Saturday, 21 December 2019

ಕಥಾದನಿ


ಕೊಟ್ಟಿಗೆಯಲ್ಲಿ ಕೆಸರು, ಸಗ್ಣಿ, ಗಂಜ್ಲ ಬಿಟ್ರೆ ನೀವು ಹೇಳುವ ಹಾಗೆ ಬೇರೇನು ನನಗೆ ಕಾಣಿಸಲೇ ಇಲ್ಲ ! 

ಗೋಶಾಲೆಯಲ್ಲಿ ಹುಟ್ಟಿದ ಬಾಲ ಯೇಸುವನ್ನು ಕಾಣಲು ಹಸು, ಕುರಿ, ಎತ್ತು, ಮೇಕೆ, ಕೋಳಿ ಹೀಗೆ ಹಲವಾರು ಪ್ರಾಣಿಪಕ್ಷಿಗಳು ಹೋದವು. ಜತೆಗೆ ಹಂದಿಯು ಸಹ ಇತರರನ್ನು ಸೇರಿ ಗೋದಲಿ ಕಡೆ ಹೋಗಿತ್ತು. ಅಲ್ಲಿ ಕಂಡ ಅತ್ಯಾಕರ್ಷಕ ದೃಶ್ಯವನ್ನು ಕಂಡು ಮನಸೂರೆಗೊಂಡು ತಮ್ಮ ವಾಸಸ್ಥಳಕ್ಕೆ ಹಿಂದುರುಗಿದ ಪ್ರಾಣಿಪಕ್ಷಿಗಳು ತಮ್ಮ ಕಣ್ಣುಗಳನ್ನು ತುಂಬಿಕೊಂಡಿದ್ದ ಮನೋಹರ ದೃಶ್ಯವನ್ನು ವರ್ಣಿಸಿ ಹೇಳಲಾರಂಭಿಸಿದವು. ಎಲ್ಲಾ ಪ್ರಾಣಿಪಕ್ಷಿಗಳ ವರ್ಣನೆಯನ್ನು ಆಲಿಸಿದ ಹಂದಿ ಹೇಳಿತಂತೆ: "ಗೋಶಾಲೆಯಲ್ಲಿ ಕೆಸರು, ಸಗಣಿ, ಗಂಜ್ಲ ಬಿಟ್ರೆ ನೀವು ಹೇಳುವ ಹಾಗೆ ಬೇರೇನೂ ನನಗೆ ಕಾಣಿಸಲೇ ಇಲ್ಲ" ಎಂದು. 


ಹೌದು ಬನ್ನಿ ಸಾಕಷ್ಟು ಸ್ಥಳವಿದೆ ಒಳಗೆ ಬನ್ನಿ 

ಕ್ರಿಸ್ತ ಯೇಸುವಿನ ಜನನದ ರೂಪಕವನ್ನು ಅಭಿನಯಿಸುತ್ತಿದ್ದ ಸಂದರ್ಭ. ಮರಿಯಳಿಗೆ ಪ್ರಸವಕಾಲ ಸಮೀಪಿಸಿದ್ದರಿಂದ ಹೆರಿಗೆಗೆ ಒಂದು ಮನೆಯ ಅವಶ್ಯವಾಗಿತ್ತು. ಪರಸ್ಥಳ ಬೆತ್ಲೆಹೇಮಿನಲ್ಲಿ ಮನೆಗಾಗಿ ಕಾಡಿ ಬೇಡಿ ಹುಡುಕಾಡಿದರೂ ಸಿಗದೆ ಇದ್ದಾಗ ಕೊನೆಗೆ ಒಂದು ಕೊಟ್ಟಿಗೆಯಲ್ಲಿ ಯೇಸು ಹುಟ್ಟುವ ದೃಶ್ಯವನ್ನು ಅಭಿನಯಿಸಿ ತೋರಿಸಬೇಕಾಗಿತ್ತು. 

ಮನೆಯನ್ನು ಕೇಳಿಕೊಂಡು ಬರುವ ಜೋಸೆಫ್ ಮತ್ತು ಮರಿಯಳಿಗೆ ಛತ್ರದ ಯಜಮಾನನ ಪಾತ್ರವಹಿಸಿದ ಒಬ್ಬ ಪುಟ್ಟ ಬಾಲಕ "ಮನೆ ಖಾಲಿ ಇಲ್ಲ" ಎಂದು ಬೈದು ಅವರನ್ನು ವಾಪಸ್ಸು ಕಳಿಸುವಂತೆ ಅಭಿನಯಿಸಬೇಕಾಗಿತ್ತು. ಆದರೆ ಜೋಸೆಫ ಮತ್ತು ಮರಿಯಳ ಕಷ್ಟವನ್ನು ಕಂಡು "ಹೌದು ಬನ್ನಿ ಛತ್ರದಲ್ಲಿ ಸಾಕಷ್ಟು ಸ್ಥಳವಿದೆ ಒಳಗೆ ಬನ್ನಿ" ಎಂದು ಹೇಳಿ ಮುಂದುವರಿಯಬೇಕಾಗಿದ್ದ ನಾಟಕವನ್ನು ಕೊನೆಗೊಳಿಸಿಯೇ ಬಿಟ್ಟ. 


ಅವನಿಗೆ ನನ್ನ ಅವಶ್ಯಕತೆ ತುಂಬಾ ಇದೆ 

ಒಬ್ಬ ಝೆನ್ ಗುರುಗಳು ತನ್ನ ಶಿಷ್ಯಂದಿರ ಮಧ್ಯೆ ಏನೋ ಗದ್ದಲವಾಗುತ್ತಿರುವುದನ್ನು ಗಮನಿಸಿ ಏನಾಯಿತೆಂದು ಕೇಳಿದರು. ಅವರು ಒಬ್ಬ ಶಿಷ್ಯನನ್ನು ಗುರುವಿನ ಮುಂದೆ ತಳ್ಳಿ “ಇವನು ಮತ್ತೆ ಕಳ್ಳತನ ಮಾಡಿದ್ದಾನೆ” ಎಂದರು. ಗುರುಗಳು “ಅವನನ್ನು ಕ್ಷಮಿಸಿಬಿಡಿ”ಎಂದರು. ಅದಕ್ಕೆ ಶಿಷ್ಯರು “ಸಾಧ್ಯವೇ ಇಲ್ಲ. ನಿಮಗೋಸ್ಕರ ನಾವು ಇವನನ್ನು ಈಗಾಗಲೇ ಸಾಕಷ್ಟು ಬಾರಿ ಕ್ಷಮಿಸಿದ್ದೇವೆ. ನೀವೀಗ ಅವನನ್ನು ಹೊರಗೆ ಕಳುಹಿಸದಿದ್ದರೆ, ನಾವೆಲ್ಲರೂ ಇಲ್ಲಿಂದ ಹೊರಟುಹೋಗುತ್ತೇವೆ ”ಎಂದು ಹೆದರಿಸಿದರು.“ನೀವೆಲ್ಲ ಹೊರಟು ಹೋದರೂ ಸಹ, ನನಗೆ ಅವನನ್ನು ಹೊರ ಕಳಿಸುವ ಇಂಗಿತವಿಲ್ಲ. ನಿಮಗೆ ನನ್ನ ಅವಶ್ಯಕತೆ ಇಲ್ಲದಿರಬಹುದು ಆದರೆ ಅವನಿಗೆ ನನ್ನ ಅವಶ್ಯಕತೆ ತುಂಬಾ ಇದೆ” ಎಂದು ಗುರುಗಳು ಹೇಳಿದರು. ಆಗ ಅಪರಾಧವನ್ನೆಸಗಿದ ಶಿಷ್ಯ ಗುರುಗಳ ಪಾದಕ್ಕೆ ಬಿದ್ದು ಕಣ್ಣೀರಿಟ್ಟ. 


******************* 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...