Thursday, 13 February 2020

ಮಾನವ ಕುಲದ ಆದರ್ಶ



ಪ್ರೀತಿಯ ಅನುಗೆ, ಸ್ನೇಹಾಂಜಲಿ.
ಜಗತ್ತಿನಲ್ಲಿ ತಾಯಿ ಮರಿಯಳನ್ನು ಕುರಿತು ಬರೆದಷ್ಟು ಬೇರೆ ಯಾವ ಮಹಿಳೆಯ ಬಗ್ಗೆ ಬರೆದಿಲ್ಲವೇನೋ! ಹೌದು ಈ ಒಂದು ಹೇಳಿಕೆ ಉತ್ಪ್ರೇಕ್ಷೆಯ ಮಾತಲ್ಲ. ಇದು ಸತ್ಯ. ತಾಯಿಯ ಈ ರೀತಿಯ ಪ್ರಸಿದ್ಧಿಗೆ ವಿವಿಧ ಕಾರಣಗಳಿರಬಹುದು. ಆದರೆ ಪ್ರಮುಖವಾಗಿ ನಾವು ಎರಡು ಕಾರಣಗಳನ್ನು ಗುರುತಿಸಬಹುದು: ಒಂದು ಬೇರೆ ಯಾವ ವ್ಯಕ್ತಿಗೂ ಸಿಗದ, ದೇವಪುತ್ರನಿಗೆ ತಾಯಿಯಾಗುವ ಪರಮ ಸಂತಸದ ಸೌಭಾಗ್ಯ ಅವರಿಗೆ ಲಭಿಸಿತೆಂಬ ವಿಶ್ವಾಸ; ಎರಡು ಆಧ್ಯಾತ್ಮಿಕವಾಗಿ ಮನುಷ್ಯನಿಗೆ ಬೇಕಾದ ಒಬ್ಬ ತಾಯಿಯ ಅವಶ್ಯಕತೆ. ತಾಯಿಯಲ್ಲಿ ಸಿಗುವಂತಹ ಮಮತೆಯ ಹಾಗೂ ಕಾರುಣ್ಯದ ಮನೋಭಾವ ಬೇರೆ ಯಾವ ವ್ಯಕ್ತಿಯಿಂದಲೂ ಸಿಗಲು ಸಾಧ್ಯವೇ ಇಲ್ಲ. ಈ ಕಾರಣದಿಂದಲೇ ಮರಿಯಳ ಹೆಸರಿನಲ್ಲಿ ಸಾವಿರಾರು ಚರ್ಚುಗಳು, ಪುಣ್ಯಕ್ಷೇತ್ರಗಳು ಆವಿರ್ಭವಿಸಿವೆ. ಆಕೆಗೆ ಲಕ್ಷಾಂತರ ಭಕ್ತರಿದ್ದಾರೆ. ಜತೆಗೆ ಸಾವಿರಾರು ಜನರು ಮರಿಯಳ ಪುಣ್ಯಕ್ಷೇತ್ರಗಳಿಗೆ ಹೋಗಿ ಹರಕೆ ಪ್ರಾರ್ಥನೆಗಳನ್ನು ಸಲ್ಲಿಸುವ ಪರಿಪಾಠವನ್ನು ನಾವು ದಿನನಿತ್ಯ ಕಾಣಬಹುದಾಗಿದೆ.
ಆದರೆ ಮರಿಯಳನ್ನು ಪೂಜ್ಯ ಭಾವನೆಯಿಂದ ಗೌರವಿಸುವ ನಾವು, ಅವಳನ್ನು ದೈವಿಕ ವ್ಯಕ್ತಿಯಂತೆ ನೋಡಿದ್ದೆ ಹೆಚ್ಚು. ದೇವರಿಂದ ವಿಶೇಷವಾಗಿ ಆಶೀರ್ವಾದಿಸಲ್ಪಟ್ಟವಳು, ಪುನೀತಳು, ಮಹಾತ್ಮಳು ಎಂದು ಆಕೆಯನ್ನು ನಿತ್ಯ ಸ್ತುತಿಸುತ್ತಾ ದೈವತ್ವದ ಪಟ್ಟಕ್ಕೆ ಅವಳನ್ನು ಏರಿಸುತ್ತೇವೆ ವಿನಃ ಆಕೆಯ ಮಾದರಿಯ ಜೀವನ, ವಿಶ್ವಾಸದ ಬದುಕು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಅಥವಾ ಜಾಣ ಕುರುಡರಂತೆ ನಾವು ಅವುಗಳ ಬಗ್ಗೆ ಒಂದಿನಿತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹೌದು ಆಕೆ ದೇವರ ತಾಯಿ ನಿಜ! ಆದರೆ ಆಕೆ ಕೂಡ ನಮ್ಮಂತೆ ಈ ಮಾಯಾ ಪ್ರಪಂಚದಲ್ಲಿ ಹುಟ್ಟಿ ಬೆಳೆದು ತನ್ನ ವಿಶ್ವಾಸ ಮತ್ತು ಸಂಕಲ್ಪಭರಿತ ಜೀವನದಿಂದ ಮಹಿಮಾಭರಿತಳಾದಳು ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು.
ತಾಯಿಯ ಬದುಕನ್ನು ಬಿಡಿ ಬಿಡಿಯಾದ ಘಟನೆಗಳನ್ನು ಆಧಾರಿಸಿಕೊಂಡು ಇಡಿಯಾಗಿ ನೋಡಬೇಕಾಗಿದೆ. ಅವರ ಬದುಕಿನಲ್ಲಿ ಧಾರ್ಮಿಕ ಮತ್ತು ಬದುಕಿನ ಮೌಲ್ಯಗಳು ಜೊತೆಜೊತೆಯಾಗಿ ನಡೆಯುವುದನ್ನು ಅರ್ಥಪೂರ್ಣವಾಗಿ ಗ್ರಹಿಸಬೇಕಾಗಿದೆ. ಆಗ ತಾಯಿಯ ಪಾರಮಾರ್ಥಿಕ ಬದುಕು ಅನಾವರಣಗೊಳ್ಳುತ್ತಾ ನಮ್ಮ ಆತ್ಮವಿಮರ್ಶೆಗೆ ಅನುವು ಮಾಡಿಕೊಡುತ್ತಾ ಉತ್ಕೃಷ್ಟ ಮಾದರಿಯ ಜೀವನಕ್ಕೆ ನಮಗೆ ಖಂಡಿತವಾಗಿಯೂ ಸ್ಪೂರ್ತಿಯಾಗಬಹುದು. ಅವಳು ವಹಿಸಿದ ನಾನಾ ಪಾತ್ರಗಳನ್ನು ಗಮನಿಸುತ್ತಾ ಇಡಿಯಾಗಿ ಮರಿಯಳನ್ನು ಅರ್ಥಮಾಡಿಕೊಳ್ಳಬೇಕಿದೆ. ತಾಯಿಯಾಗಿ, ಪತ್ನಿಯಾಗಿ, ಭಕ್ತೆಯಾಗಿ, ದೇವತೆಯಾಗಿ, ಕ್ರಾಂತಿಕಾರಿಯಾಗಿ, ನಾಯಕಿಯಾಗಿ, ಸತ್ಯವಂತಳಾಗಿ, ದುಃಖಿಯಾಗಿ, ಸೇವಕಿಯಾಗಿ, ಧರ್ಮಸಭೆಯ ತಾಯಿಯಾಗಿ, ಮಧ್ಯವರ್ತಿಯಾಗಿ ಅವಳು ನಿರ್ವಹಿಸಿದ ಪ್ರತಿಯೊಂದು ಪಾತ್ರವೂ ವಿಶಿಷ್ಟವಾಗಿ ಕಣ್ಣಿಗೆ ಕಟ್ಟುವಂತಿವೆ. 
ಆ ಪಾತ್ರಗಳ ಸಾರ, ಸತ್ವ, ತತ್ವಗಳು ನಮ್ಮ ಕಣ್ಣು ತಪ್ಪಿ ಹೋಗದಂತೆ ಎಚ್ಚರ ವಹಿಸಿದರೆ ಮರಿಯಳ ಬದುಕು ನಮ್ಮ ಗ್ರಹಿಕೆಗೆ ಸ್ಪಲ್ಪವಾದರೂ ಸಿಗಬಹುದೇನೋ! ಈ ರೀತಿಯ ಒಂದು ಅವಲೋಕನ ಮರಿಯಳ ಸಾತ್ವಿಕ ಬದುಕನ್ನು ಅನಾವರಣಗೊಳಿಸುತ್ತಾ ಕ್ರಿಸ್ತನ ಜೊತೆಗೆ ನಮ್ಮ ಆತ್ಮೀಯತೆಯನ್ನು ವೃದ್ಧಿಸದಿರದು.
ಕ್ರಿಸ್ತನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಅನೇಕರಲ್ಲಿ ತಾಯಿ ಮರಿಯಳ ಪಾತ್ರ ಹಿರಿದು ಮತ್ತು ಮಹತ್ವಪೂರ್ಣವಾದುದು. ಬೆಳೆಯುವ ಗಿಡಕ್ಕೆ ಬೇರಿನಂತಿರುವ ಪಾತ್ರವದು. ಆದ್ದರಿಂದ ಕ್ರಿಸ್ತನ ಜೀವನದಲ್ಲಿ ಮರಿಯಳು ವಹಿಸಿದ ಗಮನಾರ್ಹ ಪಾತ್ರವನ್ನು ಸುಮಾರು ಐದು ಸ್ಥಳಗಳಲ್ಲಿ ಜರುಗಿದ ಘಟನೆಗಳ ಮೂಲಕ ಅರ್ಥೈಸಿಕೊಂಡರೆ ಮರಿಯಳು ನಮ್ಮ ಅರಿವಿಗೆ ಸ್ವಲ್ಪವಾದರೂ ಸಿಗುವಳೋ ಏನೋ!
ಮೊದಲಿಗೆ ಬೆತ್ಲೆಹೇಮ್ ಎಂಬ ಸ್ಥಳದಲ್ಲಾದ ಘಟನೆ. ತಾಯಿ ಮರಿಯಳು ಯೇಸುವಿಗೆ ಜನ್ಮಕೊಟ್ಟಂತಹ ಸಂದರ್ಭವಿದು. ಲೋಕವನ್ನು ರಕ್ಷಿಸಲು ತನ್ನ ಸ್ವಂತ ಮಗನನ್ನೇ ಲೋಕಕ್ಕೆ ಕಳುಹಿಸಲು ನಿರ್ಧರಿಸಿದ ದೇವರು, ದೇವರ ಹುಟ್ಟುವಿಕೆಗೆ ಮರಿಯಾಳ ಒಡಲನ್ನು ಕೇಳಿಕೊಂಡಾಗ, ಸಂತೋಷದಿಂದ ಒಪ್ಪಿ, ಪವಿತ್ರಾತ್ಮರ ಸಹಾಯದಿಂದ ಗರ್ಭವತಿಯಾಗಿ ಯೇಸುವಿಗೆ ಜನ್ಮ ಕೊಡುತ್ತಾಳೆ. ಹೌದು, ಒಬ್ಬ ಸಾಧಾರಣ ಮುಗ್ದೆ ಮದುವೆಯ ಮುಂಚಿತವಾಗಿಯೇ ಗರ್ಭ ತಳೆಯುವುದೆಂದರೆ ತನ್ನ ಸಾವನ್ನು ತಾನೇ ಬರಮಾಡಿಕೊಳ್ಳುವುದೆಂದೇ ಅರ್ಥ. 
ಹೆಣ್ಣಿಗೆ ಸ್ಥಾನಮಾನವಿಲ್ಲದ ಸಮಾಜದಲ್ಲಿ, ಅನೈತಿಕ ಸಂಬಂಧ, ಅತ್ಯಾಚಾರ ಮುಂತಾದವುಗಳು ಧರ್ಮಶಾಸ್ತ್ರದ ಪ್ರಕಾರ ಶಿಕ್ಷಾರ್ಹ ಅಪರಾಧಗಳೆಂದು ಪರಿಗಣಿಸಲಾದ ಸಮಾಜದಲ್ಲಿ ಅಂದರೆ ಅನೈತಿಕತೆಯಲ್ಲಿ ಸಿಕ್ಕಿಕೊಂಡವರನ್ನು ಮುಖ್ಯವಾಗಿ ಮಹಿಳೆಯರನ್ನು ಕಲ್ಲುಗಳಿಂದ ಹೊಡೆದು ಕೊಲ್ಲುವ ಸಂಪ್ರದಾಯವಿದ್ದ ಸಮಾಜದಲ್ಲಿ ಮರಿಯಳು ದೇವರ ಯೋಜನೆಗೆ “ಇಗೋ ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ” (ಲೂಕ 1:38) ಎಂದು ಹೇಳಿ ದೇವರ ಚಿತ್ತಕ್ಕೆ ತಲೆಬಾಗುತ್ತಾಳೆ. ಈ ಒಂದು ಹಿನ್ನಲೆಯಲ್ಲಿ ಮರಿಯಳು ಯೇಸುವಿಗೆ ಜನ್ಮ ಕೊಡುವುದಕ್ಕೆ ಒಪ್ಪಿದನ್ನು ನಾವು ಪ್ರಶಂಸಿಸದಿರಲು ಸಾಧ್ಯವೇ ಇಲ್ಲ. 
ಜಗದ ರಕ್ಷಣೆಗಾಗಿ ಮರಿಯಳು ತೆಗೆದುಕೊಂಡ ಈ ನಿಲುವು, ತೋರಿದ ದಿಟ್ಟತನ ನಮಗೆ ಪಾಠಗಳಾಗಬೇಕು. ನಾವು ಕೂಡ ತಾಯಿಯಂತೆ ಕ್ರಿಸ್ತ ಇನ್ನೂ ಹುಟ್ಟದೇ ಇರುವ ಸ್ಥಳಗಳಲ್ಲಿ ಕ್ರಿಸ್ತನು ಹುಟ್ಟುವಂತೆ ನೋಡಿಕೊಳ್ಳಬೇಕು. ಕ್ರಿಸ್ತನಿಗೆ ಜನ್ಮ ಕೊಡುವುದೆಂದರೆ ಅಕ್ಷರಶಃ ದೈಹಿಕ ಜನ್ಮ ಕೊಡುವಂತಹದಲ್ಲ. ಕ್ರಿಸ್ತನ ಮೌಲ್ಯಗಳು, ಮಾತುಗಳು ಜನರಲ್ಲಿ ಹುಟ್ಟುವಂತೆ ನೋಡಿಕೊಳ್ಳಬೇಕು. ಎಂತಹ ಕಠಿಣ ಕಷ್ಟ ಬಂದರೂ ಕ್ರಿಸ್ತನಿಗೆ ಜನ್ಮ ಕೊಡುವುದನ್ನು ನಾವು ನಿಲ್ಲಿಸಬಾರದು. ಕ್ರಿಸ್ತ ನಮ್ಮಲ್ಲಿ ನಮ್ಮ ಸಮಾಜದಲ್ಲಿ ನಿರಂತರವಾಗಿ ಹುಟ್ಟುತ್ತಿರಬೇಕು. ಮುಖ್ಯವಾಗಿ ಕೋಮುವಾದಿಗಳಲ್ಲಿ, ಮೂಲಭೂತವಾದಿಗಳಲ್ಲಿ ಕಾಪೆರ್Çೀರೇಟ್ ಮನೆ - ಮನಗಳಲ್ಲಿ ಕ್ರಿಸ್ತ ಹುಟ್ಟುವಂತೆ ನೋಡಿಕೊಳ್ಳಬೇಕಾದುದ್ದು ನಮ್ಮ ಆದ್ಯ ಕರ್ತವ್ಯ. ಇವೆಲ್ಲಕ್ಕಿಂತ ಮುಖ್ಯವಾಗಿ ತಾಯಿ ಮರಿಯಳು ನಮ್ಮ ಹೃದಯಗಳನ್ನು ಕ್ರಿಸ್ತನ ಗರ್ಭಗುಡಿಯಾಗಿಸಲೆಂದು ಕೇಳಿಕೊಳ್ಳೋಣ.
ಎರಡನೆಯದಾಗಿ ಜೆರುಸಲೇಮಿನಲ್ಲಿ ಜರುಗಿದ ಘಟನೆ. ಜೋಸೆಫ್, ಮರಿಯ ಮತ್ತು ಯೇಸು ವಾಡಿಕೆಯಂತೆ ಪಾಸ್ಕ ಹಬ್ಬಕ್ಕೆ ಜೆರುಸಲೇಮಿಗೆ ಹೋಗಿ, ಹಬ್ಬ ಮುಗಿಸಿ ವಾಪಸಾಗುವ ಹೊತ್ತಿಗೆ ಯೇಸು ಕಾಣೆಯಾಗುತ್ತಾರೆ. ಮಗನನ್ನು ಕಾಣದೆ ತಳಮಳಕೊಂಡ ಮರಿಯಳು ತಮ್ಮ ಬಂಧುಬಳಗದವರಲ್ಲೂ ಪರಿಚಿತರಲ್ಲೂ ಹುಡುಕಾಡಿ ಅಲ್ಲೆಲ್ಲೂ ಕಾಣದೆ ಯೇಸುವನ್ನು ಹುಡುಕಿಕೊಂಡು ಜೆರುಸಲೇಮಿಗೆ ಮರಳಿ ಬರುತ್ತಾಳೆ. ಕೊನೆಗೆ ಮಹಾದೇವಾಲಯದಲ್ಲಿ ಯೇಸುವನ್ನು ಕಂಡು ನಿಟ್ಟುಸಿರು ಬಿಡುತ್ತಾಳೆ. ಮಕ್ಕಳು ಕಳೆದು ಹೋಗದಂತೆ ಮುತುವರ್ಜಿ ವಹಿಸುವುದು ತಾಯ್ತನದ ಗುಣ. ಮಕ್ಕಳ ಕ್ಷೇಮಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಿರುವ ಅಮ್ಮಂದಿರು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲಹುತ್ತಾರೆ. ಅವರಿಗೆ ಮಕ್ಕಳನ್ನು ಕಳೆದುಕೊಳ್ಳುವುದೆಂದರೆ ತಮ್ಮ ಸರ್ವಸ್ವವನ್ನೇ ಕಳೆದುಕೊಂಡಂತೆ. ಆದ್ದರಿಂದ ತಪ್ಪಿಹೋದವರವನ್ನು ತಾಯಿ ಎಂದಿಗೂ ಕೈ ಬಿಡುವುದಿಲ್ಲ. ಅವರನ್ನು ಹುಡುಕಿಕೊಂಡು ಖಂಡಿತ ಬಂದೇ ಬರುತ್ತಾಳೆ. ಇಂತಹ ವಿಶ್ವಾಸದಲ್ಲಿ ತಮ್ಮನ್ನೇ ತಾವು ಕಳೆದುಕೊಂಡು ದೇವರಿಂದ ದೂರವಾಗಿರುವವರನ್ನು ಆ ತಾಯಿ ಹುಡುಕಿ ತರಲೆಂದು ಪ್ರಾರ್ಥಿಸುತ್ತಲೇ, ನಾವು ಕೂಡ ನಾನಾ ಕಾರಣಗಳಿಂದ ಕಳೆದು ಹೋದವರನ್ನು ಹುಡುಕಿ ಸಂತೈಸುವ ತಾಯಿಯ ಗುಣವನ್ನು ಮರಿಯಳಿಂದ ಪಡೆದುಕೊಳ್ಳೋಣ.
ಮೂರನೆಯದಾಗಿ, ಗಲಿಲೇಯದ ಕಾನಾ ಎಂಬ ಊರಿನಲ್ಲಿ ನಡೆದ ಮೊದಲ ಅದ್ಭುತ ಅಥವಾ ಸೂಚಕ ಕಾರ್ಯ. ಆಮಂತ್ರಣದ ಮೇರೆಗೆ ಯೇಸು, ಅವರ ಶಿಷ್ಯರು ಮತ್ತು ಮರಿಯಳು ಮದುವೆಯ ಜೌತಣಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ದ್ರಾಕ್ಷಾರಸ ಸಾಲದೆ ಹೋಯಿತು. ಆತಿಥೇಯರಿಗೆ ಇದರಿಂದ ದೊಡ್ಡ ಅವಮಾನವಾಗಬಹುದು ಎಂಬ ಅರಿವೊಂದಿಗೆ ಮರಿಯಳು ತನ್ನ ಮಗನಲ್ಲಿ ಕೋರಿಕೆ ಸಲ್ಲಿಸಿ, ಸೇವಕರಿಗೆ “ಆತ ಏನು ಹೇಳುತ್ತಾರೋ ಹಾಗೆಯೇ ಮಾಡಿ” ಎಂದು ಹೇಳುತ್ತಾಳೆ. ಕೊನೆಗೆ ಅಲ್ಲಿ ನಡೆದ ಅದ್ಭುತದ ಬಗ್ಗೆ ನಮಗೆ ಗೊತ್ತೇ ಇದೆ. ಬಾನಿಗಳಲ್ಲಿ ತುಂಬಿದ ನೀರು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದಲ್ಲದೆ, ಉತ್ತಮವಾದ ದಾಕ್ಷಾರಸವಾಗಿ ಆತಿಥಿಗಳ ಪ್ರಶಂಸೆಗೆ ಪಾತ್ರವಾಗಿದ್ದನ್ನು ಬೈಬಲಿನಲ್ಲಿ ಓದುತ್ತೇವೆ. ಇವಿಷ್ಟೂ ಪಠ್ಯದ ಮೂಲಪಾಠವಾದರೂ ಆಳದಲ್ಲಿ ಈ ಕಥನಕ್ಕೆ ಮತ್ತೊಂದು ಅರ್ಥವಿರುವುದನ್ನು ಅಲ್ಲಗಳೆಯಲಾಗದು. ಯೆಹೂದ್ಯರ ಸಂಪ್ರದಾಯಲ್ಲಿ ದ್ರಾಕ್ಷಾರಸವೆಂಬುವುದು ಸಮೃದ್ಧಿ, ಸಂತೋಷ, ಸುಖವನ್ನು ಸಂಕೇತಿಸುವಂತಹದ್ದು. 
ಆದ್ದರಿಂದ ಸಂತೋಷವನ್ನು ಕಳೆದುಕೊಂಡ ನಮ್ಮ ಮನಮನೆಗಳಿಗೆ ಸಮೃದ್ಧಿ ಸಂತೋಷ ತರಲು ಮಾತೆ ಮರಿಯಳು ನಿತ್ಯವೂ ಮಗನಲ್ಲಿ ಕೋರಿಕೆ ಸಲ್ಲಿಸುತ್ತಿರುತ್ತಾರೆ ಎಂಬುವುದು ಈ ಪಠ್ಯದ ಅಂತರಾರ್ಥ. ಈ ಕಾರಣದಿಂದಲೇ ಸಾವಿರಾರು ಜನರು ಮನ ಶಾಂತಿಗಾಗಿ ಮರಿಯಳ ಪುಣ್ಯಕ್ಷೇತ್ರಗಳಿಗೆ ಹೋಗುವುದನ್ನು ನಾವು ಕಾಣುತ್ತೇವೆ. ಹೌದು, ಇಂದು ಎಷ್ಟೋ ಕುಟುಂಬಗಳು ವೈಮನಸ್ಸಿನಿಂದ ನುಚ್ಚು ನೂರಾಗಿವೆ. ಕುಟುಂಬಗಳಲ್ಲಿ ನೆಮ್ಮದಿ ಸಂತೋಷ ಮರೀಚಿಕೆಯಾಗಿ ನೈತಿಕತೆಯ ಅಧಃಪತನವಾಗಿದೆ. ಇಂತಹ ಕುಟುಂಬಗಳಲ್ಲಿ ಕ್ರಿಸ್ತನ ಅದ್ಭುತಗಳಾಗಬೇಕಿದೆ. ನೀರು ದಾಕ್ಷಾರಸದಂತೆ ಕುಟುಂಬಗಳಲ್ಲಿ ಕಂಡುಬರುತ್ತಿರುವ ಕಲಹಗಳು, ಅಪಸವ್ಯಗಳೆಂಬ ನಕಾರಾತ್ಮಕತೆಯ ಕತ್ತಲು ಸರಿದು ಸಮೃದ್ಧಿಯ ಬೆಳಕು ಮೂಡಬೇಕಿದೆ. 
ಆದ್ದರಿಂದ ಆಕೆಯ ಪ್ರಾರ್ಥನೆ ಪವಾಡಗಳನ್ನು ಮಾಡಿಸಲಿ. ಜತೆಗೆ ಕ್ರಿಸ್ತ ಹೇಳಿದಂತೆ ನಾವು ಮಾಡಿದರೆ, ಅಂದರೆ ಕ್ರಿಸ್ತನ ಮಾತುಗಳನ್ನು ಅನುಸರಿಸಿ ನಡೆದರೆ ಖಂಡಿತವಾಗಿಯೂ ಅದ್ಭುತಗಳು ನಮ್ಮ ಬದುಕಿನ ತೋರಣಗಳಾಗುತ್ತವೆ ಎಂದು ಮರಿಯಳು ನಮಗೆ ತಿಳಿಸುತ್ತಾಳೆ. ಸುಖ ಸಂತೋಷ ಕಳೆದುಕೊಂಡ ಮನಗಳಿಗೆ ಮರಿಯಳಂತೆ ನಾವು ಕೂಡ ಸಮೃದ್ಧಿ, ಸುಖ ಶಾಂತಿ ಹೊತ್ತು ತರುವ ಸಾಧನಗಳಾಗಬೇಕಿರುವ ತುರ್ತು ನಮಗಿರುವುದನ್ನು ನಾವು ಮರೆಯಬಾರದು. 
ನಾಲ್ಕನೆಯದಾಗಿ, ಕಲ್ವಾರಿ ಬೆಟ್ಟ. ಶಿಲುಬೆ ಮೇಲೆ ನೋವಿನಿಂದ ನೇತಾಡುತ್ತಿರುವ ಮಗನನ್ನು ಬೆರಳೆಣಿಕೆಯಷ್ಟು ಜನರನ್ನು ಸೇರಿ ಅಸಹಾಯಕತೆಯಿಂದ ದಿಟ್ಟಿಸುವ ಮರಿಯಳನ್ನು ಕಾಣುತ್ತೇವೆ. ಹೌದು, ಆಪ್ತ ಶಿಷ್ಯರು ಪ್ರಾಣಭಯದಿಂದ ಕ್ರಿಸ್ತನನ್ನು ಬಿಟ್ಟು ಓಡಿಹೋದರು. ಆಪ್ತರೇ ಕ್ರಿಸ್ತನನ್ನು ನಿರಾಕರಿಸಿ ಆವನಿಗೆ ದ್ರೋಹ ಬಗೆದರು. ಆದರೆ ಮರಿಯಳು ಕ್ರಿಸ್ತನ ನೋವಿನಲ್ಲೂ ದೃಢವಾಗಿ ಅವನ ಜೊತೆ ನಿಂತಳು. ಭಾರವಾದ ಶಿಲುಬೆ ಹೊತ್ತು ಕಲ್ವಾರಿ ಕಡೆ ಹೆಜ್ಜೆ ಹಾಕುತ್ತಿದ್ದ ಕ್ರಿಸ್ತನ ಜೊತೆ ನಿರ್ಭೀತಿಯಾಗಿ ಹೆಜ್ಜೆ ಹಾಕಿದಳು. ಪ್ರಾಣಕ್ಕೆ ಅಪಾಯವಿದ್ದರೂ ಕ್ರಿಸ್ತನನ್ನು ಬಿಟ್ಟು ಆ ಮಹಾತಾಯಿ ಒಂದಿನಿತೂ ಕದಲಲಿಲ್ಲ. ನಮ್ಮ ತಾಯಿಯಾಗಿರುವ ಅವಳು ನಮ್ಮ ಕಷ್ಟದಲ್ಲೂ ನಮ್ಮ ಒತ್ತಾಸೆಯಾಗಿ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಒಂದು ವಿಶ್ವಾಸದಲ್ಲಿ ಅನ್ಯಾಯವನ್ನು ಖಂಡಿಸುವ ಮನೋಧರ್ಮ ನಮ್ಮಲ್ಲಿ ಬೆಳೆಯಬೇಕಿದೆ. 
ಕಲ್ವಾರಿಯಲ್ಲಿ ನಡೆದ ಮತ್ತೊಂದು ಘಟನೆ ನಮ್ಮ ಅರಿವಿಗೆ ಬಾರದಿರಲು ಸಾಧ್ಯವಿಲ್ಲ. ಕ್ರಿಸ್ತನು ಶಿಲುಬೆಯ ಮೇಲೆ ಸಾಯುವ ಮುನ್ನ, “ಅಮ್ಮಾ ಇದೋ ನಿನ್ನ ಮಗನು” ಎಂದು ಹೇಳಿ ಯೊವಾನ್ನನನ್ನು ತಾಯಿಗೆ ಮಗನಾಗಿ ನೀಡಲಾಯಿತು. ಯೊವಾನ್ನನಿಗೆ “ಇಗೋ ನಿನ್ನ ತಾಯಿ” ಎಂದು ತಾಯಿಯನ್ನು ನೀಡಲಾಯಿತು. ಈ ಒಂದು ಕೊಡುವಿಕೆಯಲ್ಲಿ ಯೊವಾನ್ನನಂತೆ ಯೊವಾನ್ನನ ಮೂಲಕ ಎಲ್ಲಾ ಪ್ರೇಷಿತರು ಮತ್ತು ನಾವೆಲ್ಲರೂ ಆ ಮಹಾತಾಯಿಯ ಮಕ್ಕಳಾಗಿದ್ದೇವೆ. ಮಾನವ ಕುಲದ ಆ ತಾಯಿಯ ಸಂರಕ್ಷಣೆಯ ಪರಿಧಿಯಲ್ಲಿ ಒಳಪಡುವ ನಾವು ತಾಯಿಯ ಸುರಕ್ಷೆಯಲ್ಲಿ ಬಾಳುವ ಸೌಭಾಗ್ಯ ನಮಗಿದೆ.
ಕೊನೆಗೆ. ಕ್ರಿಸ್ತನ ಕ್ರೂರ ಮರಣದಿಂದ ಭಯಭೀತರಾಗಿ ಚದುರಿದ ಶಿಷ್ಯರನ್ನು, ಒಟ್ಟುಗೂಡಿಸಿ, ಪವಿತ್ರಾತ್ಮರು ಅವರ ಮೇಲೆ ಆಗಮಿಸುವವರೆಗೂ ಅವರೊಟ್ಟಿಗಿದ್ದು ಧರ್ಮಸಭೆಯ ಹುಟ್ಟಿಗೆ, ಸಂರಕ್ಷಣೆಗೆ ಕಾರಣಕರ್ತರಾದ ತಾಯಿ ಮರಿಯಳು ಕ್ರಿಸ್ತನ ಸಂದೇಶವನ್ನು ಸಾರಲು ಧರ್ಮಸಭೆಯ ಮುಂದಾಳತ್ವ ವಹಿಸಿ ಇಂದಿಗೂ ಧರ್ಮಸಭೆಯನ್ನು ಮುನ್ನಡೆಸುತ್ತಿದ್ದಾಳೆ. ಆದ್ದರಿಂದ ನಾವೆಲ್ಲರೂ ಮರಿಯಳನ್ನು ಧರ್ಮಸಭೆಯ ನಾಯಕಿ ಪಾಲಕಿ ಎಂದು ಕರೆಯುತ್ತೇವೆ. ಅಷ್ಟು ಮಾತ್ರವಲ್ಲ, ಮರಿಯಳು ಆಗಾಗ ಕಾಣಿಸಿಕೊಂಡು ಧರ್ಮಸಭೆಗೆ ಅವಶ್ಯಕವಾದ ಸಂದೇಶ ಮತ್ತು ಮಾರ್ಗದರ್ಶನ ನೀಡುತ್ತಾ ಧರ್ಮಸಭೆಯನ್ನು ಮುನ್ನಡೆಸುತ್ತಿದ್ದಾಳೆ. ಈ ರೀತಿಯ ದರ್ಶನಗಳು ಕೂಡ ಧರ್ಮಸಭೆಯ ಬಗ್ಗೆ ತಾಯಿ ತೋರುವ ಕಾಳಜಿಯ ಅಭಿವ್ಯಕ್ತಿಯೆಂದೇ ಹೇಳಬಹುದು. 
ಪರಿಪೂರ್ಣತೆಯನ್ನು ಹುಡುಕಿ ಹೊರಟ ಕವಿ ಈ ರೀತಿ ಹೇಳುತ್ತಾನೆ;
ಹೊನ್ನಿಗೆ ಪರಿಮಳವಿಲ್ಲ
ಕಬ್ಬಿಗೆ ಪುಷ್ಪವಿಲ್ಲ
ಗಂಧದ ಮರದೊಳು ಒಂದಿನಿತೂ ಫಲವಿಲ್ಲ;
ರಾಜನಿಗೆ ದೀರ್ಘಾಯುವಿಲ್ಲದ
ಪಂಡಿತನಲ್ಲಿ ಕಾಂಚಾಣವಿಲ್ಲದ
ಈ ಲೋಕದೊಳಗೆ ಪರಿಪೂರ್ಣತೆ
ದಕ್ಕುವ ಜಾಗವೇ ಬಲು ಮಜವಾಗಿದೆ.
ಅಲ್ಲಿ, ನೆಲ ಕೆಳಕ್ಕೆ ಜಾರುತ್ತಿರುತ್ತದೆ;
ಆಕಾಶ ಮೇಲಕ್ಕೆ ಹಾರುತ್ತಿರುತ್ತದೆ.
ಅಲ್ಲಿಗೆ ಪರಿಪೂರ್ಣತೆ ಎಂಬುವುದು ಮರೀಚಿಕೆ. 
ಯಾರಿಗೂ ದಕ್ಕದೇ ಇರುವಂಥದ್ದು. 
ಇಷ್ಟಕ್ಕೂ ಪರಿಪೂರ್ಣತೆ ಅಂತನ್ನುವ ಯಾವುದಾದರೂ ಈ ಸೃಷ್ಟಿಯಲ್ಲಿ ಇದೆಯೇ? 
ಎಂಬ ಪ್ರಶ್ನೆಯನ್ನು ಕೇಳುತ್ತಲೇ ಕೊನೆಗೆ ಈ ರೀತಿ ಹೇಳುತ್ತಾನೆ; 
ಅರೇ, ತನ್ನನ್ನು ತಾನು ಆಕರ್ಷಿಸಿಕೊಳ್ಳಲು ಚಿನ್ನಕ್ಕೆ ಪರಿಮಳದ ಆಸರೆಯಾದರೂ ಯಾಕಿರಬೇಕು?
ಹೌದು ಬದುಕಿನಲ್ಲಿ ಪವಾಡಗಳನ್ನು ಮಾಡಲಿಲ್ಲ. ಅವಳು ಶ್ರೀಮಂತಳಾಗಿರಲಿಲ್ಲ, ಯಾವುದೇ ಪುಸ್ತಕಗಳನ್ನು ಬರೆಯಲಿಲ್ಲ, ಯಾವುದೇ ಕಲಾಕೃತಿಗಳನ್ನು ರಚಿಸಲಿಲ್ಲ, ಕಾನೂನುಗಳು ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸಿ ಯಾವುದೇ ದೊಡ್ಡ ಮಟ್ಟದ ಸಾಮಾಜಿಕ ಆಂದೋಲನವನ್ನು ಮುನ್ನಡೆಸಲಿಲ್ಲ. ಆದರೂ 2000 ಸಾವಿರ ವರ್ಷಗಳು ಕಳೆದರೂ ಮರಿಯಳನ್ನು ನಾವು ಸ್ಮರಿಸಲು ಕಾರಣವೇನು?
ತನ್ನ ಪಾಲಿನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಅವಳು ಮಾಡಿದಳು. ಆಕೆಯ ದೀನತೆ, ವಿಧೇಯತೆ, ಕರ್ತವ್ಯಪಾಲನೆ ಪರಿಪೂರ್ಣವಾಗಿತ್ತು. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ವಿಶ್ವಾಸ ಮತ್ತು ದೀನತೆಯ ಮೂಲಕ ದೈವತ್ವಕೇರಬಹುದು ಎಂಬುದಕ್ಕೆ ಆಕೆ ಉದಾಹರಣೆಯಾದಳು. ಈ ದೃಷ್ಟಿಯಿಂದ ಇಡೀ ಮಾನವ ಕುಲಕ್ಕೆ ಆದರ್ಶಳಾದಳು.
- ಆನಂದ್
-0--0--0--0--0--0-






ಗೀತಾಂಜಲಿಯ ತುಣುಕು

ಮುಟ್ಠಾಳನೇ,
ಹೊತ್ತುಕೊ ನಿನ್ನನೇ ಹೆಗಲಲಿ,
ಓ ತಿರುಪೆಯವನೇ,
ತಿರಿ ಮೊದಲು ನಿನ್ನದೇ ಮನೆಯ ಬಾಗಿಲಲಿ.
ಹೊರುವವನಿಗೆ ನಿನ್ನ ಹೊರೆಯ ಬಿಟ್ಟುಬಿಡು,
ಮತ್ತೆಂದೂ ತಿರುಗಿ ನೋಡಿ ಮರುಗದಿರು.
ಜ್ಯೋತಿಯದು ಸೂಲಿನಿಂದ
ಆತುಕೊಂಡಿಹುದು ಹಣತೆಗೆ,
ಒಮ್ಮೆಲೇ ನೀನು ಅದನು
ಊದಿಬಿಡುವುದು ಬಯಕೆಯೇ?
ಅಮಂಗಳ ಅಮಂಗಳ?
ಅದರ ಕೊಳಕು ಕೈಗಳಿಂದ ಏನನೂ ಬಯಸದಿರು.
ಪವಿತ್ರ ಪ್ರೀತಿಯಿಂದ ಕೊಟ್ಟಾಗಲೇ ತೆಗೆದುಕೋ.

(ಟ್ಯಾಗೋರರ O fool, , try to carry thyself  ಪದ್ಯದ ಭಾವಾನುವಾದ: ಸಿ ಮರಿಜೋಸೆಫ್)

0-0-0-0-0

ಬದುಕು ಜಟಕಾಬಂಡಿ


ಅಜಯ್ ರಾಜ್, ಬೆಂಗಳೂರು

ಕ್ರಿಸ್ಮಸ್ ಹಬ್ಬಕ್ಕೆ ಇನ್ನು ಕೆಲವೇ ಗಂಟೆಗಳು ಉಳಿದಿದ್ದವು. ಊರಿನ ಬೀದಿಗಳು ಜಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಪ್ರತಿ ಮನೆಯಲ್ಲೂ ಹಬ್ಬದ ಸಡಗರ. ಪ್ಲಮ್ ಕೇಕು, ವೈನು ಹಾಗೂ ಇತರೆ ಕ್ರಿಸ್ಮಸ್ ತಿನಿಸುಗಳ ಘಮಲು ಊರಿನಾದ್ಯಂತ ಹಬ್ಬಿತ್ತು. ಇನ್ನು ಕೆಲವು ಮನೆಗಳಂತೂ ಆಗಲೇ ಅವರೆಕಾಯಿಯನ್ನು ಸುಲಿದು ಕಾಳನ್ನು ಮಧ್ಯಾಹ್ನವೇ ನೀರಿನಲ್ಲಿ ನೆನೆಸಿಟ್ಟು, ಹಿದುಕುಬೇಳೆ ಕೋಳಿ ಮಾಂಸದ ಸಾರು ಮಾಡುತ್ತಿದ್ದುದು ಗುಟ್ಟಾಗಿ ಉಳಿದಿರಲಿಲ್ಲ.
ಊರಿನ ಇಷ್ಟೆಲ್ಲಾ ಗಜಿಬಿಜಿಯ ನಡುವೆಯೂ ಚರ್ಚಿನ ಕೂಗಳತೆಯ ದೂರದಲ್ಲಿದ್ದ ಮೇರಮ್ಮನ ಮನೆಯಲ್ಲಿ ಮಾತ್ರ ನೀರವ ಮೌನ ಆವರಿಸಿಕೊಂಡಿತ್ತು. ಮನೆಯಲ್ಲಿನ ಲೈಟುಗಳನ್ನು ಆರಿಸಿ, ಮೊಂಬತ್ತಿಯ ದೀಪದ ಬೆಳಕಿನಲ್ಲಿ ಗೋಡೆಯಲ್ಲಿದ್ದ ಶಿಲುಬೆಗೆ ಮುಖ ಮಾಡಿಕೊಂಡು ಗಾಢವಾಗಿ ಯೋಚಿಸುತ್ತಿದ್ದ ಮೇರಮ್ಮನ ಮುಖದಲ್ಲಿ ಯಾವುದೇ ಭಾವನೆಗಳಿರಲಿಲ್ಲ. ಜೀವನ ಪೂರ್ತಿ ಗೇಯ್ದು ಬಹಳ ಜತನದಿಂದ ಮಕ್ಕಳನ್ನು ಸಲಹಿದ ಅವಳ ದೇಹವು ಹಣ್ಣಾಗಿ, ಕೃಶವಾಗಿತ್ತು. ಬದುಕಿನ ಚಾಟಿಯ ಹೊಡೆತಗಳಿಗೆ ಸಿಕ್ಕಿ ಜರ್ಜರಿತವಾಗಿದ್ದ ಮೇರಮ್ಮನ ಮೈಮನಗಳು ಬದುಕಿನಲ್ಲಿ ವಸಂತದ ಆಗಮನದ ಆಸೆಯನ್ನು ಕೈಚೆಲ್ಲಿ ವರ್ಷಗಳೇ ಸರಿದಿದ್ದವು.
ಹೀಗೆ ಸುಮಾರು ಹೊತ್ತು ತನ್ನ ಆಲೋಚನೆಗಳಲ್ಲಿ ಮುಳುಗಿದ್ದ ಮೇರಮ್ಮನನ್ನು ವಾಸ್ತವಕ್ಕೆ ಮರಳಿಸಿದ್ದು ಮಾತ್ರ ಚರ್ಚಿನ ಗಂಟೆಯ ಸದ್ದು. ಜೈಲಿನಲ್ಲಿದ್ದ ಮಗ ರಾಬರ್ಟನನ್ನು ಇಂದು ಸಂಧಿಸಿ ಬಂದಾಗಿನಿಂದ ಆಕೆಯ ಹೆಂಗರುಳು ಕ್ಷಣ ಕ್ಷಣಕ್ಕೂ ಪರಿತಾಪದಿಂದ ನಲುಗುತ್ತಿತ್ತು. ಇದೆಲ್ಲಾ ಅದೆಷ್ಟು ವೇಗವಾಗಿ ನನ್ನ ಕಣ್ಣಮುಂದೆಯೇ ನಡೆದುಹೋಯಿತು ಎನ್ನುಕೊಳ್ಳುತ್ತಿರುವಾಗಲೇ ಮೇರಮ್ಮನ ತಲೆಯಲ್ಲಿ ಮೂರು ತಿಂಗಳ ಹಿಂದೆ ನಡೆದ ಒಂದು ಘಟನೆ ಮತ್ತೆ ಮತ್ತೆ ಗುಂಗೀ ಹುಳದಂತೆ ಕೊರೆಯತೊಡಗಿತು.
-0-
ಅಂದು ಸಂಜೆ ಮೇರಮ್ಮ ಹಸುಗಳಿಗೆ ಹುಲ್ಲುತಂದು ಹಾಕಿ, ಹಾಲು ಕರೆದು, ಅವುಗಳನ್ನು ಮನೆಯ ಮುಂದಿನ ಗೂಟಕ್ಕೆ ಕಟ್ಟಿ, ಮನೆಯೊಳಕ್ಕೆ ಬಂದಾಗ ಅದಾಗಲೇ ರಾಬರ್ಟ್ ಮನೆಗೆ ಬಂದು, ತನ್ನ ಮೊಬೈಲಿನಲ್ಲಿ ಮುಳುಗಿಹೋಗಿದ್ದ. ರಾಬರ್ಟ್ ಒಬ್ಬ ಪ್ಲಂಬರ್. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಈತ ಅದೇ ಊರಿನ ಗಾಬ್ರಿಯೇಲನ ಮಗಳನ್ನು ಪ್ರೀತಿ ಮಾಡುತ್ತಿದ್ದುದು ಹೆಚ್ಚುಕಮ್ಮಿ ಇಡೀ ಊರಿಗೆ ತಿಳಿದಿತ್ತು. ಮೇಲ್ನೋಟಕ್ಕೆ ಇದಕ್ಕೆ ಯಾರ ವಿರೋಧವೂ ಇರಲಿಲ್ಲವಾದರೂ ಗಾಬ್ರಿಯೇಲನ ಹೆಂಡತಿ ರೀಟಾ ಇದಕ್ಕೆ ಬಿಲ್ಕುಲ್ ಒಪ್ಪಿರಲಿಲ್ಲ. 
ರೀಟಾ ಬಯಲುಸೀಮೆಯವಳು. ಜಗಳಗಂಟಿಯಾದ ಇವಳ ಹತ್ತಿರ ಅಕ್ಕಪಕ್ಕದ ಒಂದೆರಡು ಮನೆಯ ಹೆಂಗಸರಷ್ಟೇ ಮಾತನಾಡುತ್ತಿದ್ದರು. ಸ್ವತಃ ಗಾಬ್ರಿಯೇಲನ ಅಕ್ಕತಂಗಿಯರಿಗೇ ಅವಳನ್ನು ಕಂಡರೆ ಆಗುತ್ತಿರಲಿಲ್ಲ. ಅಲ್ಲದೆ ರೀಟಾ ಊರಿನ ಒಬ್ಬ ಯುವಕನನ್ನು ಇಟ್ಟುಕೊಂಡಿದ್ದಾಳೆ ಎಂಬ ಸುದ್ದಿ ಊರಿನಲ್ಲಿ ಇತ್ತೀಚಿಗೆ ಗುಸುಗುಸಾಗಿತ್ತು. ಅದು ಸುಳ್ಳೋ ನಿಜವೋ, ಆದರೆ ರೀಟಾ ಮಾತ್ರ ತಾನು ಇಟ್ಟುಕೊಂಡಿದ್ದ (?) ಯುವಕನಿಗೇ ತನ್ನ ಮಗಳು ಕೆನಿಶಾಳನ್ನು ಕೊಟ್ಟು ಮದುವೆ ಮಾಡಬೇಕು ಎಂದು ಯೋಚಿಸುತ್ತಿದ್ದುದು ಮಾತ್ರ ಸುಳ್ಳಲ್ಲ. ಈ ಮದುವೆ ಸ್ವತಃ ಕೆನಿಶಾಳಿಗೂ ಇಷ್ಟವಿಲ್ಲದ ಕಾರಣ ಆಕೆ ಪದೇ ಪದೇ ರಾಬರ್ಟನಿಗೆ ಓಡಿಹೋಗೋಣ ಬಾ ಎಂದು ಪೀಡಿಸುತ್ತಿದ್ದಳು.
-0-
ಸಾಮಾನ್ಯವಾಗಿ ಮಗ ಮನೆಗೆ ಬರುತ್ತಿದ್ದುದು ರಾತ್ರಿ ಎಂಟು ಗಂಟೆಯ ನಂತರ. ಇವತ್ತು ಆರು ಗಂಟೆಗೇ ಮನೆಗೆ ಬಂದಿದ್ದ ಮಗನನ್ನು ನೋಡಿದ ಮೇರಮ್ಮನಿಗೆ ಆಶ್ಚರ್ಯವಾದರೂ ಕೊಂಚ ಸಂತೋಷವಾಯಿತು. ಆದರೆ ರಾಬರ್ಟನ ಮುಖ ಪೇಲವವಾಗಿದ್ದನ್ನು ಕಂಡ ಮೇರಮ್ಮ, "ರಾಬು. ಯಾಕಪ್ಪ ಒಂಥರಾ ಇದ್ದಿಯ?" ಎಂದು ಕಕ್ಕುಲತೆಯಿಂದ ಕೇಳಿದಳು.
"ಏನಿಲ್ಲ ಅಮ್ಮ, ಸ್ವಲ್ಪ ತಲೆನೋವು. ಬೆಳಿಗ್ಗೆಯಿಂದ ಬಿಸಿಲಲ್ಲಿ ಕೆಲಸ ಅಲ್ವಾ ಅದಕ್ಕೆ ಅನ್ಸುತ್ತೆ" ರಾಬರ್ಟ್ ಮೊಬೈಲನ್ನು ನೋಡುತ್ತಲೇ ಉತ್ತರಿಸಿದ.
"ತಲೆಗೆ ಸ್ವಲ್ಪ ಹಳ್ಳೆಣ್ಣೆ ಹಚ್ಲಾ ಮಗಾ.? ಸರಿಹೋಗುತ್ತೇ!" ಮೇರಮ್ಮ ತುಸು ಮೆಲುದನಿಯಲ್ಲಿ ಕೇಳಿದಳು.
ಅಮ್ಮನ ಮುಖವನ್ನೇ ದಿಟ್ಟಿಸಿದ ರಾಬರ್ಟನಿಗೆ ಇನ್ನು ಕೊಂಚ ಹೊತ್ತಿನಲ್ಲಿ ತಾನು ಇವಳಿಂದ ದೂರ ಹೋಗುತ್ತಿರುವುದನ್ನು ನೆನೆದು ಸಂಕಟವಾದರೂ, ಅದ್ಯಾವುದನ್ನೂ ತೋರಿಸಿಕೊಳ್ಳದೆÀ, "ಅದೆಲ್ಲಾ ಏನೂ ಬೇಡಮ್ಮಾ. ಸ್ವಲ್ಪ ಹೊತ್ತು ನಿದ್ದೆ ಮಾಡಿದರೆ ಸರಿಹೋಗುತ್ತೆ" ಎಂದವನೇ ಅಮ್ಮನಿಗೆ ಊಟ ಬಡಿಸಲು ಹೇಳಿದ.
ರಾಬರ್ಟ್ ಊಟ ಮಾಡುತ್ತಿರುವಾಗಲೇ ಅವನಿಗೆ ಮೇಲಿಂದ ಮೇಲೆ ಕರೆಗಳು ಬರಲಾರಂಭಿಸಿದವು. ಒಂದೆರಡು ಬಾರಿ ಮಾತನಾಡಿ ಕಾಲ್ ಕಟ್ ಮಾಡಿದರೂ ಸಹ ಮತ್ತೆ ಮತ್ತೆ ರಿಂಗಣಿಸುತ್ತಿದ್ದ ಮೊಬೈಲನ್ನು ನೆಲಕ್ಕೆ ಬಡಿಯುವಷ್ಟು ಕೋಪ ಬಂತು. ಇವನಿಗೆ ಓಡಿಹೋಗಲು ಸುತಾರಾಂ ಇಷ್ಟವಿಲ್ಲ. ಅದೆಷ್ಟೇ ದಿನವಾದರೂ ಇಲ್ಲೇ ಇದ್ದು ಊರಿನಲ್ಲೇ ಮದುವೆಯಾಗ ಬೇಕೆಂಬುದು ಅವನ ಆಸೆ. ಆದರೆ ಕೆನಿಶಾಳಿಗೆ ಅವಳ ಅಮ್ಮ ರೀಟಾಳ ಬಳಿ ಇರುವ ಒಂದೊಂದು ಕ್ಷಣವೂ ಕೆಂಡದ ಮೇಲೆ ನಡೆಯುವಂತೆ ಭಾಸವಾಗುತ್ತಿತ್ತು. ಹೇಗಾದರೂ ಸರಿ ಅಂದು ರಾತ್ರಿಯೇ ಅಲ್ಲಿಂದ ಓಡಿ ಹೋಗಿಬಿಡಬೇಕೆಂದು ಅವಳು ನಿರ್ಧರಿಸಿದ್ದಳು. ಅವಳ ಈ ನಿರ್ಧಾರದ ಪರಿಣಾಮ ರಾಬರ್ಟನ ಮೇಲಾಗಿತ್ತು. ಮತ್ತೊಂದು ಬಾರಿ ಮೊಬೈಲ್ ರಿಂಗಣಿಸಿದ್ದೇ ತಡ ಫೋನ್ ತೆಗೆದುಕೊಂಡು "ನನ್ನನ್ನು ಡಿಸ್ಟರ್ಬ್ ಮಾಡ್ಬೇಡ. ಫೋನ್ ಇಡೇ" ಎಂದು ಜೋರಾಗಿ ಹೇಳಿದವನೇ ಕಾಲ್ ಕಟ್ ಮಾಡಿದ.
ಮಗನ ಈ ವರ್ತನೆಯಿಂದ ಗಾಬರಿಗೊಂಡ ಮೇರಮ್ಮ "ಏನಾಯ್ತು ರಾಬು? ಯಾರದು ಫೋನಿನಲ್ಲಿ?" ಆತಂಕದಿಂದ ಕೇಳಿದಳು.
"ನನಗೆ ಸ್ವಲ್ಪ ಕೆಲ್ಸ ಇದೆ. ನಾಳೆ ಬೆಳಿಗ್ಗೆ ಮನೆಗೆ ಬರ್ತೀನಿ. ನೀನು ಹುಷಾರಾಗಿ ಮಲಗು" ಎಂದು ಹೇಳಿ ಹೊರಟವನು ಮತ್ತೆ ಸಿಕ್ಕಿದ್ದು ಮಾತ್ರ ಜೈಲಿನಲ್ಲಿ.
ರಾತ್ರೋರಾತ್ರಿ ರಾಬರ್ಟ್ ಮತ್ತು ಕೆನಿಶಾ ಓಡಿಹೋಗಿದ್ದು ಬೆಳಹು ಹರಿಯುವಷ್ಟರಲ್ಲಿ ಇಡೀ ಊರಿಗೆ ಗೊತ್ತಾಗಿತ್ತು. ಅಕ್ಕಪಕ್ಕದ ಮನೆಯವರು, ರಸ್ತೆಯಲ್ಲಿ ಹೋಗುವವರಾದಿಯಾಗಿ ಎಲ್ಲರೂ ಮೇರಮ್ಮನನ್ನು ಕಂಡೊಡನೆ "ಮೇರಮ್ಮ ನಿನ್ ಮಗ ಆ ಹುಡ್ಗೀನ್ ಕರ್ಕೊಂಡು ಓಡೋಗ್ಬುಟ್ನಂತೆ," ಎಂದು ಕೇಳಿದಾಗಲೆಲ್ಲಾ ಮೇರಮ್ಮ ಕನಲಿಹೋಗುತ್ತಿದ್ದಳು.
ಅತ್ತ ರೀಟಾ ತನ್ನ ಮಗಳು ರಾಬರ್ಟನೊಂದಿಗೆ ಓಡಿ ಹೋಗಿದ್ದು ತಿಳಿದ ತಕ್ಷಣವೇ ಪೊಲೀಸರು ಸ್ಟೇಷನ್ನಿಗೆ ಹೋಗಿ ನನ್ನ ಮಗಳು ಅಪ್ರಾಪ್ತೆ, ಅವಳ ಮನಸ್ಸನ್ನು ಕೆಡಿಸಿ ರಾಬರ್ಟ್ ಅವಳನ್ನು ಕರೆದುಕೊಂಡು ಓಡಿಹೋಗಿದ್ದಾನೆ ಎಂದು ಕೇಸು ಮಾಡಿಬಿಟ್ಟಳು. ಎರಡು ತಿಂಗಳ ಸತತ ಹುಡುಕಾಟದ ನಂತರ ರಾಬರ್ಟ್ ಹಾಗೂ ಕೆನಿಶಾಳನ್ನು ಪೊಲೀಸರು ಪತ್ತೆಹಚ್ಚಿ ಹುಡುಗಿಯನ್ನು ಸಮಾಲೋಚನಾ ಕೇಂದ್ರಕ್ಕೆ ಕಳಿಸಿ, ರಾಬರ್ಟನನ್ನು ಜೈಲಿಗೆ ಹಾಕಿದರು. ಮಗನನ್ನು ಪೋಲಿಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದ ತಕ್ಷಣವೇ ಮೇರಮ್ಮ ಊರಿನ ಹಿರಿಯರು ಪುಡಿ ರಾಜಕಾರಣಿಗಳಾದಿಯಾಗಿ ಎಲ್ಲರನ್ನೂ ಕಾಡಿ ಬೇಡಿ ನನ್ನ ಮಗನನ್ನು ಬಿಡುಗಡೆ ಮಾಡಿಸಿ ಎಂದು ಗೋಗರೆದರೂ ಸಹ ಯಾರಿಂದಲೂ ಆಕೆಯ ಮಗನನ್ನು ಬಿಡಿಸಲಾಗಲಿಲ್ಲ. ಮೇರಮ್ಮನ ಯೋಚನಾ ಲಹರಿ ಇನ್ನಷ್ಟು ಆಳಕ್ಕೆ ಇಳಿದು ಗತಕಾಲದ ನೆನಪುಗಳನ್ನು ಮೆಲುಕು ಹಾಕುತ್ತಿತ್ತು. ಒಂದೊಂದು ನೆನಪೂ ಅವಳ ಬದುಕಿನಲ್ಲಿ ನೋವಿನ ಛಾಯೆಯನ್ನು ಮೂಡಿಸಿದ್ದವೇ ಹೊರತು, ಸುಖದ ಒಂದು ಸಣ್ಣ ಗೆರೆಯೂ ಕಾಣಲಿಲ್ಲ. ಮೇರಮ್ಮ ಮದುವೆಯಾದಾಗಿನಿಂದಲೂ ತನ್ನ ಪಾಲಿಗೆ ಸುಖ ಎನ್ನುವುದು ಗಗನದ ತಾರೆ ಎಂದೇ ಭಾವಿಸಿದ್ದಳು.
-0-
ಒಂದೆರಡು ತಿಂಗಳಲ್ಲಿ ಎಷ್ಟೆಲ್ಲಾ ನಡೆದುಹೋಯಿತು? ತಾನು ನಂಬಿದ ಗಂಡ ನನ್ನನ್ನು ನಡುನೀರಿನಲ್ಲಿ ಕೈಬಿಟ್ಟುಹೋಗಿ ವರ್ಷಗಳೇ ಕಳೆದಿವೆ. ಅವನು ಬದುಕಿದ್ದಾನೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಇನ್ನು ಕೊನೆಗಾಲಕ್ಕೆ ಒತ್ತಾಸೆಯಾಗುತ್ತಾನೆ ಎಂದು ನಂಬಿಕೊಂಡಿದ್ದ ಮಗ ಈಗ ನನ್ನ ನಂಬಿಕೆಗಳನ್ನೆಲ್ಲಾ ಹುಸಿಮಾಡಿ ಜೈಲಿನಲ್ಲಿದ್ದಾನೆ. ಬದುಕು ಯಾಕೆ ನನ್ನ ಮೇಲೆ ಇಷ್ಟು ಕ್ರೂರವಾಗಿದೆ ಎಂದು ಯೋಚಿಸುತ್ತಲೇ ಮೇರಮ್ಮ ಶಿಲುಬೆಯ ಬುಡದಲ್ಲಿ ತನಗರಿವಿಲ್ಲದೆಯೇ ನಿದ್ರೆಗೆ ಜಾರಿದ್ದಳು. ಮತ್ತೆ ಮೇರಮ್ಮನಿಗೆ ಎಚ್ಚರವಾದಾಗ ನಸುಕಿನ ಜಾವದಲ್ಲಿ ಎಂದಿನಂತೆ ಚರ್ಚು ಗಂಟೆ ಬಾರಿಸುತ್ತಿತ್ತು.
0-0-0-0-0

ಭಾರತದಲ್ಲಿ ಮನೋರೋಗದ ಹೆಚ್ಚಳ


ಯೊಗೇಶ್ ಮಾಸ್ಟರ್

ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಬೆಳಕಿಗೆ ಬಂದ ವಿಷಯವಿದು. ಭಾರತದ ಜನಸಂಖ್ಯೆಯಲ್ಲಿ ನೂರಕ್ಕೆ ಸುಮಾರು 7.5 ರಷ್ಟು ಜನ ಒಂದಲ್ಲಾ ಒಂದು ಮನೋರೋಗದಿಂದ ಬಳಲುತ್ತಿದ್ದಾರೆ. ಈ ಮನೋರೋಗ  ಆರನೇ ಒಂದರಷ್ಟು ಆರೋಗ್ಯದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಿಶ್ವದ ಸುಮಾರು ಶೇಕಡಾ ಹದಿನೈದರಷ್ಟು ಮಾನಸಿಕ ಮತ್ತು ನರದೌರ್ಬಲ್ಯದ ಸಮಸ್ಯೆಗಳನ್ನು ಭಾರತ ತಾನೊಂದೇ ಹೊತ್ತುಕೊಂಡಿದೆ. ಇದೇ ವಿಶ್ವ ಆರೋಗ್ಯ ಸಂಸ್ಥೆಯು ಮುಂದುಗಾಣುವ ಅಂಕಿಅಂಶಗಳ ಪ್ರಕಾರ ಇದೇ 2020ರ ಕೊನೆಯ ಹೊತ್ತಿಗೆ ಸುಮಾರು ಶೇಕಡಾ 20ರಷ್ಟು ಜನರು ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿರುತ್ತಾರೆ. ಇನ್ನೂ ಗಾಬರಿಯ ವಿಷಯವೆಂದರೆ ಭಾರತದಲ್ಲಿ ನುರಿತ ಮತ್ತು ವೃತ್ತಿಪರ ಮನೋರೋಗ ತಜ್ಞರು ಸುಮಾರು ನಾಲ್ಕು ಸಾವಿರಕ್ಕೂ ಕಡಿಮೆ ಇದ್ದಾರೆ. 
ಭಾರತದಲ್ಲಿ ಮಾನಸಿಕ ಸಮಸ್ಯೆಗಳು ಮತ್ತು ಮನೋರೋಗಗಳು ಇಷ್ಟರ ಮಟ್ಟಿಗೆ ತೀವ್ರತರವಾಗಿದ್ದರೂ, ಕೆಲವು ಅಂಕಿಅಂಶಗಳ ಪ್ರಕಾರ ಸೈಕ್ರಿಯಾಟ್ರಿಸ್ಟ್‍ಗಳ ಸಂಖ್ಯೆ ಪ್ರತಿ ಹತ್ತುಸಾವಿರ ಜನಕ್ಕೆ ಒಂದಕ್ಕಿಂತ ಕಡಿಮೆ ಇದ್ದಾರೆ. ಇನ್ನು ಸಮಾಲೋಚಕರು ಎಂದರೆ ಒಂದೋ ಕನಿಷ್ಠ ತರಬೇತಿ ಪಡೆದವರು ಅಥವಾ ತರಬೇತಿಯನ್ನೇ ಪಡೆಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ವಿಶ್ಲೇಷಣೆಗಳು ವೈಜ್ಞಾನಿಕವಾಗಿರದೇ ಕೆಲವು ಸಲ ಸಹಾಯವಾಗುವುದಕ್ಕಿಂತ ತೊಂದರೆಯೇ ಆಗಬಹುದು. 
ಒಟ್ಟಾರೆ ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆ ಮಾತನ್ನು ನಿಜವಾಗಿಸುವಂತಹ ಪ್ರಯತ್ನದಲ್ಲಿದೆ ನಮ್ಮ ಸದ್ಯದ ಮಾನಸಿಕ ಆರೋಗ್ಯ ನಿರ್ವಹಣೆಯ ವ್ಯವಸ್ಥೆ. 
ಭಾರತದಲ್ಲಿ ಮಾನಸಿಕ ಆರೋಗ್ಯ ನಿರ್ವಹಣೆಯ ವ್ಯವಸ್ಥೆ ಹದಗೆಡಲು ಕಾರಣವೇನು ಎಂಬುದನ್ನು ಗಮನಿಸಿದರೆ ಮೊಟ್ಟ ಮೊದಲನೆಯದಾಗಿ ನಿರ್ಲಕ್ಷ್ಯ, ತನ್ನಲ್ಲಿ ಮಾನಸಿಕ ಸಮಸ್ಯೆ ಇರುವುದೇ ಇಲ್ಲ ಎಂಬ ಭ್ರಮೆ, ಆತ್ಮಾವಲೋಕನ ಅಥವಾ ಸ್ವಯಂವಿಶ್ಲೇಷಣೆಗೆ ತಯಾರಿಲ್ಲದಿರುವುದು, ಸಾಮಾಜಿಕ ಕಳಂಕವೆಂಬಂತೆ ಮನೋರೋಗವನ್ನು ಕಾಣುವುದು; ಹೀಗೆ ಹಲವು ಕಾರಣಗಳಿವೆ. ಆದರೆ ಮಾನಸಿಕ ಆರೋಗ್ಯದ ವ್ಯವಸ್ಥೆಯನ್ನು ಕಾಪಾಡುವ ವಾತಾವರಣವನ್ನು ನಿರ್ಮಾಣ ಮಾಡುವುದರಲ್ಲಿ ಮತ್ತು ಅದರ ಬಗ್ಗೆ ಅರಿವು ನೀಡುವುದರಲ್ಲಿ ಶಿಕ್ಷಣ ಸಂಸ್ಥೆಗಳು ಮೊಟ್ಟ ಮೊದಲನೆಯ ಸ್ಥಾನವನ್ನು ಹೊಂದಲು ಸಾಧ್ಯ. ವಾಸ್ತವವಾಗಿ ಇದು ಮನೆಯಲ್ಲಿಯೇ ಪ್ರಾರಂಭವಾಗಬೇಕು. ಆದರೆ ಭಾರತವಿನ್ನೂ ಗುಣಮಟ್ಟದ ಜೀವನ, ಆಲೋಚನೆ, ಆರ್ಥಿಕ ಸ್ಥಿತಿ, ಶಿಕ್ಷಣ, ಉದ್ಯೋಗ, ಗಳಿಕೆ, ಸಂವಹನ, ಸಂವೇದನೆ, ಸಂಬಂಧ, ಆಡಳಿತ ವ್ಯವಸ್ಥೆಗಳನ್ನು ಅಗತ್ಯವಿರುವಷ್ಟರ ಮಟ್ಟಿಗೆ ಖಂಡಿತ ಹೊಂದಿಲ್ಲ. ಹಾಗಾಗಿ ಮನೆಯೇ ಮೊದಲ ಪಾಠಶಾಲೆಯಾದರೂ, ಮನೆಗಳನ್ನು ನೆಚ್ಚಿಕೊಳ್ಳುವಷ್ಟು ಧೈರ್ಯ ತಾಳಲಾಗದು. ಹೋಗಲಿ, ಶಿಕ್ಷಣ ಸಂಸ್ಥೆಗಳಾದರೂ ಈ ಪಾತ್ರವನ್ನು ವಹಿಸಬೇಕು. ಆದರೆ ಮಗುವಿನ ಉಚ್ಚಾರಣೆಯ ಸಮಸ್ಯೆಯನ್ನು ಅಥವಾ ಕಲಿಕೆಯ ನ್ಯೂನ್ಯತೆಯನ್ನು ಅಣಕಿಸುವ ಅಥವಾ ದಂಡಿಸುವ ಕುಚೇಷ್ಟೆಯ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸುತ್ತಾ ಮಜ ತೆಗೆದುಕೊಳ್ಳುವ ಶಿಕ್ಷಕರು ಶಿಕ್ಷಣ ಸಂಸ್ಥೆಗಳಲ್ಲಿದ್ದರೆ ಎಂತಹ ಮಾನಸಿಕ ಆರೋಗ್ಯದ ಪ್ರತಿನಿಧಿಗಳನ್ನು ನಾವು ನಿರೀಕ್ಷಿಸಬಹುದು! 

ಮನೋರೋಗ ಮತ್ತು ಮಕ್ಕಳು 

ಈಗ ಸದ್ಯಕ್ಕೆ ರೋಗವನ್ನು ತಡೆಗಟ್ಟುವಿಕೆಯೇ (ಠಿಡಿeveಟಿಣioಟಿ) ರೋಗಕ್ಕೆ ಮದ್ದಾಗಿದೆ. ವ್ಯಕ್ತಿ, ಕುಟುಂಬ, ಸಮಾಜ ಮತ್ತು ವ್ಯವಸ್ಥೆಗಳು ಈ ಮನೋರೋಗದಿಂದ ಮುಕ್ತವಾಗಬೇಕಾದರೆ ಕುಟುಂಬ ಮತ್ತು ಶಿಕ್ಷಣ ಸಂಸ್ಥೆಗಳು ಬಹಳ ಗಂಭೀರವಾಗಿ ಮಗುತನವನ್ನು ಜತನ ಮಾಡುವ ಜವಾಬ್ದಾರಿಯನ್ನು ಹೊರಬೇಕು. 
ಮಗುವಿಗೆ ಆಹಾರ, ಆಶ್ರಯ, ಶಿಕ್ಷಣ ಮತ್ತು ಆರೋಗ್ಯವನ್ನು ಸಮರ್ಪಕವಾಗಿ ಮತ್ತು ಸಮಯಾನುಸಾರವಾಗಿ ಒದಗಿಸುವುದು ಕುಟುಂಬದ ಕರ್ತವ್ಯವಾಗಿದೆ. ಹಾಗೆಯೇ ಆರೋಗ್ಯವೆಂದರೆ ಶಾರೀರಿಕ ಮಾತ್ರವಲ್ಲದೇ ಮಾನಸಿಕವೂ ಕೂಡ ಆಗಿದೆ. ಹೇಗೆ ಸಿಡುಬು, ದಢಾರ, ಕಾಮಾಲೆ, ಪೆÇೀಲಿಯೋ ಇತ್ಯಾದಿ ರೋಗಗಳು ಬರದಂತೆ ಲಸಿಕೆಗಳನ್ನು ಹಾಕಿಸುತ್ತೇವೆಯೋ ಹಾಗೆಯೇ ಮಾನಸಿಕ ಅಸ್ವಸ್ಥತೆಗಳಿಗೆ ಮಕ್ಕಳು ಬಲಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕುಟುಂಬ ಮತ್ತು ಶಿಕ್ಷಣ ಸಂಸ್ಥೆಗಳು ಎಚ್ಚರಿಕೆಯನ್ನು ವಹಿಸಬೇಕಿದೆ. ಶಾರೀರಿಕ ಮತ್ತು ಸಾಂಕ್ರಮಿಕ ರೋಗಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆಗಳನ್ನು ಕೊಡಿಸಿದಷ್ಟು ಸುಲಭದ ಕೆಲಸವಲ್ಲ ಮಾನಸಿಕ ಸಮಸ್ಯೆಗಳಿಗೆ ಅಥವಾ ಮನೋರೋಗಗಳ ಮುಂಜಾಗರೂಕತ ಕ್ರಮಗಳು. ಆದರೂ ತಿಳುವಳಿಕೆ, ಜಾಗ್ರತೆ, ಶಿಸ್ತು, ಸಂಯಮ ಮತ್ತು ದೂರದೃಷ್ಟಿಯನ್ನು ಹೊಂದಿದರೆ ಕಷ್ಟವೇನಲ್ಲ. ಮೊಟ್ಟ ಮೊದಲು ಹಿರಿಯರು ಸಂಕಲ್ಪ ಮಾಡಬೇಕಾಗಿರುವುದು ಯಾವುದೇ ಮಗುವಿನ ಮಗುತನವನ್ನು ಜೋಪಾನ ಮಾಡುತ್ತೇನೆಂದು. 
ವಿದ್ಯಾವಂತ ಮತ್ತು ಸ್ಥಿತಿವಂತ ಕುಟುಂಬಗಳಲ್ಲಿಯೇ ಈ ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡುತ್ತಿರುವುದು ಕಡಿಮೆ ಪ್ರಮಾಣದಲ್ಲಿರುವಾಗ ಇನ್ನು ಅವಿದ್ಯಾವಂತ ಮತ್ತು ಕಡಿಮೆ ವರಮಾನದ, ಹೊತ್ತುಹೊತ್ತಿಗೆ ದುಡಿದುಕೊಂಡು ತಿನ್ನಬೇಕಾಗಿರುವವರ ಮನೆಗಳಲ್ಲಿ ಇದರ ಬಗ್ಗೆ ಜಾಗೃತಿ ಮತ್ತು ತಿಳುವಳಿಕೆ ತೀರಾ ಚಿಂತಾಜನಕಸ್ಥಿತಿಯಲ್ಲಿರುತ್ತದೆ.

ಅನುತ್ಪಾದಕರಲ್ಲಿ ((Uಟಿಠಿಡಿoಜuಛಿಣive ಠಿeoಠಿಟe) ಮನೋರೋಗದ ತೀವ್ರತೆ
ಯಾವ ಮಕ್ಕಳಿಗೆ ಮಾನಸಿಕ ಆರೋಗ್ಯ ಮತ್ತು ಶಿಕ್ಷಣದೊಂದಿಗೆ ಸ್ಪಷ್ಟ ಔದ್ಯೋಗಿಕ ಗುರಿಯನ್ನು ನೀಡಿಲ್ಲವಾದರೆ ಅವರು ವಯಸ್ಕರಾಗುವ ಹಂತದಲ್ಲಿ ಅನುತ್ಪಾದಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಜೊತೆಗೆ ತಮ್ಮ ಆರ್ಥಿಕತೆಗೆ ಯಾವುದಾದರೂ ಕೆಲಸಕ್ಕೆ ಹೋಗುವ ಅನಿವಾರ್ಯತೆಯು ಉಂಟಾಗಿ ವಿದ್ರೋಹದ ಚಟುವಟಿಕೆಗಳಿಂದ ಹಣ ಬರುವುದಾದರೆ ಅದಕ್ಕೂ ಸಮ್ಮತಿಸುತ್ತಾರೆ. ಇದರಿಂದ ಅಂತಹ ಮಾನವ ಸಂಪನ್ಮೂಲಗಳನ್ನು ಹಣವುಳ್ಳ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ವ್ಯವಸ್ಥೆಯು ತನ್ನ ನಕಾರಾತ್ಮಕ ಕೆಲಸಕ್ಕೆ ಕೂಡಾ ಉಪಯೋಗಿಸಿಕೊಳ್ಳಬಹುದು. ಹಾಗಾಗಿ ಮಕ್ಕಳು ಕಿಶೋರಾವಸ್ಥೆಯಿಂದ ಪ್ರೌಢಾವಸ್ಥೆಗೆ ಹೋಗುವ ಸಮಯದಲ್ಲಿಯೇ ಅವರನ್ನು ಗಂಭೀರವಾಗಿ ಗಮನಿಸಬೇಕು ಮತ್ತು ಅವರ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕತೆಗೆ ಸ್ಪಷ್ಟವಾದ ರೂಪುರೇಶೆಗಳನ್ನು ನಿರ್ಮಿಸಬೇಕು. ಅದರೊಟ್ಟಿಗೆ ಬಹಳ ಮುಖ್ಯವಾಗಿ ಅವರ ಮಾನಸಿಕ ಆರೋಗ್ಯದ ನಿರ್ವಹಣೆ ಜೊತೆಯಾಗಲೇ ಬೇಕು. ಅನುತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳಲ್ಲಿ ಮನೋರೋಗಗಳು ತೀವ್ರತರದಲ್ಲಿರುತ್ತದೆ. ಈ ಕಾರಣಕ್ಕಾಗಿಯೇ ಸಂಘಟನಾತ್ಮಕ, ರಚನಾತ್ಮಕ, ಸೃಜನಶೀಲಾತ್ಮಕ ಮತ್ತು ಉತ್ಪಾದಕ ಚಟುವಟಿಕೆಗಳ ತರಬೇತಿಯ ಅಗತ್ಯ ಮಕ್ಕಳಿಗೆ ಬೇಕಾಗುವುದು. 
ವಿಶ್ವ ಸಂಸ್ಥೆಯು 2019ರಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ ಭಾರತದಲ್ಲಿ ಸುಮಾರು, ಪ್ರೌಢಾವಸ್ಥೆಗೆ ಹೋಗುತ್ತಿರುವ ನಾಲ್ಕು ಮಕ್ಕಳಲ್ಲಿ ಒಂದು ಮಗು ಖಿನ್ನತೆಗೆ ಒಳಗಾಗಿರುತ್ತದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಯೋಜನೆಗಳನ್ನು ಮತ್ತು ಕೈಪಿಡಿಗಳನ್ನು ರಚಿಸಿದೆ. ಅವು ಮಕ್ಕಳ ಮನಸ್ಸಿನ ಮತ್ತು ಶರೀರದ ಆರೋಗ್ಯದ ಬಗ್ಗೆ ಇರುವ ಕಾಳಜಿಯಿಂದಾಗಿ ರೂಪುಗೊಂಡಿವೆ. ಅವುಗಳೇನೆಂದು ಮುಂದೆ ನೋಡೋಣ.

-0--0--0--0--0--0-

ಲೋಟನ ಮಡದಿ


ದೀಪ್ತಿ ಫ್ರಾನ್ಸಿಸ್ಕಾ, ಯಡವನಹಳ್ಳಿ


ದಿನನಿತ್ಯ ತನ್ನನ್ನು ತಾನು ವ್ಯವಹಾರಗಳಲ್ಲಿ ತೊಡಗಿಸಿ, ಮನೆಯ ಸ್ವಚ್ಛತೆ, ಅಡಿಗೆ ಕಾರ್ಯಗಳು, ನೆರೆಹೊರೆಯವರೊಂದಿಗೆ ಹರಟೆ ಹೊಡೆದು ಜೀವನ ಸಾಗಿಸುತ್ತಿದ್ದ ಲೋಟನ ಮಡದಿಗೆ ಅವಳ ಜೀವನ ಇನ್ನು ಕೆಲವೇ ಗಂಟೆಗಳಲ್ಲಿ ಮುಗಿಯಲಿದೆ ಎಂಬ ಪರಿವೆ ಇರಲಿಲ್ಲ. ಅವಳು ಕೆಲ ವರ್ಷಗಳ ಹಿಂದಷ್ಟೇ ಆರೋನನ ಮಗನಾದ ಲೋಟನನ್ನು ಮದುವೆಯಾಗಿ, ಇಬ್ಬರೂ ಸುಖ ಸಮೃದ್ಧಿಯ ಜೀವನ ನಡೆಸುತ್ತಿದ್ದರು. ಕಡೆಗೆ ದುಷ್ಪರೇ ತುಂಬಿದ್ದ ಸೋದೋಮ್ ನಗರದಲ್ಲಿ ನೆಲೆಯೂರಿದರು. ಆ ದುಷ್ಟ ನಗರದ ಸಂಹಾರಕ್ಕಾಗಿ ಸ್ವರ್ಗದಿಂದ ಸ್ವತಃ ದೇವದೂತರನ್ನೇ ಕಳುಹಿಸಿಕೊಡಲಾಯಿತು. 
ದೂತರು ಬರುವ ವೇಳೆ ನಗರದ ಬಾಗಿಲಲ್ಲೇ ಇದ್ದ ಲೋಟನು ಆ ಹೊಸಬರನ್ನು ಕಂಡು ಅವರನ್ನು ತನ್ನ ಮನೆಗೆ ಕರೆದೊಯ್ದು ಸ್ವಾಗತಿಸಿ ಸತ್ಕರಿಸಿದನು. ರಾತ್ರಿಯಾಗುತ್ತಿದ್ದಂತೆ ಏನಾಗಬಹುದೋ ಎಂಬ ಆತಂಕದೊಂದಿಗೆ ದೂತರೆಲ್ಲರನ್ನೂ ತನ್ನ ಮನೆಯಲ್ಲಿ ರಾತ್ರಿ ಕಳೆಯಲು ವಿನಂತಿಸಿದನು. ಆ ಕಾಲದಲ್ಲಿ ಅತಿಥಿ  ಸತ್ಕಾರವು ಪವಿತ್ರತೆಯ ಗುರುತಾಗಿದ್ದರಿಂದ ಆ ಹೊಸಬರನ್ನು ಲೋಟನ ಮಡದಿಯೂ ಸಹ ಉತ್ಸಾಹದಿಂದ ಸ್ವಾಗತಿಸಿ ಸತ್ಕರಿಸಿದಳು. ಇನ್ನೇನು ಮಲಗುವ ವೇಳೆ, ಹೊರಗಿನಿಂದ ಮಾತುಗಳು ಬರಲಾರಂಭಿಸಿದವು. ಮೊದಲಿಗೆ ಮುಸುಕುಗಟ್ಟಿದ ಮಾತುಗಳು, ನಂತರ ಪ್ರತಿಧ್ವನಿಸುವ ನಗೆ, ಕೊನೆಗೆ ಕೊಳಕು ಮಾತುಗಳು ಮನೆಯ ಸುತ್ತುವರಿದು ಗದ್ದಲ ಹೆಚ್ಚಿತು. ಬಾಗಿಲು ತೆಗೆದು ಅತಿಥಿಗಳನ್ನು ನಮ್ಮ ಖುಷಿಗೆ ಒಪ್ಪಿಸಿ ಎಂದು ಒರಟು ಧ್ವನಿಗಳು ಕೂಗಿದವು. ಇಲ್ಲ ಸ್ನೇಹಿತರೆ ಇಂತಹ ದುಷ್ಟ ಕಾರ್ಯವನ್ನು ಎಸಗಬೇಡಿ ಎಂದು ಲೋಟನು ಕಿರುಚುತ್ತಾ ಮರುತ್ತರ ಕೊಟ್ಟನು. ಅವರು ಬಗ್ಗದ ಕಾರಣ ನಿಸ್ತೇಜನಗೊಳಿಸುವ ಚೌಕಾಸಿ ಪ್ರಾರಂಭಿಸಿದನು. ಯಾರೊಂದಿಗೂ ಮಲಗದ ಅವನ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಅವರನ್ನು ಹೊರಗೆ ಕಳುಹಿಸುವೆನು, ಅವರೊಂದಿಗೆ ನೀವು ಇಷ್ಟ ಬಂದದ್ದು ಮಾಡಿ. ಆದರೆ ನನ್ನ ಮನೆಯಲ್ಲಿ ತಂಗಿ ಆಶ್ರಯ ಪಡೆಯುತ್ತಿರುವ ಈ ಜಾಣರಿಗೆ ಏನೂ ಮಾಡಬೇಡಿ ಎಂದು ಬೇಡಿಕೊಂಡನು. ಆದರೆ ಸೊದೋಮಿನ ಆ ಜನ ಯಾವುದನ್ನೂ ಲೆಕ್ಕಿಸದೆ ಬಾಗಿಲು ಹೊಡೆಯಲಾರಂಬಿಸಿದರು. ಆಗ ಒಮ್ಮೆಲೆ ದೂತರು ಹೊರಗೆ ಹೋಗಿ ಲೋಟನನ್ನು ಮನೆಯೊಳಕ್ಕೆಳೆದು ಬಾಗಿಲಲ್ಲಿದ್ದ ದುಷ್ಟರನ್ನು ಕುರುಡಾಗಿಸಿದರು. ಬಳಿಕ ಅವರು ಲೋಟನ ಕಡೆಗೆ ತಿರುಗಿ " ಈ ನಗರದಲ್ಲಿ ನಿನ್ನವರು, ನಿನಗೆ ಬೇಕಾದವರು ಯಾರೆಲ್ಲ ಇದ್ದಾರೋ ಅವರೆಲ್ಲರನ್ನೂ ಕರೆದುಕೊಂಡು ಕೂಡಲೇ ಹೊರಡು. ಇಲ್ಲಿಂದ ಅವರೆಲ್ಲರನ್ನೂ ಹೊರಗೆ ಕರೆದುಕೊಂಡು ಹೋಗು. ಏಕೆಂದರೆ ನಾವು ಈ ನಗರವನ್ನು ನಾಶಗೊಳಿಸುತ್ತವೆ ಎಂದು ಆಜ್ಞಾಪಿಸಿದರು. ಲೋಟನ ಅಳಿಯನಾದರೋ ದೂತರು ಹಾಸ್ಯ ಮಾಡುತ್ತಿದ್ದಾರೆ ಎಂದುಕೊಂಡು ಹೊರಡಲು ನಿರಾಕರಿಸಿದ. ಮುಂಜಾನೆಯ ವೇಳೆ ದೂತರು ಲೋಟನನ್ನು ಮತ್ತೊಮ್ಮೆ ಪ್ರಚೋದಿಸಿದರು. ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೊರಡದಿದ್ದರೆ, ಇಡೀ ನಗರದೊಂದಿಗೆ ಅವರೂ ನಾಶವಾಗುವರೆಂದು ಎಚ್ಚರಿಸಿದರು. ಆದರೂ ಹಿಂಜರಿಯುತ್ತಿದ್ದ ಕುಟುಂಬವನ್ನು ಕಂಡು, ದೂತರೇ ಅವರುಗಳ ಕೈ ಹಿಡಿದು ಹೊರಗೆಳೆದು, ಓಡಿಹೋಗಿ ಜೀವ ಉಳಿಸಿಕೊಳ್ಳಿ! ಹಿಂದಿರುಗಿ ನೋಡದೆ, ಎಲ್ಲೂ ನಿಲ್ಲದೆ, ಪರ್ವತದತ್ತ ಓಡಿಹೋಗಿ, ಇಲ್ಲವಾದರೆ ನೀವೂ ನಾಶವಾಗುತ್ತೀರಿ, ಎಂದು ಕಟ್ಟೆಚ್ಚರ ನೀಡಿದರು. ಲೋಟನ ಕುಟುಂಬ ಓಡಿಹೋಗುತ್ತಲೇ ಜೋಹಾರ್ ಎಂಬ ಪುಟ್ಟ ಹಳ್ಳಿಗೆ ತಲುಪುತಿದ್ದ ಹಾಗೆ, ಸೂರ್ಯ ಉದಯಿಸಿದ್ದ, ಸುಡುವ ಗಂಧಕದಲ್ಲಿ ಇಡೀ ಸೋದೋಮ್ ನಗರವೇ ಮುಳುಗಿ ಹೋಗಿತ್ತು. ಪುರುಷರು, ಮಹಿಳೆಯರು, ಮಕ್ಕಳು, ದನಕರುಗಳು, ಹೊಲಗದ್ದೆಗಳು ಎಲ್ಲವೂ ಇಲ್ಲವಾಗಿದ್ದವು. ಘೋರ ಪಾಪಕ್ಕೆ ಘೋರ ತೀರ್ಪು ಅದಾಗಿತ್ತು. 
ಲೋಟನು ಮತ್ತು ಅವರ ಮಕ್ಕಳು ಊಹಿಸಿಕೊಂಡಿದ್ದಕ್ಕಿಂತ ಭಯಾನಕವಾಗಿತ್ತು ಆ ತೀರ್ಪು. ಬದುಕುಳಿದೆವೆಂಬ ತೃಪ್ತಿಯೊಂದಿಗೆ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ, ಅವರಲ್ಲಿ ಯಾರೋ ಒಬ್ಬರೂ ಕಳೆದು ಹೋಗಿದ್ದಾರೆ ಎಂದು ದಿಗ್ಭ್ರಮೆಗೊಂಡು, ಸಿಗುವರು ಎಂಬ ಭರವಸೆಯೊಂದಿಗೆ ಅವರು ಕಳೆದು ಹೋದವರನ್ನು ಹುಡುಕಿರಬಹುದು. ಮಹಿಳೆಯ ಆಕಾರದಲ್ಲಿ ಸೊದೋಮಿನತ್ತ ತಿರುಗಿ ಗಗನದತ್ತ ನೋಡುತ್ತಿರುವ ಬಿಳಿಯ ಉಪ್ಪಿನ ಕಂಬದ ಆಕೃತಿಯು ಕಣ್ಣಿಗೆ ಬೀಳುವ ವರೆಗೂ ಹುಡುಕಿರಬಹುದು. ಉಪ್ಪಿನ ಕಂಬವನ್ನು ನೋಡಿ ಅವರಿಗೆ ಅದು ಲೋಟನ ಮಡದಿ ಎಂದು ಖಾತರಿಯಾಗುತ್ತದೆ.
ದೇವದೂತರ ಸ್ಪಷ್ಟ ಎಚ್ಚರಿಕೆಯ ನಂತರವೂ ಅವಳು ಏಕೆ ತಿರುಗಿದಳು? ಅವಳ ಮನಸ್ಸು ನಗರದ ಸುಖ ಸಂತೃಪ್ತಿಯ ಐಷಾರಾಮಿ ಜೀವನಕ್ಕೆ ಅಷ್ಟೊಂದು ಹೊಂದಿಕೊಂಡು ಬಿಟ್ಟಿತ್ತೇ? ಇಲ್ಲಾ ಅವಳಿಗೆ ಸಂಬಂಧ ಪಟ್ಟವರು ಯಾರಾದರೂ ನಗರದಲ್ಲಿ ಸಿಲುಕಿದ್ದರೆ? ಅಥವಾ ಅವಳ ಹಿಂದೆ ನಡೆಯುತ್ತಿದ್ದ ಆ ದುರಂತದ ಘಟನೆ ಅವಳಲ್ಲಿ ಕುತೂಹಲ ಮೂಡಿಸಿ ಆಕರ್ಷಿಸಿತೇ? ಬಹುಶಃ ಈ ಎಲ್ಲಾ ಗ್ರಹಚಾರಗಳು ಒಟ್ಟಾಗಿ, ಅವಳ ಪಾದಗಳನ್ನು ನಿಧಾನಿಸಿ ತಿರುಗಿ ನೋಡುವಂತೆ ಮಾಡುದವೇನೋ... ಅವಳ ಸ್ವಂತ ಆಯ್ಕೆಯಿಂದ ಹಾಗೂ  ಅದೇ ಕೊನೆಯ ಆಯ್ಕೆಯಿಂದ ಕರುಣೆಯನ್ನು ಬದಿಗಿಟ್ಟು ತೀರ್ಪಿಗೆ ಗುರಿಯಾಗಿ ಹೋದಳು.
ಯೇಸು ಸ್ವಾಮಿ ಲೋಕಾಂತ್ಯದ ಕುರಿತು ಬೋಧಿಸುವಾಗ ಇದನ್ನು ಉಲ್ಲೇಖಿಸಿದ್ದಾರೆ; " ಲೋಟನು ಸೋದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆಸುರಿದು ಎಲ್ಲರನ್ನೂ ನಾಶಮಾಡಿತು. ನರಪುತ್ರನು ಪ್ರತ್ಯಕ್ಷನಾಗುವ ದಿನದಲ್ಲೂ ಹಾಗೆಯೇ ನಡೆಯುವುದು. ಆ ದಿನದಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕು ಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ ಹೊಲದಲ್ಲಿರುವವನು ಮನೆಗೆ ಹಿಂತಿರುಗದಿರಲಿ. ಲೋಟನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ. ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಚಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ. (ಲೂಕ 17:29-33). ಗಾಂಭೀರ್ಯದ ಘಟನೆಯನ್ನು ನೆನಪಿಸುವ ಗಂಭೀರ ಪದಗಳಿವು. ವಚನಗಳು ನಮ್ಮನ್ನು ದುಷ್ಟ ಭ್ರಮೆಯಿಂದ ದೂರವಿದ್ದು ದಯೆಯ ತೋಳಲ್ಲಿ ಸುರಕ್ಷಿತವಾಗಿರಲು ಕರೆ ನೀಡುತ್ತವೆ. ಅವುಗಳಲ್ಲಿ ವಿಶ್ವಾಸವಿಡೋಣ..
-0--0--0--0--0--0-

ಹಣ ಬೊಕ್ಕಸಕ್ಕೆ, ಕೋರಿಕೆ ಪತ್ರಗಳು ತಿಪ್ಪೆಗೆ


ಎಲ್.ಚಿನ್ನಪ್ಪ, ಬೆಂಗಳೂರು.

ಸುಮಾರು ವರ್ಷಗಳ ಹಿಂದೆ ನಾನು ಕಣ್ಣಾರೆ ಕಂಡ ಘಟನೆಯೊಂದಕ್ಕೆ ಈಗ ಅಕ್ಷರ ರೂಪ ಕೊಟ್ಟಿದ್ದೇನೆ. ಹಣವೇ ಮುಖ್ಯ ಹಣವೇ ಸರ್ವಸ್ವ. ಎಲ್ಲರೂ ಹಣದಾಹಿಗಳೇ, ಹಣದ ಹಪಾಪಿಗಳೇ. ಮನಷ್ಯನ ಮನೋರಥವೇ ಹಣ. ಹಣಗಳಿಸಲು ನಾನಾ ಮಾರ್ಗಗಳಿವೆ. ವಾಮ ಮಾರ್ಗಗಳೂ ಇವೆ. ಉದ್ಯೋಗ, ಧರ್ಮ, ಶಿಕ್ಷಣ, ವ್ಯಾಪಾರ, ರಾಜಕೀಯದಲ್ಲೂ ಹಣ ಮಾಡಬಹುದು. ದೇವರ ಹೆಸರಿನಲ್ಲೂ ಹಣಗಳಿಸುವ ನಾನಾ ದಂದೆಗಳಿವೆ. ಹೆಚ್ಚು ಹಣ ಗಳಿಸುವುದರಿಂದ ಸಮಾಜದಲ್ಲೊಂದು ಗೌರವ, ಪ್ರತಿಷ್ಟೆಗೆ ಪಾತ್ರರಾಗಬಹುದು ಎಂಬುದು ಹಣದಾಹಿಗಳ ವಾಂಛೆ. ಹೌದು, ಹಣ ಪ್ರತಿಯೊಂದು ವ್ಯವಹಾರದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೂ ಹಣ ತನ್ನ ಪರೋಕ್ಷ ಪ್ರಭಾವ ಮೆರೆದಿದೆ. ಹಣ ಯಾರಿಗೆ ಬೇಡ? ‘ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ’ ಎಂಬ ಮಾತಿಗೆ ಈ ಲೇಖನ ಒಂದು ದೃಷ್ಟಾಂತ. 
ಬೆಂಗಳೂರು ನಗರದ ಹೃದಯ ಭಾಗದಲ್ಲೊಂದು ಸುಂದರ ಬಡಾವಣೆ. ಅಲ್ಲಿ ನೆಲೆಸಿದ್ದವರ ಪೈಕಿ ಶ್ರೀಮಂತ ವರ್ಗದವರೇ ಹೆಚ್ಚು. ಅಲ್ಲೊಂದು ಸುಸಜ್ಜಿತ ಕಲ್ಯಾಣ ಮಂಟಪ. ಅದಕ್ಕೆ ಹೊಂದಿಕೊಂಡಂತೆ ದೇವಸ್ಥಾನ. ಪ್ರತಿ ನಿತ್ಯ ನೂರಾರು ಭಕ್ತರು ಬೆಳಿಗ್ಗೆ ಮತ್ತು ಸಂಜೆ ದೇವರ ದರ್ಶನಕ್ಕಾಗಿ ಬರುತ್ತಿದ್ದರು. ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳು ಕುಳಿತುಕೊಂಡು ವಿಶ್ರಮಿಸಲು ಬೆಂಚುಗಳಿದ್ದವು. ನೆರಳಿನ ಆಸರೆಗೆ ಮರಗಳೂ ಇದ್ದವು. ನಿವೃತ್ತರಿಗೆ, ವೃದ್ಧರಿಗೆ ಆ ಸ್ಥಳ ಹೇಳಿ ಮಾಡಿಸಿದಂತಿತ್ತು. ವೃದ್ಧರು, ಕೆಲಸವಿಲ್ಲದವರು ಅಲ್ಲಿ ಕುಳಿತುಕೊಂಡು ಮಾತಾಡುತ್ತ ಸಮಯ ಕಳೆಯುತ್ತಿದ್ದರು. 
ಭಕ್ತರ ಕೋರಿಕೆ ಪತ್ರಗಳಿಗೆ ಸಂದ ದುರ್ಗತಿ
ದೇವಸ್ಥಾನದ ಪ್ರಾಂಗಣದಲ್ಲಿ ಆಗಾಗ್ಗೆ ವಿಶೇಷ ಪೂಜೆ ಪ್ರವಚನಗಳು ಜರುಗುತ್ತಿದ್ದವು. ಪ್ರವಚನ ಆಲಿಸಲು ಭಕ್ತರು ಅಪಾರ ಸಂಖ್ಯೆಯಲ್ಲಿ ನೆರೆಯುತ್ತಿದ್ದರು. ಅಲ್ಲಿನ ಕಲ್ಯಾಣ ಮಂಟಪ ಹಾಗೂ ದೇವಸ್ಥಾನವು ಟ್ರಸ್ಟೊಂದಕ್ಕೆ ಸೇರಿದ್ದು ಅದರ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ಟ್ರಸ್ಟಿಗಳು ಅಲ್ಲೇ ಮೊಕ್ಕಾಂ ಮಾಡಿದ್ದರು. ದೇವಸ್ಥಾನದ ಪ್ರಾಂಗಣದಲ್ಲಿ ದೊಡ್ಡ ಸೈಜಿನ ಹುಂಡಿಗಳನ್ನು ಇಟ್ಟಿದ್ದರು. ಭಕ್ತಾಧಿಗಳು ಪ್ರತಿ ದಿನ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರಿಂದ ಹುಂಡಿಗಳಲ್ಲಿ ಕಾಣಿಕೆ ತುಸು ಹೆಚ್ಚಾಗಿಯೇ ಬೀಳುತ್ತಿತ್ತು. ವಿವಾಹ ಸಮಾರಂಭಕ್ಕೆ ಬಂದ ದೈವಭಕ್ತರು ಸಹ ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರಿಂದ ಅವರಿಂದಲೂ ಹುಂಡಿ ಪೆಟ್ಟಿಗೆಗಳಿಗೆ ಹಣ ಬೀಳುತ್ತಿತ್ತು. ಹಬ್ಬ-ಹರಿ ದಿನಗಳಲ್ಲಿ, ಅಲ್ಲಿ ವಿಶೇಷ ಪೂಜೆ ಪ್ರವಚನಗಳು ಜರುಗುತ್ತಿದ್ದವು. ಟ್ರಸ್ಟಿಗಳು ಅಂದು ಹೆಚ್ಚುವರಿ ಹುಂಡಿಗಳನ್ನು ಇಡುತ್ತಿದ್ದರು. 
ಪ್ರತಿ ದಿನ ರಾತ್ರಿ ಒಂಬತ್ತು ಗಂಟೆಗೆ ಟ್ರಸ್ಟಿಗಳು ಎಲ್ಲಾ ಹುಂಡಿಗಳನ್ನು ತಮ್ಮ ಆಫೀಸಿಗೆ ಸಾಗಿಸುತ್ತಿದ್ದರು. ಅವರ ಆಫೀಸ್ ಕಲ್ಯಾಣ ಮಂಟಪದ ನೆಲಮಾಳಿಗೆಯಲ್ಲಿತ್ತು. ಅಲ್ಲಿ ಅವರ ಜೊತೆ ಇನ್ನಿಬ್ಬರು ಸದಸ್ಯರು ಸೇರಿಕೊಂಡು ಹುಂಡಿಗಳನ್ನು ತೆರೆದು ಸಂಗ್ರಹವಾಗಿದ್ದ ಹಣವನ್ನೆಲ್ಲ ಮೇಜಿನ ಮೇಲೆ ಸುರಿದು ಎಣಿಸುತ್ತಿದ್ದರು. ನೋಟುಗಳÀನ್ನು ಕಣ್ಣಲ್ಲಿ ಕಣ್ಣಿಟ್ಟು ಎಣಿಸಿ ಬಂಡಲ್‍ಗಳನ್ನಾಗಿ ಕಟ್ಟುತ್ತಿದ್ದರೆ ಅದರ ಜೊತೆಗೆ ಸಿಕ್ಕ ಪತ್ರಗಳನ್ನು ಸಿಡುಕಿನಿಂದ ಹೊಸಕಿ ‘ದರಿದ್ರ ಮುಂಡೇವು ಬರೀ ಚೀಟಿಗಳನ್ನೇ ಹಾಕವೆ’ ಎಂದು ಮುಖ ಸಿಂಡರಿಸಿಕೊಂಡು ಅವುಗಳನ್ನು ಎತ್ತಿ ಕಸದ ಬುಟ್ಟಿಗೆ ಎಸೆಯುತ್ತಿದ್ದರು. ಭಕ್ತರು ತಮ್ಮ ಕಾಣಿಕೆ ಜೊತೆಗೆ ಕೋರಿಕೆ ಪತ್ರಗಳನ್ನೂ ಬರೆದು ಹಾಕುತ್ತಿದ್ದರು. ಅದರಲ್ಲಿ ತಮ್ಮ ಆಂತರಿಕ ಕಷ್ಟ ಸಮಸ್ಯೆಗಳನ್ನೆಲ್ಲ ತೋಡಿಕೊಂಡು ಅವುಗಳ ಪರಿಹಾರಕ್ಕಾಗಿ ಭಗವಂತನಿಗೆ ಬರೆದಿದ್ದ ಪತ್ರಗಳವು. 
ಆದರೆ ಆ ಪತ್ರಗಳು ಟ್ರಸ್ಟ್‍ನವರಿಗೆ ಬೇಕಿರಲಿಲ್ಲ. ಅವರಿಗೆ ಬೇಕಿದ್ದುದು ಹಣ ಮಾತ್ರ. ಹಾಗಾಗಿ ಹಣವನ್ನಷ್ಟೆ ಬಾಚಿಕೊಳ್ಳುತ್ತಿದ್ದರು. ನಂತರ ಕಸದ ಬುಟ್ಟಿಗಳಲ್ಲಿದ್ದ ಪತ್ರಗಳನ್ನೆಲ್ಲ ತಿಪ್ಪೆಗೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕುತ್ತಿದ್ದರು. ಭಕ್ತರಲ್ಲಿ ಕೆಲವರು ಉಪವಾಸವ್ರತ ಕೈಗೊಂಡು, ತಾವು ಹರಸಿಕೊಂಡಂತೆ ದೇವರಿಗೆ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. ಅದರ ಜೊತೆಗೆ ತಾವು ಹರಸಿಕೊಂಡ ಕಾರ್ಯಗಳು, ಇಷ್ಟಾರ್ಥಗಳು ನೆರವೇರಲೆಂದು ದೇವರಿಗೆ ಪತ್ರಗಳನ್ನು ಬರೆದು ಹುಂಡಿಗಳಲ್ಲಿ ಹಾಕುತ್ತಿದ್ದರು. ಇನ್ನೂ ಕೆಲವು ವಯೋವೃದ್ಧರು ತಮ್ಮ ಉದ್ದೇಶಗಳ ಈಡೇರಿಕೆಗಾಗಿ ತಮ್ಮ ಕೈ ನೋಯಿಸಿಕೊಂಡು ಸಹಸ್ರ ‘ರಾಮನಾಮ’ ವನ್ನು ಬರೆದು ಹಾಕುತ್ತಿದ್ದರು. ನಾನು ಪ್ರತ್ಯಕ್ಷವಾಗಿ ಕಂಡಂತೆ ಆಗಿನ ಕಾಲಕ್ಕೇ ಪ್ರತಿ ನಿತ್ಯ ಸುಮಾರು 20,000-25,000 ದಷ್ಟು ಹಣ ಅಲ್ಲಿನ ಹುಂಡಿಗಳಲ್ಲಿ ಸಂಗ್ರಹವಾಗುತ್ತಿತ್ತು ಹಬ್ಬ ಹರಿದಿನಗಳಲ್ಲಿ ಇನ್ನೂ ಹೆಚ್ಚು ಹಣ. ಕಲ್ಯಾಣ ಮಂಟಪದಿಂದಲೂ ಟ್ರಸ್ಟ್‍ಗೆ ಹೆಚ್ಚಿನ ಆದಾಯ ಬರುತ್ತಿತ್ತು. 
ಭಕ್ತರು ನೀಡಿದ ಕಾಣಿಕೆ ಹಣವÀನ್ನು ಟ್ರಸ್ಟಿಗಳು ಹೇಗೆ ದುರಾಸೆಯಿಂದ ಬಾಚಿಕೊಳ್ಳುತ್ತಿದ್ದರೋ, ಅದೇ ರೀತಿ ಅವರ ಕೋರಿಕೆ ಪತ್ರಗಳನ್ನೂ ಸಂಗ್ರಹಿಸಿ ಅಲ್ಲಿನ ಭಗವಂತನ ಸನ್ನಿಧಿಗೆ ಸಮರ್ಪಿಸುವಂತ ಪುಣ್ಯದ ಕೆಲಸ ಮಾಡಬಹುದಿತ್ತು ಅಥವಾ ಅವುಗಳನ್ನೆಲ್ಲ ಒಟ್ಟುಗೂಡಿಸಿ ಪತ್ರ ಬರೆದಿದ್ದವರ ಹೆಸರಿನಲ್ಲಿ ಪುರೋಹಿತರಿಂದ ಸಾಮೂಹಿಕ ಅರ್ಚನೆ ಮಾಡಿಸಬಹುದಿತ್ತು. ಆದರೆ, ದೇವಸ್ಥಾನದ ಟ್ರಸ್ಟಿಗಳಿಗೆ ಭಕ್ತರ ಹಣ ಬೇಕಾಗಿತ್ತೇ ಹೊರತು ಅವರ ಕೋರಿಕೆ ಪತ್ರಗಳಲ್ಲ. ಭಗವಂತ ಬಯಸುವುದು ‘ಕೃಪಾನಿಧಿ ಕರುಣಿಸೆನ್ನನು,’ ಎಂದು ಅಂಗಲಾಚುವ ದೀನ ದಲಿತರ ಪ್ರಾರ್ಥನೆಯೇ ಹೊರತು ಅವರು ನೀಡುವ ಹಣವಲ್ಲ. 
ದೇವರ ಹೆಸರಿನಲ್ಲಿ ಹಣಗಳಿಸುವ ಇಂತಹ ನಾನಾ ದಂಧೆಗಳು ನಮ್ಮಲ್ಲಿವೆ. ಹಣ ಕೊಟ್ಟರೆ ಬೇಗ ದೇವರ ದರ್ಶನವಾಗುತ್ತದೆ. ಮಂಗಳಾರತಿ ತಟ್ಟೆಗೆ ಚಿಲ್ಲರೆ ಕಾಸು ಹಾಕದಿದ್ದರೆ, ಪೂಜಾರಿಗಳು ಕೆಕ್ಕರಿಸಿಕೊಂಡು ನೋಡುತ್ತಾರೆ. ಹೀಗೆ ದೇವರ ದರ್ಶನದಲ್ಲೂ ತಾರತಮ್ಯವಿದೆ, ಪಕ್ಷಪಾತಗಳಿವೆ. ಇದನ್ನು ವಿಚಾರವಂತರು, ಸಾಮಾಜಿಕ ಕಳಕಳಿ ಉಳ್ಳವರು, ಪರಾಂಬರಿಸಬೇಕು. ಭಕ್ತರ ಪತ್ರಗಳಿಗೆ ನ್ಯಾಯ ಒದಗಿಸುವಂತಹ ವ್ಯವಸ್ಥೆಯಾಗಬೇಕು. ಹಾಗಾದಾಗ ಮಾನವೀಯ ಮೌಲ್ಯಗಳಿಗೆ ಗೌರವ ಕೊಟ್ಟಂತಾಗುತ್ತದೆ. ಹಿಂದೂ ಧರ್ಮದವರಲ್ಲಿ ಇಂತಹ ಅರಾಜಕತೆಯಿದ್ದರೆ, ನಮ್ಮ ಕ್ರೈಸ್ತ ಧರ್ಮದಲ್ಲಿ ಇದಕ್ಕೆ ತದ್ವಿರುದ್ಧವಾದ ಪದ್ದತಿಯೊಂದಿದೆ. ನಮ್ಮ ಎಲ್ಲಾ ದೇವಾಲಯಗಳಲ್ಲಿ ಇದಕ್ಕೆಂದೇ ಪ್ರತ್ಯೇಕವಾಗಿ ‘ಪೆಟಿಶನ್ ಬಾಕ್ಸ್’ ಇಟ್ಟಿರುವುದನ್ನು ಕಾಣಬಹುದು. ಹೀಗೆ ಪೆಟಿಶನ್ ಬಾಕ್ಸ್‍ಗಳಲ್ಲಿ ಸಂಗ್ರಹÀವಾದ ಭಕ್ತರ ಕೋರಿಕೆಯ ಪತ್ರಗಳನ್ನೆಲ್ಲ ತೆಗೆದು ಅವರಿಗೋಸ್ಕರ ಪ್ರಾರ್ಥಿಸುವ ಪದ್ದತಿ ನಮ್ಮಲ್ಲಿದೆ. ಪೋನ್ ಮೂಲಕವೂ ಕೋರಿಕೆ ಸಲ್ಲಿಸಬಹುದು. 
ಭಕ್ತರ ಮನವಿ ಪತ್ರಗಳನ್ನು ಗೌರವಿಸುವ ಇಸ್ರೇಲ್ ರಾಷ್ಟ್ರ
ಭಕ್ತರ ಪತ್ರಗಳನ್ನು ಸ್ವೀಕರಿಸಿ ಗೌರವಿಸುವ ಸಂಸ್ಕøತಿಯೊಂದು ಇಸ್ರೇಲ್‍ನಲ್ಲಿದೆ. ಭಕ್ತರು ತಮ್ಮ ಹರಕೆ-ಕಾಣಿಕೆಗಳನ್ನು ಹಣ ಮತ್ತು ವಸ್ತುಗಳ ರೂಪದಲ್ಲಿ ಸಲ್ಲಿಸುವಂತೆಯೇ ತಮ್ಮ ಕೋರಿಕೆಗಳನ್ನು ಪತ್ರಗಳ ಮುಖಾಂತರವೂ ಅಲ್ಲಿ ಸಲ್ಲಿಸಬಹುದು. ಸಾವಿರಾರು ಮೈಲುಗಳ ದೂರದ ಸ್ಥಳಕ್ಕೆ ದೇವರನ್ನು ಅರಸಿಕೊಂಡು ಹೋಗಬೇಕಾಗಿಲ್ಲ. ಮಾಡಿದ ಪಾಪಗಳ ಪರಿಹಾರಕ್ಕಾಗಿ ಅಷ್ಟು ದೂರ ಪ್ರಯಾಣಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿಲ್ಲ. ಈಗ ಎಲ್ಲವೂ ಸರಳಗೊಂಡಿವೆ. ಪ್ರಪಂಚದ ಭೂಪಟದಲ್ಲಿ ಒಂದು ಪುಟ್ಟ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಇಸ್ರೇಲ್ ರಾಷ್ಟ್ರದಲ್ಲಿ ಇಂತಹ ಒಂದು ಪವಿತ್ರ ಸ್ಥಳವಿದೆ. ಕ್ರೈಸ್ತರಿಗೆ ಹಾಗೂ ಯೆಹೂದಿಗಳಿಗೆ ದೇವರಲ್ಲಿ ನಂಬಿಕೆ ಇರುವ ವಿಶ್ವಾಸದ ಕೊಂಡಿಯನ್ನು ಪೋಷಿಸಿ ಬೆಳೆಸುವ ಸೇವೆಯೊಂದನ್ನು ಇಸ್ರೇಲ್ ರಾಷ್ಟ್ರ ಮಾಡುತ್ತಿದೆ. ಇದರ ಸಲುವಾಗಿಯೇ ರಾಷ್ಟ್ರವು ಒಂದು ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ. ಭಕ್ತರು ದೇವರ ಹೆಸರಿಗೆ ಎಲ್ಲಿಂದ ಬೇಕಾದರೂ ಪತ್ರಗಳನ್ನು ಬರೆಯಬಹುದು. ಅಲ್ಲಿನ ಅಂಚೆ ಕಛೇರಿಯು ಅಂತಹ ಪತ್ರಗಳನ್ನೆಲ್ಲಾ ಸ್ವೀಕರಿಸಿ ದೇವರ ಸಾನ್ನಿಧ್ಯಕ್ಕೆ ತಲುಪಿಸುವಂತ ಪುಣ್ಯದ ಕೆಲಸ ಮಾಡುತ್ತಿದೆ. ಅದೊಂದು ಅವರ ಅಳಿಲು ಸೇವೆ. 
ದೇವರಿಗೆ ಶ್ವಾಶ್ವತ ವಿಳಾಸವಿಲ್ಲದಿದ್ದರೂ ಭಕ್ತರು ತಮಗೆ ತೋಚಿದ ರೀತಿಯಲ್ಲಿ ತಮ್ಮ ಕಷ್ಟ ಕಾರ್ಪಣ್ಯಗಳನ್ನೆಲ್ಲ ತೋಡಿಕೊಂಡು ದೇವರಿಗೆ ಪತ್ರಗಳನ್ನು ಬರೆಯುವುದುಂಟು. ‘ಜೆರುಸಲೆಂ ಪರಮಾತ್ಮನ ಸನ್ನಿಧಿಗೆ, ಪಶ್ಚಿಮ ಗೋಡೆಯ ಭಗವಂತನ ಸನ್ನಿಧಿಗೆ, ಜೀವಂತ ದೇವರ ಸನ್ನಿಧಿಗೆ” ಎಂದೆಲ್ಲಾ ಹೆಸರಿಸಿ ದೇವರಿಗೆ ಪತ್ರಗಳನ್ನು ಬರೆಯುತ್ತಾರೆ. ಪ್ರಪಂಚದ ನಾನಾ ಕಡೆಗಳಿಂದ    ಅಲ್ಲಿಗೆ ಅಂಚೆಯ ಮೂಲಕ ಬರುವ ಭಕ್ತರ ಪತ್ರಗಳನ್ನು ಇಸ್ರೇಲ್ ರಾಷ್ಟ್ರವು ಸ್ವೀಕರಿಸಿ ಭಕ್ತಾಧಿಗಳ ಇಚ್ಛೆಯಂತೆ ಅಲ್ಲಿನ ಅಂಚೆ ಸಿಬ್ಬಂದಿಗಳು ಅವುಗಳನ್ನು ಜೆರುಸಲೆಂ ಗೋಡೆಗೆ ಪ್ರಾಮಾಣಿಕಬದ್ದರಾಗಿ ರವಾನಿಸÀುತ್ತಾರೆ. ‘ಇಲ್ಲಿಗೆ ಬರುವ ಭಕ್ತಾಧಿಗಳ ಸಂದೇಶವನ್ನು ದೇವರ ಅವಗಾಹನೆಗೆ ಇಡುತ್ತೇವೆ. ಅವುಗಳಿಗೆ ಸ್ಪಂದಿಸುವುದು ಬಿಡುವುದು ದೇವರ ಇಚ್ಛೆಗೆ ಬಿಟ್ಟದ್ದು, ನಮ್ಮ ಪಾಲಿನ ಕರ್ತವ್ಯವನ್ನಷ್ಟೆ ನಾವು ಪ್ರಮಾಣಿಕವಾಗಿ ಮಾಡುತ್ತೇವೆ’ ಎಂಬುದು ಅಲ್ಲಿನ ಅಂಚೆ ಸಿಬ್ಬಂದಿಗಳ ಹೇಳಿಕೆ. 
ಇಲ್ಲಿ ನಮ್ಮ ಅಂಚೆ ಇಲಾಖೆಗಳು ವ್ಯಕ್ತಿಗಳ ಹೆಸರಿಗೆ ಬಂದಿರುವ ಪತ್ರಗಳನ್ನು ಕೆಲವು ವೇಳೆ ಸರಿಯಾಗಿ ತಲುಪಿಸುವುದಿಲ್ಲ. ಆದರೆ ಇಸ್ರೇಲ್‍ನ ಪ್ರಾಮಾಣಿಕ ಶ್ರದ್ಧಾಳುಗಳು ಅಂತಹ ಪುಣ್ಯದ ಕೆಲಸ ಮಾಡುತ್ತಾರೆ. ಅಲ್ಲಿನ ಅಂಚೆ ಕಛೇರಿಯ ಹೆಸರು ‘ಡೆಡ್ ಲೆಟರ್ ಪೋಸ್ಟ್ ಆಫೀಸ್ ‘ (ಆಐPಔ) 
ಅಲ್ಲಿಗೆ ಖುದ್ದು ಭೇಟಿ ಕೊಡುವ ಯಾತ್ರಾರ್ಥಿಗಳು ಗೋಡೆಯ ಮುಂದೆ ನಿಂತು ನಿವೇದನೆ, ಹರಕೆ ಮಾಡಿಕೊಳ್ಳುತ್ತಾರೆ. ತಮ್ಮ ಬೇಡಿಕೆಗಳನ್ನು ಬರೆದು ಪತ್ರವನ್ನು ಗೋಡೆಯ ಕಿಂಡಿಗೆ ಸಿಕ್ಕಿಸುತ್ತಾರೆ. ಬೇರೆಯವರಿಗಾಗಿಯೂ ಬೇಡಿಕೆ ಚೀಟಿ ಬರೆದು ಗೋಡೆಗೆ ತುರುಕುವುದುಂಟು. ಗೋಡೆಯ ಕಿಂಡಿಯಲ್ಲಿ ಸಿಕ್ಕಿಸಲಾಗಿದ್ದ ನೂರಾರು ಚೀಟಿಗಳನ್ನು ಅಂಚೆ ಇಲಾಖೆಯವರು ಸಂಗ್ರಹಿಸಿ ಅವುಗಳನ್ನು ಸಭಾ ಮಂದಿರಕ್ಕೆ ಹೊತ್ತೊಯ್ದು ಪ್ರಾರ್ಥಿಸಿ ಅವುಗಳÀನ್ನು ಮೂಟೆ ಕಟ್ಟುತ್ತಾರೆ. ಅಲ್ಲಿಗೇ ಅದು ಕೊನೆಗೊಳ್ಳದೇ,. ನಂತರ ಎಂದಾದರೊಂದು ದಿನ ಆ ಪತ್ರಗಳನ್ನೆಲ್ಲ ಹರಾಜು ಹಾಕುವ ಪದ್ದತಿಯೂ ಅಲ್ಲಿದೆ. 
ಗೋಳಾಟದ ಗೋಡೆ
ದೇವರು ಗೋಡೆಯಲ್ಲಿ ಇನ್ನೂ ಜೀವಂತವಾಗಿದ್ದಾನೆ ಎಂಬುದು ಯೆಹೂದಿಗಳ ನಂಬಿಕೆ. ದೇವಾಲಯದ ಗೋಡೆ ಪಶ್ಚಿಮ ದಿಕ್ಕಿಗಿರುವುದರಿಂದ ಇದಕ್ಕೆ ಪಶ್ಚಿಮದ ಗೋಡೆ (ವೆಸ್ಟರ್ನ್ ವಾಲ್) ಎನ್ನುವ ಹೆಸರು ಬಂದಿದೆ. ಇದಕ್ಕೆ ಗೋಳಾಟದ ಗೋಡೆ (ವೇಲಿಂಗ್ ವಾಲ್) ಎಂಬ ಹೆಸರೂ ಇದೆ. ಯೆಹೂದ್ಯರು ಈ ಗೋಡೆಯ ಕಡೆಗೆ ಮುಖಮಾಡಿಕೊಂಡು ತಮ್ಮ ಧರ್ಮಗ್ರಂಥ (ಥೋರಾ)ದ ಪಠಣ ಮಾಡುವರು ಮತ್ತು ದೇವಾಲಯದ ಗತ ವೈಭವವನ್ನು ನೆನೆ ನೆನೆದು ಕಣ್ಣೀರು ಇಡುವರು. ಇದಕ್ಕಾಗಿಯೇ ಆ ಗೋಡೆಗೆ ಗೋಳಾಟದ ಗೋಡೆ ಎಂಬ ಹೆಸರು ಬಂದಿದೆ. 
ಭೌಗೋಳಿಕ
ಇಸ್ರೇಲ್ ರಾಷ್ಟ್ರವು ಯೆಹೂದ್ಯರಿಗೆ, ಕ್ರೈಸ್ತರಿಗೆ ಹಾಗೂ ಮುಸ್ಲಿಮರಿಗೆ ಪವಿತ್ರ ಸ್ಥಳವಾಗಿದೆ. ಇಸ್ರೇಲ್ ರಾಷ್ಟ್ರ ಪುಟ್ಟದಾದರೂ ಗಳಿಸಿರುವ ಕೀರ್ತಿ ಮಾತ್ರ ದೊಡ್ಡದು. ನಮ್ಮ ರಾಯಚೂರು, ಬಳ್ಳಾರಿ ಜಿಲ್ಲೆಗಳ ವಿಸ್ತೀರ್ಣಕ್ಕಿಂತ ಇದು ಚಿಕ್ಕದು. ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ, ಈ ದೇಶವು 470 ಕಿ.ಮೀ. ಉದ್ದ, 135 ಕಿ.ಮೀ. ಅಗಲವಿದೆ. ದೇಶವನ್ನೆಲ್ಲ ಒಂದೇ ದಿನದಲ್ಲಿ ಸುತ್ತಿ ಬರಬಹುದು. ಜನ ಸಂಖ್ಯೆಯೂ ತೀರಾ ಕಡಿಮೆ. ಇಲ್ಲಿನ ಜನ ಸಂಖ್ಯೆ ಕೇವಲ 90 ಲಕ್ಷ. ದೇಶದ ಅರ್ಧಭಾಗದಷ್ಟು ಸ್ಥಳವನ್ನು ಮರುಭೂಮಿಯೇ ಆಕ್ರಮಿಸಿಕೊಂಡಿದೆ. ಉತ್ತರ ಭಾಗದಲ್ಲಿ 40 ಸೆ.ಮೀ. ಮಳೆ ಬಿದ್ದರೆ, ದಕ್ಷಿಣ ಭಾಗದಲ್ಲಿ ಕೇವಲ 3.ಸೆ.ಮೀ. ಮಳೆ ಬೀಳುವುದು. ಪ್ರಾರಂಭದಲ್ಲಿ ಮರುಭೂಮಿ ಪ್ರದೇಶವೆಲ್ಲ ಕೃಷಿಗೆ ಅನುಪಯುಕ್ತವೇ ಆಗಿತ್ತು. ಆದರೂ ಶತಪ್ರಯತ್ನದಿಂದ ಆ ಪ್ರದೇಶವನ್ನು ಕೃಷಿಯೋಗ್ಯ ಪ್ರದೇಶವನ್ನಾಗಿ ಮಾಡಿದ್ದಾರೆ. 
500 ಕಿಲೋಮೀಟರು ದೂರವಿರುವ ಗಲಿಲೇಯ ಸರೋವರದಿಂದ ನೀರನ್ನು ಹಾಯಿಸುವ ಯೋಜನೆಯೊಂದು 1964ರಲ್ಲಿ ಕಾರ್ಯಗತಗೊಂಡಿತು. ಆಮೇಲೆ ದೇಶದ ಕೃಷಿ ಚಟುವಟಿಕೆಗಳು ಸಮರೋಪಾದೆಯಲ್ಲಿ ಗರಿಗೆದರಿದÀವು. ಅನೇಕ ಕೃಷಿ ಸಂಶೋಧನಾ ಕೇಂದ್ರಗಳು ಹುಟ್ಟಿಕೊಂಡವು. ರಾಷ್ಟ್ರವು ಆಧುನಿಕ ವಿಧಾನದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿಗೆ ಪ್ರಾಮುಖ್ಯತೆ ಕೊಟ್ಟಿತು. ಇಂದು ದೇಶದುದ್ದಕ್ಕೂ ಕೊಳವೆಗಳಲ್ಲಿ ನಿರಂತರವಾಗಿ ಹರಿಯುವ ನೀರೇ ಕೃಷಿಗೆ ಆಧಾರವಾಗಿದೆ. ದೇಶವು ಇಂದು ಎಲ್ಲಾ ದವಸ ಧಾನ್ಯಗಳನ್ನು, ತರಕಾರಿ ಹಣ್ಣುಗಳನ್ನು ಬೆಳೆಯುವ ಸಾಮಥ್ರ್ಯ ರೂಢಿಸಿಕೊಂಡಿದೆ. ಇಂದು ಮರುಭೂಮಿಯಲ್ಲೂ ಹಸಿರು ಪೈರುಗಳು ಕಂಗೊಳಿಸುತ್ತಿವೆ. ಪುಷ್ಪೋದ್ಯಮದಲ್ಲೂ ಗಮನಾರ್ಹ ಪ್ರಗತಿ ಸಾಧಿಸಿದೆ. ಪ್ರವಾಸೋದ್ಯಮದಿಂದಲೂ ಸಾಕಷ್ಟು ಆದಾಯ ಗಳಿಸುತ್ತಿದೆ. ಮಿಲಿಟರಿ ತಂತ್ರಜ್ಞಾನದಲ್ಲಿಯೂ ದೇಶ ಬಹಳ ಮುಂದಿದೆ. ಈ ಪುಟ್ಟ ರಾಷ್ಟ್ರ ಇಷ್ಟೆಲ್ಲಾ ಮುಂದುವರಿಯಲು ಅದು ಅಳವಡಿಸಿಕೊಂಡ ಕಾರ್ಯಬದ್ದತೆ ಹಾಗೂ ನಿಸ್ಪøಹ ಸೇವೆಯೇ ಕಾರಣ.
---------------------------------
ಮಾಹಿತಿ: ಇಸ್ರೇಲ್ ದೇಶದ ಪ್ರವಾಸ ಪುಸ್ತಕ. 

-0--0--0--0--0--0-

ಓದಿದ ಪುಸ್ತಕದಿಂದ



ಒಂದು ಯಥಾವತ್ತಾದ ಆತ್ಮಕಥೆಯನ್ನು ಬರೆಯಲು ಪ್ರಯತ್ನಿಸುವುದು ನನ್ನ ಉದ್ದೇಶವಲ್ಲ. ನಾನು ಹೇಳಬಯಸುವುದು ಸತ್ಯಶೋಧನೆಯ ನನ್ನ ಅನೇಕ ಪ್ರಯೋಗಗಳ ಕಥೆಯನ್ನು ಮಾತ್ರ. ನನ್ನ ಜೀವನ ಈ ಪ್ರಯೋಗಗಳ ಹೊರತು ಮತ್ತೇನೂ ಅಲ್ಲ. ಆದುದರಿಂದ ಈ ಕಥೆ ಆತ್ಮಕಥೆಯ ರೂಪವನ್ನು ಹೊಂದುವುದೂ ಸತ್ಯ. ಇದರ ಪ್ರತಿಯೊಂದು ಪುಟದಲ್ಲಿಯೂ ನನ್ನ ಪ್ರಯೋಗಗಳ ವಿಷಯವನ್ನೇ ಹೇಳುವುದಾದರೂ ನನಗೆ ಚಿಂತೆಯಿಲ್ಲ. ಈ ಎಲ್ಲ ಪ್ರಯೋಗಗಳ ಒಟ್ಟು ಕಥೆ ವಾಚಕರಿಗೆ ಲಾಭವಾಗದಿರದೆಂದು ನಾನು ನಂಬುತ್ತೇನೆ. ಈಗ, ರಾಜಕೀಯ ಕ್ಷೇತ್ರದ ನನ್ನ ಪ್ರಯೋಗಗಳು ಭಾರತದಲ್ಲಿ ಮಾತ್ರವೇ ಅಲ್ಲದೆ "ನಾಗರಿಕ" ಪ್ರಪಂಚಕ್ಕೆಲ್ಲ ತಕ್ಕಮಟ್ಟಿಗೆ ಗೊತ್ತಾಗಿದೆ. ಅವುಗಳಿಂದ ನನಗೆ ಬಂದಿರುವ "ಮಹಾತ್ಮ" ಎಂಬ ಬಿರುದು ನನಗೆ ಇನ್ನೂ ಕಡಿಮೆ ಬೆಲೆಯುಳ್ಳದ್ದು. ಅನೇಕ ವೇಳೆ ಈ ಬಿರುದು ನನಗೆ ನೋವನ್ನುಂಟುಮಾಡಿದೆ. ಇದರಿಂದ ಒಂದು ಕ್ಷಣವಾದರೂ ನಾನು ಉಬ್ಬಿಹೋದುದು ನನಗೆ ನೆನಪಿಲ್ಲ. ಆದರೆ ಆಧ್ಯಾತ್ಮ ಕ್ಷೇತ್ರದಲ್ಲಿ ನಾನು ನಡೆಸಿದ ಪ್ರಯೋಗಗಳನ್ನು ವಿವರಿಸುವುದು ನನಗೆ ನಿಜವಾಗಿಯೂ ಇಷ್ಟ. ಇವು ಗೊತ್ತಿರುವುದು ನನಗೆ ಮಾತ್ರ. ಈ ಪ್ರಯೋಗಗಳು ರಾಜಕೀಯ ಕ್ಷೇತ್ರದಲ್ಲಿ ಕೆಲಸಮಾಡಲು ನನಗೆ ಶಕ್ತಿಯನ್ನು ಕೊಟ್ಟಿವೆ. ಇವುಗಳಿಂದ ನನ್ನ ನಮ್ರತೆಯೇ ಹೆಚ್ಚಾಗಬಲ್ಲದು, ನಾನು ನನ್ನಲ್ಲೇ ಆಲೋಚನೆ ಮಾಡಿ ಹಿನ್ನೋಟ ಬೀರಿದಂತೆ ನನ್ನ ದೌರ್ಬಲ್ಯ ನನಗೆ ಹೆಚ್ಚು ಸ್ಪಷ್ಟವಾಗಿ ಅನುಭವವಾಗುತ್ತಿದೆ..

ಆತ್ಮ ಕಥೆ ಅಥವಾ ನನ್ನ ಸತ್ಯಾನ್ವೇಷನೆ
ಮೂಲ ಲೇಖಕರು: ಮಹಾತ್ಮ ಗಾಂಧೀ
ಕನ್ನಡಕ್ಕೆ ಅನುವಾದ: ಗೊರೂರು ರಾಮಸ್ವಾಮಿ ಅಯ್ಯಂಗಾರ್

ಯೊವಾನ್ನರ ಶುಭಸಂದೇಶ - 15


ಸಹೋ. ವಿನಯ್ ಕುಮಾರ್
-------------
ಈ ಸಂಚಿಕೆಯಲ್ಲಿ ಇತರೆ ಶುಭಸಂದೇಶಗಳಿಗೂ ಹಾಗೂ ಸಂತ ಯೊವಾನ್ನರ  ಶುಭಸಂದೇಶಕ್ಕೂ ಇರುವ ಸಾಮ್ಯತೆಗಳು ಹಾಗೂ ಭಿನ್ನತೆಗಳನ್ನು ನೋಡೋಣ. 
-----------
ಭಿನ್ನತೆಗಳು
ಇತರೆ ಶುಭ ಸಂದೇಶಗಳಲ್ಲಿ ಸಿಗುವಂತಹ ಸಾಹಿತ್ಯದ ಪ್ರಕಾರಗಳು ಸಂತ ಯೊವಾನ್ನರ ಶುಭಸಂದೇಶದಲ್ಲಿ ಇಲ್ಲದೆ ಇರುವಂತದ್ದು.
1) ಮತ್ತಾಯ ಮತ್ತು ಲೂಕನ ಶುಭ ಸಂದೇಶವು ಯೇಸುಸ್ವಾಮಿಯ ಜನನದ ಪ್ರಕರಣದೊಂದಿಗೆ ಹಾಗೂ ಯೇಸುಸ್ವಾಮಿಯ ವಂಶಾವಳಿಯೊಂದಿಗೆ ಪ್ರಾರಂಭವಾಗುತ್ತದೆ, ಆದರೆ ಈ ಶುಭಸಂದೇಶದಲ್ಲಿ ನಾವು ಈ ಎರಡನ್ನೂ ಕಾಣುವುದಿಲ್ಲ.
2) ಇತರೆ ಶುಭ ಸಂದೇಶಗಳಲ್ಲಿ ಸ್ನಾನಿಕ ಯೊವಾನ್ನರ  ಐತಿಹಾಸಿಕ ಕುರುಹುಗಳನ್ನು ವ್ಯವಸ್ಥಿತವಾಗಿ ಬರುವುದನ್ನು ನೋಡುತ್ತೇವೆ, ಆದರೆ ಇಲ್ಲಿ ಸ್ನಾನಿಕ ಯೊವಾನ್ನರ ಬಗ್ಗೆ ಯಾವ ಮಾಹಿತಿ ಇಲ್ಲದೆ ಹೋದರೂ  ಅವರ ಬೋಧನೆಯ  ಬಗ್ಗೆ ಮಾಹಿತಿ ಇದೆ.
3) ಇತರೆ ಶುಭಸಂದೇಶಗಳು ಯೇಸು ಸ್ವಾಮಿಯ ದೀಕ್ಷಾಸ್ನಾನದ ಪ್ರಕರಣವನ್ನು ನಮಗೆ ತಿಳಿಸುತ್ತದೆ ಆದರೆ ಈ ಶುಭಸಂದೇಶದಲ್ಲಿ ದೀಕ್ಷಾಸ್ನಾನದ ಪ್ರಕರಣದ ಬಗ್ಗೆ  ಸ್ನಾನಿಕ ಯೊವಾನ್ನನು ಸಾಕ್ಷಿ ನೀಡುವುದನ್ನು ಕಾಣುತ್ತೇವೆ. "ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದು ಬಂದು ಅವರ ಮೇಲೆ ನೆಲೆಸುವುದು ನಾನು ನೋಡಿದೆನು".( ಯೊವಾನ್ನ 1:32)                       
4) ಯೇಸುಸ್ವಾಮಿಯ ಶೋಧನೆಯ (ಸೈತಾನನ ಪ್ರಲೋಭನೆ) ಬಗ್ಗೆ  ಈ  ಶುಭಸಂದೇಶದಲ್ಲಿ ನಮಗೆ ಕಾಣಸಿಗುವುದಿಲ್ಲ.
5) ಪ್ರೇಷಿತರ ಆಯ್ಕೆ, ಕರೆ, ನಿಯೋಗದ ಬಗ್ಗೆ ಯಾವುದೇ ಮಾಹಿತಿಯನ್ನು ಈ ಶುಭಸಂದೇಶದಲ್ಲಿ ನಾವು ನೋಡುವುದಿಲ್ಲ.           
6) ಯೇಸುಸ್ವಾಮಿಯ ಪ್ರಸಿದ್ಧವಾದ ಸಾಮತಿಯ ಬೋಧನ ಶೈಲಿ ಅಥವಾ ಸಾಮತಿಗಳು ಇಲ್ಲಿ ಕಾಣುವುದಿಲ್ಲ.
7) ಬಹುತೇಕ  ಸೌಖ್ಯ ಹೊಂದಿದಂತಹ ಪವಾಡಗಳು ಇಲ್ಲಿ ದಾಖಲಾಗಿಲ್ಲ.
8) ಬಲು ಮುಖ್ಯವಾದ  ಯೇಸುಸ್ವಾಮಿಯ ಪರ್ವತ ಬೋಧನೆ ಇಲ್ಲಿ ಕಾಣದಾಗಿದೆ.
9) ಸ್ವರ್ಗ ಸಾಮ್ರಾಜ್ಯದ ಕಲ್ಪನೆಯನ್ನು ನಾವು ಇಲ್ಲಿ ಇಲ್ಲದೆ ಇರುವುದನ್ನು ಗಮನಿಸಬಹುದಾಗಿದೆ.
10) ಕಡೆಯ ರಾತ್ರಿಯ ಭೋಜನದ ಪ್ರಕರಣದಲ್ಲಿ ಪರಮಪ್ರಸಾದ ಸ್ಥಾಪನೆಯ ಪದಗಳು ಇಲ್ಲಿ ಗೋಚರವಾಗುವುದಿಲ್ಲ.   
ಸಾಮ್ಯತೆಗಳು
ಈಗ ಯೊವಾನ್ನರ ಶುಭ ಸಂದೇಶಕ್ಕೂ ಹಾಗೂ ಇತರ ಶುಭಸಂದೇಶಗಳಿಗೂ ಇರುವ ಸಾಮ್ಯತೆಗಳ ಬಗ್ಗೆ ನೋಡೋಣ.
1) ಎರಡು ಶುಭಸಂದೇಶಗಳಲ್ಲಿ ಸಾಹಿತ್ಯದ ಪ್ರಕಾರಗಳಲ್ಲಿ ಒಂದು ಕರಾರಿದೆ.  ಎರಡು ಸಹ ಸಾಮ್ಯತೆಗಳನ್ನು ಹೊಂದಿದೆ. ಅದು ಯೇಸುಸ್ವಾಮಿಯ ಬಹಿರಂಗ ಜೀವನ ,ಯಾತನೆ, ಮರಣ ಹಾಗೂ ಪುನರುತ್ಥಾನದಿಂದ ಕೂಡಿದೆ.
2) ಯೇಸು ಸ್ವಾಮಿ ತಮ್ಮ ಕಾರ್ಯಗಳನ್ನು ಹಾಗೂ ಪವಾಡಗಳನ್ನು ಎರಡು ಪ್ರಮುಖ ಸ್ಥಳಗಳಲ್ಲಿ ಮಾಡಿದ್ದಾರೆ. ಈ ಸ್ಥಳಗಳ ಉಲ್ಲೇಖದ ಬಗ್ಗೆ ಇಲ್ಲಿ ಸಾಮ್ಯತೆಯನ್ನು ಕಾಣಬಹುದಾಗಿದೆ. (ಗಲಿಲೇಯ ಹಾಗು ಜೆರುಸಲೆಮ್)
3) ಯೇಸುಸ್ವಾಮಿಯ ಬಹಿರಂಗ ಜೀವನದಲ್ಲಿ ಗುರುತಿಸಿಕೊಂಡಂತಹ ಬಹುತೇಕ ವ್ಯಕ್ತಿಗಳು ಹಾಗೂ ಸ್ಥಳಗಳ ಉಲ್ಲೇಖದ ಬಗ್ಗೆ ಸಾಮ್ಯತೆಯನ್ನು ಹೊಂದಿದೆ. 
ಮುಂದುವರಿಯುವುದು

ಕಥಾದನಿ

- ಇನ್ನಾ

ಬುದ್ಧಿವಂತ ಶಿಷ್ಯನೊಬ್ಬ ಚಂದ್ರನನ್ನ ದಿಟ್ಟಿಸಿ ನೋಡುತ್ತಾ ಪರವಶಗೊಂಡು ಮೌನವಾದ
ಚಂದಿರನ ಸೌಂದರ್ಯಕ್ಕೆ ಆಕರ್ಷಿತನಾದ ಗುರು ತನ್ನ ಶಿಷ್ಯರನ್ನು ಕರೆದೊಯ್ದು ಚಂದ್ರನತ್ತ ಬೆರಳು ತೋರಿಸಿದನು. ಅಜ್ಞಾನಿ ಶಿಷ್ಯರು ಗುರುವಿನ ಬೆರಳಿಗೆ ಆಕರ್ಷಿತರಾಗಿ, ಗುರುವಿನ ಬೆರಳಿನ ಮಹತ್ವದ ಕುರಿತು ಚರ್ಚೆಗಳನ್ನು ನಡೆಸಿದರು. ಅವುಗಳ ಬಗ್ಗೆ ಪ್ರವಚನಗಳನ್ನು ನೀಡಲು ಪ್ರಾರಂಭಿಸಿದರು. ಆದರೆ ಬುದ್ಧಿವಂತ ಶಿಷ್ಯನೊಬ್ಬ ಚಂದ್ರನನ್ನ ದಿಟ್ಟಿಸಿ ನೋಡುತ್ತಾ ಪರವಶಗೊಂಡು ಮೌನವಾದ.
--------------
ಅವು ನನಗೇ ಸಿಗಬೇಕು, ನಾನೇ ಅವನ್ನ ಅನುಭವಿಸಬೇಕು ಎಂದೇನೂ ಇಲ್ಲ
ಅದೊಂದು ದಿನ ರಾಜನು ಕುದುರೆಯನ್ನೇರಿ ತನ್ನ ರಾಜ್ಯದಲ್ಲಿ ತಿರುಗಾಟದಲ್ಲಿದ್ದನು. ದಾರಿಯುದ್ದಕ್ಕೂ ತನಗೆ ಸಿಕ್ಕಿದ ಬಹಳಷ್ಟು ಜನರ ಯೋಗಕ್ಷೇಮವನ್ನು ವಿಚಾರಿಸಿ ಮುಂದೆ ಸಾಗುತ್ತಿದ್ದನು. ರಸ್ತೆಯ ಎರಡೂ ಬದಿಗಳಲ್ಲಿ ಬೃಹತ್ ಮರಗಳು ಬೆಳೆದಿದ್ದವು. ಅಲ್ಲಿಂದ ಒಂದಷ್ಟು ಮುಂದೆ ಸರಿದಾಗ ರಾಜನು ಒಬ್ಬ ಮುದುಕನನ್ನು ಕಂಡನು. ಆತನು ಒಂದು ಮಾವಿನ ಮರದ ಸಸಿಯನ್ನು ನೆಡುತ್ತಿದ್ದನು. ರಾಜನು ಆ ವೃದ್ಧನಿದ್ದಲ್ಲಿ ಹೋಗಿ ಆತನಲ್ಲಿ ವಿಚಾರಿಸಿದನು: “ಅಜ್ಜಾ ನೀನೇನನ್ನು ಮಾಡುತ್ತಿರುವೆ”
ಆ ಮುದುಕ ಉತ್ತರಿಸಿದ: “ನಾನು ಮಾವಿನ ಮರದ ಸಸಿಯನ್ನು ನೆಡುತ್ತಿದ್ದೇನೆ” ರಾಜನಿಗೆ ಇವೆಲ್ಲವೂ ವಿಚಿತ್ರವೆಂಬಂತೆ ಕಂಡಿತು. ಆಶ್ಚರ್ಯದಿಂದಲೇ ರಾಜನು ಆತನಲ್ಲಿ ವಿಚಾರಿಸಿದನು: “ಆದರೆ ಅಜ್ಜಾ, ನಿನಗೆ ಇಷ್ಟು ವಯಸ್ಸಾಗಿದೆ. ನೀನು ಈ ಮಾವಿನ ಸಸಿಯನ್ನು ನೆಡುತ್ತಿರುವುದಾದರೂ ಯಾರಿಗಾಗಿ” ಈ ಗಿಡವು ಬೆಳೆದು ಮರವಾಗುವುದು ಯಾವಾಗ? ಅದರಲ್ಲಿ ಮಾವಿನ ಹಣ್ಣು ಬೆಳೆಯುವಾಗ ನೀನು ಸತ್ತು ಮಣ್ಣಾಗಿರುವೆ ನಿನಗೆ ಇದರಿಂದ ಆಗುವ ಲಾಭವಾದರೂ ಏನು?”
ರಾಜನ ಮಾತುಗಳನ್ನು ಆಲಿಸಿದ ಮುದುಕನು ನಗುತ್ತಾ ಹೀಗೆಂದ: “ರಾಜರೇ, ಇಲ್ಲಿ ಕಾಣುತ್ತಿರುವ ಮರಗಳೆಲ್ಲ ನಾನು ನೆಟ್ಟು ಬೆಳೆಸಿದವುಗಳಲ್ಲ. ಅವನ್ನು ನನ್ನ ತಾತ, ಮುತ್ತಾತ ಇವರುಗಳು ನೆಟ್ಟು ಬೆಳೆಸಿದವುಗಳು. ಈ ಗಿಡವೂ ಬೆಳೆದು ಮರವಾಗಿ ಅದರಲ್ಲಿ ಮಾವು ಸಿಗುವುದು, ಅವು ನನಗೇ ಸಿಗಬೇಕು, ನಾನೇ ಅವನ್ನ ಅನುಭವಿಸಬೇಕು ಎಂದೇನೂ ಇಲ್ಲ” ಆ ವೃದ್ಧನ ಮಾತುಗಳು ಕೇಳಿದ ರಾಜನು ಸಂತೋಷಪಟ್ಟನು.

-0--0--0--0--0--0-

ಕ್ರಿಸ್ತನ ಅಧ್ಯಾತ್ಮ (ಭಾಗ - 2)


ಜೋವಿ 
ಆಧ್ಯಾತ್ಮಿಕ ಹಸಿವು
2004 ರಂದು ಪ್ರಕಟವಾದ ಡ್ಯಾನ್ ಬ್ರೌನನ the Da Vinci Code ಅತ್ಯಧಿಕವಾಗಿ ಮಾರಾಟಗೊಂಡು ದಾಖಲೆಯನ್ನು ಸೃಷ್ಟಿಸಿದ ಒಂದು ಬೆಸ್ಟ್ ಸೆಲರ್ ಕಾದಂಬರಿ. ಈ ಕಾದಂಬರಿ ಆಧಾರಿತವಾಗಿ ಮೂಡಿಬಂದ ಚಲನಚಿತ್ರ ಕೂಡ ಹಣಗಳಿಕೆಯಲ್ಲಿ ಎಲ್ಲಾ ದಾಖಲೆಗಳನ್ನು ಧೂಳಿಪಟವಾಗಿಸಿತ್ತು. ಇಂತಹ ಪುಸ್ತಕಗಳು ಮತ್ತು ಚಲನಚಿತ್ರಗಳು ಜನಪ್ರಿಯಗೊಳ್ಳಲು ಕಾರಣವೇನು? ಇದು ನಮ್ಮ ಈಗಿನ ಮನಸ್ಥಿತಿಯ ಬಗೆ ಏನು ಹೇಳುತ್ತದೆ? ದ ವಿಂಚಿ ಕೋಡ್ ಒಂದು ಐತಿಹಾಸಿಕ ಕಾದಂಬರಿಯಾದರೂ ಇತಿಹಾಸ ದೋಷಗಳಿಂದ ಕೂಡಿದುದಲ್ಲದೆ ಇದು ಕಲೆಯ ಇತಿಹಾಸ ಮತ್ತು ಕ್ಯಾಥೊಲಿಕ್ ಚರ್ಚುಗಳ ರಚನೆ ಅಥವಾ ಸಂಘಟನೆಯ ಬಗೆಗಿನ ಗಮನಾರ್ಹ ಅಜ್ಞಾನವನ್ನು ತೋರಿಸುವ ಕಟ್ಟುಕತೆಯ ಕಾದಂಬರಿ. ಆದರೂ ಜನರು ಇಂತಹ ಕಾದಂಬರಿ ಬಗೆ ಗಮನಾರ್ಹ ಆಸಕ್ತಿ ತೋರಿಸಿದ್ದೇ ಆಶ್ಚರ್ಯ!
ಡಾನ್ ಬ್ರೌನ್ ಕಾದಂಬರಿಯ ಮೂಲ ಕಥೆ ಇಷ್ಟೆ: ಯೇಸು ಮೇರಿ ಮಗ್ದಲೇನಳನ್ನು ಮದುವೆಯಾಗಿದ್ದು, ಅವರಿಬ್ಬರ ಕೂಡುವಿಕೆಯಲ್ಲಿ ಸಾರಾ ಎಂಬ ಮಗು ಹುಟ್ಟಿ, ಈ ವಂಶವೂ ಮುಂದುವರಿದು ಇಂದಿಗೂ ಅಸ್ತಿತ್ವದಲ್ಲಿದೆ ಎಂಬ ಚಿದಂಬರ ರಹಸ್ಯವನ್ನು ಸುಮಾರು ಎರಡು ಸಾವಿರ ವರ್ಷಗಳಿಂದ ರಹಸ್ಯವಾಗಿಸಿಕೊಂಡು ಕೆಲ ಜನರಿಗೆ ಮಾತ್ರ ಸಂಕೇತಭಾಷೆಯ ಮೂಲಕ ಹಸ್ತಾಂತರಿಸಲಾಗುತ್ತಿದೆಂಬುದು ಕಾದಂಬರಿ ಕಥೆಯ ಒಟ್ಟು ಒಳಹಂದರ. ಚರ್ಚಿನ ಆರಂಭಿಕ ದಿನಗಳಲ್ಲಿ ಮೇರಿ ಮಗ್ದಲೇನಳು ವಹಿಸಿದ ಪಾತ್ರದ ಬಗೆಗಿನ ಪಾಂಡಿತ್ಯಪೂರ್ಣ ಆಸಕ್ತಿಯನ್ನು ಕೆರಳಿಸಿರುವ ಇತ್ತಿಚಿನ ದಿನಗಳಲ್ಲಿ ಈ ಕಾದಂಬರಿ ಎಲ್ಲರ ಗಮನ ಸೆಳೆದಿದ್ದರಲ್ಲಿ ಆಶ್ಚರ್ಯವೆನಿಲ್ಲ!
 ಡಾನ್ ಬ್ರೌನ್ ಕಾದಂಬರಿಯ ಮಹತ್ವ ಕಾದಂಬರಿಯ ವಿಷಯದ ನಿಖರತೆಯಲಾಗಲಿ ಅಥವಾ ಅನಿಖರತೆಯಲಾಗಲಿ ಇಲ್ಲ. ಮೂಲತಃ ಈ ಕಾದಂಬರಿ ಒಂದು ಮಾಪನವಾಗಿ/ಅಳತೆಗೋಲಾಗಿ ನಮ್ಮ ಈಗಿನ ಮನಸ್ಥಿತಿಯನ್ನು ಹಾಗೂ ಜನರು ಆಂತರಿಕವಾಗಿ ಯಾವುದಕ್ಕಾಗಿ ಹಸಿದಿದ್ದಾರೆ ಎಂಬುದರ ಬಗ್ಗೆ ವಿಮರ್ಶಾತ್ಮಕವಾದ ಮಾಹಿತಿಯನ್ನು ನಮಗೆ ಒದಗಿಸುತ್ತದೆ. ಬಹಳಷ್ಟು ಜನ ವಿಶೇಷವಾಗಿ ಯುವಜನರು ಗತಕಾಲದ ಖಚಿತತೆಗಳಿಗೆ ವಿಮುಖರಾಗಿದ್ದಾರೆ. ಧಾರ್ಮಿಕ, ವೈಜ್ಞಾನಿಕ, ಸಾಂಸ್ಕೃತಿಕ ರಾಜಕೀಯ ಹಾಗೂ ಇತಿಹಾಸದ ಖಚಿತತೆಗಳಿಗೆ ಗುಡ್ ಬೈ ಹೇಳಿಬಿಟ್ಟಿದ್ದಾರೆ. ಎಲ್ಲವನ್ನೂ ಪ್ರÀಶ್ನಿಸಲಾಗುತ್ತಿದೆ. ಇವತ್ತು ಬದುಕಿನ ವಿವಿಧ ಕ್ಷೇತ್ರಗಳಲ್ಲಿನ ವಿದ್ವಾಂಸರು ಅಂದರೆ ಧಾರ್ಮಿಕ ಪಂಡಿತರು, ವಿಜ್ಞಾನಿಗಳು ಬೋಧಿಸಿದ್ದನ್ನು ಇಂದು ಸಂಶಯದಿಂದ ನೋಡಲಾಗುತ್ತಿದೆ. ಸುಮಾರು ಶತಮಾನಗಳಿಂದ ಪರಿಶೋಧಿಸಿ ಪ್ರತಿಷ್ಠಾಪಿಸಿದ ಯಾವುದೇ ರೀತಿಯ ತತ್ವಗಳಿರಬಹುದು, ನಂಬಿಕೆಗಳಿರಬಹುದು ಎಲ್ಲವನ್ನೂ ಇಂದಿನ ಮನುಷ್ಯ ಅಪನಂಬಿಕೆಯ/ಸಂಶಯ ಕಣ್ಣುಗಳಿಂದ ನೋಡುತ್ತಿದ್ದಾನೆ. ಆದ್ದರಿಂದ ನಮ್ಮದು ಅಭೂತಪೂರ್ವ ಸಂಶಯವಾದದ ಯುಗವೆಂದೇ ಕರೆಯಬಹುದು. ಒಂದು ಅಭಿಪ್ರಾಯ ಮತ್ತೊಂದು ಅಭಿಪ್ರಾಯದಷ್ಟೇ ಉತ್ತಮ. ಒಟ್ಟಾರೆ ಏನು ಹೇಳಬಹುದೆಂದರೆ: ಕೆಲವೊಂದು ಅಭಿಪ್ರಾಯಗಳು ಹಳೆಯದಾಗಿ ನೀರಸವಾಗಿದ್ದರೆ, ಇನ್ನೂ ಕೆಲವು ಆಸಕ್ತಿದಾಯವಾಗಿವೆ ಅಷ್ಟೆ. 
ದಿ ಡಾ ವಿನ್ಸಿ ಕೋಡ್ ಕಾದಂಬರಿಗೆ ಜನರು ಆಕರ್ಷಿತಗೊಳ್ಳಲು ಕಾರಣವೇನಿರಬಹುದು? ಇದು ಸುಮಾರು ವರ್ಷಗಳ ಧಾರ್ಮಿಕ ಖಚಿತತೆ ಅಥವಾ ಖಚಿತ ಎಂದು ಭಾವಿಸಿಕೊಂಡಿದ್ದ ಧಾರ್ಮಿಕ ನಂಬಿಕೆಗಳ ಮೇಲೆ ಸವಾರಿ ಮಾಡಿ ಹಿಂದೆ ಏನಾಗಿರಬಹುದು ಎಂಬ ಊಹಿಸಿ ಒಂದು ಕಲ್ಪಿತ ಒಳಸಂಚಿನ ಕಥೆಯನ್ನು ಹೇಳುವುದರಿಂದ ಜನರು ಇದರ ಮೋಹಕ್ಕೆ ಒಳಗಾಗಿರಬಹುದೆಂದು ಹೇಳಬಹುದು. ಈ ಕಥೆಯಲ್ಲಿ ನಿಜಾಂಶವಿರಬಹುದು ಇಲ್ಲದೆಯೂ ಇರಬಹುದು! ಆದರೆ ಇದು ಯಾವುದೇ ಧಾರ್ಮಿಕ ಅಧಿಕಾರಯುಕ್ತ ಬೋಧನೆಯ ಕಟ್ಟುಪಾಡಿಗೆ ಒಳಗಾಗಿಲ್ಲವೆಂದೇ ಹೇಳಬಹುದು. 
ದಿ ಡಾ ವಿನ್ಸಿ ಕೋಡ್ ಕಾದಂಬರಿಯು ನಮ್ಮ ಕಲ್ಪನಾ ಶಕ್ತಿಯನ್ನು ಮುಕ್ತಗೊಳಿಸಿ ಸಕಲ ಸಾಧ್ಯತೆಗಳನ್ನು ಪರಿಗಣಿಸುವಂತೆ ಮುತುವರ್ಜಿ ವಹಿಸುತ್ತದೆ. ಇದು ನಮ್ಮ ಹೇರಿದ ಖಚಿತತೆಗಳ/ ಸಿದ್ಧಾಂತಗಳ ಮತ್ತು ಮತತತ್ವಗಳಿಂದ ಮನಸ್ಸನ್ನು ಮುಕ್ತಗೊಳಿಸಲು ನಮಗೆ ಒಂದು ಸೂಚಿಯಾಗುತ್ತದೆ.
ಜನರ ಈ ರೀತಿಯ ವರ್ತನೆಯನ್ನು ಬುದ್ಧಿಜೀವಿಗಳು ಆಧುನಿಕೋತ್ತರ ಮನೋಭಾವ ಅಥವಾ ಆಟಿಟ್ಯೂಡ್ ಅಂತ ಕರೆಯುತ್ತಾರೆ. ಈ ರೀತಿಯ ಮನೋಭಾವ ಎಷ್ಟು ವಿಸ್ತಾರಗೊಂಡಿದೆ ಎಂದು ಅಳೆಯಲು ದಿ ಡಾ ವಿನ್ಸಿ ಕೋಡ್ ಕಾದಂಬರಿಯು ನಮಗೆ ಮಾಪನವಾಗಿ ಸಹಾಯಕ್ಕೆ ಬರುತ್ತದೆ. ನಿಜವಾಗಲೂ ಇದು ನಮ್ಮ ಈಗಿನ ಕಾಲಘಟ್ಟದ ಮನಸ್ಥಿತಿಯ ಚಿತ್ರಣವೆಂದೇ ಹೇಳಬಹುದು.
ಆಧುನಿಕೋತ್ತರತೆ(Post Modernism)
ಆಧುನಿಕ ಯುಗವನ್ನು ನಾವು ವೈಚಾರಿಕ ಯುಗ ಎಂದ ಕರೆಯಬಹುದು. ಇದು ಜ್ಞಾನೋದಯ ಯುಗದೊಂದಿಗೆ ಆರಂಭಗೊಂಡಿತ್ತು. ಕಾಕತಾಳಿಯ ಎಂಬಂತೆ ಈ ಕಾಲದ ಜತೆಗೆ ನ್ಯೂಟನ್ನನ ಯಾಂತ್ರಿಕಯುಗದ ನೋಟ ಕೂಡ ಸೇರಿಕೊಂಡಿತ್ತು. ಇದನ್ನು ಕೈಗಾರಿಕಾ ಬಂಡವಾಳಶಾಹಿ ಮತ್ತು ಅನಿಯವಿತ ಆರ್ಥಿಕ ಬೆಳವಣಿಗೆಯ ಪರ್ವ ಅಂತಲೂ ಕರೆಯಬಹುದು. 
ಈ ಆಧುನೀಕರಣವು ವಿಜ್ಞಾನ, ತಂತ್ರಜ್ಞಾನ ವೈಚಾರಿಕ ಪ್ರಗತಿಗಳಿಂದ ಮಾನವನ ಸಮಸ್ಯೆಗಳು ಪರಿಹಾರ ಕಂಡುಕೊಂಡು ಆಧುನಿಕಪೂರ್ವ ಯುಗದಲ್ಲಿದ್ದ ಮೂಡನಂಬಿಕೆಗಳು ಕ್ರಮೇಣ ಮಾಸಿದವು. ಧರ್ಮ ನೈತಿಕತೆ ಮತ್ತು ಕಲೆ ಮನುಷ್ಯನ ಖಾಸಗಿತನಕ್ಕೆ ವರ್ಗಾಯಿಸಲ್ಪ್ಪಟ್ಟವು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಧರ್ಮ ನೈತಿಕತೆ ಮತ್ತು ಕಲೆ ಖಾಸಗಿ ಅಥವಾ ವೈಯಕ್ತಿಕ ವಿಷಯಗಳಾದ್ದವು. ಈ ಕಾಲದಲ್ಲಿ ಮಾನವನಿಗೆ ಬಹು ಮುಖ್ಯವಾಗಿದ್ದು ಆರ್ಥಿಕ ಮತ್ತು ರಾಜಕೀಯ ಪ್ರಗತಿಗಳು ಮಾತ್ರ.
ಕ್ರಮೇಣ ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ ಆಧುನಿಕತೆಯ ಕಸನಸಿನ ಗಾಗೋಪುರ ಕುಸಿಯಲು ಆರಂಭಿಸಿತ್ತು. ಕೈಗಾರಿಕೆಯಲ್ಲಿ ಮುಂದುವರಿದ ರಾಷ್ಟ್ರಗಳು; ನಾಜಿ ಕೈವಶವಾಗಿದ್ದ ಹಾಗೂ ಬಲಪಂಥೀಯ ಇನ್ನು ಇತರ ದೇಶಗಳು ವಿಚಾರಹೀನವಾಗಿ ಹಾಗೂ ಅಮಾನುಷವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ಅವರ ಚಿತ್ರಹಿಂಸೆ, ಕೌರ್ಯ, ಹಿಂಸಿಸುತ್ತಿದ್ದ ವಿಧಾನಗಳನ್ನು ಇಂದಿಗೂ ಮಾನವೀಯತೆಯ ಜತೆ ಸಂಧಾನಗೊಳಿಸಲಾಗುತ್ತಿಲ್ಲ.
ಇದೇ ಸಮಯದಲ್ಲಿ, ತಮ್ಮದೇ ಆದ ಆಧುನಿಕತೆಯ ರೂಪ ಮತ್ತು ಮಾನವನ ಪ್ರಗತಿಯ ದೃಷ್ಟಿ ಇರಿಸಿಕೊಂಡಿದ್ದ ಕಮ್ಯುನಿಷ್ಟ್ ರಾಷ್ಟ್ರಗಳು ಕೂಡ ಏಕಚಕ್ರಾಧಿಪತ್ಯ ಮತ್ತು ದಬ್ಬಾಳಿಕೆಯನ್ನು ತೋರಿಸಲು ಪ್ರಾರಂಭಿಸಿದರು. ಶತಮಾನದ ಅಂತ್ಯಕ್ಕೆ ಕಮ್ಯುನಿಷ್ಟ ಆಡಳಿತವು ನಮಗೆ ಭಯೋತ್ಪಾದನೆಯನ್ನು ನಿರ್ಮೂಲ ಮಾಡಲು ಯುದ್ಧಕ್ಕೆ ದೃಢಸಂಕಲ್ಪ ತಳೆಯುತ್ತಿರುವ, ಇನ್ನೊಂದು ಕಡೆ ಪರಿಸಾರ ನಾಶ ಮಾಡುತ್ತಿರುವ ಒಂದು ಸೂಪರ್ ಪವರ್ ಕೊಟ್ಟಿದೆ. ನಾವು ಇದನ್ನು ಮಾನವನ ಪ್ರಗತಿ ಎಂದು ಕರೆಯಬಹುದಾ?
ಈ ಎಲ್ಲಾ ವಿದ್ಯಮಾನಗಳಿಂದಾಗಿ, ಯಾವುದೇ ತತ್ವವನ್ನು ಅಥವಾ ಸಿದ್ಧಾಂತವನ್ನು ಒಪ್ಪದೆ, ಅವುಗಳನ್ನು ಸಂಶಯಾಸ್ಪದವಾಗಿ ನೋಡುವ ಒಂದು ಪೀಳಿಗೆಯಿದೆ. ಅವರ ಪ್ರಕಾರ ಯಾವುದೇ ರೀತಿಯ ಯೋಜನೆಗಳು, ರಂಜನೀಯ ನಿರೂಪಣೆಗಳು ಜಗತ್ತನ್ನು ರಕ್ಷಿಸುವುದಿಲ್ಲ. ಅವೆಲ್ಲವೂ ಕೆಲಸಕ್ಕೆ ಬಾರದಾಗಿವೆ.
ಧಾರ್ಮಿಕ ಸಿದ್ಧಾಂತಗಳದ್ದು ಕೂಡ ಇದೇ ಹಣೆಬರಹ. ಹಗರಣಗಳಿಂದ ಜರ್ಜರಿತವಾಗಿರುವ ಚರ್ಚ್ ತನ್ನ ಅಧಿಕಾರವನ್ನು ದುರ್ಬಲಗೊಳಿಸಿಕೊಂಡಿದೆ. ಅನೇಕರಿಗೆ ಇಂದು ಧಾರ್ಮಿಕ ಆಡಳಿತವು ವಿಭಜಕ, ಬಹಿಷ್ಕರಿಸುವ ಹಾಗೂ ದಬ್ಬಾಳಿಕೆಯ ಕೇಂದ್ರವಾಗಿದೆ.
(ಮುಂದುವರಿಯುವುದು)
-0--0--0--0--0--0-

ಮನಃಪರಿವರ್ತನೆಗೆ ಸಕಾಲ ಈ ತಪಸ್ಸು ಕಾಲ


ಜಾಜಿ ಎಂ. ದಾಸಾಪುರ

ತಪಸ್ಸು ಕಾಲ ಎಂದಾಕ್ಷಣ ನಮ್ಮ ಮನಸ್ಸಿನ ಸ್ಮøತಿಪಟಲದಲ್ಲಿ ಹಾದುಹೋಗುವ ವಿಷಯಗಳೆಂದರೆ ವಿಭೂತಿ, ಉಪವಾಸ, ಜಪತಪ, ಶಿಲುಬೆಯ ಹಾದಿ ಹಾಗೂ ದೇಹದಂಡನೆ ಇತ್ಯಾದಿಗಳು. ಇವೆಲ್ಲವೂ ನಮಗೆ ತಪಸ್ಸುಕಾಲದ ಬಗ್ಗೆ ಆಸಕ್ತಿವಹಿಸುವಂತೆ ಮಾಡಿ ಪಾಪಿಗಳಾದ ನಾವೆಲ್ಲರೂ ಕ್ರಿಸ್ತರ ಪುನರುತ್ಥಾನಕ್ಕೆ ಸಿದ್ಧರಾಗಲು ಕರೆಯನ್ನೀಯುತ್ತವೆ. ಮುಖ್ಯವಾಗಿ ತಪಸ್ಸಿನ ಆಚರಣೆಯ ಮೂಲಕ ಈ ಕಾಲವನ್ನು ನಿರಾಡಂಬರವಾಗಿ ಆಚರಿಸಲು ಧರ್ಮಸಭೆಯು ತನ್ನ ಇಡೀ ದೈವಜನತೆಗೆ ಪ್ರೀತಿಯ ಕರೆಯೋಲೆಯನ್ನೀಯುತ್ತದೆ. ಈ ಕಾಲವು ಆರಂಭವಾಗುವುದು ವಿಭೂತಿ ಬುಧವಾರದ ಮೂಲಕ. ಈ ವಿಭೂತಿ ಬುಧವಾರವು ತಪಸ್ಸು ಕಾಲಕ್ಕೆ ಮುನ್ನುಡಿಯನ್ನು ಬರೆಯುತ್ತಾ, “ಮನುಜ ನೀನು ಮಣ್ಣು, ಮರಳಿ ಸೇರ್ವೆ ಮಣ್ಣಿಗೆ” ಎಂಬ ಮನುಷ್ಯನ ಬದುಕಿನ ತಾತ್ಪರ್ಯವನ್ನು ನಮಗೆ ತಿಳಿಸಿಕೊಡುತ್ತದೆ. ಹೀಗೆ ಹೆಚ್ಚಿನ ಆಡಂಬರವಿಲ್ಲದ ಈ ಕಾಲವು ನಮ್ಮೆಲ್ಲರನ್ನು ಪ್ರಭುವಿನ ಪಾಡು ಮರಣಗಳನ್ನು ಧ್ಯಾನಿಸುತ್ತಾ ಅವರೊಂದಿಗೆ ನಮ್ಮ ಜೀವನದ ನೋವು ನಲಿವುಗಳನ್ನು ಹಾಗೂ ಏಳುಬೀಳುಗಳನ್ನು ಸಮರ್ಪಿಸಿ, ಅವರೊಂದಿಗೆ ಒಂದಾಗಿ ಬಾಳಲು ಕರೆಕೊಡುತ್ತದೆ.
ವಿಭೂತಿಯನ್ನು ಹಣೆಯ ಮೇಲೆ ಧರಿಸುವುದರ ಮೂಲಕ ತಪಸ್ಸುಕಾಲಕ್ಕೆ ನಾವು ಕಾಲಿಡುತ್ತೇವೆ. ಇಷ್ಟು ದಿನ ಆಡಂಬರದ ಜೀವನಕ್ಕೆ ಹೊಂದಿಕೊಂಡಿದ್ದ ನಾವು ಇಲ್ಲಿಂದ ನಿರಾಡಂಬರಕ್ಕೆ ನಮ್ಮನ್ನೇ ಸಮರ್ಪಿಸಿಕೊಂಡು ಪ್ರಭುವಿನ ಪಾಡು ಮರಣವನ್ನು ಧ್ಯಾನಿಸಲು ನಮ್ಮ ಮನಗಳನ್ನು ಅಣಿಮಾಡಿಕೊಳ್ಳುತ್ತೇವೆ. 
ವಿಭೂತಿ ಧರಿಸುವಿಕೆಯು ನಾವು ಈ ಭೂಮಿಯ ಮೇಲೆ ನಶ್ವರ ಎಂಬ ಸತ್ಯಾಂಶವÀನ್ನು ನಮಗೆ ತಿಳಿಸಿಕೊಡುತ್ತಾ. ಮಾನವರಾದ ನಾವೆಲ್ಲರೂ ಅದನ್ನು ಅರಿತುಕೊಂಡು ಕ್ರಿಸ್ತರ ತತ್ವಗಳಿಗೆ ಅನುಗುಣವಾಗಿ ನಡೆಯಬೇಕೆಂದು ಅದು ಆಶಿಸುತ್ತದೆ. ಈ ಪ್ರಪಂಚದಲ್ಲಿ ಮಾನವನನ್ನು ಬಿಟ್ಟು ಉಳಿದೆಲ್ಲವೂ ತಮ್ಮ ಸಾವಿನ ನಂತರವೂ ಇತರರಿಗೆ ಉಪಯೋಗವಾಗುತ್ತವೆ. ಆದರೆ ಮಾನವರಾದ ನಾವು ನಮ್ಮ ಸಾವಿನ ನಂತರ ಯಾರಿಗೂ ಬೇಡವಾದ ವಸ್ತುಗಳಾಗಿ ಪರಿಣಮಿಸುವುದಲ್ಲದೇ ಮಣ್ಣಲ್ಲಿ ಮಣ್ಣಾಗಿ ಹೋಗುತ್ತೇವೆ. 
ಹೀಗಿರುವಲ್ಲಿ ನಾವು ಇರುವಷ್ಟು ಕಾಲ ದೇವರಿಗೆ ಸ್ವಲ್ಪವಾದರೂ ನಮ್ಮ ಸಮಯವನ್ನು ನೀಡಿ, ಅವರೊಂದಿಗೂ ಸಹ ಒಡನಾಟ ಬೆಳೆಸಬೇಕಲ್ಲವೇ? ಅದನ್ನು ಬಿಟ್ಟು ಕೇವಲ ಲೌಕಿಕ ಹಾಗೂ ಪ್ರಾಪಂಚಿಕ ವಿಷಯಗಳಿಗೆ ನಮ್ಮ ಹೆಚ್ಚಿನ ಸಮಯವನ್ನು ಮೀಸಲಿಟ್ಟು, ನಮ್ಮನ್ನು ನಿರ್ಮಿಸಿದ ಆ ಜನಕನಿಗೆ ಸಮಯವೇ ಇಲ್ಲ ಎನ್ನುವುದು ಎಷ್ಟು ಸಮಂಜಸ? ಆದ್ದರಿಂದ ಕ್ರಿಸ್ತೇಸುವಿನ ಕಲ್ವಾರಿ ಪಯಣದ ದೃಶ್ಯಾವಳಿಯನ್ನು ಬಹಳ ಅರ್ಥಪೂರ್ಣವಾಗಿ ಅನುಸರಿಸಿ ನಡೆಯಲು ಈ ಕಾಲ ನಮಗೆ ನೆರವಾಗುತ್ತದೆ. 
ತನ್ನ ಧಾವಂತ ಬದುಕಿನಲ್ಲಿ ಮಾನವ ಹೆಚ್ಚಾಗಿ ಆಡಂಬರವನ್ನೇ ತನ್ನ ಬದುಕಿನ ಬಂಡವಾಳವಾಗಿಸಿ ಕೊಂಡಿದ್ದಾನೆ. ಈ ಪರಿಪಾಠವನ್ನು ಹೊರತುಪಡಿಸಿ ತನ್ನನ್ನು ಸೃಷ್ಟಿಸಿದ ದೇವರನ್ನು ಹತ್ತಿರದಿಂದ ದೃಷ್ಟಿಸಿ ಅವರನ್ನು ಮನಸ್ಸಾರೆ ಧ್ಯಾನಿಸಲು ಈ ವಿಭೂತಿಯು ನಮ್ಮನ್ನು ಎಚ್ಚರಿಸುತ್ತದೆ. ಈ ವಿಭೂತಿಯು, ನಾವೆಲ್ಲರೂ ಈ ಭೂಮಿಯ ಮೇಲೆ ಬಾಡಿಗೆದಾರರು ಎಂಬ ನಿಜಾಂಶವನ್ನು ತಿಳಿಸಿಕೊಡುತ್ತಾ, ನಮ್ಮ ಬಾಡಿಗೆ ಮುಗಿದ ನಂತರ ನಾವು ತೆರಳಬೇಕಾದ ಲೋಕವನ್ನು ಪ್ರವೇಶಿಸಲು ಈ ಭುವಿಯಲ್ಲಿ ಆ ದೇವರನ್ನು ಕಂಡುಕೊಂಡು ಅವರ ಪಾಡು ಮರಣದಲ್ಲಿ ಪಾಲ್ಗೊಂಡು ಅವರ ಇಚ್ಛೆಗೆ ತಕ್ಕಂತೆ ನಮ್ಮ ಜೀವನ ಸಾಗಿಸಬೇಕೆಂದು ಅದು ನಮ್ಮನ್ನು ಎಚ್ಚರಿಸುತ್ತದೆ. 
ಈ ತಪಸ್ಸುಕಾಲವು ಆ ದೇವರೇ ನಮಗೆ ನೀಡಿರುವ ಒಂದು ವರದಾನ. ಏಕೆಂದರೆ ಕ್ರಿಸ್ತ ಜಯಂತಿಯ ಸಮಯದಲ್ಲಿ ಕ್ರಿಸ್ತÀರ ಜನನವನ್ನು ಸಂಭ್ರಮಿಸುವ ನಾವು ಅದೇ ಕ್ರಿಸ್ತರು ನಮ್ಮ ಪಾಪಗಳಿಗಾಗಿ ಸ್ವತಃ ತಾವೇ ಬಲಿಯಾಗಿ ನಮ್ಮೆಲ್ಲರ ಪಾಪಗಳನ್ನು ತೊಳೆಯಲು ತಮ್ಮ ಅಮೂಲ್ಯ ರಕ್ತವನ್ನು ಸುರಿಸಿದ ಈ ಕರುಣಾಭರಿತ ಘಟನೆಯನ್ನು ಈ ನಲ್ವತ್ತು ದಿನಗಳ ಕಾಲ ಧ್ಯಾನಿಸಿ ಅದನ್ನು ಅರ್ಥೈಸಿಕೊಂಡು ನಮ್ಮ ಬಾಳು ದೇವರಿಗೆ ಮೀಸಲು ಎಂಬುದನ್ನು ನಾವು ಗ್ರಹಿಸಿಕೊಂಡು ಪ್ರಾರ್ಥನೆ ಹಾಗೂ ಜಪತಪಗಳ ಮೂಲಕ ಈ ಕಾಲವನ್ನು ಬಹಳ
ಅರ್ಥಗರ್ಭಿತವಾಗಿ ಆಚರಿಸುವುದು ನಮ್ಮ ಕರ್ತವ್ಯವಲ್ಲವೇ?
ಇದೇ ಫೆಬ್ರವರಿ 24ರಿಂದ ನಾವು ತಪಸ್ಸು ಕಾಲವನ್ನು ಆರಂಭಿಸಲು ಅಣಿಯಾಗುತ್ತಿದ್ದೇವೆ. ಕಲ್ವಾರಿಯ ಕಾವ್ಯವನ್ನು ನಮ್ಮ ಪಾಫಪಗಳ ಪರಿಹಾರಕ್ಕಾಗಿ ಪುನಃ ಆಚರಿಸಲು ನಮಗಿದೋ ಪ್ರಭುವಿನ ಪ್ರೀತಿಯ ಕರೆಯೋಲೆ. ವಿಭೂತಿಯನ್ನು ಧರಿಸುವುದರ ಮೂಲಕ ನಾವು ದೇವರೆಡೆಗೆ ನಮ್ಮ ಮನಗಳನ್ನು ತಿರುಗಿಸಿಕೊಳ್ಳುತ್ತೇವೆ ಎಂಬ ಆಶಾಭಾವನೆ ಹೊಂದಿ ಆ ಪ್ರಭುವಿಗೆ ನಮ್ಮನ್ನೇ ಸಮರ್ಪಿಸಲು ಇದು ಸಕಾಲ. ನಮ್ಮ ಪಾಪಮಯ ಪ್ರವೃತ್ತಿಯನ್ನು ಸ್ವಲ್ಪವಾದರೂ ದೂರವಿಡಲು ಈ ಕಾಲ ನಮಗೆ ಸಹಾಯ ಮಾಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ದೇವರಿಗೆ ನಾವೇನನ್ನೂ ಕೊಡಲು ಸಾಧ್ಯವಿಲ್ಲ. ಆದರೆ ನಮ್ಮ ಪಾಪಮಯ ಜೀವನಕ್ಕೆ ಸತ್ತು, ಕ್ರಿಸ್ತರಲ್ಲಿ ಹೊಸಸೃಷ್ಟಿಗಳಾಗಲು ಈ ತಪಸ್ಸು ಕಾಲವು ನಮ್ಮನ್ನು ಪ್ರೇರೇಪಿಸುತ್ತದೆ ಎಂಬುದನ್ನು ಮನಗಾಣೋಣ. 
ಆದ್ದರಿಂದ ಈ ತಪಸ್ಸು ಕಾಲವು ನಮಗೆ ದೇವರ ಅಪರಿಮಿತ ವರಪ್ರಸಾದಗಳನ್ನು ಹೇರಳವಾಗಿ ಸುರಿಸಿ ಅದರ ಮೂಲಕ ನಾವೆಲ್ಲರೂ ಅವರಿಗೆ ಹತ್ತಿರವಾಗುವಂತೆ ಮಾಡುತ್ತದೆ. ಅಷ್ಟೇ ಅಲ್ಲದೇ ನಾವು ಅವರಿಗೆ ಸಂಪೂರ್ಣವಾಗಿ ಶರಣಾದಾಗ ಅವರಂತೆ ಸುಮನಸ್ಕರಾಗಿ ಬಾಳಲು ಸಾಧ್ಯ ಎಂಬ ಕಿವಿ ಮಾತನ್ನು ಈ ಕಾಲ ನಮಗೆ ಪದೇ ಪದೇ ನಮ್ಮ ನೆನೆಪಿಸಿಕೊಡುತ್ತದೆ. ಆದ್ದರಿಂದ ಪ್ರಭುವಿನ ಕಲ್ವಾರಿಯ ಹೆಜ್ಜೆಗಳಲ್ಲಿ ನಮ್ಮ ಹೆಜ್ಜೆಗಳನ್ನಿರಿಸಲು, ಅವರು ಅನುಭವಿಸಿದ ನೋವು, ಯಾತನೆ ಮತ್ತು ಸಂಕಟಗಳನ್ನು ಮನಸಾರೆ ಧ್ಯಾನಿಸಲು ಅಂತೆಯೇ ನಮ್ಮ ಹೃನ್ಮನಗಳು ಪ್ರಭುವಿಗಾಗಿ ಸದಾ ಪರಿವರ್ತನೆಯ ಹಾದಿಯಲ್ಲಿ ಸಾಗಲು ಪ್ರಭುಕ್ರಿಸ್ತರ ಕಲ್ವಾರಿ ಪಯಣವೇ ನಮಗೆ ಪ್ರೇರಣೆಯಾಗಲಿ ಎಂದು ಮನಃಪೂರ್ವಕವಾಗಿ ಆಶಿಸೋಣವೇ? 

  -0--0--0--0--0--0-

ಪರಮ ಸಂಸ್ಕಾರ [ಭಾಗ 3) - ಸಿಎಂಜೆ


ಪರಮಪ್ರಸಾದ
ಯೇಸುಕ್ರಿಸ್ತರು ತಾವು ಮರಣಯಾತನೆ ಅನುಭವಿಸುವ ಮುನ್ನ ತಮ್ಮ ಆಪ್ತ ಶಿಷ್ಯರೊಂದಿಗೆ ಕೊನೆಯ ಊಟವನ್ನು ಮಾಡುತ್ತಾ ರೊಟ್ಟಿರಸಗಳನ್ನು ತಮ್ಮ ಪೂಜ್ಯ ಶರೀರ ಮತ್ತು ರಕ್ತದೊಂದಿಗೆ ಸಮೀಕರಿಸಿ ಎಲ್ಲರಿಗೂ ಹಂಚಿದರು ಹಾಗೂ ಅವರ ಸ್ಮರಣೆಗಾಗಿ ಆ ಆಚರಣೆಯನ್ನು ಅನುಗಾಲವೂ ಮಾಡುವಂತೆ ಆದೇಶ ನೀಡಿದರು. (ನೋಡಿ. ಮತ್ತಾಯ 26:26-28). ಪ್ರತಿ ಬಲಿಪೂಜೆಯಲ್ಲೂ ನಾವು ಯೇಸುವಿನ ಕೊನೆಯ ಭೋಜನದ ಸ್ಮರಣೆ ಮಾಡುತ್ತೇವೆ. ಇದೇ ಆಧಾರದಲ್ಲಿ ಕ್ರೈಸ್ತ ಕುಟುಂಬದ ಮಗುವಿಗೆ ತಿಳಿವು ಬಂದ ಮೇಲೆ ಅಂದರೆ ಸುಮಾರು ಏಳೆಂಟು ವಯಸ್ಸಿನಲ್ಲಿ ಪವಿತ್ರ ಪರಮಪ್ರಸಾದದಲ್ಲಿ ಯೇಸುಕ್ರಿಸ್ತರು ಇದ್ದಾರೆಂಬುದರ ಬಗ್ಗೆ ವಿಶೇಷ ಅರಿವು ಮತ್ತು ಭಕ್ತಿಯನ್ನು ಮೂಡಿಸಿ ಪರಮಪ್ರಸಾದ ಸಂಸ್ಕಾರವನ್ನು ನೀಡಲಾಗುತ್ತದೆ. ಅಲ್ಲಿಂದಾಚೆಗೆ ಆ ಹುಡುಗ ಹುಡುಗಿಯರು ಯೇಸುವಿನಲ್ಲಿ ಭಕ್ತಿಯಿಂದ ಒಂದಾಗಿ ದಿನದಿನವೂ ಅನೂಚಾನವಾಗಿ ಪರಮಪ್ರಸಾದ ಸ್ವೀಕರಿಸುವ ಮೂಲಕ ಕ್ರಿಸ್ತೀಯ ಚೇತನದಲ್ಲಿ ಬಲಗೊಳ್ಳುತ್ತಾರೆ ಹಾಗೂ ನಿಜಕ್ರೈಸ್ತರಾಗಿ ಜೀವಿಸುತ್ತಾರೆ. 
ಮೊದಲ ಪರಮಪ್ರಸಾದವನ್ನು ಬಿಷಪರು ನೀಡುತ್ತಾರಾದರೂ ಕೆಲ ಅನಿವಾರ್ಯ ಸಂದರ್ಭಗಳಲ್ಲಿ ಬಿಷಪರು ತಮ್ಮ ಪರವಾಗಿ ಬೇರೆ ಯಾರಾದರೂ ಗುರುಗಳಿಗೆ ಅಧಿಕಾರ ನೀಡಿ ಕಳಿಸುವುದುಂಟು. ಹೊಸದಾಗಿ ಕ್ರೈಸ್ತ ಧರ್ಮಕ್ಕೆ ಬಂದವರಿಗೆ   ದೀಕ್ಷಾಸ್ನಾನ ಮತ್ತು ಪರಮಪ್ರಸಾದವನ್ನು ಆಯಾ ಧರ್ಮಕೇಂದ್ರದ ಗುರುಗಳೇ ನೀಡುವುದಕ್ಕೆ ಅನುಮತಿಯಿದೆ.   ದೀಕ್ಷಾಸ್ನಾನದಂತೆಯೇ ಪರಮಪ್ರಸಾದ ಸಂಸ್ಕಾರ ಸ್ವೀಕಾರದ ಸಂದರ್ಭವನ್ನು ನೆಂಟರಿಷ್ಟರೊಂದಿಗೆ ಸೇರಿ ಸಂಭ್ರಮದಿಂದ ಔತಣ ಮಾಡಿ ಆಚರಿಸುವುದು ವಾಡಿಕೆಯಾಗಿ ನಡೆದುಬಂದಿದೆ.
ಪ್ರತಿ ಬಲಿಪೂಜೆಯಲ್ಲೂ ಗುರುಗಳು ಗೋದಿಹಿಟ್ಟಿನಿಂದ ಅಚ್ಚು ತೆಗೆದ ಅಪ್ಪವನ್ನು ಮತ್ತು ದ್ರಾಕ್ಷಾರಸವನ್ನು ಬಲಿಯರ್ಪಣೆಯ ಸಂದರ್ಭದಲ್ಲಿ ಎರಡೂ ಹಸ್ತಗಳನ್ನಿಟ್ಟು ಪವಿತ್ರೀಕರಿಸುತ್ತಾ ‘ಪ್ರಭುಯೇಸುವೇ ಈ ರೊಟ್ಟಿರಸಗಳಲ್ಲಿ ನೀವು ಇಳಿದು ಬಂದು ಪಾವನಗೊಳಿಸಿರಿ’ ಎಂದು ಪ್ರಾರ್ಥಿಸುವಾಗ ಅದರಲ್ಲಿ ಯೇಸುಕ್ರಿಸ್ತರು ನೆಲೆಗೊಳ್ಳುತ್ತಾರೆ. ಆ ಸಮಯದಲ್ಲಿ ದೇವರು ಇಳಿದು ಬರುವ ಆ ಸಂದರ್ಭವನ್ನು ಉದ್ಘೋಷಿಸುವುದೋ ಎಂಬಂತೆ ಪೀಠಸೇವೆಯ ಹುಡುಗರು ಕೈಗಂಟೆಯನ್ನು ನುಡಿಸುತ್ತಾರೆ. 
ಪ್ರಸಾದ ಹಂಚುವಿಕೆಯ ನಂತರ ಮಿಕ್ಕಿದ ಪರಮಪ್ರಸಾದವನ್ನು ದೇವಾಲಯದ ಪ್ರಸಾದಮಂಜೂಷದಲ್ಲಿ ಸಂಗ್ರಹಿಸಿಡಲಾಗುತ್ತದೆ. ಹಾಗೂ ಮರಣಾವಸ್ಥೆಯಲ್ಲಿರುವವರನ್ನು ಸಂಧಿಸಲು ಹೋದಾಗ ಅವರಿಗೆ ನೀಡುವುದಕ್ಕಾಗಿ ಪರಮಪ್ರಸಾದವನ್ನು ಈ ಮಂಜೂಷದಿಂದಲೇ ಗುರುಗಳು ಕೊಂಡೊಯ್ಯುತ್ತಾರೆ.       ದಿನನಿತ್ಯದ ಆರಾಧನೆಗಾಗಿ ಕೆಲವು ದೇವಾಲಯ, ಗುರುಮಠ, ಕನ್ಯಾಮಠ, ಆಸ್ಪತ್ರೆಗಳ ಪ್ರಾರ್ಥನಾಮಂದಿರಗಳಲ್ಲಿ ದೊಡ್ಡಗಾತ್ರದ ಪ್ರಸಾದವನ್ನು ಪ್ರಭಾವಳಿಯ ನಡುವೆ ಪ್ರದರ್ಶಿಸಿ ಸಾರ್ವಜನಿಕ ಆರಾಧನೆಗೆ  ಇಡುತ್ತಾರೆ. 
ಪರಮಪ್ರಸಾದವು ಸ್ವತಃ ಯೇಸುವಿನ ಶರೀರವೇ ಆಗಿರುವುದರಿಂದ ಅದಕ್ಕೆ ವಿಶೇಷ ಗೌರವ ಭಕ್ತಿಗಳಿಂದ ನಡೆದುಕೊಳ್ಳಬೇಕು. ಯೊವಾನ್ನ 6:35-36ರಲ್ಲಿ ‘ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು. ಆದರೆ ನಾನು ನಿಮಗೆ ಹೇಳಿದಂತೆ ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ’ ಎಂದ ಯೇಸುಸ್ವಾಮಿಯ ಮಾತುಗಳ ಮೇಲೆ ಗಮನವಿರಿಸಿ ದೇವಾಲಯವನ್ನು ಪ್ರವೇಶಿಸಿದಾಗಲೆಲ್ಲ ಪ್ರಸಾದ ಸಂಪುಟಕ್ಕೆ ತಲೆಬಾಗಿ ಮೊಣಕಾಲೂರಿ ವಂದಿಸಬೇಕು. ಪ್ರಸಾದ ಸಂಪುಟದ ಸಮ್ಮುಖದಲ್ಲಿರುವಾಗ ಯಾರೊಂದಿಗೂ ಮಾತಾಡಲೇಬಾರದು. ಅನಿವಾರ್ಯವೆನಿಸಿದ ಸಂದರ್ಭದಲ್ಲಿ ಮೆಲುದನಿಯಲ್ಲಿ ಭಯಭಕ್ತಿಯಿಂದ ಮಾತಾಡುವುದು ಸೂಕ್ತ. ದೇವಾಲಯದಲ್ಲಿ ಪರಮಪ್ರಸಾದದವನ್ನು ಹಂಚುತ್ತಿರುವಾಗ ಇತರರು ಭಕ್ತಿಯಿಂದ ಮೊಣಕಾಲೂರಿ ಪ್ರಾರ್ಥನೆ ಭಜನೆಗಳಲ್ಲಿ ನಿರತರಾಗಬೇಕು ಅಥವಾ ತಲೆಬಾಗಿ ಕುಳಿತಿರಬೇಕು. ಪ್ರಸಾದ ಸ್ವೀಕಾರಕ್ಕೆ ಬರುವವರ ಅಲಂಕಾರ, ಬಟ್ಟೆಬರೆ, ನಡಿಗೆಗಳನ್ನು ಗಮನಿಸುವುದು ಯೇಸುಕ್ರಿಸ್ತರಿಗೆ ನಾವು ತೋರುವ ಅಗೌರವ ಅಪಮಾನ ಎಂಬುದನ್ನು ಮನಗಾಣಬೇಕು. ಪರಮಪ್ರಸಾದ ಸ್ವೀಕಾರವನ್ನು ಯಾವುದೇ ಅಬ್ಬರ ಗತ್ತು ಗಮ್ಮತ್ತುಗಳಿಲ್ಲದೆ 
ದೈನ್ಯದಿಂದ ಕೈಮುಗಿದು ಸ್ವೀಕರಿಸಿ ಅಷ್ಟೇ ಭಕ್ತಿಯಿಂದ ಹಿಂದಿರುಗಿ ಮೊಣಕಾಲೂರಿ ಮೌನದಿಂದ ಮನದೊಳಗಿನ ಯೇಸುವಿನೊಂದಿಗೆ ಸಂಭಾಷಿಸಬೇಕು. ‘ನನ್ನೊಳಗೆ ಬಂದು ನನ್ನ ಮನಸಿನ ಮೊಡಕು ಮೂಲೆಗಳನ್ನೆಲ್ಲ ಬೆಳಗಿರುವ ಯೇಸುವೇ ಅದೇ ಬೆಳಕಿನಲ್ಲಿ ನನ್ನನ್ನು ಮುನ್ನಡೆಸು’ ಎಂದು ಪುನೀತ ಭಾವದಿಂದ ಹೇಳಿ ಪ್ರಾರ್ಥನೆ ಭಜನೆಗಳಲ್ಲಿ ತೊಡಗಬೇಕು. 
ಕೊರಿಂಥದವರಿಗೆ ಬರೆದ ಮೊದಲಪತ್ರ 10: 16-17ರಲ್ಲಿ ಹೇಳಿರುವ ಪ್ರಕಾರ ‘ನಾವು ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ’. ಪರಮಪ್ರಸಾದವನ್ನು ಸ್ವೀಕರಿಸಿದ ಮೇಲೆ ನಾವು ಜೀವಂತ ಪ್ರಸಾದ ಸಂಪುಟಗಳಾಗುತ್ತೇವೆ. ಮತ್ತೊಬ್ಬರಲ್ಲೂ ಅದೇ ಜೀವಂತ ಸಂಪುಟವನ್ನು ಕಾಣುವ ಮೂಲಕ ನಾವು ದೇವರಿಗೆ ಸ್ತೋತ್ರ ಎನ್ನುತ್ತೇವೆ. ಪೂಜೆ ಮುಗಿದ ನಂತರ ದೊಡ್ಡವರು ಚಿಕ್ಕವರೆನ್ನದೆ ಒಬ್ಬರು ಮತ್ತೊಬ್ಬರಿಗೆ ಕೈ ಮುಗಿಯುತ್ತಾ ದೇವರಿಗೆ ಸ್ತೋತ್ರ ಎನ್ನುವುದು ಬಹು ಒಳ್ಳೆಯ ರೂಢಿಯಾಗಿದೆ. ಒಂದೇ ಪೀಠದಲ್ಲಿ ಒಂದೇ ರೊಟ್ಟಿಯನ್ನು ಒಟ್ಟಿಗೆ ಭುಜಿಸುವ ನಾವೆಲ್ಲರೂ ಒಂದೇ ಆಗಿದ್ದೇವೆ. ಪ್ರೇ.ಕಾ. 2:42-46ರಲ್ಲಿ ಹೇಳಿರುವ ಪ್ರಕಾರ ಪರಮಪ್ರಸಾದ ಸ್ವೀಕರಿಸುವ ನಾವೆಲ್ಲರೂ ಅನ್ಯೋನ್ಯವಾಗಿ ಜೀವಿಸಬೇಕು.
ಇಂದಿಗೆ ಸುಮಾರು ಒಂಬೈನೂರು ವರ್ಷಗಳ ಹಿಂದೆ ಜೀವಿಸಿದ್ದ ಅಂತೋಣಿಯವರು ಪರಮಪ್ರಸಾದ ಭಕ್ತಿಯನ್ನು ಎಲ್ಲೆಡೆ ಪ್ರಚುರಗೊಳಿಸುತ್ತಿದ್ದರು. ಆಗ ಪಾಷಂಡಿ ಪಾಳೇಗಾರನೊಬ್ಬ ‘ನಿನ್ನ ಪರಮಪ್ರಸಾದದಲ್ಲಿರುವ ದೇವರನ್ನು ನನ್ನ ಕತ್ತೆ ಗುರುತಿಸಿದರೆ ನಾನು ನಂಬುತ್ತೇನೆ’ ಎಂದು ಪಂದ್ಯ ಕಟ್ಟಿದ. ಅವನ ಮನ ಪರಿವರ್ತನೆಗಾಗಿ ಮೂರುದಿನ ಎಡಬಿಡದೆ ದೇವರಲ್ಲಿ ಪ್ರಾರ್ಥಿಸಿದ ಅಂತೋಣಿಯವರು ಮೂರನೇ ದಿನ ಪ್ರಭಾವಳಿಯಲ್ಲಿರಿಸಿದ ಪರಮಪ್ರಸಾದವನ್ನು ಭಯಭಕ್ತಿಯಿಂದ ಎತ್ತಿಹಿಡಿದು ಕತ್ತೆಯ ಕಡೆ ಗಾಂಭೀರ್ಯದಿಂದ ನಡೆದು ಬಂದರು. ಪಾಳೇಗಾರನು ಆ ಕತ್ತೆಗೆ ಮೂರು ದಿನದಿಂದ ಊಟವನ್ನೇ ಹಾಕಿರಲಿಲ್ಲ. ಇದೀಗ ಕತ್ತೆಯ ಮುಂದೆ ಹುಲ್ಲುಕಂತೆ ಹಿಡಿದ ಅವನು, ಜೊತೆಗೆ ಪರಮಪ್ರಸಾದ ಹಿಡಿದ ಅಂತೋಣಿಯವರು ನಿಂತಿದ್ದರು. ಎಲ್ಲರೂ ನೋಡನೋಡುತ್ತಿದ್ದಂತೆ ಆ ಕತ್ತೆ ಹುಲ್ಲನ್ನು ತಿರಸ್ಕರಿಸಿ ಪರಮಪ್ರಸಾದವನ್ನು ನೋಡುತ್ತಾ ಭಕ್ತಿಯಿಂದ ಮೊಣಕಾಲೂರಿತು. ಪರಮಪ್ರಸಾದದ ಪಾರಮ್ಯದ ಬಗ್ಗೆ ಇದಕ್ಕಿಂತ ಉತ್ತಮ ಉದಾಹರಣೆ ಇರಲಾರದು.

-0--0--0--0--0--0-

ಮೌನದ ದನಿ


- ಜೀವಸೆಲೆ

ಮೌನದಲ್ಲಿ ಹಾಡಾದ
ನನ್ನ ಮಾತುಗಳು
ಖಾಲಿ ಶಬ್ದಗಳಲ್ಲ...
ನಿನ್ನ ಅರಿವ ತಿಳಿಹೇಳುವ
ನಿನ್ನದೇ ಆತ್ಮಸೃಷ್ಟಿ
-------
ನನ್ನ ಬದುಕ ಪುಸ್ತಕದಲ್ಲಿ
ನಿನ್ನದಚ್ಚಿಲ್ಲದ ಒಂದಾಳೆಯು
ಕಾಣದಾಗ
ಅರಿವಾಗಿದ್ದು:
ಈ ಬದುಕು ನೀ ಬರೆಯುವ ದಿನಚರಿ! ಎಂದು
-----
ದಿನಪತ್ರಿಕೆಯ
ಓದುತ್ತಾ ಓದುತ್ತಾ
ನಿಟ್ಟುಸಿರಿನಿಂದ ಹೇಳಿದ್ದು
ಮನುಷ್ಯನಿಗೆ ನೀ ಮನುಷ್ಯನೆಂದು
ತಿಳಿ ಹೇಳುವ ಅಗಾಧ ಸಮಾಜಮುಖೀ
ಪ್ರವಾದಿ ನೀನು ಬರಬೇಕೆಂದು

-0--0--0--0--0--0-

ಸೃಷ್ಟಿಯ ಕತೆ (ಭಾಗ 6)

ಜಗತ್ತು, ಆರು ದಿನಗಳ ಸೃಷ್ಟಿ 
- ಎಫ್ ಎಂ ಎನ್
---------------------------------
ಯೆಹೂದಿಗಳ ಪವಿತ್ರಗ್ರಂಥ ಮತ್ತು ಕ್ರೈಸ್ತರ ಶ್ರೀಗ್ರಂಥ ಪವಿತ್ರ ಬೈಬಲ್ಲಿನಲ್ಲಿನ ಸೃಷ್ಟಿಯ ಕತೆ.
------------------------

ಆದಿಯಲ್ಲಿ ದೇವರು ಯಹೋವ (ಎಲೊಹಿಂ), ಸ್ವರ್ಗ(ಪರಲೋಕ)ವನ್ನು ಮತ್ತು ಭೂಮಿ(ಭೂಲೋಕ)ಯನ್ನು ಸೃಷ್ಟಿಸಿದರು. ಭೂಮಿಯು ನಿರಾಕಾರಿಯಾಗಿಯೂ ಬರಿದಾಗಿಯೂಇತ್ತು. ಆದಿ ಸಾಗರದ ಮೇಲೆ ಕಗ್ಗತ್ತಲು ಕವಿದಿತ್ತು. ದೇವರಾತ್ಮ ಜಲರಾಶಿಯ ಮೇಲೆ ಚಲಿಸುತ್ತಿತ್ತು. ಆಗ ದೇವರು, `ಬೆಳಕಾಗಲಿ’ ಎನ್ನಲು ಬೆಳಕಾಯಿತು. ದೇವರಕಣ್ಣಿಗೆ ಅದು ಚೆನ್ನಾಗಿ ಕಂಡಿತು. ಅವರು ಬೆಳಕನ್ನು ಕತ್ತಲೆಯನ್ನು ಬೇರೆ ಬೇರೆ ಮಾಡಿ, ಬೆಳಕಿಗೆ ಹಗಲೆಂದು ಕತ್ತಲೆಗೆ ಇರುಳೆಂದು ಹೆಸರಿಸಿದರು. ಹೀಗೆ ಬೈಗೂ ಬೆಳಗೂ ಆಗಿ ಮೊದಲನೇ ದಿನವಾಯಿತು.
 ಆ ಬಳಿಕ ದೇವರು, `ಜಲರಾಶಿಯ ನಡುವೆ ಒಂದು ಗುಮ್ಮಟವು ಉಂಟಾಗಲಿ. ಅದು ಕೆಳಗಿನ ನೀರನ್ನು ಮೇಲಿನ ನೀರನ್ನು ಬೇರೆ ಬೇರೆ ಮಾಡಲಿ’ ಎಂದರು. ಅಷ್ಟಾದ ಮೇಲೆ, ದೇವರು ಆ ಗುಮ್ಮಟಕ್ಕೆ `ಆಕಾಶ’ ಎಂದು ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಎರಡನೇ ದಿನವಾಯಿತು.
ಆನಂತರ ದೇವರು, ‘ಆಕಾಶದ ಕೆಳಗಿರುವ ನೀರೆಲ್ಲ ಒಂದೇ ಕಡೆ ಕೂಡಿಕೊಳ್ಳಲಿ, ಒಣ ನೆಲ ಕಾಣಿಸಿಕೊಳ್ಳಲಿ’ ಎಂದರು. ಹಾಗಾದ ಮೇಲೆ ದೇವರು, ಒಣ ನೆಲಕ್ಕೆ `ಭೂಮಿ’ ಎಂತಲೂ, ಜಲರಾಶಿಗೆ `ಸಮುದ್ರ’ವೆಂತಲೂ ಹೆಸರಿಟ್ಟರು. ತರುವಾಯ ದೇವರು, `ಭೂಮಿಯಲ್ಲಿ ಎಲ್ಲಾ ಬಗೆಯ ದವಸಧಾನ್ಯ, ಹಣ್ಣುಹಂಪಲು ಬಿಡುವ ಗಿಡಮರಬಳ್ಳಿಗಳು ಬೆಳೆಯಲಿ’ ಎಂದರು. ಹಾಗೆ ಆಯಿತು. ಅವು ದೇವರ ಕಣ್ಣಿಗೆ ಚೆನ್ನಾಗಿ ಕಂಡವು. ಹೀಗೆ ಬೈಗೂ ಬೆಳಗೂ ಆಗಿ ಮೂರನೆಯ           ದಿನವಾಯಿತು.
ಅದಾದ ನಂತರ ದೇವರು, ಹಗಲಿರುಳುಗಳನ್ನು ಬೇರೆ ಬೇರೆ ಮಾಡಲು, ಋತುಮಾನಗಳನ್ನು, ದಿನ ಸಂವತ್ಸರಗಳನ್ನು ಸೂಚಿಸಲು ಹಾಗೂ ಭೂಮಿಗೆ ಬೆಳಕನ್ನು ನೀಡಲು ಎರಡು ಆಕಾಶ ದೀಪಗಳು ಉಂಟಾಗಲಿ ಎಂದರು. ಹಾಗಾದಾಗ ಹಗಲನ್ನು ಆಳುವುದಕ್ಕೆ ಸೂರ್ಯನನ್ನು, ಇರುಳನ್ನು ಆಳುವುದಕ್ಕೆ ಚಂದ್ರನನ್ನು ನಿಯಮಿಸಿದರು. ಜೊತೆಗೆ ನಕ್ಷತ್ರಗಳನ್ನೂ ಸೃಷ್ಟಿಸಿ ಆಕಾಶದಲ್ಲಿ ಕೂರಿಸಿದರು. ದೇವರ ಕಣ್ಣಿಗೆ ಅದು ಚೆನ್ನಾಗಿ ಕಂಡಿತು. ಹೀಗೆ ಬೈಗೂ ಬೆಳಗೂ ಆಗಿ ನಾಲ್ಕನೇ ದಿನವಾಯಿತು.
 ಆಮೇಲೆ ದೇವರು, `ಹಲವಾರು ಜೀವ ಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಭೂಮ್ಯಾಕಾಶಗಳ ನಡುವೆ ಪಕ್ಷಿಗಳು ಹಾರಾಡಲಿ’ ಎಂದರು. ಅದು ನೆರವೇರಿತು. ಅದು ದೇವರ ಕಣ್ಣಿಗೆ ಚೆನ್ನಾಗಿ ಕಂಡಿತು. ಹೀಗೆ ಬೈಗೂ ಬೆಳಗೂ ಆಗಿ ಐದನೇ ದಿನವಾಯಿತು.
 ಆ ಬಳಿಕ ದೇವರು, `ಭೂಮಿಯಲ್ಲಿ ಎಲ್ಲಾ ತರಹದ ಜೀವಜಂತುಗಳು – ದೊಡ್ಡಚಿಕ್ಕ ಸಾಕುಪ್ರಾಣಿಗಳು, ಕಾಡು ಮೃಗಗಳು ಹುಟ್ಟಲಿ’ ಎಂದರು, ಅಂತೆಯೇ ಆಯಿತು. ಅವರ ನೋಟಕ್ಕೆ ಅದು ಚೆನ್ನಾಗಿಕಂಡಿತು. ಅದಾದ ನಂತರ ದೇವರು, `ನಮ್ಮಂತೆಯೆ ಇರುವ ಹಾಗೂ ನಮ್ಮನ್ನು ಹೋಲುವ ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆ, ನೆಲದ ಮೇಲಿನ ದೊಡ್ಡಚಿಕ್ಕ ಸಾಕುಪ್ರಾಣಿಗಳು ಮತ್ತು ಕಾಡು ಮೃಗಗಳ ಮೇಲೆ, ನೆಲದ ಮೆಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆ ದೊರೆತನ ಮಾಡಲಿ’ ಎಂದರು. 
 ಮನುಷ್ಯರಿಗೆ ದವಸಧಾನ್ಯಗಳನ್ನು, ಹಣ್ಣುಹಂಪಲುಗಳನ್ನು, ಸೊಪ್ಪುಗಳನ್ನು ಕೊಡಮಾಡಿದರು, ಅದರಂತೆ ಪ್ರಾಣಿಗಳಿಗೂ ಅವಕ್ಕೆ ಬೇಕಾದ ಆಹಾರಗಳನ್ನು ನಿಗದಿ ಮಾಡಿದರು. ದೇವರು ತಮ್ಮ ಸೃಷ್ಟಿಯನ್ನು ನೋಡಿ ಸಂತಸಗೊಂಡರು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನವಾಯಿತು.
 ಸರ್ವೇಶ್ವರ ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು, ಏಳನೆಯ ದಿನ ವಿಶ್ರಾಂತಿಯನ್ನು ಪಡೆದರು. ಆ ಏಳನೇ ದಿನ ಪರಿಶುದ್ಧವಾಗಿರಲಿ ಎಂದು ಆಶೀರ್ವದಿಸಿದರು.
 ಸರ್ವೇಶ್ವರ ಪರಲೋಕ ಭೂಲೋಕಗಳನ್ನು ಸೃಷ್ಟಿ ಮಾಡಿದಾಗ, ಯಾವ ಗಿಡಗಂಟಿಗಳೂ ಭೂಮಿಯಲ್ಲಿ ಇರಲಿಲ್ಲ. ಯಾವ ಬೀಜವೂ ಮೊಳಕೆಯೊಡೆದಿರಲಿಲ್ಲ. ಏಕೆಂದರೆ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ. ಭೂಮಿಯನ್ನು ವ್ಯವಸಾಯ ಮಾಡಲು ಮನುಷ್ಯನೂ ಇರಲಿಲ್ಲ. ಭೂಮಿಯಿಂದ ನೀರು ಉಕ್ಕಿ ನೆಲಕ್ಕೆ ನೀರೆರೆಯುತ್ತಿತ್ತು.
 ಹೀಗಿರಲು ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ತಮ್ಮ ಆಕಾರದಲ್ಲಿ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿಜೀವಶ್ವಾಸವನ್ನು ಊದಿದರು. ಆಗ ಮನುಷ್ಯ ಜೀವಾತ್ಮನಾದನು. ಪೂರ್ವ ದಿಕ್ಕಿನ ಏಡನ್ ಪ್ರದೇಶದಲ್ಲಿ ಒಂದು ತೋಟವನ್ನು ನಿರ್ಮಿಸಿ, ಅಲ್ಲಿ ಕೃಷಿ ಮಾಡಲು ಮತ್ತು ಅದನ್ನು ಕಾಯಲು ಆ ಮನುಷ್ಯನನ್ನು ಇರಿಸಿದರು. ಆ ತೋಟದ ನಡುವೆ ಒಂದು ನದಿಯು ಹರಿದು, ಅಲ್ಲೆಲ್ಲಾ ನೀರುಣಿಸುತ್ತಿತು. ಆ ನದಿಯು ನಂತರ ನಾಲ್ಕು ಕವಲುಗಳಲ್ಲಿ ಒಡೆದಾಗ ನಾಲ್ಕು ನದಿಗಳಾದವು.
 ಆ ನಾಲ್ಕು ನದಿಗಳು ಜಗತ್ತಿನ ನಾಲ್ಕು ದಿಕ್ಕಿಗೂ ಹರಿಯುತ್ತಿದ್ದವು. ಆ ಏಡನ್ ತೋಟದಲ್ಲಿ ನೋಟಕ್ಕೆ ರಮ್ಯವೂ, ತಿನ್ನಲು ರುಚಿಕರವೂ ಆದ ನಾನಾ ತರದ ಮರಗಳಿದ್ದವು. ಆ ತೋಟದ ಮಧ್ಯದಲ್ಲಿ ಜೀವದಾಯಕ ಅಂದರೆ ಅಮರತ್ವ ನೀಡುವ ಮತ್ತು ಜ್ಞಾನದ ಅಂದರೆ ಒಳಿತು ಕೆಡಕುಗಳ ಅರಿವು ಮೂಡಿಸುವ ಎರಡು ಮರಗಳಿದ್ದವು.
 ಆ `ತೋಟದಲ್ಲಿನ ಸಕಲ ಗಿಡಮರಗಳ ಹಣ್ಣು ಹಂಪಲುಗಳನ್ನು ತಿನ್ನಬಹುದು’ ಎಂದು ಆ ಮನುಷ್ಯನಿಗೆ ತಿಳಿಸಿದ್ದ ದೇವರು, `ಜೀವದಾಯಕ ಹಾಗೂ ಒಳಿತು ಕೆಡಕುಗಳ ಅರಿವು ಮೂಡಿಸುವ ಮರಗಳ ಹಣ್ಣುಗಳನ್ನು ತಿನ್ನಕೂಡದು’ ಎಂದು ನಿರ್ಬಂಧ ಹೇರಿದ್ದರು. ತಪ್ಪಿದರೆ `ಸಾಯುವಿ’ ಎಂದು ಬೆದರಿಕೆಯನ್ನು ಹಾಕಿದ್ದರು.
 ಆ ನಂತರ ದೇವರಾದ ಸರ್ವೇಶ್ವರ, `ಮನುಷ್ಯ ಒಂಟಿಯಾಗಿ ಇರುವುದು ಸರಿಯಲ್ಲ, ಅವನಿಗೆ ಒಬ್ಬ ಸಂಗಾತಿಯನ್ನು ಇಲ್ಲವೆ ಸಹಾಯಕನನ್ನು ಕೊಡಬೇಕು ಎಂದು ಸಕಲ ಪ್ರಾಣಿಗಳನ್ನು ಅವನ ಎದುರು ತಂದು ನಿಲ್ಲಿಸಿದರು. ಅವುಗಳಿಗೆ ಆತ ಒಂದೊಂದು ಹೆಸರಿಟ್ಟ, ಆದರೆ ಅವು ಅವನಿಗೆ ಸಹಾಯಕನಾಗಿರಲು ಅಥವಾ ಸಂಗಾತಿಯಾಗಿರಲು ಸರಿ ಹೊಂದಲಿಲ್ಲ. ಕೊನೆಗೆ ಸರ್ವೇಶ್ವರ ಮನುಷ್ಯನಿಗೆ ಗಾಢ ನಿದ್ರೆ ಬರಮಾಡಿಸಿ, ಅವನು ಮಲಗಿದ್ದಾಗ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡರು. ಅದರಿಂದ ಮಹಿಳೆಯನ್ನು ಸಿದ್ಧಪಡಿಸಿ ಅವನ ಬಳಿಗೆ ತಂದು ನಿಲ್ಲಿಸಿದರು. ಆಕೆ, `ನರ’ನಿಂದ ಉತ್ಪತ್ತಿಯಾದವಳು `ನಾರಿ’ ಎನಿಸಿಕೊಂಡಳು.
ಅವರು ಇತರ ಪ್ರಾಣಿಗಳಂತೆಯೆ ಬೆತ್ತೆಲೆಯೆ ಇದ್ದರು. ಸರ್ವೇಶ್ವರನ ಸೃಷ್ಟಿಯಲ್ಲಿ ಅತಿಶಯ ಯುಕ್ತಿಯುಳ್ಳ ಸರ್ಪವು ಒಮ್ಮೆ ಮಹಿಳೆಯ ಹತ್ತಿರ ಬಂದು, `ತೋಟದ ಮಧ್ಯದಲ್ಲಿರುವ ಜೀವದಾಯಕ ಹಾಗೂ ಒಳಿತು ಕೆಡಕುಗಳ ಅರಿವು ಮೂಡಿಸುವ ಮರಗಳ ಹಣ್ಣುಗಳನ್ನು ತಿಂದರೆ ಸಾಯುವುದಿಲ್ಲ’ ಎಂದು ಅವಳ ತಲೆ ಕೆಡಿಸಿತು. `ನೋಡಿಯೆ ಬಿಡೋಣ’ ಎಂದು ಆ ಮಹಿಳೆ `ಅರಿವಿನ ಮರದ ಹಣ’್ಣನ್ನು ಕಿತ್ತು ತಂದು ತಾನೂ ತಿಂದಳು, ತನ್ನ ಗಂಡನಿಗೂ ತಿನ್ನಿಸಿದಳು. ಆಗ ಅವರಿಬ್ಬರಿಗೆ ತಾವು ಬೆತ್ತೆಲೆ ಇರುವುದು ತಿಳಿಯಿತು. 
 ನಡೆದ ಸಂಗತಿ ಗಮನಕ್ಕೆ ಬಂದಾಗ ಸರ್ವೇಶ್ವರ ದೇವರು, `ಹಗೆತನವಿರಲಿ ನಿನಗೂ ಮಹಿಳೆಗೂ ಮತ್ತು ಮಹಿಳೆಯ ಸಂತಾನಕ್ಕೂ’ ಎಂದು ಸರ್ಪಕ್ಕೆ ಶಾಪ ಕೊಟ್ಟರು. ಮಕ್ಕಳ ಆಸೆಯನ್ನು ಹೊಂದಿರುವ ನಿನಗೆ `ಹೆಚ್ಚಿಸುವೆನು ನಿನ್ನ ಪ್ರಸವಕಾಲದ ವೇದನೆಯನ್ನು’ ಎಂದು ಮಹಿಳೆಗೆ ಶಿಕ್ಷೆ ನೀಡಿದರು. `ಜೊತೆಗೆ, ಆಕೆ ಗಂಡನ ಅಧೀನದಲ್ಲಿರಲಿ’ ಎಂದೂ ಕಟ್ಟಪ್ಪಣೆ ಮಾಡಿದರು. `ಮಡದಿಯ ಮಾತನ್ನು ಕೇಳಿ ತಿನ್ನಬಾರದೆಂದು ಹೇಳಿದ ಮರದ ಹಣ್ಣನ್ನು ತಿಂದ ತಪ್ಪಿಗೆ ಇನ್ನು ನೀವಿಬ್ಬರೂ ಕಷ್ಟಪಟ್ಟು ಬಿತ್ತಿ ಬೆಳೆದು ಬದುಕಿರಿ’ ಎಂದು ಅವರಿಬ್ಬರಿಗೂ ಶಪಿಸಿದರು.** 
 `ಒಳಿತು ಕೆಡಕುಗಳ ಅರಿವು ಮೂಡಿಸುವ ಮರದ ಹಣ್ಣನ್ನು ತಿಂದ ಈ ಮನುಷ್ಯನಿಗೆ ಈಗ ಒಳ್ಳೆಯದು ಮತ್ತು ಕೆಟ್ಟದುದರ ಬಗ್ಗೆ ತಿಳಿವಳಿಕೆ ಮೂಡಿದೆ. ಮುಂದೆ ಆತ ಜೀವದಾಯಕ ಮರದ ಹಣ್ಣನ್ನು ತಿಂದರೆ ನಮ್ಮಂತೆಯೇ ಅಜರಾಮರ ಆಗಿಬಿಡುತ್ತಾನೆ’ ಎಂದು ಯೋಚಿಸಿದ ದೇವರು ಸರ್ವೇಶ್ವರ, ಅವರಿಬ್ಬರಿಗೂ ಬಟ್ಟೆ ತೊಡಿಸಿ, ಅವರಿಬ್ಬರನ್ನು ಏಡನ್ ತೋಟದಿಂದ ಹೊರಗೆ ದಬ್ಬಿದರು. ಅವರಿಬ್ಬರು ಮತ್ತೆ ಏಡನ್ ತೋಟಕ್ಕೆ ಕಾಲಿಡದಂತೆ ತಡೆಯಲು, ಅರ್ಧ ಸಿಂಹ ಮತ್ತು ಅರ್ಧ ಮಾನವದೇಹದ ರೆಕ್ಕೆಗಳುಳ್ಳ ಪ್ರಾಣಿಯನ್ನು ಆ ತೋಟದ ಕಾವಲಿಗೆ ನಿಯೋಜಿಸಿದರು.
 ಹಿಬ್ರೂ ಭಾಷೆಯಲ್ಲಿ `ಆದಾಮ’ ಎಂದರೆ ಮಣ್ಣಿನಿಂದ ಆದವನು ಎಂಬ ಅರ್ಥವಿದೆ. ಹೀಗಾಗಿ ದೇವರು ಸೃಷ್ಟಿಸಿದ ಮೊದಲ ಮನುಷ್ಯನ ಹೆಸರು ಆದಾಮ. ಆದಾಮನ ಹೆಂಡತಿಯ ಹೆಸರು `ಹವ್ವ’. ಹಿಬ್ರೂ ಭಾಷೆಯಲ್ಲಿ ಹವ್ವ ಎಂದರೆ ಜೀವ ಎಂಬ ಅರ್ಥವಿದೆ. ಈ `ಆದಾಮ’ ಮತ್ತು `ಹವ್ವ’ರು ಮಾನವಕುಲದ ಆದಿ ದಂಪತಿ. ಈ ದಂಪತಿಯಿಂದಲೇಜಗತ್ತಿನಲ್ಲಿ ಮಾನವ ಕುಲ ವಿವಿಧ ಪಂಗಡಗಳಲ್ಲಿ ಅರಳುತ್ತಾ ಸಾಗುತ್ತಿದೆ.
----
** ಆದಿ ತಂದೆ ತಾಯಿಗಳು ಮಾಡಿದ ಈ ತಪ್ಪು, `ಆದಿ ಪಾಪ’ ಎಂಬ ಕಲ್ಪನೆಗೆ ದಾರಿ ಮಾಡಿಕೊಟ್ಟಿದೆ. 
-0--0--0--0--0--0-

ಕವಿದನಿ


ನೆನ್ನೆ ಮೊನ್ನೆಯವರೆಗೆ...
ಡೇವಿಡ್ ಕುಮಾರ್. ಎ

ನೆನ್ನೆ ಮೊನ್ನೆಯವರೆಗೆ
ಒಬ್ಬರನೊಬ್ಬರ  ಟೀಕಿಸಲು
ಪೆನ್ನುಗಳ ಮರೆ ಹೊಕ್ಕೆವು
ಇಂದು, ಸಣ್ಣ ಸಿಟ್ಟಿಗೂ
ಗನ್ನು, ಬಾಂಬುಗಳ ತಂದೆವು

ನೆನ್ನೆಯವರೆಗೆ,
ರಾಮ ರಹೀಮರಿಗೆ
ಒಂದೇ ಪಂಕ್ತಿಯ  ಊಟ,
ಇಂದು,  ‘ಭಕ್ತ’ ‘ಉಗ್ರ’ ರೆಂಬ
ಆರೋಪಗಳ ಕಾದಾಟ

ಮೊನ್ನೆಯವರೆಗೆ,
ಜಾತಿ ಮೀರಿದ ಪ್ರೀತಿ
ಧರ್ಮದಾಚೆಗಿನ ದಯೆ,
ಇಂದು, ಕಾಮಾಲೆ ಕಣ್ಣಿನಲಿ
ಹಣೆ ಪಟ್ಟಿಗಳ ಹಚ್ಚಿ
ಗುಂಪು ಬಣಗಳ ದ್ವೇಷ.

ನೆನ್ನೆಯವರೆಗೆ
ತ್ರಿವರ್ಣ ಧ್ವಜದ
ರಂಗು ರಂಗಿನ ಹಾರಾಟ
ಇಂದು, ಹಸುರಿಲ್ಲ, ಬಿಳಿಯಿಲ್ಲ
ಕೋಮು ಕೇಸರಿಯ ದಳ್ಳುರಿ

ಮೊನ್ನೆಯವರೆಗೆ,
ರಾಷ್ಟ ಪ್ರೇಮವೆಂದರೆ
ಸಹೋದರತ್ವ, ಸಾಮರಸ್ಯ,
ಕಾನೂನು ಸುವ್ಯವಸ್ಥೆ,
ಇಂದು, ಅಂಧ ಭಕ್ತಿ, ಅಸಹನೆ
ಪಿಸ್ತೂಲು ಹಿಡಿದ ಉಗ್ರನ ಮುಂದೆ
ಪೆÇೀಲಿಸರ ಜಾಣ ಮೌನ !


--0--0--0-

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು (ಲೇಖನ-10)



ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)

---------------------------
ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕನ್ನಡ ಕ್ರೈಸ್ತ ಸಾಹಿತಿಯಾದ ರೆವರೆಂಡ್ ಉತ್ತಂಗಿಯವರ ಅವಿರತ ಶ್ರಮದಿಂದ ಸರ್ವಜ್ಞನ ಸುವಿಚಾರಗಳು ಹಳ್ಳಿಯ ಮುಗ್ಧರಿಂದಿಡಿದು ಪಟ್ಟಣದ ಪಂಡಿತರವರೆಗೂ ಹರಡಿದವು ಎಂಬುದನ್ನು ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಅವರ ಬರವಣಿಗೆಯ ಸೇವೆಯ ಅಮೋಘತೆಯನ್ನು ಸಾದಾರಪಡಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ. 
-----------------------------

ಅ. ಉತ್ತಂಗಿ ಚನ್ನಪ್ಪನವರ ಕೊಡುಗೆಗಳ ಮಹತ್ವ:
ಕ್ರೈಸ್ತ ಧರ್ಮದ ಕೃತಿಗಳು : ಉತ್ತಂಗಿ ಚನ್ನಪ್ಪನವರ ಮೊದಲ ಕೃತಿ ‘ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ’ ಇದು ಕ್ರಿಸ್ತಶಕ1921ರಲ್ಲಿ ಧಾರವಾಡದ ಕರ್ನಾಟಕ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಮುದ್ರಣಗೊಂಡು ಪ್ರಕಟವಾಗಿದೆ. ಕ್ರಿಸ್ತಶಕ 1918, ಡಿಸೆಂಬರ್ 24ರಂದು ಕ್ರಿಸ್‍ಮಸ್ ಹಬ್ಬದಂದು ರಾಣಿಬೆನ್ನೂರಿನ ಹರಿಜನ ಕೇರಿಯಲ್ಲಿ ನೆರೆದ ವಿದ್ಯಾವಂತ ಸಭಿಕರೆದುರು ಕ್ರಿಸ್ತನ ಸಂದೇಶವನ್ನು ಕುರಿತು ಮಾಡಿದ ಭಾಷಣದ ವಸ್ತುವೇ ಪುಸ್ತಕ ರೂಪದ ಈ ಕೃತಿ. ಪ್ರಪಂಚದ ಸಮಸ್ತ ಸಮುದ್ರಗಳಲ್ಲಿ ‘ಭೂಮಧ್ಯ ಸಮುದ್ರ’ವೆಂದು ಹೆಸರಾಂತ ಮಧ್ಯ ಸಮುದ್ರದ ಸಮೀಪದಲ್ಲಿ ‘ಪಾಲೆಸ್ತೀನ’ ಎಂಬುದೊಂದು ದೇಶವುಂಟು. ‘ಬೆತ್ಲೆಹೇಮ್’ ಎಂಬುದು ‘ಪಾಲೆಸ್ತೀನ’ ದೇಶದೊಳಗಿನದೊಂದು ಕುಗ್ರಾಮವಾಗಿದೆ. ಯೇಸುಕ್ರಿಸ್ತನು ಈ ಬೆತ್ಲೆಹೇಮ್ ಗ್ರಾಮದಲ್ಲಿಯೇ ಹುಟ್ಟಿದನು. ‘ಬನಾರಸ’ (ಕಾಶಿ) ಹಿಂದೂ ಧರ್ಮದವರಿಗೆ ಪುಣ್ಯಕ್ಷೇತ್ರ, ಭೂಕೈಲಾಸವೆನಿಸಿದೆ. ಭೂಮಂಡಲದ ತತ್ವಜ್ಞರೆಲ್ಲ ತಲೆದೂಗಿ ‘ಸೈ! ಸೈ’! ಎಂದು ಜಯ ಜಯಕಾರ ಮಾಡುತ್ತಿರುವ, ಶ್ರೇಷ್ಠತರದ ತತ್ವ ವಿಚಾರದ ತವರೂರಾಗಿದೆ. ಹೀಗೆ ‘ಬೆತ್ಲೆಹೇಮ’ ಮತ್ತು ‘ಬನಾರಸ’ ಈ ಉಭಯ ಕ್ಷೇತ್ರಗಳು ಜಗತ್ತಿನ ಎರಡು ಶ್ರೇಷ್ಠ ಧರ್ಮಗಳ ಕ್ಷೇತ್ರ ಸ್ಥಾನಗಳಾಗಿವೆ. ಬೆತ್ಲಹೇಮ ಬನಾರಸದ ಯೋಗ್ಯತೆಯನ್ನು ಗುರುತಿಸಿದೆ. ಬನಾರಸವು ಬೆತ್ಲಹೇಮನ್ನು ಅರಿತುಕೊಳ್ಳಬೇಕೆಂಬುದೇ ‘ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ’ಯಾಗಿದೆ. ಕ್ರೈಸ್ತ ಧರ್ಮದ ಸಂಸ್ಥಾಪಕನಾದ ಯೇಸುಕ್ರಿಸ್ತನೆಂದರೆ ಯಾರು? ಆತನ ಯೋಗ್ಯತೆಯೇನು? ಎಂಬುದನ್ನು ನಿರ್ಣಯಿಸುವುದೇ ಮುಖ್ಯ ವಿಷಯವಾಗಿದೆ ಎಂದು ಉತ್ತಂಗಿಯವರು ತಮ್ಮ ಕೃತಿಯ ಪ್ರಾರಂಭದಲ್ಲಿ ಹೇಳಿರುವರು. 
‘ಮೃತ್ಯುಂಜಯ’ ಇದು ಉತ್ತಂಗಿಯವರ ಎರಡನೇ ಕೃತಿ. ಕ್ರಿಸ್ತಶಕ 1921ರಲ್ಲಿ ಅವರ ಮೊದಲ ಕೃತಿ ‘ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ’ ಪ್ರಕಟವಾದರೆ, ಸುಮಾರು 40 ವರ್ಷಗಳ ನಂತರ ಮೃತ್ಯುಂಜಯ ಎಂಬ ಹೆಸರಿನಿಂದ ಕ್ರಿಸ್ತಶಕ 1963ರಲ್ಲಿ ಈ ಕೃತಿ ಪ್ರಕಟವಾಯಿತು. ಈ ಕೃತಿ ಯೇಸುಕ್ರಿಸ್ತನ ಜೀವನದ ಕೊನೆಯ ಭಾಗದ ಚರಿತ್ರೆಯನ್ನು ವಿವರಿಸುತ್ತದೆ. ಅಂದರೆ ಯೇಸುಕ್ರಿಸ್ತನು ಹುರುಳಿಲ್ಲದ ರಾಜಕೀಯ ಹಾಗೂ ಧಾರ್ಮಿಕ ಆರೋಪಗಳಿಗೆ ಗುರಿಯಾಗಿ ಶಿಲುಬೆಯಲ್ಲಿ ಚಿತ್ರಹಿಂಸೆಯಿಂದ ಮರಣವನ್ನಪ್ಪಿದರೂ ದಿವ್ಯ ಶರೀರಧಾರೆಯಾಗಿ ಶಿಷ್ಯರೊಂದಿಗೆ 40 ದಿವಸಗಳವರೆಗೂ ವ್ಯವಹರಿಸಿದ ವಿಷಯವನ್ನು ಈ ಗ್ರಂಥದಲ್ಲಿ ವಿವರಿಸಿ ಹೇಳಲಾಗಿದೆ. ಅಂದರೆ ಯೇಸುಕ್ರಿಸ್ತನು ಅನುಭವಿಸಿದ ಪಾಡು-ಮರಣ ಮತ್ತು ಪುನರುತ್ಥಾನದ ವಿಷಯಗಳು ಹೃದಯಂಗವಾಗಿಯೂ ತರ್ಕಬದ್ಧವಾಗಿಯೂ ಇದರಲ್ಲಿ ಹೇಳಲ್ಪಟ್ಟಿವೆ. ಯೇಸುಕ್ರಿಸ್ತನು ತನ್ನ ಶಿಷ್ಯರೊಂದಿಗೆ ಮಾಡಿದ ಕೊನೆಯ ಭೋಜನದ (ಐಚಿsಣ Suಠಿಠಿeಡಿ) ಬಗೆಗೆ ವಿವರಿಸಿ ಹೇಳಿದ ಭಾಗವಂತೂ ಕರುಣಾರಸಪೂರಿತ ಕಾದಂಬರಿಯನ್ನೋದಿದಂತೆ ಭಾಸವಾಗುತ್ತದೆ. ಮಹಾನ್ ವ್ಯಕ್ತಿ ಯೇಸುಕ್ರಿಸ್ತ ತನ್ನ ಶಿಷ್ಯರ ಪಾದವನ್ನು ತೊಳೆದ ಸೇವೆಯ ಮಹತ್ವದ ಪ್ರಸಂಗದ ವರ್ಣನೆಯನ್ನು ಓದುತ್ತಿದ್ದಂತೆ ಹೃದಯ ಹಿಂಡಿದಂತಾಗಿ ಕಣ್ಣು ತೇವವಾಗುತ್ತದೆ.
ಸ್ವತಃ ವಿಶಾಲ ಹೃದಯದವರಾದ ಪೂಜ್ಯ ಉತ್ತಂಗಿಯವರು ಕ್ರಿಸ್ತನ ಅದ್ಭುತ ಜೀವನದ ಬಗೆಗೆ ಈ ಚಿಕ್ಕ ಹೊತ್ತಿಗೆಯಲ್ಲಿ ಮಾಡಿದ ಸೌಜನ್ಯಯುತವಾದ ವಿಮರ್ಶೆಯನ್ನೋದಿದವರಿಗೆ ಕ್ರಿಸ್ತನ ಬಗೆಗೆ ಗೌರವಾದಾರಗಳು ಸುರಿಸುವವು. ಅಲ್ಲದೆ ಅವನ ಬಗೆಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಲವಲವಿಕೆಯುಂಟಾಗುತ್ತದೆ. ಈ ದೃಷ್ಟಿಯಿಂದ ಪೂಜ್ಯ ಚನ್ನಪ್ಪನವರು ಕ್ರಿಸ್ತನಿಗೆ, ಕ್ರೈಸ್ತ ಧರ್ಮಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಸಂಕುಚಿತ ಮನೋವೃತ್ತಿಗೆ ಬಲಿಬೀಳದೆ, ಕನ್ನಡಿಗರು ಈ ಚಿಕ್ಕ ಹೊತ್ತಿಗೆಯ ಉಪಯೋಗ ಮಾಡಿಕೊಳ್ಳುವರೆಂದು ಹಾರೈಸುವೆ ಎಂದಿದ್ದಾರೆ. ‘ಮೃತ್ಯುಂಜಯ’ ಗ್ರಂಥದಲ್ಲಿ ಪ್ರಕಟಪಡಿಸಿದ ಬೈಬಲ್ ಗ್ರಂಥದ ಬಗೆಗಿನ ಅವರ ಜ್ಞಾನ ಬೆರಗುಗೊಳಿಸುವಂತಹದ್ದಾಗಿದೆ. ಬೈಬಲ್ ಗ್ರಂಥವನ್ನು ಅತ್ಯಂತ ಸೂಕ್ಷ್ಮದೃಷ್ಟಿಯಿಂದ ವೀಕ್ಷಿಸಿ ಅಲ್ಲಿ ಸೂತ್ರರೂಪದಲ್ಲಿ ನಿರೂಪಿಸಲ್ಪಟ್ಟ ಕ್ರಿಸ್ತನ ಚರಿತ್ರೆಯನ್ನು ಸ್ಪಷ್ಟವಾಗಿ ತೋರುವಂತೆ ಈ ಗ್ರಂಥದಲ್ಲಿ ಚಿತ್ರಿಸಿರುವರು. ಇಲ್ಲಿ ಕ್ರಿಸ್ತನು ಉತ್ತಂಗಿಯವರ ಹಸ್ತದಿಂದ ರೇಖಾಚಿತ್ರದಲ್ಲಿ ಬರೆಯಲ್ಪಟ್ಟಿಲ್ಲ-ವರ್ಣಚಿತ್ರದಲ್ಲಿ ತೋರಿಸಲ್ಪಟ್ಟಿದ್ದಾನೆ. ನಾನು ಪೌರಾತ್ಯನಂತೆ ಯೇಸುಕ್ರಿಸ್ತನನ್ನು ಆರಾಧಿಸಬೇಕಾದರೆ ನನಗೆ ಇರುವುದೊಂದೇ ಮಾರ್ಗ: ಅದೇ ಅವನನ್ನು ದೇವರಂತೆ ಮಾತ್ರ ಪೂಜಿಸಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿರುವಂತೆ, ಆ ದೇವಪುರುಷನಾದ ಯೇಸುಕ್ರಿಸ್ತನ ಬಗೆಗೆ ಉತ್ತಂಗಿಯವರು ಮನಮುಟ್ಟುವಂತೆ ವರ್ಣಿಸಿರುವರು. ‘ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ’ ಗ್ರಂಥದಲ್ಲಿ ವರ್ಣಿತನಾದ ಯೇಸುಕ್ರಿಸ್ತನ ಬಗೆಗೆ ಶ್ರೀ ಹುರಳಿಯವರು ತಳೆದ ಅಭಿಪ್ರಾಯವು ಉತ್ತಂಗಿಯವರ ಅದೇ ವ್ಯಕ್ತಿಯನ್ನು ಕುರಿತ ದ್ವಿತೀಯ ಗ್ರಂಥ ‘ಮೃತ್ಯುಂಜಯ’ದ ಬಗೆಗೂ ಒಪ್ಪವಾಗಿ ತೋರುತ್ತದೆ. ಕನ್ನಡದಲ್ಲಿ ಕ್ರೈಸ್ತಧರ್ಮದ ಮೇಲೆ ಸಾಕಷ್ಟು ಗ್ರಂಥಗಳು ಬಂದಿವೆ. ಆದರೆ ಅವುಗಳಲ್ಲಿ ಯೇಸುಕ್ರಿಸ್ತನ ಜೀವನ ಚರಿತ್ರೆಯನ್ನು ಕುರಿತಾದ ಗ್ರಂಥಗಳ ಸಂಖ್ಯೆ ಬಹಳ ಕಡಿಮೆ. ಆ ದೃಷ್ಟಿಯಿಂದ ಪರಿಶೀಲಿಸಿದರೆ ಉತ್ತಂಗಿಯವರ ಈ ಎರಡು ಕೃತಿಗಳು ಯೇಸುಕ್ರಿಸ್ತನ ಜೀವನವನ್ನು ಅರಿತುಕೊಳ್ಳುವಲ್ಲಿ ಬಹು ಉಪಯುಕ್ತವಾಗಿವೆ. ಕನ್ನಡ ಸಾಹಿತ್ಯದಲ್ಲಿ ಸ್ಥಿರವಾಗಿ ನಿಲ್ಲಬಲ್ಲವುಗಳಾಗಿವೆ. ಹೀಗೆ ಈ ಎರಡು ಕೃತಿಗಳು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದವು.
ಕನ್ನಡ ಸಾಹಿತ್ಯ-ಸಂಸ್ಕøತಿಯ ಕೃತಿಗಳು : 
‘ಬಸವೇಶ್ವರನೂ ಕರ್ನಾಟಕದ ಅಭ್ಯುದಯವೂ’ ಕೃತಿಯಲ್ಲಿ ಜಗತ್ತಿನ ಇತಿಹಾಸದಲ್ಲಿ ಮಾನವರು ನಡೆಸಿದ ಯುದ್ಧದ ವಿಷಯವಿದ್ದರೆ, ‘ಬಸವೇಶ್ವರನೂ ಅಸ್ಪøಶ್ಯರ ಉದ್ಧಾರವೂ’ ಕೃತಿಯಲ್ಲಿ ನಮ್ಮ ದೇಶ ಹಾಗೂ ಸಮಾಜವನ್ನು ಭಿನ್ನ ವಿಭಿನ್ನಗೊಳಿಸಿರುವ ಜಾತಿ ಪದ್ಧತಿಯ ಧಾರುಣ ಕಥೆಯಿದೆ. ‘ಅನುಭವ ಮಂಟಪ’ ಕೃತಿಯಲ್ಲಿ ಅದರ ಐತಿಹಾಸಿಕತೆಯನ್ನು ಸಿದ್ಧಮಾಡಿ ತೋರಿಸಿದ್ದಾರೆ. ಡಿ.ಎಲ್. ನರಸಿಂಹಾಚಾರ್ ಅವರು ಸಿದ್ಧರಾಮನ ವೀರಶೈವತ್ವದ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿದಾಗ, ಸಿದ್ಧರಾಮ ಸಾಹಿತ್ಯ ಸಂಗ್ರಹ ಕೃತಿಯನ್ನು ಬರೆದು ಆತನ ವೀರಶೈವತ್ವವನ್ನು ಪ್ರತಿಷ್ಠಾಪಿಸಿದ್ದಾರೆ. ‘ಮೋಳಿಗೆಯಮಾರಯ್ಯ’ ಮತ್ತು ‘ರಾಣಿ ಮಹಾದೇವಿಯವರ ವಚನಗಳು’ ಕೃತಿಗಳಲ್ಲಿ ವಚನ ಸಾಹಿತ್ಯ ಸಂಗ್ರಹದ ಶುದ್ಧೀಕರಣ ಮತ್ತು ಸಂಶೋಧನ ಕಾರ್ಯ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದಾರೆ. ‘ಆದಯನ ವಚನಗಳು’ ಕೂಡ ಇದಕ್ಕೆ ಸಾಕ್ಷಿಯಾಗಿದೆ. 
ಉತ್ತಂಗಿಯವರ ಹೆಸರು ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗಿರುವುದು ಅವರ ಸರ್ವಜ್ಞನ ವಚನಗಳಿಂದ. ಸರ್ವಜ್ಞನ ಸಾಕ್ಷಾತ್ಕಾರಕ್ಕಾಗಿ ಅವರು ಪಟ್ಟ ಪಾಡು, ಪರಿಶ್ರಮ ಅಷ್ಟಿಷ್ಟಲ್ಲ. ತಮ್ಮ ಜೀವನವನ್ನು ಸರ್ವಜ್ಞನ ವಚನಗಳ ಸಂಗ್ರಹ ಕಾರ್ಯಕ್ಕಾಗಿ ಮುಡಿಪಿಟ್ಟು ಸರ್ವಜ್ಞ ಮೂರ್ತಿಯ ಸೇವೆ ಮಾಡಿದರು. ಉತ್ತಂಗಿಯವರ ಸತಿಪತಿ ಭಾವದ ಭಕ್ತಿಗೆ ಸರ್ವಜ್ಞನು ಪ್ರತ್ಯಕ್ಷನಾದನು. ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಕಲ್ಪವೃಕ್ಷವಾಗಿ ಕಾಣಿಸಿಕೊಂಡನು. ಕನ್ನಡದ ಕ್ರಾಂತಿ ಪುರುಷನೆಂಬ ಹೆಗ್ಗಳಿಕೆಗೆ ಪಾತ್ರನಾದ, ದೀನರ, ದಲಿತರ, ಬಿದ್ದವರ, ಅಸ್ಪøಶ್ಯರ ಕಹಳೆಯ ಧ್ವನಿಯಾಗಿ ಮೂಡಿ ಬಂದ ಸರ್ವಜ್ಞನನ್ನು ಕನ್ನಡ ಜಾನಪದದ ಆದಿ ಮಹಾಕವಿ ಎಂಬ ಪಟ್ಟಕ್ಕೇರಿಸಿದ ಕೀರ್ತಿ ಉತ್ತಂಗಿಯವರಿಗೆ ಸಲ್ಲುತ್ತದೆ. ಉತ್ತಂಗಿಯವರು ಸರ್ವಜ್ಞನಿಗೆ ಮರುಹುಟ್ಟು ಕೊಡದಿದ್ದರೆ, ಸರ್ವಜ್ಞ ಅಜ್ಞಾತನಾಗಿಯೇ ಉಳಿಯುತ್ತಿದ್ದನೇನೋ! ಆದ್ದರಿಂದಲೇ ಉತ್ತಂಗಿ ಹಾಗೂ ಸರ್ವಜ್ಞ ಒಂದೇ ಎಂಬ ಭಾವವನ್ನು ತಳೆದು ಉತ್ತಂಗಿಯವರಿಗೆ, ‘ಸರ್ವಜ್ಞ ಸಾಹಿತ್ಯ’, ‘ಅಭಿನವ ಸರ್ವಜ್ಞ’ ಎಂಬ ಅಭಿದಾನಗಳನ್ನು ನೀಡಿದೆ ಜನತೆ.
ಆ. ಉತ್ತಂಗಿ ಚನ್ನಪ್ಪರವರಿಗೆ ಬಯಸದೇ ಬಂದ ಭಾಗ್ಯ :
ಸದ್ದುಗದ್ಧಲವಿಲ್ಲದೆ ಉಪಯುಕ್ತವಾದ ಕೆಲಸ ಮಾಡುವುದು ಉತ್ತಂಗಿಯವರ ಹುಟ್ಟು ಗುಣ. ಅವರ ಮನಸ್ಸು ಅಂತರಮುಖಿಯಾದ ಒಂದು ಕಾಲಕ್ಕೆ, ಆತ್ಮಜ್ಞಾನ ಮಾಡಿಕೊಂಡು ಸದ್ದಿಲ್ಲದೆ ಒಂದು ದಿನ ಇಹಲೋಕವನ್ನು ತ್ಯಜಿಸಿಬಿಡಬೇಕೆಂಬ ನಿರ್ಧಾರಕ್ಕೂ ಬಂದಿದ್ದರು. ಹೀಗಾಗಿ ಸಮಾಜದಲ್ಲಿ ಯಾವತ್ತು ಉನ್ನತ ಪದವಿ ಅಥವಾ ಪುರಸ್ಕಾರಗಳಿಗಾಗಿ ಹಂಬಲಿಸಿದವರಲ್ಲ. ಭಾರತೀಯ ಕ್ರೈಸ್ತರನ್ನು ವಿದೇಶಿ ಮಿಶನರಿಗಳ ದಾಸ್ಯತ್ವದಿಂದ ಬಿಡಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಡಿಸುವುದಕ್ಕಾಗಿ ಹೋರಾಡುವ ಸಮಯದಲ್ಲಿ ಅನೇಕರು ಉತ್ತಂಗಿಯವರನ್ನು ಸ್ವಾರ್ಥಿಗಳೆಂದು ಮೂದಲಿಸಿದರು. ಅಲ್ಲದೆ ‘ರೆವರೆಂಡ್’ ಪದವಿ ಸಿಕ್ಕಿದಾಗ ಚನ್ನಪ್ಪನವರು ಅದನ್ನು ತೃಣ ಸಮಾನವೆಂದು ತಿರಸ್ಕರಿಸಿದರು. ಕರ್ತವ್ಯಪರರಾದ ಉತ್ತಂಗಿಯವರು ಯಾವುದೇ ತರದ ಗೌರವ, ಪ್ರತಿಷ್ಠೆಗಳಿಗಾಗಿ ಹಾತೊರೆದವರಲ್ಲ, ಕೀರ್ತಿಗಾಗಿ ಪರದಾಡಿದವರಲ್ಲ ಬದಲಿಗೆ ತಮ್ಮ ಕಾಯಕದಲ್ಲೇ ಕೈಲಾಸ ಸುಖವನ್ನು ಕಾಣಲೆತ್ನಿಸಿದವರು. ಸ್ವಲ್ಪ ತಡವಾದರೂ ಅವರು ಮಾಡಿದ ಸಾಹಿತ್ಯ ಸೇವೆ ಸಕಲ ಕನ್ನಡಿಗರ ಕಣ್ಣಿಗೆ ಒಡೆದು ತೋರುವಂತಾಯಿತು ಮತ್ತು ಅವರ ಪ್ರಶಂಸೆಗೂ ಕಾರಣವಾಯಿತು. ಅಂದಿನ ಜನತೆ ಉತ್ತಂಗಿಯವರನ್ನು ಹಾಡಿ ಹರಸುತ್ತಿದ್ದರು, ಕೀರ್ತಿ, ಗೌರವಗಳು ಅವರನ್ನು ಹಿಂಬಾಲಿಸಿದವು.
ಉತ್ತಂಗಿಯವರಿಗೆ 60 ವರ್ಷಗಳು ತುಂಬಿದಾಗ ತಮ್ಮ ಧರ್ಮೋಪದೇಶ ಹುದ್ಧೆಯಿಂದ ನಿವೃತ್ತರಾದಾಗ ಹುಬ್ಬಳ್ಳಿಯ ಪುರಜನರು ದಿನಾಂಕ 5.4.1942ರಂದು ರವಿವಾರ ಮುಂಬಾಯಿ ಸರಕಾರದ ಮಾಜಿ ಶಿಕ್ಷಣ ಮಂತ್ರಿಗಳಾದ ದಿವಾನ ಬಹದ್ದೂರ, ಸರ್. ಸಿದ್ಧಪ್ಪಕಂಬಳಿ ಇವರ ಅಧ್ಯಕ್ಷತೆಯಲ್ಲಿ ಉತ್ತಂಗಿಯವರ ಷಷ್ಠಿಪೂರ್ತಿಯ ಸಮಾರಂಭವನ್ನು ಏರ್ಪಾಡಿಸಿ, ಉತ್ತಂಗಿಯವರನ್ನು ಸನ್ಮಾನಿಸಲಾಯಿತು, ಸಮಾರಂಭದಲ್ಲಿ ಉತ್ತಂಗಿಯವರ ವಿವಿಧ ವ್ಯಕ್ತಿತ್ವಗಳನ್ನು ಕುರಿತು ಏಳು ಜನ ವಿದ್ವಾಂಸರು ಮಾತನಾಡಿ ಉತ್ತಂಗಿಯವರ ಅಭ್ಯಾಸಕ್ರಮ ಹಾಗೂ ಸಾಹಿತ್ಯ ಸೇವೆಗಳನ್ನು ಮುಕ್ತಕಂಠದಿಂದ ಹೊಗಳಿದರು. ಶ್ರೀಉತ್ತಂಗಿಯವರ ಸಾಹಿತ್ಯಸೇವೆ ಚಿರಸ್ಮರಣೀಯವಾದುದು, ಅವರು ಅನುಭವಿಸಿದ ಕಷ್ಟ, ಮಾಡಿದ ತ್ಯಾಗ ಮುಂತಾದವುಗಳನ್ನು ಯಾವ ಕನ್ನಡಿಗನೂ ಮರೆಯಲಾರ, ಎಂಬುದಾಗಿ ಶ್ರೀ ಮುದವೀಡು ಕೃಷ್ಣರಾಯರ ಗುಣಗಾನವಾದರೆ, ಉತ್ತಂಗಿಯವರ ಸರ್ವಜ್ಞನು ಸ್ವತಂತ್ರನಾದ ದೊಡ್ಡಕವಿ, ನಿರ್ಭೀತನು, ಅಂಥವನ ಕಾರ್ಯವನ್ನು ಕನ್ನಡಿಗರಿಗೆ ಉಣಬಡಿಸಿ, ಪಂಡಿತರು ತಲೆದೂಗುವಂತೆ ವ್ಯವಸ್ಥೆ ಮಾಡಿದ್ದಾರೆ ಶ್ರೀ ಉತ್ತಂಗಿಯವರು. ಇವರು 60 ವರ್ಷ ಬದುಕಿರುವುದೇ ಹೆಚ್ಚು, ಯಾಕೆಂದರೆ ಅವರ ಜೀವನದಲ್ಲಿ ಅವರು ಸಹಿಸಿದ ಕಷ್ಟನಷ್ಟಗಳು ಬಹಳಷ್ಟಿವೆ. ಎಂದು ಉತ್ತಂಗಿಯವರ ಸ್ವಚ್ಛಂದ ವ್ಯಕ್ತಿತ್ವವನ್ನು ಶ್ರೀ ಬೇಂದ್ರೆಯವರು ಬಣ್ಣಿಸಿರುವುದನ್ನು ನಾವು ಗಮನಿಸಬಹುದು.
ಹೀಗೆ ಸಮಾರಂಭದಲ್ಲಿ ಘನವಿದ್ವಾಂಸರಿಂದ ಪ್ರಶಂಸಿಸಲ್ಪಟ್ಟು ಗೌರವಸ್ವೀಕೃತರಾದ ಉತ್ತಂಗಿಯವರು ಕೃತಜ್ಞತೆಗಳನ್ನು ಅರ್ಪಿಸುತಾ ಹೇಳಿದ ಮಾತುಗಳು ಅವರ ವಿನಯಭಾವವನ್ನು ಎತ್ತಿ ತೋರಿಸುತ್ತವೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಇದು ಅನುಪಮ ಮತ್ತು ಚಿರಸ್ಮರಣೀಯ ದಿನ. ಕ್ರಿಶ್ಚಿಯನ್ನರಲ್ಲಿ ಅನೇಕರು ಸಾಹಿತ್ಯ ಸೇವೆ ಮಾಡಿದ್ದುಂಟು ಆದರೆ ಅವರಿಗೆ ಬೇಕಾದ ಪ್ರೋತ್ಸಾಹ ಈ ಮೊದಲು ದೊರಕಿಲ್ಲ. ಈ ತರಹದ ಸಂಭಾವನೆ ದೊರತದ್ದು ಇದೇ ಮೊದಲು. ನನಗೆ ಕಂಠ ನೋವು ಇರುವುದರಿಂದ ನಾನು ಹೇಳುವುದನ್ನು ಸ್ವಲ್ಪದರಲ್ಲಿ ಹೇಳುತ್ತೇನೆ, ಸುದೈವವಶಾತ್ ಇಂದು ಯೇಸುಕ್ರಿಸ್ತನು ಉತ್ಥಾನವಾದ ದಿನ. ಕೊನೆಯ ರಾತ್ರಿ ಭೋಜನ ಸಮಾರಂಭದ ಕಾಲದಲ್ಲಿ ವಾಡಿಕೆಯಂತೆ ಪಾದಪೂಜೆ ಮಾಡಲು ಕರೆದಾಗ ಯೇಸುವಿನ ಶಿಷ್ಯರಾರೂ ಒಪ್ಪಲಿಲ್ಲ. ಆ ಸಂದರ್ಭ ಸ್ವತಃ ಯೇಸುಕ್ರಿಸ್ತನೇ ಶಿಷ್ಯರ ಪಾದಪೂಜೆ ಮಾಡಿ, ಶಿಷ್ಯರಿಗೆ ಉಪದೇಶ ಮಾಡಿದನು. ನಾನಾದರೂ ಒಬ್ಬ ಕ್ರೈಸ್ತ, ಕನ್ನಡ ಭಾಷಾವನಿತೆಯ ಪಾದಸೇವೆ ಮಾಡುವವರಲ್ಲೊಬ್ಬ. ಸರ್ವಜ್ಞನು ಸ್ವತಂತ್ರ ಕವಿ. ಅವನ ವಿಚಾರ ಸ್ವಾತಂತ್ರ್ಯವು ಅನುಪಮವಾದುದು. ಆ ಕವಿಯ ನೇರವಾದ, ಸ್ವಲ್ಪದರಲ್ಲಿಯೇ ಎಲ್ಲವನ್ನೂ ವಿವರಿಸುವಂತಹ ಅಗಾಧ ಪ್ರತಿಭೆ ಹಾಗೂ ಸ್ಪಷ್ಟೋಕ್ತಿಗೆ ನಾನು ಮರುಳಾದೆ. ಅವನಿಗಿಂತ ಹೆಚ್ಚಿನ ಕವಿ ನನಗೆ ದೊರಕಲಿಲ್ಲ. ಎಲ್ಲಾ ಕವಿಗಳು ಒಂದು ಗುಂಪು, ಸರ್ವಜ್ಞನೊಬ್ಬನೇ ಒಂದು. ಅವನ ಸಮಾನರು ಇನ್ನೊಬ್ಬರಿಲ್ಲ. ಎಂಬುದಾಗಿ ಸರ್ವಜ್ಞನ ವ್ಯಕ್ತಿತ್ವವನ್ನು ಗುಣಗಾನ ಮಾಡಿದ್ದಾರೆ. ಉತ್ತಂಗಿಯವರಿಗೆ ಕನ್ನಡದ ಜನತೆ ಅಪಾರ ಗೌರವವನ್ನು ಸಲ್ಲಿಸಿದೆ. ಅವರ ಅದ್ಭುತ ಕನ್ನಡ ಸೇವೆಯನ್ನು ಗುರುತಿಸಿ ಕೊಂಚ ತಡವಾದರೂ ಕ್ರಿಸ್ತಶಕ 1949ರಲ್ಲಿ ನಡೆದ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿ ಕನ್ನಡ ನಾಡು ತನ್ನನ್ನೇ ತಾನು ಗೌರವಿಸಿಕೊಂಡಿತು. 
ಈ ಮಹಾಸಮ್ಮೇಳನದಲ್ಲಿಯೇ ಉತ್ತಂಗಿಯವರು ಬಹಳ ವಿನಮ್ರದಿಂದ, ‘ತಿರುಳ್‍ಗನ್ನಡ ತಿರುಕ’ ಎಂದು ತಮ್ಮನ್ನು ತಾವು ಕರೆದುಕೊಂಡದ್ದು ಅವರ ವಿನಯಶೀಲತೆಗೆ ಹಿಡಿದ ಕನ್ನಡಿಯಾಗಿದೆ. ಅವರೇ ಹೀಗೆ ಹೇಳುತ್ತಾ ನಾನು ಮಾಡಿದ ಸೇವೆಯೆಂದರೆ ಸರ್ವಾಂಗ ಸುಂದರಿಯಾದ ಕನ್ನಡ ಸರಸ್ವತಿಯ ಹಾವುಗೆಯ ಮುರಿದ ಉಂಗುಷ್ಠವನ್ನು ಹೊಲಿದಿದ್ದು, ಏನೇ ಆದರೂ ನಾನು ಒಬ್ಬ ತಿರುಕ, ನೀವು ನನ್ನನ್ನು ಹೊಗಳಿ ವ್ಯಕ್ತಪಡಿಸಿದ ಸಮಾರಂಭ ಈ ತಿರುಕನನ್ನು ಸ್ವಪ್ನ ಲೋಕಕ್ಕೆ ಒಯ್ದಿದೆ. ಇದೂ ಕೂಡ ತಿರುಕನ ಕನಸಿನಂತೆಯೇ ಇದೆ ಎನ್ನುತ ಭಾವುಕರಾದ ಉತ್ತಂಗಿಯವರು ತಮ್ಮ ಕೊನೆಯ ಉಸಿರಿನವರೆಗೆ ಕನ್ನಡದ ಏಳ್ಗೆಗಾಗಿ ದೇಹ ಸವೆಯಿಸಿದ ಹಿರಿಯರು. ಇವರ ವ್ಯಕ್ತಿತ್ವ ಬಹುರೂಪಕ ಯಂತ್ರವಿದ್ದಂತೆ, ವೈವಿಧ್ಯಮಯವಾದುದು. ಇವರ ವಿನಯಕ್ಕೆ ಒಳಗಾದವರಿಲ್ಲ. ವಿದ್ವತ್ತಿಗೆ ಮಣಿಯದವರಿಲ್ಲ. ಸರಳ ಸಜ್ಜನಿಕೆಗೆ ಅವರನ್ನು ಮೀರಿದವರಿಲ್ಲ ಮತ್ತು ಅವರ ಸೇವೆಯನ್ನು ಸ್ಮರಿಸಿ ಮರೆಯುವಂತಿಲ್ಲ ಹೀಗೆ ಕನ್ನಡ ತಾಯಿಯ ಕುವರತೆಗೆ ಪಾತ್ರರಾದವರು ಉತ್ತಂಗಿ ಚನ್ನಪ್ಪನವರು. ಇವರು 28.08.1962ರಲ್ಲಿ ದೈವಾಧೀನರಾದರು.
-0--0--0-

ಶೂನ್ಯನಾಗು ನೀ ಎಂದ ಯೇಸು



ದಿನೇಶ್ ನಾಯಕ್, ಮಂಗಳೂರು  

ವಿಶ್ವದಾದ್ಯಂತ ಕ್ರಿಸ್‍ಮಸ್ ಅನ್ನು ಸಂಭ್ರಮದ ಸೆಕ್ಯುಲರ್ ಹಬ್ಬ ಎಂದು ಶುರುವಿನಿಂದಲೇ ಹೇಳುತ್ತ ಬರಲಾಗಿದೆ. ಯೇಸುವಿನ ಜೀವನದ ದಾಖಲೆಗಳಂತಿರುವ ಸುವಾರ್ತೆಗಳು ಆತನ ಹುಟ್ಟಿದ ದಿನದ ಬಗ್ಗೆ ನಿಖರವಾಗಿ ಏನನ್ನೂ ಹೇಳುವುದಿಲ್ಲ. ಆದರೆ ಕ್ರೈಸ್ತರ ಮೊದಲ ಪೆÇೀಪ್ ಜೂಲಿಯಸ್ 1 ಮೊದಲ ಬಾರಿಗೆ ಡಿಸೆಂಬರ್ 25 ಕ್ರಿಸ್‍ಮಸ್ ದಿನ ಎಂಬುದಾಗಿ ಹೇಳಿದ್ದರು. ವಿಗ್ರಹಾರಾಧನೆಯನ್ನು ಮಾಡುತ್ತಿದ್ದುದರಿಂದ ಕ್ರಿಸ್ತ ತತ್ತ್ವಪಾಲಕರ ಕಣ್ಣಲ್ಲಿ ಕ್ಷುದ್ರ ಧರ್ಮೀಯರೆನಿಸಿಕೊಂಡಿದ್ದ ಆ ಕಾಲದ ವಿಗ್ರಹಾರಾಧಕರ ಸಂಸ್ಕೃತಿಯಲ್ಲಿದ್ದ ಯೇಸುವಿನ ಹುಟ್ಟುಹಬ್ಬದ ಆಚರಣೆಯನ್ನು ಕ್ರಿಸ್ತೀಯಗೊಳಿಸುವ ಪ್ರಯತ್ನವಾಗಿ ಈ ದಿನವನ್ನು ಕ್ರಿಸ್‍ಮಸ್ ಹಬ್ಬವಾಗಿ ಮೊತ್ತ ಮೊದಲು 4ನೇ ಶತಮಾನದಲ್ಲಿ ಆಚರಿಸಲಾಯಿತು. 
ಹಾಗಾಗಿ ಕ್ರಿಸ್‍ಮಸ್ ಹಬ್ಬದ ಆಚರಣೆ ಎಂದರೆ ಒಂದು ಬಗೆಯಲ್ಲಿ ಕ್ರೈಸ್ತ, ಪೇಗನ್ (ವಿಗ್ರಹಾರಾಧಕ) ಮತ್ತು ಜನಪದ ಸಂಸ್ಕೃತಿ-ಪರಂಪರೆಗಳ ವಿಚಿತ್ರ ಸಂಗಮವಾಗಿದೆ. 17ನೆಯ ಶತಮಾನದ ಮಧ್ಯಭಾಗ ಮತ್ತು 18 ನೆಯ ಶತಮಾನದ ಆರಂಭದಲ್ಲಿ ರಾಣಿ ಎಲಿಜಬೆತ್ ಕಾಲಾವಧಿಯಲ್ಲಿ ಯೂರೋಪ್ ಮತ್ತು ಅಮೆರಿಕಗಳಲ್ಲಿ ಕಾಣಿಸಿಕೊಂಡ ಕ್ರಿಶ್ಚಿಯನ್ ಧರ್ಮಶುದ್ಧಿ ಚಳವಳಿಯ ಕಾರಣಕ್ಕಾಗಿ ಕ್ರಿಸ್ಮಸ್ ಆಚರಣೆಗೆ ನಿಷೇಧ ಹೇರಲಾಯಿತು. ನೈತಿಕ ಮಾರ್ಗದ ನಡೆ, ಸದಾ ಪ್ರಾರ್ಥನೆ ಮತ್ತು ಹೊಸ ಹೊಸಬಂಡಿಕೆಯ ತತ್ತ್ವಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಆಗ್ರಹಿಸುತ್ತಿದ್ದ ಈ ಧರ್ಮಶುದ್ಧಿವಾದಿಗಳು ಯೇಸುವಿನ ಜನ್ಮದಿನಾಂಕ ಸುವಾರ್ತೆಗಳಲ್ಲಿ ಖಚಿತವಾಗಿ ನಮೂದಾಗಿಲ್ಲದಿರುವುದರಿಂದ ಜನರು ಪೇಗನ್ ರೋಮನ್ ಸಂಸ್ಕೃತಿಯನ್ನು ಆಚರಣೆಯಲ್ಲಿ ತರುತ್ತಿದ್ದಾರೆ ಎಂದು ಭಾವಿಸಿ ಕ್ರಿಸ್ಮಸ್ ಆಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ಆದರೆ 19ನೆಯ ಶತಮಾನದ ಕೊನೆಯ ಭಾಗದಲ್ಲಿ ವಿಕ್ಟೋರಿಯನ್ ರಾಣಿಯ ಯುಗದಲ್ಲಿ ಮತ್ತೆ ಕ್ರಿಸ್ಮಸ್ ಸಂಭ್ರಮಾಚರಣೆಯ ದೊಡ್ಡ ವಾರ್ಷಿಕ ಹಬ್ಬವಾಯಿತು. 
ಮನುಷ್ಯ ಲೋಕದ ಚರಿತ್ರೆಯನ್ನು ತಿರುವಿ ಹಾಕಿದರೆ ಪ್ರಾಚೀನ ಮಾನವ ಕೆಲವೊಮ್ಮೆ ಹೊಸ ನಡೆ-ನುಡಿಯ, ಅಪರೂಪದ ವ್ಯಕ್ತಿತ್ವದ ಜನರ ಮಾತುಗಳಲ್ಲಿ ಪಾರಮಾರ್ಥಿಕ ಅರ್ಥ ಕಲ್ಪಿಸುತ್ತಾ ಅವರನ್ನೇ ಗುರುವಾಗಿ ಸ್ವೀಕರಿಸಿ, ಬದುಕಿನುದ್ದಕ್ಕೂ ಅವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂಥವರ ಬೆಂಬಲಕ್ಕೆ ದೊಡ್ಡ ಜನ ಸಮೂಹವೇ ಇರುತ್ತದೆ. ಇನ್ನು ಕೆಲವೊಮ್ಮೆ ತನಗಿಂತ ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುವ, ಹೊಸ ಭಾಷೆಯಲ್ಲಿ ಮಾತನಾಡುತ್ತ ಸ್ಥಿತಪ್ರಜ್ಞನಾಗಿ ನಿಗೂಢವೆಂಬಂತೆ ಕಾಣುವ ವ್ಯಕ್ತಿಯನ್ನು ಸಂಶಯದ ಕಣ್ಣಲ್ಲಿ ಕಂಡು, ಆ ವ್ಯಕ್ತಿಯ ಜೊತೆ ಅಂತರ ಕಾಯ್ದುಕೊಂಡು ನೋಡುವುದು ಮತ್ತು ಅವರ ಬಗೆಗೆ ಏನೇನೂ ತಿಳಿದುಕೊಳ್ಳಲಾಗದೇ ಅವರ ಸಾವಿನ ಬಳಿಕ ಆರಾಧಿಸುತ್ತಾ ಅವರ ಅಮರತ್ವವನ್ನು ಪ್ರತಿಷ್ಠಾಪಿಸುವ ಬಗೆಯನ್ನು ನಾವು ಕಾಣುತ್ತೇವೆ. 
ನಮ್ಮ ಬಸವಣ್ಣ, ಬುದ್ಧ ಮತ್ತು ಮಹಾವೀರರಿಗೆ ಜನರಿಂದ ಅಭೂತಪೂರ್ವ ಬೆಂಬಲ ದೊರೆತರೆ ದೂರದ ಮರುಭೂಮಿಯ ಕಥಾನಕದ ಯೇಸುವಿಗೆ ಪ್ರಾಯಶಃ ಅವರ ಪುನರುತ್ಥಾನÀ ಪೂರ್ವದ ಬದುಕಿನಲ್ಲಿ ಭಾರೀ ಜನ ಬೆಂಬಲ, ಸಹಕಾರ ದೊರೆಯದೇ ಅವರು ಶಿಲುಬೆಗೇರಬೇಕಾಗುತ್ತದೆ. ಹಾಗೆ ನೋಡಿದರೆ ಯೇಸುವಿಗೆ ಅನುಯಾಯಿಗಳಿದ್ದರು. ಆದರೆ ಅವರು ಸಂಖ್ಯೆಯಲ್ಲಿ ಬಹಳ ಕಡಿಮೆ ಇದ್ದರು. ವಾಸ್ತವದಲ್ಲಿ ಯೇಸು ಜನರೊಂದಿಗೆ ಬಾಳಿ ಬದುಕಲು ಬಂದ ಜನಪದೀಯನೇ ಆಗಿದ್ದರು. ಆದರೆ ಜನರು ಅವರನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗಿರಲಿಲ್ಲ. ಜನರ ಮತ್ತು ಅವರ ನಡುವೆ ಅಂತರವಿತ್ತು, ಕಂದರವಿತ್ತು. ಜನರು ಅವರ ಮಾತುಗಳನ್ನು ಅಪಾರ್ಥ ಮಾಡಿಕೊಂಂಡರು. ಯೇಸುವಿನ ಶಿಷ್ಯರೆನಿಸಿಕೊಂಡವರು ಹಲವಾರು ಸಂದರ್ಭಗಳಲ್ಲಿ ಅವರನ್ನು ಅತ್ಯಂತ ಬಾಲಿಶವಾಗಿ ಪ್ರಶ್ನಿಸಿದ್ದರು. “ದೇವರ ರಾಜ್ಯದಲ್ಲಿ ನಮ್ಮ ಸ್ಥಾನ ಯಾವುದು? ದೇವರ ಬಳಿ ನಾವು ಎಲ್ಲಿ ನಿಂತಿರುತ್ತೇವೆ? ನಮ್ಮ ಅಧಿಕಾರವೇನು?” ಹೀಗೆಲ್ಲ ಕೇಳುತ್ತಿದ್ದರು. ದೇವರ ರಾಜ್ಯವೆಂಬುದರ ಅರ್ಥ ಅವರಿಗಾಗಿರಲಿಲ್ಲ. ಹೀಗಾಗಿ ಯೇಸು ಜನರಿಗೆ ಮೋಕ್ಷದ ಹಾದಿಯನ್ನು ಹೇಳುತ್ತಾ ಹೋದರೂ, ಪ್ರೇಮದ ಸುಖವನ್ನು ತಿಳಿಸುತ್ತಾ ನಡೆದರೂ ಜನರ ಪ್ರೀತಿಯ ಬಂಧನದಲ್ಲಿ ಸಿಲುಕಲೇ ಇಲ್ಲ. 
ಪಾರಮಾರ್ಥಿಕತೆಯ ಅಂತಸ್ಸತ್ತ್ವದ ದೀರ್ಘ ಪರಂಪರೆಯನ್ನು ಹೊಂದಿದ್ದ ಪೂರ್ವದ ದೇಶಗಳಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ತನ್ನೊಳಗೆ ಆವಾಹಿಸಿಕೊಳ್ಳುವ ಸಲುವಾಗಿ ಗುರುವನ್ನು ಪಡೆಯಲು ಹವಣಿಸುವ ಜನಸಮೂಹಗಳು ಇದ್ದ ಬಗ್ಗೆಅನೇಕ ದಾರ್ಶನಿಕ ಪರಂಪರೆಗಳು ಹೇಳುತ್ತವೆ. ಆದರೆ ಯೇಸು ಬದುಕಿದ ಮರುಭೂಮಿಯ ದೇಶ ಕಾಲದಲ್ಲಿ ಈ ಬಗೆಯ ಚಾರಿತ್ರಿಕ ಸಂದರ್ಭಗಳೇ ಇರಲಿಲ್ಲ. ಹಾಗಾಗಿ ಅವರ ಪಾರಮಾರ್ಥಿಕ ತತ್ತ್ವಜ್ಞಾನದ ಆಳ ಅಗಲವನ್ನು ಆ ಕಾಲದಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನಗಳೇ ಸರಿಯಾಗಿ ಕಾಣುವುದಿಲ್ಲ. ಯೇಸುವಿನ ಗುರುತ್ವಕ್ಕೆ ಹಾತೊರೆಯುತ್ತ ಅದಕ್ಕೊಂದು ರುಜುತ್ವವನ್ನು ಒಪ್ಪಿಸಬಲ್ಲ ಗಟ್ಟಿ ಶಿಷ್ಯ ಪರಂಪರೆ ರೂಪುಗೊಂಡಿದ್ದೇ ಅವರ ಪುನರುತ್ಥಾನದ ಬಳಿಕ. 
ಸಾಮಾನ್ಯವಾಗಿ ತತ್ತ್ವಜ್ಞಾನದಲ್ಲಿ ಎರಡು ಬಗೆಯ ಚಿಂತನೆಗಳಿವೆ. ಒಂದು, ತರ್ಕಬದ್ಧ ಚಿಂತನೆಯಾದರೆ ಮತ್ತೊಂದು ಹೋಲಿಕೆಯ ಚಿಂತನೆ. ತರ್ಕಬದ್ಧ ಚಿಂತನೆ ಗಣಿತದ ಲೆಕ್ಕಾಚಾರದಂತೆ. ಇದು ಜನರಿಗೆ ಕೆಲವೊಮ್ಮೆ ಬೇಗ ಅರ್ಥವಾಗುತ್ತದೆ. ಆದರೆ ಹೋಲಿಕೆಯ ಚಿಂತನೆ ಇದಕ್ಕಿಂತ ಭಿನ್ನವಾಗಿದೆ. ಇದು ಒಂದು ರೀತಿಯಲ್ಲಿ ಕಾವ್ಯಮಯವಾಗಿದೆ. ಇದು ತರ್ಕದ ನೆಲೆಗೆ ನಿಲುಕದ್ದು. ಇದು ಎಲೆಕ್ಟ್ರಾನಿಕ್ ಚಲನೆಯಂತೆ. ನಮ್ಮ ಯೇಸು ಈ ರೀತಿಯ ಹೋಲಿಕೆಯೊಡನೆ ಮಾತನಾಡುತ್ತಿದ್ದರು. ಹಾಗೆ ನೋಡಿದರೆ ಪಾರಮಾರ್ಥಿಕ ಜ್ಞಾನದ ಮೂಲ ಇರುವುದೇ ಹೋಲಿಕೆಯ ವಿಶ್ವದಲ್ಲಿ. ಯೇಸು ಎಂದೂ ವಾದ ಮಾಡುತ್ತಿರಲಿಲ್ಲ. ತರ್ಕವನ್ನು ಮುಂದಿಡುತ್ತಿರಲಿಲ್ಲ. ನಿಜದಲ್ಲಿ ಯಾರಲ್ಲಿ ಮನುಷ್ಯ ನೋವಿಗೆ, ಮನುಷ್ಯನ ಕ್ಲೈಬ್ಯಕ್ಕೆ, ದೀನತನಕ್ಕೆ ಮರುಗುವ ಮಿಡಿಯುವ ಸಹಾನುಭೂತಿ ಇದೆಯೋ ಅವರಲ್ಲಿ ಮಾತ್ರ ಹೋಲಿಕೆಯ ಚಿಂತನೆ ಹುಟ್ಟಲು ಸಾಧ್ಯ. ಯೇಸು ಹೀಗೆ ಕಾಣಿಸಿಕೊಂಡವರು. ಅರಮನೆ ಇಲ್ಲದೆ ಗೋದಲಿಯಲ್ಲಿ ಹುಟ್ಟಿ, ಅಧಿಕಾರದ ಮಾನವನ್ನು ಹೊರದೆ, ಒಂದೆಡೆ ನಿಲ್ಲದೆ, ಜಂಗಮ ಜೀವನವನ್ನು ಬದುಕಿ ಪ್ರೀತಿಯ ಮೂಲಕ, ನಿರ್ಮೋಹದ ನೋಟದ ಮೂಲಕ ಮನುಷ್ಯರನ್ನು ತಲುಪ ಬಯಸಿದರು. ಇವರು ಗಾಢ ನೋವಿನ, ದುಃಖದ, ವಿರಹಗಳ ಬಲೆಯಲ್ಲಿ ಬಿದ್ದ, ಅಸಹಾಯಕತೆಯ ಮಡುವಿನಲ್ಲಿ ಬಿದ್ದು ತೊಳಲಾಡುತ್ತಿದ್ದ ಮನುಷ್ಯ ಲೋಕಕ್ಕೆ ಪರಿಹಾರವಾಗಿ ಅಪಾರ ಪ್ರೀತಿಯನ್ನು ಧಾರೆ ಎರೆದರು. ಭೂಮಿ ಮೇಲೆ ಕೆಳಗೆ ಇರುವುದೆಲ್ಲವೂ ನಶ್ವರ ಪ್ರೀತಿಯೊಂದೇ ಈಶ್ವರ, ಸತ್ಯವೊಂದೇ ಪರಮಾತ್ಮ ಎಂದು ತಿಳಿದು, ತನ್ನ ನೋವಿಗೆ ಮಮ್ಮಲ ಮರುಗದೆ ಜಗದ ಪಾಪಿಷ್ಟ ಜೀವರಾಶಿಯನ್ನು ಕ್ಷಮಿಸುವ ಔದಾರ್ಯ ತೋರಿದ ಇವರನ್ನು ಆಗಿನ ಧರ್ಮಾಧಿಕಾರಿಗಳು ಧರ್ಮಭಂಜಕರೆಂದೂ, ದಂಗೆಕೋರನೆಂದೂ ಭಾವಿಸಿದರು. ಮಾನವ ಬದುಕನ್ನು ಸಂಘಟಿಸುವ ಸ್ಥಿರ ನಿಯಮಗಳ ನಶ್ವರತೆಯನ್ನು ವಿಮರ್ಶಿಸುವ ಪ್ರಯತ್ನದಲ್ಲಿ ರಾಜ್ಯದ್ರೋಹ ಮತ್ತು ಧರ್ಮದ್ರೋಹದ ಆಪಾದನೆಯನ್ನು ಎದುರಿಸಿದರೂ ಅನ್ಯಾಯದ ವಿರುದ್ಧ ನ್ಯಾಯವನ್ನು, ಅನೈತಿಕತೆಯ ವಿರುದ್ಧ ನೈತಿಕತೆಯನ್ನು ಹಾಗೂ ಹಿಂಸೆಯ ವಿರುದ್ಧ ಅಹಿಂಸೆಯ ಹೊಸ ಭಾಷೆಯನ್ನು ಜಗತ್ತಿಗೆ ಸಾರಿದ ಒಬ್ಬ ತತ್ತ್ವಪದಕಾರ ಈ ಯೇಸು. 
ಬೆಟ್ಟದ ಮೇಲಿನ ತಮ್ಮ ದೀರ್ಘ ಮಾತುಗಳಲ್ಲಿ ಅವರು ಮತ್ತೆ ಮತ್ತೆ ಪರಿಧಿಗೆ ಸರಿದ ಜನರಿಗೆ, ದುಃಖಿತರಿಗೆ, ರೋಗಿಗಳಿಗೆ, ಅಸಹಾಯಕರಿಗೆ ಆತ್ಮವಿಶ್ವಾಸವನ್ನು ತುಂಬುವ ಅಮೃತ ಮಾತುಗಳನ್ನು ಧಾರೆ ಎರೆದರು. ಮನುಷ್ಯ ತನ್ನ ಬದುಕಿನಲ್ಲಿ ಎದುರಾಗುವ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ತನ್ನ ಪಾಪದ, ಅಹಂಕಾರದ ಹಲ್ಲುಗಳನ್ನು ತೊರೆದು ಹದವಾಗಿ, ಸಂಯಮಿಯಾಗಿ, ತನ್ನನ್ನು ನಿಯಂತ್ರಿಸುವ ಮೂಲಕ ತನ್ನನ್ನು ತಾನೇ ಆಳಲು ಸಮರ್ಥನಾದರೆ ಅದುವೇ ಮೋಕ್ಷದ ಪರಮ ಹಾದಿ ಎಂದು ಹೇಳಲೆತ್ನಿಸಿದ ಇವರ ಮಾತುಗಳನ್ನು ಇಂದಿನ ನಮ್ಮ ಅಹಂಕಾರದ ರಾಜಕಾರಣಕ್ಕೆ ಮತ್ತು ಅಧಿಕಾರಶಾಹಿ ದರ್ಪಕ್ಕೆ ಅಹಂಕಾರ ನಿರಸನದ ಮತ್ತು ಅಧಿಕಾರ ನಿಗ್ರಹದ ಹೊಸ ಚಿಂತನೆಯಾಗಿ ಕಂಡುಕೊಳ್ಳಬೇಕಾಗಿದೆ. ಮನುಷ್ಯ ತನ್ನನ್ನು ತಾನು ವಿನಮ್ರನನ್ನಾಗಿಸಿಕೊಳ್ಳಬೇಕು, ವ್ಯಕ್ತಿ ತನ್ನನ್ನು ತಾನು ಶೂನ್ಯನನ್ನಾಗಿ ಮಾಡಿಕೊಳ್ಳಬೇಕು ಎಂದು ಮತ್ತೆ ಮತ್ತೆ ಸಾರಿ ಸಾರಿ ಹೇಳಿದ ಯೇಸು ನಿಜ ಅರ್ಥದಲ್ಲಿ ತತ್ತ್ವಜ್ಞಾನಿಯೇ. 
ಈ ಹಿನ್ನೆಲೆಯಲ್ಲಿ ಯೇಸು ಅಂದು ಹೇಳಿದ ಮಾತುಗಳನ್ನು ನಾವು ಮರುನೆನಪಿಸುತ್ತಾ ನಮ್ಮ ನಡೆ-ನಡಾವಳಿಯನ್ನು, ನಮ್ಮ ರಾಜಕಾರಣದ ನಡೆಯನ್ನು ಶುದ್ಧಗೊಳಿಸುತ್ತಾ ಸಮಾಜವನ್ನು, ರಾಷ್ಟ್ರವನ್ನು ಮರುಸಂಘಟಿಸಬೇಕಾಗಿದೆ ಮತ್ತು ಇದಕ್ಕೆ ಯೇಸುವಿನ ಮಾತುಗಳು ನಮಗೆ ದಾರಿದೀಪ ಮತ್ತು ನೈತಿಕ ಸ್ಥೈರ್ಯವನ್ನು ತುಂಬಲಿದೆ. 

-0--0--0--0--0--0-

Saturday, 8 February 2020

ಯೇಸುಸ್ವಾಮಿ ಕುಟುಂಬ ಸಂತ್ರಸ್ತ ವಲಸೆ ಕುಟುಂಬ?


ಎಫ್.ಎಂ. ನಂದಗಾವ್
ನಮ್ಮ ದೇಶದಾದ್ಯಂತ ಈಗ ಎಲ್ಲಿ ನೋಡಿದಲ್ಲಿ, ಮುದ್ರಣ ಮಾಧ್ಯಮಗಳಲ್ಲಿ, ದೂರದರ್ಶನ ವಾಹಿನಿಗಳಲ್ಲಿ, ಸಾಮಾಜಿಕ ತಾಣಗಳಲ್ಲಿ, ಈಗ ಪೌರತ್ವ ತಿದ್ದುಪಡಿ ಕಾಯ್ದೆಯದ್ದೇ (ಸಿಟಿಜನ್ ಅಮೆಂಡಮೆಂಟ್ ಆಕ್ಟ್) ಚರ್ಚೆ, ಕಾವು. ಎಲ್ಲೆಲ್ಲೂ ಪ್ರತಿಭಟನೆ ಜೋರಾಗಿದೆ. ಅಕ್ರಮ ವಲಸಿಗರ ತಡೆಗಾಗಿ ಕೇಂದ್ರ ಸರ್ಕಾರ ಪೌರತ್ವ ಕಾಯಿದೆಗೆ ಮಾಡಿರುವ ಹೊಸ ತಿದ್ದುಪಡಿಯ ಬಗ್ಗೆ ಒಂದುಕಡೆ ಟೀಕೆಗಳ ಮಹಾಪೂರವೇ ಹರಿದುಬರುತ್ತಿದ್ದರೆ, ಇನ್ನೊಂದೆಡೆ ಅದಕ್ಕೆ ಪ್ರತಿಯಾಗಿ ಅಧಿಕಾರಾರೂಢ ಪಕ್ಷದ ಸಚಿವರೊಂದಿಗೆ, ಆ ಪಕ್ಷದ ಕಾರ್ಯಕರ್ತರು ಅದರ ಸಮರ್ಥನೆಗೆ ನಿಂತಿದ್ದಾರೆ.
ನಮ್ಮ ದೇಶವು ಈಗ ಸ್ವಾತಂತ್ರದ ನಂತರದಲ್ಲಿ ಯಾವ ಕಾಲದಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಅನುಭವಿಸದ ಸಂಕಷ್ಟಗಳನ್ನು ಎದುರಿಸುತ್ತಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ಹೆಚ್ಚಾಗುತ್ತಿವೆ. ಬಡವ ಬಲ್ಲಿ ದರ ಅಂತರ ಹೆಚ್ಚುತ್ತಿದೆ, ದಲಿತರು, ಆದಿವಾಸಿಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ, ಬಡವರ ಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗುತ್ತಿದೆ, ದೇಶದ ಆರ್ಥಿಕತೆ ಕುಂಠಿತಗೊಂಡಿದೆ, ಯುವಜನತೆ ಉದ್ಯೋಗದಿಂದ ವಂಚಿತರಾಗಿದ್ದಾರೆ, ಹೆಚ್ಚುತ್ತಿರುವ ಹಣದುಬ್ಬರದಿಂದ ಜನ ಕಂಗಾಲಾಗಿದ್ದಾರೆ. ಇವುಗಳ ಬಗೆಗೆ ಸೂಕ್ತ ಕ್ರಮ ಜರುಗಿಸದ ಸರ್ಕಾರ, ಈ ಪೌರತ್ವ ತಿದ್ದುಪಡಿ ಕಾಯಿದೆ ರಚಿಸಿ ದೇಶದ ಜನತೆಯ ಗಮನ ಬೇರೆಡೆಗೆ ಸೆಳೆದು ದಿಕ್ಕು ತಪ್ಪಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ತಿದ್ದುಪಡಿಯ ಪ್ರಕಾರ, ದೌರ್ಜನ್ಯಕ್ಕೊಳಗಾಗಿ ನೆರೆಯ ದೇಶಗಳಿಂದ ವಲಸೆ ಬರುವ ಮುಸ್ಲೀಂ ಧರ್ಮದವರು ಭಾರತದ ಪೌರತ್ವ ಪಡೆಯುವಂತಿಲ್ಲ. ಆದರೆ, ಹಿಂದೂ, ಜೈನ್, ಬೌದ್ಧ, ಪಾರ್ಸಿ, ಶಿಖ್ ಮತ್ತು ಕ್ರೈಸ್ತರು ಪೌರತ್ವ ಪಡೆಯಬಹುದಾಗಿದೆ. ನಮ್ಮ ಸಂವಿಧಾನ ಸಾರುವ ಪ್ರಕಾರ ನಮ್ಮದು ಸಕಲ ಧರ್ಮದವರನ್ನು ಸಮಾನವಾಗಿ ಕಾಣುವ ಧರ್ಮನಿರಪೇಕ್ಷ, ಜಾತ್ಯತೀತ ದೇಶ. ಆದರೆ, ಸದ್ಯದ ಸರ್ಕಾರ ತಂದಿರುವ ತಿದ್ದುಪಡಿ, ಒಡೆದು ಆಳುತ್ತಿದ್ದ ಬ್ರಿಟಿಷರು ದೇಶದ ಇಬ್ಭಾಗಕ್ಕೆ ಬಿಜಾಂಕುರ ಮಾಡಿದಂತೆಯೇ ಧರ್ಮದ ಹೆಸರಿನಲ್ಲಿ ದೇಶದಲ್ಲಿನ ನಿವಾಸಿಗಳನ್ನು ಇಬ್ಭಾಗ ಮಾಡುತ್ತಿದೆ ಎಂಬ ಆರೋಪಿತ ಕೂಗು ದಿನೇದಿನೇ ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕ ಚರ್ಚೆಯಲ್ಲಿರುವ ಈ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಹಿಂಪಡೆಯುವುದೋ ಇಲ್ಲವೋ ಕಾಲ ನಿರ್ಣಯಿಸಲಿದೆ. 

ವಲಸಿಗರ ಪ್ರತಿಮೆಯಲ್ಲಿ ಯೇಸುಸ್ವಾಮಿ ಕುಟುಂಬ:
ಅನೇಕ ಅನಿವಾರ್ಯ ಕಾರಣಗಳಿಂದ ತಾಯ್ನೆಲವನ್ನು ತೊರೆದು ಪರದೇಶಕ್ಕೆ ವಲಸೆ ಹೋಗುವವರು ಅನುಭವಿಸುವ ಸಂಕಟ, ತಲ್ಲಣ ಮತ್ತು ತಳಮಳಗಳು ನಿಜಕ್ಕೂ ಅನುಭವಿಸಿದವರಿಗಷ್ಟೇ ಗೊತ್ತು. ಆ ಎಲ್ಲಾ ನೋವು ಬಿಕ್ಕಟ್ಟುಗಳನ್ನು ಪ್ರತಿಮಾ ರೂಪಕವಾಗಿ ಕೂಸು ಯೇಸುಸ್ವಾಮಿಯ ಕುಟುಂಬವು ನಿಲ್ಲುತ್ತದೆ ಎಂಬ ಭಾವ ಕ್ರೈಸ್ತ ಜಗತ್ತಿನಲ್ಲೆಲ್ಲಾ ಸುಳಿದಾಡುತ್ತಿದೆ. 
ಈಚೆಗೆ ಕಥೋಲಿಕ ಕ್ರೈಸ್ತರ ಪರಮೋಚ್ಚಗುರು ಪಾಪು ಸ್ವಾಮಿಗಳ (ಪೋಪರ) ಅಧಿಕೃತ ನೆಲೆಯಾದ ರೋಮ ಪಟ್ಟಣದ ವ್ಯಾಟಿಕನ್‍ನಲ್ಲಿ ಸ್ಥಾಪಿಸಿದ ಸಂತ್ರಸ್ತ ವಲಸಿಗರ ಸ್ಮರಣೆಯ `ಅರಿವಿಗೆ ಬಾರದ ದೇವದೂತರು’ (ಏಂಜಲ್ಸ್ ಅನ್ ಅವೇರ್) ಹೆಸರಿನ ಕಂಚಿನ ಪ್ರತಿಮೆ ಈ ಬಗೆಯ ಭಾವಕ್ಕೆ ಪುಟ ನೀಡಿದ್ದಂತೂ ಹೌದು. ಆ ವಲಸಿಗರ ಪ್ರತಿಮೆಯ ಗುಚ್ಛಿನಲ್ಲಿ ಯೇಸುಸ್ವಾಮಿಯ ಕುಟುಂಬವೂ ಸೇರಿಕೊಂಡಿದೆ. 
ನಾವು ಈಗ ಕಾಣುತ್ತಿರುವ ಇಂದಿನ ವಲಸೆ ಸಂತ್ರಸ್ತರಿಗೂ ಮತ್ತು ಈಜಿಪ್ಟಿಗೆ ವಲಸೆ ಹೋದ ಯೇಸುಸ್ವಾಮಿಯ ಪವಿತ್ರ ಕುಟುಂಬದೊಂದಿಗೆ ಮಾಡುವ ಈ ಹೋಲಿಕೆ ಸರಿಯೋ ತಪ್ಪೋ ಗೊತ್ತಿಲ್ಲ. 
ಎಂದಿನಂತೆ ಪ್ರಸಕ್ತ ಸಾಲಿನ (2019-2020) ಕಥೋಲಿಕ ಪೂಜಾ ಪಂಚಾಂಗದ ಪ್ರಕಾರ ಈಚೆಗೆ ಡಿಸೆಂಬರ 28ರಂದು `ಪಾವನ ಶಿಶುಗಳು, ರಕ್ತಸಾಕ್ಷಿಗಳು’ (ಫೀಸ್ಟ್ ಆಫ್ ಹೋಲಿ ಇನೊಸೆಂಟ್ಸ್) ಹಬ್ಬ ಆಚರಿಸಲಾಯಿತು. ಆಗ ಪೂಜಾವಿಧಿಯ ಸಂದರ್ಭದಲ್ಲಿ ಮತ್ತಾಯನ ಶುಭಸಂದೇಶದ ಎರಡನೇ ಅಧ್ಯಾಯದ 13-18ರ ಚರಣಗಳನ್ನು ಪಠಿಸಲಾಯಿತು.
ಪವಿತ್ರ ಬೈಬಲ್ಲಿನ ಹೊಸ ಒಡಂಬಡಿಕೆಯ ಮತ್ತಾಯನು ಬರೆದ ಶುಭಸಂದೇಶದಲ್ಲಿನ ಎರಡನೇ ಅಧ್ಯಾಯದ 13 ರಿಂದ 18ರವರೆಗಿನ ಚರಣಗಳು ಯೇಸುಸ್ವಾಮಿ ಕುಟುಂಬವು ಬಂಧು ಬಳಗವಿದ್ದರೂ ಅನಾಥವಾಗಿ ಈಜಿಪ್ತಿಗೆ ವಲಸೆ ಹೋಗುವ ಪ್ರಕರಣವನ್ನು ಚಿತ್ರಿಸಿದೆ. ಅಂತೆಯೇ, ಅಂದಿನ ದುರ್ಭರ ದಿನಗಳನ್ನು, ಅಧಿಕಾರಸ್ಥರ ದರ್ಪ, ಹಸುಗೂಸುಗಳ ಕೊಲೆ, ಸಂತ್ರಸ್ತರ ಗೋಳಾಟ ಮೊದಲಾದ ದುರಾಡಳಿತಗಳನ್ನು ಆ ಚರಣಗಳು ಚಿತ್ರಿಸಿವೆ.
ಈಜಿಪ್ಟಿಗೆ ಪಲಾಯನಗೈದ ಪವಿತ್ರಕುಟುಂಬ : 
ಜ್ಯೋತಿಷಿಗಳು ಹೊರಟುಹೋದ ಮೇಲೆ ದೇವದೂತರು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು `ಏಳು, ಎದ್ದೇಳು. ಹೆರೋದನು ಮಗುವನ್ನು ಕೊಂದು ಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವತನಕ ಅಲ್ಲೇ ಇರು’ ಎಂದನು. ಅದರಂತೆ, ಜೋಸೆಫನು ಕೂಡಲೇ ಎದ್ದು ಮಗುವನ್ನೂ ತಾಯಿಯನ್ನೂ ರಾತ್ರೋರಾತ್ರಿಯಲ್ಲೇ ಕರೆದುಕೊಂಡು ಈಜಿಪ್ಟಿಗೆ ತೆರಳಿದನು. ಹೆರೋದನು ಸಾಯುವ ತನಕ ಅಲ್ಲೇ ಇದ್ದನು. ಈ ಪ್ರಕಾರ, `ಈಜಿಪ್ಟ ದೇಶದಿಂದ ನನ್ನ ಕುಮಾರನನ್ನು ಕರೆದನು’ ಎಂದು ಪ್ರವಾದಿಯ ಮುಖಾಂತರ ಸರ್ವೇಶ್ವರನು ಹೇಳಿದ್ದ ಪ್ರವಚನ ಈಡೇರಿತು.
ಹಸುಗೂಸುಗಳ ಕಗ್ಗೊಲೆ :
 ಜ್ಯೋತಿಷಿಗಳಿಂದ ತಾನು ವಂಚಿತನಾದೆನೆಂದು ಅರಿತ ಹೆರೋದನು ರೋಷಾವೇಶÀಗೊಂಡನು. ಬೆತ್ಲೆಹೇಮಿಗೂ ಅದರ ಸುತ್ತಮುತ್ತಲಿಗೂ ಆಳುಗಳನ್ನು ಕಳುಹಿಸಿದನು. ತಾನು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಕಾಲದ ಆಧಾರದ ಮೇಲೆ ಅಲ್ಲದ್ದ, ಎರಡು ವರ್ಷಗಳಿಗೆ ಮೀರದ, ಎಲ್ಲಾ ಗಂಡುಮಕ್ಕಳನ್ನು ಕೊಂದುಹಾಕಿಸಿದನು. `ಕೇಳಿಬರುತಿದೆ ರಮಾ ಊರಿನೊಳು ರೋದನ, ಗೋಳಾಟ ಅಘೋರ, ಆಕ್ರಂದನ; ಕಳೆದುಕೊಂಡ ಮಕ್ಕಳಿಗಾಗಿ ಗೋಳಿಡುತಿಹಳು ರಾಖೇಲಳು, ಇನ್ನಿಲದವುಗಳಿಗಾಗಿ ಉಪಶಮನ ಒಲ್ಲೆನುತಿಹಳು’. ಪ್ರವಾದಿ ಯೆರೇಮೀಯನ ಈ ಪ್ರವಚನಅಂದು ಸತ್ಯವಾಯಿತು.
ಮತ್ತಾಯನ ಶುಭಸಂದೇಶ ಸಾರುವ ಪ್ರಕಾರ, ಎರಡು ಸಾವಿರ ವರ್ಷಗಳ ಹಿಂದೆ ಬೆತ್ಲೆಹೇಮಿ£ Àಕುಟುಂಬವೊಂದು, ಅಂದರೆ ಪ್ರಭುಯೇಸುಸ್ವಾಮಿಯ ಕುಟುಂಬ ಅಂದಿನ ಆಡಳಿತಗಾರರ ಆಕ್ರೋಶದಿಂದ, ದೌರ್ಜನ್ಯದಿಂದ ಪಾರಾಗಲು ತಮ್ಮ ತಾಯ್ನಾಡನ್ನು ಬಿಟ್ಟು ಈಜಿಪ್ಟಿಗೆ ಪಲಾಯನ ಮಾಡಿತು. ಅಂದಿನ ಆ ದುರಾದೃಷ್ಟ ಕುಟುಂಬದ ಸ್ಥಿತಿಯೂ ಹೆಚ್ಚುಕಡಿಮೆ ಇಂದಿನ ಆಧುನಿಕಕಾಲದಲ್ಲಿನ ವಲಸೆ ಸಂತ್ರಸ್ತರ ಸ್ಥಿತಿಯನ್ನೇ ಹೋಲುತ್ತದೆ.
 ವಲಸೆ ಸಂತ್ರಸ್ತರುಯಾರು?:
ವಿಶ್ವಸಂಸ್ಥೆಯು ಸಂತ್ರಸ್ತ ವಲಸೆಗಾರರನ್ನು ಈ ರೀತಿಯಲ್ಲಿ ವ್ಯಾಖ್ಯಾನಿಸಿದೆ. ಹಿಂಸೆ, ಯುದ್ಧ ಹಾಗೂ ಕಿರುಕುಳದ ದೆಸೆಯಿಂದ ಅನಿವಾರ್ಯವಾಗಿ ತಮ್ಮ ತಾಯಿನಾಡನ್ನು ತೊರೆದು ಬರುವವರು ವಲಸೆ ಸಂತ್ರಸ್ತರು. ಸಂತ್ರಸ್ತ ವಲಸೆಗಾರರು ಜಾತಿ, ಮತಧರ್ಮ, ರಾಷ್ಟ್ರೀಯತೆ, ರಾಜಕೀಯ ಭಿನ್ನಾಭಿಪ್ರಾಯ, ಒಂದು ನಿರ್ದಿಷ್ಟ ಸಾಮಾಜಿಕ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ಕಿರುಕುಳದ ಭೀತಿ ಹೊಂದಿರುತ್ತಾರೆ.
ಶುಭಸಂದೇಶಕರ್ತ ಮತ್ತಾಯನು ವಿವರಿಸುವ ಪ್ರಕಾರ, ಒಂದು ಸಾಮಾಜಿಕ ಸಮುದಾಯಕ್ಕೆ ಸೇರಿದ ಯೇಸುಸ್ವಾಮಿಯ ಪವಿತ್ರಕುಟುಂಬವು, ಒಬ್ಬ ಕ್ರೂರ ಆಡಳಿತಗಾರರನ ದುಷ್ಟತನಕ್ಕೆ ಹೆದರಿ ಪಲಾಯನದ ಮಾರ್ಗ ಹಿಡಿದಿತ್ತು. ಕೂಸು ಯೇಸುಸ್ವಾಮಿಯೊಂದಿಗೆ ಈಜಿಪ್ಟಿಗೆ ಪಲಾಯನ ಮಾಡುವಾಗ ತಂದೆ ಜೋಸೆಫ್ ಮತ್ತು ತಾಯಿ ಮರಿಯ ಅಧಿüಕೃತವಾಗಿ ತಮ್ಮನ್ನು ತಾವು ಸಂತ್ರಸ್ತ ವಲಸೆಗಾರರು ಎಂದು ಘೋಷಿಸಿಕೊಂಡು ಎಲ್ಲಾದರೂ ಮನವಿ ಸಲ್ಲಿಸಿದ್ದರೆ? ಇದಕ್ಕೆ ಬಹುಶಃ ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ. 
ಅವರ ಕಾಲದಲ್ಲಿ, ಎರಡು ಸಾವಿರ ವರ್ಷಗಳ ಹಿಂದೆ. ಈ ಬಗೆಯ ಸಂತ್ರಸ್ತರ ವ್ಯಾಖ್ಯಾನಗಳು ಗಡಿ ಕಾನೂನುಗಳು ಜಾರಿಯಲ್ಲಿ ಇದ್ದಿರಲಿಕ್ಕಿಲ್ಲ. ಆ ಕಾಲದಲ್ಲಿ ದೇಶದೇಶಗಳ ನಡುವೆ ಗಡಿಯು ಇಂದಿನ ಕ್ರಮದಲ್ಲಿ ಕ್ರಮಬದ್ಧವಾಗಿ ಇದ್ದಿರಲಿಕ್ಕಿಲ್ಲ. ಒಂದಂತೂ ನಿಜ, ಪುರಾತನ ಇಜಿಪ್ಟ ದೇಶ ಕ್ರಿಸ್ತಶಕಪೂರ್ವ 30ರ ಸುಮಾರು ರೋಮನ್ ಚಕ್ರವರ್ತಿಗಳ ಆಡಳಿತಕ್ಕೆ ಒಳಪಟ್ಟಿತು. ಅದಕ್ಕೂ ಪೂರ್ವದಲ್ಲಿ ಅದು ಸ್ವತಂತ್ರ ದೇಶವಾಗಿಯೇ ಇತ್ತು. ಹೀಗಾಗಿ ಆ ಈಜಿಪ್ಟ ನಾಡು, ಹೆರೋದ ಅರಸನ ಆಡಳಿತವಿದ್ದ ಪ್ರದೇಶದ ಆಚೆ ಇದ್ದ ನಾಡು.
ಪಲಾಯನಕ್ಕೆ ಅನುಕೂಲಕರ ದೇಶ ಈಜಿಪ್ಟ:
ಪುರಾತನ ಈಜಿಪ್ಟ್ ದೇಶವು, ಆದಿಕಾಲದಿಂದಲೂ ಯೆಹೂದಿಗಳ ಪಾಲಿಗೆ ಪಲಾಯನಕ್ಕೆ ಅನುಕೂಲಕರವಾದ ಒಂದು ಸುರಕ್ಷಿತ ತಾಣವೇ ಆಗಿತ್ತು. ಇದನ್ನು ಬೈಬಲಿನ ಹಳೆಯ ಒಡಂಬಡಿಕೆಯ ಅರಸುಗಳು ಪುಸ್ತಕದಲ್ಲಿ ಕಾಣಬಹುದು. ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದಾಗ ಅವನು ತಪ್ಪಿಸಿಕೊಂಡು, ಈಜಿಪ್ಟಿನ ಅರಸ ಶೀಸಕನ ಬಳಿಗೆ ಹೋಗಿ, ಸೊಲೊಮೋನನು ಜೀವದಿಂದಿರುವವರಿಗೆ ಅಲ್ಲಿಯೇ ಇದ್ದನು. (ಅರಸುಗಳು 1ನೇ ಪ್ರಕರಣ, 11ನೇ ಅಧ್ಯಾಯ 40ನೇ ಚರಣ).
ಈಜಿಪ್ಟಿನ ಪಲಾಯನದ ಇನ್ನೊಂದು  ಘಟನೆಯನ್ನು ಪ್ರವಾದಿ ಯೆರೆಮೀಯನ ಗ್ರಂಥದ 26ನೇ ಅಧ್ಯಾಯ 21 ನೇ ಚರಣ ದಾಖಲಿಸಿದೆ. ಅರಸ ಯೆಹೋಯಾಕೀಮನು ಅವನ ಎಲ್ಲ ವೀರಶೂರರು ಹಾಗೂ ನಾಯಕರು ಆ ಊರೀಯನ ಮಾತುಗಳನ್ನು ಕೇಳಿಸಿಕೊಂಡರು. ಕೂಡಲೆ ಅರಸ ಅವನನ್ನು ಕೊಂದುಹಾಕಲು ಮನಸ್ಸು ಮಾಡಿದ. ಈ ಸುದ್ದಿಯನ್ನು ಕೇಳಿದ ಊರೀಯ ಭಯಪಟ್ಟು ಓಡಿಹೋಗಿ ಈಜಿಪ್ಟನ್ನು ಸೇರಿಕೊಂಡ.
ಮಕ್ಕಬಿಯರ ಕಾಲದಲ್ಲೂ ಪ್ರಧಾನಯಾಜಕ ನಾಲ್ಕನೇ ಓನೀಯನು ಆಶ್ರಯ ಅರಸಿಕೊಂಡು ಈಜಿಪ್ಟಿಗೆ ಓಡಿಹೋಗಿದ್ದನ್ನು ಗಮನಿಸಬಹುದು.
ಆದಿಕಾಂಡದಲ್ಲಿ ಮೊದಲ ಬಾರಿ (37ನೇ ಅಧ್ಯಾಯ) ಯಕೋಬನ ಮಕ್ಕಳಾದ ಜೋಸೆಫ್ ಮತ್ತು ಸೋದರರ ಚರಿತ್ರೆಯಲ್ಲಿ ಈಜಿಪ್ಟಿನ ಪ್ರಸ್ತಾಪವಾಗಿದೆ. ಕನಸುಗಾರ ಜೋಸೆಫ್ ನನ್ನು ಸಾಯಿಸಲು ಉದ್ದೇಶಿಸಿದ ಸೋದರರು ಅವನನ್ನು ಈಜಿಪ್ಟಿಗೆ ಹೊರಟಿದ್ದ ವ್ಯಾಪಾರಿಗಳಿಗೆ ಮಾರಿಬಿಡುತ್ತಾರೆ. ಮುಂದೆ ಆತ ಈಜಿಪ್ಟಿನ ಅರಸರ ಆಸ್ಥಾನದಲ್ಲಿ ಉನ್ನತ ಸ್ಥಾನದಲ್ಲಿದ್ದಾಗ, ತಮ್ಮ ನಾಡಿನಲ್ಲಿನ ಬರಗಾಲದಿಂದ ಬೆಂದ ಅವನ ಸೋದರರು ಅಲ್ಲಿಗೆ ತೆರಳುತ್ತಾರೆ. ಮುಂದೆ ಯೆಹೂದಿಗಳು ಅಲ್ಲಿ ಈಜಿಪ್ಟಿನ ಜನರ ಗುಲಾಮರಾಗುತ್ತಾರೆ. ತಲೆಮಾರುಗಳ ನಂತರ ಪ್ರವಾದಿ ಮೋಶೆಯ ಕಾಲದಲ್ಲಿ ಅವರಿಗೆ ಬಿಡುಗಡೆ ಸಿಗುತ್ತದೆ. 
ದೇವದೂತನ ಪ್ರಕಾರವೂ ಇದು ವಲಸೆ ಸಂತ್ರಸ್ತ ಕುಟುಂಬ:
ಅಧಿಕಾರಸ್ಥರ ಕಿರುಕುಳದ ಭಯದಿಂದಲೇ ಶಿಶು ಯೇಸುಸ್ವಾಮಿ ಅವರ ಕುಟುಂಬ, ತಮ್ಮ ನಾಡನ್ನು ಬಿಟ್ಟು ಪರದೇಶಕ್ಕೆ ವಲಸೆ ಹೋಗಬೇಕಾಯಿತು.
ಜೋತಿಷಿಗಳು ಹೊರಟು ಹೋದ ಮೇಲೆ ದೇವದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, `ಏಳು, ಹೆರೋದನು ಮಗುವನ್ನು ಕೊಂದು ಹಾಕಲು ಹವಣಿಸುತ್ತಿದ್ದಾನೆ. ಮಗುವನ್ನು ತಾಯಿಯನ್ನು ಕರೆದುಕೊಂಡು ಈಜಿಪ್ಟ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವತನಕ ಅಲ್ಲೇ ಇರು’ ಎಂದರು. (ಮತ್ತಾಯ 2ನೆಯ ಅಧ್ಯಾಯ, 13ನೆಯ ವಚನ)
ಇಲ್ಲಿ, ಪವಿತ್ರ ಬೈಬಲ್ಲಿನ ಹೊಸ ಒಡಂಬಡಿಕೆಯ ಮತ್ತಾಯನ ಶುಭಸಂದೇಶದ ಅನುವಾದದಲ್ಲಿ `ಓಡಿಹೋಗು’ ಎನ್ನುವ ಪದವನ್ನು ಇಂಗ್ಲಿಷ ಭಾಷೆಯ `ಫ್ಲೀ’ ಪದಕ್ಕೆ ಸಂವಾದಿಯಾಗಿ ಬಳಸಲಾಗಿದೆ. ಇದೇ `ಫ್ಲೀ’ ಪದ `ವಲಸೆ ಸಂತ್ರಸ್ತ’ ಎಂಬ ಅರ್ಥದ `ರಿಫುಜಿ’ ಪದದ ಮೂಲ ಎನ್ನಲಾಗುತ್ತದೆ. ಮತ್ತಾಯನ ಶುಭಸಂದೇಶದಲ್ಲಿನ ದೇವದೂತ ಶಿಶು ಯೇಸುಸ್ವಾಮಿಯ ಕುಟುಂಬವನ್ನು ವಲಸೆ ಸಂತ್ರಸ್ತ ಕುಟುಂಬವೆಂದು ಗುರುತಿಸುತ್ತಾನೆ!
ಅಪರಿಚಿತನಾಗಿದ್ದೆ ಆಶ್ರಯಕೊಟ್ಟಿರಿ: 
ಮತ್ತಾಯನ ಶುಭಸಂದೇಶದ 25ನೆಯ ಅಧ್ಯಾಯ 35ನೇ ಚರಣದಿಂದ 45ನೇ ಚರಣದ ವರೆಗಿನ ಪಠ್ಯದಲ್ಲಿ `ಪರರ ಸೇವೆಯೆ ಪರಮಾತ್ಮನ ಸೇವೆ, ಅಪರಿಚತರಲ್ಲಿ ನನ್ನನ್ನು ಕಾಣಿರಿ’ ಎಂದು ಬೋಧಿಸಿರುವುದನ್ನು ಗುರುತಿಸಬಹುದು. 
 `ನಾನು ಹಸಿದಿದ್ದೆ, ನನಗೆ ಆಶ್ರಯಕೊಟ್ಟಿರಿ, ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ. ಅಪರಿಚಿತನಾಗಿದ್ದೆ, ನನಗೆ ಆಶ್ರಯಕೊಟ್ಟಿರಿ. ಬಟ್ಟೆಬರೆ ಇಲ್ಲದೇ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನ ಆರೈಕೆ ಮಾಡಿದಿರಿ. ಬಂಧಿ ಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ’.. ಈ ಮೊದಲಾದ ಮಾತುಗಳಿಂದ ಅಪರಿಚಿತರನ್ನು ಸತ್ಕರಿಸುವುದೂ ಕ್ರೈಸ್ತರ ಕರ್ತವ್ಯ ಎಂದು ತಿಳಿಸುತ್ತಾರೆ ಯೇಸು. 
ಅದರಂತೆಯೇ, ಪಾಪು ಸ್ವಾಮಿಗಳ ಅಧಿಕೃತ ನೆಲೆಯಾದ ರೋಮ ಪಟ್ಟಣದ ವ್ಯಾಟಿಕನ್‍ನಲ್ಲಿ ಕಳೆದ ವರ್ಷ ಸ್ಥಾಪಿಸಿದ ಸಂತ್ರಸ್ತ ವಲಸಿಗರ ಸ್ಮರಣೆಯ `ಅರಿವಿಗೆ ಬಾರದ ದೇವದೂತರು’ ಈ ಭಾವದ ಅಭಿವ್ಯಕ್ತಿ ಎನ್ನಬಹುದು. 
ಭಾರತದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಲಪಂಥೀಯ ವಿಚಾರಧಾರೆಯ ಆಡಳಿತ ಪಕ್ಷವು ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಟಿಜನ್ ಅಮೆಂಡಮೆಂಟ್ ಆಕ್ಟ್) ಕುರಿತಂತೆ ಭಾರತ ಮೂಲದ ಕ್ರೈಸ್ತರ ಪೌರ್ವಾತ್ಯ ಧರ್ಮಸಭೆಯ ಬಿಷಪರು, ದೇಶದ ಸಂವಿಧಾನಿಕ ತತ್ವಗಳಿಗೆ ಕುಂದು ಉಂಟಾಗಬಾರದು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರೆ, ಬೆಂಗಳೂರಿನ ಕಥೊಲಿಕ ಕ್ರೈಸ್ತ ಪಂಥದ ಮಹಾಧರ್ಮಾಧ್ಯಕ್ಷರು ಈ ನಿಟ್ಟಿನ ಧರ್ಮಾಧಾರಿತ ನಿಲುವು ತರವಲ್ಲ ಎಂದಿದ್ದಾರೆ.
ಸುಡಾನ, ಉಗಾಂಡ, ಸೊಮಾಲಿಯ, ಈಥಿಯೋಪಿಯ, ಎರಿಟ್ರಿಯ, ರವಾಂಡ, ಬುರುಂಡಿ, ಇರಾನ್, ಇರಾಕ್, ಅಫಘಾನಿಸ್ತಾನ, ಪಾಕಿಸ್ತಾನ, ಮೈನ್ಮಾರ (ಬರ್ಮಾ), ಬಂಗ್ಲಾ ಮೊದಲಾದ ದೇಶಗಳಲ್ಲಿನ ಅಲ್ಪಸಂಖ್ಯಾತರು ಧರ್ಮದ ಕಾರಣದಿಂದ ಮನೆಮಠಗಳನ್ನು ಬಿಟ್ಟು ತಮ್ಮತಮ್ಮ ದೇಶಗಳನ್ನು ತೊರೆದು ಸಂತ್ರಸ್ತರಾಗಿ ಸುರಕ್ಷಿತ ತಾಣಗಳನ್ನು ಅರಸಿ ತಮ್ಮ ನೆರೆಹೊರೆಯ ದೇಶಗಳಿಗೆ, ದೂರದ ಖಂಡಗಳಿಗೆ ವಲಸೆ ಹೋಗುತ್ತಿದ್ದಾರೆ. 
ಶಿಶು ಯೇಸುಸ್ವಾಮಿಯ ಪವಿತ್ರಕುಟುಂಬ ಎದುರಿಸಿದ ಸಂಕಷ್ಟಗಳನ್ನೇ ಇಂದಿನ ವಲಸೆ ಸಂತ್ರಸ್ತ ಕುಟುಂಬಗಳು ಎದುರಿಸುತ್ತಿವೆ. ತಂದೆತಾಯಿ ಎದುರಿನಲ್ಲಿಯೇ ಕಂದಮ್ಮಗಳನ್ನು ಕೊಲ್ಲಲಾಗುತ್ತಿದೆ. ಪುಟಾಣಿ ಮಕ್ಕಳ ಮುಂದೆಯೇ ಅವರ ತಂದೆ ತಾಯಿಗಳನ್ನು, ಪೋಷಕರನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗುತ್ತಿದೆ. ಈ ಅಮಾಯಕ ವಲಸೆ ಸಂತ್ರಸ್ತ ಕುಟುಂಬಗಳು ಒಂದು ಬಗೆಯಲ್ಲಿ ಪವಿತ್ರಕುಟುಂಬ ಎದುರಿಸಿದ ಪರಿಸ್ಥಿತಿಯಲ್ಲಿಯೆ ತೊಳಲಾಡುತ್ತಿವೆ. 
ಧರ್ಮದ ಹೆಸರಿನಲ್ಲಿ ದೌರ್ಜನ್ಯ ನಡೆಸಿ, ತಮಗೊಪ್ಪದ ಧರ್ಮದವರನ್ನು ಅಸಹನೆಯಿಂದ ಅವರ ನೆಲೆಗಳಿಂದ ಹೊರಗಟ್ಟುವ ಧೂರ್ತತನ ತೋರುವ, ಉಗ್ರಗಾಮಿ ಸಂಘಟನೆಗಳ, ಅಧಿಕಾರಸ್ಥ ಮತಾಂಧರ ಮನಃ ಪರಿವರ್ತನೆಯಾಗಬೇಕಿದೆ. ಇದೊಂದು ಈಗ ಜಾಗತಿಕ ಮಟ್ಟದ ಹೊಸ ಪಿಡುಗಿನ ರೂಪ ತಾಳುತ್ತಿದೆ. ಇಂತಹ ಸಂದರ್ಭದಲ್ಲಿ ಜಾತ್ಯತೀತ ನಿಲುವಿನ ಭಾರತ ಜಾತಿಮತದ ಆಧಾರದ ಮೇಲೆ ವಲಸಿಗರಲ್ಲಿ ತಾರತಮ್ಯ ಮಾಡುತ್ತಿರುವುದು ಪ್ರಜ್ಞಾವಂತರಲ್ಲಿ ತಳಮಳ ಮೂಡಿಸುತ್ತಿದೆ.

-0--0--0--0--0--0-

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...