Thursday, 13 February 2020

ಬದುಕು ಜಟಕಾಬಂಡಿ


ಅಜಯ್ ರಾಜ್, ಬೆಂಗಳೂರು

ಕ್ರಿಸ್ಮಸ್ ಹಬ್ಬಕ್ಕೆ ಇನ್ನು ಕೆಲವೇ ಗಂಟೆಗಳು ಉಳಿದಿದ್ದವು. ಊರಿನ ಬೀದಿಗಳು ಜಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಪ್ರತಿ ಮನೆಯಲ್ಲೂ ಹಬ್ಬದ ಸಡಗರ. ಪ್ಲಮ್ ಕೇಕು, ವೈನು ಹಾಗೂ ಇತರೆ ಕ್ರಿಸ್ಮಸ್ ತಿನಿಸುಗಳ ಘಮಲು ಊರಿನಾದ್ಯಂತ ಹಬ್ಬಿತ್ತು. ಇನ್ನು ಕೆಲವು ಮನೆಗಳಂತೂ ಆಗಲೇ ಅವರೆಕಾಯಿಯನ್ನು ಸುಲಿದು ಕಾಳನ್ನು ಮಧ್ಯಾಹ್ನವೇ ನೀರಿನಲ್ಲಿ ನೆನೆಸಿಟ್ಟು, ಹಿದುಕುಬೇಳೆ ಕೋಳಿ ಮಾಂಸದ ಸಾರು ಮಾಡುತ್ತಿದ್ದುದು ಗುಟ್ಟಾಗಿ ಉಳಿದಿರಲಿಲ್ಲ.
ಊರಿನ ಇಷ್ಟೆಲ್ಲಾ ಗಜಿಬಿಜಿಯ ನಡುವೆಯೂ ಚರ್ಚಿನ ಕೂಗಳತೆಯ ದೂರದಲ್ಲಿದ್ದ ಮೇರಮ್ಮನ ಮನೆಯಲ್ಲಿ ಮಾತ್ರ ನೀರವ ಮೌನ ಆವರಿಸಿಕೊಂಡಿತ್ತು. ಮನೆಯಲ್ಲಿನ ಲೈಟುಗಳನ್ನು ಆರಿಸಿ, ಮೊಂಬತ್ತಿಯ ದೀಪದ ಬೆಳಕಿನಲ್ಲಿ ಗೋಡೆಯಲ್ಲಿದ್ದ ಶಿಲುಬೆಗೆ ಮುಖ ಮಾಡಿಕೊಂಡು ಗಾಢವಾಗಿ ಯೋಚಿಸುತ್ತಿದ್ದ ಮೇರಮ್ಮನ ಮುಖದಲ್ಲಿ ಯಾವುದೇ ಭಾವನೆಗಳಿರಲಿಲ್ಲ. ಜೀವನ ಪೂರ್ತಿ ಗೇಯ್ದು ಬಹಳ ಜತನದಿಂದ ಮಕ್ಕಳನ್ನು ಸಲಹಿದ ಅವಳ ದೇಹವು ಹಣ್ಣಾಗಿ, ಕೃಶವಾಗಿತ್ತು. ಬದುಕಿನ ಚಾಟಿಯ ಹೊಡೆತಗಳಿಗೆ ಸಿಕ್ಕಿ ಜರ್ಜರಿತವಾಗಿದ್ದ ಮೇರಮ್ಮನ ಮೈಮನಗಳು ಬದುಕಿನಲ್ಲಿ ವಸಂತದ ಆಗಮನದ ಆಸೆಯನ್ನು ಕೈಚೆಲ್ಲಿ ವರ್ಷಗಳೇ ಸರಿದಿದ್ದವು.
ಹೀಗೆ ಸುಮಾರು ಹೊತ್ತು ತನ್ನ ಆಲೋಚನೆಗಳಲ್ಲಿ ಮುಳುಗಿದ್ದ ಮೇರಮ್ಮನನ್ನು ವಾಸ್ತವಕ್ಕೆ ಮರಳಿಸಿದ್ದು ಮಾತ್ರ ಚರ್ಚಿನ ಗಂಟೆಯ ಸದ್ದು. ಜೈಲಿನಲ್ಲಿದ್ದ ಮಗ ರಾಬರ್ಟನನ್ನು ಇಂದು ಸಂಧಿಸಿ ಬಂದಾಗಿನಿಂದ ಆಕೆಯ ಹೆಂಗರುಳು ಕ್ಷಣ ಕ್ಷಣಕ್ಕೂ ಪರಿತಾಪದಿಂದ ನಲುಗುತ್ತಿತ್ತು. ಇದೆಲ್ಲಾ ಅದೆಷ್ಟು ವೇಗವಾಗಿ ನನ್ನ ಕಣ್ಣಮುಂದೆಯೇ ನಡೆದುಹೋಯಿತು ಎನ್ನುಕೊಳ್ಳುತ್ತಿರುವಾಗಲೇ ಮೇರಮ್ಮನ ತಲೆಯಲ್ಲಿ ಮೂರು ತಿಂಗಳ ಹಿಂದೆ ನಡೆದ ಒಂದು ಘಟನೆ ಮತ್ತೆ ಮತ್ತೆ ಗುಂಗೀ ಹುಳದಂತೆ ಕೊರೆಯತೊಡಗಿತು.
-0-
ಅಂದು ಸಂಜೆ ಮೇರಮ್ಮ ಹಸುಗಳಿಗೆ ಹುಲ್ಲುತಂದು ಹಾಕಿ, ಹಾಲು ಕರೆದು, ಅವುಗಳನ್ನು ಮನೆಯ ಮುಂದಿನ ಗೂಟಕ್ಕೆ ಕಟ್ಟಿ, ಮನೆಯೊಳಕ್ಕೆ ಬಂದಾಗ ಅದಾಗಲೇ ರಾಬರ್ಟ್ ಮನೆಗೆ ಬಂದು, ತನ್ನ ಮೊಬೈಲಿನಲ್ಲಿ ಮುಳುಗಿಹೋಗಿದ್ದ. ರಾಬರ್ಟ್ ಒಬ್ಬ ಪ್ಲಂಬರ್. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಈತ ಅದೇ ಊರಿನ ಗಾಬ್ರಿಯೇಲನ ಮಗಳನ್ನು ಪ್ರೀತಿ ಮಾಡುತ್ತಿದ್ದುದು ಹೆಚ್ಚುಕಮ್ಮಿ ಇಡೀ ಊರಿಗೆ ತಿಳಿದಿತ್ತು. ಮೇಲ್ನೋಟಕ್ಕೆ ಇದಕ್ಕೆ ಯಾರ ವಿರೋಧವೂ ಇರಲಿಲ್ಲವಾದರೂ ಗಾಬ್ರಿಯೇಲನ ಹೆಂಡತಿ ರೀಟಾ ಇದಕ್ಕೆ ಬಿಲ್ಕುಲ್ ಒಪ್ಪಿರಲಿಲ್ಲ. 
ರೀಟಾ ಬಯಲುಸೀಮೆಯವಳು. ಜಗಳಗಂಟಿಯಾದ ಇವಳ ಹತ್ತಿರ ಅಕ್ಕಪಕ್ಕದ ಒಂದೆರಡು ಮನೆಯ ಹೆಂಗಸರಷ್ಟೇ ಮಾತನಾಡುತ್ತಿದ್ದರು. ಸ್ವತಃ ಗಾಬ್ರಿಯೇಲನ ಅಕ್ಕತಂಗಿಯರಿಗೇ ಅವಳನ್ನು ಕಂಡರೆ ಆಗುತ್ತಿರಲಿಲ್ಲ. ಅಲ್ಲದೆ ರೀಟಾ ಊರಿನ ಒಬ್ಬ ಯುವಕನನ್ನು ಇಟ್ಟುಕೊಂಡಿದ್ದಾಳೆ ಎಂಬ ಸುದ್ದಿ ಊರಿನಲ್ಲಿ ಇತ್ತೀಚಿಗೆ ಗುಸುಗುಸಾಗಿತ್ತು. ಅದು ಸುಳ್ಳೋ ನಿಜವೋ, ಆದರೆ ರೀಟಾ ಮಾತ್ರ ತಾನು ಇಟ್ಟುಕೊಂಡಿದ್ದ (?) ಯುವಕನಿಗೇ ತನ್ನ ಮಗಳು ಕೆನಿಶಾಳನ್ನು ಕೊಟ್ಟು ಮದುವೆ ಮಾಡಬೇಕು ಎಂದು ಯೋಚಿಸುತ್ತಿದ್ದುದು ಮಾತ್ರ ಸುಳ್ಳಲ್ಲ. ಈ ಮದುವೆ ಸ್ವತಃ ಕೆನಿಶಾಳಿಗೂ ಇಷ್ಟವಿಲ್ಲದ ಕಾರಣ ಆಕೆ ಪದೇ ಪದೇ ರಾಬರ್ಟನಿಗೆ ಓಡಿಹೋಗೋಣ ಬಾ ಎಂದು ಪೀಡಿಸುತ್ತಿದ್ದಳು.
-0-
ಸಾಮಾನ್ಯವಾಗಿ ಮಗ ಮನೆಗೆ ಬರುತ್ತಿದ್ದುದು ರಾತ್ರಿ ಎಂಟು ಗಂಟೆಯ ನಂತರ. ಇವತ್ತು ಆರು ಗಂಟೆಗೇ ಮನೆಗೆ ಬಂದಿದ್ದ ಮಗನನ್ನು ನೋಡಿದ ಮೇರಮ್ಮನಿಗೆ ಆಶ್ಚರ್ಯವಾದರೂ ಕೊಂಚ ಸಂತೋಷವಾಯಿತು. ಆದರೆ ರಾಬರ್ಟನ ಮುಖ ಪೇಲವವಾಗಿದ್ದನ್ನು ಕಂಡ ಮೇರಮ್ಮ, "ರಾಬು. ಯಾಕಪ್ಪ ಒಂಥರಾ ಇದ್ದಿಯ?" ಎಂದು ಕಕ್ಕುಲತೆಯಿಂದ ಕೇಳಿದಳು.
"ಏನಿಲ್ಲ ಅಮ್ಮ, ಸ್ವಲ್ಪ ತಲೆನೋವು. ಬೆಳಿಗ್ಗೆಯಿಂದ ಬಿಸಿಲಲ್ಲಿ ಕೆಲಸ ಅಲ್ವಾ ಅದಕ್ಕೆ ಅನ್ಸುತ್ತೆ" ರಾಬರ್ಟ್ ಮೊಬೈಲನ್ನು ನೋಡುತ್ತಲೇ ಉತ್ತರಿಸಿದ.
"ತಲೆಗೆ ಸ್ವಲ್ಪ ಹಳ್ಳೆಣ್ಣೆ ಹಚ್ಲಾ ಮಗಾ.? ಸರಿಹೋಗುತ್ತೇ!" ಮೇರಮ್ಮ ತುಸು ಮೆಲುದನಿಯಲ್ಲಿ ಕೇಳಿದಳು.
ಅಮ್ಮನ ಮುಖವನ್ನೇ ದಿಟ್ಟಿಸಿದ ರಾಬರ್ಟನಿಗೆ ಇನ್ನು ಕೊಂಚ ಹೊತ್ತಿನಲ್ಲಿ ತಾನು ಇವಳಿಂದ ದೂರ ಹೋಗುತ್ತಿರುವುದನ್ನು ನೆನೆದು ಸಂಕಟವಾದರೂ, ಅದ್ಯಾವುದನ್ನೂ ತೋರಿಸಿಕೊಳ್ಳದೆÀ, "ಅದೆಲ್ಲಾ ಏನೂ ಬೇಡಮ್ಮಾ. ಸ್ವಲ್ಪ ಹೊತ್ತು ನಿದ್ದೆ ಮಾಡಿದರೆ ಸರಿಹೋಗುತ್ತೆ" ಎಂದವನೇ ಅಮ್ಮನಿಗೆ ಊಟ ಬಡಿಸಲು ಹೇಳಿದ.
ರಾಬರ್ಟ್ ಊಟ ಮಾಡುತ್ತಿರುವಾಗಲೇ ಅವನಿಗೆ ಮೇಲಿಂದ ಮೇಲೆ ಕರೆಗಳು ಬರಲಾರಂಭಿಸಿದವು. ಒಂದೆರಡು ಬಾರಿ ಮಾತನಾಡಿ ಕಾಲ್ ಕಟ್ ಮಾಡಿದರೂ ಸಹ ಮತ್ತೆ ಮತ್ತೆ ರಿಂಗಣಿಸುತ್ತಿದ್ದ ಮೊಬೈಲನ್ನು ನೆಲಕ್ಕೆ ಬಡಿಯುವಷ್ಟು ಕೋಪ ಬಂತು. ಇವನಿಗೆ ಓಡಿಹೋಗಲು ಸುತಾರಾಂ ಇಷ್ಟವಿಲ್ಲ. ಅದೆಷ್ಟೇ ದಿನವಾದರೂ ಇಲ್ಲೇ ಇದ್ದು ಊರಿನಲ್ಲೇ ಮದುವೆಯಾಗ ಬೇಕೆಂಬುದು ಅವನ ಆಸೆ. ಆದರೆ ಕೆನಿಶಾಳಿಗೆ ಅವಳ ಅಮ್ಮ ರೀಟಾಳ ಬಳಿ ಇರುವ ಒಂದೊಂದು ಕ್ಷಣವೂ ಕೆಂಡದ ಮೇಲೆ ನಡೆಯುವಂತೆ ಭಾಸವಾಗುತ್ತಿತ್ತು. ಹೇಗಾದರೂ ಸರಿ ಅಂದು ರಾತ್ರಿಯೇ ಅಲ್ಲಿಂದ ಓಡಿ ಹೋಗಿಬಿಡಬೇಕೆಂದು ಅವಳು ನಿರ್ಧರಿಸಿದ್ದಳು. ಅವಳ ಈ ನಿರ್ಧಾರದ ಪರಿಣಾಮ ರಾಬರ್ಟನ ಮೇಲಾಗಿತ್ತು. ಮತ್ತೊಂದು ಬಾರಿ ಮೊಬೈಲ್ ರಿಂಗಣಿಸಿದ್ದೇ ತಡ ಫೋನ್ ತೆಗೆದುಕೊಂಡು "ನನ್ನನ್ನು ಡಿಸ್ಟರ್ಬ್ ಮಾಡ್ಬೇಡ. ಫೋನ್ ಇಡೇ" ಎಂದು ಜೋರಾಗಿ ಹೇಳಿದವನೇ ಕಾಲ್ ಕಟ್ ಮಾಡಿದ.
ಮಗನ ಈ ವರ್ತನೆಯಿಂದ ಗಾಬರಿಗೊಂಡ ಮೇರಮ್ಮ "ಏನಾಯ್ತು ರಾಬು? ಯಾರದು ಫೋನಿನಲ್ಲಿ?" ಆತಂಕದಿಂದ ಕೇಳಿದಳು.
"ನನಗೆ ಸ್ವಲ್ಪ ಕೆಲ್ಸ ಇದೆ. ನಾಳೆ ಬೆಳಿಗ್ಗೆ ಮನೆಗೆ ಬರ್ತೀನಿ. ನೀನು ಹುಷಾರಾಗಿ ಮಲಗು" ಎಂದು ಹೇಳಿ ಹೊರಟವನು ಮತ್ತೆ ಸಿಕ್ಕಿದ್ದು ಮಾತ್ರ ಜೈಲಿನಲ್ಲಿ.
ರಾತ್ರೋರಾತ್ರಿ ರಾಬರ್ಟ್ ಮತ್ತು ಕೆನಿಶಾ ಓಡಿಹೋಗಿದ್ದು ಬೆಳಹು ಹರಿಯುವಷ್ಟರಲ್ಲಿ ಇಡೀ ಊರಿಗೆ ಗೊತ್ತಾಗಿತ್ತು. ಅಕ್ಕಪಕ್ಕದ ಮನೆಯವರು, ರಸ್ತೆಯಲ್ಲಿ ಹೋಗುವವರಾದಿಯಾಗಿ ಎಲ್ಲರೂ ಮೇರಮ್ಮನನ್ನು ಕಂಡೊಡನೆ "ಮೇರಮ್ಮ ನಿನ್ ಮಗ ಆ ಹುಡ್ಗೀನ್ ಕರ್ಕೊಂಡು ಓಡೋಗ್ಬುಟ್ನಂತೆ," ಎಂದು ಕೇಳಿದಾಗಲೆಲ್ಲಾ ಮೇರಮ್ಮ ಕನಲಿಹೋಗುತ್ತಿದ್ದಳು.
ಅತ್ತ ರೀಟಾ ತನ್ನ ಮಗಳು ರಾಬರ್ಟನೊಂದಿಗೆ ಓಡಿ ಹೋಗಿದ್ದು ತಿಳಿದ ತಕ್ಷಣವೇ ಪೊಲೀಸರು ಸ್ಟೇಷನ್ನಿಗೆ ಹೋಗಿ ನನ್ನ ಮಗಳು ಅಪ್ರಾಪ್ತೆ, ಅವಳ ಮನಸ್ಸನ್ನು ಕೆಡಿಸಿ ರಾಬರ್ಟ್ ಅವಳನ್ನು ಕರೆದುಕೊಂಡು ಓಡಿಹೋಗಿದ್ದಾನೆ ಎಂದು ಕೇಸು ಮಾಡಿಬಿಟ್ಟಳು. ಎರಡು ತಿಂಗಳ ಸತತ ಹುಡುಕಾಟದ ನಂತರ ರಾಬರ್ಟ್ ಹಾಗೂ ಕೆನಿಶಾಳನ್ನು ಪೊಲೀಸರು ಪತ್ತೆಹಚ್ಚಿ ಹುಡುಗಿಯನ್ನು ಸಮಾಲೋಚನಾ ಕೇಂದ್ರಕ್ಕೆ ಕಳಿಸಿ, ರಾಬರ್ಟನನ್ನು ಜೈಲಿಗೆ ಹಾಕಿದರು. ಮಗನನ್ನು ಪೋಲಿಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದ ತಕ್ಷಣವೇ ಮೇರಮ್ಮ ಊರಿನ ಹಿರಿಯರು ಪುಡಿ ರಾಜಕಾರಣಿಗಳಾದಿಯಾಗಿ ಎಲ್ಲರನ್ನೂ ಕಾಡಿ ಬೇಡಿ ನನ್ನ ಮಗನನ್ನು ಬಿಡುಗಡೆ ಮಾಡಿಸಿ ಎಂದು ಗೋಗರೆದರೂ ಸಹ ಯಾರಿಂದಲೂ ಆಕೆಯ ಮಗನನ್ನು ಬಿಡಿಸಲಾಗಲಿಲ್ಲ. ಮೇರಮ್ಮನ ಯೋಚನಾ ಲಹರಿ ಇನ್ನಷ್ಟು ಆಳಕ್ಕೆ ಇಳಿದು ಗತಕಾಲದ ನೆನಪುಗಳನ್ನು ಮೆಲುಕು ಹಾಕುತ್ತಿತ್ತು. ಒಂದೊಂದು ನೆನಪೂ ಅವಳ ಬದುಕಿನಲ್ಲಿ ನೋವಿನ ಛಾಯೆಯನ್ನು ಮೂಡಿಸಿದ್ದವೇ ಹೊರತು, ಸುಖದ ಒಂದು ಸಣ್ಣ ಗೆರೆಯೂ ಕಾಣಲಿಲ್ಲ. ಮೇರಮ್ಮ ಮದುವೆಯಾದಾಗಿನಿಂದಲೂ ತನ್ನ ಪಾಲಿಗೆ ಸುಖ ಎನ್ನುವುದು ಗಗನದ ತಾರೆ ಎಂದೇ ಭಾವಿಸಿದ್ದಳು.
-0-
ಒಂದೆರಡು ತಿಂಗಳಲ್ಲಿ ಎಷ್ಟೆಲ್ಲಾ ನಡೆದುಹೋಯಿತು? ತಾನು ನಂಬಿದ ಗಂಡ ನನ್ನನ್ನು ನಡುನೀರಿನಲ್ಲಿ ಕೈಬಿಟ್ಟುಹೋಗಿ ವರ್ಷಗಳೇ ಕಳೆದಿವೆ. ಅವನು ಬದುಕಿದ್ದಾನೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಇನ್ನು ಕೊನೆಗಾಲಕ್ಕೆ ಒತ್ತಾಸೆಯಾಗುತ್ತಾನೆ ಎಂದು ನಂಬಿಕೊಂಡಿದ್ದ ಮಗ ಈಗ ನನ್ನ ನಂಬಿಕೆಗಳನ್ನೆಲ್ಲಾ ಹುಸಿಮಾಡಿ ಜೈಲಿನಲ್ಲಿದ್ದಾನೆ. ಬದುಕು ಯಾಕೆ ನನ್ನ ಮೇಲೆ ಇಷ್ಟು ಕ್ರೂರವಾಗಿದೆ ಎಂದು ಯೋಚಿಸುತ್ತಲೇ ಮೇರಮ್ಮ ಶಿಲುಬೆಯ ಬುಡದಲ್ಲಿ ತನಗರಿವಿಲ್ಲದೆಯೇ ನಿದ್ರೆಗೆ ಜಾರಿದ್ದಳು. ಮತ್ತೆ ಮೇರಮ್ಮನಿಗೆ ಎಚ್ಚರವಾದಾಗ ನಸುಕಿನ ಜಾವದಲ್ಲಿ ಎಂದಿನಂತೆ ಚರ್ಚು ಗಂಟೆ ಬಾರಿಸುತ್ತಿತ್ತು.
0-0-0-0-0

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...