Saturday, 4 April 2020

ಮೊಲೊಕೈ - ದಿ ಸ್ಟೋರಿ ಆಫ್ ಫಾದರ್ ಡೇಮಿಯನ್

- ಪ್ರಶಾಂತ್ ಇಗ್ನೇಶಿಯಸ್
------------------
ಫ್ರಾನ್ಸ್ ನ ಯೇಸು ಮತ್ತು ಮರಿಯಮ್ಮನವರ ಪವಿತ್ರ ಹೃದಯದ ಸಭೆಗೆ ಸೇರಿದ್ದ ಫಾದರ್ ಡೇಮಿಯನ್ ರವರು ಹವಾಯ್ ರಾಜ್ಯದಲ್ಲಿ ಸಲ್ಲಿಸಿದ ಸೇವೆ ಕುರಿತಾದ ಚಿತ್ರವೇ ‘ಮೊಲೊಕೈ - ದಿ ಸ್ಟೋರಿ ಆಫ್ ಫಾದರ್ ಡೇಮಿಯನ್’. ಪೌಲ್ ಕೋಕ್ಸ್ ನಿರ್ದೇಶನದ ಈ ಚಿತ್ರ 1999ರಲ್ಲಿ ಬಿಡುಗಡೆಯಾಯಿತು. 
ಅಮೆರಿಕ ಸಮೀಪದ ಹವಾಯ್ ದ್ವೀಪಕ್ಕೆ ಏಷಿಯಾದ ವಲಸಿಗರು ಬಂದು ನೆಲಸುವುದರೊಂದಿಗೆ ಅಲ್ಲಿ ಕುಷ್ಠ ರೋಗವೂ ಕಾಣಿಸಿಕೊಳ್ಳತೊಡಗುತ್ತದೆ. ಅದು ವ್ಯಾಪಕವಾಗಿ ಹರಡುತ್ತಿದ್ದಂತೆ, ಪಕ್ಕದ ಕಲೌಪಾಪ ಎಂಬ ಸಣ್ಣ ಹಳ್ಳಿಗೆ ರೋಗ ಬಾಧಿತರನ್ನು ಸರ್ಕಾರ ಕಳುಹಿಸುತ್ತದೆ. ಇದಕ್ಕೆ ಹವಾಯ್ ಸರ್ಕಾರಕ್ಕೆ ಕಥೋಲಿಕ ಧರ್ಮಸಭೆ ನೆರವು ನೀಡುತ್ತದೆ. 
ಆ ಬಾಧಿತರ ಆಧ್ಯಾತ್ಮಿಕ ನೆರವು ಹಾಗೂ ಕೊನೆಯ ಸಂಸ್ಕಾರಕ್ಕಾಗಿ ಒಬ್ಬ ಧರ್ಮಗುರುವನ್ನು ಕಳುಹಿಸಬೇಕೆಂದು ಆ ಪ್ರಾಂತ್ಯದ ಧರ್ಮಾಧ್ಯಕ್ಷರಿಗೆ ಅನಿಸುತ್ತದೆ. ಆಗ ಫಾದರ್ ಡೇಮಿಯನ್ ಇದಕ್ಕೆ ಸ್ವಯಂ ಮುಂದೆ ಬರುತ್ತಾರೆ. ಆದರೆ ಅಲ್ಲಿ ಯಾರನ್ನೂ ಮುಟ್ಟಬಾರದೆಂಬ ಎಚ್ಚರಿಕೆಯನ್ನು ಅವರಿಗೆ ನೀಡಲಾಗುತ್ತದೆ. ಫಾದರ್ ಡೇಮಿಯನ್ ಕಲೌಪಾಪಗೆ ಬಂದು ಏನು ಮಾಡುತ್ತಾರೆ ಎಂಬುದೇ ಚಿತ್ರದ ಕಥಾವಸ್ತು.
ಹಾಗೆ ಕಲೌಪಾಪಗೆ ಬಂದ ಫಾದರ್ ಡೇಮಿಯನ್ ರನ್ನು ಅಲ್ಲಿನ ನಿರಾಶಾದಾಯಕ ವಾತಾವರಣ ಸ್ವಾಗತಿಸುತ್ತದೆ. ಸಾವಿನ ದವಡೆಯಲ್ಲಿರುವವರ ಹಾಗೂ ಮಾರಣಾಂತಿಕ     ಕುಷ್ಠರೋಗದಿಂದ ವಿಧ ವಿಧವಾಗಿ ನರಳುತ್ತಿರುªವರು ಇನ್ನೇನು ತಾನೇ ಮಾಡಲು ಸಾಧ್ಯ.? ಎಲ್ಲರೂ ತಮ್ಮ ಜೀವದ ಆಸೆ ಬಿಟ್ಟಿರುವಾಗ ಅಲ್ಲೊಂದು ಲೋಲಪತನ ಮನೆ ಮಾಡಿರುತ್ತದೆ. ಉಡಾಫೆ, ಅಹಂಕಾರ ನೆರಮನೆಯಂತಿರುತ್ತದೆ. ಇದ್ದ ಸಣ್ಣ ದೇವಾಲಯವೊಂದು ಅಲ್ಲಿನ ಧಾರ್ಮಿಕ ಆಗು ಹೋಗುಗಳ ಪ್ರತಿಬಿಂಬವಾಗಿ ಪಾಳುಬಿದ್ದು ಹೋಗಿರುತ್ತದೆ. 
ಹೀಗೆ ರೋಗ ಬಾಧಿತರ ಜಾಗಕ್ಕೆ ಆಧ್ಯಾತ್ಮಿಕ ನೆರವಿಗಾಗಿ ಬಂದ ಗುರು ಮುಂದೆ ಹೇಗೆ ಆ ಊರಿನವರೇ ಆಗುತ್ತಾರೆ ಎಂಬ ಹೃದಯಸ್ಪರ್ಶಿ ಚಿತ್ರಣ ಇಲ್ಲಿದೆ. ಫಾದರ್ ಡೇಮಿಯನ್ ಪಾತ್ರಧಾರಿ ಡೇವಿಡ್ ವೆನ್ನಾಮ್ ಚಿತ್ರದ ವಿವಿಧ ಹಂತದಲ್ಲಿ ಪಾತ್ರವಾಗಿ ತಲ್ಲೀನವಾಗಿರುವ ಪರಿ ಅದ್ಭುತ.
ಚಿತ್ರದಲ್ಲಿ ಅನೇಕ ರೀತಿಯ ಸಂಘರ್ಷಗಳನ್ನು ಉತ್ತಮವಾಗಿ ಚಿತ್ರಿಸಲಾಗಿದೆ. ಮೊದಲಿಗೆ ಆ ನಿರಾಶೆಯ ವಾತಾವರಣವೇ ಒಂದು ದೊಡ್ಡ ತೊಡಕಾದರೆ, ಮಾರಣಾಂತಿಕ ರೋಗ ಮತ್ತೊಂದು ತೊಡಕಾಗುತ್ತದೆ. ನಂತರ ಅಲ್ಲಿನ ಜನರ ಮನೋಭಾವ, ಫಾದರ್ ಡೇಮಿಯನ್‍ಗೆ ತಮ್ಮ ಸಂಸ್ಥೆಯಿಂದಲೇ ಸಿಗದ ನೆರವು, ರಾಜಕೀಯ ತಂತ್ರಗಾರಿಕೆ, ರಾಜಕೀಯ ಹಾಗೂ ಧಾರ್ಮಿಕ ಅಧಿಕಾರಶಾಹಿಯ ಸ್ವಾರ್ಥ, ಕಠೋರತೆ ಎಲ್ಲವೂ ಇದೆ. 
ಅದಕ್ಕೆ ಉದಾಹರಣೆಯಾಗಿ ಫಾದರ್ ಡೇಮಿಯನ್ ತಮಗೆ ತಿಳಿದಿರುವ ಒಬ್ಬರ ಮೂಲಕ ತಾವು ಮಾಡುತ್ತಿರುವ ಕಾರ್ಯಕ್ಕಾಗಿ ಹಣವನ್ನು ತರಿಸಲು ಒಂದು ಪತ್ರ ಬರೆಯುತ್ತಾರೆ. ಆದರೆ ಆ ರೀತಿಯ ಪತ್ರದಿಂದ ಅಲ್ಲಿನ ಸರ್ಕಾರ ಹಾಗೂ ಧಾರ್ಮಿಕ ವ್ಯವಸ್ಥೆ ಏನೂ ಮಾಡುತ್ತಿಲ್ಲವೆಂಬ ಸಂದೇಶ ಹೊರಜಗತ್ತಿಗೆ ಹೋಗಬಹುದು ಎಂಬ ಕಾರಣದಿಂದ ಆ ಪ್ರದೇಶದ ಪ್ರಧಾನ ಮಂತ್ರಿ ಹಾಗೂ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರು ಫಾದರ್ ಡೇಮಿಯನ್‍ರನ್ನು ಖಂಡಿಸುತ್ತಾರೆ. 
ಅಲ್ಲಿ ನಡೆಯುತ್ತಿರುವುದು ಹೊರ ಜಗತ್ತಿಗೆ ಗೊತ್ತಾಗಬಾರದು ಎನ್ನುತ್ತಾ ಆ ಒಳ್ಳೆಯ ಕಾರ್ಯಕ್ಕಿಂತ ತಮ್ಮ ತಮ್ಮ ಪ್ರತಿಷ್ಠೆ ಮುಖ್ಯ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಆ ಪ್ರದೇಶದ ರಾಣಿ ಈ ರೋಗಗ್ರಸ್ಥ ಪ್ರದೇಶಕ್ಕೆ ಭೇಟಿ ಕೊಡಲು ಬಂದು ಅಲ್ಲಿನ ಜನರೊಂದಿಗೆ ಬೆರೆಯುವುದು, ಫಾದರ್ ರವರ ಸೇವೆಯನ್ನು ಪ್ರಶಂಸಿಸುವುದು, ಆದರೆ ಅದೇ ಧಾರ್ಮಿಕ ನಾಯಕರು ಅಲ್ಲಿ ಬರಲು ಹಿಂಜರಿಯುತ್ತಾ, ಅನಾದರ ತೋರಿಸುವುದು ಮೌಲ್ಯಗಳ ದ್ವಂದ್ವವನ್ನು ಎತ್ತಿ ತೋರಿಸುತ್ತದೆ. 
ವ್ಯವಸ್ಥೆ ಹೇಗೆ ತನ್ನ ಕ್ರೂರತನವನ್ನು ಪ್ರದರ್ಶಿಸಬಹುದು ಎಂಬುದರ ಮತ್ತೊಂದು ನಿದರ್ಶನ ಇಲ್ಲಿ ಸುಂದರವಾಗಿ ಮೂಡಿಬಂದಿದೆ. ಸುಮಾರು ತಿಂಗಳುಗಳ ಕಾಲದಿಂದ ಪಾಪ ನಿವೇದನೆಯನ್ನು ಮಾಡದ ಫಾದರ್ ತಮ್ಮ  ಉನ್ನತಾಧಿüಕಾರಿಗಳಿಗೆ ಈ ಮೂಲಕ ಪತ್ರ ಬರೆಯುತ್ತಾರೆ. ಮಾರಣಾಂತಿಕ ರೋಗದ ಗೂಡಾದ ಈ ದ್ವೀಪಕ್ಕೆ ಯಾವುದೇ ಒಬ್ಬ ಗುರು ಬರಲು ಒಪ್ಪದೇ ಅನೇಕ ರೀತಿಯ ಸಬೂಬುಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಾರೆ. ಇದನ್ನು ತಿಳಿದ ಅಲ್ಲಿನ ಧರ್ಮಾಧ್ಯಕ್ಷರು ತಾವೇ ಕಲೌಪಾಪಗೆ ಹೋಗುವ ನಿರ್ಧಾರ ಮಾಡುತ್ತಾರೆ. ರೋಗದ ಸ್ಥಳಕ್ಕೆ ಹೋಗುವುದು ಬೇಡ ಎಂಬ ಸಲಹೆಯನ್ನು ಧಿಕ್ಕರಿಸಿ ಅವರು ಹೋಗುತ್ತಾರೆ. 
ಧರ್ಮಾಧ್ಯಕ್ಷರು ಹಡಗಿನಲ್ಲಿ ಹೋದಾಗ ಅಲ್ಲಿನ ಆರೋಗ್ಯ ಇಲಾಖೆಯು ಅವರನ್ನು ಹಡಗಿನಿಂದ ಇಳಿಯಲು ಅನುಮತಿ ನೀಡುವುದಿಲ್ಲ. ಇತ್ತ ದ್ವೀಪದಿಂದ ಒಂದು ಸಣ್ಣ ದೋಣಿಯ ಮೂಲಕ ಹಡಗಿನತ್ತ ಬರುವ ಫಾದರ್ ಡೇಮಿಯನ್‍ಗೂ ಕೂಡ ಹಡಗನ್ನು ಹತ್ತಲು ಅನುಮತಿ ನಿರಾಕರಿಸಲಾಗುತ್ತದೆ. ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಳಗಿನ ಒಂದು ಸಣ್ಣ ದೋಣಿಯಲ್ಲಿ ಫಾದರ್, ಮೇಲೆ ನಿಂತ ಧರ್ಮಾಧ್ಯಕ್ಷರರ ನಡುವಿನ ಪಾಪ ನಿವೇದನೆಯ ದೃಶ್ಯ ಅತ್ಯಂತ ಹೃದಯಂಗಮವಾಗಿಯೂ ಹಾಗು ಹಾಸ್ಯಮಯವಾಗಿಯೂ ಚಿತ್ರಿತವಾಗಿದೆ. ಪಾಪ ನಿವೇದನೆ ಸುತ್ತಮುತ್ತಲಿನ ಜನರಿಗೆ ಅರ್ಥವಾಗದಂತೆ ಪ್ರೆಂಚ್ ಭಾಷೆಯಲ್ಲಿ ತನ್ನ ಪಾಪ ನಿವೇದನೆಯನ್ನು ಮಾಡುತ್ತಾರೆ. 
ಈ ಧಾರ್ಮಿಕ ಸಂಸ್ಥೆಗಳ ಕ್ರೂರತನ ಎಲ್ಲಿಯ ತನಕ ಹೋಗಿ ಮುಟ್ಟುತ್ತದೆ ಎಂದರೆ ಫಾದರ್ ಡೇಮಿಯನ್ ಅಲ್ಲಿನ ಜನರೊಂದಿಗೆ ಬೆರೆಯುವುದನ್ನು ಸಹಿಸದ ಧಾರ್ಮಿಕ ಸಂಸ್ಥೆ ಅವರಿಗೆ ಯಾವುದಾದರೂ ಲೈಂಗಿಕ ರೋಗ ತಗುಲಿದೆಯೇ ಎಂಬುದನ್ನು ಸಂಸ್ಥೆಯ ವೈದ್ಯರ ಮೂಲಕ ಖಾತರಿಪಡಿಸಿಕೊಳ್ಳುತ್ತದೆ. ಈ ದೃಶ್ಯ ನೋಡುಗರ ಹೃದಯದಲ್ಲಿ ಕೋಪವನ್ನು ತರಿಸುತ್ತದೆ. ಏಕೆಂದರೆ ಆ ಊರಿನ ಯುವತಿಯೊಬ್ಬಳು ಅವರಲ್ಲಿ ಆಕರ್ಷಿತಳಾಗಿ ಅವರ ಸಾಂಗತ್ಯ ಬಯಸಿದಾಗ, ಅವರು ಅವಳನ್ನು ತಿರಸ್ಕರಿಸಿರುತ್ತಾರೆ. ನೋಡುಗರ ಭಾವನೆಯ ಪ್ರತಿರೂಪವೋ ಎಂಬಂತೆ ಅಲ್ಲಿರುವ ಖುರ್ಚಿಯನ್ನು ಒದ್ದು ಫಾದರ್ ತಮ್ಮ ಕೋಪವನ್ನು ಹೊರಗೆಡುವುತ್ತಾರೆ. 
ಈ ರೀತಿಯ ಅನೇಕ ಸುಂದರ ದೃಶ್ಯಗಳು ಚಿತ್ರದಲ್ಲಿ ಇವೆ. ಕೆಲವೊಂದು ದೃಶ್ಯಗಳು ಕಣ್ಣಲ್ಲಿ ನೀರು ತರಿಸಿದರೆ, ಮತ್ತೆ ಕೆಲವು ಕೋಪ ಬರಿಸುತ್ತದೆ. ಅನೇಕ ದೃಶ್ಯಗಳು ಮನಸ್ಸಿನ ಆಳದಲ್ಲಿ ನಿಲ್ಲುವಂತೆ ಮಾಡಲು ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಾವಿನ ದವಡೆಯಲ್ಲಿ ವೈದ್ಯಕೀಯ ಸಹಾಯಕನಾಗಿದ್ದ ವೃದ್ಧನೊಬ್ಬನ ಹಾಗೂ ಫಾದರ್ ನಡುವೆ ನಡೆಯುವ ಸಂಭಾಷಣೆಗಳು, ಆತನ ಅಂತ್ಯಸಂಸ್ಕಾರಕ್ಕೆ ದೇವಾಲಯದ ದುರಸ್ತಿಗೆ ಇಟ್ಟಿದ ಒಳ್ಳೆಯ ಮರದಿಂದ ಶವಪೆಟ್ಟಿಗೆಯನ್ನು ತಯಾರಿಸುವುದು, ಡೈಯಿಂಗ್ ಶೆಡ್‍ನಲ್ಲಿ ಸಾಯುತ್ತಿರುವ ಮಗುವನ್ನು ತಬ್ಬಿ ಅಳುವ ದೃಶ್ಯ, ಸಣ್ಣ ವಯಸ್ಸಿನ ಮಗನನ್ನು ಹೊಡೆಯುವ ಕುಡುಕ ತಂದೆಯನ್ನು ಫಾದರ್ ಎಚ್ಚರಿಸುವುದು ಎಲ್ಲವೂ ಮನಸ್ಸಿಗೆ ಬಹಳ ಹತ್ತಿರ. 
ಇನ್ನು ಚಿತ್ರದಲ್ಲಿ ಹಾಸ್ಯ ಇದ್ದೂ ಇಲ್ಲದಂತಿದೆ. ಸಂಗೀತವೂ ಇಲ್ಲಿ ಅತ್ತ್ಯುತ್ತಮವಾಗಿ ಬಳಕೆಯಾಗಿದೆ. ಗಾನವೃಂದದ ಅಭ್ಯಾಸ ಹಾಗೂ ಪೂಜೆಯ ಸಮಯದಲ್ಲಿ ಸಂಗೀತದ ಬಳಕೆ ನಿಜಕ್ಕೂ ಉತ್ತಮ. ರೋಗಿಗಳ ಕರುಣಾಜನಕವಾದ ದೃಶ್ಯಗಳ ನಡುವೆಯೇ ಬೆಟ್ಟ, ಹಸಿರು, ಸಮುದ್ರದ ನಡುವಿನ ಪ್ರದೇಶದ ದೃಶ್ಯಗಳು ಛಾಯಾಗ್ರಾಹಕನ ಮೂಲಕ ಈ ಚಿತ್ರಕ್ಕೆ ಅಗತ್ಯವಾಗಿ ಬೇಕಾದ ತಂಪನ್ನು, ಸಾಂತ್ವನವನ್ನು ನೀಡುತ್ತವೆ.
ಎಲ್ಲಾ ಪಾತ್ರದಾರಿಗಳು ಇಲ್ಲಿ ಪಾತ್ರವೇ ಆಗಿ ಹೋಗಿದ್ದಾರೆ. ಅದರಲ್ಲೂ ಅನೇಕ ನಿಜ ರೋಗಿಗಳನ್ನೇ ಬಳಸಿರುವುದನ್ನು ಕಾಣಬಹುದು. ಚಿತ್ರದ ನೈಜತೆಗೆ ಅವರು ನೀಡಿರುವ ಕೊಡುಗೆ ಚಿತ್ರದ ಗುಣಮಟ್ಟ ಎತ್ತರಿಸಿದೆ. ಅನೇಕ ರೀತಿಯ ಸಾಮಾಜಿಕ, ಧಾರ್ಮಿಕ ಹಾಗೂ ಮೌಲ್ಯಗಳ ಸಂಘರ್ಷಗಳನ್ನು ಕಾಣುತ್ತಿರುವ ನಮಗೆ ಈ ಚಿತ್ರ ಆಪ್ತವಾಗುತ್ತದೆ ಅಂತೆಯೇ ಮಾರಣಾಂತಿಕ ರೋಗದ ಭಯವನ್ನು ಅನುಭವಿಸುತ್ತಿರುವ ಈ ಸಮಯದಲ್ಲಿ ನಮ್ಮಂತೆ ನಿಮ್ಮಂತೆ ಬಾಳಿದ ವ್ಯಕ್ತಿಯೊಬ್ಬ ತೋರಿದ ಮಾನವೀಯ ಕಾಳಜಿಯನ್ನು ಆರಿಯಲು ಈ ಚಿತ್ರವನ್ನು ನಾವು ನೋಡಲೇಬೇಕು. ಈ ಮೂಲಕ ಇಷ್ಟು ಕಾಲ ನಮಗೆ ಅಜ್ಞಾತವಾಗಿ ಉಳಿದು ಹೋಗಿದ್ದ ಫಾದರ್ ಡೇಮಿಯನ್ ರವರ ಸೇವಾ ಜೀವನಕ್ಕೆ ನಮ್ಮ ಗೌರವವನ್ನು ಸಲ್ಲಿಸ ಬಹುದಾಗಿದೆ. ಯುಟ್ಯೂಬ್‍ನಲ್ಲಿ ಈ ಚಿತ್ರ ಲಭ್ಯವಿದೆ 
**********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...