Saturday, 21 December 2019

ಡಿಸೆಂಬರಲ್ಲವೆ ಈಗ?


ಡಿಸೆಂಬರಲ್ಲವೆ ಈಗ? 

ಇರುಳು ಚೆಲ್ಲಿದೆ ಹಾಲು ಬೆಳದಿಂಗಳಲ್ಲಿ 

ನಕ್ಷತ್ರಗಳ ಕೆಳಗೆ ಸಾಗುವಾಗ 

ಕಣ್ಣಿಗೆ ಬೀಳುವುದಿಲ್ಲವೆ 

ಬೆಳೆದ ಮರಗಳ ತುದಿಯ ಬೆಳ್ಳಿಯೆಲೆಗಳ ಮೇಲೆ 

ಗೋಪುರದಲ್ಲಿ ಶಿಲುಬೆ? 


ಕ್ರಿಸ್ಮಸ್ ರಾತ್ರಿಗಂತು ಇನ್ನಷ್ಟು ಚಳಿ ಬೇಕು; 

ಹಾದಿ ಬೀದಿಗಳಲ್ಲಿ ಕ್ರಿಸ್ಮಸ್ ಗಿಡಗಳೆದ್ದು 

ಮುತ್ತುರತ್ನಗಳಂಥ ಬೆಳಕು ತೂಗಿ 

ಕಿಟಕಿಗಾಜಿನ ಹಿಂದೆ ಕಿರಿನಗೆಯರಳಬೇಕು; 

ನೃತ್ಯಗೀತದ ನಲಿವು ಉಕ್ಕಿಹರಿಯಬೇಕು; 

ಮೃದು ನುಡಿಗಳಲ್ಲಿ ಸ್ವಾಗತಿಸಬೇಕು 


ಪ್ರಾರ್ಥನೆಯ ಕೊರಳು ಬಾನತ್ತ ಏರಬೇಕು; 

ಎತ್ತರದ ಘಂಟೆಗಳ ದನಿ ಎಡೆಬಿಡದೆ ಮೊಳಗಬೇಕು; 

ಶಾಂತಿ ನೆಲಸಬೇಕು. 

ಬಯಲ ಹಸಿರಿನ ತುಂಬ ಹೂವಾಡಬೇಕು. 

ಪ್ರೀತಿಯೇ ದೇವರೆಂದು ನೆನೆಯಬೇಕು; 

ಕಣ್ಣಹನಿಗಳ ನಡುವೆ ಕೈಮುಗಿಯಬೇಕು. 



ಕೆ. ಎಸ್. ನರಸಿಂಹಸ್ವಾಮಿ- ಪುಟ - 93 

ಪುಸ್ತಕ :ಕ್ರಿಸ್ತಕಾವ್ಯ 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...