ ಸಂಪೂರ್ಣ ವೇತನವನ್ನು ಆಕೆಗೆ ನೀಡಿರಲಿಲ್ಲ. ಹದಿಮೂರು ಸಾವಿರ ಬಾಕಿಯಿತ್ತು. ಊರಿಗೆ ಹೋದ ಹುಡುಗಿ ಯಾವ ಕಾರಣದಿಂದಲೋ ವಾಪಸ್ಸು ಬರಲಿಲ್ಲ. ಆಕೆಯ ಅಕ್ಕ ನನ್ನ ಬಳಿ ಕೆಲಸ ಮಾಡುತ್ತಿದ್ದರು. ಬಾಕಿ ಹಣವನ್ನು ಕೇಳಿ ತರಲು ಅಕ್ಕನನ್ನು ಕಳುಹಿಸಿದೆ. ಬಾಕಿ ಹಣ ಕೇಳಲು ಹೋದ ಅಕ್ಕನಿಗೆ ಆ ಮನೆಯ ಒಡತಿ ನೀಡಿದ್ದು ಉದ್ದವಾದ ಒಂದು ಲಿಸ್ಟ್. ಊಟ-ವಸತಿಗೆಂದು ಹತ್ತು ಸಾವಿರ ಕಡಿತಗೊಳಿಸಿ ಕೇವಲ ಮೂರು ಸಾವಿರ ಕೊಟ್ಟಳು ಆ ಮನೆಯ ಒಡತಿ. ಪ್ರತಿನಿತ್ಯ ನಾ ಕಾಣುವಂತೆ ದಿವ್ಯ ಬಲಿಪೂಜೆಯಲ್ಲಿ ಹಾಜರಿರುವ ಈ ಐಶ್ವರ್ಯವಂತ ಕುಟುಂಬದಲ್ಲಿ ಉದಾರತೆ ಕಣ್ಮರೆಯಾಗಿಲ್ಲವೇ? 



-o-



ಕ್ರಿಸ್ತನ ಬೋಧನೆ (ಬಡ ವಿಧವೆಯ ಬಿಡಿಗಾಸು: ಲೂಕ 21, 1-4)

ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಯನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು. ಅಷ್ಟರಲ್ಲಿ ಒಬ್ಬ ಬಡವಿಧವೆಯು ಅಲ್ಲಿಗೆ ಬಂದು, ತಾಮ್ರದ ಚಿಕ್ಕ ನಾಣ್ಯಗಳನ್ನು ಕಾಣಿಕೆಯಾಗಿ ಹಾಕಿದಳು. ಅದನ್ನು ಕಂಡ ಯೇಸು , ಈ ಬಡ ವಿಧವೆಯು ಎಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅವರೆಲ್ಲರೂ ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು: ಈಕೆಯಾದರೋ ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲ ಕೊಟ್ಟುಬಿಟ್ಟಳು, ಎಂದರು.





ಘಟನೆ-2



ಕೆಲವು ತಿಂಗಳ ಹಿಂದೆ ಪರಿಚಯವಾದ ಬೆಂಗಳೂರು ಧರ್ಮಕ್ಷೇತ್ರಕ್ಕೆ ಸೇರಿದ ಯಾಜಕರೊಬ್ಬರು ತಾನು ಸೇವೆ ಸಲ್ಲಿಸಿದ ಒಂದು ಧರ್ಮಕೇಂದ್ರದಲ್ಲಿ ಕೆಲವು ವರುಷಗಳ ಹಿಂದೆ ಆದ ಅನುಭವವನ್ನು ಸಂತಸದಿಂದ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರ ಧರ್ಮಕೇಂದ್ರಕ್ಕೆ ಸೇರಿದ ಒಬ್ಬ ಬಡ ಕ್ರೈಸ್ತ ಮಹಿಳೆ ಬಸ್ಸು ನಿಲ್ದಾಣದಲ್ಲಿ ದಿನನಿತ್ಯ ಹೂ ಮಾರುತ್ತಿದ್ದರು. ಒಂದು ದಿನ ತಾನು ಅನೇಕ ದಿನದಿಂದ ಸಂಪಾದಿಸಿದ ಸುಮಾರು ಏಳು ಸಾವಿರ ರೂಪಾಯಿಗಳನ್ನು ತಂದು ಈ ಯಾಜಕನ ಕೈಗಿಟ್ಟು ಈ ರೀತಿ ನುಡಿಯುತ್ತಾರೆ: “ಸ್ವಾಮಿ, ಈ ಹಣವನ್ನು ಧರ್ಮಕೇಂದ್ರದ ಕೆಲವು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಿ” ಎಂದು. ಈಕೆಯ ಬದುಕಿನ ಪರಿಸ್ಥಿತಿಯನ್ನು ಅರಿತಿದ್ದ ಗುರುಗಳು ಹೇಳುತ್ತಾರೆ: “ದಯವಿಟ್ಟು ಬೇಡಿ ಅಮ್ಮ. ಈ ಹಣವನ್ನು ನೀವೇ ಯಾವುದಕ್ಕಾದರೂ ಬಳಸಿಕೊಳ್ಳಿ” ಎಂದು. ಆದರೂ ಈ ಬಡ ಮಹಿಳೆ ಒಪ್ಪದೇ ಒತ್ತಾಯಪೂರ್ವಕವಾಗಿ ಕೊಟ್ಟ ಹಣವನ್ನು ಸ್ವೀಕರಿಸಿ ಧರ್ಮಕೇಂದ್ರದ ಪಾಲನಾ ಸಮಿತಿಯ ಮುಂದಿಡುತ್ತಾರೆ. ಪಾಲನಾ ಸಮಿತಿಯ ಸಲಹೆಯಂತೆ ಬಡಮಕ್ಕಳ ಕ್ಷೇಮಾಭಿವೃದ್ಧಿಗೋಸ್ಕರವೇ ಒಂದು ನಿಧಿ ಸ್ಥಾಪಿಸುತ್ತಾರೆ. ಇವತ್ತಿಗೆ ಆ ನಿಧಿಯಲ್ಲಿ ಸುಮಾರು 10 ಲಕ್ಷ ಸಂಗ್ರಹವಾಗಿದೆ. 



ಸ್ನೇಹಿತರೇ, ತಪಸ್ಸು ಕಾಲದ ಹೊಸ್ತಿಲಲ್ಲಿ ನಾವಿದ್ದೇವೆ. ಲಯೋಲದ ಸಂತ ಇಗ್ನಾಸಿಯವರು ನುಡಿಯುತ್ತಿದ್ದರು: ಪ್ರೀತಿಯನ್ನು ಹೆಚ್ಚಾಗಿ ಬರೀ ಮಾತಿನಲ್ಲಿ ಅಲ್ಲ. ಬದಲಾಗಿ ಕಾರ್ಯರೂಪದಲ್ಲಿ ತೋರಬೇಕು. ಕ್ರಿಸ್ತನ ತ್ಯಾಗಮಯ ಬದುಕು, ಘಟನೆ-2 ರ ಬಡ ಮಹಿಳೆಯಲ್ಲಿದ್ದ ಉದಾರ ಮನಸ್ಸು ನಮ್ಮಲ್ಲೂ ಹೆಚ್ಚಾಗಿ ಬೆಳೆಯಲಿ. ಘಟನೆ-1 ರಲ್ಲಿನ ಅ ಸಿರಿವಂತ ಮನೆಯೊಡತಿಯಲ್ಲಿ ಕಾಣುವ ಸ್ವಾರ್ಥ ಲೆಕ್ಕಾಚಾರ ನಮ್ಮಿಂದ ದೂರ ಸರಿಯಲಿ. 



’ಕೊಡುವುದ ಕಲಿಸೆಮಗೆ ಕ್ರಿಸ್ತ’ ಎಂಬುದೇ ಈ ತಪಸ್ಸುಕಾಲದ ಪರ್ಯಂತ ನಮ್ಮ ಮನದಾಳದ ಕೋರಿಕೆಯಾಗಲಿ.



*******



ಮೌನ



ಮೌನ,
ಭಗ್ನ ಹೃದಯಗಳ ಮೌನ
ಹಸಿವಿನ ಮೌನ
ಪದಗಳ ನಡುವಿನ ಮೌನ
ಪರ್ವತ ಕಣಿವೆಯೊಡಲಿನ ಮೌನ
ಕಡಲಿನ ಅಲೆಗಳ ನಡುವಿನ ಮೌನ
ಹಕ್ಕಿಯ ಮೌನ
ಕಥೆಗಳೊಳಗಿನ ಮೌನ
ರಾಗ ಆಲಾಪನೆಗಳ ಮೌನ
ಮಿಡಿದ ತಂತಿಯ ಮೌನ
ಈ ಎಲ್ಲಾ ಮೌನಗಳಲ್ಲೂ
ಮಾತನಾಡುವುದೊಂದೇ
ಅದೇ ಆತ್ಮ ಮೌನ


ಮೌನವ ಬಯಸುವೆಯಾ?


ಮೌನವ ಬಯಸುವೆಯಾ?
ಮಾರುಕಟ್ಟೆಯ ಮಂಡಿಯಲ್ಲಿ
ಜನಜಂಗುಳಿಯ ಹಾದಿಬೀದಿಗಳಲ್ಲಿ
ಒತ್ತಡ ಕೆಲಸಕಾರ್ಯಗಳಲ್ಲಿ
ಬಯಸಿ ಮೌನದಿಂದಿರು
ಆದರೆ
ಅನ್ಯಾಯವು ನ್ಯಾಯವ
ಕಟ್ಟಿ ಬಡಿಯುವಾಗ
ಮೌನವಹಿಸಬೇಡ
ಹಾಗಾಗಿದ್ದಲ್ಲಿ ನಿನ್ನೆಲ್ಲಾ
ದಿವ್ಯಮೌನಕ್ಕೆ
ಅರ್ಥವಿರದು
¨ ಜೀವಸೆಲೆ

ಮಹಿಳಾ ದಿನಾಚರಣೆ: ಒಂದು ಚಿಂತನೆ - ಸಿ ಮರಿಜೋಸೆಫ್


ಮಾರ್ಚ್ ಎಂಟರಂದು ಜಗತ್ತಿನಾದ್ಯಂತ ಮಹಿಳಾ ದಿನವೆಂದು ಆಚರಿಸಲಾಗುತ್ತದೆ. ಇಂಡಿಯಾದಲ್ಲಿ ಮೊದಲ ಬಾರಿಗೆ 1931ರಲ್ಲಿ ಲಾಹೋರಿನಲ್ಲಿ ಸಂಘಟಿಸಿದ್ದ ‘ಸಮಾನತೆಗಾಗಿ ಏಷ್ಯಾದ ಮಹಿಳಾ ಸಮಾವೇಶ’ದಲ್ಲಿ ಈ ದಿನಾಚರಣೆ ಆಚರಿಸಲಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಮಹಿಳೆಯರಿಗೆ ಸಮಾನತೆ ನೀಡಬೇಕೆಂಬುದರ ಜೊತೆಗೆ ಬಂಡವಾಳಶಾಹಿ, ಪುರುಷ ಪ್ರಧಾನ ಸಮಾಜದ ಶೋಷಣೆಯ ವಿರುದ್ಧ ಮತ್ತು ಮಹಿಳಾ ಉನ್ನತೀಕರಣಕ್ಕಾಗಿ ನಡೆದ ಚಳವಳಿಯ ಸಂಕೇತವಾಗಿದೆ.

ಮಹಿಳೆ, ಹೆಣ್ಣು, ಹೆಂಗಸು, ಸ್ತ್ರೀ, ವನಿತೆ, ಪ್ರಮೀಳೆ, ಪ್ರಮದೆ, ರಮಣಿ ಎಂದೆಲ್ಲ ಕರೆಸಿಕೊಳ್ಳುವ ನಮ್ಮ ನಿಮ್ಮ ಅಕ್ಕಂದಿರು ಅಮ್ಮಂದಿರು ಅಜ್ಜಿಯರು ಅತ್ತೆ ದೊಡ್ಡಮ್ಮ ಚಿಕ್ಕಮ್ಮ ಅತ್ತಿಗೆ ಶಿಕ್ಷಕಿ ವೈದ್ಯೆ ನರ್ಸು ನಮ್ಮ ಮನೆಯಲ್ಲಿ ಕಚೇರಿಯಲ್ಲಿ ಕೆಲಸ ಮಾಡುವ ಹೆಂಗಸರು ಕನ್ಯಾಮಠದ ಸೋದರಿಯರು, ಮುಖ್ಯವಾಗಿ ಹೆಂಡತಿ ಇವರೆಲ್ಲ ನಾವು ಪ್ರತಿನಿತ್ಯ ಕಾಣುವ ನಮ್ಮೊಂದಿಗೆ ಸಮಾಜದಲ್ಲಿ ಜೀವಿಸುವ ಮಹಿಳೆಯರೇ ಆಗಿದ್ದಾರೆ. ನಾವು ದಿನಂಪ್ರತಿ ಮಾಡುವ ಜಪಗಳಲ್ಲಿನ ಒಡತಿ ಮಾತೆ ಮರಿಯಮ್ಮನವರೂ ಒಬ್ಬ ಭಾಗ್ಯವಂತ ಮಹಿಳೆ ಎಂದರಿತಿದ್ದೇವೆ. 






ಯೇಸುವಿನ ಬದುಕಿನುದ್ದಕ್ಕೂ ಹಲವಾರು ಮಹಿಳೆಯರು ಹಾದುಹೋಗುತ್ತಾರೆ. ಯೇಸುವನ್ನು ದೇವಾಲಯದಲ್ಲಿ ಮೊದಲು ದರ್ಶಿಸಿ ಪುನೀತಳಾದ ಹನ್ನಾ ಎಂಬ ವಯೋವೃದ್ಧೆ, ಅತಿಥಿ ಸತ್ಕಾರ ಮೊದಲೋ ದೈವನಿಷ್ಠೆ ಮೊದಲೋ ಎಂಬುದರ ಚಿಂತನೆ ಪಡೆದ ಮಾರ್ತಾ ಮರಿಯಾ, ಜಾರಿಹೋದ ಎಲ್ಲ ತಪ್ಪುಗಳಿಗಾಗಿ ಪ್ರಾಯಶ್ಚಿತ್ತಪಟ್ಟು ಹೊಸ ಮನುಷ್ಯಳಾದ ಮಗ್ದಲದ ಮರಿಯಾ, ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿ ಜೀವಿಸುತ್ತಿದ್ದು ದೈವೀ ವರದಾನಗಳ ಸಮಾನಹಂಚಿಕೆಯ ಬಗ್ಗೆ ಯೇಸುವಿನೊಂದಿಗೆ ವಾದ ಮಾಡಿದ ಸಮಾರಿಯಾ ಸ್ತ್ರೀ, ಇಳಿವಯಸ್ಸಿನಲ್ಲೂ ರಕ್ತಸ್ರಾವದ ಕಾರಣ ನಾಚಿಕೆಯಿಂದ ಮುದುಡಿ ಮಾನಸಿಕವಾಗಿ ನರಳಿ ಕೊನೆಗೆ ಯೇಸುವಿನ ಬಟ್ಟೆಯಂಚನ್ನು ಮುಟ್ಟಿ ಗುಣಮುಖಳಾದ ಸ್ತ್ರೀ, ಕಲ್ಲೆಸೆದು ಕೊಲ್ಲುವ ಆರೋಪ ಹೊತ್ತುಬಂದು ಯೇಸುವಿನಿಂದ ಅಭಯ ಹೊಂದಿದ ಸ್ತ್ರೀ, ಅಳಿದುಳಿದ ಎಂಜಲನ್ನವನ್ನು ನಾಯಿಗೆಸೆವಂತೆ ನಿನ್ನ ಕಿಂಚಿತ್ ವರವನ್ನು ನನಗೆ ಕೊಡು ಎಂದ ಸ್ತ್ರೀ, ಶಿಲುಬೆಹಾದಿಯಲ್ಲಿ ಯೇಸುವಿನ ದಣಿದ ಮುಖವನ್ನು ಒರೆಸಿದ ವೆರೋನಿಕಾ, ಕಪಾಲ ಬೆಟ್ಟದ ಬುಡದ ಬಳಿ ಎಂಟನೆಯ ಸ್ಥಳದಲ್ಲಿ ಯೇಸುವನ್ನು ಅತ್ತು ಗೋಳಾಡಿ ಬೀಳ್ಕೊಟ್ಟ ಮಹಿಳೆಯರು, ಯೇಸುವಿನ ಸಮಾಧಿ ದರ್ಶಿಸಿ ಅವರು ಪುನರುತ್ಥಾನರಾದರೆಂದು ಮೊದಲ ಸಂದೇಶ ಪಡೆದ ಮಹಿಳೆಯರು ಹೀಗೆ ಹಲವಾರು ಹೆಂಗಸರು ಯೇಸುಕ್ರಿಸ್ತನ ಒಡನಾಟಕ್ಕೆ ಬಂದು ಪುನೀತರಾಗುತ್ತಾರೆ ಎಂಬುದನ್ನು ಕಂಡಿದ್ದೇವೆ. ಇದರರ್ಥವೇನೆಂದರೆ ಯೇಸುಕ್ರಿಸ್ತರು ಮಹಿಳೆಯರನ್ನೂ ಪುರುಷರ ಸಮವೆಂದು ಭಾವಿಸಿದ್ದರು. 

ದೇವರು ಮೊದಲ ಮನುಷ್ಯ ಆದಾಮನನನ್ನು ಸೃಷ್ಟಿಸಿದಾಗ ಅವನಿಗೆ ಸಂಗಾತಿಯಾಗಿ ಇರಲೆಂದು ಏವಳನ್ನು ಉಂಟುಮಾಡಿ ಅವನೊಂದಿಗೆ ಜೊತೆಮಾಡಿದರು. ಅವನು ಆಕೆಯನ್ನು ತನ್ನ ಪಕ್ಕೆಯ ಪಕ್ಕೆ, ಒಡಲಿನ ಒಡಲು ಎಂದು ಭಾವಿಸಿ ತನಗೆ ಸರಿಸಮನಾಗಿ ಆಕೆಯನ್ನು ಸ್ವೀಕರಿಸಿದನು. ಪುರುಷನಿಗೆ ಸಮನಾಗಿ ಜೋಡಿಯಾಗಿರಲೆಂದು ದೇವರು ಹೆಣ್ಣನ್ನು ಸೃಷ್ಟಿಸಿದ್ದಾರೆಂದ ಮೇಲೆ ಪ್ರತಿ ಹೆಣ್ಣನ್ನೂ ದೇವರ ಸೃಷ್ಟಿ ಎಂದು ಭಾವಿಸಿ ಸಮಾನ ಗೌರವ ನೀಡಬೇಕೆಂಬುದೇ ಪವಿತ್ರ ಬೈಬಲಿನ ಆದಿ



ಕಾಂಡದ ಸಂದೇಶವಾಗಿದೆ. 

ಆದರೆ ಕ್ರಮೇಣ ಯೆಹೂದ್ಯ ಸಂಸ್ಕೃತಿಯಲ್ಲಿ ಹೆಣ್ಣನ್ನು ನಗಣ್ಯವಾಗಿಸಲಾಯಿತು. ಸಾರಾ, ರೂತ್, ಜೂಡಿತ್, ಎಸ್ತೆರ್, ಹನ್ನಾ ಎಂಬ ವನಿತೆಯರನ್ನು ಹೆಸರಿನಿಂದ ಗುರುತಿಸಲಾಗಿದೆ ಆದರೂ ಪವಿತ್ರ ಬೈಬಲಿನಲ್ಲಿ ಬಂದು ಹೋಗುವ ಎಷ್ಟೋ ಹೆಂಗಸರಿಗೆ ಹೆಸರೇ ಇಲ್ಲ.‌ ಲೋತನ ಪತ್ನಿ, ಪೇತ್ರನ ಅತ್ತೆ, ಮುಂತಾದ ಸರ್ವನಾಮಗಳಿಂದಲೇ ಅವರ ಉಲ್ಲೇಖವಿದೆ.

ಶತಶತಮಾನಗಳಿಂದ ಪ್ರಪಂಚದ ಹಲವು ಸಂಸ್ಕೃತಿಗಳಲ್ಲಿ ಹೆಣ್ಣನ್ನು ಆತ್ಮವಿಲ್ಲದವಳೆಂದು, ಕ್ಷುದ್ರಜೀವಿಯೆಂದು, ಸಂತಾನಯಂತ್ರವೆಂದು, ಅಬಲೆಯೆಂದು, ಭೋಗವಸ್ತುವೆಂದು ಪರಿಭಾವಿಸಲಾಗಿದೆ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆಯ ಪ್ರತಿರೂಪ, ಸಹನಶೀಲೆ, ಕ್ಷಮಯಾಧರಿತ್ರಿ ಎನ್ನುವ ನಮ್ಮ ದೇಶದಲ್ಲಿ ಹೆಣ್ಣನ್ನು ಅಪಮಾನಿಸಿದ ಬಗ್ಗೆ ಕಾವ್ಯಗಳೇ ಸಾರಿಹೇಳುತ್ತಿವೆ. 

ಹಲವು ಸಂಸ್ಕೃತಿಗಳ ತವರಾದ ನಮ್ಮ ದೇಶದಲ್ಲಿ ಸ್ಥೂಲವಾಗಿ ಉತ್ತರಭಾರತದ ಸಂಸ್ಕೃತಿ ಮತ್ತು ದಕ್ಷಿಣಭಾರತದ ಸಂಸ್ಕೃತಿಗಳನ್ನು ಗುರುತಿಸಬಹುದು. ಉತ್ತರಭಾರತದ ರಾಮಲಕ್ಷ್ಮಣರು ದಕ್ಷಿಣದಲ್ಲಿ ವನವಾಸದಲ್ಲಿದ್ದಾಗ ಅಲ್ಲಿ ವನವಿಹಾರ ಮಾಡುತ್ತಿದ್ದ ಶೂರ್ಪನಖಿಯು ಅವರ ಗೌರವರ್ಣದ ಬಗ್ಗೆ ಮೋಹ ತಳೆಯುತ್ತಾಳೆ.‌ ಆದರೆ ಅವಳ ಪ್ರಸ್ತಾವವನ್ನು ನಯವಾಗಿ ತಿರಸ್ಕರಿಸದೆ ಅಪಮಾನ ಮಾಡಿ ಮೂಗು ಕತ್ತರಿಸಿ ಕಳಿಸಿದ್ದರಿಂದಾಗಿ ಅಣ್ಣ ರಾವಣ ಕೆರಳಿ ಈ ಉತ್ತರಭಾರತೀಯರಿಗೆ ಹೆಣ್ಣಿನ ಬಗ್ಗೆ ಗೌರವ ನೀಡುವುದನ್ನು ಕಲಿಸುವುದಕ್ಕಾಗಿ ಸೀತೆಯನ್ನು ಅಪಹರಿಸಿದ ಎಂಬುದೇ ರಾಮಾಯಣ ಕಾವ್ಯದ ಒಳದನಿ.

ಅದೇ ರೀತಿ ಮಹಾಭಾರತದಲ್ಲಿ ದ್ರೌಪದಿಯನ್ನು ಭೋಗವಸ್ತುವಾಗಿಸಿ, ಪಗಡೆಯಾಟದ ಪಣವಾಗಿಸಿ, ತುಂಬಿದ ಸಭೆಯಲ್ಲಿ ಮಾನಭಂಗ ಮಾಡಿದ್ದೇ ಅಲ್ಲದೆ ಇಡೀ ಕಾವ್ಯದಲ್ಲಿ ಹಾಗೂ ಅದಕ್ಕೆ ಪೂರಕವಾದ ಪುರಾಣಗಳಲ್ಲಿ ಹಾದರ ಬಹುಪತಿತ್ವ ಬಹುಪತ್ನಿತ್ವ ಕಾನೀನಹುಟ್ಟನ್ನು ಗೌರವಿಸಿದರೂ ಹೆಣ್ಣನ್ನು ಅಬಲೆಯಾಗಿ ತೋರಿರುವುದು ಢಾಳಾಗಿ ಕಾಣುತ್ತದೆ.

ಹೆಣ್ಣು ತಾಯಿಯಾಗಿ ಹೊತ್ತು ಹೆತ್ತು ನೋವನನುಭವಿಸಿದರೂ ಮಕ್ಕಳ ಮೇಲೆ ಆಕೆ ತೋರುವ ಮಮತೆ ಅನನ್ಯ. ಅದಕ್ಕೇ ತಾಯಪ್ರೇಮವನ್ನು ಎಲ್ಲಕ್ಕೂ ದೊಡ್ಡದೆನ್ನುತ್ತಾರೆ ತಾಯ ಋಣವನ್ನ ತೀರಿಸಲಾಗದು ಎನ್ನುತ್ತಾರೆ. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು ತಾಯಿಯನ್ನು ಬರಿ ಸ್ತ್ರೀ ಎಂದು ವರ್ಗೀಕರಿಸಿದರೆ ಸಾಲದು ತಾಯಿ ಎಂಬ ವ್ಯಕ್ತಿತ್ವವೇ ಎಲ್ಲಕ್ಕಿಂತ ಮೇಲಾದುದು ಎನ್ನುತ್ತಾ

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ

ಎಂದು ಬಣ್ಣಿಸಿದ್ದಾರೆ. ಬಾಲಯೇಸುವನ್ನು ನಮಿಸುತ್ತಾ ಅವನನ್ನು ಹೊತ್ತು ನಮ್ಮೆಡೆಗೆ ಅಭಯ ತೋರುವ ಮೇರಿಮಾತೆಯಲ್ಲಿ ಅಮ್ಮನನ್ನು ಕಂಡ ಕವಿ ಕುವೆಂಪುನವರು,

ಇಹಳು ತಾಯಿ ಹೊರೆವುದವಳ ಹಾಲ ತೊಟ್ಟಿಲೆಂದು

ನಂಬಿ ಬಾಳು ತುಂಬಿ ಬದುಕು ಅವಳು ಪ್ರೇಮಸಿಂಧು

ಎಂದಿದ್ದಾರೆ. 

ಶರಣ ಚಳವಳಿಯ ಸಮಾನತೆಯ ಹರಿಕಾರರಿಂದ ಹಿಡಿದು ಮೈಸೂರು ಮಹಾರಾಜರವರೆಗಿನ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಜನರಾಳ್ವಿಕೆಗಳಲ್ಲೂ ಕನ್ನಡ ನಾಡಿನ ಮಹಿಳೆಯರಿಗೆ ಸಮಾನಸ್ಥಾನ ಕಲ್ಪಿಸಲಾಗಿದೆಯಾದರೂ ಮಹಿಳೆಯರ ಕುರಿತ ಜನಸಾಮಾನ್ಯರ ದೃಷ್ಟಿ ಬದಲಾಗಿಲ್ಲ. ನಮ್ಮ ದಿನನಿತ್ಯದ ಸುದ್ದಿಗಳೂ, ಟಿವಿವಾಹಿನಿಯ ಧಾರಾವಾಹಿಗಳೂ, ಚಲನಚಿತ್ರಗಳೂ ಸ್ತ್ರೀಯ ಬಗ್ಗೆ ಉದಾತ್ತ ಭಾವನೆಗಳನ್ನು ಪಸರಿಸುವ ಬದಲು ಕೀಳು ಅಭಿರುಚಿಯನ್ನೇ ಹಂಚುತ್ತಿವೆ ಎಂಬುದು ಸುಳ್ಳೇನಲ್ಲ. 

ಹೆಣ್ಣುಮಗು ಬೇಡವೆನ್ನುವ, ಭ್ರೂಣದಲ್ಲೇ ಅದನ್ನು ಹೊಸಕುವ, ಬೆಳೆದರೂ ಗಂಡುಮಕ್ಕಳ ಹಾಗೆ ಶಿಕ್ಷಣ ಮುಂತಾದ ಸವಲತ್ತು ನೀಡದ, ಕೆಲಸಕ್ಕೆ ಸಮಾನ ಕೂಲಿ ನೀಡದ, ಪ್ರತಿಭೆಗಳನ್ನು ಪ್ರೋತ್ಸಾಹಿಸದ, ವರದಕ್ಷಿಣೆಗಾಗಿ ಪೀಡಿಸುವ ಮನಃಸ್ಥಿತಿಯನ್ನು ನಾವು ಅಳವಡಿಸಿಕೊಂಡು ಆಚರಿಸುತ್ತಿದ್ದೇವೆ. ಕರ್ನಾಟಕದಲ್ಲಿ ಲಿಂಗಾನುಪಾತ 2007ರಲ್ಲಿ 1000:1004 ಇದ್ದಿದ್ದು 2016ರ ವೇಳೆಗೆ 1000 ಹುಡುಗರಿಗೆ 896 ಹುಡುಗಿಯರಿಗೆ ಕುಸಿದಿತ್ತು ಎಂಬುದು ತುಂಬಾ ಆತಂಕದ ವಿಚಾರವಾಗಿದೆ. ಶಿಶುಮರಣಪ್ರಮಾಣ ಹೆಚ್ಚಾಗಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೆಯದಾಗಿದೆ. ನಮ್ಮಲ್ಲಿ ಗರ್ಭಿಣಿ ಆರೈಕೆಗಳು ಸೋತಿವೆಯೋ ಅಥವಾ ಹೆಣ್ಣು ಭ್ರೂಣಹತ್ಯೆಗಳು ಹೆಚ್ಚಾಗಿವೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಯೂನಿಸೆಫ್ ಸಮೀಕ್ಷೆಯ ಪ್ರಕಾರ, ಶೇಕಡಾ 57 ರಷ್ಟು ಯುವಕರು ಮತ್ತು ಶೇಕಡ 55 ರಷ್ಟು ಮಹಿಳೆಯರು ಹೆಂಡತಿಗೆ ಗಂಡ ಹೊಡೆಯುವುದು ಸ್ವಾಭಾವಿಕ ಎನ್ನುತ್ತಾರಂತೆ. ಆದರೆ ನಮ್ಮ ದೇಶದಲ್ಲಿ ಮದುವೆಯಾದ ಹೆಣ್ಣುಮಕ್ಕಳನ್ನು ಗಂಡ ಮಾತ್ರವಲ್ಲ ಗಂಡನ ಮನೆಯ ಎಲ್ಲರೂ ಹಿಂಸಿಸುವುದು ಸ್ವಾಭಾವಿಕ ಎನಿಸಿದೆ. ಬಲವಾದ ಕಾನೂನುಗಳ ಬೆಂಬಲವಿದ್ದರೂ ಮಹಿಳೆಯರನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿ ನೋಡುವ ಪ್ರವೃತ್ತಿ ಬದಲಾಗಿಲ್ಲ.

ವಿಶ್ವಸಂಸ್ಥೆಯ ಸಮೀಕ್ಷಾ ವರದಿ­ಯೊಂದರ ಪ್ರಕಾರ, ಇಂಡಿಯಾದಲ್ಲಿ ಚುನಾವಣೆ ಎದುರಿಸುವ ಶೇಕಡಾ 50 ರಷ್ಟು ಮಹಿಳಾ ಅಭ್ಯರ್ಥಿ­ಗಳು ಒಂದಲ್ಲ ಒಂದು ರೀತಿಯಲ್ಲಿ ನಿಂದನೆ ಅಪಮಾನಗಳನ್ನು ಎದುರಿಸಿದ್ದಾರೆ. ಎಷ್ಟೋ ವೇಳೆ ಅವರ ಜನಪ್ರಿಯತೆಯನ್ನು ತಗ್ಗಿಸಲು ಚಾರಿತ್ರ‍್ಯಹರಣ ಮಾಡುವ ಕೀಳುಮಟ್ಟಕ್ಕೂ ಜನ ಇಳಿದಿದ್ದಾರೆ. ಚಾರಿತ್ರ‍್ಯಹರಣದ ಸಂದೇಶಗಳನ್ನು ವಾಟ್ಸಾಪಿನಲ್ಲಿ ಹರಿಬಿಡುವ ವಿಕೃತ ಸಂತೋಷದಲ್ಲಿ ಜನಸಾಮಾನ್ಯರೂ ಭಾಗಿಯಾಗಿದ್ದಾರೆಂದರೆ ನಮ್ಮ ಜನರ ಮಾನಸಿಕ ಎತ್ತರವೇನೆಂದು ಊಹಿಸಬಹುದು.

ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟಿದ್ದರೂ, ಶಿಕ್ಷಣದಲ್ಲಿ ಮುಂದಿದ್ದರೂ ನಮ್ಮ ಸಮಾಜದ ಹೆಣ್ಣು ಶೋಷಣೆಯಿಂದ ಹೊರತಾಗಿಲ್ಲ. ತಾರತಮ್ಯವನ್ನು ಇನ್ನೂ ಅನುಭವಿಸುತ್ತಿದ್ದಾಳೆ. ಪ್ರತಿದಿನ ಒಂದಿಲ್ಲೊಂದು ಕಡೆ ಅತ್ಯಾಚಾರಕ್ಕೆ ಈಡಾಗುತ್ತಿದ್ದಾಳೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಣ್ಣಿಗೆ ಈಗಲೂ ರಕ್ಷಣೆಯಿಲ್ಲ. ಎಷ್ಟೋ ಕಡೆಗಳಲ್ಲಿ ಮಾನವಸಂಪನ್ಮೂಲದಲ್ಲಿ ಹೆಣ್ಣಿನ ಪಾಲೂ ಇದೆ ಎಂಬುದನ್ನು ಕಡೆಗಣಿಸಲಾಗುತ್ತಿದೆ. ಶಿಕ್ಷಣದ ವಿಚಾರದಲ್ಲೂ ಆಕೆಗೆ ತಾರತಮ್ಯ ಎಸಗಲಾಗುತ್ತಿದೆ. ’ಹೆಣ್ಣೊಬ್ಬಳು ಕಲಿತರೆ ಅವಳ ಪರಿವಾರವೇ ಕಲಿತಂತೆ’ ಎಂಬ ಮಾತು ಮಾತಾಗಿಯಷ್ಟೇ ಬಳಕೆಯಾಗಿ ಸವಕಲಾಗಿದೆ. ಎಷ್ಟೋ ಕುಟುಂಬಗಳಲ್ಲಿ ಹೆಣ್ಣಿಗೆ ಪ್ರಾಥಮಿಕ ವಿದ್ಯೆಯಷ್ಟೇ ಪಾಲಿಗೆ ಬಂದ ಪಂಚಾಮೃತ. ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ. ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿ ಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು. ಹೆಣ್ಣು ಮಕ್ಕಳೆಲ್ಲ ಶಿಕ್ಷಿತರಾದಾಗ ಮಾತ್ರ, ಸಂವಿಧಾನದ ಕಲ್ಪನೆಯ ಭಾರತವನ್ನು ನಾವು ತಲಪಲು ಸಾಧ್ಯ.

ಎಲ್ಲಕ್ಕಿಂತಲೂ ಮುಖ್ಯವಾಗಿ ಮಹಿಳೆಯರನ್ನು ನಾವು ಗೌರವಿಸಬೇಕು. ಎಲ್ಲ ಸ್ತ್ರೀಯರಲ್ಲೂ ಅಮ್ಮನನ್ನು ಕಾಣುವುದೇ ಕನ್ನಡದ ಸಂಸ್ಕೃತಿ. 



*******



ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...